ಬಹಿರಂಗ
ಭೂಮಿ ತಾಯಿಯ ಚೊಚ್ಚಲ ಮಗ
ಓದಿದ್ದು ಕಂಗ್ಲೀಷ್ ಮೀಡಿಯಂ,ಸೇರಿದ್ದು ಇಂಜಿನಿಯರಿಂಗ್, ಇವಾಗ ಮಾಡ್ತಿರೋ ಕೆಲಸ ಮಾತ್ರ ಜರ್ನಲಿಸಂ…
ಲೈಫು ಆದ್ರೆ still ವೈಟ್ & ಬ್ಲಾಕ್ screen…
ಅವತ್ ರಾತ್ರಿ…
ಏನ್ ಗುಡುಗು, ಸಿಡಿಲು ಅಂತೀರಾ..!!!
ಯಪ್ಪ ಮಿಂಚು ಪಣಾರ್!!! ಅಂತಾ ಕಿಟಕಿ ಪಕ್ದಲ್ಲೆ ಬರದು.. ನಾನ್ ಅಂತೂ ಕಿಟಕಿ ಅತ್ರಕ್ಕೂ ಹೋಗ್ಲಿಲ್ಲ…ಜೊತೆಗೆ ಸುಯ್ ಸುಯ್ ಅನ್ನೋ ಜೊರು ಗಾಳಿ .ತೆಂಗಿನ ಮರ , ಅಡಿಕೆ ಮರಗಳು 45° ಆಂಗಲ್ ಗೆ ಬಾಗಿದ್ವು ಅನ್ನಿ ಅಷ್ಟೊಂದು ರಭಸವಾದ ಗಾಳಿ..ಉಧೋ ಉಧೋ ಅಂತಾ ಮಳೆ ಬರಕ್ಕೆ ಶುರು ಆಯ್ತು..ಗಾಳಿ ಜೊತೆ ಮಳೆ ಬಂದ್ರೆ ಕೇಳ್ಬೇಕ??
ಅದೇ time ಗೆ ಕರೇಂಟ್ ಹೋಯ್ತು , ಅಕ್ಕಿ ಬೇರೆ ಕಾಲಿ ಆಗಿತ್ತು, , time ಬೇರೆ 10 ಆಗಿತ್ತು , ಸುತ್ತಲೂ ಕತ್ತಲೆ ಆವರಿಸಿತ್ತು, ಜೊತೆಗೆ ಮಳೆ ಬೇರೆ ಬರ್ತಿತ್ತು… ಏನ್ ಮಾಡ್ಲಿ ಸ್ಬಾಮಿ.. ಮಳೆಲಿ ಹೋಗಿ ತರಕ್ಕೆ ಆಗಲ್ಲ ಯಾಕಂದ್ರೆ ನಂಗೆ ಸಿಡಿಲು ಮಿಂಚು ಅಂದ್ರೆ ಭಯ..
ನಾನ್ ಬಾಗ್ಲಲ್ಲೇ ನಿಂತ್ಕೊಂಡು ಹೊದ್ದಾಡ್ತಿದ್ದೆ… ಅವಾಗ ಪಕ್ಕದ ಮನೆ ಅವರ್ಗೆ ನನ್ ಕಷ್ಟ ಗೊತ್ತಾಯ್ತು ಅನ್ಸುತ್ತೆ ಊಟ ಮಾಡು ಬಾರಪ್ಪ ಅಂತ ಬಲವಂತ್ ಮಾಡುದ್ರು , ನಾನು ಇಲ್ಲವ್ವೋ ..ಅಂತ ಹೇಳಿ. ಒಂದ್ ಕಪ್ ಅಕ್ಕಿ ಸಾಲ ಕೊಡಿ ಅಂತಾ ಕೇಳ್ದೆ. ಅದಿಕ್ಕೆ ಅವರು ನೋಡಪ್ಪ ನಾವು ಬೆಳೆದಿರೋ ಅಕ್ಕಿ ತಿನ್ನದು , ನೀವೆಲ್ಲಾ ಪ್ಯಾಟೆ ಮಂದಿ ನಿಮ್ ಥರ ಬಾಸುಮತಿ ,ಸೋನಾಮಸುರಿ ಎಲ್ಲಾ ತಿನ್ನಲ್ಲ ಅಂದ್ರೂ .. ಅಯ್ಯೋ ತಾಯಿ ನಾನು ಮಣ್ಣಿನ್ ಮಗ , ನಾನ್ ಇಲ್ಲಿ ತನ್ಕ ತಿಂದಿದ್ದು ಸಿದ್ದರಾಮಯ್ಯ ಕೊಟ್ಟಿದ್ ಒಂದು ರುಪಾಯಿ ಸೋಸೈಟಿ ಅಕ್ಕೀನೆ ಅಂತಾ ಹೇಳಿ ಒಂದು ಕಪ್ಪ ಅಕ್ಕಿ ತಂದೆ..
ಎರಡು ಈರುಳ್ಳಿ, ಎರಡು ಮೆಣಸಿನ ಕಾಯಿ , ಒಂದ್ ಟೊಮೋಟೊ ಹಾಕಿ ಚಿತ್ರನ್ನ ಮಾಡಿದೆ, ಘಮ್ ಅನ್ಲಿ ಅಂತಾ ಚಿಕನ್ ಬಿರಿಯಾನೆ ಪೌಡರ್ ಬೇರೆ ಹಾಕಿದ್ದೆ..
ಜೊತೆಗೆ ಇರ್ಲಿ ಅಂತಾ ಎರಡು ಕೋಳಿ ಮೊಟ್ಟೆ ಬೇಯಿಸ್ಕೊಂಡು ಫುಲ್ ಮೀಲ್ಸ್ ರೇಡಿ ಮಾಡ್ಕೊಂಡು ಕೂತ್ಕೊಂಡೆ.. ಏನ್ ಘಮಲು ಅಂತಿರಾ…. ಆಹಾ.. !!
ಪಕ್ಕದ್ ಮನೆ ಆಂಟಿ ಕೂಡ ಏನಪ್ಪ ಸೋಮವಾರ ಅಂತನೂ ನೊಡ್ದಲೆ, ಬಿರಿಯಾನಿ ಮಾಡಿದ್ದೀಯ ಅಂದ್ರೂ… ಆ ರೇಂಜ್ಗೆ ನಾನು ಕೂಡ ನಳ ಮಹಾರಾಜ ಆದ್ನಲ್ಲ ಅಂನ್ಕೊಂಡು ಕನ್ನಡಿಲ್ಲಿ ನನ್ನ ನಾನೆ ನೋಡ್ಕೊಂಡೆ…ಬೆಳಗ್ಗೆ 8ಆಗಿತ್ತು ಇನ್ನು ಹಾಸಿಗೆ ಮೇಲೆ ಹೊದ್ದಾಡ್ತಿದ್ದೆ… ಅವಾಗ ಇದ್ದಕ್ಕಿದಂತೆ ಪಕ್ಕದ್ ಮನೆಲೆ ಅಳ್ತಿರೋ ದನಿ ಕೇಳಿಸ್ತು… ಏನು ಆಯ್ತಪ್ಪ ಅಂತಾ ಎದ್ದಂಗೆನೆ ಹೋದೆ…
ಒಂದ್ ಕಡೆ ಯಜಮಾನ ತಲೆಮೇಲೆ ಬಟ್ಟೆ ಹಾಕೊಂಡು ಸರ ಸರ ಅಂತಾ ಆಚೆಗಡೆ ಹೊರಟ, ಇನ್ನೊಂದ್ ಕಡೆ ಆ ತಾಯಿ ದೇವರಿಗೆ ಇಡಿ ಶಾಪ ಹಾಕೊಂಡು , ಬರ್ತೀರೋ ಕಣ್ಣೀರನ್ನ ತಡಿಲಾರ್ದೆ ತನ್ನ ಸೆರಗಲ್ಲಿ ಹೊರೆಸ್ಕೊಂಡು ಅಡುಗೆ ಮನೆ ಕಡೆ ಹೋದ್ರು.. ನಾನು ಇಂತ timeನಲ್ಲಿ ಯಾರನ್ನ ಏನಂತ ಕೇಳನ ಅನ್ಕೊಂಟು , ಆ ತಾಯಿನ ಕೇಳ್ದೆ, ಯಾಕಮ್ಮ ಏನಾಯ್ತು ಹೇಳಿ ನಾವ್ ಇದೀವಿ ಅಂತಾ… ಅದಕ್ಕೆ ಅವರು ಹೇಳುದ್ರು ರಾತ್ರಿ ಇಡೀ ಸುರಿದಿದ್ದ ಬಾರಿ ಗಾಳಿ ಮಳೆಗೆ 500 ಅಡಿಕೆ ಮರ, 15 ಎಕ್ಕರೆ ಭತ್ತದ ಬೆಳೆ, 5 ತೆಂಗಿನ ಮರ ಎಲ್ಲಾ ನೆಲಕ್ಕೆ ಉರುಳಿ ನಾಶ ಆಯ್ತಂತೆ ಅಂದ್ರೂ..
Just ಒಂದ್ ಕ್ಷಣ ನೀವು imagine ಮಾಡ್ಕೊಳಿ .. ನೀವು ಇಷ್ಟ ಪಟ್ಟಿರೋ Dairy Milk ಚಾಕೊಲೇಟ್ ನ cover ತೆಗೆದು ಇನ್ನೇನು ತಿನ್ಬೇಕು ಅನ್ನೋ time ನಲ್ಲಿ ಕೆಳಗಡೆ ಬಿದ್ದಾಗ ನಮ್ reactions ಹೆಂಗ್ ಇರ್ಬೇಡ…
ಕೈಗೆ ಬಂದಿರೋ ತುತ್ತು ಬಾಯಿಗೆ ಬರ್ಲಿಲ್ಲ ಅಂದಾಗ ಆ ಅನ್ನದಾತರ ಸ್ಥಿತಿ ಎಂತಾ ಶೋಚನೀಯ ಅಂತಾ…
ಅವರ ತೋಟದ ಬಳಿ ಸುದ್ದಿ ಮಾಡನ ಅಂತಾ ನಾನು ನಮ್ ಕ್ಯಾಮೆರಾ ಮ್ಯಾನ್ ಜೊತೆಲೆ ಹೊರಟ್ವಿ… ದಾರಿ ಉದ್ದಕ್ಕೂ ಭತ್ತದ ಘಮಲು ಆಹಾ.. ಏನ್ ಸುವಾಸನೆ ಅಂತಿರಾ ಒಂದ್ಕ್ಷಣ ನಮ್ ಮಂಡ್ಯ ಸೀಮೆ ನೆನೆಪಾಗೋಯ್ತು… ಅಂತಾ ಅದ್ಭುತ ಹಸಿರು ಸಾಲು ಎಲ್ಲಿ ನೋಡಿದ್ರು ಅಲ್ಲಿ ತನಕವೂ ಭತ್ತದ ಗದ್ದೆಗಳು.. ಒಂಥರಾ ಮಲೆನಾಡ ಅನುಭವ .

ಇನ್ನೇನು ಸಮೀಪ ಅವರ ತೋಟಕ್ಕೆ ಹೋಗ್ಬೇಕು , ಅನ್ನೋವಾಗ್ಲೆ ಕಂಡಿದ್ದು …. ನೆಲಕ್ಕೆ ಬಿದ್ದಿರೋ ವಿದ್ಯುತ್ ಕಂಬಗಳು.. ದನ ಕರುಗಳಿಗೆ ಅಂತಾ ಕಟ್ಸಿದ್ದ ಮನೆಗೆ ರೋಡ್ ಸೈಡಲ್ಲಿ ಬಿದ್ದಿದ್ದ ಚಾವಣಿ ಗಳು ,
ರಸ್ತೆ ಬದಿಲಿ ಸೀಳಾಗಿ ಬಿದ್ದಿರೋ ಮರಗಿಡಗಳು… ಒಂದು ಕಡೆ ಬೇರು ಸಮೇತ ಬಿದ್ದಿರುವ ತೆಂಗಿನಮರಗಳು… ಅರ್ಧಕ್ಕೆ ಮುರ್ಕೊಂಡು ಬಿದ್ದಿರುವ ತ್ಯಾಗದ ಮರಗಳು ,
ಇನ್ನೊಂದ್ ಕಡೆ ಒಂದ್ ಅಷ್ಟು ಅರ್ಧಕ್ಕೆ ಮುರಿದಿದ್ದ ಅಡಿಕೆ ಮರಗಳು, ಇನ್ನ ಸ್ವಲ್ಪ ಬೇರು ಸಮೇತ ನೆಲ ಕಚ್ಚಿದ ಗಿಡಗಳು. ಹಸಿರಾಗಿ, ಕೇಸರಿ ಬಣ್ಣಕ್ಕೆ ತಿರುಗಿ ಇನ್ನೇನು ಫಲಕ್ಕೆ ಬಂದಿರುವ ಅಡಿಕೆ ಕಾಯಿಗಳು..
ಎಲ್ಲಂದ್ರೆ ಅಲ್ಲಿ ಚೆಲ್ಲಾಪಿಲ್ಲಿಯಾಗಿ ಇಟ್ಟಾಟ್ಟ…. ಎಲ್ಲೆ ನೋಟುದ್ರು ಮುರಿದು ಬಿದ್ದಿರೋ ಅಡಿಕೆ ಮರಗಳೆ ಕಾಣಿಸ್ತಿದ್ವು…
ಮತ್ತೊಂದು ಕಡೆ ನೋಡ್ಬೇಕು ನೀವು ..!!!
ನಿಮಗೆ ಈ ಗದ್ದೆ ತೋಟ ಅಂದ್ಮೇಲೆ ಒಂದು imagination ಇರುತ್ತೆ ಎಲ್ಲೆಲ್ಲೂ ಹಸಿರು ಹಸಿರಾಗಿರೋ ಭತ್ತದ ಗಿಡ , ಜುಳು ಜುಳು ಹರಿಯೊ ನೀರು …. ತಂಪನೆ ವಾತವರಣ, ನೋಡಿದಷ್ಟು ಹಸಿರಿನ ತೋರಣ.. ಆದ್ರೆ ಅವತ್ ಏನಾದ್ರು ನೋಡಿದಿದ್ರೆ ನಿಮ್ ಕಣ್ಣಲ್ಲಿ ಅಕ್ಷರಶಃ ನೀರು ಬರದು. ಹತ್ತಾರು ಎಕ್ಕರೆ ಭತ್ತ , ಇನ್ನೇನು ಕುಯ್ಯಲಿಗೆ ಬರುತ್ತೆ .. ಈ ಬಾರಿ ದಾಖಲೆ ಪ್ರಮಾಣದಲ್ಲಿ ಭತ್ತ ಬೆಳೆಯಬೇಕು ಅಂತಾ ಕನಸನ್ನ ಅವರ ಕಣ್ಣಲ್ಲಿ ನಾವು ಕಾಣಬಹುದಿತ್ತು.. ನಿಮ್ಗೆ ಗೊತ್ತಾ ಆ ಕನಸಿನ ಹಿಂದೆ ಎಷ್ಟೊಂದು ಆಸೆಗಳು ಇರ್ತಾವೆ ಅಂತಾ ..????
ಮಕ್ಕಳ higher education ಗೆ ದುಡ್ಡು ಹೊಂದಿಸದು ಇರುತ್ತೋ…?
ಇಲ್ಲಾ ಮಗಳ ಮದ್ವೆ ಇರುತ್ತೋ..?
ಇಲ್ಲಾ ಆಸ್ಪತ್ರೆನಲ್ಲಿ ಯಾರದ್ರು ಚಿಕಿತ್ಸಾ ಪಡಿತಿದ್ರೋ… ??
ಇಷ್ಟು ಬೆಳೆ ಬೆಳೆಯೊಕ್ಕೇ ಯಾರತ್ರ ಎಷ್ಟು ಸಾಲ ಮಾಡಿದ್ರೋ ??
ಎಲ್ಲಾ ಅವರಿಗೆ ಮಾತ್ರ ಗೊತ್ತಿರುತ್ತೆ.…
ನಿಮಗೆ ಇನ್ನೊಂದು ಗೊತ್ತಿರಲಿ ಒಂದು KG ಅಕ್ಕಿ ಬೆಳೆದು ನಾವು ಅನ್ನ ತಿನ್ನಬೇಕು ಅಂದರೆ ಸತತ ಐದಾರು ತಿಂಗಳಾದ್ರು ಬೇಕು… ಒಂದು ಎಕ್ಕರೆ ಗದ್ದೆ ಅಚ್ಚುಕಟ್ಟು ಮಾಡಬೇಕು ಅಂದ್ರೆ ಏನೆಲ್ಲಾ ಪರಿಶ್ರಮ ಅಂದ್ರು 25ಸಾವಿರ ದುಡ್ಡು ಖರ್ಚು ಮಾಡಬೇಕು…
ಮೊದಲು ಗದ್ದೆ ಉಳುಮೆ ಮಾಡ್ಸಿ… ನೀರ್ ಕಟ್ಟಿ ಹದ ಮಾಡಿ… ಭತ್ತದ ಸಸಿಗಳನ್ನ ನಾಟಿ ಮಾಡಿ… ವಾರ ವಾರಕ್ಕೂ ನೀರು ಕಟ್ಬೇಕು…. ಅವನು ಟೈಮಿಗೆ ಸರಿಯಾಗಿ ಊಟ ನೀರು ಕುಡಿತಾನೋ ಗೊತ್ತಿಲ್ಲ ಆದ್ರೆ ಬೆಳೆಗೆ ಮಾತ್ರ ಇನ್ಟೈಮ್ನಲ್ಲಿ ಮಾಡ್ಬೇಕು.. ನೀರಿಗಾಗಿ ಲಕ್ಷಾಂತರ ರುಪಾಯಿ ಖರ್ಚು ಮಾಡಿ ಬೋರ್ ವೆಲ್ ಹಾಕ್ಸಿರ್ಬೇಕು ..
ಅದೃಷ್ಟ ಚೆನ್ನಾಗಿದ್ರೆ ನೀರು ಬರುತ್ತೆ , ಇಲ್ಲಾ ಅಂದ್ರೆ ಅದೂ ಕೂಡ ಮಣ್ಣಪಾಲು.. 15ದಿನಕೊಮ್ಮೆಯಂತೆ ಗೊಬ್ಬರ ಹಾಕಿ… ಕಳೆ ಗಿಡಗಳು ಬರಬಾರದು ಅಂತಾ ದಿನ ಎಲ್ಲಾ ಔಷಧಿ ಹೊಡೆದು… ತಾಯಿ 9ತಿಂಗಳು ನಮ್ಮನ ಹೇಗೆ ಕಾಪಾಡಿದ್ಲೋ ಹಂಗೆ ಬೆಳೆನು ಕೂಡ ಕಾಯಬೇಕು..
ಫಸಲು ಬಿಟ್ಟಗಾ ಕುಯ್ಸಿ ಭತ್ತ ತೆಗೆದು ಅಕ್ಕಿ ಮಾಡ್ಸೋ ಅಷ್ಟ್ರಲ್ಲಿ ಒಂದ್ ರೌಂಡ್ ನರಕ ದರ್ಶನ ಆಗಿರುತ್ತೆ…ಆದ್ರೆ ಅವತ್ ಬಂದಿದ್ದ ಒಂದುಮಳೆ ಯಿಂದಾಗಿ ಇರೋ ಬರೋ ಗದ್ದೆ ಎಲ್ಲಾ ನೆಲ ಕಚ್ಚಿ ಭತ್ತದ ಕಾಳುಗಳು ಕೆಸರಲ್ಲಿ ಹೊರಳಾಡ್ತಿದ್ದೋ… ಕಷ್ಟ ಪಟ್ಟು 5 ತಿಂಗಳು ಮಗು ಥರ ಕಾಪಾಡ್ಕೊಂಡು ಬಂದಿದ್ದ ಫಸಲು ಅವತ್ತು ಮಣ್ಣು ಪಾಲಾಗಿದ್ದು ಮಾತ್ರ ಘೋರ ಕೃತ್ಯ…ಸೊಂಟದ ಎತ್ತರಕ್ಕೆ ಬೆಳೆದಿದ್ದ ಭತ್ತದ ಗಿಡಗಳು ನೆಲಸಮ ಆಗಿದ್ವು… ಇಷ್ಟು , ಕೇವಲ 15 ಎಕ್ರೆ ಮಾತಲ್ಲ !! ಅಲ್ಲಿ ಸುತ್ತಾ ಮುತ್ತಾ ಇರೋ 150ಕ್ಕೂ ಹೆಚ್ಚಿನ ರೈತರ ಪಾಡು ಕೂಡ ಇದೆ ಆಗಿತ್ತು.. ಸುದ್ದಿ ಮಾಡ್ತೀನಿ ಅಂತಾ ಹೋಗಿ ಸೈಲೆಂಟ್ ಹಾಗಿ ಬಂದೆ… ಎಲ್ಲಾ ಭತ್ತದ ಗದ್ದೆಗಳು ಕೂಡ ಇನ್ನೇನು ಎರಡೇ ದಿನದಲ್ಲಿ ಫಸಲು ಕಟಾವಿಗೆ ಬರಬೇಕು, ಅನ್ನೋ ಅಷ್ಟ್ರಲ್ಲಿ ಪ್ರಕೃತಿ ವಿಕೋಪಕ್ಕೆ ಮುಗ್ದ ರೈತ ಬಲಿಯಾಗಿದ್ದ….ಯಜಮಾನ ತಲೆ ಮೇಲೆ ಟವಲ್ ಸುತ್ಕೊಂಡು.. ಗಣೇಶ ಬೀಡಿ ಸೇದ್ಕೊಂಡು ಯೋಚನೆ ಮಾಡ್ಕೊಂಡು ಕುಂತಿದ್ರು…ಇದೇನಪ್ಪ ಮಳೆ ಇಂಗು ಬರುತ್ತಾ ಅಂತಾ ಅವತ್ತೆ ಗೊತ್ತಾಗಿದ್ದು…ಇದು ಕೇವಲ ಭತ್ತದ ಮಾತದ್ರೆ… ಇನ್ನು 500 ಅಡಿಕೆ ಮರಗಳ ಶ್ರಮ ಎಷ್ಟು ಅಂತಾ ಗೊತ್ತ.. ಫಸ್ಟ್ 4ವರ್ಷ school ಮಕ್ಕಳು ಥರ ಕಾಪಾಡ್ಬೇಕು..ನಾವೇ ಊಟ ಮಾಡ್ಸಿ time to time ನೀರು ಕುಡಿಸ್ಬೇಕು…ಅದಾದ್ಮೇಲೆನೆ ಪರಿಶ್ರಮಕ್ಕೆ ತಕ್ಕ ಫಲಸಿಗದು.. ಏನಿಲ್ಲಾ ಅಂದ್ರು 500ಅಡಿಕೆ ಮರದ ಬೆಳೆಗೆ 5-6 ಲಕ್ಷ ಸಂಪಾದನೆ ಆಗ್ತಿತ್ತು ಪ್ರತಿ ವರ್ಷಕ್ಕೇ ಹಾಗೆನೆ ಲಕ್ಷಾಂತರ ರುಪಾಯಿ ಖರ್ಚು ಕೂಡ ಮಾಡ್ಬೇಕಿತ್ತು… ಆದ್ರೆ ಅವತ್ತಿನ ವಿಧಿ ಆಟನೇ ಬೇರೆ ಆಗಿತ್ತು…
ಇವಿಷ್ಟು ನಮ್ ರೈತ ಪಡೋ ಪಾಡು ಇನ್ನೂ ಇಷ್ಟೆಲ್ಲಾ ಬೆಳೆಗಾಗಿ ಕೆಲವರು ಬೇರೆ ಕಡೆಯಿಂದ ಬ್ಯಾಂಕುಗಳಲ್ಲಿ ಸಾವಿರಾರು ರುಪಾಯಿ ಸಾಲ ಮಾಡಿರ್ತಾರೆ… ಆದ್ರೆ ಅವರು ಬೆಳೆಯೋ ಬೆಳೆಗೆ ಸರಿಯಾದ ಬೆಂಬಲ ಬೆಲೆನೇ ಸಿಕ್ಕಿರಲ್ಲ…ಇಷ್ಟೆಲ್ಲಾ ತಾಪತ್ರಾಯ ಇದ್ರು ಮನೆ , ಮಕ್ಕಳು, ಸಂಸಾರದ ದೊಡ್ಡ ಜವಾಬ್ದಾರಿ ಹೆಗಲ ಮೇಲಿರುತ್ತೆ.. ಕೊನೆಗೊಮ್ಮೆ ಬ್ಯಾಂಕ್ ಅಧಿಕಾರಿಗಳು, ಸಾಲ ಕೊಟ್ಟವರ ಹಣ ತೀರಿಸಕ್ಕೇ ಆಗ್ದೆ ಅವರ ಕಿರುಕೊಳದಿಂದ ಸಾವೇ ಗತಿ ಅಂತಾ ಹೊಲದಲ್ಲೇ ವಿಷ ತಗೊಂಡೋ , ಮರಕ್ಕೆ ನೇಣು ಬಿಗಿದುಕೊಂಡೋ ತನ್ನ ಪ್ರಾಣಾನ ಬಿಟ್ಟೀರ್ತಾನೆ…ನಾನ್ ಇಷ್ಟಲ್ಲಾ ನಿಮ್ಗೆ ಯಾಕೆ ಹೇಳ್ತಿದ್ದೀನಿ ಗೊತ್ತಾ… ???ಈ ದೊಡ್ಡ ದೊಡ್ಡ ಸಿಟಿ ಗಳ ಕಡೆ ಕೆಲವರು ಒಪ್ಪತ್ತಿನಾ ಊಟಕ್ಕೂ ಪಡಬಾರದ ಕಷ್ಟನೇ ಪಡ್ತಾರೆ…ಆದ್ರೆ ಇವಾಗಿನ forward people’s ಇದಾರಲ್ಲ ಹಾಳಾದ ಹೋಟೇಲ್ಗೆ ಊಟಕ್ಕೆ ಅಂತಾ ಹೋಗ್ತಾರೆ..ಅಲ್ಲು ಕೂಡ ತಿರ್ಕೆ ಶೋಕಿ ಮಾಡ್ತಾರೆ.. ಚಾಲುಕ್ಯ ಹೋಟೆಲ್ಗೆ ಕಾಫಿ ಕುಡಿಯಕ್ ಹೋದ್ವಿ , ಪಕ್ಕದ್ table ನಲ್ಲಿ ಎರಡು ಜೋಡಿ ಬಂದ್ರು ಕೂತ್ರು.. ಸೌತ್ ಇಂಡಿಯನ್ ಮಿಲ್ಸ್ ನ order ಮಾಡಿ ಹರಟೆ ಹೊಡಿತಿದ್ರು.. ಊಟ ಬಂದ್ಮೇಲೆ ಅರ್ಧಂಬರ್ದ ತಿಂದು ಊಟದ್ ಮೇಲೆನೆ ಕೈ ತೊಳೆದು ಕೊಂಡು ಹೋದ್ರು.. ಅವರಿಗೆ ಅನ್ನದ ಬೆಲೆ ಗೊತ್ತಾಗಿಲ್ಲ , ಯಾರೋ ದುಡ್ಡು ಕೊಡ್ತಾರೆ , ಇನ್ಯಾರೋ ತಿಂದು ಶೋಕಿ ಮಾಡ್ತಾರೆ…
ಕಷ್ಟ ಪಟ್ಟು ದುಡಿದು ತಿನ್ನೋವರ್ಗು ಅವರಿಗೆ ತುತ್ತಿನ ಬೆಲೆ ತಿಳಿಯಲ್ಲ ..
ಅದು ರಾತ್ರಿ 11ಹಾಗಿತ್ತು ಬುಲ್ ಟೆಂಪಲ್ ರೋಡ್ ಹೋಟೆಲ್ ಎಲ್ಲಾ close ಹಾಗಿತ್ತು ಇನ್ನೇನ್ ಮಾಡದು ಅಂತಾ ಅಲ್ಲೆ ಇದ್ದ Domino’s pizza ಸೆಂಟರ್ ಗೆ ಹೋದೆ ಅಲ್ಲೂ ಅಷ್ಟೇ ರೀ ಬೇಕಾ ಬಿಟ್ಟಿ ತಿಂದು ಮಿಕ್ಕಿದ್ನೆಲ್ಲಾ plate ನಲ್ಲೇ ಬಿಡ್ತಿದ್ರು … ಪಾಪ ಅಲ್ಲೆ ಆಚೆಕಡೆ ಒಬ್ಬ ಅನಾಥ ಹುಡ್ಗ ಅದನ್ನೆ ನೋಡ್ಕೊಂಡು ನಿಂತಿದ್ದ .. ಆ ಸರ್ವರ್ ಬಂದು ಮಿಕ್ಕಿರದ್ನೆ ಪಾಕೇಟ್ ಕಟ್ಟಿ ಆ ಹುಡುಗನಿಗೆ ಕೊಟ್ಟ… ನಾನ್ ಕೇಳ್ದಾಗ daily ಇದೇ ಸಾರ್ ಇವರ್ಗಳು ಬರ್ತಾರೆ, ಮಿಕ್ಕಿದ್ನೆ ತಿನ್ಕೊಂಡು ಖುಷಿ ಪಡ್ತಾರೆ ಅಂದ…
ಎಷ್ಟೋ ಜನ ಇವತ್ತಿಗೂ ಕೂಡ, ವಾಸ ಮಾಡಕ್ಕೆ ಮನೆ ಇಲ್ದಲೆ, ತಿನ್ನಕ್ಕೆ ಅನ್ನಾ ಇಲ್ದಲನೆ ಸಾಯ್ತಿದ್ದಾರೆ…
ಇಷ್ಟೇ ನೋಡಿ ಬದುಕು ಹಲ್ಲು ಇದ್ದೋನ್ಗೆ ಕಡ್ಲೆ ಇಲ್ಲಾ, ಕಡ್ಲೆ ಇದ್ದೋನ್ಗೆ ಹಲ್ಲೆ ಇಲ್ಲಾ..
ದುಡ್ಡು ಇದ್ದೋನು ಪೂರ್ತಿ ತಿನ್ನಲ್ಲ..
ದುಡ್ ಇಲ್ದೋನು ಸಿಕ್ಕಿದ್ನೆ ಬಿಡಲ್ಲ..
ಇನ್ನು ಕೆಲ ಜನ ಮಕ್ಕಳ ಮದುವೇನ ಧಾಮ್ ಧೂಮ್ ಅಂತಾ ಜೋರಾಗ ಮಾಡ್ತಾರೆ ಹತ್ತಾರು variety ಊಟ ಮಾಡ್ಸಿರ್ತಾರೆ… ಮಿಕ್ಕಿದ್ ಊಟನ corporation ಗಾಡೀಲಿ ಕಸದ ರಾಶಿಲಿ ಹಾಕಿ ಕೈ ಸೀಟ್ಕೋತಾರೆ..
ಅದೇ ಕಸದಲ್ಲಿ ಹಾಕೋ ಬದ್ಲು ಯಾವುದಾದ್ರು ಅನಾಥ ಆಶ್ರಮಕ್ಕೋ ಇಲ್ಲಾ ಹಸಿದು ಬೀದಿನಲ್ಲಿ ಬಂದೋರ್ಗೆ ಕೊಟ್ರೆ ಅನ್ನದಾನಕ್ಕಿಂತ ಶ್ರೇಷ್ಠದಾನ ಮತ್ತೊಂದು ಇಲ್ಲಾ ಅನ್ನೋ ಭಾವನೆ ನಂದು…
ಇನ್ನೂ ಕೆಲವರು ರಾತ್ರಿ ಮಾಡಿದ್ದ ಅನ್ನ ಮಿಕ್ಕಿದ್ರೆ ಬೆಳಗ್ಗೆ ತಿನ್ನದೆ ಬಿಸಾಕ್ತಾರೆ , ನಾನ್ ತಂಗಳು ತಿನ್ನಲ್ಲ ಅಂತ ಧಿಮಾಕ್ ತೋರುಸ್ತಾರೆ…. ಕೆಲವರು ಮನೆ ಮುಂದೆ ಭಿಕ್ಷುಕ ಬಂದ್ರೆ ಅವನ ಪಾತ್ರೆಗೆ ಹಾಕ್ತರೆ , ಕೆಲವರು ಬೀದಿ ಹಸುಗಳು ತಿನ್ತವೆ ಅಂತಾ ಮುಸರೆಗೆ ಹಾಕ್ತಾರೆ..
ಇಲ್ಲಾ ಅಂದ್ರೆ ನಮ್ ಥರ ಮೋಸ್ಟ್ ವಾಂಟೆಡ್ ಬ್ಯಾಚುಲರ್ಸ್ ಆದ್ರೆ ಬೆಳಗ್ಗೆಗೆ ಅದೇ ಒಗ್ಗರಣೆ ರೈಸ್ …ಇವತ್ತು ರೈತ ಒಂದು ತುತ್ತು ಅನ್ನ ಬೆಳೆದು ನಮಗೆ ನೀಡಬೇಕು ಅಂದ್ರೆ ಅವನು ಪಡುವ ಕಷ್ಟ ಅಷ್ಟಿಷ್ಟಲ್ಲ..so ಎಲ್ಲರೂ ದಯಮಾಡಿ ತಿನ್ನುವ ಅಗಳನ್ನು waste ಮಾಡ್ಬೇಡಿ… ಒಂದೊಂದು ಕಾಳಿನಲ್ಲೂ ನೂರಾರು ಮಣ್ಣಿನ ಮಕ್ಕಳ ಬೆವರು ಹನಿ ಇರುತ್ತೆ…
ಹಾಗಾಗಿ ರೈತನ ಪರಿಶ್ರಮ ಕ್ಕೆ ಬೆಲೆ ನೀಡಿ .. ಇವತ್ತು ಕಾವೇರಿ ಇರ್ಬೋದು , ಮಹದಾಯಿ ಇರ್ಬೋದು … ಆ ತಾಯಿನ ನೆಚ್ಕೊಂಡು ಎಷ್ಟೋ ಕುಟುಂಬ ಗಳು ಜೀವನ ಸಾಗಿಸ್ತಿವೆ , ಕೃಷಿನೇ ಜೀವನ ಅನ್ಕೊಂಡು ಹೊದ್ದಾಡ್ತಿವೆ. ನೀವೇನು ಇವತ್ IT BT ನಲ್ಲಿ ಟೈಮ್ – ಟೈಮ್ ಗೆ ತಿನ್ಕೊಂಡು , ಕುಡ್ಕೊನಮಡು ಲೈಪ್ ಲೀಡ್ ಮಾಡ್ತಿದ್ದೀರ ಇದ್ಕೆಲ್ಲಾ ನಮ್ ರೈತರೆ ಕಾರಣ..
ಹಾಗಾಗಿ ತಾವೆಲ್ಲ
ಅನ್ನದಾತನ ಬೆಂಬಲಕ್ಕೆ ಸದಾ ಮುನ್ನುಗ್ಗಿ ಬನ್ನಿ…
ಅವನ ಸಂಕಷ್ಟಕ್ಕೆ ಸದಾ ಕೈ ಜೋಡಿಸಿ .
ಜೈ ಜವಾನ್ ಜೈ ಕಿಸಾನ್
ಸುದ್ದಿದಿನ.ಕಾಂ|ವಾಟ್ಸಾಪ್|9986715401

ದಿನದ ಸುದ್ದಿ
ರಸ್ತೆ ವಿಸ್ತೀರ್ಣ ವಿರೋಧಿಸಿ ಎಸ್ಓಜಿ ಕಾಲೋನಿ ನಿವಾಸಿಗಳ ಪ್ರತಿಭಟನೆ
ದಾವಣಗೆರೆ: ಎಸ್ಓಜಿ ಕಾಲೊನಿಯ ಮುಖ್ಯ ರಸ್ತೆಯ ವಿಸ್ತೀರ್ಣ ಕಡಿತಗೊಳಿಸಿ ನಿರಾಶ್ರಿತರಿಗೆ ನಿವೇಶನ ಹಂಚಿಕೆ ಮಾಡಿರುವ ಆದೇಶವನ್ನು ಕೂಡಲೇ ರದ್ದುಪಡಿಸುವುದರೊಂದಿಗೆ, ನೀರಿನ ಕಂದಾಯ ಪಾವತಿಗೆ 5 ವರ್ಷದ ಬಾಕಿಯನ್ನು ಮಾತ್ರ ಪರಿಗಣಿಸಬೇಕು ಎಂದು ಒತ್ತಾಯಿಸಿ ಎಸ್ಒಜಿ ಕಾಲೊನಿಯ ನಿವಾಸಿಗಳು ಮಹಾನಗರ ಪಾಲಿಕೆ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.
ಜಯದೇವ ವೃತ್ತದಲ್ಲಿ ಸೇರಿದ ಎಸ್ಒಜಿ ಕಾಲೊನಿಯ ನಿವಾಸಿಗಳು ಇಲ್ಲಿಂದಲೇ ಮೆರವಣಿಗೆ ಹೊರಟು ಮಹಾನಗರ ಪಾಲಿಕೆಗೆ ತೆರಳಿ ಮನವಿ ಸಲ್ಲಿಸಿದರು.
ನಗರದ ರವೀಂದ್ರನಾಥ ಬಡಾವಣೆಯಲ್ಲಿ ಇತ್ತೀಚೆಗೆ ತೆರವುಗೊಳಿಸಿದ 36 ಕುಟುಂಬಗಳಿಗೆ ನಿರಾಶ್ರಿತರ ಕೇಂದ್ರದಲ್ಲಿ ಆಶ್ರಯ ಕಲ್ಪಿಸಲಾಗಿತ್ತು. ಈ ಕುಟುಂಬಗಳಿಗೆ ಇತ್ತೀಚೆಗೆ ಎಸ್ಒಜಿ ಕಾಲೊನಿಯ ಮುಖ್ಯ ರಸ್ತೆ ಬದಿಯಲ್ಲಿ ನಿವೇಶನ ಒದಗಿಸಲಾಗಿದೆ. ಮುಖ್ಯರಸ್ತೆಯ ವಿಸ್ತೀರ್ಣವನ್ನು ಕಡಿತಗೊಳಿಸಿ ನಿರಾಶ್ರಿತರಿಗೆ ನಿವೇಶನ ಸೌಲಭ್ಯ ಕಲ್ಪಿಸಿದ್ದು ಖಂಡನೀಯ ಎಂದು ಪ್ರತಿಭಟನಕಾರರು ಆಕ್ರೋಶ ವ್ಯಕ್ತಪಡಿಸಿದರು.
ವಾಹನ ದಟ್ಟಣೆ ಸಾಧ್ಯತೆಯನ್ನು ಗಮನಿಸಿ 40 ಅಡಿ ಮುಖ್ಯ ರಸ್ತೆಯನ್ನು ನಿರ್ಮಿಸಲಾಗಿತ್ತು. ಇದೇ ರಸ್ತೆಯ ಬದಿಯಲ್ಲಿ ಒಳಚರಂಡಿ, ಗ್ಯಾಸ್ ಕೊಳವೆ ಮಾರ್ಗ ಹಾಗೂ ಕುಡಿಯುವ ನೀರಿನ ಪೈಪ್ಲೈನ್ ಅಳವಡಿಸಲಾಗಿದೆ. ರಸ್ತೆ ವಿಸ್ತೀರ್ಣವನ್ನು 25 ಅಡಿಗೆ ಕಡಿತಗೊಳಿಸಿ ಪ್ರತಿ ನಿರಾಶ್ರಿತ ಕುಟುಂಬಕ್ಕೆ 15X40 ಅಡಿಯ ನಿವೇಶನ ಹಂಚಿಕೆ ಮಾಡಲಾಗಿದೆ. ಇದರಿಂದ ಕಾಲೊನಿಯ ನಿವಾಸಿಗಳಿಗೆ ತೊಂದರೆ ಆಗಲಿದೆ ಎಂದು ಎಸ್ಓಜಿ ಕಾಲೊನಿ ನಾಗರಿಕ ಹಿತರಕ್ಷಣಾ ಸಮಿತಿ ಅಧ್ಯಕ್ಷ ಡಿ. ಕಲ್ಲೇಶಪ್ಪ ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲಾಧಿಕಾರಿಯಾಗಿದ್ದ ಕೆ.ಶಿವರಾಂ ಅವರು ಎಸ್ಒಜಿ ಕಾಲೊನಿ ನಿರ್ಮಿಸಿದ್ದರು. ಶಾಸಕರಾಗಿದ್ದ ಶಾಮನೂರು ಶಿವಶಂಕರಪ್ಪ ಅವರು ನೀರಿನ ಕಂದಾಯಕ್ಕೆ ವಿನಾಯಿತಿ ನೀಡಿದ್ದರು. ಆದರೆ, ಇತ್ತೀಚೆಗೆ ಮಹಾನಗರ ಪಾಲಿಕೆ 25 ವರ್ಷಗಳ ನೀರಿನ ಕಂದಾಯ ಪಾವತಿಸುವಂತೆ ನೋಟಿಸ್ ನೀಡಿದೆ. ಇದು ನಾಗರಿಕರಲ್ಲಿ ಆತಂಕ ಮೂಡಿಸಿದೆ ಎಂದು ಪ್ರತಿಭಟನಕಾರರು ಅಸಮಾಧಾನ ಹೊರಹಾಕಿದರು.

ಅಂತರಂಗ
ಭೀಮಾ ಕೋರೆಗಾಂವ ; ಮಹರ್ ಸೈನಿಕರ ವೀರಗಾಥೆ
~ ಡಾ. ಸುಜಾತಾ ಚಲವಾದಿ
ಭಾರತದ ಇತಿಹಾಸದಲ್ಲಿ ಅನೇಕ ಕ್ರೂರ ವ್ಯಂಗ್ಯಗಳಿವೆ. ಅವುಗಳಲ್ಲಿ ಪೇಶ್ವಾಶಾಹಿ ಆಡಳಿತವು ಒಂದು. ಅವರ ಆಡಳಿತ ಸಂದರ್ಭದಲ್ಲಿ ಅಸ್ಪೃಶ್ಯರು ತಮ್ಮ ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಬದುಕುವ ಸ್ಥಿತಿಯಿತ್ತು. ಜಾತಿ ವ್ಯವಸ್ಥೆ ವಿಜೃಂಭಿಸುತ್ತಿದ್ದ ಕಾಲವದು.
ದೌರ್ಜನ್ಯ, ಅನ್ಯಾಯಕ್ಕೆ ಒಳಗಾಗಿ ಸದಾ ನೋವಿನ ಬದುಕು ಅಸ್ಪೃಶ್ಯರದ್ದಾಗಿತ್ತು. ಕಿತ್ತುತಿನ್ನುವ ಬಡತನ, ಹಸಿವು, ದಾರಿದ್ರö್ಯ, ಅಶಿಕ್ಷಿತರಾದ ಅಸ್ಪಶ್ಯರು ಅನ್ಯಾಯದ ವಿರುದ್ಧ ಹೋರಾಟ ಮಾಡುವುದು ಕನಸಿನ ಮಾತಾಗಿತ್ತು. ಇವರ ಬಲಹೀನತೆಯನ್ನು ಬಳಸಿಕೊಂಡು ‘ಪ್ರಾಣಿಗಿಂತ ಕೀಳಾಗಿ’ ನಡೆಸಿಕೊಳ್ಳುತ್ತಿದ್ದ ಪೇಶ್ವಾ ಆಡಳಿತವು ಶೂದ್ರರ, ನಿಮ್ನರ ಮೇಲೆ ತಮ್ಮ ಅಟ್ಟಹಾಸವನ್ನು ಮೆರೆಯುತ್ತಿದ್ದರು.
ಅನ್ಯಾಯಕ್ಕೆ ಒಳಗಾದ ಕೆಳಜಾತಿಯ ಮಹಾರರು, ಮಾಂಗರು, ಚಮ್ಮಾರರು ಮತ್ತು ಮಹಿಳೆಯರು ತತ್ತರಿಸಿ ಹೋಗಿದ್ದರು. ಮಹಾರಾಷ್ಟçದ ಪೇಶ್ವಾಶಾಹಿ ಕಾಲಘಟ್ಟದಲ್ಲಿ ನಡೆದ ಭೀಮಾ ಕೋರೆಗಾಂವ ಚಳವಳಿಯನ್ನು ಬರಹದ ರೂಪದಲ್ಲಿ ಬಾಬಾಸಾಹೇಬ ಅಂಬೇಡ್ಕರ್ ನಮ್ಮ ಮುಂದೆ ಇರಿಸಿದ್ದಾರೆ.
1ನೇ ಜನವರಿ 1818ರಲ್ಲಿ ಅಂದರೆ ಇಂದಿಗೆ 207 ವರ್ಷಗಳ ಹಿಂದೆ 28,000 ಸಾವಿರ ಸಂಖ್ಯೆಯ ಪೇಶ್ವಾಸೈನ್ಯದ ಎದುರು ಐದುನೂರು ಮಹಾರ ಜನಾಂಗದವರು ಹೋರಾಡಿ ವಿಜಯ ಸಾಧಿಸಿದ ದಿನ ಕೋರೆಗಾಂವ್ ಯುದ್ಧ ‘ನ್ಯಾಯದ ಯುದ್ಧ’, ಇಡೀ ಪರಿಶಿಷ್ಟ ಜಾತಿಯವರಿಗೆ ಸ್ವಾಭಿಮಾನದ ಸಂಕೇತವಾಗಿ ಪರಿಣಮಿಸಿದೆ.
ಈ ದಿನವನ್ನು ಯಾವ ಮಹಾರರೂ ಮರೆಯುವ ಹಾಗಿಲ್ಲ. ಬಾಬಾಸಾಹೇಬರು ಈ ದಿನದ ಸ್ಮರಣೆಯನ್ನು “ದಲಿತರ ಪರಾಕ್ರಮ ದಿನ”ವೆಂದು ತಿಳಿದು ಕೋರೆಗಾಂವನಲ್ಲಿ ನಿರ್ಮಿಸಿದ ವಿಜಯಸ್ತಂಭ ಸ್ಮಾರಕಕ್ಕೆ ವಂದಿಸಲು ಪ್ರತೀ ವರ್ಷ ಜನವರಿ 1 ರಂದು ತಪ್ಪದೇ ಹೋಗಿ ಬರುತ್ತಿದ್ದರು. ಜಾತಿಪದ್ಧತಿಯೇ ಪ್ರಧಾನವಾದ ಕಾಲದಲ್ಲಿ ಅಸ್ಪಶ್ಯರ ಸ್ಥಿತಿ ತುಂಬಾ ಹದಗೆಟ್ಟು ಹೋಗಿತ್ತು. ಮೇಲು-ಕೀಳು ಎಂಬ ಭಾವನೆ ಏರುಮುಖದಲ್ಲಿದ್ದ ಕಾಲ.
ಮನುಸ್ಮೃತಿಯನ್ನು ಚಾಚೂ ತಪ್ಪದೇ ಮುನ್ನಡೆಸಿಕೊಂಡು ಬರುವ ಮೇಲ್ವರ್ಗದವರು ಅಸ್ಪೃ್ಪಶ್ಯರನ್ನು ಕಂಡರೆ ಅನೇಕ ಬಗೆಯ ಶಿಕ್ಷೆಗೆ ಒಳಗು ಮಾಡುತ್ತಿದ್ದರು. ಅಸ್ಪೃಶ್ಯರನ್ನು ಕಂಡರೆ ಮೈಲಿಗೆಯಾಗುತ್ತದೆ ಎನ್ನುವ ಮನಸ್ಥಿತಿ ಅವರದ್ದು, ಅಸ್ಪೃಶ್ಯ ರಸ್ತೆಗೆ ಇಳಿಯಕೂಡದು, ಒಳ್ಳೆ ಬಟ್ಟೆ ಹಾಕಿಕೊಳ್ಳುವ ಹಾಗಿಲ್ಲ, ಒಳ್ಳೆಯ ಆಹಾರ ಸೇವನೆಯಂತೂ ಕನಸಿನ ಮಾತಾಗಿತ್ತು. ಊರ ಪ್ರವೇಶಕ್ಕೆ ಸಮಯ ನಿಗದಿ ಮಾಡಿದ್ದರು.
ಸೂರ್ಯೋದಯ, ಸೂರ್ಯಾಸ್ತದ ಸಂದರ್ಭದಲ್ಲಿ ಅಸ್ಪೃಶ್ಯ ವ್ಯಕ್ತಿ ಊರಲ್ಲಿ ಬರುವಂತಿರಲಿಲ್ಲ. ಸೂರ್ಯ ನೆತ್ತಿಯ ಮೇಲಿದ್ದಾಗ ಮಾತ್ರ ಊರ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಬೀದಿಯಲ್ಲಿ ಹೋಗಬೇಕಾದರೆ ಕೊರಳಿಗೆ ಮಣ್ಣಿನ ಸಣ್ಣ ಕುಡಿಕೆಯನ್ನು ಹಾಕಿಕೊಂಡು ಹೋಗಬೇಕು, ಉಗುಳುವ ಸಂದರ್ಭ ಬಂದರೆ, ಅದೇ ಕುಡಿಕೆಯಲ್ಲಿಯೇ ಉಗುಳಿಕೊಳ್ಳಬೇಕು. ಕಾರಣ ರಸ್ತೆಯಲ್ಲಿ ಅಸ್ಪೃಶ್ಯರು ಉಗುಳಿದರೆ ಅವನ ಹೇಸಿಗೆಯನ್ನು ಸವರ್ಣೀಯರು ತುಳಿಯಬಾರದು.
ತುಳಿದರೆ ಮೈಲಿಗೆಯಾಗುತ್ತಿತ್ತು. ರಸ್ತೆಯಲ್ಲಿ ನಡೆಯುವಾಗ ಆತನ ನೆರಳು ಅವನ ಕಾಲಲ್ಲಿಯೇ ಉಳಿಯುವ ಹಾಗೇ ಮಧ್ಯಾಹ್ನದ ನೆತ್ತಿ ಸುಡುವ ಬಿಸಿಲಿನಲ್ಲಿ ಮಾತ್ರ ಊರಲ್ಲಿ ಬರಬೇಕು. ನಡೆದುಕೊಂಡು ಹೋಗುವಾಗ ಹೆಜ್ಜೆ ಗುರುತುಗಳು ಕಾಣದಿರಲಿ ಎಂದು ಬೆನ್ನಿಗೆ ಮುಳ್ಳಿನ ಪೊರಕೆಯನ್ನು ಕಟ್ಟಿಕೊಂಡು ಸಾಗಬೇಕಾದ ಸ್ಥಿತಿ ಅವರದಾಗಿತ್ತು. ಹಾಗೇ ಅಸ್ಪೃಶ್ಯನೊಬ್ಬ ಬರುವುದನ್ನು ‘ಸಂಭೋಳಿ ಸಂಭೋಳಿ ಮಾಯ್ ಬಾಪ್ ಹೊಲೆಯ ಬರುತ್ತಿದ್ದೇನೆ’ ಅಂತಾ ಕೂಗಿ ಹೇಳಬೇಕು. ಇಲ್ಲ, ಕೈಯಲ್ಲಿ ಗೆಜ್ಜೆಕಟ್ಟಿದ ಕೋಲನ್ನು ಹಿಡಿದುಕೊಂಡು ನೆಲಕ್ಕೆ ಕುಕ್ಕಿಸಿಕೊಂಡು ಸದ್ದು ಮಾಡುತ್ತ ಹೋಗಬೇಕು.
ಇದಲ್ಲದೆ ಅಸ್ಪೃಶ್ಯ ಊರ ಪ್ರವೇಶ ಮಾಡಿದಾಗ ಯಾರಾದರೂ ಎದುರು ಬಂದರೆ ಸುಡುವ ಬಿಸಿಲಲ್ಲಿ ಓಡಿ ಹೋಗಿ ಭೂಮಿಯನ್ನು ಅಪ್ಪಿಕೊಳ್ಳಬೇಕು. ಸವರ್ಣೀಯರಿಗೆ ಅವನ ನೆರಳೂ ಸ್ಪರ್ಶ ಮಾಡುವಂಗಿರಲಿಲ್ಲ. ಇಂತಹ ಅಮಾನವೀಯ ನಿಯಮಗಳನ್ನು ಹೊರಡಿಸಿದ ಕಾಲಘಟ್ಟವದು. ಇಷ್ಟೆಲ್ಲಾ ನಿಯಮಗಳನ್ನು ಅಸ್ಪಶ್ಯರ ಮೇಲೆ ಹೇರಿದರೂ ಕೂಡಾ ಮಹಾರ್ ಸೈನಿಕರು ತಮ್ಮ ಪ್ರಾಣವನ್ನು ಲೆಕ್ಕಿಸದೆ ಮೊಗಲರ ಬೃಹತ್ ಸೈನ್ಯದ ವಿರುದ್ಧ ಹೋರಾಡಿ ಪೇಶ್ವೆಗಳ ಪರವಾಗಿ ಯುದ್ಧಕ್ಕೆ ಸನ್ನದ್ಧರಾಗಿದ್ದರು. ಮಹಾರ್ ಸೈನಿಕರ ಶೌರ್ಯದಿಂದಲೇ ಪೇಶ್ವೆಗಳ ಆಡಳಿತ ಸುಗಮವಾಗಿ ನಡೆಯುತ್ತಿತ್ತು. ಆದರೆ ಪೇಶ್ವಗಳು ಮತ್ತು ಸವರ್ಣೀಯರು ಮಹಾರ್ಸೈನಿಕರನ್ನು ತುಚ್ಛವಾಗಿ ನಡೆಸಿಕೊಳ್ಳುತ್ತಿದ್ದರು.
1758 ರಲ್ಲಿ ಬ್ರಿಟಿಷರು ಈಸ್ಟ್ ಇಂಡಿಯಾ ಕಂಪನಿಯನ್ನು ಸ್ಥಾಪಿಸಿದ ನಂತರ ಮಹಾರ್ ಜನರನ್ನು ಸೈನಿಕರಾಗಿ ನೇಮಕ ಮಾಡಿಕೊಳ್ಳಲು ಪ್ರಾರಂಭಿಸಿದರು. ಭಾರತೀಯ ಮಹಾರ್ ಸೈನಿಕರಿಗೆ ಶಿಕ್ಷಣದ ಅವಕಾಶವನ್ನು ಮಾಡಿಕೊಟ್ಟಿದ್ದರ ಪರಿಣಾಮ ಸ್ವಲ್ಪ ಮಟ್ಟಿಗೆ ತಿಳಿವಳಿಕೆ ಮೂಡಲು ಸಹಾಯವಾಯಿತು. ತಮ್ಮ ಹಕ್ಕು-ಬಾಧ್ಯತೆಗಳನ್ನು ತಿಳಿಯುವಂತಾಯಿತು. ಬ್ರಿಟಿಷರಲ್ಲಿ ಇರದ ಜಾತಿವ್ಯವಸ್ಥೆ ನಮ್ಮ ದೇಶದಲ್ಲಿ ಕಂಡ ಮಹಾರ್ ಸೈನಿಕರು ಬ್ರಿಟಿಷರಿಗೆ ತಮ್ಮ ಬೆಂಬಲವನ್ನು ನೀಡುವಂತಾಯಿತು. ಅವಮಾನ, ಅನ್ಯಾಯ, ದೌರ್ಜನ್ಯಕ್ಕೆ ಒಳಗಾದ ಮಹಾರ್ ಜನಾಂಗದವರು, ಈ ಎಲ್ಲದರಿಂದ ಮುಕ್ತಿ ಕಾಣಲು ಬ್ರಿಟಿಷರ ಪರವಾಗಿ ಯುದ್ಧಗಳಲ್ಲಿ ಹೋರಾಡಲು ಪ್ರಾರಂಭಿಸಿದರು.
ಎರಡನೆಯ ಬಾಜೀರಾವ್ ಪೇಶ್ವೆಯ ರಾಜ್ಯಾಡಳಿತವಿದ್ದ ಸಂದರ್ಭದಲ್ಲಿ 31 ನೇ ಡಿಸೆಂಬರ್ 1817 ರ ರಾತ್ರಿ ಬ್ರಿಟಿಷರ ಸೇನಾಪತಿ ಕ್ಯಾಪ್ಟನ್ ಫ್ರಾನ್ಸಿಸ್ ಸ್ಟಂಡನ್ ಮುಂದಾಳತ್ವದಲ್ಲಿ ಸೇನೆ ಪೇಶ್ವೆಗಳ ಮೇಲೆ ದಾಳಿ ಮಾಡಲು ಸಿದ್ಧಗೊಂಡಿತು. ಇದನ್ನು ತಿಳಿದ ಮಹಾರ್ ಬೆಟಾಲಿಯನ್ನಿನ ನಾಯಕ ಸಿದ್ಧನಾಕ ಮಾರುವೇಷದಲ್ಲಿ ಪೇಶ್ವೆಯನ್ನು ಕಾಣುತ್ತಾನೆ. ಆಗ ಪೇಶ್ವೆ ಮಹಾರ್ ಬೆಟಾಲಿಯನ್ನಿನ ನಾಯಕ ಸಿದ್ಧನಾಕನನ್ನು ಒಳಗೆ ಬಿಟ್ಟವನನ್ನು ಕೊಲ್ಲಿಸುತ್ತಾನೆ. ಇಂಗ್ಲಿಷರು ನಿಮ್ಮ ಮೇಲೆ ಯುದ್ಧ ಮಾಡುವರಿದ್ದಾರೆ, ನೀವು ನಮ್ಮ ಹಕ್ಕುಗಳನ್ನು ನಮಗೆ ನೀಡುವುದಾದರೆ ನಿಮ್ಮ ಪರವಾಗಿ ಅವರ ವಿರುದ್ಧ ನಾವು ಹೋರಾಡುತ್ತೇವೆ ಎನ್ನುತ್ತಾನೆ. “ನಿಮ್ಮ ಹಕ್ಕುಗಳು ಯಾವವು? ನೀನು ಇನ್ನೊಂದು ಘಳಿಗೆ ಇಲ್ಲಿ ನಿಂತರೆ ನಿನ್ನ ಶಿರಚ್ಛೇದನ ಮಾಡುತ್ತೇನೆ” ಎಂದು ಗದರುತ್ತಾನೆ. ಸಿದ್ಧನಾಕ ಮರಳಿ ಬಂದು ಅಲ್ಲಿ ನಡೆದ ಎಲ್ಲ ವಿವರ ಸಂಗಾತಿಗಳಿಗೆ ನೀಡುತ್ತಾನೆ. ಅಂತಿಮವಾಗಿ ಇಂಗ್ಲಿಷರ ಪರವಾಗಿ ಮಹಾರ್ ಬೆಟಾಲಿಯನ್ ಹೋರಾಡಲು ಸಿದ್ಧವಾಗುತ್ತದೆ. ಪೇಶ್ವೆಗಳ ಸೈನ್ಯ ಕೋರೆಗಾಂವ್ ಪ್ರದೇಶದ ಭೀಮಾನದಿಯ ಬಲದಂಡೆಯ ಮೇಲೆ ಯುದ್ಧಕ್ಕೆ ಸಜ್ಜಾಗಿ ಸುತ್ತುವರೆದು ನಿಂತುಕೊಂಡಿತು. ಮಹಾರ್ ರೆಜಿಮೆಂಟ್ ಸೈನ್ಯ ಬ್ರಿಟಿಷರ ಪರವಾಗಿ ಯುದ್ಧಕ್ಕೆ ಸಜ್ಜಾಗಿದ್ದರು.
ಪೇಶ್ವೆಗಳ ಸೇನೆಯು 25,000 ಕುದುರೆ ಸವಾರರು ಮತ್ತು 3,000 ಕ್ಕಿಂತಲೂ ಹೆಚ್ಚು ಸಂಖ್ಯೆಯಲ್ಲಿದ್ದ ಯೋಧರಿಂದ ತುಂಬಿ ತುಳುಕುತ್ತಿತ್ತು. ಎರಡೂ ಸೇನೆಗಳ ನಡುವೆ ಘನಘೋರ ಯುದ್ಧ ಪ್ರಾರಂಭವಾಗುತ್ತದೆ. ಬೃಹತ್ ಸೇನೆಯ ವಿರುದ್ಧ ಬ್ರಿಟಿಷ್ ಸೇನಾಪತಿ ಕ್ಯಾಪ್ಟನ್ ಪ್ರಾನ್ಸಿಸ್ ಸ್ಟಂಡನ್ ತಾನು ಸೋಲುತ್ತೇನೆ ಎಂದುಕೊAಡು ನಿರಾಶೆಯನ್ನು ತಳೆದಿದ್ದ. ಆದರೂ ಎದುರಾಳಿಯ ಜೊತೆ ಯುದ್ಧದಲ್ಲಿ ಮುನ್ನುಗ್ಗುವುದು ಆತನ ವಿಚಾರವಾಗಿತ್ತು. “ಮಹಾರ್ ಸೈನಿಕರು ವೀರಾವೇಶದಿಂದ ಹೋರಾಡಿ ಪೇಶ್ವೆಗಳು ಪಲಾಯನ ಗೈಯ್ಯಲು ಕಾರಣರಾದರು. ಈ ಯುದ್ಧದಲ್ಲಿ ಎರಡನೆಯ ಬಾಜಿರಾವ್ ಪೇಶ್ವೆಯು ಪಲಾಯನ ಮಾಡುವುದರಲ್ಲಿ ಮೊದಲಿಗ”ನೆಂದು ಬಾಬಾಸಾಹೇಬರು ತಮ್ಮ ಬರಹದಲ್ಲಿ ದಾಖಲಿಸಿದ್ದಾರೆ.
ಬೆಳಿಗ್ಗೆ ಆರು ಗಂಟೆಗೆ ಪ್ರಾರಂಭವಾದ ಯುದ್ಧ ರಾತ್ರಿ ಆರು ಗಂಟೆಗೆ ಮುಕ್ತಾಯಗೊಳ್ಳುತ್ತದೆ. ಸಂಖ್ಯೆಯಲ್ಲಿ ಅಲ್ಪವಾಗಿದ್ದರೂ ಅತ್ಯಂತ ಕೆಚ್ಚಿನಿಂದ ಕಲಿತನ ಪ್ರದರ್ಶಿಸಿದ ಮಹಾರ್ ಯೋಧರು, ತಮ್ಮ ಮೇಲೆ ಅಮಾನವೀಯವಾದ ಅಸ್ಪೃಶ್ಯತೆಯನ್ನು ಹೇರಿದ್ದ ಪೇಶ್ವೆ ಆಡಳಿತವನ್ನು ಯುದ್ಧದಲ್ಲಿ ಮಣ್ಣು ಮುಕ್ಕಿಸಿದರು. ಮಹಾರ್ ಸೈನಿಕರ ಅಭೂತಪೂರ್ವ ಕಲಿತನದ ಕಾರಣದಿಂದಲೇ ಬ್ರಿಟಿಷರು ಕೋರೆಗಾಂವ್ ಯುದ್ಧವನ್ನು ಗೆಲ್ಲಲು ಸಾಧ್ಯವಾಯಿತು. ಗೆಲುವಿಗೆ ಕಾರಣರಾದ, ಕದನದಲ್ಲಿ ಹುತಾತ್ಮರಾದ ಯೋಧರನ್ನು ಸದಾಕಾಲ ಸ್ಮರಿಸುವಂತೆ ಕೋರೆಗಾಂವನ ಭೀಮಾನದಿ ತೀರದ ಪ್ರಶಸ್ತವಾದ ಮೈದಾನ, ಕದನದ ಕಿಡಿ ಮೊಟ್ಟ ಮೊದಲು ಹೊತ್ತಿದ ಸ್ಥಳದಲ್ಲಿ ಬ್ರಿಟಿಷರು ಸ್ಮರಣ ಸ್ತಂಭವನ್ನು ಸ್ಥಾಪಿಸಿದರು.
26 ನೆಯ ಮಾರ್ಚ್ 1821 ರಲ್ಲಿ ಈ ಭವ್ಯ ವಿಜಯಸ್ತಂಭಕ್ಕೆ ಅಡಿಗಲ್ಲು ಹಾಕಿದಾಗ ಬಂದೂಕು ಮತ್ತು ತೋಪುಗಳ ಮೂಲಕ ಹುತಾತ್ಮರಿಗೆ ರಾಜಮರ್ಯಾದೆಯ ಶ್ರದ್ಧಾಂಜಲಿ ಸಲ್ಲಿಸಲಾಯಿತು. 63 ಅಡಿ ಎತ್ತರ ಇರುವ ಈ ವಿಜಯಸ್ತಂಭವು 1822 ರಲ್ಲಿ ಪೂರ್ಣವಾಗಿ ನಿರ್ಮಾಣವಾಯಿತು. ಮೊದಲಿಗೆ ಈ ಸ್ತಂಭವನ್ನು ಮಹಾರ್ ಸ್ತಂಭವೆAದು ಕರೆಯಲಾಗುತ್ತಿತ್ತು. ನಂತರದಲ್ಲಿ ವಿಜಯಸ್ತಂಭವೆಂದು ಹೆಸರಿಸಲಾಯಿತು.
ವಿಜಯಸ್ತಂಭದ ಮೇಲೆ 20 ಮಹಾರ್ ಸೈನಿಕರ ಹೆಸರುಗಳನ್ನು ಕೆತ್ತಿಸಲಾಗಿದೆ. ಪ್ರತಿವರ್ಷ ಜನೆವರಿ 1 ರಂದು ಬಾಬಾಸಾಹೇಬರು ಕೋರೆಗಾಂವ್ ವಿಜಯಸ್ತಂಭಕ್ಕೆ ಭೇಟಿ ಕೊಟ್ಟು ನಮನವನ್ನು ಸಲ್ಲಿಸುತ್ತಿದ್ದರು. ಇಂತಹ ಐತಿಹಾಸಿಕ ವಿಜಯದ ಸಂಕೇತವಾದ ಕೋರೆಗಾಂವ ಚಳವಳಿಯನ್ನು ಮತ್ತೆ ಮತ್ತೆ ನೆನೆಯುವುದು ಇಂದಿನ ಅನಿವಾರ್ಯವೂ ಹೌದು. ಏಕೆಂದರೆ ಬಾಬಾಸಾಹೇಬರೇ ಹೇಳಿದ ಹಾಗೆ “ಇತಿಹಾಸವನ್ನು ತಿಳಿಯದವನು ಇತಿಹಾಸವನ್ನು ಸೃಷ್ಟಿಸಲು ಸಾಧ್ಯವಾಗದು” ಎಂದಿದ್ದಲ್ಲದೆ ದಲಿತರಾರೂ ಕುರಿಗಳಲ್ಲ, ಅವರು ಹುಲಿಗಳು’ ಎಂದು ಹೇಳಿರುವುದನ್ನು ಮತ್ತೆ ಮತ್ತೆ ಮನನಿಸಬೇಕಾಗಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂತರಂಗ
ಕುವೆಂಪು ಅವರಿಗೆ ಲಂಕೇಶರ ಎಂಟು ಪ್ರಶ್ನೆಗಳು
ಕುವೆಂಪು ಅವರನ್ನು ನಾನು ಅಂದು ನೋಡಿದ್ದು ಎರಡನೆ ಸಲ. ನಾನು ನೋಡಲು ಬಂದಿರುವ ವಿಷಯ ತಿಳಿದು ಕೈಯಲ್ಲಿ ನನ್ನ ಪ್ರಶ್ನೆ ಮತ್ತು ತಮ್ಮ ಉತ್ತರಗಳಿಂದ ಕೂಡಿದ ಟೈಪ್ ಮಾಡಿದ ಹಾಳೆಗಳನ್ನು ಹಿಡಿದುಕೊಂಡು ಬಂದರು. ನಾನು ಮತ್ತು ಮಿತ್ರ ನೆಲಮನೆ ದೇವೇಗೌಡರು ನಮಸ್ಕರಿಸಿದೊಡನೆ ಕೂತು ಪ್ರಶ್ನೆ ಮತ್ತು ಉತ್ತರಗಳನ್ನು ಓದುತ್ತ ವಿವರಿಸತೊಡಗಿದರು.
ತಮಗೆ ಯಾವುದೇ ಜಾತಿಯ ಬಗ್ಗೆ ಒಣ ಅಭಿಮಾನವಾಗಲಿ ಅನಗತ್ಯ ಪೂರ್ವಗ್ರಹವಾಗಲಿ ಇಲ್ಲವೆಂದು ಸ್ಪಷ್ಟಪಡಿಸಿದರು. ಅವರ ಮಾತಿನಲ್ಲಿ ತಮ್ಮ ಉತ್ತರಗಳು ಜನಕ್ಕೆಲ್ಲಿ ತಿಳಿಯುವುದಿಲ್ಲವೋ ಎಂಬ ಆತಂಕವಿದ್ದಂತಿತ್ತು. ಆದ್ದರಿಂದ ತಮ್ಮ ಕೃತಿಗಳಿಂದ ಉದಾಹರಣೆ ಎತ್ತಿಕೊಂಡು ಮಾತಾಡಿದರು. ನಾನು ಅವೆಲ್ಲವನ್ನೂ ಓದಿದ್ದೆನಾದ್ದರಿಂದ ಆ ವಿವರಣೆ ಅನಗತ್ಯವಾಗಿತ್ತು. ಆದರೆ ಕುವೆಂಪು ಅವರಿಗೆ ಅದಮ್ಯ ಉತ್ಸಾಹವಿದೆ; ಈ ಸಮಾಜದ ಕೆಡಕುಗಳ ಬಗ್ಗೆ ಕೋಪವಿದೆ. ತಾವು ಎಷ್ಟೇ ಬರೆದರೂ ಮಾತಾಡಿದರೂ ಈ ಜನತೆ ಸರಿಹೋಗುತ್ತದೋ ಇಲ್ಲವೋ ಎಂಬ ಸಂದೇಹವಿದೆ. ಆದ್ದರಿಂದಲೇ ಹಲವೊಮ್ಮೆ ವ್ಯಗ್ರವಾಗಿ ಮಾತಾಡುತ್ತಾರೆ. ಅವರು ನನ್ನ ಪ್ರಶ್ನೆಗಳಿಗೆ ಉತ್ತರ ಹೇಳುತ್ತ ಹೊಸ ಸಾಹಿತ್ಯದ ಬಗ್ಗೆ ಮಾತಾಡಿರುವುದನ್ನೂ ಈ ಅರ್ಥದಲ್ಲೇ ತೆಗೆದುಕೊಳ್ಳಬೇಕೆಂದು ಕಾಣುತ್ತದೆ.
ಕಿರಿಯ ಲೇಖಕರು ಯಾರಿಗೂ ಅರ್ಥವಾಗದ ಗೊಂದಲಗಳಲ್ಲಿ ಸಿಲುಕಿಕೊಂಡು ತಮ್ಮನ್ನು ತಾವು ಮೋಸಗೊಳಿಸಿಕೊಳ್ಳುವ ಬದಲು ಸಮಾಜಕ್ಕೆ ತಮ್ಮನ್ನು ತಾವು ತೆರೆದುಕೊಳ್ಳಬೇಕೆಂದೂ ಸಮಾಜದ ಅನಿಷ್ಟಗಳನ್ನು ಸರಿಪಡಿಸಬೇಕೆಂದೂ ಅವರು ಸೂಚಿಸುತ್ತಾರೆ. ಇದು ಕಿರಿಯ ಬರಹಗಾರರು ಅನುಭವ ಪಡೆಯುವ ಬಗ್ಗೆ ಉತ್ತಮ ಹಿತವಚನ. ಇನ್ನೊಂದು ಬಗೆಯಲ್ಲಿ ಇದು ನೀತಿ ಪಾಠ. ಇವೆರಡೂ ಕುವೆಂಪು ಮಾತುಗಳಲ್ಲಿರುವುದು ಎಂಥವರಿಗೂ ಕಂಡು ಬರುತ್ತದೆ.
ಆವೊತ್ತು ಮಾತಾಡುವ ಮೂಡಲ್ಲಿದ್ದರು ಕುವೆಂಪು ನಾವಿಬ್ಬರೂ ಕೆಲಸದ ಮೂಡಿನಲ್ಲಿದ್ದೆವು. ಅವರು ತಮ್ಮ ‘ರಾಮಾಯಣ ದರ್ಶನಂ’ನಿಂದ ಓದಿ ತೋರಿಸುವುದಾಗಿ ಸೂಚಿಸಿ ಬೇರೊಂದು ವಿಷಯ ಎತ್ತಿಕೊಂಡು ವಿವರಿಸತೊಡಗಿದರು. ‘ಪಾಂಚಾಲಿ’ ವಿವಿಧ ತೊಡಕುಗಳಲ್ಲಿ ಸಿಲುಕಿದ್ದ ನಾನು ಮತ್ತು ದೇವೇಗೌಡರು ನಮಸ್ಕಾರ ಹೇಳಿ ಹೊರಬಿದ್ದೆವು.
ಕುವೆಂಪು ಒಂದು ಸಂಸ್ಥೆ ಅಥವಾ ದೇವತೆಯಾಗಿ ಹುಂಬರ ಮನಸ್ಸಿನಲ್ಲಿ ಬೆಳೆಯುತ್ತಿದ್ದ ವೇಳೆಗೆ ಸರಿಯಾಗಿ ಅವರು ಮೈಕೊಡವಿಕೊಂಡು ಹೊರಬಂದು ಮನುಷ್ಯರೂ ವಿಚಾರವಾದಿಗಳೂ ಆಗಿ ಮಾತಾಡುತ್ತಿದ್ದುದು ನನಗೆ ಸಂತಸ ಉಂಟುಮಾಡಿತ್ತು.
——————————————————————-
ಲಂಕೇಶ್: ಸಾಮಾನ್ಯವಾಗಿ ಸಾರ್ವಜನಿಕ ಸಭೆಗಳಲ್ಲಿ ಮತ್ತು ವಾದವಿವಾದಗಳಲ್ಲಿ ಭಾಗವಹಿಸದ ತಾವು ಈಚೆಗೆ ಹೀಗೆ ಭಾಗವಹಿಸುವ ಮೂಲಕ ತಮ್ಮ ವಿಶಿಷ್ಟ ಬಗೆಯ ಕೀರ್ತಿಗೆ ಕಳಂಕ ತಂದುಕೊಳ್ಳುತ್ತಿರಬಹುದೇ ಎಂಬ ಅಳುಕು ತಮ್ಮ ಅಭಿಮಾನಿಗಳಲ್ಲಿ ಕೆಲವರಿಗಿದೆ. ಈ ಬಗ್ಗೆ ತಮ್ಮ ಅಭಿಪ್ರಾಯವೇನು?
ಕುವೆಂಪು: ಕೀರ್ತಿಗಿಂತಲೂ ನನಗೆ ಹೆಚ್ಚು ಪ್ರಿಯವಾದದ್ದು ಸತ್ಯ. ಸತ್ಯ ಹೇಳಿದರೆ ಕಲುಷಿತವಾಗುವ ಕೀರ್ತಿ ಭ್ರಷ್ಟಾಚಾರದ ವಸ್ತುವಾಗುತ್ತದೆ. ಅಲ್ಲದೆ ‘ಕೀರ್ತಿಶನಿ’ ಎಂಬ ನನ್ನ ಸಾನೆಟ್ಟಿನಲ್ಲಿ ಅನೇಕ ವರ್ಷಗಳ ಹಿಂದೆಯೇ ನಾನು ಅದನ್ನು ‘ತೊಲಗಾಚೆ’ ಎಂದು ತೊಲಗಿಸಿದ್ದೇನೆ. ಆದರೂ, ಶ್ರೀ ಎ.ಆರ್. ಕೃಷ್ಣಶಾಸ್ತ್ರಿಗಳು ಹೇಳಿದಂತೆ, ಶನಿ ಒಮ್ಮೆ ಬೆನ್ನು ಹತ್ತಿದರೆ ಬಿಡುವುದಿಲ್ಲವಂತೆ. ನನ್ನ ಮತ್ತೊಂದು ಸಾನೆಟ್ ‘ಯಶೋಲಕ್ಷ್ಮಿ’ ಈ ವಿಚಾರವಾಗಿ ನನ್ನ ಭಾವನೆ ಏನು ಎಂಬುದನ್ನು ತಿಳಿಸುತ್ತದೆ. ಕೀರ್ತಿ ಕಲುಷಿತವಾಗುವುದಿರಲಿ ಅಪಕೀರ್ತಿಯೆ ಬಂದರು ಸತ್ಯ ಹೇಳುವುದನ್ನು ಬಿಡುವುದಿಲ್ಲ.
ಲಂಕೇಶ್: ಕೆಟ್ಟಿರಲಿ, ಕೆಡದಿರಲಿ ಭಾರತೀಯ ಸಂಸ್ಕೃತಿಯೆಂದರೆ ವೈದಿಕ ಸಂಸ್ಕೃತಿಯೇ ಎಂಬ ಅಭಿಪ್ರಾಯದ ಬಗ್ಗೆ ನಿಮಗೇನೆನ್ನಿಸುತ್ತದೆ?
ಕುವೆಂಪು: ಇದೊಂದು ತಪ್ಪು ಅಭಿಪ್ರಾಯ. ಭಾರತೀಯ ಸಂಸ್ಕೃತಿ ಬರಿಯ ವೈದಿಕವಲ್ಲ. ಅವೈದಿಕವೂ ಅದರ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿದೆ. ಬೌದ್ಧ, ಜೈನಗಳಲ್ಲದೆ ನ್ಯಾಯ, ವೈಶ್ಲೇಷಿಕ, ಸಾಂಖ್ಯ, ಯೋಗ ದರ್ಶನಗಳೂ ವೇದದ ಪರಮ ಪ್ರಾಮಾಣ್ಯವನ್ನು ಅವಿಚಾರಕವಾಗಿ ಒಪ್ಪಬೇಕು ಅನ್ನುವುದಿಲ್ಲ. ನನ್ನದು ವಿಶ್ವಸಂಸ್ಕೃತಿ. ಅಭಾರತೀಯವೂ ಅದರಲ್ಲಿ ಸೇರಿದೆ. ಸನಾತನವೂ (ಪುರಾತನ ಅಲ್ಲ.) ಶಾಶ್ವತವೂ ಆಧ್ಯಾತ್ಮಿಕವೂ ವಿಚಾರ ಮತ್ತು ವಿಜ್ಞಾನಗಳಿಗೆ ಅವಿರುದ್ಧವೂ ಆಗಿರುವ ಸತ್ಯ ಎಲ್ಲಿಯೇ ಇರಲಿ ಅದನ್ನು ನಾನು ಸ್ವೀಕರಿಸಿದ್ದೇನೆ.
ಲಂಕೇಶ್: ಬ್ರಾಹ್ಮಣ ಜಾತಿಯಲ್ಲಿ ಹಲವು ಒಳಪಂಗಡಗಳಿದ್ದರೂ ಕೇವಲ ಒಂದು ಪಂಗಡವನ್ನು ನೀವು ಟೀಕಿಸಿದ್ದು ಕೇವಲ ಉದಾಹರಣೆಗೋ ಅಥವಾ ಆ ಪಂಗಡ ತೀರಾ ಮಲಿನಗೊಂಡಿದೆ ಎಂಬ ಕಾರಣಕ್ಕೋ?
ಕುವೆಂಪು: ನನ್ನ ಭಾಷಣ ಬ್ರಾಹ್ಮಣರಿಗಾಗಲಿ, ಮಾಧ್ವರಿಗಾಗಲೀ ನಿರ್ದೆಶಿಸಿದ್ದಲ್ಲ; ಒಕ್ಕೂಟದವರಿಗಾಗಿ ಮಾತ್ರ. ಜಗತ್ತಿನ ಪುರೋಹಿತಶಾಹಿ ಅವೈಚಾರಿಕ ಮತ್ತು ಅವೈಜ್ಞಾನಿಕ ಮೂಢ ಭಾವನೆಗಳ ಆಶ್ರಯದಲ್ಲಿ ಶ್ರೀ ಸಾಮಾನ್ಯರನ್ನು ಹೇಗೆ ವಂಚಿಸುತ್ತಾ ಬಂದಿದೆ ಎನ್ನುವುದನ್ನು ಕುರಿತು ವಿಚಾರವಾದಿಗಳಾಗಿ ಬಾಳನ್ನು ನಡೆಸಬೇಕು ಎನ್ನುವ ತರುಣರಿಗೆ ತಿಳಿಸುತ್ತಿದ್ದೆ. ಪ್ರಾಸಂಗಿಕವಾಗಿ, ನಾನು ಕೆಲವೇ ದಿನಗಳ ಹಿಂದೆ ಆ ಪುಸ್ತಕಗಳನ್ನು ಓದುತ್ತಿದ್ದು ಸಂಗತಿ ಮನಸ್ಸಿನಲ್ಲಿ ಹೊಚ್ಚ ಹೊಸದಾಗಿ ಇದ್ದುದರಿಂದ ಮಧ್ವ-ಜಯತೀರ್ಥರ ನಿದರ್ಶನಗಳನ್ನು ಕೊಟ್ಟೆನಷ್ಟೆ; ಆಮೇಲೆ ಗುಲ್ಲೆದ್ದ ಮತಭ್ರಾಂತರ ಗಲಾಟೆಯಿಂದಲೇ ಗೊತ್ತಾದದ್ದು ನಾನು ಎಂತಹ ಹೇಸಿಗೆಯ ಹೊಂಡಕ್ಕೆ ಕಲ್ಲು ಎಸೆದಿದ್ದೇನೆ ಎಂದು.
ಲಂಕೇಶ್: ತಮ್ಮ ಕಾವ್ಯದ ಮತ್ತು ಮುಖ್ಯ ಕಥಾಸಾಹಿತ್ಯದ (fiction) ಕೇಂದ್ರ ನಿಲುವು ವೈದಿಕ, ಆದರ್ಶಮಯ, ಅವಾಸ್ತವ ಎಂದು ಹಲವರು ಟೀಕಿಸುತ್ತಾರೆ. ಇದಕ್ಕೆ ತಮ್ಮ ಉತ್ತರವೇನು?
ಕುವೆಂಪು: ಅವರ ತಲೆ; ನನ್ನದು ವಿಶ್ವಪ್ರಜ್ಞೆ. ನಾನು ಭಾರತೀಯನಾಗಿ ಅದರಲ್ಲೂ ಕನ್ನಡಿಗನಾಗಿ ಹುಟ್ಟಿದ್ದರಿಂದ ಆ ಸಂಸ್ಕೃತಿಯ ಮತ್ತು ಆ ಭಾಷೆಯ ಪರಿಭಾಷೆಯನ್ನು ಅನಿವಾರ್ಯವಾಗಿ ಉಪಯೋಗಿಸುತ್ತೇನಷ್ಟೆ. ಸತ್ಯ ವೈದಿಕವಾಗಿ ಪ್ರಕಟವಾದ ಮಾತ್ರಕ್ಕೆ ಅಸತ್ಯವಾಗುವುದಿಲ್ಲ. ಆದರ್ಶಮಯವಾದ ಮಾತ್ರಕ್ಕೆ ಅವಾಸ್ತವವಾಗುವುದಿಲ್ಲ. ನನ್ನ ಭಾಷಣದ ಉದ್ದೇಶವೆ ಒಕ್ಕೂಟದ ಹುಡುಗರನ್ನು ಅಂತಹ ತಪ್ಪುದಾರಿಗೆ ಹೋಗದಿರುವಂತೆ ತಡೆಯಬೇಕು ಎಂಬುದಾಗಿತ್ತು. ಚಿನ್ನದ ಒಡವೆಯನ್ನು ಅಕ್ಕಸಾಲಿ ಮಾಡಿದ ಮಾತ್ರಕ್ಕೆ ಚಿನ್ನ ಅಸತ್ಯವಾಗುತ್ತದೆಯೇ? ಗ್ರಾವಿಟೇಶನ್ ಸಿದ್ಧಾಂತವನ್ನು ನ್ಯೂಟನ್ ಕಂಡುಹಿಡಿದ ಮಾತ್ರಕ್ಕೆ ಅದು ಕ್ರೈಸ್ತವಾಗುತ್ತದೆಯೇ? ವೇದದ ಋಷಿ ಸನಾತನ ಶಾಶ್ವತ ಸತ್ಯವನ್ನು ಸಾಕ್ಷಾತ್ಕರಿಸಿಕೊಂಡು ಅದಕ್ಕೆ ‘ಬ್ರಹ್ಮನ್’ ಎಂದು ಹೆಸರು ಕೊಟ್ಟ ಮಾತ್ರಕ್ಕೆ ಆ ಸತ್ಯ ಆ ಋಷಿಯ ಸೃಷ್ಠಿಯಾಗುತ್ತದೆಯೇ? ಆ ಸತ್ಯ ಋಷಿಗೆ ಪೂರ್ವದಲ್ಲಿಯೇ ಇದ್ದುದು; ಆ ಋಷಿ ಮಾತ್ರವಲ್ಲ ಮನುಷ್ಯರೆಲ್ಲ ಮುಗಿದ ಮೇಲೆಯೂ ಆ ಸತ್ಯಕ್ಕೆ ಚ್ಯುತಿ ಬರುವುದಿಲ್ಲ. ಗುರುತ್ವಾಕರ್ಷಣ ಶಕ್ತಿ ನ್ಯೂಟನ್ನಿಗೆ ಪೂರ್ವದಲ್ಲಿಯೂ ಇತ್ತು, ಮನುಷ್ಯ ಕುಲವೇ ನಾಶವಾದ ಮೇಲೆಯೂ ಇರುತ್ತದೆ.
ಅಂತಹ ಸತ್ಯವನ್ನು ನಿತ್ಯ, ಸನಾತನ ಶಾಶ್ವತ ಎನ್ನುತ್ತೇವೆ. ಬೇರೆ ಬೇರೆ ದೇಶಗಳು, ಬೇರೆ ಬೇರೆ ಭಾಷೆಗಳೂ ಬೇರೆ ಬೇರೆ ಹೆಸರು ಕೊಡಬಹುದಷ್ಟೆ. ನನ್ನ ಜೀವನ ದರ್ಶನ ಅಂತಹ ಅಚ್ಯುತ ಸತ್ಯದ ಮೇಲೆ ನಿಂತಿದೆ. ನನ್ನ ಸಾಹಿತ್ಯವೂ ಅದನ್ನೆ ಅಭಿವ್ಯಕ್ತಗೊಳಿಸುತ್ತದೆ. ಅದನ್ನು ‘ನಿಮ್ಮಲ್ಲಿ’ ಕೆಲವರು ‘ವೈದಿಕ’ ಎಂದು ನಿಂದಿಸುವಂತೆ ‘ಅವರಲ್ಲಿ’ ಕೆಲವರು ‘ಅವೈದಿಕ’ ಎಂದೂ ತಿರಸ್ಕರಿಸುತ್ತಾರೆ. ಆದರೆ ನನ್ನ ಸಾಹಿತ್ಯ ಉದ್ಭವಿಸುವುದು ಬದುಕಿನಿಂದ, ಬದುಕಿಗಾಗಿ; ಮತ್ತು ಬದುಕಿನಾಚೆಯ ಬದುಕಿಗಾಗಿ.
ಲಂಕೇಶ್: ಈಚೆಗೊಬ್ಬರು ತಮ್ಮ ಸಾಮಾಜಿಕ ವಿಮರ್ಶೆಯನ್ನು ಕುರಿತು ಹೇಳುತ್ತಾ ‘ಕುವೆಂಪು ಅವರ ಮಾತಿನಲ್ಲಿ ಬ್ರಾಹ್ಮಣ ವಿರೋಧಿ ಧ್ವನಿ ಕೇಳಿ ಬರುತ್ತಿದ್ದರೆ ಅದಕ್ಕೆ ಕಾರಣವನ್ನು ಅವರ ವೈಯಕ್ತಿಕ ಅನುಭವದಲ್ಲಿ ಹುಡುಕಬೇಕು’ ಎಂದಿದ್ದಾರೆ. ಇದಕ್ಕೆ ತಮ್ಮ ಪ್ರತಿಕ್ರಿಯೆ?
ಕುವೆಂಪು: ಶುದ್ಧ ಅಪಾರ್ಥ! ಮೊದಲನೆಯದಾಗಿ ಅದು ಬ್ರಾಹ್ಮಣ ವಿರೋಧಿ ಧ್ವನಿಯಲ್ಲ. ಅಂದರೆ ಬೌದ್ಧ, ಜೈನ, ಕ್ರೈಸ್ತ, ಇಸ್ಲಾಂ ಮತ್ತು ಲಿಂಗಾಯಿತ ಪುರೋಹಿತಶಾಹಿಯನ್ನೂ ಒಳಗೊಂಡಿದೆ. ನನ್ನ ಪುರೋಹಿತಶಾಹಿ ಖಂಡನೆಗೆ ಕಾರಣವನ್ನು ನನಗಿರಬಹುದಾದ ವೈಯಕ್ತಿಕ ಅನುಭವದಲ್ಲಿ ಹುಡುಕುವುದು ಅತ್ಯಂತ ಹಾಸ್ಯಾಸ್ಪದ. ನನ್ನ ಮೂವತ್ತು ನಲವತ್ತು ವರ್ಷದ ಹಿಂದಿನ ಬರಹವನ್ನು ಯಾರೋ ಒಬ್ಬರು ಅಂದು ಟೀಕಿಸಿದುದಕ್ಕಾಗಿ ಇಂದು ನಾನು ನಲವತ್ತು ವರ್ಷಗಳ ಮೇಲೆ ರೊಚ್ಚು ತೀರಿಸಿಕೊಳ್ಳುವುದಕ್ಕೆ ಹಾಗೆ ಮಾತನಾಡಿದೆನೆಂದು ಹೇಳುವುದು ನನ್ನ ವ್ಯಕ್ತಿತ್ವಕ್ಕೆ ಅತ್ಯಂತ ‘ಅಲ್ಪತನ’ ಆರೋಪಿಸಿದಂತಾಗುತ್ತದೆ. ನಾನು ಅಷ್ಟು ‘ಸಣ್ಣ’ವನಲ್ಲ. ನಲವತ್ತು ಐವತ್ತು ವರ್ಷಗಳಿಂದಲೂ ನಾನು ಗದ್ಯ, ಪದ್ಯ, ನಾಟಕ ಎಲ್ಲದರಲ್ಲಿಯೂ ಹೇಳುತ್ತಾ ಬಂದಿರುವುದನ್ನೆ ಮೊನ್ನೆಯು ಹೇಳಿದ್ದೇನೆ ಅಷ್ಟೆ. ಆದರೆ ಇವರು ಯಾರೂ ನೀವೂ ಸೇರಿ, ನನ್ನ ಬರಹಗಳನ್ನು ಅಷ್ಟು ಆಸ್ಥೆಯಿಂದ ಓದಿಯೇ ಇಲ್ಲ ಎಂಬುದು ನನ್ನ ಗುಮಾನಿ. ಇಡೀ ರಾಮಾಯಣದರ್ಶನವೆ ನನ್ನ ‘ದರ್ಶನ’ಕ್ಕೆ ಒಡ್ಡಿದ ಮಹಾ ಪ್ರತಿಮೆಯಾಗಿದೆ. (ನಿಮ್ಮ ಎರಡನೆಯ ಪ್ರಶ್ನೆಗೆ ಕೊಟ್ಟಿರುವ ಉತ್ತರವನ್ನೂ ನೋಡಬಹುದು.)
ಲಂಕೇಶ್: ‘ಬ್ರಾಹ್ಮಣ’ ‘ಶೂದ್ರ’ ‘ಮಣ್ಣಿನ ವಾಸನೆ’ ಇತ್ಯಾದಿ ಮಾತು ಬಹಳವಾಗಿ ಕೇಳಿಬರುತ್ತಿರುವ ಈ ಕಾಲದಲ್ಲಿ ಬ್ರಾಹ್ಮಣ, ಶೂದ್ರರ ಭಾಷೆ, ಅನುಭವ ದೃಷ್ಟಿಯನ್ನು ಕುರಿತ ತಮ್ಮ ವಿಶ್ಲೇಷಣೆ ಏನು?
ಕುವೆಂಪು: ಈ ಮಾತುಗಳೆಲ್ಲ ಮತ್ತೆ ಪುರೋಹಿತಶಾಹಿಯ ಪಿತೂರಿಯ ಟಂಕಸಾಲೆಯ ನಾಣ್ಯಗಳೆ. ನಿಮ್ಮನ್ನು ದಿಕ್ಕು ತಪ್ಪಿಸಿ ಬದುಕಿನ ಋಜುಮಾರ್ಗದಿಂದ ಕಟಂಕಿತ ಮಾರ್ಗಕ್ಕೆ ತಳ್ಳುವ ಉಪಾಯದಿಂದಲೆ ಅವರು ಅವನ್ನು ಹುಟ್ಟಿಸಿದ್ದಾರೆ. ನೀವೂ ಹಿಂದಿನಂತೆಯೇ ಇಂದು ಬೆಪ್ಪುಗಳಾಗಿ ಅದಕ್ಕೆ ವಶರಾಗಿ, ಜನರ ಬದುಕನ್ನು ಮತಮೌಢ್ಯದಿಂದ ಪಾರು ಮಾಡಿ ಅವರನ್ನು ವೈಚಾರಿಕ ಬುದ್ಧಿ ಮತ್ತು ವೈಜ್ಞಾನಿಕ ದೃಷ್ಟಿ ಸಂಪನ್ನರಾಗಿ ಪರಿವರ್ತಿಸಿ ಅವರ ಮನಸ್ಸು ಮತ್ತು ಹೃದಯಗಳನ್ನು ಬೆಳಗುವ, ಅವರ ಸೋತ ಹೃದಯಗಳನ್ನು ಹುರಿದುಂಬಿಸುವ, ಮತ್ತು ವರ್ಣ, ಜಾತಿ ಭೇದಭಾವನೆಗಳನ್ನೆಲ್ಲ ಕಸದ ಬುಟ್ಟಿಗೆ ತೂರಿ ಅವರನ್ನು ಸಮಾನತಾವಾದಿಗಳನ್ನಾಗಿ ಪರಿವರ್ತಿಸುವ ಸಾಹಿತ್ಯ ಸೃಷ್ಟಿ ಮಾಡುವ ಬದಲು, ಗುಂಪುಗಾರಿಕೆಗಲ್ಲದೆ ಮತ್ತೆ ಯಾರಿಗೂ ಬೇಡದ ಮತ್ತು ಯಾರಿಗೂ ಅರ್ಥವಾಗದ ‘ನವ್ಯ’ ನಾಮಕ ವಿಕಾರ ಸೃಷ್ಟಿಗೆ ಮರುಳಾಗಿ ಹೋಗಿದ್ದೀರಿ. ಅಂತಹ ಕೃತಕ ಅನುಕರಣೀಯ ಪಂಥಗಳನ್ನೆಲ್ಲ ನಿಮ್ಮ ಹೃದಯದಿಂದ ಕಿತ್ತೊಗೆದು, ನಿಮ್ಮವರ ಬದುಕನ್ನು ನೇರವಾಗಿ ನೋಡಿ ಅದರಿಂದ ಉದ್ಭವಿಸುವ ಸಮಸ್ಯೆಗಳನ್ನು ಅರ್ಥ ಮಾಡಿಕೊಂಡು ಅವರನ್ನು ಮೇಲಕ್ಕೆತ್ತುವ ಧೀರಭಾವಗಳನ್ನೂ ಕ್ರಿಯಾಶೀಲ ಆದರ್ಶಗಳನ್ನೂ ನಿಮ್ಮ ಬರವಣಿಗೆಗಳಲ್ಲಿ ನೀಡಬೇಕಾಗಿರುವುದು ಸದ್ಯದ ನಿಮ್ಮ ಆದ್ಯ ಕರ್ತವ್ಯ. ಪುರೋಹಿತಶಾಹಿಯ ಮೆಚ್ಚುಗೆಗೂ ಹೊಗಳಿಕೆಗೂ ಹಾತೊರೆದು ಬಾಯಿ ಬಿಟ್ಟು ನಿಮ್ಮ ಪೌರುಷ ತೇಜಸ್ಸುಗಳಿಗೆ ಅಪಮಾನ ಮಡಿಕೊಳ್ಳುವುದನ್ನು ಒಡನೆಯೇ ನಿಲ್ಲಿಸಿಬಿಡಿ. (ಮಾನಸ ಗಂಗೋತ್ರಿಯಲ್ಲಿ ಏರ್ಪಡಿಸಿದ್ದ ಲೇಖಕರ ಗೋಷ್ಠಿಯನ್ನು ಉದ್ಘಾಟಿಸುತ್ತಾ ನಾನು ಮಾಡಿದ ಭಾಷಣವನ್ನು ಗಮನವಿಟ್ಟು ಓದಿ ನೋಡಿದರೆ ನನ್ನ ಅಭಿಪ್ರಾಯಗಳು ಸ್ಪಷ್ಟಗೊಳ್ಳುತ್ತವೆ.)
ಲಂಕೇಶ್: ಕನ್ನಡ ಸಾಹಿತಿಗಳು ಬಹುಕಾಲದಿಂದ ಈ ನಾಡ ಹೆಸರಿನ ಬದಲಾವಣೆ, ಕನ್ನಡ ಮಾಧ್ಯಮ ಕುರಿತು ಮಾತನ್ನಾಡುತಿದ್ದರೂ ಕೇವಲ ಹೆಸರಿನ ಬದಲಾವಣೆ ಮಾತ್ರ ಆಗಿ ಮಾಧ್ಯಮದ ಪ್ರಶ್ನೆ ಹಾಗೇ ಉಳಿದಿದೆ. ಇದು ಸಾಹಿತಿಯ ಪ್ರಭಾವದ ದೌರ್ಬಲ್ಯ ತೋರುತ್ತದೆಯೆ?
ಕುವೆಂಪು: ಹಾಗೇನಿಲ್ಲ, ಈಗಾಗಲೆ ತಕ್ಕಷ್ಟು ಕಾರ್ಯ ನಡೆದಿದೆ. ನಡೆಯುತ್ತಲೂ ಇದೆ. ಜನತೆ, ಸರಕಾರ, ಸಾಹಿತ್ಯ ಪರಿಷತ್ತು ಮತ್ತು ವಿಶ್ವವಿದ್ಯಾಲಯಗಳು ಎಲ್ಲವೂ ಕನ್ನಡ ಮಾಧ್ಯಮ ತತ್ವವನೊಪ್ಪಿ ಕ್ರಿಯಾಶೀಲವಾಗಿ ಮುಂದುವರೆಯುತ್ತಿವೆ. ಅದು ಪೂರ್ತಿ ಕೈಗೂಡಲು ತುಸು ಸಮಯ ಬೇಕಾಗಬಹುದು ಅಷ್ಟೆ.
ಲಂಕೇಶ್: ಈ ನಾಡ ತರುಣರಿಗೆ ತಮ್ಮ ಹಿತವಚನವೇನು?
ಕುವೆಂಪು: ನನ್ನ ಸಾಹಿತ್ಯದಲ್ಲಿ- ಕತೆ, ಕಾದಂಬರಿ, ಭಾವಗೀತೆ, ಕಾವ್ಯ, ಮಹಾಕಾವ್ಯ, ಜೀವನ ಚರಿತ್ರೆ, ಭಾಷಣ, ವಿಮರ್ಶೆ ಇತ್ಯಾದಿ- ನಾನು ಹೇಳಬೇಕಾದ್ದೆಲ್ಲವನ್ನೂ ಹೇಳಿದ್ದೇನೆ. ಇಷ್ಟವಿರುವ ತರುಣರು ಅವುಗಳನ್ನು ಮನಸ್ಸಿಟ್ಟು ಓದಲಿ. ವಿಶೇಷವಾಗಿ, ಅದರ ಮುನ್ನುಡಿ ಸಹಿತ ‘ಆತ್ಮಶ್ರೀಗಾಗಿ ನಿರಂಕುಶಮತಿಗಳಾಗಿ’ ಎಂಬ ಪುಸ್ತಕದ ನಾಲ್ಕು ಭಾಷಣಗಳನ್ನಾದರೂ ಓದಲಿ. ಆದರೆ ನಾಲ್ಕನ್ನೂ ಸಮಗ್ರವಾಗಿ ತೆಗೆದುಕೊಳ್ಳಬೇಕು, ಅಷ್ಟೆ.- ಸರ್ವೋದಯ, ಸಮನ್ವಯ ಮತ್ತು ಪೂರ್ಣದೃಷ್ಟಿ ಇವುಗಳೇ ಎಲ್ಲರ ಧ್ಯೇಯಮಂತ್ರಗಳಾಗಲಿ.
ಕೃಪೆ: -‘ಪಾಂಚಾಲಿ’ (ದೀಪಾವಳಿ-ರಾಜ್ಯೋತ್ಸವ ವಿಶೇಷ ಸಂಚಿಕೆ, ಪುಟ: 11-14, 1974)
ಸಂಪಾದಕರು: ಪಿ. ಲಂಕೇಶ್
ಸುದ್ದಿದಿನ.ಕಾಂ|ವಾಟ್ಸಾಪ್|9980346243




