Connect with us

ದಿನದ ಸುದ್ದಿ

ಕೋವಿಡ್ ನಂತರದ ಭಾರತ

Published

on

  • ಕೇಸರಿ ಹರವೂ

‘ಕೋರೋನಾದೊಂದಿಗೆ ಬದುಕುವುದನ್ನು ಕಲಿಯಿರಿ’ ಎನ್ನುವ ಸಂದೇಶ ನಮ್ಮ ಪ್ರಭುತ್ವದಿಂದ ರವಾನೆಯಾಗಿದೆ. ಇದರರ್ಥ ಕೋರೋನಾ ನಮ್ಮಲ್ಲಿ ಇನ್ನೂ ಒಂದಷ್ಟು ಕಾಲ ಕಾಡುತ್ತಲೇ ಇರುತ್ತದೆ ಎಂದು. ಇದು ಜಾಗತಿಕವಾಗಿಯೂ ನಿಜ. ಹಾಗಾಗಿ ನಮ್ಮಲ್ಲೂ ನಿಜ. ಆದರೆ ಅನೇಕ ರಾಷ್ಟ್ರಗಳು, ವಿಜ್ಞಾನಿಗಳು ಇದನ್ನು ಹೇಳಿ ಹಲವು ವಾರಗಳೇ ಆದವು. ನಮ್ಮ ದೇಶ ಈಗ ಹೇಳುವುದಕ್ಕೆ ಕೆಲವು ಕಾರಣಗಳಿವೆ.

ಈ ಸಂದೇಶ ನಾವು ಕೋರೋನಾವನ್ನು ಪೂರ್ತಿಯಾಗಿ ಹಿಮ್ಮೆಟ್ಟಿಸುವಲ್ಲಿ, ಸೋಂಕು ತಡೆಯುವಲ್ಲಿ ವಿಫಲರಾಗಿದ್ದೇವೆ ಎಂದೂ ಹೇಳುತ್ತದೆ. ನಮ್ಮಲ್ಲಿ ಸೋಂಕು ತೀರಾ ಕಡಿಮೆ ಪ್ರಮಾಣದಲ್ಲಿ ಇದ್ದಾಗಲೇ ಎಂಟು ವಾರಗಳ ಕಾಲ ಲಾಕ್ಡೌನ್ ಹೇರಿ ಕಾಲಹರಣ ಮಾಡಲಾಯಿತು. ಈಗ ಸೋಂಕು exponential ಆಗಿ ಹರಡುವುದಕ್ಕೆ ಆರಂಭವಾಗಿದೆ.

ನಿಜಕ್ಕೂ ಲಾಕ್ಡೌನ್ ಅವಶ್ಯ ಎಂದು ವೈಜ್ಞಾನಿಕವಾಗಿ ಎನಿಸಿದ್ದರೆ ಅದನ್ನು ಈಗ ಜಾರಿಗೊಳಿಸಬೇಕಿತ್ತು. ಈಗಲೂ ಅದು ದೇಶದಾದ್ಯಂತ ಬೇಕಿಲ್ಲ ಎಂದೇ ಹಲವು ತಜ್ಞರು ಹೇಳುತ್ತಾರೆ. ಆದರೆ ನಾವು ಇನ್ನಷ್ಟು ದಿನ ಆರ್ಥಿಕ ಚಟುವಟಿಕೆಗಳನ್ನು ಸ್ಥಗಿತಗೊಳಿಸುವುದು ಸಾಧ್ಯವೇ ಇಲ್ಲದಂತಾ ಪರಿಸ್ಥಿತಿಯಲ್ಲಿ ಸಮುದಾಯ ಹರಡುವಿಕೆಗೆ ತಯಾರಾಗಿ ಲಾಕ್ಡೌನ್ ಅನ್ನು ಕ್ರಮೇಣ ಸಡಿಲಿಸಲು ಆರಂಭಿಸಿದ್ದೇವೆ.

ಪ್ರಭುತ್ವ ಈಗ ಹೇಳಿರುವ ಈ ಹೇಳಿಕೆ ನಮ್ಮನ್ನು ಈ ಎಂಟು ವಾರಗಳ ಲಾಕ್ಡೌನಿನಲ್ಲಿ ದೇಶದಲ್ಲಿ ನಡೆದ ವಿದ್ಯಮಾನಗಳನ್ನು ಮತ್ತೊಮ್ಮೆ ನೋಡಲು ತೊಡಗಿಸುತ್ತದೆ. ಈ ನೋಟ ನಮ್ಮ ದೇಶ ಇನ್ನುಮುಂದೆ ಹೇಗೆ ಸಾಗುತ್ತದೆ ಎನ್ನುವುದಕ್ಕೆ ಕೆಲವು ಸುಳಿವುಗಳನ್ನೂ ಕೊಡುತ್ತದೆ.

ಲಾಕ್ಡೌನಿನ ಮೂಲ ಉದ್ದೇಶವನ್ನು ಸಾಕಷ್ಟು ವಿಫಲಗೊಳಿಸಿದ್ದರೂ, ಪ್ರಭುತ್ವ ತನ್ನ ಕೆಲವು ಉದ್ದೇಶಗಳನ್ನು ಈಡೇರಿಸಿಕೊಂಡಿದೆ.

ಪೌರತ್ವ ತಿದ್ದುಪಡಿ ಕಾಯ್ದೆಯ ವಿರೋಧೀ ಹೋರಾಟದ ಕಾವನ್ನು ಬಹುತೇಕ ತಣ್ಣಗಾಗಿಸುವಲ್ಲಿ ಅದು ಸಫಲವಾಗಿದೆ. ಹೋರಾಟ ತನ್ನ ಉಚ್ಛ್ರಾಯ ಸ್ಥಿತಿಯಲ್ಲಿದ್ದು, ಜಗತ್ತಿನಾದ್ಯಂತ ಪೌರತ್ವ ತಿದ್ದುಪಡಿಯ ವಿರುದ್ಧ ದನಿಯೆದ್ದಿದ್ದಾಗ, ಆ ಮುಜುಗರದಿಂದ ತಪ್ಪಿಸಿಕೊಳ್ಳಲು ಹೆಣಗುತ್ತಿದ್ದ ಪ್ರಭುತ್ವ ಪ್ರತಿಯೊಬ್ಬರಲ್ಲೂ ಮಹಾಮಾರಿಯ ಸಾಂಕ್ರಾಮಿಕದ ಆತಂಕದ ವಾತಾವರಣವನ್ನು ಹುಟ್ಟಿಹಾಕಿತು. ಲಾಕ್ಡೌನ್ ಒಂದೇ ಪರಿಹಾರ ಎಂದು ಅದನ್ನು ಹೇರಿ, ಪರ ಮತ್ತು ವಿರೋಧಿಗಳೆಲ್ಲರೂ ಸಹಕರಿಸುವಂತೆ ಮಾಡುವಲ್ಲಿ ಅದು ಯಶಸ್ವಿಯಾಯಿತು. ಮತ್ತೊಮ್ಮೆ ದೇಶದಲ್ಲಿ ಆ ಮಟ್ಟಕ್ಕೆ ಕಾವು ಏರಲು ದೊಡ್ಡ ಸಂಕಲ್ಪ ಮತ್ತು ಸಮಯ ಎರಡೂ ಬೇಕು.

ಸೋಂಕು ಹರಡುವಿಕೆಗೆ ಮುಸ್ಲಿಮರೇ ಮುಖ್ಯ ಕಾರಣ ಎಂದು ಜನರ ಮನಸ್ಸಿನಲ್ಲಿ ಯಶಸ್ವಿಯಾಗಿ ಬಿತ್ತಿ ತನ್ನ ಮುಸ್ಲಿಂ ವಿರೋಧೀ ನೀತಿಯನ್ನು ಅದು ಸಮರ್ಥಿಸಿಕೊಂಡಿದೆ. ಇದು ತನ್ನ ದೀರ್ಘಕಾಲದ ನೀತಿಗಳಲ್ಲಿ ಒಂದು. ಕೊರೋನಾ ಇದನ್ನು ಸುಲಭದಲ್ಲಿ ಸಾಧ್ಯವಾಗಿಸಿದ್ದು ಆ ನೀತಿಗೆ ಒದಗಿಬಂದ ದೊಡ್ಡ ಲಾಭ. ಇಂದು ಮಾವಿನ ಫಸಲು ಕೊಳ್ಳುವ ವರ್ತಕರಿಂದ ಹಿಡಿದು, ಬೇರೆಬೇರೇ ಕಸುಬುಗಳಿಗೆ ಹಳ್ಳಿಗಳಿಗೆ ಬರುತ್ತಿದ್ದ ಮುಸ್ಲಿಮರನ್ನು ಜನ ಕಾಣುತ್ತಿರುವ ರೀತಿಯೇ ಬೇರೆಯಾಗಿದೆ. ಸಾಮಾಜಿಕ ಅಂತರದ ಪರಾಕಾಷ್ಟೆ ಇದು.

ಪರಿಷ್ಕೃತ ಕರಡು ಕಾರ್ಮಿಕ ನೀತಿ ಲೋಕಸಭೆಯಲ್ಲಿ ಮಂಡನೆಯಾಗಿತ್ತು. ಬಲಪಂಥೀಯ ಬಿಎಮ್ಮೆಸ್’ನಿಂದ ಹಿಡಿದು ಎಲ್ಲ ಕಾರ್ಮಿಕ ಸಂಘಟನೆಗಳಿಂದ ಈ ನೀತಿಗೆ ದೊಡ್ಡ ವಿರೋಧವಿದ್ದು, ಅದು ಪಾಸ್ ಆಗುವುದು ಅತ್ಯಂತ ಕಠಿಣವಾಗಿತ್ತು. ಲಾಕ್ಡನ್ ಸಡಿಲಗೊಳಿಸುತ್ತಿರುವ ಈ ಸಂದರ್ಭದಲ್ಲಿ ಕಾರ್ಮಿಕರನ್ನು ಹೇಗೆ ನಡೆಸಿಕೊಳ್ಳುತ್ತಿವೆ ದೇಶದ ಮತ್ತು ರಾಜ್ಯಗಳ ಪ್ರಭುತ್ವಗಳು ಎನ್ನುವುದು ನಮ್ಮ ಕಣ್ಣಮುಂದೆಯೇ ಇದೆ.

ಇನ್ನೂ ಮೇಲಾಗಿ, ಆರು ರಾಜ್ಯಗಳು ಕಾರ್ಮಿಕ ಹಕ್ಕುಗಳನ್ನು ಮೂರು ವರ್ಷಗಳ ಕಾಲ ಅಮಾನತಿನಲ್ಲಿಟ್ಟಿವೆ. ಕಾರ್ಮಿಕರ ಎಲ್ಲ ಹಕ್ಕುಗಳನ್ನೂ, ಇದ್ದ ಅಲ್ಪ ಭದ್ರತೆಯನ್ನೂ ಒಂದೇ ಏಟಲ್ಲಿ ತೊಡೆದುಹಾಕುವಂತೆ ಮಾಡಿತು ಈ ಕೊರೋನಾ. ಆರ್ಥಿಕತೆಯ ಚೇತರಿಕೆಗಾಗಿ ಈ ಕ್ರಮ ಅತ್ಯಗತ್ಯ ಎಂದು ಬಿಂಬಿಸುವ ಪ್ರಯತ್ನ ನೇರವಾಗಿ ಕಾಣುತ್ತದೆ.

ಇದು ನಮ್ಮ ಕಾರ್ಪೊರೇಟ್ ಧಣಿಗಳಿಗೆ ಬಹುದೊಡ್ಡ ಕೊಡುಗೆಯಾಗಿ ಬರಲಿದೆ. ಬಹಳ ಹಿಂದಿನಿಂದಲೇ ಕೆಲವು ಅನುಕೂಲಕರ ವಾತಾರಣಗಳನ್ನು ಬಯಸಿದ್ದ ಕಾರ್ಪೋರೇಟುಗಳಿಗೆ ಈಗ ಲೀಲಾಜಾಲವಾಗಿ ತಮ್ಮ ಕಾರ್ಮಿಕ ನೀತಿಗಳನ್ನು ಬದಲಿಸಿಕೊಂಡು ಲಾಭ ಬಡಿಯುವ ಅವಕಾಶ ಒದಗಿ ಬಂದಿದೆ. ಈ ಲಾಭ ನಮ್ಮ ಪರಿಸರ, ಭೂಬಳಕೆ, ಕಾರ್ಮಿಕ ನೀತಿ, ಮಾನವ ಸಂಬಂಧಗಳ ಮೇಲೆ ದೊಡ್ಡ ವ್ಯತಿರಿಕ್ತ ಪರಿಣಾಮ ಬೀರಲಿದೆ. ಜನರ ಅನುಭವದಲ್ಲಿದ್ದ ಅಲ್ಪಸ್ವಲ್ಪ ಸಂಪನ್ಮೂಲಗಳೂ ಕಾರ್ಪೊರೇಟ್ಗಳ ಪಾಲಾಗಲಿದ್ದು, ನಾವು ಕಾರ್ಪೊರೇಟ್ಗಳ ಮುಂದೆ ಇನ್ನಷ್ಟು ಕೈಚಾಚಿ ಬದುಕುವ ಅನಿವಾರ್ಯತೆಯನ್ನು ಸೃಷ್ಟಿಸುತ್ತದೆ.

‘ಕೋರೋನಾ ನಮಗೆ ಪಾಠ ಕಲಿಸಿದೆ. ಜಾಗತೀಕರಣ, ಬಂಡವಾಳಶಾಹೀ ಅರ್ಥವ್ಯವಸ್ಥೆ ಎಲ್ಲಕ್ಕೂ ಉತ್ತರವಲ್ಲ ಎನ್ನುವುದನ್ನು ಜಗತ್ತು ಕಲಿತಿದೆ. ನಮ್ಮ ಜಗತ್ತು ಸಮಾಜಸ್ನೇಹಿಯಾಗಿ, ಪರಿಸರ ಸ್ನೇಹಿಯಾಗಿ ಬದಲಾಗಲಿದೆ’ ಎನ್ನುವ ಆಶಾವಾದ ಕೆಲವರದು. ಆದರೆ, ಕಾರ್ಮಿಕರ ಹಕ್ಕುಗಳನ್ನು ಅಮಾನತಿನಲ್ಲಿಟ್ಟಿರುವ ಕ್ರಮವೊಂದೇ ಸಾಕು ಕೋವಿಡ್ ನಂತರದ ಆರ್ಥಿಕತೆ ಅದಕ್ಕೆ ತದ್ವಿರುದ್ಧವಾಗಿ ತಯಾರಾಗುವುದಕ್ಕೆ. ಕೊರೋನಾದಂಥಾ ಸಾಂಕ್ರಾಮಿಕವನ್ನು ಸಮರ್ಥವಾಗಿ ನಿಭಾಯಿಸಲು ಸರ್ಕಾರಗಳಿಗೆ ಶಕ್ತಿ ಸಾಲುವುದಿಲ್ಲ, ಖಾಸಗೀ ವ್ಯವಸ್ಥೆಯೂ ದೊಡ್ಡದಾಗಿ ಸಜ್ಜುಗೊಳ್ಳಬೇಕು ಎನ್ನುವ ಹೊಸ ವಾದ ಹುಟ್ಟಲಿದೆ.

ಆ ವಾದವನ್ನು ನಮ್ಮ ಪ್ರಭುತ್ವಗಳೂ ಒಪ್ಪಿಕೊಳ್ಳುತ್ತವೆ. ಅದೇ ಕಾರಣಕ್ಕಾಗಿ ಅಲ್ಲದಿದ್ದರೂ ತಮ್ಮ ಅನುಕೂಲಕ್ಕಾಗಿ ಶಕ್ತಿಕೇಂದ್ರಗಳು ಒಪ್ಪುತ್ತವೆ. ಅಲ್ಲಿಂದ ಮುಂದೆ ಖಾಸಗೀ ಶಿಕ್ಷಣ, ಆರೋಗ್ಯ ಸೇವೆ, ಸಂಪರ್ಕ, ಸಾಗಣೆ, ಆಹಾರ ಸರಬರಾಜು ಎಲ್ಲ ಕ್ಷೇತ್ರಗಳಿಗೂ ಇದು ವಿಸ್ತರಿಸುತ್ತದೆ. ಇವೆಲ್ಲವೂ ಇನ್ನಷ್ಟು ವಿಸ್ತರಣೆಯಾಗಲಿವೆ ಮತ್ತು ದುಬಾರಿಯಾಗಲಿವೆ. ಸಾವಿರ ಕಿಮೀ ಗಟ್ಟಲೆ ನಡೆಯುವವರು, ರೈಲಿನ ಕೆಳಗೆ ಸಾಯುವ ಗುಂಪುಗಳು ಸಾಮಾನ್ಯವಾಗಲಿವೆ.

ಇವೆಲ್ಲವನ್ನೂ ಪ್ರಭುತ್ವ ಜನತೆಗೆ ಒಪ್ಪಿಸಿ ಮುನ್ನಡೆಯುತ್ತಿರಬೇಕಾಗುತ್ತದೆ. ಹಾಗಾದರೆ ಏನು ಮಾಡಬೇಕು? ಸರ್ಜಿಕಲ್ ಸ್ಟ್ರೈಕ್, ಪುಲ್ವಾಮಾ, ಮುಂತಾದವು ಈಗ ಸಾಲುವುದಿಲ್ಲ. ದೇಶದ ಗಡಿಗಳನ್ನು ರಕ್ಷಿಸುವ ಜೊತೆಗೆ ಕಳಕೊಂಡ ಆಕ್ರಮಿತ ಪ್ರದೇಶಗಳನ್ನು ಮತ್ತೆ ವಶಮಾಡಿಕೊಳ್ಳಬೇಕು. ದೇಶಭಕ್ತರು ಯಾರೂ ಇದನ್ನು ಬೇಡ ಎನ್ನಲಾರರು. ಬದಲಿಗೆ ಒಕ್ಕೊರಳಿನಿಂದ ಜೈ ಎಂದೇ ಅಂದಾರು.

ಈಗಾಗಲೇ ಗೂಗಲ್ ತನ್ನ ಮ್ಯಾಪಿನಲ್ಲಿ LOC ಅಳಿಸಿಹಾಕಿದೆ. ಅದರ ಹಿಂದಿನ ಒತ್ತಡ ಏನಿರಬಹುದು ಲೆಕ್ಕ ಹಾಕಿ. ಭಾರತೀಯರಾದ ನಮಗೆ ಇದು ಅತ್ಯಂತ ಸ್ವಾಗತಾರ್ಹ ವಿಚಾರ. ನಮ್ಮ ಹವಾಮಾನ ಇಲಾಖೆ POKಯ ಪೂರ್ಣ ಹವಾಮಾನ ವರದಿಯನ್ನು ಕೊಡಲು ಶುರು ಮಾಡಿದೆ. ಯುದ್ಧ ಸಾಮಗ್ರಿಗಳ ಹೊಸ ಒಪ್ಪಂದಗಳು ನಮ್ಮಲ್ಲಿ ಆಗ್ತಿವೆ. ಯುದ್ಧೋನ್ಮಾದವನ್ನು ಉಣಬಡಿಸಲು ಪ್ರಯತ್ನ ನಡೆಯುತ್ತಿದೆಯೇ? ಅಥವಾ ಯುದ್ಧಕ್ಕೇ ತಯಾರಿ ನಡೆಯುತ್ತಿದೆಯೇ? ಯೋಚಿಸಿ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ಹಳೆ ಪಿಂಚಣಿ ಪದ್ಧತಿ ಮರುಜಾರಿಗಾಗಿ ಸರ್ಕಾರದ ಮೇಲೆ ಒತ್ತಡ ಹೇರಲು ರಾಜ್ಯ ಸರ್ಕಾರಿ ನೌಕರರ ಸಂಘದ ಕಾರ್ಯಕಾರಿ ಸಮಿತಿ ನಿರ್ಣಯ

Published

on

ಸುದ್ದಿದಿನಡೆಸ್ಕ್:ಹಳೆ ಪಿಂಚಣಿ ಪದ್ಧತಿ ಮರು ಜಾರಿಗಾಗಿ ಸರ್ಕಾರದ ಮೇಲೆ ಒತ್ತಡ ಹೇರಲು ವಿವಿಧ ಹಂತಗಳಲ್ಲಿ ಹೋರಾಟ ಸೇರಿದಂತೆ ಇನ್ನಿತರೆ ನಿರ್ಣಯಗಳಿಗೆ ಬೆಂಬಲ ಸೂಚಿಸಲು ದಾವಣಗೆರೆಯಲ್ಲಿ ನಡೆದ ರಾಜ್ಯ ಸರ್ಕಾರಿ ನೌಕರರ ಸಂಘದ ಕಾರ್ಯಕಾರಿ ಸಮಿತಿ ಸಭೆ ನಿರ್ಧರಿಸಲಾಗಿದೆ ಎಂದು ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಕ್ಷರಿ ತಿಳಿಸಿದ್ದಾರೆ.

ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಗದು ರಹಿತ ಚಿಕಿತ್ಸೆ ಯೋಜನೆಯ ತ್ವರಿತ ಜಾರಿಗೆ ಒತ್ತಾಯಿಸುವುದು, 2026ಕ್ಕೆ ಕೇಂದ್ರ ಸರ್ಕಾರದ ಮಾದರಿ ವೇತನಕ್ಕಾಗಿ ಹೋರಾಟ ರೂಪಿಸುವುದು ಮುಖ್ಯ ಉದ್ದೇಶವಾಗಿದೆ ಎಂದರು.

ಪ್ರಾಥಮಿಕ ಶಾಲಾ ಶಿಕ್ಷಕರ ಸಿ ಆಂಡ್ ಆರ್ ನಿಯಮಕ್ಕೆ ತಿದ್ದುಪಡಿ ತರುವಂತೆ ಆಗ್ರಹಿಸಿ, ನಡೆಸಲಾಗುವ ಹೋರಾಟವನ್ನು ಬೆಂಬಲಿಸುವುದು, ವೈದ್ಯಕೀಯ ವೆಚ್ಚ ಮರುಪಾವತಿ ಬಿಲ್‌ಗಳಿಗೆ ಶೀಘ್ರವೇ ಹಣ ಬಿಡುಗಡೆ ಮಾಡಿಸುವ ನಿರ್ಣಯಗಳನ್ನು ಕೈಗೊಳ್ಳಲಾಯಿತು ಎಂದು ಸಿ.ಎಸ್.ಷಡಕ್ಷರಿ ತಿಳಿಸಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಉತ್ಸವಕ್ಕೆ ಬೈಲಹೊಂಗಲದಲ್ಲಿ ಚಾಲನೆ

Published

on

ಸುದ್ದಿದಿನಡೆಸ್ಕ್:ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಉತ್ಸವ-2025ಕ್ಕೆ ಇಂದು ಮುಂಜಾನೆ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ರಾಯಣ್ಣನ ಜನ್ಮಸ್ಥಳ ಸಂಗೊಳ್ಳಿಯಲ್ಲಿ ಅದ್ದೂರಿ ಚಾಲನೆ ನೀಡಲಾಯಿತು.

ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಆಯೋಜಿಸಲಾಗಿರುವ ಉತ್ಸವವು ಪ್ರತಿವರ್ಷದಂತೆ ಸಾಂಪ್ರದಾಯಿಕವಾಗಿ ಆರಂಭಗೊಂಡಿದೆ. ಸಂಗೊಳ್ಳಿಯ ಶ್ರೀ ಸಿದ್ದಲಿಂಗೇಶ್ವರ ಸಂಸ್ಥಾನ ಹಿರೇಮಠದ ಗುರುಲಿಂಗ ಶಿವಾಚಾರ್ಯ ಮಹಾಸ್ವಾಮಿಗಳ ಸಾನಿಧ್ಯದಲ್ಲಿ ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಪ್ರಾತಃಕಾಲದ ಪೂಜೆ ಸಲ್ಲಿಸಲಾಯಿತು.

ಬೈಲಹೊಂಗಲ ಶಾಸಕ ಮಹಾಂತೇಶ ಕೌಜಲಗಿ ಜ್ಯೋತಿಯನ್ನು ಸ್ವಾಗತಿಸಿದರು. ಉಪ ವಿಭಾಗಾಧಿಕಾರಿ ಪ್ರಭಾವತಿ ಫಕ್ಕೀರಪುರ, ಸಂಗೊಳ್ಳಿ ರಾಯಣ್ಣ ಸ್ಮಾರಕ ಭವನದ ಆವರಣದಲ್ಲಿ ಕಿತ್ತೂರು ಸಂಸ್ಥಾನದ ಧ್ವಜಾರೋಹಣ ನೆರವೇರಿಸಿದರು. ಬಳಿಕ ಕಿತ್ತೂರು ಶಾಸಕ ಬಾಬಾಸಾಹೇಬ್ ಪಾಟೀಲ, ಜಾನಪದ ಕಲಾವಾಹಿನಿಗೆ ಚಾಲನೆ ನೀಡಿದರು.

ಪೂರ್ಣ ಕುಂಭ ಹೊತ್ತ ಮಹಿಳೆಯರು, ಪೂಜಾ ಕುಣಿತ, ನಂದಿಕೋಲು, ವೀರಗಾಸೆ, ಡೊಳ್ಳು, ಬೊಂಬೆ ಕುಣಿತ ಸೇರಿದಂತೆ ವಿವಿಧ ಕಲಾ ತಂಡಗಳು ಉತ್ಸವಕ್ಕೆ ಮೆರುಗು ತಂದಿತು. ಸಂಗೊಳ್ಳಿ ರಾಯಣ್ಣ ಸ್ಮಾರಕದ ಬಳಿಯಿಂದ ಆರಂಭಗೊಂಡ ಕಲಾವಾಹಿನಿಯು ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು.

ಇಂದು ಸಂಜೆ 8 ಗಂಟೆಗೆ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಉತ್ಸವದ ಅಧಿಕೃತ ಉದ್ಘಾಟನೆ ನೆರವೇರಿಸಲಿದ್ದಾರೆ. ಸಚಿವೆ ಲಕ್ಷ್ಮೀ ಹೆಬ್ಬಾಳ್ಕಾರ್ ಸೇರಿದಂತೆ ಅನೇಕ ಗಣ್ಯರು ಪಾಲ್ಗೊಳ್ಳಲಿದ್ದಾರೆ.

ನಾಳೆ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ. ವೀರರ ಸ್ಮರಣಾರ್ಥ ದೀಪೋತ್ಸವ, ರಾಯಣ್ಣನ ಕುರಿತಾದ ವಿಚಾರ ಸಂಕಿರಣ, ರಾಷ್ಟ್ರಮಟ್ಟದ ಕುಸ್ತಿ ಪಂದ್ಯಾವಳಿ ಸೇರಿದಂತೆ ಇತರೆ ಸ್ಪರ್ಧೆಗಳು ನಡೆಯಲಿವೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ನಾಳೆಯಿಂದ ಜಗಳೂರಿನಲ್ಲಿ ಜಿಲ್ಲಾ 14 ನೇ ಕನ್ನಡ ಸಾಹಿತ್ಯ ಸಮ್ಮೇಳನ

Published

on

ಸುದ್ದಿದಿನ,ದಾವಣಗೆರೆ:ಜಗಳೂರು ಪಟ್ಟಣದಲ್ಲಿ ಜನವರಿ 11 ಮತ್ತು 12 ರಂದು ಜಗಳೂರು ಪಟ್ಟಣದ ಬಯಲು ರಂಗಮಂದಿರದಲ್ಲಿ ಜಿಲ್ಲಾ 14 ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಆಯೋಜಿಸಲಾಗಿದೆ.

ಜನವರಿ 11 ರಂದು ಬೆಳಿಗ್ಗೆ 8 ಗಂಟೆಗೆ ಅಪರ ಜಿಲ್ಲಾಧಿಕಾರಿ ಪಿ ಎನ್ ಲೋಕೇಶ್ ರಾಷ್ಟ್ರ ಧ್ವಜಾರೋಹಣ ನೆರೆವೇರಿಸುವರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಬಿ. ವಾಮದೇವಪ್ಪ ಪರಿಷತ್ತಿನ ಧ್ವಜಾರೋಹಣ ನೆರೆವೇರಿಸುವರು.ಜಗಳೂರು ತಹಶೀಲ್ದಾರ್ ಸೈಯದ್ ಕಲೀಂ ಉಲ್ಲಾ ನಾಡ ಧ್ವಜಾರೋಹಣ ನೆರೆವೇರಿಸುವರು. ನವಚೇತನ ಶಾಲೆಯ ವಿದ್ಯಾರ್ಥಿಗಳಿಂದ ರಾಷ್ಟ್ರಗೀತೆ, ನಾಡಗೀತೆ ಹಾಡುವರು.

ಅಂದು ಬೆಳಿಗ್ಗೆ 9 ಗಂಟೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾಪ್ರಶಾಂತ್ ತಾಯಿ ಭುವನೇಶ್ವರಿ ಮತ್ತು ಸಮ್ಮೇಳನಾಧ್ಯಕ್ಷರ ಮೆರವಣಿಗೆಗೆ ಚಾಲನೆ ನೀಡುವರು.

ಮುಖ್ಯ ಅತಿಥಿಗಳಾಗಿ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕರಾದ ರವಿಚಂದ್ರ, ಪಟ್ಟಣ ಪಂಚಾಯಿತಿಯ ಉಪಾಧ್ಯಕ್ಷರಾದ ಲೋಕಮ್ಮ ಜೆ ಸಿ ಓಬಣ್ಣ, ಡಿ.ಡಿ.ಪಿ.ಯು ಕರಿಸಿದ್ದಪ್ಪ ಎಸ್.ಜಿ, ಡಿ.ಡಿ.ಪಿ.ಐ ಕೋಟ್ರೇಶ್.ಜಿ, ಜಗಳೂರು ವೃತ್ತ ನಿರೀಕ್ಷಕರು ಶ್ರೀನಿವಾಸರಾವ್, ತಾಲ್ಲೂಕು ಪಂಚಾಯಿತಿ, ಸಿ.ಇ.ಓ ಕೆಂಚಪ್ಪ, ಜಗಳೂರು ಬಿ.ಇ.ಓ ಹಾಲಮೂರ್ತಿ, ಶಿಶು ಅಭಿವೃದ್ದಿ ಯೋಜನಾಧಿಕಾರಿ ಬೀರೇಂದ್ರ ಕುಮಾರ್ ಭಾಗವಹಿಸುವರು. ಮೆರವಣಿಗೆ ತಾಲೂಕು ಕಚೇರಿಯಿಂದ ಡಾ.ಬಿ.ಆರ್ ಅಂಬೇಡ್ಕರ್ ವೃತ್ತ, ಗಾಂಧಿ ವೃತ್ತ, ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣದಿಂದ ಬಯಲು ರಂಗಮಂದಿರವರೆಗೆ ತಾಯಿ ಭುವನೇಶ್ವರಿ ಮೆರವಣಿಗೆ ನಡೆಯುತ್ತದೆ.

ಡೊಳ್ಳು ಕುಣಿತ,ಹಗಲುವೇಷ, ಬೊಂಬೆ ಮೇಳ, ಉರುಮೆ, ತಪ್ಪಡಿ, ಕಹಳೆ, ವೀರಗಾಸೆ, ಕರಡಿ ಮಜಲು, ನಂದಿಧ್ವಜ, ಭಜನೆ, ಕೋಲಾಟ, ಎತ್ತಿನಗಾಡಿಗಳ ಮೆರವಣಿಗೆ, ಮಹಿಳೆಯರಿಂದ ಪೂರ್ಣಕುಂಭ, ಇಲಾಖೆಗಳ ಸ್ತಬ್ಧ ಚಿತ್ರಗಳು ಇತ್ಯಾದಿ.

ಬೆಳಿಗ್ಗೆ 11 ಗಂಟೆಗೆ ಸಮ್ಮೇಳನದ ಉದ್ಘಾಟನಾ ಸಮಾರಂಭವನ್ನು ಕನ್ನಡ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರು ಹಾಗೂ ಸಾಹಿತಿಗಳಾದ ಡಾ.ಪುರುಷೋತ್ತಮ ಬಿಳಿಮಲೆ ಉದ್ಘಾಟಿಸುವರು. ಜಗಳೂರು ಶಾಸಕರಾದ ಬಿ.ದೇವೆಂದ್ರಪ್ಪ ಅಧ್ಯಕ್ಷತೆ ವಹಿಸುವರು.

ಸಂಸ್ಕøತಿ ಚಿಂತಕರು ಸಾಹಿತಿಗಳಾದ ಡಾ.ಎ.ಬಿ.ರಾಮಚಂದ್ರಪ್ಪ ಸಮ್ಮೇಳನಾಧ್ಯಕ್ಷರಾಗಿದ್ದಾರೆ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಬಿ.ವಾಮದೇವಪ್ಪ ಆಶಯ ನುಡಿಗಳಾನ್ನಾಡುವರು. ಗಣಿ ಮತ್ತು ಭೂ ವಿಜ್ಞಾನ, ತೋಟಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಎಸ್. ಮಲ್ಲಿಕಾರ್ಜುನ್ ಮಹಲಿಂಗರಂಗ ವೇದಿಕೆಯನ್ನು ಉದ್ಘಾಟಿಸುವರು. ಸಂಸದರಾದ ಡಾ.ಪ್ರಭಾ ಮಲ್ಲಿಕಾರ್ಜುನ್ ಚಿನ್ನಹಗರಿಯ ನುಡಿ ತೇರು ಸ್ಮರಣ ಸಂಚಿಕೆಯ ಲೋಕಾರ್ಪಣೆ ಮಾಡುವರು. ಶಾಸಕರಾದ ಡಾ.ಶಾಮನೂರು ಶಿವಶಂಕರಪ್ಪ ಜೆ.ಎಂ ಇಮಾಮ್ ಮಹಾದ್ವಾರವನ್ನು ಉದ್ಘಾಟಿಸುವರು.

ಕ.ಸಾ.ಪ ಅಧ್ಯಕ್ಷರಾದ ನಾಡೋಜ ಡಾ.ಮಹೇಶ ಜೋಶಿ ಅವರು ವಿದ್ಯಾರತ್ನ ಡಾ.ಟಿ.ತಿಪ್ಪೇಸ್ವಾಮಿ ಸಭಾಂಗಣವನ್ನು ಉದ್ಘಾಟಿಸುವರು. ನಿಕಟ ಪೂರ್ವ ಸಮ್ಮೇಳಧ್ಯಕ್ಷರಾದ ಪ್ರೊ.ಸಿ.ವಿ ಪಾಟೀಲ್ ಕನ್ನಡ ಧ್ವಜ ಹಸ್ತಾಂತರ ಮಾಡುವರು. ಜಗಳೂರು ಕ್ಷೇತ್ರದ ಮಾಜಿ ಶಾಸಕರಾದ ಟಿ.ಗುರುಸಿದ್ದನಗೌಡ, ಎಸ್.ವಿ ರಾಮಚಂದ್ರಪ್ಫ, ಹೆಚ್.ಪಿ.ರಾಜೇಶ್ ಕೃತಿಗಳ ಲೋಕಾರ್ಪಣೆ ಮಾಡುವರು.

ವಿಧಾನ ಪರಿಷತ್ ಸದಸ್ಯರಾದ ಅಬ್ದುಲ್ ಜಬ್ಬಾರ್ ಪ್ರೊ.ಎಸ್.ಬಿ ರಂಗನಾಥ್ ಪುಸ್ತಕ ಮಳಿಗೆ ಉದ್ಘಾಟಿಸುವರು. ಜಗಳೂರು ಪಟ್ಟಣದ ಅಧ್ಯಕ್ಷರಾದ ಕೆ.ಎಸ್ ನವೀನ್ ಕುಮಾರ್ ಡಾ.ಎಂ.ಜಿ.ಈಶ್ವರಪ್ಪ ವಸ್ತು ಪ್ರದರ್ಶನ ಮಳಿಗೆ ಉದ್ಘಾಟಿಸುವರು.

ಮುಖ್ಯ ಅತಿಥಿಗಳಾಗಿ ಮಾಯಕೊಂಡ ಶಾಸಕರಾದ ಕೆ.ಎಸ್.ಬಸವಂತಪ್ಪ, ಹೊನ್ನಾಳಿ ಶಾಸಕರಾದ ಡಿ.ಜಿ.ಶಾಂತನಗೌಡ, ಹರಿಹರ ಶಾಸಕರಾಧ ಬಿ.ಪಿ ಹರೀಶ್, ಚನ್ನಗಿರಿ ಶಾಸಕರಾದ ಬಸವರಾಜ ವಿ. ಶಿವಗಂಗ, ಬ್ರಾಹ್ಮಣ ಅಭಿವೃದ್ದಿ ನಿಗಮದ ಅಧ್ಯಕ್ಷರಾದ ಅಸಗೋಡು ಜಯಸಿಂಹ, ತಾಂಡ ಅಭಿವೃದ್ದಿ ನಿಗಮದ ಅಧ್ಯಕ್ಷರಾದ ಎನ್ ಜಯದೇವ ನಾಯ್ಕ, ವಿಧಾನ ಪರಿಷತ್ ಸದಸ್ಯರಾದ ಕೆ.ಎಸ್ ನವೀನ್, ನಾ.ರವಿಕುಮಾರ, ಡಿ.ಟಿ.ಶ್ರೀನಿವಾಸ್, ಡಾ.ಚಿದಾನಂದ ಎಂ.ಗೌಡ, ಜಿ.ಸ.ನೌ ಸಂಘದ ಅಧ್ಯಕ್ಷರಾದ ವೀರೇಶ್ ಎಸ್ ಒಡೇನಪುರ, ಜಿಲ್ಲಾ ವರದಿಗಾರರ ಕೂಟ ನಾಗರಾಜ್.ಎಸ್ ಬಡದಾಳ್, ಯುವ ಮುಖಂಡರಾದ ಕೆ.ಪಿ ಪಾಲಯ್ಯ, ಜಿಲ್ಲಾ ಕಸಾಪ ನಿಕಟಪೂರ್ವ ಅಧ್ಯಕ್ಷರಾದ ಮಂಜುನಾಥ ಕುರ್ಕಿ, ತಾ.ಸ.ನೌ ಸಂಘದ ಎ.ಎಲ್ ತಿಪ್ಪೇಸ್ವಾಮಿ, ಕಾರ್ಯಕಾರಿ ಸಮಿಯಿಯ ಅಧ್ಯಕ್ಷರಾದ ಜಿ.ರುದ್ರಯ್ಯ, ಪ್ರಗತಿಪರ ಕೃಷಿಕರು ಕಲ್ಲೇರುದ್ರೇಶ್ ಪಾಲ್ಗೋಳ್ಳುವರು.

ಮಧ್ಯಾಹ್ನ 2 ಗಂಟೆಗೆ ಗೋಷ್ಠಿ-1ರಲ್ಲಿ. ಸಾಹಿತ್ಯ ಮತ್ತು ಸಾಮಾಜಿಕ ನೆಲೆಗಳು, ಮಧ್ಯಾಹ್ನ 3:45 ಕ್ಕೆ ಗೋಷ್ಠಿ -2ರಲ್ಲಿ ಸೌಹಾರ್ದತೆ- ಸಮಾನತೆ-ಸಾಮಾಜಿಕ ನ್ಯಾಯ, ಗೋಷ್ಠಿ-3ರಲ್ಲಿ ಸಂಜೆ 5.30ಕ್ಕೆ ದಾವಣಗೆರೆ ಜಿಲ್ಲೆಯ ಐತಿಹಾಸಿಕ ನೆಲೆಗಳು, ಗೋಷ್ಠಿಗಳು ನಡೆಸಲಾಗುವುದು.

ಸಂಜೆ 6:15 ಗಂಟೆಗೆ ಜಗಳೂರು ತಾಲ್ಲೂಕು ಕಸಾಪ ಮಾಜಿ ಅಧ್ಯಕ್ಷರುಗಳಿಗೆ ಸನ್ಮಾನ ಕಾರ್ಯಕ್ರಮ ಇರುತ್ತದೆ. ನಂತರ ಡಾ. ಶುಭಾ ಮರವಂತೆ, ಗಂಗಾವತಿ ಪ್ರಾಣೇಶ್ ಮತ್ತು ತಂಡದವರಿಂದ ಹಾಸ್ಯ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯುತ್ತವೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending