ದಿನದ ಸುದ್ದಿ
ಹೇಡಿಯೊಬ್ಬ ಧೈರ್ಯಶಾಲಿಯಂತೆ ಕಾಣುವುದು ಅವನ ಕೈಯಲ್ಲಿ ಅಧಿಕಾರ ಇದ್ದಾಗ ಮಾತ್ರ : ಮಹುವಾ ಮೊಯಿತ್ರಾ
- ದಿನೇಶ್ ಕುಮಾರ್ ಎಸ್.ಸಿ
ಮಹುವಾ ಮೊಯಿತ್ರಾ ಸೋಮವಾರ ಲೋಕಸಭೆಯಲ್ಲಿ ಮಾತನಾಡಿದ್ದು ಕೇವಲ 21 ನಿಮಿಷಗಳು ಮಾತ್ರ. ಅದರಲ್ಲಿ ಕೆಲವು ನಿಮಿಷಗಳು ಗದ್ದಲದಲ್ಲಿ ಕಳೆದುಹೋದವು. ಆದರೆ ಮಹುವಾ ತನಗೆ ಸಿಕ್ಕ ಪ್ರತಿ ಸೆಕೆಂಡನ್ನೂ ಸಮರ್ಪಕವಾಗಿ ಬಳಸಿಕೊಂಡರು, ಉಸಿರಾಡಲೂ ಅವಕಾಶವಿಲ್ಲದಂತೆ ಸರಸರನೆ ಮಾತನಾಡುತ್ತ ಹೋದರು.
ಅದು ಏಳು ವರ್ಷಗಳ ಮೋದಿ ಸರ್ಕಾರದ ಅನಧಿಕೃತ ಪೋಸ್ಟ್ ಮಾರ್ಟಂ. ಇಂಗ್ಲಿಷ್ ಸಲೀಸಾಗಿ ಅರ್ಥವಾಗದ ಕೆಲವು ಗೆಳೆಯರು, ಮಹುವಾ ಅವರ ಭಾಷಣದ ಮುಖ್ಯ ಅಂಶಗಳನ್ನು ಕನ್ನಡದಲ್ಲೂ ಹೇಳಿ ಅಂತ ಕೋರಿದರು. ಅವರಿಗಾಗಿ ಈ ಟಿಪ್ಪಣಿ.
ಮಹುವಾ ಅವರ ಈ ಐತಿಹಾಸಿಕ ಭಾಷಣಕ್ಕೊಂದು ತಲೆಬರೆಹ ಕೊಡಿ ಎಂದರೆ ನಾನು ಹೇಳುವುದು “ಧೈರ್ಯ ಮತ್ತು ಹೇಡಿತನ” ಎಂಬ ವಾಕ್ಯವನ್ನೇ. ಮಹುವಾ ಈ ಎರಡು ಪದಗಳನ್ನು ಇಟ್ಟುಕೊಂಡೇ ಒಂದು ಪ್ರತಿರೋಧ ಕಾವ್ಯವನ್ನು ಕಟ್ಟಿದರು. ಅವರು ಹೇಡಿಗಳನ್ನು ಬಹಳ ಚೆನ್ನಾಗಿ ವರ್ಣಿಸಿದರು. ಧೀರರಿಗೂ ಹೇಡಿಗಳಿಗೂ ಮೂಲಭೂತವಾದ ವ್ಯತ್ಯಾಸವಿದೆ. ಹೇಡಿಯೊಬ್ಬ ಧೈರ್ಯಶಾಲಿಯಂತೆ ಕಾಣುವುದು ಅವನ ಕೈಯಲ್ಲಿ ಅಧಿಕಾರ ಇದ್ದಾಗ ಮಾತ್ರ.
ನಾವು ನಿಜವಾದ ಧೈರ್ಯವಂತರು, ಬರಿಗೈಯಲ್ಲಿ ಇದ್ದರೂ ಹೋರಾಡೋಣ ಎಂದರು ಮಹುವಾ. ದ್ವೇಷ ಮತ್ತು ಧರ್ಮಾಂಧತೆಯನ್ನು ತಲೆಗೇರಿಸಿಕೊಂಡ ಪ್ರಭುತ್ವ ಹೇಗೆ ದೇಶದ ಅಸ್ತಿತ್ವವನ್ನು ಅಲುಗಾಡಿಸುತ್ತ ಬರುತ್ತಿದೆ ಎಂಬುದನ್ನು ಹೇಳುತ್ತ ಹೋದರು. ಅವರು ಕೇವಲ ಸರ್ಕಾರವನ್ನು ದೂಷಿಸಲಿಲ್ಲ, ಇವತ್ತಿನ ಸ್ಥಿತಿಗೆ ನ್ಯಾಯಾಂಗ ಮತ್ತು ಮೀಡಿಯಾ ಕೂಡ ಹೊಣೆ ಹೊರಬೇಕು ಎಂದರು.
ಸರ್ಕಾರ ಅಧಿಕಾರಬಲದ ಹಿಂದೆ ಅಡಗಿಕೊಂಡು ದೇಶವನ್ನು ‘ಪೊಲೀಸ್ ರಾಜ್ಯ’ವನ್ನಾಗಿ ಮಾಡಿದೆ. ಟೀಕಿಸುವ ಧ್ವನಿಗಳ ಮೇಲೆ ರಾಜದ್ರೋಹದ ಕೇಸುಗಳನ್ನು ಹೂಡುತ್ತಿದೆ. ಇದನ್ನು ನೀವು ಧೈರ್ಯ ಎಂದು ಭಾವಿಸಬೇಡಿ. ಹೇಡಿಗಳಷ್ಟೆ ಇದನ್ನು ಮಾಡಬಲ್ಲರು ಎನ್ನುತ್ತಲೇ ಸರ್ಕಾರದ ಜತೆಗಿರುವ ಮೀಡಿಯಾ ಹೌಸ್ ಒಂದರ ಮುಖ್ಯಸ್ಥನ ವಾಟ್ಸಾಪ್ ಚಾಟ್ ಉಲ್ಲೇಖಿಸಿ, ಮೀಡಿಯಾ ಹೇಗೆ ಪಾತಾಳ ತಲುಪಿದೆಎನ್ನುವುದನ್ನು ಸೂಚ್ಯವಾಗಿ ಹೇಳಿದರು.
ಮಹುವಾ ಭಾಷಣದಲ್ಲಿ ಎಷ್ಟೊಂದು ವಿಷಯಗಳಿದ್ದವು. ಒಂದರ ಹಿಂದೊಂದು ಬಾಣಗಳು ಹೊರಡುತ್ತಿದ್ದವು. ಟ್ರಜರಿ ಬೆಂಚ್ ನಲ್ಲಿ ಕುಳಿತವರ ಮುಖಗಳು ಸೀದುಹೋಗತೊಡಗಿದವು.
ನೆರೆಯ ದೇಶಗಳ ಧಾರ್ಮಿಕ ಅಲ್ಪಸಂಖ್ಯಾತರ ಕುರಿತು ಅಪಾರ ಕಾಳಜಿ ಇಟ್ಟುಕೊಂಡವರಂತೆ ಸಿಎಎ ಕಾಯ್ದೆಯನ್ನು ಅಷ್ಟು ಆತುರವಾಗಿ ಜಾರಿಗೆ ತಂದಿರಲ್ಲ. ಕಾಯ್ದೆಯ ನಿಯಮಗಳನ್ನು ರಚಿಸಲು ಇನ್ನೂ ಈ ಸರ್ಕಾರಕ್ಕೆ ಯಾಕೆ ಸಾಧ್ಯವಾಗಿಲ್ಲ? ಯಾಕೆ ಒಂದಾದ ಮೇಲೊಂದರಂತೆ ಡೆಡ್ ಲೈನ್ ಗಳನ್ನು ನೀಡಲಾಗುತ್ತಿದೆ ಎಂಬ ಪ್ರಶ್ನೆ ಎಸೆದರು.
ನೀವು ನಾಲ್ಕೇ ಗಂಟೆಗಳ ಅವಕಾಶ ನೀಡಿ ರಾಷ್ಟ್ರವ್ಯಾಪಿ ಲಾಕ್ ಡೌನ್ ಘೋಷಿಸಿದಿರಿ. ಲಕ್ಷಾಂತರ ಜನರು ನೂರಾರು ಕಿ.ಮೀ. ನಡೆದುಕೊಂಡು ಹೋಗುವಂತೆ ಮಾಡಿದಿರಿ. ಎಷ್ಟೋ ಪ್ರಾಣಗಳು ಬಲಿಯಾದವು. ಇದೇ ನೀವು ಪ್ರದರ್ಶಿಸಿದ ಧೈರ್ಯ ಎಂದು ಮಹುವಾ ಚುಚ್ಚಿದರು.
ಕೃಷಿ ಕಾಯ್ದೆಗಳ ವಿರುದ್ಧ ಪ್ರತಿಭಟಿಸುತ್ತಿರುವ ರೈತರ ಬಗ್ಗೆ ಕಾಳಜಿ ವಹಿಸಲು ನಿಮ್ಮ ಒಂದೇ ಒಂದು ಸಚಿವಾಲಯವನ್ನು ದೆಹಲಿ ಗಡಿಗೆ ಕಳುಹಿಸಲಿಲ್ಲ. ಆದರೆ ಹದಿನೆಂಟು ವರ್ಷ ವಯಸ್ಸಿನ ಪರಿಸರ ಕಾರ್ಯಕರ್ತೆ, ಒಬ್ಬ ಪಾಪ್ ಗಾಯಕಿ ಟ್ವೀಟ್ ಮಾಡಿದ ಕೂಡಲೇ ವಿದೇಶಾಂಗ ಸಚಿವಾಲಯವನ್ನೇ ಕಣಕ್ಕೆ ಇಳಿಸಿದಿರಿ. ದೆಹಲಿ ಗಡಿಯಲ್ಲಿ ಪ್ರತಿಭಟಿಸುತ್ತಿರುವ ರೈತರ ವಿಷಯದಲ್ಲಿ ನೈತಿಕವಾಗಿ ನಡೆದುಕೊಳ್ಳಬೇಕಾಗಿದ್ದ ನೀವು ಆಯ್ದುಕೊಂಡಿದ್ದು ಕ್ರೌರ್ಯದ ಮಾರ್ಗವನ್ನು. ಇದು ನಿಮ್ಮ ಧೈರ್ಯಶಾಲಿತನವೇ? ಅಲ್ಲ, ಇದು ಹೇಡಿತನ.
ದೇಶದ ಅತ್ಯುನ್ನತ ನ್ಯಾಯಾಲಯದ ಸರ್ವೋಚ್ಛ ನ್ಯಾಯಮೂರ್ತಿಯ ಮೇಲೆ ಲೈಂಗಿಕ ಕಿರುಕುಳದ ಪ್ರಕರಣ ದಾಖಲಾಯಿತು. ಶತ ತನ್ನ ಮೇಲಿನ ಆರೋಪ ಪ್ರಕರಣವನ್ನು ತಾನೇ ಕ್ಲಿಯರ್ ಮಾಡಿಕೊಂಡು, ನಿವೃತ್ತಿಯಾದ ಮೂರೇ ತಿಂಗಳಲ್ಲಿ ರಾಜ್ಯಸಭೆಯ ಸದಸ್ಯನೂ ಆಗಿಬಿಟ್ಟ ಎಂದು ಮಹುವಾ ಹೇಳಿದ ಕೂಡಲೇ ಸದನದಲ್ಲಿ ಬಾಂಬ್ ಬಿದ್ದ ಹಾಗಾಯಿತು. ಇದನ್ನು ಹೇಳುವ ಮೊದಲು, ನಾನು ಈಗ ಏನನ್ನು ಪ್ರಸ್ತಾಪಿಸಲಿದ್ದೇನೋ ಅದನ್ನು ಹೇಳಿಯೇ ತೀರುತ್ತೇನೆ. ಯಾರೂ ಅಡ್ಡಿ ಮಾಡಬೇಡಿ, ಇದನ್ನು ದಾಖಲೆಗಳಿಂದಲೂ ತೆಗೆಯಕೂಡದು ಎಂದು ತಾಕೀತು ಮಾಡಿದ್ದರು ಮಹುವಾ.
ಬಿಜೆಪಿ ಮಂತ್ರಿಗಳು ಎಷ್ಟೇ ಗದ್ದಲ, ಅಡೆತಡೆ ಮಾಡಿದರೂ ಮಹುವಾ ಹೇಳಬೇಕಾಗಿದ್ದನ್ನು ಹೇಳಿಯೇ ಬಿಟ್ಟರು. ನ್ಯಾಯಾಂಗ ಇವತ್ತು ಪವಿತ್ರವಾಗಿ ಉಳಿದಿಲ್ಲ. ಅದು ತನ್ನ ಘನತೆ ಕಳೆದುಕೊಂಡಿದೆ. ಅದು ಈಗೀಗ ಯಕಶ್ಚಿತ್ ಕಾಮಿಡಿಯನ್ ಗಳ ಹಾಸ್ಯವನ್ನೂ ಸಹಿಸಿಕೊಳ್ಳುತ್ತಿಲ್ಲ. ಈ ನೆಲದ ಅತ್ಯಂತ ಮಹತ್ವದ ಸಾಮಾಜಿಕ ಹೋರಾಟಗಾರರು ಜೈಲಿನಲ್ಲಿ ಕೊಳೆಯುತ್ತಿದ್ದಾರೆ. ಲಾಕ್ ಡೌನ್ ಸಮಯದಲ್ಲಿ ವಲಸೆ ಕಾರ್ಮಿಕರು ನಡೆದುನಡೆದೇ ಸತ್ತು ಹೋದಾಗ ನ್ಯಾಯಾಂಗ ನೋಡಿಕೊಂಡು ಸುಮ್ಮನಿತ್ತು ಎಂದು ಇವತ್ತಿನ ಸನ್ನಿವೇಶಕ್ಕೆ ನ್ಯಾಯಾಂಗದ ಕೊಡುಗೆಗಳನ್ನು ಪಟ್ಟಿ ಮಾಡಿದರು.
ಸರ್ಕಾರ ಭಿನ್ನಧ್ವನಿಗಳನ್ನು ಅಡಗಿಸುವ ಕೆಲಸವನ್ನು ಎಗ್ಗಿಲ್ಲದೆ ಮಾಡುತ್ತಿದೆ. ಇವರು ಎಮರ್ಜೆನ್ಸಿಯ ಬಗ್ಗೆ ಮಾತಾಡುವವರು.ಆದರೆ ದೇಶದಲ್ಲೀಗ ಅಘೋಷಿತ ತುರ್ತುಪರಿಸ್ಥಿತಿ ಇದೆ. ಸರ್ಕಾರ ತನ್ನ ವಿರುದ್ಧ ಧ್ವನಿ ಎತ್ತುವ ಎಲ್ಲರನ್ನೂ ಬಗ್ಗು ಬಡಿಯುತ್ತದೆ. ಅದು ವಿದ್ಯಾರ್ಥಿಗಳು, ರೈತರಿಂದ ಹಿಡಿದು ಶಾಹೀನ್ ಬಾಗ್ ನ ದಾದಿಯವರೆಗೆ ಎಲ್ಲರೂ ಈ ಸರ್ಕಾರದಿಂದ ಶಿಕಾರಿಯಾದವರೇ ಆಗಿದ್ದಾರೆ. ನಿಮ್ಮನ್ನು ಧೈರ್ಯವಂತರೆಂದು ಹೇಗೆ ಕರೆಯುವುದು? ನೀವು ಅಕ್ಷರಶಃ ಹೇಡಿಗಳು!… ಹೀಗೆ ಏನನ್ನೇ ಮಾತಾಡಿದರೂ ಧೈರ್ಯ ಮತ್ತು ಹೇಡಿತನದ ನಡುವಿನ ಅಂತರ ಹೇಳಲು ಬಳಸಿಕೊಂಡರು.
ಮಹುವಾ ಪಶ್ಚಿಮ ಬಂಗಾಳದ ಸಂಸದೆ. ತಾಯ್ನೆಲದ ಇಬ್ಬರು ಮಹಾನ್ ವ್ಯಕ್ತಿಗಳನ್ನು ಅವರು ಉಲ್ಲೇಖಿಸಿದರು. ರವೀಂದ್ರನಾಥ ಠಾಗೋರ್ ಅವರ ಕಲ್ಪನೆಯ ಭಾರತವನ್ನು ಅರ್ಥ ಮಾಡಿಕೊಳ್ಳಲು ಜನಗಣಮನದ ಪೂರ್ಣ ಪಾಠ ಓದಿಕೊಳ್ಳಿ. ಭಾರತದ ಬಹುತ್ವ ನಿಮಗೆ ಅರ್ಥವಾಗಬಹುದು ಎಂದು ಹೇಳುತ್ತಲೇ, ನಾವು ಈಗ ಹಾಡುವ ಜನಗಣಮನದಲ್ಲಿ ಇಲ್ಲದ ಮೂಲ ಗೀತೆಯ ಚರಣವೊಂದನ್ನು ಹೇಳಿದರು.
ಸರ್ಕಾರ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ 125ನೇ ಜನ್ಮದಿನಾಚರಣೆಯಲ್ಲಿ ತನ್ನ ಸಂಕುಚಿತ ನೆರೇಟಿವ್ ಗಳನ್ನು ಹೇರಲು ಯತ್ನಿಸಿತು. ನೇತಾಜಿ ಎಲ್ಲರೂ ಒಪ್ಪುವ ‘ಜೈ ಹಿಂದ್’ ಘೋಷಣೆಯನ್ನು ನೀಡಿದರು. ನೀವು ಒಂದು ಧರ್ಮಕ್ಕೆ ಮಾತ್ರ ಅನ್ವಯಿಸುವ ಸಂಕುಚಿತ ಘೋಷಣೆಯನ್ನು ವಿರೋಧಿಗಳನ್ನು ಹಣಿಯಲು ಬಳಸುತ್ತಿದ್ದೀರಿ. ಈ ಘೋಷಣೆ ಅಲ್ಪಸಂಖ್ಯಾತರಿಗೆ ತಾವು ಯಾರಿಂದ ಆಳಲ್ಪಡುತ್ತಿದ್ದೇವೆ ಎಂದು ಪದೇಪದೇ ನೆನಪಿಸುವ ಕುಟಿಲ ಉದ್ದೇಶದಿಂದ ಕೂಡಿದೆ. ನೇತಾಜಿ ಸ್ವಾತಂತ್ರ್ಯ ಸಂಗ್ರಾಮದ ಸಂದರ್ಭದಲ್ಲಿ ‘ಚಲೋ ದಿಲ್ಲಿ’ ಎಂಬ ಕರೆ ನೀಡಿದ್ದರು. ನೇತಾಜಿಯ ಹಾಗೆಯೇ ನಿಮ್ಮೊಂದಿಗೆ ಮಾತಾಡಲು, ನಿಮ್ಮ ಕಾಯ್ದೆಗಳನ್ನು ಧಿಕ್ಕರಿಸಲು ಬರುತ್ತಿದ್ದ ರೈತರನ್ನು ದಿಲ್ಲಿಯ ಗಡಿಗಳಲ್ಲೇ ತಡೆದುಬಿಟ್ಟಿರಿ.
ನೇತಾಜಿಯನ್ನು ಹೈಜಾಕ್ ಮಾಡಿಕೊಳ್ಳುವ ಬಿಜೆಪಿ ಯತ್ನಗಳ ಕುರಿತು ಮಮತಾ ಬ್ಯಾನರ್ಜಿಯವರು ಮಾತಾಡಿದ್ದು ಕೇಳಿದ್ದೆವು. ಮಹುವಾ ಅದನ್ನು ಇಲ್ಲಿ ಮುಂದುವರೆಸಿದರು.
ಮಹುವಾ ಭಾಷಣ ಅತ್ಯಂತ inclusive ಆಗಿತ್ತು. ಅವರು ಕೇವಲ ಪಶ್ಚಿಮ ಬಂಗಾಳದ ಕುರಿತು ಮಾತನಾಡಲಿಲ್ಲ. ಹರಿಯಾಣದ ಉದಾಹರಣೆ ತೆಗೆದುಕೊಂಡರು. ವಾಯುಸೇನೆಯ ಶೇ.10ರಷ್ಟು, ನೌಕಾದಳದ ಶೇ.11 ಸೈನಿಕರು ಹರಿಯಾಣ್ವಿಗಳು. ನೀವು ಅವರನ್ನು ಭಯೋತ್ಪಾದಕರು, ದೇಶದ್ರೋಹಿಗಳು ಎಂದು ಕರೆಯುತ್ತೀರಾ ಎಂದು ಕಿಡಿಕಿಡಿಯಾದರು.
ಹೆಸರುಗಳನ್ನು ಹೇಳದಿದ್ದರೂ ಅವರ ಭಾಷಣ ಕೇಳುವಾಗ ನಿಮಗೆ ರೋಹಿತ್ ವೇಮುಲಾರಿಂದ ಹಿಡಿದು ಕನ್ಹಯ್ಯ, ಮುನಾವರ್, ಸುಧಾ ಭಾರದ್ವಾಜ್, ಉಮರ್ ಖಾಲಿದ್ ವರವರರಾವ್, ಶಶಿ ತರೂರ್, ರಾಜದೀಪ್ ಸರದೇಸಾಯಿ, ಆನಂದ್ ತೇಲ್ತುಂಬೆವರೆಗೆ ಪ್ರಭುತ್ವದ ಕ್ರೌರ್ಯಕ್ಕೆ ಬಲಿಯಾದವರ, ಕೇಸು ಎದುರಿಸುತ್ತಿರುವವರ, ಜೈಲು ಸೇರಿರುವವರ ಮುಖಗಳೆಲ್ಲ ಕಣ್ಣಮುಂದೆ ಹಾದು ಹೋದಂತಾಗುತ್ತದೆ. ಕ್ರೂರ UAPA ಕಾಯ್ದೆ ಮತ್ತು ಬ್ರಿಟಿಷರ ಕಾಲದ ರಾಜದ್ರೋಹದ ಸೆಕ್ಷನ್ ಗಳನ್ನು ಸರ್ಕಾರ ಹೇಗೆ ನಿರ್ಲಜ್ಜತೆಯಿಂದ ಬಳಸಿಕೊಳ್ಳುತ್ತಿದೆ ಎಂಬುದನ್ನು ಮಹುವಾ ಹೇಳುತ್ತ ಹೋದರು. ಒಟ್ಟಾರೆಯಾಗಿ ಮಹುವಾ ಎಲ್ಲರ ಪರವಾಗಿ ಮಾತನಾಡಿದರು.
ಮಹುವಾ ಭಾಷಣ ಮಾಡುವಾಗ ಸಭಾಧ್ಯಕ್ಷ ಸ್ಥಾನದಲ್ಲಿ ಕುಳಿತಿದ್ದಿದ್ದು ಕೇರಳದ ಸಂಸದ ಎನ್.ಕೆ.ಪ್ರೇಮಚಂದ್ರನ್. Revolutionary Socialist Party ಸದಸ್ಯರು. ಕೊನೆಯಾದಾಗಿ ಸಮಯಾವಕಾಶ ಮುಗಿದು ಭಾಷಣ ನಿಲ್ಲಿಸಲು ಹೇಳಿದಾಗ ಮಹುವಾ ಟೇಬಲ್ ಗುದ್ದಿ ‘ರಿಪೀಲ್ ಆರ್ ನಂಥಿಂಗ್’ ಎಂದು ಅಬ್ಬರಿಸಿ ಕುಳಿತುಕೊಂಡರು. ಪ್ರೇಮಚಂದ್ರನ್ ‘ವೆರಿಗುಡ್’ ಎಂದರು. ಅವರು ವೆರಿಗುಡ್ ಎಂದಿದ್ದು ಭಾಷಣ ನಿಲ್ಲಿಸಿದ್ದಕ್ಕಾ? ಅಥವಾ ಇಡಿಯ ಭಾಷಣಕ್ಕಾ? ಅದು ನಮ್ಮ ಊಹೆಗೆ ಬಿಟ್ಟ ವಿಷಯ.
ನಾವು ಪ್ರಜಾಪ್ರಭುತ್ವವಾದಿಗಳು ಮಹುವಾ ಮೊಯಿತ್ರ ಭಾಷಣವನ್ನು ಇಷ್ಟಪಡುವುದಕ್ಕೆ ಹಲವು ಕಾರಣಗಳಿವೆ. ಇಡೀ ದೇಶದಲ್ಲಿ ಪ್ರಜಾಸತ್ತೆ ಸತ್ತೇ ಹೋಯಿತು ಎಂಬ ಭೀತಿ ಆವರಿಸಿಕೊಳ್ಳುತ್ತಿರುವ ಈ ಹೊತ್ತಿನಲ್ಲಿ, ಮಹುವಾ ಭಾಷಣ ನಿಜಕ್ಕೂ ಸಣ್ಣ ಧೈರ್ಯ ತುಂಬುತ್ತದೆ. ಒಂದು ಸಣ್ಣ ಕಿಡಿ ಜ್ವಾಲೆಯಾಗಿ ಹರಡುವುದಲ್ಲವೇ? ಮಹುವಾ ಅವರ ಧೈರ್ಯದ ಭಾಷಣ ನೂರಾರು ಭೀತಿ ತೊರೆದು ಮಾತನಾಡಲು ಶಕ್ತಿ ತುಂಬಬಹುದು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಮಾನವ ಸಂಪನ್ಮೂಲ ನೀತಿ ಗುತ್ತಿಗೆ ನೌಕರರಿಗೆ ಮಾರಕ | ನೀತಿ ರದ್ದುಗೊಳಿಸಲು ಶಾಸಕ ಜೆ.ಎಸ್.ಬಸವಂತಪ್ಪಗೆ ಮನವಿ
ಸುದ್ದಿದಿನ,ದಾವಣಗೆರೆ: ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳ ಪ್ರಸ್ತಾವನೆ ಎನ್ಎಚ್ ಎಂ ಸಿಬ್ಬಂದಿಗಳಲ್ಲಿ ಆತಂಕ ಮೂಡಿಸಿದ್ದು, ಮುಖ್ಯಮಂತ್ರಿಗಳು ಹಾಗೂ ಆರೋಗ್ಯ ಸಚಿವರು ಮಧ್ಯಸ್ತಿಕೆ ವಹಿಸಿ ಸರಿಪಡಿಸಲು ಶಿಪಾರಸ್ಸು ಮಾಡಬೇಕು. ಈ ಬಗ್ಗೆ ಬೆಳಗಾವಿಯ ಚಳಿಗಾಲ ಅಧಿವೇಶನದಲ್ಲಿ ಪ್ರಸ್ತಾಪ ಮಾಡಬೇಕೆಂದು ಕರ್ನಾಟಕ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆ ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರ ಸಂಘದ ಜಿಲ್ಲಾ ಪದಾಧಿಕಾರಿಗಳು ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ ಅವರಿಗೆ ಶನಿವಾರ ಮನವಿ ಸಲ್ಲಿಸಿದರು.
ರಾಷ್ಟ್ರೀಯ ಆರೋಗ್ಯ ಅಭಿಯಾನ ಅಡಿಯಲ್ಲಿ ಗುತ್ತಿಗೆ ಆಧಾರದ ಮೇಲೆ ಸುಮಾರು 30 ಸಾವಿರ ಸಿಬ್ಬಂದಿಗಳು ಕರ್ತವ್ಯ ನಿರ್ವಹಿಸುತ್ತಿದ್ದು, ಈ ಸಿಬ್ಬಂದಿಗಳಿಗೆ ನೇಮಕಾತಿ ಮತ್ತು ವರ್ಗಾವಣೆ ಒಳಗೊಂಡು ಮಾನವ ಸಂಪನ್ಮೂಲ (HR Policy) ನೀತಿಯನ್ನು ಜಾರಿಗೊಳಿಸುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು ಕಳೆದ ಅ.28ರಂದು ಆದೇಶ ಹೊರಡಿಸಿ, ಅಭಿಯಾನ ನಿರ್ದೇಶಕರು, ಮುಖ್ಯ ಆಡಳಿತಾಧಿಕಾರಿಗಳು ಹಾಗೂ ಮುಖ್ಯ ಆರ್ಥಿಕ ಅಧಿಕಾರಿಗಳಿಗೆ ವರದಿ ನೀಡಲು ಸೂಚನೆ ನೀಡಿದ್ದಾರೆ.
ಈ ವಿಷಯದ ಬಗ್ಗೆ ಈಗಾಗಲೇ ಅಭಿಯಾನ ನಿರ್ದೇಶಕರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಎಲ್ಲಾ ಗುತ್ತಿಗೆ ನೌಕರರ ವೃಂದವಾರು ಸಂಘಟನೆಗಳ ಅಭಿಪ್ರಾಯ ನೀಡಲಾಗಿದೆ. ಎಲ್ಲಾ ಸಂಘಟನೆಗಳು ಈ ಒಂದು ಹೊಸ ಸಿಬ್ಬಂದಿಗಳಿಗೆ ಮಾರಕ ಇರುವಂತಹ ಮಾನವ ಸಂಪನ್ಮೂಲ ನೀತಿಯನ್ನು ಜಾರಿಗೊಳಿಸಲು ವಿರೋಧ ವ್ಯಕ್ತಪಡಿಸಿವೆ.
ಸರ್ಕಾರ ಈಗ ನೀಡುತ್ತಿರುವ ಕಡಿಮೆ ವೇತನದಲ್ಲಿ ಈ ಸಿಬ್ಬಂದಿಗಳು ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದಾರೆ. ಈ ಸಿಬ್ಬಂದಿಗಳಿಗೆ ಖಾಯಂ ಸಿಬ್ಬಂದಿಗಳಂತೆ ಕಡ್ಡಾಯ ವರ್ಗಾವಣೆ ಮಾಡಿದರೆ ಈ ಕಡಿಮೆ ವೇತನದಲ್ಲಿ ಕುಟುಂಬ ನಿರ್ವಹಣೆ ಹೇಗೆ ಸಾಧ್ಯ? ಮೂರು ಮೂರು ತಿಂಗಳಿಗೊಮ್ಮೆ ವೇತನ ಆಗುತ್ತಿದ್ದು ಬೇರೆ ಜಿಲ್ಲೆಗೆ ಕಡ್ಡಾಯ ವರ್ಗಾವಣೆ ಮಾಡಿದ್ದರೆ ಮನೆ ಬಾಡಿಗೆ ಕಟ್ಟಲಾಗದೇ ಬೀದಿಗೆ ಬರಬೇಕಿದೆ ಎಂದು ಶಾಸಕರಿಗೆ ಮನವರಿಕೆ ಮಾಡಿದರು.
ಒಂದು ವೇಳೆ ಇಂತಹ ಕ್ರಮ ಕೈಗೊಂಡರೆ ಖಾಯಂ ಸಿಬ್ಬಂದಿಗಳಿಗೆ ನೀಡಿದಂತೆ ಎಲ್ಲಾ ಸೌಕರ್ಯ ಹಾಗೂ ಖಾಯಂ ಸೇರಿದಂತೆ ವೇತನ ಹೆಚ್ಚಳ ಮಾಡಿ, ಟಿಎ, ಡಿಎ, ಎಚ್ ಆರ್ ಎ ನೀಡಿ ಇಂತಹ ಆದೇಶ ಮಾಡಬೇಕು. ಸಿಬ್ಬಂದಿಗಳಿಗೆ ಬೆನ್ನು ತಟ್ಟಿ ಕೆಲಸ ಮಾಡಿಸಿಕೊಳ್ಳಬೇಕು.ಅದು ಬಿಟ್ಟು ಹೊಟ್ಟೆ ಮೇಲೆ ಹೊಡೆಯುವಂತಹ ಯಾವುದೇ ಆದೇಶ ಹೊರಡಿಸುವುದು ಎಷ್ಟು ಸರಿ ಎಂದು ಸಿಬ್ಬಂದಿಗಳು ಪ್ರಶ್ನೆ ಮಾಡಿದ್ದಾರೆ.
ಪ್ರಧಾನ ಕಾರ್ಯದರ್ಶಿಗಳ ಈ ಒಂದು ಪತ್ರ 30 ಸಾವಿರ ನೌಕರರಿಗೆ ಆತಂಕ ಸೃಷ್ಟಿ ಮಾಡಿದೆ. ಇದು ಈ ವರ್ಷದಲ್ಲಿ ಮೊದಲ ಸಾರಿ ಅಲ್ಲದೆ ಇದೇ ವರ್ಷ ಸಾಕಷ್ಟು ಮಾನಸಿಕ ಒತ್ತಡ ಹೆಚ್ಚಳವಾಗಿರುವ ಅನೇಕ ಆದೇಶ ಮಾಡಿದ್ದಾರೆ.
ಪ್ರತಿ ವರ್ಷ ಏಪ್ರಿಲ್ ಒಂದನೇ ತಾರೀಖು ಎಲ್ಲಾ ನೌಕರರಿಗೆ ಒಂದು ದಿವಸ ವಿರಾಮ ನೀಡಿ ಮುಂದುವರೆಸುತ್ತಿದ್ದು 2005 ರಿಂದ ಸುಮಾರು 20 ವರ್ಷಗಳವರೆಗೆ ಈ ಪದ್ಧತಿ ನಡೆದುಕೊಂಡು ಬಂದಿದೆ. ಆದರೆ ಈ ವರ್ಷ ಏಕಾಏಕಿ ಕೇವಲ 15 ದಿವಸ ವಿಸ್ತರಣೆ ನೀಡಿ, ತದನಂತರ ಒಂದು ತಿಂಗಳು ವಿಸ್ತರಣೆ ನೀಡಿ ಆಮೇಲೆ ಮೂರು ತಿಂಗಳ ವಿಸ್ತರಣೆ ನೀಡಿ ತದನಂತರ ಸಿಬ್ಬಂದಿಗಳಿಗೆ ಕರ್ತವ್ಯದಿಂದ ವಿಮುಕ್ತಿಗೊಳಿಸುವ ಆದೇಶ ನೀಡಿದ್ದು ನಮ್ಮ ಸಂಘಟನೆಯಿಂದ ಕೋರ್ಟ್ ನಲ್ಲಿ ದಾವೆ ಹೂಡಿದ್ದು ಇದೆ, ಕಳೆದ 8 ತಿಂಗಳಲ್ಲಿ ವೇತನ ಪಡೆಯಲು ಸರಿಯಾಗಿ ಅನುದಾನ ಬಿಡುಗಡೆ ಆಗದೇ ಸಿಬ್ಬಂದಿಗಳು ಪರದಾಡುವಂತಾಗಿದೆ. ಈ ಬಗ್ಗೆ ಸದನದಲ್ಲಿ ಗಮನ ಸೆಳೆದು ನಮಗೆ ನ್ಯಾಯ ಕೊಡಿಸಬೇಕೆಂದು ಶಾಸಕರಲ್ಲಿ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಸಂಘದ ಜಿಲ್ಲಾಧ್ಯಕ್ಷ ಹಾಲಸ್ವಾಮಿ, ಪ್ರಧಾನ ಕಾರ್ಯದರ್ಶಿ ಡಾ.ಮಂಜುನಾಥ್, ಸುನೀಲ್, ಸುರೇಶ್, ಮಹಾಲಿಂಗಪ್ಪ, ಬಸವರಾಜ್, ದೊಡ್ಡಮನಿ, ಡಾ.ರೇಣುಕಾ, ಇನ್ನಿತರರಿದ್ದರು.”
- ಪ್ರಧಾನ ಕಾರ್ಯದರ್ಶಿಗಳ ಆದೇಶ ರದ್ದುಗೊಳಿಸಲು ಎನ್ ಎಚ್ ಎಂ ಸಿಬ್ಬಂದಿಗಳು ಆಗ್ರಹ
- ಈ ಬಗ್ಗೆ ಬೆಳಗಾವಿ ಚಳಿಗಾಲ ಅಧಿವೇಶನದಲ್ಲಿ ಚರ್ಚಿಸಲು ಶಾಸಕ ಕೆ.ಎಸ್.ಬಸವಂತಪ್ಪಗೆ ಸಿಬ್ಬಂದಿಗಳ ಮನವಿ
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ದಾವಣಗೆರೆ | ಕನ್ನಡ ಚಳವಳಿ ಸಮಿತಿಯಿಂದ ಇಮ್ಮಡಿ ಪುಲಕೇಶಿ ಜಯಂತಿ ಆಚರಣೆ
ಸುದ್ದಿದಿನ,ದಾವಣಗೆರೆ:ನಗರದ ಜಯದೇವ ವೃತ್ತದಲ್ಲಿರುವ ಅಖಿಲ ಕರ್ನಾಟಕ ಕನ್ನಡ ಚಳವಳಿ ಕೇಂದ್ರ ಸಮಿತಿಯಿಂದ ಗುರುವಾರ (ಡಿಸೆಂಬರ್.4) ಕನ್ನಡ ಚಳವಳಿಯ ಕಚೇರಿಯ ಆವರಣದಲ್ಲಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ರಾಜ್ಯ ಉಪಾಧ್ಯಕ್ಷರಾದ ಟಿ ಶಿವಕುಮಾರ್ ಅವರು ಇಮ್ಮಡಿ ಪುಲ್ಲಕೇಶಿ ಸಾಮ್ರಾಟ್ ರವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು.
ನಂತರ ಜಿಲ್ಲಾಧ್ಯಕ್ಷರಾದ ಶಿವರತನ್ ಮಾತನಾಡಿ ,ನಾಡಿನ ಇತಿಹಾಸ ಪುಟಗಳಲ್ಲಿ ಕಣ್ಮರೆಯಾಗಿರುವ ಕನ್ನಡದ ಶ್ರೇಷ್ಠ ಸಾಮ್ರಾಟರಲ್ಲಿ ಇಮ್ಮಡಿ ಪುಲಿಕೇಶಿ ಅಗ್ರ ಸ್ಥಾನ ಪಡೆದಿದ್ದಾರೆ. ಇಂತಹ ಮಹಾನ್ ಸಾಮ್ರಾಟರನ್ನ ನೆನಪಿಸಿ ಮುಂದಿನ ಪೀಳಿಗೆಗೆ ಪರಿಚಯಿಸುವ ಜವಾಬ್ದಾರಿಯನ್ನು ನಾವೆಲ್ಲರೂ ಹೊರಬೇಕಾಗಿದೆ ಎಂದರು.
ಭಾರತೀಯ ನೌಕಾಪಡೆಯ ಪಿತಾಮಹ ಎಂದೇ ಕರೆಯಲಾಗುವ ಇಮ್ಮಡಿ ಪುಲಿಕೇಶಿ ಸಾಮ್ರಾಟರ ಜನ್ಮದಿನದ ಪ್ರಯುಕ್ತ ಭಾರತೀಯ ನೌಕಾಪಡೆ ದಿನಾಚರಣೆಯೆoದು ಆಚರಿಸುವುದು ಕನ್ನಡಿಗರಿಗೆ ಹೆಮ್ಮೆಯ ವಿಚಾರ.
ಬೇರೆಲ್ಲ ಜಯಂತಿಗಳನ್ನು ಆಚರಿಸುವ ಸರ್ಕಾರಗಳು ಇಮ್ಮಡಿ ಪುಲಿಕೇಶಿ ಜಯಂತಿಯನ್ನು ಕಡ್ಡಾಯವಾಗಿ ಎಲ್ಲೆಡೆ ಆಚರಿಸಲು ಆಡಳಿತಾತ್ಮಕವಾಗಿ ಜಾರಿಗೊಳಿಸಲು ಆದೇಶ ಹೊರಡಿಸಬೇಕು ಎಂದು ಆಗ್ರಹಿಸಿದರು.
ಮಹಿಳಾ ಅಧ್ಯಕ್ಷೆ ಶುಭಮಂಗಳ ಅವರು ಸಿಹಿ ವಿತರಿಸಿದರು. ಕನ್ನಡ ಚಳವಳಿಯ ಹಿರಿಯ ಹೋರಾಟಗಾರರು , ಕನ್ನಡ ಚಳವಳಿಯ ಮಾಜಿ ಅಧ್ಯಕ್ಷರಾದ ಬಂಕಾಪುರ ಚನ್ನಬಸಪ್ಪ, ದಾ.ಹ. ಶಿವಕುಮಾರ್. ಈಶ್ವರ್. ಪ್ರಕಾಶ್. ವಾರ್ತಾ ಇಲಾಖೆ ನಿವೃತ್ತ ಬಿ.ಎಸ್. ಬಸವರಾಜ್ ಹಾಗೂ ಹಲವಾರು ಕನ್ನಡಪರ ಹೋರಾಟಗಾರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ದಾವಣಗೆರೆ | ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿಗೆ ಅರ್ಜಿ ಆಹ್ವಾನ
ಸುದ್ದಿದಿನ,ದಾವಣಗೆರೆ:ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಮಹಿಳೆಯರ ಸರ್ವತೋಮುಖ ಅಭಿವೃದ್ಧಿಗಾಗಿ ಕ್ರಮಿಸುತ್ತಿರುವ ಅರ್ಹ ಸಂಘ, ಸಂಸ್ಥೆಗಳಿಗೆ ಮತ್ತು ವ್ಯಕ್ತಿಗಳನ್ನೊಳಗೊಂಡಂತೆ ಕ್ರೀಡೆ, ಕಲೆ, ಸಾಹಿತ್ಯ ಹಾಗೂ ಶಿಕ್ಷಣ ಕ್ಷೇತ್ರಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿರುವ ಮಹಿಳೆಯರು ಹಾಗೂ ಕ್ಲಿಷ್ಟಕರ ಪರಿಸ್ಥಿತಿಯಲ್ಲಿ ಆತ್ಮಸ್ಥೆರ್ಯದಿಂದ ಹೋರಾಡಿ ಜೀವನೋಪಾಯದಿಂದ ಪಾರು ಮಾಡಿದಂತಹ ಮಹಿಳೆಯರಿಗೆ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿಗೆ ಅರ್ಹ ಮಹಿಳೆಯರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಅರ್ಜಿಯನ್ನು ಉಪನಿರ್ದೇಶಕರು ಕಛೇರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ದಾವಣಗೆರೆ ಪಡೆದು ಅಗತ್ಯ ದಾಖಲೆಗಳೊಂದಿಗೆ ಡಿಸೆಂಬರ್ 24 ರೊಳಗಾಗಿ ಉಪ ನಿರ್ದೇಶಕರು, ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸರ್ಕಾರಿ ಬಾಲಕರ ಬಾಲಮಂದಿರ ಕಟ್ಟಡ, 14ನೇ ಮುಖ್ಯ ರಸ್ತೆ, ಕುವೆಂಪುನಗರ, ಎಂ.ಸಿ.ಸಿ, ‘ಬಿ’ ಬ್ಲಾಕ್, ದಾವಣಗೆರೆ ದೂ.ಸಂ:08192-264056 ಸಲ್ಲಿಸಬೇಕೆಂದು ಇಲಾಖೆಯ ಉಪನಿರ್ದೇಶಕರಾದ ರಾಜಾನಾಯ್ಕ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ4 days agoದಾವಣಗೆರೆ | ಜಿಲ್ಲಾ ಪಂಚಾಯಿತಿ ಸಿ.ಇ.ಒ ಗಿತ್ತೆ ಮಾಧವ್ ವಿಠ್ಠಲ್ ರಾವ್ ವಿರುದ್ಧ ಲೋಕಾಗೆ ದೂರು
-
ದಿನದ ಸುದ್ದಿ6 days agoದುಡಿಯುವ ವರ್ಗಕ್ಕೆ ಸ್ಥಳದಲ್ಲೇ ಉಚಿತ ಚಿಕಿತ್ಸೆ : ಶಾಸಕ ಕೆ.ಎಸ್.ಬಸವಂತಪ್ಪ ‘ಸಂಚಾರಿ ಆರೋಗ್ಯ ಘಟಕ’ಕ್ಕೆ ಚಾಲನೆ
-
ದಿನದ ಸುದ್ದಿ5 days agoಜಿಎಂ ವಿಶ್ವವಿದ್ಯಾಲಯ ರಂಗೋತ್ಸವ -2025 | ವಿದ್ಯಾರ್ಥಿಗಳ ಪ್ರತಿಭೆ ಅನಾವರಣ : ಸ್ಪರ್ಧೆಯಲ್ಲಿ ರಂಗ ಪ್ರೇಮ, ನಟನಾ ಚತುರತೆ ಬೆರಗು
-
ದಿನದ ಸುದ್ದಿ5 days agoಉಳಿಕೆ ಸರ್ಕಾರಿ ನಿವೇಶನ ಇಲಾಖೆಗಳ ವಿವಿಧ ಉದ್ದೇಶಿತ ಕಟ್ಟಡಗಳಿಗೆ ಹಂಚಿಕೆ: ಡಿಸಿ ಜಿ.ಎಂ.ಗಂಗಾಧರಸ್ವಾಮಿ
-
ದಿನದ ಸುದ್ದಿ6 days agoಸಹಾಯಧನಕ್ಕಾಗಿ ಅರ್ಜಿ ಆಹ್ವಾನ
-
ದಿನದ ಸುದ್ದಿ2 days agoಮಾನವ ಸಂಪನ್ಮೂಲ ನೀತಿ ಗುತ್ತಿಗೆ ನೌಕರರಿಗೆ ಮಾರಕ | ನೀತಿ ರದ್ದುಗೊಳಿಸಲು ಶಾಸಕ ಜೆ.ಎಸ್.ಬಸವಂತಪ್ಪಗೆ ಮನವಿ
-
ದಿನದ ಸುದ್ದಿ3 days agoದಾವಣಗೆರೆ | ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿಗೆ ಅರ್ಜಿ ಆಹ್ವಾನ
-
ದಿನದ ಸುದ್ದಿ2 days agoದಾವಣಗೆರೆ | ಕನ್ನಡ ಚಳವಳಿ ಸಮಿತಿಯಿಂದ ಇಮ್ಮಡಿ ಪುಲಕೇಶಿ ಜಯಂತಿ ಆಚರಣೆ

