ಬಹಿರಂಗ
ಪ್ರತಿರೋಧದ ದನಿಯೂ, ಪ್ರಭುತ್ವದ ನಿಷ್ಕ್ರಿಯತೆಯೂ..!
- ನಾ ದಿವಾಕರ
ಪ್ರತಿರೋಧದ ದನಿಗೆ ಅವಕಾಶವಿಲ್ಲದ ಯಾವುದೇ ರಾಜಕೀಯ ವ್ಯವಸ್ಥೆ ಅಥವಾ ಸಮಾಜ ಶಾಂತಿಯುತವಾಗಿ ಬಾಳಲು ಸಾಧ್ಯವಿಲ್ಲ. ಹಾಗೆಯೇ ಒಂದು ದೇಶದ ರಾಜಕೀಯ ವ್ಯವಸ್ಥೆಯನ್ನು ನಿರ್ವಹಿಸುವ ಅಥವಾ ರಾಜಕೀಯ ಅಧಿಕಾರ ಪೀಠಗಳನ್ನು ಆಕ್ರಮಿಸುವ ಆಳುವ ವರ್ಗಗಳು ಪ್ರತಿರೋಧದ ದನಿಗೆ ಕಿವಿಗೊಡದಿದ್ದರೆ ಅಂತಹ ವ್ಯವಸ್ಥೆ ಕ್ರಮೇಣ ಅರಾಜಕತೆಯತ್ತ ಸಾಗುತ್ತದೆ. ಸಾಮಾಜಿಕ ವಲಯದಲ್ಲಿ ಪ್ರತಿರೋಧಕ್ಕೆ ಅವಕಾಶವೇ ಕೊಡದ ಒಂದು ಸಮಾಜ ತನ್ನ ಅಂತಃಸತ್ವವನ್ನೇ ಕಳೆದುಕೊಂಡು ಜಡಗಟ್ಟುತ್ತದೆ. ಭಾರತೀಯ ಸಮಾಜ ತನ್ನೊಳಗಿನ ಶ್ರೇಣೀಕೃತ ಜಾತಿ ವ್ಯವಸ್ಥೆ, ಜಾತಿ ಶ್ರೇಷ್ಠತೆಯ ವ್ಯಸನ, ಜಾತಿ ಪದ್ಧತಿಯ ಅನಿಷ್ಟಗಳು, ಅಸ್ಪೃಶ್ಯತೆಯಂತಹ ಕ್ರೂರ ಮನೋಭಾವ, ಪಿತೃಪ್ರಧಾನ ಧೋರಣೆ ಇವೆಲ್ಲವನ್ನೂ ಹೊತ್ತುಕೊಂಡಿದ್ದರೂ ಇಂದಿಗೂ ಸಹ ತನ್ನ ಮೂಲ ನೆಲೆಗಳನ್ನು ಉಳಿಸಿಕೊಂಡುಬಂದಿದ್ದರೆ ಅದಕ್ಕೆ ಕಾರಣ ಈ ದೇಶದ ನೆಲದಲ್ಲಿ ಪ್ರಾಚೀನ ಕಾಲದಿಂದಲೂ ಉಗಮಿಸುತ್ತಲೇ ಇರುವ ಪ್ರತಿರೋಧದ ನೆಲೆಗಳು.
ಚಾರ್ವಾಕನಿಂದ ಅಂಬೇಡ್ಕರ್ ವರೆಗೆ ಭಾರತೀಯ ಸಮಾಜದಲ್ಲಿ, ಪ್ರಬಲ ಸಾಮ್ರಾಜ್ಯಗಳು ಅಧಿಪತ್ಯ ಸಾಧಿಸಿದ್ದ ಸಂದರ್ಭದಲ್ಲೂ ಸಹ ಪ್ರತಿರೋಧದ ನೆಲೆಗಳು ತಮ್ಮ ಅಸ್ತಿತ್ವವನ್ನು ಉಳಿಸಿಕೊಂಡೇ ಬಂದಿವೆ. ಇಂದು ನಾವು ಪ್ರಾಚೀನ ನಿರಂಕುಶಾಧಿಕಾರದ ನೆಲೆಗಳನ್ನು ಧ್ವಂಸಗೊಳಿಸಿ ಒಂದು ಪ್ರಜಾಸತ್ತಾತ್ಮಕ ಸಮಾಜೋ ರಾಜಕೀಯ ನೆಲೆಯಲ್ಲಿ ನೆಲೆಸಿದ್ದರೆ ಅದಕ್ಕೆ ಕಾರಣವೂ ಈ ಪ್ರತಿರೋಧದ ನೆಲೆಗಳೇ ಆಗಿವೆ. ಭಾರತದ ಸಂವಿಧಾನ ರಚನೆಯ ಸಂದರ್ಭದಲ್ಲೂ ಡಾ ಬಿ ಆರ್ ಅಂಬೇಡ್ಕರ್ ಹಲವಾರು ಪ್ರತಿರೋಧಗಳನ್ನು ಎದುರಿಸುತ್ತಲೇ ಅಂತಿಮ ಕರಡು ಸಿದ್ಧಪಡಿಸಿದ್ದರು. ಹಾಗೆಯೇ ಸ್ವಾತಂತ್ರ್ಯ ಪೂರ್ವದಲ್ಲಿ ರಾಜಕೀಯವಾಗಿ, ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಪ್ರಬಲವಾಗಿದ್ದ ಮೇಲ್ಜಾತಿಗಳ ವಿರುದ್ಧ ತಮ್ಮ ಪ್ರತಿರೋಧ ವ್ಯಕ್ತಪಡಿಸುತ್ತಲೇ, ಸಮಸಮಾಜದ ಕನಸುಗಳನ್ನು ಹೊತ್ತ ಸಮಾಜವಾದಿ, ಜಾತ್ಯತೀತ ಸಂವಿಧಾನವನ್ನು ಅಂಬೇಡ್ಕರ್ ರಚಿಸಿದ್ದರು.
ಇಂದು ನಾವು 21ನೆಯ ಶತಮಾನದ ಮೂರನೆಯ ದಶಕದಲ್ಲಿದ್ದೇವೆ. 73 ವರ್ಷಗಳ ಸ್ವಾತಂತ್ರ್ಯದ ಸವಿ ಅನುಭವಿಸಿದ್ದೇವೆ. 70 ವರ್ಷಗಳ ಕಾಲ ಸಂವಿಧಾನದ ಆಶಯಗಳನ್ನು ಈಡೇರಿಸುವ ಮಾರ್ಗದಲ್ಲಿ ನಡೆದುಬಂದಿದ್ದೇವೆ. ಅಂಬೇಡ್ಕರ್ ಪ್ರತಿಪಾದಿಸಿದ ಸಂಸದೀಯ ಪ್ರಜಾತಂತ್ರ ವ್ಯವಸ್ಥೆಯಲ್ಲಿ ಏನೇ ಸಮಸ್ಯೆಗಳು ಎದುರಾಗಿದ್ದರೂ ಸಮರ್ಥವಾಗಿ ಪರಿಹರಿಸುತ್ತಲೇ ಭಾರತ ಒಂದು ಪ್ರಬಲ ರಾಷ್ಟ್ರವಾಗಿ ಹೊರಹೊಮ್ಮುತ್ತಿದೆ. ಏಕೆಂದರೆ ಕಾಲದಿಂದ ಕಾಲಕ್ಕೆ ಸರ್ಕಾರಗಳು ಬದಲಾಗುತ್ತಿದ್ದರೂ, ಪ್ರತಿಯೊಂದು ಕಾಲಘಟ್ಟದಲ್ಲೂ ಸಾಮಾಜಿಕ ನ್ಯಾಯಕ್ಕಾಗಿ, ಆರ್ಥಿಕ ಸಮಾನತೆಗಾಗಿ, ಸಾಂಸ್ಕೃತಿಕ ಅಸ್ಮಿತೆ ಮತ್ತು ಅಸ್ತಿತ್ವಕ್ಕಾಗಿ, ಶೋಷಣೆ ಮತ್ತು ದಬ್ಬಾಳಿಕೆಯ ವಿರುದ್ಧ, ಅನ್ಯಾಯದ ವಿರುದ್ಧ, ನಿರಂಕುಶ ಅಧಿಕಾರದ ವಿರುದ್ಧ ಪ್ರತಿರೋಧ ವ್ಯಕ್ತಪಡಿಸುತ್ತಲೇ ಜನಾಂದೋಲನಗಳು ನಡೆದಿರುವುದನ್ನು ಕಂಡಿದ್ದೇವೆ. ಈ ಪ್ರತಿರೋಧದ ದನಿಗಳೇ ಭಾರತದ ಪ್ರಜಾತಂತ್ರ ವ್ಯವಸ್ಥೆಯ ತಳಹದಿಯನ್ನು ಸುಭದ್ರವಾಗಿರಿಸಿವೆ.
ಆದರೆ ಇಂದು ಈ ತಳಪಾಯ ಶಿಥಿಲವಾಗುತ್ತಿದೆ. ಆಳುವ ವರ್ಗಗಳು ಮತ್ತು ಈ ವರ್ಗವನ್ನು ಪ್ರತಿನಿಧಿಸುವ ರಾಜಕೀಯ ಪಕ್ಷಗಳು ಕ್ರಮೇಣ ಭಾರತದ ಪ್ರಜಾತಂತ್ರ ವ್ಯವಸ್ಥೆಯನ್ನು ಶಿಥಿಲಗೊಳಿಸಲು ಯತ್ನಿಸುತ್ತಲೇ ಇವೆ. ಸಂವಿಧಾನದ ಚೌಕಟ್ಟಿನಲ್ಲೇ ಕಾಯ್ದೆ ಕಾನೂನುಗಳ ತಿದ್ದುಪಡಿ ಮಾಡುವ ಮೂಲಕ, ಜನಾಭಿಪ್ರಾಯವನ್ನು ಸ್ವೇಚ್ಚಾಚಾರದ ಅಧಿಕಾರಕ್ಕೆ ಪರವಾನಗಿ ಎನ್ನುವಂತೆ ಭಾವಿಸಿ, ಪ್ರಜೆಗಳ ಬದುಕಿಗೇ ಸಂಚಕಾರ ತರುವಂತಹ ಕಾನೂನುಗಳನ್ನು ಜಾರಿಗೊಳಿಸಲಾಗುತ್ತಿದೆ. ವ್ಯಕ್ತಿ ಸ್ವಾತಂತ್ರ್ಯ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಕರಾಳ ಶಾಸನಗಳಿಂದ ಹಿಡಿದು, ಜನಸಾಮಾನ್ಯರ ಜೀವನೋಪಾಯಕ್ಕೆ ಧಕ್ಕೆ ಉಂಟುಮಾಡುವ ಮಸೂದೆಗಳನ್ನು, ಸಂವಿಧಾನದ ನಿಯಮಗಳನ್ನೂ ಮೀರಿ ಜಾರಿಗೊಳಿಸಲಾಗುತ್ತಿದೆ. ಇಂತಹ ಒಂದು ಪ್ರಯತ್ನವನ್ನು ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಕೃಷಿ ಮಸೂದೆಗಳಲ್ಲಿ ಕಾಣಬಹುದು.
ಜನವರಿ 26ರ ಗಣರಾಜ್ಯೋತ್ಸವ ಸಂದರ್ಭದಲ್ಲಿ ದೆಹಲಿಯಲ್ಲಿ ನಡೆದ ಅಹಿತಕರ ಘಟನೆಗಳನ್ನು ಈ ಹಿನ್ನೆಲೆಯಲ್ಲಿ ನೋಡಬೇಕಾಗುತ್ತದೆ. ಭಾರತದ ಬಹುತೇಕ ಮುದ್ರಣ ಮತ್ತು ದೃಶ್ಯ ಮಾಧ್ಯಮಗಳು, ಆಳುವ ಪಕ್ಷದ ಬೆಂಬಲಿಗರು, ಪ್ರಜಾತಂತ್ರದ ಮೌಲ್ಯವನ್ನೇ ಅರಿಯದ ಪ್ರಜ್ಞಾವಂತ ನಾಗರಿಕರು ಮತ್ತು ಸಾಂಸ್ಕೃತಿಕ ರಾಷ್ಟ್ರೀಯವಾದದ ಹರಿಕಾರರು, ದೇಶದ ರಾಜಧಾನಿಯೊಳಗೆ ನುಗ್ಗಿ, ಪ್ರತಿಷ್ಠಿತ ಕೆಂಪುಕೋಟೆಯನ್ನು ಆಕ್ರಮಿಸಿ ಅಲ್ಲಿ ತಮ್ಮದೇ ಆದ ಧಾರ್ಮಿಕ ಧ್ವಜವನ್ನು ಹಾರಿಸುವ ಒಂದು ಗುಂಪಿನ ಪ್ರತಿರೋಧವನ್ನು, ಭಯೋತ್ಪಾದಕ ಕೃತ್ಯದಂತೆ ಬಿಂಬಿಸುತ್ತಿರುವುದು ಕಾಣುತ್ತಿದ್ದೇವೆ. ರಾಷ್ಟ್ರಧ್ವಜಕ್ಕೆ ಅವಮಾನವಾಗಿದೆ ಎಂದು ಹುಯಿಲೆಬ್ಬಿಸುತ್ತಲೇ ಕೆಂಪುಕೋಟೆಯನ್ನು ಪ್ರವೇಶಿಸಿರುವುದೇ ರಾಷ್ಟ್ರದ್ರೋಹದ ಕೃತ್ಯ ಎನ್ನುವಂತೆ ಸುದ್ದಿಮನೆಗಳು ಬಿತ್ತರಿಸುತ್ತಿವೆ. ಈ ಘಟನೆಯ ಸತ್ಯಾಸತ್ಯತೆಗಳು ಏನೇ ಇರಲಿ, ಧ್ವಜ ನೆಟ್ಟವರು ಯಾರೇ ಇರಲಿ, ಅನ್ಯಾಯಕ್ಕೊಳಗಾದ, ನೊಂದ ಮನಸುಗಳ ಪ್ರತಿರೋಧದ ಹಿಂದೆ ಸುಪ್ತ ಆಕ್ರೋಶ ಮಡುಗಟ್ಟಿರುತ್ತದೆ ಎನ್ನುವುದನ್ನು ಈ ಘಟನೆ ನಿರೂಪಿಸುತ್ತದೆ.
ದೆಹಲಿಯಲ್ಲಿ ನಡೆದ ಘಟನೆ ಸರಿಯೋ ತಪ್ಪೋ ಎನ್ನುವುದಕ್ಕಿಂತಲೂ, 60 ದಿನಗಳ ಕಾಲ ಅತ್ಯಂತ ಶಾಂತಿಯುತವಾಗಿ ನಡೆದ ಒಂದು ಜನಾಂದೋಲನ, 150ಕ್ಕೂ ಹೆಚ್ಚು ಸಾವುಗಳ ನಂತರವೂ ತಾಳ್ಮೆ ಸಂಯಮ ಕಳೆದುಕೊಳ್ಳದ ಒಂದು ಆಂದೋಲನ, ಪೊಲೀಸರ ಲಾಠಿ, ಜಲಫಿರಂಗಿ, ಅಶ್ರುವಾಯು ದಾಳಿಯನ್ನು ಸಹಿಸಿಕೊಂಡು ದೃಢಚಿತ್ತದಿಂದ ಮುನ್ನಡೆದ ಒಂದು ಹೋರಾಟ, ಚಳಿ ಮಳೆಯನ್ನೂ ಲೆಕ್ಕಿಸದೆ ಜನರಿಂದಲೇ ಹಣ ಸಂಗ್ರಹಿಸಿ ತನ್ನ ಸ್ವಂತಬಲದಿಂದ ಎರಡು ತಿಂಗಳ ಕಾಲ ನಡೆದ ಚಳುವಳಿ, ಕೇಂದ್ರ ಮತ್ತು ಕೆಲವು ರಾಜ್ಯ ಸರ್ಕಾರಗಳು ಮುಷ್ಕರ ನಿರತರ ಮುನ್ನಡಿಗೆಯನ್ನು ತಡೆಗಟ್ಟಲು ಸಿಮೆಂಟ್ ಗೋಡೆಗಳನ್ನು, ಮುಳ್ಳು ತಂತಿಗಳನ್ನು, ಜೆಸಿಬಿ ಮತ್ತು ಬೃಹತ್ ಲಾರಿಗಳನ್ನು ಬಳಸಿದರೂ ಕಂಗೆಡದೆ ನಡೆದ ಹೋರಾಟ, ಕೇಂದ್ರ ಸರ್ಕಾರ ಹೆದ್ದಾರಿಗಳಲ್ಲಿ ಬೃಹತ್ ಕಂದಕಗಳನ್ನು ತೋಡಿ ಮುನ್ನಡಿಗೆಗೆ ಅಡ್ಡಿಪಡಿಸಿದರೂ ಧೃತಿಗೆಡದೆ ನಡೆದ ಒಂದು ಹೋರಾಟ, ಹೇಗೆ ಹಿಂಸಾತ್ಮಕವಾಗಲು ಸಾಧ್ಯ ಎನ್ನುವ ಪ್ರಶ್ನೆ ನಮ್ಮನ್ನು ಕಾಡಬೇಕಿದೆ.
ನಿಗದಿತ ಮಾರ್ಗವನ್ನು ಬಿಟ್ಟು, ಒಳಮಾರ್ಗದಿಂದ ದೆಹಲಿಯನ್ನು ಪ್ರವೇಶಿಸಿ, ಪೊಲೀಸರ ಅಡ್ಡಗೋಡೆಗಳನ್ನು ದಾಟಿ ರಾಜಧಾನಿಯನ್ನು ಪ್ರವೇಶಿಸಿ ಕೆಂಪುಕೋಟೆಯ ಮೇಲೆ ನೆರೆದ ಹೋರಾಟಗಾರರೆಲ್ಲರೂ ದೇಶದ್ರೋಹಿಗಳೇನಲ್ಲ. ಅಲ್ಲಿ ಧ್ವಜ ನೆಡುವ ಮೂಲಕ ವಿವಾದ ಮತ್ತು ಗೊಂದಲ ಸೃಷ್ಟಿಸಿದ ವ್ಯಕ್ತಿಯೂ ದೇಶದ್ರೋಹಿಯೇನಲ್ಲ. ರೈತ ಮುಷ್ಕರವನ್ನು ಶಿಥಿಲಗೊಳಿಸಲೆಂದೇ, ದುರ್ಬಲಗೊಳಿಸಲೆಂದೇ ಇಂತಹ ಪಿತೂರಿಗಳನ್ನು ನಡೆಸುವ ರಾಜಕೀಯ ಶಕ್ತಿಗಳು ನಿಜವಾದ ದೇಶದ್ರೋಹಿಗಳು ಅಲ್ಲವೇ ? ಲಕ್ಷಾಂತರ ಜನರ ಪ್ರತಿಭಟನೆಯಲ್ಲಿ ಒಂದು ಸಣ್ಣ ಗುಂಪು ಈ ರೀತಿಯ ಗಲಭೆಯಲ್ಲಿ ತೊಡಗುವುದೂ ಸಹ ಘೋರ ಅಪರಾಧವೇನಲ್ಲ. ಇದು ಸಹಜ ಪ್ರಕ್ರಿಯೆ. ಏಕೆಂದರೆ ಈ ರೈತಾಪಿ ಸಮುದಾಯ ಎರಡು ತಿಂಗಳ ಕಾಲ ತಾಳ್ಮೆಯಿಂದ ನ್ಯಾಯಕ್ಕಾಗಿ ಹೋರಾಡುತ್ತಿದೆ.
ಕೆಂಪುಕೋಟೆಯ ಮೇಲೆ ಧ್ವಜ ಹಾರಿಸಿದ್ದು ಬಿಜೆಪಿ ಕಾರ್ಯಕರ್ತ, ಬಿಜೆಪಿ ಸಂಸದ ಸನ್ನಿ ಡಯೋಲ್ನ ನಿಕಟವರ್ತಿ ಮತ್ತು ಕೇಂದ್ರ ನಾಯಕರಿಗೆ ಸಮೀಪವರ್ತಿಯಾದ ದೀಪ್ ಸಿಧು ಎಂದು ಇದೀಗ ಸಾಬೀತಾಗಿದೆ. ತಾನೇ ಧ್ವಜ ಹಾರಿಸಿದ್ದಾಗಿ ದೀಪ್ ಸಿಧು ಹೆಮ್ಮೆಯಿಂದ ಹೇಳಿಕೊಂಡಿದ್ದಾನೆ. ಆದರೆ ರಾಷ್ಟ್ರಧ್ವಜಕ್ಕೆ ಯಾವುದೇ ಅಪಮಾನವಾಗಿಲ್ಲ ಎಂದು ಸ್ಪಷ್ಟವಾಗಿದ್ದು, ಭಾರತದ ಧ್ವಜಕ್ಕಿಂತಲೂ ಕೆಳಮಟ್ಟದಲ್ಲೇ ಸಿಖ್ಖರ ಧಾರ್ಮಿಕ ಧ್ವಜವನ್ನು ಹಾರಿಸಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದ ದೀಪ್ ಸಿಧು ವಿರುದ್ಧ ದೂರು ದಾಖಲಿಸದ ದೆಹಲಿ ಪೊಲೀಸರು, ಘಟನೆಗೆ ಸಂಬಂಧವೇ ಇಲ್ಲದ 22 ರೈತ ನಾಯಕರ ವಿರುದ್ಧ ಎಫ್ಐಆರ್ ದಾಖಲಿಸಿರುವುದು ಈ ಘಟನೆಯ ಹಿಂದಿನ ಹುನ್ನಾರವನ್ನು ತಂತಾನೇ ಬಯಲು ಮಾಡುತ್ತದೆ.
ಇಲ್ಲಿ ನಮ್ಮನ್ನು ಕಾಡಬೇಕಾದ ಪ್ರಶ್ನೆ ಎಂದರೆ, ಎರಡು ತಿಂಗಳ ಕಾಲ ಶಾಂತಿಯುತ ಮುಷ್ಕರ ನಡೆಸಿರುವ 540ಕ್ಕೂ ಹೆಚ್ಚು ರೈತ ಸಂಘಟನೆಗಳು ಗಣರಾಜ್ಯೋತ್ಸವದ ದಿನದಂದೇ ದೆಹಲಿಯಲ್ಲಿ ಎರಡು ಲಕ್ಷ ಟ್ರಾಕ್ಟರ್ಗಳ ಪರೇಡ್ ನಡೆಸಲು ತೀರ್ಮಾನಿಸಿದ್ದು ಏಕೆ ? ರೈತರ ಬೇಡಿಕೆ ಮೊದಲನೆ ದಿನದಿಂದಲೂ ಒಂದೇ ಆಗಿದೆ, ಮೂರೂ ಕೃಷಿ ಮಸೂದೆಗಳನ್ನು ಹಿಂಪಡೆಯುವುದು. ಇದರ ಹೊರತಾಗಿ ಮತ್ತಾವುದೇ ರಾಜೀಸೂತ್ರಕ್ಕೆ ತಾವು ಸಿದ್ಧರಾಗಿಲ್ಲ ಎಂದು ರೈತ ಸಂಘಟನೆಗಳು ಸ್ಪಷ್ಟಪಡಿಸುತ್ತಲೇ ಇವೆ. ಕೇಂದ್ರ ಸರ್ಕಾರ ಈ ಬೇಡಿಕೆಗಳಿಗೆ ಮಾತುಕತೆಗಳ ಪ್ರಸ್ತಾವದ ಮೂಲಕ ಸ್ಪಂದಿಸಿದೆಯೇ ಹೊರತು, ಮಾನವೀಯ ಸ್ಪಂದನೆಯನ್ನು ತೋರಿಯೇ ಇಲ್ಲ. 150ಕ್ಕೂ ಹೆಚ್ಚು ರೈತರ ಸಾವಿಗೆ ಒಂದು ಅನುಕಂಪದ ಮಾತನ್ನೂ ಆಡದ ಬೌದ್ಧಿಕ ನಿಷ್ಕ್ರಿಯತೆ ಮತ್ತು ಕ್ರೌರ್ಯವನ್ನು ನಾವು ಕಂಡಿದ್ದೇವೆ. ಇದು ಸಹಜವಾಗಿಯೇ ಮುಷ್ಕರ ನಿರತರಲ್ಲಿ ಆಕ್ರೋಶ ಮೂಡಿಸುತ್ತದೆ.
“ ನಿಮ್ಮ ಬೇಡಿಕೆಗಳನ್ನು ಪರಿಶೀಲಿಸುತ್ತೇವೆ, ಸದ್ಯಕ್ಕೆ ಮಸೂದೆಗಳನ್ನು ಹಿಂಪಡೆಯುತ್ತೇವೆ. ಸಂಸತ್ತಿನಲ್ಲಿ ಚರ್ಚೆಗೊಳಪಡಿಸುವ ಮೂಲಕ, ಕೃಷಿ ತಜ್ಞರು ಮತ್ತು ವಿಜ್ಞಾನಿಗಳೊಡನೆ, ರೈತ ಸಂಘಟನೆಗಳೊಡನೆ ಮಾತುಕತೆ ನಡೆಸಿ ದೇಶದ ರೈತಾಪಿಗೆ ಸಮಧಾನಕರವಾಗಿರುವಂತಹ ಹೊಸ ಮಸೂದೆಯನ್ನು ಜಾರಿಗೊಳಿಸುತ್ತೇವೆ ” ಎನ್ನುವ ಮೂರು ನಾಲ್ಕು ಸಾಂತ್ವನದ ಮಾತುಗಳು ಮುಷ್ಕರವನ್ನು ಕೊನೆಗೊಳಿಸಬಹುದಿತ್ತು. ಗಣರಾಜ್ಯೋತ್ಸವದ ದಿನದಂದೇ ಎರಡು ಲಕ್ಷ ಟ್ರಾಕ್ಟರ್ಗಳು ದೇಶದ ರಾಜಧಾನಿಯಲ್ಲಿ ಮೆರವಣಿಗೆ ನಡೆಸುವ ಒಂದು ನಿರ್ಧಾರಕ್ಕೆ ಕೇಂದ್ರ ಸರ್ಕಾರದ ಮಾನವೀಯ, ಸಕಾರಾತ್ಮಕ ಸ್ಪಂದನೆ ತಡೆಒಡ್ಡಬಹುದಿತ್ತು. ಆದರೆ ಪ್ರಜಾತಂತ್ರ ವ್ಯವಸ್ಥೆಯ ಮೂಲ ಆಶಯಗಳನ್ನೇ ಲೆಕ್ಕಿಸದ ಕೇಂದ್ರ ಸರ್ಕಾರ ರೈತರ ಒಕ್ಕೊರಲ ಬೇಡಿಕೆಗಳನ್ನು ನಿರ್ಲಕ್ಷಿಸಿರುವುದೇ ಹೆಚ್ಚು. ಈ ಧೋರಣೆ ಸಣ್ಣ ಪುಟ್ಟ ಗಲಭೆಗಳಿಗೆ, ಅಹಿತಕರ ಘಟನೆಗಳಿಗೆ ಎಡೆಮಾಡಿಕೊಟ್ಟರೆ ಅದರ ಹೊಣೆಯನ್ನು ಸರ್ಕಾರವೇ ಹೊರಬೇಕಾಗುತ್ತದೆ.
ಸ್ವತಂತ್ರ ಭಾರತದ ಇತಿಹಾಸದಲ್ಲಿ ಮೊಟ್ಟಮೊದಲ ಬಾರಿಗೆ ರಾಷ್ಟ್ರೀಯ ಹಬ್ಬದ ದಿನದಂದು ದೇಶವ್ಯಾಪಿ ಆಂದೋಲನವೊಂದು ರೂಪುಗೊಂಡಿರುವುದು ನಿಜಕ್ಕೂ ಅಭೂತಪೂರ್ವ ಬೆಳವಣಿಗೆ. ಭಾರತದಲ್ಲಿ ಪ್ರಜಾತಂತ್ರ ಉಳಿದಿರುವುದಕ್ಕೆ ಸಾಕ್ಷಿಯಾದಂತೆಯೇ ಈ ಜನಾಂದೋಲನ ಈ ದೇಶದ ಆಡಳಿತ ವ್ಯವಸ್ಥೆ ನಿರಂಕುಶತ್ವದೆಡೆಗೆ ಜಾರುತ್ತಿರುವುದಕ್ಕೂ ಸಾಕ್ಷಿಯಾಗಿದೆ. ಹೋರಾಟಗಾರರನ್ನು ತಡೆಗಟ್ಟಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕೈಗೊಂಡ ಕ್ರಮಗಳು, ಟ್ರಾಕ್ಟರ್ಗಳನ್ನು ಜಪ್ತಿ ಮಾಡುವುದು, ಉತ್ತರಪ್ರದೇಶದಲ್ಲಿ ಟ್ರಾಕ್ಟರ್ಗಳಿಗೆ ಡೀಸೆಲ್ ಸರಬರಾಜು ಸ್ಥಗಿತಗೊಳಿಸುವುದು, ಕರ್ನಾಟಕದಲ್ಲಿ ಬೆಂಗಳೂರಿಗೆ ಹೊರಟಿದ್ದ ಸಾವಿರಾರು ಟ್ರಾಕ್ಟರುಗಳನ್ನು ತಡೆಗಟ್ಟಿರುವುದು, ಪೊಲೀಸ್ ಮತ್ತು ಅರೆಸೇನಾ ಪಡೆಗಳನ್ನು ನಿಯೋಜಿಸುವ ಮೂಲಕ ಹೋರಾಟಗಾರರಲ್ಲಿ ಭೀತಿ ಹುಟ್ಟಿಸುವುದು ಈ ಎಲ್ಲ ಕ್ರಮಗಳು ನಿರಂಕುಶ ಪ್ರಭುತ್ವದ ಸೂಚನೆಗಳಾಗಿಯೇ ಕಾಣುತ್ತವೆ.
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೈತರ ಪ್ರತಿಭಟನೆಗೆ ಮುಕ್ತ ಅವಕಾಶ ನೀಡಿದ್ದರೆ, ಟ್ರಾಕ್ಟರ್ ಪರೇಡ್ಗೆ ಪೂರ್ಣ ಅನುಮತಿ ನೀಡಿದ್ದಲ್ಲಿ ಬಹುಶಃ ಗಲಭೆ ಸಂಭವಿಸುತ್ತಿರಲಿಲ್ಲ. ಅಥವಾ ನಿಮ್ಮ ಬೇಡಿಕೆಗಳಿಗೆ ಮನ್ನಣೆ ನೀಡುತ್ತೇವೆ, ಮುಷ್ಕರ ಹಿಂಪಡೆಯಿರಿ ಎಂದು ವಿನಂತಿಸಿದ್ದರೆ ಟ್ರಾಕ್ಟರ್ ಪರೇಡ್ ನಡೆಯುತ್ತಲೇ ಇರಲಿಲ್ಲ. ಎರಡೂ ನೆಲೆಯಲ್ಲಿ ಸರ್ಕಾರಗಳು ವಿಫಲವಾಗಿವೆ. ಬದಲಾಗಿ, ಹೋರಾಟಗಾರರಲ್ಲಿ ಭಯೋತ್ಪಾದಕರನ್ನು, ಖಲಿಸ್ತಾನಿಗಳನ್ನು, ನಗರ ನಕ್ಸಲರನ್ನು ಹುಡುಕಲು ಪ್ರಯತ್ನಿಸಿವೆ. ತಮ್ಮ ಜೀವನೋಪಾಯದ ಮೂಲ ಸೆಲೆಯನ್ನು ಉಳಿಸಿಕೊಳ್ಳಲು ಹೋರಾಡುತ್ತಿರುವ ಅನ್ನದಾತರನ್ನು ದೇಶದ್ರೋಹಿಗಳೆಂದು ಕರೆಯುವಷ್ಟು ಮಟ್ಟಿಗೆ ನಮ್ಮ ರಾಜಕೀಯ ನಾಯಕರು, ಪಕ್ಷಗಳು ಬೌದ್ಧಿಕ ದಾರಿದ್ರ್ಯ ಪ್ರದರ್ಶಿಸಿವೆ.
ಆಳುವ ವರ್ಗಗಳ ಈ ದುರ್ವರ್ತನೆಗೆ ಪೂರಕವಾಗಿ ವಿದ್ಯುನ್ಮಾನ ಮಾಧ್ಯಮಗಳು ರೈತ ಮುಷ್ಕರವನ್ನು ಬಿಂಬಿಸಿವೆ. ಜನವರಿ 25ರವರೆಗೂ ದೆಹಲಿಯಲ್ಲಿ ಮುಷ್ಕರ ಹೂಡಿದ್ದ ರೈತರ ಸಮಸ್ಯೆಗಳನ್ನಾಗಲೀ, ಬೇಡಿಕೆಗಳನ್ನಾಗಲೀ, ಮುಷ್ಕರದ ಮೂಲ ಸಮಸ್ಯೆಯನ್ನಾಗಲೀ ಕಣ್ಣೆತ್ತಿಯೂ ನೋಡದ ಮಾಧ್ಯಮಗಳು ಹಠಾತ್ತನೆ ತಮ್ಮ ರಾಷ್ಟ್ರವಾದಿ ದೇಶಪ್ರೇಮವನ್ನು ಪ್ರದರ್ಶಿಸಲು ಆರಂಭಿಸಿದ್ದು ಜನವರಿ 26ರಂದು, ಟ್ರಾಕ್ಟರ್ ಪರೇಡ್ ಆರಂಭವಾದ ನಂತರ. ಒಂದು ರೀತಿಯಲ್ಲಿ ಇದು ರೈತ ಮುಷ್ಕರದ ವಿಜಯ ಎಂದೇ ಹೇಳಬಹುದು. ಇಡೀ ದೇಶದ ಗಮನ ಸೆಳೆಯುವಂತಹ ಒಂದು ಜನಾಂದೋಲನ ಪ್ರಜಾತಂತ್ರ ವ್ಯವಸ್ಥೆಯಲ್ಲಿ ಹೆಚ್ಚು ಗೌರವಯುತವಾಗಿ ಕಾಣುತ್ತದೆ. ಕನ್ನಡದ ಸುದ್ದಿಮನೆಗಳ ಪಕ್ಷಪಾತಿ ಧೋರಣೆ ಮತ್ತು ಉತ್ಕಟ-ಉನ್ಮತ್ತ ರಾಷ್ಟ್ರವಾದಿ ದೇಶಪ್ರೇಮದ ಹೊರತಾಗಿಯೂ ರೈತ ಮುಷ್ಕರ ಟಿವಿ ಪರದೆಗಳ ಮೂಲಕ ಮನೆಮನೆ ತಲುಪಿರುವುದು ರೈತರ ದಿಗ್ವಿಜಯವಾಗಿ ಕಾಣುತ್ತದೆ.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿರೋಧದ ಧ್ವನಿಗಳಿಗೆ ಕಿವಿಗೊಡುವ ಸಂಯಮ ಇರುವವರು ಅಧಿಕಾರದಲ್ಲಿದ್ದರೆ ಒಂದು ಸ್ವಾಸ್ಥ್ಯ ಸಮಾಜ ನಿರ್ಮಾಣ ಸಾಧ್ಯ . ನೊಂದ ಜನತೆಯ ಹಕ್ಕೊತ್ತಾಯಗಳನ್ನು, ಆಗ್ರಹಗಳನ್ನು ಆಲಿಸಿ, ಪರಿಶೀಲಿಸಿ, ಪರಾಮರ್ಶಿಸಿ, ಶಾಸನ ಸಭೆಗಳಲ್ಲಿ ಜನಪ್ರತಿನಿಧಿಗಳ ನಡುವೆ ಚರ್ಚೆಗೊಳಪಡಿಸಿ ಸಮಸ್ತ ಜನತೆಗೆ ಒಳಿತನ್ನುಂಟುಮಾಡುವ ನೀತಿಗಳನ್ನು, ಯೋಜನೆಗಳನ್ನು ಜಾರಿಗೊಳಿಸುವುದು ಒಂದು ಪ್ರಬುದ್ಧ ಸಂಸದೀಯ ಪ್ರಜಾತಂತ್ರದ ಲಕ್ಷಣ. ದುರಂತ ಎಂದರೆ ಏಳು ದಶಕಗಳ ಸ್ವತಂತ್ರ ಆಳ್ವಿಕೆಯ ನಂತರ ಭಾರತ ಈ ಪ್ರಬುದ್ಧತೆಯನ್ನು ಕಳೆದುಕೊಳ್ಳುತ್ತಿದೆ. ಸಂಸತ್ತಿನಲ್ಲಿ, ವಿಧಾನಸಭೆಯಲ್ಲಿ ಪೂರ್ಣ ಬಹುಮತ ಗಳಿಸುವುದು ಎಂದರೆ ದೇಶದ ಅತಿ ಹೆಚ್ಚಿನ ಜನಸಂಖ್ಯೆಯನ್ನು ಪ್ರತಿನಿಧಿಸುವುದು ಎಂದರ್ಥವೇ ಹೊರತು, ಸ್ವೇಚ್ಚಾನುಸಾರ ಕಾನೂನುಗಳನ್ನು ರೂಪಿಸಲು ಮುಕ್ತ ಪರವಾನಗಿ ದೊರೆತಂತಲ್ಲ. ಡಾ ಬಿ ಆರ್ ಅಂಬೇಡ್ಕರ್ ಈ ಕುರಿತು ಅನೇಕ ಸಂದರ್ಭಗಳಲ್ಲಿ ಸ್ಪಷ್ಟನೆ ನೀಡುತ್ತಲೇ ಸಂವಿಧಾನ ರಚನೆಯಲ್ಲಿ ತೊಡಗುತ್ತಾರೆ.
ಆದರೆ ಭಾರತದ ಪ್ರಜಾತಂತ್ರ ವ್ಯವಸ್ಥೆಯಲ್ಲಿ ಸ್ಪಷ್ಟ ಬಹುಮತ ಎನ್ನುವುದು ಸ್ವೇಚ್ಚಾಚಾರದ ಪರವಾನಗಿಯೇ ಆಗಿದೆ. ಕಳೆದ ಆರು ವರ್ಷಗಳಲ್ಲಿ ಈ ಧೋರಣೆ ಸಮೂಹ ಸನ್ನಿಗೊಳಗಾದ ಬೃಹತ್ ಜನಸಮುದಾಯದ ನಡುವೆ ಸ್ವೀಕೃತಿಯನ್ನೂ ಪಡೆದುಬಿಟ್ಟಿದೆ. ಹಾಗಾಗಿಯೇ 150 ಮುಷ್ಕರ ನಿರತ ರೈತರ ಸಾವು, ಲಕ್ಷಾಂತರ ರೈತರ ಒಕ್ಕೊರಲ ದನಿ, ಬೃಹತ್ ಸಂಖ್ಯೆಯ ರೈತಾಪಿಯ ಮೇಲೆ ನಡೆಯುವ ದೌರ್ಜನ್ಯ, ರೈತರ ಬೆನ್ನ ಮೇಲೆ ಬಾಸುಂಡೆ ಬರುವಂತೆ ಬಾರಿಸುವ ಪೊಲೀಸರ ಕ್ರೌರ್ಯ ಎಲ್ಲವೂ ‘ ದೇಶದ ಅಭಿವೃದ್ಧಿಯ ’ ದೃಷ್ಟಿಯಿಂದ ಸ್ವೀಕಾರಾರ್ಹ ಎನಿಸಿಬಿಡುತ್ತವೆ. ಇದು ಹಿತವಲಯದಲ್ಲಿರುವ ಮಧ್ಯಮ ವರ್ಗಗಳನ್ನು ಕಾಡುತ್ತಿರುವ ಒಂದು ದುರ್ವ್ಯಸನ. ಈ ವ್ಯಸನವೇ ದೇಶದಲ್ಲಿ ನಿರಂಕುಶ ಆಳ್ವಿಕೆಗೆ ಸುಭದ್ರ ತಳಪಾಯವನ್ನು ನಿರ್ಮಿಸುತ್ತಿರುವುದನ್ನು ಕಾಣುತ್ತಿದ್ದೇವೆ.
ಮೂರು ಲಕ್ಷ ರೈತರು ಆತ್ಮಹತ್ಯೆಗೆ ಶರಣಾದಾಗ, ಎರಡು ತಿಂಗಳ ಕಾಲ ಚಳಿ ಮಳೆ ಎನ್ನದೆ, ಕೇಳುವವರಿಲ್ಲದೆ ಲಕ್ಷಾಂತರ ರೈತರು ರಸ್ತೆಗಳಲ್ಲೇ ಕುಳಿತು ಪ್ರತಿರೋಧ ವ್ಯಕ್ತಪಡಿಸುವಾಗ, ಈ ಮುಷ್ಕರದ ನಡುವೆಯೇ 150 ರೈತರು ಮೃತಪಟ್ಟಾಗ ಈ ದೇಶಕ್ಕೆ ಅಪಮಾನವಾಗಿದೆ ಎನಿಸಬೇಕಿತ್ತು. ಇದರಲ್ಲೇ ಆಡಳಿತ ವ್ಯವಸ್ಥೆಯ ರಾಷ್ಟ್ರದ್ರೋಹದ ವರ್ತನೆ ಗೋಚರಿಸಬೇಕಿತ್ತು. ದುರಂತ ಎಂದರೆ ಈ ದೇಶದ ಒಂದು ವರ್ಗದ ಜನತೆಗೆ, ಕಾರ್ಪೋರೇಟ್ ನಿಯಂತ್ರಿತ ಮಾಧ್ಯಮಗಳಿಗೆ ಮತ್ತು ಅಧಿಕಾರ ಲಾಲಸೆಯಿಂದ ತಮ್ಮ ಸಭ್ಯತೆ, ಸಂಯಮ, ಸೌಜನ್ಯ ಮತ್ತು ಎಲ್ಲ ಮಾನವೀಯ ಮೌಲ್ಯಗಳನ್ನೂ ಕಳೆದುಕೊಂಡಿರುವ ಜನಪ್ರತಿನಿಧಿಗಳಿಗೆ ಈ ಹೋರಾಟವೇ ದೇಶದ್ರೋಹದ ನಡೆಯಂತೆ ಕಾಣುತ್ತಿದೆ. ಜನಸಾಮಾನ್ಯರ ರಕ್ಷಣೆಗೆ ನಿಲ್ಲಬೇಕಾದ ಸಾಂವಿಧಾನಿಕ ಸಂಸ್ಥೆಗಳಿಗೆ ಇದು ಗಂಭೀರ ವಿಚಾರ ಎನಿಸುತ್ತಲೇ ಇಲ್ಲ.
ಈ ವಿಷಮ ಸನ್ನಿವೇಶದಲ್ಲೇ ಭಾರತದ ರೈತಾಪಿ ತನ್ನ ದಿಗ್ವಿಜಯ ಸಾಧಿಸಿದ್ದಾರೆ. ದೆಹಲಿಯಲ್ಲಿ ನಡೆದ ಗಣತಂತ್ರದಿನದ ಟ್ರಾಕ್ಟರ್ ಪರೇಡ್ ಮತ್ತು ದೇಶದ ರಾಜಧಾನಿಯನ್ನೂ ಸೇರಿದಂತೆ ದೇಶವ್ಯಾಪಿಯಾಗಿ ನಡೆದ ಪ್ರಜೆಗಳ ಜನಗಣರಾಜ್ಯೋತ್ಸವದ ಪ್ರತಿರೋಧದ ನೆಲೆಗಳು ಪ್ರಜಾತಂತ್ರಕ್ಕೆ ಸಂದ ದಿಗ್ವಿಜಯವಾಗಿದೆ. ಕೆಲವು ಅಹಿತಕರ ಘಟನೆಗಳ ನಡುವೆಯೂ ರೈತ ಸಮುದಾಯ ತನ್ನ ಅಂತಿಮ ಗುರಿಗೆ ಬದ್ಧತೆ ತೋರಿ ಶಿಸ್ತು ಸಂಯಮದಿಂದ ವರ್ತಿಸಿರುವುದು, ಈ ದೇಶದ ಜನಸಾಮಾನ್ಯರಲ್ಲಿರುವ ಸಂಯಮ, ತಾಳ್ಮೆಯ ಸಂಕೇತವಾಗಿದೆ. ಹಾಗೆಯೇ ಈ ಹೋರಾಟವನ್ನು ಕ್ರೂರವಾಗಿ ಹತ್ತಿಕ್ಕುವ ಪ್ರಯತ್ನಗಳ ಮೂಲಕ ಪ್ರಭುತ್ವ ಮತ್ತು ಆಳುವ ವರ್ಗಗಳು ಬೆತ್ತಲಾಗಿವೆ. ಸಾರ್ವಭೌಮ ಪ್ರಜೆಗಳ ಹೋರಾಟಗಳನ್ನು ರಾಷ್ಟ್ರದ್ರೋಹದ ಪರಿಭಾಷೆಯಲ್ಲಿ ಅಪಮಾನಿಸುವ ಮೂಲಕ ಮಾಧ್ಯಮಗಳು ಪೂರ್ಣ ಬೆತ್ತಲೆಯಾಗಿವೆ.
ಮುಂಬರುವ ದಿನಗಳಲ್ಲಿ ನಡೆಯಬಹುದಾದ ಜನಪರ ಹೋರಾಟಗಳಿಗೆ ದೆಹಲಿಯಲ್ಲಿನ ರೈತರ ಹೋರಾಟ ಮತ್ತು ದೇಶವ್ಯಾಪಿ ನಡೆಯುತ್ತಿರುವ ಆಂದೋಲನಗಳು ಸ್ಫೂರ್ತಿದಾಯಕವಾಗುವ ಆಶಯದೊಂದಿಗೇ, ಈ ದೇಶದ ಕಾರ್ಮಿಕ ಬಂಧುಗಳು, ಗ್ರಾಮೀಣ ಬಡಜನತೆ, ಶೋಷಿತ ಸಮುದಾಯಗಳು, ಅವಕಾಶವಂಚಿತರು, ಮಹಿಳೆಯರು ಮತ್ತು ಜಾತಿ ದೌರ್ಜನ್ಯವನ್ನು ನಿತ್ಯ ಎದುರಿಸುತ್ತಿರುವ ದಲಿತ ಸಮುದಾಯಗಳು ತಮ್ಮ ಹಕ್ಕೊತ್ತಾಯಗಳೊಂದಿಗೆ ಹೋರಾಟಗಳಿಗೆ ಸಜ್ಜಾಗಬೇಕಿದೆ. ಈ ದೇಶ ನಮ್ಮದು, ಈ ಮಣ್ಣು ನಮ್ಮದು, ಸಂವಿಧಾನ ನಮ್ಮದು, ನಮಗೆ ನಾವೇ ಅರ್ಪಿಸಿಕೊಂಡಿರುವ ಸಂವಿಧಾನದ ಆಶಯಗಳೂ ನಮ್ಮವೇ ಆಗಿದೆ. ಈ ಸಂವಿಧಾನದ ರಕ್ಷಣೆಯಾದರೆ ಮಾತ್ರವೇ ಪ್ರಜಾಪ್ರಭುತ್ವದ ರಕ್ಷಣೆ ಸಾಧ್ಯ ಎನ್ನುವುದನ್ನು ಇನ್ನಾದರೂ ಮನಗಾಣಬೇಕಿದೆ. ಇತಿಹಾಸದ ಕರಾಳ ಪುಟಗಳು, ಸಮಕಾಲೀನ ಭಾರತದ ಕರಾಳ ಹಾಳೆಗಳು ನಮ್ಮ ಮುಂದಿವೆ, ಕಣ್ತೆರೆದು ನೋಡುವ ಇಚ್ಚಾಶಕ್ತಿ ನಮ್ಮೊಳಗಿದ್ದರೆ ಗೆಲುವು ನಮ್ಮದೇ. ಈ ಆಶಯದೊಂದಿಗೇ ಮುನ್ನಡೆಯಬೇಕಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಕತೆ | ಹದ್ದುಗಳ ರಾಜ್ಯ
~ತೆಲುಗು ಮೂಲ: ಡಾ.ವೇಂಪಲ್ಲಿ ಗಂಗಾಧರ್, ಕನ್ನಡಕ್ಕೆ: ಡಾ.ಶಿವಕುಮಾರ್ ಕಂಪ್ಲಿ
ಮಟಮಟ ಮಧ್ಯಾನ್ಹದೊಳಗ ಬರ ಬರನ ಕಾಲು ಬೀಸಿಗೋಂತ ಪಟ್ನದ ಕಡಿಗೆ ಹೋಗಿ ಬರುತಿದ್ದ ವೀರಭದ್ರಿ. ಆತ ಎಲ್ಯಾನ ಸೊಲುಪೊತ್ತು ನಿರುಮ್ಮಳವಾಗಲು ನೆಳ್ಳು ಕಂಡರೆ ಕುಂತಗಾ ಬೇಕು ಎಂದುಕೊಳ್ಳುತಿದ್ದಾನೆ.
ಅಸಲಿಗೆ ನೆಳ್ಳು ಎಲ್ಲೈತಿ?
ನೆಳ್ಳನ್ನು ನೀಡುವ ಹಚ್ಚನೆ ಮರಗಳ ಹಸುರು ಎಲ್ಲೈತಿ?
ಬರಗಾಲದ ಹೊಡೆತಕ್ಕೆ ಭೂಮಿತಾಯಿಯು ಬಿರುಕು ಬಿಟ್ಟು ನೆಲ ಸೀಳಿಕೊಂಡು ವಿಲ ವಿಲನೆ ವದ್ದಾಡುತ್ತಾ.. ಕೆಂಡದಂತಹ ಉಗಿಯನ್ನು ಉಗುಳುತ್ತಾ ಕೊತ ಕೊತನೆ ಕುದಿಯುತಿದ್ದಾಳೆ.
ನಡೆಯುವ ಕಾಲುಗಳು ಸೋತುಹೋಗುತ್ತಿವೆ.
ಕೆಂಪಗೆ ಕಾದ ಬಿಸಿಲ ಶೂಲವು ತಿವಿಯುತ್ತಿದೆ.
ಹಸನಾದ ನೆಲಕೆ ಬೀಜಗಳ ಚೆಲ್ಲಿ ಮಳೆ ಮೋಡಗಳ ಕನಸು ಕಾಣುವ ಕಣ್ಣುಗಳಿಗೆ ಒಂದು ಮಳೆ ಹನಿಯೂ ಕೂಡಾ ನಿಲುಕುತಿಲ್ಲ.
ರೋಹಿಣಿಯ ಮಳೆಗೆ ಓಣೆಲ್ಲಾ ಕಾಳು ಅನ್ನಂಗ, ಕಲ್ಲನಕೇರಿ ಕೆರೆ ಕೋಡಿ ಯೊಡೆದು ಹರಿಯುತ್ತಿದ್ದ ನೀರಿಂದ ಬರುತಿದ್ದ ಬಳ್ಳ ಬಳ್ಳದ ಜೋಳದ ಒಕ್ಕಲು ಊರಿಗೆ ತಾಗಿದ ನೆಲೆದ ಹಗೇವುಗಳಿಗೆ ಈಗ ನೆನಪುಗಳದೇ ಬದುಕಾಗಿದೆ.
ತಟುಗು ಕುಂದ್ರಾಕ ಎಲ್ಯಾನ ನೆರಳುಬೇಕು…ನೆರಳು…ನೆರಳು.
ಮ್ಯಾಲ ನೋಡಿದರೆ ಎಲ್ಡು ಮೂರು ಹದ್ದುಗಳು ಹರ್ಯಾಡುತ್ತಿವೆ.
ಕೆಳಗ ತನ್ನ ನೆಳ್ಳನ್ನ ತಾನೇ ನೋಡಿದರೆ, ತನಗೇ ತುಚ್ಚನಿಸುತ್ತಿದೆ.
ಥೂ…ಇವನೌವನಾ…ನರ ಜಲುಮ ನಾಯಿ ಜಲುಮ!
ಗಂಟಲು ಸಣ್ಣಕ ಒಣಗುತೈತಿ…
ಎಲೈತಪ್ಪೋ…ನೀರು…ನೀರು…
ಎದಿ ಒಡೆಯೋ ಹಂಗ ಕುಂತು ಅಬ್ಬರಿಸಿದರೂ ಕಣ್ಣೀರು ಕೂಡಾ ಸೆಟಗೊಂಡು ಕುಂತಾವು!
ತಾನು ಬದುಕುತ್ತಿರುವುದು ಒಂದು ಬದುಕೇನಾ?
ನೆಳ್ಳಿಲ್ಲದಿದ್ದರೆ ಪರಾವಾಗಿಲ್ಲ.
ನೀರಿಲ್ಲದಿದ್ದರೂ ಪರವಾಗಿಲ್ಲ.
ನಾಳೆ ವಿರುಪಾಪುರದೊಳಗ ನಡಿಯೋ ಪಂಚಾಯ್ತಿ ಏನಾದ್ರೂ ಪರವಾಗಿಲ್ಲ.
ನನಗೆ ಮೊದಲೇ ಗೊತ್ತು… ಪಂಚಾಯ್ತಿಯೊಳಗ ನನಗೆ ಅನ್ಯಾಯವೇ ಆಗುತ್ತದ.
ನಡೀಲಿ…ನಡೀಲಿ…ಮತ್ತೆ ಮತ್ತೆ ನಡೀಲಿ..!, ಹೊಸಾದು ನಡೆಯೋದು ಏನೈತಿ?
ಆ ಫಕ್ಕೀರ ಗೌಡನಿಗೆ ನಾಳೆಯಿಂದ ಏನಾರ ಒಂದಾಗುತ್ತದೆ.
ಅಂಗಾ ಅವನ ಸವಾಸಗಾರರಿಗೂ ಕೂಡಾ!
ಲಮ್ಡಿ ನನ ಮಕ್ಕಳು ಹೊಕ್ಕಾರ…ಹೊಕ್ಕಾರ.
ಊರಿಗೆ ಹಿಡಿದ ಶನಿ ಹೊಕ್ಕಾತಿ. ಅನಿಷ್ಟ ಹೊಕ್ಕತಿ…ಎಲ್ಲಾ ಸುಡಗಾಡಿಗೆ ಹೊಕ್ಕತಿ.
ಒಣಗುತ್ತಿರುವ ಗಂಟಲನ್ನ ಎಂಜಲು ನುಂಗಿ ವೀರಭದ್ರಿ ತಣ್ಣಗ ಮಾಡಿಕೊಂಡ.
ಕೈಗೆ ತಗುಲಿಸಿಕೊಂಡ ಹೊಲೆದ ಚೀಲದೊಳಗ ಆತನ ಹೊಸಾ ಬ್ಯಾಟಿಯ ಕೊಡ್ಲಿ ಬೆಚ್ಚಗೆ ನಿದ್ದಿ ಮಾಡುತ್ತಿತ್ತು …
ವೀರಭದ್ರಿಯ ಹೆಜ್ಜೆಗಳು ಬಡ ಬಡನೇ ಹಳ್ಳಿಯ ಕಡೆಗೆ ಹೊಂಟಿವೆ.
***
ಸುಮಾರು ಇಪ್ಪತೈದು ರ್ಷಕ್ಕೂ ಮೊದಲು…
ಪ್ರಶಾಂತವಾದ ಊರೊಳಗೆ ರಾಜಕೀಯ ಪರ್ಟಿಗಳ ನಡುವೆ ಕಿಚ್ಚು ಹೊತ್ತಿಕೊಂಡಿತ್ತು. ಮಲ್ಲನ ಗೌಡ, ಕೆಂಚನ ಗೌಡ ಇಬ್ಬರೂ ಒಂದೇ ಮನೆಯ ಅಣ್ಣ ತಮ್ಮಂದಿರು. ಅಣ್ಣ ಮಲ್ಲನ ಗೌಡ ಒಂದು ಪರ್ಟಿ ಸೇರಿದ್ದು ನೋಡಿ ಪೈಪೋಟಿಗೆ ಬಿದ್ದ ಇನ್ನೊಂದು ಪರ್ಟಿಯವರು ಬಣ್ಣದ ಮಾತಗಳನ್ನ ಹೇಳಿ, ಅಧಿಕಾರದ ಆಸೆ ತೋರಿಸಿ ಆತನ ತಮ್ಮ ಕೆಂಚನ ಗೌಡನನ್ನು ಆತನಿಗೆ ಎದುರು ನಿಲ್ಲಿಸಿದರು. ಊರು ಅವರಿಬ್ಬರ ರಾಜಕೀಯಗಳಿಗೆ ಒಡೆದು ಎರಡು ಹೋಳಾಯಿತು. ತಣ್ಣಗೆ ಸುಖವಾಗಿದ್ದ ಕುಟುಂಬವೂ ಛಿದ್ರವಾಯಿತು!
ಅಲ್ಲಿಯ ತನಕ ಮನೆಯ ಹಿರಿಯ ಯಜಮಾನ ರಾಜೇ ಗೌಡ ಈ ಇಬ್ಬರು ಮಕ್ಕಳ ಮೇಲೆ ಪ್ರಾಣ ಇಟ್ಟುಕೊಂಡು ಬದುಕುತಿದ್ದ. ಆತನ ಕಣ್ಣಿನೆದುರೇ ತನ್ನ ಕೂಡು ಕುಟುಂಬ ಚೂರಾಗುತಿದ್ದರೆ ತಡಕೊಳ್ಳಲಾರದೇ ರೋಷಿಗೊಂಡು ಮಕ್ಕಳಿಬ್ಬರಿಗೂ ಭೂಮಿ, ಆಸ್ತಿ, ಆದಾಯಗಳನ್ನು ಎರಡು ಸರಪಾಲುಗಳಾಗಿ ಮಾಡಿ ಹರಿದು ಹಂಚಿದನು. ಪತ್ನಿ ಜಾನಕವ್ವನನ್ನು ಕರಕೊಂಡು ಏಳು ಕೆರೆ ದಾಟಿ ಮಲ್ಲನ ಕೇರಿಗೆ ಹೋಗಿಬಿಟ್ಟನು.
ಹಿರೇ ಗೌಡರು ಊರು ಬಿಟ್ಟ ನಂತರ ಆತನ ಇಬ್ಬರು ಮಕ್ಕಳು ಹೊಟ್ಟೆ ತುಂಬಾ ಉಂಡದ್ದಿಲ್ಲ. ಕಣ್ ತುಂಬಾ ನಿದ್ರಿಸಿದ್ದಿಲ್ಲ. ಇವರ ಪರ್ಟಿಗಳ ಹೊಡೆತಕ್ಕೆ ಊರೂ ಕೂಡಾ ಎರಡು ಹೋಳಾಯಿತು. ಜನರಲ್ಲಿಯೂ ರ್ಧ ಮಂದಿ ಒಬ್ಬರ ಕಡಿಗೆ ಸರಿದರೆ, ಉಳಿದ ರ್ಧ ಮಂದಿ ಮತ್ತೊಬ್ಬರ ಕಡಿಗೆ ಸರಕೊಂಡು ನಿಂತು ಬಿಟ್ಟರು. ನೋಡು ನೋಡುತಿದ್ದಂಗೇನೆ ಅಧಿಕಾರಗಳ ಯುದ್ಧ ಶುರುವಾಯಿತು. ಊರೊಳಗೆ ಜೀಪುಗಳು ಬಂದವು. ನಾಡ ತುಪಾಕಿಗಳು ನುಗ್ಗಿದವು. ನಾಡ ಬಾಂಬುಗಳು ತಯಾರಾದವು. ಎರಡೂ ರ್ಗಗಳು ಬಲಿಷ್ಟವಾಗಿ ದರ್ಭಲವಾದ ಜನರನ್ನು ಬಲಿಪಶುಗಳನ್ನಾಗಿ ಮಾಡಲು ಪ್ರಾರಂಭಿಸಿದವು. ಒಮ್ಮಿಂದ ಒಮ್ಮೆಲೇ ಊರೊಳಗೆ ಹೊಡೆದಾಟಗಳು ಭುಗಿಲೆದ್ದವು.
ಪಟ್ನದಿಂದ ನಡುರಾತ್ರಿಯಲ್ಲಿ ಕಣಿವಿಹಳ್ಳಿ ಮೇಲೆ ಬರುತ್ತಿದ್ದ ಮಲ್ಲನ ಗೌಡನ ಜೀಪಿನ ಮೇಲೆ ಕೆಂಚನ ಗೌಡನ ಕಡೆಯವರು ನಾಡ ಬಾಂಬುಗಳಿಂದ ದಾಳಿ ಮಾಡಿದರು. ಎಗರಿದ ಜೀಪು ತುಂಡು ತುಂಡಾಗಿ ಸಿಡಿದಿತು.ಜನರ ಸುಳಿವರಿತು ಒಮ್ಮೆಲೇ ಜಿಗಿದು ಹಾರಿಕೊಂಡ ಮಲ್ಲನ ಗೌಡ ಪೆಳಿಯೊಳಗೆ ಎಗರಿ ಬಿದ್ದಿದ್ದ. ಸಣ್ಣಪುಟ್ಟ ಗಾಯಗಳಲ್ಲಿ ಪೆಳಿಯ ಹಿಂದೆ ಎದ್ದವನೇ ಅಲಮರಸಿಕೇರಿ ಕಾಲು ದಾರಿ ಕಡೆಗೆ ಓಡಿ ತಲೆ ಉಳಿಸಿಕೊಂಡಿದ್ದ. ಬೆಳಗಾ ಮುಂಜಾನೆ ಬಂದು ನೋಡಿದರೆ ಆ ನೆಲದೊಳಗೆ ಆರು ಹೆಣಗಳು ಬಕ್ಕಬಾರಲೇ ಬಿದ್ದಿದ್ದವು. ನಾಲ್ಕು ಜನ ಕುಂಬಾರ ಹುಡುಗರು ಇಬ್ಬರು ಮಾದರ ಹುಡುಗರು ಆ ರಾತ್ರಿಯ ಜೀಪು ದಾಳಿಯೊಳಗ ಸತ್ತಿದ್ದರು. ಹಗೆಯು ಅಲ್ಲಿಗೇ ಮುಗಿಯಲಿಲ್ಲ.
ಮರುದಿನವೇ ಕರೇಕಲ್ಲು ಗುಡ್ಡದ ಕರೆ ದಾರಿಯಿಂದ ಹಳ್ಳಿಗೆ ಬರುತ್ತಿರುವಾಗ ಕೆಂಚನ ಗೌಡನ ಕಡೆಯ ಎಂಟು ಜನರು ಹಾಳು ಬಿದ್ದ ಅಗಸಿ ಬಾವಿಯೊಳಗ ಶವಗಳಾಗಿ ತೇಲಿದರು! ನಾಲ್ವರು ಹೊಲೆಯರು, ನಾಕು ಜನ ತಳವಾರರು.
ಊರು ಊರೆಲ್ಲಾ ಉರಿಯಲ್ಲಿ ಹೊತ್ತಿಕೊಂಡು ಬೆಂದು ಹೋಯಿತು. ನಾಲ್ಕಂತಸ್ಥಿನ ಮಹಡಿ ಮನಿಯೊಳಗ ಕೆಂಚನ ಗೌಡ ಅರಾಮಾಗಿದ್ದ.ಎಕರೆ ಎಕರೆ ಕಲ್ಲಿನ ವಾಡೆಯೊಳಗ ಮಲ್ಲನ ಗೌಡ ಮಲ್ಲಿಗೆ ಹೂವಿನಂಗ ಕಳ ಕಳ ತುಂಬಿಕೊಂಡಿದ್ದ. ಊರೊಳಗೆ ಮಾತ್ರ ಎರಡು ದಿನದೊಳಗೆ ಹನ್ನೆರಡು ಜನರು ಶವಗಳಾದರು!
ರಾಜಕೀಯಗಳ ರಕ್ತಪಾತಗಳಾದವು. ದೊಡ್ಡಸ್ಥಿಕೆಗಾಗಿ ಕುಣಿವ ನಾಯಕರು ತಮ್ಮನ್ನು ನೆಚ್ಚಿಕೊಂಡ ಜನರ ಕುರಿತು ಎಳ್ಳಷ್ಟೂ ಆಲೋಚಿಸಲಿಲ್ಲ. ಕೊನೆ ಕೊನೆಗೆ ಈ ರಾಜಕೀಯದ ಗೊಡವೆಗಳು ಜಾತಿ ಗೊಡವೆಗಳಾದವು. ಮಾದರ, ಹೊಲೆಯ, ಕುಂಬಾರ, ತಳವಾರರ ಮದ್ಯ ಹಸಿರು ಹುಲ್ಲು ಹಾಕಿದರೂ ಭಗ್ಗನೆದ್ದು ಹೊತ್ತಿ ಕೊಳ್ಳುವಷ್ಟು ಉರಿ ಎದ್ದವು!
ಯಾರಾದರೂ ರಾತ್ರಿ ಹೊತ್ತು ಒಂಟಿಯಾಗಿ ತಿರುಗ ಬೇಕೆಂದರೂ ಕೂಡಾ ಜನ ಭಯ ಪಡುತಿದ್ದಾರೆ. ಪಟ್ನಕ್ಕೆ ಹೋಗ ಬೇಕೆಂದರೂ ಹೊಲಕ್ಕ ಹೋಗ ಬೇಕೆಂದರೂ..ಒಬ್ಬರ ಜೊತೆ ಇಲ್ಲಂದ್ರ ಹೊರಾಕೂ ಕೂಡಾ ಯಾರೂ ಇಣುಕಿ ನೋಡರು. ಊರು ಹಿಂಗೆ ಸುಡುಗಾಡಾಗಿ ಬದಲಾಗುತ್ತಿರುವ ಸುದ್ಧಿ ತಿಳಿದ ಹಿರಿಯ ಯಜಮಾನ ರಾಜುಗೌಡರು ಕುಂತಲ್ಲೇ….ಕಣ್ಣೀರು ಹಾಕಿದರು.
ಮಧ್ಯಾನ್ಹದ ಬಸ್ಸಿಳಿದು ಕಾಳವ್ವನ ಹೋಟಲ ಕಡೆಯಿಂದ ಬರುತಿದ್ದ ಅಲ್ಲಾ ಭಕ್ಷಿಯ ಮಗ ಗೌಸ್ ಮೊಯಿನುದ್ದೀನನನ್ನು ಕೆಂಚನ ಗೌಡನ ಕಡೆಯ ಜನ ಬೇಟೆಗಾರರಂತೆ ಬೆನ್ನಟ್ಟಿ ಬೆನ್ನಟ್ಟಿ, ಮಂಡಿ ದುರುಗಮ್ಮನ ಗುಡಿ ಹತ್ರ ಕತ್ತಿ ಬೀಸಿ ಒಂದು ಕೈ ತೋಳನ್ನೇ ಕಡಿದು ಬಿಟ್ಟರು! ಜಗ್ಗದ ಗೌಸ್ ಮೊಯಿನುದ್ದೀನ್ ಅಲ್ಲೇ ಸವಾಕಾರರ ಜೀನಿನ ಕಡೆಯ ಮುಳ್ಳ ಬೇಲಿ ಹಾರಿ ಮಲ್ಲನ ಗೌಡನ ಮನೆ ಸೇರಿಕೊಂಡು ಜೀವ ಉಳಿಸಿಕೊಂಡ.
“ ಬ್ಯಾಡಲೋ ಬ್ಯಾಡಲೋ … ಅಂತ ನಾಲಿಗಿ ಗಂಟಲು ಹರಿಯಂಗ ಬಡಕೊಂಡೆನಲ್ಲಲೋ… ಆ ರಾಜಕೀ ಪರ್ಟಿಗಳ ಜೊತಿಗೆ ತಿರುಗ್ಯಾಡ ಬೇಡ ಅಂದಿನಿ… ಬಂಗಾರದಂತಹ ನಿನ್ನ ಕೈ ಇಲ್ಲದಂಗಾತಲ್ಲೋ.. ಏನು ಮಾಡಿ ನಾ ಸಾಯಲೋ …ಅಲ್ಲಾ …ಅಲ್ಲಾ” ಎಂದು ಗೌಸ್ ಮೊಯಿನುದ್ದೀನನ ತಾಯಿ ಬಿದ್ದು ಬಿದ್ದೂ ಅತ್ತಳು.
“ ನಮಗ್ಯಾಕಲೇ ಒಣ ರಾಜಕೀ ಪರ್ಟಿಗಳು.. ಆ ಜೀಪುಗಳು? ಅವರ ಹಿಂದ ಹೋಗಬ್ಯಾಡ.. ಹೋಗಬ್ಯಾಡ …ಅಂದೆ… ಇದು ಎಂದೋ ಒಂದು ದಿನ ತಿರುಗು ಬಾಣ ಆಗಿ ಬಡಿತೈತಿ ಅಂದಿದ್ದನಲ್ಲಲೇ.. ನನ್ನ ಮಾತು ಕೇಳಲಿಲ್ಲೋ..ಸುವ್ವರ್ ” ಎಂದು ತಂದಿ ಅಲ್ಲಾ ಭಕ್ಷಿ ಎದಿ ಎದಿ ಹೊಡಕೊಂಡು ಅತ್ತನು.
ಅಗಸಿ ಬಾವಿಯೊಳಗ ಶವಗಳಾಗಿ ತೇಲಿದ ಎಂಟು ಜನರ ಕಥಿ ಹಿಂದ ಗೌಸ್ ಮೊಯಿನುದ್ದೀನನ ಕೈವಾಡ ಇತ್ತೆಂದು ತಿಳಿದುಕೊಂಡ ಕೆಂಚನ ಗೌಡನ ಜನರು ಕಾವಲು ಕಾದು ಹಿಂಗ ಒಳ ಏಟು ಕೊಟ್ಟಿದ್ದರು. ಗೌಸ್ ಮೊಯಿನುದ್ದೀನ್ ಮೇಲೆ ನಡೆದ ದಾಳಿಯೊಳಗೆ ಜಮಾಲ್ ಸಾಬ್ ಕೆಂಚನ ಗೌಡನ ಕಡೆಯವರೊಳಗ ಇದ್ದದ್ದರಿಂದಾಗಿ ಊರೊಳಗಿನ ಸಾಬರೂ ಎರಡು ರ್ಗಗಳಾಗಿ ಹೋಳಾಗಿ ಬಿಟ್ಟರು. ಪ್ರತಿ ರ್ಷ ಜಾಂಡಾ ಕಟ್ಟಿಯ ಹತ್ತಿರ ನಡೆಯೋ ಪರ್ಲ ದೇವರ ಹಬ್ಬ ಕೂಡಾ ಈ ರ್ತಿ ಯಾರೂ ಮಾಡದಂಗಾದರು.
ಊರೀಗ ಊರಂತಿಲ್ಲ.
ಹಬ್ಬಗಳಿಲ್ಲ. ಆಚರಣೆಗಳಿಲ್ಲ..
ಒಬ್ಬರಿಗೊಬ್ಬರ ಸಹಕಾರವಿಲ್ಲ. ಅವರೆಂದರೆ ಇವರಿಗೆ ಕೋಪ,ಇವರೆಂದರೆ ಅವರಿಗೆ ಉರಿ. ಊರು ತನ್ನ ಅಸ್ತಿತ್ವವನ್ನೇ ಕಳೆದುಕೊಂಡಂತಿದೆ. ಎಲ್ಲರೂ ಕೂಡಿ ನಕ್ಕು ನಲಿದು ಇದ್ದ ಊರೊಳಗೆ ಕಲಹಗಳೇ ಕುಣಿದು ಕೊರಳ ಕಡಿಯುತ್ತಿವೆ. ಊರೀಗ ಹಾಳುಬಿದ್ದ ಸ್ಮಶಾನವಾಗಿದೆ.
ಊರೀಗ ಒಡೆದು ಸರಿಪಾಲಾಗಿದೆ. ದೊಡ್ಡ ಕೇರಿಗಳೆಲ್ಲಾ ಮಲ್ಲನ ಗೌಡನ ಪಾಲಿಗಾದರೆ ಕೆಳಗೇರಿಗಳೆಲ್ಲಾ ಕೆಂಚನ ಗೌಡನ ಸೊತ್ತಾಗಿವೆ. ಊರಿಗೆ ಎರಡು ದಾರಿಗಳಾಗಿವೆ. ಕಾಳವ್ವನ ಹೋಟಲ ತನಕಾ ಬಸ್ಸು ಬರುತ್ತದೆ. ಅಲ್ಲಿಂದ ಊರೊಳಕ್ಕೆ ಬರದು. ಊರಿಗೆ ಸಂಬಂಧಿಸಿದ ಪಂಚಾಯ್ತಿಗಳು ನಡದ್ರೆ ಮಾತ್ರ ಕಾಳವ್ವನ ಹೋಟಲ ಹತ್ರದ ಚಾವಡಿಯೊಳಗೇ ನಡಿತದೆ.
“ಊರಿಗೆ ಶಾಲೆಯೊಂದು ಮಂಜೂರಾಗಿದೆ” ಎಂಬ ಸುದ್ಧಿ ತಿಳಿದೊಡನೆಯೇ ಊರಿನ ಎರಡೂ ಗುಂಪುಗಳವರು ಪೈಪೋಟಿಗೆ ಬಿದ್ದರು. ದೊಡ್ಡ ಕೇರಿಯಲ್ಲಿಯೇ ಆಗಬೇಕೆಂದು ಮಲ್ಲನ ಗೌಡ. ಕೆಳಗೇರಿಯಲ್ಲೇ ಆಗಬೇಕೆಂದು ಕೆಂಚನ ಗೌಡ. ಇಬ್ಬರೂ ಜಿಲ್ಲಾ ಶಿಕ್ಷಣಾಧಿಕಾರಿಗಳನ್ನು ಕಂಡು ಬಲು ಪ್ರಯತ್ನಗಳನ್ನು ನಡೆಸಿದರು. ಇದರ ಮೇಲಾಗಿ ಮಲ್ಲನ ಗೌಡ ಶಾಸಕರನ್ನು ಹಿಡಕೊಂಡು ರಾಜಕೀಯ ನಡೆಸಿದ. ಶಾಲೆ ಎಲ್ಲಿ ತೆಗೆಯಬೇಕೋ… ರ್ಥವಾಗದೇ ಶಿಕ್ಷಣ ಶಾಖೆಗೇ ತಿಕ್ಕಲೆದ್ದಿತು.
ಊರಿನೊಳಗೆ ಶಾಲೆ ತೆಗೆಯುವ ಸುದ್ಧಿಯನ್ನು ನಂತರ ಪರಿಶೀಲಿಸೋಣವೆಂದು ಹೇಳಿ ಪೆಂಡಿಗ್ ನಲ್ಲಿಟ್ಟು ಫೈಲ್ ಮುಚ್ಚಿಹಾಕಿ ಶಿಕ್ಷಣ ಶಾಖೆಯು ಕೈ ತೊಳೆದುಕೊಂಡಿತು.
ಶಾಲೆಯಿಲ್ಲದ ಊರಲ್ಲಿ ಮಕ್ಕಳಿಗೆ ಇನ್ನೇನು ಕೆಲಸವಿರುತ್ತದೆ? ಕೆಲವು ಜನ ಎತ್ತು,ಎಮ್ಮೆ,ಕುರಿ, ಅಡು ಮೇಯಿಸಲಿಕ್ಕೆ ಗುಡ್ಡದ ಕಡೆಗೆ ಹೊರಟರು. ಮತ್ತೆ ಕೆಲವರು ಪಟ್ನದ ಕಡೆಗೆ ಹೋಗಿ ಆಟೋ ರಿಕ್ಷಾಗಳನ್ನು ನಡೆಸಿ ಬದುಕ ತೊಡಗಿದರು. ಇನ್ನೂ ಕೆಲವರು ಮಲ್ಲನ ಗೌಡನ ಜೀಪಿಗೆ ಆತುಕೊಂಡು ಪರ್ಟಿಗಳ ಮಾಡತೊಡಗಿದರು. ಯಾವಕ್ಕೂ ಸೇರದವರು ಕೆಂಚನ ಗೌಡ ತಯಾರು ಮಾಡೋ ನಾಡ ಬಾಂಬಿನ ಕರ್ಖಾನೆಯೊಳಗೆ ಕೆಲಸಕ್ಕೆ ಹೋಗುತಿದ್ದಾರೆ.
ಕಥೆಯಲ್ಲಾ ಹೀಗೆ ನಡೀತಿರುವಾಗಲೇ ….
ಗ್ರಾಮ ಪಂಚಾಯ್ತಿ ಚುನಾವಣೆಗಳು ಬಂದು ಸತ್ತವು.
ಊರ ಪರಿಸ್ಥಿತಿಯು ಬಾಣಲೆಯಿಂದ ಬೆಂಕಿಗೆ ಬಿದ್ದಂತಾಯಿತು.
ಇದಕ್ಕೆ ಜೊತೆಯಾಗಿ ಮೀಸಲಾತಿ ಸೀಟು ಬಂದು ಖಾಯಂ ಆಗಿದೆ. ಊರೊಳಗೆ ಎಲ್ಲಿ ನೋಡಿದರೂ ಇದೇ ಸುದ್ದಿಯೇ… ದೊಡ್ಡದಾಗಿದೆ. ಲಿಂಗಾಯ್ತರು,ಬಿ.ಸಿ. ರ್ಗಗಳು, ಮೈನಾರಿಟಿ ರ್ಗಗಳು, ಒಳಗೊಳಗೇ ಬೈದುಕೊಂಡರು, ಆದ್ರೆ ಹೊರಗೆ ಯಾರಿಗೆ ಕೊಟ್ಟರೂ ಒಳ್ಳೆಯದೇ ಅಂತ ಹೇಳುತಿದ್ದರು.
ಊರೊಳಗೆ ಎರಡು ಗುಂಪಿನ ಮಧ್ಯೆ ಈ ಚುನಾವಣೆಯು ಮತ್ತಷ್ಟು ಬೆಂಕಿಯನ್ನು ಬೆಳಸಿತು.
ಒಂದು ಪರ್ಟಿಯ ಕಡೆಗೆ ಮಲ್ಲನ ಗೌಡ ತನ್ನ ವ್ಯಕ್ತಿ ಮಾದಿಗರ ಅಂಕಪ್ಪನನ್ನ ಅಭ್ರ್ಥಿಯಾಗಿ ನಿಲ್ಲಿಸಿದರೆ, ಕೆಂಚನಗೌಡ ತನ್ನ ಮತ್ತೊಂದು ಪರ್ಟಿಯ ಅಭ್ರ್ಥಿಯಾಗಿ ಹೊಲ್ಯಾರ ಹುಚ್ಚಪ್ಪನನ್ನ ಪ್ರತಿಸ್ರ್ಧಿಯಾಗಿಸಿದ. ಎರಡೂ ಅರ್ಥಿಗಳು ರ್ಥಿಕವಾಗಿ ಏನೂ ಇಲ್ಲದವರೇ. ಇಬ್ಬರದೂ ಗುಡಿಸಲ ಬಾಳು, ಆದರೆ ನಂಬಿಗಸ್ಥರು. ಮಾದಿಗರ ಅಂಕಪ್ಪ ಹೊಡೆದಾಟ ಜಗಳವೆಂದರೆ ಮಾರು ದೂರ ಇರುವ ಮನುಷ್ಯ.ಪ್ರತಿ ಗುರುವಾರದ ದಿನ ಸಂತೆಗೋಗಿ ತರಕಾರಿ ವ್ಯಾಪಾರ ಮಾಡುತಿದ್ದ. ಹೆಬ್ಬಟ್ಟಿನವನು.
ಇನ್ನ ಹುಚ್ಚಪ್ಪ ಕೆಂಚನ ಗೌಡ ಹಾಕಿದ ಗೆರೆ ದಾಟಲಾರ. ಬಾಳಾ ಕಾಲದಿಂದಲೂ ಜೀಪು ಡ್ರೈವರಾಗಿ ಅಲ್ಲೇ ಇದ್ದವ.ಹುಚ್ಚಪ್ಪ ಕಾಗದ ಬರೆಯೋವಷ್ಟು ಓದನ್ನೂ ಕಲಿತಿದ್ದಾನೆ. ನಾಕು ಜನ ಹೆಣ್ಣ ಮಕ್ಕಳ ತಂದೆ ಎಂಬ ಸಣ್ಣ ಸಹಾನುಭೂತಿಯೂ ಈತನ ಮೇಲಿದೆ.
ಊರೊಳಗೆ…
ಕುವೈತ್ ನಿಂದ ಅಕ್ಬರ್ ಭಾಷಾ ಮಗಳು ಬಂದಿದ್ದಾಳೆ.
ಅವರಿರೋದು ಕೆಳಗೇರಿಯಲ್ಲೇ…
ಆ ಹುಡುಗಿಯ ಮೇಲೆ ಕೆಂಚನ ಗೌಡನ ಕಣ್ಣು ಬಿದ್ದಿತು.
“ ಅಕ್ಬರ್ ಮಾವಾ… ನಿನಿಗೆ ತಿಳಿಯದೇನೈತಿ? ನೋಡು ನನಿಗೆ ಮದುವಿ ಆಗೇತಿ ಅದ್ರ ಹೊಟ್ಯಾಗ ಮಕ್ಕಳಿಲ್ಲ. ನೀನು ಒಪ್ಪಿಕೊಂಡ್ರೆ ನಿನ್ನ ಮಗಳನ್ನ ಮಾಡಿಕ್ಯಾಬೇಕಂತ ಅದಾನಿ” ಅಂತ ನಾಟಿ ಕೋಳಿ ರೆಡಿ ಮಾಡಿಸಿ, ರಾತ್ರಿ ತನ್ನ ನಾಲ್ಕಂತಸ್ಥಿನ ಮಹಡಿ ಮನೆಯೊಳಗ ಕೂಡಿಸಿ ಹೇಳಿದನು ಕೆಂಚನ ಗೌಡ.
ಅಕ್ಬರ್ ಭಾಷಾ ಗೌಡನ ಮಾತಿಗೆ ಎದರು ಮಾತಾಡಿದರೆ ಊರೊಳಗೆ ಇರಲಾಗದೆಂದು ಒಪ್ಪಿಕೊಂಡನೋ..
ಕುಡಿದ ಅಮಲಿನೊಳಗೆ ತಲೆಯಾಡಿಸಿದನೋ ತಿಳಿಯದು.
ಆದರೆ ಅಂದಿನಿಂದ ಇಬ್ಬರ ಮನೆ ನಡುವೆ ಹೋಗೋದು ಬರೋದು ನಡಿಯತೊಡಗಿದವು.
ಮಗಳ ನಿಖಾದೊಂದಿಗೆ ಅಕ್ಕ ಪಕ್ಕದ ಸಾಬರೆಲ್ಲಾ ಕೆಂಚನ ಗೌಡನ ಕಡಿಗೇ ಕಲೆತು ಸೇರೋ ಹಂಗಾಯಿತು.
ಸ್ರ್ಧೆಗೆ ನಿಂತ ಮಾದಿಗರ ಅಂಕಪ್ಪನಿಗೆ ಕರೆಕಲ್ಲು ಗುಡ್ಡದ ಹತ್ರ ಹೊಲವಿತ್ತು. ರಾತ್ರಿ ಹೊಲಕ್ಕ ನೀರು ಕಟ್ಟಲೆಂದು ಹೊಲಕ್ಕೆ ಹೋಗಿದ್ದ ಆತನನ್ನ ಯಾರೋ…ಹೊಲದಲ್ಲಿರುವ ಬೇವಿನ ಮರಕ್ಕೆ ಉರುಲು ಹಾಕಿ ಹೋಗಿ ಬಿಟ್ಟರು. ಕುಟುಂಬಕ್ಕೇ ದೊಡ್ಡ ಆಧಾರವಾಗಿದ್ದ ತನ್ನ ಗಂಡನ ಸಾವನ್ನ ಕಂಡ ಅಂಕಪ್ಪನ ಹೆಂಡತಿ ನಾಕು ರ್ಷದ ಮಗನನ್ನ ಹಿಡಕೊಂಡು ಬರ್ಯಾಡಿ ಅತ್ತಳು.
“ ಸಿಗತಾರ…ಸಿಗತಾರ…
ಯಾರನ್ನೂ ಬಿಡಲಾರೆವು. ಸೊಲುಪ ಉಸಿರಾಡಲಿ….” ಎಂದು ಅಂದು ಹೆಣ ತಂದ ಮನಿ ಮುಂದೆ ನಾಕು ಸಮಾಧಾನದ ಮಾತುಗಳೇಳಿ ಹೋದನು ಮಲ್ಲನ ಗೌಡ.
ಚುನಾವಣೆಯ ದಿನಾಂಕವು ಘೋಷಣೆಯಾಯಿತು.
“ ನಾನು ಹೇಳೋದು ಕೇಳಮ್ಮಾ…
ಆ.. ನನ ಮಕ್ಕಳು ನಮ್ಮ ಅಂಕಪ್ಪನನ್ನ ಯಂಗ ಉರುಲು ಹಾಕಿದರೋ…? ಅದನ್ನ ಮರೆತು ಬಿಟ್ಟೆಯಾ?…
ಏನು? ನೀನು ನಮ್ಮ ಕಡೆ ಮನುಷಾಳು ಭಯ ಪಡಬೇಡ… ಎಲ್ಲಾ ನಾನು ಹತ್ತಿರವಿದ್ದು ನೋಡಿಕೊಳ್ಳುತ್ತೇನೆ. ಇಂತಾ ಹೊತ್ನಾಗ ಧರ್ಯ ತೋರಿಸಬೇಕು…. ನೀನು ನನ್ನ ಮಾತು ಕೇಳಿ ನಾಮಿನೇಷನ್ ಮಾಡು ಬಾ… ಎಂದು ಮಲ್ಲನ ಗೌಡ ಅಂಕಪ್ಪನ ಹೆಂಡತಿ ಆದಿ ಲಕ್ಷ್ಮಿಯನ್ನ ಸ್ರ್ಧೆಗೆ ಇಳಿಯಲು ಹೇಳಿದ.
“ ಸೋಮಿ … ನನಗ್ಯಾಕ ರಾಜಕೀಯದ ಉಸಾಬರಿ? ಇರೋ ಒಬ್ಬ ಮಗನ ಮೇಲೆಯೇ ನನ್ನ ಜೀವ ಸಾಮಿ. ಅವನ್ನ ಇಟ್ಟಕೊಂಡು ಬದುಕು ಸವಸತಾ ಅದೀನಿ. ನನಗೂ ಏನಾನ ಅದೂ ಇದೂ ಆದ್ರೆ ಮಗ ಅನಾಥ ಅಕ್ಕಾನ” ಎಂದು ಆಕಿ ಹಲುಬ್ಯಾಡಿದಳು.
ಆದರೂ….
ಅದ್ಯಾವುದನ್ನೂ ಲೆಕ್ಕಿಸದದಂತೆ ಮಲ್ಲನ ಗೌಡ ನಿಂತು ಆದಿಲಕ್ಷ್ಮಿಯನ್ನು ನಾಮಿನೇಷನ್ ಮಾಡಿಸಿದ.
ಪಾಪ… ಗಂಡನನ್ನು ಕಳೆದುಕೊಂಡ ಹೆಂಗಸು.
ದಿಕ್ಕೆಟ್ಟ ಬಡ ಕುಟುಂಬವೆಂದು ಜನರೊಳಗೆ ಸಹಾನುಭೂತಿ ಹುಟ್ಟಿತು.
ಸ್ರ್ಧೆಯೊಳಗೆ ಆದಿಲಕ್ಷ್ಮಿ ಗೆದ್ದಳು.
ಮಲ್ಲನ ಗೌಡ ಮೀಸೆ ತಿರುವಿದನು.
ಹೊಲದ ಹತ್ರ ಅಂಕಪ್ಪನನ್ನು ನಿಜವಾಗಿಯೂ ಕೆಂಚನ ಗೌಡನ ಕಡೆಯವರು ಸಾಯಿಸಿದರಾ…? ತನ್ನ ರಾಜಕೀಯ ಆದಿಪತ್ಯವನ್ನು ಉಳಿಸಿಕೊಳ್ಳಲಿಕ್ಕೆ ಚುನಾವಣೆಯಲ್ಲಿ ತನ್ನ ಅಭ್ರ್ಥಿಯನ್ನು ಗೆಲ್ಲಿಸಲಿಕ್ಕೇ ಮಲ್ಲನ ಗೌಡ ಈ ಕೆಲಸ ಮಾಡಿಸಿದನೋ? ಎಂಬ ಅನುಮಾನಗಳ ಹಕ್ಕಿಗಳೂ ರೆಕ್ಕೆ ಬಿಚ್ಚಿ ಹರ್ಯಾಡಿದ್ದು ಗುಸು ಗುಸು ಸುದ್ಧಿಯಾಗಿಯೇ ಉಳಿದು ಹೋಯಿತು.
***
ಕೆಂಚನ ಗೌಡ ಮದುವೆ ಆಗುತ್ತೇನೆಂದು ಹೇಳಿದನೇ ವಿನಾ ಅದೇನೂ ನಡಿಯಲೇ ಇಲ್ಲ. ರಾಜಾ ರೋಷವಾಗಿ ಅಕ್ಬರ್ ಭಾಷಾ ನ ಮಗಳನ್ನ ಇಟ್ಟುಕೊಂಡು ಆಕೆಗೊಂದು ಚಿಕ್ಕ ಮನೆ ಮಾಡಿದನು. ಕೆಲವು ಕಾಲ ಇಬ್ಬರ ಸಂಸಾರವೂ ಸಾಗಿತು. ಆಕೆ ತಾಯಿಯೂ ಆದಳು. ಕೆಂಚನ ಗೌಡನ ಆನಂದಕ್ಕೆ ಎಣೆಯಿಲ್ಲದಂಗಾಯಿತು. ಅದು ಅಷ್ಟಿಷ್ಟಲ್ಲ. ಕೆಂಚನ ಗೌಡ ತನ್ನ ಕಾಲು ನೆಲಕ್ಕಿಡದಂತೆ ಹಕ್ಕಿಯಾಗಿ ಮುಗಿಲೊಳಗೇ ತೇಲಾಡ ಹತ್ತಿದ. ದೇವರ ಪೂಜೆಗಳ ಮಾಡಿಸಿದ.ದಾನ ರ್ಮಗಳ ಮಾಡಿಸಿದ.
ಕೆಂಚನ ಗೌಡನಿಗೆ ಮಗ ಹುಟ್ಟಿದನು.
ಮಗ ಬಲಹೀನವಾಗಿರುವನೆಂದು ಡಾಕ್ಟರ್ ಗಳು ಹೇಳಿದ್ದರಿಂದ ದೊಡ್ಡ ದೊಡ್ಡ ಆಸ್ಪತ್ರೆಗಳನ್ನು ತಿರುಗ್ಯಾಡಿ ಬಂದನು. ಗ್ರಹ ಬಲದೊಳಗೆ ದೋಷ ವಿದೆಯೆಂದು ಫಕ್ಕೀರ ಗೌಡ ಎಂದು ಹೆಸರಿಡಬೇಕೆಂದು ಕೆಲವು ಜೋತಿಷಿಗಳು ಹೇಳಿದಂಗೆಯೇ ಮಾಡಿದನು. ಅತ್ತ ಮಸೀದಿಯೊಳಗೆ ಇತ್ತ ದೇವಾಲಯಗಳೊಳಗೆ ಎರಡೂ ಕಡಿಗೆ ಆತ ಪೂಜೆಗಳ ಮಾಡಿಸಿದ..
“ಬಲಹೀನವಾದ ಮಗು ಆರೋಗ್ಯವಾಗುತ್ತದೆ. ಆಯಿತವಾರ ಅಮಾಸೆ ದಿನ ರ್ಧರಾತ್ರಿ ಹೊತ್ತು ಹುಟ್ಟಿದ ಮಗ ದೊಡ್ಡ ರ್ವಜ್ಞನಾಗುತ್ತಾನೆ. ಇಲ್ಲಾಂದ್ರ ಪಾಪರು ಪಟ್ಟಿ ಪಟಿಂಗ ಕಳ್ಳನಾಗುತ್ತಾನೆ” ಎಂದು ಕೂಡಾ ಪೂಜಾರಿಗಳು ಹೇಳಿದರು.
ಈ ಮಾತುಗಳನ್ನ ಕೇಳಿ ಕೆಂಚನಗೌಡ ಬಿದ್ದೂ ಬಿದ್ದೂ ನಕ್ಕನು.
ಮಗನು ಬಂದ ಗಳಿಗೆ ಚಲೋದೈತೇನೋ, ಆದರೆ ಮಲ್ಲನ ಕೇರಿಯಿಂದ ಕೆಟ್ಟ ಸುದ್ಧಿಯೊಂದು ಆಗಲೇ ಬಂದು ಬಡಿಯಿತು. ತಂದೆ ರಾಜೇ ಗೌಡ ಸತ್ತನೆಂಬ ಸುದ್ಧಿ ತಿಳಿಯುತ್ತಲೇ ಕೆಂಚನ ಗೌಡನ ಎದೆಗೆ ಸಿಡಿಲು ಬಿಡಿದಂಗಾತು. ಪಟ್ಟನೇ ಮನೆಯಿಂದ ಹೊರ ಬಿದ್ದನು.
ಅಷ್ಟೊತ್ತಿಗೆ ಅಣ್ಣ ಮಲ್ಲನ ಗೌಡ ಕೂಡಾ ಬಂದು ಅಳುತಿದ್ದನು.
ಕೆಂಚನ ಗೌಡ ಕೂಡಾ ಬಂದು ಶವದ ಮೇಲೆ ಬಿದ್ದೂ ಬಿದ್ದು ಅತ್ತನು.
ಆ ನಂತರ ಮಷಾಣದ ಕರ್ಯಗಳೆಲ್ಲಾ… ಒಂದರ ನಂತರ ಒಂದು ಆಗಿ ಹೋದವು.
ಶವವನ್ನು ಗುದ್ದಿನೊಳಗೆ ಹೂತ ನಂತರ ಇಬ್ಬರೂ ಕೂಡಿ ಮೂರು ದಿನಗಳ ಹಿಂಡೇ ಕೂಳು ಎಡಿ ಮಾಡಿದರು.
ಮನೆಗೆ ತಂದ ಹೊಸ ಗಡಿಗೆಯೊಳಗೆ ಐದು ಪಾವುಗಳ ಅನ್ನ ಕುದಿಯುತ್ತಿರುವಾಗಲೇ ಮನೆಯೊಳಗೆ ಅಣ್ಣ ತಮ್ಮರಿಬ್ಬರೂ ದೇವರಿಗೆ ಪೂಜೆ ಮಾಡಿದರು. ದೀಪ ವಿಟ್ಟು ಹೊರಗೆ ಬಂದರು. ಒಳಗೆ ಏನು ಮಾತಾಡಿಕೊಂಡರೋ ತಿಳಿಯದು. ಆದರೆ ರಾಜ್ಯ ಮಟ್ಟದಲ್ಲಿ ರಾಜಕೀಯಗಳು ನಡೆದವು. ಎಂ.ಎಲ್.ಎ. ಯೊಂದಿಗೆ ಮಾತಾಡಿ ಬಂದಮೇಲೆ ರಾಜ್ಯ ಮಟ್ಟದಲ್ಲಿ ರಚಿಸಲಾದ ಕೃಷಿ ಮಾರುಕಟ್ಟೆ ಸಮತಿಯ ಕರ್ಯಕಾರಿ ಸದಸ್ಯನನ್ನಾಗಿ ಮಲ್ಲನ ಗೌಡನನ್ನು ಆಯ್ಕೆ ಮಾಡಲಾಯಿತು. ಇದಕ್ಕೆ ತೆರಿ ಹಿಂದೆ ಕೆಲಸ ಮಾಡಿದ್ದೇ ಕೆಂಚನಗೌಡನೆಂದು ಒಳಗಿನ ಗುಸು ಗುಸು….
ರ್ಕಾರದ ಬಂಗ್ಲೆ,ಕಾರು, ಆಫೀಸು ಪಡೆದು ಬೆಂಗಳೂರೊಳಗೆ ಕುಂತ ಮೇಲೆ ಊರೊಳಗಿನ ತನ್ನ ಕುಟುಂಬವನ್ನೆಲ್ಲಾ ಮಲ್ಲನ ಗೌಡ ಸಿಟಿಗೆ ಕರೆಸಿಕೊಂಡು ಬಿಟ್ಟ.
ಮಲ್ಲನ ಗೌಡನನ್ನು ಇಷ್ಟು ಕಾಲದಿಂದ ಊರೊಳಗೆ ನಂಬಿಕೊಂಡು ಬಂದವರ ಕಥೆಯೇನು? ಹೇಳಿಕೊಳ್ಳಲಾರದಂಗಾಯಿತು.
“ ನಾನು ಎಲ್ಲಿದ್ದರೂ ನಿಮಗೆ ಒಳ್ಳೆಯದೇ ಆಗುತ್ತದೆ. ರಾಜಧಾನಿಯೊಳಗೆ ಕುಳಿತರೆ ಎಂತಾ ಕೆಲಸಗಳಾದರೂ ಆಗುತ್ತವೆ. ನಿಮಗಾಗಿಯೇ ನಾನು ಹೋಗುತ್ತಿರುವುದು ” ಎಂದು ಹೇಳಿ ಮೊಸಳೆ ಕಣ್ಣೀರು ವರೆಸಿಕೊಂಡನು ಮಲ್ಲನ ಗೌಡ.
ಅಣ್ಣ ತಮ್ಮಂದಿರಿಬ್ಬರೂ ಕೂಡಿಕೊಂಡ ಮೇಲೆ ಊರು ಉದ್ದಾರ ವಾಗುತ್ತದೆಂದು ಎಲ್ಲರೂ ಅಂದುಕೊಂಡರು.
ಆದರೆ ಅದೇನೂ ಆಗಲಿಲ್ಲ.
ಊರೊಳಗೆ ಕೆಂಚನ ಗೌಡನದೇ ಆಡಳಿತವಾಯಿತು.
ಆತ ಹೇಳಿದ್ದೇ ಶಾಸನವಾಯಿತು.
ಅಲ್ಲಿ ತನಕ ಮಲ್ಲನ ಗೌಡನ ಬಳಿ ಕೆಲಸ ಮಾಡಿದವರನ್ನೆಲ್ಲಾ ಪೀಡಿಸುವುದು, ಕತ್ತರಿಸುವುದು, ಹೆಚ್ಚಾಯಿತು. ಕಷ್ಟ ಬಿದ್ದು ಎರಡು ಮೂರು ಸಲ ಬೆಂಗಳೂರಿಗೆ ಹೋಗಿ ಊರಿನ ಸಂಗತಿಗಳನ್ನೆಲ್ಲಾ ಮಲ್ಲನ ಗೌಡನಿಗೆ ಹೇಳಿದರೂ… ಏನೂ ಪ್ರಯೋಜನ ವಿಲ್ಲದಂಗಾಯಿತು.
“ಊರೊಳಗೆ ವಡೆದಾಟಗಳ್ಯಾಕೆ? ಯಾರೋ ಒಬ್ಬರು ಅನುಸರಿಸಿಕೊಂಡು ಹೋಗಬೇಕಪ್ಪಾ…ಏಷ್ಟು ಕಾಲ ಬಡಿದಾಡತೀರಿ ಅವು ಎಷ್ಟು ದಿನ ನಡೀತಾವೆ? ಸುಮ್ಮಕ ಸಿಕ್ಕಿದ್ದು ಗಳಿಸಿಕೊಂಡು ಸುಖ ಪಡಾದನ್ನ ನೋಡ್ರಿ. ಸಾಕಿನ್ನ… ಇಂಥಾ ರಾಡಿಗಳನ್ನ ಹೊತ್ತಗೊಂಡು ಇಲ್ಲಿತಂಕಾ ಬರಬ್ಯಾಡ್ರಿ. ಬೆಂಗಳೂರು ತಂಕ ತರಬ್ಯಾಡ್ರಿ ಬೇಸಿರಕಿಲ್ಲ ನಡ್ರೀ… ಇದಾ ಕಡೇ ಮಾತು ಎಚ್ಚರ” ಎಂದು ಕಡ್ಡಿ ಮುರಿದ ಮಲ್ಲನ ಗೌಡ.
ಅದಾ…ಕೊನಿ…
ಆ ಮ್ಯಾಲ ಅತನಿಂದ ಯಾರೂ ಒಳ್ಳೇದು ಬಯಸಲೂ ಇಲ್ಲ.
ನಮ್ಮ ರಾಡಿ ಪಂಚಾಯ್ತಿ ತೀರಿಸ ಬಾರಪ್ಪ ಎಂದು ಕೇಳಿಕೊಳ್ಳಲೂ ಇಲ್ಲ.
ಊರೊಳಗೆ ಕೆಂಚನ ಗೌಡಪ್ಪನದೇ ರ್ಭಾರಿಕಿ ನಡೆಯತೊಡಗಿತು. ಊರೊಳಗೆ ಆತನಿಗೆ ಯಾರ ಅಡೆತಡೆಯೇ… ಇಲ್ಲದಂಗಾಗಿ ಹೋಯಿತು.
ರೈತರು ಕಷ್ಟ ಪಟ್ಟು ಬೆವರು ಸುರಿಸಿ ಬೆಳೆದ ಬೆಳೆಯನ್ನ ತನಗೇ ಮಾರಬೇಕೆಂದು ಕೆಂಚನ ಗೌಡ ಠರಾವು ಹೊರಡಿಸಿದ. ರೈತರಿಗೆ ನ್ಯಾಯಯುತವಾದ ಬೆಲೆಯನ್ನು ಸಯಿತಾ ನೀಡಲಿಲ್ಲ.
ಊರೊಳಗೆ ರೈತರು ಕಷ್ಟ ಪಡುತ್ತಾರೆಯೇ ವಿನಾ, ಅವರು ಬೆಳೆದ ಬೆಳೆಗೆ ಬೆಲೆ ಕಟ್ಟುವುದು ಮಾತ್ರ ಕೆಂಚನ ಗೌಡನದೇ ಆಯಿತು. ʼಗೌಡನನ್ನು ಬಿಟ್ಟು ಮಾರಿದರೆ ಬೂದಿ ಪಾಲು ಗೌಡನಿಗೆ ತಂದು ಮಾರಿದರೆ ಕಾಡುಪಾಲುʼ ಅನ್ನಂಗಾತು. ಅವರ ಪಾಡು.
“ವ್ಯವಸಾಯವೆಂದರೆ ಜೂಜಾಟವಾ? ಕೊನೆಗಾಣದ ದುಃಖವಾ?”…
ಹೊಲಗಳ ಬಳಿಯೇ ಕೆಂಚನ ಗೌಡರ ನಾಲ್ಕು ಜನ ನಿಂತು, ಮುಖಕ್ಕೆ ಹೊಡೆದಂತೆ, ಟ್ರ್ಯಾಕ್ಟರ್ ಗಳೊಳಗೆ, ಲಾರಿಗಳೊಳಗೆ ರೈತರು ಬೆಳೆದ ಬೆಳೆಗಳನ್ನ ಹದ್ದುಗಳಂತೆ ಹಾರಿಸಿಕೊಂಡು ಹೋಗುತ್ತಿದ್ದಾರೆ…
ರೈತರು ತಿರುಗಿ ಬೀಳಲಾಗದೇ ಹೋದರು.
ಯಾರಿಗೆ ಹೇಳಿಕೊಳ್ಳುತ್ತಾರೆ?
ಇದಕ್ಕೆ ಜೊತೆಯಾಗಿ….
ಊರೊಳಗೆ ನಂಬರ್ ಗಳಾಟದ ಮಟ್ಕವೂ ಬಂದಿದೆ.
ಸುತ್ತು ಮುತ್ತಲ ಹಳ್ಳಿಗಳನ್ನೆಲ್ಲಾ ಸೆಳಕೊಂಡಿದೆ.
“ ರೂಪಾಯಿಗೆ ನೂರು ರೂಪಾಯಿಗಳು” ಎಂದು ಹೇಳಿದ್ದರಿಂದ ಆಸೆಪಟ್ಟ ಜನರು ತಮ್ಮ ಹತ್ತಿರ ಉಳಿಸಿದ ಹಣವನ್ನೆಲ್ಲಾ ತೆಗೆದು ತಮ್ಮ ಅದೃಷ್ಟವನ್ನ ಪರೀಕ್ಷಸಲು ನೋಡಿದರು. ಆ ಆಟ ಕೆಂಚನ ಗೌಡನ ಮನೆಗೆ ಹಣದ ಬೆಳೆಯಾಗಿ ಒದಗಿತು.
ರಾತ್ರೋ ರಾತ್ರಿಗೆ ಲಕ್ಷಾಧೀಶ್ವರರಾಗಬೇಕು,ಕೋಟ್ಯಾಧೀಶ್ವರರಾಗಬೇಕು ಎಂದು ಕನಸು ಕಾಣುವವರನ್ನು ಬೇಟೆಯಾಡುತ್ತಲೇ ಕೆಂಚನ ಗೌಡ ಬೆಳೆದುಬಿಟ್ಟನು. ಮಟ್ಕಾದ ಏಟಿಗೆ ಸುಖದ ಕುಟುಂಬಗಳು ಒಡೆದು ಛಿದ್ರ ಛಿದ್ರಗೊಂಡವು. ಹೆಣ್ಣು ಮಕ್ಕಳ ಕೊರಳೊಳಗಿನ ತಾಳಿ ಸರಗಳು ಕೂಡಾ ಮಟ್ಕಾದ ಮಹಾ ಮಾರಿಗೆ ಆಹುತಿ ಆದವು.
ನೋಡು ನೋಡುತ್ತಿದ್ದಂತೆಯೇ ಊರೊಳಗೆ ಮತ್ತೊಂದು ಅನಿಷ್ಟವು ಊರನ್ನು ಪ್ರವೇಶಿಸಿತು.
ರ್ಕರವು ಎರಡು ಬ್ರಾಂದಿ ಶಾಪುಗಳನ್ನು ತೆರೆಯಲು ಕೆಂಚನ ಗೌಡನಿಗೆ ರ್ಮಿಷನ್ ನೀಡಿತು.
ಇದರೊಂದಿಗೆ ಊರೆಲ್ಲಾ ಮತ್ತಾಗಿ ಮಲಗಿತು.
ಹೆಸರಿಗೆ ಅವು ಬ್ರಾಂದಿ ಶಾಪುಗಳಾದವೇ ವಿನಃ ಒಳಗೆಲ್ಲಾ ಅವು ಕಳ್ಳ ಬಟ್ಟಿ ಸರಾಯಿಯ ಸರಕೇ ಆಗಿದ್ದವು.
ಕಲ್ಲಪ್ಪನ ಗುಡಿ ಕೆಳಗಿನ ಕೆರೆ ಅಂಗಳದಲ್ಲಿ ಬಟ್ಟಿ ಸರಾಯಿ ತಯಾರು ಮಾಡುವುದು…
ಆ ಸರಕನ್ನು ಪ್ಲಾಸ್ಟಿಕ್ ಕ್ಯಾನ್ ಗಳೊಳಗೆ ಹಳ್ಳಿಗಳಿಗೆ ತರುವುದು…
ಆ ಸರಕಿನ ಯಾಪಾರವನ್ನು ಪುಲ್ ಬಾಟಲು.. ಆಫ್ ಬಾಟಲುಗಳಾಗಿ ಮರ್ಪಡಿಸುವ ವ್ಯಾಪಾರ ಸುರುವಾಯಿತು.
ಆ ನಂತರ ಕೆಂಚನ ಗೌಡ ಹಿಂದಕ್ಕೆ ತಿರುಗಿ ನೋಡಲೇ ಇಲ್ಲ…
ಮಲ್ಲನ ಗೌಡ ರಾಜಧಾನಿ ಲೆವೆಲ್ ನೊಳಗೆ ಸಂಪಾದಿಸಿಕೊಳ್ಳುತ್ತಾ ಊರಿನ ಕಡೆಗೆ ಬರಲೇ ಇಲ್ಲ.
ನೋಡಲೇ ಇಲ್ಲ.
***
ಕಾಲ ಕಳೆಯುತ್ತಲೇ ಇತ್ತು.
ಎಂ.ಎಲ್.ಎ ಈ ಸಲ ಚುನಾವಣೆಯೊಳಗೆ ತಾನು ನಿಲ್ಲಲಾರದೇ ತನ್ನ ಮಗ ವೀರನ ಗೌಡನನ್ನು ನಿಲ್ಲಿಸಿದನು. ಮಲ್ಲನ ಗೌಡನ ಪರ್ಟಿಯ ಗೆಲುವಿಗಾಗಿ ಕೆಂಚನ ಗೌಡ ಶ್ರಮಿಸಿದನು. ಎಂ.ಎಲ್.ಎ. ಮಗನನ್ನು ಗೆಲಿಸಿಕೊಳ್ಳಲಿಕ್ಕಾಗಿ ತಮಗೆ ಎದುರು ಬಿದ್ದ ಎರಡು ಮೂರು ಕಡೆಯ ಅಭ್ರ್ಥಿಗಳನ್ನು ಕಾವಲು ಕಾದು ಕಿಡ್ನಾಪ್ ಮಾಡಿಸಿದನು.
“ ಯಂಗಾದರೂ ಎಷ್ಟು ರ್ಚಾದರೂ ನನ್ನ ಮಗ ಗೆಲ್ಲಬೇಕು..” ಎಂದು ಎಂ.ಎಲ್.ಎ. ಶಪಥ ಮಾಡಿದ್ದ.
ಎರಡು ದಿನಗಳು ಹಳ್ಳಿ ಹಳ್ಳಿಗಳೊಳಗೆ ಬಿಳಿಯ ಸುಮೋ ಕಾರ್ ಗಳಲ್ಲಿ ಮಲ್ಲನ ಗೌಡ ತಿರುಗಾಡಿದ.
ಜನವ್ಯಾರೂ ಆತನನ್ನ ಗೌರವದಿಂದ ನೋಡಲಿಲ್ಲ.
ಅಭಿಮಾನಪಟ್ಟು ಆದರಿಸಲಿಲ್ಲ.
ಪ್ರಚಾರಗಳ ರ್ವವೂ ಮುಗಿಯಿತು.
ಓಟು ಹಾಕುವ ದಿನ ಬಂದೇ ಬಿಟ್ಟಿತು.
ಕಳ್ಳ ಬಟ್ಟಿ ಸರಾಯಿ ಹಳ್ಳಿಗಳನ್ನು ಹೊಕ್ಕು ಹಿಂಡಿ ಹಾಕಿತು. ನೋಟಿನ ಕಂತೆಗಳು ರೆಕ್ಕೆ ಬಿಚ್ಚಿಕೊಂಡು ಬಾಗಿಲುಗಳಿಗೆ ಮಾವಿನ ತೋರಣಗಳಾದವು. ಓಟಿಂಗ್ ಎಲ್ಲೂ ನಡೆಯಲಿಲ್ಲ. ಪೋಲಿಂಗ್ ಆಫೀಸರ್ ಗಳು ಮಾರಾಟವಾದರು. ಎಲ್ಲಾ ಓಟುಗಳನ್ನು ಕೆಂಚನ ಗೌಡನ ಕಡೆಯವರೇ ಗುದ್ದಿ ಬ್ಯಾಲೆಟ್ ಬಾಕ್ಸಗೆ ತುಂಬಿದರು. ಈ ಸಲದ ಚುನಾವಣೆಯ ನೇತೃತ್ವವನ್ನು ಕೆಂಚನ ಗೌಡನ ಮಗ ಫಕ್ಕೀರ ಗೌಡನೇ ವಹಿಸಿಕೊಂಡಿದ್ದ.
ಫಕೀರಗೌಡನ ಕಡೆಯವರು ಪೋಲಿಂಗ್ ದಿನ, ಕೋಡಿ ಹಳ್ಳಿಯ ವಿರೋಧ ಪಕ್ಷದ ಅಭ್ರ್ಥಿಯ ಏಜೆಂಟು ನಾಗಭೂಷಣನನ್ನು ತುಂಡು ತುಂಡಾಗಿ ಕತ್ತರಿಸಿದರು.
ಚುನಾವಣಾ ಅಧಿಕಾರಿಗಳು ಅಲ್ಲಿ ರೀಪೋಲಿಂಗ್ ʼಗೆ ಆದೇಶ ನೀಡಿದರು.
ಆ ನಂತರ ಅದನ್ನು ಕೂಡಾ ಮತ್ತೆ ಫಕ್ಕೀರಗೌಡ ರಾಜಕೀಯ ಮಾಡಿ ತಮ್ಮದನ್ನಾಗಿಸಿಕೊಂಡ.
ಎಂ.ಎಲ್.ಎ. ಮಗ ವೀರನ ಗೌಡ ಚುನಾವಣೆಯಲ್ಲಿ ಗೆದ್ದನು.
ಅವರಿಗಾದ ಸಂತೋಷ ಅಷ್ಟಿಷ್ಟಲ್ಲ.
“ಯುವಕರು ರಾಜಕೀಯದೊಳಗೆ ಕಾಲಿಡುವಂತಹ ಅಗತ್ಯವೇನೋ ಇದೆ. ಅದಕ್ಕೆ ಆತನಿಗೆ ಈ ಚುನಾವಣೆಯೇ ಶ್ರೀಕಾರವಾಯಿತು.” ಎಂದು ಶಾಸಕರು ಮೀಸೆ ತಿರುವಿಕೊಳ್ಳುತ್ತಾ ಹೇಳಿದರು.
ವೀರನ ಗೌಡ ತನ್ನ ಬೆಂಬಲಿಗರಾದ ಕೆಂಚನ ಗೌಡ, ಪಕ್ಕೀರ ಗೌಡರ ಜೊತೆಗೆ ಬಣ್ಣದಗಳಲ್ಲಿ ಮುಳುಗಿ ಕುಂಕುಮದ ತಿಲಕ ಇಟ್ಟುಕೊಂಡು ಸಂಭ್ರಮದಿಂದ ಪೇಪರ್ ಗಳಲ್ಲಿ ಕಾಣಿಸಿಕೊಂಡ.
ಫಕ್ಕೀರ ಗೌಡನೇ ಆ ಸಮಾರಂಭಕ್ಕೆ ರ್ಚು ಮಾಡಿದನೆಂದು ಸುದ್ಧಿಯಾಯಿತು..
ಈ ಚುನಾವಣೆಯೊಂದಿಗೆ ಕೆಂಚನ ಗೌಡನಿಗೆ ಒಂದು ನಂಬಿಕೆ ಕುದುರಿತು.
ಫಕ್ಕೀರ ಗೌಡ ತನ್ನಂತೆಯೇ ಬೆಳೆಯ ಬಲ್ಲ.
ಮಟ್ಕಾ ವ್ಯಾಪಾರಗಳು, ಭಟ್ಟಿ ಸರಾಯಿ, ರಸ್ತೆ ಕಾಮಗಾರಿಗಳ ಕಾಂಟ್ರಾಕ್ಟಗಳನ್ನೆಲ್ಲಾ ಆತನಿಗೇ ವಹಿಸಿದ.
ತಾನು ಎಲ್ಲಿಗೂ ಹೋಗಲಿಲ್ಲ.
ದಿನಗಳು ಹೀಗೇ ಕಳೆಯುತ್ತಲೇ ಇದ್ದವು…
ಇದ್ದಕ್ಕಿದ್ದ ಹಾಗೇ ಒಂದು ದಿನ ಎಂ.ಎಲ್.ಎ. ಮಲ್ಲನಗೌಡರು ಬಂದು ಹೊಸ ಸಂದೇಶವೊಂದನ್ನು ಬಿತ್ತರಿಸಿದರು.
“ ಅಮೇರಿಕಾಕ್ಕೆ ಹೋಗಿ ಎರಡು ರ್ಷ ಇದ್ದು ಬರೋಣಪ್ಪಾ ಬಾ” ಎಂದು ತಿಳಿಸಿದರು.
ಕೆಂಚನ ಗೌಡ ತುಟಿಗಳಲ್ಲಿ ನಗು ಅರಳಿಸುತ್ತಾ “ ಏನಣ್ಣಾ … ಆ ಕಡಿಕೆ ಗಾಳಿ ಬೀಸುಬುಟೈತೆ” ಎಂದ.
“ ಬುಡಾ ಇಷ್ಟು ರ್ಷಗಳೆಲ್ಲಾ ಮಾಡಿದವನ್ನೇ ಮಾಡಿ ಮಾಡಿ ಸಾಕಾತು. ಇನ್ನಾನ ಓಟು ಆ ದೂರದ ದೇಶಕ್ಕ ಹೋಗಿ ನಿರುಮ್ಮಳವಾಗಿ ಲೋಕ ಸುತ್ಯಗಂಡು ಬರೋನಾ ನಡಿ, ಇಲ್ಲಿ ಎಲ್ಲಾ ಸರಿ ಹೋಗೇತಿ ನಡಿ…” ಅಂತಾ ತೂಗ್ಯಾಡೋ ಕರ್ಚಿಯೊಳಗ ಕುಂತು ತೂಗುತ್ತಾ ಹೇಳಿದನು.
“ ಬಿಡು ನಡಿಯಣ್ಣಾ… ನನಗೂ ಅಂಗಾ ಅನಸಾಕತ್ತೇತಿ…. ನಮ್ಮ ಮ್ಯಾಲ ಯಾ ಜವಾಬ್ದಾರಿಗಳು ಗುಡಾ ಇಲ್ಲ. ಯಾಪಾರ..ಅಧಿಕಾರಗಳನ್ನೆಲ್ಲಾ ಮಕ್ಕಳೇ ನೋಡಿಕೊನಾಕತ್ಯಾವು. ಹ್ವಾದ ರ್ಷ ಅದೇನೋ ಪಾಸ್ ಪರ್ಟ ವಿಸಾ ಅದೆಲ್ಲಾ ಮಾಡಿಸಿದ್ದೆಲ್ಲಾ ಇದಕಾ ಏನು?, ಅಬಬಬೋ ಭಾರಿ ಬಿಡು ನೀನು. ಆತು ನಡಿಯಣ್ಣಾ ಹೋಗಾನ..ನಮಗೂ ಆ ಕಡಿ ಗಾಳಿ ಕುಡದಂಗಕ್ಕಾತಿ” ನಿರುಮ್ಮಳವಾಗಿ ಒಪ್ಪಿದನು ಕೆಂಚನ ಗೌಡ.
ಅಷ್ಟೇ….
ಬರೋ ವಾರಕ್ಕೇನೇ.. ಎಲ್ಲಾ ಹೊಂದಿಸಿಕೊಂಡರು.
ವಿಮಾನ ಗಾಳಿಯೊಳಗೆ ಹಾರಿತು.
***
ಕೆಂಚನ ಗೌಡ, ಮಲ್ಲನ ಗೌಡರು ಅತ್ತ ಅಮೇರಿಕಾಕ್ಕೆ ಹೋಗುತ್ತಲೇ…
ಇತ್ತ ಹೊಸ ಎಂ. ಎಲ್.ಎ. ವೀರನ ಗೌಡನ ಬೆಂಬಲಿಗರೊಂದಿಗೆ ಫಕ್ಕೀರ ಗೌಡ ಎದ್ದು ಕುಂತನು.
ಊರೊಳಗೆ ತನಗೆ ಎಡಗೈ ಬಲಗೈ ಆಗಿದ್ದ ಬಾರಕೀರ ಸಿದ್ಧಪ್ಪ, ತಳವಾರ ರೇವಣ ಸಿದ್ಧಪ್ಪನನ್ನ ಬೆನ್ನ ಹಿಂದೆ ಇಟ್ಟಕೊಂಡು ಹೊಲಗಳಿಗೆ ಕೆಲಸಕ್ಕೆಂದು ಬರುವ ಚಂದುಳ್ಳ ಹೆಣ್ಣುಮಕ್ಕಳನ್ನು ಬಿಡದೆ ಅನುಭವಿಸುವುದನ್ನು ಶುರುಮಾಡಿದನು.
ತನ್ನ ಹತ್ತಿರಕ್ಕೆ ನ್ಯಾಯ ಕೇಳಿಕೊಂಡು ಬರುವ ಬಡಜನರನ್ನು ಪೀಡಿಸಿ ಹಣ ವಸೂಲಿ ಮಾಡುವುದು…
ವಾರ ಬಡ್ಡಿಗೆ ರೊಕ್ಕ ಕೊಟ್ಟು ತನಗೆ ಬೇಕಾದಂಗೆ ಬಾಂಡು ಬರೆಸಿಕೊಂಡು… ಮನಿ ಮಠ ಎತ್ತಾಕಿಕೊಳ್ಳೋದು.
ಅಡ್ಡ ಬಂದವರನ್ನ…
ತಿರುಗಿ ಬಿದ್ದವರನ್ನ…
ಹಿಡಿ ಹಿಡಿದು ಊರ ಹೊರಗಿನ ತೋಟದ ಮನಿಗೆ ತಂದು ನಾದಿ ನಾದಿ.. ನರಗಳನ್ನ ಕತ್ತಿರಿಸೋದ ಮಾಡತೊಡಗಿದ.
ಫಕ್ಕೀರ ಗೌಡನ ಏಟಿಗೆ ಎದುರೇ ಇಲ್ಲದಂಗಾತು.
ಭೂಮಿ ಹುಚ್ಚು ಹಿಡಿಯಿತು.
ತನಗೆ ಹಿಡಿಸಿದ ಕಾಲುವೆ ಮ್ಯಾಗಳ ಭೂಮಿಗಳ ಮೇಲೆಲ್ಲಾ ಕಣ್ಣಾಕಿದ.
ರಾತ್ರೋ ರಾತ್ರಿ ನಂಬರ್ ಕಲ್ಲುಗಳನ್ನ ಬದಲಿಸಲು ಹೇಳಿದ…
ಹಳ್ಳಗಳನ್ನು ಮಾಯ ಮಾಡಿಸಿದ…
ಭೂಮಿಗಳನ್ನೆಲ್ಲಾ ಖಬ್ಜಾ ಮಾಡಿಕೊಳ್ಳ ತೊಡಗಿದ.
ಫಕ್ಕೀರ ಗೌಡನ ಕಡೆಯೋರಿಗೆಲ್ಲಾ ಇದೇ ಕಸಬಾಯಿತು.
ಅವರೆಲ್ಲಾ ಈ ಕಸಬಿನೊಳಗೇ ಮುಳುಗಿ ಹೋದರು.
ವೀರ ಭದ್ರಿಯ ಮನಸೆಲ್ಲಾ ಉರಿಯುತ್ತಿದೆ.
ರಕ್ತ ಕುದಿಯುತ್ತಿದೆ.
ಇದಕ್ಕೆ ನಾನು ಅಡ್ಡಲಾಗಬೇಕು.
ನನ್ನ ಭೂಮಿನ ನಾನು ಉಳಿಸಿಗ್ಯಾಬೇಕು.
***
ಅರಳೀ ಮರದ ರೆಂಬೆಗಳು ಗಾಳಿಗೆ ಸಣ್ಣಗೆ ತೂಗುತ್ತಿವೆ…
ಹೊತ್ತುಟ್ಟಿ ಎಳೆ ಬಿಸಿಲು ಬಿದ್ದು ಎಲೆಗಳೆಲ್ಲಾ ಥಳ ಥಳನೇ ಹೊಳೆಯುತ್ತಿವೆ…. ಪಕ್ಷಿಗಳ ಕೊರಳಿಂದ ನೂರಾ ಒಂದು ಸದ್ದು….
ಮರದ ರೆಂಬೆಗಳು ತೂಗುತ್ತಾ ತೂಗುತ್ತಾ ನೆಲದ ಬಳಿಗೆ ಹಾಯುತ್ತಿವೆ. ಅವು ಭೂಮಿ ತಾಯಿಯನ್ನ ಪ್ರೀತಿಯಿಂದ ಮುತ್ತಿಡಲು ಬಾಗಿದಂಗೆಯೇ ಕಾಣುತ್ತವೆ…
ಒಂದು ಕೈಯೊಳಗೆ ಖಡ್ಗವನ್ನು ಮತ್ತೊಂದು ಕೈಯೊಳಗೆ ಕುದುರೆಯ ಹಗ್ಗವನ್ನು ಹಿಡಕೊಂಡು ಹೋರಾಟ ಮಾಡುತ್ತಿರುವ ವೀರಗಲ್ಲೊಂದು ಆ ಮರದ ಪೊಟರೆಯೊಳಗೆ ಅತುಕೊಂಡು ನಿಂತಿದೆ.
ಅದೇ ಕಟ್ಟೆಯ ಮೇಲೆ ಊರ ಹಿರೀಕರು ಕುಳಿತಿದ್ದಾರೆ. ಉಳಿದವರೆಲ್ಲಾ ನೆಲದ ಮ್ಯಾಲೆಯೇ ಕುಳಿತಿದ್ದಾರೆ.
“ ಹಂಗಾದ್ರೆ… ಏನಂತಿಯಾ…ವೀರಭದ್ರೀ…? ಫಕ್ಕೀರ ಗೌಡ್ರು ನಿನ್ನ ಭೂಮಿನಾ ಒತ್ತಿಕ್ಯಂಡಾನ ಅಂತೀಯಾ? ಹಂಗದ್ರ ನೀನು ಆತನ್ನಾ… ಭೂಮಿ ಕಳ್ಳಾ ಅಂತೀಯಾ!?” ಅಂತಾ ಕೇಳಿದನು ರೇವಣಪ್ಪ.
ಅತ್ತ ಕಿವಿಗೊಡದೇ ಪಂಚಾಯ್ತಿ ಕಟ್ಟೆ ಕಡೆಗೆ ತಿರುಗಿದ ವೀರಭದ್ರಿ “ ಏನೇಳ್ತೀರಿ ಗೌಡ್ರೇ…ಎಕರಿಯಿಂದ ಈಗ ಎಲ್ಡೆಕ್ರೀ ಹಿಡದಾರ, ರಾತ್ರಿಗೆ ರಾತ್ರಿಯೇ ಮ್ಯಾರಿ ಕಲ್ಲು ಕಿತ್ತು ಈ ಕಡಿಗೆ ಹುಗುದಾರ. ಇದರ ಮ್ಯಾಲ ಪಂಚಾಯ್ತಿ ಇಟ್ಟರ ಅವರೇ ಹೇಳಿದ್ದ ಕೇಳಬೇಕು ಅಂತ ಅವತ್ತು ಕಳಿಸಿಬಿಟ್ಟಿರಿ. ಈಗ ಅವರೇ….ಸರಕಂತಾ ಸರಕಂತಾ.. ಹೊಲವೀಟೂ ಹಿಡದಾರ… ಈಗ ನಮಗ ಉಳಿದಿರೋದು ಹಳ್ಳದ ತುಂಡು ಹೊಲ ಒಂದಾ… ಅದು ಕೂಡಾ ಮೊನ್ನೆ ರಾತ್ರಿ ಫಕ್ಕೀರ ಗೌಡ್ರ ಭೂಮಿ ಒಳಗಾ ಬರತೈತಿ ಅನ್ನಂಗ ಮ್ಯಾರಿ ಕಲ್ಲು ಕಿತ್ತಕ್ಯಾರಪ್ಪೋ… ಇನ್ನ ನಾನೇನ್ ಮಾಡದು?” ಅಂತಾ ವೀರಭದ್ರ ದುಃಖಿಸಿದನು.
ಕಟ್ಟಿ ಮ್ಯಾಗ ಕುಂತ ದೊಡ್ಡ ಜನರೆಲ್ಲಾ ಆನಂದ ಪಡುತಿದ್ದರೆ ಕೆಳಗೆ ನೆಲದ ಮೇಲೆ ಕುಂತ ಹಳ್ಳಿ ಜನರು ಕಕ್ಕ ಬಿಕ್ಕಿಯಾಗಿ ನೋಡ್ತಾ ಇದ್ರು.
ಮರದ ಬುಡದಲ್ಲೇ ನಿಂತ ಫಕ್ಕೀರ ಗೌಡ ಮೀಸಿ ತಿರುವುತಿದ್ದಾನೆ.
ಮರದ ಕೊಂಬೆಗಳ ತೂಗಾಟವಿಲ್ಲ. ಶಬ್ದಗಳಿಲ್ಲ…. ಪಕ್ಷಿಗಳ ಕಲರವವಿಲ್ಲ…
ಕಣ್ಣಗಲಕ್ಕೂ….ವೀರಭದ್ರ ಅಳುತ್ತಿರುವ ನೋಟ.
“ ಅತ್ತು ಬಿಡಲೇ… ಗಂಡಸು ಅತ್ರೆ ಮುಂಡೆ ನೋಡಿದಂಗ ಅಕ್ಕಾತಿ…. ತಟಗನ್ನಾ ರೋಷವಿಲ್ಲದ ಕಳ್ಳ ಸೂಳೇ ಮಗನೇ…ನಮ್ಮ ಫಕ್ಕೀರ ಗೌಡ್ರನ್ನ ಪಂಚಾಯ್ತಿಗೆ ಕರಿತೀಯಾ ನೀನು!? ಅವ್ರ ಮೇಲೆನೇ… ಭೂಮಿ ಕಳುವು ಹೊರಸ್ತೀಯಾ?… ಅಂದ್ರ ಕಳ್ಳ ಅಂತೀಯೇನ್ಲೇ…
ಅಂತ ಪೊಗರು ಬಂದತೇನ್ಲೇ ನಿನಗೆ…” ಎಂದು ಎಗರಿ ಜಾಡಿಸಿ ಒದ್ದ ಬಾರಿಕೇರ ಸಿದ್ದಪ್ಪ.
ವೀರಭದ್ರಿ ಸಿಡಿದು ಅಷ್ಟು ದೂರ ಉರುಳಿದ.
ಏಳಲು ಹೋದವನಿಗೆ ಮತ್ತೊಂದು ಒದೆ ಬಿತ್ತು.
ಇದೇ ಅವಕಾಶ ನೋಡಿಕೊಂಡು ಫಕ್ಕೀರ ಗೌಡ ಕೂಡಾ ಒದೆಯಲು ಶುರುವಿಟ್ಟನು.
“ ಬೀಳ್ಲಿ ಸೊಕ್ಕು ಕರಗತಾವು. ಏಟು ತಿಮರು ಇರಬೇಕು ಈ ತಿರಬೋಕಿಗೆ ನಮ್ಮ ಗೌಡನ್ನ ಪಂಚಾಯ್ತಿಗೆ ಕರಸಾಕ. ಇನ್ನಾ ನಾಕು ಹಾಕ್ರಿ. ಬುದ್ಧಿ ರ್ತಾವು… ಲಮ್ಡಿ ನನ ಮಗನಿಗೆ” ….ಕುಂತು ಕಾರಿಕೊಂಡ ತಳವಾರ ರೇವಣಪ್ಪ.
ವೀರ ಭದ್ರನಿಗೆ ಎರಡೂ ಕಡೆಯಿಂದ ಏಟು ಬೀಳತೊಡಗಿದವು.
ಒಂದು ಕಡಿಗೆ ಸಿದ್ದಪ್ಪ, ಇನ್ನೊಂದು ಕಡಿಗೆ ಫಕ್ಕೀರ ಗೌಡ…. ಕೆಳಗೆ ಬೀಳಿಸಿಕೊಂಡು ರುಬ್ಬತೊಡಗಿದರು.
ಈ ರ್ತಿ ಫಕ್ಕೀರ ಗೌಡನು ಹಿಡಿದು ಎಳೆದು ಒದ್ದ ಏಟಿಗೆ ವೀರ ಭದ್ರ ಹಾರಿ ಮರದ ಪೊಟರಿ ಹತ್ರ ಬಿದ್ದ.
ಆತನ ಇನ್ನೊಂದು ಹೊಡ್ತ ಬೀಳೋ ಮುನ್ನವೇ ಬಗಲಾಗ ನೇತಾಡುತಿದ್ದ ಚೀಲದಿಂದ ಗಂಡು ಗೊಡಲಿ ತೆಗೆದು ಮಿಂಚಿನಂತೆ ಮೇಲಕ್ಕೆದ್ದ…
ಸುತ್ತು ಸೇರಿದ ಜನರು ಓಟ ಕಿತ್ತರು…
ವೀರಭದ್ರಿ ಬೀಸಿದ ಒಂದೇ ಒಂದು ಏಟಿಗೆ ಫಕ್ಕೀರ ಗೌಡನ ತಲೆ ಹಾರಿ ಕುಳ್ಳು ತುಂಬಿದ ಗೋಣೀ ಚೀಲದೊಳಕ್ಕೆ ಬಿತ್ತು!
ಇದನ್ನ ನೋಡಿ ಪ್ರಾಣವನ್ನ ಅಂಗೈಲೇ… ಹಿಡಕೊಂಡು ಓಡಲು ನೋಡಿದ ಬಾರಕೇರ ಸಿದ್ಧಪ್ಪ.
ಬೆನ್ನಟ್ಟಿ ಹಿಡಿಯಿತು ವೀರಭದ್ರನ ರುದ್ರಾವತಾರ!
ಹಾರಿ.. ಸಿದ್ಧಪ್ಪನು ಒದ್ದ ಬಲಗಾಲನ್ನು ಕಡಿದು ಬಿಟ್ಟ.
ಹಾ….ಎಂದು ಕುಸಿದ ಸಿದ್ಧಪ್ಪನ ಬಾಯನ್ನ ಹಂಗೇ ಗಂಡು ಗೊಡಲಿಯೊಳಗೆ ಕಡಿದು ಎರಡು ಹೋಳು ಮಾಡಿಬಿಟ್ಟ!
ತಲೆ ತುಂಬಾ ಮಾತಾಡಿದ ತಳವಾರ ರೇವಣಪ್ಪ ಓಡಲೆಂದು ನೋಡಿದನೇ ವಿನಃ. ಆತನ ಕೈ ಕಾಲೇ ಆಡುತಿಲ್ಲ. ನಿಂತಲ್ಲೇ ನಡುಗುತ್ತಾ… ರೇವಣಿ ಎದೆ ಒಡೆದು ಹಂಗೇ ಕುಸಿದು ಪ್ರಾಣ ಬಿಟ್ಟ!
ಅದರೂ…
ಬಿಡದ ವೀರಭದ್ರ ಎಳೆದು ಅವನ ರುಂಡವನ್ನ ಎಗರಿಸಿದ. ಅದು ಹಾರಿ ವೀರಗಲ್ಲಿನ ಪೊಟರೆಯ ಎದುರು ಕಾವಲು ಕಾಯುವಂತೆ ಕುಂತಿತು!
ಅವತ್ತೇ ಕೊನೆ….
ಊರೊಳಗೆ ಹದ್ದುಗಳು ಹಾರಿದ್ದು….
ಊರೊಳಗೆ ಪಾಪದ ಕೆಲಸ ನಿಂತವು.
ಊರ ಪಂಚಾಯ್ತಿಗಳು ನಿಂತವು.
ಊರೀಗ ಊರಿನಂತೆಯೇ ಇದೆ.
ಕಾಲ ಕಾಲಕ್ಕೆ ಮಳೆಯಾಗುತ್ತಿದೆ.
ಕಾಲುವೆಗಳು ತುಂಬಿ ಹರಿಯುತ್ತಿವೆ.
ಎಲ್ಲರ ಹೊಲಗಳೂ ಹಚ್ಚ ಹಸಿರಾಗಿವೆ.
ಎಲ್ಲರೂ ಸಮನಾಗಿ ಬಾಳುತಿದ್ದಾರೆ.
ಮರದ ಕೊಂಬೆಗಳು ಎಂದಿನ ಹಾಗೇ ನೆಲ ತಾಯಿಯ ಕೆನ್ನೆಗೆ ಬಾಗಿ ಮುದ್ದಿಡಲು ನೋಡುತ್ತಿವೆ.
ಸಣ್ಣಗೆ ಹನಿವ ಹನಿಗಳ ನಡುವೆ ಮೂಡಿದ ಕಾಮನ ಬಿಲ್ಲಿನ ಚಲುವಾದ ಬಣ್ಣಗಳು ಮುಗಿಲ ಸೆರಗನ್ನು ತುಂಬಿಕೊಂಡಿವೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂಕಣ
ಸಿದ್ಧಾಂತ ಮತ್ತು ಪತ್ರಿಕೋದ್ಯಮ
- ಹರ್ಷಕುಮಾರ್ ಕುಗ್ವೆ, ಪತ್ರಕರ್ತ ಮತ್ತು ಆಕ್ಟಿವಿಸ್ಟ್
ಇದು ಸುಮಾರು 2002-03ರ ಸಂದರ್ಭ. ಶಿವಮೊಗ್ಗದಲ್ಲಿ ನಾವು ಹೋರಾಟಗಳಲ್ಲಿ ಸಕ್ರಿಯವಾಗಿದ್ದ ಕಾಲ. ಒಬ್ಬ ಪತ್ರಕರ್ತ ಮಿತ್ರರೊಂದಿಗೆ ಹೀಗೇ ಚರ್ಚೆ ನಡೆಯುತ್ತಿತ್ತು. ಅವರು ಪತ್ರಿಕೋದ್ಯಮದ ನ್ಯೂಟ್ರಾಲಿಟಿ ಕುರಿತು ಮಾತಾಡುತ್ತಾ, ʼನಾವು ಪತ್ರಕರ್ತರು ನಿಮ್ಮ ರೀತಿ ಯೋಚನೆ ಮಾಡೋದಕ್ಕೆ ಆಗಲ್ಲ. ನಾವು ಯಾವತ್ತೂ ಯಾವುದೇ ಸಿದ್ಧಾಂತಕ್ಕೆ ವಾಲಿಕೊಳ್ಳದೇ ತಟಸ್ಥತೆ ಕಾಪಾಡಬೇಕಾಗುತ್ತದೆʼ ಎಂದು ಹೇಳಿದರು. ʼಅವರ ಜೊತೆ ನಾನು ವಾದಿಸಿದೆ.
ಸರ್, ಸುಳ್ಳನ್ನೇ ಬಂಡವಾಳ ಮಾಡಿಕೊಂಡ ಸಿದ್ಧಾಂತಗಳು ರಾರಾಜಿಸುವಾಗ ಸತ್ಯವನ್ನು ಹುಡುಕಲು ಸಹ ಸಿದ್ಧಾಂತದ ಸಹಾಯ ಬೇಕಾಗುತ್ತದೆ. ಯಾವ ವ್ಯಕ್ತಿಯೂ ಸಿದ್ಧಾಂತದ ಹೊರಗಾಗಿ ಇರಲು ಸಾಧ್ಯವಿಲ್ಲ. ನನಗೆ ಸಿದ್ದಾಂತವೇ ಇಲ್ಲ ಎನ್ನುವ ವ್ಯಕ್ತಿಯನ್ನು ಕೂಡಾ ಅವನಿಗೆ ತಿಳಿದೋ ತಿಳಿಯದೆಯೋ ಒಂದಲ್ಲಾ ಒಂದು ಸಿದ್ದಾಂತ ಇಲ್ಲವೇ ಹಲವು ಸಿದ್ಧಾಂತಗಳು ನಿರ್ದೇಶಿಸುತ್ತಿರುತ್ತವಲ್ಲ.. ʼ ಎಂದ ನನ್ನ ಮಾತಿಗೆ ನಮಗೆ ಪತ್ರಕರ್ತರಿಗೆ ಹಾಗೆ ಯೋಚಿಸಲು ಬರುವುದಿಲ್ಲ. ನೀವು ಎಡ ಪಂಥ ಅಂತೀರಿ, ಅವರು ಬಲಪಂಥ ಅಂತಾರೆ, ನಾವು ಇವೆರಡರ ನಡುವೆ ಸತ್ಯ ಹುಡುಕ್ತೀವಿʼ ಎಂದೆಲ್ಲಾ ಹೇಳಿದರು. ಕೊನೆಗೆ ಯಾರೂ ರಾಜಿಯಾಗಲಿಲ್ಲ.
ಇದಾಗಿ ಹದಿನೈದು ವರ್ಷಗಳ ನಂತರ, 2019ರಲ್ಲಿ ಅದೇ ಪತ್ರಕರ್ತ ಸ್ನೇಹಿತರು ನಮ್ಮ ಜೊತೆ ಕೆಲಸ ಮಾಡುತ್ತಿದ್ದರು. ಅವರು ನರೇಂದ್ರ ಮೋದಿ ಸರ್ಕಾರದ ಆರ್ಥಿಕ ವಂಚನೆಗಳನ್ನು ಅದ್ಭುತ ರೀತಿಯಲ್ಲಿ ಅಂಕಿಅಂಶಗಳ ಸಮೇತ ಬಯಲು ಮಾಡುತ್ತಿದ್ದುದು ಕಂಡು ನನಗೆ ಅಚ್ಚರಿ ಮತ್ತು ಸಂತೋಷವಾಗಿತ್ತು. ಅಂದು ಅವರು ನಿಜಕ್ಕೂ ಸತ್ಯದ ಪರವಾಗಿದ್ದರು. ಆದರೆ ಅವರ ಬರೆಹಗಳನ್ನು ಯಾರಾದರೂ ಬಲಪಂಥೀಯರು ಓದಿದರೆ ಅವರಿಗೆ ಖಂಡಿತಾ ಇವರು ʼಎಡಪಂಥೀಯ ಸಿದ್ಧಾಂತಿʼ, ʼನಗರ ನಕ್ಸಲ್ʼ ಎಂದೆಲ್ಲಾ ಸುಲಭವಾಗಿ ಹಣೆಪಟ್ಟಿ ಕಟ್ಟಬಹುದಿತ್ತು. ಆದರೆ ಆ ಪತ್ರಕರ್ತ ಸ್ನೇಹಿತರು ನಿಜಕ್ಕೂ ಈ ದೇಶದ ಭವಿಷ್ಯದ ಬಗ್ಗೆ ತುಂಬಾ ಆತಂಕಗೊಂಡು, ಕಾಳಜಿಯಿಂದ ಕೆಲಸ ಮಾಡುತ್ತಿದ್ದರು. ಕೊನೆಗೆ ಅವರಿಗೂ ಸಹ ಅವರು ಹಿಂದೆ ಹೇಳಿದ್ದ ರೀತಿಯಲ್ಲಿ ತಟಸ್ಥವಾಗಿ ಪತ್ರಿಕೋದ್ಯಮ ನಡೆಸುವುದು ಸಾಧ್ಯವಿಲ್ಲ ಎಂಬ ಅರಿವಾಗಿರಬಹುದು ಎಂದುಕೊಂಡೆ. ಹೌದು ಪತ್ರಕತ್ರರಾದವರು ಮಾಡಲು ಇರುವ ಬಹಳ ಕೆಲಸಗಳ ನಡುವೆಯೂ ಅವರು ಅದ್ಯತೆಯನ್ನು ಗುರುತಿಸಿಕೊಂಡಿದ್ದರು.
ಪತ್ರಿಕೋದ್ಯಮದ ಬಗ್ಗೆ ಮಾತಾಡುವಾಗ ನಾವು ಒಂದು ಪ್ರಾಥಮಿಕ ಸಂಗತಿಯನ್ನು ತಿಳಿದುಕೊಳ್ಳಬೇಕು. ನಮ್ಮ ದೇಶದಲ್ಲಿ ಪತ್ರಿಕೋದ್ಯಮ ಆರಂಭವಾದ ಸಂದರ್ಭದಲ್ಲಿ ಯಾವೆಲ್ಲಾ ಭಾರತೀಯರು ಪತ್ರಿಕೆಗಳನ್ನು ಹೊರತರುತ್ತಿದ್ದರೋ ಅವರೆಲ್ಲರೂ ಕಟು ಸಿದ್ಧಾಂತಿಗಳಾಗಿದ್ದರು. ಸಾಮ್ರಾಜ್ಯವಾದದ ವಿರುದ್ಧದ ಸಿದ್ದಾಂತ ಅವರೆಲ್ಲರನ್ನು ಮುನ್ನಡೆಸುತ್ತಿತ್ತು. ಬಹುತೇಕ ಅವರೆಲ್ಲರೂ ಸ್ವಾತಂತ್ರ್ಯ ಹೋರಾಟಗಾರರು ಇಲ್ಲವೇ ಸ್ವಾಭಿಮಾನ ಚಳವಳಿಯ ಹೋರಾಟಗಾರರು, ನಾಯಕರು ಆಗಿದ್ದರು. ಅಂತಹ ಸ್ಪಷ್ಟ ಸೈದ್ಧಾಂತಿಕ ಬುನಾದಿಯಿಟ್ಟುಕೊಂಡು ಅವರೆಲ್ಲಾ ಬ್ರಿಟಿಷರ ವಿರುದ್ಧ ಪತ್ರಿಕೋದ್ಯಮ ನಡೆಸದಿದ್ದರೆ ಈ ದೇಶದ ಪತ್ರಿಕೋದ್ಯಮದ ಇತಿಹಾಸ ಅತ್ಯಂತ ಟೊಳ್ಳಾದ, ಬೂಸಾ ಇತಿಹಾಸವಾಗುತ್ತಿತ್ತು.
ಕೆಲ ಬ್ರಿಟಿಷ್ ಪತ್ರಕರ್ತರು ಹೇಗೆ ಬ್ರಿಟಿಷ್ ಅಧಿಕಾರಿಗಳ ಬೆಡ್ ರೂಮ್ ಸ್ಟೋರಿಗಳನ್ನು ಚಪ್ಪರಿಸಿಕೊಂಡು ಅದನ್ನೇ ಪತ್ರಿಕೋದ್ಯಮ ಎಂದು ಬೀಗುತ್ತಿದ್ದರೋ ಅಷ್ಟರಲ್ಲೇ ಭಾರತೀಯ ಪತ್ರಿಕೋದ್ಯಮ ಉಳಿದುಬಿಡುತ್ತಿತ್ತು. ಆದರೆ ಹೀಗೆ ಆಗಲು ಬಿಡದೇ ಉದಾತ್ತ ಧ್ಯೇಯಗಳ ಮೂಲಕ ದೇಶದ ಪತ್ರಿಕೋದ್ಯಮ ಬೆಳೆಸಿದ 19ನೆಯ ಶತಮಾನದ ಅಂತಹ ಧೀಮಂತ ಪತ್ರಕರ್ತರು ಹಲವರು. ಸುರೇಂದ್ರ ನಾಥ್ ಬ್ಯಾನರ್ಜಿ (ಬೆಂಗಾಲಿ ಪತ್ರಿಕೆ- 1879) ಪತ್ರಕರ್ತರಾಗಿ ಕೆಲಸ ಮಾಡುತ್ತಲೇ ಸತ್ಯ ಹೇಳಿದ ಕಾರಣಕ್ಕೆ ಬ್ರಿಟಿಷ್ ಸರ್ಕಾರ ಅವರನ್ನು ವರ್ನಾಕ್ಯುಲರ್ ಪ್ರೆಸ್ ಕಾಯ್ದೆಯ ಅಡಿ ಜೈಲಿಗಟ್ಟಿತ್ತು. ಸಂವಾದ ಕೌಮುದಿ ಎಂಬ ಪತ್ರಿಕೆ ನಡೆಸುತ್ತಿದ್ದ ರಾಜಾರಾಮ ಮೋಹನ್ ರಾಯ್ ಒಬ್ಬ ಸ್ಪಷ್ಟ ವಿಚಾರವಾದಿಯಾಗಿದ್ದರು.
ಅವರು ಈ ದೇಶದ ಅನಿಷ್ಟಗಳ ಕುರಿತೇ ತಮ್ಮ ಪತ್ರಿಕೆಯಲ್ಲಿ ಬರೆಯುತ್ತಾ ಹೋದರು. ಇದೇ ಕೆಲಸವನ್ನು ಮಹಾರಾಷ್ಟ್ರದಲ್ಲಿ ಮರಾಠಿ ಪತ್ರಿಕೆ ಆರಂಭಿಸಿದ ಜಂಬೇಕರ್ ಮಾಡಿದರು, ಅವರು ತಮ್ಮ ದರ್ಪಣ್ ಪತ್ರಿಕೆಯ ಮೂಲಕ ಸಾಮಾಜಿಕ ಅನಿಷ್ಟಗಳು ಕುರಿತು ಜಾಗೃತಿ ಮೂಡಿಸಿದರು- ಇವರನ್ನು ಮರಾಠಿ ಪತ್ರಿಕೋದ್ಯಮದ ಪಿತಾಮಹ ಎಂದು ಕರೆಯಲಾಗುತ್ತದೆ. ಬಂಗಾಳದಲ್ಲಿ ಹರೀಶ್ಚಂದ್ರ ರಾಯ್ ಎಂಬುವವರು ಬಂಗದರ್ಶನ್ ಎಂಬ ಪತ್ರಿಕೆ ತಂದರು; ಗುಜರಾತಿಯಲ್ಲಿ ʼಬಾಂಬೆ ಸಮಾಚಾರ್ʼ ಪತ್ರಿಕೆ ಆರಂಭಿಸಿದ ಫರ್ದುನ್ಜಿ ಮರ್ಜ್ ಬಾನ್ ಎಂಬುವವರು ಸಹ ಪತ್ರಿಕೆಯ ಮೂಲಕ ಸಮಾಜ ಸುಧಾರಣೆಗೆ ಒತ್ತು ಕೊಟ್ಟರು. ಇನ್ನು ಸ್ವಾತಂತ್ರ್ಯ ಹೋರಾಟಗಾರರಲ್ಲಿ ಬಾಲಗಂಗಾಧರ ತಿಲಕ್ ಕೇಸರಿ ಮತ್ತು ಮರಾಟಾ ಪತ್ರಿಕೆ ಹೊರಡಿಸುತ್ತಿದ್ದರು, ಗಾಂದೀಜಿಯವರು ಆಫ್ರಿಕಾದಲ್ಲಿದ್ದಾಗಲೇ ಇಂಡಿಯನ್ ಒಪಿನಿಯನ್ ಪತ್ರಿಕೆ ನಡೆಸುತ್ತಿದ್ದರೆ, ಭಾರತಕ್ಕೆ ಬಂದ ಮೇಲೆ ಯಂಗ್ ಇಂಡಿಯಾ ಮತ್ತು ಹರಿಜನ್ ಎಂಬ ಪತ್ರಿಕೆಗಳನ್ನು ಹೊರತಂದರು,
ಸುಭಾಷ್ ಚಂದ್ರ ಬೋಸ್ ಅವರು ಸ್ವರಾಜ್ ಪತ್ರಿಕೆಯ ಸಂಪಾದಕರಾಗಿದ್ದರು, ಲಾಲಾ ಲಜಪತ್ ರಾಯ್ ಅವರು ದ ಟ್ರಿಬ್ಯೂನ್ ಎಂಬ ಇಂಗ್ಲಿಷ್ ಪತ್ರಿಕೆ ತಂದರು, ಜೊತೆಗೆ ವಂದೆ ಮಾತರಂ ಎಂಬ ಉರ್ದು ಪತ್ರಿಕೆಯನ್ನೂ ಪ್ರಕಟಿಸುತ್ತಿದ್ದರು- ಇವುಗಳ ಮೂಲಕ ಸ್ವದೇಶಿ ಚಿಂತನೆಯನ್ನು ಅಥವಾ ಸಿದ್ಧಾಂತವನ್ನು ಪ್ರಚುರಪಡಿಸಿದರು, ಹೋಂರೂಲ್ ಚಳವಳಿಯ ಮುಂದಾಳು ಅನಿಬೆಸೆಂಟ್ ಅವರು ನ್ಯೂ ಇಂಡಿಯಾ ಪತ್ರಿಕೆ ತಂದರು, ಇನ್ನು ಮದನ್ ಮೋಹನ್ ಮಾಳವೀಯ ಅವರು ಮೋತಿಲಾಲ್ ನೆಹರೂ ಜೊತೆ ಸೇರಿಕೊಂಡು ದ ಲೀಡರ್ ಎಂಬ ಪತ್ರಿಕೆ ತಂದರೆ, ನಂತರ ಹಿಂದೂಸ್ತಾನ್ ಟೈಮ್ಸ್ ಪತ್ರಿಕೆಯನ್ನೂ ಪುನರುಜ್ಜೀವಗೊಳಿಸಿದರು. ಇನ್ನು ಡಾ. ಬಿ.ಆರ್. ಅಂಬೇಡ್ಕರ್ ಅವರು ʼಅಸ್ಪೃಶ್ಯರಿಗೆ ಈ ದೇಶದಲ್ಲಿ ಪತ್ರಿಕೆಯಿಲ್ಲʼ ಎಂದು ಘೋಷಿಸಿ ಮೊದಲಿಗೆ ಶಾಹು ಮಹಾರಾಜರ ಬೆಂಬಲದಿಂದ ಮೂಕನಾಯಕ ಪತ್ರಿಕೆ (1920) ತಂದರು; ನಂತರ ಬಹಿಷ್ಕೃತ ಭಾರತ (1927), ನಂತರ ಸಮತಾ (1928), ನಂತರ ಜನತಾ (1930) ಹಾಗೂ ಪ್ರಬುದ್ಧ ಭಾರತ (1956) ಪತ್ರಿಕೆಗಳನ್ನು ಹೊರಡಿಸಿ ನಿರಂತರವಾಗಿ ಅವುಗಳಲ್ಲಿ ಬರೆಯುತ್ತಾ ತಾವೊಬ್ಬ ಧೀಮಂತ ಪತ್ರಕರ್ತ ಎಂಬುದನ್ನೂ ನಿರೂಪಿಸಿದ್ದರು.
ಇವರನ್ನೆಲ್ಲಾ ಹೊರಗಿಟ್ಟು ಕೇವಲ ಬ್ರಿಟಿಷರು ತಂದ ಬೆಂಗಾಲ್ ಗೆಜೆಟ್ ನಂತವುಗಳನ್ನು ಮಾತ್ರವೇ ಭಾರತದ ಪತ್ರಿಕೋದ್ಯಮದ ಇತಿಹಾಸ ಎಂದು ಹೇಳಲು ಬರುತ್ತದೆಯೇ? ಈ ದೇಶದ ಪತ್ರಿಕೋದ್ಯಮದ ಇತಿಹಾಸದ ಸೈದ್ಧಾಂತಿಕ ಅಡಿಪಾಯ ಅತ್ಯಂತ ಭದ್ರವಾಗಿತ್ತು ಎಂಬುದಕ್ಕೆ ಇವೆಲ್ಲಾ ಸಾಕ್ಷಿಯಲ್ಲವೆ? ಅಲ್ಲಿ ಎಡಬಿಡಂಗಿತನಕ್ಕೆ, ಸೊ ಕಾಲ್ಡ್ ತಟಸ್ಥತೆಗೆ ಯಾವುದೇ ಅವಕಾಶವಿರಲಿಲ್ಲ. ಈ ದೇಶವನ್ನು ಕಾಡುತ್ತಿದ್ದ ಸಾಮ್ರಾಜ್ಯಶಾಹಿ ಮತ್ತು ಬ್ರಾಹ್ಮಣಶಾಹಿ ಶಕ್ತಿಗಳನ್ನು ನೇರವಾಗಿ ಎದುರಿಸಿಯೇ ಭಾರತದ ಪತ್ರಿಕೋದ್ಯಮ ನಡೆದುಕೊಂಡುಬಂದಿದೆ ಎಂಬುದಕ್ಕೆ ಮೇಲಿನ ಉದಾಹರಣೆಗಳೇ ಸಾಕ್ಷಿ.
ಸ್ವಾತಂತ್ರ್ಯಾನಂತರದಲ್ಲಿ, ನಮ್ಮ ಕರ್ನಾಟಕದಲ್ಲೇ ನಾವು ಯಾರನ್ನೆಲ್ಲಾ ಇಂದು ಧೀಮಂತ ಪತ್ರಕರ್ತರೆಂದು ಪರಿಗಣಿಸಿದ್ದೇವೆಯೋ, ಯಾರನ್ನೆಲ್ಲಾ ಆದರ್ಶ ಎಂದು ನೋಡುತ್ತೇವೆಯೋ ಅವರೆಲ್ಲರೂ ಅತ್ಯಂತ ಸ್ಪಷ್ಟ ಮತ್ತು ದೃಢವಾದ ಸಿದ್ಧಾಂತಿಗಳೇ ಆಗಿದ್ದರು ಎಂಬುದನ್ನು ಮರೆಯಬಾರದು. ಕರ್ನಾಟಕದ ಪತ್ರಿಕೋದ್ಯಮಕ್ಕೇ ಹೊಸ ಮೆರಗು ತಂದು ಸಂಚಲನ ಮೂಡಿಸಿದ ಪಿ. ಲಂಕೇಶ್ ಅವರು ಕಡಿಮೆ ಸಿದ್ಧಾಂತಿಯೇ? ಸ್ಪಷ್ಟ ಸೈದ್ಧಾಂತಿಕ ತಳಹದಿಯ ಪತ್ರಿಕೋದ್ಯಮವೇ ಅವರ ಆಕ್ಟಿವಿಸಂ ಆಗಿತ್ತು ಮಾತ್ರವಲ್ಲ ಪತ್ರಿಕೋದ್ಯಮದ ಮೂಲಕ ಸಾಮಾಜಿಕ ರಾಜಕೀಯ ಬದಲಾವಣೆಯನ್ನೂ ಮಾಡಲು ಸಾಧ್ಯ ಎಂದು ಪಿ ಲಂಕೇಶ್ ಒಂದು ಮಾದರಿಯನ್ನೇ ಸೃಷ್ಟಿಸಿದರು. ಅದು ಸಾಧ್ಯವಾಗಿದ್ದೇ ಅವರ ಕಟಿಬದ್ಧ ಸೈದ್ಧಾಂತಿಕ ನಿಲುವಿನಿಂದ.
ನಾಡು ಕಂಡ ಮತ್ತೊಬ್ಬ ಧೀಮಂತ ಪತ್ರಕರ್ತ ವಡ್ಡರ್ಸೆ ರಘುರಾಮ್ ಶೆಟ್ಟಿ ಕೂಡಾ ಗಟ್ಟಿ ತಾತ್ವಿಕ ನಿಲುವುಗಳ ಮೂಲಕ ನಾಡಿನ ಜನರನ್ನು ತಲುಪಿದರು. ಇನ್ನು 70-80ರ ದಶಕಗಳಲ್ಲಿ ಭಾರತೀಯ ಪತ್ರಿಕೋದ್ಯಮದ ಧೀಮಂತ ಪರಂಪರೆಯಲ್ಲಿ ಸಾಗಿದ ಹಲವಾರು ಕನ್ನಡ ಪತ್ರಿಕೆಗಳಿದ್ದವು- ಸುದ್ದಿ ಸಂಗಾತಿ, ಶೂದ್ರ, ಪಂಚಮ, ಸಮುದಾಯ, ಸಂಕ್ರಮಣ ಮುಂತಾದ ನಿಯತಕಾಲಿಕೆಗಳು ಕನ್ನಡಿಗರ ಅರಿವಿನ ವಿಸ್ತರಣೆಯಲ್ಲಿ ಕಡಿಮೆ ಕೆಲಸ ಮಾಡಿವೆಯೇ? ಹಾಗಾದರೆ ಇವೆಲ್ಲವೂ ಖಚಿತ ಸೈದ್ದಾಂತಿಕತೆಯಿಂದಲೇ ನಡೆಯಲಿಲ್ಲವೇ?
ಇನ್ನು ಕಳೆದ ಕೆಲವು ದಶಕಗಳಲ್ಲಿ, ಅಗ್ನಿ, ಹಾಯ್ ಬೆಂಗಳೂರು, ಗೌರಿ ಲಂಕೇಶ್ ವಾರಪತ್ರಿಗಳೂ ತಮ್ಮ ಛಾಪು ಮೂಡಿಸಿದವು. ಪಿ ಲಂಕೇಶರ ಸ್ಪೂರ್ತಿಯಲ್ಲೇ ದೊಡ್ಡ ದೊಡ್ಡ ಭ್ರಷ್ಟಾಚಾರ ಪ್ರಕರಣಗಳನ್ನು ಅನಾವರಣಗೊಳಿಸಿದವು. ಇದ್ದುದರಲ್ಲಿ ರವಿ ಬೆಳಗರೆ ಎಡಬಿಡಂಗಿಯಾಗಿ ಕ್ರೈಂ, ಸೆಕ್ಸ್ ಗಳನ್ನ ಅಸ್ತ್ರವಾಗಿಸಿಕೊಂಡು ಟ್ಯಾಬ್ಲಾಯ್ಡ್ ಪತ್ರಿಕೋದ್ಯಮವನ್ನು ಹಳ್ಳ ಹಿಡಿಸಿದರೂ ಹಾಯ್ ಬೆಂಗಳೂರು ಸಹ ಅನೇಕ ಬ್ರಷ್ಟಾಚಾರ ಹಗರಣಗಳನ್ನು ಬಯಲು ಮಾಡಿದ್ದು ಸತ್ಯ.
ಯಾವನ್ನು ನಾವು ದಿನಪತ್ರಿಕೆಗಳು ಅಥವಾ ವೃತ್ತ ಪತ್ರಿಕೆಗಳು ಎನ್ನುತ್ತೇವೆಯೋ ಇವುಗಳ ಆದ್ಯತೆ ದಿನನಿತ್ಯದ ಸುದ್ದಿಗಳನ್ನು ಜನರಿಗೆ ತಲುಪುವುದು ಮಾತ್ರವಾಗಿದ್ದ ಕಾರಣ ಬಹಳ ಪತ್ರಿಕೆಗಳಲ್ಲಿ ಸೈದ್ಧಾಂತಿಕತೆ ದೊಡ್ಡ ವಿಷಯವಾಗಲಿಲ್ಲ. ಆದರೆ ಅಂತಹ ಕಡೆಗಳಲ್ಲಿ ಸಹ ದೊಡ್ಡ ದೊಡ್ಡ ಸಿದ್ಧಾಂತಿಗಳು ಹತ್ತಾರು ವರ್ಷಗಳ ಕಾಲ ಕೆಲಸ ಮಾಡಿದ್ದರು ಮತ್ತು ತಮ್ಮ ಖಚಿತ ಅಭಿಪ್ರಾಯಗಳನ್ನು ಆ ವೇದಿಕೆಗಳ ಮೂಲಕ ಜನರಿಗೆ ತಲುಪಿಸುತ್ತಾ ಬಂದಿದ್ದರೆಂಬುದನ್ನು ನಾವು ಮರೆಯಕೂಡದು.
ಈಗ ಹೇಳಿ, ನಮ್ಮ ಪತ್ರಿಕೋದ್ಯಮಕ್ಕೆ ಸಿದ್ಧಾಂತ ಬೇಡವೆ, ಪತ್ರಕರ್ತರಾಗಿರುವವರು ಸೈದ್ಧಾಂತಿಕ ಸ್ಪಷ್ಟತೆ ಹೊಂದಿರಬಾರದೆ? ಆಕ್ಟಿವಿಸ್ಟುಗಳು ಪತ್ರಕರ್ತರಾಗುವುದು ಅಪರಾಧವೆ? ಪತ್ರಿಕೋದ್ಯಮ ಆಕ್ಟಿವಿಸಂಗೆ ಪೂರಕವಾಗಿರಬಾರದೆ? ಇಂದು ಬ್ರಾಹ್ಮಣ್ಯದ ದಿಗ್ವಿಜಯ ಮತ್ತೊಮ್ಮೆ ನಿಜವಾಗುವ ಕರಾಳ ಛಾಯೆ ಇಡೀ ದೇಶವನ್ನು ಆವರಿಸಿಕೊಂಡಿರುವಾಗ, ಬಾಬಾಸಾಹೇಬರು ಎಚ್ಚರಿಸಿದ್ದ ಆ ʼಪ್ರತಿಕ್ರಾಂತಿʼ ತನ್ನ ಕಬಂಧಬಾಹುಗಳನ್ನು ಚಾಚಿಕೊಂಡ ಎಲ್ಲವನ್ನೂ ನೊಣೆಯುತ್ತಿರುವಾಗ, ಅಪರಾಧವೇ ಅಧಿಕಾರವಾಗಿ ದೇಶದ ಪ್ರಮುಖ ಸಂಸ್ಥೆಗಳೆಲ್ಲವನ್ನೂ ನುಂಗಿ ನೀರುಕುಡಿದು ತಮ್ಮ ಅಂಕೆಯಲ್ಲಿ ತಂದುಕೊಂಡು ಇಡೀ ದೇಶದ ಜನರಿಗೆ ಕರಾಳತೆ ದರ್ಶನ ಮಾಡುತ್ತಾ ಭ್ರಷ್ಟಾಚಾರದ ವ್ಯಾಖ್ಯಾನವನ್ನೇ ತಿರುಗುಮರುಗು ಮಾಡುತ್ತಿರುವಾಗ ಸೊ ಕಾಲ್ಡ್ ತಟಸ್ಥತೆಯ ಬದನೇಕಾಯಿಯನ್ನು ನೆಚ್ಚಿಕೊಳ್ಳದೇ ನಿರ್ಧಾರಿತ ಜನಾಂದೋಲನಗಳಿಗೆ ಪೂರಕವಾಗಿ ಪತ್ರಿಕೋದ್ಯಮ ಮತ್ತು ಪತ್ರಕರ್ತರಾದವರು ಜೊತೆಗೂಡುವುದು ಬೇಡವೇ?
‘ಬೇಡ’ ಎಂಬ ಅಭಿಪ್ರಾಯ ನಿಮ್ಮದಾಗಿದ್ದರೆ ನಿಮ್ಮ ಬಳಿ ಹೇಳಲು ನನಗೆ ಏನೂ ಉಳಿದಿಲ್ಲ. ನೀವು ನಿಮ್ಮದೇ ಸುಖಾಸನದಲ್ಲಿ ನೆಮ್ಮದಿಯಾಗಿ ಪವಡಿಸಬಹುದು, ನನಗೇನೂ ಅಭ್ಯಂತರವಿಲ್ಲ. (ಬರಹ- ಹರ್ಷಕುಮಾರ್ ಕುಗ್ವೆ, ಪತ್ರಕರ್ತ ಮತ್ತು ಆಕ್ಟಿವಿಸ್ಟ್)
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಪೂನಾ ಒಪ್ಪಂದಕ್ಕೆ 92 ವರ್ಷ
- ಮಲ್ಕುಂಡಿ ಮಹದೇವ ಸ್ವಾಮಿ
“ಅಂಬೇಡ್ಕರ್ ಜೀ ನಮ್ಮ ತಂದೆ ‘ಮುಳುಗುತ್ತಿದ್ದಾರೆ’ ಅವರ ಪ್ರಾಣ ಉಳಿಸಿ” ದೇವದಾಸ್ ಗಾಂಧಿ.
“ನನ್ನನ್ನು ಗಲ್ಲಿಗೇರಿಸಿದರೂ ನಂಬಿದ ಜನರ ವಿಶ್ವಾಸಕ್ಕೆ ದ್ರೋಹ ಮಾಡುವುದಿಲ್ಲ” ಡಾ. ಅಂಬೇಡ್ಕರ್.
ಅಂದು ಅಕೋಲದಲ್ಲಿ ಗಾಂಧಿಜೀ ತಂಗಿದ್ದರು. ಅಲ್ಲಿಗೆ ಕೆಲವು ಅಂಬೇಡ್ಕರ್ ಅನುಯಾಯಿಗಳು ಬಂದು ಗಾಂಧಿಯವರನ್ನು ಭೇಟಿಯಾಗಿ, ಕೆಲವು ಪ್ರಶ್ನೆಗಳನ್ನು ಕೇಳಿದರು. “ಗಾಂಧೀಜಿಯವರೇ, ಕೆಲವರು ತಿಲಕರನ್ನು ದೇವರೆಂದು ಪೂಜಿಸುವಂತೆ, ಅಂಬೇಡ್ಕರರನ್ನು ದೇವರೆಂದು ಪೂಜಿಸಬಹುದೇ….? ಗಾಂಧೀಜಿಯವರು ಉತ್ತರಿಸುತ್ತಾ, ಪೂಜಿಸಬಹುದು. ಪೂಜಿಸುವವರಿಗೆ ಈ ಹಕ್ಕಿದೆ. ಅಂಬೇಡ್ಕರರನ್ನು ನಾನು ಮೆಚ್ಚುತ್ತೇನೆ. ನಾನು ಅವರ ದೃಷ್ಟಿಕೋನಗಳಿಂದ ಭಿನ್ನವಾಗಿದ್ದೇನೆ ಆದರೆ ಅವರು ಧೈರ್ಯಶಾಲಿ ಎಂದು ಒಪ್ಪಿಕೊಳ್ಳುತ್ತೇನೆ. ಧೈರ್ಯಶಾಲಿ ಪುರುಷ ಕೂಡ ತಪ್ಪು ಮಾಡುತ್ತಾನೆ. ನಾನು ನನ್ನನ್ನು ಧೈರ್ಯಶಾಲಿ ಎಂದು ಸ್ವತಹ ನಿರ್ಧರಿಸಿಕೊಳ್ಳುತ್ತೇನೆ ಮತ್ತು ನಾನು ಅನೇಕ ತಪ್ಪುಗಳನ್ನು ಮಾಡಿದ್ದೇನೆ ಎಂದು ಒಪ್ಪಿಕೊಳ್ಳುತ್ತೇನೆ” ಎಂದರು.
ತಿಲಕರನ್ನು ದೇವರೆಂದು ಭಾವಿಸಿದ್ದ ಗಾಂಧೀಜಿಗೆ ಪ್ರಶ್ನಿಸಿದ ಅಂಬೇಡ್ಕರ್ ಅನುಯಾಯಿಗಳು ಪೂನಾ ಒಪಂದದಿಂದಾದ ಅನ್ಯಾಯದ ಸಿಟ್ಟನ್ನು ತೋಡಿಕೊಂಡರು. ಮತ್ತು ಈ ಒಪ್ಪಂದ ಇನ್ನು ಮುಂದಿನ ಪೀಳಿಗೆಯೂ ಪ್ರಶ್ನಿಸುವ ಅಧಿಕಾರವನ್ನು ಶಾಶ್ವತವಾಗಿ ಕಿತ್ತುಕೊಂಡಿತು ಎಂಬ ಮತ್ತೊಂದು ಸಿಟ್ಟುಕೂಡ ಅಲ್ಲಡಗಿತ್ತು. ನೀವು ಪ್ರಶ್ನಿಸುವವರಾಗಿದ್ದರೇ ಈ ಪ್ರಸಂಗದ ವಿಶ್ಲೇಷಣೆಯನ್ನು ನಿಮಗೇ ಬಿಡುತ್ತೇನೆ.
ರಾಮ್ಸೆ ಮೆಕ್ ಡೊನಾಲ್ಡ್ ರವರಿಗೆ ಆಗಸ್ಟ್ 18 ಗಾಂಧಿಜೀ ಪತ್ರ ಬರೆದು ಬ್ರಿಟಿಷ್ ರ ಕೋಮುವಾರು ತೀರ್ಪನ್ನು ಕಟುವಾಗಿ ಟೀಕಿಸಿದ್ದರು. ಮತ್ತು ತಮ್ಮ ಅಸಮ್ಮತಿಯನ್ನು ತೋರಿದರು. ಸೆಪ್ಟೆಂಬರ್ 9 ಬ್ರಿಟಿಷರು ಗಾಂಧೀಜಿ ಯವರ ನಿರ್ಧಾರವನ್ನು ನಿರಾಕರಿಸಿದ ಕಾರಣ. ಆ ಸೋಮವಾರ ಎಲ್ಲಾ ನಾಯಕರು ಜಮಾಯಿಸಿ ಅಂಬೇಡ್ಕರರನ್ನು ಕೇಳಿದಾಗ: ” ಗಾಂಧೀಜಿ ಅವರಿಗಾಗಿ ಇಂತಹ ಮಹಾತ್ಯಾಗ ಮಾಡಲಾರೆ ” ಎಂದರು. ಮರುದಿನ ಮಹಾತ್ಮಗಾಂಧಿಜೀಯವರು ಆ ಮಾವಿನ ತೋಪಿನಲ್ಲಿ ಉಪವಾಸಕ್ಕೆ ಕುಳಿತರು.
ಉಪವಾಸದ 3 ದಿನಗಳ ನಂತರ ಅಂಬೇಡ್ಕರ್ ಅವರಿಗೆ ಎಲ್ಲಾ ಕಡೆಯಿಂದ ಬೆದರಿಕೆ ಕರೆಗಳು ಬರಲು ಆರಂಭಿಸಿದವು. ಕೆಲವು ಗೂಂಡಾಗಳು ನೇರವಾಗಿ ಅಂಬೇಡ್ಕರರನ್ನು ಪ್ರಶ್ನಿಸಿದ್ದರು. ಬಹುತೇಕ ಎಲ್ಲ ಪತ್ರಿಕೆಗಳು ಗಾಂಧಿಯವರನ್ನು ಬೆಂಬಲಿಸುತ್ತಿವೆ ಮತ್ತು ಅಂಬೇಡ್ಕರರನ್ನು ವಿರೋಧಿಸುತ್ತಿವೆ. ಅವರ ರಕ್ತದ ಒತ್ತಡ ಹೆಚ್ಚುತ್ತಿದೆ.
ಉದ್ರಿಕ್ತತೆ ಹೆಚ್ಚಾಯಿತು, ಅಂಬೇಡ್ಕರ್ ಖಳನಾಯಕ, ದೇಶದ್ರೋಹಿ, ಭಾರತವನ್ನು ಛಿದ್ರಗೊಳಿಸಲು ಬಯಸಿದ ವ್ಯಕ್ತಿ, ಗಾಂಧಿಯನ್ನು ಕೊಲ್ಲಲು ಪ್ರಯತ್ನಿಸುತ್ತಿದ್ದ ವ್ಯಕ್ತಿ. ಟ್ಯಾಗೋರ್, ನೆಹರು ಮತ್ತು ಸಿ. ರಾಜಗೋಪಾಲಾಚಾರಿ ಸೇರಿದಂತೆ ಗರಂ ದಾಲ್ (ಉಗ್ರಗಾಮಿಗಳು) ಹಾಗೂ ನರಮ್ ದಾಲ್ (ಮಿತವಾದಿಗಳು) ರಾಜಕೀಯ ಭಾರೀ ತೂಕ ಗಾಂಧಿಯ ಕಡೆ ತೂಗಿತು. ಆದರೂ ಅಂಬೇಡ್ಕರ್ ರದು ಅದೇಮಾತು.
“ನಾನು ನನ್ನ ಆದ್ಯ ಕರ್ತವ್ಯಕ್ಕೆ ದ್ರೋಹ ಬಗೆಯಲಾರೆ ಮತ್ತು ನನ್ನನ್ನು ಗಲ್ಲಿಗೇರಿಸಿದರೂ ನಂಬಿದ ಜನರ ನ್ಯಾಯಯುತ ಮತ್ತು ನ್ಯಾಯ ಸಮ್ಮತವಾದ ವಿಶ್ವಾಸಕ್ಕೆ ದ್ರೋಹ ಮಾಡುವುದಿಲ್ಲ” ಎಂಬದು. ಅಂಬೇಡ್ಕರ್ ರವರ ಈ ಕಾಠಿಣ್ಯ, ಗಾಂಧಿಯವರ ಸ್ವಯಂ ಪ್ರೇರಿತ ಹಠ. ಭಾರತವನ್ನು ಅಂದು ನಿತ್ರಾಣಗೊಳಿಸಿತ್ತು.
ಮಹಾದೇವ ದೇಸಾಯಿ ಹೇಳುವಂತೆ ಸೆಪ್ಟಂಬರ್ 22 ಮಧ್ಯಾಹ್ನ ಅಂಬೇಡ್ಕರ್ ಗಾಂಧಿಯಜೀಯವರನ್ನು ಭೇಟಿಯಾಗಿ, “ನಾನು ನನ್ನ ಸಮುದಾಯಕ್ಕೆ ರಾಜಕೀಯ ಅಧಿಕಾರವನ್ನು ಬಯಸುತ್ತೇನೆ ಅದು ನಮ್ಮ ಉಳಿವಿಗೆ ಅನಿವಾರ್ಯವಾಗಿದೆ” ಉಪವಾಸವನ್ನು ಕೈ ಬಿಡಿ” ಎಂದರು. ಚರ್ಚೆ ಕಗ್ಗಂಟಾಗಿ ಸೆಪ್ಟೆಂಬರ್ 23 ಕ್ಕೆ ಮಾತುಕತೆ ಮುಂದುವರಿಯಿತು. ಮತ್ತೇ 24 ಕ್ಕೆ. ಅಂದು ಸಂಜೆ 5 ಗಂಟೆಗೆ 23 ಜನರು ಒಪ್ಪಂದಕ್ಕೆ ಸಹಿ ಹಾಕಿದ್ದರು. ಈ ವಿಶ್ವಾಸ ಅರ್ಹತೆಗಾಗಿ ರಾಜಾಜಿ ತಮ್ಮ ಒಂದು “ಫೌಂಟೆನ್ ಪೆನ್ನ” ನ್ನು ಅಂಬೇಡ್ಕರ್ ಅವರ ಜತೆ ವಿನಿಮಯ ಮಾಡಿಕೊಂಡಿದ್ದರು. ಇದು ಹೊರಗಿನ ಮರ್ಮಾಘಾತ. ಈ ಒಳಗಿನ ಮರ್ಮಾಘಾತದಬಗ್ಗೆ ಹೇಳಲೇ ಬೇಕು.
ಈ ದಕ್ಷಿಣ ಭಾರತದ ಅಸ್ಪೃಶ್ಯ ರಾಜಕಾರಣಿ
“ಎ ಸಿ ರಾಜನ್” ಅವರು ಅಂಬೇಡ್ಕರ್ ಅವರು ದುಂಡುಮೇಜಿನ ಸಭೆಯಲ್ಲಿ ಚರ್ಚಿಸಲು ಅಸ್ಪೃಶ್ಯರ ಪ್ರತಿನಿಧಿ ಎನ್ನುವುದನ್ನು ನಿರಾಕರಿಸಿದ್ದರು. ಮತ್ತು ಬಾಪೂ ರವರ ಕಡೆ ಕೈ ಎತ್ತಿದ್ದರು. ಪೂನಾ ಒಪ್ಪಂದದ ಬಿಕ್ಕಟ್ಟಿನ ಸಮಯದಲ್ಲಿ ಅಂಬೇಡ್ಕರವರನ್ನು ಪ್ರತ್ಯೇಕೀಕರಿಸಿ ಚರ್ಚೆಮಾಡಲು ಸಿದ್ಧಗೊಂಡಿದ್ದರು.
“ಪಲ್ ವಂಕರ್ ಬಾಲೂ” ದೇಶದ ಮೊದಲ ದಲಿತ ಕ್ರಿಕೆಟಿಗ ಕೂಡ ಅಂಬೇಡ್ಕರವರಿಗೆ 24ವರ್ಷ ದೊಡ್ಡವರಾಗಿದ್ದು ಅಂಬೇಡ್ಕರರ ಸ್ನೇಹ ಜೀವಿಯಾಗಿದ್ದರು. ಆದರೆ ಈ ಸಂದರ್ಭದಲ್ಲಿ ಗಾಂಧೀಜಿಯವರ ಪಾಳಯದಲ್ಲಿ ಪಳಗಿದರು. ಅವರು ಗಾಂಧಿಜೀಯವರ ಅನುಯಾಯಿಗಳಾಗಿ, ಅಂಬೇಡ್ಕರವರ ನಿಲುವುಗಳನ್ನು ಹೆಜ್ಜೆಹೆಜ್ಜೆಗೂ ನಿರಾಕರಿಸಿದರು. ಅಂಬೇಡ್ಕರ್ ಅವರು ಬೌದ್ಧ ಧರ್ಮಕ್ಕೆ ಮತಾಂತರ ವಾಗುವ ವಿಚಾರದಲ್ಲಿಯೂ ಕಠೋರ ವಿರೋಧವನ್ನು ವ್ಯಕ್ತಪಡಿಸಿದ್ದರು. ಮುಂದೆ ಅಂಬೇಡ್ಕರ್ ಅವರ ವಿರುದ್ಧ ಚುನಾವಣೆಗೆ ನಿಂತು ಸೋತದ್ದು ಬೇರೆ ವಿಚಾರ ಆದರೆ ಇಲ್ಲಿ ನಾವು ಅರ್ಥಮಾಡಿಕೊಳ್ಳಬೇಕಾದದ್ದು ಒಂದು ಐತಿಹಾಸಿಕ ಹೋರಾಟದಲ್ಲಿ ಅಂಬೇಡ್ಕರ್ ಅವರ ನಿಲುವು ಮತ್ತು ಕಾಠಿಣ್ಯಗಳನ್ನು.
ಗಾಂಧೀಜಿಯವರ ಪ್ರಕಾರ ಪ್ರತ್ಯೇಕ ಮತದಾನ ಪದ್ಧತಿ ಸಮಸ್ಯೆಯನ್ನು ಉತ್ತಮಕ್ಕಿಂತ ಕೆಟ್ಟದ್ದಾಗಿಸುತ್ತದೆ. ಇದು ಪ್ರತಿ ಹಳ್ಳಿಯಲ್ಲಿ ವಿಭಜನೆಯನ್ನು ಮತ್ತಷ್ಟು ಹೆಚ್ಚಿಸುತ್ತದೆ. ಸ್ಥಳಿಯ ಸಂಘರ್ಷಕ್ಕೆ ಕಾರಣವಾಗುತ್ತಿದೆ.ಎಂಬುದು.
1931 ಅ 14 ಅಂಬೇಡ್ಕರವರು ಗಾಂಧಿಯವರನ್ನು ಮೊಟ್ಟ ಮೊದಲನೆ ಬಾರಿಗೆ ಭೇಟಿಯಾಗಿ ಪ್ರತ್ಯೇಕ ಮತದಾನದ ಹಕ್ಕುಗಳ ಬಗ್ಗೆ ಚರ್ಚಿಸಿದ್ದರು. ನಂತರ ಗಾಂಧೀಜಿ ನವೆಂಬರ್ 13 ತಮ್ಮ ಭಾಷಣದಲ್ಲಿ ನಾನು ಪ್ರತ್ತೇಕ ಪ್ರಾತಿನಿಧ್ಯವನ್ನು ವಿರೋಧಿಸುವ ಏಕೈಕ ವ್ಯಕ್ತಿಯಾಗಿದ್ದೇನೆ ಎಂದು ಒಂದು ವರ್ಷದ ಹಿಂದೆಯೇ ಹೇಳಿದ್ದರು. ಈ ಉಪವಾಸ ಒಂದು ವರ್ಷ ಪೂರ್ವ ನಿಯೋಜಿತ ಕಾರ್ಯಕ್ರಮ ದಂತೆ ಕಾಣುತ್ತದೆ ಅಲ್ಲವೆ? ಇದು ಹಠಾತ್ತಾಗಿ ಆಗಿಂದಾಗೆ ಸೃಷ್ಟಿಯಾದ ಯೋಜನೆ ಅಲ್ಲ.
ಇಡೀ ಪೂನಾ ಒಪ್ಪಂದಕ್ಕೆ ಸಾಕ್ಷಿಯಾದ ಘಟನೆಗಳನ್ನಾಧರಿಸಿ ಮಹಾದೇವ ರಾನಡೆ ಹೇಳುವಂತೆ ” ಅವರಿಗೆ ಬೇಕಿರುವುದು ಯಾವುದೋ ಒಂದು ಇತ್ಯಾರ್ಥ; ಅವರು ಆದರ್ಶ ಪರಿಹಾರಕ್ಕಾಗಿ ಕಾಯಲು ಸಿದ್ಧರಿಲ್ಲ. ಗಾಂಧೀಜಿ ಯವರ ಜೀವ ಉಳಿಸುವ ಉತ್ಸಾಹದಲ್ಲಿ ಈ ಸಹಿ ಹಾಕಿದರು.
ಅಂಬೇಡ್ಕರ್ ಜೀ ನಮ್ಮ ತಂದೆ ‘ಮುಳುಗುತ್ತಿದ್ದಾರೆ’ ಅವರ ಪ್ರಾಣ ಉಳಿಸಿ” ಎಂದು ಅಂಬೇಡ್ಕರ್ ರವರ ಮುಂದೆ ಕಣ್ಣೀರುಡುತ್ತದ್ದ ದೇವದಾಸ್ ಗಾಂಧಿ ಅವರ ಮುಖದಲ್ಲಿ ಮಾತ್ರ ಮಂದಹಾಸವಿತ್ತು.
ಹೊ! ಗಾಂಧಿಯವರು ಒಪ್ಪಂದಕ್ಕೆ ಸಹಿ ಹಾಕಿದರಾ?, ಒಂದು ಅಂತಿಮ ಪದ; ಅದು ಗಾಂಧಿಯಲ್ಲ. ಅವರ ಮಗ ದೇವದಾಸ್ ಗಾಂಧಿ.
ಸುಪರ್ಣ ಗುಪ್ತಾ ‘ ಅಂಬೇಡ್ಕರ್ ರವರು ಶೋಷಿತರ ವಿಮೋಚನೆಗಾಗಿ ಹಕ್ಕು ಆಧಾರಿತ ವಿಧಾನಕ್ಕೆ ಆದ್ಯತೆ ನೀಡಿದರು. ಗಾಂಧಿಜೀಯವರು ಅಧ್ಯಾತ್ಮ ಮತ್ತು ನಂಬಿಕೆ ವಿಧಾನಕ್ಕೆ ಮಾನ್ಯತೆ ನೀಡಿದರು. ಅಂಬೇಡ್ಕರರಿಗಿಂತ ಭಿನ್ನವಾಗಿ ಶೋಷಕರ ಮನಸ್ಥಿತಿಯನ್ನು ಬದಲಾಯಿಸಿದಾಗ ಮಾತ್ರ, ಯಾವುದೇ ಶೋಷಣೆಯನ್ನು ಸರಿಪಡಿಸಬಹುದು ಎಂದು ಗಾಂಧಿಜೀ ಭಾವಿಸಿದ್ದರು’. ಎನ್ನುತ್ತಾರೆ. ಇದು ಈ ನೆಲದಲ್ಲಿ ಅಸಂಭವ. ಕಾರಣ ಇಲ್ಲಿನ ಜಾತಿ ವ್ಯವಸ್ಥೆ ಒಂದು ಮಾನಸಿಕ ಸ್ಥಿತಿಯಾಗಿದೆ. ಅದು ಸಾವಿರಾರು ವರ್ಷಗಳು ತನ್ನ ಬೇರನ್ನು ತಾನೇ, ತನ್ನ ಮೆದುಳಿಗೆ ಎಣೆದುಕೊಂಡಿದೆ. ಇದನ್ನು ನಂಬಿಕೆ ಮಾತ್ರದಿಂದಲೇ ಬಿಡಿಸುವುದು ಕಷ್ಟ.
ಈ ಸತ್ಯ ಗಾಂಧೀಜಿಯವರ ಅರಿವಿಗೆ ಬಂದಿದ್ದೆ ಅವರು
ಅಸ್ಪೃಶ್ಯತೆಯ ವಿರುದ್ದ 1933 ನವೆಂಬರ್ ನಿಂದ 1934 ರ ಆಗಸ್ಟ್ ವರೆಗೆ 12500 km ಭಾರತದಾದ್ಯಂತ ಪ್ರವಾಸ ಕೈಗೊಂಡಾಗ. 800000 ಗಳನ್ನು ಹರಿಜನ ನಿಧಿಗೆ ಸಂಗ್ರಹಿಸಲು ಮೇಲ್ವರ್ಗದ ಜನರ ಬಳಿ ತೆರಳಿದಾಗ. ಕೊನೆ ಕೊನೆಗೆ ಶ್ರೀರಂಗಂ ತಂಜಾವೂರಿನ ಇತರ ದೇವಾಲಯಗಳಲ್ಲಿ ಅಸ್ಪೃಶ್ಯತಾಚರಣೆಯನ್ನು ಮನಗಂಡು ತಾವೇ ದೇವಾಲಗಳಿಗೇ ಹೋಗುವುದನ್ನು ನಿಷೇಧಿಸಿಕೊಂಡಾಗ. ಹರಿಜನ ಸೇವಕ ಸಂಘ ಹರಿಜನ ಪತ್ರಿಕೆ ಇಲ್ಲಿ ಹುಟ್ಟಿಕೊಂಡವು. ಪ್ರತಿ ಹಳ್ಳಿಗಳಲ್ಲಿ ರಾಮಮಂದಿರ ಭಜನೆಗಳು ಆರಂಭವಾದವು. ಇದು
ಈಗ ಈ ಜನರ ಬದುಕಿನ ಭಾಗವಾಗಿ ಬಿಟ್ಟಿದೆ.
ಲೂಯಿ ಫಿಷರ್ “ಗಾಂಧೀಜಿಗೆ ದ್ವೇಷ, ಅಸೂಯೆ, ವಿಷ, ಅಸಮಧಾನವಿಲ್ಲ. ಅವರನ್ನು ಜೈಲಿಗೆ ಹಾಕಿದ ವೈಸ್ ರಾಯ್ ಗಳ ಜೊತೆ ಅವರು ಸ್ನೇಹಿತರಾಗಿದ್ದರು. ಅವರು ವ್ಯವಸ್ಥೆಯನ್ನು ವಿರೋಧಿಸಿದರು ಆದರೆ ವ್ಯಕ್ತಿಯನ್ನಲ್ಲಾ.
ಎಂದು ಯಾರು ಏನೇ ಹೇಳಿದರು,
ಅಂಬೇಡ್ಕರ್ ಅವರು ಬಿಬಿಸಿಗೆ ನೀಡಿದ ಸಂದರ್ಶನದಲ್ಲಿ ಗಾಂಧೀಜಿಯವರನ್ನು ನಾನು “ಮಹಾತ್ಮ” ಎಂದು ಒಪ್ಪಲಾರೆ ಎಂದರು.
ಅಂಬೇಡ್ಕರ್ ರ ಈ ನೋವಿಗೆ ಪಟೇಲರ ಈ ಮಾತನಲ್ಲಿ ಉತ್ತರ ಸಿಗಬಹುದೇನೊ ಪಟೇಲರು “ಈ ಗಾಂಧಿಜೀ ಏಕೆ ಉಪವಾಸ ಮಾಡುತ್ತಿದ್ದಾರೆ ?” ಎಂದು ಗೊಂದಲಕ್ಕೀಡಾದರು. ಎದುರಿನಲ್ಲಿದ್ದವರು “ಅಸ್ಪೃಶ್ಯರನ್ನು ಎದುರಿಸಲು ಇನ್ಯಾವುದೇ ಮಾರ್ಗಗಳಿಲ್ಲವಲ್ಲಾ ಆ ಕಾರಣಕ್ಕಿರಬಹುದೇನೊ…? ಎಂದರು.
ಕೊನೆಯದಾಗಿ ಈ ಮಾತು
ನನ್ನನ್ನು ಗಲ್ಲಿಗೇರಿಸಿದರೂ ನಂಬಿದ ಜನರ ವಿಶ್ವಾಸ ಕ್ಕೆ ದ್ರೋಹ ಮಾಡುವುದಿಲ್ಲ” ಎಂದರಲ್ಲಾ ಡಾ. ಅಂಬೇಡ್ಕರ್ ಈ ಎಳೆಯನ್ನು ಇಡಿದು ಈ ಪೀಳಿಗೆ ಯಾಕೆ ಬದುಕುವ ಪ್ರಯತ್ನ ಮಾಡುತ್ತಿಲ್ಲಾ….? (ಬರಹ-ಮಲ್ಕುಂಡಿ ಮಹದೇವ ಸ್ವಾಮಿ)
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ4 days agoದಾವಣಗೆರೆ | ಜಿಲ್ಲಾ ಪಂಚಾಯಿತಿ ಸಿ.ಇ.ಒ ಗಿತ್ತೆ ಮಾಧವ್ ವಿಠ್ಠಲ್ ರಾವ್ ವಿರುದ್ಧ ಲೋಕಾಗೆ ದೂರು
-
ದಿನದ ಸುದ್ದಿ6 days agoದುಡಿಯುವ ವರ್ಗಕ್ಕೆ ಸ್ಥಳದಲ್ಲೇ ಉಚಿತ ಚಿಕಿತ್ಸೆ : ಶಾಸಕ ಕೆ.ಎಸ್.ಬಸವಂತಪ್ಪ ‘ಸಂಚಾರಿ ಆರೋಗ್ಯ ಘಟಕ’ಕ್ಕೆ ಚಾಲನೆ
-
ದಿನದ ಸುದ್ದಿ5 days agoಜಿಎಂ ವಿಶ್ವವಿದ್ಯಾಲಯ ರಂಗೋತ್ಸವ -2025 | ವಿದ್ಯಾರ್ಥಿಗಳ ಪ್ರತಿಭೆ ಅನಾವರಣ : ಸ್ಪರ್ಧೆಯಲ್ಲಿ ರಂಗ ಪ್ರೇಮ, ನಟನಾ ಚತುರತೆ ಬೆರಗು
-
ದಿನದ ಸುದ್ದಿ5 days agoಉಳಿಕೆ ಸರ್ಕಾರಿ ನಿವೇಶನ ಇಲಾಖೆಗಳ ವಿವಿಧ ಉದ್ದೇಶಿತ ಕಟ್ಟಡಗಳಿಗೆ ಹಂಚಿಕೆ: ಡಿಸಿ ಜಿ.ಎಂ.ಗಂಗಾಧರಸ್ವಾಮಿ
-
ದಿನದ ಸುದ್ದಿ6 days agoಸಹಾಯಧನಕ್ಕಾಗಿ ಅರ್ಜಿ ಆಹ್ವಾನ
-
ದಿನದ ಸುದ್ದಿ2 days agoಮಾನವ ಸಂಪನ್ಮೂಲ ನೀತಿ ಗುತ್ತಿಗೆ ನೌಕರರಿಗೆ ಮಾರಕ | ನೀತಿ ರದ್ದುಗೊಳಿಸಲು ಶಾಸಕ ಜೆ.ಎಸ್.ಬಸವಂತಪ್ಪಗೆ ಮನವಿ
-
ದಿನದ ಸುದ್ದಿ3 days agoದಾವಣಗೆರೆ | ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿಗೆ ಅರ್ಜಿ ಆಹ್ವಾನ
-
ದಿನದ ಸುದ್ದಿ2 days agoದಾವಣಗೆರೆ | ಕನ್ನಡ ಚಳವಳಿ ಸಮಿತಿಯಿಂದ ಇಮ್ಮಡಿ ಪುಲಕೇಶಿ ಜಯಂತಿ ಆಚರಣೆ

