ಲೈಫ್ ಸ್ಟೈಲ್
ಅಧಿಕ ರಕ್ತದೊತ್ತಡದ ಬಗ್ಗೆ ನಿಮಗೆಷ್ಟು ಗೊತ್ತು?
ಅಧಿಕ ರಕ್ತದೊತ್ತಡ ಎಂದರೆ ಕೇವಲ ವಯೋವೃದ್ಧರಿಗೆ ಮಾತ್ರವಲ್ಲ, ಇತ್ತೀಚಿನ ದಿನಮಾನಗಳಲ್ಲಿ 45 ವರ್ಷಗಳು ದಾಟದ ಅನೇಕ ಮಧ್ಯ ವಯಸ್ಕರಿಗೂ ಶುರುವಾಗತೊಡಗಿದೆ. ಇನ್ನೂ 15-20 ವರ್ಷಗಳು ಅವರ ಸಶಕ್ತ ಜೀವನ ಸಾಗಿಸುವಷ್ಟು ಸಮಯ ಇರುವಾಗಲೇ ದೇಹಕ್ಕೆ ಖಾಯಿಲೆಗಳು ಅಂಟಿಕೊಳ್ಳುವುದು ವಿಷಾದನೀಯ ಸಂಗತಿಯೇ ಸರಿ.
ಅಧಿಕ ರಕ್ತದೊತ್ತಡ ( Hypertension ) ಎಂದರೆ ತನ್ನೊಳಗೇ ಹರಿಯುವ ರಕ್ತವು ರಕ್ತನಾಳಗಳ ಮೇಲೆ ಬೀರುವ ಸುದೀರ್ಘ ಮತ್ತು ಅಧಿಕ ಪ್ರಮಾಣದ ಒತ್ತಡ.
ಸಾಧಾರಣ ರಕ್ತದೊತ್ತಡ
ಸಿಸ್ಟೋಲಿಕ್(80-120mmHg)/ ಡಯಾಸ್ಟೋಲಿಕ್(60-80mmHg)
ಅಧಿಕ ರಕ್ತದೊತ್ತಡದ ಹಂತಗಳು
ಆರಂಭಿಕ ಹಂತ: 120-139/80-89 mmHg
ಹಂತ-1 : 140-159/90-99 mmHg
ಹಂತ-2 : 160 ಕ್ಕಿಂತ ಹೆಚ್ಚು/100 ಕ್ಕಿಂತ ಹೆಚ್ಚು mmHg
ರೋಗಿಯ ತುರ್ತು ಸಂದರ್ಭ
180 ಕ್ಕಿಂತ ಹೆಚ್ಚು/110 ಕ್ಕಿಂತ ಹೆಚ್ಚು mmHg
ಸಾಮಾನ್ಯವಾಗಿ ಸತತ ಮೂರು ಬಾರಿ ಬೇರೆ ಬೇರೆ ಸಮಯದಲ್ಲಿ ಪರೀಕ್ಷೆ ಮಾಡಿದ ರಕ್ತದೊತ್ತಡಗಳು ಅಧಿಕವಾಗಿಯೇ ಇದ್ದರೆ ಅದನ್ನು ಅಧಿಕ ರಕ್ತದೊತ್ತಡ ಅಂದು ಪರಿಗಣಿಸಲಾಗುತ್ತದೆ.
ಕಾರಣಗಳು
• ಶೇ.90 – 95 ರೋಗಿಗಳಲ್ಲಿ ಅದು ಕೇವಲ ಅವರ ಜೀವನಶೈಲಿ ( ಊಟದಲ್ಲಿ ಹೆಚ್ಚು ಉಪ್ಪು ಬಳಕೆ, ಅಧಿಕ ತೂಕ, ಧೂಮಪಾನ, ಮದ್ಯಪಾನ) ಅಥವಾ ಅನುವಂಶಿಕವಾಗಿ ಬಂದಿರುತ್ತದೆ.
• ಇನ್ನೂ ಉಳಿದ ಸಂದರ್ಭಗಳಲ್ಲಿ ಕಿಡ್ನಿ ತೊಂದರೆ, ವಿವಿಧ ಗ್ರಂಥಿಗಳ ಖಾಯಿಲೆಗಳಲ್ಲಿ, ಮತ್ತು ಸಂತಾನವಿರೋಧಿ ಮಾತ್ರೆಗಳನ್ನು ಸೇವಿಸುವವರಲ್ಲಿ ಹೆಚ್ಚು ಕಂಡುಬರುತ್ತದೆ
ಗುಣಲಕ್ಷಣಗಳು
• ಅತೀ ಹೆಚ್ಚಿನ ಸಂದರ್ಭಗಳಲ್ಲಿ ರೋಗಿಯು ಇನ್ಯಾವುದೋ ಆರೋಗ್ಯ ಸಮಸ್ಯೆಗೆ ವೈದ್ಯರ ಬಳಿ ಹೋದಾಗ ಅಧಿಕ ರಕ್ತದೊತ್ತಡ ಕಾಣಸಿಗುವುದುಂಟು.
• ತಲೆನೋವು(ಬಹುತೇಕ ಹಿಂಬಾಗದಲ್ಲಿ)
• ತಲೆ ಹಗುರವೆನಿಸುವುದು
• ತಲೆಸುತ್ತು, ಕಿವಿಯಲ್ಲಿ ಶಬ್ಧವಾಗವುದು
• ಸುಸ್ತಾಗುವುದು, ಬೆವರುವುದು
• ಗಾಬರಿಯಾಗುವುದು
ಪರಿಣಾಮಗಳು
ಸುದೀರ್ಘ ಕಾಲದ ಬಳಿಕ ವಿವಿಧ ಅಂಗಾಂಗಗಳ ರಕ್ತನಾಳಗಳಲ್ಲಿಯೂ ಅಧಿಕ ರಕ್ತದೊತ್ತಡ ಉಂಟಾಗಿ ಅವುಗಳ ಮೇಲೆ ಪರಿಣಾಮ ಬೀರುವುದುಂಟು.
• ಹೃದಯ ರಕ್ತನಾಳಗಳ ಖಾಯಿಲೆ
• ಕಣ್ಣುಗಳ ಮೇಲೆ ಪರಿಣಮಿಸಿ, ಮುಂದೆ ಕಣ್ಣು ಕುರುಡಾಗಬಹುದು
• ಮಿದುಳಿನಲ್ಲಿ ರಕ್ತಸ್ರಾವ,
• ಸ್ಟ್ರೋಕ್ ಉಂಟಾಗಿ ಪ್ರಜ್ಞಾಹೀನ ಸ್ಥಿತಿಗೆ ತಲುಪಬಹುದು
• ಕಿಡ್ನಿ ತೊಂದರೆ
• ಶ್ವಾಸಕೋಶಗಳಲ್ಲಿ ನೀರು ತುಂಬಿಕೊಳ್ಳುವುದು
ಪರೀಕ್ಷೆಗಳು
ಸಾಮಾನ್ಯವಾಗಿ ರೋಗಿಗೆ ಯಾವ ರೀತಿಯ ಗುಣಲಕ್ಷಣಗಳು ಇವೆಯೋ ಅದಕ್ಕೆ ಸಂಬಂಧಿಸಿದ ಪರೀಕ್ಷೆಗಳನ್ನು ನಡೆಸಲಾಗುತ್ತದೆ. ಕೆಲವೊಮ್ಮೆ ಸಂದರ್ಭಾನುಸಾರ ಈ ಕೆಳಗಿನ ಎಲ್ಲಾ ಪರೀಕ್ಷೆಗಳನ್ನೂ ನಡೆಸಲಾಗುತ್ತದೆ.
• ಕಣ್ಣುಗಳ ಫಂಡಸ್ ಪರೀಕ್ಷೆಗೆ ಒಳಪಡಿಸಲಾಗುತ್ತದೆ.
• ಇಸಿಜಿ
• ರಕ್ತದಲ್ಲಿ ಸೋಡಿಯಮ್ ಮತ್ತು ಇತರ ಲವಣಾಂಶಗಳ ಪರೀಕ್ಷೆ
• ಮೂತ್ರ ಪರೀಕ್ಷೆ
• ಲಿಪಿಡ್ ಪ್ರೊಫೈಲ್
• ಎದೆಯ ಎಕ್ಸ್ರೇ
• ರೋಗಿಯು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದರೆ ತಲೆಯ ಸಿ.ಟಿ. ಇಲ್ಲವೇ ಎಮ್.ಆರ್.ಐ. ಸ್ಕ್ಯಾನ್ ಮಾಡಬೇಕಾಗುತ್ತದೆ
ಚಿಕಿತ್ಸೆ
ವ್ಯಕ್ತಿಗೆ ಅಧಿಕ ರಕ್ತದೊತ್ತಡವಿದೆಯೆಂದು ಖಾತರಿಯಾದ ಬಳಿಕ ವ್ಯಕ್ತಿಗೆ ತಕ್ಷಣವೇ ಮಾತ್ರೆಗಳನ್ನು ತೆಗೆದುಕೊಳ್ಳಲು ಸಲಹೆ ನೀಡುವುದಿಲ್ಲ. ಬದಲಾಗಿ ಸುಮಾರು ಒಂದು ತಿಂಗಳವರೆಗೂ ಆ ವ್ಯಕ್ತಿಗೆ ಜೀವನ ಶೈಲಿ ಬದಲಾವಣೆಗಳ ಸಲಹೆ ನೀಡಲಾಗುತ್ತದೆ.
ಆರಂಭಿಕ ಹಂತದ ಮತ್ತು ಮೊದಲ ಹಂತದ ವ್ಯಕ್ತಿಗಳು ಕೇವಲ ಜೀವಶೈಲಿ ಬದಲಾವಣೆಗೆಯೇ ಒಂದಿಷ್ಟು ಕಾಲದ ಬಳಿಕ ಸಾಧಾರಣ ಹಂತಕ್ಕೆ ಬರುತ್ತಾರೆ. ಅವರಿಗೆ ಬೇರೆ ಔಷಧಗಳು ಅವಶ್ಯಕತೆ ಇರುವುದಿಲ್ಲ. ಬದಲಾಗಿ ಇಷ್ಟಕ್ಕೂ ಸಾಧಾರಣ ಹಂತಕ್ಕೆ ತಲುಪದೇ ಇರುವವರಿಗೆ ಮತ್ತು ಎರಡನೇ ಹಂತ ತಲುಪಿರುವ ರೋಗಿಗಳಿಗೆ ಆಯಾ ರೋಗಿಗಳಿಗೆ ತಕ್ಕಂತೆ ಔಷಧಗಳನ್ನು ತೆಗೆದುಕೊಳ್ಳಲು ಸೂಚಿಸಲಾಗುತ್ತದೆ. ಆದರೆ ಅಧಿಕ ರಕ್ತದೊತ್ತಡ ಖಾಯಿಲೆಗೆ ಜೀವನ ಶೈಲಿ ಬದಲಾವಣೆಗಳೇ ಮೊದಲ ಆದ್ಯತಾ ಚಿಕಿತ್ಸೆಯಾಗಿರುತ್ತದೆ.
ಆದರೆ ರೋಗಿಯು ತುರ್ತುಪರಿಸ್ಥಿಗೆಗೆ ಹೋಗುವಷ್ಟು ರಕ್ತದೊತ್ತಡ ಕಂಡರೆ ಆಗ ಇಂಜೆಕ್ಷನ್ ರೂಪದಲ್ಲೇ ತಕ್ಷಣ ಚಿಕಿತ್ಸೆ ನೀಡಬೇಕಾಗುತ್ತದೆ.
ಮುಂಜಾಗ್ರತಾ ಕ್ರಮಗಳು
• ದೇಹತೂಕವು ನಮ್ಮ ಎತ್ತರಕ್ಕೆ ಅನುಗುಣವಾಗಿ, ಅದಕ್ಕೂ ಹೆಚ್ಚು ಆಗದಂತೆ ಗಮನಹರಿಸಬೇಕು
• ಊಟದಲ್ಲಿ ಉಪ್ಪಿನ ಅಂಶ ಹಿಡಿತವಿರಲಿ
• ಪ್ರತಿದಿನವೂ ಕನಿಷ್ಠ ಅರ್ಧ ಗಂಟೆ ಕಾಲ ಕಾಲ್ನಡಿಗೆ
• ಧೂಮಪಾನ ಮತ್ತು ಮದ್ಯಪಾನಗಳನ್ನು ಕಡಿತಗೊಳಿಸುವದು
• ಕೆಲಸದಲ್ಲಿ ಮಾನಸಿಕ ಒತ್ತಡಗಳು ಇಲ್ಲದಿರಲಿ
ಇದಿಷ್ಟು ಮಾಹಿತಿ ಹೈಪರ್ ಟನ್ಷನ್ ಬಗೆಗೆ. ಪ್ರತಿಯೊಬ್ಬರೂ ಈ ಮಾಹಿತಿಯನ್ನ ಇತರಿಗೆ ತಿಳಿಸಿ ಅವರ ಆರೋಗ್ಯ ಸುಸ್ಥಿತಿಯಲ್ಲಿಡಲು ಸಹಕರಿಸಿ.
ಸುದ್ದಿದಿನ.ಕಾಂ|ವಾಟ್ಸಾಪ್|9986715401

ದಿನದ ಸುದ್ದಿ
ವಿದ್ಯಾರ್ಥಿಗಳು ದೊರೆತ ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು: ಹೆಚ್ ಎನ್ ಶಿವಕುಮಾರ್
ಸುದ್ದಿದಿನ,ರಾಣೇಬೆನ್ನೂರ: ಸಾಮಾಜಿಕ ಹಾಗೂ ಶೈಕ್ಷಣಿಕ ಜವಾಬ್ದಾರಿಗಳ ಅಗತ್ಯವು ವಿದ್ಯಾರ್ಥಿಗಳಿಗೆ ಅವಶ್ಯಕವಾಗಿದೆ. ವಿದ್ಯಾರ್ಥಿಗಳು ತಮಗೆ ದೊರೆತ ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು.ಸದಾಕಾಲ ಜ್ಞಾನವನ್ನು ಪಡೆಯುವ ತನಕ ಹೊಂದಿ ಜ್ಞಾನಿಗಳಾಗುವ ಗುರಿ ಹೊಂದಲು ಬಾಪೂಜಿ ಮಹಾವಿದ್ಯಾಲಯ ಉಪ ಪ್ರಾಚಾರ್ಯರಾದ ಎಚ್ ಎನ್ ಶಿವಕುಮಾರ್ ನುಡಿದರು.
ಅವರು ಸ್ಥಳೀಯ ಬಿಎಜೆಎಸ್ಎಸ್ ಪ್ರಥಮ ದರ್ಜೆ ಕಾಲೇಜಿನ ಪ್ರತಿಭಾ ಪುರಸ್ಕಾರ, ಬಿಳ್ಕೋಡಿಗೆ ಕಾರ್ಯಕ್ರಮ ಮತ್ತು ವಿದ್ಯಾರ್ಥಿ ಒಕ್ಕೂಟದ, ಎನ್ ಎಸ್ ಎಸ್ ಚಟುವಟಿಕೆ, ಯುವ ರೆಡ್ ಕ್ರಾಸ್ ಘಟಕದ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ವಿಶೇಷ ಅತಿಥಿಗಳಾಗಿ ಉಪಸ್ಥಿತರಿದ್ದ ಬಿಎ ಜೆಎಸ್ಎಸ್ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತ ಅಧಿಕಾರಿಗಳು ಡಾ.ಆರ್ ಎಂ ಕುಬೇರಪ್ಪ ಮಾತನಾಡಿ ವಿದ್ಯೆಯನ್ನು ವಿನಯದಿಂದ ವಿದ್ಯೆಕಲಿಯಬೇಕು ಸಂಸ್ಕಾರವಂತರಾಗ ಬೇಕು, ಸಂಸ್ಕಾರ ಹೊಂದಿರುವ ವ್ಯಕ್ತಿಗಳು ಪುರಸ್ಕಾರ ಪಡೆದರೆ ಸಂಸ್ಕಾರ ಇಲ್ಲದವರು ಸಮಾಜದಲ್ಲಿ ತಿರಸ್ಕಾರಕ್ಕೆ ಒಳಗಾಗುವರು.ನಿಮ್ಮ ಬದುಕನ್ನು ನೀವೆ ಕಟ್ಟಿಕೊಳ್ಳುವ ನೆಲೆಯಲ್ಲಿ ಪ್ರಯತ್ನಿಸಬೇಕು ಎಂದು ನುಡಿದರು.
ಪ್ರಾಚಾರ್ಯರಾದ ಪ್ರಕಾಶ್ ಬಸಪ್ಪನವರ್ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಎಚ್ ಎನ್ ಭೀಕ್ಷಾವರ್ತಿಮಠ ಹಾಗೂ ಕೆ ಕೆ ಹಾವಿನಾಳ ರವರು ವಿದ್ಯಾರ್ಥಿಗಳಿಗೆ ಹಿತವಚನ ನುಡಿದರು.ಆರಂಭದಲ್ಲಿಪ್ರೋ.ಎಂ ಡಿ ಹೊನ್ನಮ್ಮನವರ ಸ್ವಾಗತಿಸಿದರು.ಪ್ರೋ.ಶ್ರೀಕಾಂತ ಕುಂಚೂರ, ಪ್ರಾಸ್ತಾವಿಕ ಮಾತನಾಡಿ ವಾರ್ಷಿಕ ವರದಿ ವಾಚಿಸಿದರು.
ಕೊನೆಯಲ್ಲಿ ಪ್ರೋ.ಪುಷ್ಟಾ ಕಬ್ಬಿನಾಲೆ ವಂದಿಸಿದರು.ಇದೆ ಸಮಾರಂಭದಲ್ಲಿ ಕ್ರೀಡೆ, ಸಾಂಸ್ಕೃತಿಕ, ಸಾಮಾಜಿಕ ಸೇವೆಗಳಲ್ಲಿವಿದ್ಯಾರ್ಥಿಗಳ ಸಾಧನೆ ಗುರುತಿಸಿ ಪುರಸ್ಕಾರ ಮಾಡಲಾಯಿತು.ವರ್ಷದ ಮಹಾವಿದ್ಯಾಲಯ ಉತ್ತಮ ವಿದ್ಯಾರ್ಥಿಗಳನ್ನು ಗುರುತಿಸಿ ಪುರಸ್ಕಾರ ಪ್ರದಾನ ಮಾಡಲಾಯಿತು.ವಿವಿಧ ವಿಷಯದ ಉಪನ್ಯಾಸಕರು, ವಿದ್ಯಾರ್ಥಿಗಳು, ಸಿಬ್ಬಂದಿ ಭಾಗವಹಿಸಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಗವಿಸಿದ್ಧ ಎನ್. ಬಳ್ಳಾರಿ ಕಾವ್ಯ ಪ್ರಶಸ್ತಿಗೆ ದಾವಣಗೆರೆಯ ಪಾಪು ಗುರು ಆಯ್ಕೆ
ಸುದ್ದಿದಿನ,ದಾವಣಗೆರೆ: ಕವಿ ಗವಿಸಿದ್ಧ ಎನ್. ಬಳ್ಳಾರಿ ವೇದಿಕೆ ಹಾಗೂ ಗವಿಸಿದ್ಧ ಎನ್. ಬಳ್ಳಾರಿ ಸಾಂಸ್ಕೃತಿಕ, ಕಲಾ, ಶಿಕ್ಷಣ ಮತ್ತು ಗ್ರಾಮೀಣಾಭಿವೃದ್ಧಿ ಸೇವಾ ಸಂಸ್ಥೆ, ಕೊಪ್ಪಳ ವತಿಯಿಂದ ನೀಡಲಾಗುವ **”ಗವಿಸಿದ್ಧ ಎನ್. ಬಳ್ಳಾರಿ ಕಾವ್ಯ ಪ್ರಶಸ್ತಿ – 2026″**ಕ್ಕೆ ದಾವಣಗೆರೆಯ ಕವಿ ಹಾಗೂ ಪತ್ರಕರ್ತ ಪಾಪು ಗುರು ಅವರ “ಈ ಹೊತ್ತಿಗೆ ಇಷ್ಟು ಸಾಕು” ಕವನ ಹಸ್ತ ಪ್ರತಿ ಆಯ್ಕೆಯಾಗಿದೆ.
ಪ್ರಶಸ್ತಿಗೆ ಈ ಬಾರಿ ರಾಜ್ಯದ ವಿವಿಧ ಭಾಗಗಳಿಂದ ಒಟ್ಟು 53 ಕವನ ಹಸ್ತಪ್ರತಿಗಳು ಬಂದಿದ್ದು, ಅಂತಿಮ ಆಯ್ಕೆ ಪ್ರಕ್ರಿಯೆಯಲ್ಲಿ ಪಾಪು ಗುರು ಅವರ ಕೃತಿ ಪ್ರಶಸ್ತಿಗೆ ಪಾತ್ರವಾಗಿದೆ.
ಪ್ರಶಸ್ತಿಯು ₹5,000 ನಗದು ಹಾಗೂ ಪ್ರಶಸ್ತಿ ಫಲಕವನ್ನು ಒಳಗೊಂಡಿದೆ. ನವೆಂಬರ್ ತಿಂಗಳಲ್ಲಿ ಕೊಪ್ಪಳದಲ್ಲಿ ನಡೆಯಲಿರುವ ಗವಿಸಿದ್ಧ ಎನ್. ಬಳ್ಳಾರಿ ಸಾಹಿತ್ಯೋತ್ಸವದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ಜರುಗಲಿದೆ ಎಂದು ಸಾಹಿತ್ಯೋತ್ಸವದ ಸಂಚಾಲಕ ಮಹೇಶ್ ಬಳ್ಳಾರಿ ತಿಳಿಸಿದ್ದಾರೆ.
ಈಗಾಗಲೇ ಸಾಹಿತ್ಯ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ಪಾಪು ಗುರು ಅವರ ‘ಮುಳ್ಳೆಲೆಯ ಮದ್ದು’, ‘ಮಣ್ಣೇ ಮೊದಲು’ ಕವನ ಸಂಕಲನಗಳು ಹಾಗೂ ‘ಸೂಜಿ’ ಕಾದಂಬರಿ ಪ್ರಕಟವಾಗಿವೆ. ಅಲ್ಲದೆ ‘ಕೆಂಪು ಕಾಂಡದ ಹೂ’ ಮತ್ತು ‘ಹಸಿರು ಹಾದಿಯ ಹೆಜ್ಜೆಗಳು’ ಕೃತಿಗಳನ್ನು ಸಂಪಾದನೆ ಮಾಡಿದ್ದಾರೆ. ಅವರ ಸೂಳೆಕೆರೆಯ ಇತಿಹಾಸದ ಹಿನ್ನೆಲೆ ಇರುವ ‘ಶಾಂತದೇವಿ’ ಕಾದಂಬರಿ ಮುದ್ರಣ ಹಂತದಲ್ಲಿದೆ.
ಸಾಹಿತ್ಯ, ಪತ್ರಿಕೋದ್ಯಮ ಮತ್ತು ಸೃಜನಶೀಲ ಬರವಣಿಗೆಯ ಮೂಲಕ ತಮ್ಮದೇ ಆದ ಛಾಪು ಮೂಡಿಸಿರುವ ಪಾಪು ಗುರು ಅವರಿಗೆ ದೊರೆತಿರುವ ಈ ಪ್ರಶಸ್ತಿ ಸಾಹಿತ್ಯ ವಲಯದಲ್ಲಿ ಸಂತಸಕ್ಕೆ ಕಾರಣವಾಗಿದೆ. ಇವರಿಗೆ ಜಿಲ್ಲೆಯ ಅಭಿಮಾನಿಗಳು, ಪತ್ರಕರ್ತರು ಮತ್ತು ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಸಾಹಿತಿ ಸಂತೆಬೆನ್ನೂರು ಫೈಜ್ನಟ್ರಾಜ್ ಹಾಗೂ ಹೆಚ್ ಬಿ. ಇಂದ್ರಕುಮಾರ್ ಅಭಿನಂದನೆ ಸಲ್ಲಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ದಾವಣಗೆರೆ | ಕುರಿ ಮತ್ತು ಮೇಕೆ ಸಾಕಾಣಿಕೆ ತರಬೇತಿ
ಸುದ್ದಿದಿನ,ದಾವಣಗೆರೆ: ದಾವಣಗೆರೆ ಪಶುಪಾಲನಾ ಮತ್ತು ಪಶುವೈದ್ಯಕೀಯ ತರಬೇತಿ ಕೇಂದ್ರದಲ್ಲಿ ಆಧುನಿಕ ಕುರಿ ಮತ್ತು ಮೇಕೆ ಸಾಕಾಣಿಕೆ ತರಬೇತಿ ಜೂನ್ 15 ಮತ್ತು 16 ರಂದು ಆಯೋಜಿಸಲಾಗಿದೆ.
ಆಸಕ್ತ ರೈತರು ಆಧಾರ್ ಕಾರ್ಡ್ ಜೆರಾಕ್ಸ್, 2 ಪಾಸ್ ಪೋರ್ಟ್ ಸೈಜ್ ಪೋಟೋ ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರು ಜಾತಿ ಪ್ರಮಾಣ ಪತ್ರದ ಜೆರಾಕ್ಸ್ ಪ್ರತಿಯೊಂದಿಗೆ ಹಾಜರಾಗಬೇಕು. ತರಬೇತಿ ಕಾರ್ಯಕ್ರಮಕ್ಕೆ ಯಾವುದೇ ಪ್ರೋತ್ಸಾಹಧನ ಮತ್ತು ಭತ್ಯೆಗಳನ್ನು ನೀಡಲಾಗುವುದಿಲ್ಲ.
ಹೆಚ್ಚಿನ ಮಾಹಿತಿಗಾಗಿ ಪಶುಪಾಲನಾ ಮತ್ತು ಪಶು ವೈದ್ಯಕೀಯ ತರಬೇತಿ ಕೇಂದ್ರ, ದಾವಣಗೆರೆ ಕಚೇರಿ ದೂ.ಸಂ: 08192-233787 ಸಂಪರ್ಕಿಸಿ ಮಾಹಿತಿ ಪಡೆದುಕೊಳ್ಳಬಹುದು ಎಂದು ಪಶುವೈದ್ಯಾಧಿಕಾರಿಗಳು ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243


