ಬಹಿರಂಗ
ಅವಳು ಲುಬೈನಾ
- ಯೋಗೇಶ್ ಮಾಸ್ಟರ್
ಹಿಜಾಬು ಅವಳ ಸೌಂದರ್ಯವನ್ನು ಅವಿಸಿಟ್ಟಿರಲಿಲ್ಲ. ಬದಲಾಗಿ ಚೊಕ್ಕವಾಗಿ ಅಚ್ಚುಕಟ್ಟಾಗಿಸಿಟ್ಟಿತ್ತು. ಬಟ್ಟೆಯ ತೆರೆಯೊಡ್ಡುತ್ತಿದ್ದ ಕುತೂಹಲದ ಅಡಗುಕಟ್ಟೆಯ ಹಿಂದಿನಿಂದ ಅವಳ ಕಣ್ಣುಗಳೇ ನಗುತ್ತಿದ್ದವು. ಗೆಳತಿ ಮತ್ತು ಸಹಧರ್ಮೀಯಳಾಗಿದ್ದ ಆಸ್ಮಾ ಜೊತೆಗೇನೇ ಬರುತ್ತಿದ್ದದ್ದು, ಹೋಗುತ್ತಿದ್ದದ್ದು.
“ಯೋಗಿ” ಅಂತ ಅವಳು ಕರೆದಾಗೆಲ್ಲಾ ಅದು ಹೋಗಿ ಅಂತಾನೇ ಕೇಳಿಸುತ್ತಿದ್ದದ್ದು. ಅದನ್ನು ಅವಳಿಗೆ ಹೇಳಿದೆ ಒಮ್ಮೆ. “ಹೇ, ನಾನು ಸರಿಯಾಗೇ ಕರೆಯುತ್ತೇನಲ್ಲಾ?” ಎಂದು ಆಸ್ಮಾಳ ಕಡೆಗೆ ನೋಡಿ ಕೇಳಿ ಮತ್ತೆ ನನ್ನ ಕಡೆ ತಿರುಗಿ, “ಯೋಗಿ” ಎಂದಳು.
ನನಗೆ ‘ಹೋಗಿ’ ಎಂದೇ ಕೇಳಿಸಿತು. ಆಸ್ಮಾ ಸರಿಯಾಗಿ ಹೇಳಿದಳು “ಅವನಿಗೆ ಹಾಗೆ ಕೇಳಿಸಿರತ್ತೆ.” ಹಾಗೆ ನೋಡಲು ಹೋದರೆ ಆಸ್ಮಾ ಇಡೀ ತರಗತಿಯಲ್ಲಿ ಜೋರು ಜೋರಾಗಿ ಮಾತಾಡಿಕೊಂಡು, ನಗಾಡಿಕೊಂಡು ಇರುವವಳು. ಲುಬೈನಾ ಹಿಂಜರಿಕೆ ಮತ್ತು ಮುಚ್ಚುಮರೆ ಇಲ್ಲದೆ ಮಾತಾಡುವವಳಾದರೂ ಅಗತ್ಯವಿದ್ದರೆ ಮಾತ್ರ ಮುಂದಾಗುವವಳು. ಈ ಆಸ್ಮಾ ಇದ್ದಾಳಲ್ಲಾ, ಒಂದು ತರ ರೌಡಿ. ಮನೆಯಿಂದ ಬುರುಕಾ ಹಾಕಿಕೊಂಡು ಬರುತ್ತಾಳೆ.
ಕ್ಯಾಂಪಸ್ಸಿಗೆ ಬಂದ ಮೇಲೆ ಬುರುಕಾ ಬಿಚ್ಚಿಟ್ಟು, ತಲೆಗವಸು ಹಾಕಿಕೊಂಡು ಇಡೀ ದಿನ ಇರುತ್ತಾಳೆ. ಮನೆಗೆ ಹೋಗುವಾಗ ಮತ್ತೆ ಬುರುಕಾ ಹಾಕಿಕೊಂಡು ಮರಳುತ್ತಾಳೆ. ಇಬ್ಬರೂ ಎಲ್ಲರ ಜೊತೆಗೂ ಎಲ್ಲರಂತೆಯೇ ಮಾತಾಡುತ್ತಿದ್ದರು, ಊಟ ಹಂಚಿಕೊಳ್ಳುತ್ತಿದ್ದರು. ಸುಮಂಗಲಿ ಮನೆಯ ಚಿತ್ರಾನ್ನ, ಪಲ್ಲವಿ ಮನೆಯ ಪುಳಿಯೋಗರೆ, ಪರಿಮಳ ಮನೆಯ ತಂಬುಳಿ, ಗಿರೀಶ್ ಮನೆಯ ಚಪಾತಿ ಪಲ್ಯ, ನಮ್ಮ ಮನೆಯ ಇಡ್ಲಿ ಸಾಂಬಾರ್ ಅಂದರೆ ಇಬ್ಬರೂ ಖುಷಿಖುಷಿಯಾಗಿ ತಿನ್ನುತ್ತಿದ್ದರು.
ಅದರಲ್ಲೂ ಪುಳಿಯೋಗರೆ ಮತ್ತು ಮಜ್ಜಿಗೆ ಹುಳಿ ಎಂದರೆ ಇವರಿಬ್ಬರೂ ಲೊಟ್ಟೆ ಹಾಕಿಕೊಂಡು ತಿನ್ನುತ್ತಿದ್ದರು. ತರುವವರು ಕೂಡಾ ಇವರಿಗೆಂದೇ ಹೆಚ್ಚಾಗಿ ತರುತ್ತಿದ್ದರು. ಇವರೂ ಕೂಡಾ ವಿಶೇಷವಾಗಿ ಬಿರಿಯಾನಿ, ಪಾಯಸ ಮಾಡಿದಾಗ ನಮಗೆಲ್ಲರಿಗೆಂದು ದೊಡ್ಡ ಕ್ಯಾರಿಯರ್ ಬಾಕ್ಸುಗಳಲ್ಲೇ ತಂದುಬಿಡುತ್ತಿದ್ದರು. ಮಾಂಸಾಹಾರ ಮತ್ತು ಸಸ್ಯಾಹಾರದ ಊಟಗಳೆರಡೂ ಬಂದಾಗಲೂ ಊಟಕ್ಕೆ ಕುಳಿತುಕೊಳ್ಳುವ ವರ್ತುಲ ಮಾತ್ರ ಒಂದೇ ಇರುತ್ತಿತ್ತು. ಆದರೆ ಡಬ್ಬ ಮಾತ್ರ ಕೆಲವರನ್ನು ಹಾದು ಹೋಗುತ್ತಿತ್ತು ಅಷ್ಟೇ.
ಲುಬೈನಾ ಮತ್ತು ಆಸ್ಮಾ ಇಬ್ಬರೂ ಹುಡುಗಿಯರ ಜೊತೆಯಲ್ಲೇ ಅವರವರು ಇದ್ದಾಗ, ತಲೆಗವಸನ್ನು ತೆಗೆದು, ಕೂದಲನ್ನು ಬಾಚಿಕೊಂಡು, ನೀಟಾಗಿ ಪಿನ್ ಹಾಕಿಕೊಂಡು ಮತ್ತೆ ತಲೆಗೆ ಬಟ್ಟೆಯನ್ನು ಸರಿಯಾಗಿ ಹಾಕಿಕೊಳ್ಳುತ್ತಿದ್ದರು.
ಲುಬೈನಾ ಮತ್ತು ಆಸ್ಮಾಳ ತಂದೆ, ತಾಯಿಗಳೋ, ಅಣ್ಣಂದಿರೋ ಬಂದಾಗ ಹುಡುಗಿಯರೆಲ್ಲಾ ಗುಂಪುಗಟ್ಟಿ ಮಾತಾಡಿಸುತ್ತಿದ್ದರು. ಅವರೂ ಬಲೇ ನಗುಮುಖದಿಂದ ಎಲ್ಲರನ್ನೂ ಮಾತಾಡಿಸಿ, ಚೆನ್ನಾಗಿ ಓದಿ ಅಂತ ಹೇಳಿ ಹೋಗುತ್ತಿದ್ದರು.
ಅದರಲ್ಲೂ ಲುಬೈನಾಳ ತಂದೆಯಂತೂ; ಮುಖವೋ ಪೂರ್ಣ ಚಂದಿರ, ನಗುವೋ ಬೆಳದಿಂಗಳು, ಇನ್ನು ಮಾತಂತೂ ತಿಂಗಳ ತಂಪು. ಅವರು ನಿದ್ರಿಸುವಾಗಲೂ ಮುಗುಳುನಗುವಿನ ಮುಖದಲ್ಲೇ ಇರುತ್ತಾರೆ ಎಂಬುದು ನನ್ನ ಖಚಿತ ಅನಿಸಿಕೆ.
ಅದೊಂದು ದಿನ ಹುಡುಗಿಯರ ಗುಂಪಿನಲ್ಲಿ ಮಾತಾಡುವಾಗ ಲುಬೈನಾಳ ತಾಯಿ ಲೋಕಾಭಿರಾಮವಾಗಿ ಮಾತಾಡುತ್ತಾ “ನಮ್ಮ ಲುಬೈನಾ ನೋಡಲು ಡಿಟ್ಟೋ ಅವಳ ತಂದೆಯ ಹಾಗೆ, ಬುದ್ಧಿ ಮತ್ತು ಆಡುವುದೆಲ್ಲಾ ನನ್ನ ಹಾಗೆ” ಎನ್ನುತ್ತಿದ್ದರು.
ಆಹಾ, ಎಂಥಾ ಒಳ್ಳೆಯ ಸಂಯೋಜನೆ ಎನಿಸಿ, “ಆಂಟೀ, ಒಳ್ಳೆಯ ಕಾಂಬಿನೇಶನ್” ಎಂದುಬಿಟ್ಟೆ. ಅವರೋ, ಪಾಪ ಏನೂ ಹೇಳಲು ತೋಚದೇ “ಆಹಾ?” ಎಂದಷ್ಟೇ ಅಂದರು. ಅವರಿಗೆ ಮುಜುಗರವಾಯಿತೋ ಏನೋ ಎಂದು ನನಗೆ ಮುಜುಗರವಾಗತೊಡಗಿತು.
ಮರುದಿನ ಲುಬೈನಾಗೆ ಕೇಳಿದೆ.
“ನಿಮ್ಮ ಅಮ್ಮ ಏನಾದರೂ ಬೇಜಾರು ಮಾಡಿಕೊಂಡರಾ?”
“ಯಾಕೆ?”
“ನಾನು ನಿನ್ನೆ ಹಾಗೆಂದಿದ್ದಕ್ಕೆ.”
“ಇಲ್ಲ. ಅದು ಅವರ ಕಿವಿಗೆ ಸರಿಯಾಗಿ ಹೋಗಿರೋದೇ ಇಲ್ಲ” ಎಂದು ನಕ್ಕ ಲುಬೈನಾ ಆರಾಮವಾಗಿದ್ದದ್ದು ನೋಡಿ ಸಮಾಧಾನವಾಯಿತು. ಅಂದಿನಿಂದ ಅವಳ ಕಂಡಷ್ಟು ಮುಖವನ್ನು ನೋಡುವಾಗೆಲ್ಲಾ ಅವಳ ತಂದೆಯ ಕಾಣುವಷ್ಟು ಮುಖವು ನೆನಪಿಗೆ ಬರುತ್ತಿತ್ತು. ಮೀಸೆ, ಗಡ್ಡ ಅಳಿಸುತ್ತಿದ್ದೆ. ಆ ಬಿಳಿಯಾದ ಪುಡಿಗೂದಲಿನ ತಲೆಯ ಮೇಲೆ ಉದ್ದನೆಯ ಕಪ್ಪು ಕೇಶರಾಶಿಯನ್ನು ಕಲ್ಪಿಸಿಕೊಳ್ಳುತ್ತಿದ್ದೆ.
“ಅದೇನು ಹಾಗೆ ನೋಡ್ತಿದ್ದೀಯಾ?” ಎಂದು ಕೇಳಿದಳು ಲುಬೈನಾ.
“ನಿಮ್ಮಪ್ಪನ ಮುಖವನ್ನು ಜ್ಞಾಪಿಸಿಕೊಳ್ತಿದ್ದೀನಿ” ಎಂದೆ.
ಅವಳು ನಕ್ಕು, “ನಿನ್ನ ತಲೆ” ಎಂದಳಷ್ಟೇ.
ಇಂಗ್ಲೀಷ್ ಬರದಿದ್ದ ನನಗೆ ಇತರ ಹುಡುಗಿಯರಲ್ಲಾ ಅವರವರ ಪಾಠವನ್ನು ಹೇಳಿಕೊಡುತ್ತಿದ್ದರು. ಆದರೆ ಲುಬೈನಾ ಮಾತ್ರ “ಇಂಗ್ಲೀಷ್ ಕಲಿ ಯೋಗಿ. ತುಂಬಾ ಇಂಪಾರ್ಟೆಂಟ್. ನೀನು ಮೊದಲು ಪಾರ್ಟ್ಸ್ ಆಫ್ ದ ಸ್ಪೀಚ್ ಕಲಿ. ಆಮೇಲೆ ಟೆನ್ಸ್ ಕಲಿ.
ಇಷ್ಟಾದರೆ ಟೆನ್ಶನ್ ಬೇಡ. ಇಂಗ್ಲೀಷ್ ಕಲಿತೆ ಎಂದೇ ಅರ್ಥ” ಎಂದವಳು ನನಗೆ, ಗಿರೀಶನಿಗೆ ಮತ್ತು ಕನ್ನಡ ಮೀಡಿಯಂನಿಂದ ಬಂದಿರುವ ಇತರ ಹುಡುಗ ಹುಡುಗಿಯರಿಗೆ ತಾನೇ ಮುಂದಾಗಿ ಇಂಗ್ಲೀಷ್ ಗ್ರಾಮರ್ ಕಲಿಸಲು ದಿನದ ಅರ್ಧ ಅಥವಾ ಮುಕ್ಕಾಲು ಗಂಟೆಯನ್ನು ಮೀಸಲಿಡುತ್ತಿದ್ದಳು.
ಅಂದೊಮ್ಮೆ, ನನ್ನ ಕಸಿನ್ ಒಬ್ಬ ತಾನು ಪ್ರೀತಿಸುವ ಹುಡುಗಿಯ ಬಗ್ಗೆ ಕಸಿನ್ಗಳ ಅಸೋಸಿಯೇಶನ್ನಿನಲ್ಲಿ ಹೇಳಿಕೊಳ್ಳುತ್ತಿದ್ದ. ಅವರಿಬ್ಬರೂ ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದರಂತೆ, ಅವಳ ಮನೆಯವರಿಗೆ ಗೊತ್ತಾಯಿತಂತೆ, ಅವಳ ಅಣ್ಣ ಬಂದು ಅವಾಜ್ ಹಾಕಿ ಹೋದನಂತೆ. ಇವನು ಮತ್ತು ಅವಳು ಬೇಜಾರು ಮಾಡ್ಕೊಂಡರಂತೆ; ಹೀಗೇ ಸಾಗಿತ್ತು ಅವರು ಕಟ್ಟಿಕೊಡುತ್ತಿದ್ದ ಚಿತ್ರಣ.
“ಯೋಗಿ, ನಿನ್ನ ಲವ್ ಯಾರೋ?” ಗುಂಪಿನಿಂದ ಪ್ರಶ್ನೆಯೊಂದು ಬಂದಿತು.
ಹಾಗೆಂದ ಕೂಡಲೇ ಲುಬೈನಾ ಮುಖ ಕಣ್ಮುಂದೆ ಬಂದಿತು.
“ಯಾರೂ ಇಲ್ಲ” ಎಂದು ನಕ್ಕೆ.
“ತಿಕಾ ಮುಚ್ಚು. ಯಾರೋ ಇರ್ಬೇಕು. ಅದಕ್ಕೇ ಕಿಸಿತಾಯಿದ್ದೀಯ” ಎಂದ ನನ್ನ ಕಸಿನ್.
“ಇಲ್ಲ. ಯಾರೂ ಇಲ್ಲ. ಎಲ್ಲರೂ ನನ್ನ ಫ್ರೆಂಡ್ಸ್ ಅಷ್ಟೇ. ಎಲ್ಲರ ಜೊತೆಗೂ ನಾನು ಚೆನ್ನಾಗಿದ್ದೀನಿ” ಎನ್ನುತ್ತಿದ್ದರೂ ಕಣ್ಮುಂದೆ ಬರುತ್ತಿದ್ದ ಲುಬೈನಾ ಮುಖ ನನ್ನ ಮುಖವನ್ನು ಅರಳಿಸಿತ್ತು ಮತ್ತು ನಗುವನ್ನು ಸೂಸಿತ್ತು.
“ಮತ್ತೆ ಯಾಕೆ ಒಂದು ಥರಾ ಫಿಲಾಸಫರ್ ಸ್ಮೈಲ್ ಕೊಡ್ತಿದ್ದೀಯಾ?” ಅಂತ ಒಬ್ಬ ಕಸಿನ್ ಹೇಳಿದರೆ, ಮತ್ತೊಬ್ಬ ಕಸಿನ್ ಹೇಳಿದಳು.
“ಅದು ಫಿಲಾಸಫರ್ ಸ್ಮೈಲ್ ಅಲ್ವೋ. ಒನ್ ವೇ ಲವ್ವರ್ ಸ್ಮೈಲ್. ಅವನು ಇನ್ನೂ ಪ್ರೊಪೋಸ್ ಮಾಡಿಲ್ಲಾಂತ ಕಾಣತ್ತೆ. ಅದೇನಾರ ಸಕ್ಸಸ್ ಆದರೆ ಹೇಳ್ತಾನೆ. ಹೇಳಲೇ ಬೇಕು. ನಾವಲ್ಲದೇ ಇನ್ಯಾರು ದಿಕ್ಕು.”
ನನಗೂ ಅವಳು ಹೇಳುತ್ತಿರುವುದು ಸರಿ ಎನ್ನಿಸಿತು.
ಅಂದಾದ ಮೇಲೆ ಕ್ಲಾಸಿನಲ್ಲಿ ಪಾಠ ಮಾಡುವಾಗ ತನ್ನ ಪಾಡಿಗೆ ತಾನು ಪಾಠದ ಕಡೆಗೆ ಚಿತ್ತ ನೆಟ್ಟಿರುತ್ತಿದ್ದ ಲುಬೈನಾ ಕಡೆಗೆ ಆಗಾಗ ನೋಡುತ್ತಿದ್ದೆ. “ಇದೆಂತದೋ ಲವ್ವು… ಮಾಡಲೀ ಬಿಡಲಿ, ಅವರೊಂದಿಗೆ ಹೇಳಲಿ ಬಿಡಲಿ, ಅವರಿಗೆ ತಿಳಿಯಲಿ ಬಿಡಲಿ. ನಾವು ಮಾಡುತ್ತಿದ್ದೇವೆಂದು ಭಾವಿಸಿದರೇನೇ ಅದೆಷ್ಟು ಮಧುರವಾಗಿರುತ್ತದೆ. ನಾನು ಪ್ರೀತಿಸುತ್ತಿದ್ದೇನೆ ಎಂಬ ಭಾವವೇ ಅದೆಂತಾ ಆಪ್ಯಾಯಮಾನ! ಒಳಗೊಳಗಿಂದ ನಗು ಉಕ್ಕಿ ಬರುತ್ತದೆ.
ನಮ್ಮ ಪಕ್ಕದವರ ಕ್ರಿಯೆಗೆ ಕೊಡುವ ಪ್ರತಿಕ್ರಿಯೆ ಕೂಡಾ ಅದೆಷ್ಟು ನವಿರಾಗಿರುತ್ತದೆ! ಹೊಟ್ಟೆಯೊಳಗೆಲ್ಲಾ ತುಂಬಿಕೊಳ್ಳುತ್ತಿದ್ದ ನವಿರಾದ, ಮೆಲುವಾದ ನಗುವನ್ನು ಬಾಯಿಂದ ಪುಫ್ ಎಂದು ನಿಟ್ಟುಸಿರಂತೆ ಬಿಡುವುದೂ ಪ್ರೇಮದ ಉದ್ಗಾರವೇ. ಹೌದು, ಪ್ರೇಮವೆಂಬುದನ್ನು ಮಾಡುವಂತಹದ್ದಲ್ಲ. ಭಾವಿಸುವುದು. ಅನುಭವಿಸುವುದು. ತರಂಗಗಳಂತೆ ನಾವಿರುವ ಕಡೆಯಲ್ಲೆಲ್ಲಾ ಹರಡಿಸುತ್ತಿರುವುದು. ಖುಷಿಖುಷಿಯಾಗಿರುತ್ತದೆ. ಬಹುಶಃ ಪ್ರೇಮವೆಂದರೆ ಆನಂದವೇ ಇರಬೇಕು.
ಅಥವಾ ಆನಂದದ ಮತ್ತೊಂದು ಮಧುರವಾದ ಮಗ್ಗುಲು ಈ ಪ್ರೇಮವೇ! ಒಟ್ಟಾರೆ, ಐ ಲವ್ ಯೂ ಲುಬೈನಾ ಎನ್ನುವುದನ್ನು ಅವಳು ಕೇಳಿಸಿಕೊಳ್ಳದಿದ್ದರೂ, ಬಾರಿ ಬಾರಿ ಹೇಳಿಕೊಳ್ಳುವುದರಲ್ಲೇ ರೋಮಾಂಚನ ಉಂಟಾಗುತ್ತದೆ. ಆಶ್ಚರ್ಯವೆಂದರೆ ಆ ರೋಮಾಂಚನವು ದಿನದಿನಕ್ಕೂ ಹೆಚ್ಚಿನ ಆನಂದವನ್ನು ತರುತ್ತದೆಯೇ ಹೊರತು ಕಡಿಮೆಯಾಗುವುದಿಲ್ಲ. ನಿಜ ನಿದ್ರೆ ಬರುವುದಿಲ್ಲ. ಹಾಸುಗೆ ಮೇಲೆ ಮಲಗಿಕೊಂಡು ಕತ್ತಲಲ್ಲಿ ಆನಂದದಿಂದ ಪುಳಕಿತವಾಗುತ್ತಿರುವುದು, ಅಮ್ಮ, “ಏನೋ ಅದು ತಿಕ್ಲುತಿಕ್ಲಾಗಿ ಒಬ್ನೇ ನಕ್ಕೊಳ್ತಿದ್ದೀಯಾ?” ಎಂದು ಕೇಳುವಷ್ಟು.
ಅವತ್ತು ಕಾಲೇಜಿಗೆ ತುಂಬಾ ಬೇಗನೇ ಹೋಗಿದ್ದೆ.
“ಏ ಯೋಗಿ. ಪ್ಲೀಸ್ ಬಾರೋ ಇಲ್ಲಿ” ಎಂದು ಆತುರಾತುರವಾಗಿ ಆಸ್ಮಾ ಕರೆದಳು. ಏನೆಂದು ಕೇಳಿದರೆ, “ಲುಬೈನಾಗೆ ಸ್ವಲ್ಪ ಜ್ವರ ಬಂದಿರೋ ಹಾಗಿದೆ. ಆಫೀಸ್ ರೂಮಲ್ಲಿ ಟ್ಯಾಬ್ಲೆಟ್ಸ್ ಏನಾದ್ರೂ ಇದ್ರೆ ಕೇಳಿ ತಗಂಡು ಬಾ. ಅಲ್ಲಿಲ್ಲಾಂದ್ರೆ ಮೆಡಿಕಲ್ ಷಾಪಿಗೆ ಹೋಗಿ ಬರ್ತೀಯಾ?” ಎಂದು ಕೇಳಿದಳು. ನಾನು ಕೂಡಲೇ ಹೋದೆ ಆಫೀಸ್ ರೂಮಿನಲ್ಲೇ ಮಾತ್ರೆ ಸಿಕ್ಕಿತು. ತಕ್ಷಣವೇ ತಂದೆ.
ಆಸ್ಮಾ ಅವಳಿಗೆ ಮಾತ್ರೆ ನುಂಗಿಸಿ, ಅವಳದೂ ಮತ್ತು ತನ್ನ ಅಸೈನ್ಮೆಂಟುಗಳನ್ನು ತೆಗೆದುಕೊಂಡು, “ಯೋಗಿ, ಇವಳನ್ನು ನೋಡಿಕೊಂಡು ನೀನು ಇಲ್ಲೇ ಇರು. ನಾನು ಅಸೈನ್ಮೆಂಟ್ ಸೈನ್ ಹಾಕಿಸ್ಕೊಂಡು ಬರ್ತೀನಿ” ಎಂದು ಸ್ಟಾಫ್ ರೂಂ ಕಡೆಗೆ ಹೋದಳು.
ಇಡೀ ತರಗತಿಯಲ್ಲಿ ನಾನು ಮತ್ತು ಲುಬೈನಾ ಇಬ್ಬರೇ!
ಇಂತದ್ದೊಂದು ಏಕಾಂತವೇ ಇದುವರೆಗೂ ಸಿಕ್ಕಿರಲಿಲ್ಲ.
ಜ್ವರದಿಂದ ಬಾಡಿದ ಅವಳ ಮುಖವನ್ನು ನೋಡುತ್ತಾ ಮೆಲ್ಲನೆ ನಕ್ಕೆ. “ಲುಬೈನಾ, ನೀನು ಇವತ್ತು ಕಾಲೇಜಿಗೆ ಬರಬಾರದಿತ್ತು. ಮನೇಲೇ ಇದ್ದು ರೆಸ್ಟ್ ತಗೋಬೇಕಿತ್ತು” ಎಂದೆ.
“ಟೆಸ್ಟ್ ಇದೆಯಲ್ಲಾ ಅದಕ್ಕೇ ಬಂದೆ” ಎಂದ ಲುಬೈನಾ ಪದೇ ಪದೇ ಬಾಗಿಲ ಕಡೆಗೆ ನೋಡುತ್ತಾ, “ಯೋಗಿ, ನಾನು ನಿನಗೊಂದು ಮಾತು ಹೇಳಬೇಕು” ಎನ್ನುತ್ತಾ ಹತ್ತಿರವೇ ಕುಳಿತಿದ್ದ ನನ್ನ ಬಲಗೈಯನ್ನು ತನ್ನೆರಡೂ ಕೈಗಳಲ್ಲಿ ತಟ್ಟನೆ ಬಾಚಿ ಹಿಡಿದುಕೊಂಡಳು.
“ಅರೆ!”
ಇದೇನಾ ಪ್ರೇಮದ ಪುಳಕ. ಮೈಯೆಲ್ಲಾ ನವಿರೆದ್ದಿತು.
ಅದೆಷ್ಟು ಬೆಚ್ಚಗಿದೆ ಅವಳ ಪ್ರೇಮದ ಸ್ಪರ್ಷ!
ಗಂಟಲೊಣಗಿತು. ಉಗುಳು ತಾನೇ ಒಳಕ್ಕೆ ಧುಮುಕಿಕೊಂಡಿತು.
ನಾನು ಪ್ರಪೋಸ್ ಮಾಡಬೇಕೆಂದುಕೊಂಡಿರುವ ಪ್ರೇಮಿಯು ತಾನೇ ಪ್ರಪೋಸ್ ಮಾಡುತ್ತಾಳೆಂದರೆ ಅದಕ್ಕಿಂತ ಮಿಗಿಲಾದ ಆನಂದ ಇನ್ನೇನಿರುತ್ತದೆ!
“ಹೇಳು ಲುಬೈನಾ” ಎಂದು ನನ್ನ ಎಡಗೈಯಿಂದ ಹಿಡಿದಿದ್ದ ಅವಳ ಕೈಗಳ ಮುಷ್ಟಿಯನ್ನು ಮೆಲ್ಲನೆ ಮುಟ್ಟಿದೆ.
“ಯೋಗಿ, ನಿನ್ನ ಮೇಲೆ ನನಗೆ ನಂಬಿಕೆ ಇದೆ. ನನಗೆ ಪ್ಲೀಸ್ ಹೆಲ್ಪ್ ಮಾಡು” ಎಂದ ಲುಬೈನಾ ನನ್ನ ಹಿಡಿತದಿಂದ ಅವಳ ಕೈಗಳನ್ನು ತೆಗೆದುಕೊಂಡು ಬ್ಯಾಗಿನಿಂದ ಒಂದು ಮಡಿಸಿದ ಪತ್ರವನ್ನು ನನ್ನ ಕೈಗಿತ್ತಳು. ಅವಳ ಕಣ್ಣುಗಳು ಪದೇ ಪದೇ ಬಾಗಿಲಿನ ಕಡೆಗೆ.
“ಯೋಗಿ, ಇದು ಗಿರೀಶ್ ನನಗೆ ಕೊಟ್ಟಿರೋದು. ಲವ್ ಲೆಟರ್. ಬೇಕಾದರೆ ನೀನು ನಿಧಾನವಾಗಿ ಓದು. ಅವನಿಗೆ ವಾಪಸ್ ಕೊಟ್ಟುಬಿಡು. ಅವನಿಗೆ ಒಂದು ಮಾತು ಹೇಳಿಬಿಡು. ನನಗೆ ಈ ರೀತಿಯೆಲ್ಲಾ ಲವ್ವು ಅದೂ ಇದೂಂತ ಪ್ರಪೌಸ್ ಮಾಡಿದರೆ ಡಿಸ್ಟರ್ಬ್ ಆಗತ್ತೆ.
ನಮ್ಮ ಮನೆಯವರೆಲ್ಲಾ ನನಗೆ ಇಷ್ಟು ಮಾತ್ರ ಕಾಲೇಜಿಗೆ ಕಳಿಸುತ್ತಿರುವುದೇ ಹೆಚ್ಚು. ನಮ್ಮ ಮನೆಯ ಹೆಂಗಸರಲ್ಲಿ ನಾನೇ ಮೊದಲನೆಯವಳು ಈ ತರ ಕಾಲೇಜಿಗೆ ಬಂದು ಕಲಿಯುತ್ತಿರುವುದು. ನಮ್ಮ ಮನೆಯಲ್ಲಿ ಹೀಗೆಲ್ಲಾ ಅಂತ ಗೊತ್ತಾದರೆ ಕಾಲೇಜಿಗೇ ಕಳಿಸೊಲ್ಲ. ಅದೆಲ್ಲಾ ಬೇರೆ ವಿಷಯ. ಮುಖ್ಯವಾಗಿ ನನಗೇ ಇದರಲ್ಲೆಲ್ಲಾ ಇಂಟರೆಸ್ಟ್ ಇಲ್ಲ. ನಾನು ಚೆನ್ನಾಗಿ ಓದಬೇಕು. ಹೈಯರ್ ಸ್ಟಡೀಸ್ ಮಾಡಬೇಕು. ನನ್ನ ಕೆರಿಯರ್ ಬಗ್ಗೆ ನಾನು ಕಂಪ್ಲೀಟ್ ಕಾನ್ಸೆನ್ಟ್ರೇಶನ್ ಮಾಡ್ತಿದ್ದೀನಿ. ನಾವೂ ನೀವೂ ಎಲ್ಲಾ ಫ್ರೆಂಡ್ಲಿಯಾಗಿ ಇದ್ದೀವಲ್ಲಾ ಅಷ್ಟೇ ಒಂದು ಖುಷಿ.
ಈ ತರ ಲವ್ವು ಗಿವ್ವು ಅಂತ ಪ್ರಪೋಸ್ ಮಾಡೋದು, ಡಿಸ್ಟರ್ಬ್ ಮಾಡಿದರೆ ಈಗ ಇರೋ ಫ್ರೆಂಡ್ಶಿಪ್ ಕೂಡಾ ಇರಲ್ಲ. ಅವನ ಪಾಡಿಗೆ ಅವನಿಗೆ ಇರಕ್ಕೆ ಹೇಳು. ಆಸ್ಮಾಗೇನಾದರೂ ಗೊತ್ತಾದರೆ ಅವಳು ದೊಡ್ಡ ಬಾಯಿಯವಳು. ಜಗಳ ಮಾಡಿಬಿಡ್ತಾಳೆ. ನಿನ್ನೆ ಸಾಯಂಕಾಲ ಅವನು ಲೆಟರ್ ಕೊಟ್ಟ. ರಾತ್ರಿ ಪೂರ್ತಿ ನಿದ್ರೆನೇ ಬರಲಿಲ್ಲ. ಥೋ ಎಂತಾ ಕೆಲ್ಸ ಆಗೋಯ್ತು.
ಇವನೇನಾದರೂ ಹಟ ಮಾಡ್ಕೊಂಡು ಲವ್ವು ಗಿವ್ವು ಅಂತ ಹಿಂದಿಂದೆ ಬಿದ್ದರೆ ನನ್ನ ಸ್ಟಡೀಸ್ ಗತಿ ಏನು ಅಂತ ನೆನಿಸ್ಕೊಂಡು ನೆನಿಸ್ಕೊಂಡೇ ಅಳು ಬರ್ತಾಯಿತ್ತು. ಜ್ವರ ಬಂದಾಗಿಬಿಟ್ಟಿದೆ ಯೋಗಿ. ನೀನು ನನ್ನ ಬ್ರದರ್ ಅಂತ ತಿಳ್ಕೊಂಡು ರಿಕ್ವೆಸ್ಟ್ ಮಾಡ್ಕೊಳ್ತಿದ್ದೀನಿ. ಗಿರೀಶನಿಗೆ ಪ್ಲೀಸ್ ಕನ್ವೀನ್ಸ್ ಮಾಡು. ಮೊದಲಿದ್ದ ಹಾಗೇ ಇರಲಿ. ಇದೊಂದು ಅವನ ತಲೆಯಿಂದ ತೆಗೆದುಹಾಕಿಬಿಡಲಿ ಅಷ್ಟೇ. ಪ್ಲೀಸ್” ಲುಬೈನಾ ಕೈ ಮುಗಿದಳು.
ಮುಗಿದ ಅವಳ ಕೈಯನ್ನು ಹಿಡಿದುಕೊಂಡು ಹೇಳಿದೆ.
“ಯೋಚ್ನೆ ಮಾಡಬೇಡ. ನಾನು ಅವನ ಜೊತೆ ಮಾತಾಡ್ತೀನಿ. ನೀನು ಕೈಯೆಲ್ಲಾ ಏನೂ ಮುಗಿಯೋದು ಬೇಡ.”
“ಯಾರಿಗೂ ಹೇಳಬೇಡ. ಈ ವಿಷಯ ನಮ್ಮೂವರಲ್ಲೇ ಮುಗಿದು ಹೋಗಲಿ. ಪ್ಲೀಸ್” ಎಂದ ಲುಬೈನಾ ಆಸ್ಮಾ ಬರುವುದನ್ನು ನೋಡಿ ಮಾತು ನಿಲ್ಲಿಸಿದಳು.
ನಾನು ನಕ್ಕೆ. ಗಿರೀಶನಿಗೆ ಅವಳು ಹೇಳಿದ್ದನೆಲ್ಲಾ ಹೇಳಿದೆ. ಅವಳು ಕೊಟ್ಟ ಪತ್ರವನ್ನು ಮರಳಿಸಿದೆ.
“ಅನ್ನಿಸ್ತು ಪ್ರಪೋಸ್ ಮಾಡ್ದೆ. ಅವರಿಗೆ ಇಷ್ಟ ಇಲ್ಲಾಂದ್ರೆ ಬಿಡು, ಅಷ್ಟೇ!” ಎಂದ ಅವನ ಕಣ್ಣಂಚಿನಲ್ಲಿ ಜಿನುಗಲು ಸಿದ್ಧವಾಗಿದ್ದ ಕಣ್ಣೀರಿನ ಹನಿಗಳನ್ನು ಆದಷ್ಟು ತಡೆದುಕೊಂಡ.
ಆದರೆ ನನಗೆ ಧಳಧಳ ಸುರಿದೇ ಬಿಟ್ಟಿತು.
“ಹೋಗಲಿ ಬಿಡು” ಅವನಿಗೆ ಅಂದು ಜೀವನದಲ್ಲೇ ತುಂಬಾ ಆಪ್ತನಾದ ಸ್ನೇಹಿತ ಎಂದೆಸಿದ್ದಿರಬೇಕು. ತನ್ನ ಸ್ನೇಹಿತನ ಭಗ್ನ ಹೃದಯಕ್ಕೆ ಇಷ್ಟೊಂದು ಮರಗುತ್ತಿದ್ದಾನಲ್ಲಾ ಎಂದು ಅವನು ನನ್ನ ಬಗ್ಗೆ ತನ್ನ ಆತ್ಮೀಯತೆಯನ್ನು ಮತ್ತಷ್ಟು ಗಾಢ ಮಾಡಿಕೊಂಡಿರಬೇಕು.
“ಪ್ಚ್, ನೀನೇನೋ, ನನಗೊಸ್ಕರ ಇಷ್ಟು ಫೀಲ್ ಮಾಡ್ಕೊಳ್ತಿದ್ದೀಯಾ?” ಎಂದ ಅವನು ನನ್ನ ಭುಜವನ್ನು ಬಳಸಿ ಹಿಡಿದುಕೊಂಡು “ಇಷ್ಟು ಸಾಕು ಬಿಡು ಗುರು, ಇಷ್ಟು ಸಾಕು” ಎಂದ ಅವನ ಕಣ್ಣಿಂದಲೂ ಧುಮುಕುತ್ತಿತ್ತು.
ಯಾರೊಂದಿಗೂ ಹಂಚಿಕೊಳ್ಳದ ಅಂದು ನನ್ನ ಕಣ್ಣಿಂದ ನೀರು ಸುರಿದ ರಹಸ್ಯವನ್ನು ನಾನು ಬಿಚ್ಚಿಟ್ಟಿದ್ದು ಸುಮಾರು ಇಪ್ಪತ್ತೈದು ವರ್ಷಗಳ ನಂತರ. ಅದು ದಲೀಲ್ ಮುಂದೆ. ದಲೀಲ್ ಲುಬೈನಾಳ ಗಂಡ. ಅವನು ಮುಂಬೈನಲ್ಲಿ ರಂಗತಂಡವೊಂದನ್ನು ಹೊಂದಿದ್ದ. ನಾನೂ ರಂಗಕರ್ಮಿ ಎಂದು ಲುಬೈನಾಳಿಂದ ತಿಳಿದಾಗ ನನ್ನ ಜೊತೆ ಮಾತಾಡಲು ಇಷ್ಟ ಪಟ್ಟಿದ್ದ.
ನನ್ನ ರಂಗಪ್ರಯೋಗ ಖಲೀಲ್ ಗಿಬ್ರಾನನ ದ ಪ್ರಾಫೆಟ್ ಹಲವು ಪ್ರಯೋಗಗಳನ್ನು ಕಂಡು, ಪತ್ರಿಕೆಗಳಲ್ಲಿ ಅದರ ಬಗ್ಗೆ ಬರಹಗಳನ್ನು ನೋಡಿದಾಗ ಲುಬೈನಾ ಮತ್ತು ದಲೀಲ್ ನನಗೆ ಫೋನ್ ಮಾಡಿ ಮುಂದಿನ ಪ್ರಯೋಗ ಇದ್ದಾಗ ತಿಳಿಸಲು ಹೇಳಿದ್ದರು. ಅಲೆಯನ್ಸ್ ಡಿ ಫ್ರಾನಿಸ್ ನಲ್ಲಿ ಪ್ರಯೋಗವಾದಾಗ ಇಬ್ಬರೂ ಬಂದು ನಾಟಕ ನೋಡಿ ಖುಷಿಪಟ್ಟರು. ಇಬ್ಬರೂ ಬೆನ್ಸನ್ ಟೌನಿನಲ್ಲಿರುವ ತಮ್ಮ ಮನೆಗೆ ಊಟಕ್ಕೆ ಕರೆದರು. ಲುಬೈನಾಗೆ ದೇವಿಯನ್ನು ಕಂಡರೆ ಬಲೇ ಮುದ್ದಾಗಿತ್ತು.
ರಂಗಪ್ರಯೋಗದಲ್ಲಿಯೂ ಪುಟಪುಟನೆ ವೇದಿಕೆಯ ಮೇಲೆ ನಾಟಕದ ಭಾಗವಾಗಿದ್ದ ದೇವಿ ಪ್ರದರ್ಶನದ ವೇಳೆ ಕೆಳಗಿಳಿದು ಬಿಟ್ಟಳು. ಲುಬೈನಾ ಅವಳನ್ನು ಎತ್ತಿಕೊಂಡು ಮತ್ತೆ ವೇದಿಕೆ ಹತ್ತಿಸಿದ್ದಳು. ಕತ್ತಲಿನಲ್ಲಿ ನನಗೆ ಆ ವ್ಯಕ್ತಿ ಲುಬೈನಾ ಎಂದು ತಿಳಿದಿರಲಿಲ್ಲ. ಆದರೆ ನಾಟಕ ಮುಗಿದ ಮೇಲೆ ಅವಳೆಂಬ ಅಚ್ಚರಿ ಕಾದಿತ್ತು.
ಗಂಡ ಹೆಂಡಿರಿಬ್ಬರೇ ಇದ್ದ ಅವರ ಮನೆಯಲ್ಲಿ ನಾವು ಕುಟುಂಬ ಸಮೇತ ಊಟ ಮಾಡುವಾಗ ಲುಬೈನಾ “ನಾವು ಕಾಲೇಜಲ್ಲಿ ಓದುವಾಗ ಒಂದು ಘಟನೆ ನಡಿತು. ಏನೂಂತ ನೀನೇ ಕೇಳು” ಎಂದು ಲುಬೈನಾ ದಲೀಲನಿಗೆ ಹೇಳಿದಳು.
ನಾನು ಗಿರೀಶ್ ಪ್ರೇಮಪತ್ರ ಕೊಟ್ಟ ಕತೆಯನ್ನು ಹೇಳುತ್ತೇನೆ ಎಂದಷ್ಟೇ ತಿಳಿದಿದ್ದ ಲುಬೈನಾಗೆ ಅಚ್ಚರಿ ಕಾದಿತ್ತು.
ನನ್ನೊಮೆಯನ್ನೂ ತೆರೆದಿಟ್ಟಾಗ ದಲೀಲ್ ನಮ್ಮಿಬ್ಬರ ಮುಖವನ್ನು ನೋಡಿ ನೋಡಿ ನಗುತ್ತಿದ್ದ.
“ಅಯ್ಯೋ ನಿನ್ನಾ. ನೀನು ಹೇಳಲೇ ಇಲ್ಲಾ!” ಎಂದಳು ಲುಬೈನಾ.
ನಾನು ನಕ್ಕೆ. ಗಂಗಾ ಕೂಡಾ ನಗುತ್ತಿದ್ದಳು.
“ಇವರು ಹೇಳಿದ್ದರೆ ಏನು ಮಾಡುತ್ತಿದ್ದೆ?” ಎಂದು ಕೇಳಿದ ದಲೀಲ್.
“ಆವಾಗ ಇವನ ಕತೆ ಹೀಗೇಂತ ಗಿರೀಶನಿಗೇ ಹೇಳಿರುತ್ತಿದ್ದೆ” ಎಂದು ನಕ್ಕಳು ಲುಬೈನಾ.
“ಗಿರೀಶ ಮತ್ತೆ ಯೋಗೀಶ ಇಬ್ಬರೂ ಪ್ರಪೋಸ್ ಮಾಡಿದ್ದರೆ?” ಎಂದು ಕೇಳಿದ ದಲೀಲ್.
“ಮಹೇಶನಿಗೆ ಹೇಳ್ತಿದ್ದೆ!” ಎಂದಳು ಲುಬೈನಾ.
“ಅವನ್ಯಾರು?”
“ಪಕ್ಕದ ಕ್ಲಾಸ್ ರೌಡಿ” ಎಂದು ನಕ್ಕಳು ಲುಬೈನಾ.
“ನೋಡಿ ಗಂಗಾ ನಿಮ್ಮ ಗಂಡ ಭಯಂಕರ ಸೀಕ್ರೆಟ್ ಲವ್ವರ್. ಇಷ್ಟು ವರ್ಷ ಆದ ಮೇಲೆ ಹೇಳ್ತಿದ್ದಾರೆ” ಎಂದ ದಲೀಲ್.
“ಅವರ ಹತ್ತಿರ ಯಾವ ಸೀಕ್ರೇಟೂ ಇರಲ್ಲ. ಕತೆ ಕಾದಂಬರಿಗಳಲ್ಲಾದರೂ ಬಂದುಬಿಡತ್ತೆ” ಎಂದ ಗಂಗಾ, “ಅವರು ಒಳಗೊಳಗೇ ಏನೂ ಇಟ್ಕೊಳಲ್ಲ” ಎಂದು ಪುನರುಚ್ಚರಿಸಿದಳು.
ಹೌದು, ಹಾಗೆ ಇಟ್ಟುಕೊಳ್ಳಲ್ಲ. ಆದರೆ ಅದಿತ್ತು ಇಪ್ಪತ್ತೈದು ವರ್ಷ. ದಲೀಲ್ ಮತ್ತು ಲುಬೈನಾ ದಂಪತಿಗಳ ಮುಕ್ತ ಮನಸ್ಸು ಮತ್ತು ಒಡನಾಟ ನೋಡಿ ಅದನ್ನು ಹೇಳಲು ಸಾಧ್ಯವಾಯಿತು. ಲುಬೈನಾ ಕಾಲೇಜಿನಲ್ಲಿ ಹಿಂಜರಿಯುತ್ತಿದ್ದಂತೆ ಈಗ ಇರದೇ ಹಿಜಾಬಿನಲ್ಲೇ ಬಾಯ್ಬಿಟ್ಟು ನಗುತ್ತಿದ್ದಳು. ಕಣ್ಣರಳಿಸಿ ಹುಬ್ಬೆತ್ತಿ ಕೇಳುವ, ಹೇಳುವ ಬಗೆಯಲ್ಲಿ ಅವಳ ಮುಕ್ತತೆ, ಲವಲವಿಕೆ ಕಾಣುತ್ತಿತ್ತು.
ಒಂದು ವೇಳೆ ದಲೀಲ್ ಕಾಟೇವಾಡ ಹಾಕಿಕೊಂಡಿರುವ ವ್ಯಕ್ತಿಯಂತೆ ಕಂಡಿದ್ದರೆ ಊಟ ಮಾಡಿ “ನಮ್ಮನೆಗೂ ಬನ್ನಿ” ಎಂದು ಆಹ್ವಾನಿಸುವುದರಲ್ಲೇ ನಮ್ಮ ಮಾತುಕತೆ ಮುಗಿದಿರುತ್ತಿತ್ತು. ಗಂಗಾ ಹೇಳಿದಂತೆ ಯಾವುದೋ ಕತೆ, ಕಾದಂಬರಿಯಲ್ಲಿ ಯಾರದೋ ಕತೆಯಂತೆ, ಯಾವುದೋ ಪಾತ್ರದ್ದಂತೆ ಇದು ನುಸುಳೇ ತೀರಿರುತ್ತಿತ್ತು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
Mysuru Dasara Elephants: ದಸರಾ ಗಜಪಡೆಯ ತೂಕ ಪರೀಕ್ಷೆ: ಶ್ರೀಕಂಠ ಭಾರೀ ಗಜ, ಏಕಲವ್ಯಕ್ಕೆ 2ನೇ ಸ್ಥಾನ; ಅಂಬಾರಿ ಆನೆ ಆಯ್ಕೆ ಇನ್ನೂ ಬಾಕಿ
ಸುದ್ದಿದಿನ,ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಸಿದ್ಧತೆಗಳು ಆರಂಭವಾಗಿದ್ದು, ಮೊದಲ ಹಂತದಲ್ಲಿ ಆಗಮಿಸಿರುವ 9 ಆನೆಗಳಿಗೆ ಸಾಂಪ್ರದಾಯಿಕ ತೂಕ ಪರೀಕ್ಷೆ ನಡೆಸಲಾಗಿದೆ. ಈ ಬಾರಿ ಮತ್ತಿಗೋಡು ಶಿಬಿರದ 57 ವರ್ಷದ ಶ್ರೀಕಂಠ 5,790 ಕೆಜಿ ತೂಕದೊಂದಿಗೆ ಗಜಪಡೆಯಲ್ಲೇ ಅತ್ಯಂತ ಭಾರವಾದ ಆನೆಯಾಗಿ ಮೊದಲ ಸ್ಥಾನ ಪಡೆದುಕೊಂಡಿದ್ದಾನೆ. ಭೀಮನಕಟ್ಟೆ ಶಿಬಿರದ 41 ವರ್ಷದ ಏಕಲವ್ಯ 5,600 ಕೆಜಿ ತೂಗಿ ಎರಡನೇ ಸ್ಥಾನದಲ್ಲಿದ್ದಾನೆ.
ನಗರದ ಧನ್ವಂತರಿ ರಸ್ತೆಯಲ್ಲಿರುವ ಎಲೆಕ್ಟ್ರಾನಿಕ್ ವೇ ಬ್ರಿಡ್ಜ್ನಲ್ಲಿ ಭಾನುವಾರ ಬೆಳಗ್ಗೆ ಎಲ್ಲ 9 ಆನೆಗಳ ತೂಕ ಪರೀಕ್ಷೆ ನಡೆಸಲಾಯಿತು. ಕಳೆದ ವರ್ಷ ಭೀಮ ಮತ್ತು ಅಭಿಮನ್ಯು ಕ್ರಮವಾಗಿ ಮೊದಲ ಎರಡು ಸ್ಥಾನದಲ್ಲಿದ್ದರು. ಆದರೆ ಈ ಬಾರಿ ಇವರಿಬ್ಬರನ್ನೂ ದಸರಾಗೆ ಕರೆತಂದಿಲ್ಲ. ಹೀಗಾಗಿ ಶ್ರೀಕಂಠನ ತೂಕವೇ ಈ ವರ್ಷದ ಗಜಪಡೆಯ ಗಮನ ಸೆಳೆದಿದೆ.
ಹೈಲೈಟ್ಸ್: 57 ವರ್ಷದ ಶ್ರೀಕಂಠನೇ ಗಜಪಡೆಯ ತೂಕದ ಬಾದ್ಷಾ |
|
http://Visit : www.suddidina.com
ಗಂಡಾನೆಗಳ ತೂಕ 5 ಸಾವಿರ ಕೆಜಿಗೂ ಅಧಿಕ
ಈ ಬಾರಿಯ ಮೊದಲ ಹಂತದ ಗಜಪಡೆಯ ವಿಶೇಷತೆಯೆಂದರೆ ಬಹುತೇಕ ಗಂಡಾನೆಗಳು 5 ಸಾವಿರ ಕೆಜಿಗೂ ಹೆಚ್ಚು ತೂಕ ಹೊಂದಿರುವುದು. ಆದರೆ ಆನೆಗಳ ತೂಕ ಹೆಚ್ಚಿಸುವುದೇ ಅರಣ್ಯ ಇಲಾಖೆಯ ಮುಖ್ಯ ಗುರಿಯಲ್ಲ. ಬದಲಿಗೆ ಅವುಗಳ ಆರೋಗ್ಯ, ದೈಹಿಕ ಸಾಮರ್ಥ್ಯ ಮತ್ತು ತಾಲೀಮಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ.
ಡಿಸಿಎಫ್ ಡಾ. ಐ.ಬಿ. ಪ್ರಭುಗೌಡ ಅವರ ಪ್ರಕಾರ, ಆನೆಗಳ ತೂಕದ ಆಧಾರದ ಮೇಲೆ ಅವುಗಳಿಗೆ ನೀಡಬೇಕಾದ ಆಹಾರದ ಪ್ರಮಾಣ ಮತ್ತು ಪೌಷ್ಟಿಕ ಆಹಾರವನ್ನು ನಿರ್ಧರಿಸಲಾಗುತ್ತದೆ. ಪ್ರತಿಯೊಂದು ಆನೆಯ ದೈಹಿಕ ಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ತಾಲೀಮು ರೂಪಿಸಲಾಗುತ್ತದೆ.
9 ಆನೆಗಳ ತೂಕದ ಆಧಾರದಲ್ಲೇ ಆಹಾರ
ದಸರಾ ಗಜಪಡೆಯಲ್ಲಿರುವ ಆನೆಗಳ ಆರೋಗ್ಯ ಕಾಪಾಡುವುದು ಪ್ರಮುಖ ಆದ್ಯತೆಯಾಗಿದೆ. ತೂಕ ಪರೀಕ್ಷೆಯ ಮೂಲಕ ಆನೆಗಳ ದೈಹಿಕ ಸ್ಥಿತಿಯ ಬಗ್ಗೆ ಅಗತ್ಯ ಮಾಹಿತಿ ಪಡೆಯಲಾಗುತ್ತದೆ. ಅದರ ಆಧಾರದ ಮೇಲೆ ಪೌಷ್ಟಿಕ ಆಹಾರ, ದಿನನಿತ್ಯದ ಚಟುವಟಿಕೆ ಹಾಗೂ ತಾಲೀಮಿನಲ್ಲಿ ಅಗತ್ಯ ಬದಲಾವಣೆ ಮಾಡಲಾಗುತ್ತದೆ.
ಅರಣ್ಯ ಇಲಾಖೆ ಅಧಿಕಾರಿಗಳ ಪ್ರಕಾರ, ಈಗಿರುವ ಎಲ್ಲ ಆನೆಗಳೂ ಅಂಬಾರಿ ಹೊರುವ ಸಾಮರ್ಥ್ಯ ಹೊಂದಿವೆ. ಅನುಭವಿ ಆನೆಗಳಾಗಿರುವುದರಿಂದ ಅಂತಿಮ ತಾಲೀಮು ಅತ್ಯಂತ ಮಹತ್ವ ಪಡೆಯಲಿದೆ.
ಅಂಬಾರಿ ಆನೆ ಯಾರು? ಕುತೂಹಲ
ಈ ಬಾರಿಯ ದಸರಾ ಜಂಬೂಸವಾರಿಯಲ್ಲಿ ಚಿನ್ನದ ಅಂಬಾರಿ ಹೊರುವ ಆನೆ ಯಾರು ಎಂಬ ಕುತೂಹಲ ಈಗಾಗಲೇ ಹೆಚ್ಚಾಗಿದೆ. ಕೇವಲ ತೂಕದ ಆಧಾರದ ಮೇಲೆ ಅಂಬಾರಿ ಆನೆಯನ್ನು ಆಯ್ಕೆ ಮಾಡುವುದಿಲ್ಲ. ಆನೆಯ ಆರೋಗ್ಯ, ಸಾಮರ್ಥ್ಯ, ಅನುಭವ, ತಾಲೀಮು ಮತ್ತು ಅಂತಿಮ ಹಂತದ ಪ್ರದರ್ಶನವನ್ನು ಪರಿಗಣಿಸಿ ಆಯ್ಕೆ ಮಾಡಲಾಗುತ್ತದೆ.
ಮೊದಲ ಹಂತದ ತಾಲೀಮು ಮುಗಿದ ಬಳಿಕ ನಡೆಯುವ ಅಂತಿಮ ತಾಲೀಮಿನ ನಂತರವೇ ಚಿನ್ನದ ಅಂಬಾರಿ ಹೊರುವ ಆನೆಯನ್ನು ಅಂತಿಮಗೊಳಿಸಲಾಗುತ್ತದೆ. ಹೀಗಾಗಿ ಶ್ರೀಕಂಠ ತೂಕದಲ್ಲಿ ನಂಬರ್ 1 ಆಗಿದ್ದರೂ, ಅಂಬಾರಿ ವಿಚಾರದಲ್ಲಿ ಅಂತಿಮ ನಿರ್ಧಾರ ಇನ್ನೂ ಬಾಕಿಯಿದೆ.
ಆನೆಗಳ ಬಳಿ ಸಾರ್ವಜನಿಕರಿಗೆ ನಿರ್ಬಂಧ
ದಸರಾ ಆನೆಗಳ ವೀಕ್ಷಣೆಗೆ ಯಾವುದೇ ಟಿಕೆಟ್ ವ್ಯವಸ್ಥೆ ಮಾಡಿಲ್ಲ ಎಂದು ಡಿಸಿಎಫ್ ಸ್ಪಷ್ಟಪಡಿಸಿದ್ದಾರೆ. ಸಾರ್ವಜನಿಕರು ಆನೆಗಳ ಬಳಿ ತೆರಳದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ದಸರಾ ಆನೆಗಳ ಕುರಿತು ಸುಳ್ಳು ಮಾಹಿತಿ ಹರಡಿದರೆ ಕ್ರಮ ಕೈಗೊಳ್ಳುವುದಾಗಿಯೂ ಅರಣ್ಯ ಇಲಾಖೆ ಎಚ್ಚರಿಕೆ ನೀಡಿದೆ.
“ಆನೆಗಳಿಗೆ ಹಂತ ಹಂತವಾಗಿ ತಾಲೀಮು ಮಾಡಲಾಗುತ್ತದೆ. ಸದ್ಯಕ್ಕೆ ಎಲ್ಲ ಆನೆಗಳ ಆರೋಗ್ಯ ಚೆನ್ನಾಗಿದೆ. ಅಂತಿಮ ಹಂತದ ತಾಲೀಮಿನ ಬಳಿಕ ಅಂಬಾರಿ ಹೊರುವ ಆನೆ ಆಯ್ಕೆ ಮಾಡಲಾಗುವುದು.”
– ಡಾ.ಐ.ಬಿ.ಪ್ರಭುಗೌಡ, ಡಿಸಿಎಫ್
ದಸರಾ ಗಜಪಡೆಯ ತೂಕದ ವಿವರ
- ಶ್ರೀಕಂಠ: 5,790 ಕೆಜಿ
- ಏಕಲವ್ಯ: 5,600 ಕೆಜಿ
- ಧನಂಜಯ: 5,530 ಕೆಜಿ
- ಮಹೇಂದ್ರ: 5,490 ಕೆಜಿ
- ಪ್ರಶಾಂತ: 5,205 ಕೆಜಿ
- ಗೋಪಿ: 5,170 ಕೆಜಿ
- ಶ್ರೀರಾಮ: 4,820 ಕೆಜಿ
- ಲಕ್ಷ್ಮೀ: 3,990 ಕೆಜಿ
- ಕಾವೇರಿ: 3,075 ಕೆಜಿ

ದಿನದ ಸುದ್ದಿ
ಬೆಂಗಳೂರು ಕಟ್ಟಡ ತೆರವು ಕಾರ್ಯಾಚರಣೆ: 18 ಅಂತಸ್ತಿನ ಅಪಾರ್ಟ್ಮೆಂಟ್ಗೆ ‘ಡೆಮಾಲಿಷನ್’ ಶುರು!
ಕೂಡ್ಲುಗೇಟ್ನ ಎಸ್ಎನ್ಎನ್ ರಾಜ್ ಎಟರ್ನಿಯಾ ಸಂಕೀರ್ಣದ 49 ಫ್ಲ್ಯಾಟ್ಗಳ ತೆರವು; ₹200 ಕೋಟಿ ವೆಚ್ಚದ ಕಟ್ಟಡಕ್ಕೆ ಹೊಸ ರೂಪ
ಸುದ್ದಿದಿನ,ಬೆಂಗಳೂರು: ನಗರದ ಪ್ರಮುಖ ವಸತಿ ಯೋಜನೆಗಳಲ್ಲಿ ಒಂದಾಗಿರುವ ಕೂಡ್ಲುಗೇಟ್ನ ಎಸ್ಎನ್ಎನ್ ಎಸ್ಟೇಟ್ ಒಡೆತನದ 18 ಅಂತಸ್ತಿನ ಕಟ್ಟಡದ ತೆರವು ಕಾರ್ಯಾಚರಣೆ ಶುಕ್ರವಾರದಿಂದ ಆರಂಭವಾಗಿದೆ. ಬೆಂಗಳೂರಿನ ಗಮನ ಸೆಳೆದಿದ್ದ ಈ ಪ್ರಕರಣದಲ್ಲಿ ಎಸ್ಎನ್ಎನ್ ರಾಜ್ ಕಾರ್ಪ್ ಸಂಸ್ಥೆಯು ಎಚ್ಎಸ್ಆರ್ ಲೇಔಟ್ನಲ್ಲಿರುವ ತನ್ನ ಎಸ್ಎನ್ಎನ್ ರಾಜ್ ಎಟರ್ನಿಯಾ ಪ್ರೀಮಿಯಂ ವಸತಿ ಸಂಕೀರ್ಣದ 49 ಅಪಾರ್ಟ್ಮೆಂಟ್ ಘಟಕಗಳನ್ನು ನಿಯಂತ್ರಿತ ರೀತಿಯಲ್ಲಿ ಕೆಡವುವ ಪ್ರಕ್ರಿಯೆಗೆ ಚಾಲನೆ ನೀಡಿದೆ.
ಒಟ್ಟು 972 ಮನೆಗಳನ್ನು ಹೊಂದಿರುವ ಈ ವಸತಿ ಯೋಜನೆಯಲ್ಲಿನ 49 ಘಟಕಗಳ ತೆರವು ಈಗ ಭಾರಿ ಕುತೂಹಲ ಮೂಡಿಸಿದೆ. ಕಟ್ಟಡದ ಸುರಕ್ಷತೆ ಕುರಿತು ತಾಂತ್ರಿಕ ಪರಿಶೀಲನೆ ನಡೆಸಿದ ಬಳಿಕ ಈ ಕ್ರಮಕ್ಕೆ ಮುಂದಾಗಲಾಗಿದೆ.
₹200 ಕೋಟಿ ವೆಚ್ಚದ ಕಟ್ಟಡದಲ್ಲಿ ದೋಷ ಪತ್ತೆ
ಸುಮಾರು ₹200 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ಕಟ್ಟಡ ಇದಾಗಿದೆ. ತಾಂತ್ರಿಕ ಪರಿಶೀಲನೆ ವೇಳೆ ಕಟ್ಟಡದ ರಚನೆಯಲ್ಲಿ ಹಾನಿಯಾಗಿರುವುದು ಹಾಗೂ ಕಟ್ಟಡ ವಾಲಿರುವುದು ಬೆಳಕಿಗೆ ಬಂದಿತ್ತು. ಈ ಹಿನ್ನೆಲೆಯಲ್ಲಿ ನಿವಾಸಿಗಳ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಕಟ್ಟಡದ ನಿರ್ದಿಷ್ಟ ಭಾಗಗಳನ್ನು ತೆರವುಗೊಳಿಸುವ ನಿರ್ಧಾರ ಕೈಗೊಳ್ಳಲಾಗಿದೆ.
ತೆರವು ಕಾರ್ಯಾಚರಣೆಯನ್ನು ಯಾವುದೇ ರೀತಿಯ ಆತಂಕ ಅಥವಾ ಅಪಾಯ ಉಂಟಾಗದಂತೆ ಅತ್ಯಂತ ನಿಯಂತ್ರಿತ ರೀತಿಯಲ್ಲಿ ನಡೆಸಲಾಗುತ್ತಿದೆ. ಕಟ್ಟಡ ತೆರವು ಸಂದರ್ಭದಲ್ಲಿ ಸುತ್ತಮುತ್ತಲಿನ ಪ್ರದೇಶಕ್ಕೂ ಸಮಸ್ಯೆಯಾಗದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.
ಮುಂಬೈ ಮೂಲದ ಖಾಸಗಿ ಕಂಪನಿಗೆ ಗುತ್ತಿಗೆ
ತೆರವು ಕಾರ್ಯವನ್ನು ಮುಂಬೈ ಮೂಲದ ಖಾಸಗಿ ಕಂಪನಿಗೆ ಗುತ್ತಿಗೆ ನೀಡಲಾಗಿದೆ ಎಂದು ಎಸ್ಎನ್ಎನ್ ಅಪಾರ್ಟ್ಮೆಂಟ್ ನಿರ್ದೇಶಕ ಅನೂಜ್ ತಿಳಿಸಿದ್ದಾರೆ. ಫ್ಲ್ಯಾಟ್ಗಳನ್ನು ಹಂತ ಹಂತವಾಗಿ ತೆರವುಗೊಳಿಸುವ ಮೂಲಕ ಕಾರ್ಯಾಚರಣೆ ನಡೆಸಲಾಗುತ್ತಿದೆ.
ಈ ಕುರಿತು ಮಾತನಾಡಿರುವ ಅವರು, ಬಿಬಿಎಂಪಿಗೂ ಸಂಸ್ಥೆಯ ವತಿಯಿಂದ ಪತ್ರ ಬರೆಯಲಾಗಿದೆ ಎಂದು ತಿಳಿಸಿದ್ದಾರೆ. ಯಾವುದೇ ರೀತಿಯ ಸಮಸ್ಯೆ ಉಂಟಾಗದಂತೆ ತೆರವು ಕಾರ್ಯ ನಡೆಸಲಾಗುವುದು ಎಂಬ ಭರವಸೆಯನ್ನೂ ನೀಡಿದ್ದಾರೆ.
ಅದೇ ಜಾಗದಲ್ಲಿ ಹೊಸ ಅಪಾರ್ಟ್ಮೆಂಟ್ ನಿರ್ಮಾಣ
ಪ್ರಸ್ತುತ ಕಟ್ಟಡದ ತೆರವು ಕಾರ್ಯ ಪೂರ್ಣಗೊಂಡ ಬಳಿಕ ಅದೇ ಜಾಗದಲ್ಲಿ ಹೊಸ ಅಪಾರ್ಟ್ಮೆಂಟ್ ನಿರ್ಮಿಸುವ ಯೋಜನೆ ಇದೆ ಎಂದು ಸಂಸ್ಥೆ ತಿಳಿಸಿದೆ. ಈಗಾಗಲೇ ಕೆಲವು ಫ್ಲ್ಯಾಟ್ಗಳು ಮುಂಗಡವಾಗಿ ಬುಕ್ ಆಗಿದ್ದ ಹಿನ್ನೆಲೆಯಲ್ಲಿ ಖರೀದಿದಾರರೊಂದಿಗೆ ಮಾತುಕತೆ ನಡೆಸಿ ಸಮಸ್ಯೆ ಪರಿಹರಿಸುವುದಾಗಿ ಸಂಸ್ಥೆ ಹೇಳಿದೆ.
ಯಾರಿಗೂ ತೊಂದರೆಯಾಗದಂತೆ ಸಂಪೂರ್ಣ ಪ್ರಕ್ರಿಯೆ ನಡೆಸುವುದಾಗಿ ಸ್ಪಷ್ಟಪಡಿಸಿರುವ ಸಂಸ್ಥೆ, ನಿವಾಸಿಗಳು ಹಾಗೂ ಖರೀದಿದಾರರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಮುಂದಿನ ಕ್ರಮ ಕೈಗೊಳ್ಳಲಿದೆ.

ದಿನದ ಸುದ್ದಿ
ಪಾಕ್ ಗಡಿಯಿಂದ ಡ್ರೋನ್ ಎಂಟ್ರಿ ಶಂಕೆ: ಪೂಂಚ್ನಲ್ಲಿ ಹೈ ಅಲರ್ಟ್, 3 ಜಿಲ್ಲೆಗಳಲ್ಲಿ ಭದ್ರತಾ ಪಡೆಗಳ ಬೃಹತ್ ಬೇಟೆ
ಸುದ್ದಿದಿನ,ಜಮ್ಮುಕಾಶ್ಮೀರ: ಜಮ್ಮು-ಕಾಶ್ಮೀರದ ಗಡಿ ಪ್ರದೇಶದಲ್ಲಿ ಮತ್ತೆ ಡ್ರೋನ್ ಹಾರಾಟದ ಆತಂಕ ಎದುರಾಗಿದೆ. ಪೂಂಚ್ ಜಿಲ್ಲೆಯ ಮೆಂಧರ್ ಸೆಕ್ಟರ್ನಲ್ಲಿ ಪಾಕಿಸ್ತಾನ ಮೂಲದ್ದೆಂದು ಶಂಕಿಸಲಾದ ಡ್ರೋನ್ವೊಂದು ಕಾಣಿಸಿಕೊಂಡಿರುವುದು ಭದ್ರತಾ ಪಡೆಗಳನ್ನು ಅಲರ್ಟ್ ಮಾಡಿದೆ. ಗಡಿಯಾಚೆಯಿಂದ ನಡೆಯಬಹುದಾದ ಯಾವುದೇ ಅನುಮಾನಾಸ್ಪದ ಚಟುವಟಿಕೆಗಳನ್ನು ತಡೆಯಲು ಸೇನೆ ಹಾಗೂ ಭದ್ರತಾ ಪಡೆಗಳು ನಿಗಾ ಮತ್ತಷ್ಟು ಬಿಗಿಗೊಳಿಸಿವೆ.
ಹೈಲೈಟ್ಸ್ |
|
http://Visit : www.suddidina.com
ಬೆಹ್ರೂಟಿ ಗ್ರಾಮದ ಬಳಿ ಕಾಣಿಸಿಕೊಂಡ ಶಂಕಿತ ಡ್ರೋನ್
ಶುಕ್ರವಾರ ಸಂಜೆ ಬಾಲಕೋಟೆ ಪ್ರದೇಶದ ಬೆಹ್ರೂಟಿ ಗ್ರಾಮದ ಸಮೀಪ ಆಕಾಶದಲ್ಲಿ ಶಂಕಿತ ಡ್ರೋನ್ ಹಾರಾಟ ನಡೆಸಿರುವುದು ಸ್ಥಳೀಯರ ಹಾಗೂ ಭದ್ರತಾ ಪಡೆಗಳ ಗಮನಕ್ಕೆ ಬಂದಿದೆ. ಬಳಿಕ ಅದು ಮಂಗಲ್ನಾರ್-ದಬ್ರೋಟ್ ಪ್ರದೇಶದತ್ತ, ಅಂದರೆ ಗಡಿ ಪ್ರದೇಶದ ಸಮೀಪಕ್ಕೆ ತೆರಳಿ ಪಾಕಿಸ್ತಾನದ ದಿಕ್ಕಿನಲ್ಲಿ ವಾಪಸ್ ಹೋಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಡ್ರೋನ್ ಕಾಣಿಸಿಕೊಂಡ ಮಾಹಿತಿ ಸಿಗುತ್ತಿದ್ದಂತೆ LoC ವ್ಯಾಪ್ತಿಯಲ್ಲಿ ಭದ್ರತಾ ಕ್ರಮಗಳನ್ನು ತೀವ್ರಗೊಳಿಸಲಾಗಿದೆ. ಬೆಳಗ್ಗೆಯಿಂದಲೇ ಸರ್ಚ್ ಆಪರೇಷನ್ ಆರಂಭಿಸಲಾಗಿದ್ದು, ಡ್ರೋನ್ ಮೂಲಕ ಯಾವುದೇ ವಸ್ತು, ಶಸ್ತ್ರಾಸ್ತ್ರ ಅಥವಾ ಅನುಮಾನಾಸ್ಪದ ಸಾಮಗ್ರಿಗಳನ್ನು ಕೆಳಗೆ ಇಳಿಸಲಾಗಿದೆಯೇ ಎಂಬುದರ ಕುರಿತು ಪರಿಶೀಲನೆ ನಡೆಸಲಾಗುತ್ತಿದೆ.
3 ಜಿಲ್ಲೆಗಳಲ್ಲಿ ಭದ್ರತಾ ಪಡೆಗಳ ಬೃಹತ್ ಶೋಧ
ಡ್ರೋನ್ ಆತಂಕದ ನಡುವೆಯೇ ಜಮ್ಮು-ಕಾಶ್ಮೀರದ ಉಧಂಪುರ, ಕಥುವಾ ಮತ್ತು ರಾಜೌರಿ ಜಿಲ್ಲೆಗಳ ವಿಶಾಲ ಅರಣ್ಯ ಪ್ರದೇಶಗಳಲ್ಲೂ ಭದ್ರತಾ ಪಡೆಗಳು ಶೋಧ ಕಾರ್ಯಾಚರಣೆ ತೀವ್ರಗೊಳಿಸಿವೆ.
ಉಧಂಪುರ-ಕಥುವಾ ಅರಣ್ಯ ಪ್ರದೇಶದ ಖುಬನ್, ನಾಗೈನ್, ಖ್ಟ್ರೈಲ್, ಗೋಡು ಫಲಾಲ್, ಪದೇತಾರ್, ಚೋರ್ ಮೊಟ್ಟು, ಕಿಯಾ, ಖೇಬಾ, ಭೇದ್, ಮಾರ್ತಾ ಹಾಗೂ ಜೋಫರ್ ಸೇರಿದಂತೆ ಹಲವು ಪ್ರದೇಶಗಳಲ್ಲಿ ಪೊಲೀಸರು, ಸೇನೆ ಮತ್ತು ಅರೆಸೇನಾ ಪಡೆಗಳು ಜಂಟಿಯಾಗಿ ಕಾರ್ಯಾಚರಣೆ ನಡೆಸುತ್ತಿವೆ.
ರಾಜೌರಿಯಲ್ಲಿ ಶಸ್ತ್ರಸಜ್ಜಿತರ ಶಂಕೆ
ರಾಜೌರಿ ಜಿಲ್ಲೆಯ ಗೈಬಾಸ್, ಮಿಥಿಯಾನಿ, ಮೊಗ್ಲಾ ಮತ್ತು ನಾರ್ಲಾ ಪ್ರದೇಶಗಳಲ್ಲೂ ಪ್ರತ್ಯೇಕ ಸರ್ಚ್ ಆಪರೇಷನ್ ಕೈಗೊಳ್ಳಲಾಗಿದೆ. ಇಬ್ಬರು ಶಸ್ತ್ರಸಜ್ಜಿತ ವ್ಯಕ್ತಿಗಳು ಸಂಚರಿಸುತ್ತಿರುವುದನ್ನು ಗ್ರಾಮಸ್ಥರು ಗಮನಿಸಿ ಭದ್ರತಾ ಪಡೆಗಳಿಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.
ಮಾಹಿತಿ ಆಧರಿಸಿ ಭದ್ರತಾ ಪಡೆಗಳು ವ್ಯಾಪಕ ಶೋಧ ನಡೆಸಿದರೂ, ಇದುವರೆಗೆ ಯಾವುದೇ ಶಂಕಿತ ವ್ಯಕ್ತಿಗಳು ಪತ್ತೆಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಗಡಿಯಲ್ಲಿ ಹೆಚ್ಚಿದ ಕಣ್ಗಾವಲು
ಡ್ರೋನ್ ಹಾರಾಟ ಹಾಗೂ ಅರಣ್ಯ ಪ್ರದೇಶಗಳಲ್ಲಿ ಶಂಕಿತ ವ್ಯಕ್ತಿಗಳ ಚಲನವಲನದ ಮಾಹಿತಿ ಹಿನ್ನೆಲೆಯಲ್ಲಿ ಗಡಿ ಪ್ರದೇಶದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಯಾವುದೇ ಅನುಮಾನಾಸ್ಪದ ಚಟುವಟಿಕೆ ಕಂಡುಬಂದರೂ ತಕ್ಷಣ ಮಾಹಿತಿ ನೀಡುವಂತೆ ಸ್ಥಳೀಯರಿಗೂ ಸೂಚನೆ ನೀಡಲಾಗಿದೆ.
ಪ್ರಸ್ತುತ ಕಾರ್ಯಾಚರಣೆಯ ಪ್ರಮುಖ ಉದ್ದೇಶ ಗಡಿಯಾಚೆಯಿಂದ ಸಂಭವಿಸಬಹುದಾದ ಒಳನುಸುಳುವಿಕೆ ಅಥವಾ ಅನುಮಾನಾಸ್ಪದ ಸಾಗಾಟವನ್ನು ತಡೆಯುವುದು ಮತ್ತು ಪ್ರದೇಶದಲ್ಲಿ ಭದ್ರತೆಯನ್ನು ಖಚಿತಪಡಿಸಿಕೊಳ್ಳುವುದಾಗಿದೆ.

-
ದಿನದ ಸುದ್ದಿ1 day agoಬರ ನಿರ್ವಹಣೆಗೆ ಸಚಿವ ಸಂಪುಟ ಉಪಸಮಿತಿ ಸಭೆ – ದಾವಣಗೆರೆಯಲ್ಲಿ ಕುಡಿಯುವ ನೀರು, ಮೇವು ಕೊರತೆ ಬಗ್ಗೆ ಸಚಿವ ಮಲ್ಲಿಕಾರ್ಜುನ್ ಪ್ರಸ್ತಾಪ
-
ದಿನದ ಸುದ್ದಿ1 day agoಬಿಎಂಟಿಸಿ ಪ್ರಯಾಣಿಕರಿಗೆ ಗುಡ್ ನ್ಯೂಸ್ – ಇನ್ಮುಂದೆ ಓಲಾ, ಉಬರ್ ಆ್ಯಪ್ನಲ್ಲೇ ಬಿಎಂಟಿಸಿ ಬಸ್ ಟ್ರ್ಯಾಕಿಂಗ್ ಮತ್ತು ಟಿಕೆಟ್ ಬುಕಿಂಗ್!
-
ದಿನದ ಸುದ್ದಿ1 day ago5 ವರ್ಷದಿಂದ PFಗೆ ಹಣ ಜಮಾ ಮಾಡಿಲ್ಲ, ಬಡ್ಡಿ ಸಿಗುತ್ತಾ? ಇಲ್ಲಿದೆ EPFO ನಿಯಮದ ಸ್ಪಷ್ಟ ಮಾಹಿತಿ!
-
ದಿನದ ಸುದ್ದಿ1 day agoಭದ್ರೆ ಆಗಮನದಿಂದ ರೈತರಲ್ಲಿ ಹೊಸ ಭರವಸೆ – ಶಾಸಕ ಕೆ.ಸಿ. ವೀರೇಂದ್ರ ಪಪ್ಪಿ
-
ದಿನದ ಸುದ್ದಿ1 day agoವಿಶೇಷ ಚೇತನ ಮಕ್ಕಳು ದೇವರ ಮಕ್ಕಳು – ವಿಧಾನ ಪರಿಷತ್ ಸದಸ್ಯ ಕೆ.ಎಸ್. ನವೀನ್
-
ದಿನದ ಸುದ್ದಿ15 hours agoಡಿಕೆಶಿ ಸರ್ಕಾರಕ್ಕೆ 100 ದಿನಗಳ ಸಂಭ್ರಮ – `ದೃಢ ಕರ್ನಾಟಕದ ಸಂಕಲ್ಪ’ ಕಾರ್ಯಕ್ರಮಕ್ಕೆ ವಿಧಾನಸೌಧ ಸಜ್ಜು
-
ದಿನದ ಸುದ್ದಿ1 day agoಮೊದಲ ಬಾರಿಗೆ ಗೋನೂರು ಕೆರೆಗೆ ಹರಿದು ಬಂದ ಭದ್ರೆ – ರೈತರ ಸಂಭ್ರಮಾಚರಣೆ
-
ದಿನದ ಸುದ್ದಿ15 hours agoರೈಲ್ವೆ ಪ್ರಯಾಣಿಕರಿಗೆ ಭರ್ಜರಿ ಗುಡ್ ನ್ಯೂಸ್ – 20 ಸಾವಿರ ಕೋಟಿ ರೂ. ವೆಚ್ಚದ 8 ಬಹು ಟ್ರ್ಯಾಕಿಂಗ್ ಯೋಜನೆಗಳಿಗೆ ಕೇಂದ್ರದ ಅಸ್ತು!


