ದಿನದ ಸುದ್ದಿ
ಸಾವಿರ ಹೂವ್ವ ಎದೆಹನಿ ಬೇಕು..!
- ಹಿರಿಯೂರು ಪ್ರಕಾಶ್
ಕನ್ನಡ ಚಿತ್ರರಂಗವನ್ನು ಡ್ರಗ್ ರಂಗಕ್ಕೆ ಸಮೀಕರಿಸಿ ನಿತ್ಯವೂ ಬಿತ್ತರಿಸುತ್ತಿರುವ ಕೆಟ್ಟ ಸಾಂಬ್ರಾಣಿ ಹೊಗೆಯಂತಿರುವ ಹಸಿ ,ಬಿಸಿ, ಕಸಿ ಸುದ್ದಿ ವೀರರ ಅಬ್ಬರದ ಗಬ್ಬುನಾತದ ನಡುವೆ ಕನ್ನಡ ಚಿತ್ರರಂಗಕ್ಕೆ ತನ್ನದೇ ಆದ ರೀತಿಯಲ್ಲಿ ಪ್ರಬುದ್ಧವಾದ ಸೇವೆಸಲ್ಲಿಸಿ ಕನ್ನಡಿಗರೆಲ್ಲರ ಮನೆಮಾತಾಗಿ ಹೋಗಿದ್ದ ಮಾಗಿದ ಸ್ಫುರದ್ರೂಫಿ ನಟನೊಬ್ಬನ ಜನ್ಮದಿನವನ್ನು ನೆನಪು ಮಾಡಿಕೊಳ್ಳುವ ಅಗತ್ಯ ಹಿಂದೆಂದಿಗಿಂತಲೂ ಇಂದು ಹೆಚ್ಚಿದೆ.
ಇಂದಿನ ಜನಾಂಗಕ್ಕೆ ಸ್ಯಾಂಡಲ್ ವುಡ್ ಎಂದರೆ ಡ್ರಗ್ಮಾಫ಼ಿಯಾ ಎಂದು ಪರಿಚಯಿಸುತ್ತಾ ತನ್ಮೂಲಕ ಸಾಮಾನ್ಯ ಜ್ಞಾನ ಕ್ಷೇತ್ರಕ್ಕೆ ಅದಮ್ಯ ಸೇವೆ ಸಲ್ಲಿಸುತ್ತಿರುವ ಅಪೂರ್ವ ದೃಶ್ಯ ಮಾಧ್ಯಮಗಳ ಘನಕಾರ್ಯದ ಈ ಹೊತ್ತಿನಲ್ಲಿ ಕನ್ನಡ ಚಿತ್ರರಂಗವೆಂದರೆ ಅನೇಕ ಪ್ರತಿಭೆಗಳ ಗಣಿಯೂ ಹೌದೆಂಬ ವಾಸ್ತವವನ್ನು ಕನ್ನಡದ ಪ್ರತಿಭಾನ್ವಿತ ನಟ ಡಾ. ವಿಷ್ಣುವರ್ಧನ್ ರವರ ಎಪ್ಪತ್ತನೇ ಜನ್ಮದಿನವನ್ನು ಆಚರಿಸುವ ಮೂಲಕ ಸಾದರ ಪಡಿಸುವ ಅಗತ್ಯವಿದೆ.
ಬಹುಶಃ ಕನ್ನಡ ಚಿತ್ರರಂಗದಲ್ಲಿ ವರನಟ, ಮೇರುನಟ ಡಾ. ರಾಜ್ ಕುಮಾರ್ ರವರ ನಂತರ ತಮ್ಮ ವೈವಿಧ್ಯಮಯ ಪಾತ್ರಗಳ ಮೂಲಕ, ಸಧಭಿರುಚಿಯ ಚಿತ್ರಗಳ ಮೂಲಕ ಜನಮಾನಸದಲ್ಲಿ ಆಳವಾಗಿ ಬೇರೂರಿರುವ ನಾಯಕ ನಟನೆಂದರೆ ಅದು ನಿಸ್ಸಂದೇಹವಾಗಿ ಡಾ. ವಿಷ್ಣುವರ್ಧನ್. ಅವರು ನಮ್ಮೊಂದಿಗಿದ್ದಿದ್ದರೆ ಇಂದು ತಮ್ಮ ಎಪ್ಪತ್ತನೇ ವಸಂತದ ಸಂಭ್ರಮವನ್ನು ಆಚರಿಸಿಕೊಳ್ಳುತ್ತಿದ್ದರು. ಆದರೆ ಕಲಾವಿದರ ಅದೃಷ್ಟವೆಂದರೆ ಅವರು ನಮ್ಮೊಂದಿಗಿಲ್ಲ ಎನ್ನುವುದು ಕೇವಲ ಭೌತಿಕವಾಗಿ ನಮ್ಮೊಡನಿಲ್ಲವೆಂದು ಅರ್ಥವೇ ಹೊರತು ಅವರ ಕಲಾಸೇವೆಯ ಮೂಲಕ ಅವರು ಜನರ ಹೃನ್ಮನಗಳಲ್ಲಿ ಶಾಶ್ವತವಾಗಿ ಬೇರೂರಿರುತ್ತಾರೆ. ಈ ಮಾತಿಗೆ ಡಾ. ವಿಷ್ಣುವರ್ಧನ್ ಒಂದು ಸ್ಪಷ್ಟ ಉದಾಹರಣೆ.
ಒಮ್ಮೆ ವಿಷ್ಣುವರ್ಧನ್ ರವರ ಭಾವಚಿತ್ರವನ್ನು ದಿಟ್ಟಿಸಿ ನೋಡಿ ! ನಿಷ್ಕಳಂಕತೆ ನಿಚ್ಚಳವಾಗಿ ತುಂಬಿರುವ ಅವರ ಕಂಗಳಲ್ಲಿ ಏನೋ ಒಂಥರಾ ಕಾಂತಿಯಿದೆ, ಅವರ ಮುಖದಲ್ಲಿ ತೇಜಸ್ಸಿದೆ, ಆ ಮುಗುಳುನಗೆಯಲ್ಲಿ ಮುಗ್ಧತೆ ತುಂಬಿದೆ, ಆ ನೋಟದಲ್ಲಿ ಮುಗ್ಧ ಬಾಲಕನ ಅಮಾಯಕತನವಿದೆ. ಅವರ ವ್ಯಕ್ತಿತ್ವದಲ್ಲಿ ಆಕರ್ಷಣೆಯಿದೆ, ನುಡಿಯಲ್ಲಿ ಧೃಡತೆಯಿದೆ, ಸವಿ ಜೇನಿದೆ, ನಡೆಯಲ್ಲಿ ಆತ್ಮವಿಶ್ವಾಸವಿದೆ, ನಕ್ಕರೆ ಹಾಲು ಸಕ್ಕರೆಯಿದೆ, ಕರದಲ್ಲಿ ಕಡಗವಿದೆ, ಅವರ ಬಗ್ಗೆ ಬರೆಯಲು ಹೊರಟರೆ ಕಾದಂಬರಿಯೇ ಆಗುವಂತಿದೆ. ಎಲ್ಲಕ್ಕಿಂತ ಮುಖ್ಯವಾಗಿ ಇಡೀ ಮಾನವ ಕುಲವನ್ನು ಅದರಲ್ಲೂ ವಿಶೇಷವಾಗಿ ಹೆಣ್ಣು ಕುಲವನ್ನು ಗೌರವದಿಂದ ಕಾಣುವ ಸಹೃದತೆಯ ಗುಣವಿದೆ… ಇಷ್ಟೆಲ್ಲಾ ಅಪರೂಪದ ಅಂಶಗಳಿರುವ “ಗುಣವಂತ”ನಾದ “ಹೃದಯವಂತ” ನಿಗೆ ಇಂದು ಎಪ್ಪತ್ತರ ಜನ್ಮದಿನದ ಸಂಭ್ರಮ.
ಬರೋಬ್ಬರಿ 48 ವರ್ಷಗಳ ಹಿಂದೆ ಕನ್ನಡ ಚಿತ್ರರಂಗದಲ್ಲಿ ಹೊಸ ದಾಖಲೆ ಬರೆದ ‘ನಾಗರ ಹಾವು’ ಎಂಬ ಎವರ್ ಗ್ರೀನ್ ಚಿತ್ರವೊಂದು ಕನ್ನಡಕ್ಕೊಬ್ಬ ಸ್ಫುರಧ್ರೂಪಿ, ಹಾಗೂ ಪ್ರತಿಭಾವಂತ ನಟನನ್ನು ಪರಿಚಯಿಸಿತು. “ವಂಶವೃಕ್ಷ ” ವೆಂಬ ಕಪ್ಪುಬಿಳುಪು ಚಿತ್ರದಲ್ಲಿ ಅಲ್ಲೆಲ್ಲೋ ಹಾಗೆ ಬಂದು ಹೀಗೆ ಹೋಗಿದ್ದ ಸಂಪತ್ ಕುಮಾರ್ ಎಂಬ ಹುಡುಗನನ್ನು ‘ ವಿಷ್ಣುವರ್ಧನ’ ಎಂಬ ಐತಿಹಾಸಿಕ ಹೆಸರಿನಿಂದ ನಾಮಕರಣ ಮಾಡಿ ತನ್ಮೂಲಕ ಒಂದು ಅಪರೂಪದ ಕೊಡುಗೆಯನ್ನು ಚಿತ್ರರಂಗಕ್ಕೆ ಕೊಡುತ್ತಿದ್ದೇನೆಂದು ಅಂದು ನಿರ್ದೇಶಕ ಪುಟ್ಟಣ್ಣ ಕಣಗಾಲ್ ಕೂಡಾ ಊಹಿಸಿರಲಿಲ್ಲವೇನೋ ?
ರೋಷ- ಆವೇಶದ, ಬೆಂಕಿಯುಗುಳುವ ಕಂಗಳ, ಕೆದರಿದ ಉದ್ದ ಕೂದಲಿನ, ಸಿಡಿಲಿನಂತಹಾ ಮಾತುಗಳ, ಯಾರಿಗೂ ಕೇರ್ ಮಾಡದ ಚಿತ್ರದುರ್ಗದ ರಾಮಾಚಾರಿಯ ಕ್ಯಾರೆಕ್ಟರ್ ಅಂದು ಚಿತ್ರ ಬಿಡುಗಡೆಯಾದ ರಾತ್ರೋರಾತ್ರಿ ಸಮಸ್ತ ಯುವ ಪಡೆಯ , ಪಡ್ಡೆ ಹೈದರ ಪಾಲಿನ ಆಂಗ್ರೀ ಯಂಗ್ ಮ್ಯಾನ್ ಆಗಿ, ಅನ್ಯಾಯದ ವಿರುದ್ಧದ ಪ್ರತಿಭಟನೆಯ ಐಕಾನ್ ಆಗಿ ಉದ್ಭವಿಸಿ , ಆನಂತರ ಸಾಹಸಸಿಂಹ ವಿಷ್ಣುವರ್ಧನ್ ಎಂದು ರೂಪಾಂತರಗೊಂಡು ಕನ್ನಡ ಚಿತ್ರರಂಗದಲ್ಲಿ ಅನೇಕ ಸಧಭಿರುಚಿಯ ಚಿತ್ರಗಳಲ್ಲಿ ತನ್ನ ಹೃದಯಂಗಮ ಹಾಗೂ ಆಕರ್ಷಕ ಶೈಲಿಯ ನಟನೆಯಿಂದ ಒಬ್ಬ ಮಾಗಿದ, ಮನಮುಟ್ಟುವ ಅಭಿನಯದ ಪರಿಪಕ್ವ ಕಲಾವಿದ ವಿಷ್ಣುವರ್ಧನ್ ಆಗಿ ಮನೆಮಾತಾಗಿದ್ದು ಗಂಧದಗುಡಿಯ ಮನೆಮನೆ ಕಥೆ .
ನಾಗರಹಾವಿನಿಂದ ಆಪ್ತರಕ್ಷಕನ ವರೆಗೆ ಭರ್ತಿ ಇನ್ನೂರು ಚಿತ್ರಗಳಲ್ಲಿ ನಟಿಸಿ ಕನ್ನಡ ಚಿತ್ರರಂಗದಲ್ಲಿ ತನ್ನದೇ ಆದ ಅಭಿಮಾನಿ ಬಳಗವನ್ನು ಹೊಂದಿ ತನ್ನ ಅರವತ್ತರ ಪ್ರಾಯದಲ್ಲೇ ಅಕಾಲ ಮರಣಕ್ಕೆ ತುತ್ತಾದ ವಿಷ್ಣು ಚಿತ್ರರಂಗದ ದಾದಾ ನೇ ಆಗಿದ್ದರು . ಅವರು ನಟಿಸಿದ ಬಹುತೇಕ ಚಿತ್ರಗಳಲ್ಲಿ ಉತ್ತಮ ಕಥೆ, ಸಂಗೀತ, ಸಂದೇಶ, ಅಭಿನಯ, ಭಾವೈಕ್ಯತೆ …ಎಲ್ಲವೂ ಇರುತ್ತಿತ್ತು. ಅದು ಶ್ರೀಸಾಮಾನ್ಯನಿಗೂ ಥಟ್ಟನೇ ಮನಮುಟ್ಟುವಂತೆ ಇದ್ದಿದರಿಂದಾಗಿಯೇ ಅವರಿಗೆ ಅಣ್ಣಾವ್ರಂತೆ ಜನಪ್ರಿಯತೆ ದೊರೆಯಲು ಸಾಧ್ಯವಾಯಿತು.
ಮೂಲತಃ ಸಂಸ್ಕಾರವಂತರಾಗಿದ್ದ ಅವರನ್ನು ಆಗಾಗ್ಗೆ ಒಬ್ಬ ವಿವಾದಾಸ್ಪದ ನಟನನ್ನಾಗಿಸಿದ ಕೀರ್ತಿ ನಮ್ಮ ಅಂದಿನ ಕೆಲವು ಮಾಧ್ಯಮಗಳಿಗೆ ಸಲ್ಲಬೇಕು. ಉಗುರಲ್ಲಿ ಹೋಗುವಂತಹ ಸುದ್ದಿಗಳನ್ನು ವರ್ಣರಂಜಿತ ಕೊಡಲಿಯಿಂದ ಕೆತ್ತಿ ಕೆತ್ತಿ ವಿಷ್ಣುವನ್ನು ತಾನೊಲ್ಲದ ವಿವಾದಗಳ ಕೂಪಕ್ಕೆ ತಳ್ಳಿ ಅದರ ಮಸಿಯನ್ನು ಯಾರ್ಯಾರಿಗೋ ಬಳಿಯಲು ನೋಡಿ ಕೈ ಸುಟ್ಟುಕೊಂಡಿದ್ದು ಈಗ ಇತಿಹಾಸ. ತೆರೆಯ ಮೇಲೆ ನಾಯಕನಾಗಿ ಮಿಂಚಿದ್ದ ವಿಷ್ಣು ಅದೇಕೋ ನಿಜ ಬದುಕಿನ ಹೋರಾಟದಲ್ಲಿ ವಿಮುಖರಾಗಿ ಸದಾ ಅಂತರ್ಮುಖಿಯಾಗಿಯೇ ಇರಲು ಬಯಸುತ್ತಿದ್ದರು.
ಹೀಗಾಗಿಯೇ ಅವರು ಯಾವುದೇ ಹೋರಾಟದ ನಾಯಕತ್ವದಿಂದ, ಮುಜುಗರದ ಹೇಳಿಕೆಗಳಿಂದ ಅಂತರವನ್ನು ಕಾಯ್ದುಕೊಂಡಿರುತ್ತಿದ್ದರು. ಅದರಲ್ಲೂ ತಮ್ಮ ಜೀವನದ ಕೊನೆಯ ದಿನಗಳಲ್ಲಿ ಒಮ್ಮೊಮ್ಮೆ ಸಂತನಂತೆಯೇ ಮಾತನಾಡುತ್ತಾ, ಕೆಲವೊಮ್ಮೆ ಕಳೆದುಕೊಂಡ ಏನನ್ನೋ ಅರಸುವಂತಹ ಬಾಲಕನಂತೆ , ದೈವೀಕ ಪ್ರತಿನಿಧಿಯಂತೆ ಭಾಸವಾಗುತ್ತಿದ್ದರು.
ಅದೇನೇ ಇರಲಿ, ಇಂದಿನ ಸಂತಸದ ಸಂಗತಿಯೆಂದರೆ ವಿಷ್ಣು ಗತಿಸಿ ಹತ್ತು ವರ್ಷಗಳ ನಂತರವಾದರೂ ಅವರ ಅಭಿಮಾನಿಗಳ ಕುಟುಂಬದ ಬಹು ಬೇಡಿಕೆಯ ಸ್ಮಾರಕ ನಿರ್ಮಾಣಕ್ಕೆ ಮೊನ್ನೆ ಚಾಲನೆ ಸಿಕ್ಕಿರುವುದು !. ಕನ್ನಡ ಚಿತ್ರರಂಗಕ್ಕೆ ವಿಷ್ಣುವರ್ಧನ್ ರವರ ಕೊಡುಗೆಯನ್ನು, ಕಲಾಸೇವೆಯನ್ನು ಪರಿಗಣಿಸಿ ಅವರ ಸ್ಮಾರಕ ನಿರ್ಮಾಣಕ್ಕಾಗಿ ಅವರ ನೆಚ್ಚಿನ ಮೈಸೂರು ಬಳಿಯಲ್ಲಿಯೇ ಅದರ ಶಂಕುಸ್ಥಾಪನೆಯಾಗಿರುವುದು ಹಾಗೂ ಇದಕ್ಕಾಗಿ ಸರ್ಕಾರ ಹನ್ನೊಂದು ಕೋಟಿ ಹಣ ತೆಗೆದಿಟ್ಟಿರುವುದು ಅಭಿಮಾನಿಗಳ ಖುಷಿಗೆ ಕಾರಣವಾಗಿದೆ. ಈ ಕಾರ್ಯ ಆದಷ್ಟು ಬೇಗನೇ ಪೂರ್ಣವಾಗಲಿ.
” ಸಾವಿರ ಹೂವ್ವಿನ ಎದೆಹನಿ ಬೇಕು ಜೇನಿನ ಗೂಡಾಗಲು, ಸಾವಿರ ಭಾವ ಸ್ಪಂದಿಸಬೇಕು ಕನ್ನಡ ನಾಡಾಗಲು” ಎಂಬ ಸುಂದರ ಸಾಲುಗಳಂತೆ ಸಾವಿರ ಹೃದಯಗಳು ಮನದುಂಬಿ ಹಾರೈಸಬೇಕಿಂದು ವಿಷ್ಣುವರ್ಧನ್ ರವರ ಜನ್ಮದಿನವಾಗಲು..!
ಚಾಮುಂಡಿ ತಾಯಾಣೆ ಮುಂದಿನ ಜನ್ಮದಲ್ಲೂ ಹುಟ್ಟೋದು ಇಲ್ಲೇನೇ ” ಎಂದು ತಮ್ಮ ಕೊನೆ ಚಿತ್ರದಲ್ಲಿ ವಿಷ್ಣು ಅಂದುಕೊಂಡಂತೆ ತಾಯಿ ಚಾಮುಂಡಿ ಅವರನ್ನು ಮತ್ತೇ ಕರುನಾಡಿನ ಮಣ್ಣಲ್ಲೇ ಜನ್ಮ ನೀಡಲಿ ಎಂಬ ಅಭಿಮಾನಪೂರ್ವಕ ಪ್ರಾರ್ಥನೆಯೊಂದಿಗೆ
ಕಲೆಯನ್ನು, ಕಲಾವಿದರನ್ನು, ಮತ್ತು ಕನ್ನಡವನ್ನು ಮನದಾಳದಿಂದ ಪ್ರೀತಿಸುವ ಎಲ್ಲ ಸಹೃದಯರ ಪರವಾಗಿ ಅಭಿನಯ ಭಾರ್ಗವ ಡಾ. ವಿಷ್ಣುವರ್ಧನ್ ರವರಿಗೆ 70 ನೇ ‘ವರ್ಷ’ ದ ಹುಟ್ಟುಹಬ್ಬದ ಶುಭಾಶಯಗಳು.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಶಿವಮೊಗ್ಗಕ್ಕೆ ಇಂದು ಪ್ರಧಾನಿ ನರೇಂದ್ರ ಮೋದಿ
ಸುದ್ದಿದಿನ, ಶಿವಮೊಗ್ಗ : ಪ್ರಧಾನಮಂತ್ರಿ ನರೇಂದ್ರ ಮೋದಿ ಇಂದು ಮಧ್ಯಾಹ್ನ 2 ಗಂಟೆಗೆ ಶಿವಮೊಗ್ಗದಲ್ಲಿ ಬೃಹತ್ ಸಾರ್ವಜನಿಕ ಸಭೆಯನ್ನುದ್ದೇಶಿ ಮಾತನಾಡಲಿದ್ದಾರೆ.
ಯುವಜನರು, ಮಹಿಳೆಯರು, ರೈತರು ಸೇರಿ ಸುಮಾರು ಎರಡೂವರೆ ಲಕ್ಷಕ್ಕೂ ಹೆಚ್ಚು ಜನರು ಕಾರ್ಯಕ್ರಮದಲ್ಲಿ ಭಾಗವಹಿಸುವ ನಿರೀಕ್ಷೆ ಇದೆ ಎಂದು ವಿಧಾನಪರಿಷತ್ ಮುಖ್ಯ ಸಚೇತಕ ಎನ್.ರವಿಕುಮಾರ್ ಶಿವಮೊಗ್ಗದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಚುನಾವಣಾ ಬಾಂಡ್ ಕುರಿತ ದತ್ತಾಂಶ ಬಿಡುಗಡೆ
ಸುದ್ದಿದಿನ,ನವದೆಹಲಿ : ಚುನಾವಣಾ ಬಾಂಡ್ ಕುರಿತಂತೆ ಸುಪ್ರೀಂಕೋರ್ಟ್ನ ರಿಜಿಸ್ಟ್ರಿ ಇಂದ ಲಭ್ಯವಾದ ಅಂಕಿಕೃತ ದತ್ತಾಂಶ ಮಾದರಿಯನ್ನು ಚುನಾವಣಾ ಆಯೋಗ ಭಾನುವಾರ ತನ್ನ ವೆಬ್ಸೈಟ್ನಲ್ಲಿ ಅಪ್ಲೋಡ್ ಮಾಡಿದೆ. www.eci.gov.in/candidate-politicalparty ವೆಬ್ಸೈಟ್ನಲ್ಲಿ ಈ ದತ್ತಾಂಶ ಲಭ್ಯವಿರುತ್ತದೆ.
ಸುಪ್ರೀಂಕೋರ್ಟ್ ನಿರ್ದೇಶಿಸಿದಂತೆ ರಾಜಕೀಯ ಪಕ್ಷಗಳು ಚುನಾವಣಾ ಬಾಂಡ್ ಕುರಿತ ದತ್ತಾಂಶಗಳನ್ನು ಮೊಹರು ಹಾಕಿದ ಲಕೋಟೆಯಲ್ಲಿ ಸಲ್ಲಿಸಿದ್ದವು ಎಂದು ಚುನಾವಣಾ ಆಯೋಗದ ಹೇಳಿಕೆ ತಿಳಿಸಿದೆ. ರಾಜಕೀಯ ಪಕ್ಷಗಳಿಂದ ಸ್ವೀಕರಿಸಿದ ಮೊಹರು ಹಾಕಿದ ಲಕೋಟೆಗಳನ್ನು ತೆರೆಯದೇ ಸುಪ್ರೀಂಕೋರ್ಟ್ಗೆ ಸಲ್ಲಿಸಲಾಗಿತ್ತು.
ಇದೇ 15ರಂದು ಸುಪ್ರೀಂಕೋರ್ಟ್ ನೀಡಿದ ಆದೇಶದ ಮೇರೆಗೆ ಸುಪ್ರೀಂಕೋರ್ಟ್ನ ರಿಜಿಸ್ಟ್ರಿ, ಭೌತಿಕ ಪ್ರತಿ ಹಾಗೂ ಅದರ ಡಿಜಿಟಲ್ ದಾಖಲೆಯಿರುವ ಪೆನ್ಡ್ರೈವ್ ಒಳಗೊಂಡ ಮೊಹರು ಹಾಕಿದ ಲಕೋಟೆಯನ್ನು ಹಿಂತಿರುಗಿಸಿತ್ತು.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ರಶ್ಮಿ ಚಂದ್ರಗಿರಿ ಅವರಿಗೆ ಪಿಎಚ್.ಡಿ ಪದವಿ
ಸುದ್ದಿದಿನ,ಹಾವೇರಿ : ನಗರದ ರಶ್ಮಿ ಚಂದ್ರಗಿರಿ ಅವರು ಕರ್ನಾಟಕ ವಿಶ್ವವಿದ್ಯಾಲಯಕ್ಕೆ ಮಂಡಿಸಿದ “ದಲಿತ ಬಂಡಾಯ ಕಾದಂಬರಿಗಳಲ್ಲಿ ಸಾಂಸ್ಕೃತಿಕ ನೆಲೆಗಳು” ಎಂಬ ಮಹಾಪ್ರಬಂಧಕ್ಕೆ ಕರ್ನಾಟಕ ವಿಶ್ವವಿದ್ಯಾಲಯ ಪಿಎಚ್.ಡಿ ಪದವಿ ಪ್ರಧಾನ ಮಾಡಿದೆ.
ಇವರಿಗೆ ಡಾ.ಬಿಎಸ್.ಭಜಂತ್ರಿ , ಸಹಾಯಕ ಪ್ರಧ್ಯಾಪಕರು ಕರ್ನಾಟಕ ಕಲಾ ಮಹಾವಿದ್ಯಾಲಯ ಧಾರವಾಡ ಇವರು ಮಾರ್ಗದರ್ಶನ ಮಾಡಿದ್ದರು.
ಬರವಣಿಗೆಯಲ್ಲಿ ತೊಡಗಿಸಿಕೊಂಡಿರುವ ರಶ್ಮಿ ಚಂದ್ರಗಿರಿಯವರ ಹಲವು ಲೇಖನಗಳು ನಿಯತಕಾಲಿಕೆಗಳಲ್ಲಿ ಪ್ರಕಟಗೊಂಡಿವೆ. ಪ್ರಸ್ತುತ ಇವರು ಉಪನ್ಯಾಸಕಿಯಾಗಿ ಕಾರ್ಯನಿರ್ವಹಿಸಿತ್ತಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243