Connect with us

ಲೈಫ್ ಸ್ಟೈಲ್

ಗೋವಿನ ಉದರವೆಂಬ ಬ್ರಹ್ಮಾಂಡ ಬಾಂಡ, ಅದ್ಭುತ ಲೋಕ..!

Published

on

  • ಡಾ.ಎನ್.ಬಿ.ಶ್ರೀಧರ, ಶಿವಮೊಗ್ಗ

ಏನ್, ದನಾ ತಿಂದ ಹಾಗೆ ತಿಂತೀಯಲ್ಲೋ” ಎಂದು ಕೆಲವರು ಮೂದಲಿಸುವುದನ್ನು ನೋಡುತ್ತೇವೆ. ಅಣ್ಣಾವ್ರು ಸಂಪತ್ತಿಗೆ ಸವಾಲ್ ಚಿತ್ರದಲ್ಲಿನ ಪ್ರಸಿದ್ಧ ಎಮ್ಮೆ ಹಾಡಿನಲ್ಲಿ “ಕಸವನ್ನೇ ತಿಂದರು ಕೊನೆಗೆ..ಹಾಲನ್ನೇ ನೀಡುವೆ ನಮಗೆ… ಎಂದು ಎಮ್ಮೆಯ ಮೇಲೆ ಸವಾರಿ ಮಾಡುತ್ತಾ ಹಾಡುತ್ತಾ ಹೋಗುವುದನ್ನೂ ಗಮನಿಸಿದ್ದೀರಿ.

ಏನೇನೂ ಕೆಲಸಕ್ಕೆ ಬರದ ವಸ್ತುಗಳು ನಮ್ಮಲ್ಲಿ ಅನೇಕ. ಅದರಲ್ಲಿ ತೆನೆಕೊಯ್ದ ಮೇಲೆ ಇರುವ ಜೋಳದ ಸಿಪ್ಪೆ, ಭತ್ತದ ಕಟಾವು ಆದ ನಂತರ ಸಿಗುವ ಒಣಹುಲ್ಲು, ಅಡಿಕೆಯ ಹಾಳೆ, ಅಕ್ಕಿ ಹೊಟ್ಟು, ಶೇಂಗಾ ಹೊಟ್ಟು, ರಾಗಿ ಹೊಟ್ಟು, ಅಡಿಕೆ ಹಾಳೆ ಇತ್ಯಾದಿಗಳನ್ನು ತಿಂದು ಜೀರ್ಣಿಸಿಕೊಂಡು ಅತ್ಯಂತ ಪೌಷ್ಟಿಕಾಂಶ ಹೊಂದಿದ ರುಚಿಕಟ್ಟಾದ ಅಮೃತದಂತ ಹಾಲನ್ನು ನೀಡುವಂತ ಪ್ರಪಂಚದ ಏಕೈಕ ಪ್ರಾಣಿ ನಮ್ಮ ಗೋಮಾತೆ.

ಅದೆಂತ ಅದ್ಭುತ ಉದರವನ್ನು ಹೊಂದಿದೆಯೆಂದರೆ ಮನುಷ್ಯನಿಗೆ ಏನೇನೂ ಪ್ರಯೋಜನ ಬಾರದ ಅನುಪಯುಕ್ತ ವಸ್ತುಗಳನ್ನು ತಿಂದು ಹಾಲನ್ನಾಗಿ ಪರಿವರ್ತಿಸುವ ಅದ್ಭುತ ಗುಣ ಹೊಂದಿದೆ. ಅದಕ್ಕೆ ಅದರ ಹೆಸರು “ಗೋಮಾತೆ” ಎಂದಿರಬಹುದು.

ಹಾಗಿದ್ದರೆ ಏನಿದೆ ಅದರ ಉದರದಲ್ಲಿ !? ಇದನ್ನು ತಿಳಿಯುವ ಕುತೂಹಲ ಇದೆಯೇ? ಈ ಲೇಖನವನ್ನು ಕೊನೆಯವರೆಗೆ ಓದಿ ಬಿಡಿ.

ನಮ್ಮ ಜಾನುವಾರುಗಳ ಜೀರ್ಣಕ್ರಿಯೆಯ ಅದ್ಭುತ ಪರಿಯನ್ನು ನೋಡಿಯೇ ಬರೆದಿರಬಹುದು. ಮೊದಲನೆಯದು-ಅವನು ಹೆಚ್ಚು ಆಹಾರ ತಿನ್ನುತ್ತಾನೆ ಎಂದು. ಎರಡನೆಯದೆಂದರೆ, ನಿಧಾನವಾಗಿ ಮೆಲುಕು ಹಾಕುತ್ತ ತಿನ್ನುತ್ತಾನೆ ಎಂದು! ನಿಜವೇ. ದನಗಳಿಗೆ ಅಧಿಕ ಆಹಾರ ಬೇಕು. ಜೊತೆಗೆ ಅವು ಒಮ್ಮೆ ತಿಂದ ಆಹಾರವನ್ನು ಬಿಡುವಾದಾಗ ಪುನಃ ಬಾಯಿಗೆ ತಂದುಕೊAಡು ಮೆಲುಕು ಹಾಕುವ ಮೂಲಕ ಚೆನ್ನಾಗಿ ನುರಿಸಿ ಆಮೇಲೆ ನುಂಗುತ್ತವೆ. ಮನುಷ್ಯರಿಗೆ ಈ ಸೌಲಭ್ಯವಿಲ್ಲ.

ಒಮ್ಮೆ ತಿಂದರೆ ಮುಗಿಯಿತು, ಆಹಾರದ ಮುಮ್ಮುಖ ಪ್ರಯಾಣ ಆರಂಭವಾದಂತೆಯೇ. ಆದರೆ ಜಾನುವಾರುಗಳು ಒರಟಾದ ಮತ್ತು ಕಡಿಮೆ ಗುಣಮಟ್ಟದ ಮೇವನ್ನು ತಿಂದು ಜೀರ್ಣಿಸಿಕೊಳ್ಳಲು ವಿಶಿಷ್ಟವಾದ ಜೀರ್ಣಾಂಗವ್ಯೂಹವನ್ನು ಹೊಂದಿವೆ. ಇದರ ರಚನೆ ಮತ್ತು ಕಾರ್ಯವಿಧಾನಗಳು ನಿಜಕ್ಕೂ ಅದ್ಭುತ ಮತ್ತು ಕುತೂಹಲಕರ.

ಜಾನುವಾರುಗಳಿಗೆ ನಾಲ್ಕು ಹೊಟ್ಟೆಗಳಿರುತ್ತವೆ! ಆಶ್ಚರ್ಯವೆನಿಸಿದರೂ ಸತ್ಯ. ಅಂದರೆ, ಅವುಗಳ ಹೊಟ್ಟೆಯು ನಾಲ್ಕು ಭಾಗಗಳಾಗಿ ವಿಂಗಡಿಸಲ್ಪಟ್ಟಿದ್ದು ಪ್ರತಿಯೊಂದು ಭಾಗದ ರಚನೆ ಮತ್ತು ಕಾರ್ಯಗಳು ಸಂಪೂರ್ಣವಾಗಿ ವಿಭಿನ್ನವಾಗಿದೆ. ಅಂತೆಯೇ ಅವುಗಳಿಗೆ ಅಧಿಕ ಪ್ರಮಾಣದ ಆಹಾರ ಹಾಗೂ ನೀರು ಬೇಕು. ದೇಹದ ಎಡ ಭಾಗದಲ್ಲಿರುವುದು ದೊಡ್ಡದಾದ ಮೊದಲ ಹೊಟ್ಟೆ. ಅದಕ್ಕೆ ರುಮೆನ್ ಎನ್ನುತ್ತಾರೆ. ಇದೊಂದು ಬ್ರಹ್ಮಾಂಡ ಬಾಂಡ!.

ಇದರ ಸಾಮರ್ಥ್ಯವೆಷ್ಟು ಗೊತ್ತೇ? ಸುಮಾರು 150 ಲೀಟರ್‌ಗಳು! ಅಂದರೆ ನಮ್ಮ ಹೊಟ್ಟೆಯ 100 ಪಟ್ಟು !. ದೇಹದ ಎಡಭಾಗವನ್ನು ಬಹುಮಟ್ಟಿಗೆ ಆಕ್ರಮಿಸಿದ ಇದರ ಒಳ ಮೈ ರಚನೆ ಕಂದು ಟರ್ಕಿ ಟವೆಲ್ಲಿನಂತಿವೆ. ಈ ಮೊದಲ ಹೊಟ್ಟೆಯಲ್ಲಿ ಜೀರ್ಣಕ್ರಿಯೆಗೆ ಸಹಕಾರಿಯಾಗುವ 2000 ಕೋಟಿಗಿಂತೆ ಹೆಚ್ಚಿನ ಅಸಂಖ್ಯಾತ ಸೂಕ್ಷ್ಮಾಣು ಜೀವಿಗಳಿವೆ. ಅವುಗಳಲ್ಲಿ ಶೇ. 40-60 ರಷ್ಟು ಪ್ರೊಟೊಜೋವಾ ಏಕಾಣುಗಳು, ಶೇ. 30-40 ರಷ್ಟು ನಿರುಪದ್ರವಿ ಬ್ಯಾಕ್ಟೀರಿಯಾಗಳು ಹಾಗೂ ಶೇ. 8-10ರಷ್ಟು ಶಿಲೀಂಧ್ರಗಳು ಇವೆ. ರುಮೆನ್ ಇರುವುದರಿಂದಲೇ ಈ ಪ್ರಾಣಿ ಜಾತಿಗೆ “ರುಮಿನೆಂಟ್” ಎಂಬ ಹೆಸರು ಬಂದಿದ್ದು. ಇವುಗಳನ್ನು “ರೋಮಾಂತಕ” ಪ್ರಾಣಿಗಳೆಂದೂ ಸಹ ಕರೆಯಬಹುದು.

ಎರಡನೆಯ ಹೊಟ್ಟೆಯೇ ಜೇನುಗೂಡಿನ ರಚನೆಯನ್ನು ಹೋಲುವ ರೆಟಿಕ್ಯೂಲಂ. ಹೃದಯಕ್ಕೆ ಹತ್ತಿರದಲ್ಲಿರುವ ಇದರ ಮುಖ್ಯ ಕೆಲಸ ಆಹಾರದಲ್ಲಿ ಬಂದ ಗಟ್ಟಿಯಾದ ಅಥವಾ ಚೂಪಾದ ವಸ್ತುಗಳನ್ನು ಮುಂದೆ ಹೋಗದಂತೆ ತಡೆಯುವುದು. ಅದಕ್ಕೆ ಪಾಪ. ಅನೇಕ ಸಲ ನಮ್ಮ ಅಸಡ್ಡೆಯಿಂದ ಜಾನುವಾರಿನ ಉದರ ಸೇರುವ ಮೊಳೆ, ಸೂಜಿ ಇತ್ಯಾದಿ ಇಲ್ಲಿ ಉಳಿದುಕೊಂಡು ವಫೆಯನ್ನು ಚುಚ್ಚಿ ಹೃದಯವನ್ನು ಘಾಸಿಗೊಳಿಸುತ್ತವೆ.

ಅನೇಕ ಪದರುಗಳನ್ನು ಹೊಂದಿದ “ಒಮೇಸಂ” 3 ನೇ ಹೊಟ್ಟೆ. ಇಲ್ಲಿ ಆಹಾರ ಮತ್ತಷ್ಟು ಸಣ್ಣದಾಗಿ ನುರಿಯಲ್ಪಡುತ್ತದೆ. ಇದನ್ನು ಅಕ್ಕಿ ಗಿರಣಿಯ ಹಲ್ಲರ್‌ಗೆ ಹೋಲಿಸಬಹುದು. ರುಮೆನ್ನಿಗೆ ಹೋಲಿಸಿದರೆ ಒಮೇಸಂ ಇದರ ಗಾತ್ರ ಚಿಕ್ಕದು.

ನಾಲ್ಕನೆಯ ಹೊಟ್ಟೆಯಾದ ಅಬೋಮೇಸಮ್ ಮಾನವನ ಹೊಟ್ಟೆಯನ್ನು ಹೋಲುತ್ತದೆ. ತಿಂದ ಆಹಾರವು ಇಲ್ಲಿ ಇನ್ನಷ್ಟು ಸಣ್ಣ ಸಣ್ಣ ಕಣಗಳಾಗುತ್ತದೆ. ಇದಕ್ಕೂ ನಮ್ಮ ಹೊಟ್ಟೆಯಲ್ಲಿ ಆದ ಹಾಗೇ ಅಲ್ಸರುಗಳಾಗುತ್ತವೆ ಎನ್ನುವುದು ನಿಜ. ಬೇಕಾಬಿಟ್ಟಿ ನೋವು ನಿವಾರಕಗಳನ್ನು 2-3 ದಿನ ನೀಡಿದರೆ ಅಲ್ಸರ್ ಹುಣ್ಣಾಗುವುದು ಗ್ಯಾರಂಟಿ. ಗೋವಿನ ಉದರಭಾಗದ ಶೇ.80 ಭಾಗವನ್ನು ರೂಮೆನ್ (ಮೆಲಕು ಚೀಲ) ಆವರಿಸಿಕೊಂಡರೆ, ಶೇ.4-5 ಭಾಗ ರೆಟಿಕ್ಯುಲಮ್, ಶೇ.6-7 ಭಾಗ ಒಮೇಸಂ ಹಾಗೂ ಶೇ.7-8 ಭಾಗ ಅಬೋಮೇಸಂಗಳು ಆವರಿಸಿವೆ.

ಗೋವು ಹೇಗೆ ಕಸವನ್ನು ರಸ(ಹಾಲು)ವನ್ನಾಗಿ ಪರಿವರ್ತಿಸುತ್ತದೆ?

ಇದೊಂದು ಅದ್ಭುತ ಪ್ರಕ್ರಿಯೆ. ಗೋವುಗಳು ಮೇವು, ಹಿಂಡಿ ತಿಂದು ನೀರು ಕುಡಿದು ಬದುಕುತ್ತವೆ. ಮೇಯುವಾಗ ಹಸಿ ಅಥವಾ ಒಣ ಹುಲ್ಲನ್ನು ಯಾವುದು ಸಿಗುವುದೋ ಅದನ್ನು ನಮ್ಮ ಹಾಗೇ ಅಗಿಯದೇ ಆದಷ್ಟು ಲಗುಬಗೆಯಿಂದ ಗಬಗಬನೆ ತಿನ್ನುತ್ತವೆ. ಇದು ಅವು ಹಿಂಸ್ರ ಮೃಗಗಳಿಗೆ ಅಂಜಿ ಮಾಡುವ ಪ್ರಕ್ರಿಯೆ ಇರಬಹುದೇನೋ?. ತಿಂದ ಮೇವನ್ನು ವಿರಾಮದ ವೇಳೆಯಲ್ಲಿ ಬಾಯಿಗೆ ಪುನಃ ತಂದು ಜೊಲ್ಲು ಸೇರಿಸಿ ಅರೆದು ವಾಪಸ್ಸು ಕಳಿಸುವ “ಮೆಲುಕು” ಹಾಕುತ್ತವೆ.

ಅವುಗಳ ಎಡಭಾಗದ ಎದೆಗೂಡಿನ ಹಿಂಭಾಗದಲ್ಲಿ ತ್ರಿಕೋನಾಕಾರದ ತಗ್ಗು ಇದ್ದು, ನೋಡುವಾಗ ಅದರ ಏರಿಳಿತದ ಅನುಭವವಾಗುತ್ತದೆ. ಹೀಗೆ, ಗೋವೊಂದನ್ನು ಸೂಕ್ಷö್ಮವಾಗಿ ಗಮನಿಸಿದರೆ ವಿಸ್ಮಯವೆನಿಸುತ್ತದೆ ಅಲ್ಲವೇ? ನಾವು ಕೊಡುವ ನಮಗೆ ಅನಾವಶ್ಯವಾದ, ಕೃಷಿಯಲ್ಲಿ ಯಾರಿಗೂ ಬೇಡವಾದ ಜೋಳದ ಕಣಿಕೆ, ಭತ್ತದ ಹುಲ್ಲು, ಮರದ ಒಣಗಿದೆ ಎಲೆಗಳು, ಅಡಿಕೆ ಹಾಳೆ ಇತ್ಯಾದಿ ಮನುಷ್ಯನಿಗೆ ಯಾತಕ್ಕೂ ಬೇಡವಾದ ವಸ್ತುಗಳನ್ನು ಮೆಂದು ಈ ವಸ್ತುಗಳನ್ನು ಜೀರ್ಣ ಮಾಡಿಕೊಂಡು ನಮಗೆ ಅದ್ಭುತವಾದ ಹಾಲನ್ನು ನೀಡುವ ಆಕಳನ್ನು “ಗೋಮಾತೆ” “ಅಮೃತವರ್ಷಿಣಿ” ಎಂದು ಕರೆಯದೇ ಇದ್ದರೆ ನಮಗೆ ನಾವೇ ದ್ರೋಹ ಮಾಡಿಕೊಂಡಂತೆ!

ಇವುಗಳ ಜೀರ್ಣಕ್ರಿಯೆ ಬೇರೆ ಪ್ರಾಣಿಗಳಿಗಿಂತ ಭಿನ್ನವಾಗಿದೆ. ಜಾನುವಾರುಗಳ ಆಹಾರದಲ್ಲಿ ಬಹುಪಾಲು ನಾರು, ದಂಟು ಅಥವಾ ಗಟ್ಟಿ ಪದಾರ್ಥಗಳಿರುವುದರಿಂದ ಜೀರ್ಣ ರಸದಿಂದ ಬೇಗ ಜೀರ್ಣವಾಗುವುದಿಲ್ಲ. ತಿಂದ ಆಹಾರವನ್ನು ಜೀರ್ಣಗೊಳಿಸುವ ಈ ಕೆಲಸವನ್ನು ಹೊಟ್ಟೆಯಲ್ಲಿರುವ ಅಸಂಖ್ಯಾತ ಸೂಕ್ಷಾö್ಮಣುಗಳು ಮಾಡುತ್ತವೆ. ಇಲ್ಲಿನ ರಸಸಾರ (ಪಿ.ಎಚ್.) 6.5-7.0 ಇರುತ್ತದೆ. ಆಹಾರದ ಆಮ್ಲತೆ ಅಥವಾ ಕ್ಷಾರತೆ ಅಧಿಕವಾದರೆ ಈ ರಸಸಾರದಲ್ಲೂ ವ್ಯತ್ಯಾಸವಾಗಿ ಸೂಕ್ಷ್ಮಾ ಣುಗಳು ಸಾವನ್ನಪ್ಪಿ ಜೀರ್ಣಕ್ರಿಯೆ ಸರಿಯಾಗಿ ನಡೆಯುವುದಿಲ್ಲ.

ಅವಸರದಲ್ಲಿ ಗೋವು ನುಂಗಿದ ಆಹಾರವು ವಿರಾಮದಲ್ಲಿ ಮೆಲುಕಾಡುವಾಗ ಗ್ರೈಂಡರಿನಲ್ಲಿ ಅಕ್ಕಿ ನೀರು ಒಟ್ಟಿಗೇ ಹಾಕಿ ರುಬ್ಬಿದಂತೆ ಬಾಯಿಯಲ್ಲಿ ಸೃವಿಸುವ ಜೊಲ್ಲುರಸದೊಂದಿಗೆ ಮಿಶ್ರಗೊಳ್ಳುವುದರ ಮೂಲಕ ಜೀರ್ಣಕ್ರಿಯೆ ಆರಂಭಗೊಳ್ಳುತ್ತದೆ. ಹಸುವೊಂದು ದಿನದಲ್ಲಿ 8 ಗಂಟೆಗಳಷ್ಟು ಕಾಲ ಮೆಲುಕು ಹಾಕುವುದರಲ್ಲೇ ಕಳೆಯುತ್ತದೆ! ಆಹಾರ ಸರಿಯಾಗಿ ಜೀರ್ಣವಾಗಬೇಕಾದರೆ ಇದು ಅಗತ್ಯ ಕೂಡಾ. ಗೋವಿನಲ್ಲಿ ದಿನಕ್ಕೆ 150-180 ಲೀಟರಿನಷ್ಟು ಅಂದರೆ 4-5 ದೊಡ್ಡ ಬಕೇಟ್ ತುಂಬಾ ಅಂದರೆ ನಾವು ಜೊಲ್ಲು ಉತ್ಪಾದನೆಯಾಗುತ್ತದೆಂದರೆ ಆಶ್ಚರ್ಯವಾಗುತ್ತದೆ ಅಲ್ಲವೇ?.

ಹೀಗೆ ಚೆನ್ನಾಗಿ ಅಗಿಯಲ್ಪಟ್ಟ ಜೊಲ್ಲು ಮಿಶ್ರಿತ ಆಹಾರವು ಜಠರದ ನಾಲ್ಕು ಕೋಣೆಗಳಲ್ಲಿ ಮೊದಲನೇ ಹೊಟ್ಟೆಯಾದ ‘ರೂಮೆನ್’ ಎಂಬ ಚೀಲಕ್ಕೆ ಹೋಗುತ್ತದೆ. ಇದೊಂದು ದೊಡ್ಡ ಉಗ್ರಾಣವಿದ್ದಂತೆ. ತಿಂದಷ್ಟೂ ಹಿಗ್ಗುವ ಚರ್ಮದ ಚೀಲದಂತೆ. ತಿಂದ ಆಹಾರವು 10-12 ತಾಸುಗಳ ಕಾಲ ಇಲ್ಲಿದ್ದು ಸೂಕ್ಷ್ಮಾಣುಗಳಿಂದ ಭಾಗಶಃ ಜೀರ್ಣಗೊಂಡು ಮುಂದೆ ಸಾಗುತ್ತದೆ.

ಇಲ್ಲಿ ತಂಗಿರುವಾಗ ಕೋಟ್ಯಾಂತರ ಸೂಕ್ಷಾö್ಮಣುಗಳು ಅದನ್ನು ಅವುಗಳ ಆಹಾರವಾಗಿ ಮಾಡಿಕೊಂಡು ಜೀರ್ಣಿಸುತ್ತವೆ. ಈ ಸೂಕ್ಷ್ಮಾಣುಗಳು ನಿರುಪದ್ರವಿಗಳು. ಜೀರ್ಣಕ್ರಿಯೆಗೆ ಸಹಕಾರಿಗಳು. ಅವುಗಳ ಸಹಾಯದಿಂದಲೇ ಜಾನುವಾರುಗಳು ನಾರು ಪದಾರ್ಥಗಳನ್ನು ಜೀರ್ಣಿಸಿಕೊಳ್ಳಲು ಸಾಧ್ಯ. ಹಸು ತನ್ನ ಹೊಟ್ಟೆಯಲ್ಲಿ ಈ ಸೂಕ್ಷ್ಮಾಣುಗಳಿಗೆ ಜಾಗ ನೀಡಿ ಅವುಗಳ ವೃದ್ಧಿಗೆ ಬೇಕಾದ ಆಹಾರವನ್ನು ಕೊಡುತ್ತದೆ.

ಬದಲಾಗಿ ಸೂಕ್ಷ್ಮಾಣುಗಳು ನಿರ್ವಾತ ವಾತಾವರಣದಲ್ಲಿ ಹಸುಗಳ ಆಹಾರವನ್ನು ಶೇ.70ರಷ್ಟು ಜೀರ್ಣಗೊಳಿಸುತ್ತವೆ. ಅಷ್ಟೇ ಅಲ್ಲದೇ ಇವುಗಳಿಂದ ದೇಹಕ್ಕೆ ಬೇಕಾದ ಪ್ರೋಟೀನ್, ವಿಟಮಿನ್ ಬಿ ಕಾಂಪ್ಲೆಕ್ಸ್ ಹಾಗೂ ಇನ್ನಿತರ ಪೋಷಕಾಂಶಗಳು ತಯಾರಾಗುತ್ತವೆ. ಹೀಗಾಗಿ ಹಸು ಮತ್ತು ಈ ಸೂಕ್ಷ್ಮಾ ಣುಜೀವಿಗಳು ಪರಸ್ಪರರ ಉಳಿವಿಗಾಗಿ ಪೂರಕ ಸಂಬ೦ಧ ಹೊಂದಿವೆ.

ಇದಕ್ಕೆ ಒಂದು ರೀತಿಯ ಸಹಬಾಳ್ವೆಯ ಕೂಡು ಜೀವನ ಅನ್ನಬಹುದು. ಗೋವು ತನ್ನದೇ ಉದರದಲ್ಲಿರುವ ಅಸಂಖ್ಯ ಸೂಕ್ಷ್ಮಾಣುಗಳಿಗೆ ಸೆಲ್ಯುಲೋಸ್ ಎಂಬ ಕಚ್ಚಾ ವಸ್ತು ಪೂರೈಸಿದರೆ ಇದನ್ನು ಸೂಕ್ಷ್ಮಾಣುಗಳುು ಸೆಲ್ಯುಲೇಸ್ ಎಂಬ ಕಿಣ್ವವನ್ನು ಉತ್ಪಾದಿಸಿ ಜೀರ್ಣಿಸಿಕೊಂಡು ಹಾಲಿನ ಉತ್ಪಾದನೆಗೆ ಅವಶ್ಯವಾದ ಶರ್ಕರ ಪಿಷ್ಟ ಲ್ಯಾಕ್ಟೋಸ್ ಇತ್ಯಾದಿ ಅನೇಕ ಉಪವಸ್ತುಗಳನ್ನು ತಯಾರು ಮಾಡಿ ಕೆಚ್ಚಲಿಗೆ ರಕ್ತದ ಮೂಲಕ ಪೂರೈಸುತ್ತವೆ.

ಹಾಲಿನ ಉತ್ಪಾದನೆಗೆ ಅವಶ್ಯವಿರುವ ಅನೇಕಾನೇಕ ಕಚ್ಚಾ ವಸ್ತುಗಳು ಕೆಚ್ಚಲಿಗೆ ರಕ್ತ ಪ್ರಸರಣದ ಮೂಲಕ ತಲುಪುತ್ತವೆ. 1 ಲೀಟರ್ ಹಾಲು ಉತ್ಪಾದಿಸಲು 500 ಲೀಟರಿನಷ್ಟು ರಕ್ತವು ಕೆಚ್ಚಲಿನ ವಿಶೇಷ ಗ್ರಂಥಿಗಳಿಗೆ ಹರಿಯುತ್ತದೆ. ಅಂದರೆ ಹೊತ್ತಿಗೆ 10 ಲೀಟರ್ ಹಾಲು ಹಾಲು ಉತ್ಪಾದಿಸಲು 5000 ಲೀಟರ್ ರಕ್ತವು ಕೆಚ್ಚಲಿಗೆ ನುಗ್ಗಿ ಅಲ್ಲಿಗೆ ಅವಶ್ಯಕ ವಸ್ತುಗಳನ್ನು ಸರಬರಾಜು ಮಾಡಿ ರುಚಿಯಾದ ಹಾಲನ್ನು ಉತ್ಪಾದಸಲು ಸಹಕಾರಿಯಾಗಿದೆ.

ಕಸದಿಂದ ರಸ ತೆಗೆಯುವುದು ಎಂದರೆ ಇದೇ ಇರಬೇಕಲ್ಲವೇ? ಇದಕ್ಕೆ ಗೋಮಾತೆಯ ಅದ್ಭುತ ಶಕ್ತಿ ಕಾರಣ. ಏನಂತೀರಿ?

ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂತರಂಗ

250ಕ್ಕೂ ಹೆಚ್ಚು ಗಿಳಿಗಳ ನಿಗೂಢ ಸಾವು ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ ಆತಂಕ

Published

on

250ಕ್ಕೂ ಹೆಚ್ಚು ಗಿಳಿಗಳ ನಿಗೂಢ ಸಾವು

ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ ಆತಂಕ

ಬೆಂಗಳೂರು: ಮಧ್ಯಪ್ರದೇಶ ರಾಜ್ಯದ ಖಾರ್ಗೋನ್ ಜಿಲ್ಲೆಯಲ್ಲಿರುವ ನರ್ಮದಾ ನದಿ ತೀರದಲ್ಲಿ 250ಕ್ಕೂ ಹೆಚ್ಚು ಗಿಳಿಗಳು ಕೃಷಿ ಭೂಮಿಯಲ್ಲಿ ಬಳಸುವ ಕೀಟನಾಶಕ ಮಿಶ್ರಿತ ಆಹಾರ ಅಥವಾ ನರ್ಮದಾ ನದಿಯ ಕಲುಷಿತ ನೀರು ಸೇವಿಸಿ ಸಾವನ್ನಪ್ಪಿರುವ ಪ್ರಕರಣ ಇಡೀ ದೇಶದಲ್ಲಿ ಇದೇ ಮೊದಲ ಬಾರಿಗೆ ನಡೆದ ದುರ್ಘಟನೆ ಎಂದು ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷರೂ ಹಾಗೂ ರಾಷ್ಟ್ರೀಯ ಸಮಿತಿ ನಿರ್ದೇಶಕರಾದ ಮಾಲತೇಶ್ ಅರಸ್ ಹರ್ತಿಕೋಟೆ ಆತಂಕ ವ್ಯಕ್ತಪಡಿಸಿದ್ದಾರೆ.

ಕಳೆದ ಮೂರು ದಿನಗಳಲ್ಲಿ ನರ್ಮದಾ ನದಿ ತೀರದಲ್ಲಿ ಸುಮಾರು ಇನ್ನೂರಕ್ಕೂ ಅಧಿಕ ಗಿಳಿಗಳು ನಿಗೂಢವಾಗಿ ಸಾವನ್ನಪ್ಪಿದ್ದು ಆರಂಭದಲ್ಲಿ ಇದು ಹಕ್ಕಿ ಜ್ವರ ದಿಂದ ಸಾವನ್ನಪ್ಪಿರಬಹುದು ಎಂದು ಶಂಕಿಸಲಾಗಿತ್ತು ಆದರೆ ಪಶುವೈದ್ಯಕೀಯ ಅಧಿಕಾರಿ ಡಾ. ಸುರೇಶ್ ಬಫೇಲ್ ಅವರು ನೀಡಿದ ಮಾಹಿತಿ ಪ್ರಕಾರ ಹಕ್ಕಿಗಳ ಹೊಟ್ಟೆಯಲ್ಲಿ ಅಕ್ಕಿ ಕಾಳುಗಳು ಮತ್ತು ಸಣ್ಣ ಕಲ್ಲುಗಳು ಪತ್ತೆಯಾಗಿವೆ. ಅಲ್ಲದೆ ಕೃಷಿ ಭೂಮಿಯಲ್ಲಿ ಬಳಸುವ ಕೀಟನಾಶಕ ಮಿಶ್ರಿತ ಆಹಾರ ಅಥವಾ ನರ್ಮದಾ ನದಿಯ ಕಲುಷಿತ ನೀರು ಸೇವಿಸಿ 200 ರಿಂದ 50 ಕ್ಕೂ ಅಧಿಕ ಮೃತಪಟ್ಟಿರುವ ಸಾಧ್ಯತೆಗಳು ಹೆಚ್ಚಿವೆ ಎಂದು ಹೇಳಿದ್ದು ಇವರ ಮಾಹಿತಿಯನ್ನು ಆದರಿಸಿ ವಿಶೇಷ ತನಿಖೆ ಮಾಡಬೇಕು ಎಂದು ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ ಆಗ್ರಹಿಸಿದೆ.

ಖರ್ಗೋನ್‌ ಜಿಲ್ಲೆಯ ಬದ್ವಾ ಪ್ರದೇಶದ ನರ್ಮದಾ ನದಿ ತೀರದಲ್ಲಿರುವ ಅಕ್ವೆಡಕ್ಟ್ ಸೇತುವೆಯ ಸಮೀಪ ಈ ಘಟನೆ ಬೆಳಕಿಗೆ ಬಂದಿದ್ದು ಅರಣ್ಯ ಇಲಾಖೆಯು ಸೇತುವೆಯ ಸುತ್ತಮುತ್ತ ಹಕ್ಕಿಗಳಿಗೆ ಆಹಾರ ನೀಡುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಿದೆ. ಸದ್ಯ ಹಕ್ಕಿಗಳ ಸಾವಿಗೆ ನಿಖರ ಕರಣ ತಿಳಿಯಲು ಹಕ್ಕಿಗಳ ಅವಶೇಷಗಳನ್ನು ಜಬಲ್ಪುರಕ್ಕೆ ಕಳುಹಿಸಲಾಗಿದೆ. ಸದ್ಯ ಅರಣ್ಯ ಇಲಾಖೆ ಮತ್ತು ಪಶುವೈದ್ಯಕೀಯ ತಂಡಗಳು ಸ್ಥಳದಲ್ಲೇ ಬೀಡುಬಿಟ್ಟಿದ್ದು, ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿವೆ.

ಇನ್ನೊಂದು ಮುಖ್ಯ ವಿಚಾರ ಏನೆಂದರೆ ಪಕ್ಷಿಗಳಿಗೆ ಮನುಷ್ಯರು ಸೇವಿಸುವ ಎಣ್ಣೆ ಪದಾರ್ಥ ಅಥವಾ ಬೇಯಿಸಿದ ಆಹಾರ ನೀಡುವುದು ಅವುಗಳ ಜೀರ್ಣಾಂಗ ವ್ಯವಸ್ಥೆಯ ಮೇಲೆ ಮಾರಕ ಪರಿಣಾಮ ಬೀರುತ್ತದೆ ಎಂದು ಪಶುವೈದ್ಯಕೀಯ ಅಧಿಕಾರಿ ಡಾ. ಮನಿಷಾ ಚೌಹಾಣ್ ಹೇಳಿದ್ದಾರೆ. ಏನೇ ಆದರೂ ನೂರಾರು ಗಿಳಿಗಳು ಸಾವನ್ನಪಿರುವುದು ಮಾತ್ರ ದುರಂತ.

ಈ ಸಂದರ್ಭದಲ್ಲಿ ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷರೂ ಹಾಗೂ ರಾಷ್ಟ್ರೀಯ ಸಮಿತಿ ನಿರ್ದೇಶಕರಾದ ಮಾಲತೇಶ್ ಅರಸ್ ಹರ್ತಿಕೋಟೆ, ಹಿರಿಯ ಉಪಾಧ್ಯಕ್ಷರಾದ ಗುರುರಾಜ್ ಹೂಗಾರ್, ಉಪಾಧ್ಯಕ್ಷರಾದ ಯೋಗೀಶ್ ಕುಮಾರ್, ರುದ್ರಮುನಿ, ಡಾ.ಸಿದ್ದಲಿಂಗಪ್ಪ, ಮತ್ತು ಪದಾಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

Continue Reading

ಅಂಕಣ

Indian birthwort: ಪರಮಾತ್ಮನ ಹೆಸರಲ್ಲೇ ಇರುವ ದಿವ್ಯೌಷದ ಈಶ್ವರ ಬಳ್ಳಿ ಬಗ್ಗೆ ಗೊತ್ತೇ?

Published

on

indian birthwort, Aristolochia tagala

‘ಈಶ್ವರ’ ಎಂದ ಕೂಡಲೇ ಪರಮಾತ್ಮನನ್ನೆ ನೆನಪಿಸಿಕೊಳ್ಳೋ ನಮಗೆ ಅದೇ ಹೆಸರಿನಲ್ಲಿ ದಿವ್ಯೌಷಧಿ ಇದೆ ಎಂಬುದು ಎಷ್ಟು ಜನರಿಗೆ ತಿಳಿದೀತು? ಹೌದು! ಪರಮಾತ್ಮನ ಹೆಸರಿನಲ್ಲೇ ಒಂದು ಗಿಡಮೂಲಿಕೆ ಇದೆ (Indian birthwort). ಇದರ ವಿಶೇಷತೆ ಏನು? ಅದರಿಂದಾಗುವ ಪ್ರಯೋಜನಗಳೇನು? ಆರೋಗ್ಯದ ಮೇಲೆ ಬೀರುವ ಪ್ರಬಾವಗಳೇನು? ಎಂಬುದನ್ನು ಈ ಲೇಖನದಲ್ಲಿ ತಿಳಿಯೋಣ.

ಈ ಬಳ್ಳಿಯನ್ನು ಹೆಚ್ಚಾಗಿ ಭಾರತ, ನೇಪಾಳ, ಶ್ರೀಲಂಕಾ ಮತ್ತು ಬಾಂಗ್ಲಾದೇಶಗಳಲ್ಲಿ ಕಾಣಬಹುದಾಗಿದೆ. ಇದರ ವೈಜ್ಞಾನಿಕ ಹೆಸರು ಅರಿಸ್ಟೋಲೋಚಿಯ ಇಂಡಿಕಾ. ಸಾಮಾನ್ಯವಾಗಿ ಮೂಲಿಕೆ ಮರಕ್ಕೆ ಸುತ್ತಿಕೊಂಡು ಬೆಳೆಯುವ ಕಪ್ಪು ಬಳ್ಳಿಯಾಗಿದ್ದು, ಇದರ ಎಲೆಗಳು ಉದ್ದವಾಗಿ, ತಳದಲ್ಲಿ ಅಗಲವಾಗಿ, ತುದಿಯಲ್ಲಿ ಮೊನಚಾಗಿ, ಮೃದುವಾಗಿರುತ್ತದೆ. ಇನ್ನೂ ಇದರ ಬೀಜಗಳು ಚಪ್ಪಟೆಯಾಗಿ, ಅಂಡಕಾರವಾಗಿದ್ದು ಪುಕ್ಕಗಳನ್ನು ಹೊಂದಿದೆ ಹಾಗು ಇದರ ಬೇರುಗಳಲ್ಲಿ ಸುಗಂಧ ತೈಲವಿರುತ್ತದೆ.

ಈಶ್ವರ ಬಳ್ಳಿ (Indian birthwort)ಯ ಪೌರಾಣಿಕ ಹಿನ್ನೆಲೆ:

ನಮ್ಮೆಲ್ಲರಿಗೂ ತಿಳಿದಂತೆ ಶಿವ ಸಮುದ್ರ ಮಂಥನ ಮಾಡುವಾಗ ಹಾಲಾಹಲ (ವಿಷ) ಉತ್ಪತ್ತಿಯಾಯಿತು. ಆ ವಿಷ ಯಾರಿಗೂ ತೊಂದರೆಯಾಗಬಾರದೆಂದು ತಾನೇ ಅದನ್ನು ಕುಡಿದ. ಇದನ್ನು ನೋಡಿದ ಪಾರ್ವತಿ ದೇವಿ ಆ ವಿಷ ತನ್ನ ಪತಿಯ ಹೊಟ್ಟೆ ಸೇರಬಾರದೆಂದು ಆತನ ಕುತ್ತಿಗೆಯನ್ನು ಒತ್ತಿ ಹಿಡಿದಳು. ವಿಷ ಒಳ ಹೋಗಲಿಲ್ಲ. ವಿಷದ ಪ್ರಭಾವದಿಂದ ಕುತ್ತಿಗೆ ನೀಲ ವರ್ಣವಾಯಿತು. ಶಿವ ನೀಲಕಂಠನಾದ. ಶಿವ ವಿಷ ಕುಡಿದರೂ ಶಿವನಿಗೆ ಏನೂ ಆಗಲಿಲ್ಲ. ವಿಷವನ್ನು ನಿರ್ವಿಷ ಮಾಡುವ ಗುಣ ಶಿವನಿಗಿದ್ದಂತೆ ಈ ಗಿಡಕ್ಕೂ ಇರುವ ಕಾರಣ ‘ಈಶ್ವರ’ ಎಂಬ ಹೆಸರು ಈ ವನಸ್ಪತಿಗೆ ಇಟ್ಟಿದ್ದಾರೆ.

ಇದನ್ನೂ ಓದಿ: ಓಂಶಕ್ತಿ ಮಾಲಾಧಾರಿಗಳ ಮೇಲೆ ಕಲ್ಲು ತೂರಾಟ

‘ಈಶ್ವರ’ ಬಳ್ಳಿ ಮತ್ತು ಅದರ ಫಲ ನೋಡಲು ಹೇಗಿರುತ್ತದೆ?

ಕೆಲ ‘ಈಶ್ವರ’ ಬಳ್ಳಿಯು ಮರದಂತೆ ಉದ್ದಕ್ಕೆ ಏರುತ್ತದೆ. ಮತ್ತಷ್ಟು ಬಳ್ಳಿಯು ಪೊದೆಯಾಗಿ ಆವರಿಸಿಕೊಳ್ಳುತ್ತದೆ. ಸ್ವಲ್ಪ ಉದ್ದ ಆಯತಾಕಾರದ ಎಲೆಗಳು. ಎಲೆಗಳು ಅಲ್ಲಾಡಿದರೆ ಪರಿಮಳ ಸೂಸುತ್ತದೆ. ಎಲೆಯನ್ನು ಕಿವಿಚಿದರೂ ಪರಿಮಳ ಬರುತ್ತದೆ. ಹೂಗಳು ಬಾಯಿ ತೆರೆದ ಹಕ್ಕಿಗಳಂತೆ ಕಂಡುಬರುತ್ತದೆ. ಫಲಗಳು ಉದ್ದ ಹಾಗೂ ಸ್ವಲ್ಪ ದುಂಡಾಗಿ ಇರುತ್ತದೆ. ಫಲ ಬೆಳೆದು ಒಡೆದಾಗ ತಲೆ ಕೆಳಗಾಗಿ ಬಿಡಿಸಿದ ಪ್ಯಾರಾಚೂಟ್‌ನಂತೆ ಕಾಣುತ್ತದೆ. ಅದರೊಳಗೆ ತೆಳುವಾದ ತ್ರಿಕೋಣಾಕಾರದ ಬೀಜಗಳು ಇರುತ್ತದೆ.

‘ಈಶ್ವರ’ ಬಳ್ಳಿ (Indian birthwort)ಯಿಂದ ಆಗುವ ಪ್ರಯೋಜನಗಳೇನು?

ಭಾರತದ ಎಲ್ಲಾ ಕಡೆ ಕಂಡು ಬರುವ ಈಶ್ವರ ಬಳ್ಳಿಯ ಬೇರು, ಎಲೆಗಳು ಔಷಧಿಗಾಗಿ ಉಪಯೋಗಿಸಲ್ಪಡುತ್ತದೆ. ಕ್ರಿಮಿ ಬಾಧೆ, ಕಫ ಬಾಧೆ, ಸ್ತ್ರೀಯರ ಕೆಲವು ತೊಂದರೆಗಳಲ್ಲಿ, ವಿಷ ಚಿಕಿತ್ಸೆಯಲ್ಲಿ ವಿಶೇಷವಾಗಿ ಇದನ್ನು ಉಪಯೋಗಿಸಲ್ಪಡುತ್ತದೆ.

ಜೇಡ, ಚೇಳು, ಇಲಿ ಕಚ್ಚಿದರೆ: ಇದರ 3ಗ್ರಾಂ ಬೇರನ್ನು ಅಕ್ಕಿ ತೊಳೆದ ನೀರಲ್ಲಿ ಕಲಸಿ ಕುಡಿಸಬೇಕು ಹಾಗೂ ಅದರ ಎಲೆಯನ್ನು ನೀರಲ್ಲಿ ಅರೆದು ಕಚ್ಚಿದಲ್ಲಿಗೆ ಲೇಪಿಸಬೇಕು.
ತಲೆ ನೋವಿಗೆ ರಾಮಬಾಣ: ಈಶ್ವರ ಬಳ್ಳಿಯ ಎಲೆಯಲ್ಲಿ 10 ಗ್ರಾಂ ರಸ ತೆಗೆದು, 3ಗ್ರಾಂ ಅರಿಶಿನ ಪುಡಿ ಸೇರಿಸಿ ಕುಡಿಯುವುದರಿಂದ ತಲೆನೋವು ಶೀಘ್ರವಾಗಿ ಕಡಿಮೆಯಾಗುತ್ತದೆ.
ಗಂಟುನೋವು, ಬಿಳಿ ಮಚ್ಚೆಗಳು: ಈ ಎಲೆಯನ್ನು ನೀರಲ್ಲಿ ಅರೆದು ಗಂಟುನೋವು ಅಥವಾ ಬಿಳಿ ಮಚ್ಚೆಗಳ ಮೇಲೆ ಹಚ್ಚುತ್ತ ಬಂದರೆ ಕ್ರಮೇಣ ವಾಸಿಯಾಗುತ್ತದೆ.
ಕೆಮ್ಮು ಕಫಕ್ಕೆ ಔಷಧಿ: ಇದರ ಎಲೆಯ ಜ್ಯೂಸ್ ತೆಗೆದು 15 ಎಂಎಲ್ ನಷ್ಟು ಕುಡಿಸುವುದರಿಂದ ಕಡಿಮೆಯಾಗುವುದು. ಕೆಲವೊಮ್ಮೆ ಈ ಎಲೆಯ ಜ್ಯೂಸ್ ಕುಡಿದ ಸ್ವಲ್ಪ ಹೊತ್ತಿನಲ್ಲಿ ಕಫ ವಾಂತಿಯಾಗಿ ಕರಗಿ ಹೋಗುತ್ತದೆ. ಕಫ ಜಾಸ್ತಿ ಇರುವಾಗ ಸಾಮಾನ್ಯವಾಗಿ ಅಮೃತಾಂಜನ, ವಿಕ್ಸ್ ಎದೆಗೆ ಹಚ್ಚುತ್ತಾರೆ. ಅದೇ ರೀತಿ ಎಲೆಯನ್ನು ಅರೆದು ಎದೆಗೆ ಹಚ್ಚಬಹುದು.
ಮುಟ್ಟಿನ ದೋಷ ನಿವಾರಣೆ: ಹೆಣ್ಣುಮಕ್ಕಳ ಋತುಚಕ್ರದ ವೇಳೆ ಕಾಣಿಸಿಕೊಳ್ಳುವ ಹೊಟ್ಟೆನೋವಿಗೆ 10ಗ್ರಾಂ ಈಶ್ವರ ಬೇರಿನ ಕಷಾಯ ಮಾಡಿ (30 ರಿಂದ 40 ಎಂ.ಎಲ್) ಕುಡಿಸಬೇಕು.
ಹೊಟ್ಟೆ ಕ್ರಿಮಿ ಬಾಧೆ: 5-10 ಮಿಲಿ ಎಲೆರಸವನ್ನು 3 ದಿನ ಕುಡಿಯುವುದರಿಂದ ಕಡಿಮೆಯಾಗುವುದು.
ಜ್ವರಕ್ಕೆ ದಿವ್ಯೌಷಧಿ: 5 ಗ್ರಾಂ ಈಶ್ವರ ಬೇರನ್ನು ಕಷಾಯ ಮಾಡಿ ಅದಕ್ಕೆ 1/2 ಚಮಚ ಕಾಳು ಮೆಣಸು ಪುಡಿ ಸೇರಿಸಿ ಕುಡಿಯುವುದರಿಂದ ಕಡಿಮೆಯಾಗುವುದು. ಶರೀರ ಬಿಸಿ ಆಗಿ ಚಳಿಯಿಂದ ಕೂಡಿದ ಜ್ವರವಿದ್ದರೆ ಈಶ್ವರ ಬೇರಿನ ಕಷಾಯದೊಂದಿಗೆ ಈಶ್ವರ ಬೇರಿನ ಎಲೆ ರಸಕ್ಕೆ ಹಿಪ್ಪಿಯನ್ನು ಪುಡಿಮಾಡಿ ಸೇರಿಸಿ ಕುಡಿಯುವುದರಿಂದ ಕಡಿಮೆಯಾಗುವುದು.
ಸರ್ಪ ಸುತ್ತಿಗೆ ರಾಮಬಾಣ: ಇತ್ತೀಚೆಗೆ ಸರ್ಪ ಸುತ್ತಿಗೆ ಅನೇಕ ಔಷಧಿಗಳಿದ್ದರು ಈಶ್ವರ ಬೇರು ಮತ್ತು ನೀಲಿ ಸೊಪ್ಪನ್ನು ಸೇರಿಸಿ ಅರೆದು ಹಚ್ಚುವುದರಿಂದ ಉರಿ ನೋವು ಕಡಿಮೆಯಾಗುವುದು.
ದೃಷ್ಟಿ ದೋಷ ನಿವಾರಣೆ: ಇದರ ಬೇರನ್ನು ನಯವಾಗಿ ಚೂರ್ಣಮಾಡಿ ಅದಕ್ಕೆ ಅಪ್ಪಟ ಗೋರೋಜನ ಮತ್ತು ಚಂದನ ಸೇರಿಸಿ ತಿಲಕವಿಟ್ಟರೆ ದೃಷ್ಟಿ ದೋಷ ಪರಿಹಾರವಾಗುತ್ತದೆ.
ಮಲಬದ್ಧತೆ ಮತ್ತು ಮೂಲವ್ಯಾಧಿ ನಿವಾರಣೆ: ಈಶ್ವರಿಬೇರು, ಹಾವು ಮೆಕ್ಕೆ ಬೇರು ದಂತಿ, ತಿಗಡೆ ಕೊಮ್ಮೆ ಬೇರು, ಅಳಲೆಕಾಯಿ ಸಿಪ್ಪೆ, ಹಿಪ್ಪಲಿ ಇವುಗಳೆಲ್ಲವನ್ನು ಸಮತೂಕದಲ್ಲಿ ನಯವಾಗಿ ಚೂರ್ಣಿಸಬೇಕು. ನಂತರ 2 ರಿಂದ 2.5 ಗ್ರಾಂ ಚೂರ್ಣವನ್ನು ಸೇವಿಸಿ ಬಿಸಿನೀರು ಕುಡಿದರೆ ಮಲಬದ್ಧತೆ ಮತ್ತು ಮೂಲವ್ಯಾದಿ ನಿವಾರಣೆಯಾಗುತ್ತದೆ.

ಹೀಗೆ ಈಶ್ವರ ಬೇರು (Indian birthwort) ಮತ್ತು ಅದರ ಎಲೆಯಲ್ಲಿ ಅಡಗಿರುವ ದಿವ್ಯೌಷಧಿ ಅಪಾರ. ಅದರಲ್ಲಿ ತೀಕ್ಷ ಗುಣಗಳುಳ್ಳ ಮದ್ದಾಗಿದ್ದು, ಅನೇಕ ಕಾಯಿಲೆಗಳಿಗೆ ರಾಮಬಾಣವಾಗಿದೆ. ಯಾವುದೇ ಔಷಧಿಯಾದರು ಉಪಯೋಗಿಸು ಮುನ್ನ ಒಮ್ಮೆ ತಜ್ಞ ವೈದ್ಯರ ಸಲಹೆ ಪಡೆಯುವುದು ಸೂಕ್ತ.

Continue Reading

ದಿನದ ಸುದ್ದಿ

ಗೃಹಬಳಕೆ ಎಲ್‌ಪಿಜಿ ಸಿಲೆಂಡರ್ ಬೆಲೆಯಲ್ಲಿ ಬದಲಾವಣೆ ಇಲ್ಲ

Published

on

ಸುದ್ದಿದಿನಡೆಸ್ಕ್:ಗೃಹಬಳಕೆಯ ಎಲ್‌ಪಿಜಿ ಸಿಲೆಂಡರ್ ಬೆಲೆಯಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ಸ್ಪಷ್ಟಪಡಿಸಿದೆ.

ಗೃಹ ಬಳಕೆ ಎಲ್‌ಪಿಜಿ ಸಿಲೆಂಡರ್ ಬೆಲೆಯನ್ನು 111 ರೂಪಾಯಿಗಳಷ್ಟು ಹೆಚ್ಚಿಸಲಾಗಿದೆ ಎಂಬ ಮಾಧ್ಯಮ ವರದಿಗಳನ್ನು ತಳ್ಳಿ ಹಾಕಿರುವ ಸಚಿವಾಲಯ, ವಾಣಿಜ್ಯ ಸಿಲೆಂಡರ್ ಬೆಲೆಯು ಅಂತಾರಾಷ್ಟ್ರೀಯ ಕಚ್ಚಾ ಅನಿಲ ಮತ್ತು ಸಂಬAಧಿತ ದರಗಳ ಮೇಲೆ ಅವಲಂಬಿತವಾಗಿದ್ದು, ಆಗಾಗ್ಗೆ ಮಾರುಕಟ್ಟೆಯ ದರಗಳು ಬದಲಾಗುತ್ತವೆ. ಆದರೆ, ಗೃಹ ಬಳಕೆಯ ಸಿಲೆಂಡರ್ ದರದಲ್ಲಿ ಯಾವುದೇ ವ್ಯತ್ಯಾಸವಿಲ್ಲ ಎಂದು ತಿಳಿಸಿದೆ.

ದೆಹಲಿಯಲ್ಲಿ 14.2 ಕೆಜಿ ಗೃಹ ಬಳಕೆ ಅಡುಗೆ ಅನಿಲ ಸಿಲೆಂಡರ್ ಬೆಲೆ 950 ರೂಪಾಯಿಯಾಗಿದ್ದು, ಪ್ರಧಾನಮಂತ್ರಿ ಉಜ್ವಲ ಯೋಜನೆಯ ಫಲಾನುಭವಿಗಳಿಗೆ ಇದು 553 ರೂಪಾಯಿ ಬೆಲೆಯಲ್ಲಿ ಲಭ್ಯವಿದೆ. ಇದು ಆಗಸ್ಟ್ 2023 ರಿಂದ ನವೆಂಬರ್ 2025ರವರೆಗೆ ಹೋಲಿಸಿದರೆ, ಶೇಕಡಾ 39 ರಷ್ಟು ದರ ಕಡಿತವನ್ನು ಸೂಚಿಸುತ್ತದೆ. ಜನರಿಗೆ ಸುಸ್ಥಿರ ಇಂಧನ ಪೂರೈಕೆಗೆ ಒತ್ತು ನೀಡಲಾಗಿದ್ದು, ದರ ಬದಲಾವಣೆ ಇಲ್ಲ ಎಂದು ಸಚಿವಾಲಯ ಮಾಹಿತಿ ನೀಡಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending