Connect with us

ಅಂತರಂಗ

ಧರ್ಮ ಮರ್ಮ-02 : ದೈವಿಕತೆಯ ಸೃಷ್ಟಿ

Published

on

  • ಯೋಗೇಶ್ ಮಾಸ್ಟರ್

ನಾಸ್ತಿಕ ಧೋರಣೆಯ ಧರ್ಮಗಳಿದ್ದರೂ ಅದಕ್ಕಿಂತ ಪುರಾತನವಾದ ಧರ್ಮಗಳಲ್ಲಿ ದೇವರೇ ಧಾರ್ಮಿಕ ಕೇಂದ್ರ. ಅವನ ಶಕ್ತಿ, ಅವನ ಸೃಷ್ಟಿ, ಅವನ ಒಲವು, ಅವನ ನಿಲುವು, ಅವನ ಕೋಪ, ಕಟ್ಟಕಡೆಗೆ ಮನುಷ್ಯನ ಮೇಲೆ ಅವನ ಪ್ರಭಾವ ಮತ್ತು ನಿಯಂತ್ರಣವೇ ಧಾರ್ಮಿಕತೆಯ ಪ್ರಾರಂಭ. ಬೌದ್ಧ ಧರ್ಮವೂ ಸೇರಿದಂತೆ ಹಲವಾರು ನಿರೀಶ್ವರವಾದದ ಅಂದರೆ ದೇವರನ್ನು ಕೇಂದ್ರವಾಗಿಟ್ಟುಕೊಳ್ಳದ ಧರ್ಮಗಳಿವೆ.

ಆದರೆ ಧಾರ್ಮಿಕತೆ ಎಂದಕೂಡಲೇ ದೇವರನ್ನು ಕೇಂದ್ರವಾಗಿರಿಸಿಕೊಳ್ಳುವುದು ರೂಢಿಯಾಗಿದೆ. ಅಬ್ರಹಾಮನ ಧರ್ಮವೇ ಮೊದಲಾಗಿ 1844ರಲ್ಲಿ ಹುಟ್ಟಿರುವ ಬಹಾಯಿಯವರೆಗೂ ಹಲವು ಧರ್ಮದವರೆಗೂ ದೇವರೇ ಕೇಂದ್ರ.

ಆದಿಮ ಕಾಲದಲ್ಲಿ ಯಾವ ಧರ್ಮಗಳೂ ಇರಲಿಲ್ಲ. ಬೇಟೆಯಾಡುತ್ತಿದ್ದ ಅಲೆಮಾರಿ ಗುಂಪುಗಳ, ಹಣ್ಣು ಕಾಯಿಗಳನ್ನು ಆಯುವ ಬುಡಕಟ್ಟುಗಳು, ನಂತರ ಕೃಷಿಯನ್ನು ಪ್ರಾರಂಭಿಸಿ ಮನುಷ್ಯ ನೆಲೆ ನಿಲ್ಲಲು ಪ್ರಾರಂಭಿಸಿದ ಮೇಲೂ ಧರ್ಮಗಳ ಕಲ್ಪನೆಗಳೇ ಇರಲಿಲ್ಲ. ಆದರೆ ದೇವರ ಪರಿಕಲ್ಪನೆ ಹುಟ್ಟಿತ್ತು. ಧರ್ಮಕ್ಕಿಂತ ದೇವರು ಹಳತು ಎಂಬುದು ನಿಜ.

ಧರ್ಮದ ಕೇಂದ್ರವನ್ನಾಗಿ ದೇವರನ್ನು ಹೊಂದಿದ್ದರೂ ದೇವರಿಗಾಗಿ ಧರ್ಮವು ಹುಟ್ಟಿದ್ದಲ್ಲ. ಈಗ ನಾವು ನೋಡುತ್ತಿರುವ ಎಲ್ಲಾ ಸ್ಥಾಪಿತ ಧರ್ಮಗಳೂ ಕೂಡ ಆಯಾ ಕಾಲದ ಸಾಮಾಜಿಕ ಮತ್ತು ಸಾಂಸ್ಕೃತಿಕ ಸಂಘರ್ಷಗಳ ಫಲವೇ ಆಗಿವೆ. ಹಿಂದೂ ಧರ್ಮ ಮಾತ್ರ ಈ ಪಟ್ಟಿಗೆ ಸೇರುವುದಿಲ್ಲ. ಏಕೆಂದರೆ ಹಿಂದೂ ಧರ್ಮವು ಸ್ಥಾಪಿತ ಧರ್ಮವಲ್ಲ. ಅದೊಂದು ವಿಕಸಿತ ಧರ್ಮ.

ಸಾಮಾಜಿಕ ಮತ್ತು ಸಾಂಸ್ಕೃತಿಕ ಬೆಳವಣಿಗೆಯ ಪ್ರಕ್ರಿಯೆಯಲ್ಲಿ ವಿಕಾಸವಾಗುತ್ತಾ ಬಂದ ಜೀವನ ಪದ್ಧತಿಯು ಆಧ್ಯಾತ್ಮವೇ ಮೊದಲಾದ ಅನೇಕ ಅಂಶಗಳನ್ನು ತನ್ನದಾಗಿಸಿಕೊಂಡು ಧರ್ಮವೆಂದು ಕರೆಯಿಸಿಕೊಳ್ಳಲ್ಪಟ್ಟಿತು. ಇದರ ವಿಕಾಸದ ಪ್ರಕ್ರಿಯೆಯ ಬಗ್ಗೆ ಮುಂದೆ ವಿವರವಾಗಿ ನೋಡುತ್ತೇವೆ. ಈಗ ಸಧ್ಯಕ್ಕೆ ದೇವರ ಕಡೆ ತಿರುಗೋಣ.

ಆದಿ ದೇವರು

ಬೈಬಲ್ಲಿನ ಆದಿಕಾಂಡ ದೇವರು ತನ್ನ ರೂಪದಂತೆ ಪ್ರತಿರೂಪವಾಗಿ ಮನುಷ್ಯನನ್ನು ಸೃಷ್ಟಿ ಮಾಡಿದ ಎಂದು ಹೇಳುತ್ತದೆ. ಅದು ಬ್ಯಾಬಿಲೋನದ ಮಿಥಾಲಜಿಯಿಂದ ಎರವಲು ಪಡೆದಿರುವ ಕತೆ. ಅದೇನೇ ಇರಲಿ, ವಾಸ್ತವವೆಂದರೆ ಮನುಷ್ಯ ತನ್ನ ರೂಪದ ಪ್ರತಿರೂಪವಾಗಿ ದೇವರನ್ನು ಸೃಷ್ಟಿಸಿದ್ದು. ದೇವರು ಎನ್ನುವ ಪರಿಕಲ್ಪನೆಯೇ ಒಂದು ಬಗೆಯ ಭಾವುಕತೆಯಿಂದ ಅಥವಾ ಭಾವಾವೇಶದಿಂದ ಉಂಟಾಗಿರುವ ಮಾನವ ಸೃಷ್ಟಿಯೇ ಹೊರತು ಪ್ರಾಕೃತಿಕವಾಗಿಯಾಗಲಿ, ವೈಜ್ಞಾನಿಕವಾಗಿಯಾಗಲಿ ಎಂದಿಗೂ ಪ್ರಕಟಗೊಂಡಿರುವಂತಹ ಒಂದು ಪ್ರಾಯೋಗಿಕ ಸತ್ಯವೇನಲ್ಲ.

ಆದರೆ, ಯಾರಿಂದಲೇ ಆಗಲಿ, ಹೇಗೇ ಆಗಲಿ, ಆಗ ಸೃಷ್ಟಿಯಾದ ಈ ಪರಿಕಲ್ಪನೆಯು ಇಷ್ಟು ಬೃಹದ್ರೂಪ ತಾಳುವುದೆಂದು ಯಾರಿಗಾದರೂ ಕಲ್ಪನೆ ಇರಲಿಲ್ಲ. ಕೆಲವರಲ್ಲಿ ಅದೊಂದು ಮುಗ್ಧತೆಯ ಭಾವುಕ ಅಭಿವ್ಯಕ್ತತೆಯಾದರೆ ಮತ್ತೂ ಕೆಲವರಲ್ಲಿ ದಡ್ಡತನದ ವಿತಂಡವಾದದ ಪ್ರಕಟಣೆ ಮತ್ತು ಹಟಸಾಧನೆ.
ದೇವರೆಂಬ ಪರಿಕಲ್ಪನೆಯು ಹುಟ್ಟುವ ಮೂಲವೂ ಒಂದೇ ಏನು ಆಗಿರಲಿಲ್ಲ. ವಿವಿಧ ಸ್ಥಳಗಳಲ್ಲಿ, ವಿವಿಧ ಪ್ರೇರಣೆಗಳಿಂದ, ವಿವಿಧ ರೀತಿಯ ಅತಿಮಾನುಷವಾದಂತಹ ಪರಿಕಲ್ಪನೆಗಳಿಂದ ಮೊಳೆದವು.

ಪ್ರಕೃತಿಯ ವಿಸ್ಮಯಗಳಿಗೆ ಬೆರಗಾಗಿ, ಅಥವಾ ಪ್ರಕೃತಿಯ ರುದ್ರ ಸ್ವಭಾವಕ್ಕೆ ಹೆದರಿ ಅತಿಮಾನುಷಶಕ್ತಿಯೆಂದು ಗುರುತಿಸಿ ಹೆದರಿದರೆ ಅಥವಾ ಗೌರವಿಸಿದರೆ, ಸೃಷ್ಟಿಯಲ್ಲಿ ಹುಟ್ಟುವ ಪ್ರಕ್ರಿಯೆ ಮತ್ತು ಸಾಯುವ ಅನಿವಾರ್ಯತೆಗಳನ್ನು ಗಮನಿಸುತ್ತಾ ಅವುಗಳ ಬೇಧಿಸಲಾಗದ ರಹಸ್ಯಗಳನ್ನು ಅನುಸರಿಸಲು ಯತ್ನಿಸುತ್ತಾ ದೈವತ್ವದ ಪರಿಕಲ್ಪನೆಗೆ ತಗುಲಿಕೊಂಡರು.

ಕೆಲವೊಂದು ಸಂಸ್ಕೃತಿಗಳಲ್ಲಂತೂ ಸತ್ತ ಪಿತೃಗಳ ಆರಾಧನೆಯೇ ಕ್ರಮೇಣ ದೇವರ ಪರಿಕಲ್ಪನೆ ಗಟ್ಟಿಗೊಳ್ಳಲು ಸಾಧ್ಯವಾಯಿತು. ಅವುಗಳೆಲ್ಲಾ ನಂತರದ ದಿನಗಳಲ್ಲಿ ವಿವಿಧ ಸಂಸ್ಕೃತಿಗಳು ಪರಸ್ಪರ ಪರಿಚಯವಾದಂತೆಲ್ಲಾ ತಮ್ಮ ಪರಿಕಲ್ಪನೆಗೂ ಮತ್ತು ಇತರರ ಪರಿಕಲ್ಪನೆಗೂ ಸಾಮ್ಯತೆಗಳನ್ನು ಗುರುತಿಸಿಕೊಳ್ಳುತ್ತಾ ಅದನ್ನು ಏಕರೂಪದಲ್ಲಿ ಗ್ರಹಿಸಲಾರಂಭಿಸಿದರು. ಅದನ್ನೇ ಈಗ ನಾವು ಒಟ್ಟಾರೆ ದೇವರೆನ್ನಲು ಸಾಧ್ಯವಾಗುತ್ತಿದೆ.

ಆರ್ಯರಲ್ಲಿ ದೇವರ ಕಲ್ಪನೆಗಳ ಸಾಧ್ಯತೆ

ಅಲೆಮಾರಿಗಳಾಗಿದ್ದ ಆರ್ಯ ಬುಡಕಟ್ಟುಗಳು ಸ್ಥಳದಿಂದ ಸ್ಥಳಕ್ಕೆ ಚಲಿಸುವಾಗ ಅವರ ಮುಖ್ಯ ಗಮನಕ್ಕೆ ಮತ್ತು ಗೌರವಕ್ಕೆ ಬರುತ್ತಿದ್ದದ್ದು ಪ್ರಕೃತಿಯ ನೇರ ಕೊಡುಗೆಗಳು. ಭೂಮಿ, ಸೂರ್ಯ, ಚಂದ್ರ, ಗಾಳಿ, ನೀರು, ಅಗ್ನಿ ಇತ್ಯಾದಿ ಪ್ರಕೃತಿಯ ಕೊಡುಗೆಗಳ ಉಪಯುಕ್ತತೆಗೆ ಪ್ರಶಂಸಾರೂಪವಾಗಿ ಸ್ತುತಿಗಳನ್ನು ಮಾಡುತ್ತಾ, ಆರ್ಯ ಕವಿಗಳು ಅವುಗಳನ್ನು ಪ್ರತಿಮಾರೂಪದಲ್ಲಿಯೂ ಕೂಡ ಕಾಣುತ್ತಾ ಸಂವಹನ ನಡೆಸಲು ಯತ್ನಿಸಿದರು.

ಇವುಗಳೆಲ್ಲವೂ ರೂಪಕಗಳೇ ಹೊರತು, ಅವರಿಗೂ ಇವನ್ನು ಅದಕ್ಕಿಂತ ಹೆಚ್ಚಾಗಿ ಅರ್ಥೈಸಲು ಸಾಧ್ಯವಿರಲಿಲ್ಲ. ಅವರಿಗಿರುವ ಅನೇಕ ನಂಬುಗೆಗಳಂತೆ, ಆಕಾಶವೆಂಬುದು ಮೊಗಚಿ ಹಾಕಿದ ಬುಟ್ಟಿಯಂತೆ ಭೂಮಿಯ ಮೇಲಿದೆ, ಭೂಮಿಯು ಚಪ್ಪಟೆಯಾಗಿದೆ ಎಂದು ನಂಬುವಂತೆ, ಜೊತೆಗೆ ಪಿತು ಎಂಬ ಆಹಾರದ ದೇವನನ್ನು ಕಂಡುಕೊಂಡಿದ್ದಂತೆ, ಅನೇಕ ಇತರ ಅಗತ್ಯ ವಸ್ತುಗಳಿಗೆ ಮತ್ತು ಗುಣಗಳಿಗೆ ದೈವತ್ವವನ್ನು ಆರೋಪಿಸುತ್ತಿದ್ದದ್ದು ಗೌರವದಿಂದಲೇ ಹೊರತು, ಅದಕ್ಕೂ ತಮ್ಮಂತೆ ಮನಸ್ಸು, ಭಾವನೆ, ಕ್ರೋಧಾ, ಒಲವು ಇತ್ಯಾದಿ ಮಾನವ ರೀತಿಯ ಗುಣಗಳಿವೆ ಎಂತಲ್ಲ.

ಆದರೆ, ಆರ್ಯರು ಒಂದೆಡೆ ನೆಲೆ ನಿಲ್ಲಲು ಯತ್ನಿಸುತ್ತಿದ್ದಂತೆ, ಕೊಂಚ ಮಟ್ಟಿಗೆ ಅಲೆದಾಟದ ಪಾಡು ಕ್ಷೀಣಿಸುತ್ತಿದ್ದಂತೆ, ತಮ್ಮ ಪರಿಕಲ್ಪನೆಗಳನ್ನು ಮತ್ತಷ್ಟು ಬಲಗೊಳಿಸತೊಡಗಿದ್ದರು. ಯಾವುದೇ ಪರಿಕಲ್ಪನೆಯ ಜನಕರು ತಮಗಿಂತ ಬುದ್ಧಿಮತ್ತೆಯಲ್ಲಿ, ವೈಚಾರಿಕ ಶಕ್ತಿಯಲ್ಲಿ ಕಡಿಮೆಯಿರುವವರಿಗೆ ತಮ್ಮ ವಿಚಾರವನ್ನು ತಲುಪಿಸಲು ಹೋದಾಗ, ಅವರಿಗಾಗುವ ಅರ್ಥಗ್ರಹಣವಾಗಲಿ, ರಸಾನುಭವವಾಗಲಿ ಪೂರ್ಣವಾಗಿ ಆಗುವುದಿಲ್ಲ.

ತಮಗೆ ಅಷ್ಟು ಮೇದಾವಂತಿಕೆ ಇಲ್ಲವೆಂದು ಒಪ್ಪಿಕೊಳ್ಳುವ ಮುಗ್ಧರು ನೇರವಾಗಿ, ಅಕ್ಷರಶಃ ಬುದ್ಧಿವಂತರ ಅಥವಾ ಪರಿಕಲ್ಪನೆಯ ಹರಿಕಾರರ ವಿಷಯವನ್ನು ಒಪ್ಪಿಕೊಳ್ಳುತ್ತಾರೆ. ಅವರ ಸ್ವೀಕೃತಿಯು ಆ ಪರಿಕಲ್ಪನೆಯ ಸಾಕಾರಭಾವವನ್ನೇ ಹೊಂದಿರುತ್ತದೆ. ಅದಕ್ಕಿಂತ ಆಚೆಗೆ ಆಲೋಚಿಸಲು ಅವರಿಗೆ ಬಹುಶಃ ಸಾಧ್ಯವಿರುವುದಿಲ್ಲ. ಅಂಥ ಮುಗ್ಧರು ಒಂದು ಬಗೆಯಲ್ಲಿ ಇಂತಹ ಪರಿಕಲ್ಪನೆಗಳನ್ನು ಕೊಂಡೊಯ್ಯುತ್ತಿದ್ದರೆ, ಮೂರ್ಖರು ಅಥವಾ ಕಿಲಾಡಿ ಬುದ್ಧಿವಂತರು ಅದೇ ಪರಿಕಲ್ಪನೆಗಳನ್ನು ಮತ್ತೊಂದು ಬಗೆಯಲ್ಲಿ ಸಾಮಾನ್ಯರಲ್ಲಿ ಹರಡುವರು.

ಅದೇನೇ ಇರಲಿ, ಪ್ರಕೃತಿಯ ಅದ್ಭುತಗಳನ್ನು ಕಂಡ, ಅದರ ಅಪ್ರತಿಮವಾದ ವರದಾನಗಳನ್ನು ಮನಗಂಡ ಆರ್ಯ ದಾರ್ಶನಿಕರು ಮತ್ತು ಕವಿಗಳು ತಮ್ಮ ಕೃತಿಗಳಲ್ಲಿ ಅವನ್ನು ರೂಪಿಸಿದರು. ಈ ಎಲ್ಲಾ ಪ್ರಾಕೃತಿಕ ಅದ್ಭುತಗಳು ಶಕ್ತಿಗಳೆಂದೂ ಮತ್ತು ಶಕ್ತಿಗಳಿಂದ ಹೊರಡುವ ರಸಭಾವಗಳೆಂದೂ ಮನಗಂಡಿದ್ದರು. ಶಕ್ತಿಗಳ ಸ್ವರೂಪವನ್ನು ಮತ್ತು ರಸಗುಣವನ್ನು ಇತರೇ ವಸ್ತುಗಳಲ್ಲಿ ಅಥವಾ ವ್ಯಕ್ತಿಗಳಲ್ಲೂ ಹುಡುಕುವ ಅಥವಾ ಆಕಸ್ಮಿಕವಾಗಿ ಕಾಣುವ ಅಥವಾ ಗುರುತಿಸುವ ಶೋಧನೆಗಳೂ, ಜಿಜ್ಞಾಸುಪೂರ್ಣವಾದ ಅನ್ವೇಷಣೆಯನ್ನೂ ಮಾಡುತ್ತಿದ್ದರು.

ಆಗಲೇ ಅವರು ಕಂಡುಕೊಂಡ ಒಂದು ಅದ್ಭುತ ವಿಷಯವೆಂದರೆ, ವ್ಯಕ್ತಿಯಲ್ಲಿಯೂ ಒಂದು ಪ್ರಮಾಣದಲ್ಲಿ ಪ್ರಕೃತಿಯ ಶಕ್ತಿಯು ಅಂಶವಿದ್ದು ಅಥವಾ ಗ್ರಹಿಕೆಯಿದ್ದು, ಅವು ಕಾಲದೊಂದಿಗೆ ಹೆಚ್ಚುವುದು, ಅಥವಾ ಗಮನಿಸುವಂತಹ (ಧ್ಯಾನ) ಕ್ರಿಯೆಯಿಂದ ಅವುಗಳ ಗುಣಶಕ್ತಿಯು ಪ್ರಕಟವಾಗುವುದು ಎಂಬುದು. ಈ ಅರಿವೇ ವ್ಯಕ್ತಿಯನ್ನು ದೇವರನ್ನಾಗಿಸುವ ಪ್ರಕ್ರಿಯೆಗೆ, ಯೋಗ, ಧಾರಣ ಇತ್ಯಾದಿಗಳಾದ ತಂತ್ರ ಸಾಧನೆಗಳಿಗೂ ಪ್ರೇರಣೆಯಾಯಿತು.

ರಸವಿದ್ಯೆ ಮತ್ತು ದೇವವಿದ್ಯೆ

ಸಾಧಾರಣವಾದ ಲೋಹವನ್ನು ಚಿನ್ನವನ್ನಾಗಿಸುವ ರಸವಿದ್ಯೆಯನ್ನು ನೆನೆಪಿಸಿಕೊಂಡರೆ, ಮನುಷ್ಯನಿಗೂ ಅವನಿಗಿರುವ ಗುಣಶಕ್ತಿಯನ್ನು ಆಧರಿಸಿ ದೈವತ್ವಕ್ಕೇರಿಸುವ ಪ್ರಕ್ರಿಯೆ ಅಥವಾ ಆ ಬಗೆಯ ಆಲೋಚನೆಗಳು, ಪರಿಕಲ್ಪನೆಗಳು ಅರ್ಥವಾಗುತ್ತದೆ.

ಇದೇ ಮುಂದುವರಿದಂತೆ ತನ್ನನ್ನು ತಾನು ಹಾಗೆ ಪ್ರಕೃತಿಯ ಶಕ್ತಿಗಳಿಗೆ ಗುರುತಿಸಿಕೊಂಡವನು ಅಥವಾ ಗುರುತಿಸಲ್ಪಟ್ಟಂತಹ ಮಾನವನು ವಿಶೇಷವೆಂದು ಮಾನ್ಯವಾಗಿದ್ದೇ ಅಲ್ಲದೇ ಅವನ ವೈಯಕ್ತಿಕ ಗುಣಸ್ವಾಭಾವಗಳ ಮುಖೇನ ಇತರರೊಂದಿಗೆ ವ್ಯವಹರಿಸಬಹುದಾದ ಸಂಗತಿಗಳನ್ನು ಸಾಕ್ಷೀಕರಿಸಿದವರು ಅವನ್ನೂ ದಾಖಲು ಮಾಡತೊಡಗಿರುವ ಸಾಧ್ಯತೆಗಳು ಉಂಟು. ಹಾಗೆಯೇ ಅಲ್ಪಪ್ರಮಾಣಗಳಲ್ಲಿ ಗುರುತಿಸಲ್ಪಟ್ಟ ಅಂತಹ ಗುಣಸ್ವಭಾವಗಳು ಮತ್ತಷ್ಟು ಶಕ್ತಿಶಾಲಿಯಾಗಲೆಂದು ಯಾಗ ಯಜ್ಞ, ಮಂತ್ರ-ತಂತ್ರಗಳ ಮೂಲಕ ಉದ್ದೀಪನಗೊಳಿಸುವ ಯತ್ನಗಳೂ ಕೂಡ ನಡೆಯತೊಡಗಿದವು.

ತಾಂತ್ರಿಕತೆಯಲ್ಲಿ ಶಕ್ತಿಯ ಉದ್ದೀಪನಕ್ಕೆ ಗಮನೀಯವಾದ ಸ್ಥಾನವಿದೆ. ಅಂತಹ ಸೈದ್ಧಾಂತಿಕ ವಿಚಾರಗಳಿಂದ ಮತ್ತು ತಾಂತ್ರಿಕ ಆಚರಣೆಗಳಿಂದ ಮುಂದೆ ಪುರೋಹಿತರು, ತಾವದನ್ನು ನಂಬಲಿ ಬಿಡಲಿ, ಇತರರ ಮೇಲೆ ಅತ್ಯಂತ ಪರಿಣಾಮಕಾರಿಯಾಗಿ ಬಳಸಿದರು.

ಆಚಾರಗಳು ವಿಚಾರಗಳನ್ನು ಗೌರವಿಸುವ ಸಂಕೇತಗಳಾಗಿ ಮುಂದುವರಿದವು. ಹಾಗೂ ನಂಬುಗೆಗಳು ಪರಿಕಲ್ಪನೆಗಳನ್ನು ನಿಜವಾಗಿಸುವ ಪ್ರಯತ್ನಗಳು ಅಥವಾ ಗೌರವಿಸುವ ಸಂಕೇತಗಳು. ಹಾಗಾಗಿ ಸೌಜನ್ಯದ ನೆಲೆಯಿಂದ ಒಪ್ಪಿಕೊಂಡಂತಹ ಅನೇಕ ವಿಚಾರಗಳು ಇಂದು ಬೃಹದಾಕಾರವಾಗಿ ಬೆಳೆದು ಮೂಲ ಭಾವನೆಗಳನ್ನೇ ಕದಡಿಬಿಟ್ಟಿವೆ.

ಆರ್ಯ ಮತ್ತು ದ್ರಾವಿಡ ದೇವರುಗಳು

ಭಾರತದಲ್ಲಿ ದ್ರಾವಿಡರೇ ಮೊದಲಾದ ಮೂಲನಿವಾಸಿಗಳು ಪ್ರಕೃತಿಯ ಆರಾಧಕರಾಗಿದ್ದು, ನಿಸರ್ಗದ ಮಕ್ಕಳಾಗಿದ್ದ ಅರಣ್ಯಕರು ಮತ್ತು ರೈತರು ಶವಸಂಸ್ಕಾರವನ್ನು ಭೂಮಿಯಲ್ಲಿ ಮಾಡುತ್ತಿದ್ದರು. ಅವರ ಮೃತ ಹಿರಿಯರ ಅಥವಾ ಇತರರ ಮರಣಾನಂತರದ ಅತಿಭೌತಿಕ ಶಕ್ತಿಯನ್ನು ಕಲ್ಪಿಸಿಕೊಂಡವರು ತಮ್ಮ ಪಿತೃಗಳನ್ನು ಗೌರವಿಸುತ್ತಿದ್ದರು. ತಮ್ಮ ಮೇಲಿನ ಪ್ರೇಮ ಮತ್ತು ಅನುರಾಗ ಅಥವಾ ಸೆಳೆತದಿಂದಾಗಿ ಮೃತರು ದೈಹಿಕವಾಗಿ ದೂರಾದರೂ, ಭಾವನಾತ್ಮಕವಾಗಿ, ಮಾನಸಿಕವಾಗಿ, ಚೇತನಾರೂಪದಲ್ಲಿ ತಮ್ಮನ್ನು ಸಮೀಪಿಸುತ್ತಾರೆ ಅಥವಾ ತಮ್ಮೊಡನೆ ಇರುತ್ತಾರೆ ಎಂದು ನಂಬಲು ಭಾವನಾತ್ಮಕವಾದ ನಿಲುವೇ ಕಾರಣವಾಗಿತ್ತು.

ಹಾಗಾಗಿ ತಮ್ಮ ಪರಿಕಲ್ಪನೆಯ ದೈವಗಳಿಗೆ, ಶಕ್ತಿಗಳಿಗೆ ತಾವು ಕಂಡಿದ್ದ ಮೃತರ ಕೋಪ, ಒಲವು, ಆಸೆ, ಅಸೂಯೆ, ಅನುರಾಗ ಇತ್ಯಾದಿ ಗುಣಗಳನ್ನೂ ಆರೋಪಿಸುತ್ತಿದ್ದರು.

ದೇವರ ಬಗೆಗಿನ ದ್ರಾವಿಡರ ಮತ್ತು ಆರ್ಯರ ಎರಡೂ ಬಗೆಯ ಪರಿಕಲ್ಪನೆಗಳು ಸಂಸ್ಕೃತಿಗಳು ಮತ್ತು ಜೀವನ ಶೈಲಿಗಳು ವಿಲೀನವಾದ ರೀತಿಯಲ್ಲಿಯೇ ವಿಲೀನವಾಗಿ ಇಂದು ನಾವು ಕ್ರೋಧಾವಿಷ್ಟವಾಗಿ ಶಾಪ ಕೊಡುವ ದೇವರನ್ನೂ, ಸ್ತುತಿಗೆ ಒಲಿದು, ಒಲವಿಗೆ ಮಣಿದು ವರ ಕೊಡುವಂತಹ ದೇವರನ್ನೂ ಕಾಣುತ್ತಿದ್ದೇವೆ. ಆದರೆ ಆರ್ಯರ ಅಥವಾ ದ್ರಾವಿಡ ಪರಿಕಲ್ಪನೆಯ ದೇವರ ವಿಚಾರದಲ್ಲಿ ಗಮನಿಸುವಾಗ ಮೂಲದಲ್ಲಿ ಗೋಚರವಾಗುವುದು ಮಾನವಾತೀತವಾದ ‘ಚೈತನ್ಯ’ ಎಂಬ ಅರ್ಥೈಸುವಿಕೆ.

ಮಾನವಾತೀತವಾಗಿರುವ ಕಾರಣದಿಂದ ಮಾನವರೂಪಕ್ಕೆ ಇಳಿಯುವ ಸಾಧ್ಯತೆಯೂ ಕೂಡ ತೀರಾ ಸಹಜ. ಇರಲಿ, ಚೈತನ್ಯ ಎಂಬ ಅಂಶದ ಮುಖೇನ ನೋಡಿದರೆ, ದೇವರೆನ್ನುವ ಪರಿಕಲ್ಪನೆಯು ಶಾಪ ಕೊಡುವಷ್ಟು ಕ್ರೂರ ಕಲ್ಪನೆಯಿಂದಲೂ, ವರ ಕೊಡುವಷ್ಟು ಅಹಂಕಾರದ ಕಲ್ಪನೆಯಿಂದಲೂ ದೂರವಾಗುತ್ತದೆ. ವಾಸ್ತವವಾಗಿ ಅದು ಮನುಷ್ಯ ಸಹಜವಾದ ಮೋಹ, ಕ್ರೋಧಾದಿ ವಿಷಯಗಳಿಗೆ ಅತೀತವಾದ ನಿರ್ಮನಸ್ಸಿನ ಸ್ಥಿತಿ, ನಿರ್ಭಾವದ ಸ್ಥಿತಿಯಾದ ಪ್ರಕೃತಿಯ ಶಕ್ತಿಗೆ ತೆರೆದುಕೊಳ್ಳುತ್ತದೆ.
ಗಮನಿಸಿ, ಸೂರ್ಯನ ಬೆಳಕು ಪಸರಿಸುತ್ತದೆ. ಅದಕ್ಕೆ ಎಲ್ಲೆಲ್ಲಿ ಅವಕಾಶಗಳಿರುತ್ತದೆಯೋ ಅಲ್ಲೆಲ್ಲಾ ತನ್ನ ಕಿರಣಗಳನ್ನು ಬೀರುತ್ತದೆ.

ಅದಕ್ಕೆ ಇದು ಸುಂದರವಾದ ವಸ್ತು, ಇದನ್ನು ಚೆನ್ನಾಗಿ ಬೆಳಗಿಸಬೇಕೆಂದೋ ಅಥವಾ ಇದು ಕುರೂಪವಾದ ವಸ್ತು ಇದನ್ನು ಕಾಣಿಸುವುದು ಬೇಡವೆಂದೋ ಆಲೋಚನೆಗಳನ್ನು ಮಾಡದೇ ಅವಕಾಶಾನುಗುಣವಾಗಿ ತನ್ನ ಪ್ರಕಾಶವನ್ನು ಚೆಲ್ಲುತ್ತದೆ. ಹಾಗೆಯೇ ಮಳೆಯೂ ಕೂಡ ಸುಂದರವಾದ ಹೂಗಳನ್ನು ನೀಡುವ ಎಂದು ಹೂಗಿಡಗಳ ಮೇಲೆ ಮಾತ್ರ ಸುರಿದು, ಮುಳ್ಳುಗಳು ಇರುವಂತಹ ಗಿಡಗಳ ಮೇಲೆ ಸುರಿಯದೇ ಇರುವುದಿಲ್ಲ. ಅಂದರೆ, ಚೈತನ್ಯವೆನ್ನುವುದು ನಿಷ್ಪಕ್ಷಪಾತವಾದ, ನಿರ್ಭಾವುಕವಾದ, ನಿರ್ವ್ಯಾಮೋಹಿಯಾದ ಗುಣವೆನ್ನುವುದು ಸ್ಪಷ್ಟವಾಗುವುದು.

ಹಾಗಾದರೆ, ದೇವರೆಂಬ ಶಕ್ತಿ, ಚೈತನ್ಯಕ್ಕೆ ಶಾಪ ಕೊಡುವ, ವರ ಕೊಡುವ, ಮುನಿಯುವ, ಒಲಿಯುವ, ನಲಿಯುವ ಗುಣಗಳು ಹೇಗೆ ಬಂತೆಂದು ಮೇಲೆ ವಿಚಾರ ಮಾಡಿದ ರೀತಿಯನ್ನು ಗಮನಿಸಿದರೆ ತಿಳಿಯುವುದು.

ದೇವರು ಎಂದು ಹಿಂದೂ ಧರ್ಮದಲ್ಲಿ ಯಾರನ್ನೆಲ್ಲಾ ಕರೆಯುವರೋ ಹಾಗೆ ಹಿಂದೆ ವೈದಿಕರಲ್ಲೇ ಕರೆಯುತ್ತಿರಲಿಲ್ಲ. ಅವರ ದೇವರುಗಳೇ ಬೇರೆ ಇದ್ದರು. ಹಾಗೆಯೇ ಯಹೂದಿ, ಕ್ರೈಸ್ತ, ಇಸ್ಲಾಂ ರೀತಿಯ ಏಕದೇವೋಪಾಸನೆಯ ದೇವರು ಹಿಂದೂ ಧರ್ಮದ ದೇವರುಗಳ ರೀತಿಯಲ್ಲ. ಹಾಗಾಗಿ ಹಿಂದೂ ಧರ್ಮದಲ್ಲಿ ದೇವರುಗಳ ಕುರಿತಾಗಿ ಹಲವಾರು ಪೌರಾಣಿಕ ಕತೆಗಳಿರುತ್ತವೆ. ಆದರೆ ದೇವರನ್ನು ಮಾನವ ರೂಪದಲ್ಲಿ ನೋಡದ ಕ್ರೈಸ್ತ ಮತ್ತು ಇಸ್ಲಾಂ ಧರ್ಮದಂತಹ ಏಕ ದೇವೋಪಾಸನೆಯ ಧರ್ಮಗಳಲ್ಲಿ ದೇವರಿಗೆ ಮಡದಿ ಮಕ್ಕಳು ಸಂಸಾರಗಳು ಇರುವುದಿಲ್ಲ.

ಅವರಲ್ಲಿ ಮಿಥ್ ಇಲ್ಲವೆಂದೇನಿಲ್ಲ. ಅಗಾಧವಾಗಿಯೇ ಇವೆ. ಆದರೆ ಈ ಮಾದರಿಯದಲ್ಲ. ಯೆಹೂದರ ದೇವರಿಗೂ ಹಿಂದೂ ಧರ್ಮದ ದೇವರಿಗೆ ಬಂದಂತೆ ಕೋಪ ಬರುತ್ತದೆ, ಖುಷಿಯಾಗುತ್ತದೆ. ಆದರೆ ಹೆಂಡತಿ ಮಕ್ಕಳು ಇರುವುದಿಲ್ಲ ಅಷ್ಟೇ. ದೇವರ ಪ್ರೊಜೆಕ್ಷನ್ ಬೇರೆ ರೀತಿಯದ್ದಾಗಿರುತ್ತದೆ. ಏನೇ ಆಗಲಿ, ಧರ್ಮವನ್ನು ತಿಳಿಯಬೇಕಾದರೆ ದೇವರ ಉಗಮದ ಬಗ್ಗೆ ಕಿಂಚಿತ್ತು ಪರಿಚಯ ಇರಬೇಕು.

(ಮುಂದುವರಿಯುತ್ತದೆ)

ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂಕಣ

ಇತಿಹಾಸ ಕಥನಶಾಸ್ತ್ರ: ಅಂಬೇಡ್ಕರ್ ಅವರ ಚಿಂತನೆಯ ಹಾದಿ

Published

on

~ಮೇಟಿ ಮಲ್ಲಿಕಾರ್ಜುನ, ಪ್ರಾಧ್ಯಾಪಕರು, ಸಹ್ಯಾದ್ರಿ ಕಾಲೇಜು, ಶಿವಮೊಗ್ಗ

ಅಂಬೇಡ್ಕರ್ ಅವರು ಭಾರತದ ಚರಿತ್ರೆಗಳ ರಚನೆಗೆ ಪ್ರಾಯೋಗಿಕ ಉಪಕರಣಗಳನ್ನು (ಎಂಪರಿಕಲ್ ಟೂಲ್ಸ್) ಬಳಸಿರುತ್ತಾರೆ. ಆದರೆ ಈ ಎಲ್ಲ ಉಪಕರಣಗಳು ಕೇವಲ ಚರಿತ್ರೆಯ ರಚನೆಗೆ ಮಾತ್ರ ಕಾರಣವಾಗದೆ, ಸಮೂಹಗಳ ಸಾಮಾಜಿಕ-ರಾಜಕೀಯ ಸಮಾನತೆ, ಸ್ವಾಯತ್ತತೆಯನ್ನೂ ಕಲ್ಪಿಸುವುದಕ್ಕೂ ಬದ್ಧವಾಗಿರುತ್ತವೆ. ಆರ್ಥಿಕತೆಯ ನಿಲುವುಗಳ ಮೂಲಕ ಭಾರತದ ಚರಿತ್ರೆಯನ್ನು ವ್ಯಾಖ್ಯಾನಿಸುವ ಕ್ರಮಗಳನ್ನು ಅಂಬೇಡ್ಕರ್ ಅವರು ಅತ್ಯಂತ ಕಟುವಾಗಿಯೇ ವಿಮರ್ಶಿಸುತ್ತಾರೆ.

ಸಮಾಜವಾದಿಗಳು ಮತ್ತು ಮಾರ್ಕ್ಸ್ವಾದಿಗಳು ಆರ್ಥಿಕತೆಯ ನೆಲೆಯಿಂದ ಭಾರತದಲ್ಲಿ ಚರಿತ್ರೆಗಳನ್ನು ನಿರ್ವಚಿಸುವ ಪ್ರಯತ್ನವನ್ನು ಮಾಡಿರುತ್ತಾರೆ ಎನ್ನುವುದನ್ನು ಇಲ್ಲಿ ಗಮನಿಸಬಹುದು. ಭಾರತದ ಚರಿತ್ರೆಗಳಲ್ಲಿ ದಾಖಲಾಗಿರುವ ಯಾವುದೇ ರಾಜಕೀಯ ಕ್ರಾಂತಿ/ಹೋರಾಟಗಳು ಯಾವಾಗಲೂ ಸಾಮಾಜಿಕ-ಧಾರ್ಮಿಕ ಕ್ರಾಂತಿಗಳಿಂದ ಮಾತ್ರ ಕೂಡಿರುವುದನ್ನೂ ಅಂಬೇಡ್ಕರ್ ಅವರು ಇಲ್ಲಿ ಗುರುತಿಸುತ್ತಾರೆ. ಭಾರತದಲ್ಲಿ ಅಷ್ಟೆಯಲ್ಲ, ಅಮೆರಿಕ, ಯುರೋಪ್, ಅರೇಬಿಯಾ ದೇಶಗಳಲ್ಲಿಯೂ ಇದೇ ಬಗೆಯ ಚರಿತ್ರೆಯ ನಿರ್ಮಾಣವು ನಡೆದಿರುವುದನ್ನು ನೋಡುತ್ತೇವೆ. ಮತ್ತು ಶಿವಾಜಿ, ಚಂದ್ರಗುಪ್ತ ಮೌರ್ಯ, ಸಿಖ್ ರಾಜ್ಯಗಳ ರಾಜರುಗಳಿಂದ ಕೈಗೊಳ್ಳಲಾದ ರಾಜಕೀಯ ಕ್ರಾಂತಿಗಳು, ಬುದ್ಧ, ಗುರು ನಾನಕ್ ಹಾಗೂ ಇತರ ಸಾಧು ಸಂತರ ಸಾಮಾಜಿಕ, ಧಾರ್ಮಿಕ ಚಳವಳಿಗಳ ಮೂಲಕ ಕಂಡಿರುತ್ತೇವೆ.

ಆದರೆ ಪರಿಣಾಮಗಳಲ್ಲಿ ಅಗಾಧವಾದ ವ್ಯತ್ಯಾಸಗಳನ್ನೂ ನಾವು ಇವತ್ತು ಕಾಣುತ್ತೇವೆ ಹಾಗೂ ಭಾರತದ ಚರಿತ್ರೆಗಳನ್ನು ಕುರಿತು ಬ್ರಿಟಿಶರು ತಾಳಿರುವ ಧೋರಣೆಗಳು ಅತ್ಯಂತ ದೋಷಪೂರಿತ ನೆಲೆಗಳಿಂದ ಕೂಡಿದ್ದವು ಎಂಬುದನ್ನು ಅಂಬೇಡ್ಕರ್ ಅವರು ಅತ್ಯಂತ ಬಲವಾಗಿ ನಂಬಿದ್ದರು. ಮತ್ತು ಅವುಗಳನ್ನು ಬಿಡಿಸಿ ತೋರಿಸುವುದಕ್ಕೆ ಬೇಕಾದ ಪರಿಕರಗಳನ್ನೂ ತಮ್ಮ ಅಧ್ಯಯನಗಳ ಮೂಲಕ ರೂಪಿಸಿರುತ್ತಾರೆ.

ಭಿನ್ನ ಸಂವೇದನೆಯ ಮೂಲಕ ಭಾರತವನ್ನು ಗ್ರಹಿಸಿದ ಅಂಬೇಡ್ಕರ್ ಚಿಂತನೆಗಳು ಹಾಗೂ ಸಾಮಾಜಿಕವಾಗಿ ಅತ್ಯಂತ ಸೂಕ್ಷ್ಮ ನಿಲುವುಗಳಾಗಿ ಯಾವತ್ತಿಗೂ ಚರ್ಚೆಗೆ ಒಳಪಡುತ್ತಿರುವ ‘ಅಲ್ಪಸಂಖ್ಯಾತರು’ ‘ಲಿಂಗ’ ಹಾಗೂ ‘ಜಾತಿ’ಗಳ ನಡುವೆ ಒಂದು ಬಗೆಯ ತಾರ್ಕಿಕ ನಂಟನ್ನು ಏರ್ಪಡಿಸಬಹುದು. ರಾಷ್ಟ್ರೀಯತೆಯ ಜೊತೆಗೆ ಅಲ್ಪಸಂಖ್ಯಾತರು, ಲಿಂಗ ಹಾಗೂ ಜಾತಿಯ ವಿನ್ಯಾಸಗಳನ್ನು ಇಟ್ಟು ನೋಡಿದರೆ, ರಾಷ್ಟ್ರೀಯತೆ ಎನ್ನುವುದು ಕೇವಲ ಏಕಾಕೃತಿಯ ನೆಲೆಯನ್ನಾಗಿ ಬಿಂಬಿಸಲಾಗುತ್ತದೆ. ಇಂತಹ ಏಕಾಕೃತಿ ನಿಲುವುಗಳನ್ನು ಭಗ್ನ ಮಾಡುವ ಅತ್ಯಂತ ಪ್ರಖರವಾದ ಚಿಂತನೆಗಳನ್ನು, ಅಲ್ಪಸಂಖ್ಯಾತ, ಲಿಂಗ, ಜಾತಿ ಮತ್ತು ಧರ್ಮಗಳ ವಿನ್ಯಾಸಗಳನ್ನು ನೆಲೆಯಾಗಿಸಿಕೊಂಡು ಅಂಬೇಡ್ಕರ್ ಅವರು ಚಿಂತಿಸಿರುತ್ತಾರೆ. ಹಾಗೂ ಈ ಚಿಂತನೆಗಳ ಮುಖೇನವೇ ಸಾಂಸ್ಕೃತಿಕ-ಚಾರಿತ್ರಿಕ ಬಹುಳತೆಯನ್ನು ಕಂಡರಿಸುವ ದಾರಿಗಳನ್ನೂ ಅವರ ಚಿಂತನೆಗಳಲ್ಲಿ ಕಾಣಬಹುದಾಗಿದೆ.

ಅಂದರೆ ಅಂಬೇಡ್ಕರ್ ಅವರ ಸೈದ್ಧಾಂತಿಕ ತಿಳಿವಿನ ಚೌಕಟ್ಟನ್ನು ಅರಿಯಬೇಕೆಂದರೆ, ಅವರು ಫ್ರೆಂಚ್ ಕ್ರಾಂತಿಯಿಂದ ಎರವಲು ಪಡೆದಿರುವ ಸಾಮಾಜಿಕ-ರಾಜಕೀಯ ‘ತ್ರಿಕೂಟ’ (ಟ್ರಿನಿಟಿ) ಪರಿಕಲ್ಪನೆಗಳನ್ನು ಇಲ್ಲಿ ನಾವು ಪರಿಗಣನೆಗೆ ತೆಗೆದುಕೊಳ್ಳುವ ಅಗತ್ಯವಿದೆ. ‘ಸ್ವಾತಂತ್ರ್ಯ, ಸಮಾನತೆ ಹಾಗೂ ಸಹೋದರತ್ವ’ ಎಂಬುದಾಗಿ ಈ ತ್ರಿಕೂಟ ಪರಿಕಲ್ಪನೆಗಳನ್ನು ಗುರುತಿಸಬಹುದು.

ಫ್ರೆಂಚ್ ಕ್ರಾಂತಿಯ ನಿಲುವುಗಳನ್ನು ಕುರುಡಾಗಿ ಅನುಕರಿಸುವುದಾಗಲೀ ಇಲ್ಲವೇ ಆ ಕ್ರಾಂತಿಯ ನಿಲುವುಗಳನ್ನು ಯಥಾವತ್ತಾಗಿ ಪಾಲಿಸುವುದಾಗಲೀ ಅಂಬೇಡ್ಕರ್ ಅವರ ಉದ್ದೇಶವಾಗಿರಲಿಲ್ಲ. ಆದರೆ ಈ ಕ್ರಾಂತಿಯಿಂದ ಪ್ರೇರಣೆಯನ್ನು ಮಾತ್ರ ಪಡೆದುಕೊಂಡಿರುತ್ತಾರೆ. ಅಂಬೇಡ್ಕರ್ ಅವರು ಈ ತ್ರಿಕೂಟ ಪರಿಕಲ್ಪನೆಗಳನ್ನು ಮರುಪರೀಕ್ಷಿಸುವುದು ಅಷ್ಟೆಯಲ್ಲದೆ ಅವುಗಳನ್ನು ಮರು ವಿನ್ಯಾಸಗೊಳಿಸಿರುವುದನ್ನೂ ಇಲ್ಲಿ ನೋಡಬಹುದು. ಅಂದರೆ, ಫ್ರೆಂಚ್ ಕ್ರಾಂತಿಯ ಸನ್ನಿವೇಶಕ್ಕಿಂತ ಮಿಗಿಲಾದ ಸಾಮಾಜಿಕ-ಸಾಂಸ್ಕೃತಿಕ ಆಯಾಮ ಮತ್ತು ಅರ್ಥಗಳನ್ನು ಅಂಬೇಡ್ಕರ್ ಅವರು ಈ ಪರಿಕಲ್ಪನೆಗಳಿಗೆ ಕೊಟ್ಟಿರುತ್ತಾರೆ.

ಜಾತಿಕೇಂದ್ರಿತವಾದ ಭಾರತ ದೇಶವು ವರ್ಗಕೇಂದ್ರಿತವಾದ ಫ್ರೆಂಚ್ ದೇಶಕ್ಕಿಂತ ಸಹಜವಾಗಿಯೇ ಭಿನ್ನವಾಗಿದೆ. ಈ ಸಾಮಾಜಿಕ ವಿನ್ಯಾಸಕ್ಕೆ ಅನುಗುಣವಾಗಿಯೇ ಅಂಬೇಡ್ಕರ್ ಅವರು ಈ ತ್ರಿಕೂಟ ಪರಿಕಲ್ಪನೆಗಳ ತಾತ್ವಿಕತೆಯನ್ನು ರೂಪಿಸಿರುತ್ತಾರೆ. ಸಮೂಹಗಳ ಒಳ್ಳೆಯ ಬದುಕಿಗೆ ಈ ತ್ರಿಕೂಟಗಳು ಅತ್ಯಂತ ಅವಶ್ಯವೆಂಬುದನ್ನು ಅಂಬೇಡ್ಕರ್ ಅವರು ಮನಗಂಡಿದ್ದರು (ರೊಡ್ರಿಗಸ್, 2002). ಚರಿತ್ರೆಯ ನಿರ್ಮಾಣದಲ್ಲಿ ಹಾಗೂ ಸಾಮಾಜಿಕ ಬದುಕುಗಳನ್ನು ಕಟ್ಟಿಕೊಳ್ಳುವಲ್ಲಿ ಈ ಸಮಾನತೆ, ಸ್ವಾತಂತ್ರ್ಯ ಹಾಗೂ ಸಹೋದರತ್ವವು ಎಷ್ಟೊಂದು ಮಹತ್ವದ ಪಾತ್ರವನ್ನು ವಹಿಸಬಲ್ಲವು ಎನ್ನುವುದನ್ನು ಅಂಬೇಡ್ಕರ್ ಅವರು ಮನಗಂಡಿದ್ದರು.

ಅಂಬೇಡ್ಕರ್ ಅವರು ಗಾಂಧಿ ಮತ್ತು ಕಾಂಗ್ರೇಸ್ ಸಂಘಟನೆಯನ್ನು ಕುರಿತು ‘ವ್ಹಾಟ್ ಗಾಂಧಿ ಆ್ಯಂಡ್ ಕಾಂಗ್ರೇಸ್ ಹ್ಯಾವ್ ಡನ್ ಟು ದ ಅನ್ಟಚೇಬಲ್ಸ್’ ಎಂಬ ಬರಹದಲ್ಲಿ ಸಮೂಹಗಳ ಏಳ್ಗೆಯ ನೆಲೆಯಿಂದ ವಿಶ್ಲೇಷಣೆ ಮಾಡಿರುತ್ತಾರೆ. ಅಂದರೆ ಸ್ವಾತಂತ್ರ್ಯ, ಸಮಾನತೆ ಮತ್ತು ಸಹೋದರತ್ವದಂತಹ ತ್ರಿಕೂಟ ಕಲ್ಪನೆಗಳು ಸಮೂಹಗಳ ಅಸ್ತಿತ್ವ, ಅಸ್ಮಿತೆ ಹಾಗೂ ಪ್ರಜ್ಞೆಯನ್ನು ಕುರಿತು ಮಾತ್ನಾಡಿದರೆ, ಕಾಂಗ್ರೆಸ್ ಸಂಘಟನೆಯು ರಾಷ್ಟ್ರೀಯತೆಯ ಕಲ್ಪನೆಯ ಬಗೆಗೆ ಮಾತ್ರ ಹೆಚ್ಚು ಕಾಳಜಿಯನ್ನು ವಹಿಸಿರುವುದನ್ನು ಇಲ್ಲಿ ನೋಡುತ್ತೇವೆ. ಆದರೆ ಗಾಂಧೀಜಿಯವರು ಸಾಂಪ್ರದಾಯಿಕ ರಾಷ್ಟ್ರೀಯತೆಯನ್ನು ಕುರಿತು ಯೋಚಿಸಿದರೆ, ನೆಹರೂ ಅವರು ಸಮಾಜವಾದದ ನೆಲೆಯಿಂದ ರಾಷ್ಟ್ರೀಯತೆಯ ಪ್ರಜ್ಞೆಯನ್ನು ರೂಪಿಸುವ ತುಡಿತವನ್ನು ಹೊಂದಿದ್ದರು. ಒಟ್ಟಾರೆ ರಾಷ್ಟ್ರೀಯತೆ ಬಗೆಗಿನ ನಿಲುವುಗಳಲ್ಲಿ ಬಹುಸಮಾಜಗಳು ಎದುರಿಸುವ ಸಾಮಾಜಿಕ-ರಾಜಕೀಯ ಬಿಕ್ಕಟ್ಟುಗಳು ಮಹತ್ವವನ್ನು ಪಡೆಯದೆ, ಕೇವಲ ರಾಷ್ಟ್ರ ಮತ್ತು ರಾಷ್ಟ್ರೀಯತೆಯ ಕುರಿತಾದ ಮೌಲ್ಯಗಳು ಮಾತ್ರ ಮುಂಚೂಣಿಗೆ ಬರುತ್ತವೆ.

ಹಾಗಾಗಿ ಭಾರತದ ಚರಿತ್ರೆಗಳಲ್ಲಿ ರಾಷ್ಟ್ರ, ರಾಷ್ಟ್ರ ಪ್ರಭುತ್ವ ಹಾಗೂ ರಾಷ್ಟ್ರೀಯತೆಗಳ ಮಹತ್ವ ಮತ್ತು ಹಿರಿಮೆಯ ಬಗೆಗಿರುವ ಕಾಳಜಿಗಳು, ಸಾಮಾಜಿಕ ಚರಿತ್ರೆಯನ್ನು ಬಿಂಬಿಸುವಲ್ಲಿ ಗೈರು ಆಗಿರುತ್ತವೆ. ಅಂಬೇಡ್ಕರ್ ಅವರು ಇಂತಹ ಚಾರಿತ್ರಿಕ ಲೋಪಗಳನ್ನು ಗುರುತಿಸುವ ಜೊತೆಗೆ, ರಾಜಕೀಯ ಪ್ರೇರಿತವಾದ ಚರಿತ್ರೆಗಳಿಗಿಂತ, ಸಾಮಾಜಿಕ ನೆಲೆಗಳಿಂದ ಚರಿತ್ರೆಯನ್ನು ಬರೆಯುವುದು ಎಷ್ಟೊಂದು ಮಹತ್ವದ ಕೆಲಸವೆಂಬುದನ್ನೂ ಮನಗಾಣಿಸಿದ್ದಾರೆ. ಸಾಮಾಜಿಕ ಚರಿತ್ರೆಗಳನ್ನು ಕಡೆಗಣಿಸಿ ರಾಷ್ಟ್ರೀಯತೆಯ ಕಲ್ಪನೆಯನ್ನು ಊಹಿಸುವುದು ಕೂಡ ದುಸ್ತರದ ಸಂಗತಿಯೆಂಬುದನ್ನು ಅಂಬೇಡ್ಕರ್ ಅವರು ಚಿಂತನೆಗಳು ನಮಗೆ ಮನವರಿಕೆ ಮಾಡುತ್ತವೆ. ಈ ಕಾರಣಗಳಿಂದ ‘ಚರಿತ್ರೆಯನ್ನು ಮರೆತವರು ಚರಿತ್ರೆಯನ್ನು ಸೃಷ್ಟಿಸಲಾರರು’ ಎಂಬ ನಿಲುವನ್ನು ಅತ್ಯಂತ ಬಲವಾಗಿಯೇ ಅಂಬೇಡ್ಕರ್ ಅವರು ನಂಬಿರುತ್ತಾರೆ ಎಂಬುದು ಅತ್ಯಂತ ಗಮನಾರ್ಹ ಸಂಗತಿ.

ಚರಿತ್ರೆ ಎಂಬುದು ಒಂದು ಕನಸಾಗಲೀ ಇಲ್ಲವೇ ಭ್ರಮೆಯಾಗಲೀ ಅಲ್ಲ ಹಾಗೂ ಚರಿತ್ರೆಯೆಂಬುದು ಒಂದು ನಿರ್ವಾತವೂ ಅಲ್ಲ ಮತ್ತು ತೆರಪುಗಳನ್ನು ತುಂಬುವ ಪ್ರಕ್ರಿಯೆಯೂ ಅಲ್ಲ. ಬದಲಾಗಿ ಅದೊಂದು ಸಾಮಾಜಿಕ-ಸಾಂಸ್ಕೃತಿಕ-ರಾಜಕೀಯ ಗ್ರಹಿಕೆ ಮತ್ತು ಜ್ಞಾನಶಿಸ್ತು ಆಗಿರುತ್ತದೆ. ಜ್ಞಾನಶಿಸ್ತುಗಳು ಮತ್ತು ಗ್ರಹಿಕೆಗಳು ಸಮೂಹ ಕೇಂದ್ರಿತವಾಗಿರುಬೇಕೆ ಹೊರತು ಕೇವಲ ರಾಜಕೀಯ-ಸಾಮಾಜಿಕ ಪ್ರಾಬಲ್ಯವನ್ನು ಹೊಂದಿರುವ ವ್ಯಕ್ತಿಗಳ ಇಲ್ಲವೇ ಆಳುವ ವರ್ಗಗಳನ್ನು ಮಾತ್ರ ಪ್ರತಿನಿಧಿಸುವ ವಿನ್ಯಾಸಗಳಾಗಿ ಇವುಗಳು ಇರಲಾರವು. ಚರಿತ್ರೆಯೂ ಒಂದು ಜ್ಞಾನಶಿಸ್ತೇ ಆಗಿರುವುದರಿಂದ, ಇದು ಬಹುಸಮೂಹಗಳನ್ನು ಪ್ರತಿನಿಧಿಸುವ ವಿನ್ಯಾಸವಾಗಬೇಕು ಎಂಬ ಅಚಲವಾದ ನಿಲುವನ್ನು ಅಂಬೇಡ್ಕರ್ ಅವರು ತಾಳಿದ್ದರು. ಯಾವುದೇ ಗ್ರಹಿಕೆಯು ಸಮೂಹ ಕೇಂದ್ರಿತವಾಗಿರುತ್ತದೆ ಎನ್ನುವ ನಿಲುವಿನಲ್ಲಿ ಅಂಬೇಡ್ಕರ್ ಅವರಿಗೆ ತಾತ್ವಿಕ ಹಾಗೂ ವೈಯಕ್ತಿಕವಾಗಿ ಅಪಾರವಾದ ನಂಬಿಕೆಯಿತ್ತು.

ಹಾಗಾಗಿ ಅಂಬೇಡ್ಕರ್ ಅವರು ನಿನ್ನೆಗಳನ್ನು ಕುರಿತಾದ ತಾತ್ವಿಕ ಪ್ರಶ್ನೆಗಳನ್ನು ಮೈಮೇಲೆ ಎಳೆದುಕೊಂಡು, ಅವುಗಳಿಗೆ ಉತ್ತರಗಳನ್ನು ಹುಡುಕುವ ಪ್ರಯತ್ನವನ್ನು ಮಾಡಿರುತ್ತಾರೆ. ನಿನ್ನೆಗಳು ತಮ್ಮ ಹಕ್ಕುಗಳೆಂದು ಯಾರು ವಾದಿಸುವವರೋ ಅವರೆಲ್ಲರಿಗೂ, ವರ್ತಮಾನದಲ್ಲಿ ಉಂಟಾಗಿರುವ ಬಿಕ್ಕಟ್ಟುಗಳಿಗೆ ಈ ನಿನ್ನೆಗಳು ಹೇಗೆ ಹೊಣೆಯಾಗಿವೆ ಎಂಬ ದಿಟವನ್ನು ಅರಿಯುವುದಕ್ಕೆ ಬೇಕಾದ ವಿಶ್ಲೇಷಣೆಗಳನ್ನು ಇವರು ಮಾಡಿರುತ್ತಾರೆ. ಅಂಬೇಡ್ಕರ್ ಅವರ ಈ ಹಾದಿಯು ಎಲ್ಲರಿಗೂ ಒಪ್ಪಿತವಾಗುವ ಸತ್ಯವನ್ನು ಹೇಳುವುದಲ್ಲ. ಬದಲಾಗಿ, ಎಲ್ಲ ಸಮೂಹಗಳ ಇವತ್ತಿನ ಬದುಕಿಗೆ ಅಗತ್ಯವಾಗಿರುವ ಹಾದಿಗಳನ್ನು ರೂಪಿಸುವುದಾಗಿತ್ತು. ಆದ್ದರಿಂದ, ಸದ್ಯದ ಚರಿತ್ರೆ, ಸಾಹಿತ್ಯ, ಸಂಸ್ಕೃತಿ, ಆರ್ಥಿಕತೆ ಹಾಗೂ ರಾಜಕಾರಣವನ್ನು ವಿಶ್ಲೇಷಿಸುವುದಕ್ಕೆ ಅಂಬೇಡ್ಕರ್ ಅವರು ರೂಪಿಸಿದ ಈ ತಾತ್ವಿಕ ವಿನ್ಯಾಸಗಳು ಅತ್ಯಂತ ಸಮರ್ಪಕವಾಗಿರುತ್ತವೆ. ಇವರ ಈ ತಾತ್ವಿಕ ವಿನ್ಯಾಸಗಳಲ್ಲಿ ಅನ್ಯ ಪ್ರಭಾವಕ್ಕಿಂತ ಪ್ರೇರಣೆಗಳನ್ನು ಮಾತ್ರ ನಾವು ಕಾಣುತ್ತೇವೆ. ಆದ್ದರಿಂದ ಅಂಬೇಡ್ಕರ್ ಅವರು ರೂಪಿಸಿದ ಮರುರಚನೆಯ (ರೀಕನ್ಸ್ಟ್ರಕ್ಸನ್) ಮಾದರಿಗಳು ಕೇವಲ ತೆರಪುಗಳನ್ನು ತುಂಬುವ ರಚನೆಗಳಾಗದೆ, ವರ್ತಮಾನದ ಬಿಕ್ಕಟ್ಟುಗಳಿಗೆ ಇವುಗಳು ಹೇಗೆ ಕಾರಣವಾಗಿರುತ್ತವೆ ಹಾಗೂ ಇವುಗಳಿಗೆ ಉತ್ತರಗಳನ್ನು ಕಂಡುಕೊಳ್ಳುವ ಬಗೆಗಳಾವುವು ಎಂಬೆಲ್ಲ ಸಂಗತಿಗಳನ್ನು ಕುರಿತು ಅತ್ಯಂತ ವಸ್ತುನಿಷ್ಠ ವಿಶ್ಲೇಷಣೆಗಳನ್ನು ತಮ್ಮ ಬರಹಗಳಲ್ಲಿ ಮಾಡಿರುತ್ತಾರೆ.

ಅಂಬೇಡ್ಕರ್ ಅವರಿಗಿಂತ ಮೊದಲು ಇಂತಹದೊಂದು ನೋಟಕ್ರಮಕ್ಕೆ ಚಾಲನೆಯನ್ನು ಕೊಟ್ಟವರು ಜ್ಯೋತಿರಾವ್ ಫುಲೆಯವರು. ಆದರೆ ಇವರಿಬ್ಬರ ತಿಳಿವಳಿಕೆಗಳನ್ನು ಹೋಲಿಸಿ ನೋಡುವ ಉದ್ದೇಶಕ್ಕಿಂತ, ಸಮೂಹಕೇಂದ್ರಿತ ಆಲೋಚನೆಯ ಕ್ರಮಗಳು ಬೆಳೆಯುವುದಕ್ಕೆ ಬೇಕಾಗಿರುವ ಚಾರಿತ್ರಿಕ ಒತ್ತಡಗಳು ಹೇಗಿರುತ್ತವೆ ಎಂಬ ದಿಟವನ್ನು ಅರಿಯುವುದಕ್ಕೆ, ಫುಲೆಯವರ ಚಿಂತನೆಗಳನ್ನು ಇಲ್ಲಿ ಚರ್ಚಿಸಲಾಗಿದೆ. ಹಾಗೂ ಭಾರತದ ಸನ್ನಿವೇಶದಲ್ಲಿ ಚರಿತ್ರೆ ಕಥನಶಾಸ್ತ್ರಗಳ ವಿಭಿನ್ನ ಸ್ವರೂಪವನ್ನೂ ಈ ಮೂಲಕ ಅರಿಯಬಹುದಾಗಿದೆ. ಜ್ಞಾನಶಿಸ್ತುಗಳನ್ನು ರೂಪಿಸುವ ಪ್ರಕ್ರಿಯೆಯ ಭಾಗವಾಗಿ ಈ ಹಾದಿಯನ್ನು ಕರ್ನಾಟಕದ ವಿದ್ವತ್ ಲೋಕದಲ್ಲಿ ಇಡೀಯಾಗಿ ಅನುಸರಿಸುವುದನ್ನು ನಾನು ಕಾಣಲಾರೆ.

ಅಂದರೆ ಯಾರೂ ಈ ಹಾದಿಯನ್ನು ತುಳಿಯುತ್ತಿಲ್ಲವೆಂದು ಅರ್ಥವಲ್ಲ. ಬದಲಾಗಿ ಇದುವೇ ಮುಖ್ಯಧಾರೆ ಚಿಂತನೆಯ ಕ್ರಮವಾಗಿ ಭಾರತ ಇಲ್ಲವೇ ಕರ್ನಾಟಕದಲ್ಲಿ ಇನ್ನೂ ಬೆಳೆದಿಲ್ಲವೆಂದರ್ಥ. ಆದರೆ ಅಂಬೇಡ್ಕರ್ ಚಿಂತನೆಯ ಮಾದರಿಯೆಂಬುದನ್ನು ಕೇವಲ ಪರ್ಯಾಯ ಆಲೋಚನೆಯ ಕ್ರಮವನ್ನಾಗಿ ಮಾತ್ರ ನೋಡಲಾಗಿದೆ. ಈ ನಿಲುವು ಸರಿಯಲ್ಲ. ಏಕೆಂದರೆ, ಸಮೂಹಕೇಂದ್ರಿತ ಆಲೋಚನೆಯ ಕ್ರಮಗಳೇ ನಮ್ಮ ಮುಖ್ಯಧಾರೆಯ ಆಲೋಚನೆಯ ಕ್ರಮಗಳಾಗಬೇಕಾದ ತುರ್ತು ಇದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಅಂತರಂಗ

ಸಂಪಾದಕೀಯ | ದಾವಣಗೆರೆ ದಕ್ಷಿಣ ಉಪಚುನಾವಣೆ: ಪ್ರತಿಷ್ಠೆಯ ಹೋರಾಟದಲ್ಲಿ ಜನರ ಧ್ವನಿ ಪ್ರಬಲವಾಗಲಿ

Published

on

~ಗೋವರ್ಧನ ನವಿಲೇಹಾಳು 

ಮಧ್ಯ ಕರ್ನಾಟಕದ ಹೃದಯಭಾಗವಾದ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಈಗ ಉಪಚುನಾವಣೆಯ ಕಾವು‌ ಏರುತ್ತಲೇ ಇದೆ. ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಅವರ ನಿಧನದಿಂದಾಗಿ ಖಾಲಿಯಾದ ಈ ಕ್ಷೇತ್ರದಲ್ಲಿ ಏಪ್ರಿಲ್ 9, 2026ರಂದು ಮತದಾನ ನಡೆಯಲಿದೆ. ಫಲಿತಾಂಶ ಮೇ 4ರಂದು ಪ್ರಕಟವಾಗಲಿದೆ. ಈ ಉಪಚುನಾವಣೆಯು ಕೇವಲ ಒಂದು ಸೀಟಿನ ಹೋರಾಟವಲ್ಲ; ಇದು ಕರ್ನಾಟಕ ರಾಜಕೀಯದಲ್ಲಿ ಪ್ರತಿಷ್ಠೆ, ಕುಟುಂಬ ವಾರಸುದಾರಿಕೆ, ಸಮುದಾಯ ಸಮೀಕರಣಗಳು ಮತ್ತು ಅಭಿವೃದ್ಧಿ ನಿರೀಕ್ಷೆಗಳ ನಡುವಿನ ಸಂಕೀರ್ಣ ಸಮರವಾಗಿದೆ.

ಶಾಮನೂರು ಶಿವಶಂಕರಪ್ಪ ಅವರು ತಾನು ಸ್ಪರ್ಧಿಸಿದ ಈ ಕ್ಷೇತ್ರವನ್ನು ಎಂದೂ ಸೋಲದೆ ಉಳಿಸಿಕೊಂಡಿದ್ದರು. ಅವರ ನಂತರ ಕಾಂಗ್ರೆಸ್ ಪಕ್ಷವು ಅವರ ಮೊಮ್ಮಗ ಸಮರ್ಥ್ ಶಾಮನೂರು ಅವರನ್ನು ಅಭ್ಯರ್ಥಿಯಾಗಿ ಕಣಕ್ಕಿಳಿಸಿದೆ. ಇದು ಕಾಂಗ್ರೆಸ್ ಹೇಳುವಂತೆ “ಕುಟುಂಬಕ್ಕೆ ಟಿಕೆಟ್ ನೀಡುವ ಸಾಂಪ್ರದಾಯಿಕ ನಡೆ”ಯಾಗಿದೆ. ಬಿಜೆಪಿ ಪಕ್ಷವು ಶ್ರೀನಿವಾಸ್ ಟಿ. ದಾಸಕರಿಯಪ್ಪ ಅವರನ್ನು ಅಭ್ಯರ್ಥಿಯಾಗಿ ಘೋಷಿಸಿದೆ. ಇದರ ಜೊತೆಗೆ SDPIಯ ಅಫ್ಸರ್ ಕೊಡ್ಲಿಪೇಟೆ, ಸಾದಿಕ್ ಪೈಲ್ವಾನ್ ಸೇರಿದಂತೆ 25 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಆದರೆ ಮುಖ್ಯ ಹೋರಾಟ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆಯೇ ಇದೆ .

ಈ ಉಪಚುನಾವಣೆಯಲ್ಲಿ ಮುಸ್ಲಿಂ ಸಮುದಾಯದ ಪಾತ್ರ ನಿರ್ಣಾಯಕವಾಗಿದೆ. ಕ್ಷೇತ್ರದಲ್ಲಿ ಮುಸ್ಲಿಂ ಮತದಾರರ ಸಂಖ್ಯೆ ಸುಮಾರು 40% ಇದೆ ಎಂದು ಅಂದಾಜು. ಶಾಮನೂರು ಕುಟುಂಬಕ್ಕೆ ಐತಿಹಾಸಿಕ ಬೆಂಬಲವಿದ್ದರೂ, ಈ ಬಾರಿ ಮುಸ್ಲಿಂ ನಾಯಕರು ಟಿಕೆಟ್ ಆಕಾಂಕ್ಷೆಯನ್ನು ವ್ಯಕ್ತಪಡಿಸಿದ್ದರು. ಕಾಂಗ್ರೆಸ್ ಪಕ್ಷವು ಕುಟುಂಬ ವಾರಸುದಾರಿಕೆಯನ್ನು ಆಯ್ಕೆ ಮಾಡಿದ್ದಕ್ಕೆ ಅಸಮಾಧಾನ ವ್ಯಕ್ತವಾಗಿದೆ. ಸಚಿವ ಜಮೀರ್ ಅಹಮದ್ ಅವರ ಪ್ರಚಾರ ಮತ್ತು ಸಿಎಂ ಸಿದ್ದರಾಮಯ್ಯ ಅವರ ಭೇಟಿಗಳು ಈ ಅಸಮಾಧಾನವನ್ನು ತಣಿಸುವ ಪ್ರಯತ್ನವಾಗಿದೆ. ಆದರೆ ಮುಸ್ಲಿಂ ಮತಗಳ ವಿಭಜನೆಯ ಸಾಧ್ಯತೆ ಇದೆ. SDPI ಮತ್ತು ಇತರ (ಕಾಂಗ್ರೆಸ್ ಸಾದಿಕ್ ಅವರನ್ನು ಪೈಲ್ವಾನ್ ತಟಸ್ಥರಾಗಿರುವಂತೆ ಹೇಳಿದೆ) ಮುಸ್ಲಿಂ ಅಭ್ಯರ್ಥಿಗಳು ಈ ವಿಭಜನೆಯನ್ನು ಹೆಚ್ಚಿಸುವ ಸಾಧ್ಯತೆಯಿದೆ. ಬಿಜೆಪಿ ಎಸ್‌ಟಿ ಅಭ್ಯರ್ಥಿಯನ್ನು ಕಣಕ್ಕಿಳಿಸಿ ಅಹಿಂದ ಮತಗಳನ್ನು ಸೆಳೆಯುವ ತಂತ್ರ ರೂಪಿಸಿದೆ.

ಕಾಂಗ್ರೆಸ್ ಪಕ್ಷಕ್ಕೆ ಈ ಉಪಚುನಾವಣೆ ಪ್ರತಿಷ್ಠೆಯ ವಿಷಯವಾಗಿದೆ. ರಾಜ್ಯದಲ್ಲಿ ಆಡಳಿತಾರೂಢ ಪಕ್ಷವಾಗಿ ತನ್ನ ಬಲವನ್ನು ಉಳಿಸಿಕೊಳ್ಳುವುದು ಅತ್ಯಗತ್ಯ. ಸಿಎಂ ಸಿದ್ದರಾಮಯ್ಯ ಅವರು ಬಜೆಟ್‌ನಲ್ಲಿ ದಾವಣಗೆರೆ ದಕ್ಷಿಣಕ್ಕೆ 100 ಕೋಟಿ ರೂಪಾಯಿ ಅನುದಾನ ಘೋಷಿಸಿದ್ದು, ಇದು ಉಪಚುನಾವಣೆಗೆ ಮುನ್ನ ಜನರನ್ನು ಆಕರ್ಷಿಸುವ ಪ್ರಯತ್ನವಾಗಿ ಕಾಣುತ್ತಿದೆ. ಅನುಕಂಪದ ಅಲೆಯೂ ಕಾಂಗ್ರೆಸ್‌ಗೆ ಬೆಂಬಲ ನೀಡುವ ಸಾಧ್ಯತೆಯಿದೆ. ಆದರೆ ಪಕ್ಷದಲ್ಲಿ ಬಂಡಾಯದ ಬಿಸಿ ತಟ್ಟಿದೆ. ಕಾಂಗ್ರೆಸ್ ನ ಬಂಡಾಯ ಅಭ್ಯರ್ಥಿ ಸಾದಿಕ್ ಪೈಲ್ವಾನ್ ಅವರನ್ನು ಪಕ್ಷ ಚುನಾವಣೆಯಲ್ಲಿ ತಟಸ್ಥರಾಗಿರುವಂತೆ ಹೇಳಿದೆ. ಆದರೆ ಇದು ಮುಸಲ್ಮಾನರ ಒಳಮುನಿಸನ್ನು ತಣಿಸುತ್ತದೆಯೇ ಅಥವಾ ಮತ ವಿಭಜನೆಗೆ ಕಾರಣವಾಗುತ್ತದೆಯೇ ಎಂಬುದು ಫಲಿತಾಂಶದ ಮೇಲೆ ಪರಿಣಾಮವನ್ನಂತೂ ಬೀರುತ್ತದೆ.

ಬಿಜೆಪಿ ಪಕ್ಷಕ್ಕೆ ಇದು ನೈತಿಕ ಸ್ಥೈರ್ಯವನ್ನು ಹೆಚ್ಚಿಸುವ ಅವಕಾಶ. 2023ರ ವಿಧಾನಸಭಾ ಚುನಾವಣೆಯಲ್ಲಿ ಶಾಮನೂರು ಶಿವಶಂಕರಪ್ಪ ಅವರು ಬಿಜೆಪಿ ಅಭ್ಯರ್ಥಿ ಅಜಯ್ ಕುಮಾರ್ ಅವರನ್ನು ಸುಮಾರು 27,888 ಮತಗಳ ಅಂತರದಿಂದ ಸೋಲಿಸಿದ್ದರು. ಈ ಬಾರಿ ಬಿಜೆಪಿ “ಬದಲಾವಣೆ”ಯ ಸಂದೇಶವನ್ನು ನೀಡುತ್ತಿದೆ. ಅಭಿವೃದ್ಧಿ ಕೊರತೆ, ಗ್ಯಾರಂಟಿ ಯೋಜನೆಗಳ ವೆಚ್ಚ ಮತ್ತು ಸರ್ಕಾರದ ನೀತಿಗಳ ವಿರುದ್ಧ ವಾಗ್ದಾಳಿ ನಡೆಸುತ್ತಿದೆ. ಶ್ರೀನಿವಾಸ್ ದಾಸಕರಿಯಪ್ಪ ಅವರು ಕುಟುಂಬ ರಾಜಕಾರಣಕ್ಕೆ ವಿರುದ್ಧ ಧ್ವನಿ ಎತ್ತುತ್ತಿದ್ದಾರೆ. ಆದರೆ ಬಿಜೆಪಿಗೆ ಕ್ಷೇತ್ರದಲ್ಲಿ ಐತಿಹಾಸಿಕ ಬೆಂಬಲ ಕಡಿಮೆ. ಮುಸ್ಲಿಂ ಮತ್ತು ಅಹಿಂದ ಮತಗಳನ್ನು ತನ್ನತ್ತ ಸೆಳೆಯುವುದು ಅವರ ದೊಡ್ಡ ಸವಾಲು.

ದಾವಣಗೆರೆ ದಕ್ಷಿಣ ಕ್ಷೇತ್ರವು ಕೈಗಾರಿಕೆ, ವ್ಯಾಪಾರ ಮತ್ತು ಕೃಷಿಯ ಸಮ್ಮಿಶ್ರಣವಾಗಿದೆ. ರಸ್ತೆಗಳು, ನೀರಾವರಿ, ಉದ್ಯೋಗ, ಶಿಕ್ಷಣ ಮತ್ತು ಆರೋಗ್ಯ ಸೌಲಭ್ಯಗಳು ಜನರ ಮುಖ್ಯ ನಿರೀಕ್ಷೆಗಳು. ಹಿರಿಯ ಶಾಸಕರ ಕಾಲದಲ್ಲಿ ಕ್ಷೇತ್ರಕ್ಕೆ ಅನೇಕ ಅಭಿವೃದ್ಧಿ ಕಾರ್ಯಗಳು ನಡೆದಿದ್ದವು. ಆದರೆ ಇಂದು ಯುವಕರ ಉದ್ಯೋಗ, ಮಹಿಳೆಯರ ಸುರಕ್ಷತೆ ಮತ್ತು ಸ್ಥಳೀಯ ಸಮಸ್ಯೆಗಳು ಬಗೆಹರಿಯಬೇಕಿದೆ. ಉಪಚುನಾವಣೆಯಲ್ಲಿ ಅಭ್ಯರ್ಥಿಗಳು ಭರವಸೆಗಳ ಮಳೆ ಸುರಿಸುತ್ತಿದ್ದಾರೆ. ಆದರೆ ಜನರು ನೋಡುವುದು ಕಾರ್ಯನಿರ್ವಹಣೆಯನ್ನು. 100 ಕೋಟಿ ಅನುದಾನ ಘೋಷಣೆಯಂತಹ ಕ್ರಮಗಳು ತಾತ್ಕಾಲಿಕ ಆಕರ್ಷಣೆಯಾಗಬಹುದು, ಆದರೆ ಸುಸ್ಥಿರ ಅಭಿವೃದ್ಧಿ ಅಗತ್ಯ.

ರಾಜಕೀಯವು ಜನಸೇವೆಗಾಗಿ ಇರಬೇಕು, ಅಧಿಕಾರಕ್ಕಾಗಿ ಅಲ್ಲ ಎಂಬುದು ಎಲ್ಲರೂ ಹೇಳುವ ಮಾತು. ಆದರೆ ವಾಸ್ತವದಲ್ಲಿ ಕುಟುಂಬ ರಾಜಕಾರಣ, ಜಾತಿ-ಸಮುದಾಯ ಲೆಕ್ಕಾಚಾರಗಳು ಪ್ರಬಲವಾಗಿವೆ. ದಾವಣಗೆರೆ ದಕ್ಷಿಣದಲ್ಲಿ ಶಾಮನೂರು ಕುಟುಂಬದ ವರ್ಚಸ್ಸು ದೀರ್ಘಕಾಲದ್ದು. ಇದು ಜನಸೇವೆಯ ಫಲವೋ ಅಥವಾ ವ್ಯವಸ್ಥೆಯ ದೌರ್ಬಲ್ಯವೋ ಎಂಬುದನ್ನು ಜನರು ನಿರ್ಧರಿಸಬೇಕು. ಬಿಜೆಪಿ “ಬದಲಾವಣೆ”ಯ ಸಂದೇಶ ನೀಡುತ್ತಿದ್ದರೂ, ಅದು ಕೇವಲ ವಿರೋಧ ಪಕ್ಷದ ಧ್ವನಿಯಾಗಿ ಉಳಿಯದೆ ಸಕಾರಾತ್ಮಕ ಪರ್ಯಾಯವಾಗಬೇಕು.

ಈ ಉಪಚುನಾವಣೆಯಲ್ಲಿ ಮತದಾರರ ಜವಾಬ್ದಾರಿ ದೊಡ್ಡದು. ಅನುಕಂಪ, ಕುಟುಂಬ ನಿಷ್ಠೆ ಅಥವಾ ಸಮುದಾಯ ಲೆಕ್ಕಾಚಾರಕ್ಕಿಂತ ಹೆಚ್ಚಾಗಿ ಅಭಿವೃದ್ಧಿ, ಪಾರದರ್ಶಕತೆ ಮತ್ತು ಜನೋಪಯೋಗಿ ಕಾರ್ಯಗಳನ್ನು ಆಧರಿಸಿ ಮತ ನೀಡಬೇಕು. ಯುವಕರು ಮತ್ತು ಮಹಿಳೆಯರು ಹೆಚ್ಚು ಸಕ್ರಿಯರಾಗಬೇಕು. ಮತದಾನ ಶೇಕಡಾ 80ಕ್ಕಿಂತ ಹೆಚ್ಚು ಆಗುವಂತೆ ಮಾಡುವುದು ಪ್ರಜಾಪ್ರಭುತ್ವದ ಆರೋಗ್ಯಕ್ಕೆ ಸೂಚಕ.

ಕರ್ನಾಟಕ ರಾಜಕೀಯದಲ್ಲಿ ಉಪಚುನಾವಣೆಗಳು ಸಣ್ಣ ಪರೀಕ್ಷೆಗಳು. ದಾವಣಗೆರೆ ದಕ್ಷಿಣದ ಫಲಿತಾಂಶವು 2028ರ ವಿಧಾನಸಭಾ ಚುನಾವಣೆಗೆ ಸಂದೇಶ ನೀಡುತ್ತದೆ. ಕಾಂಗ್ರೆಸ್ ಗೆದ್ದರೆ ಅದು ತನ್ನ ಬಲವನ್ನು ಮತ್ತಷ್ಟು ಭದ್ರಪಡಿಸಿಕೊಳ್ಳುತ್ತದೆ. ಬಿಜೆಪಿ ಗೆದ್ದರೆ ಅದು ವಿರೋಧ ಪಕ್ಷವಾಗಿ ತನ್ನ ಸಾಮರ್ಥ್ಯವನ್ನು ತೋರಿಸುತ್ತದೆ. ಆದರೆ ಗೆಲುವು ಯಾರದ್ದಾದರೂ, ಜಯಿಸುವುದು ದಾವಣಗೆರೆ ದಕ್ಷಿಣದ ಜನರೇ ಆಗಬೇಕು.

ಈ ಹೋರಾಟದಲ್ಲಿ ರಾಜಕೀಯ ಪಕ್ಷಗಳು ಜನರ ಸಮಸ್ಯೆಗಳನ್ನು ಕೇಂದ್ರದಲ್ಲಿ ಇರಿಸಿಕೊಂಡು ಪ್ರಚಾರ ಮಾಡಲಿ. ಮತದಾರರು ತಮ್ಮ ಧ್ವನಿಯನ್ನು ಸ್ಪಷ್ಟವಾಗಿ ಮತ್ತು ನಿರ್ಭಯವಾಗಿ ವ್ಯಕ್ತಪಡಿಸಲಿ. ದಾವಣಗೆರೆ ದಕ್ಷಿಣ ಉಪಚುನಾವಣೆಯು ಪ್ರಜಾಪ್ರಭುತ್ವದ ಸೌಂದರ್ಯವನ್ನು ಪ್ರದರ್ಶಿಸುವ ಅವಕಾಶವಾಗಲಿ. ಅಭಿವೃದ್ಧಿ, ಸಮಾನತೆ ಮತ್ತು ಪಾರದರ್ಶಕ ಆಡಳಿತದತ್ತ ಕ್ಷೇತ್ರ ಸಾಗಲಿ ಎಂಬುದೇ ನಮ್ಮ ಆಶಯ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

 

Continue Reading

ಅಂತರಂಗ

250ಕ್ಕೂ ಹೆಚ್ಚು ಗಿಳಿಗಳ ನಿಗೂಢ ಸಾವು ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ ಆತಂಕ

Published

on

250ಕ್ಕೂ ಹೆಚ್ಚು ಗಿಳಿಗಳ ನಿಗೂಢ ಸಾವು

ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ ಆತಂಕ

ಬೆಂಗಳೂರು: ಮಧ್ಯಪ್ರದೇಶ ರಾಜ್ಯದ ಖಾರ್ಗೋನ್ ಜಿಲ್ಲೆಯಲ್ಲಿರುವ ನರ್ಮದಾ ನದಿ ತೀರದಲ್ಲಿ 250ಕ್ಕೂ ಹೆಚ್ಚು ಗಿಳಿಗಳು ಕೃಷಿ ಭೂಮಿಯಲ್ಲಿ ಬಳಸುವ ಕೀಟನಾಶಕ ಮಿಶ್ರಿತ ಆಹಾರ ಅಥವಾ ನರ್ಮದಾ ನದಿಯ ಕಲುಷಿತ ನೀರು ಸೇವಿಸಿ ಸಾವನ್ನಪ್ಪಿರುವ ಪ್ರಕರಣ ಇಡೀ ದೇಶದಲ್ಲಿ ಇದೇ ಮೊದಲ ಬಾರಿಗೆ ನಡೆದ ದುರ್ಘಟನೆ ಎಂದು ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷರೂ ಹಾಗೂ ರಾಷ್ಟ್ರೀಯ ಸಮಿತಿ ನಿರ್ದೇಶಕರಾದ ಮಾಲತೇಶ್ ಅರಸ್ ಹರ್ತಿಕೋಟೆ ಆತಂಕ ವ್ಯಕ್ತಪಡಿಸಿದ್ದಾರೆ.

ಕಳೆದ ಮೂರು ದಿನಗಳಲ್ಲಿ ನರ್ಮದಾ ನದಿ ತೀರದಲ್ಲಿ ಸುಮಾರು ಇನ್ನೂರಕ್ಕೂ ಅಧಿಕ ಗಿಳಿಗಳು ನಿಗೂಢವಾಗಿ ಸಾವನ್ನಪ್ಪಿದ್ದು ಆರಂಭದಲ್ಲಿ ಇದು ಹಕ್ಕಿ ಜ್ವರ ದಿಂದ ಸಾವನ್ನಪ್ಪಿರಬಹುದು ಎಂದು ಶಂಕಿಸಲಾಗಿತ್ತು ಆದರೆ ಪಶುವೈದ್ಯಕೀಯ ಅಧಿಕಾರಿ ಡಾ. ಸುರೇಶ್ ಬಫೇಲ್ ಅವರು ನೀಡಿದ ಮಾಹಿತಿ ಪ್ರಕಾರ ಹಕ್ಕಿಗಳ ಹೊಟ್ಟೆಯಲ್ಲಿ ಅಕ್ಕಿ ಕಾಳುಗಳು ಮತ್ತು ಸಣ್ಣ ಕಲ್ಲುಗಳು ಪತ್ತೆಯಾಗಿವೆ. ಅಲ್ಲದೆ ಕೃಷಿ ಭೂಮಿಯಲ್ಲಿ ಬಳಸುವ ಕೀಟನಾಶಕ ಮಿಶ್ರಿತ ಆಹಾರ ಅಥವಾ ನರ್ಮದಾ ನದಿಯ ಕಲುಷಿತ ನೀರು ಸೇವಿಸಿ 200 ರಿಂದ 50 ಕ್ಕೂ ಅಧಿಕ ಮೃತಪಟ್ಟಿರುವ ಸಾಧ್ಯತೆಗಳು ಹೆಚ್ಚಿವೆ ಎಂದು ಹೇಳಿದ್ದು ಇವರ ಮಾಹಿತಿಯನ್ನು ಆದರಿಸಿ ವಿಶೇಷ ತನಿಖೆ ಮಾಡಬೇಕು ಎಂದು ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ ಆಗ್ರಹಿಸಿದೆ.

ಖರ್ಗೋನ್‌ ಜಿಲ್ಲೆಯ ಬದ್ವಾ ಪ್ರದೇಶದ ನರ್ಮದಾ ನದಿ ತೀರದಲ್ಲಿರುವ ಅಕ್ವೆಡಕ್ಟ್ ಸೇತುವೆಯ ಸಮೀಪ ಈ ಘಟನೆ ಬೆಳಕಿಗೆ ಬಂದಿದ್ದು ಅರಣ್ಯ ಇಲಾಖೆಯು ಸೇತುವೆಯ ಸುತ್ತಮುತ್ತ ಹಕ್ಕಿಗಳಿಗೆ ಆಹಾರ ನೀಡುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಿದೆ. ಸದ್ಯ ಹಕ್ಕಿಗಳ ಸಾವಿಗೆ ನಿಖರ ಕರಣ ತಿಳಿಯಲು ಹಕ್ಕಿಗಳ ಅವಶೇಷಗಳನ್ನು ಜಬಲ್ಪುರಕ್ಕೆ ಕಳುಹಿಸಲಾಗಿದೆ. ಸದ್ಯ ಅರಣ್ಯ ಇಲಾಖೆ ಮತ್ತು ಪಶುವೈದ್ಯಕೀಯ ತಂಡಗಳು ಸ್ಥಳದಲ್ಲೇ ಬೀಡುಬಿಟ್ಟಿದ್ದು, ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿವೆ.

ಇನ್ನೊಂದು ಮುಖ್ಯ ವಿಚಾರ ಏನೆಂದರೆ ಪಕ್ಷಿಗಳಿಗೆ ಮನುಷ್ಯರು ಸೇವಿಸುವ ಎಣ್ಣೆ ಪದಾರ್ಥ ಅಥವಾ ಬೇಯಿಸಿದ ಆಹಾರ ನೀಡುವುದು ಅವುಗಳ ಜೀರ್ಣಾಂಗ ವ್ಯವಸ್ಥೆಯ ಮೇಲೆ ಮಾರಕ ಪರಿಣಾಮ ಬೀರುತ್ತದೆ ಎಂದು ಪಶುವೈದ್ಯಕೀಯ ಅಧಿಕಾರಿ ಡಾ. ಮನಿಷಾ ಚೌಹಾಣ್ ಹೇಳಿದ್ದಾರೆ. ಏನೇ ಆದರೂ ನೂರಾರು ಗಿಳಿಗಳು ಸಾವನ್ನಪಿರುವುದು ಮಾತ್ರ ದುರಂತ.

ಈ ಸಂದರ್ಭದಲ್ಲಿ ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷರೂ ಹಾಗೂ ರಾಷ್ಟ್ರೀಯ ಸಮಿತಿ ನಿರ್ದೇಶಕರಾದ ಮಾಲತೇಶ್ ಅರಸ್ ಹರ್ತಿಕೋಟೆ, ಹಿರಿಯ ಉಪಾಧ್ಯಕ್ಷರಾದ ಗುರುರಾಜ್ ಹೂಗಾರ್, ಉಪಾಧ್ಯಕ್ಷರಾದ ಯೋಗೀಶ್ ಕುಮಾರ್, ರುದ್ರಮುನಿ, ಡಾ.ಸಿದ್ದಲಿಂಗಪ್ಪ, ಮತ್ತು ಪದಾಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

Continue Reading

Trending