Connect with us

ನೆಲದನಿ

ಕಾಯಕ ಜೀವಿಗಳ ಚಳುವಳಿಯಲ್ಲಿ ಬುದ್ಧಪ್ರಜ್ಞೆ

Published

on

  • ಪ್ರೊ.ಹೆಚ್.ಲಿಂಗಪ್ಪ

ಕ್ರಿ.ಪೂ.ಐದನೆಯ ಶತಮಾನದ ಪೂರ್ವದಲ್ಲಿ ಏಷ್ಯಾದ ಮಹಾಬೆಳಕಾದ ಬುದ್ಧ ಮತ್ತು ಮಹಾವೀರರು ಶ್ರವಣ ಪರಂಪರೆಯ ಸಾಧಕರಿವರು. ಬ್ರಾಹ್ಮಣ್ಯದ ಬೌದ್ಧ ಧರ್ಮ ಭಾರತದಿಂದ ಏಷ್ಯಾಪೂರ್ವ ದೇಶಗಳಿಗೆ ವಲಸೆ ಹೋತ್ತು. ಜೈನ ಧರ್ಮ ದೇಶದಲ್ಲಿ ಜೀರ್ಣವಾಯಿತು. ವೈದಿಕ ಕದಂಬಬಾಹುಗಳಿಗೆ ಸಿಲುಕಿ ನರಳಿತು.

ಬಹು ಕಾಲದಿಂದಲೂ ವಲಸೆ ಪ್ರವೃತ್ತಿಯು ನಿರಂತರವಾಗಿ ನಡೆಯುತ್ತಾ ಬಂದಿದೆ. ಮಧ್ಯ ಏಷಿಯಾದಿಂದ ಹಲವು ಜನಾಂಗವು ವಲಸೆ ಬಂದಿದೆ. ಅವರ ಬಣ್ಣ, ಆಕಾರ, ಎತ್ತರ ಮತ್ತು ಮೈಕಟ್ಟು ಭಿನ್ನವಾಗಿದೆ. ಉತ್ತರದಲ್ಲಿ ಈ ಜನಾಂಗವು. ದಕ್ಷಿಣದಲ್ಲಿ ದ್ರಾವಿಡ ಮೂಲದವರು ನೆಲೆಸಿಕೊಂಡ ಅಖಂಡ ಭಾರತವಾಗಿದೆ. ಈ ರೀತಿಯಲ್ಲಿ ಬಣ್ಣದ ಆಧಾರದ ಮೇಲೆ ಮೂರು ಜನಾಂಗವಿರುವ ಭಾರತ ದೇಶ ನಮ್ಮದು!

ಆದ್ದರಿಂದ ಯಾರು ಆರ್ಯರು? ಯಾರು ಶೂದ್ರರು? ಎಂಬುದಾಗಿ ಸುದೀರ್ಘವಾದ ಸಂಶೋಧನೆಗಳು ನಡೆದುಕೊಂಡು ಬಂದಿವೆ. ಸಂಶೋಧನೆ ಮೂಲ ಸಾರ ಅರಿತರೆ ಭಾರತೀಯರಾದ ನಮಗೆ ನಮ್ಮೊಳಗೆಯಿರುವ ಕಿಚ್ಚಿಗೆ ಮುಲಾಮು ದೊರೆತಂತಾಗುತ್ತದೆ. ಜನಪರವಾದ ವಿಚಾರಗಳ ದಾಸೋಹದ ಮಾರ್ಗಗಳಾದ ಬುದ್ಧಮಾರ್ಗ-ಬಸವಮಾರ್ಗ ಮತ್ತು ಅಂಬೇಡ್ಕರ್ ಮಾರ್ಗಗಳು ನೆಲೆಕಂಡಿವೆ. ಇವು ಎಂದೂ ಮಾಸದ-ಇಂಗದ ಬತ್ತದ ವಿಚಾರ ಪರತೆಗಳು, ಸಮಾನತೆಯ ಬೀಜ ಬಿತ್ತಿ, ಸಮಾನತೆಯ ಬೆಳೆಯ ಬೆಳೆದು ಸಾಮರಸ್ಯದ ತೋರಣ ಕಟ್ಟಿದ್ದಾರೆ.

ಅವರಲ್ಲಿ ಪ್ರಮುಖರಾದ12ನೇ ಶತಮಾನದ ಬಸವಣ್ಣ ಸಾಮಾಜಿಕ ಕ್ರಾಂತಿಗೆ ಮುನ್ನೆಲೆಯಾಗುತ್ತಾರೆ. ಕನ್ನಡದ ನೆಲ, ಜಲ, ಭಾಷೆಯ ಬಗ್ಗೆ ಸರಳವಾಗಿ ಚಿಂತಿಸಿದ್ದು ಬಸವಣ್ಣ ಆಂದೋಲನವೊಂದರ ನಾಯಕರಾಗುತ್ತಾರೆ. ಕನ್ನಡ ಭಾಷೆಯಲ್ಲಿ, ದೇಶ-ಭಾಷೆಗಳ ಈ ಪರಿಮಿತಿ ಕಾರಣವಾಗಿ ನ್ಯಾಯವಾಗಿ ಸಿಗಬೇಕಾದ ಜಾಗತಿಕ ಪ್ರಸಿದ್ಧಿ ಸಿಕ್ಕಿಲ್ಲವಾದರೂ, ಇವರನ್ನು ಕುರಿತು ಹುಟ್ಟಿದಷ್ಟು ಸಾಹಿತ್ಯ ಕನ್ನಡದಲ್ಲಿ ಯಾರನ್ನು ಕುರಿತು ಹುಟ್ಟಿದಷ್ಟು ಬೇರೆಯವರಿಗೆ ಸಲ್ಲಿಕೆಯಾಗಿಲ್ಲ. ಇವನಷ್ಟು ಪ್ರಭಾವವನ್ನು ನಾಡಿನ ಯಾವ ಅನುಭಾವಿಕ ಪುರುಷನಿಲ್ಲಾ!

ಬಸವನ ವಚನಗಳ-ಚಿಂತನೆ ಒಂದು ಅಪೂರ್ವ ವಿಚಾರವಾಗಿತ್ತು. ವಚನವೆಂದರೆ ಪ್ರಜ್ಞೆ, ಆತ್ಮಸಾಕ್ಷಿಯ ಮಾತು ಎಂದು ಅರ್ಥ. ನಡೆ-ನುಡಿ ಮಾತ್ರ ಕಲಾತ್ಮಕವಾಗಿದ್ದುದು ರಚನೆಯಾಗಿ, ನಡೆದಂತೆ ನುಡಿದ ಆತ್ಮ ಸಾಕ್ಷಿ ವಾಣಿ ‘ವಚನ’ವೆನಿಸುತ್ತದೆ. ವಚನಗಳು ಪಂಡಿತ ಪಾಮರ ಸಾಹಿತ್ಯವಲ್ಲ. ಅನುಭಾವಿಗಳ ಸಾಹಿತ್ಯ, ಅವರು ಜೀವಿಸುರುವಾಗಲೇ ತಮ್ಮ ವಿಚಾರಗಳನ್ನು ಬರೆದು ಹೃದಯದಿಂದ ಹೃದಯಕ್ಕೆ ಮನಮುಟ್ಟವಂತೆ ಬಿಡಿ ಮಾತುಗಳ ಮೂಲಕ ಅನುಭವವೇದ್ಯವಾದ ವಿಚಾರಗಳ ಬುದ್ಧಪ್ರಜ್ಞೆಯ ಕಣಜವಾಗಿವೆ.

ನಾಡಿನ ಚರಿತ್ರೆಯಲ್ಲಿ ಇದೊಂದು ಜನಪರ ಆಂದೋಲನ, ನಮ್ಮ ನಾಡಿನ ಚರಿತ್ರೆಯಲ್ಲಿ ಒಂದು ವಿಶಿಷ್ಟ ಘಟನೆಯಾಗಿದೆ. ಆಂದೋಲನದ ನೇರ ಧ್ವನಿ, ವಚನ ಸಾಹಿತ್ಯ ಅದರಲ್ಲೂ ವರ್ಣಭೇದ, ವರ್ಗಭೇದ, ಲಿಂಗಭೇದ, ನಿರಾಕರಣೆಗಳಂಥ ವಿಚಾರಗಳು ಸ್ಫೋಟಗೊಂಡುದು ಲಕ್ಷಿತ ಸಂಗತಿಯಾಗಿವೆ. ಇಲ್ಲಿ ಪುರುಷರಷ್ಟೇ ಪ್ರಧಾನವಾಗಿ ಮಹಿಳೆಯರೂ, ಕುಲಜರಷ್ಟೇ ಪ್ರಧಾನವಾಗಿ ಅಂತ್ಯಜರೂ, ಪ್ರಭುಗಳಷ್ಟೇ ಪ್ರಧಾನವಾಗಿ ಪ್ರಜೆಗಳು ಬಾಳಿದರು. ಹಾಗೂ ಬರೆದದ್ದು ಕೂಡಾ ಚಾರಿತ್ರಿಕ ಸತ್ಯ. ವಚನ ವಾಙ್ಮಯ ನಮ್ಮ ಪರಂಪರೆಯ ಅಪೂರ್ವ ಸಾಹಿತ್ಯಿಕ ಸೃಷ್ಟಿಯಾಗಿದೆ. ಅತ್ಮಕಲ್ಯಾಣದೊಂದಿಗೆ ಸಮಾಜ ಕಲ್ಯಾಣವನ್ನು ಕಾರ್ಯಗತಗೊಳಿಸಲು ಹೋರಾಡಿ ಮಡಿದ ಹುತಾತ್ಮರ ಸಾಹಿತ್ಯವಿದು. ಅಂದು ಬಸವಣ್ಣ ಸುಮಾರು ಒಂದು ಸಾವಿರಾರು ನಾಲ್ಕು ನೂರು ಆರು (1406) ವಚನಗಳನ್ನು ಜನಮುಖಿಯಾಗಿ ರಚಿಸಿದ್ದಾರೆ.

ಜಾತಿ ಮತ್ತು ಧರ್ಮದ ಹೆಸರಿನಲ್ಲಿ ಯುದ್ಧಗಳು ಜರುಗಿವೆ. ಇವುಗಳ ನಡುವೆ ಅನಂತವಾದ ವಿಭಜನೆಗಳು ಮನುಷ್ಯ ಸಮಾಜವನ್ನು ಸೀಳಿ-ಸೀಳಿ ಅಣಕಿಸುವ ರೀತಿಯಲ್ಲಿ ಅಸಮಾನತೆಯ ವಿಷಬೀಜ ಬಿತ್ತುತ್ತಿವೆ. ಭಾರತೀಯವಾದ ಸಂದರ್ಭದಲ್ಲಿ ಹಿಂದೂ ಹಾಗೂ ಅದರ ವರ್ಣವ್ಯವಸ್ಥೆಯ ಕಾರಣದಿಂದ ಸಮಾಜಶಾಸ್ತçಜ್ಞರ ಅಧ್ಯಯನದಿಂದ ಶ್ರೇಣೀಕರಣಗೊಂಡ ಜಾತಿಗಳು ಸುಮಾರು ಇಂದು ಆರು ಸಾವಿರಕ್ಕೂ ಅಧಿಕ ಜಾತಿ ಮತ್ತು ಉಪ-ಜಾತಿಗಳು ಸೃಷ್ಟಿಯಾಗಿ ಇಡೀ ಸಾಮಾಜಿಕ ವ್ಯವಸ್ಥೆಯಲ್ಲಿ ಜಾತಿಯ ಅಸಮಾನತೆಯ ತಲ್ಲಣ ತಲೆದೋರಿದೆ.

ಜಾತಿ ವ್ಯವಸ್ಥೆಗೆ ಪ್ರಬಲವಾದ ಆಕರ ಮೂಲ ವೈದಿಕ ಪರಂಪರೆಯಾಗಿದೆ! ವೈದಿಕ ಪರಂಪರೆಯ ಜೊತೆಗೆ ಪರಂಪರೆಯ ಮಾರ್ಗವು, ಚಾರ್ವಾಕ ಪರಂಪರೆಯು, ಬಸವಾದಿ ಶರಣರ ಜಂಗಮ ಗುಣಗಳು, ಸಂತರಾಮದೇವ, ತುಕಾರಾಮ, ಕಬೀರ, ತುಳಸೀದಾಸ, ಮೀರಾಬಾಯಿ, ರೈದಾಸ, ಸಂತಶಿಶುನಾಳ ಷರೀಫ್ ಮುಂತಾದ ಅಪರೂಫದ ಭಕ್ತಿ ಪರಂಪರೆ ಕಂಡುಬರುತ್ತದೆ.

ಅದರಂತೆ ಹನ್ನೆರಡನೆಯ ಶತಮಾನದ ಬಸವಾದಿ ಶರಣರ ವಚನಗಳು ಬದುಕಿನ ಜೀವದುಸಿರಾಗಿ ಸಮಾಜವನ್ನು ಹೇಗೆ ಅಂತರ್‌ಗತವಾಗಿ ಬೆಸೆಯುತ್ತಿದ್ದವು ಎಂಬುದು ಕೂಡಾ ಮುಖ್ಯ ಸಂಗತಿಯಾಗಿದೆ. ವ್ಯಕ್ತಿತ್ವದ ವಿಕಾಸದಿಂದ ತಮ್ಮ ಹುಟ್ಟಿನ ಕಲ್ಮಶವನ್ನು ಕಳೆದುಕೊಂಡು ಮನದ ಮಲಿನತೆಯನ್ನು ಅಳಿದು ಶ್ರೇಷ್ಠರಾಗಿದ್ದಾರೆ. ತಾವು ಬದುಕಿ ಇತರರು ಬದುಕಲು ಅವಕಾಶ ಕಲ್ಪಿಸಿದ್ದಾರೆ. ಸರ್ವ ಸಮಾನತೆಯನ್ನು ಬಿಂಬಿಸುವುದೇ ಶರಣರ ಜೀವನದ ಪರಮ ಧ್ಯೇಯ. ನಿಜವಾಗಿಯೂ ದಲಿತ ವರ್ಗದಲ್ಲಿ ಜನ್ಮವೆತ್ತಿ ಸದ್ಗುರುಗಳ ಉಪದೇಶಾಮೃತದಿಂದ ಮೇಲೆದ್ದು, ಶ್ರೇಷ್ಠ ತತ್ವಜ್ಞಾನಿಯಾಗಿ, ಜೀವನ ಚೇತೋಹಾರಿ, ಸ್ಫೂರ್ತಿದಾಯಕ.

ಇವರಂತೆ ದಲಿತವರ್ಗದಲ್ಲಿ ಜನಿಸಿದ ಗುರುಮಾತೆ ಅಕ್ಕನಾಗಲಾಂಬಿಕೆ, ಅಕ್ಕಮಹಾದೇವಿ ಜೀವನಧಾರೆ, ಸತ್ಯಕ್ಕ, ಆಯ್ದಕ್ಕ ಲಕ್ಕಮ್ಮ, ಕಾಲಣ್ಣಿಯ ಕಾಮಮ್ಮ, ಸೂಳೆ ಸಂಕವ್ವೆ, ಕೊಟ್ಟಣ ಸೋಮಮ್ಮ, ಕದಿರ ರೆಮ್ಮವ್ವೆ, ಕೊಟ್ಟಣದ ಸೋಮಮ್ಮ, ಕಾಳೆವ್ವೆ, ಗಣೇಶ್ ಮಸಣಯ್ಯಗಳ ಪುಣ್ಯಸ್ತಿç, ಈಡಿಗರ ಶರಣೆ ಅಕ್ಕಮ್ಮ, ದುಗ್ಗಳೆ, ಗೊಗ್ಗವ್ವೆ, ಬೊಂತಾದೇವಿ, ಗಂಗಾಂಬಿಕೆ, ನೀಲಾಂಬಿಕೆ, ಮೋಳಿಗೆ ಮಹಾದೇವಿ, ಅಮುಗೆ ರಾಯಮ್ಮ, ಬಸವಣ್ಣ, ಅಲ್ಲಮ, ಚನ್ನಬಸವಣ್ಣ, ಅಂಬಿಗರ ಚೌಡಯ್ಯ, ಚೆನ್ನಯ್ಯ, ಧೂಳಯ್ಯ, ಹರಳಯ್ಯ, ಕಕ್ಕಯ್ಯ, ಶಿವನಾಗಿದೇವ, ಮಡಿವಾಳ ಮಾಚಯ್ಯ, ಹಡಪದ ಅಪ್ಪಣ್ಣ, ನುಲಿಯ ಚಂದಯಕ್ಯ, ಉರಿಲಿಮಗದೇವ, ಉರಿಲಿಂಗಪೆದ್ದಿ ಮುಂತಾದವರು ಪ್ರಮುಖವಾಗಿ ನಿಲ್ಲುತ್ತಾರೆ.

ಆ ಕಾಲದ ಸಾಮಾಜಿಕ ಜೀವನದಲ್ಲಿ ಕಂಡುಬಂದ ಮೂಢನಂಬಿಕೆಗಳನ್ನು ಡಾಂಬಿಕ ಆಚರಣೆಗಳನ್ನು, ಅಜ್ಞಾನವನ್ನು ಪ್ರತಿಭಟಿಸಿ, ಪರಿಶುದ್ಧವಾದ ಜೀವನವನ್ನು ರೂಪಿಸುವುದಕ್ಕೆ ಕಾರಣರಾದರು. ಧರ್ಮ, ಸಮಾಜ, ಸಾಹಿತ್ಯ ಈ ಮೂರು ಅಂಶದಲ್ಲಿ ಏಕಕಾಲಕ್ಕೆ ಕ್ರಾಂತಿಯೆಬ್ಬಿಸಿದ ಕೀರ್ತಿ ವಚನಕಾರರಿಗೆ ಸಲ್ಲುತ್ತದೆ. ಅದರಲ್ಲಿ ವಿಶೇಷವಾಗಿ ಅಂಬಿಗರ ಚೌಡಯ್ಯ, ಮಡಿವಾಳ ಮಾಚಯ್ಯ ಇಂಥವರು ನಿರ್ದಾಕ್ಷಿಣ್ಯವಾದ ಕಟುವಚನಗಳನ್ನು ರಚಿಸಿದ್ದಾರೆ. ಅಂದಿನ ಹದಗೆಟ್ಟು ಸಾಮಾಜಿಕ ಜಾತಿವ್ಯವಸ್ಥೆ ಭೀಕರವಾದ ರೋಗಕ್ಕೆ ಎಲ್ಲಾ ಕಾಲಮಾನಕ್ಕೆ ಅನ್ವಯವಾಗುವಂತಹ ವಿಚಾರಗಳನ್ನು ಅರುವಿದ್ದಾರೆ.

ಅಂಬಿಗರ ಚೌಡಯ್ಯನ ವಚನಗಳು ಚಾಟಿ ಏಟಿನಂತೆ ಎಲ್ಲರನ್ನು ಗಾಸಿಗೊಳಿಸಿ ಹೊಡೆದೆಬ್ಬಿಸುತ್ತವೆ. ಪ್ರತಿಯೊಬ್ಬರಲ್ಲಿಯ ಕುಂದು ಕೊರತೆಗಳನ್ನು ನಿರ್ಧಾಕ್ಷಿಣ್ಯವಾಗಿ ಎತ್ತಿ ತೋರಿಸುತ್ತವೆ. ಅವನ ವಚನಗಳ ಮೇಲಿಂದ ಚೌಡಯ್ಯನು ಕಟು ಶಿವಭಕ್ತನಾಗಿದ್ದ. ಕೊಂಚವೂ ಅತ್ತಿತ್ತ ಅಲುಗದೆ ನೇರವಾಗಿ ಶಿವಭಕ್ತರತ್ತ ಸಾಗುವಂಥ ಅದ್ವಿತೀಯ ಶರಣನಾಗಿದ್ದನೆಂಬುದು ಆತನ (398) ಮುನ್ನೂರ ತೊಂಭತ್ತೆAಟು ವಚನಗಳು ಸಮಾಜವನ್ನು ವೈಚಾರಿಕವಾಗಿ ಮೆರೆಯುವಂತೆ ಅವರ ವಚನದಲ್ಲಿ ವಿಜೃಂಭಿಸಿದ್ದಾರೆ.

ವರ್ತಮಾನದ ದಿನಮಾನದಲ್ಲಿ ಭೌದ್ಧಿಕವಾಗಿ ಬೆಳೆದ ರಾಜಕಾರಣಿಗಳು, ಮಠಾಧೀಶರು, ಮುಲ್ಲಾಗಳು, ಪಾದ್ರಿಗಳು, ಚಿಂತಕರು ಅವರದೇ ಆದ ಬ್ಯಾರಿಕೇಡ್ ಹಾಕಿಕೊಂಡು ವ್ಯವಸ್ಥೆಯನ್ನು ಅನುಸಂಧಾನ ಮೂಲಕ ಬೆಸೆಯುವ ಪ್ರಯತ್ನದ ವಿರುದ್ಧ ಕಂಕಣ ಕಟ್ಟಿದ್ದಾರೆ. ನಾನು ಆರಂಭಿಕವಾಗಿ ಕಕೇಶಿಯನ್, ಮಂಗೋಲಿಯನ್, ದ್ರಾವಿಡ ಮೂಲ ಜನಾಂಗವನ್ನು ಗುರುತಿಸುವುದು ಇದೇ ಕಾರಣಕ್ಕೆ. ಆದರೆ ಇಂದು ಜಾತಿ ಮತ್ತು ಧರ್ಮಭೇದದ ವಿಷಬೀಜಕ್ಕೆ, ವಿಷ ಗೊಬ್ಬರ, ವಿಷದ ಔಷಧಿ ಮತ್ತು ಮಲಿನಗೊಂಡ ನೀರು ಎರೆದು ಮತಾಂಧತೆಯ ದೆವ್ವ ಗುಣಿತವನ್ನು ಕಾಣುವ ದುರದೃಷ್ಟ ಸಂಗತಿ ಒದಗಿಬಂದಿದೆ.

ನಮ್ಮ ಸಂಸ್ಕೃತಿ ಪರಾಕಾಷ್ಠೆಯ ಮುಗಿಲು ಮುಟ್ಟಿದರೂ ಜಾತಿಯೆಂಬ ಅರ್ಬುದ ರೋಗಕ್ಕೆ ಸಿಲುಕಿ ನರಳುತ್ತಿದೆ. ಪ್ರಜಾಪ್ರಭುತ್ವದ ಆಶಯ ಎಲ್ಲಾ ಕಾಲದಲ್ಲಿ ನೆಲೆಸಿರುತ್ತದೆ. ಸಾಮಾಜಿಕ ಅಸಮಾನತೆಯು ಶತ-ಶತಮಾನಗಳ ಯಾನ ಮುಂದುರೆದೆಯಿದೆ? ಅದರಲ್ಲೂ ಸಮಗ್ರಭಾಗವಾದ ತಳ ಸಮುದಾಯಗಳ ಅಲಕ್ಷಿತ ಜಾತಿಯ ಅನುಭಾವದ ವಚನಕಾರರು ಸಮಾಜವಿಜ್ಞಾನಿಗಳ ನಡೆಯಂತೆ ಮುಂದಾಗಿದ್ದಾರೆ.

ಅವರ ನಡೆ-ನುಡಿಯಲ್ಲಿ ಯಾವ ವ್ಯತ್ಯಾಸವಿಲ್ಲದ ಬದುಕಿನ, ಕ್ಲೇಶಭಾವ ತೋರದ ಅನುಭಾವಿ ವಚನಕಾರ ದಂಡು-ಹಿಂಡಾಗಿರುವುದನ್ನು ಅನುಭವ ಮಂಟಪದಲ್ಲಿ ವಿಜೃಂಭಿಸಿರುವುದು ಅವರವರ ಜಾತಿಯ ಮೂಲಕ ಪ್ರವೇಶ ಹೊಂದಿದ್ದಾರೆ. ಹನ್ನೆರಡನೆಯ ಶತಮಾನದಲ್ಲಿ ಬಸವಣ್ಣನವರು ಸರ್ವಸಮಾನತೆಯ ಚಳುವಳಿಯಿಂದ ಪ್ರೇರಿತರಾಗಿ ಬಸವನೆಂಬ ಮಹಾವೃಕ್ಷದ ನೆರಳಲ್ಲಿ ಆಶ್ರಯ ಪಡೆದು ಸೇರಿದವರಲ್ಲಿ “ಘನವಂತ ಅಂಬಿಗರ ಚೌಡಯ್ಯ” ಆದ್ಯ ವಚನಕಾರರಾಗಿದ್ದರು. ಎಲ್ಲಾ ಕಾಲಗಳಲ್ಲಿ ಕೂಡಾ ಹೀನ ಜನಾಂಗದವರು ಇದ್ದರು, ಆದರೆ ಅವರಾರು ಮಾನಸಿಕವಾಗಿ ಹೀನರಾಗಿದ್ದಿರಲಿಲ್ಲಾ. ಅಂಥವರನ್ನು ಅವರಿಗೆ ಮಾನವ ಲಿಂಗದೀಕ್ಷೆಯನ್ನು ಬಸವಣ್ಣ ದಯಪಾಲಿಸಿದ್ದರು.

ಅರಮನೆ-ಗುರುಮನೆ-ದೇವಸ್ಥಾನಗಳಿಂದ ದೂರವೇ ಉಳಿದಿದ್ದರು. ಅವರೆಲ್ಲಾ ಜಾತ್ಯಾತೀತ ನೆಲೆಯಲ್ಲಿ ಸಮಾಜ ನಿರ್ಮಾಣಕ್ಕಾಗಿ ಮೇಲು-ಕೀಳನ್ನದೇ, ಸರ್ವರಿಗೂ ಒಳ್ಳೆಯದು ಮಾಡುವ ಮೂಲಕ – “ಸಕಲ ಜೀವಾತ್ಮರಿಗೆ ಲೇಸನೆ ಬಯಸುವ ನಮ್ಮ ಕೂಡಲ ಸಂಗನ ಶರಣರೆ, ಕುಲಜನರು ಎಂದು ಸಾರಿದರು” ಅಂದು ದಲಿತ ಕುಲದವರೆಲ್ಲರೂ ಬಸವನ ತತ್ವಕ್ಕೆ ಆಕರ್ಷಿತರಾದರೆಂದರೆ ಅದೇನು ಯಾವ ಅತಿಶಯೋಕ್ತಿ ಎನಿಸುವುದಿಲ್ಲ. ಬಸವಣ್ಣನವರಂತೆ ಬ್ರಾಹ್ಮಣ ಕುಲದಲ್ಲಿ ಜನಿಸಿದವರೂ ಬಸವತತ್ವವನ್ನು ತಪ್ಪದೆ ಒಪ್ಪಿ ಪರಿಪಾಲಿಸಿ ಆತನ ವಿಚಾರಪಥವನ್ನು ಅರಿತ ಅನೇಕ ಘನವಂತ ಅನುಬಾವಿ ಶರಣ-ಶರಣೆಯರಿದ್ದರು.

ಶರಣ ಸಾಹಿತ್ಯದಲ್ಲಿ ಸರ್ವಜ್ಞವಾಣಿಯಿಂದ ಮೆರೆದ ವ್ಯಕ್ತಿ ಅಂಬಿಗರ ಚೌಡಯ್ಯ ಆ ಕಾಲಘಟ್ಟದ ವೈಚಾರಿಕ ಪ್ರಭೆಯಾಗಿದ್ದರು. ಅವರ ಚಿಂತನೆಯನ್ನು ಮಾಡಿದ ಬಂಡಾಯದ ಬಾವುಟ ಹಿಡಿದವರು. ಬದುಕೇ ಸ್ವರ್ಗ, ಆದರೆ ನಡೆಯುವ ಮಾರ್ಗ ನರಕವಾಗಬಾರದು. ಅದು ಮೂಢನಂಬಿಕೆ, ಅಜ್ಞಾನ, ಕಂದಾಚಾರ ದೇವರು, ಅಂಧಶ್ರದ್ಧೆ ಎಲ್ಲವನ್ನೂ ತಿರಸ್ಕರಿಸಿದ ಅಪರೂಪದ ಮೇರು ವ್ಯಕ್ತಿತ್ವದ ಪ್ರತಿಭೆ. “ಭೂತಕಾಲದ ಚರಿತ್ರೆಯನ್ನು ವರ್ತಮಾನ ಕಾಲದಲ್ಲಿ ಅವಲೋಕಿಸುವುದು ಬಹುಮುಖ್ಯ”.
ಈ ಹೊತ್ತಿನ ಅಂಬೇಡ್ಕರ್ ಮಾರ್ಗವು ಕೂಡ ಬಸವನ ವಿಚಾರಗಳನ್ನು ಅನುಸಂಧಾನದ ರೂಪದಲ್ಲಿ ಮುಂದುವರೆದಿದೆ.

ಆದ್ದರಿಂದ ಅಂಬೇಡ್ಕರ್ ಮಾತಿನಲ್ಲಿ “ಇತಿಹಾಸ ಅರಿಯದವ ಇತಿಹಾಸ ಸೃಷ್ಟಿಸಲಾರ, ಅಂದರೆ ಗತಕಾಲದ ಘಟನೆಯು ಇತಿಹಾಸವನ್ನು ವರ್ತಮಾನದ ಕನ್ನಡಿ ಸಹಾಯದಿಂದ ನೋಡಬೇಕಾಗುತ್ತದೆ” ಆದಕಾರಣ ಅಂಬಿಗರ ಚೌಡಯ್ಯ ಅವರ ಚಿಂತನ-ಮಂಥನ, ಅಗ್ನಿ-ನೀರಿನಂತೆ ನೋಡಿದಾಗ ಜಗತ್ತಿನ ದೇಶಗಳು ನಾಗರೀಕರಣದ ಕಾರಣದಿಂದ ಸಮೀಪವಾಗುತ್ತದೆ. ನಾಗರೀಕ ಸಾಧನವಿಲ್ಲದಲ್ಲಿ ದೇಶದ ಮೂಲೆ-ಮೂಲೆಗಳಿಂದ ಬಂದ ಶರಣರ ದಂಡು-ಹಿAಡಾಗಿ ಒಂದು ಸಾಮಾಜಿಕ ಕ್ರಾಂತಿಗೆ ಮುನ್ನುಡಿ ಬರೆದು ಬಹುದೊಡ್ಡ ಸಾಮಾಜಿಕ ಚರಿತ್ರೆಯನ್ನು ಕನ್ನಡ ನಾಡಿನಲ್ಲಿ ಬರೆದಿದ್ದು ಅದ್ಭುತವಾದ ಶಕ್ತಿಯೆಂದು ಪರಿಗ್ರಹಿಸಬಹುದು!

ಹೀಗೆ ಶರಣ-ಶರಣೆಯರು ಮಾಡಿದ ಸೇವೆ ಅನಂತವಾದುದು. ಅವರು ಚಿಂತಿಸಿದ ವಿಚಾರಪಥ ಜನಮಾನಸದಲ್ಲಿ ಬೆರೆತು ಪರಿವರ್ತನಾಶೀಲರಾಗಿದ್ದು, ಜಾತಿಯ ಮೋಹಕ್ಕೆ ಹಿಂಬು ನೀಡಿದವರಲ್ಲ, ಆದರೆ ಇಂದು ಅದು ಬೇರೆಯೇ ಆಗಿದೆ. ಆದಕಾರಣ ಈಗಾಗಲೇ ದಮನಿತ ಸಮುದಾಯಗಳಲ್ಲಿ ಜನಿಸಿದ ಬುದ್ಧಪ್ರಜ್ಞೆಯ ಅನುಭಾವಿಗಳನ್ನು ಕುರಿತು ಚರ್ಚಿಸಿದ್ದೇನೆ.

ವಚನಗಳ ಆಶಯವೇ ಸರಳವಾಗಿ ಜನಸಾಮಾನ್ಯರಿಗೆ ಅರ್ಥವಾಗಿರುವಂತವು, ಜೊತೆಗೆ ಅವರು ಜನಸಾಮಾನ್ಯರಾಗಿದ್ದವರು. ಚಳುವಳಿಯ ನಾಯಕ ಬಸವಣ್ಣ ಆಗಿದ್ದರು, ಅವರು ಎಂದು ನಾಯಕರಾಗಿರಲಿಲ್ಲ. ಅವರದು ಒಂದು ರೀತಿಯ ಕಿಂಗ್ ಮೇಕರ್‌ರಾಗಿದ್ದವರು. ಅವರುಗಳಲ್ಲಿ ಅಲ್ಲಮ, ಸಿದ್ಧರಾಮ, ಅಂಬಿಗರ ಚೌಡಯ್ಯ, ಹಡಪದ ಅಪ್ಪಣ, ಮಾಚಯ್ಯ, ಚನ್ನಯ್ಯ, ಧೂಳಯ್ಯ, ಹರಳಯ್ಯ ಮತ್ತು ಚನ್ನಬಸವನಂತಹ ಅನುಭಾವಿ ವಚನಕಾರರು ಚಳುವಳಿಯ ಪ್ರಮುಖ ನಾಯಕರಾಗಿದ್ದವರು ಎಂಬ ಸಂಗತಿಯನ್ನು ಬಸವಣ್ಣ ತನ್ನ ವಚನದಲ್ಲಿ ವಿಶ್ಲೇಷಿಸಿದ್ದಾರೆ.

ಬಸವಣ್ಣನವರ ಬದುಕು ಪಾರದರ್ಶಕವಾಗಿತ್ತು. ಅವರು ಬದುಕಿದ್ದನ್ನೇ ಬರೆದರು. ಬರೆದದ್ದನ್ನೇ ಉಪದೇಶಿಸಿದರು. ಅವರ ಬದುಕೇ ಒಂದು ಉಪದೇಶವಾಗಿತ್ತು. ಆದರೆ ಇಂದು ಉಪದೇಶವೇ ಬದುಕಿನ ಬಂಡವಾಳವಾಗುತ್ತದೆ. ನಮ್ಮ ಕೆಲವು ಧರ್ಮಾಧಿಕಾರಿಗಳ, ಮಠಾಧೀಶರ ನಿತ್ಯ ಬದುಕನ್ನು ಸೂಕ್ಷ್ಮವಾಗಿ ಅವಲೋಕಿಸಿದರೆ. ಈ ಮಾತು ಉತ್ಪೆçÃಕ್ಷೆ ಎನಿಸುವುದಿಲ್ಲ. ಜನರಲ್ಲಿ ನೈತಿಕಪ್ರಜ್ಞೆ ಬೆಳಸಿ, ಸಮಾಜ ಸಂಘಟನೆ ಮಾಡಬೇಕಾಗಿದ್ದ ಈ ಗುರು ವರ್ಗದವರೇ ವಾಮಮಾರ್ಗಿಗಳಾಗಿ ಅಧಿಕಾರಕ್ಕಾಗಿ ಕಿತ್ತಾಡುವವರನ್ನು ನೋಡುತ್ತೇವೆ. ಜೊತೆಗೆ ಅನುಭಾವ ಪರಂಪರೆಗೆ ಮೋಸವೆಸಗುತ್ತಿದ್ದಾರೆ. ಬಡವರ ತೆರಿಗೆಯ ಅನ್ನವನ್ನು ಕೈಚಾಚಿ ಬೇಡುತ್ತಾರೆ. ಇದು ರೀತಿಯಲ್ಲಿ ಸಾಮಾಜಿಕ ದ್ರೋಹ ಹಾಗೂ ಕಲ್ಯಾಣದ ಚಿಂತನೆಗೆ ಎಳ್ಳು-ನೀರನ್ನು ಇವರೇ ಬಿಡಲು ಮುಂದಾಗಿದ್ದಾರೆ.

ಬದುಕಿನ ಬೆಳಕಾದ, ಮಹಾಬೆಳಕಾದ ಬುದ್ಧ, ಮಹಾವೀರ ಮತ್ತು ಬಸವನ ತತ್ವಗಳನ್ನು ಇವತ್ತಿನ ಸಮಾಜ ಸರಿಯಾಗಿ ಅರ್ಥಮಾಡಿಕೊಂಡರೆ ಯುದ್ಧ ಭೀತಿಯೂ ಬರದು. ಬುದ್ಧನು ಚಿಂತನೆಯಂತೆ ಮನುಕುಲದ ಮುಂದೆ ಎರಡು ಪ್ರಶ್ನೆಗಳೂ “ಯುದ್ಧ ಮತ್ತು ಬುದ್ಧ” ನಾವು ಬುದ್ಧನನ್ನು ಆಯ್ಕೆ ಮಾಡಿಕೊಂಡರೆ ನೆಮ್ಮದಿಯ ಬದುಕು ಕಾಣಲು ಸಾಧ್ಯವಾಗುತ್ತದೆ. ಅಂತಹ ಸುಂದರ ಕನಸಿನ ಬುದ್ಧನೊಂದಿಗೆ ಸಂವಾದಕ್ಕೆ ಇಳಿದರೆ, ಅದರ ಪಾತಳಿಯ ಅಂಶಗಳು ತ್ವೊರೆಯಂತೆ ಚಿಮ್ಮಿ ಹರಿಯುತ್ತದೆ!

ಬುದ್ಧ ಚಿಂತಿಸಿದ ಅತ್ಯಂತ ಸರಳವಾದ ವಿಚಾರಗಳು ಎಲ್ಲಾ ಕಾಲದಲ್ಲಿ ಅಳವಡಿಸಿಕೊಳ್ಳಲು ಯಾವ ಆತಂಕವಿಲ್ಲಾ. ಬುದ್ಧನ ಜೀವ ಪರ, ಮಾನವ ಪರ, ಕಲ್ಯಾಣ ಪರವಾದ ಚಿಂತನೆಗಳಾದ ಶೀಲ, ಸಮಾಧಿ ಮತ್ತು ಪ್ರಜ್ಞೆ ಈ ಮೂರು ಬುದ್ಧನ ಶ್ರೇಷ್ಠಮಟ್ಟದ ಚಿಂತನೆಗಳು. ಇವುಗಳಲ್ಲಿ ಒಂದನ್ನು ಬಿಟ್ಟು ಇನ್ನೊಂದನ್ನು ಸ್ವತಂತ್ರವಾಗಿ ಸಾಧಿಸಲು ಹೊರಟರೆ ಗುರಿಮುಟ್ಟಲು ಸಾಧ್ಯವಾಗುವುದಿಲ್ಲ. ಪೂರ್ಣಮಟ್ಟದ ಶೀಲವನ್ನು ಅಳವಡಿಸಿಕೊಂಡಾಗ ಮಾತ್ರ ಸಮಾಧಿ ತಲುಪಲು ಸಾಧ್ಯ. ಸಮಾಧಿ ಸಿದ್ಧಿಸದೆ ಪ್ರಜ್ಞೆ ಮೂಡುವುದಿಲ್ಲ.

ಪ್ರಜ್ಞೆ ಇಲ್ಲದೆ ನಿರ್ವಾಣದ ಪರಮ ಶಾಂತಿ ದೊರೆಯುದಿಲ್ಲ. ಶೀಲವೆಂದರೆ ಒಳ್ಳೆಯ ನಡೆತೆ, ಒಳ್ಳೆಯ ಚಾರಿತ್ರ್ಯ , ಸಮಸ್ತ ಜೀವ ಸಂಕುಲದ ಒಳಿತಿಗಾಗಿ ಚಿಂತನೆ ಮತ್ತು ಪ್ರಯತ್ನ ಎಂದು ಅರ್ಥ. ಸಮಾಧಿ ಎಂದರೆ ಧ್ಯಾನಭ್ಯಾಸದಲ್ಲಿ ಸಾಧಿಸುವ ಸ್ಥಿರ ಚಿತ್ತದ ಏಕಾಗ್ರತೆ. ಪ್ರಜ್ಞೆ ಎಂದರೆ ಸಮಾಧಿ ಸ್ಥಿತಿಯಲ್ಲಿ ದೊರೆಯುವ ಇಂದ್ರಿಯಾತೀತವಾದ ಜ್ಞಾನವೆಂದು ಅರ್ಥ.

ಇವು ಸಕಲ ಜೀವ ಸಂಕಲ್ಪಕ್ಕೂ ಅನ್ವಯವಾಗುತ್ತದೆ. ಹಾಗಾಗಿ ಬೌದ್ಧ ಧರ್ಮ ಪ್ರತಿಯೊಬ್ಬ ಕೂಡ ಪಂಚಶೀಲಗಳನ್ನು ತಪ್ಪದೆ ಪಾಲಿಸಬೇಕೆಂದು ಉಪದೇಶಿಸುತ್ತದೆ. ಕೊಲೆ, ಕಳ್ಳತನ, ಸುಳ್ಳು, ವ್ಯಭಿಚಾರ ಮತ್ತು ಮಧ್ಯಪಾನ ಇವುಗಳನ್ನು ಸಂಪೂರ್ಣವಾಗಿ ತ್ಯಜಿಸುವುದು. ಹೀಗೆ ಸಮಾಜದ ಮೂಲ ಘಟಕವಾದ ವ್ಯಕ್ತಿಶೀಲವಂತನಾದರೆ ಸಮಾಜವು ಶಾಂತಿಯಿಂದ, ನೆಮ್ಮದಿಯಿಂದ ಜೀವಿಸುತ್ತದೆ. ಸಮಾಜವು ಉತ್ತಮವಾದರೆ ರಾಷ್ಟç ಮತ್ತು ಜಗತ್ತು ಹಿಂಸೆ, ಶೋಷಣೆ ಇಲ್ಲದೆ ಶಾಂತಿ ನೆಮ್ಮದಿಯಿಂದಿರುತ್ತದೆ.

ಧ್ಯಾನಮಾರ್ಗದಿಂದ ಸಮಾಧಿ ಸ್ಥಿತಿಯನ್ನು ಹೊಂದುವುದರಿAದ ಮನಸ್ಸು ಪರಿಶುದ್ಧವಾಗುತ್ತದೆ. ಲೋಭ, ಮೋಹ, ದ್ವೇಷ, ಅಸೂಯೆ, ಅಹಂಕಾರ, ಕ್ರೌರ್ಯ ಮುಂತಾದ ದುರ್ಗಣಗಳನ್ನು ಧ್ಯಾನದ ಮೂಲಕ ನಾಶಮಾಡಿ ಸಮಚಿತ್ತವನ್ನು ಹೊಂದುವುದು. ತಮ್ಮ ಸಾಕ್ಷಾತ್ಕಾರಕ್ಕೆ ಅತ್ಯಂತ ಮುಖ್ಯವಾಗುವುದು. ಈ ರೀತಿಯಾಗಿ ಬುದ್ಧನು ತಾನು ಕಂಡುಹಿಡಿದ ಅನುಸರಿಸಿದ ಅಷ್ಟಾಂಗ ಮಾರ್ಗವನ್ನು ಅಭ್ಯಾಸ ಮಾಡಿದರೆ ಸಕಲ ದುಃಖಗಳಿಂದ ಮುಕ್ತಿ ಹೊಂದಿ ಬುದ್ಧನು ಅನುಭವಿಸಿದ ಪರಿಮಶಾಂತಿಯ ನಿರ್ವಾಣ ಸುಖವನ್ನು ಅನುಭವಿಸಿ ಹರಹಂತ ಸ್ಥಿತಿಯನ್ನು ತಲುಪಬಹುದೆಂದು ತಿಳಿಸಿದರು.

ವಚನ ಸಾಹಿತ್ಯ ಸುಲಭ, ಸರಳ, ಸುಸ್ಪಷ್ಟ ಎಂಬ ಸಂಗತಿಗಳಿಂದ ಕೂಡಿದೆ. ಇವು ವೈವಿಧ್ಯ ಮತ್ತು ವೈರುಧ್ಯಗಳ, ಲೋಕದೃಷ್ಟಿ, ಲೋಕಾನುಭಾವದ ಪರಿಣಾಮವಾಗಿ ಕಸುಬುದಾರರಿಗೆ ಹಾಗೂ ಮಹಿಳೆಯರು ಸೇರಿದಂತೆ ವಿವಿಧ ಕುಲ ಕಸುಬಗಳ ಜನರ, ಅವರ-ಅವರ ನಡುವೆಯೇ ಎತ್ತರದ ವಿಚಾರ ಪಥವನ್ನು ಮುಕ್ತವಾಗಿ ಸಾಮಾಜಿಕ ನೆಲೆಯಲ್ಲಿ ಮಂಡಿಸುತ್ತಿದ್ದರು.

ಅವರುಗಳಲ್ಲಿ ಪ್ರಮುಖವಾಗಿ ಅಧ್ಯಾತ್ಮಿಕ ಸಮಾನತೆಯ ಆದರ್ಶದ ನೆಲೆಯಲ್ಲಿ ಅಕ್ಕಿ ಆರಿಸುವರು, ಕಸಗುಡಿಸುವರು, ಕಟ್ಟಿಗೆ ಮಾರುವರು, ಜೋಡು ತಯಾರಿಸುವರು, ಬಟ್ಟೆ ತೊಳೆಯುವರು, ಹಡಪದ ಕೆಲಸ ಮಾಡುವವರು, ಅಗ್ಗ-ಕಣ್ಣಿ ಮತ್ತು ಕೃಷಿಯ ಪರಿಕರಗಳನ್ನು ರಾಟೆಯ ಕೆಲಸ, ಬಡಿಗೆ ಜಾತಿಯ, ಶುದ್ಧ-ಸಿದ್ಧ ಪ್ರಸಾದ ತಯಾರಿಸುವ, ಹೆಂಡದ ಮತ್ತನ್ನು ಬಿಡಿಸಿ, ಜ್ಞಾನದ ಮತ್ತನ್ನು ಕುಡಿಸಿ ಪಂಚಶೀಲವನ್ನು ನೆನಪಿಸುವ, ಧೂಪದ ಕಾಯಕ, ಸುಖ ಬೋಗವನ್ನು ತೊರೆದ ಬೊಂತಾದೇವಿ ಕಾಶ್ಮೀರದ ರಾಜನ ಮಗಳು, ಬುದ್ಧನ ಅರಮನೆ ತೊರೆದಂತೆ ಕಟ್ಟಿಗೆ ಮಾರುವ ಮಹಾದೇವಿ ರಾಯಮ್ಮ ನೆಯ್ಗೆಯ ಕಾಯಕ. ಕಾಯಕದ ಹಿಂಡು-ದಂಡಾಗಿರುವುದನ್ನು ಜಾತಿ ಮೂಲದ ವಚನಕಾರ ಮೂಲಕ ಸಾಮಾಜಿಕ ಅಸಮಾನತೆ ಮತ್ತು ಜಾತಿವಿನಾಶದ ಹೋರಾಟಗಳಿಗೆ ಸ್ಫೂರ್ತಿ ತುಂಬುವ ಪ್ರಾಚೀನ ವಿಚಾರಧಾರೆಗಳೆಂದು ನೆನೆಯಬೇಕು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ತತ್ವಪದಗಳು ಸಾರ್ವಕಾಲಿಕ ಬೆಳಕನಿಧಿ: ಕಾ.ತ.ಚಿಕ್ಕಣ್ಣ

Published

on

ಸುದ್ದಿದಿನ,ಬೆಂಗಳೂರು:ತತ್ವಪದಗಳು ಎಲ್ಲ ಕಾಲಕ್ಕೂ ಸಲ್ಲುವಂತಹ ಬೆಳಕನ್ನು ನೀಡುವ ಸೃಜನಶೀಲ ಸಂರಚನೆಗಳಾಗಿವೆ ಎಂದು ಕರ್ನಾಟಕ ಸರ್ಕಾರದ ಸಂತಕವಿ ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರದ ಅಧ್ಯಕ್ಷರಾದ ಶ್ರೀ ಕಾ.ತ.ಚಿಕ್ಕಣ್ಣ ಅವರು ಅಭಿಪ್ರಾಯಪಟ್ಟರು.

ಬೆಂಗಳೂರಿನ ಕೆ.ನಾರಾಯಣಪುರದ ಕ್ರಿಸ್ತು ಜಯಂತಿ ಡೀಮ್ಡ್ ವಿಶ್ವವಿದ್ಯಾನಿಲಯದ ಕನ್ನಡ ವಿಭಾಗ ಹಾಗೂ ಕರ್ನಾಟಕ ಸರ್ಕಾರದ ಸಂತಕವಿ ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರದ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ‘ಕನ್ನಡ ತತ್ವಪದ ಸಾಹಿತ್ಯ: ಸಾಂಸ್ಕೃತಿಕ ಅನುಸಂಧಾನ’ ವಿಷಯ ಕುರಿತಾದ ಒಂದು ದಿನದ ರಾಷ್ಟ್ರೀಯ ವಿಚಾರಸಂಕಿರಣದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ತತ್ವಪದ ಸಾಹಿತ್ಯ ರೂಪುಗೊಂಡಿದ್ದ ಕಾಲವನ್ನು ಕತ್ತಲಯುಗ ಎಂದು ಕರೆದು ವಿಸ್ಮೃತಿಗೆ ತಳ್ಳಲಾಗಿತ್ತು. ಆದರೆ ಆ ಕತ್ತಲೆಯುಗದಲ್ಲಿಯೇ ಜಗತ್ತಿಗೆ ಮಹೋನ್ನತ ಬೆಳಕು ನೀಡುವ ನುಡಿರತ್ನಗಳು ರಚನೆಗೊಂಡಿದ್ದವು. ತತ್ವಪದಕಾರರು ಪರಂಪರೆಯೊಂದಿಗೆ ಸಂವಾದ ನಡೆಸುತ್ತಾ ವರ್ತಮಾನಕ್ಕೆ ಸೂಕ್ತವಾಗಿ ಅನ್ವಯವಾಗುವ ಹಾಗೂ ಭವಿಷ್ಯಕ್ಕೆ ಬೇಕಾದ ಜಾಗೃತಿಯನ್ನು ನೀಡುವ ಮೂಲಕ ಕನ್ನಡ ಸಂಸ್ಕೃತಿಯಲ್ಲಿ ತಮ್ಮದೇ ಆದ ಮೌಲ್ಯಯುತ ಸ್ಥಾನವನ್ನು ಪಡೆದುಕೊಂಡಿವೆ. ಸಮಾಜದಲ್ಲಿರುವ ಜಾತಿಭೇದ, ಲಿಂಗಭೇದ, ವರ್ಣಭೇದ ಮೊದಲಾದ ವಿಷಕಾರಿ ಮನಸ್ಥಿತಿಗೆ ತತ್ವಪದಕಾರರು ತಮ್ಮ ನುಡಿ-ನಡೆಗಳ ಮೂಲಕ ಚಿಕಿತ್ಸೆ ನೀಡುವ ಮೂಲಕ ಬದುಕಿನ ಸತ್ಯ ಮತ್ತು ಸಾರ್ಥಕತೆಯನ್ನು ಸಾಧಿಸಿತೋರಿದ್ದಾರೆ ಎಂದು ತಿಳಿಸಿದರು.

ವಿಶ್ವಾತ್ಮಕವಾದ ಸಂವೇದನೆಯ ತತ್ವಪದ ಸಾಹಿತ್ಯ

ವಿಚಾರಸಂಕಿರಣವನ್ನು ಉದ್ಘಾಟನೆ ಮಾಡಿದ ಕ್ರಿಸ್ತು ಜಯಂತಿ ವಿವಿಯ ಸಂಸೋಧನೆ ಮತ್ತು ಅಭಿವೃದ್ಧಿ ವಿಭಾಗದ ನಿರ್ದೇಶಕರಾದ ಫಾ.ಡಾ.ಮರಿಯಾಲಾಲ್ ಜೋಸೆಫ್ ಅವರು, ಕನ್ನಡದ ತತ್ವಪದಗಳು ಜನಸಾಮಾನ್ಯರ ವೇದಗಳಾಗಿವೆ. ಕನ್ನಡ ಸಾಹಿತ್ಯಕ್ಕೆ ಸಂಗೀತಾತ್ಮಕ ಶಾಸ್ತ್ರೀಯ ಸಂರಚನೆಯ ಜೊತೆಗೆ ವಿಶ್ವಾತ್ಮಕವಾದ ಸಂವೇದನೆಯ ಮೂಲಕ ಮಹತ್ತರವಾದ ಕೊಡುಗೆ ನೀಡಿದ್ದು ತತ್ವಪದ ಸಾಹಿತ್ಯ.

ಮಧ್ಯಯುಗೀನ ಕಾಲದ ಭಕ್ತಿಚಳವಳಿಯ ಭಾಗವಾಗಿ ಮೂಡಿಬಂದ ವಚನ ಸಾಹಿತ್ಯ ಹಾಗೂ ಕೀರ್ತನ ಸಾಹಿತ್ಯಗಳು ಕರ್ನಾಟಕದಲ್ಲಿ ಮೂಡಿಸಿದ ಸಾಂಸ್ಕೃತಿಕ ಚೈತನ್ಯಶೀಲತೆಯನ್ನು ನಂತರದಲ್ಲಿ ಮುಂದುವರೆಸುವ ಮೂಲಕ ಮತ್ತಷ್ಟು ಎತ್ತರಕ್ಕೆ ಕೊಂಡೊಯ್ದದ್ದು ತತ್ವಪದ ಸಾಹಿತ್ಯವಾಗಿದೆ. ಇಂದಿನ ಆವೇಗದ ಆಧುನಿಕ ಜಗತ್ತಿಗೆ ತತ್ವಪದಕಾರರು ನೀಡಿದ ಅರಿವಿನ ಬೆಳಕು ಅತ್ಯಗತ್ಯವಾಗಿದೆ ಎಂದು ಅಭಿಪ್ರಾಯಪಟ್ಟರು.

ನಿಜತ್ವ ಬೆಳಗುವ ದಾರಿದೀಪ ತತ್ವಪದಗಳು-ಪದ್ಮಾಲಯ ನಾಗರಾಜ್: ಪ್ರಧಾನಗೋಷ್ಠಿಯ ಅಧ್ಯಕ್ಷತೆ ವಹಿಸಿ ತತ್ವಪದಗಳ ಸಾಂಸ್ಕೃತಿಕ ಮಹತ್ವ ಕುರಿತು ಮಾತನಾಡಿದ ಅಚಲ ಸಾಧಕರಾದ ಪದ್ಮಾಲಯ ನಾಗರಾಜ್ ಅವರು, ಜಗತ್ತಿನಾದ್ಯಂತ ಇಂದು ನಡೆಯುತ್ತಿರುವ ಅಧಿಕಾರ ಹಾಗೂ ವ್ಯಾಪಾರದಾಹೀ ರಾಜಕೀಯ ಲಂಪಟ, ಆರ್ಥಿಕ ಲಂಪಟ ಹಾಗೂ ಸಾಮಾಜಿಕ ಅಸಮಾನ ಸೃಷ್ಟಿಗಳು ಮಾನವಲೋಕವನ್ನು ಭ್ರಮೆ ಮತ್ತು ಅಸತ್ಯದತ್ತ ಕೊಂಡೊಯ್ಯುತ್ತಿವೆ. ಅವೈಜ್ಞಾನಿಕ ಕಲ್ಪನೆಗಳನ್ನು ಹುಟ್ಟುಹಾಕುತ್ತಾ ವಾಸ್ತವಿಕತೆಯಿಂದ ದೂರಮಾಡುತ್ತಿವೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ನಿರಂತರ ಆಗುವಿಕೆಯ ಅನಂತವಿಶ್ವದಲ್ಲಿ ನಾವೊಂದು ಬಿಂದುವೆಂಬ ಸತ್ಯದರ್ಶನ ಮಾಡಿಸುವ ಮೂಲಕ ನಿಜತ್ವವನ್ನು ಬೆಳಗುವ ದಾರದೀಪವಾಗಿವೆ ತತ್ವಪದಗಳು ಎಂದು ತಿಳಿಸಿದರು.

‘ತತ್ವಪದಕಾರ್ತಿಯರ ಲೋಕದೃಷ್ಠಿ’ಯನ್ನು ಕುರಿತು ವಿಚಾರಮಂಡನೆ ಮಾಡಿದ ಡಾ.ಶೋಭಾರಾಣಿ ಎನ್. ಅವರು, ‘ತತ್ವಪದಕಾರ್ತಿಯರು ಸಂಸಾರದ ಸಹಯಾನದೊಂದಿಗೇ ಅಧ್ಯಾತ್ಮಿಕ ಸಾಧನೆಯನ್ನು ಮಾಡಬಹುದೆಂದು ಸಾಧಿಸಿತೋರಿದ್ದಾರೆ. ನಿರ್ಭೀತ ನುಡಿಕಾರರು ತತ್ವಪದಕಾರ್ತಿಯರು. ಮಹಿಳಾ ತತ್ವಪದಕಾರರ ಇನ್ನೂ ಎಷ್ಟೋ ತತ್ವಪದಗಳು ಸಂಗ್ರಹವಾಗಬೇಕಿದೆ’ ಎಂದು ಅಭಿಪ್ರಯಪಟ್ಟರು.

‘ಕನ್ನಡ ತತ್ವಪದಗಳು ಮತ್ತು ಬಹುತ್ವ ಭಾರತ’ ಕುರಿತು ಮಾತನಾಡಿದ ರವಿ ಕಂಬಳಿ ಅವರು, ಬಹುಸಂಸ್ಕೃತಿಗಳಿರುವ ಭಾರತದಲ್ಲಿ ಏಕರೂಪೀತನದ ಯಾಜಮಾನ್ಯ ಹೇರುವ ದೌರ್ಜನ್ಯ ಹಾಗೂ ಸಮಸ್ಯೆಗಳಿಗೆ ಪ್ರತಿಕ್ರಿಯೆಯಾಗಿ ಕನ್ನಡ ತತ್ವಪದಕಾರರು ಬಹುತ್ವವನ್ನು ತಮ್ಮ ಸಾಹಿತ್ಯದ ಆಶಯ ಹಾಗೂ ಬದುಕಿನ ಆಚರಣೆಯನ್ನಾಗಿ ಮಾಡಿಕೊಂಡರು. ಮೌಢ್ಯರಹಿತವಾದ ಸಮಸಮಾಜ ಕಲ್ಪನೆ ಅವರದಾಗಿತ್ತು. ತಮಗಿಂತಲೂ ಹಿಂದೆ ಹಲವು ಬಗೆಯ ಬಹುತ್ವದ ಮಾದರಿಗಳನ್ನು ಪ್ರತಿಪಾದಿಸಿದ್ದ ವಚನಕಾರರು ಇವರಿಗೆ ಆದರ್ಶವಾಗಿದ್ದರು ಎಂದು ತಿಳಿಸಿದರು.

ವಿಚಾರಸಂಕಿರಣದ ಭಾಗವಾಗಿ ಹೊರತರಲಾಗಿದ್ದ ‘ಕನ್ನಡ ತತ್ವಪದ ಸಾಹಿತ್ಯ

ಸಾಂಸ್ಕೃತಿಕ ಅನುಸಂಧಾನ-ಸಂಪುಟ 1 ಮತ್ತು 2’ ಕೃತಿಗಳನ್ನು ಲೋಕಾರ್ಪಣೆಗೊಳಿಸಲಾಯಿತು. ಪ್ರಸಿದ್ಧ ಗಾಯಕರಾದ ಶ್ರೀ ಖಾಸೀಂ ಮಲ್ಲಿಗೆ ಮಡುವು ತತ್ವಪದ ಗಾಯನವನ್ನು ಪ್ರಸ್ತುತಪಡಿಸಿದರು. ಪರ್ಯಾಯಗೋಷ್ಠಿಗಳಲ್ಲಿ 6೦ಕ್ಕೂ ಹೆಚ್ಚು ಸಂಶೋಧಕರು ಪ್ರಬಂಧ ಮಂಡನೆ ಮಾಡಿದರು.

ಕ್ರಿಸ್ತು ಜಯಂತಿ ವಿಶ್ವವಿದ್ಯಾಲಯದ ಮಾನವಿಕ ವಿಭಾಗದ ಡೀನರಾದ ಡಾ.ಗೋಪಕುಮಾರ್ ಎ.ವಿ. ಅವರು ಮುಖ್ಯ ಅತಿಥಿಯಾಗಿದ್ದರು. ಕನ್ನಡ ವಿಭಾಗದ ಮುಖ್ಯಸ್ಥರಾದ ಕ್ಯಾಪ್ಟನ್ ಡಾ.ಸರ್ವೇಶ್ ಬಿ.ಎಸ್. ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ವಿಚಾರಸಂಕಿರಣದ ಸಂಯೋಜಕರಾದ ಡಾ.ಕಿರಣಕುಮಾರ್ ಹೆಚ್.ಜಿ ಅವರು ವಂದಿಸಿದರು.

ಕನ್ನಡ ಪ್ರಾಧ್ಯಾಪಕರಾದ ಡಾ.ಕುಪ್ಪನಹಳ್ಳಿ ಎಂ.ಭೈರಪ್ಪ ಅವರು ನಿರೂಪಿಸಿದರು. ಕನ್ನಡ ಪ್ರಾಧ್ಯಾಪಕರಾದ ಪ್ರೊ.ಚಂದ್ರಶೇಖರ್ ಎನ್., ಡಾ.ಸೈಯದ್ ಮುಯಿನ್, ಡಾ.ರವಿಶಂಕರ್ ಎ.ಕೆ., ತತ್ವಪದಕಾರರ ಅಧ್ಯಯನ ಕೇಂದ್ರದ ಸಿಬ್ಬಂದಿವರ್ಗದವರಾದ ರಜತಾ ಶೆಟ್ಟಿ ಹಾಗೂ ಸುಪ್ರಿಯಾ ಅವರು ಉಪಸ್ಥಿತರಿದ್ದರು. 200ಕ್ಕೂ ಹೆಚ್ಚು ಅಧ್ಯಾಪಕರು, ಸಂಶೋಧಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಅಂತರಂಗ

ಭೀಮಾ ಕೋರೆಗಾಂವ ; ಮಹರ್ ಸೈನಿಕರ ವೀರಗಾಥೆ

Published

on

~ ಡಾ. ಸುಜಾತಾ ಚಲವಾದಿ

ಭಾರತದ ಇತಿಹಾಸದಲ್ಲಿ ಅನೇಕ ಕ್ರೂರ ವ್ಯಂಗ್ಯಗಳಿವೆ. ಅವುಗಳಲ್ಲಿ ಪೇಶ್ವಾಶಾಹಿ ಆಡಳಿತವು ಒಂದು. ಅವರ ಆಡಳಿತ ಸಂದರ್ಭದಲ್ಲಿ ಅಸ್ಪೃಶ್ಯರು ತಮ್ಮ ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಬದುಕುವ ಸ್ಥಿತಿಯಿತ್ತು. ಜಾತಿ ವ್ಯವಸ್ಥೆ ವಿಜೃಂಭಿಸುತ್ತಿದ್ದ ಕಾಲವದು.

ದೌರ್ಜನ್ಯ, ಅನ್ಯಾಯಕ್ಕೆ ಒಳಗಾಗಿ ಸದಾ ನೋವಿನ ಬದುಕು ಅಸ್ಪೃಶ್ಯರದ್ದಾಗಿತ್ತು. ಕಿತ್ತುತಿನ್ನುವ ಬಡತನ, ಹಸಿವು, ದಾರಿದ್ರö್ಯ, ಅಶಿಕ್ಷಿತರಾದ ಅಸ್ಪಶ್ಯರು ಅನ್ಯಾಯದ ವಿರುದ್ಧ ಹೋರಾಟ ಮಾಡುವುದು ಕನಸಿನ ಮಾತಾಗಿತ್ತು. ಇವರ ಬಲಹೀನತೆಯನ್ನು ಬಳಸಿಕೊಂಡು ‘ಪ್ರಾಣಿಗಿಂತ ಕೀಳಾಗಿ’ ನಡೆಸಿಕೊಳ್ಳುತ್ತಿದ್ದ ಪೇಶ್ವಾ ಆಡಳಿತವು ಶೂದ್ರರ, ನಿಮ್ನರ ಮೇಲೆ ತಮ್ಮ ಅಟ್ಟಹಾಸವನ್ನು ಮೆರೆಯುತ್ತಿದ್ದರು.

ಅನ್ಯಾಯಕ್ಕೆ ಒಳಗಾದ ಕೆಳಜಾತಿಯ ಮಹಾರರು, ಮಾಂಗರು, ಚಮ್ಮಾರರು ಮತ್ತು ಮಹಿಳೆಯರು ತತ್ತರಿಸಿ ಹೋಗಿದ್ದರು. ಮಹಾರಾಷ್ಟçದ ಪೇಶ್ವಾಶಾಹಿ ಕಾಲಘಟ್ಟದಲ್ಲಿ ನಡೆದ ಭೀಮಾ ಕೋರೆಗಾಂವ ಚಳವಳಿಯನ್ನು ಬರಹದ ರೂಪದಲ್ಲಿ ಬಾಬಾಸಾಹೇಬ ಅಂಬೇಡ್ಕರ್ ನಮ್ಮ ಮುಂದೆ ಇರಿಸಿದ್ದಾರೆ.
1ನೇ ಜನವರಿ 1818ರಲ್ಲಿ ಅಂದರೆ ಇಂದಿಗೆ 207 ವರ್ಷಗಳ ಹಿಂದೆ 28,000 ಸಾವಿರ ಸಂಖ್ಯೆಯ ಪೇಶ್ವಾಸೈನ್ಯದ ಎದುರು ಐದುನೂರು ಮಹಾರ ಜನಾಂಗದವರು ಹೋರಾಡಿ ವಿಜಯ ಸಾಧಿಸಿದ ದಿನ ಕೋರೆಗಾಂವ್ ಯುದ್ಧ ‘ನ್ಯಾಯದ ಯುದ್ಧ’, ಇಡೀ ಪರಿಶಿಷ್ಟ ಜಾತಿಯವರಿಗೆ ಸ್ವಾಭಿಮಾನದ ಸಂಕೇತವಾಗಿ ಪರಿಣಮಿಸಿದೆ.

ಈ ದಿನವನ್ನು ಯಾವ ಮಹಾರರೂ ಮರೆಯುವ ಹಾಗಿಲ್ಲ. ಬಾಬಾಸಾಹೇಬರು ಈ ದಿನದ ಸ್ಮರಣೆಯನ್ನು “ದಲಿತರ ಪರಾಕ್ರಮ ದಿನ”ವೆಂದು ತಿಳಿದು ಕೋರೆಗಾಂವನಲ್ಲಿ ನಿರ್ಮಿಸಿದ ವಿಜಯಸ್ತಂಭ ಸ್ಮಾರಕಕ್ಕೆ ವಂದಿಸಲು ಪ್ರತೀ ವರ್ಷ ಜನವರಿ 1 ರಂದು ತಪ್ಪದೇ ಹೋಗಿ ಬರುತ್ತಿದ್ದರು. ಜಾತಿಪದ್ಧತಿಯೇ ಪ್ರಧಾನವಾದ ಕಾಲದಲ್ಲಿ ಅಸ್ಪಶ್ಯರ ಸ್ಥಿತಿ ತುಂಬಾ ಹದಗೆಟ್ಟು ಹೋಗಿತ್ತು. ಮೇಲು-ಕೀಳು ಎಂಬ ಭಾವನೆ ಏರುಮುಖದಲ್ಲಿದ್ದ ಕಾಲ.

ಮನುಸ್ಮೃತಿಯನ್ನು ಚಾಚೂ ತಪ್ಪದೇ ಮುನ್ನಡೆಸಿಕೊಂಡು ಬರುವ ಮೇಲ್ವರ್ಗದವರು ಅಸ್ಪೃ್ಪಶ್ಯರನ್ನು ಕಂಡರೆ ಅನೇಕ ಬಗೆಯ ಶಿಕ್ಷೆಗೆ ಒಳಗು ಮಾಡುತ್ತಿದ್ದರು. ಅಸ್ಪೃಶ್ಯರನ್ನು ಕಂಡರೆ ಮೈಲಿಗೆಯಾಗುತ್ತದೆ ಎನ್ನುವ ಮನಸ್ಥಿತಿ ಅವರದ್ದು, ಅಸ್ಪೃಶ್ಯ ರಸ್ತೆಗೆ ಇಳಿಯಕೂಡದು, ಒಳ್ಳೆ ಬಟ್ಟೆ ಹಾಕಿಕೊಳ್ಳುವ ಹಾಗಿಲ್ಲ, ಒಳ್ಳೆಯ ಆಹಾರ ಸೇವನೆಯಂತೂ ಕನಸಿನ ಮಾತಾಗಿತ್ತು. ಊರ ಪ್ರವೇಶಕ್ಕೆ ಸಮಯ ನಿಗದಿ ಮಾಡಿದ್ದರು.

ಸೂರ್ಯೋದಯ, ಸೂರ್ಯಾಸ್ತದ ಸಂದರ್ಭದಲ್ಲಿ ಅಸ್ಪೃಶ್ಯ ವ್ಯಕ್ತಿ ಊರಲ್ಲಿ ಬರುವಂತಿರಲಿಲ್ಲ. ಸೂರ್ಯ ನೆತ್ತಿಯ ಮೇಲಿದ್ದಾಗ ಮಾತ್ರ ಊರ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಬೀದಿಯಲ್ಲಿ ಹೋಗಬೇಕಾದರೆ ಕೊರಳಿಗೆ ಮಣ್ಣಿನ ಸಣ್ಣ ಕುಡಿಕೆಯನ್ನು ಹಾಕಿಕೊಂಡು ಹೋಗಬೇಕು, ಉಗುಳುವ ಸಂದರ್ಭ ಬಂದರೆ, ಅದೇ ಕುಡಿಕೆಯಲ್ಲಿಯೇ ಉಗುಳಿಕೊಳ್ಳಬೇಕು. ಕಾರಣ ರಸ್ತೆಯಲ್ಲಿ ಅಸ್ಪೃಶ್ಯರು ಉಗುಳಿದರೆ ಅವನ ಹೇಸಿಗೆಯನ್ನು ಸವರ್ಣೀಯರು ತುಳಿಯಬಾರದು.

ತುಳಿದರೆ ಮೈಲಿಗೆಯಾಗುತ್ತಿತ್ತು. ರಸ್ತೆಯಲ್ಲಿ ನಡೆಯುವಾಗ ಆತನ ನೆರಳು ಅವನ ಕಾಲಲ್ಲಿಯೇ ಉಳಿಯುವ ಹಾಗೇ ಮಧ್ಯಾಹ್ನದ ನೆತ್ತಿ ಸುಡುವ ಬಿಸಿಲಿನಲ್ಲಿ ಮಾತ್ರ ಊರಲ್ಲಿ ಬರಬೇಕು. ನಡೆದುಕೊಂಡು ಹೋಗುವಾಗ ಹೆಜ್ಜೆ ಗುರುತುಗಳು ಕಾಣದಿರಲಿ ಎಂದು ಬೆನ್ನಿಗೆ ಮುಳ್ಳಿನ ಪೊರಕೆಯನ್ನು ಕಟ್ಟಿಕೊಂಡು ಸಾಗಬೇಕಾದ ಸ್ಥಿತಿ ಅವರದಾಗಿತ್ತು. ಹಾಗೇ ಅಸ್ಪೃಶ್ಯನೊಬ್ಬ ಬರುವುದನ್ನು ‘ಸಂಭೋಳಿ ಸಂಭೋಳಿ ಮಾಯ್ ಬಾಪ್ ಹೊಲೆಯ ಬರುತ್ತಿದ್ದೇನೆ’ ಅಂತಾ ಕೂಗಿ ಹೇಳಬೇಕು. ಇಲ್ಲ, ಕೈಯಲ್ಲಿ ಗೆಜ್ಜೆಕಟ್ಟಿದ ಕೋಲನ್ನು ಹಿಡಿದುಕೊಂಡು ನೆಲಕ್ಕೆ ಕುಕ್ಕಿಸಿಕೊಂಡು ಸದ್ದು ಮಾಡುತ್ತ ಹೋಗಬೇಕು.

ಇದಲ್ಲದೆ ಅಸ್ಪೃಶ್ಯ ಊರ ಪ್ರವೇಶ ಮಾಡಿದಾಗ ಯಾರಾದರೂ ಎದುರು ಬಂದರೆ ಸುಡುವ ಬಿಸಿಲಲ್ಲಿ ಓಡಿ ಹೋಗಿ ಭೂಮಿಯನ್ನು ಅಪ್ಪಿಕೊಳ್ಳಬೇಕು. ಸವರ್ಣೀಯರಿಗೆ ಅವನ ನೆರಳೂ ಸ್ಪರ್ಶ ಮಾಡುವಂಗಿರಲಿಲ್ಲ. ಇಂತಹ ಅಮಾನವೀಯ ನಿಯಮಗಳನ್ನು ಹೊರಡಿಸಿದ ಕಾಲಘಟ್ಟವದು. ಇಷ್ಟೆಲ್ಲಾ ನಿಯಮಗಳನ್ನು ಅಸ್ಪಶ್ಯರ ಮೇಲೆ ಹೇರಿದರೂ ಕೂಡಾ ಮಹಾರ್ ಸೈನಿಕರು ತಮ್ಮ ಪ್ರಾಣವನ್ನು ಲೆಕ್ಕಿಸದೆ ಮೊಗಲರ ಬೃಹತ್ ಸೈನ್ಯದ ವಿರುದ್ಧ ಹೋರಾಡಿ ಪೇಶ್ವೆಗಳ ಪರವಾಗಿ ಯುದ್ಧಕ್ಕೆ ಸನ್ನದ್ಧರಾಗಿದ್ದರು. ಮಹಾರ್ ಸೈನಿಕರ ಶೌರ್ಯದಿಂದಲೇ ಪೇಶ್ವೆಗಳ ಆಡಳಿತ ಸುಗಮವಾಗಿ ನಡೆಯುತ್ತಿತ್ತು. ಆದರೆ ಪೇಶ್ವಗಳು ಮತ್ತು ಸವರ್ಣೀಯರು ಮಹಾರ್‌ಸೈನಿಕರನ್ನು ತುಚ್ಛವಾಗಿ ನಡೆಸಿಕೊಳ್ಳುತ್ತಿದ್ದರು.

1758 ರಲ್ಲಿ ಬ್ರಿಟಿಷರು ಈಸ್ಟ್ ಇಂಡಿಯಾ ಕಂಪನಿಯನ್ನು ಸ್ಥಾಪಿಸಿದ ನಂತರ ಮಹಾರ್ ಜನರನ್ನು ಸೈನಿಕರಾಗಿ ನೇಮಕ ಮಾಡಿಕೊಳ್ಳಲು ಪ್ರಾರಂಭಿಸಿದರು. ಭಾರತೀಯ ಮಹಾರ್ ಸೈನಿಕರಿಗೆ ಶಿಕ್ಷಣದ ಅವಕಾಶವನ್ನು ಮಾಡಿಕೊಟ್ಟಿದ್ದರ ಪರಿಣಾಮ ಸ್ವಲ್ಪ ಮಟ್ಟಿಗೆ ತಿಳಿವಳಿಕೆ ಮೂಡಲು ಸಹಾಯವಾಯಿತು. ತಮ್ಮ ಹಕ್ಕು-ಬಾಧ್ಯತೆಗಳನ್ನು ತಿಳಿಯುವಂತಾಯಿತು. ಬ್ರಿಟಿಷರಲ್ಲಿ ಇರದ ಜಾತಿವ್ಯವಸ್ಥೆ ನಮ್ಮ ದೇಶದಲ್ಲಿ ಕಂಡ ಮಹಾರ್ ಸೈನಿಕರು ಬ್ರಿಟಿಷರಿಗೆ ತಮ್ಮ ಬೆಂಬಲವನ್ನು ನೀಡುವಂತಾಯಿತು. ಅವಮಾನ, ಅನ್ಯಾಯ, ದೌರ್ಜನ್ಯಕ್ಕೆ ಒಳಗಾದ ಮಹಾರ್ ಜನಾಂಗದವರು, ಈ ಎಲ್ಲದರಿಂದ ಮುಕ್ತಿ ಕಾಣಲು ಬ್ರಿಟಿಷರ ಪರವಾಗಿ ಯುದ್ಧಗಳಲ್ಲಿ ಹೋರಾಡಲು ಪ್ರಾರಂಭಿಸಿದರು.

ಎರಡನೆಯ ಬಾಜೀರಾವ್ ಪೇಶ್ವೆಯ ರಾಜ್ಯಾಡಳಿತವಿದ್ದ ಸಂದರ್ಭದಲ್ಲಿ 31 ನೇ ಡಿಸೆಂಬರ್ 1817 ರ ರಾತ್ರಿ ಬ್ರಿಟಿಷರ ಸೇನಾಪತಿ ಕ್ಯಾಪ್ಟನ್ ಫ್ರಾನ್ಸಿಸ್ ಸ್ಟಂಡನ್ ಮುಂದಾಳತ್ವದಲ್ಲಿ ಸೇನೆ ಪೇಶ್ವೆಗಳ ಮೇಲೆ ದಾಳಿ ಮಾಡಲು ಸಿದ್ಧಗೊಂಡಿತು. ಇದನ್ನು ತಿಳಿದ ಮಹಾರ್ ಬೆಟಾಲಿಯನ್ನಿನ ನಾಯಕ ಸಿದ್ಧನಾಕ ಮಾರುವೇಷದಲ್ಲಿ ಪೇಶ್ವೆಯನ್ನು ಕಾಣುತ್ತಾನೆ. ಆಗ ಪೇಶ್ವೆ ಮಹಾರ್ ಬೆಟಾಲಿಯನ್ನಿನ ನಾಯಕ ಸಿದ್ಧನಾಕನನ್ನು ಒಳಗೆ ಬಿಟ್ಟವನನ್ನು ಕೊಲ್ಲಿಸುತ್ತಾನೆ. ಇಂಗ್ಲಿಷರು ನಿಮ್ಮ ಮೇಲೆ ಯುದ್ಧ ಮಾಡುವರಿದ್ದಾರೆ, ನೀವು ನಮ್ಮ ಹಕ್ಕುಗಳನ್ನು ನಮಗೆ ನೀಡುವುದಾದರೆ ನಿಮ್ಮ ಪರವಾಗಿ ಅವರ ವಿರುದ್ಧ ನಾವು ಹೋರಾಡುತ್ತೇವೆ ಎನ್ನುತ್ತಾನೆ. “ನಿಮ್ಮ ಹಕ್ಕುಗಳು ಯಾವವು? ನೀನು ಇನ್ನೊಂದು ಘಳಿಗೆ ಇಲ್ಲಿ ನಿಂತರೆ ನಿನ್ನ ಶಿರಚ್ಛೇದನ ಮಾಡುತ್ತೇನೆ” ಎಂದು ಗದರುತ್ತಾನೆ. ಸಿದ್ಧನಾಕ ಮರಳಿ ಬಂದು ಅಲ್ಲಿ ನಡೆದ ಎಲ್ಲ ವಿವರ ಸಂಗಾತಿಗಳಿಗೆ ನೀಡುತ್ತಾನೆ. ಅಂತಿಮವಾಗಿ ಇಂಗ್ಲಿಷರ ಪರವಾಗಿ ಮಹಾರ್ ಬೆಟಾಲಿಯನ್ ಹೋರಾಡಲು ಸಿದ್ಧವಾಗುತ್ತದೆ. ಪೇಶ್ವೆಗಳ ಸೈನ್ಯ ಕೋರೆಗಾಂವ್ ಪ್ರದೇಶದ ಭೀಮಾನದಿಯ ಬಲದಂಡೆಯ ಮೇಲೆ ಯುದ್ಧಕ್ಕೆ ಸಜ್ಜಾಗಿ ಸುತ್ತುವರೆದು ನಿಂತುಕೊಂಡಿತು. ಮಹಾರ್ ರೆಜಿಮೆಂಟ್ ಸೈನ್ಯ ಬ್ರಿಟಿಷರ ಪರವಾಗಿ ಯುದ್ಧಕ್ಕೆ ಸಜ್ಜಾಗಿದ್ದರು.

ಪೇಶ್ವೆಗಳ ಸೇನೆಯು 25,000 ಕುದುರೆ ಸವಾರರು ಮತ್ತು 3,000 ಕ್ಕಿಂತಲೂ ಹೆಚ್ಚು ಸಂಖ್ಯೆಯಲ್ಲಿದ್ದ ಯೋಧರಿಂದ ತುಂಬಿ ತುಳುಕುತ್ತಿತ್ತು. ಎರಡೂ ಸೇನೆಗಳ ನಡುವೆ ಘನಘೋರ ಯುದ್ಧ ಪ್ರಾರಂಭವಾಗುತ್ತದೆ. ಬೃಹತ್ ಸೇನೆಯ ವಿರುದ್ಧ ಬ್ರಿಟಿಷ್ ಸೇನಾಪತಿ ಕ್ಯಾಪ್ಟನ್ ಪ್ರಾನ್ಸಿಸ್ ಸ್ಟಂಡನ್ ತಾನು ಸೋಲುತ್ತೇನೆ ಎಂದುಕೊAಡು ನಿರಾಶೆಯನ್ನು ತಳೆದಿದ್ದ. ಆದರೂ ಎದುರಾಳಿಯ ಜೊತೆ ಯುದ್ಧದಲ್ಲಿ ಮುನ್ನುಗ್ಗುವುದು ಆತನ ವಿಚಾರವಾಗಿತ್ತು. “ಮಹಾರ್ ಸೈನಿಕರು ವೀರಾವೇಶದಿಂದ ಹೋರಾಡಿ ಪೇಶ್ವೆಗಳು ಪಲಾಯನ ಗೈಯ್ಯಲು ಕಾರಣರಾದರು. ಈ ಯುದ್ಧದಲ್ಲಿ ಎರಡನೆಯ ಬಾಜಿರಾವ್ ಪೇಶ್ವೆಯು ಪಲಾಯನ ಮಾಡುವುದರಲ್ಲಿ ಮೊದಲಿಗ”ನೆಂದು ಬಾಬಾಸಾಹೇಬರು ತಮ್ಮ ಬರಹದಲ್ಲಿ ದಾಖಲಿಸಿದ್ದಾರೆ.

ಬೆಳಿಗ್ಗೆ ಆರು ಗಂಟೆಗೆ ಪ್ರಾರಂಭವಾದ ಯುದ್ಧ ರಾತ್ರಿ ಆರು ಗಂಟೆಗೆ ಮುಕ್ತಾಯಗೊಳ್ಳುತ್ತದೆ. ಸಂಖ್ಯೆಯಲ್ಲಿ ಅಲ್ಪವಾಗಿದ್ದರೂ ಅತ್ಯಂತ ಕೆಚ್ಚಿನಿಂದ ಕಲಿತನ ಪ್ರದರ್ಶಿಸಿದ ಮಹಾರ್ ಯೋಧರು, ತಮ್ಮ ಮೇಲೆ ಅಮಾನವೀಯವಾದ ಅಸ್ಪೃಶ್ಯತೆಯನ್ನು ಹೇರಿದ್ದ ಪೇಶ್ವೆ ಆಡಳಿತವನ್ನು ಯುದ್ಧದಲ್ಲಿ ಮಣ್ಣು ಮುಕ್ಕಿಸಿದರು. ಮಹಾರ್ ಸೈನಿಕರ ಅಭೂತಪೂರ್ವ ಕಲಿತನದ ಕಾರಣದಿಂದಲೇ ಬ್ರಿಟಿಷರು ಕೋರೆಗಾಂವ್ ಯುದ್ಧವನ್ನು ಗೆಲ್ಲಲು ಸಾಧ್ಯವಾಯಿತು. ಗೆಲುವಿಗೆ ಕಾರಣರಾದ, ಕದನದಲ್ಲಿ ಹುತಾತ್ಮರಾದ ಯೋಧರನ್ನು ಸದಾಕಾಲ ಸ್ಮರಿಸುವಂತೆ ಕೋರೆಗಾಂವನ ಭೀಮಾನದಿ ತೀರದ ಪ್ರಶಸ್ತವಾದ ಮೈದಾನ, ಕದನದ ಕಿಡಿ ಮೊಟ್ಟ ಮೊದಲು ಹೊತ್ತಿದ ಸ್ಥಳದಲ್ಲಿ ಬ್ರಿಟಿಷರು ಸ್ಮರಣ ಸ್ತಂಭವನ್ನು ಸ್ಥಾಪಿಸಿದರು.

26 ನೆಯ ಮಾರ್ಚ್ 1821 ರಲ್ಲಿ ಈ ಭವ್ಯ ವಿಜಯಸ್ತಂಭಕ್ಕೆ ಅಡಿಗಲ್ಲು ಹಾಕಿದಾಗ ಬಂದೂಕು ಮತ್ತು ತೋಪುಗಳ ಮೂಲಕ ಹುತಾತ್ಮರಿಗೆ ರಾಜಮರ್ಯಾದೆಯ ಶ್ರದ್ಧಾಂಜಲಿ ಸಲ್ಲಿಸಲಾಯಿತು. 63 ಅಡಿ ಎತ್ತರ ಇರುವ ಈ ವಿಜಯಸ್ತಂಭವು 1822 ರಲ್ಲಿ ಪೂರ್ಣವಾಗಿ ನಿರ್ಮಾಣವಾಯಿತು. ಮೊದಲಿಗೆ ಈ ಸ್ತಂಭವನ್ನು ಮಹಾರ್ ಸ್ತಂಭವೆAದು ಕರೆಯಲಾಗುತ್ತಿತ್ತು. ನಂತರದಲ್ಲಿ ವಿಜಯಸ್ತಂಭವೆಂದು ಹೆಸರಿಸಲಾಯಿತು.

ವಿಜಯಸ್ತಂಭದ ಮೇಲೆ 20 ಮಹಾರ್ ಸೈನಿಕರ ಹೆಸರುಗಳನ್ನು ಕೆತ್ತಿಸಲಾಗಿದೆ. ಪ್ರತಿವರ್ಷ ಜನೆವರಿ 1 ರಂದು ಬಾಬಾಸಾಹೇಬರು ಕೋರೆಗಾಂವ್ ವಿಜಯಸ್ತಂಭಕ್ಕೆ ಭೇಟಿ ಕೊಟ್ಟು ನಮನವನ್ನು ಸಲ್ಲಿಸುತ್ತಿದ್ದರು. ಇಂತಹ ಐತಿಹಾಸಿಕ ವಿಜಯದ ಸಂಕೇತವಾದ ಕೋರೆಗಾಂವ ಚಳವಳಿಯನ್ನು ಮತ್ತೆ ಮತ್ತೆ ನೆನೆಯುವುದು ಇಂದಿನ ಅನಿವಾರ್ಯವೂ ಹೌದು. ಏಕೆಂದರೆ ಬಾಬಾಸಾಹೇಬರೇ ಹೇಳಿದ ಹಾಗೆ “ಇತಿಹಾಸವನ್ನು ತಿಳಿಯದವನು ಇತಿಹಾಸವನ್ನು ಸೃಷ್ಟಿಸಲು ಸಾಧ್ಯವಾಗದು” ಎಂದಿದ್ದಲ್ಲದೆ ದಲಿತರಾರೂ ಕುರಿಗಳಲ್ಲ, ಅವರು ಹುಲಿಗಳು’ ಎಂದು ಹೇಳಿರುವುದನ್ನು ಮತ್ತೆ ಮತ್ತೆ ಮನನಿಸಬೇಕಾಗಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಅಂತರಂಗ

ಕುವೆಂಪು ಅವರಿಗೆ ಲಂಕೇಶರ ಎಂಟು ಪ್ರಶ್ನೆಗಳು

Published

on

ಕುವೆಂಪು ಅವರನ್ನು ನಾನು ಅಂದು ನೋಡಿದ್ದು ಎರಡನೆ ಸಲ. ನಾನು ನೋಡಲು ಬಂದಿರುವ ವಿಷಯ ತಿಳಿದು ಕೈಯಲ್ಲಿ ನನ್ನ ಪ್ರಶ್ನೆ ಮತ್ತು ತಮ್ಮ ಉತ್ತರಗಳಿಂದ ಕೂಡಿದ ಟೈಪ್ ಮಾಡಿದ ಹಾಳೆಗಳನ್ನು ಹಿಡಿದುಕೊಂಡು ಬಂದರು. ನಾನು ಮತ್ತು ಮಿತ್ರ ನೆಲಮನೆ ದೇವೇಗೌಡರು ನಮಸ್ಕರಿಸಿದೊಡನೆ ಕೂತು ಪ್ರಶ್ನೆ ಮತ್ತು ಉತ್ತರಗಳನ್ನು ಓದುತ್ತ ವಿವರಿಸತೊಡಗಿದರು.

ತಮಗೆ ಯಾವುದೇ ಜಾತಿಯ ಬಗ್ಗೆ ಒಣ ಅಭಿಮಾನವಾಗಲಿ ಅನಗತ್ಯ ಪೂರ್ವಗ್ರಹವಾಗಲಿ ಇಲ್ಲವೆಂದು ಸ್ಪಷ್ಟಪಡಿಸಿದರು. ಅವರ ಮಾತಿನಲ್ಲಿ ತಮ್ಮ ಉತ್ತರಗಳು ಜನಕ್ಕೆಲ್ಲಿ ತಿಳಿಯುವುದಿಲ್ಲವೋ ಎಂಬ ಆತಂಕವಿದ್ದಂತಿತ್ತು. ಆದ್ದರಿಂದ ತಮ್ಮ ಕೃತಿಗಳಿಂದ ಉದಾಹರಣೆ ಎತ್ತಿಕೊಂಡು ಮಾತಾಡಿದರು. ನಾನು ಅವೆಲ್ಲವನ್ನೂ ಓದಿದ್ದೆನಾದ್ದರಿಂದ ಆ ವಿವರಣೆ ಅನಗತ್ಯವಾಗಿತ್ತು. ಆದರೆ ಕುವೆಂಪು ಅವರಿಗೆ ಅದಮ್ಯ ಉತ್ಸಾಹವಿದೆ; ಈ ಸಮಾಜದ ಕೆಡಕುಗಳ ಬಗ್ಗೆ ಕೋಪವಿದೆ. ತಾವು ಎಷ್ಟೇ ಬರೆದರೂ ಮಾತಾಡಿದರೂ ಈ ಜನತೆ ಸರಿಹೋಗುತ್ತದೋ ಇಲ್ಲವೋ ಎಂಬ ಸಂದೇಹವಿದೆ. ಆದ್ದರಿಂದಲೇ ಹಲವೊಮ್ಮೆ ವ್ಯಗ್ರವಾಗಿ ಮಾತಾಡುತ್ತಾರೆ. ಅವರು ನನ್ನ ಪ್ರಶ್ನೆಗಳಿಗೆ ಉತ್ತರ ಹೇಳುತ್ತ ಹೊಸ ಸಾಹಿತ್ಯದ ಬಗ್ಗೆ ಮಾತಾಡಿರುವುದನ್ನೂ ಈ ಅರ್ಥದಲ್ಲೇ ತೆಗೆದುಕೊಳ್ಳಬೇಕೆಂದು ಕಾಣುತ್ತದೆ.

ಕಿರಿಯ ಲೇಖಕರು ಯಾರಿಗೂ ಅರ್ಥವಾಗದ ಗೊಂದಲಗಳಲ್ಲಿ ಸಿಲುಕಿಕೊಂಡು ತಮ್ಮನ್ನು ತಾವು ಮೋಸಗೊಳಿಸಿಕೊಳ್ಳುವ ಬದಲು ಸಮಾಜಕ್ಕೆ ತಮ್ಮನ್ನು ತಾವು ತೆರೆದುಕೊಳ್ಳಬೇಕೆಂದೂ ಸಮಾಜದ ಅನಿಷ್ಟಗಳನ್ನು ಸರಿಪಡಿಸಬೇಕೆಂದೂ ಅವರು ಸೂಚಿಸುತ್ತಾರೆ. ಇದು ಕಿರಿಯ ಬರಹಗಾರರು ಅನುಭವ ಪಡೆಯುವ ಬಗ್ಗೆ ಉತ್ತಮ ಹಿತವಚನ. ಇನ್ನೊಂದು ಬಗೆಯಲ್ಲಿ ಇದು ನೀತಿ ಪಾಠ. ಇವೆರಡೂ ಕುವೆಂಪು ಮಾತುಗಳಲ್ಲಿರುವುದು ಎಂಥವರಿಗೂ ಕಂಡು ಬರುತ್ತದೆ.

ಆವೊತ್ತು ಮಾತಾಡುವ ಮೂಡಲ್ಲಿದ್ದರು ಕುವೆಂಪು ನಾವಿಬ್ಬರೂ ಕೆಲಸದ ಮೂಡಿನಲ್ಲಿದ್ದೆವು. ಅವರು ತಮ್ಮ ‘ರಾಮಾಯಣ ದರ್ಶನಂ’ನಿಂದ ಓದಿ ತೋರಿಸುವುದಾಗಿ ಸೂಚಿಸಿ ಬೇರೊಂದು ವಿಷಯ ಎತ್ತಿಕೊಂಡು ವಿವರಿಸತೊಡಗಿದರು. ‘ಪಾಂಚಾಲಿ’ ವಿವಿಧ ತೊಡಕುಗಳಲ್ಲಿ ಸಿಲುಕಿದ್ದ ನಾನು ಮತ್ತು ದೇವೇಗೌಡರು ನಮಸ್ಕಾರ ಹೇಳಿ ಹೊರಬಿದ್ದೆವು.

ಕುವೆಂಪು ಒಂದು ಸಂಸ್ಥೆ ಅಥವಾ ದೇವತೆಯಾಗಿ ಹುಂಬರ ಮನಸ್ಸಿನಲ್ಲಿ ಬೆಳೆಯುತ್ತಿದ್ದ ವೇಳೆಗೆ ಸರಿಯಾಗಿ ಅವರು ಮೈಕೊಡವಿಕೊಂಡು ಹೊರಬಂದು ಮನುಷ್ಯರೂ ವಿಚಾರವಾದಿಗಳೂ ಆಗಿ ಮಾತಾಡುತ್ತಿದ್ದುದು ನನಗೆ ಸಂತಸ ಉಂಟುಮಾಡಿತ್ತು.

——————————————————————-

ಲಂಕೇಶ್: ಸಾಮಾನ್ಯವಾಗಿ ಸಾರ್ವಜನಿಕ ಸಭೆಗಳಲ್ಲಿ ಮತ್ತು ವಾದವಿವಾದಗಳಲ್ಲಿ ಭಾಗವಹಿಸದ ತಾವು ಈಚೆಗೆ ಹೀಗೆ ಭಾಗವಹಿಸುವ ಮೂಲಕ ತಮ್ಮ ವಿಶಿಷ್ಟ ಬಗೆಯ ಕೀರ್ತಿಗೆ ಕಳಂಕ ತಂದುಕೊಳ್ಳುತ್ತಿರಬಹುದೇ ಎಂಬ ಅಳುಕು ತಮ್ಮ ಅಭಿಮಾನಿಗಳಲ್ಲಿ ಕೆಲವರಿಗಿದೆ. ಈ ಬಗ್ಗೆ ತಮ್ಮ ಅಭಿಪ್ರಾಯವೇನು?

ಕುವೆಂಪು: ಕೀರ್ತಿಗಿಂತಲೂ ನನಗೆ ಹೆಚ್ಚು ಪ್ರಿಯವಾದದ್ದು ಸತ್ಯ. ಸತ್ಯ ಹೇಳಿದರೆ ಕಲುಷಿತವಾಗುವ ಕೀರ್ತಿ ಭ್ರಷ್ಟಾಚಾರದ ವಸ್ತುವಾಗುತ್ತದೆ. ಅಲ್ಲದೆ ‘ಕೀರ್ತಿಶನಿ’ ಎಂಬ ನನ್ನ ಸಾನೆಟ್ಟಿನಲ್ಲಿ ಅನೇಕ ವರ್ಷಗಳ ಹಿಂದೆಯೇ ನಾನು ಅದನ್ನು ‘ತೊಲಗಾಚೆ’ ಎಂದು ತೊಲಗಿಸಿದ್ದೇನೆ. ಆದರೂ, ಶ್ರೀ ಎ.ಆರ್. ಕೃಷ್ಣಶಾಸ್ತ್ರಿಗಳು ಹೇಳಿದಂತೆ, ಶನಿ ಒಮ್ಮೆ ಬೆನ್ನು ಹತ್ತಿದರೆ ಬಿಡುವುದಿಲ್ಲವಂತೆ. ನನ್ನ ಮತ್ತೊಂದು ಸಾನೆಟ್ ‘ಯಶೋಲಕ್ಷ್ಮಿ’ ಈ ವಿಚಾರವಾಗಿ ನನ್ನ ಭಾವನೆ ಏನು ಎಂಬುದನ್ನು ತಿಳಿಸುತ್ತದೆ. ಕೀರ್ತಿ ಕಲುಷಿತವಾಗುವುದಿರಲಿ ಅಪಕೀರ್ತಿಯೆ ಬಂದರು ಸತ್ಯ ಹೇಳುವುದನ್ನು ಬಿಡುವುದಿಲ್ಲ.

ಲಂಕೇಶ್: ಕೆಟ್ಟಿರಲಿ, ಕೆಡದಿರಲಿ ಭಾರತೀಯ ಸಂಸ್ಕೃತಿಯೆಂದರೆ ವೈದಿಕ ಸಂಸ್ಕೃತಿಯೇ ಎಂಬ ಅಭಿಪ್ರಾಯದ ಬಗ್ಗೆ ನಿಮಗೇನೆನ್ನಿಸುತ್ತದೆ?

ಕುವೆಂಪು: ಇದೊಂದು ತಪ್ಪು ಅಭಿಪ್ರಾಯ. ಭಾರತೀಯ ಸಂಸ್ಕೃತಿ ಬರಿಯ ವೈದಿಕವಲ್ಲ. ಅವೈದಿಕವೂ ಅದರ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿದೆ. ಬೌದ್ಧ, ಜೈನಗಳಲ್ಲದೆ ನ್ಯಾಯ, ವೈಶ್ಲೇಷಿಕ, ಸಾಂಖ್ಯ, ಯೋಗ ದರ್ಶನಗಳೂ ವೇದದ ಪರಮ ಪ್ರಾಮಾಣ್ಯವನ್ನು ಅವಿಚಾರಕವಾಗಿ ಒಪ್ಪಬೇಕು ಅನ್ನುವುದಿಲ್ಲ. ನನ್ನದು ವಿಶ್ವಸಂಸ್ಕೃತಿ. ಅಭಾರತೀಯವೂ ಅದರಲ್ಲಿ ಸೇರಿದೆ. ಸನಾತನವೂ (ಪುರಾತನ ಅಲ್ಲ.) ಶಾಶ್ವತವೂ ಆಧ್ಯಾತ್ಮಿಕವೂ ವಿಚಾರ ಮತ್ತು ವಿಜ್ಞಾನಗಳಿಗೆ ಅವಿರುದ್ಧವೂ ಆಗಿರುವ ಸತ್ಯ ಎಲ್ಲಿಯೇ ಇರಲಿ ಅದನ್ನು ನಾನು ಸ್ವೀಕರಿಸಿದ್ದೇನೆ.

ಲಂಕೇಶ್: ಬ್ರಾಹ್ಮಣ ಜಾತಿಯಲ್ಲಿ ಹಲವು ಒಳಪಂಗಡಗಳಿದ್ದರೂ ಕೇವಲ ಒಂದು ಪಂಗಡವನ್ನು ನೀವು ಟೀಕಿಸಿದ್ದು ಕೇವಲ ಉದಾಹರಣೆಗೋ ಅಥವಾ ಆ ಪಂಗಡ ತೀರಾ ಮಲಿನಗೊಂಡಿದೆ ಎಂಬ ಕಾರಣಕ್ಕೋ?

ಕುವೆಂಪು: ನನ್ನ ಭಾಷಣ ಬ್ರಾಹ್ಮಣರಿಗಾಗಲಿ, ಮಾಧ್ವರಿಗಾಗಲೀ ನಿರ್ದೆಶಿಸಿದ್ದಲ್ಲ; ಒಕ್ಕೂಟದವರಿಗಾಗಿ ಮಾತ್ರ. ಜಗತ್ತಿನ ಪುರೋಹಿತಶಾಹಿ ಅವೈಚಾರಿಕ ಮತ್ತು ಅವೈಜ್ಞಾನಿಕ ಮೂಢ ಭಾವನೆಗಳ ಆಶ್ರಯದಲ್ಲಿ ಶ್ರೀ ಸಾಮಾನ್ಯರನ್ನು ಹೇಗೆ ವಂಚಿಸುತ್ತಾ ಬಂದಿದೆ ಎನ್ನುವುದನ್ನು ಕುರಿತು ವಿಚಾರವಾದಿಗಳಾಗಿ ಬಾಳನ್ನು ನಡೆಸಬೇಕು ಎನ್ನುವ ತರುಣರಿಗೆ ತಿಳಿಸುತ್ತಿದ್ದೆ. ಪ್ರಾಸಂಗಿಕವಾಗಿ, ನಾನು ಕೆಲವೇ ದಿನಗಳ ಹಿಂದೆ ಆ ಪುಸ್ತಕಗಳನ್ನು ಓದುತ್ತಿದ್ದು ಸಂಗತಿ ಮನಸ್ಸಿನಲ್ಲಿ ಹೊಚ್ಚ ಹೊಸದಾಗಿ ಇದ್ದುದರಿಂದ ಮಧ್ವ-ಜಯತೀರ್ಥರ ನಿದರ್ಶನಗಳನ್ನು ಕೊಟ್ಟೆನಷ್ಟೆ; ಆಮೇಲೆ ಗುಲ್ಲೆದ್ದ ಮತಭ್ರಾಂತರ ಗಲಾಟೆಯಿಂದಲೇ ಗೊತ್ತಾದದ್ದು ನಾನು ಎಂತಹ ಹೇಸಿಗೆಯ ಹೊಂಡಕ್ಕೆ ಕಲ್ಲು ಎಸೆದಿದ್ದೇನೆ ಎಂದು.

ಲಂಕೇಶ್: ತಮ್ಮ ಕಾವ್ಯದ ಮತ್ತು ಮುಖ್ಯ ಕಥಾಸಾಹಿತ್ಯದ (fiction) ಕೇಂದ್ರ ನಿಲುವು ವೈದಿಕ, ಆದರ್ಶಮಯ, ಅವಾಸ್ತವ ಎಂದು ಹಲವರು ಟೀಕಿಸುತ್ತಾರೆ. ಇದಕ್ಕೆ ತಮ್ಮ ಉತ್ತರವೇನು?

ಕುವೆಂಪು: ಅವರ ತಲೆ; ನನ್ನದು ವಿಶ್ವಪ್ರಜ್ಞೆ. ನಾನು ಭಾರತೀಯನಾಗಿ ಅದರಲ್ಲೂ ಕನ್ನಡಿಗನಾಗಿ ಹುಟ್ಟಿದ್ದರಿಂದ ಆ ಸಂಸ್ಕೃತಿಯ ಮತ್ತು ಆ ಭಾಷೆಯ ಪರಿಭಾಷೆಯನ್ನು ಅನಿವಾರ್ಯವಾಗಿ ಉಪಯೋಗಿಸುತ್ತೇನಷ್ಟೆ. ಸತ್ಯ ವೈದಿಕವಾಗಿ ಪ್ರಕಟವಾದ ಮಾತ್ರಕ್ಕೆ ಅಸತ್ಯವಾಗುವುದಿಲ್ಲ. ಆದರ್ಶಮಯವಾದ ಮಾತ್ರಕ್ಕೆ ಅವಾಸ್ತವವಾಗುವುದಿಲ್ಲ. ನನ್ನ ಭಾಷಣದ ಉದ್ದೇಶವೆ ಒಕ್ಕೂಟದ ಹುಡುಗರನ್ನು ಅಂತಹ ತಪ್ಪುದಾರಿಗೆ ಹೋಗದಿರುವಂತೆ ತಡೆಯಬೇಕು ಎಂಬುದಾಗಿತ್ತು. ಚಿನ್ನದ ಒಡವೆಯನ್ನು ಅಕ್ಕಸಾಲಿ ಮಾಡಿದ ಮಾತ್ರಕ್ಕೆ ಚಿನ್ನ ಅಸತ್ಯವಾಗುತ್ತದೆಯೇ? ಗ್ರಾವಿಟೇಶನ್ ಸಿದ್ಧಾಂತವನ್ನು ನ್ಯೂಟನ್ ಕಂಡುಹಿಡಿದ ಮಾತ್ರಕ್ಕೆ ಅದು ಕ್ರೈಸ್ತವಾಗುತ್ತದೆಯೇ? ವೇದದ ಋಷಿ ಸನಾತನ ಶಾಶ್ವತ ಸತ್ಯವನ್ನು ಸಾಕ್ಷಾತ್ಕರಿಸಿಕೊಂಡು ಅದಕ್ಕೆ ‘ಬ್ರಹ್ಮನ್’ ಎಂದು ಹೆಸರು ಕೊಟ್ಟ ಮಾತ್ರಕ್ಕೆ ಆ ಸತ್ಯ ಆ ಋಷಿಯ ಸೃಷ್ಠಿಯಾಗುತ್ತದೆಯೇ? ಆ ಸತ್ಯ ಋಷಿಗೆ ಪೂರ್ವದಲ್ಲಿಯೇ ಇದ್ದುದು; ಆ ಋಷಿ ಮಾತ್ರವಲ್ಲ ಮನುಷ್ಯರೆಲ್ಲ ಮುಗಿದ ಮೇಲೆಯೂ ಆ ಸತ್ಯಕ್ಕೆ ಚ್ಯುತಿ ಬರುವುದಿಲ್ಲ. ಗುರುತ್ವಾಕರ್ಷಣ ಶಕ್ತಿ ನ್ಯೂಟನ್ನಿಗೆ ಪೂರ್ವದಲ್ಲಿಯೂ ಇತ್ತು, ಮನುಷ್ಯ ಕುಲವೇ ನಾಶವಾದ ಮೇಲೆಯೂ ಇರುತ್ತದೆ.

ಅಂತಹ ಸತ್ಯವನ್ನು ನಿತ್ಯ, ಸನಾತನ ಶಾಶ್ವತ ಎನ್ನುತ್ತೇವೆ. ಬೇರೆ ಬೇರೆ ದೇಶಗಳು, ಬೇರೆ ಬೇರೆ ಭಾಷೆಗಳೂ ಬೇರೆ ಬೇರೆ ಹೆಸರು ಕೊಡಬಹುದಷ್ಟೆ. ನನ್ನ ಜೀವನ ದರ್ಶನ ಅಂತಹ ಅಚ್ಯುತ ಸತ್ಯದ ಮೇಲೆ ನಿಂತಿದೆ. ನನ್ನ ಸಾಹಿತ್ಯವೂ ಅದನ್ನೆ ಅಭಿವ್ಯಕ್ತಗೊಳಿಸುತ್ತದೆ. ಅದನ್ನು ‘ನಿಮ್ಮಲ್ಲಿ’ ಕೆಲವರು ‘ವೈದಿಕ’ ಎಂದು ನಿಂದಿಸುವಂತೆ ‘ಅವರಲ್ಲಿ’ ಕೆಲವರು ‘ಅವೈದಿಕ’ ಎಂದೂ ತಿರಸ್ಕರಿಸುತ್ತಾರೆ. ಆದರೆ ನನ್ನ ಸಾಹಿತ್ಯ ಉದ್ಭವಿಸುವುದು ಬದುಕಿನಿಂದ, ಬದುಕಿಗಾಗಿ; ಮತ್ತು ಬದುಕಿನಾಚೆಯ ಬದುಕಿಗಾಗಿ.

ಲಂಕೇಶ್: ಈಚೆಗೊಬ್ಬರು ತಮ್ಮ ಸಾಮಾಜಿಕ ವಿಮರ್ಶೆಯನ್ನು ಕುರಿತು ಹೇಳುತ್ತಾ ‘ಕುವೆಂಪು ಅವರ ಮಾತಿನಲ್ಲಿ ಬ್ರಾಹ್ಮಣ ವಿರೋಧಿ ಧ್ವನಿ ಕೇಳಿ ಬರುತ್ತಿದ್ದರೆ ಅದಕ್ಕೆ ಕಾರಣವನ್ನು ಅವರ ವೈಯಕ್ತಿಕ ಅನುಭವದಲ್ಲಿ ಹುಡುಕಬೇಕು’ ಎಂದಿದ್ದಾರೆ. ಇದಕ್ಕೆ ತಮ್ಮ ಪ್ರತಿಕ್ರಿಯೆ?

ಕುವೆಂಪು: ಶುದ್ಧ ಅಪಾರ್ಥ! ಮೊದಲನೆಯದಾಗಿ ಅದು ಬ್ರಾಹ್ಮಣ ವಿರೋಧಿ ಧ್ವನಿಯಲ್ಲ. ಅಂದರೆ ಬೌದ್ಧ, ಜೈನ, ಕ್ರೈಸ್ತ, ಇಸ್ಲಾಂ ಮತ್ತು ಲಿಂಗಾಯಿತ ಪುರೋಹಿತಶಾಹಿಯನ್ನೂ ಒಳಗೊಂಡಿದೆ. ನನ್ನ ಪುರೋಹಿತಶಾಹಿ ಖಂಡನೆಗೆ ಕಾರಣವನ್ನು ನನಗಿರಬಹುದಾದ ವೈಯಕ್ತಿಕ ಅನುಭವದಲ್ಲಿ ಹುಡುಕುವುದು ಅತ್ಯಂತ ಹಾಸ್ಯಾಸ್ಪದ. ನನ್ನ ಮೂವತ್ತು ನಲವತ್ತು ವರ್ಷದ ಹಿಂದಿನ ಬರಹವನ್ನು ಯಾರೋ ಒಬ್ಬರು ಅಂದು ಟೀಕಿಸಿದುದಕ್ಕಾಗಿ ಇಂದು ನಾನು ನಲವತ್ತು ವರ್ಷಗಳ ಮೇಲೆ ರೊಚ್ಚು ತೀರಿಸಿಕೊಳ್ಳುವುದಕ್ಕೆ ಹಾಗೆ ಮಾತನಾಡಿದೆನೆಂದು ಹೇಳುವುದು ನನ್ನ ವ್ಯಕ್ತಿತ್ವಕ್ಕೆ ಅತ್ಯಂತ ‘ಅಲ್ಪತನ’ ಆರೋಪಿಸಿದಂತಾಗುತ್ತದೆ. ನಾನು ಅಷ್ಟು ‘ಸಣ್ಣ’ವನಲ್ಲ. ನಲವತ್ತು ಐವತ್ತು ವರ್ಷಗಳಿಂದಲೂ ನಾನು ಗದ್ಯ, ಪದ್ಯ, ನಾಟಕ ಎಲ್ಲದರಲ್ಲಿಯೂ ಹೇಳುತ್ತಾ ಬಂದಿರುವುದನ್ನೆ ಮೊನ್ನೆಯು ಹೇಳಿದ್ದೇನೆ ಅಷ್ಟೆ. ಆದರೆ ಇವರು ಯಾರೂ ನೀವೂ ಸೇರಿ, ನನ್ನ ಬರಹಗಳನ್ನು ಅಷ್ಟು ಆಸ್ಥೆಯಿಂದ ಓದಿಯೇ ಇಲ್ಲ ಎಂಬುದು ನನ್ನ ಗುಮಾನಿ. ಇಡೀ ರಾಮಾಯಣದರ್ಶನವೆ ನನ್ನ ‘ದರ್ಶನ’ಕ್ಕೆ ಒಡ್ಡಿದ ಮಹಾ ಪ್ರತಿಮೆಯಾಗಿದೆ. (ನಿಮ್ಮ ಎರಡನೆಯ ಪ್ರಶ್ನೆಗೆ ಕೊಟ್ಟಿರುವ ಉತ್ತರವನ್ನೂ ನೋಡಬಹುದು.)

ಲಂಕೇಶ್: ‘ಬ್ರಾಹ್ಮಣ’ ‘ಶೂದ್ರ’ ‘ಮಣ್ಣಿನ ವಾಸನೆ’ ಇತ್ಯಾದಿ ಮಾತು ಬಹಳವಾಗಿ ಕೇಳಿಬರುತ್ತಿರುವ ಈ ಕಾಲದಲ್ಲಿ ಬ್ರಾಹ್ಮಣ, ಶೂದ್ರರ ಭಾಷೆ, ಅನುಭವ ದೃಷ್ಟಿಯನ್ನು ಕುರಿತ ತಮ್ಮ ವಿಶ್ಲೇಷಣೆ ಏನು?

ಕುವೆಂಪು: ಈ ಮಾತುಗಳೆಲ್ಲ ಮತ್ತೆ ಪುರೋಹಿತಶಾಹಿಯ ಪಿತೂರಿಯ ಟಂಕಸಾಲೆಯ ನಾಣ್ಯಗಳೆ. ನಿಮ್ಮನ್ನು ದಿಕ್ಕು ತಪ್ಪಿಸಿ ಬದುಕಿನ ಋಜುಮಾರ್ಗದಿಂದ ಕಟಂಕಿತ ಮಾರ್ಗಕ್ಕೆ ತಳ್ಳುವ ಉಪಾಯದಿಂದಲೆ ಅವರು ಅವನ್ನು ಹುಟ್ಟಿಸಿದ್ದಾರೆ. ನೀವೂ ಹಿಂದಿನಂತೆಯೇ ಇಂದು ಬೆಪ್ಪುಗಳಾಗಿ ಅದಕ್ಕೆ ವಶರಾಗಿ, ಜನರ ಬದುಕನ್ನು ಮತಮೌಢ್ಯದಿಂದ ಪಾರು ಮಾಡಿ ಅವರನ್ನು ವೈಚಾರಿಕ ಬುದ್ಧಿ ಮತ್ತು ವೈಜ್ಞಾನಿಕ ದೃಷ್ಟಿ ಸಂಪನ್ನರಾಗಿ ಪರಿವರ್ತಿಸಿ ಅವರ ಮನಸ್ಸು ಮತ್ತು ಹೃದಯಗಳನ್ನು ಬೆಳಗುವ, ಅವರ ಸೋತ ಹೃದಯಗಳನ್ನು ಹುರಿದುಂಬಿಸುವ, ಮತ್ತು ವರ್ಣ, ಜಾತಿ ಭೇದಭಾವನೆಗಳನ್ನೆಲ್ಲ ಕಸದ ಬುಟ್ಟಿಗೆ ತೂರಿ ಅವರನ್ನು ಸಮಾನತಾವಾದಿಗಳನ್ನಾಗಿ ಪರಿವರ್ತಿಸುವ ಸಾಹಿತ್ಯ ಸೃಷ್ಟಿ ಮಾಡುವ ಬದಲು, ಗುಂಪುಗಾರಿಕೆಗಲ್ಲದೆ ಮತ್ತೆ ಯಾರಿಗೂ ಬೇಡದ ಮತ್ತು ಯಾರಿಗೂ ಅರ್ಥವಾಗದ ‘ನವ್ಯ’ ನಾಮಕ ವಿಕಾರ ಸೃಷ್ಟಿಗೆ ಮರುಳಾಗಿ ಹೋಗಿದ್ದೀರಿ. ಅಂತಹ ಕೃತಕ ಅನುಕರಣೀಯ ಪಂಥಗಳನ್ನೆಲ್ಲ ನಿಮ್ಮ ಹೃದಯದಿಂದ ಕಿತ್ತೊಗೆದು, ನಿಮ್ಮವರ ಬದುಕನ್ನು ನೇರವಾಗಿ ನೋಡಿ ಅದರಿಂದ ಉದ್ಭವಿಸುವ ಸಮಸ್ಯೆಗಳನ್ನು ಅರ್ಥ ಮಾಡಿಕೊಂಡು ಅವರನ್ನು ಮೇಲಕ್ಕೆತ್ತುವ ಧೀರಭಾವಗಳನ್ನೂ ಕ್ರಿಯಾಶೀಲ ಆದರ್ಶಗಳನ್ನೂ ನಿಮ್ಮ ಬರವಣಿಗೆಗಳಲ್ಲಿ ನೀಡಬೇಕಾಗಿರುವುದು ಸದ್ಯದ ನಿಮ್ಮ ಆದ್ಯ ಕರ್ತವ್ಯ. ಪುರೋಹಿತಶಾಹಿಯ ಮೆಚ್ಚುಗೆಗೂ ಹೊಗಳಿಕೆಗೂ ಹಾತೊರೆದು ಬಾಯಿ ಬಿಟ್ಟು ನಿಮ್ಮ ಪೌರುಷ ತೇಜಸ್ಸುಗಳಿಗೆ ಅಪಮಾನ ಮಡಿಕೊಳ್ಳುವುದನ್ನು ಒಡನೆಯೇ ನಿಲ್ಲಿಸಿಬಿಡಿ. (ಮಾನಸ ಗಂಗೋತ್ರಿಯಲ್ಲಿ ಏರ್ಪಡಿಸಿದ್ದ ಲೇಖಕರ ಗೋಷ್ಠಿಯನ್ನು ಉದ್ಘಾಟಿಸುತ್ತಾ ನಾನು ಮಾಡಿದ ಭಾಷಣವನ್ನು ಗಮನವಿಟ್ಟು ಓದಿ ನೋಡಿದರೆ ನನ್ನ ಅಭಿಪ್ರಾಯಗಳು ಸ್ಪಷ್ಟಗೊಳ್ಳುತ್ತವೆ.)

ಲಂಕೇಶ್: ಕನ್ನಡ ಸಾಹಿತಿಗಳು ಬಹುಕಾಲದಿಂದ ಈ ನಾಡ ಹೆಸರಿನ ಬದಲಾವಣೆ, ಕನ್ನಡ ಮಾಧ್ಯಮ ಕುರಿತು ಮಾತನ್ನಾಡುತಿದ್ದರೂ ಕೇವಲ ಹೆಸರಿನ ಬದಲಾವಣೆ ಮಾತ್ರ ಆಗಿ ಮಾಧ್ಯಮದ ಪ್ರಶ್ನೆ ಹಾಗೇ ಉಳಿದಿದೆ. ಇದು ಸಾಹಿತಿಯ ಪ್ರಭಾವದ ದೌರ್ಬಲ್ಯ ತೋರುತ್ತದೆಯೆ?

ಕುವೆಂಪು: ಹಾಗೇನಿಲ್ಲ, ಈಗಾಗಲೆ ತಕ್ಕಷ್ಟು ಕಾರ್ಯ ನಡೆದಿದೆ. ನಡೆಯುತ್ತಲೂ ಇದೆ. ಜನತೆ, ಸರಕಾರ, ಸಾಹಿತ್ಯ ಪರಿಷತ್ತು ಮತ್ತು ವಿಶ್ವವಿದ್ಯಾಲಯಗಳು ಎಲ್ಲವೂ ಕನ್ನಡ ಮಾಧ್ಯಮ ತತ್ವವನೊಪ್ಪಿ ಕ್ರಿಯಾಶೀಲವಾಗಿ ಮುಂದುವರೆಯುತ್ತಿವೆ. ಅದು ಪೂರ್ತಿ ಕೈಗೂಡಲು ತುಸು ಸಮಯ ಬೇಕಾಗಬಹುದು ಅಷ್ಟೆ.

ಲಂಕೇಶ್: ಈ ನಾಡ ತರುಣರಿಗೆ ತಮ್ಮ ಹಿತವಚನವೇನು?

ಕುವೆಂಪು: ನನ್ನ ಸಾಹಿತ್ಯದಲ್ಲಿ- ಕತೆ, ಕಾದಂಬರಿ, ಭಾವಗೀತೆ, ಕಾವ್ಯ, ಮಹಾಕಾವ್ಯ, ಜೀವನ ಚರಿತ್ರೆ, ಭಾಷಣ, ವಿಮರ್ಶೆ ಇತ್ಯಾದಿ- ನಾನು ಹೇಳಬೇಕಾದ್ದೆಲ್ಲವನ್ನೂ ಹೇಳಿದ್ದೇನೆ. ಇಷ್ಟವಿರುವ ತರುಣರು ಅವುಗಳನ್ನು ಮನಸ್ಸಿಟ್ಟು ಓದಲಿ. ವಿಶೇಷವಾಗಿ, ಅದರ ಮುನ್ನುಡಿ ಸಹಿತ ‘ಆತ್ಮಶ್ರೀಗಾಗಿ ನಿರಂಕುಶಮತಿಗಳಾಗಿ’ ಎಂಬ ಪುಸ್ತಕದ ನಾಲ್ಕು ಭಾಷಣಗಳನ್ನಾದರೂ ಓದಲಿ. ಆದರೆ ನಾಲ್ಕನ್ನೂ ಸಮಗ್ರವಾಗಿ ತೆಗೆದುಕೊಳ್ಳಬೇಕು, ಅಷ್ಟೆ.- ಸರ್ವೋದಯ, ಸಮನ್ವಯ ಮತ್ತು ಪೂರ್ಣದೃಷ್ಟಿ ಇವುಗಳೇ ಎಲ್ಲರ ಧ್ಯೇಯಮಂತ್ರಗಳಾಗಲಿ.

ಕೃಪೆ: -‘ಪಾಂಚಾಲಿ’ (ದೀಪಾವಳಿ-ರಾಜ್ಯೋತ್ಸವ ವಿಶೇಷ ಸಂಚಿಕೆ, ಪುಟ: 11-14, 1974)
ಸಂಪಾದಕರು: ಪಿ. ಲಂಕೇಶ್

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending