ಅಂತರಂಗ
ಧರ್ಮ ಮರ್ಮ-03 : ದೈವಿಕತೆ ಮತ್ತು ಧಾರ್ಮಿಕತೆ
- /home/u584543641/domains/suddidina.com/public_html/wp-content/plugins/mvp-social-buttons/mvp-social-buttons.php on line 27
https://suddidina.com/wp-content/uploads/2020/06/god_suddidina_art.jpg&description=ಧರ್ಮ ಮರ್ಮ-03 : ದೈವಿಕತೆ ಮತ್ತು ಧಾರ್ಮಿಕತೆ', 'pinterestShare', 'width=750,height=350'); return false;" title="Pin This Post">
- Share
- Tweet /home/u584543641/domains/suddidina.com/public_html/wp-content/plugins/mvp-social-buttons/mvp-social-buttons.php on line 72
https://suddidina.com/wp-content/uploads/2020/06/god_suddidina_art.jpg&description=ಧರ್ಮ ಮರ್ಮ-03 : ದೈವಿಕತೆ ಮತ್ತು ಧಾರ್ಮಿಕತೆ', 'pinterestShare', 'width=750,height=350'); return false;" title="Pin This Post">
- ಯೋಗೇಶ್ ಮಾಸ್ಟರ್
ದೇವರ ಪರಿಕಲ್ಪನೆ ವಿಶ್ವದ ಬಹುತೇಕ ಸಂಸ್ಕೃತಿಗಳಲ್ಲಿ ಭಯದ ಮೂಲವೇ ಆಗಿದ್ದು, ನಂತರ ಅದನ್ನು ಸುಧಾರಿಸಿದಂತಹ ಉದಾಹರಣೆಗಳು ಧಾರಾಳವಾಗಿ ಕಾಣುತ್ತದೆ. ಇಂದಿನ ಭಾಷೆಯಲ್ಲಿ ಭಾರತೀಯರು ಎನ್ನುವುದಾದರೂ ಸ್ಪಷ್ಟ ಸೀಮೆ, ಸಂಸ್ಕೃತಿ, ಭಾಷೆ, ಜನಾಂಗವೇನೂ ಇಲ್ಲದ ಈ ನೆಲದ ವಿವಿಧ ನೆಲೆಗಳಲ್ಲೇ ದೇವರ ಕಲ್ಪನೆಗಳು ಅನೇಕ ರೀತಿಗಳಲ್ಲಿ ಉಂಟಾದವು.
ಆದರೆ, ನಂತರ ರಾಜಕೀಯವಾಗಿ ಮತ್ತು ಭೌಗೋಳಿಕವಾಗಿ, ಮಾತಾಡುವ ಭಾಷೆಯೂ ಸೇರಿದಂತೆ ಜನಗಣಗಳನ್ನು ಒಂದು ಮಾಡಿರುವ ಕಾರಣಕ್ಕಾಗಿ, ರಾಷ್ಟ್ರೀಯತೆಯ ಹೆಸರಿನಲ್ಲಿ, ಅದಕ್ಕೂ ಮೀರಿ ಜಗತ್ಕುಟುಂಬದ ಪರಿಕಲ್ಪನೆಯಲ್ಲಿ ಈ ವಿವಿಧತೆಗಳಲ್ಲಿ ಏಕತೆಯನ್ನು ಕಾಣುವ ಪ್ರಯತ್ನವನ್ನು ಹಲವಾರು ದಿಕ್ಕುಗಳಿಂದ ಮಾಡುತ್ತಿದ್ದರೂ ಸಾಧ್ಯವಾಗಿಲ್ಲ. ಬಹುಶಃ ಸಾಧ್ಯವಾಗುವುದೂ ಇಲ್ಲ.
ನಿರ್ಧಮೀಯವಾಗಿ, ಸಂಪ್ರದಾಯರಹಿತವಾಗಿ ಏಕತೆಯನ್ನು ಸಾಧಿಸಲು ಸಾಧ್ಯವಾಗುವುದು ಜೀವಸೂಕ್ಷ್ಮವಾದ ಮಾನವೀಯ ನೆಲೆಗಟ್ಟಿನಿಂದ ಯೋಚಿಸಲು ಸಮರ್ಥವಾದಾಗ ಮಾತ್ರ. ಏಕತೆಯೆಂದರೆ ಆಲೋಚನೆಯಷ್ಟೇ. ಆ ಆಲೋಚನೆಯನ್ನು ಖಾಸಗಿಯಾಗಿ ತಮ್ಮದೆಂದು ಭಾವಿಸುವುದು. ಧರ್ಮವೂ ಕೂಡಾ ಒಂದು ಆಲೋಚನೆಯೇ ಆಗಿದೆ. ವಾಸ್ತವವಾಗಿ ಮನುಷ್ಯನೆಂದು ನಾವು ಯಾವ ಜೀವವರ್ಗಕ್ಕೆ ಕರೆಯುತ್ತೇವೆಯೋ ಆ ತಳಿಯು ಮೂಲದಲ್ಲಿ ಪ್ರಾಣಿಯೇ ಆಗಿದ್ದು ಒಂದು ವಿಶಿಷ್ಟ ಗುಣ ಲಕ್ಷಣವೆಂದರೆ ಮನಸ್ಸು.
ಈ ಮನಸ್ಸಿನ ಕಾರಣದಿಂದಲೇ ಅವನಿಗೆ ಆಲೋಚಿಸಲು ಸಾಧ್ಯವಾಗಿರುವುದು. ಪ್ರಾಣಿಗಳಿಗಿರುವಂತೆ ಪ್ರವೃತ್ತಿಯೂ ಕೂಡಾ ಸಹಜವಾಗಿ ಇದೆ ಮತ್ತು ಆ ಪ್ರವೃತ್ತಿಯನ್ನು ಕ್ರಮಬದ್ಧಗೊಳಿಸಿಕೊಂಡು ತನ್ನ ಜೀವನವನ್ನು ಮುಂಗಾಣುವಂತಹ ಆಲೋಚನಾ ಶಕ್ತಿಯೂ ಇದೆ. ಈ ಆಲೋಚನೆಯಿಂದಾಗಿ ತರ್ಕವೂ ಸಾಧ್ಯವಾಗುತ್ತದೆ.
ಈ ಮನಸ್ಸಿಗೆ ಇರುವ ಆಲೋಚನಾ ಶಕ್ತಿಯ ಪರಿಣಾಮವಾಗಿ ತನ್ನ ದೈಹಿಕ, ಮಾನಸಿಕ, ಬೌದ್ಧಿಕ ಮತ್ತು ಭಾವನಾತ್ಮಕ ಚಟುವಟಿಕೆಗಳನ್ನು ತಾನೇ ನೋಡಿಕೊಳ್ಳಬಲ್ಲ. ಹಾಗೆಯೇ ಇತರರದನ್ನು ಗಮನಿಸಬಲ್ಲ. ತನ್ನ ಹಿಂದಿನದನ್ನು ಸ್ಮರಣೆಗೆ ತಂದುಕೊಂಡು ಅದನ್ನು ದಾಖಲು ಮಾಡಲು ಸಾಧ್ಯವಾಗುತ್ತದೆ. ಮುಂದಿನದನ್ನು ದೂರದೃಷ್ಟಿಯಿಂದ ಗ್ರಹಿಸಿ ಅದಕ್ಕೆ ಯೋಜನೆಗಳನ್ನು ರೂಪಿಸಿಕೊಳ್ಳಲೂ ಸಾಧ್ಯವಾಗುತ್ತದೆ.
ಒಂದು ಸ್ಪಷ್ಟವಾಗಿ ತಿಳಿದುಕೊಳ್ಳೋಣ. ಪ್ರಾಣಿಗಳ ಪ್ರವೃತ್ತಿಯೂ ಮತ್ತು ಮನುಷ್ಯನ ವೈಚಾರಿಕ ಮನಸ್ಸೂ ಏಕಕಾಲದಲ್ಲಿ ನಮ್ಮಲ್ಲಿ ಅಸ್ತಿತ್ವದಲ್ಲಿರುವುದರಿಂದಲೇ ಮನುಕುಲ ವಿಕಾಸದ ಚರಿತ್ರೆಯಲ್ಲಿ ಸಂಘರ್ಷಗಳನ್ನು, ದಾಳಿಗಳನ್ನು, ಯುದ್ಧಗಳನ್ನು ಸತತವಾಗಿ ಕಾಣುತ್ತಿದ್ದೇವೆ. ಅಹಂಕಾರ ಎನ್ನುವುದು ವ್ಯಕ್ತಿಗತವಾಗಿರುವ ಒಂದು ಸ್ವಕೇಂದ್ರಿತ ಭಾವ. ಈ ಭಾವವು ವರವೂ ಹೌದು, ಶಾಪವೂ ಹೌದು. ಈ ಅಹಂಕಾರದ ಭಾವವನ್ನು ಮನುಷ್ಯ ತನ್ನಲ್ಲಿ ಮತ್ತು ತನ್ನಂತೆಯೇ ಇರುವ ಇತರರಲ್ಲಿ ಸ್ಪಷ್ಟವಾಗಿ ಗುರುತಿಸಿದ.
ಹಾಗೂ ಅದರಿಂದಾಗುವ ಒಳಿತು ಮತ್ತು ಕೆಡಕುಗಳನ್ನೂ ಕೂಡಾ ಕಂಡುಕೊಂಡ. ಆದರೆ ಕೆಡುಕು ಎನ್ನುವುದು ಸಹಜವಾಗಿ ಆಗ್ರಹ ಮತ್ತು ಆಕ್ರೋಶಭರಿತವಾಗಿದ್ದು ರಭಸವನ್ನು ಹೊಂದಿರುತ್ತದೆ. ಒಳಿತು ಎನ್ನುವುದು ರಭಸ ರಹಿತವಾಗಿ ಸಾತ್ವಿಕವಾಗಿರುವುದರಿಂದ, ಅಗ್ರಗಾಮಿಯಾಗಿಲ್ಲದಿರುವುದರಿಂದ ಅದು ಕೆಡುಕಿನ ರಭಸವನ್ನು ತಡೆಯಲಾರದ ಕಾರಣದಿಂದ ಒಂದು ಕ್ರಮಕ್ಕೆ ಮನುಷ್ಯನ ಮನವನ್ನು ಒಳಪಡಿಸಲೇ ಬೇಕಾಗಿರುವಂತಹ ಅನಿವಾರ್ಯವಿತ್ತು.
ಆದಿಮ ಕಾಲದಲ್ಲಿ ಮನುಷ್ಯರು ಮನುಷ್ಯರಿಂದಲೇ ಎರಡು ಬಹುದೊಡ್ಡ ಸಮಸ್ಯೆಯನ್ನು ಎದುರಿಸುತ್ತಿದ್ದರು. ಒಂದು ಬಲಶಾಲಿ ಮನುಷ್ಯರು ನಿರ್ಬಲರನ್ನು ನಿಗ್ರಹಿಸುತ್ತಿದ್ದರು. ಈ ನಿರ್ಬಲರು ದಾರ್ಷ್ಟ್ಯದ ಮತ್ತು ಆಕ್ರಮಣಕಾರಿಯಾದ ಬಲಶಾಲಿಗಳನ್ನು ಎದುರಿಸಲು ಸಂಘಟಿತರಾಗಬೇಕಿತ್ತು. ಅವರೂ ಶಕ್ತಿಶಾಲಿಗಳಾಗಬೇಕಿದೆ ಎಂಬುದನ್ನು ಕೆಲವರು ಮನಗಂಡರು.
ಆದರೆ ಇವರೂ ಬರಿದೇ ಶಕ್ತಿಶಾಲಿಗಳಾಗಿಬಿಟ್ಟಿದ್ದರೆ ಈ ಮೊದಲ ಕೇಡಿನ ವರ್ತನೆಗಳ ಶಕ್ತಿಶಾಲಿಗಳಂತೆಯೇ ವರ್ತಿಸುವ ಸಾಧ್ಯತೆಯೂ ಇರುವುದರಿಂದ ಒಂದು ಕ್ರಮದೊಳಗೆ ಅವರನ್ನು ಅಡಕ ಮಾಡಿಸುವ ಒಂದು ಅನಿವಾರ್ಯತೆ ಇತ್ತು. ಆ ಅನಿವಾರ್ಯತೆಯ ಫಲವೇ ಧರ್ಮ. ನಿರ್ಬಲರ ಮೇಲಿನ ಅನುಕಂಪವೇ ಧರ್ಮಗಳ ಉಗಮಕ್ಕೆ ಕಾರಣವಾಯಿತು.
ಪಶುತನದ ಕೆಂಡ
ಮನುಷ್ಯನ ಆಲೋಚನೆಗಳನ್ನು ಒಂದು ನಿರ್ಧಿಷ್ಟ ಕ್ರಮಕ್ಕೆ ಒಳಪಡಿಸಿದರೆ ಅಷ್ಟಕ್ಕೆ ಸುಮ್ಮನಾಗುವ ವರ್ಗವಲ್ಲ ಈ ಮಾನವ. ಅವನಲ್ಲಿ ಸ್ವಾಭಾವಿಕವಾದಂತಹ ಪಶುಪ್ರವೃತ್ತಿ ಸದಾ ಬೂಧಿ ಮುಚ್ಚಿದ ಕೆಂಡದಂತೆ ಇದ್ದೇ ಇರುತ್ತದೆ. ಅದಕ್ಕಾಗಿ ಆದಿಮ ಕಾಲದ ಪ್ರಕೃತಿಯ ವಿದ್ಯಮಾನಗಳಿಗೆ ಪಟ್ಟ ಭಯದ ಪ್ರತಿಫಲವಾಗಿ ಹುಟ್ಟಿದ ದೇವರ ಪರಿಕಲ್ಪನೆಯನ್ನು ಜಾಣ ನಾಯಕ ತೆಗೆದುಕೊಂಡ.
ತನ್ನನ್ನು ಪ್ರವಾದಿಯೆಂದು ಕರೆಯಿಸಿಕೊಂಡ ಆ ಜಾಣ ಮತ್ತು ಕರುಣಾಮಯಿ ಮನುಷ್ಯ ತನ್ನ ಸೂಕ್ಷ್ಮಗ್ರಹಿಕೆಗಳನ್ನು, ಕ್ರಮಕ್ಕೊಳಪಡಿಸುವ ರೀತಿಗಳನ್ನು ಮತ್ತು ದೂರಾಲೋಚನೆಗಳನ್ನು ತನ್ನೊಡನೆ ಇರುವವರಿಗೆ ದಾಟಿಸಲು ದೇವರನ್ನು ಮಾಧ್ಯಮವನ್ನಾಗಿಸಿಕೊಂಡ. ಇಲ್ಲವಾದರೆ ಇವನೂ ನಮ್ಮಂತೆಯೇ ಇರುವವನಾದರೆ ನಾವೇಕೆ ಇವನ ಮಾತನ್ನು ಕೇಳಬೇಕು? ಇದು ಮನುಷ್ಯನ ಸಾಧಾರಣ ಅಹಂಕಾರದ ಧೋರಣೆ.
ಅವನು ತಮ್ಮ ಜೀವನದ ಕ್ರಮವನ್ನೇ ನಿರ್ದೇಶಿಸಲು ಹೊರಟಿದ್ದಾನೆಂದರೆ ಒಂದೋ ಅವನು ಅತಿಮಾನುಷನಾಗಿರಬೇಕು, ಅಥವಾ ಮಾನವನಲ್ಲದೇ ಸರ್ವಶಕ್ತಿ ಇರುವಂತಹ ದೇವರು ತಾನು ಆಯ್ದ ಅವನ ಮೂಲಕ ತನ್ನ ಮಾತುಗಳನ್ನು ಹೇಳಬೇಕು. ಬೈಬಲ್ಲಂತೂ ಈ ವೈಚಾರಿಕತೆಯನ್ನು ತನ್ನ ಆದಿಕಾಂಡದಲ್ಲಿ ಬಹಳ ಸುಂದರವಾದ ಕಥನದ ರೂಪಕದಲ್ಲಿ ಕಟ್ಟಿಕೊಡುತ್ತದೆ.
ತನ್ನ ಶಕ್ತಿಯ ಬಗ್ಗೆ ಅಭಿಮಾನವಿದ್ದು ಅಹಂಕಾರದಿಂದ ತನ್ನ ದಾರ್ಷ್ಟ್ಯವನ್ನು ಪ್ರದರ್ಶಿಸುವ ಮನುಷ್ಯನ ಶಕ್ತಿಗೆ ಎಟುಕಲಾರದ ಶಕ್ತಿಯಾದ ದೇವರ ಪರಿಕಲ್ಪನೆ ಅವನನ್ನು ಭಯದಲ್ಲಿ ಹಿಡಿದಿಡಲೇ ನಂತರ ಬಳಕೆಯಾದದ್ದು. ಹಾಗೆಯೇ ಧರ್ಮವು ಈ ದಾರ್ಷ್ಟ್ಯದ ಮಾನವರನ್ನು ಕ್ರಮಗೊಳಿಸಿ ನಿರ್ಬಲರನ್ನು ರಕ್ಷಿಸಲೆಂದೇ ಜಾಣನೂ, ಅನುಭಾವಿಯೂ, ಅನುಕಂಪಪೂರಿತನೂ ಆದ ಮನುಷ್ಯನ ದಯೆಯಿಂದ ರೂಪುಗೊಂಡಿದ್ದು.
ಒಟ್ಟಿನಲ್ಲಿ ಇಷ್ಟು ತಿಳಿದುಕೊಳ್ಳೋಣ. ಭಯವೇ ದೇವರ ಮೂಲ. ದಯವೇ ಧರ್ಮದ ಮೂಲ.
ಇನ್ನು ಹಲವಾರು ಆಯಾಮಗಳಿಂದ ಧರ್ಮವನ್ನು ವಿವಿಧ ದೇಶಗಳಲ್ಲಿ, ವಿವಿಧ ಕಾಲಗಳಲ್ಲಿ ವಿವರಿಸಲು ಯತ್ನಿಸಿದ್ದಾರೆ. ಆ ವಿವರಣೆಗಳಿಗೂ ಆಯಾ ಪ್ರದೇಶಗಳ ಸಾಮಾಜಿಕ ವಿದ್ಯಮಾನಗಳು ಕಾರಣವಾಗಿರುತ್ತವೆ. ಅವುಗಳನ್ನು ಮುಂದೆ ಸಂದರ್ಭಾನುಸಾರ ನೋಡೋಣ.
ಒಟ್ಟಾರೆ ಧರ್ಮ, ಸಂಪ್ರದಾಯ, ನಂಬಿಕೆ ಇತ್ಯಾದಿಗಳ ಸಂಕೋಲೆಯಲ್ಲಿ ದೇವರನ್ನು ಬಂಧಿಸಿ, ತಾವು ಸೃಷ್ಟಿಸಿದ ದೇವರನ್ನು ತಮ್ಮ ಸೃಷ್ಟಿಕರ್ತನನ್ನಾಗಿ ಮಾಡಿಕೊಂಡು, ತನ್ನ ಪ್ರತಿರೂಪದಂತೆ ದೇವರು ತಮ್ಮನ್ನು ಸೃಷ್ಟಿಸಿದ ಎಂದು ತಮ್ಮ ಪ್ರತಿರೂಪವನ್ನು ಅವನಿಗೆ ಆರೋಪಿಸಿದ ಹೆಗ್ಗಳಿಗೆ ನಮ್ಮ ಮಾನವ ಜನಾಂಗಕ್ಕಿದೆ.
ಮಾನವನ ಶಕ್ತಿಯ ವಿಕಾಸ, ವಿಸ್ತರಣೆಯ ಮತ್ತು ಸಾಮರ್ಥ್ಯದ ಭೀಕರತೆಗಳನ್ನು ಮಾನವನೇ ಅರಿಯುತ್ತಿದ್ದಂತೆ, ಮಾನವನೇ ಇದನ್ನು ಒಂದು ತಹಂಬದಿಗೆ ತರಲು ಮತ್ತೊಂದು ಪರಿಕಲ್ಪನೆಯನ್ನು ಸೃಷ್ಟಿಸಿದ ಅಥವಾ ಸೃಷ್ಟಿಯಾಗಿದ್ದ ದೇವರ ಪರಿಕಲ್ಪನೆಯನ್ನು ಗಟ್ಟಿಗೊಳಿಸಿದ. ಈ ದೇವರ ಪರಿಕಲ್ಪನೆಯು ನಿರ್ಬಲರಿಗೆ ಭರವಸೆಯಾದರೆ, ಮತ್ತೂ ಕೆಲವರಿಗೆ ಶೋಷಣೆಯ ಅಸ್ತ್ರವಾಗಿದ್ದು ಮಾತ್ರ ವಿಪರ್ಯಾಸ.
ವಿಕಾಸವಾದ ಮಾನವನ ಬುದ್ಧಿಮತ್ತೆ
ಭೌತಿಕವಾಗಿ ಮಾನವನ ಶಕ್ತಿಯ ವಿಕಾಸವಾದದ್ದೇನೂ ನಮಗೆ ಕಾಣುವುದಿಲ್ಲ. ಸಹಸ್ರಾರು ವರ್ಷಗಳ ಹಿಂದೆ ಇದ್ದಂತಹ ಮನುಷ್ಯನ ದೈಹಿಕ ಸಾಮರ್ಥ್ಯವನ್ನು ಅಥವಾ ಅದೇ ಶಾರೀರಿಕ ಬಲದ ಉದಾಹರಣೆಗಳನ್ನು ಈಗಲೂ ಕಾಣಬಹುದು. ಆದರೆ ಜೀವನ ಪದ್ಧತಿ, ಆಹಾರ ಮತ್ತು ಉಡುಗೆ ತೊಡುಗೆಗಳ ಪದ್ಧತಿಗಳು, ತಂತ್ರಜ್ಞಾನದ ಬಳಕೆಗಳು ಒಂದೇ ಬಗೆಯಾಗಿ ಕಾಣುವುದಿಲ್ಲ.
ಅದೇ ಹಳೆಯ ಬಗೆಯ ಶರೀರಗಳು, ಅವೇ ಕಣ್ಣುಗಳು, ಅವೇ ಕೈಗಳು, ಅವೇ ಕರಳುಗಳು, ಯಕೃತ್ತು ಇತ್ಯಾದಿ, ಆದರೆ ಅವುಗಳು ಬಳಸುತ್ತಿರುವ ವಸ್ತುಗಳು, ಸೇವನೆಗಳು ಮತ್ತು ಪಡೆಯುತ್ತಿರುವ ಪೋಷಣೆಗಳಲ್ಲಿ ಧ್ರುವಾಂತರ ಮತ್ತು ಯುಗಾಂತರಗಳ ವ್ಯತ್ಯಾಸಗಳನ್ನು ಕಾಣಬಹುದು. ಆಗಿಲ್ಲದ ತಂತ್ರಜ್ಞಾನ ಈಗಿದೆ. ಆಗಿಲ್ಲದ ಜೀವನಪದ್ಧತಿ ಈಗ ಬಳಕೆಯಲ್ಲಿದೆ.
ಈಗ ನಾವು ಉಪಯೋಗಿಸುತ್ತಿರುವ, ಉಪಭೋಗಿಸುತ್ತಿರುವ ಆವಿಷ್ಕಾರದ ಫಲಗಳು ದೀರ್ಘಕಾಲದ, ಹಲವು ಜನಗಳ ಪ್ರಯತ್ನಗಳ, ತಪ್ಪು ಮತ್ತು ಪ್ರಯತ್ನಗಳಿಂದ ರೂಪುಗೊಂಡಿರುವವೇ. ಹಾಗೆಯೇ ನಮ್ಮ ಮುಂದಿನ ಪೀಳಿಗೆಗಳ ಬಳಕೆ ಮತ್ತು ಜೀವನ ಪದ್ಧತಿಯಲ್ಲಿ ಇನ್ನೂ ಮುಂದುವರಿದ ಅಥವಾ ವಿಕಸಿತ ಬದಲಾವಣೆಗಳನ್ನು ಕಾಣುವುದರಲ್ಲಿ ಯಾವ ಆಶ್ಚರ್ಯವೂ ಇಲ್ಲ.
ಆ ರೀತಿಯ ಬದಲಾವಣೆಗೆ ತಮ್ಮ ಬುದ್ಧಿ ಅಥವಾ ಮಿದುಳಿನ ಸಾಮರ್ಥ್ಯದ ಬಳಕೆಯೇ ಮತ್ತು ಅದರ ವ್ಯಾಪ್ತಿಯ ಅಪಾರ ಬಳಕೆಯೇ ಕಾರಣವಲ್ಲದೇ ಬೇರೇನೂ ಅಲ್ಲ. ಹಾಗೆಯೇ ಚಿಂತನಾ ಕ್ರಮ ಮತ್ತು ವಿಚಾರ ಧಾಟಿಯೂ ಕೂಡ ಬದಲಾಗುತ್ತಾ ಬಂದಿತು. ಆಗಿಲ್ಲದ ದೇವರು, ಧರ್ಮ, ನಂಬಿಕೆಗಳು ಈಗೆಲ್ಲಿಂದ ಬಂದವು? ಅವು ಹೇಗೆ ಬದಲಾಗದಂತಹ ಸತ್ಯವಾಯಿತು? ಯಾವ ದೇವರೂ, ಧರ್ಮವೂ ಈ ಜಗತ್ತಿನ ಸೃಷ್ಟಿಯಿಂದ ಇರಲಿ, ಮನುಷ್ಯನ ಸೃಷ್ಟಿಯಿಂದಲೇ ಇರಲಿಲ್ಲ.
ಮನುಕುಲ ವಿಕಾಸದ ಯಾವುದೋ ಒಂದು ಹಂತದಲ್ಲಿ ತನ್ನ ಆಲೋಚನೆಗಳಿಂದ ಉತ್ಪನ್ನವಾದ ವಿಚಾರಗಳಿಂದ ದೇವರು ಜಗತ್ತನ್ನು ಸೃಷ್ಟಿಸಿದನೆಂಬುದನ್ನು ಮನುಷ್ಯ ಹೇಗೆ ಗ್ರಹಿಸಿದ? ಕಾಣದ ದೇವರನ್ನು ಯಾರು, ಹೇಗೆ ಕಂಡ? ದೇವರೆಂಬುದು ಗ್ರಹಿಸಿದ, ವಿಚಾರ ಮಾಡಿದ, ಕಲ್ಪಿಸಿಕೊಂಡ, ವಿವಿಧ ಸತ್ವ, ಸಾರ, ಶಕ್ತಿಗಳಿಗೆ ಆರೋಪಿಸಿದಂತಹ ಪರಿಕಲ್ಪನೆಯೇ ಹೊರತು ಎಂದಿಗೂ ಸಾಕಾರಸ್ತಿತ್ವದಲ್ಲಿ ಕಾಣುವಂತಹ ಸತ್ಯವೇನಲ್ಲ.
ಆದರೂ ವಿಕಾಸವಾಗಿಸಲು ಒಪ್ಪದ ದೇವರ ಮತ್ತು ಧರ್ಮವನ್ನು, ಭಿನ್ನ ಬೇಧಗಳನ್ನು ಉಂಟು ಮಾಡುವ ಅವುಗಳ ಪ್ರಭಾವವು ಮನುಕುಲದ ಮೇಲೆ ಕಂಡೇ ಅದನ್ನು ಸುಧಾರಿಸಲು ಯತ್ನಿಸಿದರು. ಸಂಕೀರ್ಣವಾಗಿರುವ ಆ ನಿರಾಕಾರ ಮತ್ತು ಅಸಂಗತ ಪರಿಕಲ್ಪನೆಗಳನ್ನು ಸರಳೀಕರಣಗೊಳಿಸಿ ತಮ್ಮ ಸಹಜೀವಿಗಳನ್ನು ಒಂದು ಮಾನವೀಯ ಮತ್ತು ಉದಾರವಾದ ನೆಲೆಗಟ್ಟಿಗೆ ತರಲು ಶ್ರಮಿಸಿದರು.
ಆ ದೇವರ ಪರಿಕಲ್ಪನೆಗಳು ಜನಜೀವನದೊಳಗೆ ಅದೆಷ್ಟು ಹಾಸುಹೊಕ್ಕಾಗಿದ್ದವೆಂದರೆ, ಅವನ್ನು ನಿರಾಕರಿಸಿದರೆ, ಸುಧಾರಕರನ್ನೇ ತಿರಸ್ಕರಿಸುವ ಎಲ್ಲಾ ಸಾಧ್ಯತೆಗಳಿದ್ದವು. ಆದ್ದರಿಂದ ಆ ಪರಿಕಲ್ಪನೆಗಳನ್ನು ಸುಧಾರಿಸಲು, ತಮ್ಮ ಮುಂದುವರಿದ ಮತ್ತು ವಿಕಸಿತವಾದ ಚಿಂತನೆಗಳಿಂದ ವಿವರಿಸಲು, ಅರ್ಥ ನೀಡಲು ಪ್ರಯತ್ನಿಸಿದರು.
ಜೀವಂತವಿರುವುದರ ಲಕ್ಷಣವೇ ಬೆಳವಣಿಗೆ ಮತ್ತು ವಿಕಾಸ. ಆದರೆ, ತಮ್ಮದೇ ಆದಂತಹ ಕಾರಣಗಳಿಂದ ಈ ವಿಕಾಸವನ್ನಾಗಲಿ, ಬೆಳವಣಿಗೆಯನ್ನಾಗಲಿ ಒಪ್ಪದ ಮೂಲಭೂತವಾದಿಗಳು ಅವರನ್ನೇ ನಾಶಗೊಳಿಸಿದರು. ಅಥವಾ ಅವರ ನಂತರ ತಮ್ಮ ತೆಕ್ಕೆಗೇ ಅವರ ಚಿಂತನೆಗಳನ್ನೂ ಎಳೆದುಕೊಂಡು ಬಿಟ್ಟರು.
ದೇವರ ಸುಧಾರಕರು
ಕ್ರೈಸ್ತರ ದೇವರ ಪರಿಕಲ್ಪನೆಯ ಮೂಲ ಬ್ಯಾಬಿಲೋನಿಯನ್ನಿನ ಮಿಥಾಲಜಿಯ ಆಧಾರಿತ ವಿಚಾರಗಳಿಂದ ಮೂಡಿ, ಆದಮ, ಹವ್ವರಂತಹ ಆದಿ ಮಾನವರೂ ಮೊದಲ್ಗೊಂಡು ಯಹೂದಿಗಳ ಸಾಂಪ್ರದಾಯಿಕ ನಂಬುಗೆಗೆ ಎಡೆ ಮಾಡಿತ್ತು. ಅವುಗಳು ವಿಕಸಿತವಾದ ಹಂತಗಳು ಈಗ ನಮಗೆ ಬೇಡ. ಆದರೆ, ಯೇಸು ಎಂಬ ಸಮಾಜ ಸುಧಾರಕ ಅವರ ಪರಿಕಲ್ಪನೆಗಳನ್ನು ಸಾಮಾಜಿಕವಾಗಿ, ಆಧ್ಯಾತ್ಮಿಕವಾಗಿ, ತಾತ್ವಿಕವಾಗಿ ಸುಧಾರಿಸುವ ನಿಟ್ಟಿನಲ್ಲಿ ಮಾನವತೆಯ ಮತ್ತು ಔದಾರ್ಯದ ನೆಲೆಗಟ್ಟಿನ ಸಮಾಜದಲ್ಲಿ ಎಲ್ಲರನ್ನೂ ಒಂದುಗೂಡಿಸುವ ಪ್ರಯತ್ನ ಮಾಡಿದ.
ಈಗಲೂ ಬಹಳಷ್ಟು ಕ್ರೈಸ್ತರು ಉಪಯೋಗಿಸುವ ಶಬ್ಧ ‘ಗಾಡ್ ಫಿಯರ್’. ದೇವರು ಎಂಬುವುದಕ್ಕೆ ಇಷ್ಟವಾಗದ್ದನ್ನು ಮಾಡದೇ ಹೋದರೆ ಅದರ ಆಗ್ರಹಕ್ಕೆ ಗುರಿಯಾಗುತ್ತೇವೆಂಬ ಪರಿಕಲ್ಪನೆ ಜನರು ನೈತಿಕವಾಗಿ ಬದುಕುವುದಕ್ಕೂ, ದುರ್ಮಾಗಿಗಳಾಗದೇ ಇರುವುದಕ್ಕೂ ಸಾಧ್ಯವಾಗುವುದಕ್ಕೆ ಸಹಾಯಕವಾದದ್ದು. ಉದ್ದೇಶ ಒಳ್ಳೆಯದೇ ಆದರೂ, ನಕಾರಾತ್ಮಕವಾದ ಅನುಸಂಧಾನದ ಬದಲಾಗಿ ಭೀತಿಯನ್ನು ಪ್ರೀತಿಗೆ ಬದಲಿಸಲು ಯೇಸು ಯತ್ನಿಸಿದ.
ಭೀತಿಯನ್ನು ಪ್ರೀತಿಯನ್ನಾಗಿ ಬದಲಿಸುವುದೂ ಕೂಡ ಅತಿ ಉನ್ನತವಾದ ಕ್ರಾಂತಿಕಾರಕ ನಡೆಯೇ ಆಗಿತ್ತು. ನಿರಾಕಾರವಾಗಿರುವ ದೇವರನ್ನು ತಂದೆಯೆಂಬಂತೆ ಭಾವನಾತ್ಮಕವಾಗಿ ಸಾಕಾರಗೊಳಿಸಿ, ಪ್ರೀತಿ ಮತ್ತು ವಾತ್ಸಲ್ಯಪೂರ್ಣವಾದ ತಂದೆಯಂತೆ ಅವನನ್ನು ಬಿಂಬಿಸಿ, ಅವನ ಇಷ್ಟಕ್ಕೆ ನಡೆದುಕೊಂಡು ಪ್ರೇಮಪೂರ್ಣ ಮತ್ತು ಔದಾರ್ಯಪೂರ್ಣವಾದ ಜನರ ಸಮಾಜವನ್ನು ಉಂಟುಮಾಡಲು ಯತ್ನಿಸಿದ.
ಭೀತಿಯ ಸ್ಥಾನದಲ್ಲಿ ಪ್ರೀತಿಯು ಬಂದಿತಾದರೂ, ಧಾರ್ಮಿಕತೆಯಾಗಲಿ, ಸಾಂಪ್ರದಾಯಕ ಧೋರಣೆಗಳಾಗಲಿ ಅದನ್ನು ಒಪ್ಪಲು ತಯಾರಿರಲಿಲ್ಲ. ರಾಜಕೀಯಪ್ರೇರಿತ ಅಥವಾ ಸ್ವಸ್ಥಾನಕೇಂದ್ರಿತರಾಗಿದ್ದ ಅಂದಿನ ಪುರೋಹಿತರೇ ಯೇಸುವಿನ ವಿಚಾರಗಳನ್ನು ಅವನ ದೇಹ ಸಮೇತ ನಾಶ ಮಾಡಲು ಯತ್ನಿಸಿ ಸಫಲರೂ ಆದರು. ಆದರೆ ಕ್ರೈಸ್ತರಲ್ಲಿ ಇಂದಿಗೂ ಪಾದ್ರಿಗಳೆಂಬ ಪುರೋಹಿತರು ಇದ್ದಾರೆ ಎಂಬುದು ವಿಪರ್ಯಾಸವೋ, ಅವಶ್ಯಕವೋ, ವ್ಯಂಗ್ಯವೋ; ವಿಭಿನ್ನ ನೆಲೆಗಳ ವಿಶ್ಲೇಷಣೆಗಳಲ್ಲಿ ವಿಭಿನ್ನ ರೀತಿಗಳಲ್ಲಿ ವ್ಯಕ್ತವಾಗುತ್ತದೆ.
ಆದರೆ ಆ ಪಾದ್ರಿಗಳು ಎಂತವರೆಂಬುದು ಧರ್ಮಾಧಾರಿತವಾದುದಲ್ಲ, ವ್ಯಕ್ತಿಗತವಾದದು. ಧರ್ಮದ ಲಾಂಛನದಡಿಯಲ್ಲಿ ತಮ್ಮ ಮಾನವೀಯ ಮತ್ತು ಉದಾರವಾದ ನೆಲೆಗಟ್ಟಿನ ಆಧಾರದಲ್ಲಿ ಧಾರ್ಮಿಕತೆಯನ್ನು ವಿವರಿಸುತ್ತಾರೆ ಮತ್ತು ಆಚರಿಸುತ್ತಾರೆ.
ಇರಲಿ, ಮುಂದೆ ಕ್ರೈಸ್ತ ಧರ್ಮದ ಅವತರಣವಾದ ಮೇಲೆ ಪಿತ, ಸುತ ಮತ್ತು ಪವಿತ್ರಾತ್ಮಗಳೆಂಬ ತ್ರಿಮೂರ್ತಿಯ ಪರಿಕಲ್ಪನೆಯಿಂದ ಸೈದ್ಧಾಂತಿಕವಾಗಿ ಮತ್ತಷ್ಟು ಸಂಕೀರ್ಣಗೊಂಡಂತಹ ವಿಷಯದ ಉಗಮವಾಯ್ತು. ತಮ್ಮನ್ನು ಪಾಪಿಯೆಂದು ನಕಾರಾತ್ಮಕ ಧೋರಣೆಯನ್ನೂ ಮತ್ತು ಪ್ರೀತಿಯೆಂಬ ಸಕಾರಾತ್ಮಕ ಧೋರಣೆಯನ್ನೂ ಒಟ್ಟೊಟ್ಟಿಗೇ ಸ್ವೀಕರಿಸಿದ್ದಾರೆ.
ಒಂದು ವೇಳೆ ಯೇಸುವೆಂಬ ಸುಧಾರಕನಿಗೆ ತನ್ನ ವಿಷನ್ ಮತ್ತು ಮಿಷನ್ಗಳನ್ನು ಪೂರ್ಣಗೊಳಿಸಲು ಸಾಧ್ಯವಾಗಿದ್ದರೆ, ಇಂದು ಕ್ರೈಸ್ತಮತವೆಂಬುದೇ ಇರುತ್ತಿರಲಿಲ್ಲವೆಂದು ನನ್ನ ಗ್ರಹಿಕೆ. ಪಿತ, ಸುತ ಮತ್ತು ಪವಿತ್ರಾತ್ಮಗಳೂ ಇರುತ್ತಿರಲಿಲ್ಲ. ಆತನ ಸಾವಿನಾಧಾರಿತವಾದ ಆರಾಧನೆಗಳಾಗಲಿ, ಸಂಪ್ರದಾಯಗಳಾಗಲಿ ಇರುತ್ತಿರಲಿಲ್ಲ. ಪೂರ್ಣವಾಗಿ ಸಂವಹಿಸದ ಯೇಸುವಿನ ವಿಚಾರಗಳ ಅಲ್ಪ ಗ್ರಹಿಕೆಗಳು ಪೀಳಿಗೆಯಿಂದ ಪೀಳಿಗೆಗೆ ಹಸ್ತಾಂತರಗಳಾಗುತ್ತಾ ವಿಷಯಾಂತರವೇ ಆಗಿರುವುದರಲ್ಲಿ ಯಾವ ಆಶ್ಚರ್ಯವೂ ಇಲ್ಲ.
ಮನುಕುಲದಲ್ಲಿ ಶೋಷಣೆಗೆ ಒಳಗಾಗುವ ನಿರ್ಬಲರನ್ನು ಮಾನಸಿಕವಾಗಿ ಮತ್ತು ಆತ್ಮಿಕವಾಗಿ ಸದೃಢಗೊಳಿಸಲು ಉದ್ದೇಶಿಸಿದ್ದ ಯೇಸುವಿನ ಬೋಧನೆಗಳು ಮತ್ತು ದೌರ್ಜನ್ಯ ಹಾಗೂ ನಿರ್ಲಜ್ಜ ಕ್ರೌರ್ಯ ಸಂಪ್ರದಾಯದ ವಿರುದ್ಧವಾದ ಸಾತ್ವಿಕವಾದ ಕ್ರಾಂತಿಯಿಂದ ಕೂಡಿದ ಆತನ ಜೀವನ ಚರಿತ್ರೆಯ ಪರಿಕ್ಷಿಪ್ತ ರೂಪ ಬೈಬಲ್.
ಬೈಬಲ್ ಕ್ರಿಸ್ತನೆಂಬ ಜಾಣ ಮತ್ತು ದಯಾಹೃದಯದ ಒಂದು ಪರಿಚಯವನ್ನಷ್ಟೇ ನೀಡುವುದು. ಆತನ ವಾಸ್ತವ ರೂಪವನ್ನಲ್ಲ. ಹಲವಾರು ಬೈಬಲ್ಲುಗಳಿವೆ ಅವುಗಳಲ್ಲಿರುವ ಹೊಟ್ಟು ಮತ್ತು ಕಾಳುಗಳನ್ನು ಬೇರ್ಪಡಿಸುವುದು ಮತ್ತು ಅದರಿಂದ ಕ್ರಿಸ್ತನೆಂಬ ಮನುಕುಲದ ಕರುಣೆಯ ಬೀಜವನ್ನು ಹೆಕ್ಕಿ ತೆಗೆಯುವುದು ಸಾಧ್ಯ. ಆದರೆ ಸಧ್ಯಕ್ಕೆ ಈ ಲೇಖನಕ್ಕೆ ಆ ಉದ್ದೇಶವಿಲ್ಲ. ಮುಂದೆ ಕ್ರೈಸ್ತಧರ್ಮದ ಚರಿತ್ರೆಯ ಸಮಯದಲ್ಲಿ ಇದನ್ನು ವಿವರವಾಗಿ ನೋಡೋಣ.
ಇದೊಂದು ಉದಾಹರಣೆಯಷ್ಟೇ! ಯಾವುದೇ ಧಾರ್ಮಿಕ, ಸಾಮಾಜಿಕ, ಆಧ್ಯಾತ್ಮಿಕ ಸುಧಾರಕನಿಗೆ ಹಲವಾರು ರಾಜಕೀಯ, ಸಾಮಾಜಿಕ ಅಡೆತಡೆಗಳಿದ್ದು ಅಷ್ಟು ಸುಲಭವಾಗಿ ಆತನ ದೃಷ್ಟಿಯಂತೆ ತನ್ನ ಮಿಷನ್ನನ್ನು ಪೂರ್ಣಗೊಳಿಸಲು ಸಾಧ್ಯವಾಗುವುದಿಲ್ಲ. ಸುಧಾರಕರ, ಹೋರಾಟಗಾರರ ವಿಫಲ ಮಿಷನ್ಗಳ ಮುಂದುವರಿಕೆಗಳೇ ಧರ್ಮಗಳಾಗುವವು.
ಆದರೆ ಅವು ವಿಕಾಸಕ್ಕೆ ಮಾರ್ಗವಾಗದೇ, ಮಂಡೂಕಗಳ ಕೂಪಕ್ಕೆ ಮತ್ತೊಂದು ಕೊಡುಗೆಯಾಗುವುದು ಮನುಕುಲದ ದುರಾದೃಷ್ಟ. ಬುದ್ಧ, ಆದಿನಾಥ, ಮಹಾವೀರ, ಮಹಮದ್, ನಾನಕ್, ಬಸವ, ಬಹಾಯ್ ಯಾರೇ ಆಗಲಿ ಇದರಿಂದ ಹೊರತಲ್ಲ.
ಬೆಳವಣಿಕೆ ಮತ್ತು ವಿಕಾಸದ ಹಾದಿಯಲ್ಲಿಯೇ ಇರುವ ಜಗತ್ತಿನಲ್ಲಿ ಹೊಸ ಪ್ರವಾದಿಗಳು, ತೀರ್ಥಂಕರರು ಹುಟ್ಟಲಾರರೇಕೆ? ಹುಟ್ಟಿದರೂ, ಘೋಷಿಸಿಕೊಂಡರೂ ಕೇಳುವವರಾರು? ಒಪ್ಪುವುದಾದರೂ ಹೇಗೆ ಸಾಧ್ಯ?
ಹಾಗೊಮ್ಮೆ ಯಾರಾದರೂ ವೈಚಾರಿಕವಾಗಿ, ಸೈದ್ಧಾಂತಿಕವಾಗಿ ಮುಂದಾದರೂ ಜನ ಸಮೂಹ ಅವನ ಚಿಂತನೆಗಳ ಧಾರೆಯನ್ನು ಮೆಚ್ಚುವುದಕ್ಕೆ ಇಚ್ಛಿಸುವುದಿಲ್ಲ.
ತಮ್ಮ ಸಮಕಾಲೀನ ಯಾವುದೋ ಈ ವ್ಯಕ್ತಿಯನ್ನು ನಂಬಿಕೆಯ ಕೇಂದ್ರಕ್ಕೆ ಒಯ್ಯಲಾಗುವುದಿಲ್ಲ. ವಿಚಾರಗಳನ್ನು ಆಳಕ್ಕೆ ತೆಗೆದುಕೊಳ್ಳಲಾಗುವುದಿಲ್ಲ. ತಮ್ಮಂತೆ ಉಣ್ಣುವ, ಉಡುವಷ್ಟೇ ಮಾಡದೇ ಅತಿಮಾನುಷವಾದುದನ್ನು ಮಾಡಿದರೆ ಒಂದು ಹಂತಕ್ಕೆ ಒಪ್ಪಲು ಸಾಧ್ಯ! ಈ ಕಥೆ ಇಂದಿನದು ಮಾತ್ರವಲ್ಲ. ಅನಾದಿಕಾಲದಿಂದಲೂ ಹಾಗೆಯೇ ಇರುವುದು.
ಹಾಗಾಗಿಯೇ ಎಂದೋ, ಯಾವುದೋ ಕಾಲದಲ್ಲಿ ಏನೋ ಮಾಡಿ ಸತ್ತವರಷ್ಟೇ ದೇವರಾಗುತ್ತಾರೆ. ಈಗ ನಾನು ದೇವರೆಂದು ಘೋಷಿಸಿಕೊಂಡವರೆಲ್ಲಾ ಅಪಹಾಸ್ಯಕ್ಕೆ, ಟೀಕೆಗೆ ಅಥವಾ ವಿಮರ್ಶೆಗೆ ಗುರಿಯಾಗುತ್ತಾರೆ. ತಾನು ದೇವರೆನ್ನದೇ ಬರಿಯ ದೇವರ ಮಗನೆಂದು ಕರೆದುಕೊಂಡ ಕ್ರಿಸ್ತನಿಗೇ ಅಪಾಯ ತಪ್ಪಿರಲಿಲ್ಲ.
ಪುಟ್ಟಪರ್ತಿಯ ಸತ್ಯಸಾಯಿಬಾಬಾನ ಸಮಕಾಲೀನರಾದ ಮತ್ತು ಆತನ ವಿವಿಧ ವಿಷಯಗಳು ಸ್ಪಷ್ಟವಾಗಿ ತಿಳಿದಿರುವಂತಹ ಈ ನಮ್ಮ ಪೀಳಿಗೆಯು ಮುಗಿದಾದ ಮೇಲೆ ಮುಂಬರುವ ಪೀಳಿಗೆಯೊಂದು ಅವರ ಎಲ್ಲಾ ಪ್ಲಸ್ ಮತ್ತು ಮೈನಸ್ಸುಗಳನ್ನು ವಿವಿಧ ರೀತಿಗಳಲ್ಲಿ ಅರ್ಥೈಸುತ್ತಾ, ಈಗಿನ ಕೃಷ್ಣನ ಪರಿಕಲ್ಪನೆಯ ರೀತಿಯಲ್ಲಿ ಒಂದು ದೇವರನ್ನಾಗಿ ಸ್ಪಷ್ಟೀಕರಿಸಬಹುದು. ದೇವರೆನ್ನುವ ಅಭೂತಪೂರ್ವವಾದ, ಅತ್ಯದ್ಭುತವಾದ ಪರಿಕಲ್ಪನೆಗೆ ಸೇರಿಕೊಳ್ಳಲು ಮನುಷ್ಯನಿಗೆ ಹಲವು ದಾರಿಗಳುಂಟು.
(ಮುಂದುವರಿಯುವುದು)
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂಕಣ
ಇತಿಹಾಸ ಕಥನಶಾಸ್ತ್ರ: ಅಂಬೇಡ್ಕರ್ ಅವರ ಚಿಂತನೆಯ ಹಾದಿ
~ಮೇಟಿ ಮಲ್ಲಿಕಾರ್ಜುನ, ಪ್ರಾಧ್ಯಾಪಕರು, ಸಹ್ಯಾದ್ರಿ ಕಾಲೇಜು, ಶಿವಮೊಗ್ಗ
ಅಂಬೇಡ್ಕರ್ ಅವರು ಭಾರತದ ಚರಿತ್ರೆಗಳ ರಚನೆಗೆ ಪ್ರಾಯೋಗಿಕ ಉಪಕರಣಗಳನ್ನು (ಎಂಪರಿಕಲ್ ಟೂಲ್ಸ್) ಬಳಸಿರುತ್ತಾರೆ. ಆದರೆ ಈ ಎಲ್ಲ ಉಪಕರಣಗಳು ಕೇವಲ ಚರಿತ್ರೆಯ ರಚನೆಗೆ ಮಾತ್ರ ಕಾರಣವಾಗದೆ, ಸಮೂಹಗಳ ಸಾಮಾಜಿಕ-ರಾಜಕೀಯ ಸಮಾನತೆ, ಸ್ವಾಯತ್ತತೆಯನ್ನೂ ಕಲ್ಪಿಸುವುದಕ್ಕೂ ಬದ್ಧವಾಗಿರುತ್ತವೆ. ಆರ್ಥಿಕತೆಯ ನಿಲುವುಗಳ ಮೂಲಕ ಭಾರತದ ಚರಿತ್ರೆಯನ್ನು ವ್ಯಾಖ್ಯಾನಿಸುವ ಕ್ರಮಗಳನ್ನು ಅಂಬೇಡ್ಕರ್ ಅವರು ಅತ್ಯಂತ ಕಟುವಾಗಿಯೇ ವಿಮರ್ಶಿಸುತ್ತಾರೆ.
ಸಮಾಜವಾದಿಗಳು ಮತ್ತು ಮಾರ್ಕ್ಸ್ವಾದಿಗಳು ಆರ್ಥಿಕತೆಯ ನೆಲೆಯಿಂದ ಭಾರತದಲ್ಲಿ ಚರಿತ್ರೆಗಳನ್ನು ನಿರ್ವಚಿಸುವ ಪ್ರಯತ್ನವನ್ನು ಮಾಡಿರುತ್ತಾರೆ ಎನ್ನುವುದನ್ನು ಇಲ್ಲಿ ಗಮನಿಸಬಹುದು. ಭಾರತದ ಚರಿತ್ರೆಗಳಲ್ಲಿ ದಾಖಲಾಗಿರುವ ಯಾವುದೇ ರಾಜಕೀಯ ಕ್ರಾಂತಿ/ಹೋರಾಟಗಳು ಯಾವಾಗಲೂ ಸಾಮಾಜಿಕ-ಧಾರ್ಮಿಕ ಕ್ರಾಂತಿಗಳಿಂದ ಮಾತ್ರ ಕೂಡಿರುವುದನ್ನೂ ಅಂಬೇಡ್ಕರ್ ಅವರು ಇಲ್ಲಿ ಗುರುತಿಸುತ್ತಾರೆ. ಭಾರತದಲ್ಲಿ ಅಷ್ಟೆಯಲ್ಲ, ಅಮೆರಿಕ, ಯುರೋಪ್, ಅರೇಬಿಯಾ ದೇಶಗಳಲ್ಲಿಯೂ ಇದೇ ಬಗೆಯ ಚರಿತ್ರೆಯ ನಿರ್ಮಾಣವು ನಡೆದಿರುವುದನ್ನು ನೋಡುತ್ತೇವೆ. ಮತ್ತು ಶಿವಾಜಿ, ಚಂದ್ರಗುಪ್ತ ಮೌರ್ಯ, ಸಿಖ್ ರಾಜ್ಯಗಳ ರಾಜರುಗಳಿಂದ ಕೈಗೊಳ್ಳಲಾದ ರಾಜಕೀಯ ಕ್ರಾಂತಿಗಳು, ಬುದ್ಧ, ಗುರು ನಾನಕ್ ಹಾಗೂ ಇತರ ಸಾಧು ಸಂತರ ಸಾಮಾಜಿಕ, ಧಾರ್ಮಿಕ ಚಳವಳಿಗಳ ಮೂಲಕ ಕಂಡಿರುತ್ತೇವೆ.
ಆದರೆ ಪರಿಣಾಮಗಳಲ್ಲಿ ಅಗಾಧವಾದ ವ್ಯತ್ಯಾಸಗಳನ್ನೂ ನಾವು ಇವತ್ತು ಕಾಣುತ್ತೇವೆ ಹಾಗೂ ಭಾರತದ ಚರಿತ್ರೆಗಳನ್ನು ಕುರಿತು ಬ್ರಿಟಿಶರು ತಾಳಿರುವ ಧೋರಣೆಗಳು ಅತ್ಯಂತ ದೋಷಪೂರಿತ ನೆಲೆಗಳಿಂದ ಕೂಡಿದ್ದವು ಎಂಬುದನ್ನು ಅಂಬೇಡ್ಕರ್ ಅವರು ಅತ್ಯಂತ ಬಲವಾಗಿ ನಂಬಿದ್ದರು. ಮತ್ತು ಅವುಗಳನ್ನು ಬಿಡಿಸಿ ತೋರಿಸುವುದಕ್ಕೆ ಬೇಕಾದ ಪರಿಕರಗಳನ್ನೂ ತಮ್ಮ ಅಧ್ಯಯನಗಳ ಮೂಲಕ ರೂಪಿಸಿರುತ್ತಾರೆ.
ಭಿನ್ನ ಸಂವೇದನೆಯ ಮೂಲಕ ಭಾರತವನ್ನು ಗ್ರಹಿಸಿದ ಅಂಬೇಡ್ಕರ್ ಚಿಂತನೆಗಳು ಹಾಗೂ ಸಾಮಾಜಿಕವಾಗಿ ಅತ್ಯಂತ ಸೂಕ್ಷ್ಮ ನಿಲುವುಗಳಾಗಿ ಯಾವತ್ತಿಗೂ ಚರ್ಚೆಗೆ ಒಳಪಡುತ್ತಿರುವ ‘ಅಲ್ಪಸಂಖ್ಯಾತರು’ ‘ಲಿಂಗ’ ಹಾಗೂ ‘ಜಾತಿ’ಗಳ ನಡುವೆ ಒಂದು ಬಗೆಯ ತಾರ್ಕಿಕ ನಂಟನ್ನು ಏರ್ಪಡಿಸಬಹುದು. ರಾಷ್ಟ್ರೀಯತೆಯ ಜೊತೆಗೆ ಅಲ್ಪಸಂಖ್ಯಾತರು, ಲಿಂಗ ಹಾಗೂ ಜಾತಿಯ ವಿನ್ಯಾಸಗಳನ್ನು ಇಟ್ಟು ನೋಡಿದರೆ, ರಾಷ್ಟ್ರೀಯತೆ ಎನ್ನುವುದು ಕೇವಲ ಏಕಾಕೃತಿಯ ನೆಲೆಯನ್ನಾಗಿ ಬಿಂಬಿಸಲಾಗುತ್ತದೆ. ಇಂತಹ ಏಕಾಕೃತಿ ನಿಲುವುಗಳನ್ನು ಭಗ್ನ ಮಾಡುವ ಅತ್ಯಂತ ಪ್ರಖರವಾದ ಚಿಂತನೆಗಳನ್ನು, ಅಲ್ಪಸಂಖ್ಯಾತ, ಲಿಂಗ, ಜಾತಿ ಮತ್ತು ಧರ್ಮಗಳ ವಿನ್ಯಾಸಗಳನ್ನು ನೆಲೆಯಾಗಿಸಿಕೊಂಡು ಅಂಬೇಡ್ಕರ್ ಅವರು ಚಿಂತಿಸಿರುತ್ತಾರೆ. ಹಾಗೂ ಈ ಚಿಂತನೆಗಳ ಮುಖೇನವೇ ಸಾಂಸ್ಕೃತಿಕ-ಚಾರಿತ್ರಿಕ ಬಹುಳತೆಯನ್ನು ಕಂಡರಿಸುವ ದಾರಿಗಳನ್ನೂ ಅವರ ಚಿಂತನೆಗಳಲ್ಲಿ ಕಾಣಬಹುದಾಗಿದೆ.
ಅಂದರೆ ಅಂಬೇಡ್ಕರ್ ಅವರ ಸೈದ್ಧಾಂತಿಕ ತಿಳಿವಿನ ಚೌಕಟ್ಟನ್ನು ಅರಿಯಬೇಕೆಂದರೆ, ಅವರು ಫ್ರೆಂಚ್ ಕ್ರಾಂತಿಯಿಂದ ಎರವಲು ಪಡೆದಿರುವ ಸಾಮಾಜಿಕ-ರಾಜಕೀಯ ‘ತ್ರಿಕೂಟ’ (ಟ್ರಿನಿಟಿ) ಪರಿಕಲ್ಪನೆಗಳನ್ನು ಇಲ್ಲಿ ನಾವು ಪರಿಗಣನೆಗೆ ತೆಗೆದುಕೊಳ್ಳುವ ಅಗತ್ಯವಿದೆ. ‘ಸ್ವಾತಂತ್ರ್ಯ, ಸಮಾನತೆ ಹಾಗೂ ಸಹೋದರತ್ವ’ ಎಂಬುದಾಗಿ ಈ ತ್ರಿಕೂಟ ಪರಿಕಲ್ಪನೆಗಳನ್ನು ಗುರುತಿಸಬಹುದು.
ಫ್ರೆಂಚ್ ಕ್ರಾಂತಿಯ ನಿಲುವುಗಳನ್ನು ಕುರುಡಾಗಿ ಅನುಕರಿಸುವುದಾಗಲೀ ಇಲ್ಲವೇ ಆ ಕ್ರಾಂತಿಯ ನಿಲುವುಗಳನ್ನು ಯಥಾವತ್ತಾಗಿ ಪಾಲಿಸುವುದಾಗಲೀ ಅಂಬೇಡ್ಕರ್ ಅವರ ಉದ್ದೇಶವಾಗಿರಲಿಲ್ಲ. ಆದರೆ ಈ ಕ್ರಾಂತಿಯಿಂದ ಪ್ರೇರಣೆಯನ್ನು ಮಾತ್ರ ಪಡೆದುಕೊಂಡಿರುತ್ತಾರೆ. ಅಂಬೇಡ್ಕರ್ ಅವರು ಈ ತ್ರಿಕೂಟ ಪರಿಕಲ್ಪನೆಗಳನ್ನು ಮರುಪರೀಕ್ಷಿಸುವುದು ಅಷ್ಟೆಯಲ್ಲದೆ ಅವುಗಳನ್ನು ಮರು ವಿನ್ಯಾಸಗೊಳಿಸಿರುವುದನ್ನೂ ಇಲ್ಲಿ ನೋಡಬಹುದು. ಅಂದರೆ, ಫ್ರೆಂಚ್ ಕ್ರಾಂತಿಯ ಸನ್ನಿವೇಶಕ್ಕಿಂತ ಮಿಗಿಲಾದ ಸಾಮಾಜಿಕ-ಸಾಂಸ್ಕೃತಿಕ ಆಯಾಮ ಮತ್ತು ಅರ್ಥಗಳನ್ನು ಅಂಬೇಡ್ಕರ್ ಅವರು ಈ ಪರಿಕಲ್ಪನೆಗಳಿಗೆ ಕೊಟ್ಟಿರುತ್ತಾರೆ.
ಜಾತಿಕೇಂದ್ರಿತವಾದ ಭಾರತ ದೇಶವು ವರ್ಗಕೇಂದ್ರಿತವಾದ ಫ್ರೆಂಚ್ ದೇಶಕ್ಕಿಂತ ಸಹಜವಾಗಿಯೇ ಭಿನ್ನವಾಗಿದೆ. ಈ ಸಾಮಾಜಿಕ ವಿನ್ಯಾಸಕ್ಕೆ ಅನುಗುಣವಾಗಿಯೇ ಅಂಬೇಡ್ಕರ್ ಅವರು ಈ ತ್ರಿಕೂಟ ಪರಿಕಲ್ಪನೆಗಳ ತಾತ್ವಿಕತೆಯನ್ನು ರೂಪಿಸಿರುತ್ತಾರೆ. ಸಮೂಹಗಳ ಒಳ್ಳೆಯ ಬದುಕಿಗೆ ಈ ತ್ರಿಕೂಟಗಳು ಅತ್ಯಂತ ಅವಶ್ಯವೆಂಬುದನ್ನು ಅಂಬೇಡ್ಕರ್ ಅವರು ಮನಗಂಡಿದ್ದರು (ರೊಡ್ರಿಗಸ್, 2002). ಚರಿತ್ರೆಯ ನಿರ್ಮಾಣದಲ್ಲಿ ಹಾಗೂ ಸಾಮಾಜಿಕ ಬದುಕುಗಳನ್ನು ಕಟ್ಟಿಕೊಳ್ಳುವಲ್ಲಿ ಈ ಸಮಾನತೆ, ಸ್ವಾತಂತ್ರ್ಯ ಹಾಗೂ ಸಹೋದರತ್ವವು ಎಷ್ಟೊಂದು ಮಹತ್ವದ ಪಾತ್ರವನ್ನು ವಹಿಸಬಲ್ಲವು ಎನ್ನುವುದನ್ನು ಅಂಬೇಡ್ಕರ್ ಅವರು ಮನಗಂಡಿದ್ದರು.
ಅಂಬೇಡ್ಕರ್ ಅವರು ಗಾಂಧಿ ಮತ್ತು ಕಾಂಗ್ರೇಸ್ ಸಂಘಟನೆಯನ್ನು ಕುರಿತು ‘ವ್ಹಾಟ್ ಗಾಂಧಿ ಆ್ಯಂಡ್ ಕಾಂಗ್ರೇಸ್ ಹ್ಯಾವ್ ಡನ್ ಟು ದ ಅನ್ಟಚೇಬಲ್ಸ್’ ಎಂಬ ಬರಹದಲ್ಲಿ ಸಮೂಹಗಳ ಏಳ್ಗೆಯ ನೆಲೆಯಿಂದ ವಿಶ್ಲೇಷಣೆ ಮಾಡಿರುತ್ತಾರೆ. ಅಂದರೆ ಸ್ವಾತಂತ್ರ್ಯ, ಸಮಾನತೆ ಮತ್ತು ಸಹೋದರತ್ವದಂತಹ ತ್ರಿಕೂಟ ಕಲ್ಪನೆಗಳು ಸಮೂಹಗಳ ಅಸ್ತಿತ್ವ, ಅಸ್ಮಿತೆ ಹಾಗೂ ಪ್ರಜ್ಞೆಯನ್ನು ಕುರಿತು ಮಾತ್ನಾಡಿದರೆ, ಕಾಂಗ್ರೆಸ್ ಸಂಘಟನೆಯು ರಾಷ್ಟ್ರೀಯತೆಯ ಕಲ್ಪನೆಯ ಬಗೆಗೆ ಮಾತ್ರ ಹೆಚ್ಚು ಕಾಳಜಿಯನ್ನು ವಹಿಸಿರುವುದನ್ನು ಇಲ್ಲಿ ನೋಡುತ್ತೇವೆ. ಆದರೆ ಗಾಂಧೀಜಿಯವರು ಸಾಂಪ್ರದಾಯಿಕ ರಾಷ್ಟ್ರೀಯತೆಯನ್ನು ಕುರಿತು ಯೋಚಿಸಿದರೆ, ನೆಹರೂ ಅವರು ಸಮಾಜವಾದದ ನೆಲೆಯಿಂದ ರಾಷ್ಟ್ರೀಯತೆಯ ಪ್ರಜ್ಞೆಯನ್ನು ರೂಪಿಸುವ ತುಡಿತವನ್ನು ಹೊಂದಿದ್ದರು. ಒಟ್ಟಾರೆ ರಾಷ್ಟ್ರೀಯತೆ ಬಗೆಗಿನ ನಿಲುವುಗಳಲ್ಲಿ ಬಹುಸಮಾಜಗಳು ಎದುರಿಸುವ ಸಾಮಾಜಿಕ-ರಾಜಕೀಯ ಬಿಕ್ಕಟ್ಟುಗಳು ಮಹತ್ವವನ್ನು ಪಡೆಯದೆ, ಕೇವಲ ರಾಷ್ಟ್ರ ಮತ್ತು ರಾಷ್ಟ್ರೀಯತೆಯ ಕುರಿತಾದ ಮೌಲ್ಯಗಳು ಮಾತ್ರ ಮುಂಚೂಣಿಗೆ ಬರುತ್ತವೆ.
ಹಾಗಾಗಿ ಭಾರತದ ಚರಿತ್ರೆಗಳಲ್ಲಿ ರಾಷ್ಟ್ರ, ರಾಷ್ಟ್ರ ಪ್ರಭುತ್ವ ಹಾಗೂ ರಾಷ್ಟ್ರೀಯತೆಗಳ ಮಹತ್ವ ಮತ್ತು ಹಿರಿಮೆಯ ಬಗೆಗಿರುವ ಕಾಳಜಿಗಳು, ಸಾಮಾಜಿಕ ಚರಿತ್ರೆಯನ್ನು ಬಿಂಬಿಸುವಲ್ಲಿ ಗೈರು ಆಗಿರುತ್ತವೆ. ಅಂಬೇಡ್ಕರ್ ಅವರು ಇಂತಹ ಚಾರಿತ್ರಿಕ ಲೋಪಗಳನ್ನು ಗುರುತಿಸುವ ಜೊತೆಗೆ, ರಾಜಕೀಯ ಪ್ರೇರಿತವಾದ ಚರಿತ್ರೆಗಳಿಗಿಂತ, ಸಾಮಾಜಿಕ ನೆಲೆಗಳಿಂದ ಚರಿತ್ರೆಯನ್ನು ಬರೆಯುವುದು ಎಷ್ಟೊಂದು ಮಹತ್ವದ ಕೆಲಸವೆಂಬುದನ್ನೂ ಮನಗಾಣಿಸಿದ್ದಾರೆ. ಸಾಮಾಜಿಕ ಚರಿತ್ರೆಗಳನ್ನು ಕಡೆಗಣಿಸಿ ರಾಷ್ಟ್ರೀಯತೆಯ ಕಲ್ಪನೆಯನ್ನು ಊಹಿಸುವುದು ಕೂಡ ದುಸ್ತರದ ಸಂಗತಿಯೆಂಬುದನ್ನು ಅಂಬೇಡ್ಕರ್ ಅವರು ಚಿಂತನೆಗಳು ನಮಗೆ ಮನವರಿಕೆ ಮಾಡುತ್ತವೆ. ಈ ಕಾರಣಗಳಿಂದ ‘ಚರಿತ್ರೆಯನ್ನು ಮರೆತವರು ಚರಿತ್ರೆಯನ್ನು ಸೃಷ್ಟಿಸಲಾರರು’ ಎಂಬ ನಿಲುವನ್ನು ಅತ್ಯಂತ ಬಲವಾಗಿಯೇ ಅಂಬೇಡ್ಕರ್ ಅವರು ನಂಬಿರುತ್ತಾರೆ ಎಂಬುದು ಅತ್ಯಂತ ಗಮನಾರ್ಹ ಸಂಗತಿ.
ಚರಿತ್ರೆ ಎಂಬುದು ಒಂದು ಕನಸಾಗಲೀ ಇಲ್ಲವೇ ಭ್ರಮೆಯಾಗಲೀ ಅಲ್ಲ ಹಾಗೂ ಚರಿತ್ರೆಯೆಂಬುದು ಒಂದು ನಿರ್ವಾತವೂ ಅಲ್ಲ ಮತ್ತು ತೆರಪುಗಳನ್ನು ತುಂಬುವ ಪ್ರಕ್ರಿಯೆಯೂ ಅಲ್ಲ. ಬದಲಾಗಿ ಅದೊಂದು ಸಾಮಾಜಿಕ-ಸಾಂಸ್ಕೃತಿಕ-ರಾಜಕೀಯ ಗ್ರಹಿಕೆ ಮತ್ತು ಜ್ಞಾನಶಿಸ್ತು ಆಗಿರುತ್ತದೆ. ಜ್ಞಾನಶಿಸ್ತುಗಳು ಮತ್ತು ಗ್ರಹಿಕೆಗಳು ಸಮೂಹ ಕೇಂದ್ರಿತವಾಗಿರುಬೇಕೆ ಹೊರತು ಕೇವಲ ರಾಜಕೀಯ-ಸಾಮಾಜಿಕ ಪ್ರಾಬಲ್ಯವನ್ನು ಹೊಂದಿರುವ ವ್ಯಕ್ತಿಗಳ ಇಲ್ಲವೇ ಆಳುವ ವರ್ಗಗಳನ್ನು ಮಾತ್ರ ಪ್ರತಿನಿಧಿಸುವ ವಿನ್ಯಾಸಗಳಾಗಿ ಇವುಗಳು ಇರಲಾರವು. ಚರಿತ್ರೆಯೂ ಒಂದು ಜ್ಞಾನಶಿಸ್ತೇ ಆಗಿರುವುದರಿಂದ, ಇದು ಬಹುಸಮೂಹಗಳನ್ನು ಪ್ರತಿನಿಧಿಸುವ ವಿನ್ಯಾಸವಾಗಬೇಕು ಎಂಬ ಅಚಲವಾದ ನಿಲುವನ್ನು ಅಂಬೇಡ್ಕರ್ ಅವರು ತಾಳಿದ್ದರು. ಯಾವುದೇ ಗ್ರಹಿಕೆಯು ಸಮೂಹ ಕೇಂದ್ರಿತವಾಗಿರುತ್ತದೆ ಎನ್ನುವ ನಿಲುವಿನಲ್ಲಿ ಅಂಬೇಡ್ಕರ್ ಅವರಿಗೆ ತಾತ್ವಿಕ ಹಾಗೂ ವೈಯಕ್ತಿಕವಾಗಿ ಅಪಾರವಾದ ನಂಬಿಕೆಯಿತ್ತು.
ಹಾಗಾಗಿ ಅಂಬೇಡ್ಕರ್ ಅವರು ನಿನ್ನೆಗಳನ್ನು ಕುರಿತಾದ ತಾತ್ವಿಕ ಪ್ರಶ್ನೆಗಳನ್ನು ಮೈಮೇಲೆ ಎಳೆದುಕೊಂಡು, ಅವುಗಳಿಗೆ ಉತ್ತರಗಳನ್ನು ಹುಡುಕುವ ಪ್ರಯತ್ನವನ್ನು ಮಾಡಿರುತ್ತಾರೆ. ನಿನ್ನೆಗಳು ತಮ್ಮ ಹಕ್ಕುಗಳೆಂದು ಯಾರು ವಾದಿಸುವವರೋ ಅವರೆಲ್ಲರಿಗೂ, ವರ್ತಮಾನದಲ್ಲಿ ಉಂಟಾಗಿರುವ ಬಿಕ್ಕಟ್ಟುಗಳಿಗೆ ಈ ನಿನ್ನೆಗಳು ಹೇಗೆ ಹೊಣೆಯಾಗಿವೆ ಎಂಬ ದಿಟವನ್ನು ಅರಿಯುವುದಕ್ಕೆ ಬೇಕಾದ ವಿಶ್ಲೇಷಣೆಗಳನ್ನು ಇವರು ಮಾಡಿರುತ್ತಾರೆ. ಅಂಬೇಡ್ಕರ್ ಅವರ ಈ ಹಾದಿಯು ಎಲ್ಲರಿಗೂ ಒಪ್ಪಿತವಾಗುವ ಸತ್ಯವನ್ನು ಹೇಳುವುದಲ್ಲ. ಬದಲಾಗಿ, ಎಲ್ಲ ಸಮೂಹಗಳ ಇವತ್ತಿನ ಬದುಕಿಗೆ ಅಗತ್ಯವಾಗಿರುವ ಹಾದಿಗಳನ್ನು ರೂಪಿಸುವುದಾಗಿತ್ತು. ಆದ್ದರಿಂದ, ಸದ್ಯದ ಚರಿತ್ರೆ, ಸಾಹಿತ್ಯ, ಸಂಸ್ಕೃತಿ, ಆರ್ಥಿಕತೆ ಹಾಗೂ ರಾಜಕಾರಣವನ್ನು ವಿಶ್ಲೇಷಿಸುವುದಕ್ಕೆ ಅಂಬೇಡ್ಕರ್ ಅವರು ರೂಪಿಸಿದ ಈ ತಾತ್ವಿಕ ವಿನ್ಯಾಸಗಳು ಅತ್ಯಂತ ಸಮರ್ಪಕವಾಗಿರುತ್ತವೆ. ಇವರ ಈ ತಾತ್ವಿಕ ವಿನ್ಯಾಸಗಳಲ್ಲಿ ಅನ್ಯ ಪ್ರಭಾವಕ್ಕಿಂತ ಪ್ರೇರಣೆಗಳನ್ನು ಮಾತ್ರ ನಾವು ಕಾಣುತ್ತೇವೆ. ಆದ್ದರಿಂದ ಅಂಬೇಡ್ಕರ್ ಅವರು ರೂಪಿಸಿದ ಮರುರಚನೆಯ (ರೀಕನ್ಸ್ಟ್ರಕ್ಸನ್) ಮಾದರಿಗಳು ಕೇವಲ ತೆರಪುಗಳನ್ನು ತುಂಬುವ ರಚನೆಗಳಾಗದೆ, ವರ್ತಮಾನದ ಬಿಕ್ಕಟ್ಟುಗಳಿಗೆ ಇವುಗಳು ಹೇಗೆ ಕಾರಣವಾಗಿರುತ್ತವೆ ಹಾಗೂ ಇವುಗಳಿಗೆ ಉತ್ತರಗಳನ್ನು ಕಂಡುಕೊಳ್ಳುವ ಬಗೆಗಳಾವುವು ಎಂಬೆಲ್ಲ ಸಂಗತಿಗಳನ್ನು ಕುರಿತು ಅತ್ಯಂತ ವಸ್ತುನಿಷ್ಠ ವಿಶ್ಲೇಷಣೆಗಳನ್ನು ತಮ್ಮ ಬರಹಗಳಲ್ಲಿ ಮಾಡಿರುತ್ತಾರೆ.
ಅಂಬೇಡ್ಕರ್ ಅವರಿಗಿಂತ ಮೊದಲು ಇಂತಹದೊಂದು ನೋಟಕ್ರಮಕ್ಕೆ ಚಾಲನೆಯನ್ನು ಕೊಟ್ಟವರು ಜ್ಯೋತಿರಾವ್ ಫುಲೆಯವರು. ಆದರೆ ಇವರಿಬ್ಬರ ತಿಳಿವಳಿಕೆಗಳನ್ನು ಹೋಲಿಸಿ ನೋಡುವ ಉದ್ದೇಶಕ್ಕಿಂತ, ಸಮೂಹಕೇಂದ್ರಿತ ಆಲೋಚನೆಯ ಕ್ರಮಗಳು ಬೆಳೆಯುವುದಕ್ಕೆ ಬೇಕಾಗಿರುವ ಚಾರಿತ್ರಿಕ ಒತ್ತಡಗಳು ಹೇಗಿರುತ್ತವೆ ಎಂಬ ದಿಟವನ್ನು ಅರಿಯುವುದಕ್ಕೆ, ಫುಲೆಯವರ ಚಿಂತನೆಗಳನ್ನು ಇಲ್ಲಿ ಚರ್ಚಿಸಲಾಗಿದೆ. ಹಾಗೂ ಭಾರತದ ಸನ್ನಿವೇಶದಲ್ಲಿ ಚರಿತ್ರೆ ಕಥನಶಾಸ್ತ್ರಗಳ ವಿಭಿನ್ನ ಸ್ವರೂಪವನ್ನೂ ಈ ಮೂಲಕ ಅರಿಯಬಹುದಾಗಿದೆ. ಜ್ಞಾನಶಿಸ್ತುಗಳನ್ನು ರೂಪಿಸುವ ಪ್ರಕ್ರಿಯೆಯ ಭಾಗವಾಗಿ ಈ ಹಾದಿಯನ್ನು ಕರ್ನಾಟಕದ ವಿದ್ವತ್ ಲೋಕದಲ್ಲಿ ಇಡೀಯಾಗಿ ಅನುಸರಿಸುವುದನ್ನು ನಾನು ಕಾಣಲಾರೆ.
ಅಂದರೆ ಯಾರೂ ಈ ಹಾದಿಯನ್ನು ತುಳಿಯುತ್ತಿಲ್ಲವೆಂದು ಅರ್ಥವಲ್ಲ. ಬದಲಾಗಿ ಇದುವೇ ಮುಖ್ಯಧಾರೆ ಚಿಂತನೆಯ ಕ್ರಮವಾಗಿ ಭಾರತ ಇಲ್ಲವೇ ಕರ್ನಾಟಕದಲ್ಲಿ ಇನ್ನೂ ಬೆಳೆದಿಲ್ಲವೆಂದರ್ಥ. ಆದರೆ ಅಂಬೇಡ್ಕರ್ ಚಿಂತನೆಯ ಮಾದರಿಯೆಂಬುದನ್ನು ಕೇವಲ ಪರ್ಯಾಯ ಆಲೋಚನೆಯ ಕ್ರಮವನ್ನಾಗಿ ಮಾತ್ರ ನೋಡಲಾಗಿದೆ. ಈ ನಿಲುವು ಸರಿಯಲ್ಲ. ಏಕೆಂದರೆ, ಸಮೂಹಕೇಂದ್ರಿತ ಆಲೋಚನೆಯ ಕ್ರಮಗಳೇ ನಮ್ಮ ಮುಖ್ಯಧಾರೆಯ ಆಲೋಚನೆಯ ಕ್ರಮಗಳಾಗಬೇಕಾದ ತುರ್ತು ಇದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂತರಂಗ
ಸಂಪಾದಕೀಯ | ದಾವಣಗೆರೆ ದಕ್ಷಿಣ ಉಪಚುನಾವಣೆ: ಪ್ರತಿಷ್ಠೆಯ ಹೋರಾಟದಲ್ಲಿ ಜನರ ಧ್ವನಿ ಪ್ರಬಲವಾಗಲಿ
~ಗೋವರ್ಧನ ನವಿಲೇಹಾಳು
ಮಧ್ಯ ಕರ್ನಾಟಕದ ಹೃದಯಭಾಗವಾದ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಈಗ ಉಪಚುನಾವಣೆಯ ಕಾವು ಏರುತ್ತಲೇ ಇದೆ. ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಅವರ ನಿಧನದಿಂದಾಗಿ ಖಾಲಿಯಾದ ಈ ಕ್ಷೇತ್ರದಲ್ಲಿ ಏಪ್ರಿಲ್ 9, 2026ರಂದು ಮತದಾನ ನಡೆಯಲಿದೆ. ಫಲಿತಾಂಶ ಮೇ 4ರಂದು ಪ್ರಕಟವಾಗಲಿದೆ. ಈ ಉಪಚುನಾವಣೆಯು ಕೇವಲ ಒಂದು ಸೀಟಿನ ಹೋರಾಟವಲ್ಲ; ಇದು ಕರ್ನಾಟಕ ರಾಜಕೀಯದಲ್ಲಿ ಪ್ರತಿಷ್ಠೆ, ಕುಟುಂಬ ವಾರಸುದಾರಿಕೆ, ಸಮುದಾಯ ಸಮೀಕರಣಗಳು ಮತ್ತು ಅಭಿವೃದ್ಧಿ ನಿರೀಕ್ಷೆಗಳ ನಡುವಿನ ಸಂಕೀರ್ಣ ಸಮರವಾಗಿದೆ.
ಶಾಮನೂರು ಶಿವಶಂಕರಪ್ಪ ಅವರು ತಾನು ಸ್ಪರ್ಧಿಸಿದ ಈ ಕ್ಷೇತ್ರವನ್ನು ಎಂದೂ ಸೋಲದೆ ಉಳಿಸಿಕೊಂಡಿದ್ದರು. ಅವರ ನಂತರ ಕಾಂಗ್ರೆಸ್ ಪಕ್ಷವು ಅವರ ಮೊಮ್ಮಗ ಸಮರ್ಥ್ ಶಾಮನೂರು ಅವರನ್ನು ಅಭ್ಯರ್ಥಿಯಾಗಿ ಕಣಕ್ಕಿಳಿಸಿದೆ. ಇದು ಕಾಂಗ್ರೆಸ್ ಹೇಳುವಂತೆ “ಕುಟುಂಬಕ್ಕೆ ಟಿಕೆಟ್ ನೀಡುವ ಸಾಂಪ್ರದಾಯಿಕ ನಡೆ”ಯಾಗಿದೆ. ಬಿಜೆಪಿ ಪಕ್ಷವು ಶ್ರೀನಿವಾಸ್ ಟಿ. ದಾಸಕರಿಯಪ್ಪ ಅವರನ್ನು ಅಭ್ಯರ್ಥಿಯಾಗಿ ಘೋಷಿಸಿದೆ. ಇದರ ಜೊತೆಗೆ SDPIಯ ಅಫ್ಸರ್ ಕೊಡ್ಲಿಪೇಟೆ, ಸಾದಿಕ್ ಪೈಲ್ವಾನ್ ಸೇರಿದಂತೆ 25 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಆದರೆ ಮುಖ್ಯ ಹೋರಾಟ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆಯೇ ಇದೆ .
ಈ ಉಪಚುನಾವಣೆಯಲ್ಲಿ ಮುಸ್ಲಿಂ ಸಮುದಾಯದ ಪಾತ್ರ ನಿರ್ಣಾಯಕವಾಗಿದೆ. ಕ್ಷೇತ್ರದಲ್ಲಿ ಮುಸ್ಲಿಂ ಮತದಾರರ ಸಂಖ್ಯೆ ಸುಮಾರು 40% ಇದೆ ಎಂದು ಅಂದಾಜು. ಶಾಮನೂರು ಕುಟುಂಬಕ್ಕೆ ಐತಿಹಾಸಿಕ ಬೆಂಬಲವಿದ್ದರೂ, ಈ ಬಾರಿ ಮುಸ್ಲಿಂ ನಾಯಕರು ಟಿಕೆಟ್ ಆಕಾಂಕ್ಷೆಯನ್ನು ವ್ಯಕ್ತಪಡಿಸಿದ್ದರು. ಕಾಂಗ್ರೆಸ್ ಪಕ್ಷವು ಕುಟುಂಬ ವಾರಸುದಾರಿಕೆಯನ್ನು ಆಯ್ಕೆ ಮಾಡಿದ್ದಕ್ಕೆ ಅಸಮಾಧಾನ ವ್ಯಕ್ತವಾಗಿದೆ. ಸಚಿವ ಜಮೀರ್ ಅಹಮದ್ ಅವರ ಪ್ರಚಾರ ಮತ್ತು ಸಿಎಂ ಸಿದ್ದರಾಮಯ್ಯ ಅವರ ಭೇಟಿಗಳು ಈ ಅಸಮಾಧಾನವನ್ನು ತಣಿಸುವ ಪ್ರಯತ್ನವಾಗಿದೆ. ಆದರೆ ಮುಸ್ಲಿಂ ಮತಗಳ ವಿಭಜನೆಯ ಸಾಧ್ಯತೆ ಇದೆ. SDPI ಮತ್ತು ಇತರ (ಕಾಂಗ್ರೆಸ್ ಸಾದಿಕ್ ಅವರನ್ನು ಪೈಲ್ವಾನ್ ತಟಸ್ಥರಾಗಿರುವಂತೆ ಹೇಳಿದೆ) ಮುಸ್ಲಿಂ ಅಭ್ಯರ್ಥಿಗಳು ಈ ವಿಭಜನೆಯನ್ನು ಹೆಚ್ಚಿಸುವ ಸಾಧ್ಯತೆಯಿದೆ. ಬಿಜೆಪಿ ಎಸ್ಟಿ ಅಭ್ಯರ್ಥಿಯನ್ನು ಕಣಕ್ಕಿಳಿಸಿ ಅಹಿಂದ ಮತಗಳನ್ನು ಸೆಳೆಯುವ ತಂತ್ರ ರೂಪಿಸಿದೆ.
ಕಾಂಗ್ರೆಸ್ ಪಕ್ಷಕ್ಕೆ ಈ ಉಪಚುನಾವಣೆ ಪ್ರತಿಷ್ಠೆಯ ವಿಷಯವಾಗಿದೆ. ರಾಜ್ಯದಲ್ಲಿ ಆಡಳಿತಾರೂಢ ಪಕ್ಷವಾಗಿ ತನ್ನ ಬಲವನ್ನು ಉಳಿಸಿಕೊಳ್ಳುವುದು ಅತ್ಯಗತ್ಯ. ಸಿಎಂ ಸಿದ್ದರಾಮಯ್ಯ ಅವರು ಬಜೆಟ್ನಲ್ಲಿ ದಾವಣಗೆರೆ ದಕ್ಷಿಣಕ್ಕೆ 100 ಕೋಟಿ ರೂಪಾಯಿ ಅನುದಾನ ಘೋಷಿಸಿದ್ದು, ಇದು ಉಪಚುನಾವಣೆಗೆ ಮುನ್ನ ಜನರನ್ನು ಆಕರ್ಷಿಸುವ ಪ್ರಯತ್ನವಾಗಿ ಕಾಣುತ್ತಿದೆ. ಅನುಕಂಪದ ಅಲೆಯೂ ಕಾಂಗ್ರೆಸ್ಗೆ ಬೆಂಬಲ ನೀಡುವ ಸಾಧ್ಯತೆಯಿದೆ. ಆದರೆ ಪಕ್ಷದಲ್ಲಿ ಬಂಡಾಯದ ಬಿಸಿ ತಟ್ಟಿದೆ. ಕಾಂಗ್ರೆಸ್ ನ ಬಂಡಾಯ ಅಭ್ಯರ್ಥಿ ಸಾದಿಕ್ ಪೈಲ್ವಾನ್ ಅವರನ್ನು ಪಕ್ಷ ಚುನಾವಣೆಯಲ್ಲಿ ತಟಸ್ಥರಾಗಿರುವಂತೆ ಹೇಳಿದೆ. ಆದರೆ ಇದು ಮುಸಲ್ಮಾನರ ಒಳಮುನಿಸನ್ನು ತಣಿಸುತ್ತದೆಯೇ ಅಥವಾ ಮತ ವಿಭಜನೆಗೆ ಕಾರಣವಾಗುತ್ತದೆಯೇ ಎಂಬುದು ಫಲಿತಾಂಶದ ಮೇಲೆ ಪರಿಣಾಮವನ್ನಂತೂ ಬೀರುತ್ತದೆ.
ಬಿಜೆಪಿ ಪಕ್ಷಕ್ಕೆ ಇದು ನೈತಿಕ ಸ್ಥೈರ್ಯವನ್ನು ಹೆಚ್ಚಿಸುವ ಅವಕಾಶ. 2023ರ ವಿಧಾನಸಭಾ ಚುನಾವಣೆಯಲ್ಲಿ ಶಾಮನೂರು ಶಿವಶಂಕರಪ್ಪ ಅವರು ಬಿಜೆಪಿ ಅಭ್ಯರ್ಥಿ ಅಜಯ್ ಕುಮಾರ್ ಅವರನ್ನು ಸುಮಾರು 27,888 ಮತಗಳ ಅಂತರದಿಂದ ಸೋಲಿಸಿದ್ದರು. ಈ ಬಾರಿ ಬಿಜೆಪಿ “ಬದಲಾವಣೆ”ಯ ಸಂದೇಶವನ್ನು ನೀಡುತ್ತಿದೆ. ಅಭಿವೃದ್ಧಿ ಕೊರತೆ, ಗ್ಯಾರಂಟಿ ಯೋಜನೆಗಳ ವೆಚ್ಚ ಮತ್ತು ಸರ್ಕಾರದ ನೀತಿಗಳ ವಿರುದ್ಧ ವಾಗ್ದಾಳಿ ನಡೆಸುತ್ತಿದೆ. ಶ್ರೀನಿವಾಸ್ ದಾಸಕರಿಯಪ್ಪ ಅವರು ಕುಟುಂಬ ರಾಜಕಾರಣಕ್ಕೆ ವಿರುದ್ಧ ಧ್ವನಿ ಎತ್ತುತ್ತಿದ್ದಾರೆ. ಆದರೆ ಬಿಜೆಪಿಗೆ ಕ್ಷೇತ್ರದಲ್ಲಿ ಐತಿಹಾಸಿಕ ಬೆಂಬಲ ಕಡಿಮೆ. ಮುಸ್ಲಿಂ ಮತ್ತು ಅಹಿಂದ ಮತಗಳನ್ನು ತನ್ನತ್ತ ಸೆಳೆಯುವುದು ಅವರ ದೊಡ್ಡ ಸವಾಲು.
ದಾವಣಗೆರೆ ದಕ್ಷಿಣ ಕ್ಷೇತ್ರವು ಕೈಗಾರಿಕೆ, ವ್ಯಾಪಾರ ಮತ್ತು ಕೃಷಿಯ ಸಮ್ಮಿಶ್ರಣವಾಗಿದೆ. ರಸ್ತೆಗಳು, ನೀರಾವರಿ, ಉದ್ಯೋಗ, ಶಿಕ್ಷಣ ಮತ್ತು ಆರೋಗ್ಯ ಸೌಲಭ್ಯಗಳು ಜನರ ಮುಖ್ಯ ನಿರೀಕ್ಷೆಗಳು. ಹಿರಿಯ ಶಾಸಕರ ಕಾಲದಲ್ಲಿ ಕ್ಷೇತ್ರಕ್ಕೆ ಅನೇಕ ಅಭಿವೃದ್ಧಿ ಕಾರ್ಯಗಳು ನಡೆದಿದ್ದವು. ಆದರೆ ಇಂದು ಯುವಕರ ಉದ್ಯೋಗ, ಮಹಿಳೆಯರ ಸುರಕ್ಷತೆ ಮತ್ತು ಸ್ಥಳೀಯ ಸಮಸ್ಯೆಗಳು ಬಗೆಹರಿಯಬೇಕಿದೆ. ಉಪಚುನಾವಣೆಯಲ್ಲಿ ಅಭ್ಯರ್ಥಿಗಳು ಭರವಸೆಗಳ ಮಳೆ ಸುರಿಸುತ್ತಿದ್ದಾರೆ. ಆದರೆ ಜನರು ನೋಡುವುದು ಕಾರ್ಯನಿರ್ವಹಣೆಯನ್ನು. 100 ಕೋಟಿ ಅನುದಾನ ಘೋಷಣೆಯಂತಹ ಕ್ರಮಗಳು ತಾತ್ಕಾಲಿಕ ಆಕರ್ಷಣೆಯಾಗಬಹುದು, ಆದರೆ ಸುಸ್ಥಿರ ಅಭಿವೃದ್ಧಿ ಅಗತ್ಯ.
ರಾಜಕೀಯವು ಜನಸೇವೆಗಾಗಿ ಇರಬೇಕು, ಅಧಿಕಾರಕ್ಕಾಗಿ ಅಲ್ಲ ಎಂಬುದು ಎಲ್ಲರೂ ಹೇಳುವ ಮಾತು. ಆದರೆ ವಾಸ್ತವದಲ್ಲಿ ಕುಟುಂಬ ರಾಜಕಾರಣ, ಜಾತಿ-ಸಮುದಾಯ ಲೆಕ್ಕಾಚಾರಗಳು ಪ್ರಬಲವಾಗಿವೆ. ದಾವಣಗೆರೆ ದಕ್ಷಿಣದಲ್ಲಿ ಶಾಮನೂರು ಕುಟುಂಬದ ವರ್ಚಸ್ಸು ದೀರ್ಘಕಾಲದ್ದು. ಇದು ಜನಸೇವೆಯ ಫಲವೋ ಅಥವಾ ವ್ಯವಸ್ಥೆಯ ದೌರ್ಬಲ್ಯವೋ ಎಂಬುದನ್ನು ಜನರು ನಿರ್ಧರಿಸಬೇಕು. ಬಿಜೆಪಿ “ಬದಲಾವಣೆ”ಯ ಸಂದೇಶ ನೀಡುತ್ತಿದ್ದರೂ, ಅದು ಕೇವಲ ವಿರೋಧ ಪಕ್ಷದ ಧ್ವನಿಯಾಗಿ ಉಳಿಯದೆ ಸಕಾರಾತ್ಮಕ ಪರ್ಯಾಯವಾಗಬೇಕು.
ಈ ಉಪಚುನಾವಣೆಯಲ್ಲಿ ಮತದಾರರ ಜವಾಬ್ದಾರಿ ದೊಡ್ಡದು. ಅನುಕಂಪ, ಕುಟುಂಬ ನಿಷ್ಠೆ ಅಥವಾ ಸಮುದಾಯ ಲೆಕ್ಕಾಚಾರಕ್ಕಿಂತ ಹೆಚ್ಚಾಗಿ ಅಭಿವೃದ್ಧಿ, ಪಾರದರ್ಶಕತೆ ಮತ್ತು ಜನೋಪಯೋಗಿ ಕಾರ್ಯಗಳನ್ನು ಆಧರಿಸಿ ಮತ ನೀಡಬೇಕು. ಯುವಕರು ಮತ್ತು ಮಹಿಳೆಯರು ಹೆಚ್ಚು ಸಕ್ರಿಯರಾಗಬೇಕು. ಮತದಾನ ಶೇಕಡಾ 80ಕ್ಕಿಂತ ಹೆಚ್ಚು ಆಗುವಂತೆ ಮಾಡುವುದು ಪ್ರಜಾಪ್ರಭುತ್ವದ ಆರೋಗ್ಯಕ್ಕೆ ಸೂಚಕ.
ಕರ್ನಾಟಕ ರಾಜಕೀಯದಲ್ಲಿ ಉಪಚುನಾವಣೆಗಳು ಸಣ್ಣ ಪರೀಕ್ಷೆಗಳು. ದಾವಣಗೆರೆ ದಕ್ಷಿಣದ ಫಲಿತಾಂಶವು 2028ರ ವಿಧಾನಸಭಾ ಚುನಾವಣೆಗೆ ಸಂದೇಶ ನೀಡುತ್ತದೆ. ಕಾಂಗ್ರೆಸ್ ಗೆದ್ದರೆ ಅದು ತನ್ನ ಬಲವನ್ನು ಮತ್ತಷ್ಟು ಭದ್ರಪಡಿಸಿಕೊಳ್ಳುತ್ತದೆ. ಬಿಜೆಪಿ ಗೆದ್ದರೆ ಅದು ವಿರೋಧ ಪಕ್ಷವಾಗಿ ತನ್ನ ಸಾಮರ್ಥ್ಯವನ್ನು ತೋರಿಸುತ್ತದೆ. ಆದರೆ ಗೆಲುವು ಯಾರದ್ದಾದರೂ, ಜಯಿಸುವುದು ದಾವಣಗೆರೆ ದಕ್ಷಿಣದ ಜನರೇ ಆಗಬೇಕು.
ಈ ಹೋರಾಟದಲ್ಲಿ ರಾಜಕೀಯ ಪಕ್ಷಗಳು ಜನರ ಸಮಸ್ಯೆಗಳನ್ನು ಕೇಂದ್ರದಲ್ಲಿ ಇರಿಸಿಕೊಂಡು ಪ್ರಚಾರ ಮಾಡಲಿ. ಮತದಾರರು ತಮ್ಮ ಧ್ವನಿಯನ್ನು ಸ್ಪಷ್ಟವಾಗಿ ಮತ್ತು ನಿರ್ಭಯವಾಗಿ ವ್ಯಕ್ತಪಡಿಸಲಿ. ದಾವಣಗೆರೆ ದಕ್ಷಿಣ ಉಪಚುನಾವಣೆಯು ಪ್ರಜಾಪ್ರಭುತ್ವದ ಸೌಂದರ್ಯವನ್ನು ಪ್ರದರ್ಶಿಸುವ ಅವಕಾಶವಾಗಲಿ. ಅಭಿವೃದ್ಧಿ, ಸಮಾನತೆ ಮತ್ತು ಪಾರದರ್ಶಕ ಆಡಳಿತದತ್ತ ಕ್ಷೇತ್ರ ಸಾಗಲಿ ಎಂಬುದೇ ನಮ್ಮ ಆಶಯ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂತರಂಗ
250ಕ್ಕೂ ಹೆಚ್ಚು ಗಿಳಿಗಳ ನಿಗೂಢ ಸಾವು ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ ಆತಂಕ
250ಕ್ಕೂ ಹೆಚ್ಚು ಗಿಳಿಗಳ ನಿಗೂಢ ಸಾವು
ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ ಆತಂಕ
ಬೆಂಗಳೂರು: ಮಧ್ಯಪ್ರದೇಶ ರಾಜ್ಯದ ಖಾರ್ಗೋನ್ ಜಿಲ್ಲೆಯಲ್ಲಿರುವ ನರ್ಮದಾ ನದಿ ತೀರದಲ್ಲಿ 250ಕ್ಕೂ ಹೆಚ್ಚು ಗಿಳಿಗಳು ಕೃಷಿ ಭೂಮಿಯಲ್ಲಿ ಬಳಸುವ ಕೀಟನಾಶಕ ಮಿಶ್ರಿತ ಆಹಾರ ಅಥವಾ ನರ್ಮದಾ ನದಿಯ ಕಲುಷಿತ ನೀರು ಸೇವಿಸಿ ಸಾವನ್ನಪ್ಪಿರುವ ಪ್ರಕರಣ ಇಡೀ ದೇಶದಲ್ಲಿ ಇದೇ ಮೊದಲ ಬಾರಿಗೆ ನಡೆದ ದುರ್ಘಟನೆ ಎಂದು ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷರೂ ಹಾಗೂ ರಾಷ್ಟ್ರೀಯ ಸಮಿತಿ ನಿರ್ದೇಶಕರಾದ ಮಾಲತೇಶ್ ಅರಸ್ ಹರ್ತಿಕೋಟೆ ಆತಂಕ ವ್ಯಕ್ತಪಡಿಸಿದ್ದಾರೆ.
ಕಳೆದ ಮೂರು ದಿನಗಳಲ್ಲಿ ನರ್ಮದಾ ನದಿ ತೀರದಲ್ಲಿ ಸುಮಾರು ಇನ್ನೂರಕ್ಕೂ ಅಧಿಕ ಗಿಳಿಗಳು ನಿಗೂಢವಾಗಿ ಸಾವನ್ನಪ್ಪಿದ್ದು ಆರಂಭದಲ್ಲಿ ಇದು ಹಕ್ಕಿ ಜ್ವರ ದಿಂದ ಸಾವನ್ನಪ್ಪಿರಬಹುದು ಎಂದು ಶಂಕಿಸಲಾಗಿತ್ತು ಆದರೆ ಪಶುವೈದ್ಯಕೀಯ ಅಧಿಕಾರಿ ಡಾ. ಸುರೇಶ್ ಬಫೇಲ್ ಅವರು ನೀಡಿದ ಮಾಹಿತಿ ಪ್ರಕಾರ ಹಕ್ಕಿಗಳ ಹೊಟ್ಟೆಯಲ್ಲಿ ಅಕ್ಕಿ ಕಾಳುಗಳು ಮತ್ತು ಸಣ್ಣ ಕಲ್ಲುಗಳು ಪತ್ತೆಯಾಗಿವೆ. ಅಲ್ಲದೆ ಕೃಷಿ ಭೂಮಿಯಲ್ಲಿ ಬಳಸುವ ಕೀಟನಾಶಕ ಮಿಶ್ರಿತ ಆಹಾರ ಅಥವಾ ನರ್ಮದಾ ನದಿಯ ಕಲುಷಿತ ನೀರು ಸೇವಿಸಿ 200 ರಿಂದ 50 ಕ್ಕೂ ಅಧಿಕ ಮೃತಪಟ್ಟಿರುವ ಸಾಧ್ಯತೆಗಳು ಹೆಚ್ಚಿವೆ ಎಂದು ಹೇಳಿದ್ದು ಇವರ ಮಾಹಿತಿಯನ್ನು ಆದರಿಸಿ ವಿಶೇಷ ತನಿಖೆ ಮಾಡಬೇಕು ಎಂದು ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ ಆಗ್ರಹಿಸಿದೆ.
ಖರ್ಗೋನ್ ಜಿಲ್ಲೆಯ ಬದ್ವಾ ಪ್ರದೇಶದ ನರ್ಮದಾ ನದಿ ತೀರದಲ್ಲಿರುವ ಅಕ್ವೆಡಕ್ಟ್ ಸೇತುವೆಯ ಸಮೀಪ ಈ ಘಟನೆ ಬೆಳಕಿಗೆ ಬಂದಿದ್ದು ಅರಣ್ಯ ಇಲಾಖೆಯು ಸೇತುವೆಯ ಸುತ್ತಮುತ್ತ ಹಕ್ಕಿಗಳಿಗೆ ಆಹಾರ ನೀಡುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಿದೆ. ಸದ್ಯ ಹಕ್ಕಿಗಳ ಸಾವಿಗೆ ನಿಖರ ಕರಣ ತಿಳಿಯಲು ಹಕ್ಕಿಗಳ ಅವಶೇಷಗಳನ್ನು ಜಬಲ್ಪುರಕ್ಕೆ ಕಳುಹಿಸಲಾಗಿದೆ. ಸದ್ಯ ಅರಣ್ಯ ಇಲಾಖೆ ಮತ್ತು ಪಶುವೈದ್ಯಕೀಯ ತಂಡಗಳು ಸ್ಥಳದಲ್ಲೇ ಬೀಡುಬಿಟ್ಟಿದ್ದು, ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿವೆ.
ಇನ್ನೊಂದು ಮುಖ್ಯ ವಿಚಾರ ಏನೆಂದರೆ ಪಕ್ಷಿಗಳಿಗೆ ಮನುಷ್ಯರು ಸೇವಿಸುವ ಎಣ್ಣೆ ಪದಾರ್ಥ ಅಥವಾ ಬೇಯಿಸಿದ ಆಹಾರ ನೀಡುವುದು ಅವುಗಳ ಜೀರ್ಣಾಂಗ ವ್ಯವಸ್ಥೆಯ ಮೇಲೆ ಮಾರಕ ಪರಿಣಾಮ ಬೀರುತ್ತದೆ ಎಂದು ಪಶುವೈದ್ಯಕೀಯ ಅಧಿಕಾರಿ ಡಾ. ಮನಿಷಾ ಚೌಹಾಣ್ ಹೇಳಿದ್ದಾರೆ. ಏನೇ ಆದರೂ ನೂರಾರು ಗಿಳಿಗಳು ಸಾವನ್ನಪಿರುವುದು ಮಾತ್ರ ದುರಂತ.
ಈ ಸಂದರ್ಭದಲ್ಲಿ ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷರೂ ಹಾಗೂ ರಾಷ್ಟ್ರೀಯ ಸಮಿತಿ ನಿರ್ದೇಶಕರಾದ ಮಾಲತೇಶ್ ಅರಸ್ ಹರ್ತಿಕೋಟೆ, ಹಿರಿಯ ಉಪಾಧ್ಯಕ್ಷರಾದ ಗುರುರಾಜ್ ಹೂಗಾರ್, ಉಪಾಧ್ಯಕ್ಷರಾದ ಯೋಗೀಶ್ ಕುಮಾರ್, ರುದ್ರಮುನಿ, ಡಾ.ಸಿದ್ದಲಿಂಗಪ್ಪ, ಮತ್ತು ಪದಾಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

-
ದಿನದ ಸುದ್ದಿ7 days agoದಾವಣಗೆರೆ ದಕ್ಷಿಣ ವಿಧಾನಸಭಾ ಉಪ ಚುನಾವಣೆ: ಶೇ. 68.55ರಷ್ಟು ಮತದಾನ
-
ದಿನದ ಸುದ್ದಿ7 days agoದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ: ವಿಜ್ಞಾನ ವಿಭಾಗಕ್ಕೆ ಅಗ್ರಸ್ಥಾನ
-
ದಿನದ ಸುದ್ದಿ6 days agoಸಂವಿಧಾನದ ಆಶಯಗಳನ್ನು ಜಾರಿಗೊಳಿಸುವ ಕೆಲಸ ನಾವು ಮಾಡುತ್ತಿದ್ದೀವಾ ಎಂದು ಪತ್ರಕರ್ತರು ಪ್ರಶ್ನಿಸಿಕೊಳ್ಳಬೇಕು : ಸಿಎಂ ಸಿದ್ದರಾಮಯ್ಯ
-
ಅಂಕಣ3 days agoಇತಿಹಾಸ ಕಥನಶಾಸ್ತ್ರ: ಅಂಬೇಡ್ಕರ್ ಅವರ ಚಿಂತನೆಯ ಹಾದಿ
-
ದಿನದ ಸುದ್ದಿ17 hours agoವಯೋವೃದ್ಧರ ಸಾಮಾಜಿಕ ಆರ್ಥಿಕ ಸ್ಥಿತಿಗತಿ ಅಧ್ಯಯನ
-
ದಿನದ ಸುದ್ದಿ4 days agoಚಿಕ್ಕಮಗಳೂರು | ನೂತನ ಭದ್ರಾ ಸೇತುವೆ ಲೋಕಾರ್ಪಣೆಗೊಳಿಸಿ
-
ದಿನದ ಸುದ್ದಿ3 days agoನಾಳೆ ಡಾ. ಬಿ.ಆರ್. ಅಂಬೇಡ್ಕರ್ ಅವರ 135 ನೇ ಜನ್ಮ ದಿನಾಚರಣೆ
-
ದಿನದ ಸುದ್ದಿ2 days agoಸಮಾನತೆಯ ಸಮಾಜ ನಿರ್ಮಾಣಕ್ಕೆ ಸಂವಿಧಾನವೇ ಭದ್ರ ಬುನಾದಿ: ಗಂಗಾಧರಸ್ವಾಮಿ ಜಿ.ಎಂ




