Connect with us

ರಾಜಕೀಯ

ಕೇಜ್ರಿವಾಲ್ ಮತ್ತು ದೆಹಲಿ ಗಲಭೆ

Published

on

  • ವಿ.ನಟರಾಜ್

ದೆಹಲಿಯ ಮತೀಯ ಗಲಭೆಗಳ ನಿರ್ವಹಣೆಯ ವಿಚಾರದಲ್ಲಿ ಅಗತ್ಯಕ್ಕಿಂತಲೂ ಹೆಚ್ಚಿನ ಅಸಹಾಯಕತೆಯನ್ನು ಪ್ರದರ್ಶಿಸಿರುವ ದೆಹಲಿಯ ಮುಖ್ಯಮಂತ್ರಿ ಕೇಜ್ರಿವಾಲ್‌ ಅವರ ಬಗ್ಗೆ‌ ಬಹುತೇಕ ಗೆಳೆಯರು ಧಿಡೀರನೆ ಭ್ರಮನಿರಸನಗೊಂಡಿದ್ದಾರೆ.

ಮತೀಯ ಗಲಭೆ ವಿಚಾರದಲ್ಲಿ ಮೋದಿ-ಶಾ ಜೋಡಿಯ ‘ಎಂದಿನ ಸಂವೇದನಾಶೂನ್ಯತೆ’ಯನ್ನು, ಅದರಲ್ಲಿಯೂ ವಿಶೇಷವಾಗಿ ಕಾಶ್ಮೀರದ ವಿಚಾರದಲ್ಲಿ ತಾನು ಭಲೇ ಭಲೇ ಉಕ್ಕಿನ ಮನುಷ್ಯ ಎಂದು ಸಾಬೀತು ಪಡಿಸಿರುವುದಾಗಿ ತೊಡೆ ತಟ್ಟುತ್ತಿದ್ದ ಗೃಹ ಸಚಿವ ಅಮಿತ್‌ ಶಾ, ದೆಹಲಿ ಗಲಭೆಯ ವಿಚಾರದಲ್ಲಿ ಬೇಕೆಂದೇ ಬೆನ್ನುಮೂಳೆ ಕಳೆದುಕೊಂಡ ಬಗ್ಗೆ ಹೆಚ್ಚಿನ ತಕರಾರು ಪ್ರಗತಿಪರರಿಗೂ ಇದ್ದಂತಿಲ್ಲ.

ಯಾಕೆಂದರೆ, ಇಂಥದ್ದನ್ನೆಲ್ಲಾ ಈ ಜೋಡಿಯ ಆಡಳಿತ ಕಾಲದಲ್ಲಿ ನೋಡಲು ಬಹುಶಃ ಎಲ್ಲ ಪ್ರಗತಿಪರರೂ ಮಾನಸಿಕವಾಗಿ ಸಿದ್ಧರಾಗಿದ್ದಂತಿದೆ. ಆದರೆ, ಕೇಜ್ರಿವಾಲ್‌ ಕೂಡಾ ಇಷ್ಟು ಬೇಗನೇ ಮತೀಯಗಲಭೆಗಳಂತಹ ಗಂಭೀರ ವಿಷಯದಲ್ಲಿ ಶುದ್ಧಾತಿಶುದ್ಧ ರಾಜಕಾರಣಿಯಾಗಿ ಹೊರಹೊಮ್ಮುತ್ತಾರೆ, ಆಪ್ ನ ದೆಹಲಿ ರಾಜಕಾರಣಿಗಳು ರಂಗೋಲಿ ಕೆಳಗೆ ತೂರುವಂತಹ ಮಾತುಗಳನ್ನು ಆಡತೊಡಗುತ್ತಾರೆ ಎನ್ನುವುದನ್ನು ಬಹುತೇಕ ಗೆಳೆಯರು ನಿರೀಕ್ಷಿಸಿರಲಿಲ್ಲ.

ಇದೀಗ ದೇಶದ್ರೋಹ ಪ್ರಕರಣದಲ್ಲಿ ಜೆಎನ್‌ಯು ಮಾಜಿ ಮುಖಂಡ ಕನ್ಹಯ್ಯ ಕುಮಾರ್ ಹಾಗೂ ಸಂಗಡಿಗರ ವಿರುದ್ಧ ದೇಶದ್ರೋಹದ ಪ್ರಕರಣದ ವಿಚಾರಣೆಗೆ ದೆಹಲಿ ಸರ್ಕಾರ ಅನುಮತಿ ನೀಡಿರುವುದು ಸಹ ಅನೇಕರಿಗೆ ಅಚ್ಚರಿ ಉಂಟುಮಾಡಿದೆ. ದೆಹಲಿ ಗಲಭೆಯ ವಿಚಾರದಲ್ಲಿ ಆಪ್‌ ನ ಧೋರಣೆಯನ್ನು ಖಂಡಿಸಿದ್ದ ಜೆಎನ್‌ಯು ವಿದ್ಯಾರ್ಥಿಗಳ ಮೇಲೆ ಪರೋಕ್ಷವಾಗಿ ಕೇಜ್ರಿ ಸರ್ಕಾರ ಚಾಟಿ ಬೀಸಿದೆಯೇ ಎನ್ನುವ ಅನುಮಾನ ಮೇಲುನೋಟಕ್ಕೇ ಗೋಚರಿಸುತ್ತಿದೆ.

ದೆಹಲಿ ಮತೀಯ ಗಲಭೆಗಳ ಮೊದಲ ಮೂರು ದಿನ ಆಪ್ ವರ್ತಿಸಿದ ರೀತಿ ಹೇಗಿತ್ತೆಂದರೆ, ಇಂತಹದ್ದೊಂದು ಗಲಭೆ ಸಂಭವಿಸಿದರೆ ಮಾತ್ರ ದೆಹಲಿ ಸರ್ಕಾರದ ಕೆಳಗೆ ಪೊಲೀಸ್‌ ಇಲಾಖೆ ಹಾಗೂ ಆ ಮೂಲಕ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ಹೊಣೆ ಬರಬೇಕು ಎನ್ನುವ ತನ್ನ ವಾದಕ್ಕೆ ಬಲ ಬರುತ್ತದೆ ಎನ್ನುವಂತಿತ್ತು. ಕೇಜ್ರಿವಾಲ್‌ ಅವರಂತೂ ‘ಹೆಚ್ಚುವರಿ’ ಅಸಹಾಯಕತೆಯನ್ನೇ ತಮ್ಮ ಮೇಲೆ ಆವಾಹಿಸಿಕೊಂಡವರಂತೆ ‘ಪೊಲೀಸ್‌ ಇಲಾಖೆ ನಮ್ಮ ಬಳಿ ಇಲ್ಲ’, ಎನ್ನುವುದನ್ನು ಸಾರಿ ಸಾರಿ ಹೇಳುವಂತೆ ಪ್ರತಿಕ್ರಿಯಿಸಿದರು.

ಇಂತಹದ್ದೊಂದು ‘ಚಾಲಾಕಿತನದ ರಾಜಕಾರಣ’ವನ್ನು ಕೇಜ್ರಿವಾಲ್ ಯಾವತ್ತಿದ್ದರೂ‌ ಪ್ರದರ್ಶಿಸುತ್ತಾರೆ ಎನ್ನುವುದು ಅವರ ಹೋರಾಟಗಳನ್ನು ಹತ್ತಿರದಿಂದ ಗಮನಿಸಿದವರಿಗೆ ತಿಳಿಯದ ವಿಷಯವೇನಲ್ಲ. ಎಷ್ಟಾದರೂ ಕೇಜ್ರಿವಾಲ್ ಇಂದಿನ ಪೀಳಿಗೆ ಬಯಸುವ ಫಟಾಫಟ್ ಕಾರ್ಪೊರೆಟ್‌ ಮಾದರಿ ರಾಜಕಾರಣವನ್ನು ಅನುಸರಿಸುತ್ತಾ‌ ಅಡಳಿತಾತ್ಮಕ ವಿಷಯಗಳ ಮೂಲಕ ಅಂಕಗಳಿಸುವ ರಾಜಕಾರಣಿಯೇ ಹೊರತು ಸೈದ್ಧಾಂತಿಕವಾಗಿ ಗಟ್ಟಿಯಾದ, ದಿಟ್ಟ ಹೆಜ್ಜೆಯನ್ನು ಇಡಬಹುದಾದ ರಾಜಕಾರಣಿ ಅಲ್ಲ.

ಈ ಬಗ್ಗೆ ತಕರಾರು ತೆಗೆಯ ಬಯಸುವವರ ವಾದಗಳಿಗೆ ಕೇಜ್ರಿವಾಲ್ ರ ಈವರೆಗಿನ ನಡೆಗಳಲ್ಲಿ ಹೆಚ್ಚಿನ ಸಾಕ್ಷ್ಯಗಳೂ ಸಿಗುವುದಿಲ್ಲ. ಕೇಜ್ರಿ ಹೀಗೇಕೆ ಎಂದು ಕಾರಣ ಹುಡುಕುತ್ತಾ ಹೊರಟವರಿಗೆ, ಇದೆಲ್ಲದರ ಬೀಜಗಳು ಇರುವುದು ಅವರನ್ನು ಅಧಿಕಾರ ರಾಜಕಾರಣದ ಕೇಂದ್ರಕ್ಕೆ ತಂದ “ಭ್ರಷ್ಟಾಚಾರದ ವಿರುದ್ಧ”ದ ಹೋರಾಟದಲ್ಲಿ ಎನ್ನುವುದನ್ನು ಇಲ್ಲಿ ಮತ್ತೊಮ್ಮೆ ನೆನಪಿಸಬೇಕಾಗುತ್ತದೆ.

ಭ್ರಷ್ಟಾಚಾರದ ವಿರುದ್ಧದ ಹೋರಾಟ ಎನ್ನುವ ಅಣ್ಣಾ ಹಜಾರೆಯವರ ನೇತೃತ್ವದಲ್ಲಿ ನಡೆದ ‘ದೆಹಲಿ ಕೇಂದ್ರಿತ’ ಹೋರಾಟವನ್ನು ಬಿಜೆಪಿ ಹೈಜಾಕ್‌ ಮಾಡದಂತೆ ಕೇಜ್ರಿವಾಲ್‌ ತಡೆದರು ಎನ್ನುವುದನ್ನು ಹೊರತುಪಡಿಸಿದರೆ, ಅವರು ಭ್ರಷ್ಟಾಚಾರದ ಹೋರಾಟವನ್ನು ಮತೀಯವಾದಿ ಮನಸ್ಸುಗಳನ್ನು ದೂರವಿಟ್ಟು ಕಟ್ಟಿದರು ಎಂದು ಯಾರೂ ಎದೆತಟ್ಟಿ ಹೇಳಲಾರರು.

ಒಂದೆಡೆ ಕಾಂಗ್ರೆಸ್‌ನ ಅಹಿಂದ ವೋಟ್‌ ಬ್ಯಾಂಕ್‌, ಮತ್ತೊಂದೆಡೆ ಬಿಜೆಪಿಯ ಮತೀಯವಾದಿ ರಾಜಕಾರಣ ಈ ಎರಡರಿಂದ ಸೈದ್ಧಾಂತಿಕವಾಗಿ ಸಮಾನಾಂತರವಾಗಿ ಇದ್ದುಕೊಂಡು ತಮ್ಮದೇ ಆದ ವೋಟ್‌ ಬ್ಯಾಂಕ್‌ ರೂಪಿಸಿಕೊಳ್ಳುವುದು ಸುದೀರ್ಘ ಅವಧಿಯನ್ನು, ಶ್ರಮವನ್ನು ಬೇಡುವಂತಹ ರಾಜಕಾರಣ ಎನ್ನುವುದನ್ನು ಅರಿತಿದ್ದ ಕೇಜ್ರಿವಾಲ್, ಫಟಾಫಟ್‌ ರಾಜಕಾರಣಕ್ಕೆ ಮೊರೆ ಹೋದರು.

ಈ ಎರಡೂ ರಾಷ್ಟ್ರೀಯ ಪಕ್ಷಗಳಿಂದ ಸುಲಭಕ್ಕೆ‌ ‘ವೋಟು ಕೀಳುವ’ ರಾಜಕಾರಣಕ್ಕೆ ತಮ್ಮನ್ನು ಮುಡಿಪಾಗಿಟ್ಟುಕೊಂಡರು. ಕೇಜ್ರಿವಾಲ್‌ ಭ್ರಷ್ಟಾಚಾರದ ವಿರುದ್ಧ ಮಾತನಾಡಿದಷ್ಟೇ ಉತ್ಸಾಹದಿಂದ ಸಾಮಾಜಿಕ ನ್ಯಾಯ, ಮತೀಯ ಸಾಮರಸ್ಯದಂತಹ ವಿಷಯಗಳ ಬಗ್ಗೆ ಮಾತನಾಡುವುದಿಲ್ಲ. ಈ ವಿಚಾರಗಳು ಬಂದಾಗ ಪ್ರಗತಿಪರರ ಮನಸ್ಸಿಗೆ ನೋವಾಗದಂತೆ ಎಚ್ಚರಿಕೆ ವಹಿಸುತ್ತಾರಾದರೂ, ಸ್ಥಳೀಯ ರಾಜಕಾರಣದಲ್ಲಿ ತಮ್ಮನ್ನು ಬೆಂಬಲಿಸುವ ಮೂಲತಃ ಬಿಜೆಪಿಯ ಮತದಾರರ ಆಕ್ರೋಶವನ್ನು ಕಟ್ಟಿಕೊಳ್ಳುವಷ್ಟು ದೂರಕ್ಕೆ ಅವರೆಂದೂ ಹೋಗುವುದಿಲ್ಲ. ಒಂದು ವೇಳೆ ಹೋದರೂ, ಅವಕಾಶ ನೋಡಿ ಚಕ್ಕನೆ ಹಿಂದಕ್ಕೆ ಪಲ್ಟಿ ಹೊಡೆದು ಬಿಡುತ್ತಾರೆ!

ಈ ವಿಷಯದಲ್ಲಿ ಅವರೊಬ್ಬ ಉತ್ತಮ ‘ಅಕ್ರೋಬ್ಯಾಟ್’. ಕೇಜ್ರಿವಾಲ್‌ ಅವರನ್ನು ಮುಂದೆ ಬಿಟ್ಟುಕೊಂಡ ಹಿಂದೆ ಓಡುವುದೆಂದರೆ ಅದೊಂದು ದುಸ್ಸಾಹಸವೇ ಸರಿ. ಕೇಜ್ರಿ, ಯಾವಾಗ ಛಕ್ಕನೆ ಲೇನ್‌ ಬದಲಿಸಿ ಹಿಂದಕ್ಕೆ ತಿರುಗಿ ಓಡಿಬಿಡುತ್ತಾರೋ ಹೇಳಲುಬಾರದು! ಹಾಗಾಗಿಯೇ, ಅವರ ಈ ವರಸೆಗಳನ್ನು ಕಂಡಾಗ, ಸದಾಕಾಲ ಅಧಿಕಾರದ ಕೇಂದ್ರದಲ್ಲಿರಲು ಅತ್ತಿಂದಿತ್ತ ಲಾಗ ಹಾಕುವ ಜೆಡಿಯು ಮುಖಂಡ ನಿತೀಶ್‌ ಕುಮಾರ್ ಅವರ ಸುಧಾರಿತ ಆವೃತ್ತಿಯಂತೆ ಕೇಜ್ರಿ ಭಾಸವಾಗುತ್ತಾರೆ!

ಬಿಜೆಪಿಯನ್ನು ವಿರೋಧಿಸುವ ಕಟ್ಟರ್‌ ಕಾಂಗ್ರೆಸ್ಸಿಗರು ಹಾಗೂ ಸಮಾಜವಾದಿಗಳಿಗೆ, ಅದೇ ರೀತಿ, ಕಾಂಗ್ರೆಸ್‌ ಹಾಗೂ ಸಮಾಜವಾದಿಗಳನ್ನು ಕಂಡರೆ ಉರಿದುಬೀಳುವ ಉಗ್ರ ಹಿಂದುತ್ವವಾದಿಗಳಿಗೆ ಕೇಜ್ರಿವಾಲ್‌ ಒಂದು ತಂಗುದಾಣದಂತೆ. ಹೇಗಾದರೂ ಸರಿ ತಮ್ಮ ವೋಟು ಕಾಂಗ್ರೆಸ್ಸಿಗೆ ಹೋಗಬಾರದು ಎಂದು ಬಯಸುವವರು, ಎಷ್ಟಾದರೂ ಸರಿ, ಬಿಜೆಪಿ ಅಧಿಕಾರಕ್ಕೆ ಬರಬಾರದು ಎಂದು ಇಚ್ಛಿಸುವವರು ಕೇಜ್ರಿವಾಲ್‌ ರ ಪರಿಣಾಮಕಾರಿ ಆಡಳಿತ ಶೈಲಿಗೆ ಜೈಕಾರ ಹಾಕಿ ಅವರಿಗೆ ಮತ ನೀಡುತ್ತಾರೆ. ಹೀಗೆ ತಮಗೆ ಯಾವುದೇ ಸೈದ್ಧಾಂತಿಕ ಬಲದ ಸಹಾಯವಿಲ್ಲದೆ ಹರಿದುಬರುವ ಮತಗಳಿಂದಾಗಿ, ಕೇಜ್ರಿಯವರು ಯಾವತ್ತೂ ಹ್ಯಾಪಿಯೇ!

ಸೈದ್ಧಾಂತಿಕವಾಗಿ ಪೊಳ್ಳಾದರೂ ಸಹ ಇದು ಅಧಿಕಾರದ ಪಡಸಾಲೆಯಲ್ಲಿ ಬಹುಕಾಲ ಉಳಿಯುವ ವಾಸ್ತವ ರಾಜಕಾರಣದ ತಂತ್ರ ಎನ್ನುವುದನ್ನು ಅವರ ಅರ್ಥ ಮಾಡಿಕೊಂಡು, ಜೀರ್ಣಿಸಿಕೊಂಡಿದ್ದಾರೆ. ಪಾಪ, ಇದಾವುದರ ಅರಿವಿಲ್ಲದೆ, ಕೇಜ್ರಿ ಅವರಲ್ಲಿ ನೆಹರು ಪ್ರಣೀತ ಅಭಿವೃದ್ಧಿ ಮಾದರಿಯನ್ನು, ಸಾಮಾಜಿಕ ನ್ಯಾಯದ ಪರಿಕಲ್ಪನೆಯನ್ನು ನಿರೀಕ್ಷಿಸಲು ಹೊರಟವರು ಭ್ರಮನಿರಸನಕ್ಕೆ ಒಳಗಾಗುತ್ತಾರೆ…

ಇನ್ನು, ಈ ಭ್ರಷ್ಟಾಚಾರದ ವಿರುದ್ಧದ ಹೋರಾಟ ಎನ್ನುವ ಪರಿಕಲ್ಪನೆ ಇಂದು ಬಹುತೇಕವಾಗಿ ಅವಕಾಶವಾದಿ ರಾಜಕಾರಣದ ಸರಕಾಗಿಬಿಟ್ಟಿದೆ. ಇದು ಎಲ್ಲರನ್ನೂ ಒಳಗೊಳ್ಳುವ, ‘ರಾಜಕೀಯ ಚಲಾವಣೆ’ಯ ಹೋರಾಟ ಎನ್ನುವ ಕಾರಣಕ್ಕೆ ಸುಲಭಕ್ಕೆ ನಮ್ಮ ಅನೇಕ ಭರವಸೆಯ ನಾಯಕರು ಗೊತ್ತಿದ್ದೋ, ಗೊತ್ತಿಲ್ಲದೆಯೋ, ಉದ್ದೇಶಪೂರ್ವಕವಾಗಿಯೋ, ದುರುದ್ದೇಶಪೂರ್ವಕವಾಗಿಯೋ ಇದಕ್ಕೆ ಜೋತು ಬೀಳುತ್ತಾರೆ. ವಿಪರ್ಯಾಸವೆಂದರೆ, ಭ್ರಷ್ಟಾಚಾರವನ್ನು ಅಸಾಮರ್ಥ್ಯದೊಂದಿಗೂ, ಅಸಾಮರ್ಥ್ಯವನ್ನು ಮೀಸಲಾತಿಯೊಂದಿಗೂ, ಮೀಸಲಾತಿಯನ್ನು ಮೇಲ್ಜಾತಿ ವಿರೋಧಿ ರಾಜಕಾರಣದೊಂದಿಗೂ ಚಕಚಕನೆ ಜೋಡಿಸಿ ಬಿಡುವ ದುರಾಲೋಚನಾ ಪ್ರವಾಹವೊಂದನ್ನು ಈ ದೇಶದಲ್ಲಿ ವ್ಯವಸ್ಥಿತವಾಗಿ ನಿರ್ಮಿಸಲಾಗಿದೆ.

ಈ ಪ್ರವಾಹದ ಚಾಲಕಶಕ್ತಿಯಾಗಿರುವ ವರ್ಗವು ಯಾವುದೇ ಬಗೆಯ ಸಾಮಾಜಿಕ ಅಸಮಾನತೆಯ ಬಗ್ಗೆ ಅಪ್ಪಿತಪ್ಪಿಯೂ ಬಾಯಿಬಿಡುವುದಿಲ್ಲ, ಬದಲಿಗೆ, ಭ್ರಷ್ಟಾಚಾರದ ಬಗ್ಗೆ ಮಾತ್ರ ಉದ್ದುದ್ದ ಭಾಷಣ ಬಿಡುತ್ತದೆ. ನಿರುದ್ಯೋಗ, ಕುಸಿದಿರುವ ಆರ್ಥಿಕತೆ, ಹೆಚ್ಚುತ್ತಿರುವ ಸಾಮಾಜಿಕ ಉದ್ವಿಗ್ನತೆ, ಕಂದಾಚಾರ, ಮೌಢ್ಯಗಳ ವಿರುದ್ಧ ಇದಕ್ಕೆ ಪ್ರತಿಭಟಿಸುವ ಇರಾದೆ ಇರುವುದಿಲ್ಲ. ಮತೀಯವಾದದ ಬಗ್ಗೆಯಂತೂ ತುಟಿ ಬಿಚ್ಚುವುದೇ ಇಲ್ಲ. ಹೀಗಾಗಿಯೇ ಈ ಬಗೆಯ ಹೋರಾಟಗಳು ಬಹುತೇಕ ಬಾರಿ ಸಂವಿಧಾನ ವಿರೋಧಿಗಳಿಗೆ ಶಕ್ತಿಯನ್ನು ತುಂಬಿವೆ!

ಅಂದಹಾಗೆ, ಕೊನೆಯದಾಗಿ, ಕಾಶ್ಮೀರದಲ್ಲಿ ಶಾಂತಿ ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ಸಲುವಾಗಿ ತಿಂಗಳುಗಟ್ಟಲೆ ಮೊಬೈಲ್ ಹಾಗೂ ಇಂಟರ್ನೆಟ್‌ ಸೇವೆಗಳನ್ನು ಬಂದ್‌ ಮಾಡಿದ್ದನ್ನು ಸಮರ್ಥಿಸಿಕೊಂಡಿದ್ದ ಕೇಂದ್ರ ಸರ್ಕಾರ ದೆಹಲಿಯಲ್ಲಿ ಸಾಲು ಸಾಲು ಹೆಣಗಳು ಉರುಳಿದರೂ ಇಂತಹ ನಿರ್ಧಾರ ಕೈಗೊಳ್ಳಲಿಲ್ಲ! ಕೇವಲ ಒಂದು ವಾರ ಕಾಲವಾದರೂ ದೆಹಲಿಯಲ್ಲಿ ಮೊಬೈಲ್‌ ಹಾಗೂ ಇಂಟರ್‌ನೆಟ್‌ ಸೇವೆಗಳನ್ನು ಕೇಂದ್ರ ಸರ್ಕಾರ ಬಂದ್‌ ಮಾಡಲಿಲ್ಲವೇಕೆ? ಮೊದಲೇ ಕುಸಿದು ಕೂತಿರುವ ಅರ್ಥಿಕತೆಯ ಈ ಸಂದರ್ಭದಲ್ಲಿ ದೇಶದ ಯಾವುದೇ ಮೊಟ್ರೋ ನಗರಿಯಲ್ಲಿ ಇಂಟರ್ನೆಟ್‌ ಸೇವೆಯನ್ನು ಬ್ಯಾನ್‌ ಮಾಡುವುದು ಕೇಂದ್ರ ಸರ್ಕಾರಕ್ಕೆ ಸಾಧ್ಯವೇ? ಇಲ್ಲ. ಕಾಶ್ಮೀರದ ಪ್ರಯೋಗವನ್ನೇನಾದರೂ ದೇಶದ ಇತರೆಡೆ ಮಾಡಿದರೆ ಅದರಿಂದ ದೇಶದ ಆರ್ಥಿಕತೆಗೆ ಎಂತಹ ಹೊಡೆತ ಬೀಳಬಹುದು ಎನ್ನುವುದು ಅದಕ್ಕೆ ಗೊತ್ತು. ಹಾಗಾಗಿಯೇ ಅಂತಹ ದುಸ್ಸಾಹಸಕ್ಕೆ ಕೈ ಹಾಕಲು ಹೋಗುವುದಿಲ್ಲ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ಮಾನವ ಸಂಪನ್ಮೂಲ ನೀತಿ ಗುತ್ತಿಗೆ ನೌಕರರಿಗೆ ಮಾರಕ | ನೀತಿ ರದ್ದುಗೊಳಿಸಲು ಶಾಸಕ ಜೆ.ಎಸ್.ಬಸವಂತಪ್ಪಗೆ ಮನವಿ

Published

on

ಸುದ್ದಿದಿನ,ದಾವಣಗೆರೆ: ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳ ಪ್ರಸ್ತಾವನೆ ಎನ್ಎಚ್ ಎಂ ಸಿಬ್ಬಂದಿಗಳಲ್ಲಿ ಆತಂಕ ಮೂಡಿಸಿದ್ದು, ಮುಖ್ಯಮಂತ್ರಿಗಳು ಹಾಗೂ ಆರೋಗ್ಯ ಸಚಿವರು ಮಧ್ಯಸ್ತಿಕೆ ವಹಿಸಿ ಸರಿಪಡಿಸಲು ಶಿಪಾರಸ್ಸು ಮಾಡಬೇಕು. ಈ ಬಗ್ಗೆ ಬೆಳಗಾವಿಯ ಚಳಿಗಾಲ ಅಧಿವೇಶನದಲ್ಲಿ ಪ್ರಸ್ತಾಪ ಮಾಡಬೇಕೆಂದು ಕರ್ನಾಟಕ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆ ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರ ಸಂಘದ ಜಿಲ್ಲಾ ಪದಾಧಿಕಾರಿಗಳು ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ ಅವರಿಗೆ ಶನಿವಾರ ಮನವಿ ಸಲ್ಲಿಸಿದರು.

ರಾಷ್ಟ್ರೀಯ ಆರೋಗ್ಯ ಅಭಿಯಾನ ಅಡಿಯಲ್ಲಿ ಗುತ್ತಿಗೆ ಆಧಾರದ ಮೇಲೆ ಸುಮಾರು 30 ಸಾವಿರ ಸಿಬ್ಬಂದಿಗಳು ಕರ್ತವ್ಯ ನಿರ್ವಹಿಸುತ್ತಿದ್ದು, ಈ ಸಿಬ್ಬಂದಿಗಳಿಗೆ ನೇಮಕಾತಿ ಮತ್ತು ವರ್ಗಾವಣೆ ಒಳಗೊಂಡು ಮಾನವ ಸಂಪನ್ಮೂಲ (HR Policy) ನೀತಿಯನ್ನು ಜಾರಿಗೊಳಿಸುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು ಕಳೆದ ಅ.28ರಂದು ಆದೇಶ ಹೊರಡಿಸಿ, ಅಭಿಯಾನ ನಿರ್ದೇಶಕರು, ಮುಖ್ಯ ಆಡಳಿತಾಧಿಕಾರಿಗಳು ಹಾಗೂ ಮುಖ್ಯ ಆರ್ಥಿಕ ಅಧಿಕಾರಿಗಳಿಗೆ ವರದಿ ನೀಡಲು ಸೂಚನೆ ನೀಡಿದ್ದಾರೆ.

ಈ ವಿಷಯದ ಬಗ್ಗೆ ಈಗಾಗಲೇ ಅಭಿಯಾನ ನಿರ್ದೇಶಕರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಎಲ್ಲಾ ಗುತ್ತಿಗೆ ನೌಕರರ ವೃಂದವಾರು ಸಂಘಟನೆಗಳ ಅಭಿಪ್ರಾಯ ನೀಡಲಾಗಿದೆ. ಎಲ್ಲಾ ಸಂಘಟನೆಗಳು ಈ ಒಂದು ಹೊಸ ಸಿಬ್ಬಂದಿಗಳಿಗೆ ಮಾರಕ ಇರುವಂತಹ ಮಾನವ ಸಂಪನ್ಮೂಲ ನೀತಿಯನ್ನು ಜಾರಿಗೊಳಿಸಲು ವಿರೋಧ ವ್ಯಕ್ತಪಡಿಸಿವೆ.

ಸರ್ಕಾರ ಈಗ ನೀಡುತ್ತಿರುವ ಕಡಿಮೆ ವೇತನದಲ್ಲಿ ಈ ಸಿಬ್ಬಂದಿಗಳು ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದಾರೆ. ಈ ಸಿಬ್ಬಂದಿಗಳಿಗೆ ಖಾಯಂ ಸಿಬ್ಬಂದಿಗಳಂತೆ ಕಡ್ಡಾಯ ವರ್ಗಾವಣೆ ಮಾಡಿದರೆ ಈ ಕಡಿಮೆ ವೇತನದಲ್ಲಿ ಕುಟುಂಬ ನಿರ್ವಹಣೆ ಹೇಗೆ ಸಾಧ್ಯ? ಮೂರು ಮೂರು ತಿಂಗಳಿಗೊಮ್ಮೆ ವೇತನ ಆಗುತ್ತಿದ್ದು ಬೇರೆ ಜಿಲ್ಲೆಗೆ ಕಡ್ಡಾಯ ವರ್ಗಾವಣೆ ಮಾಡಿದ್ದರೆ ಮನೆ ಬಾಡಿಗೆ ಕಟ್ಟಲಾಗದೇ ಬೀದಿಗೆ ಬರಬೇಕಿದೆ ಎಂದು ಶಾಸಕರಿಗೆ ಮನವರಿಕೆ ಮಾಡಿದರು.

ಒಂದು ವೇಳೆ ಇಂತಹ ಕ್ರಮ ಕೈಗೊಂಡರೆ ಖಾಯಂ ಸಿಬ್ಬಂದಿಗಳಿಗೆ ನೀಡಿದಂತೆ ಎಲ್ಲಾ ಸೌಕರ್ಯ ಹಾಗೂ ಖಾಯಂ ಸೇರಿದಂತೆ ವೇತನ ಹೆಚ್ಚಳ ಮಾಡಿ, ಟಿಎ, ಡಿಎ, ಎಚ್ ಆರ್ ಎ ನೀಡಿ ಇಂತಹ ಆದೇಶ ಮಾಡಬೇಕು. ಸಿಬ್ಬಂದಿಗಳಿಗೆ ಬೆನ್ನು ತಟ್ಟಿ ಕೆಲಸ ಮಾಡಿಸಿಕೊಳ್ಳಬೇಕು.ಅದು ಬಿಟ್ಟು ಹೊಟ್ಟೆ ಮೇಲೆ ಹೊಡೆಯುವಂತಹ ಯಾವುದೇ ಆದೇಶ ಹೊರಡಿಸುವುದು ಎಷ್ಟು ಸರಿ ಎಂದು ಸಿಬ್ಬಂದಿಗಳು ಪ್ರಶ್ನೆ ಮಾಡಿದ್ದಾರೆ.

ಪ್ರಧಾನ ಕಾರ್ಯದರ್ಶಿಗಳ ಈ ಒಂದು ಪತ್ರ 30 ಸಾವಿರ ನೌಕರರಿಗೆ ಆತಂಕ ಸೃಷ್ಟಿ ಮಾಡಿದೆ. ಇದು ಈ ವರ್ಷದಲ್ಲಿ ಮೊದಲ ಸಾರಿ ಅಲ್ಲದೆ ಇದೇ ವರ್ಷ ಸಾಕಷ್ಟು ಮಾನಸಿಕ ಒತ್ತಡ ಹೆಚ್ಚಳವಾಗಿರುವ ಅನೇಕ ಆದೇಶ ಮಾಡಿದ್ದಾರೆ.

ಪ್ರತಿ ವರ್ಷ ಏಪ್ರಿಲ್ ಒಂದನೇ ತಾರೀಖು ಎಲ್ಲಾ ನೌಕರರಿಗೆ ಒಂದು ದಿವಸ ವಿರಾಮ ನೀಡಿ ಮುಂದುವರೆಸುತ್ತಿದ್ದು 2005 ರಿಂದ ಸುಮಾರು 20 ವರ್ಷಗಳವರೆಗೆ ಈ ಪದ್ಧತಿ ನಡೆದುಕೊಂಡು ಬಂದಿದೆ. ಆದರೆ ಈ ವರ್ಷ ಏಕಾಏಕಿ ಕೇವಲ 15 ದಿವಸ ವಿಸ್ತರಣೆ ನೀಡಿ, ತದನಂತರ ಒಂದು ತಿಂಗಳು ವಿಸ್ತರಣೆ ನೀಡಿ ಆಮೇಲೆ ಮೂರು ತಿಂಗಳ ವಿಸ್ತರಣೆ ನೀಡಿ ತದನಂತರ ಸಿಬ್ಬಂದಿಗಳಿಗೆ ಕರ್ತವ್ಯದಿಂದ ವಿಮುಕ್ತಿಗೊಳಿಸುವ ಆದೇಶ ನೀಡಿದ್ದು ನಮ್ಮ ಸಂಘಟನೆಯಿಂದ ಕೋರ್ಟ್ ನಲ್ಲಿ ದಾವೆ ಹೂಡಿದ್ದು ಇದೆ, ಕಳೆದ 8 ತಿಂಗಳಲ್ಲಿ ವೇತನ ಪಡೆಯಲು ಸರಿಯಾಗಿ ಅನುದಾನ ಬಿಡುಗಡೆ ಆಗದೇ ಸಿಬ್ಬಂದಿಗಳು ಪರದಾಡುವಂತಾಗಿದೆ. ಈ ಬಗ್ಗೆ ಸದನದಲ್ಲಿ ಗಮನ ಸೆಳೆದು ನಮಗೆ ನ್ಯಾಯ ಕೊಡಿಸಬೇಕೆಂದು ಶಾಸಕರಲ್ಲಿ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಸಂಘದ ಜಿಲ್ಲಾಧ್ಯಕ್ಷ ಹಾಲಸ್ವಾಮಿ, ಪ್ರಧಾನ ಕಾರ್ಯದರ್ಶಿ ಡಾ.ಮಂಜುನಾಥ್, ಸುನೀಲ್, ಸುರೇಶ್, ಮಹಾಲಿಂಗಪ್ಪ, ಬಸವರಾಜ್, ದೊಡ್ಡಮನಿ, ಡಾ.ರೇಣುಕಾ, ಇನ್ನಿತರರಿದ್ದರು‌.”

  • ಪ್ರಧಾನ ಕಾರ್ಯದರ್ಶಿಗಳ ಆದೇಶ ರದ್ದುಗೊಳಿಸಲು ಎನ್ ಎಚ್ ಎಂ ಸಿಬ್ಬಂದಿಗಳು ಆಗ್ರಹ
  • ಈ ಬಗ್ಗೆ ಬೆಳಗಾವಿ ಚಳಿಗಾಲ ಅಧಿವೇಶನದಲ್ಲಿ ಚರ್ಚಿಸಲು ಶಾಸಕ ಕೆ.ಎಸ್.ಬಸವಂತಪ್ಪಗೆ ಸಿಬ್ಬಂದಿಗಳ ಮನವಿ

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ದಾವಣಗೆರೆ | ಜಿಲ್ಲಾ ಪಂಚಾಯಿತಿ ಸಿ.ಇ.ಒ ಗಿತ್ತೆ ಮಾಧವ್ ವಿಠ್ಠಲ್ ರಾವ್ ವಿರುದ್ಧ ಲೋಕಾಗೆ ದೂರು

Published

on

ಸುದ್ದಿದಿನ,ದಾವಣಗೆರೆ:2023-24ನೇ ಸಾಲಿನಲ್ಲಿ ಚನ್ನಗಿರಿ ತಾಲ್ಲೂಕಿನಲ್ಲಿ ಬರುವ ಸಮಸ್ಯಾತ್ಮಕ ಗ್ರಾಮಗಳಲ್ಲಿ ತುರ್ತು ಕುಡಿಯುವ ನೀರಿನ ಕಾಮಗಾರಿಯಲ್ಲಿ ನಡೆದಿರುವ ಅವ್ಯವಹಾರ ತನಿಖೆಗೆ ಒಳಪಡಿಸುವಂತೆ ಕೋರಿ ಅರ್ಜಿ ಸಲ್ಲಿಸಿ 5 ತಿಂಗಳು ಕಳೆದರೂ ಯಾವುದೇ ತನಿಖೆ ನಡೆಸದೆ ನಿರ್ಲಕ್ಷ್ಯ ತೋರಿದ ದಾವಣಗೆರೆ ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶ್ರೀ ಗಿತ್ತೆ ಮಾಧವ್ ವಿಠ್ಠಲ್ ರಾವ್, ಇವರ ವಿರುದ್ಧ ಕರ್ತವ್ಯ ಲೋಪದ ಅಡಿಯಲ್ಲಿ ಪ್ರಕರಣ ದಾಖಲಿಸಿರುವುದಾಗಿ ವಕೀಲ ಡಾ.ಕೆ.ಎ.ಓಬಳೇಶ್ ತಿಳಿಸಿದ್ದಾರೆ.

ದಾವಣಗೆರೆ ಜಿಲ್ಲಾ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ, ದಾವಣಗೆರೆ ಇಲ್ಲಿಗೆ 2023-24ನೇ ಸಾಲಿನಲ್ಲಿ ಉಂಟಾದ ಮಳೆಯ ಅಭಾವ ಮತ್ತು ಬರದ ಕಾರಣದಿಂದ ಕೋಟ್ಯಾಂತರ ರೂಪಾಯಿಗಳನ್ನು ಕುಡಿಯುವ ನೀರಿಗಾಗಿ ಸರ್ಕಾರ ಬಿಡುಗಡೆ ಮಾಡಿರುತ್ತದೆ. ಆದರೆ ಕೆಲವು ಅಧಿಕಾರಿಗಳು ತುರ್ತು ಕುಡಿಯುವ ನೀರಿನ ಅನುದಾನವನ್ನು ದುರುಪಯೋಗಪಡಿಸಿಕೊಂಡ ಮಾಹಿತಿ ತಿಳಿದು, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ, ಉಪ ವಿಭಾಗ, ಚನ್ನಗಿರಿ ಇವರಿಂದ ಮಾಹಿತಿಹಕ್ಕು ಅಡಿಯಲ್ಲಿ ದಾಖಲೆ ಪಡೆಯಲಾಗಿದೆ.

ದಾಖಲೆಗಳನ್ನು ಪರಿಶೀಲನೆ ಮಾಡಿದಾಗ ಸಾಕಷ್ಟು ಅವ್ಯವಹಾರ ನಡೆದಿರುವುದು ಕಂಡುಬಂದ ಕಾರಣ ಸೂಕ್ತ ದಾಖಲೆಗಳೊಂದಿಗೆ ದಿನಾಂಕ: 05-07-2025 ರಂದು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಜಿಲ್ಲಾ ಪಂಚಾಯಿತಿ, ದಾವಣಗೆರೆ ಇವರಿಗೆ ದೂರು ನೀಡಿ, ತನಿಖೆಗೆ ಒಳಪಡಿಸುವಂತೆ ಕೋರಿದ್ದರು. ದೂರು ನೀಡಿ 3 ತಿಂಗಳು ಕಳೆದರೂ ದೂರು ಅರ್ಜಿಗೆ ಸಂಬಂಧಿಸಿದಂತೆ ತನಿಖೆಯನ್ನು ಕೈಗೊಂಡ ಬಗ್ಗೆ ಮಾಹಿತಿಯನ್ನಾಗಲಿ ಅಥವಾ ಹಿಂಬರಹವನ್ನಾಗಲಿ ನೀಡದ ದಿನಾಂಕ: 29-10-2025 ರಂದು ಜ್ಞಾಪನವನ್ನು ಸಹ ನೀಡಲಾಗಿತ್ತು.

ಆದರೆ ನಾವು ಜ್ಞಾಪನ ನೀಡಿ ಒಂದು ತಿಂಗಳು ಕಳೆದರೂ ಯಾವುದೇ ತನಿಖೆ ನಡೆಸದೆ ನಿರ್ಲಕ್ಷ್ಯ ತೋರಿದ ದಾವಣಗೆರೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಶ್ರೀ ಗಿತ್ತೆ ಮಾಧವ್ ವಿಠ್ಠಲ್ ರಾವ್ ಇವರ ವಿರುದ್ಧ ಕರ್ತವ್ಯ ಲೋಪದ ಅಡಿಯಲ್ಲಿ ವಕೀಲ ಡಾ.ಕೆ.ಎ.ಓಬಳೇಶ್ ಲೋಕಾಯುಕ್ತದಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಉಳಿಕೆ ಸರ್ಕಾರಿ ನಿವೇಶನ ಇಲಾಖೆಗಳ ವಿವಿಧ ಉದ್ದೇಶಿತ ಕಟ್ಟಡಗಳಿಗೆ ಹಂಚಿಕೆ: ಡಿಸಿ ಜಿ.ಎಂ.ಗಂಗಾಧರಸ್ವಾಮಿ

Published

on

ಸುದ್ದಿದಿನ,ದಾವಣಗೆರೆ: ದಾವಣಗೆರೆಯಲ್ಲಿ ಸರ್ಕಾರಿ ನಿವೇಶನಗಳು ಖಾಲಿ ಇದ್ದರೆ ಅವುಗಳನ್ನು ಕೂಡಲೇ ಸರ್ಕಾರಿ ಕಚೇರಿಗಳ ಉಪಯೋಗಕ್ಕೆ ನೀಡಬೇಕೆಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಗಂಗಾಧರಸ್ವಾಮಿ.ಜಿ.ಎಂ ಸೂಚಿಸಿದರು.

ಮಂಗಳವಾರ(ಡಿ.2) ರಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಪ್ರಧಾನ ಮಂತ್ರಿಗಳ 15 ಅಂಶಗಳ ಕಾರ್ಯಕ್ರಮದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಕೊರತೆಯಾಗಬಾರದು. 100 ವಿದ್ಯಾರ್ಥಿಗಳು ವಾಸಿಸುವ ಕಟ್ಟಡಕ್ಕೆ ಬದಲಾಗಿ 400 ವಿದ್ಯಾರ್ಥಿಗಳು ವಾಸ ಮಾಡುವ ಕಟ್ಟಡವನ್ನು ನಿರ್ಮಿಸಬೇಕು ಎಂದರು. ಖಬರಸ್ಥಾನಕ್ಕೆ ಮತ್ತು ಸ್ಮಶಾನಕ್ಕೆ ಜಾಗದ ಅವಶ್ಯಕತೆ ಇದ್ದರೆ ನೀಡಲಾಗುತ್ತದೆ ಎಂದು ಭರವಸೆ ನೀಡಿದರು.

ಅಂಗನವಾಡಿ ಕೇಂದ್ರಗಳನ್ನು ಅಲ್ಪಸಂಖ್ಯಾತರ ಸಮುದಾಯದ ಜನರು ಅಧಿಕವಾಗಿ ವಾಸಿಸುತ್ತಿರುವ ತಾಲ್ಲೂಕುಗಳು ಮತ್ತು ಗ್ರಾಮಗಳಲ್ಲಿ ತೆರೆಯುವುದು, ಇದರಿಂದಾಗಿ ಯೋಜನೆಯ ಪ್ರಯೋಜನೆಗಳು ಅವರುಗಳಿಗೆ ನೇರವಾಗಿ ಸಿಗುತ್ತವೆ. ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿರುವ ಶಾಲೆ, ಕಾಲೇಜು ಹಾಗೂ ಅಂಗನವಾಡಿಗಳಿಗೆ ವಕ್ಫ್ ಬೋರ್ಡ್ ಅಥವಾ ಯಾವುದೇ ಇಲಾಖೆಯ ಅಧೀನದಲ್ಲಿನ ನಿವೇಶನವಿದ್ದರೂ ಗುರುತಿಸಿ ಶಾಲೆ, ಕಾಲೇಜುಗಳ ಕಟ್ಟಡ ನಿರ್ಮಿಸಬೇಕು. ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚಾಗಿ ವಾಸಿಸುತ್ತಿರುವ ಅಲ್ಪಸಂಖ್ಯಾತ ಸಮುದಾಯಗಳಿಗೆ ಇಲಾಖೆಗಳಲ್ಲಿನ ಯೋಜನೆಗಳನ್ನು ಸಮರ್ಪಕವಾಗಿ ಒದಗಿಸುವ ಮೂಲಕ ಶಿಕ್ಷಣ ಮತ್ತು ಆರೋಗ್ಯಕ್ಕೆ ಹೆಚ್ಚಿನ ಆಧ್ಯತೆ ನೀಡಬೇಕು.

ವಿವಿಧ ಇಲಾಖೆಯ ಅನುಪಾಲನಾ ವರದಿಯನ್ನು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅಧಿಕಾರಿ ಭಕ್ತಮಾರ್ಕಡೇಶ್ವರ ಜಿಲ್ಲಾಧಿಕಾರಿಯವರಿಗೆ ಸಲ್ಲಿಸಿದರು.

ಸಮಾಜದ ಧಾರ್ಮಿಕ ಮುಖಂಡರು ಅಲ್ಪಸಂಖ್ಯಾತ ವಿದ್ಯಾರ್ಥಿಗಳನ್ನು ವಸತಿ ಶಾಲೆಗೆ ಸೇರಿಸುವಂತಾಗಲು ಪ್ರೇರೇಪಿಸಬೇಕು. ವಸತಿ ಶಾಲೆಯಲ್ಲಿ ಗುಣಮಟ್ಟದ ಶಿಕ್ಷಣ ದೊರೆಯುವುದರ ಜೊತೆಗೆ ಅಗತ್ಯ ಸೌಲಭ್ಯ ಇರುವ ಬಗ್ಗೆ ತಿಳಿಸಬೇಕು ಎಂದರು.

ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಮಮತ ಹೊಸಗೌಡ್ರು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕರಾದ ರಾಜಾನಾಯ್ಕ, ಡಿಡಿಪಿಐ ಕೊಟ್ರೇಶ್, ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿರುವರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending