ರಾಜಕೀಯ
ಮೌನ ಜೀವಿಯ ತತ್ವವೂ ಆಂದೋಲನಜೀವಿಯ ಸತ್ವವೂ
- ನಾ ದಿವಾಕರ
ಮಾನವನ ಉಗಮ ಮತ್ತು ಅಭ್ಯುದಯದ ಇತಿಹಾಸವನ್ನು ಅರಿತಿರುವ ಯಾರಿಗೇ ಆದರೂ ಒಂದು ಅಂಶ ತಿಳಿದಿರಲೇಬೇಕು. ಅದೇನೆಂದರೆ, ಮಾನವನಲ್ಲಿ ಸ್ವಾಭಾವಿಕವಾದ ಆಂದೋಲನದ ತುಡಿತ ಮತ್ತು ಸಂವೇದನೆ ಇಲ್ಲದೆ ಹೋಗಿದ್ದಲ್ಲಿ ಬಹುಶಃ ಮನುಕುಲ ಶಿಲಾಯುಗದಿಂದ ಒಂದು ಹೆಜ್ಜೆಯೂ ಮುಂದೆ ಚಲಿಸಲಾಗುತ್ತಿರಲಿಲ್ಲ.
ತನಗೆ ಹಸಿವಾಗುವುದನ್ನು ಹೇಳಲಾರದೆ ರಚ್ಚೆ ಹಿಡಿಯುವ ಎಳೆ ಕೂಸಿನ ಅಳು ಸಹ ಒಂದು ರೀತಿಯ ಆಂದೋಲನವೇ. ಅಂಬೆಗಾಲಿನ ಹಂತವನ್ನು ದಾಟಿ ಹೆಜ್ಜೆ ಹಾಕಲು ಕಲಿಯುವ ಹಸುಳೆ ಬೀಳುತ್ತಾ, ಏಳುತ್ತಾ , ಗಾಯ ಮಾಡಿಕೊಳ್ಳುತ್ತಾ ನಡೆಯುವ ಪ್ರಕ್ರಿಯೆಯೂ ಒಂದು ರೀತಿಯ ಆಂತರಿಕ ಆಂದೋಲನವೇ. ಅಂದರೆ, ಮಾನವ ತನ್ನ ಅಭ್ಯುದಯದ ಹಾದಿಯಲ್ಲಿ ಸ್ಥಾಪಿತ ನೆಲೆಯ ವಿರುದ್ಧ ಬಂಡಾಯ ಹೂಡುತ್ತಲೇ ತನ್ನ ಮುನ್ನಡೆ ಸಾಧಿಸಲೆತ್ನಿಸುತ್ತಾನೆ.
ತನಗೆ ನ್ಯಾಯಯುತವಾಗಿ ದಕ್ಕಬೇಕಾಗಿರುವುದನ್ನು, ತನ್ನಿಂದ ಕಸಿದುಕೊಳ್ಳಲಾಗಿರುವುದನ್ನು, ತನಗೆ ವಂಚಿಸಲಾಗಿರುವುದನ್ನು ಮತ್ತು ತನ್ನ ಸ್ವಾಭಾವಿಕ ಹಕ್ಕುಗಳನ್ನು ಸಾಧಿಸಲು ಮನುಷ್ಯ ವ್ಯಕ್ತಿಗತ ನೆಲೆಯಲ್ಲಿ, ಸಾಮುದಾಯಿಕ ನೆಲೆಯಲ್ಲಿ, ಸಾಂಘಿಕ ನೆಲೆಯಲ್ಲಿ ವೈಯಕ್ತಿಕವಾಗಿ, ಸಾಮುದಾಯಿಕವಾಗಿ, ಸಾಂಸ್ಥಿಕವಾಗಿ ಆಂದೋಲನಗಳ ಮೂಲಕವೇ ಪ್ರಯತ್ನಿಸುತ್ತಾ ಬಂದಿದ್ದಾನೆ.
ಮಾನವ ಸಮಾಜ ಇಂದು ಪ್ರಜಾತಂತ್ರ, ಗಣತಂತ್ರ, ಸಂವಿಧಾನ, ಕಾನೂನು ಕಟ್ಟಳೆ ಮುಂತಾದ ನಾಗರಿಕ ಸಮಾಜದ ರೀತಿ ರಿವಾಜುಗಳನ್ನು ರೂಢಿಸಿಕೊಂಡು, ಮೈಗೂಡಿಸಿಕೊಂಡು ನಡೆದು ಬಂದಿದ್ದರೆ ಅದರ ಹಿಂದೆ ಶತಮಾನಗಳಿಂದಲೂ ನಡೆದು ಬಂದ ಜನಾಂದೋಲನಗಳಿವೆ, ಚಳುವಳಿಗಳ ಇತಿಹಾಸವಿದೆ, ಪ್ರತಿರೋಧ ಪ್ರತಿಭಟನೆಯ ಪರಂಪರೆ ಇದೆ.
ಗುಲಾಮಗಿರಿಯ ವಿರುದ್ಧ ಮೊಟ್ಟಮೊದಲ ಬಾರಿಗೆ ದಂಗೆಯೆದ್ದು, ಪ್ರತಿರೋಧದ ಪಂಜುಗಳನ್ನು ತನ್ನ ಮುಂದಿನ ಹಲವು ಶತಮಾನಗಳ ಪೀಳಿಗೆಗೆ ಬಿಟ್ಟು ಹೋದ ಸ್ಪಾರ್ಟಕಸ್ ನಿಂದ ಹಿಡಿದು ಇತ್ತೀಚಿನ ರೈತ ಮುಷ್ಕರದವರೆಗೆ ಮಾನವ ಸಮಾಜ ಜನಾಂದೋಲನಗಳ ಮೂಲಕವೇ, ವೈಯಕ್ತಿಕ/ಸಾಂಘಿಕ ಪ್ರತಿಭಟನೆ, ಪ್ರತಿರೋಧ, ಬಂಡಾಯಗಳ ಮೂಲಕವೇ ತನ್ನ ವಿಕಾಸವನ್ನು ಕಂಡಿದೆ.
ಬಹುಶಃ ಈ ಇತಿಹಾಸದ ವಿಭಿನ್ನ ಕಾಲಘಟ್ಟಗಳಲ್ಲಿ, ವಿಭಿನ್ನ ನೆಲೆಗಳಲ್ಲಿ ಈ ಪ್ರತಿರೋಧದ ದನಿಗಳು ದಾಖಲಾಗದೆ ಹೋಗಿದ್ದರೆ 21ನೆಯ ಶತಮಾನದ ಮನುಕುಲ ಶಿಲಾಯುಗದ ಅಥವಾ ಗುಲಾಮಿ ಸಮಾಜದಲ್ಲೇ ಉಳಿದುಬಿಡುತ್ತಿತ್ತು.
ಆಂದೋಲನಗಳ ಮೂಲಕ ತಮ್ಮ ಹಕ್ಕೊತ್ತಾಯಗಳನ್ನು ಮಂಡಿಸಿ ನಾಗರಿಕ ಸಮಾಜದ ವಿಕಸನಕ್ಕೆ ಕಾರಣವಾಗುವ ಮನುಷ್ಯರನ್ನು ಒಂದು ‘ ತಳಿ ’ ಎಂದು ಮೂದಲಿಸುವ, ಆಂದೋಲನಜೀವಿಗಳು ಎಂದು ಹೀಗಳೆಯುವ ಪ್ರಧಾನಮಂತ್ರಿಗಳು ಇತಿಹಾಸದ ಪುಟಗಳನ್ನು ಒಮ್ಮೆಯಾದರೂ ತಿರುವಿಹಾಕುವುದು ಒಳಿತು.
ಆಂದೋಲನಜೀವಿಗಳ ಈ ತಳಿ ತನ್ನ ಜೀವವಂತಿಕೆಯನ್ನು ಕಾಪಾಡಿಕೊಂಡು ಬಂದಿರುವುದರಿಂದಲೇ ಇಂದು ಭಾರತದಲ್ಲಿ ಒಂದು ಸಂವಿಧಾನ, ಪ್ರಜಾತಂತ್ರ ಮತ್ತು ಸಮಾನತೆಯ ಕನಸುಗಳು ಜೀವಂತವಾಗಿವೆ.
ಈ ತಳಿಯ ಇತಿಹಾಸ ಮತ್ತು ಪರಂಪರೆ ಮನುಕುಲದ ಇತಿಹಾಸದಷ್ಟೇ ಹಳೆಯದು, ಅಷ್ಟೇ ಅಮೂಲ್ಯವಾದುದಲ್ಲವೇ ? ಟಿಪ್ಪುಸುಲ್ತಾನನಿಂದ ಆರಂಭವಾಗಿ, 1857ರ ಸ್ವಾತಂತ್ರ್ಯ ಸಂಗ್ರಾಮವನ್ನು ಹಾದು ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಸಕ್ರಿಯವಾಗಿ ಪಾಲ್ಗೊಂಡು, ಜೀವ, ಜೀವನ, ಜೀವನೋಪಾಯ ಎಲ್ಲವನ್ನೂ ಕಳೆದುಕೊಂಡ ಲಕ್ಷಾಂತರ ಜೀವಿಗಳು ಈ ತಳಿಗೇ ಸೇರಿದವರು.
ದುರಂತ ಎಂದರೆ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಸಂತತಿಯನ್ನು ಪ್ರತಿನಿಧಿಸದ ಒಂದು ಪೀಳಿಗೆ ಇಂದು ದೇಶ ಮತ್ತು ದೇಶಪ್ರೇಮದ ನಿಷ್ಕರ್ಷೆ ಮಾಡುತ್ತಿದೆ. ಈ ಪೀಳಿಗೆಯ ಕೂಸುಗಳು ಆಂದೋಲನಜೀವಿಗಳನ್ನು ಅಪಮಾನಿಸುತ್ತಿವೆ.
ಬುದ್ಧನ ಸಾತ್ವಿಕ ಆಂದೋಲನದಿಂದ ಅಂಬೇಡ್ಕರರ ತಾತ್ವಿಕ ಪ್ರಜಾಂದೋಲನದವರೆಗಿನ ಹೆಜ್ಜೆಗುರುತುಗಳನ್ನು ಗಮನಿಸಿದ್ದರೆ ಅಥವಾ ಶತಮಾನಗಳ ಅಸಮಾನತೆ ಮತ್ತು ತಾರತಮ್ಯಗಳ ಪಳೆಯುಳಿಕೆಗಳನ್ನು ಇಂದಿಗೂ ಉಳಿಸಿಕೊಂಡು ಬಂದಿರುವ ಭಾರತೀಯ ಸಮಾಜದಲ್ಲಿನ ಚಾರಿತ್ರಿಕ ಪ್ರತಿರೋಧದ ದನಿಗಳನ್ನು, ಹೋರಾಟಗಳನ್ನು, ಜನಾಂದೋಲನಗಳನ್ನು ಗಮನಿಸಿದ್ದರೆ, ಪ್ರಧಾನಿ ನರೇಂದ್ರ ಮೋದಿಯವರು ‘ ತಳಿ ’ ಎನ್ನುವ ಪದ ಬಳಸುವ ಬದಲು ಪರಂಪರೆ, ನಾಗರಿಕತೆ ಎಂಬ ಮೌಲಿಕ ಪದವನ್ನು ಬಳಸುತ್ತಿದ್ದರು.
ಅಸ್ಪೃಶ್ಯತೆ, ಬಾಲ್ಯ ವಿವಾಹ ಮುಂತಾದ ಅನಿಷ್ಟ ಪದ್ಧತಿಗಳನ್ನು ಇಂದಿಗೂ ಜೀವಂತವಾಗಿರಿಸಿಕೊಂಡು ಬಂದಿರುವ ಭಾರತೀಯ ಸಮಾಜದಲ್ಲಿ ಆಂದೋಲನ ನಾಗರಿಕತೆಯ ಒಂದು ಭಾಗವಾಗಿ ಬೆಳೆದುಬಂದಿರುವುದನ್ನು ಅರಿತಿದ್ದರೆ ‘ ಆಂದೋಲನಜೀವಿ ’ ಎನ್ನುವ ಲೇವಡಿಯ ಮಾತುಗಳು ಹೊರಬರುತ್ತಿರಲಿಲ್ಲ.
ನಿಜ, ಭಾರತದಲ್ಲಿ ‘ ಅಂದೋಲನಜೀವಿಗಳ ’ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಸಾಮಾಜಿಕ ಮತ್ತು ಆರ್ಥಿಕ ಸಮಾನತೆಗಾಗಿ, ಜಾತಿ ತಾರತಮ್ಯ ಮತ್ತು ದೌರ್ಜನ್ಯಗಳ ವಿರುದ್ಧ, ಮಹಿಳೆಯರ ಘನತೆಗಾಗಿ, ಹೆಣ್ತನದ ರಕ್ಷಣೆಗಾಗಿ, ಅಸ್ಪೃಶ್ಯತೆ ಮತ್ತು ಜಾತಿ ದೌರ್ಜನ್ಯದ ವಿರುದ್ಧ, ಸಾಮಾಜಿಕ ಅನ್ಯಾಯಗಳ ವಿರುದ್ಧ ಆಂದೋಲನಜೀವಿಗಳ ಒಂದು ಪರಂಪರೆಯೇ ಇಲ್ಲಿ ಬೆಳೆದುಬಂದಿದೆ.
ಬಸವಣ್ಣನಿಂದ ಅಂಬೇಡ್ಕರ್ ವರೆಗೆ ಈ ಪರಂಪರೆ ಬೆಳೆಯುತ್ತಲೇ ಬಂದಿದೆ. ಮಾರ್ಕ್ಸ್, ಲೆನಿನ್, ಮಾವೋ, ಫುಲೆ, ಗಾಂಧಿ, ಅಂಬೇಡ್ಕರ್, ಲೋಹಿಯಾ, ಪೆರಿಯಾರ್ ಹೀಗೆ ಮಹಾನ್ ಚಿಂತಕರ ಸಂತತಿ ಮತ್ತು ವಿಚಾರಧಾರೆ ಈ ಪರಂಪರೆಯನ್ನು ಪೋಷಿಸುತ್ತಾ ಬಂದಿದೆ.
ಇದು ಯಾವುದೇ ವೈಜ್ಞಾನಿಕ ಪ್ರಯೋಗಾಲಯದಲ್ಲಿ ಸೃಷ್ಟಿಸಿದ ತಳಿ ಅಲ್ಲ. ಇದು ಶತಮಾನಗಳ ಅನ್ಯಾಯಗಳ ವಿರುದ್ಧ ಜನಮಾನಸದ ನಡುವೆ ಸೃಷ್ಟಿಯಾಗಿರುವ ಸಂಘರ್ಷದ ಪರಂಪರೆಗಳು, ಹೋರಾಟದ ವಾಹಿನಿಗಳು, ಜನಾಂದೋಲನದ ಸಾಗರಗಳು.
ವಸಾಹತು ದಾಸ್ಯದಿಂದ ವಿಮೋಚನೆ ಪಡೆದ ನಂತರ ವಿಶ್ವದ ಅತ್ಯುತ್ತಮ ಸಂವಿಧಾನವನ್ನು ರಚಿಸಿ ರಾಜಕೀಯ, ಸಾಮಾಜಿಕ ಮತ್ತು ಆರ್ಥಿಕ ಸ್ವಾತಂತ್ರ್ಯ ಸಾಧಿಸುವ ನಿಟ್ಟಿನಲ್ಲಿ 73 ವರ್ಷಗಳ ಸ್ವತಂತ್ರ ಅಡಳಿತ ನಡೆಸಿದ ನಂತರವೂ ಭಾರತದಲ್ಲಿ ಆಂದೋಲನಜೀವಿಗಳು ಸಕ್ರಿಯರಾಗಿದ್ದರೆ ಅದು ಆಡಳಿತ ವ್ಯವಸ್ಥೆ ಮತ್ತು ಆಳುವ ವರ್ಗಗಳು ನಾಚಿಕೆಪಡಬೇಕಾದ ವಿಚಾರ.
ಸಂವಿಧಾನದ ಆಶಯದಂತೆ ಸಮಸಮಾಜವನ್ನು ಕಟ್ಟುವ ಪ್ರಕ್ರಿಯೆಯಲ್ಲಿ, ಶೋಷಣೆ ಮುಕ್ತ, ದೌರ್ಜನ್ಯ ಮುಕ್ತ, ಭ್ರಷ್ಟಾಚಾರ ಮುಕ್ತ, ಸಂವೇದನಾಶೀಲ ಸಮಾಜ ನಿರ್ಮಾಣಕ್ಕಾಗಿ ಈ ದೇಶದ ಆಳುವ ವರ್ಗಗಳು, ರಾಜಕೀಯ ಪಕ್ಷಗಳು ಸಂವಿಧಾನ ಬದ್ಧತೆ ಮತ್ತು ಪ್ರಜಾತಂತ್ರ ನಿಷ್ಠೆಯಿಂದ ಶ್ರಮಿಸಿದ್ದರೆ ಬಹುಶಃ ಆಂದೋಲನಜೀವಿಗಳೂ ತಮ್ಮ ಬದುಕಿನ ಅಮೂಲ್ಯ ಕ್ಷಣಗಳನ್ನು ಪ್ರತಿಭಟನೆ, ಪ್ರತಿರೋಧ, ಮುಷ್ಕರ, ಧರಣಿ ಮುಂತಾದ ಸಂಘರ್ಷಗಳಲ್ಲಿ ಕಳೆಯುತ್ತಿರಲಿಲ್ಲ.
1970ರ ದಶಕದ ರೈಲ್ವೆ ಮುಷ್ಕರದಿಂದ 2020ರ ರೈತ ಮುಷ್ಕರದವರೆಗೆ, ನೆಲ್ಲಿ ಹತ್ಯಾಕಾಂಡದಿಂದ ಶಹೀನ್ ಭಾಗ್ವರೆಗೆ, ಮಥುರಾ ಅತ್ಯಾಚಾರ ಪ್ರಕರಣದಿಂದ ಹಥ್ರಾಸ್ವರೆಗೆ, ತುರ್ತುಪರಿಸ್ಥಿತಿಯಿಂದ ಈ ಕ್ಷಣದವರೆಗೆ ಈ ದೇಶದ ಹಾದಿ ಬೀದಿಗಳಲ್ಲಿ ನಡೆದ ಹೋರಾಟಗಳನ್ನು, ನ್ಯಾಯಾಂಗದ ಅಂಗಳದಲ್ಲಿ ನಡೆದ ಸಂಘರ್ಷಗಳನ್ನು ಗಮನಿಸಿದರೆ ಭಾರತದ ಆಳುವ ವರ್ಗಗಳು ‘ ಆಂದೋಲನಜೀವಿಗಳನ್ನು ’ ಹೇಗೆ ತುದಿಗಾಲಲ್ಲಿ ನಿಲ್ಲಿಸಿವೆ ಎಂದು ಅರ್ಥವಾಗುತ್ತದೆ.
ಶಿಕ್ಷಣ ಹಕ್ಕು, ಆಹಾರ ಹಕ್ಕು, ಅರಣ್ಯ ಹಕ್ಕು, ಮಾಹಿತಿ ಹಕ್ಕು ಹೀಗೆ ಸಾರ್ವಭೌಮ ಪ್ರಜೆಗಳ ಜೀವನ ಮತ್ತು ಜೀವನೋಪಾಯಕ್ಕೆ ಅತ್ಯವಶ್ಯವಾದ ಹಕ್ಕುಗಳನ್ನು ಸಾಂವಿಧಾನಿಕವಾಗಿ ಪ್ರಜೆಗಳಿಗೆ ಒದಗಿಸಲು ಈ ದೇಶಕ್ಕೆ ಆರು ದಶಕಗಳು ಬೇಕಾದವು. ಈ ಎಲ್ಲ ಹಕ್ಕುಗಳೂ ಆಳುವವರ ಔದಾರ್ಯದಿಂದ ಪಡೆದಿದ್ದಲ್ಲ, ಜನಪರ ಸಂಘಟನೆಗಳ, ಜನಾಂದೋಲನಗಳ ಅವಿರತ ಶ್ರಮ, ಹೋರಾಟ ಮತ್ತು ನ್ಯಾಯಯುತ ಪ್ರಯತ್ನಗಳ ಫಲವಾಗಿ ಪಡೆದದ್ದು.
ಪ್ರತಿಭಟನೆ ಮತ್ತು ಪ್ರತಿರೋಧ ಪ್ರಜಾತಂತ್ರ ವ್ಯವಸ್ಥೆಯಲ್ಲಿ ಆಡಳಿತ ಯಂತ್ರವನ್ನು ಸುಸ್ಥಿತಿಯಲ್ಲಿಡಲು ನೆರವಾಗುವ ಪ್ರಬಲ ಅಸ್ತ್ರಗಳು. ಸರ್ವಾಧಿಕಾರಿ, ನಿರಂಕುಶ ವ್ಯವಸ್ಥೆಯಲ್ಲಿ ದಾಸ್ಯದಿಂದ ಮುಕ್ತಿಪಡೆಯಲು ಇರುವ ಮಾರ್ಗಗಳು. ಜಗತ್ತಿನ ಇತಿಹಾಸದಲ್ಲಿ ಅನೇಕಾನೇಕ ಸರ್ವಾಧಿಕಾರಿಗಳು, ನಿರಂಕುಶ ಪ್ರಭುಗಳು ಜನಾಂದೋಲನಗಳಿಗೆ ಮಣಿದು ಪದತ್ಯಾಗ ಮಾಡಿರುವುದನ್ನು ಕಂಡಿದ್ದೇವೆ, ಇಂದಿಗೂ ಕಾಣುತ್ತಿದ್ದೇವೆ.
1990 ದಶಕದಲ್ಲಿ ವಿಶ್ವದ ಹಲವು ರಾಷ್ಟ್ರಗಳಲ್ಲಿ ಕಮ್ಯುನಿಸ್ಟ್ ಭದ್ರಕೋಟೆಯನ್ನು ಛಿದ್ರಗೊಳಿಸಿದ್ದು, ಹಿಂದೂ ರಾಷ್ಟ್ರ ಎಂಬ ಹೆಗ್ಗಳಿಕೆಯಿದ್ದ ನೇಪಾಲದಲ್ಲಿ ರಾಜಪ್ರಭುತ್ವವನ್ನು ಕೊನೆಗೊಳಿಸಿದ್ದು ಜನಾಂದೋಲನಗಳೇ ಅಲ್ಲವೇ ? ಭಾರತದಲ್ಲಿ ತುರ್ತುಪರಿಸ್ಥಿತಿಯ ಕರಾಳ ದಿನಗಳನ್ನು ಕೊನೆಗೊಳಿಸಿದ್ದೂ ಜನಾಂದೋಲನವೇ ಅಲ್ಲವೇ ?
ಈ ಆಂದೋಲನಜೀವಿಗಳು ಇಲ್ಲದೆ ಹೋಗಿದ್ದರೆ ಭಾರತ ಮತ್ತು ವಿಶ್ವ ಹೇಗಿರುತ್ತಿತ್ತು ? ಈ ಪ್ರಶ್ನೆ ಒಂದು ಘಳಿಗೆ ಮನದಲ್ಲಿ ಸುಳಿದಿದ್ದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ‘ ಅಂದೋಲನಜೀವಿ ’ ಪದವನ್ನು ಅವಹೇಳನಕಾರಿಯಾಗಿ ಬಳಸುತ್ತಿರಲಿಲ್ಲ.
ಇಂದು ಭಾರತ ಕವಲು ಹಾದಿಯಲ್ಲಿದೆ. ಇಂದಿನ ಭಾರತ ತನ್ನ ಸ್ಥಾಪಿತ ಮಾನವೀಯ ನೆಲೆಗಳಿಂದ ವಿಮುಖವಾಗುತ್ತಿದೆ, ಶತಮಾನಗಳ ಬಹುಸಂಸ್ಕೃತಿಯ ನೆಲೆಗಳನ್ನು ಅಲ್ಲಗಳೆಯುತ್ತಿದೆ, ಈ ದೇಶದ ಅಂತಃಸತ್ವವನ್ನು ಕಾಪಾಡಿಕೊಂಡು ಬಂದಿರುವ ಜನಸಂಸ್ಕೃತಿಗಳನ್ನು ನಿರಾಕರಿಸುತ್ತಿದೆ, ಸಮಾಜೋ ಸಾಂಸ್ಕೃತಿಕ ನೆಲೆಯಲ್ಲಿ ಚಾರಿತ್ರಿಕವಾಗಿ ನೆಲೆಗೊಂಡಿರುವ ಭ್ರಾತೃತ್ವದ ನೆಲೆಗಳನ್ನು ನಾಶಪಡಿಸುತ್ತಿದೆ, ಮತ್ತೊಂದೆಡೆ ಈ ದೇಶದ ಬಹುಸಂಖ್ಯಾತ ಜನತೆಯನ್ನು ಶೋಷಣೆಗೊಳಪಡಿಸುತ್ತಲೇ ಬ್ರಾಹ್ಮಣ್ಯದ ಅಧಿಕಾರಶಾಹಿ ನೆಲೆಗಳಿಗೆ ಮರುಜನ್ಮ ಕಲ್ಪಿಸುತ್ತಿದೆ.
ನವ ಭಾರತ ಪ್ರಾಚೀನ ಮನುಸ್ಮೃತಿಯ ಪರಂಪರೆಯನ್ನು ಪುನರ್ ಸ್ಥಾಪಿಸುವತ್ತ ಧಾವಿಸುತ್ತಿದೆ. ಸ್ವತಂತ್ರ ಭಾರತ ಶಿಲ್ಪಿಗಳ ಸುಂದರ ಕನಸುಗಳನ್ನು ಭಗ್ನಗೊಳಿಸಿ ಸಾಂವಿಧಾನಿಕ, ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಹೊಸಕಿಹಾಕುವತ್ತ ದಾಪುಗಾಲು ಹಾಕುತ್ತಿದೆ. ಈ ಬೆಳವಣಿಗೆಗಳ ಹಿನ್ನೆಲೆಯಲ್ಲೇ ಕಳೆದ ಎರಡು ವರ್ಷಗಳಲ್ಲಿ ಪ್ರಬಲ ಜನಾಂದೋಲನಗಳು ರೂಪುಗೊಳ್ಳುತ್ತಿವೆ, ಆಂದೋಲನಜೀವಿಗಳೂ ಹೆಚ್ಚಾಗುತ್ತಿದ್ದಾರೆ.
ದೇಶದ ಶ್ರಮಜೀವಿಗಳನ್ನು, ದುಡಿಯುವ ವರ್ಗಗಳನ್ನು ಶಾಶ್ವತವಾಗಿ ಗುಲಾಮಗಿರಿಗೆ ದೂಡುವ ಕಾರ್ಮಿಕ ಸಂಹಿತೆಗಳು, ಸಮಸ್ತ ರೈತಾಪಿಯನ್ನು ಕಾರ್ಪೋರೇಟ್ ಗುಲಾಮಗಿರಿಗೆ ಒಳಪಡಿಸುವ ಮೂರು ಕರಾಳ ಕೃಷಿ ಮಸೂದೆಗಳು, ದೇಶದ ಅವಕಾಶವಂಚಿತ ಜನಸಮುದಾಯಗಳನ್ನು ಮತ್ತು ಶೋಷಿತರನ್ನು ಶಿಕ್ಷಣದಿಂದ ವಂಚಿತರನ್ನಾಗಿ ಮಾಡುವ ಹೊಸ ಶಿಕ್ಷಣ ನೀತಿ, ಶತಮಾನಗಳಿಂದ ಈ ದೇಶದಲ್ಲಿ ನೆಲೆಸಿರುವ ಜನಸಮುದಾಯಗಳನ್ನು ಹೊರದಬ್ಬುವ ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ಎನ್ ಆರ್ ಸಿ ಕಾಯ್ದೆ, ಸಂವಿಧಾನ ಈ ದೇಶದ ಸಾರ್ವಭೌಮ ಪ್ರಜೆಗಳಿಗೆ ನೀಡಿರುವ ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ವಾಕ್ ಸ್ವಾತಂತ್ರ್ಯವನ್ನು ಕಸಿದುಕೊಳ್ಳುವ ಯುಎಪಿಎ ಎನ್ನುವ ಕರಾಳ ಶಾಸನ, ಸಂವಿಧಾನದ ಕನಸಿನ ಒಕ್ಕೂಟ ವ್ಯವಸ್ಥೆಯನ್ನು ನಾಶಪಡಿಸುವ ಆಡಳಿತ ನೀತಿಗಳು ಇವೆಲ್ಲವೂ ಆಂದೋಲನಜೀವಿಗಳ ಸಂಖ್ಯೆಯನ್ನು ಹೆಚ್ಚಿಸುತ್ತಿವೆ. ಸಹಜವೇ ಅಲ್ಲವೇ “ ದೇಶ ಎಂದರೆ ಮಣ್ಣಲ್ಲವೋ ಮನುಷ್ಯರು ” ಎಂಬ ಕವಿವಾಣಿ ನಿಜ ಅಲ್ಲವೇ ?
ದೇಶದ ಆಡಳಿತ ನಿರ್ವಹಿಸುವವರ ನೈತಿಕ ನೆಲೆ ಪರಿಶುದ್ಧವಾಗಿರಬೇಕು, ವ್ಯಕ್ತಿಗತ ಹಿನ್ನೆಲೆ ದೋಷಮುಕ್ತವಾಗಿರಬೇಕು, ವೈಯಕ್ತಿಕ ನೆಲೆ ಪ್ರಾಮಾಣಿಕವಾಗಿರಬೇಕು. ಹೀಗಿದ್ದಾಗ ಮಾತ್ರ ಸಾಮಾಜಿಕ ಸ್ವಾಸ್ಥ್ಯ ಮತ್ತು ಸಾಂಸ್ಕೃತಿಕ ಮೌಲ್ಯಗಳನ್ನು ಕಾಪಾಡಲು ಸಾಧ್ಯ. ಸಾರ್ವಭೌಮ ಪ್ರಜೆಗಳ ಅಮೂಲ್ಯ ಮತಗಳನ್ನು ಪಡೆದು ವಿಧಾನಸಭೆ, ಸಂಸತ್ತನ್ನು ಪ್ರವೇಶಿಸುವ ಜನಪ್ರತಿನಿಧಿಗಳು ತಮ್ಮ ನಾಲಿಗೆಯ ಮೇಲೆ ಹಿಡಿತ ಕಳೆದುಕೊಂಡರೆ ಶಾಸನಸಭೆಗಳು ತಮ್ಮ ಮೌಲ್ಯವನ್ನು ಕಳೆದುಕೊಳ್ಳುತ್ತವೆ.
ಇತ್ತೀಚಿನ ದಿನಗಳಲ್ಲಿ ಇದನ್ನು ಗಮನಿಸುತ್ತಲೇ ಬಂದಿದ್ದೇವೆ. ಗುಂಡಿಟ್ಟು ಕೊಲ್ಲುವವರು, ತಲೆ ಕಡಿಯುವವರು, ಸಮುದ್ರಕ್ಕೆ ಎಸೆಯುವವರು, ಕೈಕಾಲು ಕತ್ತರಿಸುವವರು ಅಧಿಕಾರಪೀಠಗಳನ್ನು ಅಲಂಕರಿಸುತ್ತಿದ್ದಾರೆ. ಶಾಸನಸಭೆಗಳ ಅಂಗಳದಲ್ಲಿ ಸಚ್ಚಾರಿತ್ರ್ಯದ ಪ್ರತಿನಿಧಿಗಳ ಸಂಖ್ಯೆ ಕಡಿಮೆಯಾಗುತ್ತಿರುವಂತೆಲ್ಲಾ, ಸಭ್ಯ ನಡತೆ, ಸೌಜನ್ಯಯುತ ಮಾತು, ಸಂವೇದನಾಶೀಲ ವರ್ತನೆ ಮತ್ತು ಮಾನವೀಯ ಧೋರಣೆ ಕ್ಷೀಣಿಸುವುದು ಸಹಜ. ಈ ದುರಂತ ಸನ್ನಿವೇಶವನ್ನು ನಾವು ಎದುರಿಸುತ್ತಿದ್ದೇವೆ.
ಈ ಮೌಲ್ಯರಹಿತ ಭೂಮಿಕೆಯ ಮೇಲೆ ನಿಂತು, ತಮ್ಮ ಹಕ್ಕುಗಳಿಗಾಗಿ, ಅಸ್ಮಿತೆ ಅಸ್ತಿತ್ವಗಳಿಗಾಗಿ , ತಮ್ಮ ಭವಿಷ್ಯಕ್ಕಾಗಿ ಹೋರಾಡುವ ಪ್ರಜೆಗಳನ್ನು ‘ ಆಂದೋಲನಜೀವಿಗಳು ’ ಎಂದು ಮೂದಲಿಸುವುದು ಪ್ರಧಾನಮಂತ್ರಿಗಳ ಸ್ಥಾನಕ್ಕೆ ಶೋಭೆ ತರುವಂತಹುದಲ್ಲ.
ಪ್ರಧಾನಿಗಳ ಈ ಹೇಳಿಕೆ ಕೊರೋನಾಗಿಂತಲೂ ಶೀಘ್ರವಾಗಿ ವ್ಯಾಪಿಸಿದ್ದು ತೆಲಂಗಾಣದ ಮುಖ್ಯಮಂತ್ರಿ ಹೋರಾಟನಿರತ ಮಹಿಳೆಯರನ್ನು ನಾಯಿಗಳಿಗೆ ಹೋಲಿಸಿದ್ದಾರೆ. ಸಾರ್ವಜನಿಕ ವೇದಿಕೆಯಲ್ಲಿ ಮಾತನಾಡುತ್ತಿದ್ದ ಕೆ ಚಂದ್ರಶೇಖರ್ ರಾವ್ ತಮ್ಮ ಹಕ್ಕೊತ್ತಾಯಗಳಿಗಾಗಿ ಮನವಿ ಸಲ್ಲಿಸಲು ನೆರೆದಿದ್ದ ಮಹಿಳೆಯರನ್ನು ಉದ್ದೇಶಿಸಿ “ ನೀವು ಈಗ ಅರ್ಜಿ ಸಲ್ಲಿಸಿದ್ದೀರಿ ಈಗ ಇಲ್ಲಿಂದ ಹೊರಡಿ, ನೀವು ಇಲ್ಲಿಯೇ ಇರಲು ಬಯಸಿದರೆ ಮೌನದಿಂದಿರಿ.
ಅನಗತ್ಯವಾಗಿ ನೀವು ಏಟು ತಿನ್ನಬೇಕಾಗುತ್ತದೆ. ನಿಮ್ಮಂತಹ ಸಾಕಷ್ಟು ಜನರನ್ನು ನೋಡಿದ್ದೇವೆ, ಅಮ್ಮಾ , ನಿಮ್ಮಂತಹ ನಾಯಿಗಳು ಸಾಕಷ್ಟಿವೆ ಇಲ್ಲಿಂದ ಹೊರಡಿ ” ಎಂದು ಹೇಳಿದ್ದಾರೆ.(ಟೈಮ್ಸ್ ಆಫ್ ಇಂಡಿಯಾ-11-2-21). ಲಕ್ಷಾಂತರ ಆಂದೋಲನಜೀವಿಗಳ ಹೋರಾಟದ ಫಲಾನುಭವಿಯಾಗಿ ಅಧಿಕಾರಪೀಠದಲ್ಲಿರುವ ಓರ್ವ ಮುಖ್ಯಮಂತ್ರಿಯ ಕಣ್ಣಿಗೆ ಇಂದಿನ ಆಂದೋಲನಜೀವಿಗಳು ನಾಯಿಗಳಂತೆ ಕಾಣುತ್ತಾರೆ. ಇದು ಈ ದೇಶದ ದುರಂತ.
ಭಾರತದ ಸಂವಿಧಾನವನ್ನು ಮುನ್ನಡೆಸಿಕೊಂಡು ಹೋಗುವವರು ತಮ್ಮ ನಡತೆ, ಧೋರಣೆ, ಚಾರಿತ್ರ್ಯ ಮತ್ತು ಸದ್ಗುಣಗಳ ಮೂಲಕ ಮುಂದಿನ ಪೀಳಿಗೆಗೆ ಮಾರ್ಗದರ್ಶಕರಾಗಿದ್ದರೆ ಮಾತ್ರ ಈ ದೇಶದಲ್ಲಿ ಪ್ರಜಾತಂತ್ರ ಉಳಿಯಲು ಸಾಧ್ಯ ಎನ್ನುವುದನ್ನು ಇನ್ನಾದರೂ ನಾವು ಅರ್ಥಮಾಡಿಕೊಳ್ಳಬೇಕಿದೆ.
ಸ್ವಾತಂತ್ರ್ಯೋತ್ತರ ಭಾರತದಲ್ಲಿ ಇಂತಹ ಉದಾತ್ತ ಚಿಂತನೆಯ ನಾಯಕರು ಇದ್ದುದರಿಂದಲೇ ಭಾರತ ತನ್ನ ಮೌಲ್ಯಗಳನ್ನು ಕೊಂಚಮಟ್ಟಿಗಾದರೂ ಉಳಿಸಿಕೊಂಡುಬಂದಿದೆ. ಸರ್ಕಾರದ ಆಡಳಿತ ನೀತಿಗಳ ವಿರುದ್ಧ, ಜನಸಾಮಾನ್ಯರ ಸಾಂವಿಧಾನಿಕ ಹಕ್ಕುಗಳಿಗಾಗಿ ದನಿ ಎತ್ತುವ, ಹೋರಾಡುವ ಪ್ರಜೆಗಳನ್ನು ‘ ಆಂದೋಲನಜೀವಿಗಳು ’ ಎಂದು ಮೂದಲಿಸುವ ಒಂದು ಸರ್ಕಾರ ಈ ಮೌಲ್ಯಗಳನ್ನು ಸಂರಕ್ಷಿಸಲು ಸಾಧ್ಯವೂ ಇಲ್ಲ, ಅರ್ಹವೂ ಅಲ್ಲ.
ಈ ವಿಕೃತ ಮನಸ್ಥಿತಿಯ ಆಡಳಿತವ ವ್ಯವಸ್ಥೆಯಲ್ಲೇ “ ಭಾರತದ ಪ್ರಜೆಗಳಾದ ನಾವು,,, ನಮಗೆ ನಾವೇ ಅರ್ಪಿಸಿಕೊಂಡಿರುವ ” ಸಂವಿಧಾನವನ್ನು ರಕ್ಷಿಸಲು ನಿರಂತರ ಆಂದೋಲನಗಳ ಹೊಸ ಯುಗವನ್ನು ಪ್ರವೇಶಿಸಬೇಕಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ದಾವಣಗೆರೆ | ನಾಳೆ ವಿವಿಧೆಡೆ ವಿದ್ಯುತ್ ವ್ಯತ್ಯಯ
ಸುದ್ದಿದಿನ,ದಾವಣಗೆರೆ : 66/11 ಕೆ.ವಿ. ವಿದ್ಯುತ್ ಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣೆ ಮತ್ತು ತುರ್ತು ನಿರ್ವಹಣಾ ಕಾಮಗಾರಿಗಳ ಕಾರ್ಯವನ್ನು ಹಮ್ಮಿಕೊಂಡಿರುವುದರಿಂದ ಜೂನ್ 23 ರಂದು ಬೆಳಿಗ್ಗೆ 10 ರಿಂದ ಸಂಜೆ 5.30 ರವರೆಗೆÉ ಈ ಕೆಳಕಂಡ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
ಮಾಮಾಸ್ ಜಾಯಿಂಟ್ ರಸ್ತೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳು, ಎಮ್.ಸಿ.ಸಿ.ಬಿ : ಶಾಬನೂರು ರಸ್ತೆ, ಎಸ್.ಎಸ್. ಲೇಔಟ್, ಎ ಬ್ಲಾಕ್, ಕುವೆಂಪು ನಗರ, ಬಾಟ್ಲಿ ಬಿಲ್ಡಿಂಗ್ ಸುತ್ತ ಮುತ್ತ, ಸಿದ್ದವೀರಪ್ಪ ಬಡಾವಣೆ, 1ನೇ ಅಡ್ಡ ರಸ್ತೆ ಯಿಂದ 7ನೇ ಅಡ್ಡರಸ್ತೆವರೆಗೆ, ಗ್ಲಾಸ್ ಹೌಸ್, ಬಾಪೂಜಿ ಬ್ಯಾಂಕ್ ಸಮುದಾಯ ಭವನದ ಹಿಂಭಾಗದ ಪ್ರದೇಶ , ಬಿ.ಐ.ಇ.ಟಿ. ಕಾಲೇಜು ಹಾಗೂ ಸುತ್ತ ಮುತ್ತ ಪ್ರದೇಶಗಳು.
ಮಂಡಿಪೇಟೆ, ಬೆನ್ನೆ ಕಂಪನಿ ರಸ್ತೆ, ಎಮ್ ಜಿ ರಸ್ತೆ, ಎನ್ ಆರ್ ರಸ್ತೆ, ಬೆಲ್ಲೌಡಿಹಲ್ಲಿ, ಮಹಾವೀರ ರಸ್ತೆ ಹಾಗೂ ಸುತ್ತ ಮುತ್ತಲಿನ ಪ್ರದೇಶಗಳು, ಬಿ.ಟಿ.: ಮಂಡಕ್ಕಿ ಬಟ್ಟಿ, 1 ರಿಂದ 10 ನೇ ಕ್ರಾಸ್, ಇಂದಿರಾ ನಗರ, ಸಿದ್ದರಾಮೇಶ್ವರ ಬಡಾವಣೆ, ಕಾರ್ಲ್ ಮಾರ್ಸ್ ನಗರ, ಕೋಳಿ ಚನ್ನಪ್ಪ ಬಡಾವಣೆ ಮತ್ತು ಸುತ್ತ ಮುತ್ತಲಿನ ಪ್ರದೇಶಗಳು, ಮೌನೇಶ್ವರ : ಹೆಚ್.ಕೆ. ಆರ್. ಸರ್ಕಲ್, ಕೆ.ಇ.ಬಿ ಕಾಲೋನಿ, ನಿಟುವಳ್ಳಿ ಹಾಗು ನಿಟುವಳ್ಳಿ ಹೊಸಬಡಾವಣೆ, ಮೌನೇಶ್ವರ ಬಡಾವಣೆ, ಸೈಯದ್ ಪೀರ್ ಬಡಾವಣೆ, ಐ.ಟಿ.ಐ. ರಿಂಗ್ ರಸ್ತೆ, ಜಯನಗರ, ದುರ್ಗಾಂಬಿಕ ದೇವಸ್ಥಾನ ಸುತ್ತಮುತ್ತ.
ಎಸ್.ಎಸ್. ಹೈಟೆಕ್ ಆಸ್ಪತ್ರೆ ರಸ್ತೆ, ಭಗೀರಥ ಸರ್ಕಲ್, ಕಾಳಿಕಾಂಬ ದೇವಸ್ಥಾನ, ಶಕ್ತಿನಗರ, ಹಾಗು ಇ.ಎಸ್.ಐ ಆಸ್ಪತ್ರೆ ಮತ್ತು ಸುತ್ತ ಮುತ್ತಲಿನ ಪ್ರದೇಶಗಳ, ಪಿ.ಬಿ. ರಸ್ತೆ., ಹಾಗೂ ಸುತ್ತ ಮುತ್ತಲಿನ ಪ್ರದೇಶಗಳು, ಕೆಟಿಜೆ: ಶ್ರೀ ಮುರಘ ರಾಜೇಂದ್ರ ಸ್ವಾಮಿಗಳ ಮಠ, ಜಾಧವ್ ಕ್ಲಿನಿಕ್ ಸುತ್ತ ಮುತ್ತ , ಶಿವಪ್ಪ ವೃತ್ತದಿಂದ ಜಯದೇವ ವೃತ್ತದವರೆಗೆ ಹಾಗು ಸುತ್ತಮುತ್ತ ಪ್ರದೇಶಗಳು, ಪಿಜೆ: ಪೋಲೀಸ್ ಕ್ವಾಟ್ರಸ್, ತುಂಗ, ಭದ್ರ, ಸರಸ್ವತಿ, ಕೃಷ್ಣ ಬ್ಲಾಕ್, ಅರುಣಾ ಸರ್ಕಲ್ ಮತ್ತು ಸುತ್ತಮುತ್ತಲಿನ ಪ್ರದೇಶಗಳು, ಸಿಜಿಹೆಚ್: ಎಮ್.ಸಿ.ಸಿ. ಎ ಬ್ಲಾಕ್, ನ್ಯಾಯಾಧೀಶರ ವಸತಿ ಗೃಹಗಳು, ತೊಗಟವೀರ ಕಲ್ಯಾಣ ಮಂದಿರ, ವಿನೋಬ ನಗರ 1ನೇ ಮುಖ್ಯ ರಸ್ತೆ ಹಾಗೂ ಸುತ್ತ ಮುತ್ತಲಿನ ಪ್ರದೇಶಗಳು, ಎಸ್.ಎಸ್. ಬಡಾವಣೆ, ಎ ಬ್ಲಾಕ್, ಶಾಂತಿ ನಗರ, ಕುಂದುವಾಡ ರಸ್ತೆ, ಮಹಾನಗರ ಪಾಲಿಕೆ ಕುಡಿಯುವ ನೀರಿನ ಸ್ಥಾವರ, ಬಸವೇಶ್ವರ ಬಡಾವಣೆ, ಮಹಾಲಕ್ಷ್ಮೀ ಬಡಾವಣೆ, ಬಾಲಾಜಿ ನಗರ, ಕುಂದುವಾಡ ಕೆರೆ ಹಾಗು ಸುತ್ತಮುತ್ತ ಪ್ರದೇಶಗಳು.
ಕರೂರು ಇಂಡಸ್ಟ್ರಿಯಲ್ ಏರಿಯಾ, ಡಿ.ಸಿ. ಕಛೇರಿ, ಜಿ.ಎಂ.ಐ.ಟಿ. ಬಸವೇಶ್ವರ ನಗರ, ರಶ್ಮೀ, ಹರಿಹರ ರಸ್ತೆ, ವಿಜಯ ನಗರ, ಅಶೋಕ ನಗರ, ಆರ್.ಟಿ.ಓ. ಕಛೇರಿ, ಎಸ್.ಪಿ. ಕಛೇರಿ, ರಿಂಗ್ ರಸ್ತೆ, ಶಿಬಾರ, ಎಸ್.ಎಂ.ಕೆ. ನಗರ, ಹಾಗೂ ಚಿತ್ತನಹಳ್ಳಿ, ಕಕ್ಕರಗೊಳ್ಳ, ಆವರಗೊಳ್ಳ, ನೀಲನಹಳ್ಳಿ, ದೇವರಹಟ್ಟಿ, ದೊಡ್ಡಬಾತಿ, ಹಳೆಬಾತಿ, ನಾರಾಯಣ ಕ್ಯಾಂಪ್, ಯರಗುಂಟಾ, ಕೋಡಿಹಳ್ಳಿ, ಗ್ರಾಮಗಳು ಹಾಗೂ ಸುತ್ತಮುತ್ತಲಿನ ಗ್ರಾಮಗಳು, ಮಾಗಾನಹಳ್ಳಿ, ಮಾಗಾನಹಳ್ಳಿ ಕ್ಯಾಂಪ್, ಓಬಜ್ಜಿಹಳ್ಳಿ, ಓಬಜ್ಜಿಹಳ್ಳಿ ಕ್ಯಾಂಪ್, ಕಡ್ಲೇಬಾಳು, ಹಳೆಕಡ್ಲೆಬಾಳು, ಮಾಳಗೊಂಡನಹಳ್ಳಿ, ಅರಸಾಪುರ, ಬದುನಾಯಕನತಾಂಡ, ಚಿಕ್ಕಓಬಜ್ಜೀಹಳ್ಳಿ, ದೊಡ್ಡಓಬಜ್ಜೀಹಳ್ಳಿ ಹಾಗೂ ಸುತ್ತಮುತ್ತಲಿನ ಗ್ರಾಮಗಳು, ಮ್ಯಾಸರಹಳ್ಳಿ, ಗುಮ್ಮನೂರು, ಹುಣಸೆಕಟ್ಟೆ, ಮುಡೇನಹಳ್ಳಿ, ಕೆಂಚಮ್ಮನಹಳ್ಳಿ, ಹೊಸಹಳ್ಳಿ, ಕಾಟಿಹಳ್ಳಿ.
ಮಂಡಲೂರು ಗ್ರಾಮಗಳು ಹಾಗೂ ಸುತ್ತಮುತ್ತಲಿನ ಗ್ರಾಮಗಳು ಹನುಮನಹಳ್ಳಿ, ಕೊಗ್ಗÀನೂರು, ಹನುಮನಹಳ್ಳಿ, ಆನಗೋಡು, ಹೆಬ್ಬಾಳು, ನೀರ್ಥಡಿ, ಶಿವಪುರ, ಹಾಲುವರ್ತಿ, ಗಂಗನಕಟ್ಟೆ, ನೇರ್ಲಿಗಿ, ಚಿನ್ನಸಮುದ್ರ ಗ್ರಾಮಗಳು ಹಾಗೂ ಸುತ್ತಮುತ್ತಲಿನ ಗ್ರಾಮಗಳು ಮತ್ತು ಆರಾಧ್ಯಾ ಕೈಗಾರಿಕೆ, ಅತ್ತಿಗೆರೆ, ಕುರ್ಕಿ, ಬಾಡ, ಕಬ್ಬೂರು, ಹೀರೆತೊಗಲೇರಿ, ಗೊಪಾನಾಳು, ಕಂದ್ಗಲ್, ರಾಮಗೊಂಡನಹಳ್ಳಿ, ಕಾಶೀಪುರ ಗ್ರಾಮಗಳು ಹಾಗೂ ಸುತ್ತಮುತ್ತಲಿನ ಗ್ರಾಮಗಳು ಆರ್.ಎಂ.ಸಿ. ಲಿಂಕ್ ರಸ್ತೆ, ಬಿ.ಟಿ. ಲೇಔಟ್, ಗುಜರಿ ಲೈನ್, ಬಂಬೂ ಬಜಾರ್, ಮಟ್ಟಿಕಲ್, ಬಿಡಿಓ ಕಛೇರಿ, ಇಮಾಮ್ ನಗರ, ಅಮರಪ್ಪನ ತೋಟ.
ಆನೆಕೊಂಡ, ಎಲ್.ಬಿ.ಎಸ್. ನಗರ.ಟಿ.ಸಿ. ಲೇಔಟ್, ಬಿಟಿ ಲೇಔಟ್, ಕೆ.ಆರ್. ರಸ್ತೆ, ಇಮಾಮ್ ನಗರ, ಆನೆಕೊಂಡ, ಐನಳ್ಳಿ ಕಾಂಪೌಂಡ್, ಎಪಿಎಂಸಿ, ಭಾರತ್ ಕಾಲೋನಿ, ಶೇಖ್ರಪ್ಪ ನಗರ ಹೆಚ್.ಕೆ.ಆರ್. ನಗರ, ಕಬ್ಬೂರು ಬಸಾಪುರ ನಗರ, ಆಣ್ಣಾ ನಗರ, ಬಸಾಪುರ ರಸ್ತೆ, ಗೋಶಾಲೆ, ಪಿ.ಬಿ. ರಸ್ತೆ, ರವಿ ಮಿಲ್ ಹಾಗೂ ಆವರಗೆರೆ, ಹೊನ್ನೂರು, ಐಗೂರು, ಮಲ್ಲಶೆಟ್ಟಿಹಳ್ಳಿ, ತೊಳಹುಣಸೆ, ದಾವಣಗೆರೆ ವಿಶ್ವವಿದ್ಯಾಲಯ ಗ್ರಾಮಗಳು ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಪಿಂಚಣಿ ದಾರರು ಸಕಾಲದಲ್ಲಿ ಜೀವಂತ ಪ್ರಮಾಣ ಪತ್ರ ಸಲ್ಲಿಸಿ
ಸುದ್ದಿದಿನ,ದಾವಣಗೆರೆ: ಪಿಂಚಣಿ ಪಡೆಯಲು ಜೀವಂತ ಸದಸ್ಯರ ಪ್ರಮಾಣ ಪತ್ರಗಳು ಕಡ್ಡಾಯವಾಗಿರುವುದರಿಂದ ಸಕಾಲಕ್ಕೆ ಸೂಕ್ತ ದಾಖಲಾತಿಗಳನ್ನು ನೀಡುವ ಮೂಲಕ ಸಹಕರಿಸಿ ಎಂದು ಉಪ ಮಹಾಲೇಖಪಾಲರಾದ ಸಚ್ಚಿನ್ ಕೃಷ್ಣ ಕೌಶಿಕ್ ತಿಳಿಸಿದರು.
ಶುಕ್ರವಾರ ಜೂನ್(19) ಬೆಂಗಳೂರಿನ ಮಹಾಲೇಖಪಾಲರು ದಾವಣಗೆರೆ ಜಿಲ್ಲಾ ಖಜಾನೆ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಸಾಮಾನ್ಯ ಭವಿಷ್ಯ ನಿಧಿ ಹಾಗೂ ಲೆಕ್ಕಪತ್ರ ಸಮಸ್ಯೆಗಳ ಕುರಿತು ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಪಿಂಚಣಿದಾರರು ತಮ್ಮ ಎಲ್ಲಾ ಬ್ಯಾಂಕ್ಗೆ 2ನೇ ವಾರ ಭೇಟಿ ನೀಡಿದರೆ ನಿಮ್ಮ ಸಮಸ್ಯೆಯನ್ನು ಶೀಘ್ರವಾಗಿ ಬಗೆಹರಿಸಲಾಗುವುದು. ಜೀವಂತ ಸದಸ್ಯರ ದೃಢೀಕರಣ ಪತ್ರವನ್ನು ಪಡೆಯಲು ಸೈಬರ್ಕೆಫೆ ಇನ್ನಿತರ ಕೇಂದ್ರಗಳಿಗೆ ಅಲೆಯುವ ಅವಶ್ಯಕತೆ ಇಲ್ಲ. ನೀವು ಮನೆಯಲ್ಲಿ ಮೊಬೈಲ್ನಲ್ಲಿ ಅಫ್ ಲೋಡ್ ಮಾಡಿ ಪಡೆಯಬಹುದು. ಮತ್ತು ನಿಮ್ಮ ಸಮಸ್ಯೆಗಳನ್ನು ತಿಳಿಸುವಾಗ ಅರ್ಜಿಯಲ್ಲಿ ಇ-ಮೇಲ್ ವಿಳಾಸ, ಮೊಬೈಲ್ ನಂಬರ್ನ್ನು ಕಡ್ಡಾಯವಾಗಿ ನಮೂದಿಸಿದರೆ, ಇದರಿಂದ ನಿಮಗೆ ಮಾಹಿತಿ ನೀಡಲು ಅನುಕೂಲವಾಗುತ್ತದೆ ಎಂದರು.
ಪಿಂಚಣಿ ಅದಾಲತ್ ಎನ್ನುವುದು ನಿವೃತ್ತ ನೌಕರರು ಮತ್ತು ಪಿಂಚಣಿದಾರರ ದೀರ್ಘಕಾಲದ ಬಾಕಿ ಉಳಿದಿರುವ ಸಮಸ್ಯೆಗಳನ್ನು ಅಥವಾ ಕುಂದುಕೊರತೆಗಳನ್ನು ಪರಿಹರಿಸಲು ವಿಶೇಷ ವೇದಿಕೆಯಾಗಿದೆ. ಸ್ಥಳದಲ್ಲೇ ಅರ್ಜಿಗಳನ್ನು ಪರಿಶೀಲಿಸಿ, ಬ್ಯಾಂಕ್ ಅಧಿಕಾರಿಗಳ ಸಮ್ಮುಖದಲ್ಲಿ ತ್ವರಿತವಾಗಿ ಸಮಸ್ಯೆಗಳನ್ನು ಬಗೆಹರಿಸುವುದು ಇದರ ಮುಖ್ಯ ಉದ್ದೇಶವಾಗಿದೆ.
ಮಹಾಲೇಖಪಾಲರ ಕಚೇರಿಯ ಹಿರಿಯ ಲೆಕ್ಕಪರಿಶೋಧನಾ ಅಧಿಕಾರಿ ನಾಗಸೇನಾ.ಟಿ.ವಿ, ಮತ್ತು ಪದ್ಮವತಿ, ಜಿಲ್ಲಾ ಖಜಾನೆಯ ಉಪನಿರ್ದೇಶಕರಾದ ರಮೇಶ್ ಅರೆಮಲ್ಲಾಪುರ, ಸಹಾಯಕ ಲೆಕ್ಕಪರಿಶೋಧನಾ ಆಧಿಕಾರಿ ಚಂದನ್ ಮತ್ತು ಜಾಬ್ಲೀನೋ, ಉಪಸ್ಥಿತರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಆಯುರ್ವೇದ ಆರೋಗ್ಯಕರ ಜೀವನ ಶೈಲಿ
ಸುದ್ದಿದಿನ,ದಾವಣಗೆರೆ:ಭಾರತದ ವೈದ್ಯಕೀಯ ಪರಂಪರೆಯು ಅತ್ಯಂತ ಪ್ರಾಚೀನ ಹಾಗೂ ಸಮೃದ್ಧವಾದುದಾಗಿದೆ. ಆಯುರ್ವೇದವು ಕೇವಲ ರೋಗಗಳಿಗೆ ಚಿಕಿತ್ಸೆ ನೀಡುವ ವಿಜ್ಞಾನವಲ್ಲ, ಅದೊಂದು ಆರೋಗ್ಯಕರ ಜೀವನ ಶೈಲಿಯಾಗಿದೆ ಎಂದು ಘನವೆತ್ತ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ತಿಳಿಸಿದರು.
ಅವರು ಶನಿವಾರ ತಪೋವನ ಆಯುರ್ವೇದ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಹಾಗೂ ನ್ಯಾಚುರೋಪತಿ ಮತ್ತು ಯೋಗ ವಿಜ್ಞಾನ ಸಂಸ್ಥೆಯು ಏರ್ಪಡಿಸಿದ್ದ ದ್ವಿತೀಯ ಘಟಿಕೋತ್ಸವ ಸಮಾರಂಭವನ್ನು ಉದ್ಪಾಟಿಸಿ ಮಾತನಾಡಿದರು.
ಈಗಿನ ದಿನಮಾನಗಳಲ್ಲಿ ಇಡೀ ಜಗತ್ತು ಮಾನಸಿಕ ಒತ್ತಡ ಹಾಗೂ ಪರಿಸರ ಸವಾಲುಗಳನ್ನು ಎದುರಿಸುತ್ತಿದ್ದು, ಇಂತಹ ಸಂದರ್ಭದಲ್ಲಿ ಆಯುರ್ವೇದ, ಯೋಗ ಮತ್ತು ನೈಸರ್ಗಿಕ ಚಿಕಿತ್ಸಾ ಪದ್ಧತಿಗಳ ಪ್ರಸ್ತುತತೆ ಹಾಗೂ ಮಹತ್ವ ಮತ್ತಷ್ಟು ಹೆಚ್ಚಾಗಿದೆ, ವೈದ್ಯರು ತಮ್ಮ ವೃತ್ತಿ ಜೀವನದಲ್ಲಿ ಮಾನವೀಯ ಮೌಲ್ಯಗಳಿಗೆ ಮೊದಲ ಆದ್ಯತೆ ನೀಡಬೇಕು ಎಂದು ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರು ತಿಳಿಸಿದರು.
ಭಾರತದ ವೈದ್ಯಕೀಯ ಪರಂಪರೆಯು ಅತ್ಯಂತ ಪ್ರಾಚೀನ ಹಾಗೂ ಸಮೃದ್ಧವಾದುದಾಗಿದೆ. ಆಯುರ್ವೇದವು ಕೇವಲ ರೋಗಗಳಿಗೆ ಚಿಕಿತ್ಸೆ ನೀಡುವ ವಿಜ್ಞಾನವಲ್ಲ, ಅದೊಂದು ಆರೋಗ್ಯಕರ ಜೀವನ ಶೈಲಿಯಾಗಿದೆ. ಜಗತ್ತು ಮಾನಸಿಕ ಒತ್ತಡ ಹಾಗೂ ಪರಿಸರ ಸವಾಲುಗಳನ್ನು ಎದುರಿಸುತ್ತಿರುವ ಈ ಸಂದರ್ಭದಲ್ಲಿ ಆಯುರ್ವೇದ, ಯೋಗ ಮತ್ತು ನೈಸರ್ಗಿಕ ಚಿಕಿತ್ಸಾ ಪದ್ಧತಿಗಳ ಪ್ರಸ್ತುತತೆ ಹಾಗೂ ಮಹತ್ವ ಮತ್ತಷ್ಟು ಹೆಚ್ಚಾಗಿದೆ ಎಂದು ತಿಳಿಸಿದರು.
ಆಧುನಿಕ ತಂತ್ರಜ್ಞಾನ, ಕೃತಕ ಬುದ್ಧಿಮತ್ತೆ (AI) ಮತ್ತು ಡಿಜಿಟಲ್ ಆರೋಗ್ಯ ಸೇವೆಗಳು ಇಂದಿನ ವೈದ್ಯಕೀಯ ಕ್ಷೇತ್ರದ ಚಿತ್ರಣವನ್ನೇ ಸಂಪೂರ್ಣವಾಗಿ ಬದಲಾಯಿಸುತ್ತಿವೆ. ಇಂತಹ ತಾಂತ್ರಿಕ ಕ್ರಾಂತಿಯ ಯುಗದಲ್ಲಿ ಪದವಿ ಪಡೆದು ಹೊರಬರುತ್ತಿರುವ ನೂತನ ವೈದ್ಯರು ಕೇವಲ ಸಾಂಪ್ರದಾಯಿಕ ವೈದ್ಯಕೀಯ ಜ್ಞಾನಕ್ಕೆ ಸೀಮಿತವಾಗದೆ, ಆಧುನಿಕ ವಿಜ್ಞಾನದ ನೂತನ ಆವಿಷ್ಕಾರಗಳನ್ನು ಅಳವಡಿಸಿಕೊಳ್ಳುವ ಮೂಲಕ ಉಭಯ ಕ್ಷೇತ್ರಗಳ ನಡುವೆ ಬಲವಾದ ಸೇತುವೆಯಾಗಿ ಕೆಲಸ ಮಾಡಬೇಕಾದ ತುರ್ತು ಅಗತ್ಯವಿದೆ ಎಂದರು.
ಕೃತಕ ಬುದ್ಧಿಮತ್ತೆಯು ರೋಗನಿರ್ಣಯವನ್ನು ಹೆಚ್ಚು ನಿಖರ ಹಾಗೂ ವೇಗವಾಗಿಸಲು ನೆರವಾದರೆ, ಡಿಜಿಟಲ್ ಆರೋಗ್ಯ ಸೇವೆಗಳು ದೂರದ ಊರುಗಳಿಗೂ ಚಿಕಿತ್ಸೆಯನ್ನು ತಲುಪಿಸಲು ಸಹಕಾರಿಯಾಗಿವೆ. ಆದ್ದರಿಂದ, ಹೊಸ ತಲೆಮಾರಿನ ವೈದ್ಯರು ಕೇವಲ ದಿನನಿತ್ಯದ ಕ್ಲಿನಿಕ್ ಅಥವಾ ಆಸ್ಪತ್ರೆಯ ಚಿಕಿತ್ಸೆಗೆ ಸೀಮಿತವಾಗದೆ, ತಂತ್ರಜ್ಞಾನದ ದತ್ತಾಂಶಗಳನ್ನು ಬಳಸಿಕೊಂಡು ಹೊಸ ರೋಗಗಳಿಗೆ ಪರಿಹಾರ ಕಂಡುಕೊಳ್ಳುವ ಉತ್ತಮ ಸಂಶೋಧಕರಾಗಬೇಕು. ಇದರೊಂದಿಗೆ, ಸಮಾಜದಲ್ಲಿ ತಂತ್ರಜ್ಞಾನ ಮತ್ತು ಆರೋಗ್ಯದ ಕುರಿತು ಇರುವ ತಪ್ಪು ಕಲ್ಪನೆಗಳನ್ನು ದೂರಾಗಿಸಿ, ಮಾನವೀಯ ಕಾಳಜಿಯೊಂದಿಗೆ ಜನರನ್ನು ಸನ್ಮಾರ್ಗದಲ್ಲಿ ಮುನ್ನಡೆಸುವ ನೈಜ ಮಾರ್ಗದರ್ಶಕರಾಗಿ ಹೊರಹೊಮ್ಮಬೇಕಿದೆ ಎಂದು ತಿಳಿಸಿದರು.
ವೈದ್ಯಕೀಯ ಸೇವೆಯು ಅತ್ಯಂತ ಪವಿತ್ರವಾದ ಮಾನವೀಯ ಸೇವೆಯಾಗಿದೆ. ರೋಗಿಗಳಿಗೆ ಔಷಧಿಗಿಂತ ಮುಂಚಿತವಾಗಿ ವೈದ್ಯರ ಪ್ರೀತಿಯ ನುಡಿಗಳು ಹಾಗೂ ಸಕಾರಾತ್ಮಕ ನಡವಳಿಕೆಯ ಅಗತ್ಯವಿರುತ್ತದೆ. ಆದ್ದರಿಂದ ವೈದ್ಯರು ತಮ್ಮ ವೃತ್ತಿ ಜೀವನದಲ್ಲಿ ಮಾನವೀಯ ಮೌಲ್ಯಗಳಿಗೆ ಮೊದಲ ಆದ್ಯತೆ ನೀಡಬೇಕು. ಕೇಂದ್ರ ಸರ್ಕಾರದ ಆಯುಷ್ ಮಂತ್ರಾಲಯವು ಸಾಂಪ್ರದಾಯಿಕ ಚಿಕಿತ್ಸಾ ಪದ್ಧತಿಗಳ ಅಭಿವೃದ್ಧಿಗೆ ಶ್ರಮಿಸುತ್ತಿದ್ದು, ಗುಜರಾತ್ನ ಜಾಮ್ನಗರದಲ್ಲಿ ವಿಶ್ವ ಆರೋಗ್ಯ ಸಂಸ್ಥೆ, ಗ್ಲೋಬಲ್ ಟ್ರೆಡಿಷನಲ್ ಮೆಡಿಸಿನ್ ಸೆಂಟರ್’ ಸ್ಥಾಪಿಸುತ್ತಿದೆ ಎಂದು ತಿಳಿಸಿದರು.
ರಾಜ್ಯಸಭಾ ಸದಸ್ಯರಾದ ಶ್ರೀ ನಾರಾಯಣಸಾ ಭಾಂಡಗೆ, ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಮಾಜಿ ಡೀನ್ ಡಾ: ಶ್ರೀನಿವಾಸ್ ಬನ್ನಿಗೊಳ, ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಉಪಕುಲಪತಿಗಳಾದ ಪ್ರೊ. ಎಸ್.ವಿ.ಹಲಸೆ, ತಪೋವನ ಸಂಸ್ಥೆಯ ಅಧ್ಯಕ್ಷ ಡಾ. ಶಶಿಕುಮಾರ್ ವಿ.ಎಂ, ಆಯುರ್ವೇದ ಕಾಲೇಜಿನ ಪ್ರಾಚಾರ್ಯರಾದ ಡಾ. ಅಶ್ವಿನಿ ಕೆ.ಆರ್., ಡಾ.ಸುಮನ ಭಟ್ ಉಪಸ್ಥಿತರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243


