ದಿನದ ಸುದ್ದಿ
ಪತ್ರಿಕೋದ್ಯಮ, ಮಾನವೀಯತೆ ಹಾಗೂ ಸಲ್ಮಾನ್ ರಾವೀ ಎಂಬ ಹೃದಯವಂತ..!
- ಡಿ.ಕೆ. ರಮೇಶ್, ಪತ್ರಕರ್ತರು
ಸುದ್ದಿದಿನ ವಿಶೇಷ : ಒಂದು ಸಂದಿಗ್ಧ ಪರಿಸ್ಥಿತಿಯಲ್ಲಿ ಆ ಘಟನೆಯನ್ನು ತಟಸ್ಥವಾಗಿ ವರದಿ ಮಾಡಿದರೆ ಸಾಕೆ ಅಥವಾ ಆ ಘಟನೆಯಲ್ಲಿ ಸಂಕಷ್ಟಕ್ಕೀಡಾದವರ ಸಹಾಯಕ್ಕೆ ವರದಿಗಾರ/ ಛಾಯಾಗ್ರಾಹಕ ಮುಂದಾಗಬೇಕೆ? ಇದೊಂದು ಜಿಜ್ಞಾಸೆ. ಬಹಳ ಹಿಂದಿನಿಂದಲೂ ಇರುವ ಜಿಜ್ಞಾಸೆ ವರದಿಗಾರ ವರದಿ ಮಾಡಿದರಷ್ಟೇ ಸಾಕು ಅದೇ ಒಂದು ಸಹಾಯ ಎನ್ನುವುದು ಒಂದು ವಾದವಾದರೆ, ಸ್ಥಳದಲ್ಲೇ ಇದ್ದವರು ಸಹಾಯಕ್ಕೆ ಬರಬಹುದಿತ್ತಲ್ಲಾ ಎಂಬುದು ಇನ್ನೊಂದು ವಾದ. ಎರಡೂ ಬಹಳ ಮುಖ್ಯವಾದ ಆಲೋಚನೆಗಳು. ಕೊರೊನಾ ರೀತಿಯ ಸಂಕಷ್ಟದ ಸಂದರ್ಭದಲ್ಲಿ ಪತ್ರಕರ್ತರು ಇಂತಹ ಜಿಜ್ಞಾಸೆಗೆ ಮುಖಾಮುಖಿ ಆಗುವುದು, ಅದಕ್ಕೆ ತಮ್ಮದೇ ರೀತಿಯಲ್ಲಿ ಪ್ರತಿಕ್ರಿಯೆ ನೀಡುವುದು ಸಹಜ. ಅಂತಹ ಒಬ್ಬ ಪತ್ರಕರ್ತ ಸಲ್ಮಾನ್ ರಾವೀ.
ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ
https://twitter.com/RifatJawaid/status/1260957072281096192?s=20
ರಾವೀ ಅವರ ಕತೆ ಹೇಳುವ ಮುನ್ನ ಘಟನೆಯೊಂದನ್ನು ಇಲ್ಲಿ ಪ್ರಸ್ತಾಪಿಸಿಬಿಡಬೇಕು. ಮೊದಲನೆಯದು ಸೂಡಾನಿನ ಹಸಿವಿನ ದಾರುಣತೆಯನ್ನು ಚಿತ್ರಿಸುತ್ತಿದ್ದ ಕೆವಿನ್ ಕಾರ್ಟರ್ ಎಂಬ ಛಾಯಾಗ್ರಾಹಕನ ಕುರಿತಾದದ್ದು, ಅಸ್ತಿಪಂಜರದಂತಿರುವ ಮಗುವೊಂದು ಮಣ್ಣಿಗೆ ತಲೆ ಆನಿಸಿದೆ.
ಹಿನ್ನೆಲೆಗೆ ರಣಹದ್ದೊಂದು ಕುಳಿತಿದೆ. ಅದನ್ನು ತನ್ನ ಕ್ಯಾಮೆರಾದಲ್ಲಿ ಕಾರ್ಟರ್ ಸೆರೆ ಹಿಡಿಯುತ್ತಾನೆ. ‘ದ ವಲ್ಚರ್ ಅಂಡ್ ದ ಲಿಟಲ್ ಗರ್ಲ್’ ಎಂಬ ಹೆಸರಿನಲ್ಲಿ ಛಾಯಾಚಿತ್ರ ಮನ್ನಣೆ ಪಡೆಯುತ್ತದೆ. ನ್ಯೂಯಾರ್ಕ್ ಟೈಮ್ಸ್ ಪತ್ರಿಕೆ ಅದನ್ನು ಪ್ರಕಟಿಸಿಸುತ್ತದೆ. ಮುಂದೆ ಆ ಚಿತ್ರಕ್ಕೆ ಪುಲಿಟ್ಜರ್ ಪ್ರಶಸ್ತಿ ಕೂಡ ಸಿಗುತ್ತದೆ. ಅಷ್ಟರಲ್ಲಾಗಲೇ ಅವನ ಕ್ಯಾಮೆರಾ ಅಂತಹ ಹಲವಾರು ಮಕ್ಕಳ ಚಿತ್ರಗಳನ್ನು ಸೆರೆಹಿಡಿಯುತ್ತದೆ. ಆದರೆ ಕಾರ್ಟರ್ ಖಿನ್ನತೆಗೆ ಸರಿಯುತ್ತಾನೆ. ತನ್ನ ಬಾಲ್ಯವನ್ನು ಕಳೆದಿದ್ದ ಪಾರ್ಕ್ ಮೋರ್ ಎಂಬಲ್ಲಿ ಕಡೆಗೊಂದು ದಿನ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ. ಆಗ ಅವನ ವಯಸ್ಸು ಕೇವಲ 33.
ಈಗ ಸಲ್ಮಾನ್ ರಾವೀ ವಿಚಾರಕ್ಕೆ ಬರೋಣ. ದೇಶ ಕಂಡ ಅತ್ಯುತ್ತಮ ಪತ್ರಕರ್ತ, ಸೂಕ್ಷ್ಮ ಮನಸ್ಸಿನ ವರದಿಗಾರ, ಬಿಬಿಸಿ ಹಿಂದಿ ವಾಹಿನಿಗಾಗಿ ಅವರು ಸೇವೆ ಸಲ್ಲಿಸುತ್ತಿದ್ದಾರೆ ಎಂಬ ವಿಚಾರಗಳೆಲ್ಲಾ ದೇಶಕ್ಕೆ ಗೊತ್ತಿರುವಂಥದ್ದೇ. ಆದರೆ ಕೊರೊನಾ ಸಂದರ್ಭದಲ್ಲಿ ಅವರು ನಡೆದುಕೊಳ್ಳುತ್ತಿರುವ ರೀತಿಯಿಂದಾಗಿ ಪತ್ರಿಕಾ ಲೋಕ ಎದೆಯುಬ್ಬಿಸುವಂತಾಗಿದೆ. ಜಗತ್ತೇ ಅವರ ಕೆಲಸವನ್ನು ಕೊಂಡಾಡುತ್ತಿದೆ.
ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ
https://twitter.com/salmanravi/status/1261201617522737152?s=19
ಕೊರೊನಾ ದಿಗ್ಬಂಧನದಿಂದಾಗಿ ದೆಹಲಿಯಿಂದ ಸಾವಿರಾರು ವಲಸೆ ಕಾರ್ಮಿಕರು ತಮ್ಮ ಊರುಗಳಿಗೆ ಮರಳಲು ಬೀದಿಗೆ ಬಂದಿರುತ್ತಾರೆ. ಅಂತಹ ಒಂದು ಕುಟುಂಬ ಸುಮಾರು 250 ಕಿಮೀ ದೂರದ ತನ್ನೂರಿಗೆ ಮರಳಲು ಸಿದ್ಧವಾಗಿರುತ್ತದೆ. ಕುಟುಂಬದ ಹಿರಿಯ ಮಲಗಿರುವ ಮಗುವನ್ನು ಹೆಗಲಿಗೆ ಆನಿಸಿಕೊಂಡಿದ್ದಾನೆ. ಆತನ ಕಾಲಲ್ಲಿ ಚಪ್ಪಲಿ ಇಲ್ಲ ಎಂಬ ಸಂಗತಿ ಸಲ್ಮಾನ್ ಗಮನಕ್ಕೆ ಬರುತ್ತದೆ.
ಸಲ್ಮಾನ್ ಸಹಜವಾಗಿಯೇ ಆ ವ್ಯಕ್ತಿಗೆ ತನ್ನ ಬೂಟುಗಳನ್ನು ಕೊಡುತ್ತಾರೆ. ಕಾರ್ಮಿಕ ಅದನ್ನು ತೊಡಲು ಹಿಂದೇಟು ಹಾಕಿದಾಗ ‘ಇಲ್ಲ ಇಲ್ಲ ನೀವು ಹಾಕಿಕೊಳ್ಳಬೇಕು. ನೀವು ಕ್ರಮಿಸಬೇಕಾದ ಹಾದಿ ಬಹುದೂರದ್ದು. ನನ್ನದು ಹೇಗೋ ನಡೆಯುತ್ತದೆ’ ಎಂದು ಹೇಳಿ ಆತನಿಗೆ ಶೂ ಹಾಕಿಕೊಳ್ಳಲು ಅನುವು ಮಾಡಿಕೊಟ್ಟು ಮತ್ತೊಬ್ಬ ಕಾರ್ಮಿಕನನ್ನು ಮಾತನಾಡಿಸಲು ಹೋಗುತ್ತಾರೆ.
ಬಾಲಿವುಡ್ ನಟರಿಂದ ಹಿಡಿದು ಜನಸಾಮಾನ್ಯರ ತನಕ ಈ ಘಟನೆ ಗಮನ ಸೆಳೆದಿದೆ. ಘಟನೆಗೆ ಪ್ರತಿಕ್ರಿಯೆ ನೀಡಿರುವ ಆಲಿಯಾ ಭಟ್ ಸಹೋದರಿ ಪೂಜಾ ಭಟ್ ‘ಈ ಘಟನೆ ನನ್ನಲ್ಲಿ ಕಣ್ಣೀರು ತರಿಸಿತು’ ಎಂದಿದ್ದಾರೆ. ಟ್ವಿಟರ್, ಫೇಸ್ಬುಕ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಸಲ್ಮಾನ್ ಕೆಲಸಕ್ಕೆ ಮೆಚ್ಚುಗೆಯ ಮಹಾಪೂರವೇ ಹರಿಯುತ್ತಿದೆ.
ಅಷ್ಟೇ ಆಗಿದ್ದರೆ ಅದೊಂದು ಘಟನೆ ಎಂದು ಸುಮ್ಮನಾಗಬಹುದಿತ್ತು. ಆದರೆ ಸಲ್ಮಾನ್ ಅವರೊಳಗಿನ ಅಂತಃಕರಣ ಆ ಘಟನೆಗೆ ಮಾತ್ರ ಸೀಮಿತವಾಗುವುದಿಲ್ಲ. ಕಾಲ್ನಡಿಗೆಯಲ್ಲಿ ಸಾಗುತ್ತಿದ್ದ ವಲಸೆ ಕಾರ್ಮಿಕರ ಒಂದು ತಂಡಕ್ಕೆ ಪೊಲೀಸರ ಸಹಾಯ ಪಡೆದು ಫರೀದಾಬಾದಿನ ಶಾಲೆಯೊಂದರಲ್ಲಿ ತಾತ್ಕಾಲಿಕ ವಸತಿ ಕಲ್ಪಿಸುತ್ತಾರೆ ಸಲ್ಮಾನ್. ಈ ಕೆಲಸವೂ ಅಪಾರ ಮೆಚ್ಚುಗೆ ಗಳಿಸಿದೆ.
ಇನ್ನೊಂದು ಘಟನೆ ಇವೆರಡಕ್ಕೂ ಹೊರತಾದದ್ದು, ಅದು ಭಾರತದಲ್ಲಿಯೇ ನಡೆದದ್ದು. ‘ಸುದ್ದಿ ಇಲ್ಲದಿದ್ದರೆ ಅದನ್ನು ಸೃಷ್ಟಿಸಿದರಾಯಿತು’ ಎಂಬ ಧೋರಣೆಗೆ ಸಂಬಂಧಿಸಿದ್ದು. ಸ್ಥಳ ಘಟನೆ ನಡೆದ ದಿನ ನೆನಪಿಲ್ಲ. ಆದರೆ ಆ ಘಟನೆಯನ್ನು ಮನುಷ್ಯರಾದವರಾರೂ ಮರೆಯಲು ಸಾಧ್ಯ ಇಲ್ಲ. ರೈತನೋ ಮತ್ತಾರೋ ಆತ್ಮಹತ್ಯೆಗೆ ಮುಂದಾಗಿರುತ್ತಾರೆ. ತಡವಾಗಿ ಅಲ್ಲಿಗೆ ಬರುವ ವೀಡಿಯೊಗ್ರಾಫರ್ ಇನ್ನೊಮ್ಮೆ ಬೆಂಕಿ ಹಚ್ಚಿಕೊಳ್ಳುವಂತೆ ಪ್ರೇರೇಪಿಸುತ್ತಾನೆ. ಆತ ಬೆಂಕಿ ಹಚ್ಚಿಕೊಳ್ಳುತ್ತಾನೆ. ಆತನ ಮೈ ಸುಟ್ಟು ಹೋಗುತ್ತದೆ.
Spontaneous gesture by someone who is equally generous off camera too. God bless you @salmanravi https://t.co/JKbWKhMEPy
— Mitul Thakkar (@MitulThakkar) May 14, 2020
ಮೇಲೆ ವಿವರಿಸಿದ ಮೂರೂ ಘಟನೆಗಳು ಪತ್ರಿಕೋದ್ಯಮ, ನೈತಿಕತೆ, ಮಾನವೀಯತೆಯ ಸುತ್ತ ಹೆಣೆದುಕೊಂಡಿರುವಂತಹವು. ಉಳಿದೆರಡು ಘಟನೆಗಳಿಗಿಂತಲೂ ಸಲ್ಮಾನ್ ರಾವೀ ಅವರ ಕೆಲಸಗಳಿಗೆ ಹೆಚ್ಚು ತೂಕ ಇರುವಂತಿದೆ. ಆ ಕಾರಣಕ್ಕೆ ರಾವೀ ಅಂತಹ ಪತ್ರಕರ್ತರ ಸಂಖ್ಯೆ ಹೆಚ್ಚಲಿ ಎಂದು ಹಾರೈಸಬೇಕಿದೆ.
This photo is going to haunt me for the rest of my life 😥 pic.twitter.com/HyonF6sutW
— SALMAN RAVI (@salmanravi) May 16, 2020
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ದುರ್ಗಾಂಬಿಕಾದೇವಿ ಜಾತ್ರೆ ; ಭಕ್ತಾದಿಗಳಿಗೆ ಶೌಚಾಲಯ ವ್ಯವಸ್ಥೆ
ಸುದ್ದಿದಿನ,ದಾವಣಗೆರೆ:ಫೆಬ್ರವರಿ 23 ರಿಂದ 27 ರವರೆಗೆ ನಡೆಯುವ ದುರ್ಗಾಂಬಿಕಾದೇವಿ ಜಾತ್ರೆ ಪ್ರಯಕ್ತ ದೇವಾಲಯಕ್ಕೆ ಆಗಮಿಸುವ ಭಕ್ತಾಧಿಗಳಿಗೆ ಶೌಚಾಲಯಗಳ ವ್ಯವಸ್ಥೆ ಕಲ್ಪಿಸಲಾಗಿದೆ.
ದೊಡ್ಡಪೇಟೆಯ ನಾಮದೇವ ಸಿಂಪಿ ಕಲ್ಯಾಣ ಮಂಟಪ, ವಿರಕ್ತಮಠ ಮತ್ತು ನಗರ ಕುಟುಂಬ ಕಲ್ಯಾಣ ಕೇಂದ್ರ-1, ಎಸ್.ಕೆ.ಪಿ ರಸ್ತೆಯ ಎಸ್.ವಿ.ಎಸ್.ಶಾಲೆ ಮತ್ತು ಕನ್ನಿಕಾಪರಮೇಶ್ವರಿ ದೇವಸ್ಥಾನ ಸಂಘ, ಮಾರ್ಕಂಡೇಶ್ವರ ಕಲ್ಯಾಣ ಮಂಟಪ, ಈ ಸ್ಥಳಗಳಲ್ಲಿರುವ ಶೌಚಾಲಯಗಳನ್ನು ಉಪಯೋಗಿಸುವ ಮೂಲಕ ದೇವಾಲಯದ ಸುತ್ತಮುತ್ತಲಿನ ಆವರಣವನ್ನು ಸ್ವಚ್ಚವಾಗಿಡಲು ಸಹಕರಿಸಬೇಕೆಂದು ಪಾಲಿಕೆ ಆಯುಕ್ತರು ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಮಾಜಿ ದೇವದಾಸಿ ಮಹಿಳೆಯರ ಮರು ಸಮೀಕ್ಷೆ : ಆಕ್ಷೇಪಣೆಗಳಿಗೆ ಅರ್ಜಿ ಆಹ್ವಾನ
ಸುದ್ದಿದಿನ,ದಾವಣಗೆರೆ : ಮಾಜಿ ದೇವದಾಸಿ ಮಹಿಳೆಯರ ಮರು ಸಮೀಕ್ಷೆ -2025ಕ್ಕೆ ಸಂಬಂಧಿಸಿದಂತೆ ಜಿಲ್ಲಾ ಮಟ್ಟದ ಮೇಲ್ವಿಚಾರಣೆ ಮತ್ತು ಮೌಲ್ಯಮಾಪನಗಳಿಗೆ ಆಕ್ಷೇಪಣೆ, ತಕರಾರು ಸಲ್ಲಿಸಲು ಅರ್ಜಿ ಆಹ್ವಾನಿಸಲಾಗಿದೆ.
ತಿರಸ್ಕೃತಗೊಂಡ ಅರ್ಜಿಗಳ ಅಭ್ಯರ್ಥಿಗಳ ಆಕ್ಷೇಪಣೆಗಳಿದ್ದಲ್ಲಿ, ಮಾರ್ಚ್ 13 ರೊಳಗೆ ನಿಗದಿಪಡಿಸಿದ ದಿನಾಂಕದೊಳಗಾಗಿ ಪೂರಕ ದಾಖಲಾತಿಗಳನ್ನು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಗೆ ಸಲ್ಲಿಸಬೇಕೆಂದು ಜಿಲ್ಲಾಧಿಕಾರಿ ಗಂಗಾರ್ವಾಮಿ.ಜಿ.ಎಂ.ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಉದ್ಯೋಗಿಗಳಿಗೆ ಗೂಗಲ್ ಶಾಕ್..! AI ಕಲಿಯದಿದ್ದರೆ ಉದ್ಯೋಗ ತೊರೆಯಿರಿ
ಸುದ್ದಿದಿನ,ಬೆಂಗಳೂರು: ಜಗತ್ತಿನ ಟೆಕ್ ದೈತ್ಯ ಕಂಪನಿ ಗೂಗಲ್ ತನ್ನ ಉದ್ಯೋಗಿಗಳಿಗೆ ಶಾಕ್ ನೀಡಿದೆ. AI ಕಲಿಯದಿದ್ದರೆ ಉದ್ಯೋಗ ತೊರೆಯುವಂತೆ ಸೂಚಿಸಿದ್ದು, ‘ವಾಲಂಟರಿ ಎಕ್ಸಿಟ್ ಪ್ರೋಗ್ರಾಮ್’ (VEP) ಘೋಷಿಸಿದೆ.
‘ವಾಲಂಟರಿ ಎಕ್ಸಿಟ್ ಪ್ರೋಗ್ರಾಮ್’ (VEP)
AI ಕಲಿಯುವುದು ಅನಿವಾರ್ಯ: ಗೂಗಲ್ ಈಗ ಸಂಪೂರ್ಣವಾಗಿ ‘AI ಫಸ್ಟ್’ ಕಂಪನಿಯಾಗಿ ರೂಪಾಂತರಗೊಳ್ಳುತ್ತಿದೆ. ತಂತ್ರಜ್ಞಾನದ ವೇಗಕ್ಕೆ ಹೊಂದಿಕೊಳ್ಳಲು ಸಾಧ್ಯವಾಗದ ಅಥವಾ AI ಕಲಿಯಲು ಆಸಕ್ತಿ ಇಲ್ಲದ ಉದ್ಯೋಗಿಗಳಿಗೆ ಗೌರವಯುತವಾಗಿ ಉದ್ಯೋಗ ತೊರೆಯಲು ‘ವಾಲಂಟರಿ ಎಕ್ಸಿಟ್ ಪ್ರೋಗ್ರಾಮ್’ (VEP) ಯನ್ನು ಜಾರಿಗೊಳಿಸಿದೆ.
ಯಾರಿಗೆ ಅನ್ವಯಿಸುತ್ತದೆ?: ಇದು ಮುಖ್ಯವಾಗಿ ಗೂಗಲ್ನ ಗ್ಲೋಬಲ್ ಬಿಸಿನೆಸ್ ಆರ್ಗನೈಸೇಷನ್ (GBO) ವಿಭಾಗದ ಉದ್ಯೋಗಿಗಳಿಗೆ (ಸೇಲ್ಸ್, ಕಾರ್ಪೊರೇಟ್ ಡೆವಲಪ್ಮೆಂಟ್ ಮತ್ತು ಸೊಲ್ಯೂಷನ್ಸ್ ಟೀಮ್) ಗೆ ಅನ್ವಯಿಸುತ್ತದೆ. ಆದರೆ, ಗ್ರಾಹಕರೊಂದಿಗೆ ನೇರ ಸಂಪರ್ಕ ಹೊಂದಿರುವ ತಂಡಗಳಿಗೆ ಇದರಿಂದ ವಿನಾಯಿತಿ ನೀಡಲಾಗಿದೆ.
ಇದು ಲೇ-ಆಫ್ ಅಲ್ಲ: ಇದು ಕಡ್ಡಾಯವಾಗಿ ಕೆಲಸದಿಂದ ತೆಗೆದುಹಾಕುವ ಪ್ರಕ್ರಿಯೆಯಲ್ಲ. ಬದಲಾಗಿ, ಸ್ವತಃ ಹೊರಹೋಗಲು ಬಯಸುವ ಉದ್ಯೋಗಿಗಳಿಗೆ ಉತ್ತಮ ಪರಿಹಾರ ಧನ (Severance Package) ಮತ್ತು ಇತರ ಸೌಲಭ್ಯಗಳನ್ನು ನೀಡಿ ಕಳುಹಿಸಿಕೊಡುವ ಯೋಜನೆಯಾಗಿದೆ.
ಕಾರಣವೇನು?: ತಂತ್ರಜ್ಞಾನ ಅತ್ಯಂತ ವೇಗವಾಗಿ ಬದಲಾಗುತ್ತಿದ್ದು, ಕಂಪನಿಗೆ AI ಮಿಷನ್ಗೆ ಸಂಪೂರ್ಣವಾಗಿ ಹೊಂದಿಕೊಳ್ಳುವ ಮತ್ತು ಕ್ರಿಯಾತ್ಮಕವಾಗಿ ಕೆಲಸ ಮಾಡುವ ಕಾರ್ಯಪಡೆಯ ಅಗತ್ಯವಿದೆ ಎಂದು ಗೂಗಲ್ನ ಚೀಫ್ ಬಿಸಿನೆಸ್ ಆಫೀಸರ್ ಫಿಲಿಪ್ ಶೆಡ್ಲರ್ ತಿಳಿಸಿದ್ದಾರೆ.
ಭವಿಷ್ಯದ ಮುನ್ಸೂಚನೆ: ಅಮೆಜಾನ್, ಮೆಟಾ ಮತ್ತು ಮೈಕ್ರೋಸಾಫ್ಟ್ನಂತಹ ಇತರ ಟೆಕ್ ದೈತ್ಯ ಕಂಪನಿಗಳು ಕೂಡ ಇದೇ ಹಾದಿಯಲ್ಲಿ ಸಾಗುವ ಸಾಧ್ಯತೆ ಇದೆ. 2026ರಲ್ಲಿ ಈ ನಾಲ್ಕು ಕಂಪನಿಗಳು AI ತಂತ್ರಜ್ಞಾನಕ್ಕಾಗಿ ಸುಮಾರು 58.92 ಲಕ್ಷ ಕೋಟಿ ರೂಪಾಯಿ ಹೂಡಿಕೆ ಮಾಡುವ ಅಂದಾಜಿದೆ.
ಒಟ್ಟಾರೆಯಾಗಿ, ಭವಿಷ್ಯದ ಉದ್ಯೋಗ ಮಾರುಕಟ್ಟೆಯಲ್ಲಿ AI ಕೌಶಲ್ಯ ಅತ್ಯಂತ ಅನಿವಾರ್ಯ ಎಂಬ ಎಚ್ಚರಿಕೆಯ ಸಂದೇಶವನ್ನು ಗೂಗಲ್ ಈ ಮೂಲಕ ನೀಡಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ6 days agoದಾವಣಗೆರೆ | ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಕೊಟ್ರೇಶ್ ವಿರುದ್ಧ ಲೋಕಾಗೆ ದೂರು
-
ದಿನದ ಸುದ್ದಿ4 days agoಫೆ.14 ರಂದು ಸಂತ ಸೇವಾಲಾಲ್ರವರ 287ನೇ ಜಯಂತಿ ಕಾರ್ಯಕ್ರಮ
-
ದಿನದ ಸುದ್ದಿ4 days agoಎಸ್.ಎಸ್.ಎಲ್.ಸಿ ಫಲಿತಾಂಶ ಹೆಚ್ಚಿಸಲು ಕ್ರಮವಹಿಸಿ : ಶಿಕ್ಷಕರಿಗೆ ಡಿಸಿ ಗಂಗಾಧರಸ್ವಾಮಿ ಸೂಚನೆ
-
ದಿನದ ಸುದ್ದಿ6 days agoಕನ್ನಡಭಾಷೆಯಲ್ಲಿ ನಾಮಫಲಕ ಕಡ್ಡಾಯ : ಆಯುಕ್ತೆ ರೇಣುಕಾ ಆದೇಶ
-
ದಿನದ ಸುದ್ದಿ3 days agoಉದ್ಯೋಗಿಗಳಿಗೆ ಗೂಗಲ್ ಶಾಕ್..! AI ಕಲಿಯದಿದ್ದರೆ ಉದ್ಯೋಗ ತೊರೆಯಿರಿ
-
ದಿನದ ಸುದ್ದಿ15 hours agoಮಾಜಿ ದೇವದಾಸಿ ಮಹಿಳೆಯರ ಮರು ಸಮೀಕ್ಷೆ : ಆಕ್ಷೇಪಣೆಗಳಿಗೆ ಅರ್ಜಿ ಆಹ್ವಾನ
-
ದಿನದ ಸುದ್ದಿ14 hours agoದುರ್ಗಾಂಬಿಕಾದೇವಿ ಜಾತ್ರೆ ; ಭಕ್ತಾದಿಗಳಿಗೆ ಶೌಚಾಲಯ ವ್ಯವಸ್ಥೆ




