Connect with us

ಅಂತರಂಗ

ಧರ್ಮ ಮರ್ಮ-01: ಭಾರತದಲ್ಲಿ ಧರ್ಮದ ಸ್ವರೂಪ

Published

on

  • ಯೋಗೇಶ್ ಮಾಸ್ಟರ್

ಭಾರತದಲ್ಲಿ ಸದಾ ಗೊಂದಲಕ್ಕೊಳಗಾಗುವ ಅನೇಕ ವಿಷಯಗಳಲ್ಲಿ ಧರ್ಮವೂ ಒಂದು. ಸಹಜವಾಗಿ ಗೊಂದಲ ಎಂದರೇನೇ ಸ್ಪಷ್ಟತೆ ಇಲ್ಲ ಎಂದು ಅರ್ಥ. ಬೇರೆ ದೇಶಗಳಲ್ಲಿಯೂ ಕೂಡಾ ಧರ್ಮದ ಆಚರಣೆಗಳ ಬಗ್ಗೆ ಗೊಂದಲಗಳಿವೆ, ಸಂಘರ್ಷಗಳಿವೆ. ಆದರೆ ನಮ್ಮ ದೇಶದಲ್ಲಿ ಧರ್ಮ ಎನ್ನುವುದು ಬೇರೆ ದೇಶದವರಿಗಿಂತ ಹೆಚ್ಚು ವ್ಯಾಪಕವಾಗಿ ಮತ್ತು ವಿಸ್ತಾರವಾಗಿ ಅರ್ಥೈಸಲು ಸಾಧ್ಯವಿರುವುದರಿಂದ ಗೊಂದಲಗಳು ಹೆಚ್ಚಾಗಿವೆ.

ಹೌದು, ನಮ್ಮ ದೇಶದಲ್ಲಿ ಧರ್ಮದ ವಿಷಯವಾಗಿಯೂ ಒಂದು ಸಾಮಾನ್ಯ ಸ್ಪಷ್ಟತೆ ಇಲ್ಲ. ಭಾರತದ ಮಟ್ಟಿಗೆ ಧರ್ಮವನ್ನು ಅರ್ಥ ಮಾಡಿಕೊಳ್ಳುವುದು ಅಷ್ಟೇನೂ ದೊಡ್ಡ ವಿಷಯವೂ ಅಲ್ಲ ಮತ್ತು ಸಂಕೀರ್ಣವೂ ಅಲ್ಲ. ಒಂದು ಪದವನ್ನು ವಿವಿಧ ಬಳಕೆಗಳಲ್ಲಿ ಬೇರೆ ಬೇರೆ ಅರ್ಥವನ್ನು ಪಡೆದುಕೊಳ್ಳುತ್ತವೆ ಎಂಬುದರ ಗಮನ ನಮಗಿರಬೇಕು.

ಕಾಯು’ ಎಂಬ ಸರಳ ಪದವನ್ನು “ನಾನು ನನ್ನ ಸರದಿಗಾಗಿ ಕಾಯುತ್ತಿದ್ದೇನೆ” ಮತ್ತು “ಒಲೆಯ ಮೇಲೆ ನೀರು ಕಾಯುತ್ತಿದೆ” ಎಂಬ ಎರಡು ಬೇರೆ ಬೇರೆ ಅರ್ಥಗಳಲ್ಲಿ ಬಳಕೆ ಮಾಡುವಂತೆ ಧರ್ಮ ಎಂಬ ಪದದ ಬಳಕೆಯೂ ಕೂಡಾ ಭಿನ್ನ ಅರ್ಥಗಳಲ್ಲಿ ಬಳಕೆ ಮಾಡುತ್ತೇವೆ.

ಪದ ಬಳಕೆಯ ಕಾಳಜಿ

40ರಿಂದ 70ರ ದಶಕದವರೆಗೂ ಕೆಲವರನ್ನು ಹೊರತುಪಡಿಸಿ ಬಹಳಷ್ಟು ಬರಹಗಾರರು ಎಚ್ಚರಿಕೆಯಿಂದ ಧರ್ಮದ ಪದವನ್ನು ದೇಶೀಯವಾಗಿ ಅಂದರೆ ಭಾರತೀಯ ಅರ್ಥದಲ್ಲಿಯೇ ಬಳಸುತ್ತಿದ್ದರು. ಅವರು ‘ಧರ್ಮ’ ಮತ್ತು ‘ಮತ’ ಎಂದು ಉಪಯೋಗಿಸುತ್ತಿದ್ದ ಎರಡು ಪದಗಳಲ್ಲಿ ಸ್ಪಷ್ಟತೆ ಇತ್ತು. ಇಂಗ್ಲೀಷಿನಲ್ಲಿ ರಿಲೀಜಿಯನ್ ಎಂಬ ಪದಕ್ಕೆ ಧರ್ಮ ಎಂಬುದನ್ನು ಬಳಸುತ್ತಿರಲಿಲ್ಲ. ಬದಲಾಗಿ ಮತ ಎಂದು ಬಳಸುತ್ತಿದ್ದರು. ಇನ್ನೂ ಸರಳವಾಗಿ ಪದ್ಧತಿ ಎಂದೂ ಹೇಳುತ್ತಿದ್ದರು.

ಆದರೆ ರಿಲೀಜಿಯನ್ ಎಂದು ಇಂಗ್ಲೀಷಿನಲ್ಲಿ ಹೇಳುವ ಪದಕ್ಕೂ, ಭಾರತೀಯರು ಧರ್ಮ ಎನ್ನುವ ಪದಕ್ಕೂ ವ್ಯತ್ಯಾಸವಿದೆ ಎಂಬುದು ಸ್ಪಷ್ಟವಾಗಿತ್ತು. ಎರಡೂ ಒಂದೇ ಆಗಿರಲಿಲ್ಲ. ನಂತರ ಕೆಲವು ಬರಹಗಾರರು ಮತ ಎಂಬ ಪದವು ಬಹಳ ಲಘುವಾಗಿದೆ ಅನ್ನಿಸುವುದರಿಂದ ಮತದ ಬದಲು ಧರ್ಮ ಎಂದು ಬಳಸತೊಡಗಿದರು. ಇದರಿಂದಾಗಿ ಇಸ್ಲಾಮ್ ಮತ, ಕ್ರೈಸ್ತ ಮತ, ಬೌದ್ಧ ಮತಗಳ ಬದಲಿಗೆ ಧರ್ಮ ಎಂದು ಬಳಸತೊಡಗಿದರು.

ಅಲ್ಲಿಂದೀಚೆಗೆ ಅದು ಹೆಚ್ಚು ವ್ಯಾಪಕವೂ ಆಗ ತೊಡಗಿ ಭಾರತೀಯ ಅಥವಾ ದೇಸೀ ಅರ್ಥದ ಧರ್ಮವು ಮತವೆಂಬ ಪದದ ಬದಲಿಗೆ ಉಪಯೋಗಿಸತೊಡಗಿದರು. ಇದರಿಂದಾಗಿ ಪ್ರಾಚೀನ ಭಾರತೀಯ ಬರಹಗಳಲ್ಲಿದ್ದ ಧರ್ಮ ಎಂಬ ಪದವನ್ನು ಮತವೆಂಬ ಅರ್ಥದಲ್ಲಿ ಅರ್ಥೈಸತೊಡಗಿದ್ದರಿಂದ ಅನರ್ಥಗಳಾಗ ತೊಡಗಿದವು. ಏಕೆಂದರೆ ಯಾವ ಧರ್ಮ ಎಂಬ ಪದದ ಅರ್ಥವು ಅಜ್ಞಾತವೂ ಮತ್ತು ಸೂಕ್ಷ್ಮವೂ ಆಗಿದ್ದ ಸ್ವಭಾವ ಎಂಬ ಅರ್ಥದಲ್ಲಿ ಬಳಸುತ್ತಿದ್ದರೋ ಅದನ್ನು ಸ್ಥಾಪಿತ ಮತಕ್ಕೆ ಹೆಸರಿಸಲು ಪ್ರಾರಂಭಿಸಿ ಅದರ ಅರ್ಥ ಮರೆತುಹೋಯಿತು.

ಆದರೂ ಕಂಗಾಲಾಗುವ ಅಗತ್ಯವೇನೂ ಇಲ್ಲ. ಭಾಷೆಗಳಲ್ಲಿ ಪದಗಳು ಕಾಲದಿಂದ ಕಾಲಕ್ಕೆ ಅರ್ಥವನ್ನು ಬದಲಾಯಿಸಿಕೊಳ್ಳುವ, ಮತ್ತೊಂದಕ್ಕೆ ಬಳಕೆಯಾಗುವ ಸ್ವಭಾವವೂ ಉಂಟು. ಹಾಗಾಗಿ ಧರ್ಮ ಎಂಬ ಒಂದೇ ಪದವನ್ನು ಎರಡು ಅರ್ಥಗಳಿಗೆ ಬಳಸಲಾಗುತ್ತಿದೆ ಎಂಬ ಎಚ್ಚರಿಕೆಯನ್ನು ಹೊಂದಿದ್ದು ಪ್ರಾಚೀನ ಗ್ರಂಥಗಳನ್ನು, ಇತರ ಪಠ್ಯಗಳನ್ನು ಓದುವಾಗ ಯಾವ ಅರ್ಥದಲ್ಲಿ ಅವನ್ನು ಬಳಸಿದ್ದಾರೆ ಎಂಬ ಅರಿವು ಇರಬೇಕಷ್ಟೇ.

ಪ್ರಭುತ್ವಮು ಎಂದು ತೆಲುಗಿನವರು ಉಪಯೋಗಿಸುವ ಪದ ಕನ್ನಡದಲ್ಲಿ ಸರ್ಕಾರ ಎಂದಾಗುತ್ತದೆ. ಆದರೆ ಪ್ರಭುತ್ವದ ಪದ ಕನ್ನಡದಲ್ಲಿಯೂ ಇದೆ. ಆದರೆ ನಾವು ಅದನ್ನು ಸರ್ಕಾರ ಎಂಬ ಅರ್ಥದಲ್ಲಿ ಬಳಸುವುದಿಲ್ಲ. ರಾಜರ ಅಧಿಕಾರದ ಅರ್ಥದಲ್ಲಿ ಬಳಸುತ್ತೇವೆ. ಹಾಗೆಯೇ ಉತ್ತರ ಭಾರತದ ಕೆಲವು ರಾಜ್ಯಗಳರಲ್ಲಿ ಸರಕಾರ್ ಎಂದು ಬಳಸುವ ಪದವು ಯಜಮಾನ, ಒಡೆಯ ಎಂಬ ಅರ್ಥದಲ್ಲಿ ಬಳಸುತ್ತಾರೆ. ಆದರೆ ನಮಗೆ ಅದು ರಾಜಕೀಯ ವ್ಯವಸ್ಥೆಯ ಸರ್ಕಾರವಾಗಿ ಮಾತ್ರವೇ ಬಳಕೆಯಾಗುತ್ತದೆ.

ಯಜಮಾನ ಅಥವಾ ದಣಿ ಎಂಬ ಪದಗಳಿಗೆ ಬದಲಾಗಿ ನಾವು ಸರಕಾರ ಎಂಬ ಪದವನ್ನು ಬಳಸುವುದಿಲ್ಲ. ಸಂಸ್ಕೃತ ಪದಗಳು ಭಾರತದ ಬಹುತೇಕ ಭಾಷೆಗಳಲ್ಲಿ ಬೆರೆತುಹೋದರೂ ಅವುಗಳನ್ನು ಬಳಸುವಾಗ ಅವರ ಪ್ರಾದೇಶಿಕ ಪ್ರಭಾವಗಳು ಇರುತ್ತಿದ್ದವು. ಆ ಪ್ರಯೋಗಗಳ ಹಿಂದೆ ಕಾರಣಗಳೇನೇ ಇದ್ದರೂ ಅರ್ಥ ವ್ಯತ್ಯಾಸ ಇದ್ದುದಂತೂ ನಿಜ. ಹೀಗೆಯೇ ಧರ್ಮವನ್ನೂ ಕನಿಷ್ಟಪಕ್ಷ ನಮ್ಮ ಕನ್ನಡದ ಹಿರಿಯರು ಬರೆಯುತ್ತಿದ್ದ ಪುಸ್ತಕಗಳಲ್ಲಿ ಎಚ್ಚರಿಕೆಯಿಂದ ಬಳಸುತ್ತಿದ್ದರು. ಸಂಸ್ಕೃತದಲ್ಲಾಗಲಿ ಅಥವಾ ಕನ್ನಡದಲ್ಲಾಗಲಿ ಧರ್ಮದ ಅರ್ಥಕ್ಕೆ ಬಹಳ ಸ್ಪಷ್ಟತೆ ಇತ್ತು.

ರೂಢಿ ದೋಷ

ನಮ್ಮ ರೂಢಿಗೊಳಿಸಿಕೊಂಡಿರುವ ಒಂದು ದೊಡ್ಡ ದೋಷವೆಂದರೆ ಸರಳ ಮತ್ತು ನೇರವಾಗಿರುವ ವಿಷಯಗಳನ್ನು ಸಂಕೀರ್ಣಗೊಳಿಸಿಕೊಳ್ಳುವುದು. ಯಾವುದು ಸಾಮಾನ್ಯ ತಿಳುವಳಿಕೆಗೆ ಎಟುಕುವುದಿಲ್ಲವೋ ಅದು ಮಹತ್ವವಾದುದು, ಬಹಳ ಮೌಲ್ಯವುಳ್ಳದ್ದು, ಬಹಳ ಉನ್ನತವಾದದ್ದು ಎಂಬ ಭ್ರಮೆಯನ್ನು ಹುಟ್ಟಿಸಿರುವುದು. ಅದು ಬರಿಯ ಭ್ರಮೆಯು ಮಾತ್ರವಲ್ಲ ಮಾನವನ ಸಂವಹನ ಕ್ರಮಕ್ಕೆ ಮಾಡುವ ದ್ರೋಹವೂ ಹೌದು. ನಾನು ಹೇಳುವುದು ನಿಮಗೆ ಅರ್ಥವಾಗಬೇಕು. ನಿಮ್ಮ ತಿಳುವಳಿಕೆಗೆ ನಿಲುಕಬೇಕು. ಆಗ ನಾನು ಹೇಳುವ ಕೆಲಸದಲ್ಲಿ ಯಶಸ್ವಿಯಾಗಿದ್ದೇನೆ ಎಂದು ಅರ್ಥ.

ಅದು ಬಿಟ್ಟು, ನಾನು ನಿಮ್ಮ ಶಬ್ಧಭಂಡಾರದಲ್ಲಿ ಇಲ್ಲದಿರುವಂತಹ, ಹುಡುಕಿದರೂ ಅರ್ಥ ಸಿಗದಂತಹ ಮಹಾ ಪಾಂಡಿತ್ಯದ ಶಬ್ಧಗಳನ್ನು ಉಪಯೋಗಿಸಿ, ನಿಮಗೆ ನಾನು ನಿಮ್ಮ ತಿಳುವಳಿಕೆಗೆ ನಿಲುಕದಂತವನಾದರೆ ಅದು ನನ್ನ ವೈಫಲ್ಯ. ಏನೋ ಸ್ವಲ್ಪ ಪ್ರಾದೇಶಿಕ ಭಾಷಾ ಪ್ರಯೋಗಗಳಿಂದ ಒಂದಷ್ಟು ಪದಗಳು ಆಚೀಚೆ ಆಗಬಹುದು. ಆದರೆ ನನ್ನ ತಿಳುವಳಿಕೆಗೆ ನಿಲುಕದ್ದು ಎಂದು ಅವನ್ನು ಉನ್ನತೀಕರಿಸಿ, ಅರಿಯದವರು ಪಾಮರರು ಎಂಬ ಭ್ರಮೆ ಹುಟ್ಟಿಸಿದ ಕಾರಣದಿಂದಲೇ ಅಪವ್ಯಾಖ್ಯಾನಗಳು ಅಂದರೆ ಇರುವ ಅರ್ಥವನ್ನು ಬಿಟ್ಟು ಬೇರೇನೇನೋ ವಿವರಣೆಗಳು ಹುಟ್ಟಿರುವವು.

ಧರ್ಮದ ಪಾವಿತ್ರ್ಯದ ವ್ಯಾಪ್ತಿ

ಧರ್ಮದ ವಿವರಣೆಯಲ್ಲಿಯೂ ಕೂಡಾ ಹಾಗೇ ಆಗಿವೆ. ಅದೇನೋ ಅತ್ಯಂತ ಶ್ರದ್ಧೆಗೆ, ಬದ್ಧತೆಗೆ, ಪಾವಿತ್ರ್ಯತೆಗೆ ಸಂಬಂಧಿಸಿದ್ದು, ದೇವರನ್ನು ಸಮೀಪಿಸುವುದಕ್ಕೆ ಇರುವುದು ಎಂಬ ಭ್ರಮೆ ಇದೆ ಅಥವಾ ಧರ್ಮ ಎಂದ ಕೂಡಲೇ ಹಾಗಾಡುತ್ತಾರೆ. ಅದರಲ್ಲೂ ಭಾರತೀಯರ ವಿಷಯದಲ್ಲಂತೂ ಧರ್ಮ ಎಂಬುದು ಪವಿತ್ರತೆಗೂ, ದೇವರಿಗೂ, ಶ್ರದ್ಧೆಗೂ ಸಂಬಂಧಿಸಿದ್ದಲ್ಲ. ಬಹಳ ಸರಳವಾಗಿ ಧರ್ಮವನ್ನು ಅರ್ಥ ಮಾಡಿಕೊಳ್ಳುತ್ತಾ ಹೋಗೋಣ.

ಬಂಡೆ ಗಟ್ಟಿಯಾಗಿರುವುದು ಅದರ ಗುಣ, ನೀರಿಗೆ ಹರಿಯುವ ಗುಣ, ಗಾಳಿಗೆ ಬೀಸುವಂತಹ ಸಹಜ ಗುಣವಿದೆ ಹಾಗೆಯೇ ಬೆಂಕಿಗೆ ಸುಡುವ ಸ್ವಭಾವ ಇದೆ ಎಂದರೆ ಅರ್ಥವಾಗುತ್ತದೆ. ಹಾಗೆಯೇ ಕಾಠಿಣ್ಯವು ಬಂಡೆಯ ಧರ್ಮ, ಹರಿಯುವುದು ನೀರಿನ ಧರ್ಮ, ಬೀಸುವುದು ಗಾಳಿಯ ಧರ್ಮ, ಸುಡುವುದು ಬೆಂಕಿಯ ಧರ್ಮ ಎಂದರೂ ಅರ್ಥವಾಯಿತಲ್ಲವೇ? ಅಂದರೆ ಯಾವುದೇ ಒಂದರ ಮೂಲ ಅಥವಾ ಪ್ರಮುಖವಾದ ಸ್ವಭಾವವೇ ಧರ್ಮ.

ಧರ್ಮ ಶಬ್ದವು ಸಂಸ್ಕೃತದ ‘ಧೃ’ ಎಂಬ ಮೂಲದಿಂದ ಬಂದಿದೆ. ‘ಧೃ’ ಎಂದರೆ ಧಾರಣ ಮಾಡು ಅಥವಾ ಧರಿಸು, ಎತ್ತಿ ಹಿಡಿ ಅಥವಾ ಬೆಂಬಲಿಸು ಎಂದರ್ಥ. ಇದು ಪ್ರಾರಂಭದ ಪಾಠ. “ಧಾರಣಾತ್ ಧರ್ಮ ಇತ್ಯಾಹುಃ ಧರ್ಮೋ ಧಾರಯತಿ ಪ್ರಜಾಃ” ಎಂದು ಮಹಾಭಾರತದ ಕರ್ಣಪರ್ವದಲ್ಲಿ ಯಾವುದು ಇನ್ನೊಂದನ್ನು ಎತ್ತಿ ಹಿಡಿಯುವುದೋ, ಅಥವಾ ಇನ್ನೊಂದಕ್ಕೆ ಆಧಾರವಾಗಿ ಅದನ್ನು ರಕ್ಷಿಸುವುದೋ ಅದು ಧರ್ಮ ಎನಿಸಿಕೊಳ್ಳುತ್ತದೆ.

ಹೀಗೆಂದು ಕೃಷ್ಣ ಅರ್ಜುನನಿಗೆ ಧರ್ಮ ಎಂದು ವಿವರಿಸಲು ಯತ್ನಿಸುತ್ತಾನೆ. ಅದೇ ರೀತಿಯಲ್ಲಿ ಭಗವತ್ಗೀತೆಯಲ್ಲಿ “ಶ್ರೇಯಾನ್ ಸ್ವಧರ್ಮೋ ವಿಗುಣಃ ಪರಧರ್ಮಾತ್ ಸ್ವನುಷ್ಠಿತಾತ್” ಎನ್ನುತ್ತಾ ಬೇರೆ ಧರ್ಮವನ್ನು ಚೆನ್ನಾಗಿ ಮಾಡುವುದಕ್ಕಿಂತ ತನ್ನ ಧರ್ಮವು ವಿಗುಣವಾಗಿದ್ದರೂ (ಪರರ ದೃಷ್ಟಿಯಲ್ಲಿ) ಅದೇ ಶ್ರೇಯಸ್ಕರ ಎನ್ನುತ್ತಾ “ಸ್ವಧರ್ಮೇ ನಿಧನಂ ಶ್ರೇಯಃ ಪರಧರ್ಮೋ ಭಯಾವಹಃ” ನಿನ್ನದೇ ಧರ್ಮದಲ್ಲಿ ಸತ್ತರೂ ಅದು ಮೇಲು, ಪರಧರ್ಮ ಅದಕ್ಕಿಂತ ಭಯಂಕರವಾದುದು ಎಂದೂ ಹೇಳುತ್ತಾನೆ.

ಭಗವತ್ಗೀತೆಯಲ್ಲಿ ಧರ್ಮವೆಂದರೆ ವ್ಯಕ್ತಿ ಅಥವಾ ವಸ್ತುವಿನ ಸ್ವಭಾವದಂತೆ ತೋರಿದರೆ, ಕರ್ಣಪರ್ವದಲ್ಲಿ ಕರ್ತವ್ಯದಂತೆ ತೋರುತ್ತದೆ. ಭಗವತ್ಗೀತೆಯ ಧರ್ಮವನ್ನೂ ಕರ್ತವ್ಯವೆಂದೂ ಕೂಡಾ ಅರ್ಥೈಸಬಹುದು. ಆದರೆ ಒಂದು ವಿಷಯ ನೆನಪಿಡಬೇಕು. ಮಹಾಭಾರತದ ಯಾವುದೋ ಒಂದು ಉಲ್ಲೇಖಿತ ಸಾಲನ್ನು ಹಿಡಿದುಕೊಂಡು ಸುಭಾಷಿತದ ರೀತಿಯಲ್ಲಿ ಅಥವಾ ಧಾರ್ಮಿಕ ಸೂತ್ರದ ರೀತಿಯಲ್ಲಿ ಶಾಸನವನ್ನಾಗಿ ಮಾಡಿಕೊಳ್ಳಬಾರದು.

ಏಕೆಂದರೆ ಮಹಾಭಾರತದಲ್ಲಿ ನೂರಾರು ಪಾತ್ರಗಳು ಬರುತ್ತವೆ. ಎಲ್ಲಾ ಪಾತ್ರಗಳೂ ತಮ್ಮ ತಮ್ಮ ಧೋರಣೆಯನ್ನು, ಮನೋಭಾವವನ್ನು, ಮನಸ್ಥಿತಿಗಳನ್ನು ವ್ಯಕ್ತಪಡಿಸುವಂತೆ ಧರ್ಮವನ್ನೂ ಕೂಡಾ ನಾನಾ ರೀತಿಯಲ್ಲಿ ಸಮಯ ಸನ್ನಿವೇಶಕ್ಕೆ ತಕ್ಕಂತೆ ವಿವರಿಸುತ್ತಾ ಹೋಗುತ್ತಾರೆ. ವ್ಯಾಸ, ಜನಮೇಜಯ, ಭೀಷ್ಮ, ವಿದುರ, ಕೃಷ್ಣ, ಧುರ್ಯೋದನ, ದೃತರಾಷ್ಟ್ರ, ಗಾಂಧಾರಿ, ಕುಂತಿ, ಮಾದ್ರಿ, ಧರ್ಮರಾಯ; ಹೀಗೆ ಹಲವಾರು ಪಾತ್ರಗಳು ಅನೇಕ ವಿಷಯಗಳನ್ನು ತಮ್ಮದೇ ಆದ ರೀತಿಯಲ್ಲಿ, ತಾವು ಗ್ರಹಿಸಿದಂತೆ, ತಾವು ನಂಬಿದಂತೆ, ತಮ್ಮ ಸಿದ್ಧಾಂತದಂತೆ, ತಮ್ಮ ಅನುಭವಕ್ಕೆ ತಕ್ಕಂತೆ ವಿವರಿಸುತ್ತಾ ಹೋಗುತ್ತಾರೆ.

ಮಹಾಭಾರತ ಯಾವುದೇ ಒಂದು ಸಿದ್ಧಾಂತವನ್ನು ಸ್ಪಷ್ಟ ಪಡಿಸಲು, ನೀತಿ ಹೇಳಲು ನಿಲ್ಲುವುದಿಲ್ಲ. ಆದರೆ ಧರ್ಮವನ್ನೇ ಕೇಂದ್ರವಾಗಿಟ್ಟುಕೊಳ್ಳುತ್ತದೆ. ಧರ್ಮವನ್ನು ಎತ್ತಿ ಹಿಡಿಯುತ್ತದೆ. ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಧರ್ಮದ ಕೇಂದ್ರ ಮತ್ತು ಕರ್ಮದ ಚಕ್ರವನ್ನೇ ಎಲ್ಲಾ ಪಾತ್ರಗಳ ಜೊತೆಜೊತೆಯಾಗಿ ಹೋಗುತ್ತಿರುತ್ತದೆ.
ಇಷ್ಟೆಲ್ಲಾ ಆದರೂ ಮಹಾಭಾರತ ಧಾರ್ಮಿಕತೆಯ ಕತೆಯಲ್ಲ. ಇದರಲ್ಲಿ ಬದ್ಧತೆ, ಶ್ರದ್ಧೆ ಎಲ್ಲವನ್ನೂ ಕೋರಲಾಗುತ್ತದೆ.

ಆದರೆ ಯಾವುದೋ ಸ್ಥಾಪಿತ ಧರ್ಮದ ಸಾಂಪ್ರದಾಯಿಕ ಆಚರಣೆಯ ರೀತಿಯಲ್ಲಿ ಅಂದರೆ ರಿಲೀಜಿಯಸ್ ಪ್ರಾಕ್ಟೀಸ್ ರೀತಿಯದಲ್ಲ. ವ್ಯಕ್ತಿಧರ್ಮ, ಪ್ರಕೃತಿಧರ್ಮ, ಪರಿವಾರಿಕ ಅಥವಾ ಕುಟುಂಬ ಧರ್ಮ, ಸಮಾಜಧರ್ಮ, ವೃತ್ತಿಧರ್ಮ, ಮನೋಧರ್ಮ, ರಾಜಧರ್ಮ, ಕಾಲಧರ್ಮ ಅಥವಾ ಯುಗಧರ್ಮ, ವರ್ಣಧರ್ಮ, ಆಪತ್ಧರ್ಮ, ಆಶ್ರಮಧರ್ಮ; ಹೀಗೆ ಅನೇಕಾನೇಕ ಧರ್ಮಗಳ ಚಹರೆಗಳನ್ನು, ಚಟುವಟಿಕೆಗಳನ್ನು, ಚರ್ಚೆಗಳನ್ನು ಗುರುತಿಸಬಹುದು.

ಇನ್ನೂ ಮುಂದುವರಿದು ಆಪತ್ಕಾಲೇ ನಾಸ್ತಿ ಧರ್ಮ ಎಂತಲೂ ಎನ್ನುವುದು. ಅಂದರೆ ಪ್ರಾಣ ಹೋಗುವಂತಹ ಕೆಟ್ಟ ಸಂದರ್ಭ ಒದಗಿದರೆ ಯಾವ ಧರ್ಮವನ್ನು ಬಿಟ್ಟು ನಿನ್ನ ಪ್ರಾಣವನ್ನು ಉಳಿಸಿಕೋ ಎಂಬಂತಹ ಕಿವಿ ಮಾತು. ಇದನ್ನೇ ಆಪತ್ಧರ್ಮ ಎಂದುಕೊಳ್ಳೋಣ. ಒಟ್ಟಿನಲ್ಲಿ ಧರ್ಮ ಎಂಬ ಪದದ ಹಿಂದೆ ಜೋಡುಪದವಾಗಿ ಬಂದಿರುವ ಪದಗಳನ್ನೆಲ್ಲಾ ನೋಡಿದರೆ, ಧರ್ಮ ಎಂಬುದು ಸ್ಥಿರವೂ ಹೌದು, ಚರವೂ ಹೌದು ಎಂದಾಗುತ್ತದೆ. ಸ್ಥಿರವಾಗಿರುವುದು ಯಾವ ಧರ್ಮ ಮತ್ತು ಚರವಾಗಿರುವುದು ಯಾವ ಧರ್ಮ ಎಂಬುದನ್ನು ಗಮನಿಸಬೇಕು.

ಒಟ್ಟಾರೆ ಸಧ್ಯಕ್ಕೆ ಧರ್ಮವನ್ನು ಮೂರು ರೀತಿಯಲ್ಲಿ ಅರ್ಥ ಮಾಡಿಕೊಳ್ಳೋಣ. ಆಗ ಇನ್ನು ಮುಂದೆ ನಾವು ಪ್ರಯಾಣ ಮಾಡಲಿರುವ ದೇಶ ವಿದೇಶಗಳ ಧರ್ಮಗಳನ್ನೆಲ್ಲಾ ಅರ್ಥ ಮಾಡಿಕೊಳ್ಳಲು ಸಾಧ್ಯವಾಗುತ್ತದೆ.

ಧರ್ಮ ಎಂದರೆ ಒಂದು ವಸ್ತು ಅಥವಾ ಜೀವದ ಸ್ವಾಭಾವಿಕ ಗುಣವೆಂಬುದು ಸ್ಥಿರ ಧರ್ಮ ಎನ್ನಬಹುದು. ಅದೇನಾದರೂ ಬದಲಾಗದು. ನೈಸರ್ಗಿಕವಾಗಿ ಪ್ರಾಕೃತಿಕವಾಗಿ ಇರುವಂತಹ ಗುಣ ಸ್ವಭಾವ. ನಮ್ಮ ಹಿರಿಯರು ಹೇಳುತ್ತಿದ್ದರು, “ಅವನು ಎಷ್ಟು ತಿಂದರೂ ದಪ್ಪಗಾಗುವುದಿಲ್ಲ. ಅದು ಅವನ ಶರೀರ ಧರ್ಮ!” ಅವನು ಇರುವುದೇ ಹಾಗೇ ಎನ್ನುವುದಕ್ಕೆ ಹಾಗೆನ್ನುತ್ತಿದ್ದರು.

ಶರೀರ ಪ್ರಕೃತಿ ಅಥವಾ ಶರೀರಧರ್ಮ ಎಂಬುದನ್ನು ಸಮಾರ್ಥಕ ಪದಗಳಾಗಿ ಬಳಸುತ್ತಿದ್ದರು. ಅದು ಸ್ಥಿರವಾಗಿರುವ ಧರ್ಮ. ಇದು “ಅವರವರ ಮನೋಧರ್ಮಕ್ಕೆ ತಕ್ಕಂತೆ ನಡೆದುಕೊಳ್ಳುತ್ತಾರೆ” ಎನ್ನುವ ಮಾತಿನಲ್ಲಿಯೂ ಧರ್ಮ ಎನ್ನುವುದನ್ನು ಗಮನಿಸಿ. ಅವರವರ ಸಹಜ ಸ್ವಭಾವ ಎನ್ನುವುದಕ್ಕೆ ಸೂಚಿಸುತ್ತಾರೆ.

ಅದೇ ರೀತಿ ವೃತ್ತಿಧರ್ಮ, ಕುಟುಂಬಧರ್ಮ, ಆಶ್ರಮಧರ್ಮ, ಇತ್ಯಾದಿಗಳನ್ನು ಗಮನಿಸಿದರೆ ಧರ್ಮ ಎಂದರೆ ಕರ್ತವ್ಯ ಎಂಬ ಅರ್ಥ ಬರುತ್ತದೆ. ನಾನು ಮಡಿವಾಳನಾಗಿ ವೃತ್ತಿಯನ್ನು ಮಾಡುವಾಗ ನನ್ನ ಕೆಲಸದಲ್ಲಿ ಯಾವ ಯಾವ ಕರ್ತವ್ಯಗಳಿಗೆ ಬದ್ಧನಾಗಿರಬೇಕು ಎಂಬುದನ್ನು ನೋಡಬೇಕು. ಅದು ನನ್ನ ವೃತ್ತಿಧರ್ಮ. ಕುಟುಂಬದ ಒಂದು ಪಾತ್ರವನ್ನು ನಿರ್ವಹಣೆ ಮಾಡುವಾಗ ಆ ಪಾತ್ರದ ಕರ್ತವ್ಯಕ್ಕೆ ಬದ್ಧನಾಗಿ ಅದನ್ನು ನೆರವೇರುವಂತೆ ನೋಡಿಕೊಳ್ಳುವುದು ನನ್ನ ಧರ್ಮವನ್ನು ಪಾಲನೆ ಮಾಡಿದಂತೆ.

ಹಾಗೆಯೇ ಪ್ರಕೃತಿಧರ್ಮ, ಯುಗಧರ್ಮ, ಸಮಾಜಧರ್ಮ; ಇತ್ಯಾದಿಗಳಲ್ಲಿ ಧರ್ಮವನ್ನು ‘ಕ್ರಮ’ ಎಂದು ಅರ್ಥ ಮಾಡಿಕೊಳ್ಳಬೇಕು. ಪ್ರಕೃತಿಯಲ್ಲಿ ಋತುಧರ್ಮವಿದೆ. ಅದಕ್ಕೆ ಅನುಸಾರವಾಗಿ ಋತುಗಳು ಕಾಲಕಾಲಕ್ಕೆ ಬರುತ್ತವೆ ಹೋಗುತ್ತವೆ. ಒಂದು ಕ್ರಮವನ್ನು ಅನುಸರಿಸುತ್ತವೆ. ಇದು ಸಹಜವಾಗಿ ಆಗುವುದು. ಯುಗಧರ್ಮ ಅಥವಾ ಕಾಲಧರ್ಮದಲ್ಲಿ ಬದಲಾದ ಕಾಲಕ್ಕೆ ಅನುಗುಣವಾಗಿ, ಆ ಕಾಲದ ಪರಿಸ್ಥಿತಿ, ರೀತಿ ನೀತಿಗಳನ್ನು ನೋಡಿಕೊಂಡು ನಮ್ಮ ನಡೆಯ ಕ್ರಮವನ್ನು ಬದಲಿಸಿಕೊಳ್ಳಬೇಕು. ಇದು ನಾವು ಗ್ರಹಿಸಿ ಕಾಲದ ಪರಿಸ್ಥಿತಿಗೆ ಹೊಂದಿಕೊಳ್ಳುವ ಮೂಲಕ ಕ್ರಮವನ್ನು ರೂಪಿಸಿಕೊಳ್ಳುವುದು.

ಸಮಾಜ ಎಲ್ಲರೂ ಒಟ್ಟಾಗಿ ಬಾಳುವಂತಹ ಒಂದು ಸಾಂಘಿಕ ವ್ಯವಸ್ಥೆ. ವ್ಯಕ್ತಿಗಳ ಮನೋಭಾವ, ಮನೋಭಿಲಾಷೆ, ನಿರಾಶೆ, ಒಲವು, ನಿಲುವುಗಳಲ್ಲಿ ಬಹಳಷ್ಟು ವ್ಯತ್ಯಾಸಗಳಿರುತ್ತವೆ. ಹಾಗಿದ್ದರೂ ನಾವು ಸಂಘಜೀವಿಗಳಾದ್ದರಿಂದ ವ್ಯವಸ್ಥೆಯಲ್ಲಿ ಒಂದು ಕ್ರಮವನ್ನು ರೂಪಿಸಲಾಗಿರುತ್ತದೆ.

ಏನೇ ಸಂಘರ್ಷ, ಸಂಕಟ, ಸಂತೋಷ ಎದುರಾಗುವಂತಹ ಸನ್ನಿವೇಶಗಳಿದ್ದರೂ ಇಡೀ ಸಮಾಜ ಅಥವಾ ಸಮುದಾಯದ ವ್ಯವಸ್ಥೆಯು ಕುಸಿಯದಿರುವಂತೆ, ಅದು ನಾಶಗೊಳ್ಳದಿರುವಂತೆ ನೋಡಿಕೊಳ್ಳಲು ಒಂದು ಕ್ರಮವನ್ನು ರೂಪಿಸಿದೆ. ಅದನ್ನು ಅನುಸರಿಸುವ ಕರ್ತವ್ಯವೂ ವ್ಯಕ್ತಿಗಳದ್ದಾಗಿರುತ್ತದೆ. ಅದು ಒಬ್ಬನ ಧರ್ಮ. ಸಮಾಜಕ್ಕೊಂದು ಧರ್ಮ ಅಂದರೆ ಕ್ರಮ. ಸಮಾಜದಲ್ಲಿ ಬಾಳಿ ಬದುಕಲು ಆ ಕ್ರಮವನ್ನು ಪಾಲಿಸಲು ವ್ಯಕ್ತಿಗೆ ಧರ್ಮ, ಅಂದರೆ ಕರ್ತವ್ಯ.

ಒಟ್ಟಾರೆ, ಧರ್ಮ ಎಂದರೆ ಮೂರು ಅರ್ಥಗಳಲ್ಲಿ ಸ್ಥೂಲವಾಗಿ ತಿಳಿದುಕೊಳ್ಳೋಣ. ಒಂದು ಸ್ವಾಭಾವಿಕ ಗುಣ, ಎರಡನೆಯದು ಕರ್ತವ್ಯ ಮತ್ತು ಮೂರನೆಯದು ಕ್ರಮ. ಇಷ್ಟನ್ನು ತಿಳಿದುಕೊಂಡರೆ ನಮಗೆ ವಿಶ್ವದಲ್ಲಿ ಧರ್ಮಗಳ ವಿಷಯದಲ್ಲಿ ಉಂಟಾಗಿರುವ ಗೊಂದಲಗಳು, ಗಲಾಟೆಗಳು, ಸಂಘರ್ಷಗಳು, ಸಂಕಟಗಳು ಎಲ್ಲಾ ಅರ್ಥವಾಗುತ್ತವೆ. ಬಹಳ ಮುಖ್ಯವಾಗಿ ಧರ್ಮವನ್ನು ಏನೆಂದು ಅರ್ಥ ಮಾಡಿಕೊಳ್ಳಬೇಕಿತ್ತು, ಹೇಗೆಂದು ಅರ್ಥ ಮಾಡಿಕೊಂಡಿದ್ದಾರೆ ಎಂದು ತಿಳಿಯುತ್ತದೆ. ಅಥವಾ ಏನೆಂದೂ ಅರ್ಥವೇ ಆಗಿಲ್ಲ ಎಂದಾದರೂ ಅರ್ಥವಾಗುತ್ತದೆ.

ಧರ್ಮವನ್ನು ಸಾಮಾಜಿಕವಾಗಿ, ತಾತ್ವಿಕವಾಗಿ, ಆಧ್ಯಾತ್ಮಿಕವಾಗಿ, ಸಾಂಸ್ಕೃತಿಕವಾಗಿ, ಮಾನಸಿಕವಾಗಿ, ನೈತಿಕವಾಗಿ ಮತ್ತು ರಾಜಕೀಯವಾಗಿ ಅರ್ಥ ಮಾಡಿಕೊಳ್ಳಲು ಹೋದಾಗ ಸಮಾಜದಲ್ಲಿ ನಡೆಯುತ್ತಿರುವ ಧಾರ್ಮಿಕ ದೊಂಬಿಗಳು, ಅವುಗಳನ್ನು ನಡೆಸುತ್ತಿರುವ ಝ್ಹೋಂಬಿಗಳು ಕೂಡಾ ಅರ್ಥವಾಗುತ್ತಾರೆ.

(ಮುಂದುವರಿಯುತ್ತದೆ)

ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂತರಂಗ

ಡಾ. ಆತ್ಮಾರಾಮನ ಆತ್ಮನಿವೇದನೆ | ಮೆಟ್ಟಿಲಿನವನು

Published

on

~ ಯೋಗೇಶ್ ಮಾಸ್ಟರ್

ಮೆಟ್ಟಿಲುಗಳ ಮೇಲೆ ನಿಂತು ದಿಟ್ಟಿಸುತ್ತಿರುವವನ ನೋಡುಗರು ಏನೆಂದು ತಿಳಿದಾರು? ಹತ್ತುತ್ತಿರುವನೆಂದೋ, ಇಳಿಯುತ್ತಿರುವನೆಂದೋ? ಯಾರೇನಾದರೂ ಅಂದುಕೊಳ್ಳಲಿ ಹೊರಗೆ ಹತ್ತುತ್ತಿರುವವನು ಇಳಿಯುತ್ತಿರಬಹುದು. ಇಳಿಯುತ್ತಿರುವವನು ಹತ್ತುತ್ತಿರಬಹುದು.

ಈಗ ಯಾರೂ ನೋಡುತ್ತಿಲ್ಲ. ನಾನು ಹತ್ತುತ್ತಿರುವೆನೋ ಇಳಿಯುತ್ತಿರುವೆನೋ ಯಾರೂ ನೋಡುತ್ತಿಲ್ಲ. ಯಾರೊಬ್ಬರೂ ಇಲ್ಲದಿರುವಾಗಲೂ ನಾನು ನನಗೆ ಪ್ರಾಮಾಣಿಕವಾಗಿ ಇರದಿದ್ದರೆ? ‘ಆತ್ಮಾರಾಮ್, ಈಗೇನು ನೀನು ಏರುತ್ತೀಯೋ, ಇಳಿಯುತ್ತೀಯೋ?’ ಬೇರೊಬ್ಬರು ಕೇಳುವ ಪ್ರಶ್ನೆಗಳಿಗೆ ಉತ್ತರಿಸಿಬಿಡಬಹುದು. ನಾನೇ ಹಾಕಿಕೊಳ್ಳುವ ಪ್ರಶ್ನೆಗೆ ನಾನೇ ಉತ್ತರಿಸುವ ಧೈರ್ಯ ಅಷ್ಟು ಸುಲಭದಲ್ಲಿ ಬರುವುದಿಲ್ಲ.
ನೂರಾರು ಆಪ್ತ ಸಮಾಲೋಚನೆಗಳಲ್ಲಿ ಸಾವಿರಾರು ಪ್ರೊಜೆಕ್ಟಿವ್ ಪ್ರಶ್ನೆಗಳನ್ನು ಕೇಳಿದ್ದೇನೆ. ನನಗೆ ನಾನೇ ಪ್ರೊಜೆಕ್ಟ್ ಮಾಡುವ ಪ್ರಶ್ನೆಯನ್ನು ನಾನು ಹಾಕಿಕೊಳ್ಳಲು ಇದುವರೆಗೂ ಆಗಿಲ್ಲ.

ಇವತ್ತು ಹಾಕಿಕೊಂಡೆ. ಅದ್ಯಾಕೋ ಮೆಟ್ಟಿಲುಗಳು ನನ್ನ ಪ್ರಶ್ನಿಸಿದವು. ಹೇ ಆತ್ಮಾರಾಮ್, ಈಗೇನು? ನೀನು ಏರುತ್ತೀಯೋ? ಇಳಿಯುತ್ತೀಯೋ?’ ಏರಿದ್ದೇನೆಂದುಕೊAಡು ಇಳಿದಿರುವ ನಾನು ಹೇಗೆ ಉತ್ತರಿಸಲಿ? ಮೆಲ್ಲನೆ ಕುಳಿತುಬಿಟ್ಟೆ.
ಹೌದು, ಈ ಮೆಟ್ಟಿಲುಗಳು ಬರೀ ಏರಲಲ್ಲ, ಇಳಿಯಲೂ ಅಲ್ಲ. ಕುಳಿತುಕೊಳ್ಳಲೂ ಹೌದು.

ಒಳಗಿರುವ ಮಾತುಗಳು ಹೊರಗೆಡವಲೂ ಅಲ್ಲ, ಒಳಗೆ ನುಂಗಿಕೊಳ್ಳಲೂ ಅಲ್ಲ. ಆದರೆ ಅವು ಬಹುಕಾಲದಿಂದ ಕಾಯುತ್ತಲೇ ಇವೆ. ಕಾದು ಕಾದು ಬಿಸಿಯೇರಿದೆ. ಈಗ ಹೊರಗೆಡಬೇಕು ಅಥವಾ ನುಂಗಬೇಕು. ಹಾಗೆಯೇ ತಣ್ಣಗಾಗುವ ಬಗೆಯೇನಾದರೂ ಇದೆಯಾ?

ನೋಡುಗರ ಕಣ್ಣಲ್ಲಿ ನಾನೊಂದು ಪರಮ ಶಾಂತಿ. ಆದರೆ ಅದು ನನ್ನೊಳಗೆ ಬರೀ ಭ್ರಾಂತಿ. ಒಳಗೆ ಪದೇ ಪದೇ ಪ್ರತಿಧ್ವನಿಸುತ್ತಿರುವ ಸದ್ದುಗಳ ಸೊಲ್ಲಡಗಿಸಿ ಸುಮ್ಮನಿರಿಸಲು ಹೇಗಾದೀತು? ಆಪ್ತ ಸಮಾಲೋಚನೆಗೆ ಬಂದವರು ಇದನ್ನು ಹೇಳಿದರೆ, “ಪದೇ ಪದೇ ಆಲೋಚನೆಗಳು ಬರುತ್ತಿದ್ದರೆ ಅದನ್ನು ಚಿಂತಾಚಕ್ರ ಅಥವಾ ಡಿumiಟಿಚಿಣioಟಿ ಎನ್ನುತ್ತೇವೆ. ಅದರಿಂದ ನೀವು ಹೊರಗೆ ಬರಬೇಕು” ಎಂದು ಎಂತದ್ದೋ ಒಂದಷ್ಟು ಸಲಹೆ ಸೂಚನೆಗಳನ್ನು ಕೊಟ್ಟು ಕಳುಹಿಸುತ್ತಿದ್ದೆ. ಆದರೆ ನನಗೆ ನಾನು ಎಂತದ್ದೋ ಒಂದಷ್ಟು ಸಲಹೆ ಸೂಚನೆಗಳನ್ನು ಕೊಟ್ಟುಕೊಳ್ಳಲು ಆಗದು.

ಸದ್ದಿಲ್ಲದ ಹಗಲಲ್ಲಿ, ಸದ್ದಡಗಿದಾಗ ರಾತ್ರಿಯಲ್ಲಿ ಹಳೆಯ ಮಾತುಕತೆಗಳು, ತಪುö್ಪಗಳು, ಬೇಸರಗಳು, ಪಶ್ಚಾತ್ತಾಪಗಳು ಮತ್ತು ವೈಫಲ್ಯಗಳು ಹಿಂದೆ ಹಿಂದೆಯೇ ಕಡಲ ತಡಿಗೆ ಬಂದಪ್ಪಳಿಸುವ ತಡೆಯಲಾಗದ ಅಲೆಗಳಾಗಿರುತ್ತವೆ. ಬೆಳಗಾದಾಗ ಗತ್ಯಂತರವಿಲ್ಲದೇ ಮಾಡುವ ಗದ್ದಲದಲ್ಲಿ ರಾತ್ರಿಗಾಗಿ ಕಾಯುತ್ತಾ ಒಳಗವಿತಿರುವ ಹೆಗ್ಗಣಗಳಂತೆ, ಜಿರಳೆಗಳಂತೆ ಅದೆಲ್ಲೋ ಬಿದ್ದಿರುತ್ತವೆ. ರಾತ್ರಿಯಾದರೆ ಸಾಕು ಮೆದುಳೆಂಬ ಒಡಕಲು ಪ್ರೊಜೆಕ್ಟರ್ ತನ್ನ ಮಾಸಲು ಸಿನಿಮಾವನ್ನು ತಂತಾನೆ ತೋರಿಸಲಾರಂಭಿಸುತ್ತವೆ.
ಅವರಿಗೆ ಇವರಿಗೆ ನಾನು ಹೇಳುವುದು ಅದೆಷ್ಟು ಕಪಟತನದ್ದು!
‘ಇದು trap of overthinking. ನೀವು ಹೊರಗೆ ಬರಬೇಕು.’
ನನಗೇ ಅವನ್ನು ನೋಡಿಕೊಳ್ಳಲು ಆಗಿಲ್ಲ. ನೋಡಿಕೊಳ್ಳಲು ಆಗಿಲ್ಲ ಎನ್ನುವುದಕ್ಕಿಂತ ನೋಡಿಕೊಳ್ಳಲು ಭಯ. ನನಗೆ ನನ್ನ ಮೇಲೆಯೇ ಜಿಗುಪ್ಸೆ ಬಂದುಬಿಟ್ಟೀತೆAಬ ಭಯ. ಆದರೆ ನೋಡಿಕೊಂಡರೆ ಬಾಧೆ ನಿವಾರಣೆಯಾಗಬಹುದು. ಚಿಂತಾಚಕ್ರ ತಿರುಗುತ್ತಿದ್ದಂತೆ, ಬಹುಕಾಲ ತಿರುಗುತ್ತಲೇ ಇದ್ದಂತೆ ಸವೆಯುವುದು. ಆ ಸವಕಳಿ ಚಿಂತಾಚಕ್ರವನ್ನು ಇಲ್ಲವಾಗಿಸದು. ಆದರೆ ಅದು ಸುತ್ತಲು ಮಧ್ಯದ ಕೀಲಾಗಿರುವ ನನ್ನ ಬಳಲಿಸುವುದು.

ಆ ಬಳಲಿಕೆಯೇ ನನ್ನ ವಯಸ್ಸಿಗಿಂತ ಹೆಚ್ಚು ಆಯಸ್ಸಾದಂತೆ ಕಾಣಿಸುವುದು. ಇರುವುದಕ್ಕಿಂತ ದೇಹ ಭಾರವಾಗಿರುವುದು.
ಹೌದಲ್ಲಾ, ಏರುತ್ತಲೋ, ಇಳಿಯುತ್ತಲೋ ಹೆಣಗಾಡುವ ಬದಲು ಕುಳಿತಾದ ಅಂದೆತದ್ದೋ ಪ್ರಶಾಂತತೆ ಒದಗಿದೆ ಇಂದು! ನನಗೆ ನಾನೇ ಹಳೆಯ ಸ್ನೇಹಿತನಾಗಿ ಕುಳಿತುಕೊಂಡು ನನ್ನದೇ ಮಾತುಗಳಿಗೆ ನಾನೇ ಕಿವಿಯಾಗುವ ಸರತಿ ಇಂದು ಒದಗಿತೇ?
ನನಗೆ ನಾನೇ ಹೇಳಿಕೊಳ್ಳುವುದು ಪರಕೀಯವೆನ್ನಿಸಿದರೂ ಒಂದಿಷ್ಟು ಉಸಿರಾಡಲು ಸರಾಗವೆನಿಸಿದೆ. ಕೈ ಮುಷ್ಟಿಗಟ್ಟಿದರೂ ಒಳಗೇ ಸಡಿಲವಾಯಿತು. ಮಡಿಸಿದ ಮೊಣಕೈ ತೊಡೆಯ ಮೇಲೆ ಒತ್ತುವುದನ್ನು ನಿಲ್ಲಿಸಿ ಹಗುರವಾಗಿ ಹತ್ತಿಯಂತೆ ಊರಿತು. ಮಧ್ಯಾಹ್ನದಲ್ಲೂ ತಂಗಾಳಿಯು ಮುಖಕ್ಕೆ ಮುತ್ತಿಡತೊಡಗಿತು.

ನಾಳೆ ಈ ಚಿಂತಾಚಕ್ರ ಮತ್ತೆ ತಿರುಗಣಿಯಾಗಬಹುದೇನೋ. ಆದರೆ ಚಿಂತೆಗಳ ನಡುನಡುವೆ ಒಂದಿಷ್ಟು ಉಸಿರುತೆಗೆದುಕೊಳ್ಳಲು ಸಾಧ್ಯವಾಗಿದ್ದು, ಏರುವುದನ್ನು, ಇಳಿಯುವುದನ್ನು ಬಿಟ್ಟು ಈ ಮೆಟ್ಟಿಲುಗಳ ಮೇಲೆ ಕೂತಿದ್ದಕ್ಕೆ.
‘ಹೌದು ಕಣೋ ಆತ್ಮಾ, ಹೌದು!’

Continue Reading

ಅಂತರಂಗ

ಡಾ. ಆತ್ಮಾರಾಮನ ಆತ್ಮನಿವೇದನೆ ; ಒಳಗನ್ನಡಿಯಲ್ಲಿ ಮೌನದ ಮುಖ

Published

on

~ಯೋಗೇಶ್ ಮಾಸ್ಟರ್, ಚಿಂತಕರು

ಪ್ತ ಸಮಾಲೋಚಕ ಮತ್ತು ಮನೋವೈದ್ಯ
ಹಾಗಂತಿರುವ ನನ್ನ ಮನೆಯ ಮುಂದಿನ ನನ್ನ ಪರಿಚಯ. ಅದನ್ನೇ ನಾನೆಂದು ತಿಳಿದಿರುವ ಹೊರಗಿನವರಿಗೆಲ್ಲಾ ನನ್ನೊಳಗಿರುವ ಅಪರಿಚಿತನ ಹೇಗೂ ಕಾಣಲಾಗದು.

ಲೋಕ ಕಾಣುವ ಅಥವಾ ನಾನು ತೋರುವ ಮುಖದ ಮುಸುಕನ್ನು ಸರಿಸಿ ಇಣುಕುವಷ್ಟು ಯಾರಿಗಾದರೂ ಅದೆಷ್ಟು ಬಿಡುವಿರುವುದು! ಪರದೆಯ ಮೇಲಿನ ಡಾ. ಆತ್ಮಾರಾಮನ ನೆರಳಿನಾಟವನ್ನು ಮೆಚ್ಚುವರು, ಹೊಗಳುವರು, ತೆಗಳುವರು, ತಿರಸ್ಕರಿಸುವರು; ಅವರವರ ಕಣ್ಣುಗಳ ಅಭಿರುಚಿಗೆ ತಕ್ಕಂತೆ.
ಪರರ ರುಚಿಗೆ ಎಟಕುವುದು ಚಹರೆಗಳೇ ತಾನೇ! ಅವರ ಕಣ್ಣುಗಳಿಂದಲೇ ನನ್ನ ನಾನು ಕಂಡುಕೊಳ್ಳಲು ಅಥವಾ ಕಾಣಿಸಿಕೊಳ್ಳಲು ಸಾಕಾಗಿ ನನ್ನ ಕಣ್ಣುಗಳು ಮುಚ್ಚಿಕೊಂಡವು. ಅದೆಷ್ಟೋ ಹೊತ್ತು ಹಾಗಿದ್ದೆನೋ!

ಚಹರೆಗಳ ನೆರಳುಗಳನ್ನು ನುಂಗಿಕೊAಡ ಕಣ್ಣೊಳಗಿನ ಕತ್ತಲೆಯಲ್ಲಿ ಬೆತ್ತಲೆಯಾಗಿರುವುದು ಸುಖ. ಅದು ನಿರಾಳತೆಯ ಸುಖ. ತರಾವರಿ ತೊಡುಗೆಗಳ ತೂಕವನಿಳಿಸಿಕೊಂಡ ನಿರಾತಂಕದ ನೆಮ್ಮದಿ. ಕತ್ತಲು; ಅದೆಷ್ಟು ಆಳ! ಗೂಢತೆಗಳ ಮೇಳವದೆಷ್ಟಿದ್ದರೂ ತೋರ್ಪಡಿಸಿಕೊಳ್ಳುವ ಕಾತುರವಿಲ್ಲದ ನಿರಹಂಕಾರದ ನಿರಾಳತೆ!

ಬೆಳಕಿನದೇ ಸಮಸ್ಯೆ. ಅದರಲ್ಲದೆಷ್ಟು ಬಣ್ಣಗಳು, ಬಣ್ಣನೆಗಳು. ವ್ಯತ್ಯಾಸಗಳು, ವ್ಯತ್ಯಯಗಳು. ಸಮೀಕರಣಗಳು, ಅಸಮಾನತೆಗಳು. ಉಪಮೆಗಳು, ಉದಾಹರಣೆಗಳು. ಸಾಧಾರಣಗಳು, ಅಸಾಧರಣಗಳು. ಅಸೂಯೆಗಳು, ಆಯಾಸಗಳು. ಕತ್ತಲು ನೆಮ್ಮದಿ. ಮುಚ್ಚಿರುವ ಕಣ್ಣೊಳಗಿನ ಕತ್ತಲಿನಲ್ಲಿ ಕಾಣತೊಡಗಿದ ನನ್ನ ಬಿಂಬವನ್ನು ನೋಡುತ್ತಲೇ ಕುಳಿತುಬಿಟ್ಟೆ. ಹೌದಲ್ಲಾ, ಇಷ್ಟು ಕಾಲ ಮುಚ್ಚಿಟ್ಟಿದವರೇ ಈಗ ಬಿಚ್ಚಿಡುತ್ತಿದ್ದಾರೆ.

ಹೌದು, ಮನಸ್ಸೆಂಬುದೇ ಹಾಗೆ. ಅದು ತನಗೆ ತಾನೇ ತೊಂದರೆಯನ್ನು ಉಂಟುಮಾಡಿಕೊಳ್ಳುತ್ತದೆ. ತಾನೇ ಗೋಗರೆಯುತ್ತದೆ. ತಾನೇ ಸಹಾಯವನ್ನು ನಿರಾಕರಿಸುತ್ತದೆ. ತಾನೇ ಗೋಳಿಡುತ್ತದೆ. ತಾನೇ ಸಂತೈಸುತ್ತದೆ.
ತಿಕ್ಕಲು, ತಾನೇ ಹಾಳು ಮಾಡುವುದು, ತಾನೇ ಗೋಳಿಡುವುದು, ತಾನೇ ಸರಿ ಮಾಡುವುದು. ಈಗ ಸರಿಮಾಡಿಕೊಳ್ಳುವ ಮಗ್ಗುಲಿಗೆ ತಿರುಗಿಕೊಂಡಿದೆ. ಸರಿ ಹೋಗಿಬಿಡಲಿ.
ಸರಿ ಹೋಗುವುದೋ ಬಿಡುವುದೋ, ಸರಿಯಿಲ್ಲ, ಸರಿ ಮಾಡಬೇಕಾಗಿದೆ ಅಂತ ಗೊತ್ತಾಯಿತಲ್ಲಾ ಅಷ್ಟೇ ಸಾಕು.
ರೋಗವಿದೆ ಎಂಬ ಅರಿವು ಬಹುದೊಡ್ಡ ಉಪಶಮನ. ರೋಗವನ್ನೇ ಆರೋಗ್ಯವೆಂದು ಭಾವಿಸಿದ್ದು, ಈಗ ರೋಗ ಎಂದು ತಿಳಿಯಿತಲ್ಲಾ, ಅದೇ ಗುಣಮುಖವಾಗುವ ಮುನ್ಸೂಚನೆ.

ಇಷ್ಟೂ ದಿನಗಳ ಕಾಲ ಕನ್ನಡಿಯೊಳಗೆ ಮುಖ ನೋಡಿಕೊಳ್ಳುತ್ತಿದ್ದದ್ದು, ಇತರರಿಗೆ ಹೇಗೆ ಕಾಣಿಸುತ್ತೇನೆ, ಹೇಗೆ ಕಾಣಿಸಬೇಕು ಎಂದು. ಆದರೆ ಇಂದು ಕತ್ತಲಿನ ಕನ್ನಡಿಯಲ್ಲಿ ಕಾಣುತ್ತಿರುವ ಮುಖದ ಒಳಗಿನ ಮೌನ ತನ್ನ ಗುರುತಿನ ಪರದೆಯನ್ನು ಹರಿಯುತ್ತಿದೆ. ಯಾವ ಅಡಿಗಿದ್ದ ಮೌನ ನನ್ನಾತ್ಮದ ಕವಚವಾಗಿತ್ತೋ ಅದು ಕಾರಾಗೃಹವೆನಿಸಿ ಉಸಿರುಕಟ್ಟಿಸಿದ್ದು ಒಳ್ಳೆಯದೇ ಆಯಿತು.
ಮೌನ ದನಿಯಾಗುತ್ತಿದೆ. ದನಿ ಬನಿಯಾಗುತ್ತಿದೆ.
ಹಾಗಾಗಿಯೇ ಬೆಳಕಿನಲ್ಲಿ ವಿವಿಧ ಬಣ್ಣಗಳನ್ನು ಹಚ್ಚಿ ಬಣ್ಣಿಸಿದ್ದ ಎಲ್ಲಾ ಸಂಬAಧಗಳು, ಸಂಗತಿಗಳು, ಸಂವಹನಗಳು, ಸಂಘರ್ಷಗಳು ಈಗ ನೆನಪಿನ ನೆರಳುಗಳಾಗಿ ಆಳವಾದ ಕತ್ತಲಲ್ಲಿ ಬಣ್ಣ, ಬಣ್ಣನೆಗಳನ್ನು ಕಳೆದುಕೊಂಡಿವೆ.
ಅವರಿವರ ಮನಸ್ಸುಗಳ ಮಸುಕು ಮಾಡುವ ಮುಸುಕುಗಳ ತೆಗೆಯಲು ಸಹಕರಿಸುತ್ತಿದ್ದವನಿಗೆ ಸ್ವಸಹಾಯ ಮಾಡಿಕೊಳ್ಳಲು ಅದೇ ಮನಸ್ಸು ಮನಸ್ಸು ಮಾಡಿದೆ. ಆಗಲಿ, ಅದೂ ಆಗಿ ಹೋಗಲಿ.

ಮನೋವೈದ್ಯ ತನ್ನೊಳಗಿನ ರೋಗವನ್ನು ಪತ್ತೆ ಮಾಡಿಕೊಳ್ಳಲಿ. ಆಪ್ತ ಸಮಾಲೋಚಕ ತನ್ನಿರುವಿಗೆ, ತನ್ನಾಳಕೆ ಒಂದಿಷ್ಟು ಕಾಲ ಆಪ್ತನಾಗಿರುವ ಅವಕಾಶವನ್ನು ದಕ್ಕಿಸಿಕೊಳ್ಳಲಿ. ಮೌನವನ್ನು ಓದುವ ಓರಗೆಯವರಿದ್ದಾರೆ. ಓದಲಿ.
ವೈದ್ಯನೊಬ್ಬ ತಾನು ರೋಗಿಯಾಗಿರಲಿಲ್ಲ, ಅಥವಾ ತನಗೆ ರೋಗ ಬರುವುದಿಲ್ಲ ಎನ್ನುವುದು ಆತ್ಮವಂಚನೆ. ತನಗೆ ತಾನು ವಂಚಿಸಿಕೊಳ್ಳುವವನು ಜಗತ್ತಿನ ಯಾರೊಂದಿಗೆ ವಿಶ್ವಾಸವನ್ನು ಸಂಚಯ ಮಾಡಿಯಾನು!

ಮತ್ತೆ ಸಿಕ್ಕಿದನವನು ಮೌನದಲಿ
ಕಳೆದಿದ್ದವನು ಗದ್ದಲದಲಿ
ಗಾಯಗಳು ಮರೆತಿವೆ
ನೋವಿಲ್ಲದ ಕಲೆಗಳ ಹಿಂದೆ
ಪ್ರತಿ ಉಸಿರು ಆಸೆಗಳ ಬಸಿರು
ಹೆರಲಾಗದೆ ಘನವಾದ ಕಣ್ಣೀರು
ಕರಗುವುದೊಮ್ಮೆ ಹೆಪುö್ಪಗಟ್ಟಿದ ಕಾರ್ಮೋಡ
ಸುರಿವುದಲ್ಲಿ ಒಳಗಣ್ಣಿಂದ ಮಳೆಯು ನೋಡ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಅಂತರಂಗ

ದಿಮಾಗಿ ನಕ್ಸಲ್-ನಗರ ನಕ್ಸಲ್

Published

on

~ರಹಮತ್ ತರೀಕೆರೆ, ಚಿಂತಕರು

ಕಾರ್ನಾಡರಲ್ಲಿ ನನಗೆ ಮೊದಲಿಂದಲೂ ವೈಯಕ್ತಿಕ ಸಂಪರ್ಕ ಇರಲಿಲ್ಲ. ಅನಂತಮೂರ್ತಿ ಅವರಂತೆ ಅವರು ಕಿರಿಯ ಲೇಖಕರ ಜತೆ ನಂಟಿರಿಸಿಕೊಂಡವರಲ್ಲ. ಯಾರಿಗಾದರೂ ಮುನ್ನುಡಿ ಬರೆದಿದ್ದೂ ನನಗೆ ತಿಳಿದಿಲ್ಲ. ತಾವಾಯಿತು ತಮ್ಮ ಬರೆಹ, ಸಿನಿಮಾ ಆಯಿತು ಎಂದಿದ್ದವರು. ಮಹಾರಾಷ್ಟ್ರದಲ್ಲಿ ಹುಟ್ಟಿ, ಜೀವಿತದ ಬಹುಕಾಲ ಕರ್ನಾಟಕದ ಹೊರಗಿದ್ದ ಅವರು, ಕರ್ನಾಟಕದ ಸಾರ್ವಜನಿಕ ಕಾರ್ಯಕ್ರಮಗಳಲ್ಲೂ ಹೆಚ್ಚು ಕಾಣಿಸಿದವರಲ್ಲ. ಸಮಕಾಲೀನರಾದ ತೇಜಸ್ವಿ ಲಂಕೇಶ್ ಅನಂತಮೂರ್ತಿ ಅವರಂತೆ ಪಬ್ಲಿಕ್ ಇಂಟಲೆಕ್ಚುವಲ್ ಕೆಲಸವನ್ನು ಮೈಮೇಲೆ ಹಾಕಿಕೊಂಡು, ಕರ್ನಾಟಕದ ಕಷ್ಟದ ದಿನಗಳಲ್ಲಿ ತಮ್ಮ ಮಾತು ಭಾಷಣ ಬರೆಹಗಳಿಂದ ಜನಾಭಿಪ್ರಾಯ ರೂಪಿಸಿದವರಲ್ಲ.

ಹೀಗಿದ್ದ ಕಾರ್ನಾಡರು ಬಾಳಿನ ಕೊನೆಯ ವರ್ಷಗಳಲ್ಲಿ ಆಶ್ಚರ್ಯಕರವಾಗಿ ಬದಲಾದರು; ಸಾರ್ವಜನಿಕ ಮಹತ್ವದ ಪ್ರಸಂಗಗಳಲ್ಲಿ ಮಾತಾಡಿದರು. ಹಠಬಿದ್ದಂತೆ ಬೀದಿಗಿಳಿದರು. ಈ ರೂಪಾಂತರಕ್ಕೆ ಕಾರಣ, ಪ್ರಭುತ್ವಗಳು ರಾಜಕೀಯ ಸೈದ್ದಾಂತಿಕ ಭಿನ್ನಮತಗಳನ್ನು ದಮನಿಸುವ ನಡೆಗಳಿರಬಹುದು; ಅನಂತಮೂರ್ತಿ ತೇಜಸ್ವಿ ಲಂಕೇಶ್ ತೀರಿಕೊಂಡ ಬಳಿಕ, ಉಂಟಾದ ರಿಕ್ತತೆ ಅವರನ್ನು ಈ ಹೊಸ ಪಾತ್ರ ನಿರ್ವಹಿಸುವಂತೆ ಆಹ್ವಾನಿಸಿರಬಹುದು. ಅವರು ತಮ್ಮ ಮಾತು, ಕೃತಿ, ಕ್ರಿಯೆಗಳಲ್ಲಿ ಭಾರತವನ್ನು ಆವರಿಸುತ್ತಿರುವ ಮತೀಯತೆ ಕುರಿತು ವ್ಯಗ್ರರಾಗಿದ್ದರು.

ಅವರು ಮಾಡಿದ ಸಾರ್ವಜನಿಕ ಪ್ರತಿರೋಧದ ಪ್ರಕರಣಗಳನ್ನು ಗಮನಿಸಬೇಕು. ಬಾಬರಿ ಮಸೀದಿಯ ಧ್ವಂಸವನ್ನು ವಿರೋಧಿಸಿದ್ದು; ನೈಪಾಲರ ಬಲಪಂಥೀಯವಾದ ಬೆಂಬಲಿಸುವ ನಿಲುವನ್ನು ಖಂಡಿಸಿದ್ದು; ಬಾಬಾಬುಡನಗಿರಿ ಚಳುವಳಿಯಲ್ಲಿ ಭಾಗವಹಿಸಿದ್ದು; ಟಿಪ್ಪು ನೆನಪಿನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು; ಟಿಪ್ಪು ಕುರಿತು ನಾಟಕ ಬರೆದಿದ್ದು; ಎಂ. ಎಫ್. ಹುಸೇನರ ಸೃಜನಶೀಲತೆ ಪರವಾಗಿ ನಿಂತಿದ್ದು; ಗೋರಕ್ಷಣೆ ಹೆಸರಲ್ಲಿ ನಡೆಯುತ್ತಿರುವ ಉಪಟಳ ವಿರೋಧಿಸಿ `ನಮ್ಮ ಆಹಾರ ನಮ್ಮ ಹಕ್ಕು’ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು. ಇಲ್ಲಿನ ಕೊನೆಯ ಕಾರ್ಯಕ್ರಮದಲ್ಲಿ ಅವರೊಟ್ಟಿಗೆ ಅನಂತಮೂರ್ತಿಯವರೂ ಇದ್ದರು. ಭಾರತದಲ್ಲಿ ಇಬ್ಬರು ಜ್ಞಾನಪೀಠ ಲೇಖಕರು ಇಂತಹದೊಂದು ಸಾರ್ವಜನಿಕ ಪ್ರತಿರೋಧದ ಕಾರ್ಯಕ್ರಮದಲ್ಲಿ ಒಟ್ಟಿಗೆ ಭಾಗವಹಿಸಿದ್ದು ಅಪೂರ್ವ ಸಂಗತಿ.

ನನಗೆ ಅವರ ಜತೆ ಮೊದಲ ಮುಖಾಬಿಲೆ ಆಗಿದ್ದು ಬಾಬಾಬುಡನಗಿರಿಗೆ ಮಾಡಿದ ಪಯಣದಲ್ಲಿ. ಸೂಫಿಗಳ ಮೇಲೆ ತುಸು ಅಧ್ಯಯನ ಮಾಡಿದವನೆಂದು ನನ್ನನ್ನು ಅವರೊಟ್ಟಿಗೆ ಕೂರಿಸಲಾಗಿತ್ತು. ಅವರ ಗಂಭೀರ ಸ್ವಭಾವದ ಬಗ್ಗೆ ತಿಳಿದಿದ್ದ ನಾನು, ಅವರಾಗಿ ಏನಾದರೂ ಕೇಳಿದರೆ ಮಾತ್ರ ಹೇಳಬೇಕೆಂದು, ಸಹಪಯಣದ ಖುಶಿಯನ್ನು ಅನುಭವಿಸುತ್ತ ಜತೆಗೆ ಕೂತಿದ್ದೆ. ಗಿರಿಯನ್ನು ವಾಹನ ಹತ್ತುವಾಗ, ನೆತ್ತಿಮೇಲಣ ಶಿಖರಗಳನ್ನೂ ಕೆಳಗಿನ ಕಣಿವೆಗಳನ್ನೂ ನೋಡುತ್ತ ಕಾರ್ನಾಡರು `ಓಹ್ ಎಷ್ಟೊಂದು ಸುಂದರವಾಗಿದೆಯಲ್ಲ’’ ಎಂದು ಉದ್ಗರಿಸುತ್ತ ಮಗುವಿನಂತೆ ಪುಟಿಯುತ್ತಿದ್ದರು.

ಅವರೊಬ್ಬ ಸೆಲೆಬ್ರಿಟಿಯಾದರೂ ಸರಳವ್ಯಕ್ತಿ. ಅಭಿನಯ ಅವರ ವೃತ್ತಿಯಾದರೂ ವ್ಯಕ್ತಿಯಾಗಿ ತೋರಿಕೆಯೇ ಇಲ್ಲದ ನೇರಗುಣದವರು. ಗೋಕರ್ಣದಲ್ಲಿ ನಡೆದ ಗೌರೀಶ ಕಾಯ್ಕಿಣಿಯವರ ಶತಮಾನೋತ್ಸವ ಕಾರ್ಯಕ್ರಮದಲ್ಲಿ ನಮ್ಮನ್ನು ತೋಟದ ಮನೆಯೊಂದರಲ್ಲಿ ಉಳಿಸಲಾಗಿತ್ತು. ಕಾರ್ನಾಡರು ನನಗಿಂತಲೂ ವೈದ್ಯೆಯಾದ ನನ್ನ ಮಗಳ ಜತೆ ಹೆಚ್ಚು ಮಾತನಾಡಿದರು. ಆದಿನ ನಾನು ಅವರ `ಆಡಾಡ್ತಾ ಆಯುಷ್ಯ’ ಒಳಗೊಂಡಂತೆ (ಬೆರಗು ಹುಟ್ಟಿಸುವ ಭಾಷೆಯುಳ್ಳ ವಿಶಿಷ್ಟ ಗದ್ಯಶೈಲಿಯ ಕೃತಿಯಿದು) ಕನ್ನಡದ ಆತ್ಮಕತೆಗಳ ಬಗ್ಗೆ ಉಪನ್ಯಾಸ ಮಾಡಿದೆ. ಬಸಳೆಸೊಪ್ಪಿನ ಹೊರೆಯನ್ನು ಅವರ ಕೈಯಿಂದ ಉಡುಗೊರೆ ಕೊಡಿಸಲಾಯಿತು. ಉಪನ್ಯಾಸದ ಬಳಿಕ ಕಾರ್ನಾಡರು ಕೇಳಿದರು: “ಭಾರತದ ಮೊಟ್ಟಮೊದಲ ಆತ್ಮಕಥೆ `ಅರ್ಧಕಥಾನಕ’ ಓದಿದ್ದೀರಾ?” “ಇಲ್ಲ” “ನೀವು ಓದಲೇಬೇಕು. ಅಪರೂಪದ ಪುಸ್ತಕ. 16ನೇ ಶತಮಾನದ್ದು’’. ಬೆಂಗಳೂರಿಗೆ ಹೋದೊಡನೆ ನೆರಳಚ್ಚನ್ನು ಕಳಿಸಿಕೊಟ್ಟರು. ವ್ಯವಹಾರ ಪ್ರಜ್ಞೆಯಿಲ್ಲದವನೂ ಕಾವ್ಯಪ್ರೇಮಿಯೂ ಆದ ಜೈನ ವ್ಯಾಪಾರಿಯೊಬ್ಬನ ರೋಚಕ ಅನುಭವಗಳ ಕಥನವದು.

ಹೀಗೆ ಸಣ್ಣಗೆ ಆರಂಭವಾದ ಪರಿಚಯ `ಅಮೀರ‍ಬಾಯಿ ಕರ್ನಾಟಕಿ’ ಪುಸ್ತಕದ ಸನ್ನಿವೇಶದಲ್ಲಿ ಧಕ್ಕೆಗೊಳಗಾಯಿತು. ನಾನು ಅಮೀರಬಾಯಿ ಸಂಶೋಧನೆಗೆಂದು ಪುಣೆ ಮುಂಬೈ ತಿರುಗಾಡುವಾಗ, ಮಹಾರಾಷ್ಟ್ರದಲ್ಲಿ ಕಾರ್ನಾಡರಿಗೆ ಸಿನಿಮಾ ಮತ್ತು ಸಾಹಿತ್ಯ ಕ್ಷೇತ್ರದಲ್ಲಿರುವ ಮರ್ಯಾದೆಯನ್ನು ಗಮನಿಸಿದ್ದೆ. ಮರಾಠಿ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾಡಿದ ದಿಟ್ಟ ಭಾಷಣವು-ಅದರಲ್ಲಿ ರಾಜಕೀಯ ಪಕ್ಷಗಳು ಸೈನೀಕರಣಗೊಳ್ಳುವುದರ ಬಗ್ಗೆ ಕಟುವಾದ ವಿಮರ್ಶೆಯಿದೆ- ಅಲ್ಲಿನ ಲೇಖಕರು ನೆನಪಿಟ್ಟಿದ್ದರು. ಕನ್ನಡ-ಮರಾಠಿ ಸಾಂಸ್ಕøತಿಕ ಬಾಂಧವ್ಯದ ಕೊಂಡಿಯಾಗಿದ್ದ ಅಮೀರಬಾಯಿ ಕುರಿತ ಹೊತ್ತಗೆಯನ್ನು ಅವರೇ ಬಿಡುಗಡೆ ಮಾಡಿದರೆ ಚೆನ್ನವೆನಿಸಿತು. ಹೇಗೂ `ಸಾಹಿತ್ಯ ಸಂಭ್ರಮ’ದ ಕಾರ್ಯಕ್ರಮಕ್ಕಾಗಿ ದಿನ ಮೊದಲೇ ಧಾರವಾಡಕ್ಕೆ ಬರುತ್ತಿದ್ದರು. ಹಿಂದಿನ ದಿನ ಸಂಜೆ ಬಿಡುಗಡೆ ಮಾಡಲು ಸಾಧ್ಯವೇ ಎಂದು ಕೇಳಿದೆ. ಕೂಡಲೇ ಒಪ್ಪಿದರು.

ಆದರೆ ಸಾಹಿತ್ಯ ಸಂಭ್ರಮ ಕಾರ್ಯಕ್ರಮದ ಸ್ವರೂಪದ ಬಗ್ಗೆ ಭಿನ್ನಮತ ವ್ಯಕ್ತಪಡಿಸಿ ನಾನು ಭಾಗವಹಿಸದೆ ಹೊರಗುಳಿದೆ. ಕಾರ್ನಾಡರು ಕರೆ ಮಾಡಿ “ನೀವು ಸಂಭ್ರಮಕ್ಕೆ ಬರಲು ನಿರಾಕರಿಸಿದರಂತೆ. ನಿಜವೇ?’’ ಎಂದು ಕೇಳಿದರು. ಹೌದೆಂದೆ. `ಹಾಗಿದ್ದಲ್ಲಿ ನಿಮ್ಮ ಕಾರ್ಯಕ್ರಮಕ್ಕೆ ಬರಲಾರೆ, ಕ್ಷಮಿಸಿ’ ಎಂದರು. `ಆಗಲಿ’ ಎಂದೆ. ಅವರಿಗೆ ತಾನು ಹಾಗೆ ಮಾಡಿದ್ದು ಸರಿಯಲ್ಲ ಅನಿಸಿರಬೇಕು. ಧಾರವಾಡದಲ್ಲಿರುವ ತಮ್ಮ ಒಡನಾಡಿ ಸುರೇಶ ಕುಲಕರ್ಣಿಯವರೊಟ್ಟಿಗೆ ತಮ್ಮ ಚಡಪಡಿಕೆ ಹಂಚಿಕೊಂಡರಂತೆ. ಆದರೆ ನಾನು ಕಾರ್ಯಕ್ರಮ ಮುಗಿದ ಬಳಿಕ ಪುಸ್ತಕದ ಗೌರವಪ್ರತಿ ಕಳಿಸಿಕೊಟ್ಟೆ. ಚೆನ್ನಾಗಿ ಬಂದಿದೆ ಎಂದು ಪತ್ರ ಬರೆದರು. ಅವರು ಆ ಘಟನೆಯನ್ನು ಮನಸ್ಸಿನಲ್ಲಿ ಇಟ್ಟುಕೊಂಡಂತೆ ಕಾಣಲಿಲ್ಲ. ತಮ್ಮ ಪರಿಚಿತರು ಯಾರಾದರೂ ಹಂಪಿ ನೋಡಬಯಸಿದರೆ, ನನ್ನ ಸಲಹೆ ಪಡೆಯಲು ಹೇಳುತ್ತಿದ್ದರು. ಒಮ್ಮೆ ಅವರ ನಾಟಕಗಳಲ್ಲಿ ನಟಿಸುವ ಬಂಗಾಳದ ನಟಿ ಹಂಪಿಯಲ್ಲಿ ಹಣ ಪಾಸ್‍ಪೋರ್ಟುಳ್ಳ ಪರ್ಸನ್ನು ಕಳೆದುಕೊಂಡರು. ಕಾರ್ನಾಡರು ಕರೆಮಾಡಿ ಆಕೆಗೆ ಬೆಂಗಳೂರಿನ ತನಕ ಬರಲು ಸಹಾಯ ಮಾಡುವುದು ಸಾಧ್ಯವೇ ಎಂದು ಕೇಳಿದರು.

ಸಂವಾದಕ್ಕೆ ಸದರವಾಗಿ ಸಿಗುವ ಲೇಖಕರಲ್ಲದ ಗಿರೀಶ್, ಬಾಳಿನ ಕೊನೆಯ ದಿನಗಳಲ್ಲಿ ತಮ್ಮ ಲಾಗಾಯ್ತಿನ ಸ್ವಭಾವಕ್ಕೆ ಪ್ರತಿಯಾಗಿ, ಸಾಂಸ್ಕøತಿಕ ನಾಯಕತ್ವದ ದನಿ ಮೊಳಗಿಸಿದರು. ತಮಗೆ ತಪ್ಪೆಂದು ಕಂಡ ವಿಷಯಗಳಲ್ಲಿ ಪರಿಣಾಮ ಲೆಕ್ಕಿಸದೆ ದಿಟ್ಟತನದ ನಿಲುವು ತೆಗೆದುಕೊಂಡರು. ತಮ್ಮ ತಾತ್ವಿಕ ರಾಜಕೀಯ ನಿಲುವಿಗೆ ವಿರುದ್ಧವಿರುವ ದೊಡ್ಡ ಸಾಧಕರನ್ನೂ ಲೆಕ್ಕಿಸದೆ ಶಾಬ್ದಿಕ ಹಿಂಸೆಗೆ ಗುರಿಪಡಿಸುವ ಈಚಿನ ಪದ್ಧತಿಗೆ ಬಲಿಯೂ ಆದರು. ಗೌರಿಲಂಕೇಶ್ ಸ್ಮರಣ ಕಾರ್ಯಕ್ರಮಕ್ಕೆ `ನಾನೂ ನಗರ ನಕ್ಸಲ್’ ಎಂದು ಕೊರಳಿಗೆ ಬೋರ್ಡು ಸಿಕ್ಕಿಸಿಕೊಂಡು ಬಂದ ಸನ್ನಿವೇಶ ನೆನಪಾಗುತ್ತಿದೆ. ಅದು ತೀರಾ ನಾಟಕೀಯವಾಗಿತ್ತು. ಆದರೆ ಅವರ ಸ್ಪಷ್ಟತೆ ಧೈರ್ಯ ಸಿಟ್ಟು ಹತಾಶೆ ಆಕ್ಟಿವಿಸಂಗಳ ಆತ್ಯಂತಿಕ ರೂಪಕವಾಗಿತ್ತು. ಆರೋಗ್ಯ ಸರಿಯಿರಲಿಲ್ಲ. ಕೈಯಲ್ಲಿ ಆಮ್ಲಜನಕದ ಸಿಲಿಂಡರನ್ನು ಹಿಡಿದಿದ್ದರು. ಅಪರಾಧಿಗಳ ಕೊರಳಿಗೆ ಫಲಕ ತೂಗುಹಾಕುವುದು ಕ್ರಮವಿದೆ. ಶಿಲುಬೆಗೇರಿದ ಕ್ರಿಸ್ತನ ಕೊರಳಿಗೂ `ನಜರೇತಿನ ಅರಸ’ ಎಂಬ ವ್ಯಂಗ್ಯದ ಫಲಕ ತೂಗಿಸಲಾಗಿತ್ತು. ಆದರೆ ಕಾರ್ನಾಡರು ಇದನ್ನು ಸ್ವತಃ ಧಾರಣಮಾಡಿದ್ದರು. `ವಿಚಾರ ಮಾಡುವುದು, ಪ್ರಭುತ್ವವನ್ನು ವಿಮರ್ಶಿಸುವುದು, ಮತಧರ್ಮದ ಹಿಂಸೆ ಖಂಡಿಸುವುದು ಅಪರಾಧವಾದರೆ ನಾನೂ ಅಪರಾಧಿ’ ಎಂಬ ನಾಟಕೀಯ ತಪ್ಪೊಪ್ಪಿಗೆಯನ್ನು ಅದು ಒಳಗೊಂಡಿತ್ತು. ಜನಪದ ಮಿತ್ ಮತ್ತು ಪುರಾಣಗಳನ್ನು ನಾಟಕಗಳಿಗೆ ದುಡಿಸಿಕೊಂಡ ಕಾರ್ನಾಡರು ನಾಗರಿಕ ಹಕ್ಕುಗಳ ವಿಷಯ ಬಂದರೆ, ಮುಕ್ತ ಸಮಾಜದ ಪರವಾದ ಆಕ್ಸಫರ್ಡ್ ಪದವೀಧರರೇ. ನಾಗರಿಕ ಸಮಾಜವೊಂದರಲ್ಲಿ ಸಹಜವಾಗಿ ಇರಬೇಕಾದ ಸ್ವಾತಂತ್ರ್ಯದ ಪರವಾಗಿ ಅವರು ಸದಾ ಆಲೋಚಿಸುತ್ತಿದ್ದರು. ಫಲಕದಲ್ಲಿರುವ ಬರೆಹವು ಸ್ವಹಸ್ತಾಕ್ಷರದಲ್ಲಿತ್ತು. ದೇಶದ ಸುದ್ದಿಯಾಗಬೇಕೆಂದೇ ಇಂಗ್ಲೀಶಿನಲ್ಲಿತ್ತು. ಅದರಲ್ಲಿ ದೇಶೀಭಾಷೆಯ ಲೇಖಕ ಎಂಬುದನ್ನು ದಾಖಲಿಸುವಂತೆ `ನಾನು ಕೂಡ’ ಎಂಬ ಎರಡು ಪದಗಳು ಕನ್ನಡದಲ್ಲಿದ್ದವು. ಉಸಿರ್ಗಟ್ಟಿಸುವ ಸನ್ನಿವೇಶಕ್ಕೆ ತುಡಿಯುವಂತೆ ಕೈಯಲ್ಲಿ ಆಕ್ಸಿಜನ್ ಸಿಲಿಂಡರಿತ್ತು.

ಅದೊಂದು ಅಭಿಮಾನ ಉಕ್ಕಿಸುವ ಮತ್ತು ಎದೆಕರಗಿಸುವ ಚಿತ್ರ; ಸಮಾಜದ ಹದುಳಕ್ಕಾಗಿ ತನ್ನ ಬೇನೆಯಲ್ಲೂ ಲೇಖಕ ರಿಸ್ಕ್ ತೆಗೆದುಕೊಳ್ಳುವ ಪ್ರತೀಕ. ಕಾರ್ನಾಡರಲ್ಲಿ ಲೆಕ್ಕಾಚಾರ ದ್ವಂದ್ವ ಇರಲಿಲ್ಲ. ಅಂತರಂಗಕ್ಕೆ ಸರಿಯೆನಿಸಿದ್ದನ್ನು ಹೇಳುವ-ಮಾಡುವ ಪ್ರಾಮಾಣಿಕತೆಯಿತ್ತು. ಇದು ಅವರ ಶವಸಂಸ್ಕಾರದಲ್ಲೂ ವ್ಯಕ್ತವಾಯಿತು. ಅವರು ಸತ್ತು ದೊಡ್ಡವರಾದವರು; ಅವರನ್ನು ಕೆಟ್ಟದಾಗಿ ನಡೆಸಿಕೊಂಡು ಬದುಕಿರುವ ನಾವು ಸಣ್ಣವರಾದೆವು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending