ಭಾವ ಭೈರಾಗಿ
ಕವಿತೆ | ಮನುಜನು ನಾನು

- ಮೂಲ : ತೆಲುಗಿನ ತಂಗೆಲ್ಲ ರಾಜಗೋಪಾಲ
- ಕನ್ನಡಕ್ಕೆ : ಅರುಣ್ ನವಲಿ
ಸೃಷ್ಠಿ ನಂಗಾಗಿಯೇ ವಿಸ್ತಾರ ಇದೆಯೆಂದೂ
ಭೂ-ಗೋಲ ನಂಗಾಗಿಯೇ ತಿರುಗುತ್ತಲಿದೆಯೆಂದೂ
ಸಮಸ್ತ ಜೀವಕೋಟಿ ನನ್ನಡಿಯಾಳು ಎಂದೂ
ಮೂಢನಂತೆ ನಂಬಿರುವ ಮನುಜನು ನಾನು
ಮೂಢನಂತೆ ನಂಬಿರುವ ಮನುಜನು ನಾನು
ಪೃಥ್ವಿಯನು ತಾಯೆನ್ನುವೆ ನಾನು
ನೇಸರನೇ ತಂದೆ ಅಂದೆ ನಾನು
ನಡಿಗೆ ಬರುವವರೆಗೆ ನಟಿಸಿದವನು ನಾನು
ಹಾರುವಾಗ ಮೋಡವಿದು ಅಡ್ಡಿ ಎಂದೆನು
ಹಾರುವಾಗ ಮೋಡವಿದು ಅಡ್ಡಿ ಎಂದೆನು
ಕಾಲಿಟ್ಟೊಡೆ ಕಾಡಕಡಿದು ದಾರಿ ಮಾಡಿದವನು
ದಡದಿ ನಿಂತು ಕಡಲಲೆಗೆ ಸೆಡ್ಡು ಹೊಡೆದೆನು
ತಾಯ ಗರ್ಬದೀ ಬಂಗಾರ ಉಂಟೆಂದು-
ಬಗೆದುಬಿಟ್ಟೆನು
ಕಡಲ ಕಿಬ್ಬೊಟ್ಟೆಗೆ ಅಮೃತಕೆ ಕಡೆಗೋಲ ಇಟ್ಟೆನು!
ಅರೇ…ನಾಳೆಗೇನೋ ಅಂದೊಡನೆ
ನಾನಿರುವೆನೆ? ಅಂದು ನಕ್ಕು ನಡೆದೆನು.
ನೆಲದ ಮೇಲೆ ಗೆರೆಯಾ ಗೀಚಿ
ನಂದು-ನಿಂದಂತ ಹಂಚಿಕೊಂಡೆನು
ಜಗಳ ಜೂಟಿ ಮಾಡುತ್ತಲೆ ಕಾಲವನ್ನೇ ಮರೆತೆನು
ನಾನೆ ರಾಜನೆಂದೆನು
ದಕ್ಕಿದ್ದೆಲ್ಲ ರಾಜ್ಯವೆಂದುಕೊಂಡೆನು
ಹುಚ್ಚಾಟ-ಕಚ್ಚಾಟವನೇ ಇತಿಹಾಸ ಎಂದೆನು
ಗುರುತಿಗಾಗಿ ಬಂಡೆಗಲ್ಲ ನೆಟ್ಟೆ ನಾನು
ನಾ ಹೇಳಿದಂತೆ ಕೇಳುವಂಥ
ಕೆತ್ತಿದಂತೆ ಕಾಣುವಂಥ
ನನ್ನಂತೆಯೆ ತೋರುವ ದೇವರ ಧರೆಗೆ ತಂದೆನು
ನನ್ನ ಕಾಯುವುದೇ ದೇವರೆಂದು ನಂಬಿನಡೆದೆನು
ಕರುಣೆ ತೋರೋ ದೇವನೆಂದು ಕೈಯ ಮುಗಿದೆನು
ಅದನು-ಇದನು ಕೊಂದು ತಿಂದು
ಕಾಣದಂತ ರೋಗ ಬಂದು ಊರೂರು ಅಲೆದೆನು
ಗಂಡಾಂತರ ಗಡಿ ದಾಟಲು ಕೈಕಟ್ಟಿ ಕೂತೆನು
ಗುಮ್ಮ ಹೋಗಲಮ್ಮ ಎಂದು ಬೆವರು ಬಂದೆನು
ನೀನು ಹಾಡದಿದ್ದರೀಗ ಚಿಗುರು ಚಿಗಿಯಲಿಲ್ಲವೇ?
ನೀನು ಕೇಳದಿದ್ದರೀಗ ವಸಂತ ಕೂಗಲಿಲ್ಲವೇ?
ನೀನು ಕೇಳದಿದ್ದರೀಗ ವಸಂತ ಕೂಗಲಿಲ್ಲವೆ
ನಾ ನಡೆಯೋದು ನಿಂತಕ್ಷಣ ಭೂಬ್ರಮಣೆಯು ನಿಂತಿತೆ
ಏಳುವುದು ತಡವೆಂದು ಹಕ್ಕಿಗಾನ ಅಡಗಿತೆ?
‘ರಾಜ’ನಲ್ಲ ‘ಭೋಜ’ನಲ್ಲ
ಕ್ರಿಮಿಯು ನನ್ನಷ್ಟಕೆ ನಾನೆಂದೆನು
ಬದುಕಿದರೆ ಸಾಕೆಂದು ಬಾಯಿ ಬಾಯಿ ಬಿಟ್ಟೆನು
ಸೃಷ್ಠಿಮಾತ ಮೀರೆನೆಂದು ಗಲ್ಲಗಲ್ಲ ಬಡಿದೆನು
ಏನೋ, ಬುದ್ದಿ ಬಂದಿತೆಂದು ವಿನಯ ಮೆತ್ತಿಕೊಂಡೆನು
ಮದ್ದೂ ನನಗೆ ಸಿಕ್ಕ ಒಡನೇ, ಅದೇ ವರಸೆ ತೆಗೆದೆನು
ಹೊಟ್ಟೆ ತುಂಬಿದಾಗ ನಾನು,
ಯಾರೋ ನೀನು ಎಂದೆನು..!!
ನನಗ್ಯಾರು ಸಾಟಿಯೆಂದು ಅದೇರಾಗ ನುಲಿದೆನು.!!
ಮನುಜನು ನಾನು ಸ್ವಾರ್ಥಿ ಮನುಜನು ನಾನು
ಮಾಯದಾರಿಯಲ್ಲಿ ನಡೆವ ವಿಷಕೂಟವು ನಾನು
ಮನುಜನು ನಾನು ಸ್ವಾರ್ಥಿ ಮನುಜನು ನಾನು
ಸ್ವಾರ್ಥ ದಾರಿಯಲ್ಲಿ ನಡೆವ ಹೇಯ ಜಂತುವು ನಾನು..!
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ನಮ್ಮ ಪೂರ್ವಿಕ ಶಿವನೂ ; ಅವರ ಡುಬಾಕು ಸನಾತನವೂ..

- ಹರ್ಷಕುಮಾರ್ ಕುಗ್ವೆ
ಲಿಂಗವು ದೇವರಲ್ಲ ಶಿವನು ದೇವರಲ್ಲ
ಶಕ್ತಿಯೂ ದೇವರಲ್ಲ. ಮನುಷ್ಯನ ಕಲ್ಪನೆಯ ಆಳವನ್ನು ಮೀರಿದ ಯಾವ ದೇವರೂ ಇಲ್ಲ. ಅಸಲಿಗೆ ಇಡೀ ಜಗತ್ತನ್ನು ನಡೆಸುವ ದೇವರೆಂಬುದೇ ಇಲ್ಲ.
ಶಿವನು ನಮ್ಮ ಪೂರ್ವಿಕ, ಗೌರಿ ಅತವಾ ಶಕ್ತಿ ನಮ್ಮ ಪೂರ್ವಿಕಳು. ಗಂಗೆ ನಮ್ಮ ಬದುಕು. ಶಿವನ ಕೊರಳಿನ ನಾಗ ನಮ್ಮ ಕುಲ. ಲಿಂಗ ಫಲವಂತಿಕೆಯ ಸಂಕೇತವೂ ಹೌದು, ಶಿವ ಶಕ್ತಿಯರ ಸಮಾಗಮದ ಸಂಕೇತವೂ ಹೌದು. ನಮ್ಮ ಜನರಿಗೆ ಸಂಕೇತಗಳು ಶಕ್ತಿಯಾಗಿದ್ದವು, ಪ್ರೇರಣೆಯಾಗಿದ್ದವು. ಡೊಳ್ಳು ಹೊಡೆದು ಕೇಕೆ ಹಾಕಿದಾಗ ಮಳೆ ಬಂದರೆ, ನಮ್ಮ ಡೊಳ್ಳಿನ ಸದ್ದಿನ ಶಕ್ತಿಯಿಂದಲೇ, ನಮ್ಮ ಕೇಕೆಯಿಂದಲೇ ಮಳೆ ಬಂತು ಎಂದು ನಂಬಿದರು. ಇದನ್ನು primitive magic ಪರಿಕಲ್ಪನೆ ಎನ್ನಲಾಗಿದೆ. ನಮ್ಮ ಬಳ್ಳಾರಿಯ ಸಂಗನಕಲ್ಲಿನಲ್ಲಿ 3000 ವರ್ಷಗಳ ಹಿಂದೆ ಕಲ್ಲು ಬಂಡೆಗಳ ಮೇಲೆ ಕೆತ್ತಿದ ಹೋರಿ ಮತ್ತು ಉದ್ದ ಕೊಂಬಿನ ಕೆತ್ತನೆಗಳು ಸಹ ಇಂತಹ ಒಂದು ಆದಿಮ ಮಾಂತ್ರಿಕ ಶಕ್ತಿಯ ಆಚರಣೆಯಾಗಿದೆ.
ನಂಬಿಕೆಗಳನ್ನು ಸಂಸ್ಕೃತಿಯಾಗಿ, ಪರಂಪರೆಯಾಗಿ ಗ್ರಹಿಸಬೇಕೇ ಹೊರತು ದೇವರಾಗಿ ಅಲ್ಲ. ದೇವ ಎಂಬ ಕಲ್ಪನೆಯೇ ದ್ರಾವಿಡರಲ್ಲಿ ಇರಲಿಲ್ಲ. 50 ಸಾವಿರ ವರ್ಷಗಳಿಂದ ಬಂದ ಲಿಂಗ- ಯೋನಿ ಪೂಜೆ, ಗೌರಿ ಪೂಜೆ, 9,000 ವರ್ಷಗಳಿಂದ ಬಂದ ಬೂಮ್ತಾಯಿ ಪೂಜೆ, ಅರಳಿ ಮರದ ಪೂಜೆ, ಐದು ಸಾವಿರ ವರ್ಷಗಳಿಂದ ಬಂದ ಶಿವನ ಪೂಜೆ, ಗಣಪತಿ ಪೂಜೆ, ನಾಗನ ಪೂಜೆ, 4000 ವರ್ಷಗಳಿಂದ ಬಂದ ಗತಿಸಿದ ಹಿರೀಕರ ಪೂಜೆ, ಇದರ ಮುಂದುವರಿಕೆಯಾಗಿಯೇ 2600 ವರ್ಷಗಳ ಹಿಂದೆ ಬುದ್ದ ಗುರುವು ತೀರಿದ ಬಳಿಕ ಅವನ ಅಸ್ತಿಯನ್ನು ಇಟ್ಟ ಸ್ತೂಪಗಳನ್ನು ಪೂಜಿಸಿದೆವು, ದೂಪ ಹಾಕಿದೆವು... ಇದುವೇ ಈ ನೆಲದ ಪೂಜನ ಸಂಸ್ಕತಿಯಾಗಿತ್ತು.
‘ದೇವ’ ಮತ್ತು ಅಸುರ ಇಬ್ಬರೂ ಬಂದಿದ್ದು ಮಧ್ಯ ಏಷ್ಯಾದಿಂದ ಹೊರಟಿದ್ದ ಆರ್ಯರಿಂದಲೇ. ಅವರಿಗೆ ಪೂಜೆ ಗೊತ್ತಿರಲಿಲ್ಲ. ಯಜ್ಞ ಗೊತ್ತಿತ್ತು, ಹೋಮ ಗೊತ್ತಿತ್ತು. ‘ದೇವ’ ಅತವಾ “ದ-ಏವ” ಕೂಡಾ ಮೂಲದಲ್ಲಿ ಆರ್ಯರ ಪೂರ್ವಿಕ ಕುಲ ನಾಯಕರೇ ಆಗಿದ್ದಾರು... ಹೀಗಾಗಿಯೇ ಆರ್ಯ ವೈದಿಕರ ದೇವ ಎಂದರೆ ಅವರ ದಾಯಾದಿಗಳಾಗಿದ್ದ ಪಾರ್ಸಿಯನ್ (ಜೊರಾಸ್ಟ್ರಿಯನ್) ಆರ್ಯ ಅವೆಸ್ತನ್ನರಿಗೆ ಕೆಡುಕಿನ ಸಂಕೇತವಾಗಿತ್ತು. ಹಾಗೇ ಆರ್ಯ ವೈದಿಕರು ಕೆಡುಕು ಎಂದ ಅಸುರ (ಅಹುರ) ಆರ್ಯ ಅವೆಸ್ತನ್ನರ ಪಾಲಿಗೆ “ನಾಯಕ”ನಾಗಿದ್ದ. ಅವರನ್ನು ಅಹುರ ಮಜ್ದಾ ಎಂದು ಕರೆದು ಆರಾದಿಸಿದರು.
ಭಾರತಕ್ಕೆ ಪ್ರವೇಶಿಸಿದ ಬಳಿಕ ಆರ್ಯ ವೈದಿಕರಿಗೆ ಈ ನೆಲದ ಮೊದಲ ನಿವಾಸಿಗಳ ಮೇಲೆ ಯಜಮಾನಿಕೆ ಸ್ತಾಪಿಸಬೇಕಿತ್ತು. ಅದಕ್ಕಾಗಿ ನಮ್ಮಿಂದ ಪೂಜೆಗೊಳ್ಳುತ್ತಿದ್ದ ಪೂರ್ವಿಕರನ್ನು ತಮ್ಮ “ದೇವರು” ಮಾಡಿದರು. ಆ ದೇವರ ಪೂಜೆಗೆ ಅವರೇ ನಿಂತರು. ತಮ್ಮ ಜುಟ್ಟು ಬಿಟ್ಟುಕೊಂಡು ನಮ್ಮ ಜುಟ್ಟು ಹಿಡಿದರು. ನಾವು ಪೂರ್ವಿಕರನ್ನು ಬಿಟ್ಟು ಕೊಟ್ಟು, ಅವರ ಕೈಯಲ್ಲಿ ದೇವರುಗಳ ಪೂಜೆ ನಡೆಯುವಾಗ ನಮ್ಮ ಪೂರ್ವಿಕರಿಗೆ ಗೊತ್ತೇ ಇರದಿದ್ದ ವೇದ ಮಂತ್ರಗಳನ್ನ ಕೇಳಿ ಪುನೀತರಾದೆವು. ಈ ಮಂತ್ರ ಭಾಷೆಯೇ ದೇವರಿಗೆ ಅರ್ಥವಾಗುವುದು ಎಂದು ಪುಂಗಿದ್ದಕ್ಕೆ ತಲೆಯಾಡಿಸಿ ಕೈಮುಗಿದು ಗರ್ಭಗುಡಿಯ ಹೊರಗೆ ಸಾಲಿನಲ್ಲಿ ನಿಂತೆವು. ಮುಂದಿನ 2000 ವರ್ಷಗಳ ಕಾಲ ಗುಲಾಮರಾದೆವು. ಪುರಾಣಗಳನ್ನು ಕೇಳಿದೆವು, ನಂಬಿದೆವು ಮತಿಗೆಟ್ಟೆವು, ಗತಿಗೆಟ್ಟೆವು.
ಇನ್ನೂ ಉಳಿದಿರುವುದೇನು?
ನಾವು ಶಿವನ ವಕ್ಕಲು, ಗೌರಿ- ಗಂಗೆಯರ ಒಕ್ಕಲು. ಅವರು ಇಂದ್ರ ಅಗ್ನಿಯರ ವಕ್ಕಲಾಗಿದ್ದವರು ತಮ್ಮ ದೇವರಿಗೆ ಕಿಮ್ಮತ್ತಿಲ್ಲ ಎಂದರಿತು ಅವರನ್ನೇ ಬಿಟ್ಟರು. ಈಗ ಹೇಳುತ್ತಾರೆ ನಾವೇ ಸನಾತನರು ಎಂದು! ಅವರ ಡುಬಾಕು ಸನಾತನದಲ್ಲಿ ನಮ್ಮತನ ಕಳೆದುಕೊಂಡ “ಶೂದ್ರ ಮುಂಡೇಮಕ್ಕಳಾಗಿ”, ಅವರಿಗಾಗಿ ಬಾಳು ಬದುಕು ಹಾಳುಮಾಡಿಕೊಂಡು, ಅವರ ಹೋಮ ಹವನ ಮಾಡಿಸಿ, ನಮ್ಮ ಉಳಿಕೆ ಕಾಸು ಕಳೆದುಕೊಂಡು, ಗೌರವ ಗನತೆ ಕಳೆದುಕೊಳ್ಳುವುದೇ ಇವತ್ತಿನ ಸನಾತನ!
– ಹರ್ಷಕುಮಾರ್ ಕುಗ್ವೆ
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಕವಿತೆ | ಗಾಯದ ಬೆಳಕು

- ಕಾವ್ಯ ಎಂ ಎನ್, ಶಿವಮೊಗ್ಗ
ನೋವ ಹಾಡುವುದನ್ನೇ ಕಲಿತೆ
ಬದುಕು ಬಿಕ್ಕಿತು..
ಗಾಯದ ಬೆಳಕು
ಹೊತ್ತಿ ಉರಿದು
ತಮವೆಲ್ಲ ತಣ್ಣಗಾದಾಗ
ಚುಕ್ಕಿಬೆರಳಿಗೆ ಮುಗಿಲು ತೋರಿದೆ
ಕೆಂಡದಂತ ಹಗಲು ನೆತ್ತಿಪೊರೆಯಿತು.
ಅದ್ಯಾವ ಕಾಡು ಮಲ್ಲಿಗೆಯ
ಹಾಡು ಕರೆಯಿತೊ ಏನೊ
ಎದೆ ಹಾದಿಯ ತುಂಬೆಲ್ಲಾ ಬೇಸಿಗೆ.
ಒಡಲು ತುಂಬಿ ಕಡಲು
ಜೀಕಿ ದಡ ಮುಟ್ಟಿದ
ಕಪ್ಪೆಚಿಪ್ಪಿನೊಳಗೆಲ್ಲಾ
ಸ್ವಾತಿ ಮುತ್ತು…
ಓಡುವ ಆಮೆಯಂತ ಗಡಿಯಾರ
ಮೈತುಂಬ ಮುಳ್ಳ ಹೊತ್ತು
ಸಾಗಿಸುತ್ತಿದೆ ಭವದ ಭಾರ.
ನನ್ನ ನಿನ್ನ ರೂಹು ತಿಳಿದ
ಕಾಡು ಗಿಡ ಮರ ಬೆಟ್ಟ ಬಯಲೆಲ್ಲಾ
ಕಥೆ ಕಟ್ಟಿ ಪಿಸುಗುಡುತ್ತಿವೆ
ಉಟ್ಟ ಉಸಿರಿನ ಬಟ್ಟೆ ಕಳಚಿದ ಮೇಲೆ
ಎಲ್ಲವೂ ಬೆತ್ತಲೆ…
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಕವಿತೆ | ನಾನೊಲಿದೆನಯ್ಯಾ

- ರಮ್ಯ ಕೆ ಜಿ, ಮೂರ್ನಾಡು
ಅಲೆಯುತ್ತಿದೆ ಈ ರೂಹು
ನನ್ನೊಳಗಿಂದ ಚಿಗಿದು
ನಿನ್ನ ತುದಿಬೆರಳಲಿ ಕುಣಿದು
ಗಾಳಿತುಟಿಯ ಸೋಕಿದಾಕ್ಷಣ
ಬೆವೆತು,
ಮಳೆ ಹೊಯ್ಯಿಸಿ
ಮಣ್ಣ ಘಮದೊಳಗೆ
ಲೀನವಾಗುವಂತೆ.
ಹೊಳೆಯುತ್ತದೆ ನಿನ್ನ
ಕಣ್ಣಬೊಂಬೆಯೊಳಗೆ,
ಎಷ್ಟೋ ನೋವು ಕುಡಿದ
ನದಿಯೆದೆಯೊಳಗೆ,
ನೆನಪ ಮೀಟುವ ಘಳಿಗೆಗೆಲ್ಲ
ಪಾರಿಜಾತದ ಪರಿಮಳವುಳಿವಂತೆ.
ಕಲೆಯುತ್ತದೆ ಮತ್ತೆ,
ನಿನ್ನ ಮಾತು ಜೀವವಾಗುವಂತೆ
ನಗೆಬೆಳಕು ಕೈಹಿಡಿದು
ಜೊತೆ ನಡೆಯುವಂತೆ
ಅನಂತ ಬಾನು-
ಪ್ರೇಮಗಡಲಿಗೆ ಬಾಗುವಂತೆ
ತಿರುವುಗಳಲಿ ಹೊರಳಿ,
ಕವಲಾಗುವಾಗ
ಹಾಡೊಂದು ಕಾಡುವಂತೆ
ಜಪಮಣಿ ಎಣಿಸುವ
ಬೆರಳು, ಲೆಕ್ಕ ಮರೆತು
ಉಸಿರ ಪಲುಕನು
ಚಿತ್ರವಾಗಿಸುವಂತೆ.
ಕವಿತೆ : ರಮ್ಯ ಕೆ ಜಿ, ಮೂರ್ನಾಡು
ಸುದ್ದಿದಿನ.ಕಾಂ|ವಾಟ್ಸಾಪ್|9980346243
