Connect with us

ಸಿನಿ ಸುದ್ದಿ

ನನ್ನ ನೆನಪಲ್ಲಿ ಡಾ ರಾಜಕುಮಾರ್..!

Published

on

  • ಕ್ರಾಂತಿರಾಜ್ ಒಡೆಯರ್, ಪ್ರಾಧ್ಯಾಪಕರು, ಮೈಸೂರು

ಸನ್ 2000 ಅನ್ಸುತ್ತೆ. ಶಬ್ದವೇದಿ ಚಿತ್ರ ರಿಲೀಸ್ ಆಗಿದ್ದ ಸಂದರ್ಭ. 10 ನೇ ತರಗತಿ ಪರೀಕ್ಷೆ ಮುಗಿಸಿ ರಜಾ ದಿನಗಳನ್ನು ಅನುಭವಿಸಲು ಶಿವಾರಗುಡ್ಡದಿಂದ ಮೈಸೂರಿನ ಮಾರ್ಗವಾಗಿ ನಮ್ಮೂರಾದ ಪೂರಿಗಾಲಿಗೆ ಹೋಗುವ ಯೋಜನೆ. ಅಂದಿನ ದಿನಗಳಲ್ಲಿ ಮೈಸೂರಿನಿಂದ ನಮ್ಮೂರಿಗೆ ಇದ್ದ ಕೊನೆಯ ಬಸ್ಸು 7 ಗಂಟೆಗೆ. ಮ್ಯಾಟನಿ ಶೋ ನೋಡ್ಕಂಡು ಊರಿಗೆ ಹೋದರೆ ಆಯಿತು ಅಂತ, ಪ್ರಭಾ ಥೀಯೇಟರ್ ಗೆ ಹೋಗಿ, ಅಲ್ಲಿ ಟಿಕೆಟ್ ತೆಗೆದುಕೊಳ್ಳಲು ನಿಂತಿದ್ದ ಉದ್ದದ ಸಾಲಿನಲ್ಲಿ ನಿಂತಿದ್ದು ಬೆಳಿಗ್ಗೆ 11.30 ಗಂಟೆಗೆ.

ಆದರೆ ನಾನು ಟಿಕೆಟ್ ಕೌಂಟರ್ ಬಳಿ ಬರುವಷ್ಟರಲ್ಲಿ ಮ್ಯಾಟನಿ ಟಿಕೆಟ್ ಮುಗಿದು ಫಸ್ಟ್ ಶೋ ಟಿಕೆಟ್ ಕೊಡೋಕೆ ಶುರು ಮಾಡಿದ್ರು. 4.30 ಗೆ ಫಸ್ಟ್ ಶೋ ಶುರು ಆದ್ರೂ 7 ಗಂಟೆಗೆ ಚಿತ್ರ ಮುಗಿದು, ಹೇಗಾದ್ರು ಮಾಡಿ ಕೊನೆಯ ಬಸ್ ಹಿಡಿದು ಪೂರಿಗಾಲಿ ತಲುಪಬಹುದು ಎಂಬ ಧೈರ್ಯದಲ್ಲಿ ಫಸ್ಟ್ ಶೋ ಟಿಕೆಟ್ ತಕೊಂಡು ಚಿತ್ರ ನೋಡೋಕೆ ಕೂತೆ. ಚಿತ್ರ ಮುಗಿದಾಗ 7 ಗಂಟೆ 10 ನಿಮಿಷ. ಪ್ರಭಾ ಥಿಯೇಟರ್ ನಿಂದ ಓಡೋಡಿ ಛತ್ರಿ ಮರ ಬಸ್ ಸ್ಟಾಪ್ ತಲುಪುವಷ್ಟರಲ್ಲಿ 7 ಗಂಟೆ 15 ನಿಮಿಷ. ಅಷ್ಟು ಹೊತ್ತಿಗಾಗಲೇ ಲಾಸ್ಟ್ ಬಸ್ ಹೊರಟು ಹೋಗಿತ್ತು. ದಿಕ್ಕು ತೋಚದೆ ಅಲ್ಲೇ ನಿಂತಿದ್ದಾಗ ಚಾಮರಾಜನಗರಕ್ಕೆ ಹೋಗುವ ಬಸ್ಸು ಬಂತು.

ಆ ಬಸ್ಸಿನ ಕಂಡೆಕ್ಟರ್, “ಈಗ ಹೊರಟರೆ ನರಸೀಪುರದಲ್ಲಿ ನನಗೆ ಮಿಸ್ ಆದ ಬಸ್ ಸಿಗುತ್ತದೆ” ಎಂದು ಹೇಳಿದ. ಅವನ ಮಾತನ್ನು ನಂಬಿ, ಅದೇ ಬಸ್ಸಿನಲ್ಲಿ ಹೊರಟು ನರಸೀಪುರದಲ್ಲಿ ಇಳಿದುಕೊಂಡೆ. ಅಷ್ಟರಲ್ಲಾಗಲೇ ನಮ್ಮೂರಿನ ಲಾಸ್ಟ್ ಬಸ್ಸು ನರಸೀಪುರವನ್ನೂ ಬಿಟ್ಟು ಹೊರಟಿತ್ತು. ಅಂದು ರಾತ್ರಿ ನರಸೀಪುರದ ಬಸ್ ಸ್ಟ್ಯಾಂಡಿನಲ್ಲೇ ಮಲಗಿ, ಬೆಳಗ್ಗೆ ಎದ್ದು ಮೊದಲ ಬಸ್ಸಿನಲ್ಲೇ ಊರ ಕಡೆ ಪಯಣ. ಊರಲ್ಲಿ ಕಾದಿತ್ತು ನನಗೆ ಸುಪ್ರಭಾತ. ರಾತ್ರಿಯೆಲ್ಲಾ ಎಲ್ಲಿದ್ದೆ? ಏನು ಮಾಡ್ತಾ ಇದ್ದೆ? ಎಸ ಟಿ ಡಿ ಬೂತ್ ಇಂದ ಒಂದು ಫೋನ್ ಆದ್ರೂ ಮಾಡಬಾರದ? ಎಂಬ ಹಲವಾರು ಪ್ರಶ್ನೆಗಳಿಗೆ, ನಾನು ರಾಜಕುಮಾರ್ ಪಿಕ್ಚರ್ ನೋಡೋಕೆ ಹೋಗಿ ಹೀಗಾಯಿತು ಎಂಬ ಸತ್ಯವನ್ನು ಹೇಳಿದರೆ ಮತ್ತಷ್ಟು ಬೊಗಳವನ್ನು ಕೇಳಬೇಕಾದೀತು ಎಂದು ಅರಿತು, ಮನೆಯವರು ಏನಾದ್ರೂ ಅಂದುಕೊಳ್ಳಲಿ ಎಂದು ತೀರ್ಮಾನಿಸಿ, ಮೌನಕ್ಕೆ ಶರಣಾದೆ. ಇದು ರಾಜಕುಮಾರ್ ಅವರ ಅಭಿಮಾನಿಯಾಗಿ ನಾನು ಪಟ್ಟ ಪಾಡು.

ಅಂದ ಹಾಗೆ, ಅಂದಿನ ದಿನಗಳಲ್ಲಿ ನನ್ನ ಸಮಕಾಲೀನರಾಗಲಿ ಅಥವಾ ನಮ್ಮ ಊರಿನಲ್ಲಾಗಲಿ, ರಾಜಕುಮಾರ್ ಅವರ ಅಭಿಮಾನಿಗಳು ಅಂತ ಯಾರೂ ಇರಲಿಲ್ಲ. ಅವಾಗ ಬಂಧನ ವಿಷ್ಣುವರ್ಧನ್, ಏಕಲವ್ಯ ಅಂಬರೀಷ್, ಎಸ್ ಪಿ ಸಾಂಗ್ಲಿಯಾನ ಶಂಕರ್ ನಾಗ್ ಅವರ ಯುಗ. ನಮ್ಮೂರಿನಲ್ಲಿ ಹೆಚ್ಚಿನ ಅಭಿಮಾನಿಗಳು ಇವರಿಗಿದ್ದರೆ, ಕೆಲವರು ಬಾ ನಲ್ಲೆ ಮಧುಚಂದ್ರಕೆಯ ಶಿವರಾಂ ಹಾಗು ಎ ಚಿತ್ರದ ಉಪೇಂದ್ರ ಅವರ ಭಕ್ತರು। ಆಗ ನಾನು ವಿಷ್ಣುವರ್ಧನ್ ಅವರ ಅಭಿಮಾನಿ.

ವಯಸ್ಸಾಗ್ತಾ ಮನಸ್ಸು ಪರಿಪಕ್ವ ಆಗ್ತಾ ಆಗ್ತಾ ಸೆಲೆಕ್ಟಿವ್ ಚಿತ್ರಗಳನ್ನ ನೋಡೋಕೆ ಶುರು ಆಯಿತು. ಆವಾಗ ನಾನು ಟಿ ವಿ ಗಳಲ್ಲಿ ಬರುತ್ತಿದ್ದ ರಾಜಕುಮಾರ್ ಅವರ ಚಿತ್ರಗಳನ್ನು ನೋಡ್ತಾ ನೋಡ್ತಾ ಅವರು ಅಭಿನಯಿಸಿರುವ ಚಿತ್ರಗಳೂ ಇಷ್ಟ ಆದ್ವು. ಹೆಚ್ಚಾಗಿ ರಾಜಕುಮಾರ್ ಅವರ ಅದ್ಬುತ ಅಭಿನಯ ನನ್ನನ್ನು ಅವರಿಸಿಕೊಳ್ಳುತ್ತ ಹೋಯಿತು. ಹಾಗೆ ಶುರುವಾದದ್ದು ರಾಜಕುಮಾರ್ ಅವರ ಮೇಲಿನ ಅಭಿಮಾನ. ವಯಸ್ಸಾಗ್ತಾ ಆಗ್ತಾ ಚಿತ್ರಗಳ ವಿಶ್ಲೇಷಣೆ ಮಾಡೋಕೆ ಶುರು ಮಾಡಿದೆ ನೋಡಿ, ಅವಾಗ ರಾಜಣ್ಣ ಇನ್ನೂ ಇಷ್ಟ ಆಗಿ ಬಹಳ ಹತ್ತಿರವಾದ್ರು.

“ಆಡು ಮುಟ್ಟದ ಸೊಪ್ಪಿಲ್ಲ, ರಾಜಕುಮಾರ್ ಅವರು ಮಾಡದ ಪಾತ್ರಗಳಿಲ್ಲ” ಅಂತ ಸುಮ್ನೇನಾ ಹೇಳೋದು! ಎಂಥಾ ಅದ್ಬುತ ನಟ… ನಿರ್ದೇಶಕರ ನಟ ರಾಜಣ್ಣ. ಕನ್ನಡ ಚಿತ್ರರಂಗದಲ್ಲಿ ಬಂದ ಪೌರಾಣಿಕ ಕಥೆಯ ಚಿತ್ರಗಳು, ಸಾಮಾಜಿಕ ಕಳಕಳಿಯುಳ್ಳ ಚಿತ್ರಗಳು, ಸಂಸಾರದ ಕಥೆಯುಳ್ಳ ಚಿತ್ರಗಳು ಹಾಗು ಡಿಟೆಕ್ಟಿವ್ ಕಥೆ ಆಧಾರಿತ ಚಿತ್ರಗಳಿಗೆಲ್ಲ ಬಣ್ಣ ಹಚ್ಚಿದ ರಾಜಕುಮಾರ್ ಅವರು, ಚಿತ್ರರಂಗದಲ್ಲಿ ಆದ ಎಲ್ಲಾ ಬದಲಾವಣೆಗಳಿಗೂ ತಮ್ಮನ್ನು ಒಡ್ಡುಕೊಂಡು, ಎಲ್ಲಾ ತರಹದ ಪಾತ್ರಗಳಲ್ಲೂ ತಮ್ಮ ಮನೋಜ್ಞ ಅಭಿನಯದಿಂದ ಕನ್ನಡ ನಾಡಿನ ಚಿತ್ರರಸಿಕರ ಮನಸ್ಸನ್ನ ಗೆದ್ದವರು. ಅವರು ನಿರ್ವಹಿಸುವ ಪಾತ್ರದ ಆಳಕ್ಕೆ ಇಳಿದು ಅಭಿನಯಿಸುತ್ತಿದ್ದುದ್ದನ್ನು ನೋಡಿದರೆ, ಆ ಕಥೆ ನಿಜವಾಗಿಯೂ ನಮ್ಮ ಕಣ್ಣ ಮುಂದೆ ನೆಡೆಯುತ್ತಿರುವುದೇನೋ ಎಂದು ಭಾಸವಾಗುತ್ತದೆ.

ಅವರು ಅಭಿನಯಿಸಿದ ಚಿತ್ರದ ಪಾತ್ರಗಳಲ್ಲಷ್ಟೇ ಸರಳತೆಯನ್ನು ತೋರದೇ, ನಿಜಜೀವನದಲ್ಲಿಯೂ ಕೂಡ ತುಂಬ ಸರಳವಾಗಿ, ತಾವು ನಂಬಿರುವ ಸಿದ್ದಾಂತಕ್ಕೆ ಅನುಗುಣವಾಗಿ, ದೊಡ್ಡ ನಟನಾದರೂ ಕೂಡ ಯಾವುದೇ ಅಹಂ ಇಲ್ಲದೆ ಬದುಕಿ, ಬರೀ ಚಿತ್ರರಸಿಕರಿಗಲ್ಲದೇ ಎಲ್ಲರಿಗೂ ಆದರ್ಶವಾದ ಬಂಗಾರದ ಮನುಷ್ಯ ಡಾ ರಾಜಕುಮಾರ್ ಅವರ ಹುಟ್ಟಿದ ದಿನ ಈವತ್ತು. ಅವರ ಹುಟ್ಟಿದ ದಿನವೊಂದೇ ಅಲ್ಲದೇ, ಸರ್ವಕಾಲಕ್ಕೂ ನೆನಪಿನಲ್ಲಿ ಇಡಬೇಕಾದ ವ್ಯಕ್ತಿತ್ವ ನಮ್ಮ ರಾಜಣ್ಣನವರದು.

ಇಂತಹ ವ್ಯಕ್ತಿಯ 92 ನೇ ವರ್ಷದ ಹುಟ್ಟಿದ ದಿನಾಚರಣೆಯ ಸಂದರ್ಭದಲ್ಲಿ, ಬೆಳಿಗ್ಗೆಯೇ ಲೇಖನ ಬರೆಯಬೇಕೆಂದುಕೊಂಡಿದ್ದೆ. ಆದರೆ, ಹಲವು ಟಿ ವಿ ಚಾನಲ್ಲುಗಳಲ್ಲಿ ಬೆಳಿಗ್ಗೆಯಿಂದ ಪ್ರಸಾರವಾಗುತ್ತಿದ್ದ ರಾಜಣ್ಣ ಅವರ ಚಿತ್ರ ನೋಡುವುದರಲ್ಲಿ ಮಗ್ನನಾಗಿದ್ದು, ದಿನದ ಕೊನೆಯಲ್ಲಿ ಬಿಡುವು ಮಾಡಿಕೊಂಡು ಬರೆದಿರುವೆ. ರಾಜಣ್ಣ ಅವರ ಸರಳತೆ ಹಾಗು ಚಿಂತನೆ ಅಮರವಾಗಲಿ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ರೇಣುಕಾಸ್ವಾಮಿ ಕೊಲೆ ಮತ್ತು ಗಂಡುಹೆಣ್ಣಿನ ನಡುವಿನ ಸಂಬಂಧ

Published

on

  • ರಾಜೇಂದ್ರ ಬುರಡಿಕಟ್ಟಿ

ರೇಣುಕಾಸ್ವಾಮಿ ಕೊಲೆ ಕೇಸನ್ನು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚಿಸುವ ಅನೇಕ ಸ್ನೇಹಿತರು ಈ ಕೇಸಿನಲ್ಲಿ ಮೊದಲನೆಯ ಮತ್ತು ಎರಡನೆಯ ಆರೋಪಿಗಳೆಂದು ಹೆಸರಿಸಲ್ಪಟ್ಟ ದರ್ಶನ್ ಮತ್ತು ಪವಿತ್ರ ಗೌಡ ಅವರ ನಡುವಿನ ಸಂಬಂಧದ ಬಗ್ಗೆ ಅನಗತ್ಯವಾಗಿ ಚರ್ಚಿಸಿ ಪವಿತ್ರಗೌಡ ಅವರನ್ನು ‘ಇಟ್ಟುಕೊಂಡವಳು’ ಇತ್ಯದಿ ಪದಬಳಸಿ ಹಿಯ್ಯಾಳಿಸಿದ್ದಾರೆ.

ಒಂದು ಟಿವಿ ಚಾನೆಲ್ ನವರು ಅವರನ್ನು ‘ಸೆಕೆಂಡ್ ಹ್ಯಾಂಡ್ ಸುಂದರಿ’ ಎಂದೂ ಕರೆದದ್ದು ವರದಿಯಾಗಿದೆ. ಇದನ್ನು ಮಾಡುವ ಹಕ್ಕು ಯಾರಿಗೂ ಇಲ್ಲ. ನಮ್ಮ ವಿರೋಧ ಇರಬೇಕಾದದ್ದು ಅವರು ರೂಪಿಸಿದ್ದಾರೆ ಎನ್ನಲಾದ ಕೊಲೆಯ ಕೇಸಿನ ಬಗ್ಗೆಯೇ ಹೊರತು ಅವರಿಬ್ಬರ ನಡುವಿನ ವೈಯಕ್ತಿಕ ಸಂಬಂಧದ ಬಗ್ಗೆ ಅಲ್ಲ.

ಗಂಡು ಹೆಣ್ಣಿನ ನಡುವಿನ ಸಂಬಂಧ ಎಂಬುದು ಅತ್ಯಂತ ಸಹಜವಾದದ್ದು. ಯಾರಿಗೆ ಯಾರ ಮೇಲೆ ಯಾವಾಗ ಆಕರ್ಷಣೆ ಉಂಟಾಗಿ ಸಂಬಂಧಗಳು ಬೆಸೆದುಕೊಳ್ಳುತ್ತವೆ ಎಂಬುದನ್ನು ಹೇಳಲಾಗದು. ಇದಕ್ಕೆ ‘ನೈತಿಕ’ ‘ಅನೈತಿಕ’ ಎಂಬ ಹಣೆಪಟ್ಟಿ ಹಚ್ಚಿ ಗೌರವಿಸುವ ಅಥವಾ ಅವಹೇಳನ ಮಾಡುವ ಕ್ರಮ ಸರಿಯಾದದ್ದಲ್ಲ. ಪ್ರತಿಯೊಬ್ಬರಿಗೂ ಆಯ್ಕೆಗಳಿರುತ್ತವೆ. ತಮಗೆ ಬೇಕಾದ ಗಂಡನ್ನು ಅಥವಾ ಹೆಣ್ಣನ್ನು ಆಯ್ದುಕೊಳ್ಳುವ ಅವರೊಡನೆ ಲೈಂಗಿಕ ಸಂಬಂಧವನ್ನು ಇಟ್ಟುಕೊಳ್ಳುವ ಸ್ವಾತಂತ್ರ್ಯವಿದೆ. ಎಲ್ಲರಿಗೂ ಇದೆ. ಅದನ್ನು ಪ್ರಶ್ನಿಸುವ ಹಕ್ಕು ಇತರರಿಗೆ ಇಲ್ಲ. ಪರಸ್ಪರ ಒಪ್ಪಿತ ಲೈಂಗಿಕ ಸಂಬಂಧವು ದೇಶದ ಕಾನೂನಿನ ಪ್ರಕಾರವೂ ಅಪರಾಧವಲ್ಲ.

ಕನ್ನಡಕ್ಕೆ ಜ್ಞಾನಪೀಠ ಪ್ರಶಸ್ತಿ ತಂದುಕೊಟ್ಟ ಹಿರಿಯ ಸಾಹಿತಿ ಡಾ. ಶಿವರಾಮ ಕಾರಂತರು ತಮ್ಮ ಅನೇಕ ಕಾದಂಬರಿಗಳ ಮೂಲಕ ಇದಕ್ಕೆ ಸಂಬಂಧಿಸಿದಂತೆ ಒಂದು ತಾತ್ವಿಕತೆಯನ್ನು ನಮಗೆ ರೂಪಿಸಿಕೊಡುತ್ತಾರೆ. ಅದೆಂದರೆ ‘ಲೈಂಗಿಕ ಸುಖ ಎನ್ನುವುದು ಮನುಷ್ಯನ ಬದುಕು ಮನುಷ್ಯನಿಗೆ ನೀಡುವ ಅತ್ಯಂತ ಸುಖದ ಸಂಗತಿಗಳಲ್ಲಿ ಒಂದು. ಅದರಿಂದ ಯಾರೂ ವಂಚಿತರಾಗಬಾರದು. ಪರಸ್ಪರ ಒಪ್ಪಿಕೊಂಡ ಗಂಡು ಹೆಣ್ಣುಗಳ ನಡುವಿನ ಲೈಂಗಿಕ ಸಂಬಂಧದಲ್ಲಿ ಒಂದು ಚೆಲುವು ಇರುತ್ತದೆ. ಇಂತಹ ಒಂದು ಒಳ್ಳೆಯ ಸಂಬಂಧಕ್ಕೆ ಮದುವೆ ಎಂಬುದು ಒಂದು ‘ಪೂರ್ವಾಗತ್ಯ’ವಾಗಬೇಕಿಲ್ಲ. ಗಂಡುಹೆಣ್ಣಿನ ನಡುವಿನ ಒಂದು ಒಳ್ಳೆಯ ಸಂಬಂಧವು ವಿವಾಹದ ಒಳಗೂ ಇರಬಹುದು; ಹೊರಗೂ ಇರಬಹುದು. ಅದೇ ರೀತಿ ಒಂದು ಕೆಟ್ಟ ಸಂಬಂಧವು ವಿವಾಹದ ಒಳಗೂ ಇರಬಹುದು ಹೊರಗೂ ಇರಬಹುದು. ವಿವಾಹದ ಚೌಕಟ್ಟಿನ ಒಳಗಿನ ಒಂದು ಕೆಟ್ಟ ಸಂಬಂಧಕ್ಕಿಂತ ವಿವಾಹದ ಚೌಕಟ್ಟಿನ ಹೊರಗಿನ ಒಳ್ಳೆಯ ಸಂಬಂಧ ಬೆಲೆಯುಳ್ಳದ್ದು.

ಹೀಗಾಗಿ ಯಾರೊಡನೆ ಎಂತಹ ಸಂಬಂಧ ಇಟ್ಟುಕೊಳ್ಳಬೇಕು ಎಂಬುದು ಅವರವರ ವೈಯಕ್ತಿಕ ವಿಚಾರ. ಅದರಲ್ಲಿ ಇತರರು ತಲೆಹಾಕುವುದು ಅವಿವೇಕತನ. ‘ಮದುವೆ ಎಂಬುದು ಏಳೇಳು ಜನ್ಮಗಳ ಸಂಬಂಧ’ ಏನೇ ಆದರೂ ಅದರ ಗೆರೆದಾಟಿ ಬೇರೆಯವರೊಡನೆ ಲೈಂಗಿಕ ಸಂಬಂಧ ಇಟ್ಟುಕೊಳ್ಳಬಾರದು’ ಎನ್ನುವವರು ಹಾಗೆಯೇ ಇರಬಹುದು. ಅದಕ್ಕೂ ಅವರಿಗೆ ಸ್ವಾತಂತ್ರ್ಯವಿದೆ. ಆದರೆ ಮದುವೆಯ ಚೌಕಟ್ಟಿನ ಹೊರಗಿನ ಸಂಬಂಧಗಳನ್ನು ಟೀಕಿಸುವ ಸ್ವಾತಂತ್ರ್ಯ ಹಕ್ಕು ಅವರಿಗಿಲ್ಲ. ಈ ವಿಷಯದಲ್ಲಿ ನಮ್ಮ ಆಲೋಚನಾ ಕ್ರಮ ಸಾಕಷ್ಟು ಬದಲಾಗಬೇಕಿದೆ. ಒಂದು ಗಂಡು ಮತ್ತು ಒಂದು ಹೆಣ್ಣಿನ ನಡುವಿನ ಸಂಬಂಧ ಎಂಥದ್ದೇ ಇರಲಿ ಅದು ಅವರಿಬ್ಬರಿಗೂ ಸಂತೋಷವನ್ನು ಕೊಡುತ್ತಿದ್ದರೆ ಅದನ್ನು ಕಂಡು ನಾವು ಸಂತೋಷ ಪಡಬೇಕೆ ಹೊರತು ಹೊಟ್ಟೆಕಿಚ್ಚು ಪಡಬಾರದು. ಅದನ್ನು ಗೌರವಿಸುವುದನ್ನು ನಾವು ಮೊದಲು ಕಲಿಯಬೇಕು. ಈ ಹಿನ್ನಲೆಯಲ್ಲಿ ನಮ್ಮ ವಿರೋಧವಿರಬೇಕಾದದ್ದು ಅವರಿಬ್ಬರು ಸೇರಿ ವ್ಯಕ್ತಿಯೊಬ್ಬರ ಕೊಲೆಮಾಡಿದ್ದಾರೆ ಎನ್ನಲಾದ ವಿಚಾರಕ್ಕೆ ಹೊರತು ಅವರ ನಡುವಿನ ವೈಯಕ್ತಿಕ ಸಂಬಂಧದ ಬಗ್ಗೆ ಅಲ್ಲ. ಇಂತದ್ದೇ ವಿಚಾರವನ್ನು ಬೇರೆ ರೀತಿಯಲ್ಲಿ ಹೇಳಿರುವ ಸುಹಾಸಿನಿ ಶ್ರೀ Suhasini Shree ಅವರ ಒಂದು ಪೋಸ್ಟನ್ನೂ ಆಸಕ್ತಿ ಇರುವವರು ಗಮನಿಸಬಹುದು.(ರಾಬು (23-06-2024)
(ರಾಜೇಂದ್ರ ಬುರಡಿಕಟ್ಟಿ ಅವರ ಫೇಸ್ ಬುಕ್ ಬರೆಹ)

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ನಟ ದರ್ಶನ್ ಪರಪ್ಪನ ಆಗ್ರಹಾರ ಜೈಲು ಪಾಲು

Published

on

ಸುದ್ದಿದಿನಡೆಸ್ಕ್:ರೇಣುಕಾ ಸ್ವಾಮಿ ಹತ್ಯೆ ಪ್ರಕರಣದ ಎರಡನೇ ಆರೋಪಿ ದರ್ಶನ್ ಹಾಗೂ ಇತರೆ ಆರೋಪಿಗಳಾದ ವಿನಯ್, ಪ್ರದೋಷ್, ಧನರಾಜ್‌ಗೆ 13 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ವಿಚಾರಣೆ ನಡೆಸಿದ ಬೆಂಗಳೂರಿನ 24ನೇ ಎಸಿಎಂಎಂ ನ್ಯಾಯಾಲಯ ಜುಲೈ 4 ರವರೆಗೆ ನ್ಯಾಯಾಂಗ ಬಂಧನ ವಿಧಿಸಿದೆ.

ಈ ಹಿನ್ನೆಲೆಯಲ್ಲಿ 2ನೇ ಆರೋಪಿ ದರ್ಶನ್ ಸೇರಿದಂತೆ ಎಲ್ಲಾ ಆರೋಪಿಗಳು ಪರಪ್ಪನ ಆಗ್ರಹಾರ ಜೈಲು ಪಾಲಾಗಿದ್ದಾರೆ. ಇದೇ ಪ್ರಕರಣದಲ್ಲಿ ಆರೋಪಿಗಳಾದ ಪವಿತ್ರಾ ಹಾಗೂ ಇತರರಿಗೆ 2 ದಿನಗಳ ಹಿಂದೆಯೇ ನ್ಯಾಯಾಂಗ ಬಂಧನ ವಿಧಿಸಲಾಗಿತ್ತು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಕ್ರೀಡೆ

ಈ ಕ್ಷಣದ ಪ್ರಮುಖ ಸುದ್ದಿಗಳು

Published

on

ರಾಜ್ಯದಲ್ಲಿ ಜರುಗಿದ ಈ ಕ್ಷಣದ ಕೆಲವು ಸುದ್ದಿಗಳ ಪ್ರಮುಖಾಂಶಗಳು ( ಕನ್ನಡ ನ್ಯೂಸ್; ಕನ್ನಡ ಸುದ್ದಿ)

  1. ರಾಜ್ಯಾದ್ಯಂತ ವ್ಯಾಪಕ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಮುಂಜಾಗ್ರತೆ ವಹಿಸದಿದ್ದರೆ ಕುಡಿಯುವ ನೀರು ಕಲುಷಿತಗೊಳ್ಳುವ ಪ್ರಕರಣ ಹೆಚ್ಚಾಗುವ ಸಾಧ್ಯತೆಯಿದೆ. ಹಾಗಾಗಿ ಗ್ರಾಮೀಣ ನೀರು ಸರಬರಾಜು ಇಲಾಖೆಯ ಇಂಜಿನಿಯರ್‌ಗಳು ಕಟ್ಟೆಚ್ಚರ ವಹಿಸಬೇಕು ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಸೂಚಿಸಿದ್ದಾರೆ.
  2. ಪೆಟ್ರೋಲ್ ಹಾಗೂ ಡೀಸೆಲ್ ಮಾರಾಟ ತೆರಿಗೆ ಏರಿಕೆ ಹಾಗೂ ಇತರ ಬೆಲೆ ಏರಿಕೆ ನೀತಿ ವಿರೋಧಿಸಿ ಬಿಜೆಪಿ ಬೆಂಗಳೂರಿನಲ್ಲಿಂದು ವಿಧಾನಸೌಧದವರೆಗೆ ಸೈಕಲ್ ಜಾಥಾ ನಡೆಸಿತು. ಪಕ್ಷದ ಕಚೇರಿಯಿಂದ ವಿಧಾನಸೌಧದವರೆಗೆ ಜಾಥಾದಲ್ಲಿ ಹೊರಟ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ವಿಧಾನಪರಿಷತ್ ಸದಸ್ಯ ಸಿ.ಟಿ. ರವಿ ಸೇರಿದಂತೆ ಹಲವು ನಾಯಕರನ್ನು ಪೊಲೀಸರು ವಶಕ್ಕೆ ಪಡೆದು ನಂತರ ಬಿಡುಗಡೆಗೊಳಿಸಿದರು.
  3. ಪ್ರತಿಯೊಂದು ವಾಹನಗಳಿಗೆ ಕೇಂದ್ರ ಮೋಟಾರು ವಾಹನ ಕಾಯ್ದೆಯಡಿ ನಮೂದಿಸಿರುವ ಮಾನದಂಡದಂತೆ ಎಲ್‌ಇಡಿ ದೀಪಗಳನ್ನು ಅಳವಡಿಸದಿದ್ದರೆ ವಾಹನಗಳ ಸವಾರರುಗಳ ಮೇಲೆ ಪ್ರಕರಣ ದಾಖಲಿಸಲಾಗುವುದು ಎಂದು ಸಂಚಾರ ವಿಭಾಗದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಅಲೋಕ್ ಕುಮಾರ್ ತಿಳಿಸಿದ್ದಾರೆ.
  4. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಶುಭ ಕೋರಿದ್ದಾರೆ. ಪ್ರಧಾನಿ ತಮ್ಮ ಸಾಮಾಜಿಕ ಮಾಧ್ಯಮ ಪೋಸ್ಟ್ನಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು, ದೇಶಕ್ಕಾಗಿ ಅಪ್ರತಿಮ ಸೇವೆಯನ್ನು ಸಲ್ಲಿಸುತ್ತಿದ್ದು, ನಮಗೆಲ್ಲರಿಗೂ ಸ್ಫೂರ್ತಿಯಾಗಿದ್ದಾರೆ ಎಂದು ಹೇಳಿದ್ದಾರೆ.
  5. ತಮಿಳುನಾಡಿನ ಕಲ್ಲಕುರಿಚಿಯಲ್ಲಿ ನಡೆದ ಕಳ್ಳಬಟ್ಟಿ ಸರಾಯಿ ದುರಂತದಲ್ಲಿ 33 ಮಂದಿ ಮೃತಪಟ್ಟಿದ್ದು, 60ಕ್ಕೂ ಅಧಿಕ ಮಂದಿ ನಾನಾ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಳ್ಳಬಟ್ಟಿ ಸರಾಯಿ ಸೇವಿಸಿ ಅಸ್ವಸ್ಥರಾಗಿದ್ದ ಜನರನ್ನು ಕಲ್ಲಕುರಿಚಿ, ಸೆಲಂ ಮತ್ತು ಪುದುಚೇರಿಯ ಜೆಐಪಿಎಂಇಆರ್ ಆಸ್ಪತ್ರೆಗೆ ದಾಖಲಿಸಲಾಗಿದೆ.
  6. ಕೇಂದ್ರ ಸರ್ಕಾರದ ಆದೇಶದಂತೆ 2019ರ ಏಪ್ರಿಲ್‌ಗಿಂತ ಮುಂಚಿತವಾಗಿ ನೋಂದಣಿಯಾಗಿರುವ ವಾಹನಗಳಿಗೆ ಹೈಸೆಕ್ಯೂರಿಟಿ ನೋಂದಣಿ ಫಲಕ ಅಳವಡಿಕೆ ಗಡುವನ್ನು ರಾಜ್ಯ ಸರ್ಕಾರ ಸೆಪ್ಟೆಂಬರ್ 15ರವರೆಗೆ ವಿಸ್ತರಿಸಿ ಆದೇಶ ಹೊರಡಿಸಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending