ದಿನದ ಸುದ್ದಿ
ದೀಪಿಕಾ ಪಡುಕೋಣೆ ನಿಲುವಿನ ಹಿಂದಿನ ಆಯಾಮಗಳು
- ಕೇಸರಿ ಹರವೂ
ಹೆಚ್ಚೂ ಕಡಿಮೆ ಇಡೀ ಬಾಲಿವುಡ್ ಅಡ್ಡಗೋಡೆಯ ಮೇಲೆ ಕೂತಿರುವಾಗ ದೀಪಿಕಾರ ನಿಲುವು ಪ್ರಾಶಸ್ತ್ಯ ಪಡೆಯುತ್ತದೆ. ದೀಪಿಕಾರ ನಿಲುವಿನ ಹಿಂದಿನ ಪ್ರಾಮಾಣಿಕತೆಯನ್ನು ನಾನು ಖಂಡಿತಾ ಅನುಮಾನಿಸುತ್ತಿಲ್ಲ. ‘ಸರ್ವಜನಾಂಗದ ಶಾಂತಿಯ ತೋಟ’ ಎನ್ನುವ ಉದಾತ್ತ ಆದರ್ಶವನ್ನು ನಾವೆಲ್ಲರೂ ಹೆಮ್ಮೆಯಿಂದ ಪಾಲಿಸುತ್ತಿದ್ದ ಎಂಭತ್ತು ತೊಂಭತ್ತರ ದಶಕದ ಕರ್ನಾಟಕದಲ್ಲಿ ಬೆಳೆದ ಪರಿಸರದಲ್ಲೇ ಆಕೆಯೂ ಬೆಳೆದವರು. ಈಗ ನಮ್ಮಲ್ಲೇ ಕೆಲವರು ಮೋಡಿಗೊಳಗಾಗಿ ಒಡಕು ಮೂಡಿಸಿಕೊಂಡಿದ್ದಾರೆ. ಆದರೂ ನಾವು ಬಹುತೇಕರು ಹಾಗೇ ಇದ್ದೇವೆ ಎನ್ನುವುದು ನಿರ್ವಿವಾದ. ಅದನ್ನು ಈ ಕ್ಷಣದ ಮಟ್ಟಿಗೆ ಬದಿಗಿಡೋಣ.
ಮೊದಲ ಪ್ರಶ್ನೆ ಏಳುವುದು ನಾಸಿರುದ್ದೀನ್ ಷಾ, ಶಬನಾ ಅಜ್ಮಿ, ಜಾವೇಡ್ ಅಖ್ತರ್, ಇನ್ನೂ ಅನೇಕರು ದೀಪಿಕಾಳಂತೆಯೇ, ಆಕೆ ಪ್ರಟಕವಾಗುವುದಕ್ಕಿಂತ ತುಂಬಾ ಮೊದಲಿಂದಲೇ ಈ ನಿಲುವನ್ನು ಹೊಂದಿದ್ದಾರೆ. ಇನ್ನೂ ಹಲವಾರು ಬಾಲಿವುಡ್ ಪ್ರಮುಖರು ಇವರುಗಳಂತೆಯೇ ನಮ್ಮ ದೇಶದ ಸಂವಿಧಾನವೇ ಮೊದಲು ಮತ್ತು ಅಂತಿಮ, ನಮ್ಮ ಜಾತ್ಯತೀತ ನಿಲುವೇ ನನ್ನದು ಎನ್ನುವಂತಾ ನಿಲುವನ್ನೇ ಹೊಂದಿರಬಹುದು. ಆದರೂ ಏಕೆ ತಮ್ಮ ನಿಲುವನ್ನು ನೇರವಾಗಿ ಪ್ರಕಟಿಸುವುದಕ್ಕೆ ಹಿಂಜರಿಯುತ್ತಿದ್ದಾರೆ? ದೀಪಿಕಾ ಕೂಡಾ ಈ ಮಾತುಗಳನ್ನು ನೇರವಾಗಿ ಹೇಳಿಲ್ಲ, ನಮ್ಮ ಯುವಜನರ ಧೈರ್ಯವನ್ನು ಮೆಚ್ಚಿಕೊಂಡತಹ ಮಾತುಗಳಲ್ಲಿ ಆ ಅರ್ಥ ಬರುವಂತೆ ಹೇಳಿದ್ದಾರೆ ಎನ್ನುವುದನ್ನೂ ನಾವು ಗಣನೆಗೆ ತೆಗೆದುಕೊಳ್ಳಬೇಕು.
ಬಾಲಿವುಡ್ ಎಷ್ಟೇ ಆಧುನಿಕತೆಯನ್ನು ಅಪ್ಪಿಕೊಳ್ಳುತ್ತಿದ್ದರೂ, ಅದು ಮೊದಲಿಂದಲೂ ಸಂಪ್ರದಾಯವಾದಿ ಎನ್ನುವುದು ಸ್ಪಷ್ಟ. ಹಿಂದೂಯೇತರ ತಾರೆಯರು ಅಲ್ಲಿ ಮಿಂಚುವುದೂ ಬಹುತೇಕ ಹಿಂದೂ ಪ್ರೊಟಾಗೋನಿಸ್ಟುಗಳಾಗಿಯೇ. ಅಮರ್, ಅಕ್ಬರ್ ಮತ್ತು ಆಂಟೊನೀ ಮೂವರೂ ಒಬ್ಬ ಹಿಂದೂ ತಾಯಿಯ ಹೊಟ್ಟೆಯಲ್ಲೇ ಹುಟ್ಟಿ ಬೇರೆಬೇರೇ ಧರ್ಮಗಳಲ್ಲಿ ಬೆಳೆದು ನಂತರ ಮತ್ತೆ ತಮ್ಮ ಹಿಂದೂ ತಾಯಿಯನ್ನೇ ಸೇರಿದವರು ಎನ್ನುವುದನ್ನು ನೆನಪಿಸಿಕೊಳ್ಳಿ. ಇದನ್ನು ಬಾಲಿವುಡ್ ಎಂದಿಗೂ ಪಾಲಿಸುತ್ತಲೇ ಬಂದಿರುವ ಸಂಪ್ರದಾಯ. ಹಿಂದೂಯೇತರ ಪ್ರೇಕ್ಷಕ ವರ್ಗ ಇಡೀ ಭಾರತದಲ್ಲಿ ಗಣನೀಯವಾಗಿ ಇದ್ದರೂ ಬಾಲಿವುಡ್ ಬಹುತೇಕವಾಗಿ ಓಲೈಸುವುದು ಬಹುಸಂಖ್ಯಾತ ವರ್ಗವನ್ನೇ.
ಈ ಬಾಲಿವುಡ್ಡಿನ ಜನ ತಮ್ಮ ಸಂವಿಧಾನ ಬದ್ಧತೆ, ಜಾತ್ಯತೀತ ನಿಲುವುಗಳನ್ನು ಪ್ರಕಟಿಸಲು ಹಿಂಜರಿಯುವುದು ಈ ಕಾರಣಕ್ಕೇ. ನಾಳೆ ತಮ್ಮ ಚಿತ್ರಗಳನ್ನು ಈ ಬಹುಸಂಖ್ಯಾತರು ಎಲ್ಲಿ ಬಹಿಷ್ಕರಿಸುತ್ತಾರೋ ಎನ್ನುವ ಭಯ ಅಲ್ಲಿನ ಅನೇಕ ನಿರ್ಮಾಪಕರು, ನಿರ್ದೇಶಕರು, ತಂತ್ರಜ್ಞರು ಮತ್ತು ಕಲಾವಿದರಿಗೆ ಖಂಡಿತಾ ಇದೆ. ಹಾಗೆಂದು ಅಲ್ಲಿ ಎಲ್ಲರೂ ಇಂಥಾ ನಿಲುವನ್ನೇ ಹೊಂದಿದ್ದರೆ ಎನ್ನಲೂ ಆಗುವುದಿಲ್ಲ. ಬಹುತೇಕರು ಹಿಂದುತ್ವ ಪರ ನಿಲುವುಗಳನ್ನೇ ಹೊಂದಿದ್ದಾರೆ ಎನ್ನುವುದೇ ನನ್ನ ಗುಮಾನಿ.
ಇವರುಗಳ ಆತಂಕಕ್ಕೆ ಇನ್ನೊಂದು ಮುಖ್ಯ ಕಾರಣ ಫೈನಾನ್ಸ್, ಹಂಚಿಕೆ ಮತ್ತು ಪ್ರದರ್ಶನ ವಲಯಗಳು. ಬಾಲಿವುಡ್ಡಿನ ಮೂರೂ ವಲಯಗಳಿಗೂ ಫೈನಾನ್ಸ್ ಮಾಡುವ ಬಹುತೇಕರು ಗುಜರಾತಿಗಳು ಮತ್ತು ಮಾರ್ವಾಡಿಯರು. ಇಂದು ಧರ್ಮಾತೀತವಾಗಿ ಮೌನ ವಹಿಸಿರುವ ಬಹುತೇಕರು ಹಿಂದುತ್ವಕ್ಕೆ ಭಯಪಟ್ಟು ಮೌನ ವಹಿಸಿರುವುದು ಹೌದಾದರೂ, ಅವರ ಮೂಲ ಭಯ ಇರುವುದು ಈ ಮೇಲಿನ ಕಾರಣಕ್ಕೆ. ಆದರೆ, ಈ ಫೈನಾನ್ಷಿಯರುಗಳು ಕೂಡಾ ಎಂದಿಗೂ ಹೀಗೇ ಇರುತ್ತಾರೆಂದು ಹೇಳಲು ಬರುವುದಿಲ್ಲ.
ಭಾರತ ನಿಜಕ್ಕೂ ಜಾತ್ಯತೀತತೆಯೆಡೆಗೆ ಹೆಜ್ಜೆ ಇಡುತ್ತಿದ್ದ ಕಾಲದಲ್ಲಿ ಅವರುಗಳು ಹಾಗೇ ನಡೆದುಕೊಂಡರು. ಇಂದು ಬಲಪಂಥೀಯ ಆಳ್ವಿಕೆಯಲ್ಲಿ ಅವರು ಹೀಗೆ ನಡೆದುಕೊಳ್ಳುತ್ತಾರೆ. ನಾಳೆ ಇನ್ನೊಂದು ರೀತಿಯಾದರೆ ಆಗ ಅವರೂ ಹಾಗೇ. ಟ್ರೆಂಡ್ ಅನುಸರಿಸಿ ಬಂಡವಾಳದ ಸೇವೆ ಮಾಡುವುದೇ ಅವರ ಧರ್ಮ. ಹೀಗಾಗಿ, ಇಂದು ಹೀಗೆ, ನಾಳೆ ಹೇಗೋ ಎಂದು ಮೌನ ವಹಿಸಿರುವವರು ಮೌನ ವಹಿಸಿದ್ದಾರೆ.
ಹಾಗಾದರೆ, ದೀಪಿಕಾ ಹೇಗೆ ದಿಟ್ಟವಾಗಿ ಪ್ರಕಟವಾಗಲು ಸಾಧ್ಯವಾಯಿತು? ಯಾವ ಭಯಗಳು ಕೆಲವರನ್ನು ಮೌನ ವಹಿಸುವಂತೆ ಮಾಡಿದವೋ, ಆ ಭಯಗಳನ್ನು ದಾಟಿ ಅನುಪಮ್ ಖೇರ್, ಪರೇಶ ರಾವಲ್ ಮುಂತಾದವರು ನಾವು ‘ಬಲಪಂಥೀಯರು’ ಎಂದು ಘೋಷಿಸಿಕೊಂಡರು. ಅದು ಒಂದು ರೀತಿಯಲ್ಲಿ ಅವರುಗಳು ತೆಗೆದುಕೊಂಡ ರಿಸ್ಕ್. ಅವರ ಪ್ರೇಕ್ಷಕವರ್ಗದಲ್ಲಿ ಒಂದು ಪಾಲು ಅವರನ್ನು ಖಂಡಿಸಿತು. ಹಾಗೆಯೇ, ದೀಪಿಕಾ ಕೂಡಾ ಆ ರಿಸ್ಕಿಗೆ ತದ್ವಿರುದ್ಧವಾದ ರಿಸ್ಕ್ ಒಂದನ್ನು ಈಗ ತೆಗೆದುಕೊಂಡಿದ್ದಾರೆ.
ಈಕೆಯನ್ನೂ ಒಂದು ವರ್ಗ ಈಗ ಖಂಡಿಸುತ್ತಿದೆ, ಆಕೆಯ ಫಿಲ್ಮ್ ಬಹಷ್ಕರಿಸಿ ಎನ್ನುತ್ತಿದೆ. ಈ ರಿಸ್ಕ್ ತಿಳಿದಿದ್ದರೂ ಸಹ ಆಕೆ ತನ್ನನ್ನು ಪ್ರಕಟಿಸಿಕೊಂಡಿದ್ದಾರೆ. ಸಧ್ಯ ಈ ದಿನಗಳ CAA ಮತ್ತು NRC ವಿರೋಧೀ ಹೋರಾಟಗಳ ಟ್ರೆಂಡಿನಲ್ಲಿ ಈ ರಿಸ್ಕ್ ಒಂದು ಅಡ್ವಾಂಟೇಜ್ ಆದರೂ ಆಗಬಹುದು ಎನ್ನುವುದು ಆಕೆಯ ಆಶಯ ಇರಬಹುದು. ಆದರೆ, ಈ ಆಶಯ ತೀರ ತಾತ್ಕಾಲಿಕ ಎಂದೇನೂ ನನಗೆ ಎನಿಸುವುದಿಲ್ಲ.
ಏಕೆಂದರೆ ‘ಬದಲಾವಣೆ ತರಲು ನಾವು ಧೈರ್ಯವಾಗಿ, ಮುಕ್ತವಾಗಿ ಪ್ರಕಟಿಸಿಕೊಳ್ಳಬೇಕು’ ಎನ್ನುವ ಮಾತನ್ನು ಆಕೆ ಆಡಿದ್ದಾರೆ. ಸಾಂಪ್ರದಾಯಿಕ ಬಂಡವಾಳಶಾಹಿಗಳ ಮೂಗಿನ ನೇರಕ್ಕೇ ಬಾಲಿವುಡ್ ಏಕೆ ನಡೆದುಕೊಳ್ಳಬೇಕು? ಎನ್ನುವ ಆಧುನಿಕ ಪ್ರಶ್ನೆಯೊಂದನ್ನು ತನ್ನ ಮಿತಿಯೊಳಗೇ ದೀಪಿಕಾ ಹುಟ್ಟಿಹಾಕಿದ್ದಾರೆ. ಈ ಪ್ರಶ್ನೆ ಬಾಲಿವುಡ್ಡನ್ನೂ ದಾಟಿ ಇಡೀ ಭಾರತೀಯ ಸಮಾಜಕ್ಕೂ ಅನ್ವಯಿಸುವಂತದ್ದು. ಈಕೆ ನಿಜಕ್ಕೂ ಬದಲಾವಣೆ ಬಯಸಿದ್ದಾರೆ. ನಾನು ಈಕೆಯ ನಿಲುವನ್ನು ಸಂಭ್ರಮಿಸುವುದು ಈ ಕಾರಣಕ್ಕೇ…
ಇನ್ನು ಸ್ಯಾಂಡಲ್ ವುಡ್ ಬಗ್ಗೆ ನಾನೇನೂ ಹೇಳಲ್ಲ. ಅಲ್ಲಿ ಬಹಳಷ್ಟು ಜನಕ್ಕೆ ದೇಶದಲ್ಲಿ ಏನು ನಡೆಯುತ್ತಿದೆ ಎನ್ನುವುದೇ ಸ್ಪಷ್ಟವಾಗಿ ಗೊತ್ತಿಲ್ಲ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ದಾವಣಗೆರೆ | ಸರ್ಕಾರಿ ಮಹಿಳಾ ಕಾಲೇಜಿನಲ್ಲಿ ಬೆಂಕಿ ರಹಿತ ಕುಕಿಂಗ್ ಕಾರ್ಯಕ್ರಮ
ಸುದ್ದಿದಿನ,ದಾವಣಗೆರೆ: ನಗರದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ವಿದ್ಯಾರ್ಥಿನಿಯರಿಗಾಗಿ “ಕುಕಿಂಗ್ ವಿಥೌಟ್ ಫೈರ್” ಎಂಬ ಬೆಂಕಿ ರಹಿತ ಆಹಾರ ತಯಾರಿ ಕಾರ್ಯಕ್ರಮವನ್ನು ಇಂದು ಆಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಹಲವಾರು ತಂಡಗಳು ಉತ್ಸಾಹದಿಂದ ಭಾಗವಹಿಸಿ ತಮ್ಮ ಕೌಶಲ್ಯವನ್ನು ಪ್ರದರ್ಶಿಸಿದರು. ಕಾರ್ಯಕ್ರಮದ ಅಂಗವಾಗಿ ಆಹಾರ ಮೇಳವೂ ಏರ್ಪಡಿಸಲಾಯಿತು. ವಿದ್ಯಾರ್ಥಿನಿಯರು ಕಾರಟ್ ಹಲ್ವಾ, ಫ್ರೂಟ್ ಸಲಾಡ್, ಚುರಿ ಮುರಿ, ಮೊಸರು ಅವಲಕ್ಕಿ, ವಿವಿಧ ರುಚಿಯ ಜ್ಯೂಸ್ಗಳು, ಕೊಕೊನೆಟ್ ಬರ್ಫಿ, ಕುಕುಂಬರ್ ಬೋಟ್, ಟೊಮೇಟೊ ಚಾಟ್, ಆಪಲ್ ಪೇಡ ಮತ್ತು ಅವಲಕ್ಕಿ ಚಿತ್ರಾನ್ನ ಸೇರಿದಂತೆ ಹಲವಾರು ಪೌಷ್ಟಿಕ ಹಾಗೂ ರುಚಿಕರ ಆಹಾರಗಳನ್ನು ತಯಾರಿಸಿ ಪ್ರದರ್ಶನೆ ಮತ್ತು ಮಾರಾಟ ಮಾಡಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರು, ಉಪನ್ಯಾಸಕರು ಮತ್ತು ವಿದ್ಯಾರ್ಥಿನಿಯರು ಪಾಲ್ಗೊಂಡು ಯಶಸ್ವಿ ಕಾರ್ಯಕ್ರಮವನ್ನಾಗಿ ಮಾಡಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಮಕ್ಕಳ ಆಧಾರ್ ಬಯೋಮೆಟ್ರಿಕ್ ನವೀಕರಣಕ್ಕೆ ಉಚಿತ ಅವಕಾಶ : ಕೂಡಲೇ ಆಧಾರ್ ಸೇವಾ ಕೇಂದ್ರಗಳಿಗೆ ಭೇಟಿ ನೀಡಿ
ಸುದ್ದಿದಿನ,ದಾವಣಗೆರೆ: ಜಿಲ್ಲೆಯ 5 ರಿಂದ 7 ವರ್ಷ ಹಾಗೂ 15 ರಿಂದ 17 ವರ್ಷದ ವಯೋಮಿತಿಯ ಮಕ್ಕಳಿಗೆ ಕಡ್ಡಾಯ ಬಯೋಮೆಟ್ರಿಕ್ ಅಪ್ಡೇಟ್ (Mandatory Biometric Update) ಮಾಡಿಸಲು ಜಿಲ್ಲಾಡಳಿತವು ವಿಶೇಷ ಅವಕಾಶ ಕಲ್ಪಿಸಿದೆ. ಜಿಲ್ಲೆಯ ಎಲ್ಲಾ ಆಧಾರ್ ಕೇಂದ್ರಗಳಲ್ಲಿ ಸೆಪ್ಟೆಂಬರ್ 30, 2026 ರವರೆಗೆ ಈ ಸೇವೆಯು ಸಂಪೂರ್ಣ ಉಚಿತವಾಗಿ ಲಭ್ಯವಿರಲಿದೆ.
ಆಧಾರ್ ನಿಯಮಗಳ ಪ್ರಕಾರ, ಮಕ್ಕಳಿಗೆ 5 ಮತ್ತು 15 ವರ್ಷ ತುಂಬಿದಾಗ ಬಯೋಮೆಟ್ರಿಕ್ ವಿವರಗಳನ್ನು ನವೀಕರಿಸುವುದು ಕಡ್ಡಾಯವಾಗಿದೆ. ಈ ನವೀಕರಣದಿಂದ ಶಾಲಾ ದಾಖಲಾತಿ, ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳು, ವಿದ್ಯಾರ್ಥಿ ವೇತನ ಹಾಗೂ ಸರ್ಕಾರದ ವಿವಿಧ ಜನಕಲ್ಯಾಣ ಯೋಜನೆಗಳ ಸೌಲಭ್ಯ ಪಡೆಯಲು ಅನುಕೂಲವಾಗಲಿದೆ.
ಪೋಷಕರು ತಮ್ಮ ಮಕ್ಕಳ ಆಧಾರ್ ಕಾರ್ಡ್ ಮತ್ತು ಪೂರಕ ದಾಖಲೆಗಳೊಂದಿಗೆ ಹತ್ತಿರದ ಆಧಾರ್ ಸೇವಾ ಕೇಂದ್ರಗಳಿಗೆ ಭೇಟಿ ನೀಡಿ ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು. ಜಿಲ್ಲೆಯ ಎಲ್ಲಾ ಪೋಷಕರು ಈ ಜವಾಬ್ದಾರಿಯನ್ನು ಅರಿತು, ನಿಗದಿತ ಅವಧಿಯೊಳಗೆ ತಮ್ಮ ಮಕ್ಕಳ ಆಧಾರ್ ನವೀಕರಿಸುವ ಮೂಲಕ ಸರ್ಕಾರದ ಯೋಜನೆಗಳು ತಲುಪಲು ಸಹಕರಿಸಬೇಕೆಂದು ಅಪರ ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಕ್ರೀಡೆ
ಹಿರಿಯ ಕ್ರಿಕೆಟ್ ಪಟು ಎನ್ಆರ್ಎಚ್ ರಮೇಶ್ ನಿಧನ
ಸುದ್ದಿದಿನ,ದಾವಣಗೆರೆ: ನಗರದ ಎನ್ಆರ್ಎಚ್ ಸೈಕಲ್ ಮಾರ್ಟ್ ಮಾಲೀಕ, ದಾವಣಗೆರೆ ಫ್ರೆಂಡ್ಸ್ ಕ್ರಿಕೆಟ್ ಕ್ಲಬ್ನ ನಾಯಕನಾಗಿದ್ದ ಎನ್.ಆರ್.ಎಚ್.ರಮೇಶ ಇಲ್ಲಿನ ಕೆಟಿಜೆ ನಗರದ 15ನೇ ಕ್ರಾಸ್, 2ನೇ ಮೇನ್ನಲ್ಲಿರುವ ತಮ್ಮ ನಿವಾಸದಲ್ಲಿ ಬುಧವಾರ ಸಂಜನೆ ನಿಧನರಾಗಿದ್ದಾರೆ. ಅವರಿಗೆ 51 ವರ್ಷ ವಯಸ್ಸಾಗಿತ್ತು.
ಮೃತರು ಪತ್ನಿ, ಓರ್ವ ಪುತ್ರ, ಇಬ್ಬರು ಪುತ್ರಿಯರು, ಓರ್ವ ಸಹೋದರ, ಮೂವರು ಸಹೋದರಿಯರು ಸೇರಿದಂತೆ ಬಂಧು-ಬಳಗ ಅಗಲಿದ್ದಾರೆ. ದಾವಣಗೆರೆ ಗಾಂಧಿ ನಗರ ಸಮೀಪದ ವೀರಶೈವ ರುದ್ರಭೂಮಿಯಲ್ಲಿ ಮೇ.7ರಂದು ಮಧ್ಯಾಹ್ನ 2 ಗಂಟೆಗೆ ಅಂತ್ಯಕ್ರಿಯೆ ನಡೆಯಲಿದೆ.
90ರ ದಶಕದಲ್ಲಿ ದಾವಣಗೆರೆ ಸೇರಿದಂತೆ ನೆರೆ ಹೊರೆಯ ಜಿಲ್ಲೆಗಳಲ್ಲಿ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯ, ಪಂದ್ಯಾವಳಿಗಳಲ್ಲಿ ಭರ್ಜರಿ ಸಿಕ್ಸರ್ ಭಾರಿಸುವ ಮೂಲಕ ಕ್ರಿಕೆಟ್ ಪ್ರೇಮಿಗಳ ನೆಚ್ಚಿನ ಆಟಗಾರನಾಗಿ ರಮೇಶ ಸಾಧನೆ ಮಾಡಿದ್ದರು. ಎನ್ಆರ್ಎಚ್ ರಮೇಶ ನಿಧನಕ್ಕೆ ಎಫ್ಸಿಸಿ ತಂಡದ ಹಿರಿಯ ಆಟಗಾರರು, ದಾವಣಗೆರೆ ಕ್ರಿಕೆಟ್ ಕ್ಲಬ್ ಸೇರಿದಂತೆ ವಿವಿಧ ಕ್ರಿಕೆಟ್ ಕ್ಲಬ್ಗಳ ಹಿರಿಯ ಆಟಗಾರರು ತೀವ್ರ ಸಂತಾಪ ಸೂಚಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ಅಂಕಣ4 days agoಸಮರ್ಥ್ ಶಾಮನೂರು ಪ್ರಯಾಸದ ಗೆಲುವು ಮತ್ತು ಮುಂದಿನ ಸವಾಲುಗಳು
-
ದಿನದ ಸುದ್ದಿ7 days agoದಾವಣಗೆರೆ | ದೇಗುಲಗಳಲ್ಲಿ ನಿಧಿ ಶೋಧನೆ ಯತ್ನ ; ಆರು ಜನರ ಬಂಧನ
-
ದಿನದ ಸುದ್ದಿ3 days agoಸಂಶೋಧಕರಿಂದ ಪಶ್ಚಿಮ ಘಟ್ಟಗಳಲ್ಲಿ ಮೂರು ಅಣಬೆಯ ಹೊಸ ಶಿಲೀಂಧ್ರ ಜಾತಿಗಳ ಪತ್ತೆ
-
ದಿನದ ಸುದ್ದಿ2 days agoದಾವಣಗೆರೆ | ಸರ್ಕಾರಿ ಮಹಿಳಾ ಕಾಲೇಜಿನಲ್ಲಿ ಬೆಂಕಿ ರಹಿತ ಕುಕಿಂಗ್ ಕಾರ್ಯಕ್ರಮ
-
ದಿನದ ಸುದ್ದಿ2 days agoಮಕ್ಕಳ ಆಧಾರ್ ಬಯೋಮೆಟ್ರಿಕ್ ನವೀಕರಣಕ್ಕೆ ಉಚಿತ ಅವಕಾಶ : ಕೂಡಲೇ ಆಧಾರ್ ಸೇವಾ ಕೇಂದ್ರಗಳಿಗೆ ಭೇಟಿ ನೀಡಿ
-
ಕ್ರೀಡೆ2 days agoಹಿರಿಯ ಕ್ರಿಕೆಟ್ ಪಟು ಎನ್ಆರ್ಎಚ್ ರಮೇಶ್ ನಿಧನ

