ರಾಜಕೀಯ
ಸಮಾಜಶಕ್ತಿಗೆ ಭ್ರಮನಿರಸನ
ತುರ್ತು ಪರಿಸ್ಥಿತಿಯ ನಂತರದ ಚುನಾವಣೆಯಷ್ಟೇ ಮಹತ್ವದ ಚುನಾವಣೆ ಇದು ಕೆಲವರು ವಿಶ್ಲೇಷಿಸಿದ್ದರು. 2014 ರಿಂದ ಇಂದಿನವರೆಗೂ ದೇಶದಲ್ಲಿ ನಡೆದ ವಿದ್ಯಮಾನಗಳು ಮತ್ತು ಅವು ಎತ್ತಿದ ಪ್ರಶ್ನೆಗಳನ್ನು ತಿರುವಿ ಹಾಕಿದಾಗ ಅದು ನಿಜ ಎಂದೇ ಅನಿಸಿತ್ತು. ಹಾಗಿದ್ದ ಮೇಲೆ ಎಲ್ಲ ಪಕ್ಷಗಳೂ ಆ ಮಟ್ಟದ ಒಗ್ಗಟ್ಟಿನ ಹೋರಾಟಕ್ಕೆ ತಯಾರಾಗಿರಬೇಕಿತ್ತು.
ದೇಶದ ಬಿಜೆಪಿಯೇತರ ಎಲ್ಲ ನಾಯಕರುಗಳ ಹುಮ್ಮಸ್ಸು ಮೇಳೈಸಿ ದೇಶದ ಸಂಘಟಿತ ಪರ್ಯಾಯ ಶಕ್ತಿಗೆ ನಾಂದಿ ಆಯಿತು ಎನ್ನುವಂತೆ ಕುಮಾರಸ್ವಾಮಿಯವರ ಅಧಿಕಾರ ಸ್ವೀಕಾರ ವೇದಿಕೆಯಲ್ಲಿ ಸಂಭ್ರಮಿಸಲಾಯಿತು. ಆದರೆ ಆನಂತರ ಆದದ್ದು ನಾಯಿ ಬಾಲದ ಕಥೆಯೇ. ಬಿಜೆಪಿಯ ಬೆಂಬಲಿಗರು ಈಗ ಮೂರು ವರ್ಷಗಳಿಂದ ಒಂದು ಪ್ರಶ್ನೆಯನ್ನು ಕೇಳುತ್ತಲೇ ಇದ್ದರು: ‘ಮೋದಿಗೆ ಪರ್ಯಾಯ ಯಾರು? ಯಾರೂ ಇಲ್ಲವಲ್ಲಾ!’ ಎಂದು.
ಅದನ್ನು ಇಂದು ಸ್ಪಷ್ಟ ಗುರಿಯೇ ಇಲ್ಲದ, ಇದ್ದರೂ ಅದಕ್ಕೊಂದು ಅಜೆಂಡಾನೇ ಇಲ್ಲದ ಜಢತ್ವಕ್ಕೆ ಶರಣಗಿದ್ದ ಈ ಪಕ್ಷಗಳು ಒಪ್ಪಿಕೊಂಡಾಯಿತು. ಅದರ ನೈತಿಕ ಹೊಣೆಯನ್ನು ಈ ಪಕ್ಷಗಳು ಹೊರುವುದಿರಲಿ, ಅವು ದೇಶವನ್ನು ಎತ್ತ ತಳ್ಳಿದವು ಎನ್ನುವುದು ಅಕ್ಷಮ್ಯ. ಹಾಗೊಮ್ಮೆ ಬಿಜೆಪಿಯೇತರ ಸರ್ಕಾರ ರಚನೆಗೆ ಅವಕಾಶವಾಗುವಂತೆ ಫಲಿತಾಂಶ ಬಂದಿದ್ದರೂ ಅಂತಹ ಸರ್ಕಾರವನ್ನು ಈ ಪಕ್ಷಗಳು ಎಷ್ಟರ ಮಟ್ಟಿಗೆ ಸಧೃಢವಾಗಿ ನಡೆಸುತ್ತಿದ್ದವು ಎನ್ನುವ ಪ್ರಶ್ನೆ ದೊಡ್ಡದಾಗಿಯೇ ಇರುತ್ತಿತ್ತು. ಅದು ಇನ್ನೂ ಭಯಾನಕ. ಸಂಘ ಪರಿವಾರದ ಗುರಿ ಮಾತ್ರ ಸ್ವಾತಂತ್ರಪೂರ್ವದಿಂದಲೂ ಸ್ಪಷ್ಠವಾಗಿಯೇ ಇದೆ. ಹಂತಹಂತವಾಗಿ ಆ ಕಡೆಗೆ ಅದು ಸಾಗುತ್ತಲೇ ಇದೆ. ಇದು ಈ ದೇಶ-ಕಾಲದ ನಿಜ ಸ್ಥಿತಿ.
ಕರ್ನಾಟಕದಲ್ಲಿ ಮೈತ್ರಿ ಸರ್ಕಾರದ ಕಪಾಳಕ್ಕೆ ಹೊಡೆದಂತಾ ಈ ಫಲಿತಾಂಶಕ್ಕೆ ಇಲ್ಲಿ ನಡೆದ ಅಪ್ರಬುದ್ಧ ಅಥವಾ ಸ್ವಾರ್ಥ ತುಂಬಿದ ನಡೆಗಳೇ ಕಾರಣ. ಕರ್ನಾಟಕದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಸರ್ಕಾರ ರಚನೆ ಮಾಡಿಕೊಂಡಿದ್ದೇ ಈ ಲೋಕಸಭಾ ಚುನಾವಣೆಯನ್ನು ದೃಷ್ಟಿಯಲ್ಲಿ ಇಟ್ಟುಕೊಂಡು. ಯಾವುದೇ ಕಾರಣಕ್ಕೂ ಕೇಂದ್ರದಲ್ಲಿ ಮತ್ತೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಬಾರದು, ಬಿಜೆಪಿಯ ಅತ್ಯಂತ ಕಡಿಮೆ ಲೋಕಸಭಾ ಸದಸ್ಯರನ್ನು ಕರ್ನಾಟಕದಿಂದ ದೆಹಲಿಗೆ ಕಳಿಸುವಂತಾಗಬೇಕು ಎನ್ನುವ ದೃಷ್ಟಿ.
ಅದಕ್ಕಾಗಿ ಕಾಂಗ್ರೆಸ್ ಮುಖ್ಯಮಂತ್ರಿ ಸ್ಥಾನವನ್ನೂ ಜೆಡಿಎಸ್ಸಿಗೆ ಕೊಟ್ಟುಬಿಟ್ಟಿತ್ತು. ರಾಷ್ಟ್ರಮಟ್ಟದಲ್ಲಿ ಬಿಜೆಪಿಯೇತರ ಪಕ್ಷಗಳು ಒಂದೇ ವೇದಿಕೆಯಲ್ಲಿ ಹೇಗೆ ಬರಲು ಸಾಧ್ಯವಾಗಲಿಲ್ಲವೋ ಹಾಗೆಯೇ ಕರ್ನಾಟಕದಲ್ಲೂ ಕೂಡ ಸೀಟು ಹಂಚಿಕೆ ವಿಚಾರದಲ್ಲಿ ಮಿತ್ರಪಕ್ಷಗಳು ಒಮ್ಮತಕ್ಕೆ ಬರಲು ಸಾಧ್ಯವೇ ಆಗಲಿಲ್ಲ. ಈ ರಾಜಕೀಯ ಆಟಗಳಿಂದ ಪ್ರಜಾಪ್ರಭುತ್ವಕ್ಕಾದ ಧಕ್ಕೆ ಅಷ್ಟಿಷ್ಟಲ್ಲ.
ದೇವೇಗೌಡರ ಎದೆಯಲ್ಲಿ ಬಿಜೆಪಿಯೇತರ ಸರ್ಕಾರದ ಉದ್ದೇಶ ಇದ್ದರೂ ಅವರು ತಮ್ಮ ಕುಟುಂಬಕ್ಕೆ ತಮ್ಮನ್ನು ಕಟ್ಟಿಹಾಕಿಕೊಳ್ಳುತ್ತಾರೆ. ಆ ಕುಟುಂಬದ ಮೂರನೇ ತಲೆಮಾರಿನ ನಿನ್ನೆಯ ಹುಡುಗರು ಇಂದು ಸ್ವಂತ ಕಾಲ ಮೇಲೆ ನಿಲ್ಲಬೇಕಾದ ಅನಿವಾರ್ಯಕ್ಕೆ ಸಿಕ್ಕಿರುವ ಯುವಕರಾಗಿಬಿಟ್ಟಿದ್ದಾರೆ. ಆ ಒಬ್ಬೊಬ್ಬರಿಗೂ ಒಂದೊಂದು ನೆಲೆ ದೊರಕಿಸುವುದು ಆ ಕುಟುಂಬದ ಜವಾಬ್ದಾರಿ. ಆ ಕುಟುಂಬಕ್ಕೆ ಗೊತ್ತಿರುವುದು, ಆಸರೆಯಾಗಿರುವುದು ರಾಜಕೀಯವೇ. ಹಾಗಾಗಿ ತನ್ನ ಹಾಸನ ಕ್ಷೇತ್ರವನ್ನೇ ಒಬ್ಬ ಮೊಮ್ಮಗನಿಗೆ ದಾನ ಮಾಡಿದ ದೇವೇಗೌಡರು ತುಮಕೂರಿಗೆ ನಡೆದರು. ಅಥವಾ ಮೊಮ್ಮಗನೇ ಕಿತ್ತುಕೊಂಡು ಕಳಿಸಿದ್ದ!
ಮತ್ತೊಬ್ಬ ಮೊಮ್ಮಗನಿಗೆ ತಾವು ಕೆಲವು ವರ್ಷಗಳಿಂದ ಅನುಕೂಲಕರ ವಾತಾವರಣ ನಿರ್ಮಿಸಿಕೊಂಡ ಹಾಗೂ ಸಧ್ಯಕ್ಕೆ ಪ್ರಬಲ ಸ್ಪರ್ಧೆಯೊಡ್ಡಬಹುದಾದ ಯಾವ ಆಕಾಂಕ್ಷಿ ಇಲ್ಲವೆಂದೇ ತಿಳಿದಿದ್ದ ಮಂಡ್ಯ ಕ್ಷೇತ್ರವನ್ನು ಆಯ್ದುಕೊಂಡರು. ಯಾವ ಮೂಲ ಉದ್ದೇಶಕ್ಕಾಗಿ ಮೈತ್ರಿ ರಾಜಕೀಯಕ್ಕೆ ಅವಕಾಶ ಮಾಡಿಕೊಂಡಿದ್ದರೋ ಆ ಉದ್ದೇಶವನ್ನು ಪಕ್ಕಕ್ಕೆ ಸರಿಸಲಾಯಿತು. ಅಥವಾ, ನಿಜಕ್ಕೂ ಮೂಲ ಉದ್ದೇಶ ಇದು ಅಲ್ಲವೇ ಅಲ್ಲ, ಅದು ಚುನಾವಣೆಯಿಂದ ಚುನಾವಣೆಗೆ ಜಹಗೀರು ವಿಸ್ತರಣೆಯೇ. ಮುಂದೊಂದು ದಿನ ಭಾರತದಲ್ಲಿ ಪ್ರಜಾಪ್ರಭುತ್ವ ಕಳಚಿಹೋಗಿ ಮತ್ತೆ ರಾಜಾಡಳಿತ ಬರುತ್ತದೇನೋ, ಹಾಗಾಗುವುದಾದರೆ ತಮ್ಮ ಕುಟುಂಬವೇ ಅರಸಾಗಲಿ ಎನ್ನುವ ಮುಂಗಾಣ್ಕೆಯೋ ಎನ್ನುವ ಹಾಗೆ! ಪರಿಣಾಮ ಎದುರಿಗೇ ಇದೆ.
ದೇವೇಗೌಡರ ಉದ್ದೇಶ ನಿಜಕ್ಕೂ ಜಾತ್ಯತೀತ ಮನಸ್ಸಿನ, ಸಂವಿಧಾನಬದ್ಧ ಪರ್ಯಾಯ ಶಕ್ತಿಯನ್ನು ಹುಟ್ಟಿಹಾಕುವುದೇ ಆಗಿದ್ದಿದ್ದರೆ, ಅವರು ಈಗ ನಡೆದುಕೊಂಡಂತೆ ನಡೆದುಕೊಳ್ಳುತ್ತಿರಲಿಲ್ಲ. ಅವರು ತಮ್ಮ ಮೊಮ್ಮಕ್ಕಳನ್ನು ಮುಂದೆ ತರುವ ಕೆಲಸವನ್ನು ಮುಂದಕ್ಕೆ ಹಾಕುತ್ತಿದ್ದರು. ಅದರಿಂದ ಅವರ ಕುಟುಂಬಕ್ಕೆ ತುಂಬಾ ದೊಡ್ಡ ನಷ್ಟವೇನೂ ಆಗುತ್ತಿರಲಿಲ್ಲ. ಬದಲಿಗೆ ದಕ್ಷ ಅಭ್ಯರ್ಥಿಗಳನ್ನು ಹುಡುಕಿ ಅವಕಾಶ ಕೊಟ್ಟಿದ್ದರೆ ತಮ್ಮ ಪಕ್ಷದ ವರ್ಚಸ್ಸು ಇನ್ನಷ್ಟು ಬೆಳೆಯುತ್ತಿತ್ತು.
ಮೂರೂ ಕ್ಷೇತ್ರಗಳಲ್ಲಿ ಮೈತ್ರಿಯ ಅಭ್ಯರ್ಥಿಗಳೇ ಗೆಲ್ಲುತ್ತಿದ್ದರೇನೋ! ಇದನ್ನು ಬರೆಯುತ್ತಿರುವಾಗ ನನ್ನ ಬಗ್ಗೆ ನನಗೇ ನಗು ಬರುತ್ತದೆ. ಯಾವ ಆದರ್ಶವನ್ನು ಯಾರಿಂದ ನಿರೀಕ್ಷಿಸುತ್ತಿದ್ದೇವೆ ಎಂದು! ಬಿಜೆಪಿಯ ಸುಳಿವೇ ಇರದ ಮಂಡ್ಯವನ್ನು ಆ ಪಕ್ಷಕ್ಕೆ ಧಾರೆಯೆರೆದು ಕೊಟ್ಟಾಯಿತು. ಈ ರೀತಿಯ ಅಪ್ರಬುದ್ಧ, ಸ್ವಾರ್ಥ ರಾಜಕಾರಣದ ಚಾರಿತ್ರಿಕ ಪ್ರಮಾದಗಳೇ ಕರ್ನಾಟಕದಲ್ಲಿ ಬಿಜೆಪಿ ತಳವೂರಲು ಕಾರಣವಾಯ್ತು.
ಇನ್ನು ಕಾಂಗ್ರೆಸ್ಸಿಗೆ ಮತ್ತೆ ಬಿಜೆಪಿಗೆ ಅಧಿಕಾರ ಕೊಡಬಾರದು ಎನ್ನುವ ಛಲ ಮಾತಿನಲ್ಲಿ ಮಾತ್ರ ಕಂಡಿತು. ಕೃತಿಯಲ್ಲಿ ನಿರ್ಧಿಷ್ಠ ಗುರಿಯೇ ಇರಲಿಲ್ಲ ಎಂಬಂತೆ ತೋರಿತು. ಇಡೀ ದೇಶದಲ್ಲಿದ್ದ ಕಾಂಗ್ರೆಸ್ಸಿನ ಬಲಹೀನ ಸ್ಥಿತಿ ಕರ್ನಾಟಕ ಕಾಂಗ್ರೆಸ್ಸಿನ ಮೇಲೆ ಅಡ್ಡ ಪರಿಣಾಮ ಬೀರಿಯೇ ಇದ್ದಿತು. ಹೇಗಾದರೂ ಮಾಡಿ ಹಿಂದಿನ ಬಾರಿ ಗೆದ್ದ ಕ್ಷೇತ್ರಗಳನ್ನು ಉಳಿಸಿಕೊಂಡು ಲೋಕಸಭಾ ಚುನಾವಣೆಯೆಂಬ ದೈಯ್ಯವನ್ನು ಸಾಗಹಾಕುವ ಒಳಮನಸ್ಸೇ ಇಲ್ಲಿನ ಕಾಂಗ್ರೆಸ್ ನಾಯಕರಲ್ಲಿ ಕಂಡಿತು.ಈ ಮೈತ್ರಿ ಪಕ್ಷಗಳು ಮಾಡಿಕೊಂಡ ಗೊಂದಲ, ಅರಾಜಕತೆ ಮತ್ತು ಸ್ವಾರ್ಥಚಿಂತನೆಗಳಿಂದ ದೊಡ್ಡ ಲಾಭವಾಗಿದ್ದು, ಆಗುತ್ತಿರುವುದು ಬಿಜೆಪಿಗೆ. ದೊಡ್ಡ ನೈತಿಕ ನಷ್ಟವಾಗಿದ್ದು, ಆಗುವುದು ಈ ಮೈತ್ರಿ ಪಕ್ಷಗಳಿಗೆ.
ಎಲ್ಲಕ್ಕಿಂತ ಹೆಚ್ಚಾಗಿ ಈ ಮೈತ್ರಿ ಪಕ್ಷಗಳಿಂದ ದೊಡ್ಡ ಭ್ರಮನಿರಸನವಾಗಿದ್ದು ಕರ್ನಾಟಕದ ಪ್ರಗತಿಪರ ಯುವಶಕ್ತಿಗೆ ಮತ್ತು ಸಮಾಜಶಕ್ತಿಗೆ. ಕೋಮುವಾದೀ, ವಿಭಜಕ ಶಕ್ತಿಗಳು ಕರ್ನಾಟಕದಲ್ಲಿ ಬೆಳೆಯುವುದನ್ನು, ನೆಲೆಕಾಣುವುದನ್ನು ತಡೆಯಲು ಎಲ್ಲ ಪ್ರಜಾಪ್ರಭುತ್ವವಾದೀ ದಾರಿಗಳನ್ನೂ ಬಳಸಿಕೊಂಡು ಸ್ವಯಂಪ್ರೇರಿತವಾಗಿ ಸತತ ಹೋರಾಡುತ್ತಿವೆ ಈ ಶಕ್ತಿಗಳು. ಬಹುಶಃ ಈ ಮಟ್ಟಕ್ಕೆ ಟೊಂಕ ಕಟ್ಟಿ ಜನಪರವಾಗಿ, ಸಂವಿಧಾನದ ಪರವಾಗಿ ನಿಂತು ಪ್ರತಿರೋಧ ಒಡ್ಡುತ್ತಿರುವ ಕೆಲವೇ ರಾಜ್ಯಗಳಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ.
ಆ ಕಾರಣದಿಂದಲೇ ಇಲ್ಲಿ ಇಂದಿನ ಮೈತ್ರಿ ಸರ್ಕಾರಕ್ಕೂ ಅವಕಾಶವಾಯಿತು. ಇದನ್ನು ಈ ಮೈತ್ರಿಪಕ್ಷಗಳು ಮರೆಯಬಾರದು. ಆದರೆ ಇಂದು ತಮ್ಮ ನಡೆಗಳಿಂದ ಅವು ಈ ಶಕ್ತಿಗಳ ವಿಶ್ವಾಸವನ್ನು ಸಾಕಷ್ಟು ಕಳಕೊಂಡಿವೆ. ಈಗ ಈ ಮೈತ್ರಿ ಸರ್ಕಾರ ನಿಜಕ್ಕೂ ಉಳಿದುಕೊಂಡರೆ ತಾನು ಕಳಕೊಂಡ ಈ ಶಕ್ತಿಗಳ ವಿಶ್ವಾಸವನ್ನು ಮತ್ತೆ ಗಳಿಸಿಕೊಳ್ಳುವ ಪ್ರಯತ್ನ ಪಡಬೇಕು. ಮತ್ತು ಆ ಪ್ರಯತ್ನ ಪ್ರಾಮಾಣಿಕವಾಗಿರಬೇಕು, ಅಷ್ಟೇ.
– ಕೇಸರಿ ಹರವೂ
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯೋಗ ಇಲಾಖೆಯ ಜಂಟಿ ನಿರ್ದೇಶಕ ರಮೇಶ್ ದೇಸಾಯಿ ವಿರುದ್ಧ ಲೋಕಾಗೆ ದೂರು
ಸುದ್ದಿದಿನ,ದಾವಣಗೆರೆ:ಪ್ರಾಚಾರ್ಯರು ಹಾಗೂ ಸಾರ್ವಜನಿಕ ಮಾಹಿತಿ ಅಧಿಕಾರಿಗಳು, ಶ್ರೀ ಅನ್ನದಾನೇಶ್ವರ ಅನುದಾನಿತ ಕೈಗಾರಿಕಾ ತರಬೇತಿ ಸಂಸ್ಥೆ, ಗಜೇಂದ್ರಗಡ ಇವರ ಸಹಿಯನ್ನು ತನಿಖೆಗೆ ಒಳಪಡಿಸುವಂತೆ ದೂರು ನೀಡಿ 3 ತಿಂಗಳು ಕಳೆಯುತ್ತ ಬಂದರೂ ಯಾವುದೇ ಕ್ರಮ ಕೈಗೊಳ್ಳದ ಹುಬ್ಬಳ್ಳಿಯ ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯೋಗ ಇಲಾಖೆಯ ಜಂಟಿ ನಿರ್ದೇಶಕರಾದ ರಮೇಶ್ ದೇಸಾಯಿ ಇವರ ವಿರುದ್ಧ ಕರ್ತವ್ಯ ಲೋಪದ ಅಡಿಯಲ್ಲಿ ವಕೀಲ ಡಾ.ಕೆ.ಎ.ಓಬಳಪ್ಪ ಲೋಕಾಯುಕ್ತದಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಶ್ರೀ ಅನ್ನದಾನೇಶ್ವರ ಅನುದಾನಿತ ಕೈಗಾರಿಕಾ ತರಬೇತಿ ಸಂಸ್ಥೆ, ಗಜೇಂದ್ರಗಡ ಇಲ್ಲಿ ಅಧ್ಯಯನ ಮಾಡಿದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಹಾಗೂ ಸರ್ಕಾರದಿಂದ ವಿತರಣೆಯಾದ ಟೂಲ್ಕಿಟ್ಗಳನ್ನು ನಿಯಮಾನುಸಾರ ವಿತರಣೆ ಮಾಡದೆ ವಂಚಿಸಿರುವ ಅಧಿಕೃತ ಮಾಹಿತಿಯ ಆಧಾರದ ಮೇಲೆ ಸಾರ್ವಜನಿಕ ಮಾಹಿತಿ ಅಧಿಕಾರಿಗಳು, ಶ್ರೀ ಅನ್ನದಾನೇಶ್ವರ ಅನುದಾನಿತ ಕೈಗಾರಿಕಾ ತರಬೇತಿ ಸಂಸ್ಥೆ, ಗಜೇಂದ್ರಗಡ ಇವರಿಗೆ ಮಾಹಿತಿಹಕ್ಕು ಅರ್ಜಿ ಸಲ್ಲಿಸಿ, ಮಾಹಿತಿ ಕೋರಲಾಗಿತ್ತು.
ಪ್ರಾಚಾರ್ಯರು, ಶ್ರೀ ಅನ್ನದಾನೇಶ್ವರ ಅನುದಾನಿತ ಕೈಗಾರಿಕಾ ತರಬೇತಿ ಸಂಸ್ಥೆ, ಗಜೇಂದ್ರಗಡ ಇವರು ನೀಡಿರುವ ಪತ್ರದಲ್ಲಿ ಫಾರ್ ಸಹಿಯೊಂದಿಗೆ ಹಿಂಬರಹ ನೀಡಲಾಗಿರುತ್ತದೆ. ಮಾಹಿತಿ ಅಧಿಕಾರಿ, ಶ್ರೀ ಅನ್ನದಾನೇಶ್ವರ ಅನುದಾನಿತ ಕೈಗಾರಿಕಾ ತರಬೇತಿ ಸಂಸ್ಥೆ, ಗಜೇಂದ್ರಗಡ ಇವರು ನೀಡಿರುವ ಪತ್ರದಲ್ಲಿರುವ ಫಾರ್ ಸಹಿಯೇ ಪ್ರಾಚಾರ್ಯರ ಹೆಸರಿನ ಪತ್ರದಲ್ಲಿ ನಮೂದಾಗಿರುತ್ತದೆ. ಸದರಿ ಸಂಸ್ಥೆಯ ಸಾರ್ವಜನಿಕ ಮಾಹಿತಿ ಅಧಿಕಾರಿ ಪ್ರಾಚಾರ್ಯರೇ ಆಗಿರುತ್ತಾರೆ.
ಹೀಗಿರುವಾಗ ಪಾಚಾರ್ಯರ ಮುದ್ರೆ ಇರುವಲ್ಲಿ ಫಾರ್ ಎಂಬುದಾಗಿ ನಮೂದಿಸಿ ಸಹಿ ಮಾಡಿ, ಮಾಹಿತಿ ಅಧಿಕಾರಿ ಎಂಬ ಮುದ್ರೆಗೆ ಫಾರ್ ಬಳಸದೆ ಸಹಿ ಮಾಡಿರುವುದು ಹಲವು ಅನುಮಾನಕ್ಕೆ ಕಾರಣವಾಗಿ ಈ ಬಗ್ಗೆ ತನಿಖೆ ನಡೆಸುವಂತೆ ಜಂಟಿ ನಿರ್ದೇಶಕರಿಗೆ ದೂರು ನೀಡಲಾಗಿತ್ತು.
ಆದರೆ ಜಂಟಿ ನಿರ್ದೇಶಕರು, ಕೌಶಲ್ಯ ಅಭಿವೃದ್ದಿ ಮತ್ತು ಉದ್ಯೋಗ ಇಲಾಖೆ, ಹುಬ್ಬಳ್ಳಿ ಇವರಿಗೆ ದೂರು ನೀಡಿ 3 ತಿಂಗಳು ಕಳೆಯುತ್ತ ಬಂದರೂ ದೂರು ಅರ್ಜಿಗೆ ಸಂಬಂಧಿಸಿದಂತೆ ಯಾವುದೇ ಕ್ರಮ ಕೈಗೊಂಡ ಮಾಹಿತಿಯನ್ನಾಗಲಿ ಅಥವಾ ಹಿಂಬರಹವನ್ನಾಗಲಿ ನೀಡದ ಕಾರಣ ಕರ್ತವ್ಯ ಲೋಪದ ಅಡಿಯಲ್ಲಿ ದೂರು ನೀಡಿರುವುದಾಗಿ ವಕೀಲ ಡಾ.ಕೆ.ಎ.ಓಬಳಪ್ಪ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಮೆಗಾ ಉದ್ಯೋಗ ಮೇಳ ವಿದ್ಯಾಭ್ಯಾಸದೊಂದಿಗೆ ಕೌಶಲ್ಯತೆಗೂ ಆದ್ಯತೆ ನೀಡಿ : ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್
ಸುದ್ದಿದಿನ,ದಾವಣಗೆರೆ:ಮಕ್ಕಳಿಗೆ ಸರಿಯಾದ ವಿದ್ಯಾಭ್ಯಾಸದ ಜೊತೆಗೆ ಕೌಶಲ್ಯ ಶಿಕ್ಷಣಕ ಕಲಿಸಬೇಕು. ಯುವ ಜನತೆ ವಿದ್ಯಾರ್ಥಿ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕೆಂದು ಎಂದು ಸಂಸದರಾದ ಡಾ.ಪ್ರಭಾ ಮಲ್ಲಿಕಾರ್ಜುನ್ ಹೇಳಿದರು.
ಸೋಮವಾರ(ಫೆ.23) ರಂದು ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ರಾಷ್ಟಿçÃಯ ಗ್ರಾಮೀಣ ಜೀವನೋಪಾಯ ಅಭಿಯಾನ, ಮಹಾನಗರಪಾಲಿಕೆ, ಜಿಲ್ಲಾ ಕೌಶಲ್ಯಾ ಮಿಷನ್, ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಇವರ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಬೃಹತ್ ಉದ್ಯೋಗ ಮೇಳವನ್ನು ಉದ್ಘಾಟಿಸಿ ಮಾತನಾಡಿದ ಅವರು
ಯುವನಿಧಿ ಯೋಜನೆಯಡಿ ರಾಜ್ಯದಲ್ಲಿ 3,62,000 ಅಭ್ಯರ್ಥಿಗಳು ನೋಂದಾಯಿಸಿಕೊAಡಿದ್ದು, ಜಿಲ್ಲೆಯಲ್ಲಿ 10,404 ಪದವಿಧರರು, 226 ಡಿಪ್ಲೋಮ ಆದವರು ಯುವನಿಧಿಯ ಸೌಲಭ್ಯ ಪಡೆಯುತ್ತಿದ್ದಾರೆ. ಇದರಲ್ಲಿ 2326 ಯುವಕ, ಯುವತಿಯರಿಗೆ ಬೇರೆ ಬೇರೆ ಉದ್ಯೋಗ ಮೇಳದಲ್ಲಿ ಉದ್ಯೋಗ ದೊರತಿದೆ. 2024-25ನೇ ಸಾಲಿನಲ್ಲಿ ಸುಮಾರು 33 ಕೋಟಿ, 22 ಲಕ್ಷ ಹಣ ಸಂದಾಯವಾಗಿದೆ. ರಾಜ್ಯದಲ್ಲಿ ಕೌಶಲ್ಯಾಭಿವೃದ್ದಿ ಯೋಜನೆಯಡಿ 17,715 ಅಭ್ಯರ್ಥಿಗಳಿಗೆ ತರಬೇತಿ ನೀಡಿದ್ದು, 2376 ಅಭ್ಯರ್ಥಿಗಳಿಗೆ ಉದ್ಯೋಗ ದೊರತಿದೆ.
ಜೊತೆಗೆ ಪದವಿ ಉತ್ತೀರ್ಣ ವಿದ್ಯಾರ್ಥಿಗಳು ಸಿವಿಲ್ ಸರ್ವಿಸಸ್ ಸ್ಪರ್ಧಾತ್ಮಕ ಪರೀಕ್ಷೆಗೆ ಉಚಿತ ತರಬೇತಿ ನೀಡಲಾಗುತ್ತಿದೆ. ಒಟ್ಟಾರೆ ಯುವಜನತೆಗೆ ಐಎಎಸ್, ಕೆಎಎಸ್ ಈ ರೀತಿಯ ಉದ್ಯೋಗಾವಕಾಶಗಳು ಸಿಗುವಂತಾಗಲು ಎಸ್ಎಸ್ ಕೇರ್ ಟ್ರಸ್ಟ್ ನಿಂದ ತರಬೇತಿ ನೀಡಲಾಗುತ್ತಿದೆ.
ಯುವಕರು ಸ್ಕೂಲ್, ಕಾಲೇಜ್ಗೆ ಬಂದಾಗ ಅಲ್ಲಿರುವಂತಹ ವಿದ್ಯಾರ್ಥಿಗಳು ಸ್ಪೋರ್ಟ್ಸ್, ಕಲ್ಚರಲ್ ಆಕ್ಟಿವಿಟೀಸ್, ಜೊತೆಗೆ ಆನ್ಲೈನ್ ಕೋರ್ಸ್ಗಳಲ್ಲಿ ಭಾಗವಹಿಸಬೇಕು.
ಯಾವುದೇ ಕಂಪನಿಯ ಲಿಖಿತ ಪರೀಕ್ಷೆಗೆ ಹಾಜರಾದಾಗ ನಿಮ್ಮಲ್ಲಿ ಏನು ಲೋಪದೋಷ ಹೇಳಿದ್ರು, ಯಾವ ರೀತಿ ನೀವು ಮತ್ತೊಮ್ಮೆ ನಿಮ್ಮ ತಪ್ಪನ್ನು ಸರಿ ಮಾಡಿಕೊಳ್ಳಬಹುದು ಎನ್ನುವುದನ್ನು ಅರಿತು ಸಂದರ್ಶನ ಎದುರಿಸಬೇಕೆಂದರು.
ಉದ್ಯೋಗ ಮೇಳದಲ್ಲಿ ನೀಡಿದ ಪ್ರಮಾಣ ಪತ್ರ ಪಡೆದು ಆಯ್ಕೆಯಾದ ಕಂಪನಿಗೆ ವರದಿ ಮಾಡಿಕೊಳ್ಳಲು ಸಲಹೆ ನೀಡಿದರು.
ಜಿಲ್ಲಾಧಿಕಾರಿ ಗಂಗಾಧರಸ್ವಾಮಿ.ಜಿ.ಎಂ ಮಾತನಾಡಿ ಎಲ್ಲರಿಗೂ ಸರ್ಕಾರವೇ ಉದ್ಯೋಗ ನೀಡಲು ಆಗುವುದಿಲ್ಲ. ಜನರು ಸ್ವಯಂ ಬದುಕು ಕಟ್ಟಿಕೊಂಡು, ಉದ್ಯೋಗದಾತರಾಗಿ ಹೊರಹೊಮ್ಮಬೇಕು. ಶಿಕ್ಷಣ, ಜ್ಞಾನದ ಜೊತೆ ಕೌಶಲ್ಯತೆ ರೂಢಿಸಿಕೊಳ್ಳಬೇಕು. ಒಂದು ದೇಶದ ಪ್ರಗತಿ ಹಾಗೂ ಅಭಿವದ್ಧಿಗೆ ಯುವ ಶಕ್ತಿ ಪ್ರಮುಖವಾಗಿದ್ದು, ಉದ್ಯೋಗ ಮೇಳದಿಂದ ಯುವಕರಿಗೆ ಹೆಚ್ಚು ಲಾಭ ದೊರೆಯಲಿದೆ. ಇದರಿಂದ ಬದುಕು ಕಟ್ಟಿಕೊಂಡು ಯಶಸ್ಸು ಗಳಿಸಲು ಶ್ರಮಿಸಬೇಕು ಎಂದರು. ಯುವಕರು ದೇಶದ ಸಂಪತ್ತು. ಪ್ರತಿಯೊಬ್ಬರೂ ಯಾವುದಾದರೂ ಒಂದು ವೃತ್ತಿ ಮಾಡಬೇಕು. ಇದರಿಂದ ನಿಮ್ಮ ಭವಿಷ್ಯ ಉತ್ತಮವಾಗುತ್ತದೆ ಎಂದರು.
ಉದ್ಯೋಗದಾತ ಕಂಪನಿಗಳು ಕಾಲೇಜು ಆವರಣದಲ್ಲೇ ಮೇಳ ಆಯೋಜಿಸಿ, ಅಭ್ಯರ್ಥಿಗಳ ಸಂದರ್ಶನ ನಡೆಸಿ, ಅರ್ಹರಿಗೆ ಉದ್ಯೋಗ ನೀಡುತ್ತಿವೆ. ಇದು ವಿದ್ಯಾವಂತ ಬಡ ನಿರುದ್ಯೋಗಿಗಳಿಗೆ ಅನುಕೂಲವಾಗಿದೆ ಎಂದರು.
ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಯುವಕರು ಕೇವಲ ಪದವಿ ಪಡೆದರೆ ಸಾಲದು, ತಾಂತ್ರಿಕ ಕೌಶಲ್ಯಗಳನ್ನು ರೂಢಿಸಿಕೊಳ್ಳಬೇಕು. ಬದ್ಧತೆ, ಸಮಯಪ್ರಜ್ಞೆ ಮತ್ತು ಆತ್ಮವಿಶ್ವಾಸವಿದ್ದರೆ ಯಾವುದೇ ಉದ್ಯೋಗವನ್ನು ಪಡೆಯಬಹುದು ಎಂದು ಯುವಜನತೆಗೆ ಕರೆ ನೀಡಿದರು. ತರಬೇತಿಯು ಹೆಚ್ಚು ಅಭ್ಯರ್ಥಿಗಳಿಗೆ ಮಾರ್ಗದರ್ಶನ ನೀಡುವಲ್ಲಿ ಯಶಸ್ವಿಯಾಗಿವೆ ಎಂದು ಅವರು ತಿಳಿಸಿದರು.
ಮೋನಿಕಾ, ಚಂದನಾ, ಸಿಂಚನಾ, ಸುಶೀಲಾ, ವಿನೂತ, ಸಾನಿಯಾ, ಶರತ್, ಅಶ್ವಿನಿ ಇನ್ನೂ ಕೆಲವು ಅಭ್ಯರ್ಥಿಗಳಿಗೆ ಸ್ಥಳದಲ್ಲೇ ಆದೇಶ ಪ್ರತಿಯನ್ನು ನೀಡಿದರು.
ಮೇಳದ ಪ್ರಮುಖ ಅಂಕಿ-ಅAಶಗಳು: ಭಾಗವಹಿಸಿದ ಕಂಪನಿಗಳು: 50ಕ್ಕೂ ಹೆಚ್ಚು ಪ್ರತಿಷ್ಠಿತ ಕಂಪನಿಗಳು, 61 ವಿಶೇಷ ಚೇತನ ಅಭ್ಯರ್ಥಿಗಳು ಒಳಗೊಂಡು 1944 ಉದ್ಯೋಗಾಕಾಂಕ್ಷಿಗಳು, ಆಯ್ಕೆ ಹಂತ ತಲುಪಿದವರು: 421 ಅಭ್ಯರ್ಥಿಗಳು, ಸ್ಥಳದಲ್ಲೇ ನೇಮಕಾತಿ: 421 ಅಭ್ಯರ್ಥಿಗಳಿಗೆ ಅಂತಿಮ ನೇಮಕಾತಿ ಆದೇಶ ಪಡೆದಿರುತ್ತಾರೆ. ಹಾಗೂ 555 ಅಭ್ಯರ್ಥಿಗಳು ಶಾರ್ಟ್ ಲಿಸ್ಟ್ ಆಗಿ 2ನೇ ಹಂತದ ಸಂದರ್ಶನ ಅರ್ಹತೆ ಪಡೆದಿರುತ್ತಾರೆ.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗಿತ್ತೆ ಮಾಧವ್ ವಿಠ್ಠಲ್ರಾವ್ ಪ್ರಾಸ್ತವಿಕ ನುಡಿಗಳಾನ್ನಾಡಿದರು.
ದೂಡಾ ಅಧ್ಯಕ್ಷರಾದ ದಿನೇಶ್.ಕೆ.ಶೆಟ್ಟಿ, ಜಿಲ್ಲಾ ಪಂಚಾಯತ್ ಯೋಜನಾ ನಿರ್ದೇಶಕರಾದ ಕೌಸರ್ ರೇಷ್ಮಾ, ಜಿಲ್ಲಾ ಗ್ಯಾರಂಟಿ ಯೋಜನೆಯ ಅಧ್ಯಕ್ಷರಾದ ಬಸವರಾಜ.ಟಿ.ಶಾಮನೂರು, ಉಪಾಧ್ಯಕ್ಷರಾದ ಮಂಜಣ್ಣ, ಪ್ರಾಂಶುಪಾಲರಾದ ಬಸವರಾಜ ತಹಶೀಲ್ದಾರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ರವಿಚಂದ್ರ, ಜಿ.ಪಂ ಮುಖ್ಯ ಯೋಜನಾಧಿಕಾರಿ ಮಲ್ಲನಾಯ್ಕ ಉಪಸ್ಥಿತರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ದಾವಣಗೆರೆ | ಕಂದಾಯ ಹಕ್ಕು ಪತ್ರ ಮತ್ತು ಪಾವತಿ ಆಂದೋಲನ
ಸುದ್ದಿದಿನ,ದಾವಣಗೆರೆ:ಜಿಲ್ಲೆಯಲ್ಲಿ 298 ಗ್ರಾಮಗಳನ್ನು ಕಂದಾಯ ಗ್ರಾಮಗಳನ್ನಾಗಿ ಘೋಷಿಸಲಾಗಿದ್ದು, ಈಗಾಗಲೇ 12,000ಕ್ಕೂ ಹೆಚ್ಚು ಹಕ್ಕು ಪತ್ರಗಳನ್ನು ವಿತರಿಸಲಾಗಿದ್ದು, ಬಾಕಿ ಇರುವವರು ತಹಶೀಲ್ದಾರ್ ಕಚೇರಿಗೆ ಅರ್ಜಿ ಸಲ್ಲಿಸಬಹುದು ಎಂದು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ತಿಳಿಸಿದರು.
ಗುರುವಾರ(ಫೆ.19) ರಂದು ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ಅಲ್ಲದೆ, ಮೃತಪಟ್ಟ ರೈತರ ಹೆಸರಿರುವ ಪಹಣಿಗಳನ್ನು ವಾರಸುದಾರರ ಹೆಸರಿಗೆ ಸುಮಾರು 24000 ಪೌತಿ ಖಾತೆಗಳನ್ನು ಬದಲಾಯಿಸಲಾಗಿದ್ದು, ಪೌತಿ ಆಂದೋಲನವನ್ನು ಸಹ ಹಮ್ಮಿಕೊಳ್ಳಲಾಗಿದೆ. ಸರ್ಕಾರಿ ಜಮೀನು ಮಂಜೂರು ಆಗಿ ಪೋಡಿ ಆಗದೇ ಪ್ರತ್ಯೇಕ ಪಹಣಿ ಬರದೇ ಇರುವುದರಿಂದ ಅಂತಹವುಗಳನ್ನು ಗೈರು ವಿಲೇ ಕಡತವನ್ನು ಮಾಡಲಾಗಿದ್ದು, ಸುಮಾರು 4000 ಜನರಿಗೆ ಈ ಗೈರು ವಿಲೇ ಕಡತವನ್ನು ನೀಡಲಾಗಿದೆ. ರಾಜ್ಯದಲ್ಲಿ ನಮ್ಮ ಜಿಲ್ಲೆಯೂ 3ನೇ ಸ್ಥಾನವನ್ನು ಹೊಂದಲಾಗಿದೆ ಎಂದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243


