ರಾಜಕೀಯ
ನವ ಉದಾರ ವಿತ್ತೀಯ ಆಳ್ವಿಕೆಯ ವಿಕೃತಿ-1: ರಾಜ್ಯಗಳಿಗೆ ಜಿಎಸ್ಟಿ ಪರಿಹಾರ ನಿಲ್ಲಿಸಿರುವ ಮೋದಿ ಸರಕಾರ
ದೇಶದ ಅದೃಷ್ಟಹೀನ ಅಲ್ಪ ಸಂಖ್ಯಾತರ ಮೇಲೆ ಆರ್ಭಟಿಸುವ, ಜಬರ್ದಸ್ತು ಮಾಡುವ, ಆಡಂಬರದ ಗಂಡಸುತನ ತೋರಿಸುವ ಮೋದಿ ಸರ್ಕಾರವು ಹಣಕಾಸು ಬಂಡವಾಳದ ವಿರುದ್ಧ ನಿಲ್ಲುವ ಎದೆಗಾರಿಕೆ ಹೊಂದಿಲ್ಲ. ಬದಲಿಗೆ ರಾಜ್ಯಗಳನ್ನು ಆರ್ಥಿಕವಾಗಿ ಹಿಂಡಲು ಮುಂದಾಗುತ್ತದೆ, ರಾಜ್ಯಗಳಿಗೆ ಜಿಎಸ್ಟಿ ನಷ್ಟ ಪರಿಹಾರದ ಹಣ ಕೊಡುವುದನ್ನು ನಿಲ್ಲಿಸುತ್ತದೆ, ಬಡವರ ಕಲ್ಯಾಣ ಕಾರ್ಯಕ್ರಮಗಳ ವೆಚ್ಚದ ಕಡಿತವನ್ನು ಮಾಡುತ್ತದೆ. ಅದು, ಹಣಕಾಸು ಬಂಡವಾಳವು ಅರ್ಥವ್ಯವಸ್ಥೆಗೆ ಆಘಾತ ತಲುಪಿಸುವಂತಹ ಆಜ್ಞೆಗಳನ್ನು ಕೊಂಡೊಯ್ಯುವ ಕೊಳವೆಯ ಪಾತ್ರ ವಹಿಸಿದೆ. ಇಲ್ಲಿ ನವ ಉದಾರ ಆಳ್ವಿಕೆಯ ವಿಕೃತಿಯ ಪ್ರಭಾವ ಸ್ಪಷ್ಟವಾಗಿ ಕಾಣುತ್ತದೆ.
-ಪ್ರೊ. ಪ್ರಭಾತ್ ಪಟ್ನಾಯಕ್
ಅನು: ಕೆ.ಎಂ. ನಾಗರಾಜ್
ಒಂದು ಅರ್ಥವ್ಯವಸ್ಥೆಯಲ್ಲಿ ವರಮಾನಗಳ ವೃದ್ಧಿ ನಿಧಾನಗೊಳ್ಳುತ್ತಿರುವಾಗ, ಸರ್ಕಾರದ ತೆರಿಗೆ ಆದಾಯದ ಬೆಳವಣಿಗೆಯೂ ನಿಧಾನಗೊಳ್ಳುತ್ತದೆ. ಆದಾಗ್ಯೂ, ಸರ್ಕಾರಕ್ಕೆ ಕೆಲವು ನಿರ್ದಿಷ್ಟ ವೆಚ್ಚಗಳನ್ನು ಕೈಗೊಳ್ಳಲೇಬೇಕಾದ ಅನಿವಾರ್ಯತೆ ಇರುತ್ತದೆ. ಅಂತಹ ಅನಿವಾರ್ಯ ವೆಚ್ಚಗಳನ್ನು ಹೊಂದಿಸಿಕೊಳ್ಳುವ ಸಲುವಾಗಿ, ಸರ್ಕಾರವು ಅಧಿಕ ತೆರಿಗೆಗಳನ್ನು ಹೇರಬೇಕಾಗುತ್ತದೆ; ಇಲ್ಲವೇ ಸಾಲಮಾಡಬೇಕಾಗುತ್ತದೆ (ಅಂದರೆ, ವಿತ್ತೀಯ ಕೊರತೆಯ ಗಾತ್ರ ದೊಡ್ಡದಾಗುತ್ತದೆ).
ಮಹಾ ಯದ್ಧಾನಂತರದ ಕಾಲದಲ್ಲಿ ಎಲ್ಲ ಬಂಡವಾಳಶಾಹಿ ದೇಶಗಳೂ (ಆಗ, ಈ ದೇಶಗಳು ತಮ್ಮ ಅರ್ಥವ್ಯವಸ್ಥೆಯ ಮೇಲೆ ನಿಯಂತ್ರಣ ಹೊಂದಿದ್ದವು) ತಮ್ಮ ಅರ್ಥವ್ಯವಸ್ಥೆಯು ಮಂದಗತಿಗೆ ಇಳಿದಾಗ ತಮ್ಮ ವಿತ್ತೀಯ ಕೊರತೆಯನ್ನು ಹೆಚ್ಚಿಸಿಕೊಳ್ಳುತ್ತಿದ್ದವು, ಅಂದರೆ ಸಾಲ ಮಾಡುತ್ತಿದ್ದವು. ಸಾಲ ಮಾಡಿದ ಹಣವನ್ನು ಸರ್ಕಾರಗಳು ಧಾರಾಳವಾಗಿ ಖರ್ಚು ಮಾಡುತ್ತಿದ್ದ ಕಾರಣದಿಂದಾಗಿ, ಬೇಡಿಕೆ ಕುದುರುತ್ತಿತ್ತು ಮತ್ತು ಅರ್ಥವ್ಯವಸ್ಥೆಯು ಚೇತರಿಸಿಕೊಳ್ಳುತ್ತಿತ್ತು. ಇಂತಹ ವಿದ್ಯಮಾನವನ್ನು ಒಂದು ಸ್ವಯಂ ಸ್ಥಿರಕಾರಿ (automatic stabiliser) ಎಂಬುದಾಗಿ ಅರ್ಥಶಾಸ್ತ್ರದ ಪಠ್ಯ ಪುಸ್ತಕಗಳು ತಿಳಿಸುತ್ತವೆ.
ಸರ್ಕಾರಗಳು ಸಂದರ್ಭಾನುಸಾರವಾಗಿ ಸಾಲ ಮಾಡಿ ಅದನ್ನು ಖರ್ಚು ಮಾಡುತ್ತಿದ್ದ ಸಂಗತಿಯು, ತಮ್ಮ ಸಾಮಾಜಿಕ ಮತ್ತು ಆರ್ಥಿಕ ನೀತಿಗಳ ಮೇಲೆ ಎಲ್ಲ ದೇಶಗಳೂ ನಿಯಂತ್ರಣ ಹೊಂದಿದ್ದ ಕಾಲದಲ್ಲಿ ಸಂಗತವಾಗಿತ್ತು. ಆದರೆ, ನವ ಉದಾರವಾದದ ಆಳ್ವಿಕೆಯಲ್ಲಿ ಈ ಸಂಗತಿಯು ಅಸಂಗತವಾಗಿದೆ. ನವ ಉದಾರವಾದದ ಆಳ್ವಿಕೆಯಲ್ಲಿ, ಅರ್ಥವ್ಯವಸ್ಥೆಯ ಮಂದಗತಿಯಿಂದಾಗಿ ತೆರಿಗೆ ಸಂಗ್ರಹ ಇಳಿದಾಗ, ಸರ್ಕಾರವು ಬಂಡವಾಳಗಾರರ ಮೇಲೆ ಅಧಿಕ ತೆರಿಗೆ ವಿಧಿಸಲೂ ಆಗದ ಅಥವಾ ಹೆಚ್ಚು ಸಾಲ ಮಾಡಲೂ ಆಗದ ಪರಿಸ್ಥಿತಿಯಲ್ಲಿದೆ.
ಏಕೆಂದರೆ, ಈ ಎರಡೂ ಕ್ರಮಗಳನ್ನು ಅಂತಾರಾಷ್ಟ್ರೀಯ ಹಣ ಕಾಸು ಬಂಡವಾಳವು ವಿರೋಧಿಸುತ್ತದೆ. ಅದರ ಈ ನಿಲುವಿಗೆ ಸರ್ಕಾರ ಒಪ್ಪಿಕೊಳ್ಳದಿದ್ದರೆ ಬಂಡವಾಳವು ದೇಶದಿಂದ ಪಲಾಯನ ಮಾಡಿ ಒಂದು ಆರ್ಥಿಕ ಬಿಕ್ಕಟ್ಟು ಉಂಟಾಗುತ್ತದೆ. ಒಂದು ವೇಳೆ, ದುಡಿಯುವ ಜನತೆಯ ಮೇಲೆ ಅಧಿಕ ತೆರಿಗೆಗಳ ಭಾರ ಹೊರಿಸಿದರೆ, ಆಗಲೂ, ಒಟ್ಟಾರೆ ಬೇಡಿಕೆ ವೃದ್ಧಿಸುವುದಿಲ್ಲ. ಹಾಗಾಗಿ, ಅರ್ಥವ್ಯವಸ್ಥೆಯ ಮಂದಗತಿ ನಿಲ್ಲದು.
ಒಂದು ವಾಸ್ತವಾಂಶವಾಗಿ ಹೇಳುವುದಾದರೆ, ಅಮೇರಿಕಾ ದೇಶವನ್ನು ಹೊರತುಪಡಿಸಿದರೆ, ಎಲ್ಲಾ ದೇಶಗಳೂ ತಮ್ಮ ವಿತ್ತೀಯ ಕೊರತೆಯು ತಮ್ಮ ದೇಶದ ಜಿಡಿಪಿಯ 3% ಮೀರದಂತೆ ಕಾನೂನು ಮಾಡಿಕೊಂಡಿವೆ. ಭಾರತದಲ್ಲಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತಮ್ಮ ವಿತ್ತೀಯ ಕೊರತೆಯು ತಮ್ಮ ತಮ್ಮ ಜಿಡಿಪಿಯ 3% ಮೀರದಂತೆ ಕಾನೂನು ಮಾಡಿಕೊಂಡಿವೆ. ಅರ್ಥವ್ಯವಸ್ಥೆಯು ಮಂದಗತಿಗೆ ಇಳಿದಾಗ ತೆರಿಗೆ ಸಂಗ್ರಹವೂ ಇಳಿಯಲೇಬೇಕಾಗುತ್ತದೆ. ಹಾಗಾಗಿ ಸರ್ಕಾರವು ಸಾರ್ವಜನಿಕರಿಗಾಗಿ ಕೈಗೊಳ್ಳುವ ಖರ್ಚುಗಳೂ ಇಳಿಯುತ್ತವೆ.
ಆದ್ದರಿಂದ, ಒಂದು ನವ ಉದಾರ ಆಳ್ವಿಕೆಯಲ್ಲಿ, ಸರ್ಕಾರವು ಕೈಗೊಳ್ಳುವ ಖರ್ಚು ವೆಚ್ಚಗಳು, ಬೇಡಿಕೆ ಕುದುರಿಸುವ ಮತ್ತು ಅರ್ಥವ್ಯವಸ್ಥೆ ಚೇತರಿಸಿಕೊಳ್ಳುವ ಸ್ವಯಂ ಸ್ಥಿರಕಾರಿ ಪರಿಣಾಮವನ್ನು ನವ ಉದಾರ ಆಳ್ವಿಕೆ ಬರುವ ಮೊದಲಿನ ರೀತಿಯಲ್ಲಿ ಬೀರುವುದಿಲ್ಲ. ಮೇಲಾಗಿ, ಅರ್ಥವ್ಯವಸ್ಥೆಯು ಮಂದಗತಿಗೆ ಇಳಿದಾಗ ತೆರಿಗೆ ಸಂಗ್ರಹವೂ ಇಳಿಯುತ್ತದೆ ಮತ್ತು ಸರ್ಕಾರವು ಸಾರ್ವಜನಿಕರಿಗಾಗಿ ಕೈಗೊಳ್ಳುವ ಖರ್ಚುಗಳೂ ಇಳಿಯುತ್ತವೆ.
ಅದರ ಪರಿಣಾಮವಾಗಿ ಅರ್ಥವ್ಯವಸ್ಥೆಯು ಇನ್ನೂ ಹೆಚ್ಚಿನ ಮಂದಗತಿಗೆ ಇಳಿಯುತ್ತದೆ. ಸರ್ಕಾರದ ಕಡಿಮೆ ಖರ್ಚುಗಳು ಆವರ್ತಗಳಲ್ಲಿ ಉಂಟಾಗುವ ಬಿಕ್ಕಟ್ಟಿಗೆ ಇಂಬು ಕೊಡುತ್ತವೆ ಎಂದು ಹೇಳುವುದುಂಟು. ಬಿಕ್ಕಟ್ಟು ಯಾವಾಗಲೂ ಆವರ್ತನಗೊಳ್ಳುತ್ತದೆ ಎಂದು ಸೂಚಿಸುವ ಕಾರಣದಿಂದ ಈ ಹೇಳಿಕೆಯು ನಮ್ಮನ್ನು ತಪ್ಪುದಾರಿಗೆ ಎಳೆಯುತ್ತದೆ.
ಅನಿವಾರ್ಯ ವೆಚ್ಚಗಳನ್ನು ಹೊಂದಿಸಿಕೊಳ್ಳುವ ಸಲುವಾಗಿ ಸರ್ಕಾರಗಳು ಹೆಚ್ಚಿನ ಮಟ್ಟದ ಸಾಲ ಮಾಡುವ ಕ್ರಮವನ್ನು ವಿತ್ತೀಯ ಹೊಣೆಗಾರಿಕೆಯ ಹೆಸರಿನಲ್ಲಿ ಕೈಬಿಡಲಾಗಿದೆ ಮತ್ತು ಎಲ್ಲ ಸರ್ಕಾರಗಳು ವಿತ್ತೀಯ ಶಿಸ್ತು ಪಾಲಿಸುವಂತೆ ಆಜ್ಞಾಪಿಸಲಾಗಿದೆ. ಹಿಂದೆ, ಸರ್ಕಾರಗಳು ಸಂದರ್ಭಕ್ಕನುಸಾರವಾಗಿ ಹೆಚ್ಚಿನ ಮಟ್ಟದ ಸಾಲ ಮಾಡುತ್ತಿದ್ದ ಕ್ರಮವು ಅರ್ಥವ್ಯವಸ್ಥೆಯು ಮಂದಗತಿಗೆ ಇಳಿಯದಂತೆ ರಕ್ಷಿಸುವ ಒಂದು ತಡೆ ಗೋಡೆಯಂತೆ ಕೆಲಸ ಮಾಡುತ್ತಿತ್ತು. ಅಂತಹ ಕ್ರಮವನ್ನು ವಿರೋಧಿಸುವ ನವ ಉದಾರ ಆಳ್ವಿಕೆಯ ಹಠಮಾರಿತನದ ನಿಲುವು ಅರ್ಥವ್ಯವಸ್ಥೆಯ ಮಂದಗತಿಯನ್ನು ಅಧಿಕಗೊಳಿಸುತ್ತದೆ. ಈ ಅಂಶವೇ ನವ ಉದಾರ ವಿತ್ತೀಯ ಆಳ್ವಿಕೆಯ ವಿಕೃತಿಯ ತಿರುಳು.
ಈ ಹಿನ್ನೆಲೆಯಲ್ಲಿ, ತಾನು ಸಿಲುಕಿರುವ ಇಕ್ಕಟ್ಟಿನಿಂದ ನುಣಿಚಿಕೊಳ್ಳಲು ಸರ್ಕಾರವು ಎಲ್ಲ ರೀತಿಯ ಕುಯುಕ್ತಿಗಳನ್ನೂ ಬಳಸುತ್ತಿದೆ. ಭಾರತದಲ್ಲಿ ಈಗ ಎರಡು ಇಂತಹ ಕುಯುಕ್ತಿಯ ಪ್ರಯತ್ನಗಳನ್ನು ಮಾಡಲಾಗುತ್ತಿದೆ. ಒಂದು, ಕೇಂದ್ರ ಸರ್ಕಾರವು ತಾನು ಹೊರಬೇಕಾಗಿರುವ ವಿತ್ತೀಯ ಭಾರವನ್ನು, ಬಲವಂತವಾಗಿ ಮತ್ತು ಸಾಂವಿಧಾನಿಕ ಹೊಣೆಗಾರಿಕೆಯನ್ನು ಉಲ್ಲಂಘಿಸಿ, ರಾಜ್ಯ ಸರ್ಕಾರಗಳ ಹೆಗಲಿಗೆ ಹೊರಿಸುತ್ತಿದೆ. ಇಂತಹ ಇನ್ನೊಂದು ಪ್ರಯತ್ನವೆಂದರೆ, ಸಾರ್ವಜನಿಕ ವಲಯವನ್ನು ಖಾಸಗಿಯವರಿಗೆ ಮಾರಲು ಸರ್ಕಾರ ಹುಚ್ಚು ಅವಸರದಲ್ಲಿದೆ. ಹೇಗಾದರೂ ಸರಿ ಒಂದಿಷ್ಟು ಹಣ ಕೈಗೆ ಸಿಕ್ಕಿದರೆ ಸಾಕು ಎನ್ನುವ ಅದರ ಮಂದದೃಷ್ಠಿಯ ಮನೋಭಾವ ಖಂಡನೀಯ. ಈ ಎರಡೂ ಪ್ರಯತ್ನಗಳನ್ನು ಒಂದೊಂದಾಗಿ ಪರಿಶೀಲಿಸೋಣ.
ಕೇಂದ್ರ ಸರ್ಕಾರವು ತಾನು ಹೊರಬೇಕಾಗಿರುವ ರಕ್ಷಣಾ ವೆಚ್ಚದ ಭಾರವನ್ನು, ಬಲವಂತವಾಗಿ ಮತ್ತು ಸಾಂವಿಧಾನಿಕ ಹೊಣೆಗಾರಿಕೆಯನ್ನು ಉಲ್ಲಂಘಿಸಿ, ಹೇಗೆ ರಾಜ್ಯ ಸರ್ಕಾರಗಳ ಹೆಗಲಿಗೆ ಹೊರಿಸಲು ಪ್ರಯತ್ನಿಸುತ್ತಿದೆ ಎಂಬ ಅಂಶವನ್ನು ಈಗಾಗಲೇ ಚರ್ಚಿಸಲಾಗಿದೆ (ಜನಶಕ್ತಿ- ಸಂಚಿಕೆ 37, ಸೆಪ್ಟೆಂಬರ್ 9-15, 2019). ದೇಶದ ರಕ್ಷಣೆ ಸಂಬಂಧಿತ ಖರ್ಚು ವೆಚ್ಚಗಳನ್ನು ಮತ್ತು ರಕ್ಷಣೆಗೆ ಸಂಬಂಧಿಸಿದ ಎಲ್ಲ ತೀರ್ಮಾನಗಳನ್ನು ತೆಗೆದುಕೊಳ್ಳುವ ಜವಾಬ್ದಾರಿಯನ್ನು ಪ್ರತ್ಯೇಕವಾಗಿ ಮತ್ತು ಏಕಮಾತ್ರವಾಗಿ ಕೇಂದ್ರ ಸರ್ಕಾರಕ್ಕೆ ವಹಿಸಲಾಗಿದೆ.
ಇದನ್ನು ಸಂವಿಧಾನದ ಏಳನೆಯ ಷೆಡ್ಯೂಲಿನಲ್ಲಿ ನಿರ್ದಿಷ್ಟವಾಗಿ ನಮೂದಿಸಲಾಗಿದೆ. ಈ ಸಂವಿಧಾನಿಕ ಏರ್ಪಾಟಿನಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಆದಾಗ್ಯೂ, ತನ್ನ ಸಾಂವಿಧಾನಿಕ ಹೊಣೆಗಾರಿಕೆಯನ್ನು ಉಲ್ಲಂಘಿಸಿ, ಕೇಂದ್ರ ಸರ್ಕಾರವು ತನ್ನ ಪಾಲಿಗೆ ವಹಿಸಿರುವ ರಕ್ಷಣಾ ಖರ್ಚು ವೆಚ್ಚಗಳನ್ನು, ಕೇಂದ್ರ ಮತ್ತು ರಾಜ್ಯಗಳ ನಡುವೆ ಹಂಚಿಕೆಯಾಗುವ ಹಣದಿಂದ ಮುರಿದುಕೊಳ್ಳಲು ಆದೇಶಿಸುವಂತೆ ಹದಿನೈದನೆಯ ಹಣ ಕಾಸು ಆಯೋಗವನ್ನು ಕೋರಿದೆ. ಅಂದರೆ, ಕೇಂದ್ರ ಸರ್ಕಾರವೇ ಹೊರಬೇಕಾದ ರಕ್ಷಣಾ ವೆಚ್ಚದ ಹೊರೆಯನ್ನು ಬಲವಂತವಾಗಿ ರಾಜ್ಯ ಸರ್ಕಾರಗಳಿಗೆ ವರ್ಗಾಯಿಸಲಾಗುತ್ತಿದೆ.
ಇಲ್ಲಿಯವರೆಗೆ, ಈ ವಿಷಯವು, ರಾಜ್ಯಗಳಿಗೆ ಒಡ್ಡಿದ ಒಂದು ಬೆದರಿಕೆಯಾಗಿ ಉಳಿದಿದೆ. ಆದರೆ, ಇನ್ನೊಂದು ವಿಷಯದಲ್ಲಿ-ಜಿಎಸ್ಟಿಯ ನಷ್ಟ ತುಂಬಿಕೊಡುವ ವಿಷಯದಲ್ಲಿ – ಕೇಂದ್ರ ಸರ್ಕಾರವು ಈಗಾಗಲೇ ರಾಜ್ಯಗಳನ್ನು ಹಿಂಡಿ ಹಿಪ್ಪೆ ಮಾಡಿದೆ. ಜಿಎಸ್ಟಿ ಜಾರಿ ಮಾಡುವ ಸಂದರ್ಭದಲ್ಲಿ, ರಾಜ್ಯಗಳು ಜಿಎಸ್ಟಿ ಪದ್ಧತಿಯನ್ನು ಒಪ್ಪಿಕೊಳ್ಳುವಂತೆ ಅವುಗಳ ಮನ ಒಲಿಸುವ ಸಲುವಾಗಿ, ಜಿಎಸ್ಟಿಯ ಜಾರಿಯಿಂದ ರಾಜ್ಯಗಳಿಗೆ ಉಂಟಾಗುವ ತೆರಿಗೆ ಆದಾಯದ ನಷ್ಟವನ್ನು ಐದು ವರ್ಷಗಳ ಅವಧಿಯವರೆಗೆ ತುಂಬಿಕೊಡುತ್ತೇವೆ ಎಂದು ಕೇಂದ್ರ ಸರ್ಕಾರವು ರಾಜ್ಯಗಳಿಗೆ ಭರವಸೆ ಕೊಟ್ಟಿತ್ತು.
ಈ ಉದ್ದೇಶಕ್ಕಾಗಿ ಒಂದು ಪರಿಹಾರ ನಿಧಿಯನ್ನೂ ಸ್ಥಾಪಿಸಲಾಗಿತ್ತು ಮತ್ತು ಕೆಲವು ನಿರ್ದಿಷ್ಟ ತೆರಿಗೆಗಳಿಂದ ಬರುವ ಹಣವನ್ನು ಈ ನಿಧಿಗೆ ತುಂಬುವ ಏರ್ಪಾಟನ್ನೂ ಮಾಡಲಾಗಿತ್ತು. ತೆರಿಗೆ ಆದಾಯದ ನಷ್ಟವನ್ನು ಲೆಕ್ಕ ಹಾಕುವ ಸಲುವಾಗಿ, ಒಂದು ಮೂಲ ವರ್ಷದ ತೆರಿಗೆ ಆದಾಯದ ಮೇಲೆ ಪ್ರತಿ ವರ್ಷವೂ 14% ತೆರಿಗೆ ಅದಾಯ ಹೆಚ್ಚುವ ಒಂದು ವಾಸ್ತವಿಕ ಅಂದಾಜಿನ ಮೇಲೆ, ರಾಜ್ಯಗಳಿಗೆ ಉಂಟಾಗುವ ತೆರಿಗೆ ಆದಾಯದ ನಷ್ಟವನ್ನು ಲೆಕ್ಕ ಹಾಕುವ ವಿಧಾನವನ್ನೂ ಒಪ್ಪಿಕೊಳ್ಳಲಾಗಿತ್ತು.
ಆದರೆ, ಕೇಂದ್ರ ಸರ್ಕಾರವು ಆಗಸ್ಟ್ ತಿಂಗಳಿನಿಂದೀಚೆಗೆ ರಾಜ್ಯಗಳಿಗೆ ಜಿಎಸ್ಟಿ ನಷ್ಟ ಪರಿಹಾರದ ಹಣ ಕೊಡುವುದನ್ನು ನಿಲ್ಲಿಸಿದೆ. ನಷ್ಟ ಪರಿಹಾರ ನಿಧಿಯಲ್ಲಿ ಸಾಕಷ್ಟು ಹಣವಿಲ್ಲ ಎಂದು ಹೇಳುತ್ತಿದೆ. ಆದರೆ, ರಾಜ್ಯಗಳಿಗೆ ತೆರಿಗೆ ಆದಾಯ ನಷ್ಟ ತುಂಬಿಕೊಡುವುದಾಗಿ ಕೇಂದ್ರ ಕೊಟ್ಟ ಭರವಸೆಗೂ ಮತ್ತು ನಿಧಿಯಲ್ಲಿ ಎಷ್ಟು ಹಣ ಇದೆ ಎಂಬುದಕ್ಕೂ ಸಂಬಂಧವಿಲ್ಲ; ನಷ್ಟ ತುಂಬಿಕೊಡುವ ಅಂಶವನ್ನು ಸಂವಿಧಾನ ತಿದ್ದುಪಡಿಯಲ್ಲಿ ನಮೂದಿಸಲಾಗಿತ್ತು; ನಷ್ಟ ಪರಿಹಾರ ನಿಧಿಯಲ್ಲಿ ಸಾಕಷ್ಟು ಹಣವಿಲ್ಲದಿದ್ದರೆ ಕೇಂದ್ರ ಸರ್ಕಾರವು ತನ್ನ ಪಾಲಿನ ಜಿಎಸ್ಟಿ ಆದಾಯದಿಂದಲೇ ಕೊಡಲಿ ಎಂದು ರಾಜ್ಯಗಳು ಹೇಳುತ್ತಿರುವುದು ಸರಿಯಾಗಿಯೇ ಇದೆ.
ಜಿಎಸ್ಟಿ ಜಾರಿಯಿಂದಾಗಿ ಪ್ರಸಕ್ತ ಹಣ ಕಾಸು ವರ್ಷದ ಹೆಚ್ಚಿನ ತಿಂಗಳುಗಳಲ್ಲಿ ಮಾಸಿಕ ತೆರಿಗೆ ಸಂಗ್ರಹವು ಒಂದು ಲಕ್ಷ ಕೋಟಿ ರೂ. ದಾಟುತ್ತಿಲ್ಲ ಎಂಬುದು ಎಲ್ಲರಿಗೂ ತಿಳಿದ ವಿಷಯವೇ. ಜಿಎಸ್ಟಿಯಲ್ಲಿರುವ ನ್ಯೂನತೆಗಳ ಕಾರಣದಿಂದಾಗಿ ಮತ್ತು ಮಂದಗತಿಗೆ ಇಳಿದಿರುವ ಅರ್ಥವ್ಯವಸ್ಥೆಯ ಕಾರಣದಿಂದಾಗಿ ತೆರಿಗೆ ಸಂಗ್ರಹದಲ್ಲಿ ಕೊರತೆಯುಂಟಾಗುತ್ತಿದೆ. ಹಬ್ಬಗಳ ಕಾರಣದಿಂದಾಗಿ ವಹಿವಾಟು ಹೆಚ್ಚಿಗೆ ಇದ್ದ ನವೆಂಬರ್ ತಿಂಗಳಿನಲ್ಲಿ ಮಾತ್ರ ಒಂದು ಲಕ್ಷ ಕೋಟಿಗಿಂತಲೂ ಜಾಸ್ತಿ ತೆರಿಗೆ ಸಂಗ್ರಹವಾಗಿತ್ತು.
ಆದಾಯದ ಕೊರತೆಯನ್ನು ಎದುರಿಸುತ್ತಿರುವ ಕೇಂದ್ರ ಸರ್ಕಾರವು, ನಷ್ಟ ತುಂಬಿಕೊಡುವ ಸಂವಿಧಾನಿಕ ಭರವಸೆಯನ್ನು ಮುರಿದು, ತಲೆಯ ಮೇಲೆ ಮರಿಗಳನ್ನು ಹೊತ್ತಿದ್ದ ಕೋತಿಯೊಂದು ನೀರಿನ ಮಟ್ಟ ಮೂಗಿನವರೆಗೆ ಏರಿದಾಗ ಆ ಮರಿಗಳನ್ನೇ ನಿಂತ ಕಾಲ ಕೆಳಗೆ ಹಾಕಿಕೊಂಡು ಜೀವ ಉಳಿಸಿಕೊಳ್ಳುವ ಕೋತಿಯ ರೀತಿಯಲ್ಲಿ ರಾಜ್ಯಗಳನ್ನು ತುಳಿಯುತ್ತಿದೆ. ಅದರ ಜೊತೆಯಲ್ಲಿ, ಹಂಚಿಕೆಯಾಗಬೇಕಾದ ಸಂಯೋಜಿತ ಜಿಎಸ್ಟಿ(ಐಜಿಎಸ್ಟಿ) ಸಂಗ್ರಹದ ಸಿಂಹ ಪಾಲನ್ನು ಕೇಂದ್ರವೇ ಇಟ್ಟುಕೊಳ್ಳುತ್ತಿದೆ.
ಕೇಂದ್ರ ಸರ್ಕಾರದ ಇಂತಹ ಇಬ್ಬಗೆಯ ಹಿಂಡುವಿಕೆಯಿಂದಾಗಿ ರಾಜ್ಯಗಳ ಹಣಕಾಸಿನ ಪರಿಸ್ಥಿತಿ ಕಳವಳಕಾರಿಯಾಗಿದೆ. ಬಡವರ ಅರೋಗ್ಯ ರಕ್ಷಣೆ, ಶಿಕ್ಷಣ ಮುಂತಾದ ಕಲ್ಯಾಣ ಕಾರ್ಯಕ್ರಮಗಳ ವೆಚ್ಚದ ಹೆಚ್ಚಿನ ಭಾಗವನ್ನು ರಾಜ್ಯಗಳು ಭರಿಸುವ ಕಾರಣದಿಂದಾಗಿ, ರಾಜ್ಯಗಳ ಆದಾಯ ಇಳಿದಾಗ ಇಂತಹ ಕಲ್ಯಾಣ ಕಾರ್ಯಕ್ರಮಗಳ ವೆಚ್ಚಗಳ ಇಳಿಕೆಯು ಬಡವರನ್ನು ಇನ್ನೂ ಹೆಚ್ಚಿನ ಬಡತನಕ್ಕೆ ತಳ್ಳುತ್ತದೆ.
ಕೇಂದ್ರ ಸರ್ಕಾರವು ಸಾಲ ಮಾಡುವ ಮೂಲಕ (ಅಂದರೆ, ವಿತ್ತೀಯ ಕೊರತೆಯನ್ನು ಹೆಚ್ಚಿಸಿಕೊಳ್ಳುವ ಮೂಲಕ) ರಾಜ್ಯಗಳಿಗೆ ನಷ್ಟ ತುಂಬಿಕೊಡುವ ಭರವಸೆಯನ್ನು ಈಡೇರಿಸಿದ್ದರೆ, ಈ ರೀತಿಯಲ್ಲಿ ರಾಜ್ಯಗಳ ಹಿಂಡುವಿಕೆಯನ್ನು ತಪ್ಪಿಸಬಹುದಿತ್ತು. (ಬಂಡವಾಳಿಗರ ಮೇಲೆ ತೆರಿಗೆ ಹಾಕುವ ಕೆಚ್ಚೆದೆ ಕೇಂದ್ರ ಸರ್ಕಾರಕ್ಕೆ ಇಲ್ಲವೆಂಬ ಅಂಶವನ್ನು ಇತ್ತೀಚೆಗೆ ಅದು ಬಂಡವಾಳಿಗರಿಗೆ ಕೊಟ್ಟಿರುವ ತೆರಿಗೆ ವಿನಾಯ್ತಿಯ ಕ್ರಮವೇ ಸಾಬೀತು ಮಾಡುತ್ತದೆ).
ವಿತ್ತೀಯ ಕೊರತೆಯನ್ನು ಹೆಚ್ಚಿಸಿಕೊಂಡು ಒಟ್ಟಾರೆ ಬೇಡಿಕೆಯನ್ನು ಉತ್ತೇಜಿಸಿ ಉದ್ಯೋಗ ಸೃಷ್ಠಿಸಬಹುದಿತ್ತು, ಅದೂ ಕೂಡ ಹಣದುಬ್ಬರಕ್ಕೆ ಎಡೆ ಇಲ್ಲದಂತೆ. ಇತ್ತೀಚೆಗೆ ಹಣದುಬ್ಬರ ನುಸುಳುತ್ತಿರುವುದು ನಿಜವಾದರೂ, ಅದು ನಿರ್ದಿಷ್ಟ ವಲಯಕ್ಕೆ (ಅದಕ್ಕೆ ಈರುಳ್ಳಿ ಒಂದು ಉದಾಹರಣೆ) ಸಂಬಂಧಿಸುತ್ತದೆ. ಸರಬರಾಜಿಗೆ ಸಂಬಂಧಿಸಿದ ಇಂತಹ ಸಮಸ್ಯೆಗಳನ್ನು ಪಡಿತರ ವ್ಯವಸ್ಥೆಯ ಮೂಲಕ ನಿವಾರಿಸಿಕೊಂಡು, ಹಣದುಬ್ಬರಕ್ಕೆ ಆಸ್ಪದವಿಲ್ಲದ ರೀತಿಯಲ್ಲಿ, ವಿತ್ತೀಯ ಕೊರತೆಯನ್ನು ಹೆಚ್ಚಿಸಿಕೊಳ್ಳಬಹುದಿತ್ತು.
ಆದರೆ, ವಿತ್ತೀಯ ಕೊರತೆಯನ್ನು ಈ ರೀತಿಯಲ್ಲಿ ಹೆಚ್ಚಿಸಿಕೊಳ್ಳುವುದನ್ನು ಅಂತಾರಾಷ್ಟ್ರೀಯ ಹಣಕಾಸು ಬಂಡವಾಳವು ಒಪ್ಪುವುದಿಲ್ಲ. ದೇಶದ ಅದೃಷ್ಟಹೀನ ಅಲ್ಪ ಸಂಖ್ಯಾತರ ಮೇಲೆ ಆರ್ಭಟಿಸುವ, ಜಬರ್ದಸ್ತು ಮಾಡುವ, ಆಡಂಬರದ ಗಂಡಸುತನ ತೋರಿಸುವ ಮೋದಿ ಸರ್ಕಾರವು ಹಣಕಾಸು ಬಂಡವಾಳದ ವಿರುದ್ಧ ನಿಲ್ಲುವ ಎದೆಗಾರಿಕೆ ಹೊಂದಿಲ್ಲ.
ಹಣಕಾಸು ಬಂಡವಾಳವು ಮುಖ ಸಿಂಡರಿಕೊಳ್ಳುವಂತಹ ಯಾವ ಕ್ರಮವನ್ನೂ ಅದು ಕೈಗೊಳ್ಳುವುದಕ್ಕಿಂತ ರಾಜ್ಯಗಳ ಹಿಂಡುವಿಕೆಯನ್ನು ಇಷ್ಟಪಡುತ್ತದೆ; ಬಡವರ ಕಲ್ಯಾಣ ಕಾರ್ಯಕ್ರಮಗಳ ವೆಚ್ಚದ ಕಡಿತವನ್ನು ಇಷ್ಟಪಡುತ್ತದೆ. ಅದು, ಹಣಕಾಸು ಬಂಡವಾಳವು ಅರ್ಥವ್ಯವಸ್ಥೆಗೆ ಆಘಾತ ತಲುಪಿಸುವಂತಹ ಆಜ್ಞೆಗಳನ್ನು ಕೊಂಡೊಯ್ಯುವ ಕೊಳವೆಯ ಪಾತ್ರ ವಹಿಸಿದೆ ಮತ್ತು ನವ ಉದಾರ ಆಳ್ವಿಕೆಯ ವಿಕೃತಿಯ ಪ್ರಭಾವ ಸ್ಪಷ್ಟವಾಗಿ ಕಾಣುತ್ತದೆ.
( ಈ ವಾರದ ಜನಶಕ್ತಿ ವಾರಪತ್ರಿಕೆಯಲ್ಲಿ ಪ್ರಕಟವಾದ ಲೇಖನ)
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
2027ರ ಜನಗಣತಿ ನಡೆಸಲು ಬಜೆಟ್ ಅಂಗೀಕಾರ
ಸುದ್ದಿದಿನ,ದೆಹಲಿ:2027ರ ಜನಗಣತಿಯನ್ನು ನಡೆಸಲು ಸಂಪುಟವು 11 ಸಾವಿರದ 718 ಕೋಟಿ ರೂಪಾಯಿಗಳ ಬಜೆಟ್ಅನ್ನು ಅಂಗೀಕರಿಸಿದೆ. ಈ ಕುರಿತು ಮಾಹಿತಿ ನೀಡಿದ ಸಚಿವರು, 2027ರ ಜನಗಣತಿಯನ್ನು ಎರಡು ಹಂತಗಳಲ್ಲಿ ನಡೆಸಲಾಗುವುದು ಎಂದು ಹೇಳಿದರು.
ಇದು ಮೊದಲ ಡಿಜಿಟಲ್ ಜನಗಣತಿಯಾಗಲಿದೆ. 2027 ರ ಜನಗಣತಿಯು ಒಟ್ಟಾರೆ 16ನೇ ಮತ್ತು ಸ್ವಾತಂತ್ರ್ಯದ ನಂತರದ 8 ನೇ ಜನಗಣತಿಯಾಗಲಿದೆ. ಭಾರತದ ಜನಗಣತಿಯನ್ನು ವಿಶ್ವದ ಅತಿದೊಡ್ಡ ಆಡಳಿತಾತ್ಮಕ ಮತ್ತು ಸಂಖ್ಯಾಶಾಸ್ತ್ರೀಯ ಕ್ರಮವೆಂದು ಪರಿಗಣಿಸಲಾಗಿದೆ ಎಂದು ಅವರು ತಿಳಿಸಿದರು.
ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿಯು 2026ರ ಹಂಗಾಮಿಗೆ ಕೊಬ್ಬರಿಗೆ ಕನಿಷ್ಠ ಬೆಂಬಲ ಬೆಲೆಗೆ ಅನುಮೋದನೆ ನೀಡಿದೆ. ಬೆಳೆಗಾರರಿಗೆ ಲಾಭದಾಯಕ ಬೆಲೆಗಳನ್ನು ಒದಗಿಸುವ ಸಲುವಾಗಿ, ಸರ್ಕಾರವು 2018-19 ರ ಕೇಂದ್ರ ಬಜೆಟ್ನಲ್ಲಿ ಎಲ್ಲಾ ಕಡ್ಡಾಯ ಬೆಳೆಗಳ ಎಂಎಸ್ಪಿ ಅನ್ನು ಅಖಿಲ ಭಾರತ ಸರಾಸರಿ ಉತ್ಪಾದನಾ ವೆಚ್ಚದ ಕನಿಷ್ಠ 1.5 ಪಟ್ಟು ಮಟ್ಟದಲ್ಲಿ ನಿಗದಿಪಡಿಸಲಾಗುವುದು ಎಂದು ಘೋಷಿಸಿತ್ತು. ಮಿಲ್ಲಿಂಗ್ ಕೊಬ್ಬರಿಗೆ ಎಂಎಸ್ಪಿಯನ್ನು ಕ್ವಿಂಟಲ್ಗೆ 445 ರೂಪಾಯಿಗಳಿಂದ 12 ಸಾವಿರದ 27 ರೂಪಾಯಿಗಳಿಗೆ ಹೆಚ್ಚಿಸಲಾಗಿದೆ ಮತ್ತು ಅದೇ ಅವಧಿಗೆ ಉಂಡೆ ಕೊಬ್ಬರಿಗೆ ಕನಿಷ್ಠ ಬೆಂಬಲ ಬೆಲೆ 2026ರ ಹಂಗಾಮಿಗೆ ಕ್ವಿಂಟಲ್ಗೆ 400 ರೂಪಾಯಿಗಳಿಂದ 12 ಸಾವಿರದ 500 ರೂಪಾಯಿಗಳಿಗೆ ಹೆಚ್ಚಿಸಲಾಗಿದೆ.
ಹೆಚ್ಚಿನ ಕನಿಷ್ಠ ಬೆಂಬಲ ಬೆಲೆಯು ತೆಂಗಿನ ಬೆಳೆಗಾರರಿಗೆ ಉತ್ತಮ ಲಾಭದಾಯಕ ಆದಾಯವನ್ನು ಖಚಿತಪಡಿಸುವುದಲ್ಲದೆ, ದೇಶೀಯವಾಗಿ ಮತ್ತು ಅಂತಾರಾಷ್ಟ್ರೀಯವಾಗಿ ತೆಂಗಿನ ಉತ್ಪನ್ನಗಳಿಗೆ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲು ಕೊಬ್ಬರಿ ಉತ್ಪಾದನೆಯನ್ನು ವಿಸ್ತರಿಸಲು ರೈತರನ್ನು ಪ್ರೋತ್ಸಾಹಿಸುತ್ತದೆ ಎಂದು ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಕೋಲ್ಸೇತು ನೀತಿಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ; ಸಂಪನ್ಮೂಲಗಳ ನ್ಯಾಯಯುತ ಬಳಕೆಗೆ ಒತ್ತು
ಸುದ್ದಿದಿನ,ದೆಹಲಿ:ಕೇಂದ್ರ ಸರ್ಕಾರವು ’ಕೋಲ್ಸೇತು’ ನೀತಿಯನ್ನು ಅನುಮೋದಿಸಿದೆ. ಇದು ವಿವಿಧ ಕೈಗಾರಿಕಾ ಬಳಕೆಗಳು ಮತ್ತು ರಫ್ತಿಗೆ ಕಲ್ಲಿದ್ದಲು ಸಂಪರ್ಕಗಳ ಹರಾಜಿಗೆ ಹೊಸ ವ್ಯವಸ್ಥೆ ಸೃಷ್ಟಿಸುತ್ತದೆ, ಹಾಗೂ ಸಂಪನ್ಮೂಲಗಳ ನ್ಯಾಯಯುತ ಪ್ರವೇಶ ಮತ್ತು ಅತ್ಯುತ್ತಮ ಬಳಕೆಯನ್ನು ಖಚಿತಪಡಿಸುತ್ತದೆ.
ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಆರ್ಥಿಕ ವ್ಯವಹಾರಗಳ ಸಚಿವ ಸಂಪುಟ ಸಮಿತಿಯು ನಿನ್ನೆ ತಡೆರಹಿತ, ದಕ್ಷ ಮತ್ತು ಪಾರದರ್ಶಕ ಬಳಕೆಗಾಗಿ ಕಲ್ಲಿದ್ದಲು ಸಂಪರ್ಕದ ಹರಾಜು ನೀತಿಗೆ ಅನುಮೋದನೆ ನೀಡಿತು.
ನವದೆಹಲಿಯಲ್ಲಿ ನಿನ್ನೆ ಸಂಜೆ ಸಂಪುಟದ ನಿರ್ಧಾರಗಳ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಅಶ್ವಿನಿ ವೈಷ್ಣವ್, 2016ರ ಎನ್ಆರ್ಎಸ್ ನಿಯಂತ್ರಿತವಲ್ಲದ ವಲಯದ ಸಂಪರ್ಕ ಹರಾಜು ನೀತಿಯಲ್ಲಿ ’ಕೋಲ್ಸೇತು’ ಎಂಬ ಪ್ರತ್ಯೇಕ ವ್ಯವಸ್ಥೆಯನ್ನು ಸೇರಿಸುವ ಮೂಲಕ ಯಾವುದೇ ಕೈಗಾರಿಕಾ ಬಳಕೆ ಮತ್ತು ರಫ್ತಿಗೆ ದೀರ್ಘಾವಧಿಯವರೆಗೆ ಹರಾಜು ಆಧಾರದ ಮೇಲೆ ಕಲ್ಲಿದ್ದಲು ಸಂಪರ್ಕಗಳ ಹಂಚಿಕೆಗೆ ಈ ನೀತಿಯು ಅವಕಾಶ ನೀಡುತ್ತದೆ ಎಂದು ಹೇಳಿದರು.
ಕಲ್ಲಿದ್ದಲು ಅಗತ್ಯವಿರುವ ಯಾವುದೇ ದೇಶೀಯ ಖರೀದಿದಾರರು ಅಂತಿಮ ಬಳಕೆಯನ್ನು ಲೆಕ್ಕಿಸದೆ ಸಂಪರ್ಕ ಹರಾಜಿನಲ್ಲಿ ಭಾಗವಹಿಸಬಹುದು ಎಂದು ಅವರು ಹೇಳಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಬೆಂಬಲ ಬೆಲೆ | ಮೆಕ್ಕೆಜೋಳ ಖರೀದಿ ಪ್ರಕ್ರಿಯೆ ಪ್ರಾರಂಭ: ಡಿಸಿ ಗಂಗಾಧರಸ್ವಾಮಿ
ಸುದ್ದಿದಿನ,ದಾವಣಗೆರೆ:ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನಲ್ಲಿ ರೈತರು ಬೆಳೆದ ಮೆಕ್ಕೆಜೋಳವನ್ನು ಬುಧುವಾರದಿಂದ ರೈತರಿಂದ ಖರೀದಿಸಲಾಗುವುದು ಎಂದು ಜಿಲ್ಲಾಧಿಕಾರಿ ಗಂಗಾಧರಸ್ವಾಮಿ ಜಿ.ಎಂ ರವರು ತಿಳಿಸಿದರು.
ಅವರು ಮಂಗಳವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಮೆಕ್ಕೆಜೋಳ ಖರೀದಿ ಕುರಿತು ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪ್ರತಿ ರೈತರಿಂದ ಎಕರೆಗೆ 12 ಕ್ವಿಂಟಾಲ್ ಹಾಗೂ ಗರಿಷ್ಠ 50 ಕ್ವಿಂಟಾಲ್ನಂತೆ ಮೆಕ್ಕೆಜೋಳ ಉತ್ಪನ್ನವನ್ನು ಬೆಂಬಲ ಬೆಲೆ ದರ ಪ್ರತಿ ಕ್ವಿಂಟಾಲ್ಗೆ ರೂ.2400.00 ರಂತೆ ಖರೀದಿಸಲಾಗುವುದು. ಮೆಕ್ಕೆಜೋಳ ಖರೀದಿದಾರರು ಡಿಸ್ಟಿಲರಿ ಮಾಲೀಕರಿಂದ ಮಾರಾಟದ ಮೊತ್ತ ಪಡೆದ ದಿನಾಂಕದಿಂದ ಮೂರು ದಿನಗಳಲ್ಲಿ ಸಂಬಂಧಪಟ್ಟ ರೈತರಿಗೆ ಡಿಬಿಟಿ ಮೂಲಕ ಪಾವತಿಸಲಾಗುವುದು. ಖರೀದಿ ಪ್ರಕ್ರಿಯೆಗೆ ಎನ್ಇಎಂಎಲ್ (NEML) ಸಂಸ್ಥೆಯ ತಂತ್ರಾಂಶ ಅಳವಡಿಸಿಕೊಂಡು ಸರ್ಕಾರದ ಪ್ರೂಟ್ಸ್ ಪೊರ್ಟಲ್(FRUITS Portal) ಮತ್ತು ಡಿಬಿಟಿ ಸಂಯೋಜನೆಯೊಂದಿಗೆ ರೈತರ ನೊಂದಣಿ ಕಾರ್ಯ ನಿರ್ವಹಿಸಲು ಸಂಬಂಧಪಟ್ಟ ಅಧಿಕಾರಿಗಳು ಕ್ರಮವಹಿಸುವಂತೆ ತಿಳಿಸಿದರು.
ಜಿಲ್ಲೆಯಲ್ಲಿ 730 ಮೆಟ್ರಿಕ್ ಟನ್ ಮೆಕ್ಕೆಜೋಳ ಖರೀದಿಸಲು ಗುರಿಯನ್ನು ಹೊಂದಲಾಗಿದೆ. ರೈತರು ಮೆಕ್ಕೆಜೋಳ ಖರೀದಿ ಕೇಂದ್ರಗಳಲ್ಲಿ ಮಾರಾಟ ಮಾಡಿ ಇದರ ಪ್ರಯೋಜನೆ ಪಡೆದುಕೊಳ್ಳುವಂತೆ ತಿಳಿಸಿದರು. ಸಹಕಾರ ಇಲಾಖೆ ಮತ್ತು ಎಪಿಎಂಸಿ ಅಧಿಕಾರಿಗಳು ಮೆಕ್ಕೆಜೋಳ ಖರೀದಿ ಕುರಿತು ಮಾಹಿತಿಯುಳ್ಳ ಕರಪತ್ರಗಳನ್ನು ಮುದ್ರಿಸಿ ರೈತರಿಗೆ ನೀಡಬೇಕು. ಮೆಕ್ಕೆಜೋಳ ಖರೀದಿಯಲ್ಲಿ ಯಾವುದೇ ಗೊಂದಲ ಆಗದಂತೆ ಅಧಿಕಾರಿಗಳು ಕ್ರಮವಹಿಸುವಂತೆ ತಿಳಿಸಿದರು.
ಸಭೆಯಲ್ಲಿ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯ ಜಂಟಿ ನಿರ್ದೇಶಕ ಮಧುಸೂಧನ್, ಸಹಕಾರ ಇಲಾಖೆ ಉಪನಿಬಂಧಕ ಮಧು ಶ್ರೀನಿವಾಸ್, ಅಬಕಾರಿ ಇಲಾಖೆಯ ಉಪ ಆಯುಕ್ತ ಜುನೈದ್ , ಕೃಷಿ ಇಲಾಖೆಯ ಜಂಟಿ ನಿರ್ದೇಶಕರಾದ ಜಿಯಾವುಲ್ಲಾ, ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರಾದ ರಾಘವೇಂದ್ರ ಪ್ರಸಾದ್ ಹಾಗೂ ಇತರರು ಉಪಸ್ಥಿತರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ5 days agoಯಮ ಸ್ವರೂಪಿ ಗ್ಯಾಸ್ ಗೀಸರ್ ಬಳಸೋ ಮುನ್ನ ಎಚ್ಚರ ; ಇವಿಷ್ಟನ್ನು ಪಾಲಿಸಿ ಅಪಾಯ ತಡೆಗಟ್ಟಿ
-
ದಿನದ ಸುದ್ದಿ4 days agoಬೆಂಬಲ ಬೆಲೆ | ಮೆಕ್ಕೆಜೋಳ ಖರೀದಿ ಪ್ರಕ್ರಿಯೆ ಪ್ರಾರಂಭ: ಡಿಸಿ ಗಂಗಾಧರಸ್ವಾಮಿ
-
ದಿನದ ಸುದ್ದಿ4 days agoಪತ್ರಿಕೋದ್ಯಮ ಪದವೀಧರರಿಗೆ ಸಿಹಿ ಸುದ್ದಿ | ವಾರ್ತಾ ಇಲಾಖೆಯಲ್ಲಿ ಅಪ್ರೆಂಟಿಸ್ ತರಬೇತಿ ; ಅರ್ಜಿ ಆಹ್ವಾನ
-
ದಿನದ ಸುದ್ದಿ3 days agoಅಂಚೆ ಇಲಾಖೆಯಿಂದ ಸೆಲ್ಪ್ ಬುಕ್ಕಿಂಗ್ ಸೌಲಭ್ಯ
-
ದಿನದ ಸುದ್ದಿ2 days agoಮಹಿಳೆಯರ ಪುನರ್ ವಸತಿ ಯೋಜನೆ | ಅರ್ಜಿ ಆಹ್ವಾನ ; ಅವಧಿ ವಿಸ್ತರಣೆ
-
ದಿನದ ಸುದ್ದಿ2 days agoಕೋಲ್ಸೇತು ನೀತಿಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ; ಸಂಪನ್ಮೂಲಗಳ ನ್ಯಾಯಯುತ ಬಳಕೆಗೆ ಒತ್ತು
-
ದಿನದ ಸುದ್ದಿ2 days ago2027ರ ಜನಗಣತಿ ನಡೆಸಲು ಬಜೆಟ್ ಅಂಗೀಕಾರ

