Connect with us

ದಿನದ ಸುದ್ದಿ

ಹಿಂದುತ್ವದ ಹಿತಾಸಕ್ತಿಯೂ ಜಾತಿಯ ಅನಿವಾರ್ಯತೆಯೂ

Published

on

  • ನಾ ದಿವಾಕರ

ಜಾತಿ ರಾಜಕಾರಣ ಈ ದೇಶಕ್ಕೆ ಅಂಟಿರುವ ಒಂದು ಶಾಪವಾದರೆ, ಹಿಂದುತ್ವ ರಾಜಕಾರಣ ಒಂದು ಭೀಕರ ಸ್ವಪ್ನ. ಕರ್ನಾಟಕದ ಜನತೆಗೆ ಈಗ ಶಾಪಗ್ರಸ್ತರಾಗಿ ಈ ಭೀಕರ ಸ್ವಪ್ನ ಲೋಕದಲ್ಲಿ ವಿಹರಿಸುವ ಒಂದು ಅವಕಾಶ.

ಜಾತಿ ಸಮೀಕರಣದಿಂದಾಚೆಗೆ ಸರ್ಕಾರಗಳನ್ನು ರಚಿಸಲು ಸಾಧ್ಯವೇ ಆಗದ ಒಂದು ದುಸ್ಥಿತಿಗೆ ರಾಜ್ಯ ತಲುಪಿರುವುದು, ಮೌಲ್ಯಾಧಾರಿತ ರಾಜಕಾರಣದ ಹರಿಕಾರರಿಗೆ ಮಾಡುವ ಅಪಮಾನ ಹೌದಾದರೂ, ಈ ಮೌಲ್ಯಗಳ ನಿಷ್ಕರ್ಷೆಯಾದದ್ದೇ ಮಾರುಕಟ್ಟೆ ರಾಜಕಾರಣದ ಆವರಣದಲ್ಲಿ ಎನ್ನುವ ವಾಸ್ತವವನ್ನು ಅರಿತರೆ, ಅಷ್ಟೇನೂ ನಿರಾಶರಾಗಬೇಕಿಲ್ಲ.

ಏಕೆಂದರೆ ಕರ್ನಾಟಕದಲ್ಲಿ ಮೌಲ್ಯಾಧಾರಿತ ರಾಜಕಾರಣದ ಛಾಯೆ ಮೂಡುವ ವೇಳೆಗೇ ರಾಜಕೀಯ ವಲಯದಲ್ಲಿ ಅಧಿಕಾರ ಪೀಠದ ಮಾರುಕಟ್ಟೆ ಮೌಲ್ಯ ನಿರ್ಧಾರವಾಗುವ ಪರಂಪರೆಗೆ ನಾಂದಿ ಹಾಡಲಾಗಿತ್ತು. ನವ ಉದಾರವಾದ ಜಾತಿ ಧರ್ಮಗಳನ್ನೂ ಸಂತೆಯಲ್ಲಿಟ್ಟು ಮಾರುವ ಸಾಮಥ್ರ್ಯ ಹೊಂದಿರುವುದನ್ನು ಇಲ್ಲಿ ಗಮನಿಸಲೇಬೇಕು.

ಬಿಜೆಪಿ ಹೈಕಮಾಂಡ್ ತನ್ನ ಪಗಡೆಯಾಟದಲ್ಲಿ ದಾಳ ಉರುಳಿಸುವ ಮುನ್ನ ಯಾವ ಚೌಕಗಳಲ್ಲಿ ಯಾರನ್ನು ಕೂಡಿಸಬೇಕು ಎಂದು ನಿರ್ಧರಿಸಿಯೇ ಮುಂದೆ ಹೆಜ್ಜೆಯಿಟ್ಟಿದೆ. ಹಣಕಾಸು ಬಂಡವಾಳ ಮತ್ತು ನವ ಉದಾರವಾದದ ಮಾರುಕಟ್ಟೆ ಆರ್ಥಿಕತೆಯಲ್ಲಿ ಕರ್ನಾಟಕ ಪ್ರಶಸ್ತ ಸ್ಥಾನ ಗಳಿಸಿರುವುದರಿಂದಲೇ ಉಳಿದೆಲ್ಲಾ ರಾಜ್ಯಗಳಿಗಿಂತಲೂ ಇಲ್ಲಿನ ರಾಜಕಾರಣಕ್ಕೆ ಹೆಚ್ಚಿನ ಮಾರುಕಟ್ಟೆ ಮೌಲ್ಯವಿದೆ.

ನಮ್ಮ ರಾಜ್ಯದಲ್ಲಿರುವ ಜಲಮೂಲಗಳು ಮತ್ತು ಅರಣ್ಯ ಮತ್ತು ಇತರ ನೈಸರ್ಗಿಕ ಸಂಪನ್ಮೂಲಗಳು ಕಾರ್ಪೋರೇಟ್ ರಾಜಕಾರಣದ ಸಾಮ್ರಾಜ್ಯ ವಿಸ್ತರಣೆಗೆ ಹೆದ್ದಾರಿಗಳನ್ನು ನಿರ್ಮಿಸಲು ಹೆಚ್ಚು ನೆರವಾಗುತ್ತವೆ. ಹಾಗಾಗಿಯೇ ಇಲ್ಲಿನ ರಾಜಕಾರಣದಲ್ಲಿ ನಾವು ಕಾಣುತ್ತಿರುವ ಪ್ರಬಲ ಜಾತಿಗಳ ವೈರುಧ್ಯಗಳು ಮತ್ತು ಪೈಪೋಟಿಗಳು ಹೆಚ್ಚು ಗಮನಾರ್ಹವಾಗುತ್ತವೆ.

ಯಡಿಯೂರಪ್ಪನವರ ಪದಚ್ಯುತಿ ಮತ್ತು ಬೊಮ್ಮಾಯಿಯವರ ಅಧಿಕಾರ ಸ್ವೀಕಾರವನ್ನು ಕೇವಲ ಜಾತಿ ರಾಜಕಾರಣದ ಕೋನದಿಂದಲೇ ನೋಡಲಾಗುವುದಿಲ್ಲ. ಇಲ್ಲಿ ಜಾತಿ ಒಂದು ನಿಮಿತ್ತಮಾತ್ರ.

ಲಿಂಗಾಯತ ರಾಜಕಾರಣದ ಹಿಂದಿರುವ ಔದ್ಯಮಿಕ ಸಾಮ್ರಾಜ್ಯದ ಹಿತಾಸಕ್ತಿಗಳನ್ನು, ಬಂಡವಾಳಶಾಹಿ ಕಾರ್ಪೋರೇಟ್ ಅಭಿವೃದ್ಧಿ ಮಾರ್ಗಗಳೊಡನೆ ಮುಖಾಮುಖಿಯಾಗಿಸಿ ನೋಡಿದಾಗ, ಇಲ್ಲಿನ ಮಠೋದ್ಯಮಿಗಳ ಒತ್ತಾಸೆ, ವೀರಶೈವ-ಲಿಂಗಾಯತ ಅನುಯಾಯಿಗಳ ಸಾಂಸ್ಕೃತಿಕ ಮತ್ತು ರಾಜಕೀಯ ಹಿತಾಸಕ್ತಿ ಮತ್ತು ಹಿಂದುತ್ವ ರಾಜಕಾರಣದ ಭವಿಷ್ಯದ ಕಾರ್ಯಸೂಚಿಗಳೂ ಸ್ಪಷ್ಟವಾಗುತ್ತವೆ.

ಕರ್ನಾಟಕವನ್ನು ಕೋಮು ರಾಜಕಾರಣದ ಪ್ರಯೋಗಶಾಲೆಯನ್ನಾಗಿ ಕೆಲವು ಪ್ರಾತ್ಯಕ್ಷಿಕೆಗಳನ್ನು ಒದಗಿಸಿ ಈಗಾಗಲೇ ಎಂಟು ಹತ್ತು ವರ್ಷಗಳೇ ಕಳೆದಿವೆ. ಚರ್ಚ್ ಮೇಲಿನ ಧಾಳಿ, ಕರಾವಳಿ ಜಿಲ್ಲೆಗಳ ಕೋಮು ಧೃವೀಕರಣ ಮತ್ತು ಮತ್ತು ಇಸ್ಲಾಂ ಭೀತಿಯನ್ನು ಸೃಷ್ಟಿಸುವ ಪ್ರಯೋಗಗಳಿಗೆ ಬಿಜೆಪಿಯ ಪ್ರಥಮ ಸೋಪಾನದಲ್ಲೇ ಚಾಲನೆ ನೀಡಲಾಗಿದ್ದು, ಈಗ ಧೃವೀಕರಣ ಘನೀಕೃತವಾಗಿರುವುದನ್ನೂ ಅಲ್ಲಗಳೆಯಲಾಗುವುದಿಲ್ಲ.

ಇಂದಿನ ಬೆಳವಣಿಗೆಗಳು ಮೇಲ್ನೋಟಕ್ಕೆ ಯಡಿಯೂರಪ್ಪನವರ ಮೇಲುಗೈ ಎಂದೋ ಅಥವಾ ನೂತನ ಮುಖ್ಯಮಂತ್ರಿ ಬೊಮ್ಮಾಯಿಯ ಮೂಲಕ ಯಡಿಯೂರಪ್ಪ ಯುಗಕ್ಕೆ ಇನ್ನೂ ಉಸಿರಾಡಲು ಅವಕಾಶ ನೀಡಲಾಗಿದೆ ಎಂದೋ ಭಾವಿಸಲು ಸಾಧ್ಯ. ಕಾರ್ಪೋರೇಟ್ ರಾಜಕಾರಣಕ್ಕೆ ಲಿಂಗಾಯತ ಎನ್ನುವ ಒಂದು ನಿಮಿತ್ತ ಇರುವಂತೆಯೇ ಅಧಿಕಾರ ರಾಜಕಾರಣಕ್ಕೆ ಯಡಿಯೂರಪ್ಪ ಒಂದು ನಿಮಿತ್ತ ಮಾತ್ರವಾಗಿರುತ್ತಾರೆ.

ಹಾಗಾಗಿಯೇ ಬಿಜೆಪಿ ಹೈಕಮಾಂಡ್ ಮೇಲ್ನೋಟಕ್ಕೆ ಸೌಮ್ಯವಾದಿಯಂತೆ ಕಾಣುವ ಒಬ್ಬ ಪರಿವರ್ತಿತ ಹಿಂದುತ್ವವಾದಿಯನ್ನು ಗದ್ದುಗೆಯಲ್ಲಿ ಕೂರಿಸಿದೆ. ಕರಾವಳಿಯಲ್ಲಿ ಕೋಮು ದ್ವೇಷದ ಬೀಜಗಳನ್ನು ವ್ಯವಸ್ಥಿತವಾಗಿ ಬಿತ್ತಿದ ಸಂದರ್ಭದಲ್ಲೂ ರಾಜ್ಯದಲ್ಲಿ ಪರಿಭಾವಿತ ಸೌಮ್ಯವಾದಿಗಳೇ ಅಧಿಕಾರದಲ್ಲಿದ್ದುದನ್ನು ಸ್ಮರಿಸುವುದು ಅಗತ್ಯ.

ಬೊಮ್ಮಾಯಿಯವರನ್ನು ಮುಖ್ಯಮಂತ್ರಿಯನ್ನಾಗಿ ಆಯ್ಕೆ ಮಾಡುವ ಮೂಲಕ ಬಿಜೆಪಿ ಹೈಕಮಾಂಡ್ ಯಡಿಯೂರಪ್ಪನವರ ಕೌಟುಂಬಿಕ ಹಿತಾಸಕ್ತಿಗಳಿಗೂ ಕಡಿವಾಣ ಹಾಕಿರುವುದು ಸ್ಪಷ್ಟ . ಹಿಂದಿನ ಸರ್ಕಾರದಲ್ಲಿ ಕಾರ್ಯತಃ ಅಧಿಕಾರ ಚಲಾಯಿಸುತ್ತಿದ್ದ ವಿಜಯೇಂದ್ರನಿಗೆ ನೂತನ ಸಚಿವ ಸಂಪುಟದಲ್ಲೂ ಅವಕಾಶ ನೀಡದಿರುವುದನ್ನು ಗಮನಿಸಿದರೆ ಬಹುಶಃ ಯಡಿಯೂರಪ್ಪ ಕ್ರಮೇಣ ಮೂಲೆಗುಂಪಾಗುವ ಸಾಧ್ಯತೆಗಳು ಕಾಣುತ್ತವೆ.

ಇಲ್ಲಿ ವೀರಶೈವ ಲಿಂಗಾಯತ ಮಠೋದ್ಯಮಿಗಳ ವಾಣಿಜ್ಯ ಹಿತಾಸಕ್ತಿಯನ್ನು ಸೂಕ್ಷ್ಮವಾಗಿ ಗಮನಿಸಬೇಕಿದೆ. ಇವರಿಗೆ ಯಡಿಯೂರಪ್ಪ ನಿಮಿತ್ತ ಮಾತ್ರವಾಗಿದ್ದರು. ಹಣಕಾಸು ಬಂಡವಾಳ ಮಾರುಕಟ್ಟೆಯಲ್ಲಿ ಈ ಬೃಹತ್ ಜಾತಿ ಸಮುದಾಯ ಹೊಂದಿರುವ ಬೃಹತ್ ಬಂಡವಾಳದ ಮರು ಕ್ರೋಢೀಕರಣ ಮತ್ತು ಸಂರಕ್ಷಣೆಗೆ ಲಿಂಗಾಯತ ಮುಖ್ಯಮಂತ್ರಿ ಅವಶ್ಯ, ಯಡಿಯೂರಪ್ಪ ಅಲ್ಲ ಎನ್ನುವುದು ಸಾಬೀತಾಗಿದೆ.

ಆದರೆ ಮತಬ್ಯಾಂಕ್ ರಾಜಕಾರಣದಲ್ಲಿ ತಮ್ಮದೇ ಪ್ರಭಾವಿ ವಲಯ ಹೊಂದಿರುವ ರಾಜಕೀಯ ಉದ್ಯಮಿ ಯಡಿಯೂರಪ್ಪನವರನ್ನು ಸುಲಭವಾಗಿ ಕೈಬಿಡುವುದೂ ಚುನಾವಣೆಗಳ ದೃಷ್ಟಿಯಿಂದ ಪ್ರಮಾದವಾಗುತ್ತದೆ. ಹಾಗಾಗಿಯೇ ಬಿಜೆಪಿ ಹೈಕಮಾಂಡ್ ಒಂದೇ ಕಲ್ಲಿಗೆ ಎರಡು ಹಕ್ಕಿಗಳನ್ನು ಹೊಡೆದು, ದಾಳ ಬೀಸಿದೆ.

ಈಗ ಮಾಜಿ ಮುಖ್ಯಮಂತ್ರಿಗೆ ಉಳಿದ ಅವಧಿಗೆ ಸಂಪುಟ ದರ್ಜೆಯ ಸ್ಥಾನಮಾನಗಳನ್ನು ನೀಡಿರುವುದನ್ನು ಈ ದೃಷ್ಟಿಯಿಂದಲೇ ನೋಡಬೇಕಿದೆ. ಯಡಿಯೂರಪ್ಪ ಅವರ ಕೃತ್ರಿಮ ರಾಜಕಾರಣದ ಮೂಲಕವೇ ಬಿಜೆಪಿಯಿಂದ ಖರೀದಿಸಲ್ಪಟ್ಟ ವಲಸಿಗರೂ ಸಹ ತಮ್ಮ ಸ್ವಾಮಿನಿಷ್ಠೆಯನ್ನು ಬದಲಿಸಿ ಇದೀಗ ವಾಣಿಜ್ಯ ಹಿತಾಸಕ್ತಿಗಳಿಗೆ ಶರಣಾಗಿದ್ದಾರೆ. ಆದ್ದರಿಂದಲೇ ಬಂಡಾಯದ ಸ್ವರ ಕ್ಷೀಣವಾಗಿದೆ. ಕಾರ್ಪೋರೇಟ್ ರಾಜಕಾರಣದಲ್ಲಿ ಮಾರುಕಟ್ಟೆಯೇ ನಿರ್ಣಾಯಕ ಎನ್ನುವುದಕ್ಕೆ ಇದಕ್ಕಿಂತಲೂ ಸಾಕ್ಷಿ ಬೇಕೇ ?

ನೂತನ ಸಂಪುಟ ರಚನೆಯಲ್ಲೂ ಬಿಜೆಪಿ ಹೈಕಮಾಂಡ್ ಇದೇ ರಣತಂತ್ರವನ್ನು ಅನುಸರಿಸಿದೆ. ಯಡಿಯೂರಪ್ಪ ಅವಧಿಯಲ್ಲಿ ಉಪಮುಖ್ಯಮಂತ್ರಿ ಸ್ಥಾನ ಬಹುತೇಕ ಅನಿವಾರ್ಯ ಎಂಬಂತೆ ಮೂವರನ್ನು ನೇಮಿಸಿದ್ದ ಹೈಕಮಾಂಡ್ ಇದೀಗ ಆ ಹುದ್ದೆಯನ್ನೇ ಕೈಬಿಟ್ಟಿದೆ. ಇಲ್ಲಿ ಆಕಾಂಕ್ಷಿಗಳ ಕೊರತೆ ಇಲ್ಲದಿದ್ದರೂ ಬಂಡಾಯದ ಧ್ವನಿಯಂತೂ ಕೇಳಿಬರುವುದಿಲ್ಲ. ಏಕೆಂದರೆ ಯಡಿಯೂರಪ್ಪನವರಿಗೆ ಕತ್ತರಿಸಬೇಕಾದ ರೆಕ್ಕೆಗಳಿದ್ದವು, ಬೊಮ್ಮಾಯಿ ಈಗಾಗಲೇ ರೆಕ್ಕೆ ಕತ್ತರಿಸಿಕೊಂಡೇ ಪದಗ್ರಹಣ ಮಾಡಿದ್ದಾರೆ.

ವೀರಶೈವ ಲಿಂಗಾಯತ ಮಠೋದ್ಯಮಿಗಳ ಹಿತಾಸಕ್ತಿಯ ಸಂರಕ್ಷಣೆಗೆ ಕಾವಲುಗಾರರಾಗಿ ಯಡಿಯೂರಪ್ಪ ಮತ್ತು ವಿಜಯೇಂದ್ರ ಜೋಡಿ ಕಾರ್ಯನಿರ್ವಹಿಸುವುದಂತೂ ಖಚಿತ. ಇದು ಮುಂದಿನ ಚುನಾವಣೆಗಳ ದೃಷ್ಟಿಯಿಂದ ಮುಖ್ಯವಾಗುತ್ತದೆ. ಉಳಿದಂತೆ ಸರ್ಕಾರ ಹೈಕಮಾಂಡ್ ಅಣತಿಯಂತೆಯೇ ನಡೆಯಲಿದೆ. ನೂತನ ಸಂಪುಟದಲ್ಲಿ ಯಡಿಯೂರಪ್ಪನವರಿಗೆ ಕಂಟಕವಾಗಿದ್ದ ಬಂಡಾಯ ಶಾಸಕರನ್ನು ದೂರ ಇಟ್ಟಿರುವಂತೆಯೇ ಅವರ ಆಪ್ತರನ್ನೂ ದೂರ ಇಡುವ ಮೂಲಕ ಸಂತೃಪ್ತಿಗೊಳಿಸಿರುವುದನ್ನು ಸುರೇಶ್ ಕುಮಾರ್ ಮತ್ತು ಲಕ್ಷ್ಮಣ ಸವದಿಯವರ ಪದಚ್ಯುತಿಯಲ್ಲಿ ಗಮನಿಸಬಹುದು.

ಹಿಂದುತ್ವವಾದದ ಸೌಮ್ಯವಾದಿ ಮುಖವಾಡ ಹೊತ್ತವರಲ್ಲಿ ಸುರೇಶ್ ಕುಮಾರ್ ಸಹ ಒಬ್ಬರು. ವಿರೋಧ ಪಕ್ಷಗಳಷ್ಟೇ ಅಲ್ಲದೆ ಸಾರ್ವಜನಿಕ ವಲಯದಲ್ಲಿ ಪ್ರಗತಿಪರರ ನಡುವೆಯೇ “ಅಜಾತಶತ್ರು” ಎಂದೇ ಪರಿಭಾವಿಸಲಾಗುವ ವಾಜಪೇಯಿ ಸಂತತಿಯ ರಾಜಕಾರಣಿಗಳಲ್ಲಿ ದಿವಂಗತ ಅನಂತಕುಮಾರ್ ಮತ್ತು ಸುರೇಶ್ ಕುಮಾರ್ ಪ್ರಮುಖರು. ಪ್ರಾಥಮಿಕ ಶಿಕ್ಷಣ ಸಚಿವರಾಗಿ ಸುರೇಶ್ ಕುಮಾರ್ ಕಾರ್ಪೋರೇಟ್ ಅರ್ಥವ್ಯವಸ್ಥೆಯ ಕಾರ್ಯಸೂಚಿಯನ್ನು ಬಹುಪಾಲು ಪೂರೈಸಿದ್ದಾಗಿದೆ. ಕೋವಿದ್ ಸಂದರ್ಭದಲ್ಲಿ ಸರ್ಕಾರಿ ಶಾಲೆಗಳಿಂದ ಹೊರಗುಳಿಯಲ್ಪಟ್ಟ ಲಕ್ಷಾಂತರ ಮಕ್ಕಳ ಸಂಖ್ಯೆ ಇವರನ್ನು ಬಾಧಿಸಿಯೇ ಇಲ್ಲ ಎನ್ನುವುದು ಗಮನಿಸತಕ್ಕ ಅಂಶ ಅಲ್ಲವೇ ?

ಕಾರ್ಪೋರೇಟ್ ಅರ್ಥವ್ಯವಸ್ಥೆಯಲ್ಲಿ ಸಾರ್ವಜನಿಕ ಉದ್ದಿಮೆಗಳ, ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದ ಖಾಸಗೀಕರಣ ಮತ್ತು ವಾಣಿಜ್ಯೀಕರಣ ಪ್ರಕ್ರಿಯೆಗೆ ಇನ್ನು ಮುಂದೆ ಚಾಲನೆ ದೊರೆಯಲಿದೆ. ಹಿಂದಿನ ಸಾರಿಗೆ ಸಚಿವ ಲಕ್ಷ್ಮಣಸವದಿ ಈ ಬಾರಿ ಅವಕಾಶವಂಚಿತರಾಗಿದ್ದರೂ, ರಾಜ್ಯ ಸಾರಿಗೆ ಸಂಸ್ಥೆಯ ಖಾಸಗೀಕರಣಕ್ಕೆ ಅವಶ್ಯವಾದ ಭೂಮಿಕೆಯನ್ನು ಸಿದ್ಧಪಡಿಸಿಯೇ ನಿರ್ಗಮಿಸಿದ್ದಾರೆ.

ಸಾರಿಗೆ ನೌಕರರ ಮುಷ್ಕರದ ನೆಪದಲ್ಲಿ ಸಂಘಟಿತ ಕಾರ್ಮಿಕರ ಐಕ್ಯತೆಯನ್ನು ಭಂಗಗೊಳಿಸುವ ಮೂಲಕ ಸಾರಿಗೆ ನಿಗಮಗಳ ಖಾಸಗೀಕರಣದ ಹಾದಿ ಸುಗಮವಾಗಿದೆ. ನೂತನ ಸಾರಿಗೆ ಸಚಿವ ಶ್ರೀರಾಮುಲು ಬಹುಶಃ ಈ ನಿಟ್ಟಿನಲ್ಲಿ ಇನ್ನೂ ಕ್ಷಿಪ್ರಗತಿಯಲ್ಲಿ ಮುನ್ನಡೆಯಬಹುದು.

ಆರೆಸ್ಸೆಸ್ ಹಿನ್ನೆಲೆಯಿಂದಲೇ ಬಂದ ಇಬ್ಬರು ಶಾಸಕರಿಗೆ ನೂತನ ಸಂಪುಟದಲ್ಲಿ ಪ್ರಮುಖ, ಪ್ರಭಾವಿ ಇಲಾಖೆಗಳನ್ನು ನೀಡಿರುವುದು, ಬೊಮ್ಮಾಯಿ ಸರ್ಕಾರದ ಹಿಂದುತ್ವ ಕಾರ್ಯಸೂಚಿಯ ಲಕ್ಷಣವೇ ಆಗಿದೆ. ಸಂಘಪರಿವಾರದ ನೆರಳಲ್ಲೇ ಬೆಳೆದ ಅರಗ ಜ್ಞಾನೇಂದ್ರ ಗೃಹ ಸಚಿವರಾಗಿ, “ ಸಚಿವ ಹುದ್ದೆಗಿಂತಲೂ ಹಿಂದುತ್ವವೇ ಮುಖ್ಯ ” ಎಂದು ಈಗಾಗಲೇ ಘೋಷಿಸಿರುವ ಸುನೀಲ್ ಕುಮಾರ್ ಕನ್ನಡ ಮತ್ತು ಸಂಸ್ಕೃತಿ ಸಚಿವರಾಗಿ, ಮತ್ತಿಬ್ಬರು ಸಂಘನಿಷ್ಠರಾದ ಕೋಟಾ ಶ್ರೀನಿವಾಸ ಪೂಜಾರಿ ಸಮಾಜ ಕಲ್ಯಾಣ ಇಲಾಖೆ ಮತ್ತು ಬಿ ಸಿ ನಾಗೇಶ್ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಇಲಾಖೆಯನ್ನು ವಹಿಸಿಕೊಳ್ಳುವ ಮೂಲಕ ಹಿಂದುತ್ವದ ಕಾರ್ಯಸೂಚಿಯನ್ನು ಜಾರಿಗೊಳಿಸುವ ಮುಂಚೂಣಿ ತಂಡವಾಗಿ ಕಾರ್ಯನಿರ್ವಹಿಸಲಿದ್ದಾರೆ.

ಸೌಮ್ಯ ಹಿಂದುತ್ವವಾದಿ ಹಣೆಪಟ್ಟಿ ಹೊತ್ತ ಬೊಮ್ಮಾಯಿ ಅವರ ಸಂಪುಟದಲ್ಲಿ ಗೃಹ, ಕನ್ನಡ ಮತ್ತು ಸಂಸ್ಕೃತಿ, ಸಮಾಜ ಕಲ್ಯಾಣ, ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಈ ಪ್ರಮುಖ-ಪ್ರಭಾವಿ ವಲಯಗಳು ಸಂಘಪರಿವಾರದ ಪಾಲಾಗಿರುವುದನ್ನು ಸೂಕ್ಷ್ಮವಾಗಿ ಗಮನಿಸಬೇಕಿದೆ. ಮತಬ್ಯಾಂಕ್ ಧೃವೀಕರಣದ ದೃಷ್ಟಿಯಿಂದ ವೀರಶೈವ-ಲಿಂಗಾಯತರನ್ನು ಓಲೈಸಲು ಬೊಮ್ಮಾಯಿ ಒಂದು ಮುಖವಾಡವಾಗುತ್ತಾರೆ.

ಈ ಮಠೋದ್ಯಮಿಗಳ ಕಾರ್ಪೋರೇಟ್ ಹಿತಾಸಕ್ತಿಯನ್ನು ಸಂರಕ್ಷಿಸಲು ಸರ್ಕಾರವೇ ಬದ್ಧವಾಗಿದೆ. ಹಿಂದುತ್ವ ಕಾರ್ಯಸೂಚಿಯನ್ನು ಜಾರಿಗೊಳಿಸಲು ನಾಲ್ಕು ಪ್ರಮುಖ ಸಚಿವ ಹುದ್ದೆಗಳು ಸನ್ನದ್ಧವಾಗಿವೆ. ಕ್ರಮೇಣ ನಿಮಿತ್ತ ಮಾತ್ರವಾಗಿರುವ ಯಡಿಯೂರಪ್ಪ ಅಪ್ರಸ್ತುತವಾದರೂ ಅಚ್ಚರಿಯೇನಿಲ್ಲ. ಏಕೆಂದರೆ ಜಾತಿ ರಾಜಕಾರಣ ಮೂಲತಃ ಔದ್ಯಮಿಕ ಸಾಮ್ರಾಜ್ಯದ ಒಂದು ಅಂಶಿಕ ಭಾಗವಾಗಿಯೇ ರೂಪುಗೊಂಡಿದೆ.

ಎಂಟು ಲಿಂಗಾಯತ, ಏಳು ಒಕ್ಕಲಿಗ, ಏಳು ಒಬಿಸಿ ಸಚಿವರನ್ನೊಳಗೊಂಡ ಬೊಮ್ಮಾಯಿ ಸಂಪುಟವನ್ನು ಜಾತಿಯ ದೃಷ್ಟಿಕೋನದಿಂದ ನೋಡದೆ, ಈ ಸಚಿವರುಗಳ ಹಿಂದಿರುವ ಔದ್ಯಮಿಕ ಪ್ರಭಾವವನ್ನು ಗಮನಿಸಿದರೆ ಬಹುಶಃ ಈ ಸಮೀಕರಣವನ್ನು ಗ್ರಹಿಸುವುದು ಸುಲಭವಾಗುತ್ತದೆ. ಬೊಮ್ಮಾಯಿಯವರ ಅಲ್ಪಾಯುಷಿ ಸರ್ಕಾರದ ಮುಂದೆ ಬೃಹತ್ ಸವಾಲುಗಳೂ ಇವೆ.

ಸಾರ್ವಜನಿಕ ಉದ್ದಿಮೆಗಳ ಖಾಸಗೀಕರಣ, ರಸ್ತೆ, ನೀರಾವರಿ, ವಿದ್ಯುತ್ ಮತ್ತಿತರ ಮೂಲ ಸೌಕರ್ಯಗಳಲ್ಲಿ ಕಾರ್ಪೋರೇಟ್ ವಲಯಕ್ಕೆ ಮುಕ್ತ ಪ್ರವೇಶ, ಭೂ ಸುಧಾರಣೆ ಕಾಯ್ದೆಯ ತ್ವರಿತ ಅನುಷ್ಟಾನ ಮತ್ತು ನೂತನ ಕಾರ್ಮಿಕ ಸಂಹಿತೆಗಳ ಪ್ರಾಮಾಣಿಕ ಜಾರಿ ಇವೆಲ್ಲವೂ ಬೊಮ್ಮಾಯಿ ಸರ್ಕಾರದ ಮುಂದಿರುವ ಹೆಜ್ಜೆಗಳು. ಹಾಗಾಗಿಯೇ ಈ ಸರ್ಕಾರದ ಪ್ರತಿಯೊಂದು ಹೆಜ್ಜೆಯ ಮೇಲೂ ಬಿಜೆಪಿ ಹೈಕಮಾಂಡಿನ ಕಣ್ಗಾವಲು ಶತಃಸಿದ್ಧ.

ಸೌಮ್ಯವಾದಿ ಮುಖವಾಡದ ಯಡಿಯೂರಪ್ಪ-ಸುರೇಶ್ ಕುಮಾರ್ ಕರ್ನಾಟಕದ ಹಿಂದುತ್ವ ರಾಜಕಾರಣದ ಭದ್ರಕೋಟೆಗೆ ಬುನಾದಿಯನ್ನು ನಿರ್ಮಿಸಿಯೇ ನಿರ್ಗಮಿಸಿದ್ದಾರೆ. ವೀರಶೈವ ಲಿಂಗಾಯತ ಮಠೋದ್ಯಮಿಗಳು. ಒಕ್ಕಲಿಗ ಔದ್ಯಮಿಕ ಹಿತಾಸಕ್ತಿಗಳು ಮತ್ತು ಒಬಿಸಿ ಕಾರ್ಪೋರೇಟ್ ಶಕ್ತಿಗಳು ಈ ರಾಜಕೀಯ ಮುನ್ನಡೆಗೆ ಒತ್ತಾಸೆಯಾಗಿ ನಿಂತಿವೆ. ಅಂಬೇಡ್ಕರರನ್ನು ಸಾಂವಿಧಾನಿಕ ಬಳಕೆಯ ವಸ್ತುವನ್ನಾಗಿ ಮಾಡಿಕೊಂಡಿರುವ ದಲಿತ ಶಾಸಕರು ಸಚಿವ ಹುದ್ದೆಗಳಿಂದ ವಂಚಿತರಾದರೂ, ಹಿಂದುತ್ವದ ಕಾಲಾಳುಗಳಾಗಿ ಮುಂದುವರೆಯಲು ಸಜ್ಜಾಗಿದ್ದಾರೆ. ಎನ್ ಮಹೇಶ್ ಇತ್ತೀಚಿನ ಸೇರ್ಪಡೆಯಷ್ಟೆ.

2024ರ ಲೋಕಸಭಾ ಚುನಾವಣೆಗಳಿಗೆ ಮುನ್ನ ಭಾರತದ ಅರ್ಥವ್ಯವಸ್ಥೆಯನ್ನು ಕಾರ್ಪೋರೇಟ್ ವಲಯಕ್ಕೆ ಒಪ್ಪಿಸಿ, ಸಾಂಸ್ಕೃತಿಕ ವಲಯವನ್ನು ಸಂಘಪರಿವಾರಕ್ಕೆ ಅರ್ಪಿಸಿ, ಸಾಂವಿಧಾನಿಕ ಸಂಸ್ಥೆಗಳನ್ನು ಶಿಥಿಲಗೊಳಿಸುವ ಮೂಲಕ ನವ #ಆತ್ಮನಿರ್ಭರ ಭಾರತವನ್ನು ನಿರ್ಮಾಣ ಮಾಡುವ ನಿಟ್ಟಿನಲ್ಲಿ ಕರ್ನಾಟಕ ಪ್ರಮುಖ ಪಾತ್ರ ವಹಿಸಲಿದೆ.

ಹಿಂದುತ್ವ ರಾಜಕಾರಣವನ್ನು ಬಲಪಡಿಸಲು ದಕ್ಷಿಣ ಭಾರತದಲ್ಲಿ ಪ್ರಶಸ್ತ ಭೂಮಿಕೆಯನ್ನು ಕರ್ನಾಟಕದಲ್ಲಿ ನಿರ್ಮಿಸಲಾಗಿದ್ದು, ಈ ಸೌಧವನ್ನು ಪೂರ್ಣಗೊಳಿಸುವ ಜವಾಬ್ದಾರಿ ಬೊಮ್ಮಾಯಿ ಸರ್ಕಾರದ ಮೇಲಿದೆ. ನೂತನ ಸಚಿವ ಸಂಪುಟ ಈ ಬೆಳವಣಿಗೆಯ ದಿಕ್ಸೂಚಿಯಾಗಿದೆ.

ಕರ್ನಾಟಕದ ಪ್ರಮುಖ ವಿರೋಧ ಪಕ್ಷವಾದ ಕಾಂಗ್ರೆಸ್ ಈ ಸೂಕ್ಷ್ಮಗಳನ್ನು ಸಮರ್ಪಕವಾಗಿ ಗ್ರಹಿಸಲು ವಿಫಲವಾಗಿದೆ. ಮಣ್ಣಿನ ಮಕ್ಕಳ ಪಕ್ಷ ಜೆಡಿಎಸ್ ಅಧಿಕಾರ ರಾಜಕಾರಣದ ಚೌಕಟ್ಟಿನಿಂದ ಹೊರಗೆ ಇಣುಕಿ ನೋಡಲೂ ಸಾಧ್ಯವಾಗದೆ ತನ್ನ ಸಾಮ್ರಾಜ್ಯವನ್ನು ಸಂರಕ್ಷಿಸುವಲ್ಲಿ ನಿರತವಾಗಿದೆ.

ಈ ಸಂದರ್ಭದಲ್ಲಿ ರಾಜ್ಯದ ಪ್ರಜಾಪ್ರಭುತ್ವದ ನೆಲೆಗಳನ್ನು, ಸಾಮಾಜಿಕ ನ್ಯಾಯದ ನೆಲೆಗಳನ್ನು ಮತ್ತು ಸಾಂವಿಧಾನಿಕ ಪ್ರಜಾತಂತ್ರದ ನಿಕ್ಷೇಪಗಳನ್ನು ಸಂರಕ್ಷಿಸುವ ಹೊಣೆ ಕರ್ನಾಟಕದ ದುಡಿಯುವ ಜನತೆಯ ಮೇಲಿದೆ, ಶೋಷಿತ-ದಮನಿತ ಸಮುದಾಯಗಳ ಮೇಲಿದೆ. ಈ ವರ್ಗದ ಮುಂದಿರುವ ಬೃಹತ್ ಸವಾಲನ್ನು ಎದುರಿಸಲು ಇರುವ ಏಕೈಕ ಮಾರ್ಗ ಸೈದ್ದಾಂತಿಕ ಸ್ಪಷ್ಟತೆಯೊಂದಿಗೆ ಸಂಘಟನಾತ್ಮಕ ವಿಘಟನೆಯನ್ನು ತಡೆಗಟ್ಟಿ ಐಕ್ಯತೆಯತ್ತ ಸಾಗುವುದೇ ಆಗಿದೆ. ಪ್ರಜಾತಂತ್ರ ಮತ್ತು ಸಂವಿಧಾನದ ರಕ್ಷಣೆ ನಮ್ಮ ಆದ್ಯತೆಯೂ ಆಗಬೇಕಿದೆ. ಈ ಸಂಕಲ್ಪದೊಂದಿಗೆ ಸ್ವಾತಂತ್ರ್ಯ ದಿನವನ್ನು ಆಚರಿಸೋಣ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ಪ್ರತ್ಯೇಕ ದಾವಣಗೆರೆ-ಚಿತ್ರದುರ್ಗ ಮೆಗಾ ಡೈರಿ ಆರಂಭಿಸಿ : ಶಾಸಕ ಕೆ.ಎಸ್.ಬಸವಂತಪ್ಪ ಒತ್ತಾಯ

Published

on

ಸುದ್ದಿದಿನ,ದಾವಣಗೆರೆ: ಕ್ಷೇತ್ರದ ವ್ಯಾಪ್ತಿಯ ಕಲ್ಪನಹಳ್ಳಿ ಬಳಿ ಪ್ರತ್ಯೇಕ ದಾವಣಗೆರೆ-ಚಿತ್ರದುರ್ಗ ಮೆಗಾ ಡೈರಿ ಸ್ಥಾಪಿಸಲು ಭೂಮಿ ಖರೀದಿಸಿದ್ದು, ಈ ಬಗ್ಗೆ ಸರ್ಕಾರಕ್ಕೆ ಈಗಾಗಲೇ ಪ್ರಸ್ತಾವನೆ ಸಲ್ಲಿಸಲಾಗಿದೆ. ಕೂಡಲೇ ಅನುದಾನ ಬಿಡುಗಡೆ ಮಾಡಬೇಕೆಂದು ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ ಒತ್ತಾಯಿಸಿದರು.

ವಿಧಾನಸಭೆಯಲ್ಲಿ ಬುಧವಾರ ಬಜೆಟ್ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಶಿವಮೊಗ್ಗ ಹಾಲು ಒಕ್ಕೂಟದಿಂದ ಬೇರ್ಪಡಿಸಿ ಪ್ರತ್ಯೇಕ ದಾವಣಗೆರೆ-ಚಿತ್ರದುರ್ಗ ಒಳಗೊಂಡ ಮೆಗಾ ಡೈರಿ ಆರಂಭಿಸಲು ನನ್ನ ಕ್ಷೇತ್ರದ ವ್ಯಾಪ್ತಿಯ ಕಲ್ಪನಹಳ್ಳಿಯಲ್ಲಿ ಭೂಮಿ ಖರೀದಿಸಿದ್ದೇವೆ. ಸರ್ಕಾರ ಕೂಡಲೇ ಅನುದಾನ ಬಿಡುಗಡೆ ಮಾಡಿ ಡೈರಿ ಆರಂಭಿಸಿದರೆ ಈ ಭಾಗದ ರೈತರು ಆರ್ಥಿಕವಾಗಿ ಸಬಲರಾಗಲಿದ್ದಾರೆ ಎಂದು ಸದನದ ಗಮನ ಸೆಳೆದರು.

ಹೈನುಗಾರಿಕೆಯಲ್ಲಿ ಮಹಿಳೆಯರಿಗೆ ಶೇ.50ರಷ್ಟು ಸಬ್ಸಿಡಿ ಕೊಡುವುದನ್ನು ಶೇ.75ರಷ್ಟು ಹೆಚ್ಚಳ ಮಾಡಿದರೆ ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬಿಯಾಗಿ ಉತ್ತಮ ಬದುಕು ಕಟ್ಟಿಕೊಳ್ಳುತ್ತಾರೆ. ಈ ಬಗ್ಗೆ ಸರ್ಕಾರ ಗಮನ ಹರಿಸಬೇಕೆಂದರು.

ಮಧ್ಯ ಕರ್ನಾಟಕದ ಕೇಂದ್ರ ಬಿಂದು, ಹಿಂದುಳಿದ ಜಿಲ್ಲೆ ದಾವಣಗೆರೆ. ಅದರಲ್ಲೂ ಅತೀ ಹಿಂದುಳಿದ ಮೀಸಲು ಕ್ಷೇತ್ರ ಮಾಯಕೊಂಡ. ಸಿರಿಗೆರೆ ತರಳಬಾಳು ಜಗದ್ಗುರುಗಳ ಹೋರಾಟದ ಫಲವಾಗಿ ನನ್ನ ಕ್ಷೇತ್ರದಲ್ಲಿ 22 ಕೆರೆಗಳ ಯೋಜನೆ ಜಾರಿಗೊಂಡು ಎಲ್ ಅಂಡ್ ಟಿ ಕಂಪನಿ ಕಾಮಗಾರಿ ನಡೆಸಿತ್ತು. ಕಳಪೆ ಕಾಮಗಾರಿಯಿಂದ 100 ಹಳ್ಳಿಗಳಿಗೆ ಕುಡಿಯುವ ನೀರು, ನೀರಾವರಿ ಕಲ್ಪಿಸಬೇಕೆಂಬ ಉದ್ದೇಶ ಈಡೇರಿಲ್ಲ. ಪುನಃ ಹೊಸ ಪೈಪ್‌ಲೈನ್ ಕಾಮಗಾರಿಗೆ ಹಣ ನೀಡಿ ಕಾಮಗಾರಿ ಆರಂಭಿಸುವAತೆ ಈಗಾಗಲೇ ಡಿಸಿಎಂ ಡಿ.ಕೆ.ಶಿವಕುಮಾರ್ ಅವರಿಗೆ ಮನವಿ ಸಲ್ಲಿಸಲಾಗಿತ್ತು. ಕೂಡಲೇ ಸರ್ಕಾರ ಅನುದಾನ ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿದರು.

ನನ್ನ ಕ್ಷೇತ್ರದಲ್ಲಿ ಹೆಚ್ಚು ಗುಡ್ಡಗಾಡು ಪ್ರದೇಶ ಹೊಂದಿದ್ದು, ಈ ಪ್ರದೇಶಗಳಲ್ಲಿ ಅತೀ ಹೆಚ್ಚು ಕೆರೆಗಳನ್ನು ನಿರ್ಮಾಣ ಮಾಡಿದರೆ ಜನಜಾನುವಾರುಗಳಿಗೆ ಕುಡಿಯುವ ನೀರು, ಅಂತರ್ಜಲ ಮಟ್ಟ ವೃದ್ಧಿಗೆ ಅನುಕೂಲವಾಗುತ್ತದೆ. ಅಲ್ಲದೇ ಬ್ರಿಟಿಷರು ನಿರ್ಮಿಸಿದ ಕೆರೆ ಇದೆ. ಅದನ್ನು ಜೀರ್ಣೋದ್ಧಾರ ಮಾಡಿದರೆ ಇಡೀ ಪಕ್ಷಿ ಸಂಕುಲ, ಹಳ್ಳಿಗಳಿಗೆ ಕುಡಿಯುವ ನೀರು ಒದಗಿಸಬಹುದು ಎಂದು ಸದನ ಗಮನ ಸೆಳೆದರು.

ಎಸ್ಸಿ-ಎಸ್ಟಿ ಅಭಿವೃದ್ಧಿ ನಿಗಮಗಳಿಗೆ ಅನೇಕ ಸೌಲಭ್ಯ ಒದಗಿಸಲು ಅನುದಾನದ ಕೊರತೆ ಇದೆ. ಹೆಚ್ಚಿನ ಅನುದಾನ ನೀಡಬೇಕು. ಎಸ್ಸಿ-ಎಸ್ಟಿ ಸಮುದಾಯ ಆರ್ಥಿಕವಾಗಿ ಸಬಲರಾಗಲು ಭೂಒಡೆತನ ಯೋಜನೆ ಜಾರಿಗೊಳಿಸಿದ್ದು, ಕ್ಷೇತ್ರಕ್ಕೆ ಕೇವಲ ಒಂದೇ ಕೊಟ್ಟರೆ ಸಾಧ್ಯವಾಗುವುದಿಲ್ಲ. ಇದಕ್ಕೆ ಹೆಚ್ಚು ಒತ್ತು ಕೊಡಬೇಕು. ಖಾಸಗಿ ಕಾಲೇಜುಗಳಲ್ಲಿ ಡಿಪ್ಲೊಮಾ, ನರ್ಸಿಂಗ್, ಪ್ಯಾರಾ ಮೆಡಿಕಲ್ ಸೇರಿದಂತೆ ವೃತ್ತಿಪರ ಕೋರ್ಸ್ನಲ್ಲಿ ಅಭ್ಯಾಸ ಮಾಡುವ ಎಸ್ಸಿ-ಎಸ್ಟಿ ಮಕ್ಕಳಿಗೆ 2013-18ರಲ್ಲಿ ಹಾಸ್ಟೆಲ್ ಸೌಲಭ್ಯ ಇತ್ತು, ಈಗ ಇಲ್ಲ. ಕೂಡಲೇ ಈ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಸೌಲಭ್ಯ ಒದಗಿಸಬೇಕೆಂದು ಆಗ್ರಹಿಸಿದರು.

ಹೊರ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುವ ಪೌರ ಕಾರ್ಮಿಕರಿಗೆ ಹಗಲು ದರೋಡೆ ಮಾಡಲಾಗುತ್ತಿದೆ. ಹೊರ ಗುತ್ತಿಗೆ ತೆಗೆದು ನೇರವಾಗಿ ನೇಮಕಾತಿ ಮಾಡಿಕೊಂಡರೆ ಅವರ ಬದುಕು ಉಜ್ವಲವಾಗುತ್ತದೆ. ಶೋಷಿತ ಸಮುದಾಯಗಳಿಗೆ ತ್ವರಿತ ನ್ಯಾಯ ಒದಗಿಸಲು ಎಸ್ಸಿ-ಎಸ್ಟಿ ದೌರ್ಜನ್ಯ ಕಾಯ್ದೆಯಡಿ ರಾಜ್ಯದಲ್ಲಿ 33 ವಿಶೇಷ ಪೊಲೀಸ್ ಠಾಣೆ ತೆರೆಯಲು ಕ್ರಮ, ಅಲ್ಲದೇ ಎಸ್ಸಿ-ಎಸ್ಟಿ ಗುತ್ತಿಗೆದಾರರಿಗೆ 2 ಕೋಟಿ ಮೀಸಲು, ಅದರಂತೆ ಒಬಿಸಿ, ಅಲ್ಪಸಂಖ್ಯಾತರಿಗೂ 2 ಕೋಟಿ ಮೀಸಲಿಡುವ ಮೂಲಕ ರೈತರು, ಕಾಯಕ ಜೀವಿಗಳು, ವಿಶೇಷವಾಗಿ ಸಮಾಜ ಕಲ್ಯಾಣ ಇಲಾಖೆಯಲ್ಲಿ ಎಸ್‌ಸಿಪಿ-ಎಸ್‌ಟಿಪಿ ಯೋಜನೆಯಡಿ 48,018 ಕೋಟಿ ರೂ. ಬಜೆಟ್‌ನಲ್ಲಿ ಮೀಸಲಿಟ್ಟಿರುವ ಸಿಎಂ ಸಿದ್ದರಾಮಯ್ಯ ಅವರಿಗೆ ಅಭಿನಂದನೆ ಸಲ್ಲಿಸಿದರು.


  • ತ್ವರಿತವಾಗಿ ಕಾಮಗಾರಿ ಪೂರ್ಣಗೊಳಿಸಿ
    ಮಳೆಗಾಲದಲ್ಲಿ ತುಂಗಾ ಜಲಾಯಶದಿಂದ ಭದ್ರಾ ಜಲಾಶಯಕ್ಕೆ ನೀರು ತುಂಬಿಸಿ ಅಪರ್ ಭದ್ರಾ ಯೋಜನೆ ನೀರು ನೀಡುವ ಯೋಜನೆಯನ್ನು ತ್ವರಿತವಾಗಿ ಪೂರ್ಣಗೊಳಿಸಿದರೆ ಭದ್ರಾ ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಯ ರೈತರಿಗೆ ಅನುಕೂಲವಾಗಲಿದೆ. ಇಲ್ಲದಿದ್ದರೆ, ನಮ್ಮ ಭಾಗದ ರೈತರಿಗೆ ಅನಾನುಕೂಲವಾಗಲಿದೆ. ಕೂಡಲೇ ಸರ್ಕಾರ ಈ ಯೋಜನೆಯ ಕಾಮಗಾರಿ ಪೂರ್ಣಗೊಳಿಸಬೇಕು. ರಾಗಿ, ಭತ್ತ, ತೊಗರಿ ಬೆಂಬಲ ಬೆಲೆಯಡಿ ಖರೀದಿಸಿದಂತೆ ಮೆಕ್ಕೆಜೋಳವನ್ನು ಬೆಂಬಲ ಬೆಲೆಯಡಿ ಖರೀದಿಸಬೇಕೆಂದು ಶಾಸಕ ಕೆ.ಎಸ್.ಬಸವಂತಪ್ಪ ಒತ್ತಾಯಿಸಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಕೆರೆಬಿಳಚಿ | ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆ ; 6ನೇ ತರಗತಿ ಪ್ರವೇಶಕ್ಕೆ ಅರ್ಜಿ ಆಹ್ವಾನ

Published

on

ಸುದ್ದಿದಿನ,ಚನ್ನಗಿರಿ:ತಾಲೂಕಿನ ಕೆರೆಬಿಳಚಿಯಲ್ಲಿನ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ 6ನೇ ತರಗತಿಗೆ ಪ್ರವೇಶ ಪಡೆಯಲು ಅರ್ಜಿ ಆಹ್ವಾನಿಸಲಾಗಿದೆ.

ಅಲ್ಪಸಂಖ್ಯಾತರ ಸಮುದಾಯದ ಮುಸ್ಲಿಂ ,ಕ್ರಿಶ್ಚಿಯನ್, ಜೈನ್ ,ಬೌದ್ಧ ಸಿಖ್ ಪಾರ್ಸಿ ಧರ್ಮದವರಿಗೆ 75% ಸ್ಥಾನ ಮತ್ತು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಇತರೆ ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ 25% ಸ್ಥಾನಗಳು ಮೀಸಲಾಗಿವೆ.ವಿದ್ಯಾರ್ಥಿಗಳನ್ನು ಪ್ರವೇಶ ಪರೀಕ್ಷೆಯ ಆಧಾರದ ಮೇಲೆ ಮತ್ತು ಮೀಸಲಾತಿ ಆಧಾರದ ಮೇಲೆ ಆಯ್ಕೆ ಮಾಡಲಾಗುವುದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಅರ್ಜಿ ಸಲ್ಲಿಸಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ : https://sevasindhuservices.karnataka.gov.in/

ಪ್ರವೇಶ ಪಡೆಯಲು ಅರ್ಹತೆಗಳು

  • 05 ನೇ ತರಗತಿಯಲ್ಲಿ ಉತ್ತೀರ್ಣರಾಗಿರುವ ವಿದ್ಯಾರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದಾಗಿದೆ.
  • ಪೋಷಕರ ಆದಾಯದ ಮಿತಿ ಎಸ್.ಸಿ/ಎಸ್.ಟಿ ಮತ್ತು ಪ್ರವರ್ಗ-1 ಅಭ್ಯರ್ಥಿಗಳಿಗೆ
  • 1 ಲಕ್ಷ ರೂ.ಗಳು ಮತ್ತು ಅಲ್ಪಸಂಖ್ಯಾತರಿಗೆ 2.5ಲಕ್ಷ ರೂ.ಗಳು ಮತ್ತು ಹಿಂದುಳಿದ ವರ್ಗದವರಿಗೆ 44500/- ರೂ.ಗಳಿಗೆ ಮೀರಿರಬಾರದು.

ವಸತಿ ಶಾಲೆಯಲ್ಲಿ ದೊರೆಯುವ ಸೌಲಭ್ಯಗಳು

  • ಆಯ್ಕೆಯಾದ ವಿದ್ಯಾರ್ಥಿಗಳಿಗೆ 6ನೇ ತರಗತಿಯಿಂದ 12 ತರಗತಿಯವರೆಗೆ ಉಚಿತ ಶಿಕ್ಷಣ.
  • ಉಚಿತ ಪಠ್ಯ ಪುಸ್ತಕ, ಲೇಖನ ಸಾಮಗ್ರಿಗಳು, ಸಮವಸ್ತ್ರ, ಶೂ ಮತ್ತು ಸಾಕ್ಸ್, ಹಾಸಿಗೆ ಹೊದಿಕೆ ಜೊತೆಗೆ ಉತ್ತಮ ಮೂಲ ಸೌಲಭ್ಯ ಒದಗಿಸಲಾಗುವುದು.
  • ಸುಸಜ್ಜಿತ ಕೊಠಡಿ ಹಾಗೂ ವಸತಿ ನಿಲಯಗಳು, ವಿದ್ಯುತ್ ವ್ಯವಸ್ಥೆ, 24×7 ಬಿಸಿ ನೀರಿನ ವ್ಯವಸ್ಥೆ, ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಇದೆ.
  • ನುರಿತ ಶಿಕ್ಷಕರು ಮತ್ತು ಉಪನ್ಯಾಸಕರಿಂದ ಭೋದನೆ, ಪ್ರತಿ ವಿಷಯಕ್ಕೆ ಸುಸಜ್ಜಿತ ಪ್ರಯೋಗಾಲಯ ಸೌಲಭ್ಯ ಹಾಗೂ ಡಿಜಿಟಲ್ ಗ್ರಂಥಾಲಯ ವ್ಯವಸ್ಥೆ ಇದೆ.
  • ಉಚಿತ ವಸತಿ ಮತ್ತು ಭೋಜನ ವ್ಯವಸ್ಥೆ ಇದೆ. ಜೊತೆಗೆ 24×7 CCTV ನಿರೀಕ್ಷಣೆಯಲ್ಲಿ ಇರುತ್ತದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಯಶಸ್ವಿನಿ ಆರೋಗ್ಯ ರಕ್ಷಣಾ ಯೋಜನೆ : ಹೊಸ ಸದಸ್ಯರ ನೊಂದಣಿ, ನೊಂದಣಿಯಾದ ಸದಸ್ಯರನ್ನು ನವೀಕರಿಸಲು ಸೂಚನೆ

Published

on

ಸುದ್ದಿದಿನ,ದಾವಣಗೆರೆ:ಕರ್ನಾಟಕ ಸಹಕಾರ ಸಂಘಗಳ ಕಾಯ್ದೆ 1959 ಹಾಗೂ ಸಹಕಾರ ಸಂಘಗಳ ನಿಯಮ 1960ರಡಿ ಜಿಲ್ಲೆಯಲ್ಲಿ ನೊಂದಣಿಯಾಗಿರುವ ಎಲ್ಲಾ ವಿಧದ ಸಹಕಾರ ಸಂಘಗಳ ಸದಸ್ಯರು ಮಾರ್ಚ್ 31ರೊಳಗಾಗಿ ಯಶಸ್ವಿನಿ ಆರೋಗ್ಯ ರಕ್ಷಣಾ ಯೋಜನೆಯಡಿ ಹೊಸ ಸದಸ್ಯರನ್ನು ನೊಂದಾಯಿಸುವ ಮತ್ತು ನೊಂದಣಿಯಾದ ಸದಸ್ಯರನ್ನು ನವೀಕರಿಸಲು ಮತ್ತು ಯಾವುದೇ ಒಂದು ಸಹಕಾರ ಸಂಘದ ಸದಸ್ಯರಾಗಿದ್ದರೆ, ಈ ಯೋಜನೆಯ ಫಲಾನಭವಿಗಳಾಗಬಹುದು ಎಂದು ಸಹಕಾರ ಸಂಘಗಳ ಉಪನಿಬಂಧಕ ಮಧು ಶ್ರೀನಿವಾಸ್ ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending