ರಾಜಕೀಯ
ಬಲಪಂಥದತ್ತ ಜಾಗತಿಕ ಪಲ್ಲಟದ ಈ ಸಮಯ

- ಜಾಗತಿಕ ಅರ್ಥವ್ಯವಸ್ಥೆಯು ಬಿಕ್ಕಟ್ಟಿಗೆ ಒಳಗಾಗಿರುವ ಪರಿಸ್ಥಿತಿಯಲ್ಲಿ ಮತ್ತು ಅದರ ಪರಿಣಾಮವಾಗಿ ನಿರುದ್ಯೋಗವು ಉಲ್ಬಣಗೊಂಡ ಪರಿಸ್ಥಿತಿಯಲ್ಲಿ ಜಗತ್ತಿನಾದ್ಯಂತ ಬಲ ಪಂಥದತ್ತ ಪಲ್ಲಟ ಕಾಣುತ್ತಿದೆ. ಬಲಪಂಥದ ಬೆಳವಣಿಗೆಗೆ ಅದು ಆರ್ಥಿಕ ಬಿಕ್ಕಟ್ಟು ಮತ್ತು ನಿರುದ್ಯೋಗವನ್ನು ಗಮನಕ್ಕೆ ತಗೊಂಡಿರುವುದು ಮತ್ತು ಅಧಿಕಾರಸ್ಥರ ಪರವಾದ ರಾಜಕೀಯ ಪಕ್ಷಗಳು ಗಮನಕ್ಕೆ ತಗೊಂಡಿರದಿರುವುದೇ ಕಾರಣ ಎನ್ನಬಹುದು. ಭಾರತದಲ್ಲಿಯೂ ಸಹ ಅಭಿವೃದ್ಧಿ ಅಜೆಂಡಾದ ಮೂಲಕವೇ 2014ರಲ್ಲಿ ಮೋದಿ ಅಧಿಕಾರ ಹಿಡಿದದ್ದು. ನವ ಉದಾರವಾದವನ್ನು ಪ್ರತಿನಿಧಿಸುವ ಕಾಂಗ್ರೆಸ್ನಂತಹ ಒಂದು ಪಕ್ಷದಿಂದ ಬಿಜೆಪಿಯಂತಹ ಒಂದು ಬಲ ಪಂಥೀಯ ಪಕ್ಷದತ್ತ ಪಲ್ಲಟವು ಸಾಧ್ಯವಾಗಿರುವುದು ನವ-ಉದಾರವಾದದ ಬಿಕ್ಕಟ್ಟಿನಿಂದಾಗಿಯೇ ಎಂಬ ಸಂಗತಿಯಂತೂ ಸ್ಪಷ್ಟ.
ಮೋದಿಯವರ ಪುನರಾಯ್ಕೆಯು, ಜಗತ್ತು ಬಲ ಪಂಥಾಭಿಮುಖವಾಗಿ ಸರಿಯುತ್ತಿರುವ ವಿದ್ಯಮಾನದ ಒಂದು ಭಾಗವಾಗಿದೆ ಎಂಬ ಆಯಾಮವನ್ನು ನಾವು ಗಮನಿಸುವುದೇ ಇಲ್ಲ. ಹಾಗಾಗಿ, ಮೋದಿಯವರ ಪುನರಾಯ್ಕೆಯ ಬಗ್ಗೆ ನಾವು ಚರ್ಚಿಸುವಾಗ, ಇಡೀ ಜಗತ್ತೇ ಬಲಕ್ಕೆ ವಾಲುತ್ತಿದೆ ಎಂಬ ಅಂಶದ ಪ್ರಸ್ತಾಪ ನಮ್ಮ ಚರ್ಚೆಯಲ್ಲಿ ಬಹುತೇಕ ಇರುವುದಿಲ್ಲ. ಇಸ್ರೇಲ್ನಲ್ಲಿ ನೆತನ್ಯಾಹು ಪುನರಾಯ್ಕೆಗೊಂಡಿದ್ದಾರೆ. ಟರ್ಕಿಯಲ್ಲಿ ಎರ್ಡೊಗಾನ್ ಪ್ರಚಂಡ ಬಹುಮತದಿಂದ ಪುನರಾಯ್ಕೆಯಾಗಿದ್ದಾರೆ. ಚುನಾವಣೆಗೆ ಮುನ್ನ ಈ ಪಕ್ಷವು ಪುನರಾಯ್ಕೆ ಆಗುವುದೇ ಇಲ್ಲ ಎನ್ನುವ ಭವಿಷ್ಯ ನುಡಿಯನ್ನು ಸುಳ್ಳಾಗಿಸಿ, ಆಸ್ಟ್ರೇಲಿಯಾದಲ್ಲಿ ಕನ್ಸರ್ವೇಟಿವ್ ಪಕ್ಷವು ಅಧಿಕಾರಕ್ಕೆ ಮರಳಿದೆ.
ಎಡ ಪಂಥವು ಹಲವು ಹತ್ತು ದೇಶಗಳಲ್ಲಿ ಮರು ಹುಟ್ಟು ಪಡೆಯುವಂತಹ ಸ್ಪೂರ್ತಿ ತುಂಬುವ ಭರವಸೆ ಇತರರಲ್ಲಿ ಮೂಡಲು ಕಾರಣವಾಗಿದ್ದ ಎಡ ಪಕ್ಷಗಳು ಇತ್ತೀಚಿನವರೆಗೆ ಅಧಿಕಾರದಲ್ಲಿದ್ದ ಲ್ಯಾಟಿನ್ ಅಮೇರಿಕಾದಲ್ಲಿ, ಒಂದರ ನಂತರ ಮತ್ತೊಂದು ದೇಶದಲ್ಲಿ ಬಲ ಪಂಥೀಯ ಸರ್ಕಾರಗಳು ಅಧಿಕಾರಕ್ಕೆ ಬಂದಿವೆ. ಇಂತಹ ಬದಲಾವಣೆಗಳ ಪೈಕಿ, ಅತ್ಯಂತ ಮಹತ್ವದ್ದು ಮತ್ತು ಅದೇ ಸಮಯದಲ್ಲಿ ಕುಖ್ಯಾತ ಎನ್ನಬಹುದಾದ ಬದಲಾವಣೆ ಬ್ರೆಜಿಲ್ನಲ್ಲಿ ಆಗಿದೆ.
ಅಲ್ಲಿ ಹೊಸ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಜೇರ್ ಬೊಲ್ಸೊಮಾರೊ ಕೆಲ ವರ್ಷಗಳ ಹಿಂದೆ ಬ್ರೆಜಿಲ್ನಲ್ಲಿ ಅಧಿಕಾರದಲ್ಲಿದ್ದ ಮಿಲಿಟರಿ ಆಡಳಿತವನ್ನು ಹಾಡಿ ಹೊಗಳಿರುವುದೇ ಅಲ್ಲದೆ, ಮಿಲಿಟರಿಯು ಇನ್ನೂ ಹೆಚ್ಚು ಮಂದಿಯನ್ನು ಕೊಂದು ಹಾಕಿದ್ದರೆ ಒಳ್ಳೆಯದಿತ್ತು ಎಂದು ಹೇಳಿರುವುದು ದಾಖಲಾಗಿದೆ. ಈ ಎಲ್ಲವಕ್ಕೂ ಕಳಶವಿಟ್ಟಂತೆ, ಕಳೆದ ಭಾನುವಾರ ಯೂರೋಪಿಯನ್ ಒಕ್ಕೂಟದ 28ಸದಸ್ಯ ದೇಶಗಳಲ್ಲಿ ಯೂರೊ ಪಾರ್ಲಿಮೆಂಟಿಗೆ ನಡೆದ ಚುನಾವಣೆಗಳ ಫಲಿತಾಂಶವು ಯೂರೋಪಿನಲ್ಲಿ ಗಮನಾರ್ಹ ಸಂಖ್ಯೆಯ ಜನತೆಯ ಒಲವು ಬಲ ಪಂಥದತ್ತ ಸರಿಯುತ್ತಿರುವ ಅಂಶವನ್ನು ಸಾರುತ್ತದೆ.
ಫ್ರಾನ್ಸ್ನಲ್ಲಿ ಮುಂಬರುವ ಮಹಾ ಚುನಾವಣೆಯಲ್ಲಿ ಮರೀನ್ ಲೇ ಪೆನ್ ಅವರ ಉಗ್ರ ಬಲಪಂಥೀಯ ಪಕ್ಷವು, ಹಾಲಿ ಅಧ್ಯಕ್ಷ ಎಮ್ಯಾನ್ಯುಅಲ್ ಮೆಕ್ರಾನ್ ಅವರ ನಡು ಪಂಥೀಯ ಪಕ್ಷಗಳ ಮೈತ್ರಿಕೂಟವನ್ನು ಹಿಂದಿಕ್ಕಿ, ಅತಿ ದೊಡ್ಡ ಪಕ್ಷವಾಗಿ ಹೊರ ಹೊಮ್ಮಬಹುದೆಂದು ಈಗ ತೋರುತ್ತದೆ. ಇಟಲಿಯ ಉಪ ಪ್ರಧಾನ ಮಂತ್ರಿ ಮಾತ್ತಿಯೊ ಸಲ್ವಿನಿ ಅವರ ಉಗ್ರ ಬಲಪಂಥೀಯ ಪಕ್ಷವು ಇಟಲಿಯಲ್ಲಿ ಅತಿ ದೊಡ್ಡ ಪಕ್ಷವಾಗಿ ಹೊರ ಹೊಮ್ಮುವುದಷ್ಟೇ ಅಲ್ಲದೆ, ಯೂರೊ ಪಾರ್ಲಿಮೆಂಟಿನಲ್ಲಿ ಜರ್ಮನಿಯ ಛಾನ್ಸೆಲರ್ ಅಂಜೆಲಾ ಮರ್ಕೆಲ್ ಅವರ ಪಕ್ಷವನ್ನು ಹಿಂದಿಕ್ಕಿ ಅತಿ ದೊಡ್ಡ ಪಕ್ಷವಾಗಿ ಹೊರ ಹೊಮ್ಮಿದೆ. ಮರ್ಕೆಲ್ ಅವರ ಪಕ್ಷವು ಐದು ವರ್ಷಗಳ ಹಿಂದಿನ ಚುನಾವಣೆಯಲ್ಲಿ ಗಳಿಸಿದ್ದಕ್ಕಿಂತ 9% ಕಡಿಮೆ ಮತಗಳಿಸಿದೆ. ಅಷ್ಟೇ ಅಲ್ಲ, ಜರ್ಮನಿಯ ಆಲ್ಟರ್ನೆಟೀವ್ ಫಾರ್ ಜರ್ಮನಿ ಎಂಬ ಉಗ್ರ ಬಲಪಂಥೀಯ ಪಕ್ಷವು 10.೫% ಮತ ಹೆಚ್ಚಿಸಿಕೊಂಡಿದೆ. ಹಂಗೆರಿಯಲ್ಲಿ, ಅಧ್ಯಕ್ಷ ವಿಕ್ಟರ್ ಒರ್ಬಾನ್ ಅವರ ಬಲಪಂಥೀಯ ಪಕ್ಷವು ಮತ್ತೊಮ್ಮೆ ಪುನರಾಯ್ಕೆಗೊಳ್ಳುವ ಹಾದಿಯಲ್ಲಿದೆ.
ಮೋದಿಯವರ ಗೆಲುವು ದೇಶದಲ್ಲಿ ಜರುಗಿದ ಅನೇಕ ಬೆಳವಣಿಗೆಗಳಿಗೆ ಸಲ್ಲುತ್ತದೆ ಎಂಬುದು ಸ್ಪಷ್ಟವಿದ್ದರೂ ಸಹ, ಇಡೀ ವಿಶ್ವವೇ ಬಲ ಪಂಥಾಭಿಮುಖವಾಗಿ ದಾಪುಗಾಲು ಹಾಕುತ್ತಿರುವ ಈ ಸನ್ನಿವೇಶವನ್ನು ಮರೆಯಬಾರದು. ಬಲ ಪಂಥದ ಕಡೆಗೆ ಕೊಂಡೊಯ್ಯುವ ಉದ್ದೇಶಪೂರ್ವಕ ಪ್ರಯತ್ನಗಳು ಚಾಲನೆಯಲ್ಲಿರುವ ಈ ಸಂದರ್ಭದಲ್ಲಿ, ಇದು ಹೀಗೆಯೇ ಆಗುತ್ತಿರುವುದು ಏಕೆ? ಎಂಬ ಪ್ರಶ್ನೆಯನ್ನು ನಾವು ಕೇಳಬೇಕಾಗುತ್ತದೆ. ಉದಾರ ಮನೋಭಾವದ ಬೂರ್ಜ್ವಾ ವಿಶ್ಲೇಷಕರು, ಈ ಎಲ್ಲ ದೇಶಗಳ ಪಕ್ಷಗಳು ಮತ್ತು ಚಳವಳಿಗಳ ನಡುವೆ ಗೋಚರಿಸುವ ಒಂದು ಸಮಾನ ಅಂಶವನ್ನು ಕಾಣುವುದರ ಬದಲಾಗಿ, ಈ ವಾಸ್ತವದ ಚಿತ್ರವನ್ನು ತುಂಡರಿಸಿ ವಿಶ್ಲೇಷಿಸುವ ಪ್ರವೃತ್ತಿ ಬೆಳಸಿಕೊಂಡಿದ್ದಾರೆ: ಅವರು ಯೂರೋಪ್ ದೇಶದ ರಾಜಕೀಯ ಪಕ್ಷಗಳನ್ನು ಯೂರೋಪಿಯನ್ ಒಕ್ಕೂಟ ಪರ ಮತ್ತು ಯೂರೋಪಿಯನ್ ಒಕ್ಕೂಟ ವಿರೋಧಿ, ಅಥವಾ, ವಲಸೆ-ಪರ ಅಥವಾ ವಲಸೆ-ವಿರೋಧಿ ಎಂದೇ ವಿಭಜಿಸುತ್ತಾರೆ.
ಅದೇ ರೀತಿಯಲ್ಲಿ, ಬೂರ್ಜ್ವಾ ವಿಶ್ಲೇಷಕರು ಮೋದಿಯವರ ಗೆಲುವನ್ನು ಹಿಂದುತ್ವದೊಂದಿಗೆ ತಳುಕು ಹಾಕಿಕೊಂಡಿರುವ ಒಂದು ವಿದ್ಯಮಾನವಾಗಿ ನೋಡುತ್ತಾರೆಯೇ ಹೊರತು, ಯೂರೋಪಿನಲ್ಲಿ ಆಗುತ್ತಿರುವ ವಿದ್ಯಮಾನಕ್ಕೂ ಮತ್ತು ಭಾರತದ ಈ ವಿದ್ಯಮಾನಕ್ಕೂ ಒಂದಕ್ಕೊಂದು ಸಂಬಂಧವೇ ಇಲ್ಲ ಎಂಬಂತೆಯೇ ನೋಡುತ್ತಾರೆ. ಡೊನಾಲ್ಡ್ ಟ್ರಂಪ್ ಅವರ ಬಲಗೊಳ್ಳುತ್ತಿರುವ ಪುನರಾಯ್ಕೆಯನ್ನೂ ಸಹ ಈ ಬೆಳವಣಿಗೆಗಳಿಂದ ಪ್ರತ್ಯೇಕಿಸಿಯೇ ಕಾಣುತ್ತಾರೆ. ಆದರೆ, ಈ ರೀತಿ ಪ್ರತ್ಯೇಕಿಸಿ ನೋಡುವುದು ಮಾರ್ಕ್ಸ್ವಾದಿ ವಿಶ್ಲೇಷಣೆಗೆ ಸಲ್ಲುವಂತದ್ದಲ್ಲ. ಮಾರ್ಕ್ಸ್ವಾದಿ ವಿಶ್ಲೇಷಣೆ ಘಟನೆಗಳನ್ನು ಸಮಗ್ರವಾಗಿ ನೋಡುತ್ತದೆ, ಅನಾವರಣಗೊಳ್ಳುತ್ತಿರುವ ಘಟನಾವಳಿಗಳ ನಡುವೆ ಇರುವ ಸಮಾನ ರೂಪ, ಕ್ರಮ ಅಥವಾ ಏರ್ಪಾಡು ಮತ್ತು ಅದರ ವರ್ಗ ವಿನ್ಯಾಸವನ್ನು ಗುರುತಿಸುತ್ತದೆ. ಅಂತಾದರೆ, ಜಗತ್ತಿನಾದ್ಯಂತ ಬಲ ಪಂಥದತ್ತ ಸರಿಯುತ್ತಿರುವುದರ ಬಗ್ಗೆ ಮಾರ್ಕ್ಸ್ವಾದಿಗಳು ಏನು ಹೇಳಬಹುದು?
ಇದು ಸ್ಪಷ್ಟವಾಗಿ 2008ರಲ್ಲಿ ಆರಂಭವಾಗಿ ಇನ್ನೂ ಜಾಗತಿಕ ಅರ್ಥವ್ಯವಸ್ಥೆಯನ್ನು ಬಿಗಿದುಕೊಂಡಿರುವ ಆರ್ಥಿಕ ಬಿಕ್ಕಟ್ಟನ್ನು ವ್ಯಕ್ತಪಡಿಸುತ್ತದೆ. ಈ ಬಿಕ್ಕಟ್ಟಿನಿಂದ ಸ್ವಲ್ಪ ಚೇತರಿಕೆಯ ಲಕ್ಷಣಗಳು ಆಗೊಮ್ಮೆ ಈಗೊಮ್ಮೆ ಪ್ರಕಟಗೊಂಡಿವೆ. ಆದರೆ, ಚೇತರಿಕೆಯ ಲಕ್ಷಣಗಳು ಕಾಣಿಸಿಕೊಂಡ ಸ್ವಲ್ಪವೇ ಸಮಯದಲ್ಲಿ ಜಾಗತಿಕ ಅರ್ಥವ್ಯವಸ್ಥೆಯು ಮತ್ತೊಮ್ಮೆ ಬಿಕ್ಕಟ್ಟಿನಲ್ಲಿ ಮುಳುಗುತ್ತಿತ್ತು. ಒಂದು ಪುಟಿಯುವ ರಬ್ಬರ್ ಚೆಂಡಿನ ಉಪಮಾನವು ಜಾಗತಿಕ ಅರ್ಥವ್ಯವಸ್ಥೆಯ ಈ ಪರಿಸ್ಥಿತಿಗೆ ಸೊಗಸಾಗಿ ಹೋಲುತ್ತದೆ: ಚೆಂಡು ನೆಲದಿಂದ ಪುಟಿದ ಕೂಡಲೇ ಚೇತರಿಕೆಯ ಉತ್ಸಾಹ ಏರುತ್ತಿತ್ತು; ಪುಟಿದ ಚೆಂಡು ಮತ್ತೆ ನೆಲಕ್ಕೆ ಬಿದ್ದ ಕೂಡಲೇ ಆ ಉತ್ಸಾಹ ಇಳಿಯುತ್ತಿತ್ತು.
ಇಂತಹ ವಾದದ ಬಗ್ಗೆ ತಕರಾರು ಎತ್ತಬಹುದು. ಈ ತಕರಾರಿನ ಸಮರ್ಥನೆಯಾಗಿ ಅಮೇರಿಕಾದಲ್ಲಿ ನಿರುದ್ಯೋಗದ ದರವು ಹಿಂದಿನ ದಶಕಗಳಿಗಿಂತಲೂ ಕೆಳ ಮಟ್ಟಕ್ಕೆ ಈಗ ಇಳಿದಿದೆ ಎಂದು ಹೇಳಬಹುದು. ಆದರೆ, ಉದ್ಯೋಗದಲ್ಲಿ ಭಾಗವಹಿಸುವಿಕೆಯ ದರವು 2008ರಲ್ಲಿ ಇದ್ದದ್ದಕ್ಕಿಂತಲೂ ಕೆಳಗಿದೆ. ಉದ್ಯೋಗ ಭಾಗವಹಿಸುವಿಕೆಯ ದರವು ಈಗಲೂ 2008ರಲ್ಲಿ ಇದ್ದಷ್ಟೇ ಇದೆ ಎಂದು ಊಹಿಸಿಕೊಂಡರೆ, ಅಮೇರಿಕಾದ ಇಂದಿನ ನಿರುದ್ಯೋಗದ ದರ 8% ಆಗುತ್ತದೆ, ಅಧಿಕೃತ ಅಂಕಿಗಳು ಹೇಳುವ ಹಾಗೆ 4% ಅಲ್ಲ.
ಜಾಗತಿಕ ಅರ್ಥವ್ಯವಸ್ಥೆಯು ಬಿಕ್ಕಟ್ಟಿಗೆ ಒಳಗಾಗಿರುವ ಪರಿಸ್ಥಿತಿಯಲ್ಲಿ ಮತ್ತು ಅದರ ಪರಿಣಾಮವಾಗಿ ನಿರುದ್ಯೋಗವು ಉಲ್ಬಣಗೊಂಡ ಪರಿಸ್ಥಿತಿಯಲ್ಲಿ ಜಗತ್ತಿನಾದ್ಯಂತ ಬಲ ಪಂಥದತ್ತ ಪಲ್ಲಟ ಕಾಣುತ್ತಿದೆ. ಅರ್ಥವ್ಯವಸ್ಥೆಯ ಬಿಕ್ಕಟ್ಟು ಮತ್ತು ನಿರುದ್ಯೋಗದ ಪ್ರಶ್ನೆ ಬಂದಾಗ, ಉದಾರವಾದೀ ಬೂರ್ಜ್ವಾ ಪಕ್ಷಗಳು ಸಾಮಾನ್ಯವಾಗಿ ನಿರಾಕರಣೆಯ ಧೋರಣೆ ತಳೆಯುತ್ತವೆ. ನಿರುದ್ಯೋಗ ಉಂಟಾಗುವುದಕ್ಕೆ ವ್ಯವಸ್ಥೆ ಕಾರಣವಲ್ಲ; ವಲಸಿಗರೇ ಕಾರಣ; ಆದುದರಿಂದ ವಲಸೆಯನ್ನು ತಡೆಯಬೇಕು ಎಂದು ಪ್ರತಿಪಾದಿಸುವ ಬಲ ಪಂಥವು, ಕೊನೆಯ ಪಕ್ಷ, ನಿರುದ್ಯೋಗವು ಉಂಟುಮಾಡುವ ಯಾತನೆಯನ್ನು ಗುರುತಿಸುತ್ತದೆ.
ಯೂರೋಪಿಯನ್ ಒಕ್ಕೂಟ ವ್ಯವಸ್ಥೆಯಲ್ಲಿ, ಅದರ ದುಡಿಮೆಗಾರರು ಒಕ್ಕೂಟದ 28 ಸದಸ್ಯ ದೇಶಗಳಲ್ಲಿ ಯಾವುದೇ ದೇಶಕ್ಕೆ ವಲಸೆ ಹೋಗುವ ಅವಕಾಶವು ಮುಕ್ತವಾಗಿರುವುದರಿಂದ, ಕೆಲವು ಬಲ ಪಂಥೀಯ ಪಕ್ಷಗಳು ಯೂರೋಪಿಯನ್ ಒಕ್ಕೂಟದ ವಿರೋಧಿಗಳೂ ಆಗಿದ್ದಾರೆ. ಆಡಳಿತದಲ್ಲಿರುವ ಮತ್ತು ಅವರಿಗೆ ವಿರೋಧವಿರುವ ಉದಾರವಾದೀ ಬೂರ್ಜ್ವಾ ಪಕ್ಷಗಳು ಬಿಕ್ಕಟ್ಟು ಇದೆಯೆನ್ನುವುದನ್ನೇ ಒಪ್ಪಿಕೊಳ್ಳದ ಪರಿಸ್ಥಿತಿಯಲ್ಲಿ ಮತ್ತು ಎಡ ಪಂಥವು ಈ ಬಿಕ್ಕಟ್ಟಿನಿಂದ ಹೊರಬರುವ ಒಂದು ಪರ್ಯಾಯ ಅಜೆಂಡಾವನ್ನು ಜನತೆಯ ಮುಂದಿಡುವಲ್ಲಿ ನಿಧಾನವಾಗಿರುವ ಪರಿಸ್ಥಿತಿಯಲ್ಲಿ, ಇಂತಹ ಪರಿಸ್ಥಿತಿ ನಿರ್ಮಾಣವಾಗುವುದನ್ನೇ ಕಾಯುತ್ತಿದ್ದ ಬಲ ಪಂಥವು ಕಿಂದರಿಜೋಗಿಯಂತೆ ರಂಗ ಪ್ರವೇಶಿಸಿ ನಿರುದ್ಯೋಗ ಪರಿಹರಿಸುವ ಕಿಂದರಿ ಬಾರಿಸಿತು. ಒಂದು ವಲಸೆ-ವಿರೋಧಿ ಅಜೆಂಡಾವನ್ನು ಜನತೆಯ ಮುಂದಿಡುವ ಮೂಲಕ ಬಲ ಪಂಥವು ತನ್ನ ಚಟುವಟಿಕೆಗಳಿಗೆ ಚಾಲನೆ ಕೊಟ್ಟಿದೆ. ಹೀಗೆ ಜಗತ್ತಿನ ಉದ್ದಗಲದಲ್ಲೂ ಅದರ ಬೆಳವಣಿಗೆಗೆ ಅದು ಬಿಕ್ಕಟ್ಟು ಮತ್ತು ನಿರುದ್ಯೋಗವನ್ನು ಗಮನಕ್ಕೆ ತಗೊಂಡಿರುವುದು ಮತ್ತು ಅಧಿಕಾರಸ್ಥರ ಪರವಾದ ರಾಜಕೀಯ ಪಕ್ಷಗಳು ಗಮನಕ್ಕೆ ತಗೊಂಡಿರದಿರುವುದೇ ಕಾರಣ ಎನ್ನಬಹುದು.
ಹಾಗಾದರೆ, ಭಾರತದಲ್ಲಿನ ಕತೆ ಈ ವಿವರಣೆಯ ಚೌಕಟ್ಟಿಗೆ ಹೊಂದಿಕೊಳ್ಳುತ್ತದೆಯೇ? ಭಾರತದಲ್ಲಿಯೂ ಸಹ ಅಭಿವೃದ್ಧಿ ಅಜೆಂಡಾದ ಮೂಲಕವೇ 2014ರಲ್ಲಿ ಮೋದಿ ಅಧಿಕಾರ ಹಿಡಿದದ್ದು. ಅದಕ್ಕೂ ಮುನ್ನವೇ ಯುಪಿಎ-2 (2009-14) ಅವಧಿಯಲ್ಲಿ ಆರ್ಥಿಕ ಬೆಳವಣಿಗೆ ದರ ಇಳಿಮುಖವಾಗಿತ್ತು. ಹಾಗಾಗಿ, ಪ್ರತಿಯೊಬ್ಬರ ಅದೃಷ್ಟ ಖುಲಾಯಿಸುವ ನವ ಉದಾರವಾದದ ಭರವಸೆ ಮಬ್ಬಾಗಲಾರಂಭಿಸಿತ್ತು. ಜನತೆಗೆ ಕೊಟ್ಟಿದ್ದ ಅಭಿವೃದ್ಧಿ ಅಥವಾ ವಿಕಾಸ ಭರವಸೆಯನ್ನು ಈಡೇರಿಸಲು ಮೋದಿ ಸರ್ಕಾರವು ಅಧಿಕಾರದ ಅವಧಿಯಲ್ಲಿ(2014-19) ಅಕ್ಷರಷಃ ಏನನ್ನೂ ಮಾಡಲಿಲ್ಲ.
ಆ ಕಾರಣದಿಂದಾಗಿಯೇ ಈಗ ತಾನೇ ಮುಗಿದ ಚುನಾವಣೆಯಲ್ಲಿ ಅಭಿವೃದ್ಧಿ ಅಥವಾ ವಿಕಾಸದ ಬಗ್ಗೆ ಮೋದಿಯವರು ಒಂದೇ ಒಂದು ಶಬ್ದವನ್ನೂ ಉಚ್ಛರಿಸಲಿಲ್ಲ. ಆದರೆ, ಭಯೋತ್ಪಾದನೆ ವಿರುದ್ಧ ಹೋರಾಡುವೆ, ರಾಷ್ಟ್ರವನ್ನು ರಕ್ಷಿಸುವೆ, ಪಾಕೀಸ್ತಾನಕ್ಕೆ ಪಾಠ ಕಲಿಸುವೆ ಮತ್ತು ಹಿಂದುತ್ವ ಪ್ರತಿಷ್ಠಾಪನೆಯಂತಹ ಮಾತುಗಳ ಮೂಲಕ ಇಡೀ ಚರ್ಚೆಯ ದಿಕ್ಕನ್ನೇ ಮೋದಿ ಬದಲಿಸಿದರು. ಈ ತಂತ್ರಗಾರಿಕೆಯ ಮಾತುಗಳ ಮೂಲಕ, ಅಧಿಕಾರದ ಅವಧಿಯಲ್ಲಿ ಅಭಿವೃದ್ಧಿ ಸಾಧಿಸಲು ತಮ್ಮ ಸರ್ಕಾರ ಮಾಡಿದ್ದೇನು ಎಂಬುದರ ಕುರಿತು ಎದುರಾಗುವ ಇರುಸು ಮುರುಸಿನ ಪ್ರಶ್ನೆಗಳನ್ನು ನಿರಾಯಾಸವಾಗಿ ತಪ್ಪಿಸಿಕೊಂಡರು. ಅದರಿಂದ ಅವರಿಗೆ ಭರ್ಜರಿ ಅನುಕೂಲವೇ ಆಯ್ತು.
ನವ ಉದಾರವಾದವನ್ನು ಪ್ರತಿನಿಧಿಸುವ ಕಾಂಗ್ರೆಸ್ನಂತಹ ಒಂದು ಪಕ್ಷದಿಂದ ಬಿಜೆಪಿಯಂತಹ ಒಂದು ಬಲ ಪಂಥೀಯ ಪಕ್ಷದತ್ತ ಪಲ್ಲಟವು ಸಾಧ್ಯವಾಗಿರುವುದು ನವ ಉದಾರವಾದದ ಬಿಕ್ಕಟ್ಟಿನಿಂದಾಗಿಯೇ ಎಂಬ ಸಂಗತಿಯಂತೂ ಉಳಿದೇ ಉಳಿಯುತ್ತದೆ. ನವ ಉದಾರವಾದವು ಅಭಿವೃದ್ಧಿ ತರುತ್ತದೆ ಎಂಬುದಾಗಿ ಸೋಗುಹಾಕುವುದು ಕಾಗ್ರೆಸ್ ಪಕ್ಷಕ್ಕೆ ಇನ್ನೆಷ್ಟೂ ಸಾಧ್ಯವಿರಲಿಲ್ಲ. ಬಿಜೆಪಿಯಂತೂ ಅಭಿವೃದ್ಧಿಯ ಬಗ್ಗೆ ಮಾತಾಡಲೇ ಇಲ್ಲ. ಆದರೆ, ಕಥನ-ಪ್ರವಚನದ ದಿಕ್ಕನ್ನೇ ಬದಲಿಸಿತು. ಅದು ಕಾರ್ಪೊರೇಟ್-ಹಣಕಾಸು ಕುಳಗಳಿಗೆ ಹಿಡಿಸಿತು ಕೂಡ (ಅದೆಷ್ಟು ಅಂದರೆ, ಬಿಜೆಪಿ ಗೆಲ್ಲುತ್ತದೆಂದು ಎಕ್ಸಿಟ್ ಪೋಲ್ಗಳು ಭವಿಷ್ಯ ನುಡಿದ ಕೂಡಲೇ ಷೇರು ಪೇಟೆ ಸೂಚ್ಯಂಕ ಸರ್ರನೆ ಏರಿತು).
ಬದಲಾದ ಇಂತಹ ಸಂವಾದ-ಕಥನಗಳ ಪ್ರಭಾವ ತಾತ್ಕಾಲಿಕ. ನವ ಉದಾರವಾದವು ಸಿಕ್ಕಿಹಾಕಿಕೊಂಡಿರುವ ಬಿಕ್ಕಟ್ಟಿನಿಂದ ಹೊರಬರುವುದು ಹೇಗೆ ಎಂಬುದರ ಬಗ್ಗೆ ಯಾವ ಸುಳಿವೂ ಕಾಂಗ್ರೆಸ್ಗೂ ಇಲ್ಲ, ಬಿಜೆಪಿಗೂ ಇಲ್ಲ. ಆದ್ದರಿಂದ, ಕೋಟ್ಯಂತರ ನಿರುದ್ಯೋಗಿಗಳಿಗೆ ಅವರು ಉದ್ಯೋಗ ಒದಗಿಸಲಾರರು. ಹಾಗೆ ಹೇಳುವುದಾದರೆ, ಕಾಂಗ್ರೆಸ್ ಪಕ್ಷದ ಕೆಲವರಿಗೆ ನವ ಉದಾರವಾದದ ಹಾದಿಯಲ್ಲಿ ಮುಂದೆ ಹೋಗುವುದು ಅದೆಷ್ಟು ಕಷ್ಟ ಎಂಬುದರ ಅರಿವಿತ್ತು. ಹಾಗಾಗಿಯೇ, ಕಾಂಗ್ರೆಸ್ ಪಕ್ಷವು ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಐದು ಕೋಟಿ ಕಡು ಬಡ ಕುಟುಂಬಗಳಿಗೆ ವಾರ್ಷಿಕ 72,000 ರೂ ಹಣ ವರ್ಗಾಯಿಸುವ ನ್ಯಾಯ ಯೋಜನೆಯ ಘೋಷಣೆ ಕೊಟ್ಟಿತ್ತು. ಮಾಮೂಲು ಪರಿಸ್ಥಿತಿಯಲ್ಲಿ ಸಾಕಷ್ಟು ಉತ್ಸಾಹ ತುಂಬುವ ಸಾಧ್ಯತೆ ಹೊಂದಿದ್ದ ಮತ್ತು ಪಕ್ಷದ ಪಾಲಿಗೆ ಅಧಿಕಾರ ತಂದುಕೊಡುವಂತಹ ಒಂದು ಯೋಜನೆಯೇ ಠುಸ್ ಪಟಾಕಿಯಂತಾಯಿತು. ಏಕೆಂದರೆ, ಅದಕ್ಕೆ ಬೇಕಾಗುವ ಹಣ ಯಾವ ಮೂಲದಿಂದ ಬರುತ್ತದೆ ಎಂಬುದನ್ನು ಕಾಂಗ್ರೆಸ್ ಪಕ್ಷವು ಹೇಳದೇ ಇದ್ದುದರಿಂದ ಅದು ಜನರ ವಿಶ್ವಾಸ ಗಳಿಸಲಿಲ್ಲ. ಇದೊಂದು ಚುನಾವಣಾ ಭರವಸೆ, ಚುನಾವಣೆಯ ಮರು ದಿನವೇ ಅದನ್ನು ಮುರಿಯಲಾಗುತ್ತದೆ ಎಂದೇ ಜನ ಸಹಜವಾಗಿ ಭಾವಿಸಿದರು.
ಅರ್ಥವ್ಯವಸ್ಥೆಯನ್ನು ಮುನ್ನೆಡೆಸುವುದು ಹೇಗೆ ಎಂಬುದರ ಬಗ್ಗೆ ಮಧ್ಯಮಾರ್ಗಿ, ಉದಾರವಾದೀ ಬೂರ್ಜ್ವಾ ಪಕ್ಷವಾದ ಕಾಂಗ್ರೆಸ್ಗೆ ಒಂದು ಸ್ಪಷ್ಟ ಕಲ್ಪನೆಯೇ ಇಲ್ಲ. ಆ ಪಕ್ಷಕ್ಕೆ ಸರಿಸಮನಾಗಿ ಬಿಜೆಪಿಗೂ ಅದರ ಬಗ್ಗೆ ಯಾವುದೇ ಸುಳಿವೂ ಇಲ್ಲ. ಬಿಜೆಪಿಯ ಅತಿರೇಕದ ರಾಷ್ಟ್ರವಾದವು ಬಹಳ ಬೇಗನೇ ತೆಳುವಾಗುತ್ತದೆ. ಹಸಿವು ಮತ್ತು ನಿರುದ್ಯೋಗದಿಂದ ನರಳುತ್ತಿರುವ ಜನತೆಯನ್ನು ಗಾಳಕ್ಕೆ ಸಿಕ್ಕಿಸಿದ ಹುಳ ತಿನ್ನುವ ಮೀನುಗಳೆಂದು ಭಾವಿಸಿ, ಅವರಿಗೆ ದಿನನಿತ್ಯವೂ ಪಾಕೀಸ್ತಾನ-ವಿರೋಧೀ ಮತ್ತು ಮುಸ್ಲಿಂ-ವಿರೋಧೀ ಮಾತುಗಳನ್ನೇ ಉಣಬಡಿಸುವ ಆಟ ಬಹಳ ಕಾಲ ನಡೆಯುವುದಿಲ್ಲ. ಅಲ್ಲದೆ, ಆರ್ಥಿಕ ಪರಿಸ್ಥಿತಿ ನಿಂತಲ್ಲೇ ನಿಶ್ಚಲವಾಗಿ ಉಳಿಯುವುದಿಲ್ಲ.
ಮೋದಿ ಸರ್ಕಾರವು ಆರ್ಥಿಕ ವಲಯದತ್ತ ತಲೆ ಹಾಕಿ ಮಲಗದೇ ಇದ್ದರೂ ಸಹ, ಅರ್ಥವ್ಯವಸ್ಥೆಯು ಮೋದಿಯವರನ್ನು ಅವರಷ್ಟಕ್ಕೆ ಅವರು ಇರಲು ಬಿಡುವುದಿಲ್ಲ, ಬೆನ್ನು ಹತ್ತಿದ ಬೇತಾಳನಂತೆ ಕಾಡುತ್ತದೆ. ಕಾಲಕ್ರಮೇಣ, ಆರ್ಥಿಕ ಚಟುವಟಿಕೆಗಳ ಹಿಂಜರಿತ ಮತ್ತು ವಿದೇಶ ವ್ಯಾಪಾರದ ಬಾಕಿ ಚುಕ್ತಾ ಮಾಡುವುದೇ ಒಂದು ಸಮಸ್ಯೆಯಾದಾಗ, ಆರ್ಥಿಕ ಬಿಕ್ಕಟ್ಟು ಉಲ್ಬಣಗೊಳ್ಳುತ್ತದೆ. ಆಗ, ಉತ್ತರ ಕೊಡಲು ಮೋದಿ ಸರ್ಕಾರದ ಬಳಿ ಹೇಳಿಕೊಳ್ಳುವ ಸಮರ್ಥನೆಗಳಿರುವುದಿಲ್ಲ. ಮತ್ತು, ಬಿಕ್ಕಟ್ಟಿನಿಂದ ಅರ್ಥವ್ಯವಸ್ಥೆಯನ್ನು ಪಾರುಮಾಡುವುದು ಆ ವೇಳೆಗಾಗಲೇ ಇನ್ನೂ ಹೆಚ್ಚು ಕಷ್ಟಕರವಾಗುತ್ತದೆ.
ಜನತೆಯ ದಿನನಿತ್ಯದ ಬದುಕಿನ ಜ್ವಲಂತ ಸಮಸ್ಯೆಗಳನ್ನು ಪರಿಹರಿಸಲು ನವ ಉದಾರವಾದದ ಎರಡೂ ಪಡೆಗಳು (ಕಾಂಗ್ರೆಸ್ ಮತ್ತು ಬಿಜೆಪಿ) ಅಸಮರ್ಥವಾಗಿವೆ. ಈ ಪರಿಸ್ಥಿತಿಯಲ್ಲಿ, ಅರ್ಥವ್ಯವಸ್ಥೆಯನ್ನು ಬಿಕ್ಕಟ್ಟಿನಿಂದ ಹೊರ ಬರುವ ಮಾರ್ಗದರ್ಶನವನ್ನು ಎಡ ಪಂಥ ಮಾತ್ರ ಒದಗಿಸಬಲ್ಲದು. ಎಡ ಪಂಥದ ಈ ಮಾರ್ಗವು ನಮ್ಮನ್ನು ಬಂಡವಾಳಶಾಹಿಯಿಂದ ಆಚೆಗೆ ಕೊಂಡೊಯ್ಯಬಲ್ಲದು. ನವ ಉದಾರ ಬಂಡವಾಳಶಾಹಿ ದಿಗಂತದಿಂದ ಆಚೆಗಿನ ಕಣ್ಣೋಟ ಹೊಂದಿರುವುದು ಎಡ ಪಂಥ ಮಾತ್ರ. ಆದ್ದರಿಂದ, ಎಡ ಪರ್ಯಾಯ ಭಾರತಕ್ಕೆ ಮಾತ್ರವಲ್ಲ, ಇಡೀ ವಿಶ್ವಕ್ಕೇ ಸಲ್ಲುತ್ತದೆ.
ಸಂಕ್ಷಿಪ್ತವಾಗಿ, ನಾವೀಗ ಒಂದು ಚಾರಿತ್ರಿಕ ಪರ್ವಕಾಲವನ್ನು ನೋಡುತ್ತಿದ್ದೇವೆ. ಈ ಸನ್ನಿವೇಶದಲ್ಲಿ, ಬಲಪಂಥವು ಒಂದು ಹುಸಿ ಅಥವಾ ವಿಭಜನಕಾರೀ ಅಜೆಂಡಾದ ಸುತ್ತ ಜನರನ್ನು ಅಲ್ಪ ಕಾಲದಲ್ಲೇ ಅಣಿನೆರೆಸುವಲ್ಲಿ ಎಷ್ಡೇ ಯಶಸ್ವಿಯಾಗಿದ್ದರೂ ಸಹ, ನಿರುದ್ಯೋಗ ಮತ್ತು ಹತಾಶೆಯ ಪರಿಸ್ಥಿತಿಗೆ ಒಳಗಾಗಿರುವ ಆ ಜನರನ್ನು ಆ ಪರಿಸ್ಥಿತಿಯಿಂದ ಹೊರತರುವ ಮಾರ್ಗ ತೋರಲು ಬಲ ಪಂಥವು ಮೂಲಭೂತವಾಗಿ ಅಸಮರ್ಥವಾಗಿದೆ.
ಒಂದು ರಾಷ್ಟ್ರದ ಚರಿತ್ರೆಯಲ್ಲಿ, ಅಸ್ತಿತ್ವದಲ್ಲಿರುವ ವ್ಯವಸ್ಥೆಯು ಸ್ಥಿರವಾಗಿ ಮತ್ತು ದೀರ್ಘವಾಗಿ ಬಾಳುವ ಸಾಮರ್ಥ್ಯವುಳ್ಳದ್ದೆಂದು ತೋರುವ ಕ್ಷಣಗಳಿರುತ್ತವೆ. ಆದರೆ, ಇವೆಲ್ಲವೂ ಕ್ಷಿಪ್ರವಾಗಿ ಬದಲಾಗುತ್ತವೆ, ಹಿಂದಿನಂತೆಯೆ ಸಾಗುವುದು ಇನ್ನು ಸಾಧ್ಯವಿಲ್ಲವೆಂಬ ಪರಿಸ್ಥಿತಿಯಲ್ಲಿ ಹೊಸ ಕ್ಷಣಗಳು ಕಾಣಿಸಿಕೊಳ್ಳುತ್ತವೆ. ಅಂತಹ ಒಂದು ಕ್ಷಣ ಬಂಡವಾಳಶಾಹಿಗೆ ಈಗ ಬಂದಿದೆ, ಭಾರತದಲ್ಲಿ ಮಾತ್ರವಲ್ಲ ವಿಶ್ವದ ಎಲ್ಲೆಡೆಯಲ್ಲೂ. ಭಾರತದಲ್ಲಿ ಮತ್ತು ಬೇರೆ ಹಲವು ದೇಶಗಳಲ್ಲಿ ಬಲಪಂಥವು ಎಷ್ಡೇ ಚುನಾವಣಾ ಯಶಸ್ಸು ಗಳಿಸಿದರೂ, ಅದು ಈ ಮೂಲಭೂತ ಅಂಶವನ್ನು ಮಾರ್ಪಡಿಸಲಾರದು.
–ಪ್ರೊ.ಪ್ರಭಾತ್ ಪಟ್ನಾಯಕ್
ಅನು: ಕೆ.ಎಂ.ನಾಗರಾಜ್
ಕೃಪೆ : ಜನಶಕ್ತಿ
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಗ್ಯಾರಂಟಿ ಯೋಜನೆಗಳ ಅನುಷ್ಠಾನ, ಶ್ವೇತಪತ್ರ ಹೊರಡಿಸಲು ಎಚ್.ಡಿ. ಕುಮಾರಸ್ವಾಮಿ ಆಗ್ರಹ

ಸುದ್ದಿದಿನ, ಬೆಂಗಳೂರು : ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ಬಗ್ಗೆ ಶ್ವೇತಪತ್ರ ಹೊರಡಿಸಬೇಕೆಂದು ಜೆಡಿಎಸ್ ಮುಖಂಡ ಎಚ್.ಡಿ.ಕುಮಾರಸ್ವಾಮಿ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಯೋಜನೆಯ ಫಲ ಎಷ್ಟು ಜನರಿಗೆ ಲಭ್ಯವಾಗಿದೆ, ಆರ್ಥಿಕವಾಗಿ ಎಷ್ಟು ಹೊರೆಬಿದ್ದಿದೆ, ಇದುವರೆಗೆ ಫಲಾನುಭವಿಗಳ ಖಾತೆಗೆ ಎಷ್ಟು ಹಣ ಜಮೆಯಾಗಿದೆ ಎಂಬುದರ ಬಗ್ಗೆ ಶ್ವೇತಪತ್ರ ಹೊರಡಿಸಬೇಕು ಎಂದು ಅವರು ಸಾಮಾಜಿಕ ಜಾಲತಾಣದಲ್ಲಿ ಒತ್ತಾಯಿಸಿದ್ದಾರೆ.
ಸರ್ಕಾರದ ಗ್ಯಾರಂಟಿ ಯೋಜನೆಗಳು ವಿಫಲವಾಗಿದೆ, ಸಮರ್ಪಕವಾಗಿ ಜಾರಿಯಾಗುತ್ತಿಲ್ಲ, ಈ ಬಗ್ಗೆ ಮುಂಬರುವ ವಿಧಾನಮಂಡಲ ಅಧಿವೇಶನದಲ್ಲಿ ಪ್ರಸ್ತಾಪಿಸುವುದಾಗಿ ಕುಮಾರಸ್ವಾಮಿ ಹೇಳಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಪಂಚಾಯತ್ ರಾಜ್ ಇಲಾಖೆ ಜತೆ ಕೆಲಸ ಮಾಡಲು ಬಂಧುತ್ವ ಫೌಂಡೇಷನ್ ಸಿದ್ಧ : ಅಧ್ಯಕ್ಷ ರಾಘು ದೊಡ್ಡಮನಿ

ಸುದ್ದಿದಿನ, ದಾವಣಗೆರೆ : ಮಕ್ಕಳ ವಿಷೇಶ ಗ್ರಾಮ ಸಭೆಯ ಮೂಲಕ ಜಿಲ್ಲೆಯ ಮಕ್ಕಳ ಶಿಕ್ಷಣ, ರಕ್ಷಣೆ ಹಾಗೂ ಅವರ ಹಕ್ಕು ಬಾಧ್ಯತೆಗಳಿಗಾಗಿ ಪಂಚಾಯತ್ ರಾಜ್ ಇಲಾಖೆಯ ಜತೆ ಕೆಲಸ ಮಾಡಲು ನಮ್ಮ ಬಂಧುತ್ವ ಫೌಂಡೇಷನ್ ಸಿದ್ಧವಿದೆ ಎಂದು ಫೌಂಡೇಶನ್ ನ ಅಧ್ಯಕ್ಷರಾದ ರಾಘು ದೊಡ್ಡಮನಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರತಿ ವರ್ಷದಂತೆ ಈ ವರ್ಷವೂ ಸಹ ಮಕ್ಕಳ ಸ್ನೇಹಿ ಗ್ರಾಮ ಪಂಚಾಯಿತಿ ಅಭಿಯಾನ ಹಾಗೂ ಮಕ್ಕಳ ಗ್ರಾಮ ಸಭೆ ರೂಪಿಸಲು ರಾಜ್ಯ ಸರ್ಕಾರ ಹೊಸ ಆದೇಶ ಹೊರಡಿಸಿದ್ದು, ಇದೇ ತಿಂಗಳ 14 ರಿಂದ ಜನವರಿ 24 ರವರೆಗೆ 10 ವಾರಗಳ ಮಕ್ಕಳ ಸ್ನೇಹಿ ಅಭಿಯಾನ ಹಾಗೂ ಮಕ್ಕಳ ಗ್ರಾಮ ಸಭೆ ನಡೆಸಲು ರಾಜ್ಯದ ಎಲ್ಲಾ ಗ್ರಾಮ ಪಂಚಾಯಿತಿಗಳಿಗೂ ಸೂಚನೆ ನೀಡಲಾಗಿದೆ.
ಈ ಅಭಿಯಾನವು ಗ್ರಾಮ ಪಂಚಾಯಿತಿಗಳನ್ನು ಮಕ್ಕಳ ಸ್ನೇಹಿಯಾಗಿಸಲು ಪಂಚಾಯತ್ ರಾಜ್ ಇಲಾಖೆ ಈ ಮೂಲಕ ದಾಪುಗಾಲಿಟ್ಟಿದೆ. ಸ್ಥಳೀಯ ಸಂಸ್ಥೆಗಳ ಮೂಲಕ ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುವ ಸರ್ಕಾರದ ಮಹಾತ್ವಕಾಂಕ್ಷೆಯ ಯೋಜನೆ ಇದಾಗಿದ್ದು, ಜಿಲ್ಲಾ ಪಂಚಾಯತ್, ತಾಲ್ಲೂಕು ಪಂಚಾಯತ್ ಸಹಕಾರದೊಂದಿಗೆ ಗ್ರಾಮ ಪಂಚಾಯಿತಿಗಳು ತಮ್ಮ ಸದಸ್ಯರು ಹಾಗೂ ಸ್ಥಳೀಯ ಶಾಲೆಗಳು, ಸಂಘ-ಸಂಸ್ಥೆಗಳ ಸಹಕಾರದೊಂದಿಗೆ ನಮ್ಮ ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲೂ ಕಡ್ಡಾಯವಾಗಿ ಈ ಮಕ್ಕಳ ಸ್ನೇಹಿ ಗ್ರಾಮ ಪಂಚಾಯಿತಿ ಅಭಿಯಾನ ಹಾಗೂ ಮಕ್ಕಳ ವಿಷೇಶ ಗ್ರಾಮ ಸಭೆ ನಡೆಸಲು ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ ಎಂದಿದ್ದಾರೆ.
ಮಕ್ಕಳ ವಿಷೇಶ ಗ್ರಾಮ ಸಭೆಯು ಸ್ಥಳೀಯ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಮಕ್ಕಳಿಗೆ ಸಂಬಂಧಿಸಿದ ಅನೇಕ ಸಮಸ್ಯೆಗಳು ಮಕ್ಕಳ ಆರೋಗ್ಯ, ರಕ್ಷಣೆ, ಅಂಗನವಾಡಿಗಳು, ಶಾಲೆ, ಶಾಲಾ ಆವರಣ, ಸ್ವಚ್ಛತೆ, ಬಡ ಮಕ್ಕಳಿಗೆ ನೆರವು ಮುಂತಾದ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಯಬೇಕು. ಹಾಗೂ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸದಸ್ಯರುಗಳ ಜೊತೆ ಅಧಿಕಾರಿಗಳು ಸಭೆಯಲ್ಲಿ ಖುದ್ದು ಹಾಜರಿರಬೇಕು. ಮಕ್ಕಳ ಸಭೆ ಅಲ್ಲವೇ ಎಂದು ಯಾರು ಸಹ ನಿರ್ಲಕ್ಷ್ಯ ತೋರುವಂತಿಲ್ಲ. ಸಾಮಾನ್ಯ ಗ್ರಾಮ ಸಭೆಗಳಿಗಿರುವಷ್ಟು ಪ್ರಾಮುಖ್ಯತೆ ಈ ಮಕ್ಕಳ ಸಭೆಗೂ ಇರುತ್ತದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
2024 ರ ಲೋಕಸಭಾ ಸಾರ್ವತ್ರಿಕ ಚುನಾವಣೆ; ರಾಜಕೀಯ ಪಕ್ಷಗಳೊಂದಿಗೆ ಜಾಹಿರಾತು ದರ ನಿಗದಿ ಸಭೆ

ಸುದ್ದಿದಿನ,ದಾವಣಗೆರೆ : 2024 ರಲ್ಲಿ ನಡೆಯುವ ಲೋಕಸಭಾ ಸಾರ್ವತ್ರಿಕ ಚುನಾವಣೆಗೆ ಸಂಬಂಧಿಸಿದಂತೆ ಮುದ್ರಣ, ವಿದ್ಯುನ್ಮಾನ ಮಾಧ್ಯಮ, ಕೇಬಲ್ ಟಿ.ವಿ ಗಳಲ್ಲಿ ಪ್ರಚಾರ ಮಾಡಲು ನಿಗದಿ ಮಾಡಿರುವ ಜಾಹಿರಾತು ದರದ ಬಗ್ಗೆ ರಾಜಕೀಯ ಪಕ್ಷಗಳ ಮುಖಂಡರೊಂದಿಗೆ ನವೆಂಬರ್ 10 ರಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಅಪರ ಜಿಲ್ಲಾಧಿಕಾರಿ ಪಿ.ಎನ್.ಲೋಕೇಶ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಚರ್ಚಿಸಲಾಯಿತು.
ಚುನಾವಣಾ ಸಂದರ್ಭದಲ್ಲಿ ಅಭ್ಯರ್ಥಿಗಳು ರಾಜ್ಯ ಮಟ್ಟದ ಪತ್ರಿಕೆಗಳು, ಸ್ಥಳೀಯ, ಪ್ರಾದೇಶಿಕ, ವಾರಪತ್ರಿಕೆ, ಕೇಬಲ್ ಟಿ.ವಿ.ಗಳಲ್ಲಿ ನೀಡುವ ಚುನಾವಣಾ ಜಾಹಿರಾತುಗಳಿಗೆ ಅನ್ವಯಿಸುವ ದರದ ಬಗ್ಗೆ ರಾಜಕೀಯ ಪಕ್ಷಗಳ ಮುಖಂಡರಿಗೆ ತಿಳಿಸಲಾಯಿತು.
ಚುನಾವಣಾ ಸಂದರ್ಭದಲ್ಲಿ ಎಂಸಿಎಂಸಿ ಸಮಿತಿಯು ಕಾರ್ಯನಿರ್ವಹಿಸಲಿದ್ದು ಇದರ ಎಲ್ಲಾ ಮೇಲ್ವಿಚಾರಣೆ ನಡೆಸಲಿದೆ. ಅಭ್ಯರ್ಥಿಗಳು ನೀಡುವ ಜಾಹಿರಾತು ವೆಚ್ಚವು ಸಹ ಅಭ್ಯರ್ಥಿಗಳಿಗೆ ವೆಚ್ಚಕ್ಕೆ ನಿಗದಿಪಡಿಸಿರುವ ಮೊತ್ತದಲ್ಲಿ ಸೇರಲಿದೆ ಎಂದು ಪಕ್ಷಗಳ ಮುಖಂಡರಿಗೆ ಮನವರಿಕೆ ಮಾಡಿದರು.
ಸಭೆಯಲ್ಲಿ ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಜಿ.ಸಿ.ರಾಘವೇಂದ್ರ ಪ್ರಸಾದ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಧನಂಜಯ, ಚುನಾವಣಾ ತಹಶೀಲ್ದಾರ್ ಅರುಣ್ ಎಸ್.ಕಾರ್ಗಿ ಹಾಗೂ ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಉಪಸ್ಥಿತರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ6 days ago
ಚನ್ನಗಿರಿ | ಅತಿಥಿ ಉಪನ್ಯಾಸಕರಿಂದ ಅನಿರ್ದಿಷ್ಟಾವಧಿ ಮುಷ್ಕರ ; ತಹಶೀಲ್ದಾರರಿಗೆ ಮನವಿ
-
ದಿನದ ಸುದ್ದಿ4 days ago
ಭಾರತೀಯರೆಲ್ಲರ ಪವಿತ್ರಗ್ರಂಥ ಭಾರತದ ಸಂವಿಧಾನ : ಡಾ.ಕೆ.ಎ.ಓಬಳೇಶ್
-
ದಿನದ ಸುದ್ದಿ3 days ago
ಮಹಿಳೆಗೆ ಮೀಸಲಾತಿ ಬೇಡ, ಸಮಾನ ಪ್ರಾತಿನಿಧ್ಯ ಕೊಡಿ : ಡಾ.ಜ್ಯೋತಿ ಟಿ.ಬಿ
-
ದಿನದ ಸುದ್ದಿ6 days ago
ಸರ್ಕಾರಕ್ಕೆ ಸೆಡ್ಡು ಹೊಡೆದ ದಾವಣಗೆರೆ ರೈತರು