Connect with us

ಅಂತರಂಗ

ಧರ್ಮ ಮರ್ಮ-03 : ದೈವಿಕತೆ ಮತ್ತು ಧಾರ್ಮಿಕತೆ

Published

on

  • ಯೋಗೇಶ್ ಮಾಸ್ಟರ್

ದೇವರ ಪರಿಕಲ್ಪನೆ ವಿಶ್ವದ ಬಹುತೇಕ ಸಂಸ್ಕೃತಿಗಳಲ್ಲಿ ಭಯದ ಮೂಲವೇ ಆಗಿದ್ದು, ನಂತರ ಅದನ್ನು ಸುಧಾರಿಸಿದಂತಹ ಉದಾಹರಣೆಗಳು ಧಾರಾಳವಾಗಿ ಕಾಣುತ್ತದೆ. ಇಂದಿನ ಭಾಷೆಯಲ್ಲಿ ಭಾರತೀಯರು ಎನ್ನುವುದಾದರೂ ಸ್ಪಷ್ಟ ಸೀಮೆ, ಸಂಸ್ಕೃತಿ, ಭಾಷೆ, ಜನಾಂಗವೇನೂ ಇಲ್ಲದ ಈ ನೆಲದ ವಿವಿಧ ನೆಲೆಗಳಲ್ಲೇ ದೇವರ ಕಲ್ಪನೆಗಳು ಅನೇಕ ರೀತಿಗಳಲ್ಲಿ ಉಂಟಾದವು.

ಆದರೆ, ನಂತರ ರಾಜಕೀಯವಾಗಿ ಮತ್ತು ಭೌಗೋಳಿಕವಾಗಿ, ಮಾತಾಡುವ ಭಾಷೆಯೂ ಸೇರಿದಂತೆ ಜನಗಣಗಳನ್ನು ಒಂದು ಮಾಡಿರುವ ಕಾರಣಕ್ಕಾಗಿ, ರಾಷ್ಟ್ರೀಯತೆಯ ಹೆಸರಿನಲ್ಲಿ, ಅದಕ್ಕೂ ಮೀರಿ ಜಗತ್ಕುಟುಂಬದ ಪರಿಕಲ್ಪನೆಯಲ್ಲಿ ಈ ವಿವಿಧತೆಗಳಲ್ಲಿ ಏಕತೆಯನ್ನು ಕಾಣುವ ಪ್ರಯತ್ನವನ್ನು ಹಲವಾರು ದಿಕ್ಕುಗಳಿಂದ ಮಾಡುತ್ತಿದ್ದರೂ ಸಾಧ್ಯವಾಗಿಲ್ಲ. ಬಹುಶಃ ಸಾಧ್ಯವಾಗುವುದೂ ಇಲ್ಲ.

ನಿರ್ಧಮೀಯವಾಗಿ, ಸಂಪ್ರದಾಯರಹಿತವಾಗಿ ಏಕತೆಯನ್ನು ಸಾಧಿಸಲು ಸಾಧ್ಯವಾಗುವುದು ಜೀವಸೂಕ್ಷ್ಮವಾದ ಮಾನವೀಯ ನೆಲೆಗಟ್ಟಿನಿಂದ ಯೋಚಿಸಲು ಸಮರ್ಥವಾದಾಗ ಮಾತ್ರ. ಏಕತೆಯೆಂದರೆ ಆಲೋಚನೆಯಷ್ಟೇ. ಆ ಆಲೋಚನೆಯನ್ನು ಖಾಸಗಿಯಾಗಿ ತಮ್ಮದೆಂದು ಭಾವಿಸುವುದು. ಧರ್ಮವೂ ಕೂಡಾ ಒಂದು ಆಲೋಚನೆಯೇ ಆಗಿದೆ. ವಾಸ್ತವವಾಗಿ ಮನುಷ್ಯನೆಂದು ನಾವು ಯಾವ ಜೀವವರ್ಗಕ್ಕೆ ಕರೆಯುತ್ತೇವೆಯೋ ಆ ತಳಿಯು ಮೂಲದಲ್ಲಿ ಪ್ರಾಣಿಯೇ ಆಗಿದ್ದು ಒಂದು ವಿಶಿಷ್ಟ ಗುಣ ಲಕ್ಷಣವೆಂದರೆ ಮನಸ್ಸು.

ಈ ಮನಸ್ಸಿನ ಕಾರಣದಿಂದಲೇ ಅವನಿಗೆ ಆಲೋಚಿಸಲು ಸಾಧ್ಯವಾಗಿರುವುದು. ಪ್ರಾಣಿಗಳಿಗಿರುವಂತೆ ಪ್ರವೃತ್ತಿಯೂ ಕೂಡಾ ಸಹಜವಾಗಿ ಇದೆ ಮತ್ತು ಆ ಪ್ರವೃತ್ತಿಯನ್ನು ಕ್ರಮಬದ್ಧಗೊಳಿಸಿಕೊಂಡು ತನ್ನ ಜೀವನವನ್ನು ಮುಂಗಾಣುವಂತಹ ಆಲೋಚನಾ ಶಕ್ತಿಯೂ ಇದೆ. ಈ ಆಲೋಚನೆಯಿಂದಾಗಿ ತರ್ಕವೂ ಸಾಧ್ಯವಾಗುತ್ತದೆ.

ಈ ಮನಸ್ಸಿಗೆ ಇರುವ ಆಲೋಚನಾ ಶಕ್ತಿಯ ಪರಿಣಾಮವಾಗಿ ತನ್ನ ದೈಹಿಕ, ಮಾನಸಿಕ, ಬೌದ್ಧಿಕ ಮತ್ತು ಭಾವನಾತ್ಮಕ ಚಟುವಟಿಕೆಗಳನ್ನು ತಾನೇ ನೋಡಿಕೊಳ್ಳಬಲ್ಲ. ಹಾಗೆಯೇ ಇತರರದನ್ನು ಗಮನಿಸಬಲ್ಲ. ತನ್ನ ಹಿಂದಿನದನ್ನು ಸ್ಮರಣೆಗೆ ತಂದುಕೊಂಡು ಅದನ್ನು ದಾಖಲು ಮಾಡಲು ಸಾಧ್ಯವಾಗುತ್ತದೆ. ಮುಂದಿನದನ್ನು ದೂರದೃಷ್ಟಿಯಿಂದ ಗ್ರಹಿಸಿ ಅದಕ್ಕೆ ಯೋಜನೆಗಳನ್ನು ರೂಪಿಸಿಕೊಳ್ಳಲೂ ಸಾಧ್ಯವಾಗುತ್ತದೆ.

ಒಂದು ಸ್ಪಷ್ಟವಾಗಿ ತಿಳಿದುಕೊಳ್ಳೋಣ. ಪ್ರಾಣಿಗಳ ಪ್ರವೃತ್ತಿಯೂ ಮತ್ತು ಮನುಷ್ಯನ ವೈಚಾರಿಕ ಮನಸ್ಸೂ ಏಕಕಾಲದಲ್ಲಿ ನಮ್ಮಲ್ಲಿ ಅಸ್ತಿತ್ವದಲ್ಲಿರುವುದರಿಂದಲೇ ಮನುಕುಲ ವಿಕಾಸದ ಚರಿತ್ರೆಯಲ್ಲಿ ಸಂಘರ್ಷಗಳನ್ನು, ದಾಳಿಗಳನ್ನು, ಯುದ್ಧಗಳನ್ನು ಸತತವಾಗಿ ಕಾಣುತ್ತಿದ್ದೇವೆ. ಅಹಂಕಾರ ಎನ್ನುವುದು ವ್ಯಕ್ತಿಗತವಾಗಿರುವ ಒಂದು ಸ್ವಕೇಂದ್ರಿತ ಭಾವ. ಈ ಭಾವವು ವರವೂ ಹೌದು, ಶಾಪವೂ ಹೌದು. ಈ ಅಹಂಕಾರದ ಭಾವವನ್ನು ಮನುಷ್ಯ ತನ್ನಲ್ಲಿ ಮತ್ತು ತನ್ನಂತೆಯೇ ಇರುವ ಇತರರಲ್ಲಿ ಸ್ಪಷ್ಟವಾಗಿ ಗುರುತಿಸಿದ.

ಹಾಗೂ ಅದರಿಂದಾಗುವ ಒಳಿತು ಮತ್ತು ಕೆಡಕುಗಳನ್ನೂ ಕೂಡಾ ಕಂಡುಕೊಂಡ. ಆದರೆ ಕೆಡುಕು ಎನ್ನುವುದು ಸಹಜವಾಗಿ ಆಗ್ರಹ ಮತ್ತು ಆಕ್ರೋಶಭರಿತವಾಗಿದ್ದು ರಭಸವನ್ನು ಹೊಂದಿರುತ್ತದೆ. ಒಳಿತು ಎನ್ನುವುದು ರಭಸ ರಹಿತವಾಗಿ ಸಾತ್ವಿಕವಾಗಿರುವುದರಿಂದ, ಅಗ್ರಗಾಮಿಯಾಗಿಲ್ಲದಿರುವುದರಿಂದ ಅದು ಕೆಡುಕಿನ ರಭಸವನ್ನು ತಡೆಯಲಾರದ ಕಾರಣದಿಂದ ಒಂದು ಕ್ರಮಕ್ಕೆ ಮನುಷ್ಯನ ಮನವನ್ನು ಒಳಪಡಿಸಲೇ ಬೇಕಾಗಿರುವಂತಹ ಅನಿವಾರ್ಯವಿತ್ತು.

ಆದಿಮ ಕಾಲದಲ್ಲಿ ಮನುಷ್ಯರು ಮನುಷ್ಯರಿಂದಲೇ ಎರಡು ಬಹುದೊಡ್ಡ ಸಮಸ್ಯೆಯನ್ನು ಎದುರಿಸುತ್ತಿದ್ದರು. ಒಂದು ಬಲಶಾಲಿ ಮನುಷ್ಯರು ನಿರ್ಬಲರನ್ನು ನಿಗ್ರಹಿಸುತ್ತಿದ್ದರು. ಈ ನಿರ್ಬಲರು ದಾರ್ಷ್ಟ್ಯದ ಮತ್ತು ಆಕ್ರಮಣಕಾರಿಯಾದ ಬಲಶಾಲಿಗಳನ್ನು ಎದುರಿಸಲು ಸಂಘಟಿತರಾಗಬೇಕಿತ್ತು. ಅವರೂ ಶಕ್ತಿಶಾಲಿಗಳಾಗಬೇಕಿದೆ ಎಂಬುದನ್ನು ಕೆಲವರು ಮನಗಂಡರು.

ಆದರೆ ಇವರೂ ಬರಿದೇ ಶಕ್ತಿಶಾಲಿಗಳಾಗಿಬಿಟ್ಟಿದ್ದರೆ ಈ ಮೊದಲ ಕೇಡಿನ ವರ್ತನೆಗಳ ಶಕ್ತಿಶಾಲಿಗಳಂತೆಯೇ ವರ್ತಿಸುವ ಸಾಧ್ಯತೆಯೂ ಇರುವುದರಿಂದ ಒಂದು ಕ್ರಮದೊಳಗೆ ಅವರನ್ನು ಅಡಕ ಮಾಡಿಸುವ ಒಂದು ಅನಿವಾರ್ಯತೆ ಇತ್ತು. ಆ ಅನಿವಾರ್ಯತೆಯ ಫಲವೇ ಧರ್ಮ. ನಿರ್ಬಲರ ಮೇಲಿನ ಅನುಕಂಪವೇ ಧರ್ಮಗಳ ಉಗಮಕ್ಕೆ ಕಾರಣವಾಯಿತು.

ಪಶುತನದ ಕೆಂಡ

ಮನುಷ್ಯನ ಆಲೋಚನೆಗಳನ್ನು ಒಂದು ನಿರ್ಧಿಷ್ಟ ಕ್ರಮಕ್ಕೆ ಒಳಪಡಿಸಿದರೆ ಅಷ್ಟಕ್ಕೆ ಸುಮ್ಮನಾಗುವ ವರ್ಗವಲ್ಲ ಈ ಮಾನವ. ಅವನಲ್ಲಿ ಸ್ವಾಭಾವಿಕವಾದಂತಹ ಪಶುಪ್ರವೃತ್ತಿ ಸದಾ ಬೂಧಿ ಮುಚ್ಚಿದ ಕೆಂಡದಂತೆ ಇದ್ದೇ ಇರುತ್ತದೆ. ಅದಕ್ಕಾಗಿ ಆದಿಮ ಕಾಲದ ಪ್ರಕೃತಿಯ ವಿದ್ಯಮಾನಗಳಿಗೆ ಪಟ್ಟ ಭಯದ ಪ್ರತಿಫಲವಾಗಿ ಹುಟ್ಟಿದ ದೇವರ ಪರಿಕಲ್ಪನೆಯನ್ನು ಜಾಣ ನಾಯಕ ತೆಗೆದುಕೊಂಡ.

ತನ್ನನ್ನು ಪ್ರವಾದಿಯೆಂದು ಕರೆಯಿಸಿಕೊಂಡ ಆ ಜಾಣ ಮತ್ತು ಕರುಣಾಮಯಿ ಮನುಷ್ಯ ತನ್ನ ಸೂಕ್ಷ್ಮಗ್ರಹಿಕೆಗಳನ್ನು, ಕ್ರಮಕ್ಕೊಳಪಡಿಸುವ ರೀತಿಗಳನ್ನು ಮತ್ತು ದೂರಾಲೋಚನೆಗಳನ್ನು ತನ್ನೊಡನೆ ಇರುವವರಿಗೆ ದಾಟಿಸಲು ದೇವರನ್ನು ಮಾಧ್ಯಮವನ್ನಾಗಿಸಿಕೊಂಡ. ಇಲ್ಲವಾದರೆ ಇವನೂ ನಮ್ಮಂತೆಯೇ ಇರುವವನಾದರೆ ನಾವೇಕೆ ಇವನ ಮಾತನ್ನು ಕೇಳಬೇಕು? ಇದು ಮನುಷ್ಯನ ಸಾಧಾರಣ ಅಹಂಕಾರದ ಧೋರಣೆ.

ಅವನು ತಮ್ಮ ಜೀವನದ ಕ್ರಮವನ್ನೇ ನಿರ್ದೇಶಿಸಲು ಹೊರಟಿದ್ದಾನೆಂದರೆ ಒಂದೋ ಅವನು ಅತಿಮಾನುಷನಾಗಿರಬೇಕು, ಅಥವಾ ಮಾನವನಲ್ಲದೇ ಸರ್ವಶಕ್ತಿ ಇರುವಂತಹ ದೇವರು ತಾನು ಆಯ್ದ ಅವನ ಮೂಲಕ ತನ್ನ ಮಾತುಗಳನ್ನು ಹೇಳಬೇಕು. ಬೈಬಲ್ಲಂತೂ ಈ ವೈಚಾರಿಕತೆಯನ್ನು ತನ್ನ ಆದಿಕಾಂಡದಲ್ಲಿ ಬಹಳ ಸುಂದರವಾದ ಕಥನದ ರೂಪಕದಲ್ಲಿ ಕಟ್ಟಿಕೊಡುತ್ತದೆ.

ತನ್ನ ಶಕ್ತಿಯ ಬಗ್ಗೆ ಅಭಿಮಾನವಿದ್ದು ಅಹಂಕಾರದಿಂದ ತನ್ನ ದಾರ್ಷ್ಟ್ಯವನ್ನು ಪ್ರದರ್ಶಿಸುವ ಮನುಷ್ಯನ ಶಕ್ತಿಗೆ ಎಟುಕಲಾರದ ಶಕ್ತಿಯಾದ ದೇವರ ಪರಿಕಲ್ಪನೆ ಅವನನ್ನು ಭಯದಲ್ಲಿ ಹಿಡಿದಿಡಲೇ ನಂತರ ಬಳಕೆಯಾದದ್ದು. ಹಾಗೆಯೇ ಧರ್ಮವು ಈ ದಾರ್ಷ್ಟ್ಯದ ಮಾನವರನ್ನು ಕ್ರಮಗೊಳಿಸಿ ನಿರ್ಬಲರನ್ನು ರಕ್ಷಿಸಲೆಂದೇ ಜಾಣನೂ, ಅನುಭಾವಿಯೂ, ಅನುಕಂಪಪೂರಿತನೂ ಆದ ಮನುಷ್ಯನ ದಯೆಯಿಂದ ರೂಪುಗೊಂಡಿದ್ದು.
ಒಟ್ಟಿನಲ್ಲಿ ಇಷ್ಟು ತಿಳಿದುಕೊಳ್ಳೋಣ. ಭಯವೇ ದೇವರ ಮೂಲ. ದಯವೇ ಧರ್ಮದ ಮೂಲ.

ಇನ್ನು ಹಲವಾರು ಆಯಾಮಗಳಿಂದ ಧರ್ಮವನ್ನು ವಿವಿಧ ದೇಶಗಳಲ್ಲಿ, ವಿವಿಧ ಕಾಲಗಳಲ್ಲಿ ವಿವರಿಸಲು ಯತ್ನಿಸಿದ್ದಾರೆ. ಆ ವಿವರಣೆಗಳಿಗೂ ಆಯಾ ಪ್ರದೇಶಗಳ ಸಾಮಾಜಿಕ ವಿದ್ಯಮಾನಗಳು ಕಾರಣವಾಗಿರುತ್ತವೆ. ಅವುಗಳನ್ನು ಮುಂದೆ ಸಂದರ್ಭಾನುಸಾರ ನೋಡೋಣ.

ಒಟ್ಟಾರೆ ಧರ್ಮ, ಸಂಪ್ರದಾಯ, ನಂಬಿಕೆ ಇತ್ಯಾದಿಗಳ ಸಂಕೋಲೆಯಲ್ಲಿ ದೇವರನ್ನು ಬಂಧಿಸಿ, ತಾವು ಸೃಷ್ಟಿಸಿದ ದೇವರನ್ನು ತಮ್ಮ ಸೃಷ್ಟಿಕರ್ತನನ್ನಾಗಿ ಮಾಡಿಕೊಂಡು, ತನ್ನ ಪ್ರತಿರೂಪದಂತೆ ದೇವರು ತಮ್ಮನ್ನು ಸೃಷ್ಟಿಸಿದ ಎಂದು ತಮ್ಮ ಪ್ರತಿರೂಪವನ್ನು ಅವನಿಗೆ ಆರೋಪಿಸಿದ ಹೆಗ್ಗಳಿಗೆ ನಮ್ಮ ಮಾನವ ಜನಾಂಗಕ್ಕಿದೆ.

ಮಾನವನ ಶಕ್ತಿಯ ವಿಕಾಸ, ವಿಸ್ತರಣೆಯ ಮತ್ತು ಸಾಮರ್ಥ್ಯದ ಭೀಕರತೆಗಳನ್ನು ಮಾನವನೇ ಅರಿಯುತ್ತಿದ್ದಂತೆ, ಮಾನವನೇ ಇದನ್ನು ಒಂದು ತಹಂಬದಿಗೆ ತರಲು ಮತ್ತೊಂದು ಪರಿಕಲ್ಪನೆಯನ್ನು ಸೃಷ್ಟಿಸಿದ ಅಥವಾ ಸೃಷ್ಟಿಯಾಗಿದ್ದ ದೇವರ ಪರಿಕಲ್ಪನೆಯನ್ನು ಗಟ್ಟಿಗೊಳಿಸಿದ. ಈ ದೇವರ ಪರಿಕಲ್ಪನೆಯು ನಿರ್ಬಲರಿಗೆ ಭರವಸೆಯಾದರೆ, ಮತ್ತೂ ಕೆಲವರಿಗೆ ಶೋಷಣೆಯ ಅಸ್ತ್ರವಾಗಿದ್ದು ಮಾತ್ರ ವಿಪರ್ಯಾಸ.

ವಿಕಾಸವಾದ ಮಾನವನ ಬುದ್ಧಿಮತ್ತೆ

ಭೌತಿಕವಾಗಿ ಮಾನವನ ಶಕ್ತಿಯ ವಿಕಾಸವಾದದ್ದೇನೂ ನಮಗೆ ಕಾಣುವುದಿಲ್ಲ. ಸಹಸ್ರಾರು ವರ್ಷಗಳ ಹಿಂದೆ ಇದ್ದಂತಹ ಮನುಷ್ಯನ ದೈಹಿಕ ಸಾಮರ್ಥ್ಯವನ್ನು ಅಥವಾ ಅದೇ ಶಾರೀರಿಕ ಬಲದ ಉದಾಹರಣೆಗಳನ್ನು ಈಗಲೂ ಕಾಣಬಹುದು. ಆದರೆ ಜೀವನ ಪದ್ಧತಿ, ಆಹಾರ ಮತ್ತು ಉಡುಗೆ ತೊಡುಗೆಗಳ ಪದ್ಧತಿಗಳು, ತಂತ್ರಜ್ಞಾನದ ಬಳಕೆಗಳು ಒಂದೇ ಬಗೆಯಾಗಿ ಕಾಣುವುದಿಲ್ಲ.

ಅದೇ ಹಳೆಯ ಬಗೆಯ ಶರೀರಗಳು, ಅವೇ ಕಣ್ಣುಗಳು, ಅವೇ ಕೈಗಳು, ಅವೇ ಕರಳುಗಳು, ಯಕೃತ್ತು ಇತ್ಯಾದಿ, ಆದರೆ ಅವುಗಳು ಬಳಸುತ್ತಿರುವ ವಸ್ತುಗಳು, ಸೇವನೆಗಳು ಮತ್ತು ಪಡೆಯುತ್ತಿರುವ ಪೋಷಣೆಗಳಲ್ಲಿ ಧ್ರುವಾಂತರ ಮತ್ತು ಯುಗಾಂತರಗಳ ವ್ಯತ್ಯಾಸಗಳನ್ನು ಕಾಣಬಹುದು. ಆಗಿಲ್ಲದ ತಂತ್ರಜ್ಞಾನ ಈಗಿದೆ. ಆಗಿಲ್ಲದ ಜೀವನಪದ್ಧತಿ ಈಗ ಬಳಕೆಯಲ್ಲಿದೆ.

ಈಗ ನಾವು ಉಪಯೋಗಿಸುತ್ತಿರುವ, ಉಪಭೋಗಿಸುತ್ತಿರುವ ಆವಿಷ್ಕಾರದ ಫಲಗಳು ದೀರ್ಘಕಾಲದ, ಹಲವು ಜನಗಳ ಪ್ರಯತ್ನಗಳ, ತಪ್ಪು ಮತ್ತು ಪ್ರಯತ್ನಗಳಿಂದ ರೂಪುಗೊಂಡಿರುವವೇ. ಹಾಗೆಯೇ ನಮ್ಮ ಮುಂದಿನ ಪೀಳಿಗೆಗಳ ಬಳಕೆ ಮತ್ತು ಜೀವನ ಪದ್ಧತಿಯಲ್ಲಿ ಇನ್ನೂ ಮುಂದುವರಿದ ಅಥವಾ ವಿಕಸಿತ ಬದಲಾವಣೆಗಳನ್ನು ಕಾಣುವುದರಲ್ಲಿ ಯಾವ ಆಶ್ಚರ್ಯವೂ ಇಲ್ಲ.

ಆ ರೀತಿಯ ಬದಲಾವಣೆಗೆ ತಮ್ಮ ಬುದ್ಧಿ ಅಥವಾ ಮಿದುಳಿನ ಸಾಮರ್ಥ್ಯದ ಬಳಕೆಯೇ ಮತ್ತು ಅದರ ವ್ಯಾಪ್ತಿಯ ಅಪಾರ ಬಳಕೆಯೇ ಕಾರಣವಲ್ಲದೇ ಬೇರೇನೂ ಅಲ್ಲ. ಹಾಗೆಯೇ ಚಿಂತನಾ ಕ್ರಮ ಮತ್ತು ವಿಚಾರ ಧಾಟಿಯೂ ಕೂಡ ಬದಲಾಗುತ್ತಾ ಬಂದಿತು. ಆಗಿಲ್ಲದ ದೇವರು, ಧರ್ಮ, ನಂಬಿಕೆಗಳು ಈಗೆಲ್ಲಿಂದ ಬಂದವು? ಅವು ಹೇಗೆ ಬದಲಾಗದಂತಹ ಸತ್ಯವಾಯಿತು? ಯಾವ ದೇವರೂ, ಧರ್ಮವೂ ಈ ಜಗತ್ತಿನ ಸೃಷ್ಟಿಯಿಂದ ಇರಲಿ, ಮನುಷ್ಯನ ಸೃಷ್ಟಿಯಿಂದಲೇ ಇರಲಿಲ್ಲ.

ಮನುಕುಲ ವಿಕಾಸದ ಯಾವುದೋ ಒಂದು ಹಂತದಲ್ಲಿ ತನ್ನ ಆಲೋಚನೆಗಳಿಂದ ಉತ್ಪನ್ನವಾದ ವಿಚಾರಗಳಿಂದ ದೇವರು ಜಗತ್ತನ್ನು ಸೃಷ್ಟಿಸಿದನೆಂಬುದನ್ನು ಮನುಷ್ಯ ಹೇಗೆ ಗ್ರಹಿಸಿದ? ಕಾಣದ ದೇವರನ್ನು ಯಾರು, ಹೇಗೆ ಕಂಡ? ದೇವರೆಂಬುದು ಗ್ರಹಿಸಿದ, ವಿಚಾರ ಮಾಡಿದ, ಕಲ್ಪಿಸಿಕೊಂಡ, ವಿವಿಧ ಸತ್ವ, ಸಾರ, ಶಕ್ತಿಗಳಿಗೆ ಆರೋಪಿಸಿದಂತಹ ಪರಿಕಲ್ಪನೆಯೇ ಹೊರತು ಎಂದಿಗೂ ಸಾಕಾರಸ್ತಿತ್ವದಲ್ಲಿ ಕಾಣುವಂತಹ ಸತ್ಯವೇನಲ್ಲ.

ಆದರೂ ವಿಕಾಸವಾಗಿಸಲು ಒಪ್ಪದ ದೇವರ ಮತ್ತು ಧರ್ಮವನ್ನು, ಭಿನ್ನ ಬೇಧಗಳನ್ನು ಉಂಟು ಮಾಡುವ ಅವುಗಳ ಪ್ರಭಾವವು ಮನುಕುಲದ ಮೇಲೆ ಕಂಡೇ ಅದನ್ನು ಸುಧಾರಿಸಲು ಯತ್ನಿಸಿದರು. ಸಂಕೀರ್ಣವಾಗಿರುವ ಆ ನಿರಾಕಾರ ಮತ್ತು ಅಸಂಗತ ಪರಿಕಲ್ಪನೆಗಳನ್ನು ಸರಳೀಕರಣಗೊಳಿಸಿ ತಮ್ಮ ಸಹಜೀವಿಗಳನ್ನು ಒಂದು ಮಾನವೀಯ ಮತ್ತು ಉದಾರವಾದ ನೆಲೆಗಟ್ಟಿಗೆ ತರಲು ಶ್ರಮಿಸಿದರು.

ಆ ದೇವರ ಪರಿಕಲ್ಪನೆಗಳು ಜನಜೀವನದೊಳಗೆ ಅದೆಷ್ಟು ಹಾಸುಹೊಕ್ಕಾಗಿದ್ದವೆಂದರೆ, ಅವನ್ನು ನಿರಾಕರಿಸಿದರೆ, ಸುಧಾರಕರನ್ನೇ ತಿರಸ್ಕರಿಸುವ ಎಲ್ಲಾ ಸಾಧ್ಯತೆಗಳಿದ್ದವು. ಆದ್ದರಿಂದ ಆ ಪರಿಕಲ್ಪನೆಗಳನ್ನು ಸುಧಾರಿಸಲು, ತಮ್ಮ ಮುಂದುವರಿದ ಮತ್ತು ವಿಕಸಿತವಾದ ಚಿಂತನೆಗಳಿಂದ ವಿವರಿಸಲು, ಅರ್ಥ ನೀಡಲು ಪ್ರಯತ್ನಿಸಿದರು.

ಜೀವಂತವಿರುವುದರ ಲಕ್ಷಣವೇ ಬೆಳವಣಿಗೆ ಮತ್ತು ವಿಕಾಸ. ಆದರೆ, ತಮ್ಮದೇ ಆದಂತಹ ಕಾರಣಗಳಿಂದ ಈ ವಿಕಾಸವನ್ನಾಗಲಿ, ಬೆಳವಣಿಗೆಯನ್ನಾಗಲಿ ಒಪ್ಪದ ಮೂಲಭೂತವಾದಿಗಳು ಅವರನ್ನೇ ನಾಶಗೊಳಿಸಿದರು. ಅಥವಾ ಅವರ ನಂತರ ತಮ್ಮ ತೆಕ್ಕೆಗೇ ಅವರ ಚಿಂತನೆಗಳನ್ನೂ ಎಳೆದುಕೊಂಡು ಬಿಟ್ಟರು.

ದೇವರ ಸುಧಾರಕರು

ಕ್ರೈಸ್ತರ ದೇವರ ಪರಿಕಲ್ಪನೆಯ ಮೂಲ ಬ್ಯಾಬಿಲೋನಿಯನ್ನಿನ ಮಿಥಾಲಜಿಯ ಆಧಾರಿತ ವಿಚಾರಗಳಿಂದ ಮೂಡಿ, ಆದಮ, ಹವ್ವರಂತಹ ಆದಿ ಮಾನವರೂ ಮೊದಲ್ಗೊಂಡು ಯಹೂದಿಗಳ ಸಾಂಪ್ರದಾಯಿಕ ನಂಬುಗೆಗೆ ಎಡೆ ಮಾಡಿತ್ತು. ಅವುಗಳು ವಿಕಸಿತವಾದ ಹಂತಗಳು ಈಗ ನಮಗೆ ಬೇಡ. ಆದರೆ, ಯೇಸು ಎಂಬ ಸಮಾಜ ಸುಧಾರಕ ಅವರ ಪರಿಕಲ್ಪನೆಗಳನ್ನು ಸಾಮಾಜಿಕವಾಗಿ, ಆಧ್ಯಾತ್ಮಿಕವಾಗಿ, ತಾತ್ವಿಕವಾಗಿ ಸುಧಾರಿಸುವ ನಿಟ್ಟಿನಲ್ಲಿ ಮಾನವತೆಯ ಮತ್ತು ಔದಾರ್ಯದ ನೆಲೆಗಟ್ಟಿನ ಸಮಾಜದಲ್ಲಿ ಎಲ್ಲರನ್ನೂ ಒಂದುಗೂಡಿಸುವ ಪ್ರಯತ್ನ ಮಾಡಿದ.

ಈಗಲೂ ಬಹಳಷ್ಟು ಕ್ರೈಸ್ತರು ಉಪಯೋಗಿಸುವ ಶಬ್ಧ ‘ಗಾಡ್ ಫಿಯರ್’. ದೇವರು ಎಂಬುವುದಕ್ಕೆ ಇಷ್ಟವಾಗದ್ದನ್ನು ಮಾಡದೇ ಹೋದರೆ ಅದರ ಆಗ್ರಹಕ್ಕೆ ಗುರಿಯಾಗುತ್ತೇವೆಂಬ ಪರಿಕಲ್ಪನೆ ಜನರು ನೈತಿಕವಾಗಿ ಬದುಕುವುದಕ್ಕೂ, ದುರ್ಮಾಗಿಗಳಾಗದೇ ಇರುವುದಕ್ಕೂ ಸಾಧ್ಯವಾಗುವುದಕ್ಕೆ ಸಹಾಯಕವಾದದ್ದು. ಉದ್ದೇಶ ಒಳ್ಳೆಯದೇ ಆದರೂ, ನಕಾರಾತ್ಮಕವಾದ ಅನುಸಂಧಾನದ ಬದಲಾಗಿ ಭೀತಿಯನ್ನು ಪ್ರೀತಿಗೆ ಬದಲಿಸಲು ಯೇಸು ಯತ್ನಿಸಿದ.

ಭೀತಿಯನ್ನು ಪ್ರೀತಿಯನ್ನಾಗಿ ಬದಲಿಸುವುದೂ ಕೂಡ ಅತಿ ಉನ್ನತವಾದ ಕ್ರಾಂತಿಕಾರಕ ನಡೆಯೇ ಆಗಿತ್ತು. ನಿರಾಕಾರವಾಗಿರುವ ದೇವರನ್ನು ತಂದೆಯೆಂಬಂತೆ ಭಾವನಾತ್ಮಕವಾಗಿ ಸಾಕಾರಗೊಳಿಸಿ, ಪ್ರೀತಿ ಮತ್ತು ವಾತ್ಸಲ್ಯಪೂರ್ಣವಾದ ತಂದೆಯಂತೆ ಅವನನ್ನು ಬಿಂಬಿಸಿ, ಅವನ ಇಷ್ಟಕ್ಕೆ ನಡೆದುಕೊಂಡು ಪ್ರೇಮಪೂರ್ಣ ಮತ್ತು ಔದಾರ್ಯಪೂರ್ಣವಾದ ಜನರ ಸಮಾಜವನ್ನು ಉಂಟುಮಾಡಲು ಯತ್ನಿಸಿದ.

ಭೀತಿಯ ಸ್ಥಾನದಲ್ಲಿ ಪ್ರೀತಿಯು ಬಂದಿತಾದರೂ, ಧಾರ್ಮಿಕತೆಯಾಗಲಿ, ಸಾಂಪ್ರದಾಯಕ ಧೋರಣೆಗಳಾಗಲಿ ಅದನ್ನು ಒಪ್ಪಲು ತಯಾರಿರಲಿಲ್ಲ. ರಾಜಕೀಯಪ್ರೇರಿತ ಅಥವಾ ಸ್ವಸ್ಥಾನಕೇಂದ್ರಿತರಾಗಿದ್ದ ಅಂದಿನ ಪುರೋಹಿತರೇ ಯೇಸುವಿನ ವಿಚಾರಗಳನ್ನು ಅವನ ದೇಹ ಸಮೇತ ನಾಶ ಮಾಡಲು ಯತ್ನಿಸಿ ಸಫಲರೂ ಆದರು. ಆದರೆ ಕ್ರೈಸ್ತರಲ್ಲಿ ಇಂದಿಗೂ ಪಾದ್ರಿಗಳೆಂಬ ಪುರೋಹಿತರು ಇದ್ದಾರೆ ಎಂಬುದು ವಿಪರ್ಯಾಸವೋ, ಅವಶ್ಯಕವೋ, ವ್ಯಂಗ್ಯವೋ; ವಿಭಿನ್ನ ನೆಲೆಗಳ ವಿಶ್ಲೇಷಣೆಗಳಲ್ಲಿ ವಿಭಿನ್ನ ರೀತಿಗಳಲ್ಲಿ ವ್ಯಕ್ತವಾಗುತ್ತದೆ.

ಆದರೆ ಆ ಪಾದ್ರಿಗಳು ಎಂತವರೆಂಬುದು ಧರ್ಮಾಧಾರಿತವಾದುದಲ್ಲ, ವ್ಯಕ್ತಿಗತವಾದದು. ಧರ್ಮದ ಲಾಂಛನದಡಿಯಲ್ಲಿ ತಮ್ಮ ಮಾನವೀಯ ಮತ್ತು ಉದಾರವಾದ ನೆಲೆಗಟ್ಟಿನ ಆಧಾರದಲ್ಲಿ ಧಾರ್ಮಿಕತೆಯನ್ನು ವಿವರಿಸುತ್ತಾರೆ ಮತ್ತು ಆಚರಿಸುತ್ತಾರೆ.

ಇರಲಿ, ಮುಂದೆ ಕ್ರೈಸ್ತ ಧರ್ಮದ ಅವತರಣವಾದ ಮೇಲೆ ಪಿತ, ಸುತ ಮತ್ತು ಪವಿತ್ರಾತ್ಮಗಳೆಂಬ ತ್ರಿಮೂರ್ತಿಯ ಪರಿಕಲ್ಪನೆಯಿಂದ ಸೈದ್ಧಾಂತಿಕವಾಗಿ ಮತ್ತಷ್ಟು ಸಂಕೀರ್ಣಗೊಂಡಂತಹ ವಿಷಯದ ಉಗಮವಾಯ್ತು. ತಮ್ಮನ್ನು ಪಾಪಿಯೆಂದು ನಕಾರಾತ್ಮಕ ಧೋರಣೆಯನ್ನೂ ಮತ್ತು ಪ್ರೀತಿಯೆಂಬ ಸಕಾರಾತ್ಮಕ ಧೋರಣೆಯನ್ನೂ ಒಟ್ಟೊಟ್ಟಿಗೇ ಸ್ವೀಕರಿಸಿದ್ದಾರೆ.

ಒಂದು ವೇಳೆ ಯೇಸುವೆಂಬ ಸುಧಾರಕನಿಗೆ ತನ್ನ ವಿಷನ್ ಮತ್ತು ಮಿಷನ್‍ಗಳನ್ನು ಪೂರ್ಣಗೊಳಿಸಲು ಸಾಧ್ಯವಾಗಿದ್ದರೆ, ಇಂದು ಕ್ರೈಸ್ತಮತವೆಂಬುದೇ ಇರುತ್ತಿರಲಿಲ್ಲವೆಂದು ನನ್ನ ಗ್ರಹಿಕೆ. ಪಿತ, ಸುತ ಮತ್ತು ಪವಿತ್ರಾತ್ಮಗಳೂ ಇರುತ್ತಿರಲಿಲ್ಲ. ಆತನ ಸಾವಿನಾಧಾರಿತವಾದ ಆರಾಧನೆಗಳಾಗಲಿ, ಸಂಪ್ರದಾಯಗಳಾಗಲಿ ಇರುತ್ತಿರಲಿಲ್ಲ. ಪೂರ್ಣವಾಗಿ ಸಂವಹಿಸದ ಯೇಸುವಿನ ವಿಚಾರಗಳ ಅಲ್ಪ ಗ್ರಹಿಕೆಗಳು ಪೀಳಿಗೆಯಿಂದ ಪೀಳಿಗೆಗೆ ಹಸ್ತಾಂತರಗಳಾಗುತ್ತಾ ವಿಷಯಾಂತರವೇ ಆಗಿರುವುದರಲ್ಲಿ ಯಾವ ಆಶ್ಚರ್ಯವೂ ಇಲ್ಲ.

ಮನುಕುಲದಲ್ಲಿ ಶೋಷಣೆಗೆ ಒಳಗಾಗುವ ನಿರ್ಬಲರನ್ನು ಮಾನಸಿಕವಾಗಿ ಮತ್ತು ಆತ್ಮಿಕವಾಗಿ ಸದೃಢಗೊಳಿಸಲು ಉದ್ದೇಶಿಸಿದ್ದ ಯೇಸುವಿನ ಬೋಧನೆಗಳು ಮತ್ತು ದೌರ್ಜನ್ಯ ಹಾಗೂ ನಿರ್ಲಜ್ಜ ಕ್ರೌರ್ಯ ಸಂಪ್ರದಾಯದ ವಿರುದ್ಧವಾದ ಸಾತ್ವಿಕವಾದ ಕ್ರಾಂತಿಯಿಂದ ಕೂಡಿದ ಆತನ ಜೀವನ ಚರಿತ್ರೆಯ ಪರಿಕ್ಷಿಪ್ತ ರೂಪ ಬೈಬಲ್.

ಬೈಬಲ್ ಕ್ರಿಸ್ತನೆಂಬ ಜಾಣ ಮತ್ತು ದಯಾಹೃದಯದ ಒಂದು ಪರಿಚಯವನ್ನಷ್ಟೇ ನೀಡುವುದು. ಆತನ ವಾಸ್ತವ ರೂಪವನ್ನಲ್ಲ. ಹಲವಾರು ಬೈಬಲ್ಲುಗಳಿವೆ ಅವುಗಳಲ್ಲಿರುವ ಹೊಟ್ಟು ಮತ್ತು ಕಾಳುಗಳನ್ನು ಬೇರ್ಪಡಿಸುವುದು ಮತ್ತು ಅದರಿಂದ ಕ್ರಿಸ್ತನೆಂಬ ಮನುಕುಲದ ಕರುಣೆಯ ಬೀಜವನ್ನು ಹೆಕ್ಕಿ ತೆಗೆಯುವುದು ಸಾಧ್ಯ. ಆದರೆ ಸಧ್ಯಕ್ಕೆ ಈ ಲೇಖನಕ್ಕೆ ಆ ಉದ್ದೇಶವಿಲ್ಲ. ಮುಂದೆ ಕ್ರೈಸ್ತಧರ್ಮದ ಚರಿತ್ರೆಯ ಸಮಯದಲ್ಲಿ ಇದನ್ನು ವಿವರವಾಗಿ ನೋಡೋಣ.

ಇದೊಂದು ಉದಾಹರಣೆಯಷ್ಟೇ! ಯಾವುದೇ ಧಾರ್ಮಿಕ, ಸಾಮಾಜಿಕ, ಆಧ್ಯಾತ್ಮಿಕ ಸುಧಾರಕನಿಗೆ ಹಲವಾರು ರಾಜಕೀಯ, ಸಾಮಾಜಿಕ ಅಡೆತಡೆಗಳಿದ್ದು ಅಷ್ಟು ಸುಲಭವಾಗಿ ಆತನ ದೃಷ್ಟಿಯಂತೆ ತನ್ನ ಮಿಷನ್‍ನನ್ನು ಪೂರ್ಣಗೊಳಿಸಲು ಸಾಧ್ಯವಾಗುವುದಿಲ್ಲ. ಸುಧಾರಕರ, ಹೋರಾಟಗಾರರ ವಿಫಲ ಮಿಷನ್‍ಗಳ ಮುಂದುವರಿಕೆಗಳೇ ಧರ್ಮಗಳಾಗುವವು.

ಆದರೆ ಅವು ವಿಕಾಸಕ್ಕೆ ಮಾರ್ಗವಾಗದೇ, ಮಂಡೂಕಗಳ ಕೂಪಕ್ಕೆ ಮತ್ತೊಂದು ಕೊಡುಗೆಯಾಗುವುದು ಮನುಕುಲದ ದುರಾದೃಷ್ಟ. ಬುದ್ಧ, ಆದಿನಾಥ, ಮಹಾವೀರ, ಮಹಮದ್, ನಾನಕ್, ಬಸವ, ಬಹಾಯ್ ಯಾರೇ ಆಗಲಿ ಇದರಿಂದ ಹೊರತಲ್ಲ.

ಬೆಳವಣಿಕೆ ಮತ್ತು ವಿಕಾಸದ ಹಾದಿಯಲ್ಲಿಯೇ ಇರುವ ಜಗತ್ತಿನಲ್ಲಿ ಹೊಸ ಪ್ರವಾದಿಗಳು, ತೀರ್ಥಂಕರರು ಹುಟ್ಟಲಾರರೇಕೆ? ಹುಟ್ಟಿದರೂ, ಘೋಷಿಸಿಕೊಂಡರೂ ಕೇಳುವವರಾರು? ಒಪ್ಪುವುದಾದರೂ ಹೇಗೆ ಸಾಧ್ಯ?
ಹಾಗೊಮ್ಮೆ ಯಾರಾದರೂ ವೈಚಾರಿಕವಾಗಿ, ಸೈದ್ಧಾಂತಿಕವಾಗಿ ಮುಂದಾದರೂ ಜನ ಸಮೂಹ ಅವನ ಚಿಂತನೆಗಳ ಧಾರೆಯನ್ನು ಮೆಚ್ಚುವುದಕ್ಕೆ ಇಚ್ಛಿಸುವುದಿಲ್ಲ.

ತಮ್ಮ ಸಮಕಾಲೀನ ಯಾವುದೋ ಈ ವ್ಯಕ್ತಿಯನ್ನು ನಂಬಿಕೆಯ ಕೇಂದ್ರಕ್ಕೆ ಒಯ್ಯಲಾಗುವುದಿಲ್ಲ. ವಿಚಾರಗಳನ್ನು ಆಳಕ್ಕೆ ತೆಗೆದುಕೊಳ್ಳಲಾಗುವುದಿಲ್ಲ. ತಮ್ಮಂತೆ ಉಣ್ಣುವ, ಉಡುವಷ್ಟೇ ಮಾಡದೇ ಅತಿಮಾನುಷವಾದುದನ್ನು ಮಾಡಿದರೆ ಒಂದು ಹಂತಕ್ಕೆ ಒಪ್ಪಲು ಸಾಧ್ಯ! ಈ ಕಥೆ ಇಂದಿನದು ಮಾತ್ರವಲ್ಲ. ಅನಾದಿಕಾಲದಿಂದಲೂ ಹಾಗೆಯೇ ಇರುವುದು.

ಹಾಗಾಗಿಯೇ ಎಂದೋ, ಯಾವುದೋ ಕಾಲದಲ್ಲಿ ಏನೋ ಮಾಡಿ ಸತ್ತವರಷ್ಟೇ ದೇವರಾಗುತ್ತಾರೆ. ಈಗ ನಾನು ದೇವರೆಂದು ಘೋಷಿಸಿಕೊಂಡವರೆಲ್ಲಾ ಅಪಹಾಸ್ಯಕ್ಕೆ, ಟೀಕೆಗೆ ಅಥವಾ ವಿಮರ್ಶೆಗೆ ಗುರಿಯಾಗುತ್ತಾರೆ. ತಾನು ದೇವರೆನ್ನದೇ ಬರಿಯ ದೇವರ ಮಗನೆಂದು ಕರೆದುಕೊಂಡ ಕ್ರಿಸ್ತನಿಗೇ ಅಪಾಯ ತಪ್ಪಿರಲಿಲ್ಲ.

ಪುಟ್ಟಪರ್ತಿಯ ಸತ್ಯಸಾಯಿಬಾಬಾನ ಸಮಕಾಲೀನರಾದ ಮತ್ತು ಆತನ ವಿವಿಧ ವಿಷಯಗಳು ಸ್ಪಷ್ಟವಾಗಿ ತಿಳಿದಿರುವಂತಹ ಈ ನಮ್ಮ ಪೀಳಿಗೆಯು ಮುಗಿದಾದ ಮೇಲೆ ಮುಂಬರುವ ಪೀಳಿಗೆಯೊಂದು ಅವರ ಎಲ್ಲಾ ಪ್ಲಸ್ ಮತ್ತು ಮೈನಸ್ಸುಗಳನ್ನು ವಿವಿಧ ರೀತಿಗಳಲ್ಲಿ ಅರ್ಥೈಸುತ್ತಾ, ಈಗಿನ ಕೃಷ್ಣನ ಪರಿಕಲ್ಪನೆಯ ರೀತಿಯಲ್ಲಿ ಒಂದು ದೇವರನ್ನಾಗಿ ಸ್ಪಷ್ಟೀಕರಿಸಬಹುದು. ದೇವರೆನ್ನುವ ಅಭೂತಪೂರ್ವವಾದ, ಅತ್ಯದ್ಭುತವಾದ ಪರಿಕಲ್ಪನೆಗೆ ಸೇರಿಕೊಳ್ಳಲು ಮನುಷ್ಯನಿಗೆ ಹಲವು ದಾರಿಗಳುಂಟು.

(ಮುಂದುವರಿಯುವುದು)

ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂತರಂಗ

ಮರೆಯಾದ ಅಪೂರ್ವ ಚಿತ್ರಕಲಾ ಪ್ರತಿಭೆ ‘ಶೋಭಾ ಕರಣಿಕ್’

Published

on

ಶೋಭಾ ಕರಣಿಕ್
  • ಡಾ.ಎನ್.ಕೆ.ಪದ್ಮನಾಭ, ಸಹಾಯಕ ಪ್ರಾಧ್ಯಾಪಕರು, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ,ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರ,ಉಜಿರೆ

ವರು ಬಿಡಿಸುತ್ತಿದ್ದ ರೇಖೆಗಳು ನಮ್ಮ ದೇಶೀ ಸಂಸ್ಕೃತಿಯ ವಕ್ತಾರಿಕೆಯ ಪಾತ್ರ ನಿರ್ವಹಿಸುತ್ತಿದ್ದವು. ಕನ್ನಡದ್ದೇ ಆದ ಕಲಾತ್ಮಕ ಪರಂಪರೆಯನ್ನು ಸೂಕ್ಷ್ಮವಾಗಿ ಗ್ರಹಿಸಿದ್ದ ಅವರ ಚಿತ್ರಗಳು ಜೀವಂತಿಕೆಯ ಗುಣಲಕ್ಷಣದೊಂದಿಗೆ ಕಂಗೊಳಿಸುತ್ತಿದ್ದವು.

ಸಾಂಪ್ರದಾಯಿಕ ಚಿತ್ರಶೈಲಿಯನ್ನು ಆಧುನಿಕ ಅಗತ್ಯಗಳಿಗೆ ತಕ್ಕಂತೆ ಮಣಿಸಿ ಪರಂಪರೆಯೊಳಗೇ ಅಡಗಿದ್ದ ಮೌಲಿಕ ಮಾದರಿಗಳನ್ನು ಮನಗಾಣಿಸುವ ಶ್ರದ್ಧೆಯೊಂದಿಗೇ ಅವರು ಚಿತ್ರವಿನ್ಯಾಸ ರೂಪಿಸುತ್ತಿದ್ದರು. ಇನ್ಸ್ಟಾಗ್ರಾಮ್, ಫೇಸ್‌ಬುಕ್ ಮತ್ತಿತರ ಮಾಧ್ಯಮಗಳ ಮೂಲಕ ತಮ್ಮ ಚಿತ್ರಗಳನ್ನು ಕಾಣಿಸುತ್ತಿದ್ದರು. ಪರಂಪರೆ ಮತ್ತು ವರ್ತಮಾನವನ್ನು ಬೆಸೆದು ಹೊಸ ಬಗೆಯ ಚಿತ್ರಪ್ರಯೋಗಗಳನ್ನು ನಡೆಸುವ ಹುಮ್ಮಸ್ಸಿನೊಂದಿಗೆ ಚಿತ್ರಕಲಾಯಾನ ಮುಂದುವರೆಸಿದ್ದರು. ಅವರ ಹೆಸರು ಶೋಭಾ ಕರಣಿಕ್.

ಇತ್ತೀಚೆಗಷ್ಟೇ ಅವರ ಚಿತ್ರಕಲಾಯಾನ ನಿಂತಿತು. ಅವರ ನಿಧನವು ವಿನೂತನವಾದ ಪ್ರಯೋಗಶೀಲ ಚಿತ್ರಕಲಾ ಸಾಧ್ಯತೆಗಳನ್ನು ತಡೆದು ನಿಲ್ಲಿಸಿತು. ಪುರಾಣದ ಕಥನ ಪ್ರಸಂಗಗಳಲ್ಲಿ ಉಲ್ಲೇಖಿತ ದೇವರು-ದೇವತೆಗಳ ಅಸ್ಮಿತೆ ಮತ್ತು ದೇಸೀ ಸಂಸ್ಕೃತಿಯನ್ನು ಬಿಂಬಿಸುವ ವಿನ್ಯಾಸಗಳನ್ನು ಸಮನ್ವಯಗೊಳಿಸಿ ಚಿತ್ರಕಲೆಗೆ ಹೊಸ ಆಯಾಮ ತಂದುಕೊಟ್ಟ ಪ್ರತಿಭೆಯಾಗಿ ಶೋಭಾ ಕರಣಿಕ್ ಅವರದ್ದು ವಿಶೇಷ ವ್ಯಕ್ತಿತ್ವವಾಗಿತ್ತು. ಮ್ಯೂರಲ್ ಪೇಂಟಿಂಗ್‌ನಲ್ಲಿ ಅವರಿಗಿದ್ದ ಪರಿಣತಿ, ಉತ್ತರ ಕನ್ನಡದ ಕಾವಿ ಕಲೆಯ ಕುರಿತಾದ ವಿಸ್ತೃತ ಜ್ಞಾನವು ಚಿತ್ರಕಲೆಯನ್ನು ಉನ್ನತೀಕರಿಸುವುದಕ್ಕೆ ಅವರಿಗೆ ನೆರವಾಗಿತ್ತು.

