ದಿನದ ಸುದ್ದಿ
ಅಂಬೇಡ್ಕರ್ : ಅಂತಿಮ ಯಾತ್ರೆಯ ಆರ್ದ್ರ ಚಿತ್ರಗಳು
- ಎನ್.ಆರ್. ಶಿವರಾಂ
ಡಿಸೆಂಬರ್ 4, 1956ನೇ ಇಸವಿ. ಡಾ. ಅಂಬೇಡ್ಕರ್ ಅವರು ರಾಜ್ಯಸಭೆಯ ಕಲಾಪಗಳಲ್ಲಿ ಭಾಗವಹಿಸಿದ್ದರು. ಮರುದಿನ ಮನೆಯಲ್ಲೇ ಉಳಿದುಕೊಂಡು ಬರವಣಿಗೆಯಲ್ಲಿ ತೊಡಗಿಕೊಂಡಿದ್ದರು. ಅಂದು ರಾತ್ರಿ 8ಕ್ಕೆ, ಜೈನ ಮುನಿಗಳೊಬ್ಬರು ಅಂಬೇಡ್ಕರ್ರವರನ್ನು ಭೇಟಿ ಮಾಡಿ ನಾಳಿನ ಒಂದು ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದರು. ರಾತ್ರಿ 11.15ಕ್ಕೆ ಲೇಖನಿ ಕೆಳಗಿಡುವ ವೇಳೆಗೆ ಬಾಬಾ ಸಾಹೇಬರು ಸಾಕಷ್ಟು ಬಳಲಿದ್ದರು. ನಂತರ ಕೊಂಚ ಊಟ ಮಾಡಿದರು.
ತಮ್ಮ ಆಪ್ತ ಕಾರ್ಯದರ್ಶಿ ನಾನಕ್ಚಂದುರತ್ತು ಜೊತೆ ‘ಬುದ್ಧ ಅಂಡ್ ಹಿಸ್ ಧಮ್ಮ’ ಗ್ರಂಥದ ಬಗ್ಗೆ ಮಾತನಾಡಿದರು ಹಾಗೂ ಈ ಪುಸ್ತಕದ ಅರ್ಪಣೆಯ ಟೈಪ್ ಮಾಡಿದ ಪುಟಗಳನ್ನು ಜೊತೆಗೆ ಬರ್ಮಾ ಸರ್ಕಾರಕ್ಕೆ ತಾವು ಬರೆದಿರುವ ಪತ್ರಗಳನ್ನು ತೆಗೆದು ತಮ್ಮ ಟೇಬಲ್ ಮೇಲಿಡುವಂತೆ ಸೂಚಿಸಿದರು. ರಾತ್ರಿ ಮತ್ತೊಮ್ಮೆ ಅವುಗಳನ್ನು ಪರಿಶೀಲಿಸುವುದು ಅವರ ಉದ್ದೇಶವಾಗಿತ್ತು. ‘ಬೆಳಿಗ್ಗೆ ಬೇಗನೇ ಬಂದುಬಿಡು. ಅವುಗಳೆಲ್ಲವನ್ನು ನಾಳೆಯೇ ತುರ್ತಾಗಿ ಕಳುಹಿಸಬೇಕು’ ಎಂದು ಹೇಳಿದರು.
ಎಲ್ಲ ಕೆಲಸ ಮುಗಿಸಿ, ‘ಬೆಳಿಗ್ಗೆ ಬೇಗ ಬರುವೆ’ ಎಂದು ಹೇಳಿದ ರತ್ತು ತಮ್ಮ ಸೈಕಲ್ ಹತ್ತಿ ಮನೆಗೆ ತೆರಳಿದರು. ನಂತರ ಬಾಬಾ ಸಾಹೇಬರು ಟೇಬಲ್ ಮೇಲಿಟ್ಟಿದ್ದ ಎಲ್ಲಾ ಕಾಗದ ಪತ್ರಗಳನ್ನು ಓದಿ ಮುಗಿಸಿ, ತಡರಾತ್ರಿ ಮಲಗಿಕೊಂಡರು. ಡಿಸೆಂಬರ್ 6ರ ಮುಂಜಾವು. ಬೆಳಿಗ್ಗೆ 6.30ಕ್ಕೆ ಬಾಬಾ ಸಾಹೇಬರ ಪತ್ನಿ ಸವಿತಾ ಅಂಬೇಡ್ಕರ್ ಅವರು ಚಹಾದೊಂದಿಗೆ ಕೊಠಡಿಗೆ ಬಂದರು. ಬಾಬಾ ಸಾಹೇಬರು ನಿದ್ದೆಯಲ್ಲಿದ್ದರು. ಅದು ಚಿರನಿದ್ರೆ.
ತಕ್ಷಣವೇ ರತ್ತು ಅವರಿಗೆ ಕರೆ ಹೋಯಿತು. ಅಂಬೇಡ್ಕರ್ ನಿಧನರಾದ ಸುದ್ದಿಯನ್ನು ನಂತರ ಆಕಾಶವಾಣಿಗೆ ತಿಳಿಸಲಾಯಿತು. ಈ ವಾರ್ತೆ ರೇಡಿಯೊದಲ್ಲಿ ಬಿತ್ತರಗೊಳ್ಳುತ್ತಿದ್ದಂತೆ ಇಡೀ ದೇಶದ ಸೂತಕದ ಸಂಚಲನೆ. ಬಾಬಾ ಸಾಹೇಬರ ಕೋಟಿ ಕೋಟಿ ಅನುಯಾಯಿಗಳು ದಿಗ್ಭ್ರಾಂತರಾದರು. ಲಕ್ಷ ಲಕ್ಷ ಜನರು ಅಂಬೇಡ್ಕರ್ರವರು ಕೊನೆಯುಸಿರೆಳೆದ ನವದೆಹಲಿಯ ಅಲಿಪುರ ರಸ್ತೆಯಲ್ಲಿರುವ 26ನೇ ನಂಬರಿನ ಬಂಗಲೆಯತ್ತ ಧಾವಿಸಲಾರಂಭಿಸಿದರು. ಅಂಬೇಡ್ಕರ್ರವರ ಪಾರ್ಥಿವ ಶರೀರವನ್ನು ಅವರ ಕರ್ಮಭೂಮಿ ಮುಂಬೈಗೆ ತರುವುದಾಗಿಯೂ, ಮುಂಬೈನಲ್ಲೇ ಅಂತಿಮ ಶವಸಂಸ್ಕಾರ ಮಾಡುವುದಾಗಿಯೂ ಪ್ರಕಟಿಸಲಾಯಿತು.
ದುಡ್ಡಿನ ಕೊರತೆ
1947ರಲ್ಲಿ ಬ್ರಿಟೀಷರು ಭಾರತಕ್ಕೆ ಸ್ವಾತಂತ್ರ್ಯ ನೀಡುವಾಗ ಅಖಂಡ ಭಾರತವನ್ನು ಭಾರತ ಮತ್ತು ಪಾಕಿಸ್ತಾನಗಳೆಂದು ಎರಡು ಪ್ರತ್ಯೇಕ ರಾಷ್ಟ್ರಗಳನ್ನಾಗಿ ವಿಭಜಿಸಿದರು. ಆ ಸಂದರ್ಭದಲ್ಲಿ ಅಂಬೇಡ್ಕರ್ ಅವರು ದಲಿತರಿಗಾಗಿಯೂ ಒಂದು ಪ್ರತ್ಯೇಕ ರಾಷ್ಟ್ರ ಕೇಳಿದ್ದರೆ, ಭಾರತ ಮೂರು ಪ್ರತ್ಯೇಕ ದೇಶಗಳನ್ನಾಗಿ ವಿಭಜನೆ ಹೊಂದುತ್ತಿತ್ತೇನೋ? ಆಗ ದಲಿತರಿಗಾಗಿ ರೂಪುಗೊಳ್ಳುವ ದೇಶಕ್ಕೆ ಅಂಬೇಡ್ಕರ್ ಅವರು ತಾವು ಬದುಕಿರುವವರೆಗೂ ಪ್ರಧಾನಮಂತ್ರಿ ಆಗಿರಬಹುದಿತ್ತು. ಆದರೆ ಬುದ್ಧನ ತತ್ವಗಳಿಂದ ಪ್ರಭಾವಿತರಾಗಿದ್ದ ಅವರು ಪ್ರಧಾನಿಯಾಗುವ ಆಸೆಯಿಂದ ಅಖಂಡ ಭಾರತವನ್ನು ಹೋಳು ಮಾಡಲು ಇಷ್ಟಪಡಲೂ ಇಲ್ಲ ಮತ್ತು ಅಂತಹ ಪ್ರಯತ್ನಕ್ಕೆ ಕೈ ಹಾಕಲೂ ಇಲ್ಲ.
ಅಧಿಕಾರದ ಮಾತಿರಲಿ, ಅಂಬೇಡ್ಕರ್ ತಮ್ಮ ವಿದ್ಯೆ–ತಿಳಿವಳಿಕೆಯನ್ನು ವಾಣಿಜ್ಯೋದ್ಯಮಕ್ಕೆ ಬಳಸಿಕೊಂಡಿದ್ದರೆ ಬಹುದೊಡ್ಡ ವಾಣಿಜ್ಯೋದ್ಯಮಿಯಾಗಿ ರೂಪುಗೊಳ್ಳಲು ಸಾಧ್ಯವಿತ್ತು. ಅವರಿಗಿದ್ದ ಜ್ಞಾನ ಮತ್ತು ಪ್ರತಿಭೆಗೆ ಅವರು ವಿದೇಶದಲ್ಲಿ ಉನ್ನತ ಹುದ್ದೆ ಪಡೆದು ಅಲ್ಲಿಯೇ ನೆಲೆಸಬಹುದಿತ್ತು.
ಆದರೆ, ಅವರದು ಭಾರತದಲ್ಲಿಯೇ ಉಳಿದು ಪ್ರವಾಹದ ವಿರುದ್ಧ ಈಜುವ ಮನೋಭಾವವಾಗಿತ್ತು. ಜ್ಞಾನ–ಶೀಲ–ಸ್ವಾಭಿಮಾನ ಮತ್ತು ಪ್ರಾಮಾಣಿಕತೆಗಳನ್ನೇ ಉಸಿರಾಡುವಂತೆ ಕಾಣಿಸುತ್ತಿದ್ದ ಅವರು ತಮ್ಮ ಬದುಕಿನ ಕೊನೆಯವರೆಗೂ ಆರ್ಥಿಕ ಮುಗ್ಗಟ್ಟು ಎದುರಿಸುತ್ತಿದ್ದರು. ಆ ಮುಗ್ಗಟ್ಟು ಅವರ ಸಾವಿನ ಸಂದರ್ಭದಲ್ಲೂ ಎದುರಾಯಿತು.
ಅಂಬೇಡ್ಕರ್ ಅವರ ದೇಹವನ್ನು ದೆಹಲಿಯಿಂದ ಮುಂಬೈಗೆ ಸಾಗಿಸಲು ಇಂಡಿಯನ್ ಏರ್ಲೈನ್ಸ್ನ ಲಘು ವಿಶೇಷ ವಿಮಾನವನ್ನು ಬಾಡಿಗೆಗೆ ಕೇಳಿದಾಗ, 5,000 ರೂಪಾಯಿ ಬಾಡಿಗೆಯಾಗುತ್ತದೆಂದು ತಿಳಿಸಲಾಯಿತು. ‘ಭಾರತದ ಸಂವಿಧಾನ ಶಿಲ್ಪಿ’ ಎನ್ನುವ ಖ್ಯಾತಿಯ ಹಾಗೂ ಕೇಂದ್ರ ಸರ್ಕಾರದ ಮಾಜಿ ಕಾನೂನು ಮಂತ್ರಿಗಳೂ ಆದ ಅಂಬೇಡ್ಕರ್ ಅವರ ಅಲ್ಮೇರಾ ತೆರೆದು ನೋಡಿದರೆ ಅಲ್ಲಿದ್ದುದು ಕೇವಲ 300 ರೂಪಾಯಿ! ರತ್ತುರವರು ಶ್ರೀಮತಿ ಸವಿತಾ ಅಂಬೇಡ್ಕರ್ರವರಲ್ಲಿ ವಿಚಾರಿಸಿದರೆ, ಅವರು ನನ್ನ ಹತ್ತಿರ ಸ್ವಲ್ಪವೂ ಹಣವಿಲ್ಲವೆಂದರು. 5,000 ರೂಪಾಯಿ ಹಣ ಹೊಂದಿಸಲು ಸಾಧ್ಯವಾಗದ ಪರಿಸ್ಥಿತಿ ಎದುರಾಯಿತು. ಆಗ ಟಿ.ಬಿ. ಬೋನ್ಸ್ಲೆ ಎನ್ನುವವರು ತಮ್ಮ ಅಂಬಾಸಿಡರ್ ಕಾರನ್ನು ಮಾರಾಟ ಮಾಡಿ ಹಣ ನೀಡಲು ಮುಂದಾದರು.
ಆದರೆ ಆ ಕಾರನ್ನು ತಕ್ಷಣಕ್ಕೆ ಕೊಳ್ಳಲು ಯಾರೂ ಮುಂದಾಗಲಿಲ್ಲ. ಕೊನೆಗೆ ಅಂದಿನ ಸಂಪರ್ಕ ಖಾತೆ (ವಿಮಾನಯಾನವೂ ಸೇರಿದಂತೆ) ಸಚಿವರಾದ ಬಾಬು ಜಗಜೀವನರಾಂ ಅವರನ್ನು ಸಂಪರ್ಕಿಸಲಾಯಿತು. ಅವರು, ‘ವಿಮಾನವನ್ನು ಉಚಿತವಾಗಿ ಬಯಸುತ್ತೀರೋ ಅಥವಾ ಅರ್ಧ ಬೆಲೆಯ (ರೂ. 2,500) ಬಾಡಿಗೆಗೆ ಬಯಸುತ್ತೀರೋ’ ಎಂದು ಅಂಬೇಡ್ಕರ್ರವರ ಮತ್ತೊಬ್ಬ ಸಹಾಯಕರಾದ ಡಾ. ಶಂಕರಾನಂದ ಶಾಸ್ತ್ರಿಯವರನ್ನು ಕೇಳಿದರು. ಅಂಬೇಡ್ಕರ್ರವರು ತಾವು ಬದುಕಿರುವಷ್ಟು ದಿನ ತನಗಾಗಿ ಯಾರಲ್ಲೂ ಏನನ್ನೂ ಬೇಡಿಕೊಂಡಿರಲಿಲ್ಲ.
ಹಾಗಾಗಿ ಉಚಿತವಾಗಿ ಬೇಡ, ಅರ್ಧ ಬಾಡಿಗೆಯನ್ನು ತಾನು ನೀಡುತ್ತೇನೆ. ಆದರೆ ಈಗ ಹಣ ಇಲ್ಲ. ಬಾಂಬೆಗೆ ಹೋದ ನಂತರ ಅಲ್ಲಿ ಈ ಹಣವನ್ನು ನೀಡುತ್ತೇನೆ, ಸಹಾಯ ಮಾಡಿ’ ಎಂದು ಶಂಕರಾನಂದ ಶಾಸ್ತ್ರಿಯವರು ಕೇಳಿಕೊಂಡರು. ತಕ್ಷಣ ಸ್ಪಂದಿಸಿದ ಜಗಜೀವನರಾಂರವರು– ‘ಸದ್ಯಕ್ಕೆ ನಿಮ್ಮಲ್ಲಿರುವ ಹಣವನ್ನು ಪಾವತಿಸಿ, ಉಳಿಕೆ ಹಣವನ್ನು ನಂತರ ಪಾವತಿಸಿ’ ಎಂದು ಹೇಳಿ ಇಂಡಿಯನ್ ಏರ್ಲೈನ್ಸನ ಲಘು ವಿಶೇಷ ವಿಮಾನಕ್ಕೆ ವ್ಯವಸ್ಥೆ ಮಾಡಿದರು. ನಂತರ ಈ ಉಳಿಕೆ ಹಣವನ್ನು ಬಾಂಬೆಯಲ್ಲಿ ಅಂಬೇಡ್ಕರ್ರವರ ನಿಕಟವರ್ತಿಗಳಾದ ‘ಗಾಯಕ್ವಾಡ್’ ಅವರು ಪಾವತಿಸಿದರು.
ಅಭಿಮಾನಿಗಳ ಅಶ್ರುತರ್ಪಣ
ದೆಹಲಿಯಲ್ಲಿ ಸಾರ್ವಜನಿಕರ ದರ್ಶನಕ್ಕಿಟ್ಟಿದ್ದ ಬಾಬಾ ಸಾಹೇಬರ ಪಾರ್ಥಿವ ಶರೀರವನ್ನು ಹೂವಿನಿಂದ ಅಲಂಕೃತವಾದ ಟ್ರಕ್ ಮೇಲಿಟ್ಟು ನಂ. 26, ಅಲಿಪುರ ರಸ್ತೆಯಲ್ಲಿನ ಮನೆಯಿಂದ ದೆಹಲಿಯ ಸಪ್ಧರ್ಜಂಗ್ ವಿಮಾನ ನಿಲ್ದಾಣಕ್ಕೆ ಮೆರವಣಿಗೆಯಲ್ಲಿ ತರಲಾಯಿತು. ಮಧ್ಯಾಹ್ನ 3ಕ್ಕೆ ಹೊರಟ ಮೆರವಣಿಗೆ, ಸುಮಾರು 7 ಲಕ್ಷಕ್ಕೂ ಅಧಿಕ ಸಂಖ್ಯೆಯಲ್ಲಿದ್ದ ದುಃಖತಪ್ತ ಜನರು ಬಾಬಾಸಾಹೇಬರ ಪಾರ್ಥಿವ ಶರೀರದ ಜೊತೆ ಸಾಗಿದ್ದರಿಂದ ವಿಮಾನ ನಿಲ್ದಾಣವನ್ನು ಸೇರಬೇಕಾದರೆ ರಾತ್ರಿ 9 ಗಂಟೆಯಾಗಿತ್ತು.
ರಾತ್ರಿ 9.45ಕ್ಕೆ ಸರಿಯಾಗಿ ಬಾಬಾ ಸಾಹೇಬರ ದೇಹವನ್ನು ಹೊತ್ತ ವಿಶೇಷ ವಿಮಾನವು ಮುಂಬೈನತ್ತ ಪ್ರಯಾಣ ಬೆಳೆಸಿತು. ಈ ವಿಮಾನದಲ್ಲಿ ಸವಿತಾ ಅಂಬೇಡ್ಕರ್, ರತ್ತು, ಬಿಕ್ಕು ಆನಂದ ಕೌಸಲಾಯನ್, ಡಾ. ಶಂಕರಾನಂದ ಶಾಸ್ತ್ರಿ ಸೇರಿದಂತೆ 11 ಜನರಿದ್ದರು. ವಿಮಾನವು ನಿಲ್ದಾಣ ಬಿಟ್ಟು ಆಕಾಶಕ್ಕೇರಿದ ತಕ್ಷಣ ಆ ಪರಿಸರದಲ್ಲಿ ಜಮಾಯಿಸಿದ್ದ 7 ಲಕ್ಷಕ್ಕೂ ಅಧಿಕ ಜನರು ದುಃಖಪೂರಿತರಾಗಿ ‘ಬಾಬಾ ಸಾಹೇಬ್ ಅಂಬೇಡ್ಕರ್ ಅಮರ್ ರಹೇ’ ಎಂದು ಘೋಷಣೆ ಕೂಗಿದರು.
ಮುಂಬೈನ ಸಾಂತಾಕ್ರೂಜ್ ವಿಮಾನ ನಿಲ್ದಾಣಕ್ಕೆ ಬಾಬಾ ಸಾಹೇಬರ ಪಾರ್ಥಿವ ಶರೀರ ತಲುಪಿದಾಗ, ಅಲ್ಲಿ ಸುಮಾರು 5 ಲಕ್ಷ ಮಂದಿ ಡಿಸೆಂಬರ್ ಚಳಿಯನ್ನು ಲೆಕ್ಕಿಸದೆ ನೆರೆದಿದ್ದರು. ಸುಮಾರು 25–30 ಮೈಲಿಗಳಿಂದ ಅಂಬೇಡ್ಕರ್ರವರ ಅಭಿಮಾನಿಗಳು ನಡೆದುಕೊಂಡೇ ವಿಮಾನ ನಿಲ್ದಾಣ ಬಂದಿದ್ದರು. ವಿಮಾನ ನಿಲ್ದಾಣದಿಂದ ಅಂಬೇಡ್ಕರರ ಪಾರ್ಥಿವ ದೇಹ ಅವರ ಸ್ವಗೃಹ ‘ರಾಜಗೃಹ’ಕ್ಕೆ ಬಂದು ಸೇರುವಷ್ಟೊತ್ತಿಗೆ ಬೆಳಗಿನ ಜಾವ 5.30. ಡಿಸೆಂಬರ್ 7ರ ಬೆಳಿಗ್ಗೆ 11 ಗಂಟೆಯ ತನಕ ಬಾಬಾ ಸಾಹೇಬರ ಪಾರ್ಥಿವ ಶರೀರವನ್ನು ‘ರಾಜಗೃಹ’ದ ಪೋರ್ಟಿಕೋದಲ್ಲಿ ಸಾರ್ವಜನಿಕರ ದರ್ಶನಕ್ಕೆ ಇಡಲಾಯಿತು. ಬಾಬಾ ಸಾಹೇಬರ ಅಂತಿಮ ದರ್ಶನ ಪಡೆಯಲು ಸುಮಾರು 20 ಕಿ.ಮೀ.ಗಳಷ್ಟು ಉದ್ದದ ಕ್ಯೂ ಇತ್ತು.
ಹೂವಿನಿಂದ ಅಲಂಕೃತಗೊಂಡ ಟ್ರಕ್ನ ಮೇಲೆ ಹಾಸಿಗೆಯನ್ನಿಟ್ಟು, ಹಾಸಿಗೆಯ ಮೇಲೆ ಶೋಷಿತರ ವಿಮೋಚಕ ಬಾಬಾಸಾಹೇಬರ ಶವವನ್ನು ಮಲಗಿಸಲಾಯಿತು. ತಲೆಯ ಪಕ್ಕ ಭಗವಾನ್ ಬುದ್ಧನ ಪ್ರತಿಮೆ ಇಡಲಾಯಿತು. ನಂತರ ‘ದಾದರ್’ ಕಡೆಗೆ ಅಂತಿಮ ಯಾತ್ರೆ ಹೊರಟಿತು. ಬಾಬಾ ಸಾಹೇಬರ ಅಂತಿಮ ಯಾತ್ರೆಯಲ್ಲಿ ಸುಮಾರು 20 ಲಕ್ಷಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು. ಇಷ್ಟೊಂದು ಬೃಹತ್ ಸಂಖ್ಯೆಯ ಜನರು ಭಾಗವಹಿಸಿದ್ದು ಮುಂಬೈನ ಇತಿಹಾಸದಲ್ಲೇ ಇರಲಿಲ್ಲ.
ಅಂಬೇಡ್ಕರ್ರವರು ಪ್ರಶಾಂತವಾಗಿ ಚಿರನಿದ್ರೆಯಲ್ಲಿ ಮಲಗಿರುವುದನ್ನು ನೋಡಲಾಗದೆ ಹೆಂಗಸರು ಸೇರಿದಂತೆ ಲಕ್ಷಾಂತರ ಜನ ಎದೆ ಬಡಿದುಕೊಂಡು ರೋಧಿಸುತ್ತಿದ್ದರು. ಅಂದು ಸಂಜೆ 6 ಗಂಟೆಗೆ ಅಂತಿಮಯಾತ್ರೆಯ ಶವ ಸಂಸ್ಕಾರ ಸ್ಥಳಕ್ಕೆ (ಚೈತ್ಯ ಭೂಮಿ) ಮೆರವಣಿಗೆ ತಲುಪಿತು. ಪಾರ್ಥಿವ ಶರೀರದ ಮುಂದೆ 2 ಲಕ್ಷ ಜನ ಬೌದ್ಧ ಧರ್ಮ ಸ್ವೀಕರಿಸುವ ಮೂಲಕ ಬಾಬಾ ಸಾಹೇಬರಿಗೆ ಗೌರವ ಸಲ್ಲಿಸಿದರು. (ಅದೇ ತಿಂಗಳ 16ರಂದು ಮುಂಬೈನಲ್ಲಿ 10 ಲಕ್ಷ ಜನರು ಅಂಬೇಡ್ಕರ್ ನೇತೃತ್ವದಲ್ಲಿ ಬೌದ್ಧ ಧರ್ಮ ಸ್ವೀಕರಿಸುವ ಕಾರ್ಯಕ್ರಮ ನಿಗದಿಯಾಗಿತ್ತು. ಈ ಕಾರ್ಯಕ್ರಮಕ್ಕೆ ಅಂಬೇಡ್ಕರ್ರವರು ಎಲ್ಲಾ ತಯಾರಿ ನಡೆಸಿದ್ದರು).
ಸಾಗರ- ಜನಸಾಗರ:
ಸಮುದ್ರದ ದಡದಲ್ಲಿ ಶವ ಸಂಸ್ಕಾರದ ಸ್ಥಳವಿತ್ತು. ಸಮುದ್ರದ ಒಳಗೆ ಸೊಂಟ ಮಟ್ಟದ ನೀರಿನಲ್ಲೇ ಜನರು ಗಂಟೆಗಟ್ಟಲೆ ನಿಂತಿದ್ದರು. ಜನರಿಗೆ ಬಾಬಾ ಸಾಹೇಬರ ಕಳೆಬರಹ ಕಾಣಲೆಂದು 6 ಅಡಿ ಎತ್ತರದ ಮಣ್ಣಿನ ದಿಬ್ಬ ನಿರ್ಮಿಸಿ, ಆ ದಿಬ್ಬದ ಮೇಲೆ ಗಂಧದ ಕಟ್ಟಿಗೆಗಳನ್ನಿಟ್ಟು ಅದರ ಮೇಲೆ ಬಾಬಾ ಸಾಹೇಬರನ್ನು ಮಲಗಿಸಲಾಗಿತ್ತು. ರಾತ್ರಿ 7.30ಕ್ಕೆ ಸರಿಯಾಗಿ ಅಂಬೇಡ್ಕರ್ ಪುತ್ರ ಯಶವಂತರಾವ್ ಅಂಬೇಡ್ಕರ್ರವರು ತಂದೆಯ ಚಿತೆಗೆ ಅಗ್ನಿಸ್ಪರ್ಶ ಮಾಡಿದರು.
ಶವಸಂಸ್ಕಾರವು ಬೌದ್ಧಧರ್ಮದ ವಿಧಿವಿಧಾನಗಳಂತೆ ನೆರವೇರಿತು. ವಿಶೇಷವೆಂದರೆ ಆ ಇಡೀ ರಾತ್ರಿ ಲಕ್ಷಾಂತರ ಜನರು ಅಲ್ಲೇ ಉಳಿದುಕೊಂಡಿದ್ದರು. ಬೆಳಿಗ್ಗೆ 6.30ಕ್ಕೆ ಅಲ್ಲಿಂದ ‘ಚಿತಾಭಸ್ಮ’ವನ್ನು ತೆಗೆದ ನಂತರ ಜನರು ಅಲ್ಲಿಂದ ತೆರಳಿದರು. ಚಿತಾಭಸ್ಮವನ್ನು ಒಂದು ಮಣ್ಣಿನ ಕುಡಿಕೆಯಲ್ಲಿಟ್ಟು ತೆರೆದ ವಾಹನದ ಮೂಲಕ ಅವರ ನಿವಾಸ ‘ರಾಜಗೃಹ’ಕ್ಕೆ ತರಲಾಯಿತು. ಚಿತಾಭಸ್ಮವನ್ನು ತರುವಾಗ ಮೆರವಣಿಗೆಯಲ್ಲಿ 5 ಲಕ್ಷ ಜನರು ಸೇರಿದ್ದರು. ಬಾಬಾ ಸಾಹೇಬ್ ಅಂಬೇಡ್ಕರ್ರವರ ಚಿತಾಭಸ್ಮವನ್ನು ಈಗ ಮುಂಬೈನಲ್ಲಿರುವ ಅವರ ಸಮಾಧಿ ಸ್ಥಳದಲ್ಲಿ ಮತ್ತು ನಾಗಪುರದಲ್ಲಿ ಸಂರಕ್ಷಿಸಿಡಲಾಗಿದೆ.
ಈಗಲೂ ಅಂಬೇಡ್ಕರ್ ಅವರ ಪರಿನಿರ್ವಾಣದ ದಿನ ಡಿಸೆಂಬರ್ 6ರಂದು, ಮುಂಬೈನ ಚೈತ್ಯಭೂಮಿಯಲ್ಲಿರುವ ಅವರ ಸಮಾಧಿಗೆ ದೇಶದ ಮೂಲೆ ಮೂಲೆಗಳಿಂದ ಜನರು ಬಂದು ಶ್ರದ್ಧಾಂಜಲಿ ಸಲ್ಲಿಸುತ್ತಾರೆ. ಡಿಸೆಂಬರ್ 6 ಅಂಬೇಡ್ಕರ್ ಸ್ಮೃತಿ ದಿನ ಮಾತ್ರವಲ್ಲದೆ, ಅದು ಮನುಷ್ಯತ್ವದ ಹೊಳಪನ್ನು ನವೀಕರಿಸುವ ದಿನವೂ ಆಗಿದೆ. ಎಲ್ಲ ಮಹಾತ್ಮರ ನೆನಪುಗಳಿಗೂ ಮಾನಸಿಕ ಕೊಳಕನ್ನು ತೊಳೆದು ಹೊಳಪು ನೀಡುವ ಜೀವಂತಿಕೆಯ ಮಾಂತ್ರಿಕ ಶಕ್ತಿ ಇರುತ್ತದಲ್ಲವೇ?
ಕೃಪೆ:ಪ್ರಜಾವಾಣಿ (0/12/2013)
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಇಂದಿನಿಂದ ಏ.3 ರವರೆಗೆ ಸೂಳೆಕೆರೆಗೆ ನೀರು ಬಿಡುಗಡೆ
ಸುದ್ದಿದಿನ,ದಾವಣಗೆರೆ: ಭದ್ರಾ ಜಲಾಶಯ ಯೋಜನೆ ವ್ಯಾಪ್ತಿಗೆ ಬರುವ ದೇವರಬೆಳಕೆರೆ ಪಿಕ್ಅಪ್ ಅಣೆಕಟ್ಟಿನ ಸ್ಕವರಿಂಗ್ ಸ್ಪೂಯೀಸ್ ಗೇಟ್ ಮುಖಾಂತರ ಜಲಾಶಯದ ಡೆಡ್ ಸ್ಟೋರೇಜ್ ನೀರನ್ನು ಸೂಳೆಕೆರೆ ಹಳ್ಳಕ್ಕೆ ಮಾರ್ಚ್ 28 ರಿಂದ ಏಪ್ರಿಲ್ 3 ರವರೆಗೆ ಪ್ರತಿದಿನ 20 ಕ್ಯೂಸೆಕ್ಸ್ಗಳಲ್ಲಿ ಜನ-ಜಾನುವಾರು ಪಕ್ಷಿಗಳಿಗೆ ಕುಡಿಯುವ ನೀರು ಒದಗಿಸಲು ಹಾಗೂ ಅಕ್ಕಪಕ್ಕದ ಗ್ರಾಮಗಳ ಕುಡಿಯುವ ನೀರಿನ ಉದ್ದೇಶಕ್ಕೆ ಬಿಡಲಾಗುತ್ತಿದೆ.
ಈ ವೇಳೆ ಹಳ್ಳಕ್ಕೆ ದನ ಕರಗಳನ್ನು ಇಳಿಸುವುದಾಗಲಿ, ಪಂಪ್ಸೆಟ್ಗಳಿಂದ ನೀರೆತ್ತುವುದುನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ಕನೀನಿನಿ ಕಾರ್ಯಪಾಲಕ ಇಂಜಿನಿಯರ್ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಲೋಕಸಭಾ ಚುನಾವಣೆಯ ಮೊದಲ ಹಂತಕ್ಕೆ ನಾಮಪತ್ರ ಸಲ್ಲಿಕೆಗೆ ಇಂದು ಕೊನೆಯ ದಿನ
ಸುದ್ದಿದಿನ ಡೆಸ್ಕ್ : ಲೋಕಸಭಾ ಚುನಾವಣೆಯ ಮೊದಲ ಹಂತಕ್ಕೆ ನಾಮಪತ್ರ ಸಲ್ಲಿಸಲು ಇಂದು ಕೊನೆಯ ದಿನವಾಗಿದೆ.
ನಾಳೆ ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, ಇದೇ 30 ನಾಮಪತ್ರ ಹಿಂಪಡೆಯಲು ಕಡೆಯ ದಿನವಾಗಿದೆ. ಇದೇ ವೇಳೆ ಬಿಹಾರದಲ್ಲಿ ನಾಮಪತ್ರ ಸಲ್ಲಿಕೆಗೆ ನಾಳೆ ಕಡೆ ದಿನವಾಗಿದ್ದು, ಈ ತಿಂಗಳ 30 ರಂದು ನಾಮಪತ್ರಗಳ ಪರಿಶೀಲನೆ ಹಾಗೂ ಏಪ್ರಿಲ್ 2ರಂದು ನಾಮತ್ರ ಹಿಂಪಡೆಯುವಿಕೆಗೆ ಕೊನೆಯ ದಿನವಾಗಿರುತ್ತದೆ.
ಏಪ್ರಿಲ್ 19 ರಂದು 17 ರಾಜ್ಯಗಳು ಮತ್ತು ನಾಲ್ಕು ಕೇಂದ್ರಾಡಳಿತ ಪ್ರದೇಶಗಳಲ್ಲಿನ 102ಲೋಕಸಭಾ ಕ್ಷೇತ್ರಗಳಿಗೆ ಮೊದಲ ಹಂತದಲ್ಲಿ ಚುನಾವಣೆ ನಡೆಯಲಿದೆ. ಅದರಂತೆ ತಮಿಳುನಾಡಿನಲ್ಲಿ 39, ರಾಜಸ್ಥಾನದಲ್ಲಿ 12, ಉತ್ತರ ಪ್ರದೇಶದಲ್ಲಿ 8, ಮಧ್ಯಪ್ರದೇಶದಲ್ಲಿ 6, ಉತ್ತರಾಖಂಡ, ಅಸ್ಸಾಂ ಮತ್ತು ಮಹಾರಾಷ್ಟ್ರದಲ್ಲಿ ತಲಾ 5 , ಬಿಹಾರದಲ್ಲಿ 4, ಪಶ್ಚಿಮ ಬಂಗಾಳದಲ್ಲಿ 3, ಅರುಣಾಚಲ ಪ್ರದೇಶ, ಮಣಿಪುರ, ಮೆಘಾಲಯದಲ್ಲಿ ತಲಾ 2 ಮತ್ತು ಛತ್ತೀಸ್ಗಢ, ಮಿಜೋರಾಂ, ನಾಗಾಲ್ಯಾಂಡ್, ಸಿಕ್ಕಿಂ, ತ್ರಿಪುರ, ಅಂಡಮಾನ್-ನಿಕೋಬಾರ್ ದ್ವೀಪಗಳು, ಜಮ್ಮು-ಕಾಶ್ಮೀರ, ಲಕ್ಷದ್ವೀಪ ಮತ್ತು ಪುದುಚೇರಿಯಲ್ಲಿ ತಲಾ ಒಂದು ಕ್ಷೇತ್ರದಲ್ಲಿ ಮೊದಲ ಹಂತದಲ್ಲಿ ಚುನಾವಣೆ ನಡೆಯಲಿದೆ.
ಎರಡನೇ ಹಂತದಲ್ಲಿ 89 ಲೋಕಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದ್ದು, ಚುನಾವಣಾ ಆಯೋಗ ನಾಳೆ ಅಧಿಸೂಚನೆ ಹೊರಡಿಸಲಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಚುನಾವಣಾ ಅಕ್ರಮ ; ಸಾರ್ವಜನಿಕರು ದೂರು ಸಲ್ಲಿಸಲು ಆಯೋಗದಿಂದ ಸಿ-ವಿಜಿಲ್ ಆಪ್ ಅಭಿವೃದ್ಧಿ
ಸುದ್ದಿದಿನ ಡೆಸ್ಕ್ : 18ನೇ ಲೋಕಸಭೆಗೆ ಸದಸ್ಯರನ್ನು ಆಯ್ಕೆ ಮಾಡಲು ನಡೆಯಲಿರುವ ಸಾರ್ವತ್ರಿಕ ಚುನಾವಣೆಗೆ ಭಾರತ ಚುನಾವಣಾ ಆಯೋಗ, ಸಕಲ ಸಿದ್ಧತೆಯೊಂದಿಗೆ ಸಜ್ಜಾಗಿದೆ.
ದೇಶದಲ್ಲಿ ಚುನಾವಣೆಗಳನ್ನು ಪಾರದರ್ಶಕವಾಗಿ ಹಾಗೂ ಅತ್ಯಂತ ವಿಶ್ವಾಸಾರ್ಹ ರೀತಿಯಲ್ಲಿ ನಡೆಸುವ ಸಂಕಲ್ಪದೊಂದಿಗೆ ಚುನಾವಣಾ ಆಯೋಗ, ಸಮಸ್ತ ಚುನಾವಣಾ ಪ್ರಕ್ರಿಯೆಗಳನ್ನು ಸುಗಮಗೊಳಿಸಲು ತಂತ್ರಜ್ಞಾನದ ನೆರವನ್ನು ಬಳಸಿಕೊಳ್ಳುತ್ತಿದೆ. ಈ ನಿಟ್ಟಿನಲ್ಲಿ ಮತದಾರರು, ಚುನಾವಣಾ ಸಿಬ್ಬಂದಿ ಹಾಗೂ ಆಯೋಗಕ್ಕೆ ನೆರವಾಗುವ ಹಲವು ಆಪ್ಗಳನ್ನು ಚುನಾವಣಾ ಆಯೋಗ ಅಭಿವೃದ್ಧಿಪಡಿಸಿದೆ.
ಈ ಪೈಕಿ ಇಂದು ಸಿ-ವಿಜಿಲ್ ಆಪ್ ಬಗ್ಗೆ ಮಾಹಿತಿ.
ದೇಶದಲ್ಲಿ ಚುನಾವಣೆಗಳ ವೇಳೆ ನಡೆಯುವ ಅಕ್ರಮಗಳು, ಮಾದರಿ ನೀತಿ ಸಂಹಿತೆಯ ಉಲ್ಲಂಘನೆ ಪ್ರಕರಣಗಳ ಮೇಲೆ ಕಣ್ಣಿಡುವುದು ಕೇವಲ ಚುನಾವಣಾ ಸಿಬ್ಬಂದಿಯ ಕೆಲಸವಲ್ಲ. ಇದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವೂ ಹೌದು. ಹಾಗಾಗಿ ಚುನಾವಣಾ ಅಕ್ರಮಗಳ ಬಗ್ಗೆ ಸಾರ್ವಜನಿಕರು ಆಯೋಗಕ್ಕೆ ದೂರು ತಲುಪಿಸಲು ಭಾರತ ಚುನಾವಣಾ ಆಯೋಗ ಸಿ-ವಿಜಿಲ್ ಆಪ್ ಅನ್ನು ಅಭಿವೃದ್ಧಿ ಪಡಿಸಿದೆ.
ದೂರುಗಳನ್ನು ಆನ್ಲೈನ್ ಮೂಲಕ ಆಯೋಗಕ್ಕೆ ರವಾನಿಸಲು ಈ ಆಪ್ ನೆರವಾಗುವುದು. ಯಾವುದೇ ಚುನಾವಣಾ ಅಕ್ರಮಗಳ ಬಗ್ಗೆ ಧ್ವನಿಮುದ್ರಣ, ವಿಡಿಯೋ ಚಿತ್ರದ ತುಣುಕುಗಳು ಮತ್ತು ಫೋಟೊ ಮೊದಲಾದ ದಾಖಲೆಗಳನ್ನು ಸಾರ್ವಜನಿಕರು ಇದರ ಮೂಲಕ ಕಳುಹಿಸಬಹುದು.
ಚುನಾವಣೆಗಳಲ್ಲಿ ರಾಜಕೀಯ ಪಕ್ಷಗಳು, ಅಭ್ಯರ್ಥಿಗಳು ಮಾಡುವ ಖರ್ಚು-ವೆಚ್ಚ, ಮತದಾರರ ಮನವೊಲಿಕೆಗೆ ಆಮಿಷಗಳ ಬಳಕೆ ಮೊದಲಾದ ಅಕ್ರಮಗಳ ಬಗ್ಗೆ ದೂರು ನೀಡಲು ಇದನ್ನು ಬಳಸಬಹುದು. ಒಂದುನೂರು ನಿಮಿಷಗಳಲ್ಲಿ ಚುನಾವಣಾಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳುತ್ತಾರೆ ಎಂದು ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಹೇಳಿದ್ದಾರೆ.
ದೇಶದ ಯಾವ ಮೂಲೆಯಲ್ಲೇ ಆಗಲಿ ನಡೆಯುವ ಚುನಾವಣಾ ಅಕ್ರಮ ಅಥವಾ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳ ಬಗ್ಗೆ ತಾವು ನೀಡಿದ ದೂರುಗಳನ್ನು ಆಯೋಗ ಪರಿಗಣಿಸಿದೆಯೇ ಎನ್ನುವ ವಿವರಗಳನ್ನು ಸಹ ಸಾರ್ವಜನಿಕರು ಸಿ-ವಿಜಿಲ್-ಆಪ್ ಮೂಲಕ ವೀಕ್ಷಿಸಬಹುದು.
ಸುದ್ದಿದಿನ.ಕಾಂ|ವಾಟ್ಸಾಪ್|9980346243
-
ದಿನದ ಸುದ್ದಿ7 days ago
ನಾಯಕನ ಹಟ್ಟಿ | ಶ್ರೀಗುರು ತಿಪ್ಪೇರುದ್ರಸ್ವಾಮಿ ರಥೋತ್ಸವಕ್ಕೆ ವಿಶೇಷ ಬಸ್ ಸೌಲಭ್ಯ
-
ದಿನದ ಸುದ್ದಿ6 days ago
ಲೋಕಸಭಾ ಚುನಾವಣೆ : ಚುನಾವಣಾ ಚಟುವಟಿಕೆಗಳ ಕುರಿತ ಜಿಲ್ಲಾವಾರು ಮಾಹಿತಿ
-
ದಿನದ ಸುದ್ದಿ6 days ago
ವಿಜಯಪುರ ಜಿಲ್ಲಾ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಗೆ ಮೈಬೂಬಸಾಹೇಬ.ವೈ.ಜೆ ಆಯ್ಕೆ
-
ದಿನದ ಸುದ್ದಿ6 days ago
ಬೆಂಗಳೂರಿನಲ್ಲಿ ಬಿಜೆಪಿ ನೂತನ ಮಾಧ್ಯಮಕೇಂದ್ರ ಆರಂಭ
-
ದಿನದ ಸುದ್ದಿ5 days ago
ಲೋಕಸಭಾ ಚುನಾವಣೆ | ಹೊಸ ಮತದಾರರೆಷ್ಟು ಗೊತ್ತಾ..?
-
ದಿನದ ಸುದ್ದಿ5 days ago
ಕವಿತೆ | ನೆನಪು
-
ದಿನದ ಸುದ್ದಿ3 days ago
ಚುನಾವಣಾ ಅಕ್ರಮ ; ಸಾರ್ವಜನಿಕರು ದೂರು ಸಲ್ಲಿಸಲು ಆಯೋಗದಿಂದ ಸಿ-ವಿಜಿಲ್ ಆಪ್ ಅಭಿವೃದ್ಧಿ
-
ದಿನದ ಸುದ್ದಿ2 days ago
ಲೋಕಸಭಾ ಚುನಾವಣೆಯ ಮೊದಲ ಹಂತಕ್ಕೆ ನಾಮಪತ್ರ ಸಲ್ಲಿಕೆಗೆ ಇಂದು ಕೊನೆಯ ದಿನ