ದಿನದ ಸುದ್ದಿ
ಬಿತ್ತನೆ ಬೀಜ ಹಾಗೂ ಗೊಬ್ಬರದ ಕೊರತೆಯಾಗದಂತೆ ಕ್ರಮ : ಶಾಸಕ ಪ್ರೊ. ಲಿಂಗಣ್ಣ
ಸುದ್ದಿದಿನ,ದಾವಣಗೆರೆ:ರೈತರ ಕೃಷಿ ಚಟುವಟಿಕೆಗೆ ಹಿನ್ನಡೆಯಾಗದಂತೆ ಕ್ರಮ ಕೈಗೊಳ್ಳಲಾಗಿದ್ದು ಈಗಾಗಲೆ ರಿಯಾಯಿತಿ ದರದಲ್ಲಿ ಬಿತ್ತನೆ ಬೀಜ ವಿತರಣೆ ಪ್ರಾರಂಭಿಸಲಾಗಿದೆ, ಜಿಲ್ಲೆಗೆ ಅಗತ್ಯವಿರುವ ರಸಗೊಬ್ಬರ ಸರಬರಾಜಿಗಾಗಿ ಅಗತ್ಯ ಕ್ರಮ ಕೈಗೊಳ್ಳಲಾಗಿದ್ದು, ರೈತರು ಅನಗತ್ಯವಾಗಿ ಮುಗಿಬಿದ್ದು ಗೊಬ್ಬರ ಖರೀದಿಸಲು ಮುಂದಾಗದೆ, ಅವಶ್ಯವಿರುವಷ್ಟು ಗೊಬ್ಬರ ಮಾತ್ರ ಖರೀದಿಸಬೇಕು ಎಂದು ಮಾಯಕೊಂಡ ಶಾಸಕರು ಹಾಗೂ ಲಿಡಕರ್ ಅಭಿವೃದ್ಧಿ ನಿಗವ್ಮದ ಅಧ್ಯಕ್ಷರಾದ ಪ್ರೊ. ಲಿಂಗಣ್ಣ ಅವರು ಮನವಿ ಮಾಡಿದರು.
ಆನಗೋಡು ರೈತ ಸಂಪರ್ಕ ಕೇಂದ್ರ ಕಛೇರಿಯಲ್ಲಿ ರೈತರಿಗೆ ರಿಯಾಯಿತಿ ದರದಲ್ಲಿ ಬಿತ್ತನೆ ಬೀಜ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕ್ಷೇತ್ರದಲ್ಲಿ ಕಳೆದ ವಾರದಿಂದ ವಾಡಿಕೆಗಿಂತ ಹೆಚ್ಚಿನ ಮಳೆಯಾಗಿದ್ದು ಎಲ್ಲಾ ಭಾಗದ ರೈತರು ಕೃಷಿ ಚಟುವಟಿಕೆಯಲ್ಲಿ ಭಾಗವಹಿಸುತ್ತಿದ್ದಾರೆ. ಹೀಗಾಗಿ ರೈತರಿಗೆ ಬಿತ್ತನೆಗೆ ಯಾವುದೇ ತೊಂದರೆಯಾಗಬಾರದು ಎಂಬ ಉದ್ದೇಶದಿಂದ ಕೂಡಲೆ ರಿಯಾಯಿತಿ ದರದಲ್ಲಿ ಬಿತ್ತನೆ ಬೀಜ ವಿತರಣೆ ಮಾಡುವಂತೆ ಸೂಚಿಸಿದ್ದರ ಹಿನ್ನೆಲೆಯಲ್ಲಿ ಸೋಮವಾರದಿಂದ ಬೀಜ ವಿತರಣೆ ಪ್ರಾರಂಭಿಸಲಾಗಿದೆ.
ಅಂತರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾವಸ್ತುಗಳ ಬೆಲೆ ಏರಿಕೆಯಿಂದ ಡಿಎಪಿ ಗೊಬ್ಬರದ ಬೆಲೆ ಹೆಚ್ಚಾಗಿದ್ದರೂ, ಕೋವಿಡ್-19ರ ಸಂಕಷ್ಟ ಸಮಯದಲ್ಲಿ ರೈತರಿಗೆ ಕೃಷಿ ಪರಿಕರಗಳನ್ನು ಖರೀದಿಸಲು ಕಷ್ಟವಾಗುತ್ತಿರುವುದನ್ನು ಮನಗಂಡು ಪ್ರಧಾನಿಯವರು ಏರಿಕೆಯಾಗಿದ್ದ ಡಿಎಪಿ ಗೊಬ್ಬರದ ಬೆಲೆಯನ್ನು 1200 ರೂ.ಗಳಿಗೆ ಇಳಿಸಿದ್ದಾರೆ.
ಸಂಸದರು ಸಹ ನಮ್ಮ ಮನವಿಯಂತೆ ಜಿಲ್ಲೆಗೆ ಅಗತ್ಯವಿರುವ ರಸಗೊಬ್ಬರದ ಕುರಿತು ಕೇಂದ್ರ ರಸಗೊಬ್ಬರ ಮಂತ್ರಿಗಳೊಂದಿಗೆ ಮಾತನಾಡಿ ಜಿಲ್ಲೆಗೆ ಅವಶ್ಯವಿರುವಷ್ಟು ಸರಬರಾಜು ಮಾಡಲು ಕ್ರಮ ಕೈಗೊಂಡಿರುತ್ತಾರೆ. ಆದ್ದರಿಂದ ಯಾವುದೇ ರೈತರು ಅನಗತ್ಯವಾಗಿ ಗೊಬ್ಬರ ಖರೀದಿಗೆ ಮುಂದಾಗಬಾರದು ಹಾಗೂ ಅವಶ್ಯವಿರುವಷ್ಟು ಗೊಬ್ಬರವನ್ನು ಮಾತ್ರ ಖರೀದಿಸಬೇಕು. ಬಿತ್ತನೆ ಬೀಜ ಹಾಗೂ ಗೊಬ್ಬರದ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಲಾಗಿದೆ.
ದಾವಣಗೆರೆ ಉಪವಿಭಾಗದ ಉಪ ಕೃಷಿ ನಿರ್ದೇಶಕ ತಿಪ್ಪೇಸ್ವಾಮಿ ಮಾತನಾಡಿ, ಪ್ರತಿ ವರ್ಷದಂತೆ ಈ ವರ್ಷವೂ ಸಹ ರೈತರಿಗೆ ಸಕಾಲದಲ್ಲಿ ಉತ್ತಮ ಗುಣಮಟ್ಟದ ಬೀಜಗಳನ್ನು ರಿಯಾಯಿತಿ ದರದಲ್ಲಿ ವಿತರಿಸಲು ಕ್ರಮ ವಹಿಸಲಾಗಿದೆ.
ಮೆಕ್ಕೇಜೋಳಕ್ಕೆ ಸಾಮಾನ್ಯ ವರ್ಗದ ರೈತರಿಗೆ ಕೆ.ಜಿ.ಗೆ 20ರೂ., ಪ.ಜಾತಿ/ಪ.ಪಂಗಡಗಳ ರೈತರಿಗೆ ಕೆ.ಜಿ.ಗೆ 30 ರೂ., ಶೇಂಗಾಕ್ಕೆ ಸಾಮಾನ್ಯ ವರ್ಗದ ರೈತರಿಗೆ ಕೆ.ಜಿ.ಗೆ 18 ರೂ., ಪ.ಜಾತಿ/ಪ.ಪಂಗಡಗಳ ರೈತರಿಗೆ 27 ರೂ., ತೊಗರಿಗೆ ಸಾಮಾನ್ಯ ವರ್ಗದ ರೈತರಿಗೆ 25 ರೂ. ಪ.ಜಾತಿ/ಪ.ಪಂಗಡಗಳ ರೈತರಿಗೆ 37.50 ರೂ.ಗಳ ಸಹಾಯಧನವಿದ್ದು, ರೈತರು ತಮ್ಮ ಪಹಣಿ ಮತ್ತು ಆಧಾರ್ ಕಾರ್ಡ್ ಅಥವಾ ಪ್ರೂಟ್ಸ್ ನಂಬರ್ ತಿಳಿಸಿ ಈ ಸೌಲಭ್ಯ ಪಡೆಯಲು ಮನವಿ ಮಾಡಿದರು.
ದಾವಣಗೆರೆ ತಾಲ್ಲೂಕಿನಲ್ಲಿ ಸುಮಾರು 29 ರಿಂದ 30 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮೆಕ್ಕೇಜೋಳ ಬಿತ್ತನೆಯಾಗುತ್ತಿದ್ದು, ರೈತರು ಇತ್ತೀಚಿನ ದಿನಗಳಲ್ಲಿ ಕೇವಲ ಏಕಬೆಳೆ ಪದ್ಧತಿ ಅನುಸರಿಸುತ್ತಿದ್ದಾರೆ. ಈ ಪದ್ಧತಿಯಿಂದ ಲಾಭದಲ್ಲಿ ಇಳಿಕೆಯಲ್ಲದೇ ಮಣ್ಣಿನ ಗುಣಮಟ್ಟ ಹಾನಿಯಾಗುತ್ತಿರುತ್ತದೆ. ಹೀಗಾಗಿ ಬೆಳೆ ಪರಿವರ್ತನೆ ಅಥವಾ ಮೆಕ್ಕೇಜೋಳದಲ್ಲಿ ಕಡ್ಡಾಯವಾಗಿ ದ್ವಿದಳ ಧಾನ್ಯ ಬೆಳೆಗಳಾದ ತೊಗರಿ, ಅವರೆ, ಅಲಸಂದೆ ಬೆಳೆಗಳನ್ನು ಬೆಳೆಯಬೇಕು.
ಇದನ್ನೂ ಓದಿ | ತಂಬಾಕು ಸೇವನೆಯಿಂದ ಕೊರೋನಾ ಸಾಧ್ಯತೆ ಹೆಚ್ಚು : ಡಾ. ವೆಂಕಟೇಶ್
ಇದರಿಂದ ಹೆಚ್ಚುವರಿ ಆದಾಯದ ಜೊತೆಯಲ್ಲಿ ಮಣ್ಣಿನ ಫಲವತ್ತತೆಯನ್ನು ಸಹ ಹೆಚ್ಚಿಸಿಕೊಳ್ಳಬಹುದು. ಈ ಕಾರಣಕ್ಕಾಗಿ ಸಣ್ಣ ರೈತರಿಗೂ ಅನುಕೂಲವಾಗಲೆಂದು ರೈತ ಸಂಪರ್ಕ ಕೇಂದ್ರಗಳಲ್ಲಿ 2 ಕೆಜಿ ತೊಗರಿ ಪ್ಯಾಕೆಟ್ಗಳನ್ನು ಸಹ ವ್ಯವಸ್ಥೆ ಮಾಡಿದ್ದು ಇದರ ಲಾಭ ಪಡೆಯಲು ಮನವಿ ಮಾಡಿದರು. ಯಾವುದೇ ರೈತರು ಅನಧಿಕೃತ ಕೃಷಿ ಪರಿಕರ ಮಾರಾಟಗಾರರಿಂದ ಯಾವುದೇ ಕೃಷಿ ಪರಿಕರಗಳನ್ನು ಖರೀದಿಸಬಾರದೆಂಬ ಸೂಚನೆಯನ್ನೂ ಸಹ ನೀಡಿದರು.
ಬಯಲು ಸೀಮೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಅಣಬೇರು ಜೀವನಮೂರ್ತಿ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿ, ಸಾಂಕ್ರಾಮಿಕ ರೋಗದ ಹಿನ್ನೆಲೆ ರೈತರು ಕೋವಿಡ್-19 ನಿಯಮಗಳನ್ನು ಪಾಲಿಸಿಕೊಂಡು ಕೃಷಿ ಚಟುವಟಿಕೆಗಳನ್ನು ಕೈಗೊಳ್ಳಲು ರೈತರಿಗೆ ಮನವಿ ಮಾಡಿದರು.
ಸಹಾಯಕ ಕೃಷಿ ನಿರ್ದೇಶಕ ರೇವಣಸಿದ್ದನಗೌಡ ಹೆಚ್.ಕೆ., ಕೃಷಿ ಅಧಿಕಾರಿ ರವಿಕುಮಾರ್, ಸಹಾಯಕ ಕೃಷಿ ಅಧಿಕಾರಿ ಬಿ.ಕೆ. ಚಂದ್ರಪ್ಪ, ಗ್ರಾಮದ ಮುಖಂಡರಾದ ವಸಂತಕುಮಾರ್ ಮತ್ತು ಇತರೆ ಸಿಬ್ಬಂದಿ ಕಾರ್ಯಕ್ರಮದಲ್ಲಿ ಹಾಜರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಶಿವಮೊಗ್ಗಕ್ಕೆ ಇಂದು ಪ್ರಧಾನಿ ನರೇಂದ್ರ ಮೋದಿ
ಸುದ್ದಿದಿನ, ಶಿವಮೊಗ್ಗ : ಪ್ರಧಾನಮಂತ್ರಿ ನರೇಂದ್ರ ಮೋದಿ ಇಂದು ಮಧ್ಯಾಹ್ನ 2 ಗಂಟೆಗೆ ಶಿವಮೊಗ್ಗದಲ್ಲಿ ಬೃಹತ್ ಸಾರ್ವಜನಿಕ ಸಭೆಯನ್ನುದ್ದೇಶಿ ಮಾತನಾಡಲಿದ್ದಾರೆ.
ಯುವಜನರು, ಮಹಿಳೆಯರು, ರೈತರು ಸೇರಿ ಸುಮಾರು ಎರಡೂವರೆ ಲಕ್ಷಕ್ಕೂ ಹೆಚ್ಚು ಜನರು ಕಾರ್ಯಕ್ರಮದಲ್ಲಿ ಭಾಗವಹಿಸುವ ನಿರೀಕ್ಷೆ ಇದೆ ಎಂದು ವಿಧಾನಪರಿಷತ್ ಮುಖ್ಯ ಸಚೇತಕ ಎನ್.ರವಿಕುಮಾರ್ ಶಿವಮೊಗ್ಗದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಚುನಾವಣಾ ಬಾಂಡ್ ಕುರಿತ ದತ್ತಾಂಶ ಬಿಡುಗಡೆ
ಸುದ್ದಿದಿನ,ನವದೆಹಲಿ : ಚುನಾವಣಾ ಬಾಂಡ್ ಕುರಿತಂತೆ ಸುಪ್ರೀಂಕೋರ್ಟ್ನ ರಿಜಿಸ್ಟ್ರಿ ಇಂದ ಲಭ್ಯವಾದ ಅಂಕಿಕೃತ ದತ್ತಾಂಶ ಮಾದರಿಯನ್ನು ಚುನಾವಣಾ ಆಯೋಗ ಭಾನುವಾರ ತನ್ನ ವೆಬ್ಸೈಟ್ನಲ್ಲಿ ಅಪ್ಲೋಡ್ ಮಾಡಿದೆ. www.eci.gov.in/candidate-politicalparty ವೆಬ್ಸೈಟ್ನಲ್ಲಿ ಈ ದತ್ತಾಂಶ ಲಭ್ಯವಿರುತ್ತದೆ.
ಸುಪ್ರೀಂಕೋರ್ಟ್ ನಿರ್ದೇಶಿಸಿದಂತೆ ರಾಜಕೀಯ ಪಕ್ಷಗಳು ಚುನಾವಣಾ ಬಾಂಡ್ ಕುರಿತ ದತ್ತಾಂಶಗಳನ್ನು ಮೊಹರು ಹಾಕಿದ ಲಕೋಟೆಯಲ್ಲಿ ಸಲ್ಲಿಸಿದ್ದವು ಎಂದು ಚುನಾವಣಾ ಆಯೋಗದ ಹೇಳಿಕೆ ತಿಳಿಸಿದೆ. ರಾಜಕೀಯ ಪಕ್ಷಗಳಿಂದ ಸ್ವೀಕರಿಸಿದ ಮೊಹರು ಹಾಕಿದ ಲಕೋಟೆಗಳನ್ನು ತೆರೆಯದೇ ಸುಪ್ರೀಂಕೋರ್ಟ್ಗೆ ಸಲ್ಲಿಸಲಾಗಿತ್ತು.
ಇದೇ 15ರಂದು ಸುಪ್ರೀಂಕೋರ್ಟ್ ನೀಡಿದ ಆದೇಶದ ಮೇರೆಗೆ ಸುಪ್ರೀಂಕೋರ್ಟ್ನ ರಿಜಿಸ್ಟ್ರಿ, ಭೌತಿಕ ಪ್ರತಿ ಹಾಗೂ ಅದರ ಡಿಜಿಟಲ್ ದಾಖಲೆಯಿರುವ ಪೆನ್ಡ್ರೈವ್ ಒಳಗೊಂಡ ಮೊಹರು ಹಾಕಿದ ಲಕೋಟೆಯನ್ನು ಹಿಂತಿರುಗಿಸಿತ್ತು.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ರಶ್ಮಿ ಚಂದ್ರಗಿರಿ ಅವರಿಗೆ ಪಿಎಚ್.ಡಿ ಪದವಿ
ಸುದ್ದಿದಿನ,ಹಾವೇರಿ : ನಗರದ ರಶ್ಮಿ ಚಂದ್ರಗಿರಿ ಅವರು ಕರ್ನಾಟಕ ವಿಶ್ವವಿದ್ಯಾಲಯಕ್ಕೆ ಮಂಡಿಸಿದ “ದಲಿತ ಬಂಡಾಯ ಕಾದಂಬರಿಗಳಲ್ಲಿ ಸಾಂಸ್ಕೃತಿಕ ನೆಲೆಗಳು” ಎಂಬ ಮಹಾಪ್ರಬಂಧಕ್ಕೆ ಕರ್ನಾಟಕ ವಿಶ್ವವಿದ್ಯಾಲಯ ಪಿಎಚ್.ಡಿ ಪದವಿ ಪ್ರಧಾನ ಮಾಡಿದೆ.
ಇವರಿಗೆ ಡಾ.ಬಿಎಸ್.ಭಜಂತ್ರಿ , ಸಹಾಯಕ ಪ್ರಧ್ಯಾಪಕರು ಕರ್ನಾಟಕ ಕಲಾ ಮಹಾವಿದ್ಯಾಲಯ ಧಾರವಾಡ ಇವರು ಮಾರ್ಗದರ್ಶನ ಮಾಡಿದ್ದರು.
ಬರವಣಿಗೆಯಲ್ಲಿ ತೊಡಗಿಸಿಕೊಂಡಿರುವ ರಶ್ಮಿ ಚಂದ್ರಗಿರಿಯವರ ಹಲವು ಲೇಖನಗಳು ನಿಯತಕಾಲಿಕೆಗಳಲ್ಲಿ ಪ್ರಕಟಗೊಂಡಿವೆ. ಪ್ರಸ್ತುತ ಇವರು ಉಪನ್ಯಾಸಕಿಯಾಗಿ ಕಾರ್ಯನಿರ್ವಹಿಸಿತ್ತಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243