ಅಂತರಂಗ
ಧರ್ಮ ಮರ್ಮ-01: ಭಾರತದಲ್ಲಿ ಧರ್ಮದ ಸ್ವರೂಪ
- ಯೋಗೇಶ್ ಮಾಸ್ಟರ್
ಭಾರತದಲ್ಲಿ ಸದಾ ಗೊಂದಲಕ್ಕೊಳಗಾಗುವ ಅನೇಕ ವಿಷಯಗಳಲ್ಲಿ ಧರ್ಮವೂ ಒಂದು. ಸಹಜವಾಗಿ ಗೊಂದಲ ಎಂದರೇನೇ ಸ್ಪಷ್ಟತೆ ಇಲ್ಲ ಎಂದು ಅರ್ಥ. ಬೇರೆ ದೇಶಗಳಲ್ಲಿಯೂ ಕೂಡಾ ಧರ್ಮದ ಆಚರಣೆಗಳ ಬಗ್ಗೆ ಗೊಂದಲಗಳಿವೆ, ಸಂಘರ್ಷಗಳಿವೆ. ಆದರೆ ನಮ್ಮ ದೇಶದಲ್ಲಿ ಧರ್ಮ ಎನ್ನುವುದು ಬೇರೆ ದೇಶದವರಿಗಿಂತ ಹೆಚ್ಚು ವ್ಯಾಪಕವಾಗಿ ಮತ್ತು ವಿಸ್ತಾರವಾಗಿ ಅರ್ಥೈಸಲು ಸಾಧ್ಯವಿರುವುದರಿಂದ ಗೊಂದಲಗಳು ಹೆಚ್ಚಾಗಿವೆ.
ಹೌದು, ನಮ್ಮ ದೇಶದಲ್ಲಿ ಧರ್ಮದ ವಿಷಯವಾಗಿಯೂ ಒಂದು ಸಾಮಾನ್ಯ ಸ್ಪಷ್ಟತೆ ಇಲ್ಲ. ಭಾರತದ ಮಟ್ಟಿಗೆ ಧರ್ಮವನ್ನು ಅರ್ಥ ಮಾಡಿಕೊಳ್ಳುವುದು ಅಷ್ಟೇನೂ ದೊಡ್ಡ ವಿಷಯವೂ ಅಲ್ಲ ಮತ್ತು ಸಂಕೀರ್ಣವೂ ಅಲ್ಲ. ಒಂದು ಪದವನ್ನು ವಿವಿಧ ಬಳಕೆಗಳಲ್ಲಿ ಬೇರೆ ಬೇರೆ ಅರ್ಥವನ್ನು ಪಡೆದುಕೊಳ್ಳುತ್ತವೆ ಎಂಬುದರ ಗಮನ ನಮಗಿರಬೇಕು.
‘ಕಾಯು’ ಎಂಬ ಸರಳ ಪದವನ್ನು “ನಾನು ನನ್ನ ಸರದಿಗಾಗಿ ಕಾಯುತ್ತಿದ್ದೇನೆ” ಮತ್ತು “ಒಲೆಯ ಮೇಲೆ ನೀರು ಕಾಯುತ್ತಿದೆ” ಎಂಬ ಎರಡು ಬೇರೆ ಬೇರೆ ಅರ್ಥಗಳಲ್ಲಿ ಬಳಕೆ ಮಾಡುವಂತೆ ಧರ್ಮ ಎಂಬ ಪದದ ಬಳಕೆಯೂ ಕೂಡಾ ಭಿನ್ನ ಅರ್ಥಗಳಲ್ಲಿ ಬಳಕೆ ಮಾಡುತ್ತೇವೆ.
ಪದ ಬಳಕೆಯ ಕಾಳಜಿ
40ರಿಂದ 70ರ ದಶಕದವರೆಗೂ ಕೆಲವರನ್ನು ಹೊರತುಪಡಿಸಿ ಬಹಳಷ್ಟು ಬರಹಗಾರರು ಎಚ್ಚರಿಕೆಯಿಂದ ಧರ್ಮದ ಪದವನ್ನು ದೇಶೀಯವಾಗಿ ಅಂದರೆ ಭಾರತೀಯ ಅರ್ಥದಲ್ಲಿಯೇ ಬಳಸುತ್ತಿದ್ದರು. ಅವರು ‘ಧರ್ಮ’ ಮತ್ತು ‘ಮತ’ ಎಂದು ಉಪಯೋಗಿಸುತ್ತಿದ್ದ ಎರಡು ಪದಗಳಲ್ಲಿ ಸ್ಪಷ್ಟತೆ ಇತ್ತು. ಇಂಗ್ಲೀಷಿನಲ್ಲಿ ರಿಲೀಜಿಯನ್ ಎಂಬ ಪದಕ್ಕೆ ಧರ್ಮ ಎಂಬುದನ್ನು ಬಳಸುತ್ತಿರಲಿಲ್ಲ. ಬದಲಾಗಿ ಮತ ಎಂದು ಬಳಸುತ್ತಿದ್ದರು. ಇನ್ನೂ ಸರಳವಾಗಿ ಪದ್ಧತಿ ಎಂದೂ ಹೇಳುತ್ತಿದ್ದರು.
ಆದರೆ ರಿಲೀಜಿಯನ್ ಎಂದು ಇಂಗ್ಲೀಷಿನಲ್ಲಿ ಹೇಳುವ ಪದಕ್ಕೂ, ಭಾರತೀಯರು ಧರ್ಮ ಎನ್ನುವ ಪದಕ್ಕೂ ವ್ಯತ್ಯಾಸವಿದೆ ಎಂಬುದು ಸ್ಪಷ್ಟವಾಗಿತ್ತು. ಎರಡೂ ಒಂದೇ ಆಗಿರಲಿಲ್ಲ. ನಂತರ ಕೆಲವು ಬರಹಗಾರರು ಮತ ಎಂಬ ಪದವು ಬಹಳ ಲಘುವಾಗಿದೆ ಅನ್ನಿಸುವುದರಿಂದ ಮತದ ಬದಲು ಧರ್ಮ ಎಂದು ಬಳಸತೊಡಗಿದರು. ಇದರಿಂದಾಗಿ ಇಸ್ಲಾಮ್ ಮತ, ಕ್ರೈಸ್ತ ಮತ, ಬೌದ್ಧ ಮತಗಳ ಬದಲಿಗೆ ಧರ್ಮ ಎಂದು ಬಳಸತೊಡಗಿದರು.
ಅಲ್ಲಿಂದೀಚೆಗೆ ಅದು ಹೆಚ್ಚು ವ್ಯಾಪಕವೂ ಆಗ ತೊಡಗಿ ಭಾರತೀಯ ಅಥವಾ ದೇಸೀ ಅರ್ಥದ ಧರ್ಮವು ಮತವೆಂಬ ಪದದ ಬದಲಿಗೆ ಉಪಯೋಗಿಸತೊಡಗಿದರು. ಇದರಿಂದಾಗಿ ಪ್ರಾಚೀನ ಭಾರತೀಯ ಬರಹಗಳಲ್ಲಿದ್ದ ಧರ್ಮ ಎಂಬ ಪದವನ್ನು ಮತವೆಂಬ ಅರ್ಥದಲ್ಲಿ ಅರ್ಥೈಸತೊಡಗಿದ್ದರಿಂದ ಅನರ್ಥಗಳಾಗ ತೊಡಗಿದವು. ಏಕೆಂದರೆ ಯಾವ ಧರ್ಮ ಎಂಬ ಪದದ ಅರ್ಥವು ಅಜ್ಞಾತವೂ ಮತ್ತು ಸೂಕ್ಷ್ಮವೂ ಆಗಿದ್ದ ಸ್ವಭಾವ ಎಂಬ ಅರ್ಥದಲ್ಲಿ ಬಳಸುತ್ತಿದ್ದರೋ ಅದನ್ನು ಸ್ಥಾಪಿತ ಮತಕ್ಕೆ ಹೆಸರಿಸಲು ಪ್ರಾರಂಭಿಸಿ ಅದರ ಅರ್ಥ ಮರೆತುಹೋಯಿತು.
ಆದರೂ ಕಂಗಾಲಾಗುವ ಅಗತ್ಯವೇನೂ ಇಲ್ಲ. ಭಾಷೆಗಳಲ್ಲಿ ಪದಗಳು ಕಾಲದಿಂದ ಕಾಲಕ್ಕೆ ಅರ್ಥವನ್ನು ಬದಲಾಯಿಸಿಕೊಳ್ಳುವ, ಮತ್ತೊಂದಕ್ಕೆ ಬಳಕೆಯಾಗುವ ಸ್ವಭಾವವೂ ಉಂಟು. ಹಾಗಾಗಿ ಧರ್ಮ ಎಂಬ ಒಂದೇ ಪದವನ್ನು ಎರಡು ಅರ್ಥಗಳಿಗೆ ಬಳಸಲಾಗುತ್ತಿದೆ ಎಂಬ ಎಚ್ಚರಿಕೆಯನ್ನು ಹೊಂದಿದ್ದು ಪ್ರಾಚೀನ ಗ್ರಂಥಗಳನ್ನು, ಇತರ ಪಠ್ಯಗಳನ್ನು ಓದುವಾಗ ಯಾವ ಅರ್ಥದಲ್ಲಿ ಅವನ್ನು ಬಳಸಿದ್ದಾರೆ ಎಂಬ ಅರಿವು ಇರಬೇಕಷ್ಟೇ.
ಪ್ರಭುತ್ವಮು ಎಂದು ತೆಲುಗಿನವರು ಉಪಯೋಗಿಸುವ ಪದ ಕನ್ನಡದಲ್ಲಿ ಸರ್ಕಾರ ಎಂದಾಗುತ್ತದೆ. ಆದರೆ ಪ್ರಭುತ್ವದ ಪದ ಕನ್ನಡದಲ್ಲಿಯೂ ಇದೆ. ಆದರೆ ನಾವು ಅದನ್ನು ಸರ್ಕಾರ ಎಂಬ ಅರ್ಥದಲ್ಲಿ ಬಳಸುವುದಿಲ್ಲ. ರಾಜರ ಅಧಿಕಾರದ ಅರ್ಥದಲ್ಲಿ ಬಳಸುತ್ತೇವೆ. ಹಾಗೆಯೇ ಉತ್ತರ ಭಾರತದ ಕೆಲವು ರಾಜ್ಯಗಳರಲ್ಲಿ ಸರಕಾರ್ ಎಂದು ಬಳಸುವ ಪದವು ಯಜಮಾನ, ಒಡೆಯ ಎಂಬ ಅರ್ಥದಲ್ಲಿ ಬಳಸುತ್ತಾರೆ. ಆದರೆ ನಮಗೆ ಅದು ರಾಜಕೀಯ ವ್ಯವಸ್ಥೆಯ ಸರ್ಕಾರವಾಗಿ ಮಾತ್ರವೇ ಬಳಕೆಯಾಗುತ್ತದೆ.
ಯಜಮಾನ ಅಥವಾ ದಣಿ ಎಂಬ ಪದಗಳಿಗೆ ಬದಲಾಗಿ ನಾವು ಸರಕಾರ ಎಂಬ ಪದವನ್ನು ಬಳಸುವುದಿಲ್ಲ. ಸಂಸ್ಕೃತ ಪದಗಳು ಭಾರತದ ಬಹುತೇಕ ಭಾಷೆಗಳಲ್ಲಿ ಬೆರೆತುಹೋದರೂ ಅವುಗಳನ್ನು ಬಳಸುವಾಗ ಅವರ ಪ್ರಾದೇಶಿಕ ಪ್ರಭಾವಗಳು ಇರುತ್ತಿದ್ದವು. ಆ ಪ್ರಯೋಗಗಳ ಹಿಂದೆ ಕಾರಣಗಳೇನೇ ಇದ್ದರೂ ಅರ್ಥ ವ್ಯತ್ಯಾಸ ಇದ್ದುದಂತೂ ನಿಜ. ಹೀಗೆಯೇ ಧರ್ಮವನ್ನೂ ಕನಿಷ್ಟಪಕ್ಷ ನಮ್ಮ ಕನ್ನಡದ ಹಿರಿಯರು ಬರೆಯುತ್ತಿದ್ದ ಪುಸ್ತಕಗಳಲ್ಲಿ ಎಚ್ಚರಿಕೆಯಿಂದ ಬಳಸುತ್ತಿದ್ದರು. ಸಂಸ್ಕೃತದಲ್ಲಾಗಲಿ ಅಥವಾ ಕನ್ನಡದಲ್ಲಾಗಲಿ ಧರ್ಮದ ಅರ್ಥಕ್ಕೆ ಬಹಳ ಸ್ಪಷ್ಟತೆ ಇತ್ತು.
ರೂಢಿ ದೋಷ
ನಮ್ಮ ರೂಢಿಗೊಳಿಸಿಕೊಂಡಿರುವ ಒಂದು ದೊಡ್ಡ ದೋಷವೆಂದರೆ ಸರಳ ಮತ್ತು ನೇರವಾಗಿರುವ ವಿಷಯಗಳನ್ನು ಸಂಕೀರ್ಣಗೊಳಿಸಿಕೊಳ್ಳುವುದು. ಯಾವುದು ಸಾಮಾನ್ಯ ತಿಳುವಳಿಕೆಗೆ ಎಟುಕುವುದಿಲ್ಲವೋ ಅದು ಮಹತ್ವವಾದುದು, ಬಹಳ ಮೌಲ್ಯವುಳ್ಳದ್ದು, ಬಹಳ ಉನ್ನತವಾದದ್ದು ಎಂಬ ಭ್ರಮೆಯನ್ನು ಹುಟ್ಟಿಸಿರುವುದು. ಅದು ಬರಿಯ ಭ್ರಮೆಯು ಮಾತ್ರವಲ್ಲ ಮಾನವನ ಸಂವಹನ ಕ್ರಮಕ್ಕೆ ಮಾಡುವ ದ್ರೋಹವೂ ಹೌದು. ನಾನು ಹೇಳುವುದು ನಿಮಗೆ ಅರ್ಥವಾಗಬೇಕು. ನಿಮ್ಮ ತಿಳುವಳಿಕೆಗೆ ನಿಲುಕಬೇಕು. ಆಗ ನಾನು ಹೇಳುವ ಕೆಲಸದಲ್ಲಿ ಯಶಸ್ವಿಯಾಗಿದ್ದೇನೆ ಎಂದು ಅರ್ಥ.
ಅದು ಬಿಟ್ಟು, ನಾನು ನಿಮ್ಮ ಶಬ್ಧಭಂಡಾರದಲ್ಲಿ ಇಲ್ಲದಿರುವಂತಹ, ಹುಡುಕಿದರೂ ಅರ್ಥ ಸಿಗದಂತಹ ಮಹಾ ಪಾಂಡಿತ್ಯದ ಶಬ್ಧಗಳನ್ನು ಉಪಯೋಗಿಸಿ, ನಿಮಗೆ ನಾನು ನಿಮ್ಮ ತಿಳುವಳಿಕೆಗೆ ನಿಲುಕದಂತವನಾದರೆ ಅದು ನನ್ನ ವೈಫಲ್ಯ. ಏನೋ ಸ್ವಲ್ಪ ಪ್ರಾದೇಶಿಕ ಭಾಷಾ ಪ್ರಯೋಗಗಳಿಂದ ಒಂದಷ್ಟು ಪದಗಳು ಆಚೀಚೆ ಆಗಬಹುದು. ಆದರೆ ನನ್ನ ತಿಳುವಳಿಕೆಗೆ ನಿಲುಕದ್ದು ಎಂದು ಅವನ್ನು ಉನ್ನತೀಕರಿಸಿ, ಅರಿಯದವರು ಪಾಮರರು ಎಂಬ ಭ್ರಮೆ ಹುಟ್ಟಿಸಿದ ಕಾರಣದಿಂದಲೇ ಅಪವ್ಯಾಖ್ಯಾನಗಳು ಅಂದರೆ ಇರುವ ಅರ್ಥವನ್ನು ಬಿಟ್ಟು ಬೇರೇನೇನೋ ವಿವರಣೆಗಳು ಹುಟ್ಟಿರುವವು.
ಧರ್ಮದ ಪಾವಿತ್ರ್ಯದ ವ್ಯಾಪ್ತಿ
ಧರ್ಮದ ವಿವರಣೆಯಲ್ಲಿಯೂ ಕೂಡಾ ಹಾಗೇ ಆಗಿವೆ. ಅದೇನೋ ಅತ್ಯಂತ ಶ್ರದ್ಧೆಗೆ, ಬದ್ಧತೆಗೆ, ಪಾವಿತ್ರ್ಯತೆಗೆ ಸಂಬಂಧಿಸಿದ್ದು, ದೇವರನ್ನು ಸಮೀಪಿಸುವುದಕ್ಕೆ ಇರುವುದು ಎಂಬ ಭ್ರಮೆ ಇದೆ ಅಥವಾ ಧರ್ಮ ಎಂದ ಕೂಡಲೇ ಹಾಗಾಡುತ್ತಾರೆ. ಅದರಲ್ಲೂ ಭಾರತೀಯರ ವಿಷಯದಲ್ಲಂತೂ ಧರ್ಮ ಎಂಬುದು ಪವಿತ್ರತೆಗೂ, ದೇವರಿಗೂ, ಶ್ರದ್ಧೆಗೂ ಸಂಬಂಧಿಸಿದ್ದಲ್ಲ. ಬಹಳ ಸರಳವಾಗಿ ಧರ್ಮವನ್ನು ಅರ್ಥ ಮಾಡಿಕೊಳ್ಳುತ್ತಾ ಹೋಗೋಣ.
ಬಂಡೆ ಗಟ್ಟಿಯಾಗಿರುವುದು ಅದರ ಗುಣ, ನೀರಿಗೆ ಹರಿಯುವ ಗುಣ, ಗಾಳಿಗೆ ಬೀಸುವಂತಹ ಸಹಜ ಗುಣವಿದೆ ಹಾಗೆಯೇ ಬೆಂಕಿಗೆ ಸುಡುವ ಸ್ವಭಾವ ಇದೆ ಎಂದರೆ ಅರ್ಥವಾಗುತ್ತದೆ. ಹಾಗೆಯೇ ಕಾಠಿಣ್ಯವು ಬಂಡೆಯ ಧರ್ಮ, ಹರಿಯುವುದು ನೀರಿನ ಧರ್ಮ, ಬೀಸುವುದು ಗಾಳಿಯ ಧರ್ಮ, ಸುಡುವುದು ಬೆಂಕಿಯ ಧರ್ಮ ಎಂದರೂ ಅರ್ಥವಾಯಿತಲ್ಲವೇ? ಅಂದರೆ ಯಾವುದೇ ಒಂದರ ಮೂಲ ಅಥವಾ ಪ್ರಮುಖವಾದ ಸ್ವಭಾವವೇ ಧರ್ಮ.
ಧರ್ಮ ಶಬ್ದವು ಸಂಸ್ಕೃತದ ‘ಧೃ’ ಎಂಬ ಮೂಲದಿಂದ ಬಂದಿದೆ. ‘ಧೃ’ ಎಂದರೆ ಧಾರಣ ಮಾಡು ಅಥವಾ ಧರಿಸು, ಎತ್ತಿ ಹಿಡಿ ಅಥವಾ ಬೆಂಬಲಿಸು ಎಂದರ್ಥ. ಇದು ಪ್ರಾರಂಭದ ಪಾಠ. “ಧಾರಣಾತ್ ಧರ್ಮ ಇತ್ಯಾಹುಃ ಧರ್ಮೋ ಧಾರಯತಿ ಪ್ರಜಾಃ” ಎಂದು ಮಹಾಭಾರತದ ಕರ್ಣಪರ್ವದಲ್ಲಿ ಯಾವುದು ಇನ್ನೊಂದನ್ನು ಎತ್ತಿ ಹಿಡಿಯುವುದೋ, ಅಥವಾ ಇನ್ನೊಂದಕ್ಕೆ ಆಧಾರವಾಗಿ ಅದನ್ನು ರಕ್ಷಿಸುವುದೋ ಅದು ಧರ್ಮ ಎನಿಸಿಕೊಳ್ಳುತ್ತದೆ.
ಹೀಗೆಂದು ಕೃಷ್ಣ ಅರ್ಜುನನಿಗೆ ಧರ್ಮ ಎಂದು ವಿವರಿಸಲು ಯತ್ನಿಸುತ್ತಾನೆ. ಅದೇ ರೀತಿಯಲ್ಲಿ ಭಗವತ್ಗೀತೆಯಲ್ಲಿ “ಶ್ರೇಯಾನ್ ಸ್ವಧರ್ಮೋ ವಿಗುಣಃ ಪರಧರ್ಮಾತ್ ಸ್ವನುಷ್ಠಿತಾತ್” ಎನ್ನುತ್ತಾ ಬೇರೆ ಧರ್ಮವನ್ನು ಚೆನ್ನಾಗಿ ಮಾಡುವುದಕ್ಕಿಂತ ತನ್ನ ಧರ್ಮವು ವಿಗುಣವಾಗಿದ್ದರೂ (ಪರರ ದೃಷ್ಟಿಯಲ್ಲಿ) ಅದೇ ಶ್ರೇಯಸ್ಕರ ಎನ್ನುತ್ತಾ “ಸ್ವಧರ್ಮೇ ನಿಧನಂ ಶ್ರೇಯಃ ಪರಧರ್ಮೋ ಭಯಾವಹಃ” ನಿನ್ನದೇ ಧರ್ಮದಲ್ಲಿ ಸತ್ತರೂ ಅದು ಮೇಲು, ಪರಧರ್ಮ ಅದಕ್ಕಿಂತ ಭಯಂಕರವಾದುದು ಎಂದೂ ಹೇಳುತ್ತಾನೆ.
ಭಗವತ್ಗೀತೆಯಲ್ಲಿ ಧರ್ಮವೆಂದರೆ ವ್ಯಕ್ತಿ ಅಥವಾ ವಸ್ತುವಿನ ಸ್ವಭಾವದಂತೆ ತೋರಿದರೆ, ಕರ್ಣಪರ್ವದಲ್ಲಿ ಕರ್ತವ್ಯದಂತೆ ತೋರುತ್ತದೆ. ಭಗವತ್ಗೀತೆಯ ಧರ್ಮವನ್ನೂ ಕರ್ತವ್ಯವೆಂದೂ ಕೂಡಾ ಅರ್ಥೈಸಬಹುದು. ಆದರೆ ಒಂದು ವಿಷಯ ನೆನಪಿಡಬೇಕು. ಮಹಾಭಾರತದ ಯಾವುದೋ ಒಂದು ಉಲ್ಲೇಖಿತ ಸಾಲನ್ನು ಹಿಡಿದುಕೊಂಡು ಸುಭಾಷಿತದ ರೀತಿಯಲ್ಲಿ ಅಥವಾ ಧಾರ್ಮಿಕ ಸೂತ್ರದ ರೀತಿಯಲ್ಲಿ ಶಾಸನವನ್ನಾಗಿ ಮಾಡಿಕೊಳ್ಳಬಾರದು.
ಏಕೆಂದರೆ ಮಹಾಭಾರತದಲ್ಲಿ ನೂರಾರು ಪಾತ್ರಗಳು ಬರುತ್ತವೆ. ಎಲ್ಲಾ ಪಾತ್ರಗಳೂ ತಮ್ಮ ತಮ್ಮ ಧೋರಣೆಯನ್ನು, ಮನೋಭಾವವನ್ನು, ಮನಸ್ಥಿತಿಗಳನ್ನು ವ್ಯಕ್ತಪಡಿಸುವಂತೆ ಧರ್ಮವನ್ನೂ ಕೂಡಾ ನಾನಾ ರೀತಿಯಲ್ಲಿ ಸಮಯ ಸನ್ನಿವೇಶಕ್ಕೆ ತಕ್ಕಂತೆ ವಿವರಿಸುತ್ತಾ ಹೋಗುತ್ತಾರೆ. ವ್ಯಾಸ, ಜನಮೇಜಯ, ಭೀಷ್ಮ, ವಿದುರ, ಕೃಷ್ಣ, ಧುರ್ಯೋದನ, ದೃತರಾಷ್ಟ್ರ, ಗಾಂಧಾರಿ, ಕುಂತಿ, ಮಾದ್ರಿ, ಧರ್ಮರಾಯ; ಹೀಗೆ ಹಲವಾರು ಪಾತ್ರಗಳು ಅನೇಕ ವಿಷಯಗಳನ್ನು ತಮ್ಮದೇ ಆದ ರೀತಿಯಲ್ಲಿ, ತಾವು ಗ್ರಹಿಸಿದಂತೆ, ತಾವು ನಂಬಿದಂತೆ, ತಮ್ಮ ಸಿದ್ಧಾಂತದಂತೆ, ತಮ್ಮ ಅನುಭವಕ್ಕೆ ತಕ್ಕಂತೆ ವಿವರಿಸುತ್ತಾ ಹೋಗುತ್ತಾರೆ.
ಮಹಾಭಾರತ ಯಾವುದೇ ಒಂದು ಸಿದ್ಧಾಂತವನ್ನು ಸ್ಪಷ್ಟ ಪಡಿಸಲು, ನೀತಿ ಹೇಳಲು ನಿಲ್ಲುವುದಿಲ್ಲ. ಆದರೆ ಧರ್ಮವನ್ನೇ ಕೇಂದ್ರವಾಗಿಟ್ಟುಕೊಳ್ಳುತ್ತದೆ. ಧರ್ಮವನ್ನು ಎತ್ತಿ ಹಿಡಿಯುತ್ತದೆ. ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಧರ್ಮದ ಕೇಂದ್ರ ಮತ್ತು ಕರ್ಮದ ಚಕ್ರವನ್ನೇ ಎಲ್ಲಾ ಪಾತ್ರಗಳ ಜೊತೆಜೊತೆಯಾಗಿ ಹೋಗುತ್ತಿರುತ್ತದೆ.
ಇಷ್ಟೆಲ್ಲಾ ಆದರೂ ಮಹಾಭಾರತ ಧಾರ್ಮಿಕತೆಯ ಕತೆಯಲ್ಲ. ಇದರಲ್ಲಿ ಬದ್ಧತೆ, ಶ್ರದ್ಧೆ ಎಲ್ಲವನ್ನೂ ಕೋರಲಾಗುತ್ತದೆ.
ಆದರೆ ಯಾವುದೋ ಸ್ಥಾಪಿತ ಧರ್ಮದ ಸಾಂಪ್ರದಾಯಿಕ ಆಚರಣೆಯ ರೀತಿಯಲ್ಲಿ ಅಂದರೆ ರಿಲೀಜಿಯಸ್ ಪ್ರಾಕ್ಟೀಸ್ ರೀತಿಯದಲ್ಲ. ವ್ಯಕ್ತಿಧರ್ಮ, ಪ್ರಕೃತಿಧರ್ಮ, ಪರಿವಾರಿಕ ಅಥವಾ ಕುಟುಂಬ ಧರ್ಮ, ಸಮಾಜಧರ್ಮ, ವೃತ್ತಿಧರ್ಮ, ಮನೋಧರ್ಮ, ರಾಜಧರ್ಮ, ಕಾಲಧರ್ಮ ಅಥವಾ ಯುಗಧರ್ಮ, ವರ್ಣಧರ್ಮ, ಆಪತ್ಧರ್ಮ, ಆಶ್ರಮಧರ್ಮ; ಹೀಗೆ ಅನೇಕಾನೇಕ ಧರ್ಮಗಳ ಚಹರೆಗಳನ್ನು, ಚಟುವಟಿಕೆಗಳನ್ನು, ಚರ್ಚೆಗಳನ್ನು ಗುರುತಿಸಬಹುದು.
ಇನ್ನೂ ಮುಂದುವರಿದು ಆಪತ್ಕಾಲೇ ನಾಸ್ತಿ ಧರ್ಮ ಎಂತಲೂ ಎನ್ನುವುದು. ಅಂದರೆ ಪ್ರಾಣ ಹೋಗುವಂತಹ ಕೆಟ್ಟ ಸಂದರ್ಭ ಒದಗಿದರೆ ಯಾವ ಧರ್ಮವನ್ನು ಬಿಟ್ಟು ನಿನ್ನ ಪ್ರಾಣವನ್ನು ಉಳಿಸಿಕೋ ಎಂಬಂತಹ ಕಿವಿ ಮಾತು. ಇದನ್ನೇ ಆಪತ್ಧರ್ಮ ಎಂದುಕೊಳ್ಳೋಣ. ಒಟ್ಟಿನಲ್ಲಿ ಧರ್ಮ ಎಂಬ ಪದದ ಹಿಂದೆ ಜೋಡುಪದವಾಗಿ ಬಂದಿರುವ ಪದಗಳನ್ನೆಲ್ಲಾ ನೋಡಿದರೆ, ಧರ್ಮ ಎಂಬುದು ಸ್ಥಿರವೂ ಹೌದು, ಚರವೂ ಹೌದು ಎಂದಾಗುತ್ತದೆ. ಸ್ಥಿರವಾಗಿರುವುದು ಯಾವ ಧರ್ಮ ಮತ್ತು ಚರವಾಗಿರುವುದು ಯಾವ ಧರ್ಮ ಎಂಬುದನ್ನು ಗಮನಿಸಬೇಕು.
ಒಟ್ಟಾರೆ ಸಧ್ಯಕ್ಕೆ ಧರ್ಮವನ್ನು ಮೂರು ರೀತಿಯಲ್ಲಿ ಅರ್ಥ ಮಾಡಿಕೊಳ್ಳೋಣ. ಆಗ ಇನ್ನು ಮುಂದೆ ನಾವು ಪ್ರಯಾಣ ಮಾಡಲಿರುವ ದೇಶ ವಿದೇಶಗಳ ಧರ್ಮಗಳನ್ನೆಲ್ಲಾ ಅರ್ಥ ಮಾಡಿಕೊಳ್ಳಲು ಸಾಧ್ಯವಾಗುತ್ತದೆ.
ಧರ್ಮ ಎಂದರೆ ಒಂದು ವಸ್ತು ಅಥವಾ ಜೀವದ ಸ್ವಾಭಾವಿಕ ಗುಣವೆಂಬುದು ಸ್ಥಿರ ಧರ್ಮ ಎನ್ನಬಹುದು. ಅದೇನಾದರೂ ಬದಲಾಗದು. ನೈಸರ್ಗಿಕವಾಗಿ ಪ್ರಾಕೃತಿಕವಾಗಿ ಇರುವಂತಹ ಗುಣ ಸ್ವಭಾವ. ನಮ್ಮ ಹಿರಿಯರು ಹೇಳುತ್ತಿದ್ದರು, “ಅವನು ಎಷ್ಟು ತಿಂದರೂ ದಪ್ಪಗಾಗುವುದಿಲ್ಲ. ಅದು ಅವನ ಶರೀರ ಧರ್ಮ!” ಅವನು ಇರುವುದೇ ಹಾಗೇ ಎನ್ನುವುದಕ್ಕೆ ಹಾಗೆನ್ನುತ್ತಿದ್ದರು.
ಶರೀರ ಪ್ರಕೃತಿ ಅಥವಾ ಶರೀರಧರ್ಮ ಎಂಬುದನ್ನು ಸಮಾರ್ಥಕ ಪದಗಳಾಗಿ ಬಳಸುತ್ತಿದ್ದರು. ಅದು ಸ್ಥಿರವಾಗಿರುವ ಧರ್ಮ. ಇದು “ಅವರವರ ಮನೋಧರ್ಮಕ್ಕೆ ತಕ್ಕಂತೆ ನಡೆದುಕೊಳ್ಳುತ್ತಾರೆ” ಎನ್ನುವ ಮಾತಿನಲ್ಲಿಯೂ ಧರ್ಮ ಎನ್ನುವುದನ್ನು ಗಮನಿಸಿ. ಅವರವರ ಸಹಜ ಸ್ವಭಾವ ಎನ್ನುವುದಕ್ಕೆ ಸೂಚಿಸುತ್ತಾರೆ.
ಅದೇ ರೀತಿ ವೃತ್ತಿಧರ್ಮ, ಕುಟುಂಬಧರ್ಮ, ಆಶ್ರಮಧರ್ಮ, ಇತ್ಯಾದಿಗಳನ್ನು ಗಮನಿಸಿದರೆ ಧರ್ಮ ಎಂದರೆ ಕರ್ತವ್ಯ ಎಂಬ ಅರ್ಥ ಬರುತ್ತದೆ. ನಾನು ಮಡಿವಾಳನಾಗಿ ವೃತ್ತಿಯನ್ನು ಮಾಡುವಾಗ ನನ್ನ ಕೆಲಸದಲ್ಲಿ ಯಾವ ಯಾವ ಕರ್ತವ್ಯಗಳಿಗೆ ಬದ್ಧನಾಗಿರಬೇಕು ಎಂಬುದನ್ನು ನೋಡಬೇಕು. ಅದು ನನ್ನ ವೃತ್ತಿಧರ್ಮ. ಕುಟುಂಬದ ಒಂದು ಪಾತ್ರವನ್ನು ನಿರ್ವಹಣೆ ಮಾಡುವಾಗ ಆ ಪಾತ್ರದ ಕರ್ತವ್ಯಕ್ಕೆ ಬದ್ಧನಾಗಿ ಅದನ್ನು ನೆರವೇರುವಂತೆ ನೋಡಿಕೊಳ್ಳುವುದು ನನ್ನ ಧರ್ಮವನ್ನು ಪಾಲನೆ ಮಾಡಿದಂತೆ.
ಹಾಗೆಯೇ ಪ್ರಕೃತಿಧರ್ಮ, ಯುಗಧರ್ಮ, ಸಮಾಜಧರ್ಮ; ಇತ್ಯಾದಿಗಳಲ್ಲಿ ಧರ್ಮವನ್ನು ‘ಕ್ರಮ’ ಎಂದು ಅರ್ಥ ಮಾಡಿಕೊಳ್ಳಬೇಕು. ಪ್ರಕೃತಿಯಲ್ಲಿ ಋತುಧರ್ಮವಿದೆ. ಅದಕ್ಕೆ ಅನುಸಾರವಾಗಿ ಋತುಗಳು ಕಾಲಕಾಲಕ್ಕೆ ಬರುತ್ತವೆ ಹೋಗುತ್ತವೆ. ಒಂದು ಕ್ರಮವನ್ನು ಅನುಸರಿಸುತ್ತವೆ. ಇದು ಸಹಜವಾಗಿ ಆಗುವುದು. ಯುಗಧರ್ಮ ಅಥವಾ ಕಾಲಧರ್ಮದಲ್ಲಿ ಬದಲಾದ ಕಾಲಕ್ಕೆ ಅನುಗುಣವಾಗಿ, ಆ ಕಾಲದ ಪರಿಸ್ಥಿತಿ, ರೀತಿ ನೀತಿಗಳನ್ನು ನೋಡಿಕೊಂಡು ನಮ್ಮ ನಡೆಯ ಕ್ರಮವನ್ನು ಬದಲಿಸಿಕೊಳ್ಳಬೇಕು. ಇದು ನಾವು ಗ್ರಹಿಸಿ ಕಾಲದ ಪರಿಸ್ಥಿತಿಗೆ ಹೊಂದಿಕೊಳ್ಳುವ ಮೂಲಕ ಕ್ರಮವನ್ನು ರೂಪಿಸಿಕೊಳ್ಳುವುದು.
ಸಮಾಜ ಎಲ್ಲರೂ ಒಟ್ಟಾಗಿ ಬಾಳುವಂತಹ ಒಂದು ಸಾಂಘಿಕ ವ್ಯವಸ್ಥೆ. ವ್ಯಕ್ತಿಗಳ ಮನೋಭಾವ, ಮನೋಭಿಲಾಷೆ, ನಿರಾಶೆ, ಒಲವು, ನಿಲುವುಗಳಲ್ಲಿ ಬಹಳಷ್ಟು ವ್ಯತ್ಯಾಸಗಳಿರುತ್ತವೆ. ಹಾಗಿದ್ದರೂ ನಾವು ಸಂಘಜೀವಿಗಳಾದ್ದರಿಂದ ವ್ಯವಸ್ಥೆಯಲ್ಲಿ ಒಂದು ಕ್ರಮವನ್ನು ರೂಪಿಸಲಾಗಿರುತ್ತದೆ.
ಏನೇ ಸಂಘರ್ಷ, ಸಂಕಟ, ಸಂತೋಷ ಎದುರಾಗುವಂತಹ ಸನ್ನಿವೇಶಗಳಿದ್ದರೂ ಇಡೀ ಸಮಾಜ ಅಥವಾ ಸಮುದಾಯದ ವ್ಯವಸ್ಥೆಯು ಕುಸಿಯದಿರುವಂತೆ, ಅದು ನಾಶಗೊಳ್ಳದಿರುವಂತೆ ನೋಡಿಕೊಳ್ಳಲು ಒಂದು ಕ್ರಮವನ್ನು ರೂಪಿಸಿದೆ. ಅದನ್ನು ಅನುಸರಿಸುವ ಕರ್ತವ್ಯವೂ ವ್ಯಕ್ತಿಗಳದ್ದಾಗಿರುತ್ತದೆ. ಅದು ಒಬ್ಬನ ಧರ್ಮ. ಸಮಾಜಕ್ಕೊಂದು ಧರ್ಮ ಅಂದರೆ ಕ್ರಮ. ಸಮಾಜದಲ್ಲಿ ಬಾಳಿ ಬದುಕಲು ಆ ಕ್ರಮವನ್ನು ಪಾಲಿಸಲು ವ್ಯಕ್ತಿಗೆ ಧರ್ಮ, ಅಂದರೆ ಕರ್ತವ್ಯ.
ಒಟ್ಟಾರೆ, ಧರ್ಮ ಎಂದರೆ ಮೂರು ಅರ್ಥಗಳಲ್ಲಿ ಸ್ಥೂಲವಾಗಿ ತಿಳಿದುಕೊಳ್ಳೋಣ. ಒಂದು ಸ್ವಾಭಾವಿಕ ಗುಣ, ಎರಡನೆಯದು ಕರ್ತವ್ಯ ಮತ್ತು ಮೂರನೆಯದು ಕ್ರಮ. ಇಷ್ಟನ್ನು ತಿಳಿದುಕೊಂಡರೆ ನಮಗೆ ವಿಶ್ವದಲ್ಲಿ ಧರ್ಮಗಳ ವಿಷಯದಲ್ಲಿ ಉಂಟಾಗಿರುವ ಗೊಂದಲಗಳು, ಗಲಾಟೆಗಳು, ಸಂಘರ್ಷಗಳು, ಸಂಕಟಗಳು ಎಲ್ಲಾ ಅರ್ಥವಾಗುತ್ತವೆ. ಬಹಳ ಮುಖ್ಯವಾಗಿ ಧರ್ಮವನ್ನು ಏನೆಂದು ಅರ್ಥ ಮಾಡಿಕೊಳ್ಳಬೇಕಿತ್ತು, ಹೇಗೆಂದು ಅರ್ಥ ಮಾಡಿಕೊಂಡಿದ್ದಾರೆ ಎಂದು ತಿಳಿಯುತ್ತದೆ. ಅಥವಾ ಏನೆಂದೂ ಅರ್ಥವೇ ಆಗಿಲ್ಲ ಎಂದಾದರೂ ಅರ್ಥವಾಗುತ್ತದೆ.
ಧರ್ಮವನ್ನು ಸಾಮಾಜಿಕವಾಗಿ, ತಾತ್ವಿಕವಾಗಿ, ಆಧ್ಯಾತ್ಮಿಕವಾಗಿ, ಸಾಂಸ್ಕೃತಿಕವಾಗಿ, ಮಾನಸಿಕವಾಗಿ, ನೈತಿಕವಾಗಿ ಮತ್ತು ರಾಜಕೀಯವಾಗಿ ಅರ್ಥ ಮಾಡಿಕೊಳ್ಳಲು ಹೋದಾಗ ಸಮಾಜದಲ್ಲಿ ನಡೆಯುತ್ತಿರುವ ಧಾರ್ಮಿಕ ದೊಂಬಿಗಳು, ಅವುಗಳನ್ನು ನಡೆಸುತ್ತಿರುವ ಝ್ಹೋಂಬಿಗಳು ಕೂಡಾ ಅರ್ಥವಾಗುತ್ತಾರೆ.
(ಮುಂದುವರಿಯುತ್ತದೆ)
ಸುದ್ದಿದಿನ.ಕಾಂ|ವಾಟ್ಸಾಪ್|9980346243
ಅಂತರಂಗ
ಮರೆಯಾದ ಅಪೂರ್ವ ಚಿತ್ರಕಲಾ ಪ್ರತಿಭೆ ‘ಶೋಭಾ ಕರಣಿಕ್’
- ಡಾ.ಎನ್.ಕೆ.ಪದ್ಮನಾಭ, ಸಹಾಯಕ ಪ್ರಾಧ್ಯಾಪಕರು, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ,ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರ,ಉಜಿರೆ
ಅವರು ಬಿಡಿಸುತ್ತಿದ್ದ ರೇಖೆಗಳು ನಮ್ಮ ದೇಶೀ ಸಂಸ್ಕೃತಿಯ ವಕ್ತಾರಿಕೆಯ ಪಾತ್ರ ನಿರ್ವಹಿಸುತ್ತಿದ್ದವು. ಕನ್ನಡದ್ದೇ ಆದ ಕಲಾತ್ಮಕ ಪರಂಪರೆಯನ್ನು ಸೂಕ್ಷ್ಮವಾಗಿ ಗ್ರಹಿಸಿದ್ದ ಅವರ ಚಿತ್ರಗಳು ಜೀವಂತಿಕೆಯ ಗುಣಲಕ್ಷಣದೊಂದಿಗೆ ಕಂಗೊಳಿಸುತ್ತಿದ್ದವು.
ಸಾಂಪ್ರದಾಯಿಕ ಚಿತ್ರಶೈಲಿಯನ್ನು ಆಧುನಿಕ ಅಗತ್ಯಗಳಿಗೆ ತಕ್ಕಂತೆ ಮಣಿಸಿ ಪರಂಪರೆಯೊಳಗೇ ಅಡಗಿದ್ದ ಮೌಲಿಕ ಮಾದರಿಗಳನ್ನು ಮನಗಾಣಿಸುವ ಶ್ರದ್ಧೆಯೊಂದಿಗೇ ಅವರು ಚಿತ್ರವಿನ್ಯಾಸ ರೂಪಿಸುತ್ತಿದ್ದರು. ಇನ್ಸ್ಟಾಗ್ರಾಮ್, ಫೇಸ್ಬುಕ್ ಮತ್ತಿತರ ಮಾಧ್ಯಮಗಳ ಮೂಲಕ ತಮ್ಮ ಚಿತ್ರಗಳನ್ನು ಕಾಣಿಸುತ್ತಿದ್ದರು. ಪರಂಪರೆ ಮತ್ತು ವರ್ತಮಾನವನ್ನು ಬೆಸೆದು ಹೊಸ ಬಗೆಯ ಚಿತ್ರಪ್ರಯೋಗಗಳನ್ನು ನಡೆಸುವ ಹುಮ್ಮಸ್ಸಿನೊಂದಿಗೆ ಚಿತ್ರಕಲಾಯಾನ ಮುಂದುವರೆಸಿದ್ದರು. ಅವರ ಹೆಸರು ಶೋಭಾ ಕರಣಿಕ್.
ಇತ್ತೀಚೆಗಷ್ಟೇ ಅವರ ಚಿತ್ರಕಲಾಯಾನ ನಿಂತಿತು. ಅವರ ನಿಧನವು ವಿನೂತನವಾದ ಪ್ರಯೋಗಶೀಲ ಚಿತ್ರಕಲಾ ಸಾಧ್ಯತೆಗಳನ್ನು ತಡೆದು ನಿಲ್ಲಿಸಿತು. ಪುರಾಣದ ಕಥನ ಪ್ರಸಂಗಗಳಲ್ಲಿ ಉಲ್ಲೇಖಿತ ದೇವರು-ದೇವತೆಗಳ ಅಸ್ಮಿತೆ ಮತ್ತು ದೇಸೀ ಸಂಸ್ಕೃತಿಯನ್ನು ಬಿಂಬಿಸುವ ವಿನ್ಯಾಸಗಳನ್ನು ಸಮನ್ವಯಗೊಳಿಸಿ ಚಿತ್ರಕಲೆಗೆ ಹೊಸ ಆಯಾಮ ತಂದುಕೊಟ್ಟ ಪ್ರತಿಭೆಯಾಗಿ ಶೋಭಾ ಕರಣಿಕ್ ಅವರದ್ದು ವಿಶೇಷ ವ್ಯಕ್ತಿತ್ವವಾಗಿತ್ತು. ಮ್ಯೂರಲ್ ಪೇಂಟಿಂಗ್ನಲ್ಲಿ ಅವರಿಗಿದ್ದ ಪರಿಣತಿ, ಉತ್ತರ ಕನ್ನಡದ ಕಾವಿ ಕಲೆಯ ಕುರಿತಾದ ವಿಸ್ತೃತ ಜ್ಞಾನವು ಚಿತ್ರಕಲೆಯನ್ನು ಉನ್ನತೀಕರಿಸುವುದಕ್ಕೆ ಅವರಿಗೆ ನೆರವಾಗಿತ್ತು.
ಕಲೆಯ ಜೊತೆಗಿನ ಅನುಸಂಧಾನದ ಕ್ಷಣಗಳು ಅಪೂರ್ವ. ಒಂದು ನಿರ್ದಿಷ್ಟ ನಿರ್ಣಾಯಕ ಸಂದರ್ಭ, ಸಮಯದಲ್ಲಿ ಕಲೆಯೊಂದು ವ್ಯಕ್ತಿತ್ವವನ್ನು ಪ್ರಭಾವಿಸಿ ಸೃಜನಶೀಲತೆಯ ಹಸಿವನ್ನು ನೆಲೆಗೊಳಿಸುವುದಕ್ಕೆ ಪ್ರೇರಣೆಯಾಗುತ್ತದೆ. ಕಲೆಯ ಪ್ರಭಾವ ಎರಡು ಬಗೆಯದ್ದು. ಸಹೃದಯರನ್ನು ತನ್ನ ಕಲಾತ್ಮಕ ಮಾದರಿಗಳಿಂದ ಸೆಳೆದು ಅವರೊಳಗೆ ವಿಶೇಷ ಅನುಭೂತಿ ಧಾರೆ ಎರೆಯುವಂಥದ್ದು ಒಂದು ಬಗೆಯಾದರೆ ಹೀಗೆ ಸೆಳೆದುಕೊಂಡು ಮತ್ತೆ ಮತ್ತೆ ಪ್ರಭಾವಿಸುತ್ತಾ ಸಹೃದಯರನ್ನೇ ಕಲಾವಿದರನ್ನಾಗಿಸುವ ಸಾಧ್ಯತೆ ಮತ್ತೊಂದು ತೆರನಾದದ್ದು.
ಈ ಕಾರಣಕ್ಕಾಗಿಯೇ ಕಲಾತ್ಮಕ ಸಂಭವನೀಯತೆಯು ಅನನ್ಯವೆನ್ನಿಸಿಕೊಂಡಿದೆ. ಇಂಥ ಅನನ್ಯತೆಯೊಂದಿಗೇ ಶೋಭಾ ಕರಣಿಕ್ ಗುರುತಿಸಿಕೊಂಡಿದ್ದರು. ಅವರು ಓದಿದ್ದು ತಾಂತ್ರಿಕ ವಿಜ್ಞಾನ. ಆದರೆ, ಅವರ ನಿಜದ ಪ್ರತಿಭೆ ಅಭಿವ್ಯಕ್ತವಾದದ್ದು ಚಿತ್ರಕಲೆಯ ಮೂಲಕ.
ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಪರಿಸರದಲ್ಲಿ ಬೆಳೆದ ಶೋಭಾ ಕರಣಿಕ್ ಮೊದಲಿನಿಂದಲೂ ದೇಶೀ ಕಲೆಯ ಕುರಿತು ವಿಶೇಷ ಆಸಕ್ತಿಯನ್ನು ಬೆಳೆಸಿಕೊಂಡು ಬಂದಿದ್ದರು. ಹೈಸ್ಕೂಲ್ ಓದುತ್ತಿರುವಾಗಲೇ ಕಾವಿಕಲೆಯ ವಿನ್ಯಾಸ ಅವರನ್ನು ಸೆಳೆದಿತ್ತು. ಇವುಗಳನ್ನು ಮತ್ತೆ ಮತ್ತೆ ನೋಡುತ್ತಾ ಹೋದಂತೆಲ್ಲಾ ಕಾವಿ ಕಲೆಯ ಕುರಿತ ಆಕರ್ಷಣೆ ಕಲಿಕೆಯ ಹಂಬಲವಾಗಿ ಮಾರ್ಪಟ್ಟಿತು. ಉತ್ತರ ಕನ್ನಡದ ಟೆಂಪಲ್ ರ್ಟ್ ಪ್ರಕಾರದ ಭಾಗವಾಗಿ ಕಾವಿ ಕಲೆಯನ್ನು ಪರಿಚಯಿಸುವ ದೃಷ್ಟಿಯಿಂದ ಅವರು ರಚಿಸಿದ್ದ ತರಹೇವಾರಿ ವಿನ್ಯಾಸಗಳು ವಿವಿಧ ಚಿತ್ರಕಲಾ ಪ್ರದರ್ಶನ ಕಾರ್ಯಕ್ರಮಗಳಲ್ಲಿ ಗಮನ ಸೆಳೆದಿದ್ದವು.
ಕಾವಿ ಕಲೆಯೂ ಸೇರಿದಂತೆ ನಮ್ಮ ಸಾಂಪ್ರದಾಯಿಕ ಕಲೆಗಳು ಈ ಹಿಂದಿನ ಕಾಲದ ತಲೆಮಾರನ್ನಷ್ಟೇ ಪ್ರಭಾವಿಸಿದ್ದಲ್ಲದೇ ನಂತರದ ಹೊಸ ಪೀಳಿಗೆಯನ್ನೂ ಆಕರ್ಷಿಸುವ ಗುಣ ಹೊಂದಿವೆ. ಮೂಲ ಅಂತಃಸತ್ವಕ್ಕೆ ಧಕ್ಕೆಯೊದಗದ ಹಾಗೆ ಹೊಸ ಕಾಲದ ಅಗತ್ಯಗಳಿಗೆ ಅನುಗುಣವಾಗಿ ಈ ಸಾಂಪ್ರದಾಯಿಕ ಚಿತ್ರಕಲಾ ವಿನ್ಯಾಸಗಳನ್ನು ಮರುರೂಪಿಸಬಹುದು. ಹೊಸ ಕಾಲದಲ್ಲಿ ಅವುಗಳ ಮಹತ್ವವನ್ನು ಮನಗಾಣಿಸಬಹುದು ಎಂಬುದು ಅವರ ಆಶಯವಾಗಿತ್ತು.
ಕಲೆಯೊಂದು ಒಂದು ಕಾಲದಿಂದ ಮತ್ತೊಂದು ಕಾಲಕ್ಕೆ ದಾಟಿಕೊಳ್ಳುವಾಗ ಪಲ್ಲಟಗಳು ಸಹಜ. ಈ ಪಲ್ಲಟಗಳನ್ನು ದೃಷ್ಟಿಯಲ್ಲಿರಿಸಿಕೊಂಡು ಇಂತಹ ಕಲೆಗಳಿಗೆ ಹೊಸಕಾಲದಲ್ಲೂ ಜೀವಂತಿಕೆಯನ್ನು ತಂದುಕೊಡುವ ಪ್ರಯತ್ನದ ಅಗತ್ಯವನ್ನು ಮನಗಾಣಿಸುವುದಕ್ಕಾಗಿಯೇ ಶೋಭಾ ಕರಣಿಕ್ ಅವರು ಚಿತ್ರಕಲಾ ರಚನೆಯ ವೈವಿಧ್ಯಮಯ ಪ್ರಯೋಗಗಳಲ್ಲಿ ತೊಡಗಿಸಿಕೊಂಡಿದ್ದರು.
ಅವರ ನಿಧನದಿಂದ ಈ ಪ್ರಯೋಗಶೀಲ ಹೆಜ್ಜೆಗಳು ನಿಂತಂತಾಗಿವೆ. ಆದರೆ, ಅವರು ಪರಂಪರೆ ಮತ್ತು ವರ್ತಮಾನವನ್ನು ಸಮನ್ವಯಗೊಳಿಸಿ ಸಾಬೀತುಪಡಿಸಿದ ಅಪೂರ್ವ ಚಿತ್ರಕಲಾ ಪ್ರಯೋಗಶೀಲತೆಯ ಜೀವಂತಿಕೆ ಹೊಸ ಪೀಳಿಗೆಗೆ ಸದಾ ಸ್ಫೂರ್ತಿಯ ಸೆಲೆಯಾಗಿರುತ್ತದೆ. ಅವರ ಹೆಸರಿನ ಇನಸ್ಟಾಗ್ರಾಂನಲ್ಲಿ ಕಾಣಿಸಿಕೊಂಡಿರುವ ಚಿತ್ರಗಳು ಇಂಥ ಸ್ಫೂರ್ತಿಯ ಪ್ರಭೆಯನ್ನು ದಾಟಿಸುತ್ತಿವೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ಅಂತರಂಗ
ಹೊಸತನದ ಹೊಸ್ತಿಲಲ್ಲಿ..!
- ಮೀನಾಕ್ಷಿ .ಬಿ, ಎಂ. ಎ ವಿದ್ಯಾರ್ಥಿನಿ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ, ದಾವಣಗೆರೆ ವಿಶ್ವವಿದ್ಯಾಲಯ
ಹೊಸವರ್ಷ ವೆಂಬುದು ಪ್ರತಿಯೊಬ್ಬರ ಬಾಳಲ್ಲಿ ವರ್ಷಕ್ಕೊಮ್ಮೆ ಬರುವ ಹೊಸದಿನಗಳ ಆಗಮನ ಯಾಕೆಂದರೆ ಹೊಸತನವನ್ನು ತರುತ್ತಾ ಇರುವ ಹೊಸವರ್ಷ ಕೂಡ ಒಂದು ಜೀವನದ ಭರವಸೆ, ನಿರೀಕ್ಷೆ ಕನಸುಗಳ ಬಂಡಿಯ ಮೇಲೆ ಸಾಗುವ ಪ್ರಯಾಣ ನಮ್ಮ ಜೀವನ.
ವ್ಯಕ್ತಿಯ ನಂಬಿಕೆಯ ಆಧಾರದ ಮೇಲೆಯೇ ಜೀವನ ಸಾಗುಸುತ್ತಿರುವುದು.ಯಾಕೆಂದರೆ ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲಿಯೂ ಕೂಡ ಕಷ್ಟ -ಸುಖ ದುಃಖದ ಸಂಗತಿಗಳು ಇದ್ದೆ ಇರುತ್ತದೆ. ಕೆಲವೊಂದು ಬಾರಿ ಹತಾಶೆಯನ್ನು ಹೊಂದಿ ಜೀವನದಲ್ಲಿ ಜಿಗುಪ್ಸೆ ಒಂದು ಕೆಟ್ಟ ನಿರ್ಧಾರಕ್ಕೆ ಮನಸ್ಸು ದಾರಿ ಮಾಡಿಕೊಡುತ್ತದೆ. ಹಾಗೆಯೇ ಕಷ್ಟ ಇದ್ದಲ್ಲಿ ಸುಖವಿರುವುದುಂಟು ಅನ್ನುವ ಹಾಗೇ ಇವತ್ತಲ್ಲ ನಾಳೆ ಒಳ್ಳೆಯ ದಿನಗಳು ನಮ್ಮ ಜೀವನದಲ್ಲಿ ಬರಬಹುದೆಂಬ ಭರವಸೆ,ಆತ್ಮವಿಶ್ವಾಸವನ್ನು ಇಟ್ಟುಕೊಂಡು ಜೀವನ ನಡೆಸುತ್ತಲೇ ಇದ್ದೇವೆ.
ಈ ವರ್ಷ ಒಳ್ಳೆಯದಾಗಿಲ್ಲ ಅಂದರೆ ಏನು ಮುಂದಿನ ವರ್ಷ ಆದರೂ ನನ್ನ ಬದುಕು ಬದಲಾಗಬಹುದು ಎಂಬ ಹೊಸತನವನ್ನು ನಮ್ಮಲ್ಲಿ ಭರವಸೆ,ನಂಬಿಕೆಯ ಬೇರಿನೊಂದಿಗೆ ಬೆರೆಸಿಕೊಂಡು ಬದುಕಬೇಕು.ನಾಳೆಯ ದಿನಗಳ ಮೇಲಿನ ಅನಿರೀಕ್ಷಿತ ತೀರಿವಿನಿಂದಾಗುವ ಬದುಕಿನಲ್ಲಾಗುವ ಬದಲಾವಣೆ ಹೊಸತನದ ಚಾಪನ್ನು ಮೂಡಿಸುತ್ತದೆ.
ಎಂಥ ಹತಾಶ ಮನಸ್ಥಿತಿಯವರಲ್ಲೂ ಹೊಸವರ್ಷ ಭರವಸೆಯ ಅಭಯ ಹಸ್ತವನ್ನು ಚಾಚುತ್ತದೆ. ಅದೆಲ್ಲಿಂದಲೇ ಆತ್ಮ ವಿಶ್ವಾಸದ ಬೆಳಕಿನ ಕಿಡಿಯೊಂದು ಕಾಣಿಸಿಕೊಳ್ಳುತ್ತದೆ.
ಹೊಸವರ್ಷವೆಂಬುದು ಕೇವಲ ಸಂಭ್ರಮದ ಕಾಲ ಮಾತ್ರವಲ್ಲ. ಕಳೆದ ದಿನಗಳತ್ತ ಹಿಂತಿರುಗಿ ನೋಡುವ ಸಮಯ ಕೂಡ ಹಿಂದಿನ ದಿನಗಳ ಪುಟಗಳನ್ನು ತೆಗೆದು ನೋಡಿದರೆ. ಉತ್ಸಾಹದ ಗಳಿಗೆಗಳು ಮುಂದಿನ ಕೆಲಸಗಳಿಗೆ ಚೈತನ್ಯ, ಉತ್ಸಾಹ ನೀಡಬಲ್ಲದು.ನಮ್ಮ ದಿಕ್ಕಿಲ್ಲದ ದಾರಿಗೆ ಖಚಿತ ದಿಕ್ಕು ದಾರಿಯನ್ನು ತೋರಬಲ್ಲದು.
ಜೀವನದ ಪ್ರಯಾಣಕ್ಕೆ ಒಂದು ನಿಲ್ದಾಣವಾಗಿದೆ. ನಾವು ಕಾಣುವ ಕನಸಗಳು ಕನಸಾಗಿಯೇ ಉಳಿದಿದೆ ಯಾಕೆಂದರೆ ನಮ್ಮಲ್ಲಿನ ಬೇಜವಾಬ್ದಾರಿ, ನಿರ್ಲಕ್ಷತನ ಆಮೇಲೆ ಮಾಡಿದರೆ ಆಯ್ತು ಅನ್ನೋ ಮನೋಭಾವನೆ ಯಾವುದರ ಬಗ್ಗೆಯೂ ಆಸಕ್ತಿ ಕೊಡದೆ ಇರೋದು ಎಲ್ಲವು ನಮ್ಮ ಕನಸಿನ ಜೀವನ ರೂಪಿಸಿಕೊಳ್ಳುವಲ್ಲಿ ಸಫಲರಾಗದೆ ಉಳಿಯಲು ಕಾರಣ.
ಮೊದಲು ಆತ್ಮವಿಶ್ವಾಸ ಬೇಕು ನಾನು ಈ ಕೆಲಸವನ್ನು ಮಾಡುವೆ ಎಂಬ ಒಂದು ನಿರ್ಧಿಷ್ಟ ಗುರಿ ಇರಬೇಕು ಅಂಗಿದ್ರೆ ಅಷ್ಟೇ ಜೀವನದ ಪಯಣದ ಹಾದಿಯಲ್ಲಿ ಯಶಸ್ಸನ್ನು ಕಾಣಲು ಸಾಧ್ಯ ಇಲ್ಲವಾದಲ್ಲಿ ಸೋಲನ್ನು ಅನುಭವಿಸುವ ಪರಿಸ್ಥಿತಿ ಎದುರಾಗುತ್ತದೆ. ಮುಂದಿನ ದಿನಗಳ ಆಗಮನದೊಂದಿಗೆ ನಾವು ಕಂಡ ಕನಸನ್ನು ಈಡೇರಿಸಿಕೊಳ್ಳುವ ಸತತ ಪ್ರಯತ್ನದೊಂದಿಗೆ ಬರುವ ದಿನವನ್ನು ಸ್ವಾಗತಿಸಿಕೊಳ್ಳೋಣ.
ಎಲ್ಲರ ಬಾಳಲಿ ಹರುಷ ,ಸಂತೋಷ ಮನೆಮಾಡಲಿ ಎಂದು ಆಶಿಸುತ್ತಾ ಎಲ್ಲರಿಗೂ ಹೊಸವರ್ಷದ ಶುಭಾಶಯಗಳು.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ಅಂತರಂಗ
ಕಾಮರೂಪದ ಪ್ರಭಾಕರ
- ಪ್ರೊ.ರಹಮತ್ ತರೀಕೆರೆ
ನಾನು ಕೋಲಾರಕ್ಕೆ ಹೋದಾಗೆಲ್ಲ ಎರಡು ಜಾಗಗಳಿಗೆ ತಪ್ಪದೆ ಭೇಟಿ ಕೊಡುತ್ತೇನೆ. ಒಂದು-ಕೆ.ರಾಮಯ್ಯ ಮತ್ತವರ ಸಂಗಾತಿಗಳು ಸೇರಿ ತೇರುಹಳ್ಳಿ ಬೆಟ್ಟದ ಮೇಲೆ ಕಟ್ಟಿರುವ `ಆದಿಮ’ಕ್ಕೆ; ಇನ್ನೊಂದು-`ಕಾಮರೂಪಿ’ ಎಂಬ ಹೆಸರಲ್ಲಿ ಬರೆಯುತ್ತಿದ್ದ ಕನ್ನಡ ಲೇಖಕ ಡಾ. ಎಂ.ಎಸ್. ಪ್ರಭಾಕರ ಅವರಿರುವ ಕಠಾರಿಪಾಳ್ಯದ ಮನೆಗೆ. 50ರ ದಶಕದ ಕೊನೆಯಲ್ಲಿ ಕರ್ನಾಟಕ ಬಿಟ್ಟುಹೋದ ಪ್ರಭಾಕರ, ‘ಹಿಂದೂ’ ಪತ್ರಿಕೆಯ ವರದಿಗಾರರಾಗಿ ಆಫ್ರಿಕಾ ಅಮೇರಿಕ ಬಾಂಗ್ಲಾದೇಶ ಈಶಾನ್ಯ ಭಾರತವನ್ನೆಲ್ಲ ಅಲೆದಾಡಿ, ಕಡೆಗೆ ಕಾಮರೂಪದಲ್ಲಿ (ಅಸ್ಸಾಮಿನ ಪುರಾತನ ಹೆಸರಿದು) ನೆಲೆಸಿಬಿಟ್ಟರು.
`ಕಾಮರೂಪ’ ಶಬ್ದಕ್ಕೆ ಬಯಸಿದ ರೂಪಧಾರಣೆ ಮಾಡುವ ಮಾಯಾವಿ ವಿದ್ಯೆ ಎಂಬರ್ಥವೂ ಇದೆ. ಎಂಬತ್ತರ ಪ್ರಾಯದಲ್ಲಿ ಕರ್ನಾಟಕಕ್ಕೆ ಮರಳಿ ಬಂದಿರುವ ಪ್ರಭಾಕರ ಅವರು, ತಾವು ಹುಟ್ಟಿಬೆಳೆದ ಮನೆಯಲ್ಲಿ ಬಿಡಾರ ಹೂಡಿದ್ದಾರೆ. ಹಿರೀಕರು ಕಟ್ಟಿದ ದೊಡ್ಡಮನೆ. ಮನೆಯೊಳಗೊಂದೇ ಜೀವ; ಮನೆ ತುಂಬ ಪುಸ್ತಕದ ರಾಶಿ (ಹೆಚ್ಚಿನವು ಇಂಗ್ಲೀಶ್ ಬಂಗಾಳಿ ಅಸ್ಸಾಮಿ). ನಟ್ಟನಡುವಿರುವ ಹಾಲಿನ ಮೂಲೆಯಲ್ಲಿ ಬೀದಿಗೆ ಬೆನ್ನುಕೊಟ್ಟಂತೆ ಕೂತು, ಲ್ಯಾಪ್ಟಾಪಿನಲ್ಲಿ ಬರೆಯುತ್ತ, ವೆಬ್ಸೈಟುಗಳನ್ನು ಜಾಲಾಡುತ್ತ, ಬ್ಲಾಗುಗಳನ್ನೋದುತ್ತ ಪ್ರಭಾಕರ ಕುಳಿತಿರುತ್ತಾರೆ.
ಅವರ ಮನಗೆ ಹೋದಾಗಲೆಲ್ಲ ನನಗೆ ರಾಗಿಮುದ್ದೆ ಸೊಪ್ಪಿನ ಸಾರಿನ ಊಟ ಸಿಗುತ್ತದೆ. ಅವರು ಉಣ್ಣುವುದೊಂದು ಅಪೂರ್ವ ದೃಶ್ಯ. ತಣಿಗೆಯ ನಡುವೆ ಹದವಾಗಿ ಬೆಂದು ಕಂಪು ಬೀರುವ ಗೋಂದಿನಂತಹ ಕೆಂಗಪ್ಪು ಬಣ್ಣದ ಬಿಸಿಮುದ್ದೆಯನ್ನಿಟ್ಟು, ಅದರ ತಲೆಯ ಮೇಲೆ ಶಿಖರವನ್ನು ಹಿಮವು ಅಲಂಕರಿಸುವಂತೆ ಬೆಣ್ಣೆಯ ಚೂರನ್ನಿಡುತ್ತಾರೆ; ಬೆಣ್ಣೆಯು ಮುದ್ದೆ ಕಾವಿಗೆ ಕರಗಿ ಇಡೀ ಚೆಂಡನ್ನು ಆವರಿಸಿ ಅಭಿಷೇಕ ಮಾಡಿಸಿಕೊಂಡ ಮೂರುತಿಯಂತೆ ಥಳಥಳ ಹೊಳೆಯುತ್ತದೆ. ಆಗ ಘಮಿಸುವ ಮುದ್ದೆಯನ್ನು ಚೆನ್ನಾಗಿ ಮಿದ್ದು, ಒಂದು ಬದಿಯಿಂದ ಇಷ್ಟಿಷ್ಟೇ ಮುರಿದು ತುತ್ತು ಮಾಡಿ, ಸೊಪ್ಪಿನ ಗಟ್ಟಿಸಾರಲ್ಲಿ ಹೊರಳಾಡಿಸಿ ಗುಕ್ಕನೆ ನುಂಗಿ ಕಣ್ಮುಚ್ಚಿ ಕೊಳ್ಳುತ್ತಾರೆ. ತರುವಾಯ ಶ್ರೀಯುತರು ಜ್ಞಾನೋದಯವಾದ ಸಿದ್ಧನಂತೆ ಅವರ ಮುಖದಲ್ಲಿ ಪರಮಾನಂದದ ಒಂದು ಕಳೆ ಆವಿರ್ಭವಿಸುತ್ತದೆ. ಇದನ್ನೆಲ್ಲ ಕಾಣುವಾಗ, ಲೋಕವನ್ನೆಲ್ಲ ಸುತ್ತಾಡಿರುವ ಇವರು ಕೋಲಾರಕ್ಕೆ ಮುದ್ದೆಸುಖಕ್ಕಾಗಿಯೆ ಬಂದರೇನೊ ಎಂದು ಶಂಕೆ ಬರುತ್ತದೆ. ಪ್ರಭಾಕರ ಅವರಿಗೆ ಆಧುನಿಕ ಕನ್ನಡ ಸಾಹಿತ್ಯದ ಮೇಲೆ ಅನೇಕ ದೂರುಗಳಿವೆ. ಅವುಗಳಲ್ಲಿ ಆಹಾರ ತಯಾರಿಕೆ ಮತ್ತು ಸೇವನೆ ಕುರಿತು ಅದರಲ್ಲಿ ವಿವರಗಳೇ ಇಲ್ಲ ಎಂಬುದೂ ಒಂದು.
ಕನ್ನಡದ ಅತಿಹಿರಿಯ ಮತ್ತು ಹೆಚ್ಚು ಬರೆಯದ ಲೇಖಕರಲ್ಲಿ ಪ್ರಭಾಕರ ಅವರೂ ಒಬ್ಬರು. ನಾನು ಅವರ ‘ಕುದುರೆಮೊಟ್ಟೆ’ ಕಾದಂಬರಿಯನ್ನೂ ‘ಒಂದು ತೊಲ ಪುನುಗು ಮತ್ತು ಇತರ ಕತೆಗಳು’ ಸಂಕಲನವನ್ನೂ ಓದಿದ್ದೆ. ಇವುಗಳಲ್ಲಿ ‘ಕುದುರೆ ಮೊಟ್ಟೆ’ ಈಗಲೂ ಪ್ರಿಯವಾದ ಪುಸ್ತಕ. ಅದರಲ್ಲಿರುವ ಕೆಲವು ಪಾತ್ರಗಳು ಕೊಂಚ ವಿಕ್ಷಿಪ್ತವಾಗಿವೆ; ಅಲ್ಲಿನ ಬಾಳಿನ ಸನ್ನಿವೇಶಗಳೂ ಅನಿರೀಕ್ಷಿತವಾಗಿವೆ. ಆದರೆ ಎಲ್ಲಿಯೂ ಹುಸಿ ಅನಿಸದಂತೆ, ಒಂದೇ ಶಬ್ದ ಅಪವ್ಯಯವಾಗದಂತೆ ಅದನ್ನು ಬರೆಯಲಾಗಿದೆ. ಪಾತ್ರಗಳನ್ನು ತಮ್ಮ ಸಿದ್ಧಾಂತಕ್ಕೆ ತಕ್ಕಂತೆ ಮಣಿಸಿ ಕೈಗೊಂಬೆಯಂತೆ ಆಡಿಸುತ್ತ, ಕೆಲವನ್ನು ಮುದ್ದಾಮಾಗಿ ದುರುಳಗೊಳಿಸಿ ಕಲೆಯ ಜಾಣಮುಸುಕಿನಲ್ಲಿ ಅಡಗಿಸುತ್ತ, ಕೆಲವು ಕಾದಂಬರಿಗಳು ಕನ್ನಡದಲ್ಲಿ ಪ್ರಕಟವಾಗುತ್ತಿವೆ. ಇಂತಹ ಹೊತ್ತಲ್ಲಿ ಅರ್ಧ ಶತಮಾನದ ಹಿಂದೆ ಪ್ರಕಟವಾದ ಈ ಕಾದಂಬರಿ, ಬಾಳನ್ನು ಕುರಿತು ತೋರುವ ಕಕ್ಕುಲಾತಿ ಕಂಡು ಖುಶಿಯಾಗುತ್ತದೆ. ಕತೆಗಾರರಿಗೆ ತಾವು ಸೃಷ್ಟಿಸುವ ಕೆಲವು ಪಾತ್ರಗಳ ಮೇಲೆ ಕೊಂಚ ಭಾವ ಪಕ್ಷಪಾತವಿರುತ್ತದೆ. ಆದರೆ ತಾವು ಸೃಜಿಸುವ ಎಲ್ಲ ಪಾತ್ರಗಳನ್ನು ತಾಯಿಯಂತೆ ನೋಡುವುದು ಬರೆಹದ ನೈತಿಕತೆ. ಈ ಸಂಗತಿ ಕುವೆಂಪು ಮತ್ತು ಟಾಲ್ ಸ್ಟಾಯ್ ಕಾದಂಬರಿ ಓದಿದವರಿಗೆ ಗೊತ್ತಿದೆ.
ಕಾಮವನ್ನು ಇಟ್ಟುಕೊಂಡು ಜೀವನದ ಸತ್ಯಗಳನ್ನು ಶೋಧಿಸುವ ವಿಷಯದಲ್ಲಿ ಕಾಮರೂಪಿಯವರು, ಒಬ್ಬ ಟಿಪಿಕಲ್ ನವ್ಯಲೇಖಕರೇ. ಆದರೆ ನವ್ಯದ ಕೆಲವು ಲೇಖಕರಲ್ಲಿ ಕಾಣುವಂತೆ, ಅದಕ್ಕವರು ಅನಗತ್ಯ ಪ್ರಾಮುಖ್ಯ ಕೊಡುವುದಿಲ್ಲ. ಅದನ್ನು ಚಪ್ಪರಿಸುವುದಿಲ್ಲ. ವೈಭವೀಕರಿಸುವುದಿಲ್ಲ. ಬದಲಿಗೆ, ಮನುಷ್ಯರಾದವರು ಜೀವನದ ಇಕ್ಕಟ್ಟುಗಳಲ್ಲಿ ಸಿಲುಕಿ ಅನಿವಾರ್ಯವಾಗಿ ವರ್ತಿಸುವ ಪರಿಯನ್ನು ತಣ್ಣಗೆ ವ್ಯಂಗ್ಯವಾಗಿ ಚಿತ್ರಿಸುತ್ತಾ ಹೋಗುತ್ತಾರೆ. ಸತ್ಯಕ್ಕಿರುವ ಹಲವು ಮುಖಗಳನ್ನು ಹಿಡಿಯುವಂತಹ ಕುರುಸೋವಾನ ‘ರಶೋಮನ್’ ಸಿನಿಮಾ ನೆನಪಿಸುವ ಈ ಕಾದಂಬರಿ, ಮತ್ತೆಮತ್ತೆ ಓದಬೇಕು ಎನಿಸುವಷ್ಟು ತಾಜಾ ಆಗಿದೆ. ‘ಉಪಪತ್ತಿಯೋಗ’ ಎಂಬುದನ್ನು ಬಿಟ್ಟರೆ, ಉಳಿದಂತೆ ವ್ಯಕ್ತಿವಾದವನ್ನು ಅತಿಯಾಗಿ ಬಿಂಬಿಸುವ ತಂತ್ರದ ಬಿಗಿತದಲ್ಲಿರುವ ಅವರ ಕತೆಗಳು ಅಷ್ಟು ಆಪ್ತವೆನಿಸಿಲ್ಲ.
ನನಗೆ ಪ್ರಭಾಕರ್ ಕುರಿತು ಆಸಕ್ತಿ ಮೂಡಿಸಿದವರು ಮಾರ್ಕ್ಸ್ವಾದಿ ಚಿಂತಕ ಕೆ.ರಾಘವೇಂದ್ರರಾವ್ ಅವರು. ಅಮೆರಿಕೆಯ ವಿಶ್ವವಿದ್ಯಾಲಯಗಳಲ್ಲಿ ಕೆಲಸ ಮಾಡುತ್ತಿದ್ದ ಎ.ಕೆ.ರಾಮಾನುಜನರ ಹೊಂದಾಣಿಕೆಯ ಗುಣವನ್ನು ಕಟುವಾಗಿ ವಿಮರ್ಶಿಸುತ್ತ, ಅಲ್ಲಿನ ಶೈಕ್ಷಣಿಕ ಕ್ಷೇತ್ರದಲ್ಲಿರುವ ಬಿಳಿಯರ ಯಜಮಾನಿಕೆಗೆ ಬಾಗದೆ ಹೊರಬಂದ ಪ್ರಭಾಕರ ಅವರ ದಿಟ್ಟ ಸ್ವಭಾವವನ್ನು ಅವರು ತಮ್ಮ ಸಂದರ್ಶನದಲ್ಲಿ ಪ್ರಸ್ತಾಪಿಸಿದ್ದರು. ಪ್ರಭಾಕರ ಅವರನ್ನು ಭೇಟಿಯಾಗಬೇಕು ಎಂದು ಅನಿಸುತ್ತಿತ್ತು. ಅದರಲ್ಲೂ ಭಾರತದ ಶಾಕ್ತಪೀಠಗಳಲ್ಲಿ ಮುಖ್ಯವಾಗಿರುವ ಅಸ್ಸಾಮಿನ ಕಾಮಾಖ್ಯಕ್ಕೆ ಹೋಗಲು ಯತ್ನಿಸುತ್ತಿದ್ದ ನಾನು, ಅಲ್ಲೇ ಸಮೀಪದ ಗೌಹಾತಿಯಲ್ಲಿರುವ ಅವರನ್ನು ಕಾಣಲು ಹವಣಿಕೆ ಮಾಡಿಕೊಂಡಿದ್ದೆ. ಆದರೆ ಸಾರ್ವಜನಿಕ ವ್ಯಕ್ತಿಯಾಗಲು ನಿರಾಕರಿಸಿ ಅಜ್ಞಾತವಾಗಿಯೇ ಬಾಳುವ ಅವರು ಸುಲಭವಾಗಿ ಸಿಗುತ್ತಿರಲಿಲ್ಲ.
ನನ್ನ ತವಕವನ್ನರಿತಿದ್ದ ಕೆ.ರಾಮಯ್ಯ, ‘ಪ್ರಭಾಕರ್ ಕರ್ನಾಟಕಕ್ಕೆ ಬಂದಿದ್ದಾರೆ. ಬನ್ನಿ’ ಎಂದು ಅವರ ಮನೆಗೆ ಕರೆದುಕೊಂಡು ಹೋದರು. ಮಧ್ಯಾಹ್ನದ ಸುಡುಹೊತ್ತು. ಪ್ರಭಾಕರ ಪ್ರೀತಿಯಿಂದ ಬರಮಾಡಿಕೊಂಡು ನೊರೆ ತುಂಬಿದ ಒಗರು ಬೀರಿನ ಮಗ್ಗನ್ನು ಕೈಗೆ ಕೊಟ್ಟು, ಕಾಮಾಖ್ಯದ ಬಗ್ಗೆಯೂ ತಂತ್ರ ಪಂಥದ ಬಗ್ಗೆಯೂ ಇರುವ ಕೃತಿಗಳನ್ನು ತೋರಿಸುತ್ತ, ಗಂಟೆಗಟ್ಟಳೆ ಮಾತಾಡಿದರು. ಅರಿವಿನ ಕಿಡಿಗಳು ಹಾರುವ ಅದೊಂದು ವಿದ್ವತ್ಪೂರ್ಣ ಹರಟೆ.
ನಾನು ಅವರಲ್ಲಿ ಶಿಷ್ಯವೃತ್ತಿ ಸ್ವೀಕರಿಸಿ ಹಲವಾರು ಸಲ ಕೋಲಾರಕ್ಕೆ ಹೋಗಿ ಬಂದಿದ್ದೇನೆ. ಅವರ ಮಾತುಕತೆಗಳಲ್ಲಿ ನನಗೆ ಮುಖ್ಯವಾಗಿ ಕಂಡಿದ್ದು, ಜಾತ್ಯತೀತವಾದ ಮನಸ್ಸು; ಸಣ್ಣಪುಟ್ಟ ಸಂಗತಿಗಳ ಮೇಲೂ ಕಾಳಜಿಯಿಂದ ಸೂಕ್ಷ್ಮವಾಗಿ ಚಿಂತಿಸುವ ಮಾನವೀಯತೆ; ಗತಕಾಲದ ಬಗ್ಗೆ ಹಳಹಳಿಕೆಯಿಲ್ಲದೆ ವರ್ತಮಾನದ ಸಮಸ್ಯೆಗಳನ್ನು ಕುರಿತು ಚಿಂತಿಸುವ ಪ್ರಖರವೂ ನಿಷ್ಠುರವೂ ಆದ ರಾಜಕೀಯ ಪ್ರಜ್ಞೆ. ಸಾರ್ವಜನಿಕ ಬದುಕಿನಲ್ಲಿ ಜಾತಿಪದ್ಧತಿ ಎಲ್ಲೆಮೀರಿ ನಿರತವಾಗಿರುವ ಕುರಿತ ಹೇವರಿಕೆ. ಹಿರಿಯ ಲೇಖಕರಲ್ಲಿ ಸಾಮಾನ್ಯವಾಗಿ ಎರಡು ಸ್ವಭಾವಗಳಿರುತ್ತವೆ. ಒಂದು- ಕಳೆದುಹೋದ ಕಾಲದ ಬಗ್ಗೆ ಭಾವುಕ ಮರುಕಳಿಕೆ. ಎರಡು-ವರ್ತಮಾನದ ಸಾಮಾಜಿಕ ರಾಜಕೀಯ ವೈರುಧ್ಯಗಳನ್ನು ಉದಾರವಾಗಿ ನೋಡುತ್ತ, ಚಿಂತನೆಯ ಮೊನಚನ್ನು ಕಳೆದುಕೊಳ್ಳುವುದು. ಆದರೆ ಆತ್ಮಕ್ಕೆ ಸದಾ ಬೆಂಕಿ ಹತ್ತಿಸಿಕೊಂಡಂತೆ ಉರಿಯುವ ಕೆಲವರಿದ್ದಾರೆ. ಕೋಚೆ, ಕುಸುಮಾಕರ ದೇವರಗೆಣ್ಣೂರ, ಎಂ.ಡಿ. ನಂಜುಂಡಸ್ವಾಮಿ, ನೀಲಗಂಗಯ್ಯ ಪೂಜಾರ, ಕೆ.ರಾಘವೇಂದ್ರರಾವ್, ಅಬ್ಬಿಗೇರಿ ವಿರೂಪಾಕ್ಷಪ್ಪ, ಸಾರಾ ಅಬೂಬಕರ್, ಕಾಮರೂಪಿ ಪ್ರಭಾಕರ-ಇವರೆಲ್ಲ ಇಂತಹವರು. ಈ ಹಿರಿಯರ ಜತೆ ಮಾತಾಡುವಾಗ ಇವರ ಹಠಮಾರಿತನ, ಜಗಳಗಂಟಿತನ, ಆದರ್ಶವಾದ, ನೈತಿಕ ಪ್ರಜ್ಞೆ ಹಾಗೂ ಭಿನ್ನಮತ ಇಷ್ಟವಾಗುತ್ತದೆ.
ಕರ್ನಾಟಕದಿಂದ ಬಹುಕಾಲ ದೂರವಿದ್ದ ಕಾರಣದಿಂದ ಏರ್ಪಟ್ಟಿರುವ ಅಪರಿಚಿತತೆಯಿಂದಲೊ ಅಥವಾ ಕರ್ನಾಟಕದ ಒಳಗೇ ಇದ್ದೂಇದ್ದೂ ನಮಗೆ ಕಾಣದಂತಾಗಿರುವ ವೈರುಧ್ಯಗಳು ‘ಹೊರಗಿನಿಂದ’ ಬಂದಿರುವ ಅವರಿಗೆ ಒಡೆದು ಕಾಣುತ್ತಿರುವುದರಿಂದಲೊ, ಪ್ರಭಾಕರ ಕರ್ನಾಟಕದ ಸಮಕಾಲೀನ ಸಾಂಸ್ಕೃತಿಕ ರಾಜಕಾರಣದ ವೈರುಧ್ಯಗಳ ಬಗ್ಗೆ ತೀಕ್ಷ್ಣವಾದ ಟಿಪ್ಪಣಿ ಮಾಡುತ್ತಿರುತ್ತಾರೆ; ಕನ್ನಡಿಗರ ಸ್ವಭಾವದಲ್ಲೇ ವ್ಯಕ್ತಿನಿಷ್ಠೆಗಾಗಿ ವಿಮರ್ಶೆಯ ನಿಷ್ಠುರತೆ ಬಿಟ್ಟುಕೊಡುವ, ಸಜ್ಜನಿಕೆಯ ಭಾಷೆಯಲ್ಲಿ ವಾಸ್ತವವನ್ನು ಅಡಗಿಸುವ ಪ್ರವೃತ್ತಿಯಿದೆ ಎಂದು ಹೇಳುತ್ತಿರುತ್ತಾರೆ. ಸಂಘಟಕರೊಬ್ಬರು ಕಾರ್ಯಕ್ರಮವೊಂದಕ್ಕೆ ಕರೆಸಿಕೊಂಡು ಪರಿಚಯ ಭಾಷಣದಲ್ಲಿ ತಮ್ಮನ್ನು ಅತಿಯಾಗಿ ಹೊಗಳಿದ್ದನ್ನು ನೆನೆಯುತ್ತ ಅವರೊಮ್ಮೆ ಹೇಳಿದರು: “ಏನ್ ಸ್ವಾಮಿ ಕನ್ನಡಿಗರು? ಎಷ್ಟು ಉದಾರತೆ! ನನ್ನ ಬಗ್ಗೆ ಅವರಿಗೆ ಏನೂ ಗೊತ್ತಿಲ್ಲ. ನಾನು ಎಲ್ಲ ಸೇರಿದರೆ ನೂರೈವತ್ತು ಪುಟಗಳನ್ನೂ ಬರೆದಿಲ್ಲ. ಕನ್ನಡಕ್ಕೆ ದೊಡ್ಡ ಕೊಡುಗೆಯನ್ನು ಕೊಟ್ಟಿಲ್ಲ. ಆದರೂ ವಾಚಾಮಗೋಚರ ಹೊಗಳಿಬಿಟ್ಟರು. ಕರ್ನಾಟಕದಲ್ಲಿ ಮಾತಿಗೆ ಬೆಲೆಯೇ ಇದ್ದಂತಿಲ್ಲ.’’
ಇದನ್ನು ಕೇಳುವಾಗ ಈಚೆಗೆ ಕಲ್ಕತ್ತಾದಲ್ಲಿ ನಾನು ಕಂಡ, ಹಿರಿಯ ಲೇಖಕ ರುದ್ರಪ್ರತಾಪ ಸೇನರ ಸನ್ಮಾನ ಕಾರ್ಯಕ್ರಮ ನೆನಪಾಯಿತು. ಸೇನರಿಗೆ 75ವರ್ಷ ತುಂಬಿದ ನೆಪದಲ್ಲಿ ಇರಿಸಿಕೊಂಡಿದ್ದ ಆ ಕಾರ್ಯಕ್ರಮ ಎಷ್ಟು ವಿಮರ್ಶಾತ್ಮಕವಾಗಿತ್ತು ಎಂದರೆ, ಅವರ ಶಿಷ್ಯರು ತಮ್ಮ ಗುರುವಿನ ಜತೆ ಕೋರ್ಟ್ಮಾರ್ಶಲ್ ನಡೆಸುವವರ ಹಾಗೆ ಪ್ರಶ್ನೆ ಕೇಳುತ್ತಿದ್ದರು. ಸೇನರು ಆ ಕಟುತರ ಪ್ರಶ್ನೆಗಳಿಗೆಲ್ಲ ಪ್ರಾಮಾಣಿಕವಾಗಿ ದ್ವಂದ್ವವಿಲ್ಲದೆ ಉತ್ತರಿಸುತ್ತಿದ್ದರು. ಹಿರಿಯರ ತಲೆಗೆ ಅಭಿನಂದನ ಗ್ರಂಥಗಳ ಸರಮಾಲೆಯನ್ನು ತಂದು ಕಟ್ಟಿ, ಎಗ್ಗಿಲದೆ ಹೊಗಳಿ ವೈಭವೀಕರಿಸುವ ಪದ್ಧತಿಯಿರುವ ಕರ್ನಾಟಕದಲ್ಲಿ, ಈ ಪರಿಯ ನಿಷ್ಠುರತೆ ಕಲ್ಪಿಸಿಕೊಳ್ಳುವುದೇ ಕಷ್ಟ.
ತೋರುಗಾಣಿಕೆಯನ್ನು ಸದಾ ನಿರಾಕರಿಸುವ ಪ್ರಭಾಕರ ಅವರಲ್ಲಿ, ಅವರ ಖಂಡಿತವಾದಿ ನಿಲುವಿಗೆ ಅಷ್ಟೊಂದು ತಾಳೆಯಾಗದ ಇನ್ನೊಂದು ಮುಖವಿದೆ. ಅದೆಂದರೆ, ಜೀವನಪ್ರೀತಿಯ ಸಂಕೇತದಂತಿರುವ ತಮಾಶೆ ಮತ್ತು ಪೋಲಿತನ. ಈ ತಮಾಶೆಯ ಗುಣ ಅದ್ಭುತ ನಾಟಕೀಯ ಶೈಲಿಯಾಗಿ ಅವರ ಕಥೆ ಕಾದಂಬರಿಗಳಲ್ಲೆಲ್ಲ ಆವರಿಸಿಕೊಂಡಿದೆ. ತಮಗೆ ಪಾಠ ಹೇಳಿದ ಗುರುಗಳ ವೈಯಕ್ತಿಕ ಬದುಕಿನಲ್ಲಿದ್ದ ಸನಾತನವಾದ ಮತ್ತು ತರಗತಿಗಳಲ್ಲಿ ಕನ್ನಡ ಬಳಸದ ಅವರ ಇಂಗ್ಲಿಷಿನ ವ್ಯಾಮೋಹ ಕುರಿತಂತೆ, ಅವರಲ್ಲಿ ಸ್ವಾರಸ್ಯಕರ ಮಾಹಿತಿಗಳಿವೆ. ಪ್ರಭಾಕರ ಅವರು ಆಪ್ತರ ಎದುರು ತಾವು ಬರೆದಿರುವ ಅಪ್ರಕಟಿತ ಪೋಲಿ ಪದ್ಯಗಳನ್ನು ವಾಚಿಸುವುದುಂಟು. ಬಹುಶಃ ಇದು ಅವರ ಗೆಳೆಯರಾಗಿದ್ದ ಎಚ್.ಎಸ್. ಬಿಳಿಗಿರಿಯವರ ಸಹವಾಸ ಫಲವಿರಬೇಕು.
ಒಂದೇ ವ್ಯಕ್ತಿತ್ವದಲ್ಲಿ ಒಟ್ಟಿಗೇ ಇರಲು ಕಷ್ಟವೆನಿಸಬಹುದಾದ ಇನ್ನೂ ಅನೇಕ ಸಂಗತಿಗಳು ಅವರಲ್ಲಿ ಸಹಜವಾಗಿ ನಿರಾಳವಾಗಿ ಇವೆ. ಉದಾ.ಗೆ, ಬಹುಭಾಷಿಕರಾದ ಅವರ ಮನೆಮಾತು ತಮಿಳುಗನ್ನಡ; ಬರವಣಿಗೆ ಕನ್ನಡ ಮತ್ತು ಇಂಗ್ಲೀಶಿನಲ್ಲಿ; ಸಂಸ್ಕೃತ ಅಸ್ಸಾಮಿ ಬಂಗಾಳಿ ಭಾಷೆಗಳಲ್ಲಿ ದೊಡ್ಡ ವಿದ್ವತ್ತು. (ಅವರ ಅಸ್ಸಾಮಿ ಬಂಗಾಳಿ ತಿಳಿವಳಿಕೆಯಿಂದ ಕನ್ನಡಕ್ಕೆ ಪ್ರಯೋಜನವಿನ್ನೂ ಆಗಿಲ್ಲ). ಪಂಪ ಅವರ ಇಷ್ಟದ ಕವಿ. ಮೂಲತಃ ಇಂಗ್ಲೀಶ್ ಸಾಹಿತ್ಯದ ವಿದ್ಯಾರ್ಥಿಯಾದರೂ ಸಾಹಿತ್ಯಕ್ಕಿಂತ ಹೆಚ್ಚಾಗಿ ಅಂತರಾಷ್ಟ್ರೀಯ ರಾಷ್ಟ್ರೀಯ ರಾಜಕಾರಣದ ಮೇಲೆ ಹೆಚ್ಚು ಬರೆವಣಿಗೆ. ಅದರಲ್ಲೂ ಈಶಾನ್ಯ ಭಾರತದ ರಾಜಕಾರಣ ಭಾಷೆ ಧರ್ಮ ಸಂಸ್ಕೃತಿ ಕುರಿತ ಅವರ ತಿಳಿವಳಿಕೆ ಅಪರೂಪದ್ದು. ಇವನ್ನೆಲ್ಲ ಒಟ್ಟಿಗೆ ಹೇಗೆ ಕಲ್ಪಿಸಿಕೊಳ್ಳುವುದು? ಪ್ರಭಾಕರ ತಮ್ಮ ಕಾದಂಬರಿಯ ಒಂದು ಪಾತ್ರದ ಹಾಗೇ ಬದುಕಿದ್ದಾರೆ.
ಅವರು ಈಚೆಗೆ ಮಾತಾಡುತ್ತ ಕೊಂಚ ದಣಿದ ದನಿಯಲ್ಲಿ “ಸ್ವಾಮಿ, ಕರ್ನಾಟಕ ನನಗೆ ಸಾಕಾಗಿದೆ. ಗೌಹಾಟಿಗೆ ಹೋಗಬೇಕು ಅನಿಸುತ್ತಿದೆ’ ಎಂದು ಗೊಣಗಿದರು. “ಹೋಗಿ. ಆದರೆ ಮತ್ತೆಬನ್ನಿ’’ ಎಂದೆ. ಅವರಲ್ಲಿ ಕೋಲಾರ-ಗೌಹಾತಿಗಳ ನಡುವೆ ವಿಚಿತ್ರವಾದ ಆಕರ್ಷಣೆ ವಿಕರ್ಷಣೆಯಿದೆ. ಇದು ಬಹುಕಾಲ ಬೇರೆಡೆ ಬೆಳೆದ ಮರ ತನ್ನ ಮೂಲನೆಲಕ್ಕೆ ಬಂದು ನಾಟಿಗೊಂಡರೆ ಬೇರೂರುವ ಕಷ್ಟ. ಮರಳಿ ಹುಟ್ಟಿದೂರಿಗೆ ಬರುವಿಕೆ ಬಾಲ್ಯದ ನೆನಪುಗಳನ್ನು ಎಚ್ಚರಿಸಿ ಸುಖ ಕೊಡುತ್ತದೆ; ಆದರೆ ಹೊಚ್ಚ ಹೊಸತೆೆನಿಸುವಷ್ಟು ಬದಲಾಗಿರುವ ಪರಿಸರವು, ಕಾಡುವ ಏಕಾಂಗಿತನವನ್ನೂ ತಂದಿಡುತ್ತದೆ. ಯಾರ ಮರುಕವನ್ನೂ ಬಯಸದೆ ಏಕಾಂತದಲ್ಲಿ ಘನತೆಯಿಂದ ಕೊನೆಯ ದಿನಗಳನ್ನು ಕಳೆಯ ಬಯಸುವ ಇಂತಹ ಹಠಮಾರಿ ಜೀವಗಳು, ಒಳಗೇ ಮೃದ್ವಂಗಿಗಳಾಗಿ ಆಪ್ತಸಂಗಾತಕ್ಕೆ ಹಾತೊರೆಯುತ್ತಿರುತ್ತವೆ.
ಆ ಸಂಗಾತದ ಸ್ವರೂಪ ಎಂತಹುದು ಎಂದು ಸ್ಪಷ್ಟವಾಗುವುದಿಲ್ಲ. ನಾನು ‘ಕಾಮರೂಪಕ್ಕೆ ಯಾವಾಗ ಹೋಗುತ್ತೀರಿ’ ಎಂದು ಕೇಳಿದೆ: ‘ಆದಿಮದ 50ನೇ ಬೆಳುದಿಂಗಳ ಕಾರ್ಯಕ್ರಮ ಮುಗಿಸಿಕೊಂಡು’ ಎಂದರು.
ಪ್ರತಿಯೊಬ್ಬರಿಗೂ ಬಾಳಿನಲ್ಲಿ ಬಹುರೂಪಧಾರಣೆ ಮಾಡಬೇಕಾದ ಒತ್ತಡಗಳು ಎದುರಾಗಬಹುದು. ಆದರೆ ಈ ರೂಪಧಾರಣೆಗೆ ಕಾರಣ, ನಮ್ಮ ಇಚ್ಛಾನಿಚ್ಛೆಗಳು ಮಾತ್ರವಲ್ಲ, ಬಾಳಿನ ಅನೂಹ್ಯ ಒತ್ತಡಗಳು ಸಹ. ಈ ಒತ್ತಡಗಳು ಬರೆಹ ಇಲ್ಲವೇ ಮಾತಿನ ವ್ಯಾಖ್ಯಾನಕ್ಕೆ ಕೆಲವೊಮ್ಮೆ ನಿಲುಕುವಂತೆ ಇರುವುದಿಲ್ಲ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
-
ದಿನದ ಸುದ್ದಿ6 days ago
ನಾಯಕನ ಹಟ್ಟಿ | ಶ್ರೀಗುರು ತಿಪ್ಪೇರುದ್ರಸ್ವಾಮಿ ರಥೋತ್ಸವಕ್ಕೆ ವಿಶೇಷ ಬಸ್ ಸೌಲಭ್ಯ
-
ದಿನದ ಸುದ್ದಿ7 days ago
ಭಾನುವಾರದಂದು ಕಾರ್ಯನಿರ್ವಹಿಸುವಂತೆ ಬ್ಯಾಂಕ್ಗಳಿಗೆ ಆರ್ ಬಿ ಐ ಸೂಚನೆ
-
ದಿನದ ಸುದ್ದಿ5 days ago
ಲೋಕಸಭಾ ಚುನಾವಣೆ : ಚುನಾವಣಾ ಚಟುವಟಿಕೆಗಳ ಕುರಿತ ಜಿಲ್ಲಾವಾರು ಮಾಹಿತಿ
-
ದಿನದ ಸುದ್ದಿ7 days ago
ಕಾಂಗ್ರೆಸ್ ಪಕ್ಷದ ಬ್ಯಾಂಕ್ ಖಾತೆಗಳು ಸ್ಥಗಿತ ; ಬಿಜೆಪಿ ಅಧಿಕಾರ ದುರುಪಯೋಗ : ಖರ್ಗೆ ಕಿಡಿ
-
ದಿನದ ಸುದ್ದಿ5 days ago
ವಿಜಯಪುರ ಜಿಲ್ಲಾ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಗೆ ಮೈಬೂಬಸಾಹೇಬ.ವೈ.ಜೆ ಆಯ್ಕೆ
-
ದಿನದ ಸುದ್ದಿ5 days ago
ಬೆಂಗಳೂರಿನಲ್ಲಿ ಬಿಜೆಪಿ ನೂತನ ಮಾಧ್ಯಮಕೇಂದ್ರ ಆರಂಭ
-
ದಿನದ ಸುದ್ದಿ5 days ago
ಲೋಕಸಭಾ ಚುನಾವಣೆ | ಹೊಸ ಮತದಾರರೆಷ್ಟು ಗೊತ್ತಾ..?
-
ದಿನದ ಸುದ್ದಿ5 days ago
ಕವಿತೆ | ನೆನಪು