ಕಲೆಯ ಜೊತೆಗಿನ ಅನುಸಂಧಾನದ ಕ್ಷಣಗಳು ಅಪೂರ್ವ. ಒಂದು ನಿರ್ದಿಷ್ಟ ನಿರ್ಣಾಯಕ ಸಂದರ್ಭ, ಸಮಯದಲ್ಲಿ ಕಲೆಯೊಂದು ವ್ಯಕ್ತಿತ್ವವನ್ನು ಪ್ರಭಾವಿಸಿ ಸೃಜನಶೀಲತೆಯ ಹಸಿವನ್ನು ನೆಲೆಗೊಳಿಸುವುದಕ್ಕೆ ಪ್ರೇರಣೆಯಾಗುತ್ತದೆ. ಕಲೆಯ ಪ್ರಭಾವ ಎರಡು ಬಗೆಯದ್ದು. ಸಹೃದಯರನ್ನು ತನ್ನ ಕಲಾತ್ಮಕ ಮಾದರಿಗಳಿಂದ ಸೆಳೆದು ಅವರೊಳಗೆ ವಿಶೇಷ ಅನುಭೂತಿ ಧಾರೆ ಎರೆಯುವಂಥದ್ದು ಒಂದು ಬಗೆಯಾದರೆ ಹೀಗೆ ಸೆಳೆದುಕೊಂಡು ಮತ್ತೆ ಮತ್ತೆ ಪ್ರಭಾವಿಸುತ್ತಾ ಸಹೃದಯರನ್ನೇ ಕಲಾವಿದರನ್ನಾಗಿಸುವ ಸಾಧ್ಯತೆ ಮತ್ತೊಂದು ತೆರನಾದದ್ದು.

ಈ ಕಾರಣಕ್ಕಾಗಿಯೇ ಕಲಾತ್ಮಕ ಸಂಭವನೀಯತೆಯು ಅನನ್ಯವೆನ್ನಿಸಿಕೊಂಡಿದೆ. ಇಂಥ ಅನನ್ಯತೆಯೊಂದಿಗೇ ಶೋಭಾ ಕರಣಿಕ್ ಗುರುತಿಸಿಕೊಂಡಿದ್ದರು. ಅವರು ಓದಿದ್ದು ತಾಂತ್ರಿಕ ವಿಜ್ಞಾನ. ಆದರೆ, ಅವರ ನಿಜದ ಪ್ರತಿಭೆ ಅಭಿವ್ಯಕ್ತವಾದದ್ದು ಚಿತ್ರಕಲೆಯ ಮೂಲಕ.

ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಪರಿಸರದಲ್ಲಿ ಬೆಳೆದ ಶೋಭಾ ಕರಣಿಕ್ ಮೊದಲಿನಿಂದಲೂ ದೇಶೀ ಕಲೆಯ ಕುರಿತು ವಿಶೇಷ ಆಸಕ್ತಿಯನ್ನು ಬೆಳೆಸಿಕೊಂಡು ಬಂದಿದ್ದರು. ಹೈಸ್ಕೂಲ್ ಓದುತ್ತಿರುವಾಗಲೇ ಕಾವಿಕಲೆಯ ವಿನ್ಯಾಸ ಅವರನ್ನು ಸೆಳೆದಿತ್ತು. ಇವುಗಳನ್ನು ಮತ್ತೆ ಮತ್ತೆ ನೋಡುತ್ತಾ ಹೋದಂತೆಲ್ಲಾ ಕಾವಿ ಕಲೆಯ ಕುರಿತ ಆಕರ್ಷಣೆ ಕಲಿಕೆಯ ಹಂಬಲವಾಗಿ ಮಾರ್ಪಟ್ಟಿತು. ಉತ್ತರ ಕನ್ನಡದ ಟೆಂಪಲ್ ರ‍್ಟ್ ಪ್ರಕಾರದ ಭಾಗವಾಗಿ ಕಾವಿ ಕಲೆಯನ್ನು ಪರಿಚಯಿಸುವ ದೃಷ್ಟಿಯಿಂದ ಅವರು ರಚಿಸಿದ್ದ ತರಹೇವಾರಿ ವಿನ್ಯಾಸಗಳು ವಿವಿಧ ಚಿತ್ರಕಲಾ ಪ್ರದರ್ಶನ ಕಾರ್ಯಕ್ರಮಗಳಲ್ಲಿ ಗಮನ ಸೆಳೆದಿದ್ದವು.

ಕಾವಿ ಕಲೆಯೂ ಸೇರಿದಂತೆ ನಮ್ಮ ಸಾಂಪ್ರದಾಯಿಕ ಕಲೆಗಳು ಈ ಹಿಂದಿನ ಕಾಲದ ತಲೆಮಾರನ್ನಷ್ಟೇ ಪ್ರಭಾವಿಸಿದ್ದಲ್ಲದೇ ನಂತರದ ಹೊಸ ಪೀಳಿಗೆಯನ್ನೂ ಆಕರ್ಷಿಸುವ ಗುಣ ಹೊಂದಿವೆ. ಮೂಲ ಅಂತಃಸತ್ವಕ್ಕೆ ಧಕ್ಕೆಯೊದಗದ ಹಾಗೆ ಹೊಸ ಕಾಲದ ಅಗತ್ಯಗಳಿಗೆ ಅನುಗುಣವಾಗಿ ಈ ಸಾಂಪ್ರದಾಯಿಕ ಚಿತ್ರಕಲಾ ವಿನ್ಯಾಸಗಳನ್ನು ಮರುರೂಪಿಸಬಹುದು. ಹೊಸ ಕಾಲದಲ್ಲಿ ಅವುಗಳ ಮಹತ್ವವನ್ನು ಮನಗಾಣಿಸಬಹುದು ಎಂಬುದು ಅವರ ಆಶಯವಾಗಿತ್ತು.

ಕಲೆಯೊಂದು ಒಂದು ಕಾಲದಿಂದ ಮತ್ತೊಂದು ಕಾಲಕ್ಕೆ ದಾಟಿಕೊಳ್ಳುವಾಗ ಪಲ್ಲಟಗಳು ಸಹಜ. ಈ ಪಲ್ಲಟಗಳನ್ನು ದೃಷ್ಟಿಯಲ್ಲಿರಿಸಿಕೊಂಡು ಇಂತಹ ಕಲೆಗಳಿಗೆ ಹೊಸಕಾಲದಲ್ಲೂ ಜೀವಂತಿಕೆಯನ್ನು ತಂದುಕೊಡುವ ಪ್ರಯತ್ನದ ಅಗತ್ಯವನ್ನು ಮನಗಾಣಿಸುವುದಕ್ಕಾಗಿಯೇ ಶೋಭಾ ಕರಣಿಕ್ ಅವರು ಚಿತ್ರಕಲಾ ರಚನೆಯ ವೈವಿಧ್ಯಮಯ ಪ್ರಯೋಗಗಳಲ್ಲಿ ತೊಡಗಿಸಿಕೊಂಡಿದ್ದರು.

ಅವರ ನಿಧನದಿಂದ ಈ ಪ್ರಯೋಗಶೀಲ ಹೆಜ್ಜೆಗಳು ನಿಂತಂತಾಗಿವೆ. ಆದರೆ, ಅವರು ಪರಂಪರೆ ಮತ್ತು ವರ್ತಮಾನವನ್ನು ಸಮನ್ವಯಗೊಳಿಸಿ ಸಾಬೀತುಪಡಿಸಿದ ಅಪೂರ್ವ ಚಿತ್ರಕಲಾ ಪ್ರಯೋಗಶೀಲತೆಯ ಜೀವಂತಿಕೆ ಹೊಸ ಪೀಳಿಗೆಗೆ ಸದಾ ಸ್ಫೂರ್ತಿಯ ಸೆಲೆಯಾಗಿರುತ್ತದೆ. ಅವರ ಹೆಸರಿನ ಇನಸ್ಟಾಗ್ರಾಂನಲ್ಲಿ ಕಾಣಿಸಿಕೊಂಡಿರುವ ಚಿತ್ರಗಳು ಇಂಥ ಸ್ಫೂರ್ತಿಯ ಪ್ರಭೆಯನ್ನು ದಾಟಿಸುತ್ತಿವೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಅಂತರಂಗ

ಹೊಸತನದ ಹೊಸ್ತಿಲಲ್ಲಿ..!

Published

on

ಬರಹ : ಮೀನಾಕ್ಷಿ. ಬಿ
  • ಮೀನಾಕ್ಷಿ .ಬಿ, ಎಂ. ಎ ವಿದ್ಯಾರ್ಥಿನಿ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ, ದಾವಣಗೆರೆ ವಿಶ್ವವಿದ್ಯಾಲಯ

ಹೊಸವರ್ಷ ವೆಂಬುದು ಪ್ರತಿಯೊಬ್ಬರ ಬಾಳಲ್ಲಿ ವರ್ಷಕ್ಕೊಮ್ಮೆ ಬರುವ ಹೊಸದಿನಗಳ ಆಗಮನ ಯಾಕೆಂದರೆ ಹೊಸತನವನ್ನು ತರುತ್ತಾ ಇರುವ ಹೊಸವರ್ಷ ಕೂಡ ಒಂದು ಜೀವನದ ಭರವಸೆ, ನಿರೀಕ್ಷೆ ಕನಸುಗಳ ಬಂಡಿಯ ಮೇಲೆ ಸಾಗುವ ಪ್ರಯಾಣ ನಮ್ಮ ಜೀವನ.

ವ್ಯಕ್ತಿಯ ನಂಬಿಕೆಯ ಆಧಾರದ ಮೇಲೆಯೇ ಜೀವನ ಸಾಗುಸುತ್ತಿರುವುದು.ಯಾಕೆಂದರೆ ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲಿಯೂ ಕೂಡ ಕಷ್ಟ -ಸುಖ ದುಃಖದ ಸಂಗತಿಗಳು ಇದ್ದೆ ಇರುತ್ತದೆ. ಕೆಲವೊಂದು ಬಾರಿ ಹತಾಶೆಯನ್ನು ಹೊಂದಿ ಜೀವನದಲ್ಲಿ ಜಿಗುಪ್ಸೆ ಒಂದು ಕೆಟ್ಟ ನಿರ್ಧಾರಕ್ಕೆ ಮನಸ್ಸು ದಾರಿ ಮಾಡಿಕೊಡುತ್ತದೆ. ಹಾಗೆಯೇ ಕಷ್ಟ ಇದ್ದಲ್ಲಿ ಸುಖವಿರುವುದುಂಟು ಅನ್ನುವ ಹಾಗೇ ಇವತ್ತಲ್ಲ ನಾಳೆ ಒಳ್ಳೆಯ ದಿನಗಳು ನಮ್ಮ ಜೀವನದಲ್ಲಿ ಬರಬಹುದೆಂಬ ಭರವಸೆ,ಆತ್ಮವಿಶ್ವಾಸವನ್ನು ಇಟ್ಟುಕೊಂಡು ಜೀವನ ನಡೆಸುತ್ತಲೇ ಇದ್ದೇವೆ.

ಈ ವರ್ಷ ಒಳ್ಳೆಯದಾಗಿಲ್ಲ ಅಂದರೆ ಏನು ಮುಂದಿನ ವರ್ಷ ಆದರೂ ನನ್ನ ಬದುಕು ಬದಲಾಗಬಹುದು ಎಂಬ ಹೊಸತನವನ್ನು ನಮ್ಮಲ್ಲಿ ಭರವಸೆ,ನಂಬಿಕೆಯ ಬೇರಿನೊಂದಿಗೆ ಬೆರೆಸಿಕೊಂಡು ಬದುಕಬೇಕು.ನಾಳೆಯ ದಿನಗಳ ಮೇಲಿನ ಅನಿರೀಕ್ಷಿತ ತೀರಿವಿನಿಂದಾಗುವ ಬದುಕಿನಲ್ಲಾಗುವ ಬದಲಾವಣೆ ಹೊಸತನದ ಚಾಪನ್ನು ಮೂಡಿಸುತ್ತದೆ.
ಎಂಥ ಹತಾಶ ಮನಸ್ಥಿತಿಯವರಲ್ಲೂ ಹೊಸವರ್ಷ ಭರವಸೆಯ ಅಭಯ ಹಸ್ತವನ್ನು ಚಾಚುತ್ತದೆ. ಅದೆಲ್ಲಿಂದಲೇ ಆತ್ಮ ವಿಶ್ವಾಸದ ಬೆಳಕಿನ ಕಿಡಿಯೊಂದು ಕಾಣಿಸಿಕೊಳ್ಳುತ್ತದೆ.

ಹೊಸವರ್ಷವೆಂಬುದು ಕೇವಲ ಸಂಭ್ರಮದ ಕಾಲ ಮಾತ್ರವಲ್ಲ. ಕಳೆದ ದಿನಗಳತ್ತ ಹಿಂತಿರುಗಿ ನೋಡುವ ಸಮಯ ಕೂಡ ಹಿಂದಿನ ದಿನಗಳ ಪುಟಗಳನ್ನು ತೆಗೆದು ನೋಡಿದರೆ. ಉತ್ಸಾಹದ ಗಳಿಗೆಗಳು ಮುಂದಿನ ಕೆಲಸಗಳಿಗೆ ಚೈತನ್ಯ, ಉತ್ಸಾಹ ನೀಡಬಲ್ಲದು.ನಮ್ಮ ದಿಕ್ಕಿಲ್ಲದ ದಾರಿಗೆ ಖಚಿತ ದಿಕ್ಕು ದಾರಿಯನ್ನು ತೋರಬಲ್ಲದು.

ಜೀವನದ ಪ್ರಯಾಣಕ್ಕೆ ಒಂದು ನಿಲ್ದಾಣವಾಗಿದೆ. ನಾವು ಕಾಣುವ ಕನಸಗಳು ಕನಸಾಗಿಯೇ ಉಳಿದಿದೆ ಯಾಕೆಂದರೆ ನಮ್ಮಲ್ಲಿನ ಬೇಜವಾಬ್ದಾರಿ, ನಿರ್ಲಕ್ಷತನ ಆಮೇಲೆ ಮಾಡಿದರೆ ಆಯ್ತು ಅನ್ನೋ ಮನೋಭಾವನೆ ಯಾವುದರ ಬಗ್ಗೆಯೂ ಆಸಕ್ತಿ ಕೊಡದೆ ಇರೋದು ಎಲ್ಲವು ನಮ್ಮ ಕನಸಿನ ಜೀವನ ರೂಪಿಸಿಕೊಳ್ಳುವಲ್ಲಿ ಸಫಲರಾಗದೆ ಉಳಿಯಲು ಕಾರಣ.

ಮೊದಲು ಆತ್ಮವಿಶ್ವಾಸ ಬೇಕು ನಾನು ಈ ಕೆಲಸವನ್ನು ಮಾಡುವೆ ಎಂಬ ಒಂದು ನಿರ್ಧಿಷ್ಟ ಗುರಿ ಇರಬೇಕು ಅಂಗಿದ್ರೆ ಅಷ್ಟೇ ಜೀವನದ ಪಯಣದ ಹಾದಿಯಲ್ಲಿ ಯಶಸ್ಸನ್ನು ಕಾಣಲು ಸಾಧ್ಯ ಇಲ್ಲವಾದಲ್ಲಿ ಸೋಲನ್ನು ಅನುಭವಿಸುವ ಪರಿಸ್ಥಿತಿ ಎದುರಾಗುತ್ತದೆ. ಮುಂದಿನ ದಿನಗಳ ಆಗಮನದೊಂದಿಗೆ ನಾವು ಕಂಡ ಕನಸನ್ನು ಈಡೇರಿಸಿಕೊಳ್ಳುವ ಸತತ ಪ್ರಯತ್ನದೊಂದಿಗೆ ಬರುವ ದಿನವನ್ನು ಸ್ವಾಗತಿಸಿಕೊಳ್ಳೋಣ.
ಎಲ್ಲರ ಬಾಳಲಿ ಹರುಷ ,ಸಂತೋಷ ಮನೆಮಾಡಲಿ ಎಂದು ಆಶಿಸುತ್ತಾ ಎಲ್ಲರಿಗೂ ಹೊಸವರ್ಷದ ಶುಭಾಶಯಗಳು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಅಂತರಂಗ

ಕಾಮರೂಪದ ಪ್ರಭಾಕರ

Published

on

  • ಪ್ರೊ.ರಹಮತ್ ತರೀಕೆರೆ

ನಾನು ಕೋಲಾರಕ್ಕೆ ಹೋದಾಗೆಲ್ಲ ಎರಡು ಜಾಗಗಳಿಗೆ ತಪ್ಪದೆ ಭೇಟಿ ಕೊಡುತ್ತೇನೆ. ಒಂದು-ಕೆ.ರಾಮಯ್ಯ ಮತ್ತವರ ಸಂಗಾತಿಗಳು ಸೇರಿ ತೇರುಹಳ್ಳಿ ಬೆಟ್ಟದ ಮೇಲೆ ಕಟ್ಟಿರುವ `ಆದಿಮ’ಕ್ಕೆ; ಇನ್ನೊಂದು-`ಕಾಮರೂಪಿ’ ಎಂಬ ಹೆಸರಲ್ಲಿ ಬರೆಯುತ್ತಿದ್ದ ಕನ್ನಡ ಲೇಖಕ ಡಾ. ಎಂ.ಎಸ್. ಪ್ರಭಾಕರ ಅವರಿರುವ ಕಠಾರಿಪಾಳ್ಯದ ಮನೆಗೆ. 50ರ ದಶಕದ ಕೊನೆಯಲ್ಲಿ ಕರ್ನಾಟಕ ಬಿಟ್ಟುಹೋದ ಪ್ರಭಾಕರ, ‘ಹಿಂದೂ’ ಪತ್ರಿಕೆಯ ವರದಿಗಾರರಾಗಿ ಆಫ್ರಿಕಾ ಅಮೇರಿಕ ಬಾಂಗ್ಲಾದೇಶ ಈಶಾನ್ಯ ಭಾರತವನ್ನೆಲ್ಲ ಅಲೆದಾಡಿ, ಕಡೆಗೆ ಕಾಮರೂಪದಲ್ಲಿ (ಅಸ್ಸಾಮಿನ ಪುರಾತನ ಹೆಸರಿದು) ನೆಲೆಸಿಬಿಟ್ಟರು.

`ಕಾಮರೂಪ’ ಶಬ್ದಕ್ಕೆ ಬಯಸಿದ ರೂಪಧಾರಣೆ ಮಾಡುವ ಮಾಯಾವಿ ವಿದ್ಯೆ ಎಂಬರ್ಥವೂ ಇದೆ. ಎಂಬತ್ತರ ಪ್ರಾಯದಲ್ಲಿ ಕರ್ನಾಟಕಕ್ಕೆ ಮರಳಿ ಬಂದಿರುವ ಪ್ರಭಾಕರ ಅವರು, ತಾವು ಹುಟ್ಟಿಬೆಳೆದ ಮನೆಯಲ್ಲಿ ಬಿಡಾರ ಹೂಡಿದ್ದಾರೆ. ಹಿರೀಕರು ಕಟ್ಟಿದ ದೊಡ್ಡಮನೆ. ಮನೆಯೊಳಗೊಂದೇ ಜೀವ; ಮನೆ ತುಂಬ ಪುಸ್ತಕದ ರಾಶಿ (ಹೆಚ್ಚಿನವು ಇಂಗ್ಲೀಶ್ ಬಂಗಾಳಿ ಅಸ್ಸಾಮಿ). ನಟ್ಟನಡುವಿರುವ ಹಾಲಿನ ಮೂಲೆಯಲ್ಲಿ ಬೀದಿಗೆ ಬೆನ್ನುಕೊಟ್ಟಂತೆ ಕೂತು, ಲ್ಯಾಪ್‌ಟಾಪಿನಲ್ಲಿ ಬರೆಯುತ್ತ, ವೆಬ್‌ಸೈಟುಗಳನ್ನು ಜಾಲಾಡುತ್ತ, ಬ್ಲಾಗುಗಳನ್ನೋದುತ್ತ ಪ್ರಭಾಕರ ಕುಳಿತಿರುತ್ತಾರೆ.

ಅವರ ಮನಗೆ ಹೋದಾಗಲೆಲ್ಲ ನನಗೆ ರಾಗಿಮುದ್ದೆ ಸೊಪ್ಪಿನ ಸಾರಿನ ಊಟ ಸಿಗುತ್ತದೆ. ಅವರು ಉಣ್ಣುವುದೊಂದು ಅಪೂರ್ವ ದೃಶ್ಯ. ತಣಿಗೆಯ ನಡುವೆ ಹದವಾಗಿ ಬೆಂದು ಕಂಪು ಬೀರುವ ಗೋಂದಿನಂತಹ ಕೆಂಗಪ್ಪು ಬಣ್ಣದ ಬಿಸಿಮುದ್ದೆಯನ್ನಿಟ್ಟು, ಅದರ ತಲೆಯ ಮೇಲೆ ಶಿಖರವನ್ನು ಹಿಮವು ಅಲಂಕರಿಸುವಂತೆ ಬೆಣ್ಣೆಯ ಚೂರನ್ನಿಡುತ್ತಾರೆ; ಬೆಣ್ಣೆಯು ಮುದ್ದೆ ಕಾವಿಗೆ ಕರಗಿ ಇಡೀ ಚೆಂಡನ್ನು ಆವರಿಸಿ ಅಭಿಷೇಕ ಮಾಡಿಸಿಕೊಂಡ ಮೂರುತಿಯಂತೆ ಥಳಥಳ ಹೊಳೆಯುತ್ತದೆ. ಆಗ ಘಮಿಸುವ ಮುದ್ದೆಯನ್ನು ಚೆನ್ನಾಗಿ ಮಿದ್ದು, ಒಂದು ಬದಿಯಿಂದ ಇಷ್ಟಿಷ್ಟೇ ಮುರಿದು ತುತ್ತು ಮಾಡಿ, ಸೊಪ್ಪಿನ ಗಟ್ಟಿಸಾರಲ್ಲಿ ಹೊರಳಾಡಿಸಿ ಗುಕ್ಕನೆ ನುಂಗಿ ಕಣ್ಮುಚ್ಚಿ ಕೊಳ್ಳುತ್ತಾರೆ. ತರುವಾಯ ಶ್ರೀಯುತರು ಜ್ಞಾನೋದಯವಾದ ಸಿದ್ಧನಂತೆ ಅವರ ಮುಖದಲ್ಲಿ ಪರಮಾನಂದದ ಒಂದು ಕಳೆ ಆವಿರ್ಭವಿಸುತ್ತದೆ. ಇದನ್ನೆಲ್ಲ ಕಾಣುವಾಗ, ಲೋಕವನ್ನೆಲ್ಲ ಸುತ್ತಾಡಿರುವ ಇವರು ಕೋಲಾರಕ್ಕೆ ಮುದ್ದೆಸುಖಕ್ಕಾಗಿಯೆ ಬಂದರೇನೊ ಎಂದು ಶಂಕೆ ಬರುತ್ತದೆ. ಪ್ರಭಾಕರ ಅವರಿಗೆ ಆಧುನಿಕ ಕನ್ನಡ ಸಾಹಿತ್ಯದ ಮೇಲೆ ಅನೇಕ ದೂರುಗಳಿವೆ. ಅವುಗಳಲ್ಲಿ ಆಹಾರ ತಯಾರಿಕೆ ಮತ್ತು ಸೇವನೆ ಕುರಿತು ಅದರಲ್ಲಿ ವಿವರಗಳೇ ಇಲ್ಲ ಎಂಬುದೂ ಒಂದು.

ಕನ್ನಡದ ಅತಿಹಿರಿಯ ಮತ್ತು ಹೆಚ್ಚು ಬರೆಯದ ಲೇಖಕರಲ್ಲಿ ಪ್ರಭಾಕರ ಅವರೂ ಒಬ್ಬರು. ನಾನು ಅವರ ‘ಕುದುರೆಮೊಟ್ಟೆ’ ಕಾದಂಬರಿಯನ್ನೂ ‘ಒಂದು ತೊಲ ಪುನುಗು ಮತ್ತು ಇತರ ಕತೆಗಳು’ ಸಂಕಲನವನ್ನೂ ಓದಿದ್ದೆ. ಇವುಗಳಲ್ಲಿ ‘ಕುದುರೆ ಮೊಟ್ಟೆ’ ಈಗಲೂ ಪ್ರಿಯವಾದ ಪುಸ್ತಕ. ಅದರಲ್ಲಿರುವ ಕೆಲವು ಪಾತ್ರಗಳು ಕೊಂಚ ವಿಕ್ಷಿಪ್ತವಾಗಿವೆ; ಅಲ್ಲಿನ ಬಾಳಿನ ಸನ್ನಿವೇಶಗಳೂ ಅನಿರೀಕ್ಷಿತವಾಗಿವೆ. ಆದರೆ ಎಲ್ಲಿಯೂ ಹುಸಿ ಅನಿಸದಂತೆ, ಒಂದೇ ಶಬ್ದ ಅಪವ್ಯಯವಾಗದಂತೆ ಅದನ್ನು ಬರೆಯಲಾಗಿದೆ. ಪಾತ್ರಗಳನ್ನು ತಮ್ಮ ಸಿದ್ಧಾಂತಕ್ಕೆ ತಕ್ಕಂತೆ ಮಣಿಸಿ ಕೈಗೊಂಬೆಯಂತೆ ಆಡಿಸುತ್ತ, ಕೆಲವನ್ನು ಮುದ್ದಾಮಾಗಿ ದುರುಳಗೊಳಿಸಿ ಕಲೆಯ ಜಾಣಮುಸುಕಿನಲ್ಲಿ ಅಡಗಿಸುತ್ತ, ಕೆಲವು ಕಾದಂಬರಿಗಳು ಕನ್ನಡದಲ್ಲಿ ಪ್ರಕಟವಾಗುತ್ತಿವೆ. ಇಂತಹ ಹೊತ್ತಲ್ಲಿ ಅರ್ಧ ಶತಮಾನದ ಹಿಂದೆ ಪ್ರಕಟವಾದ ಈ ಕಾದಂಬರಿ, ಬಾಳನ್ನು ಕುರಿತು ತೋರುವ ಕಕ್ಕುಲಾತಿ ಕಂಡು ಖುಶಿಯಾಗುತ್ತದೆ. ಕತೆಗಾರರಿಗೆ ತಾವು ಸೃಷ್ಟಿಸುವ ಕೆಲವು ಪಾತ್ರಗಳ ಮೇಲೆ ಕೊಂಚ ಭಾವ ಪಕ್ಷಪಾತವಿರುತ್ತದೆ. ಆದರೆ ತಾವು ಸೃಜಿಸುವ ಎಲ್ಲ ಪಾತ್ರಗಳನ್ನು ತಾಯಿಯಂತೆ ನೋಡುವುದು ಬರೆಹದ ನೈತಿಕತೆ. ಈ ಸಂಗತಿ ಕುವೆಂಪು ಮತ್ತು ಟಾಲ್ ಸ್ಟಾಯ್ ಕಾದಂಬರಿ ಓದಿದವರಿಗೆ ಗೊತ್ತಿದೆ.

ಕಾಮವನ್ನು ಇಟ್ಟುಕೊಂಡು ಜೀವನದ ಸತ್ಯಗಳನ್ನು ಶೋಧಿಸುವ ವಿಷಯದಲ್ಲಿ ಕಾಮರೂಪಿಯವರು, ಒಬ್ಬ ಟಿಪಿಕಲ್ ನವ್ಯಲೇಖಕರೇ. ಆದರೆ ನವ್ಯದ ಕೆಲವು ಲೇಖಕರಲ್ಲಿ ಕಾಣುವಂತೆ, ಅದಕ್ಕವರು ಅನಗತ್ಯ ಪ್ರಾಮುಖ್ಯ ಕೊಡುವುದಿಲ್ಲ. ಅದನ್ನು ಚಪ್ಪರಿಸುವುದಿಲ್ಲ. ವೈಭವೀಕರಿಸುವುದಿಲ್ಲ. ಬದಲಿಗೆ, ಮನುಷ್ಯರಾದವರು ಜೀವನದ ಇಕ್ಕಟ್ಟುಗಳಲ್ಲಿ ಸಿಲುಕಿ ಅನಿವಾರ್ಯವಾಗಿ ವರ್ತಿಸುವ ಪರಿಯನ್ನು ತಣ್ಣಗೆ ವ್ಯಂಗ್ಯವಾಗಿ ಚಿತ್ರಿಸುತ್ತಾ ಹೋಗುತ್ತಾರೆ. ಸತ್ಯಕ್ಕಿರುವ ಹಲವು ಮುಖಗಳನ್ನು ಹಿಡಿಯುವಂತಹ ಕುರುಸೋವಾನ ‘ರಶೋಮನ್’ ಸಿನಿಮಾ ನೆನಪಿಸುವ ಈ ಕಾದಂಬರಿ, ಮತ್ತೆಮತ್ತೆ ಓದಬೇಕು ಎನಿಸುವಷ್ಟು ತಾಜಾ ಆಗಿದೆ. ‘ಉಪಪತ್ತಿಯೋಗ’ ಎಂಬುದನ್ನು ಬಿಟ್ಟರೆ, ಉಳಿದಂತೆ ವ್ಯಕ್ತಿವಾದವನ್ನು ಅತಿಯಾಗಿ ಬಿಂಬಿಸುವ ತಂತ್ರದ ಬಿಗಿತದಲ್ಲಿರುವ ಅವರ ಕತೆಗಳು ಅಷ್ಟು ಆಪ್ತವೆನಿಸಿಲ್ಲ.

ನನಗೆ ಪ್ರಭಾಕರ್ ಕುರಿತು ಆಸಕ್ತಿ ಮೂಡಿಸಿದವರು ಮಾರ್ಕ್ಸ್‌ವಾದಿ ಚಿಂತಕ ಕೆ.ರಾಘವೇಂದ್ರರಾವ್ ಅವರು. ಅಮೆರಿಕೆಯ ವಿಶ್ವವಿದ್ಯಾಲಯಗಳಲ್ಲಿ ಕೆಲಸ ಮಾಡುತ್ತಿದ್ದ ಎ.ಕೆ.ರಾಮಾನುಜನರ ಹೊಂದಾಣಿಕೆಯ ಗುಣವನ್ನು ಕಟುವಾಗಿ ವಿಮರ್ಶಿಸುತ್ತ, ಅಲ್ಲಿನ ಶೈಕ್ಷಣಿಕ ಕ್ಷೇತ್ರದಲ್ಲಿರುವ ಬಿಳಿಯರ ಯಜಮಾನಿಕೆಗೆ ಬಾಗದೆ ಹೊರಬಂದ ಪ್ರಭಾಕರ ಅವರ ದಿಟ್ಟ ಸ್ವಭಾವವನ್ನು ಅವರು ತಮ್ಮ ಸಂದರ್ಶನದಲ್ಲಿ ಪ್ರಸ್ತಾಪಿಸಿದ್ದರು. ಪ್ರಭಾಕರ ಅವರನ್ನು ಭೇಟಿಯಾಗಬೇಕು ಎಂದು ಅನಿಸುತ್ತಿತ್ತು. ಅದರಲ್ಲೂ ಭಾರತದ ಶಾಕ್ತಪೀಠಗಳಲ್ಲಿ ಮುಖ್ಯವಾಗಿರುವ ಅಸ್ಸಾಮಿನ ಕಾಮಾಖ್ಯಕ್ಕೆ ಹೋಗಲು ಯತ್ನಿಸುತ್ತಿದ್ದ ನಾನು, ಅಲ್ಲೇ ಸಮೀಪದ ಗೌಹಾತಿಯಲ್ಲಿರುವ ಅವರನ್ನು ಕಾಣಲು ಹವಣಿಕೆ ಮಾಡಿಕೊಂಡಿದ್ದೆ. ಆದರೆ ಸಾರ್ವಜನಿಕ ವ್ಯಕ್ತಿಯಾಗಲು ನಿರಾಕರಿಸಿ ಅಜ್ಞಾತವಾಗಿಯೇ ಬಾಳುವ ಅವರು ಸುಲಭವಾಗಿ ಸಿಗುತ್ತಿರಲಿಲ್ಲ.

ನನ್ನ ತವಕವನ್ನರಿತಿದ್ದ ಕೆ.ರಾಮಯ್ಯ, ‘ಪ್ರಭಾಕರ್ ಕರ್ನಾಟಕಕ್ಕೆ ಬಂದಿದ್ದಾರೆ. ಬನ್ನಿ’ ಎಂದು ಅವರ ಮನೆಗೆ ಕರೆದುಕೊಂಡು ಹೋದರು. ಮಧ್ಯಾಹ್ನದ ಸುಡುಹೊತ್ತು. ಪ್ರಭಾಕರ ಪ್ರೀತಿಯಿಂದ ಬರಮಾಡಿಕೊಂಡು ನೊರೆ ತುಂಬಿದ ಒಗರು ಬೀರಿನ ಮಗ್ಗನ್ನು ಕೈಗೆ ಕೊಟ್ಟು, ಕಾಮಾಖ್ಯದ ಬಗ್ಗೆಯೂ ತಂತ್ರ ಪಂಥದ ಬಗ್ಗೆಯೂ ಇರುವ ಕೃತಿಗಳನ್ನು ತೋರಿಸುತ್ತ, ಗಂಟೆಗಟ್ಟಳೆ ಮಾತಾಡಿದರು. ಅರಿವಿನ ಕಿಡಿಗಳು ಹಾರುವ ಅದೊಂದು ವಿದ್ವತ್‌ಪೂರ್ಣ ಹರಟೆ.

ನಾನು ಅವರಲ್ಲಿ ಶಿಷ್ಯವೃತ್ತಿ ಸ್ವೀಕರಿಸಿ ಹಲವಾರು ಸಲ ಕೋಲಾರಕ್ಕೆ ಹೋಗಿ ಬಂದಿದ್ದೇನೆ. ಅವರ ಮಾತುಕತೆಗಳಲ್ಲಿ ನನಗೆ ಮುಖ್ಯವಾಗಿ ಕಂಡಿದ್ದು, ಜಾತ್ಯತೀತವಾದ ಮನಸ್ಸು; ಸಣ್ಣಪುಟ್ಟ ಸಂಗತಿಗಳ ಮೇಲೂ ಕಾಳಜಿಯಿಂದ ಸೂಕ್ಷ್ಮವಾಗಿ ಚಿಂತಿಸುವ ಮಾನವೀಯತೆ; ಗತಕಾಲದ ಬಗ್ಗೆ ಹಳಹಳಿಕೆಯಿಲ್ಲದೆ ವರ್ತಮಾನದ ಸಮಸ್ಯೆಗಳನ್ನು ಕುರಿತು ಚಿಂತಿಸುವ ಪ್ರಖರವೂ ನಿಷ್ಠುರವೂ ಆದ ರಾಜಕೀಯ ಪ್ರಜ್ಞೆ. ಸಾರ್ವಜನಿಕ ಬದುಕಿನಲ್ಲಿ ಜಾತಿಪದ್ಧತಿ ಎಲ್ಲೆಮೀರಿ ನಿರತವಾಗಿರುವ ಕುರಿತ ಹೇವರಿಕೆ. ಹಿರಿಯ ಲೇಖಕರಲ್ಲಿ ಸಾಮಾನ್ಯವಾಗಿ ಎರಡು ಸ್ವಭಾವಗಳಿರುತ್ತವೆ. ಒಂದು- ಕಳೆದುಹೋದ ಕಾಲದ ಬಗ್ಗೆ ಭಾವುಕ ಮರುಕಳಿಕೆ. ಎರಡು-ವರ್ತಮಾನದ ಸಾಮಾಜಿಕ ರಾಜಕೀಯ ವೈರುಧ್ಯಗಳನ್ನು ಉದಾರವಾಗಿ ನೋಡುತ್ತ, ಚಿಂತನೆಯ ಮೊನಚನ್ನು ಕಳೆದುಕೊಳ್ಳುವುದು. ಆದರೆ ಆತ್ಮಕ್ಕೆ ಸದಾ ಬೆಂಕಿ ಹತ್ತಿಸಿಕೊಂಡಂತೆ ಉರಿಯುವ ಕೆಲವರಿದ್ದಾರೆ. ಕೋಚೆ, ಕುಸುಮಾಕರ ದೇವರಗೆಣ್ಣೂರ, ಎಂ.ಡಿ. ನಂಜುಂಡಸ್ವಾಮಿ, ನೀಲಗಂಗಯ್ಯ ಪೂಜಾರ, ಕೆ.ರಾಘವೇಂದ್ರರಾವ್, ಅಬ್ಬಿಗೇರಿ ವಿರೂಪಾಕ್ಷಪ್ಪ, ಸಾರಾ ಅಬೂಬಕರ್, ಕಾಮರೂಪಿ ಪ್ರಭಾಕರ-ಇವರೆಲ್ಲ ಇಂತಹವರು. ಈ ಹಿರಿಯರ ಜತೆ ಮಾತಾಡುವಾಗ ಇವರ ಹಠಮಾರಿತನ, ಜಗಳಗಂಟಿತನ, ಆದರ್ಶವಾದ, ನೈತಿಕ ಪ್ರಜ್ಞೆ ಹಾಗೂ ಭಿನ್ನಮತ ಇಷ್ಟವಾಗುತ್ತದೆ.

ಕರ್ನಾಟಕದಿಂದ ಬಹುಕಾಲ ದೂರವಿದ್ದ ಕಾರಣದಿಂದ ಏರ್ಪಟ್ಟಿರುವ ಅಪರಿಚಿತತೆಯಿಂದಲೊ ಅಥವಾ ಕರ್ನಾಟಕದ ಒಳಗೇ ಇದ್ದೂಇದ್ದೂ ನಮಗೆ ಕಾಣದಂತಾಗಿರುವ ವೈರುಧ್ಯಗಳು ‘ಹೊರಗಿನಿಂದ’ ಬಂದಿರುವ ಅವರಿಗೆ ಒಡೆದು ಕಾಣುತ್ತಿರುವುದರಿಂದಲೊ, ಪ್ರಭಾಕರ ಕರ್ನಾಟಕದ ಸಮಕಾಲೀನ ಸಾಂಸ್ಕೃತಿಕ ರಾಜಕಾರಣದ ವೈರುಧ್ಯಗಳ ಬಗ್ಗೆ ತೀಕ್ಷ್ಣವಾದ ಟಿಪ್ಪಣಿ ಮಾಡುತ್ತಿರುತ್ತಾರೆ; ಕನ್ನಡಿಗರ ಸ್ವಭಾವದಲ್ಲೇ ವ್ಯಕ್ತಿನಿಷ್ಠೆಗಾಗಿ ವಿಮರ್ಶೆಯ ನಿಷ್ಠುರತೆ ಬಿಟ್ಟುಕೊಡುವ, ಸಜ್ಜನಿಕೆಯ ಭಾಷೆಯಲ್ಲಿ ವಾಸ್ತವವನ್ನು ಅಡಗಿಸುವ ಪ್ರವೃತ್ತಿಯಿದೆ ಎಂದು ಹೇಳುತ್ತಿರುತ್ತಾರೆ. ಸಂಘಟಕರೊಬ್ಬರು ಕಾರ್ಯಕ್ರಮವೊಂದಕ್ಕೆ ಕರೆಸಿಕೊಂಡು ಪರಿಚಯ ಭಾಷಣದಲ್ಲಿ ತಮ್ಮನ್ನು ಅತಿಯಾಗಿ ಹೊಗಳಿದ್ದನ್ನು ನೆನೆಯುತ್ತ ಅವರೊಮ್ಮೆ ಹೇಳಿದರು: “ಏನ್ ಸ್ವಾಮಿ ಕನ್ನಡಿಗರು? ಎಷ್ಟು ಉದಾರತೆ! ನನ್ನ ಬಗ್ಗೆ ಅವರಿಗೆ ಏನೂ ಗೊತ್ತಿಲ್ಲ. ನಾನು ಎಲ್ಲ ಸೇರಿದರೆ ನೂರೈವತ್ತು ಪುಟಗಳನ್ನೂ ಬರೆದಿಲ್ಲ. ಕನ್ನಡಕ್ಕೆ ದೊಡ್ಡ ಕೊಡುಗೆಯನ್ನು ಕೊಟ್ಟಿಲ್ಲ. ಆದರೂ ವಾಚಾಮಗೋಚರ ಹೊಗಳಿಬಿಟ್ಟರು. ಕರ್ನಾಟಕದಲ್ಲಿ ಮಾತಿಗೆ ಬೆಲೆಯೇ ಇದ್ದಂತಿಲ್ಲ.’’

ಇದನ್ನು ಕೇಳುವಾಗ ಈಚೆಗೆ ಕಲ್ಕತ್ತಾದಲ್ಲಿ ನಾನು ಕಂಡ, ಹಿರಿಯ ಲೇಖಕ ರುದ್ರಪ್ರತಾಪ ಸೇನರ ಸನ್ಮಾನ ಕಾರ್ಯಕ್ರಮ ನೆನಪಾಯಿತು. ಸೇನರಿಗೆ 75ವರ್ಷ ತುಂಬಿದ ನೆಪದಲ್ಲಿ ಇರಿಸಿಕೊಂಡಿದ್ದ ಆ ಕಾರ್ಯಕ್ರಮ ಎಷ್ಟು ವಿಮರ್ಶಾತ್ಮಕವಾಗಿತ್ತು ಎಂದರೆ, ಅವರ ಶಿಷ್ಯರು ತಮ್ಮ ಗುರುವಿನ ಜತೆ ಕೋರ್ಟ್ಮಾರ್ಶಲ್ ನಡೆಸುವವರ ಹಾಗೆ ಪ್ರಶ್ನೆ ಕೇಳುತ್ತಿದ್ದರು. ಸೇನರು ಆ ಕಟುತರ ಪ್ರಶ್ನೆಗಳಿಗೆಲ್ಲ ಪ್ರಾಮಾಣಿಕವಾಗಿ ದ್ವಂದ್ವವಿಲ್ಲದೆ ಉತ್ತರಿಸುತ್ತಿದ್ದರು. ಹಿರಿಯರ ತಲೆಗೆ ಅಭಿನಂದನ ಗ್ರಂಥಗಳ ಸರಮಾಲೆಯನ್ನು ತಂದು ಕಟ್ಟಿ, ಎಗ್ಗಿಲದೆ ಹೊಗಳಿ ವೈಭವೀಕರಿಸುವ ಪದ್ಧತಿಯಿರುವ ಕರ್ನಾಟಕದಲ್ಲಿ, ಈ ಪರಿಯ ನಿಷ್ಠುರತೆ ಕಲ್ಪಿಸಿಕೊಳ್ಳುವುದೇ ಕಷ್ಟ.

ತೋರುಗಾಣಿಕೆಯನ್ನು ಸದಾ ನಿರಾಕರಿಸುವ ಪ್ರಭಾಕರ ಅವರಲ್ಲಿ, ಅವರ ಖಂಡಿತವಾದಿ ನಿಲುವಿಗೆ ಅಷ್ಟೊಂದು ತಾಳೆಯಾಗದ ಇನ್ನೊಂದು ಮುಖವಿದೆ. ಅದೆಂದರೆ, ಜೀವನಪ್ರೀತಿಯ ಸಂಕೇತದಂತಿರುವ ತಮಾಶೆ ಮತ್ತು ಪೋಲಿತನ. ಈ ತಮಾಶೆಯ ಗುಣ ಅದ್ಭುತ ನಾಟಕೀಯ ಶೈಲಿಯಾಗಿ ಅವರ ಕಥೆ ಕಾದಂಬರಿಗಳಲ್ಲೆಲ್ಲ ಆವರಿಸಿಕೊಂಡಿದೆ. ತಮಗೆ ಪಾಠ ಹೇಳಿದ ಗುರುಗಳ ವೈಯಕ್ತಿಕ ಬದುಕಿನಲ್ಲಿದ್ದ ಸನಾತನವಾದ ಮತ್ತು ತರಗತಿಗಳಲ್ಲಿ ಕನ್ನಡ ಬಳಸದ ಅವರ ಇಂಗ್ಲಿಷಿನ ವ್ಯಾಮೋಹ ಕುರಿತಂತೆ, ಅವರಲ್ಲಿ ಸ್ವಾರಸ್ಯಕರ ಮಾಹಿತಿಗಳಿವೆ. ಪ್ರಭಾಕರ ಅವರು ಆಪ್ತರ ಎದುರು ತಾವು ಬರೆದಿರುವ ಅಪ್ರಕಟಿತ ಪೋಲಿ ಪದ್ಯಗಳನ್ನು ವಾಚಿಸುವುದುಂಟು. ಬಹುಶಃ ಇದು ಅವರ ಗೆಳೆಯರಾಗಿದ್ದ ಎಚ್.ಎಸ್. ಬಿಳಿಗಿರಿಯವರ ಸಹವಾಸ ಫಲವಿರಬೇಕು.

ಒಂದೇ ವ್ಯಕ್ತಿತ್ವದಲ್ಲಿ ಒಟ್ಟಿಗೇ ಇರಲು ಕಷ್ಟವೆನಿಸಬಹುದಾದ ಇನ್ನೂ ಅನೇಕ ಸಂಗತಿಗಳು ಅವರಲ್ಲಿ ಸಹಜವಾಗಿ ನಿರಾಳವಾಗಿ ಇವೆ. ಉದಾ.ಗೆ, ಬಹುಭಾಷಿಕರಾದ ಅವರ ಮನೆಮಾತು ತಮಿಳುಗನ್ನಡ; ಬರವಣಿಗೆ ಕನ್ನಡ ಮತ್ತು ಇಂಗ್ಲೀಶಿನಲ್ಲಿ; ಸಂಸ್ಕೃತ ಅಸ್ಸಾಮಿ ಬಂಗಾಳಿ ಭಾಷೆಗಳಲ್ಲಿ ದೊಡ್ಡ ವಿದ್ವತ್ತು. (ಅವರ ಅಸ್ಸಾಮಿ ಬಂಗಾಳಿ ತಿಳಿವಳಿಕೆಯಿಂದ ಕನ್ನಡಕ್ಕೆ ಪ್ರಯೋಜನವಿನ್ನೂ ಆಗಿಲ್ಲ). ಪಂಪ ಅವರ ಇಷ್ಟದ ಕವಿ. ಮೂಲತಃ ಇಂಗ್ಲೀಶ್ ಸಾಹಿತ್ಯದ ವಿದ್ಯಾರ್ಥಿಯಾದರೂ ಸಾಹಿತ್ಯಕ್ಕಿಂತ ಹೆಚ್ಚಾಗಿ ಅಂತರಾಷ್ಟ್ರೀಯ ರಾಷ್ಟ್ರೀಯ ರಾಜಕಾರಣದ ಮೇಲೆ ಹೆಚ್ಚು ಬರೆವಣಿಗೆ. ಅದರಲ್ಲೂ ಈಶಾನ್ಯ ಭಾರತದ ರಾಜಕಾರಣ ಭಾಷೆ ಧರ್ಮ ಸಂಸ್ಕೃತಿ ಕುರಿತ ಅವರ ತಿಳಿವಳಿಕೆ ಅಪರೂಪದ್ದು. ಇವನ್ನೆಲ್ಲ ಒಟ್ಟಿಗೆ ಹೇಗೆ ಕಲ್ಪಿಸಿಕೊಳ್ಳುವುದು? ಪ್ರಭಾಕರ ತಮ್ಮ ಕಾದಂಬರಿಯ ಒಂದು ಪಾತ್ರದ ಹಾಗೇ ಬದುಕಿದ್ದಾರೆ.

ಅವರು ಈಚೆಗೆ ಮಾತಾಡುತ್ತ ಕೊಂಚ ದಣಿದ ದನಿಯಲ್ಲಿ “ಸ್ವಾಮಿ, ಕರ್ನಾಟಕ ನನಗೆ ಸಾಕಾಗಿದೆ. ಗೌಹಾಟಿಗೆ ಹೋಗಬೇಕು ಅನಿಸುತ್ತಿದೆ’ ಎಂದು ಗೊಣಗಿದರು. “ಹೋಗಿ. ಆದರೆ ಮತ್ತೆಬನ್ನಿ’’ ಎಂದೆ. ಅವರಲ್ಲಿ ಕೋಲಾರ-ಗೌಹಾತಿಗಳ ನಡುವೆ ವಿಚಿತ್ರವಾದ ಆಕರ್ಷಣೆ ವಿಕರ್ಷಣೆಯಿದೆ. ಇದು ಬಹುಕಾಲ ಬೇರೆಡೆ ಬೆಳೆದ ಮರ ತನ್ನ ಮೂಲನೆಲಕ್ಕೆ ಬಂದು ನಾಟಿಗೊಂಡರೆ ಬೇರೂರುವ ಕಷ್ಟ. ಮರಳಿ ಹುಟ್ಟಿದೂರಿಗೆ ಬರುವಿಕೆ ಬಾಲ್ಯದ ನೆನಪುಗಳನ್ನು ಎಚ್ಚರಿಸಿ ಸುಖ ಕೊಡುತ್ತದೆ; ಆದರೆ ಹೊಚ್ಚ ಹೊಸತೆೆನಿಸುವಷ್ಟು ಬದಲಾಗಿರುವ ಪರಿಸರವು, ಕಾಡುವ ಏಕಾಂಗಿತನವನ್ನೂ ತಂದಿಡುತ್ತದೆ. ಯಾರ ಮರುಕವನ್ನೂ ಬಯಸದೆ ಏಕಾಂತದಲ್ಲಿ ಘನತೆಯಿಂದ ಕೊನೆಯ ದಿನಗಳನ್ನು ಕಳೆಯ ಬಯಸುವ ಇಂತಹ ಹಠಮಾರಿ ಜೀವಗಳು, ಒಳಗೇ ಮೃದ್ವಂಗಿಗಳಾಗಿ ಆಪ್ತಸಂಗಾತಕ್ಕೆ ಹಾತೊರೆಯುತ್ತಿರುತ್ತವೆ.

ಆ ಸಂಗಾತದ ಸ್ವರೂಪ ಎಂತಹುದು ಎಂದು ಸ್ಪಷ್ಟವಾಗುವುದಿಲ್ಲ. ನಾನು ‘ಕಾಮರೂಪಕ್ಕೆ ಯಾವಾಗ ಹೋಗುತ್ತೀರಿ’ ಎಂದು ಕೇಳಿದೆ: ‘ಆದಿಮದ 50ನೇ ಬೆಳುದಿಂಗಳ ಕಾರ್ಯಕ್ರಮ ಮುಗಿಸಿಕೊಂಡು’ ಎಂದರು.
ಪ್ರತಿಯೊಬ್ಬರಿಗೂ ಬಾಳಿನಲ್ಲಿ ಬಹುರೂಪಧಾರಣೆ ಮಾಡಬೇಕಾದ ಒತ್ತಡಗಳು ಎದುರಾಗಬಹುದು. ಆದರೆ ಈ ರೂಪಧಾರಣೆಗೆ ಕಾರಣ, ನಮ್ಮ ಇಚ್ಛಾನಿಚ್ಛೆಗಳು ಮಾತ್ರವಲ್ಲ, ಬಾಳಿನ ಅನೂಹ್ಯ ಒತ್ತಡಗಳು ಸಹ. ಈ ಒತ್ತಡಗಳು ಬರೆಹ ಇಲ್ಲವೇ ಮಾತಿನ ವ್ಯಾಖ್ಯಾನಕ್ಕೆ ಕೆಲವೊಮ್ಮೆ ನಿಲುಕುವಂತೆ ಇರುವುದಿಲ್ಲ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending