ದಿನದ ಸುದ್ದಿ
ದಲಿತರು ಮತ್ತು ಮತಾಂತರ : ಪ್ರೊ. ಬಿ.ಕೃಷ್ಣಪ್ಪ ಅವರ ಲೇಖನ
- ಪ್ರೊ. ಬಿ.ಕೃಷ್ಣಪ್ಪ
ತಮಿಳು ನಾಡಿನ ಮೀನಾಕ್ಷಿಪುರಂ ದಲಿತರು ಮುಸ್ಲಿಮರಾಗುವುದರ ಮೂಲಕ ಕನ್ಯಾಕುಮಾರಿಯಿಂದ ಹಿಡಿದು ಹಿಮಾಲಯದವರೆಗೆ, ಅರಬ್ಬಿ ಸಮುದ್ರದಿಂದ ಹಿಡಿದು ಬಂಗಾಳ ಕೊಲ್ಲಿಯವರೆಗೆ ಹಬ್ಬಿರುವ ಈ ನೆಲದಲ್ಲಿ ದೊಡ್ಡ ಬಿರುಗಾಳಿ ಎಬ್ಬಿಸಿದ್ದಾರೆ. ಇಡೀ ಹಿಂದು ರಾಷ್ಟ್ರವನ್ನು ಮುಸ್ಲಿಂ ರಾಷ್ಟ್ರವನ್ನಾಗಿಸುವತ್ತ ಹೆಜ್ಜೆ ಇಟ್ಟಿದ್ದಾರೆ.
ಹಿಂದೂ ರಾಷ್ಟ್ರ ತಮ್ಮದು ಎಂದು ಬೊಗಳೆ ಹೊಡೆಯುವ ಹಿಂದುಗಳ ಬಾಯಿಗೆ ಬಲವಾದ ಗುಂಡು ಜಡಿದಿದ್ದಾರೆ. ನಿಂತ ಕಾಲ ಮೇಲೆ ಹಿಂದೂಗಳಿಗೆ ನೆಲ ಕುಸಿದಂತಾಗಿದೆ. ದಲಿತರು ಮನಸ್ಸು ಮಾಡಿದರೆ ಬಿರುಗಾಳಿಯಲ್ಲಿ ವಿಷಗಾಳಿಯಾಗಬಲ್ಲರು ಎಂಬುದಕ್ಕೆ ಇದು ಒಂದು ಉದಾಹರಣೆ ಮಾತ್ರ.
ಅಂಬೇಡ್ಕರ್ ಹೇಳಿದಂತೆ, ದಲಿತರು ಬೌದ್ಧರಾಗುತ್ತಿದ್ದರೆ, ಇಲ್ಲವೆ ಕ್ರಿಶ್ಚಿ ಯನ್ನರಾಗುತ್ತಿದ್ದರೆ, ಹಿಂದೂಗಳಿಗೆ ಈಗಿನಂತೆ ಷಾಕ್, ಚುರುಕು ತಟ್ಟುತ್ತಿರಲಿಲ್ಲ. ಏಕೆಂದರೆ ಈಗ ಹಾಲಿ ಇಂಡಿಯಾದಲ್ಲಿರುವ ಬೌದ್ಧ ಮತ್ತು ಕ್ರಿಶ್ಚಿಯನ್ ಧರ್ಮಗಳು ಹಿಂದೂ ಧರ್ಮದ ಕಕ್ಷೆ ಒಳಗೆ ಅದೆಷ್ಟು ರೂಪ ಪಡೆದುಕೊಳ್ಳುತ್ತಿವೆ. ಇತಿಹಾಸದಲ್ಲಿ ಎಂದೂ ಬೌದ್ಧ ಮತ್ತು ಕ್ರೈಸ್ತರು ಹಿಂದೂ ದ್ವೇಷಿಗಳಾಗಿ ವರ್ತಿಸಿಲ್ಲ. ಆದರೆ ಮುಸ್ಲಿ೦ ಮತ್ತು ಹಿಂದೂ ಧರ್ಮಗಳು ಶತಮಾನಗಳಿಂದ ಹಾವು ಮುಂಗುಸಿಗಳಂತೆ ಕಚ್ಚಾಡುತ್ತ,
ದ್ವೇಷದ ಕಿಡಿ ಕಾರುತ್ತ ಬಂದಿರುವುದಕ್ಕೆ ಇತಿಹಾಸವೇ ಸಾಕ್ಷಿ, ಇತ್ತೀಚೆಗಂತೂ ಆರ್. ಎಸ್. ಎಸ್. ನವರು ಹಳೆಯ ಗಾಯಕ್ಕೆ ಉಪ್ಪು ಸುರಿಯುತ್ತಿದ್ದಾರೆ.
ದೇಶದ 30 ಕೋಟಿ ದಲಿತರು ಮುಸ್ಲಿಮರಾದರೆ ಗತಿ ಏನು? ಜುಟ್ಟು ಜನಿವಾರಗಳು ಕಿತ್ತು ಹೋಗುತ್ತವೆ. ಮಠಮಾನ್ಯಗಳು ಮಸೀದಿಗಳಾಗುತ್ತವೆ. ರಾಜಕೀಯ ಅಧಿಕಾರ ಮುಸ್ಲಿಮರ ಕೈಗೆ ಹೋಗುತ್ತದೆ. ತ್ರಿವರ್ಣಧ್ವಜ ಹೋಗಿ ಚಂದ್ರ ಚುಕ್ಕೆ ಬಾವುಟ ಹಾರಾಡುತ್ತದೆ. ಕಾಶಿಗೆ ಬದಲಾಗಿ ಮೆಕ್ಕ ಮದೀನಗಳು ಧಾರ್ಮಿಕ ಶ್ರದ್ಧೆಯ ಕೇಂದ್ರಗಳಾಗುತ್ತವೆ.
ಇದನ್ನು ಊಹಿಸಿಕೊಂಡ ಹಿಂದೂ ಮಠಾಧಿಪತಿಗಳಿಗೆ, ರಾಜಕಾರಣಿಗಳಿಗೆ ಭೇದಿ ಕಿತ್ತುಕೊಂಡಿದೆ. ಮಲಗಿದ್ದ ಮುದ್ರೆ ನಾಮ, ವಿಭೂತಿಗಳು ಎದ್ದು ಕೂತಿವೆ. ಹಿಂದೂ ರಾಜಕಾರಣಿಗಳು ಪುರುಸೊತ್ತಿಲ್ಲದೆ ಓಡಾಡತೊಡಗಿದ್ದಾರೆ. ಪುರೋಹಿತಶಾಹಿ ಪತ್ರಿಕೆಗಳು ದಿನ ನಿತ್ಯ ಮತಾಂತರದ ಬಗ್ಗೆ ಬರೆಯತೊಡಗಿವೆ. ಎಂದಿನಂತೆ ಹಿಂದೂ ಮೆದುಳು ವಾಸ್ತವ ಸ್ಥಿತಿಯ ಸುತ್ತ ಇಲ್ಲ ಸಲ್ಲದ ಕತೆ ಕಟ್ಟತೊಡಗಿದೆ.
ದಲಿತರು ಮುಸ್ಲಿಮರಾಗಲು ಕಾರಣವೇನು? ಇದಕ್ಕೆ ಹೊಣೆ ಯಾರು? ಇಂಥ ಪ್ರಶ್ನೆಗಳಿಗೆ ಉತ್ತರ ಹೇಳ ಬೇಕಾದವರು ಅಸ್ಪೃಶ್ಯರಲ್ಲ. ದಲಿತರು ಹಿಂದೂ ಧರ್ಮ ಬಿಡುತ್ತಿದ್ದರೆ, ಅದಕ್ಕೆ ಹೊಣೆ ಸವರ್ಣೀಯರೆ ಹೊರತು ಅಸ್ಪೃಶ್ಯರಲ್ಲ.
ತಮ್ಮನ್ನು ಊರಿಂದ ಹೊರಗೆ ಇಟ್ಟಿದ್ದರೂ, ತಮ್ಮ ನೋಟ ಅಪವಿತ್ರ ಎಂದು ಭಾವಿಸಿದ್ದರೂ, ದೇವಸ್ಥಾನ, ಭಾವಿ, ಕೆರೆಗಳಲ್ಲಿ ನೀರು ಎತ್ತುವ ಅವಕಾಶ ಕೊಡದಿದ್ದರೂ, ತಮ್ಮ ಹುಟ್ಟು ಹೀನಾಯವೆಂದು ಹೀಗಳೆದರೂ, 5 ಸಾವಿರ ವರ್ಷಗಳಿಂದ ದಲಿತರು ತಮ್ಮನ್ನು ಹಿಂದೂಗಳು ಎಂದೇ ಭಾವಿಸಲಿಲ್ಲವೆ?
ಹಿಂದೂ ದೇವರು, ಪುರಾಣ, ಶಾಸ್ತ್ರಗಳನ್ನು ಪರಮಪೂಜ್ಯವೆಂದು ಆರಾಧಿಸಲಿಲ್ಲವೆ? ಒದ್ದ ಕಾಲುಗಳಿಗೆ ಚಪ್ಪಲಿ ಹೊಲಿದುಕೊಡಲಿಲ್ಲವೆ? ಬೆವರು ಸುರಿಸಿ ಮೂಕ ಪ್ರಾಣಿಗಳಂತೆ ಜೀತ ಮಾಡಲಿಲ್ಲವೆ? ಇಷ್ಟಾದರೂ ಹಿಂದೂಗಳು ಅವರನ್ನು ಮನುಷ್ಯರೆಂದು ಭಾವಿಸಿದರೇನು? ತಮ್ಮ ಸಹ ಸೋದರರೆಂದು ಅತ್ತುಗರೆದರೇನು? ಶತಮಾನಗಳು ಉರುಳಿದರೂ ಅವರ ಮನಸ್ಸು ಬದಲಾಗಿಲ್ಲ.
ಪಪಾ ಬೆಳ್ಳಿ ಕಿಲ್ಬಮನೆ, ನಾರಾಯಣಪುರ, ಇತ್ಯಾದಿ ಘಟನೆಗಳು ಇನ್ನೂ ಮುಂದುವರಿಯುತ್ತಲೇ ಇವೆ. ಅಡ್ಡಬಿದ್ದವರನ್ನೆ ಮತ್ತಷ್ಟು ತುಳಿಯುವ ಈ ಲಫಂಗ ಹಿಂದೂ ಧರ್ಮದಲ್ಲಿ ತಾವಾದರೂ ಏಕೆ ಇರಬೇಕು? ಎಂದು ಅಸ್ಪೃಶ್ಯರು ಭಾವಿಸಿದ್ದರೆ. ಅದಕ್ಕೆ ಹೊಣೆ ಯಾರು? ಜವಾಬ್ದಾರರು ಯಾರು?
ಮೀನಾಕ್ಷಿಪುರಂಗೆ ಧಾವಿಸಿದ ಭಾ.ಜ.ಪ. ನಾಯಕ ವಾಜಪೇಯಿ ಸುಬ್ರಮಣ್ಯಸ್ವಾಮಿ ನಾಮ ಮುದ್ರೆ, ವಿಭೂತಿ ಜುಟ್ಟಿನ ಖದೀಮ ಮಠಾಧಿಪತಿಗಳು, ಆರ್ ಎಸ್. ಎಸ್. ಚಡ್ಡಿಗಳು ಮೇಲು ಜಾತಿ ಗೃಹಮಂತ್ರಿ ಜೈಲ್ಸಿಂಗ್ ಅಸ್ಪೃಶ್ಯರು ಮತಾಂತರ ಹೊಂದಲು ವಿದೇಶಿ ಹಣ, ರೊಕ್ಕದ ಆಸೆ ಎಂದು ಹೇಳಿಕೆ ಕೊಟ್ಟಿದ್ದಾರೆ.
ಮೀನಾಕ್ಷಿಪುರಂ ಅಸ್ಪಶ್ಯರು ಸ್ಟೇಟ್ ಗೃಹ ಸಚಿವ ಅಸ್ಪೃಶ್ಯ ಮಂತ್ರಿ ಯೋಗೀಂದ್ರ ಮಕ್ಕಾನ ‘ಮತಾಂತರಕ್ಕೆ ಸಾಮಾಜಿಕ ಅವಹೇಳನ” ಕಾರಣ ಎಂದಿದ್ದಾರೆ. ಪೇಜಾವರ ಮಠಾಧಿಪತಿ ‘ಮತಾಂತರಕ್ಕೆ ಸಾಮಾಜಿಕ ಅಸಮಾನತೆ ಕಾರಣ’ ಎಂದಿರುವುದು ಗಮನಾರ್ಹ. ಇದರಲ್ಲಿ ಯಾವುದು ಮೂಲಭೂತ? ಯಾವುದು ನಿಜ? ಯಾವುದು ಸುಳ್ಳು?
5 ಸಾವಿರ ವರ್ಷಗಳಿಂದ ಅಸ್ಪಶ್ಯತೆಗೆ ಸಿಕ್ಕು ನರಳುತ್ತಿರುವ ಅಸ್ಪಶ್ಯರಾಗಿ ಹುಟ್ಟಿದ ಕಾರಣಕ್ಕಾಗಿಯೆ? ಅಮಾನುಷ ಹಿಂಸೆಗೆ ಬಲಿಯಾಗುತ್ತಿರುವ, ಈ ಜನರ ಮನಸ್ಸಿನ ಬೇಗುದಿ, ತಳಮಳ ಮೇಲ್ಮಾತಿಯ ನೋವಿಲ್ಲದ ಜನಕ್ಕೆ ಹೇಗೆ ಅರ್ಥವಾಗಬಲ್ಲದು? ಹಣಕ್ಕಾಗಿಯೇ ಅಸ್ಪೃಶ್ಯರು ಮತಾಂತರಗೊಳ್ಳುವುದಾಗಿದ್ದರೆ, ಇಂಡಿಯಾ ದೇಶ ಈಗಿರುವ ಸ್ಥಿತಿಯಲ್ಲಿ ಅದು ಹಿಂದೂ ದೇಶವಾಗಿ ಉಳಿಯುತ್ತಿರಲಿಲ್ಲ. ಎಂದೋ ಅದು ಕ್ರಿಶ್ಚಿಯನ್ ಅಥವಾ ಮುಸ್ಲಿಂ ರಾಷ್ಟ್ರವಾಗುತ್ತಿತ್ತು.
ಇಷ್ಟಾದರೂ ದಲಿತರು ಹಿಂದೂ ಧರ್ಮದಲ್ಲಿ ಉಳಿದಿರಲು ಕಾರಣ ಅವರಲ್ಲಿ ಮೌಢ ಅಜ್ಞಾನ ನಿರಕ್ಷರತೆಗಳನ್ನು ಪೋಷಿಸಿಕೊಂಡು ಬಂದಿರುವ ಹಿಂದೂ ಪರಿಸರ ಕಾರಣವಾಗಿದೆ. ಯಾವ ವಿದ್ಯಾವಂತ ದಲಿತನೇ ಆಗಲಿ, ಯಾವೊಬ್ಬ ಮಾನವತಾವಾದಿಯೇ ಆಗಲಿ ತನ್ನನ್ನು ಕೀಳಾಗಿ ಕಾಣುವ ಯಾವ ಧರ್ಮವನ್ನೂ ಗೌರವಿಸಲಾರ. ಗೌರವಿಸುವುದಿಲ್ಲ. ದಲಿತರು ವಿದ್ಯಾವಂತರಾಗುತ್ತಿರುವುದರಿಂದಲೆ ಮತಾಂತರ ಹೆಚ್ಚುತ್ತಿರುವುದು. ಆದ್ದರಿಂದಲೇ ಹಿಂದೂ ರಾಷ್ಟ್ರದ ಕನಸು ಕಾಣುತ್ತಿರುವ ಜಾತಿವಾದಿಗಳು ಮತಾಂತರ ನಿಷೇಧ ಮಸೂದ ಯನ್ನು ತರಲು ಶತ ಪ್ರಯತ್ನ ನಡೆಸಿದ್ದಾರೆ.
ಮತಾಂತರ ನಿಷೇಧ ಮಸೂದೆ ಎಂದರೆ ಅಸ್ಪೃಶ್ಯರು ಈ ದೇಶದಲ್ಲಿ ಅಸ್ಪೃಶ್ಯರಾಗಿಯೆ ಉಳಿಯಬೇಕು. ಸಮಾನತೆಯನ್ನು ಬಯಸಬಾರದು” ಎಂಬುದೇ ಆಗಿದೆ. ಮತಾಂತರದ ಗಾಳಿ ಹಿಂದೂ ರಾಜಕಾರಣಿಗಳಿಗೂ ಬಿಸಿ ತಟ್ಟಿಸಿದೆ. ಹಿಂದೂ ಸರ್ಕಾರ ಉರುಳಿ ಖೊಮನಿ ಸರ್ಕಾರ ಬಂದರೆ ತಮ್ಮನ್ನೆಲ್ಲ ರಾತ್ರೋ ರಾತ್ರಿ “ಬಿಸ್ಮಿಲ್ಲ” ಮಾಡಬಹುದೆಂಬ ಬೆದರಿಕೆಯಿಂದ ಅವರ ತೊಡೆ ನಡುಗತೊಡಗಿವೆ.
ಸ್ವಾತಂತ್ರ ಬಂದ 33 ವರ್ಷಗಳಲ್ಲಿ ರಾಜಕಾರಣಿಗಳು, ಆಳುವ ಪಕ್ಷಗಳು ಅಸ್ಪೃಶ್ಯರ ಬಗ್ಗೆ 3 ಅಂಶ 5 ಅಂಶ ಇತ್ಯಾದಿ ಕಾರಕ್ರಮಗಳನ್ನು ಹೇಳಿ ಅವು ಕಿಂಚಿತ್ತೂ ಕಾರರೂಪಕ್ಕೆ ಬರದೆ ಮತಾಂತರಕ್ಕೆ ಅದೂ ಕಾರಣವಾಗಿದೆ.
ಗುಜರಾತಿನಲ್ಲಿ ಮೀಸಲಾತಿ ವಿರೋಧಿ ಚಳುವಳಿಯನ್ನು ನಡೆಸಿ ದಲಿತರ ಮಾರಣ ಹೋಮ ಮಾಡಿದ ಮರಾಠವಾಡ, ವಿಶ್ವವಿದ್ಯಾನಿಲಯಕ್ಕೆ ಅಂಬೇಡ್ಕರ್ ಹೆಸರನ್ನು ಇಡಬೇಕೆಂಬ ಬೇಡಿಕೆಯ ವಿರುದ್ಧ ಮಹಾರಾಷ್ಟ್ರದ ಅಸ್ಪೃಶ್ಯರನ್ನು ಅಮಾನುಷವಾಗಿ ಕೊಂದ, ಅಂಬೇಡ್ಕರ್ ಮೆರವಣಿಗೆ ಸವರ್ಣೀಯರ ಕೇರಿಯಲ್ಲಿ ಹೋಗಕೂಡದೆಂಬ ಕಾರಣಕ್ಕಾಗಿ ಇಡೀ ಬೀದರ್ ಜಿಲ್ಲೆ ಅಸ್ಪೃಶ್ಯರ ಮೇಲಿನ ಕಿಡಿಯಾಗಿ ಸಿಡಿದು ಅಸಂಖ್ಯ ದಲಿತರ ಸಾವು ನೋವಿಗೆ ಕಾರಣವಾದ ಹಿಂದೂಗಳು, ದಲಿತರ ಮೇಲೆ ತಮಗಿರುವ ದ್ವೇಷವನ್ನು ರಾಷ್ಟ್ರಮಟ್ಟದಲ್ಲಿ ಬಹಿರಂಗವಾಗಿ ತೋರ್ಪಡಿಸಿದ್ದಾರೆ.
ಅಷ್ಟೆ ಅಲ್ಲ ದಲಿತರ ಉದ್ಧಾರಕಿ ಎಂದು ಬೊಗಳೆ ಹೊಡೆಯುವ ಇಂದಿರಾ ಗಾಂಧಿಯಿಂದ ಹಿಡಿದು, ರಾಷ್ಟ್ರಪತಿ ನೀಲಂ ಸಂಜೀವ ರೆಡ್ಡಿ, ಮೊರಾರ್ಜಿ ದೇಸಾಯಿ ಮುಂತಾದ ಹಿಂದೂ ನಾಯಕರು ಜಗಜೀವನ ರಾಂನಂಥ ಅಸ್ಪೃಶ್ಯನೊಬ್ಬ ದೇಶದ ಪ್ರಧಾನಿಯಾಗುವುದನ್ನು ತಪ್ಪಿಸಿದರಲ್ಲಾ, ದಲಿತರು ಇವನ್ನು ಸುಲಭವಾಗಿ ಮರೆಯುತ್ತಾರೇನು? ಘಾಸಿಗೊಂಡ ಅವರ ಮನಸ್ಸು ಸೇಡಿನ ಕಿಡಿಯಾಗಿ ಉರಿಯುತ್ತದೆ.
ಈಗ ಹಾಲಿ ನಡೆಯುತ್ತಿರುವ ಮತಾಂತರವನ್ನು ತಡೆಗಟ್ಟಲು 3 ಮಾರ್ಗಗಳಿವೆ.
1. ಮತಾಂತರ ನಿಷೇಧ ಮಸೂದೆಯನ್ನು ತಂದು ಬಲವಂತವಾಗಿ ಮತಾಂತರವನ್ನು ತಡೆಗಟ್ಟುವುದು. ಅಸ್ಸಾಂ ಗುಡ್ಡಗಾಡು ಜನ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರ ಹೊಂದುತ್ತಿರುವಾಗ ಹಿಂದೂ ಜಾತಿವಾದಿಗಳು ಜನತಾ ಪಕ್ಷದ ಆಡಳಿತ ಕಾಲದಲ್ಲಿ “ಮತಾಂತರ ನಿಷೇಧ ಮಸೂದೆಯನ್ನು ಲೋಕಸಭೆಯಲ್ಲಿ ತರುವ ಯತ್ನ ಮಾಡಿದರು. ಭಾರತದ ಉದ್ದಗಲಕ್ಕೂ ಇರುವ ಕ್ರಿಶ್ಚಿಯನ್ನರು ಸಭೆ, ಮೆರವಣಿಗೆಗಳ ಮೂಲಕ ಮಸೂದೆಯನ್ನು ಪ್ರತಿಭಟಿಸಿದರು. ಅದು ರಾಜ್ಯಾಂಗದ 25(1) ಮೂಲಭೂತ ಹಕ್ಕನ್ನು ಕಿತ್ತುಕೊಳ್ಳುತ್ತಿದೆಯಾಗಿ ಆ ಮಸೂದೆ ತರುವುದು ಕಷ್ಟವಾಯಿತು ಮತ್ತು ಆ ರೀತಿಯ ಮಸೂದೆ ಈಗಿರುವ ಸಮಸ್ಯೆಗೆ ಸೂಕ್ತ ಪರಿಹಾರವಲ್ಲ.
2. ಮತಾಂತರಕ್ಕೆ ಮೂಲಕಾರಣ ಸಾಮಾಜಿಕ ಅಸಮಾನತೆ – ಅವಮಾನ, ಸಾಮಾಜಿಕ ಅವಮಾನ ಜಾತೀಯತೆಯಿಂದ ಬಂದದ್ದು. ಆದ್ದರಿಂದ ಜಾತಿ ನಿರ್ಮೂಲನ ಮತಾಂತರಕ್ಕೆ
ಇರುವ ಏಕೈಕ ಮತ್ತು ಸಮರ್ಥ ಪರಿಹಾರ, ಪೇಜಾವರ, ಕಂಚಿ ಕಾಮಕೋಠಿ ಮಠಾಧಿಪತಿಗಳು ಆರ್.ಎಸ್.ಎಸ್. ಹಿಂದೂ ಮಹಾಸಭೆ, ಆತ್ಮ ಸಮಾಜ, ಈಗ ಮಾತನಾಡುತ್ತಿರುವ ರೀತಿಯಲ್ಲಿ ಜಾತಿನಾಶ ಮಾಡಲು ಸಾಧ್ಯವೆ ಇಲ್ಲ.
ಪೇಜಾವರ ಸ್ವಾಮಿಗಳು ಅಸ್ಪೃಶ್ಯರ ಕಾಲೋನಿಗೆ ಹೋದ ಮಾತ್ರಕ್ಕೆ ಬ್ರಾಹ್ಮಣ ಅಸ್ಪಶ್ಯರ ಮನೆಯಲ್ಲಿ ಭೋಜನ ಮಾಡಿದ ಮಾತ್ರಕ್ಕೆ ಜಾತೀಯತೆ ಹೋಗಲಾರದು. ಜಾತಿಬೇರುಗಳು ಇರುವುದು ಹಿಂದೂ ಧರ್ಮದಲ್ಲಿ, ಜನನ. ವೈವಾಹಿಕ, ಮತ್ತು ಮರಣ ಕಾಲಗಳಲ್ಲಿ ನಡೆಸುವ ಕ್ರಿಯೆಗಳಲ್ಲಿ. ಮನು ಧರ್ಮಶಾಸ್ತ್ರ, ಗೃಹ್ಯ ಸೂತ್ರ ಪುರಾಣಗಳಲ್ಲಿ ಇವುಗಳನ್ನು ಅಮೂಲಾಗ್ರವಾಗಿ ನಾಶಮಾಡುವುದಾದರೆ ಜಾತಿ ಹೋಗಲು ಸಾಧ್ಯ.
ಒಂದು ಕಡೆ ಮನು ಧರ್ಮಶಾಸ್ತ್ರದಲ್ಲಿ ಆಳವಾಗಿ ಕಾಲಿಟ್ಟುಕೊಂಡು ಮತ್ತೊಂದು ಕಡೆ ಜಾತಿ ನಾಶಮಾಡುತ್ತೇವೆ ಎನ್ನುವ ಬೂಸ ಸುಧಾರಣಾವಾದಿಗಳ ಬಗ್ಗೆ ದಲಿತರು ಮೈತುಂಬ ಕಣ್ಣಿಟ್ಟು ಎಚ್ಚರಿಕೆ ವಹಿಸಬೇಕು. ಹಿಂದೂ ಧರ್ಮ ನಾಶವ ಜಾತಿ ನಾಶವಾಗಿರುವಾಗ, ಹಿಂದೂ ಧರ್ಮ ಉಳಿಸಿಕೊಂಡು ಜಾತಿಯನ್ನು ಪ್ರತ್ಯೇಕವಾಗಿ ನಾಶಮಾಡುವುದು ಹೇಗೆ? ಹಿಂದೂ ಧರ್ಮ ಸಮಗ್ರ ಘಟಕವಾಗಿರುತ್ತಿದ್ದರೆ ಜಾತಿ ನಾಶ ಸುಲಭವಾಗಬಹುದಿತ್ತು.
ಬ್ರಾಹ್ಮಣ ಜಾತಿ ಬಿಡುತ್ತೇನೆ ಎಂದರೆ ಲಿಂಗಾಯಿತರು? ಗೌಡರು? ಕನಿಷ್ಠ ಅಗಸ? ಕುಂಬಾರ? ಇಂಥ ಭಿನ್ನ ಘಟಕಗಳು ಒಂದೊಂದೂ ಜಾತಿ ಕಲ್ಪನೆಯಿಂದ ಹೊರಬರಬೇಕಾದರೆ ಶತಮಾನಗಳೇ ಹಿಡಿದೀತು. ದಲಿತರಿಗೆ ಬೇಕಾಗಿರುವುದು ಜಾತಿ, ನೋವು ತುಳಿತಗಳಿಂದ ತಕ್ಷಣದ ಪರಿಹಾರ, ಅವರ ಬೇಡಿಕೆಯನ್ನು ಹಿಂದು ಧರ್ಮ ಪೂರೈಸಲಾರದು. ಅದು ಸಾಧ್ಯವು ಇಲ್ಲ. ಸಾಧ್ಯ ಎನ್ನುವುದಾದರೆ ಅದು ಅಷ್ಟೇ ವಿಳಂಬ.
ಆದ್ದರಿಂದ ಜೀತ, ಅವಮಾನ, ಹಿಂಸೆಗಳಿಂದ ಬಿಡುಗಡೆ ಹೊಂದಲು ದಲಿತರಿಗೆ ಉಳಿದ ಮಾರ್ಗ, ಮತಾಂತರವೊಂದೆ, ಆದರೆ ಯಾವ ಮತ? ಈ ಬಗ್ಗೆ ರಾಷ್ಟ್ರಮಟ್ಟದಲ್ಲಿ ದಲಿತರು ಚರ್ಚಿಸಬೇಕಾಗಿದೆ. ಸಮಗ್ರವಾಗಿ ತೀರ್ಮಾನ ತೆಗೆದುಕೊಳ್ಳಬೇಕಾಗಿದೆ. ಈ ಮಧ್ಯೆ ಯಾವುದೇ ಪೂರ್ವ ಚಿಂತನೆ ಇಲ್ಲದೆ ಹಸಿ ಹಸಿಯಾಗಿ ಮತಾಂತರಗೊಳ್ಳು ದಲಿತರ ಪಾಲಿಗೆ ವರವಾಗುವ ಬದಲು ಶಾಪವಾಗಿ ಪರಿಣಮಿಸಬಹುದು.
(ಪ್ರೊ. ಬಿ. ಕೃಷ್ಣಪ್ಪ : ಚಿಂತನೆಗಳು – ಬರಹಗಳು ಪುಸ್ತಕದಿಂದ ಈ ಲೇಖನ ಆಯ್ದು ಕೊಳ್ಳಲಾಗಿದೆ.)
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ನಾಳೆ ಹರಿಹರ ರೈಲು ನಿಲ್ದಾಣದಲ್ಲಿ ವಾರ್ಷಿಕ ವಿಪತ್ತು ನಿರ್ವಹಣೆ ಅಣುಕು ಅಭ್ಯಾಸ
ಸುದ್ದಿದಿನ, ಹರಿಹರ :ಇದೇ 14 ರಂದು ಗುರುವಾರ (ನಾಳೆ) ಹರಿಹರ ರೈಲು ನಿಲ್ದಾಣದಲ್ಲಿ ವಾರ್ಷಿಕ ವಿಪತ್ತು ನಿರ್ವಹಣೆಯ ಅಣುಕು ಅಭ್ಯಾಸವನ್ನು ಬೆಳಗ್ಗೆ 8:30 ಕ್ಕೆ ನಡೆಸಲಿದೆ ಎಂದು ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.
ನೈಋತ್ಯ ರೈಲ್ವೆಯ ಮೈಸೂರು ವಿಭಾಗವು ಎನ್ಡಿಆರ್ಎಫ್, ಎಸ್ಡಿಆರ್ಎಫ್ ಹಾಗೂ ರಾಜ್ಯ ಸರ್ಕಾರದ ಅಧಿಕಾರಿಗಳ ಸಮನ್ವಯದಲ್ಲಿ ಅಣಕು ಅಭ್ಯಾಸವು ನಡೆಸಲಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ನಟ ದಿಲೀಪ್ ರಾಜ್ ಆ ಒಂದು ತಪ್ಪು ಪ್ರಾಣಕ್ಕೆ ಮುಳುವಾಯ್ತು
ಸುದ್ದಿದಿನಡೆಸ್ಕ್:ಕನ್ನಡ ಚಿತ್ರರಂಗದ ಖ್ಯಾತ ನಟ ದಿಲೀಪ್ ರಾಜ್ (47) ಅವರ ಅಕಾಲಿಕ ನಿಧನವು ಇಡೀ ಸ್ಯಾಂಡಲ್ವುಡ್ ಅನ್ನು ದಿಗ್ಭ್ರಮೆಗೊಳಿಸಿದೆ. ಕೇವಲ 47 ವರ್ಷ ವಯಸ್ಸಿನ ಈ ಪ್ರತಿಭಾನ್ವಿತ ಕಲಾವಿದ ಇಂದು ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. ಆದರೆ ಅವರ ಈ ಸಾವಿನ ಹಿಂದೆ ಒಂದು ಬೇಸರದ ಸಂಗತಿಯೂ ಅಡಗಿದೆ, ಅದೇನೆಂದರೆ ಅವರ ಆರೋಗ್ಯದ ಕುರಿತು ತೋರಿದ ಒಂದು ನಿರ್ಲಕ್ಷ್ಯ!
ನಟ ನಿರ್ಮಾಪಕ ದಿಲೀಪ್ ರಾಜ್ ಅವರು ಇಂದು ಹೃದಯಾಘಾತದಿಂದ ನಿಧನರಾಗಿದ್ದು, ಇಡೀ ಸ್ಯಾಂಡಲ್ವುಡ್ ದಿಗ್ಭ್ರಮೆಗೊಂಡಿದೆ. ಕೆಲವು ದಿನಗಳ ಹಿಂದೆ ಗೋವಾ ಪ್ರವಾಸದಲ್ಲಿದ್ದಾಗಲೇ ಅವರಿಗೆ ಆಗಾಗ ಎದೆನೋವು ಕಾಣಿಸಿಕೊಂಡಿತ್ತು, ಆದರೆ ಪ್ರವಾಸದ ಖುಷಿಯಲ್ಲಿದ್ದ ಅವರು ಅದನ್ನ ಗಂಭೀರವಾಗಿ ಪರಿಗಣಿಸಿರಲಿಲ್ಲ.. ಬೆಂಗಳೂರಿಗೆ ಮರಳಿದ ನಂತರ ಇಂದು ವೈದ್ಯಕೀಯ ತಪಾಸಣೆಗೆ ಅಪಾಯಿಂಟ್ಮೆಂಟ್ ಕೂಡ ಫಿಕ್ಸ್ ಆಗಿತ್ತು. ಆದರೆ ವಿಧಿ ಆಟವೇ ಬೇರೆಯಾಗಿತ್ತು;
ತಪಾಸಣೆಗೆ ಹೋಗುವ ಮುನ್ನವೇ ರಾತ್ರಿ ತೀವ್ರ ಎದೆನೋವು ಕಾಣಿಸಿಕೊಂಡು ಕುಮಾರಸ್ವಾಮಿ ಲೇಔಟ್ನ ಅಪೋಲೋ ಆಸ್ಪತ್ರೆಯಲ್ಲಿ ಅವರು ಕೊನೆಯುಸಿರೆಳೆದಿದ್ದಾರೆ.ನೋವು ಕಾಣಿಸಿಕೊಂಡ ತಕ್ಷಣವೇ ಆಸ್ಪತ್ರೆಗೆ ದಾಖಲಾಗಿದ್ದರೆ ಇಂದು ಪರಿಸ್ಥಿತಿ ಬೇರೆಯೇ ಇರುತ್ತಿತ್ತು ಎಂದು ಅವರ ಕುಟುಂಬಸ್ಥರು ಮತ್ತು ಅಭಿಮಾನಿಗಳು ಕಣ್ಣೀರು ಹಾಕುತ್ತಿದ್ದಾರೆ.
ನಟ ದಿಲೀಪ್ ರಾಜ್ ಅವರು ಕೆಲವೇ ದಿನಗಳ ಹಿಂದೆ ಗೋವಾಗೆ ಪ್ರವಾಸ ತೆರಳಿದ್ದರು.
ಅಲ್ಲಿ ಗೆಳೆಯರೊಂದಿಗೆ ಕಾಲ ಕಳೆಯುವಾಗಲೇ ಅವರಿಗೆ ಎದೆ ನೋವು ಕಾಣಿಸಿಕೊಂಡಿತ್ತು ಎನ್ನಲಾಗುತ್ತಿದೆ. ಅಂದೇ ಹೃದಯವು ಅಪಾಯದ ಮುನ್ಸೂಚನೆ ನೀಡಿದ್ದರೂ, ದಿಲೀಪ್ ಅವರು ಅದನ್ನು ಗಂಭೀರವಾಗಿ ಪರಿಗಣಿಸದೆ ನಿರ್ಲಕ್ಷ್ಯ ತೋರಿದ್ದರು. ಗೋವಾ ಟ್ರಿಪ್ನಲ್ಲಿದ್ದಾಗಲೇ ಆಗಾಗ ನೋವು ಕಾಣಿಸಿಕೊಂಡರೂ, ಅವರು ಅದನ್ನು ಕೇರ್ ಮಾಡಿರಲಿಲ್ಲ.
ಬೆಂಗಳೂರಿಗೆ ಮರಳಿದ ನಂತರ ಅವರು ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಲು ನಿರ್ಧರಿಸಿದ್ದರು. ವಿಪರ್ಯಾಸವೆಂದರೆ, ಇಂದು ಅವರು ಆಸ್ಪತ್ರೆಗೆ ತೆರಳಿ ಹೃದಯ ತಪಾಸಣೆ ಮಾಡಿಸಿಕೊಳ್ಳಬೇಕಿತ್ತು ಮತ್ತು ಅದಕ್ಕಾಗಿ ವೈದ್ಯರ ಅಪಾಯಿಂಟ್ಮೆಂಟ್ ಕೂಡ ಫಿಕ್ಸ್ ಆಗಿತ್ತು. ಆದರೆ ವಿಧಿ ಆಟವೇ ಬೇರೆಯಾಗಿತ್ತು. ನಿನ್ನೆ ರಾತ್ರಿ ಕೂಡ ಧಾರಾವಾಹಿ ಕಲಾವಿದರ ಜೊತೆ ಫೋನ್ನಲ್ಲಿ ಆತ್ಮೀಯವಾಗಿ ಮಾತನಾಡಿದ್ದ ನಟನಿಗೆ, ಮಧ್ಯರಾತ್ರಿ ತೀವ್ರವಾದ ಎದೆನೋವು ಕಾಣಿಸಿಕೊಂಡಿದೆ. ಆಸ್ಪತ್ರೆಗೆ ತೆರಳುವ ಮುನ್ನವೇ ಅವರು ಏಕಾಏಕಿ ಕುಸಿದು ಬಿದ್ದು ಕೊನೆಯುಸಿರೆಳೆದಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಸಾವಿನಲ್ಲೂ ಒಂದಾದ ಪ್ರೇಮಿಗಳು: ಪ್ರೇಮಿಯ ಪಕ್ಕದಲ್ಲೇ ಪ್ರೇಯಸಿಯ ಅಂತ್ಯಸಂಸ್ಕಾರ!
ಸುದ್ದಿದಿನ,ಕುಂಬಳೆ: ಪ್ರೀತಿ ಎನ್ನುವುದು ಸಾವಿನ ನಂತರವೂ ಶಾಶ್ವತ ಎಂಬುದಕ್ಕೆ ಕೇರಳದ ಕಾಸರಗೋಡಿನಲ್ಲಿ ನಡೆದ ಈ ಘಟನೆ ಸಾಕ್ಷಿಯಾಗಿದೆ. ನಿಶ್ಚಿತಾರ್ಥವಾಗಿದ್ದ ಯುವಕ ಮೃತಪಟ್ಟ ಬೆನ್ನಲ್ಲೇ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದ ಯುವತಿಯ ಅಂತ್ಯಸಂಸ್ಕಾರವನ್ನು ಆಕೆಯ ಇಚ್ಛೆಯಂತೆ ಯುವಕನ ಸಮಾಧಿಯ ಪಕ್ಕದಲ್ಲೇ ನೆರವೇರಿಸಲಾಗಿದೆ.
ನಡೆದಿದ್ದೇನು?
ಕಿದೂರು ಕುಂಟಂಗೇರಡ್ಕದ ಪ್ರಫುಲ್ಲ (26) ಮತ್ತು ತಮಿಳುನಾಡು ನಿವಾಸಿಯಾದ ಬ್ಯಾಂಕ್ ನೌಕರ ಮಣಿ ಎಂಬವರಿಗೆ ನಾಲ್ಕು ತಿಂಗಳ ಹಿಂದೆ ಅದ್ಧೂರಿಯಾಗಿ ಮದುವೆ ನಿಶ್ಚಿತಾರ್ಥ ನಡೆದಿತ್ತು. ಇನ್ನೇನು ದಾಂಪತ್ಯ ಜೀವನಕ್ಕೆ ಕಾಲಿಡಬೇಕು ಎನ್ನುವಷ್ಟರಲ್ಲಿ, ಒಂದು ತಿಂಗಳ ಹಿಂದೆ ಸಂಭವಿಸಿದ ಬೈಕ್ ಅಪಘಾತದಲ್ಲಿ ಮಣಿ ಮೃತಪಟ್ಟಿದ್ದರು.
ಡೆತ್ ನೋಟ್ನಲ್ಲಿತ್ತು ಕೊನೆಯ ಆಸೆ
ತನ್ನ ಭಾವಿ ಪತಿಯ ಅಗಲಿಕೆಯಿಂದ ತೀವ್ರವಾಗಿ ನೊಂದಿದ್ದ ಪ್ರಫುಲ್ಲ, ಕಳೆದ ಭಾನುವಾರ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದರು. ಸಾವಿಗೂ ಮುನ್ನ ಆಕೆ ಬರೆದಿದ್ದ ಡೆತ್ ನೋಟ್ ಎಲ್ಲರ ಕಣ್ಣಾಲಿಗಳನ್ನು ಒದ್ದೆ ಮಾಡಿದೆ. “ನನ್ನ ಮೃತದೇಹವನ್ನು ಮಣಿಯ ಸಮಾಧಿಯ ಸಮೀಪದಲ್ಲೇ ಅಂತ್ಯಸಂಸ್ಕಾರ ಮಾಡಬೇಕು” ಎಂದು ಆಕೆ ತನ್ನ ಕೊನೆಯ ಆಸೆಯನ್ನು ಬರೆದಿಟ್ಟಿದ್ದರು.
ತಮಿಳುನಾಡಿನಲ್ಲಿ ಅಂತ್ಯಕ್ರಿಯೆ
ಯುವತಿಯ ಆಸೆಯಂತೆ ಉಭಯ ಕುಟುಂಬದವರು ಮಾತುಕತೆ ನಡೆಸಿದರು. ಅದರಂತೆ ನಿನ್ನೆ ಕಾಸರಗೋಡಿನಿಂದ ಪ್ರಫುಲ್ಲರ ಮೃತದೇಹವನ್ನು ತಮಿಳುನಾಡಿನ ತಿರುನಲ್ವೇಲಿ ಜಿಲ್ಲೆಯ ವಳ್ಳಿಯೂರು ಎಂಬಲ್ಲಿಗೆ ಕೊಂಡೊಯ್ಯಲಾಯಿತು. ಅಲ್ಲಿ ಮಣಿಯ ಸಮಾಧಿಯ ಪಕ್ಕದಲ್ಲೇ ಪ್ರಫುಲ್ಲರ ಅಂತ್ಯಸಂಸ್ಕಾರವನ್ನು ನೆರವೇರಿಸುವ ಮೂಲಕ ಪ್ರೇಮಿಗಳಿಬ್ಬರನ್ನು ಸಾವಿನಲ್ಲೂ ಒಂದಾಗಿಸಲಾಯಿತು.
ಅಂತ್ಯಸಂಸ್ಕಾರದ ವೇಳೆ ಎರಡೂ ಕುಟುಂಬದ ಸದಸ್ಯರು ಉಪಸ್ಥಿತರಿದ್ದು, ಮರುಗುವ ಪ್ರೇಮಕಥೆಗೆ ಕಂಬನಿಯ ವಿದಾಯ ಹೇಳಿದರು. ಈ ವಿಡಿಯೋ ಮತ್ತು ಸುದ್ದಿ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದ್ದು, ನೆಟ್ಟಿಗರು ಈ ಜೋಡಿಯ ಆತ್ಮಕ್ಕೆ ಶಾಂತಿ ಕೋರುತ್ತಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ3 days ago2.5 ಕೋಟಿ ಖರೀದಿಯಲ್ಲಿ ಅವ್ಯವಹಾರ ; ಆಯುಕ್ತೆ ಮಂಜುಶ್ರೀ ಸೇರಿ 6 ಅಧಿಕಾರಿಗಳ ವಿರುದ್ಧ ಲೋಕಾಗೆ ದೂರು
-
ದಿನದ ಸುದ್ದಿ6 days agoದಾವಣಗೆರೆ | ಸರ್ಕಾರಿ ಮಹಿಳಾ ಕಾಲೇಜಿನಲ್ಲಿ ಬೆಂಕಿ ರಹಿತ ಕುಕಿಂಗ್ ಕಾರ್ಯಕ್ರಮ
-
ದಿನದ ಸುದ್ದಿ6 days agoಮಕ್ಕಳ ಆಧಾರ್ ಬಯೋಮೆಟ್ರಿಕ್ ನವೀಕರಣಕ್ಕೆ ಉಚಿತ ಅವಕಾಶ : ಕೂಡಲೇ ಆಧಾರ್ ಸೇವಾ ಕೇಂದ್ರಗಳಿಗೆ ಭೇಟಿ ನೀಡಿ
-
ದಿನದ ಸುದ್ದಿ3 days agoದಾವಣಗೆರೆ | ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಸಮಾರೋಪ ಸಮಾರಂಭ
-
ಅಂಕಣ2 days agoಪ್ರಜಾಪ್ರಭುತ್ವ: ಸಮಾನತೆ, ಸಾಮಾಜಿಕ ನ್ಯಾಯ ಮತ್ತು ನೈತಿಕ ಹೊಣೆಗಾರಿಕೆ
-
ಕ್ರೀಡೆ6 days agoಹಿರಿಯ ಕ್ರಿಕೆಟ್ ಪಟು ಎನ್ಆರ್ಎಚ್ ರಮೇಶ್ ನಿಧನ
-
ದಿನದ ಸುದ್ದಿ2 days agoದಾವಣಗೆರೆ| ಅಪರಿಚಿತರು ನೀಡಿದ ಟೆಲಿಗ್ರಾಮ್ ಲಿಂಕ್ ಕ್ಲಿಕ್ ಮಾಡಿ 14 ಲಕ್ಷ ಕಳೆದುಕೊಂಡ ಉಪನ್ಯಾಸಕ
-
ದಿನದ ಸುದ್ದಿ3 days agoಮಾನಸಿಕ ಆರೋಗ್ಯ ಅರಿವು ಅಗತ್ಯ : ಡಾ. ಪ್ರಭು ಎಂ. ಬಿಸ್ಲೇರಿ

