ಅಂತರಂಗ
ಧರ್ಮ ಮರ್ಮ-01: ಭಾರತದಲ್ಲಿ ಧರ್ಮದ ಸ್ವರೂಪ
- ಯೋಗೇಶ್ ಮಾಸ್ಟರ್
ಭಾರತದಲ್ಲಿ ಸದಾ ಗೊಂದಲಕ್ಕೊಳಗಾಗುವ ಅನೇಕ ವಿಷಯಗಳಲ್ಲಿ ಧರ್ಮವೂ ಒಂದು. ಸಹಜವಾಗಿ ಗೊಂದಲ ಎಂದರೇನೇ ಸ್ಪಷ್ಟತೆ ಇಲ್ಲ ಎಂದು ಅರ್ಥ. ಬೇರೆ ದೇಶಗಳಲ್ಲಿಯೂ ಕೂಡಾ ಧರ್ಮದ ಆಚರಣೆಗಳ ಬಗ್ಗೆ ಗೊಂದಲಗಳಿವೆ, ಸಂಘರ್ಷಗಳಿವೆ. ಆದರೆ ನಮ್ಮ ದೇಶದಲ್ಲಿ ಧರ್ಮ ಎನ್ನುವುದು ಬೇರೆ ದೇಶದವರಿಗಿಂತ ಹೆಚ್ಚು ವ್ಯಾಪಕವಾಗಿ ಮತ್ತು ವಿಸ್ತಾರವಾಗಿ ಅರ್ಥೈಸಲು ಸಾಧ್ಯವಿರುವುದರಿಂದ ಗೊಂದಲಗಳು ಹೆಚ್ಚಾಗಿವೆ.
ಹೌದು, ನಮ್ಮ ದೇಶದಲ್ಲಿ ಧರ್ಮದ ವಿಷಯವಾಗಿಯೂ ಒಂದು ಸಾಮಾನ್ಯ ಸ್ಪಷ್ಟತೆ ಇಲ್ಲ. ಭಾರತದ ಮಟ್ಟಿಗೆ ಧರ್ಮವನ್ನು ಅರ್ಥ ಮಾಡಿಕೊಳ್ಳುವುದು ಅಷ್ಟೇನೂ ದೊಡ್ಡ ವಿಷಯವೂ ಅಲ್ಲ ಮತ್ತು ಸಂಕೀರ್ಣವೂ ಅಲ್ಲ. ಒಂದು ಪದವನ್ನು ವಿವಿಧ ಬಳಕೆಗಳಲ್ಲಿ ಬೇರೆ ಬೇರೆ ಅರ್ಥವನ್ನು ಪಡೆದುಕೊಳ್ಳುತ್ತವೆ ಎಂಬುದರ ಗಮನ ನಮಗಿರಬೇಕು.
‘ಕಾಯು’ ಎಂಬ ಸರಳ ಪದವನ್ನು “ನಾನು ನನ್ನ ಸರದಿಗಾಗಿ ಕಾಯುತ್ತಿದ್ದೇನೆ” ಮತ್ತು “ಒಲೆಯ ಮೇಲೆ ನೀರು ಕಾಯುತ್ತಿದೆ” ಎಂಬ ಎರಡು ಬೇರೆ ಬೇರೆ ಅರ್ಥಗಳಲ್ಲಿ ಬಳಕೆ ಮಾಡುವಂತೆ ಧರ್ಮ ಎಂಬ ಪದದ ಬಳಕೆಯೂ ಕೂಡಾ ಭಿನ್ನ ಅರ್ಥಗಳಲ್ಲಿ ಬಳಕೆ ಮಾಡುತ್ತೇವೆ.
ಪದ ಬಳಕೆಯ ಕಾಳಜಿ
40ರಿಂದ 70ರ ದಶಕದವರೆಗೂ ಕೆಲವರನ್ನು ಹೊರತುಪಡಿಸಿ ಬಹಳಷ್ಟು ಬರಹಗಾರರು ಎಚ್ಚರಿಕೆಯಿಂದ ಧರ್ಮದ ಪದವನ್ನು ದೇಶೀಯವಾಗಿ ಅಂದರೆ ಭಾರತೀಯ ಅರ್ಥದಲ್ಲಿಯೇ ಬಳಸುತ್ತಿದ್ದರು. ಅವರು ‘ಧರ್ಮ’ ಮತ್ತು ‘ಮತ’ ಎಂದು ಉಪಯೋಗಿಸುತ್ತಿದ್ದ ಎರಡು ಪದಗಳಲ್ಲಿ ಸ್ಪಷ್ಟತೆ ಇತ್ತು. ಇಂಗ್ಲೀಷಿನಲ್ಲಿ ರಿಲೀಜಿಯನ್ ಎಂಬ ಪದಕ್ಕೆ ಧರ್ಮ ಎಂಬುದನ್ನು ಬಳಸುತ್ತಿರಲಿಲ್ಲ. ಬದಲಾಗಿ ಮತ ಎಂದು ಬಳಸುತ್ತಿದ್ದರು. ಇನ್ನೂ ಸರಳವಾಗಿ ಪದ್ಧತಿ ಎಂದೂ ಹೇಳುತ್ತಿದ್ದರು.
ಆದರೆ ರಿಲೀಜಿಯನ್ ಎಂದು ಇಂಗ್ಲೀಷಿನಲ್ಲಿ ಹೇಳುವ ಪದಕ್ಕೂ, ಭಾರತೀಯರು ಧರ್ಮ ಎನ್ನುವ ಪದಕ್ಕೂ ವ್ಯತ್ಯಾಸವಿದೆ ಎಂಬುದು ಸ್ಪಷ್ಟವಾಗಿತ್ತು. ಎರಡೂ ಒಂದೇ ಆಗಿರಲಿಲ್ಲ. ನಂತರ ಕೆಲವು ಬರಹಗಾರರು ಮತ ಎಂಬ ಪದವು ಬಹಳ ಲಘುವಾಗಿದೆ ಅನ್ನಿಸುವುದರಿಂದ ಮತದ ಬದಲು ಧರ್ಮ ಎಂದು ಬಳಸತೊಡಗಿದರು. ಇದರಿಂದಾಗಿ ಇಸ್ಲಾಮ್ ಮತ, ಕ್ರೈಸ್ತ ಮತ, ಬೌದ್ಧ ಮತಗಳ ಬದಲಿಗೆ ಧರ್ಮ ಎಂದು ಬಳಸತೊಡಗಿದರು.
ಅಲ್ಲಿಂದೀಚೆಗೆ ಅದು ಹೆಚ್ಚು ವ್ಯಾಪಕವೂ ಆಗ ತೊಡಗಿ ಭಾರತೀಯ ಅಥವಾ ದೇಸೀ ಅರ್ಥದ ಧರ್ಮವು ಮತವೆಂಬ ಪದದ ಬದಲಿಗೆ ಉಪಯೋಗಿಸತೊಡಗಿದರು. ಇದರಿಂದಾಗಿ ಪ್ರಾಚೀನ ಭಾರತೀಯ ಬರಹಗಳಲ್ಲಿದ್ದ ಧರ್ಮ ಎಂಬ ಪದವನ್ನು ಮತವೆಂಬ ಅರ್ಥದಲ್ಲಿ ಅರ್ಥೈಸತೊಡಗಿದ್ದರಿಂದ ಅನರ್ಥಗಳಾಗ ತೊಡಗಿದವು. ಏಕೆಂದರೆ ಯಾವ ಧರ್ಮ ಎಂಬ ಪದದ ಅರ್ಥವು ಅಜ್ಞಾತವೂ ಮತ್ತು ಸೂಕ್ಷ್ಮವೂ ಆಗಿದ್ದ ಸ್ವಭಾವ ಎಂಬ ಅರ್ಥದಲ್ಲಿ ಬಳಸುತ್ತಿದ್ದರೋ ಅದನ್ನು ಸ್ಥಾಪಿತ ಮತಕ್ಕೆ ಹೆಸರಿಸಲು ಪ್ರಾರಂಭಿಸಿ ಅದರ ಅರ್ಥ ಮರೆತುಹೋಯಿತು.
ಆದರೂ ಕಂಗಾಲಾಗುವ ಅಗತ್ಯವೇನೂ ಇಲ್ಲ. ಭಾಷೆಗಳಲ್ಲಿ ಪದಗಳು ಕಾಲದಿಂದ ಕಾಲಕ್ಕೆ ಅರ್ಥವನ್ನು ಬದಲಾಯಿಸಿಕೊಳ್ಳುವ, ಮತ್ತೊಂದಕ್ಕೆ ಬಳಕೆಯಾಗುವ ಸ್ವಭಾವವೂ ಉಂಟು. ಹಾಗಾಗಿ ಧರ್ಮ ಎಂಬ ಒಂದೇ ಪದವನ್ನು ಎರಡು ಅರ್ಥಗಳಿಗೆ ಬಳಸಲಾಗುತ್ತಿದೆ ಎಂಬ ಎಚ್ಚರಿಕೆಯನ್ನು ಹೊಂದಿದ್ದು ಪ್ರಾಚೀನ ಗ್ರಂಥಗಳನ್ನು, ಇತರ ಪಠ್ಯಗಳನ್ನು ಓದುವಾಗ ಯಾವ ಅರ್ಥದಲ್ಲಿ ಅವನ್ನು ಬಳಸಿದ್ದಾರೆ ಎಂಬ ಅರಿವು ಇರಬೇಕಷ್ಟೇ.
ಪ್ರಭುತ್ವಮು ಎಂದು ತೆಲುಗಿನವರು ಉಪಯೋಗಿಸುವ ಪದ ಕನ್ನಡದಲ್ಲಿ ಸರ್ಕಾರ ಎಂದಾಗುತ್ತದೆ. ಆದರೆ ಪ್ರಭುತ್ವದ ಪದ ಕನ್ನಡದಲ್ಲಿಯೂ ಇದೆ. ಆದರೆ ನಾವು ಅದನ್ನು ಸರ್ಕಾರ ಎಂಬ ಅರ್ಥದಲ್ಲಿ ಬಳಸುವುದಿಲ್ಲ. ರಾಜರ ಅಧಿಕಾರದ ಅರ್ಥದಲ್ಲಿ ಬಳಸುತ್ತೇವೆ. ಹಾಗೆಯೇ ಉತ್ತರ ಭಾರತದ ಕೆಲವು ರಾಜ್ಯಗಳರಲ್ಲಿ ಸರಕಾರ್ ಎಂದು ಬಳಸುವ ಪದವು ಯಜಮಾನ, ಒಡೆಯ ಎಂಬ ಅರ್ಥದಲ್ಲಿ ಬಳಸುತ್ತಾರೆ. ಆದರೆ ನಮಗೆ ಅದು ರಾಜಕೀಯ ವ್ಯವಸ್ಥೆಯ ಸರ್ಕಾರವಾಗಿ ಮಾತ್ರವೇ ಬಳಕೆಯಾಗುತ್ತದೆ.
