Connect with us

ದಿನದ ಸುದ್ದಿ

ನುಡಿಯ ಒಡಲು – 14 | ನುಡಿ ವರ್ಸಸ್ ಒಳನುಡಿ

Published

on

  • ಡಾ. ಮೇಟಿ ಮಲ್ಲಿಕಾರ್ಜುನ, ಸಹ ಪ್ರಾಧ್ಯಾಪಕರು, ಭಾಷಾಶಾಸ್ತ್ರ ವಿಭಾಗ, ಸಹ್ಯಾದ್ರಿ ಕಾಲೇಜು, ಶಿವಮೊಗ್ಗ

ನುಡಿ ಮತ್ತು ಒಳನುಡಿಗಳ ನಡುವಣ ಅಂತರಗಳನ್ನು ಗುರುತಿಸಲು ಎರಡು ಬಗೆಯ ಒರೆಗಲ್ಲುಗಳನ್ನು ಬಳಸುತ್ತಾರೆ. ಒಂದು ನುಡಿಯರಿಮೆಯ ನೆಲೆಗಟ್ಟನ್ನು ಪಡೆದಿದ್ದರೆ, ಮತ್ತೊಂದು ಸಾಮಾಜಿಕ ರಾಜಕೀಯ ನೆಲೆಗಳ ಮೇಲೆ ನಿರ್ಧಾರಗೊಳ್ಳುತ್ತದೆ. ಎತ್ತುಗೆಗಾಗಿ ನುಡಿಯರಿಮೆಯ ನೆಲೆಗಳನ್ನು ಇಲ್ಲೀಗ ನೋಡಬಹುದು;

1. ಪರಸ್ಪರ ಅರ್ಥಗ್ರಾಹ್ಯತೆಯ ಸಾಧ್ಯವೇ?

ಹೌದು? = ಒಳನುಡಿ

ಇಲ್ಲ? = ನುಡಿ

ಒಂದೇ ನುಡಿಯ ಬೇರೆ ಬೇರೆ ಬಗೆಗಳನ್ನು ಒಬ್ಬರಿಗೊಬ್ಬರು ಅರಿಯುವಂತಾದರೆ ಅದು ಒಳನುಡಿ. ಇಲ್ಲವಾದರೆ ಅವುಗಳನ್ನು ಬೇರೆ ಬೇರೆ ನುಡಿಗಳನ್ನಾಗಿ ಗುರುತಿಸಲಾಗುತ್ತದೆ. ಅಂದರೆ ಈ ಕೆಳಗಿನ ಸೂತ್ರದ ಮೂಲಕ ಇದನ್ನು ಇನ್ನೂ ನಿಚ್ಚಳವಾಗಿ ತಿಳಿಯಬಹುದು. ಉದಾ.ಗಳು;

1. ಧಾರವಾಡ ವರ್ಸಸ್ ಮೈಸೂರು ವರ್ಸಸ್ ಮಂಗಳೂರು ವರ್ಸಸ್ ಬೀದರ ವರ್ಸಸ್ ಚಾಮರಾಜ ನಗರ ವರ್ಸಸ್ ಬಳ್ಳಾರಿ = ಒಳನುಡಿಗಳು

2. ಬ್ರಿಟಿಶ್ ವರ್ಸಸ್ ಅಮೇರಿಕನ್ ವರ್ಸಸ್ ಐರಿಶ್ ವರ್ಸಸ್ ಆಸ್ಟ್ರೇಲಿಯಾ = ಒಳನುಡಿಗಳು

ಈ ಮೇಲಿನ ಎರಡೂ ಸನ್ನಿವೇಶದಲ್ಲಿ ಆಯಾ ಗುಂಪಿನ ಒಳನುಡಿಗಳಲ್ಲಿ ಪರಸ್ಪರ ಸಂವಹನ ಸಾಧ್ಯವಾಗುವುದರಿಂದ ಇವುಗಳ ನಡುವಣ ನಂಟಸ್ತಿಕೆಯನ್ನು ಅಖಂಡತೆಯ ತತ್ವದ ನೆಲೆಯಲ್ಲಿ ಕಾಣಬಹುದು. ಈ ಒಳನುಡಿಗಳ ರಾಚನಿಕ ಯಾವ ನಿಲುವುಗಳು ಒಂದನ್ನು ಇನ್ನೊಂದರಿಂದ ಹೇಗೆ ಬೇರ್ಪಡಿಸುತ್ತವೆ? ಈ ರಾಚನಿಕ ನೆಲೆಗಳು ಪ್ರಾದೇಶಿಕವಾಗಿ ಹೇಗೆ ಹರಡಿಕೊಂಡಿವೆ? ಹಾಗೂ ಪ್ರದೇಶ ಮತ್ತು ಒಳನುಡಿಗಳ ನಂಟಸ್ತಿಕೆಯ ಅಂತರ್ಸಂಬಂಧಗಳು ಯಾವ ಬಗೆಯವು? ಎಂಬೆಲ್ಲ ಸಂಗತಿಗಳನ್ನು ಲೆಕ್ಕಿಸದೆಯೂ, ಕೇವಲ ಪರಸ್ಪರ ಸಂವಹನ ಸಾಧ್ಯತೆಯ ಮಟ್ಟವನ್ನು ಗಮನದಲ್ಲಿಟ್ಟುಕೊಂಡು, ಒಳನುಡಿಗಳು ರೂಪುಗೊಳ್ಳುವ ಬಗೆಯನ್ನು ಇಲ್ಲಿ ಕಾಣಬಹುದು.

2. ಸಾಮಾಜಿಕ ಮತ್ತು ರಾಜಕೀಯ ನಿಲುವುಗಳು ಕಾರಣವಾದರೇ?

1. ನಾರ್ವೇ ವರ್ಸಸ್ ಸ್ವೀಡನ್ ವರ್ಸಸ್ ಡೆನಿಶ್ = ನುಡಿಗಳು (ಇಲ್ಲಿ ಪರಸ್ಪರ ಗ್ರಾಹ್ಯತೆ ಸಾಧ್ಯವಿದೆ).

2. ತುಳು ವರ್ಸಸ್ ಕೊಡವ ವರ್ಸಸ್ ಬಡಗ ವರ್ಸಸ್ ಕನ್ನಡ = ನುಡಿಗಳು (ಇಲ್ಲಿ ಪರಸ್ಪರ ಸಂವಹನ ಸಾಧ್ಯವಿಲ್ಲ).

3. ಕಾಂಟೀಸ್ ವರ್ಸಸ್ ಮಂಡೋರಿಯನ್ ವರ್ಸಸ್ ಹಕ್ಕ ವರ್ಸಸ್ ಹೊಕ್ಕ್‍ಯಿನ್ = ಒಳನುಡಿ (ಇಲ್ಲಿ ಪರಸ್ಪರ ಸಂವಹನಸಾಧ್ಯವಿಲ್ಲ, ಆದರೂ ಇವುಗಳನ್ನು ಚೈನಿಸ್ ನುಡಿಯ ಒಳನುಡಿಗಳೆಂದು ಗುರುತಿಸಿದ್ದಾರೆ).

4. ಡೆನಿಶ್ ವರ್ಸಸ್ ಸ್ವೀಡಿಶ್ = ನುಡಿಗಳು (ಡೆನಿಶ್ ನುಡಿಯಿಗರು ಸ್ವೀಡಿಶ್‍ನ್ನು ಅರಿತುಕೊಳ್ಳುತ್ತಾರೆ, ಆದರೆ ಸ್ವೀಡಿಶ್ ನುಡಿಯಿಗರು ಡೆನಿಶ್‍ನ್ನು ಅರಿತುಕೊಳ್ಳಲಾರರು ಹಾಗಾದರೆ ಇಂತಹ ನೆಲೆಯನ್ನು ಹೇಗೆ ಗುರುತಿಸುವುದು).

5. ಮರಾಠಿ ವರ್ಸಸ್ ಕೊಂಕಣಿ = ಒಳನುಡಿಗಳು (ಪರಸ್ಪರ ಸಂವಹನ ನಿರೀಕ್ಷಿತ ಮಟ್ಟದಲ್ಲಿಲ್ಲ).

6. ಬಡಗ ವರ್ಸಸ್ ಸೋಲಿಗ = ಒಳನುಡಿ (ಇವುಗಳ ನಡುವೆ ಪರಸ್ಪರ ಸಂವಹನ ಸಾಧ್ಯವಿಲ್ಲ. ಆದಾಗ್ಯೂ ಅವುಗಳನ್ನು ಕನ್ನಡದ ಒಳನುಡಿಗಳೆಂದು ಕರೆಯುತ್ತಾರೆ).

ಈ ಎರಡನೇ ಸನ್ನಿವೇಶದಲ್ಲಿ ನುಡಿ ಹಾಗೂ ಒಳನುಡಿಗಳ ನಡುವಣ ವ್ಯತ್ಯಾಸಗಳನ್ನು ಗುರುತಿಸಲು ಪರಸ್ಪರ ಅರ್ಥಗ್ರಾಹ್ಯ ತತ್ವವನ್ನೇ ಮುಖ್ಯ ಮಾನದಂಡವನ್ನಾಗಿ ಇಟ್ಟುಕೊಂಡಿಲ್ಲ ಎಂಬುದು ಇಲ್ಲಿ ನಿಚ್ಚಳವಾಗಿ ಕಾಣುತ್ತದೆ. ಈ ಕೆಳಗಿನ ಚಿತ್ರದ ಮೂಲಕ ಈ ತೊಡಕನ್ನು ಇನ್ನಷ್ಟು ವಿವರವಾಗಿ ನೋಡಬಹುದು;

ಚಿತ್ರ- 01

ಇವುಗಳ ಸಂವಹನದ ಗ್ರಹಿಕೆಯಲ್ಲಿ ಸಮಾನತೆಯಿಲ್ಲಿ. ಗ್ರಹಿಕೆಯಲ್ಲಿ ಇಂತಹ ಅಸಮಾನ ಮಟ್ಟವಿದ್ದರೂ, ಬೇರೆ ನುಡಿಯೆಂದು ಕರೆಯದೇ ಒಳನುಡಿಯೆಂದು ಗುರುತಿಸುವುದಕ್ಕೆ ಸಾಮಾಜಿಕ, ಚಾರಿತ್ರಿಕ, ಪ್ರಾದೇಶಿಕ ಮತ್ತು ರಾಜಕೀಯ ನಿಲುವುಗಳೇ ಕಾರಣ. ನುಡಿ ಮತ್ತು ಒಳನುಡಿಗಳ ನಡುವೆ ಯಾವುದೇ ಬಗೆಯ ಖಚಿತ ಭಿನ್ನತೆಗಳನ್ನು ಪಟ್ಟಿ ಮಾಡಲು ಸಾಧ್ಯವಿಲ್ಲ ಎಂಬ ಸಂಗತಿ ಈ ಚರ್ಚೆಗಳಿಂದಲೇ ಮನವರಿಕೆಯಾಗುತ್ತದೆ.

ಸಾಂಸ್ಕೃತಿಕ ಅಸಮಾನ ತತ್ವಗಳು, ರಾಜಕೀಯ ಮತ್ತು ಆರ್ಥಿಕ ರಚನೆಗಳು ಹಾಗೂ ಚಾರಿತ್ರಿಕವಾಗಿ ನೆಲೆನಿಂತಿರುವ ಅಧಿಕಾರ ಸಂಬಂಧಗಳೇ ನುಡಿ ಮತ್ತು ಒಳನುಡಿ ಎಂಬಂತಹ ಡೈಕಾಟಮಿಯನ್ನು ಹುಟ್ಟು ಹಾಕುತ್ತವೆ. ನುಡಿಯೆಂದರೆ ಅತ್ಯಂತ ಮೇಲು (ಸೂಪರ್‍ಆರ್ಡಿನೇಟ್) ಎಂದೋ, ಒಳನುಡಿಯೆಂದರೆ ಅತ್ಯಂತ ಕೀಳು (ಸಬ್‍ಆರ್ಡಿನೇಟ್) ಎಂದೋ ನಿರ್ವಚಿಸಲಾಗಿದೆ. ಒಳನುಡಿಗಳಿಗೆ ಅಂಟಿರುವ ಕೀಳು, ಅಧೀನ, ವಿರೂಪ ಮುಂತಾದಂತಹ ಕಳಂಕಗಳನ್ನು ತಪ್ಪಿಸಲು ಉಪಭಾಷೆ ಇಲ್ಲವೇ ಒಳನುಡಿ ಎಂದು ಕರೆಯುವ ಬದಲಾಗಿ ನುಡಿಬಗೆ (ಲಿಂಗ್ವಿಸ್ಟಿಕ್ ವೆರೈಟಿ) ಎಂದು ಗುರುತಿಸಬೇಕು ಎಂಬುದು ಹೊಸಕಾಲದ ಬಹುತೇಕ ಸಾಮಾಜಿಕ ನುಡಿಯರಿಗರ ನಿಲುವಾಗಿದೆ.

ಸಾಮಾಜಿಕವಾಗಿ ನೆಲೆ ನಿಂತಿರುವ ಅಸಮಾನತೆಗಳು, ನುಡಿಯ ಮೂಲಕ ಹೇಗೆ ಪ್ರತಿನಿಧಿಸುತ್ತವೆ ಎಂಬುದಕ್ಕೆ ಉಪಭಾಷೆ ಮತ್ತು ಒಳನುಡಿಗಳೇ ಸಾಕ್ಷಿಯಾಗಿವೆ. ಅದಕ್ಕಾಗಿ ಮೇಲು ನುಡಿ (ಮೇಲು ಜಾತಿ) ಹಾಗೂ ಕೀಳು ನುಡಿ (ಕೀಳು ಜಾತಿ)ಗಳು ತಲೆಯೆತ್ತಿವೆ. ಇಂತಹ ತರತಮ ನಿಲುವುಗಳನ್ನು ಮೊದಲು ಕಿತ್ತು ಹಾಕಬೇಕು. ಅದಕ್ಕಾಗಿ ಹೊಸ ನುಡಿಗಟ್ಟುಗಳನ್ನು ಬಳಸುವ ಅಗತ್ಯವಿದೆ. ಇವು ಕೇವಲ ಟೆಕ್ನಿಕಲ್ ಪದಗಳಾಗಿರದೇ, ಲೋಕವನ್ನು ನೋಡುವ ಕ್ರಮವನ್ನೇ ಬದಲಿಸುತ್ತವೆ.

ನುಡಿಬಗೆ ಎಂಬುದು ಸಿದ್ಧಮಾದರಿಯ ತಿಳಿವನ್ನೇ ಪಲ್ಲಟಗೊಳಿಸುವ ಬಗೆಯೆಂದೇ ಹೇಳಬೇಕಾಗುತ್ತದೆ. ನುಡಿಬಗೆ ಕೇವಲ ವ್ಯತ್ಯಾಸವನ್ನು ಸೂಚಿಸುವ ಪದ. ಅಂದರೆ ಒಂದು [ಅ] ಇನ್ನೊಂದಕ್ಕಿಂತ [ಆ] ಹೇಗೆ ಬೇರೆ ಎಂಬುದನ್ನು ಮಾತ್ರ ತೋರಿಸುತ್ತದೆ, ಹೊರತಾಗಿ ತರತಮ ನೆಲೆಗಳನ್ನಲ್ಲ. ಬಗೆ/ವ್ಯತ್ಯಾಸಗಳು (ಡಿಫರೆನ್ಸ್) ಸ್ವಾಯತ್ತ ಅಸ್ತಿತ್ವವನ್ನು ಕಾಣಿಸುತ್ತವೆ.

ಆದರೆ ತರತಮ ನಿಲುವುಗಳು ಒಂದು ಮೇಲು ಮತ್ತೊಂದು ಕೀಳು ಎಂಬ ಅಸಮಾನ ಡೈಕಾಟಮಿಯನ್ನು ಹುಟ್ಟು ಹಾಕುತ್ತವೆ. ಒಂದು ಮೇಲು ಮತ್ತೊಂದು ಕೀಳು ಎಂದು ಹೀಗೆ ಹೇಳುವುದಕ್ಕೆ ಯಾವ ಆಧಾರವೂ ಇಲ್ಲ. ನುಡಿಗಳನ್ನು ಕೇವಲ ಉಲಿ ಮತ್ತು ಪದಕೋಶಿಕ (ಲೆಕ್ಷಿಕಲ್) ನೆಲೆಯಲ್ಲಿ ಮಾತ್ರ ಬೇರ್ಪಡಿಸಿ ಅವುಗಳ ನಡುವೆ ತರಮತಗಳನ್ನು ಹುಟ್ಟಹಾಕಲಾಗಿದೆ.

ಲೋಕವನ್ನು ನೋಡುವ ಬಗೆಯಲ್ಲಿಯೇ ಅನನ್ಯತೆ ಮತ್ತು ವಿಶಿಷ್ಟತೆ ಇರುತ್ತದೆ. ಪ್ರತೀ ನುಡಿಯು ಹಲವು ಬಗೆಗಳಲ್ಲಿ ತನ್ನದೆಯಾದ ಇಂತಹ ವಿಶಿಷ್ಟತೆ ಹಾಗೂ ಅನನ್ಯತೆಯ ಗುರುತುಗಳನ್ನು ಇಟ್ಟುಕೊಂಡಿರುತ್ತದೆ. ಅವುಗಳ ವೈವಿಧ್ಯತೆ ಬಹುತೇಕ ಪದಕೋಶಿಕ ನೆಲೆಯಿಂದ ಕೂಡಿರುತ್ತದೆ. ಇಂತಹ ವೈವಿಧ್ಯತೆಗೆ ಸಾಮಾಜಿಕ, ಸಾಂಸ್ಕೃತಿಕ ಮತ್ತು ಮಾನಸಿಕ ಕಾರಣಗಳಿರುತ್ತವೆ. ಆಯಾ ಪರಿಸರಕ್ಕೆ ಅನುಗುಣವಾಗಿ ನುಡಿ ಇಲ್ಲವೇ ಒಳನುಡಿಗಳ ಸ್ವರೂಪ ರೂಪುಗೊಂಡಿರುತ್ತವೆ.

ಹಾಗಾಗಿ ಮಾನವರ ಚಿಂತನೆಯ ಮಾದರಿ, ಗ್ರಹಿಕೆಯ ಬಗೆಗಳು ರೂಪುಗೊಳ್ಳುವುದು, ಅವರಲ್ಲಿ ಅಂತಸ್ಥವಾಗಿರುವ ನುಡಿ ಸಾಮಥ್ರ್ಯದಿಂದಲೇ ಎಂಬುದನ್ನು ಮರೆಯುವಂತಿಲ್ಲ. (ನುಡಿಯ) ಅಂತಸ್ಥ ಸಾಮಥ್ರ್ಯದಲ್ಲಿ ತರಮತಮ ಎಂಬದು ಇರುವುದಿಲ್ಲ. ಬದಲಾಗಿ ನುಡಿಗಳ ನಡುವಣ ಸಮಾನ ತತ್ವಗಳು ಹಾಗೂ ವಿಕಲ್ಪಗಳು ಮಾತ್ರವಿರುತ್ತವೆ. ಇವುಗಳ ಆಧಾರದ ಮೇಲೆ ನುಡಿಗಳನ್ನು ಬೇರ್ಪಡಿಸಿ ಬೇರೆ ಬೇರೆ ನುಡಿಗಳು ಹುಟಿಸಬಹುದು.

ಕೇವಲ ಹೊರಪದರ ರಚನೆಯನ್ನು ಮಾತ್ರ ಪರಿಗಣಿಸಿ, ನುಡಿಯ ಇಡೀ ರಾಚನಿಕ ಸ್ವರೂಪವನ್ನು ಅರಿಯಲು ಸಾಧ್ಯವಿಲ್ಲ. ಹಾಗಾಗಿ ಚಾಮ್‍ಸ್ಕಿ ಹೇಳುವ ನುಡಿಯ ಏಕರೂಪತೆ (ಲಿಂಗ್ವಿಸ್ಟಿಕ್ ಹೋಮಿಜಿನಿಟಿ) ಎನ್ನುವುದು ನುಡಿಯ ಹೊರಪದರ ರಾಚನಿಕ ವ್ಯವಸ್ಥೆಗೆ ಸಂಬಂಧಿಸಿದ್ದಲ್ಲ. ಅದು ಅಂತಸ್ಥ ಸಾಮರ್ಥ್ಯಕ್ಕೂ ಹಾಗೂ ಒಳಪದರ ರಚನೆಗೂ ಸಂಬಂಧಿಸಿದ್ದು. ಹಾಗಾಗಿ ಚಾಮ್‍ಸ್ಕಿ ಪ್ರಕಾರ ನುಡಿಯನ್ನು ಅರಿಯುವುದೆಂದರೆ, ಅದರ ಅಂತಸ್ಥ ಸಾಮಥ್ರ್ಯದ ರಾಚನಿಕ ಸ್ವರೂಪವನ್ನು ಅರಿಯುವುದಾಗಿದೆ.

ಅಂದರೆ ಈ ನುಡಿ ಮತ್ತು ಒಳನುಡಿ ಎಂಬ ನೆಲೆಗಳನ್ನು ಬೇರೆ ತಾತ್ವಿಕ ಚೌಕಟ್ಟಿನಿಂದ ಮರು ಕಟ್ಟಿಕೊಳ್ಳುವ ಅಗತ್ಯವಿದೆ. ಏಕೆಂದರೆ ನುಡಿಯ ರಚನೆ ಎಂಬುದು ಮಾನವರಲ್ಲಿ ಜನ್ಮಜಾತವಾಗಿ ಬಂದಿರುತ್ತದೆ. ಹೊರತು ಯಾವುದೇ ಸಾಮಾಜಿಕ ವಿಶಿಷ್ಟತೆ ಇಲ್ಲವೇ ರಾಜಕೀಯ ತೀರ್ಮಾನದಿಂದ ನಿರ್ಧಾರವಾಗುವಂತಹದಲ್ಲ. ಪ್ರತೀ ಮಾನವನ ಮೆದುಳಿನಲ್ಲಿ ಅವರು ರೂಢಿಸಿಕೊಳ್ಳುವ ನುಡಿಗೆ ಸಂಬಂಧಿಸಿದ ರಾಚನಿಕ ನಮೂನೆಗಳು ಮಾತ್ರವಿರುವುದಿಲ್ಲ. ಅವನು ಇಲ್ಲವೇ ಅವಳು ರೂಢಿಸಿಕೊಳ್ಳಬಹುದಾದ ಯಾವುದೇ ನುಡಿಗೆ ಹೊಂದಿಕೆಯಾಗುವ ರಾಚನಿಕ ನಮೂನೆಗಳು ಇರುತ್ತವೆ.

ನುಡಿ ಮತ್ತು ಒಳನುಡಿಗಳ ಕುರಿತ ನಿಲುವುಗಳು ಕೇವಲ ಸಾಮಾಜಿಕ ಇಲ್ಲವೇ ರಾಜಕೀಯ ಮಾನದಂಡಗಳಿಂದ ಮಾತ್ರ ರೂಪುಗೊಳ್ಳಲು ಸಾಧ್ಯವಿಲ್ಲ ಎಂಬುದು ಮಾತ್ರ ಖಚಿತವಾದರೂ, ಅವುಗಳು ಅಂತಹ ನೆಲೆಗಳಿಂದಲೇ ಹೆಚ್ಚು ಗಟ್ಟಿಗೊಂಡಿವೆ. ಪರಸ್ಪರ ಸಂವಹನ/ ಅರ್ಥಗ್ರಾಹ್ಯತೆಯ ಕುರಿತ ಕೇಳ್ವಿಯೇ ಇಲ್ಲಿ ಅಪ್ರಸ್ತುತವಾಗಿದೆ. ಏಕೆಂದರೆ ನುಡಿಗಳ ನಡುವಣ ವ್ಯತ್ಯಾಸಗಳು ವಿಕಲ್ಪಗಳ (ಪ್ಯಾರಮೀಟರ್ಸ್) ಮೂಲಕ ಕಾಣಿಸಿಕೊಂಡರೆ, ನುಡಿಗಳ ನಡುವಣ ಸಮಾನತೆಗಳು (ಪ್ರಿನ್ಸಿಪಲ್ಸ್) ತತ್ವಗಳ ಮೂಲಕ ನಿರ್ಧಾರವಾಗುತ್ತವೆ.

ಹಾಗಾಗಿ ನುಡಿ ಮತ್ತು ಒಳನುಡಿಗಳನ್ನು ಗುರುತಿಸುವುದೆಂದರೆ, ಅವುಗಳ ನುಡುವಣ ವಿಕಲ್ಪಗಳನ್ನು ಗುರುತಿಸುವುದೋ ಇಲ್ಲವೇ ಕೇವಲ ಹೊರಪದರ ರಚನೆಗಳಲ್ಲಿ ಕಾಣುವ ವ್ಯತ್ಯಾಸಗಳನ್ನು ಗುರುತಿಸುವುದೋ ಎಂಬ ಗೊಂದಲ ತಲೆಯೆತ್ತುತ್ತದೆ. ಹಾಗಾಗಿ ಪರಸ್ಪರ ಅರ್ಥಗ್ರಾಹ್ಯತೆಯ ತತ್ವ ಅಷ್ಟೊಂದು ಮಹತ್ವದ ಸಂಗತಿಯಾಗಿ ಕಾಣಲಾರದು.

ಜಾನ್ ಲಯನ್ಸ್ (1981) ಎಂಬ ನುಡಿಯರಿಗನ ಪ್ರಕಾರ ನುಡಿಗಳಲ್ಲಿ ಕೆಲವು ಮೇಲು, ಮತ್ತೆ ಕೆಲವು ಕೀಳು ಅನ್ನುವ ಮಾತು ಸೈದ್ಧಾಂತಿಕ ನುಡಿಯರಿಮೆಯಿಂದಾಗಲಿ ಇಲ್ಲವೇ ನುಡಿದತ್ತವನ್ನು ಕಲೆಹಾಕಿ ಆ ಮೂಲಕ ಸಂಶೋಧನೆಯನ್ನು ಮಾಡಿ ಸಾಬೀತುಗೊಳಿಸಿದ ಸಂಶೋಧನೆಯ ಫಲಿತವೆಂದಾಗಲಿ ಅಲ್ಲ. ಇದು ಇನ್ನೂ ಸಂಶೋಧನೆಗೆ ಒಳಪಟ್ಟು ಆ ಮೂಲಕ ನಿರ್ಧಾರಗೊಳ್ಳಬೇಕಾದ ಸಂಗತಿ ಇಲ್ಲವೇ ಇದನ್ನು ಒಂದು ಕಲ್ಪಿತ ಪ್ರಮೆಯೆಂದು ಗುರುತಿಸಬಹುದೇ ಹೊರತು ಬೇರೇನೂವಲ್ಲ.

ಹಾಗಾಗಿ ಹೊಸಕಾಲದ ವೈಚಾರಿಕ ನೆಲೆಯ ಮೇಲೆ ಹುಟ್ಟಿಕೊಂಡ ನಿಗಮನ ತರ್ಕ (ಡಿಡಕ್ಟಿವಿಜಮ್) ವಿಧಾನ ತತ್ವವನ್ನು ಚಾಮ್‍ಸ್ಕಿ ಪರಿಚಯಿಸಿದನು. ಇದರ ಪ್ರಕಾರವೂ ಕೂಡ ನುಡಿಗಳ ನಡುವಿನ ಯಾವುದೇ ಬಗೆಯ ತರತಮಗಳನ್ನು ಗುರುತಿಸುವುದು ಸಾಧ್ಯವಿಲ್ಲ. ಆದರೆ ಚಾಮ್‍ಸ್ಕಿಯ ಪ್ರಕಾರ ಮಾನವರ ನುಡಿಗಳಲ್ಲಿ ‘ಹೆಚ್ಚು ಸಜ್ಜಾದ, ಹೆಚ್ಚು ಅಣಿಯಾದ’ ನುಡಿಗಳು ಮತ್ತು ‘ಕಡಿಮೆ ಸಜ್ಜಾದ, ಕಡಿಮೆ ಅಣಿಯಾದ’ ನುಡಿಗಳೆಂದು ವಿಂಗಡಿಸಬಹುದು. ನುಡಿಗಳ ಬಗ್ಗೆ ಮತ್ಯಾವ ‘ಮೌಲ್ಯ ನಿರ್ಣಯ’ (ವ್ಯಾಲ್ಯೂ ಜೆಡ್ಜಮೆಂಟ್) ಮಾಡಲು ಸಾಧ್ಯ ಇಲ್ಲ. ಹಾಗೂ ಮತ್ಯಾವುದೆ ಮೌಲ್ಯ ನಿರ್ಣಯವೂ ಸಲ್ಲದು.

ಇಂಗ್ಲಿಶ್ ಇವತ್ತು ಲೋಕದಲ್ಲಿ ಪಡೆದಿರುವ ಜಾಗ ತನ್ನದೇ ಆದ ಅಭಿವ್ಯಕ್ತಿಯ ಬಲದಿಂದ ಅಲ್ಲ. ಇದೊಂದು ಚಾರಿತ್ರಿಕ ಬೆಳವಣಿಗೆಯ ಪರಿಣಾಮದಿಂದ ರೂಪುಗೊಂಡ ಆಟ ಎಂದು ಹೇಳಬಹುದು. ಚರಿತ್ರೆಯ ನಿಲುವುಗಳು ಇಂಗ್ಲಿಶ್‍ನ್ನು ಹೆಚ್ಚು ಹೆಚ್ಚು ಸಜ್ಜುಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿವೆ. ಸಂಸ್ಕೃತ ಇಲ್ಲವೇ ಬೇರಾವುದೇ ನುಡಿಗಳು ಈ ಜಾಗದಲ್ಲಿ ಇದ್ದಿದ್ದರೆ, ಈ ಮಟ್ಟಿನ ಮಹತ್ವವನ್ನು ಪಡೆದುಕೊಳ್ಳುತ್ತಿದ್ದವು ಎಂದು ಹೇಳುವುದು ದುಸ್ತರ. ಒಂದು ವೇಳೆ ಬೇರೆ ನುಡಿಗಳು ಬೆಳೆಯಬಹುದಿತ್ತೆಂದು ಅನ್ನಿಸಿದರೂ, ಇಂಗ್ಲಿಶ್ ಹಾಗೂ ಸಂಸ್ಕೃತದಷ್ಟು ಬಲಶಾಲಿಗಳಾಗಿ ರೂಪುಗೊಳ್ಳುತ್ತಿರಲಿಲ್ಲ ಎಂಬುದು ಗಮನಾರ್ಹ.

ಪರಸ್ಪರ ಅರ್ಥಗ್ರಾಹ್ಯತೆಯ ತತ್ವ: ತೊಡಕುಗಳು ಎಂತಹವು?

ಪರಸ್ಪರ ಅರ್ಥಗ್ರಾಹ್ಯತೆಯ ತತ್ವವನ್ನು ನುಡಿ ಹಾಗೂ ಒಳನುಡಿಗಳ ನಡುವೆ ಗಡಿಗೆರೆಗಳನ್ನು ಗುರುತಿಸಲು ಮಾನದಂಡವನ್ನಾಗಿ ಬಳಸುವಲ್ಲಿ ಸಾಕಷ್ಟು ಸಿಕ್ಕಲುಗಳಿವೆ. ಈಗಾಗಲೇ ಕೆಲವು ಸಿಕ್ಕುಗಳು ಮೇಲಿನ ಚರ್ಚೆಯಿಂದ ನಮ್ಮ ಗಮನಕ್ಕೆ ಬಂದಿವೆ. ಇವುಗಳಲ್ಲಿ ಅತ್ಯಂತ ಮುಖ್ಯವಾದ ತೊಡಕು ಏನೆಂದರೆ ಅರ್ಥದ ಮಟ್ಟ (ಪ್ರಮಾಣ)ದಲ್ಲಿ ವ್ಯತ್ಯಾಸಗಳಿವೆ. ಅಂದರೆ ಸ್ವೀಡಿಶ್ ನುಡಿಯಿಗರು ನಾರ್ವೇಯನ್ನು ಚನ್ನಾಗಿ ಅರಿಯಬಲ್ಲರು.

ಆದರೆ ನಾರ್ವೇ ನುಡಿಯಿಗರಿಗೆ ಸ್ವೀಡಿಶ್‍ನ್ನು ಅದೇ ಮಟ್ಟದಲ್ಲಿ ಅರಿಯಲು ಸಾಧ್ಯವಿಲ್ಲ. ಸ್ಕ್ಯಾಂಡಿನೆವಿಯನ್ನರಲ್ಲಿ ಪೂರ್ಣ ಪ್ರಮಾಣದ ಪರಸ್ಪರ ಸಂವಹನ ಸಾಧ್ಯವಿಲ್ಲದಿದ್ದರೂ, ಅವರಲ್ಲಿ ತಕ್ಕಮಟ್ಟಿಗಾದರೂ ಪರಸ್ಪರ ಸಂವಹನ ಇರುವುದನ್ನು ಕಾಣಬಹುದು. ಇಂತಹ ಸನ್ನಿವೇಶದಲ್ಲಿ ಕೆಲವು ರಿಯಾತಿಗಳು ಇದ್ದೇ ಇರುತ್ತವೆ. ಎತ್ತುಗೆಗಾಗಿ ನಿಧಾನವಾಗಿ ಮಾತನಾಡುವುದು, ಪದಗಳು ಇಲ್ಲವೇ ಉಲಿಗಳನ್ನು ಬಿಟ್ಟು ಉಚ್ಚರಿಸುವುದು, ಅರ್ಥ ಪಲ್ಲಟಗಳನ್ನು ಉಂಟುಮಾಡುವುದು ಮುಂತಾದವುಗಳನ್ನು ಕಾಣಬಹುದು.

ಆದರೆ ಜರ್ಮನ್ನಿನ ಒಳನುಡಿಗಳಲ್ಲಿ ಪರಸ್ಪರ ಸಂವಹನಕ್ಕೆ ಅವಕಾಶವೇ ಇಲ್ಲ. ಈ ಎರಡೂ ಸನ್ನಿವೇಶಗಳಲ್ಲಿ ಪರಸ್ಪರ ಅರ್ಥಗ್ರಾಹ್ಯತೆಯ ಮಟ್ಟದಲ್ಲಿ ಯಾವುದೇ ಸಮಾನತೆಯಿಲ್ಲ ಎಂಬುದು ಮಾತ್ರ ಎದ್ದು ಕಾಣುತ್ತದೆ. ನಮ್ಮ ಸಂದಂರ್ಭದಲ್ಲಿಯೂ ಇಂತಹ ತೊಡಕುಗಳಿವೆ. ಆದರೆ ಅವುಗಳನ್ನು ಬಿಡಿಸಿ ನೋಡುವ ಬಗೆಗಳು ಬೇರೆಯಾಗಿವೆ ಎಂದು ಕಾಣುತ್ತದೆ.

ಅಂದರೆ ಮಲೆಯಾಳಂ ನುಡಿಯಿಗರು ತಕ್ಕ ಮಟ್ಟಿಗೆ ತಮಿಳನ್ನು ಅರಿಯಬಲ್ಲವರಾದರೆ, ತಮಿಳು ನುಡಿಯಿಗರಿಗೆ ಮಲೆಯಾಳಂ ಅರಿತುಕೊಳ್ಳಲು ದುಸ್ತರವಾಗುತ್ತದೆ. ಹಾಗೂ ಬೀದರ ಕನ್ನಡದ ಆಡುಗರು ಕರ್ನಾಟಕದ ಎಲ್ಲ ವಲಯಗಳ ಕನ್ನಡವನ್ನು ಅರಿತುಕೊಳ್ಳಬಲ್ಲರು. ಆದರೆ ಅವರ ಕನ್ನಡವನ್ನು ಇತರ ಒಳನುಡಿಯಿಗರು ಅದೇ ಪ್ರಮಾಣದಲ್ಲಿ ಅರಿತುಕೊಳ್ಳಲಾರರು.

ಪರಸ್ಪರ ಅರ್ಥಗ್ರಾಹ್ಯತೆಯ ತತ್ವ ಬೇರೆಯೇ ಬಗೆಯ ಮಾನದಂಡಗಳನ್ನು ನೆಚ್ಚಿಕೊಂಡಿರುತ್ತೆಂದು ಕಾಣುತ್ತದೆ. ಅವುಗಳೆಂದರೆ ಬೇರೆ ಒಳನುಡಿಗಳಿಗೆ ಒಡ್ಡಿಕೊಳ್ಳುವ ಪ್ರಮಾಣ, ಶಿಕ್ಷಣದಲ್ಲಿ ಒಳನುಡಿಗಳಿಗೆ ಸಿಗುವ ಅವಕಾಶ ಇಲ್ಲವೇ ಬಳಕೆಯ ಪ್ರಮಾಣ ಹಾಗೂ ಬೇರೆ ಒಳನುಡಿ ಮತ್ತು ಆ ಒಳನುಡಿಯಿಗರನ್ನು ಒಪ್ಪುವ ಇಲ್ಲವೇ ತಾಳಿಕೊಳ್ಳುವ ಬಗೆಗಳನ್ನು ಕುರಿತಾಗಿರುತ್ತದೆ.

ಏಕೆಂದರೆ ಅಧಿಕಾರ ಸಂಬಂಧದ ಆವರಣದಲ್ಲಿರುವ ಒಳನುಡಿ ಮತ್ತು ಅವುಗಳ ಆಡುಗರು ಪ್ರಜ್ಞಾಪೂರಕವಾಗಿಯೇ ತಮ್ಮ ಒಳನುಡಿಗೆ ಹೊರತಾದ ಬೇರೊಂದು ಒಳನುಡಿಯನ್ನು ನಿರಾಕರಿಸುವ ಸಾಧ್ಯತೆಗಳಿರುತ್ತವೆ. ಕಾರಣ ‘ಎ’ ಒಳನುಡಿ ‘ಬಿ’ಕ್ಕಿಂತ ದೊಡ್ಡದು ಇಲ್ಲವೇ ಚಿಕ್ಕದು ಹಾಗೂ ‘ಎ’ ಒಳನುಡಿ ಮೇಲು ಇಲ್ಲವೇ ‘ಬಿ’ ಒಳನುಡಿ ಕೀಳು ಎಂಬ ನಿಲುವುಗಳು ಕೂಡ ಇಂತಹ ನಿರಾಕರಣೆಗೆ ಒತ್ತಾಸೆಯಾಗಿರುತ್ತವೆ.

ಹಾಗಾಗಿ ಈ ಪರಸ್ಪರ ಅರ್ಥಗ್ರಾಹ್ಯತೆಯ ತತ್ವಕ್ಕೆ ತಕ್ಕಮಟ್ಟಿನ ಪ್ರಾಮುಖ್ಯತೆ ಇದ್ದಂತೆ ಕಂಡರೂ, ಯಾವುದು ನುಡಿ, ಯಾವುದು ಒಳನುಡಿ ಹಾಗೂ ಯಾವುದು ಏನಲ್ಲ ಎಂಬುದನ್ನು ನಿರ್ಧರಿಸುವಲ್ಲಿ ಇದರಿಂದ ಯಾವುದೇ ಬಗೆಯ ಸಹಾಯ ಸಿಗುವುದಿಲ್ಲ. ಸ್ಕ್ಯಾಂಡಿನೆವಿಯನ್ ಹಾಗೂ ಜರ್ಮನ್ ನುಡಿಗಳ ಕುರಿತ ಚರ್ಚೆಗಳು ಇಂತಹ ಅಸಂಗತಗಳನ್ನು ಎತ್ತಿ ತೋರಿಸಿವೆ.

ನುಡಿ ತನ್ನನ್ನು ವಿವರಿಸಿಕೊಳ್ಳಲು ಬೇಕಾಗಿರುವ ಲಕ್ಷಣಗಳನ್ನು ತನ್ನ ಒಡಲಲ್ಲಿಯೇ ಇರಸಿಕೊಂಡಿದ್ದರೂ, ಅದು ಕೇವಲ ನುಡಿಯ (ಲಿಂಗ್ವಿಸ್ಟಿಕ್) ಕಲ್ಪನೆ ಮಾತ್ರವಾಗಿ ಉಳದಿಲ್ಲ. ಬದಲಾಗಿ ಸಾಂಸ್ಕೃತಿಕ, ರಾಜಕೀಯ ಕಲ್ಪನೆಯೂ ಆಗಿರುತ್ತದೆ ಎಂಬುದು ಗಮನಾರ್ಹ. ನಾರ್ವೇ, ಸ್ವೀಡಿಶ್, ಡೆನಿಶ್ ಹಾಗೂ ಜರ್ಮನ್ ನುಡಿಗಳ ಕುರಿತ ನಿಲುವುಗಳು ರಾಜಕೀಯ, ಪ್ರಾದೇಶಿಕ, ಸಾಮಾಜಿಕ, ಚಾರಿತ್ರಿಕ ಮತ್ತು ಸಾಂಸ್ಕೃತಿಕ ಪ್ರಭಾವಕ್ಕೆ ಒಳಗಾಗಿರುವುದು ಇಲ್ಲಿ ನಿಚ್ಚಳವಾಗಿ ಕಾಣುತ್ತದೆ.

ನುಡಿಯರಿಮೆಗೆ ಹೊರತಾದ ಇಂತಹ ತೀರ್ಮಾನಗಳೇ, ನುಡಿ ಮತ್ತು ಒಳನುಡಿಗಳನ್ನು ಪ್ರತ್ಯೇಕಿಸುವಲ್ಲಿ ಮುಖ್ಯ ಪಾತ್ರವನ್ನು ವಹಿಸುತ್ತವೆ. ಅಂದರೆ ನಾರ್ವೇ, ಸ್ವೀಡಿಶ್, ಡೆನಿಶ್ ನುಡಿಗಳಿಗೆ ತಮ್ಮದೇ ಆದ ಪ್ರಾದೇಶಿಕ ಸ್ವಾಯತ್ತತೆ, ರಾಷ್ಟ್ರ, ರಾಜಕೀಯ ಹಕ್ಕು, ವರ್ಣಮಾಲೆ, ಸೊಲ್ಲರಿಮೆ ಹಾಗೂ ಸಾಹಿತ್ಯಗಳು ಇರುವುದರಿಂದ, ಆಯಾ ನುಡಿಯಿಗರು ತಾವಾಡುವ ನುಡಿಗಳು ಬೇರೆ ಬೇರೆಯೆಂದು ನಂಬಿರುತ್ತಾರೆ.

ಆ ಕಾರಣಕ್ಕಾಗಿ ಇವು ಮೂರು ಬೇರೆ ನುಡಿಗಳಾಗಿ ನೆಲೆನಿಂತಿವೆ. ರಾಚನಿಕವಾಗಿ ಎಷ್ಟೇ ಹತ್ತಿರವಿದ್ದರೂ, ಹಿಂದಿ ಮತ್ತು ಉರ್ದು ಎರಡೂ ಬೇರೆ ಬೇರೆ ನುಡಿಗಳು. ಇಲ್ಲಿ ನುಡಿಯರಿಮೆಯ ಯಾವುದೇ ಸಮರ್ಥನೆಗಳಿಗೆ ಅವಕಾಶವಿಲ್ಲ. ಕರ್ನಾಟಕದಲ್ಲಿರುವ ತುಳು, ಕೊಂಕಣಿ, ಬ್ಯಾರಿ, ಉರ್ದು, ಕೊಡವ ಮುಂತಾದವುಗಳಿಗೆ ಇಂತಹ ಯಾವುದೇ ಸಾಂಸ್ಥಿಕ ಸ್ವಾಯತ್ತತೆ ಇಲ್ಲವೇ ಅಧಿಕಾರ ಇಲ್ಲದಿರುವುದರಿಂದ, ಇವುಗಳನ್ನು ಬಹುತೇಕ ಸನ್ನವೇಶದಲ್ಲಿ ಕೇವಲ ಒಳನುಡಿಗಳನ್ನಾಗಿ ಆರೋಪಿಸಲಾಗುತ್ತದೆ.

ಈ ಕಾರಣಗಳಿಂದಲೇ ‘ನುಡಿ’ ಎನ್ನುವುದು ನುಡಿಯರಿಮೆಯ ಪ್ರಕಾರವೂ ಒಂದು ನಾನ್‍ಟೆಕ್ನಿಕಲ್ ಪದವಾಗಿದೆ ಅಷ್ಟೇ. ನುಡಿ, ಒಳನುಡಿ, ಪರಸ್ಪರ ಅರ್ಥಗ್ರಾಹ್ಯತೆ ಮುಂತಾದ ವರ್ಣಾತ್ಮಕ ಅರಿಮೆ ಪದಗಳನ್ನು ಬಣ್ಣಿಸುವಾಗ ಅತ್ಯಂತ ನಿಗಾವಹಿಸಬೇಕಾಗುತ್ತದೆ.

ನುಡಿ ಹಾಗೂ ಒಳನುಡಿಗಳ ನುಡುವಣ ಅಂತರ್ಸಂಬಂಧಗಳು ಸಾಮಾಜಿಕ ಸ್ವರೂಪದ್ದಾಗಿರುತ್ತವೆ. ಹಾಗಾಗಿ ಇವುಗಳನ್ನು ಸ್ವಾಯತ್ತತೆ ವರ್ಸಸ್ ವೈವಿಧ್ಯತೆ ಎಂಬ ವಿರೋಧಾತ್ಮಕ ನೆಲೆಯಿಂದ ವ್ಯಾಖ್ಯಾನಿಸಬೇಕಾಗುತ್ತದೆ.

ಅಂದರೆ ಯಾವುದೇ ಒಂದು ಸ್ವಾಯತ್ತ ನುಡಿ ಇಲ್ಲವೇ ನುಡಿಬಗೆಯನ್ನು ವಿಶಿಷ್ಟವೆಂದೋ ಸ್ವತಂತ್ರವೆಂದೋ ಗ್ರಹಿಸಿದರೆ, ಎಷ್ಟೋ ನುಡಿಬಗೆಗಳು ವೈವಿಧ್ಯತೆಯನ್ನು, ಯಾವುದು ತನ್ನನ್ನು ಒಂದು ಸ್ವಾಯತ್ತ ನುಡಿಯೆಂದು ಗುರುತಿಸಿಕೊಂಡಿರುತ್ತದೆಯೋ, ಆ ನುಡಿಯಲ್ಲಿ ಸಮಾವೇಶಗೊಳಿಸಲಾಗುತ್ತದೆ.

ಅವುಗಳ ನಡುವಣ ಯಾವುದೇ ರಾಚನಿಕ ಸಾಮ್ಯ ಹಾಗೂ ವೈಸಮ್ಯಗಳನ್ನು ಲೆಕ್ಕಿಸದೇ ಇಂತಹ ನಿಲುವುಗಳನ್ನು ತಾಳುವ ಬಗೆ ಅದು ಹೇಗೆ ನುಡಿಯರಿಮೆಯ ನೆಲೆಯಾಗುತ್ತದೆ?. ಈ ವಿವರಗಳು ಪರಸ್ಪರ ಅರ್ಥಗ್ರಾಹ್ಯತೆ ತತ್ವದ ನೆಲೆಗಳನ್ನು ಇನ್ನಷ್ಟೂ ಜಟಿಲಗೊಳಿಸುತ್ತವೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ಕೀಲು ಮತ್ತು ಮೂಳೆ ಚಿಕಿತ್ಸೆ ; ರೋಬೋಟಿಕ್ ಮತ್ತು ಮಿನಿಮಲಿ ಇನ್ನೇಸಿವ್ ಸರ್ಜರಿಗಳಲ್ಲಿ‌ ಮಹತ್ವದ ಬದಲಾವಣೆ : ಡಾ.ಲೋಕೇಶ್ ಎ. ವೀರಪ್ಪ

Published

on

ಸುದ್ದಿದಿನ,ದಾವಣಗೆರೆ:ವಯೋಸಹಜವಾಗಿ ಕಂಡುಬರುವ ಮೊಣಕಾಲು, ಸೊಂಟ, ಭುಜ ಮತ್ತು ಕ್ರೀಡಾ ಸಂಬಂಧಿತ ಸಂಧಿ ಸಮಸ್ಯೆಗಳಿಗೆ ಸಮಯೋಚಿತ ಚಿಕಿತ್ಸೆ ಮತ್ತು ನೂತನ ಶಸ್ತ್ರಚಿಕಿತ್ಸಾ ತಂತ್ರಜ್ಞಾನಗಳು ಹೇಗೆ ಸಹಾಯವಾಗುತ್ತಿವೆ ಹಾಗೂ ಈ ಚಿಕಿತ್ಸೆಗಳು ನೋವು ಕಡಿಮೆ ಮಾಡುವುದರ ಜೊತೆಗೆ, ರೋಗಿಗಳು ಮತ್ತೆ ಸ್ವತಂತ್ರವಾಗಿ ನಡೆಯಲು, ದಿನನಿತ್ಯದ ಚಟುವಟಿಕೆಗಳಿಗೆ ಮರಳಲು ಮತ್ತು ಆತ್ಮವಿಶ್ವಾಸದಿಂದ ಬದುಕಲು ನೆರವಾಗುತ್ತಿವೆ ಎಂದು ಮಣಿಪಾಲ್ ಆಸ್ಪತ್ರೆಯ ಮೂಳೆ ಮತ್ತು ಕೀಲು ರೋಬೋಟಿಕ್ ಜಾಯಿಂಟ್ ರಿಪ್ಲೇಸ್ಟೆಂಟ್ ಶಸ್ತ್ರ ಚಿಕಿತ್ಸಾ ತಜ್ಞರಾದ ಡಾ. ಲೋಕೇಶ್ ಎ. ವೀರಪ್ಪ ತಿಳಿಸಿದರು.

ಬುಧವಾರ ಸುದ್ದಿಗೋಷ್ಟಿ ಉದ್ದೇಶಿಸಿ‌ ಮಾತನಾಡಿದ ಅವರು
‘ಆರೋಗ್ಯಕರ ವಯೋವೃದ್ಧತೆ: ಅಸ್ತಿ ಸಮಸ್ಯೆಗಳ ನಿರ್ವಹಣೆ ಮತ್ತು ಪರಿಣಾಮಕಾರಿ ಚಿಕಿತ್ಸಾ ವಿಧಾನಗಳು ಕುರಿತು ಮೂಳೆ ಆರೋಗ್ಯದ ಮಹತ್ವವನ್ನು ಒತ್ತಿ ಹೇಳಿದರು.

ಇಂದಿನ ದಿನಗಳಲ್ಲಿ ಮೊಣಕಾಲು, ಸೊಂಟ ಮತ್ತು ಭುಜ ಸಂಧಿ ಸಮಸ್ಯೆಗಳು, ವಿಶೇಷವಾಗಿ ವಯೋವೃದ್ಧರಲ್ಲಿ ಹೆಚ್ಚುತ್ತಿವೆ. ‘ಇಂದು ಜನರು ಕೇವಲ ನೋವು ನಿವಾರಣೆಯನ್ನು ಮಾತ್ರ ಬಯಸುವುದಿಲ್ಲ. ಅವರು ಸುಲಭವಾಗಿ ನಡೆಯಲು, ಮೆಟ್ಟಿಲೇರಲು, ಮತ್ತೆ ಕೆಲಸಕ್ಕೆ ಹೋಗಲು, ಪ್ರವಾಸ ಮಾಡಲು ಮತ್ತು ಚುರುಕಿನ ಜೀವನವನ್ನು ಮುಂದುವರಿಸಲು ಬಯಸುತ್ತಾರೆ,” ಎಂದು ಹೇಳಿದರು.

“ರೋಬೋಟಿಕ್ ಜಾಯಿಂಟ್ ರಿಪ್ಲೇಸ್ಟೆಂಟ್ ಶಸ್ತ್ರಚಿಕಿತ್ಸೆ ಅಸ್ತಿ ಚಿಕಿತ್ಸೆಯ ಕ್ಷೇತ್ರದಲ್ಲಿ ಮಹತ್ವದ ಬದಲಾವಣೆಯನ್ನು ತಂದಿದೆ. ರೋಗಿಯ ದೇಹರಚನೆಗೆ ಅನುಗುಣವಾಗಿ ಶಸ್ತ್ರಚಿಕಿತ್ಸೆಯನ್ನು ಹೆಚ್ಚು ನಿಖರವಾಗಿ ಯೋಜಿಸಲು ಈ ತಂತ್ರಜ್ಞಾನ ಸಹಕಾರಿಯಾಗಿದೆ. ಇದರಿಂದ ಇಂಪ್ಲಾಂಟ್‌ಗಳ ಸರಿಯಾದ ಅಳವಡಿಕೆ, ಉತ್ತಮ ಜಾಯಿಂಟ್ ಅಲೈನ್‌ಮೆಂಟ್ ಮತ್ತು ಸಹಜ ಚಲನೆಯ ಸಾಧ್ಯತೆ ಹೆಚ್ಚುತ್ತದೆ. ರೋಗಿಗಳಿಗೆ ಕಡಿಮೆ ರಕ್ತಸ್ರಾವ, ಕಡಿಮೆ ಶಸ್ತ್ರಚಿಕಿತ್ಸೆತರ ನೋವು, ವೇಗವಾದ ಚೇತರಿಕೆ ಹಾಗೂ ಬೇಗನೆ ಸಾಮಾನ್ಯ ಜೀವನಕ್ಕೆ ಮರಳುವ ಅವಕಾಶ ದೊರೆಯುತ್ತದೆ. ಮೊಣಕಾಲು ಮತ್ತು ಸೊಂಟದ ಸಂಪೂರ್ಣ ಅಥವಾ ಭಾಗಶಃ ಜಾಯಿಂಟ್ ಬದಲಾವಣೆ (TKR/PKR) ಶಸ್ತ್ರ ಚಿಕಿತ್ಸೆಗಳಲ್ಲಿ ಈ ತಂತ್ರಜ್ಞಾನ ಉತ್ತಮ ಫಲಿತಾಂಶ ನೀಡುತ್ತಿದೆ,” ಎಂದರು.

“ಇದರ ಜೊತೆಗೆ ಭುಜದ ಆರ್ಥೋಸ್ಕೋಪಿ ಅಥವಾ ‘ಕೀಹೋಲ್ ಸರ್ಜರಿ’ಯಂತಹ ಅತ್ಯಾಧುನಿಕ ಚಿಕಿತ್ಸೆಗಳಲ್ಲಿಯೂ ಉತ್ತಮ ಫಲಿತಾಂಶಗಳನ್ನು ಕಾಣುತ್ತಿದ್ದೇವೆ. ಭುಜದ ಡಿಪ್ಲೊಕೇಶನ್ (ಭುಜದ ಕೀಲಿನ ಸರಿತ) ರೋಟೇಟರ್ ಕಫ್ (ಹರಿದ ಭುಜದ ಮಾಂಸ ಖಂಡ) ಗಾಯಗಳು, ಫೋಜನ್ ಶೋಲ್ಡರ್ (ಭುಜದ ಬಿಗಿತ) ಮೊದಲಾದ ಸಮಸ್ಯೆಗಳು ಬಹಳ ಸಾಮಾನ್ಯವಾಗಿದ್ದು, ಸಮಯಕ್ಕೆ ಚಿಕಿತ್ಸೆ ಪಡೆಯದೇ ಇದ್ದರೆ ದೈನಂದಿನ ಚಟುವಟಿಕೆಗಳ ಮೇಲೆಯೇ ಪರಿಣಾಮ ಬೀರುತ್ತವೆ. ಈಗ ಮಿನಿಮಲ್ಲಿ ಇನ್ನೇಸಿವ್ ಸರ್ಜರಿಸ್ ಅಂದರೆ ಅತಿ ಸಣ್ಣ ಕಟ್ ಮೂಲಕ ಮಾಡುವ ಈ ಶಸ್ತ್ರಚಿಕಿತ್ಸೆಗಳು ರೋಗಿಗಳಿಗೆ ಕಡಿಮೆ ನೋವು ಹಾಗೂ ವೇಗವಾದ ಚೇತರಿಕೆಯನ್ನು ನೀಡುತ್ತಿವೆ, ಎಂದು ತಿಳಿಸಿದರು.

ಇದೇ ವೇಳೆ, ಸಂಕೀರ್ಣ ಪೆಲ್ವಿಕ್ ಟ್ರಾಮಾ ಶಸ್ತ್ರಚಿಕಿತ್ಸೆಗಳು, ‘ಕಪ್ ಅಂಡ್ ಬಾಲ್’ ಜಾಯಿಂಟ್ ಸಂಬಂಧಿತ ಪ್ರೊಸೀಜರ್‌ಗಳು, ಹಾಗು ಮೊಣಕಾಲು, ಅಂಕಲ್ ಮತ್ತು ಮೊಣಕೈಗೆ ಸಂಬಂಧಿಸಿದ ಮಿನಿಮಲಿ ಇನ್ನೇಸಿವ್ ಕೀಹೋಲ್ ಶಸ್ತ್ರಚಿಕಿತ್ಸೆಗಳ ಕುರಿತು ಕೂಡ ಅವರು ಮಾಹಿತಿ ಹಂಚಿಕೊಂಡರು.

ಇವುಗಳ ಪ್ರಮುಖ ಉದ್ದೇಶ ರೋಗಿಗಳ ಚಲನವಲನವನ್ನು ಪುನಃಸ್ಥಾಪಿಸಿ, ಅವರನ್ನು ಆತ್ಮವಿಶ್ವಾಸದಿಂದ ದಿನನಿತ್ಯದ ಬದುಕಿಗೆ ಮರಳಿಸುವುದಾಗಿದೆ ಎಂದು ಹೇಳಿದರು.

ಸಂವಾದದ ವೇಳೆ ವೈದ್ಯರು, ದಾವಣಗೆರೆ ಮತ್ತು ಸುತ್ತಮುತ್ತಲಿನ ಜಿಲ್ಲೆಗಳಿಂದ ಅನೇಕ ರೋಗಿಗಳು ಸಂಕೀರ್ಣ ಅಸ್ಥಿ ಚಿಕಿತ್ಸೆಗಳು ಹಾಗೂ ಅತ್ಯಾಧುನಿಕ ಜಾಯಿಂಟ್ ಕೇರ್‌ಗಾಗಿ ಹಳೆ ವಿಮಾನ ನಿಲ್ದಾಣ ರಸ್ತೆಯ ಮಣಿಪಾಲ್ ಆಸ್ಪತ್ರೆಗೆ ನಿರಂತರವಾಗಿ ಭೇಟಿ ನೀಡುತ್ತಿರುವುದಾಗಿ ತಿಳಿಸಿದರು.

ಈ ದೀರ್ಘಕಾಲದ ವಿಶ್ವಾಸವನ್ನು ಗುರುತಿಸಿಕೊಂಡಿರುವ ಆಸ್ಪತ್ರೆ, ರೋಬೋಟಿಕ್ ನೆರವಿನ ಶಸ್ತ್ರಚಿಕಿತ್ಸೆಗಳು, ವಿಶೇಷ ಅಸ್ಥಿ ತಜ್ಞರ ಸೇವೆಗಳು ಮತ್ತು ಪುನಶ್ವೇತನ ಚಿಕಿತ್ಸೆಯನ್ನು ಮಧ್ಯ ಕರ್ನಾಟಕದ ಜನರಿಗೆ ಇನ್ನಷ್ಟು ಸುಲಭವಾಗಿ ಲಭ್ಯವಾಗುವಂತೆ ಮಾಡುವ ಬದ್ಧತೆಯನ್ನು ಪುನರುಚ್ಛರಿಸಿತು. “ನಮ್ಮ ಉದ್ದೇಶ ಕೇವಲ ಶಸ್ತ್ರಚಿಕಿತ್ಸೆ ನಡೆಸುವುದಲ್ಲ; ಜನರು ಮತ್ತೆ ಸ್ವತಂತ್ರವಾಗಿ ನಡೆಯಲು, ತಮ್ಮ ಜೀವನಶೈಲಿಗೆ ಮರಳಲು ಮತ್ತು ಸುಖಕರ ವಯೋವೃದ್ಧತೆಯನ್ನು ಅನುಭವಿಸಲು ಸಹಾಯ ಮಾಡುವುದಾಗಿದೆ,” ಎಂದು ಹೇಳಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ದಾವಣಗೆರೆ | ಇದೇ 22 ರಂದು ಕರ್ನಾಟಕ ಎಜುಕೇಶನ್ ಎಕ್ಸ್ ಪೋ – 2026 ಕಾರ್ಯಕ್ರಮ

Published

on

ಸುದ್ದಿದಿನ,ದಾವಣಗೆರೆ:ಬೆಂಗಳೂರಿನ ಜಿಎಂಕೆ ಎಡು ಟೆಕ್ ರಾಜ್ಯದ ಸಮಸ್ತ ಖಾಸಗಿ ಅನುದಾನರಹಿತ ಶಾಲಾ ಮುಖ್ಯಸ್ಥರು, ಆಡಳಿತ ಮಂಡಳಿಯ ಸದಸ್ಯರು ಹಾಗೂ ಶಿಕ್ಷಣ ಕ್ಷೇತ್ರದ ಆಸಕ್ತರಿಗಾಗಿ ನಾಳೆ (ಮೇ22) ರಂದು ಬೆಳಿಗ್ಗೆ 10 ರಿಂದ ಸಂಜೆ 5 ರವರೆಗೆ ನಗರದ ಶಾಮನೂರು ಶಿವಶಂಕರಪ್ಪ ಪಾರ್ವತಮ್ಮ ಸಮುದಾಯ ಭವನದಲ್ಲಿ “ಕರ್ನಾಟಕ ಎಜುಕೇಶನ್ ಎಕ್ಸ್ ಪೋ – 2026″ ಎಂಬ ವಿಶಿಷ್ಟ ಮತ್ತು ರಾಜ್ಯಮಟ್ಟದ ಶೈಕ್ಷಣಿಕ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಖಾಸಗಿ ಅನುದಾನ ರಹಿತ ಶಿಕ್ಷಣ ಸಂಸ್ಥೆಗಳ ಕಾರ್ಯಾಧ್ಯಕ್ಷ ಕೊಟ್ರೇಶ್ ಅವರು ತಿಳಿಸಿದ್ದಾರೆ.

ಬುಧವಾರ ಪತ್ರಿಕಾಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು ರಾಜ್ಯದಲ್ಲಿ ಖಾಸಗಿ ಅನುದಾನರಹಿತ ಶಾಲೆಗಳು ಎದುರಿಸುತ್ತಿರುವ ಅನೇಕ ಜ್ವಲಂತ ಸಮಸ್ಯೆಗಳು ಹಾಗೂ ಆಡಳಿತಾತ್ಮಕ ಸವಾಲುಗಳಿಗೆ ಪರಿಹಾರ ಮತ್ತು ಕಾನೂನುಬದ್ದ ಮಾರ್ಗದರ್ಶನ ಒದಗಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ರೂಪಿಸಲಾಗಿದೆ ಎಂದರು.

ಈ ಕಾರ್ಯಕ್ರಮದಲ್ಲಿ ಶೈಕ್ಷಣಿಕ ಉದ್ದೇಶಕ್ಕಾಗಿ ಕಡ್ಡಾಯ ಭೂ-ಪರಿವರ್ತನೆ, ಕಟ್ಟಡ ಮತ್ತು ಅಗ್ನಿ ಸುರಕ್ಷತಾ ನಿಯಮಗಳು, RTE ಸಂಬಂಧಿತ ವಿಷಯಗಳು, ಶಾಲಾ ಕಟ್ಟಡಗಳಿಗೆ ಆಸ್ತಿ ತೆರಿಗೆ, ESI, PF, GRATUITY, LWF ಹಾಗೂ ಕಾರ್ಮಿಕ ಕಾನೂನುಗಳನ್ನು ಕುರಿತು ಸಂಪನ್ಮೂಲ ವ್ಯಕ್ತಿಗಳಿಂದ ಮಾಹಿತಿ ನೀಡಲಾಗುತ್ತದೆ ಎಂದರು.

ಇದಲ್ಲದೆ, ರಾಜ್ಯದಲ್ಲಿ ಯಶಸ್ವಿಯಾಗಿ 10 ವರ್ಷ ಹಾಗೂ 25 ವರ್ಷ ಪೂರೈಸಿರುವ ಖಾಸಗಿ ಶಾಲೆಗಳಿಗೆ ಅಭಿನಂದನಾ ಪ್ರಮಾಣ ಪತ್ರ ನೀಡಿ ಗೌರವಿಸಲಾಗುತ್ತದೆ ಎಂದು ಹೇಳಿದರು.

ಶಿಕ್ಷಣ ಕ್ಷೇತ್ರದ ಹೊಸ ತಂತ್ರಜ್ಞಾನಗಳು, ಆಡಳಿತಾತ್ಮಕ ಪರಿಹಾರಗಳು, ಕಾನೂನು ಸಲಹೆಗಳು ಹಾಗೂ ಶಿಕ್ಷಣ ಕ್ಷೇತ್ರದ ಇತ್ತೀಚಿನ ಬೆಳವಣಿಗೆಗಳ ಕುರಿತು ತಿಳಿದುಕೊಳ್ಳಲು ಇದು ಅತ್ಯುತ್ತಮ ವೇದಿಕೆಯಾಗಿದ್ದು, ರಾಜ್ಯದ ಎಲ್ಲಾ ಶಾಲಾ ಮುಖ್ಯಸ್ಥರು ಹಾಗೂ ಶಿಕ್ಷಣಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮನವಿ ಮಾಡಿದರು.

ಸುದ್ದಿಗೋಷ್ಟಿಯಲ್ಲಿ Ours ನ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರಭಾಕರ್ ಉಪಸ್ಥಿತರಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಈಜುಕೊಳದಲ್ಲಿ ಸಾವು ; ಪರಿಹಾರಕ್ಕೆ ಆದೇಶ

Published

on

ಸುದ್ದಿದಿನ,ದಾವಣಗೆರೆ: ದಾವಣಗೆರೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ಮೊಹಮ್ಮದ್ ಮುಕ್ತಿಯಾರ್ ಬಿನ್ ಎಸ್. ಆರ್ ಸಮೀವುಲ್ಲ ಇವರ ಮಗ ಮೊಹಮ್ಮದ್ ಮುಬಾರಕ್ @ ಮುಬಾರಕ್ ಈತ ಮತ್ತು ನಿಸಾರ್ ಅಹಮದ್ ಬಿನ್ ಮಹಮ್ಮದ್ ಅಬಿದ್ ಮತ್ತು ಇನ್ನೊಬ್ಬರು, ಬೇತೂರು ರೋಡ್, ಸಿದ್ಧರಾಮೇಶ್ವರ ಬಡಾವಣೆ ಇವರು ತಮ್ಮ ಮಗ ತಾಜು @ ತಾಜುದ್ದೀನ್ ಇವರು ಸ್ವಿಮ್ಮಿಂಗ್ ಪೂಲ್‌ನಲ್ಲಿ ಈಜಾಡುವ ಸಂಧರ್ಭದಲ್ಲಿ ಮರಣ ಹೊಂದಿರುತ್ತಾರೆ.

ದಾವಣಗೆರೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು 4ನೇ ಎದುರುದಾರರಾದ ಸದಾನಂದ ವಗಲೆ ಹಾಗೂ 1 ರಿಂದ 3ನೇ ಎದುರುದಾರರ ವಿರುದ್ಧ, ತಮ್ಮ ಸೇವೆಯಲ್ಲಿನ ನಿರ್ಲಕ್ಷತೆಯಿಂದ ಘಟನೆ ಸಂಭವಿಸಿದ್ದು ಎಂಬ ತೀರ್ಮಾನಕ್ಕೆ ಆಯೋಗವು ಬಂದಿದ್ದು, ಈಗಾಗಲೇ, 1 ರಿಂದ 3ನೇ ಎದುರುದಾರರು, ದೂರುದಾರರಿಗೆ ರೂ.500,000/- ಲಕ್ಷವನ್ನು ಪರಿಹಾರವಾಗಿ ಈಗಾಗಲೆ ಕೊಟ್ಟಿದ್ದು, ಆದ್ದರಿಂದ 1 ರಿಂದ 3ನೇ ಎದುರುದಾರರ ವಿರುದ್ಧ ಪ್ರಕರಣವನ್ನು ವಜಾ ಮಾಡಿದೆ.

4ನೇ ಎದುರುದಾರರಾದ ಸದಾನಂದ ವಗಲೆ, ಕಾಂಟ್ರಕ್ಟರ್, ಇವರು ಈ ಎರಡು ಪ್ರಕರಣದ ದೂರುದಾರರಿಗೆ ಆದೇಶಿಸಿದ ದಿನದಿಂದ ಒಂದು ತಿಂಗಳೊಳಗೆ ಆದೇಶದ ಪ್ರಕಾರ ಪಾವತಿಸುವಂತೆ ಮೇ.19 ರಂದು ಆದೇಶಿಸಿ ರೂ. 5 ಲಕ್ಷಗಳನ್ನು ಶೇಕಡಾ 6 ವಾರ್ಷಿಕ ಬಡ್ಡಿಯೊಂದಿಗೆ ಹಾಗೂ ದೂರು ಖರ್ಚು ಹಾಗೂ ಮಾನಸಿಕ ಯಾತನೆಗೆ ತಲಾ ರೂ.5 ಸಾವಿರದಂತೆ, ಒಟ್ಟು ರೂ.10,000/-ಗಳನ್ನು ಪರಿಹಾರ ರೂಪವಾಗಿ ದೂರುದಾರರಿಗೆ ನೀಡುವಂತೆ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಪ್ರತ್ಯೇಕವಾಗಿ ಪಾವತಿಸುವಂತೆ ಜಿಲ್ಲಾ ಗ್ರಾಹಕರ ಆಯೋಗದ ಅಧ್ಯಕ್ಷರಾದ ಹೆಚ್.ಎನ್.ಮೀನಾ ಮತ್ತು ಸದಸ್ಯರಾದ ಸಿ.ಎಸ್. ತ್ಯಾಗರಾಜನ್ ಆದೇಶಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending