Connect with us

ದಿನದ ಸುದ್ದಿ

ಅಂಬೇಡ್ಕರ್‌ : ಅಂತಿಮ ಯಾತ್ರೆಯ ಆರ್ದ್ರ ಚಿತ್ರಗಳು

Published

on

  • ಎನ್‌.ಆರ್‌. ಶಿವರಾಂ

ಡಿಸೆಂಬರ್‌ 4, 1956ನೇ ಇಸವಿ. ಡಾ. ಅಂಬೇಡ್ಕರ್‌ ಅವರು ರಾಜ್ಯಸಭೆಯ ಕಲಾಪಗಳಲ್ಲಿ ಭಾಗವಹಿಸಿದ್ದರು. ಮರುದಿನ ಮನೆಯಲ್ಲೇ ಉಳಿದುಕೊಂಡು ಬರವಣಿಗೆಯಲ್ಲಿ ತೊಡಗಿಕೊಂಡಿದ್ದರು. ಅಂದು ರಾತ್ರಿ 8ಕ್ಕೆ, ಜೈನ ಮುನಿಗಳೊಬ್ಬರು ಅಂಬೇಡ್ಕರ್‌ರವರನ್ನು ಭೇಟಿ ಮಾಡಿ ನಾಳಿನ ಒಂದು ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದರು. ರಾತ್ರಿ 11.15ಕ್ಕೆ ಲೇಖನಿ ಕೆಳಗಿಡುವ ವೇಳೆಗೆ ಬಾಬಾ ಸಾಹೇಬರು ಸಾಕಷ್ಟು ಬಳಲಿದ್ದರು. ನಂತರ ಕೊಂಚ ಊಟ ಮಾಡಿದರು.

ತಮ್ಮ ಆಪ್ತ ಕಾರ್ಯದರ್ಶಿ ನಾನಕ್‌ಚಂದುರತ್ತು ಜೊತೆ ‘ಬುದ್ಧ ಅಂಡ್‌ ಹಿಸ್‌ ಧಮ್ಮ’ ಗ್ರಂಥದ ಬಗ್ಗೆ ಮಾತನಾಡಿದರು ಹಾಗೂ ಈ ಪುಸ್ತಕದ ಅರ್ಪಣೆಯ ಟೈಪ್‌ ಮಾಡಿದ ಪುಟಗಳನ್ನು ಜೊತೆಗೆ ಬರ್ಮಾ ಸರ್ಕಾರಕ್ಕೆ ತಾವು ಬರೆದಿರುವ ಪತ್ರಗಳನ್ನು ತೆಗೆದು ತಮ್ಮ ಟೇಬಲ್‌ ಮೇಲಿಡುವಂತೆ ಸೂಚಿಸಿದರು. ರಾತ್ರಿ ಮತ್ತೊಮ್ಮೆ ಅವುಗಳನ್ನು ಪರಿಶೀಲಿಸುವುದು ಅವರ ಉದ್ದೇಶವಾಗಿತ್ತು. ‘ಬೆಳಿಗ್ಗೆ ಬೇಗನೇ ಬಂದುಬಿಡು. ಅವುಗಳೆಲ್ಲವನ್ನು ನಾಳೆಯೇ ತುರ್ತಾಗಿ ಕಳುಹಿಸಬೇಕು’ ಎಂದು ಹೇಳಿದರು.

ಎಲ್ಲ ಕೆಲಸ ಮುಗಿಸಿ, ‘ಬೆಳಿಗ್ಗೆ ಬೇಗ ಬರುವೆ’ ಎಂದು ಹೇಳಿದ ರತ್ತು ತಮ್ಮ ಸೈಕಲ್‌ ಹತ್ತಿ ಮನೆಗೆ ತೆರಳಿದರು. ನಂತರ ಬಾಬಾ ಸಾಹೇಬರು ಟೇಬಲ್‌ ಮೇಲಿಟ್ಟಿದ್ದ ಎಲ್ಲಾ ಕಾಗದ ಪತ್ರಗಳನ್ನು ಓದಿ ಮುಗಿಸಿ, ತಡರಾತ್ರಿ ಮಲಗಿಕೊಂಡರು. ಡಿಸೆಂಬರ್‌ 6ರ ಮುಂಜಾವು. ಬೆಳಿಗ್ಗೆ 6.30ಕ್ಕೆ ಬಾಬಾ ಸಾಹೇಬರ ಪತ್ನಿ ಸವಿತಾ ಅಂಬೇಡ್ಕರ್‌ ಅವರು ಚಹಾದೊಂದಿಗೆ ಕೊಠಡಿಗೆ ಬಂದರು. ಬಾಬಾ ಸಾಹೇಬರು ನಿದ್ದೆಯಲ್ಲಿದ್ದರು. ಅದು ಚಿರನಿದ್ರೆ.

ತಕ್ಷಣವೇ ರತ್ತು ಅವರಿಗೆ ಕರೆ ಹೋಯಿತು. ಅಂಬೇಡ್ಕರ್‌ ನಿಧನರಾದ ಸುದ್ದಿಯನ್ನು ನಂತರ ಆಕಾಶವಾಣಿಗೆ ತಿಳಿಸಲಾಯಿತು. ಈ ವಾರ್ತೆ ರೇಡಿಯೊದಲ್ಲಿ ಬಿತ್ತರಗೊಳ್ಳುತ್ತಿದ್ದಂತೆ ಇಡೀ ದೇಶದ ಸೂತಕದ ಸಂಚಲನೆ. ಬಾಬಾ ಸಾಹೇಬರ ಕೋಟಿ ಕೋಟಿ ಅನುಯಾಯಿಗಳು ದಿಗ್ಭ್ರಾಂತರಾದರು. ಲಕ್ಷ ಲಕ್ಷ ಜನರು ಅಂಬೇಡ್ಕರ್‌ರವರು ಕೊನೆಯುಸಿರೆಳೆದ ನವದೆಹಲಿಯ ಅಲಿಪುರ ರಸ್ತೆಯಲ್ಲಿರುವ 26ನೇ ನಂಬರಿನ ಬಂಗಲೆಯತ್ತ ಧಾವಿಸಲಾರಂಭಿಸಿದರು. ಅಂಬೇಡ್ಕರ್‌ರವರ ಪಾರ್ಥಿವ ಶರೀರವನ್ನು ಅವರ ಕರ್ಮಭೂಮಿ ಮುಂಬೈಗೆ ತರುವುದಾಗಿಯೂ, ಮುಂಬೈನಲ್ಲೇ ಅಂತಿಮ ಶವಸಂಸ್ಕಾರ ಮಾಡುವುದಾಗಿಯೂ ಪ್ರಕಟಿಸಲಾಯಿತು.

ದುಡ್ಡಿನ ಕೊರತೆ

1947ರಲ್ಲಿ ಬ್ರಿಟೀಷರು ಭಾರತಕ್ಕೆ ಸ್ವಾತಂತ್ರ್ಯ ನೀಡುವಾಗ ಅಖಂಡ ಭಾರತವನ್ನು ಭಾರತ ಮತ್ತು ಪಾಕಿಸ್ತಾನಗಳೆಂದು ಎರಡು ಪ್ರತ್ಯೇಕ ರಾಷ್ಟ್ರಗಳನ್ನಾಗಿ ವಿಭಜಿಸಿದರು. ಆ ಸಂದರ್ಭದಲ್ಲಿ ಅಂಬೇಡ್ಕರ್‌ ಅವರು ದಲಿತರಿಗಾಗಿಯೂ ಒಂದು ಪ್ರತ್ಯೇಕ ರಾಷ್ಟ್ರ ಕೇಳಿದ್ದರೆ, ಭಾರತ ಮೂರು ಪ್ರತ್ಯೇಕ ದೇಶಗಳನ್ನಾಗಿ ವಿಭಜನೆ ಹೊಂದುತ್ತಿತ್ತೇನೋ? ಆಗ ದಲಿತರಿಗಾಗಿ ರೂಪುಗೊಳ್ಳುವ ದೇಶಕ್ಕೆ ಅಂಬೇಡ್ಕರ್‌ ಅವರು ತಾವು ಬದುಕಿರುವವರೆಗೂ ಪ್ರಧಾನಮಂತ್ರಿ ಆಗಿರಬಹುದಿತ್ತು. ಆದರೆ ಬುದ್ಧನ ತತ್ವಗಳಿಂದ ಪ್ರಭಾವಿತರಾಗಿದ್ದ ಅವರು ಪ್ರಧಾನಿಯಾಗುವ ಆಸೆಯಿಂದ ಅಖಂಡ ಭಾರತವನ್ನು ಹೋಳು ಮಾಡಲು ಇಷ್ಟಪಡಲೂ ಇಲ್ಲ ಮತ್ತು ಅಂತಹ ಪ್ರಯತ್ನಕ್ಕೆ ಕೈ ಹಾಕಲೂ ಇಲ್ಲ.

ಅಧಿಕಾರದ ಮಾತಿರಲಿ, ಅಂಬೇಡ್ಕರ್‌ ತಮ್ಮ ವಿದ್ಯೆ–ತಿಳಿವಳಿಕೆಯನ್ನು ವಾಣಿಜ್ಯೋದ್ಯಮಕ್ಕೆ ಬಳಸಿಕೊಂಡಿದ್ದರೆ ಬಹುದೊಡ್ಡ ವಾಣಿಜ್ಯೋದ್ಯಮಿಯಾಗಿ ರೂಪುಗೊಳ್ಳಲು ಸಾಧ್ಯವಿತ್ತು. ಅವರಿಗಿದ್ದ ಜ್ಞಾನ ಮತ್ತು ಪ್ರತಿಭೆಗೆ ಅವರು ವಿದೇಶದಲ್ಲಿ ಉನ್ನತ ಹುದ್ದೆ ಪಡೆದು ಅಲ್ಲಿಯೇ ನೆಲೆಸಬಹುದಿತ್ತು.

ಆದರೆ, ಅವರದು ಭಾರತದಲ್ಲಿಯೇ ಉಳಿದು ಪ್ರವಾಹದ ವಿರುದ್ಧ ಈಜುವ ಮನೋಭಾವವಾಗಿತ್ತು. ಜ್ಞಾನ–ಶೀಲ–ಸ್ವಾಭಿಮಾನ ಮತ್ತು ಪ್ರಾಮಾಣಿಕತೆಗಳನ್ನೇ ಉಸಿರಾಡುವಂತೆ ಕಾಣಿಸುತ್ತಿದ್ದ ಅವರು ತಮ್ಮ ಬದುಕಿನ ಕೊನೆಯವರೆಗೂ ಆರ್ಥಿಕ ಮುಗ್ಗಟ್ಟು ಎದುರಿಸುತ್ತಿದ್ದರು. ಆ ಮುಗ್ಗಟ್ಟು ಅವರ ಸಾವಿನ ಸಂದರ್ಭದಲ್ಲೂ ಎದುರಾಯಿತು.

ಅಂಬೇಡ್ಕರ್‌ ಅವರ ದೇಹವನ್ನು ದೆಹಲಿಯಿಂದ ಮುಂಬೈಗೆ ಸಾಗಿಸಲು ಇಂಡಿಯನ್‌ ಏರ್‌ಲೈನ್ಸ್‌ನ ಲಘು ವಿಶೇಷ ವಿಮಾನವನ್ನು ಬಾಡಿಗೆಗೆ ಕೇಳಿದಾಗ, 5,000 ರೂಪಾಯಿ ಬಾಡಿಗೆಯಾಗುತ್ತದೆಂದು ತಿಳಿಸಲಾಯಿತು. ‘ಭಾರತದ ಸಂವಿಧಾನ ಶಿಲ್ಪಿ’ ಎನ್ನುವ ಖ್ಯಾತಿಯ ಹಾಗೂ ಕೇಂದ್ರ ಸರ್ಕಾರದ ಮಾಜಿ ಕಾನೂನು ಮಂತ್ರಿಗಳೂ ಆದ ಅಂಬೇಡ್ಕರ್‌ ಅವರ ಅಲ್ಮೇರಾ ತೆರೆದು ನೋಡಿದರೆ ಅಲ್ಲಿದ್ದುದು ಕೇವಲ 300 ರೂಪಾಯಿ! ರತ್ತುರವರು ಶ್ರೀಮತಿ ಸವಿತಾ ಅಂಬೇಡ್ಕರ್‌ರವರಲ್ಲಿ ವಿಚಾರಿಸಿದರೆ, ಅವರು ನನ್ನ ಹತ್ತಿರ ಸ್ವಲ್ಪವೂ ಹಣವಿಲ್ಲವೆಂದರು. 5,000 ರೂಪಾಯಿ ಹಣ ಹೊಂದಿಸಲು ಸಾಧ್ಯವಾಗದ ಪರಿಸ್ಥಿತಿ ಎದುರಾಯಿತು. ಆಗ ಟಿ.ಬಿ. ಬೋನ್‌ಸ್ಲೆ ಎನ್ನುವವರು ತಮ್ಮ ಅಂಬಾಸಿಡರ್‌ ಕಾರನ್ನು ಮಾರಾಟ ಮಾಡಿ ಹಣ ನೀಡಲು ಮುಂದಾದರು.

ಆದರೆ ಆ ಕಾರನ್ನು ತಕ್ಷಣಕ್ಕೆ ಕೊಳ್ಳಲು ಯಾರೂ ಮುಂದಾಗಲಿಲ್ಲ. ಕೊನೆಗೆ ಅಂದಿನ ಸಂಪರ್ಕ ಖಾತೆ (ವಿಮಾನಯಾನವೂ ಸೇರಿದಂತೆ) ಸಚಿವರಾದ ಬಾಬು ಜಗಜೀವನರಾಂ ಅವರನ್ನು ಸಂಪರ್ಕಿಸಲಾಯಿತು. ಅವರು, ‘ವಿಮಾನವನ್ನು ಉಚಿತವಾಗಿ ಬಯಸುತ್ತೀರೋ ಅಥವಾ ಅರ್ಧ ಬೆಲೆಯ (ರೂ. 2,500) ಬಾಡಿಗೆಗೆ ಬಯಸುತ್ತೀರೋ’ ಎಂದು ಅಂಬೇಡ್ಕರ್‌ರವರ ಮತ್ತೊಬ್ಬ ಸಹಾಯಕರಾದ ಡಾ. ಶಂಕರಾನಂದ ಶಾಸ್ತ್ರಿಯವರನ್ನು ಕೇಳಿದರು. ಅಂಬೇಡ್ಕರ್‌ರವರು ತಾವು ಬದುಕಿರುವಷ್ಟು ದಿನ ತನಗಾಗಿ ಯಾರಲ್ಲೂ ಏನನ್ನೂ ಬೇಡಿಕೊಂಡಿರಲಿಲ್ಲ.

ಹಾಗಾಗಿ ಉಚಿತವಾಗಿ ಬೇಡ, ಅರ್ಧ ಬಾಡಿಗೆಯನ್ನು ತಾನು ನೀಡುತ್ತೇನೆ. ಆದರೆ ಈಗ ಹಣ ಇಲ್ಲ. ಬಾಂಬೆಗೆ ಹೋದ ನಂತರ ಅಲ್ಲಿ ಈ ಹಣವನ್ನು ನೀಡುತ್ತೇನೆ, ಸಹಾಯ ಮಾಡಿ’ ಎಂದು ಶಂಕರಾನಂದ ಶಾಸ್ತ್ರಿಯವರು ಕೇಳಿಕೊಂಡರು. ತಕ್ಷಣ ಸ್ಪಂದಿಸಿದ ಜಗಜೀವನರಾಂರವರು– ‘ಸದ್ಯಕ್ಕೆ ನಿಮ್ಮಲ್ಲಿರುವ ಹಣವನ್ನು ಪಾವತಿಸಿ, ಉಳಿಕೆ ಹಣವನ್ನು ನಂತರ ಪಾವತಿಸಿ’ ಎಂದು ಹೇಳಿ ಇಂಡಿಯನ್‌ ಏರ್‌ಲೈನ್ಸನ ಲಘು ವಿಶೇಷ ವಿಮಾನಕ್ಕೆ ವ್ಯವಸ್ಥೆ ಮಾಡಿದರು. ನಂತರ ಈ ಉಳಿಕೆ ಹಣವನ್ನು ಬಾಂಬೆಯಲ್ಲಿ ಅಂಬೇಡ್ಕರ್‌ರವರ ನಿಕಟವರ್ತಿಗಳಾದ ‘ಗಾಯಕ್‌ವಾಡ್‌’ ಅವರು ಪಾವತಿಸಿದರು.

ಅಭಿಮಾನಿಗಳ ಅಶ್ರುತರ್ಪಣ

ದೆಹಲಿಯಲ್ಲಿ ಸಾರ್ವಜನಿಕರ ದರ್ಶನಕ್ಕಿಟ್ಟಿದ್ದ ಬಾಬಾ ಸಾಹೇಬರ ಪಾರ್ಥಿವ ಶರೀರವನ್ನು ಹೂವಿನಿಂದ ಅಲಂಕೃತವಾದ ಟ್ರಕ್‌ ಮೇಲಿಟ್ಟು ನಂ. 26, ಅಲಿಪುರ ರಸ್ತೆಯಲ್ಲಿನ ಮನೆಯಿಂದ ದೆಹಲಿಯ ಸಪ್ಧರ್‌ಜಂಗ್‌ ವಿಮಾನ ನಿಲ್ದಾಣಕ್ಕೆ ಮೆರವಣಿಗೆಯಲ್ಲಿ ತರಲಾಯಿತು. ಮಧ್ಯಾಹ್ನ 3ಕ್ಕೆ ಹೊರಟ ಮೆರವಣಿಗೆ, ಸುಮಾರು 7 ಲಕ್ಷಕ್ಕೂ ಅಧಿಕ ಸಂಖ್ಯೆಯಲ್ಲಿದ್ದ ದುಃಖತಪ್ತ ಜನರು ಬಾಬಾಸಾಹೇಬರ ಪಾರ್ಥಿವ ಶರೀರದ ಜೊತೆ ಸಾಗಿದ್ದರಿಂದ ವಿಮಾನ ನಿಲ್ದಾಣವನ್ನು ಸೇರಬೇಕಾದರೆ ರಾತ್ರಿ 9 ಗಂಟೆಯಾಗಿತ್ತು.

ರಾತ್ರಿ 9.45ಕ್ಕೆ ಸರಿಯಾಗಿ ಬಾಬಾ ಸಾಹೇಬರ ದೇಹವನ್ನು ಹೊತ್ತ ವಿಶೇಷ ವಿಮಾನವು ಮುಂಬೈನತ್ತ ಪ್ರಯಾಣ ಬೆಳೆಸಿತು. ಈ ವಿಮಾನದಲ್ಲಿ ಸವಿತಾ ಅಂಬೇಡ್ಕರ್‌, ರತ್ತು, ಬಿಕ್ಕು ಆನಂದ ಕೌಸಲಾಯನ್‌, ಡಾ. ಶಂಕರಾನಂದ ಶಾಸ್ತ್ರಿ ಸೇರಿದಂತೆ 11 ಜನರಿದ್ದರು. ವಿಮಾನವು ನಿಲ್ದಾಣ ಬಿಟ್ಟು ಆಕಾಶಕ್ಕೇರಿದ ತಕ್ಷಣ ಆ ಪರಿಸರದಲ್ಲಿ ಜಮಾಯಿಸಿದ್ದ 7 ಲಕ್ಷಕ್ಕೂ ಅಧಿಕ ಜನರು ದುಃಖಪೂರಿತರಾಗಿ ‘ಬಾಬಾ ಸಾಹೇಬ್‌ ಅಂಬೇಡ್ಕರ್‌ ಅಮರ್‌ ರಹೇ’ ಎಂದು ಘೋಷಣೆ ಕೂಗಿದರು.

ಮುಂಬೈನ ಸಾಂತಾಕ್ರೂಜ್‌ ವಿಮಾನ ನಿಲ್ದಾಣಕ್ಕೆ ಬಾಬಾ ಸಾಹೇಬರ ಪಾರ್ಥಿವ ಶರೀರ ತಲುಪಿದಾಗ, ಅಲ್ಲಿ ಸುಮಾರು 5 ಲಕ್ಷ ಮಂದಿ ಡಿಸೆಂಬರ್‌ ಚಳಿಯನ್ನು ಲೆಕ್ಕಿಸದೆ ನೆರೆದಿದ್ದರು. ಸುಮಾರು 25–30 ಮೈಲಿಗಳಿಂದ ಅಂಬೇಡ್ಕರ್‌ರವರ ಅಭಿಮಾನಿಗಳು ನಡೆದುಕೊಂಡೇ ವಿಮಾನ ನಿಲ್ದಾಣ ಬಂದಿದ್ದರು. ವಿಮಾನ ನಿಲ್ದಾಣದಿಂದ ಅಂಬೇಡ್ಕರರ ಪಾರ್ಥಿವ ದೇಹ ಅವರ ಸ್ವಗೃಹ ‘ರಾಜಗೃಹ’ಕ್ಕೆ ಬಂದು ಸೇರುವಷ್ಟೊತ್ತಿಗೆ ಬೆಳಗಿನ ಜಾವ 5.30. ಡಿಸೆಂಬರ್‌ 7ರ ಬೆಳಿಗ್ಗೆ 11 ಗಂಟೆಯ ತನಕ ಬಾಬಾ ಸಾಹೇಬರ ಪಾರ್ಥಿವ ಶರೀರವನ್ನು ‘ರಾಜಗೃಹ’ದ ಪೋರ್ಟಿಕೋದಲ್ಲಿ ಸಾರ್ವಜನಿಕರ ದರ್ಶನಕ್ಕೆ ಇಡಲಾಯಿತು. ಬಾಬಾ ಸಾಹೇಬರ ಅಂತಿಮ ದರ್ಶನ ಪಡೆಯಲು ಸುಮಾರು 20 ಕಿ.ಮೀ.ಗಳಷ್ಟು ಉದ್ದದ ಕ್ಯೂ ಇತ್ತು.

ಹೂವಿನಿಂದ ಅಲಂಕೃತಗೊಂಡ ಟ್ರಕ್‌ನ ಮೇಲೆ ಹಾಸಿಗೆಯನ್ನಿಟ್ಟು, ಹಾಸಿಗೆಯ ಮೇಲೆ ಶೋಷಿತರ ವಿಮೋಚಕ ಬಾಬಾಸಾಹೇಬರ ಶವವನ್ನು ಮಲಗಿಸಲಾಯಿತು. ತಲೆಯ ಪಕ್ಕ ಭಗವಾನ್‌ ಬುದ್ಧನ ಪ್ರತಿಮೆ ಇಡಲಾಯಿತು. ನಂತರ ‘ದಾದರ್‌’ ಕಡೆಗೆ ಅಂತಿಮ ಯಾತ್ರೆ ಹೊರಟಿತು. ಬಾಬಾ ಸಾಹೇಬರ ಅಂತಿಮ ಯಾತ್ರೆಯಲ್ಲಿ ಸುಮಾರು 20 ಲಕ್ಷಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು. ಇಷ್ಟೊಂದು ಬೃಹತ್‌ ಸಂಖ್ಯೆಯ ಜನರು ಭಾಗವಹಿಸಿದ್ದು ಮುಂಬೈನ ಇತಿಹಾಸದಲ್ಲೇ ಇರಲಿಲ್ಲ.

ಅಂಬೇಡ್ಕರ್‌ರವರು ಪ್ರಶಾಂತವಾಗಿ ಚಿರನಿದ್ರೆಯಲ್ಲಿ ಮಲಗಿರುವುದನ್ನು ನೋಡಲಾಗದೆ ಹೆಂಗಸರು ಸೇರಿದಂತೆ ಲಕ್ಷಾಂತರ ಜನ ಎದೆ ಬಡಿದುಕೊಂಡು ರೋಧಿಸುತ್ತಿದ್ದರು. ಅಂದು ಸಂಜೆ 6 ಗಂಟೆಗೆ ಅಂತಿಮಯಾತ್ರೆಯ ಶವ ಸಂಸ್ಕಾರ ಸ್ಥಳಕ್ಕೆ (ಚೈತ್ಯ ಭೂಮಿ) ಮೆರವಣಿಗೆ ತಲುಪಿತು. ಪಾರ್ಥಿವ ಶರೀರದ ಮುಂದೆ 2 ಲಕ್ಷ ಜನ ಬೌದ್ಧ ಧರ್ಮ ಸ್ವೀಕರಿಸುವ ಮೂಲಕ ಬಾಬಾ ಸಾಹೇಬರಿಗೆ ಗೌರವ ಸಲ್ಲಿಸಿದರು. (ಅದೇ ತಿಂಗಳ 16ರಂದು ಮುಂಬೈನಲ್ಲಿ 10 ಲಕ್ಷ ಜನರು ಅಂಬೇಡ್ಕರ್‌ ನೇತೃತ್ವದಲ್ಲಿ ಬೌದ್ಧ ಧರ್ಮ ಸ್ವೀಕರಿಸುವ ಕಾರ್ಯಕ್ರಮ ನಿಗದಿಯಾಗಿತ್ತು. ಈ ಕಾರ್ಯಕ್ರಮಕ್ಕೆ ಅಂಬೇಡ್ಕರ್‌ರವರು ಎಲ್ಲಾ ತಯಾರಿ ನಡೆಸಿದ್ದರು).

ಸಾಗರ- ಜನಸಾಗರ:

ಸಮುದ್ರದ ದಡದಲ್ಲಿ ಶವ ಸಂಸ್ಕಾರದ ಸ್ಥಳವಿತ್ತು. ಸಮುದ್ರದ ಒಳಗೆ ಸೊಂಟ ಮಟ್ಟದ ನೀರಿನಲ್ಲೇ ಜನರು ಗಂಟೆಗಟ್ಟಲೆ ನಿಂತಿದ್ದರು. ಜನರಿಗೆ ಬಾಬಾ ಸಾಹೇಬರ ಕಳೆಬರಹ ಕಾಣಲೆಂದು 6 ಅಡಿ ಎತ್ತರದ ಮಣ್ಣಿನ ದಿಬ್ಬ ನಿರ್ಮಿಸಿ, ಆ ದಿಬ್ಬದ ಮೇಲೆ ಗಂಧದ ಕಟ್ಟಿಗೆಗಳನ್ನಿಟ್ಟು ಅದರ ಮೇಲೆ ಬಾಬಾ ಸಾಹೇಬರನ್ನು ಮಲಗಿಸಲಾಗಿತ್ತು. ರಾತ್ರಿ 7.30ಕ್ಕೆ ಸರಿಯಾಗಿ ಅಂಬೇಡ್ಕರ್‌ ಪುತ್ರ ಯಶವಂತರಾವ್‌ ಅಂಬೇಡ್ಕರ್‌ರವರು ತಂದೆಯ ಚಿತೆಗೆ ಅಗ್ನಿಸ್ಪರ್ಶ ಮಾಡಿದರು.

ಶವಸಂಸ್ಕಾರವು ಬೌದ್ಧಧರ್ಮದ ವಿಧಿವಿಧಾನಗಳಂತೆ ನೆರವೇರಿತು. ವಿಶೇಷವೆಂದರೆ ಆ ಇಡೀ ರಾತ್ರಿ ಲಕ್ಷಾಂತರ ಜನರು ಅಲ್ಲೇ ಉಳಿದುಕೊಂಡಿದ್ದರು. ಬೆಳಿಗ್ಗೆ 6.30ಕ್ಕೆ ಅಲ್ಲಿಂದ ‘ಚಿತಾಭಸ್ಮ’ವನ್ನು ತೆಗೆದ ನಂತರ ಜನರು ಅಲ್ಲಿಂದ ತೆರಳಿದರು. ಚಿತಾಭಸ್ಮವನ್ನು ಒಂದು ಮಣ್ಣಿನ ಕುಡಿಕೆಯಲ್ಲಿಟ್ಟು ತೆರೆದ ವಾಹನದ ಮೂಲಕ ಅವರ ನಿವಾಸ ‘ರಾಜಗೃಹ’ಕ್ಕೆ ತರಲಾಯಿತು. ಚಿತಾಭಸ್ಮವನ್ನು ತರುವಾಗ ಮೆರವಣಿಗೆಯಲ್ಲಿ 5 ಲಕ್ಷ ಜನರು ಸೇರಿದ್ದರು. ಬಾಬಾ ಸಾಹೇಬ್‌ ಅಂಬೇಡ್ಕರ್‌ರವರ ಚಿತಾಭಸ್ಮವನ್ನು ಈಗ ಮುಂಬೈನಲ್ಲಿರುವ ಅವರ ಸಮಾಧಿ ಸ್ಥಳದಲ್ಲಿ ಮತ್ತು ನಾಗಪುರದಲ್ಲಿ ಸಂರಕ್ಷಿಸಿಡಲಾಗಿದೆ.

ಈಗಲೂ ಅಂಬೇಡ್ಕರ್‌ ಅವರ ಪರಿನಿರ್ವಾಣದ ದಿನ ಡಿಸೆಂಬರ್‌ 6ರಂದು, ಮುಂಬೈನ ಚೈತ್ಯಭೂಮಿಯಲ್ಲಿರುವ ಅವರ ಸಮಾಧಿಗೆ ದೇಶದ ಮೂಲೆ ಮೂಲೆಗಳಿಂದ ಜನರು ಬಂದು ಶ್ರದ್ಧಾಂಜಲಿ ಸಲ್ಲಿಸುತ್ತಾರೆ. ಡಿಸೆಂಬರ್‌ 6 ಅಂಬೇಡ್ಕರ್‌ ಸ್ಮೃತಿ ದಿನ ಮಾತ್ರವಲ್ಲದೆ, ಅದು ಮನುಷ್ಯತ್ವದ ಹೊಳಪನ್ನು ನವೀಕರಿಸುವ ದಿನವೂ ಆಗಿದೆ. ಎಲ್ಲ ಮಹಾತ್ಮರ ನೆನಪುಗಳಿಗೂ ಮಾನಸಿಕ ಕೊಳಕನ್ನು ತೊಳೆದು ಹೊಳಪು ನೀಡುವ ಜೀವಂತಿಕೆಯ ಮಾಂತ್ರಿಕ ಶಕ್ತಿ ಇರುತ್ತದಲ್ಲವೇ?

ಕೃಪೆ:ಪ್ರಜಾವಾಣಿ (0/12/2013)

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ಜಿಎಂ ಡಿಪ್ಲೋಮೋ ಕಾಲೇಜಿನ 44 ವಿದ್ಯಾರ್ಥಿಗಳು ಕ್ಯಾಂಪಸ್ ಸಂದರ್ಶನದಲ್ಲಿ ಆಯ್ಕೆ

Published

on

ಸುದ್ದಿದಿನ,ದಾವಣಗೆರೆ:ನಗರದ ಪ್ರತಿಷ್ಠಿತ ಜಿಎಂ ತಾಂತ್ರಿಕ ಮಹಾವಿದ್ಯಾಲಯದ ತರಬೇತಿ ಮತ್ತು ಉದ್ಯೋಗ ವಿಭಾಗದಿಂದ ಇತ್ತೀಚಿಗೆ ನಡೆದ ಕ್ಯಾಂಪಸ್ ಸಂದರ್ಶನ ಪ್ರಕ್ರಿಯೆಯಲ್ಲಿ ಜಿಎಂ ಡಿಪ್ಲೋಮೋ ಕಾಲೇಜಿನ ವಿವಿಧ ವಿಭಾಗಗಳಿಂದ 44 ಅಂತಿಮ ವರ್ಷದ ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ.

ಮೆಕ್ಯಾನಿಕಲ್, ಸಿವಿಲ್, ಎಲೆಕ್ಟ್ರಿಕಲ್ ಮತ್ತು ಕಂಪ್ಯೂಟರ್ ಸೈನ್ಸ್ ವಿಭಾಗದಿಂದ ಒಟ್ಟು 44 ಅಂತಿಮ ವರ್ಷದ ವಿದ್ಯಾರ್ಥಿಗಳು ನ್ಯೂಜೈಸಾ ಟೆಕ್ನಾಲಜಿಸ್ ನಲ್ಲಿ ಉದ್ಯೋಗವಕಾಶಕ್ಕೆ ಅರ್ಹತೆ ಪಡೆದಿದ್ದಾರೆ ಎಂದು ತರಬೇತಿ ಮತ್ತು ಉದ್ಯೋಗ ವಿಭಾಗದ ನಿರ್ದೇಶಕರಾದ ತೇಜಸ್ವಿ ಕಟ್ಟಿಮನಿ ಟಿ.ಆರ್. ತಿಳಿಸಿದ್ದಾರೆ.

ಆಯ್ಕೆಯಾದ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಜಿಎಂ ಕಾಲೇಜಿನ ಚೇರ್ಮನ್ ಆದ ಜಿ.ಎಂ. ಲಿಂಗರಾಜು, ಜಿಎಂಐಟಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಸಂಜಯ್ ಪಾಂಡೆ ಎಂಬಿ, ಕಾಲೇಜಿನ ಆಡಳಿತ ಅಧಿಕಾರಿಗಳಾದ ವೈ.ಯು. ಸುಭಾಷ್ ಚಂದ್ರ, ಪಾಲಿಟೆಕ್ನಿಕ್ ಕಾಲೇಜಿನ ಪ್ರಾಂಶುಪಾಲರಾದ ಬಿ.ಎನ್. ಶ್ರೀಧರ್ ಅಭಿನಂದನೆ ಸಲ್ಲಿಸಿದ್ದು, 44 ವಿದ್ಯಾರ್ಥಿಗಳು ಆಯ್ಕೆಯಾಗಿ ಕಾಲೇಜಿಗೆ ಕೀರ್ತಿಯನ್ನು ತಂದಿರುತ್ತಾರೆ ಎಂದು ಹರುಷ ವ್ಯಕ್ತಪಡಿಸಿದ್ದಾರೆ.

ಆಯ್ಕೆಯಾದ ವಿದ್ಯಾರ್ಥಿಗಳು ಹರ್ಷ ವ್ಯಕ್ತಪಡಿಸಿದ್ದು, ಈ ಸಂಭ್ರಮದಲ್ಲಿ ಜಿಎಂ ಪಾಲಿಟೆಕ್ನಿಕ್ ಕಾಲೇಜಿನ ಸಿವಿಲ್ ವಿಭಾಗದ ಮುಖ್ಯಸ್ಥರಾದ ಸಿ. ನಿಂಗರಾಜು, ಡಿಪ್ಲೋಮೋದ ತರಬೇತಿ ಮತ್ತು ಉದ್ಯೋಗ ವಿಭಾಗದ ಸಂಯೋಜಕರಾದ ಯಾಸ್ಮಿನ್ ಬೇಗಮ್, ಎಲೆಕ್ಟ್ರಿಕಲ್ ವಿಭಾಗದ ಮುಖ್ಯಸ್ಥರಾದ ಕೆ.ಬಿ. ಜನಾರ್ಧನ್, ಕಂಪ್ಯೂಟರ್ ಸೈನ್ಸ್ ವಿಭಾಗದ ಮುಖ್ಯಸ್ಥರಾದ ಸಿ.ಎನ್. ಸಂದೀಪ್, ಮೆಕಾನಿಕಲ್ ವಿಭಾಗದ ಮುಖ್ಯಸ್ಥರಾದ ಎಂ. ಪ್ರವೀಣ್ ಕುಮಾರ್, ಕೆ. ಗಿರಿಜಾ ಸೇರಿದಂತೆ ಇತರರು ಇದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಕುರಿ ಮತ್ತು ಮೇಕೆ ಸಾಕಾಣಿಕೆ ತರಬೇತಿ

Published

on

ಸುದ್ದಿದಿನ,ದಾವಣಗೆರೆ:ದಾವಣಗೆರೆ ಪಶುಪಾಲನಾ ಮತ್ತು ಪಶುವೈದ್ಯಕೀಯ ತರಬೇತಿ ಕೇಂದ್ರದಲ್ಲಿ ಕುರಿ ಮತ್ತು ಮೇಕೆ ಸಾಕಾಣಿಕೆ ತರಬೇತಿ ಫೆಬ್ರವರಿ 14 ಮತ್ತು 15 ರಂದು ಆಯೋಜಿಸಲಾಗಿದೆ.

ಆಸಕ್ತ ರೈತರು ಆಧಾರ್ ಕಾರ್ಡ್ ಜೆರಾಕ್ಸ್, 2 ಪಾಸ್ ಪೋರ್ಟ್ ಸೈಜ್ ಪೋಟೋ ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರು ಜಾತಿ ಪ್ರಮಾಣ ಪತ್ರದ ಜೆರಾಕ್ಸ್ ಪ್ರತಿಯೊಂದಿಗೆ ಹಾಜರಾಗಬೇಕು. ತರಬೇತಿ ಕಾರ್ಯಕ್ರಮಕ್ಕೆ ಯಾವುದೇ ಪ್ರೋತ್ಸಾಹಧನ ಮತ್ತು ಭತ್ಯೆಗಳನ್ನು ನೀಡಲಾಗುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ ಪಶುಪಾಲನಾ ಮತ್ತು ಪಶುವೈದ್ಯಕೀಯ ತರಬೇತಿ ಕೇಂದ್ರ, ದಾವಣಗೆರೆ ಕಚೇರಿ ದೂ.ಸಂ: 08192-233787 ಸಂಪರ್ಕಿಸಿ ಮಾಹಿತಿ ಪಡೆದುಕೊಳ್ಳಬಹುದು ಎಂದು ಪಶುವೈದ್ಯಾಧಿಕಾರಿಗಳು ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಫೆಬ್ರವರಿ 17 ಮತ್ತು 18ಕ್ಕೆ ಕಲಬುರಗಿಯಲ್ಲಿ ಮೀಡಿಯಾ ಫೆಸ್ಟ್-2025

Published

on

ಸುದ್ದಿದಿನ,ಕಲಬುರಗಿ:ಕಲ್ಯಾಣ ಕರ್ನಾಟಕದ ಕೇಂದ್ರಸ್ಥಾನ ಕಲಬುರಗಿಯಲ್ಲಿ ಇದೇ ಮೊದಲ ಬಾರಿಗೆ ಸರ್ಕಾರದಿಂದ ಕಲಬುರಗಿ ಶರಣಬಸವ ವಿಶ್ವವಿದ್ಯಾಲಯದಲ್ಲಿ ಫೆಬ್ರವರಿ 17 ಮತ್ತು 18 ರಂದು ಎರಡು ದಿನಗಳ ಕಾಲ ಭವಿಷ್ಯದಲ್ಲಿ ಪತ್ರಕರ್ತರಾಗುವ ಪತ್ರಿಕೋದ್ಯಮ ವಿದ್ಯಾರ್ಥಿಗಳಿಗಾಗಿ ಮೀಡಿಯಾ ಫೆಸ್ಟ್-2025 ಕಾರ್ಯಕ್ರಮ ಆಯೋಜಿಸಿದೆ ಎಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಕಲಬುರಗಿ ಉಪನಿರ್ದೇಶಕ ಜಡಿಯಪ್ಪ ಗೆದ್ಲಗಟ್ಟಿ ತಿಳಿಸಿದರು.

ಮಂಗಳವಾರ ಕಲಬುರಗಿ ನಗರದ ಪತ್ರಿಕಾ ಭವನದಲ್ಲಿ ಜಂಟಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಕರ್ನಾಟಕ ಮಾಧ್ಯಮ ಅಕಾಡೆಮಿ, ಶರಣಬಸವ ವಿಶ್ವವಿದ್ಯಾಲಯ ಹಾಗೂ
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಕಲಬುರಗಿ ಇವರ ಸಹಯೋಗದೊಂದಿಗೆ ಈ ಕಾರ್ಯಕ್ರಮ ಆಯೋಜಿಸಲಾಗುತ್ತಿದ್ದು, ಕಾರ್ಯಾಗಾರ, ನುರಿತ ಪತ್ರಕರ್ತರಿಂದ ಗೋಷ್ಠಿ, ಸ್ಪರ್ಧೆಗಳು ನಡೆಯಲಿವೆ. ಕಲಬುರಗಿ ಮತ್ತು ಬೆಳಗಾವಿ ವಿಭಾಗದ ವಿಶ್ವವಿದ್ಯಾಲಯ, ಪದವಿ ಹಾಗೂ ಸ್ನಾತಕೋತ್ತರ ಪದವಿ ಪತ್ರಿಕೋದ್ಯಮ ವಿಭಾಗದ ಸುಮಾರು 200 ವಿದ್ಯಾರ್ಥಿಗಳು ಮತ್ತು ಕಾಲೇಜಿನ ಪ್ರಾಧ್ಯಾಪಕರು ಇದರಲ್ಲಿ ಭಾಗವಹಿಸಲಿದ್ದಾರೆ ಎಂದರು.

ಪತ್ರಿಕೋದ್ಯಮ ವಿದ್ಯಾರ್ಥಿಗಳ ಪ್ರತಿಭೆ ಪ್ರದರ್ಶನಕ್ಕೆ ವೇದಿಕೆ

ಶರಣಬಸವ ವಿಶ್ವವಿದ್ಯಾಲಯದ ಪತಿಕೋದ್ಯಮ ಮತ್ತು ಸಮೂಹ ಸಂವಹನ ಸ್ನಾತಕೋತ್ತರ ಪದವಿ ವಿಭಾಗದ ಮುಖ್ಯಸ್ಥ ಟಿ.ವಿ.ಶಿವಾನಂದನ್ ಮಾತನಾಡಿ, ಎರಡು ದಿನಗಳ ಕಾಲ ನಡೆಯುವ ಈ ಮಾಧ್ಯಮೋತ್ಸವದಲ್ಲಿ ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ತಮ್ಮ ಪ್ರತಿಭೆ ಪ್ರದರ್ಶಿಸಲು ವೇದಿಕೆ ಒದಗಿಸಲಾಗುತ್ತಿದೆ. ಭವಿಷ್ಯದ ಸ್ಪರ್ಧಾತ್ಮಕ ಪತ್ರಕರ್ತರಲ್ಲಿ ಅತ್ಯುತ್ತಮರನ್ನು ಹೊರತರಲು ಹತ್ತು ಹಲವು ಸ್ಪರ್ಧೆಗಳನ್ನು ವಿನ್ಯಾಸಗೊಳಿಸಿದ್ದು, ಶರಣಬಸವ ವಿಶ್ವವಿದ್ಯಾಲಯದ ಮುಖ್ಯ ಆವರಣದ ವಿವಿಧ ಸ್ಥಳಗಳಲ್ಲಿ ಈ ಸ್ಪರ್ಧೆ ನಡೆಯಲಿವೆ. ಕಾರ್ಯಕ್ರಮ್ಕಕೆ ಆಗಮಿಸುವ ವಿದ್ಯಾರ್ಥಿಗಳಿಗೆ ವಿ.ವಿ.ಯಲ್ಲಿ ವಸತಿ, ಊಟದ ವ್ಯವಸ್ಥೆ ಮಾಡಿದ್ದು, ಸ್ಪರ್ಧೇಯಲ್ಲಿ ಭಾಗವಹಿಸುವ ವಿದ್ಯಾರ್ಥಿಗಳಿಗೆ ಯಾವುದೇ ಶುಲ್ಕ ಇಲ್ಲ. ಪ್ರವೇಶ ಸಂಪೂರ್ಣ ಉಚಿತ ಇರಲಿದೆ. ಇನ್ನು ಕರ್ನಾಟಕ ಮಾಧ್ಯಮ ಅಕಾಡೆಮಿಯು ವಿದ್ಯಾರ್ಥಿಗಳ ನೋಂದಣಿ ಕಾರ್ಯ ನಿರ್ವಹಿಸುತ್ತಿದೆ ಎಂದರು.

ವೈಯಕ್ತಿಕ ಸ್ಪರ್ಧೆಗಳು ಮತ್ತು ಗುಂಪು ಸ್ಪರ್ಧೆಗಳು ಎಂದು ಎರಡು ವಿಭಾಗಗಳಾಗಿ ಸ್ಪರ್ಧೇಗಳನ್ನು ವಿಂಗಡಿಸಲಾಗಿದೆ. ವೈಯಕ್ತಿಕ ಸ್ಪರ್ಧೆಗಳಲ್ಲಿ ನೇರ ಪತ್ರಿಕಾಗೋಷ್ಠಿ ವರದಿ ಮಾಡುವಿಕೆ, ಪಿಟಿಸಿ ಮತ್ತು ಟಿವಿ ವರದಿ ಮಾಡುವಿಕೆ, ಸ್ಪಾಟ್ ಛಾಯಾಗ್ರಹಣ, ರೇಡಿಯೋ ಜಾಕಿ, ನುಡಿಚಿತ್ರ, ಜಾಹೀರಾತು ಬರವಣಿಗೆ, ಸಾಮಾಜಿಕ ಮಾಧ್ಯಮದ ವರದಿ ಮಾಡುವಿಕೆ ಮತ್ತು ಮುಖ್ಯಾಂಶಗಳನ್ನು ಬರೆಯುವ ಕಲೆ ಸೇರಿವೆ. ಗುಂಪು ಸ್ಪರ್ಧೆಗಳಲ್ಲಿ ಪ್ರಚಲಿತ ವಿದ್ಯಮಾನಗಳ ಕುರಿತು ರಸಪ್ರಶ್ನೆ, “ನಮ್ಮೂರ ಭಾಷೆ–ವರವಾ?
ಶಾಪವಾ?”
ಚರ್ಚಾ ಸ್ಪರ್ಧೆ ಸೇರಿದೆ ಎಂದರು.

ಕಲ್ಯಾಣ ಕರ್ನಾಟಕ ಮಾಧ್ಯಮೋತ್ಸವದ ಮತ್ತೊಂದು ವೈಶಿಷ್ಟ್ಯವೆಂದರೆ ಉದಯೋನ್ಮುಖ ಪತ್ರಕರ್ತರ ಕೌಶಲ್ಯಗಳನ್ನು ಉತ್ತಮಗೊಳಿಸುವ ಎರಡು ಕಾರ್ಯಾಗಾರಗಳು ಹಮ್ಮಿಕೊಳ್ಳಲಾಗಿದೆ. ಮೊದಲ ಕಾರ್ಯಾಗಾರದಲ್ಲಿ ಹಿರಿಯ ಪತ್ರಕರ್ತ ಹಾಗೂ ನಟ, ನಿರ್ದೇಶಕ ಮತ್ತು ಆಲ್ಮಾ ಮೀಡಿಯಾದ ಸಂಸ್ಥಾಪಕರಾದ ಗೌರೀಶ್ ಅಕ್ಕಿ, ಮಾಧ್ಯಮದ ಸ್ಪರ್ಧಾತ್ಮಕ ಜಗತ್ತನ್ನು ಪ್ರವೇಶಿಸುವ ಹಾಗೂ ಸವಾಲುಗಳನ್ನು ಎದುರಿಸಲು ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದ ವಿದ್ಯಾರ್ಥಿಗಳನ್ನು ಪರಿಣಾಮಕಾರಿಯಾಗಿ ಸಿದ್ಧಪಡಿಸುವ ಕುರಿತು ಮಾತನಾಡಲಿದ್ದಾರೆ. ಎರಡನೇ ಕಾರ್ಯಾಗಾರದಲ್ಲಿ ನಕಲಿ ಸುದ್ದಿಗಳನ್ನು ಹೇಗೆ ಗುರುತಿಸುವುದು ಎಂಬುದರ ಕುರಿತು ಮಣಿಪಾಲ ಉನ್ನತ ಶಿಕ್ಷಣ ಅಕಾಡೆಮಿಯ ಹಿರಿಯ ಪತ್ರಕರ್ತೆ ಹಾಗೂ ಪ್ರಾಧ್ಯಾಪಕಿ ಪ್ರೊ. ಕಾಂಚನ ಕೌರ್ ಮಾತನಾಡಲಿದ್ದಾರೆ ಎಂದು ಕಾರ್ಯಕ್ರಮದ ರೂಪುರೇಷೆ ಕುರಿತು ವಿವರಿಸಿದ ಟಿ.ವಿ.ಶಿವಾನಂದನ್ ಅವರು, ಎರಡು ದಿನಗಳ ಕಾಲ ಸಾಂಸ್ಕೃತಿಕ ಕಾರ್ಯಕ್ರಮಗಳು ಸಹ ನಡೆಯಲಿವೆ ಎಂದರು.

ಫೆಬ್ರವರಿ 17 ರಂದು ಕೆ.ಕೆ.ಆರ್.ಡಿ.ಬಿ ಅಧ್ಯಕ್ಷ ಡಾ. ಅಜಯ್ ಸಿಂಗ್ ಅವರು ಮೀಡಿಯಾ ಫೆಸ್ಟ್ ಉದ್ಘಾಟಿಸಲಿದ್ದಾರೆ. ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಚೇರಪರ್ಸನ್ ಡಾ. ದಾಕ್ಷಾಯಿಣಿ ಅವ್ವಾಜಿ ಮತ್ತು ಸಂಸ್ಥಾನದ 9ನೇ ಪೀಠಾಧಿಪತಿ ಪೂಜ್ಯ ಚಿರಂಜೀವಿ ದೊಡ್ಡಪ್ಪ ಅಪ್ಪಾಜಿಯವರ ದಿವ್ಯ ಸಾನಿಧ್ಯದಲ್ಲಿ ನಡೆಯುವ ಈ ಸಮಾರಂಭದಲ್ಲಿ ಕರ್ನಾಟಕ ಮಾಧ್ಯಮ ಅಕಾಡೆಮಿಯ ಅಧ್ಯಕ್ಷೆ ಆಯೇಷಾ ಖಾನಮ್, ಕೊಪ್ಪಳ ವಿಶ್ವವಿದ್ಯಾಲಯದ ಉಪ ಕುಲಪತಿ ಡಾ. ಬಿ. ಕೆ. ರವಿ, ಶರಣಬಸವ ವಿಶ್ವವಿದ್ಯಾಲಯದ ಉಪ ಕುಲಪತಿ ಡಾ. ಅನಿಲ್‌ಕುಮಾರ್ ಬಿಡವೆ, ಗುಲಬರ್ಗಾ ವಿಶ್ವವಿದ್ಯಾಲಯದ ಉಪ ಕುಲಪತಿ ಡಾ. ಶ್ರೀರಾಮುಲು, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಘಟಕದ ಉಪಾಧ್ಯಕ್ಷ ಭವಾನಿ ಸಿಂಗ್, ಕಲಬುರಗಿ ಘಟಕದ ಅಧ್ಯಕ್ಷ ಬಾಬುರಾವ್ ಯಡ್ರಾಮಿ ಮತ್ತು ಇನ್ನಿತರ ಗಣ್ಯರು ಈ ಮಾಧ್ಯಮೋತ್ಸವದಲ್ಲಿ ಪಾಲ್ಗೊಳ್ಳಲಿದ್ದಾರೆ.

ಫೆಬ್ರವರಿ 18 ರಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ್ ಅವರು ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದು, ಕಲಬುರಗಿಯ ಉತ್ತರ ಮತಕ್ಷೇತ್ರದ ಶಾಸಕಿ ಖನೀಜ್ ಫಾತಿಮಾ, ಕಲಬುರಗಿಯ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ್ ಮತ್ತು ಇತರ ಚುನಾಯಿತ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಜರ್ ಆಲಂ ಖಾನ್ ವಿಜೇತರಿಗೆ ಬಹುಮಾನಗಳನ್ನು ವಿತರಿಸಲಿದ್ದಾರೆ ಎಂದು ಕಾರ್ಯಕ್ರಮಗಳ ಕುರಿತು ಮಾಹಿತಿ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಘಟಕದ ಉಪಾಧ್ಯಕ್ಷ ಭವಾನಿ ಸಿಂಗ್, ಕಲಬುರಗಿ ಘಟಕದ ಜಿಲ್ಲಾಧ್ಯಕ್ಷ ಬಾಬುರಾವ್ ಯಡ್ರಾಮಿ ಇದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending