ಸಿನಿ ಸುದ್ದಿ
ನನ್ನ ನೆನಪಲ್ಲಿ ಡಾ ರಾಜಕುಮಾರ್..!
- ಕ್ರಾಂತಿರಾಜ್ ಒಡೆಯರ್, ಪ್ರಾಧ್ಯಾಪಕರು, ಮೈಸೂರು
ಸನ್ 2000 ಅನ್ಸುತ್ತೆ. ಶಬ್ದವೇದಿ ಚಿತ್ರ ರಿಲೀಸ್ ಆಗಿದ್ದ ಸಂದರ್ಭ. 10 ನೇ ತರಗತಿ ಪರೀಕ್ಷೆ ಮುಗಿಸಿ ರಜಾ ದಿನಗಳನ್ನು ಅನುಭವಿಸಲು ಶಿವಾರಗುಡ್ಡದಿಂದ ಮೈಸೂರಿನ ಮಾರ್ಗವಾಗಿ ನಮ್ಮೂರಾದ ಪೂರಿಗಾಲಿಗೆ ಹೋಗುವ ಯೋಜನೆ. ಅಂದಿನ ದಿನಗಳಲ್ಲಿ ಮೈಸೂರಿನಿಂದ ನಮ್ಮೂರಿಗೆ ಇದ್ದ ಕೊನೆಯ ಬಸ್ಸು 7 ಗಂಟೆಗೆ. ಮ್ಯಾಟನಿ ಶೋ ನೋಡ್ಕಂಡು ಊರಿಗೆ ಹೋದರೆ ಆಯಿತು ಅಂತ, ಪ್ರಭಾ ಥೀಯೇಟರ್ ಗೆ ಹೋಗಿ, ಅಲ್ಲಿ ಟಿಕೆಟ್ ತೆಗೆದುಕೊಳ್ಳಲು ನಿಂತಿದ್ದ ಉದ್ದದ ಸಾಲಿನಲ್ಲಿ ನಿಂತಿದ್ದು ಬೆಳಿಗ್ಗೆ 11.30 ಗಂಟೆಗೆ.
ಆದರೆ ನಾನು ಟಿಕೆಟ್ ಕೌಂಟರ್ ಬಳಿ ಬರುವಷ್ಟರಲ್ಲಿ ಮ್ಯಾಟನಿ ಟಿಕೆಟ್ ಮುಗಿದು ಫಸ್ಟ್ ಶೋ ಟಿಕೆಟ್ ಕೊಡೋಕೆ ಶುರು ಮಾಡಿದ್ರು. 4.30 ಗೆ ಫಸ್ಟ್ ಶೋ ಶುರು ಆದ್ರೂ 7 ಗಂಟೆಗೆ ಚಿತ್ರ ಮುಗಿದು, ಹೇಗಾದ್ರು ಮಾಡಿ ಕೊನೆಯ ಬಸ್ ಹಿಡಿದು ಪೂರಿಗಾಲಿ ತಲುಪಬಹುದು ಎಂಬ ಧೈರ್ಯದಲ್ಲಿ ಫಸ್ಟ್ ಶೋ ಟಿಕೆಟ್ ತಕೊಂಡು ಚಿತ್ರ ನೋಡೋಕೆ ಕೂತೆ. ಚಿತ್ರ ಮುಗಿದಾಗ 7 ಗಂಟೆ 10 ನಿಮಿಷ. ಪ್ರಭಾ ಥಿಯೇಟರ್ ನಿಂದ ಓಡೋಡಿ ಛತ್ರಿ ಮರ ಬಸ್ ಸ್ಟಾಪ್ ತಲುಪುವಷ್ಟರಲ್ಲಿ 7 ಗಂಟೆ 15 ನಿಮಿಷ. ಅಷ್ಟು ಹೊತ್ತಿಗಾಗಲೇ ಲಾಸ್ಟ್ ಬಸ್ ಹೊರಟು ಹೋಗಿತ್ತು. ದಿಕ್ಕು ತೋಚದೆ ಅಲ್ಲೇ ನಿಂತಿದ್ದಾಗ ಚಾಮರಾಜನಗರಕ್ಕೆ ಹೋಗುವ ಬಸ್ಸು ಬಂತು.
ಆ ಬಸ್ಸಿನ ಕಂಡೆಕ್ಟರ್, “ಈಗ ಹೊರಟರೆ ನರಸೀಪುರದಲ್ಲಿ ನನಗೆ ಮಿಸ್ ಆದ ಬಸ್ ಸಿಗುತ್ತದೆ” ಎಂದು ಹೇಳಿದ. ಅವನ ಮಾತನ್ನು ನಂಬಿ, ಅದೇ ಬಸ್ಸಿನಲ್ಲಿ ಹೊರಟು ನರಸೀಪುರದಲ್ಲಿ ಇಳಿದುಕೊಂಡೆ. ಅಷ್ಟರಲ್ಲಾಗಲೇ ನಮ್ಮೂರಿನ ಲಾಸ್ಟ್ ಬಸ್ಸು ನರಸೀಪುರವನ್ನೂ ಬಿಟ್ಟು ಹೊರಟಿತ್ತು. ಅಂದು ರಾತ್ರಿ ನರಸೀಪುರದ ಬಸ್ ಸ್ಟ್ಯಾಂಡಿನಲ್ಲೇ ಮಲಗಿ, ಬೆಳಗ್ಗೆ ಎದ್ದು ಮೊದಲ ಬಸ್ಸಿನಲ್ಲೇ ಊರ ಕಡೆ ಪಯಣ. ಊರಲ್ಲಿ ಕಾದಿತ್ತು ನನಗೆ ಸುಪ್ರಭಾತ. ರಾತ್ರಿಯೆಲ್ಲಾ ಎಲ್ಲಿದ್ದೆ? ಏನು ಮಾಡ್ತಾ ಇದ್ದೆ? ಎಸ ಟಿ ಡಿ ಬೂತ್ ಇಂದ ಒಂದು ಫೋನ್ ಆದ್ರೂ ಮಾಡಬಾರದ? ಎಂಬ ಹಲವಾರು ಪ್ರಶ್ನೆಗಳಿಗೆ, ನಾನು ರಾಜಕುಮಾರ್ ಪಿಕ್ಚರ್ ನೋಡೋಕೆ ಹೋಗಿ ಹೀಗಾಯಿತು ಎಂಬ ಸತ್ಯವನ್ನು ಹೇಳಿದರೆ ಮತ್ತಷ್ಟು ಬೊಗಳವನ್ನು ಕೇಳಬೇಕಾದೀತು ಎಂದು ಅರಿತು, ಮನೆಯವರು ಏನಾದ್ರೂ ಅಂದುಕೊಳ್ಳಲಿ ಎಂದು ತೀರ್ಮಾನಿಸಿ, ಮೌನಕ್ಕೆ ಶರಣಾದೆ. ಇದು ರಾಜಕುಮಾರ್ ಅವರ ಅಭಿಮಾನಿಯಾಗಿ ನಾನು ಪಟ್ಟ ಪಾಡು.
ಅಂದ ಹಾಗೆ, ಅಂದಿನ ದಿನಗಳಲ್ಲಿ ನನ್ನ ಸಮಕಾಲೀನರಾಗಲಿ ಅಥವಾ ನಮ್ಮ ಊರಿನಲ್ಲಾಗಲಿ, ರಾಜಕುಮಾರ್ ಅವರ ಅಭಿಮಾನಿಗಳು ಅಂತ ಯಾರೂ ಇರಲಿಲ್ಲ. ಅವಾಗ ಬಂಧನ ವಿಷ್ಣುವರ್ಧನ್, ಏಕಲವ್ಯ ಅಂಬರೀಷ್, ಎಸ್ ಪಿ ಸಾಂಗ್ಲಿಯಾನ ಶಂಕರ್ ನಾಗ್ ಅವರ ಯುಗ. ನಮ್ಮೂರಿನಲ್ಲಿ ಹೆಚ್ಚಿನ ಅಭಿಮಾನಿಗಳು ಇವರಿಗಿದ್ದರೆ, ಕೆಲವರು ಬಾ ನಲ್ಲೆ ಮಧುಚಂದ್ರಕೆಯ ಶಿವರಾಂ ಹಾಗು ಎ ಚಿತ್ರದ ಉಪೇಂದ್ರ ಅವರ ಭಕ್ತರು। ಆಗ ನಾನು ವಿಷ್ಣುವರ್ಧನ್ ಅವರ ಅಭಿಮಾನಿ.
ವಯಸ್ಸಾಗ್ತಾ ಮನಸ್ಸು ಪರಿಪಕ್ವ ಆಗ್ತಾ ಆಗ್ತಾ ಸೆಲೆಕ್ಟಿವ್ ಚಿತ್ರಗಳನ್ನ ನೋಡೋಕೆ ಶುರು ಆಯಿತು. ಆವಾಗ ನಾನು ಟಿ ವಿ ಗಳಲ್ಲಿ ಬರುತ್ತಿದ್ದ ರಾಜಕುಮಾರ್ ಅವರ ಚಿತ್ರಗಳನ್ನು ನೋಡ್ತಾ ನೋಡ್ತಾ ಅವರು ಅಭಿನಯಿಸಿರುವ ಚಿತ್ರಗಳೂ ಇಷ್ಟ ಆದ್ವು. ಹೆಚ್ಚಾಗಿ ರಾಜಕುಮಾರ್ ಅವರ ಅದ್ಬುತ ಅಭಿನಯ ನನ್ನನ್ನು ಅವರಿಸಿಕೊಳ್ಳುತ್ತ ಹೋಯಿತು. ಹಾಗೆ ಶುರುವಾದದ್ದು ರಾಜಕುಮಾರ್ ಅವರ ಮೇಲಿನ ಅಭಿಮಾನ. ವಯಸ್ಸಾಗ್ತಾ ಆಗ್ತಾ ಚಿತ್ರಗಳ ವಿಶ್ಲೇಷಣೆ ಮಾಡೋಕೆ ಶುರು ಮಾಡಿದೆ ನೋಡಿ, ಅವಾಗ ರಾಜಣ್ಣ ಇನ್ನೂ ಇಷ್ಟ ಆಗಿ ಬಹಳ ಹತ್ತಿರವಾದ್ರು.
“ಆಡು ಮುಟ್ಟದ ಸೊಪ್ಪಿಲ್ಲ, ರಾಜಕುಮಾರ್ ಅವರು ಮಾಡದ ಪಾತ್ರಗಳಿಲ್ಲ” ಅಂತ ಸುಮ್ನೇನಾ ಹೇಳೋದು! ಎಂಥಾ ಅದ್ಬುತ ನಟ… ನಿರ್ದೇಶಕರ ನಟ ರಾಜಣ್ಣ. ಕನ್ನಡ ಚಿತ್ರರಂಗದಲ್ಲಿ ಬಂದ ಪೌರಾಣಿಕ ಕಥೆಯ ಚಿತ್ರಗಳು, ಸಾಮಾಜಿಕ ಕಳಕಳಿಯುಳ್ಳ ಚಿತ್ರಗಳು, ಸಂಸಾರದ ಕಥೆಯುಳ್ಳ ಚಿತ್ರಗಳು ಹಾಗು ಡಿಟೆಕ್ಟಿವ್ ಕಥೆ ಆಧಾರಿತ ಚಿತ್ರಗಳಿಗೆಲ್ಲ ಬಣ್ಣ ಹಚ್ಚಿದ ರಾಜಕುಮಾರ್ ಅವರು, ಚಿತ್ರರಂಗದಲ್ಲಿ ಆದ ಎಲ್ಲಾ ಬದಲಾವಣೆಗಳಿಗೂ ತಮ್ಮನ್ನು ಒಡ್ಡುಕೊಂಡು, ಎಲ್ಲಾ ತರಹದ ಪಾತ್ರಗಳಲ್ಲೂ ತಮ್ಮ ಮನೋಜ್ಞ ಅಭಿನಯದಿಂದ ಕನ್ನಡ ನಾಡಿನ ಚಿತ್ರರಸಿಕರ ಮನಸ್ಸನ್ನ ಗೆದ್ದವರು. ಅವರು ನಿರ್ವಹಿಸುವ ಪಾತ್ರದ ಆಳಕ್ಕೆ ಇಳಿದು ಅಭಿನಯಿಸುತ್ತಿದ್ದುದ್ದನ್ನು ನೋಡಿದರೆ, ಆ ಕಥೆ ನಿಜವಾಗಿಯೂ ನಮ್ಮ ಕಣ್ಣ ಮುಂದೆ ನೆಡೆಯುತ್ತಿರುವುದೇನೋ ಎಂದು ಭಾಸವಾಗುತ್ತದೆ.
ಅವರು ಅಭಿನಯಿಸಿದ ಚಿತ್ರದ ಪಾತ್ರಗಳಲ್ಲಷ್ಟೇ ಸರಳತೆಯನ್ನು ತೋರದೇ, ನಿಜಜೀವನದಲ್ಲಿಯೂ ಕೂಡ ತುಂಬ ಸರಳವಾಗಿ, ತಾವು ನಂಬಿರುವ ಸಿದ್ದಾಂತಕ್ಕೆ ಅನುಗುಣವಾಗಿ, ದೊಡ್ಡ ನಟನಾದರೂ ಕೂಡ ಯಾವುದೇ ಅಹಂ ಇಲ್ಲದೆ ಬದುಕಿ, ಬರೀ ಚಿತ್ರರಸಿಕರಿಗಲ್ಲದೇ ಎಲ್ಲರಿಗೂ ಆದರ್ಶವಾದ ಬಂಗಾರದ ಮನುಷ್ಯ ಡಾ ರಾಜಕುಮಾರ್ ಅವರ ಹುಟ್ಟಿದ ದಿನ ಈವತ್ತು. ಅವರ ಹುಟ್ಟಿದ ದಿನವೊಂದೇ ಅಲ್ಲದೇ, ಸರ್ವಕಾಲಕ್ಕೂ ನೆನಪಿನಲ್ಲಿ ಇಡಬೇಕಾದ ವ್ಯಕ್ತಿತ್ವ ನಮ್ಮ ರಾಜಣ್ಣನವರದು.
ಇಂತಹ ವ್ಯಕ್ತಿಯ 92 ನೇ ವರ್ಷದ ಹುಟ್ಟಿದ ದಿನಾಚರಣೆಯ ಸಂದರ್ಭದಲ್ಲಿ, ಬೆಳಿಗ್ಗೆಯೇ ಲೇಖನ ಬರೆಯಬೇಕೆಂದುಕೊಂಡಿದ್ದೆ. ಆದರೆ, ಹಲವು ಟಿ ವಿ ಚಾನಲ್ಲುಗಳಲ್ಲಿ ಬೆಳಿಗ್ಗೆಯಿಂದ ಪ್ರಸಾರವಾಗುತ್ತಿದ್ದ ರಾಜಣ್ಣ ಅವರ ಚಿತ್ರ ನೋಡುವುದರಲ್ಲಿ ಮಗ್ನನಾಗಿದ್ದು, ದಿನದ ಕೊನೆಯಲ್ಲಿ ಬಿಡುವು ಮಾಡಿಕೊಂಡು ಬರೆದಿರುವೆ. ರಾಜಣ್ಣ ಅವರ ಸರಳತೆ ಹಾಗು ಚಿಂತನೆ ಅಮರವಾಗಲಿ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂಕಣ
ಗೆಳೆತನದ ಮಹತ್ವ ಸಾರುವ ಕುಚುಕು ಇಂದಿನಿಂದ ಅಮೋಘ ಪ್ರಾರಂಭ ; ದಾವಣಗೆರೆ ಹುಡುಗ ಅರ್ಜುನ್ ಚೌಹಾಣ್ ಅವರ ಮೂರನೇ ಚಿತ್ರ ತೆರೆಗೆ
ವಿದ್ಯಾನಾಯ್ಕ್ ಅರೇಹಳ್ಳಿ
ಸುದ್ದಿದಿನ,ದಾವಣಗೆರೆ:ಬಂಜಾರ ಸಮುದಾಯದ ಪ್ರತಿಭಾನ್ವಿತ ನಟ ಹಾಗೂ ನಿರ್ದೇಶಕರಾದ ಅರ್ಜುನ್ ಚೌಹಾಣ್ ನಟನೆಯ ಕುಚುಕು ಚಿತ್ರ ದಾವಣಗೆರೆ ನಗರದ ತ್ರಿಶುಲ್ ಚಿತ್ರಮಂದಿರದಲ್ಲಿ ಇಂದಿನಿಂದ ಪ್ರದರ್ಶನ ಕಾಣಲಿದೆ.
ಮುಖ್ಯ ಪಾತ್ರದಲ್ಲಿ ಅರ್ಜುನ್ ಚೌಹಾಣ್, ಬಸವರಾಜ್ ಕುಮಾರ್, ಪ್ರಿಯದರ್ಶಿನಿ, ಶಂಕರ್ ಅಶ್ವತ್ಥ್ ಮತ್ತು ಇತರರು ಕಾಣಿಸಿಕೊಂಡಿದ್ದು, ಮೈಸೂರು ರಾಜು ಅವರು ಕಥೆ, ಚಿತ್ರಕಥೆ, ನೃತ್ಯ, ನಿರ್ದೇಶನದಲ್ಲಿ ಚಿತ್ರ ಅಚ್ಚುಕಟ್ಟಾಗಿ ಮೂಡಿಬಂದಿದೆ.
ನಾಗರತ್ನಮ್ಮ ಚಿತ್ರದ ನಿರ್ಮಾಪಕರು ಆಗಿದ್ದು, ಲಕ್ಷ್ಮಿ ಅವರು ಕಾರ್ಯಕಾರಿ ನಿರ್ಮಾಪಕರಾಗಿ ಕಾರ್ಯ ನಿರ್ವಹಿಸಿದ್ದಾರೆ.
ಇನ್ನು ಎ. ಟಿ. ರವೀಶ್ ಸಂಗೀತ ಪ್ರೇಕ್ಷಕರನ್ನ ಹಿಡಿದಿಟ್ಟುಕೊಳ್ಳಲಿದೆ, ಅರವಿಂದ್ ರಾಜ್ ಅವರ ಸಂಕಲನ, ರಾಮನಾಥ್ ರಾಜ್ ಛಾಯಾಗ್ರಹಣಾವಿದೆ ಎನ್ನುತ್ತಾರೆ ಚಿತ್ರದ ನಾಯಕ ಅರ್ಜುನ್ ಚೌಹಾಣ್.
ಅರ್ಜುನ್ ಚೌಹಾಣ್ ಕೇವಲ ಸಿನಿಮಾಗಳಲ್ಲದೆ, ಬಂಜಾರ ಸಮುದಾಯದ ಸಂಸ್ಕೃತಿಯನ್ನು ಬಿಂಬಿಸುವ ಮತ್ತು ಯುವ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸುವ ನಿಟ್ಟಿನಲ್ಲಿ ಬಂಜಾರ ಹವೇಲಿ ಎಂಬ ರಿಯಾಲಿಟಿ ಶೋ ಅನ್ನು ಕೂಡ ಯಶಸ್ವಿಯಾಗಿ ನಡೆಸಿ, ನಿರ್ದೇಶಿಸಿದ್ದಾರೆ. ಅದಲ್ಲದೆ ಈ ಹಿಂದೆ ರುದ್ರಾಕ್ಷಿಪುರ, ಸ್ವಚ್ಛ ಕರ್ನಾಟಕ, ಉತ್ತರ, ನಾಕುತಂತಿ, ಇತ್ಯಾದಿ ಚಿತ್ರಗಳಲ್ಲಿ ನಟಿಸಿದ್ದು, ಉತ್ತರ ಮತ್ತು ನಾಕುತಂತಿ ರಿಲೀಸ್ ಆಗಬೇಕಿದೆ.
ಕನ್ನಡ ಚಿತ್ರರಂಗದಲ್ಲಿ ನಾಯಕ ನಟನಾಗಿ ಗುರುತಿಸಿಕೊಳ್ಳುತ್ತಿರುವ ಅರ್ಜುನ್ ಚೌಹಾಣ್ ಚಿಕ್ಕ ವಯಸ್ಸಿನಿಂದಲೇ ಬೆಳ್ಳಿಪರದೆಯ ಮೇಲೆ ಹೀರೊ ಆಗಬೇಕೆಂಬ ದೊಡ್ಡ ಕನಸನ್ನು ಹೊತ್ತು ಸಿನಿರಂಗಕ್ಕೆ ಬಂದ ಬಂಜಾರ ಸಮುದಾಯದ ಪ್ರತಿಭೆ. ತಾವೊಬ್ಬ ನಟನಾಗಬೇಕು ಎಂಬ ಹಂಬಲದಿಂದ ಚಿತ್ರರಂಗ ಪ್ರವೇಶಿಸಿದ ಇವರು ತಮ್ಮದೇ ಆದ ಶೈಲಿಯಲ್ಲಿ ಹೆಜ್ಜೆ ಇಡುತ್ತಿದ್ದಾರೆ.
ನಾಯಕ ನಟನಾಗಿ ರುದ್ರಾಕ್ಷಿಪುರ ಚಿತ್ರದ ಮೂಲಕ ಬೆಳ್ಳಿಪರದೆಗೆ ಕಾಲಿಟ್ಟ ಇವರು ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾದ ಮೂಲಕ ಅವರು ಪ್ರೇಕ್ಷಕರ ಗಮನ ಸೆಳೆದಿದ್ದರು.
ಇನ್ನು 2022ರಲ್ಲಿ ಸ್ವಚ್ಛ ಕರ್ನಾಟಕ ಎಂಬ ಸಾಮಾಜಿಕ ಸಂದೇಶವುಳ್ಳ ಸಿನಿಮಾದಲ್ಲಿ ಹಿರಿಯ ಸಾಹಿತಿ ಡಾ. ದೊಡ್ಡರಂಗೇಗೌಡ ಅವರಂತಹ ಗಣ್ಯರೊಂದಿಗೆ ಕೆಲಸ ಮಾಡುವ ಅವಕಾಶ ಪಡೆದದ್ದು ಇವರ ಪ್ರತಿಭೆಗೆ ರಹದಾರಿ ಸೃಷ್ಟಿಸಿದಂತಾಗಿತ್ತು. ಇದೀಗ ಕುಚುಕು ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಪರಿಶ್ರಮ ಮತ್ತು ಫಿಟ್ನೆಸ್
ಪರಿಶ್ರಮ ಮತ್ತು ಫಿಟ್ನೆಸ್ ಗೆ ಮಹತ್ವ ಕೊಡುವ ಅರ್ಜುನ್ ಸಿನಿಮಾಗಳಲ್ಲಿ ಹೀರೊ ಆಗಲು ಬೇಕಾದ ದೈಹಿಕ ಕಸರತ್ತು, ಸಿಕ್ಸ್ ಪ್ಯಾಕ್ ಬಾಡಿ ಟ್ರಾನ್ಸ್ಫಾರ್ಮೇಶನ್ ಮತ್ತು ನಟನಾ ಕೌಶಲಗಳಿಗಾಗಿ ಇವರು ಸಾಕಷ್ಟು ಶ್ರಮವಹಿಸಿದ್ದಾರೆ.
ಆಲ್ಬಮ್ ಸಾಂಗ್ಸ್ ಮತ್ತು ಶಾರ್ಟ್ ಫಿಲ್ಮ್ಸ್
ಕೇವಲ ಬೆಳ್ಳಿಪರದೆ ಮಾತ್ರವಲ್ಲದೆ, ಇನ್ಸ್ಟಾಗ್ರಾಮ್ ಹಾಗೂ ಯೂಟ್ಯೂಬ್ ಮೂಲಕ ‘ಸೇ ನೋ ಟು ಗಾಂಜಾ’ದಂತಹ ಜಾಗೃತಿ ಮೂಡಿಸುವ ಆಲ್ಬಮ್ ಹಾಡುಗಳು ಮತ್ತು ಕಿರುಚಿತ್ರಗಳಲ್ಲೂ ಭಾಗಿಯಾಗಿದ್ದಾರೆ.
ಕನ್ನಡ ಚಿತ್ರರಂಗದಲ್ಲಿ ಹೊಸಬರಾಗಿ ಬಂದು, ತಮ್ಮ ಕನಸನ್ನು ನನಸು ಮಾಡಿಕೊಳ್ಳಲು ನಿರಂತರ ಪ್ರಯತ್ನ ನಡೆಸುತ್ತಿದ್ದಾರೆ.
ಸಿದ್ದಗಂಗಾ ಶಾಲೆಯಲ್ಲಿ ಅರಳಿದ ಪ್ರತಿಭೆ
ಸಿದ್ದಗಂಗಾ ಶಾಲೆಯಲ್ಲಿ ತಮ್ಮ ನಟನೆಯ ಅಡಿಪಾಯವನ್ನು ಗಟ್ಟಿಗೊಳಿಸಿಕೊಂಡ ಬಗ್ಗೆ ಸಂತಸ ವ್ಯಕ್ತಪಡಿಸುತ್ತಾರೆ ಅರ್ಜುನ್ ಚೌಹಾಣ್. ಶಾಲೆಯಲ್ಲಿ ಓದುತ್ತಿರುವ ಶನಿವಾರ ಮತ್ತು ಭಾನುವಾರ ರಜಾ ದಿನಗಳಲ್ಲಿ ಕಥೆ, ಕವನ ನಾಟಕ ಇತ್ಯಾದಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತೆ ಪ್ರೋತ್ಸಾಹ ನೀಡಲಾಗುತ್ತಿತ್ತು. ಇದು ನಮಗೆ ವರದಾನವಾಗಿ ನಮ್ಮ ಸ್ನೇಹಿತರೆಲ್ಲ ಸೇರಿ ನಾವೇ ನಾಟಕ, ಕಥೆ ಕವನ ರಚಿಸಿ ಪ್ರದರ್ಶನ ಮಾಡುತ್ತಿದ್ದೆವು ಎಂದು ತಮ್ಮ ಶಾಲಾ ದಿನಗಳನ್ನು ನೆನಪಿಸಿಕೊಂಡರು.
ಬಂಜಾರ ಹವೇಲಿಯ ಹರಿಕಾರ
ಬಂಜಾರ ಹವೇಲಿ ಅನ್ನೋದು ಬಂಜಾರ (ಲಂಬಾಣಿ) ಸಮುದಾಯದ ಇತಿಹಾಸದಲ್ಲೇ ಅತ್ಯಂತ ದೊಡ್ಡ ಮತ್ತು ಮೊದಲ ರಿಯಾಲಿಟಿ ಶೋ. ಇದು ಬಿಗ್ ಬಾಸ್ ಮಾದರಿಯ ರಿಯಾಲಿಟಿ ಶೋ ಆಗಿದ್ದು, ವಿವಿಧ ಕ್ಷೇತ್ರಗಳ (ಸಿನಿಮಾ, ಟಿವಿ ಮತ್ತು ಸಾಮಾನ್ಯ ಜೀವನ) ಸ್ಪರ್ಧಿಗಳು ಒಂದೇ ಸೂರಿನಡಿ ವಾಸಿಸುತ್ತಾ ವಿವಿಧ ಆಟಗಳು ಮತ್ತು ಸವಾಲುಗಳಲ್ಲಿ ಸ್ಪರ್ಧಿಸುತ್ತಾರೆ.
ಬಂಜಾರ ಸಂಸ್ಕೃತಿ, ಆಚಾರ-ವಿಚಾರಗಳು ಮತ್ತು ಪ್ರತಿಭೆಗಳನ್ನು ಜಾಗತಿಕ ಮಟ್ಟದಲ್ಲಿ ಪರಿಚಯಿಸುವುದು ಈ ಶೋನ ಮುಖ್ಯ ಉದ್ದೇಶವಾಗಿದೆ.
ಒಟ್ಟಾರೆಯಾಗಿ ಹಲವು ಅಡೆತಡೆಗಳನ್ನು ತಮ್ಮ ಜೀವನದಲ್ಲಿ ಎದುರಿಸಿ ತಾನು ಕಂಡ ಕನಸನ್ನು ನನಸು ಮಾಡಿಕೊಂಡು ತನ್ನೊಟ್ಟಿಗೆ ಇತರರನ್ನು ಬೆಳೆಸುವ ನಿಟ್ಟಿನಲ್ಲಿ ಹೆಜ್ಜೆ ಇಡುತ್ತಿರುವ ಬಂಜಾರ ಸಮುದಾಯದ ಅರ್ಜುನ್ ಚೌಹಾಣ್ ಅವರಿಗೆ ಪ್ರೇಕ್ಷಕರ ಬೆಂಬಲ ಮತ್ತು ಆಶೀರ್ವಾದ ಸಿಗಲಿ ಎನ್ನುವುದು ಸುದ್ದಿದಿನ ಪತ್ರಿಕೆಯ ಹಾರೈಕೆ ಆಗಿದೆ. ಕುಟುಂಬ ಪರಿಹಾರ ಸಮೇತ ಚಿತ್ರಮಂದಿರಕ್ಕೆ ಬಂದು ಹಾರೈಸಿ ಎಂದು ವಿನಂತಿದ್ದಾರೆ ಕುಚುಕು ಚಿತ್ರದ ನಾಯಕ ನಟ ಅರ್ಜುನ್ ಚೌಹಾಣ್.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
‘ಹಿಟ್ಲರ್ ಕಲ್ಯಾಣ’ದ ನಾಯಕನ ಬದುಕಿನ ಪಯಣ ಹೀಗಿತ್ತು
ಸುದ್ದಿದಿನ ಡೆಸ್ಕ್:ಆರಂಭಿಕ ಜೀವನ – 1978ರಲ್ಲಿ ಬೆಂಗಳೂರಿನಲ್ಲಿ ಜನಿಸಿದ ದಿಲೀಪ್ ರಾಜ್ ಅವರು ಕಾಲೇಜು ದಿನಗಳಿಂದಲೇ ಕಲೆಯತ್ತ ಒಲವು ಹೊಂದಿದ್ದರು.
ಚಲನಚಿತ್ರ ರಂಗ – 2005ರಲ್ಲಿ ‘ಬಾಯ್ ಫ್ರೆಂಡ್’ ಚಿತ್ರದ ಮೂಲಕ ಎಂಟ್ರಿ ಕೊಟ್ಟ ಅವರು, 2007ರಲ್ಲಿ ಪುನೀತ್ ರಾಜ್ಕುಮಾರ್ ಅವರ ‘ಮಿಲನ’ ಚಿತ್ರದಲ್ಲಿ ಹೇಮಂತ್ ಎಂಬ ವಿಲನ್ ಪಾತ್ರದ ಮೂಲಕ ಎಲ್ಲರ ಗಮನ ಸೆಳೆದರು.
ಇತ್ತೀಚಿನ ಜನಪ್ರಿಯತೆ – ‘ಲವ್ ಮಾಕ್ಟೇಲ್’ ಸಿನಿಮಾ ಮತ್ತು ಕಿರುತೆರೆಯಲ್ಲಿ ನಟ-ನಿರ್ಮಾಪಕರಾಗಿ ದೊಡ್ಡ ಹೆಸರು ಮಾಡಿದ್ದರು.
ದಿಲೀಪ್ ರಾಜ್ ಅವರ ಸಾವು ಕೇವಲ ಒಂದು ಕುಟುಂಬಕ್ಕೆ ಮಾತ್ರವಲ್ಲದೆ ಇಡೀ ಚಿತ್ರರಂಗಕ್ಕೆ ದೊಡ್ಡ ನಷ್ಟ. ಇವರ ಈ ಹಠಾತ್ ನಿಧನವು ಒತ್ತಡದ ಜೀವನಶೈಲಿ ಮತ್ತು ಆರೋಗ್ಯದ ಕಡೆಗೆ ನಾವು ನೀಡಬೇಕಾದ ಹೆಚ್ಚಿನ ಗಮನದ ಬಗ್ಗೆ ಎಚ್ಚರಿಕೆ ನೀಡುವಂತಿದೆ.

ದಿನದ ಸುದ್ದಿ
ನಟ ದಿಲೀಪ್ ರಾಜ್ ಆ ಒಂದು ತಪ್ಪು ಪ್ರಾಣಕ್ಕೆ ಮುಳುವಾಯ್ತು
ಸುದ್ದಿದಿನಡೆಸ್ಕ್:ಕನ್ನಡ ಚಿತ್ರರಂಗದ ಖ್ಯಾತ ನಟ ದಿಲೀಪ್ ರಾಜ್ (47) ಅವರ ಅಕಾಲಿಕ ನಿಧನವು ಇಡೀ ಸ್ಯಾಂಡಲ್ವುಡ್ ಅನ್ನು ದಿಗ್ಭ್ರಮೆಗೊಳಿಸಿದೆ. ಕೇವಲ 47 ವರ್ಷ ವಯಸ್ಸಿನ ಈ ಪ್ರತಿಭಾನ್ವಿತ ಕಲಾವಿದ ಇಂದು ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. ಆದರೆ ಅವರ ಈ ಸಾವಿನ ಹಿಂದೆ ಒಂದು ಬೇಸರದ ಸಂಗತಿಯೂ ಅಡಗಿದೆ, ಅದೇನೆಂದರೆ ಅವರ ಆರೋಗ್ಯದ ಕುರಿತು ತೋರಿದ ಒಂದು ನಿರ್ಲಕ್ಷ್ಯ!
ನಟ ನಿರ್ಮಾಪಕ ದಿಲೀಪ್ ರಾಜ್ ಅವರು ಇಂದು ಹೃದಯಾಘಾತದಿಂದ ನಿಧನರಾಗಿದ್ದು, ಇಡೀ ಸ್ಯಾಂಡಲ್ವುಡ್ ದಿಗ್ಭ್ರಮೆಗೊಂಡಿದೆ. ಕೆಲವು ದಿನಗಳ ಹಿಂದೆ ಗೋವಾ ಪ್ರವಾಸದಲ್ಲಿದ್ದಾಗಲೇ ಅವರಿಗೆ ಆಗಾಗ ಎದೆನೋವು ಕಾಣಿಸಿಕೊಂಡಿತ್ತು, ಆದರೆ ಪ್ರವಾಸದ ಖುಷಿಯಲ್ಲಿದ್ದ ಅವರು ಅದನ್ನ ಗಂಭೀರವಾಗಿ ಪರಿಗಣಿಸಿರಲಿಲ್ಲ.. ಬೆಂಗಳೂರಿಗೆ ಮರಳಿದ ನಂತರ ಇಂದು ವೈದ್ಯಕೀಯ ತಪಾಸಣೆಗೆ ಅಪಾಯಿಂಟ್ಮೆಂಟ್ ಕೂಡ ಫಿಕ್ಸ್ ಆಗಿತ್ತು. ಆದರೆ ವಿಧಿ ಆಟವೇ ಬೇರೆಯಾಗಿತ್ತು;
ತಪಾಸಣೆಗೆ ಹೋಗುವ ಮುನ್ನವೇ ರಾತ್ರಿ ತೀವ್ರ ಎದೆನೋವು ಕಾಣಿಸಿಕೊಂಡು ಕುಮಾರಸ್ವಾಮಿ ಲೇಔಟ್ನ ಅಪೋಲೋ ಆಸ್ಪತ್ರೆಯಲ್ಲಿ ಅವರು ಕೊನೆಯುಸಿರೆಳೆದಿದ್ದಾರೆ.ನೋವು ಕಾಣಿಸಿಕೊಂಡ ತಕ್ಷಣವೇ ಆಸ್ಪತ್ರೆಗೆ ದಾಖಲಾಗಿದ್ದರೆ ಇಂದು ಪರಿಸ್ಥಿತಿ ಬೇರೆಯೇ ಇರುತ್ತಿತ್ತು ಎಂದು ಅವರ ಕುಟುಂಬಸ್ಥರು ಮತ್ತು ಅಭಿಮಾನಿಗಳು ಕಣ್ಣೀರು ಹಾಕುತ್ತಿದ್ದಾರೆ.
ನಟ ದಿಲೀಪ್ ರಾಜ್ ಅವರು ಕೆಲವೇ ದಿನಗಳ ಹಿಂದೆ ಗೋವಾಗೆ ಪ್ರವಾಸ ತೆರಳಿದ್ದರು.
ಅಲ್ಲಿ ಗೆಳೆಯರೊಂದಿಗೆ ಕಾಲ ಕಳೆಯುವಾಗಲೇ ಅವರಿಗೆ ಎದೆ ನೋವು ಕಾಣಿಸಿಕೊಂಡಿತ್ತು ಎನ್ನಲಾಗುತ್ತಿದೆ. ಅಂದೇ ಹೃದಯವು ಅಪಾಯದ ಮುನ್ಸೂಚನೆ ನೀಡಿದ್ದರೂ, ದಿಲೀಪ್ ಅವರು ಅದನ್ನು ಗಂಭೀರವಾಗಿ ಪರಿಗಣಿಸದೆ ನಿರ್ಲಕ್ಷ್ಯ ತೋರಿದ್ದರು. ಗೋವಾ ಟ್ರಿಪ್ನಲ್ಲಿದ್ದಾಗಲೇ ಆಗಾಗ ನೋವು ಕಾಣಿಸಿಕೊಂಡರೂ, ಅವರು ಅದನ್ನು ಕೇರ್ ಮಾಡಿರಲಿಲ್ಲ.
ಬೆಂಗಳೂರಿಗೆ ಮರಳಿದ ನಂತರ ಅವರು ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಲು ನಿರ್ಧರಿಸಿದ್ದರು. ವಿಪರ್ಯಾಸವೆಂದರೆ, ಇಂದು ಅವರು ಆಸ್ಪತ್ರೆಗೆ ತೆರಳಿ ಹೃದಯ ತಪಾಸಣೆ ಮಾಡಿಸಿಕೊಳ್ಳಬೇಕಿತ್ತು ಮತ್ತು ಅದಕ್ಕಾಗಿ ವೈದ್ಯರ ಅಪಾಯಿಂಟ್ಮೆಂಟ್ ಕೂಡ ಫಿಕ್ಸ್ ಆಗಿತ್ತು. ಆದರೆ ವಿಧಿ ಆಟವೇ ಬೇರೆಯಾಗಿತ್ತು. ನಿನ್ನೆ ರಾತ್ರಿ ಕೂಡ ಧಾರಾವಾಹಿ ಕಲಾವಿದರ ಜೊತೆ ಫೋನ್ನಲ್ಲಿ ಆತ್ಮೀಯವಾಗಿ ಮಾತನಾಡಿದ್ದ ನಟನಿಗೆ, ಮಧ್ಯರಾತ್ರಿ ತೀವ್ರವಾದ ಎದೆನೋವು ಕಾಣಿಸಿಕೊಂಡಿದೆ. ಆಸ್ಪತ್ರೆಗೆ ತೆರಳುವ ಮುನ್ನವೇ ಅವರು ಏಕಾಏಕಿ ಕುಸಿದು ಬಿದ್ದು ಕೊನೆಯುಸಿರೆಳೆದಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243



