Connect with us

ಬಹಿರಂಗ

‘ಯೆಹೂದಿ ನರಮೇಧ 75’ : 60 ಲಕ್ಷ ಯೆಹೂದಿಗಳ ನರಮೇಧ 1933-45 ಅವಧಿಯಲ್ಲಿ ಹೇಗಾಯಿತು?

Published

on

 

  • ನಾಜಿಗಳ ‘ಅಂತಿಮ ಪರಿಹಾರ’ದ (ಫೈನಲ್ ಸೊಲ್ಯುಶನ್) ಯೋಜನೆ ಯುರೋಪಿನ ಮೂರನೆಯ-ಎರಡಷ್ಟು ಯೆಹೂದಿಯರನ್ನು ನಿರ್ಮೂಲನ ಮಾಡಿತು. ಯುರೋಪಿನ ಯೆಹೂದಿಯರನ್ನು ನಿರ್ಮೂಲನ ಮಾಡಲು ಹಿಟ್ಲರ್ ನೇತೃತ್ವದ ನಾಜಿ ಪಕ್ಷವು, ಒಂದು ನಿರ್ಧಾರವನ್ನು ತೆಗೆದುಕೊಳ್ಳಲಿಲ್ಲ. ಬದಲಾಗಿ, ಅವರು ಅಧಿಕಾರಕ್ಕೆ ಬಂದ ಸಮಯದಿಂದ, ಅದಕ್ಕಾಗಿ ಸೂಕ್ತ ನೀತಿಗಳ, ಕ್ರಮಗಳ ಮತ್ತು ಕಾನೂನುಗಳ ಒಂದು ಸರಣಿಯನ್ನು ರೂಪಿಸಿ ಜಾರಿಗೊಳಿಸಿದರು.ಇದರ ಭಾಗವಾಗಿ ಯೆಹೂದಿಯರನ್ನು ಮೊದಲು ಹೇಗೆ ಪ್ರತ್ಯೇಕಿಸಲಾಯಿತು, ನಂತರ ಬಹಿಷ್ಕರಿಸಲಾಯಿತು ಮತ್ತು ಆನಂತರ ‘ಅಮಾನವೀಯ’ಗೊಳಿಸಲಾಯಿತು, ಕೊನೆಗೆ ಹೇಗೆ ಕೊಲ್ಲಲಾಯಿತು ಎಂಬುದನ್ನು ನೆನಪಿಸಿಕೊಳ್ಳಬೇಕು. ಒಂದು ಸಮುದಾಯದ ನರಮೇಧದ ಹಲವು ಹಂತಗಳ ಈ ಭೀಕರ ಚರಿತ್ರೆ ಮರೆಯುವಂತಹದ್ದಲ್ಲ. ಇದು ಯಾವುದೇ ಇತರ ಸಮುದಾಯಕ್ಕೆ ಮರುಕಳಿಸಬಾರದು. ಇಂತಹ ಕ್ರಮಗಳನ್ನು ಕೈಗೊಳ್ಳುವುದರಿಂದ ಮಾತ್ರ ‘ಯೆಹೂದಿ ನರಮೇಧ’ದಲ್ಲಿ ಬಲಿಯಾದವರ ನೆನಪಿಗೆ ಅರ್ಥಪೂರ್ಣ ಗೌರವ ಸಲ್ಲಿಸಿದಂತಾಗುತ್ತದೆ.

ನಾಗರಾಜ ನಂಜುಂಡಯ್ಯ

ಜನವರಿ 27 ರಂದು, ಪೊಲೆಂಡಿನಲ್ಲಿರುವ ‘ಆಶ್ವಿಟ್ಜ್’ ಯಾತನಾ ಶಿಬಿರವಾಸಿಗಳು ಸೋವಿಯೆಟ್ ಕೆಂಪು ಸೇನೆಯಿಂದ, ವಿಮೋಚನೆ ಹೊಂದಿದ ದಿನದ 75ನೇ ವಾರ್ಷಿಕೋತ್ಸವವನ್ನು ಆಚÀರಿಸಲಾಯಿತು. ಈಗ ಅದನ್ನು ‘ಅಂತರರಾಷ್ಟ್ರೀಯ ಯೆಹೂದಿ ನರಮೇಧ ನೆನಪಿನ ದಿನ” ವೆಂದು ಆಚರಿಸಲಾಗುತ್ತಿದೆ. ಸುಮಾರು 55 ರಿಂದ 60 ಲಕ್ಷ ಜನ ಈ ಯೆಹೂದಿ ನರಮೇಧದಲ್ಲಿ ಕೊಲ್ಲಲ್ಪಟ್ಟರು. ಆಶ್ವಿಟ್ಜ್ ಸಂಕೀರ್ಣದ ಯಾತನಾ ಶಿಬಿರ (ಕಾನ್ಸೆಂಟ್ರೇಶನ್ ಕ್ಯಾಂಪ್) ವೊಂದರಲ್ಲೇ ಸುಮಾರು 9.6 ಲಕ್ಷ ಜನರು, ಅದರಲ್ಲಿ ಬಹುತೇಕ ಎಲ್ಲರೂ ಯೆಹೂದಿ ಸಮುದಾಯುದವರೇ ಸಾವನ್ನಪ್ಪಿದ್ದರು ಎಂದು ದಾಖಲಾಗಿದೆ.

ಲಕ್ಷಾಂತರ ಯೆಹೂದಿಗಳನ್ನು ನಾಜಿಗಳು ‘ನಿರ್ಮೂಲನ’ (ಸಾಮಾನ್ಯವಾಗಿ ವಿನಾಶಕಾರಿ ಕೀಟಗಳಿಗೆ ಬಳಸುವ ಶಬ್ದ) ಮಾಡಿದ್ದರ ಕುರಿತು ಅರಿಯಲು, ಯೆಹೂದಿಗಳನ್ನು ಮೊದಲು ಹೇಗೆ ಪ್ರತ್ಯೇಕಿಸಲಾಯಿತು, ನಂತರ ಬಹಿಷ್ಕರಿಸಲಾಯಿತು ಮತ್ತು ಆನಂತರ ಅಮಾನವೀಯ ಗೊಳಿಸಲಾಯಿತು, ಕೊನೆಗೆ ಹೇಗೆ ಕೊಲ್ಲಲಾಯಿತು ಎಂಬುದನ್ನು ನೆನಪಿಸಿಕೊಳ್ಳಬೇಕು.

1945ರ ಹೊತ್ತಿಗೆ ನಾಜಿಗಳ ‘ಅಂತಿಮ ಪರಿಹಾರ’ದ (ಫೈನಲ್ ಸೊಲ್ಯುಶನ್) ಯೋಜನೆ ಯುರೋಪಿನ ಮೂರನೆಯ-ಎರಡಷ್ಟು ಯೆಹೂದಿಯರನ್ನು ನಿರ್ಮೂಲನ ಮಾಡಿತು. ಯುರೋಪಿನ ಯೆಹೂದಿಯರನ್ನು ನಿರ್ಮೂಲನ ಮಾಡಲು ಹಿಟ್ಲರ್ ನೇತೃತ್ವದ ನಾಜಿ ಪಕ್ಷವು, ಒಂದು ನಿರ್ಧಾರವನ್ನು ತೆಗೆದುಕೊಳ್ಳಲಿಲ್ಲ. ಬದಲಾಗಿ, ಅವರು ಅಧಿಕಾರಕ್ಕೆ ಬಂದ ಸಮಯದಿಂದ, ಅದಕ್ಕಾಗಿ ಸೂಕ್ತ ನೀತಿಗಳ, ಕ್ರಮಗಳ ಮತ್ತು ಕಾನೂನುಗಳ ಒಂದು ಸರಣಿಯನ್ನು ರೂಪಿಸಿ ಜಾರಿಗೊಳಿಸಿದರು. ಈ ನೀತಿಗಳು ಹಂತ ಹಂತವಾಗಿ ಹೊಮ್ಮುತ್ತಾ ಹೋದಂತೆ, ಅವುಗಳ ಭೀಕರತೆ ಜರ್ಮನಿಯ ಹೊರಗೂ ಒಳಗೂ ಸ್ಪಷ್ಟವಾಗಿ ಗೋಚರಿಸಿದರೂ ಅದನ್ನು ನಿರ್ಲಕ್ಷಿಸಲಾಯಿತೆಂದೇ ಹೇಳಬೇಕು.

ನ್ಯೂರೆಂಬರ್ಗ್ ಕಾನೂನುಗಳು
ಇಂತಹ ಸರಣಿಯ ಮೊದಲ ಹಂತವೆಂದರೆ, ಎಲ್ಲಾ ಯೆಹೂದಿಗಳ ಗುರುತಿಸುವಿಕೆ ಮತ್ತು ಅವರ ನೊಂದಾಣಿ. ಇದನ್ನು ನಂತರ ಅವರ ಆಸ್ತಿಯನ್ನು ವಿವಿಧ ರೀತಿಯಲ್ಲಿ ಮುಟ್ಟು ಗೋಲು ಹಾಕಿಕೊಳ್ಳುವುದಕ್ಕೆ ಬಳಸಲಾಯಿತು. ಆ ನಂತರ ಅವರ ಪೌರತ್ವ, ಜೀವನೋಪಾಯದ ವಿಧಾನಗಳು ಮತ್ತು ಕಾನೂನುಬದ್ಧ ಪರಿಹಾರಗಳನ್ನು ತಡೆಯುವ ಕಾನೂನುಗಳನ್ನು ಅಂಗೀಕರಿಸಲಾಯಿತು.

ಈ ಎಲ್ಲಾ ಪ್ರಭುತ್ವ-ಪ್ರಾಯೋಜಿತ ಕ್ರಮಗಳ ಮೂಲಕ ಯೆಹೂದಿಯರಿಗೆ ಬೆದರಿಕೆಗಳನ್ನು ಒಡ್ಡಲಾಯಿತು, ಅವರ ಮೇಲೆ ಹಿಂಸಾಚಾರ ವೆಸಗಲಾಯಿತು. ಅವರನ್ನು ಇನ್ನಷ್ಟು ಬಡತನದತ್ತ ಮತ್ತು ಪರಕೀಯಭಾವದತ್ತ ತಳ್ಳಲಾಯಿತು. ಇವೆಲ್ಲದರ ಫಲವಾಗಿ 1933 ಒಂದು ವರ್ಷದಲ್ಲೇ ಸುಮಾರು 37 ಸಾವಿರ ಯೆಹೂದಿಯರು ಜರ್ಮನಿ ಬಿಟ್ಟು ವಲಸೆ ಹೋದರು.

“ನ್ಯೂರೆಂಬರ್ಗ್ ಕಾನೂನುಗಳು” ಎಂದು ಕುಪ್ರಸಿದ್ಧವಾದ 1935ರಲ್ಲಿ ತರಲಾದ ಕಾನೂನಿನಲ್ಲಿ ಎರಡು ಅಂಶಗಳಿದ್ದವು. ಮೊದಲನೆಯದು “ಯೆಹೂದಿ” ಯಾರೆಂದು ಪ್ರತ್ಯೇಕವಾಗಿ ಗುರುತಿಸುವುದು. ಮತ್ತೊಂದು, “ಜರ್ಮನ್ ಪೌರತ್ವದ ” ಪ್ರತ್ಯೇಕತೆಯನ್ನು ವ್ಯಾಖ್ಯಾನಿಸಿದ ರೀತಿ. ಈ ಎರಡು ಕಾನೂನುಗಳಲ್ಲಿ ಮೊದಲನೆಯದರಲ್ಲಿ, ಯೆಹೂದಿ ಯಾರೆಂದು ಸ್ಪಷ್ಟಿಕರಿಸಲಾಗಿತ್ತು. ಎರಡನೆಯದರಲ್ಲಿ ‘ಜರ್ಮನ್ ಪೌರತ್ವ’ ಯಾರಿಗೆ ಕೊಡಲಾಗುವುದು ಎಂದು ಸ್ಪಷ್ಟಪಡಿಸಲಾಯಿತು.

ಮೊದಲನೆಯ ಕಾನೂನಿನಲ್ಲಿ ‘ಯೆಹೂದಿ’ ಮತ್ತು ‘ಜರ್ಮನ’ರ ನಡುವಿನ ವಿವಾಹವನ್ನು ನಿಷೇಧಿಸಲಾಯಿತು. ಜೊತೆಗೆ, ಯೆಹೂದಿಯರ ಮನೆಗಳಲ್ಲಿ 45 ವರ್ಷದೊಳಗಿನ ಜರ್ಮನ್ ಮಹಿಳೆಯರು ಕೆಲಸ ಮಾಡುವುದನ್ನು ನಿóಷೇಧಿಸಲಾಯಿತು. ಜರ್ಮನ ರ ಪೌರತ್ವವನ್ನು ‘ರಕ್ತದ’ ಮತ್ತು ‘ನಡವಳಿಕೆಯ ನಿರಂತರತೆ’ಗಳ ಮೂಲಕ ಸಾಬೀತು ಪಡಿಸಬೇಕೆಂದು ಕಾನೂನು ಹೇಳಿತು. ಪೌರತ್ವ ಹೊಂದಿದವರು ” ಕಡ್ಡಾಯವಾಗಿ ಜರ್ಮನ್ ಜನರು ಮತ್ತು ರೀಚ್ ‘ ಗೆ ಸೇವೆ ಸಲ್ಲಿಸಲು ಸಿದ್ದರಿರಬೇಕು. ಒಟ್ಟಿನಲ್ಲಿ ‘ನ್ಯೂರೆಂಬರ್ಗ್ ಕಾನೂನುಗಳು’ ಯೆಹೂದಿಯರ ಸಾಮಾಜಿಕ ಮತ್ತು ಆರ್ಥಿಕ ಪ್ರತ್ಯೇಕತೆ ಮತ್ತು ಕಳಂಕಿತತೆಯನ್ನು ಪೂರ್ಣಗೊಳಿಸಿದವು.

ಈ ಪ್ರತ್ಯೇಕತೆ ಮತ್ತು ಕಳಂಕಿತತೆಗಳು 1938 ರಲ್ಲಿ, ಕುಖ್ಯಾತ ‘ಕ್ರಿಸ್ಟಾಲ್ನಕ್ತ್’ (ಒಡೆದ ಗಾಜುಗಳ ರಾತ್ರಿ) ನಲ್ಲಿ ಪರಿಸಮಾಪ್ತಿಯಿತು. ಈ ಕಾನೂನನ್ನು ಬಳಸಿಕೊಂಡು, ಪ್ರಭುತ್ವ ಪ್ರಾಯೋಜಿತ ಹಿಂಸಾತ್ಮಕ ಕೃತ್ಯಗಳು ಮತ್ತು ಕಿರುಕುಳಗಳನ್ನು ನಡೆಸಲಾಯಿತು. ನಾಜಿ ಅರೆ ಸೈನಿಕರು, ನಾಗರಿಕರು ಒಟ್ಟಾಗಿ ಯೆಹೂದಿ ಮನೆಗಳು, ಅವರ ವ್ಯಾಪಾರ ವಹಿವಾಟುಗಳು, ಆಸ್ಪತ್ರೆಗಳು ಮತ್ತು ಅವರ ಪೂಜಾಮಂದಿರ(ಸಿನೆಗಾಗ್) ಗಳ ಮೇಲೆ ದಾಳಿ ನಡೆಸಿದರು. ಇದನ್ನು ಜರ್ಮನ್ ಆಡಳಿತ ಪೋಲಿಸಿನ ಎದುರೇ ನಡೆಸಿದ್ದು, ಅವರು ಅದಕ್ಕೆ ಮೂಕಸಾಕ್ಷಿಗಳಾಗಿದ್ದರು.

ಸತತ ‘ರಾಕ್ಷಸೀಕರಣ’
ಆನಂತರವೂ ವಲಸೆ ಹೋಗದ ಯೆಹೂದಿಗಳನ್ನು 1939ರಲ್ಲಿ ನಾಜಿ ಆಕ್ರಮಣ ನಡೆಸಿ ವಶಪಡಿಸಿಕೊಂಡ ಪೆÇೀಲೆಂಡಿನ ಕೊಳೆಗೇರಿ (ಘೆಟ್ಟೋಸ್) ಗಳಿಗೆ ಓಡಿಸಲಾಯಿತು. ಹೀಗೆ ಒಂದೇ ಸ್ಥಳದಲ್ಲಿ ಅವರನ್ನು ಕೂಡಿಹಾಕಿದ್ದು, ಮುಂದೆ 1941ರ ಹೊತ್ತಿಗೆ ನಾಜಿ ಕಾರ್ಯಕರ್ತರು ಇಡೀ ಯೆಹೂದಿ ಕುಟುಂಬಗಳನ್ನು ಸಮರ್ಥವಾಗಿ ಸುತ್ತುವರಿದು ಯಾತನಾ (ಕಾನ್ಸಂಟ್ರೇಶನ್ ಕ್ಯಾಂಪ್)ಗಳಿಗೆ ಕಳಿಸುವುದನ್ನು ಸುಗಮಗೊಳಿಸಿತು.

ಈ ಇಡೀ ಅವಧಿಯಲ್ಲಿ ಯೆಹೂದಿಗಳ (ಅವರನ್ನು ರಾಕ್ಷಸರಂತೆ ಬಿಂಬಿಸುವ) ‘ರಾಕ್ಷಸಿಕರಣ’ ಸತತವಾಗಿ ಮುಂದುವರೆದಿತ್ತು. 1941 ರಲ್ಲಿಯೇ ಫೀಲ್ಡ್ ಮಾರ್ಷಲ್ ವಾಲ್ಟರ್ ವಾನ್ ರೀಚೆನೌ ಯೆಹೂದಿಯರನ್ನು ಮನುಷ್ಯರೇ ಅಲ್ಲದ ಕೀಳು ಪ್ರಾಣಿಗಳೆಂದು ಪರಿಗಣಿಸುವ ‘ಕಠೋರ ಆಜ್ಞೆ’ ಹೊರಡಿಸಿದ್ದ. ಯೆಹೂದಿಯರನ್ನು ಮನುಷ್ಯರೇ ಅಲ್ಲದ ಕೀಳುಪ್ರಾಣಿಗಳೆಂದು ಪರಿಗಣಿಸಿದ ಮೇಲೆ, ನಿರ್ಲಿಪ್ತ ದಕ್ಷತೆಯಿಂದ ಅವರ ನಿರ್ಮೂಲನೆಗೆ ಮುಂದಾದರು.

ಫೀಲ್ಡ್ ಮಾರ್ಷಲ್ ರೀಚೆನೌ ರವರ ಆಜ್ಞೆಯಲ್ಲಿ ‘ಕಠೋರ ಆದರೆ, ನ್ಯಾಯಯುತ ಪ್ರತಿಕಾರ” ಎಂದು ಎಚ್ಚರಿಕೆಯಿಂದ ಕೊಡಲಾದ ಸಂದೇಶ ಯೆಹೂದಿ ಗಳನ್ನು ಕೊಲ್ಲುವ ಸಂಕೇತವಾಗಿತ್ತು. ಇಂತಹುದೇ ಸಂದೇಶವನ್ನು ಇತರ ಆಜ್ಞೆಗಳಲ್ಲೂ ಕೊಡಲಾಯಿತು. ಇದು ಜರ್ಮನಿ ವಶಪಡಿಸಿಕೊಂಡ ಪೋಲೆಂಡ್ ಮತ್ತು ಸೋವಿಯೆಟ್ ಒಕ್ಕೂಟದ ಪ್ರದೇಶಗಳಲ್ಲಿ ನರಮೇಧಧ ಅತ್ಯಂತ ಕ್ರೂರವಾದ ಹಂತವಾಗಿತ್ತು.

ನಾಜಿ ‘ಕೊಲೆಗಡುಕ ದಳ’ಗಳು, ಜರ್ಮನ್ ಮಿಲಿಟರಿ ಪಡೆ ಮತ್ತು ಸ್ಥಳೀಯ ಸಹಾಯಕ ಪಡೆಗಳೊಂದಿಗೆ 13 ಲಕ್ಷ ಯೆಹೂದಿಯರನ್ನು ಸುತ್ತುವರೆದು ಸಾಮೂಹಿಕವಾಗಿ ಗುಂಡುಹೊಡೆದು ಕೊಲೆ ಮಾಡಿದರು. ಮೊದ ಮೊದಲು ಯೆಹೂದಿ ಹುಡುಗರು ಮತ್ತು ಪುರುಷರು, ಬುದ್ಧಿಜೀವಿಗಳು ಮತ್ತು ವಿರೋಧಿ ರಾಜಕೀಯ ಪಕ್ಷಗಳ ಕಾರ್ಯಕರ್ತರನ್ನು (ಅವರು ಯೆಹೂದಿ ಅಲ್ಲದಿದ್ದರೂ) ವಿವಿಧ ಬೊಗಳೆ ಆಪಾದನೆಗಳ ಮೇಲೆ ಗುಂಡಿಕ್ಕಿ ಕೊಲೆ ಮಾಡಲಾಯಿತು. ಕ್ರಮೇಣ ಈ ಕಾನೂನುಗಳ ನೆನಪಗಳನ್ನು ಬದಿಗಿಡಲಾಯಿತು ಮತ್ತು ಹೆಣ್ಣು ಮಕ್ಕಳನ್ನು ಹೆಂಗಸರನ್ನು ಸಹ ಗುಂಡಿಕ್ಕಿ ಕೊಲ್ಲಲಾಯಿತು.

ದುರಂತವೆಂದರೆ ನಾಜಿ ‘ಕೊಲೆಗಡುಕ ದಳ’ಗಳಿಗೆ ದೊಡ್ಡ ಪ್ರಮಾಣದಲ್ಲಿ ಸ್ಥಳೀಯ ಸಹಾಯಕ ಪಡೆಗಳು ಬೆಂಬಲ ನೀಡಿದವು. ಒಬ್ಬ ನಾಜಿ ‘ಕೊಲೆಗಡುಕ ದಳ’ದ ಸದಸ್ಯನಿಗೆ 10 ಸ್ಥಳೀಯ ಸಹಾಯಕರು ಬೆಂಬಲ ನೀಡುತ್ತಿದ್ದರು. ಆಕ್ರಮಣಕೋರ ಜರ್ಮನಿಯ ಮಿಲಿಟರಿ ಪಡೆಗಳು ಹೊಸ ಹೊಸ ಪ್ರದೇಶಗಳಿಗೆ ದಾಳಿ ಮಾಡುವಾಗ, ಯೆಹೂದಿಯವರ ಮೇಲೆ ದಾಳಿ ಮಾಡಲು ಸ್ಥಳೀಯರನ್ನು ಪ್ರಚೋದಿಸುವಲ್ಲಿ ಯಶಸ್ವಿಯಾಗಿದ್ದರು.

1941 ರ ಜೂನ್ ನಲ್ಲಿ ಸೋವಿಯೆತ್ ಒಕ್ಕೂಟದ ಆಕ್ರಮಣದ ನಂತರದ 6 ತಿಂಗಳಲ್ಲಿ, ಲಾಟ್ವಿಯಾ, ಲಿಥುವೇನಿಯಾ, ಮತ್ತು ಉಕ್ರೇನ್ ನಲ್ಲಿ, 60 ಕ್ಕೂ ಹೆಚ್ಚು ಹತ್ಯಾಕಾಂಡಗಳು ನಡೆದು, ಸುಮಾರು 24,000 ಯೆಹೂದಿ ಜೀವಗಳನ್ನು ಬಲಿ ಪಡೆದವು. ‘ನಾಜಿ ಕೊಲೆಗಡುಕ ದಳ’ಗಳÀ ಅತ್ಯಂತ ಕುಖ್ಯಾತ ನರಮೇಧಗಳಲ್ಲಿ ಒಂದು ಕೀವ್ ಬಳಿಯ ಬಾಬಿಯಾರ್ ನಲ್ಲಿ ನಡೆಯಿತು. ಅಲ್ಲಿ 33 ಸಾವಿರಕ್ಕೂ ಹೆಚ್ಚು ಯೆಹೂದಿಗಳನ್ನು ಕೊಲ್ಲಲಾಯಿತು. ಹಾಗೆಯೇ, 1941 ರ ನವೆಂಬರ್ ಮತ್ತು ಡಿಸೆಂಬರ್ ನ ಎರಡು ದಿನಗಳಲ್ಲಿ, ರಿಗಾ ಬಳಿಯ ರುಂಬುಲಾ ದಲ್ಲಿ ಸುಮಾರು 25 ಸಾವಿರ ಯೆಹೂದಿಗಳನ್ನು ಬಲಿ ತೆಗೆದು ಕೊಳ್ಳಲಾಗಿದೆ. ಆದಾಗ್ಯೂ, ಈ ಸಾಮೂಹಿಕ ಕೊಲೆಗಳು ಅಸಮರ್ಪಕ ಮತ್ತು ದುಬಾರಿಯಾಗಿದ್ದವು. ಇದು ಸೈನಿಕರ ಸ್ಥೈರ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿವೆ ಎಂದು ಮಿಲಿಟರಿ ಕಮಾಂಡರುಗಳು ದೂರುತ್ತಿದ್ದರು.

ಈ ಹಿನ್ನೆಲೆಯಲ್ಲಿ ಜನವರಿ 1942ರಲ್ಲಿ ಯೆಹೂದಿಗಳ ‘ಸಮಸ್ಯೆ’ಯ ‘ಅಂತಿಮ ಪರಿಹಾರ’ದ ಯೋಜನೆ ರೂಪಿಸಲಾಯಿತು. ಸಾಧ್ಯವಿರುವ (ವಿಶೇಷವಾಗಿ ಯುರೋಪಿನ) ಎಲ್ಲಾ ಯೆಹೂದಿಯರನ್ನು ನಿರ್ಮೂಲನ ಮಾಡುವುದು ಈ ಯೋಜನೆಯ ಉದ್ದೇಶವಾಗಿತ್ತು. ಯೆಹೂದಿಗಳ ಸಂಖ್ಯೆ ಸಾಕಷ್ಟು ದೊಡ್ಡದಿದ್ದು ಸಾಮೂಹಿಕ ಗುಂಡೇಟು ‘ದಕ್ಷ’ ವಿಧಾನವಲ್ಲ ಎಂದು ನಾಜಿUಳು ಪರಿಗಣಿಸಿದರು.

ಆದ್ದರಿಂದ ನರಮೇಧವನ್ನು ದೊಡ್ಡ ಪ್ರಮಾಣದ ‘ಕೈಗಾರಿಕೀಕರಣ’ದ ವಿಧಾನ ಬಳಸಿ ಮಾಡುವುದು ‘ಅಂತಿಮ ಪರಿಹಾರ’ದ ಯೋಜನೆಯ ಭಾಗವಾಗಿತ್ತು. ದೊಡ್ಡ ಪ್ರಮಾಣದಲ್ಲಿ ಕೆಲವೇ ಕ್ಷಣಗಳಲ್ಲಿ ಕೊಲ್ಲುವ ‘ಗ್ಯಾಸ್ ಕೋಣೆ’ಗಳನ್ನು ಹೊಂದಿದ್ದ ಜರ್ಮನಿಯ ಆಶ್ವಿಟ್ಝ್ ಯಾತನಾ ಶಿಬಿರವನ್ನು ಇದಕ್ಕಾಗಿ ಸಜ್ಜುಗೊಳಿಸಲಾಯಿತು. ‘ಗ್ಯಾಸ್ ಕೋಣೆ’ಗಳು ಸ್ನಾನದ ಕೋಣೆಯ ಹಾಗೆ ಕಾಣುತ್ತಿತ್ತು. ಶಿಬಿರವಾಸಿಗಳನ್ನು ಸರದಿಯಲ್ಲಿ ಸ್ನಾನಕ್ಕೆಂದು ಕಳಿಸಿ ಸೈನೈಡ್ ವಿಷ ಗ್ಯಾಸ್ ಬಿಟ್ಟು ಅವರನ್ನು ಕೊಲ್ಲಲಾಗುತ್ತಿತ್ತು. ಕೆಲವು ನಿಮಿಷಗಳ ಭೀಕರ ಯಾತನೆಯ ನಂತರ ಅವರ ಹೆಣ ಬೀಳುತ್ತಿತ್ತು. ಈ ಯಾತನಾ ಶಿಬಿರಕ್ಕೆ ರೈಲುಗಳಲ್ಲಿ ಸಾಮಾಹಿಕವಾಗಿ ಕಳಿಸಲಾದ 13 ಲಕ್ಷ ಯೆಹೂದಿಯರಲ್ಲಿ 11 ಲಕ್ಷ ಬಲಿಯಾದರು.

ಹೆಚ್ಚಿನವರು ‘ಗ್ಯಾಸ್ ಕೋಣೆ’ಗಳಲ್ಲಿ ಬಲಿಯಾದರು. ಉಳಿದವರು ಹಸಿವಿಗೆ, ಹಸಿವಿನಿಂದ ಉಂಟಾದ ನಿಶ್ಶಕ್ತಿಗೆ, ರೋಗಗಳಿಗೆ ಬಲಿಯಾದರು. ‘ಗ್ಯಾಸ್ ಕೋಣೆ’ಗಳ ಹೆಣಗಳ ಬೆಲೆಬಾಳುವ ವಸ್ತುಗಳನ್ನು ಕಿತ್ತು ಹಾಕಲಾಗುತ್ತಿತ್ತು. ಮಹಿಳೆಯರ ಕೂದಲು ಕತ್ತರಿಸಲಾಗುತ್ತಿತ್ತು. ಚಿನ್ನದ ಹಲ್ಲುಗಳನ್ನು ದಂತವೈದ್ಯರುಗಳು ಚಿನ್ನವನ್ನು ಪ್ರತ್ಯೇಕಿಸುತ್ತಿದ್ದರು.

1944ರ ವರೆಗೆ ಈ ರೀತಿಯಲ್ಲಿ 10-12 ಕೆ.ಜಿ ಚಿನ್ನ ಸಂಗ್ರಹಿಸಲಾಗಿತ್ತು ಎಂದು ದಾಖಲಾಗಿದೆ.
ಯೆಹೂದಿಯರ ಹೆಣಗಳನ್ನೂ ಸಹ ಪೂರ್ಣವಾಗಿ ಈ ರೀತಿ ‘ಅಮಾನವೀಯ’ಗೊಳಿಸಲಾಗಿತ್ತು. ನಾಜಿ ಸೈನ್ಯವನ್ನು ಸೋವಿಯೆಟ್ ಕೆಂಪು ಸೈನ್ಯ ಸೋಲಿಸಿ ಆಶ್ವಿಟ್ಝ್ ತಲುಪಿ ಅಲ್ಲಿರುವ ಶಿಬಿರವಾಸಿಗಳನ್ನು ಬಿಡುಗಡೆ ಮಾಡದಿದ್ದರೆ ಎಷ್ಟು ಕಾಲ ಈ ನರಮೇಧ ಮುಂದುವರೆಯುತ್ತಿತ್ತೋ ಗೊತ್ತಿಲ್ಲ.

ಒಂದು ಸಮುದಾಯದ ನರಮೇಧದ ಹಲವು ಹಂತಗಳ ಈ ಭೀಕರ ಚರಿತ್ರೆ ಮರೆಯುವಂತಹದ್ದಲ್ಲ. ಇದು ಯಾವುದೇ ಇತರ ಸಮುದಾಯಕ್ಕೆ ಮರುಕಳಿಸಬಾರದು. ಅದಕ್ಕಾಗಿ ಈ ವಾರ್ಷಿಕವನ್ನು ಪ್ರತಿ ವರ್ಷ ಆಚರಿಸಲಾಗುತ್ತದೆ. ಆದರೆ ಹಿಟ್ಲರನ ಸಂತಾನ ಕೊನೆಗೊಂಡಿಲ್ಲ. ಬದಲಾಗಿ ಕಳೆದ ಒಂದೆರಡು ದಶಕಗಳಲ್ಲಿ ನಮ್ಮ ದೇಶ ಸೇರಿದಂತೆ ಇಡೀ ಜಗತ್ತಿನಲ್ಲಿ ಬೆಳೆಯುತ್ತಿದೆ. ಅವರು ಈ ಚರಿತ್ರೆಯನ್ನು ಅರಗಿಸಿಕೊಂಡು ಅದನ್ನು ಮರುಕಳಿಸಲು ಪ್ರಯತ್ನಿಸುತ್ತಿದ್ದಾರೆ. ಅವರನ್ನು ತಡೆಯುವತ್ತ ಕ್ರಮಗಳನ್ನು ಕೈಗೊಳ್ಳುವುದು ಮಾತ್ರ ‘ಯೆಹೂದಿ ನರಮೇಧ’ದಲ್ಲಿ ಬಲಿಯಾದವರ ನೆನಪಿಗೆ ಅರ್ಥಪೂರ್ಣ ಗೌರವ ಸಲ್ಲಿಸಿದಂತಾಗುತ್ತದೆ.

(ಜನಶಕ್ತಿ ವಾರಪತ್ರಿಕೆಯಲ್ಲಿ ಪ್ರಕಟವಾದ ಲೇಖನ)

ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂತರಂಗ

ಸಂಪಾದಕೀಯ | ದಾವಣಗೆರೆ ದಕ್ಷಿಣ ಉಪಚುನಾವಣೆ: ಪ್ರತಿಷ್ಠೆಯ ಹೋರಾಟದಲ್ಲಿ ಜನರ ಧ್ವನಿ ಪ್ರಬಲವಾಗಲಿ

Published

on

~ಗೋವರ್ಧನ ನವಿಲೇಹಾಳು 

ಮಧ್ಯ ಕರ್ನಾಟಕದ ಹೃದಯಭಾಗವಾದ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಈಗ ಉಪಚುನಾವಣೆಯ ಕಾವು‌ ಏರುತ್ತಲೇ ಇದೆ. ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಅವರ ನಿಧನದಿಂದಾಗಿ ಖಾಲಿಯಾದ ಈ ಕ್ಷೇತ್ರದಲ್ಲಿ ಏಪ್ರಿಲ್ 9, 2026ರಂದು ಮತದಾನ ನಡೆಯಲಿದೆ. ಫಲಿತಾಂಶ ಮೇ 4ರಂದು ಪ್ರಕಟವಾಗಲಿದೆ. ಈ ಉಪಚುನಾವಣೆಯು ಕೇವಲ ಒಂದು ಸೀಟಿನ ಹೋರಾಟವಲ್ಲ; ಇದು ಕರ್ನಾಟಕ ರಾಜಕೀಯದಲ್ಲಿ ಪ್ರತಿಷ್ಠೆ, ಕುಟುಂಬ ವಾರಸುದಾರಿಕೆ, ಸಮುದಾಯ ಸಮೀಕರಣಗಳು ಮತ್ತು ಅಭಿವೃದ್ಧಿ ನಿರೀಕ್ಷೆಗಳ ನಡುವಿನ ಸಂಕೀರ್ಣ ಸಮರವಾಗಿದೆ.

ಶಾಮನೂರು ಶಿವಶಂಕರಪ್ಪ ಅವರು ತಾನು ಸ್ಪರ್ಧಿಸಿದ ಈ ಕ್ಷೇತ್ರವನ್ನು ಎಂದೂ ಸೋಲದೆ ಉಳಿಸಿಕೊಂಡಿದ್ದರು. ಅವರ ನಂತರ ಕಾಂಗ್ರೆಸ್ ಪಕ್ಷವು ಅವರ ಮೊಮ್ಮಗ ಸಮರ್ಥ್ ಶಾಮನೂರು ಅವರನ್ನು ಅಭ್ಯರ್ಥಿಯಾಗಿ ಕಣಕ್ಕಿಳಿಸಿದೆ. ಇದು ಕಾಂಗ್ರೆಸ್ ಹೇಳುವಂತೆ “ಕುಟುಂಬಕ್ಕೆ ಟಿಕೆಟ್ ನೀಡುವ ಸಾಂಪ್ರದಾಯಿಕ ನಡೆ”ಯಾಗಿದೆ. ಬಿಜೆಪಿ ಪಕ್ಷವು ಶ್ರೀನಿವಾಸ್ ಟಿ. ದಾಸಕರಿಯಪ್ಪ ಅವರನ್ನು ಅಭ್ಯರ್ಥಿಯಾಗಿ ಘೋಷಿಸಿದೆ. ಇದರ ಜೊತೆಗೆ SDPIಯ ಅಫ್ಸರ್ ಕೊಡ್ಲಿಪೇಟೆ, ಸಾದಿಕ್ ಪೈಲ್ವಾನ್ ಸೇರಿದಂತೆ 25 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಆದರೆ ಮುಖ್ಯ ಹೋರಾಟ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆಯೇ ಇದೆ .

ಈ ಉಪಚುನಾವಣೆಯಲ್ಲಿ ಮುಸ್ಲಿಂ ಸಮುದಾಯದ ಪಾತ್ರ ನಿರ್ಣಾಯಕವಾಗಿದೆ. ಕ್ಷೇತ್ರದಲ್ಲಿ ಮುಸ್ಲಿಂ ಮತದಾರರ ಸಂಖ್ಯೆ ಸುಮಾರು 40% ಇದೆ ಎಂದು ಅಂದಾಜು. ಶಾಮನೂರು ಕುಟುಂಬಕ್ಕೆ ಐತಿಹಾಸಿಕ ಬೆಂಬಲವಿದ್ದರೂ, ಈ ಬಾರಿ ಮುಸ್ಲಿಂ ನಾಯಕರು ಟಿಕೆಟ್ ಆಕಾಂಕ್ಷೆಯನ್ನು ವ್ಯಕ್ತಪಡಿಸಿದ್ದರು. ಕಾಂಗ್ರೆಸ್ ಪಕ್ಷವು ಕುಟುಂಬ ವಾರಸುದಾರಿಕೆಯನ್ನು ಆಯ್ಕೆ ಮಾಡಿದ್ದಕ್ಕೆ ಅಸಮಾಧಾನ ವ್ಯಕ್ತವಾಗಿದೆ. ಸಚಿವ ಜಮೀರ್ ಅಹಮದ್ ಅವರ ಪ್ರಚಾರ ಮತ್ತು ಸಿಎಂ ಸಿದ್ದರಾಮಯ್ಯ ಅವರ ಭೇಟಿಗಳು ಈ ಅಸಮಾಧಾನವನ್ನು ತಣಿಸುವ ಪ್ರಯತ್ನವಾಗಿದೆ. ಆದರೆ ಮುಸ್ಲಿಂ ಮತಗಳ ವಿಭಜನೆಯ ಸಾಧ್ಯತೆ ಇದೆ. SDPI ಮತ್ತು ಇತರ (ಕಾಂಗ್ರೆಸ್ ಸಾದಿಕ್ ಅವರನ್ನು ಪೈಲ್ವಾನ್ ತಟಸ್ಥರಾಗಿರುವಂತೆ ಹೇಳಿದೆ) ಮುಸ್ಲಿಂ ಅಭ್ಯರ್ಥಿಗಳು ಈ ವಿಭಜನೆಯನ್ನು ಹೆಚ್ಚಿಸುವ ಸಾಧ್ಯತೆಯಿದೆ. ಬಿಜೆಪಿ ಎಸ್‌ಟಿ ಅಭ್ಯರ್ಥಿಯನ್ನು ಕಣಕ್ಕಿಳಿಸಿ ಅಹಿಂದ ಮತಗಳನ್ನು ಸೆಳೆಯುವ ತಂತ್ರ ರೂಪಿಸಿದೆ.

ಕಾಂಗ್ರೆಸ್ ಪಕ್ಷಕ್ಕೆ ಈ ಉಪಚುನಾವಣೆ ಪ್ರತಿಷ್ಠೆಯ ವಿಷಯವಾಗಿದೆ. ರಾಜ್ಯದಲ್ಲಿ ಆಡಳಿತಾರೂಢ ಪಕ್ಷವಾಗಿ ತನ್ನ ಬಲವನ್ನು ಉಳಿಸಿಕೊಳ್ಳುವುದು ಅತ್ಯಗತ್ಯ. ಸಿಎಂ ಸಿದ್ದರಾಮಯ್ಯ ಅವರು ಬಜೆಟ್‌ನಲ್ಲಿ ದಾವಣಗೆರೆ ದಕ್ಷಿಣಕ್ಕೆ 100 ಕೋಟಿ ರೂಪಾಯಿ ಅನುದಾನ ಘೋಷಿಸಿದ್ದು, ಇದು ಉಪಚುನಾವಣೆಗೆ ಮುನ್ನ ಜನರನ್ನು ಆಕರ್ಷಿಸುವ ಪ್ರಯತ್ನವಾಗಿ ಕಾಣುತ್ತಿದೆ. ಅನುಕಂಪದ ಅಲೆಯೂ ಕಾಂಗ್ರೆಸ್‌ಗೆ ಬೆಂಬಲ ನೀಡುವ ಸಾಧ್ಯತೆಯಿದೆ. ಆದರೆ ಪಕ್ಷದಲ್ಲಿ ಬಂಡಾಯದ ಬಿಸಿ ತಟ್ಟಿದೆ. ಕಾಂಗ್ರೆಸ್ ನ ಬಂಡಾಯ ಅಭ್ಯರ್ಥಿ ಸಾದಿಕ್ ಪೈಲ್ವಾನ್ ಅವರನ್ನು ಪಕ್ಷ ಚುನಾವಣೆಯಲ್ಲಿ ತಟಸ್ಥರಾಗಿರುವಂತೆ ಹೇಳಿದೆ. ಆದರೆ ಇದು ಮುಸಲ್ಮಾನರ ಒಳಮುನಿಸನ್ನು ತಣಿಸುತ್ತದೆಯೇ ಅಥವಾ ಮತ ವಿಭಜನೆಗೆ ಕಾರಣವಾಗುತ್ತದೆಯೇ ಎಂಬುದು ಫಲಿತಾಂಶದ ಮೇಲೆ ಪರಿಣಾಮವನ್ನಂತೂ ಬೀರುತ್ತದೆ.

ಬಿಜೆಪಿ ಪಕ್ಷಕ್ಕೆ ಇದು ನೈತಿಕ ಸ್ಥೈರ್ಯವನ್ನು ಹೆಚ್ಚಿಸುವ ಅವಕಾಶ. 2023ರ ವಿಧಾನಸಭಾ ಚುನಾವಣೆಯಲ್ಲಿ ಶಾಮನೂರು ಶಿವಶಂಕರಪ್ಪ ಅವರು ಬಿಜೆಪಿ ಅಭ್ಯರ್ಥಿ ಅಜಯ್ ಕುಮಾರ್ ಅವರನ್ನು ಸುಮಾರು 27,888 ಮತಗಳ ಅಂತರದಿಂದ ಸೋಲಿಸಿದ್ದರು. ಈ ಬಾರಿ ಬಿಜೆಪಿ “ಬದಲಾವಣೆ”ಯ ಸಂದೇಶವನ್ನು ನೀಡುತ್ತಿದೆ. ಅಭಿವೃದ್ಧಿ ಕೊರತೆ, ಗ್ಯಾರಂಟಿ ಯೋಜನೆಗಳ ವೆಚ್ಚ ಮತ್ತು ಸರ್ಕಾರದ ನೀತಿಗಳ ವಿರುದ್ಧ ವಾಗ್ದಾಳಿ ನಡೆಸುತ್ತಿದೆ. ಶ್ರೀನಿವಾಸ್ ದಾಸಕರಿಯಪ್ಪ ಅವರು ಕುಟುಂಬ ರಾಜಕಾರಣಕ್ಕೆ ವಿರುದ್ಧ ಧ್ವನಿ ಎತ್ತುತ್ತಿದ್ದಾರೆ. ಆದರೆ ಬಿಜೆಪಿಗೆ ಕ್ಷೇತ್ರದಲ್ಲಿ ಐತಿಹಾಸಿಕ ಬೆಂಬಲ ಕಡಿಮೆ. ಮುಸ್ಲಿಂ ಮತ್ತು ಅಹಿಂದ ಮತಗಳನ್ನು ತನ್ನತ್ತ ಸೆಳೆಯುವುದು ಅವರ ದೊಡ್ಡ ಸವಾಲು.

ದಾವಣಗೆರೆ ದಕ್ಷಿಣ ಕ್ಷೇತ್ರವು ಕೈಗಾರಿಕೆ, ವ್ಯಾಪಾರ ಮತ್ತು ಕೃಷಿಯ ಸಮ್ಮಿಶ್ರಣವಾಗಿದೆ. ರಸ್ತೆಗಳು, ನೀರಾವರಿ, ಉದ್ಯೋಗ, ಶಿಕ್ಷಣ ಮತ್ತು ಆರೋಗ್ಯ ಸೌಲಭ್ಯಗಳು ಜನರ ಮುಖ್ಯ ನಿರೀಕ್ಷೆಗಳು. ಹಿರಿಯ ಶಾಸಕರ ಕಾಲದಲ್ಲಿ ಕ್ಷೇತ್ರಕ್ಕೆ ಅನೇಕ ಅಭಿವೃದ್ಧಿ ಕಾರ್ಯಗಳು ನಡೆದಿದ್ದವು. ಆದರೆ ಇಂದು ಯುವಕರ ಉದ್ಯೋಗ, ಮಹಿಳೆಯರ ಸುರಕ್ಷತೆ ಮತ್ತು ಸ್ಥಳೀಯ ಸಮಸ್ಯೆಗಳು ಬಗೆಹರಿಯಬೇಕಿದೆ. ಉಪಚುನಾವಣೆಯಲ್ಲಿ ಅಭ್ಯರ್ಥಿಗಳು ಭರವಸೆಗಳ ಮಳೆ ಸುರಿಸುತ್ತಿದ್ದಾರೆ. ಆದರೆ ಜನರು ನೋಡುವುದು ಕಾರ್ಯನಿರ್ವಹಣೆಯನ್ನು. 100 ಕೋಟಿ ಅನುದಾನ ಘೋಷಣೆಯಂತಹ ಕ್ರಮಗಳು ತಾತ್ಕಾಲಿಕ ಆಕರ್ಷಣೆಯಾಗಬಹುದು, ಆದರೆ ಸುಸ್ಥಿರ ಅಭಿವೃದ್ಧಿ ಅಗತ್ಯ.

ರಾಜಕೀಯವು ಜನಸೇವೆಗಾಗಿ ಇರಬೇಕು, ಅಧಿಕಾರಕ್ಕಾಗಿ ಅಲ್ಲ ಎಂಬುದು ಎಲ್ಲರೂ ಹೇಳುವ ಮಾತು. ಆದರೆ ವಾಸ್ತವದಲ್ಲಿ ಕುಟುಂಬ ರಾಜಕಾರಣ, ಜಾತಿ-ಸಮುದಾಯ ಲೆಕ್ಕಾಚಾರಗಳು ಪ್ರಬಲವಾಗಿವೆ. ದಾವಣಗೆರೆ ದಕ್ಷಿಣದಲ್ಲಿ ಶಾಮನೂರು ಕುಟುಂಬದ ವರ್ಚಸ್ಸು ದೀರ್ಘಕಾಲದ್ದು. ಇದು ಜನಸೇವೆಯ ಫಲವೋ ಅಥವಾ ವ್ಯವಸ್ಥೆಯ ದೌರ್ಬಲ್ಯವೋ ಎಂಬುದನ್ನು ಜನರು ನಿರ್ಧರಿಸಬೇಕು. ಬಿಜೆಪಿ “ಬದಲಾವಣೆ”ಯ ಸಂದೇಶ ನೀಡುತ್ತಿದ್ದರೂ, ಅದು ಕೇವಲ ವಿರೋಧ ಪಕ್ಷದ ಧ್ವನಿಯಾಗಿ ಉಳಿಯದೆ ಸಕಾರಾತ್ಮಕ ಪರ್ಯಾಯವಾಗಬೇಕು.

ಈ ಉಪಚುನಾವಣೆಯಲ್ಲಿ ಮತದಾರರ ಜವಾಬ್ದಾರಿ ದೊಡ್ಡದು. ಅನುಕಂಪ, ಕುಟುಂಬ ನಿಷ್ಠೆ ಅಥವಾ ಸಮುದಾಯ ಲೆಕ್ಕಾಚಾರಕ್ಕಿಂತ ಹೆಚ್ಚಾಗಿ ಅಭಿವೃದ್ಧಿ, ಪಾರದರ್ಶಕತೆ ಮತ್ತು ಜನೋಪಯೋಗಿ ಕಾರ್ಯಗಳನ್ನು ಆಧರಿಸಿ ಮತ ನೀಡಬೇಕು. ಯುವಕರು ಮತ್ತು ಮಹಿಳೆಯರು ಹೆಚ್ಚು ಸಕ್ರಿಯರಾಗಬೇಕು. ಮತದಾನ ಶೇಕಡಾ 80ಕ್ಕಿಂತ ಹೆಚ್ಚು ಆಗುವಂತೆ ಮಾಡುವುದು ಪ್ರಜಾಪ್ರಭುತ್ವದ ಆರೋಗ್ಯಕ್ಕೆ ಸೂಚಕ.

ಕರ್ನಾಟಕ ರಾಜಕೀಯದಲ್ಲಿ ಉಪಚುನಾವಣೆಗಳು ಸಣ್ಣ ಪರೀಕ್ಷೆಗಳು. ದಾವಣಗೆರೆ ದಕ್ಷಿಣದ ಫಲಿತಾಂಶವು 2028ರ ವಿಧಾನಸಭಾ ಚುನಾವಣೆಗೆ ಸಂದೇಶ ನೀಡುತ್ತದೆ. ಕಾಂಗ್ರೆಸ್ ಗೆದ್ದರೆ ಅದು ತನ್ನ ಬಲವನ್ನು ಮತ್ತಷ್ಟು ಭದ್ರಪಡಿಸಿಕೊಳ್ಳುತ್ತದೆ. ಬಿಜೆಪಿ ಗೆದ್ದರೆ ಅದು ವಿರೋಧ ಪಕ್ಷವಾಗಿ ತನ್ನ ಸಾಮರ್ಥ್ಯವನ್ನು ತೋರಿಸುತ್ತದೆ. ಆದರೆ ಗೆಲುವು ಯಾರದ್ದಾದರೂ, ಜಯಿಸುವುದು ದಾವಣಗೆರೆ ದಕ್ಷಿಣದ ಜನರೇ ಆಗಬೇಕು.

ಈ ಹೋರಾಟದಲ್ಲಿ ರಾಜಕೀಯ ಪಕ್ಷಗಳು ಜನರ ಸಮಸ್ಯೆಗಳನ್ನು ಕೇಂದ್ರದಲ್ಲಿ ಇರಿಸಿಕೊಂಡು ಪ್ರಚಾರ ಮಾಡಲಿ. ಮತದಾರರು ತಮ್ಮ ಧ್ವನಿಯನ್ನು ಸ್ಪಷ್ಟವಾಗಿ ಮತ್ತು ನಿರ್ಭಯವಾಗಿ ವ್ಯಕ್ತಪಡಿಸಲಿ. ದಾವಣಗೆರೆ ದಕ್ಷಿಣ ಉಪಚುನಾವಣೆಯು ಪ್ರಜಾಪ್ರಭುತ್ವದ ಸೌಂದರ್ಯವನ್ನು ಪ್ರದರ್ಶಿಸುವ ಅವಕಾಶವಾಗಲಿ. ಅಭಿವೃದ್ಧಿ, ಸಮಾನತೆ ಮತ್ತು ಪಾರದರ್ಶಕ ಆಡಳಿತದತ್ತ ಕ್ಷೇತ್ರ ಸಾಗಲಿ ಎಂಬುದೇ ನಮ್ಮ ಆಶಯ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

 

Continue Reading

ಅಂಕಣ

ಸಂಪಾದಕೀಯ | ಯುದ್ಧದ ನರಕ ; ಅಮೆರಿಕಾ-ಇಸ್ರೇಲ್ ಆಕ್ರಮಣ : ಇರಾನ್ ಮೇಲಿನ ಅಮಾನುಷ ಹಲ್ಲೆ

Published

on

~ಗೋವರ್ಧನ ನವಿಲೇಹಾಳು

ಏಪ್ರಿಲ್ 3, 2026 ರಿಂದ ಇರಾನ್-ಇಸ್ರೇಲ್-ಅಮೆರಿಕಾ ಸಂಘರ್ಷವು ಐದನೇ ವಾರಕ್ಕೆ ಕಾಲಿಟ್ಟಿದೆ. ತೆಹ್ರಾನ್ ಮತ್ತು ಇಸ್ಫಹಾನ್‌ನಲ್ಲಿ ಧೂಮ್ರಜಾಲದ ಕಪ್ಪು ಮೋಡಗಳು, ಬೆಂಕಿಯ ಉರಿ ಭುಗಿಲೆದ್ದಿದೆ. ಅಮೆರಿಕಾ CENTCOM ವಿಡಿಯೋಗಳಲ್ಲಿ ಡ್ರೋನ್, ಟ್ಯಾಂಕ್ ಮತ್ತು ಮಿಸೈಲ್ ಲಾಂಚರ್‌ಗಳನ್ನು “ಯಶಸ್ವಿಯಾಗಿ” ನಾಶಪಡಿಸುತ್ತಿರುವುದನ್ನು ತೋರಿಸುತ್ತಿದೆ.

ಈ ಯುದ್ಧವು ನಾಗರಿಕರ ಮೇಲಿನ ನೇರ ಹಲ್ಲೆಯಾಗಿ ಮಾರ್ಪಟ್ಟಿದೆ. ಅಂತರಾಷ್ಟ್ರೀಯ ಮಾಧ್ಯಮಗಳು – ಅಲ್ ಜಜೀರಾ, ಯುರೋನ್ಯೂಸ್, ದಿ ಎಕಾನಮಿಸ್ಟ್, ಯುಎನ್ ವರದಿಗಳು – ಇದನ್ನು ಸ್ಪಷ್ಟವಾಗಿ ತೋರಿಸುತ್ತಿವೆ. ಇದು ಯುದ್ಧವಲ್ಲ; ಇದು ಮಾನವೀಯತೆಯ ವಿರುದ್ಧದ ಅಪರಾಧ.

ಫೆಬ್ರುವರಿ 28ರಂದು ಆರಂಭವಾದ ಆಪರೇಷನ್ ಎಪಿಕ್ ಫ್ಯೂರಿಯಲ್ಲಿ 900ಕ್ಕೂ ಹೆಚ್ಚು ದಾಳಿಗಳು ನಡೆದವು. ಇರಾನ್ ನಾಯಕತ್ವ, ನ್ಯೂಕ್ಲಿಯರ್ ಸೌಲಭ್ಯಗಳು, ಮಿಸೈಲ್ ಗಳನ್ನು ಹೊಡೆದು ಹಾಕುವುದು ನಮ್ಮ ಗುರಿ ಎಂದು ಅಮೆರಿಕಾ-ಇಸ್ರೇಲ್ ಹೇಳುತ್ತವೆ. ಆದರೆ ವಾಸ್ತವವು ಭಯಾನಕ. ಇರಾನ್ ಆರೋಗ್ಯ ಸಚಿವಾಲಯದ ಪ್ರಕಾರ 2,076ಕ್ಕೂ ಹೆಚ್ಚು ಜನ ಸತ್ತಿದ್ದಾರೆ, 26,500ಕ್ಕೂ ಹೆಚ್ಚು ಗಾಯಗೊಂಡಿದ್ದಾರೆ. ಇದರಲ್ಲಿ ಬಹುಪಾಲು ನಾಗರಿಕರು. ಮಿನಾಬ್‌ನ ಪ್ರಾಥಮಿಕ ಶಾಲೆಯ ಮೇಲಿನ ದಾಳಿಯಲ್ಲಿ 168-175 ಮಕ್ಕಳು (ಹೆಚ್ಚಿನವರು ಹುಡುಗಿಯರು) ಸಾವಿಗೀಡಾದರು – ವಿಯೆಟ್ನಾಮ್‌ನ ಮೈ ಲಾಯ್ ಹತ್ಯಾಕಾಂಡದ ನಂತರ ಅಮೆರಿಕಾ ಸೈನ್ಯದ ಅತಿದೊಡ್ಡ ಮಕ್ಕಳ ಸಾವು ಎಂದು ರಿಫ್ಯೂಜೀಸ್ ಇಂಟರ್ನ್ಯಾಷನಲ್ ಹೇಳಿದೆ. ಇಸ್ಫಹಾನ್‌ನಲ್ಲಿ ಉಕ್ಕು ಘಟಕಗಳು, ಔಷಧಿ ಸಂಶೋಧನಾ ಕೇಂದ್ರಗಳು ನಾಶವಾಗಿವೆ. ಯುಎನ್ ಹ್ಯೂಮನ್ ರೈಟ್ಸ್ ಚೀಫ್ ವೋಲ್ಕರ್ ಟರ್ಕ್ ಅವರು “ನಾಗರಿಕರು ಈ ಯುದ್ಧದ ಬಲಿಪಶುಗಳಾಗಿದ್ದಾರೆ” ಎಂದು ಖಂಡಿಸಿದ್ದಾರೆ. 67,414 ನಾಗರಿಕ ಸೈಟ್‌ಗಳು (498 ಶಾಲೆಗಳು, 236 ಆಸ್ಪತ್ರೆಗಳು) ಹಾನಿಗೊಳಗಾಗಿವೆ.

ಇರಾನ್ ಕೂಡ ಇಸ್ರೇಲ್ ಮೇಲೆ ಮಿಸೈಲ್ ದಾಳಿ ನಡೆಸಿದೆ. ಕೇಂದ್ರ ಇಸ್ರೇಲ್‌ನಲ್ಲಿ ಸ್ಫೋಟಗಳು, 24 ಇಸ್ರೇಲಿ ನಾಗರಿಕರು ಸತ್ತಿದ್ದಾರೆ. ಗಲ್ಫ್ ರಾಷ್ಟ್ರಗಳಲ್ಲಿ ತೈಲ ಘಟಕಗಳು, ವಿಮಾನ ನಿಲ್ದಾಣಗಳ ಮೇಲೆ ದಾಳಿ. ಆದರೆ ಸಾವುಗಳ ಪ್ರಮಾಣದಲ್ಲಿ ಇರಾನ್‌ನ ನಷ್ಟ ಅಪಾರ. ಲೆಬನಾನ್‌ನಲ್ಲಿ ಹೆಜ್ಬೊಲ್ಲಾಹ್ ಸಂಘರ್ಷದಿಂದ 1,318 ಜನ ಸತ್ತಿದ್ದಾರೆ. ಯುಎನ್‌ಎಚ್‌ಸಿಆರ್ ಪ್ರಕಾರ 3.2 ಮಿಲಿಯನ್ ಇರಾನಿಯನ್ನರು ಒಳನಾಡಿನ ನಿರಾಶ್ರಿತರಾಗಿದ್ದಾರೆ. ಇದು ಇರಾನ್‌ನ 3% ಜನಸಂಖ್ಯೆ. ಆಫ್ಘನ್ ನಿರಾಶ್ರಿತರು (1.65 ಮಿಲಿಯನ್) ಇನ್ನಷ್ಟು ಅಪಾಯದಲ್ಲಿದ್ದಾರೆ. ವಿದ್ಯುತ್ ಸರಬರಾಜು, ಔಷಧಿ, ಆಹಾರ, ಇಂಧನದ ಕೊರತೆ ತೀವ್ರವಾಗಿದೆ. ಯುನೆಸ್ಕೋ ವಿಶ್ವ ಪರಂಪರೆ ಸ್ಥಳಗಳು ಹಾನಿಗೊಳಗಾಗಿವೆ.

ಅಮೆರಿಕಾದ ನಡೆಯನ್ನು ತೀಕ್ಷ್ಣವಾಗಿ ವಿಮರ್ಶಿಸಬೇಕು. ಟ್ರಂಪ್ ಸರ್ಕಾರವು “ಸ್ವಯಂರಕ್ಷಣೆ” ಮತ್ತು “ಇರಾನ್ ಅಪಾಯವನ್ನು ತೊಡೆದುಹಾಕುವುದು” ಎಂದು ನ್ಯಾಯೀಕರಿಸುತ್ತಿದೆ. ಆದರೆ ಅವರು ಸೇತುವೆಗಳು, ವಿದ್ಯುತ್ ಘಟಕಗಳನ್ನು ಗುರಿಯಾಗಿಸುತ್ತಿದ್ದಾರೆ – ಇದು ನಾಗರಿಕ ಜೀವನವನ್ನು ಸಂಪೂರ್ಣವಾಗಿ ಅಸ್ತವ್ಯಸ್ತಗೊಳಿಸುತ್ತದೆ. ಯುದ್ಧದ ವೆಚ್ಚ ದಿನಕ್ಕೆ ಶತಕೋಟಿ ಡಾಲರ್‌ಗಳು. ಹಾರ್ಮುಜ್ ಜಲಸಂಧಿ ಪ್ರಾಯಶಃ ಮುಚ್ಚುವಿಕೆಯಿಂದ ಜಗತ್ತಿನ ತೈಲ ಸರಬರಾಜು ಅಸ್ತವ್ಯಸ್ತ. ತೈಲ ಬೆಲೆಗಳು ಏರಿಕೆಯಾಗಿ, ಅಮೆರಿಕಾದಲ್ಲಿ ಪೆಟ್ರೋಲ್ ಬೆಲೆ 50 ಸೆಂಟ್‌ಗಳಷ್ಟು ಏರಿದೆ. ಆಫ್ರಿಕಾ, ದಕ್ಷಿಣ ಏಷ್ಯಾ ರಾಷ್ಟ್ರಗಳಲ್ಲಿ ಆಹಾರ, ಗೊಬ್ಬರ, ಔಷಧಿ ಬೆಲೆಗಳು ಆಕಾಶ ಸ್ಪರ್ಶಿಸುತ್ತಿವೆ. ಇದು ಬಡ ಜನರ ಮೇಲಿನ ಪರೋಕ್ಷ ಹಲ್ಲೆ. ಟ್ರಂಪ್ ಅವರ ಭಾಷಣಗಳಲ್ಲಿ ಸ್ಪಷ್ಟ ಯೋಜನೆ ಇಲ್ಲ – “ನನಗೆ ಅನಿಸಿದಾಗ” ಯುದ್ಧ ಕೊನೆಗೊಳ್ಳುತ್ತದೆ ಎಂದು ಹೇಳುತ್ತಾರೆ. ಇದು ಅನಿಯಂತ್ರಿತ ಆಕ್ರಮಣವಲ್ಲದೆ ಬೇರೇನು?

ಅಂತರಾಷ್ಟ್ರೀಯ ಮಾಧ್ಯಮಗಳು ಎರಡು ಮುಖಗಳನ್ನು ತೋರಿಸುತ್ತವೆ. ಪಶ್ಚಿಮ ಮಾಧ್ಯಮಗಳು ಇರಾನ್‌ನ “ಅಪಾಯ”ವನ್ನು ಒತ್ತಿ ಹೇಳುತ್ತವೆಯಾದರೆ, ಅಲ್ ಜಜೀರಾ ಮತ್ತು ಮಧ್ಯಪ್ರಾಚ್ಯ ಮಾಧ್ಯಮಗಳು ಅಮೆರಿಕಾ-ಇಸ್ರೇಲ್‌ನ “ಆಕ್ರಮಣ”ವನ್ನು ಖಂಡಿಸುತ್ತವೆ. ಆದರೆ ಸತ್ಯ ಒಂದೇ: ನಾಗರಿಕರು ಬಲಿಪಶುಗಳಾಗಿದ್ದಾರೆ. ಜನೆವಾ ಕನ್ವೆನ್ಷನ್‌ಗಳು ನಾಗರಿಕ ಗುರಿಗಳನ್ನು ರಕ್ಷಿಸುತ್ತವೆ, ಆದರೆ ಇಲ್ಲಿ “ಕೊಲಾಟೆರಲ್ ಡ್ಯಾಮೇಜ್” ಎಂದು ಸುಲಭವಾಗಿ ಕರೆಯಲಾಗುತ್ತಿದೆ. ಇಸ್ರೇಲ್‌ನ ಸುರಕ್ಷತೆಯ ಅಗತ್ಯವನ್ನು ಒಪ್ಪಿಕೊಂಡರೂ, ಇರಾನ್ ಜನರನ್ನು “ಶಿಲಾ ಯುಗಕ್ಕೆ” ತಳ್ಳುವುದು ನೈತಿಕತೆಯಲ್ಲ. ಇರಾನ್ ರೆಜಿಮ್‌ನ ದಮನಕಾರಿ ನೀತಿಗಳು ಖಂಡನೀಯವೇ, ಆದರೆ ಯುದ್ಧವು ಆ ನಿರಂಕುಶತೆಯನ್ನು ಬಲಪಡಿಸುತ್ತಿದೆ, ಜನರನ್ನು ಒಗ್ಗೂಡಿಸುತ್ತಿದೆ.

ದೀರ್ಘಕಾಲೀನ ಪರಿಣಾಮಗಳು ಭಯಾನಕವಾಗಿವೆ. ಹೇಗೆಂದರೆ 3.2 ಮಿಲಿಯನ್ ನಿರಾಶ್ರಿತರು, ಆರೋಗ್ಯ ಸಂಕಷ್ಟ, ಮಾನಸಿಕ ಆಘಾತ, ಬಡತನದ ಏರಿಕೆ. ಯುದ್ಧವು ಮುಂದುವರಿದರೆ ಹಸಿವು, ರೋಗಗಳು, ಪರಿಸರ ವಿನಾಶ ತೀವ್ರವಾಗುತ್ತವೆ. ಹಾರ್ಮುಜ್ ಮುಚ್ಚುವಿಕೆ ಜಗತ್ತಿನ ಆರ್ಥಿಕತೆಗೆ ದೊಡ್ಡ ಹೊಡೆತ ಬೀಳಲಿದೆ. ಅಂತರಾಷ್ಟ್ರೀಯ ಸಮುದಾಯ ಈಗಲೇ ಎಚ್ಚರಗೊಳ್ಳಬೇಕು: ಸೆಸ್‌ಫೈರ್, ಮಾನವೀಯ ಸಹಾಯದ ಮುಕ್ತ ಪ್ರವೇಶ, ಯುಎನ್ ಮಧ್ಯಸ್ಥಿಕೆಯ ಸಂಧಾನ. ಡಿಪ್ಲಾಮಸಿಗೆ ಬದಲಾಗಿ ಬಾಂಬ್‌ಗಳನ್ನು ಆಯ್ಕೆ ಮಾಡುವುದು ಅಮೆರಿಕಾದ ಶಕ್ತಿಯನ್ನು ಅಪಹಾಸ್ಯಗೊಳಿಸುತ್ತಿದೆ.

ಯುದ್ಧವು ಯಾರಿಗೂ ಗೆಲುವು ತರುವುದಿಲ್ಲ. ಇರಾನ್‌ನ ಮಕ್ಕಳ ಸಾವುಗಳು, ಇಸ್ರೇಲ್‌ನ ಗಾಯಗೊಂಡ ಕುಟುಂಬಗಳು, ಗಲ್ಫ್‌ನ ಆರ್ಥಿಕ ಸಂಕಷ್ಟಗಳು ಮನಕಲಕುತ್ತವೆ. ರಾಜಕೀಯ ಲೆಕ್ಕಾಚಾರಗಳು ಮಾನವ ಜೀವಗಳಿಗಿಂತ ದೊಡ್ಡವಲ್ಲ. ಅಮೆರಿಕಾವು ತನ್ನ ಅಪಾರ ಶಕ್ತಿಯನ್ನು ಶಾಂತಿ ಮತ್ತು ಸಂಧಾನಕ್ಕೆ ಬಳಸಬೇಕು. ಇಲ್ಲವಾದರೆ ಈ ಯುದ್ಧವು ಅಮಾಯಕ ಜೀವಗಳ ಭವಿಷ್ಯವನ್ನು ನಾಶಪಡಿಸುತ್ತದೆ. ಮಾನವೀಯತೆಯ ದೃಷ್ಟಿಯಿಂದ, ಈ ಅಮಾನುಷ ಆಕ್ರಮಣವನ್ನು ತಕ್ಷಣ ನಿಲ್ಲಿಸಿ. ಶಾಂತಿಯೇ ಏಕೈಕ ಮಾರ್ಗ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಸಂಪಾದಕೀಯ | ಚುನಾವಣೆಗಳಲ್ಲಿ ಹಣ ಮತ್ತು ಜಾತಿ

Published

on

~ಗೋವರ್ಧನ ನವಿಲೇಹಾಳು

ಭಾರತದ ಪ್ರಜಾಪ್ರಭುತ್ವವು ವಿಶ್ವದ ಅತಿದೊಡ್ಡ ಚುನಾವಣಾ ಪ್ರಯೋಗಶಾಲೆಯಾಗಿದೆ. ಪ್ರತಿ ಐದು ವರ್ಷಕ್ಕೊಮ್ಮೆ ಕೋಟಿಗಟ್ಟಲೆ ಮತದಾರರು ತಮಗೆ ಅರ್ಹವೆನಿಸಿದ  ಪ್ರತಿನಿಧಿಯನ್ನು ಆಯ್ಕೆಯನ್ನು ಮಾಡುತ್ತಾರೆ. ಹಾಗೆಯೇ ಪ್ರಜಾ ಪ್ರಭುತ್ವದ ಪ್ರಯೋಗಶಾಲೆಯಾದ ಭಾರತದ ಚುನಾವಣೆಗಳನ್ನು ಹಣ ಮತ್ತು ಜಾತಿಗಳು ನಿಯಂತ್ರಿಸುತ್ತಿವೆ ಎಂಬುದು ಕರಾಳ ಸತ್ಯ.

ಪಕ್ಷಗಳು ಅಭ್ಯರ್ಥಿಗಳನ್ನು ಆಯ್ಕೆ ಮಾಡುತ್ತವೆ ಮತ್ತು  ಖರೀದಿಸುತ್ತಿವೆ. ಇದು ಕೇವಲ ಒಂದು ತಾತ್ಕಾಲಿಕ ಸಮಸ್ಯೆಯಲ್ಲ; ಇದು ಪ್ರಜಾಪ್ರಭುತ್ವದ ಮೂಲ ತತ್ತ್ವಗಳನ್ನೇ ಕೊಲ್ಲುತ್ತಿರುವ ದೀರ್ಘಕಾಲಿಕ ಕ್ಯಾನ್ಸರ್. ಒಂದು ದಿನಪತ್ರಿಕೆಯ ಸಂಪಾದಕನಾದ ನಾನು ಈ ಸಂಪಾದಕೀಯದ ಮೂಲಕ ಹಣ ಮತ್ತು ಜಾತಿ ಎಂಬ  ಎರಡು ಶಕ್ತಿಗಳು ಹಾಗೂ ದೌರ್ಬಲ್ಯಗಳನ್ನು ವಿಮರ್ಶಾತ್ಮಕವಾಗಿ ಪರೀಕ್ಷಿಸಲು ಬಯಸುತ್ತೇನೆ. ಇದು ಕೇವಲ ಟೀಕೆಯಲ್ಲ;  ಎಚ್ಚರಿಕೆಯೂ ಹೌದು.

ಭಾರತದ ಚುನಾವಣೆಗಳ ವೆಚ್ಚವು ದಿನದಿಂದ ದಿನಕ್ಕೆ ಏರುತ್ತಲೇ ಇದೆ. 2019ರ ಲೋಕಸಭಾ ಚುನಾವಣೆಗೆ ಸರ್ಕಾರಿ ಲೆಕ್ಕದ ಪ್ರಕಾರ 60,000 ಕೋಟಿ ರುಪಾಯಿ ವೆಚ್ಚವಾಗಿದ್ದರೆ, 2024ರ ಚುನಾವಣೆಯಲ್ಲಿ ಇದು ಒಂದು ಲಕ್ಷ ಕೋಟಿ ರುಪಾಯಿಗಳನ್ನು ಮೀರಿದೆ ಎಂದು ಅಂಕಿಅಂಶಗಳು ಹೇಳುತ್ತವೆ. ಆದರೆ ನಿಜವಾದ ವೆಚ್ಚ ಇನ್ನೂ ಹೆಚ್ಚು. ಪ್ರತಿ ಅಭ್ಯರ್ಥಿಯು ಒಂದು ಕ್ಷೇತ್ರದಲ್ಲಿ ಕನಿಷ್ಠ 10-20 ಕೋಟಿ ರುಪಾಯಿ ಖರ್ಚು ಮಾಡುತ್ತಾನೆ. ಇದಕ್ಕೆ ಕಾರಣ ಸರಳವಾಗಿದೆ, ಮತದಾರರನ್ನು ‘ಕೊಳ್ಳುವುದು’. ಚುನಾವಣಾ ಆಯೋಗದ ನಿಯಮಗಳು ಎಷ್ಟೇ ಕಟ್ಟುನಿಟ್ಟಾಗಿದ್ದರೂ, ಕಪ್ಪು ಹಣದ ಪ್ರವಾಹವನ್ನು ತಡೆಯಲಾಗದ ಪರಿಸ್ಥಿತಿ ನಿರ್ಮಾಣವಾಗಿದೆ.

ಎಲೆಕ್ಟ್ರಾಲ್ ಬಾಂಡ್‌ಗಳು ತಾತ್ಕಾಲಿಕವಾಗಿ ಪಾರದರ್ಶಕತೆಯ ಮುಸುಕು ಹಾಕಿದ್ದಾವೆ. ಆದರೆ ಸುಪ್ರೀಂ ಕೋರ್ಟ್ ಅವುಗಳನ್ನು ಅಸಂವಿಧಾನಿಕ ಎಂದು ತೀರ್ಪು ನೀಡಿದ ನಂತರವೂ, ಕಾರ್ಪೊರೇಟ್‌ಗಳು ಮತ್ತು ಉದ್ಯಮಪತಿಗಳು ಬೇರೆ ಬೇರೆ ಮಾರ್ಗಗಳ ಮೂಲಕ ಹಣ ಸುರಿಸುತ್ತಲೇ ಇದ್ದಾರೆ. ಫಲಿತಾಂಶ? ಶ್ರೀಮಂತ ಅಭ್ಯರ್ಥಿಗಳು ಮತ್ತು ಅವರ ಬೆಂಬಲಿಗರು ಮಾತ್ರ ಸ್ಪರ್ಧಿಸುತ್ತಾರೆ. 2024ರ ಲೋಕಸಭೆಯಲ್ಲಿ ಸರಾಸರಿ ಅಭ್ಯರ್ಥಿಯ ಆಸ್ತಿ 5 ಕೋಟಿ ರುಪಾಯಿಗಳಿಗಿಂತ ಹೆಚ್ಚಿತ್ತು.

ಜನಪ್ರತಿನಿಧಿಯಾಗುವುದು ಇಂದು ಉದ್ಯೋಗವಾಗಿದೆ, ಸೇವೆಯಲ್ಲ. ಹಣವು ಕೇವಲ ವೆಚ್ಚವಲ್ಲ; ಅದು ಅಧಿಕಾರದ ಹಂಚಿಕೆಯನ್ನೂ ನಿರ್ಧರಿಸುತ್ತದೆ. ಪಕ್ಷಗಳು ‘ಕ್ಯಾಷ್ ಫಾರ್ ವೋಟ್’ ಯೋಜನೆಗಳನ್ನು ಅನುಸರಿಸುತ್ತವೆ. ಗ್ರಾಮೀಣ ಪ್ರದೇಶಗಳಲ್ಲಿ ಒಂದು ಮನೆಗೆ 500 ರಿಂದ 2000 ರುಪಾಯಿ, ನಗರಗಳಲ್ಲಿ ಮೊಬೈಲ್ ರೀಚಾರ್ಜ್, ಸೈಕಲ್, ಟಿವಿ – ಇವೆಲ್ಲವೂ ಹಣದ ರೂಪದಲ್ಲಿ ಹಂಚಿಕೆಯಾಗುತ್ತವೆ. ಚುನಾವಣಾ ಆಯೋಗವು ರೇಡ್ ನಡೆಸುತ್ತದೆ, ಆದರೆ ಹಣದ ಹರಿವು ನಿಲ್ಲುವುದಿಲ್ಲ. ಇದರ ಫಲಿತಾಂಶವಾಗಿ ಜನರ ಸಮಸ್ಯೆಗಳು – ಬಡತನ, ಉದ್ಯೋಗ, ಶಿಕ್ಷಣ – ಮರೆಯುತ್ತವೆ. ಅಭ್ಯರ್ಥಿಯು ‘ನಾನು ಏನು ಮಾಡುತ್ತೇನೆ’ ಎಂದು ಹೇಳುವ ಬದಲು ‘ನಾನು ಎಷ್ಟು ಕೊಡುತ್ತೇನೆ’ ಎಂದು ಪ್ರಚಾರ ಮಾಡುತ್ತಾನೆ. ಇದು ಜನತಂತ್ರವಲ್ಲ; ಇದು ಹಣತಂತ್ರ.

ಇನ್ನು ಜಾತಿಯ ಸುಳಿಯನ್ನು ಚರ್ಚಿಸುವುದಾದರೆ, ಭಾರತದಲ್ಲಿ ಜಾತಿ ಎಂದರೆ ಕೇವಲ ಸಾಮಾಜಿಕ ವ್ಯವಸ್ಥೆಯಲ್ಲ; ಅದು ರಾಜಕೀಯ ಗಣಿತದ ಮೂಲಭೂತ ಸೂತ್ರ. ಕರ್ನಾಟಕದಲ್ಲಿ ಮಾತ್ರವಲ್ಲ, ಉತ್ತರ ಪ್ರದೇಶ, ಬಿಹಾರ, ತಮಿಳುನಾಡು – ಎಲ್ಲೆಡೆ ಜಾತಿ ಸಮೀಕ್ಷೆಗಳು, ಜಾತಿ ಆಧಾರಿತ ಟಿಕೆಟ್ ಹಂಚಿಕೆ ಮತ್ತು ಜಾತಿ ಬ್ಯಾಂಕ್‌ಗಳು ಚುನಾವಣೆಗಳನ್ನು ನಿರ್ಧರಿಸುತ್ತವೆ.

ಕರ್ನಾಟಕದಲ್ಲಿ ಲಿಂಗಾಯತ, ಒಕ್ಕಲಿಗ, ದಲಿತ, ಮುಸ್ಲಿಂ – ಈ ಜಾತಿ ಬ್ಲಾಕ್‌ಗಳನ್ನು ಲೆಕ್ಕ ಹಾಕದೆ ಯಾವುದೇ ಪಕ್ಷ ಗೆಲ್ಲಲಾರದು. ಪಕ್ಷಗಳು ಜಾತಿ ನಾಯಕರನ್ನು ‘ಖರೀದಿಸುತ್ತವೆ’. ಒಂದು ಜಾತಿಯ ನಾಯಕನಿಗೆ ಟಿಕೆಟ್ ಕೊಟ್ಟರೆ ಆ ಜಾತಿಯ 70-80% ಮತಗಳು ಬರುತ್ತವೆ ಎಂಬ ಲೆಕ್ಕ. ಇದು ಜನರನ್ನು ವ್ಯಕ್ತಿಗಳಾಗಿ ನೋಡುವುದಿಲ್ಲ; ಅವರನ್ನು ಜಾತಿ ಬ್ಯಾಂಕ್‌ಗಳಾಗಿ ಪರಿವರ್ತಿಸುತ್ತದೆ.

ಜಾತಿ ರಾಜಕಾರಣವು ಮೀಸಲಾತಿಯನ್ನು ದುರುಪಯೋಗಪಡಿಸಿಕೊಂಡಿದೆ. ಸಂವಿಧಾನದಲ್ಲಿ ಮೀಸಲಾತಿ ಸಾಮಾಜಿಕ ನ್ಯಾಯಕ್ಕಾಗಿ ಇದೆ. ಆದರೆ ಇಂದು ಅದು ಅಧಿಕಾರದ ಲಾಭಕ್ಕಾಗಿ ಬಳಸಲಾಗುತ್ತಿದೆ. ಜಾತಿ ಸಮೀಕ್ಷೆಯ ಬೇಡಿಕೆಗಳು ಹೆಚ್ಚುತ್ತಿವೆ. ಕರ್ನಾಟಕದಲ್ಲಿ ಕೂಡ ಜಾತಿ ಸಮೀಕ್ಷೆಯ ವಿವಾದ ಎಲ್ಲರಿಗೂ ತಿಳಿದಿದೆ. ಇದು ನಿಜವಾಗಿಯೂ ಸಾಮಾಜಿಕ ನ್ಯಾಯವೇ? ಅಥವಾ ಹೆಚ್ಚು ಮೀಸಲಾತಿ ಬೇಡುವ ಮೂಲಕ ಅಧಿಕಾರ ಹಂಚಿಕೊಳ್ಳುವ ರಾಜಕೀಯ ತಂತ್ರವೇ? ಜಾತಿ ಆಧಾರಿತ ರಾಜಕಾರಣವು ಮೆರಿಟ್ ಅನ್ನು ಕೊಲ್ಲುತ್ತದೆ. ಯೋಗ್ಯರಾದ ಯುವಕರು ಅಥವಾ ಮಹಿಳೆಯರು ಜಾತಿ ಲೆಕ್ಕವಿಲ್ಲದೆ ಅವಕಾಶ ಪಡೆಯುವುದಿಲ್ಲ. ಇದು ದೇಶದ ಅಭಿವೃದ್ಧಿಯನ್ನು ಹಿಂದಕ್ಕೆ ಎಳೆಯುತ್ತದೆ.

ಹಣ ಮತ್ತು ಜಾತಿ ಒಂದರೊಂದು ಪೂರಕವಾಗಿ ಕೆಲಸ ಮಾಡುತ್ತವೆ. ಹಣವು ಜಾತಿ ನಾಯಕರನ್ನು ಖರೀದಿಸುತ್ತದೆ. ಜಾತಿ ನಾಯಕರು ಹಣದಿಂದ ಮತಗಳನ್ನು ಖರೀದಿಸುತ್ತಾರೆ. ಒಂದು ಸಣ್ಣ ಗುಂಪು ಅಧಿಕಾರವನ್ನು ತನ್ನ ಕೈಯಲ್ಲಿ ಇಟ್ಟುಕೊಳ್ಳುತ್ತದೆ. ಸಾಮಾನ್ಯ ಜನರು ಕೇವಲ ಮತದಾರರಾಗಿ ಉಳಿಯುತ್ತಾರೆ, ನಿರ್ಣಾಯಕರಾಗುವುದಿಲ್ಲ. ಇದರಿಂದಾಗಿ ಭ್ರಷ್ಟಾಚಾರ ಹೆಚ್ಚುತ್ತದೆ. ಅಧಿಕಾರಕ್ಕೆ ಬಂದವರು ತಮ್ಮ ಹೂಡಿಕೆಯನ್ನು ತಿರುಗಿಸಿಕೊಳ್ಳುತ್ತಾರೆ. ರಸ್ತೆಗಳು, ಆಸ್ಪತ್ರೆಗಳು, ಶಾಲೆಗಳು – ಇವುಗಳ ಬದಲು ಅಭಿವೃದ್ಧಿ ಕೇವಲ ಫೋಟೋ ,ವಿಡಿಯೋಗಳಲ್ಲಿ ಉಳಿಯುತ್ತವೆ

ಈ ಸಮಸ್ಯೆಯನ್ನು ತೊಡೆದುಹಾಕಲು ಏನು ಮಾಡಬಹುದು? ಮೊದಲು ಚುನಾವಣಾ ಆಯೋಗವು ಹೆಚ್ಚು ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕು. ಎಲ್ಲಾ ಅಭ್ಯರ್ಥಿಗಳ ಆಸ್ತಿ ಮತ್ತು ವೆಚ್ಚದ ಪಾರದರ್ಶಕ ಲೆಕ್ಕಪತ್ರವನ್ನು ಆನ್‌ಲೈನ್‌ನಲ್ಲಿ ಪ್ರಕಟಿಸಬೇಕು. ರಾಜ್ಯ ಆರ್ಥಿಕ ನೆರವು (ಸ್ಟೇಟ್ ಫಂಡಿಂಗ್ ಆಫ್ ಎಲೆಕ್ಷನ್ಸ್) ಅನ್ನು ಜಾರಿಗೊಳಿಸಬೇಕು. ಕಾರ್ಪೊರೇಟ್ ದಾನಗಳಿಗೆ ಕಟ್ಟುಪಾಡು ಬೇಕು. ಜಾತಿ ರಾಜಕಾರಣಕ್ಕೆ ಎದುರಾಗಿ ‘ಜಾತಿ-ಮುಕ್ತ’ ಅಭ್ಯರ್ಥಿ ಆಯ್ಕೆಯನ್ನು ಪ್ರೋತ್ಸಾಹಿಸಬೇಕು. ಜಾತಿ ಸಮೀಕ್ಷೆಗಳು ನಡೆಯಬೇಕು, ಆದರೆ ಅದನ್ನು ಅಧಿಕಾರದ ಲಾಭಕ್ಕಾಗಿ ಬಳಸಬಾರದು. ಶಿಕ್ಷಣ ಮತ್ತು ಆರ್ಥಿಕ ಸಬಲೀಕರಣದ ಮೂಲಕ ಜಾತಿ ಆಧಾರಿತ ರಾಜಕಾರಣವನ್ನು ಕ್ರಮೇಣ ಕಡಿಮೆ ಮಾಡಬೇಕು.

ಜನರು ಈಗ ಎಚ್ಚರಗೊಳ್ಳಬೇಕು. ಮತವನ್ನು ಹಣಕ್ಕಾಗಿ ಅಥವಾ ಜಾತಿಗಾಗಿ ಮಾರಾಟ ಮಾಡುವುದು ಸ್ವಯಂ ವಿನಾಶಕ್ಕೆ ದಾರಿ. ಪ್ರಜಾಪ್ರಭುತ್ವವು ಜನರ ಕೈಯಲ್ಲಿದೆ. ಅದನ್ನು ಹಣ ಮತ್ತು ಜಾತಿಯ ಕೈಗೆ ಬಿಟ್ಟರೆ ನಾವು ನಮ್ಮ ಭವಿಷ್ಯವನ್ನೇ ಮಾರಿಕೊಳ್ಳುತ್ತೇವೆ. ಪತ್ರಿಕೆಗಳು, ಸಾಮಾಜಿಕ ಮಾಧ್ಯಮಗಳು ಮತ್ತು ನಾಗರಿಕ ಸಂಘಟನೆಗಳು ಈ ವಿಷಯವನ್ನು ಸತತವಾಗಿ ಚರ್ಚಿಸಬೇಕು. ಚುನಾವಣೆಗಳು ಕೇವಲ ಅಧಿಕಾರದ ಬದಲಾವಣೆಯಲ್ಲ; ಅವು ನಮ್ಮ ಸಮಾಜದ ದರ್ಶನವನ್ನು ನಿರ್ಧರಿಸುತ್ತವೆ.

ಇಂದು ನಾವು ಎದುರಿಸುತ್ತಿರುವುದು ಕೇವಲ ಒಂದು ಚುನಾವಣಾ ಸಮಸ್ಯೆಯಲ್ಲ; ಇದು ಭಾರತದ ಆತ್ಮದ ಸಮಸ್ಯೆ. ಹಣ ಮತ್ತು ಜಾತಿಯನ್ನು ಮೀರಿ ನಿಲ್ಲುವ ನಾಯಕರು ಬರಬೇಕು. ಅವರು ಜನರ ಸಮಸ್ಯೆಗಳನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು. ಅಲ್ಲಿಯವರೆಗೂ ನಮ್ಮ ಪ್ರಜಾಪ್ರಭುತ್ವವು ಕೇವಲ ಹೆಸರಿನಲ್ಲಿ ಮಾತ್ರ ಉಳಿಯುತ್ತದೆ. ಜನತೆ ಎಚ್ಚರದಿಂದಿರಲಿ. ಇದು ನಮ್ಮ ದೇಶ, ನಮ್ಮ ಭವಿಷ್ಯ.

ಸುದ್ದಿದಿನ | ವಾಟ್ಸಾಪ್ | 9980346243

Continue Reading

Trending