ಅಂತರಂಗ
ರಾಜ್ಯದ ಗಡಿಯಿಂದ ದೇಶದ ಗಡಿಗೆ ಪ್ರವಾಸದ ಕ್ಷಣಗಳು..!
- /home/u584543641/domains/suddidina.com/public_html/wp-content/plugins/mvp-social-buttons/mvp-social-buttons.php on line 27
https://suddidina.com/wp-content/uploads/2022/05/chamrajnagar_suddidina.jpg&description=ರಾಜ್ಯದ ಗಡಿಯಿಂದ ದೇಶದ ಗಡಿಗೆ ಪ್ರವಾಸದ ಕ್ಷಣಗಳು..!', 'pinterestShare', 'width=750,height=350'); return false;" title="Pin This Post">
- Share
- Tweet /home/u584543641/domains/suddidina.com/public_html/wp-content/plugins/mvp-social-buttons/mvp-social-buttons.php on line 72
https://suddidina.com/wp-content/uploads/2022/05/chamrajnagar_suddidina.jpg&description=ರಾಜ್ಯದ ಗಡಿಯಿಂದ ದೇಶದ ಗಡಿಗೆ ಪ್ರವಾಸದ ಕ್ಷಣಗಳು..!', 'pinterestShare', 'width=750,height=350'); return false;" title="Pin This Post">
- ಕೆ.ಶ್ರೀಧರ್ (ಕೆ.ಸಿರಿ), ಯುವ ಸಾಹಿತಿ
ಗಡಿ ಪ್ರದೇಶಗಳೆ ಹಾಗೆ ವಿವಿಧ ರೀತಿಯ ವೈಶಿಷ್ಟ್ಯ ಹಾಗೂ ಪ್ರಪಂಚದ ಮೂಲೆಯಲ್ಲಾಗುವ ಕ್ರಿಯೆಗಳಿಗೆ ಪ್ರತಿಕ್ರಿಯಿಸುವ ಸ್ಪಂದನಾಶೀಲತೆಯನ್ನು ಗಡಿರೇಖೆಯಲ್ಲಿರುವ ಜಿಲ್ಲೆಗಳಾಗಲಿ,ರಾಜ್ಯಗಳಾಗಲಿ ಅಥವಾ ದೇಶದ ಗಡಿಯಲ್ಲಾಗಲಿ ಹೊಂದಿರುತ್ತವೆ ಗಡಿರೇಖೆಯಲ್ಲಿನ ಚಟುವಟಿಕೆಗಳು, ಸಂಪ್ರದಾಯಗಳು, ಜನಜೀವನ ಪದ್ದತಿಗಳುಆಡಳಿತಾತ್ಮಕ ವಿಚಾರಗಳು ವಿಭಿನ್ನವಾಗಿರುತ್ತವೆ.
ನಮಗೆಲ್ಲರಿಗೂ ತಿಳಿದಿರುವ ಹಾಗೆ ಚಾಮರಾಜನಗರ ಹಚ್ಚ ಹಸಿರುಳ್ಳ ಬೆಟ್ಟ ಗುಡ್ಡಗಳು, ನದ-ನದಿಗಳನ್ನೊಳಗೊಂಡಿರುವ ಒಂದು ಪ್ರವಾಸಿಗರನ್ನು ಸೆಳೆಯುವ ಭೂ ಲೋಕದ ಸ್ವರ್ಗ ಎಂದರೆ ಬಹುಶಃ ತಪ್ಪಾಗಲಾರದು. ಇಂತಹ ಗಡಿಜಿಲ್ಲೆಯಿಂದ ಕನ್ಯಾಕುಮಾರಿ ಪ್ರಸಿದ್ದ ಪ್ರವಾಸಿ ತಾಣಕ್ಕೆ ಹೋಗಬೇಕೆಂದು ಗೆಳೆಯರೆಲ್ಲರೂ ನಿರ್ಧರಿಸಿ ದಿನಾಂಕ 30/04/2022 ರ ಸಂಜೆ ಹೊತ್ತಿಗೆ ವಾಹನವೇರಿ ಕನ್ಯಾಕುಮಾರಿಯ ಕಡೆಗೆ ಹೊರಟೆವು.
ಲಗೇಜುಗಳು, ಶೂಗಳು, ಚಾರ್ಜರ್, ಪವರ್ ಬ್ಯಾಂಕ್ ಎಲ್ಲವೂ ತುಂಬಿಕೊಂಡು ಪುಣಜನೂರು ಚೆಕ್ ಪೋಸ್ಟ್ ದಾಟಿ ಹೊರಟೆವು ಆರಂಭದಲ್ಲಿಯೇ ದಾರಿಯಲ್ಲಿ ನಮಗೆ ಆನೆಗಳ ದಂಡು ಕಂಡು ಸಂತೋಷವಾಯಿತು ಆನೆ ಅಂದ್ರೆ ಎಂತಾ ಆನೆಗಳಿಂತೀರಾ ದೊಡ್ಡ ದೊಡ್ಡ ಕಾಡಾನೆಗಳು ರೋಡಿನ ಪಕ್ಕದ ಹುಲ್ಲುಗಾವಲಿನಲ್ಲಿ ಬೆಟ್ಟದಂತೆ ನಿಂತು ಸೊಂಡಿಲಾಡಿಸುತ್ತಿದ್ದವು.
ಹಾಗೆಯೇ ವಾಹನದಲ್ಲಿ ಪ್ರಯಾಣಿಸುತ್ತಾ ಸಿನೆಮಾ ಹಾಡುಗಳಿಗೆ ಹೆಜ್ಜೆ ಹಾಕುತ್ತಾ, ಹಾಡುಗಳನ್ನು ಹಾಡುತ್ತಾ ನಾನ ತರಹದ ಚೇಷ್ಟೆಗಳೊಂದಿಗೆ ನಮ್ಮ ಪ್ರಯಾಣ ಸಾಗಿ ಬಣ್ಣಾರಿಯ ಬಣ್ಣಾರಮ್ಮನ ದರ್ಶನ ಪಡೆದು ಡಾಬಾವೊಂದರಲ್ಲಿ ಊಟ ಸೇವಿಸಿ ಮುಂದೆ ಸಾಗಿದೆವು ಊಟದ ನಂತರ ಎಲ್ಲರೂ ಮೊಬೈಲ್ ಎಂಬ ಮಾಯಲೋಕದಲ್ಲಿ ಮುಳುಗಿ ಮಗ್ನರಾದೆವು ಮಧ್ಯದಲ್ಲಿ ಒಬ್ಬ ಗೆಳೆಯ ಬಸಣ್ಣಿ ಬಾ….ಬಸಣ್ಣಿ..ಬಾ ಎಂಬ ಹಾಡು ಪ್ಲೇ ಆಗಿದ್ದೆ ತಡ ಕುಳಿತಿರುವ ಹಾಸನದಿಂದ ಎದ್ದು ಬಂದು ಕುಣಿಯಲಾರಂಭಿಸಿ ಉಳಿದವರು ಕುಣಿಯಲಾರಂಭಿಸಿದೆವುಕುಣಿಯಲಾರಂಭಿಸಿದೆವು.
ಬೆವರು ಹರಿದು ದಮ್ಮತ್ತಿದಾಗ ರಾತ್ರಿಯ ಆ ಕಿಟಕಿಯ ಗಾಳಿಗೆ ತಲೆಗಳು ತೂಗಿ ಕುಳಿತಲ್ಲಿಯೇ ಎಲ್ಲರೂ ನಿದ್ರೆಗೆ ಜಾರಿದೆವು ನಿದ್ದೆ ಯಾವಾಗ ಬಂತೋ ಕಾಣೆ ಬೆಳಿಗ್ಗೆ 6.18 ಕ್ಕೆ ಕಣ್ಣು ತೆರೆದು ನೋಡಿದರೆ ಯಾವುದೋ ನಮ್ಮದಲ್ಲದ ಊರಿಗೆ ಬಂದಂತೆನಿಸಿತು, ತಮಿಳು ಭಾಷೆಯ ಗಂಧವೆ ತಿಳಿಯದ ನಮಗೆ ದಿಕ್ಕುತಪ್ಪಿ ಬಂದಂತಾಯಿತು ” ವಾಂಗ್ ತಂಬಿ ನಲ್ಲ ರೂಂ ಇರುಕಾ ಕುಲೀರಂತ ನೀರ್, ವೆನ್ನೀರ್ ಅಂಕು ಉಲ್ಲತ್, ಆಯಿರಮ್ ವಾಟಕೈಕ್ಕು ವಾಕನತ್ತೈ ನಿರುತ್ತುವತ್ತಮ್” ಎಂದು ಯಾರೋ ಒಬ್ಬ ಕೊಂಗರ ನಾಡಿನವನು ನಮ್ಮನ್ನು ಕರೆದಾಗ ನಮ್ಮ ವಾಹನ ಆಗಾಗಲೇ ಸಮುದ್ರದ ತೀರದ ಹತ್ತಿರವಿರುವ ಶ್ರೀ ರಾಮೇಶ್ವರ ದೇವಾಲಯದ ಬಳಿ ನಿಂತಿತ್ತು ಕುತೂಹಲದಿಂದ ನಮಗೆ ಬರುವ ಹರಕು ಮುರುಕು ತಮಿಳಿನಲ್ಲ “ಇಂಕ ಸಮುದ್ರಕ್ ಪೇರು ಸೊಲ್ಲು” ಎಂದಾಗ “ಅಗ್ನಿತೀರ್ಥಂ” ಎಂದು ಟೀ ಬೋಂಡಾ ಬೇಯಿಸುತ್ತಲೇ ಒಬ್ಬ ವ್ಯಾಪಾರಿ ತಿಳಿಸಿದ ಗಾಡಿ ಹೊರಟು ದಾರಿ ಕಾಣದೆ ಟ್ರಾಫಿಕಿನಲ್ಲಿ ನಿಂತಾಗ ನಮ್ಮ ಹುಡುಗರು ಸಮುದ್ರ ದಡ ನೋಡಿ ಸುಮ್ಮನೆ ಬಿಡುವರೆ ಆಗಲೇ ಅನ್ವೇಷಕರಂತೆ ಗೂಗಲ್ ಮ್ಯಾಪ್ ಹುಡುಕಿ ಭಾರತದ ಕೆಳಭಾಗದ ಶ್ರೀಲಂಕಾದ ಗಡಿಯಲ್ಲಿದ್ದೇವೆಂದರಿತು ಗೂಗಲ್ ಮ್ಯಾಪ್ ನ್ನು ಸ್ಕ್ರೀನ್ ಶಾಟ್ ತೆಗೆದು ವಾಟ್ ಆಫ್ ಸ್ಟೇಟಸ್ ಹಾಕಿದ್ದೇ ಹಾಕಿದ್ದು ಇನ್ನು ಹಲವು ಪೋಟೋ ಪ್ರೇಮಿಗಳು ಹಾಳು ಮುಖದಲ್ಲಿಯೇ ಸಮುದ್ರ ತೀರದಲ್ಲಿ ನಿಂತು ಆ ಬೋಟ್ ಗಳು ಕಾಣುವಂತೆ ಪೋಟೋ ತೆಗೆಸಿಕೊಂಡು ವಾಟ್ಸ್ ಆಫ್ ಸ್ಟೇಟಸ್ಸಿನಲ್ಲಿ ಹಂಚಿಕೊಂಡು ಸಂಭ್ರಮಿಸಿದರು ಅಂತೂ ಇಂತೂ ರಾಮೇಶ್ವರಂ ನ ಬಾಡಿಗೆ ರೂಂ ಗೆ ಹೋಗಿ ಬೇಗ ಬೇಗನೆ ಜಳಕ ಮಾಡಿ ಎಷ್ಟು ಸಾಧ್ಯವೋ ಅಷ್ಟು ಪ್ರೇಕ್ಷಣೀಯ ಸ್ಥಳಗಳನ್ನು ಕವರ್ ಮಾಡುವ ಆಸೆಯಿಂದ ಹೋದರೆ ಕೆಲವರು ಜಳಕ ಮಾಡಿ ರೆಡಿಯಾದರೆ ಇನ್ನು ಕೆಲವರು ಮಲಗಿ ಮೊಬೈಲ್ನಲ್ಲಿ ಹರಟುತ್ತಾ ಕುಳಿತು ನೀ ಬಾ…ನಾ …ಬಾ ನಿನ್ನಿಂದ ಲೇಟು….ನಿನ್ನಿಂದಾ ಲೇಟು ಎಂದು ವಾದಿಸುತ್ತಾ ಅಲ್ಲಿಯೇ ಪುಟ್ ಪಾತ್ ಮೇಲಿರುವ ಹೋಟೆಲ್ಲೊಂದರಲ್ಲಿ ಇಡ್ಲಿ ಸವಿದೆವು ಇಲ್ಲಿಯೂ ಕೂಡ ಅರೆ ಬರೆ ತಮಿಳು ಕಲಿತ ನನ್ನ ದೋಸ್ತ್ ರಾಕೇಶ್ ನಮ್ಮ ಮೇಸ್ತ್ರೀಯಂತೆ ‘ಇಡ್ಲಿ ಕೊಡಂಗ, ತಣ್ಣೀ ಕೊಡಂಗ’ ಎಂದು ಹಾವ ಭಾವ ಮಾಡಿ ಬಲು ಜೋಕಾಗಿ ತಿಣುಕಾಡಿ ಹೇಳಹತ್ತಿದ ನಾವು ಕೂಡಾ ಭಾಷೆ ಬಾರದೆ ಇತ್ತ ಸುಮ್ಮನೆ ಇರದೆ ತೆಲುಗು ಕನ್ನಡ ತಮಿಳು ಸೇರಿಸಿ “ರಂಡು ಇಡ್ಲಿ ಕೊಡಿ ” ಎಂದು ಕೇಳಿ ಮುಖ ಮುಖ ನೋಡಿಕೊಂಡು ನಕ್ಕು ತಿಂದು ಧನುಷ್ ಕೋಡಿ ಮತ್ತು ಆರ್ಚಲ್ ಮುನಾಯ್ ನೋಡಬೇಕು ಬಿಸಿಲು ನೆತ್ತಿಗೇರುವ ಹೊತ್ತಿಗಾಗಲೇ ಎಂದು ಅವಸರವಸರವಾಗಿ ಹೊರಟೆವು ಸಮುದ್ರ ತೀರದ ತಾಪ ಯಪ್ಪಾ ! ಹೇಳತೀರದು.
ಧಗೆಗೆ ಮೈಯಲ್ಲಿ ಹರಿಯುವ ಬೆವರಿಗೆ ಎಷ್ಟು ಸ್ನಾನ ಮಾಡಿದರೂ ವ್ಯರ್ಥ ಆ ಧಗೆಗೆ ಮುಖಗಳುರಿದು ನಿದ್ದೆಗೆಟ್ಟ ನಮ್ಮ ಮುಖಗಳು ಇನ್ನಷ್ಟು ಕಳೆಗುಂದಿದವು….. ಹಾಗೆಯೇ ಕಿಟಕಿಯಲ್ಲಿ ಕಣ್ಣಾಡಿಸಿ ನೋಡಿದರೆ ಆಕಾಶ ಯಾವುದೋ ಸಮುದ್ರ ಯಾವುದೋ ಒಂದು ಕಾಣೆ ಎಲ್ಲವೂ ಕರತಲಾಮಲಕ ಧೊಪ್ಪೆಂದು ಫೀನಿಕ್ಸ್ ನಂತೆ ಬರುವ ಆ ರಕ್ಕಸ ಅಲೆಗಳ ಕಂಡು ನಾವು ವಿಚಲಿತರಾದೆವು ಹೋ……. ಎಂದು ಕೂಗಿ ವಾವ್ಹ್ ಎಂದು ಅರಚಿ ಅಲೆಗಳನ್ನು ನೋಡಿ ಸಮುದ್ರದಲ್ಲಿ ಒತ್ತಡ ಎಷ್ಟಿರಬೇಕೆಂದು ಚರ್ಚಿಸಿ ತಮ ತಮಗೆ ತಿಳಿದ ಅನಿಸಿಕೆಗಳನ್ನು ವ್ಯಕ್ತಪಡಿಸಿ ಆರ್ಚಲ್ ಮುನಾಯ್ ಪ್ರಸಿದ್ದ ಸ್ಥಳಕ್ಕೆ ಬಂದೆವು ಅದು ಮೂರು ಸಮುದ್ರಗಳು ಸಂಗಮವಾಗುವ ಜಾಗ , ಸ್ವರ್ಗದ ಗಡಿಯೆಂದರೂ ತಪ್ಪಾಗಲಾರದೂ ಆ ಸಮುದ್ರದ ಅಲೆಗಳ ನರ್ತನ ಕಂಡು ಕ್ಲಿಚಕ್… ಕ್ಲಿಚಕ್… ಎಂದು
ಪೋಟೋ ತೆಗಿಸಿಕೊಂಡು ಹುಚ್ಚೆದ್ದು ಕುಣಿದು ಲೋಕವನ್ನೆ ಮರೆತು ಸಂಭ್ರಮಿಸಿ ಮುಂದೆ ಧನುಷ್ ಕೋಡಿ ಎಂಬ ಬೇಚಿರಾಕ್ ಗ್ರಾಮಕ್ಕೆ ಬಂದೆವು ಧನುಷ್ ಕೋಡಿ ಶ್ರೀ ರಾಮನು ಬಾಣ ಬಿಟ್ಟ ಊರು 1964 ರಲ್ಲಿ ಸೈಕ್ಲೋನ್ ಬಂದು ಇಡೀ ಗ್ರಾಮಕ್ಕೆ ಗ್ರಾಮವೇ ಕೊಚ್ಚಿಕೊಂಡು ನೀರುಪಾಲಾಗಿದೆ ಅಲ್ಲಿ ಇಂದಿಗೂ ಪಾಳು ಮನೆಗಳು ರೈಲ್ವೇ ಜಂಕ್ಷನ್ ಇದ್ದು ಅಲ್ಲಿ ರಾಮಸೇತುವೆಗೆ ಬಳಸಿದ ‘ನೀರಿನಲ್ಲಿ ತೇಲುವ ಕಲ್ಲು’ ನೋಡಿ ಖುಷಿಪಟ್ಟೆವು ಮುಂದೆ ಸಾಗಿ ರಾವಣನು ತನ್ನ ಸಹೋದರನಿಗೆ ಪಟ್ಟಾಭಿಷೇಕ ಮಾಡಿದ ಸ್ಥಳವನ್ನು ನೋಡಿ ಕೈ ಮುಗಿದು, ಎಳನೀರು, ಐಸ್ ಕ್ರೀಂ ತಿಂದು ರಾಮೇಶ್ವರಂ ಕಡೆಗೆ ಹೊರಟು ಸೀದಾ ರಾಮೇಶ್ವರ ದೇವಾಲಯಕ್ಕೆ ಹೊರಟೆವು ಅಬ್ಬಾಬ್ಬ ! ಅದೆಂತ ಅದ್ದೂರಿ ದೇವಾಲಯ ಆ ಕಂಬಗಳು ಆ ಹಜಾರಗಳು, ಆ ಮಂಟಪಗಳು, ಆ ಮೇಲ್ಚಾವಣಿಗಳು, ಆ ದೇವರ ದರ್ಶನಕ್ಕೆ ಸಾಲುಗಟ್ಟಿ ನಿಂತ ಭಕ್ತರು, ಆ 21 ಕೊಳದ ನೀರಿನಲ್ಲಿ ಸ್ನಾನ ಮಾಡಲು ನಿಂತ ಜನರು ಕಲೆ ಮತ್ತು ವಾಸ್ತುಶಿಲ್ಪ ನೋಡಿ ಯಾವ ಶತಮಾನದ ದೇವಾಲಯಗಳೆಂದು ನೋಡಿದರೆ 7-8 ನೇ ಶತಮಾನದ ಭವ್ಯವಾದ ರಾಮೇಶ್ವರ ದೇವಾಲಯದ ಶಿಲ್ಪಿಗಳಿಗೆ ನನ್ನ ಧೀರ್ಘದಂಡ ನಮಸ್ಕಾರಗಳು.
ದರ್ಶನ ಮುಗಿಸಿಕೊಂಡು ಮಜ್ಜಿಗೆ ಕುಡಿದು ಜನನ-ಮರಣ ನಾಗೇಂದ್ರನ ಕಪಿಚೇಷ್ಟೇ ಗೂಗಲ್ ಮ್ಯಾಪ್ ರೂಟ್ ಹಿಡಿದು ದಾರಿ ಸಿಗದೆ ಹೆಣಗಾಡಿ ನಾಗನಿಗೆ ಬೈದಾಡಿ ಬಸವಳಿದು ರೂಂ ತಲುಪಿದ್ದಾಯ್ತು ಪುನ: ನೇರ ಕನ್ಯಾಕುಮಾರಿಗೆ ಹೋಗಲು ನಿರ್ಧರಿಸಿ ಕೆಲಹೊತ್ತು ವಿಶ್ರಮಿಸಿ ಹೋಗೋಣವೆಂದು ವಾಗ್ವಾದ ನಡೆಸಿ ಯಾರ ಮಾತಿಗೂ ಒಲಿಯದ ನಮ್ಮ ಹುಡುಗರು ಧಗೆಯ ಏಟಿಗೆ ಒಲಿದು ಗಂಟುಮೂಟೆ ಕಟ್ಟಿಕೊಂಡು ಕನ್ಯಾಕುಮಾರಿಯ ಹಾದಿ ಹಿಡಿದೆವು.
ಉಫ್ss…ಧಗೆಯ ಛಡಿ ಏಟಿಗೆ ಹಸಿದ ಹೊಟ್ಟೆಗೆ ಊಟ ಮಾಡಲು ನಿರ್ಧರಿಸಿ ಯಾವುದಾದರೂ ಚೀಫ್ ಅಂಡ್ ಬೆಸ್ಟ್ ಹೋಟೆಲ್ ಹತ್ತಿರ ವಾಹನ ನಿಲ್ಲಿಸಲು ಹೇಳಿದೆವು ಸಮುದ್ರದ ಮಧ್ಯೆ ಮೇಲ್ಸುತೆವೆಯ ಹತ್ತಿ ಮಾವಿನ ಹಣ್ಣು, ಪೈನಾಪಲ್ ಸವಿಯುತ್ತಾ ಸಮುದ್ರದ ವಿಹಂಗಮ ನೋಟ ನೋಡಿ ಕಣ್ತುಂಬಿಕೊಂಡು ಮುಂದೆ ಸಾಗಿ ಒಂದೆರೆಡು ಹೋಟೆಲ್ಲುಗಳ ನೋಡಿ ಕೊನೆಗೆ ಒಂದು ಪುಟ್ಟ ಗುಡಿಸಲಿನ ಹೋಟೆಲ್ ಹತ್ತಿರ ಊಟಕ್ಕೆ ಹೋದಾಗ ಅಲ್ಲಿ ಅನ್ನ ಮೀನುಳಿ ಮತ್ತು ಫಿಶ್ ಫ್ರೈ ಮಾತ್ರವೇ ಇದ್ದುದಾಗಿ ಹೇಳಿದರು ನಾವು ಅಲ್ಲಿಯೇ ಊಟ ಮಾಡಲು ಕುಳಿತೆವು ಊಟ, ಅಂದ್ರೆ ಅದು ಕಣ್ರೀ ಆ ಹೋಟೆಲ್ಲಿನ ಬೀಟ್ ರೋಟ್ ಪಲ್ಯಾ, ಅಲಸಂದೆ ಪಲ್ಯಾ, ಆಮ್ಲೇಟ್, ಆ ಮೀನಿನ ಫ್ರೈ ಅಬ್ಬಾ ನಾಲಿಗೆ ಮೇಲೆ ಆ ರುಚಿ ಇನ್ನೂ ಹಾಗೆಯೇ ಇದೆ ಸಮುದ್ರದ ಮೀನಲ್ವಾ ಹೊಳೆಯ ಮೀನು ತಿಂದ ನಮಗೆ ಸಮುದ್ರದ ಮೀನು ಬಲು ರುಚಿ ಕೊಡ್ತು ಈ ಬರಗೆಟ್ಟ ನಾಲಿಗೆಗೆ ಪ್ರಯಾಣ ಹಾಗೆಯೇ ಸಾಗಿತು.
ಒಂದೆರಡು ಕಡೆ ಟೀ ಕುಡಿದು ಹೊರಟು ಸೀದಾ ಬಾಲಮುರುಗನ್ ದೇವಾಲಯಕ್ಕೆ ಹೊರಟೆವು ಬೀಚ್ನಲ್ಲಿ ಕೆಲವರು ಈಜಿ ಕೆಲವರು ದರ್ಶನ ಪಡೆದು ಸಂಭ್ರಮಿಸಿ ಮುಂದೆ ಡಾಬ ಒಂದರಲ್ಲಿ ಊಟ ಮುಗಿಸಿ ವಾಹನದಲ್ಲಿ ಸಿನೆಮಾ ಹಾಡುಗಳ ಮಧ್ಯೆ ಪ್ರಯಾಣ ಸಾಗಿ ರಾತ್ರಿ 12 ಗಂಟೆಯ ಮೇಲೆ ಕನ್ಯಾಕುಮಾರಿ ತಲುಪಿ ವಾಗ್ ಯುದ್ಧಕ್ಕಿಳಿದು ಎರಡು ರೂಂ ಮಾಡಿ ಬೆಳಗ್ಗೆ ಕನ್ಯಾಕುಮಾರಿಯ ಪ್ರಸಿದ್ಧ ಸೂರ್ಯೋದಯ ಆಗುವ ದೃಶ್ಯವನ್ನು ನೋಡಬೇಕೆಂದು ಚರ್ಚಿಸಿ ಮೊಬೈಲ್ ಚಾರ್ಜ್ ಗೆ ಹಾಕಿ, ಹಸಿ ಬಟ್ಟೆಗಳ ಒಣಗಾಕಿ ಮಲಗಿ ಅಲಾರಾಂ ಸದ್ದಿಗೆ ನೀ ಏಳು, ನಾ ಏಳು ಎಂದು ಕೊನೆಗೆ ಒಂದ್ಮೂರ್ನಾಲ್ಕು ಜನ ಮಾತ್ರವೇ ಕನ್ಯಾಕುಮಾರಿಯ ಕವಿ ತಿರುವಳ್ಳೂರು ಪ್ರತಿಮೆ ಮತ್ತು ಸ್ವಾಮಿ ವಿವೇಕಾನಂದ ರಾಕ್ ಗಾರ್ಡನ್ ಹತ್ತಿರದ ಕಡಲ ತೀರಕ್ಕೆ ಹೊರಟೆವು ” ಸ್ವರ್ಗ ಮೇಲೆಲ್ಲೂ ಇಲ್ಲ ಕನ್ಯಾಕುಮಾರಿಯಲ್ಲೆ ಇದೆ ಅಂತ ನನಗನಿಸ್ತು ಏನ್ರೀ ಆ ಸಮುದ್ರದ ಅಲೆಗಳ ಶಬ್ಧ ಅಬ್ಬಾ…..! ಏನ್ರೀ ಸೂರ್ಯೋದಯಕ್ಕೂ ಮುನ್ನ ಸಮುದ್ರದಾಸಿಗೆಯ ಮೇಲೆ ಬೀಳೋ ಹೊಂಬಣ್ಣ, ಕೆಂಬಣ್ಣ ಮತ್ತು ಮೀನುಗಾರಾರು ಸಮುದ್ರದ ಸಣ್ಣ ಹಡಗಿನಲ್ಲಿ ಬಲೆಯನಾಕುವ ದೃಶ್ಯ ಎಲ್ಲವೂ ಸ್ವರ್ಗಸದೃಶ್ಯವೇ ಸರಿ” ಅಂತೂ ಇಂತೂ ಸಮುದ್ರದಿಂದಲೇ ಸೂರ್ಯ ಹುಟ್ಟೋದೇನೋ ಅನಿಸ್ತು ಆ ಸೂರ್ಯೋದಯ ಆ ಚೆಲುವನ್ನು ವರ್ಣಿಸೋಕೆ ನನ್ನ ಹತ್ತಿರ ಪದಗಳೇ ಇಲ್ಲ ಆ ಸಮುದ್ರದಲೆಯ ನರ್ತನದ ಮುಂದೆ ನನ್ನ ಶಬ್ದ ಕೋಶವೇ ಸೋತು ಹೋಗಿದೆ.
ಸೂರ್ಯನನ್ನು ಕೈಯಲ್ಲಿ ಸೆರೆಹಿಡಿಯುವುದು, ವಿಡಿಯೋ ಮಾಡಿಕೊಳ್ಳುವುದು ಬೆಳ್ಳಂಬೆಳಗ್ಗೆ ಇಂದ್ರಲೋಕಕ್ಕೆ ಹೋಗಿ ಬಂದಂಗಾಯ್ತು ನನಗೆ ಇದನ್ನ ನೋಡಿದ ನಾವೇ ಧನ್ಯರು ಅಲ್ಲಿಯವರೆಗೆ ಬಂದು ಸೂರ್ಯೋದಯ ನೋಡದೆ ಕುಂಭಕರ್ಣನಂತೆ ನಿದ್ರಿಸಿದ ನಮ್ಮ ಹುಡುಗರೆ ನತದೃಷ್ಟರು. ಅಂತೂ ಇಂತೂ ಸೂರ್ಯೋದಯ ನೋಡಿ ಬೋಟ್ನಲ್ಲಿ ಸ್ವಾಮಿ ವಿವೇಕಾನಂದ ರಾಕ್ ಪ್ರತಿಮೆ ಹತ್ತಿರ ಹೋಗಬೇಕು ಅಂತ ಕ್ಯೂನಲ್ಲಿ ಮಧ್ಯ ಹೋಗಿ ಸೇರಿಕೊಂಡಾಗ ನಮ್ಮ ಹಿಂದೆ ಇದ್ದ ಕೆಲವರು ತಿಳಿಯದ ತಮಿಳು ಭಾಷೆಯಲ್ಲಿ ಶಪಿಸಿ ಪೋಲಿಸರಿಗೆ ಹೇಳಿದರು ಪ್ರಯೋಜನವಾಗಲಿಲ್ಲ ಅವರು ಬೈಯ್ಯೋದೆಲ್ಲ ನಮಗೆ “ಹಳೆಗನ್ನಡದ ಪದ್ಯದ” ತರ ಕೇಳಿಸ್ತು ಅಂತೂ ಇಂತೂ ಬೋಟ್ನಲ್ಲಿ ಪ್ರತಿಮೆ ಹತ್ತಿರ ಹೋಗಿ ಸಮುದ್ರದ ಮಧ್ಯೆ ನಿಂತು ಕುಣಿದು ಕುಪ್ಪಳಿಸಿ, ಕಣ್ಣಿಗೆ ಎಟಕುವಷ್ಟು ಸಮುದ್ರ ನೋಡಿ ವಾಪಾಸ್ ರೂಂಗೆ ಬಂದು ಮಧುರೈಗೆ ಊಟ ಮುಗಿಸಿಕೊಂಡು ಹೊರಟೆವು ಮಧ್ಯೆ ಒಂದು ಬೀಚ್ನಲ್ಲಿ ಸಂಜೆ ಈಜಾಡಿ ಸಮುದ್ರದ ದಡದಲ್ಲಿ ಕಬ್ಬಡಿ ಆಟ ಆಡಿ ಮತ್ತೆ ಪ್ರಯಾಣ ಸಾಗಿತು.
ನನ್ನ ಮಧುರೈ ‘ದೇವಾಲಯಗಳ ನಾಡು’ ಸಾಹಿತ್ಯಿಕ ಪುಷ್ಪಮಯ & ಧಾರ್ಮಿಕ ಉತ್ಸಾಹಕ್ಕೆ ಮಧುರೈ ಹೆಸರುವಾಸಿ ‘ಮತಿರೈ’, ‘ಕೂಡಲ್’ & ‘ಆಲವ್ಯಡಿನರು’ ಮಧುರೈನ ಮೂಲ ಹೆಸರು ಮಧುರೈ ಮೀನುಗಾರಿಕೆ ಉದ್ಯಮಕ್ಕೆ ಹೆಸರುವಾಸಿ ಗ್ರೀಕ್, ರೋಮನ್, ಅರೇಬಿಕ್ ವಿದೇಶಿ ವ್ಯಾಪಾರಿಗಳು ಮಧುರೈಗೆ ಭೇಟಿ ನೀಡಿದ್ದಾರೆ. ‘ದೇವಾಲಯಗಳ ನಗರ’, ‘ಹಬ್ಬಗಳ ನಗರ’ ಅದೆಂತಹ ವೈಭವ ರೀ ಆ ದೇವಾಲಯದ್ದು. ಮಧುರೈ ಭಾರತೀಯ ಉಪಖಂಡದ ಪ್ರಾಚೀನ & ವೈಭವದ ನಗರಗಳಲ್ಲಿ ಒಂದು ಇದು ಭಾರತೀಯ ಪರ್ಯಾಯ ದ್ವೀಪದ ದಕ್ಷಿಣ ಭಾಗದಲ್ಲಿದೆ.
ಅಬ್ಬಾ ರಾತ್ರಿ ಹೊತ್ತಿಗೆ ಮಧುರೈಗೆ ಬಂದು ವಸತಿ ಮಾಡಿ ಬೆಳಗ್ಗೆ ಎದ್ದು ಮಧುರೈ “ಅರಳ್ಮಿಗು ಮೀನಾಕ್ಷಿ ಸುಂದರೇಶ್ವರ” ದೇವಾಲಯದ ಗೋಪುರ ಕೋಟೆ ವಿನ್ಯಾಸದ ಆ ಶೈಲಿ ನೋಡಿ ನಾವು ಅಕ್ಷರಶಃ ದಂಗಾಗಿ ಹೋದ್ವಿ. ಬಾದಾಮಿ ಐಹೊಳೆ ಪಟ್ಟದಕಲ್ಲು ಹಿಂದೂ ಶಿಲ್ಪಕಲೆಯ ಸಂಪ್ರದಾಯದ ತೊಟ್ಟಿಲುಗಳು. ಆದರೆ ಮೀನಾಕ್ಷಿ ದೇವಾಲಯವನ್ನು ಸೂಕ್ಷ್ಮರೂಪ ಅಥವಾ ಬ್ರಹ್ಮಾಂಡ ಮಾದರಿಯ ಸ್ಥೂಲಕಾಯ ಎಂದು ಕಲ್ಪಿಸಲಾಗಿದೆ . ತಮಿಳರಿಗೆ ‘ಸಂಗಂ’ ಶಿಲ್ಪಕಲೆ ಚೆನ್ನಾಗಿ ಪರಿಚಿತವಿತ್ತು ಮಧುರೈ ದೇವಾಲಯ ಯಾವ ಒಬ್ಬರ ಆಳ್ವಿಕೆಯಲ್ಲಿ ಪೂರ್ಣಗೊಂಡ ದೇವಾಲಯವಲ್ಲ ಆರಂಭದಲ್ಲಿ ಪಲ್ಲವರು,ಪಾಂಡ್ಯರು, ಚೋಳರು, ಗಂಗರು, ಹಾಗೂ ವಿಜಯನಗರ ಸಾಮ್ರಾಜ್ಯದ ಮಧುರೈನ ನಾಯಕರ ಕೊಡುಗೆ ಅಪಾರ ದೆಹಲಿಯ ಸುಲ್ತಾನರು, ಮುಸ್ಲಿಂ ಆಡಳಿತಗಾರರು, ಆಳ್ವಿಕೆ ನಡೆಸಿದರು ಆದ್ದರಿಂದ ಮಧುರೈಯನ್ನ ಜಾತ್ಯತೀತ ವಾಸ್ತುಶಿಲ್ಪ & ಶಿಲ್ಪಕಲೆ ಅಲಂಕಾರಗಳ ಆಕರ್ಷಣೆ & ವಿವಿಧ ಧರ್ಮಗಳು & ಸಾಮಾಜಿಕ ವ್ಯವಸ್ಥೆಗಳಿಗೆ ಸೇರಿದ ಜನರು ಸಾಮರಸ್ಯದಿಂದ ಬದುಕಿದ ನಾಡೆಂದು ಪ್ರಸಿದ್ದಿ ಹಿಂದೂ ಪ್ರತಿಮಾಶಾಸ್ತ್ರ ಮತ್ತು ಧರ್ಮಶಾಸ್ತ್ರ, ಪಂಚಾಯತನ & ಶರ್ಮತಾ ಪರಿಕಲ್ಪನೆಗಳ ಚಿತ್ರಣ ದೈವತ್ವಗಳ ಚಿತ್ರಣ,ವಿಶ್ಣುವಿನ ಹತ್ತು ಅವತಾರಗಳು ವೈಷ್ಣವ ಧರ್ಮದ ಒಲವು, ಕೃಷ್ಣ, ರಾಮಾಯಣ, ಮಹಾಭಾರತ, ಬೇಟೆಯ ದೃಶ್ಯಗಳು, ನೃತ್ಯಗಳು, ಕೋಲಾಟ, ಜಾನಾನದ ಕಲೆಗಳ ಸಾಮಾಜಿಕ ಚಟುವಟಿಕೆಗಳ ಚಿತ್ರಣ, ರತಿ&ಮನ್ಮಥನ ಪ್ರತಿಮೆಗಳು ಕಾಮಾಯಣದ ಆಧಾರ, ಆಡಳಿತಾಧಿಕಾರಿಗಳು ಮತ್ತು ಅಧಿಕಾರಿಗಳ ಭಾವಚಿತ್ರ & 2000 ವರ್ಷಗಳ ಬ್ರಾಹ್ಮಿ & ತಮಿಳು ಶಾಸನಗಳನ್ನು ಹೊಂದಿದೆ.
ಮೀನಾಕ್ಷಿ ಕಾಂಚನಮಾಲ, ನೆಲಮಾಳಿಗೆ, ಮಧುರೈ ಮಂಟಪ, ಆನಂದ ನಂದಿ, ಅಗ್ನಿ ವೀರಭದ್ರ, ಅಘೋರ ವೀರಭದ್ರ, ನವಗ್ರಹಮಂಟಪ, 49 ಕವಿಗಳ ಶಿಲ್ಪ, ಕದಂಬ ವೃಕ್ಷಗಳು , ನಾಗರಮಂಟಪ, ಸಂಗೀತ ವಾದ್ಯಗಳು, ಅಷ್ಟಶಕ್ತಿ ಮಂಟಪ, ವೇದಮರಬಡ್ಡೆ, ನೃತ್ಯ ಗಣಪತಿ & ಸುಬ್ರಮಣ್ಯ, ಎರಡು ಗೋಲ್ಡನ್ ಟವರ್ 12 ಗೋಪುರಗಳು, ರೋಸ್ ಪೀಟರ್ ಎಂಬ ಆಂಗ್ಲ ಜಿಲ್ಲಾಧಿಕಾರಿ ಮೀನಾಕ್ಷಿ ದೇವಿಯ ಪವಾಡದಿಂದ ಜೀವ ಉಳಿದುದಕ್ಕಾಗಿ ಬಂಗಾರದ & ಅಮೂಲ್ಯವಾದ ಕಲ್ಲುಗಳಿಂದ ಹೊದಿಸಿದ ಸ್ಟಿರಫ್ ಅನ್ನು ಮಾಡಿಸಿದನೆಂಬ ಐತಿಹ್ಯವಿದೆ 45 ಎಕರೆಯಲ್ಲಿರುವ ದೇವಾಲಯವನ್ನು ಅಲ್ಲಾವುದ್ದೀನ್ ಖಿಲ್ಜಿಯ ದಂಡನಾಯಕ ಮಲ್ಲಿಕಾಫರ್ ಒಮ್ಮೆ ದಾಳಿ ಅಪಾರ ಪ್ರಮಾಣದ ಸಂಪತ್ತನ್ನು ಲೂಟಿ ಮಾಡಿದ್ದನು ಮತ್ತು ದೇವಾಲಯದ ಒಳಗಡೆ ಇರುವ ಒಂದು ಕೊಳದಲ್ಲಿ ಬಂಗಾರದ ತಾವರೆಗಳು ಅರಳುತ್ತಿದ್ದವು ಆ ಕಾಲದಲ್ಲಿ ಕವಿಗಳು ಬರೆದ ಪುಸ್ತಕಳು ಗಟ್ಟಿಯಾಗಿದ್ದರೆ ನೀರಿನಲ್ಲಿ ತೇಲುತ್ತಿದ್ದವು ಜೊಳ್ಳಾಗಿದ್ದರೆ ನೀರಿನಲ್ಲಿ ಮುಳುಗುತ್ತಿದ್ದವು ಈ ರೀತಿಯಾಗಿ ಪುಸ್ತಕಗಳ ಸತ್ವವನ್ನು ತಿಳಿಯಲು ಈ ಕೊಳವನ್ನು ಬಳಸಲಾಗುತ್ತಿತ್ತು ಎಂಬ ಐತಿಹ್ಯವಿದೆ. ಮಧುರೈ ನಗರವು ದೇವಾಲಯದ ತಾವರೆಯ ಎಲೆಗಳಂತೆ ಚಾಚಿಕೊಂಡು ಬೆಳೆದಿದೆ.
ಮಧುರೈನ ಮೀನಾಕ್ಷಿ ದೇವಾಲಯ ನೋಡಿಕೊಂಡು ಪಳನಿ ಬೆಟ್ಟಕ್ಕೆ ಹೋಗಿ ಪಳನಿ ಸುಬ್ರಮ್ಯ ಸ್ವಾಮಿಯ ದರ್ಶನವನ್ನು ಮೆಟ್ಟಿಲು ಏರಿ ಹತ್ತಿ ದರ್ಶನ ಪಡೆದು ಪುನಃ ಚಾಮರಾಜನಗರಕ್ಕೆ ಹೊರಟೆವು ಇಂತಹ ಸಮುದ್ರಗಳೊಂದಿಗೆ ಮಾತು, ದೇಗುಲಗಳ ದರ್ಶನ, ಸಂಭ್ರಮದೊಂದಿಗೆ ಪ್ರಯಾಣ ಜೀವನವೆಂಬ ಪುಸ್ತಕರ ಒಂದೊಳ್ಳೆ ಪುಟವಾಗಿದೆ.
(ಕೆ.ಶ್ರೀಧರ್ (ಕೆ.ಸಿರಿ)
ಯುವ ಸಾಹಿತಿ
636229492)
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂಕಣ
ಇತಿಹಾಸ ಕಥನಶಾಸ್ತ್ರ: ಅಂಬೇಡ್ಕರ್ ಅವರ ಚಿಂತನೆಯ ಹಾದಿ
~ಮೇಟಿ ಮಲ್ಲಿಕಾರ್ಜುನ, ಪ್ರಾಧ್ಯಾಪಕರು, ಸಹ್ಯಾದ್ರಿ ಕಾಲೇಜು, ಶಿವಮೊಗ್ಗ
ಅಂಬೇಡ್ಕರ್ ಅವರು ಭಾರತದ ಚರಿತ್ರೆಗಳ ರಚನೆಗೆ ಪ್ರಾಯೋಗಿಕ ಉಪಕರಣಗಳನ್ನು (ಎಂಪರಿಕಲ್ ಟೂಲ್ಸ್) ಬಳಸಿರುತ್ತಾರೆ. ಆದರೆ ಈ ಎಲ್ಲ ಉಪಕರಣಗಳು ಕೇವಲ ಚರಿತ್ರೆಯ ರಚನೆಗೆ ಮಾತ್ರ ಕಾರಣವಾಗದೆ, ಸಮೂಹಗಳ ಸಾಮಾಜಿಕ-ರಾಜಕೀಯ ಸಮಾನತೆ, ಸ್ವಾಯತ್ತತೆಯನ್ನೂ ಕಲ್ಪಿಸುವುದಕ್ಕೂ ಬದ್ಧವಾಗಿರುತ್ತವೆ. ಆರ್ಥಿಕತೆಯ ನಿಲುವುಗಳ ಮೂಲಕ ಭಾರತದ ಚರಿತ್ರೆಯನ್ನು ವ್ಯಾಖ್ಯಾನಿಸುವ ಕ್ರಮಗಳನ್ನು ಅಂಬೇಡ್ಕರ್ ಅವರು ಅತ್ಯಂತ ಕಟುವಾಗಿಯೇ ವಿಮರ್ಶಿಸುತ್ತಾರೆ.
ಸಮಾಜವಾದಿಗಳು ಮತ್ತು ಮಾರ್ಕ್ಸ್ವಾದಿಗಳು ಆರ್ಥಿಕತೆಯ ನೆಲೆಯಿಂದ ಭಾರತದಲ್ಲಿ ಚರಿತ್ರೆಗಳನ್ನು ನಿರ್ವಚಿಸುವ ಪ್ರಯತ್ನವನ್ನು ಮಾಡಿರುತ್ತಾರೆ ಎನ್ನುವುದನ್ನು ಇಲ್ಲಿ ಗಮನಿಸಬಹುದು. ಭಾರತದ ಚರಿತ್ರೆಗಳಲ್ಲಿ ದಾಖಲಾಗಿರುವ ಯಾವುದೇ ರಾಜಕೀಯ ಕ್ರಾಂತಿ/ಹೋರಾಟಗಳು ಯಾವಾಗಲೂ ಸಾಮಾಜಿಕ-ಧಾರ್ಮಿಕ ಕ್ರಾಂತಿಗಳಿಂದ ಮಾತ್ರ ಕೂಡಿರುವುದನ್ನೂ ಅಂಬೇಡ್ಕರ್ ಅವರು ಇಲ್ಲಿ ಗುರುತಿಸುತ್ತಾರೆ. ಭಾರತದಲ್ಲಿ ಅಷ್ಟೆಯಲ್ಲ, ಅಮೆರಿಕ, ಯುರೋಪ್, ಅರೇಬಿಯಾ ದೇಶಗಳಲ್ಲಿಯೂ ಇದೇ ಬಗೆಯ ಚರಿತ್ರೆಯ ನಿರ್ಮಾಣವು ನಡೆದಿರುವುದನ್ನು ನೋಡುತ್ತೇವೆ. ಮತ್ತು ಶಿವಾಜಿ, ಚಂದ್ರಗುಪ್ತ ಮೌರ್ಯ, ಸಿಖ್ ರಾಜ್ಯಗಳ ರಾಜರುಗಳಿಂದ ಕೈಗೊಳ್ಳಲಾದ ರಾಜಕೀಯ ಕ್ರಾಂತಿಗಳು, ಬುದ್ಧ, ಗುರು ನಾನಕ್ ಹಾಗೂ ಇತರ ಸಾಧು ಸಂತರ ಸಾಮಾಜಿಕ, ಧಾರ್ಮಿಕ ಚಳವಳಿಗಳ ಮೂಲಕ ಕಂಡಿರುತ್ತೇವೆ.
ಆದರೆ ಪರಿಣಾಮಗಳಲ್ಲಿ ಅಗಾಧವಾದ ವ್ಯತ್ಯಾಸಗಳನ್ನೂ ನಾವು ಇವತ್ತು ಕಾಣುತ್ತೇವೆ ಹಾಗೂ ಭಾರತದ ಚರಿತ್ರೆಗಳನ್ನು ಕುರಿತು ಬ್ರಿಟಿಶರು ತಾಳಿರುವ ಧೋರಣೆಗಳು ಅತ್ಯಂತ ದೋಷಪೂರಿತ ನೆಲೆಗಳಿಂದ ಕೂಡಿದ್ದವು ಎಂಬುದನ್ನು ಅಂಬೇಡ್ಕರ್ ಅವರು ಅತ್ಯಂತ ಬಲವಾಗಿ ನಂಬಿದ್ದರು. ಮತ್ತು ಅವುಗಳನ್ನು ಬಿಡಿಸಿ ತೋರಿಸುವುದಕ್ಕೆ ಬೇಕಾದ ಪರಿಕರಗಳನ್ನೂ ತಮ್ಮ ಅಧ್ಯಯನಗಳ ಮೂಲಕ ರೂಪಿಸಿರುತ್ತಾರೆ.
ಭಿನ್ನ ಸಂವೇದನೆಯ ಮೂಲಕ ಭಾರತವನ್ನು ಗ್ರಹಿಸಿದ ಅಂಬೇಡ್ಕರ್ ಚಿಂತನೆಗಳು ಹಾಗೂ ಸಾಮಾಜಿಕವಾಗಿ ಅತ್ಯಂತ ಸೂಕ್ಷ್ಮ ನಿಲುವುಗಳಾಗಿ ಯಾವತ್ತಿಗೂ ಚರ್ಚೆಗೆ ಒಳಪಡುತ್ತಿರುವ ‘ಅಲ್ಪಸಂಖ್ಯಾತರು’ ‘ಲಿಂಗ’ ಹಾಗೂ ‘ಜಾತಿ’ಗಳ ನಡುವೆ ಒಂದು ಬಗೆಯ ತಾರ್ಕಿಕ ನಂಟನ್ನು ಏರ್ಪಡಿಸಬಹುದು. ರಾಷ್ಟ್ರೀಯತೆಯ ಜೊತೆಗೆ ಅಲ್ಪಸಂಖ್ಯಾತರು, ಲಿಂಗ ಹಾಗೂ ಜಾತಿಯ ವಿನ್ಯಾಸಗಳನ್ನು ಇಟ್ಟು ನೋಡಿದರೆ, ರಾಷ್ಟ್ರೀಯತೆ ಎನ್ನುವುದು ಕೇವಲ ಏಕಾಕೃತಿಯ ನೆಲೆಯನ್ನಾಗಿ ಬಿಂಬಿಸಲಾಗುತ್ತದೆ. ಇಂತಹ ಏಕಾಕೃತಿ ನಿಲುವುಗಳನ್ನು ಭಗ್ನ ಮಾಡುವ ಅತ್ಯಂತ ಪ್ರಖರವಾದ ಚಿಂತನೆಗಳನ್ನು, ಅಲ್ಪಸಂಖ್ಯಾತ, ಲಿಂಗ, ಜಾತಿ ಮತ್ತು ಧರ್ಮಗಳ ವಿನ್ಯಾಸಗಳನ್ನು ನೆಲೆಯಾಗಿಸಿಕೊಂಡು ಅಂಬೇಡ್ಕರ್ ಅವರು ಚಿಂತಿಸಿರುತ್ತಾರೆ. ಹಾಗೂ ಈ ಚಿಂತನೆಗಳ ಮುಖೇನವೇ ಸಾಂಸ್ಕೃತಿಕ-ಚಾರಿತ್ರಿಕ ಬಹುಳತೆಯನ್ನು ಕಂಡರಿಸುವ ದಾರಿಗಳನ್ನೂ ಅವರ ಚಿಂತನೆಗಳಲ್ಲಿ ಕಾಣಬಹುದಾಗಿದೆ.
ಅಂದರೆ ಅಂಬೇಡ್ಕರ್ ಅವರ ಸೈದ್ಧಾಂತಿಕ ತಿಳಿವಿನ ಚೌಕಟ್ಟನ್ನು ಅರಿಯಬೇಕೆಂದರೆ, ಅವರು ಫ್ರೆಂಚ್ ಕ್ರಾಂತಿಯಿಂದ ಎರವಲು ಪಡೆದಿರುವ ಸಾಮಾಜಿಕ-ರಾಜಕೀಯ ‘ತ್ರಿಕೂಟ’ (ಟ್ರಿನಿಟಿ) ಪರಿಕಲ್ಪನೆಗಳನ್ನು ಇಲ್ಲಿ ನಾವು ಪರಿಗಣನೆಗೆ ತೆಗೆದುಕೊಳ್ಳುವ ಅಗತ್ಯವಿದೆ. ‘ಸ್ವಾತಂತ್ರ್ಯ, ಸಮಾನತೆ ಹಾಗೂ ಸಹೋದರತ್ವ’ ಎಂಬುದಾಗಿ ಈ ತ್ರಿಕೂಟ ಪರಿಕಲ್ಪನೆಗಳನ್ನು ಗುರುತಿಸಬಹುದು.
ಫ್ರೆಂಚ್ ಕ್ರಾಂತಿಯ ನಿಲುವುಗಳನ್ನು ಕುರುಡಾಗಿ ಅನುಕರಿಸುವುದಾಗಲೀ ಇಲ್ಲವೇ ಆ ಕ್ರಾಂತಿಯ ನಿಲುವುಗಳನ್ನು ಯಥಾವತ್ತಾಗಿ ಪಾಲಿಸುವುದಾಗಲೀ ಅಂಬೇಡ್ಕರ್ ಅವರ ಉದ್ದೇಶವಾಗಿರಲಿಲ್ಲ. ಆದರೆ ಈ ಕ್ರಾಂತಿಯಿಂದ ಪ್ರೇರಣೆಯನ್ನು ಮಾತ್ರ ಪಡೆದುಕೊಂಡಿರುತ್ತಾರೆ. ಅಂಬೇಡ್ಕರ್ ಅವರು ಈ ತ್ರಿಕೂಟ ಪರಿಕಲ್ಪನೆಗಳನ್ನು ಮರುಪರೀಕ್ಷಿಸುವುದು ಅಷ್ಟೆಯಲ್ಲದೆ ಅವುಗಳನ್ನು ಮರು ವಿನ್ಯಾಸಗೊಳಿಸಿರುವುದನ್ನೂ ಇಲ್ಲಿ ನೋಡಬಹುದು. ಅಂದರೆ, ಫ್ರೆಂಚ್ ಕ್ರಾಂತಿಯ ಸನ್ನಿವೇಶಕ್ಕಿಂತ ಮಿಗಿಲಾದ ಸಾಮಾಜಿಕ-ಸಾಂಸ್ಕೃತಿಕ ಆಯಾಮ ಮತ್ತು ಅರ್ಥಗಳನ್ನು ಅಂಬೇಡ್ಕರ್ ಅವರು ಈ ಪರಿಕಲ್ಪನೆಗಳಿಗೆ ಕೊಟ್ಟಿರುತ್ತಾರೆ.
ಜಾತಿಕೇಂದ್ರಿತವಾದ ಭಾರತ ದೇಶವು ವರ್ಗಕೇಂದ್ರಿತವಾದ ಫ್ರೆಂಚ್ ದೇಶಕ್ಕಿಂತ ಸಹಜವಾಗಿಯೇ ಭಿನ್ನವಾಗಿದೆ. ಈ ಸಾಮಾಜಿಕ ವಿನ್ಯಾಸಕ್ಕೆ ಅನುಗುಣವಾಗಿಯೇ ಅಂಬೇಡ್ಕರ್ ಅವರು ಈ ತ್ರಿಕೂಟ ಪರಿಕಲ್ಪನೆಗಳ ತಾತ್ವಿಕತೆಯನ್ನು ರೂಪಿಸಿರುತ್ತಾರೆ. ಸಮೂಹಗಳ ಒಳ್ಳೆಯ ಬದುಕಿಗೆ ಈ ತ್ರಿಕೂಟಗಳು ಅತ್ಯಂತ ಅವಶ್ಯವೆಂಬುದನ್ನು ಅಂಬೇಡ್ಕರ್ ಅವರು ಮನಗಂಡಿದ್ದರು (ರೊಡ್ರಿಗಸ್, 2002). ಚರಿತ್ರೆಯ ನಿರ್ಮಾಣದಲ್ಲಿ ಹಾಗೂ ಸಾಮಾಜಿಕ ಬದುಕುಗಳನ್ನು ಕಟ್ಟಿಕೊಳ್ಳುವಲ್ಲಿ ಈ ಸಮಾನತೆ, ಸ್ವಾತಂತ್ರ್ಯ ಹಾಗೂ ಸಹೋದರತ್ವವು ಎಷ್ಟೊಂದು ಮಹತ್ವದ ಪಾತ್ರವನ್ನು ವಹಿಸಬಲ್ಲವು ಎನ್ನುವುದನ್ನು ಅಂಬೇಡ್ಕರ್ ಅವರು ಮನಗಂಡಿದ್ದರು.
ಅಂಬೇಡ್ಕರ್ ಅವರು ಗಾಂಧಿ ಮತ್ತು ಕಾಂಗ್ರೇಸ್ ಸಂಘಟನೆಯನ್ನು ಕುರಿತು ‘ವ್ಹಾಟ್ ಗಾಂಧಿ ಆ್ಯಂಡ್ ಕಾಂಗ್ರೇಸ್ ಹ್ಯಾವ್ ಡನ್ ಟು ದ ಅನ್ಟಚೇಬಲ್ಸ್’ ಎಂಬ ಬರಹದಲ್ಲಿ ಸಮೂಹಗಳ ಏಳ್ಗೆಯ ನೆಲೆಯಿಂದ ವಿಶ್ಲೇಷಣೆ ಮಾಡಿರುತ್ತಾರೆ. ಅಂದರೆ ಸ್ವಾತಂತ್ರ್ಯ, ಸಮಾನತೆ ಮತ್ತು ಸಹೋದರತ್ವದಂತಹ ತ್ರಿಕೂಟ ಕಲ್ಪನೆಗಳು ಸಮೂಹಗಳ ಅಸ್ತಿತ್ವ, ಅಸ್ಮಿತೆ ಹಾಗೂ ಪ್ರಜ್ಞೆಯನ್ನು ಕುರಿತು ಮಾತ್ನಾಡಿದರೆ, ಕಾಂಗ್ರೆಸ್ ಸಂಘಟನೆಯು ರಾಷ್ಟ್ರೀಯತೆಯ ಕಲ್ಪನೆಯ ಬಗೆಗೆ ಮಾತ್ರ ಹೆಚ್ಚು ಕಾಳಜಿಯನ್ನು ವಹಿಸಿರುವುದನ್ನು ಇಲ್ಲಿ ನೋಡುತ್ತೇವೆ. ಆದರೆ ಗಾಂಧೀಜಿಯವರು ಸಾಂಪ್ರದಾಯಿಕ ರಾಷ್ಟ್ರೀಯತೆಯನ್ನು ಕುರಿತು ಯೋಚಿಸಿದರೆ, ನೆಹರೂ ಅವರು ಸಮಾಜವಾದದ ನೆಲೆಯಿಂದ ರಾಷ್ಟ್ರೀಯತೆಯ ಪ್ರಜ್ಞೆಯನ್ನು ರೂಪಿಸುವ ತುಡಿತವನ್ನು ಹೊಂದಿದ್ದರು. ಒಟ್ಟಾರೆ ರಾಷ್ಟ್ರೀಯತೆ ಬಗೆಗಿನ ನಿಲುವುಗಳಲ್ಲಿ ಬಹುಸಮಾಜಗಳು ಎದುರಿಸುವ ಸಾಮಾಜಿಕ-ರಾಜಕೀಯ ಬಿಕ್ಕಟ್ಟುಗಳು ಮಹತ್ವವನ್ನು ಪಡೆಯದೆ, ಕೇವಲ ರಾಷ್ಟ್ರ ಮತ್ತು ರಾಷ್ಟ್ರೀಯತೆಯ ಕುರಿತಾದ ಮೌಲ್ಯಗಳು ಮಾತ್ರ ಮುಂಚೂಣಿಗೆ ಬರುತ್ತವೆ.
ಹಾಗಾಗಿ ಭಾರತದ ಚರಿತ್ರೆಗಳಲ್ಲಿ ರಾಷ್ಟ್ರ, ರಾಷ್ಟ್ರ ಪ್ರಭುತ್ವ ಹಾಗೂ ರಾಷ್ಟ್ರೀಯತೆಗಳ ಮಹತ್ವ ಮತ್ತು ಹಿರಿಮೆಯ ಬಗೆಗಿರುವ ಕಾಳಜಿಗಳು, ಸಾಮಾಜಿಕ ಚರಿತ್ರೆಯನ್ನು ಬಿಂಬಿಸುವಲ್ಲಿ ಗೈರು ಆಗಿರುತ್ತವೆ. ಅಂಬೇಡ್ಕರ್ ಅವರು ಇಂತಹ ಚಾರಿತ್ರಿಕ ಲೋಪಗಳನ್ನು ಗುರುತಿಸುವ ಜೊತೆಗೆ, ರಾಜಕೀಯ ಪ್ರೇರಿತವಾದ ಚರಿತ್ರೆಗಳಿಗಿಂತ, ಸಾಮಾಜಿಕ ನೆಲೆಗಳಿಂದ ಚರಿತ್ರೆಯನ್ನು ಬರೆಯುವುದು ಎಷ್ಟೊಂದು ಮಹತ್ವದ ಕೆಲಸವೆಂಬುದನ್ನೂ ಮನಗಾಣಿಸಿದ್ದಾರೆ. ಸಾಮಾಜಿಕ ಚರಿತ್ರೆಗಳನ್ನು ಕಡೆಗಣಿಸಿ ರಾಷ್ಟ್ರೀಯತೆಯ ಕಲ್ಪನೆಯನ್ನು ಊಹಿಸುವುದು ಕೂಡ ದುಸ್ತರದ ಸಂಗತಿಯೆಂಬುದನ್ನು ಅಂಬೇಡ್ಕರ್ ಅವರು ಚಿಂತನೆಗಳು ನಮಗೆ ಮನವರಿಕೆ ಮಾಡುತ್ತವೆ. ಈ ಕಾರಣಗಳಿಂದ ‘ಚರಿತ್ರೆಯನ್ನು ಮರೆತವರು ಚರಿತ್ರೆಯನ್ನು ಸೃಷ್ಟಿಸಲಾರರು’ ಎಂಬ ನಿಲುವನ್ನು ಅತ್ಯಂತ ಬಲವಾಗಿಯೇ ಅಂಬೇಡ್ಕರ್ ಅವರು ನಂಬಿರುತ್ತಾರೆ ಎಂಬುದು ಅತ್ಯಂತ ಗಮನಾರ್ಹ ಸಂಗತಿ.
ಚರಿತ್ರೆ ಎಂಬುದು ಒಂದು ಕನಸಾಗಲೀ ಇಲ್ಲವೇ ಭ್ರಮೆಯಾಗಲೀ ಅಲ್ಲ ಹಾಗೂ ಚರಿತ್ರೆಯೆಂಬುದು ಒಂದು ನಿರ್ವಾತವೂ ಅಲ್ಲ ಮತ್ತು ತೆರಪುಗಳನ್ನು ತುಂಬುವ ಪ್ರಕ್ರಿಯೆಯೂ ಅಲ್ಲ. ಬದಲಾಗಿ ಅದೊಂದು ಸಾಮಾಜಿಕ-ಸಾಂಸ್ಕೃತಿಕ-ರಾಜಕೀಯ ಗ್ರಹಿಕೆ ಮತ್ತು ಜ್ಞಾನಶಿಸ್ತು ಆಗಿರುತ್ತದೆ. ಜ್ಞಾನಶಿಸ್ತುಗಳು ಮತ್ತು ಗ್ರಹಿಕೆಗಳು ಸಮೂಹ ಕೇಂದ್ರಿತವಾಗಿರುಬೇಕೆ ಹೊರತು ಕೇವಲ ರಾಜಕೀಯ-ಸಾಮಾಜಿಕ ಪ್ರಾಬಲ್ಯವನ್ನು ಹೊಂದಿರುವ ವ್ಯಕ್ತಿಗಳ ಇಲ್ಲವೇ ಆಳುವ ವರ್ಗಗಳನ್ನು ಮಾತ್ರ ಪ್ರತಿನಿಧಿಸುವ ವಿನ್ಯಾಸಗಳಾಗಿ ಇವುಗಳು ಇರಲಾರವು. ಚರಿತ್ರೆಯೂ ಒಂದು ಜ್ಞಾನಶಿಸ್ತೇ ಆಗಿರುವುದರಿಂದ, ಇದು ಬಹುಸಮೂಹಗಳನ್ನು ಪ್ರತಿನಿಧಿಸುವ ವಿನ್ಯಾಸವಾಗಬೇಕು ಎಂಬ ಅಚಲವಾದ ನಿಲುವನ್ನು ಅಂಬೇಡ್ಕರ್ ಅವರು ತಾಳಿದ್ದರು. ಯಾವುದೇ ಗ್ರಹಿಕೆಯು ಸಮೂಹ ಕೇಂದ್ರಿತವಾಗಿರುತ್ತದೆ ಎನ್ನುವ ನಿಲುವಿನಲ್ಲಿ ಅಂಬೇಡ್ಕರ್ ಅವರಿಗೆ ತಾತ್ವಿಕ ಹಾಗೂ ವೈಯಕ್ತಿಕವಾಗಿ ಅಪಾರವಾದ ನಂಬಿಕೆಯಿತ್ತು.
ಹಾಗಾಗಿ ಅಂಬೇಡ್ಕರ್ ಅವರು ನಿನ್ನೆಗಳನ್ನು ಕುರಿತಾದ ತಾತ್ವಿಕ ಪ್ರಶ್ನೆಗಳನ್ನು ಮೈಮೇಲೆ ಎಳೆದುಕೊಂಡು, ಅವುಗಳಿಗೆ ಉತ್ತರಗಳನ್ನು ಹುಡುಕುವ ಪ್ರಯತ್ನವನ್ನು ಮಾಡಿರುತ್ತಾರೆ. ನಿನ್ನೆಗಳು ತಮ್ಮ ಹಕ್ಕುಗಳೆಂದು ಯಾರು ವಾದಿಸುವವರೋ ಅವರೆಲ್ಲರಿಗೂ, ವರ್ತಮಾನದಲ್ಲಿ ಉಂಟಾಗಿರುವ ಬಿಕ್ಕಟ್ಟುಗಳಿಗೆ ಈ ನಿನ್ನೆಗಳು ಹೇಗೆ ಹೊಣೆಯಾಗಿವೆ ಎಂಬ ದಿಟವನ್ನು ಅರಿಯುವುದಕ್ಕೆ ಬೇಕಾದ ವಿಶ್ಲೇಷಣೆಗಳನ್ನು ಇವರು ಮಾಡಿರುತ್ತಾರೆ. ಅಂಬೇಡ್ಕರ್ ಅವರ ಈ ಹಾದಿಯು ಎಲ್ಲರಿಗೂ ಒಪ್ಪಿತವಾಗುವ ಸತ್ಯವನ್ನು ಹೇಳುವುದಲ್ಲ. ಬದಲಾಗಿ, ಎಲ್ಲ ಸಮೂಹಗಳ ಇವತ್ತಿನ ಬದುಕಿಗೆ ಅಗತ್ಯವಾಗಿರುವ ಹಾದಿಗಳನ್ನು ರೂಪಿಸುವುದಾಗಿತ್ತು. ಆದ್ದರಿಂದ, ಸದ್ಯದ ಚರಿತ್ರೆ, ಸಾಹಿತ್ಯ, ಸಂಸ್ಕೃತಿ, ಆರ್ಥಿಕತೆ ಹಾಗೂ ರಾಜಕಾರಣವನ್ನು ವಿಶ್ಲೇಷಿಸುವುದಕ್ಕೆ ಅಂಬೇಡ್ಕರ್ ಅವರು ರೂಪಿಸಿದ ಈ ತಾತ್ವಿಕ ವಿನ್ಯಾಸಗಳು ಅತ್ಯಂತ ಸಮರ್ಪಕವಾಗಿರುತ್ತವೆ. ಇವರ ಈ ತಾತ್ವಿಕ ವಿನ್ಯಾಸಗಳಲ್ಲಿ ಅನ್ಯ ಪ್ರಭಾವಕ್ಕಿಂತ ಪ್ರೇರಣೆಗಳನ್ನು ಮಾತ್ರ ನಾವು ಕಾಣುತ್ತೇವೆ. ಆದ್ದರಿಂದ ಅಂಬೇಡ್ಕರ್ ಅವರು ರೂಪಿಸಿದ ಮರುರಚನೆಯ (ರೀಕನ್ಸ್ಟ್ರಕ್ಸನ್) ಮಾದರಿಗಳು ಕೇವಲ ತೆರಪುಗಳನ್ನು ತುಂಬುವ ರಚನೆಗಳಾಗದೆ, ವರ್ತಮಾನದ ಬಿಕ್ಕಟ್ಟುಗಳಿಗೆ ಇವುಗಳು ಹೇಗೆ ಕಾರಣವಾಗಿರುತ್ತವೆ ಹಾಗೂ ಇವುಗಳಿಗೆ ಉತ್ತರಗಳನ್ನು ಕಂಡುಕೊಳ್ಳುವ ಬಗೆಗಳಾವುವು ಎಂಬೆಲ್ಲ ಸಂಗತಿಗಳನ್ನು ಕುರಿತು ಅತ್ಯಂತ ವಸ್ತುನಿಷ್ಠ ವಿಶ್ಲೇಷಣೆಗಳನ್ನು ತಮ್ಮ ಬರಹಗಳಲ್ಲಿ ಮಾಡಿರುತ್ತಾರೆ.
ಅಂಬೇಡ್ಕರ್ ಅವರಿಗಿಂತ ಮೊದಲು ಇಂತಹದೊಂದು ನೋಟಕ್ರಮಕ್ಕೆ ಚಾಲನೆಯನ್ನು ಕೊಟ್ಟವರು ಜ್ಯೋತಿರಾವ್ ಫುಲೆಯವರು. ಆದರೆ ಇವರಿಬ್ಬರ ತಿಳಿವಳಿಕೆಗಳನ್ನು ಹೋಲಿಸಿ ನೋಡುವ ಉದ್ದೇಶಕ್ಕಿಂತ, ಸಮೂಹಕೇಂದ್ರಿತ ಆಲೋಚನೆಯ ಕ್ರಮಗಳು ಬೆಳೆಯುವುದಕ್ಕೆ ಬೇಕಾಗಿರುವ ಚಾರಿತ್ರಿಕ ಒತ್ತಡಗಳು ಹೇಗಿರುತ್ತವೆ ಎಂಬ ದಿಟವನ್ನು ಅರಿಯುವುದಕ್ಕೆ, ಫುಲೆಯವರ ಚಿಂತನೆಗಳನ್ನು ಇಲ್ಲಿ ಚರ್ಚಿಸಲಾಗಿದೆ. ಹಾಗೂ ಭಾರತದ ಸನ್ನಿವೇಶದಲ್ಲಿ ಚರಿತ್ರೆ ಕಥನಶಾಸ್ತ್ರಗಳ ವಿಭಿನ್ನ ಸ್ವರೂಪವನ್ನೂ ಈ ಮೂಲಕ ಅರಿಯಬಹುದಾಗಿದೆ. ಜ್ಞಾನಶಿಸ್ತುಗಳನ್ನು ರೂಪಿಸುವ ಪ್ರಕ್ರಿಯೆಯ ಭಾಗವಾಗಿ ಈ ಹಾದಿಯನ್ನು ಕರ್ನಾಟಕದ ವಿದ್ವತ್ ಲೋಕದಲ್ಲಿ ಇಡೀಯಾಗಿ ಅನುಸರಿಸುವುದನ್ನು ನಾನು ಕಾಣಲಾರೆ.
ಅಂದರೆ ಯಾರೂ ಈ ಹಾದಿಯನ್ನು ತುಳಿಯುತ್ತಿಲ್ಲವೆಂದು ಅರ್ಥವಲ್ಲ. ಬದಲಾಗಿ ಇದುವೇ ಮುಖ್ಯಧಾರೆ ಚಿಂತನೆಯ ಕ್ರಮವಾಗಿ ಭಾರತ ಇಲ್ಲವೇ ಕರ್ನಾಟಕದಲ್ಲಿ ಇನ್ನೂ ಬೆಳೆದಿಲ್ಲವೆಂದರ್ಥ. ಆದರೆ ಅಂಬೇಡ್ಕರ್ ಚಿಂತನೆಯ ಮಾದರಿಯೆಂಬುದನ್ನು ಕೇವಲ ಪರ್ಯಾಯ ಆಲೋಚನೆಯ ಕ್ರಮವನ್ನಾಗಿ ಮಾತ್ರ ನೋಡಲಾಗಿದೆ. ಈ ನಿಲುವು ಸರಿಯಲ್ಲ. ಏಕೆಂದರೆ, ಸಮೂಹಕೇಂದ್ರಿತ ಆಲೋಚನೆಯ ಕ್ರಮಗಳೇ ನಮ್ಮ ಮುಖ್ಯಧಾರೆಯ ಆಲೋಚನೆಯ ಕ್ರಮಗಳಾಗಬೇಕಾದ ತುರ್ತು ಇದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂತರಂಗ
ಸಂಪಾದಕೀಯ | ದಾವಣಗೆರೆ ದಕ್ಷಿಣ ಉಪಚುನಾವಣೆ: ಪ್ರತಿಷ್ಠೆಯ ಹೋರಾಟದಲ್ಲಿ ಜನರ ಧ್ವನಿ ಪ್ರಬಲವಾಗಲಿ
~ಗೋವರ್ಧನ ನವಿಲೇಹಾಳು
ಮಧ್ಯ ಕರ್ನಾಟಕದ ಹೃದಯಭಾಗವಾದ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಈಗ ಉಪಚುನಾವಣೆಯ ಕಾವು ಏರುತ್ತಲೇ ಇದೆ. ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಅವರ ನಿಧನದಿಂದಾಗಿ ಖಾಲಿಯಾದ ಈ ಕ್ಷೇತ್ರದಲ್ಲಿ ಏಪ್ರಿಲ್ 9, 2026ರಂದು ಮತದಾನ ನಡೆಯಲಿದೆ. ಫಲಿತಾಂಶ ಮೇ 4ರಂದು ಪ್ರಕಟವಾಗಲಿದೆ. ಈ ಉಪಚುನಾವಣೆಯು ಕೇವಲ ಒಂದು ಸೀಟಿನ ಹೋರಾಟವಲ್ಲ; ಇದು ಕರ್ನಾಟಕ ರಾಜಕೀಯದಲ್ಲಿ ಪ್ರತಿಷ್ಠೆ, ಕುಟುಂಬ ವಾರಸುದಾರಿಕೆ, ಸಮುದಾಯ ಸಮೀಕರಣಗಳು ಮತ್ತು ಅಭಿವೃದ್ಧಿ ನಿರೀಕ್ಷೆಗಳ ನಡುವಿನ ಸಂಕೀರ್ಣ ಸಮರವಾಗಿದೆ.
ಶಾಮನೂರು ಶಿವಶಂಕರಪ್ಪ ಅವರು ತಾನು ಸ್ಪರ್ಧಿಸಿದ ಈ ಕ್ಷೇತ್ರವನ್ನು ಎಂದೂ ಸೋಲದೆ ಉಳಿಸಿಕೊಂಡಿದ್ದರು. ಅವರ ನಂತರ ಕಾಂಗ್ರೆಸ್ ಪಕ್ಷವು ಅವರ ಮೊಮ್ಮಗ ಸಮರ್ಥ್ ಶಾಮನೂರು ಅವರನ್ನು ಅಭ್ಯರ್ಥಿಯಾಗಿ ಕಣಕ್ಕಿಳಿಸಿದೆ. ಇದು ಕಾಂಗ್ರೆಸ್ ಹೇಳುವಂತೆ “ಕುಟುಂಬಕ್ಕೆ ಟಿಕೆಟ್ ನೀಡುವ ಸಾಂಪ್ರದಾಯಿಕ ನಡೆ”ಯಾಗಿದೆ. ಬಿಜೆಪಿ ಪಕ್ಷವು ಶ್ರೀನಿವಾಸ್ ಟಿ. ದಾಸಕರಿಯಪ್ಪ ಅವರನ್ನು ಅಭ್ಯರ್ಥಿಯಾಗಿ ಘೋಷಿಸಿದೆ. ಇದರ ಜೊತೆಗೆ SDPIಯ ಅಫ್ಸರ್ ಕೊಡ್ಲಿಪೇಟೆ, ಸಾದಿಕ್ ಪೈಲ್ವಾನ್ ಸೇರಿದಂತೆ 25 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಆದರೆ ಮುಖ್ಯ ಹೋರಾಟ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆಯೇ ಇದೆ .
ಈ ಉಪಚುನಾವಣೆಯಲ್ಲಿ ಮುಸ್ಲಿಂ ಸಮುದಾಯದ ಪಾತ್ರ ನಿರ್ಣಾಯಕವಾಗಿದೆ. ಕ್ಷೇತ್ರದಲ್ಲಿ ಮುಸ್ಲಿಂ ಮತದಾರರ ಸಂಖ್ಯೆ ಸುಮಾರು 40% ಇದೆ ಎಂದು ಅಂದಾಜು. ಶಾಮನೂರು ಕುಟುಂಬಕ್ಕೆ ಐತಿಹಾಸಿಕ ಬೆಂಬಲವಿದ್ದರೂ, ಈ ಬಾರಿ ಮುಸ್ಲಿಂ ನಾಯಕರು ಟಿಕೆಟ್ ಆಕಾಂಕ್ಷೆಯನ್ನು ವ್ಯಕ್ತಪಡಿಸಿದ್ದರು. ಕಾಂಗ್ರೆಸ್ ಪಕ್ಷವು ಕುಟುಂಬ ವಾರಸುದಾರಿಕೆಯನ್ನು ಆಯ್ಕೆ ಮಾಡಿದ್ದಕ್ಕೆ ಅಸಮಾಧಾನ ವ್ಯಕ್ತವಾಗಿದೆ. ಸಚಿವ ಜಮೀರ್ ಅಹಮದ್ ಅವರ ಪ್ರಚಾರ ಮತ್ತು ಸಿಎಂ ಸಿದ್ದರಾಮಯ್ಯ ಅವರ ಭೇಟಿಗಳು ಈ ಅಸಮಾಧಾನವನ್ನು ತಣಿಸುವ ಪ್ರಯತ್ನವಾಗಿದೆ. ಆದರೆ ಮುಸ್ಲಿಂ ಮತಗಳ ವಿಭಜನೆಯ ಸಾಧ್ಯತೆ ಇದೆ. SDPI ಮತ್ತು ಇತರ (ಕಾಂಗ್ರೆಸ್ ಸಾದಿಕ್ ಅವರನ್ನು ಪೈಲ್ವಾನ್ ತಟಸ್ಥರಾಗಿರುವಂತೆ ಹೇಳಿದೆ) ಮುಸ್ಲಿಂ ಅಭ್ಯರ್ಥಿಗಳು ಈ ವಿಭಜನೆಯನ್ನು ಹೆಚ್ಚಿಸುವ ಸಾಧ್ಯತೆಯಿದೆ. ಬಿಜೆಪಿ ಎಸ್ಟಿ ಅಭ್ಯರ್ಥಿಯನ್ನು ಕಣಕ್ಕಿಳಿಸಿ ಅಹಿಂದ ಮತಗಳನ್ನು ಸೆಳೆಯುವ ತಂತ್ರ ರೂಪಿಸಿದೆ.
ಕಾಂಗ್ರೆಸ್ ಪಕ್ಷಕ್ಕೆ ಈ ಉಪಚುನಾವಣೆ ಪ್ರತಿಷ್ಠೆಯ ವಿಷಯವಾಗಿದೆ. ರಾಜ್ಯದಲ್ಲಿ ಆಡಳಿತಾರೂಢ ಪಕ್ಷವಾಗಿ ತನ್ನ ಬಲವನ್ನು ಉಳಿಸಿಕೊಳ್ಳುವುದು ಅತ್ಯಗತ್ಯ. ಸಿಎಂ ಸಿದ್ದರಾಮಯ್ಯ ಅವರು ಬಜೆಟ್ನಲ್ಲಿ ದಾವಣಗೆರೆ ದಕ್ಷಿಣಕ್ಕೆ 100 ಕೋಟಿ ರೂಪಾಯಿ ಅನುದಾನ ಘೋಷಿಸಿದ್ದು, ಇದು ಉಪಚುನಾವಣೆಗೆ ಮುನ್ನ ಜನರನ್ನು ಆಕರ್ಷಿಸುವ ಪ್ರಯತ್ನವಾಗಿ ಕಾಣುತ್ತಿದೆ. ಅನುಕಂಪದ ಅಲೆಯೂ ಕಾಂಗ್ರೆಸ್ಗೆ ಬೆಂಬಲ ನೀಡುವ ಸಾಧ್ಯತೆಯಿದೆ. ಆದರೆ ಪಕ್ಷದಲ್ಲಿ ಬಂಡಾಯದ ಬಿಸಿ ತಟ್ಟಿದೆ. ಕಾಂಗ್ರೆಸ್ ನ ಬಂಡಾಯ ಅಭ್ಯರ್ಥಿ ಸಾದಿಕ್ ಪೈಲ್ವಾನ್ ಅವರನ್ನು ಪಕ್ಷ ಚುನಾವಣೆಯಲ್ಲಿ ತಟಸ್ಥರಾಗಿರುವಂತೆ ಹೇಳಿದೆ. ಆದರೆ ಇದು ಮುಸಲ್ಮಾನರ ಒಳಮುನಿಸನ್ನು ತಣಿಸುತ್ತದೆಯೇ ಅಥವಾ ಮತ ವಿಭಜನೆಗೆ ಕಾರಣವಾಗುತ್ತದೆಯೇ ಎಂಬುದು ಫಲಿತಾಂಶದ ಮೇಲೆ ಪರಿಣಾಮವನ್ನಂತೂ ಬೀರುತ್ತದೆ.
ಬಿಜೆಪಿ ಪಕ್ಷಕ್ಕೆ ಇದು ನೈತಿಕ ಸ್ಥೈರ್ಯವನ್ನು ಹೆಚ್ಚಿಸುವ ಅವಕಾಶ. 2023ರ ವಿಧಾನಸಭಾ ಚುನಾವಣೆಯಲ್ಲಿ ಶಾಮನೂರು ಶಿವಶಂಕರಪ್ಪ ಅವರು ಬಿಜೆಪಿ ಅಭ್ಯರ್ಥಿ ಅಜಯ್ ಕುಮಾರ್ ಅವರನ್ನು ಸುಮಾರು 27,888 ಮತಗಳ ಅಂತರದಿಂದ ಸೋಲಿಸಿದ್ದರು. ಈ ಬಾರಿ ಬಿಜೆಪಿ “ಬದಲಾವಣೆ”ಯ ಸಂದೇಶವನ್ನು ನೀಡುತ್ತಿದೆ. ಅಭಿವೃದ್ಧಿ ಕೊರತೆ, ಗ್ಯಾರಂಟಿ ಯೋಜನೆಗಳ ವೆಚ್ಚ ಮತ್ತು ಸರ್ಕಾರದ ನೀತಿಗಳ ವಿರುದ್ಧ ವಾಗ್ದಾಳಿ ನಡೆಸುತ್ತಿದೆ. ಶ್ರೀನಿವಾಸ್ ದಾಸಕರಿಯಪ್ಪ ಅವರು ಕುಟುಂಬ ರಾಜಕಾರಣಕ್ಕೆ ವಿರುದ್ಧ ಧ್ವನಿ ಎತ್ತುತ್ತಿದ್ದಾರೆ. ಆದರೆ ಬಿಜೆಪಿಗೆ ಕ್ಷೇತ್ರದಲ್ಲಿ ಐತಿಹಾಸಿಕ ಬೆಂಬಲ ಕಡಿಮೆ. ಮುಸ್ಲಿಂ ಮತ್ತು ಅಹಿಂದ ಮತಗಳನ್ನು ತನ್ನತ್ತ ಸೆಳೆಯುವುದು ಅವರ ದೊಡ್ಡ ಸವಾಲು.
ದಾವಣಗೆರೆ ದಕ್ಷಿಣ ಕ್ಷೇತ್ರವು ಕೈಗಾರಿಕೆ, ವ್ಯಾಪಾರ ಮತ್ತು ಕೃಷಿಯ ಸಮ್ಮಿಶ್ರಣವಾಗಿದೆ. ರಸ್ತೆಗಳು, ನೀರಾವರಿ, ಉದ್ಯೋಗ, ಶಿಕ್ಷಣ ಮತ್ತು ಆರೋಗ್ಯ ಸೌಲಭ್ಯಗಳು ಜನರ ಮುಖ್ಯ ನಿರೀಕ್ಷೆಗಳು. ಹಿರಿಯ ಶಾಸಕರ ಕಾಲದಲ್ಲಿ ಕ್ಷೇತ್ರಕ್ಕೆ ಅನೇಕ ಅಭಿವೃದ್ಧಿ ಕಾರ್ಯಗಳು ನಡೆದಿದ್ದವು. ಆದರೆ ಇಂದು ಯುವಕರ ಉದ್ಯೋಗ, ಮಹಿಳೆಯರ ಸುರಕ್ಷತೆ ಮತ್ತು ಸ್ಥಳೀಯ ಸಮಸ್ಯೆಗಳು ಬಗೆಹರಿಯಬೇಕಿದೆ. ಉಪಚುನಾವಣೆಯಲ್ಲಿ ಅಭ್ಯರ್ಥಿಗಳು ಭರವಸೆಗಳ ಮಳೆ ಸುರಿಸುತ್ತಿದ್ದಾರೆ. ಆದರೆ ಜನರು ನೋಡುವುದು ಕಾರ್ಯನಿರ್ವಹಣೆಯನ್ನು. 100 ಕೋಟಿ ಅನುದಾನ ಘೋಷಣೆಯಂತಹ ಕ್ರಮಗಳು ತಾತ್ಕಾಲಿಕ ಆಕರ್ಷಣೆಯಾಗಬಹುದು, ಆದರೆ ಸುಸ್ಥಿರ ಅಭಿವೃದ್ಧಿ ಅಗತ್ಯ.
ರಾಜಕೀಯವು ಜನಸೇವೆಗಾಗಿ ಇರಬೇಕು, ಅಧಿಕಾರಕ್ಕಾಗಿ ಅಲ್ಲ ಎಂಬುದು ಎಲ್ಲರೂ ಹೇಳುವ ಮಾತು. ಆದರೆ ವಾಸ್ತವದಲ್ಲಿ ಕುಟುಂಬ ರಾಜಕಾರಣ, ಜಾತಿ-ಸಮುದಾಯ ಲೆಕ್ಕಾಚಾರಗಳು ಪ್ರಬಲವಾಗಿವೆ. ದಾವಣಗೆರೆ ದಕ್ಷಿಣದಲ್ಲಿ ಶಾಮನೂರು ಕುಟುಂಬದ ವರ್ಚಸ್ಸು ದೀರ್ಘಕಾಲದ್ದು. ಇದು ಜನಸೇವೆಯ ಫಲವೋ ಅಥವಾ ವ್ಯವಸ್ಥೆಯ ದೌರ್ಬಲ್ಯವೋ ಎಂಬುದನ್ನು ಜನರು ನಿರ್ಧರಿಸಬೇಕು. ಬಿಜೆಪಿ “ಬದಲಾವಣೆ”ಯ ಸಂದೇಶ ನೀಡುತ್ತಿದ್ದರೂ, ಅದು ಕೇವಲ ವಿರೋಧ ಪಕ್ಷದ ಧ್ವನಿಯಾಗಿ ಉಳಿಯದೆ ಸಕಾರಾತ್ಮಕ ಪರ್ಯಾಯವಾಗಬೇಕು.
ಈ ಉಪಚುನಾವಣೆಯಲ್ಲಿ ಮತದಾರರ ಜವಾಬ್ದಾರಿ ದೊಡ್ಡದು. ಅನುಕಂಪ, ಕುಟುಂಬ ನಿಷ್ಠೆ ಅಥವಾ ಸಮುದಾಯ ಲೆಕ್ಕಾಚಾರಕ್ಕಿಂತ ಹೆಚ್ಚಾಗಿ ಅಭಿವೃದ್ಧಿ, ಪಾರದರ್ಶಕತೆ ಮತ್ತು ಜನೋಪಯೋಗಿ ಕಾರ್ಯಗಳನ್ನು ಆಧರಿಸಿ ಮತ ನೀಡಬೇಕು. ಯುವಕರು ಮತ್ತು ಮಹಿಳೆಯರು ಹೆಚ್ಚು ಸಕ್ರಿಯರಾಗಬೇಕು. ಮತದಾನ ಶೇಕಡಾ 80ಕ್ಕಿಂತ ಹೆಚ್ಚು ಆಗುವಂತೆ ಮಾಡುವುದು ಪ್ರಜಾಪ್ರಭುತ್ವದ ಆರೋಗ್ಯಕ್ಕೆ ಸೂಚಕ.
ಕರ್ನಾಟಕ ರಾಜಕೀಯದಲ್ಲಿ ಉಪಚುನಾವಣೆಗಳು ಸಣ್ಣ ಪರೀಕ್ಷೆಗಳು. ದಾವಣಗೆರೆ ದಕ್ಷಿಣದ ಫಲಿತಾಂಶವು 2028ರ ವಿಧಾನಸಭಾ ಚುನಾವಣೆಗೆ ಸಂದೇಶ ನೀಡುತ್ತದೆ. ಕಾಂಗ್ರೆಸ್ ಗೆದ್ದರೆ ಅದು ತನ್ನ ಬಲವನ್ನು ಮತ್ತಷ್ಟು ಭದ್ರಪಡಿಸಿಕೊಳ್ಳುತ್ತದೆ. ಬಿಜೆಪಿ ಗೆದ್ದರೆ ಅದು ವಿರೋಧ ಪಕ್ಷವಾಗಿ ತನ್ನ ಸಾಮರ್ಥ್ಯವನ್ನು ತೋರಿಸುತ್ತದೆ. ಆದರೆ ಗೆಲುವು ಯಾರದ್ದಾದರೂ, ಜಯಿಸುವುದು ದಾವಣಗೆರೆ ದಕ್ಷಿಣದ ಜನರೇ ಆಗಬೇಕು.
ಈ ಹೋರಾಟದಲ್ಲಿ ರಾಜಕೀಯ ಪಕ್ಷಗಳು ಜನರ ಸಮಸ್ಯೆಗಳನ್ನು ಕೇಂದ್ರದಲ್ಲಿ ಇರಿಸಿಕೊಂಡು ಪ್ರಚಾರ ಮಾಡಲಿ. ಮತದಾರರು ತಮ್ಮ ಧ್ವನಿಯನ್ನು ಸ್ಪಷ್ಟವಾಗಿ ಮತ್ತು ನಿರ್ಭಯವಾಗಿ ವ್ಯಕ್ತಪಡಿಸಲಿ. ದಾವಣಗೆರೆ ದಕ್ಷಿಣ ಉಪಚುನಾವಣೆಯು ಪ್ರಜಾಪ್ರಭುತ್ವದ ಸೌಂದರ್ಯವನ್ನು ಪ್ರದರ್ಶಿಸುವ ಅವಕಾಶವಾಗಲಿ. ಅಭಿವೃದ್ಧಿ, ಸಮಾನತೆ ಮತ್ತು ಪಾರದರ್ಶಕ ಆಡಳಿತದತ್ತ ಕ್ಷೇತ್ರ ಸಾಗಲಿ ಎಂಬುದೇ ನಮ್ಮ ಆಶಯ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂತರಂಗ
250ಕ್ಕೂ ಹೆಚ್ಚು ಗಿಳಿಗಳ ನಿಗೂಢ ಸಾವು ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ ಆತಂಕ
250ಕ್ಕೂ ಹೆಚ್ಚು ಗಿಳಿಗಳ ನಿಗೂಢ ಸಾವು
ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ ಆತಂಕ
ಬೆಂಗಳೂರು: ಮಧ್ಯಪ್ರದೇಶ ರಾಜ್ಯದ ಖಾರ್ಗೋನ್ ಜಿಲ್ಲೆಯಲ್ಲಿರುವ ನರ್ಮದಾ ನದಿ ತೀರದಲ್ಲಿ 250ಕ್ಕೂ ಹೆಚ್ಚು ಗಿಳಿಗಳು ಕೃಷಿ ಭೂಮಿಯಲ್ಲಿ ಬಳಸುವ ಕೀಟನಾಶಕ ಮಿಶ್ರಿತ ಆಹಾರ ಅಥವಾ ನರ್ಮದಾ ನದಿಯ ಕಲುಷಿತ ನೀರು ಸೇವಿಸಿ ಸಾವನ್ನಪ್ಪಿರುವ ಪ್ರಕರಣ ಇಡೀ ದೇಶದಲ್ಲಿ ಇದೇ ಮೊದಲ ಬಾರಿಗೆ ನಡೆದ ದುರ್ಘಟನೆ ಎಂದು ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷರೂ ಹಾಗೂ ರಾಷ್ಟ್ರೀಯ ಸಮಿತಿ ನಿರ್ದೇಶಕರಾದ ಮಾಲತೇಶ್ ಅರಸ್ ಹರ್ತಿಕೋಟೆ ಆತಂಕ ವ್ಯಕ್ತಪಡಿಸಿದ್ದಾರೆ.
ಕಳೆದ ಮೂರು ದಿನಗಳಲ್ಲಿ ನರ್ಮದಾ ನದಿ ತೀರದಲ್ಲಿ ಸುಮಾರು ಇನ್ನೂರಕ್ಕೂ ಅಧಿಕ ಗಿಳಿಗಳು ನಿಗೂಢವಾಗಿ ಸಾವನ್ನಪ್ಪಿದ್ದು ಆರಂಭದಲ್ಲಿ ಇದು ಹಕ್ಕಿ ಜ್ವರ ದಿಂದ ಸಾವನ್ನಪ್ಪಿರಬಹುದು ಎಂದು ಶಂಕಿಸಲಾಗಿತ್ತು ಆದರೆ ಪಶುವೈದ್ಯಕೀಯ ಅಧಿಕಾರಿ ಡಾ. ಸುರೇಶ್ ಬಫೇಲ್ ಅವರು ನೀಡಿದ ಮಾಹಿತಿ ಪ್ರಕಾರ ಹಕ್ಕಿಗಳ ಹೊಟ್ಟೆಯಲ್ಲಿ ಅಕ್ಕಿ ಕಾಳುಗಳು ಮತ್ತು ಸಣ್ಣ ಕಲ್ಲುಗಳು ಪತ್ತೆಯಾಗಿವೆ. ಅಲ್ಲದೆ ಕೃಷಿ ಭೂಮಿಯಲ್ಲಿ ಬಳಸುವ ಕೀಟನಾಶಕ ಮಿಶ್ರಿತ ಆಹಾರ ಅಥವಾ ನರ್ಮದಾ ನದಿಯ ಕಲುಷಿತ ನೀರು ಸೇವಿಸಿ 200 ರಿಂದ 50 ಕ್ಕೂ ಅಧಿಕ ಮೃತಪಟ್ಟಿರುವ ಸಾಧ್ಯತೆಗಳು ಹೆಚ್ಚಿವೆ ಎಂದು ಹೇಳಿದ್ದು ಇವರ ಮಾಹಿತಿಯನ್ನು ಆದರಿಸಿ ವಿಶೇಷ ತನಿಖೆ ಮಾಡಬೇಕು ಎಂದು ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ ಆಗ್ರಹಿಸಿದೆ.
ಖರ್ಗೋನ್ ಜಿಲ್ಲೆಯ ಬದ್ವಾ ಪ್ರದೇಶದ ನರ್ಮದಾ ನದಿ ತೀರದಲ್ಲಿರುವ ಅಕ್ವೆಡಕ್ಟ್ ಸೇತುವೆಯ ಸಮೀಪ ಈ ಘಟನೆ ಬೆಳಕಿಗೆ ಬಂದಿದ್ದು ಅರಣ್ಯ ಇಲಾಖೆಯು ಸೇತುವೆಯ ಸುತ್ತಮುತ್ತ ಹಕ್ಕಿಗಳಿಗೆ ಆಹಾರ ನೀಡುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಿದೆ. ಸದ್ಯ ಹಕ್ಕಿಗಳ ಸಾವಿಗೆ ನಿಖರ ಕರಣ ತಿಳಿಯಲು ಹಕ್ಕಿಗಳ ಅವಶೇಷಗಳನ್ನು ಜಬಲ್ಪುರಕ್ಕೆ ಕಳುಹಿಸಲಾಗಿದೆ. ಸದ್ಯ ಅರಣ್ಯ ಇಲಾಖೆ ಮತ್ತು ಪಶುವೈದ್ಯಕೀಯ ತಂಡಗಳು ಸ್ಥಳದಲ್ಲೇ ಬೀಡುಬಿಟ್ಟಿದ್ದು, ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿವೆ.
ಇನ್ನೊಂದು ಮುಖ್ಯ ವಿಚಾರ ಏನೆಂದರೆ ಪಕ್ಷಿಗಳಿಗೆ ಮನುಷ್ಯರು ಸೇವಿಸುವ ಎಣ್ಣೆ ಪದಾರ್ಥ ಅಥವಾ ಬೇಯಿಸಿದ ಆಹಾರ ನೀಡುವುದು ಅವುಗಳ ಜೀರ್ಣಾಂಗ ವ್ಯವಸ್ಥೆಯ ಮೇಲೆ ಮಾರಕ ಪರಿಣಾಮ ಬೀರುತ್ತದೆ ಎಂದು ಪಶುವೈದ್ಯಕೀಯ ಅಧಿಕಾರಿ ಡಾ. ಮನಿಷಾ ಚೌಹಾಣ್ ಹೇಳಿದ್ದಾರೆ. ಏನೇ ಆದರೂ ನೂರಾರು ಗಿಳಿಗಳು ಸಾವನ್ನಪಿರುವುದು ಮಾತ್ರ ದುರಂತ.
ಈ ಸಂದರ್ಭದಲ್ಲಿ ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷರೂ ಹಾಗೂ ರಾಷ್ಟ್ರೀಯ ಸಮಿತಿ ನಿರ್ದೇಶಕರಾದ ಮಾಲತೇಶ್ ಅರಸ್ ಹರ್ತಿಕೋಟೆ, ಹಿರಿಯ ಉಪಾಧ್ಯಕ್ಷರಾದ ಗುರುರಾಜ್ ಹೂಗಾರ್, ಉಪಾಧ್ಯಕ್ಷರಾದ ಯೋಗೀಶ್ ಕುಮಾರ್, ರುದ್ರಮುನಿ, ಡಾ.ಸಿದ್ದಲಿಂಗಪ್ಪ, ಮತ್ತು ಪದಾಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

-
ದಿನದ ಸುದ್ದಿ5 days agoವಯೋವೃದ್ಧರ ಸಾಮಾಜಿಕ ಆರ್ಥಿಕ ಸ್ಥಿತಿಗತಿ ಅಧ್ಯಯನ
-
ದಿನದ ಸುದ್ದಿ7 days agoಸಮಾನತೆಯ ಸಮಾಜ ನಿರ್ಮಾಣಕ್ಕೆ ಸಂವಿಧಾನವೇ ಭದ್ರ ಬುನಾದಿ: ಗಂಗಾಧರಸ್ವಾಮಿ ಜಿ.ಎಂ
-
ದಿನದ ಸುದ್ದಿ3 days agoದಾವಣಗೆರೆ | ಕಾಂಗ್ರೆಸ್ ನ ಹಿರಿಯ ಮುಖಂಡ ಕೆರೆಕಟ್ಟೆ ಸೈಯದ್ ಸೈಫುಲ್ಲಾ ನಿಧನ
-
ದಿನದ ಸುದ್ದಿ3 days agoಕೆ. ಬೇವಿನಹಳ್ಳಿ, ಸಾಲಕಟ್ಟೆ ಗ್ರಾಮದಲ್ಲಿ ರಕ್ತದಾನ ಶಿಬಿರ
-
ದಿನದ ಸುದ್ದಿ5 days agoದಾವಣಗೆರೆ | ಕೆರೆಗಳ ಸಂರಕ್ಷಣೆ; ಒತ್ತುವರಿ ತೆರವಿಗೆ ಕಟ್ಟುನಿಟ್ಟಿನ ಕ್ರಮ : ಡಿಸಿ ಗಂಗಾಧರಸ್ವಾಮಿ ಜಿ.ಎಂ