ಯಜಮಾನ ಅಥವಾ ದಣಿ ಎಂಬ ಪದಗಳಿಗೆ ಬದಲಾಗಿ ನಾವು ಸರಕಾರ ಎಂಬ ಪದವನ್ನು ಬಳಸುವುದಿಲ್ಲ. ಸಂಸ್ಕೃತ ಪದಗಳು ಭಾರತದ ಬಹುತೇಕ ಭಾಷೆಗಳಲ್ಲಿ ಬೆರೆತುಹೋದರೂ ಅವುಗಳನ್ನು ಬಳಸುವಾಗ ಅವರ ಪ್ರಾದೇಶಿಕ ಪ್ರಭಾವಗಳು ಇರುತ್ತಿದ್ದವು. ಆ ಪ್ರಯೋಗಗಳ ಹಿಂದೆ ಕಾರಣಗಳೇನೇ ಇದ್ದರೂ ಅರ್ಥ ವ್ಯತ್ಯಾಸ ಇದ್ದುದಂತೂ ನಿಜ. ಹೀಗೆಯೇ ಧರ್ಮವನ್ನೂ ಕನಿಷ್ಟಪಕ್ಷ ನಮ್ಮ ಕನ್ನಡದ ಹಿರಿಯರು ಬರೆಯುತ್ತಿದ್ದ ಪುಸ್ತಕಗಳಲ್ಲಿ ಎಚ್ಚರಿಕೆಯಿಂದ ಬಳಸುತ್ತಿದ್ದರು. ಸಂಸ್ಕೃತದಲ್ಲಾಗಲಿ ಅಥವಾ ಕನ್ನಡದಲ್ಲಾಗಲಿ ಧರ್ಮದ ಅರ್ಥಕ್ಕೆ ಬಹಳ ಸ್ಪಷ್ಟತೆ ಇತ್ತು.
ರೂಢಿ ದೋಷ
ನಮ್ಮ ರೂಢಿಗೊಳಿಸಿಕೊಂಡಿರುವ ಒಂದು ದೊಡ್ಡ ದೋಷವೆಂದರೆ ಸರಳ ಮತ್ತು ನೇರವಾಗಿರುವ ವಿಷಯಗಳನ್ನು ಸಂಕೀರ್ಣಗೊಳಿಸಿಕೊಳ್ಳುವುದು. ಯಾವುದು ಸಾಮಾನ್ಯ ತಿಳುವಳಿಕೆಗೆ ಎಟುಕುವುದಿಲ್ಲವೋ ಅದು ಮಹತ್ವವಾದುದು, ಬಹಳ ಮೌಲ್ಯವುಳ್ಳದ್ದು, ಬಹಳ ಉನ್ನತವಾದದ್ದು ಎಂಬ ಭ್ರಮೆಯನ್ನು ಹುಟ್ಟಿಸಿರುವುದು. ಅದು ಬರಿಯ ಭ್ರಮೆಯು ಮಾತ್ರವಲ್ಲ ಮಾನವನ ಸಂವಹನ ಕ್ರಮಕ್ಕೆ ಮಾಡುವ ದ್ರೋಹವೂ ಹೌದು. ನಾನು ಹೇಳುವುದು ನಿಮಗೆ ಅರ್ಥವಾಗಬೇಕು. ನಿಮ್ಮ ತಿಳುವಳಿಕೆಗೆ ನಿಲುಕಬೇಕು. ಆಗ ನಾನು ಹೇಳುವ ಕೆಲಸದಲ್ಲಿ ಯಶಸ್ವಿಯಾಗಿದ್ದೇನೆ ಎಂದು ಅರ್ಥ.
ಅದು ಬಿಟ್ಟು, ನಾನು ನಿಮ್ಮ ಶಬ್ಧಭಂಡಾರದಲ್ಲಿ ಇಲ್ಲದಿರುವಂತಹ, ಹುಡುಕಿದರೂ ಅರ್ಥ ಸಿಗದಂತಹ ಮಹಾ ಪಾಂಡಿತ್ಯದ ಶಬ್ಧಗಳನ್ನು ಉಪಯೋಗಿಸಿ, ನಿಮಗೆ ನಾನು ನಿಮ್ಮ ತಿಳುವಳಿಕೆಗೆ ನಿಲುಕದಂತವನಾದರೆ ಅದು ನನ್ನ ವೈಫಲ್ಯ. ಏನೋ ಸ್ವಲ್ಪ ಪ್ರಾದೇಶಿಕ ಭಾಷಾ ಪ್ರಯೋಗಗಳಿಂದ ಒಂದಷ್ಟು ಪದಗಳು ಆಚೀಚೆ ಆಗಬಹುದು. ಆದರೆ ನನ್ನ ತಿಳುವಳಿಕೆಗೆ ನಿಲುಕದ್ದು ಎಂದು ಅವನ್ನು ಉನ್ನತೀಕರಿಸಿ, ಅರಿಯದವರು ಪಾಮರರು ಎಂಬ ಭ್ರಮೆ ಹುಟ್ಟಿಸಿದ ಕಾರಣದಿಂದಲೇ ಅಪವ್ಯಾಖ್ಯಾನಗಳು ಅಂದರೆ ಇರುವ ಅರ್ಥವನ್ನು ಬಿಟ್ಟು ಬೇರೇನೇನೋ ವಿವರಣೆಗಳು ಹುಟ್ಟಿರುವವು.
ಧರ್ಮದ ಪಾವಿತ್ರ್ಯದ ವ್ಯಾಪ್ತಿ
ಧರ್ಮದ ವಿವರಣೆಯಲ್ಲಿಯೂ ಕೂಡಾ ಹಾಗೇ ಆಗಿವೆ. ಅದೇನೋ ಅತ್ಯಂತ ಶ್ರದ್ಧೆಗೆ, ಬದ್ಧತೆಗೆ, ಪಾವಿತ್ರ್ಯತೆಗೆ ಸಂಬಂಧಿಸಿದ್ದು, ದೇವರನ್ನು ಸಮೀಪಿಸುವುದಕ್ಕೆ ಇರುವುದು ಎಂಬ ಭ್ರಮೆ ಇದೆ ಅಥವಾ ಧರ್ಮ ಎಂದ ಕೂಡಲೇ ಹಾಗಾಡುತ್ತಾರೆ. ಅದರಲ್ಲೂ ಭಾರತೀಯರ ವಿಷಯದಲ್ಲಂತೂ ಧರ್ಮ ಎಂಬುದು ಪವಿತ್ರತೆಗೂ, ದೇವರಿಗೂ, ಶ್ರದ್ಧೆಗೂ ಸಂಬಂಧಿಸಿದ್ದಲ್ಲ. ಬಹಳ ಸರಳವಾಗಿ ಧರ್ಮವನ್ನು ಅರ್ಥ ಮಾಡಿಕೊಳ್ಳುತ್ತಾ ಹೋಗೋಣ.
ಬಂಡೆ ಗಟ್ಟಿಯಾಗಿರುವುದು ಅದರ ಗುಣ, ನೀರಿಗೆ ಹರಿಯುವ ಗುಣ, ಗಾಳಿಗೆ ಬೀಸುವಂತಹ ಸಹಜ ಗುಣವಿದೆ ಹಾಗೆಯೇ ಬೆಂಕಿಗೆ ಸುಡುವ ಸ್ವಭಾವ ಇದೆ ಎಂದರೆ ಅರ್ಥವಾಗುತ್ತದೆ. ಹಾಗೆಯೇ ಕಾಠಿಣ್ಯವು ಬಂಡೆಯ ಧರ್ಮ, ಹರಿಯುವುದು ನೀರಿನ ಧರ್ಮ, ಬೀಸುವುದು ಗಾಳಿಯ ಧರ್ಮ, ಸುಡುವುದು ಬೆಂಕಿಯ ಧರ್ಮ ಎಂದರೂ ಅರ್ಥವಾಯಿತಲ್ಲವೇ? ಅಂದರೆ ಯಾವುದೇ ಒಂದರ ಮೂಲ ಅಥವಾ ಪ್ರಮುಖವಾದ ಸ್ವಭಾವವೇ ಧರ್ಮ.
ಧರ್ಮ ಶಬ್ದವು ಸಂಸ್ಕೃತದ ‘ಧೃ’ ಎಂಬ ಮೂಲದಿಂದ ಬಂದಿದೆ. ‘ಧೃ’ ಎಂದರೆ ಧಾರಣ ಮಾಡು ಅಥವಾ ಧರಿಸು, ಎತ್ತಿ ಹಿಡಿ ಅಥವಾ ಬೆಂಬಲಿಸು ಎಂದರ್ಥ. ಇದು ಪ್ರಾರಂಭದ ಪಾಠ. “ಧಾರಣಾತ್ ಧರ್ಮ ಇತ್ಯಾಹುಃ ಧರ್ಮೋ ಧಾರಯತಿ ಪ್ರಜಾಃ” ಎಂದು ಮಹಾಭಾರತದ ಕರ್ಣಪರ್ವದಲ್ಲಿ ಯಾವುದು ಇನ್ನೊಂದನ್ನು ಎತ್ತಿ ಹಿಡಿಯುವುದೋ, ಅಥವಾ ಇನ್ನೊಂದಕ್ಕೆ ಆಧಾರವಾಗಿ ಅದನ್ನು ರಕ್ಷಿಸುವುದೋ ಅದು ಧರ್ಮ ಎನಿಸಿಕೊಳ್ಳುತ್ತದೆ.
ಹೀಗೆಂದು ಕೃಷ್ಣ ಅರ್ಜುನನಿಗೆ ಧರ್ಮ ಎಂದು ವಿವರಿಸಲು ಯತ್ನಿಸುತ್ತಾನೆ. ಅದೇ ರೀತಿಯಲ್ಲಿ ಭಗವತ್ಗೀತೆಯಲ್ಲಿ “ಶ್ರೇಯಾನ್ ಸ್ವಧರ್ಮೋ ವಿಗುಣಃ ಪರಧರ್ಮಾತ್ ಸ್ವನುಷ್ಠಿತಾತ್” ಎನ್ನುತ್ತಾ ಬೇರೆ ಧರ್ಮವನ್ನು ಚೆನ್ನಾಗಿ ಮಾಡುವುದಕ್ಕಿಂತ ತನ್ನ ಧರ್ಮವು ವಿಗುಣವಾಗಿದ್ದರೂ (ಪರರ ದೃಷ್ಟಿಯಲ್ಲಿ) ಅದೇ ಶ್ರೇಯಸ್ಕರ ಎನ್ನುತ್ತಾ “ಸ್ವಧರ್ಮೇ ನಿಧನಂ ಶ್ರೇಯಃ ಪರಧರ್ಮೋ ಭಯಾವಹಃ” ನಿನ್ನದೇ ಧರ್ಮದಲ್ಲಿ ಸತ್ತರೂ ಅದು ಮೇಲು, ಪರಧರ್ಮ ಅದಕ್ಕಿಂತ ಭಯಂಕರವಾದುದು ಎಂದೂ ಹೇಳುತ್ತಾನೆ.
ಭಗವತ್ಗೀತೆಯಲ್ಲಿ ಧರ್ಮವೆಂದರೆ ವ್ಯಕ್ತಿ ಅಥವಾ ವಸ್ತುವಿನ ಸ್ವಭಾವದಂತೆ ತೋರಿದರೆ, ಕರ್ಣಪರ್ವದಲ್ಲಿ ಕರ್ತವ್ಯದಂತೆ ತೋರುತ್ತದೆ. ಭಗವತ್ಗೀತೆಯ ಧರ್ಮವನ್ನೂ ಕರ್ತವ್ಯವೆಂದೂ ಕೂಡಾ ಅರ್ಥೈಸಬಹುದು. ಆದರೆ ಒಂದು ವಿಷಯ ನೆನಪಿಡಬೇಕು. ಮಹಾಭಾರತದ ಯಾವುದೋ ಒಂದು ಉಲ್ಲೇಖಿತ ಸಾಲನ್ನು ಹಿಡಿದುಕೊಂಡು ಸುಭಾಷಿತದ ರೀತಿಯಲ್ಲಿ ಅಥವಾ ಧಾರ್ಮಿಕ ಸೂತ್ರದ ರೀತಿಯಲ್ಲಿ ಶಾಸನವನ್ನಾಗಿ ಮಾಡಿಕೊಳ್ಳಬಾರದು.
ಏಕೆಂದರೆ ಮಹಾಭಾರತದಲ್ಲಿ ನೂರಾರು ಪಾತ್ರಗಳು ಬರುತ್ತವೆ. ಎಲ್ಲಾ ಪಾತ್ರಗಳೂ ತಮ್ಮ ತಮ್ಮ ಧೋರಣೆಯನ್ನು, ಮನೋಭಾವವನ್ನು, ಮನಸ್ಥಿತಿಗಳನ್ನು ವ್ಯಕ್ತಪಡಿಸುವಂತೆ ಧರ್ಮವನ್ನೂ ಕೂಡಾ ನಾನಾ ರೀತಿಯಲ್ಲಿ ಸಮಯ ಸನ್ನಿವೇಶಕ್ಕೆ ತಕ್ಕಂತೆ ವಿವರಿಸುತ್ತಾ ಹೋಗುತ್ತಾರೆ. ವ್ಯಾಸ, ಜನಮೇಜಯ, ಭೀಷ್ಮ, ವಿದುರ, ಕೃಷ್ಣ, ಧುರ್ಯೋದನ, ದೃತರಾಷ್ಟ್ರ, ಗಾಂಧಾರಿ, ಕುಂತಿ, ಮಾದ್ರಿ, ಧರ್ಮರಾಯ; ಹೀಗೆ ಹಲವಾರು ಪಾತ್ರಗಳು ಅನೇಕ ವಿಷಯಗಳನ್ನು ತಮ್ಮದೇ ಆದ ರೀತಿಯಲ್ಲಿ, ತಾವು ಗ್ರಹಿಸಿದಂತೆ, ತಾವು ನಂಬಿದಂತೆ, ತಮ್ಮ ಸಿದ್ಧಾಂತದಂತೆ, ತಮ್ಮ ಅನುಭವಕ್ಕೆ ತಕ್ಕಂತೆ ವಿವರಿಸುತ್ತಾ ಹೋಗುತ್ತಾರೆ.
ಮಹಾಭಾರತ ಯಾವುದೇ ಒಂದು ಸಿದ್ಧಾಂತವನ್ನು ಸ್ಪಷ್ಟ ಪಡಿಸಲು, ನೀತಿ ಹೇಳಲು ನಿಲ್ಲುವುದಿಲ್ಲ. ಆದರೆ ಧರ್ಮವನ್ನೇ ಕೇಂದ್ರವಾಗಿಟ್ಟುಕೊಳ್ಳುತ್ತದೆ. ಧರ್ಮವನ್ನು ಎತ್ತಿ ಹಿಡಿಯುತ್ತದೆ. ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಧರ್ಮದ ಕೇಂದ್ರ ಮತ್ತು ಕರ್ಮದ ಚಕ್ರವನ್ನೇ ಎಲ್ಲಾ ಪಾತ್ರಗಳ ಜೊತೆಜೊತೆಯಾಗಿ ಹೋಗುತ್ತಿರುತ್ತದೆ.
ಇಷ್ಟೆಲ್ಲಾ ಆದರೂ ಮಹಾಭಾರತ ಧಾರ್ಮಿಕತೆಯ ಕತೆಯಲ್ಲ. ಇದರಲ್ಲಿ ಬದ್ಧತೆ, ಶ್ರದ್ಧೆ ಎಲ್ಲವನ್ನೂ ಕೋರಲಾಗುತ್ತದೆ.
ಆದರೆ ಯಾವುದೋ ಸ್ಥಾಪಿತ ಧರ್ಮದ ಸಾಂಪ್ರದಾಯಿಕ ಆಚರಣೆಯ ರೀತಿಯಲ್ಲಿ ಅಂದರೆ ರಿಲೀಜಿಯಸ್ ಪ್ರಾಕ್ಟೀಸ್ ರೀತಿಯದಲ್ಲ. ವ್ಯಕ್ತಿಧರ್ಮ, ಪ್ರಕೃತಿಧರ್ಮ, ಪರಿವಾರಿಕ ಅಥವಾ ಕುಟುಂಬ ಧರ್ಮ, ಸಮಾಜಧರ್ಮ, ವೃತ್ತಿಧರ್ಮ, ಮನೋಧರ್ಮ, ರಾಜಧರ್ಮ, ಕಾಲಧರ್ಮ ಅಥವಾ ಯುಗಧರ್ಮ, ವರ್ಣಧರ್ಮ, ಆಪತ್ಧರ್ಮ, ಆಶ್ರಮಧರ್ಮ; ಹೀಗೆ ಅನೇಕಾನೇಕ ಧರ್ಮಗಳ ಚಹರೆಗಳನ್ನು, ಚಟುವಟಿಕೆಗಳನ್ನು, ಚರ್ಚೆಗಳನ್ನು ಗುರುತಿಸಬಹುದು.
ಇನ್ನೂ ಮುಂದುವರಿದು ಆಪತ್ಕಾಲೇ ನಾಸ್ತಿ ಧರ್ಮ ಎಂತಲೂ ಎನ್ನುವುದು. ಅಂದರೆ ಪ್ರಾಣ ಹೋಗುವಂತಹ ಕೆಟ್ಟ ಸಂದರ್ಭ ಒದಗಿದರೆ ಯಾವ ಧರ್ಮವನ್ನು ಬಿಟ್ಟು ನಿನ್ನ ಪ್ರಾಣವನ್ನು ಉಳಿಸಿಕೋ ಎಂಬಂತಹ ಕಿವಿ ಮಾತು. ಇದನ್ನೇ ಆಪತ್ಧರ್ಮ ಎಂದುಕೊಳ್ಳೋಣ. ಒಟ್ಟಿನಲ್ಲಿ ಧರ್ಮ ಎಂಬ ಪದದ ಹಿಂದೆ ಜೋಡುಪದವಾಗಿ ಬಂದಿರುವ ಪದಗಳನ್ನೆಲ್ಲಾ ನೋಡಿದರೆ, ಧರ್ಮ ಎಂಬುದು ಸ್ಥಿರವೂ ಹೌದು, ಚರವೂ ಹೌದು ಎಂದಾಗುತ್ತದೆ. ಸ್ಥಿರವಾಗಿರುವುದು ಯಾವ ಧರ್ಮ ಮತ್ತು ಚರವಾಗಿರುವುದು ಯಾವ ಧರ್ಮ ಎಂಬುದನ್ನು ಗಮನಿಸಬೇಕು.
ಒಟ್ಟಾರೆ ಸಧ್ಯಕ್ಕೆ ಧರ್ಮವನ್ನು ಮೂರು ರೀತಿಯಲ್ಲಿ ಅರ್ಥ ಮಾಡಿಕೊಳ್ಳೋಣ. ಆಗ ಇನ್ನು ಮುಂದೆ ನಾವು ಪ್ರಯಾಣ ಮಾಡಲಿರುವ ದೇಶ ವಿದೇಶಗಳ ಧರ್ಮಗಳನ್ನೆಲ್ಲಾ ಅರ್ಥ ಮಾಡಿಕೊಳ್ಳಲು ಸಾಧ್ಯವಾಗುತ್ತದೆ.
ಧರ್ಮ ಎಂದರೆ ಒಂದು ವಸ್ತು ಅಥವಾ ಜೀವದ ಸ್ವಾಭಾವಿಕ ಗುಣವೆಂಬುದು ಸ್ಥಿರ ಧರ್ಮ ಎನ್ನಬಹುದು. ಅದೇನಾದರೂ ಬದಲಾಗದು. ನೈಸರ್ಗಿಕವಾಗಿ ಪ್ರಾಕೃತಿಕವಾಗಿ ಇರುವಂತಹ ಗುಣ ಸ್ವಭಾವ. ನಮ್ಮ ಹಿರಿಯರು ಹೇಳುತ್ತಿದ್ದರು, “ಅವನು ಎಷ್ಟು ತಿಂದರೂ ದಪ್ಪಗಾಗುವುದಿಲ್ಲ. ಅದು ಅವನ ಶರೀರ ಧರ್ಮ!” ಅವನು ಇರುವುದೇ ಹಾಗೇ ಎನ್ನುವುದಕ್ಕೆ ಹಾಗೆನ್ನುತ್ತಿದ್ದರು.
ಶರೀರ ಪ್ರಕೃತಿ ಅಥವಾ ಶರೀರಧರ್ಮ ಎಂಬುದನ್ನು ಸಮಾರ್ಥಕ ಪದಗಳಾಗಿ ಬಳಸುತ್ತಿದ್ದರು. ಅದು ಸ್ಥಿರವಾಗಿರುವ ಧರ್ಮ. ಇದು “ಅವರವರ ಮನೋಧರ್ಮಕ್ಕೆ ತಕ್ಕಂತೆ ನಡೆದುಕೊಳ್ಳುತ್ತಾರೆ” ಎನ್ನುವ ಮಾತಿನಲ್ಲಿಯೂ ಧರ್ಮ ಎನ್ನುವುದನ್ನು ಗಮನಿಸಿ. ಅವರವರ ಸಹಜ ಸ್ವಭಾವ ಎನ್ನುವುದಕ್ಕೆ ಸೂಚಿಸುತ್ತಾರೆ.
ಅದೇ ರೀತಿ ವೃತ್ತಿಧರ್ಮ, ಕುಟುಂಬಧರ್ಮ, ಆಶ್ರಮಧರ್ಮ, ಇತ್ಯಾದಿಗಳನ್ನು ಗಮನಿಸಿದರೆ ಧರ್ಮ ಎಂದರೆ ಕರ್ತವ್ಯ ಎಂಬ ಅರ್ಥ ಬರುತ್ತದೆ. ನಾನು ಮಡಿವಾಳನಾಗಿ ವೃತ್ತಿಯನ್ನು ಮಾಡುವಾಗ ನನ್ನ ಕೆಲಸದಲ್ಲಿ ಯಾವ ಯಾವ ಕರ್ತವ್ಯಗಳಿಗೆ ಬದ್ಧನಾಗಿರಬೇಕು ಎಂಬುದನ್ನು ನೋಡಬೇಕು. ಅದು ನನ್ನ ವೃತ್ತಿಧರ್ಮ. ಕುಟುಂಬದ ಒಂದು ಪಾತ್ರವನ್ನು ನಿರ್ವಹಣೆ ಮಾಡುವಾಗ ಆ ಪಾತ್ರದ ಕರ್ತವ್ಯಕ್ಕೆ ಬದ್ಧನಾಗಿ ಅದನ್ನು ನೆರವೇರುವಂತೆ ನೋಡಿಕೊಳ್ಳುವುದು ನನ್ನ ಧರ್ಮವನ್ನು ಪಾಲನೆ ಮಾಡಿದಂತೆ.
ಹಾಗೆಯೇ ಪ್ರಕೃತಿಧರ್ಮ, ಯುಗಧರ್ಮ, ಸಮಾಜಧರ್ಮ; ಇತ್ಯಾದಿಗಳಲ್ಲಿ ಧರ್ಮವನ್ನು ‘ಕ್ರಮ’ ಎಂದು ಅರ್ಥ ಮಾಡಿಕೊಳ್ಳಬೇಕು. ಪ್ರಕೃತಿಯಲ್ಲಿ ಋತುಧರ್ಮವಿದೆ. ಅದಕ್ಕೆ ಅನುಸಾರವಾಗಿ ಋತುಗಳು ಕಾಲಕಾಲಕ್ಕೆ ಬರುತ್ತವೆ ಹೋಗುತ್ತವೆ. ಒಂದು ಕ್ರಮವನ್ನು ಅನುಸರಿಸುತ್ತವೆ. ಇದು ಸಹಜವಾಗಿ ಆಗುವುದು. ಯುಗಧರ್ಮ ಅಥವಾ ಕಾಲಧರ್ಮದಲ್ಲಿ ಬದಲಾದ ಕಾಲಕ್ಕೆ ಅನುಗುಣವಾಗಿ, ಆ ಕಾಲದ ಪರಿಸ್ಥಿತಿ, ರೀತಿ ನೀತಿಗಳನ್ನು ನೋಡಿಕೊಂಡು ನಮ್ಮ ನಡೆಯ ಕ್ರಮವನ್ನು ಬದಲಿಸಿಕೊಳ್ಳಬೇಕು. ಇದು ನಾವು ಗ್ರಹಿಸಿ ಕಾಲದ ಪರಿಸ್ಥಿತಿಗೆ ಹೊಂದಿಕೊಳ್ಳುವ ಮೂಲಕ ಕ್ರಮವನ್ನು ರೂಪಿಸಿಕೊಳ್ಳುವುದು.
ಸಮಾಜ ಎಲ್ಲರೂ ಒಟ್ಟಾಗಿ ಬಾಳುವಂತಹ ಒಂದು ಸಾಂಘಿಕ ವ್ಯವಸ್ಥೆ. ವ್ಯಕ್ತಿಗಳ ಮನೋಭಾವ, ಮನೋಭಿಲಾಷೆ, ನಿರಾಶೆ, ಒಲವು, ನಿಲುವುಗಳಲ್ಲಿ ಬಹಳಷ್ಟು ವ್ಯತ್ಯಾಸಗಳಿರುತ್ತವೆ. ಹಾಗಿದ್ದರೂ ನಾವು ಸಂಘಜೀವಿಗಳಾದ್ದರಿಂದ ವ್ಯವಸ್ಥೆಯಲ್ಲಿ ಒಂದು ಕ್ರಮವನ್ನು ರೂಪಿಸಲಾಗಿರುತ್ತದೆ.
ಏನೇ ಸಂಘರ್ಷ, ಸಂಕಟ, ಸಂತೋಷ ಎದುರಾಗುವಂತಹ ಸನ್ನಿವೇಶಗಳಿದ್ದರೂ ಇಡೀ ಸಮಾಜ ಅಥವಾ ಸಮುದಾಯದ ವ್ಯವಸ್ಥೆಯು ಕುಸಿಯದಿರುವಂತೆ, ಅದು ನಾಶಗೊಳ್ಳದಿರುವಂತೆ ನೋಡಿಕೊಳ್ಳಲು ಒಂದು ಕ್ರಮವನ್ನು ರೂಪಿಸಿದೆ. ಅದನ್ನು ಅನುಸರಿಸುವ ಕರ್ತವ್ಯವೂ ವ್ಯಕ್ತಿಗಳದ್ದಾಗಿರುತ್ತದೆ. ಅದು ಒಬ್ಬನ ಧರ್ಮ. ಸಮಾಜಕ್ಕೊಂದು ಧರ್ಮ ಅಂದರೆ ಕ್ರಮ. ಸಮಾಜದಲ್ಲಿ ಬಾಳಿ ಬದುಕಲು ಆ ಕ್ರಮವನ್ನು ಪಾಲಿಸಲು ವ್ಯಕ್ತಿಗೆ ಧರ್ಮ, ಅಂದರೆ ಕರ್ತವ್ಯ.
ಒಟ್ಟಾರೆ, ಧರ್ಮ ಎಂದರೆ ಮೂರು ಅರ್ಥಗಳಲ್ಲಿ ಸ್ಥೂಲವಾಗಿ ತಿಳಿದುಕೊಳ್ಳೋಣ. ಒಂದು ಸ್ವಾಭಾವಿಕ ಗುಣ, ಎರಡನೆಯದು ಕರ್ತವ್ಯ ಮತ್ತು ಮೂರನೆಯದು ಕ್ರಮ. ಇಷ್ಟನ್ನು ತಿಳಿದುಕೊಂಡರೆ ನಮಗೆ ವಿಶ್ವದಲ್ಲಿ ಧರ್ಮಗಳ ವಿಷಯದಲ್ಲಿ ಉಂಟಾಗಿರುವ ಗೊಂದಲಗಳು, ಗಲಾಟೆಗಳು, ಸಂಘರ್ಷಗಳು, ಸಂಕಟಗಳು ಎಲ್ಲಾ ಅರ್ಥವಾಗುತ್ತವೆ. ಬಹಳ ಮುಖ್ಯವಾಗಿ ಧರ್ಮವನ್ನು ಏನೆಂದು ಅರ್ಥ ಮಾಡಿಕೊಳ್ಳಬೇಕಿತ್ತು, ಹೇಗೆಂದು ಅರ್ಥ ಮಾಡಿಕೊಂಡಿದ್ದಾರೆ ಎಂದು ತಿಳಿಯುತ್ತದೆ. ಅಥವಾ ಏನೆಂದೂ ಅರ್ಥವೇ ಆಗಿಲ್ಲ ಎಂದಾದರೂ ಅರ್ಥವಾಗುತ್ತದೆ.
ಧರ್ಮವನ್ನು ಸಾಮಾಜಿಕವಾಗಿ, ತಾತ್ವಿಕವಾಗಿ, ಆಧ್ಯಾತ್ಮಿಕವಾಗಿ, ಸಾಂಸ್ಕೃತಿಕವಾಗಿ, ಮಾನಸಿಕವಾಗಿ, ನೈತಿಕವಾಗಿ ಮತ್ತು ರಾಜಕೀಯವಾಗಿ ಅರ್ಥ ಮಾಡಿಕೊಳ್ಳಲು ಹೋದಾಗ ಸಮಾಜದಲ್ಲಿ ನಡೆಯುತ್ತಿರುವ ಧಾರ್ಮಿಕ ದೊಂಬಿಗಳು, ಅವುಗಳನ್ನು ನಡೆಸುತ್ತಿರುವ ಝ್ಹೋಂಬಿಗಳು ಕೂಡಾ ಅರ್ಥವಾಗುತ್ತಾರೆ.
(ಮುಂದುವರಿಯುತ್ತದೆ)
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂಕಣ
ಭಾಷೆ ಗಡಿಗಳ ಮೀರಿ ಮೊಳಗಿದ ಧ್ವನಿ ; ಗಾನಕೋಗಿಲೆ ಎಸ್. ಜಾನಕಿ ನಿರ್ಗಮನ
ಭಾರತೀಯ ಚಿತ್ರಸಂಗೀತದ ಇತಿಹಾಸದಲ್ಲಿ ಕೆಲವೇ ಕೆಲವು ಧ್ವನಿಗಳು ಕಾಲವನ್ನು ಮೀರಿ ಅಮರತ್ವ ಪಡೆದಿವೆ. ಅಂತಹ ಅಮರ ಸ್ವರಗಳಲ್ಲಿ ಅತ್ಯಂತ ಪ್ರಕಾಶಮಾನವಾದ ಹೆಸರು ಎಸ್. ಜಾನಕಿ. ತಮ್ಮ ಅಪೂರ್ವ ಕಂಠಸಿರಿಯಿಂದ ಆರು ದಶಕಗಳಿಗೂ ಹೆಚ್ಚು ಕಾಲ ಕೋಟ್ಯಂತರ ಸಂಗೀತಾಭಿಮಾನಿಗಳ ಹೃದಯವನ್ನು ಗೆದ್ದಿದ್ದ ಈ ಮಹಾನ್ ಹಿನ್ನೆಲೆ ಗಾಯಕಿ ಇಹಲೋಕ ತ್ಯಜಿಸಿದ್ದಾರೆ. ಅವರ ನಿಧನವು ಕೇವಲ ಒಬ್ಬ ಗಾಯಕಿಯ ಅಗಲಿಕೆಯಲ್ಲ; ಭಾರತೀಯ ಸಂಗೀತ ಪರಂಪರೆಯ ಒಂದು ಮಹತ್ತರ ಯುಗದ ಅಂತ್ಯವಾಗಿದೆ.
ಸಂಗೀತವು ಭಾಷೆಯ ಎಲ್ಲೆಗಳನ್ನು ಮೀರಿ ಹೃದಯವನ್ನು ತಲುಪುವ ಮಾಧ್ಯಮ. ಆ ಸತ್ಯವನ್ನು ತಮ್ಮ ಗಾಯನದ ಮೂಲಕ ಸಾಬೀತುಪಡಿಸಿದ ಕಲಾವಿದೆ ಎಸ್. ಜಾನಕಿ. ಅವರು ಹಾಡಿದ ಸಾವಿರಾರು ಗೀತೆಗಳು ಇಂದಿಗೂ ಪ್ರೀತಿ, ವಿರಹ, ಭಕ್ತಿ, ಮಾತೃತ್ವ, ಸಂತೋಷ ಮತ್ತು ಬದುಕಿನ ಸೂಕ್ಷ್ಮ ಭಾವನೆಗಳಿಗೆ ಧ್ವನಿಯಾಗಿವೆ. ಅವರ ಕಂಠ ಕೇಳಿದ ಕ್ಷಣವೇ ಹಾಡಿನ ಪಾತ್ರ ಜೀವಂತವಾಗಿ ಕಣ್ಣೆದುರು ಮೂಡುತ್ತಿತ್ತು. ಅದೇ ಅವರ ಗಾಯನದ ಮಹತ್ವ.
ಸಾಮಾನ್ಯ ಕುಟುಂಬದಿಂದ ಸಂಗೀತ ಸಾಮ್ರಾಜ್ಯದವರೆಗೆ
1938ರ ಏಪ್ರಿಲ್ 23ರಂದು ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ರೆಪಲ್ಲೆ ಸಮೀಪ ಜನಿಸಿದ ಜಾನಕಿ, ಬಾಲ್ಯದಿಂದಲೇ ಸಂಗೀತದತ್ತ ಅತೀವ ಆಸಕ್ತಿ ಹೊಂದಿದ್ದರು. ಮನೆಯಲ್ಲಿದ್ದ ಸಂಗೀತದ ವಾತಾವರಣವೇ ಅವರ ಪ್ರತಿಭೆಗೆ ಮೊದಲ ಪ್ರೇರಣೆ. ಸಂಪ್ರದಾಯಬದ್ಧ ಸಂಗೀತ ಶಿಕ್ಷಣ ಸೀಮಿತವಾಗಿದ್ದರೂ, ದೇವರು ನೀಡಿದ ಸಹಜ ಕಂಠವೇ ಅವರನ್ನು ಅಪರೂಪದ ಗಾಯಕಿಯನ್ನಾಗಿ ರೂಪಿಸಿತು.
ಕುಟುಂಬದ ಬೆಂಬಲದೊಂದಿಗೆ ಅವರು ಆಗಿನ ಮದ್ರಾಸಿಗೆ ತೆರಳಿ ಹಿನ್ನೆಲೆ ಗಾಯನದಲ್ಲಿ ಅವಕಾಶ ಹುಡುಕಿದರು. ಆರಂಭದ ದಿನಗಳು ಸುಲಭವಾಗಿರಲಿಲ್ಲ. ಆದರೆ ಪ್ರತಿಭೆ, ಶ್ರಮ ಮತ್ತು ಸಂಗೀತದ ಮೇಲಿನ ಅಚಲ ನಿಷ್ಠೆ ಅವರನ್ನು ಬೇಗನೇ ಸಂಗೀತ ನಿರ್ದೇಶಕರ ಗಮನಕ್ಕೆ ತಂದಿತು. 1957ರಲ್ಲಿ ಆರಂಭವಾದ ಅವರ ಗಾಯನಯಾನ, ನಂತರ ಭಾರತದ ಸಂಗೀತ ಇತಿಹಾಸದಲ್ಲೇ ಅತ್ಯಂತ ದೀರ್ಘ ಹಾಗೂ ಯಶಸ್ವಿ ಪಯಣಗಳಲ್ಲಿ ಒಂದಾಗಿ ಬೆಳೆಯಿತು.
ಭಾಷೆಗಳ ಗಡಿಗಳನ್ನು ಮೀರಿ ಮೊಳಗಿದ ಧ್ವನಿ
ತೆಲುಗು, ಕನ್ನಡ, ತಮಿಳು, ಮಲಯಾಳಂ, ಹಿಂದಿ, ಒಡಿಯಾ, ತುಳು, ಕೊಂಕಣಿ ಸೇರಿದಂತೆ ಅನೇಕ ಭಾರತೀಯ ಭಾಷೆಗಳಲ್ಲಿ ಅವರು ಸಾವಿರಾರು ಹಾಡುಗಳನ್ನು ಹಾಡಿದರು. ವಿವಿಧ ಮೂಲಗಳ ಪ್ರಕಾರ ಅವರು 40 ಸಾವಿರಕ್ಕೂ ಅಧಿಕ ಗೀತೆಗಳಿಗೆ ಧ್ವನಿಯಾಗಿದ್ದಾರೆ.
ಪ್ರತಿ ಭಾಷೆಯ ಉಚ್ಚಾರಣೆಯನ್ನು ಅತ್ಯಂತ ಶ್ರದ್ಧೆಯಿಂದ ಕಲಿತು, ಆ ಭಾಷೆಯವರೇ ಹಾಡಿದಂತೆ ಹಾಡುವುದು ಅವರ ವಿಶೇಷತೆ. ಅದಕ್ಕಾಗಿಯೇ ಅವರು ಹಾಡಿದ ಗೀತೆಗಳನ್ನು ಯಾವ ರಾಜ್ಯದ ಜನರೂ ತಮ್ಮದೇ ಭಾಷೆಯ ಹಾಡುಗಳೆಂದು ಪ್ರೀತಿಸಿದರು. ಒಬ್ಬ ಗಾಯಕಿಗೆ ಇದಕ್ಕಿಂತ ದೊಡ್ಡ ಗೌರವ ಮತ್ತೊಂದಿಲ್ಲ.
ಕನ್ನಡಿಗರ ಮನದ ಜಾನಕಿ
ಕರ್ನಾಟಕದ ಸಂಗೀತಾಸಕ್ತರಿಗೆ ಎಸ್. ಜಾನಕಿ ಎಂದರೆ ವಿಶೇಷವಾದ ಭಾವನಾತ್ಮಕ ಬಂಧ. ಕನ್ನಡ ಚಿತ್ರರಂಗದ ಸುವರ್ಣಯುಗದ ನೂರಾರು ಅಮರಗೀತೆಗಳಿಗೆ ಅವರು ಜೀವ ತುಂಬಿದ್ದಾರೆ.
ಡಾ. ರಾಜ್ಕುಮಾರ್, ವಿಷ್ಣುವರ್ಧನ್, ಅಂಬರೀಷ್, ಶಂಕರ್ ನಾಗ್, ಅನಂತ್ ನಾಗ್, ರಮೇಶ್ ಅರವಿಂದ್ ಸೇರಿದಂತೆ ಹಲವು ತಲೆಮಾರಿನ ನಟ–ನಟಿಯರ ಭಾವನೆಗಳಿಗೆ ಅವರ ಧ್ವನಿಯೇ ಆತ್ಮವಾಗಿತ್ತು.
ವಿಜಯಭಾಸ್ಕರ್, ಜಿ.ಕೆ. ವೆಂಕಟೇಶ್, ರಾಜನ್–ನಾಗೇಂದ್ರ, ಉಪೇಂದ್ರ ಕುಮಾರ್, ಹಂಸಲೇಖ ಸೇರಿದಂತೆ ಕನ್ನಡದ ಶ್ರೇಷ್ಠ ಸಂಗೀತ ನಿರ್ದೇಶಕರೊಂದಿಗೆ ಅವರು ನೀಡಿದ ಹಾಡುಗಳು ಇಂದಿಗೂ ಸಂಗೀತಾಸಕ್ತರ ತುಟಿಗಳಲ್ಲಿ ಜೀವಂತವಾಗಿವೆ.
ಪ್ರೇಮಗೀತೆಗಳಾಗಲಿ, ಭಕ್ತಿಗೀತೆಗಳಾಗಲಿ, ಜಾನಪದ ಸೊಗಡಿನ ಹಾಡುಗಳಾಗಲಿ ಅಥವಾ ವಿರಹದ ಮೌನವನ್ನು ಹೇಳುವ ಮಧುರಗೀತೆಗಳಾಗಲಿ—ಜಾನಕಿ ಅವರ ಧ್ವನಿ ಪ್ರತಿಯೊಂದು ಭಾವಕ್ಕೂ ಹೊಸ ಅರ್ಥ ನೀಡುತ್ತಿತ್ತು.
ಇಳಯರಾಜಾ–ಜಾನಕಿ: ಸಂಗೀತದ ಅದ್ಭುತ ಜೋಡಿ
ತಮಿಳು ಚಿತ್ರರಂಗದಲ್ಲಿ ಸಂಗೀತ ನಿರ್ದೇಶಕ ಇಳಯರಾಜಾ ಮತ್ತು ಎಸ್. ಜಾನಕಿ ಅವರ ಸಂಗಮ ಭಾರತೀಯ ಚಿತ್ರಸಂಗೀತದ ಅತ್ಯಂತ ಯಶಸ್ವಿ ಜೋಡಿಗಳಲ್ಲಿ ಒಂದು.
ಇಳಯರಾಜಾ ಅವರ ಸಂಗೀತದ ಸೂಕ್ಷ್ಮ ಭಾವಗಳನ್ನು ಜಾನಕಿ ತಮ್ಮ ಧ್ವನಿಯಲ್ಲಿ ಜೀವಂತಗೊಳಿಸುತ್ತಿದ್ದರು. ಈ ಜೋಡಿಯ ಅನೇಕ ಗೀತೆಗಳು ಇಂದಿಗೂ ದಕ್ಷಿಣ ಭಾರತದ ಸಂಗೀತಾಭಿಮಾನಿಗಳ ನಿತ್ಯ ಸಂಗಾತಿಗಳಾಗಿವೆ.
ಅದೇ ರೀತಿ ಎಂ.ಎಸ್. ವಿಶ್ವನಾಥನ್, ಕೆ.ವಿ. ಮಹಾದೇವನ್, ಚಕ್ರವರ್ತಿ, ಹಂಸಲೇಖ, ರಾಜನ್–ನಾಗೇಂದ್ರ, ವಿಜಯಭಾಸ್ಕರ್ ಮೊದಲಾದ ದಿಗ್ಗಜರ ಸಂಗೀತಕ್ಕೂ ಅವರು ವಿಶಿಷ್ಟ ಕಂಠಸಿರಿ ನೀಡಿದ್ದಾರೆ.
ಧ್ವನಿಯೊಳಗಿದ್ದ ಸಾವಿರ ರೂಪಗಳು
ಎಸ್. ಜಾನಕಿ ಅವರ ಗಾಯನದ ಅತ್ಯಂತ ದೊಡ್ಡ ವೈಶಿಷ್ಟ್ಯವೆಂದರೆ ಧ್ವನಿಯ ರೂಪಾಂತರ. ಒಂದು ಹಾಡಿನಲ್ಲಿ ಮಗು ಮಾತನಾಡಿದಂತೆ ಹಾಡಬಲ್ಲರು; ಮತ್ತೊಂದು ಹಾಡಿನಲ್ಲಿ ವಯಸ್ಸಾದ ಮಹಿಳೆಯ ಭಾವನೆ ಮೂಡಿಸುತ್ತಿದ್ದರು. ಕೆಲವೊಮ್ಮೆ ಗ್ರಾಮೀಣ ಹುಡುಗಿಯ ಮುಗ್ಧತೆ, ಮತ್ತೊಮ್ಮೆ ನಗರ ಮಹಿಳೆಯ ಆತ್ಮವಿಶ್ವಾಸ, ಇನ್ನೊಮ್ಮೆ ತಾಯಿಯ ಮಮತೆ, ಮತ್ತೆ ಭಕ್ತೆಯ ಪ್ರಾರ್ಥನೆ—ಪ್ರತಿ ಭಾವಕ್ಕೂ ಬೇರೆ ಧ್ವನಿಯನ್ನು ನೀಡುವ ಸಾಮರ್ಥ್ಯ ಅವರಿಗೆ ಮಾತ್ರ ಸಾಧ್ಯವಾಗಿತ್ತು. ಅವರ ಧ್ವನಿ ಕೇವಲ ಸಂಗೀತವಲ್ಲ; ಅದು ಅಭಿನಯವೂ ಆಗಿತ್ತು.
ಶ್ರಮ, ಶಿಸ್ತು ಮತ್ತು ಪರಿಪೂರ್ಣತೆಯ ಪ್ರತೀಕ
ಒಂದು ಹಾಡನ್ನು ಹಾಡುವ ಮೊದಲು ಅದರ ಸಾಹಿತ್ಯವನ್ನು ಸಂಪೂರ್ಣ ಅರ್ಥೈಸಿಕೊಳ್ಳುವುದು ಅವರ ಅಭ್ಯಾಸ. ಉಚ್ಚಾರಣೆಯಲ್ಲಿ ಯಾವುದೇ ತಪ್ಪು ಆಗಬಾರದು ಎಂಬ ಕಾರಣಕ್ಕೆ ಹೊಸ ಭಾಷೆಗಳನ್ನು ಸಹ ಕಲಿಯುತ್ತಿದ್ದರು.
ರೆಕಾರ್ಡಿಂಗ್ ಸ್ಟುಡಿಯೋದಲ್ಲಿ ಸಮಯಪಾಲನೆ, ಶಿಸ್ತು ಹಾಗೂ ಸಂಗೀತದ ಮೇಲಿನ ಅಪಾರ ಗೌರವದಿಂದ ಅವರು ಎಲ್ಲರ ಪ್ರೀತಿಗೆ ಪಾತ್ರರಾಗಿದ್ದರು.
ಸಂಗೀತ ನಿರ್ದೇಶಕರು ಅನೇಕ ಬಾರಿ ಹೇಳಿದ್ದೇನಂದರೆ, ಜಾನಕಿ ಹಾಡನ್ನು ಒಮ್ಮೆ ಅರ್ಥ ಮಾಡಿಕೊಂಡರೆ ಅದನ್ನು ಮತ್ತೆ ವಿವರಿಸುವ ಅಗತ್ಯವೇ ಇರಲಿಲ್ಲ.
ಪ್ರಶಸ್ತಿಗಳಿಗಿಂತ ದೊಡ್ಡದು ಜನರ ಪ್ರೀತಿ
ಎಸ್. ಜಾನಕಿ ಅವರು ನಾಲ್ಕು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಪಡೆದಿದ್ದಾರೆ. ವಿವಿಧ ರಾಜ್ಯ ಸರ್ಕಾರಗಳಿಂದ ಮೂವತ್ತಕ್ಕೂ ಅಧಿಕ ಅತ್ಯುತ್ತಮ ಹಿನ್ನೆಲೆ ಗಾಯಕಿ ಪ್ರಶಸ್ತಿಗಳು ಅವರಿಗೆ ಸಂದಿವೆ. ಆದರೆ ಅವರು ಎಂದಿಗೂ ಪ್ರಶಸ್ತಿಗಳಿಗಾಗಿ ಹಾಡಲಿಲ್ಲ. ಸಂಗೀತವೇ ಅವರ ಧ್ಯಾನ, ಗಾಯನವೇ ಅವರ ಪೂಜೆ.
ಪದ್ಮಭೂಷಣ ಪ್ರಶಸ್ತಿಯನ್ನು ಅವರು ವಿನಯಪೂರ್ವಕವಾಗಿ ನಿರಾಕರಿಸಿದ್ದು ದೇಶಾದ್ಯಂತ ಚರ್ಚೆಗೆ ಕಾರಣವಾಗಿತ್ತು. ತಮ್ಮ ಸಾಧನೆಗೆ ತಡವಾಗಿ ಗೌರವ ನೀಡಲಾಗಿದೆ ಎಂಬ ಭಾವನೆಯನ್ನು ಅವರು ಅತ್ಯಂತ ಗೌರವಯುತವಾಗಿ ವ್ಯಕ್ತಪಡಿಸಿದ್ದರು.
ಎಸ್.ಪಿ.ಬಿ.–ಜಾನಕಿ: ಮರೆಯಲಾಗದ ಸಂಗೀತಯಾನ
ಎಸ್.ಪಿ. ಬಾಲಸುಬ್ರಹ್ಮಣ್ಯಂ ಮತ್ತು ಎಸ್. ಜಾನಕಿ ಅವರ ಜೋಡಿ ಭಾರತೀಯ ಚಿತ್ರಸಂಗೀತದ ಅತ್ಯಂತ ಜನಪ್ರಿಯ ಗಾಯನ ಜೋಡಿಗಳಲ್ಲಿ ಒಂದು.
ಅವರಿಬ್ಬರು ಹಾಡಿದ ಸಾವಿರಾರು ಯುಗಲಗೀತೆಗಳು ಇಂದಿಗೂ ರೇಡಿಯೋಗಳಲ್ಲಿ, ಸಂಗೀತ ಕಾರ್ಯಕ್ರಮಗಳಲ್ಲಿ ಮತ್ತು ಅಭಿಮಾನಿಗಳ ನೆನಪುಗಳಲ್ಲಿ ಸದಾ ಕೇಳಿಸುತ್ತಿವೆ.ಇವರ ಗಾಯನದಲ್ಲಿ ಸ್ಪರ್ಧೆಯಿರಲಿಲ್ಲ; ಪರಸ್ಪರ ಪೂರಕವಾದ ಸಂಗೀತ ಮಾತ್ರ ಇತ್ತು.
ಸರಳತೆಯೇ ಅವರ ಅಲಂಕಾರ
ಅಸಂಖ್ಯಾತ ಪ್ರಶಸ್ತಿಗಳು, ಲಕ್ಷಾಂತರ ಅಭಿಮಾನಿಗಳು, ದೇಶವ್ಯಾಪಿ ಖ್ಯಾತಿ—ಇವೆಲ್ಲ ಇದ್ದರೂ ಎಸ್. ಜಾನಕಿ ಅತ್ಯಂತ ಸರಳ ಜೀವನ ನಡೆಸಿದರು.ವೇದಿಕೆಯಲ್ಲಿ ಎಂದಿಗೂ ಆಡಂಬರ ತೋರಲಿಲ್ಲ. ಸಂದರ್ಶನಗಳಲ್ಲಿಯೂ ತಮ್ಮ ಸಾಧನೆಗಿಂತ ಸಂಗೀತದ ಮಹತ್ವದ ಬಗ್ಗೆ ಹೆಚ್ಚು ಮಾತನಾಡುತ್ತಿದ್ದರು.ಹೊಸ ಗಾಯಕರಿಗೆ ಪ್ರೋತ್ಸಾಹ ನೀಡುವುದು, ಅವರನ್ನು ಮೆಚ್ಚುವುದು ಮತ್ತು ಸಂಗೀತವನ್ನು ಗೌರವಿಸುವಂತೆ ಸಲಹೆ ನೀಡುವುದು ಅವರ ಸ್ವಭಾವವಾಗಿತ್ತು.
ಹೊಸ ತಲೆಮಾರಿನಲ್ಲೂ ಜೀವಂತ ಧ್ವನಿ
ಡಿಜಿಟಲ್ ಸಂಗೀತದ ಯುಗದಲ್ಲಿಯೂ ಎಸ್. ಜಾನಕಿ ಅವರ ಹಾಡುಗಳ ಜನಪ್ರಿಯತೆ ಕಡಿಮೆಯಾಗಲಿಲ್ಲ. ಯೂಟ್ಯೂಬ್, ಸಂಗೀತ ಆ್ಯಪ್ಗಳು, ರಿಯಾಲಿಟಿ ಶೋಗಳು, ಸಾಮಾಜಿಕ ಜಾಲತಾಣಗಳು—ಎಲ್ಲೆಡೆ ಅವರ ಹಾಡುಗಳು ಹೊಸ ತಲೆಮಾರಿನ ಕಿವಿಗಳಿಗೆ ತಲುಪುತ್ತಲೇ ಇವೆ. ಇಂದಿನ ಅನೇಕ ಯುವ ಗಾಯಕ–ಗಾಯಕಿಯರು ತಮ್ಮ ಸಂಗೀತಯಾನದ ಪ್ರೇರಣೆಯಾಗಿ ಜಾನಕಿ ಅವರನ್ನು ಉಲ್ಲೇಖಿಸುತ್ತಾರೆ.
ಸಂಗೀತ ಲೋಕದ ಕಂಬನಿ
ಅವರ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ದೇಶದಾದ್ಯಂತ ಸಂಗೀತ ಲೋಕದಲ್ಲಿ ಶೋಕದ ಛಾಯೆ ಆವರಿಸಿತು. ಚಿತ್ರರಂಗದ ಗಣ್ಯರು, ಸಂಗೀತ ನಿರ್ದೇಶಕರು, ಗಾಯಕ–ಗಾಯಕಿಯರು, ಸಾಹಿತ್ಯಿಕರು, ರಾಜಕೀಯ ನಾಯಕರು ಹಾಗೂ ಲಕ್ಷಾಂತರ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳ ಮೂಲಕ ಭಾವಪೂರ್ಣ ನಮನ ಸಲ್ಲಿಸಿದರು.
“ಒಂದು ಯುಗ ಮುಗಿಯಿತು”, “ಗಾನಕೋಗಿಲೆಯ ಧ್ವನಿ ಎಂದೆಂದಿಗೂ ಜೀವಂತ”, “ನಮ್ಮ ಜೀವನದ ನೆನಪುಗಳಿಗೆ ಹಿನ್ನೆಲೆ ಸಂಗೀತ ನೀಡಿದ ಧ್ವನಿ” ಎಂಬ ಮಾತುಗಳು ಎಲ್ಲೆಡೆ ಕೇಳಿಬಂದವು.
ಕನ್ನಡಿಗರ ನೆನಪಿನಲ್ಲಿ ಎಂದೆಂದಿಗೂ
ಕರ್ನಾಟಕದ ಮನೆಮನೆಗಳಲ್ಲೂ ಎಸ್. ಜಾನಕಿ ಅವರ ಹಾಡುಗಳು ಇಂದಿಗೂ ಬೆಳಗಿನ ಭಕ್ತಿಗೀತೆಗಳಾಗಿ, ಪ್ರೇಮಗೀತೆಗಳಾಗಿ, ಹಬ್ಬದ ಸಂಭ್ರಮವಾಗಿ, ಬದುಕಿನ ನೆನಪುಗಳಾಗಿ ಮೊಳಗುತ್ತಿವೆ.
ಅವರ ಧ್ವನಿ ಅನೇಕ ಕುಟುಂಬಗಳ ಭಾವನೆಗಳ ಒಂದು ಭಾಗವಾಗಿದೆ. ತಾಯಿಯ ನೆನಪಿನಲ್ಲಿ, ಪ್ರೀತಿಯ ನೆನಪಿನಲ್ಲಿ, ಬಾಲ್ಯದ ನೆನಪಿನಲ್ಲಿ, ಹಬ್ಬದ ಸಂಭ್ರಮದಲ್ಲಿ—ಎಲ್ಲೆಲ್ಲೂ ಜಾನಕಿ ಅವರ ಹಾಡುಗಳಿವೆ.
ಸ್ವರ ಮೌನವಾದರೂ…
ಕಾಲ ಬದಲಾಗಬಹುದು. ಸಂಗೀತದ ಶೈಲಿಗಳು ಬದಲಾಗಬಹುದು. ಹೊಸ ತಂತ್ರಜ್ಞಾನಗಳು ಬರಬಹುದು. ಆದರೆ ಭಾವನೆಗೆ ಜೀವ ತುಂಬುವ ಧ್ವನಿಗಳು ಅಪರೂಪ.
ಎಸ್. ಜಾನಕಿ ಅಂತಹ ಅಪರೂಪದ ಧ್ವನಿ. ಅವರ ದೇಹ ನಮ್ಮೊಂದಿಗಿಲ್ಲ. ಆದರೆ ಅವರು ಹಾಡಿದ ಪ್ರತಿಯೊಂದು ಗೀತೆ ಮುಂದಿನ ಹಲವು ತಲೆಮಾರುಗಳಿಗೂ ಬದುಕಿನ ಸಂಗಾತಿಯಾಗಿರುತ್ತದೆ. ಸಂಗೀತ ಇತಿಹಾಸವನ್ನು ಬರೆಯುವಾಗ ಅವರ ಹೆಸರನ್ನು ಬಿಟ್ಟು ಮುಂದೆ ಸಾಗುವುದು ಅಸಾಧ್ಯ. ಮರಣವು ಒಬ್ಬ ವ್ಯಕ್ತಿಯನ್ನು ಮಾತ್ರ ಕಸಿದುಕೊಳ್ಳಬಹುದು; ಅವರು ಸೃಷ್ಟಿಸಿದ ಕಲೆಯನ್ನು ಅಲ್ಲ.
ಎಸ್. ಜಾನಕಿ ಅವರ ಸ್ವರ ಇಂದು ಮೌನವಾಗಿದೆ. ಆದರೆ ಅವರು ಹಾಡಿದ ಸಾವಿರಾರು ಗೀತೆಗಳು ಭಾರತೀಯ ಸಂಗೀತಾಕಾಶದಲ್ಲಿ ಶಾಶ್ವತವಾಗಿ ಪ್ರತಿಧ್ವನಿಸುತ್ತಲೇ ಇರುತ್ತವೆ.
ಅವರ ಕಂಠಸಿರಿ ಕಾಲವನ್ನು ಮೀರಿದೆ.
ಅವರ ಸಂಗೀತ ತಲೆಮಾರುಗಳನ್ನು ಮೀರಿದೆ.
ಅವರ ನೆನಪು ಎಂದಿಗೂ ಅಳಿಯದು.
ಸ್ವರ ಮೌನವಾಗಿದೆ… ಆದರೆ ಸಂಗೀತ ಅಮರವಾಗಿದೆ. ಅದೇ ಎಸ್. ಜಾನಕಿ ಅವರ ಶಾಶ್ವತ ಪರಂಪರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂಕಣ
ದೀಪಾವಳಿ ವಿಶೇಷಾಂಕ | ದೇವನಗರಿ ಸುದ್ದಿದಿನ ಪತ್ರಿಕೆಯಿಂದ ಕತೆ- ಕವಿತೆ- ಲೇಖನ- ರೂಪದರ್ಶಿ ಫೋಟೋ ಗಳಿಗೆ ಆಹ್ವಾನ
ಸುದ್ದಿದಿನ,ದಾವಣಗೆರೆ: ಪ್ರಿಯ ಓದುಗರೆ, ಬೆಳಕಿನ ಹಬ್ಬ ದೀಪಾವಳಿಯ ಪ್ರಯುಕ್ತ ದೇವನಗರಿ ಸುದ್ದಿದಿನ – ಕನ್ನಡ ದಿನ ಪತ್ರಿಕೆ ಹಾಗೂ ಶ್ಯಾಮ್ ಪ್ರಕಾಶನದವತಿಯಿಂದ ‘ ದೀಪಾವಳಿ ವಿಶೇಷಾಂಕ’-2026ನ್ನು ತರಲಾಗುತ್ತಿದೆ.
ಈ ಹಿನ್ನೆಲೆಯಲ್ಲಿ ದೀಪಾವಳಿ ವಿಷೇಶಾಂಕ 2026ರ ವಿಭಾಗಕ್ಕೆ ಕತೆ, ಕವಿತೆ ಹಾಗೂ ಲೇಖನ ಹಾಗೂ ರೂಪದರ್ಶಿಗಳ ಛಾಯಾಚಿತ್ರಗಳನ್ನು ಆಹ್ವಾನಿಸಿದ್ದೇವೆ.
ಕತೆ – ಕವಿತೆಗಳನ್ನು ಕಳುಹಿಸಲು ಇರುವ ನಿಯಮಗಳು
ಕತೆ/ಕವಿತೆ ಸ್ವತಂತ್ರ ರಚನೆಯಾಗಿರಬೇಕು. ಈ ಮೊದಲು ಯಾವ ಮಾಧ್ಯಮಗಳಲ್ಲಿಯೂ ಪ್ರಕಟ ಅಥವಾ ಪ್ರಸಾರ ಆಗಿರಬಾರದು.
ಕತೆ 1500 ಸಾವಿರ ಪದಗಳ ಮಿತಿಯಲ್ಲಿರಲಿ. ಕವಿತೆಗೆ 40 ಸಾಲಿನ ಮಿತಿಯಿರಲಿ, ನುಡಿ ಅಥವಾ ಬರಹ ತಂತ್ರಾಂಶದಲ್ಲಿ ಇಲ್ಲವೆ ಯೂನಿಕೋಡ್ನಲ್ಲಿ ಇರಬೇಕು. ವಯಸ್ಸಿನ ಮಿತಿ ಇರುವುದಿಲ್ಲ.
ಕತೆ/ಕವಿತೆ ಇರುವ ಪುಟದಲ್ಲಿ ಹೆಸರು, ವಿವರ ಬರೆಯುವಂತಿಲ್ಲ. ಪ್ರತ್ಯೇಕ ಪುಟದಲ್ಲಿ ಹೆಸರು, ಅಂಚೆ ವಿಳಾಸ, ಮೊಬೈಲ್ ನಂಬರ್, ಇ-ಮೇಲ್ ವಿಳಾಸ ಒದಗಿಸಬೇಕು.
ಇತ್ತೀಚಿನ ಪಾಸ್ಪೋರ್ಟ್ ಅಳತೆಯ ವರ್ಣಮಯ ಭಾವಚಿತ್ರದೊಂದಿಗೆ 100 ಪದಗಳ ಒಳಗೆ ಕಿರು ಪರಿಚಯ ಕಳುಹಿಸಬೇಕು.
ಸ್ಪರ್ಧೆಗೆ ಕಳುಹಿಸಿರುವ ಬರಹಗಳನ್ನು ಹಿಂದಿರುಗಿಸುವುದಿಲ್ಲ. ಬರಹಗಳು ಕಡ್ಡಾಯವಾಗಿ ಎಂಎಸ್ ವರ್ಡ್ ಫೈಲ್ (MS word File) ನಲ್ಲಿರಲಿ.
ಬರಹ ಮತ್ತು ಫೋಟೋಗಳನ್ನು ಇ-ಮೇಲ್ ಮೂಲಕವಷ್ಟೇ ಕಳಿಸಿ.
ಲೇಖನಗಳಿಗೆ ಆಹ್ವಾನ : ವೈಚಾರಿಕತೆ, ವಿಮರ್ಶೆ, ಕಾನೂನು, ಸಾಹಿತ್ಯ, ತಂತ್ರಜ್ಞಾನ, ವಿಜ್ಞಾನ, ಡಿಜಿಟಲ್ ಮಾಧ್ಯಮ, ಸಿನೆಮಾ, ಪ್ರೇಮಪತ್ರ, ಕೃಷಿ, ರಾಜಕೀಯ, ಕಲೆ, ಆರೋಗ್ಯ, ಪ್ರವಾಸ, ಅಡುಗೆ, ಫೋಟೋಗ್ರಫಿ, ವೈಲ್ಡ್ ಲೈಫ್, ಹಾಸ್ಯ ಕುರಿತಾದ ಲೇಖನಗಳನ್ನು 450 ಪದಗಳನ್ನು ಮೀರದಂತೆ ಬರೆದು ಕಳುಹಿಸಿ.
ಹಾಗೆಯೇ, ವಿಶೇಷಾಂಕದ ಮುಖಪುಟದ ರೂಪದರ್ಶಿಯಾಗಲು ಅವಕಾಶವನ್ನು ಕಲ್ಪಸಿಲಾಗಿದೆ. ಆಸಕ್ತ ರೂಪದರ್ಶಿಗಳು ಸ್ಟುಡಿಯೋ ಅಥವಾ ಫೋಟೋಗ್ರಾಫರ್ ಮೂಲಕ ತೆಗೆದ ‘6*4 ಅಳತೆಯ ಮುದ್ರಿತ ಫೋಟೋ ಮತ್ತು ಇ-ಮೇಲ್ ಮೂಲಕವೂ ಕಳಿಸಬಹುದು. 80 ಪದಗಳಮಿತಿಯೊಳಗೆ ನಿಮ್ಮ ಪರಿಚಯದೊಂದಿಗೆ, ಒಬ್ಬರು 4 ಫೋಟೋ ಕಳುಹಿಸಬೇಕು. ವಯಸ್ಸಿನ ಮಿತಿಯಿಲ್ಲ ಇರುವುದಿಲ್ಲ.
ಕತೆಯ ವಿಜೇತರಿಗೆ ಪ್ರಥಮ ಬಹುಮಾನ : 10000, ದ್ವಿತೀಯ ಬಹುಮಾನ : 5000, ತೃತೀಯ ಬಹುಮಾನ : 3000 ಹಾಗೂ ಕವಿತೆ ಬಹುಮಾನ ವಿಜೇತರಿಗೆ ಪ್ರಥಮ ಬಹುಮಾನ : 5000 ದ್ವಿತೀಯ ಬಹುಮಾನ : 3000 ಹಾಗೂ ತೃತೀಯ ಬಹುಮಾನ : ₹2000 ಸಿಗಲಿದೆ.
ಆಗಸ್ಟ್ 30ರೊಳಗೆ ಬರಹಗಳನ್ನು ಇ-ಮೇಲ್: deepasuddidina@gmail.com ಗೆ ಕಳುಹಿಸಲು ತಿಳಿಸಿದೆ. ಈ ಕುರಿತು ಹೆಚ್ಚಿನ ಮಾಹಿತಿಗಾಗಿ :9980346243 ಹಾಗೂ visit: www.suddidina.com ಅನ್ನು ವೀಕ್ಷಿಸಬಹುದಾಗಿದೆ.
ಕಚೇರಿ ವಿಳಾಸ
ದೇವನಗರಿ ಸುದ್ದಿದಿನ- ಕನ್ನಡ ದಿನ ಪತ್ರಿಕೆ
ದೀಪಾವಳಿ ವಿಶೇಷಾಂಕ ವಿಭಾಗ
#3231/1, ಸಂಜೀವ ಸದನ, 11ನೇ ಮುಖ್ಯರಸ್ತೆ, 4 ನೇ ಅಡ್ಡರಸ್ತೆ, ಎಂಸಿಸಿ ಬಿ ಬ್ಲಾಕ್, ದಾವಣಗೆರೆ, 577004
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂಕಣ
ಕವಿತೆ | ದೇವರ ಹೂವು
~ ಡಾ. ಸಿ.ಬಿ.ಐನಳ್ಳಿ
ಊಟ ಮಾಟ ವೇಷ ಭಾಷೆ
ಪ್ರಾರ್ಥನೆ ಬೇರೆ ಬೇರೆ
ಪವಿತ್ರಪಠ್ಯ ಅವನದೊಂದು
ನನ್ನದಿನ್ನೊಂದಂತೆ
ನದಿ ದಂಡೆಯ ಮೇಲೆ
ನೋಟ ಬೆರೆತು ಮಾತು ಮರೆತು
ಮೈತ್ರಿ ಮೊಳೆಯಿತು
ಎಷ್ಟು ಬಿಗಿದಪ್ಪಿಕೊಂಡರೂ
ಉಳಿಯುತ್ತಿತ್ತು ನಡುವೆ ಸಣ್ಣ ಪೊಳ್ದಾಣ
ಹೂದೋಟದ ದುಂಬಿ ಸತತ ಮೂರು
ವಸಂತದ ಗಾಳಿ ಅಣಕಿಸಿದಾಗ
ಪರಾಗಸ್ಪರ್ಶಕೆ ಹೊಸ ಹೂವೊಂದು
ಅರಳಿ ನಿಂತಿತು
ಪೊಳ್ಳಿನ ನೆನಪೇ ಮಾಯವಾಗಿದೆ
ಎಳೆ ಹೂವು ಮೈಮರೆತು
ಹಾಡಿ ಓಡಿ ನಲಿಯುತಿದೆ
ಧರ್ಮ ನನ್ನ ಕಣ್ಣೊಳಗೆ ಜಿನುಗಿ
ಹನಿಯಾಗಿ ಜಾರುತಿದೆ
ಕವಿ ಪರಿಚಯ : ಡಾ. ಸಿ.ಬಿ.ಐನಳ್ಳಿ, ಸಹಾಯಕ ಪ್ರಾಧ್ಯಾಪಕರು, ಇಂಗ್ಲೀಷ್ ವಿಭಾಗ, ಕರ್ನಾಟಕ ಕಲಾ ಮಹಾವಿದ್ಯಾಲಯ, ಧಾರವಾಡ
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ಅಂಕಣ6 days agoಭಾಷೆ ಗಡಿಗಳ ಮೀರಿ ಮೊಳಗಿದ ಧ್ವನಿ ; ಗಾನಕೋಗಿಲೆ ಎಸ್. ಜಾನಕಿ ನಿರ್ಗಮನ
-
ದಿನದ ಸುದ್ದಿ5 days agoಮಾಜಿ ರಾಜ್ಯಸಭಾ ಸದಸ್ಯ ಹೆಚ್ ಹನುಮಂತಪ್ಪ ನಿಧನ
-
ದಿನದ ಸುದ್ದಿ3 days agoಕೆ.ಆರ್.ಐ.ಡಿ.ಎಲ್ ವ್ಯವಸ್ಥಾಪಕ ನಿರ್ದೇಶಕ ರಾಜೇಶ್ಗೌಡ ವಿರುದ್ಧ ಲೋಕಾಗೆ ದೂರು
-
ದಿನದ ಸುದ್ದಿ3 days agoಎಸ್.ಐ.ಆರ್ ಮತದಾರರ ಪಟ್ಟಿಯ ಡಿಜಿಟಲೀಕರಣ ಶೇ. 56 ರಷ್ಟು ಪೂರ್ಣ
-
ದಿನದ ಸುದ್ದಿ21 hours agoಸ್ಟಾರ್ ಹೆಲ್ತ್ ಉಚಿತ ವೈದ್ಯಕೀಯ ಸಲಹೆ


