ಬಹಿರಂಗ
ಪಾದಪೂಜೆ ಮತ್ತು ಪಾದೋದಕ ಸೇವನೆ ಎಂಬ ಅನಿಷ್ಟ ಪದ್ದತಿ
ನಾನು ಅಪಾರವಾಗಿ ಗೌರವಿಸುವ ಯುವ ಸಮಾಜವಾದಿ ಚಿಂತಕ, ಸಾಮಾಜಿಕ ಕಾರ್ಯಕರ್ತ, ಗೆಳೆಯ ಜಿ.ಟಿ.ನರೇಂದ್ರಕುಮಾರ್ ಅವರು, ನಿನ್ನೆ ದಿನ ಸಂಜೆ ನನಗೆ ಫೋನಾಯಿಸಿ, ಜಾರ್ಖಂಡ್ ನಲ್ಲಿ ನಡೆದ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಹಿರಿಯ ಬಿಜೆಪಿ ಕಾರ್ಯಕರ್ತರೋರ್ವರು ತಮ್ಮ ಪಕ್ಷದ ಗೊಡ್ಡ ಕ್ಷೇತ್ರದ ಸಂಸದ ನಿಶಿಕಾಂತ್ ದುಬೆ ಅವರ ಪಾದಗಳನ್ನು ತೊಳೆದು ಆ ನೀರನ್ನು ಸೇವಿಸಿದ ಅಸಹ್ಯಕರ ಘಟನೆ ಕುರಿತು ಮಾತನಾಡಿದರು.
ನಮ್ಮ ಮಾತು ಬಸವಮೂರ್ತಿ ಮಾದಾರ ಚೆನ್ನಯ್ಯನು ಪಾದ ಪೂಜೆ ಮಾಡಿಸಿಕೊಂಡ ಅವೈಜ್ಞಾನಿಕ ನಡೆಯ ಕಡೆಗೆ ಹಾಗೂ ನಾನು ಈ ಘಟನೆಯನ್ನು ಸಾಮಾಜಿಕ ಜಾಲತಾಣದಲ್ಲಿ ಖಂಡಿಸಿದ ಕಡೆಗೆ ಹೊರಳಿಕೊಂಡಿತು. ಬುದ್ಧಗುರು – ಬಸವಣ್ಣ- ಗಾಂಧಿ- ಅಂಬೇಡ್ಕರ್- ಲೋಹಿಯಾ- ಕುವೆಂಪು ಮುಂತಾದವರ ವೈಚಾರಿಕ ಚಿಂತನೆಗಳನ್ನು ಅಪಾರವಾಗಿ ಓದಿಕೊಂಡಿರುವ ಜಿ.ಟಿ.ನರೇಂದ್ರಕುಮಾರ್, ಭಾರತದ ಮೊದಲನೇ ರಾಷ್ಟ್ರಪತಿಯಾಗಿದ್ದ ಬಾಬು ರಾಜೇಂದ್ರ ಪ್ರಸಾದ್ ಅವರು ಕಾಶಿಯಲ್ಲಿ ಪಂಕ್ತಿಯಲ್ಲಿ ಕುಳಿತಿದ್ದ ನೂರಾರು ಬ್ರಾಹ್ಮಣರ ಪಾದಪೂಜೆ ಮಾಡಿದ ಕಾರಣ, ರಾಮಮನೋಹರ ಲೋಹಿಯಾ ಅವರ ಕಟು ಟೀಕೆಗೆ ಗುರಿಯಾಗಿ, ತಮ್ಮ ಜೀವಮಾನದಲ್ಲಿ ಮತ್ತಿನ್ನೆಂದೂ ಪಾದಪೂಜೆ ಮಾಡದಂತೆ ಸುದ್ದಿಮಾಧ್ಯಮಗಳಲ್ಲಿ ಸಾರ್ವಜನಿಕವಾಗಿ ಅಪಮಾನಕ್ಕೆ ಗುರಿಯಾದ ಚಾರಿತ್ರಿಕ ಸನ್ನಿವೇಷ ಕುರಿತು ನನ್ನ ಗಮನಕ್ಕೆ ತಂದರು.
ಬಸವಮೂರ್ತಿ ಮಾದಾರ ಚೆನ್ನಯ್ಯನು ಬ್ರಾಹ್ಮಣ ಮತ್ತು ಲಿಂಗಾಯತ ದಂಪತಿಗಳಿಂದ ಪಾದಪೂಜೆ ಮಾಡಿಸಿಕೊಂಡ ಘಟನೆಯನ್ನು ಕುರಿತು ನಾನು ಸಾಮಾಜಿಕ ಜಾಲತಾಣದಲ್ಲಿ ಬರೆದದ್ದನ್ನು ಓದಿದ್ದ ಕೆಲವು ಚೆನ್ನಯ್ಯಾಭಿಮಾನಿ ಗೆಳೆಯರು, ನಮ್ಮ ನರೇಂದ್ರಕುಮಾರ್ ಅವರಿಗೆ ಫೋನ್ ಮಾಡಿ, “ಮೊದಲೇ ನಾವು ಮಾದಿಗರು ಹಿಂದುಳಿದಿದ್ದೇವೆ… ವಡ್ಡಗೆರೆ ಅವರಿಗೆ ಹೀಗೆಲ್ಲಾ ಬರೆಯಬಾರದು ಅಂತಾ ತಾಕೀತುಮಾಡಿ ಹೇಳಿ ಸರ್…. ವಡ್ಡಗೆರೆ ನಿಮ್ಮ ಮಾತು ಕೇಳುತ್ತಾರೆ’” ಎಂದು ಕೇಳಿಕೊಂಡಿದ್ದಾರೆ.
ಅದೇ ಕೆಲವು ಗೆಳೆಯರು, “ಹೊಲೆಮಾದಿಗರ ಸ್ವಾಮೀಜಿಗಳ ವಿಷಯ ಬಂದಾಗ ಮಾತ್ರ ವೈಚಾರಿಕ ಪ್ರಜ್ಞೆ ಜಾಗೃತವಾಗಿ ಟೀಕಿಸುವ ಪ್ರಗತಿಪರ ಚಿಂತಕರು ಬ್ರಾಹ್ಮಣ, ಲಿಂಗಾಯತ, ವಕ್ಕಲಿಗ, ಕುರುಬ, ಕುಂಬಾರ, ತಿಗಳ, ಈಡಿಗ, ನಾಯಕ ಮುಂತಾದ ಜನಾಂಗಗಳ ಸ್ವಾಮೀಜಿಗಳ ಬಗ್ಗೆ ಟೀಕಿಸದೆ ಮೌನವಹಿಸುವಿರೇಕೆ?” ಎಂದು ನನ್ನನ್ನು ಪ್ರಶ್ನಿಸುತ್ತಿದ್ದಾರೆ.
ಇವರ ಪ್ರಶ್ನೆ ಹೇಗಿದೆ ಎಂದರೆ – “ಜಾತೀಯತೆ ಎಲ್ಲಿದೆ? ನಾವು ಮೇಲ್ಜಾತಿಯವರು ನಿಜ. ಆದರೆ ಜಾತೀಯತೆ ನಮ್ಮಲ್ಲಿಲ್ಲ. ನೀವು ಜಾತಿಭೇದಕ್ಕೆ ಮೇಲ್ಜಾತಿಗಳನ್ನು ಮಾತ್ರ ಗುರಿಮಾಡಿ ಮಾತಾಡುತ್ತೀರಲ್ಲಾ ಯಾಕೆ…. ನಿಮ್ಮ ನಿಮ್ಮೊಳಗೇ ಎಡಗೈ ಬಲಗೈ ಹೀಗೆ ಎಷ್ಟೊಂದು ಭೇದವಿದೆ…. ಮೊದಲು ನೀವು ಸರಿಯಾಗಿರಿ…” ಹೀಗೆ ವಿವೇಕರಾಹಿತ್ಯವಾಗಿ ಕೇಳುವ ಮನೋಧೋರಣೆಗಿಂತ ನನ್ನನ್ನು ಕೇಳಿರುವ ಪ್ರಶ್ನೆ ಬೇರೆಯಲ್ಲ. ಜಾತಿ ಹೇರಿದವರೇ ಹೀಗೆ ಜಾತೀಯತೆ ನಿಮ್ಮೊಳಗೇ ಇದೆ ಎಂದು ದಲಿತರ ಕಡೆಗೇ ಬೊಟ್ಟು ಮಾಡಿದರೆ ದಲಿತರು ಯಾರನ್ನು ದೂರಬೇಕು? ಜಾತಿಭೇದ ದಲಿತರು ಮಾತ್ರ ಸೃಷ್ಟಿಸಿಕೊಂಡು ಪೋಷಿಸುತ್ತಿರುವ ಸಂಗತಿಯೇನು?
ನಾನು ವೈಯಕ್ತಿಕವಾಗಿ ನನ್ನ ಅನುಭವ ಪರಿಧಿಗೆ ಬಂದ ಯಾವುದೇ ಮೌಢ್ಯವನ್ನು ನನ್ನದೇ ಮಿತಿಯಲ್ಲಿ ಸಾಧ್ಯವಾದಷ್ಟು ಮಟ್ಟಿಗೆ ವೈಚಾರಿಕವಾಗಿ ಮುಖಾಮುಖಿಯಾಗುತ್ತಾ ಬಂದಿದ್ದೇನೆ. ಸಹಜವಾಗಿ ಅನೇಕ ಜಾತಿಗಳ ಬಹುತೇಕ ಸ್ವಾಮೀಜಿಗಳು ನನ್ನ ವೈಚಾರಿಕ ವಿಮರ್ಶೆಗೆ ಒಳಗಾಗಿದ್ದಾರೆ. ನನ್ನಲ್ಲಿರುವ ಮೌಢ್ಯದ ಮುಖಕ್ಕೆ ಯಾರೇ ಕನ್ನಡಿ ಹಿಡಿದರೂ ನಾನು ತಿದ್ದಿಕೊಳ್ಳಲು ಸಿದ್ಧನಾಗಿದ್ದುಕೊಂಡೇ ವಿಮರ್ಶಿಸುವುದು ನನ್ನ ಜಾಯಮಾನ.
ಮಾದಾರ ಚೆನ್ನಯ್ಯ ಪಾದಪೂಜೆ ಮಾಡಿಸಿಕೊಂಡಿರುವ ಸಂಗತಿ ಖಂಡನೀಯವಾದುದು. ವ್ಯಕ್ತಿಯ ಕಾಲು ತೊಳೆದ ನೀರು ಪವಿತ್ರ ತೀರ್ಥವಲ್ಲ, ಅದು ಕಲುಷಿತ ನೀರು. ಅದು ಕುಡಿಯಲಾಗಲೀ, ಅಡುಗೆಗೆ ಬಳಸಲಾಗಲೀ ಯೋಗ್ಯವಲ್ಲ, ಅದರಿಂದ ರೋಗ- ರುಜಿನಗಳು ಬರುತ್ತವೆ. ಇಷ್ಟು ಪ್ರಾಥಮಿಕ ತಿಳಿವಳಿಕೆ ಇರುವ ಯಾವುದೇ ವ್ಯಕ್ತಿ ತನ್ನ ಪಾದ ತೊಳೆಸಿಕೊಂಡು ಆ ನೀರನ್ನು ಇತರರಿಗೆ ಕುಡಿಸಲಾರ. ಇತರರ ಪಾದ ತೊಳೆದು ತಾನೂ ಕುಡಿಯಲಾರ.
ಸರಿ.ಈಗ ಗೆಳೆಯರು ನನ್ನನ್ನು ಕೇಳಿದ ಪ್ರಶ್ನೆಗೆ ಬರೋಣ…
ಮಠಪೀಠಗಳ ಗುರುಪದವಿ ಅಲಂಕರಿಸಿ ಕುಳಿತಿರುವ ದಲಿತ ಹಿಂದುಳಿದ ಜನಾಂಗಗಳ ಸ್ವಾಮೀಜಿಗಳಿಗೇನಾಗಿದೆ? ಅವರಿಗೆ ರಾಜಕೀಯ ಮೋಹವಿದ್ದರೆ ಕಾವಿ ಕಳಚಿ ಬಿಸಾಕಿ ಖಾದಿ ತೊಟ್ಟುಕೊಳ್ಳಲಿ. ಕಾವಿ ಕಿತ್ತೆಸೆದು ರಾಜಕೀಯಕ್ಕೆ ಬರುವುದಷ್ಟೇ ಅಲ್ಲ, ಸಂಸಾರ ಕಟ್ಟಿಕೊಳ್ಳಲು ಬಯಸಿದರೆ ಮದುವೆಯನ್ನೂ ಆಗಲಿ. ಕಾವಿ ತೊಟ್ಟು ಒಂದು ನಿರ್ದಿಷ್ಟ ರಾಜಕೀಯ ಪಕ್ಷದ ಸಿದ್ಧಾಂತಕ್ಕೆ ಬದ್ದವಾಗಿ ನಡೆದುಕೊಳ್ಳಬೇಕಾದ ಹಂಗಿಗೆ ಬಿದ್ದ ಬಳಿಕವೂ, ತಾವು ಧರ್ಮಾಧಿಕಾರಿಗಳಾಗಿ ತಮ್ಮ ಸಮಾಜದ ಜನರಿಗೆ ಯಾವ ಧರ್ಮಬೋಧೆ ಮತ್ತು ದಾರ್ಶನಿಕತೆಯನ್ನು ತಿಳಿಸಿಕೊಡಲು ಸಾಧ್ಯ?
ಕಾವಿ ತೊಟ್ಟು ಬಸವಮೂರ್ತಿ ಮಾದಾರ ಚನ್ನಯ್ಯ ಎಂಬ ಹೆಸರಿಟ್ಟುಕೊಂಡಿರುವ ಕೃಷ್ಣಮೂರ್ತಿ, ಘನಶರಣರಾದ ಬಸವಣ್ಣ ಮತ್ತು ಮಾದಾರ ಚೆನ್ನಯ್ಯನವರ ಧ್ಯೇಯ – ತತ್ವಾದರ್ಶಗಳಿಗೆ ವಿರುದ್ಧವಾಗಿ ಯಾಕೆ ನಡೆದುಕೊಳ್ಳಬೇಕು? ಇವತ್ತು ರಾಜಕೀಯ ಪಕ್ಷಗಳ ಪರ ವಿರೋಧ ಚಿಂತನೆಗಳನ್ನು ಪ್ರಚಾರ ಮಾಡಿಕೊಂಡು ಗಬ್ಬೆದ್ದು ನಾರುತ್ತಿರುವ ರಾಜಕೀಯದ ಗಾಳಕ್ಕೆ ಸಿಲುಕಿದ ಮೀನಾಗಬೇಕೇನು ಈ ಸ್ವಾಮೀಜಿ? ಪುರೋಹಿತಶಾಹಿ ವ್ಯವಸ್ಥೆಗೆ ಕಾವಲು ನಾಯಿಯಾದ ಚೆನ್ನಯ್ಯನಂತಹ ಮತ್ತಾವ ಸ್ವಾಮೀಜಿಯನ್ನೂ ದಲಿತರಲ್ಲಿ ನಾಕಾಣೆನು. ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿಯು ವ್ಯಾವಹಾರಿಕವಾಗಿ ಮಾತ್ರ ಚೆನ್ನಯ್ಯನ ಹೆಸರು ಹೇಳಿಕೊಳ್ಳುತ್ತಾರೆಯೇ ವಿನಃ, ಆಂತರಿಕವಾಗಿ, ಧಾರ್ಮಿಕವಾಗಿ, ಬೌದ್ಧಿಕವಾಗಿ ಎಂದಿಗೂ ವಚನಕಾರ ಮಾದಾರ ಚೆನ್ನಯ್ಯನಂತೆ ಯೊಚಿಸಿದವರಲ್ಲ,.
ಯಾರೇ ಸ್ವಾಮೀಜಿಯಾದವರಿಗೆ ಬೇಕಿರುವುದು ರಾಜಕೀಯ ಪ್ರಜ್ಞೆಯೇ ಹೊರತು, ತಂತ್ರ ಪ್ರತಿತಂತ್ರ ವ್ಯೂಹದ ರಾಜಕೀಯವಲ್ಲ. ಎಲ್ಲಾ ರಾಜಕೀಯ ಪಕ್ಷಗಳಲ್ಲಿ ಹಾಗೂ ಎಲ್ಲಾ ತತ್ವ ಸಿದ್ಧಾಂತಗಳಲ್ಲಿ ದಲಿತರು ಇರುತ್ತಾರೆ. ಹೀಗಿರುವಾಗ ತಮ್ಮ ಸ್ವಾಮಿಗಳ ಮಾತು ಕೇಳಿಕೊಂಡು ದಲಿತರೆಲ್ಲರೂ ಪಕ್ಷರಾಜಕಾರಣಕ್ಕಿಳಿದು ಪರಸ್ಪರ ಕಚ್ಚಾಡಲು ಸಾಧ್ಯವಿಲ್ಲ. ಸ್ವಾಮಿಯಾದವನಿಗೆ ಬೇಕಾಗಿರುವುದು ಜನರ ಧಾರ್ಮಿಕ ಮತ್ತು ಆಧ್ಯಾತ್ಮಿಕ ಶ್ರದ್ಧೆಯೇ ಹೊರತು ಜನರ ರಾಜಕೀಯವಲ್ಲ.
ಈಗ ನಾನು ಹೇಳಹೊರಟಿರುವುದು ಬುದ್ಧಗುರು – ಬಸವಣ್ಣ – ಅಂಬೇಡ್ಕರ್ ಸಿದ್ಧಾಂತಗಳ ಬಗ್ಗೆ. ಕೋಮುವಾದದ ಬಗ್ಗೆ. ದಲಿತ ಸಮುದಾಯಗಳ ಸ್ವಾಭಿಮಾನವನ್ನು ಬ್ರಾಹ್ಮಣ್ಯದ ಅಮಲಿನಲ್ಲಿ ಹರಾಜು ಹಾಕುತ್ತಿರುವುದರ ಬಗ್ಗೆ. ದಲಿತ ಸಮುದಾಯವನ್ನು ಆರೆಸ್ಸೆಸ್ ಗೆ ಅಥವಾ ಸಂಘಪರಿವಾರಕ್ಕೆ ಮಾರ್ಟ್ಗೇಜ್ ಮಾಡಲು ಪ್ರಯತ್ನಿಸುತ್ತಿರುವುದರ ಬಗ್ಗೆ.
ದಲಿತರ ಸ್ವಾಬಿಮಾನ ನಮ್ಮ ಪೂರ್ವಿಕ ವೈಚಾರಿಕ ನಡೆಗಳನ್ನು ಬ್ರಾಹ್ಮಣ್ಯ ವಿರೋಧಿ ಬಂಡುಕೋರ ದಂಗೆಗಳನ್ನು ಗೌರವಿಸುವುದು ಮತ್ತು ಊರ್ಜಿತಗೊಳಿಸುವುದರಲ್ಲಿದೆ.
ವೈಯಕ್ತಿಕ ಸ್ವಾರ್ಥಕ್ಕಾಗಿ ಸಂಘಿಯಾಗಿರುವ ಬಸವಮೂರ್ತಿ ಮಾದಾರ ಚನ್ನಯ್ಯ, ಆರೆಸ್ಸೆಸ್ ಬೈಟಕ್ ಗಳನ್ನು ಚಿತ್ರದುರ್ಗದ ತನ್ನ ಮಠದಲ್ಲಿಯೇ ನಡೆಸುತ್ತಿರುವುದು ಎಲ್ಲರಿಗೂ ತಿಳಿದಿರುವ ಸಂಗತಿ. ಹೀಗಿರಲು ಬಸವಣ್ಣನಿಂದ ವಂದ್ಯನಾದ ಶರಣ ಮಾದಾರ ಚನ್ನಯ್ಯನಾಗುವ ಯೋಗ್ಯತೆಯಂತೂ ಇಲ್ಲದ ಬಳಿಕ, ಮತ್ತೊಮ್ಮೆ ಕೃಷ್ಣಮೂರ್ತಿ ಆಲಿಯಾಸ್ ಕಿಟ್ಟಿಯಾಗಲು ನಮಗಾವ ಆಕ್ಷೇಪವೂ ಇಲ್ಲ. ಕಿಟ್ಟಿ ಯಾವತ್ತಿಗೂ ಶರಣ ಮಾದಾರ ಚೆನ್ನಯ್ಯನಾಗಲಾರ.. ನಮ್ಮ ಬೊಟ್ಟು ನಮ್ಮ ಕಣ್ಣನ್ನೇ ಚುಚ್ಚುತ್ತಿರುವಾಗ ನನಗೆ ಪ್ರಶ್ನೆ ಕೇಳಿದ ಗೆಳೆಯರು ಈ ಸಾಮಾಜಿಕ ವಾಸ್ತವವನ್ನೇಕೆ ಅರ್ಥಮಾಡಿಕೊಳ್ಳುತ್ತಿಲ್ಲ. ಯಾವುದೇ ರಾಜಕೀಯ ಪಕ್ಷಕ್ಕೆ ಒತ್ತೆ ಬಿದ್ದ ಸ್ವಾಮಿಗಳು ಧರ್ಮ ಮತ್ತು ದಾರ್ಶನಿಕತೆಯನ್ನು ಕುರಿತು ಹೇಗೆ ಹೇಳಬಲ್ಲರು ಏನಂತ ಹೇಳಬಲ್ಲರು? ಬಸವಮೂರ್ತಿ ಮಾದಾರ ಚನ್ನಯ್ಯ ತಮ್ಮ ಪೀಠಕ್ಕೆ ರಾಜಿನಾಮೆ ಕೊಟ್ಟು ಫುಲ್ ಟೈಮ್ ಸಂಘಪರಿವಾರದ ಕಾರ್ಯಕರ್ತರಾಗಿರಲಿ ಯಾರು ಬೇಡ ಅಂತಾರೆ?
ಬಸವಮೂರ್ತಿ ಮಾದಾರ ಚೆನ್ನಯ್ಯ ಎಂಬ ಹೆಸರಿಟ್ಟುಕೊಂಡು ಕನಿಷ್ಟ ಆ ಹೆಸರಿಗಾದರೂ ಒಂದು ತೂಕ ಬರುವಂತಹ ಕಾರ್ಯಗಳನ್ನು ಮಾಡುವುದನ್ನು ಬಿಟ್ಟು ದಲಿತರ ಮತ್ತು ಅಲ್ಪಸಂಖ್ಯಾತರ ಆಹಾರದ ಹಕ್ಕನ್ನು ಕಿತ್ತುಕೊಳ್ಳುವ ಗೋಹತ್ಯಾ ನಿಷೇಧ ಅಜೆಂಡವನ್ನು ಬೆಂಬಲಿಸುವುದು, ರಾಮ ಮಂದಿರದ ನಿರ್ಮಾಣ ಕಾರ್ಯದಲ್ಲಿ ದಲಿತರು ಕೈಜೋಡಿಸಬೇಕೆನ್ನುವುದು, ಹೋಮ ಹವನ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದು, ಮತಾಂತರ ನಿಷೇಧ ಮಸೂದೆ ಜಾರಿಯಾಗಬೇಕೆಂದು ಒತ್ತಾಯಿಸುವುದು, ಹಿಂದೂ ಸಮಾಜೋತ್ಸವಗಳಲ್ಲಿ ಭಾಗವಹಿಸುವುದ ಇಂತಹವೇ ರೀತಿಯ ಸಂಘಪರಿವಾರದ ಅಜೆಂಡಾಗಳನ್ನು ಬೆಂಬಲಿಸುವ ಈ ಸ್ವಾಮೀಜಿಯ ಮನಸ್ಥಿತಿ ನೋಡಿದರೆ, ಈತ ನಿಜವಾಗಿಯೂ ದಲಿತ ಸಮುದಾಯದವನೇ, ಅಂಬೇಡ್ಕರ್ ಹೆಸರೆತ್ತಲು ಯೋಗ್ಯನೇ ಎಂಬ ಪ್ರಶ್ನೆ ಮೂಡುತ್ತದೆ. ಕೋಮುವಾದ ಮತ್ತು ಭ್ರಷ್ಟಾಚಾರದ ಮಹಾ ರೂಪಕದಂತಿರುವ ಯಡಿಯೂರಪ್ಪನನ್ನು ಶರಣ ಬಸವಣ್ಣನೊಂದಿಗೆ ಹೋಲಿಸುವುದು, ಲ್ಯಾಂಡ್ ಡೀಲಿಂಗ್ ಮುಂತಾದವೆಲ್ಲಾ ಸ್ವಾಮೀಜಿಯಾದವನಿಗೆ ಯಾಕೆ ಬೇಕು?
ಹೇಳಿಕೇಳಿ ಬಸವಮೂರ್ತಿ ಮಾದಾರ ಚೆನ್ನಯ್ಯ, ಚಿತ್ರದುರ್ಗದ ಮುರುಘರಾಜೇಂದ್ರ ಶರಣರ ಶಿಷ್ಯನಾಗಿ ಲಿಂಗದೀಕ್ಷೆ ಪಡೆದುಕೊಂಡವರು. ಇಷ್ಟಲಿಂಗವನ್ನು ಅಂಗದ ಮೇಲೆ ಧರಿಸಿದ ಶರಣರು, ದೇಹವನ್ನೇ ದೇವಾಲಯವೆಂದು ಭಾವಿಸಬೇಕಾಗಿಯೂ, ಚಿತ್ಕಳಾರೂಪ ಪ್ರಜ್ವಲನದ ಸಂಕೇತವಾದ ಕರಸ್ಥಲ ಲಿಂಗದ ಹೊರತು ಅನ್ಯ ಸ್ಥಾವರರೂಪಿ ದೇವಾಲಯಗಳಿಗೆ ಹೋಗಬಾರದಾಗಿಯೂ ಶರಣಧರ್ಮದ ವಚನ ಸಂವಿಧಾನ ತಿಳಿಸುತ್ತದೆ. ವಚನ ಸಂವಿಧಾನದ ಘನ ಉದ್ದೇಶವೇ ಜನರಲ್ಲಿ ವೈಚಾರಿಕತೆ, ವೈಜ್ಞಾನಿಕ ಮನೋಭಾವ ಮತ್ತು ಸಕಲ ಜೀವಮಂಡಲಕ್ಕೆ ಲೇಸು ಬಯಸುವ ಸಮದರ್ಶನ ಭಾವವನ್ನು ಜಾಗೃತಗೊಳಿಸುವುದಾಗಿದೆ. ಇಂತಹ ಶರಣಧರ್ಮದ ವೈಚಾರಿಕತೆಯ ದಾರಿಯಲ್ಲಿ ನಡೆಯಬೇಕಾದವರು ಪುರೋಹಿತಶಾಹಿಯು ಹೇರಿದ ಗೊಡ್ಡು ಆಚರಣೆಗಳು ಸಂಪ್ರದಾಯಗಳು ಮತ್ತು ವಿಚಾರಗಳನ್ನು ಪೋಷಿಸಲು ಮುಂದಾಗಿರುವುದು ವಿಷಾದನೀಯ ಸಂಗತಿ. ಗುಲಾಮಗಿರಿಯನ್ನು ಕಿತ್ತೊಗೆಯಬೇಕಾದ ಜನರೇ ಬ್ರಾಹ್ಮಣಶಾಹಿಯನ್ನು ಮುದ್ದುಮಾಡಲು ಹೋಗಿ ಪಾದಪೂಜೆ ರೂಪದಲ್ಲಿ ಮತ್ತೆ ಗುಲಾಮಿತನವನ್ನು ಹೇರಿಕೊಳ್ಳುವುದು ಸರಿಯೇನು?
ಆದಿಜಾಂಬವರ ಮಹಾ ದಾರ್ಶನಿಕನಾದ ಮಾತಂಗಮುನಿ ಬ್ರಾಹ್ಮಣ್ಯದ ವಿರುದ್ಧ ಬಂಡೆದ್ದವನು. ಬುದ್ಧಗುರು ಬ್ರಾಹ್ಮಣ್ಯದ ವಿರುದ್ಧ ಹೋರಾಡಿದವನು. ಬಸವಣ್ಣ ದಂಗೆ ಎದ್ದದ್ದೂ ಇದೇ ಬ್ರಾಹ್ಮಣ್ಯದ ವಿರುದ್ಧ. ಕುವೆಂಪು, ಪೆರಿಯಾರ್, ನಾರಾಯಣ ಗುರು ಮುಂತಾದವರು ಸೆಣೆಸಿದ್ಷು ಇದರ ವಿರುದ್ಧವೇ. ಹೀಗಿರಲು ಚೆನ್ನಯ್ಯ ಈ ಬ್ರಾಹ್ಮಣ್ಯದ ಕಾವಲು ನಾಯಿ ಆಗಬೇಕೇನು? ನಮಗೆ ನಮ್ಮ ತಳಸ್ತರರ ಬಹು ಸಂಸ್ಕೃತಿ ಮತ್ತು ಪರಂಪರೆ ಮುಖ್ಯವೋ ಅಥವಾ ಬಹುತ್ವಕ್ಕೆ ವಿರೋಧಿಯಾದ ಏಕಾಕಾರಿ ವೈದಿಕ ಸಂಸ್ಕೃತಿಯ ಭಜನೆ ಮಾಡುವುದು ಮುಖ್ಯವೋ..? ಇಡೀ ರಾಜ್ಯದ ಪ್ರಜ್ಞಾವಂತ ಪ್ರಜ್ಞಾವಂತರು ಸಮಾನತೆಯ ಆಸೆಯಿಂದ ಲಿಂಗಾಯತ ಧರ್ಮದ ನಿರೀಕ್ಷೆಯಲ್ಲಿದ್ದರೆ, ಮಾದಾರ ಚೆನ್ನಯ್ಯನು ಪುರೋಹಿತಶಾಹಿಯ ಗುಲಾಮಗಿರಿ ಮಾಡುತ್ತಾ ಬ್ರಾಹ್ಮಣ್ಯದ ಕೊಚ್ಚೆ ಮೋರಿಯಲ್ಲಿಯೇ ಸುಖ ಅನುಭವಿಸುತ್ತಾ ಇದ್ದಾರೆಂದರೆ ಏನು ಹೇಳೋಣ?
ಲೇಖಕರು – ಡಾ. ವಡ್ಡಗೆರೆ ನಾಗರಾಜಯ್ಯ
ಬೆಂಗಳೂರು
ಮೊ.ಸಂ : 8722724174

ದಿನದ ಸುದ್ದಿ
ಭರವಸೆ ಕೊಟ್ಟು ಯುವಜನರನ್ನು ಮನೆಗೆ ಕಳುಹಿಸಿದ ಸರ್ಕಾರಕ್ಕೆ ಈಗ ಪ್ರತಿಭಟನೆಯ ಬಿಸಿ: ಸೆ.5ಕ್ಕೆ ದೆಹಲಿಯಲ್ಲಿ CJP ಬೃಹತ್ ಮೆರವಣಿಗೆ!
ಯುವಜನರ ಭರವಸೆ ಈಡೇರಿಲ್ಲವೆ? ಸೆ.5ರಂದು ದೆಹಲಿಯಲ್ಲಿ CJP ಶಾಂತಿಯುತ ಪ್ರತಿಭಟನೆ
- ಜುಲೈ 25ರ ಭರವಸೆ ಜಾರಿಗೆ ವಿಳಂಬ: CJP ತೀವ್ರ ಆಕ್ರೋಶ
- ಇಂಡಿಯಾ ಗೇಟ್ನಿಂದ ಪೊಲೀಸ್ ಕೇಂದ್ರ ಕಚೇರಿವರೆಗೆ ಮೆರವಣಿಗೆ
- NEET ಅಭ್ಯರ್ಥಿಗಳ ಕುಟುಂಬಸ್ಥರು, ಪೊಲೀಸ್ ದೌರ್ಜನ್ಯ ಸಂತ್ರಸ್ತರು ಮುಂಚೂಣಿಯಲ್ಲಿ
- “ನಮ್ಮ ತಾಳ್ಮೆಯನ್ನು ದೌರ್ಬಲ್ಯವೆಂದು ಭಾವಿಸಬೇಡಿ” ಎಂದ CJP
ಯುವಜನರ ಭರವಸೆ ಈಡೇರಿಲ್ಲವೆ? ಸೆ.5ರಂದು ದೆಹಲಿಯಲ್ಲಿ CJP ಶಾಂತಿಯುತ ಪ್ರತಿಭಟನೆ
ಸುದ್ದಿದಿನ,ನವದೆಹಲಿ: ದೇಶದ ಯುವಜನರಿಗೆ ನೀಡಿರುವ ಭರವಸೆಗಳನ್ನು ಸರ್ಕಾರ ಈಡೇರಿಸಿಲ್ಲ ಎಂಬ ಆರೋಪದ ಹಿನ್ನೆಲೆಯಲ್ಲಿ ಕಾಕ್ರೋಚ್ ಜನತಾ ಪಾರ್ಟಿ (CJP) ಸೆಪ್ಟೆಂಬರ್ 5ರಂದು ನವದೆಹಲಿಯಲ್ಲಿ ಶಾಂತಿಯುತ ಪ್ರತಿಭಟನಾ ಮೆರವಣಿಗೆ ನಡೆಸಲು ಕರೆ ನೀಡಿದೆ. ಜುಲೈ 25ರಂದು ಸಾರ್ವಜನಿಕವಾಗಿ ನೀಡಲಾಗಿದ್ದ ಭರವಸೆಗಳಿಗೆ ಒಂದು ತಿಂಗಳು ಕಳೆದರೂ ಅವುಗಳ ಅನುಷ್ಠಾನಕ್ಕೆ ಸ್ಪಷ್ಟ ಕ್ರಮಗಳು ಗೋಚರಿಸುತ್ತಿಲ್ಲ ಎಂಬುದು CJPಯ ಪ್ರಮುಖ ಆರೋಪವಾಗಿದೆ.
CJP ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಈ ಕುರಿತು ಚರ್ಚೆ ನಡೆಸಲಾಗಿದ್ದು, ಸರ್ಕಾರ ಹಾಗೂ ಬಿಜೆಪಿ-ಎನ್ಡಿಎ ಆಡಳಿತದ ರಾಜ್ಯಗಳು ಯುವಜನರಿಗೆ ನೀಡಿದ್ದ ಭರವಸೆಗಳ ಅನುಷ್ಠಾನವನ್ನು ಪರಿಶೀಲಿಸಿದ ಬಳಿಕ ಪ್ರತಿಭಟನೆ ನಡೆಸುವ ನಿರ್ಧಾರವನ್ನು ಸರ್ವಾನುಮತದಿಂದ ಕೈಗೊಳ್ಳಲಾಗಿದೆ ಎಂದು ಪಕ್ಷ ತಿಳಿಸಿದೆ.
http://Visit : www.suddidina.com
ಇಂಡಿಯಾ ಗೇಟ್ನಿಂದ ಮೆರವಣಿಗೆ
ಸೆಪ್ಟೆಂಬರ್ 5ರಂದು ಇಂಡಿಯಾ ಗೇಟ್ನಿಂದ ಪ್ರತಿಭಟನಾ ಮೆರವಣಿಗೆ ಆರಂಭವಾಗಿ ನವದೆಹಲಿ ಪೊಲೀಸ್ ಕೇಂದ್ರ ಕಚೇರಿಯತ್ತ ಸಾಗಲಿದೆ. ಮೃತ NEET ಅಭ್ಯರ್ಥಿಗಳ ಕುಟುಂಬಸ್ಥರು ಹಾಗೂ ಪೊಲೀಸ್ ದೌರ್ಜನ್ಯಕ್ಕೆ ಒಳಗಾದವರು ಮೆರವಣಿಗೆಯ ಮುಂಚೂಣಿಯಲ್ಲಿ ಸಾಗಲಿದ್ದಾರೆ ಎಂದು CJP ಹೇಳಿದೆ.
ದೇಶದ ವಿವಿಧ ಭಾಗಗಳಿಂದ ವಿದ್ಯಾರ್ಥಿಗಳು, ಯುವ ಸಂಘಟನೆಗಳ ಪ್ರತಿನಿಧಿಗಳು ಮತ್ತು ಯುವಜನರು ಪ್ರತಿಭಟನೆಯಲ್ಲಿ ಭಾಗವಹಿಸುವ ನಿರೀಕ್ಷೆಯಿದೆ. ಸರ್ಕಾರ ನೀಡಿದ್ದ ಭರವಸೆಗಳನ್ನು ಜಾರಿಗೆ ತರಬೇಕು ಎಂಬ ಒಂದೇ ಪ್ರಮುಖ ಬೇಡಿಕೆಯೊಂದಿಗೆ ಯುವಜನರು ಶಾಂತಿಯುತವಾಗಿ ಧ್ವನಿ ಎತ್ತಲಿದ್ದಾರೆ ಎಂದು ಪಕ್ಷ ಹೇಳಿದೆ.
‘ನಮ್ಮ ತಾಳ್ಮೆಯನ್ನು ದೌರ್ಬಲ್ಯವೆಂದು ಭಾವಿಸಬೇಡಿ’
ಜುಲೈ 25ರಂದು ನೀಡಿದ ಭರವಸೆಗಳನ್ನು ನಂಬಿ ದೇಶಾದ್ಯಂತ ನಡೆದಿದ್ದ ಪ್ರತಿಭಟನೆಗಳನ್ನು ಯುವಜನರು ಉತ್ತಮ ನಂಬಿಕೆಯಿಂದ ಹಿಂಪಡೆದಿದ್ದರು. ಆದರೆ, ಭರವಸೆಗಳ ಅನುಷ್ಠಾನದಲ್ಲಿ ವಿಳಂಬವಾಗುತ್ತಿರುವುದು ಯುವಜನರಲ್ಲಿ ಮತ್ತೆ ಅಸಮಾಧಾನ ಮೂಡಿಸಿದೆ ಎಂದು CJP ಆರೋಪಿಸಿದೆ.
“ನಮ್ಮ ತಾಳ್ಮೆಯನ್ನು ದೌರ್ಬಲ್ಯವೆಂದು ಭಾವಿಸಬೇಡಿ. ನಮ್ಮ ಸದುದ್ದೇಶವನ್ನು ಸರ್ಕಾರ ಯುವಜನರಿಗೆ ದ್ರೋಹ ಮಾಡುವ ಅವಕಾಶವಾಗಿ ಬಳಸಿಕೊಳ್ಳಬಾರದು” ಎಂದು CJP ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಎಚ್ಚರಿಕೆ ನೀಡಿದೆ.
“ಭರವಸೆಗಳನ್ನು ಜಾರಿಗೆ ತರುವ ಬದಲು ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳುವುದನ್ನು ವಿಳಂಬಿಸುತ್ತಿದೆ, ತಾಂತ್ರಿಕ ಕಾರಣಗಳ ಹಿಂದೆ ಅಡಗಿಕೊಳ್ಳುತ್ತಿದೆ ಹಾಗೂ ಸುಪ್ರೀಂ ಕೋರ್ಟ್ನ ಮುಂದೆಯೂ ಸ್ಪಷ್ಟ ಭರವಸೆ ನೀಡುವುದನ್ನು ತಪ್ಪಿಸುತ್ತಿದೆ”
|
ಮಾತಿನಿಂದ ಹಿಂದೆ ಸರಿಯಲು ಸಾಧ್ಯವಿಲ್ಲ
ಜುಲೈ 25ರಂದು ನಡೆದ ಜಂಟಿ ಸುದ್ದಿಗೋಷ್ಠಿಯಲ್ಲಿ ಸಾರ್ವಜನಿಕವಾಗಿ ನೀಡಿದ್ದ ಭರವಸೆಗಳನ್ನು ಸರ್ಕಾರ ಈಡೇರಿಸಬೇಕು ಎಂಬುದು CJPಯ ಆಗ್ರಹ. ಮಕ್ಕಳನ್ನು ಕಳೆದುಕೊಂಡ ಕುಟುಂಬಗಳು ಹಾಗೂ ಪೊಲೀಸ್ ದೌರ್ಜನ್ಯಕ್ಕೆ ಒಳಗಾದವರ ನೋವಿನ ನಡುವೆ ನಡೆಯಲಿರುವ ಈ ಮೆರವಣಿಗೆ, ಯುವಜನರ ವಿಶ್ವಾಸ ಮತ್ತು ಸರ್ಕಾರದ ಹೊಣೆಗಾರಿಕೆಯ ಪ್ರಶ್ನೆಯನ್ನು ಮುನ್ನೆಲೆಗೆ ತರುವ ಪ್ರಯತ್ನವಾಗಿದೆ.
ಕೇಂದ್ರ ಸರ್ಕಾರ ಭರವಸೆಗಳನ್ನು ಜಾರಿಗೆ ತರುವ ಬದಲು ಕ್ರಮ ಕೈಗೊಳ್ಳುವುದನ್ನು ವಿಳಂಬಿಸುತ್ತಿದೆ, ತಾಂತ್ರಿಕ ಕಾರಣಗಳ ಹಿಂದೆ ಅಡಗಿಕೊಳ್ಳುತ್ತಿದೆ ಹಾಗೂ ಸುಪ್ರೀಂ ಕೋರ್ಟ್ನ ಮುಂದೆಯೂ ಸ್ಪಷ್ಟ ಭರವಸೆ ನೀಡುವುದನ್ನು ತಪ್ಪಿಸುತ್ತಿದೆ ಎಂದು CJP ಆರೋಪಿಸಿದೆ.
ಸೆಪ್ಟೆಂಬರ್ 5ರಂದು ಹೆಚ್ಚಿನ ಸಂಖ್ಯೆಯಲ್ಲಿ ಇಂಡಿಯಾ ಗೇಟ್ನಲ್ಲಿ ಸೇರಿ ಶಾಂತಿಯುತ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವಂತೆ ಯುವಜನರು, ವಿದ್ಯಾರ್ಥಿಗಳು ಹಾಗೂ ಯುವ ಸಂಘಟನೆಗಳಿಗೆ CJP ಮನವಿ ಮಾಡಿದೆ. ಪ್ರತಿಭಟನೆ ಸಂಪೂರ್ಣವಾಗಿ ಶಾಂತಿಯುತ ಮತ್ತು ಪ್ರಜಾಸತ್ತಾತ್ಮಕ ರೀತಿಯಲ್ಲಿ ನಡೆಯಲಿದೆ ಎಂದು ಅದು ಪುನರುಚ್ಚರಿಸಿದೆ.

ದಿನದ ಸುದ್ದಿ
KPSC ಪರೀಕ್ಷಾ ಹಗರಣ: 329 ಅಭ್ಯರ್ಥಿಗಳಿಗೆ CID ನೋಟಿಸ್, IAS ಅಧಿಕಾರಿ ವಿರುದ್ಧ ED ಆರೋಪ
KPSC ಪರೀಕ್ಷಾ ಹಗರಣ: 329 ಅಭ್ಯರ್ಥಿಗಳಿಗೆ CID ನೋಟಿಸ್, IAS ಅಧಿಕಾರಿ ವಿರುದ್ಧ ED ಆರೋಪ
-
329 ಅಭ್ಯರ್ಥಿಗಳಿಗೆ ಏಕಕಾಲದಲ್ಲಿ ವಿಚಾರಣಾ ನೋಟಿಸ್
-
658 OMR ಕಾರ್ಬನ್ ಶೀಟ್ಗಳು FSLಗೆ
-
IAS ಅಧಿಕಾರಿ ಜ್ಞಾನೇಂದ್ರ ಕುಮಾರ್ ಗಂಗ್ವಾರ್ ವಿರುದ್ಧ ED ಗಂಭೀರ ಆರೋಪ
-
₹70–80 ಲಕ್ಷ ಲಂಚದ ಆರೋಪವೂ ತನಿಖೆಯಲ್ಲಿದೆ
-
ಪ್ರಶ್ನೆಪತ್ರ ಸಿದ್ಧತೆ, ಮುದ್ರಣದ CCTV ದೃಶ್ಯಗಳ ಬಗ್ಗೆಯೂ ಅನುಮಾನ
ಸುದ್ದಿದಿನ,ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗದ (KPSC) ಪಶುವೈದ್ಯಾಧಿಕಾರಿ ನೇಮಕಾತಿ ಪರೀಕ್ಷೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮದ ತನಿಖೆ ದಿನದಿಂದ ದಿನಕ್ಕೆ ಹೊಸ ತಿರುವು ಪಡೆಯುತ್ತಿದೆ. ಈಗಾಗಲೇ ಜಾರಿ ನಿರ್ದೇಶನಾಲಯ (ED) ರಾಜ್ಯದ ವಿವಿಧೆಡೆ 21ಕ್ಕೂ ಹೆಚ್ಚು ಸ್ಥಳಗಳಲ್ಲಿ ಶೋಧ ನಡೆಸಿದ್ದು, ಅದರ ಬೆನ್ನಲ್ಲೇ ಅಪರಾಧ ತನಿಖಾ ಇಲಾಖೆ (CID) ಎಲ್ಲಾ 329 ಅಭ್ಯರ್ಥಿಗಳಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದೆ.
http://Visit : www.suddidina.com
329 ಅಭ್ಯರ್ಥಿಗಳಿಗೆ ನೋಟಿಸ್ ಏಕೆ?
ಪರೀಕ್ಷಾ ಅಕ್ರಮಕ್ಕೆ ಸಂಬಂಧಿಸಿದಂತೆ ಅಭ್ಯರ್ಥಿಗಳಿಂದ ಈಗಾಗಲೇ 658 OMR ಕಾರ್ಬನ್ ಶೀಟ್ಗಳನ್ನು ವಶಕ್ಕೆ ಪಡೆಯಲಾಗಿದೆ. ಅವುಗಳನ್ನು ಮೂಲ OMR ಉತ್ತರ ಪತ್ರಿಕೆಗಳೊಂದಿಗೆ ಹೋಲಿಕೆ ಮಾಡಲು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ (FSL) ಕಳುಹಿಸಲಾಗಿದೆ. ಅಭ್ಯರ್ಥಿಗಳು ಗುರುತಿಸಿದ್ದ ಉತ್ತರಗಳ ಕಾರ್ಬನ್ ಪ್ರತಿಯಲ್ಲಿ ಮತ್ತು ಮೂಲ OMRನಲ್ಲಿ ವ್ಯತ್ಯಾಸವಿದೆಯೇ ಎಂಬುದನ್ನು ಪರಿಶೀಲಿಸುವುದು ತನಿಖೆಯ ಪ್ರಮುಖ ಭಾಗವಾಗಿದೆ.
ಇದೀಗ 329 ಅಭ್ಯರ್ಥಿಗಳನ್ನೂ ವಿಚಾರಣೆಗೆ ಒಳಪಡಿಸುವ CID ಕ್ರಮ ಪ್ರಕರಣದ ವ್ಯಾಪ್ತಿಯನ್ನು ಮತ್ತಷ್ಟು ವಿಸ್ತರಿಸಿದೆ. ಈ ವಿಚಾರಣೆಯ ಮೂಲಕ ಪರೀಕ್ಷಾ ಪ್ರಕ್ರಿಯೆಯಲ್ಲಿ ಯಾವುದೇ ಅಕ್ರಮ ನಡೆದಿದೆಯೇ, ಅಭ್ಯರ್ಥಿಗಳಿಗೆ ಪ್ರಶ್ನೆಪತ್ರಿಕೆ ಅಥವಾ ಉತ್ತರಗಳ ಮಾಹಿತಿ ಮುಂಚಿತವಾಗಿ ಸಿಕ್ಕಿತೇ, OMR ಉತ್ತರ ಪತ್ರಿಕೆಗಳಲ್ಲಿ ತಿದ್ದುಪಡಿ ನಡೆದಿದೆಯೇ ಎಂಬುದರ ಬಗ್ಗೆ ತನಿಖಾಧಿಕಾರಿಗಳು ಮಾಹಿತಿ ಕಲೆಹಾಕುತ್ತಿದ್ದಾರೆ.
IAS ಅಧಿಕಾರಿಯತ್ತ ತನಿಖೆಯ ಚಿತ್ತ
ಈ ಪ್ರಕರಣದಲ್ಲಿ IAS ಅಧಿಕಾರಿ ಜ್ಞಾನೇಂದ್ರ ಕುಮಾರ್ ಗಂಗ್ವಾರ್ ಅವರ ಹೆಸರು ಪ್ರಮುಖವಾಗಿ ಕೇಳಿಬಂದಿದೆ. ಅವರು ಫೆಬ್ರವರಿ 2024ರಿಂದ ಮಾರ್ಚ್ 2026ರವರೆಗೆ KPSCಯ ಪರೀಕ್ಷಾ ನಿಯಂತ್ರಕರಾಗಿ ಕಾರ್ಯನಿರ್ವಹಿಸಿದ್ದರು. ಪ್ರಸ್ತುತ ಅವರು ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯಲ್ಲಿ MSME ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರ ಬೆಂಗಳೂರಿನ ನಿವಾಸ ಸೇರಿದಂತೆ ಉತ್ತರ ಪ್ರದೇಶದ ಬರೇಲಿಯಲ್ಲಿರುವ ನಿವಾಸದ ಮೇಲೂ ED ಶೋಧ ನಡೆಸಿದೆ.
ED ಆರೋಪದ ಪ್ರಕಾರ, ಗಂಗ್ವಾರ್ ಅವರು ತಮ್ಮ ಇಬ್ಬರು ಪುತ್ರರಿಗೆ KPSC ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಹೆಚ್ಚಿನ ಅಂಕಗಳನ್ನು ದೊರಕಿಸಿಕೊಡಲು ವ್ಯಕ್ತಿಯೊಬ್ಬರಿಂದ ಸುಮಾರು ₹1.1 ಕೋಟಿ ಪಡೆದಿದ್ದಾರೆ ಎನ್ನಲಾಗಿದೆ. ಈ ಆರೋಪ ಇನ್ನೂ ತನಿಖೆಯ ಹಂತದಲ್ಲಿದ್ದು, ಆರೋಪ ಸಾಬೀತಾಗಿಲ್ಲ.
ಪ್ರಶ್ನೆಪತ್ರಿಕೆ ಸಿದ್ಧತೆಯಲ್ಲೂ ಅನುಮಾನ
ಪರೀಕ್ಷಾ ನಿಯಂತ್ರಕರಾಗಿದ್ದ ಅವಧಿಯಲ್ಲಿ ಪ್ರಶ್ನೆಪತ್ರಿಕೆ ಸಿದ್ಧಪಡಿಸುವ ಮತ್ತು ಮುದ್ರಿಸುವ ಪ್ರಕ್ರಿಯೆಗೆ ಸಂಬಂಧಿಸಿದ CCTV ದೃಶ್ಯಾವಳಿಗಳ ಅನುಪಸ್ಥಿತಿಯನ್ನೂ ED ಅಧಿಕಾರಿಗಳು ಪ್ರಶ್ನಿಸಿದ್ದಾರೆ ಎನ್ನಲಾಗಿದೆ. ಇಂತಹ ಪ್ರಕ್ರಿಯೆಯಲ್ಲಿ CCTV ದಾಖಲೆಗಳು ಪ್ರಮುಖ ಭದ್ರತಾ ಕ್ರಮವಾಗಿರುವುದರಿಂದ, ಅವುಗಳ ಲಭ್ಯತೆ ಮತ್ತು ನಿರ್ವಹಣೆಯೂ ತನಿಖೆಯ ಪ್ರಮುಖ ಅಂಶವಾಗಿದೆ.
ಇದರ ಜೊತೆಗೆ, ಪಶುವೈದ್ಯಾಧಿಕಾರಿ ನೇಮಕಾತಿಯಲ್ಲಿ ಅಭ್ಯರ್ಥಿಗಳಿಂದ ₹70–80 ಲಕ್ಷದವರೆಗೆ ಲಂಚ ಕೇಳಲಾಗಿದೆ ಎಂಬ ಆರೋಪಗಳೂ ತನಿಖೆಯಲ್ಲಿವೆ. ಪ್ರಶ್ನೆಪತ್ರಿಕೆ ಸೋರಿಕೆ, OMR ತಿದ್ದುಪಡಿ ಮತ್ತು ನೇಮಕಾತಿ ಪ್ರಕ್ರಿಯೆಯ ಮೇಲೆ ಪ್ರಭಾವ ಬೀರಿದ ಆರೋಪಗಳ ಕುರಿತು ತನಿಖೆ ಮುಂದುವರಿದಿದೆ.
KPSCಯಂತಹ ನೇಮಕಾತಿ ಸಂಸ್ಥೆಯ ಮೇಲಿನ ವಿಶ್ವಾಸಕ್ಕೆ ಧಕ್ಕೆ ತರುವ ಆರೋಪಗಳಾಗಿರುವುದರಿಂದ, CID ಮತ್ತು ED ತನಿಖೆಯ ಮುಂದಿನ ಹಂತಗಳು ಮಹತ್ವ ಪಡೆದುಕೊಂಡಿವೆ. 329 ಅಭ್ಯರ್ಥಿಗಳ ವಿಚಾರಣೆ, OMR ಕಾರ್ಬನ್ ಶೀಟ್ಗಳ FSL ವರದಿ ಹಾಗೂ ಹಣಕಾಸು ವ್ಯವಹಾರಗಳ ಪರಿಶೀಲನೆಯ ಬಳಿಕ ಪ್ರಕರಣದ ನಿಜವಾದ ಚಿತ್ರಣ ಇನ್ನಷ್ಟು ಸ್ಪಷ್ಟವಾಗುವ ನಿರೀಕ್ಷೆಯಿದೆ.
ಮೇಲಿನ ಹಣ, ಅಕ್ರಮ ಮತ್ತು ಅಧಿಕಾರಿಯ ವಿರುದ್ಧದ ಆರೋಪಗಳು ತನಿಖಾ ಸಂಸ್ಥೆಗಳು ಮುಂದಿಟ್ಟಿರುವ ಆರೋಪಗಳಾಗಿದ್ದು, ನ್ಯಾಯಾಲಯದಲ್ಲಿ ಸಾಬೀತಾಗುವವರೆಗೆ ಆರೋಪಗಳೆಂದೇ ಪರಿಗಣಿಸಬೇಕೆಂದು ಕೋರ್ಟ್ ತಿಳಿಸಿದೆ.

ದಿನದ ಸುದ್ದಿ
₹25 ಕೋಟಿ ಮೌಲ್ಯದ ಬಿಡಿಎ ಆಸ್ತಿ ವಶಕ್ಕೆ: ರಾಜಾಜಿನಗರ ಬಡಾವಣೆಯಲ್ಲಿ ಅನಧಿಕೃತ ನಿರ್ಮಾಣಕ್ಕೆ ಬಿತ್ತು ಬೀಗ
ರಾಜಾಜಿನಗರದಲ್ಲಿ ಬಿಡಿಎ ಭರ್ಜರಿ ಕಾರ್ಯಾಚರಣೆ: 13,000 ಚದರ ಅಡಿ ಜಾಗ ವಶಕ್ಕೆ
- 13,000 ಚದರ ಅಡಿ ಪ್ರದೇಶ ತೆರವು; ಪೊಲೀಸ್ ಭದ್ರತೆಯಲ್ಲಿ ಬಿಡಿಎ ಕಾರ್ಯಾಚರಣೆ
ನಿವೇಶನ 13 ಮತ್ತು 17ರಲ್ಲಿ ಅನಧಿಕೃತ ನಿರ್ಮಾಣ ತೆರವು; ಪೊಲೀಸ್ ಸಹಕಾರದಲ್ಲಿ ಕಾರ್ಯಾಚರಣೆ
ಸುದ್ದಿದಿನ,ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಅನಧಿಕೃತ ನಿರ್ಮಾಣಗಳ ವಿರುದ್ಧದ ತನ್ನ ಕಾರ್ಯಾಚರಣೆಯನ್ನು ಮತ್ತಷ್ಟು ಚುರುಕುಗೊಳಿಸಿದ್ದು, ರಾಜಾಜಿನಗರ ಬಡಾವಣೆಯ ಇಂಡಸ್ಟ್ರೀಯಲ್ ಸಬರ್ಬ್ 2ನೇ ಹಂತದಲ್ಲಿ ಮಹತ್ವದ ತೆರವು ಕಾರ್ಯಾಚರಣೆ ನಡೆಸಿದೆ. ಕಾರ್ಯಾಚರಣೆಯಲ್ಲಿ ಸುಮಾರು ₹25 ಕೋಟಿ ಮೌಲ್ಯದ ಆಸ್ತಿಯನ್ನು ಪ್ರಾಧಿಕಾರ ತನ್ನ ಸುಪರ್ದಿಗೆ ಪಡೆದುಕೊಂಡಿದೆ.
ಬೆಂಗಳೂರು ಉತ್ತರ ತಾಲ್ಲೂಕಿನ ಯಶವಂತಪುರ ಹೋಬಳಿಯ ಪೀಣ್ಯ ಗ್ರಾಮದ ಸರ್ವೆ ನಂಬರ್ 79 ಮತ್ತು 70ರಲ್ಲಿ ಬರುವ ಇಂಡಸ್ಟ್ರೀಯಲ್ ಸಬರ್ಬ್, 2ನೇ ಹಂತ, ರಾಜಾಜಿನಗರ ಬಡಾವಣೆಯ ನಿವೇಶನ ಸಂಖ್ಯೆ 13 ಮತ್ತು 17ರಲ್ಲಿ ಈ ಕಾರ್ಯಾಚರಣೆ ನಡೆದಿದೆ. ಸುಮಾರು 13,000 ಚದರ ಅಡಿ ವಿಸ್ತೀರ್ಣದ ಪ್ರದೇಶದಲ್ಲಿ ನಿರ್ಮಿಸಲಾಗಿದ್ದ ಅನಧಿಕೃತ ಕಟ್ಟಡ ಹಾಗೂ ನಿರ್ಮಾಣಗಳನ್ನು ತೆರವುಗೊಳಿಸಿ, ಜಾಗವನ್ನು ಬಿಡಿಎ ವಶಕ್ಕೆ ಪಡೆದುಕೊಂಡಿದೆ.
http://Visit : www.suddidina.com
ಅನಧಿಕೃತ ನಿರ್ಮಾಣಕ್ಕೆ ಬಿಡಿಎ ಬ್ರೇಕ್:
ಬಿಡಿಎಗೆ ಸೇರಿದ ಅಥವಾ ಪ್ರಾಧಿಕಾರದ ವ್ಯಾಪ್ತಿಯಲ್ಲಿರುವ ಜಾಗಗಳಲ್ಲಿ ನಿಯಮಬಾಹಿರವಾಗಿ ನಿರ್ಮಾಣವಾಗುತ್ತಿರುವ ಕಟ್ಟಡಗಳ ವಿರುದ್ಧ ಕ್ರಮ ಕೈಗೊಳ್ಳುವ ಭಾಗವಾಗಿ ಈ ಕಾರ್ಯಾಚರಣೆ ನಡೆಸಲಾಗಿದೆ. ತೆರವು ಕಾರ್ಯಾಚರಣೆಯ ಬಳಿಕ ಆಸ್ತಿಯನ್ನು ಪ್ರಾಧಿಕಾರದ ನೇರ ಸುಪರ್ದಿಗೆ ತೆಗೆದುಕೊಳ್ಳಲಾಗಿದ್ದು, ಸಾರ್ವಜನಿಕ ಹಾಗೂ ಸರ್ಕಾರಿ ಆಸ್ತಿಗಳ ಸಂರಕ್ಷಣೆಗೆ ಬಿಡಿಎ ಕೈಗೊಳ್ಳುತ್ತಿರುವ ಕ್ರಮಕ್ಕೆ ಇದು ಮತ್ತೊಂದು ಉದಾಹರಣೆಯಾಗಿದೆ.
ಸುಮಾರು ₹25 ಕೋಟಿ ಮೌಲ್ಯದ ಆಸ್ತಿ ಇರುವುದರಿಂದ, ಈ ಕಾರ್ಯಾಚರಣೆ ನಗರದ ಆಸ್ತಿ ಸಂರಕ್ಷಣೆ ಹಾಗೂ ಅನಧಿಕೃತ ನಿರ್ಮಾಣಗಳ ನಿಯಂತ್ರಣದ ದೃಷ್ಟಿಯಿಂದ ಮಹತ್ವ ಪಡೆದುಕೊಂಡಿದೆ. ದೊಡ್ಡ ಪ್ರಮಾಣದ ಭೂಮಿಯಲ್ಲಿ ನಿಯಮ ಉಲ್ಲಂಘಿಸಿ ನಿರ್ಮಾಣ ನಡೆಸಿದರೆ ಯಾವುದೇ ಕಾರಣಕ್ಕೂ ಅದನ್ನು ಮುಂದುವರಿಸಲು ಅವಕಾಶ ನೀಡುವುದಿಲ್ಲ ಎಂಬ ಸಂದೇಶವನ್ನು ಈ ಕ್ರಮ ನೀಡಿದೆ.
https://x.com/BDAOfficialGok/status/2092121239175512436?s=20
ಬಹು ಇಲಾಖೆಗಳ ಸಮನ್ವಯದಲ್ಲಿ ಕಾರ್ಯಾಚರಣೆ:
ತೆರವು ಕಾರ್ಯಾಚರಣೆಯನ್ನು ಬಿಡಿಎಯ ವಲಯ ಆಯುಕ್ತರು, ಆರಕ್ಷಕ ಅಧೀಕ್ಷಕರು, ಅಭಿಯಂತರ ಅಧಿಕಾರಿ-1, ಕಾರ್ಯನಿರತ ಆರಕ್ಷಕ ಪಡೆ, ಪಶ್ಚಿಮ ವಿಭಾಗದ ಅಭಿಯಂತರರು ಹಾಗೂ ಸರ್ವೆಯರ್ಗಳು ಒಳಗೊಂಡ ತಂಡ ಕೈಗೊಂಡಿತು. ಸ್ಥಳೀಯ ಪೊಲೀಸ್ ಇಲಾಖೆಯ ಸಹಕಾರದೊಂದಿಗೆ ಕಾರ್ಯಾಚರಣೆ ನಡೆಸಲಾಗಿದ್ದು, ಯಾವುದೇ ಅಡಚಣೆ ಉಂಟಾಗದಂತೆ ಅಗತ್ಯ ಭದ್ರತಾ ವ್ಯವಸ್ಥೆ ಮಾಡಲಾಗಿತ್ತು.
ಸ್ಥಳ ಪರಿಶೀಲನೆ, ನಿರ್ಮಾಣ ತೆರವು ಹಾಗೂ ಜಾಗದ ಸ್ವಾಧೀನ ಪ್ರಕ್ರಿಯೆಯನ್ನು ಸಂಬಂಧಪಟ್ಟ ಅಧಿಕಾರಿಗಳು ಸಮನ್ವಯದಿಂದ ಪೂರ್ಣಗೊಳಿಸಿದರು. ಕಾರ್ಯಾಚರಣೆ ಬಳಿಕ ತೆರವುಗೊಳಿಸಲಾದ ಪ್ರದೇಶವನ್ನು ಬಿಡಿಎ ತನ್ನ ನಿಯಂತ್ರಣಕ್ಕೆ ತೆಗೆದುಕೊಂಡಿದೆ.
ನಗರದ ಭೂ ಸಂಪತ್ತಿನ ರಕ್ಷಣೆಗೆ ಕಠಿಣ ಹೆಜ್ಜೆ
ಬೆಂಗಳೂರು ವೇಗವಾಗಿ ವಿಸ್ತರಿಸುತ್ತಿರುವ ಸಂದರ್ಭದಲ್ಲಿ ಸರ್ಕಾರಿ ಹಾಗೂ ಪ್ರಾಧಿಕಾರಕ್ಕೆ ಸೇರಿದ ಜಾಗಗಳ ಮೇಲೆ ಅಕ್ರಮ ನಿರ್ಮಾಣಗಳು ನಡೆಯದಂತೆ ನಿಗಾ ವಹಿಸುವುದು ಪ್ರಮುಖ ಸವಾಲಾಗಿದೆ. ಈ ಹಿನ್ನೆಲೆಯಲ್ಲಿ ಬಿಡಿಎ ಕೈಗೊಂಡಿರುವ ₹25 ಕೋಟಿ ಮೌಲ್ಯದ ಆಸ್ತಿ ವಶಪಡಿಸಿಕೊಳ್ಳುವ ಕ್ರಮ, ಅನಧಿಕೃತ ನಿರ್ಮಾಣಗಳ ವಿರುದ್ಧದ ಕಾರ್ಯಾಚರಣೆಗೆ ಮತ್ತಷ್ಟು ಬಲ ನೀಡಿದೆ.
ಬೆಂಗಳೂರು ನಗರದ ಭೂ ಸಂಪತ್ತನ್ನು ಕಾಪಾಡುವ ನಿಟ್ಟಿನಲ್ಲಿ ಬಿಡಿಎಯ ಈ ತೆರವು ಕಾರ್ಯಾಚರಣೆ, ನಿಯಮ ಉಲ್ಲಂಘಿಸುವವರಿಗೆ ಎಚ್ಚರಿಕೆಯ ಸಂದೇಶವಾಗಿದ್ದು, ಮುಂದಿನ ದಿನಗಳಲ್ಲೂ ಇಂತಹ ಕಾರ್ಯಾಚರಣೆಗಳು ಮುಂದುವರಿಯುವ ಸಾಧ್ಯತೆ ಇದೆ.

-
ಅಂತರಂಗ7 days agoಡಾ. ಆತ್ಮಾರಾಮನ ಆತ್ಮನಿವೇದನೆ ; ಒಳಗನ್ನಡಿಯಲ್ಲಿ ಮೌನದ ಮುಖ
-
ದಿನದ ಸುದ್ದಿ6 days agoಅಪರೂಪದ ಲಿವರ್ ಗಡ್ಡೆ | ಎಸ್ಎಸ್ ನಾರಾಯಣ ಹೆಲ್ತ್ ಸೂಪರ್ ಸ್ಪೆಷಾಲಿಟಿ ಸೆಂಟರ್ನಲ್ಲಿ ಮಹಿಳೆಗೆ ಯಶಸ್ವಿ ಶಸ್ತ್ರಚಿಕಿತ್ಸೆ
-
ದಿನದ ಸುದ್ದಿ4 days agoವಿಶ್ವ ವೆಂಕಟೇಶ್ವರ ಸಂಸ್ಥೆಯ ಹೆಸರು ಹಾಳು ಮಾಡುವ ಹುನ್ನಾರ: ವಿಠಲ ರುಕ್ಮಿಣಿ ಮಠದ ವಿರುದ್ಧ ಗಂಭೀರ ಆರೋಪ
-
ಅಂತರಂಗ2 days agoಡಾ. ಆತ್ಮಾರಾಮನ ಆತ್ಮನಿವೇದನೆ | ಮೆಟ್ಟಿಲಿನವನು
-
ದಿನದ ಸುದ್ದಿ8 hours agoತುಂಗಭದ್ರಾದಲ್ಲಿ ನೀರಿನ ಹರಿವು ಕುಸಿತ: ಹರಿಹರದ 24×7 ‘ಜಲಸಿರಿ’ಗೆ ಬ್ರೇಕ್, ನೀರು ಪೂರೈಕೆ ಸಮಯ ಕಡಿತ
-
ದಿನದ ಸುದ್ದಿ9 hours agoಭದ್ರಾ ಡ್ಯಾಂ ನೀರು ಹರಿಸುವಂತೆ ಆಗ್ರಹಿಸಿ ಕರೆ ನೀಡಿದ್ದ ದಾವಣಗೆರೆ ಬಂದ್ ನೀರಸ
-
ದಿನದ ಸುದ್ದಿ9 hours agoಅಂತರ್ಜಾತಿ ವಿವಾಹದ ಬೆನ್ನಲ್ಲೇ ದೇವಸ್ಥಾನ ನೌಕರ ಅಮಾನತು? ಜಾತಿ ತಾರತಮ್ಯದ ಆರೋಪ!
-
ದಿನದ ಸುದ್ದಿ9 hours agoಶಾಸಕ ಸಮರ್ಥ್ ಶಾಮನೂರು ಪ್ರಯಾಣಿಸುತ್ತಿದ್ದ ಕಾರು ಅಪಘಾತ: ಅಡ್ಡಬಂದ ವಾಹನ ತಪ್ಪಿಸಲು ಹೋಗಿ ಅವಘಡ !







