ಲೈಫ್ ಸ್ಟೈಲ್
‘ಹಾವಿನ ದ್ವೇಷ ಹನ್ನೆರಡು ವರ್ಷ’ ಎಂಬ ನುಡಿ ಸುಳ್ಳು | ಹಾವಿನ ಬಗೆಗೆ ನೀವಿಷ್ಟು ತಿಳಿಯಲೇ ಬೇಕು..!
ವರದಿಯೊಂದರ ಪ್ರಕಾರ ನಮ್ಮ ದೇಶದಲ್ಲಿ ಪ್ರತಿ ವರ್ಷಕ್ಕೆ ಸರಿ ಸುಮಾರು 2,50,000 ಜನಗಳು ಹಾವುಗಳಿಂದ ಕಡಿತಕ್ಕೊಳಗಾಗುತ್ತಾರೆ. ಇದರಲ್ಲಿ 50,000 ಜನರು ಪ್ರಾಣ ಕಳೆದುಕೊಳ್ಳುತ್ತಾರೆ. ಇದರಲ್ಲಿ 725 ಜನ ಹಾವು ಕಚ್ಚಿದೆ ಎಂಬ ಭಯಕ್ಕೆ ಸಾಯುತ್ತಾರೆ.ಮೊದಲು ಸ್ವಲ್ಪ ಹಾವಿನ ಬಗ್ಗೆ ತಿಳಿಯೋಣ.
ವೈಜ್ಞಾನಿಕ ವರ್ಗೀಕರಣ
ಸಾಮ್ರಾಜ್ಯ : ಪ್ರಾಣಿಗಳು
ವಿಭಾಗ : ಕಾರ್ಡೇಟ
ಉಪವಿಭಾಗ: ಕಶೇರುಕ
ವರ್ಗ : ಸರೀಸೃಪಗಳು
ಗಣ : ಸ್ಕ್ವಾಮಾಟ
ಹಾವು ಅಥವಾ ಉರಗ. ನೆಲದ ಮೇಲೆ ಹರಿದಾಡುತ್ತ, ಹೊರಳುತ್ತ, ಅಂಕು ಡೊಂಕಾಗಿ ಚಲಿಸುವ ಈ ಉರಗಕ್ಕೆ ಎದೆಮೂಳೆಗಳಿಲ್ಲ. ಬೆನ್ನು ಮೂಳೆ ಹಾಗು ಪಕ್ಕೆಲುಬುಗಳಿವೆ. ಎದೆ ಮೂಳೆ ಇಲ್ಲದ ಕಾರಣ ಪಕ್ಕೆಲುಬು ಸಡಿಲವಾಗಿದೆ. ತಲೆ ಬುರುಡೆ ಮೂಳೆಗಳು ಅಳ್ಳಕವಾಗಿದೆ. ಹಾಗಾಗಿ ಅವು ತಲೆಯನ್ನು ಸುಲಭವಾಗಿ ಆಡಿಸಬಹುದು. ಹಾವಿನ ಮಿದುಳಿನ ರಚನೆ ಸರಳವಾಗಿದ್ದು ಇನ್ನಿತರ ಸರೀಸೃಪಗಳ ಮಿದುಳನ್ನೆ ಹೋಲುತ್ತದೆ. ಹಾವಿಗೆ ವಿವೇಚನೆಯಾಗಲೀ ಸ್ಮರಣಶಕ್ತಿಯಾಗಲೀ ಇಲ್ಲ. ‘ಹಾವಿನ ದ್ವೇಷ ಹನ್ನೆರಡು ವರ್ಷ’ ಎಂಬ ನುಡಿ ಸತ್ಯವಲ್ಲ. ಹಾವು ಘಟನೆಗಳನ್ನು ನೆನಪಿನಲ್ಲಿಟ್ಟು ಕೊಳ್ಳಲಾಗುವುದಿಲ್ಲ. ಹಾವುಗಳ ಆಯಸ್ಸು 20 ರಿಂದ 30 ವರ್ಷಗಳೆಂದು ಅಂದಾಜು.
ಹಾವುಗಳ ಬಣ್ಣ ವರ್ಣರಂಜಿತ ಮತ್ತು ವೈವಿಧ್ಯಮಯ. ಮೇಲ್ಭಾಗದಲ್ಲಿ ಕಪ್ಪು,ಕಂದು,ಹಳದಿ ಅಥವಾ ಗೋಧಿ ಬಣ್ಣ, ಕೆಳಭಾಗದಲ್ಲಿ ಬಿಳಿ ಇಲ್ಲವೆ ತಿಳಿಹಳದಿ ಬಣ್ಣ. ಕೆಲ ಹಾವುಗಳು ಬಣ್ಣ ಅವು ವಾಸಿಸುವ ಪರಿಸರದ ಬಣ್ಣವನ್ನೇ ಹೋಲುತ್ತದೆ.
ಹಾವಿನ ಹುಟ್ಟು
ಹಾವುಗಳ ಪಳೆಯುಳಿಕೆಗಳು ದೊರೆಯುವುದು ಅಪರೂಪ. ದೊರತ ಪಳೆಯುಳಿಕೆಗಳಲ್ಲಿ ಅತ್ಯಂತ ಹಳೆಯದು ಎಂದರೆ ಸುಮಾರು 112 ರಿಂದ 94 ಮಿಲಿಯನ್ ವರ್ಷಗಳಷ್ಟು ಪ್ರಾಚೀನವಾದುದು. ಶರೀರಶಾಸ್ತ್ರದ ಅಧ್ಯಯನದಿಂದ ಹಾವುಗಳು ಹಲ್ಲಿಗಳ ಜಾತಿಯಿಂದ ಉಗಮವಾಗಿರುತ್ತವೆ ಎಂದು ತಿಳಿದು ಬಂದಿದೆ.
ಉದ್ದ ಮತ್ತು ತೂಕ
ಸುಮಾರು 20 ಕುಟುಂಬಕ್ಕೆ ಸೇರಿದ 3600ಕ್ಕೂ ಹೆಚ್ಚು ಜಾತಿಯ ಹಾವುಗಳು ಪ್ರಪಂಚದಾದ್ಯಂತ ಕಾಣಸಿಗುತ್ತವೆ. ಅಂಟಾರ್ಟಿಕವನ್ನು ಹೊರತುಪಡಿಸಿ ಉಳಿದ ಎಲ್ಲಾ ಖಂಡಗಳಲ್ಲಿಯೂ ಸಮುದ್ರ ಹಾಗೂ ಸುಮಾರು 16000ಅಡಿ ಎತ್ತರದಲ್ಲಿ ಹಿಮಾಲಯ ಪರ್ವತ ಶ್ರೇಣಿಯಲ್ಲಿ ಕೂಡಾ ಹಾವುಗಳು ಕಾಣಸಿಗುತ್ತವೆ. ಹಾವಿನ ಶರೀರ ಉರುಳೆ ಆಕಾರದಲ್ಲಿದೆ. ಉದ್ದ 12ಸೆಂಮೀ-10ಮೀ ವರೆಗೂ ಇರುವುದು. ಅದರೆ ಪಳೆಯುಳಿಕೆ ಸಿಕ್ಕಿರುವ ಪ್ರಕಾರ species Titanoboa cerrejonenis ಎಂಬುದು 12.8ಮೀ [42feet] ಉದ್ದ ಇತ್ತು.
ಶರೀರ ರಚನೆ ಮತ್ತು ಪೊರೆ ಕಳುಚುವಿಕೆ
ಹಾವಿನ ಶರೀರದ ಹೊರಭಾಗದಲ್ಲಿ ಕೈ ಕಾಲುಗಳು ಇಲ್ಲದಿರುವ ಕಾರಣ ಅವು ತಮ್ಮ ಕೆಳಭಾಗದಿಂದ ತೆವಳುತ್ತ ಮುಂದೆ ಸಾಗುತ್ತದೆ. ಕೈ ಕಾಲುಗಳಿಲ್ಲದಿದ್ದರೂ ಬೆನ್ನುಮೂಳೆ, ಪಕ್ಕೆಲುಬುಗಳು ವಿಭಿನ್ನವಾಗಿ ಮಾರ್ಪಾಡಾಗಿರುವುದರಿಂದ, ಶರೀರದ ಮುಂದಿನ ಅರ್ಧಭಾಗವನ್ನು ನೆಲದಿಂದ ಮೇಲಕ್ಕೆ ಎತ್ತಬಲ್ಲವು.ಬೆಳೆವಣಿಗೆಯಿಲ್ಲದ ಹೊರಚರ್ಮದ ಭಾಗವನ್ನು ಆಗಾಗ್ಗೆ ಹಾವು ಕಳಚಿ ಹೊಸ ಚರ್ಮವನ್ನು ಪಡೆಯುತ್ತದೆ. ಇದನ್ನು ಪೊರೆ ಕಳಚುವುದು ಎನ್ನುತ್ತಾರೆ. ಹಾವು ಬೆಳೆಯುವ ವರ್ಷಗಳಲ್ಲಿ ಹೆಚ್ಚು ಬಾರಿಯೂ, ವೃದ್ದ್ಯಾಪಕ್ಕೆ ಕಾಲಿರುಸುತ್ತಿದ್ದಂತೆ ಕಡಿಮೆ ಬಾರಿ ಪೊರೆ ಕಳಚುತ್ತದೆ. ಪೊರೆ ಕಳಚಿದ ಬಳಿಕ ಹೊಸ ಚರ್ಮ ಹಳೆ ಚರ್ಮಕ್ಕಿಂತ ಸ್ವಲ್ಪ ವಿಸ್ತಾರವಿರುವುದರಿಂದ ಮತ್ತೆ ಶರೀರದ ಒಳಭಾಗದ ಅಂಗಗಳು ಬೆಳೆಯಲು ಅವಕಾಶವಾಗುತ್ತದೆ.
ದೃಷ್ಟಿ ಮತ್ತು ಶಬ್ಧ ಗ್ರಹಿಸುವಿಕೆ
ಹಾವಿನ ರೆಪ್ಪೆಗಳು ಒಂದಕ್ಕೊಂದು ಕೂಡಿಕೊಂಡಿರುತ್ತವೆ. ಅವು ಅಲುಗಾಡುವುದಿಲ್ಲ. ಕಣ್ಣಿನ ಹೊರಭಾಗದಲ್ಲಿ ಪಾರದರ್ಶಕ ತೊಪ್ಪಿಯಂತಿರುವ ವಸ್ತು ಆವರಿಸಿರುತ್ತದೆ. ಅದರಿಂದ ಅವು ಯಾವಾಗಲೂ ಕಣ್ಣು ತೆರೆದಿರುವಂತೆ ಕಾಣಿಸುತ್ತದೆ. ಹೀಗಾಗಿ ಹಾವು ನಿದ್ರಿಸುತ್ತಿದೆಯೋ ಅಥವಾ ಎಚ್ಚರದಿಂದ ಇದೆಯೋ ಎಂದು ತಿಳಿಯುವುದಿಲ್ಲ. ಹಾವುಗಳ ದೃಷ್ಟಿ ಮಂದ. ಮುಂದೆ ಇರುವ ವಸ್ತುಗಳನ್ನು ಸರಿಯಾಗಿ ಗುರುತಿಸಲಾರವು ಮತ್ತು ಬಣ್ಣಗಳು ಕಾಣುವುದಿಲ್ಲ.ಹಾವುಗಳಿಗೆ ಹೊರ ಕಿವಿಗಳಿಲ್ಲ, ಕಿವಿ ತಮಟೆಯೂ ಇಲ್ಲ. ಅವುಗಳಿಗೆ ಕೇವಲ ಒಳಕಿವಿ ಮಾತ್ರ ಇರುತ್ತದೆ. ಆದ್ದರಿಂದ ಹಾವುಗಳಿಗೆ ಗಾಳಿಯ ಮೂಲಕ ಪ್ರಸಾರವಾಗುವ ಯಾವ ಶಬ್ದವೂ ಕೇಳಿಸಲಾರದು. ಅವಕ್ಕೆ ಭೂಮಿಯ ಮೇಲುಂಟಾಗುವ ಕಂಪನಗಳನ್ನು ಅವು ಗ್ರಹಿಸಬಲ್ಲವು.
ನಾಲಿಗೆ ಮತ್ತು ಆಹಾರನ್ವೇಷಣೆ
ಹಾವಿನ ನಾಲಿಗೆ ಉದ್ದವಿದ್ದು ಮುಂಭಾಗದಲ್ಲಿ ಸೀಳುಗಳಿವೆ. ಮೇಲಿನ ತುಟಿ ಪುಟ್ಟ ಕಮಾನಿನಾಕಾರದಲ್ಲಿದ್ದು ಬಾಯಿ ಮುಚ್ಚಿಕೊಂಡಾಗ ಚಿಕ್ಕ ರಂಧ್ರವೇರ್ಪಡುತ್ತದೆ. ಈ ರಂಧ್ರದ ಮೂಲಕ ಹಾವು ಆಗಾಗ ನಾಲಿಗೆಯನ್ನು ಹೊರಚಾಚುತ್ತಿರುತ್ತದೆ. ಎರಡು ಸೀಳುಗಳು ಪ್ರತ್ಯೇಕವಾಗಿರುವಂತೆ ಕಾಣುವುದರಿಂದ ಹಾವಿಗೆ ಎರಡು ನಾಲಿಗೆಗಳಿವೆ ಎಂದು ತಪ್ಪಾಗಿ ಭಾವಿಸಲಾಗುತ್ತದೆ ಈ ನಾಲಿಗೆ ವಾಸನೆಯನ್ನು ಕಂಡುಹಿಡಿಯಲು ಬಳುಸುತ್ತವೆ. ಮೇಲ್ದವಡೆಯಲ್ಲಿ ಎರಡು ಪುಟ್ಟ ಕುಳಿಗಳಿವೆ. ಜಕೋಬ್ಸನ್ ಅಂಗ ಎಂದು ಅದರ ಹೆಸರು. ನಾಲಗೆಯು ಈ ಅಂಗಕ್ಕೆ ಗಾಳಿಯಲ್ಲಿರುವ ರಾಸಾಯಾನಿಕಗಳನ್ನು ತಲಪಿಸುತ್ತದೆ. ಆಗ ಇದು ವಾಸನೆಯನ್ನು ಗ್ರಹಿಸುತ್ತದೆ. ವಾತಾವರಣದಲ್ಲಿನ ಅನೇಕ ಏರಿಳಿತವನ್ನು ಕೂಡ ನಾಲಿಗೆ ಗ್ರಹಿಸಬಲ್ಲದು. ಕಾಳಿಂಗ ಸರ್ಪ 100ಮೀಟರ್ ದೂರದಲ್ಲಿ ಚಲಿಸುತ್ತಿರುವ ತನ್ನ ಬೇಟೆಯನ್ನು ಪತ್ತೆ ಹಚ್ಚುತ್ತದೆ. ಇಲಿ, ಹೆಗ್ಗಣಗಳಂಥ ಪುಟ್ಟ ಸಸ್ತನಿಗಳು, ಪಕ್ಷಿಗಳು, ಸರೀಸೃಪಗಳು, ಕಪ್ಪೆ, ಮೀನುಗಳು, ಕೀಟಗಳು ಇತ್ಯಾದಿ ಹಾವಿನ ಆಹಾರ. ಕೆಲವು ಹಾವುಗಳು ವಿವಿಧ ಪ್ರಾಣಿ, ಪಕ್ಷಿಗಳ ಮೊಟ್ಟೆಗಳನ್ನು ತಿನ್ನುತ್ತವೆ. ಸಸ್ಯಹಾರೀ ಹಾವು ಇಲ್ಲವೇ ಇಲ್ಲ.
ವಿಷಗ್ರಂಥಿ ಮತ್ತು ಹಲ್ಲುಗಳು
ವಿಷದ ಹಾವುಗಳ ತಲೆ ಎರಡೂ ಪಕ್ಕದಲ್ಲಿ ಒಂದೊಂದರಂತೆ ವಿಷ ಸ್ರವಿಸುವ ಒಂದು ಜೊತೆ ಗ್ರಂಥಿ ಇದೆ. ಹಾವಿನ ವಿಷದ ಗ್ರಂಥಿಗಳಂದರೆ ಮಾರ್ಪಾಡಾಗಿರುವ ಎಂಜಲು ಗ್ರಂಥಿಗಳು. ಕಣ್ಣಿನ ಕೆಳಭಾಗ ಹಾಗೂ ಮೇಲ್ದವಡೆಗಳ ನಡುಭಾಗದಲ್ಲಿ ಇವುಗಳ ನೆಲೆ. ಗ್ರಂಥಿಯ ಮುಂಭಾಗದಲ್ಲಿ ನಾಳವಿದ್ದು ಬಾಯಿಯ ಭಾಗದಲ್ಲಿ ವಿಷದ ಹಲ್ಲಿಗೆ ಜೋಡಿಕೊಂಡಿರುತ್ತದೆ. ವಿಷದ ಹಲ್ಲುಗಳಿಗಿಂತ ದೊಡ್ಡವು ಮತ್ತು ಚೂಪು. ಕೆಲವು ಹಾವುಗಳಲ್ಲಿ ವಿಷದ ಹಲ್ಲುಗಳು ಕೊಳವೆಯಂತಿರಬಹುದು, ಇನ್ನು ಕೆಲವು ಹಾವುಗಳಲ್ಲಿ ಒಂದು ಕಡೆ ತೆರೆದಿದ್ದು ಕಮಾನಿನಂತಿರಬಹುದು. ಆದ್ದರಿಂದ ಕೆಲವು ಪರಿಣಿತರು ಕಡಿತದ ಗಾಯ ನೋಡಿಯೇ ಕಚ್ಚಿದ ಹಾವಿನ ಪ್ರಭೇದ ಊಹಿಸಬಲ್ಲರು. ವಿಷರಹಿತ ಹಾವುಗಳಲ್ಲಿ ವಿಷಗ್ರಂಥಿಗಳ ಬೆಳೆವಣಿಗೆ ಅಪೂರ್ಣ ಅಥವಾ ಬೆಳೆವಣಿಗೆಯೇ ಇರುವುದಿಲ್ಲ. ಇನ್ನು ಕೆಲವು ಹಾವುಗಳಲ್ಲಿ ವಿಷದ ಹಲ್ಲುಗಳು ಮೇಲ್ದವಡೆಯ ಮುಂಭಾಗದಲ್ಲಿಯೇ ಇರುತ್ತದೆ. ವಿಷಗ್ರಂಥಿಯ ನಳ ಈ ಹಲ್ಲಿನ ಕೆಳಭಾಗದಲ್ಲಿ ಜೋಡಿಕೊಂಡಿರುತ್ತದೆ. ಈ ಹಲ್ಲುಗಳನ್ನು ಕಿತ್ತರೆ, ಕೆಲವೇ ದಿನಗಳಲ್ಲಿ ಅವುಗಳ ಪಕ್ಕದ ಹಲ್ಲುಗಳೂ ವಿಷದ ಹಲ್ಲುಗಳಾಗಿ ಮಾರ್ಪಡುತ್ತವೆ.
ಭಾರತದಲ್ಲಿ ಎಷ್ಟು ವಿಷಪೂರಿತ ಹಾವುಗಳು..?
ನಮ್ಮ ದೇಶದಲ್ಲಿ 4 ಜಾತಿಯ ಹಾವುಗಳು ಮಾತ್ರ ವಿಷಪೂರಿತ. ಈ ಜಾತಿಯ ಹಾವು ಕಚ್ಚಿದರೆ ಮಾತ್ರ ಮನುಷ್ಯ ಸಾಯುತ್ತಾನೆ ಹೊರೆತು[ಅಗತ್ಯ ಚಿಕಿತ್ಸೆ ಕೊಡಿಸದಿದ್ದಾಗ] ಬೇರೆ ಎಲ್ಲಾ ಹಾವುಗಳು ವಿಷರಹಿತ.
ಈ 4 ಜಾತಿಯ ಹಾವುಗಳು ಯಾವುವುವೆಂದರೆ
1. King Cobra ಅಥವಾ ಕಾಳಿಂಗ
2. Cobra ಅಥವಾ ನಾಗರ ಹಾವು
3. Viper ಅಥವಾ ಕನ್ನಡಿ ಹಾವು ಅಥವಾ ಕೊಳಕು ಮಂಡಲ
4. Common krait ಅಥವಾ ಕಡಂಬಳ ಅಥವಾ ಕಟ್ಟು ಹಾವು
ಈ ವಿಷಪೂರಿತ ಹಾವುಗಳು ಕೂಡ ಯಾರಿಗೂ ಸುಮ್ಮನೆ ಸುಮ್ಮನೆ ಕಚ್ಚುವುದಿಲ್ಲ. ನಾವು ಅಚಾನಕ್ಕಾಗಿ ಅವುಗಳನ್ನು ತುಳಿದಾಗ ಅಥವಾ ಬೇಕೆಂದೇ ಹಿಂಸೆ ಮಾಡಿದಾಗ ಮಾತ್ರ ಅವುಗಳ ಪ್ರಾಣ ಉಳಿಸಿಕೊಳ್ಳಲು ಅವು ಕಚ್ಚುತ್ತವೆ. ಪ್ರಕೃತಿಯಲ್ಲಿ ವಿಷರಹಿತ ಹಾವುಗಳಿಗೂ, ವಿಷಪೂರಿತ ಹಾವುಗಳಿಗೂ ತಮ್ಮ ಪ್ರಾಣ ರಕ್ಷಣೆ ಮಾಡಿಕೊಳ್ಳಲು ಅವುಗಳದ್ದೇ ಆದ ಒಂದು ರಕ್ಷಣಾ ತಂತ್ರವು ಇರುತ್ತದೆ. ಯಾವಾಗ ತಮ್ಮ ಪ್ರಾಣಕ್ಕೆ ಸಂಚಕಾರ ಬಂದಿದೆ ಎಂದು ಅನ್ನಿಸಿದಾಗ ಮಾತ್ರ ಅವು ರಕ್ಷಣ ತಂತ್ರವನ್ನು ಬಳಸಿಕೊಳ್ಳುತ್ತವೆ.
ಹಾವುಗಳಿಂದ ಮನುಷ್ಯನಿಗೆ ಆಗುವ ಉಪಯೋಗಗಳು
ಹಾವುಗಳು ವಿಷಯುಕ್ತ ಪ್ರಾಣಿಗಳೆನೋ ನಿಜ ಜೊತೆಗೆ ಇದು ಮಾನವನಿಗೆ ಮಾತ್ರವಲ್ಲ ಬೇರೆ ಪ್ರಾಣಿಗಳಿಗೂ ಜೀವಹಾನಿಯಾಗುತ್ತದೆ. ಆದರೆ ಇದಿಷ್ಟೇ ಕಾರಣದಿಂದ ಹಾವುಗಳೆಲ್ಲವೂ ಹಾನಿಕಾರಕ ಎಂದು ಪರಿಗಣಿಸಬಾರದು. ವಿಷರಹಿತ ಹಾಗೂ ವಿಷಯುಕ್ತ ಹಾವು ಎಲ್ಲವುಗಳಿಂದಲೂ ನಮಗೆ ಸಾಕಷ್ಟು ಉಪಯೋಗಗಳಿವೆ.
1. ಪರಿಸರದ ಸಮತೋಲನ ಸಾಧಿಸುವಲ್ಲಿ ಹಾವುಗಳ ಪಾತ್ರ ತುಂಬಾನೇ ಮುಖ್ಯ. ಇಲಿ, ಹೆಗ್ಗಣ, ಕೀಟ, ಪಕ್ಷಿ ಮುಂತಾದವನ್ನು ಹಾವುಗಳು ಆಹಾರವಾಗಿ ಸೇವಿಸುವುದರಿಂದ ಇದು ನಮ್ಮ ದವಸ ಧಾನ್ಯಗಳಿಗೆ ಉಂಟಗುವ ಹಾನಿಯನ್ನು ಕಡಿಮೆಗೊಳಿಸುತ್ತವೆ ಅಲ್ಲದೆ, ಈ ಹಾವುಗಳೇ ಇತರೆ ಕೆಲವು ಜೀವಿಗಳಿಗೆ [ಉದಾ: ಕೆಲವು ಪಕ್ಷಿಗಳಿಗೆ] ಆಹಾರವಾಗುವುದರಿಂದ ನಿಸರ್ಗದ ಆಹಾರ ಸರಪಳಿಯಲ್ಲಿ ಒಂದು ಕೊಂಡಿಯೂ ಆಗಿದೆ.
2. ಹಾವಿನ ವಿಷದಲ್ಲಿ ಫಾಸ್ಫೊಡೈಯೆಸ್ಟಿರೇಸ್ ಎಂಬ ಕಿಣ್ವವಿದೆ. ಇದನ್ನು ಕೆಲವು ಸರಳ ರಾಸಾಯನಿಕ ಕ್ರಿಯೆಗಳಿಂದ ಬೇರ್ಪಡಿಸಬಹುದು. ಈ ಕಿಣ್ವ ಜೀವಿಗಳ ಅನುವಂಶೀಯತೆಗೆ ಕಾರಣವಾಗುವ ಜೈವಿಕ ವಸ್ತು ಡಿಎನ್ಎಯ ತಂತುಗಳನ್ನು ಬೇರ್ಪಡಿಸುತ್ತದೆ. ಇದನ್ನು ಬಳಸಿ ಡಿಎನ್ಎಯ ರಚನೆ ಹಾಗೂ ಕಾರ್ಯವಿಧಾನಗಳನ್ನು ಅರಿಯಲು ಸಾಧ್ಯವಾಗಿದೆ.
3. ನರಕೋಶಗಳನ್ನು ನಿಷ್ಕ್ರಿಯಗೊಳಿಸುವ ವಿಷವನ್ನು ಬಳಸಿ ಪಾರ್ಶ್ವವಾಯು ಅಥವಾ ನರಮಂಡಲ ಸಂಬಂಧೀ ರೋಗಗಳಿಗೆ ಔಷಧಿ ತಯಾರಿಸಲಾಗುತ್ತದೆ. ವೈಜ್ಞಾನಿಕವಾಗಿ ಈ ಪ್ರಯತ್ನ ಇನ್ನೂ ಸಫಲವಾಗಿಲ್ಲದಿದ್ದರೂ ಕೆಲವೂ ಸ್ಥಳೀಯ ವೈದ್ಯ ಪದ್ಧತಿಯಲ್ಲಿ ಈ ತಂತ್ರ ಬಳಕೆಯಲ್ಲಿದೆ.
4. ವಿಷದ ಘಟಕವಾದ ಆ್ಯಂಕ್ರೊಡ್ ಎಂಬ ವಸ್ತುವನ್ನು ಬೇರ್ಪಡಿಸಿ ಅದನ್ನು ನರರೋಗ ಚಿಕಿತ್ಸೆಗೆ ಬಳಸುವ ಪ್ರಯತ್ನವೂ ನಡೆಯುತ್ತಿದೆ. ಕ್ರೀಡಾಪಟುಗಳ ಕಾಲಿನ ಅಥವಾ ಶರೀರದ ಕೆಲವು ಮಾಂಸಖಂಡಗಳು ಆಟದ ಒತ್ತಡದಿಂದ ಕ್ರೀಯಾಹೀನವಾಗುತ್ತವೆ. ಆಫ್ರಿಕ ದೇಶದ ಕೆಲ ಹಾವುಗಳ ವಿಷದಿಂದ ಇಂಥ ರೋಗಗಳಿಗೆ ಚಿಕಿತ್ಸೆ ನಡೆಸಲಾಗುತ್ತದೆ.
5. ಹಾವಿನ ಚರ್ಮದಿಂದ ನಾವು ಧರಿಸುವ ಸೊಂಟದ ಪಟ್ಟಿ [ಬೆಲ್ಟ್] ಹಾಗೂ ಸ್ತ್ರಿಯರು ಬಳಸುವ ಚೀಲ [ವ್ಯಾನಿಟಿ ಬ್ಯಾಗ್] ಮುಂತಾದವನ್ನು ತಯಾರಿಸುತ್ತಾರೆ.
6. ಆಫ್ರಿಕ, ಚೀನಾದಂಥ ರಾಷ್ಟ್ರಗಳಲ್ಲಿ ಕೆಲವು ಪ್ರಭೇದದ ಹಾವುಗಳ ಮಾಂಸವನ್ನು ತಿನ್ನುತ್ತಾರೆ.
7. ಕಡಲ ಹಾವಿನ ವಿಷದ ನಂಜು ನರಗಳ ಮೇಲೆ ಪರಿಣಾಮಕಾರಿಯಾಗಿದೆ. ಮುಂಬೈಯ ಹಾಫ್ಕಿನ್ ಇನ್ಸ್ಟಿಟ್ಯೂಟಿನಲ್ಲಿ ಇದರ ನಂಜನ್ನು ಶಮನಗೊಳಿಸುವ ಆಂಟಿವೆನೊಮ್ ಅಥವಾ ಪ್ರತಿವಿಷವನ್ನು ಅಭಿವೃಧ್ಧಿಪಡಿಸಲಾಗುತ್ತಿದೆ.
ಹಾವುಗಳನ್ನು ರಕ್ಷಿಸಿ
ನಾವು ನಮ್ಮ ಜಾಗ್ರತೆಯಲ್ಲಿದ್ದರೆ ಹಾವುಗಳಿಂದ ಕಡಿತಕ್ಕೊಳಗಾಗುವ ಸಂದರ್ಭವೇ ಬರುವುದಿಲ್ಲ. ಅಕಸ್ಮಾತ್ ಹಾವುಗಳು ದಾರಿ ತಪ್ಪಿ ನಿಮ್ಮ ಮನೆಯ ಸುತ್ತ ಮುತ್ತ ಕಾಣಿಸಿಕೊಂಡರೆ ನೀವು ಹೆದರಿ ಹಿಂಸೆ ಮಾಡದೆ ಉರಗ ರಕ್ಷಕರನ್ನು ಸಂಪರ್ಕಿಸಿ ಅವುಗಳನ್ನು ಸುರಕ್ಷಿತ ಪ್ರದೇಶಕ್ಕೆ ಬಿಡಿಸಿ. ಜೊತೆಗೆ ಆಹಾರ ಸರಪಳಿಯ ಒಂದು ಕೊಂಡಿಯಾದ ಕಾರಣಕ್ಕಾಗಿ ಹಾವುಗಳು ಅಳಿವಿನಂಚಿಗೆ ಬಂದು ನಿಂತಿದೆ. ಹಲವಾರು ಪ್ರಭೇದದ ಹಾವುಗಳನ್ನು ಕಳೆದ ನೂರು ವರ್ಷಗಳಿಂದ ಜೀವಂತವಾಗಿ ಯಾರೂ ಕಂಡಿಲ್ಲ. ಇವನ್ನು ಉಳಿಸಲು ಇವುಗಳ ಆವಾಸ ಸ್ಥಾನವಾದ ಕಾಡುಗಳನ್ನು ಉಳಿಸುವುದು ಅತಿ ಮುಖ್ಯ. ಜೊತೆಗೆ ಹಾವುಗಳ ಬಗ್ಗೆ ಜನರಲ್ಲಿ ಇರುವ ಮೂಢನಂಬಿಕೆಗಳನ್ನು ತೊಲಗಿಸಿ ಪರಿಸರದ ಬಗ್ಗೆ ಜಾಗೃತಿ ಮೂಡಿಸುವುದರ ಮೂಲಕ ಹಾವುಗಳನ್ನು ಉಳಿಸಬೇಕಾಗಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9986715401

ಅಂತರಂಗ
250ಕ್ಕೂ ಹೆಚ್ಚು ಗಿಳಿಗಳ ನಿಗೂಢ ಸಾವು ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ ಆತಂಕ
250ಕ್ಕೂ ಹೆಚ್ಚು ಗಿಳಿಗಳ ನಿಗೂಢ ಸಾವು
ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ ಆತಂಕ
ಬೆಂಗಳೂರು: ಮಧ್ಯಪ್ರದೇಶ ರಾಜ್ಯದ ಖಾರ್ಗೋನ್ ಜಿಲ್ಲೆಯಲ್ಲಿರುವ ನರ್ಮದಾ ನದಿ ತೀರದಲ್ಲಿ 250ಕ್ಕೂ ಹೆಚ್ಚು ಗಿಳಿಗಳು ಕೃಷಿ ಭೂಮಿಯಲ್ಲಿ ಬಳಸುವ ಕೀಟನಾಶಕ ಮಿಶ್ರಿತ ಆಹಾರ ಅಥವಾ ನರ್ಮದಾ ನದಿಯ ಕಲುಷಿತ ನೀರು ಸೇವಿಸಿ ಸಾವನ್ನಪ್ಪಿರುವ ಪ್ರಕರಣ ಇಡೀ ದೇಶದಲ್ಲಿ ಇದೇ ಮೊದಲ ಬಾರಿಗೆ ನಡೆದ ದುರ್ಘಟನೆ ಎಂದು ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷರೂ ಹಾಗೂ ರಾಷ್ಟ್ರೀಯ ಸಮಿತಿ ನಿರ್ದೇಶಕರಾದ ಮಾಲತೇಶ್ ಅರಸ್ ಹರ್ತಿಕೋಟೆ ಆತಂಕ ವ್ಯಕ್ತಪಡಿಸಿದ್ದಾರೆ.
ಕಳೆದ ಮೂರು ದಿನಗಳಲ್ಲಿ ನರ್ಮದಾ ನದಿ ತೀರದಲ್ಲಿ ಸುಮಾರು ಇನ್ನೂರಕ್ಕೂ ಅಧಿಕ ಗಿಳಿಗಳು ನಿಗೂಢವಾಗಿ ಸಾವನ್ನಪ್ಪಿದ್ದು ಆರಂಭದಲ್ಲಿ ಇದು ಹಕ್ಕಿ ಜ್ವರ ದಿಂದ ಸಾವನ್ನಪ್ಪಿರಬಹುದು ಎಂದು ಶಂಕಿಸಲಾಗಿತ್ತು ಆದರೆ ಪಶುವೈದ್ಯಕೀಯ ಅಧಿಕಾರಿ ಡಾ. ಸುರೇಶ್ ಬಫೇಲ್ ಅವರು ನೀಡಿದ ಮಾಹಿತಿ ಪ್ರಕಾರ ಹಕ್ಕಿಗಳ ಹೊಟ್ಟೆಯಲ್ಲಿ ಅಕ್ಕಿ ಕಾಳುಗಳು ಮತ್ತು ಸಣ್ಣ ಕಲ್ಲುಗಳು ಪತ್ತೆಯಾಗಿವೆ. ಅಲ್ಲದೆ ಕೃಷಿ ಭೂಮಿಯಲ್ಲಿ ಬಳಸುವ ಕೀಟನಾಶಕ ಮಿಶ್ರಿತ ಆಹಾರ ಅಥವಾ ನರ್ಮದಾ ನದಿಯ ಕಲುಷಿತ ನೀರು ಸೇವಿಸಿ 200 ರಿಂದ 50 ಕ್ಕೂ ಅಧಿಕ ಮೃತಪಟ್ಟಿರುವ ಸಾಧ್ಯತೆಗಳು ಹೆಚ್ಚಿವೆ ಎಂದು ಹೇಳಿದ್ದು ಇವರ ಮಾಹಿತಿಯನ್ನು ಆದರಿಸಿ ವಿಶೇಷ ತನಿಖೆ ಮಾಡಬೇಕು ಎಂದು ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ ಆಗ್ರಹಿಸಿದೆ.
ಖರ್ಗೋನ್ ಜಿಲ್ಲೆಯ ಬದ್ವಾ ಪ್ರದೇಶದ ನರ್ಮದಾ ನದಿ ತೀರದಲ್ಲಿರುವ ಅಕ್ವೆಡಕ್ಟ್ ಸೇತುವೆಯ ಸಮೀಪ ಈ ಘಟನೆ ಬೆಳಕಿಗೆ ಬಂದಿದ್ದು ಅರಣ್ಯ ಇಲಾಖೆಯು ಸೇತುವೆಯ ಸುತ್ತಮುತ್ತ ಹಕ್ಕಿಗಳಿಗೆ ಆಹಾರ ನೀಡುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಿದೆ. ಸದ್ಯ ಹಕ್ಕಿಗಳ ಸಾವಿಗೆ ನಿಖರ ಕರಣ ತಿಳಿಯಲು ಹಕ್ಕಿಗಳ ಅವಶೇಷಗಳನ್ನು ಜಬಲ್ಪುರಕ್ಕೆ ಕಳುಹಿಸಲಾಗಿದೆ. ಸದ್ಯ ಅರಣ್ಯ ಇಲಾಖೆ ಮತ್ತು ಪಶುವೈದ್ಯಕೀಯ ತಂಡಗಳು ಸ್ಥಳದಲ್ಲೇ ಬೀಡುಬಿಟ್ಟಿದ್ದು, ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿವೆ.
ಇನ್ನೊಂದು ಮುಖ್ಯ ವಿಚಾರ ಏನೆಂದರೆ ಪಕ್ಷಿಗಳಿಗೆ ಮನುಷ್ಯರು ಸೇವಿಸುವ ಎಣ್ಣೆ ಪದಾರ್ಥ ಅಥವಾ ಬೇಯಿಸಿದ ಆಹಾರ ನೀಡುವುದು ಅವುಗಳ ಜೀರ್ಣಾಂಗ ವ್ಯವಸ್ಥೆಯ ಮೇಲೆ ಮಾರಕ ಪರಿಣಾಮ ಬೀರುತ್ತದೆ ಎಂದು ಪಶುವೈದ್ಯಕೀಯ ಅಧಿಕಾರಿ ಡಾ. ಮನಿಷಾ ಚೌಹಾಣ್ ಹೇಳಿದ್ದಾರೆ. ಏನೇ ಆದರೂ ನೂರಾರು ಗಿಳಿಗಳು ಸಾವನ್ನಪಿರುವುದು ಮಾತ್ರ ದುರಂತ.
ಈ ಸಂದರ್ಭದಲ್ಲಿ ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷರೂ ಹಾಗೂ ರಾಷ್ಟ್ರೀಯ ಸಮಿತಿ ನಿರ್ದೇಶಕರಾದ ಮಾಲತೇಶ್ ಅರಸ್ ಹರ್ತಿಕೋಟೆ, ಹಿರಿಯ ಉಪಾಧ್ಯಕ್ಷರಾದ ಗುರುರಾಜ್ ಹೂಗಾರ್, ಉಪಾಧ್ಯಕ್ಷರಾದ ಯೋಗೀಶ್ ಕುಮಾರ್, ರುದ್ರಮುನಿ, ಡಾ.ಸಿದ್ದಲಿಂಗಪ್ಪ, ಮತ್ತು ಪದಾಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

ಅಂಕಣ
Indian birthwort: ಪರಮಾತ್ಮನ ಹೆಸರಲ್ಲೇ ಇರುವ ದಿವ್ಯೌಷದ ಈಶ್ವರ ಬಳ್ಳಿ ಬಗ್ಗೆ ಗೊತ್ತೇ?
‘ಈಶ್ವರ’ ಎಂದ ಕೂಡಲೇ ಪರಮಾತ್ಮನನ್ನೆ ನೆನಪಿಸಿಕೊಳ್ಳೋ ನಮಗೆ ಅದೇ ಹೆಸರಿನಲ್ಲಿ ದಿವ್ಯೌಷಧಿ ಇದೆ ಎಂಬುದು ಎಷ್ಟು ಜನರಿಗೆ ತಿಳಿದೀತು? ಹೌದು! ಪರಮಾತ್ಮನ ಹೆಸರಿನಲ್ಲೇ ಒಂದು ಗಿಡಮೂಲಿಕೆ ಇದೆ (Indian birthwort). ಇದರ ವಿಶೇಷತೆ ಏನು? ಅದರಿಂದಾಗುವ ಪ್ರಯೋಜನಗಳೇನು? ಆರೋಗ್ಯದ ಮೇಲೆ ಬೀರುವ ಪ್ರಬಾವಗಳೇನು? ಎಂಬುದನ್ನು ಈ ಲೇಖನದಲ್ಲಿ ತಿಳಿಯೋಣ.
ಈ ಬಳ್ಳಿಯನ್ನು ಹೆಚ್ಚಾಗಿ ಭಾರತ, ನೇಪಾಳ, ಶ್ರೀಲಂಕಾ ಮತ್ತು ಬಾಂಗ್ಲಾದೇಶಗಳಲ್ಲಿ ಕಾಣಬಹುದಾಗಿದೆ. ಇದರ ವೈಜ್ಞಾನಿಕ ಹೆಸರು ಅರಿಸ್ಟೋಲೋಚಿಯ ಇಂಡಿಕಾ. ಸಾಮಾನ್ಯವಾಗಿ ಮೂಲಿಕೆ ಮರಕ್ಕೆ ಸುತ್ತಿಕೊಂಡು ಬೆಳೆಯುವ ಕಪ್ಪು ಬಳ್ಳಿಯಾಗಿದ್ದು, ಇದರ ಎಲೆಗಳು ಉದ್ದವಾಗಿ, ತಳದಲ್ಲಿ ಅಗಲವಾಗಿ, ತುದಿಯಲ್ಲಿ ಮೊನಚಾಗಿ, ಮೃದುವಾಗಿರುತ್ತದೆ. ಇನ್ನೂ ಇದರ ಬೀಜಗಳು ಚಪ್ಪಟೆಯಾಗಿ, ಅಂಡಕಾರವಾಗಿದ್ದು ಪುಕ್ಕಗಳನ್ನು ಹೊಂದಿದೆ ಹಾಗು ಇದರ ಬೇರುಗಳಲ್ಲಿ ಸುಗಂಧ ತೈಲವಿರುತ್ತದೆ.
ಈಶ್ವರ ಬಳ್ಳಿ (Indian birthwort)ಯ ಪೌರಾಣಿಕ ಹಿನ್ನೆಲೆ:
ನಮ್ಮೆಲ್ಲರಿಗೂ ತಿಳಿದಂತೆ ಶಿವ ಸಮುದ್ರ ಮಂಥನ ಮಾಡುವಾಗ ಹಾಲಾಹಲ (ವಿಷ) ಉತ್ಪತ್ತಿಯಾಯಿತು. ಆ ವಿಷ ಯಾರಿಗೂ ತೊಂದರೆಯಾಗಬಾರದೆಂದು ತಾನೇ ಅದನ್ನು ಕುಡಿದ. ಇದನ್ನು ನೋಡಿದ ಪಾರ್ವತಿ ದೇವಿ ಆ ವಿಷ ತನ್ನ ಪತಿಯ ಹೊಟ್ಟೆ ಸೇರಬಾರದೆಂದು ಆತನ ಕುತ್ತಿಗೆಯನ್ನು ಒತ್ತಿ ಹಿಡಿದಳು. ವಿಷ ಒಳ ಹೋಗಲಿಲ್ಲ. ವಿಷದ ಪ್ರಭಾವದಿಂದ ಕುತ್ತಿಗೆ ನೀಲ ವರ್ಣವಾಯಿತು. ಶಿವ ನೀಲಕಂಠನಾದ. ಶಿವ ವಿಷ ಕುಡಿದರೂ ಶಿವನಿಗೆ ಏನೂ ಆಗಲಿಲ್ಲ. ವಿಷವನ್ನು ನಿರ್ವಿಷ ಮಾಡುವ ಗುಣ ಶಿವನಿಗಿದ್ದಂತೆ ಈ ಗಿಡಕ್ಕೂ ಇರುವ ಕಾರಣ ‘ಈಶ್ವರ’ ಎಂಬ ಹೆಸರು ಈ ವನಸ್ಪತಿಗೆ ಇಟ್ಟಿದ್ದಾರೆ.
ಇದನ್ನೂ ಓದಿ: ಓಂಶಕ್ತಿ ಮಾಲಾಧಾರಿಗಳ ಮೇಲೆ ಕಲ್ಲು ತೂರಾಟ
‘ಈಶ್ವರ’ ಬಳ್ಳಿ ಮತ್ತು ಅದರ ಫಲ ನೋಡಲು ಹೇಗಿರುತ್ತದೆ?
ಕೆಲ ‘ಈಶ್ವರ’ ಬಳ್ಳಿಯು ಮರದಂತೆ ಉದ್ದಕ್ಕೆ ಏರುತ್ತದೆ. ಮತ್ತಷ್ಟು ಬಳ್ಳಿಯು ಪೊದೆಯಾಗಿ ಆವರಿಸಿಕೊಳ್ಳುತ್ತದೆ. ಸ್ವಲ್ಪ ಉದ್ದ ಆಯತಾಕಾರದ ಎಲೆಗಳು. ಎಲೆಗಳು ಅಲ್ಲಾಡಿದರೆ ಪರಿಮಳ ಸೂಸುತ್ತದೆ. ಎಲೆಯನ್ನು ಕಿವಿಚಿದರೂ ಪರಿಮಳ ಬರುತ್ತದೆ. ಹೂಗಳು ಬಾಯಿ ತೆರೆದ ಹಕ್ಕಿಗಳಂತೆ ಕಂಡುಬರುತ್ತದೆ. ಫಲಗಳು ಉದ್ದ ಹಾಗೂ ಸ್ವಲ್ಪ ದುಂಡಾಗಿ ಇರುತ್ತದೆ. ಫಲ ಬೆಳೆದು ಒಡೆದಾಗ ತಲೆ ಕೆಳಗಾಗಿ ಬಿಡಿಸಿದ ಪ್ಯಾರಾಚೂಟ್ನಂತೆ ಕಾಣುತ್ತದೆ. ಅದರೊಳಗೆ ತೆಳುವಾದ ತ್ರಿಕೋಣಾಕಾರದ ಬೀಜಗಳು ಇರುತ್ತದೆ.
‘ಈಶ್ವರ’ ಬಳ್ಳಿ (Indian birthwort)ಯಿಂದ ಆಗುವ ಪ್ರಯೋಜನಗಳೇನು?
ಭಾರತದ ಎಲ್ಲಾ ಕಡೆ ಕಂಡು ಬರುವ ಈಶ್ವರ ಬಳ್ಳಿಯ ಬೇರು, ಎಲೆಗಳು ಔಷಧಿಗಾಗಿ ಉಪಯೋಗಿಸಲ್ಪಡುತ್ತದೆ. ಕ್ರಿಮಿ ಬಾಧೆ, ಕಫ ಬಾಧೆ, ಸ್ತ್ರೀಯರ ಕೆಲವು ತೊಂದರೆಗಳಲ್ಲಿ, ವಿಷ ಚಿಕಿತ್ಸೆಯಲ್ಲಿ ವಿಶೇಷವಾಗಿ ಇದನ್ನು ಉಪಯೋಗಿಸಲ್ಪಡುತ್ತದೆ.
ಜೇಡ, ಚೇಳು, ಇಲಿ ಕಚ್ಚಿದರೆ: ಇದರ 3ಗ್ರಾಂ ಬೇರನ್ನು ಅಕ್ಕಿ ತೊಳೆದ ನೀರಲ್ಲಿ ಕಲಸಿ ಕುಡಿಸಬೇಕು ಹಾಗೂ ಅದರ ಎಲೆಯನ್ನು ನೀರಲ್ಲಿ ಅರೆದು ಕಚ್ಚಿದಲ್ಲಿಗೆ ಲೇಪಿಸಬೇಕು.
ತಲೆ ನೋವಿಗೆ ರಾಮಬಾಣ: ಈಶ್ವರ ಬಳ್ಳಿಯ ಎಲೆಯಲ್ಲಿ 10 ಗ್ರಾಂ ರಸ ತೆಗೆದು, 3ಗ್ರಾಂ ಅರಿಶಿನ ಪುಡಿ ಸೇರಿಸಿ ಕುಡಿಯುವುದರಿಂದ ತಲೆನೋವು ಶೀಘ್ರವಾಗಿ ಕಡಿಮೆಯಾಗುತ್ತದೆ.
ಗಂಟುನೋವು, ಬಿಳಿ ಮಚ್ಚೆಗಳು: ಈ ಎಲೆಯನ್ನು ನೀರಲ್ಲಿ ಅರೆದು ಗಂಟುನೋವು ಅಥವಾ ಬಿಳಿ ಮಚ್ಚೆಗಳ ಮೇಲೆ ಹಚ್ಚುತ್ತ ಬಂದರೆ ಕ್ರಮೇಣ ವಾಸಿಯಾಗುತ್ತದೆ.
ಕೆಮ್ಮು ಕಫಕ್ಕೆ ಔಷಧಿ: ಇದರ ಎಲೆಯ ಜ್ಯೂಸ್ ತೆಗೆದು 15 ಎಂಎಲ್ ನಷ್ಟು ಕುಡಿಸುವುದರಿಂದ ಕಡಿಮೆಯಾಗುವುದು. ಕೆಲವೊಮ್ಮೆ ಈ ಎಲೆಯ ಜ್ಯೂಸ್ ಕುಡಿದ ಸ್ವಲ್ಪ ಹೊತ್ತಿನಲ್ಲಿ ಕಫ ವಾಂತಿಯಾಗಿ ಕರಗಿ ಹೋಗುತ್ತದೆ. ಕಫ ಜಾಸ್ತಿ ಇರುವಾಗ ಸಾಮಾನ್ಯವಾಗಿ ಅಮೃತಾಂಜನ, ವಿಕ್ಸ್ ಎದೆಗೆ ಹಚ್ಚುತ್ತಾರೆ. ಅದೇ ರೀತಿ ಎಲೆಯನ್ನು ಅರೆದು ಎದೆಗೆ ಹಚ್ಚಬಹುದು.
ಮುಟ್ಟಿನ ದೋಷ ನಿವಾರಣೆ: ಹೆಣ್ಣುಮಕ್ಕಳ ಋತುಚಕ್ರದ ವೇಳೆ ಕಾಣಿಸಿಕೊಳ್ಳುವ ಹೊಟ್ಟೆನೋವಿಗೆ 10ಗ್ರಾಂ ಈಶ್ವರ ಬೇರಿನ ಕಷಾಯ ಮಾಡಿ (30 ರಿಂದ 40 ಎಂ.ಎಲ್) ಕುಡಿಸಬೇಕು.
ಹೊಟ್ಟೆ ಕ್ರಿಮಿ ಬಾಧೆ: 5-10 ಮಿಲಿ ಎಲೆರಸವನ್ನು 3 ದಿನ ಕುಡಿಯುವುದರಿಂದ ಕಡಿಮೆಯಾಗುವುದು.
ಜ್ವರಕ್ಕೆ ದಿವ್ಯೌಷಧಿ: 5 ಗ್ರಾಂ ಈಶ್ವರ ಬೇರನ್ನು ಕಷಾಯ ಮಾಡಿ ಅದಕ್ಕೆ 1/2 ಚಮಚ ಕಾಳು ಮೆಣಸು ಪುಡಿ ಸೇರಿಸಿ ಕುಡಿಯುವುದರಿಂದ ಕಡಿಮೆಯಾಗುವುದು. ಶರೀರ ಬಿಸಿ ಆಗಿ ಚಳಿಯಿಂದ ಕೂಡಿದ ಜ್ವರವಿದ್ದರೆ ಈಶ್ವರ ಬೇರಿನ ಕಷಾಯದೊಂದಿಗೆ ಈಶ್ವರ ಬೇರಿನ ಎಲೆ ರಸಕ್ಕೆ ಹಿಪ್ಪಿಯನ್ನು ಪುಡಿಮಾಡಿ ಸೇರಿಸಿ ಕುಡಿಯುವುದರಿಂದ ಕಡಿಮೆಯಾಗುವುದು.
ಸರ್ಪ ಸುತ್ತಿಗೆ ರಾಮಬಾಣ: ಇತ್ತೀಚೆಗೆ ಸರ್ಪ ಸುತ್ತಿಗೆ ಅನೇಕ ಔಷಧಿಗಳಿದ್ದರು ಈಶ್ವರ ಬೇರು ಮತ್ತು ನೀಲಿ ಸೊಪ್ಪನ್ನು ಸೇರಿಸಿ ಅರೆದು ಹಚ್ಚುವುದರಿಂದ ಉರಿ ನೋವು ಕಡಿಮೆಯಾಗುವುದು.
ದೃಷ್ಟಿ ದೋಷ ನಿವಾರಣೆ: ಇದರ ಬೇರನ್ನು ನಯವಾಗಿ ಚೂರ್ಣಮಾಡಿ ಅದಕ್ಕೆ ಅಪ್ಪಟ ಗೋರೋಜನ ಮತ್ತು ಚಂದನ ಸೇರಿಸಿ ತಿಲಕವಿಟ್ಟರೆ ದೃಷ್ಟಿ ದೋಷ ಪರಿಹಾರವಾಗುತ್ತದೆ.
ಮಲಬದ್ಧತೆ ಮತ್ತು ಮೂಲವ್ಯಾಧಿ ನಿವಾರಣೆ: ಈಶ್ವರಿಬೇರು, ಹಾವು ಮೆಕ್ಕೆ ಬೇರು ದಂತಿ, ತಿಗಡೆ ಕೊಮ್ಮೆ ಬೇರು, ಅಳಲೆಕಾಯಿ ಸಿಪ್ಪೆ, ಹಿಪ್ಪಲಿ ಇವುಗಳೆಲ್ಲವನ್ನು ಸಮತೂಕದಲ್ಲಿ ನಯವಾಗಿ ಚೂರ್ಣಿಸಬೇಕು. ನಂತರ 2 ರಿಂದ 2.5 ಗ್ರಾಂ ಚೂರ್ಣವನ್ನು ಸೇವಿಸಿ ಬಿಸಿನೀರು ಕುಡಿದರೆ ಮಲಬದ್ಧತೆ ಮತ್ತು ಮೂಲವ್ಯಾದಿ ನಿವಾರಣೆಯಾಗುತ್ತದೆ.
ಹೀಗೆ ಈಶ್ವರ ಬೇರು (Indian birthwort) ಮತ್ತು ಅದರ ಎಲೆಯಲ್ಲಿ ಅಡಗಿರುವ ದಿವ್ಯೌಷಧಿ ಅಪಾರ. ಅದರಲ್ಲಿ ತೀಕ್ಷ ಗುಣಗಳುಳ್ಳ ಮದ್ದಾಗಿದ್ದು, ಅನೇಕ ಕಾಯಿಲೆಗಳಿಗೆ ರಾಮಬಾಣವಾಗಿದೆ. ಯಾವುದೇ ಔಷಧಿಯಾದರು ಉಪಯೋಗಿಸು ಮುನ್ನ ಒಮ್ಮೆ ತಜ್ಞ ವೈದ್ಯರ ಸಲಹೆ ಪಡೆಯುವುದು ಸೂಕ್ತ.

ದಿನದ ಸುದ್ದಿ
ಗೃಹಬಳಕೆ ಎಲ್ಪಿಜಿ ಸಿಲೆಂಡರ್ ಬೆಲೆಯಲ್ಲಿ ಬದಲಾವಣೆ ಇಲ್ಲ
ಸುದ್ದಿದಿನಡೆಸ್ಕ್:ಗೃಹಬಳಕೆಯ ಎಲ್ಪಿಜಿ ಸಿಲೆಂಡರ್ ಬೆಲೆಯಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ಸ್ಪಷ್ಟಪಡಿಸಿದೆ.
ಗೃಹ ಬಳಕೆ ಎಲ್ಪಿಜಿ ಸಿಲೆಂಡರ್ ಬೆಲೆಯನ್ನು 111 ರೂಪಾಯಿಗಳಷ್ಟು ಹೆಚ್ಚಿಸಲಾಗಿದೆ ಎಂಬ ಮಾಧ್ಯಮ ವರದಿಗಳನ್ನು ತಳ್ಳಿ ಹಾಕಿರುವ ಸಚಿವಾಲಯ, ವಾಣಿಜ್ಯ ಸಿಲೆಂಡರ್ ಬೆಲೆಯು ಅಂತಾರಾಷ್ಟ್ರೀಯ ಕಚ್ಚಾ ಅನಿಲ ಮತ್ತು ಸಂಬAಧಿತ ದರಗಳ ಮೇಲೆ ಅವಲಂಬಿತವಾಗಿದ್ದು, ಆಗಾಗ್ಗೆ ಮಾರುಕಟ್ಟೆಯ ದರಗಳು ಬದಲಾಗುತ್ತವೆ. ಆದರೆ, ಗೃಹ ಬಳಕೆಯ ಸಿಲೆಂಡರ್ ದರದಲ್ಲಿ ಯಾವುದೇ ವ್ಯತ್ಯಾಸವಿಲ್ಲ ಎಂದು ತಿಳಿಸಿದೆ.
ದೆಹಲಿಯಲ್ಲಿ 14.2 ಕೆಜಿ ಗೃಹ ಬಳಕೆ ಅಡುಗೆ ಅನಿಲ ಸಿಲೆಂಡರ್ ಬೆಲೆ 950 ರೂಪಾಯಿಯಾಗಿದ್ದು, ಪ್ರಧಾನಮಂತ್ರಿ ಉಜ್ವಲ ಯೋಜನೆಯ ಫಲಾನುಭವಿಗಳಿಗೆ ಇದು 553 ರೂಪಾಯಿ ಬೆಲೆಯಲ್ಲಿ ಲಭ್ಯವಿದೆ. ಇದು ಆಗಸ್ಟ್ 2023 ರಿಂದ ನವೆಂಬರ್ 2025ರವರೆಗೆ ಹೋಲಿಸಿದರೆ, ಶೇಕಡಾ 39 ರಷ್ಟು ದರ ಕಡಿತವನ್ನು ಸೂಚಿಸುತ್ತದೆ. ಜನರಿಗೆ ಸುಸ್ಥಿರ ಇಂಧನ ಪೂರೈಕೆಗೆ ಒತ್ತು ನೀಡಲಾಗಿದ್ದು, ದರ ಬದಲಾವಣೆ ಇಲ್ಲ ಎಂದು ಸಚಿವಾಲಯ ಮಾಹಿತಿ ನೀಡಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243








