ನೆಲದನಿ
ಲಕ್ಷ್ಮಣ್ ಜೀ ; ನಮ್ಮ ನಡುವಿನ ಬುದ್ಧ..!
![](https://suddidina.com/wp-content/uploads/2022/05/lakshman_suddidina.jpg)
- ಪರಶುರಾಮ್. ಎ
ಕವಿ ಲಕ್ಷ್ಮಣ್ ಜೀ ನಮಗೆಲ್ಲ ಅಣ್ಣನಂತೆ, ಗುರುವಿನಂತೆ ಇದ್ದರು. ಅವರು ಎಂದಿಗೂ ನಾನೊಬ್ಬ ಪ್ರತಿಷ್ಟಿತ ಕವಿ, ಹೋರಾಟಗಾರ, ಜಾತಿ ವಿನಾಶ ವೇದಿಕೆಯ ಅಧ್ಯಕ್ಷನೆಂಬ ಅಹಂ ಅವರಿಗೆ ಕಿಂಚಿತ್ತು ಇರಲಿಲ್ಲ. ಕೇವಲ ಸಾಮಾನ್ಯನೊಳಗೊಬ್ಬ ಸಾಮಾನ್ಯನಂತೆ ಬದುಕಿದವರು.
ನಮಗೆಲ್ಲ ಆದರ್ಶವಾಗಿ ಉಳಿದರು. ಯಾವುದಾದರೂ ಸಾಮಾಜಿಕ ಹೋರಾಟ ಶಿಬಿರಗಳಿದ್ದಲ್ಲಿ ಮುಂಚೂಣಿಯಲ್ಲಿ ಪಾಲ್ಗೊಳ್ಳುತ್ತಿದ್ದರು. ನಮಗೂ ಅಂತಹ ಕಾರ್ಯಕ್ರಮಗಳಿಗೆ ಬರಲು ತಿಳಿಸಿ, ಅಲ್ಲಿನ ವೇದಿಕೆಗಳಲ್ಲಿ ಮಾತನಾಡುವಂತೆ ಮೈಕ್ ನೀಡಿ ಅವಕಾಶ ಒದಗಿಸುತ್ತಿದ್ದರು.
ಇದಕ್ಕೆ ಉದಾಹರಣೆ ಆದಿಜಾಂಬವ ಸಂಘದಿಂದ ಬೆಂಗಳೂರಿನ ಮೈಸೂರ್ ಬ್ಯಾಂಕ್ ವೃತ್ತದಲ್ಲಿ ಪತ್ರಕರ್ತೆ ವಿಚಾರವಾದಿ ಗೌರಿ ಲಂಕೇಶ್ ಹತ್ಯೆ ಖಂಡಿಸಿ ಹೋರಾಟ ಮಾಡುವಾಗ ಹಿಂದಿನ ಸಾಲಿನಲ್ಲಿದ್ದ ನಾನು ಮತ್ತು ಬಸವಣ್ಣ (ಬಸವರಾಜು)ನಿಗೆ ಕರೆದು ಮಾತನಾಡುವಂತೆ ಹೇಳಿದರು, ನಾವಿಬ್ಬರೂ ಅಂದು ಧೈರ್ಯವಾಗಿ ನಿಸ್ಸಂಕೋಚದಿಂದ ರಾಜ್ಯ ಸರ್ಕಾರದ ಈ ಕೇಸಿನ ನಿರ್ಲಕ್ಷ ಮತ್ತು ಪೋಲಿಸರು ನ್ಯಾಯಯುತವಾಗಿ ವಿಚಾರಣೆ ಮಾಡುವಂತೆ ಒತ್ತಾಯಿಸಿ ಸುಮಾರು ಇಪ್ಪತ್ತು ನಿಮಿಷಗಳ ಕಾಲ ಮಾತನಾಡಿದೆವು.
ಮೈಕ್ ಹಿಂದಿರುಗಿಸುತ್ತಿದ್ದಂತೆ ಲಕ್ಷ್ಮಣ್ ಜೀ ನನ್ನ ಬಳಿ ಬಂದು ‘ಲೋ ಅಣ್ಣಾ ಚೆನ್ನಾಗೆ ಮಾತ್ನಾಡ್ತ್ಯಲ್ಲೋ, ವಿದ್ಯಾರ್ಥಿಗಳು ಮಾತನಾಡಬೇಕು ವೇದಿಕೆ ಸಿಕ್ಕಾಗ ಮಾತಾಡೋ’ ಅಂದ್ರು. ಆಯ್ತ್ ಸಾರ್ ಅಂದೆ, ‘ಇನ್ನು ಮುಂದೆ ನನ್ನ ಜೊತೆಯಲ್ಲಿ ಹೋರಾಟಕ್ಕೆ ಎಲ್ಲಿಯೇ ಬಂದರು ನಾನು ಮಾತನಾಡಿದ ಮೇಲೆ ನೀನು ಮಾತನಾಡಬೇಕು ತಿಳೀತಾ? ತಪ್ಪಿಸ್ಕಂಡ್ರೆ ನಿನ್ನ ನಾನು ಉಗಿತಿನಿ ನೋಡ್ಕಾ!!’ ಎಂದು ಷಹಬ್ಬಾಷ್ ಹೇಳಿ ಬೆನ್ನು ತಟ್ಟಿದ್ದರು. ಇದು ನನ್ನ ಹೋರಾಟದ ಮೊದಲ ಮಾತಿಗೆ ಲಕ್ಷ್ಮಣ್ ಜೀ ಅಭಿಮಾನದ ಮತ್ತು ಪ್ರೀತಿಯನ್ನು ಸೂಚಿಸಿದ ಪರಿ.
ಬಸವಣ್ಣನ ಮನೆಯ ಮೇಲೆ ಆಗಾಗ ಭಾನುವಾರವೋ ಅಥವಾ ಎಂದಾದರೂ ಒಂದು ದಿನ ಸ್ನೇಹಿತರೆಲ್ಲ ಸೇರಿ ಮಾಂಸದಡುಗೆಯ ಮಾಡಿ ಸ್ನೇಹಕೂಟ ಏರ್ಪಡಿಸುವುದು ನಮ್ಮ ಬಳಗದಲ್ಲಿ ಆಗಾಗ ಸಾಮಾನ್ಯ. ಒಮ್ಮೆ ಇಂತಹ ಮಾಂಸದಡುಗೆಯ ಸ್ನೇಹಕೂಟಕ್ಕೆ ಲಕ್ಷ್ಮಣ್ ಜೀ ವಿಶೇಷ ಆಹ್ವಾನಿತರು. ಅಂದಿನ ಸ್ಪೆಷಲ್ ಫೋರ್ಕ್ ಮತ್ತು ಭೀಫ್ ಮಾಂಸದಡುಗೆ. ಬೀಫ್ನ ಮನೆಯ ಮಾಂಸದಡುಗೆ ಎಂದರೆ ಲಕ್ಷ್ಮಣ್ರಿಗೆ ಅಷ್ಟೇ ಇಷ್ಟ ಕೂಡಾ.
ಆ ಸ್ನೇಹಕೂಟಕ್ಕೆ ಅಡುಗೆ ತಯಾರಾಗುವ ವೇಳೆಗೆ ಬಂದ ಇವರು ಸ್ನೇಹಿತರ ಬಳಗವನ್ನು ಕಂಡು ತುಂಬ ಸಂತಸಗೊಂಡು ಇಂತಹ ಕ್ಷಣಗಳನ್ನು ನೀವು ನನಗೆ ಮೊದಲಿನಿಂದಲೂ ನೀಡಬೇಕಿತ್ತು ಕಣೊ ಲೋ ಅಣ್ಣ ಎಂದರು. ಭೀಫ್ ಅಡುಗೆ, ಸ್ನೇಹಿತರ ಬಳಗ, ನಗುಕೇಕೆ, ವಿಚಾರ ವಿನಿಮಯಕ್ಕೆ ಪ್ರಾಶ್ಯಸ್ತ ಸ್ಥಳ, ನೆಮ್ಮದಿ ನೀಡುವ ತಾಣವಾಗಿ ಕಂಡ ಸಮಯವನ್ನು ಲಕ್ಷ್ಮಣ್ ಸಾರ್ ಅರೆಕಾಲ ಗದ್ಗದಿತರಾಗಿದ್ದರು.
ಅಡುಗೆ ಇನ್ನೇನು ಮುಗಿಯುತ್ತಿದ್ದಂತೆ ಜೇಬಿನಿಂದ ಪುಟ್ಟ ಬಾಟಲ್ ತೆಗೆದು ಅಣ್ಣಾ ಒಂದು ಗ್ಲಾಸ್ ಒಂದು ತಟ್ಟೆಗೆ ಸಾರು ಮಾಂಸದ ಪೀಸ್ ಒಂಚೂರು ಹಾಕ್ಕೊಂಡು ನೀರು ತಗೊಂಡ್ ಬಾರಣ್ಣಾ ಅಂದರು. ಅಷ್ಟನ್ನೂ ತಂದು ಕೊಟ್ಟೆ ಹೆಬ್ಬೆರಳಿನ ಗಾತ್ರದ ಆ ಪುಟ್ಟ ಬಾಟಲಿನಿಂದ ಅರ್ಧ ಗ್ಲಾಸಿಗೆ ಉಯ್ದು, ಇನ್ನರ್ಧ ಗ್ಲಾಸಿಗೆ ಕೊಂಚ ನೀರು ಬೆರೆಸಿ ಬಾಟಲಿನಲ್ಲಿ ಉಳಿದ ಅರ್ಧ ಯಾರಿಗಾದರು ಕೊಟ್ಟು ಬಿಡಿ ಎಂದು ಹೇಳುತ್ತಾ, ಮಾಂಸದ ತುಂಡು ಕೈಯಲ್ಲಿ ಹಿಡಿದು ಒಂದೊಂದೆ ಗುಟುಕು ಡ್ರಿಂಕ್ಸ್ ಹೀರುತ್ತಾ ಮಾಂಸ ನಾಲಿಗೆಗೆ ಸೋಕಿಸಿ ಚಪ್ಪರಿಸಿ ತಿನ್ನುತ್ತಾ, ಅಡುಗೆಗೆ ಒಳ್ಳೆ ರುಚಿಯಿದೆ, ಬಹಳ ಚೆನ್ನಾಗಿದೆ ಲೋ ಅಣ್ಣಂದಿರ ಅಡುಗೆಯೆಂದು ಅದನ್ನು ಖಾಲಿಮಾಡಿದರು.
ಅವರಿಗೆ ಒಂದೆರೆಡು ಬಾರಿ ಮಾಂಸ ಕೊಡಲು ನಾನು ಬರಿಗಾಲಲ್ಲಿ ಓಡಾಡುತ್ತಿದ್ದನ್ನು ಗಮನಿಸಿ ಬಾ ಇಲ್ಲಿ, ಬರಿಗಾಲಲ್ಲಿ ಓಡಾಡೋದು ಆರೋಗ್ಯಕ್ಕೆ ತುಂಬ ಒಳ್ಳೆದು ದಿನಕ್ಕೆ ಸ್ವಲ್ಪ ಸಮಯವಾದರೂ ಬರಿಗಾಲ್ಲಿ ಓಡಾಡು, ನಾನು ದ,ಕೊರಿಯಾ ಪ್ರವಾಸಕ್ಕೆ ಹೋಗಿದ್ದಾಗ ಅಲ್ಲಿಯ ಜನ ಇಂತಹ ಅಭ್ಯಾಸ ಇಟ್ಟುಕೊಂಡಿದ್ದಾರೆ ಎಂದರು. ನಾನು ಅದಕ್ಕೆ ಉತ್ತರವೆಂಬಂತೆ ಅಣ್ಣಾ ನಮಗೆ ಅಭ್ಯಾಸ ಯಾಕೆ ಬೇಕು, ನಮಗೆಲ್ಲಾ ಚಿಕ್ಕ ವಯಸ್ಸಿನಲ್ಲಿ ಚಪ್ಪಲಿಯೇ ಇಲ್ಲದಂತೆ ಹಾಗೆ ಓಡಾಡಿಕೊಂಡಿದ್ದೇವಲ್ಲಾ ಇದಕ್ಕೆ ಅಭ್ಯಾಸವೇತಕೆ ಅಂದೆ.
ಅದಕ್ಕವರು ನಿಜ!! ನಿಜ!! ಅಣ್ಣಾ ಈ ಮಾತು! ನನ್ನ ಜೀವನಕ್ಕು ಈ ಮಾತು ಹೊಂದುವಂತದ್ದೇ ಎಂದು ಮನದೊಳಗೆ ಮಂದಸ್ಮಿತ ನಕ್ಕು ಬೀರಿ ಬಾಲ್ಯದಲ್ಲಿ ಚಪ್ಪಲಿಯಿಲ್ಲದೆ ಬದುಕಿದ ಸವಿಯಾದ ಗಾಯವೋ ದಿನಗಳೋ ಏನೋ ನೆನಸಿಕೊಂಡರು. ಕೊಂಚ ಸಮಯ ಕಳೆದು ನಾನು ಹೊರಡ್ತಿನಿ, ಹೋಗಿ ರೆಸ್ಟ್ ಮಾಡ್ತಿನಿ ಅಂದರು. ನಾನೇ ಅವರನ್ನು ಮನೆಯವರೆಗೂ ಬೈಕಿನಲ್ಲಿ ಡ್ರಾಪ್ ಮಾಡಿ ಬೀಳ್ಕೊಟ್ಟೆ. ಹಿಂದಿರುಗಿ ಬಂದು ಲೋ ಅಣ್ಣ ಇನ್ನೊಮ್ಮೆ ಅಂತಹ ಮಾಂಸದಡುಗೆ ಊಟಕ್ಕೆ ನನಗೆ ಮೊದಲೇ ತಿಳಿಸ್ರೋ ನಾನು ಬಂದೆ ಬರ್ತೀನಿ ಎಂದಿದ್ದರು.
ಅವರಿಗೆ ಆ ಒಂದು ಸ್ನೇಹಕೂಟದಲ್ಲಿ ಕಳೆದ ಸಂದರ್ಭ ಸಮಯವೆಲ್ಲಾ ಎಷ್ಟು ಆಪ್ತತೆಯನ್ನು ಬಯಸಿತ್ತು ಎಂದು ಅವರ ಈ ಮಾತುಗಳಲ್ಲಿ ವ್ಯಕ್ತವಾಗಿತ್ತು. ಅವರ ಮನಸ್ಸು ಸದಾ ಜಾಗೃತವಾಗಿ ನಮ್ಮ ಸ್ನೇಹಕೂಟವನ್ನು ಬಯಸಿದ್ದದ್ದನ್ನು ಕೇಳುತ್ತಿತ್ತು. ಇಂದು ನಮ್ಮ ಅವರ ಒಡನಾಟವೆಲ್ಲಾ ಸ್ಮøತಿಪಟಲದಲ್ಲಿ ಅಚ್ಚಾಗಿ ಆಗಾಗ ಅವರ ನೆನಪುಗಳು ಕಣ್ಣ ಮುಂದೆ ಬಂದು ತೇವಗೊಳಿಸುತ್ತದೆ.
ಅದ್ಯಾವುದೊ ಆತ್ಮೀಯತೆ ಲಕ್ಷ್ಮಣ್ ಜೀಗೆ ನನಗೆ ಹೆಚ್ಚಿತ್ತು, ಬಹುಶಃ ವಿಧ್ಯಾರ್ಥಿಯಂತಲೋ ಸಾಹಿತ್ಯದ ಓದುಗನಂತಲೋ ಎಂಬುದು ಸಹ ತಿಳಿಯದು. ಲೋ ಅಣ್ಣ ಸ್ಟೂಡೆಂಟ್ಗಳು ಅಂಬೇಡ್ಕರರ ಬಗ್ಗೆ ಓದಿ ತಿಳಿದು ಬರಿಬೇಕು. ನಿನಗೆ ಏನ್ ಅನ್ಸುತ್ತೊ ಅದ ಬರಿ ಅದ್ನಾ ನಾನೇ ತಿದ್ದಿ ನಂಗೊತ್ತಿರೊ ಯಾವ್ದಾದ್ರೂ ಪತ್ರಿಕೆಗೆ ನಂಗೊತ್ತಿರೋ ಹುಡ್ಗ ಬರ್ದಿರೋದು ಅಂತ ಹೇಳಿ ಹಾಕಿಸ್ತೀನಿ, ನೀನ್ ಬರಿಯೋ ಅಣ್ಣ ಅನ್ತಿದ್ರು.
ಅವರು ಲೋ ಅಣ್ಣ ಎಂದು ಸಂಬೋದಿಸುತ್ತಿದ್ದೆ ಹೆಚ್ಚು ಪ್ರಶ್ನೆಯಂತಿತ್ತು!. ಲೋ ಬಳಸೋದು ಯಾರಿಗೆ? ಚಿಕ್ಕವರಿಗೆ. ಅಣ್ಣ ಅನ್ನೋದು ಯಾರಿಗೆ ಬಳಸೋದು? ದೊಡ್ಡವರಿಗೆ. ಆದರೆ ಲಕ್ಷ್ಮಣ್ ಜೀ ಕಣ್ಣಲ್ಲಿ ಎಲ್ಲರೂ ಸಮಾನರಾಗಿ ಕಂಡದ್ದರಿಂದಲೇ ‘ಲೋ ಅಣ್ಣ’ ಎನ್ನುತ್ತಿದ್ದರೇನೋ? ಲಕ್ಷ್ಮಣ್ ಜೀ ಮಾತಿನಂತೆ ಒಂದು ಲೇಖನ ಬರೆದೆ, ಅದು ಸ್ಪರ್ಧಾ ಪರೀಕ್ಷೆಯಲ್ಲಿ ಓದಿಗೆ ತೊಡಗಿ ವಿಧ್ಯಾರ್ಥೀಗಳ ಮನಸ್ಥಿತಿ ತೊಳಲಾಟದ ಕುರಿತು.
ಅದು ಚಳುವಳಿ ಚಿಂತನೆ ಎಂಬ ಮಾಸ ಪತ್ರಿಕೆಯಲ್ಲಿ ಪ್ರಕಟವಾಗಿತ್ತು. ಅದನ್ನು ಲಕ್ಷ್ಮಣ್ ಜೀಗೆ ತೋರಿಸುವ ಮುನ್ನವೇ ಅವರು ನಮ್ಮನ್ನು ಬಿಟ್ಟು ಅಗಲಿದರು. ನನಗೆ ಅವರಿಂದ ಲೇಖನದ ಅಭಿಪ್ರಾಯವನ್ನು ಕೇಳುವ ಭಾಗ್ಯವೇ ಇಲ್ಲವಾಗಿತ್ತು. ತಾಯಿ ಚೊಚ್ಚಲ ಮಗುವಿಗೆ ಜನ್ಮವಿತ್ತು, ಮಗುವಿನ ಮುಖ ನೋಡದೆ, ಮುದ್ದಿಸಿ ಆನಂದಿಸದೆ ಮಗುವನ್ನು ಬಿಟ್ಟು ಅವಳು ಹೋದಂತೆ ನನ್ನ ಪಾಲಿಗೆ ಆಗಿದ್ದು. ಮಗುವಿನ ಮುಖ ನೋಡದೆ ಅನಾಥವಾದಂತೆ ಮಾಡಿ ಹೋದ ಮಗುವಿನಂತೆ ಸದಾ ನನ್ನೆದೆಯಲ್ಲಿ ಅನಾಥ ಪ್ರಜ್ಞೆ ಕಾಡುವಂತೆ ಅವರ ಸಾವು ನನ್ನನ್ನು ದಿಗ್ಬ್ರಮೆಗೊಳಿಸಿತು ಈ ನೋವು ಶಾಶ್ವತವಾಗಿ ಉಳಿಯಿತು.
ಲಕ್ಷ್ಮಣ್ ಜೀ ಬಗ್ಗೆ ಅವರ ಒಡನಾಟದಲ್ಲಿದ್ದ ಅಷ್ಟು ದಿನಗಳ ನೆನಪುಗಳಲ್ಲಿ ಹಲವು ಅಲೆ ಅಲೆಯಾಗಿ ಮೇಲೆದ್ದು ಬರುತ್ತದೆ. ನೋಟು ಅಮಾನ್ಯೀಕರಣವಾದ ಕಾಲ ಜ್ಞಾನಮೂರ್ತಿ ಲಾಯರ್ ಬಾಲನ್ ಸಾರ್ ಇತರೆ ಒಡನಾಡಿಗಳೆಲ್ಲಾ ಸೇರಿ ಪ್ರಗತಿಪರ ವೇದಿಕೆಯಿಂದ ಆರ್ಬಿಐ ಮುತ್ತಿಗೆ ಹಾಕಬೇಕು ನೋಟು ಅಮಾನ್ಯೀಕರಣವನ್ನು ಪ್ರತಿಭಟಿಸಿ ಹೋರಾಟ ಮಾಡಬೇಕೆಂದು ನಿರ್ಧರಿಸಿದ್ದರು, ಇದರಲ್ಲಿ ಕವಿ ಲಕ್ಷ್ಮಣ್ ಜೀಯು ಕೂಡಾ ಇದ್ದರು.
ಹೋರಾಟದ ದಿನ ಮುತ್ತಿಗೆ ಹಾಕಬೇಕಾದಂತಹ ಸಂಧರ್ಭದಲ್ಲಿ ಎಲ್ಲರೂ ಆರ್ಭಟಿಸಿ ಧಿಕ್ಕಾರ ಕೂಗಿ ಪ್ರಗತಿಪರ ವೇದಿಕೆಯಿಂದ ಆರ್ಬಿಐ ಮುತ್ತಿಗೆಗೆ ಮುನ್ನುಗ್ಗಿದ್ದೆವು. ಪೋಲೀಸರು ಪ್ರತಿಭಟನಾಕಾರರನ್ನು ವಶಕ್ಕೆ ಪಡೆದು ಪೋಲಿಸ್ ವಾಹನಕ್ಕೆ ಬಲವಂತವಾಗಿ ತುಂಬುತ್ತಿದ್ದರು. ಈ ನಡುವೆ ಲಕ್ಷ್ಮಣ್ ಜೀ ಹಾಗೂ ಇನ್ನಿತರೆ ಹಿರಿಯ ಜೀವಗಳಿಗೆ ಎಂತಾದರೂ ಹಾನಿಯಾದರೆ ಎಂಬ ಭಯದಲ್ಲಿಯೆ ನಾನು ಜ್ಞಾನಮೂರ್ತಿ ‘ಲಕ್ಷ್ಮಣ್ ಜೀ ಲಕ್ಷ್ಮಣ್ ಜೀ’ ಎಂದು ಕೂಗುತ್ತಿದ್ದೆವು.
ಪೋಲಿಸರು ತಮ್ಮ ಹಿಡಿತವನ್ನು ಭಿಗಿಗೊಳಿಸಿ ವಾಹನಕ್ಕೆ ತುಂಬಿಸಿಯೇ ಬಿಟ್ಟರು. ನಮ್ಮನ್ನು ಒಟ್ಟು 2 ತಂಡಗಳಾಗಿ ವಿಂಗಡಿಸಿ 2 ವಾಹನಗಳಿಗೆ ಪ್ರತಿಭಟನಾಕಾರರನ್ನು ಅರೆಸ್ಟ್ ಮಾಡಿದರು. ನಾವಿದ್ದ ವಾಹನದ ಪ್ರತಿಭಟನಾಕಾರರಲ್ಲಿ ಲಕ್ಷ್ಮಣ್ ಜೀ ಇರಲಿಲ್ಲ. ಇನ್ನೊಂದು ವಾಹನವನ್ನು ಕಿಟಕಿಯಿಂದಲೇ ಸಂಪರ್ಕಿಸಿ ಅಲ್ಲಿನ ಗೆಳೆಯರೊಂದಿಗೆ ವಿಚಾರಿಸಿದರೆ ಆ ವಾಹನದಲ್ಲೂ ಅವರು ಬಂಧಿಯಾಗಿರಲಿಲ್ಲ. ನಮಗೆ ಗಾಬರಿ ಹೆಚ್ಚಾಯಿತು, ಆ ಹಿರಿಯ ಜೀವಕ್ಕೆ ಹೋರಾಟದ ಗಲಾಟೆ ಪೋಲೀಸರ ತಳ್ಳಾಟದ ನೂಕು ನುಗ್ಗಲಿನಲಿ ಏನಾದರೂ ಆಪತ್ತಾಯಿತೆ ಎಂದು ಗಲಿಬಿಲಿ ಗಾಬರಿ ಭಯದಿಂದ ಲಕ್ಷ್ಮಣ್ ಜೀಯನ್ನು ಸಂತೆಯಲ್ಲಿ ಕಳೆದು ಹೋದ ಅಮ್ಮನಂತೆ ಕಿಟಕಿಯಿಂದ ಪೋಲೀಸರ ಗುಂಪಿನತ್ತ ಕಣ್ಣು ಹಾಯಿಸಿದರೆ ಅಲ್ಲಿ ಮೂಲೆಯಲ್ಲಿ ನಿಂತು ಸಾವಧಾನವಾಗಿ ನಗು ಮುಖದಿಂದ ನಮಗೆ ಬೈ ಬೈ ಹೇಳಿ ನಮ್ಮತ್ತ ಕೈ ಬೀಸುತ್ತಿದ್ದರು.
ನಂತರ ಅವರ ಮೊಬೈಲ್ಗೆ ಕರೆ ಮಾಡಿದರೆ ನಾನು ಅರೆಸ್ಟ್ ಆಗಲಿಲ್ಲ, ಪೋಲಿಸರು ನನ್ನತ್ತ ಬರಲಿಲ್ಲವೆಂದು ನಗುತ್ತಾ ಹೇಳಿದರು. ಸರಿ ಪ್ರತಿಭಟನಾಕಾರರನ್ನು ಎಲ್ಲಿಗೆ ಸಾಗಿಸುತ್ತಾರೆಂದು ತಿಳಿದು ಸ್ಥಳವನ್ನು ಹೇಳಿ ನಾನು ಅಲ್ಲಿಗೆ ಬಂದು ಭೇಟಿಯಾಗುವೆ ಅಂದರು . ಬೇಡ ಬೇಡ ಸಾರ್ ನೀವು ಹುಷಾರಾಗಿರಿ ಇಲ್ಲಿನ ವಿಚಾರ ಸಂಜೆ ವೇಳೆಗೆ ನಾವೆ ಬಂದು ಭೇಟಿ ಮಾಡಿ ತಿಳಿಸುವೆವು, ನೀವು ಮನೆಯತ್ತ ಹೊರಡಿ ಎಂದಾಗ ಆ ಕರೆಯಲ್ಲಿ ನನ್ನ ಮೊದಲ ಹೋರಾಟದ ಮಾರ್ಗದರ್ಶಕನಾಗಿ ಲಕ್ಷ್ಮಣ್ ಜೀಯಾಗಿದ್ದರು. ಆಗ ಒಂದು ಎಚ್ಚರಿಕೆ ಮಾತು ಕೊಟ್ಟರು.
ಅರೆಸ್ಟ್ ಆದ ಬಳಿಕ ನಿನ್ನ ವಿವರ ಪೋಲಿಸರು ಕೇಳುವರು ಆಗ ಯಾವುದನ್ನು ಸತ್ಯ ಹೇಳಬೇಡ ಸುಳ್ಳು ಹೆಸರು ವಿಳಾಸ ಬರೆಸು, ನೀನಿನ್ನು ವಿದ್ಯಾರ್ಥಿಯಿದ್ದಿಯಾ ಯಾವುದೇ ಕೇಸು ಬೀಳದಂತೆ ಎಚ್ಚರವಾಗಿರು ಭವಿಷ್ಯಕ್ಕೆ ತೊಂದರೆ ಆಗದಂತೆ ಹೆಸರು ವಿಳಾಸ ಕೊಡು. ಎಂದರು ಹಾಗೆ ಮಾತು ಮುಂದುವರೆಸಿ ಊಟ ತರಿಸಿ ಎಂದು ಪೋಲಿಸರಿಗೆ ಗತ್ತಾಗಿಯೇ ಕೇಳು ನಿನಗೇನು ಊಟ ಬೇಕೊ ಕೇಳು ಅನ್ನುವಾಗ ಮಾತಿನ ಮದ್ಯೆ ನಾನು ಊಟ ಕೇಳಿದರೆ ಏಟು ಕೊಟ್ಟರೆ? ಅನ್ನುತ್ತಿದ್ದಾಗಲೇ ಹೋರಾಟಗಾರರಿಗೆ,ಪ್ರತಿಭಟನಾಕಾರರಿಗೆ ಪೋಲಿಸರು ಹೆದರುತ್ತಾರೆ,ಅದರಲ್ಲೂ ನೀನು ವಿದ್ಯಾರ್ಥಿ ವಿಚಾರವಂತನಿದ್ದೀಯಾ ಕೇಳು ಪರ್ವಾಗಿಲ್ಲ.
ಇದಕ್ಕಾಗಿಯೇ ಅವರಿಗೆ ಸರ್ಕಾರದಿಂದ ಹಣ ಬರುತ್ತದೆ ಭಯಬೇಡ ಎಂದರು ನಾನು ಸರಿ ಸಾರ್ ಎಂದು ಮಾತು ಮುಗಿಸಿದೆ. ನಾನು ಕೂಡಾ ಅದರಂತೆ ಆ ದಿನವನ್ನು ಕಳೆದು ಹೇಗೊ ಹೊರಬಂದೆ, ಎರಡು ದಿನ ಕಳೆದು ಲಕ್ಷ್ಮಣ್ ಸಾರ್ನ ನಂದಿನಿ ಬಡಾವಣೆಯ ಗ್ರಂಥಾಲಯದಲ್ಲಿ ಭೇಟಿಯಾದೆ, ಅವರು ನಗುತ್ತ ಇದೇ ಮೊದಲ ಹೋರಾಟದ ಫಲ ಮುಂದೆ ಮುಂದಿನ ಹೋರಾಟಗಳಲ್ಲಿ ಎಚ್ಚರ. ನಾನು ಅರೆಸ್ಟ್ ಆಗಲಿಲ್ಲವೆಂದು ಮೌನದಿಂದಲೇ ನಗುತ್ತಿದ್ದರು. ಆ ನಗು ನನ್ನ ಹೋರಾಟದ ದಾರಿದೀಪವಾಗಿದೆ. ಮಾರ್ಗದರ್ಶನಕ್ಕೆ ಅವರಿರುವರು ಎಂಬ ಧೈರ್ಯ ನನ್ನಲಿದೆ. ಒಟ್ಟಾರೆ “ ಲಕ್ಷ್ಮಣ್ ಜೀ ಎಂದರೆ ನಮ್ಮ ನಡುವಿನ ಬುದ್ಧನೇ ಸರಿ.”
ಸುದ್ದಿದಿನ.ಕಾಂ|ವಾಟ್ಸಾಪ್|9980346243
![](https://suddidina.com/wp-content/uploads/2022/04/20210226_111406.jpg)
ಅಂತರಂಗ
ಆತ್ಮಕತೆ | ತುರ್ತು ಪರಿಸ್ಥಿತಿ ಮತ್ತು ನಮ್ಮೂರಿನ ಭೂ ಹೋರಾಟ
![](https://suddidina.com/wp-content/uploads/2024/06/Rudrappa_Hanagawadi_runadagani_suddidina.jpg)
- ರುದ್ರಪ್ಪ ಹನಗವಾಡಿ
ದೇಶದಾದ್ಯಂತ ತುರ್ತುಪರಿಸ್ಥಿತಿ ಇತ್ತು. ಶಾಲಾ ಕಾಲೇಜುಗಳಲ್ಲಿ ಪಾಠ ಪ್ರವಚನಗಳು ನಿಗದಿಯಂತೆ ನಡೆಯುತ್ತಿದ್ದವು. ರಾಜ್ಯ ಮತ್ತು ರಾಷ್ಟ್ರಮಟ್ಟದ ಕಾಂಗ್ರೆಸ್ ವಿರೋಧಿ ರಾಜಕೀಯ ನಾಯಕರನ್ನು ಬಂಧಿಸಿ ಜೈಲಿನಲ್ಲಿರಿಸಿದ್ದರು. ಇಂದಿರಾ ಗಾಂಧಿಯವರ 20 ಅಂಶದ ಕಾರ್ಯಕ್ರಮಗಳು ವಿಶೇಷವಾಗಿ ದಲಿತ ಹಿಂದುಳಿದವರ ಪರವಾಗಿದ್ದುದನ್ನು ಮುಖ್ಯಮಂತ್ರಿ ದೇವರಾಜ ಅರಸು ಅವರು ಒತ್ತಿ ಹೇಳುತ್ತಿದ್ದರು ಮತ್ತು ತುರ್ತು ಪರಿಸ್ಥಿತಿಯನ್ನು ಸಮರ್ಥಿಸಿಕೊಂಡು ರಾಜ್ಯಾಡಳಿತವನ್ನು ನಡೆಸುತ್ತಿದ್ದರು.
ದೇವರಾಜ ಅರಸು ಅವರು ಕರ್ನಾಟಕದಲ್ಲಿ ಹಿಂದೆಂದೂ ನೀಡಿರದಿದ್ದ ವಿಶೇಷ ಸವಲತ್ತುಗಳನ್ನು ದಲಿತರು, ಹಿಂದುಳಿದವರಿಗೆ ಮತ್ತು ಅಲ್ಪಸಂಖ್ಯಾತರಿಗೆ ನೀಡುತ್ತಿದ್ದರು. ಹಾಗೆ ಹೇಳುತ್ತಲೂ ಇದ್ದರು. ಅದು ನಿಜವೂ ಆಗಿತ್ತು. ಆದರೆ ನಾವೆಲ್ಲ ತುರ್ತುಪರಿಸ್ಥಿತಿಯ ವಿರುದ್ಧವಾಗಿ ಕೆಲಸ ಮಾಡುತ್ತಿದ್ದೆವು.
ನಮ್ಮ ಊರಿನಲ್ಲಿ ವೀರಭದ್ರ ದೇವರ ಚಾಕರಿ (ಮ್ಯಾಳ) ಮಾಡುತ್ತಿದ್ದ ಕಾರಣ ಹದಿನೇಳು ಎಕರೆ ವೀರಭದ್ರ ದೇವರ ಹೆಸರಿನಲ್ಲಿದ್ದುದನ್ನು ನಮ್ಮ ಎಲ್ಲ ಆರು ಕುಟುಂಬಗಳಿಗೆ ಊರಿನ ಪ್ರಮುಖರು ನಾವಿನ್ನು ಹುಟ್ಟುವ ಮುಂಚೆಯೇ ಹಂಚಿ ಕೊಟ್ಟಿದ್ದರು. ಅದರಲ್ಲಿ ಅಪ್ಪನಿಗೆ ಸುಮಾರು ನಾಲ್ಕು ಎಕರೆಯಷ್ಟನ್ನು ನೀಡಿದ್ದು ಸಾಗುವಳಿ ಮಾಡಿಕೊಂಡು ಬರುತ್ತಿದ್ದೆವು. ಈ ನಡುವೆ ಭೂಸುಧಾರಣಾ ಕಾನೂನು ಜಾರಿ ಮಾಡುವ ಬಗ್ಗೆ ಅರಸು ಸರ್ಕಾರ ವಿಶೇಷವಾಗಿ ಭೂನ್ಯಾಯ ಮಂಡಳಿಯನ್ನು ರಚಿಸಿತ್ತು. ಇದನ್ನರಿತ ನಮ್ಮವರೆಲ್ಲ ಸೇರಿ ನಮ್ಮ ಅಣ್ಣ ತಿಪ್ಪಣ್ಣನ ಪ್ರಯತ್ನದಿಂದ ಸರ್ಕಾರ ರಚಿಸಿದ್ದ ಭೂನ್ಯಾಯ ಮಂಡಳಿಯ ಮುಂದೆ ಎಲ್ಲ ಆರು ಜನರೂ ತಮಗೆ ಭೂಮಿಯ ಹಕ್ಕು ನೀಡಲು ನಮೂನೆ 7ರ ಅರ್ಜಿ ಸಲ್ಲಿಸಿದ್ದರು.
ಭೂನ್ಯಾಯ ಮಂಡಳಿಯ ಮುಂದೆ ಅರ್ಜಿ ಹಾಕಿದ ವಿಷಯ ಊರಲ್ಲಿ ದೊಡ್ಡ ಅಸಮಾಧಾನದ ಕಿಚ್ಚನ್ನು ಮೂಡಿಸಿತ್ತು. ಈ ನಡುವೆ ನಮಗಾಗಿ ಕೊಟ್ಟಿದ್ದ 17 ಎಕರೆಯಲ್ಲಿ ಮಧ್ಯ ಭಾಗದಲ್ಲಿ 4 ಎಕರೆಯನ್ನು ಕಬಳಿಸುವಷ್ಟು ರಾಷ್ಟ್ರೀಯ ಹೆದ್ದಾರಿಯು ದಾವಣಗೆರೆಯಿಂದ ಹುಬ್ಬಳ್ಳಿವರೆಗೆ ಬೈಪಾಸ್ ರಸ್ತೆಗಾಗಿ ಸರ್ಕಾರ ವಶಪಡಿಸಿಕೊಂಡಿತ್ತು. ಸರ್ಕಾರದಿಂದ ನೀಡಿದ ನಾಲ್ಕು ಎಕರೆ ಪರಿಹಾರದ ಹಣವನ್ನು ಕೂಡ ದೇವಸ್ಥಾನದವರೇ ತೆಗೆದುಕೊಂಡಿದ್ದರು. ಉಳಿದಿದ್ದ 13 ಎಕರೆಯಲ್ಲಿ ಮತ್ತೆ ಪುನಃ ಮರು ಹಂಚಿಕೆ ಮಾಡಿಕೊಂಡು ಆರು ಜನರು ಸುಮಾರು ಎರಡೆರಡು ಎಕರೆಗಳಷ್ಟು ಸಾಗುವಳಿ ಮಾಡುತ್ತಿದ್ದರು.
ದೇವಸ್ಥಾನ ಧರ್ಮದರ್ಶಿ ಕಮಿಟಿಯಲ್ಲಿ ಊರಿನ ಹಿರಿಯರಿದ್ದರೂ ಉಳಿದಿರುವ ಭೂಮಿಯನ್ನು ನಮ್ಮವರಿಂದ ಬಿಡಿಸುವುದು ಮತ್ತು ಪ್ರತಿ ಮಂಗಳವಾರ ಗುಡಿಯಲ್ಲಿ ಮಾಡುತ್ತಿರುವ ಮ್ಯಾಳಗಳನ್ನು ನಿಲ್ಲಿಸಬೇಕೆಂದು ಚರ್ಚೆ ಆಗ ಊರಲ್ಲಿ ನಡೆಯುತ್ತಿತ್ತು. ಅವರೆಲ್ಲರ ಚರ್ಚೆಗಳ ಮಧ್ಯೆ ಮ್ಯಾಳದವರು ನಿಲ್ಲಿಸದೆ ಪ್ರತಿ ಮಂಗಳವಾರ ತಪ್ಪಿಸದೆ ಗುಡಿಗೆ ಹೋಗಿ ಎಂದಿನಂತೆ ಮ್ಯಾಳ ಮಾಡಿ ಬರುತ್ತಿದ್ದರು.
ನಮ್ಮೂರ ಚಲುವಾದಿಗಳಿಗೆ ಈ ರೀತಿಯ ಧೈರ್ಯವಿರಲಿಲ್ಲ. ಇವೆಲ್ಲದರ ಹಿಂದಿನ ಯೋಜಕ ಮೈಸೂರಲ್ಲಿ ಓದುತ್ತಿರುವ ಹುಡುಗ ನಾನೇ ಎಂದು ಊರವರು ಮಾತಾಡಿಕೊಂಡರು. ಅವನು ಊರಿಗೆ ಯಾವ ದಾರಿಯಲ್ಲಿ ಬರುತ್ತಾನೋ ಕಾದು ಕುಳಿತು ಕಾಲು ಮುರಿಯಬೇಕೆಂಬ ಯೋಜನೆ ಕೂಡ ಹಾಕಿಕೊಂಡಿದ್ದರಂತೆ. ಆದರೆ ಏಕಾಂಗಿಯಾಗಿ ಓಡಾಡುತ್ತಿದ್ದ ನನಗೆ ಒಳಗೊಳಗೆ ಅಳುಕು ಇದ್ದರೂ ನಾನೇನು ತಪ್ಪು ಮಾಡುತ್ತಿಲ್ಲ ಎಂಬ ತಿಳುವಳಿಕೆ ಧರ್ಯ ನೀಡುತ್ತಿತ್ತು. ಆದರೆ ಊರಿಗೆ ಬಂದು ಹೊರಗೆ ಓಡಾಡುತ್ತಿದ್ದರೆ ನಮ್ಮವರೆಲ್ಲ ದೂರದಲ್ಲಿದ್ದುಕೊಂಡೇ ನನ್ನನ್ನು ಊರಲ್ಲಿರುವ ತನಕ ವಿಶೇಷವಾಗಿ ಕವರ್ ಮಾಡುತ್ತಿದ್ದರು.
ಇದಕ್ಕೂ ಮುಂಚೆ ನಾನಿನ್ನು ಬಿ.ಎ.ನಲ್ಲಿ ಓದುತ್ತಿರುವಾಗ ಸರ್ಕಾರದ ವತಿಯಿಂದ ನಮ್ಮ ಮನೆಯ ಹತ್ತಿರದಲ್ಲೇ ಸಾರ್ವಜನಿಕರಿಗಾಗಿ ಕುಡಿಯಲು ಒಂದು ತೆರೆದ ಬಾವಿಯನ್ನು ತೆಗೆದಿದ್ದರು. ಊರಲ್ಲಿದ್ದ ಎರಡು ಬಾವಿಗಳಿಂದ ನೀರು ಸೇದುತ್ತಿದ್ದ ಮೇಲ್ಜಾತಿಗಳ ಜನರಿಂದ ನಮ್ಮವರೆಲ್ಲ ಹೊಯ್ ನೀರು ತರುತ್ತಿದ್ದರು. ಅಂದರೆ ಮೇಲ್ಜಾತಿಯವರಿಂದ ನೀರು ಸೇದಿ ಇವರ ಕೊಡಗಳಿಗೆ ನೀರು ಹಾಕಬೇಕು, ಆಗ ಇವರ ಮನೆಗಳಿಗೆ ತೆಗೆದುಕೊಳ್ಳಬೇಕು. 1936ರಲ್ಲಿ ಸರ್ಕಾರ ನಮಗೊಂದು ರಂಗಜ್ಜನ ಮಠದ ಹತ್ತಿರ ಬಾವಿ ತೆಗೆಸಿತ್ತು. ಅದು ನಮ್ಮ ಮನೆಗಳಿಗೆ ಅರ್ಧ ಕಿಲೋಮೀಟರ್ ದೂರದಲ್ಲಿತ್ತು. ಆದರೆ ಅಲ್ಲಿನ ನೀರು ಕುಡಿಯಲು ಯೋಗ್ಯವಾಗಿರಲಿಲ್ಲ.
ಮನೆಯ ಹತ್ತಿರವಿರುವ ಬಾವಿಯನ್ನು ವಿಧ್ಯುಕ್ತವಾಗಿ ಉದ್ಘಾಟಿಸುವ ಮುನ್ನ ನಾನು ನಮ್ಮಲ್ಲಿದ್ದ ಹಸುವಿನ ಜೊತೆ ಆ ಹೊಸ ಬಾವಿಯಿಂದ ನೀರು ಸೇದಿ ಅದಕ್ಕೆ ಕುಡಿಸಿ ನಾನು ಅಲ್ಲೇ ಸ್ನಾನ ಮಾಡಿಕೊಂಡು ಬರುತ್ತಿದ್ದೆ. ನಾನಿರುವಾಗ ಯಾರೂ ಮಾತಾಡದೆ ಇದ್ದವರು, ನಾನು ಮೈಸೂರಿಗೆ ವಾಪಸ್ ಓದಲು ಹೋದಾಕ್ಷಣ ಮಾರನೆ ದಿನ ನಮ್ಮ ಮನೆಯ ಹೆಣ್ಣು ಮಕ್ಕಳು ನೀರಿಗೆ ಹೋದಾಗ ಹಗ್ಗ ಕೊಡಪಾನಗಳನ್ನು ಕಿತ್ತು ಬಿಸಾಕಿ ನೀರು ಸೇದಲು ಬಿಟ್ಟಿರಲಿಲ್ಲ. ಆಗಿನ್ನು ಅಪ್ಪ ಇದ್ದ. ‘ನೀನು ಊರ ಉಸಾಬರಿಗೆ ಬರಬೇಡ ನಿನ್ನ ಓದು ನೀನು ಮಾಡಿಕೊಂಡು ಸುಮ್ಮನಿರು’ ಎಂದು ಪತ್ರ ಬರೆಸಿ ಸಮಾಧಾನ ಹೇಳಿದ್ದ. ಆದರೂ ನಾನು ಆಗಿರುವ ಅವಮಾನದ ಬಗ್ಗೆ ಚಿಂತಿಸುತ್ತಿದ್ದಾಗ ಒಂದು ದಿನ ಮೈಸೂರಿಗೆ ಬಂದಿದ್ದ ಕಂದಾಯ ಮಂತ್ರಿಗಳಾಗಿದ್ದ ಬಸವಲಿಂಗಪ್ಪನವರ ಹತ್ತಿರ ಹೋಗಿ, ನಮ್ಮೂರಲ್ಲಿ ಸಾರ್ವಜನಿಕ ಬಾವಿಯಿಂದ ನೀರು ಸೇದಲು ಲಿಂಗಾಯತರು ತೊಂದರೆ ಕೊಡುತ್ತಿರುವ ಬಗ್ಗೆ ಹೇಳಿದೆ.
ಅವರು ಅದನ್ನು ಮನಸ್ಸಿನಲ್ಲಿಕೊಂಡು ಬೆಂಗಳೂರಿಗೆ ವಾಪಸಾಗಿದ್ದರು. ನಮ್ಮೂರ ಛರ್ಮನ್ ಬಸಪ್ಪನವರು ಮತ್ತು ನಮ್ಮ ಹರಿಹರದವರೇ ಬಿ. ಬಸವಲಿಂಗಪ್ಪನವರು ಮೊದಲಿಂದಲೂ ಬಳಕೆಯಲ್ಲಿದ್ದವರಾಗಿದ್ದರು. ಛರ್ಮನ್ ಬಸಪ್ಪನವರು ಇನ್ನು ನಮ್ಮ ಊರಿನವರೊಡನೆ ಬೆಂಗಳೂರಲ್ಲಿ ತಮ್ಮ ಯಾವುದೋ ಕೆಲಸಕ್ಕೆ ಭೇಟಿ ಮಾಡಿದಾಗ ನಾನು ಹೇಳಿದ ವಿಷಯವನ್ನು ಪ್ರಸ್ತಾಪಿಸಿ, ‘ನೀವೇನು ಹೆಂಡ ಕುಡಿಯೋದಿಲ್ಲವಾ? ಮಾಂಸ ತಿನ್ನೋದಿಲ್ವಾ’ ಎಂದೆಲ್ಲಾ ಕೇಳಿ ‘ಬಸವಣ್ಣ ಏನು ಹೇಳಿದ್ದಾನೆ ಗೊತ್ತಾ? ಅದನ್ನ ಪಾಲಿಸೋದು ಬಿಟ್ಟು, ಸರ್ಕಾರ ಕಟ್ಟಿಸಿದ ಬಾವಿಯ ನೀರು ಸೇದಲು ಅಡ್ಡಿಪಡಿಸಬಾರದೆಂದು ಗರ್ಜನೆ ಹಾಕಿ ತಾಕೀತು ಮಾಡಿ ಕಳಿಸಿದ್ದರು.
ನಮ್ಮೂರ ಛರ್ಮನ್ ಬಸಪ್ಪನವರು ಬಹಳ ದಿನಗಳ ಕಾಲ ನಮ್ಮೂರ ಛರ್ಮನ್ರಾಗಿ ಎಲ್ಲರ ಜೊತೆ ಒಳ್ಳೆಯ ಸಂಬಂಧವಿಟ್ಟುಕೊಂಡಿದ್ದರು. ಆದರೆ ಊರ ಸಮಷ್ಟಿಯ ಸಮಸ್ಯೆಗಳು ಬಂದಾಗ ಧೈರ್ಯವಾಗಿ ಒಬ್ಬರೇ ತೀರ್ಮಾನ ತೆಗೆದುಕೊಳ್ಳಲು ಆಗುತ್ತಿರಲಿಲ್ಲ. ಆದರೆ ಬೆಂಗಳೂರಿನಿಂದ ಬಂದವರೇ ಯಾರು ನಿಮಗೆ ನೀರು ತರಲು ಅಡ್ಡಿಪಡಿಸಿದವರು ಎಂದು ಹೇಳಿ ಅವರೇ ನಮ್ಮ ಕೇರಿಗೆ ಬಂದು ನಮ್ಮವರನ್ನೇ ನೀರು ಸೇದಿಕೊಳ್ಳಲು ಹೇಳಿದ್ದರು. ಊರಲ್ಲಿ ವಿರೋಧಿಸಿದವರಿಗೆ ಸರ್ಕಾರದಿಂದ ಆದೇಶವಾಗಿದೆ ಎಂದೆಲ್ಲ ಹೇಳಿ ಬಾಯಿ ಮುಚ್ಚಿಸಿದ್ದರು. ಛರ್ಮನ್ ಬಸಪ್ಪನವರು ಸುಮಾರು 20 ವರ್ಷಗಳ ಕಾಲ ಛರ್ಮನ್ರಾಗಿದ್ದರು. ಯಾರಿಗೂ ಕೇಡು ಬಯಸುವ ವ್ಯಕ್ತಿಯಾಗಿರಲಿಲ್ಲ. ಇದೇ ಸಮಸ್ಯೆ ಬೇರೆಯವರ ಕೈಗೆ ಬಿದ್ದಿದ್ದರೆ, ಏನೆಲ್ಲಾ ಅನಾಹುತ ಮಾಡುತ್ತಿದ್ದರೋ ಊಹಿಸಲೂ ಅಸಾಧ್ಯ.
ಈ ಹಿನ್ನೆಲೆಯಲ್ಲಿ ಈಗ ಊರ ಮಟ್ಟದಲ್ಲಿ ಮತ್ತೊಂದು ಮಹತ್ತರವಾದ ಸಮಸ್ಯೆಯಾಗಿ ಎದ್ದು ಕೂತಿತ್ತು. ಅದು ಭೂ ನ್ಯಾಯ ಮಂಡಳಿಗೆ ಅರ್ಜಿ ಫಾರಂ ಹಾಕಿದ್ದು. ಹರಿಹರದಲ್ಲಿ ನಡೆಸುತ್ತಿದ್ದ ಭೂನ್ಯಾಯ ಮಂಡಳಿಯ ಮುಂದೆ ಹಾಜರಾಗಬೇಕು. ನಮ್ಮವರೆಲ್ಲ ದೇವಸ್ಥಾನದ ಧರ್ಮದರ್ಶಿಗಳ ಜೊತೆಗೆ ಮಾತಾಡಿಕೊಂಡು ಅವರು ತರುತ್ತಿದ್ದ ಟ್ರಾಕ್ಟರ್ನಲ್ಲಿ ಕೂತು ಹೋಗುತ್ತಿದ್ದರು. ನಮ್ಮ ಅಣ್ಣ ತಿಪ್ಪಣ್ಣ ಮಾತ್ರ ಅವರ ಜೊತೆಗೆ ಹೋಗುತ್ತಿರಲಿಲ್ಲ. ಅವರ ಜೊತೆ ಇರುವಾಗ, ನೀವು ಹೇಳಿದ ಹಾಗೆ ಸಾಕ್ಷಿ ಹೇಳುತ್ತೇವೆಂದು ಅವರ ಹತ್ತಿರವೇ ಬೀಡಿ ಕೇಳಿ ಸೇದಿಕೊಳ್ಳುತ್ತಿದ್ದರು. `ಇದೆಲ್ಲ ನಮ್ಮ ಹುಡುಗನ ಕೆಲಸ, ನಮಗ್ಯಾಕಣ್ಣ ದೇವರ ಜಮೀನು’ ಎಂದೆಲ್ಲ ಅವರ ಜೊತೆಯೇ ತಾಳ ಹಾಕುತ್ತ ಇದ್ದರು. ನಾನು ಊರಿಗೆ ಹೋದಾಗ ಯಾವಾಗ ತೀರ್ಮಾನಿಸಲಾಗುತ್ತದೆ ಎಂದು ಬಂದು ಗುಟ್ಟಾಗಿ ನನ್ನ ಬಳಿ ಕೇಳುತ್ತಿದ್ದರು. ನಮ್ಮವರೆಲ್ಲರ ಅದೃಷ್ಟವೋ ಎನ್ನುವಂತೆ ನನಗೆ 1969-1972ರಲ್ಲಿ ಮಹಾರಾಜಾ ಕಾಲೇಜಿನಲ್ಲಿ ಸಹಪಾಠಿಯಾಗಿದ್ದ ಕೆ.ಎಂ. ಶಂಕರಲಿಂಗೇಗೌಡರನ್ನು ದಾವಣಗೆರೆ ಭೂನ್ಯಾಯ ಮಂಡಳಿಯ ಅಧ್ಯಕ್ಷರಾಗಿ ಸರ್ಕಾರ ನೇಮಕ ಮಾಡಿತ್ತು. ನಾನು ನಮ್ಮ ಊರಿನ ಸ್ಥಿತಿಯನ್ನೆಲ್ಲ್ಲ ಅವರಿಗೆ ವಿವರಿಸಿ, ನಮಗೆ ಆದಷ್ಟು ಬೇಗ ಇತ್ಯರ್ಥಗೊಳಿಸಿಕೊಡಬೇಕೆಂದು ಅವರಲ್ಲಿ ವಿನಂತಿಸಿದೆ. ನಾನು ಹೋಗಿ ವಿನಂತಿಸಿದ 3-4 ತಿಂಗಳಲ್ಲಿ ನಮ್ಮವರೆಲ್ಲರ ಹೆಸರಿಗೆ ಭೂನ್ಯಾಯ ಮಂಡಳಿಯಲ್ಲಿ 1976ರ ವರ್ಷದ ಮಧ್ಯ ಭಾಗದಲ್ಲಿ ಭೂನ್ಯಾಯ ಮಂಡಳಿಯಿಂದ ತೀರ್ಮಾನಿಸಲಾಗಿತ್ತು.
ಆ ಸಂದರ್ಭದಲ್ಲಿ ಹೆಚ್. ಶಿವಪ್ಪನವರು ಹರಿಹರ ತಾಲ್ಲೂಕು ಶಾಸಕರು ಮತ್ತು ಭೂನ್ಯಾಯ ಮಂಡಳಿಯ ಸದಸ್ಯರಾಗಿದ್ದರು. ಅವರು ನಮಗೆಲ್ಲ ಜಮೀನು ನೋಂದಾಯಿಸುವ ಪ್ರಕರಣದಲ್ಲಿ ವಿರೋಧಿಸದೆ ಸಹಕಾರ ನೀಡಿದ್ದನ್ನು ನಾನು ನೆನಪಿಸಿಕೊಳ್ಳಬೇಕು. ಆದೇಶ ನೀಡುವ ಸಮಯದಲ್ಲಿ ದೇವಸ್ಥಾನದ ಧರ್ಮದರ್ಶಿಗಳು, ಭೂನ್ಯಾಯ ಮಂಡಳಿಯ ಅಧ್ಯಕ್ಷರ ಎದುರೇ ‘ಊರಿಗೆ ರ್ರಲೇ ನೋಡಿಕೊಳ್ಳುತ್ತೇವೆ’ ಎನ್ನೋ ಧಮ್ಕಿ ಹಾಕಿದಾಗ, ಅಧ್ಯಕ್ಷರು ‘ನಿಮ್ಮನ್ನೆಲ್ಲ ಪೊಲೀಸ್ ಕರೆಸಿ ಈಗಲೇ ಜೈಲಿಗೆ ಕಳಿಸುತ್ತೇನೆಂದು ಹೇಳಿ ಎಚ್ಚರಿಕೆ ನೀಡಿದರೆಂದು ನಮ್ಮವರೆಲ್ಲ ನನ್ನ ಬಳಿ ಸಂತೋಷದಿಂದ ಎಲ್ಲ ಮುಗಿದ ಮೇಲೆ ಹೇಳಿಕೊಂಡಿದ್ದರು.
ಮುಂದುವರಿಯುವುದು
ಸುದ್ದಿದಿನ.ಕಾಂ|ವಾಟ್ಸಾಪ್|9980346243
![](https://suddidina.com/wp-content/uploads/2022/04/20210226_111406.jpg)
ದಿನದ ಸುದ್ದಿ
ನಾಡೋಜೆ ಡಾ. ಕಮಲಾ ಹಂಪನಾಗೆ ರವೀಂದ್ರ ಕಲಾಕ್ಷೇತ್ರದಲ್ಲಿ ಗಣ್ಯರಿಂದ ಅಂತಿಮ ನಮನ
![](https://suddidina.com/wp-content/uploads/2024/06/kamalahampana_suddidina_siddaramaiah.jpg)
ಸುದ್ದಿದಿನ,ಬೆಂಗಳೂರು:ಹಿರಿಯ ಸಾಹಿತಿ ನಾಡೋಜ ಡಾ. ಕಮಲಾ ಹಂಪನಾ ಪಾರ್ಥೀವ ಶರೀರದ ಅಂತಿಮ ದರ್ಶನವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ರವೀಂದ್ರ ಕಲಾಕ್ಷೇತ್ರದಲ್ಲಿ ಪಡೆದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾದ ಶಿವರಾಜ ತಂಗಡಗಿ, ಸಾಹಿತಿ ಹಂಪನಾ ಮತ್ತು ಬರಗೂರು ರಾಮಚಂದ್ರಪ್ಪ ಸೇರಿ ಹಲವು ಗಣ್ಯರು ಅಂತಿಮ ನಮನ ಸಲ್ಲಿಸಿದರು.
ಈ ವೇಳೆ, ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಕನ್ನಡದ ಉತ್ತಮ ಸಾಹಿತಿಯನ್ನು ಕಳೆದುಕೊಂಡಿದ್ದೇವೆ, ಕಮಲಾ ಹಂಪನಾ, ಬೋಧಕರಾಗಿ, ಸಂಶೋಧಕರಾಗಿ, ಸಾಹಿತಿಯಾಗಿ ಕನ್ನಡ ಭಾಷೆಗಾಗಿ ಬಹಳ ಶ್ರಮಿಸಿದ್ದಾರೆ. ಅವರ ಆತ್ಮಕ್ಕೆ ಚಿರಶಾಂತಿ ದೊರೆಯಲಿ ಹಂಪನಾ ಮತ್ತು ಅವರ ಕುಟುಂಬದವರಿಗೆ ದುಃಖ ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ತಿಳಿಸಿದರು.
ರವೀಂದ್ರ ಕಲಾಕ್ಷೇತ್ರದಲ್ಲಿ ಹಿರಿಯ ಸಾಹಿತಿ ಡಾII ಕಮಲ ಹಂಪನಾ ಅವರ ಪ್ರಾರ್ಥಿವ ಶರೀರದ ದರ್ಶನ ಪಡೆದು ಅಂತಿಮನಮನ ಸಲ್ಲಿಸಿ ನಂತರ ಮಾಧ್ಯಮದವರೊಂದಿಗೆ ಮಾತನಾಡಿದೆ.
ಕನ್ನಡದ ಉತ್ತಮ ಸಾಹಿತಿಯನ್ನು ನಾವು ಕಳೆದುಕೊಂಡಿದ್ದೇವೆ.
ಕಮಲಾ ಹಂಪನಾ ಅವರನ್ನು ನಾಲ್ಕೈದು ತಿಂಗಳ ಹಿಂದೆ ಭೇಟಿಯಾಗಿದ್ದೆ. ಮಹಿಳಾ ಸಾಹಿತಿಗಳ ಪೈಕಿ ಅತಿ ಹೆಚ್ಚು ಅಂದರೆ 48… pic.twitter.com/bCsMRaY2r6— Siddaramaiah (@siddaramaiah) June 22, 2024
ಸುದ್ದಿದಿನ.ಕಾಂ|ವಾಟ್ಸಾಪ್|9980346243
![](https://suddidina.com/wp-content/uploads/2022/04/20210226_111406.jpg)
ದಿನದ ಸುದ್ದಿ
ನಾಡೋಜೆ ಕಮಲಾ ಹಂಪನ ನಿಧನ ; ಮೆಡಿಕಲ್ ಕಾಲೇಜಿಗೆ ದೇಹದಾನ : ಗಣ್ಯರ ಸಂತಾಪ
![](https://suddidina.com/wp-content/uploads/2024/06/kamala_hampana_suddidina.jpg)
ಸುದ್ದಿದಿನಡೆಸ್ಕ್:ಕನ್ನಡದ ಖ್ಯಾತ ಸಾಹಿತಿ ನಾಡೋಜೆ ಕಮಲ ಹಂಪನಾ (89) ಅವರು ಇಂದು ರಾಜಾಜಿನಗರದ ಮನೆಯಲ್ಲಿ ಮಲಗಿದ್ದಲ್ಲಿಯೇ ಅಸುನೀಗಿದ್ದಾರೆ. ಅವರು ಪ್ರಾಧ್ಯಾಪಕರಾಗಿ, ಬಹಳಷ್ಟು ಪ್ರಾಚೀನ ಕೃತಿಗಳ ಅನುಸಂಧಾನಕಾರರಾಗಿ ಸೇವೆ ಸಲ್ಲಿಸಿದ್ದಾರೆ.
ಹಂಪನಾ ಅವರ ಸ್ವಗೃಹದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥ ಮಾಡಲಾಗಿದ್ದು, ಬಳಿಕ ಮೃತರ ಆಸೆಯಂತೆ ರಾಮಯ್ಯ ಮೆಡಿಕಲ್ ಕಾಲೇಜಿಗೆ ದೇಹದಾನ ಮಾಡಲಾಗುವುದು ಎಂದು ಅವರ ಕುಟುಂಬ ತಿಳಿಸಿದೆ.
ಸಿಎಂ ಸಂತಾಪ
ಹಿರಿಯ ಸಾಹಿತಿ ಡಾ.ಕಮಲ ಹಂಪನಾ ಅವರ ಅನಿರೀಕ್ಷಿತ ಸಾವಿನಿಂದ ದು:ಖಿತನಾಗಿದ್ದೇನೆ.
ಸಾಹಿತ್ಯ ಕೃಷಿಯ ಜೊತೆ ಸಂಶೋಧನೆ ಮತ್ತು ಬೋಧನೆಗಳಿಂದಲೂ ಜನಪ್ರಿಯರಾಗಿದ್ದ ಡಾ.ಕಮಲಾ ಅವರದ್ದು ಸರ್ವರಿಗೂ ಒಳಿತನ್ನು ಬಯಸಿದ ಜೀವ.
ಡಾ.ಹಂಪ ನಾಗರಾಜಯ್ಯ ಮತ್ತವರ ಕುಟುಂಬದ ದು:ಖದಲ್ಲಿ ನಾನೂ ಭಾಗಿಯಾಗಿದ್ದೇನೆ.
ಮೃತರ ಆತ್ಮಕ್ಕೆ ಶಾಂತಿ ಕೋರುವೆ.
ಹಿರಿಯ ಸಾಹಿತಿ ಡಾ.ಕಮಲ ಹಂಪನಾ ಅವರ ಅನಿರೀಕ್ಷಿತ ಸಾವಿನಿಂದ ದು:ಖಿತನಾಗಿದ್ದೇನೆ.
ಸಾಹಿತ್ಯ ಕೃಷಿಯ ಜೊತೆ ಸಂಶೋಧನೆ ಮತ್ತು ಬೋಧನೆಗಳಿಂದಲೂ ಜನಪ್ರಿಯರಾಗಿದ್ದ ಡಾ.ಕಮಲಾ ಅವರದ್ದು ಸರ್ವರಿಗೂ ಒಳಿತನ್ನು ಬಯಸಿದ ಜೀವ.
ಡಾ.ಹಂಪ ನಾಗರಾಜಯ್ಯ ಮತ್ತವರ ಕುಟುಂಬದ ದು:ಖದಲ್ಲಿ ನಾನೂ ಭಾಗಿಯಾಗಿದ್ದೇನೆ.
ಮೃತರ ಆತ್ಮಕ್ಕೆ ಶಾಂತಿ ಕೋರುವೆ. pic.twitter.com/G5D8mqqqOg— Siddaramaiah (@siddaramaiah) June 22, 2024
ಕನ್ನಡದ ಖ್ಯಾತ ಲೇಖಕಿ ಹಾಗೂ ಸಾಹಿತಿ ಶ್ರೀಮತಿ ಕಮಲಾ ಹಂಪನ ಅವರು ನಿಧನರಾದ ಸುದ್ದಿ ತಿಳಿದು ದುಃಖವಾಯಿತು. ಕಮಲಾ ಅವರು ಪ್ರಾಧ್ಯಾಪಕರಾಗಿ, ಬಹಳಷ್ಟು ಪ್ರಾಚೀನ ಕೃತಿಗಳ ಅನುಸಂಧಾನಕಾರರಾಗಿ ಸೇವೆ ಸಲ್ಲಿಸಿದ್ದಾರೆ. ಅವರ ಅಗಲಿಕೆ ಕನ್ನಡ ಸಾಹಿತ್ಯ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ. ಭಗವಂತ ಅವರ ಆತ್ಮಕ್ಕೆ ಶಾಂತಿ ಕರುಣಿಸಲಿ ಹಾಗೂ ಅವರ ಕುಟುಂಬ… pic.twitter.com/HtEOUpBUo5
— DK Shivakumar (@DKShivakumar) June 22, 2024
ಸುದ್ದಿದಿನ.ಕಾಂ|ವಾಟ್ಸಾಪ್|9980346243
![](https://suddidina.com/wp-content/uploads/2022/04/20210226_111406.jpg)
-
ದಿನದ ಸುದ್ದಿ7 days ago
ನಾಡೋಜೆ ಡಾ. ಕಮಲಾ ಹಂಪನಾಗೆ ರವೀಂದ್ರ ಕಲಾಕ್ಷೇತ್ರದಲ್ಲಿ ಗಣ್ಯರಿಂದ ಅಂತಿಮ ನಮನ
-
ದಿನದ ಸುದ್ದಿ7 days ago
ನಾಡೋಜೆ ಕಮಲಾ ಹಂಪನ ನಿಧನ ; ಮೆಡಿಕಲ್ ಕಾಲೇಜಿಗೆ ದೇಹದಾನ : ಗಣ್ಯರ ಸಂತಾಪ
-
ದಿನದ ಸುದ್ದಿ6 days ago
ರೇಣುಕಾಸ್ವಾಮಿ ಕೊಲೆ ಮತ್ತು ಗಂಡುಹೆಣ್ಣಿನ ನಡುವಿನ ಸಂಬಂಧ
-
ಅಂತರಂಗ6 days ago
ಆತ್ಮಕತೆ | ತುರ್ತು ಪರಿಸ್ಥಿತಿ ಮತ್ತು ನಮ್ಮೂರಿನ ಭೂ ಹೋರಾಟ
-
ದಿನದ ಸುದ್ದಿ6 days ago
ಇವರೇ ನೋಡಿ ಟ್ವೀಟ್ಟರ್, ಪೇಸ್ಬುಕ್ ಮೀಮ್ಸ್ ಸ್ಟಾರ್ ಕ್ಸೇವಿಯರ್ ಉರ್ಫ್ ಓಂಪ್ರಕಾಶ್
-
ದಿನದ ಸುದ್ದಿ7 days ago
ಅರಣ್ಯ ಭೂಮಿ ಒತ್ತುವರಿ ಆರೋಪ ; ಮಸ್ಕಿ ತಹಶೀಲ್ದಾರರಿಗೆ ನೋಟಿಸ್
-
ದಿನದ ಸುದ್ದಿ7 days ago
ನಟ ದರ್ಶನ್ ಪರಪ್ಪನ ಆಗ್ರಹಾರ ಜೈಲು ಪಾಲು
-
ದಿನದ ಸುದ್ದಿ6 days ago
ನಾಳೆಯಿಂದ 18ನೇ ಲೋಕಸಭೆಯ ಮೊದಲ ಅಧಿವೇಶನ