ಬಹಿರಂಗ
ದೇಶಪ್ರೇಮ ಮತು ದೇಶದ್ರೋಹ

- ದೇಶವೆಂದರೆ ಒಂದು ಭೂಪ್ರದೇಶ, ಅಲ್ಲಿ ಜೀವಿಸುವ ಜನರು, ಅವರ ಅಸ್ತಿತ್ವಕ್ಕಾಗಿ ಬಳಸುವ ಜೀವನಾಧಾರ ವಸ್ತುಗಳು ಮತ್ತು ಅವನ್ನು ಪಡೆಯಲು ಸಾಮಾಜಿಕವಾಗಿ ಬಳಸುವ ಶ್ರಮ ಮತ್ತು ಸಹಜೀವಿಗಳೊಂದಿಗಿನ ಶ್ರಮಸಂಬಂಧಗಳು ಎಲ್ಲವೂ ಕೂಡಿರುವ ವಾಸ್ತವವೇ ದೇಶ. ಇವುಗಳ ಬಗೆಗಿನ ಸ್ವಾಭಾವಿಕ ಪ್ರೀತಿಯೇ ದೇಶಪ್ರೇಮ. ಹಾಗಿದ್ದ ಮೇಲೆ ‘ದೇಶಭಕ್ತಿ’ ಎಂಬುದು ಹುಟ್ಟಿದ್ದು ಹೇಗೆ? ದೇಶಭಕ್ತಿ ಎಂಬುದು ಊಳಿಗಮಾನ್ಯ ರಾಜಕೀಯದ ಪರಿಕಲ್ಪನೆ.ಸಂಘಪರಿವಾರ ಈಗ ಹರಡುತ್ತಿರುವ ‘ದೇಶಭಕ್ತಿ‘ ಮತ್ತು ‘ದೇಶದ್ರೋಹ‘ದ ಕಲ್ಪನೆಗಳ ಹಿಂದೆ ಊಳಿಗಮಾನ್ಯ ವ್ಯವಸ್ಥೆಯ ಮತ್ತು ಫ್ಯಾಸಿಸ್ಟ್ ‘ದೇಶ’ದ ಪರಿಕಲ್ಪನೆಯ ಮಿಶ್ರಣ ಇದೆ.
–ಪ್ರೊ. ವಿ.ಎನ್.ಲಕ್ಷ್ಮೀನಾರಾಯಣ
18-19ನೇ ಶತಮಾನದ ಸ್ಕಾಟಿ? ಕವಿ, ಸರ್ ವಾಲ್ಟರ್ ಸ್ಕಾಟ್ ಬರೆದ ‘Patriotism’
ಎಂಬ ಕವನ ಹೀಗೆ ಪ್ರಾರಂಭವಾಗುತ್ತದೆ:
Breathes there the man with soul so dead
who never to himself hath said
‘This is my own my native land’
ಇದನ್ನು ಕುವೆಂಪುರವರು ಕನ್ನಡಿಸಿದ್ದು,
“ಅದು- ದೇಶ ನನ್ನದು, ನನ್ನದು ನಾಡು
ಎನ್ನದ ಮಾನವನೆದೆ ಸುಡುಗಾಡು” ಎಂದು ಪ್ರಾರಂಭವಾಗುತ್ತದೆ. ಅವರ ಅನುವಾದದಲ್ಲಿ ‘Native’ಎಂಬ ಪದಕ್ಕಿರುವ ಅರ್ಥಪುಷ್ಟಿಯು ವ್ಯಕ್ತವಾಗುವುದಿಲ್ಲ.
ದೇಶಪ್ರೇಮ, ದೇಶಾಭಿಮಾನ ಮುಂತಾದ ಪದಗಳು ಮೇಲುನೋಟಕ್ಕೆಎಲ್ಲ ಮನುಷ್ಯರೂ, ಅವರು ಹುಟ್ಟಿ-ಬೆಳೆದು ವಾಸಿಸುವ ಅಥವಾ ವಲಸೆಹೋಗಿ ಜೀವಿಸುವ ಒಂದು ಭೂ ಪ್ರದೇಶಕ್ಕೂ ಅವರಿಗೂ ನಡುವೆ ಇರುವ ಭೌತಿಕ ಮತ್ತು ಭಾವನಾತ್ಮಕ ಸಂಬಂಧವನ್ನು ಕುರಿತು ಹೇಳುವಂತೆ ತೋರುತ್ತವೆ. ನಾಡು, ದೇಶ ಎಂಬ ಪದಗಳು ಮೂಲಭೂತವಾಗಿ ಭೂ ಪ್ರದೇಶವನ್ನೇ ಕುರಿತು ಹೇಳುತ್ತವೆ. ಅವುಗಳ ವಿಶಾಲತೆಯನ್ನು ಹಿಗ್ಗಿಸುತ್ತಾ ಹೋದರೆ ಖಂಡ, ವಿಶ್ವ, ಜಗತ್ತುಎಂದಾಗಿ, ಇಡೀ ಭೂಮಿಗೆ ವಿಸ್ತರಿಸುತ್ತದೆ. ಮತ್ತೂ ವಿಸ್ತರಿಸಿದರೆ, ಸಾಂದ್ರವಾಗಿರುವ ಭೂಮಿಯ ವಾಸ್ತವತೆಯು ಅಳ್ಳಕವಾಗುತ್ತಾ ಹೋಗಿ ಎಲ್ಲವನ್ನೂ ಒಳಗೊಳ್ಳುವ ‘ಬ್ರಹ್ಮಾಂಡ’ ಎಂಬ ಅಮೂರ್ತವಾದ ಭಾವನೆಯಾಗಿಬಿಡುತ್ತದೆ.
ಅದರೊಂದಿಗಿನ ಮನುಷ್ಯ ಸಂಬಂಧವೂ ಸಹ ವಿಶಾಲಗೊಂಡು ‘ವಿಶ್ವಪ್ರೇಮ’, ಎಂದಾಗುತ್ತದೆ. ಅದೇ ರೀತಿಯಲ್ಲಿ ಈ ಸಂಬಂಧವನ್ನು ಕಿರಿದುಗೊಳಿಸುತ್ತಾ, ನಿರ್ದಿಷ್ಟಗೊಳಿಸುತ್ತಾ ಹೋದರೆ ಅದರ ಬಗ್ಗೆ ಇರುವ, ಪ್ರೀತಿ, ಅಭಿಮಾನ ಮುಂತಾದವುಗಳೆಲ್ಲಾ ದೇಶ, ಪ್ರಾಂತ್ಯ, ಜಿಲ್ಲೆ, ಊರು, ಕುಟುಂಬಗಳಿಗೆ ಕುಗ್ಗುತ್ತಾ ಕೊನೆಗೆ ಮನುಷ್ಯರ ಭೌತಿಕ ಮತ್ತು ಭಾವನಾತ್ಮಕಗಾಢ ಸಂಬಂಧಗಳ ಕೇಂದ್ರವಾದ ‘ಮನೆ’ಯನ್ನುತಲುಪುತ್ತವೆ. ‘ಮನೆ’ಯಲ್ಲಿನ ತಂದೆ, ಅಜ್ಜ, ಅಜ್ಜಿ, ಸೋದರ-ಸೋದರಿ, ಬಂಧು-ಬಳಗವನ್ನು ಒಳಗೊಳ್ಳುತ್ತದೆ. ಈ ಸಂಬಂಧಗಳನ್ನು ಮತ್ತೂ ನಿರ್ದಿಷ್ಟಗೊಳಿಸಿದರೆ, ಅದು ವ್ಯಕ್ತಿಯ ಹುಟ್ಟಿನೊಂದಿಗೆ ಬಿಡಿಸಲಾಗದಷ್ಟುಗಾಢ ಸಂಬಂಧವಿರುವ ವ್ಯಕ್ತಿಗೆ ಅಂದರೆ ತಾಯಿಗೆ, ಇನ್ನೂ ನಿರ್ದಿಷ್ಟವಾಗಿ ತಾಯಿಯ ಗರ್ಭಕ್ಕೆ ಬಂದು ನಿಲ್ಲುತ್ತವೆ.
ತಾಯಿಯ ಗರ್ಭದಲ್ಲಿರುವವರೆಗೂ ವ್ಯಕ್ತಿಗೆ (ಅಂದರೆ, ಮಗುವಿಗೆ) ಪೋಷಣೆ ಮತ್ತು ಭದ್ರತೆಗಳು ಕುಟುಂಬದ ಹಿನ್ನೆಲೆಯಲ್ಲಿ ಸ್ವಾಭಾವಿಕವಾಗಿ ದೊರೆಯುತ್ತವೆ. ಹುಟ್ಟಿದಮೇಲೆ ಪೋಷಣೆ ಮತ್ತು ಭದ್ರತೆಗಳು ಪಾಲನೆಯ ರೂಪದಲ್ಲಿ ತಾಯಿ-ತಂದೆ ಮತ್ತು ಕುಟುಂಬದ ಜನರಿಂದ ಸಾಮಾಜಿಕವಾಗಿ ದೊರೆಯುತ್ತವೆ.
ಹುಟ್ಟಿನಿಂದ ಹಿಡಿದು ಸಾಯುವ ಕಡೆಯ ಕ್ಷಣದವರೆಗೂ ಪ್ರತಿ ವ್ಯಕ್ತಿಗೂ ಪೋಷಣೆ ಮತ್ತು ಭದ್ರತೆಗಳು ಬೇಕೇ ಬೇಕು. ‘ಎಲ್ಲಿಗೇ ಹೋದರೂ’, ‘ಮನೆಗೆ’ ಮರಳಬೇಕು ಎಂಬ ಹಂಬಲ ವ್ಯಕ್ತಿಗಳಲ್ಲಿ ಸದಾ ತುಡಿಯುತ್ತಿರುತ್ತದೆ. ಮನೆಯ ಸುಖ-ಕೌಟುಂಬಿಕ ನೆಮ್ಮದಿ ಇತ್ಯಾದಿ ಹಂಬಲಗಳೆಲ್ಲಾ ಹುಟ್ಟುವ ಮುಂಚಿನಿಂದಲೂ ಎಲ್ಲರಲ್ಲಿಯೂ ಇರುವಂಥವೇ. ಇವು ವಾಸ್ತವದಲ್ಲಿ ತಾಯಿಯ ಗರ್ಭದಲ್ಲಿದ್ದುಕೊಂಡು, (ಯಾವಯತ್ನವನ್ನೂ ಮಾಡದೆ) ಮಗುವು ಹೊಕ್ಕಳು ಬಳ್ಳಿಯ ಮೂಲಕ ತಾಯಿಯಿಂದ ನೇರವಾಗಿ ಪಡೆಯುತ್ತಿದ್ದ ಪೋಷಣೆ (ಆಹಾರ-ಶಕ್ತಿ) ಮತ್ತು ಭದ್ರತೆ (ಸುರಕ್ಷತೆ)ಗಳನ್ನು ಸದಾ ಪಡೆಯುತ್ತಿರಬೇಕೆಂಬ ಹಂಬಲಗಳ ಮುಂದುವರಿಕೆಯೇ ಆಗಿದೆ.
ತಾಯಿಯನ್ನು ಕಂಡಾಗ ಆಗುವ ಸಂತೋಷ, ಎಲ್ಲಿಗೇ ಹೋದರೂ ಮತ್ತೆ, ಮನೆಗೆ ಮರಳಿದಾಗ ಆಗುವ ಸಂತೋ?ಕ್ಕೆ ಸಂವಾದಿಯಾದದ್ದು. ಈ ದೃಷ್ಟಿಯಿಂದತಾಯಿಯಗರ್ಭವನ್ನು ವ್ಯಕ್ತಿಯ ಮೊದಲ ‘ಮನೆ’ ಎಂದುಕರೆಯಬಹುದು. ಈ ಅರ್ಥದಲ್ಲಿ ಪ್ರತಿಯೊಬ್ಬ ವ್ಯಕ್ತಿಗೂಎರಡು ಮನೆಗಳಿವೆ. ಹುಟ್ಟುವುದಕ್ಕಿಂತ ಮುಂಚಿನ ಮನೆ, ಅಂದರೆ ತಾಯಿಯ ಗರ್ಭ ಮತ್ತು ಹುಟ್ಟಿದ ಮೇಲೆ ಪೋಷಣೆ ಮತ್ತು ಭದ್ರತೆಗಳನ್ನು ಒದಗಿಸುವ, ಅನುಭವಿಸುವ ತಾಣವಾದ ‘ನಮ್ಮ ಮನೆ’.
ಗರ್ಭಿಣಿ ತಾಯಿಯು ಕೃಶಳಾಗಿರಲಿ ಅಥವಾ ಆರೋಗ್ಯವಂತಳಾಗಿರಲಿ, ಹೇಗೇ ಇದ್ದರೂ ಮಗುವಿಗೆ ಆಕೆಯ ಗರ್ಭವೇ ‘ಮನೆ’. ಹಾಗೆಯೇ ವ್ಯಕ್ತಿಯು ವಾಸಿಸುವ ಸ್ಥಳವು ಗುಡಿಸಿಲಾಗಿರಲಿ ಅಥವಾ ಬಂಗಲೆಯಾಗಿರಲಿ ಅದು ಮನೆಯೇ. ಈ ಎರಡರ ಸಂಯೋಜಿತ ರೂಪವೇ ತಾಯಿಯ ಮನೆ (ತವರು), ತಾಯಿಯಊರು (ಹುಟ್ಟಿದೂರು) ತಾಯಿಯ ಭಾ? (ತಾಯ್ನುಡಿ), ಮತ್ತು ತಾಯಿ ಬದುಕುವ ನಾಡು (ತಾಯ್ನಾಡು). ‘ನನ್ನ ಮನೆ’ ಎಂದರೂ ಅದೇ, ‘ನನ್ನದೇಶ’ ಎಂದರೂ ಅದೇ.
ಗರ್ಭಸ್ಥವಾಗಿರುವಾಗಲೇ ಭ್ರೂಣದ ಬೆಳವಣಿಗೆಯೊಂದಿಗೆ, ಮತ್ತು ಮಗುವಿನ ಮೆದುಳಿನ ಬೆಳವಣಿಗೆಯೊಂದಿಗೆ ತಳುಕು ಹಾಕಿಕೊಂಡಿರುವ ತಾಯಿ ಮತ್ತು ಪೋಷಕ ಜನರ ಕುಟುಂಬ (ವಂಶ), ತಾಯ್ನುಡಿ, ತಾಯ್ನಾಡುಗಳ ಬಗೆಗಿನ ಗಾಢಪ್ರೇಮವು ಏಕಕಾಲಕ್ಕೆ ಭೌತಿಕವೂ ಹೌದು ಭಾವನಾತ್ಮಕವೂ ಹೌದು. ಈ ಕಾರಣಕ್ಕಾಗಿಯೇ ಈ ಸಂಬಂಧದ ಹೊಗಳಿಕೆ, ಪ್ರಶಂಸೆಗಳು ವ್ಯಕ್ತಿಗೆ ಅತೀವ ಸಂತೋಷವನ್ನು ಕೊಡುತ್ತದೆ. ತೆಗಳಿಕೆ ಅಥವಾ ನಿಂದನೆಗಳು ಭಾವೋದ್ರೇಕದ ತೀವ್ರ ಪ್ರತಿಕ್ರಿಯೆಗಳನ್ನು ಹುಟ್ಟಿಸುತ್ತವೆ.
ವ್ಯಕ್ತಿಗಳು ಸಣ್ಣವರಿದ್ದಾಗ ಪೋಷಣೆ ಮತ್ತು ಭದ್ರತೆಗಳನ್ನು ತಾಯಿ ತಂದೆಯರ ಮೂಲಕ ಕುಟುಂಬದಿಂದ ಪಡೆಯುತ್ತಾರೆ. ತಾಯಿಗೆ ಹತ್ತಿರವಿರುವ ಕುಟುಂಬದ ಸದಸ್ಯರು ಸ್ವತಹ ತಮ್ಮ ಪೋಷಣೆ ಮತ್ತು ಭದ್ರತೆಗಳನ್ನು ತಮ್ಮ ಸಾಮಾಜಿಕ ಶ್ರಮಗಳಿಂದ ಹುಟ್ಟುವ ಜೀವನಾಧಾರ ವಸ್ತುಗಳ ಮೂಲಕ, ತಾವಿರುವ ಭೂಪ್ರದೇಶದಿಂದ ಪಡೆಯುತ್ತಾರೆ. ಇವೆಲ್ಲವುಗಳ ಒಟ್ಟುರೂಪವೇ ದೇಶ.
ಈ ದೇಶದ ಬಗೆಗಿನ ವ್ಯಕ್ತಿಗಳ ಪ್ರೀತಿಯು ಏಕಕಾಲಕ್ಕೆ ಸ್ವಾಭಾವಿಕವಾದದ್ದು ಮತ್ತು ಸಾಮಾಜಿಕವಾದದ್ದು. ಹೀಗೆ, ದೇಶವೆಂದರೆ ಒಂದು ಭೂಪ್ರದೇಶ, ಅಲ್ಲಿ ಜೀವಿಸುವ ಜನರು, ಅವರ ಅಸ್ತಿತ್ವಕ್ಕಾಗಿ ಬಳಸುವ ಜೀವನಾಧಾರ ವಸ್ತುಗಳು ಮತ್ತು ಅವನ್ನು ಪಡೆಯಲು ಸಾಮಾಜಿಕವಾಗಿ ಬಳಸುವ ಶ್ರಮ ಮತ್ತು ಸಹಜೀವಿಗಳೊಂದಿಗಿನ ಶ್ರಮ ಸಂಬಂಧಗಳು ಎಲ್ಲವೂ ಕೂಡಿರುವ ವಾಸ್ತವವೇ ದೇಶ. ಇವುಗಳ ಬಗೆಗಿನ ಸ್ವಾಭಾವಿಕ ಪ್ರೀತಿಯೇ ದೇಶಪ್ರೇಮ.
ಹಾಗಿದ್ದ ಮೇಲೆ ‘ದೇಶಭಕ್ತಿ’ ಎಂಬುದು ಹುಟ್ಟಿದ್ದು ಹೇಗೆ?
ಶ್ರಮಸಂಬಂಧಗಳಲ್ಲಿ ಜೀವನಾಧಾರ ವಸ್ತುಗಳನ್ನು ಉತ್ಪಾದಿಸಲು ಬೇಕಾದ ಉತ್ಪಾದನಾ ಸಾಧನಗಳನ್ನು ಬಲಿಷ್ಠರಾದ ಕೆಲವರು ತಮ್ಮ ಕೈಲಿಟ್ಟುಕೊಂಡು ತಾವು ಶ್ರಮಪಡದೆ, ಸಾಮಾನ್ಯ ಜನರ ಶ್ರಮದಿಂದ ಜೀವಿಸುತ್ತಾ ಅವರ ಪೋಷಣೆ – ಭದ್ರತೆಗಳನ್ನು ನಿಯಂತ್ರಿಸುವ ಶೋಷಕ ವ್ಯವಸ್ಥೆಯು ಸಾವಿರಾರು ವರ್ಷಗಳ ಹಿಂದಿನ ಗುಲಾಮ ಪದ್ಧತಿಯಲ್ಲಿ ರೂಢಿಗೆ ಬಂದಿತು. ಈ ಆಧುನಿಕ ಕಾಲದಲ್ಲೂ ಇಂಥ ಶೋಷಕ ವ್ಯವಸ್ಥೆಯು ಬೇರೆ ಬೇರೆ ರೂಪಗಳಲ್ಲಿ, ಬೇರೆ ಬೇರೆ ಹೆಸರುಗಳಲ್ಲಿ ಇಂದಿಗೂ ಜೀವಂತವಾಗಿದೆ.
ಭೂಪ್ರದೇಶ, ಉತ್ಪಾದನಾ ಸಾಧನಗಳು ಮತ್ತು ಶ್ರಮಶಕ್ತಿಯ ಮೂಲವಾದ ಸಾಮಾನ್ಯ ಜನರು ಮತ್ತು ಅವರ ಸಂತಾನವನ್ನು ತಮ್ಮ ನಿಯಂತ್ರಣಕ್ಕೆ ಒಳಪಡಿಸಿಕೊಳ್ಳುವುದರಲ್ಲಿ ಬಲಿಷ್ಠರ ಎರಡು ಬಣಗಳ ನಡುವೆ ಹೊಡೆದಾಟ-ಕಾದಾಟಗಳು ನಡೆದಾಗಲೆಲ್ಲಾ ಬಲಿಷ್ಠರಿಗಾಗಿ ಕಾದಾಡಿ ಪ್ರಾಣಕೊಡಲು ಸಾಮಾನ್ಯ ಜನರನ್ನೇ ಬಳಸಿಕೊಳ್ಳುವುದು ಬಹು ಹಿಂದಿನಿಂದಲೂ ಬಳಕೆಯಲ್ಲಿರುವ ಮತ್ತೊಂದು ಕ್ರೂರಪದ್ಧತಿ. ಅವರಿಗೆ ಸಮವಸ್ತ್ರವನ್ನು ಹಾಕಿ ಆಯುಧಗಳನ್ನು ಕೊಟ್ಟುಕಾದಾಡಲು ಕಳಿಸಿದರೆ ಅವರೇ ರಾಜಭಕ್ತಿಯುಳ್ಳ ಸೈನಿಕರು ಅಥವಾ ರಾಜಭಟರು.
ಈ ಪದ್ಧತಿಯಿಂದಾಗಿ, ಸಾಮಾನ್ಯ ಜನರಲ್ಲಿ ಸ್ವಾಭಾವಿಕವಾಗಿ ಮತ್ತು ಸಾಮಾಜಿಕವಾಗಿ ಇದ್ದ ‘ದೇಶಪ್ರೇಮ’ವು ತಮ್ಮನ್ನು ನಿಯಂತ್ರಿಸುವ ಬಲಿಷ್ಠ ಶೋಷಕರ ಬಗ್ಗೆ ಇಟ್ಟುಕೊಳ್ಳಲೇಬೇಕಾದ ಭಯ ಮತ್ತು ಬಲವಂತದ ಗೌರವಗಳಿಗೆ ಮತ್ತೊಂದು ಹೆಸರಾದ ‘ದೇಶಭಕ್ತಿ’ಯಾಗಿ ಕಾಲಕ್ರಮೇಣ ಮಾರ್ಪಟ್ಟಿತು. ಹೀಗೆ ಸಾಮಾನ್ಯ ಜನರಿಗೆ ಪೋಷಣೆ ಮತ್ತು ಭದ್ರತೆಗಳನ್ನು ಒದಗಿಸುವ ‘ದೇಶ’ದ ಸ್ಥಾನವನ್ನು ಬಲಿಷ್ಠರಾದ ಶೋಷಕರು ಆಕ್ರಮಿಸಿಕೊಂಡು ತಾವೇ ದೇಶವೆಂದು, ತಮ್ಮ ಬಗ್ಗೆ ಸಾಮಾನ್ಯ ಜನರು ಇಟ್ಟುಕೊಳ್ಳಬೇಕಾದ ಭಯ-ಗೌರವಗಳೇ ದೇಶಭಕ್ತಿಯೆಂದು ಬಲಾತ್ಕರಿಸುತ್ತಾ ಬಂದದ್ದರ ಫಲವಾಗಿ ‘ದೇಶಪ್ರೇಮ’ದ ಸ್ಥಾನದಲ್ಲಿ, ‘ದೇಶಭಕ್ತಿ’ಯೆಂಬ ಪರಿಕಲ್ಪನೆಯು ಪ್ರತಿಷ್ಠಾಪನೆಗೊಂಡಿತು.
ದೇಶಪ್ರೇಮವು ಅಥವಾ ರಾಷ್ಟ್ರಪ್ರೇಮವು ಸ್ವಾಭಾವಿಕವಾದದ್ದು ಮತ್ತು ಸಾಮಾಜಿಕವಾದದ್ದು. ದೇಶಭಕ್ತಿ ಎಂಬುದು ಊಳಿಗಮಾನ್ಯ ರಾಜಕೀಯದ ಪರಿಕಲ್ಪನೆ. ಅದನ್ನು ನಂಬುವವರ ದೃಷ್ಟಿಯಲ್ಲಿ ಜನರು ತಮ್ಮನ್ನು ನಿಯಂತ್ರಿಸುವ ಶೋಷಕರ ಬಗ್ಗೆ ಭಯ-ಭಕ್ತಿಯನ್ನು ತೋರಿಸಿದರೆ, ಅದು ದೇಶಭಕ್ತಿ. ಅವರನ್ನೇ ಪ್ರಶ್ನಿಸಿದರೆ ಅಥವಾ ಅವರ ಬಗ್ಗೆ ಭಯ-ಭಕ್ತಿಯನ್ನು ತೋರಿಸದಿದ್ದರೆ ಅದು ‘ರಾಜದ್ರೋಹ’ ಅಥವಾ ‘ದೇಶದ್ರೋಹ’.
ಸದ್ಯದ ರಾಜಕೀಯ ಸಂದರ್ಭದಲ್ಲಿ ಸಂಘಪರಿವಾರದ ಆಳುವ ಜನರು ಪ್ರಜಾಪ್ರಭುತ್ವದ ವಿಧಾನದಲ್ಲೇ ಅಧಿಕಾರಕ್ಕೆ ಬಂದಿದ್ದರೂ ಸಹ ಅವರ ರಾಜಕೀಯ ಮೌಲ್ಯಗಳ ಬೇರುಗಳು ಇನ್ನೂ ಆಸ್ತಿಕ ಮೂಲದ ಊಳಿಗಮಾನ್ಯ ವ್ಯವಸ್ಥೆಯಲ್ಲೇ ಇವೆ. ಸಾಮಾನ್ಯ ಜನರಲ್ಲಿರುವ ಸ್ವಾಭಾವಿಕವಾದ ದೇಶಪ್ರೇಮವನ್ನು ಗುರುತಿಸಲಾಗದ ಅವರು ತಮ್ಮನ್ನು ಪ್ರಶ್ನಿಸುವವರೆಲ್ಲರನ್ನೂ ‘ದೇಶದ್ರೋಹಿ’ಗಳೆಂದು ಜರೆದು ಶಿಕ್ಷಿಸಲು ಹಾತೊರೆಯುತ್ತಾರೆ. ಭಾರತವೆಂಬ ಭೂಪ್ರದೇಶದ ಸಾಮಾನ್ಯ ಜನರೊಂದಿಗೆ, ರಕ್ತಸಂಬಂಧಗಳಲ್ಲಿ ಹೇಗೋ ಹಾಗೆ ಸಾಮಾಜಿಕ ಶ್ರಮಸಂಬಂಧಗಳಲ್ಲಿ ಬದುಕುತ್ತಿರುವ ಎಲ್ಲರೂ ದೇಶಪ್ರೇಮಿಗಳೇ. ಆದ್ದರಿಂದ, ಜನರ ದೇಶಪ್ರೇಮವನ್ನು ಶಂಕಿಸುವ, ಸಾಬೀತುಪಡಿಸಿ ಎಂದು ಆಗ್ರಹಿಸುವ, ಅಥವಾ ಆಳುವವರನ್ನು ಪ್ರಶ್ನಿಸುತ್ತಾರೆಂಬ ಕಾರಣಕ್ಕಾಗಿ ಯಾರನ್ನೇ ಆಗಲಿ ‘ದೇಶದ್ರೋಹಿ’ಗಳೆಂದು ದೂಷಿಸುವ ಕ್ರಮಗಳು ಪ್ರಜಾತಾಂತ್ರಿಕವೂ ಅಲ್ಲ, ನ್ಯಾಯಯುತವೂ ಅಲ್ಲ.
17ನೇ ಶತಮಾನದಲ್ಲಿ ಬಂಡವಾಳಶಾಹಿ ವ್ಯವಸ್ಥೆ ಯುರೋಪಿನಲ್ಲಿ ಉದಯಿಸಿ ಬೇರು ಬಿಡಲು ಆರಂಭಿಸಿದಾಗ ಬೆಳೆದು ಬಂದ ‘ದೇಶ’ದ ಪರಿಕಲ್ಪನೆ ನಮ್ಮ ಈಗಿನ ‘ದೇಶ’ದ ಕಲ್ಪನೆಯನ್ನು ಪ್ರಧಾನವಾಗಿ ರೂಪಿಸುತ್ತಿದೆ. ‘ದೇಶ’ವನ್ನು ಆಯಾ ಬಂಡವಾಳಶಾಹಿ ವರ್ಗದ ಪ್ರಭುತ್ವದ ಅಧಿಪತ್ಯದಲ್ಲಿರುವ – ಸ್ವಂತ ಮಾರುಕಟ್ಟೆಯಾಗಿ; ಭೂಮಿ, ಗಣಿ ಮತ್ತಿತರ ಪ್ರಾಕೃತಿಕ ಸಂಪನ್ಮೂಲಗಳು ಹಾಗೂ ಬಂಡವಾಳ ಇತ್ಯಾದಿ ಸೇರಿದಒಟ್ಟು ಸಂಪತ್ತು ಆಗಿ;- ನೋಡುವುದು; ಯುದ್ಧ ಅಥವಾ ಇತರ ಆಕ್ರಾಮಕ ಕ್ರಮಗಳಿಂದ ಇತರ ದೇಶಗಳನ್ನು ಅವುಗಳ ‘ಮಾರುಕಟ್ಟೆ’ ಮತ್ತು ‘ಸಂಪತ್ತು’ಗಳನ್ನು ಗೆದ್ದುಕೊಳ್ಳಬೇಕಾದ ಅಧೀನಕ್ಕೊಳಪಡಿಸಬೇಕಾದ ದ್ವೇಷಕ್ಕೆ ಯೋಗ್ಯವಾದವುಗಳಾಗಿ ನೋಡುವುದು – ಆಗ ಬೆಳೆದು ಬಂದ ‘ದೇಶ’ದ ಪರಿಕಲ್ಪನೆ. ಯುರೋಪಿನ ಪ್ರಮುಖ ‘ದೇಶ’ಗಳು ಜಗತ್ತಿನಾದ್ಯಂತ ‘ವಸಾಹತು’ಗಳನ್ನು ಗೆದ್ದುಕೊಳ್ಳಲು ಆರಂಭಿಸಿದ ಮೇಲೆ ಮತ್ತು ವಸಾಹತುಗಳಿಗಾಗಿ ಪೈಪೋಟಿಯ ಭಾಗವಾಗಿ ಮಹಾಯುದ್ಧ ನಡೆದ ಮೇಲಂತೂ ಈ ಕಲ್ಪನೆ ಇನ್ನಷ್ಟು ಗಟ್ಟಿಯಾಯಿತು.
ದೇಶಭಕ್ತಿಎಂದರೆ ‘ದೇಶ’ದ ಬಂಡವಾಳಶಾಹಿ ವರ್ಗದ ಹಿತಾಸಕ್ತಿಗಳನ್ನು ಪ್ರಶ್ನಿಸದಿರುವುದು, ಕಣ್ಣು ಮುಚ್ಚಿ ಎತ್ತಿ ಹಿಡಿಯುವುದು, ಇತರ ದೇಶಗಳನ್ನು ಹಗೆಗಳಂತೆ ಕಂಡು ದ್ವೇಷಿಸುವುದು ಎಂದಾಯಿತು. ದೇಶಭಕ್ತಿ ಎಂದರೆ ದೇಶದ ಆಳುವ ವರ್ಗ, ಅದರ ಪ್ರಭುತ್ವ, ಅದರ ಆಗಿನ ಸರಕಾರ ಇವೆಲ್ಲವನ್ನು ಒಂದೇ ಎಂದು ಬಗೆದು ಅವುಗಳಿಗೆ ಭಯ-ಭಕ್ತಿಯಿಂದ ನಡೆದುಕೊಳ್ಳುವುದು ಎಂದಾಯಿತು. ಫ್ಯಾಸಿಸ್ಟ್ ದೇಶದ ಪರಿಕಲ್ಪನೆ ಇದರ ಪರಾಕಾಷ್ಟೆಯಾಗಿತ್ತು. ಇದರಲ್ಲಿ – ದೇಶ, ಪ್ರಭುತ್ವ, ಸರಕಾರ – ಇವೆಲ್ಲವೂ ಒಬ್ಬ ಸರ್ವಾಧಿಕಾರಿಯಲ್ಲಿ ಮೂರ್ತೀಭವಿಸಿ ಅವನಿಗೆ ಭಯ ಭಕ್ತಿಯಿಂದ ನಡೆದುಕೊಳ್ಳುವುದು ದೇಶಭಕ್ತಿ ಎಂದಾಯಿತು.
ವಸಾಹತುಶಾಹ-ವಿರೋಧಿ ಚಳುವಳಿಗಳು, ಅಕ್ಟೋಬರ್ ಕ್ರಾಂತಿಯಿಂದಾರಂಭಿಸಿ ಜನತಾ ಪ್ರಜಾಪ್ರಭುತ್ವ ಅಥವಾ ಸಮಾಜವಾದಿ ಪ್ರಭುತ್ವ ಸ್ಥಾಪಿಸಿದ ದೇಶಗಳಲ್ಲಿ ಇದಕ್ಕೆ ತದ್ವಿರುದ್ಧವಾದ ಜನ-ಕೇಂದ್ರಿತ ಮತ್ತು ಮೇಲೆ ಹೇಳಿದ ಪರಿಕಲ್ಪನೆಗೆ ತದ್ವಿರುದ್ಧವಾದ ಪರಿಕಲ್ಪನೆಯನ್ನು ರೂಪಿಸಲಾಯಿತು. ಆದರೆ 1990ರ ದಶಕದಲ್ಲಿ ಇವುಗಳ ಅವನತಿಯೊಂದಿಗೆ ಬಂಡವಾಳಶಾಹಿ ಮತ್ತು ಫ್ಯಾಸಿಸ್ಟ್ ‘ದೇಶ’ದ ಮತ್ತು ‘ದೇಶಭಕ್ತಿ’ಯ ಪರಿಕಲ್ಪನೆ ಮತ್ತೆ ವ್ಯಾಪಕವಾಗಿ ಮುನ್ನೆಲೆಗೆ ಬಂದಿದೆ. ಸಂಘಪರಿವಾರ ಈಗ ಹರಡುತ್ತಿರುವ ‘ದೇಶಭಕ್ತಿ’ ಮತ್ತು ದೇಶದ್ರೋಹ’ದ ಕಲ್ಪನೆಗಳ ಹಿಂದೆ ಊಳಿಗಮಾನ್ಯ ವ್ಯವಸ್ಥೆಯ ಮತ್ತು ಫ್ಯಾಸಿಸ್ಟ್ ‘ದೇಶ’ದ ಪರಿಕಲ್ಪನೆಯ ಮಿಶ್ರಣ ಇದೆ.
(ಜನಶಕ್ತಿ ವಾರಪತ್ರಿಕೆಯಲ್ಲಿ ಪ್ರಕಟವಾದ ಲೇಖನ)
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಭಾರತದ ಜನಸಂಖ್ಯೆ ವರವೋ..? ಶಾಪವೋ..?

- ಅಂಬಿಕಾ. ಕೆ
ಎಂ.ಎ. ಪ್ರಥಮ ವರ್ಷದ ವಿದ್ಯಾರ್ಥಿನಿ
ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ
ಬೆಂಗಳೂರು ವಿಶ್ವವಿದ್ಯಾಲಯ
ವಿಶ್ವ ಸಂಸ್ಥೆಯು ಪಾಪುಲೇಷನ್ ಫಂಡ್ ಮಾಡಿರುವ ಅಂದಾಜಿನ ಪ್ರಕಾರ ಭಾರತವು ಜಗತ್ತಿನ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶ ಎನಿಸಿಕೊಂಡಿದೆ.
ದೇಶದ ಒಟ್ಟು ಜನಸಂಖ್ಯೆಯು 142.86 ಕೋಟಿಗೆ ಏರಿಕೆಯಾಗಿದ್ದು, ಚೀನಾ ಎರಡನೇ ಸ್ಥಾನಕ್ಕೆ ಇಳಿದಿದೆ, ಇಂತಹದೊಂದು ಹಿರಿಮೆಗೆ ಭಾರತವು ಪಾತ್ರವಾಗಲಿದೆ ಎಂಬುದರ ಅರಿವು ಹಿಂದೆಯೇ ಇತ್ತು. ಹೊಸ ಭಾರತದ ಜನಸಂಖ್ಯೆಯ ಸ್ವರೂಪವೇನು ಮತ್ತು ಯಾವ ವಯೋ ಮಾನದವರು ಎಷ್ಟಿದ್ದಾರೆ. ಆದಾಯ ಮಟ್ಟ ಹೇಗಿದೆ, ಆದಾಯ ಹಂಚಿಕೆ ಹೇಗಿದೆ ಎಂಬುದರ ಕುರಿತು ಕೂಡ ಚರ್ಚೆಗಳು ನಡೆಯುತ್ತಿವೆ. ಒಟ್ಟು ಜನಸಂಖ್ಯೆಯ ಜತೆಗೆ ಈ ಎಲ್ಲಾ ಅಂಶಗಳು ಕೂಡ ಸರ್ಕಾರದ ನೀತಿಗಳು ಮತ್ತು ಕಾರ್ಯಕ್ರಮ ರೂಪಿಸುವಿಕೆ ಮೇಲೆ ಪ್ರಭಾವ ಬೀರುತ್ತವೆ. ರಾಜಕೀಯ ಪಕ್ಷಗಳು ಮತ್ತು ಗುಂಪುಗಳು ರಾಜಕೀಯ ಹಾಗೂ ಸಾಮಾಜಿಕ ಸ್ಥಾನಗಳನ್ನು ನಿರ್ಧರಿಸುವಲ್ಲಿಯೂ ಈ ಅಂಶಗಳು ಪಾತ್ರವಹಿಸುತ್ತವೆ ಭಾರತದಲ್ಲಿ ಗರಿಷ್ಠ ಸಂಖ್ಯೆಯು ಯುವ ಜನರಿದ್ದಾರೆ.
ಹಾಗೆಯೇ ಮುಂದುವರೆಯಲಿದೆ 15 ರಿಂದ 24 ವರ್ಷದೊಳಗಿನವರ ಸಂಖ್ಯೆಯು 25.4 ಕೋಟಿ ಎಂದು ಅಂದಾಜಿಸಲಾಗಿದೆ ಇನ್ನು ದೀರ್ಘಕಾಲ ಭಾರತವು ಈ ಸ್ಥಿತಿ ಕಾಯ್ದುಕೊಳ್ಳಲಿದೆ ಎಂಬುದರಲ್ಲಿಯೂ ಅನುಮಾನ ಇಲ್ಲ ಜನಸಂಖ್ಯೆಯಲ್ಲಿ ಜಗತ್ತಿನಲ್ಲಿ ಮೊದಲ ಸ್ಥಾನಕ್ಕೆ ಏರುವುದು, ಗೌರವ ಏನು ಅಲ್ಲ ಬದಲಿಗೆ ಇದು ದೇಶಕ್ಕೆ ಹಲವು ಸವಾಲುಗಳನ್ನು ಹುಟ್ಟುತ್ತದೆ ಜತೆಗೆ ಅವಕಾಶಗಳ ಬಾಗಿಗಳನ್ನು ತೆರೆಯುತ್ತದೆ ಆದರೆ, ಜನರನ್ನು ಸಕಾಲಿಕವಾಗಿ ಮತ್ತು ಪರಿಣಾಮಕಾರಿಯಾಗಿ ಬಲಿಸಿಕೊಳ್ಳದೆ ಇದ್ದರೆ ಜನಸಂಖ್ಯೆಯೇ ಶಾಪವಾಗಿ ದೊಡ್ಡ ಸವಾಲಾಗಿ ಪರಿಣಮಿಸಬಹುದು. ದೇಶ ಪ್ರತಿ ವರ್ಷವೂ ಹೆಚ್ಚು ಹೆಚ್ಚು ಜನರಿಗೆ ಆಹಾರ ಬಟ್ಟೆ ಶಿಕ್ಷಣ ಆರೋಗ್ಯ ಸೇವೆ ಉದ್ಯೋಗಾವಕಾಶಗಳನ್ನು ಒದಗಿಸಬೇಕಾಗುತ್ತದೆ.
ಹೀಗೆ ಮುಂದುವರೆದರೆ ಉದ್ಯೋಗಾವಕಾಶಗಳು ದೊರೆಯದೆ ಜನರ ಜೀವನ ಮಟ್ಟ ಸುಧಾರಿಸಿಕೊಳ್ಳುವುದು ಕಷ್ಟವೇ ಸರಿ ಕೆಲಸ ಮಾಡುವ ವಯೋಮಾನದ ಜನರನ್ನು ಸಮಂಜಸವಾಗಿ ಬಳಸಿಕೊಂಡರೇ ಮಾತ್ರ ಜನಸಂಖ್ಯೆಯು ದೇಶದ ಅಭಿವೃದ್ಧಿಗೆ ಪೂರಕವಾಗಿ ಪರಿಣಮಿಸುತ್ತದೆ. ದೇಶದಲ್ಲಿ ದೊಡ್ಡ ಸಂಖ್ಯೆಯ ಜನರಿಗೆ ಈಗಲೂ ಮೂಲ ಸೌಲಭ್ಯಗಳನ್ನು ಒದಗಿಸಲು ಸಾಧ್ಯವಾಗಿಲ್ಲ ಆದ್ದರಿಂದ ಎಲ್ಲಾ ಕ್ಷೇತ್ರಗಳಲ್ಲಿಯೂ ಸಂಬಂಧಿಸಿದ ನೀತಿಗಳು ಮತ್ತು ಕಾರ್ಯತಂತ್ರ ಗಳಿಗೆ ಸಂಬಂಧಿಸಿದ ಪ್ರಯತ್ನಗಳನ್ನು ನಡೆಸದೇ ಇದ್ದರೆ ಜನಸಂಖ್ಯೆ ಹೆಚ್ಚಳದ ಲಾಭವು ದೊರೆಯದೆ ಹೋಗಬಹುದು ಇದರ ಪರಿಣಾಮವಾಗಿ ಲಾಭದ ಹೆಸರಿನಲ್ಲಿ ನಷ್ಟವೇ ಹೆಚ್ಚು ಅದುವೇ ಒಂದು ಹೊರೆಯುವಾಗಬಹುದು.
ಯುವ ಜನರಿಗೆ ಸೌಲಭ್ಯಗಳು ಮತ್ತು ಅವಕಾಶಗಳನ್ನು ಸೃಷ್ಟಿಸುವುದರ ಜೊತೆಗೆ ಹೆಚ್ಚುತ್ತಲೇ ಇರುವ ಹಿರಿಯ ನಾಗರಿಕರ ಹಾರೈಕೆಯು ವ್ಯವಸ್ಥೆ ಮಾಡಬೇಕಿದೆ ಅವಕಾಶಗಳನ್ನು ಸದುಪಯೋಗ ಮಾಡಿಕೊಳ್ಳುವುದು ಮತ್ತು ಸವಾಲುಗಳನ್ನು ಎದುರಿಸುವುದು ಭಾರತೀಯರ ಹೊರೆಗಾರಿಕೆ ದೇಶದ ಜನರ ಅಗತ್ಯಗಳನ್ನು ಪೂರೈಸಲು ವಿಫಲವಾದರೆ, ಸಾಮಾಜಿಕ ಸಂಘರ್ಷ ಮತ್ತು ರಾಜಕೀಯ ದೃಷ್ಟಿ ಉಂಟಾಗಿ ಅದು ಗಂಭೀರ ಪರಿಣಾಮಗಳಿಗೆ ಕಾರಣವಾಗಬಹುದು. ಮುಂದೆ ಜನಸಂಖ್ಯಾ ಸ್ಫೋಟವಾದರೂ ಆಶ್ಚರ್ಯ ಪಡಬೇಕಾಗಿಲ್ಲ ಈಗಿನ ಸನ್ನಿವೇಶದಲ್ಲಿ ದೊರಕುತ್ತಿರುವ ಸಂಪನ್ಮೂಲಗಳ ಗರಿಷ್ಠ ಬಳಕೆ ಮತ್ತು ಪರಿಣಾಮಕಾರಿ ಬಳಕೆ ಬಹಳ ಮಹತ್ವವಾಗಿದೆ.
ಮೀಸಲಾತಿ, ವಲಸೆ , ರಾಜಕೀಯ ಪ್ರಾತಿನಿಧ್ಯ ಸಂಪನ್ಮೂಲಗಳ ಹಂಚಿಕೆ ಮತ್ತು ಇದರ ವಿಚಾರಗಳು ಚರ್ಚೆಗೆ ಒಳಗಾಗುವ ಸಾಧ್ಯತೆ ಇದೆ ಸಮಾಜದ ಎಲ್ಲಾ ವರ್ಗಗಳನ್ನು ಸಮಾನವಾಗಿ ಒಳಗೊಳ್ಳುವ ಆರ್ಥಿಕ ಪ್ರಗತಿಯು ಸಾಧ್ಯವಾದರೆ ಜನಸಂಖ್ಯೆ ಏರಿಕೆ ಸವಾಲಾಗಿ ಪರಿಣಮಿಸಬಹುದು ಮಾನವ ಅಭಿವೃದ್ಧಿಯೇ ಅತ್ಯುತ್ತಮ ಕುಟುಂಬ ಕಲ್ಯಾಣ ಯೋಜನೆ ಇದರಿಂದ ಜನಸಂಖ್ಯೆಯ ಏರಿಕೆಯನ್ನು ನಿಯಂತ್ರಣದಲ್ಲಿ ಇರಿಸಿಕೊಳ್ಳಬಹುದು ಜನಸಂಖ್ಯೆ ಹೆಚ್ಚಳ ಯಾವುದೋ ಒಂದು ಸಮುದಾಯ ಕಾರಣ ಎಂದು ದೂಷಿಸುವ ಪ್ರವೃತ್ತಿಗೆ ಜ್ಞಾನದಾದ ಆಧಾರ ಇಲ್ಲದ ಪೂರ್ವಗ್ರಹ ಕಾರಣದಿಂದ ಮತ್ತು ಇದು ತಪ್ಪು ನಡವಳಿಕೆಯ ಜನಸಂಖ್ಯೆಗೆ ಸಂಬಂಧಿಸಿದ ಸವಾಲುಗಳನ್ನು ಉತ್ತಮವಾಗಿ ಮತ್ತು ಜಾಣ್ಮೆಯಿಂದ ನಿರ್ವಹಿಸಿದರೆ ಈ ಶತಮಾನವನ್ನು ಭಾರತದ ಶತಮಾನವನ್ನಾಗಿ ಪರಿವರ್ತಿಸುವ ಅವಕಾಶ ನಮ್ಮ ಮುಂದೆ ಇದೆ ಜನರೇ ನಮ್ಮ ದೇಶದ ಸಂಪನ್ಮೂಲವನ್ನಾಗಿ ಮಾರ್ಪಾಡು ಮಾಡಿಕೊಳ್ಳುವ ಅವಕಾಶ ನಮ್ಮ ನಿಮ್ಮೆಲ್ಲರ ಮೇಲಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಬಾಬಾ ಸಾಹೇಬ ಅಂಬೇಡ್ಕರರ ‘ಧ್ಯಾನ’ ಗಾಯನ ; ವಿನೂತನ

- ವೆನ್ನೆಲಾ ಕೆ.
ಎಂ.ಎ. ಪ್ರಥಮ ವರ್ಷದ ವಿದ್ಯಾರ್ಥಿನಿ,
ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ,
ಬೆಂಗಳೂರು ವಿಶ್ವವಿದ್ಯಾಲಯ,ಬೆಂಗಳೂರು
ಇತ್ತೀಚೆಗೆ ಬೆಂಗಳೂರಿನ ಗಾಂಧಿ ಭವನದಲ್ಲಿ ನಡೆದ ಅನನ್ಯ ಮಾಧ್ಯಮ ಮತ್ತು ಬೆಳ್ಳಿತೆರೆ ಸಂಸ್ಥೆಯ ವತಿಯಿಂದ ಆಯೋಜಿಸಿದ 132ನೇ ಬಾಬಾಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ರವರ ಜನುಮ ನಿಮಿತ್ತವಾಗಿ “ಧಾನ್ಯ” ‘ಗಾಯನವು’ ವಿನೂತನವಾದ ಈ ಕಾರ್ಯಕ್ರಮವು 5 ಘಂಟೆ, 1ನಿಮಿಷ, 14 ಸೆಕೆಂಡ್ ಗೆ ಆರಂಭವಾಗಿದ್ದು ಅವಿಸ್ಮರಣೀಯವಾದ ದಿನ, ಇದೊಂದು ಭಾರತ ಇತಿಹಾಸದ ಪುಟದ ಚರಿತ್ರೆಯಲ್ಲೇ ಹೊಸ ದಾಖಲೆಯೂ ಅಂತ ಹೇಳಬಹುದು.
ಈ ಕಾರ್ಯಕ್ರಮವನ್ನು ಅಂಬೇಡ್ಕರ್ ರವರ “ಧ್ಯಾನ” ‘ಗಾಯನ’ವು ಇಡೀ ಭಾರತದಲ್ಲೇ ಯಾರು ಮಾಡಿರದ ಈ ವಿನೂತವಾದ ಕಾರ್ಯಕ್ರಮವನ್ನು ಕರ್ನಾಟಕ ರಾಜ್ಯದಲ್ಲಿಯೇ ಪ್ರಪ್ರಥಮ ಬಾರಿಗೆ ಬೆಂಗಳೂರು ನಗರದಲ್ಲಿರುವ ಗಾಂಧಿ ಭವನದ ಆವರಣದಲ್ಲಿ ‘ಅನನ್ಯ ಸಂಸ್ಥೆ’ ವತಿಯಿಂದ 132 ನೇ ‘ವಿಶ್ವದ ವೀರ ವಿದ್ಯಾರ್ಥಿ ಹುಟ್ಟಿದ ದಿನ’ ಹಾಗೂ ‘ರಾಷ್ಟ್ರದ ಸ್ಫೂರ್ತಿಯ ದಿನ’ ‘ಸರ್ವ ಸಮುದಾಯದ ಶಕ್ತಿಯ ದಿನ’ ಇದೊಂದು ನಮ್ಮೆಲ್ಲರ ಹಬ್ಬದ ದಿನ ಅಂಬೇಡ್ಕರ್ ರವರ “ಧ್ಯಾನ” ‘ಗಾಯನ’ ಇಂತಹ ಮೇರು ಶಿಖರ ಟ್ಯಾಗ್ ಲೈನ್ ಗಳಿಂದ ಅದ್ಭುತವಾಗಿ
ಆಯೋಜಿಸಿದ ಕಾರ್ಯಕ್ರಮಕ್ಕೆ ರಾಜ್ಯ ಕಂಡ ಪ್ರಸಿದ್ಧ ಐಪಿಎಸ್ ಅಧಿಕಾರಿಗಳು, ಸರ್ಕಾರಿ ಅಧಿಕಾರಿಗಳು, ಸಿನಿಮಾ ಸೆಲೆಬ್ರಿಟಿಗಳು, ಸಮಸ್ತ ವಿದ್ಯಾರ್ಥಿ ಸಮೂಹ, ಸಾಮಾಜಿಕ ನ್ಯಾಯದ ವಿಚಾರಶೀಲರು, ಬರಹಗಾರರು, ಪತ್ರಕರ್ತರು ಇನ್ನೂ ಅನೇಕ ಮುಂತಾದವರು ಈ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.
ಇದಕ್ಕೆ ಮುಖ್ಯ ಕಾರಣಕರ್ತರಾದ ಅನನ್ಯ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಶ್ರೀ ರಾಂಪುರ ರಾಜೇಶ್ ರವರ ನಿರ್ದೇಶನದಲ್ಲಿ ಇಂತಹ ಕಾರ್ಯಕ್ರಮ ಆಯೋಜಿಸಿದ್ದು ಹೆಮ್ಮೆಯ ವಿಷಯ.
ಇದರ ಹಿನ್ನೆಲೆ: ಅಂಬೇಡ್ಕರ್ ರವರ “ಧ್ಯಾನ” ‘ಗಾಯನ’ದಲ್ಲಿ ಅತ್ಯುತ್ತಮ ಹಾಗೂ ಅತ್ಯಂತ ತುಂಬಾ ಮನಸ್ಸಿನಿಂದಲ್ಲೇ ವಿಶೇಷವಾದ ಆಸಕ್ತಿಯನ್ನು ಅಂಬೇಡ್ಕರ್ ರವರು ಸಂಗೀತ ಪ್ರಿಯರು ಹಾಗೂ ಅಂಬೇಡ್ಕರ್ ರವರು ಸುಶ್ರಾವ್ಯವಾಗಿ ವಯಲಿನ್ ನುಡಿಸುತ್ತಿದ್ದರು. ಹಾಗೇಯೆ ಇವರಿಗೆ ಚಿತ್ರಕಲೆಯೂ ಸಹ ಒಲಿದಿತ್ತು ಎಂಬುದು ಗಮನಾರ್ಹ ಸಂಗತಿ. ಇಂತಹ ವಿಷಯವನ್ನು ಯಾರು ಸಹ ಬೆಳಕು ಚೆಲ್ಲುವ ಸಾಹಸಕ್ಕೆ ಕೈ ಹಾಕಿ ಇರಲಿಲ್ಲ. ಇದೊಂದು ಅನನ್ಯ ಸಂಸ್ಥೆ ವತಿಯಿಂದ ಇಂತಹ ಕಾರ್ಯಕ್ರಮ ನಡೆಸಿಕೊಟ್ಟಿದ್ದು ಐತಿಹಾಸಿಕ ಚರಿತ್ರೆಗೆ ಮುನ್ನುಡಿವಾಗಿದೆ.
ಅಂಬೇಡ್ಕರ್ ರವರಿಗೆ ತಮ್ಮ ಬಿಡುವಿನ ವೇಳೆಯಲ್ಲಿ ಅದ್ಭುತವಾದ ಒಬ್ಬ ಸಂಗೀತ ಪ್ರಿಯರಾಗಿದ್ದರು. ಇವರು ಸುಶ್ರಾವ್ಯವಾಗಿ ವಯಲಿನ್ ನುಡಿಸುತ್ತಿದ್ದರು ಹಾಗೂ ವಿಶೇಷವಾಗಿ ಚಿತ್ರಕಲೆ ಸಹ ಸರಳವಾಗಿ ಮಾಡುವ ಮೂಲಕ ತಮ್ಮ ಮನದಲ್ಲಿ ಆಸಕ್ತಿ ಹೊಂದಿದ್ದರು. ಇನ್ನು ಹಲವಾರು ವಿಷಯದಲ್ಲಿ ಅಂದರೆ ಅಂಬೇಡ್ಕರ್ ರವರಿಗೆ ವಿಶೇಷವಾದ ಇವುಗಳಲ್ಲಿ ಆಸಕ್ತಿ ಮತ್ತು ಅಭಿರುಚಿಯನ್ನು ಹೊಂದಿದ್ದರು ಎಂಬುದನ್ನು ಮನಗಂಡ ಅನನ್ಯ ಸಂಸ್ಥೆಯ ವತಿಯಿಂದ ಆಯೋಜಿಸಿದ ಅಂಬೇಡ್ಕರ್ ರವರ “ಧ್ಯಾನ” ‘ಗಾಯನ’ ಕಾರ್ಯಕ್ರಮವು ಅತ್ಯುತ್ತಮವಾಗಿ ಮೂಡಿಬಂದಿದೆ.
ಅಂಬೇಡ್ಕರ್ ರವರ “ಧ್ಯಾನ” ‘ಗಾಯನ’ ಕಾರ್ಯಕ್ರಮದಲ್ಲಿ ವಿಶೇಷವಾಗಿ ದಕ್ಷಿಣ ಭಾರತದ ಖ್ಯಾತ ಸಂಗೀತ ನಿರ್ದೇಶಕರು ಹಾಗೂ ಚಿತ್ರ ಸಾಹಿತ್ಯಗಳು, ಅಂಬೇಡ್ಕರ್ ವಾದಿಗಳು ಮತ್ತು ಚಿತ್ರರಂಗದ ಬಹುಮುಖ ಪ್ರತಿಭೆ, ಮಹಾಗುರುಗಳಾದ ಡಾ. ಹಂಸಲೇಖ ರವರು ಹೊಸದಾಗಿ ಹಾಡನ್ನು ಬರೆದದ್ದು ತುಂಬಾ ಅವಿಸ್ಮರಣೀಯ ಅಂತ ಹೇಳಬಹುದು. ಇವರು ಇದೇ ಕಾರ್ಯಕ್ರಮದಲ್ಲಿ ಭಾಗವಹಿಸಿ, ಪ್ರೊತ್ಸಾಹ ನೀಡಿದ್ದು, ಸರ್ವ ಸಮುದಾಯದಕ್ಕೆ ಹೊಸ ಶಕ್ತಿ ತುಂಬಿದ್ದು ಮೇರು ವ್ಯಕ್ತಿಯಾಗಿದ್ದಾರೆ.
ಅಂಬೇಡ್ಕರ್ ರವರ “ಧ್ಯಾನ” ‘ಗಾಯನ’ ಕಾರ್ಯಕ್ರಮದಲ್ಲಿ ಮುಖ್ಯವಾದ ಅಂಶವೆಂದರೆ ಇದರಲ್ಲಿ ಒಟ್ಟು ನಾಲ್ಕು ಭಗವಾನ್ ಬುದ್ಧ, ಅಂಬೇಡ್ಕರ್, ಬಸವೇಶ್ವರ ಮುಂತಾದರವರನ್ನು ವಿಷಯಗಳನ್ನು ಪರಿಗಣಿಸಿ ಅಂಬೇಡ್ಕರ್ ಧ್ಯಾನ ಹಾಡುಗಳ ರಚಿಸಿವುದರಲ್ಲಿ ಪ್ರಮುಖವಾಗಿ ರಾಜ್ಯದ ಹೆಸರಾಂತ ಸಾಹಿತಿ, ಪ್ರಗತಿಪರ ಚಿಂತಕರು ಹಾಗೂ ಮಾಜಿ ಅಧ್ಯಕ್ಷರಾದ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಬೆಂಗಳೂರಿನ ಪ್ರೊ.ಎಸ್.ಜಿ.ಸಿದ್ದರಾಮಯ್ಯನವರ
‘ಧೀ ಶಕ್ತಿಯೇ … ಜ್ಞಾನ ಪರ್ವತದ … ಧೀಮಂತ ಧೀಶಕ್ತಿಯೇ …
ಇಂತಹ ಸಾಲುಗಳನ್ನು, ಡಾ. ಕೈ.ವೈ.ನಾರಾಯಣಸ್ವಾಮಿರವರ ದೀಪಾ …. ಎಲ್ಲರೆದೆಯಲಿ … ಹಚ್ಚಿದ ದೀಪಾ .. ಭೂಪಾ … ಭೂಪಾ … ಭೀಮಾ ಭೂಪಾ .. ಬಾಬಾ .. ಸಾಹೇಬ್.. ಜೀವಸ್ವರವೇ … ಬಾಬಾ.. ಹಾಗೂ ರವಿ ಮರಿಯಪ್ಪರವರ ಹತ್ತು ಸಾವಿರ ವಯಲಿನನ್ನು … ವೀಣೆಗಳು ನೂರೆಂಟು … ಕೋಟಿ ಕೋಟಿ ಎದೆ ಸದ್ದಿನ ಡೊಳ್ಳು … ಸಂಯೋಜಿಸಿದರೇ .. ಸಂವಿಧಾನಾ … ಮತ್ತು ಚಿತ್ರ ಸಾಹಿತಿ, ಹೆಸರಾಂತ ಸಂಗೀತ ನಿರ್ದೇಶಕರು ಡಾ. ಹಂಸಲೇಖ ರವರು ನಿನ್ನ ಮೌನಾ … ದೀನ ಗಾನಾ… ನಿನ್ನ ಧ್ಯಾನಾ .. ಸಂವಿಧಾನಾ … ಈ ನಾಲ್ಕು ಅಂಬೇಡ್ಕರ್ ಧ್ಯಾನ ರಚನೆಗೆ ಇವರುಗಳ ಬರೆದಿರುವ ಅದ್ಭುತವಾದ ಅಂಬೇಡ್ಕರ್ ರವರ ಧ್ಯಾನ ಹಾಡುಗಳನ್ನು ನಮ್ಮ ಹಿಂದುಸ್ತಾನಿ ಸಂಗೀತ ಹಾಡುಗಳ ಮೂಲಕ ಕನ್ವರ್ಟ್ ಮಾಡುವ ಮೂಲಕ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಿತು.
ಹಾಗೆಯೇ ಅಂಬೇಡ್ಕರ್ ರವರ “ಧ್ಯಾನ” ‘ಗಾಯನ’ ಕಾರ್ಯಕ್ರಮವು ಬಹಳಷ್ಟು ಯಶಸ್ವಿಯಾಗಬೇಕಾದರೆ ಈ ಮೊದಲು ಪುಟ್ಟರಾಜ ಗವಾಯಿಗಳ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ಶ್ರೀ ಡಿ. ಕುಮಾರ್ ದಾಸ್ ಅವರ ವಿದ್ವತ್ ಶರೀರದಲ್ಲಿ ‘ಧ್ಯಾನ ಗಾಯನ’ ಹಾಗೂ ಇವರ ತಂಡದ ವತಿಯಿಂದ ನಡೆಸಿಕೊಟ್ಟ ಅದ್ಭತವಾದ ಅಂಬೇಡ್ಕರ್ ರವರ ಧ್ಯಾನವು ಹಿಂದುಸ್ತಾನಿ ಸಂಗೀತದ ಕನ್ವರ್ಟ್ ಮಾಡುವ ಮುಖಾಂತರ ಈ ಹಾಡುಗಳನ್ನು ಬಹಳ ಸೊಗಸಾಗಿ ಮೂಡಿಬಂದಿದ್ದು ಹೊಸ ದಾಖಲೆಗೆ ಸೇರ್ಪಡೆಯಾಗಿದೆ.
ಇನ್ನು ಮುಂಬರುವ ದಿನಗಳಲ್ಲಿ ಅದಷ್ಟು ಹಲವಾರು ವಿನೂತನವಾದ ಭಗವಾನ್ ಬುದ್ಧರ, ಬಸವೇಶ್ವರರ ಹಾಗೂ ವಿಶ್ವದ ವೀರ ವಿದ್ಯಾರ್ಥಿಯಾದ ಮೇರು ರಾಷ್ಟ್ರದ
ನಾಯಕರಾದ ಬಾಬಾಸಾಹೇಬ್ ಡಾ. ಬಿ.ಆರ್.ಅಂಬೇಡ್ಕರ್ ರವರ ಹಲವಾರು ಹಾಡುಗಳನ್ನು
ಅನನ್ಯ ಮಾಧ್ಯಮ ಮತ್ತು ಬೆಳ್ಳಿತೆರೆ ಸಂಸ್ಥೆಯ ವತಿಯಿಂದ ಆಯೋಜಿಸಿದರೆ ಇನ್ನುಷ್ಟು ಭಾರತದ ಇತಿಹಾಸದ ಪುಟಗಳಲ್ಲಿ ಮರೆತು ಹೋಗಿರುವ ಹಲವು ಬಗ್ಗೆ ದಾಖಲೆ ಇಲ್ಲದ ನೈಜ ಸಂಗತಿಗಳನ್ನು ಪುನಃ ಹೊಸ ದಾಖಲೆಗೆ ಉಪಯುಕ್ತವಾದ ವಿಶಿಷ್ಟವಾದ ಮೇರು ನಾಯಕನ
ಅಂಬೇಡ್ಕರ್ ರವರ ವಿಚಾರ ಧಾರೆಗಳು ತಾವು ಅನುಭವಿಸಿದ ನೋವು, ನಲಿವು, ಭಾರತದ ರಾಜ್ಯಾಂಗದ ಶಿಲ್ಪಿಯನ್ನು ಮುಂಬರುವ ದಿನಗಳಲ್ಲಿ ಹೊಸ ಪೀಳಿಗೆಯ ಪರಿಚಯಿಸುವ ಕೀರ್ತಿದಾಯಿಕವಾಗಲಿ ಮತ್ತು ಅದಷ್ಟು ಮುಂಬರುವ ದಿನಗಳಲ್ಲಿ ಅಂಬೇಡ್ಕರ್ ರವರ ಆಸಕ್ತಿದಾಯಕ ವಿಚಾರಗಳು ಹಾಗೂ ಸಂಗೀತದ ಬಗ್ಗೆ ಹಲವಾರು ಮಾಹಿತಿಗಳು ಸಮಸಮಸಮಾಜಕ್ಕೆ ತಲುಪುವ ವ್ಯವಸ್ಥೆಗೆ ಸಾಕ್ಷಿಯಾಗಲಿ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಬಹಿರಂಗ
ರಷ್ಯಾದಲ್ಲಿ ಓಂ – ಭರತಾಸ್- ರಾಮ – ರಾವಣ ಲಂಕೇಶ – ಮಾರೀಚ – ಸೀತ ನದಿಗಳು..!

- ಲಕ್ಷ್ಮೀಪತಿ ಕೋಲಾರ, ಸಂಶೋಧಕರು, ಸಂಸ್ಕೃತಿ ಚಿಂತಕರು, ಬೆಂಗಳೂರು
ಸ್ಲಾವ್ ಸಮುದಾಯದ ಲಿತುವೇನಿಯ, ಲಾತ್ವಿಯ, ಬೆಲಾರಸ್,ಉಕ್ರೇನ್ ಮತ್ತು ರಷಿಯಾದಂತಹ ದೇಶಗಳ ನದಿ,ನಗರಗಳು ಸಂಸ್ಕೃತ ಮೂಲದ ಹೆಸರುಗಳನ್ನೆ ಇಂದಿಗು ಉಳಿಸಿಕೊಂಡಿರುವುದು ಆ ಭಾಷೆ ಮತ್ತು ಸಂಬಂಧಿತ ಸಂಸ್ಕೃತಿಯೊಂದಿಗೆ ಅವು ಹಿಂದೊಮ್ಮೆ ಹೊಂದಿದ್ದ ಬಲವಾದ ನಂಟಿಗೆ ಸಾಕ್ಷಿಯಾಗಬಲ್ಲವು.
ಇದರೊಂದಿಗೆ ಉತ್ತರ ಭಾರತದ ಆರ್ಯ ವೈದಿಕರ ಭಾಷೆ ಸಂಸ್ಕೃತಿಯೊಂದಿಗೆ ಸ್ಲಾವ್ ಸಮುದಾಯಕ್ಕೆ ಎಷ್ಟು ನಿಕಟ ಸಂಬಂಧವಿತ್ತೆಂಬುದನ್ನು ಮತ್ತು ನಾಲ್ಕೈದು ಸಾವಿರ ವರ್ಷಗಳ ಹಿಂದೆ ಈ ಎಲ್ಲ ಆರ್ಯ ಸಮುದಾಯಗಳು ಒಟ್ಟಿಗೆ ಒಂದೆಡೆಯೇ ಕಳ್ಳುಬಳ್ಳಿಗಳಾಗಿ ಜೀವಿಸಿದ್ದರೆಂಬುದನ್ನ ಈ ಹಿನ್ನೆಲೆಯಲ್ಲಿ ನಾವು ಗ್ರಹಿಸಬಹುದಾಗಿದೆ.
ಅದರಲ್ಲು ವಿಶೇಷವಾಗಿ ಲಿತುವೇನಿಯ ಮತ್ತು ರಷಿಯಾದ ನದಿಗಳ ಹೆಸರುಗಳು ಎಷ್ಟು ಸಂಸ್ಕೃತಮಯವು (ಇಂಡೋ – ಯುರೋಪಿಯನ್ ಭಾಷಾಮೂಲದ) ಮತ್ತು ವೈದಿಕರ ಪುರಾಣ ಮೂಲದವು ಆಗಿವೆ ಎಂದರೆ, ನಂಬಲಿಕ್ಕು ಅಸಾಧ್ಯ ಎಂಬಂತಿವೆ. ಇದರರ್ಥ ಸ್ಲಾವ್ ಜನರು ವೈದಿಕರ ಪುರಾಣಗಳಿಂದ ಪ್ರೇರಿತಗೊಂಡಿದ್ದಾರೆ ಎಂಬುದಲ್ಲ.
ಬದಲಿಗೆ ವೈದಿಕರ ಇಂದಿನ ಪುರಾಣ – ಸಂಸ್ಕೃತಿ – ಭಾಷೆಗಳು ವೈದಿಕರಿಗೆ ಎಷ್ಟು ಸಂಬಂಧಿಸಿದ್ದೋ ಅದಕ್ಕು ಹೆಚ್ಚಿನದಾಗಿ ಸ್ಲಾವ್ ಸಮುದಾಯಕ್ಕೂ ಸಂಬಂಧಿಸಿದ್ದಾಗಿದ್ದವು. ಹಾಗೆ ನೋಡಿದರೆ ಬ್ರಹ್ಮ – ವೇದ ಮೂಲವು ಕೂಡ ಸ್ಲಾವ್ ಸಮುದಾಯದ ಉತ್ತರ ಧ್ರುವ ಪ್ರದೇಶಕ್ಕೆ ಹೋಗಿ ನಿಲ್ಲುತ್ತದೆ ಎಂಬುದು ಸೋಜಿಗವಾದರು ನಿರ್ವಿವಾದವಾಗಿ ಚಾರಿತ್ರಿಕ ಸತ್ಯವಾಗಿದೆ. 12 – 13 ನೇ ಶತಮಾನಗಳಲ್ಲಿ ಸ್ಲಾವ್ ಜನರು ಕ್ರೈಸ್ತರಾಗಿ ಪರಿವರ್ತಿತರಾಗುವವರೆಗು ಅವರು ಶತಾಂಶ ಮತ್ತು ಥೇಟ್ ಶ್ರೇಷ್ಟ ಆರ್ಯ ವೈದಿಕರೆ ಆಗಿದ್ದರು.
ರಷ್ಯ ಮತ್ತು ಲಿತುವೇನಿಯಾಗಳಲ್ಲಿ ಭರತಾಸ್, ಓಂ, ರಾಮ, ಸೀತ, ಲಂಕೇಶ, ರಾವಣ, ಮಾರೀಚ, ನೆಮುನ (ಯಮುನ), ಕಾಮ, ಯಂತ್ರ, ಶ್ವೇತೆ, ದ್ರವ, ಮೋಕ್ಷ, ಋಗ್ವೇದದ ದಾನವ ಮಾತೆ ದನು ನೆನಪಿನ ದನುಬೆ ಮುಂತಾದ ನದಿಗಳು ಮತ್ತು ನಾರದ (ಈಗ ನರೋದ್ನಯ ಎಂದಿದ್ದರು ಸ್ಥಳೀಯರು ನಾರದ ಬೆಟ್ಟ ಎಂದೇ ಕರೆಯುತ್ತಾರೆ) ಹೆಸರಿನ ಬೆಟ್ಟವು ಇವೆ ಎಂದರೆ ಯಾರೂ ಅಚ್ಚರಿಪಡುವಂತದ್ದೆ.
ಯಾರಿಗಾದರು ಈ ಸಂಗತಿಗಳಲ್ಲಿ ಅನುಮಾನ ಹುಟ್ಟುವುದು ಸಹಜವೆ. ಯಾಕೆಂದರೆ ಸ್ಲಾವ್ – ವೈದಿಕ ಆರ್ಯರ ಮೂಲ ಪ್ರದೇಶವೆ ಉತ್ತರ ದ್ರುವ ಪ್ರದೇಶವಾಗಿತ್ತು ಎಂಬ ಚರಿತ್ರೆಯನ್ನೇ ನಮ್ಮಿಂದ ಮರೆಮಾಚಲಾಗಿತ್ತು ಮತ್ತು ಅದು ಬಹುದೊಡ್ಡ ಸಾಂಸ್ಕೃತಿಕ ರಾಜಕಾರಣವೂ ಆಗಿತ್ತು. ಆದರೆ ತಿಲಕರು ತಮ್ಮ “Arctic Home In the Vedas” ಎಂಬ ಪುಸ್ತಕದಲ್ಲಿ ಉತ್ತರ ಭಾರತದ ವೈದಿಕ ಆರ್ಯರ ತವರು ನೆಲ ಉತ್ತರ ದ್ರುವ ಪ್ರದೇಶವೆ, ಅಂದರೆ ಇಂದಿನ ಲಿತುವೇನಿಯ, ಲಾತ್ವಿಯ, ಬೆಲಾರಸ್ ಪ್ರದೇಶಗಳೇ ಆಗಿದ್ದವು ಎಂದು ಸಮರ್ಥ ಸಾಕ್ಷಾಧಾರಗಳೊಂದಿಗೆ ನಿರೂಪಿಸಿದ್ದಾರೆ.
ರಷ್ಯಾದಲ್ಲಿ ಸಂಸ್ಕೃತ ಭಾಷಾಮೂಲದ ನೂರಾರು ನದಿಗಳಿವೆ. ಭಾರತದಲ್ಲಿ ಕೆಲವು ನದಿಗಳನ್ನ ಹೊರತುಪಡಿಸಿದರೆ ಆ ಪ್ರಮಾಣದ ವೈದಿಕ ಪುರಾಣ ಮೂಲದ ನದಿ ಹೆಸರುಗಳು ಈ ನೆಲದಲ್ಲಿ ಇಲ್ಲವೆಂಬುದು ಪ್ರಾಚೀನ ಕಾಲದಿಂದಲು ಆರ್ಯ ವೈದಿಕರು ಇಲ್ಲಿರಲಿಲ್ಲವೆಂಬುದನ್ನೇ ಸೂಚಿಸುತ್ತದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ4 days ago
ಚನ್ನಗಿರಿ | ಅತಿಥಿ ಉಪನ್ಯಾಸಕರಿಂದ ಅನಿರ್ದಿಷ್ಟಾವಧಿ ಮುಷ್ಕರ ; ತಹಶೀಲ್ದಾರರಿಗೆ ಮನವಿ
-
ದಿನದ ಸುದ್ದಿ5 days ago
ದೇಹದಾಡ್ಯ ಸ್ಪರ್ಧೆ | ಶ್ರೀ ಶಿವಲಿಂಗೇಶ್ವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿ ಪ್ರೇಮ್ ಕುಮಾರ್ ಗೆ ‘ಮಿಸ್ಟರ್ ದಾವಣಗೆರೆ’ ಪ್ರಶಸ್ತಿ
-
ದಿನದ ಸುದ್ದಿ1 day ago
ಭಾರತೀಯರೆಲ್ಲರ ಪವಿತ್ರಗ್ರಂಥ ಭಾರತದ ಸಂವಿಧಾನ : ಡಾ.ಕೆ.ಎ.ಓಬಳೇಶ್
-
ದಿನದ ಸುದ್ದಿ4 days ago
ಸರ್ಕಾರಕ್ಕೆ ಸೆಡ್ಡು ಹೊಡೆದ ದಾವಣಗೆರೆ ರೈತರು
-
ದಿನದ ಸುದ್ದಿ17 hours ago
ಮಹಿಳೆಗೆ ಮೀಸಲಾತಿ ಬೇಡ, ಸಮಾನ ಪ್ರಾತಿನಿಧ್ಯ ಕೊಡಿ : ಡಾ.ಜ್ಯೋತಿ ಟಿ.ಬಿ