Connect with us

ಭಾವ ಭೈರಾಗಿ

ಸ್ಮರಣೆ | ‘ವೈಣಿಕ‌ ಶಿಖಾಮಣಿ’ ವೀಣೆ ಶೇಷಣ್ಣ

Published

on

ವಿದ್ಯೆ ಸಾಧಕನ ಸೊತ್ತೆ, ಹೊರತು ಸೋಮಾರಿಗಳ ಸ್ವತ್ತಲ್ಲ. ಎಂಬ ದಿವ್ಯ ವಾಣಿಯ ಮೂಲಕ ಸಾಮಾನ್ಯರೂ ಕೂಡಾ ನಿರಂತರವಾದ ಅಭ್ಯಾಸದಿಂದ ಏನಾದರೂ ಸಾಧಿಸಬಹುದು ಎಂಬುದನ್ನು ಸಾರಿದವರು ನಮ್ಮ ವೀಣೆ ಶೇಷಣ್ಣನವರು.

‘ವೀಣೆ’, ಇದರ ಇನ್ನೊಂದು ಅನ್ವರ್ಥನಾಮವೇ ಶೇಷಣ್ಣನವರು. ಮೈಸೂರು ಬಾನಿಯ ಪ್ರಮುಖ ಪ್ರವರ್ತಕರಾದ ಶೇಷಣ್ಣನವರು ಆದಪ್ಪಯ್ಯನವರ ವಂಶದ ಇಪ್ಪತ್ತನಾಲ್ಕನೇ ತಲೆ. ಇವರ ತಂದೆ ಭಕ್ಷಿ ಚಿಕ್ಕರಾಮಪ್ಪನವರು ಮುಮ್ಮಡಿ ಕೃಷ್ಣರಾಜ ಒಡೆಯರ ಆಸ್ಥಾನ ವಿದ್ವಾಂಸರು. 1852ರಲ್ಲಿ ಜನಿಸಿದ ಶೇಷಣ್ಣನವರು ಏಳು ವರ್ಷದ ಹುಡುಗನಾಗಿದ್ದಾಗಲೇ ಆಸ್ಥಾನದಲ್ಲಿ ಹಾಡಿ ಮಹಾರಾಜರಿಂದ ಕಂಠೀಹಾರವನ್ನು ಪಡೆದ ಬಾಲಪ್ರತಿಭೆ. ಎಳೆಯವಯಸ್ಸಿನಿಂದಲೇ ತಂದೆಯವರಿಂದ ಶಿಕ್ಷಣ ಪಡೆದರೂ ಬಾಲ್ಯದಲ್ಲೇ ತೀರ್ಥರೂಪುರವನ್ನು ಕಳೆದುಕೊಂಡಿದ್ದರಿಂದ ದೊಡ್ಡ ಶೇಷಣ್ಣನವರಲ್ಲಿ ವೀಣಾಭ್ಯಾಸ ಮುಂದುವರಿಸಿದರು. ಪ್ರತಿದಿನ ನಾಲ್ಕಾರು ಪಲ್ಲವಿಗಳು, ವಿವಿಧ ಬಗೆಯ ತಾನಗಳನ್ನು ಎಂಟು ಗಂಟೆಗಳ ಕಾಲ ಸಾಧನೆ ಮಾಡುತ್ತಿದ್ದ ಶೇಷಣ್ಣನವರ ಶ್ರದ್ಧೆ, ಏಕಾಗ್ರತೆ ಹಾಗೂ ತಲ್ಲೀನತೆಗಳು ಅಪೂರ್ವವಾದುವು. ಅವರ ಸಾಧನೆಗೆ ಅಕ್ಕ ವೆಂಕಮ್ಮನವರೇ ಪ್ರೇರಕ ಶಕ್ತಿ. ಸಾಧನೆ-ಕೇಳ್ಮೆ ಹಾಗೂ ಪ್ರತಿಭೆಗಳಿಂದ ಶೇಷಣ್ಣನವರು ವೀಣೆಯ ಮೇಲೆ ಅಸಾಧ್ಯ ಪ್ರಭುತ್ವ, ಮಧುರ ನಾದ ಹಾಗೂ ಎಣೆ ಇಲ್ಲದ ಮನೋಧರ್ಮ ಗಳಿಸಿಕೊಂಡರು. ಜೊತೆಗೆ ಮೈಸೂರು ಸದಾಶಿವರಾಯರಲ್ಲಿ ಗಾಯನದ ಅಭ್ಯಾಸವನ್ನೂ ಮುಂದುವರೆಸಿದರು. ರಾಯರು ತ್ಯಾಗರಾಜರ ಪ್ರಶಿಷ್ಯರು. ಹೀಗಾಗಿ, ಶೇಷಣ್ಣನವರು ತ್ಯಾಗರಾಜರ ನೇರ ಶಿಷ್ಯಪರಂಪರೆಗೆ ಸೇರುತ್ತಾರೆ. ಗಾಯನ ಹಾಗೂ ವೀಣಾಭ್ಯಾಸ ಎರಡರಲ್ಲೂ ವೀಣೆ ಸುಬ್ಬಣ್ಣನವರು ಶೇಷಣ್ಣನವರ ಸಹಪಾಠಿಗಳು.

ಶೇಷಣ್ಣನವರು ಪ್ರವರ್ಧಮಾನಕ್ಕೆ ಬರುವ ಕಾಲದಲ್ಲಿ ಮೈಸೂರನ್ನು ಚಾಮರಾಜ ಒಡೆಯರು ಆಳುತ್ತಿದ್ದರು. ಅವರು ಶೇಷಣ್ಣನವರನ್ನು ಆಸ್ಥಾನ ವಿದ್ವಾಂಸರಾಗಿ ನೇಮಿಸಿದರು. ಪ್ರಭು ಚಾಮರಾಜ ಒಡೆಯರ ಪಿಟೀಲು, ಸುಬ್ಬಣ್ಣನವರ ಗಾಯನ ಹಾಗೂ ಶೇಷಣ್ಣನವರ ವೀಣೆ ಒಂದು ಅಪರೂಪ ಮೇಳ. ಪ್ರಭು ಆಸ್ಥಾನಿಕರ ಸಂಬಂಧವನ್ನು ಮೀರಿದ ಸ್ನೇಹ, ಆತ್ಮೀಯತೆಗಳು ಮಹಾರಾಜರು ಮತ್ತು ಶೇಷಣ್ಣನವರಲ್ಲಿ ಬೆಳೆಯಿತು.

ಕನ್ಯಾಕುಮಾರಿಯಿಂದ ದೆಹಲಿಯವರೆಗೆ ವಿವಿಧ ಪ್ರಾಂತ್ಯ, ಅರಮನೆ, ಉತ್ಸವಗಳಲ್ಲಿ ಶೇಷಣ್ಣನವರ ವಿನಿಕೆ ನಡೆಯುತ್ತಿದ್ದವು. ಅವರ ಕಚೇರಿಯನ್ನು ಏರ್ಪಡಿಸುವುದು ಪ್ರತಿಷ್ಠೆ-ಗೌರವದ ಸಂಕೇತವಾಗಿತ್ತು. ರಾಮನಾಥಪುರಂ, ಅಂದಿನ ಪರಿಚಿತ ಸಂಸ್ಥಾನವಲ್ಲದೆ, ಒಂದು ಪ್ರಮುಖ ಸಂಗೀತ ಕೇಂದ್ರವೂ ಆಗಿತ್ತು. ಸ್ವತಃ ಮಹಾರಾಜರೇ ಸಂಗೀತಗಾರರಾಗಿದ್ದುದರಿಂದ ಸಂಗೀತ ಕಲೆಗೆ ವ್ಯಾಪಕ ಪ್ರೋತ್ಸಾಹ ಕೊಡುತ್ತಿದ್ದರು. ಅಂದಿನ ಮಹಾರಾಜ ಭಾಸ್ಕರ ಸೇತುಪತಿ ಅವರು ನವರಾತ್ರಿಯ ವಿಶೇಷ ದರ್ಬಾರಿನಲ್ಲಿ ಒಮ್ಮೆ ಶೇಷಣ್ಣನವರ ಕಚೇರಿಯನ್ನುಏರ್ಪಡಿಸಿದರು. ಶೇಷಣ್ಣನವರ ವಿನಿಕೆಗೆ ರಾಜರ ಹೃದಯ ಮಿಡಿಯಿತು. ಮರುದಿನವೂ ಅವರದೇ ವೀಣಾ ಕಚೇರಿ ಏರ್ಪಾಡಾಯಿತು. ಅಂದೂ ವೀಣೆಯ ದಿವ್ಯಾನುಭವದ, ಅಮೃತದ ಸವಿ. ಹೀಗೇ ನವರಾತ್ರಿಯ ಒಂಬತ್ತು ದಿನಗಳೂ ಶೇಷಣ್ಣನವರದೇ ವೀಣಾ ಕಚೇರಿ. ಅರಮನೆಯಲ್ಲೆಲ್ಲಾ ವೀಣಾ ಝೇಂಕಾರ. ಶೇಷಣ್ಣನವರಿಗೆ ಮಹಾರಾಜರು ಕನಕಾಭಿಷೇಕ ಮಾಡಿ ಆನೆಯ ಮೇಲೆ ಕೂಡಿಸಿ ಅಂಬಾರಿಯಲ್ಲಿ ಮೆರವಣಿಗೆ ಮಾಡಿಸಿದರು. ಅಲ್ಲಿಂದ ಮುಂದೆ ಶೇಷಣ್ಣನವರ ಕಚೇರಿ ರಾಮನಾಥಪುರಂ ಆಸ್ಥಾನದಲ್ಲಿ ಪ್ರತಿವರ್ಷವೂ ನಡೆಯತೊಡಗಿತು.

ಉತ್ತರ ಭಾರತದ ಬರೋಡಾ ಸಂಸ್ಥಾನವು ಸಂಗೀತ ಪ್ರೋತ್ಸಾಹಕ್ಕೂ ಸಂಗೀತಗಾರರ ಪೋಷಣೆಗೂ ಪ್ರಸಿದ್ಧವಾದುದು. ಮೈಸೂರು ಮತ್ತು ಬರೋಡಾ ಅರಮನೆಗಳ ಆಸ್ಥಾನಿಕರಲ್ಲಿ ಪರಸ್ಪರ ಮೈತ್ರಿ, ವಿನಿಮಯ, ಸನ್ಮಾನಗಳು ನಡೆಯುತ್ತಿದ್ದವು. ಶೇಷಣ್ಣನವರ ಖ್ಯಾತಿಯನ್ನು ಕೇಳಿದ ಬರೋಡ ಮಹಾರಾಜ ಸಯ್ಯಾಜೀರಾವ್‌ ಗಾಯಕವಾಡರು ‘ವೈಣಿಕ ಶಿಖಾಮಣಿ’ಯನ್ನು ತಮ್ಮ ಆಸ್ಥಾನಕ್ಕೆ ಆಹ್ವಾನಿಸಿದರು. ಏರ್ಪಾಡಾಗಿದ್ದ ಒಂದು ದಿನದ ಬದಲು ಮೂರು ದಿನ ಕಚೇರಿ ನಡೆಯಿತು. ಸರಸ್ವತಿಯೇ ಪುರುಷರೂಪದಲ್ಲಿ ಬಂದು ನುಡಿಸುತ್ತಿದ್ದಂತೆ ಭಾಸವಾಯಿತು. ಈ ಅಪೂರ್ವ ಅನುಭವದಿಂದ ಮಹಾರಾಜರು ಪ್ರೇರಿತರಾಗಿ ಮಹಾರಾಣಿಯವರು ಸ್ವತಃ ಉಪಯೋಗುಸುತ್ತಿದ್ದ, ಸುಂದರವಾದ ಮೇನಾವನ್ನು ಶೇಷಣ್ಣನವರಿಗೆ ನೀಡಿದರು. ಈ ಸುದ್ದಿ ಕ್ಷಿಪ್ರದಲ್ಲೇ ಮೈಸೂರು ಮುಟ್ಟಿತು. ತಮ್ಮ ಆಸ್ಥಾನಿಕರಿಗೆ ಬೇರೊಂದು ಸಂಸ್ಥಾನದಲ್ಲಿ ದೊರೆತ ಈ ಸನ್ಮಾನದಿಂದ ಮಹಾರಾಜರಿಗೆ ಸಂತೋಷ ಹೆಮ್ಮೆ ಆದುದು ಸಹಜವೇ. ದೊರೆಗಳ ಅಪ್ಪಣೆಯಂತೆ ಶೇಷಣ್ಣನವರನ್ನು ಆ ಮೇನೆಯಲ್ಲಿ ಕುಳ್ಳಿರಿಸಿ ಅರಮನೆಯ ಧ್ವಜಪತಾಕೆ, ರಾಜಲಾಂಛನ, ಜೋಡಿಸುತ್ತು ದಿಂಡುಹಾರಗಳ ಮರ್ಯಾದೆ ಸಹಿತ ಮೆರವಣಿಗೆ ಮಾಡಲು ಸಿದ್ಧತೆಗಳಾದವು. ಆದರೆ, ‘ಈ ಗೌರವವೆಲ್ಲಾ ಸರಸ್ವತಿಗೆ ಸಲ್ಲಬೇಕು, ತಮಗೆ ಅಲ್ಲ’ ಎಂದು ಭಾವಿಸಿದ ಶೇಷಣ್ಣನವರು ವೀಣೆಯನ್ನು ಪಲ್ಲಕ್ಕಿಯಲ್ಲಿಟ್ಟು ವಾಗ್ದೇವಿಗೆ ನಮಿಸಿದರು. ಮೇನಾದ ಮುಂದೆ ಬರಿಗಾಲಿನಲ್ಲಿ ಕೈಜೋಡಿಸಿ ನಡೆದರು. ಹೀಗೆ ಶೇಷಣ್ಣನವರು ‘ವೈಣಿಕ ಶಿಖಾಮಣಿ’ ಮಾತ್ರವಲ್ಲ “ಗುಣಶಿಖಾಮಣಿ”ಯೂ ಆಗಿ ಬೆಳಗಿದವರು.

ಶೇಷಣ್ಣನವರ ವೀಣಾವಾದನ ಕಚೇರಿಗಳು ಸಾಮಾನ್ಯವಾಗಿ ನಾಲ್ಕು ಗಂಟೆಗಳ ಅವಧಿಯವು. ಕೃತಿಗಳು ಕಡಿಮೆ. ಪ್ರಧಾನವಾಗಿ ರಾಗ, ಮಧ್ಯಮಕಾಲ ಮತ್ತು ಪಲ್ಲವಿಗಳನ್ನೇ ಆರಿಸಿಕೊಳ್ಳುತ್ತಿದ್ದರು. ಒಂದೇ ರಾಗವನ್ನು ಹತ್ತು ಸಲ ನುಡಿಸಿದರೂ ಪ್ರತಿಭಾರಿ ಆ ರಾಗಕ್ಕೆ ಹೊಸಬಣ್ಣ, ಹೊಸಾಕಾರ, ಹೊಸರುಚಿ. ಹೀಗಾಗಿ ರಾಗದ ಶಕ್ತಿಗಳನ್ನು ಅರಿತು ಹಂತಹಂತವಾಗಿ ರಾಗಪುಷ್ಪವನ್ನು ಅರಳಿಸಿ, ಸಂಗೀತದ ಕಂಪನ್ನು ಬೀರುತ್ತಿದ್ದರು. ಕಚೇರಿಯ ಕೊನೆಯಲ್ಲಿ ಜಾವಳಿ, ತಿಲ್ಲಾನಗಳ ಮೇಲೋಗರ. ಕರ್ಕಶತೆಗಳಿಲ್ಲದ ಮೃದುವಾದ ಮೀಟು. ನಾದ ಭಾವಕ್ಕೆ ಗಮನ ಕೊಡುತ್ತಿದ್ದರೇ ಹೊರತು ವಾದ್ಯ ತಂತ್ರಕ್ಕೆ ಅಲ್ಲ. ವೀಣೆಯು ಶೇಷಣ್ಣನವರಿಗೆ ಕೇವಲ ಒಂದು ವಾದ್ಯವಾಗಿರದೆ ಒಂದು ಉಪಾಸನೆಯಾಗಿತ್ತು. ‘ನಮ್ಮ ಶಕ್ತಿಗೆ ಒಳಪಟ್ಟು ನುಡಿಸುತ್ತೇವೆಯೇ ಹೊರತು ವೀಣೆಯ ಸಾಮರ್ಥ್ಯಕ್ಕೆ ತಕ್ಕಂತೆ ನುಡಿಸಲು ಸಾಧ್ಯವೇ?’ ಎಂಬ ಶೇಷಣ್ಣನವರ ಮಾತು ಕೇವಲ ಸೌಜನ್ಯದ್ದಲ್ಲ ಗಾಢ ಚಿಂತನೆಗೂ ಅರ್ಹವಾದ ಅಭಿಪ್ರಾಯ. ಯಾರು ಹೋಗಿ ಕೇಳಿದರೂ ವೀಣೆ ನುಡಿಸುತ್ತಿದ್ದ ಅವರ ಸ್ವಭಾವ ಆದರ್ಶಪ್ರಾಯವಾದುದು. ತಮ್ಮ ಕೊನೆಯ ದಿನಗಳಲ್ಲಿ ವೀಣೆ ನುಡಿಸಲು ಅಶಕ್ತರಾದಾಗ ‘ಸಾಯಲು ನನಗೆ ಅಂಜಿಕೆ ಇಲ್ಲ; ಆದರೆ, ವೀಣೆಯನ್ನು ಬಿಟ್ಟುಹೋಗಲು ನೋವಾಗುತ್ತದೆ’ ಎನ್ನುತ್ತಿದ್ದರು.

ಶೇಷಣ್ಣನವರು ಇಪ್ಪತ್ತನೆಯ ಶತಮಾನದ ಪ್ರಮುಖ ವಾಗ್ಗೇಯಕಾರರಲ್ಲಿ ಒಬ್ಬರು. ತಿರುಪತಿ ಶ್ರೀನಿವಾಸ, ಸರಸ್ವತೀ, ಲಕ್ಷ್ಮೀ, ಚಾಮುಂಡೇಶ್ವರಿ ಮುಂತಾದ ದೇವರುಗಳ ಮೇಲೆ ಶೇಷಣ್ಣನವರು ಕನ್ನಡ ಪದಗಳನ್ನು ರಚಿಸಿದ್ದಾರೆ. ಶೇಷ, ಶೇಷದಾಸ ಎಂಬ ಅಂಕಿತದಲ್ಲಿ ಬಹುತೇಕ ರಚನೆಗಳಿದ್ದರೂ ತಿಲ್ಲಾನಗಳನ್ನು ತಮ್ಮ ಪ್ರಭುಗಳ ಮೇಲೆ (ಚಾಮರಾಜ ಒಡೆಯರು ಮತ್ತು ಕೃಷ್ಣರಾಜ ಒಡೆಯರ) ನಾಮಾಂಕಿತ ಮಾಡಿದ್ದಾರೆ. ಹಿಂದುಸ್ತಾನಿ ಶೈಲಿಯಲ್ಲಿ ಒಂದು ಜಾವಡಿಯೂ ಉಂಟು. ಶೇಷಣ್ಣನವರ ಮನೋಧರ್ಮದ ಒಂದು ಝಳಕನ್ನು ಅವರ ಕೃತಿಗಳಲ್ಲಿ ಕಾಣಬಹುದು. ವಿಶೇಷವಾಗಿ ದಾಟುಸ್ವರ ಪ್ರಯೋಗಗಳು ಆಕರ್ಷಕವಾಗಿವೆ.

ಶೇಷಣ್ಣನವರು ಒಂದು ದೊಡ್ಡ ಶಿಷ್ಯವರ್ಗವನ್ನೇ ತರಬೇತುಗೊಳಿಸಿ ಮೈಸೂರು ವೀಣಾ ಪರಂಪರೆ ಅವ್ಯಾಹತವಾಗಿ ಮುಂದುವರಿಯುವಂತೆ ಮಾಡಿದ್ದಾರೆ. ಅವರಲ್ಲಿ ಪ್ರಮುಖರು ವೆಂಕಟಗಿರಿಯಪ್ಪ, ಶರ್ಮಾದೇವಿ ಸುಬ್ರಹ್ಮಣ್ಯ ಶಾಸ್ತ್ರೀ, ಭೈರವಿ ಲಕ್ಷ್ಮೀನಾರಾಯಣಪ್ಪ, ಚಿತ್ರಶಿಲ್ಪಿ ವೆಂಕಟಪ್ಪ, ವಿ. ನಾರಾಯಣ ಅಯ್ಯರ್‌, ತಿರುಮಲೆ ರಾಜಮ್ಮ, ಎಂ.ಎಸ್‌. ಭೀಮರಾವ್‌ ಹಾಗೂ ಶೇಷಣ್ಣನವರ ಅಣ್ಣನ ಮೊಮ್ಮಗ ಎ.ಎಸ್‌. ಚಂದ್ರಶೇಖರಯ್ಯ ಮತ್ತು ಮೊಮ್ಮಗ ವಿ.ಎನ್‌. ರಾವ್‌(ಸ್ವರಮೂರ್ತಿ). ಸುಬ್ಬಣ್ಣನವರೂ ಅವರಲ್ಲಿ ಕೆಲಕಾಲ ಕಲಿತದ್ದಲ್ಲದೆ, ಬಿಡಾರಂ ಕೃಷ್ಣಪ್ಪನವರೂ ಶಿಷ್ಯರಾಗಿಯೇ ವರ್ತಿಸಿದರು. ಮೈಸೂರು ಪ್ರಾಂತ್ಯದ ಬಹುಮಂದಿ ಕಲಾವಿದರು ಈ ತ್ರಿಮೂರ್ತಿಗಳಾದ ಶೇಷಣ್ಣ, ಸುಬ್ಬಣ್ಣ, ಕೃಷ್ಣಪ್ಪನವರ ಪರಂಪರೆಗೆ ಸೇರಿದವರೇ. ಹೀಗಾಗಿ ರಾಜ್ಯದ ಮುಂದಿನ ಬಹುತೇಕ ಹಿರಿಯ ವೈಣಿಕರುಗಳು ಶೇಷಣ್ಣನವರ ಶಿಷ್ಯ ಪರಂಪರೆಗೆ ಸೇರುತ್ತಾರೆ.

ಬರೋಡಾ ಆಸ್ಥಾನದಿಂದ ಮೌಲಾಭಕ್ಷ್‌ಎಂಬ ವಿದ್ವಾಂಸರು ಚಾಮರಾಜ ಒಡೆಯರ ಆಸ್ಥಾನಕ್ಕೆ ಆಗಮಿಸಿದರು. ಅವರ ಜಲತರಂಗ್‌ವಾದನ (ಹಿಂದುಸ್ತಾನಿ) ಅರಮನೆಯಲ್ಲಿ ನಡೆಯಿತು. ಆ ವಾದ್ಯದ ಕಿಣ ಕಿಣ ನಾದಕ್ಕೆ ಮಹಾರಾಜರು ಆಕರ್ಷಿತರಾದರು. ಇದರಿಂದ ಪ್ರೇರಿತರಾಗಿ ಶೇಷಣ್ಣನವರು ಆ ವಾದ್ಯವನ್ನು ಅತಿ ಕ್ಷಿಪ್ರದಲ್ಲೇ ಕರಗತ ಮಾಡಿಕೊಂಡರು. ಅಲ್ಲಿಂದ ಮುಂದೆ ವೀಣೆಯ ಜೊತೆ ಶೇಷಣ್ಣನವರ ಜಲತರಂಗ್‌ ಕಚೇರಿಗಳು ಸಹಾ ಎಲ್ಲ ಕಡೆ ನಡೆಯತೊಡಗಿದವು. ಕರ್ನಾಟಕ ಶಾಸ್ತ್ರೀಯ ಸಂಗೀತ ವೇದಿಕೆಯ ಮೇಲೆ ಜಲತರಂಗ ವಾದ್ಯಕ್ಕೆ ಒಂದು ಗೌರವಾನ್ವಿತ ಸ್ಥಾನ ತಂದುಕೊಟ್ಟವರು ಶೇಷಣ್ಣನವರೇ. ಇದಲ್ಲದೆ ಶೇಷಣ್ಣನವರು, ಪಿಟೀಲು, ಸ್ವರಬತ್‌, ಪಿಯಾನೋ ಮುಂತಾದ ವಾದ್ಯಗಳಲ್ಲೂ ಪ್ರಾವೀಣ್ಯತೆ ಪಡೆದಿದ್ದರು.

ಸುಪ್ರಸಿದ್ಧ ಥಿಯೊಸೊಫಿಸ್ಟರಾದ ಡಾ. ಕಸಿನ್ಸ್‌, ಎ.ಎಚ್‌. ಫಾಕ್ಸ್‌ ಸ್ಟ್ರಾಂಗ್ವೇಸ್‌, ಸರ್ ಈವಾನ್‌ ಮೆಕಾಂಜೆ ಮುಂತಾದವರು ಶೇಷಣ್ಣನವರ ವಿನಿಕೆ ತಮ್ಮ ಮೇಲೆ ಮಾಡಿದ ಪ್ರಭಾವವನ್ನು ದಾಖಲೆಗೊಳಿಸಿದ್ದಾರೆ. ‘ದಿ ಮ್ಯೂಸಿಕ್‌ ಆಫ್‌ ಒರಿಯೆಂಟ್‌ ಅಂಡ್‌ ಆಕ್ಸಿಡೆಂಟ್‌’ ಗ್ರಂಥದಲ್ಲಿ ಮಾರ್ಗರೇಟ್‌ ಕಸಿನ್ಸ್‌ರವರು ಶೇಷಣ್ಣನವರನ್ನು ‘ದಿ ಕಿಂಗ್ ಆಫ್ ವೀಣಾ ಪ್ಲೇಯರ್ಸ್’ ಎಂದು ಕರೆದಿದ್ದಾರೆ. ‘ಮ್ಯೂಸಿಕ್‌ ಆಫ್‌ ಹಿಂದೂಸ್ತಾನ್‌’ ಗ್ರಂಥದಲ್ಲಿ ಶೇಷಣ್ಣನವರ ಅಸಾಧ್ಯ ಪ್ರತಿಭೆ, ಎಣೆ ಇಲ್ಲದ ಮನೋಧರ್ಮಗಳನ್ನು ಕೊಂಡಾಡಿದ್ದಾರೆ. ದೇವುಡು, ಡಾ. ಡಿ.ವಿ. ಗುಂಡಪ್ಪ, ಡಾ. ರಾಳ್ಲಪಲ್ಲಿ ಅನಂತ ಕೃಷ್ಣಶರ್ಮ, ಡಾ. ವಿ.ಸೀತಾರಾಮಯ್ಯ, ತಿರುಮಲೆ ರಾಜಮ್ಮ, ಡಾ. ಮಾಸ್ತಿ ವೆಂಕಟೇಶ ಅಯ್ಯಂಗಾರ್‌, ಪ್ರೊ.ಎ.ಎನ್‌. ಮೂರ್ತಿರಾವ್‌, ಸ್ವರಮೂರ್ತಿ ವಿ. ಎನ್‌. ರಾವ್‌ ಮುಂತಾದವರುಗಳು ಶೇಷಣ್ಣನವರ ಜೀವನ ಸಾಧನೆಗಳನ್ನು ಕುರಿತು ತಮ್ಮ ಅನುಭವಗಳನ್ನು ದಾಖಲಿಸಿದ್ದಾರೆ.

ಶೇಷಣ್ಣನವರ ಎಲ್ಲ ರಚನೆಗಳನ್ನು ಮೈಸೂರಿನ ಸಂಗೀತ ಕಲಾವರ್ಧಿನೀ ಸಭಾದವರು ಪ್ರಕಟಿಸಿದ್ದಾರೆ, ಅಲ್ಲದೆ, ಭವನುತ, ಶ್ರೀ ರಘುವರ, ರಘುನಾಯಕ ಮುಂತಾದ ಕೆಲ ಕೀರ್ತನೆಗಳಿಗೆ ಚಿಟ್ಟೇ ಸ್ವರವನ್ನೂ ಹೆಣೆದಿದ್ದಾರೆ. ಬ್ರಿಟಿಷ್‌ ಚಕ್ರವರ್ತಿ ಐದನೇ ಜಾರ್ಜ್‌ರವರು ದೆಹಲಿಯಲ್ಲಿ ಒಂದು ರಾಜಸಭೆ ನಡೆಸಿದರು. ಅಲ್ಲಿ ಸಂಗೀತ ಕಚೇರಿ ಮಾಡಿದ ದಕ್ಷಿಣ ಭಾರತದ ಏಕೈಕ ಕಲಾವಿದರು ಶೇಷಣ್ಣನವರು! ಅವರ ವಿನಿಕೆ ಪಾಶ್ಚಾತ್ಯ ದೊರೆಯ ಮೇಲೆ ಗಾಢ ಪ್ರಭಾವವನ್ನು ಬೀರಿತು. ಆ ನಾದ ಸವಿಯನ್ನು ಸದಾ ಹಸಿರಾಗಿ ಇಟ್ಟುಕೊಳ್ಳಲು ಶೇಷಣ್ಣನವರ ಒಂದು ಭಾವಚಿತ್ರವನ್ನು ಜಾರ್ಜ್ ದೊರೆ ತಮ್ಮೊಂದಿಗೆ ತೆಗೆದುಕೊಂಡು ಹೋಗಿ ಬಕಿಂಗ್ ಹ್ಯಾಮ್ ಅರಮನೆಯಲ್ಲಿ ಅಲಂಕರಿಸಿದರು.

1924ರಲ್ಲಿ ಬೆಳಗಾಂನಲ್ಲಿ ಕಾಂಗ್ರೆಸ್‌ ಅಧಿವೇಶನ ನಡೆಯಿತು. ಮಹಾತ್ಮಗಾಂಧೀಜಿಯವರು ಅಧ್ಯಕ್ಷತೆ ವಹಿಸಿದ್ದ ಏಕೈಕ ಕಾಂಗ್ರೆಸ್‌ ಅಧಿವೇಶನವಿದು. ಆ ಸಂದರ್ಭದಲ್ಲಿ ವೀಣೆ ಶೇಷಣ್ಣನವರ ಸಂಗೀತವನ್ನು ತಲ್ಲೀನರಾಗಿ ಸವಿದ ಮಾಹಾತ್ಮರು ‘ಇದು ದೇವಗಾನ! ಇದನ್ನು ಕೇಳಿದ ನಾವೇ ಧನ್ಯರು!’ ಎಂದು ಉದ್ಗರಿಸಿದರು.

ತಂಜಾವೂರಿನ ಕೃಷ್ಣಸ್ವಾಮಿನಾಯಕರ ಮನೆಯಲ್ಲಿ ಒಂದು ಸಂಗೀತ ಗೋಷ್ಠಿ. ಕರ್ನಾಟಕ ಸಂಗೀತದ ಪ್ರಸಿದ್ಧ ವಿದ್ವಾಂಸರುಗಳಾದ ಮಹಾ ವೈದ್ಯನಾಥ ಅಯ್ಯರ್‌, ಶರಭ ಶಾಸ್ತ್ರಿ, ತಿರುಕ್ಕೋಡಿ ಕಾವಲ್‌ಕೃಷ್ಣಯ್ಯರ್‌, ವೀಣೆ ಶೇಷಣ್ಣ, ನಾರಾಯಣಸ್ವಾಮಪ್ಪ ಮುಂತಾದ ದಿಗ್ಗಜಗಳು ಸೇರಿದ್ದ ಅಪರೂಪ ಸಭೆ. ಈ ಹಿರಿಯರನ್ನು ಉದ್ದೇಶಿಸಿ ಕೃಷ್ಣಸ್ವಾಮಿ ನಾಯಕರು. “ತಾವೆಲ್ಲ ವಿದ್ವಾಂಸರುಗಳಿದ್ದೀರಿ! ತಮ್ಮಲ್ಲೇ ಶ್ರೇಷ್ಠರು ಯಾರು? ಎಂದು ತಾವುಗಳೇ ನಿರ್ಧರಿಸಬೇಕು. ತಾವುಗಳೇ ನಿರ್ಧರಿಸಿದ ಅಗ್ರರಲ್ಲಿ ಅಗ್ರಗಣ್ಯರಾದ ಕಲಾವಿದರಿಗೆ ಈ ಸೀಮೆ ಕಮಲದ ಉಂಗುರವನ್ನು ಪ್ರಧಾನ ಮಾಡಬೇಕು” ಎಂದು ಅರಿಕೆ ಮಾಡಿಕೊಂಡರು. ಕಚೇರಿ ಪ್ರಾರಂಭವಾಯಿತು. ಪೈಪೋಟಿಯಂತಿದ್ದ ವಿದ್ವತ್ಪೂರ್ಣ ಕಚೇರಿಗಳು! ಒಬ್ಬರನ್ನು ಮೀರಿಸಿದ ಪ್ರತಿಭೆ ಇನ್ನೊಬ್ಬರದು. ಪಾಂಡಿತ್ಯ, ಪ್ರತಿಭೆ, ಸೃಜನಶೀಲತೆಗಳು ಮುಪ್ಪರಿಗೊಂಡ ವಿದ್ವಾಂಸರುಗಳು!. ಅವರಲ್ಲಿ ಪ್ರಶಸ್ತಿಗೆ ಚುನಾಯಿಸುವುದು ತೀರಾ ಕಷ್ಟದ ಕೆಲಸವಾಗಿ ಕಂಡಿತು. ಆಗ, ಮಹಾವೈದ್ಯನಾಥ ಅಯ್ಯರ್‌ಅವರು ಎದ್ದುನಿಂತು. “ನಾವೆಲ್ಲಾ ಹಿರಿಯ ಕಲಾವಿದರೇ, ಪಾಂಡಿತ್ಯಪೂರ್ಣವಾಗಿ ಹಾಡಿ-ನುಡಿಸಿದ್ದೇವೆ. ಆದರೆ, ಒಬ್ಬ ವಿದ್ವಾಂಸರನ್ನು ಮಾತ್ರ ಯಾರೂ ಮೀರಿಸಲಾಗಲಿಲ್ಲ. ಆ ಅದ್ವಿತೀಯ ಕಲಾವಿದರೇ ವೀಣೆ ಶೇಷಣ್ಣನವರು! ಅವರ ನಾದ ಮಾಧುರ್ಯ, ಎಣೆ ಇಲ್ಲದ ಮನೋಧರ್ಮ, ಸುಖವಾದ ವಿನಿಕೆ. ಅದ್ಭುತವಾದುದು. ಆದ್ದರಿಂದ ಈ ಪ್ರಶಸ್ತಿ ಅವರಿಗೇ ಸಲ್ಲಬೇಕು” ಎಂದರು. ಈ ಅಭಿಪ್ರಾಯವನ್ನು ತಿರುಕ್ಕೋಡಿವಲ್‌ ಕೃಷ್ಣಯ್ಯರ್‌ ಅವರು ಅನುಮೋದಿಸಿ, ಶೇಷಣ್ಣನವರನ್ನು “ಪುರುಷ ಸರಸ್ವತಿ” ಎಂದು ಕರೆದರು. ಸಭೆ ಈ ಅಭಿಪ್ರಾಯವನ್ನು ಒಪ್ಪಿ ಅನುಮೋದಿಸಿತು. ಹೀಗೆ ಶೇಷಣ್ಣನವರು ತಮ್ಮ ಸಮಕಾಲೀನ ಕಲಾ ಪ್ರಪಂಚದಲ್ಲೇ ಗೌರವಾನ್ವಿತರಾಗಿ “ವಿದ್ವಾಂಸರ ವಿದ್ವಾಂಸರಾಗಿ” ಬೆಳಗಿದರು.

ಶೇಷಣ್ಣನವರಿಗೆ ನಾಲ್ವಡಿ ಕೃಷ್ಣರಾಜ ಒಡೆಯರು 1902ರಲ್ಲಿ ನೀಡಿದ ‘ವೈಣಿಕ ಶಿಖಾಮಣಿ’ ಬಿರುದು ಅನ್ವರ್ಥವಾಯಿತು. ಮಹಾರಾಜರ ಸಮ್ಮುಖದಲ್ಲಿ ಕಚೇರಿ ಮಾಡಬಯಸುವವರು ಮೊದಲು ಶೇಷಣ್ಣನವರ ಮುಂದೆ ಹಾಡಬೇಕಿತ್ತು. ಅರ್ಹರಾದ ಕಲಾವಿದರನ್ನು ಶೇಷಣ್ಣನವರು ಅರಮನೆಗೆ ಶಿಫಾರ್ಸು ಮಾಡುತ್ತಿದ್ದರು. ಕಲಾವಿದರ ಎಲ್ಲ ಒಳ್ಳೆಯ ಸಂಗತಿಗಳಿಗೆ ತಲೆದೂಗಿ ಶಹಭಾಸ್‌ಗಿರಿ ಹೇಳಿ ಪ್ರೋತ್ಸಾಹಿಸುತ್ತಿದ್ದರು. “ಸುನಾದ ನನ್ನ ಕೈನಲ್ಲಿ ಬಂದರೇನು? ಇನ್ನೊಬ್ಬರ ಕೈಯಲ್ಲಿ ಬಂದರೇನು” ಎಂಬ ಅವರ ಮಾತು ಒಬ್ಬ ನಾದೋಪಾಸಕನಿಗೆ ತಕ್ಕುದಾದುದು. 1926ರ ಜುಲೈ 25ರಂದು ಶೇಷಣ್ಣನವರು ಸರಸ್ವತಿಯ ಪಾದಾರವಿಂದವನ್ನು ಸೇರಿದರು. ಆಗ ಎ.ಆರ್‌.ಕೃಷ್ಣಶಾಸ್ತ್ರಿಗಳು ಪ್ರಬುದ್ಧ ಕರ್ನಾಟಕದ ಸಂಪಾದಕೀಯದಲ್ಲಿ “ಸರಸ್ವತಿಯ ಮನೆಯಲ್ಲಿ ಕಳುವಾಯಿತು” ಎಂದು ಬರೆದುದು ಎಷ್ಟು ಅರ್ಥಪೂರ್ಣ! ಸಂಗೀತ ಕ್ಷೇತ್ರದ ಧ್ರುವತಾರೆಗಳಲ್ಲಿ ಒಬ್ಬರಾದ ಶೇಷಣ್ಣನವರು ಎಂದೂ ಪ್ರಾತಃ ಸ್ಮರಣೀಯರು. ಈ ಮಹಾನ್ ಚೇತನಕ್ಕೆ ನಮ್ಮ ನಮನ.

(ಕೃಪೆ: ಮೈಸೂರು ವಿ. ಸುಬ್ರಹ್ಮಣ್ಯ ಅವರ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಪ್ರಕಟಣೆಯಾದ ‘ಕಲಾ ಚೇತನ’ದಲ್ಲಿನ ಲೇಖನದ ಸಂಕ್ಷಿಪ್ತ ರೂಪ)

ಅಂಕಣ

ಭಾಷೆ ಗಡಿಗಳ ಮೀರಿ ಮೊಳಗಿದ ಧ್ವನಿ ; ಗಾನಕೋಗಿಲೆ ಎಸ್. ಜಾನಕಿ ನಿರ್ಗಮನ

Published

on

ಭಾರತೀಯ ಚಿತ್ರಸಂಗೀತದ ಇತಿಹಾಸದಲ್ಲಿ ಕೆಲವೇ ಕೆಲವು ಧ್ವನಿಗಳು ಕಾಲವನ್ನು ಮೀರಿ ಅಮರತ್ವ ಪಡೆದಿವೆ. ಅಂತಹ ಅಮರ ಸ್ವರಗಳಲ್ಲಿ ಅತ್ಯಂತ ಪ್ರಕಾಶಮಾನವಾದ ಹೆಸರು ಎಸ್. ಜಾನಕಿ. ತಮ್ಮ ಅಪೂರ್ವ ಕಂಠಸಿರಿಯಿಂದ ಆರು ದಶಕಗಳಿಗೂ ಹೆಚ್ಚು ಕಾಲ ಕೋಟ್ಯಂತರ ಸಂಗೀತಾಭಿಮಾನಿಗಳ ಹೃದಯವನ್ನು ಗೆದ್ದಿದ್ದ ಈ ಮಹಾನ್ ಹಿನ್ನೆಲೆ ಗಾಯಕಿ ಇಹಲೋಕ ತ್ಯಜಿಸಿದ್ದಾರೆ. ಅವರ ನಿಧನವು ಕೇವಲ ಒಬ್ಬ ಗಾಯಕಿಯ ಅಗಲಿಕೆಯಲ್ಲ; ಭಾರತೀಯ ಸಂಗೀತ ಪರಂಪರೆಯ ಒಂದು ಮಹತ್ತರ ಯುಗದ ಅಂತ್ಯವಾಗಿದೆ.

ಸಂಗೀತವು ಭಾಷೆಯ ಎಲ್ಲೆಗಳನ್ನು ಮೀರಿ ಹೃದಯವನ್ನು ತಲುಪುವ ಮಾಧ್ಯಮ. ಆ ಸತ್ಯವನ್ನು ತಮ್ಮ ಗಾಯನದ ಮೂಲಕ ಸಾಬೀತುಪಡಿಸಿದ ಕಲಾವಿದೆ ಎಸ್. ಜಾನಕಿ. ಅವರು ಹಾಡಿದ ಸಾವಿರಾರು ಗೀತೆಗಳು ಇಂದಿಗೂ ಪ್ರೀತಿ, ವಿರಹ, ಭಕ್ತಿ, ಮಾತೃತ್ವ, ಸಂತೋಷ ಮತ್ತು ಬದುಕಿನ ಸೂಕ್ಷ್ಮ ಭಾವನೆಗಳಿಗೆ ಧ್ವನಿಯಾಗಿವೆ. ಅವರ ಕಂಠ ಕೇಳಿದ ಕ್ಷಣವೇ ಹಾಡಿನ ಪಾತ್ರ ಜೀವಂತವಾಗಿ ಕಣ್ಣೆದುರು ಮೂಡುತ್ತಿತ್ತು. ಅದೇ ಅವರ ಗಾಯನದ ಮಹತ್ವ.

ಸಾಮಾನ್ಯ ಕುಟುಂಬದಿಂದ ಸಂಗೀತ ಸಾಮ್ರಾಜ್ಯದವರೆಗೆ

1938ರ ಏಪ್ರಿಲ್ 23ರಂದು ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ರೆಪಲ್ಲೆ ಸಮೀಪ ಜನಿಸಿದ ಜಾನಕಿ, ಬಾಲ್ಯದಿಂದಲೇ ಸಂಗೀತದತ್ತ ಅತೀವ ಆಸಕ್ತಿ ಹೊಂದಿದ್ದರು. ಮನೆಯಲ್ಲಿದ್ದ ಸಂಗೀತದ ವಾತಾವರಣವೇ ಅವರ ಪ್ರತಿಭೆಗೆ ಮೊದಲ ಪ್ರೇರಣೆ. ಸಂಪ್ರದಾಯಬದ್ಧ ಸಂಗೀತ ಶಿಕ್ಷಣ ಸೀಮಿತವಾಗಿದ್ದರೂ, ದೇವರು ನೀಡಿದ ಸಹಜ ಕಂಠವೇ ಅವರನ್ನು ಅಪರೂಪದ ಗಾಯಕಿಯನ್ನಾಗಿ ರೂಪಿಸಿತು.

ಕುಟುಂಬದ ಬೆಂಬಲದೊಂದಿಗೆ ಅವರು ಆಗಿನ ಮದ್ರಾಸಿಗೆ ತೆರಳಿ ಹಿನ್ನೆಲೆ ಗಾಯನದಲ್ಲಿ ಅವಕಾಶ ಹುಡುಕಿದರು. ಆರಂಭದ ದಿನಗಳು ಸುಲಭವಾಗಿರಲಿಲ್ಲ. ಆದರೆ ಪ್ರತಿಭೆ, ಶ್ರಮ ಮತ್ತು ಸಂಗೀತದ ಮೇಲಿನ ಅಚಲ ನಿಷ್ಠೆ ಅವರನ್ನು ಬೇಗನೇ ಸಂಗೀತ ನಿರ್ದೇಶಕರ ಗಮನಕ್ಕೆ ತಂದಿತು. 1957ರಲ್ಲಿ ಆರಂಭವಾದ ಅವರ ಗಾಯನಯಾನ, ನಂತರ ಭಾರತದ ಸಂಗೀತ ಇತಿಹಾಸದಲ್ಲೇ ಅತ್ಯಂತ ದೀರ್ಘ ಹಾಗೂ ಯಶಸ್ವಿ ಪಯಣಗಳಲ್ಲಿ ಒಂದಾಗಿ ಬೆಳೆಯಿತು.

ಭಾಷೆಗಳ ಗಡಿಗಳನ್ನು ಮೀರಿ ಮೊಳಗಿದ ಧ್ವನಿ

ತೆಲುಗು, ಕನ್ನಡ, ತಮಿಳು, ಮಲಯಾಳಂ, ಹಿಂದಿ, ಒಡಿಯಾ, ತುಳು, ಕೊಂಕಣಿ ಸೇರಿದಂತೆ ಅನೇಕ ಭಾರತೀಯ ಭಾಷೆಗಳಲ್ಲಿ ಅವರು ಸಾವಿರಾರು ಹಾಡುಗಳನ್ನು ಹಾಡಿದರು. ವಿವಿಧ ಮೂಲಗಳ ಪ್ರಕಾರ ಅವರು 40 ಸಾವಿರಕ್ಕೂ ಅಧಿಕ ಗೀತೆಗಳಿಗೆ ಧ್ವನಿಯಾಗಿದ್ದಾರೆ.

ಪ್ರತಿ ಭಾಷೆಯ ಉಚ್ಚಾರಣೆಯನ್ನು ಅತ್ಯಂತ ಶ್ರದ್ಧೆಯಿಂದ ಕಲಿತು, ಆ ಭಾಷೆಯವರೇ ಹಾಡಿದಂತೆ ಹಾಡುವುದು ಅವರ ವಿಶೇಷತೆ. ಅದಕ್ಕಾಗಿಯೇ ಅವರು ಹಾಡಿದ ಗೀತೆಗಳನ್ನು ಯಾವ ರಾಜ್ಯದ ಜನರೂ ತಮ್ಮದೇ ಭಾಷೆಯ ಹಾಡುಗಳೆಂದು ಪ್ರೀತಿಸಿದರು. ಒಬ್ಬ ಗಾಯಕಿಗೆ ಇದಕ್ಕಿಂತ ದೊಡ್ಡ ಗೌರವ ಮತ್ತೊಂದಿಲ್ಲ.

ಕನ್ನಡಿಗರ ಮನದ ಜಾನಕಿ

ಕರ್ನಾಟಕದ ಸಂಗೀತಾಸಕ್ತರಿಗೆ ಎಸ್. ಜಾನಕಿ ಎಂದರೆ ವಿಶೇಷವಾದ ಭಾವನಾತ್ಮಕ ಬಂಧ. ಕನ್ನಡ ಚಿತ್ರರಂಗದ ಸುವರ್ಣಯುಗದ ನೂರಾರು ಅಮರಗೀತೆಗಳಿಗೆ ಅವರು ಜೀವ ತುಂಬಿದ್ದಾರೆ.

ಡಾ. ರಾಜ್‌ಕುಮಾರ್, ವಿಷ್ಣುವರ್ಧನ್, ಅಂಬರೀಷ್, ಶಂಕರ್ ನಾಗ್, ಅನಂತ್ ನಾಗ್, ರಮೇಶ್ ಅರವಿಂದ್ ಸೇರಿದಂತೆ ಹಲವು ತಲೆಮಾರಿನ ನಟ–ನಟಿಯರ ಭಾವನೆಗಳಿಗೆ ಅವರ ಧ್ವನಿಯೇ ಆತ್ಮವಾಗಿತ್ತು.

ವಿಜಯಭಾಸ್ಕರ್, ಜಿ.ಕೆ. ವೆಂಕಟೇಶ್, ರಾಜನ್–ನಾಗೇಂದ್ರ, ಉಪೇಂದ್ರ ಕುಮಾರ್, ಹಂಸಲೇಖ ಸೇರಿದಂತೆ ಕನ್ನಡದ ಶ್ರೇಷ್ಠ ಸಂಗೀತ ನಿರ್ದೇಶಕರೊಂದಿಗೆ ಅವರು ನೀಡಿದ ಹಾಡುಗಳು ಇಂದಿಗೂ ಸಂಗೀತಾಸಕ್ತರ ತುಟಿಗಳಲ್ಲಿ ಜೀವಂತವಾಗಿವೆ.

ಪ್ರೇಮಗೀತೆಗಳಾಗಲಿ, ಭಕ್ತಿಗೀತೆಗಳಾಗಲಿ, ಜಾನಪದ ಸೊಗಡಿನ ಹಾಡುಗಳಾಗಲಿ ಅಥವಾ ವಿರಹದ ಮೌನವನ್ನು ಹೇಳುವ ಮಧುರಗೀತೆಗಳಾಗಲಿ—ಜಾನಕಿ ಅವರ ಧ್ವನಿ ಪ್ರತಿಯೊಂದು ಭಾವಕ್ಕೂ ಹೊಸ ಅರ್ಥ ನೀಡುತ್ತಿತ್ತು.

ಇಳಯರಾಜಾ–ಜಾನಕಿ: ಸಂಗೀತದ ಅದ್ಭುತ ಜೋಡಿ

ತಮಿಳು ಚಿತ್ರರಂಗದಲ್ಲಿ ಸಂಗೀತ ನಿರ್ದೇಶಕ ಇಳಯರಾಜಾ ಮತ್ತು ಎಸ್. ಜಾನಕಿ ಅವರ ಸಂಗಮ ಭಾರತೀಯ ಚಿತ್ರಸಂಗೀತದ ಅತ್ಯಂತ ಯಶಸ್ವಿ ಜೋಡಿಗಳಲ್ಲಿ ಒಂದು.

ಇಳಯರಾಜಾ ಅವರ ಸಂಗೀತದ ಸೂಕ್ಷ್ಮ ಭಾವಗಳನ್ನು ಜಾನಕಿ ತಮ್ಮ ಧ್ವನಿಯಲ್ಲಿ ಜೀವಂತಗೊಳಿಸುತ್ತಿದ್ದರು. ಈ ಜೋಡಿಯ ಅನೇಕ ಗೀತೆಗಳು ಇಂದಿಗೂ ದಕ್ಷಿಣ ಭಾರತದ ಸಂಗೀತಾಭಿಮಾನಿಗಳ ನಿತ್ಯ ಸಂಗಾತಿಗಳಾಗಿವೆ.

ಅದೇ ರೀತಿ ಎಂ.ಎಸ್. ವಿಶ್ವನಾಥನ್, ಕೆ.ವಿ. ಮಹಾದೇವನ್, ಚಕ್ರವರ್ತಿ, ಹಂಸಲೇಖ, ರಾಜನ್–ನಾಗೇಂದ್ರ, ವಿಜಯಭಾಸ್ಕರ್ ಮೊದಲಾದ ದಿಗ್ಗಜರ ಸಂಗೀತಕ್ಕೂ ಅವರು ವಿಶಿಷ್ಟ ಕಂಠಸಿರಿ ನೀಡಿದ್ದಾರೆ.

ಧ್ವನಿಯೊಳಗಿದ್ದ ಸಾವಿರ ರೂಪಗಳು

ಎಸ್. ಜಾನಕಿ ಅವರ ಗಾಯನದ ಅತ್ಯಂತ ದೊಡ್ಡ ವೈಶಿಷ್ಟ್ಯವೆಂದರೆ ಧ್ವನಿಯ ರೂಪಾಂತರ. ಒಂದು ಹಾಡಿನಲ್ಲಿ ಮಗು ಮಾತನಾಡಿದಂತೆ ಹಾಡಬಲ್ಲರು; ಮತ್ತೊಂದು ಹಾಡಿನಲ್ಲಿ ವಯಸ್ಸಾದ ಮಹಿಳೆಯ ಭಾವನೆ ಮೂಡಿಸುತ್ತಿದ್ದರು. ಕೆಲವೊಮ್ಮೆ ಗ್ರಾಮೀಣ ಹುಡುಗಿಯ ಮುಗ್ಧತೆ, ಮತ್ತೊಮ್ಮೆ ನಗರ ಮಹಿಳೆಯ ಆತ್ಮವಿಶ್ವಾಸ, ಇನ್ನೊಮ್ಮೆ ತಾಯಿಯ ಮಮತೆ, ಮತ್ತೆ ಭಕ್ತೆಯ ಪ್ರಾರ್ಥನೆ—ಪ್ರತಿ ಭಾವಕ್ಕೂ ಬೇರೆ ಧ್ವನಿಯನ್ನು ನೀಡುವ ಸಾಮರ್ಥ್ಯ ಅವರಿಗೆ ಮಾತ್ರ ಸಾಧ್ಯವಾಗಿತ್ತು. ಅವರ ಧ್ವನಿ ಕೇವಲ ಸಂಗೀತವಲ್ಲ; ಅದು ಅಭಿನಯವೂ ಆಗಿತ್ತು.

ಶ್ರಮ, ಶಿಸ್ತು ಮತ್ತು ಪರಿಪೂರ್ಣತೆಯ ಪ್ರತೀಕ

ಒಂದು ಹಾಡನ್ನು ಹಾಡುವ ಮೊದಲು ಅದರ ಸಾಹಿತ್ಯವನ್ನು ಸಂಪೂರ್ಣ ಅರ್ಥೈಸಿಕೊಳ್ಳುವುದು ಅವರ ಅಭ್ಯಾಸ. ಉಚ್ಚಾರಣೆಯಲ್ಲಿ ಯಾವುದೇ ತಪ್ಪು ಆಗಬಾರದು ಎಂಬ ಕಾರಣಕ್ಕೆ ಹೊಸ ಭಾಷೆಗಳನ್ನು ಸಹ ಕಲಿಯುತ್ತಿದ್ದರು.

ರೆಕಾರ್ಡಿಂಗ್ ಸ್ಟುಡಿಯೋದಲ್ಲಿ ಸಮಯಪಾಲನೆ, ಶಿಸ್ತು ಹಾಗೂ ಸಂಗೀತದ ಮೇಲಿನ ಅಪಾರ ಗೌರವದಿಂದ ಅವರು ಎಲ್ಲರ ಪ್ರೀತಿಗೆ ಪಾತ್ರರಾಗಿದ್ದರು.

ಸಂಗೀತ ನಿರ್ದೇಶಕರು ಅನೇಕ ಬಾರಿ ಹೇಳಿದ್ದೇನಂದರೆ, ಜಾನಕಿ ಹಾಡನ್ನು ಒಮ್ಮೆ ಅರ್ಥ ಮಾಡಿಕೊಂಡರೆ ಅದನ್ನು ಮತ್ತೆ ವಿವರಿಸುವ ಅಗತ್ಯವೇ ಇರಲಿಲ್ಲ.

ಪ್ರಶಸ್ತಿಗಳಿಗಿಂತ ದೊಡ್ಡದು ಜನರ ಪ್ರೀತಿ

ಎಸ್. ಜಾನಕಿ ಅವರು ನಾಲ್ಕು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಪಡೆದಿದ್ದಾರೆ. ವಿವಿಧ ರಾಜ್ಯ ಸರ್ಕಾರಗಳಿಂದ ಮೂವತ್ತಕ್ಕೂ ಅಧಿಕ ಅತ್ಯುತ್ತಮ ಹಿನ್ನೆಲೆ ಗಾಯಕಿ ಪ್ರಶಸ್ತಿಗಳು ಅವರಿಗೆ ಸಂದಿವೆ. ಆದರೆ ಅವರು ಎಂದಿಗೂ ಪ್ರಶಸ್ತಿಗಳಿಗಾಗಿ ಹಾಡಲಿಲ್ಲ. ಸಂಗೀತವೇ ಅವರ ಧ್ಯಾನ, ಗಾಯನವೇ ಅವರ ಪೂಜೆ.

ಪದ್ಮಭೂಷಣ ಪ್ರಶಸ್ತಿಯನ್ನು ಅವರು ವಿನಯಪೂರ್ವಕವಾಗಿ ನಿರಾಕರಿಸಿದ್ದು ದೇಶಾದ್ಯಂತ ಚರ್ಚೆಗೆ ಕಾರಣವಾಗಿತ್ತು. ತಮ್ಮ ಸಾಧನೆಗೆ ತಡವಾಗಿ ಗೌರವ ನೀಡಲಾಗಿದೆ ಎಂಬ ಭಾವನೆಯನ್ನು ಅವರು ಅತ್ಯಂತ ಗೌರವಯುತವಾಗಿ ವ್ಯಕ್ತಪಡಿಸಿದ್ದರು.

ಎಸ್.ಪಿ.ಬಿ.–ಜಾನಕಿ: ಮರೆಯಲಾಗದ ಸಂಗೀತಯಾನ

ಎಸ್.ಪಿ. ಬಾಲಸುಬ್ರಹ್ಮಣ್ಯಂ ಮತ್ತು ಎಸ್. ಜಾನಕಿ ಅವರ ಜೋಡಿ ಭಾರತೀಯ ಚಿತ್ರಸಂಗೀತದ ಅತ್ಯಂತ ಜನಪ್ರಿಯ ಗಾಯನ ಜೋಡಿಗಳಲ್ಲಿ ಒಂದು.

ಅವರಿಬ್ಬರು ಹಾಡಿದ ಸಾವಿರಾರು ಯುಗಲಗೀತೆಗಳು ಇಂದಿಗೂ ರೇಡಿಯೋಗಳಲ್ಲಿ, ಸಂಗೀತ ಕಾರ್ಯಕ್ರಮಗಳಲ್ಲಿ ಮತ್ತು ಅಭಿಮಾನಿಗಳ ನೆನಪುಗಳಲ್ಲಿ ಸದಾ ಕೇಳಿಸುತ್ತಿವೆ.ಇವರ ಗಾಯನದಲ್ಲಿ ಸ್ಪರ್ಧೆಯಿರಲಿಲ್ಲ; ಪರಸ್ಪರ ಪೂರಕವಾದ ಸಂಗೀತ ಮಾತ್ರ ಇತ್ತು.

ಸರಳತೆಯೇ ಅವರ ಅಲಂಕಾರ

ಅಸಂಖ್ಯಾತ ಪ್ರಶಸ್ತಿಗಳು, ಲಕ್ಷಾಂತರ ಅಭಿಮಾನಿಗಳು, ದೇಶವ್ಯಾಪಿ ಖ್ಯಾತಿ—ಇವೆಲ್ಲ ಇದ್ದರೂ ಎಸ್. ಜಾನಕಿ ಅತ್ಯಂತ ಸರಳ ಜೀವನ ನಡೆಸಿದರು.ವೇದಿಕೆಯಲ್ಲಿ ಎಂದಿಗೂ ಆಡಂಬರ ತೋರಲಿಲ್ಲ. ಸಂದರ್ಶನಗಳಲ್ಲಿಯೂ ತಮ್ಮ ಸಾಧನೆಗಿಂತ ಸಂಗೀತದ ಮಹತ್ವದ ಬಗ್ಗೆ ಹೆಚ್ಚು ಮಾತನಾಡುತ್ತಿದ್ದರು.ಹೊಸ ಗಾಯಕರಿಗೆ ಪ್ರೋತ್ಸಾಹ ನೀಡುವುದು, ಅವರನ್ನು ಮೆಚ್ಚುವುದು ಮತ್ತು ಸಂಗೀತವನ್ನು ಗೌರವಿಸುವಂತೆ ಸಲಹೆ ನೀಡುವುದು ಅವರ ಸ್ವಭಾವವಾಗಿತ್ತು.

ಹೊಸ ತಲೆಮಾರಿನಲ್ಲೂ ಜೀವಂತ ಧ್ವನಿ

ಡಿಜಿಟಲ್ ಸಂಗೀತದ ಯುಗದಲ್ಲಿಯೂ ಎಸ್. ಜಾನಕಿ ಅವರ ಹಾಡುಗಳ ಜನಪ್ರಿಯತೆ ಕಡಿಮೆಯಾಗಲಿಲ್ಲ. ಯೂಟ್ಯೂಬ್, ಸಂಗೀತ ಆ್ಯಪ್‌ಗಳು, ರಿಯಾಲಿಟಿ ಶೋಗಳು, ಸಾಮಾಜಿಕ ಜಾಲತಾಣಗಳು—ಎಲ್ಲೆಡೆ ಅವರ ಹಾಡುಗಳು ಹೊಸ ತಲೆಮಾರಿನ ಕಿವಿಗಳಿಗೆ ತಲುಪುತ್ತಲೇ ಇವೆ. ಇಂದಿನ ಅನೇಕ ಯುವ ಗಾಯಕ–ಗಾಯಕಿಯರು ತಮ್ಮ ಸಂಗೀತಯಾನದ ಪ್ರೇರಣೆಯಾಗಿ ಜಾನಕಿ ಅವರನ್ನು ಉಲ್ಲೇಖಿಸುತ್ತಾರೆ.

ಸಂಗೀತ ಲೋಕದ ಕಂಬನಿ

ಅವರ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ದೇಶದಾದ್ಯಂತ ಸಂಗೀತ ಲೋಕದಲ್ಲಿ ಶೋಕದ ಛಾಯೆ ಆವರಿಸಿತು. ಚಿತ್ರರಂಗದ ಗಣ್ಯರು, ಸಂಗೀತ ನಿರ್ದೇಶಕರು, ಗಾಯಕ–ಗಾಯಕಿಯರು, ಸಾಹಿತ್ಯಿಕರು, ರಾಜಕೀಯ ನಾಯಕರು ಹಾಗೂ ಲಕ್ಷಾಂತರ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳ ಮೂಲಕ ಭಾವಪೂರ್ಣ ನಮನ ಸಲ್ಲಿಸಿದರು.

“ಒಂದು ಯುಗ ಮುಗಿಯಿತು”, “ಗಾನಕೋಗಿಲೆಯ ಧ್ವನಿ ಎಂದೆಂದಿಗೂ ಜೀವಂತ”, “ನಮ್ಮ ಜೀವನದ ನೆನಪುಗಳಿಗೆ ಹಿನ್ನೆಲೆ ಸಂಗೀತ ನೀಡಿದ ಧ್ವನಿ” ಎಂಬ ಮಾತುಗಳು ಎಲ್ಲೆಡೆ ಕೇಳಿಬಂದವು.

ಕನ್ನಡಿಗರ ನೆನಪಿನಲ್ಲಿ ಎಂದೆಂದಿಗೂ

ಕರ್ನಾಟಕದ ಮನೆಮನೆಗಳಲ್ಲೂ ಎಸ್. ಜಾನಕಿ ಅವರ ಹಾಡುಗಳು ಇಂದಿಗೂ ಬೆಳಗಿನ ಭಕ್ತಿಗೀತೆಗಳಾಗಿ, ಪ್ರೇಮಗೀತೆಗಳಾಗಿ, ಹಬ್ಬದ ಸಂಭ್ರಮವಾಗಿ, ಬದುಕಿನ ನೆನಪುಗಳಾಗಿ ಮೊಳಗುತ್ತಿವೆ.

ಅವರ ಧ್ವನಿ ಅನೇಕ ಕುಟುಂಬಗಳ ಭಾವನೆಗಳ ಒಂದು ಭಾಗವಾಗಿದೆ. ತಾಯಿಯ ನೆನಪಿನಲ್ಲಿ, ಪ್ರೀತಿಯ ನೆನಪಿನಲ್ಲಿ, ಬಾಲ್ಯದ ನೆನಪಿನಲ್ಲಿ, ಹಬ್ಬದ ಸಂಭ್ರಮದಲ್ಲಿ—ಎಲ್ಲೆಲ್ಲೂ ಜಾನಕಿ ಅವರ ಹಾಡುಗಳಿವೆ.

ಸ್ವರ ಮೌನವಾದರೂ…

ಕಾಲ ಬದಲಾಗಬಹುದು. ಸಂಗೀತದ ಶೈಲಿಗಳು ಬದಲಾಗಬಹುದು. ಹೊಸ ತಂತ್ರಜ್ಞಾನಗಳು ಬರಬಹುದು. ಆದರೆ ಭಾವನೆಗೆ ಜೀವ ತುಂಬುವ ಧ್ವನಿಗಳು ಅಪರೂಪ.

ಎಸ್. ಜಾನಕಿ ಅಂತಹ ಅಪರೂಪದ ಧ್ವನಿ. ಅವರ ದೇಹ ನಮ್ಮೊಂದಿಗಿಲ್ಲ. ಆದರೆ ಅವರು ಹಾಡಿದ ಪ್ರತಿಯೊಂದು ಗೀತೆ ಮುಂದಿನ ಹಲವು ತಲೆಮಾರುಗಳಿಗೂ ಬದುಕಿನ ಸಂಗಾತಿಯಾಗಿರುತ್ತದೆ. ಸಂಗೀತ ಇತಿಹಾಸವನ್ನು ಬರೆಯುವಾಗ ಅವರ ಹೆಸರನ್ನು ಬಿಟ್ಟು ಮುಂದೆ ಸಾಗುವುದು ಅಸಾಧ್ಯ. ಮರಣವು ಒಬ್ಬ ವ್ಯಕ್ತಿಯನ್ನು ಮಾತ್ರ ಕಸಿದುಕೊಳ್ಳಬಹುದು; ಅವರು ಸೃಷ್ಟಿಸಿದ ಕಲೆಯನ್ನು ಅಲ್ಲ.

ಎಸ್. ಜಾನಕಿ ಅವರ ಸ್ವರ ಇಂದು ಮೌನವಾಗಿದೆ. ಆದರೆ ಅವರು ಹಾಡಿದ ಸಾವಿರಾರು ಗೀತೆಗಳು ಭಾರತೀಯ ಸಂಗೀತಾಕಾಶದಲ್ಲಿ ಶಾಶ್ವತವಾಗಿ ಪ್ರತಿಧ್ವನಿಸುತ್ತಲೇ ಇರುತ್ತವೆ.
ಅವರ ಕಂಠಸಿರಿ ಕಾಲವನ್ನು ಮೀರಿದೆ.
ಅವರ ಸಂಗೀತ ತಲೆಮಾರುಗಳನ್ನು ಮೀರಿದೆ.
ಅವರ ನೆನಪು ಎಂದಿಗೂ ಅಳಿಯದು.

ಸ್ವರ ಮೌನವಾಗಿದೆ… ಆದರೆ ಸಂಗೀತ ಅಮರವಾಗಿದೆ. ಅದೇ ಎಸ್. ಜಾನಕಿ ಅವರ ಶಾಶ್ವತ ಪರಂಪರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಅಂಕಣ

ದೀಪಾವಳಿ ವಿಶೇಷಾಂಕ | ದೇವನಗರಿ ಸುದ್ದಿದಿನ ಪತ್ರಿಕೆಯಿಂದ ಕತೆ- ಕವಿತೆ- ಲೇಖನ- ರೂಪದರ್ಶಿ ಫೋಟೋ ಗಳಿಗೆ ಆಹ್ವಾನ

Published

on

ಸುದ್ದಿದಿನ,ದಾವಣಗೆರೆ: ಪ್ರಿಯ ಓದುಗರೆ, ಬೆಳಕಿನ ಹಬ್ಬ ದೀಪಾವಳಿಯ ಪ್ರಯುಕ್ತ ದೇವನಗರಿ ಸುದ್ದಿದಿನ – ಕನ್ನಡ ದಿನ ಪತ್ರಿಕೆ ಹಾಗೂ ಶ್ಯಾಮ್ ಪ್ರಕಾಶನದವತಿಯಿಂದ ‘ ದೀಪಾವಳಿ ವಿಶೇಷಾಂಕ’-2026ನ್ನು ತರಲಾಗುತ್ತಿದೆ.

ಈ‌ ಹಿನ್ನೆಲೆಯಲ್ಲಿ ದೀಪಾವಳಿ ವಿಷೇಶಾಂಕ 2026ರ ವಿಭಾಗಕ್ಕೆ ಕತೆ, ಕವಿತೆ ಹಾಗೂ ಲೇಖನ ಹಾಗೂ ರೂಪದರ್ಶಿಗಳ ಛಾಯಾಚಿತ್ರಗಳನ್ನು ಆಹ್ವಾನಿಸಿದ್ದೇವೆ.

ಕತೆ – ಕವಿತೆಗಳನ್ನು ಕಳುಹಿಸಲು ಇರುವ ನಿಯಮಗಳು

ಕತೆ/ಕವಿತೆ ಸ್ವತಂತ್ರ ರಚನೆಯಾಗಿರಬೇಕು. ಈ ಮೊದಲು ಯಾವ ಮಾಧ್ಯಮಗಳಲ್ಲಿಯೂ ಪ್ರಕಟ ಅಥವಾ ಪ್ರಸಾರ ಆಗಿರಬಾರದು.

ಕತೆ 1500 ಸಾವಿರ ಪದಗಳ ಮಿತಿಯಲ್ಲಿರಲಿ. ಕವಿತೆಗೆ 40 ಸಾಲಿನ ಮಿತಿಯಿರಲಿ, ನುಡಿ ಅಥವಾ ಬರಹ ತಂತ್ರಾಂಶದಲ್ಲಿ ಇಲ್ಲವೆ ಯೂನಿಕೋಡ್‌ನಲ್ಲಿ ಇರಬೇಕು. ವಯಸ್ಸಿನ ಮಿತಿ ಇರುವುದಿಲ್ಲ.

ಕತೆ/ಕವಿತೆ ಇರುವ ಪುಟದಲ್ಲಿ ಹೆಸರು, ವಿವರ ಬರೆಯುವಂತಿಲ್ಲ. ಪ್ರತ್ಯೇಕ ಪುಟದಲ್ಲಿ ಹೆಸರು, ಅಂಚೆ ವಿಳಾಸ, ಮೊಬೈಲ್ ನಂಬರ್, ಇ-ಮೇಲ್ ವಿಳಾಸ ಒದಗಿಸಬೇಕು.

ಇತ್ತೀಚಿನ ಪಾಸ್‌ಪೋರ್ಟ್ ಅಳತೆಯ ವರ್ಣಮಯ ಭಾವಚಿತ್ರದೊಂದಿಗೆ 100 ಪದಗಳ ಒಳಗೆ ಕಿರು ಪರಿಚಯ ಕಳುಹಿಸಬೇಕು.

ಸ್ಪರ್ಧೆಗೆ ಕಳುಹಿಸಿರುವ ಬರಹಗಳನ್ನು ಹಿಂದಿರುಗಿಸುವುದಿಲ್ಲ. ಬರಹಗಳು ಕಡ್ಡಾಯವಾಗಿ ಎಂಎಸ್ ವರ್ಡ್ ಫೈಲ್ (MS word File) ನಲ್ಲಿರಲಿ.

ಬರಹ ಮತ್ತು ಫೋಟೋಗಳನ್ನು ಇ-ಮೇಲ್ ಮೂಲಕವಷ್ಟೇ ಕಳಿಸಿ.

ತೀರ್ಪುಗಾರರ ತೀರ್ಮಾನವೇ ಅಂತಿಮ.

ಲೇಖನಗಳಿಗೆ ಆಹ್ವಾನ : ವೈಚಾರಿಕತೆ, ವಿಮರ್ಶೆ, ಕಾನೂನು, ಸಾಹಿತ್ಯ, ತಂತ್ರಜ್ಞಾನ, ವಿಜ್ಞಾನ, ಡಿಜಿಟಲ್ ಮಾಧ್ಯಮ, ಸಿನೆಮಾ, ಪ್ರೇಮಪತ್ರ, ಕೃಷಿ, ರಾಜಕೀಯ, ಕಲೆ, ಆರೋಗ್ಯ, ಪ್ರವಾಸ, ಅಡುಗೆ, ಫೋಟೋಗ್ರಫಿ, ವೈಲ್ಡ್ ಲೈಫ್, ಹಾಸ್ಯ ಕುರಿತಾದ ಲೇಖನಗಳನ್ನು 450 ಪದಗಳನ್ನು ಮೀರದಂತೆ ಬರೆದು ಕಳುಹಿಸಿ.

ಹಾಗೆಯೇ, ವಿಶೇಷಾಂಕದ ಮುಖಪುಟದ ರೂಪದರ್ಶಿಯಾಗಲು ಅವಕಾಶವನ್ನು ಕಲ್ಪಸಿಲಾಗಿದೆ. ಆಸಕ್ತ ರೂಪದರ್ಶಿಗಳು ಸ್ಟುಡಿಯೋ ಅಥವಾ ಫೋಟೋಗ್ರಾಫರ್ ಮೂಲಕ ತೆಗೆದ ‘6*4 ಅಳತೆಯ ಮುದ್ರಿತ ಫೋಟೋ ಮತ್ತು ಇ-ಮೇಲ್ ಮೂಲಕವೂ ಕಳಿಸಬಹುದು. 80 ಪದಗಳಮಿತಿಯೊಳಗೆ ನಿಮ್ಮ ಪರಿಚಯದೊಂದಿಗೆ, ಒಬ್ಬರು 4 ಫೋಟೋ ಕಳುಹಿಸಬೇಕು. ವಯಸ್ಸಿನ ಮಿತಿಯಿಲ್ಲ ಇರುವುದಿಲ್ಲ.

ಕತೆಯ ವಿಜೇತರಿಗೆ ಪ್ರಥಮ ಬಹುಮಾನ : 10000, ದ್ವಿತೀಯ ಬಹುಮಾನ : 5000, ತೃತೀಯ ಬಹುಮಾನ : 3000 ಹಾಗೂ ಕವಿತೆ ಬಹುಮಾನ ವಿಜೇತರಿಗೆ ಪ್ರಥಮ ಬಹುಮಾನ : 5000 ದ್ವಿತೀಯ ಬಹುಮಾನ : 3000 ಹಾಗೂ ತೃತೀಯ ಬಹುಮಾನ : ₹2000 ಸಿಗಲಿದೆ.

ಆಗಸ್ಟ್‌ 30ರೊಳಗೆ ಬರಹಗಳನ್ನು ಇ-ಮೇಲ್‌: deepasuddidina@gmail.com ಗೆ ಕಳುಹಿಸಲು ತಿಳಿಸಿದೆ. ಈ ಕುರಿತು ಹೆಚ್ಚಿನ ಮಾಹಿತಿಗಾಗಿ :9980346243 ಹಾಗೂ visit: www.suddidina.com ಅನ್ನು ವೀಕ್ಷಿಸಬಹುದಾಗಿದೆ.

ಕಚೇರಿ ವಿಳಾಸ 

ದೇವನಗರಿ ಸುದ್ದಿದಿನ- ಕನ್ನಡ ದಿನ ಪತ್ರಿಕೆ
ದೀಪಾವಳಿ ವಿಶೇಷಾಂಕ ವಿಭಾಗ
#3231/1, ಸಂಜೀವ ಸದನ, 11ನೇ ಮುಖ್ಯರಸ್ತೆ, 4 ನೇ ಅಡ್ಡರಸ್ತೆ, ಎಂಸಿಸಿ ಬಿ ಬ್ಲಾಕ್, ದಾವಣಗೆರೆ, 577004

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಅಂಕಣ

ಕವಿತೆ | ದೇವರ ಹೂವು

Published

on

~ ಡಾ. ಸಿ.ಬಿ.ಐನಳ್ಳಿ

ಊಟ ಮಾಟ ವೇಷ ಭಾಷೆ
ಪ್ರಾರ್ಥನೆ ಬೇರೆ ಬೇರೆ
ಪವಿತ್ರಪಠ್ಯ ಅವನದೊಂದು
ನನ್ನದಿನ್ನೊಂದಂತೆ

ನದಿ ದಂಡೆಯ ಮೇಲೆ
ನೋಟ ಬೆರೆತು ಮಾತು ಮರೆತು
ಮೈತ್ರಿ ಮೊಳೆಯಿತು
ಎಷ್ಟು ಬಿಗಿದಪ್ಪಿಕೊಂಡರೂ
ಉಳಿಯುತ್ತಿತ್ತು ನಡುವೆ ಸಣ್ಣ ಪೊಳ್ದಾಣ

ಹೂದೋಟದ ದುಂಬಿ ಸತತ ಮೂರು
ವಸಂತದ ಗಾಳಿ ಅಣಕಿಸಿದಾಗ
ಪರಾಗಸ್ಪರ್ಶಕೆ ಹೊಸ ಹೂವೊಂದು
ಅರಳಿ ನಿಂತಿತು
ಪೊಳ್ಳಿನ ನೆನಪೇ ಮಾಯವಾಗಿದೆ

ಎಳೆ ಹೂವು ಮೈಮರೆತು
ಹಾಡಿ ಓಡಿ ನಲಿಯುತಿದೆ
ಧರ್ಮ ನನ್ನ ಕಣ್ಣೊಳಗೆ ಜಿನುಗಿ
ಹನಿಯಾಗಿ ಜಾರುತಿದೆ

ಕವಿ ಪರಿಚಯ : ಡಾ. ಸಿ.ಬಿ.ಐನಳ್ಳಿ, ಸಹಾಯಕ ಪ್ರಾಧ್ಯಾಪಕರು, ಇಂಗ್ಲೀಷ್ ವಿಭಾಗ, ಕರ್ನಾಟಕ ಕಲಾ ಮಹಾವಿದ್ಯಾಲಯ, ಧಾರವಾಡ

ಸುದ್ದಿದಿನ.ಕಾಂ|ವಾಟ್ಸಾಪ್|9980346243

 

Continue Reading
Advertisement

Title

ಅಂಕಣ17 hours ago

ಭಾಷೆ ಗಡಿಗಳ ಮೀರಿ ಮೊಳಗಿದ ಧ್ವನಿ ; ಗಾನಕೋಗಿಲೆ ಎಸ್. ಜಾನಕಿ ನಿರ್ಗಮನ

ಭಾರತೀಯ ಚಿತ್ರಸಂಗೀತದ ಇತಿಹಾಸದಲ್ಲಿ ಕೆಲವೇ ಕೆಲವು ಧ್ವನಿಗಳು ಕಾಲವನ್ನು ಮೀರಿ ಅಮರತ್ವ ಪಡೆದಿವೆ. ಅಂತಹ ಅಮರ ಸ್ವರಗಳಲ್ಲಿ ಅತ್ಯಂತ ಪ್ರಕಾಶಮಾನವಾದ ಹೆಸರು ಎಸ್. ಜಾನಕಿ. ತಮ್ಮ ಅಪೂರ್ವ...

ದಿನದ ಸುದ್ದಿ2 days ago

ಮಾಠಾಧೀಶರ ಮೇಲೆ ಹಲ್ಲೆ ; ನಿರ್ಲಕ್ಷಿಸಿದರೆ ದುಷ್ಕೃತ್ಯ ಹೆಚ್ಚಳ ಸಂಭವ; ಕಠಿಣ ಕ್ರಮಕ್ಕೆ ಎಚ್.ಆಂಜನೇಯ ಆಗ್ರಹ

ಸುದ್ದಿದಿನ,ಚಿತ್ರದುರ್ಗ: ಹರಳಯ್ಯ ಮಠದ ಸ್ವಾಮೀಜಿ ಮೇಲೆ ಮಾರಾಣಾಂತಿಕ ಹಲ್ಲೆಯನ್ನು ನಿರ್ಲಕ್ಷ್ಯ ವಹಿಸಿದರೆ ಮುಂದಿನ ದಿನಗಳಲ್ಲಿ ಮಠಾಧೀಶರ ಮೇಲೆ ಇಂತಹ ದುಷ್ಕೃತ್ಯ ಹೆಚ್ಚಾಗಬಹುದು ಎಂದು ಮಾಜಿ ಸಚಿವ ಎಚ್.ಆಂಜನೇಯ...

ದಿನದ ಸುದ್ದಿ4 days ago

ದಾವಣಗೆರೆ | ತಾಪಂ ಅನುದಾನ ದುರುಪಯೋಗ: ಮೂವರು ಅಧಿಕಾರಿಗಳ ವಿರುದ್ಧ ಲೋಕಾಯುಕ್ತ ತನಿಖೆ ಚುರುಕು

ಮುಖ್ಯಾಂಶಗಳು ​ ಟೆಂಡರ್ ಇಲ್ಲದೆ ಸಾಮಗ್ರಿ ಖರೀದಿ ಆರೋಪ ​ಜುಲೈ 10ರ ವರೆಗೆ ಸ್ಥಳ ಪರಿಶೀಲನೆ, ದಾಖಲೆಗಳ ತಪಾಸಣೆ ತನಿಖಾಧಿಕಾರಿಗಳ ಮುಂದೆ ಹಾಜರಾಗಲು ದೂರುದಾರರಿಗೆ ನೋಟಿಸ್ ಸುದ್ದಿದಿನ,​ದಾವಣಗೆರೆ:...

ದಿನದ ಸುದ್ದಿ5 days ago

ಮತದಾರರ ಪಟ್ಟಿ ಪರಿಷ್ಕರಣೆ | ಪ್ರತಿಯೊಬ್ಬರ ಮನೆಬಾಗಿಲಿಗೆ ತಲುಪಲಿವೆ ಫಾರಂಗಳು ; ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ 

ಸುದ್ದಿದಿನ,ದಾವಣಗೆರೆ: ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆಯನ್ನು ಅತ್ಯಂತ ಪಾರದರ್ಶಕವಾಗಿ ಮತ್ತು ವ್ಯವಸ್ಥಿತವಾಗಿ ನಡೆಸಲಾಗುತ್ತಿದ್ದು, ಸಾರ್ವಜನಿಕರು ಯಾವುದೇ ರೀತಿಯ ಆತಂಕ ಪಡುವ ಅಗತ್ಯವಿಲ್ಲ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ...

ದಿನದ ಸುದ್ದಿ6 days ago

ಚನ್ನಗಿರಿ | ಲವ್ ಮ್ಯಾರೇಜ್ ; ಪೊಲೀಸ್ ಠಾಣೆ ಆವರಣದಲ್ಲೇ ಯುವಕನಿಗೆ ಚಾಕು ಇರಿತ

ಸುದ್ದಿದಿನ,ದಾವಣಗೆರೆ: ಪ್ರೀತಿಸಿ ವಿವಾಹವಾಗಿದ್ದ ದಂಪತಿ ಜೀವಭಯದಿಂದ ಪೊಲೀಸ್ ರಕ್ಷಣೆ ಕೋರಿ ಠಾಣೆಗೆ ಬಂದಿದ್ದ ವೇಳೆ, ಯುವಕನ ಮೇಲೆ ಚಾಕುವಿನಿಂದ ಹಲ್ಲೆ ನಡೆದ ಘಟನೆ ದಾವಣಗೆರೆ ಜಿಲ್ಲೆಯ ಚನ್ನಗಿರಿ...

ಅಂಕಣ1 week ago

ದೀಪಾವಳಿ ವಿಶೇಷಾಂಕ | ದೇವನಗರಿ ಸುದ್ದಿದಿನ ಪತ್ರಿಕೆಯಿಂದ ಕತೆ- ಕವಿತೆ- ಲೇಖನ- ರೂಪದರ್ಶಿ ಫೋಟೋ ಗಳಿಗೆ ಆಹ್ವಾನ

ಸುದ್ದಿದಿನ,ದಾವಣಗೆರೆ: ಪ್ರಿಯ ಓದುಗರೆ, ಬೆಳಕಿನ ಹಬ್ಬ ದೀಪಾವಳಿಯ ಪ್ರಯುಕ್ತ ದೇವನಗರಿ ಸುದ್ದಿದಿನ – ಕನ್ನಡ ದಿನ ಪತ್ರಿಕೆ ಹಾಗೂ ಶ್ಯಾಮ್ ಪ್ರಕಾಶನದವತಿಯಿಂದ ‘ ದೀಪಾವಳಿ ವಿಶೇಷಾಂಕ’-2026ನ್ನು ತರಲಾಗುತ್ತಿದೆ....

ದಿನದ ಸುದ್ದಿ1 week ago

ದಾವಣಗೆರೆ ಜಿಲ್ಲೆಯಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಚುರುಕು: ಮನೆ ಮನೆಗೆ ಬಿಎಲ್‍ಒಗಳ ಭೇಟಿ ಪ್ರಾರಂಭ

ಸುದ್ದಿದಿನ,ದಾವಣಗೆರೆ: ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ದಾವಣಗೆರೆ ಜಿಲ್ಲೆಯಾದ್ಯಂತ ‘ಮತದಾರರ ಪಟ್ಟಿ ಸಮಗ್ರ ಪರಿಷ್ಕರಣೆ ಎಸ್.ಐ.ಆರ್. ಪ್ರಕ್ರಿಯೆ ಅತ್ಯಂತ ಚುರುಕಿನಿಂದ ಸಾಗುತ್ತಿದೆ. ಜಿಲ್ಲೆಯ ಒಟ್ಟು 7 ವಿಧಾನಸಭಾ...

ದಿನದ ಸುದ್ದಿ1 week ago

ಕುಂದುವಾಡದಲ್ಲಿ ದೂಡಾ ಹೊಸ ಬಡಾವಣೆ ನಿರ್ಮಾಣ ಯೋಜನೆ ಕೈ ಬಿಡಲು ರೈತರ ಆಗ್ರಹ | ವಸತಿ ಯೋಜನೆ ಕೈ ಬಿಡಿ ಎಂದು ದೂಡಾಗೆ ಸೂಚಿಸಿದ ನಗರಾಭಿವೃದ್ದಿ ಸಚಿವ ಯತೀಂದ್ರ ಸಿದ್ದರಾಮಯ್ಯ

ಸುದ್ದಿದಿನ,ದಾವಣಗೆರೆ : ನಗರದ ಹಳೇ ಕುಂದುವಾಡದಲ್ಲಿ ದೂಡಾದಿಂದ ನಿರ್ಮಾಣ ಮಾಡಲು ಹೊರಟಿರುವ ವಸತಿ(ಹೊಸ ಲೇ ಔಟ್) ಯೋಜನೆಯನ್ನ ಈ ಕೂಡಲೇ ಕೈ ಬಿಡಬೇಕು ಎಂದು ರೈತರು ನಗರಾಭಿವೃದ್ದಿ...

ದಿನದ ಸುದ್ದಿ2 weeks ago

ಡಿ ಆರ್ ಆರ್ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ‘ಶೈಕ್ಷಣಿಕ ಪೀಠಿಕೆ ಕಾರ್ಯಕ್ರಮ’

ಸುದ್ದಿದಿನ,ದಾವಣಗೆರೆ: ನಗರದ ಡಿ ಆರ್ ಆರ್ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಪ್ರಥಮ ವರ್ಷದ ಹಾಗೂ ಲ್ಯಾಟರಲ್ ಎಂಟ್ರಿ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪೀಠಿಕೆ ಕಾರ್ಯಕ್ರಮವನ್ನು ಪ್ರಾಂಶುಪಾಲರಾದ ರಶ್ಮಿ ....

ದಿನದ ಸುದ್ದಿ2 weeks ago

ಭೀಕರ | ಪ್ರಿಯಕರನಿಂದ ಪ್ರೇಯಸಿಯ ಬರ್ಬರ ಹತ್ಯೆ

ಸುದ್ದಿದಿನ ಡೆಸ್ಕ್:ಬೆಂಗಳೂರಿನಲ್ಲಿ ಪ್ರೀತಿಯೊಂದು ರಕ್ತಸಿಕ್ತ ಅಂತ್ಯ ಕಂಡಿದೆ. ಮದುವೆಗೆ ನಿರಾಕರಿಸಿದ ಪ್ರೇಯಸಿಯನ್ನು ಪ್ರಿಯಕರನೇ ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಮಹಾಲಕ್ಷ್ಮಿ ಲೇಔಟ್ ಪೊಲೀಸ್ ಠಾಣೆ...

Trending