ದಿನದ ಸುದ್ದಿ
ಭಾರತ- ಅಮೆರಿಕ ವ್ಯಾಪಾರ ಸಂಬಂಧಗಳು : ಅವರ ಸ್ವರಕ್ಷಣಾತ್ಮಕ ನೀತಿಗಳಿಗೆ ನಮ್ಮ ಸಂತೋಷದ ಸ್ವೀಕೃತಿ?

- ಅಮೇರಿಕಾ ತನ್ನ ಸ್ವರಕ್ಷಣಾತ್ಮಕ ನೀತಿಯನ್ನು ಈಗ ಆರ್ಥಿಕವಾಗಿ ಬಲಗೊಳ್ಳುತ್ತಿರುವ ದೇಶಗಳು ತಾವೇ ಸಂತೋಷದಿಂದ ಒಪ್ಪುವಂತೆ ಅವರ ಮನವೊಲಿಸುವ ಹೊಸದೊಂದು ಕಾರ್ಯತಂತ್ರಕ್ಕಿಳಿದಿದೆ. ಈ ನಿಟ್ಟಿನಲ್ಲಿ ಚೀನಾದೊಂದಿಗೆ ಅದರ ಆಟ ನಡೆಯಲಿಲ್ಲ. ಅದು ಬಗ್ಗಲಿಲ್ಲ ಮಾತ್ರವಲ್ಲ ಅದು ಅಮೇರಿಕಾದ ಸಾಲು ಸಾಲು ರಫ್ತುಗಳ ಮೇಲೆ ಹೆಚ್ಚಿನ ಆಮದು ಸುಂಕ ವಿಧಿಸಿದೆ. ಆದರೆ ಯಾವ ಪ್ರತೀಕಾರಾತ್ಮಕ ಕ್ರಮಗಳನ್ನೂ ಕೈಗೊಳ್ಳದೆ ಒಪ್ಪಿಕೊಳ್ಳುವಂತೆ ಮತ್ತು ಅದರ ಜೊತೆಯಲ್ಲಿ, ಸಾಧ್ಯವಾದರೆ, ಆಮದು ಸುಂಕವನ್ನು ತಗ್ಗಿಸುವಂತೆ ಭಾರತದ ಮನವೊಲಿಸುವ ಪ್ರಯತ್ನದಲ್ಲಿ ಯಶಸ್ವಿಯಾಗುತ್ತಿರುವಂತೆ ಕಾಣುತ್ತದೆ. ಇರಾನಿನಿಂದ ತೈಲ ಕೊಳ್ಳಕೂಡದು, ತನ್ನ ತುಟ್ಟಿಯಾದ ತೈಲವನ್ನು ಕೊಳ್ಳಬೇಕು ಎಂಬ ಅಮೇರಿಕದ ತಗಾದೆಗೆ ಮೋದಿ ಸರ್ಕಾರವು, ಚೀನಾದಂತಲ್ಲದೆ, ಸಂಪೂರ್ಣವಾಗಿ ತಲೆಬಾಗಿದೆ.
ಹತ್ತೊಂಭತ್ತನೇ ಶತಮಾನದ ಕೊನೆಯ ಮತ್ತು ಇಪ್ಪತ್ತನೇ ಶತಮಾನದ ಆದಿ ಭಾಗದ ಅವಧಿಯಲ್ಲಿ, ಆಗ ಬಲ ಹೊಂದುತ್ತಿದ್ದ ಯೂರೋಪಿನ ದೇಶಗಳಿಗೆ ಮತ್ತು ಅಮೇರಿಕಾಗೆ ಹೋಲಿಸಿದರೆ, ಬಂಡವಾಳಶಾಹಿ ಜಗತ್ತಿನ ಅಂದಿನ ದಿಗ್ಗಜ ಎನಿಸಿದ್ದ ಬ್ರಿಟನ್ನಿನ ಚಾಲ್ತಿ ಖಾತೆಯು ಕೊರತೆಯಲ್ಲಿತ್ತು. ನಿಜ ಸಂಗತಿಯೆಂದರೆ, ಇಂತಹ ಕೊರತೆ ಮುಂಚೂಣಿ ದೇಶದ ಸ್ವಭಾವವೇ ಆಗಿದೆ. ಏಕೆಂದರೆ, ಅಂತಾರಾಷ್ಟ್ರೀಯ ಕರೆನ್ಸಿ ವಿನಿಮಯ ಸಂಬಂಧಿತವಾಗಿ ಆ ಮುಂಚೂಣಿ ದೇಶವು ವ್ಯಾವಹಾರಿಕ ದೃಷ್ಟಿಯಿಂದ ಇತರೆ ದೇಶಗಳ ಬೆಳವಣಿಗೆಗೆ ಅವಕಾಶ ಕಲ್ಪಿಸುವ ಅವಶ್ಯಕತೆಯಿಂದಾಗಿ, ಆ ದೇಶದ ಚಾಲ್ತಿ ಖಾತೆಯಲ್ಲಿ ಕೊರತೆ ಉಂಟಾಗುತ್ತಿತ್ತು.
ಅದೇ ರೀತಿಯಲ್ಲಿ, ಈಗ ಬಲಗೊಳ್ಳುತ್ತಿರುವ ದೇಶಗಳಿಗೆ ಹೋಲಿಸಿದರೆ, ಇಂದಿನ ಬಲಾಢ್ಯ ಅರ್ಥವ್ಯವಸ್ಥೆ ಎನಿಸಿರುವ ಅಮೇರಿಕಾದ ಚಾಲ್ತಿ ಖಾತೆಯು ಕೊರತೆಯಲ್ಲಿದೆ. ಅದು ಸ್ವಾಭಾವಿಕವೇ. ಆದರೆ, ಅಂದಿನ ಬ್ರಿಟನ್ ಮತ್ತು ಇಂದಿನ ಬಲಾಢ್ಯ ಅಮೇರಿಕಾ ದೇಶಗಳ ಚಾಲ್ತಿ ಖಾತೆಯ ಕೊರತೆಗಳಲ್ಲಿ ಒಂದು ವ್ಯತ್ಯಾಸವಿದೆ. ಯಾವ ದೇಶಗಳೊಂದಿಗೆ ಬ್ರಿಟನ್ನಿನ ಚಾಲ್ತಿ ಖಾತೆ ಕೊರತೆಯಲ್ಲಿತ್ತೊ ಆ ದೇಶಗಳಿಗೇ ಬ್ರಿಟನ್ ಬಂಡವಾಳವನ್ನು ಒದಗಿಸಿಯೂ ತನ್ನ ಚಾಲ್ತಿ ಖಾತೆಯ ಕೊರತೆಯನ್ನು ನಿಭಾಯಿಸಿಕೊಳ್ಳುತ್ತಿತ್ತು.
ಹೇಗೆಂದರೆ, ಬ್ರಿಟನ್ ತನ್ನ ಅಧೀನದಲ್ಲಿದ್ದ ವಸಾಹತು ದೇಶಗಳಿಗೆ ಅಲ್ಲಿನ ಉದ್ದಿಮೆಗಳು ನಾಶಗೊಳ್ಳುವಂತಹ ರಫ್ತುಗಳ ಮೂಲಕ ತನ್ನ ಚಾಲ್ತಿ ಖಾತೆಯಲ್ಲಿ ಹೆಚ್ಚುವರಿ ಉಳಿಯುವಂತೆ ನೋಡಿಕೊಳ್ಳುತ್ತಿತ್ತು ಮತ್ತು ಆ ವಸಾಹತು ದೇಶಗಳ ಬರುವ ರಫ್ತು ಹೆಚ್ಚುವರಿಯನ್ನು ಬಿಟ್ಟಿಯಾಗಿ ಲಪಟಾಯಿಸಿಕೊಂಡು ತಾನು ಮಾಡಬೇಕಾದ ಪಾವತಿಗಳನ್ನು ಇತ್ಯರ್ಥಮಾಡಿಕೊಳ್ಳುತ್ತಿತ್ತು. ಈ ರೀತಿಯಲ್ಲಿ, ಬ್ರಿಟನ್ ಆಗ ಬಲಗೊಳ್ಳುತ್ತಿದ್ದ ದೇಶಗಳೊಂದಿಗಿನ ತನ್ನ ಬಂಡವಾಳ ಖಾತೆ ಮತ್ತು ಚಾಲ್ತಿ ಖಾತೆಯ ಕೊರತೆಗಳನ್ನು ಸರಿದೂಗಿಸಿಕೊಂಡು ತನಗೆ ವ್ಯಾಪಾರದ ಶಿಲ್ಕು ಸಮಸ್ಯೆ ಉಂಟಾಗದಂತೆ ನೋಡಿಕೊಂಡಿತು.
ಅಂತಹ ಸಾಧ್ಯತೆಗಳು ಅಮೇರಿಕದ ಪಾಲಿಗೆ ಲಭ್ಯವಿಲ್ಲ. ಹಿಂದೆ ವಸಾಹತುಗಳಾಗಿದ್ದ ದೇಶಗಳಿಂದ, ಬೌದ್ಧಿಕ ಆಸ್ತಿ ಹಕ್ಕು ಮತ್ತು ಅಂತಹ ಹಕ್ಕುಸ್ವಾಮ್ಯಗಳ ಮೂಲಕ ಅಮೇರಿಕಾ ಈಗ ತನ್ನ ಚಾಲ್ತಿ ಖಾತೆಯಲ್ಲಿ ಹೆಚ್ಚುವರಿ ಉಳಿಯುವಂತೆ ನೋಡಿಕೊಳ್ಳುತ್ತಿದೆ. ಆದರೂ, ಅದರ ವ್ಯಾಪಾರ ಶಿಲ್ಕು ಚುಕ್ತಾ ಮಾಡಿಕೊಳ್ಳಲು ಇದಿಷ್ಟೇ ಗಳಿಕೆ ಎಟುಕುವುದಿಲ್ಲ. ವಸಾಹತೀಕರಣವು ರಾಜಕೀಯವಾಗಿ ಕೊನೆಗೊಂಡಿದ್ದರಿಂದಾಗಿ, ಹಿಂದೆ ವಸಾಹತುಗಳಾಗಿದ್ದ ದೇಶಗಳಿಂದ ಬಿಟ್ಟಿಯಾಗಿ ಹಣ ಮಾಡಿಕೊಳ್ಳುತ್ತಿದ್ದ ರೀತಿಯಲ್ಲಿ ಬಲಿಷ್ಟ ಬಂಡವಾಳಶಾಹಿ ದೇಶಗಳಿಗೆ ಬಿಟ್ಟಿ ಹಣ ಗಳಿಸುವುದು ಈಗ ಅಸಾಧ್ಯವಾಗಿದೆ.
ಹಾಗಾಗಿ, ತನ್ನ ವ್ಯಾಪಾರ ಶಿಲ್ಕು ಬಗೆಹರಿಸಿಕೊಳ್ಳುವ ಸಲುವಾಗಿ ಗತ್ಯಂತರವಿಲ್ಲದೆ ಬಹಳ ವರ್ಷಗಳಿಂದ ಅಮೇರಿಕಾ ಹೊರ ದೇಶಗಳಿಂದ ಸಾಲ ಪಡೆಯುತ್ತಿದೆ. ವಿಶ್ವದ ಅತ್ಯಂತ ಬಲಶಾಲಿ ಬಂಡವಾಳಶಾಹಿ ದೇಶ ಎನಿಸಿರುವ ಅಮೇರಿಕಾ ಈಗ ಅತಿ ದೊಡ್ಡ ಸಾಲಗಾರನೂ ಆಗಿದೆ. ಇಂತಹ ಒಂದು ಪರಿಸ್ಥಿತಿ ಬಂಡವಾಳಶಾಹಿ ಇತಿಹಾಸದಲ್ಲಿ ಸೃಷ್ಠಿಯಾಗಿರುವುದು ಇದೇ ಮೊದಲು. ಹಾಗಾಗಿ, ಹೊರ ದೇಶಗಳಿಂದ ಮಿತಿ ಇಲ್ಲದೇ ಪಡೆಯುತ್ತಿದ್ದ ಸಾಲಗಳ ಮೇಲೆ ಅಮೇರಿಕಾ ಈಗ ಕಡಿವಾಣ ಹಾಕಬಯಸಿದೆ.
ಜೊತೆಗೆ, ಬೇರೆ ದೇಶಗಳಲ್ಲಿ ಉದ್ದಿಮೆಗಳನ್ನು ನಾಶಗೊಳ್ಳುವಂತಹ ರಫ್ತುಗಳ ಮೂಲಕ ತನ್ನ ಆಂತರಿಕ ಆರ್ಥಿಕ ಚಟುವಟಿಕೆಗಳನ್ನು ಪೋಷಿಸಿಕೊಳ್ಳುವುದೂ ಅಮೇರಿಕಕ್ಕೆ ಸಾಧ್ಯವಿಲ್ಲವಾಗಿದೆ. ಹಿಂದೊಮ್ಮೆ ಅತ್ಯಂತ ಬಲಶಾಲಿ ವಸಾಹತುಶಾಹಿ ಶಕ್ತಿ ಎನಿಸಿದ್ದ ಬ್ರಿಟನ್ ಅಂತಹ ಉದ್ದಿಮೆಗಳ ನಾಶದ ರಫ್ತುಗಳನ್ನು ಬೇಕಾದಷ್ಟು ಮಾಡಬಹುದಿತ್ತು ಏಕೆಂದರೆ, ಅದರ ವಸಾಹತು ಮಾರುಕಟ್ಟೆಗಳು ಅದರ ಹತೋಟಿಯಲ್ಲಿದ್ದು ಅದಕ್ಕೆ ಸುಲಭವಾಗಿ ಒದಗುತ್ತಿದ್ದವು. ಆದರೆ, ಅಮೇರಿಕಾಗೆ ಸುಲಭವಾಗಿ ಒದಗುವ ಅಂತಹ ವಸಾಹತು ಮಾರುಕಟ್ಟೆಗಳು ಇಲ್ಲ.
ತನ್ನ ಆಂತರಿಕ ಆರ್ಥಿಕ ಚಟುವಟಿಕೆಗಳ ಮಂದ ಗತಿ ಮತ್ತು ಏರುತ್ತಿರುವ ಹೊರಗಿನ ಸಾಲದ ಹೊರೆಯ ಸನ್ನಿವೇಶದಲ್ಲಿ ಅಮೇರಿಕಾ ಸ್ವರಕ್ಷಣಾತ್ಮಕ ವ್ಯಾಪಾರ ನೀತಿಗಳನ್ನು ಅಳವಡಿಸಿಕೊಳ್ಳುವ ಹೊಸದೊಂದು ಸಾಹಸದಲ್ಲಿ ತೊಡಗಿದೆ. ತನ್ನ ಈ ಸ್ವರಕ್ಷಣಾತ್ಮಕ ನೀತಿಯನ್ನು ಈಗ ಬಲಗೊಳ್ಳುತ್ತಿರುವ ದೇಶಗಳು ತಾವೇ ಸಂತೋಷದಿಂದ ಒಪ್ಪುವಂತೆ ಅವರ ಮನವೊಲಿಸುವ ಕಾರ್ಯತಂತ್ರವದು.
ಅಮೇರಿಕಾ ಈ ನಿಟ್ಟಿನಲ್ಲಿ ಚೀನಾದ ಮನವೊಲಿಸಲು ಪ್ರಯತ್ನಿಸಿತು. ಇಂತಹ ಪ್ರಯತ್ನಗಳ ಮೂಲಕ ಮಂದ ಗತಿಯಲ್ಲಿರುವ ತನ್ನ ಆರ್ಥಿಕ ಚಟುವಟಿಕೆಗಳನ್ನು ಚುರುಕುಗೊಳಿಸುವ ಮತ್ತು ತನ್ನ ವ್ಯಾಪಾರ ಶಿಲ್ಕು ಸಮಸ್ಯೆಯನ್ನು ಪರಿಹರಿಸಿಕೊಳ್ಳುವ ಭಾರದ ಹೊರೆಯನ್ನು ಇತರ ದೇಶಗಳು ಹೊರುವಂತೆ ಮಾಡಬಹುದು ಎಂದು ಅಮೇರಿಕಾ ಆಶಿಸಿದೆ. ಆದರೆ, ಚೀನಾದೊಂದಿಗೆ ಅದರ ಆಟ ನಡೆಯಲಿಲ್ಲ. ಚೀನಾ ಬಗ್ಗಲಿಲ್ಲ ಮಾತ್ರವಲ್ಲ ಅದು ಅಮೇರಿಕಾದ ಸಾಲು ಸಾಲು ರಫ್ತುಗಳ ಮೇಲೆ ಹೆಚ್ಚಿನ ಆಮದು ಸುಂಕ ವಿಧಿಸಿದೆ.
ತನ್ನ ಈ ಸ್ವರಕ್ಷಣಾತ್ಮಕ ನೀತಿಯನ್ನು ಯಾವ ಪ್ರತೀಕಾರಾತ್ಮಕ ಕ್ರಮಗಳನ್ನೂ ಕೈಗೊಳ್ಳದೆ ಒಪ್ಪಿಕೊಳ್ಳುವಂತೆ ಮತ್ತು ಅದರ ಜೊತೆಯಲ್ಲಿ, ಸಾಧ್ಯವಾದರೆ, ಆಮದು ಸುಂಕವನ್ನು ತಗ್ಗಿಸುವಂತೆ ಭಾರತದ ಮನವೊಲಿಸಲು ಅಮೇರಿಕಾ ಪ್ರಯತ್ನಿಸುತ್ತಿದೆ. ಜೊತೆಗೆ, ಏಷ್ಯಾದ ದೇಶಗಳಿಂದ ಕಳೆದ ಹತ್ತು ಹದಿನೈದು ವರ್ಷಗಳಿಂದ ಭಾರತವು ಹೆಚ್ಚು ಹೆಚ್ಚಾಗಿ ತರಿಸಿಕೊಳ್ಳುತ್ತಿರುವ ಆಮದು ವಸ್ತುಗಳನ್ನು ತನ್ನಿಂದಲೇ ಆಮದು ಮಾಡಿಕೊಳ್ಳುವಂತೆಯೂ ಭಾರತದ ಮನವೊಲಿಸುತ್ತಿದೆ. ಅಮೇರಿಕವು ಏಷ್ಯಾದ ದೇಶಗಳ ರಫ್ತುಗಳನ್ನು ಪಲ್ಲಟಗೊಳಿಸಿ ತನ್ನ ಉತ್ಪನ್ನಗಳಿಗೆ ಭಾರತದ ಮಾರುಕಟ್ಟೆಗೆ ಸುಲಭ ಪ್ರವೇಶ ದೊರಕಿಸಿಕೊಳ್ಳುವ ಮೂಲಕ ಭಾರತದೊಂದಿಗಿನ ವ್ಯಾಪಾರದ ಶಿಲ್ಕು ಗಾತ್ರವನ್ನು ತಗ್ಗಿಸಿಕೊಳ್ಳಲು ಪ್ರಯತ್ನಿಸುತ್ತಿದೆ. ಈ ಉದ್ದೇಶಕ್ಕಾಗಿ, ಅಮೇರಿಕಾದ ಒಂದು ತಂಡವು ಶೀಘ್ರದಲ್ಲೇ ಭಾರತಕ್ಕೆ ಬರಲಿದೆ.
ಈ ಸಂಬಂಧವಾಗಿ, ಭಾರತದೊಂದಿಗೆ ಅಮೇರಿಕಾಗೆ ಎರಡು ಸಮಸ್ಯೆಗಳಿವೆ. ಮೊದಲನೆಯದು, ಮಾರಾಟದ ಸರಕುಗಳ ಶಿಲ್ಕು ಭಾರತಕ್ಕೆ ಅನುಕೂಲಕರವಾಗಿವೆ. ಎರಡನೆಯದು, ಬೌದ್ಧಿಕ ಆಸ್ತಿ ಹಕ್ಕುಸ್ವಾಮ್ಯದ ಭಾರತದ ವ್ಯವಸ್ಥೆ ಅಮೇರಿಕಕ್ಕೆ ಅನುಕೂಲಕರವಾಗಿಲ್ಲ.
ಭಾರತವು ಅಮೇರಿಕಾಗೆ ಮಾರಿದ ಸರಕು ಸಾಮಗ್ರಿಗಳಿಂದಾಗಿ 2017ರಲ್ಲಿ ವ್ಯಾಪಾರದ ಶಿಲ್ಕು 27.3 ಬಿಲಿಯನ್ ಡಾಲರ್ನಷ್ಟು ಮೊತ್ತವು ಭಾರತದ ಪರವಾಗಿತ್ತು. 2018ರಲ್ಲಿ ಅದು ಸುಮಾರು ನಾಲ್ಕು ಬಿಲಿಯನ್ ಡಾಲರ್ನಷ್ಟು ಇಳಿದಿದೆ. ಕಾರಣ, ಮೆರಿಕಾದ ಸರಕುಗಳಿಗೆ ಭಾರತವು ಬೇಡಿಕೆಯ ಹೆಚ್ಚಳವಾಗಿದೆ, ಮುಖ್ಯವಾಗಿ, ಇಂಧನ ಮತ್ತು ನಾಗರಿಕ ವಿಮಾನಗಳನ್ನು ಅಮೇರಿಕಾದಿಂದ ಆಮದು ಮಾಡಿಕೊಂಡಿದೆ. ಆದಾಗ್ಯೂ, ಭಾರತದ ವ್ಯಾಪಾರದ ಶಿಲ್ಕು ಮೊತ್ತವು ಗಣನೀಯವೇ. ಈ ಅಂತರವನ್ನು ಅಮೇರಿಕಾ ತಗ್ಗಿಸಿಕೊಳ್ಳಲು ಪ್ರಯತ್ನಿಸುತ್ತಿದೆ.
ಒಂದು ದಶಕದ ಹಿಂದೆ ಭಾರತದ ಆಮದುಗಳ ಪಾಲಿನಲ್ಲಿ ಅಮೇರಿಕಾದ ಭಾಗ 8.5% ಇತ್ತು. ಈಗ ಅದು 5.7%ಗೆ ಇಳಿದಿದೆ. ಇದೇ ಅವಧಿಯಲ್ಲಿ, ಭಾರತದ ಆಮದುಗಳ ಪಾಲಿನಲ್ಲಿ ಚೀನಾದ ಭಾಗ 11% ಗಿಂತಲೂ ಕಡಿಮೆ ಇದ್ದದ್ದು ಈಗ 16%ಗೆ ಏರಿದೆ. ಅಂದರೆ, ಭಾರತದ ಆಮದುಗಳು ಏಷ್ಯನ್ ಮೂಲಗಳತ್ತ ಹೊರಳಿವೆ. ಅದನ್ನು ಬದಲಿಸಲು ಅಮೇರಿಕಾ ಪ್ರಯತ್ನಿಸುತ್ತಿದೆ.
ಭಾರತವು ಆಮದು ಮಾಡಿಕೊಳ್ಳುತ್ತಿರುವ ಸೇಬು, ಬಾದಾಮಿ ಮುಂತಾದ ಪದಾರ್ಥಗಳ ಬಗ್ಗೆ ತನ್ನ ಮನೋಭಾವವನ್ನು ಬದಲಿಸಿಕೊಳ್ಳಬೇಕೆಂದು ಕಳೆದ ದಶಕದುದ್ದಕ್ಕೂ ಅಮೇರಿಕಾ ಒತ್ತಾಯಿಸಿದೆ. ಅದೇ ರೀತಿಯಲ್ಲಿ, ಭಾರತವು ವ್ಯಾಪಾರದ ಜಿಎಸ್ಪಿ ಕಾರ್ಯಕ್ರಮದ(ಆದ್ಯತೆಗಳ ಸಾಮಾನ್ಯಗೊಳಿಸಿದ ವ್ಯವಸ್ಥೆ-ಅಮೆರಿಕಾದ ಆಮದು ಸುಂಕಗಳಲ್ಲಿ ರಿಯಾಯ್ತಿ ಪಡೆವ ವ್ಯವಸ್ಥೆ) ಅಡಿಯಲ್ಲಿ ಮಾಡುತ್ತಿರುವ ರಫ್ತಿನ ಪಟ್ಟಿಯಿಂದ ಅನೇಕ ಐಟಂಗಳನ್ನು ತೆಗೆದು ಹಾಕಲಾಗಿದೆ. ಜೊತೆಯಲ್ಲಿ, ಇರಾನಿನಿಂದ ತೈಲ ಕೊಳ್ಳಕೂಡದು ಎಂದು ಅಮೇರಿಕ ಹೇರಿದ ಒತ್ತಡದಿಂದಾಗಿ, ಇರಾನಿನಿಂದ ಆಮದಾಗುತ್ತಿದ್ದ ತೈಲದ ಒಂದು ಭಾಗವು ಅಮೇರಿಕಾದ ಪಾಲಾಗಲಿದೆ.
ಇರಾನಿನಿಂದ ತೈಲ ಕೊಳ್ಳಕೂಡದು ಎಂಬ ಅಮೇರಿಕದ ತಗಾದೆಗೆ ಮೋದಿ ಸರ್ಕಾರವು, ಚೀನಾದಂತಲ್ಲದೆ, ಸಂಪೂರ್ಣವಾಗಿ ತಲೆಬಾಗಿದೆ. ಇರಾನಿನ ತೈಲದ ಬೆಲೆ ಅಗ್ಗವಾಗಿದೆ. ಅಮೇರಿಕದ ತೈಲದ ಬೆಲೆ ತುಟ್ಟಿಯಾಗಿದೆ. ಭಾರತಕ್ಕೆ ಮಾರುವ ತೈಲದ ಬೆಲೆ ಅಗ್ಗವಾಗಿರುವುದಿಲ್ಲ ಎಂಬುದನ್ನು ಅಮೇರಿಕಾ ಸ್ಪಷ್ಟಪಡಿಸಿದೆ. ಆದರೂ ಅಮೇರಿಕಾದ ಒತ್ತಡಕ್ಕೆ ಮೋದಿ ಸರ್ಕಾರ ತಲೆಬಾಗಿದೆ. ಹಾಗಾಗಿ, ಮೋದಿ ಸರ್ಕಾರವು, ತುಟ್ಟಿ ಬೆಲೆಯಲ್ಲಿ ತೈಲ ಕೊಳ್ಳುವಂತೆ ಯಾರೂ ನಮ್ಮ ಕೈ ತಿರುಚಲಾಗದು ಎಂಬ ಭಾರತದ ಹೆಮ್ಮೆಯ ನಿಲುವನ್ನು ಸ್ವಲ್ಪವೂ ಸಂಕೋಚವಿಲ್ಲದೆ ಮಣ್ಣು ಪಾಲು ಮಾಡಿದೆ. ಭಾರತದ ಹಿತದೃಷ್ಟಿಯಿಂದ ನೋಡಿದಾಗ ಇವೆಲ್ಲವುಗಳಿಗೂ ಪ್ರಾಮುಖ್ಯತೆ ಇದೆಯಾದರೂ, ಅಮೇರಿಕಾದ ಹಿತದೃಷ್ಟಿಯಿಂದ ನೋಡಿದಾಗ ಅವು ನಗಣ್ಯ ಎನಿಸುತ್ತವೆ.
ಭಾರತದ ಮೇಲೆ ಅಮೇರಿಕಾ ಒತ್ತಡ ಹೇರುತ್ತಿರುವ ಇನ್ನೊಂದು ವಿಷಯವೆಂದರೆ ಕೃಷಿ ವಲಯ. ಅಕ್ಕಿ, ಗೋಧಿ ಮುಂತಾದ ಧಾನ್ಯಗಳಿಗೆ ಭಾರತವು ವಿಶ್ವ ವ್ಯಾಪಾರ ಸಂಸ್ಥೆಯ ಅನುಮತಿಗಿಂತಲೂ ಹೆಚ್ಚಿನ ಸಬ್ಸಿಡಿ ಕೊಡುತ್ತಿದೆ ಎಂಬುದು ಅಮೇರಿಕಾದ ಬಹಳ ವರ್ಷಗಳ ಆಕ್ಷೇಪಣೆ. ವಿಶ್ವ ವ್ಯಾಪಾರ ಸಂಸ್ಥೆಯು 1995ರಲ್ಲಿ ಆರಂಭವಾದ ಸಮಯದಲ್ಲಿ ಅಮೇರಿಕಾ ಕೃಷಿಗೆ ಕೊಟ್ಟದ್ದ 61 ಬಿಲಿಯನ್ ಡಾಲರ್ ಸಬ್ಸಿಡಿ ಮೊತ್ತವು 2016ರಲ್ಲಿ 135 ಬಿಲಿಯನ್ ಡಾಲರ್ಗೆ ಏರಿದೆ.
ಅಮೇರಿಕಾದ ಈ ನಿಲುವು ಸ್ವೀಕಾರಾರ್ಹ, ಆದರೆ, ಬಹು ದೊಡ್ಡ ಸಂಖ್ಯೆಯ ಬಡ ಮತ್ತು ನಿರ್ಗತಿಕ ರೈತರಿಗೆ ಭಾರತ ಕೊಡುವ ಸಣ್ಣ ಮೊತ್ತದ ಸಬ್ಸಿಡಿ ಸ್ವೀಕಾರಾರ್ಹವಲ್ಲ. ಏಕೆಂದರೆ ಅದು ಬೆಲೆಗಳ ವಿರೂಪಕ್ಕೆ ಕಾರಣವಾಗುತ್ತದೆಯಂತೆ. ಅಮೇರಿಕಾದಲ್ಲಿ ರೈತರ ಸಂಖ್ಯೆ ಬಹಳ ಕಡಿಮೆ ಇರುವುದರಿಂದ ಅವರಿಗೇ ನೇರವಾಗಿ ಸಬ್ಸಿಡಿ ಕೊಡುವುದರಿಂದ ಬೆಲೆಗಳ ವಿರೂಪ ಇರುವುದಿಲ್ಲ ಎಂಬ ವಾದ ಮಂಡಿಸಲಾಗಿದೆ. ವಾಸ್ತವವಾಗಿ, ಅಮೇರಿಕಾದ ಈ ಬೃಹತ್ ಗಾತ್ರದ ಸಬ್ಸಿಡಿಯು ಜಾಗತಿಕ ಮಾರುಕಟ್ಟೆಯನ್ನು ವಶಪಡಿಸಿಕೊಳ್ಳಲು ಬಳಕೆಯಾಗುತ್ತಿದೆ. ಆದರೆ, ಭಾರತದ ಲಕ್ಷ ಲಕ್ಷ ಮಂದಿ ಬಡ ರೈತರಿಗೆ ಸಬ್ಸಿಡಿಯನ್ನು ವರಮಾನ ಬೆಂಬಲವಾಗಿ ಕೊಡಲಾಗದು; ಅವರಿಗೆ ಬೆಲೆ ಬೆಂಬಲ ರೂಪದಲ್ಲಿ ಸಬ್ಸಿಡಿ ಕೊಡಬೇಕಾಗುತ್ತದೆ. ಅಮೇರಿಕಾ ಕರಾರುವಾಕ್ಕಾಗಿ ಆಕ್ಷೇಪಿಸುತ್ತಿರುವುದು ಇದನ್ನೇ.
ಭಾರತದಲ್ಲಿ ಬೌದ್ಧಿಕ ಆಸ್ತಿಯ ಹಕ್ಕುಗಳಿಗನುಗುಣವಾಗಿ ರೂಪುಗೊಳಿಸಿ ಜಾರಿಗೆ ತಂದಿರುವ ಪೇಟೆಂಟ್ ಕಾಯ್ದೆಯು ಜಿನೆರಿಕ್ ಔಷದಿ ವಲಯಕ್ಕೆ ಒಂದು ಹೊಡೆತವಾಗಿ ಪರಿಣಮಿಸಿದೆ. ಈ ಪೇಟೆಂಟ್ ಕಾಯ್ದೆಯು ಜಾರಿಗೆ ಬರುವ ಮುನ್ನ ಅಸ್ತಿತ್ವದಲ್ಲಿದ್ದ ಭಾರತೀಯ ಪೇಟೆಂಟ್ ಕಾಯ್ದೆಯು ಒಂದು ಮಾದರಿ ಶಾಸನವಾಗಿತ್ತು. ಅದು, ತಂತ್ರಜ್ಞಾನದ ಮೇಲೆ ಮುಂದುವರೆದ ದೇಶಗಳು ಹೊಂದಿದ್ದ ಏಕಸ್ವಾಮ್ಯವನ್ನು ತಕ್ಕಮಟ್ಟಿಗೆ ಮುರಿದಿತ್ತು.
ಆದರೆ, ಈ ಕಾಯ್ದೆಯನ್ನು ಟ್ರಿಪ್ಸ್(ಬೌದ್ಧಿಕ ಆಸ್ತಿ ಹಕ್ಕುಗಳಿಗೆ ಸಂಬಂಧಪಟ್ಟ ಒಪ್ಪಂದ)ಗೆ ಹೊಂದಿಸುವ ಸಲುವಾಗಿ, ಅಂದರೆ, ಒಂದು ಔಷಧಿಯ ಉತ್ಪಾದನಾ ಪ್ರಕ್ರಿಯೆಗೆ ಬದಲಾಗಿ ಆ ಔಷಧಿಗೇ ಪೇಟೆಂಟ್ ಕೊಡುವ ಸಲುವಾಗಿ ಹಿಂದಿನ ಕಾಯ್ದೆಯನ್ನು ಕೈ ಬಿಡಲಾಗಿತ್ತು. ಈ ಬದಲಾವಣೆಯಿಂದಲೂ ತೃಪ್ತಿಯಾಗದ ಅಮೇರಿಕವು ಆಗಿನಿಂದಲೂ ಜಿನೆರಿಕ್ ಔಷದಿ ತಯಾರಿಕೆಯನ್ನು ಕೈಬಿಡುವಂತೆ ಭಾರತದ ಮೇಲೆ ವ್ಯವಸ್ಥಿತವಾಗಿ ಒತ್ತಡ ಹೇರುತ್ತಲೇ ಇದೆ. ಭಾರತಕ್ಕೆ ಭೇಟಿ ಕೊಡಲಿರುವ ಅಮೇರಿಕಾದ ವ್ಯಾಪಾರ ನಿಯೋಗವು ಈ ಒತ್ತಡವನ್ನು ಮುಂದುವರೆಸಲಿದೆ.
ಅಮೇರಿಕಾದ ಇಂತಹ ನಿಲುವುಗಳು, ಮುಕ್ತ ವ್ಯಾಪಾರ ಕುರಿತ ತರ್ಕ ನಿಂತಿರುವುದೇ ವಸಾಹತುವಾದದ ಅಸ್ತಿತ್ವದ ಮೇಲೆ ಎಂಬುದನ್ನು ಪ್ರದರ್ಶಿಸುತ್ತಿವೆ. ವಸಾಹತುವಾದವು ಉತ್ತುಂಗದಲ್ಲಿದ್ದಾಗ ಮುಕ್ತ ವ್ಯಾಪಾರದ ಬಗ್ಗೆ ಢಾಂಬಿಕವಾಗಿದ್ದರೂ ನಡೆಯುತ್ತಿತ್ತು, ಏಕೆಂದರೆ, ಮಾರಾಟವಾಗದೇ ಉಳಿದ ಸರಕುಗಳನ್ನು ವಸಾಹತುಗಳಲ್ಲಿ ಹೇಗಾದರೂ ಮಾರಬಹುದಿತ್ತು. ಮುಕ್ತ ವ್ಯಾಪಾರವು ಒಳ್ಳೆಯದಾಗಿಯೇ ಕಂಡಿತ್ತು ಏಕೆಂದರೆ, ಅದರಿಂದ ಮುಂದುವರೆದ ಯಾವುದೇ ದೇಶವು ಹಾನಿಗೊಳಗಾಗಲಿಲ್ಲ.
ಮುಕ್ತ ವ್ಯಾಪಾರವು ಎಂದೂ ಸಂಪೂರ್ಣವಾಗಿ ಮುಕ್ತವಾಗಿ ಇರಲೇ ಇಲ್ಲ. ಆದರೆ, ಮುಂಚೂಣಿಯ ದೇಶವು ತನಗೆ ಅನಾನುಕೂಲವಾಗದ ರೀತಿಯಲ್ಲಿ ಮುಕ್ತ ವ್ಯಾಪಾರ ಪದ್ಧತಿಯನ್ನು ಜಾರಿಯಲ್ಲಿಟ್ಟಿತ್ತು. ಅದು ಉತ್ಪಾದಿಸಿದ ಹೆಚ್ಚುವರಿ ಸರಕುಗಳು ರಫ್ತಾಗುತ್ತಿದ್ದ ವಸಾಹತುಗಳು ಲೆಕ್ಕಕ್ಕೇ ಇರಲಿಲ್ಲ. ಆದರೆ, ವಸಾಹತುವಾದವು ಇಲ್ಲದಿರುವಾಗ ಈ ವಾದವೂ ಕುಸಿದು ಬೀಳುತ್ತದೆ. ಕಳೆದ ಹಲವಾರು ವರ್ಷಗಳಿಂದ ವಿಶ್ವವು ಏಗುತ್ತಿರುವುದು ಈ ಪರಿಸ್ಥಿತಿಯೊಂದಿಗೇ.
ಅಮೇರಿಕಾದ ಸ್ವರಕ್ಷಣಾತ್ಮಕ ವ್ಯಾಪಾರ ನೀತಿಗಳನ್ನು ಚೀನಾ ಮತ್ತು ಭಾರತದಂತಹ ದೇಶಗಳು ತಾವೇ ಸಂತೋಷದಿಂದ ಒಪ್ಪಿಕೊಂಡರೆ ಅದು ಜಾಗತಿಕ ಅರ್ಥವ್ಯವಸ್ಥೆಯಲ್ಲಿ ಒಟ್ಟಾರೆ ಬೇಡಿಕೆಯನ್ನು ಹೆಚ್ಚಿಸುವ ಭಾರವನ್ನು ತಾವೇ ಹೊರುವುದು ಎಂದಾಗುತ್ತದೆ. ಆದರೆ ಒಟ್ಟಾರೆ ಬೇಡಿಕೆಯನ್ನು ಹೆಚ್ಚಿಸುವ ಉದ್ದೇಶಕ್ಕಾಗಿ ಈ ದೇಶಗಳು ತಮ್ಮ ತಮ್ಮ ಪ್ರಭುತ್ವದ ಶಕ್ತಿಯನ್ನೂ ಬಳಸಿಕೊಳ್ಳಲಾರವು. ಏಕೆಂದರೆ, ಅವು ವಿತ್ತೀಯ ಕೊರತೆಯ ಗಡಿಯನ್ನು ಒಂದು ಮಿತಿಯಿಂದ ಆಚೆ ದಾಟಲಾರವು.
ಈ ಉದ್ದೇಶಕ್ಕಾಗಿ ಅವು ತಮ್ಮ ಹಣಕಾಸು ನೀತಿಯನ್ನಷ್ಟೇ ಬಳಸಿಕೊಳ್ಳಬಲ್ಲವು. ಆದರೆ, ಬೇಡಿಕೆಯ ಕೊರತೆ ಇರುವ ಸನ್ನಿವೇಶದಲ್ಲಿ, ಒಟ್ಟಾರೆ ಬೇಡಿಕೆಯನ್ನು ಹೆಚ್ಚಿಸುವ ಗುರಿ ಸಾಧಿಸಲು ಹಣಕಾಸು ನೀತಿಯಷ್ಟೇ ಸಾಲುವುದಿಲ್ಲ. ಪರಿಣಾಮವಾಗಿ, ಒಟ್ಟು ಬೇಡಿಕೆಯ ಕೊರತೆಯ ಪರಿಸ್ಥಿತಿ ಮುಂದುವರೆಯುತ್ತದೆ. ಬೇಡಿಕೆಗೆ ಕೊರತೆ ಇರುವ ಪರಿಸ್ಥಿತಿಯಲ್ಲಿ, ಎಷ್ಟು ಸಾಧ್ಯವೊ ಅಷ್ಟು ದೊಡ್ಡ ಮಾರುಕಟ್ಟೆಗಳುನ್ನು ಹಿಡಿಯಲು ಕಿತ್ತಾಟ ನಡೆಯುತ್ತದೆ. ತನ್ನ ಸ್ವರಕ್ಷಣಾತ್ಮಕ ವ್ಯಾಪಾರ ನೀತಿಯನ್ನು ಬೇರೆಯವರು ಸ್ವೀಕರಿಸುವಂತೆ ಮಾಡುವ ಅಮೇರಿಕಾದ ಪ್ರಯತ್ನ ಸಫಲವಾಗುವುದು ಸಾಧ್ಯವೇ ಇಲ್ಲ.
(ಈ ವಾರದ ಜನಶಕ್ತಿ ವಾರಪತ್ರಿಕೆಯಲ್ಲಿ ಪ್ರಕಟವಾದ ಲೇಖನ)
-ಪ್ರೊ.ಪ್ರಭಾತ್ ಪಟ್ನಾಯಕ್
ಅನು: ಕೆ.ಎಂ.ನಾಗರಾಜ್
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಅಸಂಘಟಿತ ಕಾರ್ಮಿಕರಿಗೆ ಸ್ಮಾರ್ಟ್ ಕಾರ್ಡ್ ವಿತರಣೆ, ಗಿಗ್, ಸಿನಿ ಹಾಗೂ ಮನೆಗೆಲಸ ಕಾರ್ಮಿಕರ ಕಲ್ಯಾಣಕ್ಕಾಗಿ ಅಧಿನಿಯಮ ಜಾರಿಗೆ ಕ್ರಮ : ಸಚಿವ ಸಂತೋಷ್ ಲಾಡ್

ಸುದ್ದಿದಿನ,ದಾವಣಗೆರೆ:ದೇಶದಲ್ಲೇ ಪ್ರಥಮ ಬಾರಿಗೆ ಕರ್ನಾಟಕ ರಾಜ್ಯ ಸರ್ಕಾರ ಇ-ಕಾಮರ್ಸ್ ಫ್ಲಾಟ್ ಫಾರ್ಮ್ ಆಧಾರಿತ ಗಿಗ್ ಕಾರ್ಮಿಕರು, ಸಿನಿಮಾ ಮತ್ತು ಸಾಂಸ್ಕೃತಿಕ ಕ್ಷೇತ್ರದಲ್ಲಿ ದುಡಿಯುತ್ತಿರುವ ಕಲಾ ಕಾರ್ಮಿಕರು ಹಾಗೂ ಮನೆಗೆಲಸದಲ್ಲಿ ತೊಡಗಿರುವ ಗೃಹ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಒದಗಿಸಲು ಪ್ರತ್ಯೇಕ ಅಧಿನಿಯಮಗಳನ್ನು ರೂಪಿಸಿದೆ. ಮುಂಬರುವ ದಿನಗಳಲ್ಲಿ ಸದನದಲ್ಲಿ ಈ ಅಧಿಸೂಚನೆಗಳನ್ನು ಮಂಡಿಸಿ, ಅನುಮೋದನೆ ಪಡೆದು, ಕಾಯ್ದೆಗಳನ್ನಾಗಿ ಜಾರಿ ಮಾಡುವುದಾಗಿ ಕಾರ್ಮಿಕ ಸಚಿವ ಸಂತೋಷ್ ಲಾಡ್ ಹೇಳಿದರು.
ಕಾರ್ಮಿಕ ಇಲಾಖೆ, ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕ ಸಾಮಾಜಿಕ ಭದ್ರತಾ ಮಂಡಳಿ, ಸಾರಿಗೆ ಇಲಾಖೆ, ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್ ಸಹಯೋಗದಲ್ಲಿ ಶನಿವಾರ ನಗರದ ದೊಡ್ಡಬೂದಿಹಾಳ್ ರಸ್ತೆಯ ತಾಜ್ ಪ್ಯಾಲೇಸ್ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾದ ಜಿಲ್ಲೆಯ ವಿವಿಧ ವರ್ಗಗಳ ಅಸಂಘಟಿತ ಕಾರ್ಮಿಕರಿಗೆ ಸ್ಮಾರ್ಟ್ ಕಾರ್ಡ್ ವಿತರಣೆ ಹಾಗೂ ವಿವಿಧ ಯೋಜನೆಗಳ ಕುರಿತು ಅರಿವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ರಾಜ್ಯ ಸರ್ಕಾರ ಅಸಂಘಟಿತ ಕಾರ್ಮಿಕರ ಕಲ್ಯಾಣಕ್ಕಾಗಿ ಶ್ರಮಿಸುತ್ತಿದೆ. ಈಗಾಗಲೇ ಇ-ಕಾಮರ್ಸ್ ವಲಯಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಗಿಗ್ ಕಾರ್ಮಿಕರಿಗೆ ವಿಮಾ ಯೋಜನೆ ಜಾರಿಗೊಳಿಸಲಾಗಿದೆ. ಗಿಗ್ ಕಾರ್ಮಿಕರನ್ನು ನೋಂದಾಯಿಸಿ, ಸಾಮಾಜಿಕ ಭದ್ರತಾ ಸೌಲಭ್ಯಗಳನ್ನು ಒದಗಿಸಲು ಹಾಗೂ ಸಂಪನ್ಮೂಲ ಕ್ರೂಢೀಕರಣಕ್ಕಾಗಿ ‘ಕರ್ನಾಟಕ ಫ್ಲಾಟ್ ಫಾರ್ಮ್ ಆಧಾರಿತ ಗಿಗ್ ಕಾರ್ಮಿಕ ಅಧಿನಿಯಮ-2025’ ಜಾರಿ ಮಾಡಲಾಗುವುದು. ರಾಜ್ಯದಲ್ಲಿ ವರ್ಷಕ್ಕೆ ಸುಮಾರು 4 ಕೋಟಿ ಸಿನಿಮಾ ಟಿಕೆಟ್ಗಳು ಮಾರಾಟವಾಗುತ್ತವೆ.
ಈ ಟಿಕೆಟ್ಗಳ ಮೇಲೆ ಸೆಸ್ ವಿಧಿಸುವ ಕುರಿತು ಮುಖ್ಯಮಂತ್ರಿಗಳೊಂದಿಗೆ ಚರ್ಚೆಸಲಾಗುತ್ತಿದೆ. ಇದಕ್ಕಾಗಿ ‘ಕರ್ನಾಟಕ ಸಿನಿಮಾ ಮತ್ತು ಚಟುವಟಿಕೆಗಳಲ್ಲಿ ತೊಡಗಿದ ಕಾರ್ಮಿಕರ ಸುಂಕ ಅಧಿನಿಯಮ-2024’ ಅನ್ನು ರಚಿಸಲಾಗಿದೆ. ಇದರೊಂದಿಗೆ ಮನೆಗೆಲಸ ನಿರ್ವಹಿಸುತ್ತಿರುವ ಕಾರ್ಮಿಕರ ಕಲ್ಯಾಣಕ್ಕಾಗಿ ‘ಕರ್ನಾಟಕ ಗೃಹ ಕಾರ್ಮಿಕರ ಅಧಿನಿಯಮ-2025’ ರಚಿಸಲಾಗಿದೆ. ಈ ಎಲ್ಲಾ ಅಧಿನಿಯಮಗಳ ನಿಯಾವಳಿಗಳನ್ನು ರೂಪಿಸುವ ಪ್ರಕ್ರಿಯೆ ಚಾಲನೆಯಲ್ಲಿದೆ. ಈ ಅಧಿನಿಯಮಗಳನ್ನು ಸದನದಲ್ಲಿ ಮಂಡಿಸಿ, ಅನುಮೋದನೆ ಪಡೆದು, ಕಾಯ್ದೆ ಜಾರಿಗೊಳಿಸಲಾಗುವುದು ಎಂದು ಸಚಿವ ಸಂತೋಷ್ ಲಾಡ್ ತಿಳಿಸಿದರು.
ಗ್ಯಾರಂಟಿ ಯೋಜನೆಗಳಿಗೆ 5 ವರ್ಷದಲ್ಲಿ 3 ಲಕ್ಷ ಕೋಟಿ ಖರ್ಚು
ರಾಜ್ಯದಲ್ಲಿ ಜಾರಿಗೊಳಿಸಲಾಗಿರುವ ಪಂಚ ಗ್ಯಾರಂಟಿ ಯೋಜನೆಗಳಿಗೆ ಪ್ರತಿ ವರ್ಷ 56 ರಿಂದ 60 ಸಾವಿರ ಕೋಟಿ ರೂ. ವೆಚ್ಚವಾಗುತ್ತಿದೆ. ಈ ಮೊತ್ತ 5 ವರ್ಷಗಳಲ್ಲಿ 3 ಲಕ್ಷ ಕೋಟಿ ರೂ. ತಲುಪಬಹುದು. ದೇಶದ ಯಾವುದೇ ರಾಜ್ಯದಲ್ಲಿ ಇಷ್ಟೊಂದು ಮೊತ್ತದ ಹಣವನ್ನು ನೇರವಾಗಿ ಜನರ ಕಲ್ಯಾಣಕ್ಕಾಗಿ ವ್ಯಯಿಸುತ್ತಿಲ್ಲ. ರಾಜ್ಯದಲ್ಲಿ 30 ರಿಂದ 40 ಲಕ್ಷ ಅಸಂಘಟಿತ ಕಾರ್ಮಿಕರು ಇದ್ದು, ಕಾರ್ಮಿಕ ಇಲಾಖೆ 91 ವಿವಿಧ ಅಸಂಘಟಿತ ವರ್ಗಗಳ ಕಾರ್ಮಿಕರನ್ನು ಗುರುತಿಸಿದೆ. ಅಸಂಘಟಿತ ಕಾರ್ಮಿಕರನ್ನು ಉಚಿತವಾಗಿ ನೋಂದಾಯಿಸಿಕೊಂಡು ಸ್ಮಾರ್ಟ್ ಕಾರ್ಡ್ ನೀಡಲಾಗುತ್ತಿದೆ. ಇದಕ್ಕಾಗಿ ಅಂಬೇಡ್ಕರ್ ಕಾರ್ಮಿಕ ಸಹಾಯಹಸ್ತ ಯೋಜನೆ ಜಾರಿ ಮಾಡಲಾಗಿದೆ. ಇದುವರೆಗೂ ರಾಜ್ಯದಲ್ಲಿ 25,45,607 ಕಾರ್ಮಿಕರು, ದಾವಣಗೆರೆ ಜಿಲ್ಲೆಯಲ್ಲಿ 89,493 ಕಾರ್ಮಿಕರು ನೊಂದಣಿಯಾಗಿದ್ದಾರೆ ಎಂದು ಕಾರ್ಮಿಕ ಸಚಿವ ಸಂತೋಷ ಲಾಡ್ ಹೇಳಿದರು.
ಮೋಟಾರು ಸಾರಿಗೆ ಹಾಗೂ ಇತರೆ ಸಂಬಂಧಿಸಿದ ಕಾರ್ಮಿಕರ ಸಾಮಾಜಿಕ ಭದ್ರತೆ ಮತ್ತು ಕ್ಷೇಮಾಭಿವೃದ್ಧಿ ಮಂಡಳಿಯ ಮೂಲಕ, ಚಾಲಕರು, ನಿರ್ವಾಹಕ, ಕ್ಲೀನರ್, ನಿಲ್ದಾಣ ಸಿಬ್ಬಂದಿ, ಮಾರ್ಗ ಪರಿಶೀಲನಾ ಸಿಬ್ಬಂದಿ, ಬುಕಿಂಗ್, ನಗದು, ಡಿಪೋ ಗುಮಾಸ್ತರು ಸೇರಿದಂತೆ, ಮೋಟಾರು ಕ್ಷೇತ್ರದಲ್ಲಿ ದುಡಿಯತ್ತಿರುವ ಎಲ್ಲಾ ಕಾರ್ಮಿಕರಿಗೆ ಕಲ್ಯಾಣ ಕಾರ್ಯಕ್ರಮಗಳನ್ನು ಜಾರಿ ಮಾಡಲಾಗುತ್ತಿದೆ ಎಂದರು.
ಖಾಸಗಿ ವಲಯದ ಉದ್ಯೋಗಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳನ್ನು ನೇಮಕ ಮಾಡಿಕೊಳ್ಳುವ ಉದ್ದೇಶಿತ ದೃಷ್ಠಿಯಿಂದ ‘ಆಶಾದೀಪ’ ಯೋಜನೆಯನ್ನು ರಾಜ್ಯ ಸರ್ಕಾರ ಜಾರಿಗೊಳಿಸಿದೆ. ಈ ಯೋಜನೆಯಡಿ ಉದ್ಯೋಗದಾತ ಮಾಲಿಕರು ಪಾವತಿಸಿದ ಇ.ಎಸ್.ಐ ಮತ್ತು ಇ.ಪಿ.ಎಫ್ ವಂತಿಕೆ ಮರುಪಾವತಿ, ತರಬೇತಿ ನೇಮಿಸಿಕೊಂಡ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳ ಶಿಷ್ಯವೇತನ ಮರುಪಾವತಿ, ಹೊಸ ನೇಮಕಾತಿಗೊಂಡವರಿಗೆ ಪಾವತಿಸಿದ ವೇತನದ ಎರಡು ವರ್ಷಗಳ ಅವಧಿಗೆ ಪ್ರತಿ ಉದ್ಯೋಗಿಯ ಮಾಸಿಕ ತಲಾ 6000 ರೂ. ವೇತನವನ್ನು ಉದ್ಯೋಗದಾತರಿಗೆ ಮರುಪಾವತಿ ಮಾಡಲಾಗುವುದು ಎಂದು ಸಚಿವ ಸಂತೋಷ ಎಸ್. ಲಾಡ್ ತಿಳಿಸಿದರು.
ಸರ್ಕಾರದಿಂದ ಖಾಸಗಿ ಕಂಪನಿಗಳು ನೀಡುವ ಇ.ಪಿ.ಎಫ್ಗಳನ್ನು ಪ್ರತ್ಯೇಕವಾಗಿ ಬ್ಯಾಂಕ್ ಖಾತೆಗಳನ್ನು ತೆರದು ನಿರ್ವಹಣೆ ಮಾಡುವಂತೆ ನಿಯಮ ರೂಪಿಸಲಾಗಿದೆ. ಉದ್ಯೋಗಿ, ಕಂಪನಿ ತೊರೆದ ಸಂದರ್ಭದಲ್ಲಿ ಈ ಹಣ ನೇರವಾಗಿ ಉದ್ಯೋಗಿಯ ಬ್ಯಾಂಕ್ ಖಾತೆಗೆ ಜಮೆಯಾಗಲಿದೆ. ಇದರಿಂದ ಕಾರ್ಮಿಕರಿಗೆ ಸಾಕಷ್ಟು ಅನುಕೂಲವಾಗಲಿದೆ ಎಂದು ಹೇಳಿದರು.
ವಿಧಾನ ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ಮಾತನಾಡಿ, ಕಾರ್ಮಿಕ ಸಚಿವ ಸಂತೋಷ್ ಎಸ್ ಲಾಡ್ ಅವರು ಜಿಲ್ಲೆಯಲ್ಲಿ ಅರ್ಹ ಅಸಂಘಟಿತ ಕಾರ್ಮಿಕರನ್ನು ಗುರತಿಸಿ ಸ್ಮಾರ್ಟ್ಕಾರ್ಡ್ ವಿತರಿಸಲಾಗುತ್ತಿದೆ. ಸರ್ಕಾರದ ಯೋಜನೆ, ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿ ಜನರಿಗೆ ಯೋಜನೆ ಮತ್ತು ಸೌಲಭ್ಯಗಳನ್ನು ಸಮಪರ್ಕವಾಗಿ ಮುಟ್ಟಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಶ್ಲಾಘಿಸಿದರು.
ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ ಮಾತನಾಡಿ, ಕಾರ್ಮಿಕ ಇಲಾಖೆಯಿಂದ ಬಡವರ, ಕಾರ್ಮಿಕ ವರ್ಗದವರ ಕಷ್ಟಗಳ ಬಗ್ಗೆ ಅರಿತಿರುವ ಸಚಿವ ಸಂತೋಷ್ ಲಾಡ್ ಅವರು, ಅನೇಕ ಜನಕಲ್ಯಾಣ ಯೋಜನೆಗಳನ್ನು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಕಾರ್ಮಿಕ ಇಲಾಖೆ ಮೂಲಕ ಅರ್ಹ ಫಲಾನುಭವಿಗಳಿಗೆ ತಲುಪಿಸುತ್ತಿದ್ದಾರೆ. ಈ ಹಿಂದೆ ಕಾರ್ಮಿಕ ಇಲಾಖೆಯಲ್ಲಿ ಮಾತ್ರ ಕಾರ್ಮಿಕ ದಿನಾಚರಣೆಯನ್ನು ಆಚರಿಸಲಾಗುತ್ತಿತ್ತು. ಆದರೆ ಸಚಿವ ಲಾಡ್ ಅವರಿಂದ ಪ್ರಸ್ತುತ ಮೇ 01ರಂದು ಎಲ್ಲಾ ಇಲಾಖೆ ಹಾಗೂ ಸರ್ಕಾರಿ ಕಚೇರಿಗಳು ಸೇರಿದಂತೆ ವಿವಿಧ ಸಂಸ್ಥೆಗಳಲ್ಲಿಯೂ ಆಚರಿಸಲಾಗುತ್ತದೆ ಎಂದರು.
ವಿವಿಧ ಸೌಲಭ್ಯಗಳ ವಿತರಣೆ
ಕಾರ್ಯಕ್ರಮದಲ್ಲಿ ಅಪಘಾತದಿಂದ ಮರಣ ಹೊಂದಿದ ಖಾಸಗಿ ವಾಣಿಜ್ಯ ಚಾಲಕರ ಅವಲಂಬಿತ ಮಹಿಳೆ ಜಗಳೂರಿನ ಗೌರಮ್ಮನವರಿಗೆ ರೂ.5 ಲಕ್ಷ ಪರಿಹಾರ ಧನ, ಅಪಘಾತದಿಂದ ಮರಣ ಹೊಂದಿದ ಖಾಸಗಿ ವಾಣಿಜ್ಯ ವಾಹನ ಚಾಲಕರ ಮಕ್ಕಳಿಗೆ ರೂ.10,000 ಶೈಕ್ಷಣಿಕ ಧನಸಹಾಯದ ಚೆಕ್ ಹಾಗೂ ಅಸಂಘಟಿತ ಕಾರ್ಮಿಕರಿಗೆ ಸ್ಮಾರ್ಟ್ ಕಾರ್ಡುಗಳನ್ನು ವಿತರಿಸಲಾಯಿತು.
ಕಾರ್ಮಿಕ ಆಯುಕ್ತ ಡಾ.ಎಚ್.ಎನ್. ಗೋಪಾಲಕೃಷ್ಣ ಸಂವಿಧಾನ ಪೀಠಿಕೆ ಬೋಧಿಸಿದರು. ಉಪ ಕಾರ್ಮಿಕ ಆಯುಕ್ತ ಡಾ.ವೆಂಕಟೇಶ್ ಶಿಂದಿಹಟ್ಟಿ ಸ್ವಾಗತಿಸಿದರು. ಜಂಟಿ ಕಾರ್ಮಿಕ ಆಯುಕ್ತ ಡಾ. ಎಸ್.ಬಿ. ರವಿಕುಮಾರ್ ಪ್ರಸ್ತಾವಿಕವಾಗಿ ಮಾತನಾಡಿದರು. ಚೇತನ್ ಹಾಗೂ ಸಂಡಿಗರ ಕಲಾತಂಡ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.
ಹೊನ್ನಾಳಿ ಶಾಸಕ ಡಿ.ಜಿ.ಶಾಂತನೌಡ, ವಿಧಾನ ಪರಿಷತ್ ಸದಸ್ಯ ಅಬ್ದುಲ್ ಜಬ್ಬಾರ್, ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ದಿನೇಶ್ ಕೆ ಶೆಟ್ಟಿ, ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ, ಜಿ.ಪಂ.ಸಿಇಓ ಗಿತ್ತೆ ಮಾಧವ ವಿಠಲ ರಾವ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ರಾಷ್ಟ್ರೀಯ ಲೋಕ ಅದಾಲತ್ನಲ್ಲಿ 9360 ಪ್ರಕರಣ ಇತ್ಯರ್ಥ ; ವಿಚ್ಚೇದನ ಕೋರಿ ಸಲ್ಲಿಸಿದ್ದ 23 ಜೋಡಿ ವೈವಾಹಿಕ ಜೀವನ ಸುಖಾಂತ್ಯ

ಸುದ್ದಿದಿನ,ದಾವಣಗೆರೆ:ಜಿಲ್ಲೆಯಾದ್ಯಂತ ಎಲ್ಲಾ ನ್ಯಾಯಾಲಯಗಳಲ್ಲಿ ಜುಲೈ 12 ರಂದು ರಾಷ್ಟ್ರೀಯ ಲೋಕ್ ಅದಾಲತ್ನ್ನು ಹಮ್ಮಿಕೊಳ್ಳಲಾಗಿತ್ತು. ವಿವಿಧ ಪ್ರಕರಣಗಳ 18024 ಕೈಗೆತ್ತಿಕೊಂಡಿದ್ದು, ಅದರಲ್ಲಿ ಒಟ್ಟು 9,360 ಜಾರಿಯಲ್ಲಿರುವ ಪ್ರಕರಣಗಳು ಮುಕ್ತಾಯಗೊಂಡು, ರೂ.14,33,66,571 ಹಣದ ಪ್ರಕರಣ ಹಾಗೂ ವ್ಯಾಜ್ಯ ಪೂರ್ವ 2,62,712 ಪ್ರಕರಣಗಳು ಮುಕ್ತಾಯಗೊಂಡು ರೂ.72,62,10,788 ಹಣದ ಪರಿಹಾರವಾಗಿ ರಾಜಿ ಸಂಧಾನದ ಮೂಲಕ ಇತ್ಯರ್ಥಗೊಳಿಸಲಾಗಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಮಹಾವೀರ ಮ. ಕರೆಣ್ಣವರ ತಿಳಿಸಿದ್ದಾರೆ.
ಜಿಲ್ಲೆಯ ನ್ಯಾಯಾಲಯಗಳಲ್ಲಿ 77 ಅಪರಾಧಿಕ, 195 ಚೆಕ್ ಅಮಾನ್ಯ, 43 ಬ್ಯಾಂಕ್ ವಸೂಲಾತಿ, 14 ಇತರೆ ಹಣ ವಸೂಲಾತಿ, 74 ಅಪಘಾತ ಪರಿಹಾರ, 144 ವಿದ್ಯುತ್ ಕಳ್ಳತನ, 02 ಅಕ್ರಮ ಮರಳು ಗಣಿಗಾರಿಕೆ, 51 ಪಾಲು ವಿಭಾಗಕ್ಕಾಗಿ ದಾಖಲಿಸಿದ ದಾವೆ, 26 ಭೂ ಸ್ವಾಧೀನ ಪರಿಹಾರ ಜಾರಿ ಅರ್ಜಿ, 132 ಇತರೆ ರಾಜಿ ಅರ್ಜಿ ಹಾಗೂ ಹಲವು ಕಾರಣಕ್ಕಾಗಿ ದಾಖಲಿಸಿದ 88 ದಾವೆಗಳು ಮತ್ತು ಜೀವನಾಂಶ ಕೋರಿ ದಾಖಲಿಸಿದ್ದ 50 ಪ್ರಕರಣಗಳು ಸೇರಿ ಒಟ್ಟು 9360 ಪ್ರಕರಣಗಳನ್ನು ಇತ್ಯರ್ಥಗೊಳಿಸಲಾಗಿದೆ.
23 ಜೋಡಿ ವೈವಾಹಿಕ ಜೀವನ ಸುಖಾಂತ್ಯ
ಜಿಲ್ಲೆಯಲ್ಲಿ ಒಟ್ಟು 225 ಜೋಡಿ ವಿವಿಧ ಕಾರಣಗಳಿಂದ ವಿಚ್ಛೇದನ ಮತ್ತು ಜೀವನಾಂಶಕ್ಕಾಗಿ ಪ್ರಕರಣ ದಾಖಲಿಸಿ ನ್ಯಾಯಾಲಯ ಮೆಟ್ಟಿಲೇರಿದ್ದು, ಅದರಲ್ಲಿ 20 ಪ್ರಕರಣ ದಾವಣಗೆರೆ ಜಿಲ್ಲಾ ಕೌಟುಂಬಿಕ ನ್ಯಾಯಾಲಯ ಹಾಗೂ ಹರಿಹರ, ಚನ್ನಗಿರಿ ಹಾಗೂ ಹೊನ್ನಾಳಿ ತಾಲ್ಲೂಕು ನ್ಯಾಯಾಲಯದಲ್ಲಿ ತಲಾ ಒಂದರಂತೆ ಒಟ್ಟು 23 ಜೋಡಿಗಳು ತಮ್ಮ ವೈಮನಸ್ಸುಗಳನ್ನು ಮರೆತು ಒಂದಾಗಿ ಸಹಬಾಳ್ವೆ ನಡೆಸಲು ಒಪ್ಪಿಕೊಂಡಿದ್ದು ಸುಖಾಂತ್ಯ ಕಂಡಿವೆ. ರಾಷ್ಟ್ರೀಯ ಲೋಕ್ ಅದಾಲತ್ ನಿಂದ ಸಾಕಷ್ಟು ಜನರಿಗೆ ಅನುಕೂಲವಾಗಿದೆ ಎಂದು ಅವರು ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
500 ಪಡಿತರ ಚೀಟಿಗಳಿಗೆ ಒಂದು ಪಡಿತರ ಅಂಗಡಿ ತೆರೆಯಲು ಸರ್ಕಾರ ನಿರ್ಧಾರ

ಸುದ್ದಿದಿನಡೆಸ್ಕ್:ಗ್ರಾಮೀಣ ಪ್ರದೇಶದಲ್ಲಿ 500 ಪಡಿತರ ಚೀಟಿಗಳಿಗೆ ಒಂದು ಪಡಿತರ ಅಂಗಡಿ ಹಾಗೂ ನಗರ ಪ್ರದೇಶಗಳಲ್ಲಿ 800 ಪಡಿತರ ಚೀಟಿಗಳಿಗೆ ಒಂದು ಪಡಿತರ ಅಂಗಡಿ ತೆರೆಯಲು ಶೀಘ್ರದಲ್ಲೇ ಆದೇಶ ಹೊರಡಿಸಲಾಗುವುದು ಎಂದು ಆಹಾರ ನಾಗರಿಕ ಸರಬರಾಜು ಸಚಿವ ಕೆ.ಹೆಚ್.ಮುನಿಯಪ್ಪ ತಿಳಿಸಿದ್ದಾರೆ.
ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಭವನದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ತ್ರೈಮಾಸಿಕ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಬೆಂಗಳೂರು ಗ್ರಾಮಾಂತರ ಜಿಲ್ಲೆಯಾದ್ಯಂತ ಮುಂದಿನ ಮೂರು ತಿಂಗಳಲ್ಲಿ 10 ಸಾವಿರ ನಿವೇಶನ ನೀಡುವ ಗುರಿ ಹೊಂದಲಾಗಿದೆ. ಈಗಾಗಲೇ 2 ಸಾವಿರದ 500 ಮನೆಗಳು ಮಂಜೂರಾಗಿದ್ದು, ಮುಂದಿನ ದಿನಗಳಲ್ಲಿ ಇದನ್ನು ಕೂಡ ಅರ್ಹ ಫಲಾನುಭವಿಗಳಿಗೆ ಹಂಚಲಾಗುತ್ತದೆ ಎಂದು ಮಾಹಿತಿ ನೀಡಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ5 days ago
ವಿವಿಧ ಮಾಧ್ಯಮ ಸಂಸ್ಥೆಗಳಲ್ಲಿ ಇಂಟರ್ನ್ಶಿಪ್ ಅವಕಾಶ : ಅರ್ಜಿ ಆಹ್ವಾನ
-
ದಿನದ ಸುದ್ದಿ1 day ago
500 ಪಡಿತರ ಚೀಟಿಗಳಿಗೆ ಒಂದು ಪಡಿತರ ಅಂಗಡಿ ತೆರೆಯಲು ಸರ್ಕಾರ ನಿರ್ಧಾರ
-
ದಿನದ ಸುದ್ದಿ3 days ago
ವಿವಿಧ ವರ್ಗಗಳ ಅಸಂಘಟಿತ ಕಾರ್ಮಿಕರಿಗೆ ಸ್ಮಾರ್ಟ್ ಕಾರ್ಡ್ ವಿತರೆಣೆ
-
ದಿನದ ಸುದ್ದಿ1 day ago
ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಲ್ಲಿ ಮೂಲ ಸೌಲಭ್ಯಗಳ ಕೊರತೆ : ಕರವೇ ಮನವಿ
-
ದಿನದ ಸುದ್ದಿ3 days ago
ಪಿಹೆಚ್ಡಿ ವ್ಯಾಸಂಗ ಮಾಡುತ್ತಿರುವ ಅಲ್ಪಸಂಖ್ಯಾತರಿಗೆ ವಿದ್ಯಾರ್ಥಿವೇತನ : ಅರ್ಜಿ ಆಹ್ವಾನ
-
ದಿನದ ಸುದ್ದಿ3 days ago
ಜುಲೈ 12 ರಂದು ರಾಷ್ಟ್ರೀಯ ಲೋಕ್ ಅದಾಲತ್
-
ದಿನದ ಸುದ್ದಿ2 days ago
ದತ್ತಾಂಶ ನಿರ್ವಾಹಕ ಗ್ರೇಡ್ ಎ ಪರೀಕ್ಷೆಗೆ ಅರ್ಜಿ ಆಹ್ವಾನ
-
ದಿನದ ಸುದ್ದಿ2 days ago
ಉದ್ಯೋಗ | ಜುಲೈ 15 ರಂದದು ನೇರ ಸಂದರ್ಶನ