ಭಾವ ಭೈರಾಗಿ
ಕನ್ನಡದ ಕಾವ್ಯ ಲೋಕದ ಗಾರುಡಿಗ
- ಜಗದೀಶ್ ಕೊಪ್ಪ
ಕನ್ನಡದ ಸಾಹಿತ್ಯದಲ್ಲಿ ನವೋದಯದ ಕಾಲಘಟ್ಟ ಅತ್ಯಂತ ಮಹತ್ವವಾದುದು. ಜೈನಸಾಹಿತ್ಯದ ಕೊಡುಗೆ ಎಂದು ಕರೆಯಬಹುದಾದ ಹಳೆಗನ್ನಡ ಕಾವ್ಯವು ಕನ್ನಡ ಸಾಹಿತ್ಯ ಮತ್ತು ಭಾಷೆ ಹಾಗೂ ಸಂಸ್ಕೃತಿಗೆ ಭದ್ರ ಬುನಾದಿ ಹಾಕಿದ ನಂತರ, ನವೋದಯ ಸಾಹಿತ್ಯದ ಕಾಲಘಟ್ಟವು ತನ್ನ ಆಧುನಿಕ ಪರಿಭಾಷೆಯ ಮೂಲಕ ಕಾವ್ಯ, ನಾಟಕ, ವಿಮರ್ಶೆ ಹೀಗೆ ಕನ್ನಡ ಸಾಹಿತ್ಯಲೋಕವನ್ನು ಸಮೃದ್ಧಿಗೊಳಿಸಿತು. ನವೋದಯ ಕಾಲಘಟ್ಟದ ಕಾವ್ಯವನ್ನು ಕನ್ನಡದ ಸಾಹಿತ್ಯದ ಸುವರ್ಣಕಾಲ ಎಂದು ಬಣ್ಣಿಸಬಹುದು.
ಬಿ.ಎಂ.ಶ್ರೀ ಅವರ ಇಂಗ್ಲೀಷ್ ಗೀತಗಳು ಕಾವ್ಯದ ಮೂಲಕ ಆರಂಭವಾದ ನವೋದಯಕಾವ್ಯವನ್ನು ಬೇಂದ್ರೆ, ಕುವೆಂಪು, ಪು.ತಿ.ನ. ಮುಂತಾದ ದಿಗ್ಗಜರು ಕಾವ್ಯದ ಭಾಷೆ, ವಸ್ತು, ನಿರೂಪಣೆಯ ವೈವಿಧ್ಯತೆಯಿಂದ ಶ್ರೀಮಂತಗೊಳಿಸಿದರು. ನವೋದಯ ಕಾವ್ಯದ ಪ್ರಮುಖ ಕವಿಗಳಲ್ಲಿ ದ.ರಾ.ಬೇಂದ್ರೆ ಅತ್ಯಂತ ಪ್ರಮುಖರಾದವರು.
ಆ ಕಾಲದ ಪ್ರತಿಯೊಬ್ಬ ಬರಹಗಾರರ ಮೇಲೆ ಕನ್ನಡ ಸಾಹಿತ್ಯವನ್ನು ಪುನರುಜ್ಜೀವನಗೊಳಿಸುವ ನೈತಿಕ ಜವಾಬ್ದಾಯಿತ್ತು. ಹಾಗಾಗಿ ಬೇಂದ್ರೆ, ಕುವೆಂಪು ಆದಿಯಾಗಿ ಪ್ರತಿಯೊಬ್ಬ ಲೇಖಕನೂ ತನಗೆ ಇಷ್ಟವಾದ ಪ್ರಕಾರದ ಜೊತೆಗೆ ಇತರೆ ಪ್ರಕಾರಗಳಲ್ಲಿಯೂ ತೊಡಗಿಸಿಕೊಳ್ಳುವುದು ಸಾಮಾನ್ಯ ಸಂಗತಿಯಾಗಿತ್ತು. ಈ ಕಾರಣಕ್ಕಾಗಿ ಬೇಂದ್ರೆ ಮತ್ತು ಕುವೆಂಪುರಂತಹ ಮಹಾನ್ ಕವಿಗಳು ಕಾವ್ಯದ ಜೊತೆ ಜೊತೆಯಲ್ಲಿ ನಾಟಕ, ವಿಮರ್ಶೆ. ಗದ್ಯ ಮುಂತಾದ ಪ್ರಕಾರಗಳಲ್ಲಿ ತೊಡಗಿಸಿಕೊಂಡಿದ್ದರು.
ದ.ರಾ. ಬೇಂದ್ರೆಯವದು ಕಾವ್ಯ ಸೃಷ್ಟಿಯಲ್ಲಿ ವಿರಾಟ್ ಸ್ವರೂಪ ಎಂದು ಬಣ್ಣಿಸಬಹುದು. ಅವರು ತಮ್ಮ ಕಾವ್ಯ ಸೃಷ್ಟಿಗೆ ಬಳಸಿಕೊಂಡ ಭಾಷೆ, ಛಂದಸ್ಸು, ಲಯ, ವಸ್ತು ಎಲ್ಲವೂ ದೇಸಿಗುಣಗಳಿಂದ ಕೂಡಿರುವುದು ವಿಶೇಷ. ಹಾಗಾಗಿ ಬೇಂದ್ರೆಯವರ ಕಾವ್ಯಗಳು ಕೇವಲ ಹಾಳೆಯ ಮೇಲಿನ ಕವಿತೆಗಳಾಗಿರದೆ, ಜನಸಾಮಾನ್ಯರ ನಾಲಿಗೆಯ ಮೇಲೆ ಹಾಡುಗಳಾಗಿ ಅನುರಣಿಸಿದವು.
ಕನ್ನಡ ಭಾಷೆಯ ಬಂಧ, ಲಯ, ನುಡಿಗಟ್ಟು ಇವುಗಳನ್ನು ಸೂಕ್ಷ್ಮವಾಗಿ ಅವಲೋಕಿಸಿದಾಗ ಬಿ.ಎಂ.ಶ್ರೀ.ಯವರ ಇಂಗ್ಲೀಷ್ ಗೀತಗಳ ಪ್ರಭಾವದಿಂದ ಕಾವ್ಯ ಸೃಷ್ಟಿಗೆ ತೊಡಗಿದ ಕುವೆಂಪು ಮತ್ತು ಪು.ತಿ.ನ. ಅವರ ಕಾವ್ಯದ ಅಭಿವ್ಯಕ್ತಿಗೂ ಹಾಗೂ ಕನ್ನಡದ ದೇಶಿ ಪರಂಪರೆಯಿಂದ ಅಂದರೆ, ಲಾವಣಿ,ತತ್ವಪದ, ಜಾನಪದಗೀತೆಗಳಿಂದ ಪ್ರಭಾವಿತರಾದ ಮಧುರಚೆನ್ನ, ಬೇಂದ್ರೆ, ಆನಂದಕವಿ ಮುಂತಾದ ಕವಿಗಳ ಕಾವ್ಯರಚನೆಯಲ್ಲಿರುವ ಭಿನ್ನತೆಯನ್ನು ನಾವು ಕಾಣಬಹುದು.
ಕನ್ನದ ಕಾವ್ಯದ ಸಂದರ್ಭದಲ್ಲಿ ದ.ರಾ.ಬೇಂದ್ರೆಯವರ ರೀತಿಯಲ್ಲಿ ತಮ್ಮ ಭಾವನೆಗಳ ಅಭಿವ್ಯಕ್ತಿಗೆ ಕಾವ್ಯ ಪ್ರಕಾರವನ್ನು ಪರಿಣಾಮಕಾರಿಯಾಗಿ ಬಳಸಿದ ಕವಿ ಮತ್ತೊಬ್ಬರಿಲ್ಲ. ತಮ್ಮ ಬದುಕಿನ ಸುಖ,ಧುಃಖಗಳಿಂದ ಹಿಡಿದು, ಮನಸ್ಸು ಪ್ರಫುಲ್ಲವಾಗಿದ್ದ ಸಂದರ್ಭದಲ್ಲಿ ತಾವು ಕಂಡ ಲೋಕದ ಎಲ್ಲಾ ಸಂಗತಿಗಳನ್ನು ಕಾವ್ಯದಲ್ಲಿ ಹಿಡಿದಿಡಬೇಕೆಂಬ ದೀಕ್ಷೆ ತೊಟ್ಟವರಂತೆ ಬೇಂದ್ರೆಯವರು ನಮಗೆ ಕಾಣುತ್ತಾರೆ. ಕಾವ್ಯ ಸೃಷ್ಟಿಗೆ ಬೇಂದ್ರೆಯವರಿಗೆ ಇಂತಹದ್ದೇ ಎನ್ನುವ ನಿರ್ಧಿಷ್ಟ ಕಾರಣ ಬೇಕಾಗಿರಲಿಲ್ಲ.
ಕವಿ ಜೀವದ ಬ್ಯಾಸರ ಹರಿಸಾಕ
ಹಾಡ ನುಡಿಸಾಕ
ಹೆಚ್ಚಿಗೇನು ಬೇಕಾ?
ಒಂದು ಹೂತ ಹುಣಿಸ ಮರ ಸಾಕಾ.
ಇದು ಬೇಂದ್ರೆ ಎಂಬ ಕಾವ್ಯ ಗಾರುಡಿಗ ಜೀವನದ ದೃಷ್ಟಿ ಕೋನ. ತಮ್ಮ ಜೀವಿತಾವಧಿಯಲ್ಲಿ ಒಟ್ಟು ಮುವತ್ತೇಳು ಕವನ ಸಂಕಲಗಳನ್ನು ಹೊರತಂದಿರುವ ಬೇಂದ್ರೆಯವರು ಕಾವ್ಯವನ್ನೇ ಉಸಿರಾಡಿದ ಅಪರೂಪದ ಕನ್ನಡದ ಕವಿ ಎಂದು ನಿಸ್ಸಂದೇಹವಾಗಿ ಹೇಳಬಹುದು.
ಪಾದ ಪದ್ಧತಿಯಲಿ ಪದ ಕೂಡಿ ಬರುವಾಗ
ಯಾರಾರ ಗುರು-ಲಯ ಎಣಿಸುವರೆ
ಯಾವ ರಾಗವೆಂದರು ಯಾರಾಗ ಕೇಳುವರು
ಅನುರಾಗವನುರಣಿಸಿ ತಣಿಸುತಿರೆ
ಎಂದು ಬಲವಾಗಿ ನಂಬಿದ್ದ ಬೇಂದ್ರೆಯುವರು ಇಡೀ ಜಗತ್ತು ಮತ್ತು ಅದರ ಲೋಕ ವ್ಯವಹಾರವನ್ನು ಕಾವ್ಯದ ಕಣ್ಣಿನಿಂದ ನೋಡಿದವರು. ಅವರ ಪಾಲಿಗೂ ಕನಿಷ್ಟ ಅಥವಾ ತುಚ್ಛ ಎಂಬುದು ಯಾವುದೂ ಇರಲಿಲ್ಲ.
ಇಳೆ ಎಂದರೆ ಬರಿ ಮಣ್ಣಲ್ಲ
ನಮಗೋ ನೋಡುವ ಕಣ್ಣಿಲ್ಲ
ಏನು ತಿಂದರೂ ತೀರದಿದೆ
ಏನು ತುಂಬಿಯೂ ಮೀರದಿದೆ
ಎಂಬ ತಮ್ಮ ಜೀವನ ದೃಷ್ಟಿಕೋನವನ್ನು ಬದುಕಿನುದ್ದಕ್ಕು ಬಲವಾಗಿ ಪ್ರತಿಪಾದಿಸಿಕೊಂಡು ಬಂದವರು.
ಬೇಂದ್ರೆಯ ಹುಟ್ಟಿದ ಪರಿಸರ, ಬೆಳೆದ ಸಂಸ್ಕೃತಿ ಇವೆಲ್ಲವೂ ವೈದಿಕ ಪರಂಪರೆಗೆ ಸೇರಿದ ಕಾರಣ ಅವರಲ್ಲಿ ಆಸ್ತಿಕತೆ ಮನೆ ಮಾಡಿತ್ತು ನಿಜ. ಆದರೆ, ಆಸ್ತಿಕತೆಯನ್ನು ಮೀರುವಂತಹ ಅನುಭಾವ ಪ್ರಜ್ಞೆ ಮತ್ತು ಅಲೌಕಿಕತೆಯ ದೃಷ್ಟಿಕೋನ ಅವರಲ್ಲಿದ್ದ ಕಾರಣ ಅವರ ಬಹುತೇಕ ಕವಿತೆಗಳು ಎಲ್ಲಾ ಗಡಿಗಳನ್ನು ದಾಟಿ ಮನುಕುಲದ ಗೀತೆಗಳಂತೆ ಕನ್ನಡಿಗರ ಎದೆಯನ್ನು ಮುಟ್ಟಿವೆ.
ವೈಯಕ್ತಿಕ ಬದುಕಿನ ಕಷ್ಟ, ಸಾವು ಮತ್ತು ದುಃಖಗಳ ನಡುವೆ ಹಾಗೂ ಬದುಕಿನ ಅಭದ್ರತೆಯ ನಡುವೆಯೂ ಅವರ ಎದೆಯೊಳಗೆ ಅಪ್ರತಿಮ ಕಾವ್ಯ ಸೃಷ್ಟಿಯಾದದ್ದು ಹಾಗೂ ಬತ್ತದ ಚಿಲುಮೆಯಂತೆ ಅವರೊಳಗೆ ಜೀವಂತವಾಗಿದ್ದ ಸಂಗತಿ ಇಂದಿಗೂ ವಿಸ್ಮಯದ ಸಂಗತಿಯೇ ಸರಿ. ಪ್ರಕೃತಿಯ ಬಣ್ಣನೆಯೂ ಸೇರಿದಂತೆ, ಅವರ ಸಖಿಗೀತ ಮತ್ತು ವೈಯಕ್ತಿಕ ಬದುಕಿನ ದುರಂತದ ಸಮಯದಲ್ಲಿ ಅವರ ನೊಂದ ಎದೆಯೊಳಗೆ ಹುಟ್ಟಿದ ಕಾವ್ಯವನ್ನು ಗಮನಿಸಿದರೆ ಅಚ್ಚರಿಯಾಗುತ್ತದೆ.
ಬೆಳಗು ಕವಿತೆಯ ಮೂಲಕ ಕಾವ್ಯಾಸಕ್ತರನ್ನು ತಮ್ಮತ್ತ ಸೆಳೆದ ಬೇಂದ್ರೆಯವರು, ಹಕ್ಕಿ ಹಾರುತ್ತಿದೆ ನೋಡಿದಿರಾ ಕವಿತೆಯನ್ನು ಬರೆದು ಎಲ್ಲರಲ್ಲೂ ಬೆರಗು ಮೂಡಿಸಿದರು. ಇನ್ನು ಶ್ರಾವಣದ ಮಳೆ ಅದರಲ್ಲೂ ವಿಶೇಷವಾಗಿ ಧಾರವಾಡದ ಮಳೆ ಬೇಂದ್ರೆಯವರ ಕಾವ್ಯದ ಸ್ಪೂರ್ತಿಯ ಮೂಲ ಸೆಲೆಯಾಗಿತ್ತು.
ಶ್ರಾವಣ ಬಂತು ಕಾಡಿಗೆ, ಬಂತು ನಾಡಿಗೆ
ಬಂತು ಬೀಡಿಗೆ ಶ್ರಾವಣಾ ಬಂತು!
ಕಡಲಿಗೆ ಬಂತು ಶ್ರಾವಣಾ! ಕುಣಿದಾಂಗ ರಾವಣ
ಕುಣಿದಾವ ಗಾಳಿ ಭೈರವನ ರೂಪ ತಾಳಿ
ಶ್ರಾವಣಾ ಬಂತು ಘಟ್ಟಕ ರಾಜ್ಯ ಪಟ್ಟಕ
ಬಾನ ಮಟ್ಟಕ
ಎಂದು ಹುಚ್ಚೆದ್ದು ಹಾಡು ಕುಣಿಯುವ ಮನಸ್ಸು ಬೇಂದ್ರೆಯವರದು. ಆದ್ದರಿಂದಲೇ ಕನ್ನಡಸ ಸಾಂಸ್ಕೃತಿಕ ಜಗತ್ತು ಅವರನ್ನು ಶ್ರಾವಣದ ಪ್ರತಿಭೆ ಎಂದು ಗುರುತಿಸಿ ಗೌರವಿಸಿದೆ. ಇದರ ಜೊತೆಗೆ ತಾವು ಬದುಕಿದ ಧಾರವಾಡದ ಸಾಧನಕೇರಿಯ ಪ್ರದೇಶ ಅವರ ಪಾಲಿನ ಭಾವ ವಿಹಾರದ ಲೋಕವಾಗಿತ್ತು. ಸೊಲ್ಲಾಪುರದಲ್ಲಿ ತಮ್ಮ ಹನ್ನೆರೆಡು ವರ್ಷಗಳ ಉಪನ್ಯಾಸಕ ವೃತ್ತಿಗೆ ವಿದಾಯ ಹೇಳಿ ಬರಿಗೈಲಿ ಧಾರವಾಡಕ್ಕೆ ಹಿಂತಿರುವಾಗ, ಸಾಧನಕೆರೆಯನ್ನು ಅವರು ತುಂಬು ಹೃದಯದಿಂದ ಬಣ್ಣಿಸುವುದು ಹೀಗೆ..
ಅಲ್ಲಿ ಸಂಪಿಗೆಯಿತ್ತು, ಪಾರಿಜಾತವಿತ್ತು
ಮಾವು ಮಲ್ಲಿಗೆಯಿತ್ತು ಮನೆಯೆದುರು
ಮಾವು ಮಲ್ಲಿಗೆಯಿತ್ತು ತೆಂಗಿತ್ತು, ಹಲಸಿತ್ತು
ನಿಂಬಿಯಾ ಇಂಬಿತ್ತು ಎಡೆಯೆಡೆಗೆ
ಹೊಬೆಯ ಹೂವಿನ ರಂಗವಲ್ಲಿಯ ಬಿಡಿಸಿ
ನೆರಳನು ನೀಡುತ ನಿಲ್ಲುವುದು
ಮುತ್ತುಗ, ಬೂರಲ ದೀಪಮಾಲೆಯ ಕಂಬ
ಗಗನದ ಬಯಲೊಳಗೆತ್ತುವುದು.
ಬೇಂದ್ರೆಯವರು ಸಾಧನಕೇರಿಯನ್ನು ನೆನೆದು ರೋಮಾಂಚನಗೊಳ್ಳುವುದು ಹಾಗೂ ಇದೇ ಪರಿಯಲ್ಲಿ ಕುವೆಂಪು ತಾವು ಹುಟ್ಟಿ ಬೆಳೆದ ಮಲೆನಾಡನ್ನು ನೆನೆದು “ಹೋಗುವೆನು ನಾ ನನ್ನ ಒಲುಮೆಯ ನಾಡಿಗೆ/ ಮಲೆಯ ನಾಡಿಗೆ, ಮಳೆಯ ಬೀಡಿಗೆ” ಎಂದು ಬಣ್ಣಿಸಿರುವದು ಕನ್ನಡದ ಕಾವ್ಯ ಲೋಕದಲ್ಲಿ ವಿಶಿಷ್ಟ ಹಾಗೂ ಗಮನಾರ್ಹ ಸಂಗತಿ.
ನನ್ನ ಓದಿನ ಮಿತಿಯಲ್ಲಿ ಹೇಳುವುದಾದರೆ, ಬೇಂದ್ರೆಯವರು ವೈಯಕ್ತಿನ ಬದುಕಿನ ದುರಂತದ ಕ್ಷಣಗಳಲ್ಲಿ ಬರೆದ ಕವಿತೆಗಳು ಕವಿಯೊಬ್ಬನ ಭಾವನೆಗಳ ಪರಕಾಷ್ಟೆಯ ಪ್ರತೀಕ ಎನಿಸುತ್ತವೆ. ದುಂಃಖದಲ್ಲಿ ಮನುಷ್ಯನ ಎದೆಯೊಳಗೆ ಭಾವನೆಗಳು ಸತ್ತುಹೋಗಿ ಶೋನ್ಯತೆ ಆವರಿಸುವಾಗ ಬೇಂದ್ರೆಯವರು ದುಃಖ ಮತ್ತು ಕಣ್ಣೀರಿಗೂ ಕವಿತೆಯ ರೂಪ ನೀಡಿರುವುದನ್ನು ನೋಡಿ ನಾನು ಹಲವು ಬಾರಿ ಕಣ್ಣಿರು ಹಾಕಿರುವುದುಂಟು.
ಬಾಲ್ಯದಲ್ಲಿ ಧಾರವಾಡದ ಕಾಮನ ಕಟ್ಟೆಯಲ್ಲಿ ಖಾನಾವಳಿ ನಡೆಸುತ್ತಾ ತಮ್ಮನ್ನು ಸಾಕಿ ಸಲುಹಿದ ಅಜ್ಜಿ ನಿಧನ ಹೊಂದಿದಾಗ ಅವರ ಅಂತ್ಯಕ್ರಿಯೆ ನೆರವೇರಿ ಮನೆಗೆ ಬರುವಾಗ ಬೇಂದ್ರೆಯಲ್ಲಿ ಎದೆಯಲ್ಲಿ ಹುಟ್ಟಿದ ಕಾವ್ಯದ ಸಾಲುಗಳಿವು.
ಮರಳಿದೆ ಮನೆಯತ್ತ ಮರುಳಂತೆ ನರಳಂತೆ
ಕರುಳೆಲ್ಲಾ ಕಡಲೊಳು ಕುದಿಯುತಿರೆ.
ಅದೇ ರೀತಿ ಎದೆಯುದ್ದ ಬೆಳೆದ ಪ್ರೀತಿಯ ಪುತ್ರ ರಾಮು ತೀರಿಕೊಂಡಾಗ; ನೊಂದು ಬೆಂದು ಹೋದ ಬೇಂದ್ರೆಯವರ ಹೃದಯ ತನ್ನನ್ನು ತಾನು ಸಂತೈಸಿಕೊಳ್ಳುವುದು ಹೀಗೆ
ಸತ್ತ ದಶರಥ ಇದ್ದ ರಾಮನಾಗಿ ಅತ್ತನು ಅಂದಿಗೆ
ಸತ್ತ ರಾಮಗೆ ಅತ್ತೇ ಅಳುವನು ಇರುವ ದತ್ತನು ಇಂದಿಗೆ.
ಬೇಂದ್ರೆಯವರ ದಾಂಪತ್ಯದ ಜೀವನದ ಸುಖ ದುಃಖಗಳು ಮತ್ತು ನೋವು ನಲಿವು ಅವರ ಸಖಿಗೀತದಲ್ಲಿ ಅತ್ಯಂತ ಪರಿಣಾಮಕಾರಿಯಾಗಿ ದಾಖಲಾಗಿವೆ.
ಬೇಂದ್ರೆಯವರ ಕಾವ್ಯ ಅಭಿವ್ಯಕ್ತಿಯಲ್ಲಿ ಇಲ್ಲಿ ಉತ್ತುಂಗಕ್ಕೇರಿದೆ ಎಂದರೆ ಅತಿಶಯೋಕ್ತಿಯ ಮಾತಲಾಗಲಾರದು.
ನಾನು ಬಡವಿ ಆತ ಬಡವ ಒಲುವೆ ನಮ್ಮ ಬದುಕು
ಬಳಸಿಕೊಂಡವದನೆ ನಾವು ಅದಕು ಇದಕು ಎದಕು
ಎಂದು ತಮ್ಮ ಬದುಕಿನ ಬಡತನವನ್ನು ಪ್ರೀತಿಯ ಮೂಲಕ ಹಂಚಿಕೊಂಡ ಪರಿಯನ್ನು ಬಣ್ಣಿಸುವ ಬೇಂದ್ರೆಯವರು ಅದೇ ತಮ್ಮ ಬಾಲ ಸಂಗಾತಿ ನಿಧನ ಹೊಂದಿದಾಗ “ ಹೋದ ಬುಧುವಾರ ಬರೋಲ್ದು” ಕವಿತೆಯಲ್ಲಿ ಹೀಗೆ ದಾಖಲಿಸಿದ್ದಾರೆ.
ನೀ ಹೊರಗ ಬಿದ್ದಿ ಅಮತ ಪುಕಾರು ಆತು
ನೀ ಒಳಗೆ ಅಂತಾ ಪಿಸು ಮಾತು
ಭಾಷೆ ಯಾವುದೇ ಆಗಿರಲಿ, ಯಾವುದೇ ಕವಿ ಬರೆದ ಕಾವ್ಯವೆಲ್ಲಾ ಉತ್ಕೃಷ್ಟ ಕವಿತೆಗಳೇ ಆಗಬೇಕೆಂಬ ನಿಯಮವಿಲ್ಲ. ಬರೆದ ನೂರು ಕವಿತೆಗಳಲ್ಲಿ ಕೇವಲ ಮೂರು ಕವಿತೆಗಳು ಜನಮಾನಸದಲ್ಲಿ ಶಾಶ್ವತವಾಗಿ ಉಳಿದುಕೊಂಡರೆ ಸಾಕು ಅವನು ಯಶಸ್ವಿ ಕವಿ ಎಂತಲೇ ಅರ್ಥ. ಈ ವಿಷಯದಲ್ಲಿ ದ.ರಾ. ಬೇಂದ್ರೆಯವರು ಯಶಸ್ವಿ ಕವಿ ಮಾತ್ರವಲ್ಲ ಜಗದ ಕವಿಯಾಗಿ, ಜನರ ಕವಿಯಾಗಿ ಜನಮಾನಸದಲ್ಲಿ ಶಾಶ್ವತವಾಗಿ ಉಳಿದುಕೊಂಡಿದ್ದಾರೆ.
( ಜನವರಿ 31, 2021,ವರಕವಿ ಬೇಂದ್ರೆಯವರ 125 ನೇ ಜನ್ಮದಿನಾಚರಣೆಯ ವರ್ಷ. ಲೇಖಕಿ ಗೀತಾವಸಂತ್ ಮತ್ತು ಯುವ ಕವಿ ರಾಜುಕುಮಾರ್ ಮಡಿವಾಳ ಇವರು ಬೇಂದ್ರೆ ಕುರಿತಾಗಿ ಸಂಪಾದಿಸಿರುವ : ಕಂಡವರಿಗಷ್ಟೇ” ಕೃತಿಯು ನಾಳೆ ಬೆಂಗಳೂರಿನಲ್ಲಿ ಬಿಡುಗಡೆಯಾಗುತ್ತಿದೆ. ಅದಕ್ಕಾಗಿ ಸಿದ್ಧಪಡಿಸಿದ ಲೇಖನವಿದು. 25 ವರ್ಷದ ಹಿಂದೆ ನಾನು ಬರೆದಿದ್ದ “ ಸಾಧನಕೇರಿಯ ಕಿಂದರಿ ಜೋಗಿಗೆ” ಎಂಬ ಕವಿತೆ ಅವರ ನೂರನೇ ವರ್ಷದ ಜನ್ಮದಿನಾಚರಣೆಯ ಸಂದರ್ಭದಲ್ಲಿ ಕರ್ನಾಟಕ ವಾರ್ತಾ ಇಲಾಖೆಯ ಜನಪದ ಮಾಸಿಕ ಪತ್ರಿಕೆಯಲ್ಲಿ ವಿಶೇಷ ಕವಿತೆಯಾಗಿ ಪ್ರಕಟವಾಗಿತ್ತು. – ಜಗದೀಶ್ ಕೊಪ್ಪ)
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಕವಿತೆ | ನೆನಪು
- ರುದ್ರಪ್ಪ ಹನಗವಾಡಿ
ಅಪ್ಪನನ್ನು ಒಪ್ಪ ಮಾಡಿ
ವರ್ಷಗಳೇ ಕಳೆದವು ಮುವ್ವತ್ತೇಳು
ಇಂದಿರಾಗಾಂಧಿಯ ತುರ್ತು ಪರಿಸ್ಥಿತಿ
ಅರಸರ ಮೀಸಲಾತಿ
ಬಸವಲಿಂಗಪ್ಪನವರ ಬೂಸಾ ಖ್ಯಾತಿ
ಮಲ ಹೊತ್ತು
ಮಲಗಿದ್ದ ಕಾಲಕ್ಕೆ
ಚುರುಕು ಮುಟ್ಟಿಸಿದ ಕಾಲ
ಹರೆಯದ ನನಗೆ
ಕಾಲೇಜ ಮೇಷ್ಟರ ಕೆಲಸ
ಸೂಟು ಬೂಟಿನ ವೇಷ
ಆ ಮೇಲೆ ಅಮಲದಾರಿಕೆ
ಎಲ್ಲ ನಡೆದಾಗಲೇ ಅವ್ವನನ್ನು
ಆಸ್ಪತ್ರೆಗೆ ಸೇರಿಸಿದ್ದು
ಕಾಲ ಕಳೆದು ಕೊಂಡು
ಕೋಲ ಹಿಡಿದದ್ದು
ನಿನ್ನೆ ಮೊನ್ನೆಯಂತೆ
ಬಾಲ್ಯವಿನ್ನು ಉಂಟೆಂಬಂತೆ
ಭಾವಿಸುವಾಗಲೇ ಅವ್ವನ ಸಾವು
ಅದರೊಟ್ಟಿಗೆ ಕಾಯದಾಯಾಸ ತೀರಿಸಲು
ಬಂದರೆ ಬೆಂಗಳೂರಿಗೆ
ರೌಡಿಗಳ ಕಾಟ
ಅಂಬೇಡ್ಕರ್ ಪಟದ ಕೆಳಗೆ
ದೌರ್ಜನ್ಯದ ದಂಡು
ಅಮಾಯಕರಿಗೆ ಗುಂಡು
ಕಂಡುಂಡ ಹಾದಿಯ ಗುಡಿಸಲುಗಳಲ್ಲೀಗ
ಮುಗಿಲು ಮುಟ್ಟೋ ಮಹಲುಗಳು
ಅಂತಲ್ಲಿ
ದೇಶ ವಿದೇಶಗಳ
ಅಹವಾಲುಗಳು
ಅವಿವೇಕಗಳು
ನೋಡ ನೋಡುತ್ತಿದ್ದಂತೆ
ಉಸಿರು ಬಿಗಿಹಿಡಿದ ಜನರ ಒಳಗೆ
ಒಳಪದರಗಳೊಳಗೆ ಕನಸ ಬಿತ್ತಿ
ಹಸಿರ ಹೊನ್ನು ಬಾಚಲು ಹವಣಿಸಿದ
ಬಿಳಿ ಜನರ ಆಟ
ಅರ್ಥವಾಗುವುದೇ ಎಲ್ಲ
ಗೋಣ ನೀಡುವರೆ
ಹೂತಿಟ್ಟ ಗೂಟಕ್ಕೆ ?
( ಚಿಂತಕ ರುದ್ರಪ್ಪ ಹನಗವಾಡಿ ಅವರ ‘ಊರು – ಬಳಗ’ ಕವನ ಸಂಕಲನದಿಂದ ‘ ನೆನಪು ‘ ಕವಿತೆಯನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಈ ಕೃತಿಯನ್ನು ಫ್ರೊ.ಬಿ.ಕೃಷ್ಣಪ್ಪ ಟ್ರಸ್ಟ್ 2013 ರಲ್ಲಿ ಪ್ರಕಿಸಿದೆ.)
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಕವಿತೆ | ಮಣ್ಣ ಮಕ್ಕಳು
- ಸಿ.ಕೃಷ್ಣನಾಯಕ್, ಆಡಳಿತಾಧಿಕಾರಿ, ಐಟಿಐ ಕಾಲೇಜು ದಾವಣಗೆರೆ
ಮಣ್ಣ ಮಕ್ಕಳು ನಾವು
ಹಗಳಿರುಳೆನ್ನದೆ ಬೆವರು ಬಸಿದು
ಹಸಿದ ಹೊಟ್ಟೆಯಲಿ ಉಸಿರು ಹಿಡಿದವರು
ಕಸದಲಿ ರಸ ತೆಗದು ಬದುಕಿನುದ್ದಕ್ಕೂ ಉಳ್ಳವರ
ಕಸುಬಿಗೆ ಆಳಾದವರು ಸವಳು ನೀರಲಿ ಮೈತೊಳೆದು
ಚಿಂದಿ ಅಂಗಿಯಲಿ ಶಾಲೆಗೆ ದಾಖಲಾದವರು.
ಬರಿಗಾಲಲಿ ಕಾಡು ದಾರಿಯಲಿ ಮೈಲು ದೂರ ನಡೆದು
ನೆಗ್ಗಿಲ ಮುಳ್ಳು ತುಳಿದವರು ; ನಿಬ್ಬು ನೆಗ್ಗಿದ ಪೆನ್ನಿನಲಿ
ಹೆಸರು ಬರೆಯಲು ಕಲಿತವರು ಹರಿದ ಪಠ್ಯದಲಿ ಅಕ್ಷರ ಹುಡುಕಿ ಒಡೆದ ಪ್ಲೇಟಿನಲಿ ಬರೆದವರು.
ತೂತು ಬಿದ್ದ ಸೂರಿನಲಿ ಇಣುಕಿದ ಚುಕ್ಕಿ ಚಂದ್ರಮರ ನೋಡಿ
ವಿದ್ಯುತ್ ದೀಪದ ಕನಸು ಕಂಡವರು
ಮೋಸ ವಂಚನೆಗೆ ಬಗ್ಗದೆ ಶೋಷಣೆಗೆ ಸಿಡಿದವರು
ಮಣ್ಣ ಮಕ್ಕಳು ನಾವು.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಬಿ.ಶ್ರೀನಿವಾಸ ಅವರ ‘ಖಾಲಿ ಗೋಡೆಯ ಗುರುತಿಲ್ಲದ ಚಿತ್ರಗಳು’ ಕೃತಿಯ ಕುರಿತು
ಸಂಡೂರಿನ ಜನರ ಮುದುಡಿದ ಅಂಗಿಯ ಮೇಲೆ,ಹೆಂಗಸರು ಮಾಸಿದ ಸೀರೆಯ ಸೆರಗಿನ ಮೇಲೆ ಬಿ.ಶ್ರೀನಿವಾಸ ಅಕ್ಷರ ಬಿಡಿಸುತ್ತಾರೆ.
ಅನ್ನದ ಅಗುಳು,ಧೂಳು,ಕಾಗದದ ಚೂರು,ಆಟಿಕೆ ಸಾಮಾನು,ಕಿಡ್ನಿ,ಈ ಸಣ್ಣವು ಗಳಲ್ಲಿ ಜೀವಸಾಕ್ಷಿ ಹುಡುಕುವ ಕಥೆಗಳಿವು.ವೃತ್ತಿ ಮತ್ತು ಪ್ರವೃತ್ತಿಯಲ್ಲಿ ಅನ್ನದ ಅಗಳು,ಕಾಗದದ ಚೂರನ್ನು ಎತ್ತಿಹಿಡಿಯುವ ಗೆಳೆಯ ಶ್ರೀನಿವಾಸ *ಧೂಳನ್ನೇ ಅಕ್ಷರಗಳನ್ನಾಗಿಸಿದ ಲೇಖಕ.
- ಬಸವರಾಜ ಹೂಗಾರ
ಇಲ್ಲಿನ ಹುಚ್ಚರ ಕತೆಗಳನ್ನು ಓದುವಾಗ ಕುಂ.ವೀ.ಯವರ ಹಾಗೂ ಸಾದತ್ ಹಸನ್ ಮಾಂಟೋ ಅವರ ಹುಚ್ಚರ ಕತೆಗಳು ನೆನಪಾಗುತ್ತವೆ.ಇಲ್ಲಿನ ನತದೃಷ್ಟರ ಬದುಕನ್ನು ಹಿಡಿದಿಡಲು ಲೇಖಕರು ಕಂಡುಕೊಂಡಿರುವ ಅಭಿವ್ಯಕ್ತಿ ವಿನ್ಯಾಸ ವಿಶಿಷ್ಟವಾಗಿದೆ. ಬರಹಗಳು ದೀರ್ಘವಾಗಿಲ್ಲ. ಚುಟುಕಾಗಿವೆ. ಕವನಗಳೊ, ಗದ್ಯಗಳೊ ಎಂದು ಹೇಳಲಾಗದ ರೂಪದಲ್ಲಿವೆ.
ಗಾಢವಾದ ಅರ್ಥವನ್ನು ಕೆಲವೇ ಸಾಲುಗಳಲ್ಲಿ ವ್ಯಂಗ್ಯ ಮತ್ತು ವಿಡಂಬನೆಗಳಲ್ಲಿ ಹಿಡಿಯಲು ಯತ್ನಿಸುತ್ತವೆ.
ಇಲ್ಲಿರುವ ಲೋಕದ ನೋವಿಗೆ ಮಿಡಿವ ಸಂವೇದನೆ,ಓದುವ ಓದುಗರನ್ನೂ ಆವರಿಸಿಕೊಂಡು,ಚಿಂತನೆಗೆ ಹಚ್ಚುತ್ತದೆ.ಓದುತ್ತ,ಓದುತ್ತಾ ನಿಟ್ಟುಸಿರು ಹೊಮ್ಮುತ್ತದೆ.ಮನಸ್ಸು ಮಂಕಾಗುತ್ತದೆ.ಇಂತಹ ಬರಹಗಳನ್ನು ಕೊಟ್ಟಿರುವ ಶ್ರೀನಿವಾಸ ತಮ್ಮ ಅಂತಃಕರಣ ,ಚೂಪಾದ ಗ್ರಹಿಕೆ,ಆಳವಾದ ಸಂವೇದನೆಗಳನ್ನು ಇತರೆ ಪ್ರಕಾರಗಳಲ್ಲಿಯೂ ಪ್ರಕಟಿಸುವ ಜರೂರಿಯಿದೆ.
- ಡಾ.ರಹಮತ್ ತರೀಕೆರೆ
ಒಬ್ಬ ಮನುಷ್ಯ ಮತ್ತೊಬ್ಬನನ್ನು ಕಿತ್ತು ತಿನ್ನಬಾರದು.ಹೊಟ್ಟೆಪಾಡಿಗಾಗಿ ನಿರ್ವಹಿಸುವ ಪ್ರತಿ ಕೆಲಸವೂ ಸೃಜನಶೀಲವಾಗಿರಬೇಕು-ಎಂಬ ಧಾವಂತದಲ್ಲಿ ಹುಟ್ಟಿದ ಮನದ ಪ್ರಕ್ರಿಯೆಗಳಿಗೆಲ್ಲ ಇಲ್ಲಿ ಹರಡಿಕೊಂಡಿವೆ.
- ಬಿ.ಶ್ರೀನಿವಾಸ,ಕೃತಿ ಲೇಖಕ
ಖಾಲಿ ಗೋಡೆಯ ಗುರುತಿಲ್ಲದ ಚಿತ್ರಗಳು ನೊಂದವರ ಮನದಲ್ಲಿ ಅಲ್ಪಾವಧಿ ಗುರುತು ಮೂಡಿಸಬಹುದು ನಿಮ್ಮ ಈ ಪುಸ್ತಕ ಮತ್ತು ಅದರಲ್ಲಿರುವ ಎಷ್ಟೋ ವಿಚಾರಗಳು ನನ್ನನ್ನು ಡಿಸ್ಟರ್ಬ್ ಮಾಡಿವೆ. ಕೇವಲ ವಾಟ್ಸಾಪ್ ಲೈನ್ ಸಾಕಾಗಲ್ಲ ಎದುರುಗಡೆ ಕುಳಿತು ಇನ್ನು ಹೆಚ್ಚು ತಿಳಿದುಕೊಳ್ಳಬೇಕೇನಿಸುತ್ತದೆ. ಸಂಡೂರಿನ ದಾರುಣ ಚಿತ್ರಗಳನ್ನು,ಕೋರ್ಟಿನ ಚಿತ್ರಗಳನ್ನು,ಬದುಕಿನ ಚಿತ್ರಗಳನ್ನು ಕಣ್ಣಿಗೆ ರಾಚುವಂತೆ ಮೂಡಿಸಿದ್ದೀರಿ.
ಸಾವಿಗಿಂತ ಹಸಿವು ಬಹಳ ಕ್ರೂರಿ ಎನ್ನುವುದು: ನೋವಿನ ಬದಲು ಹಸಿವಿನ ಏಟುಗಳು ಬೀಳಬೇಕಿತ್ತು ಎನ್ನುವ ಸಾಲುಗಳಂತೂ Geographical Hungrey ಪುಸ್ತಕ ನೆನಪಿಸುತ್ತವೆ. ಸೊಂಡೂರಿನ ಚಿತ್ರಗಳ ಮೂಡಿಸಿದೆ ಗಾಢ ವಿಷಾದತೆ, ನನ್ನನ್ನು ಹೊರಬರಲು ಬಿಡುತ್ತಿಲ್ಲ.
“ಉಳ್ಳವರು ಹೊತ್ತ ಮೂಟೆಗಳಲ್ಲಿ ಬಡವರ ಹಸಿವಿನದ್ದೇ ಭಾರ”ಇವೆಲ್ಲ ಹಸಿವನ್ನು ಅನುಭವಿಸಿದವರಿಗೆ ಮಾತ್ರ ಸರಿಯಾಗಿ ಅರ್ಥವಾಗುವ ಸಾಲುಗಳು.
ಇನ್ನು ,ಕೋರ್ಟಿನ ಚಿತ್ರಗಳು, ಎಷ್ಟು ಜನ ಇರ್ತಾರೆ ಇವನ್ನೆಲ್ಲ ಸೂಕ್ಷ್ಮ ವಾಗಿ ತಿಳಿದುಕೊಳ್ಳುವವರು ?
ಶಾಲೆ ಹಿಂದೆ ತಿರುಗಬಾರದು ಕೋರ್ಟ್ ಕಚೇರಿ ಮುಂದೆ ತಿರುಗಬಾರದು ಎಂದು ನಮ್ಮ ಜನಪದರು ಹೇಳ್ವ ಮಾತು ಎಷ್ಟೋ ಸಲ ಸತ್ಯ ಎನಿಸುತ್ತದೆ.
ನೀವು ಹಿಡಿದಿಟ್ಟ ಬದುಕಿನ ಚಿತ್ರಗಳಲ್ಲಿನ “ಶವಪೆಟ್ಟಿಗೆ ಸಣ್ಣದಿದ್ದಷ್ಟು ಹೊರುವುದು ಬಹಳ ಕಷ್ಟ “ಎಂಬ ಮಾತಂತೂ ಚಿಕ್ಕಮಕ್ಕಳ ತಂದೆತಾಯಿಯರ ಕಣ್ಣಲ್ಲಿ ನೀರು ತರಿಸುವುದು.
ತಲೆ ಮ್ಯಾಲೆ ಮಲ ಸುರುವಿಕೊಂಡೆವಲ್ಲ ಸರ್ ಅವತ್ತೇ… ನಾವ್ ಹುಟ್ಟಿದ್ದು ಎನ್ನುವ ಸವಣೂರಿನ ಭಂಗಿಯ ಮಾತನ್ನು ಎಷ್ಟು ಅರ್ಥಗರ್ಭಿತವಾಗಿ ಸೋ ಕಾಲ್ಡ್ ಸೊಸೈಟಿಗೆ ಮುಟ್ಟಿ ನೋಡಿಕೊಳ್ಳುವಂತೆ ಬರೆದಿದ್ದೀರಿ. ಆಕೆ ಏನನ್ನೋ ಆಯ್ಕೆ ಮಾಡಿಕೊಂಡಿದ್ದಾಳೆ ಎಂಬ ವಿಚಾರಗಳು ಕೇವಲ ವಿಚಾರಗಳಲ್ಲ ,ಬದುಕಿನ ಸತ್ಯ ಚಿತ್ರಣಗಳು ದಿನ ನಿತ್ಯ ನಮ್ಮ ನಡುವೆ ನಡೆಯುವಂತವು.ಅವನ್ನು ಕಾಣುವಂತ ದೃಷ್ಟಿ ಇದ್ದವರಿಗೆ ಮಾತ್ರ ಇವು ಕಾಣುತ್ತವೆ ಸರ್ .
ನಿಮ್ಮ ನೈಜ ದೃಷ್ಟಿಗೆ ದನ್ಯವಾದಗಳು ಸರ್, ಉಳಿದದ್ದು ಎದುರು ಬದುರು ಕುಳಿತು ಮಾತಾಡೋಣ
- ಡಾ.ರಾಮಚಂದ್ರ ಹಂಸನೂರು, ಬೆಟಗೇರಿ
ಸುದ್ದಿದಿನ.ಕಾಂ|ವಾಟ್ಸಾಪ್|9980346243
-
ದಿನದ ಸುದ್ದಿ7 days ago
ಭಾನುವಾರದಂದು ಕಾರ್ಯನಿರ್ವಹಿಸುವಂತೆ ಬ್ಯಾಂಕ್ಗಳಿಗೆ ಆರ್ ಬಿ ಐ ಸೂಚನೆ
-
ದಿನದ ಸುದ್ದಿ6 days ago
ನಾಯಕನ ಹಟ್ಟಿ | ಶ್ರೀಗುರು ತಿಪ್ಪೇರುದ್ರಸ್ವಾಮಿ ರಥೋತ್ಸವಕ್ಕೆ ವಿಶೇಷ ಬಸ್ ಸೌಲಭ್ಯ
-
ದಿನದ ಸುದ್ದಿ7 days ago
ಕಾಂಗ್ರೆಸ್ ಪಕ್ಷದ ಬ್ಯಾಂಕ್ ಖಾತೆಗಳು ಸ್ಥಗಿತ ; ಬಿಜೆಪಿ ಅಧಿಕಾರ ದುರುಪಯೋಗ : ಖರ್ಗೆ ಕಿಡಿ
-
ದಿನದ ಸುದ್ದಿ5 days ago
ಲೋಕಸಭಾ ಚುನಾವಣೆ : ಚುನಾವಣಾ ಚಟುವಟಿಕೆಗಳ ಕುರಿತ ಜಿಲ್ಲಾವಾರು ಮಾಹಿತಿ
-
ದಿನದ ಸುದ್ದಿ5 days ago
ವಿಜಯಪುರ ಜಿಲ್ಲಾ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಗೆ ಮೈಬೂಬಸಾಹೇಬ.ವೈ.ಜೆ ಆಯ್ಕೆ
-
ದಿನದ ಸುದ್ದಿ5 days ago
ಬೆಂಗಳೂರಿನಲ್ಲಿ ಬಿಜೆಪಿ ನೂತನ ಮಾಧ್ಯಮಕೇಂದ್ರ ಆರಂಭ
-
ದಿನದ ಸುದ್ದಿ5 days ago
ಲೋಕಸಭಾ ಚುನಾವಣೆ | ಹೊಸ ಮತದಾರರೆಷ್ಟು ಗೊತ್ತಾ..?
-
ದಿನದ ಸುದ್ದಿ5 days ago
ಕವಿತೆ | ನೆನಪು