ದಿನದ ಸುದ್ದಿ
ನುಡಿಯ ಒಡಲು – 14 | ನುಡಿ ವರ್ಸಸ್ ಒಳನುಡಿ
- ಡಾ. ಮೇಟಿ ಮಲ್ಲಿಕಾರ್ಜುನ, ಸಹ ಪ್ರಾಧ್ಯಾಪಕರು, ಭಾಷಾಶಾಸ್ತ್ರ ವಿಭಾಗ, ಸಹ್ಯಾದ್ರಿ ಕಾಲೇಜು, ಶಿವಮೊಗ್ಗ
ನುಡಿ ಮತ್ತು ಒಳನುಡಿಗಳ ನಡುವಣ ಅಂತರಗಳನ್ನು ಗುರುತಿಸಲು ಎರಡು ಬಗೆಯ ಒರೆಗಲ್ಲುಗಳನ್ನು ಬಳಸುತ್ತಾರೆ. ಒಂದು ನುಡಿಯರಿಮೆಯ ನೆಲೆಗಟ್ಟನ್ನು ಪಡೆದಿದ್ದರೆ, ಮತ್ತೊಂದು ಸಾಮಾಜಿಕ ರಾಜಕೀಯ ನೆಲೆಗಳ ಮೇಲೆ ನಿರ್ಧಾರಗೊಳ್ಳುತ್ತದೆ. ಎತ್ತುಗೆಗಾಗಿ ನುಡಿಯರಿಮೆಯ ನೆಲೆಗಳನ್ನು ಇಲ್ಲೀಗ ನೋಡಬಹುದು;
1. ಪರಸ್ಪರ ಅರ್ಥಗ್ರಾಹ್ಯತೆಯ ಸಾಧ್ಯವೇ?
ಹೌದು? = ಒಳನುಡಿ
ಇಲ್ಲ? = ನುಡಿ
ಒಂದೇ ನುಡಿಯ ಬೇರೆ ಬೇರೆ ಬಗೆಗಳನ್ನು ಒಬ್ಬರಿಗೊಬ್ಬರು ಅರಿಯುವಂತಾದರೆ ಅದು ಒಳನುಡಿ. ಇಲ್ಲವಾದರೆ ಅವುಗಳನ್ನು ಬೇರೆ ಬೇರೆ ನುಡಿಗಳನ್ನಾಗಿ ಗುರುತಿಸಲಾಗುತ್ತದೆ. ಅಂದರೆ ಈ ಕೆಳಗಿನ ಸೂತ್ರದ ಮೂಲಕ ಇದನ್ನು ಇನ್ನೂ ನಿಚ್ಚಳವಾಗಿ ತಿಳಿಯಬಹುದು. ಉದಾ.ಗಳು;
1. ಧಾರವಾಡ ವರ್ಸಸ್ ಮೈಸೂರು ವರ್ಸಸ್ ಮಂಗಳೂರು ವರ್ಸಸ್ ಬೀದರ ವರ್ಸಸ್ ಚಾಮರಾಜ ನಗರ ವರ್ಸಸ್ ಬಳ್ಳಾರಿ = ಒಳನುಡಿಗಳು
2. ಬ್ರಿಟಿಶ್ ವರ್ಸಸ್ ಅಮೇರಿಕನ್ ವರ್ಸಸ್ ಐರಿಶ್ ವರ್ಸಸ್ ಆಸ್ಟ್ರೇಲಿಯಾ = ಒಳನುಡಿಗಳು
ಈ ಮೇಲಿನ ಎರಡೂ ಸನ್ನಿವೇಶದಲ್ಲಿ ಆಯಾ ಗುಂಪಿನ ಒಳನುಡಿಗಳಲ್ಲಿ ಪರಸ್ಪರ ಸಂವಹನ ಸಾಧ್ಯವಾಗುವುದರಿಂದ ಇವುಗಳ ನಡುವಣ ನಂಟಸ್ತಿಕೆಯನ್ನು ಅಖಂಡತೆಯ ತತ್ವದ ನೆಲೆಯಲ್ಲಿ ಕಾಣಬಹುದು. ಈ ಒಳನುಡಿಗಳ ರಾಚನಿಕ ಯಾವ ನಿಲುವುಗಳು ಒಂದನ್ನು ಇನ್ನೊಂದರಿಂದ ಹೇಗೆ ಬೇರ್ಪಡಿಸುತ್ತವೆ? ಈ ರಾಚನಿಕ ನೆಲೆಗಳು ಪ್ರಾದೇಶಿಕವಾಗಿ ಹೇಗೆ ಹರಡಿಕೊಂಡಿವೆ? ಹಾಗೂ ಪ್ರದೇಶ ಮತ್ತು ಒಳನುಡಿಗಳ ನಂಟಸ್ತಿಕೆಯ ಅಂತರ್ಸಂಬಂಧಗಳು ಯಾವ ಬಗೆಯವು? ಎಂಬೆಲ್ಲ ಸಂಗತಿಗಳನ್ನು ಲೆಕ್ಕಿಸದೆಯೂ, ಕೇವಲ ಪರಸ್ಪರ ಸಂವಹನ ಸಾಧ್ಯತೆಯ ಮಟ್ಟವನ್ನು ಗಮನದಲ್ಲಿಟ್ಟುಕೊಂಡು, ಒಳನುಡಿಗಳು ರೂಪುಗೊಳ್ಳುವ ಬಗೆಯನ್ನು ಇಲ್ಲಿ ಕಾಣಬಹುದು.
2. ಸಾಮಾಜಿಕ ಮತ್ತು ರಾಜಕೀಯ ನಿಲುವುಗಳು ಕಾರಣವಾದರೇ?
1. ನಾರ್ವೇ ವರ್ಸಸ್ ಸ್ವೀಡನ್ ವರ್ಸಸ್ ಡೆನಿಶ್ = ನುಡಿಗಳು (ಇಲ್ಲಿ ಪರಸ್ಪರ ಗ್ರಾಹ್ಯತೆ ಸಾಧ್ಯವಿದೆ).
2. ತುಳು ವರ್ಸಸ್ ಕೊಡವ ವರ್ಸಸ್ ಬಡಗ ವರ್ಸಸ್ ಕನ್ನಡ = ನುಡಿಗಳು (ಇಲ್ಲಿ ಪರಸ್ಪರ ಸಂವಹನ ಸಾಧ್ಯವಿಲ್ಲ).
3. ಕಾಂಟೀಸ್ ವರ್ಸಸ್ ಮಂಡೋರಿಯನ್ ವರ್ಸಸ್ ಹಕ್ಕ ವರ್ಸಸ್ ಹೊಕ್ಕ್ಯಿನ್ = ಒಳನುಡಿ (ಇಲ್ಲಿ ಪರಸ್ಪರ ಸಂವಹನಸಾಧ್ಯವಿಲ್ಲ, ಆದರೂ ಇವುಗಳನ್ನು ಚೈನಿಸ್ ನುಡಿಯ ಒಳನುಡಿಗಳೆಂದು ಗುರುತಿಸಿದ್ದಾರೆ).
4. ಡೆನಿಶ್ ವರ್ಸಸ್ ಸ್ವೀಡಿಶ್ = ನುಡಿಗಳು (ಡೆನಿಶ್ ನುಡಿಯಿಗರು ಸ್ವೀಡಿಶ್ನ್ನು ಅರಿತುಕೊಳ್ಳುತ್ತಾರೆ, ಆದರೆ ಸ್ವೀಡಿಶ್ ನುಡಿಯಿಗರು ಡೆನಿಶ್ನ್ನು ಅರಿತುಕೊಳ್ಳಲಾರರು ಹಾಗಾದರೆ ಇಂತಹ ನೆಲೆಯನ್ನು ಹೇಗೆ ಗುರುತಿಸುವುದು).
5. ಮರಾಠಿ ವರ್ಸಸ್ ಕೊಂಕಣಿ = ಒಳನುಡಿಗಳು (ಪರಸ್ಪರ ಸಂವಹನ ನಿರೀಕ್ಷಿತ ಮಟ್ಟದಲ್ಲಿಲ್ಲ).
6. ಬಡಗ ವರ್ಸಸ್ ಸೋಲಿಗ = ಒಳನುಡಿ (ಇವುಗಳ ನಡುವೆ ಪರಸ್ಪರ ಸಂವಹನ ಸಾಧ್ಯವಿಲ್ಲ. ಆದಾಗ್ಯೂ ಅವುಗಳನ್ನು ಕನ್ನಡದ ಒಳನುಡಿಗಳೆಂದು ಕರೆಯುತ್ತಾರೆ).
ಈ ಎರಡನೇ ಸನ್ನಿವೇಶದಲ್ಲಿ ನುಡಿ ಹಾಗೂ ಒಳನುಡಿಗಳ ನಡುವಣ ವ್ಯತ್ಯಾಸಗಳನ್ನು ಗುರುತಿಸಲು ಪರಸ್ಪರ ಅರ್ಥಗ್ರಾಹ್ಯ ತತ್ವವನ್ನೇ ಮುಖ್ಯ ಮಾನದಂಡವನ್ನಾಗಿ ಇಟ್ಟುಕೊಂಡಿಲ್ಲ ಎಂಬುದು ಇಲ್ಲಿ ನಿಚ್ಚಳವಾಗಿ ಕಾಣುತ್ತದೆ. ಈ ಕೆಳಗಿನ ಚಿತ್ರದ ಮೂಲಕ ಈ ತೊಡಕನ್ನು ಇನ್ನಷ್ಟು ವಿವರವಾಗಿ ನೋಡಬಹುದು;
ಇವುಗಳ ಸಂವಹನದ ಗ್ರಹಿಕೆಯಲ್ಲಿ ಸಮಾನತೆಯಿಲ್ಲಿ. ಗ್ರಹಿಕೆಯಲ್ಲಿ ಇಂತಹ ಅಸಮಾನ ಮಟ್ಟವಿದ್ದರೂ, ಬೇರೆ ನುಡಿಯೆಂದು ಕರೆಯದೇ ಒಳನುಡಿಯೆಂದು ಗುರುತಿಸುವುದಕ್ಕೆ ಸಾಮಾಜಿಕ, ಚಾರಿತ್ರಿಕ, ಪ್ರಾದೇಶಿಕ ಮತ್ತು ರಾಜಕೀಯ ನಿಲುವುಗಳೇ ಕಾರಣ. ನುಡಿ ಮತ್ತು ಒಳನುಡಿಗಳ ನಡುವೆ ಯಾವುದೇ ಬಗೆಯ ಖಚಿತ ಭಿನ್ನತೆಗಳನ್ನು ಪಟ್ಟಿ ಮಾಡಲು ಸಾಧ್ಯವಿಲ್ಲ ಎಂಬ ಸಂಗತಿ ಈ ಚರ್ಚೆಗಳಿಂದಲೇ ಮನವರಿಕೆಯಾಗುತ್ತದೆ.
ಸಾಂಸ್ಕೃತಿಕ ಅಸಮಾನ ತತ್ವಗಳು, ರಾಜಕೀಯ ಮತ್ತು ಆರ್ಥಿಕ ರಚನೆಗಳು ಹಾಗೂ ಚಾರಿತ್ರಿಕವಾಗಿ ನೆಲೆನಿಂತಿರುವ ಅಧಿಕಾರ ಸಂಬಂಧಗಳೇ ನುಡಿ ಮತ್ತು ಒಳನುಡಿ ಎಂಬಂತಹ ಡೈಕಾಟಮಿಯನ್ನು ಹುಟ್ಟು ಹಾಕುತ್ತವೆ. ನುಡಿಯೆಂದರೆ ಅತ್ಯಂತ ಮೇಲು (ಸೂಪರ್ಆರ್ಡಿನೇಟ್) ಎಂದೋ, ಒಳನುಡಿಯೆಂದರೆ ಅತ್ಯಂತ ಕೀಳು (ಸಬ್ಆರ್ಡಿನೇಟ್) ಎಂದೋ ನಿರ್ವಚಿಸಲಾಗಿದೆ. ಒಳನುಡಿಗಳಿಗೆ ಅಂಟಿರುವ ಕೀಳು, ಅಧೀನ, ವಿರೂಪ ಮುಂತಾದಂತಹ ಕಳಂಕಗಳನ್ನು ತಪ್ಪಿಸಲು ಉಪಭಾಷೆ ಇಲ್ಲವೇ ಒಳನುಡಿ ಎಂದು ಕರೆಯುವ ಬದಲಾಗಿ ನುಡಿಬಗೆ (ಲಿಂಗ್ವಿಸ್ಟಿಕ್ ವೆರೈಟಿ) ಎಂದು ಗುರುತಿಸಬೇಕು ಎಂಬುದು ಹೊಸಕಾಲದ ಬಹುತೇಕ ಸಾಮಾಜಿಕ ನುಡಿಯರಿಗರ ನಿಲುವಾಗಿದೆ.
ಸಾಮಾಜಿಕವಾಗಿ ನೆಲೆ ನಿಂತಿರುವ ಅಸಮಾನತೆಗಳು, ನುಡಿಯ ಮೂಲಕ ಹೇಗೆ ಪ್ರತಿನಿಧಿಸುತ್ತವೆ ಎಂಬುದಕ್ಕೆ ಉಪಭಾಷೆ ಮತ್ತು ಒಳನುಡಿಗಳೇ ಸಾಕ್ಷಿಯಾಗಿವೆ. ಅದಕ್ಕಾಗಿ ಮೇಲು ನುಡಿ (ಮೇಲು ಜಾತಿ) ಹಾಗೂ ಕೀಳು ನುಡಿ (ಕೀಳು ಜಾತಿ)ಗಳು ತಲೆಯೆತ್ತಿವೆ. ಇಂತಹ ತರತಮ ನಿಲುವುಗಳನ್ನು ಮೊದಲು ಕಿತ್ತು ಹಾಕಬೇಕು. ಅದಕ್ಕಾಗಿ ಹೊಸ ನುಡಿಗಟ್ಟುಗಳನ್ನು ಬಳಸುವ ಅಗತ್ಯವಿದೆ. ಇವು ಕೇವಲ ಟೆಕ್ನಿಕಲ್ ಪದಗಳಾಗಿರದೇ, ಲೋಕವನ್ನು ನೋಡುವ ಕ್ರಮವನ್ನೇ ಬದಲಿಸುತ್ತವೆ.
ನುಡಿಬಗೆ ಎಂಬುದು ಸಿದ್ಧಮಾದರಿಯ ತಿಳಿವನ್ನೇ ಪಲ್ಲಟಗೊಳಿಸುವ ಬಗೆಯೆಂದೇ ಹೇಳಬೇಕಾಗುತ್ತದೆ. ನುಡಿಬಗೆ ಕೇವಲ ವ್ಯತ್ಯಾಸವನ್ನು ಸೂಚಿಸುವ ಪದ. ಅಂದರೆ ಒಂದು [ಅ] ಇನ್ನೊಂದಕ್ಕಿಂತ [ಆ] ಹೇಗೆ ಬೇರೆ ಎಂಬುದನ್ನು ಮಾತ್ರ ತೋರಿಸುತ್ತದೆ, ಹೊರತಾಗಿ ತರತಮ ನೆಲೆಗಳನ್ನಲ್ಲ. ಬಗೆ/ವ್ಯತ್ಯಾಸಗಳು (ಡಿಫರೆನ್ಸ್) ಸ್ವಾಯತ್ತ ಅಸ್ತಿತ್ವವನ್ನು ಕಾಣಿಸುತ್ತವೆ.
ಆದರೆ ತರತಮ ನಿಲುವುಗಳು ಒಂದು ಮೇಲು ಮತ್ತೊಂದು ಕೀಳು ಎಂಬ ಅಸಮಾನ ಡೈಕಾಟಮಿಯನ್ನು ಹುಟ್ಟು ಹಾಕುತ್ತವೆ. ಒಂದು ಮೇಲು ಮತ್ತೊಂದು ಕೀಳು ಎಂದು ಹೀಗೆ ಹೇಳುವುದಕ್ಕೆ ಯಾವ ಆಧಾರವೂ ಇಲ್ಲ. ನುಡಿಗಳನ್ನು ಕೇವಲ ಉಲಿ ಮತ್ತು ಪದಕೋಶಿಕ (ಲೆಕ್ಷಿಕಲ್) ನೆಲೆಯಲ್ಲಿ ಮಾತ್ರ ಬೇರ್ಪಡಿಸಿ ಅವುಗಳ ನಡುವೆ ತರಮತಗಳನ್ನು ಹುಟ್ಟಹಾಕಲಾಗಿದೆ.
ಲೋಕವನ್ನು ನೋಡುವ ಬಗೆಯಲ್ಲಿಯೇ ಅನನ್ಯತೆ ಮತ್ತು ವಿಶಿಷ್ಟತೆ ಇರುತ್ತದೆ. ಪ್ರತೀ ನುಡಿಯು ಹಲವು ಬಗೆಗಳಲ್ಲಿ ತನ್ನದೆಯಾದ ಇಂತಹ ವಿಶಿಷ್ಟತೆ ಹಾಗೂ ಅನನ್ಯತೆಯ ಗುರುತುಗಳನ್ನು ಇಟ್ಟುಕೊಂಡಿರುತ್ತದೆ. ಅವುಗಳ ವೈವಿಧ್ಯತೆ ಬಹುತೇಕ ಪದಕೋಶಿಕ ನೆಲೆಯಿಂದ ಕೂಡಿರುತ್ತದೆ. ಇಂತಹ ವೈವಿಧ್ಯತೆಗೆ ಸಾಮಾಜಿಕ, ಸಾಂಸ್ಕೃತಿಕ ಮತ್ತು ಮಾನಸಿಕ ಕಾರಣಗಳಿರುತ್ತವೆ. ಆಯಾ ಪರಿಸರಕ್ಕೆ ಅನುಗುಣವಾಗಿ ನುಡಿ ಇಲ್ಲವೇ ಒಳನುಡಿಗಳ ಸ್ವರೂಪ ರೂಪುಗೊಂಡಿರುತ್ತವೆ.
ಹಾಗಾಗಿ ಮಾನವರ ಚಿಂತನೆಯ ಮಾದರಿ, ಗ್ರಹಿಕೆಯ ಬಗೆಗಳು ರೂಪುಗೊಳ್ಳುವುದು, ಅವರಲ್ಲಿ ಅಂತಸ್ಥವಾಗಿರುವ ನುಡಿ ಸಾಮಥ್ರ್ಯದಿಂದಲೇ ಎಂಬುದನ್ನು ಮರೆಯುವಂತಿಲ್ಲ. (ನುಡಿಯ) ಅಂತಸ್ಥ ಸಾಮಥ್ರ್ಯದಲ್ಲಿ ತರಮತಮ ಎಂಬದು ಇರುವುದಿಲ್ಲ. ಬದಲಾಗಿ ನುಡಿಗಳ ನಡುವಣ ಸಮಾನ ತತ್ವಗಳು ಹಾಗೂ ವಿಕಲ್ಪಗಳು ಮಾತ್ರವಿರುತ್ತವೆ. ಇವುಗಳ ಆಧಾರದ ಮೇಲೆ ನುಡಿಗಳನ್ನು ಬೇರ್ಪಡಿಸಿ ಬೇರೆ ಬೇರೆ ನುಡಿಗಳು ಹುಟಿಸಬಹುದು.
ಕೇವಲ ಹೊರಪದರ ರಚನೆಯನ್ನು ಮಾತ್ರ ಪರಿಗಣಿಸಿ, ನುಡಿಯ ಇಡೀ ರಾಚನಿಕ ಸ್ವರೂಪವನ್ನು ಅರಿಯಲು ಸಾಧ್ಯವಿಲ್ಲ. ಹಾಗಾಗಿ ಚಾಮ್ಸ್ಕಿ ಹೇಳುವ ನುಡಿಯ ಏಕರೂಪತೆ (ಲಿಂಗ್ವಿಸ್ಟಿಕ್ ಹೋಮಿಜಿನಿಟಿ) ಎನ್ನುವುದು ನುಡಿಯ ಹೊರಪದರ ರಾಚನಿಕ ವ್ಯವಸ್ಥೆಗೆ ಸಂಬಂಧಿಸಿದ್ದಲ್ಲ. ಅದು ಅಂತಸ್ಥ ಸಾಮರ್ಥ್ಯಕ್ಕೂ ಹಾಗೂ ಒಳಪದರ ರಚನೆಗೂ ಸಂಬಂಧಿಸಿದ್ದು. ಹಾಗಾಗಿ ಚಾಮ್ಸ್ಕಿ ಪ್ರಕಾರ ನುಡಿಯನ್ನು ಅರಿಯುವುದೆಂದರೆ, ಅದರ ಅಂತಸ್ಥ ಸಾಮಥ್ರ್ಯದ ರಾಚನಿಕ ಸ್ವರೂಪವನ್ನು ಅರಿಯುವುದಾಗಿದೆ.
ಅಂದರೆ ಈ ನುಡಿ ಮತ್ತು ಒಳನುಡಿ ಎಂಬ ನೆಲೆಗಳನ್ನು ಬೇರೆ ತಾತ್ವಿಕ ಚೌಕಟ್ಟಿನಿಂದ ಮರು ಕಟ್ಟಿಕೊಳ್ಳುವ ಅಗತ್ಯವಿದೆ. ಏಕೆಂದರೆ ನುಡಿಯ ರಚನೆ ಎಂಬುದು ಮಾನವರಲ್ಲಿ ಜನ್ಮಜಾತವಾಗಿ ಬಂದಿರುತ್ತದೆ. ಹೊರತು ಯಾವುದೇ ಸಾಮಾಜಿಕ ವಿಶಿಷ್ಟತೆ ಇಲ್ಲವೇ ರಾಜಕೀಯ ತೀರ್ಮಾನದಿಂದ ನಿರ್ಧಾರವಾಗುವಂತಹದಲ್ಲ. ಪ್ರತೀ ಮಾನವನ ಮೆದುಳಿನಲ್ಲಿ ಅವರು ರೂಢಿಸಿಕೊಳ್ಳುವ ನುಡಿಗೆ ಸಂಬಂಧಿಸಿದ ರಾಚನಿಕ ನಮೂನೆಗಳು ಮಾತ್ರವಿರುವುದಿಲ್ಲ. ಅವನು ಇಲ್ಲವೇ ಅವಳು ರೂಢಿಸಿಕೊಳ್ಳಬಹುದಾದ ಯಾವುದೇ ನುಡಿಗೆ ಹೊಂದಿಕೆಯಾಗುವ ರಾಚನಿಕ ನಮೂನೆಗಳು ಇರುತ್ತವೆ.
ನುಡಿ ಮತ್ತು ಒಳನುಡಿಗಳ ಕುರಿತ ನಿಲುವುಗಳು ಕೇವಲ ಸಾಮಾಜಿಕ ಇಲ್ಲವೇ ರಾಜಕೀಯ ಮಾನದಂಡಗಳಿಂದ ಮಾತ್ರ ರೂಪುಗೊಳ್ಳಲು ಸಾಧ್ಯವಿಲ್ಲ ಎಂಬುದು ಮಾತ್ರ ಖಚಿತವಾದರೂ, ಅವುಗಳು ಅಂತಹ ನೆಲೆಗಳಿಂದಲೇ ಹೆಚ್ಚು ಗಟ್ಟಿಗೊಂಡಿವೆ. ಪರಸ್ಪರ ಸಂವಹನ/ ಅರ್ಥಗ್ರಾಹ್ಯತೆಯ ಕುರಿತ ಕೇಳ್ವಿಯೇ ಇಲ್ಲಿ ಅಪ್ರಸ್ತುತವಾಗಿದೆ. ಏಕೆಂದರೆ ನುಡಿಗಳ ನಡುವಣ ವ್ಯತ್ಯಾಸಗಳು ವಿಕಲ್ಪಗಳ (ಪ್ಯಾರಮೀಟರ್ಸ್) ಮೂಲಕ ಕಾಣಿಸಿಕೊಂಡರೆ, ನುಡಿಗಳ ನಡುವಣ ಸಮಾನತೆಗಳು (ಪ್ರಿನ್ಸಿಪಲ್ಸ್) ತತ್ವಗಳ ಮೂಲಕ ನಿರ್ಧಾರವಾಗುತ್ತವೆ.
ಹಾಗಾಗಿ ನುಡಿ ಮತ್ತು ಒಳನುಡಿಗಳನ್ನು ಗುರುತಿಸುವುದೆಂದರೆ, ಅವುಗಳ ನುಡುವಣ ವಿಕಲ್ಪಗಳನ್ನು ಗುರುತಿಸುವುದೋ ಇಲ್ಲವೇ ಕೇವಲ ಹೊರಪದರ ರಚನೆಗಳಲ್ಲಿ ಕಾಣುವ ವ್ಯತ್ಯಾಸಗಳನ್ನು ಗುರುತಿಸುವುದೋ ಎಂಬ ಗೊಂದಲ ತಲೆಯೆತ್ತುತ್ತದೆ. ಹಾಗಾಗಿ ಪರಸ್ಪರ ಅರ್ಥಗ್ರಾಹ್ಯತೆಯ ತತ್ವ ಅಷ್ಟೊಂದು ಮಹತ್ವದ ಸಂಗತಿಯಾಗಿ ಕಾಣಲಾರದು.
ಜಾನ್ ಲಯನ್ಸ್ (1981) ಎಂಬ ನುಡಿಯರಿಗನ ಪ್ರಕಾರ ನುಡಿಗಳಲ್ಲಿ ಕೆಲವು ಮೇಲು, ಮತ್ತೆ ಕೆಲವು ಕೀಳು ಅನ್ನುವ ಮಾತು ಸೈದ್ಧಾಂತಿಕ ನುಡಿಯರಿಮೆಯಿಂದಾಗಲಿ ಇಲ್ಲವೇ ನುಡಿದತ್ತವನ್ನು ಕಲೆಹಾಕಿ ಆ ಮೂಲಕ ಸಂಶೋಧನೆಯನ್ನು ಮಾಡಿ ಸಾಬೀತುಗೊಳಿಸಿದ ಸಂಶೋಧನೆಯ ಫಲಿತವೆಂದಾಗಲಿ ಅಲ್ಲ. ಇದು ಇನ್ನೂ ಸಂಶೋಧನೆಗೆ ಒಳಪಟ್ಟು ಆ ಮೂಲಕ ನಿರ್ಧಾರಗೊಳ್ಳಬೇಕಾದ ಸಂಗತಿ ಇಲ್ಲವೇ ಇದನ್ನು ಒಂದು ಕಲ್ಪಿತ ಪ್ರಮೆಯೆಂದು ಗುರುತಿಸಬಹುದೇ ಹೊರತು ಬೇರೇನೂವಲ್ಲ.
ಹಾಗಾಗಿ ಹೊಸಕಾಲದ ವೈಚಾರಿಕ ನೆಲೆಯ ಮೇಲೆ ಹುಟ್ಟಿಕೊಂಡ ನಿಗಮನ ತರ್ಕ (ಡಿಡಕ್ಟಿವಿಜಮ್) ವಿಧಾನ ತತ್ವವನ್ನು ಚಾಮ್ಸ್ಕಿ ಪರಿಚಯಿಸಿದನು. ಇದರ ಪ್ರಕಾರವೂ ಕೂಡ ನುಡಿಗಳ ನಡುವಿನ ಯಾವುದೇ ಬಗೆಯ ತರತಮಗಳನ್ನು ಗುರುತಿಸುವುದು ಸಾಧ್ಯವಿಲ್ಲ. ಆದರೆ ಚಾಮ್ಸ್ಕಿಯ ಪ್ರಕಾರ ಮಾನವರ ನುಡಿಗಳಲ್ಲಿ ‘ಹೆಚ್ಚು ಸಜ್ಜಾದ, ಹೆಚ್ಚು ಅಣಿಯಾದ’ ನುಡಿಗಳು ಮತ್ತು ‘ಕಡಿಮೆ ಸಜ್ಜಾದ, ಕಡಿಮೆ ಅಣಿಯಾದ’ ನುಡಿಗಳೆಂದು ವಿಂಗಡಿಸಬಹುದು. ನುಡಿಗಳ ಬಗ್ಗೆ ಮತ್ಯಾವ ‘ಮೌಲ್ಯ ನಿರ್ಣಯ’ (ವ್ಯಾಲ್ಯೂ ಜೆಡ್ಜಮೆಂಟ್) ಮಾಡಲು ಸಾಧ್ಯ ಇಲ್ಲ. ಹಾಗೂ ಮತ್ಯಾವುದೆ ಮೌಲ್ಯ ನಿರ್ಣಯವೂ ಸಲ್ಲದು.
ಇಂಗ್ಲಿಶ್ ಇವತ್ತು ಲೋಕದಲ್ಲಿ ಪಡೆದಿರುವ ಜಾಗ ತನ್ನದೇ ಆದ ಅಭಿವ್ಯಕ್ತಿಯ ಬಲದಿಂದ ಅಲ್ಲ. ಇದೊಂದು ಚಾರಿತ್ರಿಕ ಬೆಳವಣಿಗೆಯ ಪರಿಣಾಮದಿಂದ ರೂಪುಗೊಂಡ ಆಟ ಎಂದು ಹೇಳಬಹುದು. ಚರಿತ್ರೆಯ ನಿಲುವುಗಳು ಇಂಗ್ಲಿಶ್ನ್ನು ಹೆಚ್ಚು ಹೆಚ್ಚು ಸಜ್ಜುಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿವೆ. ಸಂಸ್ಕೃತ ಇಲ್ಲವೇ ಬೇರಾವುದೇ ನುಡಿಗಳು ಈ ಜಾಗದಲ್ಲಿ ಇದ್ದಿದ್ದರೆ, ಈ ಮಟ್ಟಿನ ಮಹತ್ವವನ್ನು ಪಡೆದುಕೊಳ್ಳುತ್ತಿದ್ದವು ಎಂದು ಹೇಳುವುದು ದುಸ್ತರ. ಒಂದು ವೇಳೆ ಬೇರೆ ನುಡಿಗಳು ಬೆಳೆಯಬಹುದಿತ್ತೆಂದು ಅನ್ನಿಸಿದರೂ, ಇಂಗ್ಲಿಶ್ ಹಾಗೂ ಸಂಸ್ಕೃತದಷ್ಟು ಬಲಶಾಲಿಗಳಾಗಿ ರೂಪುಗೊಳ್ಳುತ್ತಿರಲಿಲ್ಲ ಎಂಬುದು ಗಮನಾರ್ಹ.
ಪರಸ್ಪರ ಅರ್ಥಗ್ರಾಹ್ಯತೆಯ ತತ್ವ: ತೊಡಕುಗಳು ಎಂತಹವು?
ಪರಸ್ಪರ ಅರ್ಥಗ್ರಾಹ್ಯತೆಯ ತತ್ವವನ್ನು ನುಡಿ ಹಾಗೂ ಒಳನುಡಿಗಳ ನಡುವೆ ಗಡಿಗೆರೆಗಳನ್ನು ಗುರುತಿಸಲು ಮಾನದಂಡವನ್ನಾಗಿ ಬಳಸುವಲ್ಲಿ ಸಾಕಷ್ಟು ಸಿಕ್ಕಲುಗಳಿವೆ. ಈಗಾಗಲೇ ಕೆಲವು ಸಿಕ್ಕುಗಳು ಮೇಲಿನ ಚರ್ಚೆಯಿಂದ ನಮ್ಮ ಗಮನಕ್ಕೆ ಬಂದಿವೆ. ಇವುಗಳಲ್ಲಿ ಅತ್ಯಂತ ಮುಖ್ಯವಾದ ತೊಡಕು ಏನೆಂದರೆ ಅರ್ಥದ ಮಟ್ಟ (ಪ್ರಮಾಣ)ದಲ್ಲಿ ವ್ಯತ್ಯಾಸಗಳಿವೆ. ಅಂದರೆ ಸ್ವೀಡಿಶ್ ನುಡಿಯಿಗರು ನಾರ್ವೇಯನ್ನು ಚನ್ನಾಗಿ ಅರಿಯಬಲ್ಲರು.
ಆದರೆ ನಾರ್ವೇ ನುಡಿಯಿಗರಿಗೆ ಸ್ವೀಡಿಶ್ನ್ನು ಅದೇ ಮಟ್ಟದಲ್ಲಿ ಅರಿಯಲು ಸಾಧ್ಯವಿಲ್ಲ. ಸ್ಕ್ಯಾಂಡಿನೆವಿಯನ್ನರಲ್ಲಿ ಪೂರ್ಣ ಪ್ರಮಾಣದ ಪರಸ್ಪರ ಸಂವಹನ ಸಾಧ್ಯವಿಲ್ಲದಿದ್ದರೂ, ಅವರಲ್ಲಿ ತಕ್ಕಮಟ್ಟಿಗಾದರೂ ಪರಸ್ಪರ ಸಂವಹನ ಇರುವುದನ್ನು ಕಾಣಬಹುದು. ಇಂತಹ ಸನ್ನಿವೇಶದಲ್ಲಿ ಕೆಲವು ರಿಯಾತಿಗಳು ಇದ್ದೇ ಇರುತ್ತವೆ. ಎತ್ತುಗೆಗಾಗಿ ನಿಧಾನವಾಗಿ ಮಾತನಾಡುವುದು, ಪದಗಳು ಇಲ್ಲವೇ ಉಲಿಗಳನ್ನು ಬಿಟ್ಟು ಉಚ್ಚರಿಸುವುದು, ಅರ್ಥ ಪಲ್ಲಟಗಳನ್ನು ಉಂಟುಮಾಡುವುದು ಮುಂತಾದವುಗಳನ್ನು ಕಾಣಬಹುದು.
ಆದರೆ ಜರ್ಮನ್ನಿನ ಒಳನುಡಿಗಳಲ್ಲಿ ಪರಸ್ಪರ ಸಂವಹನಕ್ಕೆ ಅವಕಾಶವೇ ಇಲ್ಲ. ಈ ಎರಡೂ ಸನ್ನಿವೇಶಗಳಲ್ಲಿ ಪರಸ್ಪರ ಅರ್ಥಗ್ರಾಹ್ಯತೆಯ ಮಟ್ಟದಲ್ಲಿ ಯಾವುದೇ ಸಮಾನತೆಯಿಲ್ಲ ಎಂಬುದು ಮಾತ್ರ ಎದ್ದು ಕಾಣುತ್ತದೆ. ನಮ್ಮ ಸಂದಂರ್ಭದಲ್ಲಿಯೂ ಇಂತಹ ತೊಡಕುಗಳಿವೆ. ಆದರೆ ಅವುಗಳನ್ನು ಬಿಡಿಸಿ ನೋಡುವ ಬಗೆಗಳು ಬೇರೆಯಾಗಿವೆ ಎಂದು ಕಾಣುತ್ತದೆ.
ಅಂದರೆ ಮಲೆಯಾಳಂ ನುಡಿಯಿಗರು ತಕ್ಕ ಮಟ್ಟಿಗೆ ತಮಿಳನ್ನು ಅರಿಯಬಲ್ಲವರಾದರೆ, ತಮಿಳು ನುಡಿಯಿಗರಿಗೆ ಮಲೆಯಾಳಂ ಅರಿತುಕೊಳ್ಳಲು ದುಸ್ತರವಾಗುತ್ತದೆ. ಹಾಗೂ ಬೀದರ ಕನ್ನಡದ ಆಡುಗರು ಕರ್ನಾಟಕದ ಎಲ್ಲ ವಲಯಗಳ ಕನ್ನಡವನ್ನು ಅರಿತುಕೊಳ್ಳಬಲ್ಲರು. ಆದರೆ ಅವರ ಕನ್ನಡವನ್ನು ಇತರ ಒಳನುಡಿಯಿಗರು ಅದೇ ಪ್ರಮಾಣದಲ್ಲಿ ಅರಿತುಕೊಳ್ಳಲಾರರು.
ಪರಸ್ಪರ ಅರ್ಥಗ್ರಾಹ್ಯತೆಯ ತತ್ವ ಬೇರೆಯೇ ಬಗೆಯ ಮಾನದಂಡಗಳನ್ನು ನೆಚ್ಚಿಕೊಂಡಿರುತ್ತೆಂದು ಕಾಣುತ್ತದೆ. ಅವುಗಳೆಂದರೆ ಬೇರೆ ಒಳನುಡಿಗಳಿಗೆ ಒಡ್ಡಿಕೊಳ್ಳುವ ಪ್ರಮಾಣ, ಶಿಕ್ಷಣದಲ್ಲಿ ಒಳನುಡಿಗಳಿಗೆ ಸಿಗುವ ಅವಕಾಶ ಇಲ್ಲವೇ ಬಳಕೆಯ ಪ್ರಮಾಣ ಹಾಗೂ ಬೇರೆ ಒಳನುಡಿ ಮತ್ತು ಆ ಒಳನುಡಿಯಿಗರನ್ನು ಒಪ್ಪುವ ಇಲ್ಲವೇ ತಾಳಿಕೊಳ್ಳುವ ಬಗೆಗಳನ್ನು ಕುರಿತಾಗಿರುತ್ತದೆ.
ಏಕೆಂದರೆ ಅಧಿಕಾರ ಸಂಬಂಧದ ಆವರಣದಲ್ಲಿರುವ ಒಳನುಡಿ ಮತ್ತು ಅವುಗಳ ಆಡುಗರು ಪ್ರಜ್ಞಾಪೂರಕವಾಗಿಯೇ ತಮ್ಮ ಒಳನುಡಿಗೆ ಹೊರತಾದ ಬೇರೊಂದು ಒಳನುಡಿಯನ್ನು ನಿರಾಕರಿಸುವ ಸಾಧ್ಯತೆಗಳಿರುತ್ತವೆ. ಕಾರಣ ‘ಎ’ ಒಳನುಡಿ ‘ಬಿ’ಕ್ಕಿಂತ ದೊಡ್ಡದು ಇಲ್ಲವೇ ಚಿಕ್ಕದು ಹಾಗೂ ‘ಎ’ ಒಳನುಡಿ ಮೇಲು ಇಲ್ಲವೇ ‘ಬಿ’ ಒಳನುಡಿ ಕೀಳು ಎಂಬ ನಿಲುವುಗಳು ಕೂಡ ಇಂತಹ ನಿರಾಕರಣೆಗೆ ಒತ್ತಾಸೆಯಾಗಿರುತ್ತವೆ.
ಹಾಗಾಗಿ ಈ ಪರಸ್ಪರ ಅರ್ಥಗ್ರಾಹ್ಯತೆಯ ತತ್ವಕ್ಕೆ ತಕ್ಕಮಟ್ಟಿನ ಪ್ರಾಮುಖ್ಯತೆ ಇದ್ದಂತೆ ಕಂಡರೂ, ಯಾವುದು ನುಡಿ, ಯಾವುದು ಒಳನುಡಿ ಹಾಗೂ ಯಾವುದು ಏನಲ್ಲ ಎಂಬುದನ್ನು ನಿರ್ಧರಿಸುವಲ್ಲಿ ಇದರಿಂದ ಯಾವುದೇ ಬಗೆಯ ಸಹಾಯ ಸಿಗುವುದಿಲ್ಲ. ಸ್ಕ್ಯಾಂಡಿನೆವಿಯನ್ ಹಾಗೂ ಜರ್ಮನ್ ನುಡಿಗಳ ಕುರಿತ ಚರ್ಚೆಗಳು ಇಂತಹ ಅಸಂಗತಗಳನ್ನು ಎತ್ತಿ ತೋರಿಸಿವೆ.
ನುಡಿ ತನ್ನನ್ನು ವಿವರಿಸಿಕೊಳ್ಳಲು ಬೇಕಾಗಿರುವ ಲಕ್ಷಣಗಳನ್ನು ತನ್ನ ಒಡಲಲ್ಲಿಯೇ ಇರಸಿಕೊಂಡಿದ್ದರೂ, ಅದು ಕೇವಲ ನುಡಿಯ (ಲಿಂಗ್ವಿಸ್ಟಿಕ್) ಕಲ್ಪನೆ ಮಾತ್ರವಾಗಿ ಉಳದಿಲ್ಲ. ಬದಲಾಗಿ ಸಾಂಸ್ಕೃತಿಕ, ರಾಜಕೀಯ ಕಲ್ಪನೆಯೂ ಆಗಿರುತ್ತದೆ ಎಂಬುದು ಗಮನಾರ್ಹ. ನಾರ್ವೇ, ಸ್ವೀಡಿಶ್, ಡೆನಿಶ್ ಹಾಗೂ ಜರ್ಮನ್ ನುಡಿಗಳ ಕುರಿತ ನಿಲುವುಗಳು ರಾಜಕೀಯ, ಪ್ರಾದೇಶಿಕ, ಸಾಮಾಜಿಕ, ಚಾರಿತ್ರಿಕ ಮತ್ತು ಸಾಂಸ್ಕೃತಿಕ ಪ್ರಭಾವಕ್ಕೆ ಒಳಗಾಗಿರುವುದು ಇಲ್ಲಿ ನಿಚ್ಚಳವಾಗಿ ಕಾಣುತ್ತದೆ.
ನುಡಿಯರಿಮೆಗೆ ಹೊರತಾದ ಇಂತಹ ತೀರ್ಮಾನಗಳೇ, ನುಡಿ ಮತ್ತು ಒಳನುಡಿಗಳನ್ನು ಪ್ರತ್ಯೇಕಿಸುವಲ್ಲಿ ಮುಖ್ಯ ಪಾತ್ರವನ್ನು ವಹಿಸುತ್ತವೆ. ಅಂದರೆ ನಾರ್ವೇ, ಸ್ವೀಡಿಶ್, ಡೆನಿಶ್ ನುಡಿಗಳಿಗೆ ತಮ್ಮದೇ ಆದ ಪ್ರಾದೇಶಿಕ ಸ್ವಾಯತ್ತತೆ, ರಾಷ್ಟ್ರ, ರಾಜಕೀಯ ಹಕ್ಕು, ವರ್ಣಮಾಲೆ, ಸೊಲ್ಲರಿಮೆ ಹಾಗೂ ಸಾಹಿತ್ಯಗಳು ಇರುವುದರಿಂದ, ಆಯಾ ನುಡಿಯಿಗರು ತಾವಾಡುವ ನುಡಿಗಳು ಬೇರೆ ಬೇರೆಯೆಂದು ನಂಬಿರುತ್ತಾರೆ.
ಆ ಕಾರಣಕ್ಕಾಗಿ ಇವು ಮೂರು ಬೇರೆ ನುಡಿಗಳಾಗಿ ನೆಲೆನಿಂತಿವೆ. ರಾಚನಿಕವಾಗಿ ಎಷ್ಟೇ ಹತ್ತಿರವಿದ್ದರೂ, ಹಿಂದಿ ಮತ್ತು ಉರ್ದು ಎರಡೂ ಬೇರೆ ಬೇರೆ ನುಡಿಗಳು. ಇಲ್ಲಿ ನುಡಿಯರಿಮೆಯ ಯಾವುದೇ ಸಮರ್ಥನೆಗಳಿಗೆ ಅವಕಾಶವಿಲ್ಲ. ಕರ್ನಾಟಕದಲ್ಲಿರುವ ತುಳು, ಕೊಂಕಣಿ, ಬ್ಯಾರಿ, ಉರ್ದು, ಕೊಡವ ಮುಂತಾದವುಗಳಿಗೆ ಇಂತಹ ಯಾವುದೇ ಸಾಂಸ್ಥಿಕ ಸ್ವಾಯತ್ತತೆ ಇಲ್ಲವೇ ಅಧಿಕಾರ ಇಲ್ಲದಿರುವುದರಿಂದ, ಇವುಗಳನ್ನು ಬಹುತೇಕ ಸನ್ನವೇಶದಲ್ಲಿ ಕೇವಲ ಒಳನುಡಿಗಳನ್ನಾಗಿ ಆರೋಪಿಸಲಾಗುತ್ತದೆ.
ಈ ಕಾರಣಗಳಿಂದಲೇ ‘ನುಡಿ’ ಎನ್ನುವುದು ನುಡಿಯರಿಮೆಯ ಪ್ರಕಾರವೂ ಒಂದು ನಾನ್ಟೆಕ್ನಿಕಲ್ ಪದವಾಗಿದೆ ಅಷ್ಟೇ. ನುಡಿ, ಒಳನುಡಿ, ಪರಸ್ಪರ ಅರ್ಥಗ್ರಾಹ್ಯತೆ ಮುಂತಾದ ವರ್ಣಾತ್ಮಕ ಅರಿಮೆ ಪದಗಳನ್ನು ಬಣ್ಣಿಸುವಾಗ ಅತ್ಯಂತ ನಿಗಾವಹಿಸಬೇಕಾಗುತ್ತದೆ.
ನುಡಿ ಹಾಗೂ ಒಳನುಡಿಗಳ ನುಡುವಣ ಅಂತರ್ಸಂಬಂಧಗಳು ಸಾಮಾಜಿಕ ಸ್ವರೂಪದ್ದಾಗಿರುತ್ತವೆ. ಹಾಗಾಗಿ ಇವುಗಳನ್ನು ಸ್ವಾಯತ್ತತೆ ವರ್ಸಸ್ ವೈವಿಧ್ಯತೆ ಎಂಬ ವಿರೋಧಾತ್ಮಕ ನೆಲೆಯಿಂದ ವ್ಯಾಖ್ಯಾನಿಸಬೇಕಾಗುತ್ತದೆ.
ಅಂದರೆ ಯಾವುದೇ ಒಂದು ಸ್ವಾಯತ್ತ ನುಡಿ ಇಲ್ಲವೇ ನುಡಿಬಗೆಯನ್ನು ವಿಶಿಷ್ಟವೆಂದೋ ಸ್ವತಂತ್ರವೆಂದೋ ಗ್ರಹಿಸಿದರೆ, ಎಷ್ಟೋ ನುಡಿಬಗೆಗಳು ವೈವಿಧ್ಯತೆಯನ್ನು, ಯಾವುದು ತನ್ನನ್ನು ಒಂದು ಸ್ವಾಯತ್ತ ನುಡಿಯೆಂದು ಗುರುತಿಸಿಕೊಂಡಿರುತ್ತದೆಯೋ, ಆ ನುಡಿಯಲ್ಲಿ ಸಮಾವೇಶಗೊಳಿಸಲಾಗುತ್ತದೆ.
ಅವುಗಳ ನಡುವಣ ಯಾವುದೇ ರಾಚನಿಕ ಸಾಮ್ಯ ಹಾಗೂ ವೈಸಮ್ಯಗಳನ್ನು ಲೆಕ್ಕಿಸದೇ ಇಂತಹ ನಿಲುವುಗಳನ್ನು ತಾಳುವ ಬಗೆ ಅದು ಹೇಗೆ ನುಡಿಯರಿಮೆಯ ನೆಲೆಯಾಗುತ್ತದೆ?. ಈ ವಿವರಗಳು ಪರಸ್ಪರ ಅರ್ಥಗ್ರಾಹ್ಯತೆ ತತ್ವದ ನೆಲೆಗಳನ್ನು ಇನ್ನಷ್ಟೂ ಜಟಿಲಗೊಳಿಸುತ್ತವೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂಕಣ
ಭಾಷೆ ಗಡಿಗಳ ಮೀರಿ ಮೊಳಗಿದ ಧ್ವನಿ ; ಗಾನಕೋಗಿಲೆ ಎಸ್. ಜಾನಕಿ ನಿರ್ಗಮನ
ಭಾರತೀಯ ಚಿತ್ರಸಂಗೀತದ ಇತಿಹಾಸದಲ್ಲಿ ಕೆಲವೇ ಕೆಲವು ಧ್ವನಿಗಳು ಕಾಲವನ್ನು ಮೀರಿ ಅಮರತ್ವ ಪಡೆದಿವೆ. ಅಂತಹ ಅಮರ ಸ್ವರಗಳಲ್ಲಿ ಅತ್ಯಂತ ಪ್ರಕಾಶಮಾನವಾದ ಹೆಸರು ಎಸ್. ಜಾನಕಿ. ತಮ್ಮ ಅಪೂರ್ವ ಕಂಠಸಿರಿಯಿಂದ ಆರು ದಶಕಗಳಿಗೂ ಹೆಚ್ಚು ಕಾಲ ಕೋಟ್ಯಂತರ ಸಂಗೀತಾಭಿಮಾನಿಗಳ ಹೃದಯವನ್ನು ಗೆದ್ದಿದ್ದ ಈ ಮಹಾನ್ ಹಿನ್ನೆಲೆ ಗಾಯಕಿ ಇಹಲೋಕ ತ್ಯಜಿಸಿದ್ದಾರೆ. ಅವರ ನಿಧನವು ಕೇವಲ ಒಬ್ಬ ಗಾಯಕಿಯ ಅಗಲಿಕೆಯಲ್ಲ; ಭಾರತೀಯ ಸಂಗೀತ ಪರಂಪರೆಯ ಒಂದು ಮಹತ್ತರ ಯುಗದ ಅಂತ್ಯವಾಗಿದೆ.
ಸಂಗೀತವು ಭಾಷೆಯ ಎಲ್ಲೆಗಳನ್ನು ಮೀರಿ ಹೃದಯವನ್ನು ತಲುಪುವ ಮಾಧ್ಯಮ. ಆ ಸತ್ಯವನ್ನು ತಮ್ಮ ಗಾಯನದ ಮೂಲಕ ಸಾಬೀತುಪಡಿಸಿದ ಕಲಾವಿದೆ ಎಸ್. ಜಾನಕಿ. ಅವರು ಹಾಡಿದ ಸಾವಿರಾರು ಗೀತೆಗಳು ಇಂದಿಗೂ ಪ್ರೀತಿ, ವಿರಹ, ಭಕ್ತಿ, ಮಾತೃತ್ವ, ಸಂತೋಷ ಮತ್ತು ಬದುಕಿನ ಸೂಕ್ಷ್ಮ ಭಾವನೆಗಳಿಗೆ ಧ್ವನಿಯಾಗಿವೆ. ಅವರ ಕಂಠ ಕೇಳಿದ ಕ್ಷಣವೇ ಹಾಡಿನ ಪಾತ್ರ ಜೀವಂತವಾಗಿ ಕಣ್ಣೆದುರು ಮೂಡುತ್ತಿತ್ತು. ಅದೇ ಅವರ ಗಾಯನದ ಮಹತ್ವ.
ಸಾಮಾನ್ಯ ಕುಟುಂಬದಿಂದ ಸಂಗೀತ ಸಾಮ್ರಾಜ್ಯದವರೆಗೆ
1938ರ ಏಪ್ರಿಲ್ 23ರಂದು ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ರೆಪಲ್ಲೆ ಸಮೀಪ ಜನಿಸಿದ ಜಾನಕಿ, ಬಾಲ್ಯದಿಂದಲೇ ಸಂಗೀತದತ್ತ ಅತೀವ ಆಸಕ್ತಿ ಹೊಂದಿದ್ದರು. ಮನೆಯಲ್ಲಿದ್ದ ಸಂಗೀತದ ವಾತಾವರಣವೇ ಅವರ ಪ್ರತಿಭೆಗೆ ಮೊದಲ ಪ್ರೇರಣೆ. ಸಂಪ್ರದಾಯಬದ್ಧ ಸಂಗೀತ ಶಿಕ್ಷಣ ಸೀಮಿತವಾಗಿದ್ದರೂ, ದೇವರು ನೀಡಿದ ಸಹಜ ಕಂಠವೇ ಅವರನ್ನು ಅಪರೂಪದ ಗಾಯಕಿಯನ್ನಾಗಿ ರೂಪಿಸಿತು.
ಕುಟುಂಬದ ಬೆಂಬಲದೊಂದಿಗೆ ಅವರು ಆಗಿನ ಮದ್ರಾಸಿಗೆ ತೆರಳಿ ಹಿನ್ನೆಲೆ ಗಾಯನದಲ್ಲಿ ಅವಕಾಶ ಹುಡುಕಿದರು. ಆರಂಭದ ದಿನಗಳು ಸುಲಭವಾಗಿರಲಿಲ್ಲ. ಆದರೆ ಪ್ರತಿಭೆ, ಶ್ರಮ ಮತ್ತು ಸಂಗೀತದ ಮೇಲಿನ ಅಚಲ ನಿಷ್ಠೆ ಅವರನ್ನು ಬೇಗನೇ ಸಂಗೀತ ನಿರ್ದೇಶಕರ ಗಮನಕ್ಕೆ ತಂದಿತು. 1957ರಲ್ಲಿ ಆರಂಭವಾದ ಅವರ ಗಾಯನಯಾನ, ನಂತರ ಭಾರತದ ಸಂಗೀತ ಇತಿಹಾಸದಲ್ಲೇ ಅತ್ಯಂತ ದೀರ್ಘ ಹಾಗೂ ಯಶಸ್ವಿ ಪಯಣಗಳಲ್ಲಿ ಒಂದಾಗಿ ಬೆಳೆಯಿತು.
ಭಾಷೆಗಳ ಗಡಿಗಳನ್ನು ಮೀರಿ ಮೊಳಗಿದ ಧ್ವನಿ
ತೆಲುಗು, ಕನ್ನಡ, ತಮಿಳು, ಮಲಯಾಳಂ, ಹಿಂದಿ, ಒಡಿಯಾ, ತುಳು, ಕೊಂಕಣಿ ಸೇರಿದಂತೆ ಅನೇಕ ಭಾರತೀಯ ಭಾಷೆಗಳಲ್ಲಿ ಅವರು ಸಾವಿರಾರು ಹಾಡುಗಳನ್ನು ಹಾಡಿದರು. ವಿವಿಧ ಮೂಲಗಳ ಪ್ರಕಾರ ಅವರು 40 ಸಾವಿರಕ್ಕೂ ಅಧಿಕ ಗೀತೆಗಳಿಗೆ ಧ್ವನಿಯಾಗಿದ್ದಾರೆ.
ಪ್ರತಿ ಭಾಷೆಯ ಉಚ್ಚಾರಣೆಯನ್ನು ಅತ್ಯಂತ ಶ್ರದ್ಧೆಯಿಂದ ಕಲಿತು, ಆ ಭಾಷೆಯವರೇ ಹಾಡಿದಂತೆ ಹಾಡುವುದು ಅವರ ವಿಶೇಷತೆ. ಅದಕ್ಕಾಗಿಯೇ ಅವರು ಹಾಡಿದ ಗೀತೆಗಳನ್ನು ಯಾವ ರಾಜ್ಯದ ಜನರೂ ತಮ್ಮದೇ ಭಾಷೆಯ ಹಾಡುಗಳೆಂದು ಪ್ರೀತಿಸಿದರು. ಒಬ್ಬ ಗಾಯಕಿಗೆ ಇದಕ್ಕಿಂತ ದೊಡ್ಡ ಗೌರವ ಮತ್ತೊಂದಿಲ್ಲ.
ಕನ್ನಡಿಗರ ಮನದ ಜಾನಕಿ
ಕರ್ನಾಟಕದ ಸಂಗೀತಾಸಕ್ತರಿಗೆ ಎಸ್. ಜಾನಕಿ ಎಂದರೆ ವಿಶೇಷವಾದ ಭಾವನಾತ್ಮಕ ಬಂಧ. ಕನ್ನಡ ಚಿತ್ರರಂಗದ ಸುವರ್ಣಯುಗದ ನೂರಾರು ಅಮರಗೀತೆಗಳಿಗೆ ಅವರು ಜೀವ ತುಂಬಿದ್ದಾರೆ.
ಡಾ. ರಾಜ್ಕುಮಾರ್, ವಿಷ್ಣುವರ್ಧನ್, ಅಂಬರೀಷ್, ಶಂಕರ್ ನಾಗ್, ಅನಂತ್ ನಾಗ್, ರಮೇಶ್ ಅರವಿಂದ್ ಸೇರಿದಂತೆ ಹಲವು ತಲೆಮಾರಿನ ನಟ–ನಟಿಯರ ಭಾವನೆಗಳಿಗೆ ಅವರ ಧ್ವನಿಯೇ ಆತ್ಮವಾಗಿತ್ತು.
ವಿಜಯಭಾಸ್ಕರ್, ಜಿ.ಕೆ. ವೆಂಕಟೇಶ್, ರಾಜನ್–ನಾಗೇಂದ್ರ, ಉಪೇಂದ್ರ ಕುಮಾರ್, ಹಂಸಲೇಖ ಸೇರಿದಂತೆ ಕನ್ನಡದ ಶ್ರೇಷ್ಠ ಸಂಗೀತ ನಿರ್ದೇಶಕರೊಂದಿಗೆ ಅವರು ನೀಡಿದ ಹಾಡುಗಳು ಇಂದಿಗೂ ಸಂಗೀತಾಸಕ್ತರ ತುಟಿಗಳಲ್ಲಿ ಜೀವಂತವಾಗಿವೆ.
ಪ್ರೇಮಗೀತೆಗಳಾಗಲಿ, ಭಕ್ತಿಗೀತೆಗಳಾಗಲಿ, ಜಾನಪದ ಸೊಗಡಿನ ಹಾಡುಗಳಾಗಲಿ ಅಥವಾ ವಿರಹದ ಮೌನವನ್ನು ಹೇಳುವ ಮಧುರಗೀತೆಗಳಾಗಲಿ—ಜಾನಕಿ ಅವರ ಧ್ವನಿ ಪ್ರತಿಯೊಂದು ಭಾವಕ್ಕೂ ಹೊಸ ಅರ್ಥ ನೀಡುತ್ತಿತ್ತು.
ಇಳಯರಾಜಾ–ಜಾನಕಿ: ಸಂಗೀತದ ಅದ್ಭುತ ಜೋಡಿ
ತಮಿಳು ಚಿತ್ರರಂಗದಲ್ಲಿ ಸಂಗೀತ ನಿರ್ದೇಶಕ ಇಳಯರಾಜಾ ಮತ್ತು ಎಸ್. ಜಾನಕಿ ಅವರ ಸಂಗಮ ಭಾರತೀಯ ಚಿತ್ರಸಂಗೀತದ ಅತ್ಯಂತ ಯಶಸ್ವಿ ಜೋಡಿಗಳಲ್ಲಿ ಒಂದು.
ಇಳಯರಾಜಾ ಅವರ ಸಂಗೀತದ ಸೂಕ್ಷ್ಮ ಭಾವಗಳನ್ನು ಜಾನಕಿ ತಮ್ಮ ಧ್ವನಿಯಲ್ಲಿ ಜೀವಂತಗೊಳಿಸುತ್ತಿದ್ದರು. ಈ ಜೋಡಿಯ ಅನೇಕ ಗೀತೆಗಳು ಇಂದಿಗೂ ದಕ್ಷಿಣ ಭಾರತದ ಸಂಗೀತಾಭಿಮಾನಿಗಳ ನಿತ್ಯ ಸಂಗಾತಿಗಳಾಗಿವೆ.
ಅದೇ ರೀತಿ ಎಂ.ಎಸ್. ವಿಶ್ವನಾಥನ್, ಕೆ.ವಿ. ಮಹಾದೇವನ್, ಚಕ್ರವರ್ತಿ, ಹಂಸಲೇಖ, ರಾಜನ್–ನಾಗೇಂದ್ರ, ವಿಜಯಭಾಸ್ಕರ್ ಮೊದಲಾದ ದಿಗ್ಗಜರ ಸಂಗೀತಕ್ಕೂ ಅವರು ವಿಶಿಷ್ಟ ಕಂಠಸಿರಿ ನೀಡಿದ್ದಾರೆ.
ಧ್ವನಿಯೊಳಗಿದ್ದ ಸಾವಿರ ರೂಪಗಳು
ಎಸ್. ಜಾನಕಿ ಅವರ ಗಾಯನದ ಅತ್ಯಂತ ದೊಡ್ಡ ವೈಶಿಷ್ಟ್ಯವೆಂದರೆ ಧ್ವನಿಯ ರೂಪಾಂತರ. ಒಂದು ಹಾಡಿನಲ್ಲಿ ಮಗು ಮಾತನಾಡಿದಂತೆ ಹಾಡಬಲ್ಲರು; ಮತ್ತೊಂದು ಹಾಡಿನಲ್ಲಿ ವಯಸ್ಸಾದ ಮಹಿಳೆಯ ಭಾವನೆ ಮೂಡಿಸುತ್ತಿದ್ದರು. ಕೆಲವೊಮ್ಮೆ ಗ್ರಾಮೀಣ ಹುಡುಗಿಯ ಮುಗ್ಧತೆ, ಮತ್ತೊಮ್ಮೆ ನಗರ ಮಹಿಳೆಯ ಆತ್ಮವಿಶ್ವಾಸ, ಇನ್ನೊಮ್ಮೆ ತಾಯಿಯ ಮಮತೆ, ಮತ್ತೆ ಭಕ್ತೆಯ ಪ್ರಾರ್ಥನೆ—ಪ್ರತಿ ಭಾವಕ್ಕೂ ಬೇರೆ ಧ್ವನಿಯನ್ನು ನೀಡುವ ಸಾಮರ್ಥ್ಯ ಅವರಿಗೆ ಮಾತ್ರ ಸಾಧ್ಯವಾಗಿತ್ತು. ಅವರ ಧ್ವನಿ ಕೇವಲ ಸಂಗೀತವಲ್ಲ; ಅದು ಅಭಿನಯವೂ ಆಗಿತ್ತು.
ಶ್ರಮ, ಶಿಸ್ತು ಮತ್ತು ಪರಿಪೂರ್ಣತೆಯ ಪ್ರತೀಕ
ಒಂದು ಹಾಡನ್ನು ಹಾಡುವ ಮೊದಲು ಅದರ ಸಾಹಿತ್ಯವನ್ನು ಸಂಪೂರ್ಣ ಅರ್ಥೈಸಿಕೊಳ್ಳುವುದು ಅವರ ಅಭ್ಯಾಸ. ಉಚ್ಚಾರಣೆಯಲ್ಲಿ ಯಾವುದೇ ತಪ್ಪು ಆಗಬಾರದು ಎಂಬ ಕಾರಣಕ್ಕೆ ಹೊಸ ಭಾಷೆಗಳನ್ನು ಸಹ ಕಲಿಯುತ್ತಿದ್ದರು.
ರೆಕಾರ್ಡಿಂಗ್ ಸ್ಟುಡಿಯೋದಲ್ಲಿ ಸಮಯಪಾಲನೆ, ಶಿಸ್ತು ಹಾಗೂ ಸಂಗೀತದ ಮೇಲಿನ ಅಪಾರ ಗೌರವದಿಂದ ಅವರು ಎಲ್ಲರ ಪ್ರೀತಿಗೆ ಪಾತ್ರರಾಗಿದ್ದರು.
ಸಂಗೀತ ನಿರ್ದೇಶಕರು ಅನೇಕ ಬಾರಿ ಹೇಳಿದ್ದೇನಂದರೆ, ಜಾನಕಿ ಹಾಡನ್ನು ಒಮ್ಮೆ ಅರ್ಥ ಮಾಡಿಕೊಂಡರೆ ಅದನ್ನು ಮತ್ತೆ ವಿವರಿಸುವ ಅಗತ್ಯವೇ ಇರಲಿಲ್ಲ.
ಪ್ರಶಸ್ತಿಗಳಿಗಿಂತ ದೊಡ್ಡದು ಜನರ ಪ್ರೀತಿ
ಎಸ್. ಜಾನಕಿ ಅವರು ನಾಲ್ಕು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಪಡೆದಿದ್ದಾರೆ. ವಿವಿಧ ರಾಜ್ಯ ಸರ್ಕಾರಗಳಿಂದ ಮೂವತ್ತಕ್ಕೂ ಅಧಿಕ ಅತ್ಯುತ್ತಮ ಹಿನ್ನೆಲೆ ಗಾಯಕಿ ಪ್ರಶಸ್ತಿಗಳು ಅವರಿಗೆ ಸಂದಿವೆ. ಆದರೆ ಅವರು ಎಂದಿಗೂ ಪ್ರಶಸ್ತಿಗಳಿಗಾಗಿ ಹಾಡಲಿಲ್ಲ. ಸಂಗೀತವೇ ಅವರ ಧ್ಯಾನ, ಗಾಯನವೇ ಅವರ ಪೂಜೆ.
ಪದ್ಮಭೂಷಣ ಪ್ರಶಸ್ತಿಯನ್ನು ಅವರು ವಿನಯಪೂರ್ವಕವಾಗಿ ನಿರಾಕರಿಸಿದ್ದು ದೇಶಾದ್ಯಂತ ಚರ್ಚೆಗೆ ಕಾರಣವಾಗಿತ್ತು. ತಮ್ಮ ಸಾಧನೆಗೆ ತಡವಾಗಿ ಗೌರವ ನೀಡಲಾಗಿದೆ ಎಂಬ ಭಾವನೆಯನ್ನು ಅವರು ಅತ್ಯಂತ ಗೌರವಯುತವಾಗಿ ವ್ಯಕ್ತಪಡಿಸಿದ್ದರು.
ಎಸ್.ಪಿ.ಬಿ.–ಜಾನಕಿ: ಮರೆಯಲಾಗದ ಸಂಗೀತಯಾನ
ಎಸ್.ಪಿ. ಬಾಲಸುಬ್ರಹ್ಮಣ್ಯಂ ಮತ್ತು ಎಸ್. ಜಾನಕಿ ಅವರ ಜೋಡಿ ಭಾರತೀಯ ಚಿತ್ರಸಂಗೀತದ ಅತ್ಯಂತ ಜನಪ್ರಿಯ ಗಾಯನ ಜೋಡಿಗಳಲ್ಲಿ ಒಂದು.
ಅವರಿಬ್ಬರು ಹಾಡಿದ ಸಾವಿರಾರು ಯುಗಲಗೀತೆಗಳು ಇಂದಿಗೂ ರೇಡಿಯೋಗಳಲ್ಲಿ, ಸಂಗೀತ ಕಾರ್ಯಕ್ರಮಗಳಲ್ಲಿ ಮತ್ತು ಅಭಿಮಾನಿಗಳ ನೆನಪುಗಳಲ್ಲಿ ಸದಾ ಕೇಳಿಸುತ್ತಿವೆ.ಇವರ ಗಾಯನದಲ್ಲಿ ಸ್ಪರ್ಧೆಯಿರಲಿಲ್ಲ; ಪರಸ್ಪರ ಪೂರಕವಾದ ಸಂಗೀತ ಮಾತ್ರ ಇತ್ತು.
ಸರಳತೆಯೇ ಅವರ ಅಲಂಕಾರ
ಅಸಂಖ್ಯಾತ ಪ್ರಶಸ್ತಿಗಳು, ಲಕ್ಷಾಂತರ ಅಭಿಮಾನಿಗಳು, ದೇಶವ್ಯಾಪಿ ಖ್ಯಾತಿ—ಇವೆಲ್ಲ ಇದ್ದರೂ ಎಸ್. ಜಾನಕಿ ಅತ್ಯಂತ ಸರಳ ಜೀವನ ನಡೆಸಿದರು.ವೇದಿಕೆಯಲ್ಲಿ ಎಂದಿಗೂ ಆಡಂಬರ ತೋರಲಿಲ್ಲ. ಸಂದರ್ಶನಗಳಲ್ಲಿಯೂ ತಮ್ಮ ಸಾಧನೆಗಿಂತ ಸಂಗೀತದ ಮಹತ್ವದ ಬಗ್ಗೆ ಹೆಚ್ಚು ಮಾತನಾಡುತ್ತಿದ್ದರು.ಹೊಸ ಗಾಯಕರಿಗೆ ಪ್ರೋತ್ಸಾಹ ನೀಡುವುದು, ಅವರನ್ನು ಮೆಚ್ಚುವುದು ಮತ್ತು ಸಂಗೀತವನ್ನು ಗೌರವಿಸುವಂತೆ ಸಲಹೆ ನೀಡುವುದು ಅವರ ಸ್ವಭಾವವಾಗಿತ್ತು.
ಹೊಸ ತಲೆಮಾರಿನಲ್ಲೂ ಜೀವಂತ ಧ್ವನಿ
ಡಿಜಿಟಲ್ ಸಂಗೀತದ ಯುಗದಲ್ಲಿಯೂ ಎಸ್. ಜಾನಕಿ ಅವರ ಹಾಡುಗಳ ಜನಪ್ರಿಯತೆ ಕಡಿಮೆಯಾಗಲಿಲ್ಲ. ಯೂಟ್ಯೂಬ್, ಸಂಗೀತ ಆ್ಯಪ್ಗಳು, ರಿಯಾಲಿಟಿ ಶೋಗಳು, ಸಾಮಾಜಿಕ ಜಾಲತಾಣಗಳು—ಎಲ್ಲೆಡೆ ಅವರ ಹಾಡುಗಳು ಹೊಸ ತಲೆಮಾರಿನ ಕಿವಿಗಳಿಗೆ ತಲುಪುತ್ತಲೇ ಇವೆ. ಇಂದಿನ ಅನೇಕ ಯುವ ಗಾಯಕ–ಗಾಯಕಿಯರು ತಮ್ಮ ಸಂಗೀತಯಾನದ ಪ್ರೇರಣೆಯಾಗಿ ಜಾನಕಿ ಅವರನ್ನು ಉಲ್ಲೇಖಿಸುತ್ತಾರೆ.
ಸಂಗೀತ ಲೋಕದ ಕಂಬನಿ
ಅವರ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ದೇಶದಾದ್ಯಂತ ಸಂಗೀತ ಲೋಕದಲ್ಲಿ ಶೋಕದ ಛಾಯೆ ಆವರಿಸಿತು. ಚಿತ್ರರಂಗದ ಗಣ್ಯರು, ಸಂಗೀತ ನಿರ್ದೇಶಕರು, ಗಾಯಕ–ಗಾಯಕಿಯರು, ಸಾಹಿತ್ಯಿಕರು, ರಾಜಕೀಯ ನಾಯಕರು ಹಾಗೂ ಲಕ್ಷಾಂತರ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳ ಮೂಲಕ ಭಾವಪೂರ್ಣ ನಮನ ಸಲ್ಲಿಸಿದರು.
“ಒಂದು ಯುಗ ಮುಗಿಯಿತು”, “ಗಾನಕೋಗಿಲೆಯ ಧ್ವನಿ ಎಂದೆಂದಿಗೂ ಜೀವಂತ”, “ನಮ್ಮ ಜೀವನದ ನೆನಪುಗಳಿಗೆ ಹಿನ್ನೆಲೆ ಸಂಗೀತ ನೀಡಿದ ಧ್ವನಿ” ಎಂಬ ಮಾತುಗಳು ಎಲ್ಲೆಡೆ ಕೇಳಿಬಂದವು.
ಕನ್ನಡಿಗರ ನೆನಪಿನಲ್ಲಿ ಎಂದೆಂದಿಗೂ
ಕರ್ನಾಟಕದ ಮನೆಮನೆಗಳಲ್ಲೂ ಎಸ್. ಜಾನಕಿ ಅವರ ಹಾಡುಗಳು ಇಂದಿಗೂ ಬೆಳಗಿನ ಭಕ್ತಿಗೀತೆಗಳಾಗಿ, ಪ್ರೇಮಗೀತೆಗಳಾಗಿ, ಹಬ್ಬದ ಸಂಭ್ರಮವಾಗಿ, ಬದುಕಿನ ನೆನಪುಗಳಾಗಿ ಮೊಳಗುತ್ತಿವೆ.
ಅವರ ಧ್ವನಿ ಅನೇಕ ಕುಟುಂಬಗಳ ಭಾವನೆಗಳ ಒಂದು ಭಾಗವಾಗಿದೆ. ತಾಯಿಯ ನೆನಪಿನಲ್ಲಿ, ಪ್ರೀತಿಯ ನೆನಪಿನಲ್ಲಿ, ಬಾಲ್ಯದ ನೆನಪಿನಲ್ಲಿ, ಹಬ್ಬದ ಸಂಭ್ರಮದಲ್ಲಿ—ಎಲ್ಲೆಲ್ಲೂ ಜಾನಕಿ ಅವರ ಹಾಡುಗಳಿವೆ.
ಸ್ವರ ಮೌನವಾದರೂ…
ಕಾಲ ಬದಲಾಗಬಹುದು. ಸಂಗೀತದ ಶೈಲಿಗಳು ಬದಲಾಗಬಹುದು. ಹೊಸ ತಂತ್ರಜ್ಞಾನಗಳು ಬರಬಹುದು. ಆದರೆ ಭಾವನೆಗೆ ಜೀವ ತುಂಬುವ ಧ್ವನಿಗಳು ಅಪರೂಪ.
ಎಸ್. ಜಾನಕಿ ಅಂತಹ ಅಪರೂಪದ ಧ್ವನಿ. ಅವರ ದೇಹ ನಮ್ಮೊಂದಿಗಿಲ್ಲ. ಆದರೆ ಅವರು ಹಾಡಿದ ಪ್ರತಿಯೊಂದು ಗೀತೆ ಮುಂದಿನ ಹಲವು ತಲೆಮಾರುಗಳಿಗೂ ಬದುಕಿನ ಸಂಗಾತಿಯಾಗಿರುತ್ತದೆ. ಸಂಗೀತ ಇತಿಹಾಸವನ್ನು ಬರೆಯುವಾಗ ಅವರ ಹೆಸರನ್ನು ಬಿಟ್ಟು ಮುಂದೆ ಸಾಗುವುದು ಅಸಾಧ್ಯ. ಮರಣವು ಒಬ್ಬ ವ್ಯಕ್ತಿಯನ್ನು ಮಾತ್ರ ಕಸಿದುಕೊಳ್ಳಬಹುದು; ಅವರು ಸೃಷ್ಟಿಸಿದ ಕಲೆಯನ್ನು ಅಲ್ಲ.
ಎಸ್. ಜಾನಕಿ ಅವರ ಸ್ವರ ಇಂದು ಮೌನವಾಗಿದೆ. ಆದರೆ ಅವರು ಹಾಡಿದ ಸಾವಿರಾರು ಗೀತೆಗಳು ಭಾರತೀಯ ಸಂಗೀತಾಕಾಶದಲ್ಲಿ ಶಾಶ್ವತವಾಗಿ ಪ್ರತಿಧ್ವನಿಸುತ್ತಲೇ ಇರುತ್ತವೆ.
ಅವರ ಕಂಠಸಿರಿ ಕಾಲವನ್ನು ಮೀರಿದೆ.
ಅವರ ಸಂಗೀತ ತಲೆಮಾರುಗಳನ್ನು ಮೀರಿದೆ.
ಅವರ ನೆನಪು ಎಂದಿಗೂ ಅಳಿಯದು.
ಸ್ವರ ಮೌನವಾಗಿದೆ… ಆದರೆ ಸಂಗೀತ ಅಮರವಾಗಿದೆ. ಅದೇ ಎಸ್. ಜಾನಕಿ ಅವರ ಶಾಶ್ವತ ಪರಂಪರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಮಾಠಾಧೀಶರ ಮೇಲೆ ಹಲ್ಲೆ ; ನಿರ್ಲಕ್ಷಿಸಿದರೆ ದುಷ್ಕೃತ್ಯ ಹೆಚ್ಚಳ ಸಂಭವ; ಕಠಿಣ ಕ್ರಮಕ್ಕೆ ಎಚ್.ಆಂಜನೇಯ ಆಗ್ರಹ
ಸುದ್ದಿದಿನ,ಚಿತ್ರದುರ್ಗ: ಹರಳಯ್ಯ ಮಠದ ಸ್ವಾಮೀಜಿ ಮೇಲೆ ಮಾರಾಣಾಂತಿಕ ಹಲ್ಲೆಯನ್ನು ನಿರ್ಲಕ್ಷ್ಯ ವಹಿಸಿದರೆ ಮುಂದಿನ ದಿನಗಳಲ್ಲಿ ಮಠಾಧೀಶರ ಮೇಲೆ ಇಂತಹ ದುಷ್ಕೃತ್ಯ ಹೆಚ್ಚಾಗಬಹುದು ಎಂದು ಮಾಜಿ ಸಚಿವ ಎಚ್.ಆಂಜನೇಯ ಆತಂಕ ವ್ಯಕ್ತಪಡಿಸಿದ್ದಾರೆ.
ಎಸಿ, ತಹಸೀಲ್ದಾರ್, ಪೊಲೀಸ್ ಅಧಿಕಾರಿಗಳು, ಗ್ರಾಮದ ಮುಖಂಡರೊಂದಿಗೆ ಐಮಂಗಲ ಸಮೀಪದ ಹರಳಯ್ಯ ಮಠಕ್ಕೆ ಶುಕ್ರವಾರ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಮಾತನಾಡಿ, ಚಿತ್ರದುರ್ಗ ಜಿಲ್ಲಾಸ್ಪತ್ರೆ ಬಳಿಕ ಮಠಕ್ಕೆ ಶ್ರೀಗಳು ಬಂದಿದ್ದಾರೆಂದು ಭಾವಿಸಿ ಧೈರ್ಯ ಹೇಳಲು ಬಂದಿದ್ದೇನೆ. ಆದರೆ, ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಾಗಿರುವುದು ಅವರ ಆರೋಗ್ಯ ಸ್ಥಿತಿ ಕುರಿತು ಕಳವಳ ವ್ಯಕ್ತವಾಗಿದೆ ಎಂದರು.
ಮುರುಘ ಮಠದ ಡಾ. ಶ್ರೀ ಶಿವಮೂರ್ತಿ ಮುರುಘ ಶರಣರು ಎಲ್ಲ ಶೋಷಿತ, ದಲಿತ, ಹಿಂದುಳಿದ ವರ್ಗಗಳಿಗೆ ಧಾರ್ಮಿಕ ಸ್ಥಾನ ನೀಡಲು ಹಲವರಿಗೆ ದೀಕ್ಷೆ ನೀಡಿ, ಜಮೀನು ಸೇರಿ ಅಗತ್ಯ
ಸಹಕಾರ ನೀಡಿದ್ದು ಸ್ಮರಣೀಯ. ಆ ಸಂದರ್ಭದಲ್ಲಿ ಹರಳಯ್ಯ ಮಠ ಸ್ಥಾಪನೆಗಾಗಿ ಜಮೀನು ಖರೀದಿಸಲು ಹಣ ಕೊಟ್ಟಿದ್ದರು. ಆ ಹಣದಲ್ಲಿ ಭೂಮಿ ಖರೀದಿಸಿ ಮಠ, ಶಾಲೆ ನಿರ್ಮಿಸಲು ಬಸವ ಹರಳಯ್ಯ ಸ್ವಾಮೀಜಿ ಶ್ರಮಿಸಿ ಸಾಧನೆ ಮಾಡಿದ್ದಾರೆ ಎಂದು ತಿಳಿಸಿದರು.
ಮಠ-ಮಾನ್ಯಗಳು ಮಾಡಬೇಕಾದ ಕಾರ್ಯವನ್ನು ಅತ್ಯಂತ ಶ್ರದ್ಧೆ, ಸವಾಲುಗಳ ಮಧ್ಯೆ, ಹಗಲು-ರಾತ್ರಿ ಶ್ರಮಪಟ್ಟು ಹರಳಯ್ಯ ಸ್ವಾಮೀಜಿ ಮಾಡಿದ್ದಾರೆ. ಸಮಾಜ ಕಲ್ಯಾಣ
ಸಚಿವನಾಗಿದ್ದ ವೇಳೆ 1 ಕೋಟಿ ರೂ. ಅನುದಾನ ಕೊಡಿದ್ದೇ. ಬಳಿಕ ಅಸ್ಥಿತ್ವಕ್ಕೆ ಬಂದ ಸರ್ಕಾರ ಹಾಗೂ ಭಕ್ತರು, ಜನರಿಗೆ ದೇಣಿಗೆ ಸಂಗ್ರಹಿಸಿ ಭವ್ಯವಾದ ಮಠ ನಿರ್ಮಿಸಿದ್ದಾರೆ.
ಸುತ್ತಮುತ್ತಲ ಬಡ ಮಕ್ಕಳಿಗಾಗಿ ಶಾಲೆ, ಸತ್ ಚಿಂತನೆ ಮೂಡಿಸಲು ಧಾರ್ಮಿಕ ಕಾರ್ಯಕ್ಕಾಗಿ ಸಭಾಂಗಣ ನಿರ್ಮಿಸಿದ್ದಾರೆ ಎಂದರು.
ಈ ಸಂದರ್ಭ ತಗ್ಗುಗುಂಡಿ ಆಗಿದ್ದ ಅನುಪಯುಕ್ತ ಎರಡು ಗುಂಟೆ ಜಮೀನು ಗೊಂದಲದಿಂದ ಒತ್ತುವರಿ ಆಗಿದೆ. ಈ ವಿಷಯಕ್ಕಾಗಿ ಹಲವು ಬಾರಿ ವ್ಯಕ್ತಿಯೊರ್ವ ಗಲಾಟೆ ಮಾಡಿದ್ದಾನೆ. ಗೊತ್ತಿಲ್ಲದೆ ಎರಡು ಗುಂಟೆ ಜಾಗ ಒತ್ತುವರಿ ಆಗಿದ್ದು, ತಪ್ಪು ನನ್ನಿಂದಲೇ ಆಗಿದೆಯೆಂದು ಶ್ರೀಗಳು ಒಪ್ಪಿಕೊಂಡಿದ್ದಾರೆ. ಜತೆಗೆ ಆ ಜಾಗಕ್ಕೆ ಈಗಿನ ಮಾರುಕಟ್ಟೆ ಮೌಲ್ಯದಷ್ಟು ಹಣ ಕೊಡುತ್ತೇನೆ ಎಂದು ತಿಳಿಸಿದ್ದಾರೆ. ವ್ಯಕ್ತಿ ನಿರಾಕರಿಸಿದಾಗ ಒತ್ತುವರಿ ಜಾಗದಲ್ಲಿ ಕಟ್ಟಿದ್ದ ಕಾಂಪೌಂಡನ್ನು ಸ್ವಾಮೀಜಿ ಕೆಡವಿಸಿದ್ದಾರೆ. ಆದರೂ ಆ ವ್ಯಕ್ತಿ ದ್ವೇಷ ಮುಂದುವರಿಸಿದ್ದು ಏಕಾಏಕಿ ಮಠಕ್ಕೆ ನುಗ್ಗಿ ಸ್ವಾಮೀಜಿ ಮೇಲೆ
ಮಾರಾಣಾಂತಿಕ ಹಲ್ಲೆ ನಡೆಸಿದ್ದು, ದೂರು ಕೊಡಲು ಠಾಣೆಗೆ ತೆರಳಿರುವ ವಿಷಯ ತಿಳಿದು ಅಲ್ಲಿಗೆ ತೆರಳಿ ಕಾಲಿನಿಂದ ಸ್ವಾಮೀಜಿ ಎದೆಗೆ ಒದ್ದಿದ್ದಾನೆ ಎಂದರು.
ಧಾರ್ಮಿಕ ನೇತಾರರನ್ನು ಗೌರವಿಸುವ ನಾಡು ಭಾರತ. ಇಂತಹ ಸಂದರ್ಭ ಖಾವಿಧಾರಿಯೊಬ್ಬರ ಮೇಲೆ ಮಾರಾಣಾಂತಿಕವಾಗಿ ಹಲ್ಲೆ ನಡೆಸಿ, ಅವ್ಯಾಚ್ಯ ಶಬ್ದಗಳಿಂದ ನಿಂಧಿಸಿರುವುದು ಎಚ್ಚರಿಕೆ
ಗಂಟೆಯಾಗಿದೆ. ಈ ದುಷ್ಕೃತ್ಯವನ್ನು ನಾಡಿನ ಎಲ್ಲ ಮಠಾಧೀಶರು ಖಂಡಿಸಬೇಕು, ಸ್ವಾಮೀಜಿಗೆ ನೈತಿಕವಾಗಿ ಬೆಂಬಲಿಸಬೇಕು. ಇಲ್ಲದಿದ್ದರೇ ಇಂತಹ ಕೃತ್ಯಗಳು ಹೆಚ್ಚಾಗುವ ಸಾಧ್ಯತೆ ಎಂದು ಆತಂಕ ವ್ಯಕ್ತಪಡಿಸಿದರು.
ಹಲ್ಲೆ ನಡೆಸಿದ ಮೂವರನ್ನು ಮಟ್ಟಹಾಕುವ ಶಕ್ತಿ ನಮ್ಮಲ್ಲೂ ಇದೆ. ಆದರೆ, ನಾವು ವಾಮಮಾರ್ಗದಲ್ಲಿ ಸಾಗುವವರಲ್ಲ, ಕಾನೂನು ಪರಿಪಾಲಕರು. ನಮ್ಮ ಹಕ್ಕೋತ್ತಾಯ ಬಸವ
ತತ್ವದಡಿ ಸೇವಾ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಸ್ವಾಮೀಜಿ ಮೇಲೆ ಮಾರಾಣಾಂತಿಕ ಹಲ್ಲೆ ಭೀತಿ ಹುಟ್ಟಿಸುವಂತದ್ದಾಗಿದೆ. ಈ ಕುರಿತು ತಕ್ಷಣವೇ ಎಲ್ಲ ಮಠಾಧೀಶರು, ಧರ್ಮಗಳ ಪ್ರತಿಪಾದಕರು ಖಂಡಿಸಬೇಕು ಎಂದು ಕೋರಿದರು.
ಈಗ ಯಾವುದೇ ಕಾರಣಕ್ಕೂ ಸಂಧಾನ-ಚರ್ಚೆ ಅಗತ್ಯವಿಲ್ಲ. ಮಠದ ಸಾಮಾಜಿಕ ಕಾರ್ಯಕ್ಕಾಗಿ ಸರ್ಕಾರ ಭೂಮಿ ಸ್ವಾಧೀನಪಡಿಸಿಕೊಳ್ಳಬೇಕು. ಅದಕ್ಕೆ ತಗಲುವ ವೆಚ್ಚವನ್ನು ನಾನೇ ಸ್ವಂತವಾಗಿ ಭರಿಸುತ್ತೇನೆ. ತಕ್ಷಣ ಅಧಿಕಾರಿಗಳು ಈ ಸಂಬಂಧ ಕಾರ್ಯಪ್ರವೃತ್ತರಾಗಬೇಕೆಂದು ಆಂಜನೇಯ ಆಗ್ರಹಿಸಿದರಲ್ಲದೇ ಒಂದು ವೇಳೆ ಭೂಮಿ ಯಾರದ್ದಾಗಿದ್ದರೇ ಅವರಿಗೆ ನ್ಯಾಯಯುತವಾಗಿ ಸಲ್ಲಬೇಕಾದ ಪರಿಹಾರ ನೀಡಬಹುದು. ಈ ನಿಟ್ಟಿನಲ್ಲಿ ನಾನು ತಗಲುವ ಸಂಪೂರ್ಣ ವೆಚ್ಚ ಭರಿಸುವೆ ಎಂದು ತಿಳಿಸಿದರು.
ಐಮಂಗಲ ಸುತ್ತಮುತ್ತಲ ಗ್ರಾಮಗಳ ಬಡ ಮಕ್ಕಳಿಗೆ ಶಿಕ್ಷಣ ನೀಡುವುದು, ಅನಾಥಾಲಯ ಸ್ಥಾಪನೆಯ ಸದುದ್ದೇಶ ಹೊಂದಿರುವ ಶ್ರೀಗಳ ಮೇಲೆ ಹಲ್ಲೆ ಇಡೀ ಧಾರ್ಮಿಕ ಮುಖಂಡರಿಗೆ ಮಾಡಿರುವ ಅಪಮಾನ ಮತ್ತು ಅವರಲ್ಲಿ ಭೀತಿ ಸೃಷ್ಠಿಸುವಂತದ್ದಾಗಿದೆ. ಆದ್ದರಿಂದ ಮಾರಾಣಾಂತಿಕ ಹಲ್ಲೆ ನಡೆಸಿದ ವ್ಯಕ್ತಿಗಳನ್ನು ತಕ್ಷಣವೇ ರಾಜ್ಯದಿಂದಲೇ ಗಡಿಪಾರು ಮಾಡಬೇಕು. ಜೊತೆಗೆ ಕಠಿಣ ಶಿಕ್ಷೆ ಆಗುವ ರೀತಿ ಕಾನೂನು ಪ್ರಕ್ರಿಯೆ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಎಸಿ ಕಾಂತರಾಜ್, ಡಿವೈಎಸ್ಪಿ ಶಿವಕುಮಾರ್, ಸಿಪಿಐ ಗುಡ್ಡಪ್ಪ ಹಾಗೂ ಗ್ರಾಮದ ಹಿರಿಯರು
ಉಪಸ್ಥಿತರಿದ್ದರು.
*ಪೋಟೊ ಕ್ಯಾಪ್ಷನ್* ಐಮಂಗಲದ ಹರಳಯ್ಯ ಗುರುಪೀಠಕ್ಕೆ ಶುಕ್ರವಾರ ಸಂಜೆ ಮಾಜಿಸಚಿವ ಎಚ್.ಆಂಜನೇಯ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲಿಸಿದರು.

ದಿನದ ಸುದ್ದಿ
ದಾವಣಗೆರೆ | ತಾಪಂ ಅನುದಾನ ದುರುಪಯೋಗ: ಮೂವರು ಅಧಿಕಾರಿಗಳ ವಿರುದ್ಧ ಲೋಕಾಯುಕ್ತ ತನಿಖೆ ಚುರುಕು
ಮುಖ್ಯಾಂಶಗಳು
ಟೆಂಡರ್ ಇಲ್ಲದೆ ಸಾಮಗ್ರಿ ಖರೀದಿ ಆರೋಪ
ಜುಲೈ 10ರ ವರೆಗೆ ಸ್ಥಳ ಪರಿಶೀಲನೆ, ದಾಖಲೆಗಳ ತಪಾಸಣೆ
ತನಿಖಾಧಿಕಾರಿಗಳ ಮುಂದೆ ಹಾಜರಾಗಲು ದೂರುದಾರರಿಗೆ ನೋಟಿಸ್
ಸುದ್ದಿದಿನ,ದಾವಣಗೆರೆ: ತಾಲೂಕು ಪಂಚಾಯಿತಿಯ 2022-23ನೇ ಸಾಲಿನ ಅನಿರ್ಬಂಧಿತ ಅನುದಾನದಡಿ ಕೈಗೊಳ್ಳಲಾದ ವಿವಿಧ ಕಾಮಗಾರಿಗಳ ಖರೀದಿ ವ್ಯವಹಾರದಲ್ಲಿ ನಿಯಮ ಉಲ್ಲಂಘಿಸಿ, ಸರ್ಕಾರಿ ಹಣ ದುರುಪಯೋಗಪಡಿಸಿಕೊಂಡಿರುವ ಗಂಭೀರ ಆರೋಪದ ಬೆನ್ನತ್ತಿರುವ ಲೋಕಾಯುಕ್ತ ಸಂಸ್ಥೆಯು ತನಿಖೆಯನ್ನು ತೀವ್ರಗೊಳಿಸಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತದ ತಾಂತ್ರಿಕ ಮತ್ತು ಲೆಕ್ಕಪತ್ರ ಶಾಖೆಯ ಅಧಿಕಾರಿಗಳು ಜುಲೈ 7 ರಿಂದ 10 ರವರೆಗೆ ಜಿಲ್ಲೆಯಲ್ಲಿ ಬೀಡುಬಿಡಲಿದ್ದು, ಸ್ಥಳ ತನಿಖೆ ಹಾಗೂ ದಾಖಲೆಗಳ ಪರಿಶೀಲನೆ ನಡೆಸಲಿದ್ದಾರೆ.
ನಿಯಮ ಗಾಳಿಗೆ: ‘ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ– ಕರ್ನಾಟಕ’ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ. ಕೆ.ಎ. ಓಬಳೇಶ್ ಅವರು 2025ರ ಜನೆವರಿ 21ರಂದು ಲೋಕಾಯುಕ್ತಕ್ಕೆ ಈ ಕುರಿತು ಅಧಿಕೃತ ದೂರು ನೀಡಿದ್ದರು. 2022-23ನೇ ಸಾಲಿನಲ್ಲಿ ದಾವಣಗೆರೆ ತಾಲೂಕು ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆದ ವಿವಿಧ ಯೋಜನೆಗಳ ಕಾಮಗಾರಿಗಳಿಗೆ ಸಾಮಗ್ರಿಗಳನ್ನು ಖರೀದಿಸುವಾಗ ಯಾವುದೇ ಟೆಂಡರ್ ಪ್ರಕ್ರಿಯೆ ನಡೆಸಿಲ್ಲ. ಅಧಿಕೃತ ಮಾರಾಟಗಾರರಿಂದ ದರಪಟ್ಟಿ (ಕೊಟೇಷನ್) ಪಡೆಯದೆ, ನಿಯಮಾವಳಿಗಳನ್ನು ಸಂಪೂರ್ಣವಾಗಿ ಗಾಳಿಗೆ ತೂರಿ ಸರ್ಕಾರದ ಹಣ ಪೋಲು ಮಾಡಲಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿತ್ತು.
ತನಿಖೆ ಎದುರಿಸುತ್ತಿರುವವರು
ಶ್ರೀ ಎನ್.ಜೆ. ಆನಂದ್, ಕಾರ್ಯನಿರ್ವಾಹಕ ಅಧಿಕಾರಿ (ಇಒ), ತಾಲೂಕು ಪಂಚಾಯಿತಿ, ದಾವಣಗೆರೆ.
ಶ್ರೀ ನಾಗರಾಜ್ ನಾಯ್ಕ್, ಸಹಾಯಕ ಲೆಕ್ಕಾಧಿಕಾರಿ, ತಾಲೂಕು ಪಂಚಾಯಿತಿ, ದಾವಣಗೆರೆ.
ಶ್ರೀ ಚನ್ನಪ್ಪ ಎ., ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ), ಜಿಲ್ಲಾ ಪಂಚಾಯತ್, ದಾವಣಗೆರೆ.
ಕಚೇರಿಯಲ್ಲಿ ತಪಾಸಣೆ
ದೂರಿನ ಅನ್ವಯ ಲೋಕಾಯುಕ್ತದ ತಾಂತ್ರಿಕ ಮತ್ತು ಲೆಕ್ಕಪತ್ರ ಶಾಖೆಯ ತನಿಖಾಧಿಕಾರಿ ಟಿ.ಸಿ. ಜಯರಾಮಯ್ಯ ಅವರು ತನಿಖಾ ವೇಳಾಪಟ್ಟಿ ಸಿದ್ಧಪಡಿಸಿದ್ದಾರೆ. ಜುಲೈ 7 ರಂದು ಬೆಳಗ್ಗೆ 11.30ಕ್ಕೆ ದಾವಣಗೆರೆ ತಾಲೂಕು ಪಂಚಾಯಿತಿ ಕಚೇರಿಯಲ್ಲಿ ತನಿಖಾ ಪ್ರಕ್ರಿಯೆ ಆರಂಭವಾಗಿದ್ದು, ಜುಲೈ 10 ರವರೆಗೆ ಸರಣಿ ದಾಖಲೆಗಳ ಪರಿಶೀಲನೆ ನಡೆಯಲಿದೆ. ಸ್ಥಳ ತನಿಖೆಯ ಸಂದರ್ಭದಲ್ಲಿ ಖುದ್ದಾಗಿ ಹಾಜರಿದ್ದು, ಪೂರಕ ದಾಖಲೆಗಳೊಂದಿಗೆ ಸಹಕರಿಸುವಂತೆ ದೂರುದಾರರಿಗೂ ನೋಟಿಸ್ ನೀಡಲಾಗಿದೆ.
ಜಿಲ್ಲೆಯ ಪ್ರಭಾವಿ ಅಧಿಕಾರಿಗಳೇ ಲೋಕಾಯುಕ್ತ ತನಿಖೆಯ ಬಿಸಿಗೆ ಸಿಲುಕಿರುವುದು ಆಡಳಿತ ವಲಯದಲ್ಲಿ ತೀವ್ರ ಸಂಚಲನ ಮೂಡಿಸಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ6 days agoಚನ್ನಗಿರಿ | ಲವ್ ಮ್ಯಾರೇಜ್ ; ಪೊಲೀಸ್ ಠಾಣೆ ಆವರಣದಲ್ಲೇ ಯುವಕನಿಗೆ ಚಾಕು ಇರಿತ
-
ದಿನದ ಸುದ್ದಿ4 days agoದಾವಣಗೆರೆ | ತಾಪಂ ಅನುದಾನ ದುರುಪಯೋಗ: ಮೂವರು ಅಧಿಕಾರಿಗಳ ವಿರುದ್ಧ ಲೋಕಾಯುಕ್ತ ತನಿಖೆ ಚುರುಕು
-
ದಿನದ ಸುದ್ದಿ5 days ago
ಮತದಾರರ ಪಟ್ಟಿ ಪರಿಷ್ಕರಣೆ | ಪ್ರತಿಯೊಬ್ಬರ ಮನೆಬಾಗಿಲಿಗೆ ತಲುಪಲಿವೆ ಫಾರಂಗಳು ; ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ
-
ದಿನದ ಸುದ್ದಿ2 days agoಮಾಠಾಧೀಶರ ಮೇಲೆ ಹಲ್ಲೆ ; ನಿರ್ಲಕ್ಷಿಸಿದರೆ ದುಷ್ಕೃತ್ಯ ಹೆಚ್ಚಳ ಸಂಭವ; ಕಠಿಣ ಕ್ರಮಕ್ಕೆ ಎಚ್.ಆಂಜನೇಯ ಆಗ್ರಹ
-
ಅಂಕಣ12 hours agoಭಾಷೆ ಗಡಿಗಳ ಮೀರಿ ಮೊಳಗಿದ ಧ್ವನಿ ; ಗಾನಕೋಗಿಲೆ ಎಸ್. ಜಾನಕಿ ನಿರ್ಗಮನ


