ದಿನದ ಸುದ್ದಿ
‘ನ್ಯೂಸ್ನೇಶನ್’ ಸಂದರ್ಶನ : ‘ಅಚ್ಛೇ ದಿನ್’ ಗೆ ತಕ್ಕ ಸಮಾರೋಪ..!

ಮೇ 11 ರಂದು, ಈ ಬಾರಿಯ ಸಾರ್ವತ್ರಿಕ ಚುನಾವಣೆಗಳ 6ನೇ ಘಟ್ಟದಲ್ಲಿ ದೇಶದ ರಾಜಧಾನಿ ದಿಲ್ಲಿ ಮತ್ತು ಸುತ್ತಮುತ್ತಲಿನ ರಾಜ್ಯಗಳ ಮತದಾರರು ತಾವು ಮರುದಿನ ಯಾರಿಗೆ ಮತನೀಡಬೇಕು ಎಂದು ಯೋಚಿಸುತ್ತಿರುವ ಸಮಯದಲ್ಲಿ , ‘ನ್ಯೂಸ್ ನೇಶನ್’ ಎಂಬೊಂದು ಸುದ್ದಿ ವಾಹಿನಿ ಪ್ರಸಾರ ಮಾಡಿರುವ ಪ್ರಧಾನ ಮಂತ್ರಿಗಳ ಸಂದರ್ಶನ ಈಗ ಇಡೀ ದೇಶದ ಗಮನ ಸೆಳೆದಿದೆ-ಮುಖ್ಯವಾಗಿ ಬಾಲಾಕೋಟ್ ‘ವಾಯು ಪ್ರಹಾರ’ದ ಕೀರ್ತಿ ತನ್ನದಾಗಿಸಿಕೊಳ್ಳುವ ಭರದಲ್ಲಿ ಪ್ರಧಾನಿಗಳು ಪ್ರದರ್ಶಿಸಿದ ಮೋಡಗಳು ಮತ್ತು ರಾಡಾರ್ ಕುರಿತಂತೆ ‘ಪಂಡಿತರನ್ನು ಬೆರಗಾಗಿಸಿದ’ ತನ್ನ ‘ಕಚ್ಚಾ ಜಾಣ್ಮೆ’ಯಿಂದಾಗಿ.
ಆದರೆ ಈ ಸಂದರ್ಶನದ ಹೆಚ್ಚುಗಾರಿಕೆ ಅಷ್ಟೇ ಅಲ್ಲ, ಒಂದರ್ಥದಲ್ಲಿ, ಬಹಳ ಸಮಯದ ನಂತರ ಕೇಂದ್ರದಲ್ಲಿ, ಕೇವಲ 31% ಮತಗಳಿಂದಲೇ ಆದರೇನಂತೆ, ಸ್ಪಷ್ಟ ಬಹುಮತ ಪಡೆದ ಒಂದು ಪಕ್ಷದ ನೇತೃತ್ವದ ‘ಮಜಬೂತ್’ ಸರಕಾರದ ಐದು ವರ್ಷಗಳ ಆಳ್ವಿಕೆಯ ಒಂದು ಸಾರಾಂಶವನ್ನು ಈ ಸಂದರ್ಶನ ದೇಶದ ಮುಂದೆ ಇಟ್ಟಿದೆ ಎನ್ನಬಹುದು.
ರಾಡಾರ್ಗಳು ಮತ್ತು ಮೋಡಗಳು ಮಾತ್ರವೇ ಈ ‘ಐತಿಹಾಸಿಕ’ ಎನ್ನಬಹುದಾದ ಸಂದರ್ಶನದ ‘ಹೈಲೈಟ್’ ಅಲ್ಲ ಎಂಬುದು ಈಗ ಜನಜನಿತವಾಗಿದೆ. “ತಾವು ಹಣದ ಪರ್ಸ್ ಇಟ್ಟುಕೊಳ್ಳುತ್ತೀರಾ?” ಎಂಬ ಸಂದರ್ಶಕರುಗಳ ಅಮೋಘ ಪ್ರಶ್ನೆಯನ್ನು ಉತ್ತರಿಸುತ್ತ ಜೇಬಲ್ಲಿ ಹಣವೇ ಇಲ್ಲದಿರುವಾಗ ಪರ್ಸ್ ಏಕೆ ಎಂದರು. 2001ರಲ್ಲಿ ಗುಜರಾತಿನ ಮುಖ್ಯಮಂತ್ರಿಯಾಗಿ ಸರಕಾರವನ್ನು ಸೇರುವ ವರೆಗೆ, ಅಂದರೆ ಸುಮಾರು 50ವರ್ಷ ವಯಸ್ಸಿನ ವರೆಗೆ ಅವರಿಗೆ ಏನೇನೂ ಆದಾಯವಿರಲಿಲ್ಲವಂತೆ, ಸರಕಾರಕ್ಕೆ ಬಂದಾಗಲೇ ಅಧಿಕಾರಿಗಳು ಅವರ ಹೆಸರಲ್ಲಿ ಬ್ಯಾಂಕ್ ಖಾತೆ ತೆರೆದರಂತೆ. ಹಾಗಿದ್ದರೆ ಅದುವರೆಗೆ ಆರೆಸ್ಸೆಸ್ನ ಸಂಘಟನಾ ಕೆಲಸ ಮಾಡುತ್ತಿದ್ದ ಅವರಿಗೆ ಸಂಘಟನೆ ಏನೂ ಕೊಡುತ್ತಿರಲಿಲ್ಲವೇ ಎಂದು ಹಲವರು ಮೂಗಿನ ಮೇಲೆ ಬೆರಳಿಟ್ಟುಕೊಂಡಿದ್ದಾರೆ.
1988ರಲ್ಲೇ ಅವರು ಡಿಜಿಟಲ್ ಕ್ಯಾಮರಾ ಬಳಸಿದ್ದರು, ಟಚ್ ಸ್ಕರೀನ್ ಟ್ಯಾಬ್ಲೆಟ್ ಬಳಿಸಿದ್ದರು, ಇ ಮೇಲ್ ಕೂಡ ಬಳಸುತ್ತಿದ್ದರು ಎಂಬ ಸಂಗತಿಗಳ ಮೇಲೆ ಸಂದರ್ಶನದ ವೇಳೆಯಲ್ಲಿ ಅವರು ಬೆಳಕು ಚೆಲ್ಲಿದರು. ಆ ವೇಳೆಗೆ ಇವೆಲ್ಲ ಭಾರತದಲ್ಲಿ ಬಳಕೆಗೇ ಬಂದಿರಲಿಲ್ಲ ಎಂದು ಕೆಲವು ಪರಿಣಿತರು ಹೇಳುತ್ತಿದ್ದಾರೆ. 1988ರಲ್ಲಿ ಡಿಜಿಟಲ್ ಕ್ಯಾಮರಾದ ತಂತ್ರಜ್ಞಾನ ರೂಪುಗೊಂಡಿತ್ತಷ್ಟೇ, ಅದ್ದರಿಂದ ಅಂತಹ ಕ್ಯಾಮರಾಗಳು ಎಲ್ಲೋ ಕೆಲವು ಇದ್ದು ದುಬಾರಿಯಾಗಿದ್ದವು.10-15 ಲಕ್ಷ ರೂ.ಗಳಷ್ಟು. ಇ ಮೇಲ್ ಬಳಕೆಗೆ ಬಂದದ್ದು 1990ರ ದಶಕದ ನಂತರವೇ. ಚಿಕ್ಕಾಸೂ ಜೇಬಿನಲ್ಲಿರದ ಇವರು ಅದನ್ನೆಲ್ಲ ಹೇಗೆ ಪಡೆದಿರಬಹುದು ಎಂದು ಇನ್ನು ಕೆಲವರು ಬೆರಗಾಗಿದ್ದಾರೆ.
ಬಹುಶಃ ಇವೆಲ್ಲದಕ್ಕೂ ಉತ್ತರದ ಹೊಳಹು ಸಿಕ್ಕಿದ್ದು ಸಂದರ್ಶಕರು ‘ತಾವು ಕಳೆದ ಐದು ವರ್ಷಗಳಲ್ಲಿ ಏನಾದರೂ ಬರೆದಿದ್ದೀರಾ’, ಅಂದರೆ ಕವನ ಬರೆದಿದ್ದೀರಾ ಎಂದು ಕೇಳಿದಾಗ. ಹೌದು, ಇವತ್ತಷ್ಟೇ ಒಂದು ಕವನವನ್ನು ಬರೆದಿದ್ದೇನೆ ಎಂದರು ಮಾನ್ಯ ಪ್ರಧಾನಿಗಳು. ಹಿಂದಿನ ಬಿಜೆಪಿ ಪ್ರಧಾನಿಗಳಂತೆ ಇವರೂ ಕವನ ಬರೆಯುತ್ತಾರೆ ಎಂಬುದು ಬಹಳಷ್ಟು ಮಂದಿಗೆ ಆಶ್ಚರ್ಯವಾದ್ದು ಆಗಲೇ. ಮತ್ತು ಈ ಸಂದರ್ಶನದ ನಿಜ ಚಿತ್ರದ ಆ ಹೊಳಹು ಸಿಕ್ಕಿದ್ದು ಕೂಡ ಆಗಲೇ.
ಕವನ ಓದಿ ಎಂದು ಸಂದರ್ಶಕರು ಹೇಳಿದಾಗ ಪ್ರಧಾನಿಗಳು ಅಲ್ಲಿದ್ದ ಸೇವಕರಿಂದ ತನ್ನ ಫೈಲ್ ಕೇಳಿ ಪಡೆಯುತ್ತಾರೆ, ಒಂದು ಕಾಗದವನ್ನು ಎತ್ತಿಕೊಳ್ಳುತ್ತಾರೆ, ಅದನ್ನು ತೋರಿಸಿ ಎನ್ನುತ್ತಾರೆ ಸಂದರ್ಶಕರು, ಇಲ್ಲ ಅದು ಕೈಬರಹದಲ್ಲಿದೆ, ತನ್ನ ಕೈಬರಹ ಸೊಟ್ಟ-ಸೊಟ್ಟಗಾಗಿದೆ ಎನ್ನುತ್ತಾರೆ. ಈ ವೇಳೆಗೆ ಅವರು ನೋಡುತ್ತಿದ್ದ ಕಾಗದದ ದೃಶ್ಯ ಸಂದರ್ಶನ ನೋಡುತ್ತಿರುವವರಿಗೂ ಕಾಣುತ್ತದೆ. ಆದರೆ ಅಲ್ಲಿ ಕಾಣಿಸುವುದು ಕೈಬರಹದ ಕವನವಲ್ಲ, ಮುದ್ರಿತ ಕವನ, ಅಲ್ಲದೆ ಸಂದರ್ಶಕರು ಕೇಳಿದ ಪ್ರಶ್ನೆಯೂ ಅಲ್ಲಿ ಕಾಣುತ್ತದೆ. ಅದರ ಮುಂದೆ 27 ಎಂದಿದೆ. ಅಂದರೆ 27ನೇ ಪ್ರಶ್ನೆ.
ಈ ಐದು ವರ್ಷಗಳಲ್ಲಿ ಎಂದೂ ಪತ್ರಿಕಾ ಸಮ್ಮೇಳನ ನಡೆಸಿಯೇ ಇರದ ದಾಖಲೆ ನಿರ್ಮಿಸಿರುವ ಈ ಪ್ರಧಾನಿಗಳ ಸಂದರ್ಶನಗಳು ಅಲ್ಲೋ-ಇಲ್ಲೋ ನಡೆದಿವೆ. ಚುನಾವಣೆಗಳು ಹತ್ತಿರ ಬಂದ ಮೇಲೆ ತುಸು ಹೆಚ್ಚಾಗಿವೆ. ಆದರೆ ಇವೆಲ್ಲವೂ ಸಹಾನುಭೂತಿಪರ ಸಂದರ್ಶಕರು ನಡೆಸಿದ್ದು, ಅಂದರೆ ಪ್ರಧಾನ ಮಂತ್ರಿಗಳಿಗೆ ಇಷ್ಟವಾಗುವ ಪ್ರಶ್ನೆಗಳನ್ನು ಮಾತ್ರ ಕೇಳುವ ‘ಸಹೃದಯ’ ಪತ್ರಕರ್ತರದ್ದು. ಅವೆಲ್ಲವೂ ‘ಸ್ಕ್ರಿಪ್ಟೆಡ್’ ಸಂದರ್ಶನಗಳು ಎನ್ನಲಾಗುತ್ತಿತ್ತು. ಅಂದರೆ ಅವರು ಮೊದಲೇ ಪ್ರಶ್ನೆಗಳನ್ನು ಕಳಿಸುತ್ತಾರೆ, ಪ್ರಧಾನಿಗಳ ಕಚೇರಿ ಅವುಗಳಲ್ಲಿ ಉತ್ತರಿಸುವ ಪ್ರಶ್ನೆಗಳನ್ನು ಆಯ್ದು ಕಳಿಸುತ್ತದೆ, ಪತ್ರಕರ್ತರು ಅವನ್ನೇ ಕೇಳುತ್ತಾರೆ. ಆದರೆ ಇದು ಕೇವಲ ಊಹೆಯಾಗಿರುತ್ತಿತ್ತು, ಪ್ರಧಾನಿಗಳ ಬಗ್ಗೆ ಅಸೂಯೆ ಇರುವವರ ಅಪಪ್ರಚಾರ ಇರಬಹುದು ಎಂದೂ ಭಾವಿಸಲಾಗಿತ್ತು.
ಆದರೆ ಈ ಸಂದರ್ಶನ ಅದನ್ನು ದೃಢಪಡಿಸಿದೆ ಎಂದು ಬಹಳಷ್ಟು ರಾಜಕೀಯ ವೀಕ್ಷಕರು ಹೇಳುತ್ತಿದ್ದಾರೆ. ಅದೇನೇ ಇರಲಿ, ಬಾಲಾಕೋಟ್ ವಿಮಾನ ದಾಳಿಯ ಬಗ್ಗೆ ಹೇಳಿದ್ದು ಚುನಾವಣೆಯ ಸಂದರ್ಭದಲ್ಲಿ ಅರ್ಥವಾಗುತ್ತದೆ, ಆದರೆ ಉಳಿದವುಗಳು- ಪರ್ಸ್ ಇಲ್ಲದಿರುವುದು, ಡಿಜಿಟಲ್ ಕ್ಯಾಮರಾ, ಇ-ಮೇಲ್, ಟ್ಯಾಬ್ಲೆಟ್ ಮತ್ತು ಈ ಮುದ್ರಿತ ಕವನ, ಈ ಮೇಲ್ನೋಟಕ್ಕೆ ಸುಳ್ಳಿರಬಹುದು ಎಂದೇ ಸಂದೇಹ ಮೂಡಿಸುವ ವಿಚಾರಗಳು ಯಾಕೆ ಬೇಕಿತ್ತು ಎಂಬ ಪ್ರಶ್ನೆ ಹಲವರಲ್ಲಿ ಎದ್ದಿದೆ.
ಆದರೆ ಕಳೆದ ಐದು ವರ್ಷಗಳಲ್ಲಿ ಒಂದೊಂದಾಗಿ ಆಶ್ವಾಸನೆಗಳು ಜುಮ್ಲಾಗಳಾಗಿ ಬಿಟ್ಟದ್ದು, ಮತ್ತು ನಡುನಡುವೆ ಸಮಾರಂಭಗಳಲ್ಲಿ, ಪ್ರತಿಪಕ್ಷಗಳನ್ನು ಟೀಕಿಸುವ ಸಂದರ್ಭಗಳಲ್ಲಿ, ವಿಶೇಷವಾಗಿ ಚುನಾವಣೆಗಳ ಸಂದರ್ಭದಲ್ಲಿ, ಹೊಮ್ಮಿ ಬಂದು ಆಮೇಲೆ ಶುದ್ಧ ಸುಳ್ಳುಗಳು ಒಂದು ದೃಢಪಟ್ಟಿದ್ದು(ಉದಾ: ಯಾವ ಕಾಂಗ್ರೆಸ್ ಮುಖಂಡರೂ ಭಗತ್ ಸಿಂಗ್ರನ್ನು ಜೈಲಿನಲ್ಲಿ ಭೇಟಿಯಾಗಿರಲಿಲ್ಲ!) ನೆನಪಿರುವವರಿಗೆ ಇದರಿಂದ ಆಶ್ಚರ್ಯವಾಗಲಿಕ್ಕಿಲ್ಲ.
ಆದರೂ, ಬಾಲಾಕೋಟ್ ವಾಯುದಾಳಿಗೆ ಆದೇಶ ನೀಡಿದ ಪರಿಯ ಬಗ್ಗೆ ಅವರು ಹೇಳಿರುವುದು ನಿಜವೇನು, ನಿಜವಾಗಿದ್ದರೆ ಪರಿಣಿತರಾರೂ ಅದು ತಪ್ಪು ಎಂದು ಹೇಳುವ ಧೈರ್ಯ ತೋರಲಿಲ್ಲವೇ, ದೇಶದ ಭದ್ರತೆಯಂತಹ ಗಹನವಾದ ಪ್ರಶ್ನೆಗಳಲ್ಲಿ ಇಂತಹ ‘ಕಚ್ಚಾ ಜಾಣ್ಮೆ’ ಮತ್ತು ಪರಿಣಿತರ ಮೌನ ಅಪಾಯಕಾರಿಯಲ್ಲವೇ ಎಂದು ಹಲವರಿಗೆ ಆತಂಕ ಉಂಟಾಗಿದೆ. ನೋಟುರದ್ಧತಿಯ ಅನುಭವ ನಮ್ಮ ಮುಂದಿದೆ ಎನ್ನುತ್ತಾರೆ ಅವರು. ಈ ಬಾಲಾಕೋಟ್ ವಾಯುದಾಳಿಯನ್ನು ಮಳೆ ಸುರಿಯುತ್ತಿದ್ದಾಗ ಮಾಡಿದ್ದರಿಂದಲೇ ನಮ್ಮ ಯುದ್ಧವಿಮಾನಗಳು ಹೊತ್ತಿದ್ದ ಒಂದು ಕ್ಷಿಪಣಿ ಕೆಲಸ ಮಾಡದೆ ಈ ದಾಳಿಯ ನಿಜವಾದ ಫಲಿತಾಂಶ ನಮಗೆ ತಿಳಿಯದಂತೆ ಆಗಿರಬಹುದೇ ಎಂದೂ ಕೆಲವು ರಕ್ಷಣಾ ಪರಿಣಿತರು ಊಹಿಸುತ್ತಿದ್ದಾರೆ ಎಂಬುದನ್ನು ಇಲ್ಲಿ ಗಮನಿಸಬಹುದು.
( ಈ ವಾರದ ಜನಶಕ್ತಿ ವಾರ ಪತ್ರಿಕೆಯಲ್ಲಿ ಪ್ರಕಟವಾದ ಲೇಖನ)
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಮಹಿಳೆಗೆ ಮೀಸಲಾತಿ ಬೇಡ, ಸಮಾನ ಪ್ರಾತಿನಿಧ್ಯ ಕೊಡಿ : ಡಾ.ಜ್ಯೋತಿ ಟಿ.ಬಿ

ಸುದ್ದಿದಿನ, ಚನ್ನಗಿರಿ (ಬಸವಾಪಟ್ಟಣ) : ಭಾರತೀಯ ಸಮಾಜದಲ್ಲಿ ಮೀಸಲಾತಿಯಿಂದ ಮಾತ್ರ ಮಹಿಳಾ ಪ್ರಗತಿ ಸಾಧ್ಯವಿಲ್ಲ. ಅವಳಿಗೆ ಪುರುಷನಂತೆ ಸಮಾನವಾದ ಪ್ರಾತಿನಿಧ್ಯ ನೀಡಿದಲ್ಲಿ ಮಾತ್ರವೇ ಮಹಿಳಾ ಪ್ರಗತಿ ಸಾಧ್ಯ. ಆಗ ಮಾತ್ರವೇ ಸದೃಢವಾದ ಭಾರತ ನಿರ್ಮಾಣವಾಗಲು ಸಾಧ್ಯ ಎಂದು ಸಂತೆಬೆನ್ನೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹ ಪ್ರಾಧ್ಯಾಪಕಿ ಡಾ.ಜ್ಯೋತಿಯವರು ಅಭಿಪ್ರಾಯ ವ್ಯಕ್ತಪಡಿಸಿದರು.
ಜನತಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶನಿವಾರ ಆಯೋಜಿಸಿದ್ದ ರಾಷ್ಟ್ರೀಯ ಐಕ್ಯತ ಸಪ್ತಾಹದ ಅಡಿಯಲ್ಲಿ ‘ಭಾರತೀಯ ಸಮಾಜ ಹಾಗೂ ರಾಷ್ಟ್ರದ ಪ್ರಗತಿಯಲ್ಲಿ ಮಹಿಳೆಯರ ಪ್ರಾಮುಖ್ಯತೆ’ ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಿದ ಅವರು, ಮಹಿಳೆಗೆ ಎಲ್ಲಿಯವರೆಗೆ ಮುಕ್ತವಾದ ಪ್ರಾತಿನಿಧ್ಯ ಲಭಿಸುವುದಿಲ್ಲವೋ ಅಲ್ಲಿಯವರೆಗೆ ಎಷ್ಟೇ ಕಾಯ್ದೆ, ಕಾನೂನುಗಳು ಜಾರಿಯಾದರೂ ಮಹಿಳೆಯರ ಬದುಕಿನಲ್ಲಿ ಸಮಗ್ರ ಬದಲಾವಣೆ ನಿರೀಕ್ಷಿಸಲು ಸಾಧ್ಯವಿಲ್ಲ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದ ಪ್ರಾಂಶುಪಾಲರಾದ ಡಾ.ಎಂ.ಆರ್. ಲೋಕೇಶ್ ಅವರು ಮಾತನಾಡಿ ಭಾರತೀಯ ಸಮಾಜದಲ್ಲಿ ಹೆಣ್ಣು ಸ್ವಾಭಿಮಾನದ ಬದುಕನ್ನು ಕಟ್ಟಿಕೊಳ್ಳುವುದು ಕೇವಲ ಆರ್ಥಿಕತೆಯಿಂದ ಸಾಧ್ಯವಿಲ್ಲ ಎಂದರು.
ನೈತಿಕತೆ, ಸಂಸ್ಕಾರವು ಕೂಡ ಅತ್ಯಂತ ಮಹತ್ವದ ಪಾತ್ರ ವಹಿಸುತ್ತದೆ. ಹೀಗಾಗಿಯೇ ಶರಣರು ಗಂಡು-ಹೆಣ್ಣು ಎಂಬ ಬೇಧವನ್ನು ಮೆಟ್ಟಿ ನಿಂತು ‘ಒಳಗೆ ಸುಳಿವ ಆತ್ಮ ಹೆಣ್ಣು ಅಲ್ಲ, ಗಂಡು ಅಲ್ಲ’ ಎಂಬ ತಾತ್ವಿಕತೆಯ ಮೂಲಕ ಸರ್ವರನ್ನು ಸಮಾನವಾಗಿ ಕಾಣುವಂತಹ ಸಮಾಜಕ್ಕಾಗಿ ಶ್ರಮಿಸಿದರು. ಭಾರತದ ನೆಲದಲ್ಲಿ ಶರಣರು, ದಾರ್ಶನಿಕರು ರೂಪಿಸಿಕೊಟ್ಟ ಮಾರ್ಗದಲ್ಲಿ ನಡೆದು ಇಂದಿನ ಮಹಿಳೆಯರು ಸಬಲರಾಗಬೇಕು ಎಂಬುದಾಗಿ ತಿಳಿಸಿದರು.
ಸಮಾಜಶಾಸ್ತ್ರದ ಮುಖ್ಯಸ್ಥರಾದ ಡಾ.ಎ.ಡಿ.ಬಸವರಾಜ್ ಅವರು ಪ್ರಾಸ್ತವಿಕ ಮಾತುಗಳನ್ನಾಡಿದರು. ಕಾರ್ಯಕ್ರಮದಲ್ಲಿ ಬೋಧಕರಾದ ಹನುಮಂತಪ್ಪ, ಪ್ರಕಾಶ್, ಮಧುಸೂಧನ್, ರೆಹಮತ್ಬಿ, ಸಂದೀಪ್ ಮುಂತಾದವರು ಹಾಜರಿದ್ದರು. ಕಾರ್ಯಕ್ರಮವನ್ನು ಗೋವಿಂದರೆಡ್ಡಿ ಅವರು ನಿರೂಪಿಸಿದರು. ವಿದ್ಯಾರ್ಥಿನಿ ಸೌಂದರ್ಯ ಸ್ವಾಗತಿಸಿದರು, ಯಶೋಧ, ಸಹನಾ ಪ್ರಾರ್ಥಿಸಿದರು, ರಕ್ಷಿತ ವಂದಿಸಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಭಾರತೀಯರೆಲ್ಲರ ಪವಿತ್ರಗ್ರಂಥ ಭಾರತದ ಸಂವಿಧಾನ : ಡಾ.ಕೆ.ಎ.ಓಬಳೇಶ್

ಸುದ್ದಿದಿನ,ದಾವಣಗೆರೆ : ಸಂವಿಧಾನ ಪೂರ್ವದ ಭಾರತದ ಸ್ಥಿತಿಗತಿ ಹಾಗೂ ಸಂವಿಧಾನದ ನಂತರ ಭಾರತದಲ್ಲಾದ ಸಾಮಾಜಿಕ, ಧಾರ್ಮಿಕ ಹಾಗೂ ರಾಜಕೀಯ ಬದಲಾವಣೆಗ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ಹಾಗೆಯೇ ಸಂವಿಧಾನ ರಚನೆ ಮಾಡುವ ಸಮಯದಲ್ಲಿ ಬಾಬಾಸಾಹೇಬ್ ಅಂಬೇಡ್ಕರ್ ಅವರ ಮುಂದಿದ್ದ ಬಿಕ್ಕಟ್ಟುಗಳನ್ನು ಏಕಾಂತಗಿರಿ ಟ್ರಸ್ಟ್ ನ ಕಾರ್ಯದರ್ಶಿ ಡಾ.ಕೆ.ಎ.ಓಬಳೇಶ್ ಅವರು ತಿಳಿಸಿಕೊಟ್ಟರು.
ನಗರದ ಪ್ರೇರಣ ಮಕ್ಕಳ ಆರೈಕೆ ಕೇಂದ್ರದಲ್ಲಿ ವಿ.ಬಿ.ಪಿ ಫೌಂಡೇಷನ್ ಹಾಗೂ ಏಕಾಂತಗಿರಿ ಟ್ರಸ್ಟ್ ಇವರ ಸಂಯುಕ್ತಾಶ್ರಯದಲ್ಲಿ ಸಂವಿಧಾನ ದಿನಾಚರಣೆಯನ್ನು ಭಾನುವಾರ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ದೇವನಗರಿ ಸುದ್ಧಿದಿನ ಪತ್ರಿಕೆಯ ಸಂಪಾದಕರಾದ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದು, ವಿದ್ಯಾರ್ಥಿಗಳಿಗೆ ಭಾರತದ ಸಂವಿಧಾನದ ಕಳಶದಂತಿರುವ ಸಂವಿಧಾನ ಪೀಠಿಕೆಯ ಮಹತ್ವವನ್ನು ಪರಿಚಯಿಸುವ ಮೂಲಕ ಸಂವಿಧಾನ ಪೀಠಿಕೆಯನ್ನು ಬೋಧಿಸಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಸ್ಕೈ ಲೈನ್ ಸಂಸ್ಥೆಯ ಸಂಸ್ಥಾಪಕರಾದ ಬಾಲಚಂದ್ರ ಅವರು ಸಂವಿಧಾನ ಇರುವ ಕಾಲದಲ್ಲಿಯೇ ದಲಿತರು, ದಮನಿತರು ಹಾಗೂ ಮಹಿಳೆಯರ ಸ್ಥಿತಿಯು ಅತ್ಯಂತ ಶೋಚನೀಯವಾಗಿದೆ. ಆದರೆ ಸಂವಿಧಾನವಿಲ್ಲದ ಭಾರತವನ್ನು ನಾವು ಊಹಿಸಿಕೊಳ್ಳುವುದು ಕಷ್ಟ ಸಾಧ್ಯ ಎಂಬುದಾಗಿ ತಿಳಿಸಿದರು.
ಪ್ರೇರಣ ಆರೈಕೆ ಕೇಂದ್ರದ ಶಿಕ್ಷಕರಾದ ಕುಮಾರ್ ಅವರು ಮಾತನಾಡಿ, ಸರ್ವರನ್ನು ಸಮಾನವಾಗಿ ಕಾಣುವ ಸಂವಿಧಾನವು ನಮ್ಮೆಲ್ಲರ ಪವಿತ್ರ ಗ್ರಂಥ ಎಂಬುದಾಗಿ ತಿಳಿಸಿದರು. ಕುಮಾರಿ ಪೂಜಾ ಅವರು ಅತಿಥಿಗಳನ್ನು ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಪ್ರೇರಣ ಸಂಸ್ಥೆಯ ಮಕ್ಕಳು ಹಾಜರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಸರ್ಕಾರಕ್ಕೆ ಸೆಡ್ಡು ಹೊಡೆದ ದಾವಣಗೆರೆ ರೈತರು

- ಪುರಂದರ್ ಲೋಕಿಕೆರೆ
ಸುದ್ದಿದಿನ, ದಾವಣಗೆರೆ : ಸರ್ಕಾರದ ಭದ್ರಾ ಅಚ್ಚುಕಟ್ಟು ಪ್ರದೇಶದ ನೀರಾವರಿ ಇಲಾಖೆಯ ಚಿತಾವಣೆಗೆ ಸೆಡ್ಡು ಹೊಡೆದು ಕೇವಲ 110-120 ದಿನಗಳ ಒಳಗಾಗಿಅಲ್ಪಾವಧಿ ತಳಿ ನಾಟಿ ಮಾಡಿ ಯಶಸ್ವಿಯಾಗಿ ಕಾಲುವೆ ನೀರು ಬಳಸಿಕೊಂಡು ಭತ್ತ ಬೆಳೆಯುವ ಮೂಲಕ ಮಾದರಿಯಾಗಿದ್ದಾರೆ ದಾವಣಗೆರೆ ಭಾಗದ ರೈತರು.
ಬೇಸಿಗೆ ಕಾಲದಲ್ಲಿ ನಮಗೆ ತೋಟಗಳಿಗೆ ನೀರು ಹರಿಸಲು ಆನ್ ಆಪ್ ಪದ್ದತಿ ಮಾಡಿ ಎಂದು ಒತ್ತಡ ಹಾಕಿದ ಶಿವಮೊಗ್ಗ ಜಿಲ್ಲೆಯ ಅಡಿಕೆ ದಣಿಗಳಿಗೇ ಮುಖಕ್ಕೆ ಹೊಡೆದಂತೆ ಭತ್ತ ಬೆಳೆದು ತೋರಿಸಿರುವುದು ಶ್ಲಾಘನೀಯ.
100 ದಿನಗಳು ನೀರು ಹರಿಸಲು ಆದೇಶ ಹೊರಡಿಸಿ ರೈತರೆಲ್ಲ ನಾಟಿ ಮಾಡಿದ ಮೇಲೆ ಎಂದೂ ಗದ್ದೆ ನೀರು ಕಟ್ಟದ ಐಷಾರಾಮೀ ರಾಜಕಾರಣಿ ಪುತ್ರ ರತ್ನ ಸಚಿವ ಮಧು ಬಂಗಾರಪ್ಪ ಅಡಿಕೆ ತೋಟದ ರೈತರಿಗೆ ಮನ ಸೋತವರು.
ಕಲ್ಲು ಬಂಡೆ ಹೊಡೆದು ಭರ್ಜರಿ ಜೀವನ ಸಾಗಿಸುವ ಸಂಪನ್ಮೂಲ ಸಚಿವ, ಉಸ್ತುವಾರಿ ಸಚಿವರ ನಿರ್ಲಕ್ಷ್ಯ ಬೇಸತ್ತ ರೈತ ರಸ್ತೆ ತಡೆದು ನೀರು ಕೊಡಿ ಎಂದು ಹೋರಾಟ ಮಾಡಿದರೂ ಕಿವಿ ಕೇಳೋಲ್ಲ ಎಂಬಂತೆ ವರ್ತಿಸಿದೆ ಆಡಳಿತ ಯಂತ್ರ.
ಆದರೆ ಈ ನಡುವೆ ಎರಡು ಭಾರಿ ಪ್ರಕೃತಿ ವರದಾನ ದಿಂದ ಭತ್ತ ಬೆಳೆಯುವ ಮೂಲಕ ಅನ್ನನೀಡುವ ರೈತ ಭತ್ತ ಬೆಳೆದು ಬಿಟ್ಟ. ಈ ಮೂರು ತಿಂಗಳ ಭತ್ತಕ್ಕೆ ನೀರು ಬಿಡುವುದು ಎಷ್ಟು ತ್ರಾಸದಾಯಕ. ಸರ್ಕಾರಗಳು ಯಾರು ಪರ ಎಂದು ಬೆತ್ತಲೆ ತೋರಿಸಿಕೊಂಡಿವೆ.
ಈಗಲಾದರೂ ಕಾಲ ಮಿಂಚಿಲ್ಲ ಕಟಾವು ಮಾಡಿದ ಭತ್ತ ಒಳ್ಳೆಯ ಗುಣಮಟ್ಟದ್ದು ಆಗಿದೆ.3000-3500 ರೂಂ ದರ ನಿಗದಿ ಮಾಡಿದರೆ ರೈತ ಸಾಲಶೂಲದಿಂದಮುಕ್ತಿ ಆಗಬಹುದು. ಭದ್ರಾ ನೀರು ಬೇಸಿಗೆ ಕಾಲದಲ್ಲಿ ಕೊಡುವುದೇ ಇಲ್ಲ ಎಂದು ಹೇಳಿರುವುದು ರೈತ ವಿರೋಧಿ ನೀತಿ.
ಗುಂಡುರಾವ್ ಕಾಲಾವಧಿಯಲ್ಲಿ 158ಅಡಿ ನೀರಿದ್ದರೂ ಭದ್ರಾ ನೀರು ಹರಿಸಲಾಗಿರುವ ದಾಖಲೆ ಇದೆ. ಕಡೆ ಪಕ್ಷ ಈ ಭಾರಿಯ ಭತ್ಖಕ್ಕೆ ವೈಜ್ಞಾನಿಕ ಬೆಲೆ ನಿಗದಿ ಮಾಡಿ, ಇಲ್ಲವೇ ಯಾವ ರೈತರ ಬಳಿ ಭತ್ತ ಖರೀದಿ ನಿಲ್ಲಿಸಿ. ರೈತರೇ ಸ್ವಂತ ಮಾರುಕಟ್ಟೆ ಹುಡುಕಿಕೊಳ್ಳುವ ಪ್ರಯತ್ನ ಮಾಡಲಿ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ6 days ago
ಚನ್ನಗಿರಿ | ಅತಿಥಿ ಉಪನ್ಯಾಸಕರಿಂದ ಅನಿರ್ದಿಷ್ಟಾವಧಿ ಮುಷ್ಕರ ; ತಹಶೀಲ್ದಾರರಿಗೆ ಮನವಿ
-
ದಿನದ ಸುದ್ದಿ4 days ago
ಭಾರತೀಯರೆಲ್ಲರ ಪವಿತ್ರಗ್ರಂಥ ಭಾರತದ ಸಂವಿಧಾನ : ಡಾ.ಕೆ.ಎ.ಓಬಳೇಶ್
-
ದಿನದ ಸುದ್ದಿ3 days ago
ಮಹಿಳೆಗೆ ಮೀಸಲಾತಿ ಬೇಡ, ಸಮಾನ ಪ್ರಾತಿನಿಧ್ಯ ಕೊಡಿ : ಡಾ.ಜ್ಯೋತಿ ಟಿ.ಬಿ
-
ದಿನದ ಸುದ್ದಿ6 days ago
ಸರ್ಕಾರಕ್ಕೆ ಸೆಡ್ಡು ಹೊಡೆದ ದಾವಣಗೆರೆ ರೈತರು