ದಿನದ ಸುದ್ದಿ
ದಲಿತರು ಮತ್ತು ಮತಾಂತರ : ಪ್ರೊ. ಬಿ.ಕೃಷ್ಣಪ್ಪ ಅವರ ಲೇಖನ
- ಪ್ರೊ. ಬಿ.ಕೃಷ್ಣಪ್ಪ
ತಮಿಳು ನಾಡಿನ ಮೀನಾಕ್ಷಿಪುರಂ ದಲಿತರು ಮುಸ್ಲಿಮರಾಗುವುದರ ಮೂಲಕ ಕನ್ಯಾಕುಮಾರಿಯಿಂದ ಹಿಡಿದು ಹಿಮಾಲಯದವರೆಗೆ, ಅರಬ್ಬಿ ಸಮುದ್ರದಿಂದ ಹಿಡಿದು ಬಂಗಾಳ ಕೊಲ್ಲಿಯವರೆಗೆ ಹಬ್ಬಿರುವ ಈ ನೆಲದಲ್ಲಿ ದೊಡ್ಡ ಬಿರುಗಾಳಿ ಎಬ್ಬಿಸಿದ್ದಾರೆ. ಇಡೀ ಹಿಂದು ರಾಷ್ಟ್ರವನ್ನು ಮುಸ್ಲಿಂ ರಾಷ್ಟ್ರವನ್ನಾಗಿಸುವತ್ತ ಹೆಜ್ಜೆ ಇಟ್ಟಿದ್ದಾರೆ.
ಹಿಂದೂ ರಾಷ್ಟ್ರ ತಮ್ಮದು ಎಂದು ಬೊಗಳೆ ಹೊಡೆಯುವ ಹಿಂದುಗಳ ಬಾಯಿಗೆ ಬಲವಾದ ಗುಂಡು ಜಡಿದಿದ್ದಾರೆ. ನಿಂತ ಕಾಲ ಮೇಲೆ ಹಿಂದೂಗಳಿಗೆ ನೆಲ ಕುಸಿದಂತಾಗಿದೆ. ದಲಿತರು ಮನಸ್ಸು ಮಾಡಿದರೆ ಬಿರುಗಾಳಿಯಲ್ಲಿ ವಿಷಗಾಳಿಯಾಗಬಲ್ಲರು ಎಂಬುದಕ್ಕೆ ಇದು ಒಂದು ಉದಾಹರಣೆ ಮಾತ್ರ.
ಅಂಬೇಡ್ಕರ್ ಹೇಳಿದಂತೆ, ದಲಿತರು ಬೌದ್ಧರಾಗುತ್ತಿದ್ದರೆ, ಇಲ್ಲವೆ ಕ್ರಿಶ್ಚಿ ಯನ್ನರಾಗುತ್ತಿದ್ದರೆ, ಹಿಂದೂಗಳಿಗೆ ಈಗಿನಂತೆ ಷಾಕ್, ಚುರುಕು ತಟ್ಟುತ್ತಿರಲಿಲ್ಲ. ಏಕೆಂದರೆ ಈಗ ಹಾಲಿ ಇಂಡಿಯಾದಲ್ಲಿರುವ ಬೌದ್ಧ ಮತ್ತು ಕ್ರಿಶ್ಚಿಯನ್ ಧರ್ಮಗಳು ಹಿಂದೂ ಧರ್ಮದ ಕಕ್ಷೆ ಒಳಗೆ ಅದೆಷ್ಟು ರೂಪ ಪಡೆದುಕೊಳ್ಳುತ್ತಿವೆ. ಇತಿಹಾಸದಲ್ಲಿ ಎಂದೂ ಬೌದ್ಧ ಮತ್ತು ಕ್ರೈಸ್ತರು ಹಿಂದೂ ದ್ವೇಷಿಗಳಾಗಿ ವರ್ತಿಸಿಲ್ಲ. ಆದರೆ ಮುಸ್ಲಿ೦ ಮತ್ತು ಹಿಂದೂ ಧರ್ಮಗಳು ಶತಮಾನಗಳಿಂದ ಹಾವು ಮುಂಗುಸಿಗಳಂತೆ ಕಚ್ಚಾಡುತ್ತ,
ದ್ವೇಷದ ಕಿಡಿ ಕಾರುತ್ತ ಬಂದಿರುವುದಕ್ಕೆ ಇತಿಹಾಸವೇ ಸಾಕ್ಷಿ, ಇತ್ತೀಚೆಗಂತೂ ಆರ್. ಎಸ್. ಎಸ್. ನವರು ಹಳೆಯ ಗಾಯಕ್ಕೆ ಉಪ್ಪು ಸುರಿಯುತ್ತಿದ್ದಾರೆ.
ದೇಶದ 30 ಕೋಟಿ ದಲಿತರು ಮುಸ್ಲಿಮರಾದರೆ ಗತಿ ಏನು? ಜುಟ್ಟು ಜನಿವಾರಗಳು ಕಿತ್ತು ಹೋಗುತ್ತವೆ. ಮಠಮಾನ್ಯಗಳು ಮಸೀದಿಗಳಾಗುತ್ತವೆ. ರಾಜಕೀಯ ಅಧಿಕಾರ ಮುಸ್ಲಿಮರ ಕೈಗೆ ಹೋಗುತ್ತದೆ. ತ್ರಿವರ್ಣಧ್ವಜ ಹೋಗಿ ಚಂದ್ರ ಚುಕ್ಕೆ ಬಾವುಟ ಹಾರಾಡುತ್ತದೆ. ಕಾಶಿಗೆ ಬದಲಾಗಿ ಮೆಕ್ಕ ಮದೀನಗಳು ಧಾರ್ಮಿಕ ಶ್ರದ್ಧೆಯ ಕೇಂದ್ರಗಳಾಗುತ್ತವೆ.
ಇದನ್ನು ಊಹಿಸಿಕೊಂಡ ಹಿಂದೂ ಮಠಾಧಿಪತಿಗಳಿಗೆ, ರಾಜಕಾರಣಿಗಳಿಗೆ ಭೇದಿ ಕಿತ್ತುಕೊಂಡಿದೆ. ಮಲಗಿದ್ದ ಮುದ್ರೆ ನಾಮ, ವಿಭೂತಿಗಳು ಎದ್ದು ಕೂತಿವೆ. ಹಿಂದೂ ರಾಜಕಾರಣಿಗಳು ಪುರುಸೊತ್ತಿಲ್ಲದೆ ಓಡಾಡತೊಡಗಿದ್ದಾರೆ. ಪುರೋಹಿತಶಾಹಿ ಪತ್ರಿಕೆಗಳು ದಿನ ನಿತ್ಯ ಮತಾಂತರದ ಬಗ್ಗೆ ಬರೆಯತೊಡಗಿವೆ. ಎಂದಿನಂತೆ ಹಿಂದೂ ಮೆದುಳು ವಾಸ್ತವ ಸ್ಥಿತಿಯ ಸುತ್ತ ಇಲ್ಲ ಸಲ್ಲದ ಕತೆ ಕಟ್ಟತೊಡಗಿದೆ.
ದಲಿತರು ಮುಸ್ಲಿಮರಾಗಲು ಕಾರಣವೇನು? ಇದಕ್ಕೆ ಹೊಣೆ ಯಾರು? ಇಂಥ ಪ್ರಶ್ನೆಗಳಿಗೆ ಉತ್ತರ ಹೇಳ ಬೇಕಾದವರು ಅಸ್ಪೃಶ್ಯರಲ್ಲ. ದಲಿತರು ಹಿಂದೂ ಧರ್ಮ ಬಿಡುತ್ತಿದ್ದರೆ, ಅದಕ್ಕೆ ಹೊಣೆ ಸವರ್ಣೀಯರೆ ಹೊರತು ಅಸ್ಪೃಶ್ಯರಲ್ಲ.
ತಮ್ಮನ್ನು ಊರಿಂದ ಹೊರಗೆ ಇಟ್ಟಿದ್ದರೂ, ತಮ್ಮ ನೋಟ ಅಪವಿತ್ರ ಎಂದು ಭಾವಿಸಿದ್ದರೂ, ದೇವಸ್ಥಾನ, ಭಾವಿ, ಕೆರೆಗಳಲ್ಲಿ ನೀರು ಎತ್ತುವ ಅವಕಾಶ ಕೊಡದಿದ್ದರೂ, ತಮ್ಮ ಹುಟ್ಟು ಹೀನಾಯವೆಂದು ಹೀಗಳೆದರೂ, 5 ಸಾವಿರ ವರ್ಷಗಳಿಂದ ದಲಿತರು ತಮ್ಮನ್ನು ಹಿಂದೂಗಳು ಎಂದೇ ಭಾವಿಸಲಿಲ್ಲವೆ?
ಹಿಂದೂ ದೇವರು, ಪುರಾಣ, ಶಾಸ್ತ್ರಗಳನ್ನು ಪರಮಪೂಜ್ಯವೆಂದು ಆರಾಧಿಸಲಿಲ್ಲವೆ? ಒದ್ದ ಕಾಲುಗಳಿಗೆ ಚಪ್ಪಲಿ ಹೊಲಿದುಕೊಡಲಿಲ್ಲವೆ? ಬೆವರು ಸುರಿಸಿ ಮೂಕ ಪ್ರಾಣಿಗಳಂತೆ ಜೀತ ಮಾಡಲಿಲ್ಲವೆ? ಇಷ್ಟಾದರೂ ಹಿಂದೂಗಳು ಅವರನ್ನು ಮನುಷ್ಯರೆಂದು ಭಾವಿಸಿದರೇನು? ತಮ್ಮ ಸಹ ಸೋದರರೆಂದು ಅತ್ತುಗರೆದರೇನು? ಶತಮಾನಗಳು ಉರುಳಿದರೂ ಅವರ ಮನಸ್ಸು ಬದಲಾಗಿಲ್ಲ.
ಪಪಾ ಬೆಳ್ಳಿ ಕಿಲ್ಬಮನೆ, ನಾರಾಯಣಪುರ, ಇತ್ಯಾದಿ ಘಟನೆಗಳು ಇನ್ನೂ ಮುಂದುವರಿಯುತ್ತಲೇ ಇವೆ. ಅಡ್ಡಬಿದ್ದವರನ್ನೆ ಮತ್ತಷ್ಟು ತುಳಿಯುವ ಈ ಲಫಂಗ ಹಿಂದೂ ಧರ್ಮದಲ್ಲಿ ತಾವಾದರೂ ಏಕೆ ಇರಬೇಕು? ಎಂದು ಅಸ್ಪೃಶ್ಯರು ಭಾವಿಸಿದ್ದರೆ. ಅದಕ್ಕೆ ಹೊಣೆ ಯಾರು? ಜವಾಬ್ದಾರರು ಯಾರು?
ಮೀನಾಕ್ಷಿಪುರಂಗೆ ಧಾವಿಸಿದ ಭಾ.ಜ.ಪ. ನಾಯಕ ವಾಜಪೇಯಿ ಸುಬ್ರಮಣ್ಯಸ್ವಾಮಿ ನಾಮ ಮುದ್ರೆ, ವಿಭೂತಿ ಜುಟ್ಟಿನ ಖದೀಮ ಮಠಾಧಿಪತಿಗಳು, ಆರ್ ಎಸ್. ಎಸ್. ಚಡ್ಡಿಗಳು ಮೇಲು ಜಾತಿ ಗೃಹಮಂತ್ರಿ ಜೈಲ್ಸಿಂಗ್ ಅಸ್ಪೃಶ್ಯರು ಮತಾಂತರ ಹೊಂದಲು ವಿದೇಶಿ ಹಣ, ರೊಕ್ಕದ ಆಸೆ ಎಂದು ಹೇಳಿಕೆ ಕೊಟ್ಟಿದ್ದಾರೆ.
ಮೀನಾಕ್ಷಿಪುರಂ ಅಸ್ಪಶ್ಯರು ಸ್ಟೇಟ್ ಗೃಹ ಸಚಿವ ಅಸ್ಪೃಶ್ಯ ಮಂತ್ರಿ ಯೋಗೀಂದ್ರ ಮಕ್ಕಾನ ‘ಮತಾಂತರಕ್ಕೆ ಸಾಮಾಜಿಕ ಅವಹೇಳನ” ಕಾರಣ ಎಂದಿದ್ದಾರೆ. ಪೇಜಾವರ ಮಠಾಧಿಪತಿ ‘ಮತಾಂತರಕ್ಕೆ ಸಾಮಾಜಿಕ ಅಸಮಾನತೆ ಕಾರಣ’ ಎಂದಿರುವುದು ಗಮನಾರ್ಹ. ಇದರಲ್ಲಿ ಯಾವುದು ಮೂಲಭೂತ? ಯಾವುದು ನಿಜ? ಯಾವುದು ಸುಳ್ಳು?
5 ಸಾವಿರ ವರ್ಷಗಳಿಂದ ಅಸ್ಪಶ್ಯತೆಗೆ ಸಿಕ್ಕು ನರಳುತ್ತಿರುವ ಅಸ್ಪಶ್ಯರಾಗಿ ಹುಟ್ಟಿದ ಕಾರಣಕ್ಕಾಗಿಯೆ? ಅಮಾನುಷ ಹಿಂಸೆಗೆ ಬಲಿಯಾಗುತ್ತಿರುವ, ಈ ಜನರ ಮನಸ್ಸಿನ ಬೇಗುದಿ, ತಳಮಳ ಮೇಲ್ಮಾತಿಯ ನೋವಿಲ್ಲದ ಜನಕ್ಕೆ ಹೇಗೆ ಅರ್ಥವಾಗಬಲ್ಲದು? ಹಣಕ್ಕಾಗಿಯೇ ಅಸ್ಪೃಶ್ಯರು ಮತಾಂತರಗೊಳ್ಳುವುದಾಗಿದ್ದರೆ, ಇಂಡಿಯಾ ದೇಶ ಈಗಿರುವ ಸ್ಥಿತಿಯಲ್ಲಿ ಅದು ಹಿಂದೂ ದೇಶವಾಗಿ ಉಳಿಯುತ್ತಿರಲಿಲ್ಲ. ಎಂದೋ ಅದು ಕ್ರಿಶ್ಚಿಯನ್ ಅಥವಾ ಮುಸ್ಲಿಂ ರಾಷ್ಟ್ರವಾಗುತ್ತಿತ್ತು.
ಇಷ್ಟಾದರೂ ದಲಿತರು ಹಿಂದೂ ಧರ್ಮದಲ್ಲಿ ಉಳಿದಿರಲು ಕಾರಣ ಅವರಲ್ಲಿ ಮೌಢ ಅಜ್ಞಾನ ನಿರಕ್ಷರತೆಗಳನ್ನು ಪೋಷಿಸಿಕೊಂಡು ಬಂದಿರುವ ಹಿಂದೂ ಪರಿಸರ ಕಾರಣವಾಗಿದೆ. ಯಾವ ವಿದ್ಯಾವಂತ ದಲಿತನೇ ಆಗಲಿ, ಯಾವೊಬ್ಬ ಮಾನವತಾವಾದಿಯೇ ಆಗಲಿ ತನ್ನನ್ನು ಕೀಳಾಗಿ ಕಾಣುವ ಯಾವ ಧರ್ಮವನ್ನೂ ಗೌರವಿಸಲಾರ. ಗೌರವಿಸುವುದಿಲ್ಲ. ದಲಿತರು ವಿದ್ಯಾವಂತರಾಗುತ್ತಿರುವುದರಿಂದಲೆ ಮತಾಂತರ ಹೆಚ್ಚುತ್ತಿರುವುದು. ಆದ್ದರಿಂದಲೇ ಹಿಂದೂ ರಾಷ್ಟ್ರದ ಕನಸು ಕಾಣುತ್ತಿರುವ ಜಾತಿವಾದಿಗಳು ಮತಾಂತರ ನಿಷೇಧ ಮಸೂದ ಯನ್ನು ತರಲು ಶತ ಪ್ರಯತ್ನ ನಡೆಸಿದ್ದಾರೆ.
ಮತಾಂತರ ನಿಷೇಧ ಮಸೂದೆ ಎಂದರೆ ಅಸ್ಪೃಶ್ಯರು ಈ ದೇಶದಲ್ಲಿ ಅಸ್ಪೃಶ್ಯರಾಗಿಯೆ ಉಳಿಯಬೇಕು. ಸಮಾನತೆಯನ್ನು ಬಯಸಬಾರದು” ಎಂಬುದೇ ಆಗಿದೆ. ಮತಾಂತರದ ಗಾಳಿ ಹಿಂದೂ ರಾಜಕಾರಣಿಗಳಿಗೂ ಬಿಸಿ ತಟ್ಟಿಸಿದೆ. ಹಿಂದೂ ಸರ್ಕಾರ ಉರುಳಿ ಖೊಮನಿ ಸರ್ಕಾರ ಬಂದರೆ ತಮ್ಮನ್ನೆಲ್ಲ ರಾತ್ರೋ ರಾತ್ರಿ “ಬಿಸ್ಮಿಲ್ಲ” ಮಾಡಬಹುದೆಂಬ ಬೆದರಿಕೆಯಿಂದ ಅವರ ತೊಡೆ ನಡುಗತೊಡಗಿವೆ.
ಸ್ವಾತಂತ್ರ ಬಂದ 33 ವರ್ಷಗಳಲ್ಲಿ ರಾಜಕಾರಣಿಗಳು, ಆಳುವ ಪಕ್ಷಗಳು ಅಸ್ಪೃಶ್ಯರ ಬಗ್ಗೆ 3 ಅಂಶ 5 ಅಂಶ ಇತ್ಯಾದಿ ಕಾರಕ್ರಮಗಳನ್ನು ಹೇಳಿ ಅವು ಕಿಂಚಿತ್ತೂ ಕಾರರೂಪಕ್ಕೆ ಬರದೆ ಮತಾಂತರಕ್ಕೆ ಅದೂ ಕಾರಣವಾಗಿದೆ.
ಗುಜರಾತಿನಲ್ಲಿ ಮೀಸಲಾತಿ ವಿರೋಧಿ ಚಳುವಳಿಯನ್ನು ನಡೆಸಿ ದಲಿತರ ಮಾರಣ ಹೋಮ ಮಾಡಿದ ಮರಾಠವಾಡ, ವಿಶ್ವವಿದ್ಯಾನಿಲಯಕ್ಕೆ ಅಂಬೇಡ್ಕರ್ ಹೆಸರನ್ನು ಇಡಬೇಕೆಂಬ ಬೇಡಿಕೆಯ ವಿರುದ್ಧ ಮಹಾರಾಷ್ಟ್ರದ ಅಸ್ಪೃಶ್ಯರನ್ನು ಅಮಾನುಷವಾಗಿ ಕೊಂದ, ಅಂಬೇಡ್ಕರ್ ಮೆರವಣಿಗೆ ಸವರ್ಣೀಯರ ಕೇರಿಯಲ್ಲಿ ಹೋಗಕೂಡದೆಂಬ ಕಾರಣಕ್ಕಾಗಿ ಇಡೀ ಬೀದರ್ ಜಿಲ್ಲೆ ಅಸ್ಪೃಶ್ಯರ ಮೇಲಿನ ಕಿಡಿಯಾಗಿ ಸಿಡಿದು ಅಸಂಖ್ಯ ದಲಿತರ ಸಾವು ನೋವಿಗೆ ಕಾರಣವಾದ ಹಿಂದೂಗಳು, ದಲಿತರ ಮೇಲೆ ತಮಗಿರುವ ದ್ವೇಷವನ್ನು ರಾಷ್ಟ್ರಮಟ್ಟದಲ್ಲಿ ಬಹಿರಂಗವಾಗಿ ತೋರ್ಪಡಿಸಿದ್ದಾರೆ.
ಅಷ್ಟೆ ಅಲ್ಲ ದಲಿತರ ಉದ್ಧಾರಕಿ ಎಂದು ಬೊಗಳೆ ಹೊಡೆಯುವ ಇಂದಿರಾ ಗಾಂಧಿಯಿಂದ ಹಿಡಿದು, ರಾಷ್ಟ್ರಪತಿ ನೀಲಂ ಸಂಜೀವ ರೆಡ್ಡಿ, ಮೊರಾರ್ಜಿ ದೇಸಾಯಿ ಮುಂತಾದ ಹಿಂದೂ ನಾಯಕರು ಜಗಜೀವನ ರಾಂನಂಥ ಅಸ್ಪೃಶ್ಯನೊಬ್ಬ ದೇಶದ ಪ್ರಧಾನಿಯಾಗುವುದನ್ನು ತಪ್ಪಿಸಿದರಲ್ಲಾ, ದಲಿತರು ಇವನ್ನು ಸುಲಭವಾಗಿ ಮರೆಯುತ್ತಾರೇನು? ಘಾಸಿಗೊಂಡ ಅವರ ಮನಸ್ಸು ಸೇಡಿನ ಕಿಡಿಯಾಗಿ ಉರಿಯುತ್ತದೆ.
ಈಗ ಹಾಲಿ ನಡೆಯುತ್ತಿರುವ ಮತಾಂತರವನ್ನು ತಡೆಗಟ್ಟಲು 3 ಮಾರ್ಗಗಳಿವೆ.
1. ಮತಾಂತರ ನಿಷೇಧ ಮಸೂದೆಯನ್ನು ತಂದು ಬಲವಂತವಾಗಿ ಮತಾಂತರವನ್ನು ತಡೆಗಟ್ಟುವುದು. ಅಸ್ಸಾಂ ಗುಡ್ಡಗಾಡು ಜನ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರ ಹೊಂದುತ್ತಿರುವಾಗ ಹಿಂದೂ ಜಾತಿವಾದಿಗಳು ಜನತಾ ಪಕ್ಷದ ಆಡಳಿತ ಕಾಲದಲ್ಲಿ “ಮತಾಂತರ ನಿಷೇಧ ಮಸೂದೆಯನ್ನು ಲೋಕಸಭೆಯಲ್ಲಿ ತರುವ ಯತ್ನ ಮಾಡಿದರು. ಭಾರತದ ಉದ್ದಗಲಕ್ಕೂ ಇರುವ ಕ್ರಿಶ್ಚಿಯನ್ನರು ಸಭೆ, ಮೆರವಣಿಗೆಗಳ ಮೂಲಕ ಮಸೂದೆಯನ್ನು ಪ್ರತಿಭಟಿಸಿದರು. ಅದು ರಾಜ್ಯಾಂಗದ 25(1) ಮೂಲಭೂತ ಹಕ್ಕನ್ನು ಕಿತ್ತುಕೊಳ್ಳುತ್ತಿದೆಯಾಗಿ ಆ ಮಸೂದೆ ತರುವುದು ಕಷ್ಟವಾಯಿತು ಮತ್ತು ಆ ರೀತಿಯ ಮಸೂದೆ ಈಗಿರುವ ಸಮಸ್ಯೆಗೆ ಸೂಕ್ತ ಪರಿಹಾರವಲ್ಲ.
2. ಮತಾಂತರಕ್ಕೆ ಮೂಲಕಾರಣ ಸಾಮಾಜಿಕ ಅಸಮಾನತೆ – ಅವಮಾನ, ಸಾಮಾಜಿಕ ಅವಮಾನ ಜಾತೀಯತೆಯಿಂದ ಬಂದದ್ದು. ಆದ್ದರಿಂದ ಜಾತಿ ನಿರ್ಮೂಲನ ಮತಾಂತರಕ್ಕೆ
ಇರುವ ಏಕೈಕ ಮತ್ತು ಸಮರ್ಥ ಪರಿಹಾರ, ಪೇಜಾವರ, ಕಂಚಿ ಕಾಮಕೋಠಿ ಮಠಾಧಿಪತಿಗಳು ಆರ್.ಎಸ್.ಎಸ್. ಹಿಂದೂ ಮಹಾಸಭೆ, ಆತ್ಮ ಸಮಾಜ, ಈಗ ಮಾತನಾಡುತ್ತಿರುವ ರೀತಿಯಲ್ಲಿ ಜಾತಿನಾಶ ಮಾಡಲು ಸಾಧ್ಯವೆ ಇಲ್ಲ.
ಪೇಜಾವರ ಸ್ವಾಮಿಗಳು ಅಸ್ಪೃಶ್ಯರ ಕಾಲೋನಿಗೆ ಹೋದ ಮಾತ್ರಕ್ಕೆ ಬ್ರಾಹ್ಮಣ ಅಸ್ಪಶ್ಯರ ಮನೆಯಲ್ಲಿ ಭೋಜನ ಮಾಡಿದ ಮಾತ್ರಕ್ಕೆ ಜಾತೀಯತೆ ಹೋಗಲಾರದು. ಜಾತಿಬೇರುಗಳು ಇರುವುದು ಹಿಂದೂ ಧರ್ಮದಲ್ಲಿ, ಜನನ. ವೈವಾಹಿಕ, ಮತ್ತು ಮರಣ ಕಾಲಗಳಲ್ಲಿ ನಡೆಸುವ ಕ್ರಿಯೆಗಳಲ್ಲಿ. ಮನು ಧರ್ಮಶಾಸ್ತ್ರ, ಗೃಹ್ಯ ಸೂತ್ರ ಪುರಾಣಗಳಲ್ಲಿ ಇವುಗಳನ್ನು ಅಮೂಲಾಗ್ರವಾಗಿ ನಾಶಮಾಡುವುದಾದರೆ ಜಾತಿ ಹೋಗಲು ಸಾಧ್ಯ.
ಒಂದು ಕಡೆ ಮನು ಧರ್ಮಶಾಸ್ತ್ರದಲ್ಲಿ ಆಳವಾಗಿ ಕಾಲಿಟ್ಟುಕೊಂಡು ಮತ್ತೊಂದು ಕಡೆ ಜಾತಿ ನಾಶಮಾಡುತ್ತೇವೆ ಎನ್ನುವ ಬೂಸ ಸುಧಾರಣಾವಾದಿಗಳ ಬಗ್ಗೆ ದಲಿತರು ಮೈತುಂಬ ಕಣ್ಣಿಟ್ಟು ಎಚ್ಚರಿಕೆ ವಹಿಸಬೇಕು. ಹಿಂದೂ ಧರ್ಮ ನಾಶವ ಜಾತಿ ನಾಶವಾಗಿರುವಾಗ, ಹಿಂದೂ ಧರ್ಮ ಉಳಿಸಿಕೊಂಡು ಜಾತಿಯನ್ನು ಪ್ರತ್ಯೇಕವಾಗಿ ನಾಶಮಾಡುವುದು ಹೇಗೆ? ಹಿಂದೂ ಧರ್ಮ ಸಮಗ್ರ ಘಟಕವಾಗಿರುತ್ತಿದ್ದರೆ ಜಾತಿ ನಾಶ ಸುಲಭವಾಗಬಹುದಿತ್ತು.
ಬ್ರಾಹ್ಮಣ ಜಾತಿ ಬಿಡುತ್ತೇನೆ ಎಂದರೆ ಲಿಂಗಾಯಿತರು? ಗೌಡರು? ಕನಿಷ್ಠ ಅಗಸ? ಕುಂಬಾರ? ಇಂಥ ಭಿನ್ನ ಘಟಕಗಳು ಒಂದೊಂದೂ ಜಾತಿ ಕಲ್ಪನೆಯಿಂದ ಹೊರಬರಬೇಕಾದರೆ ಶತಮಾನಗಳೇ ಹಿಡಿದೀತು. ದಲಿತರಿಗೆ ಬೇಕಾಗಿರುವುದು ಜಾತಿ, ನೋವು ತುಳಿತಗಳಿಂದ ತಕ್ಷಣದ ಪರಿಹಾರ, ಅವರ ಬೇಡಿಕೆಯನ್ನು ಹಿಂದು ಧರ್ಮ ಪೂರೈಸಲಾರದು. ಅದು ಸಾಧ್ಯವು ಇಲ್ಲ. ಸಾಧ್ಯ ಎನ್ನುವುದಾದರೆ ಅದು ಅಷ್ಟೇ ವಿಳಂಬ.
ಆದ್ದರಿಂದ ಜೀತ, ಅವಮಾನ, ಹಿಂಸೆಗಳಿಂದ ಬಿಡುಗಡೆ ಹೊಂದಲು ದಲಿತರಿಗೆ ಉಳಿದ ಮಾರ್ಗ, ಮತಾಂತರವೊಂದೆ, ಆದರೆ ಯಾವ ಮತ? ಈ ಬಗ್ಗೆ ರಾಷ್ಟ್ರಮಟ್ಟದಲ್ಲಿ ದಲಿತರು ಚರ್ಚಿಸಬೇಕಾಗಿದೆ. ಸಮಗ್ರವಾಗಿ ತೀರ್ಮಾನ ತೆಗೆದುಕೊಳ್ಳಬೇಕಾಗಿದೆ. ಈ ಮಧ್ಯೆ ಯಾವುದೇ ಪೂರ್ವ ಚಿಂತನೆ ಇಲ್ಲದೆ ಹಸಿ ಹಸಿಯಾಗಿ ಮತಾಂತರಗೊಳ್ಳು ದಲಿತರ ಪಾಲಿಗೆ ವರವಾಗುವ ಬದಲು ಶಾಪವಾಗಿ ಪರಿಣಮಿಸಬಹುದು.
(ಪ್ರೊ. ಬಿ. ಕೃಷ್ಣಪ್ಪ : ಚಿಂತನೆಗಳು – ಬರಹಗಳು ಪುಸ್ತಕದಿಂದ ಈ ಲೇಖನ ಆಯ್ದು ಕೊಳ್ಳಲಾಗಿದೆ.)
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಗ್ರಾಮೀಣ ಅಭಿವೃದ್ಧಿ ಹೋರಾಟ ಸಮಿತಿಯಿಂದ ನವಿಲೇಹಾಳು ಗ್ರಾಮ ಪಂಚಾಯಿತಿಗೆ ಭೇಟಿ ; ಗ್ರಾಮಸಭೆ – ಗ್ರಾಮಾಭಿವೃದ್ಧಿಗೆ ಮನವಿ
ಸುದ್ದಿದಿನ,ಚನ್ನಗಿರಿ: ಗ್ರಾಮೀಣ ಅಭಿವೃದ್ಧಿ ಹೋರಾಟ ಸಮಿತಿಯು ಸೋಮೌಅರ ನವಿಲೇಹಾಳು ಗ್ರಾಮ ಪಂಚಾಯಿತಿ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (PDO) ಅವರನ್ನು ಭೇಟಿಯಾಗಿ ಗ್ರಾಮಸಭೆಯನ್ನು ಸಮರ್ಪಕವಾಗಿ ಹಾಗೂ ಪರಿಣಾಮಕಾರಿಯಾಗಿ ನಡೆಸುವಂತೆ ಮನವಿ ಪತ್ರ ಸಲ್ಲಿಸಲಾಯಿತು.
ಗ್ರಾಮಸಭೆ ಎಂಬುದು ಗ್ರಾಮಸ್ಥರ ಸಮಸ್ಯೆಗಳನ್ನು ನೇರವಾಗಿ ಚರ್ಚಿಸಿ, ಗ್ರಾಮದ ಅಭಿವೃದ್ಧಿಗೆ ಅಗತ್ಯವಿರುವ ಯೋಜನೆಗಳನ್ನು ರೂಪಿಸುವ ಪ್ರಮುಖ ವೇದಿಕೆಯಾಗಿರುವುದರಿಂದ, ಗ್ರಾಮಸಭೆಯ ಕುರಿತು ಸಾರ್ವಜನಿಕರಲ್ಲಿ ಹೆಚ್ಚಿನ ಜಾಗೃತಿ ಮೂಡಿಸಿ, ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಮಸ್ಥರು ಭಾಗವಹಿಸುವಂತೆ ಕ್ರಮ ಕೈಗೊಳ್ಳಬೇಕು ಎಂದು PDO ಅವರಿಗೆ ಮನವಿ ಮಾಡಲಾಯಿತು.
ಅದರಂತೆ ಗ್ರಾಮಸಭೆಯ ದಿನಾಂಕ, ಸಮಯ ಹಾಗೂ ಸ್ಥಳದ ಮಾಹಿತಿಯನ್ನು ಟಾಂಟಾಂ/ಧ್ವನಿವರ್ಧಕದ ಮೂಲಕ ಗ್ರಾಮದಲ್ಲಿ ವ್ಯಾಪಕವಾಗಿ ಪ್ರಚಾರ ಮಾಡುವುದರ ಜೊತೆಗೆ, ಸಾರ್ವಜನಿಕರಿಗೆ ಮುಂಚಿತವಾಗಿ ಮಾಹಿತಿ ನೀಡಿ, ಅರ್ಹ ಫಲಾನುಭವಿಗಳು ಹಾಗೂ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಮಸಭೆಯಲ್ಲಿ ಭಾಗವಹಿಸುವಂತೆ ಜಾಗೃತಿ ಮೂಡಿಸುವಂತೆ ತಿಳಿಸಲಾಯಿತು.
ಗ್ರಾಮದಲ್ಲಿಯೇ ಉದ್ಯೋಗ ಸೃಷ್ಟಿಗೆ ಒತ್ತು
ಇದೇ ಸಂದರ್ಭದಲ್ಲಿ ಮನರೇಗಾ (MGNREGA) ಯೋಜನೆಯಡಿ ಗ್ರಾಮದ ಅರ್ಹ ಕಾರ್ಮಿಕರಿಗೆ ಸ್ಥಳೀಯವಾಗಿಯೇ ಹೆಚ್ಚಿನ ಉದ್ಯೋಗಾವಕಾಶಗಳನ್ನು ಕಲ್ಪಿಸುವಂತೆ ಮನವಿ ಮಾಡಲಾಯಿತು.
ಗ್ರಾಮಸ್ಥರು ಉದ್ಯೋಗಕ್ಕಾಗಿ ಅನಿವಾರ್ಯವಾಗಿ ಗುಳೆ ಹೋಗುವ ಪರಿಸ್ಥಿತಿ ನಿರ್ಮಾಣವಾಗದಂತೆ, ಸರ್ಕಾರದ ಉದ್ಯೋಗ ಖಾತರಿ ಯೋಜನೆಯಡಿ ಲಭ್ಯವಿರುವ ಕೆಲಸಗಳನ್ನು ಸಮರ್ಪಕವಾಗಿ ಗುರುತಿಸಿ, ಅರ್ಹರಿಗೆ ನಿಯಮಾನುಸಾರ ಉದ್ಯೋಗ ಒದಗಿಸಬೇಕು ಎಂದು ತಿಳಿಸಲಾಯಿತು.
ಪ್ರಸ್ತುತ ಬತ್ತದ ನಾಟಿ ಕಾರ್ಯಕ್ಕೆ ಅಗತ್ಯವಿರುವ ನೀರಿನ ಸಮಸ್ಯೆಯಿಂದ ಕೃಷಿ ಚಟುವಟಿಕೆಗಳಿಗೆ ತೊಂದರೆಯಾಗುತ್ತಿರುವ ಹಿನ್ನೆಲೆಯಲ್ಲಿ, ಕೃಷಿ ಕೆಲಸಗಳು ಲಭ್ಯವಿಲ್ಲದ ಅವಧಿಯಲ್ಲಿ ಗ್ರಾಮಸ್ಥರಿಗೆ ಮನರೇಗಾ ಸೇರಿದಂತೆ ಇತರೆ ಸರ್ಕಾರಿ ಯೋಜನೆಗಳ ಮೂಲಕ ಉದ್ಯೋಗ ಒದಗಿಸಿ, ಗ್ರಾಮದಲ್ಲಿಯೇ ಆದಾಯದ ಅವಕಾಶಗಳನ್ನು ಸೃಷ್ಟಿಸುವುದು ಅಗತ್ಯವಾಗಿದೆ ಎಂದು ಮನವಿ ಮಾಡಲಾಯಿತು.
ಗ್ರಾಮದಲ್ಲಿಯೇ ಉದ್ಯೋಗ ದೊರೆತರೆ ಗ್ರಾಮಸ್ಥರ ಆರ್ಥಿಕ ಸ್ಥಿತಿ ಸುಧಾರಿಸುವುದರ ಜೊತೆಗೆ, ಗುಳೆ ಹೋಗುವುದನ್ನು ತಡೆಯಲು ಹಾಗೂ ಗ್ರಾಮದ ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿಗೆ ಸಹಕಾರಿಯಾಗಲಿದೆ ಎಂದು PDO ಅವರ ಗಮನಕ್ಕೆ ತರಲಾಯಿತು.
ಇತರೆ ಗ್ರಾಮಾಭಿವೃದ್ಧಿ ವಿಚಾರಗಳ ಚರ್ಚೆ
ಇದರ ಜೊತೆಗೆ ನವಿಲೇಹಾಳ ಗ್ರಾಮದ ವಿವಿಧ ಅಭಿವೃದ್ಧಿ ಸಮಸ್ಯೆಗಳು, ಸಾರ್ವಜನಿಕರಿಗೆ ಅಗತ್ಯವಿರುವ ಮೂಲಭೂತ ಸೌಲಭ್ಯಗಳು, ಉದ್ಯೋಗಾವಕಾಶಗಳು, ಕೃಷಿಗೆ ಸಂಬಂಧಿಸಿದ ಸಮಸ್ಯೆಗಳು ಹಾಗೂ ಸರ್ಕಾರದ ವಿವಿಧ ಯೋಜನೆಗಳ ಪರಿಣಾಮಕಾರಿ ಅನುಷ್ಠಾನದ ಕುರಿತು PDO ಅವರೊಂದಿಗೆ ಚರ್ಚಿಸಲಾಯಿತು.
ಗ್ರಾಮಸ್ಥರಿಗೆ ಸರ್ಕಾರದ ಯೋಜನೆಗಳ ಪ್ರಯೋಜನಗಳು ಸಮರ್ಪಕವಾಗಿ ತಲುಪುವಂತೆ ಪಾರದರ್ಶಕವಾಗಿ ಹಾಗೂ ನಿಯಮಾನುಸಾರ ಯೋಜನೆಗಳನ್ನು ಅನುಷ್ಠಾನಗೊಳಿಸಬೇಕು ಎಂದು ಮನವಿ ಮಾಡಲಾಯಿತು.
ಗ್ರಾಮಸಭೆಯಲ್ಲಿ ಸಾರ್ವಜನಿಕರ ಹೆಚ್ಚಿನ ಭಾಗವಹಿಸುವಿಕೆ, ಸ್ಥಳೀಯ ಉದ್ಯೋಗ ಸೃಷ್ಟಿ ಹಾಗೂ ಗ್ರಾಮಾಭಿವೃದ್ಧಿ ಯೋಜನೆಗಳ ಪರಿಣಾಮಕಾರಿ ಅನುಷ್ಠಾನದ ಮೂಲಕ ನವಿಲೇಹಾಳ ಗ್ರಾಮವನ್ನು ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಮತ್ತಷ್ಟು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಮನವಿ ಸಲ್ಲಿಸಲಾಯಿತು.
“ಗ್ರಾಮದ ಅಭಿವೃದ್ಧಿ ಕೇವಲ ಸರ್ಕಾರದ ಜವಾಬ್ದಾರಿಯಲ್ಲ; ಅಧಿಕಾರಿಗಳು, ಜನಪ್ರತಿನಿಧಿಗಳು ಮತ್ತು ಸಾರ್ವಜನಿಕರು ಒಗ್ಗೂಡಿ ಕಾರ್ಯನಿರ್ವಹಿಸಿದಾಗ ಮಾತ್ರ ಸಮಗ್ರ ಗ್ರಾಮಾಭಿವೃದ್ಧಿ ಸಾಧ್ಯ.”
ಗ್ರಾಮದ ಜನರ ಸಮಸ್ಯೆಗಳನ್ನು ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದು, ನವಿಲೇಹಾಳ ಗ್ರಾಮದ ಸಮಗ್ರ ಅಭಿವೃದ್ಧಿಗಾಗಿ ಗ್ರಾಮೀಣ ಅಭಿವೃದ್ಧಿ ಹೋರಾಟ ಸಮಿತಿ (ರಿ.) ನಿರಂತರವಾಗಿ ಜನಪರವಾಗಿ ಕಾರ್ಯನಿರ್ವಹಿಸಲಿದೆ ಎಂದು ತಿಳಿಸಲಾಯಿತು.
ಈ ಸಂದರ್ಭದಲ್ಲಿ ಗ್ರಾಮೀಣ ಅಭಿವೃದ್ಧಿ ಹೋರಾಟ ಸಮಿತಿ ದಾವಣಗೆರೆ ಜಿಲ್ಲಾಧ್ಯಕ್ಷರಾದ ಜಾಫರ್ ರವರು ಹಾಗೂ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂತರಂಗ
ಪ್ರಪ್ರಥಮ ಮಹಿಳಾ ಸಾಹಿತ್ಯ ಸಮ್ಮೇಳನ : ಸರ್ವ ಕ್ಷೇತ್ರದಲ್ಲಿಯೂ ರಾರಾಜಿಸುವ ಶಿಖರ ಶಿರೋಮಣಿಗಳು
~ಶ್ರೀಮತಿ ವೀಣಾ ಮಹಾಂತೇಶ್ ಬಿ ಎಂ ಲೇಖಕಿ ಆಪ್ತ ಸಮಾಲೋಚಕಿ. ದಾವಣಗೆರೆ
ಆಗಸ್ಟ್ ದಿನಾಂಕ 8 ಮತ್ತು 9ನೇ ತಾರೀಕು,ಸಾಹಿತ್ಯದ ಬೃಹತ್ ಹಡಗೊಂದು ಶ್ರೀಮಂತನಗರಿ ದಾವಣಗೆರೆ. ಜ್ಞಾನದ ಗೂಡು ಸಾಹಿತ್ಯ ಕಲಾರಸಿಕರ ಬೀಡು. ವಿವಿಧ ಖಾದ್ಯಗಳ ರಸದೌತಣದ ನಾಡು,ಸರಸ್ವತಿ ನೆಲೆಸಿದ ನಾಡು ದಾವಣಗೆರೆ.
ಎಲ್ಲ ಕ್ಷೇತ್ರದಲ್ಲೂ ಮುಂಚೂಣಿಯಲ್ಲಿರುವ ಬಹು ತಾಳ್ಮೆಯ ಕುಟುಂಬವನ್ನು ನಿರ್ವಹಿಸಿಕೊಂಡು ಸಂಸಾರದ ನೌಕೆಯನ್ನು ಸಾಗಿಸುತ್ತಾ ಅದರ ಜೊತೆಗೆ ತಮ್ಮ ಮನೋರಂಜನೆ ಸಾಹಿತ್ಯ ಸಮಾಜ ಜ್ಞಾನ ವಿಜ್ಞಾನಗಳ ಸಕಲ ಕಲಾವಿದ್ಯೆಗಳಲ್ಲಿ ತೊಡಗಿಸಿಕೊಂಡಿರುವ ನಮ್ಮೆಲ್ಲರ ಮಹಿಳೆಯರ ಪರವಾಗಿ ಈ ನಮ್ಮ ಕನ್ನಡ ಸಾಹಿತ್ಯ ಪರಿಷತ್ತು ಒಂದು ಅತ್ಯದ್ಭುತವಾದ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.
ಕನ್ನಡ ಸಾಹಿತ್ಯ ಪರಿಷತ್ ಶ್ರೀ ಬಿ ವಾಮದೇವಪ್ಪ ತೊಗಲೇರಿ ಅಧ್ಯಕ್ಷರ ಸಮ್ಮುಖದಲ್ಲಿ ಈ ಮಹಿಳಾ ಸಾಹಿತ್ಯ ಸಮ್ಮೇಳನ ನಡೆಯುತ್ತಿದ್ದು . ಸಮ್ಮೇಳನದ ಅಧ್ಯಕ್ಷರು ಮಹಾಪೋಷಕರು ಡಾಕ್ಟರ್ ಪ್ರಭಾ ಮಲ್ಲಿಕಾರ್ಜುನ್, ಹಾಗೆಯೇ ಉದ್ಘಾಟಕರಾಗಿ ಮಹಿಳಾ ಆಯೋಗದ ಡಾಕ್ಟರ್ ನಾಗಲಕ್ಷ್ಮಿ ಚೌದರಿ, ಪ್ರಧಾನ ಸಂಚಾಲಕರು ರಾಜ ಯೋಗಿನಿ ಬ್ರಹ್ಮಕುಮಾರಿ ನೀಲಾಜಿ ಅವರೆಲ್ಲರಿಗೂ ಸ್ವಾಗತವನ್ನು ಬಯಸುತ್ತಾ ,
ಸ್ವಾಗತ ಸಮಿತಿ, ಹಣಕಾಸು ಸಮಿತಿ ,ಸಾಹಿತ್ಯ ಸಮಿತಿ, ಆಹಾರ ಸಮಿತಿ ,ಸಾಂಸ್ಕೃತಿಕ ಸಮಿತಿ ,ವೇದಿಕೆ ಸಮಿತಿ, ಸ್ಮರಣ ಸಂಚಿಕೆ ಸಮಿತಿ, ಪ್ರಚಾರ ಸಮಿತಿ, ಶಿಸ್ತು ಸಮಿತಿ ಮೆರವಣಿಗೆ ಸಮಿತಿ,ಪುಸ್ತಕ ಮಳಿಗೆ ಸಮಿತಿ ,ಅತಿಥಿ ಸತ್ಕಾರ ಸಮಿತಿ, ಸ್ಪರ್ಧಾ ಸಮಿತಿ, ಎಲ್ಲದಕ್ಕೂ ಸಹಕಾರ ಕೊಟ್ಟಂತಹ ಶ್ರೀ ಸಮರ್ಥ್ ಶಾಮನೂರ್ ಮಲ್ಲಿಕಾರ್ಜುನ್ ಶಾಸಕರು ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರ, ಶ್ರೀ ಸೋಮೇಶ್ವರ ಸಮೂಹ ಸಂಸ್ಥೆಗಳು.
ಎಲ್ಲ ಕಾರ್ಯಕ್ರಮಗಳನ್ನು ಸುಸಜ್ಜಿತವಾಗಿ ನಡೆಸಿ ಕೊಡುತ್ತಿರುವ ಶ್ರೀಮತಿ ಸುಮತಿ ಜಯಪ್ಪ, ಶ್ರೀಮತಿ ಯಶಾ ದಿನೇಶ್ ,ಶ್ರೀಮತಿ ವೀಣಾ ಕೃಷ್ಣಮೂರ್ತಿ , ಶ್ರೀಮತಿ ಸತ್ಯಭಾಮ ಮಂಜುನಾಥ್, ಶ್ರೀಮತಿ ಮಲ್ಲಮ್ಮ ಎಂ ಎಸ್ ,ಶ್ರೀಮತಿ ನೀಲಗುಂದ ಜಯಮ್ಮ, ಶ್ರೀಮತಿ ಜಯಲಕ್ಷ್ಮಿ ಮಹೇಶ್, ಶ್ರೀಮತಿ ಪ್ರೇಮ ಸೋಮಶೇಖರ್ ಹೇಮ ಗಣೇಶ್ ಶೇಟ್, ಸುನಿತಾ ಪ್ರಕಾಶ್, ವರದಿಗಾರರಾದ ಭಾರತಿ ಎಚ್ ,ಹಾಗೆ ಎ ಬಿ ರುದ್ರಮ್ಮ, ಆಮಂತ್ರಣ ಪತ್ರಿಕೆ ಎಲ್ಲಾ ಗೆಳತಿಯರು ಇವರೊೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಕೊಡುತ್ತಿರುವ ಎಲ್ಲ ಪ್ರತಿಭೆಗಳಿಗೂ ಹಾಗೂ ಕವಿಗೋಷ್ಠಿ ಕವಿತೆಗಳನ್ನು ವಾಚಿಸುವವರೆಗೂ ಹಾಗೆಯೇ ಸಾಹಿತ್ಯ ರತ್ನ ಪ್ರಶಸ್ತಿ ಪ್ರಧಾನ, ಪಡೆಯುತ್ತಿರುವ ಎಲ್ಲ ಸಹೋದರಿಯರಿಗೂ ಅಭಿನಂದನೆಗಳು ಹಾಗೆ ಎಲ್ಲ ಮಹಿಳಾ ಮಣಿಗಳ ಆಗಮನಕ್ಕೆ ಶುಭವನ್ನು ಕೋರುತ್ತಿರುವ ಶ್ರೀಮತಿ ವೀಣಾ ಮಹಂತೇಶ್ ಬಿ ಎಮ್ ದಾವಣಗೆರೆ.
ಶ್ರೀಮತಿ ವೀಣಾ ಮಹಾಂತೇಶ್ ಬಿ ಎಂ ಲೇಖಕಿ ಆಪ್ತ ಸಮಾಲೋಚಕಿ. ದಾವಣಗೆರೆ.

ದಿನದ ಸುದ್ದಿ
ನಾನೇ ಮುಖ್ಯಮಂತ್ರಿ ಇದ್ದಂತೆ : ಶಾಸಕ ಶಿವಗಂಗಾ ಬಸವರಾಜ್
ಸುದ್ದಿದಿನ,ದಾವಣಗೆರೆ: “ತಮ್ಮ ಕ್ಷೇತ್ರದ ಅಭಿವೃದ್ಧಿ ವಿಚಾರದಲ್ಲಿ ತಾವು ಮುಖ್ಯಮಂತ್ರಿಯಂತೆ ಜವಾಬ್ದಾರಿಯಿಂದ ಕೆಲಸ ಮಾಡುತ್ತಿದ್ದೇನೆ” ಎಂದು ಶಾಸಕ ಶಿವಗಂಗಾ ಬಸವರಾಜ್ ಹೇಳಿದರು.
ದಾವಣಗೆರೆಯಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಕಾಂಗ್ರೆಸ್ ಶಾಸಕ ಶಿವಗಂಗಾ ಬಸವರಾಜ್ ಅವರು, ನಾನು ಡಿ.ಕೆ ಶಿವಕುಮಾರ್ ಅವರ ಮನೆಮಗ, ಶಿವನ ಮುಂದೆ ಇರುವ ಬಸವ ನಾನು. ನಾನೇ ಮುಖ್ಯಮಂತ್ರಿ ಇದ್ದಂತೆ, ಮನೆ ಮಗನಿಗೆ ಯಾವಾಗಲೂ ಅವರ ಆಶೀರ್ವಾದ ಇದ್ದೇ ಇರುತ್ತದೆ ಎಂದಿದ್ದಾರೆ.
ಕ್ಷೇತ್ರದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಪರಿಶೀಲನೆ ಹಾಗೂ ಸಾರ್ವಜನಿಕರ ಅಹವಾಲು ಸ್ವೀಕರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನರು ತಮ್ಮ ಮೇಲೆ ಇಟ್ಟಿರುವ ವಿಶ್ವಾಸಕ್ಕೆ ತಕ್ಕಂತೆ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಆದ್ಯತೆ ನೀಡಲಾಗುತ್ತಿದೆ ಎಂದು ತಿಳಿಸಿದರು.
“ನಾನು ಮುಖ್ಯಮಂತ್ರಿ ಅಲ್ಲ. ಆದರೆ ನನ್ನ ಕ್ಷೇತ್ರದ ಅಭಿವೃದ್ಧಿ ವಿಚಾರ ಬಂದಾಗ ಮುಖ್ಯಮಂತ್ರಿಯಂತೆ ಜವಾಬ್ದಾರಿ ಹೊತ್ತು ಕೆಲಸ ಮಾಡುತ್ತಿದ್ದೇನೆ. ಜನರ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸುವುದು ನನ್ನ ಮೊದಲ ಕರ್ತವ್ಯವಾಗಿದೆ. ರಸ್ತೆ, ಕುಡಿಯುವ ನೀರು, ಶಿಕ್ಷಣ, ಆರೋಗ್ಯ ಹಾಗೂ ಮೂಲಸೌಕರ್ಯಗಳ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗಿದೆ,” ಎಂದು ಅವರು ಹೇಳಿದರು.
ಕ್ಷೇತ್ರದಲ್ಲಿ ಹಲವು ಅಭಿವೃದ್ಧಿ ಕಾಮಗಾರಿಗಳು ಈಗಾಗಲೇ ಪೂರ್ಣಗೊಂಡಿದ್ದು, ಇನ್ನೂ ಅನೇಕ ಯೋಜನೆಗಳು ಪ್ರಗತಿಯಲ್ಲಿವೆ ಎಂದು ತಿಳಿಸಿದ ಅವರು, ಸರ್ಕಾರದ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ನಿರಂತರ ಸಮನ್ವಯ ಸಾಧಿಸಿ ಜನರ ಸಮಸ್ಯೆಗಳಿಗೆ ಪರಿಹಾರ ಒದಗಿಸಲಾಗುತ್ತಿದೆ ಎಂದರು.
“ಜನಪ್ರತಿನಿಧಿಯಾಗಿ ಚುನಾಯಿತರಾದ ಬಳಿಕ ಕ್ಷೇತ್ರದ ಪ್ರತಿಯೊಂದು ಹಳ್ಳಿಗೂ ಭೇಟಿ ನೀಡಿ ಅಲ್ಲಿನ ಜನರ ಸಮಸ್ಯೆಗಳನ್ನು ಆಲಿಸಿದ್ದೇನೆ. ಗ್ರಾಮಗಳ ಮೂಲಭೂತ ಸೌಕರ್ಯಗಳನ್ನು ಅಭಿವೃದ್ಧಿಪಡಿಸಲು ಅಗತ್ಯ ಅನುದಾನ ತರುವ ಪ್ರಯತ್ನ ಮಾಡಲಾಗಿದೆ. ಕುಡಿಯುವ ನೀರಿನ ಯೋಜನೆಗಳು, ರಸ್ತೆ ಅಭಿವೃದ್ಧಿ, ಶಾಲೆಗಳ ಮೂಲಸೌಕರ್ಯ ಸುಧಾರಣೆ ಸೇರಿದಂತೆ ಹಲವು ಕಾಮಗಾರಿಗಳಿಗೆ ವೇಗ ನೀಡಲಾಗಿದೆ,” ಎಂದು ಹೇಳಿದರು.
ಕ್ಷೇತ್ರದ ಯುವಕರಿಗೆ ಉದ್ಯೋಗಾವಕಾಶ ಕಲ್ಪಿಸುವ ನಿಟ್ಟಿನಲ್ಲಿ ಕೈಗಾರಿಕೆಗಳನ್ನು ಆಕರ್ಷಿಸುವ ಪ್ರಯತ್ನ ನಡೆಯುತ್ತಿದೆ. ಕೃಷಿ ಕ್ಷೇತ್ರಕ್ಕೆ ಅಗತ್ಯವಾದ ನೀರಾವರಿ ಹಾಗೂ ರೈತರಿಗೆ ಅನುಕೂಲಕರ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ಹೇಳಿದರು.
ಸರ್ಕಾರದ ಅಭಿವೃದ್ಧಿ ಯೋಜನೆಗಳು ಅರ್ಹ ಫಲಾನುಭವಿಗಳಿಗೆ ತಲುಪುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಯಾವುದೇ ಅರ್ಹ ವ್ಯಕ್ತಿ ಯೋಜನೆಯಿಂದ ವಂಚಿತರಾಗಬಾರದು ಎಂಬುದು ತಮ್ಮ ಉದ್ದೇಶವಾಗಿದೆ ಎಂದು ಶಾಸಕರು ತಿಳಿಸಿದರು.
ವಿರೋಧ ಪಕ್ಷಗಳ ಟೀಕೆ ಕುರಿತು ಪ್ರತಿಕ್ರಿಯಿಸಿದ ಅವರು, “ಟೀಕೆಗಳು ಪ್ರಜಾಪ್ರಭುತ್ವದ ಭಾಗ. ಆದರೆ ಅಭಿವೃದ್ಧಿಯೇ ನಮ್ಮ ಉತ್ತರ. ಜನರ ಸಮಸ್ಯೆಗಳಿಗೆ ಪರಿಹಾರ ನೀಡುವುದು ಹಾಗೂ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ರೂಪಿಸುವುದೇ ನಮ್ಮ ಗುರಿಯಾಗಿದೆ,” ಎಂದರು.
ಕ್ಷೇತ್ರದ ಜನರು ಅಭಿವೃದ್ಧಿಗೆ ಸಹಕಾರ ನೀಡುತ್ತಿರುವುದಕ್ಕೆ ಕೃತಜ್ಞತೆ ಸಲ್ಲಿಸಿದ ಅವರು, ಸಾರ್ವಜನಿಕರು ಯಾವುದೇ ಸಮಸ್ಯೆಗಳಿದ್ದರೂ ನೇರವಾಗಿ ಸಂಪರ್ಕಿಸಬಹುದು. ಜನಸೇವೆಗಾಗಿ ತಮ್ಮ ಕಚೇರಿ ಸದಾ ತೆರೆದಿರುತ್ತದೆ ಎಂದು ಹೇಳಿದರು.
ಮುಂದಿನ ದಿನಗಳಲ್ಲಿ ಮತ್ತಷ್ಟು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುವುದು. ಶಿಕ್ಷಣ, ಆರೋಗ್ಯ, ಕುಡಿಯುವ ನೀರು, ರಸ್ತೆ, ಗ್ರಾಮೀಣ ಅಭಿವೃದ್ಧಿ ಸೇರಿದಂತೆ ವಿವಿಧ ಕ್ಷೇತ್ರಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಪಕ್ಷದ ಮುಖಂಡರು, ಸ್ಥಳೀಯ ಜನಪ್ರತಿನಿಧಿಗಳು, ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243


