ದಿನದ ಸುದ್ದಿ
ಕೋವಿಡ್ ನಂತರದ ಭಾರತ

- ಕೇಸರಿ ಹರವೂ
‘ಕೋರೋನಾದೊಂದಿಗೆ ಬದುಕುವುದನ್ನು ಕಲಿಯಿರಿ’ ಎನ್ನುವ ಸಂದೇಶ ನಮ್ಮ ಪ್ರಭುತ್ವದಿಂದ ರವಾನೆಯಾಗಿದೆ. ಇದರರ್ಥ ಕೋರೋನಾ ನಮ್ಮಲ್ಲಿ ಇನ್ನೂ ಒಂದಷ್ಟು ಕಾಲ ಕಾಡುತ್ತಲೇ ಇರುತ್ತದೆ ಎಂದು. ಇದು ಜಾಗತಿಕವಾಗಿಯೂ ನಿಜ. ಹಾಗಾಗಿ ನಮ್ಮಲ್ಲೂ ನಿಜ. ಆದರೆ ಅನೇಕ ರಾಷ್ಟ್ರಗಳು, ವಿಜ್ಞಾನಿಗಳು ಇದನ್ನು ಹೇಳಿ ಹಲವು ವಾರಗಳೇ ಆದವು. ನಮ್ಮ ದೇಶ ಈಗ ಹೇಳುವುದಕ್ಕೆ ಕೆಲವು ಕಾರಣಗಳಿವೆ.
ಈ ಸಂದೇಶ ನಾವು ಕೋರೋನಾವನ್ನು ಪೂರ್ತಿಯಾಗಿ ಹಿಮ್ಮೆಟ್ಟಿಸುವಲ್ಲಿ, ಸೋಂಕು ತಡೆಯುವಲ್ಲಿ ವಿಫಲರಾಗಿದ್ದೇವೆ ಎಂದೂ ಹೇಳುತ್ತದೆ. ನಮ್ಮಲ್ಲಿ ಸೋಂಕು ತೀರಾ ಕಡಿಮೆ ಪ್ರಮಾಣದಲ್ಲಿ ಇದ್ದಾಗಲೇ ಎಂಟು ವಾರಗಳ ಕಾಲ ಲಾಕ್ಡೌನ್ ಹೇರಿ ಕಾಲಹರಣ ಮಾಡಲಾಯಿತು. ಈಗ ಸೋಂಕು exponential ಆಗಿ ಹರಡುವುದಕ್ಕೆ ಆರಂಭವಾಗಿದೆ.
ನಿಜಕ್ಕೂ ಲಾಕ್ಡೌನ್ ಅವಶ್ಯ ಎಂದು ವೈಜ್ಞಾನಿಕವಾಗಿ ಎನಿಸಿದ್ದರೆ ಅದನ್ನು ಈಗ ಜಾರಿಗೊಳಿಸಬೇಕಿತ್ತು. ಈಗಲೂ ಅದು ದೇಶದಾದ್ಯಂತ ಬೇಕಿಲ್ಲ ಎಂದೇ ಹಲವು ತಜ್ಞರು ಹೇಳುತ್ತಾರೆ. ಆದರೆ ನಾವು ಇನ್ನಷ್ಟು ದಿನ ಆರ್ಥಿಕ ಚಟುವಟಿಕೆಗಳನ್ನು ಸ್ಥಗಿತಗೊಳಿಸುವುದು ಸಾಧ್ಯವೇ ಇಲ್ಲದಂತಾ ಪರಿಸ್ಥಿತಿಯಲ್ಲಿ ಸಮುದಾಯ ಹರಡುವಿಕೆಗೆ ತಯಾರಾಗಿ ಲಾಕ್ಡೌನ್ ಅನ್ನು ಕ್ರಮೇಣ ಸಡಿಲಿಸಲು ಆರಂಭಿಸಿದ್ದೇವೆ.
ಪ್ರಭುತ್ವ ಈಗ ಹೇಳಿರುವ ಈ ಹೇಳಿಕೆ ನಮ್ಮನ್ನು ಈ ಎಂಟು ವಾರಗಳ ಲಾಕ್ಡೌನಿನಲ್ಲಿ ದೇಶದಲ್ಲಿ ನಡೆದ ವಿದ್ಯಮಾನಗಳನ್ನು ಮತ್ತೊಮ್ಮೆ ನೋಡಲು ತೊಡಗಿಸುತ್ತದೆ. ಈ ನೋಟ ನಮ್ಮ ದೇಶ ಇನ್ನುಮುಂದೆ ಹೇಗೆ ಸಾಗುತ್ತದೆ ಎನ್ನುವುದಕ್ಕೆ ಕೆಲವು ಸುಳಿವುಗಳನ್ನೂ ಕೊಡುತ್ತದೆ.
ಲಾಕ್ಡೌನಿನ ಮೂಲ ಉದ್ದೇಶವನ್ನು ಸಾಕಷ್ಟು ವಿಫಲಗೊಳಿಸಿದ್ದರೂ, ಪ್ರಭುತ್ವ ತನ್ನ ಕೆಲವು ಉದ್ದೇಶಗಳನ್ನು ಈಡೇರಿಸಿಕೊಂಡಿದೆ.
ಪೌರತ್ವ ತಿದ್ದುಪಡಿ ಕಾಯ್ದೆಯ ವಿರೋಧೀ ಹೋರಾಟದ ಕಾವನ್ನು ಬಹುತೇಕ ತಣ್ಣಗಾಗಿಸುವಲ್ಲಿ ಅದು ಸಫಲವಾಗಿದೆ. ಹೋರಾಟ ತನ್ನ ಉಚ್ಛ್ರಾಯ ಸ್ಥಿತಿಯಲ್ಲಿದ್ದು, ಜಗತ್ತಿನಾದ್ಯಂತ ಪೌರತ್ವ ತಿದ್ದುಪಡಿಯ ವಿರುದ್ಧ ದನಿಯೆದ್ದಿದ್ದಾಗ, ಆ ಮುಜುಗರದಿಂದ ತಪ್ಪಿಸಿಕೊಳ್ಳಲು ಹೆಣಗುತ್ತಿದ್ದ ಪ್ರಭುತ್ವ ಪ್ರತಿಯೊಬ್ಬರಲ್ಲೂ ಮಹಾಮಾರಿಯ ಸಾಂಕ್ರಾಮಿಕದ ಆತಂಕದ ವಾತಾವರಣವನ್ನು ಹುಟ್ಟಿಹಾಕಿತು. ಲಾಕ್ಡೌನ್ ಒಂದೇ ಪರಿಹಾರ ಎಂದು ಅದನ್ನು ಹೇರಿ, ಪರ ಮತ್ತು ವಿರೋಧಿಗಳೆಲ್ಲರೂ ಸಹಕರಿಸುವಂತೆ ಮಾಡುವಲ್ಲಿ ಅದು ಯಶಸ್ವಿಯಾಯಿತು. ಮತ್ತೊಮ್ಮೆ ದೇಶದಲ್ಲಿ ಆ ಮಟ್ಟಕ್ಕೆ ಕಾವು ಏರಲು ದೊಡ್ಡ ಸಂಕಲ್ಪ ಮತ್ತು ಸಮಯ ಎರಡೂ ಬೇಕು.
ಸೋಂಕು ಹರಡುವಿಕೆಗೆ ಮುಸ್ಲಿಮರೇ ಮುಖ್ಯ ಕಾರಣ ಎಂದು ಜನರ ಮನಸ್ಸಿನಲ್ಲಿ ಯಶಸ್ವಿಯಾಗಿ ಬಿತ್ತಿ ತನ್ನ ಮುಸ್ಲಿಂ ವಿರೋಧೀ ನೀತಿಯನ್ನು ಅದು ಸಮರ್ಥಿಸಿಕೊಂಡಿದೆ. ಇದು ತನ್ನ ದೀರ್ಘಕಾಲದ ನೀತಿಗಳಲ್ಲಿ ಒಂದು. ಕೊರೋನಾ ಇದನ್ನು ಸುಲಭದಲ್ಲಿ ಸಾಧ್ಯವಾಗಿಸಿದ್ದು ಆ ನೀತಿಗೆ ಒದಗಿಬಂದ ದೊಡ್ಡ ಲಾಭ. ಇಂದು ಮಾವಿನ ಫಸಲು ಕೊಳ್ಳುವ ವರ್ತಕರಿಂದ ಹಿಡಿದು, ಬೇರೆಬೇರೇ ಕಸುಬುಗಳಿಗೆ ಹಳ್ಳಿಗಳಿಗೆ ಬರುತ್ತಿದ್ದ ಮುಸ್ಲಿಮರನ್ನು ಜನ ಕಾಣುತ್ತಿರುವ ರೀತಿಯೇ ಬೇರೆಯಾಗಿದೆ. ಸಾಮಾಜಿಕ ಅಂತರದ ಪರಾಕಾಷ್ಟೆ ಇದು.
ಪರಿಷ್ಕೃತ ಕರಡು ಕಾರ್ಮಿಕ ನೀತಿ ಲೋಕಸಭೆಯಲ್ಲಿ ಮಂಡನೆಯಾಗಿತ್ತು. ಬಲಪಂಥೀಯ ಬಿಎಮ್ಮೆಸ್’ನಿಂದ ಹಿಡಿದು ಎಲ್ಲ ಕಾರ್ಮಿಕ ಸಂಘಟನೆಗಳಿಂದ ಈ ನೀತಿಗೆ ದೊಡ್ಡ ವಿರೋಧವಿದ್ದು, ಅದು ಪಾಸ್ ಆಗುವುದು ಅತ್ಯಂತ ಕಠಿಣವಾಗಿತ್ತು. ಲಾಕ್ಡನ್ ಸಡಿಲಗೊಳಿಸುತ್ತಿರುವ ಈ ಸಂದರ್ಭದಲ್ಲಿ ಕಾರ್ಮಿಕರನ್ನು ಹೇಗೆ ನಡೆಸಿಕೊಳ್ಳುತ್ತಿವೆ ದೇಶದ ಮತ್ತು ರಾಜ್ಯಗಳ ಪ್ರಭುತ್ವಗಳು ಎನ್ನುವುದು ನಮ್ಮ ಕಣ್ಣಮುಂದೆಯೇ ಇದೆ.
ಇನ್ನೂ ಮೇಲಾಗಿ, ಆರು ರಾಜ್ಯಗಳು ಕಾರ್ಮಿಕ ಹಕ್ಕುಗಳನ್ನು ಮೂರು ವರ್ಷಗಳ ಕಾಲ ಅಮಾನತಿನಲ್ಲಿಟ್ಟಿವೆ. ಕಾರ್ಮಿಕರ ಎಲ್ಲ ಹಕ್ಕುಗಳನ್ನೂ, ಇದ್ದ ಅಲ್ಪ ಭದ್ರತೆಯನ್ನೂ ಒಂದೇ ಏಟಲ್ಲಿ ತೊಡೆದುಹಾಕುವಂತೆ ಮಾಡಿತು ಈ ಕೊರೋನಾ. ಆರ್ಥಿಕತೆಯ ಚೇತರಿಕೆಗಾಗಿ ಈ ಕ್ರಮ ಅತ್ಯಗತ್ಯ ಎಂದು ಬಿಂಬಿಸುವ ಪ್ರಯತ್ನ ನೇರವಾಗಿ ಕಾಣುತ್ತದೆ.
ಇದು ನಮ್ಮ ಕಾರ್ಪೊರೇಟ್ ಧಣಿಗಳಿಗೆ ಬಹುದೊಡ್ಡ ಕೊಡುಗೆಯಾಗಿ ಬರಲಿದೆ. ಬಹಳ ಹಿಂದಿನಿಂದಲೇ ಕೆಲವು ಅನುಕೂಲಕರ ವಾತಾರಣಗಳನ್ನು ಬಯಸಿದ್ದ ಕಾರ್ಪೋರೇಟುಗಳಿಗೆ ಈಗ ಲೀಲಾಜಾಲವಾಗಿ ತಮ್ಮ ಕಾರ್ಮಿಕ ನೀತಿಗಳನ್ನು ಬದಲಿಸಿಕೊಂಡು ಲಾಭ ಬಡಿಯುವ ಅವಕಾಶ ಒದಗಿ ಬಂದಿದೆ. ಈ ಲಾಭ ನಮ್ಮ ಪರಿಸರ, ಭೂಬಳಕೆ, ಕಾರ್ಮಿಕ ನೀತಿ, ಮಾನವ ಸಂಬಂಧಗಳ ಮೇಲೆ ದೊಡ್ಡ ವ್ಯತಿರಿಕ್ತ ಪರಿಣಾಮ ಬೀರಲಿದೆ. ಜನರ ಅನುಭವದಲ್ಲಿದ್ದ ಅಲ್ಪಸ್ವಲ್ಪ ಸಂಪನ್ಮೂಲಗಳೂ ಕಾರ್ಪೊರೇಟ್ಗಳ ಪಾಲಾಗಲಿದ್ದು, ನಾವು ಕಾರ್ಪೊರೇಟ್ಗಳ ಮುಂದೆ ಇನ್ನಷ್ಟು ಕೈಚಾಚಿ ಬದುಕುವ ಅನಿವಾರ್ಯತೆಯನ್ನು ಸೃಷ್ಟಿಸುತ್ತದೆ.
‘ಕೋರೋನಾ ನಮಗೆ ಪಾಠ ಕಲಿಸಿದೆ. ಜಾಗತೀಕರಣ, ಬಂಡವಾಳಶಾಹೀ ಅರ್ಥವ್ಯವಸ್ಥೆ ಎಲ್ಲಕ್ಕೂ ಉತ್ತರವಲ್ಲ ಎನ್ನುವುದನ್ನು ಜಗತ್ತು ಕಲಿತಿದೆ. ನಮ್ಮ ಜಗತ್ತು ಸಮಾಜಸ್ನೇಹಿಯಾಗಿ, ಪರಿಸರ ಸ್ನೇಹಿಯಾಗಿ ಬದಲಾಗಲಿದೆ’ ಎನ್ನುವ ಆಶಾವಾದ ಕೆಲವರದು. ಆದರೆ, ಕಾರ್ಮಿಕರ ಹಕ್ಕುಗಳನ್ನು ಅಮಾನತಿನಲ್ಲಿಟ್ಟಿರುವ ಕ್ರಮವೊಂದೇ ಸಾಕು ಕೋವಿಡ್ ನಂತರದ ಆರ್ಥಿಕತೆ ಅದಕ್ಕೆ ತದ್ವಿರುದ್ಧವಾಗಿ ತಯಾರಾಗುವುದಕ್ಕೆ. ಕೊರೋನಾದಂಥಾ ಸಾಂಕ್ರಾಮಿಕವನ್ನು ಸಮರ್ಥವಾಗಿ ನಿಭಾಯಿಸಲು ಸರ್ಕಾರಗಳಿಗೆ ಶಕ್ತಿ ಸಾಲುವುದಿಲ್ಲ, ಖಾಸಗೀ ವ್ಯವಸ್ಥೆಯೂ ದೊಡ್ಡದಾಗಿ ಸಜ್ಜುಗೊಳ್ಳಬೇಕು ಎನ್ನುವ ಹೊಸ ವಾದ ಹುಟ್ಟಲಿದೆ.
ಆ ವಾದವನ್ನು ನಮ್ಮ ಪ್ರಭುತ್ವಗಳೂ ಒಪ್ಪಿಕೊಳ್ಳುತ್ತವೆ. ಅದೇ ಕಾರಣಕ್ಕಾಗಿ ಅಲ್ಲದಿದ್ದರೂ ತಮ್ಮ ಅನುಕೂಲಕ್ಕಾಗಿ ಶಕ್ತಿಕೇಂದ್ರಗಳು ಒಪ್ಪುತ್ತವೆ. ಅಲ್ಲಿಂದ ಮುಂದೆ ಖಾಸಗೀ ಶಿಕ್ಷಣ, ಆರೋಗ್ಯ ಸೇವೆ, ಸಂಪರ್ಕ, ಸಾಗಣೆ, ಆಹಾರ ಸರಬರಾಜು ಎಲ್ಲ ಕ್ಷೇತ್ರಗಳಿಗೂ ಇದು ವಿಸ್ತರಿಸುತ್ತದೆ. ಇವೆಲ್ಲವೂ ಇನ್ನಷ್ಟು ವಿಸ್ತರಣೆಯಾಗಲಿವೆ ಮತ್ತು ದುಬಾರಿಯಾಗಲಿವೆ. ಸಾವಿರ ಕಿಮೀ ಗಟ್ಟಲೆ ನಡೆಯುವವರು, ರೈಲಿನ ಕೆಳಗೆ ಸಾಯುವ ಗುಂಪುಗಳು ಸಾಮಾನ್ಯವಾಗಲಿವೆ.
ಇವೆಲ್ಲವನ್ನೂ ಪ್ರಭುತ್ವ ಜನತೆಗೆ ಒಪ್ಪಿಸಿ ಮುನ್ನಡೆಯುತ್ತಿರಬೇಕಾಗುತ್ತದೆ. ಹಾಗಾದರೆ ಏನು ಮಾಡಬೇಕು? ಸರ್ಜಿಕಲ್ ಸ್ಟ್ರೈಕ್, ಪುಲ್ವಾಮಾ, ಮುಂತಾದವು ಈಗ ಸಾಲುವುದಿಲ್ಲ. ದೇಶದ ಗಡಿಗಳನ್ನು ರಕ್ಷಿಸುವ ಜೊತೆಗೆ ಕಳಕೊಂಡ ಆಕ್ರಮಿತ ಪ್ರದೇಶಗಳನ್ನು ಮತ್ತೆ ವಶಮಾಡಿಕೊಳ್ಳಬೇಕು. ದೇಶಭಕ್ತರು ಯಾರೂ ಇದನ್ನು ಬೇಡ ಎನ್ನಲಾರರು. ಬದಲಿಗೆ ಒಕ್ಕೊರಳಿನಿಂದ ಜೈ ಎಂದೇ ಅಂದಾರು.
ಈಗಾಗಲೇ ಗೂಗಲ್ ತನ್ನ ಮ್ಯಾಪಿನಲ್ಲಿ LOC ಅಳಿಸಿಹಾಕಿದೆ. ಅದರ ಹಿಂದಿನ ಒತ್ತಡ ಏನಿರಬಹುದು ಲೆಕ್ಕ ಹಾಕಿ. ಭಾರತೀಯರಾದ ನಮಗೆ ಇದು ಅತ್ಯಂತ ಸ್ವಾಗತಾರ್ಹ ವಿಚಾರ. ನಮ್ಮ ಹವಾಮಾನ ಇಲಾಖೆ POKಯ ಪೂರ್ಣ ಹವಾಮಾನ ವರದಿಯನ್ನು ಕೊಡಲು ಶುರು ಮಾಡಿದೆ. ಯುದ್ಧ ಸಾಮಗ್ರಿಗಳ ಹೊಸ ಒಪ್ಪಂದಗಳು ನಮ್ಮಲ್ಲಿ ಆಗ್ತಿವೆ. ಯುದ್ಧೋನ್ಮಾದವನ್ನು ಉಣಬಡಿಸಲು ಪ್ರಯತ್ನ ನಡೆಯುತ್ತಿದೆಯೇ? ಅಥವಾ ಯುದ್ಧಕ್ಕೇ ತಯಾರಿ ನಡೆಯುತ್ತಿದೆಯೇ? ಯೋಚಿಸಿ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಮಹಿಳೆಗೆ ಮೀಸಲಾತಿ ಬೇಡ, ಸಮಾನ ಪ್ರಾತಿನಿಧ್ಯ ಕೊಡಿ : ಡಾ.ಜ್ಯೋತಿ ಟಿ.ಬಿ

ಸುದ್ದಿದಿನ, ಚನ್ನಗಿರಿ (ಬಸವಾಪಟ್ಟಣ) : ಭಾರತೀಯ ಸಮಾಜದಲ್ಲಿ ಮೀಸಲಾತಿಯಿಂದ ಮಾತ್ರ ಮಹಿಳಾ ಪ್ರಗತಿ ಸಾಧ್ಯವಿಲ್ಲ. ಅವಳಿಗೆ ಪುರುಷನಂತೆ ಸಮಾನವಾದ ಪ್ರಾತಿನಿಧ್ಯ ನೀಡಿದಲ್ಲಿ ಮಾತ್ರವೇ ಮಹಿಳಾ ಪ್ರಗತಿ ಸಾಧ್ಯ. ಆಗ ಮಾತ್ರವೇ ಸದೃಢವಾದ ಭಾರತ ನಿರ್ಮಾಣವಾಗಲು ಸಾಧ್ಯ ಎಂದು ಸಂತೆಬೆನ್ನೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹ ಪ್ರಾಧ್ಯಾಪಕಿ ಡಾ.ಜ್ಯೋತಿಯವರು ಅಭಿಪ್ರಾಯ ವ್ಯಕ್ತಪಡಿಸಿದರು.
ಜನತಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶನಿವಾರ ಆಯೋಜಿಸಿದ್ದ ರಾಷ್ಟ್ರೀಯ ಐಕ್ಯತ ಸಪ್ತಾಹದ ಅಡಿಯಲ್ಲಿ ‘ಭಾರತೀಯ ಸಮಾಜ ಹಾಗೂ ರಾಷ್ಟ್ರದ ಪ್ರಗತಿಯಲ್ಲಿ ಮಹಿಳೆಯರ ಪ್ರಾಮುಖ್ಯತೆ’ ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಿದ ಅವರು, ಮಹಿಳೆಗೆ ಎಲ್ಲಿಯವರೆಗೆ ಮುಕ್ತವಾದ ಪ್ರಾತಿನಿಧ್ಯ ಲಭಿಸುವುದಿಲ್ಲವೋ ಅಲ್ಲಿಯವರೆಗೆ ಎಷ್ಟೇ ಕಾಯ್ದೆ, ಕಾನೂನುಗಳು ಜಾರಿಯಾದರೂ ಮಹಿಳೆಯರ ಬದುಕಿನಲ್ಲಿ ಸಮಗ್ರ ಬದಲಾವಣೆ ನಿರೀಕ್ಷಿಸಲು ಸಾಧ್ಯವಿಲ್ಲ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದ ಪ್ರಾಂಶುಪಾಲರಾದ ಡಾ.ಎಂ.ಆರ್. ಲೋಕೇಶ್ ಅವರು ಮಾತನಾಡಿ ಭಾರತೀಯ ಸಮಾಜದಲ್ಲಿ ಹೆಣ್ಣು ಸ್ವಾಭಿಮಾನದ ಬದುಕನ್ನು ಕಟ್ಟಿಕೊಳ್ಳುವುದು ಕೇವಲ ಆರ್ಥಿಕತೆಯಿಂದ ಸಾಧ್ಯವಿಲ್ಲ ಎಂದರು.
ನೈತಿಕತೆ, ಸಂಸ್ಕಾರವು ಕೂಡ ಅತ್ಯಂತ ಮಹತ್ವದ ಪಾತ್ರ ವಹಿಸುತ್ತದೆ. ಹೀಗಾಗಿಯೇ ಶರಣರು ಗಂಡು-ಹೆಣ್ಣು ಎಂಬ ಬೇಧವನ್ನು ಮೆಟ್ಟಿ ನಿಂತು ‘ಒಳಗೆ ಸುಳಿವ ಆತ್ಮ ಹೆಣ್ಣು ಅಲ್ಲ, ಗಂಡು ಅಲ್ಲ’ ಎಂಬ ತಾತ್ವಿಕತೆಯ ಮೂಲಕ ಸರ್ವರನ್ನು ಸಮಾನವಾಗಿ ಕಾಣುವಂತಹ ಸಮಾಜಕ್ಕಾಗಿ ಶ್ರಮಿಸಿದರು. ಭಾರತದ ನೆಲದಲ್ಲಿ ಶರಣರು, ದಾರ್ಶನಿಕರು ರೂಪಿಸಿಕೊಟ್ಟ ಮಾರ್ಗದಲ್ಲಿ ನಡೆದು ಇಂದಿನ ಮಹಿಳೆಯರು ಸಬಲರಾಗಬೇಕು ಎಂಬುದಾಗಿ ತಿಳಿಸಿದರು.
ಸಮಾಜಶಾಸ್ತ್ರದ ಮುಖ್ಯಸ್ಥರಾದ ಡಾ.ಎ.ಡಿ.ಬಸವರಾಜ್ ಅವರು ಪ್ರಾಸ್ತವಿಕ ಮಾತುಗಳನ್ನಾಡಿದರು. ಕಾರ್ಯಕ್ರಮದಲ್ಲಿ ಬೋಧಕರಾದ ಹನುಮಂತಪ್ಪ, ಪ್ರಕಾಶ್, ಮಧುಸೂಧನ್, ರೆಹಮತ್ಬಿ, ಸಂದೀಪ್ ಮುಂತಾದವರು ಹಾಜರಿದ್ದರು. ಕಾರ್ಯಕ್ರಮವನ್ನು ಗೋವಿಂದರೆಡ್ಡಿ ಅವರು ನಿರೂಪಿಸಿದರು. ವಿದ್ಯಾರ್ಥಿನಿ ಸೌಂದರ್ಯ ಸ್ವಾಗತಿಸಿದರು, ಯಶೋಧ, ಸಹನಾ ಪ್ರಾರ್ಥಿಸಿದರು, ರಕ್ಷಿತ ವಂದಿಸಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಭಾರತೀಯರೆಲ್ಲರ ಪವಿತ್ರಗ್ರಂಥ ಭಾರತದ ಸಂವಿಧಾನ : ಡಾ.ಕೆ.ಎ.ಓಬಳೇಶ್

ಸುದ್ದಿದಿನ,ದಾವಣಗೆರೆ : ಸಂವಿಧಾನ ಪೂರ್ವದ ಭಾರತದ ಸ್ಥಿತಿಗತಿ ಹಾಗೂ ಸಂವಿಧಾನದ ನಂತರ ಭಾರತದಲ್ಲಾದ ಸಾಮಾಜಿಕ, ಧಾರ್ಮಿಕ ಹಾಗೂ ರಾಜಕೀಯ ಬದಲಾವಣೆಗ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ಹಾಗೆಯೇ ಸಂವಿಧಾನ ರಚನೆ ಮಾಡುವ ಸಮಯದಲ್ಲಿ ಬಾಬಾಸಾಹೇಬ್ ಅಂಬೇಡ್ಕರ್ ಅವರ ಮುಂದಿದ್ದ ಬಿಕ್ಕಟ್ಟುಗಳನ್ನು ಏಕಾಂತಗಿರಿ ಟ್ರಸ್ಟ್ ನ ಕಾರ್ಯದರ್ಶಿ ಡಾ.ಕೆ.ಎ.ಓಬಳೇಶ್ ಅವರು ತಿಳಿಸಿಕೊಟ್ಟರು.
ನಗರದ ಪ್ರೇರಣ ಮಕ್ಕಳ ಆರೈಕೆ ಕೇಂದ್ರದಲ್ಲಿ ವಿ.ಬಿ.ಪಿ ಫೌಂಡೇಷನ್ ಹಾಗೂ ಏಕಾಂತಗಿರಿ ಟ್ರಸ್ಟ್ ಇವರ ಸಂಯುಕ್ತಾಶ್ರಯದಲ್ಲಿ ಸಂವಿಧಾನ ದಿನಾಚರಣೆಯನ್ನು ಭಾನುವಾರ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ದೇವನಗರಿ ಸುದ್ಧಿದಿನ ಪತ್ರಿಕೆಯ ಸಂಪಾದಕರಾದ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದು, ವಿದ್ಯಾರ್ಥಿಗಳಿಗೆ ಭಾರತದ ಸಂವಿಧಾನದ ಕಳಶದಂತಿರುವ ಸಂವಿಧಾನ ಪೀಠಿಕೆಯ ಮಹತ್ವವನ್ನು ಪರಿಚಯಿಸುವ ಮೂಲಕ ಸಂವಿಧಾನ ಪೀಠಿಕೆಯನ್ನು ಬೋಧಿಸಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಸ್ಕೈ ಲೈನ್ ಸಂಸ್ಥೆಯ ಸಂಸ್ಥಾಪಕರಾದ ಬಾಲಚಂದ್ರ ಅವರು ಸಂವಿಧಾನ ಇರುವ ಕಾಲದಲ್ಲಿಯೇ ದಲಿತರು, ದಮನಿತರು ಹಾಗೂ ಮಹಿಳೆಯರ ಸ್ಥಿತಿಯು ಅತ್ಯಂತ ಶೋಚನೀಯವಾಗಿದೆ. ಆದರೆ ಸಂವಿಧಾನವಿಲ್ಲದ ಭಾರತವನ್ನು ನಾವು ಊಹಿಸಿಕೊಳ್ಳುವುದು ಕಷ್ಟ ಸಾಧ್ಯ ಎಂಬುದಾಗಿ ತಿಳಿಸಿದರು.
ಪ್ರೇರಣ ಆರೈಕೆ ಕೇಂದ್ರದ ಶಿಕ್ಷಕರಾದ ಕುಮಾರ್ ಅವರು ಮಾತನಾಡಿ, ಸರ್ವರನ್ನು ಸಮಾನವಾಗಿ ಕಾಣುವ ಸಂವಿಧಾನವು ನಮ್ಮೆಲ್ಲರ ಪವಿತ್ರ ಗ್ರಂಥ ಎಂಬುದಾಗಿ ತಿಳಿಸಿದರು. ಕುಮಾರಿ ಪೂಜಾ ಅವರು ಅತಿಥಿಗಳನ್ನು ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಪ್ರೇರಣ ಸಂಸ್ಥೆಯ ಮಕ್ಕಳು ಹಾಜರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಸರ್ಕಾರಕ್ಕೆ ಸೆಡ್ಡು ಹೊಡೆದ ದಾವಣಗೆರೆ ರೈತರು

- ಪುರಂದರ್ ಲೋಕಿಕೆರೆ
ಸುದ್ದಿದಿನ, ದಾವಣಗೆರೆ : ಸರ್ಕಾರದ ಭದ್ರಾ ಅಚ್ಚುಕಟ್ಟು ಪ್ರದೇಶದ ನೀರಾವರಿ ಇಲಾಖೆಯ ಚಿತಾವಣೆಗೆ ಸೆಡ್ಡು ಹೊಡೆದು ಕೇವಲ 110-120 ದಿನಗಳ ಒಳಗಾಗಿಅಲ್ಪಾವಧಿ ತಳಿ ನಾಟಿ ಮಾಡಿ ಯಶಸ್ವಿಯಾಗಿ ಕಾಲುವೆ ನೀರು ಬಳಸಿಕೊಂಡು ಭತ್ತ ಬೆಳೆಯುವ ಮೂಲಕ ಮಾದರಿಯಾಗಿದ್ದಾರೆ ದಾವಣಗೆರೆ ಭಾಗದ ರೈತರು.
ಬೇಸಿಗೆ ಕಾಲದಲ್ಲಿ ನಮಗೆ ತೋಟಗಳಿಗೆ ನೀರು ಹರಿಸಲು ಆನ್ ಆಪ್ ಪದ್ದತಿ ಮಾಡಿ ಎಂದು ಒತ್ತಡ ಹಾಕಿದ ಶಿವಮೊಗ್ಗ ಜಿಲ್ಲೆಯ ಅಡಿಕೆ ದಣಿಗಳಿಗೇ ಮುಖಕ್ಕೆ ಹೊಡೆದಂತೆ ಭತ್ತ ಬೆಳೆದು ತೋರಿಸಿರುವುದು ಶ್ಲಾಘನೀಯ.
100 ದಿನಗಳು ನೀರು ಹರಿಸಲು ಆದೇಶ ಹೊರಡಿಸಿ ರೈತರೆಲ್ಲ ನಾಟಿ ಮಾಡಿದ ಮೇಲೆ ಎಂದೂ ಗದ್ದೆ ನೀರು ಕಟ್ಟದ ಐಷಾರಾಮೀ ರಾಜಕಾರಣಿ ಪುತ್ರ ರತ್ನ ಸಚಿವ ಮಧು ಬಂಗಾರಪ್ಪ ಅಡಿಕೆ ತೋಟದ ರೈತರಿಗೆ ಮನ ಸೋತವರು.
ಕಲ್ಲು ಬಂಡೆ ಹೊಡೆದು ಭರ್ಜರಿ ಜೀವನ ಸಾಗಿಸುವ ಸಂಪನ್ಮೂಲ ಸಚಿವ, ಉಸ್ತುವಾರಿ ಸಚಿವರ ನಿರ್ಲಕ್ಷ್ಯ ಬೇಸತ್ತ ರೈತ ರಸ್ತೆ ತಡೆದು ನೀರು ಕೊಡಿ ಎಂದು ಹೋರಾಟ ಮಾಡಿದರೂ ಕಿವಿ ಕೇಳೋಲ್ಲ ಎಂಬಂತೆ ವರ್ತಿಸಿದೆ ಆಡಳಿತ ಯಂತ್ರ.
ಆದರೆ ಈ ನಡುವೆ ಎರಡು ಭಾರಿ ಪ್ರಕೃತಿ ವರದಾನ ದಿಂದ ಭತ್ತ ಬೆಳೆಯುವ ಮೂಲಕ ಅನ್ನನೀಡುವ ರೈತ ಭತ್ತ ಬೆಳೆದು ಬಿಟ್ಟ. ಈ ಮೂರು ತಿಂಗಳ ಭತ್ತಕ್ಕೆ ನೀರು ಬಿಡುವುದು ಎಷ್ಟು ತ್ರಾಸದಾಯಕ. ಸರ್ಕಾರಗಳು ಯಾರು ಪರ ಎಂದು ಬೆತ್ತಲೆ ತೋರಿಸಿಕೊಂಡಿವೆ.
ಈಗಲಾದರೂ ಕಾಲ ಮಿಂಚಿಲ್ಲ ಕಟಾವು ಮಾಡಿದ ಭತ್ತ ಒಳ್ಳೆಯ ಗುಣಮಟ್ಟದ್ದು ಆಗಿದೆ.3000-3500 ರೂಂ ದರ ನಿಗದಿ ಮಾಡಿದರೆ ರೈತ ಸಾಲಶೂಲದಿಂದಮುಕ್ತಿ ಆಗಬಹುದು. ಭದ್ರಾ ನೀರು ಬೇಸಿಗೆ ಕಾಲದಲ್ಲಿ ಕೊಡುವುದೇ ಇಲ್ಲ ಎಂದು ಹೇಳಿರುವುದು ರೈತ ವಿರೋಧಿ ನೀತಿ.
ಗುಂಡುರಾವ್ ಕಾಲಾವಧಿಯಲ್ಲಿ 158ಅಡಿ ನೀರಿದ್ದರೂ ಭದ್ರಾ ನೀರು ಹರಿಸಲಾಗಿರುವ ದಾಖಲೆ ಇದೆ. ಕಡೆ ಪಕ್ಷ ಈ ಭಾರಿಯ ಭತ್ಖಕ್ಕೆ ವೈಜ್ಞಾನಿಕ ಬೆಲೆ ನಿಗದಿ ಮಾಡಿ, ಇಲ್ಲವೇ ಯಾವ ರೈತರ ಬಳಿ ಭತ್ತ ಖರೀದಿ ನಿಲ್ಲಿಸಿ. ರೈತರೇ ಸ್ವಂತ ಮಾರುಕಟ್ಟೆ ಹುಡುಕಿಕೊಳ್ಳುವ ಪ್ರಯತ್ನ ಮಾಡಲಿ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ4 days ago
ಚನ್ನಗಿರಿ | ಅತಿಥಿ ಉಪನ್ಯಾಸಕರಿಂದ ಅನಿರ್ದಿಷ್ಟಾವಧಿ ಮುಷ್ಕರ ; ತಹಶೀಲ್ದಾರರಿಗೆ ಮನವಿ
-
ದಿನದ ಸುದ್ದಿ5 days ago
ದೇಹದಾಡ್ಯ ಸ್ಪರ್ಧೆ | ಶ್ರೀ ಶಿವಲಿಂಗೇಶ್ವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿ ಪ್ರೇಮ್ ಕುಮಾರ್ ಗೆ ‘ಮಿಸ್ಟರ್ ದಾವಣಗೆರೆ’ ಪ್ರಶಸ್ತಿ
-
ದಿನದ ಸುದ್ದಿ1 day ago
ಭಾರತೀಯರೆಲ್ಲರ ಪವಿತ್ರಗ್ರಂಥ ಭಾರತದ ಸಂವಿಧಾನ : ಡಾ.ಕೆ.ಎ.ಓಬಳೇಶ್
-
ದಿನದ ಸುದ್ದಿ4 days ago
ಸರ್ಕಾರಕ್ಕೆ ಸೆಡ್ಡು ಹೊಡೆದ ದಾವಣಗೆರೆ ರೈತರು
-
ದಿನದ ಸುದ್ದಿ19 hours ago
ಮಹಿಳೆಗೆ ಮೀಸಲಾತಿ ಬೇಡ, ಸಮಾನ ಪ್ರಾತಿನಿಧ್ಯ ಕೊಡಿ : ಡಾ.ಜ್ಯೋತಿ ಟಿ.ಬಿ