ಲೈಫ್ ಸ್ಟೈಲ್
ಅಪ್ಪ ಎಂದರೆ..!
- ಫರ್ಹಾನಾಜ್ ಮಸ್ಕಿ, ಸಹಾಯಕ ಪ್ರಾಧ್ಯಾಪಕರು ನೆಲಮಂಗಲ, ಬೆಂಗಳೂರು
ಅಪ್ಪ ಎಂದರೆ ಬರೀ ಆಕಾಶವಲ್ಲ, ಅಪರಿಮಿತ ಬ್ರಹ್ಮಾಂಡ. ಅಪ್ಪ ಎಂದರೆ ಬರೀ ಮರವಲ್ಲ ಹೆಮ್ಮರ! ತಾನೇ ದುಡಿದು ತಾನೇ ತಂದು, ತನ್ನ ಹೊಟ್ಟೆ ತುಂಬದಿದ್ದರೂ ಕುಟುಂಬದ ಎಲ್ಲಾ ಪ್ರಭಾರಗಳನ್ನೂ ವಹಿಸಿಕೊಳ್ಳುವ ಅಪ್ಪ ಅಪ್ರತಿಮ ಸಾಧಕ!. ಅಪ್ಪ ಎಂದರೆ ಎಲ್ಲವನ್ನೂ ಎದುರಿಸಿ ಮತ್ತೇ ನಿಲ್ಲಬಲ್ಲ ಪರ್ವತ! ಅಪ್ಪ ಇದ್ದರೆ ಮನೆಯಲ್ಲಿ ಒಂಥರಾ ನೆಮ್ಮದಿ, ತೃಪ್ತಿ, ಸಡಗರ, ಸಮಾಧಾನ.
ಅಪ್ಪ ಇದ್ದಾರೆಂಬುದೇ ಬದುಕಿಗೊಂದು ಛಲ! ಅಪ್ಪನ ಬಗೆಗೆ ಅದೆಷ್ಟು ಹೇಳಿಕೊಂಡರೂ ಸಾಲದು. ಇಂಥ ಅಪ್ಪನ ಗುಣಗಳಲ್ಲಿ ಗಂಡಿನ ಗಡಸುತನ, ಸಿಟ್ಟು, ಅಸಹನೆ, ಕೋಪ, ಮುನಿಸು, ದರ್ಪ, ಗರ್ವಗಳೂ ಇರುವುದನ್ನು ನೋಡಿದ್ದೇವೆ. ಆದರೆ ನಮ್ಯ ನಡತೆ, ಮೃದು ಮನಸ್ಸು, ಮೌನ ಮನೋಭಾವ, ಅನುರಾಗ, ಅನುಕಂಪ, ತಾಯಿಯ ಮನೋಧರ್ಮಗಳನ್ನೇ ಹೋಲುವ ಅಪ್ಪಂದಿರೂ ಇದ್ದಾರೆ. ಜಗತ್ತಿಗೆ ಅದೆಷ್ಟು ಬರಡು ಬರಡಾಗಿದ್ದರೂ ಮಕ್ಕಳಿಗಾಗಿ ಮಾತ್ರ ಅಪ್ಪ, ಬಲಿಷ್ಠರೇ!!
ಮಕ್ಕಳ ವಿಕಸನಕ್ಕಾಗಿ ಅಪ್ಪ ಅದೇನೇನೋ ಮಾಡುತ್ತಾರಂತೆ. ನಮ್ಮಪ್ಪ ವಿಭಿನ್ನ, ವೈವಿಧ್ಯಮಯ ವ್ಯಕ್ತಿತ್ವ ಹೊಂದಿದವರು, ಎಂದೂ ತಿದ್ದಿ ತೀಡಿ ಬುದ್ಧಿ ಹೇಳಲು ಬಲ ಪ್ರಯೋಗ ಮಾಡಲೇ ಇಲ್ಲ. ಇದಕ್ಕೊಂದು ನಿದರ್ಶನ ಎಂದರೆ ಒಮ್ಮೆ ನಮ್ಮ ಅಣ್ಣ ತಮ್ಮ ತರಗತಿಯ ಹುಡುಗರೊಂದಿಗೆ ಜಗಳವಾಡಿ ಮನೆಗೆ ಬಂದು ಅಪ್ಪರವರನ್ನು ಕರೆದುಕೊಂಡು ಹೋಗಿ ಆ ಹುಡುಗರನ್ನು ಬೈಯ್ಯಲು ಹೇಳಿದ್ದರಂತೆ, ಆಗ ಅಪ್ಪ ಅಣ್ಣನೊಂದಿಗೆ ಹೋಗಿ, ಆ ಹುಡುಗರನ್ನು ಕರೆದು ತನ್ನ ಜೇಬಿನಲ್ಲಿದ್ದ ಚಾಕಲೇಟುಗಳನ್ನು ಕೊಟ್ಟು “ಮಕ್ಕಳೇ ನೀವೆಲ್ಲಾ ಒಂದೇ! ಹಿಂಗಿಲ್ಲಾ ಜಗಳವಾಡಬಾರದು” ಎಂದು ಮುದ್ದು ಮುದ್ದಾಗಿ ಮಾತಾಡಿ ಬಂದಿದ್ದರಂತೆ.
ಅಣ್ಣನವರು, “ನಮ್ಮಪ್ಪ ಅಂದರೆ ಹಂಗೆ ಹಿಂಗೆ ಬಂದು ನಿಮ್ಮೆಲ್ಲರಿಗೊಂದು ಗತಿ ಕಾಣಿಸುತ್ತಾರೆ” ಎಂದು ಹೇಳಿಕೊಂಡಿದ್ದು ಅಪ್ಪನ ಮೃದು ಸ್ವಭಾವ ದಿಂದಾಗಿ ಮುಜುಗರಕ್ಕೀಡಾಗಿದ್ದರಂತೆ. ಇದಕ್ಕಾಗಿಯೇ ಇರಬಹುದು ನಮ್ಮೂರಿನ ಜನ ನಮ್ಮಪ್ಪರವರಿಗೆ ದೇವರಂಥ ಮನುಷ್ಯ ಎಂದು ಹೇಳುತ್ತಿದ್ದರು. ಇಂಥ ಅಪರೂಪದ ಸ್ವಭಾವ ಹೊಂದಿದ್ದ ಅಪ್ಪ ತಮ್ಮ ಸಿಟ್ಟನ್ನು ನಮ್ಮ ಮೇಲೆ ತೋರಿಸಲೇ ಇಲ್ಲ. ಪ್ರಶಾಂತ ಸಾಗರದಂತಿದ್ದ ಅಪ್ಪ ನಿಜಕ್ಕೂ ಅಂತರ್ಗತ ಅಮೂಲ್ಯ, ಅಮೋಘ, ಅಸಿಮ ಜ್ಞಾನಿ.
ನಮ್ಮ ಬದುಕಿನಲ್ಲಿ ನಡೆವ ಪ್ರತಿಯೊಂದು ಆಗುಹೋಗುಗಳನ್ನು ವಿವರಿಸಲು ಅವರಲ್ಲೊಂದು ನೀತಿ ಕಥೆ ಇದ್ದೇ ಇರುತ್ತಿತ್ತು. ಕಥೆಗಳ ಮೂಲಕವೇ ಜೀವನ ಪಾಠ ಕಲಿಸಿಕೊಟ್ಟಿದ್ದು ಅಪ್ಪ. ಮಕ್ಕಳನ್ನು ತನ್ನ ಕುಡಿಗಳೆಂದಷ್ಟೇ ಅಲ್ಲದೇ ಸಮಾಜದ ಭಾವಿ ಪ್ರಜೆಗಳೆಂದೇ ತಿಳಿದು ಎಲ್ಲಾ ಥರದ ನೈತಿಕತೆ, ಹೊಣೆಗಾರಿಕೆ, ಜವಾಬ್ದಾರಿಗಳನ್ನೂ ಹೇಳಿಕೊಟ್ಟವರು. ಆದ್ದರಿಂದ ಮಕ್ಕಳೊಂದಿಗೆ ಗೆಳೆಯನಂತೆಯೇ ವರ್ತಿಸುತ್ತಿದ್ದರು. ಅದೆಷ್ಟೋ ಜನರು ಹೇಳುತ್ತಾರೆ ಅಪ್ಪ ಅಂದರೆ ಭಯ ಅಂತ. ಆದರೆ ನಮಗೆ ಅಂಥ ಅನುಭವವೇ ಇಲ್ಲ. ನಮ್ಮ ಅಪ್ಪ ಅದೆಷ್ಟು ಪ್ರೀತಿ ನೀಡುತ್ತಿದ್ದರೆಂದರೆ ನಾವೆಲ್ಲಾ ಚಿಕ್ಕವರಿದ್ದಾಗ ಒಮ್ಮೆ ಅಪ್ಪನ ಕಾಲಿಗೆ ಅದೇನೋ ಪೆಟ್ಟಾಗಿ ರಕ್ತ ಬರುತ್ತಿತ್ತು. ಅಮ್ಮ ತುಂಬಾ ಗಾಬರಿಯಿಂದ ಅಪ್ಪನ ಕಾಲಿಗೆ ಔಷಧಿ ಲೇಪಿಸುತ್ತಿದ್ದರು.
ಅಮ್ಮನ ಮುಖದಲ್ಲಿ ನೋವು, ಸಂಕಷ್ಟ ಎದ್ದು ಕಾಣುತ್ತಿದ್ದವು. ಆದರೆ ಮಕ್ಕಳಾದ ನಾವೆಲ್ಲಾ ತುಂಬಾ ಸಂತಸ ಪಡುತ್ತಿದ್ದೆವು. ಅದನ್ನರಿತ ಅಮ್ಮ “ ನೀವೆಲ್ಲಾ ಹುಚ್ಚರಾಗಿದ್ದೀರಿಯೇ ನಿಮ್ಮ ಅಪ್ಪನವರಿಗೆ ಗಾಯ ಆಗಿದೆ. ಅವರು ನೋವಿನಲ್ಲಿದ್ದಾರೆ, ನೀವ್ಯಾಕೆ ಸಂತಸ ಪಡುತ್ತಿದ್ದೀರಾ?” ಎಂದು ಬೈಯ್ಯಲಾರಂಭಿಸಿದರು, ಆಗ ನಾವೆಲ್ಲಾ “ಇಲ್ಲಮ್ಮ, ಅಪ್ಪನವರಿಗೆ ಗಾಯ ಆಗಿದೆ ಅಲ್ವಾ? ನಾಳೆ ಅಪ್ಪ ಮನೆಯಲ್ಲೇ ಇರುತ್ತಾರೆ, ನಮ್ಮೊಂದಿಗೆಯೇ ಕಾಲ ಕಳೆಯುತ್ತಾರೆ ಅಲ್ವಾ” ಎಂದು ಹೇಳಿದಾಗ ಅಪ್ಪ ಅಮ್ಮ ಇಬ್ಬರೂ ನಗಲಾರಂಭಿಸಿದ್ದರು. ಹೀಗೆ ಅಪ್ಪ ಮನೆಯಲ್ಲಿ ನಮ್ಮೊಟ್ಟಿಗೆಯೇ ಇದ್ದರೆ ಅದುವೇ ಸ್ವರ್ಗ.
ಆ ಸ್ವರ್ಗಾನುಭವ ನೀಡುವ ಅಪ್ಪನವರ ಹರಸಾಹಸ ನಮಗೆಲ್ಲಾ ಅಂದು ತಿಳಿಯುತ್ತಿರಲಿಲ್ಲ. ಮಕ್ಕಳನ್ನು ಒಳ್ಳೆಯ ಬದುಕು ಕಟ್ಟಿಕೊಡಲು ಅವರು ಮಾಡಿದ ತ್ಯಾಗ ಬಲಿದಾನಗಳೇನು ನಮಗೆ ಅರಿವಾಗಲೇ ಇಲ್ಲ. ಅದೆಷ್ಟು ತೊಂದರೆಗಳಿದ್ದರೂ ನಮಗೆ ಮಾತ್ರ ಅಪ್ಪನಲ್ಲಿ ಬದುಕುವ ಛಲ, ನಮ್ಮ ಬಗೆಗೆ ಇರುವ ಪ್ರೀತಿ ಮಾತ್ರ ಕಂಡಿದ್ದವು. ಬೆಳೆದು ದೊಡ್ಡವರಾದ ಮೇಲೂ ನಾವೆಲ್ಲಾ ಮಕ್ಕಳು ಅಪ್ಪನವರ ಸುತ್ತ ಕೂತುಕೊಂಡು ಅವರ ಬಾಲ್ಯದ ಕಥೆಗಳು ಮತ್ತು ಅನುಭವಗಳನ್ನು ಕೇಳುತ್ತಿದ್ದೆವು. ಅಪ್ಪ ಅದೆಷ್ಟು ಕಷ್ಟ ಪಟ್ಟು ನಮ್ಮನ್ನೆಲ್ಲಾ ಬೆಳೆಸಿದ್ದಾರೆಂದು ದೊಡ್ಡವರಾದ ಮೇಲೆ ತಿಳಿದಂತಾಯಿತು.
ಈ ಕೊರೊನಾ ಮಹಾಮಾರಿಗೆ ತುತ್ತಾಗಿ ಎಪ್ಪತ್ತೆರಡರ ಜೀವ ಸತತ ಹತ್ತು ಹನ್ನೆರಡು ದಿನಗಳ ವರೆಗೆ ಜೀವನ್ಮರಣದ ಹೋರಾಟದಲ್ಲಿ ಹೊರಟೇ ಹೋಯಿತು. ಅದೆಷ್ಟು ಕಷ್ಟಗಳು ಬಂದರೂ ನಗು ಮುಖ ಬೀರುತ್ತಿದ್ದ ಅಪ್ಪನವರು ಈ ಪಿಶಾಚಿ ಕೊರೊನಾದಿಂದಾಗಿ ನಗುವುದನ್ನೇ ಬಿಟ್ಟಿದ್ದರು. ಅದೆಷ್ಟು ತೊಂದರೆ ಆದರೂ ಹೇಳಿಕೊಳ್ಳದ ಅಪ್ಪ ಕೊರೊನಾ ದಿಂದಾಗುತ್ತಿದ್ದ ಉಸಿರಾಟದ ತೊಂದರೆಯನ್ನೂ ಹೇಳಲೇ ಇಲ್ಲ. ತಾನಾಗಿಯೇ ಐದಾರು ದಿನಗಳ ವರೆಗೆ ಒಬ್ಬಂಟಿಯಾಗಿ ಅದನ್ನು ನಿಭಾಯಿಸಿಕೊಂಡು ಹೋದರು.
ನಮ್ಮ ಬದುಕಿನ ಹೀರೋ ಹೀಗೆ ನಮ್ಮ ಮುಂದೆ ಪ್ರಾಣ ಬಿಡುತ್ತಿರುವ ಸಂದರ್ಭ ಬರುತ್ತದೆ ಎಂದು, ಅಂದುಕೊಂಡಿರಲೇ ಇಲ್ಲ! ಅಪ್ಪರವರ ಪ್ರಾಣ ಉಳಿಸಲು ಬೆಂಗಳೂರಿನ ಬೀದಿ ಬೀದಿಗೆ ರಾತ್ರಿ ಒಂದು ಎರಡು ಗಂಟೆಗಳೆನ್ನದೇ ಬೈಕ್ ಮೇಲೆ ಆಸ್ಪತ್ರೆ ಆಸ್ಪತ್ರೆ ಸುತ್ತಾಡಿದೆವು. ಮನೆಗೆ ಬಂದು ಬಿರಿಯಾನಿ ತಿಂದು ಹೋದ ಅದೆಷ್ಟೋ ಗೆಳೆಯರೂ ಮೂಕರಾಗಿಬಿಟ್ಟಿದ್ದರು. ತಮ್ಮ ಕಷ್ಟಗಳಿಗಾಗಿ, ಹೆಣ್ಣು ಮಕ್ಕಳ ಮದುವೆಗಳಿಗಾಗಿ, ಹಬ್ಬ ಹರಿದಿನಗಳಲ್ಲಿ ಖುಷಿ ಅಂತ ಹಣ ಕೇಳಲು ಮನೆಗೆ ಬರುತ್ತಿದ್ದ, ಕರೆ ಮಾಡುತ್ತಿದ್ದ ಗೆಳೆಯರು, ಸಂಬಂಧಿಗಳು ಕುಶಲ, ಕ್ಷೇಮ ವಿಚಾರಿಸಲೂ ಬಡವರಾಗಿ ಬಿಟ್ಟಿದ್ದರು.
ಕೊನೆಗೆ ಮನುಷ್ಯತ್ವ ಉಳಿದಿದೆ ಎಂಬಂತೆ ಅನೇಕ ಅಪರಿಚಿತರು ನಮಗೆ ಸಹಕಾರ ನೀಡಿದರು. ನಮಗೆ ಒಂದ್ಚೂರು ನೋವಾಗದಂತೆ ನೋಡಿಕೊಳ್ಳುತ್ತಿದ್ದ ಅಪ್ಪರವರನ್ನು ಉಳಿಸಲು ಅಣ್ಣಂದಿರೂ ಹಗಲಿರುಳು ಎನ್ನದೆ ಜೊತೆಯಾಗಿಯೇ ಉಪಚರಿಸಿದರು. ಸಿಕ್ಕ ಸಿಕ್ಕವರನ್ನು ಬೇಡಿಕೊಂಡಾಗ ಕೊನೇ ಕ್ಷಣಗಳಲ್ಲಿ ಆಸ್ಪತ್ರೆ ವ್ಯವಸ್ಥೆ ಮಾಡಲಾಯಿತು. ಆದರೆ ನಮ್ಮ ಪ್ರಾರ್ಥನೆಗಳೆಲ್ಲಾ ವ್ಯರ್ಥವಾದವು ದೇವರಿಗೆ ಮಾತ್ರ ನಮ್ಮ ಮೇಲೆ ಕರುಣೆ ಬರಲೇ ಇಲ್ಲ!! ಅಪ್ಪರವರಿಗೆ ಉಳಿಸುವ ನಮ್ಮ ಪ್ರಯತ್ನದ ಮುಂದೆ ದೇವರು ತೋರಿಸಿದ ಪ್ರೀತಿ ಗೆದ್ದು ಬಿಟ್ಟಿತು. ಅಪ್ಪ ನಮ್ಮನ್ನಗಲಿ ದೇವರತ್ತ ಹೋರಟು ಬಿಟ್ಟರು.
ನಿತ್ಯ ಚಾಚು ತಪ್ಪದೇ ಬಾಗಿಲು ತೆರೆದು ನನ್ನ ಬೀಳ್ಕೊಡುತ್ತಿದ್ದ ಅಪ್ಪ ದಿಢೀರನೇ ಹೊಗಿಬಿಟ್ಟಿದ್ದಾರೆ. ಕೆಲಸಕ್ಕಾಗಿ ಹೊರಡಲು ರೆಡಿಯಾಗಿ ನಿಂತರೆ ನೀರಿನ ಬಾಟಲ್ ತುಂಬಿ ಕೈಗೆ ಕೊಡುತ್ತಿದ್ದ ಅಪ್ಪ ಈಗ ಇಲ್ಲದಿದ್ದರಿಂದ ಆ ಬಾಟಲಿನ ನೀರೂ ಸಹ ಗಂಟಲಿನಿಂದ ಇಳಿಯುವಾಗ ಅಪ್ಪನಿಲ್ಲದ ಕಟು ಸತ್ಯವನ್ನು ಮತ್ತೇ ಮತ್ತೇ ನೆನಪಿಸುತ್ತಿದೆ. ಒಂದು ದಿನವೂ ಮನೆಯ ಹೊಸ್ತಿಲು ಒಬ್ಬಂಟಿಯಾಗಿ ದಾಟಲೂ ಬಿಡದೇ ಜೊತೆಯಲ್ಲಿ ಕಾವಲುಗಾರನಾಗಿದ್ದ ಅಪ್ಪ ಈಗಿಲ್ಲದಿರುವಾಗ ಪ್ರತಿ ಹೆಜ್ಜೆ ಹೆಜ್ಜೆಗೂ ತಾಗುವ ಕವಲುದಾರಿಗಳು ತೊಂದರೆಯನ್ನುಂಟುಮಾಡುತ್ತಿವೆ.
“ಅದೆಷ್ಟು ದೊಡ್ಡವರಾದರೂ ಅಪ್ಪ ಅಮ್ಮರನ್ನು ಮರೆಯುವಷ್ಟು ಬಲಿಷ್ಠತೆ ಬರೋದೇ ಇಲ್ಲ!!
ಅದೆಷ್ಟು ಮುಂದೆ ನೆಡದರೂ ಅಪ್ಪ ಅಮ್ಮನ ಕೈ ಹಿಡಿದು ಹಿಂದೆ ಸಾಗಿದ ದಾರಿ ಮರೆಯಕಾಗಲ್ಲ!!
ಅದೆಷ್ಟು ಧೈರ್ಯದಿಂದ ಹಿಗ್ಗಿದರೂ,
ಅಪ್ಪ ಅಮ್ಮನ ಅಗಲಿಕೆ, ಕುಗ್ಗಿಸದೇ ಬಿಡೋದಿಲ್ಲ”!!
ಆದರೂ ವಿಧಿಯಾಟ ನಾವೆಲ್ಲರೂ ಎದುರಿಸಲೇ ಬೇಕು.
ಏನೇ ನೋವು ಬಂದರೂ ಬಾಗದ ಅಪ್ಪನ ಗುಣ,ಛಲ ಮಾತ್ರ ಇಂದಿಗೂ ನಮ್ಮಲ್ಲಿದೆ. ಎಲ್ಲವನ್ನೂ ನಿಭಾಯಿಸುವ ಆತ್ಮವಿಶ್ವಾಸ, ಅಪ್ಪ ಕಲಿಸಿಕೊಟ್ಟ ಅಮೂಲ್ಯ ಸಂಸ್ಕಾರಗಳು ನಮ್ಮೊಟ್ಟಿಗಿವೆ. ಅಪ್ಪ ದೈಹಿಕವಾಗಿಲ್ಲದಿದ್ದರೂ ಮಾನಸಿಕವಾಗಿ ಎಂದಿಗೂ ನಮ್ಮೊಟ್ಟಿಗಿದ್ದಾರೆಂದೇ ಬದುಕುತ್ತಿದ್ದೇವೆ. ಬಾಲ್ಯದಿಂದಲೂ ಅಪ್ಪಂದಿರ ದಿನವನ್ನು ತುಂಬಾ ಸಡಗರದಿಂದ ಆಚರಿಸುತ್ತಿದ್ದೆವು. ಇಂದು ಈ ದಿನ ಅಪ್ಪ ಜೊತೆಗಿಲ್ಲ ಎಂಬ ಕಟು ಸತ್ಯದೊಂದಿಗೆ ಬದುಕುವುದು ಸ್ವಲ್ಪ, ಇಲ್ಲ ಇಲ್ಲ ಬಲೂ ಭಾರ ಅನ್ನಿಸುತ್ತಿದೆ!!! ಆದರೂ ಬದುಕಬೇಕು, ಬದುಕುತ್ತಿದ್ದೇವೆ!!!
(ಫರ್ಹಾನಾಜ್ ಮಸ್ಕಿ (ತಂದೆ- ಖ್ವಾಜಾ ಗೇಸುದರಾಜ್ ಹುಸೇನ್ ಕಿರನ್ ಬ್ಯಾಟರೀಸ್ ಮಸ್ಕಿ), ಸಹಾಯಕ ಪ್ರಾಧ್ಯಾಪಕರು ನೆಲಮಂಗಲ, ಬೆಂಗಳೂರು)
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂತರಂಗ
250ಕ್ಕೂ ಹೆಚ್ಚು ಗಿಳಿಗಳ ನಿಗೂಢ ಸಾವು ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ ಆತಂಕ
250ಕ್ಕೂ ಹೆಚ್ಚು ಗಿಳಿಗಳ ನಿಗೂಢ ಸಾವು
ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ ಆತಂಕ
ಬೆಂಗಳೂರು: ಮಧ್ಯಪ್ರದೇಶ ರಾಜ್ಯದ ಖಾರ್ಗೋನ್ ಜಿಲ್ಲೆಯಲ್ಲಿರುವ ನರ್ಮದಾ ನದಿ ತೀರದಲ್ಲಿ 250ಕ್ಕೂ ಹೆಚ್ಚು ಗಿಳಿಗಳು ಕೃಷಿ ಭೂಮಿಯಲ್ಲಿ ಬಳಸುವ ಕೀಟನಾಶಕ ಮಿಶ್ರಿತ ಆಹಾರ ಅಥವಾ ನರ್ಮದಾ ನದಿಯ ಕಲುಷಿತ ನೀರು ಸೇವಿಸಿ ಸಾವನ್ನಪ್ಪಿರುವ ಪ್ರಕರಣ ಇಡೀ ದೇಶದಲ್ಲಿ ಇದೇ ಮೊದಲ ಬಾರಿಗೆ ನಡೆದ ದುರ್ಘಟನೆ ಎಂದು ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷರೂ ಹಾಗೂ ರಾಷ್ಟ್ರೀಯ ಸಮಿತಿ ನಿರ್ದೇಶಕರಾದ ಮಾಲತೇಶ್ ಅರಸ್ ಹರ್ತಿಕೋಟೆ ಆತಂಕ ವ್ಯಕ್ತಪಡಿಸಿದ್ದಾರೆ.
ಕಳೆದ ಮೂರು ದಿನಗಳಲ್ಲಿ ನರ್ಮದಾ ನದಿ ತೀರದಲ್ಲಿ ಸುಮಾರು ಇನ್ನೂರಕ್ಕೂ ಅಧಿಕ ಗಿಳಿಗಳು ನಿಗೂಢವಾಗಿ ಸಾವನ್ನಪ್ಪಿದ್ದು ಆರಂಭದಲ್ಲಿ ಇದು ಹಕ್ಕಿ ಜ್ವರ ದಿಂದ ಸಾವನ್ನಪ್ಪಿರಬಹುದು ಎಂದು ಶಂಕಿಸಲಾಗಿತ್ತು ಆದರೆ ಪಶುವೈದ್ಯಕೀಯ ಅಧಿಕಾರಿ ಡಾ. ಸುರೇಶ್ ಬಫೇಲ್ ಅವರು ನೀಡಿದ ಮಾಹಿತಿ ಪ್ರಕಾರ ಹಕ್ಕಿಗಳ ಹೊಟ್ಟೆಯಲ್ಲಿ ಅಕ್ಕಿ ಕಾಳುಗಳು ಮತ್ತು ಸಣ್ಣ ಕಲ್ಲುಗಳು ಪತ್ತೆಯಾಗಿವೆ. ಅಲ್ಲದೆ ಕೃಷಿ ಭೂಮಿಯಲ್ಲಿ ಬಳಸುವ ಕೀಟನಾಶಕ ಮಿಶ್ರಿತ ಆಹಾರ ಅಥವಾ ನರ್ಮದಾ ನದಿಯ ಕಲುಷಿತ ನೀರು ಸೇವಿಸಿ 200 ರಿಂದ 50 ಕ್ಕೂ ಅಧಿಕ ಮೃತಪಟ್ಟಿರುವ ಸಾಧ್ಯತೆಗಳು ಹೆಚ್ಚಿವೆ ಎಂದು ಹೇಳಿದ್ದು ಇವರ ಮಾಹಿತಿಯನ್ನು ಆದರಿಸಿ ವಿಶೇಷ ತನಿಖೆ ಮಾಡಬೇಕು ಎಂದು ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ ಆಗ್ರಹಿಸಿದೆ.
ಖರ್ಗೋನ್ ಜಿಲ್ಲೆಯ ಬದ್ವಾ ಪ್ರದೇಶದ ನರ್ಮದಾ ನದಿ ತೀರದಲ್ಲಿರುವ ಅಕ್ವೆಡಕ್ಟ್ ಸೇತುವೆಯ ಸಮೀಪ ಈ ಘಟನೆ ಬೆಳಕಿಗೆ ಬಂದಿದ್ದು ಅರಣ್ಯ ಇಲಾಖೆಯು ಸೇತುವೆಯ ಸುತ್ತಮುತ್ತ ಹಕ್ಕಿಗಳಿಗೆ ಆಹಾರ ನೀಡುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಿದೆ. ಸದ್ಯ ಹಕ್ಕಿಗಳ ಸಾವಿಗೆ ನಿಖರ ಕರಣ ತಿಳಿಯಲು ಹಕ್ಕಿಗಳ ಅವಶೇಷಗಳನ್ನು ಜಬಲ್ಪುರಕ್ಕೆ ಕಳುಹಿಸಲಾಗಿದೆ. ಸದ್ಯ ಅರಣ್ಯ ಇಲಾಖೆ ಮತ್ತು ಪಶುವೈದ್ಯಕೀಯ ತಂಡಗಳು ಸ್ಥಳದಲ್ಲೇ ಬೀಡುಬಿಟ್ಟಿದ್ದು, ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿವೆ.
ಇನ್ನೊಂದು ಮುಖ್ಯ ವಿಚಾರ ಏನೆಂದರೆ ಪಕ್ಷಿಗಳಿಗೆ ಮನುಷ್ಯರು ಸೇವಿಸುವ ಎಣ್ಣೆ ಪದಾರ್ಥ ಅಥವಾ ಬೇಯಿಸಿದ ಆಹಾರ ನೀಡುವುದು ಅವುಗಳ ಜೀರ್ಣಾಂಗ ವ್ಯವಸ್ಥೆಯ ಮೇಲೆ ಮಾರಕ ಪರಿಣಾಮ ಬೀರುತ್ತದೆ ಎಂದು ಪಶುವೈದ್ಯಕೀಯ ಅಧಿಕಾರಿ ಡಾ. ಮನಿಷಾ ಚೌಹಾಣ್ ಹೇಳಿದ್ದಾರೆ. ಏನೇ ಆದರೂ ನೂರಾರು ಗಿಳಿಗಳು ಸಾವನ್ನಪಿರುವುದು ಮಾತ್ರ ದುರಂತ.
ಈ ಸಂದರ್ಭದಲ್ಲಿ ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷರೂ ಹಾಗೂ ರಾಷ್ಟ್ರೀಯ ಸಮಿತಿ ನಿರ್ದೇಶಕರಾದ ಮಾಲತೇಶ್ ಅರಸ್ ಹರ್ತಿಕೋಟೆ, ಹಿರಿಯ ಉಪಾಧ್ಯಕ್ಷರಾದ ಗುರುರಾಜ್ ಹೂಗಾರ್, ಉಪಾಧ್ಯಕ್ಷರಾದ ಯೋಗೀಶ್ ಕುಮಾರ್, ರುದ್ರಮುನಿ, ಡಾ.ಸಿದ್ದಲಿಂಗಪ್ಪ, ಮತ್ತು ಪದಾಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

ಅಂಕಣ
Indian birthwort: ಪರಮಾತ್ಮನ ಹೆಸರಲ್ಲೇ ಇರುವ ದಿವ್ಯೌಷದ ಈಶ್ವರ ಬಳ್ಳಿ ಬಗ್ಗೆ ಗೊತ್ತೇ?
‘ಈಶ್ವರ’ ಎಂದ ಕೂಡಲೇ ಪರಮಾತ್ಮನನ್ನೆ ನೆನಪಿಸಿಕೊಳ್ಳೋ ನಮಗೆ ಅದೇ ಹೆಸರಿನಲ್ಲಿ ದಿವ್ಯೌಷಧಿ ಇದೆ ಎಂಬುದು ಎಷ್ಟು ಜನರಿಗೆ ತಿಳಿದೀತು? ಹೌದು! ಪರಮಾತ್ಮನ ಹೆಸರಿನಲ್ಲೇ ಒಂದು ಗಿಡಮೂಲಿಕೆ ಇದೆ (Indian birthwort). ಇದರ ವಿಶೇಷತೆ ಏನು? ಅದರಿಂದಾಗುವ ಪ್ರಯೋಜನಗಳೇನು? ಆರೋಗ್ಯದ ಮೇಲೆ ಬೀರುವ ಪ್ರಬಾವಗಳೇನು? ಎಂಬುದನ್ನು ಈ ಲೇಖನದಲ್ಲಿ ತಿಳಿಯೋಣ.
ಈ ಬಳ್ಳಿಯನ್ನು ಹೆಚ್ಚಾಗಿ ಭಾರತ, ನೇಪಾಳ, ಶ್ರೀಲಂಕಾ ಮತ್ತು ಬಾಂಗ್ಲಾದೇಶಗಳಲ್ಲಿ ಕಾಣಬಹುದಾಗಿದೆ. ಇದರ ವೈಜ್ಞಾನಿಕ ಹೆಸರು ಅರಿಸ್ಟೋಲೋಚಿಯ ಇಂಡಿಕಾ. ಸಾಮಾನ್ಯವಾಗಿ ಮೂಲಿಕೆ ಮರಕ್ಕೆ ಸುತ್ತಿಕೊಂಡು ಬೆಳೆಯುವ ಕಪ್ಪು ಬಳ್ಳಿಯಾಗಿದ್ದು, ಇದರ ಎಲೆಗಳು ಉದ್ದವಾಗಿ, ತಳದಲ್ಲಿ ಅಗಲವಾಗಿ, ತುದಿಯಲ್ಲಿ ಮೊನಚಾಗಿ, ಮೃದುವಾಗಿರುತ್ತದೆ. ಇನ್ನೂ ಇದರ ಬೀಜಗಳು ಚಪ್ಪಟೆಯಾಗಿ, ಅಂಡಕಾರವಾಗಿದ್ದು ಪುಕ್ಕಗಳನ್ನು ಹೊಂದಿದೆ ಹಾಗು ಇದರ ಬೇರುಗಳಲ್ಲಿ ಸುಗಂಧ ತೈಲವಿರುತ್ತದೆ.
ಈಶ್ವರ ಬಳ್ಳಿ (Indian birthwort)ಯ ಪೌರಾಣಿಕ ಹಿನ್ನೆಲೆ:
ನಮ್ಮೆಲ್ಲರಿಗೂ ತಿಳಿದಂತೆ ಶಿವ ಸಮುದ್ರ ಮಂಥನ ಮಾಡುವಾಗ ಹಾಲಾಹಲ (ವಿಷ) ಉತ್ಪತ್ತಿಯಾಯಿತು. ಆ ವಿಷ ಯಾರಿಗೂ ತೊಂದರೆಯಾಗಬಾರದೆಂದು ತಾನೇ ಅದನ್ನು ಕುಡಿದ. ಇದನ್ನು ನೋಡಿದ ಪಾರ್ವತಿ ದೇವಿ ಆ ವಿಷ ತನ್ನ ಪತಿಯ ಹೊಟ್ಟೆ ಸೇರಬಾರದೆಂದು ಆತನ ಕುತ್ತಿಗೆಯನ್ನು ಒತ್ತಿ ಹಿಡಿದಳು. ವಿಷ ಒಳ ಹೋಗಲಿಲ್ಲ. ವಿಷದ ಪ್ರಭಾವದಿಂದ ಕುತ್ತಿಗೆ ನೀಲ ವರ್ಣವಾಯಿತು. ಶಿವ ನೀಲಕಂಠನಾದ. ಶಿವ ವಿಷ ಕುಡಿದರೂ ಶಿವನಿಗೆ ಏನೂ ಆಗಲಿಲ್ಲ. ವಿಷವನ್ನು ನಿರ್ವಿಷ ಮಾಡುವ ಗುಣ ಶಿವನಿಗಿದ್ದಂತೆ ಈ ಗಿಡಕ್ಕೂ ಇರುವ ಕಾರಣ ‘ಈಶ್ವರ’ ಎಂಬ ಹೆಸರು ಈ ವನಸ್ಪತಿಗೆ ಇಟ್ಟಿದ್ದಾರೆ.
ಇದನ್ನೂ ಓದಿ: ಓಂಶಕ್ತಿ ಮಾಲಾಧಾರಿಗಳ ಮೇಲೆ ಕಲ್ಲು ತೂರಾಟ
‘ಈಶ್ವರ’ ಬಳ್ಳಿ ಮತ್ತು ಅದರ ಫಲ ನೋಡಲು ಹೇಗಿರುತ್ತದೆ?
ಕೆಲ ‘ಈಶ್ವರ’ ಬಳ್ಳಿಯು ಮರದಂತೆ ಉದ್ದಕ್ಕೆ ಏರುತ್ತದೆ. ಮತ್ತಷ್ಟು ಬಳ್ಳಿಯು ಪೊದೆಯಾಗಿ ಆವರಿಸಿಕೊಳ್ಳುತ್ತದೆ. ಸ್ವಲ್ಪ ಉದ್ದ ಆಯತಾಕಾರದ ಎಲೆಗಳು. ಎಲೆಗಳು ಅಲ್ಲಾಡಿದರೆ ಪರಿಮಳ ಸೂಸುತ್ತದೆ. ಎಲೆಯನ್ನು ಕಿವಿಚಿದರೂ ಪರಿಮಳ ಬರುತ್ತದೆ. ಹೂಗಳು ಬಾಯಿ ತೆರೆದ ಹಕ್ಕಿಗಳಂತೆ ಕಂಡುಬರುತ್ತದೆ. ಫಲಗಳು ಉದ್ದ ಹಾಗೂ ಸ್ವಲ್ಪ ದುಂಡಾಗಿ ಇರುತ್ತದೆ. ಫಲ ಬೆಳೆದು ಒಡೆದಾಗ ತಲೆ ಕೆಳಗಾಗಿ ಬಿಡಿಸಿದ ಪ್ಯಾರಾಚೂಟ್ನಂತೆ ಕಾಣುತ್ತದೆ. ಅದರೊಳಗೆ ತೆಳುವಾದ ತ್ರಿಕೋಣಾಕಾರದ ಬೀಜಗಳು ಇರುತ್ತದೆ.
‘ಈಶ್ವರ’ ಬಳ್ಳಿ (Indian birthwort)ಯಿಂದ ಆಗುವ ಪ್ರಯೋಜನಗಳೇನು?
ಭಾರತದ ಎಲ್ಲಾ ಕಡೆ ಕಂಡು ಬರುವ ಈಶ್ವರ ಬಳ್ಳಿಯ ಬೇರು, ಎಲೆಗಳು ಔಷಧಿಗಾಗಿ ಉಪಯೋಗಿಸಲ್ಪಡುತ್ತದೆ. ಕ್ರಿಮಿ ಬಾಧೆ, ಕಫ ಬಾಧೆ, ಸ್ತ್ರೀಯರ ಕೆಲವು ತೊಂದರೆಗಳಲ್ಲಿ, ವಿಷ ಚಿಕಿತ್ಸೆಯಲ್ಲಿ ವಿಶೇಷವಾಗಿ ಇದನ್ನು ಉಪಯೋಗಿಸಲ್ಪಡುತ್ತದೆ.
ಜೇಡ, ಚೇಳು, ಇಲಿ ಕಚ್ಚಿದರೆ: ಇದರ 3ಗ್ರಾಂ ಬೇರನ್ನು ಅಕ್ಕಿ ತೊಳೆದ ನೀರಲ್ಲಿ ಕಲಸಿ ಕುಡಿಸಬೇಕು ಹಾಗೂ ಅದರ ಎಲೆಯನ್ನು ನೀರಲ್ಲಿ ಅರೆದು ಕಚ್ಚಿದಲ್ಲಿಗೆ ಲೇಪಿಸಬೇಕು.
ತಲೆ ನೋವಿಗೆ ರಾಮಬಾಣ: ಈಶ್ವರ ಬಳ್ಳಿಯ ಎಲೆಯಲ್ಲಿ 10 ಗ್ರಾಂ ರಸ ತೆಗೆದು, 3ಗ್ರಾಂ ಅರಿಶಿನ ಪುಡಿ ಸೇರಿಸಿ ಕುಡಿಯುವುದರಿಂದ ತಲೆನೋವು ಶೀಘ್ರವಾಗಿ ಕಡಿಮೆಯಾಗುತ್ತದೆ.
ಗಂಟುನೋವು, ಬಿಳಿ ಮಚ್ಚೆಗಳು: ಈ ಎಲೆಯನ್ನು ನೀರಲ್ಲಿ ಅರೆದು ಗಂಟುನೋವು ಅಥವಾ ಬಿಳಿ ಮಚ್ಚೆಗಳ ಮೇಲೆ ಹಚ್ಚುತ್ತ ಬಂದರೆ ಕ್ರಮೇಣ ವಾಸಿಯಾಗುತ್ತದೆ.
ಕೆಮ್ಮು ಕಫಕ್ಕೆ ಔಷಧಿ: ಇದರ ಎಲೆಯ ಜ್ಯೂಸ್ ತೆಗೆದು 15 ಎಂಎಲ್ ನಷ್ಟು ಕುಡಿಸುವುದರಿಂದ ಕಡಿಮೆಯಾಗುವುದು. ಕೆಲವೊಮ್ಮೆ ಈ ಎಲೆಯ ಜ್ಯೂಸ್ ಕುಡಿದ ಸ್ವಲ್ಪ ಹೊತ್ತಿನಲ್ಲಿ ಕಫ ವಾಂತಿಯಾಗಿ ಕರಗಿ ಹೋಗುತ್ತದೆ. ಕಫ ಜಾಸ್ತಿ ಇರುವಾಗ ಸಾಮಾನ್ಯವಾಗಿ ಅಮೃತಾಂಜನ, ವಿಕ್ಸ್ ಎದೆಗೆ ಹಚ್ಚುತ್ತಾರೆ. ಅದೇ ರೀತಿ ಎಲೆಯನ್ನು ಅರೆದು ಎದೆಗೆ ಹಚ್ಚಬಹುದು.
ಮುಟ್ಟಿನ ದೋಷ ನಿವಾರಣೆ: ಹೆಣ್ಣುಮಕ್ಕಳ ಋತುಚಕ್ರದ ವೇಳೆ ಕಾಣಿಸಿಕೊಳ್ಳುವ ಹೊಟ್ಟೆನೋವಿಗೆ 10ಗ್ರಾಂ ಈಶ್ವರ ಬೇರಿನ ಕಷಾಯ ಮಾಡಿ (30 ರಿಂದ 40 ಎಂ.ಎಲ್) ಕುಡಿಸಬೇಕು.
ಹೊಟ್ಟೆ ಕ್ರಿಮಿ ಬಾಧೆ: 5-10 ಮಿಲಿ ಎಲೆರಸವನ್ನು 3 ದಿನ ಕುಡಿಯುವುದರಿಂದ ಕಡಿಮೆಯಾಗುವುದು.
ಜ್ವರಕ್ಕೆ ದಿವ್ಯೌಷಧಿ: 5 ಗ್ರಾಂ ಈಶ್ವರ ಬೇರನ್ನು ಕಷಾಯ ಮಾಡಿ ಅದಕ್ಕೆ 1/2 ಚಮಚ ಕಾಳು ಮೆಣಸು ಪುಡಿ ಸೇರಿಸಿ ಕುಡಿಯುವುದರಿಂದ ಕಡಿಮೆಯಾಗುವುದು. ಶರೀರ ಬಿಸಿ ಆಗಿ ಚಳಿಯಿಂದ ಕೂಡಿದ ಜ್ವರವಿದ್ದರೆ ಈಶ್ವರ ಬೇರಿನ ಕಷಾಯದೊಂದಿಗೆ ಈಶ್ವರ ಬೇರಿನ ಎಲೆ ರಸಕ್ಕೆ ಹಿಪ್ಪಿಯನ್ನು ಪುಡಿಮಾಡಿ ಸೇರಿಸಿ ಕುಡಿಯುವುದರಿಂದ ಕಡಿಮೆಯಾಗುವುದು.
ಸರ್ಪ ಸುತ್ತಿಗೆ ರಾಮಬಾಣ: ಇತ್ತೀಚೆಗೆ ಸರ್ಪ ಸುತ್ತಿಗೆ ಅನೇಕ ಔಷಧಿಗಳಿದ್ದರು ಈಶ್ವರ ಬೇರು ಮತ್ತು ನೀಲಿ ಸೊಪ್ಪನ್ನು ಸೇರಿಸಿ ಅರೆದು ಹಚ್ಚುವುದರಿಂದ ಉರಿ ನೋವು ಕಡಿಮೆಯಾಗುವುದು.
ದೃಷ್ಟಿ ದೋಷ ನಿವಾರಣೆ: ಇದರ ಬೇರನ್ನು ನಯವಾಗಿ ಚೂರ್ಣಮಾಡಿ ಅದಕ್ಕೆ ಅಪ್ಪಟ ಗೋರೋಜನ ಮತ್ತು ಚಂದನ ಸೇರಿಸಿ ತಿಲಕವಿಟ್ಟರೆ ದೃಷ್ಟಿ ದೋಷ ಪರಿಹಾರವಾಗುತ್ತದೆ.
ಮಲಬದ್ಧತೆ ಮತ್ತು ಮೂಲವ್ಯಾಧಿ ನಿವಾರಣೆ: ಈಶ್ವರಿಬೇರು, ಹಾವು ಮೆಕ್ಕೆ ಬೇರು ದಂತಿ, ತಿಗಡೆ ಕೊಮ್ಮೆ ಬೇರು, ಅಳಲೆಕಾಯಿ ಸಿಪ್ಪೆ, ಹಿಪ್ಪಲಿ ಇವುಗಳೆಲ್ಲವನ್ನು ಸಮತೂಕದಲ್ಲಿ ನಯವಾಗಿ ಚೂರ್ಣಿಸಬೇಕು. ನಂತರ 2 ರಿಂದ 2.5 ಗ್ರಾಂ ಚೂರ್ಣವನ್ನು ಸೇವಿಸಿ ಬಿಸಿನೀರು ಕುಡಿದರೆ ಮಲಬದ್ಧತೆ ಮತ್ತು ಮೂಲವ್ಯಾದಿ ನಿವಾರಣೆಯಾಗುತ್ತದೆ.
ಹೀಗೆ ಈಶ್ವರ ಬೇರು (Indian birthwort) ಮತ್ತು ಅದರ ಎಲೆಯಲ್ಲಿ ಅಡಗಿರುವ ದಿವ್ಯೌಷಧಿ ಅಪಾರ. ಅದರಲ್ಲಿ ತೀಕ್ಷ ಗುಣಗಳುಳ್ಳ ಮದ್ದಾಗಿದ್ದು, ಅನೇಕ ಕಾಯಿಲೆಗಳಿಗೆ ರಾಮಬಾಣವಾಗಿದೆ. ಯಾವುದೇ ಔಷಧಿಯಾದರು ಉಪಯೋಗಿಸು ಮುನ್ನ ಒಮ್ಮೆ ತಜ್ಞ ವೈದ್ಯರ ಸಲಹೆ ಪಡೆಯುವುದು ಸೂಕ್ತ.

ದಿನದ ಸುದ್ದಿ
ಗೃಹಬಳಕೆ ಎಲ್ಪಿಜಿ ಸಿಲೆಂಡರ್ ಬೆಲೆಯಲ್ಲಿ ಬದಲಾವಣೆ ಇಲ್ಲ
ಸುದ್ದಿದಿನಡೆಸ್ಕ್:ಗೃಹಬಳಕೆಯ ಎಲ್ಪಿಜಿ ಸಿಲೆಂಡರ್ ಬೆಲೆಯಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ಸ್ಪಷ್ಟಪಡಿಸಿದೆ.
ಗೃಹ ಬಳಕೆ ಎಲ್ಪಿಜಿ ಸಿಲೆಂಡರ್ ಬೆಲೆಯನ್ನು 111 ರೂಪಾಯಿಗಳಷ್ಟು ಹೆಚ್ಚಿಸಲಾಗಿದೆ ಎಂಬ ಮಾಧ್ಯಮ ವರದಿಗಳನ್ನು ತಳ್ಳಿ ಹಾಕಿರುವ ಸಚಿವಾಲಯ, ವಾಣಿಜ್ಯ ಸಿಲೆಂಡರ್ ಬೆಲೆಯು ಅಂತಾರಾಷ್ಟ್ರೀಯ ಕಚ್ಚಾ ಅನಿಲ ಮತ್ತು ಸಂಬAಧಿತ ದರಗಳ ಮೇಲೆ ಅವಲಂಬಿತವಾಗಿದ್ದು, ಆಗಾಗ್ಗೆ ಮಾರುಕಟ್ಟೆಯ ದರಗಳು ಬದಲಾಗುತ್ತವೆ. ಆದರೆ, ಗೃಹ ಬಳಕೆಯ ಸಿಲೆಂಡರ್ ದರದಲ್ಲಿ ಯಾವುದೇ ವ್ಯತ್ಯಾಸವಿಲ್ಲ ಎಂದು ತಿಳಿಸಿದೆ.
ದೆಹಲಿಯಲ್ಲಿ 14.2 ಕೆಜಿ ಗೃಹ ಬಳಕೆ ಅಡುಗೆ ಅನಿಲ ಸಿಲೆಂಡರ್ ಬೆಲೆ 950 ರೂಪಾಯಿಯಾಗಿದ್ದು, ಪ್ರಧಾನಮಂತ್ರಿ ಉಜ್ವಲ ಯೋಜನೆಯ ಫಲಾನುಭವಿಗಳಿಗೆ ಇದು 553 ರೂಪಾಯಿ ಬೆಲೆಯಲ್ಲಿ ಲಭ್ಯವಿದೆ. ಇದು ಆಗಸ್ಟ್ 2023 ರಿಂದ ನವೆಂಬರ್ 2025ರವರೆಗೆ ಹೋಲಿಸಿದರೆ, ಶೇಕಡಾ 39 ರಷ್ಟು ದರ ಕಡಿತವನ್ನು ಸೂಚಿಸುತ್ತದೆ. ಜನರಿಗೆ ಸುಸ್ಥಿರ ಇಂಧನ ಪೂರೈಕೆಗೆ ಒತ್ತು ನೀಡಲಾಗಿದ್ದು, ದರ ಬದಲಾವಣೆ ಇಲ್ಲ ಎಂದು ಸಚಿವಾಲಯ ಮಾಹಿತಿ ನೀಡಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243




