Connect with us

ಅಂತರಂಗ

ಧರ್ಮ ಮರ್ಮ-08 : ನವಸಮಾಜದ ಕನಸುಗಾರರು

Published

on

  • ಯೋಗೇಶ್ ಮಾಸ್ಟರ್

ಕ್ರಿಸ್ತನ ಮರಣಾನಂತರ ಪ್ರಾರಂಭಿಕ ಕ್ರೈಸ್ತರು ಮತ್ತು ಬಸವಣ್ಣನ ಗಡಿಪಾರಿನ ನಂತರ ಶರಣರು ಹೇಗೆ ಅಪಾರವಾದ ಕಿರುಕುಳ, ಹಿಂಸೆ ಮತ್ತು ಬಹಿಷ್ಕಾರಗಳನ್ನು ಅನುಭವಿಸಿದರು. ಅದು ಮುಸಲ್ಮಾನರಿಗೂ ತಪ್ಪಿದ್ದೇನಲ್ಲ. ಪ್ರವಾದಿ ಮಹಮದರ ಸಮಯದಲ್ಲಿಯೇ ಅವರಿಗೂ ಮತ್ತು ಅವರ ಅನುಯಾಯಿಗಳಿಗೆ ಭಯಾನಕ ಕಿರುಕುಳಗಳನ್ನು, ಹಿಂಸೆಗಳನ್ನು ನೀಡಲಾಗಿತ್ತು. ಅವರನ್ನು ತಡೆಯಲು ಅದೆಷ್ಟು ಸಾಧ್ಯವೋ ಅಷ್ಟು ಬಲಪ್ರಯೋಗಗಳಾಗುತ್ತಿದ್ದವು.

ಇದು ಯಾವುದೇ ಸತ್ಯಾನ್ವೇಷಕರಿಗೆ ಮತ್ತು ನವಸಮಾಜದ ಪ್ರತಿಪಾದಕರಿಗೆ ತಪ್ಪಿದ್ದೇನಲ್ಲ.
ಮುಸಲ್ಮಾನರ ಮೊದಲಿನ ಅಬ್ರಹಾಮನ ಧಾರ್ಮಿಕತೆಯ ಪರಂಪರೆಯನ್ನು ಗಮನಿಸುವುದಾದರೆ ಮೊದಲು ಈಜಿಪ್ಟಿನಲ್ಲಿ ಇಸ್ರೇಲರು ಈ ಕಿರುಕುಳಕ್ಕೆ ಒಳಗಾಗಿದ್ದರು. ಅವರನ್ನು ಐಗುಪ್ತ್ಯರ (ಈಜಿಪ್ಟಿನವರ) ಫರೋಹನು ಇಸ್ರೇಲಿನ ಹೀಬ್ರೂಗಳನ್ನು ತನ್ನ ದಾಸ್ಯದಲ್ಲಿರಿಸಿಕೊಂಡಿದ್ದರು. ಹಾಗೂ ಅವರ ಸಂತತಿಯು ಹೆಚ್ಚಾಗದಂತೆ ನೋಡಿಕೊಳ್ಳುತ್ತಿದ್ದನು. ಗಂಡು ಮಕ್ಕಳಾದರೆ ಕೊಲ್ಲುವ ಮತ್ತು ಹೆಣ್ಣು ಮಕ್ಕಳಾದರೆ ಮಾತ್ರ ಉಳಿಸುವ ಯೋಜನೆಯನ್ನು ರೂಪಿಸಲಾಗಿತ್ತು. ಹಾಗೆ ಮಾಡಲು ಈಜಿಪ್ಟಿನ ಸೂಲಗಿತ್ತಿಯರಿಗೆ ಸೂಲಗಿತ್ತಿಯರಿಗೆ ಸೂಚನೆ ನೀಡಲಾಗಿತ್ತು. ಅವರು ಹಾಗೆ ಮಾಡಲಿಲ್ಲವೆನ್ನುವುದು ಬೇರೆ ವಿಚಾರ.

ಆದರೆ ಇದೇ ಬಗೆಯಲ್ಲಿ ದ್ವೇಷ ಮತ್ತು ಹಟದ ಸಾಧನೆಗಾಗಿ ಹುಟ್ಟುತ್ತಿದ್ದಂತೆ ಗಂಡು ಮಕ್ಕಳನ್ನು ಕೊಲ್ಲುವ ಪ್ರಕರಣಗಳನ್ನು ಹಲವು ಕಡೆ ಗಮನಿಸುತ್ತೇವೆ. ಅದಕ್ಕೆ ಎರಡು ಉದಾಹರಣೆಯೆಂದರೆ ಯೇಸುವಿನ ಜನನದ ಕಾಲದಲ್ಲಿ ಹೇರೋದನು ಯೆಹೂದ್ಯರ ಅರಸ ಹುಟ್ಟುವನು ಎಂಬ ಭವಿಷ್ಯವನ್ನು ನಂಬಿ ಆ ಸಮಯದಲ್ಲಿ ಹುಟ್ಟಿದ ಎಲ್ಲಾ ಗಂಡು ಮಕ್ಕಳನ್ನು ಕೊಲೆ ಮಾಡಲು ಆದೇಶಿಸಿದ್ದನು.

ಸುಳಿವು ತಿಳಿದ ಯೇಸುವಿನ ತಂದೆ ಜೋಸೇಫನು ತನ್ನ ಗರ್ಭಿಣಿ ಹೆಂಡತಿಯನ್ನು ಕರೆದುಕೊಂಡು ಈಜಿಪ್ಟಿಗೆ ಪಲಾಯನ ಮಾಡಬೇಕಾಯಿತು. ಅದೇ ರೀತಿ ಭಾರತದಲ್ಲಿ ಕೃಷ್ಣನ ಜನನದ ವಿಷಯದಲ್ಲಿಯೂ ಹೀಗೇ ಕಂಸನಿಂದ ಮಕ್ಕಳನ್ನು ಕೊಲ್ಲುವ ಕೆಲಸವಾಗಿತ್ತು. ಇದು ಖ್ಯಾತ ಮತ್ತು ಖ್ಯಾತವಲ್ಲದ ಅನೇಕಾನೇಕ ಸಾಮಾಜಿಕ ಮತ್ತು ಧಾರ್ಮಿಕ ಪರಂಪರೆಗಳ ಚರಿತ್ರೆಯಲ್ಲಿ ಗುರುತಿಸಬಹುದಾಗಿದೆ.

ಜನಾಂಗೀಯ, ಭಿನ್ನ ಸಂಸ್ಕೃತಿಗಳ, ಧರ್ಮಗಳ ಕಾರಣಗಳ, ರಾಜಕೀಯ ಸಂಘರ್ಷಗಳ ಕಾರಣಗಳಿಗೆ ಜನರ ಹತ್ಯಾಕಾಂಡಗಳಾಗಿವೆ. ಆದರೆ ಅವು ಕಾರಣಗಳಲ್ಲ, ನೆಪಗಳು. ಆದರೆ ನಿಜವಾದ ಕಾರಣ ತಮ್ಮ ಸಾರ್ವಭೌಮತ್ವವನ್ನು ಮತ್ತೊಬ್ಬರ ಮೇಲೆ ಹೇರುವುದು. ಇತರರನ್ನು ತಮ್ಮ ಅಧೀನದಲ್ಲಿ ಇರಿಸಿಕೊಳ್ಳುವುದು. ಕ್ಷಾಮ, ಸಾಂಕ್ರಮಿಕ ಕಾಯಿಲೆ, ಭೂಕಂಪ, ಪ್ರವಾಹ, ಜ್ವಾಲಾಮುಖಿ, ಹಿಮಪಾತಗಳಂತಹ ಅವಘಡಗಳಿಗಿಂತ ಹೆಚ್ಚು ಭೀಕರವಾಗಿ ಜನರನ್ನು ಕೊಂದಿಕ್ಕಿರುವುದು ಜನರಲ್ಲಿಯೇ ಇರುವ ಸಾರ್ವಭೌಮತ್ವದ ಅಹಂಕಾರದಿಂದ.

ವಿಮೋಚನಾ ಕಾಂಡ

ಐಗುಪ್ತ್ಯರು ಹೀಬ್ರೂಗಳನ್ನುದಾಸ್ಯದಲ್ಲಿಟ್ಟುಕೊಂಡು ತಮ್ಮಸಾರ್ವಭೌಮತ್ವವನ್ನು ಸಾಧಿಸಲು ಯತ್ನಿಸುತ್ತಿದ್ದರು. ಅವರ ಗಂಡು ಸಂತತಿ ಹೆಚ್ಚಿದರೆ ಬಲಿಷ್ಟರಾಗಿ ತಮ್ಮೊಡನೆ ಯುದ್ಧ ಮಾಡಿ ತಮ್ಮ ಸಾರ್ವಭೌಮತ್ವವನ್ನು ಮಣ್ಣುಗೂಡಿಸಬಹುದೆಂದು ಭಯ ಫರೋಹಗಳಿಗಿತ್ತು. ಇದನ್ನು ಸಾಕ್ಷೀಕರಿಸಿದವನು ಮೋಶೆ. ಹೀಬ್ರೂ ತಾಯಿಗೆ ಹುಟ್ಟಿದವನು, ಮಗುವನ್ನು ಕೊಲ್ಲುವವರೆಂದು ಅವನನ್ನು ಪೆಟ್ಟಿಗೆಯೊಂದರಲ್ಲಿ ಮಲಗಿಸಿ ನೈಲ್ ನದಿಯ ಅಂಚಿನ ಜಂಬುಹುಲ್ಲಿನ ಪೊದೆಯಲ್ಲಿ ಇಟ್ಟು ಅಡಗಿಕೊಂಡು ನೋಡುತ್ತಿರುತ್ತಾಳೆ.

ಫರೋಹನ ರಾಜಕನ್ನಿಕೆಯೊಬ್ಬಳು ಆ ಮಗುವಿನ ಮೇಲೆ ಕನಿಕರಪಟ್ಟು ತಾನೇ ಸಾಕುತ್ತಾಳೆ. ಅದಕ್ಕೆ ಮೊಲೆಯೂಡಲು ಅವನ ನಿಜವಾದ ತಾಯನ್ನೇ ಕರೆಯಿಸುವ ಕರುಣಾಜನಕ ಮತ್ತು ನಾಟಕೀಯವಾದಂತಹ ಕತೆ ಮೋಶೆಯ ಹುಟ್ಟು ಮತ್ತು ಬೆಳವಣಿಗೆಯದ್ದು. ಅದೇನೇ ಇರಲಿ, ಅವನು ರಾಜಮನೆತನದವನಾಗಿಯೇ ಬೆಳೆದರೂ ಅವನಿಗೆ ದಾಸ್ಯದಲ್ಲಿ ಹೀಬ್ರೂಗಳನ್ನು ನರಳಿಸುವುದು ಅವನಿಗೆ ಒಗ್ಗುತ್ತಿರಲಿಲ್ಲ. ಒಂದು ಸಂದರ್ಭದಲ್ಲಿ ಅವನಿಗೆ ತನ್ನ ಹುಟ್ಟಿನ ರಹಸ್ಯವೂ ತಿಳಿಯುತ್ತದೆ. ಒಟ್ಟಾರೆ ಅವನು ನಿರ್ಧರಿಸುವುದು ತನ್ನ ಜನರನ್ನು ದಾಸ್ಯದಿಂದ ಬಿಡಿಸಬೇಕೆಂಬುದು. ಇದೇ ವಿಮೋಚನಾ ಕಾಂಡ.

ಬಿಟ್ಟಿಚಾಕರಿ ಮಾಡುತ್ತಾ ದಾಸ್ಯದಲ್ಲಿ ನರಳುತ್ತಿದ್ದ ಹೀಬ್ರೂಗಳನ್ನು ಬಿಡಿಸಿದ ಮೋಶೆಯೂ ಮಾಡಿದ್ದೇನೆಂದರೆ ಅವರಿಗೆ ಬದುಕಲು ಒಂದು ಕ್ರಮವನ್ನು ಕೊಟ್ಟಿದ್ದು. ವಿಶ್ವಾಸಿಸಲು ಒಂದು ಪರಿಕಲ್ಪನೆಯನ್ನು ಕೊಟ್ಟಿದ್ದು. ಹತ್ತು ನಿಬಂಧನೆಗಳನ್ನು ಇತ್ತನು. ಸೀನಾಯಿ ಎಂದು ಕರೆಯಲ್ಪಡುವ ಬೆಟ್ಟವೊಂದರಲ್ಲಿ ಪೊದೆಯಲ್ಲಿ ಬೆಂಕಿಯಂತೆ ಕಾಣುವ ದೇವರು ಮೋಶೆ ತನ್ನ ಜನರು ನೇಮವಾಗಿ, ಶಿಸ್ತಿನಿಂದ ಮತ್ತು ಬದ್ಧತೆಯಿಂದ ನಡೆಯುವ ಅಗತ್ಯವಿರುವುದೆಂದು ಕಟ್ಟಳೆಗಳನ್ನು ನೀಡಿದನೆಂದು ಹೇಳಿಕೊಳ್ಳುವನು.

ದೇವರ ಹೆಸರಿನಲ್ಲಿ ತನ್ನ ಜನರು ದಾಸ್ಯದಿಂದ ಬಿಡುಗಡೆಯಾಗಿದ್ದು ಮತ್ತೆ ಪತನವಾಗದಿರಲೆಂಬ ಕಾಳಜಿಯಿಂದ ಅವನು ಒಂದು ದಾರಿಯನ್ನು ರೂಪಿಸಲು ಈ ಕಟ್ಟಳೆಗಳನ್ನು ವಿಧಿಸಿದನು. ಏಕೆಂದರೆ ಪಡೆದಿರುವಂತಹ ಸ್ವಾತಂತ್ರ್ಯವು ಫಲಪ್ರದವಾಗಬೇಕಾದರೆ ಅವರು ಆ ಸ್ವತಂತ್ರ ಕಾಲದಲ್ಲಿ ಮತ್ತು ಸ್ಥಿತಿಯಲ್ಲಿ ಸ್ವಶಿಸ್ತಿನಿಂದ ವರ್ತಿಸಬೇಕು. ಹಾಗೆಯೇ ತಿಳುವಳಿಗೆಯಿಂದ ಸ್ವಸ್ಥ ಮತ್ತು ಉತ್ತಮ ಗುಣಮಟ್ಟದ ಜೀವನವನ್ನು ನಡೆಸಬೇಕು. ಅದು ಅವರ ಉದ್ದೇಶ. ಈ ನಿಬಂಧನೆಗಳು ದಾಸ್ಯಕ್ಕೊಳಿಸುವ ನಿರ್ಬಂಧವಲ್ಲ. ದಾಸ್ಯಕ್ಕೆ ಮರಳದಿರಲು ಬೇಕಾದ ಶಿಸ್ತು. ಶಿಸ್ತು ಕೂಡಾ ನಿಬಂಧನೆಯೇ. ಆದರೆ ಅದು ಕಾರ್ಯ ಸಾಧನೆಗೆ.

ಹತ್ತು ಕಟ್ಟಳೆಗಳು

ಮೋಶೆಯ ಹತ್ತು ಕಟ್ಟಳೆಗಳು ಅವರಲ್ಲಿದ್ದ ನ್ಯೂನ್ಯತೆಗಳನ್ನು ತೊಡೆಯುವ ದಿಕ್ಕಿನಲ್ಲಿಯೇ ಇದ್ದವು. ಮೂರ್ತಿ ಪೂಜೆಯನ್ನು ನಿರಾಕರಿಸಿತ್ತು. ಕಂಡಕಂಡ ವಸ್ತು ವ್ಯಕ್ತಿಗಳನ್ನೆಲ್ಲಾ ದೇವರೆಂದು ಒಪ್ಪಬಾರದಿತ್ತು. ಗ್ರೀಸ್ ಮತ್ತು ಈಜಿಪ್ಟಿನಲ್ಲಿ ಹಲವಾರು ದೇವತೆಗಳು, ಹಲವಾರು ಮೂಢ ನಂಬಿಕೆಗಳು ಬಹಳವಾಗಿತ್ತು. ಅದರ ಪ್ರಭಾವದಲ್ಲಿ ಇದ್ದ ಇವರು ಅದನ್ನೇ ಅನುಸರಿಸಬಾರದೆಂಬುದೂ ಆಗಿತ್ತು.

ಮುಂದಿನ ಪೀಳಿಗೆಗಳನ್ನು ಗಮನಿಸಿಕೊಂಡು, ಅವರ ಹಿತವನ್ನು ಕಾಯುವ ದೂರದೃಷ್ಟಿಯನ್ನು ಇಟ್ಟುಕೊಂಡು ತಾನು ಇಂದು ತಪ್ಪು ಮಾಡಬಾರದೆಂದಾಗಿತ್ತು. ದೇವರ ಹೆಸರನ್ನು ತನ್ನ ಸ್ವಾರ್ಥದ ಅಥವಾ ಕೆಟ್ಟ ಕೆಲಸಗಳಿಗೆ ಬಳಸಬಾರದು. ಹಗಲು ಇರುಳು ಎನ್ನದೇ ಬಿಟ್ಟಿ ಚಾಕರಿ ಮಾಡಿಕೊಂಡಿದ್ದ ಅವರು ಕೆಲಸದ ಮಧ್ಯೆ ವಿರಾಮವನ್ನೂ ಮತ್ತು ತಮ್ಮ ಕುಟುಂಬಗಳಿಗೆ ಸಮಯವನ್ನು ಕೊಡಲು ವಾರದ ಏಳನೆಯ ದಿನವಾದ ಸಬ್ಬತ್ ದಿನದಂದು ಏನೂ ಕೆಲಸ ಮಾಡಬಾರದೆಂದು ಇತ್ತು.

ತನ್ನ ಸ್ವಾರ್ಥಕ್ಕಾಗಿ ತಂದೆ, ತಾಯಿಯೇ ಮೊದಲ್ಗೊಂಡು ಸಂಬಂಧಗಳನ್ನು ಲೆಕ್ಕಿಸದಂತಹ ಪ್ರಕರಣಗಳನ್ನು ನೋಡಿದ್ದ ಮೋಶೆ ತಂದೆ ತಾಯಿಯರನ್ನು ಚೆನ್ನಾಗಿ ನೋಡಿಕೊಂಡರೆ ದೇವರಿಂದ ಅನುಗ್ರಹಿತವಾದ ಈ ಭೂಮಿಯಲ್ಲಿ ಚೆನ್ನಾಗಿ ಬಾಳುವೆ ಎಂದು ಆಶೆ ಇರಿಸಿದನು. ವಯಸ್ಸಾದ ತಂದೆ ತಾಯಿಯರು ಮಕ್ಕಳ ಕಾಲದಲ್ಲಿ ಸಂಕಷ್ಟಕ್ಕೆ ಒಳಗಾಗದಿರಲು ಮೋಶೆ ಮನಗಂಡಿದ್ದನು.

ಹೀಗೇ ನರಹತ್ಯೆ ಮಾಡಬಾರದು, ವ್ಯಭಿಚಾರ ಮಾಡಬಾರದು, ಕದಿಯಬಾರದು, ಸುಳ್ಳುಸಾಕ್ಷಿ ಹೇಳಬಾರದು, ಮತ್ತೊಬ್ಬರ ಮನೆಯ ಜನರನ್ನಾಗಲಿ, ವಸ್ತುಗಳನ್ನಾಗಲಿ, ಪಶುಗಳನ್ನಾಗಲಿ ವಶಪಡಿಸಿಕೊಳ್ಳಲು ಬಯಸಬಾರದು. ಬಿಟ್ಟಿಚಾಕರಿ ಮಾಡುತ್ತಾ ಗುಲಾಮಗಿರಿಯಲ್ಲಿದ್ದ ಜನರಿಗೆ ಸ್ವಾತಂತ್ರ್ಯವು ಸಿಕ್ಕಿದಾಗ, ಅವರಿಗೆಂದು ಒಂದು ಭೂಮಿಯು ಬಾಳ್ವೆಗೆ ದೊರಕಿದಾಗ ತಾವು ಇನ್ನೊಬ್ಬರನ್ನು ದಾಸ್ಯಕ್ಕೆ ಒಳಮಾಡಬಾರದೆಂಬ ಮಮಕಾರ, ಕಾರುಣ್ಯ ಮೋಶೆಯಲ್ಲಿತ್ತು.

ವಿಮೋಚನೆಗೆ ದಾರಿ ತೋರಿದ್ದ ಮೋಶೆಯು ಮತ್ತೊಬ್ಬರನ್ನು ದಾಸ್ಯಕ್ಕೆ ಒಳಪಡಿಸಬಾರದೆಂಬ ಪ್ರಜ್ಞೆಯ ತರಬೇತಿ ಕೊಡಲು ದೇವರ ಹೆಸರು ಎತ್ತಿದ್ದ, ಹತ್ತು ನಿಬಂಧನೆಗಳನ್ನು ನೀಡಿದ್ದ. ನಿಜಕ್ಕೂ ಆತ ಧೀರನೂ ಹೌದು, ಕರುಣಾಳುವೂ ಹೌದು.
ಆದರೆ ದಶಾಜ್ಞೆಗಳು ಅಥವಾ ಹತ್ತು ನಿಬಂಧನೆಗಳನ್ನು ಹೀಬ್ರೂ ಜನರು ಒಂದಷ್ಟು ಕಾಲವಷ್ಟೇ ತನ್ನ ಮಾನ್ಯತೆಯನ್ನು ಪ್ರಾಮಾಣಿಕವಾಗಿ ಉಳಿಸಿಕೊಂಡಿದ್ದು. ನಂತರ ಅದನ್ನೇ ಮುಂದಿಟ್ಟುಕೊಂಡು ಪುರೋಹಿತರು ಮತ್ತೆ ಜನರನ್ನು ತಮ್ಮದೇ ಜನರನ್ನು ಶೋಷಿಸತೊಡಗಿದ್ದರು.

ಸಾಲದಕ್ಕೆ ತಮ್ಮ ಸ್ವಾರ್ಥ ಸಾಧನೆಗೆ ಬೇಕಾದಂತೆ ಅವನ್ನು ಬಳಸಿಕೊಳ್ಳಲೂ ತೊಡಗಿದ್ದರು. ಮತ್ತೆ ಗುಲಾಮರಂತಾಗಿದ್ದರು. ಅಂತಹ ಸಮಯದಲ್ಲಿ ಮೂಡಿದ ಮೋಶೆಯಂತೆಯೇ ಮತ್ತೊಬ್ಬ ಸಮಾಜ ಸುಧಾರಕ, ಆದರ್ಶ ಸಮಾಜದ ಕನಸುಗಾರ ಯೇಸು. ಸಾಂಪ್ರದಾಯಕವಾಗಿ ಬಂದಿರುವ ಧರ್ಮಶಾಸ್ತ್ರವನ್ನು ತಾನು ಕಡೆಗಣಿಸಲು ಅಥವಾ ತಿರಸ್ಕರಿಸಲು ಬಂದಿಲ್ಲ, ಬದಲಾಗಿ ಅವನ್ನು ಸರಿಯಾದ ರೀತಿಯಲ್ಲಿ ನೆರವೇರಿಸಲೆಂದೇ ಬಂದವನು ತಾನು ಎಂದೇ ಯೇಸು ನೀಡಿದ್ದ ಸ್ಪಷ್ಟತೆ.

ಆದರೆ ಯೇಸುವೂ ಕೂಡಾ ತನ್ನ ಜನರು ಮೌಢ್ಯ ಮತ್ತು ಕಂದಾಚಾರಗಳಿಂದ ಮುಕ್ತರಾಗಿ ಸಂಪೂರ್ಣ ಗುಣಮಟ್ಟದ ಜೀವನವನ್ನು ನಡೆಸಲು ತಾತ್ವಿಕವಾಗಿ ಮತ್ತು ಧಾರ್ಮಿಕವಾಗಿ ಮಾದರಿಯಾಗಿದ್ದೇ ಮಿತಿಯಲ್ಲಿರುವುದಾದರೂ ತಮ್ಮ ಚಿಲ್ಲರೆ ಸಾರ್ವಭೌಮತ್ವಕ್ಕೆ ಪೆಟ್ಟಾಗದಿರಲು ಯೇಸುವಿಗೇ ಪೆಟ್ಟುಕೊಟ್ಟರು. ಶಿಲುಬೆಯ ಪಟ್ಟಿಗಳಿಗೆ ಯೇಸುವನ್ನು ಜಡಿದು ಕೊಂದ ಮೇಲೆ ಕ್ರೈಸ್ತರಿಗೆ ಕೂಡಾ ಕಿರುಕುಳಗಳಾದವು.

ಪ್ರೇಷಿತರ ಮತ್ತು ಇತರ ಅನೇಕಾನೇಕ ಕ್ರಿಸ್ತನ ಅನುಯಾಯಿಗಳ ತ್ಯಾಗ ಬಲಿದಾನದ ನಂತರ ಕ್ರೈಸ್ತ ಧರ್ಮವು ಒಡಮೂಡಿತ್ತು. ಅದೂ ಕೂಡಾ ಕ್ರಮೇಣ ಪುರೋಹಿತ ಮತ್ತು ಪ್ರಭುತ್ವದವರ ಬಳಕೆಗೆ ಸಲಕರಣೆಯಾಗಿಬಿಟ್ಟಿತು. ಅರೇಬಿಯಾದ ಮಕ್ಕಾದಲ್ಲಿರುವ ಕಾಬಾ ಮಂದಿರದ ಮೇಲೆ ಕ್ರೈಸ್ತ ಅರಸರ ದಾಳಿಯ ಯೋಜನೆ ಇದಕ್ಕೊಂದು ನಿದರ್ಶನ.

ಅರಬರಲ್ಲಿನ ಅವ್ಯವಸ್ಥೆ

ಅರಬರಲ್ಲಿಯೇ ಹೊಂದಾಣಿಕೆ ಇರಲಿಲ್ಲ. ಭಿನ್ನ ಕುಲಗಳ ಮತ್ತು ಬುಡಕಟ್ಟುಗಳ ನಡುವೆ ಸಂಘರ್ಷ ತುಂಬಾ ಸಾಮಾನ್ಯವಾಗಿತ್ತು. ಮೂರ್ತಿ ಪೂಜೆಗಳು ವ್ಯಾಪಕವಾಗಿದ್ದವು. ಮೌಢ್ಯವೋ ಮುಗಿಲು ಮುಟ್ಟಿತ್ತು. ಯಾವ ನೈತಿಕತೆಯೂ ಇಲ್ಲದೇ ಜನರು ಕುಲಗಳ ನೆಪದಲ್ಲಿ, ಗೋತ್ರಗಳ ನೆಪದಲ್ಲಿ ಒಗ್ಗೂಡಿಕೊಂಡು ಬಡಿದಾಡಿಕೊಂಡು ಇದ್ದರು. ಹಿಂದೆ ಹೆಣ್ಣು ಮಕ್ಕಳನ್ನು ಉಳಿಸಿ, ಮುಂದೆ ಗಟ್ಟಿಗರಾದಾಗ ಹೋರಾಡಬಹುದೆಂದು ಗಂಡುಮಕ್ಕಳ ಹತ್ಯೆಗಳನ್ನು ಮಾಡುತ್ತಿದ್ದರು.

ಆದರೆ, ಆಗ ಅರೇಬಿಯಾದಲ್ಲಿ ಹೆಣ್ಣು ಮಕ್ಕಳನ್ನೂ ಕೂಡಾ ಜೀವಂತವಾಗಿ ಹೂಳುವಷ್ಟು ನೈತಿಕವಾಗಿ ಅವನತಿಯನ್ನು ಹೊಂದಿದ್ದರು. ಇಂತಹ ಸಮಯದಲ್ಲಿ ನವಸಮಾಜದ ನಿರ್ಮಾಪಕ ಬೇಕಾಗಿತ್ತು. ನೈತಿಕ ತಳಹದಿಯ ಮೇಲೆ ಆದರ್ಶ ಸಮಾಜದಲ್ಲಿ ಬಾಳುವುದಕ್ಕೆ ಮತ್ತೆ ಒಂದು ಧರ್ಮವನ್ನು ಅಥವಾ ಕ್ರಮವನ್ನು ರೂಪಿಸಬೇಕಿತ್ತು. ಬರೀ ಲೌಕಿಕವಾಗಿ ಮೇಲಿನ ಸ್ತರದಲ್ಲಿಯೇ ತಮ್ಮ ಬಾಳ್ವೆಗಳನ್ನು ಪೊಳ್ಳಾಗಿಸಿಕೊಂಡಿದ್ದು, ತಮ್ಮ ಸಹಜೀವಿಗಳಿಗೆ ಪೀಡೆಗಳಾಗುತ್ತಿದ್ದವರನ್ನು ಸರಿದಾರಿಗೆ ತರಲು ಅರಿವನ್ನು ನೀಡಬೇಕಿತ್ತು. ಆ ಕೆಲಸಕ್ಕೆ ನಿಂತವರು ಪ್ರವಾದಿ ಮುಹಮ್ಮದ್.

ಅಬ್ರಹಾಮನ ಸಮಾಜೋಧಾರ್ಮಿಕ ಪರಂಪರೆಯನ್ನು ಅವಲೋಕಿಸಿದ್ದ ಮುಹಮ್ಮದರಿಗೆ ಮೋಶೆಯ ಕಟ್ಟಳೆಯೂ ತಿಳಿದಿತ್ತು, ಯೇಸುವಿನ ಬಲಿದಾನದ ಅರಿವೂ ಇತ್ತು. ಅವುಗಳೆಲ್ಲವೂ ಅವರ ನಂತರದ ಕಾಲದಲ್ಲಿ ಹೇಗೆ ಹಳ್ಳ ಹಿಡಿಯಲಾರಂಭಿಸಿದ್ದವು ಎಂಬುದರ ಬಗ್ಗೆಯೂ ತಿಳುವಳಿಕೆ ಸ್ಪಷ್ಟವಾಗಿಯೇ ಇತ್ತು. ಇಷ್ಟು ನಮಗೆ ಅರ್ಥವಾಗಬೇಕು. ಮೋಶೆಯ ನಿಬಂಧನೆಗಳು ಪ್ರಾಮಾಣಿಕವಾಗಿ ಮತ್ತು ತಾತ್ವಿಕವಾಗಿ ಯಶಸ್ವಿಯಾಗಿದ್ದರೆ ಯೇಸುವಿನ ಅಗತ್ಯವಿರಲಿಲ್ಲ.

ಹೋಗಲಿ ಯೇಸುವಿನ ಬಲಿದಾನವನ್ನು ಮುಂದಿಟ್ಟುಕೊಂಡು ಮಹೋದ್ದೇಶದಿಂದ ಪೌಲನೇ ಮೊದಲಾದ ತ್ಯಾಗವೀರರು ರೂಪಿಸಿದ ಕ್ರೈಸ್ತ ಧರ್ಮವು ಪುರೋಹಿತ ಮತ್ತು ಪ್ರಭುತ್ವದ ಸ್ವಾರ್ಥಕ್ಕೆ ಬಳಕೆಯಾಗದಿದ್ದರೆ ಪ್ರವಾದಿ ಮುಹಮ್ಮದರೂ ಮತ್ತವರ ಪೂರ್ವಜರು ದೀನ್ ಎಂಬುದನ್ನು ಕನವರಿಸುವ ಅಗತ್ಯವಿರುತ್ತಿರಲಿಲ್ಲ. ಸತ್ಯವು ಯಾವುದೆಂದು ಅಂತರಂಗದಿಂದಲೇ ಅರಿತು ವಿದೇಯವಾಗುವುದು ಮತ್ತು ಅದನ್ನು ತಪ್ಪದಂತೆ ರೂಪಿಸಿಕೊಳ್ಳುವ ಕ್ರಮ ಅಥವಾ ದಾರಿಯನ್ನೇ ದೀನ್ ಎಂದು ಅರ್ಥೈಸಿಕೊಳ್ಳೋಣ.

ಮುಹಮ್ಮದ್ ಅವರ ಕಾಲದ ಸಮಾಜೋಧಾರ್ಮಿಕ ಅವ್ಯವಸ್ಥೆಗಳು ಮತ್ತು ಮನುಷ್ಯರ ಬಾಳ್ವೆಗೆ ಮಾರಕವಾಗಿರುವಂತಹ ಅತ್ಯಂತ ಕೆಟ್ಟ ಮತ್ತು ಕ್ರೂರವಾದಂತಹ ಸಂಘರ್ಷಗಳು ಅವರನ್ನು ಮತ್ತೊಮ್ಮೆ ನವಸಮಾಜವನ್ನು ಕನವರಿಸುವಂತಾಯಿತು. ಎಲ್ಲಾ ಅಸಮಾನತೆ, ವೈಪರಿತ್ಯ, ಅಭದ್ರತೆ, ತಾರತಮ್ಯ, ಕ್ರೂರವಾದ ಮೌಢ್ಯ; ಇತ್ಯಾದಿಗಳಿಗೆ ಪರಿಹಾರವನ್ನು ಕಂಡುಕೊಳ್ಳುವ ಹೊಣೆಗಾರಿಕೆಯನ್ನು ಹೊತ್ತು ಜನರಿಗೆ ದಾರಿಯನ್ನು ತೋರಲು ಸಿದ್ಧವಾದರು. ಅದೇ ಕುರಾನಿನ ಅವತರಣ.

(ಮುಂದುವರಿಯುವುದು)

ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂತರಂಗ

ಆತ್ಮಕತೆ | ತುರ್ತು ಪರಿಸ್ಥಿತಿ ಮತ್ತು ನಮ್ಮೂರಿನ ಭೂ ಹೋರಾಟ

Published

on

  • ರುದ್ರಪ್ಪ ಹನಗವಾಡಿ

ದೇಶದಾದ್ಯಂತ ತುರ್ತುಪರಿಸ್ಥಿತಿ ಇತ್ತು. ಶಾಲಾ ಕಾಲೇಜುಗಳಲ್ಲಿ ಪಾಠ ಪ್ರವಚನಗಳು ನಿಗದಿಯಂತೆ ನಡೆಯುತ್ತಿದ್ದವು. ರಾಜ್ಯ ಮತ್ತು ರಾಷ್ಟ್ರಮಟ್ಟದ ಕಾಂಗ್ರೆಸ್ ವಿರೋಧಿ ರಾಜಕೀಯ ನಾಯಕರನ್ನು ಬಂಧಿಸಿ ಜೈಲಿನಲ್ಲಿರಿಸಿದ್ದರು. ಇಂದಿರಾ ಗಾಂಧಿಯವರ 20 ಅಂಶದ ಕಾರ್ಯಕ್ರಮಗಳು ವಿಶೇಷವಾಗಿ ದಲಿತ ಹಿಂದುಳಿದವರ ಪರವಾಗಿದ್ದುದನ್ನು ಮುಖ್ಯಮಂತ್ರಿ ದೇವರಾಜ ಅರಸು ಅವರು ಒತ್ತಿ ಹೇಳುತ್ತಿದ್ದರು ಮತ್ತು ತುರ್ತು ಪರಿಸ್ಥಿತಿಯನ್ನು ಸಮರ್ಥಿಸಿಕೊಂಡು ರಾಜ್ಯಾಡಳಿತವನ್ನು ನಡೆಸುತ್ತಿದ್ದರು.

ದೇವರಾಜ ಅರಸು ಅವರು ಕರ್ನಾಟಕದಲ್ಲಿ ಹಿಂದೆಂದೂ ನೀಡಿರದಿದ್ದ ವಿಶೇಷ ಸವಲತ್ತುಗಳನ್ನು ದಲಿತರು, ಹಿಂದುಳಿದವರಿಗೆ ಮತ್ತು ಅಲ್ಪಸಂಖ್ಯಾತರಿಗೆ ನೀಡುತ್ತಿದ್ದರು. ಹಾಗೆ ಹೇಳುತ್ತಲೂ ಇದ್ದರು. ಅದು ನಿಜವೂ ಆಗಿತ್ತು. ಆದರೆ ನಾವೆಲ್ಲ ತುರ್ತುಪರಿಸ್ಥಿತಿಯ ವಿರುದ್ಧವಾಗಿ ಕೆಲಸ ಮಾಡುತ್ತಿದ್ದೆವು.

ನಮ್ಮ ಊರಿನಲ್ಲಿ ವೀರಭದ್ರ ದೇವರ ಚಾಕರಿ (ಮ್ಯಾಳ) ಮಾಡುತ್ತಿದ್ದ ಕಾರಣ ಹದಿನೇಳು ಎಕರೆ ವೀರಭದ್ರ ದೇವರ ಹೆಸರಿನಲ್ಲಿದ್ದುದನ್ನು ನಮ್ಮ ಎಲ್ಲ ಆರು ಕುಟುಂಬಗಳಿಗೆ ಊರಿನ ಪ್ರಮುಖರು ನಾವಿನ್ನು ಹುಟ್ಟುವ ಮುಂಚೆಯೇ ಹಂಚಿ ಕೊಟ್ಟಿದ್ದರು. ಅದರಲ್ಲಿ ಅಪ್ಪನಿಗೆ ಸುಮಾರು ನಾಲ್ಕು ಎಕರೆಯಷ್ಟನ್ನು ನೀಡಿದ್ದು ಸಾಗುವಳಿ ಮಾಡಿಕೊಂಡು ಬರುತ್ತಿದ್ದೆವು. ಈ ನಡುವೆ ಭೂಸುಧಾರಣಾ ಕಾನೂನು ಜಾರಿ ಮಾಡುವ ಬಗ್ಗೆ ಅರಸು ಸರ್ಕಾರ ವಿಶೇಷವಾಗಿ ಭೂನ್ಯಾಯ ಮಂಡಳಿಯನ್ನು ರಚಿಸಿತ್ತು. ಇದನ್ನರಿತ ನಮ್ಮವರೆಲ್ಲ ಸೇರಿ ನಮ್ಮ ಅಣ್ಣ ತಿಪ್ಪಣ್ಣನ ಪ್ರಯತ್ನದಿಂದ ಸರ್ಕಾರ ರಚಿಸಿದ್ದ ಭೂನ್ಯಾಯ ಮಂಡಳಿಯ ಮುಂದೆ ಎಲ್ಲ ಆರು ಜನರೂ ತಮಗೆ ಭೂಮಿಯ ಹಕ್ಕು ನೀಡಲು ನಮೂನೆ 7ರ ಅರ್ಜಿ ಸಲ್ಲಿಸಿದ್ದರು.

ಭೂನ್ಯಾಯ ಮಂಡಳಿಯ ಮುಂದೆ ಅರ್ಜಿ ಹಾಕಿದ ವಿಷಯ ಊರಲ್ಲಿ ದೊಡ್ಡ ಅಸಮಾಧಾನದ ಕಿಚ್ಚನ್ನು ಮೂಡಿಸಿತ್ತು. ಈ ನಡುವೆ ನಮಗಾಗಿ ಕೊಟ್ಟಿದ್ದ 17 ಎಕರೆಯಲ್ಲಿ ಮಧ್ಯ ಭಾಗದಲ್ಲಿ 4 ಎಕರೆಯನ್ನು ಕಬಳಿಸುವಷ್ಟು ರಾಷ್ಟ್ರೀಯ ಹೆದ್ದಾರಿಯು ದಾವಣಗೆರೆಯಿಂದ ಹುಬ್ಬಳ್ಳಿವರೆಗೆ ಬೈಪಾಸ್ ರಸ್ತೆಗಾಗಿ ಸರ್ಕಾರ ವಶಪಡಿಸಿಕೊಂಡಿತ್ತು. ಸರ್ಕಾರದಿಂದ ನೀಡಿದ ನಾಲ್ಕು ಎಕರೆ ಪರಿಹಾರದ ಹಣವನ್ನು ಕೂಡ ದೇವಸ್ಥಾನದವರೇ ತೆಗೆದುಕೊಂಡಿದ್ದರು. ಉಳಿದಿದ್ದ 13 ಎಕರೆಯಲ್ಲಿ ಮತ್ತೆ ಪುನಃ ಮರು ಹಂಚಿಕೆ ಮಾಡಿಕೊಂಡು ಆರು ಜನರು ಸುಮಾರು ಎರಡೆರಡು ಎಕರೆಗಳಷ್ಟು ಸಾಗುವಳಿ ಮಾಡುತ್ತಿದ್ದರು.
ದೇವಸ್ಥಾನ ಧರ್ಮದರ್ಶಿ ಕಮಿಟಿಯಲ್ಲಿ ಊರಿನ ಹಿರಿಯರಿದ್ದರೂ ಉಳಿದಿರುವ ಭೂಮಿಯನ್ನು ನಮ್ಮವರಿಂದ ಬಿಡಿಸುವುದು ಮತ್ತು ಪ್ರತಿ ಮಂಗಳವಾರ ಗುಡಿಯಲ್ಲಿ ಮಾಡುತ್ತಿರುವ ಮ್ಯಾಳಗಳನ್ನು ನಿಲ್ಲಿಸಬೇಕೆಂದು ಚರ್ಚೆ ಆಗ ಊರಲ್ಲಿ ನಡೆಯುತ್ತಿತ್ತು. ಅವರೆಲ್ಲರ ಚರ್ಚೆಗಳ ಮಧ್ಯೆ ಮ್ಯಾಳದವರು ನಿಲ್ಲಿಸದೆ ಪ್ರತಿ ಮಂಗಳವಾರ ತಪ್ಪಿಸದೆ ಗುಡಿಗೆ ಹೋಗಿ ಎಂದಿನಂತೆ ಮ್ಯಾಳ ಮಾಡಿ ಬರುತ್ತಿದ್ದರು.

ನಮ್ಮೂರ ಚಲುವಾದಿಗಳಿಗೆ ಈ ರೀತಿಯ ಧೈರ್ಯವಿರಲಿಲ್ಲ. ಇವೆಲ್ಲದರ ಹಿಂದಿನ ಯೋಜಕ ಮೈಸೂರಲ್ಲಿ ಓದುತ್ತಿರುವ ಹುಡುಗ ನಾನೇ ಎಂದು ಊರವರು ಮಾತಾಡಿಕೊಂಡರು. ಅವನು ಊರಿಗೆ ಯಾವ ದಾರಿಯಲ್ಲಿ ಬರುತ್ತಾನೋ ಕಾದು ಕುಳಿತು ಕಾಲು ಮುರಿಯಬೇಕೆಂಬ ಯೋಜನೆ ಕೂಡ ಹಾಕಿಕೊಂಡಿದ್ದರಂತೆ. ಆದರೆ ಏಕಾಂಗಿಯಾಗಿ ಓಡಾಡುತ್ತಿದ್ದ ನನಗೆ ಒಳಗೊಳಗೆ ಅಳುಕು ಇದ್ದರೂ ನಾನೇನು ತಪ್ಪು ಮಾಡುತ್ತಿಲ್ಲ ಎಂಬ ತಿಳುವಳಿಕೆ ಧರ‍್ಯ ನೀಡುತ್ತಿತ್ತು. ಆದರೆ ಊರಿಗೆ ಬಂದು ಹೊರಗೆ ಓಡಾಡುತ್ತಿದ್ದರೆ ನಮ್ಮವರೆಲ್ಲ ದೂರದಲ್ಲಿದ್ದುಕೊಂಡೇ ನನ್ನನ್ನು ಊರಲ್ಲಿರುವ ತನಕ ವಿಶೇಷವಾಗಿ ಕವರ್ ಮಾಡುತ್ತಿದ್ದರು.

ಇದಕ್ಕೂ ಮುಂಚೆ ನಾನಿನ್ನು ಬಿ.ಎ.ನಲ್ಲಿ ಓದುತ್ತಿರುವಾಗ ಸರ್ಕಾರದ ವತಿಯಿಂದ ನಮ್ಮ ಮನೆಯ ಹತ್ತಿರದಲ್ಲೇ ಸಾರ್ವಜನಿಕರಿಗಾಗಿ ಕುಡಿಯಲು ಒಂದು ತೆರೆದ ಬಾವಿಯನ್ನು ತೆಗೆದಿದ್ದರು. ಊರಲ್ಲಿದ್ದ ಎರಡು ಬಾವಿಗಳಿಂದ ನೀರು ಸೇದುತ್ತಿದ್ದ ಮೇಲ್ಜಾತಿಗಳ ಜನರಿಂದ ನಮ್ಮವರೆಲ್ಲ ಹೊಯ್ ನೀರು ತರುತ್ತಿದ್ದರು. ಅಂದರೆ ಮೇಲ್ಜಾತಿಯವರಿಂದ ನೀರು ಸೇದಿ ಇವರ ಕೊಡಗಳಿಗೆ ನೀರು ಹಾಕಬೇಕು, ಆಗ ಇವರ ಮನೆಗಳಿಗೆ ತೆಗೆದುಕೊಳ್ಳಬೇಕು. 1936ರಲ್ಲಿ ಸರ್ಕಾರ ನಮಗೊಂದು ರಂಗಜ್ಜನ ಮಠದ ಹತ್ತಿರ ಬಾವಿ ತೆಗೆಸಿತ್ತು. ಅದು ನಮ್ಮ ಮನೆಗಳಿಗೆ ಅರ್ಧ ಕಿಲೋಮೀಟರ್ ದೂರದಲ್ಲಿತ್ತು. ಆದರೆ ಅಲ್ಲಿನ ನೀರು ಕುಡಿಯಲು ಯೋಗ್ಯವಾಗಿರಲಿಲ್ಲ.

ಮನೆಯ ಹತ್ತಿರವಿರುವ ಬಾವಿಯನ್ನು ವಿಧ್ಯುಕ್ತವಾಗಿ ಉದ್ಘಾಟಿಸುವ ಮುನ್ನ ನಾನು ನಮ್ಮಲ್ಲಿದ್ದ ಹಸುವಿನ ಜೊತೆ ಆ ಹೊಸ ಬಾವಿಯಿಂದ ನೀರು ಸೇದಿ ಅದಕ್ಕೆ ಕುಡಿಸಿ ನಾನು ಅಲ್ಲೇ ಸ್ನಾನ ಮಾಡಿಕೊಂಡು ಬರುತ್ತಿದ್ದೆ. ನಾನಿರುವಾಗ ಯಾರೂ ಮಾತಾಡದೆ ಇದ್ದವರು, ನಾನು ಮೈಸೂರಿಗೆ ವಾಪಸ್ ಓದಲು ಹೋದಾಕ್ಷಣ ಮಾರನೆ ದಿನ ನಮ್ಮ ಮನೆಯ ಹೆಣ್ಣು ಮಕ್ಕಳು ನೀರಿಗೆ ಹೋದಾಗ ಹಗ್ಗ ಕೊಡಪಾನಗಳನ್ನು ಕಿತ್ತು ಬಿಸಾಕಿ ನೀರು ಸೇದಲು ಬಿಟ್ಟಿರಲಿಲ್ಲ. ಆಗಿನ್ನು ಅಪ್ಪ ಇದ್ದ. ‘ನೀನು ಊರ ಉಸಾಬರಿಗೆ ಬರಬೇಡ ನಿನ್ನ ಓದು ನೀನು ಮಾಡಿಕೊಂಡು ಸುಮ್ಮನಿರು’ ಎಂದು ಪತ್ರ ಬರೆಸಿ ಸಮಾಧಾನ ಹೇಳಿದ್ದ. ಆದರೂ ನಾನು ಆಗಿರುವ ಅವಮಾನದ ಬಗ್ಗೆ ಚಿಂತಿಸುತ್ತಿದ್ದಾಗ ಒಂದು ದಿನ ಮೈಸೂರಿಗೆ ಬಂದಿದ್ದ ಕಂದಾಯ ಮಂತ್ರಿಗಳಾಗಿದ್ದ ಬಸವಲಿಂಗಪ್ಪನವರ ಹತ್ತಿರ ಹೋಗಿ, ನಮ್ಮೂರಲ್ಲಿ ಸಾರ್ವಜನಿಕ ಬಾವಿಯಿಂದ ನೀರು ಸೇದಲು ಲಿಂಗಾಯತರು ತೊಂದರೆ ಕೊಡುತ್ತಿರುವ ಬಗ್ಗೆ ಹೇಳಿದೆ.

ಅವರು ಅದನ್ನು ಮನಸ್ಸಿನಲ್ಲಿಕೊಂಡು ಬೆಂಗಳೂರಿಗೆ ವಾಪಸಾಗಿದ್ದರು. ನಮ್ಮೂರ ಛರ‍್ಮನ್ ಬಸಪ್ಪನವರು ಮತ್ತು ನಮ್ಮ ಹರಿಹರದವರೇ ಬಿ. ಬಸವಲಿಂಗಪ್ಪನವರು ಮೊದಲಿಂದಲೂ ಬಳಕೆಯಲ್ಲಿದ್ದವರಾಗಿದ್ದರು. ಛರ‍್ಮನ್ ಬಸಪ್ಪನವರು ಇನ್ನು ನಮ್ಮ ಊರಿನವರೊಡನೆ ಬೆಂಗಳೂರಲ್ಲಿ ತಮ್ಮ ಯಾವುದೋ ಕೆಲಸಕ್ಕೆ ಭೇಟಿ ಮಾಡಿದಾಗ ನಾನು ಹೇಳಿದ ವಿಷಯವನ್ನು ಪ್ರಸ್ತಾಪಿಸಿ, ‘ನೀವೇನು ಹೆಂಡ ಕುಡಿಯೋದಿಲ್ಲವಾ? ಮಾಂಸ ತಿನ್ನೋದಿಲ್ವಾ’ ಎಂದೆಲ್ಲಾ ಕೇಳಿ ‘ಬಸವಣ್ಣ ಏನು ಹೇಳಿದ್ದಾನೆ ಗೊತ್ತಾ? ಅದನ್ನ ಪಾಲಿಸೋದು ಬಿಟ್ಟು, ಸರ್ಕಾರ ಕಟ್ಟಿಸಿದ ಬಾವಿಯ ನೀರು ಸೇದಲು ಅಡ್ಡಿಪಡಿಸಬಾರದೆಂದು ಗರ್ಜನೆ ಹಾಕಿ ತಾಕೀತು ಮಾಡಿ ಕಳಿಸಿದ್ದರು.

ನಮ್ಮೂರ ಛರ‍್ಮನ್ ಬಸಪ್ಪನವರು ಬಹಳ ದಿನಗಳ ಕಾಲ ನಮ್ಮೂರ ಛರ‍್ಮನ್‌ರಾಗಿ ಎಲ್ಲರ ಜೊತೆ ಒಳ್ಳೆಯ ಸಂಬಂಧವಿಟ್ಟುಕೊಂಡಿದ್ದರು. ಆದರೆ ಊರ ಸಮಷ್ಟಿಯ ಸಮಸ್ಯೆಗಳು ಬಂದಾಗ ಧೈರ್ಯವಾಗಿ ಒಬ್ಬರೇ ತೀರ್ಮಾನ ತೆಗೆದುಕೊಳ್ಳಲು ಆಗುತ್ತಿರಲಿಲ್ಲ. ಆದರೆ ಬೆಂಗಳೂರಿನಿಂದ ಬಂದವರೇ ಯಾರು ನಿಮಗೆ ನೀರು ತರಲು ಅಡ್ಡಿಪಡಿಸಿದವರು ಎಂದು ಹೇಳಿ ಅವರೇ ನಮ್ಮ ಕೇರಿಗೆ ಬಂದು ನಮ್ಮವರನ್ನೇ ನೀರು ಸೇದಿಕೊಳ್ಳಲು ಹೇಳಿದ್ದರು. ಊರಲ್ಲಿ ವಿರೋಧಿಸಿದವರಿಗೆ ಸರ್ಕಾರದಿಂದ ಆದೇಶವಾಗಿದೆ ಎಂದೆಲ್ಲ ಹೇಳಿ ಬಾಯಿ ಮುಚ್ಚಿಸಿದ್ದರು. ಛರ‍್ಮನ್ ಬಸಪ್ಪನವರು ಸುಮಾರು 20 ವರ್ಷಗಳ ಕಾಲ ಛರ‍್ಮನ್‌ರಾಗಿದ್ದರು. ಯಾರಿಗೂ ಕೇಡು ಬಯಸುವ ವ್ಯಕ್ತಿಯಾಗಿರಲಿಲ್ಲ. ಇದೇ ಸಮಸ್ಯೆ ಬೇರೆಯವರ ಕೈಗೆ ಬಿದ್ದಿದ್ದರೆ, ಏನೆಲ್ಲಾ ಅನಾಹುತ ಮಾಡುತ್ತಿದ್ದರೋ ಊಹಿಸಲೂ ಅಸಾಧ್ಯ.

ಈ ಹಿನ್ನೆಲೆಯಲ್ಲಿ ಈಗ ಊರ ಮಟ್ಟದಲ್ಲಿ ಮತ್ತೊಂದು ಮಹತ್ತರವಾದ ಸಮಸ್ಯೆಯಾಗಿ ಎದ್ದು ಕೂತಿತ್ತು. ಅದು ಭೂ ನ್ಯಾಯ ಮಂಡಳಿಗೆ ಅರ್ಜಿ ಫಾರಂ ಹಾಕಿದ್ದು. ಹರಿಹರದಲ್ಲಿ ನಡೆಸುತ್ತಿದ್ದ ಭೂನ್ಯಾಯ ಮಂಡಳಿಯ ಮುಂದೆ ಹಾಜರಾಗಬೇಕು. ನಮ್ಮವರೆಲ್ಲ ದೇವಸ್ಥಾನದ ಧರ್ಮದರ್ಶಿಗಳ ಜೊತೆಗೆ ಮಾತಾಡಿಕೊಂಡು ಅವರು ತರುತ್ತಿದ್ದ ಟ್ರಾಕ್ಟರ್‌ನಲ್ಲಿ ಕೂತು ಹೋಗುತ್ತಿದ್ದರು. ನಮ್ಮ ಅಣ್ಣ ತಿಪ್ಪಣ್ಣ ಮಾತ್ರ ಅವರ ಜೊತೆಗೆ ಹೋಗುತ್ತಿರಲಿಲ್ಲ. ಅವರ ಜೊತೆ ಇರುವಾಗ, ನೀವು ಹೇಳಿದ ಹಾಗೆ ಸಾಕ್ಷಿ ಹೇಳುತ್ತೇವೆಂದು ಅವರ ಹತ್ತಿರವೇ ಬೀಡಿ ಕೇಳಿ ಸೇದಿಕೊಳ್ಳುತ್ತಿದ್ದರು. `ಇದೆಲ್ಲ ನಮ್ಮ ಹುಡುಗನ ಕೆಲಸ, ನಮಗ್ಯಾಕಣ್ಣ ದೇವರ ಜಮೀನು’ ಎಂದೆಲ್ಲ ಅವರ ಜೊತೆಯೇ ತಾಳ ಹಾಕುತ್ತ ಇದ್ದರು. ನಾನು ಊರಿಗೆ ಹೋದಾಗ ಯಾವಾಗ ತೀರ್ಮಾನಿಸಲಾಗುತ್ತದೆ ಎಂದು ಬಂದು ಗುಟ್ಟಾಗಿ ನನ್ನ ಬಳಿ ಕೇಳುತ್ತಿದ್ದರು. ನಮ್ಮವರೆಲ್ಲರ ಅದೃಷ್ಟವೋ ಎನ್ನುವಂತೆ ನನಗೆ 1969-1972ರಲ್ಲಿ ಮಹಾರಾಜಾ ಕಾಲೇಜಿನಲ್ಲಿ ಸಹಪಾಠಿಯಾಗಿದ್ದ ಕೆ.ಎಂ. ಶಂಕರಲಿಂಗೇಗೌಡರನ್ನು ದಾವಣಗೆರೆ ಭೂನ್ಯಾಯ ಮಂಡಳಿಯ ಅಧ್ಯಕ್ಷರಾಗಿ ಸರ್ಕಾರ ನೇಮಕ ಮಾಡಿತ್ತು. ನಾನು ನಮ್ಮ ಊರಿನ ಸ್ಥಿತಿಯನ್ನೆಲ್ಲ್ಲ ಅವರಿಗೆ ವಿವರಿಸಿ, ನಮಗೆ ಆದಷ್ಟು ಬೇಗ ಇತ್ಯರ್ಥಗೊಳಿಸಿಕೊಡಬೇಕೆಂದು ಅವರಲ್ಲಿ ವಿನಂತಿಸಿದೆ. ನಾನು ಹೋಗಿ ವಿನಂತಿಸಿದ 3-4 ತಿಂಗಳಲ್ಲಿ ನಮ್ಮವರೆಲ್ಲರ ಹೆಸರಿಗೆ ಭೂನ್ಯಾಯ ಮಂಡಳಿಯಲ್ಲಿ 1976ರ ವರ್ಷದ ಮಧ್ಯ ಭಾಗದಲ್ಲಿ ಭೂನ್ಯಾಯ ಮಂಡಳಿಯಿಂದ ತೀರ್ಮಾನಿಸಲಾಗಿತ್ತು.

ಆ ಸಂದರ್ಭದಲ್ಲಿ ಹೆಚ್. ಶಿವಪ್ಪನವರು ಹರಿಹರ ತಾಲ್ಲೂಕು ಶಾಸಕರು ಮತ್ತು ಭೂನ್ಯಾಯ ಮಂಡಳಿಯ ಸದಸ್ಯರಾಗಿದ್ದರು. ಅವರು ನಮಗೆಲ್ಲ ಜಮೀನು ನೋಂದಾಯಿಸುವ ಪ್ರಕರಣದಲ್ಲಿ ವಿರೋಧಿಸದೆ ಸಹಕಾರ ನೀಡಿದ್ದನ್ನು ನಾನು ನೆನಪಿಸಿಕೊಳ್ಳಬೇಕು. ಆದೇಶ ನೀಡುವ ಸಮಯದಲ್ಲಿ ದೇವಸ್ಥಾನದ ಧರ್ಮದರ್ಶಿಗಳು, ಭೂನ್ಯಾಯ ಮಂಡಳಿಯ ಅಧ್ಯಕ್ಷರ ಎದುರೇ ‘ಊರಿಗೆ ರ‍್ರಲೇ ನೋಡಿಕೊಳ್ಳುತ್ತೇವೆ’ ಎನ್ನೋ ಧಮ್ಕಿ ಹಾಕಿದಾಗ, ಅಧ್ಯಕ್ಷರು ‘ನಿಮ್ಮನ್ನೆಲ್ಲ ಪೊಲೀಸ್ ಕರೆಸಿ ಈಗಲೇ ಜೈಲಿಗೆ ಕಳಿಸುತ್ತೇನೆಂದು ಹೇಳಿ ಎಚ್ಚರಿಕೆ ನೀಡಿದರೆಂದು ನಮ್ಮವರೆಲ್ಲ ನನ್ನ ಬಳಿ ಸಂತೋಷದಿಂದ ಎಲ್ಲ ಮುಗಿದ ಮೇಲೆ ಹೇಳಿಕೊಂಡಿದ್ದರು.

ಮುಂದುವರಿಯುವುದು

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಅಂತರಂಗ

ಆತ್ಮಕತೆ | ಅಪ್ಪನ ಮೈಸೂರು ಭೇಟಿ ಸಾವು – ನೋವು

Published

on

  • ರುದ್ರಪ್ಪ ಹನಗವಾಡಿ 

ನಾನು ಮೈಸೂರಿನಲ್ಲಿ ಅಧ್ಯಾಪಕನಾಗಿ ಕೆಲಸ ನಿರ್ವಹಿಸುತ್ತಿರುವುದರ ಬಗ್ಗೆ ತಿಳಿದ ನಮ್ಮೂರಲ್ಲಿ ಎಲ್ಲರಿಗೂ ಸಂತೋಷವಾಗಿತ್ತು. ಅತ್ಯಂತ ಸಂತೋಷಗೊಂಡಿದ್ದ ಅಪ್ಪನನ್ನು ನಾನು ಮೈಸೂರಿಗೆ ಕರೆದುಕೊಂಡು ಬಂದು ಒಮ್ಮೆ ತೋರಿಸಬೇಕೆಂದು ಯೋಚಿಸಿದ್ದೆ. ಅಪ್ಪನು ಓಡಾಡಲು ಶಕ್ತಿ ಇದ್ದ ಕಾಲದಲ್ಲಿ ಎಲೆ ವ್ಯಾಪಾರಕ್ಕಾಗಿ ಧಾರವಾಡ, ಕಂಪ್ಲಿ, ಗಂಗಾವತಿ, ಹೊಸಪೇಟೆ, ಹರಿಹರ, ದಾವಣಗೆರೆ ಸಂತೆಗಳಲ್ಲಿ ಓಡಾಡುತ್ತಿದ್ದನು. ಇತ್ತೀಚೆಗೆ ಅವರಿಗೆ ಇದ್ದ ಕೆಮ್ಮು ದಮ್ಮುಗಳಿಂದ ಹೊರ ಊರುಗಳಿಗೆಲ್ಲೂ ಹೋಗುತ್ತಿರಲಿಲ್ಲ. ಅಪ್ಪನ ಹೆಚ್ಚಾದ ವಯಸ್ಸಿನ ಕಾರಣದಿಂದಲೇ ಹರಿಹರದಲ್ಲಿ ಹೈಸ್ಕೂಲಿಗೆ ಸೇರಿದ್ದ ಅಣ್ಣ ತಿಪ್ಪಣ್ಣನನ್ನು ಶಾಲೆ ಬಿಡಿಸಿ ತೋಟದ ಕೆಲಸಕ್ಕೆ ಹಾಕಿಕೊಂಡಿದ್ದ. ಹಾಗಾಗಿ ಈಗೆಲ್ಲ ಸಂತೆಗಳಿಗೆ ಅಣ್ಣನನ್ನೇ ಕಳಿಸುತ್ತಿದ್ದ.

ನಾನು ಮೈಸೂರಿನಲ್ಲಿ ಮತ್ತೆ ಮುಂದಿನ ಶೈಕ್ಷಣಿಕ ವರ್ಷದಲ್ಲಿ ಪುನಃ ನನ್ನ ಉಪನ್ಯಾಸಕ ಹುದ್ದೆಯನ್ನು ವಿಶ್ವವಿದ್ಯಾಲಯ ಮುಂದುವರೆಸಿತು. ಈ ನಡುವೆ ಪಾಲ್ ಇ ಸೈಮನ್ಸ್ ಅವರ ಪ್ರಾಜೆಕ್ಟ್ ಪೂರ್ಣಗೊಂಡಿತ್ತು. ಹಾಗಾಗಿ ಅವರು ವಾಪಸ್ ಅಮೇರಿಕೆಗೆ ಹೊರಟುಹೋದರು. ಹೋಗುವ ಮುನ್ನ ತಮ್ಮಲ್ಲಿದ್ದ ರ‍್ಯಾಲೀ ಬೈಸಿಕಲ್ ಮತ್ತು ಆರಾಮವಾಗಿ ಕೂರಲು ತೆಗೆದುಕೊಂಡಿದ್ದ `ಇಸೀ ಚೇರ್’ನ್ನು ನನಗೆ ಇಟ್ಟುಕೊಳ್ಳಲು ಹೇಳಿದರು. ಉಳಿದಂತೆ ತನ್ನೆಲ್ಲ ವಸ್ತುಗಳನ್ನು ಅಚ್ಚುಕಟ್ಟಾಗಿ ಪ್ಯಾಕ್ ಮಾಡಿಕೊಳ್ಳಲು ನಾನು ಸಹಕರಿಸಿದೆ.

ಈ ಸಮಯಕ್ಕಾಗಲೇ ಮಹೇಶ ರಾಜ್ಯಶಾಸ್ತçದಲ್ಲಿ ಎಂ.ಎ. ಮುಗಿಸಿದ್ದ. ಅವನು ಮುಂದೆ ಕಾನೂನು ವ್ಯಾಸಂಗ ಮಾಡಲು ಮೈಸೂರಿನಲ್ಲಿಯೇ ಇರುವ ತೀರ್ಮಾನ ಮಾಡಿದ್ದ. ಹಾಗಾಗಿ ಹಾಲಿ ಇದ್ದ ಮನೆಯನ್ನು ನಾನು ಬಿಟ್ಟು
ಕೆ.ಜಿ. ಕೊಪ್ಪಲಲ್ಲಿ ನಾನು ಅವನೂ ಸೇರಿ ಬಾಡಿಗೆ ಮನೆ ಮಾಡಿದೆವು. ನಂತರದಲ್ಲಿ ನಮ್ಮ ಊರಿನಲ್ಲಿ ಪಿಯುಸಿ ಪಾಸು ಮಾಡಿ ಊರಲ್ಲಿದ್ದ ಬಾರಿಕರ ಮಾಂತೇಶಿ, ಐನೇರ ಮುಕ್ತಾಯಕ್ಕ ಇವರುಗಳು ಕೂಡ ಮೈಸೂರಿಗೆ ಬಂದು ಓದು ಮುಂದುವರೆಸಲು ನನ್ನ ಸಹಾಯ ಕೋರಿದ್ದರು. ನಾನು ಅವರನ್ನೂ ಸಹ ನನ್ನ ಜೊತೆಗೆ ಮೈಸೂರಿಗೆ ಕರೆತಂದು, ಮುಕ್ತಾಯಕ್ಕನಿಗೆ ಸರಸ್ವತಿಪುರಂನಲ್ಲಿ ಸಣ್ಣ ಬಾಡಿಗೆ ಮನೆ ಮಾಡಿಕೊಟ್ಟು ಮಾಂತೇಶಿಗೆ ಮಹಾರಾಜ ಕಾಲೇಜಿನಲ್ಲಿ ಮತ್ತು ಬಿ.ಸಿ.ಎಂ. ಹಾಸ್ಟೆಲ್‌ನಲ್ಲಿ ಸೀಟು ಕೊಡಿಸಿ ಬಿ.ಎ. ಮುಂದುವರೆಸಲು ಅವಕಾಶ ಮಾಡಿಕೊಟ್ಟೆ. ಈ ನಡುವೆ ನಾನು ಊರಿಗೆ ಹೋದಾಗ ನನ್ನ ಅವ್ವನ ತಂಗಿ ಮಗ ಸಿರಿಗೇರಿ ರಾಮಣ್ಣ ಬಿ.ಎ. ಪದವಿ ಕೋರ್ಸು ಮುಗಿಸಿ ಕೆಲವು ವಿಷಯಗಳಲ್ಲಿ ಫೇಲಾಗಿ ತನ್ನ ಊರಿನಲ್ಲಿದ್ದ. ಅವನನ್ನು ಕೂಡ ಮೈಸೂರಿಗೆ ಕರೆದುಕೊಂಡು ಬಂದು ನಾವಿದ್ದ ಮನೆಯಲ್ಲಿಟ್ಟುಕೊಂಡು, ಬಾಕಿ ಉಳಿದ ವಿಷಯಗಳಿಗಾಗಿ ಟ್ಯೂಷನ್ ತೆಗೆದುಕೊಳ್ಳಲು ವ್ಯವಸ್ಥೆ ಮಾಡಿದೆ. ನಂತರ ಬಿ.ಎ. ಪಾಸು ಮಾಡಿಕೊಂಡು ಮುಂದೆ ಕೆ.ಇ.ಬಿ.ಯಲ್ಲಿ ಸರ್ಕಾರಿ ಕೆಲಸಕ್ಕೆ ಸೇರಿದ.

ಕೆ.ಜಿ. ಕೊಪ್ಪಲ ಮನೆಯಲ್ಲಿ ನಾನು ಮಹೇಶ ಅಧಿಕೃತ ಬಾಡಿಗೆದಾರರಾದರೂ ಅನಧಿಕೃತವಾಗಿ ವಿದ್ಯಾರ್ಥಿ ಬಳಗ ಮತ್ತು ನಿರುದ್ಯೋಗಿಗಳ ಬಳಗದ ಸದಸ್ಯರು ಯಾರಾದರೊಬ್ಬರು ಇರುತ್ತಿದ್ದರು. ನಮ್ಮಿಬ್ಬರಿಗೆ ಅಡಿಗೆ ಮಾಡಿಡಲು ಒಪ್ಪಿಕೊಂಡಿದ್ದ ಶಿವಪ್ಪ ಎನ್ನುವ ಅಡಿಗೆಯವನು ನಮ್ಮಲ್ಲಿ ದಿನವೂ ಏರುಪೇರಾಗುತ್ತಿದ್ದ ಸಂಖ್ಯೆ ಮತ್ತು ಹೊಲೆ ಮಾದಿಗರೆಗೆಲ್ಲ ನಾನು ಅಡಿಗೆ ಮಾಡುವುದಿಲ್ಲ ಎಂದು ಹೇಳಿ ಹೊರಟು ಹೋಗಿದ್ದ. ಈ ನಡುವೆ ಹಾಸ್ಟೆಲ್‌ನಲ್ಲಿ ಸೀಟು ಸಿಗುವವರೆಗೆ ಮಾಂತೇಶಿ ಮತ್ತು ರಾಮಣ್ಣನೇ ತೋಚಿದಂತೆ ಅಡುಗೆ ಮಾಡುತ್ತಿದ್ದರು. ಅದನ್ನೇ ಎಲ್ಲರೂ ಹಂಚಿ ಉಣ್ಣುತ್ತಿದ್ದೆವು. ಇದನ್ನೆಲ್ಲ ನೆನಪಿಸಿಕೊಳ್ಳುವ ಸಮಯಕ್ಕೆ ರಾಮಣ್ಣ ಮತ್ತು ಮಾಂತೇಶಿ ಇಬ್ಬರೂ ತೀರಿಕೊಂಡಿದ್ದಾರೆ. ಮುಕ್ತಾಯಕ್ಕ ಹೊಳೆ ದಾಟಿದ ಮನುಷ್ಯ ಸ್ವಭಾವದಂತೆ ಗುರ್ತಿಲ್ಲದವರಂತೆ ದಾವಣಗೆರೆಯಲ್ಲಿ ಅರಾಮ ಇದ್ದಾಳೆ.

ಇದೇ ಸಮಯಕ್ಕೆ ರಾಷ್ಟ್ರೀಯ ಮಟ್ಟದಲ್ಲಿ ಇಂದಿರಾ ಗಾಂಧಿ ಅವರ ಬಗ್ಗೆ ಅಲಹಾಬಾದ್ ಕೈಕೋರ್ಟ್ ನೀಡಿದ ತೀರ್ಪಿನಂತೆ ಪಾರ್ಲಿಮೆಂಟ್ ಸದಸ್ಯತ್ವವನ್ನು ರದ್ದುಗೊಳಿಸಿದ ಕಾರಣ ದೇಶದಾದ್ಯಂತ ಆಂತರಿಕ ತುರ್ತು ಪರಿಸ್ಥಿತಿ ಘೋಷಣೆಯಿಂದಾಗಿ ಧಾರವಾಡದಲ್ಲಿದ್ದು ಪತ್ರಿಕೆ ನಡೆಸುತ್ತಿದ್ದ ರಾಜಶೇಖರ ಕೋಟಿ ಕೂಡ ಮೈಸೂರಿಗೆ ಬಂದಿದ್ದರು ಹಾಗೂ ನಮ್ಮ ಈ ಬಾಡಿಗೆ ಮನೆಯ ಗೌರವಾನ್ವಿತ ಸದಸ್ಯರಾಗಿದ್ದರು.

ನನಗೆ ಬರುತ್ತಿದ್ದ 600ರೂಗಳ ಸಂಬಳ ಮತ್ತು ಮಹೇಶನ ಊರಿನಿಂದ ಬರುತ್ತಿದ್ದ ಅಕ್ಕಿ ಮತ್ತು ಸಾಂಬಾರು ಪದಾರ್ಥಗಳು ಸೇರಿಕೊಂಡು ಎಲ್ಲರಿಗೂ ಊಟ-ತಿಂಡಿಗಳು ಸಾಧಾರಣವಾಗಿ ನಡೆಯುತ್ತಿದ್ದವು. ಬಿ.ಎ. ಮತ್ತು ಎಂ.ಎ.ಗಳಲ್ಲಿ ಹಾಸ್ಟೆಲ್‌ನಲ್ಲಿನ ಸೊಗಸಾದ ಊಟ ನಂತರ ಪಾಲ್ ಸೈಮನ್ಸ್ ಜೊತೆ ಅಡಿಗೆ ಭಟ್ಟನ ಕೈರುಚಿ ನೋಡಿದ್ದ ನನಗೆ ಇಲ್ಲಿನ ಅನಿಶ್ಚಿತವಾದ ಊಟೋಪಚಾರಗಳನ್ನು ಸಹಿಸಿಕೊಳ್ಳುವುದು ಕಷ್ಟವಾಗುತ್ತಿತ್ತು. ಆದರೇನು? ನಮ್ಮ ಮಿತ್ರ ಬಳಗದ ಬೆಚ್ಚಗಿನ ಸೆಳೆತಗಳು ಇದನ್ನೆಲ್ಲ ಮೀರಿ ಒಬ್ಬರಿಗೊಬ್ಬರು ಸಹಕರಿಸಿಕೊಂಡು ಕಾಲ ಹಾಕುತ್ತಿದ್ದೆವು.
ದಸರಾ ರಜೆ ಬಂದು ಊರಿಗೆ ಹೋದಾಗ ಅಪ್ಪನನ್ನು ಒಮ್ಮೆ ಮೈಸೂರಿಗೆ ಕರೆತಂದು ದಸರಾ ಹಬ್ಬ ಮತ್ತು ನಮ್ಮ ಕಾಲೇಜು ತೋರಿಸಬೇಕೆಂಬ ಆಸೆಯಾಯಿತು. ಈ ಬಾರಿ ದಸರೆಯಲ್ಲಿ ಊರಿಗೆ ಹೋದಾಗ ಸೈಕಲ್ ಹಿಂದಿನ ಸೀಟಿನಲ್ಲಿ ಕೂರಿಸಿಕೊಂಡು ನಮ್ಮ ಅಜ್ಜಿ (ಅಪ್ಪನ ತಾಯಿ) ಪಕ್ಕೀರಜ್ಜಿಯ ಹೆಸರಿಗಿದ್ದ ಹಳ್ಳದಾಚೆಗಿನ ಹೊಲದಲ್ಲಿನ ಬೆಳೆ ನೋಡಲು ಹೋಗಿದ್ದೆವು. ಅಣ್ಣ ಸರಿಯಾಗಿ ಕೆಲಸ ಮಾಡದೆ ಎಲ್ಲಾ ಕಡೆ ನಿರೀಕ್ಷಿತ ಉತ್ಪಾದನೆ ಇಲ್ಲವೆಂದು ನನ್ನ ಬಳಿ ಅಪ್ಪ ಅಲವತ್ತುಕೊಂಡಿದ್ದ. ಅವನೂ ಆಗ ತಾನೆ ಓದುವುದನ್ನು ಬಿಟ್ಟು ತೋಟದ ಕೆಲಸಗಳಲ್ಲಿ ತೊಡಗಿದ್ದರಿಂದಲೋ ಏನೋ ವ್ಯವಸಾಯದಲ್ಲಾಗಲೀ, ತೋಟ ಮಾಡುವುದರಲ್ಲಾಗಲೀ, ಅಪ್ಪನ ನಿರೀಕ್ಷಿತ ಮಟ್ಟದ ಕೆಲಸಗಾರನಾಗಿರಲಿಲ್ಲ. ಅದಕ್ಕೆ ನಮ್ಮವ್ವನ ಕಟಿಪಿಟಿಯೂ ಕಾರಣವಾಗಿತ್ತು. ನಮ್ಮ ಸೈಕಲ್ ಸವಾರಿ ಮುಗಿದು ಮನೆಗೆ ಬಂದಾಗ ಮೈಸೂರು ದಸರಾ ನೋಡಲು ಕರೆದುಕೊಂಡು ಹೋಗುವ ತೀರ್ಮಾನ ಅಪ್ಪನಿಗೆ ಹೇಳಿ ಒಪ್ಪಿಸಿದೆ. ನಂತರ ರೈಲಿನಲ್ಲಿ ಮಾರನೇ ದಿನ ಅಪ್ಪನೊಡನೆ ಮೈಸೂರಿಗೆ ಪ್ರಯಾಣ ಬೆಳೆಸಿದೆ.

ಮೈಸೂರು ನಗರ ದಸರಾ ಹಬ್ಬದ ಸಂಭ್ರಮದಲ್ಲಿ ಗಿಜುಗುಡುತ್ತಿತ್ತು. ವಿದ್ಯುತ್ ಅಲಂಕಾರದಿಂದ ಶೃಂಗಾರಗೊಂಡಿದ್ದರಿಂದ ಚಾಮುಂಡೇಶ್ವರಿ ಬೆಟ್ಟ, ಸಂಜೆ ವೇಳೆ ವಿದ್ಯುತ್ ದೀಪಗಳಿಂದ ಅಲಂಕಾರಗೊಂಡ ನಮ್ಮ ಕಾಲೇಜನ್ನು ಎಲ್ಲಾ ತೋರಿಸಿದೆ. ನಾನು ಈಗ್ಗೆ 2-3 ವರ್ಷಗಳ ಹಿಂದೆ ಇಲ್ಲಿಯೇ ಓದಿ ಈಗ ಅಲ್ಲಿಯೇ ಮೇಷ್ಟರಾಗಿ ಕೆಲಸ ಮಾಡುತ್ತಿರುವುದನ್ನು ಕಣ್ಣಾರೆ ಕಂಡ ಅಪ್ಪ ಖುಷಿಗೊಂಡಿದ್ದ. ಅರಮನೆ, ಚಾಮುಂಡಿ ಬೆಟ್ಟ, ನಮ್ಮ ಕಾಲೇಜು, ಎಲ್ಲ ನೋಡಿದ ಅಪ್ಪ `ನಾನಿನ್ನು ಸತ್ತರೂ ಚಿಂತೆಯಿಲ್ಲ, ನೀನೊಂದು ದಡ ಸೇರಿದೆ’ ಎಂದು ಹೇಳಿ ಪುಳಕಗೊಂಡಿದ್ದ. ಮಾರನೇ ದಿನ ಸಂಜೆ ಕೃಷ್ಣರಾಜ ಸಾಗರ ಅಣೆಕಟ್ಟು ವೀಕ್ಷಣೆಗೆ ಹೋಗುವ ಮಾತಾಡಿದಾಗ ಅವನು ಆಸಕ್ತಿ ತೋರಲಿಲ್ಲ. ಹಾಗಾಗಿ ಅವನನ್ನು ರಾಮನಗರದಲ್ಲಿದ್ದ ಅಕ್ಕನ ಮನೆಗೆ ಬಸ್ಸಿನಲ್ಲಿ ಹತ್ತಿಸಿ ಕಳಿಸಿದೆ.

ದೇಶಾದಾದ್ಯಂತ ತುರ್ತು ಪರಿಸ್ಥಿತಿ, ದೇವರಾಜ ಅರಸರ 20 ಅಂಶದ ಕಾರ್ಯಕ್ರಮಗಳು, ಈ ಬಗ್ಗೆ ರಾಷ್ಟ್ರಮಟ್ಟದಲ್ಲಿ ಜೆಪಿ ಅವರು ಸೇರಿದಂತೆ ವಿರೋಧ ಪಕ್ಷಗಳ ಧುರೀಣರನ್ನು ಬಂಧಿಸಿ ಜೈಲಿನಲ್ಲಿಡುವಂತಾದ ವಿಷಯಗಳ ಚರ್ಚೆ ನಮ್ಮ ಕೆ.ಜಿ.ಕೊಪ್ಪಲ ಮನೆಯಲ್ಲಿ ನಡೆಯುತ್ತಿತ್ತು. ತುರ್ತು ಪರಿಸ್ಥಿತಿಯ ಕಾರಣದಿಂದಾಗಿ ವಿದ್ಯಾರ್ಥಿಗಳಿಂದ ಆಗಾಗ ನಡೆಯುತ್ತಿದ್ದ ಮುಷ್ಕರಗಳಾಗಲಿ, ವಿದ್ಯಾರ್ಥಿ ಸಂಘದ ಚುನಾವಣೆಗಳಾಗಲೀ ನಡೆಯದೆ, ಎಲ್ಲರೂ ಬೆದರಿದಂತೆ, ಸ್ವಯಂ ನಿಯಂತ್ರಿತರಾದವರಂತೆ ಕೆಲಸ ಮಾಡುವ ವಾತಾವರಣ, ಶೈಕ್ಷಣಿಕ ಮತ್ತು ಸರ್ಕಾರಿ ಕಛೇರಿಗಳಲ್ಲಿ ಮೂಡಿದಂತೆ ತೋರುತ್ತಿತ್ತು.

ಅಪ್ಪನನ್ನು ಊರಿಗೆ ಕಳಿಸಿ, ನಂತರದ ದಿನಗಳಲ್ಲಿ ಓದು, ತರಗತಿಗಳ ಪಾಠ ಮತ್ತು ಸಮಾಜವಾದಿ ಯುವಜನ ಸಭಾ, ಲೋಹಿಯಾ, ಅಂಬೇಡ್ಕರ್ ಚಿಂತನೆಗಳ ಕಡೆ ವಾಲಿಕೊಂಡಿದ್ದೆ. ಅಪ್ಪನಿಗೆ 80-85 ವರ್ಷಗಳಾಗಿರಬಹುದು. ಆಗಿದ್ದರೂ ಎಂದೂ ಮನೆಯಲ್ಲಿ ಕೂತು ವಿಶ್ರಾಂತಿ ಪಡೆಯುವ ಪರಿಪಾಟ ಅಪ್ಪನಿಗಿರಲಿಲ್ಲ. ಬೆಳಿಗ್ಗೆ ಎದ್ದು ದನಕರುಗಳ ಕೊಟ್ಟಿಗೆಯ ಕಸವನ್ನು ತಿಪ್ಪೆಗೆ ಹಾಕಿ, ಚಾ ಕುಡಿದು ತೋಟಕ್ಕೆ ಹೋದರೆ ಮತ್ತೆ ಬರುವುದು ರಾತ್ರಿಗೆ, ಬಂದು ಬಿಸಿನೀರಿನಲ್ಲಿ ಸ್ನಾನ ಮಾಡಿ ಊಟ ಮಾಡಿದರೆ ಅವನ ದಿನಚರಿ ಮುಗಿಯುತ್ತಿತ್ತು. ಯಾರಾದರೂ ಊರಿನಿಂದಲೋ ಇಲ್ಲ ನಮ್ಮ ಚಿಕ್ಕಪ್ಪಂದಿರಾಗಿದ್ದ ನಾಗಪ್ಪ, ಮಹಾದೇವಪ್ಪ ಮತ್ತು ಭೀಮಪ್ಪ ಇವರುಗಳು ಏನಾದರೂ ಮಾತಾಡೋ ನೆಪದಲ್ಲಿ ಸಂಜೆ ಸೇರಿಕೊಂಡರೆ ಸಾರಾಯಿ ಸಮಾರಾಧನೆ ಆಗಿ ಊಟ ಮಾಡುತ್ತಿದ್ದರು. ಇಲ್ಲ ಊರಲ್ಲಿನ ಲಿಂಗಾಯತ ಸ್ನೇಹಿತರಲ್ಲಿ ವಾರಕ್ಕೋ 15ದಿನಗಳಿಗೊಮ್ಮೆಯೋ ಗೌಪ್ಯವಾಗಿ ನಮ್ಮಲ್ಲಿನ ಕೋಣೆಯೊಂದರಲ್ಲಿ ಕೂತು ಪಾರ್ಟಿ ಮಾಡುತ್ತಿದ್ದರು. ಅವ್ವ ಲೊಟಗುಡುತ್ತಾ ಜೋಳದ ಹಪ್ಪಳವನ್ನೋ ಇಲ್ಲ ಮನೆಯಲ್ಲಿದ್ದ ಮೊಟ್ಟೆಗಳನ್ನು ಹುರಿದು ಅವರ ಪಾರ್ಟಿಗೆ ನೆಂಚಿಗೆ ಮಾಡಿ ಕೊಡುತ್ತಿದ್ದಳು.

ಅಪ್ಪನ ಅಣ್ಣ ರಂಗಪ್ಪಜ್ಜ ಇದ್ದು, ಅವನು ಮದುವೆಯಾಗಿ, ಮಕ್ಕಳು ಮನಿ ಎಂತೆಲ್ಲಾ ಆದ ಮೇಲೆ ಖಾವಿ ಧರಿಸಿ ಸಾಧುವಾಗಿದ್ದ. ಅವನು ಊರ ಹೊರಗಿನ ಗೋಮಾಳದಲ್ಲಿ ನಮ್ಮಜ್ಜಿ ಫಕ್ಕೀರಜ್ಜಿಯನ್ನು ಸಮಾಧಿ ಮಾಡಿದ್ದು. ಅಲ್ಲಿಯೇ ಒಂದು ವಿಶಾಲ ಗುಡಿಸಲು ಕಟ್ಟಿಕೊಂಡು, ದಿನವೂ ಅಜ್ಜಿಯ ಸಮಾಧಿಯನ್ನು ಪೂಜೆ ಮಾಡಿಕೊಂಡು, ನಮ್ಮ ಊರಿನ ಲಿಂಗಾಯತರ ಮನೆಯಿಂದ ಕಂತೆ ಭಿಕ್ಷೆ ಎತ್ತಿ ಅದರಲ್ಲಿಯೇ ಊಟ ಮಾಡಿಕೊಂಡಿದ್ದ. ಕ್ರಮೇಣ ಎಲ್ಲ ಜನರೂ ಸಾಧು ರಂಗಜ್ಜನ ಮಠ ಎಂದು ಗುರುತಿಸುತ್ತಿದ್ದರು. ಊರಿನ ಲಿಂಗಾಯತರು ಮತ್ತು ಇತರೆ ಜಾತಿಯ ಪ್ರಮುಖರೆಲ್ಲ ಶ್ರಾವಣಮಾಸದಲ್ಲಿ ದೇವಿಪುರಾಣವನ್ನೋ, ಭಜನೆಯನ್ನೋ ಮಾಡುತ್ತಾ ಕೊನೆಯಲ್ಲಿ ಕರಿಯ ಕೊಳವೆಯಂತಹ ವುದರಲ್ಲಿ ಸಾಂಬ್ರಾಣಿಯಂತಹದನ್ನು ನಾದಿ ಚಿಲುಮೆಯಲ್ಲಿ ತುಂಬಿ ಒಂದು ತುದಿಯಲ್ಲಿ ಬಟ್ಟೆಯನ್ನು ಸುತ್ತಿ ಎಡಗೈಯಲ್ಲಿ ಒಂದು ವಿಶೇಷ ಸ್ಟೈಲ್‌ನಲ್ಲಿ ಹಿಡಿದು ಜೋರಾಗಿ ದಮ್ಮು ಎಳೆಯುತ್ತಿದ್ದರು. ಬಲಕ್ಕೊ ಎಡಕ್ಕೊ ಕೂತವನೊಬ್ಬನು ಕಡ್ಡಿ ಗೀರಿ ಬೆಂಕಿ ಹಚ್ಚಿದರೆ ಉಸಿರು ಬಿಗಿ ಹಿಡಿದು ಎಳದಾಗ ರೈಲ್ವೆ ಉಗಿ ಬಂಡಿ ಹೊಗೆ ಉಗುಳಿದಂತೆ, ಮೂಗು ಬಾಯಿಯಿಂದ ಪುಂಖಾನುಪುಂಖವಾಗಿ ಹೊಗೆ ಹೊರಬರುತ್ತಿತ್ತು. ಹಾಗೆ ಎಳೆದವನು ಮತ್ತೊಬ್ಬನಿಗೆ ಭಯ ಮಿಶ್ರಿತ ಭಕ್ತಿಯಿಂದ ನಮಸ್ಕರಿಸಿ `ಗುರುವೇ ತಿಪ್ಪೇಶಾ’ ಎಂಬ ಉದ್ಘಾರದೊಂದಿಗೆ ಕೊಡುತ್ತಿದ್ದನು. ಆತನೂ ಸೇದಿ ಭಗವಂತನ ಕೃಪೆ, ದೇವಿಯ ಮಹಾತ್ಮೆ ಎಂದೇನೇನೋ ಮಾತಾಡಿಕೊಳ್ಳುತ್ತಿದ್ದರು. ಈ ಪಾರ್ಟಿಯಲ್ಲಿ ಅಪ್ಪನೂ ಆಗಾಗ ಅಲ್ಲಿ ಸೇರಿಕೊಳ್ಳುತ್ತಿದ್ದನು. ನಾವೆಲ್ಲ ಕೆಲವು ಹುಡುಗರು ನಮ್ಮ ಕೇರಿಯಿಂದ ಪ್ರಸಾದದ ಆಸೆಗಾಗಿ ಅಲ್ಲಿಗೆ ಹೋಗುತ್ತಿದ್ದೆವು. ಏಕೆಂದರೆ ಪ್ರತಿ ಭಜನೆ ಮುಗಿದಾಕ್ಷಣ ಪೂಜೆಗಾಗಿ ಒಡೆದ ತೆಂಗಿನ ಕಾಯಿಯ ಹಸಿ ಕೊಬ್ಬರಿಯ ಚೂರುಗಳು, ಜೊತೆಗೆ ಕತ್ತರಿಸಿದ ಬಾಳೆಯ ಹಣ್ಣು ಮಂಡಕ್ಕಿ ಕಾರ ಎಲ್ಲ ಸೇರಿಸಿ ಎಲ್ಲರಿಗೂ ಹಂಚುತ್ತಿದ್ದರು.

ಮಠದ ರಂಗಪ್ಪಜ್ಜ ನಮಗೆ ಸ್ವಂತ ಅಪ್ಪನ ಅಣ್ಣ, ದೊಡ್ಡಪ್ಪನಾಗಿದ್ದವರು ಎನ್ನುವ ವಿಷಯ ನಮಗಾರಿಗೂ ನಮ್ಮ ಬಾಲ್ಯ ಕಳೆಯುವವರೆಗೂ ಗೊತ್ತೇ ಇರಲಿಲ್ಲ. ನಾನು ಮತ್ತೆ ನಮ್ಮ ಕೇರಿಯ ಕಡೆಮನೆ ತಿಪ್ಪಣ್ಣ, ಕರಿಬಸಪ್ಪ, ಕುಬೇರ ಜೋಗಪ್ಪ ತುಂಗಣ್ಣ ಸಂಜೆ 4-5 ಗಂಟೆಯ ಸಮಯಕ್ಕೆ ಮಠದ ಕಡೆಗೆ ಹೋಗಿ ಅಲ್ಲಿಯೇ ಇದ್ದ ಬಾವಿಯಿಂದ ನೀರು ಸೇದಿ ಮಠದಲ್ಲಿನ ಗಿಡಬಳ್ಳಿಗಳಿಗೆ ಹೊಯ್ಯುತ್ತಿದ್ದವು. ನೀರು ಸೇದಿ ಹಾಕಿದ ನಾಟಕ ಮುಗಿದ ಮೇಲೆ ಎಲ್ಲರಿಗೂ ಅಲ್ಲಿದ್ದ ಮಣ್ಣಿನ ಮುಚ್ಚಳಗಳಲ್ಲಿ ಊರಲ್ಲಿನ ಕಂತೆ ಭಿಕ್ಷೆಯಲ್ಲಿ ತಂದ ರೊಟ್ಟಿ ಮತ್ತು ಎಲ್ಲರ ಮನೆಯ ಸಾರನ್ನು ಒಂದೇ ಮಡಕೆಯಲ್ಲಿ ಕುದಿಸಿಟ್ಟದ್ದನ್ನು ಬಡಿಸುತ್ತಿದ್ದರು. ಅದನ್ನೆಲ್ಲ ನಾವು ತುಂಬಾ ಖುಷಿಯಿಂದ ಉಣ್ಣುತ್ತಿದ್ದೆವು. ನಂತರ ಎಲ್ಲ ಮಣ್ಣಿನ ಮುಚ್ಚಳದಂತಿದ್ದ ತಟ್ಟೆಯನ್ನು ತೊಳೆದಿಟ್ಟು ಅವರ ಕಾಲಿಗೆ ನಮಸ್ಕರಿಸಿ ಮನೆಗೆ ಹೋಗುತ್ತಿದ್ದೆವು. ನಮ್ಮಲ್ಲೆಲ್ಲ ದೊಡ್ಡವನಾಗಿದ್ದ ಕಡೆಮನೆ ತಿಪ್ಪಣ್ಣನೇ ನಮ್ಮ ಎಲ್ಲರನ್ನೂ ಕೂಡಿಸಿ ಕರೆದುಕೊಂಡು ಹೋಗುತ್ತಿದ್ದ. ಎಲ್ಲರಿಗೂ ಬೇರೆ ಬೇರೆ ನೀಡಿದ ಮೇಲೆ ಮಠದೊಳಗೆ ಅಜ್ಜ ಹೋಗುತ್ತಿದ್ದರು. ನಮಗೆ ನೀಡಿದ ರೊಟ್ಟಿಯಲ್ಲಿ ಕಡೆಮನೆ ತಿಪ್ಪಣ್ಣನಿಗೆ ಹೆಚ್ಚುವರಿಯಾಗಿ ತನಗೆ ಕೊಡುವುದರ ಬಗ್ಗೆ ಬಂದವರಿಗೆಲ್ಲ ಮೊದಲೇ ಕೊಡುವಂತೆ ತಾಕೀತು ಮಾಡಿರುತ್ತಿದ್ದ. ಕೆಲವು ಸಮಯ ತಟ್ಟೆಗಳು ಕಡಿಮೆ ಇದ್ದುದರಿಂದ ಒಂದೇ ತಟ್ಟೆಯಲ್ಲಿ ಇಬ್ಬರು ಅಥವಾ ಮೂವರು ಕೂತು ಉಣ್ಣುವುದಾದರೆ, ನಮಗೆ ಸಾಕೆಂದು ಮೊದಲೇ ಎದ್ದು ಅವನಿಗೆ ಹೆಚ್ಚಿನ ರೊಟ್ಟಿ ಉಣ್ಣಲು ಅವಕಾಶ ಮಾಡಿಕೊಡಬೇಕಾಗಿತ್ತು. ಹಾಗೆ ಮಾಡದಿದ್ದರೆ ನಾಳೆ ಮತ್ತೆ ನಿಮ್ಮನ್ನು ಇಲ್ಲಿಗೆ ಕರೆತರುವುದಿಲ್ಲ ಎನ್ನೋ ಧಮಕಿ ಹಾಕುತ್ತಿದ್ದ. ಅವನು ನಮ್ಮೆಲ್ಲರಿಗಿಂತಲೂ 2-3 ವರ್ಷಕ್ಕೂ ಹಿರಿಯವನು, ನಮ್ಮ ಚಿಕ್ಕಪ್ಪ ಭೀಮಪ್ಪನ ಮಗನಾಗಿದ್ದ ಅವರಿಗೆ ಮನೆಯಲ್ಲಿ ಆರೇಳು ಹೆಣ್ಣು ಮಕ್ಕಳ ನಂತರ ಹುಟ್ಟಿದ ಕಾರಣ ಇವನಿಗೆ ಯಾವ ಕೆಲಸವನ್ನೂ ಹೇಳುತ್ತಿರಲಿಲ್ಲ. ವಿಶೇಷವಾಗಿ ಬುಗುರಿ, ಚಿನ್ನಿ ದಾಂಡು, ಕೀಳಾಪಟ್ಟಿ ಆಟಗಳಲ್ಲಿ ನಮಗೆ ಗುರುವಾಗಿದ್ದವನು. ಆದರೆ ಊರ ಎಲ್ಲರ ದೃಷ್ಟಿಯಲ್ಲಿ ದಂಡಪಿಂಡ ಎಂಬಂತೆ ಅವನನ್ನು ಅವರ ಮನೆಯವರೂ ಸೇರಿದಂತೆ ಊರಿನಲ್ಲಿ ಜನ ಪರಿಗಣಿಸಿದ್ದರು. ಆದರೀಗ ಒಂದು ದಂಡನ್ನೇ ಕಟ್ಟುವಷ್ಟು ಮಕ್ಕಳನ್ನು, ಮೊಮ್ಮಕ್ಕಳನ್ನು ಪಡೆದು ದುಡಿಮೆ ಮಾಡಿಕೊಂಡು ಹಾಯಾಗಿದ್ದಾನೆ. ಊರಲ್ಲಿರುವಾಗಲೆಲ್ಲ ನನ್ನನ್ನು ಸೆಳೆದುಕೊಂಡಿದ್ದ ಅವನು ನಂತರದ ದಿನಗಳಲ್ಲಿ ಸಣ್ಣ ವ್ಯತ್ಯಾಸದಿಂದ ದೂರವಾಗಿದ್ದಾನೆ. ಈಗ ಮತ್ತೆ ಕರೆದು ಮಾತಾಡಿಸಬೇಕೆಂದು ನೆನಪಾದಾಗ ಅನ್ನಿಸುತ್ತಿದೆ.

ಅಜ್ಜನ ಗುಡಿಸಲು ಅರ್ಥಾತ್ ಮಠ ಸುಮಾರು ಅರ್ಧ ಎಕರೆಯಲ್ಲಿ ಸುತ್ತ ಬೇಲಿಯ ಮಧ್ಯದಲ್ಲಿನ ಅಜ್ಜಿ ಸಮಾದಿಗೆ ಮತ್ತು ಅಜ್ಜಯ್ಯ ಇರುವಿಕೆಗೆ ತೆಂಗಿನ ಗರಿ ಮತ್ತು ಭತ್ತದ ಹುಲ್ಲಿನ ಮುಚ್ಚಳಿಕೆಯಿಂದ ಗಾಳಿ ಬಿಸಿಲು ಮಳೆಗಳಿಂದ ರಕ್ಷಣೆ ಪಡೆದಿತ್ತು. ಆಗಾಗ ಅಜ್ಜಯ್ಯ ಮಠ ಕಟ್ಟುತ್ತೇನೆಂದು ಹಣ ಸಂಗ್ರಹದಲ್ಲಿ ತೊಡಗಿದ್ದರೆಂದು, ಅಪ್ಪ ಮನೆಯಲ್ಲಿ ಮಾತಾಡುತ್ತಿದ್ದರು. ಹಬ್ಬ ಹರಿದಿನಗಳಲ್ಲಿ ದೊಡ್ಡಪ್ಪ ಮನೆಗೆ ಬಂದರೆ ಅವರಿಗೆ ವಿಶೇಷವಾಗಿ ಪಾದಪೂಜೆ ಮಾಡಿ ಆ ನೀರನ್ನೆಲ್ಲ ಮನೆಯ ಎಲ್ಲ ದಿಕ್ಕುಗಳಿಗೂ ಪ್ರೋಕ್ಷಿಸುತ್ತಿದ್ದರು. ಹಾಗೆ ನಮ್ಮಲ್ಲಿನ ಇತರೆ ನಾಲ್ಕು ಚಲವಾದಿ ಮನೆತನದವರೂ ಕರೆದು ಪಾದಪೂಜೆ ಮಾಡುತ್ತಿದ್ದರು. ನಮ್ಮೂರ ಹತ್ತಿರದ ಕಡ್ಲಬಾಳ ಊರಿನ ತೇರಿಗೆ ಮತ್ತು ನಾಯಕನಹಟ್ಟಿ ತಿಪ್ಪೇರುದ್ರಸ್ವಾಮಿಯ ರಥೋತ್ಸವಕ್ಕೆ ಹೋಗಿ ವಾರಗಟ್ಟಲೇ ಅಲ್ಲಿದ್ದು, ಅನೇಕ ಇತರೆ ಸಾಧು ಸಂತರ ಸಂಗಡದಲ್ಲಿ ಭಜನೆ ಮತ್ತು ಗಾಂಜಾ ಸೇವನೆ ಮಾಡುತ್ತಿದ್ದುದರ ಬಗ್ಗೆ ಅವರ ಜೊತೆ ಹೋಗಿ ಬಂದವರು ಆಗಾಗ ಮಾತಾಡಿಕೊಳ್ಳುತ್ತಿದ್ದರು.

ಈ ರೀತಿಯಲ್ಲಿ ಇದ್ದ ದೊಡ್ಡಪ್ಪ ನಾನು ಸಾಗರದ ಹೈಸ್ಕೂಲಿನಲ್ಲಿ ಓದುವ ಸಮಯದಲ್ಲಿ ಒಂದೆರಡು ದಿನಗಳ ಅಸ್ವಸ್ಥತೆಯಿಂದ ಹರಿಹರದ ಹತ್ತಿರವಿರುವ ಗುತ್ತೂರಿನ ಗುರು ಬಸಜ್ಜನ ಮಠದಲ್ಲಿ ತೀರಿಹೋಗಿದ್ದರು. ಅಲ್ಲಿಯ ಮಠದಲ್ಲಿಯೇ ಅವರ ಸಮಾಧಿ ಮಾಡಿದ್ದಾರೆ. ಅದೇ ಮಠದಲ್ಲಿ ನನ್ನ ಗುರುಗಳಾಗಿದ್ದ
ಪ್ರೊ. ಬಿ. ಕೃಷ್ಣಪ್ಪನವರು ಮತ್ತವರ ತಂಗಿ ಹಾಲಮ್ಮ ತಮ್ಮ ಬಾಲ್ಯದ ದಿನಗಳಲ್ಲಿ ಗಿಡಗಳಿಗೆ ನೀರು ಹಾಕುವುದು, ಹೂ ಕೀಳುವ ಸೇವೆ ಮಾಡುತ್ತಿದ್ದರು ಎಂಬುದನ್ನು ಕೃಷ್ಣಪ್ಪನವರ ತಂಗಿ ಹಾಲಜ್ಜಿ ಆಗಾಗ ನಮ್ಮೂರಿಗೆ ಬಂದಾಗ ಜ್ಞಾಪಿಸಿಕೊಳ್ಳುತ್ತಿದ್ದರು. ಅಪ್ಪನ ಅಣ್ಣ ಈ ರೀತಿಯ ಜೀವನ ಸಾಗಿಸುತ್ತಾ ಕಾಲವಾದರೆ ಅಪ್ಪ ಒಂದಲ್ಲವೆಂದರೂ ಎರಡು ಮದುವೆಯಾಗಿ, ಮ್ಯಾಳ ಮಾಡುತ್ತಾ ಅವರೆಲ್ಲರಿಗೂ ನಾಯಕನಾಗಿ, ಮಾಡಿದ ಹೊಲಮನಿ ಕೆಲಸಗಳಲ್ಲಿ ಸೈ ಎನಿಸಿಕೊಂಡು, ನಾನು ಎಂ.ಎ. ಮಾಡಿ ಅಧ್ಯಾಪಕನಾಗಿರುವವರೆಗೆ ಬದುಕಿದ್ದೇ ಒಂದು ಪವಾಡ. ಸದಾ ಕೆಲಸದಲ್ಲಿ ತೊಡಗಿರುತ್ತಿದ್ದ ಅಪ್ಪ ಸಣ್ಣಪುಟ್ಟ ಖಾಯಿಲೆಗಳಿಗೆ ಜಗ್ಗುತ್ತಿರಲಿಲ್ಲ ಯವ್ವನದ ಕಾಲಘಟ್ಟದಲ್ಲಿ ಎಲೆ ಅಡಿಕೆ ತಂಬಾಕು ಬೀಡಿ ಸೇದುತ್ತಿದ್ದ ಅಪ್ಪ ನಂತರದ ದಿನಗಳಲ್ಲಿ ಕೆಮ್ಮು ದಮ್ಮುಗಳ ಕಾಟದಿಂದ ಅವನ್ನೆಲ್ಲ ಬಿಟ್ಟು ಬಿಟ್ಟಿದ್ದನು. ನಾನು ಕೆಲಸಕ್ಕೆ ಸೇರಿ ಊರಿಗೆ ಹೋದಾಗ ಅವ್ವನಿಗೆ, ಓಬಜ್ಜನಿಗೆ, ಅಪ್ಪನಿಗೆ ವಿಶೇಷವಾಗಿ ಸಣ್ಣ ಮೊತ್ತದ ಹಣ ಕೊಡಲು ಹೋದಾಗಲೆಲ್ಲ `ನನಗ್ಯಾಕೆ ಕೊಡುತ್ತೀ, ನಿಮ್ಮವ್ವನಿಗೇ ಕೊಡು’ ಎಂದು ಹೇಳಿ ಸುಮ್ಮನಾಗುತ್ತಿದ್ದ. ಇಂತಹ ಅಪ್ಪನನ್ನು ನಾನು ಅಧ್ಯಾಪಕನಾಗಿ ಕೆಲಸಕ್ಕೆ ಸೇರಿದ ಒಂದು ವರ್ಷ ತುಂಬಿದ ದಿನ (4.12.1975)ರಲ್ಲಿ ನಾನು ಎರಡನೇ ಬಿ.ಎ. ಕ್ಲಾಸ್ ರೂಮ್‌ನಲ್ಲಿ ಪಾಠ ಮಾಡುವಾಗ ತಂತಿ ಸಂದೇಶದಲ್ಲಿ ಅಪ್ಪ ತೀರಿದ ಸುದ್ದಿ ಹೊತ್ತು ತಂದಿತ್ತು. ಅಂದಿಗೆ ಸಂಬಳ ಬಂದು 4 ದಿನಗಳಾಗಿದ್ದರೂ ಎಲ್ಲಾ ಬಟವಾಡೆ ಮಾಡಿ ನನ್ನಲ್ಲಿ 50ರೂಗಳು ಮಾತ್ರ ಜೇಬಿನಲ್ಲಿದ್ದವು. ನೇರ ರಮಾವಿಲಾಸ್ ರಸ್ತೆಯಲ್ಲಿದ್ದ ಮಯೂರ ಪ್ರಿಂರ‍್ಸ್ನಲ್ಲಿಗೆ ಹೋಗಿ ಪಿ. ಮಲ್ಲೇಶ್ ಅವರಿಂದ 100 ರೂಗಳ ಸಾಲ ಪಡೆದು ನಾನು ಮತ್ತು ನನ್ನ ಕಾಲೇಜಿನಲ್ಲಿಯೇ ಓದುತ್ತಿದ್ದ ನಮ್ಮೂರಿನ ಹುಡುಗ ಮಾಂತೇಶಿಯನ್ನು ಕರೆದುಕೊಂಡು ರಾತ್ರಿಯ ಬಸ್ ಹತ್ತಿ ಬೆಳಗಿನ ಜಾವಕ್ಕೆ ಊರಿಗೆ ಬಂದು ಸೇರಿದೆ. ಅಪ್ಪನ ಸೋತ ಮುಖನೋಡಿ ನಾನು ತೀವ್ರ ಮೌನಕ್ಕೆ ಜಾರಿದೆ. ಎಂದೂ ಏನಲೇ ಎಂದು ಗದರಿಸದೆ ತನ್ನೆಲ್ಲ ಶಕ್ತಿ ಮೀರಿದ ದುಡಿಮೆಯಿಂದ, ಪ್ರೀತಿಯಿಂದ ನಮ್ಮನ್ನು ಸಾಕಿದ ಅಪ್ಪ, ಅವನ ಜೀವನದ ಹೋರಾಟಕ್ಕೆ ಅಂತ್ಯ ಹಾಡಿದ್ದ. ನಮ್ಮೆಲ್ಲರನ್ನು ತಿದ್ದಿ ಬೆಳೆಸಿ ಬದುಕಲು ನಮಗೆ ಅನುವು ಮಾಡಿ ಇಹಲೋಕದ ವ್ಯಾಪಾರ ಮುಗಿಸಿದ್ದ ಅಪ್ಪನ ನೆನಪು ನನ್ನ ಮನಸ್ಸಿನಾಳದಲ್ಲಿ ದಿನವೂ ಸ್ಫೂರ್ತಿಯಾಗಿ, ಸಾಮಾನ್ಯ ನ್ಯಾಯದ ದೊಂದಿಯಾಗಿ ಅನುರಣಿಸುತ್ತಿರುತ್ತಾನೆ.

ನಾನು ಕೆ.ಜಿ. ಕೊಪ್ಪಲಿನ ಮನೆಯಿಂದ ಮಹಾರಾಜ ಕಾಲೇಜಿಗೆ ಹೋಗಿ ಬರುತ್ತಿದ್ದೆ. ಬಿಡುವಿನ ವೇಳೆಯಲ್ಲಿ ನಾನು ಮಹೇಶ ಇತರೆ ಸ್ನೇಹಿತರು ಜೆಪಿ ಚಳುವಳಿ ನವನಿರ್ಮಾಣ ಕ್ರಾಂತಿ, ಜಾತಿ ವಿನಾಶ ಸಮ್ಮೇಳನ, ಬೂಸಾ ಚಳುವಳಿಗಳಲ್ಲಿ ಭಾಗವಹಿಸಿದ್ದೆವು. ಈ ಎಲ್ಲ ಸಂಘಟನೆಗಳ ಮೂಲ ಹೋರಾಟಗಾರರು ಮೈಸೂರಿನಲ್ಲಿದ್ದ ಎಂ.ಡಿ. ನಂಜುಂಡಸ್ವಾಮಿ, ಪಿ. ಮಲ್ಲೇಶ್, ಕೆ. ರಾಮದಾಸ್, ಮಾದೇವ, ಭಕ್ತ, ರಾಜಶೇಖರ ಕೋಟಿ, ರಾಮದೇವ ರಾಕೆ, ನಂಜುಂಡೇ ಗೌಡ, ಗೋವಿಂದಯ್ಯ, ಶಂಕರಲಿಂಗಪ್ಪ, ಗೊಟ್ಟಿಗೆರೆ ಶಿವರಾಜು, ಇಂದೂಧರ ಹೊನ್ನಾಪುರ, ದೇವನೂರ ಶಿವಮಲ್ಲು, ವಿಶ್ವವಿದ್ಯಾಲಯದ ಗಂಗೋತ್ರಿಯಿಂದ ಪ್ರೊ. ರಾಮಲಿಂಗಂ, ಕೆ.ಎಂ. ಜಯರಾಮಯ್ಯ, ಹೊರೆಯಾಲ ದೊರೆಸ್ವಾಮಿ, ಚಂದ್ರಶೇಖರ ತಾಳ್ಯ, ಎಲ್ಲರೂ ಇದೇ ಪೂರ್ಣಾವಧಿ ಕೆಲಸವೆಂಬಂತೆ ತೊಡಗಿಸಿಕೊಂಡಿದ್ದರು. ಹಾಗೆಯೇ ರಾಷ್ಟ್ರ ಮತ್ತು ರಾಜ್ಯ ಸರ್ಕಾರಗಳಲ್ಲಿನ ಭ್ರಷ್ಟಾಚಾರ, ಸ್ವಜನ ಪಕ್ಷಪಾತ ಇಂತಹ ವಿಷಯಗಳ ಬಗ್ಗೆ ಬೆಳಕು ಚೆಲ್ಲುವ `ಮ್ಯಾನ್ ಕೈಂಡ್’, `ಬಂಡಾಯ’, `ಶೋಷಿತ’, `ನರ’, `ಪಂಚಮ’ ಎಂಬ ಅಕಾಲಿಕ ಪತ್ರಿಕೆಗಳನ್ನು ಅಸಾಧ್ಯ ಹಣಕಾಸಿನ ತೊಂದರೆಗಳ ನಡುವೆಯೂ ಹೊರ ತರುತ್ತಿದ್ದರು.

ಆ ದಿನಗಳಲ್ಲಿ ಇಂತಹದೇ ಪತ್ರಿಕೆಯಲ್ಲಿ ನಮ್ಮೂರಿನಲ್ಲಿ ನಡೆದ ಹಿಂದುಳಿದ ಜಾತಿಯ ಹುಡುಗಿಯೊಬ್ಬಳನ್ನು ಲಿಂಗಾಯತರ ಹುಡುಗನೊಬ್ಬ ಕೆಣಕಿದ ಬಗ್ಗೆ ನಾನು ಊರಿಗೆ ಹೋದಾಗ ತಿಳಿಯಿತು. ಈ ಕೃತ್ಯ ಎಸಗಿದವನನ್ನು ಯಾರೂ ವಿಚಾರಿಸುವಂತಿರಲಿಲ್ಲ. ಹುಡುಗಿಯ ಕಡೆಯವರು ಯಾರೂ ಅದನ್ನು ಪ್ರಶ್ನಿಸಲೂ ಇಲ್ಲ. ಇದೆಲ್ಲ ಗೊತ್ತಾದ ನಾನು ನರ ಬಂಡಾಯದ ಪತ್ರಿಕೆಗೆ ಬರೆದು ಪ್ರಕಟಿಸಿದ್ದೆ. ಆ ಪ್ರತಿಗಳನ್ನು ಮಾಂತೇಶಿ ಊರಿಗೆ ತೆಗೆದುಕೊಂಡು ಹೋಗಿ ಊರಲ್ಲೆಲ್ಲಾ ಹಂಚಿದನು. ವಿಷಯ ತಿಳಿದ ಊರಿನ ಪ್ರಮುಖರು, ಈ ರುದ್ರಪ್ಪ ಊರ ಮಾನ ಹರಾಜು ಹಾಕಿದ ಎಂದೆಲ್ಲ ಕೂಗಾಡಿದ್ದರು.

`ಅವನು ಊರಿಗೆ ಬರಲಿ ವಿಚಾರಿಸುತ್ತೇವೆ’ ಎಂದೆಲ್ಲಾ ಕೂಗಾಡಿದರು. ನಾನು ತಿಂಗಳೊಪ್ಪತ್ತಿನಲ್ಲಿ ಊರಿಗೆ ಹೋದಾಗ ಯಾರೂ ಆ ಬಗ್ಗೆ ಮಾತಾಡಲಿಲ್ಲ. ಮುಖ್ಯ ಕಾರಣ ಬರೆದುದೆಲ್ಲ ನಿಜವಾದ ಘಟನೆಯಾಗಿತ್ತು. ಮತ್ತೆ ಹೆಚ್ಚು ಕೆದಕಿದರೆ ತಮಗೆ ಇದು ಅವಮಾನದ ಘಟನೆಯ ಮರು ಪ್ರಸ್ತಾಪವಾಗಿ ವಿಪರೀತಕ್ಕೆ ಹೋಗಬಹುದೆಂದು ಸುಮ್ಮನಾಗಿದ್ದರು. ಹೀಗೆ ನಾನು ಮೈಸೂರಲ್ಲಿದ್ದಾಗ ಊರ ಘಟನೆಗಳಿಗೆ ಸ್ಪಂದಿಸುತ್ತಾ ಇರುವುದು ಮೈಸೂರಿನಲ್ಲಿದ್ದ ಪ್ರಗತಿಪರ ಸಂಘಟನೆಗಳ ಮತ್ತು ವಿಚಾರವಂತರ ಒಡನಾಟವೇ ಅದಕ್ಕೆ ಕಾರಣವಾಗಿತ್ತು ಎಂಬುದನ್ನ ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ.

ಮುಂದುವರಿಯುವುದು

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಅಂತರಂಗ

ದಾವಣಗೆರೆ | ಪ್ರೊ. ಎಸ್.ಬಿ. ರಂಗನಾಥ್ ಅವರಿಗೆ ಕೇಂದ್ರ ಕ ಸಾ ಪ ದತ್ತಿ ಪ್ರಶಸ್ತಿ ಪ್ರದಾನ

Published

on

ಸುದ್ದಿದಿನ,ದಾವಣಗೆರೆ : ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಿರಿಯ ಸಾಹಿತಿ, ಚಿತ್ರದುರ್ಗ ಮತ್ತು ದಾವಣಗೆರೆ ಜಿಲ್ಲೆಗಳ ಕ ಸಾ ಪ ಮಾಜಿ ಅಧ್ಯಕ್ಷ ಪ್ರೊ . ಎಸ್ ಬಿ ರಂಗನಾಥ್ ಅವರಿಗೆ ಕೇಂದ್ರ ಕ ಸಾ ಪ ದತ್ತಿನಿಧಿ ಪುಸ್ತಕ ಬಹುಮಾನ ಪ್ರಶಸ್ತಿಯನ್ನು ತರಳಬಾಳು ಬಡಾವಣೆಯ ಅವರ ನಿವಾಸದಲ್ಲಿ ಜಿಲ್ಲಾ ಕ ಸಾ ಪ ಅಧ್ಯಕ್ಷ ಬಿ ವಾಮದೇವಪ್ಪ ಮತ್ತು ಪದಾಧಿಕಾರಿಗಳು ಇಂದು ಪ್ರದಾನ ಮಾಡಿ ಗೌರವಿಸಿದರು.

ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತು  ಅನುವಾದ ಸಾಹಿತ್ಯಕ್ಕಾಗಿ ನೀಡುವ 2023ರ ‘ಶ್ರೀಮತಿ ಭಾರತಿ ಮೋಹನ ಕೋಟಿ ದತ್ತಿ ಪಶಸ್ತಿ’ ಗೆ  ಪ್ರೊ. ಎಸ್.ಬಿ.ರಂಗನಾಥ್  ಅನುವಾದಿಸಿದ ಖ್ಯಾತ ಲೇಖಕ ಶಶಿ ತರೂರು ಅವರ ‘ಕಗ್ಗತ್ತಲ ಕಾಲ’ ಕೃತಿಯು ಆಯ್ಕೆಯಾಗಿತ್ತು. ಶಶಿ ತರೂರ್ ಅವರ ಇಂಗ್ಲಿಷ್ An Era of Darkness ಎಂಬ ಕೃತಿಯು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದಿದ್ದ ಇದನ್ನು ಪ್ರೊ. ರಂಗನಾಥ್ ಅವರು ಕೊರೊನಾ ಕಾಲದ ಲಾಕ್ ಡೌನ್‌ ಸಂದರ್ಭದಲ್ಲಿ ಕನ್ನಡಕ್ಕೆ ಅನುವಾದಿಸಿದ್ದರು. 2022ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿಯು ಈ ಕೃತಿಯನ್ನು ಪ್ರಕಟಿಸಿತ್ತು.

ಪ್ರೊ. ರಂಗನಾಥ್ ಇದುವರೆಗೂ ‘ಪ್ರಜಾವಾಣಿ ‘ ಯ ಅಂಕಣ ಬರಹಗಳ ಸಂಗ್ರಹ ‘ಎಲೆಲೆ ಮಧುಬಾಲೆ’, ‘ಕಚಗುಳಿ(ಗೆ) ಕಾಲ’ ಸೇರಿದಂತೆ ಹತ್ತು ಕೃತಿಗಳ ಲೇಖಕರು. ಬಂಗಾಳಿಯ ಪ್ರಸಿದ್ಧ ಕಾದಂಬರಿಗಳಾದ ‘ಭುವನ್ ಸೋಮ್’ , ‘ಪ್ರತಿದ್ವಂದಿ’ ಮುಂತಾದ ಏಳು ಕೃತಿಗಳನ್ನು ಅನುವಾದಿಸಿದ್ದಾರೆ.  ಇವರ ‘ ಟಿಪ್ಪು ಸುಲ್ತಾನನ ಖಡ್ಗ’ ಕೃತಿಯು ಮೂರು ಮುದ್ರಣಗಳನ್ನು ಕಂಡಿದೆ. ಇತ್ತೀಚೆಗೆ ಅನುವಾದಿಸಿದ ನಿವೃತ್ತ ಐ ಎ ಎಸ್ ಅಧಿಕಾರಿ ಎಂ ಮದನಗೋಪಾಲ್ ಅವರ ‘ಕಾಮನ ಬಿಲ್ಲನು ಬಂಬತ್ತಿ’ ಕೃತಿಯು ರಾಯಚೂರಿನಲ್ಲಿ ಲೋಕಾರ್ಪಣೆಗೊಂಡಿತ್ತು.

ದತ್ತಿ ಪ್ರಶಸ್ತಿ ಪ್ರಧಾನ ಸಮಾರಂಭಕ್ಕೆ ಪ್ರೊ.ಎಸ್.ಬಿ.ರಂಗನಾಥ್ ಅವರು ತಮ್ಮ ತೀವ್ರ ಅನಾರೋಗ್ಯದ ಕಾರಣದಿಂದ ಹಾಜರಿರಲು ಸಾಧ್ಯವಾಗಿರಲಿಲ್ಲ. ಈಗ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಾಡೋಜ ಡಾ.ಮಹೇಶ ಜೋಶಿಯವರ ನಿರ್ದೇಶನದ ಮೇರೆಗೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು ಎಸ್.ಬಿ.ರಂಗನಾಥ್ ಅವರ ನಿವಾಸಕ್ಕೆ ತೆರಳಿ ಅವರಿಗೆ ಪ್ರಶಸ್ತಿ ಫಲಕ ಮತ್ತು ಹತ್ತು ಸಾವಿರ ನಗದನ್ನು  ನೀಡಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಪರಿಷತ್ತಿನ ಪದಾಧಿಕಾರಿಗಳಾದ ರಾಘವೇಂದ್ರ ನಾಯರ್, ಎಸ್ ಎಂ ಮಲ್ಲಮ್ಮ, ರುದ್ರಾಕ್ಷಿ ಬಾಯಿ ಪುಟ್ಟನಾಯಕ್, ತಾಲ್ಲೂಕು ಅಧ್ಯಕ್ಷೆ ಸುಮತಿ ಜಯಪ್ಪ, ಕಾರ್ಯದರ್ಶಿಗಳಾದ ನಾಗರಾಜ ಸಿರಿಗೆರೆ, ದಾಗಿನಕಟ್ಟೆ ಪರಮೇಶ್ವರಪ್ಪ, ನಿರ್ದೇಶಕರಾದ ಷಡಾಕ್ಷರಪ್ಪ ಹಾಗೂ ಕುಟುಂಬದ ಸದಸ್ಯರು ಉಪಸ್ಥಿತರಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending