Connect with us

ರಾಜಕೀಯ

ಬದುಕಲು ಕಲಿಯುವುದೆಂದರೆ ಸಾವಿಗೆ ವಿಮುಖರಾಗುವುದೇ- ಕೊರೋನಾ ಕೇಳುತ್ತಿದೆ

Published

on

  • ನಾ ದಿವಾಕರ

ಕೊರೋನಾದೊಂದಿಗೆ ಬದುಕುವುದನ್ನು ಕಲಿಯಿರಿ ”. ಇದು ಭಾರತದ ಆಡಳಿತ ವ್ಯವಸ್ಥೆಯ ಆತ್ಮನಿರ್ಭರ ಮಂತ್ರವಾಗಿ ಪರಿಣಮಿಸಿದೆ. ಬಹುಶಃ ಇನ್ನು ಒಂದು ವರ್ಷದ ನಂತರ ಭಾರತದ ಜನಸಾಮಾನ್ಯರು ಏನೇ ಸಮಸ್ಯೆ ಎದುರಿಸಿದರೂ ಆತ್ಮನಿರ್ಭರತೆ ಎನ್ನುವ ಉತ್ತೇಜಕ ಪದ ಹಾಗೂ ಬದುಕಲು ಕಲಿಯಿರಿ ಎನ್ನುವ ಉಪನ್ಯಾಸ ಆಳುವ ವರ್ಗಗಳ ವೇದಮಂತ್ರದಂತಾಗಿಬಿಡುತ್ತದೆ.

ಇಂದು ಕರ್ನಾಟಕದ ಸಚಿವ ಎಸ್ ಟಿ ಸೋಮಶೇಖರ್ ಸಹ, ಕೊರೋನಾದೊಂದಿಗೆ ಬದುಕಲು ಕಲಿಯಿರಿ ಎಂದು ಹೇಳಿದ್ದಾರೆ. ಕಳೆದ ಮೂರು ತಿಂಗಳ ಅವಧಿಯಲ್ಲಿ ಕೊರೋನಾಗೆ ಹೆದರಿ ಯಾರೋಬ್ಬರೂ ಆತ್ಮಹತ್ಯೆ ಮಾಡಿಕೊಂಡಿಲ್ಲ ಎಂದರೆ ಏನರ್ಥ. ನಾವು, ಭಾರತೀಯರು, ಕೊರೋನಾದೊಂದಿಗೆ ಬದುಕಲು ಕಲಿತಿದ್ದೇವೆ ಎಂದೇ ಅಲ್ಲವೇ ?

ನಾವು ಕಲಿಯಬೇಕಿರುವುದು ಸಾವಿನೊಂದಿಗೆ ಬದುಕುವುದನ್ನು. ಇದನ್ನು ಆಡಳಿತ ವ್ಯವಸ್ಥೆ ಹೇಳುವುದಿಲ್ಲ. ಏಕೆಂದರೆ ಸಾವಿನೊಂದಿಗೆ ಬದುಕುವುದೂ ನಮಗೆ ಹೊಸತೇನಲ್ಲ. ಕೊರೋನಾ ನಡುವೆಯೂ ಮಳವಳ್ಳಿ ತಾಲ್ಲೂಕಿನ ಬನ್ನೂರಿನಲ್ಲಿ ಒಬ್ಬ ಪೌರಕಾರ್ಮಿಕ ಮಲಗುಂಡಿಯಲ್ಲಿ ಸಿಲುಕಿ ಸತ್ತಿದ್ದಾನೆ. ಹೇಗೆ ಸತ್ತರು, ಏಕೆ ಸತ್ತರು ಎಂದೂ ಲೆಕ್ಕಿಸದೆ, ಸಾವಿರಾರು ಸಾವುಗಳ ನಡುವೆ ಬದುಕಿ ಮುನ್ನಡೆದಿರುವ ಸಮಾಜದಲ್ಲಿ ನಾವಿದ್ದೇವೆ.

ಅಪೌಷ್ಟಿಕತೆ, ಸಾಂಕ್ರಾಮಿಕ ಪಿಡುಗು, ಜಾತಿ ಸೋಂಕು, ಜಾತಿ ವೈಷಮ್ಯದ ವೈರಾಣು, ಮತಾಂಧತೆಯ ಕ್ರಿಮಿ, ದಾರಿದ್ರ್ಯ, ಬಡತನ, ನಿರುದ್ಯೋಗ ಹೀಗೆ ಸಾವಿನ ಮನೆಗಳನ್ನು ನಿರ್ಮಿಸುತ್ತಲೇ ಇರುವ ಈ ಎಲ್ಲ ವಿದ್ಯಮಾನಗಳೊಡನೆ ನಾವು ಬದುಕಲು ಕಲಿತಿದ್ದೇವೆ. ಏಕೆಂದರೆ ನಾವು ಸಾವನ್ನು ಲೆಕ್ಕಿಸುವುದಿಲ್ಲ.

ಟಿ ವಿ ಸಂದರ್ಶನವೊಂದರಲ್ಲಿ ಕರ್ನಾಟಕದ ಪ್ರವಾಸೋದ್ಯಮ ಸಚಿವ ಸಿ ಟಿ ರವಿ “ಕೊರೋನಾದಿಂದ ಜನಗಳಿಗಿಂತಲೂ ಹೆಚ್ಚು ತೊಂದರೆಗೊಳಗಾಗಿರುವುದು ಆರ್ಥಿಕತೆ ” ಎಂದು ಹೇಳುತ್ತಾರೆ. ಮೇಲ್ನೋಟಕ್ಕೆ ಇದು ಹೌದು ಎನಿಸಬಹುದು. ಆದರೆ ಮನುಷ್ಯರನ್ನು ಒಳಗೊಳ್ಳದ ಆರ್ಥಿಕತೆ ಇದೆಯೇ ? ಈ ಪ್ರಶ್ನೆ ಕೇಳಲು ಬಿ ಟಿವಿ ಸಂದರ್ಶಕರಿಗೆ ಹೊಳೆಯುವುದಿಲ್ಲ.

ಕೋವಿದ್19 ನಿಂದ ಸತ್ತಿರುವವರ ಸಂಖ್ಯೆ ಬಹಳ ಕಡಿಮೆ, ಮಲೇರಿಯಾ, ಕಾಲರಾ ರೋಗಗಳಿಂದ, ಅಪಘಾತಗಳಿಂದ ಇನ್ನೂ ಹೆಚ್ಚಿನ ಸಂಖ್ಯೆಯ ಜನ ಸತ್ತಿದ್ದಾರೆ ” ಎಂದು ಹೇಳುವ ಮೂಲಕ ಕೊರೋನಾ ಗಂಭೀರ ಸಮಸ್ಯೆಯೇನಲ್ಲ ಎನ್ನುವಂತೆ ಮಾತನಾಡುತ್ತಾರೆ. ನಿಜ, ಅಂಕಿಅಂಶಗಳೇ ನಮ್ಮ ಸಾಮಾಜಿಕ-ಸಾರ್ವಜನಿಕ ಸಂಕಥನಗಳಿಗೆ ಆಧಾರವಾದರೆ ಇದನ್ನು ನಿರಾಕರಿಸಲಾಗುವುದಿಲ್ಲ. ಆದರೆ ಒಂದು ಆಡಳಿತ ವ್ಯವಸ್ಥೆಯ ವಕ್ತಾರರು ಈ ರೀತಿ ಹೇಳುವಾಗ, ಜನಸಾಮಾನ್ಯರ ಸಾವು ಎಷ್ಟು ನಿರ್ಲಕ್ಷಿತ ಎನ್ನುವುದು ತಿಳಿಯುತ್ತದೆ.

ಮನುಷ್ಯರಿಗಿಂತಲೂ ಆರ್ಥಿಕತೆಗೆ ಹೆಚ್ಚು ಪೆಟ್ಟುಬಿದ್ದಿದೆ ಎನ್ನುವ ಹೇಳಿಕೆಯಲ್ಲಿ ನಾವು ನಮ್ಮ ಪ್ರಜಾಸತ್ತಾತ್ಮಕ ವ್ಯವಸ್ಥೆಯನ್ನು ಆಳುತ್ತಿರುವ ಬಂಡವಾಳಶಾಹಿಯ ಅಂತರಾತ್ಮವನ್ನು ಅರ್ಥಮಾಡಿಕೊಳ್ಳಬಹುದು. ಶ್ರಮಿಕರಿಲ್ಲದ ಔದ್ಯಮಿಕ ಪ್ರಗತಿ, ಶ್ರಮವಿಲ್ಲದ ಡಿಜಿಟಲೀಕರಣ ಇದನ್ನೇ ಸೂಚಿಸುತ್ತದೆ.

ಸರಕು ಮತ್ತು ಪದಾರ್ಥಗಳ ಉತ್ಪಾದನೆ, ಸಂಸ್ಕರಣ, ಸರಕು ಮಾರಾಟ ಮತ್ತು ವಿನಿಮಯ, ಸರಕು ವಿತರಣೆ ಮತ್ತು ಶೇಖರಣೆ, ಇದಕ್ಕೆ ಪೂರಕವಾದ ಸೇವಾ ವಲಯ, ಬಂಡವಾಳದ ಕ್ರೋಢೀಕರಣ ಮತ್ತು ಪ್ರಸರಣ ಹಾಗೂ ಮಾರುಕಟ್ಟೆಯ ಲಾಭ ನಷ್ಟ ಈ ಸರಪಳಿಯಲ್ಲಿ ಮನುಷ್ಯ ನಗಣ್ಯನಾಗುವುದು ಅಚ್ಚರಿಯೇನಲ್ಲ. ಇದು ಬಂಡವಾಳ ವ್ಯವಸ್ಥೆಯ ಮೂಲಮಂತ್ರವೂ ಹೌದು. ಹಾಗಾಗಿಯೇ ಕೋಟ್ಯಂತರ ವಲಸೆ ಕಾರ್ಮಿಕರು ಗಣನೆಗೆ ಬಾರದೆ ಹೋಗುತ್ತಾರೆ. ಆರ್ಥಿಕತೆಯ ವ್ಯಾಖ್ಯಾನದಲ್ಲಿ ಜನತೆ ನಗಣ್ಯವಾಗುತ್ತಾರೆ.

ಕೋವಿದ್19 ನಿಂದ ಉಂಟಾಗಿರುವ ಸಾವು ಭಾರತದ ಜನಸಂಖ್ಯೆಗೆ ಹೋಲಿಸಿದರೆ ಅತಿ ಕಡಿಮೆ ಎನ್ನುವ ವಾದವೂ ಕೇಳಿಬರುತ್ತಿದೆ. ಭಾರತದಲ್ಲಿ 7200 ಸಾವುಗಳು ಸಂಭವಿಸಿವೆ. ಕರ್ನಾಟಕದಲ್ಲಿ 70 ಸಾವು ಸಂಭವಿಸಿವೆ. ನಿಜ, ಇತರ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಸಾವಿನ ಪ್ರಮಾಣವೂ ಕಡಿಮೆ. ಹೆಚ್ಚು ಜನರು ಗುಣಮುಖರಾಗುತ್ತಿದ್ದಾರೆ.

ಆದರೆ ಸೋಂಕು ಉಲ್ಬಣಿಸುತ್ತಿರುವ ಪ್ರಮಾಣ ದಿನೇದಿನೇ ಹೆಚ್ಚಾಗುತ್ತಿದೆ. ಮೇ 17ರ ನಾಲ್ಕನೆಯ ಲಾಕ್ ಡೌನ್ ನಂತರದಲ್ಲಿ ದೇಶದಲ್ಲಿ ಸೋಂಕಿತರ ಸಂಖ್ಯೆ ಒಂದು ಲಕ್ಷ ಅರವತ್ತು ಸಾವಿರ ಏರಿಕೆಯಾಗಿದೆ. ಈಗ ಲಾಕ್ ಡೌನ್ ಸಡಿಲಿಕೆಯ ಸಂದರ್ಭದಲ್ಲಿದ್ದೇವೆ. ಜೂನ್ ತಿಂಗಳಲ್ಲಿ ಲಾಕ್ ಡೌನ್ ಸಡಿಲಿಕೆಯ ನಂತರದಲ್ಲಿ 70 ಸಾವಿರಕ್ಕೂ ಹೆಚ್ಚು ಸೋಂಕಿತರು ಕಂಡುಬಂದಿದ್ದಾರೆ.

ಈ ಸೋಂಕಿತರ ನಡುವೆ ನಾವು ಬದುಕುವುದನ್ನು ಕಲಿಯಬೇಕೆಂದು ಆಡಳಿತ ವ್ಯವಸ್ಥೆ ನಿರೀಕ್ಷಿಸುತ್ತದೆ. ಇದು ವಾಸ್ತವವೂ ಹೌದು. ಏಕೆಂದರೆ ಇಡೀ ಸಮಾಜ ಸಹಜ ಸ್ಥಿತಿಗೆ ಬಂದಿದೆ. ಎಲ್ಲವೂ ಎಲ್ಲೆಡೆಯೂ ಮೊದಲಿನಂತೆಯೇ ದೊರೆಯುತ್ತದೆ. ದೇವ ದೇವತೆಗಳೂ ಜಾಮೀನಿನ ಮೇಲೆ ಬಿಡುಗಡೆ ಹೊಂದಿದ್ದು ದರ್ಶನಕ್ಕೆ ಸಿದ್ಧತೆ ನಡೆದಿದೆ. ಸಿನೆಮಾ ಮತ್ತು ಶಾಲೆ ಹೊರತುಪಡಿಸಿ ಉಳಿದೆಲ್ಲವೂ ಮುಕ್ತವಾಗಿದೆ. ಮಾರುಕಟ್ಟೆ ಚುರುಕಾಗುತ್ತಿದೆ.

ಈ ನಡುವೆ ವಲಸೆ ಕಾರ್ಮಿಕರ ಮೂಲಭೂತ ಸಮಸ್ಯೆಗಳು ಮೂಲೆಗೆ ಸರಿದು ಕೊರೋನಾ ಇಡೀ ವಲಸೆ ಕಾರ್ಮಿಕ ಸಮುದಾಯವನ್ನೇ ಆವರಿಸಿಬಿಟ್ಟಿದೆ. ವಲಸೆ ಕಾರ್ಮಿಕರಲ್ಲಿ ಶ್ರಮಿಕರನ್ನು ಎಂದೂ ಕಾಣದವರು “ ನಮ್ಮವರ ಅಸ್ಮಿತೆ ”ಯನ್ನಾದರೂ ಕಾಣುತ್ತಿದ್ದರು. ಈಗ ಧರ್ಮಸ್ಥಳದ ಹೆಗಡೆ ಸಹ ಅವರಿಗೆ ನಿಷೇಧ ಹೇರುತ್ತಿದ್ದಾರೆ. ಏಕೆಂದರೆ ವಲಸೆ ಕಾರ್ಮಿಕರೇ ಸಮಸ್ಯೆಯಾಗಿ ಕಾಣುತ್ತಿದ್ದಾರೆ.

ಏಳುಜನ್ಮಗಳ ಕಾಯಿಲೆ-ಕಸಾಲೆ ಇದ್ದರೂ ಒಮ್ಮೆ ದರ್ಶನ ಭಾಗ್ಯ ಪಡೆದರೆ ಸಕಲ ರೋಗಗಳೂ ಪರಿಹಾರವಾಗುತ್ತವೆ ಎಂದು ಜಗಜ್ಜಾಹೀರು ಮಾಡುತ್ತಿದ್ದ ದೈವೀಕ ಕ್ಷೇತ್ರಗಳು, ಕೇವಲ ಒಂದು ವೈರಾಣು ಸೋಂಕಿಗೆ ಒಳಗಾದವರನ್ನು ನಮ್ಮಲ್ಲಿಗೆ ಬರಬೇಡಿ ಎನ್ನುವಂತಾಗಿದೆ. ಇದು ದೈವತ್ವದ ಅವಸಾನವೋ ಅಥವಾ ದೈವತ್ವದ ಗುತ್ತಿಗೆ ಪಡೆದ ಉದ್ಯಮಿಗಳ ನೈತಿಕ ಅಧಃಪತನವೋ ಊಹೆಗೆ ಬಿಟ್ಟ ವಿಚಾರ.

ಈಗ ದೇವಾಲಯದ ತೀರ್ಥ ವ್ಯರ್ಜ್ಯ ಎನಿಸುತ್ತದೆ. ಆಲ್ಕೋಹಾಲ್ ಇರುವ ಸ್ಯಾನಿಟೈಜರ್ ಅತ್ಯಗತ್ಯ ಎನಿಸುತ್ತದೆ. ಇಷ್ಟಾದರೂ ಕೊರೋನಾ ಪೀಡಿತರಿಗೆ, ಕೊರೋನಾದಿಂದ ಬಾಧಿತರಾಗಿರುವ ಅಸಂಖ್ಯಾತ ವಲಸೆ ಕಾರ್ಮಿಕರಿಗೆ ಧರ್ಮ ಕೇಂದ್ರಗಳು, ಅಧ್ಯಾತ್ಮ ಕೇಂದ್ರಗಳು, ಮಠೋದ್ಯಮಿಗಳು ತಮ್ಮ ಬಾಹುಗಳನ್ನು ತೆರೆದಿಲ್ಲ ಎಂದರೆ, ಬಂಡವಾಳ ವ್ಯವಸ್ಥೆ ಹೇಗೆ ಮಾನವ ಸಮಾಜದ ಅತಿ ಸೂಕ್ಷ್ಮ ವಲಯಗಳನ್ನೂ ಆಕ್ರಮಿಸಿದೆ ಎನ್ನುವುದು ಅರ್ಥವಾಗುತ್ತದೆ. ಪರಿಹಾರ ನಿಧಿಗೆ ದೇಣಿಗೆ ನೀಡುವುದಕ್ಕೂ ನೊಂದ ಜೀವಗಳಿಗೆ ನೆಲೆ ನೀಡುವುದಕ್ಕೂ ವ್ಯತ್ಯಾಸ ಇರುವುದನ್ನು ಇಲ್ಲಿ ಗಮನಿಸಬೇಕು.

ಕೊರೋನಾ ಭಾರತಕ್ಕೆ ಕಾಲಿಟ್ಟ ಜನವರಿ 30 ರಿಂದ ಎರಡನೆ ಲಾಕ್ ಡೌನ್ ಮುಗಿದ ಮೇ 3ರ ಅವಧಿಯಲ್ಲಿ ಭಾರತದಲ್ಲಿ ಮಲೇರಿಯಾದಿಂದ 45 ಸಾವಿರ, ಕ್ಷಯರೋಗದಿಂದ 93 ಸಾವಿರ, ಅತಿಸಾರದಿಂದ 1 ಲಕ್ಷ 28 ಸಾವಿರ, ಕ್ಯಾನ್ಸರ್ ನಿಂದ 1 ಲಕ್ಷ 37 ಸಾವಿರ, ಒಂದು ಲಕ್ಷ ಮಕ್ಕಳು ಹುಟ್ಟಿದ ಒಂದು ತಿಂಗಳ ಒಳಗೆ, ಆರು ಸಾವಿರ ಗರ್ಭಿಣಿಯರು ಸಾವನ್ನಪ್ಪಿದ್ದಾರೆ.

ಇಷ್ಟೆಲ್ಲಾ ಸಾವುಗಳ ನಡುವೆ ಕೊರೋನಾದಿಂದ ಸಾಯುತ್ತಿರುವವರ ಸಂಖ್ಯೆ ಗೌಣ ಎಂದು ಭಾವಿಸುವುದು ಸಹಜ. ಕೊರೋನಾಗೆ ಭಯಪಡಬೇಕಿಲ್ಲ ಎಂದು ಭರವಸೆ ನೀಡಲು ಈ ಅಂಕಿಅಂಶಗಳು ನೆರವಾಗಬಹುದು. ಅದರೆ ಒಂದು ಆಡಳಿತ ವ್ಯವಸ್ಥೆ ಈ ಅಂಕಿಅಂಶಗಳನ್ನು ಮುಂದಿಟ್ಟು, ಕೊರೋನಾ ಬಗ್ಗೆ ಚಿಂತಿಸಬೇಕಿಲ್ಲ ಎಂದು ಹೇಳುವುದು ಹೊಣೆಗೇಡಿತನದ ಪರಮಾವಧಿ ಎನಿಸುತ್ತದೆ.

ಕೊರೋನಾ ಇತ್ತೀಚಿನ ವಿದ್ಯಮಾನ. ಭಾರತದಲ್ಲಿ ಮೇಲೆ ಉಲ್ಲೇಖಿಸಿದ ಆರೋಗ್ಯ ಸಮಸ್ಯೆಗಳಿಂದ ಮತ್ತು ಹಸಿವು ಬಡತನದಿಂದ ಲಕ್ಷಾಂತರ ಮಕ್ಕಳು ಸಾಯುತ್ತಲೇ ಇದ್ದಾರೆ. “ ಅಷ್ಟೊಂದು ಸಾವುಗಳು ಸಂಭವಿಸುತ್ತಿವೆ ಕೊರೋನಾ ಸಾವಿಗೆ ಏಕೆ ಅಷ್ಟೊಂದು ಆತಂಕ ” ಎನ್ನುವ ಧೋರಣೆಯೇ ಆಡಳಿತ ವ್ಯವಸ್ಥೆಯ ಅಮಾನುಷ ದೃಷ್ಟಿಕೋನವನ್ನು ಸೂಚಿಸುತ್ತದೆ.

ಅಸಹಜ ಸಾವು ಎಷ್ಟು ಸಂಭವಿಸುತ್ತಿದೆ ಎನ್ನುವುದಕ್ಕಿಂತಲೂ ಏಕೆ ಸಂಭವಿಸುತ್ತಿದೆ ಎಂದು ಯೋಚಿಸುವುದು ಸಂವೇದನಾಶೀಲ ಧೋರಣೆಯಾಗುತ್ತದೆ. ಕೊರೋನಾ ಸಂದರ್ಭದಲ್ಲೂ ಇದೇ ಧೋರಣೆ ನಮ್ಮಲ್ಲಿ, ಆಡಳಿತ ವ್ಯವಸ್ಥೆಯಲ್ಲಿ ಇರಬೇಕಿತ್ತು. ಆದರೆ ನಾವು ಕೊರೋನಾ ಎಲ್ಲಿಂದ ಹರಡುತ್ತಿದೆ ಎಂದಷ್ಟೇ ಯೋಚಿಸುತ್ತಿರುವುದರಿಂದ ಸೋಂಕಿತರ ಬಗ್ಗೆ ಕಾಳಜಿ ಕ್ಷೀಣಿಸುತ್ತಿದೆ.

ಈ ನಡುವೆ ನಾವು ಬದುಕಲು ಕಲಿಯಬೇಕೆಂದರೆ ಈ ಸಾವುಗಳ ನಡುವೆಯೋ ಅಥವಾ ಉಲ್ಬಣಿಸುತ್ತಿರುವ ರೋಗಗಳ ನಡುವೆಯೋ ? ಆಡಳಿತ ವ್ಯವಸ್ಥೆಯನ್ನು ನಿರ್ವಹಿಸುವವರಿಗೆ ಈ ಕನಿಷ್ಠ ಪ್ರಜ್ಞೆ ಇರಬೇಕಲ್ಲವೇ ? ಇಷ್ಟೊಂದು ಅಸಹಜ ಎನಿಸಬಹುದಾದ ಸಾವುಗಳು ಏಕೆ ಸಂಭವಿಸುತ್ತಿವೆ ? ನಮ್ಮಲ್ಲಿ ಇಂದಿಗೂ ಸಾರ್ವತ್ರಿಕ ಆರೋಗ್ಯ ಮತ್ತು ಪ್ರಾಥಮಿಕ ಆರೋಗ್ಯ ವ್ಯವಸ್ಥೆ ಸುಸ್ಥಿತಿಯಲ್ಲಿಲ್ಲ ಅಲ್ಲವೇ ? ಕ್ವಾರಂಟೈನ್ ಕೇಂದ್ರಗಳಲ್ಲಿ ಸೋಂಕಿತರು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಶೀಲಿಸುವ ವ್ಯವಧಾನವನ್ನೂ ಕಳೆದುಕೊಂಡಿರುವ ಆಡಳಿತ ವ್ಯವಸ್ಥೆ ಕೊರೋನಾ ವೈರಾಣುವಿನ ಸಮುದಾಯ ಪ್ರಸರಣ ಹೆಚ್ಚಾಗುತ್ತಿದ್ದರೂ ಲೆಕ್ಕಿಸದೆ ಇರುವುದು ದುರಂತ.

ಈ ಕುರಿತು ಎಚ್ಚರಿಸುವ, ಕೊರೋನಾ ನಿಯಂತ್ರಣದಲ್ಲಿನ ವೈಫಲ್ಯವನ್ನು ಎತ್ತಿತೋರುವ ವೈದ್ಯರನ್ನು, ತಜ್ಞರನ್ನು ನಿರ್ಲಕ್ಷಿಸುತ್ತಿರುವುದು ಒಂದೆಡೆಯಾದರೆ ಮತ್ತೊಂದೆಡೆ ಕ್ವಾರಂಟೈನ್ ಕೇಂದ್ರಗಳಲ್ಲಿನ ಅವ್ಯವಸ್ಥೆಯ ಬಗ್ಗೆ ಸೊಲ್ಲೆತ್ತುವವರನ್ನು ದೇಶದ್ರೋಹಿಗಳಂತೆ ಕಾಣಲಾಗುತ್ತಿದೆ. ತಮ್ಮ ಅಮೂಲ್ಯ ಸಲಹೆಗಳನ್ನು ಸರ್ಕಾರ ಗಮನಿಸುತ್ತಿಲ್ಲ ಎಂದು ವೈದ್ಯಲೋಕ ಕೂಗಿಕೂಗಿ ಹೇಳುತ್ತಲೇ ಇದೆ.

ಮಾರುಕಟ್ಟೆ ಶಕ್ತಿಗಳ ಕೂಗಿಗೆ ಕ್ಷಣ ಮಾತ್ರದಲ್ಲಿ ಸ್ಪಂದಿಸುವ ಅಧಿಕಾರಸ್ಥರು ವೈದ್ಯಲೋಕದ ಕೂಗನ್ನು ಏಕೆ ನಿರ್ಲಕ್ಷಿಸುತ್ತದೆ ? ಸಚಿವ ಸಿ ಟಿ ರವಿ ಇದಕ್ಕೆ ಸ್ಪಷ್ಟ ಉತ್ತರ ನೀಡುತ್ತಾರೆ “ ಜನಗಳಿಗಿಂತಲೂ ಹೆಚ್ಚು ಬಾಧಿತವಾಗಿರುವುದು ಆರ್ಥಿಕತೆ ”. ಮಾರುಕಟ್ಟೆ ಆರ್ಥಿಕ ವ್ಯವಸ್ಥೆಯಲ್ಲಿ ಜೀವಬೆಲೆ ಇರುವುದಿಲ್ಲ. ಏಕೆಂದರೆ ಜೀವ ಬಿಕರಿಯಾಗುವುದಿಲ್ಲ.

ಸ್ವಾತಂತ್ರ್ಯಾನಂತರದ ಮೊದಲ ನಾಲ್ಕು ದಶಕಗಳಲ್ಲಿ ರೂಪಿಸಲಾದ ಸ್ವಾವಲಂಬಿ ಭಾರತವನ್ನು ನಂತರದ ಮೂರು ದಶಕಗಳಲ್ಲಿ ವ್ಯವಸ್ಥಿತವಾಗಿ ಶಿಥಿಲಗೊಳಿಸಿದ ಆಡಳಿತ ವ್ಯವಸ್ಥೆಯೇ ಇಂದು ಆತ್ಮನಿರ್ಭರತೆಗಾಗಿ ಹಾತೊರೆಯುತ್ತಿದೆ. ಈ ಮೂರು ದಶಕಗಳ ಅವಧಿಯಲ್ಲಿ ತನ್ನ ನೆಲೆಯನ್ನೇ ಕಳೆದುಕೊಂಡಿರುವ ದೇಶದ ಸಾರ್ವತ್ರಿಕ-ಪ್ರಾಥಮಿಕ ಆರೋಗ್ಯ ವ್ಯವಸ್ಥೆಗೆ ಕಾಯಕಲ್ಪ ನೀಡಲು ಇಂದಿಗೂ ನಾವು ತಯಾರಾಗದಿದ್ದರೆ ಬಹುಶಃ ನಮ್ಮ ದೇಶಕ್ಕೆ ಕೊರೋನಾ ಅವಶ್ಯಕತೆಯೇ ಕಾಣುವುದಿಲ್ಲ.

ಖಾಸಗಿ ವೈದ್ಯಕೀಯ ಉದ್ಯಮ ಲೋಕ ಸಾವಿನ ಅಂಚಿನಲ್ಲಿರುವವರಿಗೆ ಮರುಜೀವ ನೀಡಲು ಹರಾಜುಕಟ್ಟೆಗಳನ್ನು ನಿರ್ಮಿಸುತ್ತಿದೆ. ಸತ್ತವರನ್ನೂ ಬದುಕಿಸುವ ಆಶ್ವಾಸನೆಯೊಂದಿಗೆ ತಮ್ಮ ಐಷಾರಾಮಿ ಚಿಕಿತ್ಸಾ ನೆಲೆಗಳನ್ನು ಸಿದ್ಧಪಡಿಸಿರುವ ಈ ಗಂಧರ್ವ ಲೋಕದ ಪ್ರಜೆಗಳಿಗೆ ಕೊರೋನಾ ಸೋಂಕಿತರು ಮನುಷ್ಯರಾಗಿ ಕಾಣಲೇ ಇಲ್ಲ ಎನ್ನುವುದು ದುರಂತ ಅಲ್ಲವೇ ? ಈ ಅಸಹಾಯಕ ಪ್ರಜೆಗಳತ್ತ ಒಮ್ಮೆ ತಿರುಗಿ ನೋಡ್ರಪ್ಪಾ ಎಂದು ಹೇಳುವ ಆತ್ಮಸ್ಥೈರ್ಯವೂ ಆತ್ಮನಿರ್ಭರತೆಯ ಪ್ರತಿಪಾದಕರಿಗೆ ಇಲ್ಲ. ಕಾರಣ ಇದು ಮಾರುಕಟ್ಟೆ. ಜನಸಾಮಾನ್ಯರಿಗೆ ಮಾನ್ಯತೆ ಇಲ್ಲದ ಆರ್ಥಿಕತೆಯ ಒಂದು ಲಾಭದಾಯಕ ವೇದಿಕೆ.

ಈ ವೇದಿಕೆಯ, ಈ ವ್ಯವಸ್ಥೆಯ ಪುನಶ್ಚೇತನಕ್ಕೆ ಪಣತೊಟ್ಟು ಯುದ್ಧೋನ್ಮಾದದಲ್ಲಿ ಮುನ್ನಡೆದಿರುವ ಸರ್ಕಾರಗಳಿಗೆ ಕೊರೋನಾ ವೈರಾಣು ಸಹ ಮಾರುಕಟ್ಟೆಯ ತ್ಯಾಜ್ಯದಂತೆ ಕಾಣುತ್ತಿರಬಹುದು. ಆದರೆ ಮಾರುಕಟ್ಟೆ ಆವರಣದಲ್ಲಿ ತಂತಾನೇ ಕೊಳೆತುಹೋಗುವ ತ್ಯಾಜ್ಯದಂತೆ ಕೊರೋನಾ ಕೊಳೆಯುವುದಿಲ್ಲ. ಅದು ಜನಸಮುದಾಯಗಳ ನಡುವೆ ಹರಡುತ್ತದೆ.

ಈ ಹರಡುವಿಕೆಯ ನಡುವೆ ಜನಸಾಮಾನ್ಯರು ಬದುಕು ಕಲಿಯುವುದೆಂದರೆ ಅರ್ಥವೇನು ? ಅನ್ಯರ ಸಾವನ್ನು ಲೆಕ್ಕಿಸದೆ ನಿಮ್ಮನ್ನು ನೀವು ರಕ್ಷಿಸಿಕೊಳ್ಳಿ ಎಂದೇ ? ಪಕ್ಕದ ಮನೆಯಲ್ಲಿ ಹೆಣ ಎತ್ತಿದರೆ ಸಾಕು ನಾವು ಸ್ನಾನ ಮಾಡಿ ಊಟ ಮಾಡಬಹುದು ಎನ್ನುವ ಸೂತಕ ಮನೋಭಾವ ಇರುವ ಸಮಾಜ ನಮ್ಮದು. ಈ ಸಮಾಜದಲ್ಲಿ ಅನ್ಯರ ಸಾವು ನಮ್ಮನ್ನು ವಿಚಲಿತಗೊಳಿಸಲು ಸಾಧ್ಯವೇ ?

ಆದರೆ ಸರ್ಕಾರ ವಿಚಲಿತವಾಗಲೇಬೇಕಲ್ಲವೇ ? “ ಲಕ್ಷಾಂತರ ಸಾವಿನ ನಡುವೆಯೇ ಬದುಕುತ್ತಿದ್ದೇವೆ ಸಾವಿರಗಳಿಗೇಕೆ ಚಿಂತೆ ” ಎನ್ನುವ ಧೋರಣೆ ಮಾನವೀಯ ಮೌಲ್ಯಗಳಿಗೆ ನಿಲುಕುವಂತಹುದಲ್ಲ. ಇದು ಸಾರ್ವತ್ರಿಕ ಆರೋಗ್ಯದ ಪ್ರಶ್ನೆ. ಕೊರೋನಾ ನಮ್ಮ ನಡುವೆಯೇ ಇರುತ್ತದೆ ನಿಜ, ಆದರೆ ಸಾವು ಬದುಕಿನ ಸಂಘರ್ಷದಲ್ಲಿ ಕೊರೋನಾ ಮಾನದಂಡವಾಗಕೂಡದು ಅಲ್ಲವೇ ?

ಸಮಾಜದಲ್ಲಿ ಸಂಭವಿಸುವ ಪ್ರತಿಯೊಂದು ಅಸಹಜ ಸಾವಿಗೂ ನೈತಿಕ ಹೊಣೆ ಹೊರುವ ಮಾನವೀಯ ಆಡಳಿತ ವ್ಯವಸ್ಥೆ ನಮಗೆ ಬೇಕಿದೆ. ಇಂತಹ ವ್ಯವಸ್ಥೆಯನ್ನು ನಾವು ರೂಪಿಸಿದ್ದಿದ್ದರೆ ಸೂಕ್ತ ಚಿಕಿತ್ಸೆ ದೊರೆಯಲಾರದೆ ಜನರು ಸಾಯುತ್ತಿರಲಿಲ್ಲ. ಆಕರ್ಷಕ ಪದಪುಂಜಗಳು, ಘೋಷಣೆಗಳು ತಾತ್ಕಾಲಿಕ ಶಮನ ನೀಡುತ್ತವೆ. ಶಾಶ್ವತ ಸಮಸ್ಯೆಗಳನ್ನು ಪರಿಹರಿಸುವುದಿಲ್ಲ.

ಭಾರತದ ಜನಸಮುದಾಯಗಳಿಗೆ ಬದುಕುವುದನ್ನು ಕಲಿಸಬೇಕಿಲ್ಲ. ನೋವು, ಅಪಮಾನ, ಹಿಂಸೆ, ಚಿತ್ರಹಿಂಸೆ, ಸಂಕಷ್ಟ ಮತ್ತು ರೋಗ ರುಜಿನಗಳ ನಡುವೆ ಬದುಕಿರುವುದನ್ನು ನೋಡಿದ್ದೇವೆ. ತಮ್ಮ ಅಸ್ಮಿತೆಯೇ ಸಾವಿಗೆ ಆಹ್ವಾನ ನೀಡುವ ಪರಿಸ್ಥಿತಿಯನ್ನೂ ದಿಟ್ಟತನದಿಂದ ಎದುರಿಸಿ ಬದುಕಿರುವುದನ್ನು ನೋಡಿದ್ದೇವೆ. ಕೊರೋನಾ ಅಸ್ಮಿತೆಯನ್ನು ಪ್ರಶ್ನಿಸುವುದಿಲ್ಲ.

ಆದರೆ ಕೊರೋನಾ ನಿಯಂತ್ರಿಸಬೇಕಾದ ಆಡಳಿತ ವ್ಯವಸ್ಥೆಗೆ ಅಸ್ಮಿತೆ ಮುಖ್ಯವಾಗುತ್ತದೆ. ಮಾರುಕಟ್ಟೆ ಮತ್ತು ಪ್ರಜೆ ಎರಡರ ನಡುವೆ ಒಂದನ್ನು ಆಯ್ಕೆ ಮಾಡುವ ನೆಲೆಯಲ್ಲಿ ಮಾರುಕಟ್ಟೆಯ ಅಸ್ಮಿತೆ ಮೇಲುಗೈ ಸಾಧಿಸುತ್ತದೆ. ಹಾಗಾಗಿಯೇ ಎಲ್ಲವೂ ಮುಕ್ತ – ಬದುಕುವುದು ನಿಮ್ಮಿಷ್ಟ ಎನ್ನುವ ಧೋರಣೆಯನ್ನು ಅನುಸರಿಸಲಾಗುತ್ತಿದೆ.

ಈ ದೇಶದ ಸಾರ್ವಭೌಮ ಪ್ರಜೆಗಳು ಆಡಳಿತ ವ್ಯವಸ್ಥೆಗೆ ಮಾಡಬಹುದಾದ ವಿನಂತಿ ಎಂದರೆ “ ಸ್ವಾಮಿ, ನಾವು ಬದುಕಲು ಕಲಿಯಬೇಕಿಲ್ಲ, ಸಾವಿನೊಂದಿಗೂ ಬದುಕಿ ನಿರೂಪಿಸಿದ್ದೇವೆ. ಆದರೆ ನೀವು ಸಾವುಗಳತ್ತ ಗಮನ ಹರಿಸಿ. ಮಾರುಕಟ್ಟೆ ವ್ಯವಸ್ಥೆ ಆರೋಗ್ಯವಂತರನ್ನೂ ಕೊಲ್ಲುತ್ತದೆ. ಈ ದೇಶದ ವಲಸೆ ಕಾರ್ಮಿಕರೇ ಇದಕ್ಕೆ ಸಾಕ್ಷಿ. ಮಾರುಕಟ್ಟೆ ಪುನಶ್ಚೇತನಗೊಂಡರೂ ಈ ಸಾವುಗಳು ನಿಲ್ಲುವುದಿಲ್ಲ. ಕನಿಷ್ಠ ಪಕ್ಷ ಕೊರೋನಾದಿಂದಾದರೂ ಜನರನ್ನು ರಕ್ಷಿಸಿ. ನಮಗೆ ಮಾತನಾಡಲು ಅವಕಾಶ ಕೊಡಿ ”. ಕೊರೋನಾಗೆ ಕಣ್ಣು ಕಿವಿ ಇಲ್ಲ, ಸರ್ಕಾರಕ್ಕೆ ಇರಲೇಬೇಕಲ್ಲವೇ..?

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ಭೀಕರ | ಪ್ರಿಯಕರನಿಂದ ಪ್ರೇಯಸಿಯ ಬರ್ಬರ ಹತ್ಯೆ

Published

on

ಸುದ್ದಿದಿನ ಡೆಸ್ಕ್:ಬೆಂಗಳೂರಿನಲ್ಲಿ ಪ್ರೀತಿಯೊಂದು ರಕ್ತಸಿಕ್ತ ಅಂತ್ಯ ಕಂಡಿದೆ. ಮದುವೆಗೆ ನಿರಾಕರಿಸಿದ ಪ್ರೇಯಸಿಯನ್ನು ಪ್ರಿಯಕರನೇ ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಮಹಾಲಕ್ಷ್ಮಿ ಲೇಔಟ್ ಪೊಲೀಸ್ ಠಾಣೆ ವ್ಯಾಪ್ತಿಯ ಪೈಪ್‌ಲೈನ್ ರಸ್ತೆಯಲ್ಲಿ ನಡೆದಿದೆ.

23 ವರ್ಷದ ಅಂಜಲಿ ಕೊಲೆಯಾದ ಯುವತಿಯಾಗಿದ್ದು, ರಾಜೀವ್ ಬಂಧಿತ ಆರೋಪಿ. ಕಳೆದ ಮೂರು-ನಾಲ್ಕು ವರ್ಷಗಳಿಂದ ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು. ಈ ಹಿಂದೆ ಕೆಲಸ ಮಾಡುತ್ತಿದ್ದ ಸ್ಥಳದಲ್ಲೇ ಪರಿಚಯವಾಗಿ ಸ್ನೇಹ ಬೆಳೆದು, ಬಳಿಕ ಅದು ಪ್ರೀತಿಗೆ ತಿರುಗಿತ್ತು.

ಆದರೆ ರಾಜೀವ್‌ಗೆ ಕ್ರಿಮಿನಲ್ ಹಿನ್ನೆಲೆ ಇದ್ದ ಕಾರಣ ಅಂಜಲಿ ಕುಟುಂಬಸ್ಥರು ಈ ಮದುವೆಗೆ ವಿರೋಧ ವ್ಯಕ್ತಪಡಿಸಿದ್ದರು. ಹಲವು ಬಾರಿ ಕುಟುಂಬಸ್ಥರನ್ನು ಒಪ್ಪಿಸಲು ರಾಜೀವ್ ಪ್ರಯತ್ನಿಸಿದ್ದರೂ ಫಲಿಸಿರಲಿಲ್ಲ. ಇತ್ತೀಚೆಗೆ ಪೋಷಕರ ಒತ್ತಾಯಕ್ಕೆ ಮಣಿದ ಅಂಜಲಿ ರಾಜೀವ್‌ನಿಂದ ದೂರವಾಗಲು ಆರಂಭಿಸಿದ್ದಳು. ಇಂದು ಸಂಜೆ ಅಂಜಲಿಯನ್ನು ಊಟದ ನೆಪದಲ್ಲಿ ಕರೆಸಿಕೊಂಡಿದ್ದ ರಾಜೀವ್, ಮತ್ತೊಮ್ಮೆ ಮದುವೆ ವಿಚಾರ ಪ್ರಸ್ತಾಪಿಸಿದ್ದಾನೆ. ಈ ವೇಳೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದು, ಕೋಪಗೊಂಡ ರಾಜೀವ್ ಚಾಕುವಿನಿಂದ ಅಂಜಲಿಯ ಕುತ್ತಿಗೆಗೆ ಇರಿದಿದ್ದಾನೆ.

ರಕ್ತದ ಮಡುವಿನಲ್ಲಿ ಬಿದ್ದಿದ್ದ ಅಂಜಲಿಯನ್ನು ಸ್ಥಳೀಯರು ತಕ್ಷಣ ಆಸ್ಪತ್ರೆಗೆ ದಾಖಲಿಸಿದರೂ, ಚಿಕಿತ್ಸೆ ಫಲಕಾರಿಯಾಗದೆ ಆಕೆ ಮೃ*ತಪಟ್ಟಿದ್ದಾಳೆ. ಘಟನೆ ಕುರಿತು ಮಾಹಿತಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ಮಹಾಲಕ್ಷ್ಮಿ ಲೇಔಟ್ ಪೊಲೀಸರು ಪರಿಶೀಲನೆ ನಡೆಸಿ, ಕೆಲವೇ ನಿಮಿಷಗಳಲ್ಲಿ ಆರೋಪಿ ರಾಜೀವ್‌ನನ್ನು ಬಂಧಿಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಎಂ.ಎಸ್. ರಾಮಯ್ಯ ಆಸ್ಪತ್ರೆಗೆ ರವಾನಿಸಲಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ತನಿಖೆ ಮುಂದುವರಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ದುರಂತ | ಮೇಲ್ಛಾವಣಿ ಕುಸಿದು ಮೂವರು ಸಾವು

Published

on

ಸುದ್ದಿದಿನ,ರಾಯಚೂರು: ಕಟ್ಟಡದ ಮೇಲ್ಛಾವಣಿಯ ಸಜ್ಜಾ ಏಕಾಏಕಿ ಕುಸಿದು ಬಿದ್ದು ಮೂವರು ಯುವಕರು ಮೃತಪಟ್ಟ ದುರ್ಘಟನೆ ಭಾನುವಾರ ಜಿಲ್ಲೆಯ ದೇವದುರ್ಗ ಪಟ್ಟಣದ ಹೊಸ ಬಸ್ ನಿಲ್ದಾಣದ ಸಮೀಪ ಸಂಭವಿಸಿದೆ.

ಮೃತರನ್ನು ದೇವದುರ್ಗ ತಾಲೂಕಿನ ಸಮುದ್ರ ಗ್ರಾಮದ ರವಿಚಂದ್ರ (35), ಕ್ಯಾದಿಗೆರಾ ಗ್ರಾಮದ ನಾಗರಾಜ್ (30) ಹಾಗೂ ಕೊತ್ತಿಗುಡ್ಡದ ಅರ್ಜುನ್ (21) ಎಂದು ಗುರುತಿಸಲಾಗಿದೆ.

ಕಟ್ಟಡದ ಅವಶೇಷಗಳಡಿ ಸಿಲುಕಿ ರವಿಚಂದ್ರ ಹಾಗೂ ನಾಗರಾಜ ಸ್ಥಳದಲ್ಲೇ ಮೃತಪಟ್ಟಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ಅರ್ಜುನ್‌ ಅವರನ್ನು ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅವರೂ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದರು ಎಂದು ಪೊಲೀಸರು ತಿಳಿಸಿದ್ದಾರೆ.

ಮಾಹಿತಿಯ ಪ್ರಕಾರ, ಯುವಕರು ತಾವೇ ನಿರ್ಮಿಸಿದ್ದ ‘ಅಂತ್ಯವಾಯ್ತು’ ಎಂಬ ಕಿರುಚಿತ್ರದ ಪೋಸ್ಟರ್ ಅಂಟಿಸಲು ಕಟ್ಟಡದ ಬಳಿ ತೆರಳಿದ್ದ ವೇಳೆ ಈ ದುರಂತ ಸಂಭವಿಸಿದೆ.

ಕಟ್ಟಡದ ಮೇಲ್ಛಾವಣಿಯ ಒಂದು ಭಾಗವು, ಅದಕ್ಕೆ ಜೋಡಣೆಯಾಗಿದ್ದ ಕಬ್ಬಿಣದ ಮೆಟ್ಟಿಲುಗಳ ಸಹಿತ ಕುಸಿದು ಬಿದ್ದಿದೆ. ಘಟನೆಯಲ್ಲಿ ಉಮೇಶ್, ಪ್ರಭು ಹಾಗೂ ಅಭಿಷೇಕ್ ಎಂಬವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ.

ಘಟನಾ ಸ್ಥಳಕ್ಕೆ ದೇವದುರ್ಗ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ತನಿಖೆಯ ನಂತರ ನಿಖರ ಕಾರಣ ತಿಳಿಯಲಿದೆ. ದೇವದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನಾ ಸ್ಥಳಕ್ಕೆ ದೇವದುರ್ಗ ಶಾಸಕಿ ಕರೆಮ್ಮ ನಾಯಕ ಭೇಟಿ ನೀಡಿ, ಸಂಬಂಧಪಟ್ಟ ಅಧಿಕಾರಿಗಳಿಂದ ಮಾಹಿತಿ ಪಡೆದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ದಾವಣಗೆರೆ | ನಾಳೆ ವಿವಿಧೆಡೆ ವಿದ್ಯುತ್ ವ್ಯತ್ಯಯ

Published

on

ಸುದ್ದಿದಿನ,ದಾವಣಗೆರೆ : 66/11 ಕೆ.ವಿ. ವಿದ್ಯುತ್ ಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣೆ ಮತ್ತು ತುರ್ತು ನಿರ್ವಹಣಾ ಕಾಮಗಾರಿಗಳ ಕಾರ್ಯವನ್ನು ಹಮ್ಮಿಕೊಂಡಿರುವುದರಿಂದ ಜೂನ್ 23 ರಂದು ಬೆಳಿಗ್ಗೆ 10 ರಿಂದ ಸಂಜೆ 5.30 ರವರೆಗೆÉ ಈ ಕೆಳಕಂಡ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.

ಮಾಮಾಸ್ ಜಾಯಿಂಟ್ ರಸ್ತೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳು, ಎಮ್.ಸಿ.ಸಿ.ಬಿ : ಶಾಬನೂರು ರಸ್ತೆ, ಎಸ್.ಎಸ್. ಲೇಔಟ್, ಎ ಬ್ಲಾಕ್, ಕುವೆಂಪು ನಗರ, ಬಾಟ್ಲಿ ಬಿಲ್ಡಿಂಗ್ ಸುತ್ತ ಮುತ್ತ, ಸಿದ್ದವೀರಪ್ಪ ಬಡಾವಣೆ, 1ನೇ ಅಡ್ಡ ರಸ್ತೆ ಯಿಂದ 7ನೇ ಅಡ್ಡರಸ್ತೆವರೆಗೆ, ಗ್ಲಾಸ್ ಹೌಸ್, ಬಾಪೂಜಿ ಬ್ಯಾಂಕ್ ಸಮುದಾಯ ಭವನದ ಹಿಂಭಾಗದ ಪ್ರದೇಶ , ಬಿ.ಐ.ಇ.ಟಿ. ಕಾಲೇಜು ಹಾಗೂ ಸುತ್ತ ಮುತ್ತ ಪ್ರದೇಶಗಳು.

ಮಂಡಿಪೇಟೆ, ಬೆನ್ನೆ ಕಂಪನಿ ರಸ್ತೆ, ಎಮ್ ಜಿ ರಸ್ತೆ, ಎನ್ ಆರ್ ರಸ್ತೆ, ಬೆಲ್ಲೌಡಿಹಲ್ಲಿ, ಮಹಾವೀರ ರಸ್ತೆ ಹಾಗೂ ಸುತ್ತ ಮುತ್ತಲಿನ ಪ್ರದೇಶಗಳು, ಬಿ.ಟಿ.: ಮಂಡಕ್ಕಿ ಬಟ್ಟಿ, 1 ರಿಂದ 10 ನೇ ಕ್ರಾಸ್, ಇಂದಿರಾ ನಗರ, ಸಿದ್ದರಾಮೇಶ್ವರ ಬಡಾವಣೆ, ಕಾರ್ಲ್ ಮಾರ್ಸ್ ನಗರ, ಕೋಳಿ ಚನ್ನಪ್ಪ ಬಡಾವಣೆ ಮತ್ತು ಸುತ್ತ ಮುತ್ತಲಿನ ಪ್ರದೇಶಗಳು, ಮೌನೇಶ್ವರ : ಹೆಚ್.ಕೆ. ಆರ್. ಸರ್ಕಲ್, ಕೆ.ಇ.ಬಿ ಕಾಲೋನಿ, ನಿಟುವಳ್ಳಿ ಹಾಗು ನಿಟುವಳ್ಳಿ ಹೊಸಬಡಾವಣೆ, ಮೌನೇಶ್ವರ ಬಡಾವಣೆ, ಸೈಯದ್ ಪೀರ್ ಬಡಾವಣೆ, ಐ.ಟಿ.ಐ. ರಿಂಗ್ ರಸ್ತೆ, ಜಯನಗರ, ದುರ್ಗಾಂಬಿಕ ದೇವಸ್ಥಾನ ಸುತ್ತಮುತ್ತ.

ಎಸ್.ಎಸ್. ಹೈಟೆಕ್ ಆಸ್ಪತ್ರೆ ರಸ್ತೆ, ಭಗೀರಥ ಸರ್ಕಲ್, ಕಾಳಿಕಾಂಬ ದೇವಸ್ಥಾನ, ಶಕ್ತಿನಗರ, ಹಾಗು ಇ.ಎಸ್.ಐ ಆಸ್ಪತ್ರೆ ಮತ್ತು ಸುತ್ತ ಮುತ್ತಲಿನ ಪ್ರದೇಶಗಳ, ಪಿ.ಬಿ. ರಸ್ತೆ., ಹಾಗೂ ಸುತ್ತ ಮುತ್ತಲಿನ ಪ್ರದೇಶಗಳು, ಕೆಟಿಜೆ: ಶ್ರೀ ಮುರಘ ರಾಜೇಂದ್ರ ಸ್ವಾಮಿಗಳ ಮಠ, ಜಾಧವ್ ಕ್ಲಿನಿಕ್ ಸುತ್ತ ಮುತ್ತ , ಶಿವಪ್ಪ ವೃತ್ತದಿಂದ ಜಯದೇವ ವೃತ್ತದವರೆಗೆ ಹಾಗು ಸುತ್ತಮುತ್ತ ಪ್ರದೇಶಗಳು, ಪಿಜೆ: ಪೋಲೀಸ್ ಕ್ವಾಟ್ರಸ್, ತುಂಗ, ಭದ್ರ, ಸರಸ್ವತಿ, ಕೃಷ್ಣ ಬ್ಲಾಕ್, ಅರುಣಾ ಸರ್ಕಲ್ ಮತ್ತು ಸುತ್ತಮುತ್ತಲಿನ ಪ್ರದೇಶಗಳು, ಸಿಜಿಹೆಚ್: ಎಮ್.ಸಿ.ಸಿ. ಎ ಬ್ಲಾಕ್, ನ್ಯಾಯಾಧೀಶರ ವಸತಿ ಗೃಹಗಳು, ತೊಗಟವೀರ ಕಲ್ಯಾಣ ಮಂದಿರ, ವಿನೋಬ ನಗರ 1ನೇ ಮುಖ್ಯ ರಸ್ತೆ ಹಾಗೂ ಸುತ್ತ ಮುತ್ತಲಿನ ಪ್ರದೇಶಗಳು, ಎಸ್.ಎಸ್. ಬಡಾವಣೆ, ಎ ಬ್ಲಾಕ್, ಶಾಂತಿ ನಗರ, ಕುಂದುವಾಡ ರಸ್ತೆ, ಮಹಾನಗರ ಪಾಲಿಕೆ ಕುಡಿಯುವ ನೀರಿನ ಸ್ಥಾವರ, ಬಸವೇಶ್ವರ ಬಡಾವಣೆ, ಮಹಾಲಕ್ಷ್ಮೀ ಬಡಾವಣೆ, ಬಾಲಾಜಿ ನಗರ, ಕುಂದುವಾಡ ಕೆರೆ ಹಾಗು ಸುತ್ತಮುತ್ತ ಪ್ರದೇಶಗಳು.

ಕರೂರು ಇಂಡಸ್ಟ್ರಿಯಲ್ ಏರಿಯಾ, ಡಿ.ಸಿ. ಕಛೇರಿ, ಜಿ.ಎಂ.ಐ.ಟಿ. ಬಸವೇಶ್ವರ ನಗರ, ರಶ್ಮೀ, ಹರಿಹರ ರಸ್ತೆ, ವಿಜಯ ನಗರ, ಅಶೋಕ ನಗರ, ಆರ್.ಟಿ.ಓ. ಕಛೇರಿ, ಎಸ್.ಪಿ. ಕಛೇರಿ, ರಿಂಗ್ ರಸ್ತೆ, ಶಿಬಾರ, ಎಸ್.ಎಂ.ಕೆ. ನಗರ, ಹಾಗೂ ಚಿತ್ತನಹಳ್ಳಿ, ಕಕ್ಕರಗೊಳ್ಳ, ಆವರಗೊಳ್ಳ, ನೀಲನಹಳ್ಳಿ, ದೇವರಹಟ್ಟಿ, ದೊಡ್ಡಬಾತಿ, ಹಳೆಬಾತಿ, ನಾರಾಯಣ ಕ್ಯಾಂಪ್, ಯರಗುಂಟಾ, ಕೋಡಿಹಳ್ಳಿ, ಗ್ರಾಮಗಳು ಹಾಗೂ ಸುತ್ತಮುತ್ತಲಿನ ಗ್ರಾಮಗಳು, ಮಾಗಾನಹಳ್ಳಿ, ಮಾಗಾನಹಳ್ಳಿ ಕ್ಯಾಂಪ್, ಓಬಜ್ಜಿಹಳ್ಳಿ, ಓಬಜ್ಜಿಹಳ್ಳಿ ಕ್ಯಾಂಪ್, ಕಡ್ಲೇಬಾಳು, ಹಳೆಕಡ್ಲೆಬಾಳು, ಮಾಳಗೊಂಡನಹಳ್ಳಿ, ಅರಸಾಪುರ, ಬದುನಾಯಕನತಾಂಡ, ಚಿಕ್ಕಓಬಜ್ಜೀಹಳ್ಳಿ, ದೊಡ್ಡಓಬಜ್ಜೀಹಳ್ಳಿ ಹಾಗೂ ಸುತ್ತಮುತ್ತಲಿನ ಗ್ರಾಮಗಳು, ಮ್ಯಾಸರಹಳ್ಳಿ, ಗುಮ್ಮನೂರು, ಹುಣಸೆಕಟ್ಟೆ, ಮುಡೇನಹಳ್ಳಿ, ಕೆಂಚಮ್ಮನಹಳ್ಳಿ, ಹೊಸಹಳ್ಳಿ, ಕಾಟಿಹಳ್ಳಿ.

ಮಂಡಲೂರು ಗ್ರಾಮಗಳು ಹಾಗೂ ಸುತ್ತಮುತ್ತಲಿನ ಗ್ರಾಮಗಳು ಹನುಮನಹಳ್ಳಿ, ಕೊಗ್ಗÀನೂರು, ಹನುಮನಹಳ್ಳಿ, ಆನಗೋಡು, ಹೆಬ್ಬಾಳು, ನೀರ್ಥಡಿ, ಶಿವಪುರ, ಹಾಲುವರ್ತಿ, ಗಂಗನಕಟ್ಟೆ, ನೇರ್ಲಿಗಿ, ಚಿನ್ನಸಮುದ್ರ ಗ್ರಾಮಗಳು ಹಾಗೂ ಸುತ್ತಮುತ್ತಲಿನ ಗ್ರಾಮಗಳು ಮತ್ತು ಆರಾಧ್ಯಾ ಕೈಗಾರಿಕೆ, ಅತ್ತಿಗೆರೆ, ಕುರ್ಕಿ, ಬಾಡ, ಕಬ್ಬೂರು, ಹೀರೆತೊಗಲೇರಿ, ಗೊಪಾನಾಳು, ಕಂದ್ಗಲ್, ರಾಮಗೊಂಡನಹಳ್ಳಿ, ಕಾಶೀಪುರ ಗ್ರಾಮಗಳು ಹಾಗೂ ಸುತ್ತಮುತ್ತಲಿನ ಗ್ರಾಮಗಳು ಆರ್.ಎಂ.ಸಿ. ಲಿಂಕ್ ರಸ್ತೆ, ಬಿ.ಟಿ. ಲೇಔಟ್, ಗುಜರಿ ಲೈನ್, ಬಂಬೂ ಬಜಾರ್, ಮಟ್ಟಿಕಲ್, ಬಿಡಿಓ ಕಛೇರಿ, ಇಮಾಮ್ ನಗರ, ಅಮರಪ್ಪನ ತೋಟ.

ಆನೆಕೊಂಡ, ಎಲ್.ಬಿ.ಎಸ್. ನಗರ.ಟಿ.ಸಿ. ಲೇಔಟ್, ಬಿಟಿ ಲೇಔಟ್, ಕೆ.ಆರ್. ರಸ್ತೆ, ಇಮಾಮ್ ನಗರ, ಆನೆಕೊಂಡ, ಐನಳ್ಳಿ ಕಾಂಪೌಂಡ್, ಎಪಿಎಂಸಿ, ಭಾರತ್ ಕಾಲೋನಿ, ಶೇಖ್ರಪ್ಪ ನಗರ ಹೆಚ್.ಕೆ.ಆರ್. ನಗರ, ಕಬ್ಬೂರು ಬಸಾಪುರ ನಗರ, ಆಣ್ಣಾ ನಗರ, ಬಸಾಪುರ ರಸ್ತೆ, ಗೋಶಾಲೆ, ಪಿ.ಬಿ. ರಸ್ತೆ, ರವಿ ಮಿಲ್ ಹಾಗೂ ಆವರಗೆರೆ, ಹೊನ್ನೂರು, ಐಗೂರು, ಮಲ್ಲಶೆಟ್ಟಿಹಳ್ಳಿ, ತೊಳಹುಣಸೆ, ದಾವಣಗೆರೆ ವಿಶ್ವವಿದ್ಯಾಲಯ ಗ್ರಾಮಗಳು ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending