Connect with us

ದಿನದ ಸುದ್ದಿ

ಭಾರತದ ದಿವ್ಯ ಮೌನವೇ ಗಟ್ಟಿಯಾದ ಧ್ವನಿ

Published

on

  • ಮೂಲ : ಗೋಪಾಲಕೃಷ್ಣ ಗಾಂಧಿ (ದ ಹಿಂದೂ 15-9-20),ಅನುವಾದ : ನಾ ದಿವಾಕರ

1918-20ರ ಸ್ಪಾನಿಷ್ ಫ್ಲೂ, 1958, 66, 73 ಮತ್ತು 1980ರ ಆರ್ಥಿಕ ಹಿಂಜರಿತ ಮತ್ತು 1962ರ ಭಾರತ-ಚೀನಾ ಯುದ್ಧ ಇವೆಲ್ಲವೂ ಮತ್ತೊಮ್ಮೆ ಭಾರತವನ್ನು, ಭಾರತೀಯರನ್ನು ಕಾಡುತ್ತಿದೆ. ಈ ಬಹುಮುಖಿ ಸಮಸ್ಯೆಯನ್ನು ಹೇಗೆ ನಿಭಾಯಿಸುವುದು ಎಂದು ಬಹುಶಃ ಯಾರಿಗೂ ತಿಳಿಯುತ್ತಿಲ್ಲ. ವಾಸ್ತವ ಎಂದರೆ ವಸ್ತುಸ್ಥಿತಿ ಹೇಗಿದೆ ಎಂದೂ ಯಾರಿಗೂ ಸ್ಪಷ್ಟವಾಗಿ ತಿಳಿದಿಲ್ಲ.

ಕೋವಿದ್ 19 ಕುರಿತಂತೆ ನಮಗೆ ಕರಾರುವಾಕ್ಕಾಗಿ, ವಸ್ತುನಿಷ್ಠವಾಗಿ, ಅಧಿಕಾರಯುತವಾಗಿ, ಸಮಾಧಾನಕರವಾಗಿ ನಿರ್ದಿಷ್ಟ ಮಾಹಿತಿಯನ್ನು ನಮಗೆ ಯಾರೂ ನೀಡುತ್ತಿಲ್ಲ. ಸಾಂಕ್ರಾಮಿಕ ರೋಗಗಳ ತಜ್ಞ ಡಾ ಟಿ ಜಾಕಬ್ ಜಾನ್ ಅವರು ಹೇಳುವಂತೆ ಭಾರತ ಬ್ರೆಜಿಲ್ ಮತ್ತು ಅಮೆರಿಕವನ್ನೂ ಹಿಂದಿಕ್ಕಿ , ವಿಶ್ವದಲ್ಲೇ ಅತಿ ಹೆಚ್ಚು ಕೊರೋನಾ ಸೋಂಕಿತರನ್ನು ಹೊಂದಿರುವ ದೇಶವಾಗಿ ಹೊರಹೊಮ್ಮುತ್ತಿದೆ.

ದಿನನಿತ್ಯ ವರದಿಯಾಗುವ ಕೊರೋನಾ ಸೋಂಕಿತರ ಸಂಖ್ಯೆಯಲ್ಲಿ ಭಾರತ ವಿಶ್ವದಲ್ಲೇ ಪ್ರಥಮ ಸ್ಥಾನದಲ್ಲಿದೆ. ಆದರೆ ಈ ಕುರಿತು ಸವಿವರವಾಗಿ ತಿಳಿದುಕೊಳ್ಳುವುದು ಸಾಕಷ್ಟಿದೆ. ಸರ್ಕಾರಿ ಮೂಲಗಳಿಂದ ಅಧಿಕೃತ ಮಾಹಿತಿಯನ್ನು ಈ ದೇಶದ ನಾಗರಿಕರು ಪಡೆಯಬೇಕಿದೆ. ಇದು ಸಾಧ್ಯವಾಗುತ್ತಿಲ್ಲ.

ಭಾರತದಲ್ಲಿ ಕೋವಿದ್ 19 ಸಾಮುದಾಯಿಕವಾಗಿ ಹರಡುತ್ತಿದೆಯೇ? (ಸಮುದಾಯ ಪ್ರಸರಣ ಏಪ್ರಿಲ್ ತಿಂಗಳಲ್ಲೇ ಆರಂಭವಾಗಿದೆ ಎಂದು ಆಗಲೇ ತಜ್ಞರು, ವೈದ್ಯರು ಎಚ್ಚರಿಸಿದ್ದರು-ಅನು) ಇದು ಹೌದಾದರೆ ದಿನನಿತ್ಯದ ಪರೀಕ್ಷೆ ಮತ್ತು ತಪಾಸಣೆಯ ಪ್ರಮಾಣವನ್ನು ಹೆಚ್ಚಿಸಬೇಕು. ಅವಶ್ಯಕತೆಗೆ ಅನುಗುಣವಾಗಿ ಆಸ್ಪತ್ರೆಯಲ್ಲಿ ಹಾಸಿಗೆ ಸೌಲಭ್ಯಗಳು ಮತ್ತು ವೆಂಟಿಲೇಟರ್‍ಗಳನ್ನು ಒದಗಿಸಬೇಕು.

ಅಥವಾ ಜನರು ತಮ್ಮ ಮನೆಯಲ್ಲಿದ್ದುಕೊಂಡೇ ತಾವೇ ಪರೀಕ್ಷೆ ಮಾಡಿಸಿಕೊಂಡು, ಚಿಕಿತ್ಸೆ ಪಡೆದು ಈ ವೈರಾಣುವಿನಿಂದ ಪಾರಾಗಬೇಕು ಎಂದು ಅಪೇಕ್ಷಿಸಲಾಗುತ್ತಿದೆಯೇ ? ಈಗ ಕೊರೋನಾ ವೈರಾಣು ನಗರ ಪ್ರದೇಶಗಳನ್ನು ತೊರೆದು ಭಾರತದ ಹಳ್ಳಿ ಹಳ್ಳಿಗಳನ್ನು ತಲುಪುತ್ತಿದೆಯೇ ? ಇದು ಹೌದಾದರೆ ಗ್ರಾಮೀಣ ಭಾರತದ ಜನತೆಗೆ ತಮ್ಮ ಮೇಲೆ ಎರಗಿರುವ ಈ ಅಪಾಯದ ಅರಿವು ಇದೆಯೇ ? ಭಾರತದ ಗ್ರಾಮಗಳು ಈ ಸೋಂಕಿನ ಪರಿಣಾಮವನ್ನು ಎದುರಿಸಲು ಕನಿಷ್ಟ ಮಟ್ಟದ ತಯಾರಿ ನಡೆಸಿವೆಯೇ ?

ಈ ಸವಾಲನ್ನು ಸಮರ್ಥವಾಗಿ ಎದುರಿಸಲು ಆರೋಗ್ಯ ಕೇಂದ್ರಗಳು ಮತ್ತು ವೈದ್ಯಕೀಯ ಸೌಲಭ್ಯಗಳನ್ನು ಹೊಂದಿವೆಯೇ ? ನಮ್ಮ ಆಲೋಚನೆಯಾದರೂ ಏನು ? ಏನಾದರೂ ಯೋಚಿಸಿರಲೇಬೇಕಲ್ಲವೇ ? ಸೋಂಕಿನ ಪ್ರಮಾಣ ಮತ್ತು ಪ್ರಸರಣ ಗಗನಕ್ಕೇರುತ್ತಿರುವ ಸಂದರ್ಭದಲ್ಲಿ ದೇಶಾದ್ಯಂತ ಎಲ್ಲ ರೀತಿಯ ಚಟುವಟಿಕೆಗಳಿಗೂ ಅವಕಾಶ ನೀಡುತ್ತಿರುವ ಅಧಿಕಾರ ವರ್ಗದಲ್ಲಿ ಈ ಆಲೋಚನೆ ಬಂದಿರಬೇಕಲ್ಲವೇ ? ಇದಕ್ಕೆ ತಾರ್ಕಿಕ ವಿವರಣೆ ಖಂಡಿತವಾಗಿಯೂ ಬೇಕಿದೆ.

ಶೋಧಿಸಬೇಕಾದ ಪ್ರಶ್ನೆಗಳು ಹಲವು

ಇದೇ ರೀತಿ ಲಾಕ್ ಡೌನ್ ಪರಿಣಾಮದಿಂದ ಮತ್ತು ಆರ್ಥಿಕ ಹಿಂಜರಿತದ ಪರಿಣಾಮ ದೇಶಾದ್ಯಂತ ವೇತನ ಪಡೆಯುವಂತಹ ನೌಕರರ ಮತ್ತು ಕೂಲಿಯಿಲ್ಲದ ಜನರ ಜೀವನೋಪಾಯ ಸತತವಾಗಿ ಕುಸಿಯುತ್ತಿರುವುದರ ಪರಿಣಾಮ ಏನು ಎನ್ನುವುದು ನಮಗೆ ತಿಳಿದಿಲ್ಲ. ದೇಶದಲ್ಲಿ ಜನಸಾಮಾನ್ಯರ ಕೊಳ್ಳುವ ಸಾಮರ್ಥ್ಯ ಕ್ಷೀಣಿಸುತ್ತಿರುವ ಹಿನ್ನೆಲೆಯಲ್ಲಿ, ರಫ್ತು ಪ್ರಮಾಣ ಕುಸಿಯುತ್ತಿರುವ ಹಿನ್ನೆಲೆಯಲ್ಲಿ ಗ್ರಾಮೀಣ ಪ್ರದೇಶಗಳಲ್ಲಿನ ರೈತರು ಮತ್ತು ಕೃಷಿ ಕಾರ್ಮಿಕರು ತಮ್ಮ ಫಸಲನ್ನು ಏನು ಮಾಡಬಹುದು ಎನ್ನುವುದೂ ನಮಗೆ ತಿಳಿದಿಲ್ಲ.

ನಮ್ಮ ಗೋದಾಮುಗಳಲ್ಲಿ ಭರ್ತಿ ದವಸ ಧಾನ್ಯಗಳು ತುಂಬಿದ್ದರೂ ಇತ್ತ ಜನಸಾಮಾನ್ಯರು ಹಸಿವಿನಿಂದ ಸಾಯುತ್ತಿರುವ ವಿಡಂಬನೆಯನ್ನು ನಾವು ಕಾಣಲಿದ್ದೇವೆಯೇ ? ನಗರಗಳಲ್ಲಿರುವ ಹಿತವಲಯದ ಜನರು ನಿತ್ಯ ಹಾಲು ಖರೀದಿಸುತ್ತಿದ್ದಾರೆ ಆದರೆ ಹಾಲು ಪೂರೈಸುವವರಿಗೆ ಸೂಕ್ತ ಬೆಲೆಯಲ್ಲಿ ಹಣ ಪಾವತಿಸಲಾಗುತ್ತಿದೆಯೇ ? ಈ ವಿಚಾರದಲ್ಲಿ ನಾಗರಿಕರಿಗೆ ಮನದಟ್ಟಾಗುವಂತೆ ತಿಳಿಸಿ ಹೇಳುವ ಹಣಕಾಸು ತಜ್ಞರು ಸರ್ಕಾರದಲ್ಲಿ ಇಲ್ಲವೇ ಇಲ್ಲ.

ಇನ್ನೂ ಮುಖ್ಯವಾದ ಸಂಗತಿ ಎಂದರೆ, ನಮ್ಮ ನಡುವೆ ವಿಶ್ಲೇಷಕರು ಮತ್ತು ಚರ್ಚಾಪಟುಗಳು ಹೇರಳವಾಗಿ ಲಭ್ಯವಿದ್ದರೂ, ವಿದ್ವತ್ ಪೂರ್ಣ ಎನ್ನಬಹುದಾದ ಸಾಮಾಜಿಕ ತತ್ವಶಾಸ್ತ್ರಜ್ಞರು ಇಲ್ಲ. ಭಾರತ ಇಂದು ಎದುರಿಸುತ್ತಿರುವ ವೈದ್ಯಕೀಯ, ಆರ್ಥಿಕ ಮತ್ತು ಪರಿಸರ ಸಂಬಂಧಿತ ಬಿಕ್ಕಟ್ಟಿನ ಎಲ್ಲ ಅಂಶಗಳನ್ನೂ ಪರಸ್ಪರ ಸಂಪರ್ಕಿಸಿ ಇದರ ಜಾಗತಿಕ ಪರಿಣಾಮಗಳನ್ನು ಅರ್ಥಮಾಡಿಕೊಳ್ಳಲು ಭಾರತದ ಪ್ರಜೆಗಳಿಗೆ ಸಾಧ್ಯವಾಗುತ್ತಿಲ್ಲ.

ದೇಶದ ನೈಸರ್ಗಿಕ ಸಂಪತ್ತು ಮತ್ತು ಸಂಪನ್ಮೂಲಗಳನ್ನು, ಮಾನವ ಸಂಪನ್ಮೂಲಗಳನ್ನು ಏಕಸ್ವಾಮ್ಯ ಕಾರ್ಪೋರೇಟ್ ಉದ್ಯಮಿಗಳ ಲಾಭಗಳಿಕೆಗಾಗಿ ಲೂಟಿ ಮಾಡಲಾಗುತ್ತಿರುವುದರಿಂದಲೇ ಭಾರತದ ಪ್ರಜೆಗಳು ಕೋವಿದ್ 19ನಿಂದ ಹೆಚ್ಚಿನ ಬಿಕ್ಕಟ್ಟು ಎದುರಿಸುತ್ತಿದ್ದಾರೆ ಎಂದು ಸುಸ್ಪಷ್ಟವಾಗಿ, ಧೈರ್ಯದಿಂದ ಹೇಳಲು ನಮ್ಮ ನಡುವೆ ದಿ. ಅನಿಲ್ ಅಗರ್ವಾಲ್ ಅವರಂತಹ ತಜ್ಞರು ಇಲ್ಲ.

ಈ ಬಿಕ್ಕಟ್ಟು ಎಲ್ಲರನ್ನೂ ಬಾಧಿಸಿದೆ. ಸರ್ಕಾರಕ್ಕೂ ಇದರ ಬಿಸಿ ತಟ್ಟಿದೆ. ಸಿಡಿಲಿನಂತೆ ಎರಗಿದೆ. ಎಲ್ಲರೂ ಸಹ, ವಿಶೇಷವಾಗಿ ಆಡಳಿತಾರೂಢ ಸರ್ಕಾರ ದಿನನಿತ್ಯ ಇದರಿಂದ ಪಾಠ ಕಲಿಯುವಂತಾಗಿದೆ. ಆದರೆ ಜ್ಞಾನದ ಕೊರತೆ ನಮ್ಮೊಳಗಿನ ಪೊಳ್ಳುತನವನ್ನು ಹೊರಗೆಡಹುತ್ತಿದೆ.

ಕುತೂಹಲಕಾರಿ ಸಂಗತಿ ಎಂದರೆ ಕೋವಿದ್ 19 ನಿವಾರಣೆಗೆ ಲಸಿಕೆ ಕಂಡುಹಿಡಿಯುವ ಬಗ್ಗೆ ಪುಂಖಾನುಪುಂಖವಾಗಿ ಊಹೆಗೂ ನಿಲುಕದಂತಹ ವಿಚಾರಗಳನ್ನು ಹಂಚಿಕೊಳ್ಳಲಾಗುತ್ತಿದೆ. 6 ರಿಂದ 12 ತಿಂಗಳಲ್ಲಿ ಲಸಿಕೆ ಸಿದ್ಧವಾಗುತ್ತಿದೆ ಎಂದವರೇ ಈಗ ಭಾರತದ 130 ಕೋಟಿ ಜನರನ್ನು ತಲುಪುವಷ್ಟು ಲಸಿಕೆಗೆ ಇನ್ನೂ ಐದಾರು ವರ್ಷ ಬೇಕಾಗುತ್ತದೆ ಎಂದು ಹೇಳುತ್ತಿದ್ದಾರೆ. ಬಹುಶಃ ನಾವು ಕೊರೋನಾ ಯುಗದಲ್ಲಿ ಊಹೆಗಳಲ್ಲೇ ಬದುಕುತ್ತೇವೆ ಎನಿಸುತ್ತದೆ.

ನಮ್ಮನ್ನು ರಕ್ಷಿಸುವವರು ಎಂದು ಅವತರಿಸುತ್ತಾರೋ ಎನ್ನುವ ಕುತೂಹಲ ಸಮಸ್ತ ಜನತೆಯಲ್ಲೂ ಕಂಡುಬರುತ್ತಿದೆ. ಆದರೆ ಅಂತಹ ಸಂರಕ್ಷಕನೊಬ್ಬ ಅವತರಿಸುತ್ತಾನೆ ಎಂಬ ನಿರೀಕ್ಷೆಯಲ್ಲಿರುವುದು ಮಾನವ ಸಮಾಜದ ಜ್ಞಾನ ಪರಂಪರೆಗೆ ಮತ್ತು ಆತ್ಮಗೌರವಕ್ಕೆ ಸಲ್ಲುವುದಲ್ಲ. ಸಾಂಕ್ರಾಮಿಕ ಪಿಡುಗಿನ ಕಬಂಧ ಬಾಹುಗಳಲ್ಲಿ ಸಿಲುಕಿ, ಆರ್ಥಿಕ ಹಿಂಜರಿತವನ್ನು ಎದುರಿಸಿ, ಯುದ್ಧದ ವಾತಾವರಣವನ್ನು ಎದುರಿಸುತ್ತಿರುವ ಈ ಸಂದರ್ಭದಲ್ಲಿ, ಈ ದೇಶದ ನಾಗರಿಕರಾದ ನಾವು ಏನು ಮಾಡಬೇಕು ?

ಪ್ರಭುತ್ವದ ಆಧಾರ ಸ್ತಂಭಗಳು

ವಸ್ತುಸ್ಥಿತಿಯನ್ನು ಅರಿಯುವುದೆಂದರೆ ಪರಿಸ್ಥಿತಿಯನ್ನು ನಿಯಂತ್ರಿಸಲು ಶಕ್ತರಾಗಿರುವುದು ಎಂದರ್ಥ. ಈಗಿನ ವಾಸ್ತವ ಸನ್ನಿವೇಶ, ಪರಿಸ್ಥಿತಿ ಹೇಗಿದೆ ಎಂದು ನಮಗೆ ತಿಳಿಯಬೇಕಿದೆ ಎಂದು ನಾವು ಆಗ್ರಹಿಸಲು ಇದು ಸಕಾಲ. ಕೊರೋನಾ ವೈರಾಣು ಮತ್ತು ಅದರ ಪರಿಣಾಮವನ್ನು ಮುಚ್ಚಿಟ್ಟಿದ್ದಕ್ಕಾಗಿ ಚೀನಾ ತೀವ್ರ ಖಂಡನೆಗೊಳಗಾಗಿದೆ.

ನಾವೂ ಸಹ ಇದೇ ಆರೋಪವನ್ನು ಎದುರಿಸಬೇಕಿಲ್ಲ. ಪ್ರಭುತ್ವದ ಮೂರು ಪ್ರಮುಖ ಆಧಾರ ಸ್ತಂಭಗಳ ಪೈಕಿ ಜ್ಞಾನವನ್ನು ಹಂಚಿಕೊಳ್ಳುವ ಹೊಣೆಗಾರಿಕೆ ಕಾರ್ಯಾಂಗದ ಮೇಲಿರುತ್ತದೆ. ಇದು ಕಾರ್ಯಾಂಗದ ಕರ್ತವ್ಯವೂ ಹೌದು. ದೇಶವನ್ನು ಕಾಡುತ್ತಿರುವ ಕೊರೋನಾ ಸಾಂಕ್ರಾಮಿಕ ಪಿಡುಗಿನ ಬಗ್ಗೆ, ಆರ್ಥಿಕ ಕುಸಿತ ಮತ್ತು ಹಿಂಜರಿತದ ಬಗ್ಗೆ ಹಾಗೂ ಗಡಿ ಪ್ರದೇಶದಲ್ಲಿ ಚೀನಾದೊಡನೆ ನಡೆಯುತ್ತಿರುವ ಸಂಘರ್ಷದ ಬಗ್ಗೆ , ಭಾರತದ ಪ್ರಜೆಗಳಾದ ನಾವು ಸಮಗ್ರ ಮಾಹಿತಿ ಪಡೆಯುವ ಹಕ್ಕು ಹೊಂದಿದ್ದೇವೆ, ಪಡೆಯಬೇಕಿದೆ.

ಇದಕ್ಕೆ ಈ ದೇಶ ಸಿದ್ಧವಾಗಿದೆಯೇ ? ಅಥವಾ ವೈರಾಣು ಮತ್ತು ಯುದ್ಧ ಎರಡೂ ಅಪಾಯಗಳನ್ನು, ಸವಾಲುಗಳನ್ನು ಎದುರಿಸಲು ದೇಶ ಸಜ್ಜಾಗಿದೆಯೇ ? ಸೆಪ್ಟಂಬರ್ 11ರಂದು ನಮ್ಮ ವಿದೇಶಾಂಗ ಸಚಿವರಾದ ಜೈಶಂಕರ್ ಮತ್ತು ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ನಡುವೆ ಏರ್ಪಟ್ಟಿರುವ ಒಪ್ಪಂದ ನಿಜಕ್ಕೂ ಶ್ಲಾಘನೀಯವಾದುದು. ಇದು ಉಭಯ ದೇಶಗಳನ್ನು ಯುದ್ಧದ ಸನ್ನಿವೇಶದಿಂದ ಮುಕ್ತಗೊಳಿಸಿದೆ.

ಆದರೆ ಈ ಮಾಸ್ಕೋ ಒಮ್ಮತದ ಒಪ್ಪಂದವನ್ನು ಉಲ್ಲಂಘಿಸುವ ಸನ್ನಿವೇಶ ಎದುರಾದರೆ, ಗಡಿಯಲ್ಲಿ ಕ್ಷಿಪಣಿಗಳು ಸದ್ದುಮಾಡಲಾರಂಭಿಸುತ್ತವೆ. ಯುದ್ಧ ಮತ್ತು ಕೊರೋನಾ ವೈರಾಣು ಭಾರತಕ್ಕೆ ಮಾರಣಾಂತಿಕವಾಗಿ ಪರಿಣಮಿಸುತ್ತದೆ. ಮೊದಲ ವಿಶ್ವ ಮಹಾ ಯುದ್ಧ ಸಂಭವಿಸಿದ ಬೆನ್ನಲ್ಲೇ 1918-20ರ ಸ್ಪಾನಿಷ್ ಫ್ಲೂ ಭಾರತವನ್ನು ಹಿಂಡಿ ಹಿಪ್ಪೇಕಾಯಿ ಮಾಡಿದ್ದನ್ನು ಕಂಡಿದ್ದೇವೆ. ಯುದ್ಧಭೂಮಿಯಿಂದ ಸೋಂಕು ಹೊತ್ತುಕೊಂಡೇ ಹಿಂದಿರುಗಿದ ಭಾರತದ ಯೋಧರು ಸಾಂಕ್ರಾಮಿಕ ಸೋಂಕನ್ನು ಹಳ್ಳಿ ಹಳ್ಳಿಗೂ ವ್ಯಾಪಿಸಲು ಕಾರಣರಾಗಿಬಿಟ್ಟರು. 1 ಕೋಟಿ 70 ಲಕ್ಷ ಭಾರತೀಯರು ಬಲಿಯಾಗಬೇಕಾಯಿತು.

ಒಂದು ವೇಳೆ ಈ ಯುದ್ಧ ಸಂಭವಿಸಿದ್ದೇ ಆದಲ್ಲಿ ಅದರಿಂದ ಸಾರ್ವಜನಿಕ ಆರೋಗ್ಯ, ಸಾರ್ವಜನಿಕ ಹಣಕಾಸು ಪರಿಸ್ಥಿತಿಯ ಮೇಲೆ ಯಾವ ರೀತಿಯ ಪರಿಣಾಮ ಉಂಟಾಗುತ್ತದೆ ಎಂದು ಕಾರ್ಯಾಂಗ ಈ ದೇಶದ ಪ್ರಜೆಗಳಿಗೆ ಸ್ಪಷ್ಟಪಡಿಸಬೇಕು. ಭಾರತ ಚೀನಾ ಗಡಿ ವಿವಾದಕ್ಕೆ ಇಂದು ಅಗತ್ಯವಾಗಿ ಬೇಕಿರುವುದು ದೇಶಪ್ರೇಮದ ಯುದ್ಧೋನ್ಮಾದವಲ್ಲ ಬದಲಾಗಿ ರಾಜತಾಂತ್ರಿಕ ಮಾತುಕತೆಗಳು ಬೇಕಿವೆ. ಈ ನಿಟ್ಟಿನಲ್ಲಿ ದೇಶದ ಸಮಸ್ತ ಪ್ರಜೆಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವುದು ಕಾರ್ಯಾಂಗದ ಕರ್ತವ್ಯ.

ಸಂಸತ್ತಿನಲ್ಲಿ ವಾತಾವರಣ

ಇಲ್ಲಿ ಪ್ರಭುತ್ವದ ಎರಡನೆ ಆಧಾರ ಸ್ತಂಭ, ಶಾಸಕಾಂಗದ ಪಾತ್ರ ಮುಖ್ಯವಾಗುತ್ತದೆ. ಅರ್ಧ ಹೆಜ್ಜೆ ಮುಂದಿಟ್ಟಿರುವ ಭಾರತದ ಸಂಸತ್ತಿನ ಕಲಾಪ ನಡೆಯುತ್ತಿದೆ. ಹದಿನೈದು ದಿನಗಳ ಕಾಲ ಸಂಸದರು ಖುದ್ದು ಹಾಜರಾಗಲಿದ್ದಾರೆ. ಇದು ಸಾಮಾನ್ಯವಾಗಿ ನಡೆಯುವ ಅವಧಿಯಲ್ಲಿ ಅರ್ಧದಷ್ಟು ಅವಧಿ ಮಾತ್ರ ನಡೆಯುವ ಕಲಾಪವಾಗಲಿದೆ.

ಕೊರೋನಾ ಕುರಿತ ನಮ್ಮ ಕಾಳಜಿಯ ಹಿನ್ನೆಲೆಯಲ್ಲಿ ಇದು ಉತ್ತಮ ಹೆಜ್ಜೆ. ಆದರೆ ಸಂಸತ್ತಿನ ಕಲಾಪವೇ ಬೇರೆ, ಸಂಸತ್ತಿನ ಉತ್ಸಾಹ ಮತ್ತು ಕಾಳಜಿಯೇ ಬೇರೆ. ಸಂಸತ್ ಕಲಾಪದ ವೇಳೆ ಪ್ರಶ್ನೋತ್ತರ ಅವಧಿಯನ್ನು ರದ್ದುಪಡಿಸುವ ಮೂಲಕ, ಸರ್ಕಾರದಿಂದ ಮಾಹಿತಿ ಪಡೆಯಲು ಸಂಸದರಿಗೆ ಇರುವ ಬ್ರಹ್ಮಾಸ್ತ್ರವೊಂದನ್ನು ಕಸಿದುಕೊಂಡಿರುವುದು ದುರಂತ. ಇದಕ್ಕೂ ಹೆಚ್ಚಿನ ದುರಂತಗಳನ್ನು ನಾವು ಸಂಸತ್ತಿನಲ್ಲಿ ಕಾಣುವ ಸಾಧ್ಯತೆಗಳಿವೆ.

ಬ್ರಿಟೀಷರ ಆಳ್ವಿಕೆಯಲ್ಲಿ ಶಾಸಕಾಂಗವೇ ಇರಲಿಲ್ಲ. ಆದರೂ ದೆಹಲಿಯಲ್ಲಿದ್ದ ಇಂಪೀರಿಯಲ್ ಶಾಸಕಾಂಗ ಸಮಿತಿ ಈ ದೇಶದ ಜನಕ್ಕೆ ಅನ್ಯಾಯ ಮಾಡಿತ್ತು. 1919ರ ಅರಾಜಕತೆ ಹಾಗೂ ಕ್ರಾಂತಿಕಾರಿ ಅಪರಾಧಗಳ ಕಾಯ್ದೆ, ರೌಲಟ್ ಕಾಯ್ದೆಯೆಂದು ಜನಪ್ರಿಯವಾಗಿದೆ, ಈ ಸಮಿತಿಯಲ್ಲಿ 1919ರ ಮಾರ್ಚ್ 18ರಂದು ಅಂಗೀಕೃತವಾಗಿತ್ತು. ಇದು ಮೂಲತಃ ಮಹಾಯುದ್ಧಕ್ಕೆ ನೆರವಾಗಲು ರೂಪಿಸಲಾದ ಕಾಯ್ದೆಯಾಗಿತ್ತು.

ಆದರೆ ಇದರ ಪರಿಣಾಮ ದೇಶದಲ್ಲಿ ವ್ಯಕ್ತಿಗತ ಸ್ವಾತಂತ್ರ್ಯವನ್ನು ಕಸಿದುಕೊಳ್ಳಲಾಯಿತು. ವಾಕ್ ಸ್ವಾತಂತ್ರ್ಯ ಮತ್ತು ಸಭೆ ಸೇರುವ ಸ್ವಾತಂತ್ರ್ಯವನ್ನು ಕಸಿದುಕೊಳ್ಳಲಾಯಿತು. 1975-77ರ ತುರ್ತುಪರಿಸ್ಥಿತಿ ಹೇರುವ ಸಂದರ್ಭದಲ್ಲೂ ಸಹ ಸಂಸತ್ತಿನ ಅನುಮೋದನೆ ಪಡೆಯಲಾಗಿತ್ತು.

ಈ ಹಿನ್ನೆಲೆಯಲ್ಲಿ ನೋಡಿದಾಗ ಪ್ರಸಕ್ತ ಸಂಸತ್ತಿನಿಂದ ಹೆಚ್ಚಿನ ಎಚ್ಚರಿಕೆ ಮತ್ತು ವಿವೇಕಯುತ ನಡೆಯನ್ನು ನಿರೀಕ್ಷಿಸಬೇಕಾಗುತ್ತದೆ. ದೇಶ ಒಂದು ಮಾರಣಾಂತಿಕ ವೈರಾಣುವಿನ ಅಪಾಯ ಎದುರಿಸುತ್ತಿರುವಾಗ, ಎಂದೂ ಕಾಣದಂತಹ ಆರ್ಥಿಕ ಹಿನ್ನಡೆ ಎದುರಿಸುತ್ತಿರುವಾಗ, ಯುದ್ಧದ ಕಾರ್ಮೋಡ ಕವಿಯುತ್ತಿರುವಾಗ ರೌಲಟ್ ಕಾಯ್ದೆಯ ಚಿಂತನೆಗಳು ಸರ್ಕಾರದ ಕಲ್ಪನೆಯಲ್ಲೂ ಇರಕೂಡದು.

ಇಲ್ಲಿ ಪ್ರಭುತ್ವದ ಮೂರನೆಯ ಆಧಾರ ಸ್ತಂಭ ನ್ಯಾಯಾಂಗದ ಪಾತ್ರ ಮುನ್ನೆಲೆಗೆ ಬರುತ್ತದೆ. ವಿಧಿ 370, ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ಜಮ್ಮು ಕಾಶ್ಮೀರ ಹೈಕೋರ್ಟಿನಲ್ಲಿದ್ದ ಹೇಬಿಯಸ್ ಕಾರ್ಪಸ್ ಅರ್ಜಿಯ ಸಂದರ್ಭದಲ್ಲಿ ಭಾರತದ ನ್ಯಾಯಾಂಗ ತನ್ನ ಸ್ವಾಯತ್ತತೆಯನ್ನು ಸಾಧಿಸಿ ತೋರಿಸಬಹುದಿತ್ತು.

ತನ್ನ ಸ್ವಾತಂತ್ರ್ಯ ಮತ್ತು ಅಭಿಪ್ರಾಯ ವ್ಯಕ್ತಪಡಿಸುವ ಸಾಮಥ್ರ್ಯವನ್ನು ಪ್ರದರ್ಶಿಸಬಹುದಿತ್ತು. ಏನು ಹೇಳಬೇಕಾಗಿದೆಯೋ, ಏನನ್ನು ಮನದಟ್ಟು ಮಾಡಬೇಕಾಗಿದೆಯೋ ಅದನ್ನು ಹೇಳಲು ಕೆಲವೇ ಪದಗಳು ಸಾಕಾಗುತ್ತವೆ. ನ್ಯಾ ಚಂದ್ರಚೂಡ್ ಹೇಳಿರುವಂತೆ “ ಪ್ರತಿರೋಧ ಎನ್ನುವುದು ಪ್ರಜಾತಂತ್ರ ವ್ಯವಸ್ಥೆಯ ರಕ್ಷಣಾ ಕವಚ ಇದ್ದಂತೆ ”.

ಇಂದು ಪ್ರಭುತ್ವದ ಸಾಂಸ್ಥಿಕ ನೆಲೆಯ ಸುತ್ತ ಜಡತ್ವದ ಲಕ್ಷಣಗಳು ಗೋಚರಿಸುತ್ತಿವೆ. ಇದು ಈ ಸಾಂಸ್ಥಿಕ ನೆಲೆಯ ಉಸಿರನ್ನು ಕಟ್ಟಿಸುತ್ತದೆ, ಹಾಗೆಯೇ ನಮ್ಮ ಉಸಿರನ್ನೂ ಸಹ. ಮಾಧ್ಯಮಗಳು ನಮ್ಮನ್ನು, ಅಂದರೆ ಭಾರತದ ಪ್ರಜೆಗಳನ್ನು, ಮುನ್ನಡೆಸುತ್ತಿರುವ ಸಂದರ್ಭದಲ್ಲಿ ನಾವು ಸ್ವಾತಂತ್ರ್ಯಕ್ಕೆ ಜೀವ ಕೊಡುವ ಸಾಧನಗಳಾಗಬೇಕು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Suddidina.com Kannada online news portal. Its providing Kannada news, film news Kannada, sports news Kannada, political NeWS in Kannada and more.

ದಿನದ ಸುದ್ದಿ

ಉದ್ಯೋಗಿಗಳಿಗೆ ಗೂಗಲ್ ಶಾಕ್..! AI ಕಲಿಯದಿದ್ದರೆ ಉದ್ಯೋಗ ತೊರೆಯಿರಿ

Published

on

ಸುದ್ದಿದಿನ,ಬೆಂಗಳೂರು: ಜಗತ್ತಿನ ಟೆಕ್ ದೈತ್ಯ ಕಂಪನಿ ಗೂಗಲ್ ತನ್ನ ಉದ್ಯೋಗಿಗಳಿಗೆ ಶಾಕ್ ನೀಡಿದೆ. AI ಕಲಿಯದಿದ್ದರೆ ಉದ್ಯೋಗ ತೊರೆಯುವಂತೆ ಸೂಚಿಸಿದ್ದು, ‘ವಾಲಂಟರಿ ಎಕ್ಸಿಟ್ ಪ್ರೋಗ್ರಾಮ್’ (VEP) ಘೋಷಿಸಿದೆ.

ವಾಲಂಟರಿ ಎಕ್ಸಿಟ್ ಪ್ರೋಗ್ರಾಮ್’ (VEP)

AI ಕಲಿಯುವುದು ಅನಿವಾರ್ಯ: ಗೂಗಲ್ ಈಗ ಸಂಪೂರ್ಣವಾಗಿ ‘AI ಫಸ್ಟ್’ ಕಂಪನಿಯಾಗಿ ರೂಪಾಂತರಗೊಳ್ಳುತ್ತಿದೆ. ತಂತ್ರಜ್ಞಾನದ ವೇಗಕ್ಕೆ ಹೊಂದಿಕೊಳ್ಳಲು ಸಾಧ್ಯವಾಗದ ಅಥವಾ AI ಕಲಿಯಲು ಆಸಕ್ತಿ ಇಲ್ಲದ ಉದ್ಯೋಗಿಗಳಿಗೆ ಗೌರವಯುತವಾಗಿ ಉದ್ಯೋಗ ತೊರೆಯಲು ‘ವಾಲಂಟರಿ ಎಕ್ಸಿಟ್ ಪ್ರೋಗ್ರಾಮ್’ (VEP) ಯನ್ನು ಜಾರಿಗೊಳಿಸಿದೆ.

ಯಾರಿಗೆ ಅನ್ವಯಿಸುತ್ತದೆ?: ಇದು ಮುಖ್ಯವಾಗಿ ಗೂಗಲ್‌ನ ಗ್ಲೋಬಲ್ ಬಿಸಿನೆಸ್ ಆರ್ಗನೈಸೇಷನ್ (GBO) ವಿಭಾಗದ ಉದ್ಯೋಗಿಗಳಿಗೆ (ಸೇಲ್ಸ್, ಕಾರ್ಪೊರೇಟ್ ಡೆವಲಪ್ಮೆಂಟ್ ಮತ್ತು ಸೊಲ್ಯೂಷನ್ಸ್ ಟೀಮ್) ಗೆ ಅನ್ವಯಿಸುತ್ತದೆ. ಆದರೆ, ಗ್ರಾಹಕರೊಂದಿಗೆ ನೇರ ಸಂಪರ್ಕ ಹೊಂದಿರುವ ತಂಡಗಳಿಗೆ ಇದರಿಂದ ವಿನಾಯಿತಿ ನೀಡಲಾಗಿದೆ.

ಇದು ಲೇ-ಆಫ್ ಅಲ್ಲ: ಇದು ಕಡ್ಡಾಯವಾಗಿ ಕೆಲಸದಿಂದ ತೆಗೆದುಹಾಕುವ ಪ್ರಕ್ರಿಯೆಯಲ್ಲ. ಬದಲಾಗಿ, ಸ್ವತಃ ಹೊರಹೋಗಲು ಬಯಸುವ ಉದ್ಯೋಗಿಗಳಿಗೆ ಉತ್ತಮ ಪರಿಹಾರ ಧನ (Severance Package) ಮತ್ತು ಇತರ ಸೌಲಭ್ಯಗಳನ್ನು ನೀಡಿ ಕಳುಹಿಸಿಕೊಡುವ ಯೋಜನೆಯಾಗಿದೆ.

ಕಾರಣವೇನು?: ತಂತ್ರಜ್ಞಾನ ಅತ್ಯಂತ ವೇಗವಾಗಿ ಬದಲಾಗುತ್ತಿದ್ದು, ಕಂಪನಿಗೆ AI ಮಿಷನ್‌ಗೆ ಸಂಪೂರ್ಣವಾಗಿ ಹೊಂದಿಕೊಳ್ಳುವ ಮತ್ತು ಕ್ರಿಯಾತ್ಮಕವಾಗಿ ಕೆಲಸ ಮಾಡುವ ಕಾರ್ಯಪಡೆಯ ಅಗತ್ಯವಿದೆ ಎಂದು ಗೂಗಲ್‌ನ ಚೀಫ್ ಬಿಸಿನೆಸ್ ಆಫೀಸರ್ ಫಿಲಿಪ್ ಶೆಡ್ಲರ್ ತಿಳಿಸಿದ್ದಾರೆ.

ಭವಿಷ್ಯದ ಮುನ್ಸೂಚನೆ: ಅಮೆಜಾನ್, ಮೆಟಾ ಮತ್ತು ಮೈಕ್ರೋಸಾಫ್ಟ್‌ನಂತಹ ಇತರ ಟೆಕ್ ದೈತ್ಯ ಕಂಪನಿಗಳು ಕೂಡ ಇದೇ ಹಾದಿಯಲ್ಲಿ ಸಾಗುವ ಸಾಧ್ಯತೆ ಇದೆ. 2026ರಲ್ಲಿ ಈ ನಾಲ್ಕು ಕಂಪನಿಗಳು AI ತಂತ್ರಜ್ಞಾನಕ್ಕಾಗಿ ಸುಮಾರು 58.92 ಲಕ್ಷ ಕೋಟಿ ರೂಪಾಯಿ ಹೂಡಿಕೆ ಮಾಡುವ ಅಂದಾಜಿದೆ.

ಒಟ್ಟಾರೆಯಾಗಿ, ಭವಿಷ್ಯದ ಉದ್ಯೋಗ ಮಾರುಕಟ್ಟೆಯಲ್ಲಿ AI ಕೌಶಲ್ಯ ಅತ್ಯಂತ ಅನಿವಾರ್ಯ ಎಂಬ ಎಚ್ಚರಿಕೆಯ ಸಂದೇಶವನ್ನು ಗೂಗಲ್ ಈ ಮೂಲಕ ನೀಡಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಎಸ್.ಎಸ್.ಎಲ್.ಸಿ ಫಲಿತಾಂಶ ಹೆಚ್ಚಿಸಲು ಕ್ರಮವಹಿಸಿ : ಶಿಕ್ಷಕರಿಗೆ ಡಿಸಿ ಗಂಗಾಧರಸ್ವಾಮಿ ಸೂಚನೆ

Published

on

ಸುದ್ದಿದಿನ,ದಾವಣಗೆರೆ:ಮಾರ್ಚ್ 18 ರಿಂದ ಪ್ರಾರಂಭವಾಗುವ ಎಸ್.ಎಸ್.ಎಲ್.ಸಿ ಫಲಿತಾಂಶವನ್ನು ಹೆಚ್ಚಿಸಲು ಶಿಕ್ಷಕರು ಮತ್ತು ಮುಖ್ಯೋಪಾಧ್ಯಾಯರು ಕ್ರಮವಹಿಸುವಂತೆ ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ತಿಳಿಸಿದರು.

ಅವರು ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿರುವ ತುಂಗಭದ್ರಾ ಸಭಾಂಗಣದಲ್ಲಿ ಎಸ್.ಎಸ್.ಎಲ್.ಸಿ ಫಲಿತಾಂಶ ಸುಧಾರಣೆ ಮತ್ತು ಶೈಕ್ಷಣಿಕ ಕಾರ್ಯಾಗಾರದಲ್ಲಿ ಜಿಲ್ಲಾ ಪ್ರೌಢಶಾಲೆಯ ಮುಖ್ಯ ಶಿಕ್ಷಕರು ಮತ್ತು ಉಪ ಪ್ರಾಂಶುಪಾಲರನ್ನು ಉದ್ದೇಶಿಸಿ ಮಾತನಾಡಿದರು.

ಪ್ರಸ್ತುತ ಎಸ್.ಎಸ್.ಎಲ್.ಸಿ ಎರಡು ಪೂರ್ವಭಾವಿ ಪರೀಕ್ಷೆಗಳು ನಡೆದಿದ್ದು ಶೇ. 18 ಕ್ಕಿಂತ ಕಡಿಮೆ ಫಲಿತಾಂಶ ಪಡೆದ ಶಾಲೆಗಳಿಗೆ ನೋಟಿಸ್ ನೀಡಿ ವಿವರಣೆಯನ್ನು ಪಡೆಯಬೇಕು, ಎಸ್.ಎಸ್.ಎಲ್.ಸಿ ಗೆ ಪ್ರವೇಶ ಪಡೆದು ಪರೀಕ್ಷೆಗೆ ಗೈರಾಗಿರುವ ಮಕ್ಕಳ ಬಗ್ಗೆ ಮಾಹಿತಿಯನ್ನು ಕಲೆಹಾಕಿ ಮನೆಮನೆ ಭೇಟಿ, ಅವರನ್ನು ಮತ್ತೇ ಶಾಲೆಗೆ ಕರೆತರಲು ಕ್ರಮವಹಿಸಬೇಕು ಎಂದು ತಿಳಿಸಿದರು.

ಡಿಡಿಪಿಐ ಕೊಟ್ರೇಶ್ ಅವರು ಮಾತನಾಡಿ, ಜಿಲ್ಲೆಯಲ್ಲಿ ಒಟ್ಟು 21,863 ವಿದ್ಯಾರ್ಥಿಗಳು ಎಸ್.ಎಸ್.ಎಲ್.ಸಿ ಪ್ರವೇಶ ಪಡೆದಿದ್ದಾರೆ, ವಿವಿಧ ಕಾರಣಗಳಿಂದ 378 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಣಿ ಮಾಡಿಕೊಂಡಿಲ್ಲ. ಅಂತಿಮವಾಗಿ 21,400 ವಿದ್ಯಾರ್ಥಿಗಳು ಪರೀಕ್ಷೆಗೆ ದಾಖಲಾಗಿದ್ದಾರೆ. ಮೊದಲ ಪೂರ್ವಸಿದ್ಧತಾ ಪರೀಕ್ಷೆಗೆ 20,129 ವಿದ್ಯಾರ್ಥಿಗಳು ಹಾಜರಾಗಿದ್ದು, 1,353 ವಿದ್ಯಾರ್ಥಿಗಳು ಗೈರುಹಾಜರಾಗಿದ್ದರು.

ಕಡಿಮೆ ಹಾಜರಾತಿ (75% ಕ್ಕಿಂತ ಕಡಿಮೆ) ಮತ್ತು ಪರೀಕ್ಷೆಯ ಬಗ್ಗೆ ಆಸಕ್ತಿ ಇಲ್ಲದಿರುವುದು ಗೈರುಹಾಜರಿಗೆ ಮುಖ್ಯ ಕಾರಣಗಳಾಗಿವೆ. ಮೊದಲ ಪೂರ್ವಸಿದ್ಧತಾ ಪರೀಕ್ಷೆಯಲ್ಲಿ ಜಿಲ್ಲೆಯ ಒಟ್ಟು ಫಲಿತಾಂಶ 49% ಬಂದಿದೆ. ಎರಡನೇ ಪೂರ್ವಸಿದ್ಧತಾ ಪರೀಕ್ಷೆಯಲ್ಲಿ ಫಲಿತಾಂಶ 68% ಕ್ಕೆ ಏರಿಕೆಯಾಗಿದೆ, ಆದರೆ 1,460 ವಿದ್ಯಾರ್ಥಿಗಳು ಗೈರುಹಾಜರಾಗಿದ್ದರು. ಗೈರುಹಾಜರಾದ ವಿದ್ಯಾರ್ಥಿಗಳ ಮನೆಗೆ ಭೇಟಿ ನೀಡಿ, ಪೋಷಕರ ಮನವೊಲಿಸಿ ಅವರನ್ನು ಶಾಲೆಗೆ ಕರೆತರುವಂತೆ ಕ್ರಮವಹಿಸಲಾಗಿದೆ, ವಿದ್ಯಾರ್ಥಿಗಳ ಸಂದೇಹಗಳನ್ನು ಪರಿಹರಿಸುವುದು ಮತ್ತು ಪರೀಕ್ಷಾ ವಿಧಾನಗಳ ಬಗ್ಗೆ ತಿಳಿಸಿಕೊಡುವುದು.

ಮಂಡಳಿಯಿAದ ನೀಡಲಾದ 4 ಮಾದರಿ ಪ್ರಶ್ನೆ ಪತ್ರಿಕೆಗಳು ಮತ್ತು 2 ಪೂರ್ವಸಿದ್ಧತಾ ಪರೀಕ್ಷಾ ಪತ್ರಿಕೆಗಳು ಸೇರಿದಂತೆ ಒಟ್ಟು 6 ಪ್ರಶ್ನೆ ಪತ್ರಿಕೆಗಳನ್ನು ಪದೇ ಪದೇ ಬಿಡಿಸುವ ಮೂಲಕ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ತುಂಬುವುದು. ಅನುತ್ತೀರ್ಣರಾಗುವ ಸಾಧ್ಯತೆ ಇರುವ ಸುಮಾರು 1,400 ವಿದ್ಯಾರ್ಥಿಗಳ ಮೇಲೆ ಹೆಚ್ಚಿನ ಗಮನ ಹರಿಸಿ ಅವರು ತೇರ್ಗಡೆಯಾಗುವಂತೆ ನೋಡಿಕೊಳ್ಳಲು ಕ್ರಮವಹಿಸಲಾಗಿದೆ ಎಂದು ಸಭೆಗೆ ತಿಳಿಸಿದರು.

ಶಿಕ್ಷಕರು ಅತಿ ಮುಖ್ಯವಾಗಿ ಗೈರುಹಾಜರಾಗಿರೋ ಮಕ್ಕಳನ್ನ ಶಾಲೆಗೆ ಕರೆತರಬೇಕು, ಮನೆ ಮನೆ ಭೇಟಿ ಮಾಡಿ ಪಾಲಕ ಪೋಷಕರಿಗೆ ಮನವೊಲಿಸಿ, ಶಿಕ್ಷಣ ಇಲಾಖೆ ನೀಡಿರುವ ಬ್ಲೂಪ್ರಿಂಟ್ ಪ್ರಕಾರ ಮಕ್ಕಳನ್ನು ಸಿದ್ದಗೊಳಿಸಿ, ಪ್ರಶ್ನೆ ಪತ್ರಿಕೆಗಳನ್ನ ಪದೇ ಪದೇ ಬಿಡಿಸೋದರ ಮೂಲಕ ಮಕ್ಕಳಲ್ಲಿ ಒಂದು ಆತ್ಮವಿಶ್ವಾಸ ತುಂಬಬೇಕು , ಗೈರಾಗಿರುವ ವಿದ್ಯಾರ್ಥಿಗಳ ಸಂಖ್ಯೆ 1,400 ಇದೆ, ಆ ವಿದ್ಯಾರ್ಥಿಗಳು ಉತ್ತೀರ್ಣರಾದರೆ ಒಂದು ಉತ್ತಮ ಫಲಿತಾಂಶವನ್ನ ನಿರೀಕ್ಷೆ ಮಾಡಬಹುದು, ಮಕ್ಕಳಿಗೆ ಪಾಠದ ಜೊತೆಗೆ ಆಟಕ್ಕೂ ಅವಕಾಶ ನೀಡಬೇಕು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

ಸಭೆಯಲ್ಲಿ ಸಿಇಒ ಗಿತ್ತೇ ಮಾಧವ ವಿಠಲ್ ರಾವ್, ಡಯಟ್ ಪ್ರಾಂಶುಪಾಲರಾದ ಗೀತಾ, ಜಿಲ್ಲೆಯ ಎಲ್ಲಾ ಕ್ಷೇತ್ರಶಿಕ್ಷಣಾಧಿಕಾರಿಗಳು ಉಪಸ್ಥಿತರಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಫೆ.14 ರಂದು ಸಂತ ಸೇವಾಲಾಲ್‌ರವರ 287ನೇ ಜಯಂತಿ ಕಾರ್ಯಕ್ರಮ

Published

on

ಸುದ್ದಿದಿನ,ದಾವಣಗೆರೆ:ಸಂತ ಸೇವಾಲಾಲ್‌ರವರ 287ನೇ ಜಯಂತ್ಸೋವ ಕಾರ್ಯಕ್ರಮವು ಫೆ. 14 ರಂದು ಮಧ್ಯಾಹ್ನ 2 ಗಂಟೆಗೆ ನ್ಯಾಮತಿ ತಾಲ್ಲೂಕಿನ ಭಾಯಾಗಡ್-ಸೂರಗೊಂಡನಕೊಪ್ಪದಲ್ಲಿ ನಡೆಯಲಿದೆ.

ಜಿಲ್ಲಾಡಳಿತ, ಸಮಾಜ ಕಲ್ಯಾಣ ಇಲಾಖೆ, ಕರ್ನಾಟಕ ತಾಂಡಾ ಅಭಿವೃದ್ದಿ ನಿಗಮ ನಿಯಮಿತ, ಸಂತ ಸೇವಾಲಾಲ್ ಕ್ಷೇತ್ರ ಅಭಿವೃದ್ದಿ ಮತ್ತು ನಿರ್ವಾಹಣಾ ಪ್ರತಿಷ್ಠಾನ ಹಾಗೂ ಸಂತ ಸೇವಾಲಾಲ್ ಜನ್ಮಸ್ಥಾನ ಮಹಾಮಠ ಸಮಿತಿ(ರಿ) ಭಾಯ್‌ಗಡ್, ಸೂರಗೊಂಡನಕೊಪ್ಪ ಇವರ ಸಹಯೋಗದಲ್ಲಿ ಜರುಗಲಿರುವ ಕಾರ್ಯಕ್ರಮವನ್ನು ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಉದ್ಘಾಟಿಸುವರು.ಹೊನ್ನಾಳಿ ಕ್ಷೇತ್ರದ ಶಾಸಕರಾದ ಡಿ.ಜಿ.ಶಾಂತನಗೌಡ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು.

ಗಣಿ ಮತ್ತು ಭೂವಿಜ್ಞಾನ, ತೋಟಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಎಸ್.ಮಲ್ಲಿಕಾರ್ಜುನ್ ಸಂತಸೇವಾಲಾಲ್‌ರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವರು. ಸಮಾಜ ಕಲ್ಯಾಣ ಸಚಿವರಾದ ಡಾ.ಹೆಚ್.ಸಿ.ಮಹಾದೇವಪ್ಪ ಇವರು ವಲಸೆ ಮಕ್ಕಳ ವಸತಿ ಶಾಲೆಯ ಶಂಕುಸ್ಥಾಪನೆಯನ್ನು ಉದ್ಘಾಟಿಸುವರು.

ಕೇಂದ್ರ ಬೃಹತ್ ಕೈಗಾರಿಕಾ ಸಚಿವರಾದ ಹೆಚ್.ಡಿ.ಕುಮಾರಸ್ವಾಮಿ, ಉಪ ಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್, ಜಲಶಕ್ತಿ ಹಾಗೂ ರೈಲ್ವೆ ಖಾತೆಗಳ ರಾಜ್ಯ ಸಚಿವರಾದ ವಿ.ಸೋಮಣ್ಣ ಘನ ಉಪಸ್ಥಿತರಾಗಿರುವರು.

ಮುಖ್ಯ ಅತಿಥಿಗಳಾಗಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳು ಹಾಗೂ ಪ್ರವಾಸೋದ್ಯಮ ಸಚಿವರಾದ ಹೆಚ್.ಕೆ.ಪಾಟೀಲ್, ಗೃಹಮಂತ್ರಿಗಳಾದ ಡಾ.ಜಿ.ಪರಮೇಶ್ವರ, ಲೋಕೋಪಯೋಗಿ ಸಚಿವರಾದ ಸತೀಶ್ ಜಾರಕಿಹೊಳಿ, ಕಂದಾಯ ಸಚಿವರಾದ ಕೃಷ್ಣ ಭೈರೇಗೌಡ, ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವರಾದ ಮಧು ಬಂಗಾರಪ್ಪ, ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್ ಯಡಿಯೂರಪ್ಪ, ವಿರೋಧಪಕ್ಷದ ನಾಯಕರಾದ ಆರ್.ಅಶೋಕ, ಮತ್ತು ಛಲವಾದಿ ನಾರಾಯಣಸ್ವಾಮಿ, ಉಚ್ಚ ನ್ಯಾಯಾಲಯದ ನ್ಯಾಯಾಧೀಶರಾದ ವೆಂಕಟೇಶ್ ನಾಯ್ಕ.ಟಿ, ವಿಧಾನಸಭೆಯ ಉಪಸಭಾಪತಿ ಹಾಗೂ ಸಂತ ಸೇವಾಲಾಲ್ ಜನ್ಮಸ್ಥಾನ ಮಹಾಮಠ ಸಮಿತಿಯ ಅಧ್ಯಕ್ಷರಾದ ರುದ್ರಪ್ಪ ಮಾನಪ್ಪ ಲಮಾಣಿ, ಮಹಾರಾಷ್ಟ್ರ ಸರ್ಕಾರದ ಮಣ್ಣು ಮತ್ತು ಜಲ ಸಂರಕ್ಷಣಾ ಸಚಿವರಾದ ಸಂಜಯ್ ಡಿ.ರಾಥೋಡ್, ಮಹಾರಾಷ್ಟ್ರ ಸರ್ಕಾರದ ಪ್ರವಾಸೋದ್ಯಮ, ಲೋಕೋಪಯೋಗಿ, ಕೈಗಾರಿಕೆ ಉನ್ನತ ಹಾಗೂ ತಾಂತ್ರಿಕ ಶಿಕ್ಷಣ ಸಚಿವರಾದ ಇಂದ್ರನಿಲ್ ಮನೋಹರ್ ನಾಯ್ಕ್, ತೆಲಂಗಾಣ ರಾಜ್ಯದ ಮಹಬೂಬಬಾದ್ ಕ್ಷೇತ್ರದ ಸಂಸದರಾದ ಬಲರಾಮ ನಾಯ್ಕ, ಭಾಗವಹಿಸುವರು.

ಸಂಸದರಾದ ಡಾ.ಪ್ರಭಾ ಮಲ್ಲಿಕಾರ್ಜುನ್, ಶಾಸಕರುಗಳಾದ ಕೆ.ಎಸ್.ಬಸವಂತಪ್ಪ, ಬಿ.ದೇವೇಂದ್ರಪ್ಪ, ಬಸವರಾಜು ವಿ.ಶಿವಗಂಗಾ, ಬಿ.ಪಿ ಹರೀಶ್, ಜೆ.ಡಿ.ಎಸ್ ಶಾಸಕಾಂಗ ಪಕ್ಷದ ಉಪನಾಯಕರು ಹಾಗೂ ಶಾಸಕರಾದ ಶಾರದಾ ಪೂರ್ಯಾನಾಯ್ಕ, ಕರ್ನಾಟಕ ಮರಾಠ ಸಮುದಾಯಗಳ ಅಭಿವೃದ್ದಿ ನಿಗಮದ ಅಧ್ಯಕ್ಷರಾದ ಜಿ.ಹೆಚ್ ಮರಿಯೋಜಿರಾವ್, ಕರ್ನಾಟಕ ಜೀವ ವೈವಿಧ್ಯ ಮಂಡಳಿಯ ಅಧ್ಯಕ್ಷರಾದ ವಡ್ನಾಳ್ ಜಗದೀಶ್, ಬಯಲುಸೀಮೆ ಪ್ರದ್ರೇಶಾಭಿವೃದ್ದಿ ಮಂಡಳಿಯ ಹೆಚ್.ಬಿ.ಮಂಜಪ್ಪ, ಬ್ರಾಹ್ಮಣ ಅಭಿವೃದ್ದಿ ನಿಗಮದ ಅಧ್ಯಕ್ಷ ಅಸಗೋಡು ಜಯಸಿಂಹ, ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಎನ್. ಜಯದೇವನಾಯ್ಕ್, ವಿಧಾನ ಪರಿಷತ್ ಸದಸ್ಯರುಗಳಾದ ಎಸ್.ಎಲ್.ಭೋಜೇಗೌಡ, ಡಿ.ಎಸ್.ಅರುಣ್, ಕೆ.ಅಬ್ದುಲ್ ಜಬ್ಬಾರ್, ಡಿ.ಟಿ.ಶ್ರೀನಿವಾಸ್, ಚಿದಾನಂದ ಎಂ.ಗೌಡ, ಕೆ.ಎಸ್.ನವೀನ್, ಡಾ.ಧನಂಜಯ್ ಸರ್ಜಿ, ಕರ್ನಾಟಕ ಕೌಶಲ್ಯ ಅಭಿವೃದ್ದಿ ನಿಗಮದ ಅಧ್ಯಕ್ಷರಾದ ಕಾಂತಾನಾಯಕ್, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷರಾದ ಶಾಮನೂರು.ಟಿ.ಬಸವರಾಜ್,ಲೋಕಸೇವಾ ಆಯೋಗದ ಸದಸ್ಯರಾದ ಭೋಜ್ಯಾನಾಯ್ಕ, ಅಚ್ಚುಕಟ್ಟು ಪ್ರದೇಶಾಭಿವೃದ್ದಿ ಪ್ರಾಧಿಕಾರ ಕೃಷ್ಣಾ ಮೇಲ್ದಂಡೆ ಯೋಜನೆಯ ಅಧ್ಯಕ್ಷರಾದ ಬಾಬು ಹೊನ್ನನಾಯಕ್, ಬಂಜಾರ ಸಂಸ್ಕೃತಿ ಹಾಗೂ ಭಾಷಾ ಅಕಾಡೆಮಿಯ ಅಧ್ಯಕ್ಷರಾದ ಡಾ. ಮೋತಿಲಾಲ್ ಚವ್ಹಾಣ್, ವಿಧಾನಸಭಾ ಕ್ಷೇತ್ರದ ಶಾಸಕರಾದ ಪ್ರಭು ಬಿ ಚವ್ಹಾಣ್, ಡಾ.ಅವಿನಾಶ್ ಜಾಧವ್, ನೇಮಿರಾಜ್ ನಾಯ್ಕ್, ಕೃಷ್ಣನಾಯ್ಕ, ಡಾ.ಚಂದ್ರ ಲಮಾಣಿ, ಭಾಯ್‌ಗಡ್ ಉನ್ನತಮಟ್ಟದ ಸಲಹಾ ಸಮಿತಿಯ ಅಧ್ಯಕ್ಷರು ಹಾಗೂ ಮಾಜಿ ಸಚಿವರಾದ ಪಿ.ಟಿ ಪರಮೇಶ್ವರ್‌ನಾಯ್ಕ್.

ಸಮಾಜ ಕಲ್ಯಾಣ ಇಲಾಖೆಯ ಸರ್ಕಾರದ ಕಾರ್ಯದರ್ಶಿ ರಂದೀಪ್.ಡಿ, ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆ, ಮಹಿಳೆಯರ ಮತ್ತು ಮಕ್ಕಳ ಅಭಿವೃದ್ದಿ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ.ಶಮ್ಲಾ ಇಕ್ಬಾಲ್, ಸಮಾಜ ಕಲ್ಯಾಣ ಇಲಾಖೆಯ ಆಯುಕ್ತರಾದ ಡಾ.ರಾಕೇಶ್ ಕುಮಾರ್.ಕೆ, ಜಿಲ್ಲಾಧಿಕಾರಿ ಗಂಗಾಧರಸ್ವಾಮಿ.ಜಿ.ಎಂ, ಜಿ.ಪಂ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಗಿತ್ತೆ ಮಾಧವ್ ವಿಠ್ಠಲ್ ರಾವ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶೇಖರ್.ಹೆಚ್ ತೆಕ್ಕಣ್ಣನವರ್, ಸಮಾಜ ಕಲ್ಯಾಣ ಇಲಾಖೆಯ ನೋಡೆಲ್ ಎಜೆನ್ಸಿ ಸಲಹೆಗಾರರಾದ ಡಾ.ಇ ವೆಂಕಯ್ಯ, ಕ.ತಾ.ಅ.ನಿ.ನಿ ವ್ಯವಸ್ಥಾಪಕ ನಿರ್ದೇಶಕರಾದ ಎನ್.ರಾಜು, ಸಂತ ಸೇವಾಲಾಲ್ ಜನ್ಮಸ್ಥಾನ ಮಹಾಮಠ ಸಮಿತಿ(ರಿ) ಪ್ರಧಾನ ಧರ್ಮದರ್ಶಿ ಬಿ. ಹೀರಾನಾಯ್ಕ, ಮಹಾಮಠ ನಿರ್ವಹಣಾ ಸಮಿತಿಯ ಅಧ್ಯಕ್ಷರಾದ ಹನುಮಂತನಾಯ್ಕ, ಸಮಿತಿಯ ಪ್ರಧಾನ ಕಾರ್ಯದರ್ಶಿ ಎನ್.ಅರುಣ್ ಕುಮಾರ್ ಭಾಗವಹಿಸಲಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending