Connect with us

ಅಂತರಂಗ

ನುಡಿಯ ಒಡಲು -09 | ನುಡಿ ಮತ್ತು ಮೆದುಳು

Published

on

  • ಡಾ. ಮೇಟಿ ಮಲ್ಲಿಕಾರ್ಜುನ, ಸಹ ಪ್ರಾಧ್ಯಾಪಕರು,ಭಾಷಾಶಾಸ್ತ್ರ ವಿಭಾಗ, ಸಹ್ಯಾದ್ರಿ ಕಾಲೇಜು, ಶಿವಮೊಗ್ಗ

ನುಡಿ ಮತ್ತು ಮೆದುಳುಗಳ ನಡುವಣ ನಂಟಸ್ತಿಕೆ ಎಂತಹದು? ನುಡಿಗೂ ಹಾಗೂ ಮೆದುಳಿಗೂ ನೇರವಾದ ನಂಟಸ್ತಿಕೆ ಇರುವುದರಿಂದ, ಈ ಎರಡೂ ಸಂಗತಿಗಳನ್ನು ಇಲ್ಲಿ ಚರ್ಚಿಸುವ ಅಗತ್ಯವಿದೆ. ಮೆದುಳು ಹಾಗೂ ನುಡಿಯ ನಡುವಣ ನಂಟಸ್ತಿಕೆ ಎಂತಹದು? ಯಾವ ಬಗೆಯಲ್ಲಿ ಮೆದುಳು ನುಡಿಯೊಂದಿಗೆ ನಂಟಸ್ತಿಕೆಉನ್ನು ಬೆಳೆಸಿಕೊಂಡಿರುತ್ತದೆ? ಹಾಗೂ ಈಗಾಗಲೇ ಈ ಹಿಂದೆ ಚರ್ಚಿಸಿದಂತೆ, ನುಡಿ ಮಾನವರಿಗೆ ಒದಗಿರುವ ಒಂದು ಅಂತಸ್ಥ ಸಾಮರ್ಥ್ಯ.

ಈ ಸಾಮರ್ಥ್ಯ ಅವರ ಮೆದುಳಿನಲ್ಲಿ ಯಾವ ಜಾಗದಲ್ಲಿ ಅಂತರ್ಗತವಾಗಿರುತ್ತದೆ. ಮಾನವರ ಮೆದುಳಿನ ರಚನೆಯ ಮೂಲಸ್ವರೂಪವನ್ನು ಅರಿಯುವುದರ ಜೊತೆಗೆ ನುಡಿಯ ಬಗೆಗಿನ ಕೆಲವು ಕುತೂಹಲಕಾರಿ ಸಂಗತಿಗಳನ್ನು ತಿಳಿಯಬಹುದು. ಮಾನವರಲ್ಲಿ ಜನ್ಮಜಾತವಾಗಿ ನುಡಿಯನ್ನು ಗಳಿಸಿಕೊಳ್ಳುವ ಅಂತಸ್ಥ ಸಾಮರ್ಥ್ಯ ಅವರ ಮೆದುಳಿನಲ್ಲಿ ಅಂತರ್ಗತವಾಗಿರುತ್ತದೆ. ಚಾಮ್‌ಸ್ಕಿಯ ಈ ನಿಲುವನ್ನು ಎರಿಕ್ ಲೆನ್‌ಬರ್ಗ್ ಒಪ್ಪಿಕೊಳ್ಳುತ್ತಾನೆ ದಿಟ.

ಆದರೆ ನುಡಿ ಗಳಿಕೆಯ ಪ್ರಕ್ರಿಯೆಯ ಬಗೆಗೆ ಕೆಲವು ಮಹತ್ವದ ಹೊಳವುಗಳನ್ನು ಅವನು ಕೊಡುತ್ತಾನೆ. ನುಡಿ ಗಳಿಕೆಗೆ ಒಂದು ನಿಶ್ಚಿತ ಗಡುವು (ಕ್ರಿಟಿಕಲ್ ಪಿರಿಯೇಡ್) ಇರುತ್ತದೆ. ಆ ನಿಗದಿತ ಗಡುವಿನೊಳಗೆ ಪ್ರತಿ ಮಗು ತನಗೆ ಸಿಗುವ ನುಡಿಯ ಹೂಡುವಳಿಗಳ (ಇನ್‌ಪುಟ್ಸ್) ಮೂಲಕ, ತನ್ನಲ್ಲಿರುವ ಅಂತಸ್ಥ ಸಾಮರ್ಥ್ಯವನ್ನು ಬಳಸಿಕೊಂಡು ನುಡಿಯನ್ನು ಗಳಸಿಕೊಳ್ಳದೇ ಹೋದರೆ, ಆ ಮಗುವಿಗೆ ಮುಂದೆಂದೂ ನುಡಿಯನ್ನು ಕಲಿಯಲು/ಪಡೆದುಕೊಳ್ಳಲು ಸಾಧ್ಯವಾಗುವುದಿಲ್ಲ.

ಲೆನ್‌ಬರ್ಗ್ ತನ್ನ ಈ ಚಿಂತನೆಯನ್ನು ವಿವರಿಸುವುದಕ್ಕೆ ಪ್ರೌಢಿಮೆ (ಮ್ಯಾಚ್ಯುರೇಶನ್) ಎಂಬ ಒಂದು ಅರಿಮೆ ಪದವನ್ನು ಹುಟ್ಟುಹಾಕುತ್ತಾನೆ. ಈ ಪ್ರೌಢಿಮೆಯ ಅವಧಿ ಹದಿನೆಂಟು ತಿಂಗಳಿಂದ ಹನ್ನೆರಡು ಇಲ್ಲವೇ ಹದಿನಾಲ್ಕು (ಪಬರ್ಟಿಯ ಕಾಲದವರಗೆ) ವರುಷಗಳವರೆಗೆ ಗುರುತಿಸುತ್ತಾನೆ. ಈ ಪ್ರೌಢಿಮೆ ಪ್ರಕ್ರಿಯೆಯಲ್ಲಿಯೇ ನುಡಿಗಳಿಕೆಯ ನೆಲೆಗಳು ಅಡಕಗೊಂಡಿರುತ್ತವೆ. ಇವನ ಈ ತರ್ಕಕ್ಕೆ ಮುಖ್ಯ ಕಾರಣವೇ ಮಗ್ಗಲಾಗುವಿಕೆ (ಲ್ಯಾಟರಲೈಜೇಶನ್). ಈ ಅರಿಮೆಯ ಪದದ ಕಣ್ನೋಟದಿಂದ ನುಡಿ ಗಳಿಕೆಯ ನೆಲೆಗಳನ್ನು ಇನ್ನಷ್ಟು ವಿವರವಾಗಿ ನೋಡಬಹುದು.

ಪ್ರತಿಯೊಂದು ಸಾಮನ್ಯ ಮಗು ಕೂಡ ಈ ಮಗ್ಗಲಾಗುವಿಕೆಯ ಪ್ರಕ್ರಿಯೆಯಲ್ಲಿಯೆ ತನ್ನ ಎಲ್ಲ ಗ್ರಹಿಕಾ ಸಾಮರ್ಥ್ಯಗಳನ್ನು ಮೆದುಳಿನ ಬೇರೆ ಬೇರೆ ಭಾಗಗಳಲ್ಲಿ ನೆಲೆಗೊಳಿಸುವಲ್ಲಿ ನಿರತವಾಗಿರುತ್ತದೆ. ನುಡಿ ಗಳಿಕೆಯ ಪ್ರಕ್ರಿಯೆಯೂ ಈ ಮಗ್ಗಲಾಗುವಿಕೆಯ ಭಾಗವೇ ಆಗಿರುತ್ತದೆ. ಮಕ್ಕಳು ತಮ್ಮ ಮೆದುಳಿನ ನಿಶ್ಚಿತ ಭಾಗಗಳಲ್ಲಿ, ಈ ಮಗ್ಗಲಾಗುವಿಕೆಯ ಕಾಲದಲ್ಲಿಯೇ, ತಮ್ಮಲ್ಲಿರುವ ಅಂತಸ್ಥ ಸಾಮರ್ಥ್ಯದ ಮೂಲಕ ನುಡಿಯ ಬಹುತೇಕ ನೆಲೆಗಳನ್ನು ಪಡೆದುಕೊಳ್ಳುತ್ತಾರೆ. ಆದರೆ ಈ ಪ್ರಕ್ರಿಯೆ ಮಕ್ಕಳಿಗೆ ಸಿಗುವ ನುಡಿಯ ಹೂಡುವಳಿ (ಇನ್‌ಪುಟ್ಸ್) ಗಳನ್ನೂ ನಂಬಿಕೊಂಡಿರುತ್ತದೆ ಎಂಬುದನ್ನೂ ಗಮನಿಸಬೇಕಾಗುತ್ತದೆ.

ಒಂದು ಸಲ ಈ ಮಗ್ಗಲಾಗುವಿಕೆಯ ಕೆಲಸ ಮುಗಿದ ಮೇಲೆ ನುಡಿಯನ್ನು ಗಳಿಸಿಕೊಳ್ಳುವ ಕಸುವು ಸ್ಥಗಿತವಾಗುತ್ತದೆ. ಆದರೆ ಎಂದಿನಂತೆ, ಈ ಮಗ್ಗಲಾಗುವಿಕೆ ಮಗುವಿಗೆ ಆಯಾ ನುಡಿಯ ಸೊಲ್ಲರಿಮೆಯ/ವ್ಯಾಕರಣ ತಿಳಿವನ್ನು ಗಳಿಸಿಕೊಳ್ಳಲು ಅಗತ್ಯಕ್ಕಿಂತ ಹೆಚ್ಚು ಅವಕಾಶವನ್ನು ಕೊಡುತ್ತದೆ. ಹೆಚ್ಚಿನ ಮಂದಿಗೆ ಈ ನುಡಿ ಗಳಿಕೆಯ ನೆಲೆ ಅವರ ಎಡಮೆದುಳಿನಲ್ಲಿಯೇ ಕೊನೆಗೊಳ್ಳುತ್ತದೆ.

ನಿರ್ಣಾಯಕ ಕಾಲ (ಕ್ರಿಟಿಕಲ್ ಪಿರಿಯೆಡ್) ಮೀರಿದ ಮೇಲೆ, ನುಡಿ ಬೆಳವಣಿಗೆ/ಗಳಿಕೆಯ ಸಹಜ ಸ್ಥಿತಿ ನಿಂತ ಮೇಲೆ, ಒಂದುವೇಳೆ ಎಡಮೆದುಳಿಗೆ ಏನಾದರೂ ಎರವು [ಡ್ಯಾಮೇಜ್] ಉಂಟಾದರೆ, ಅಂತಹ ಎರವು ಖಾಯಂ ಆಗಿಯೇ ಉಳಿಯುತ್ತದೆ. ಕೇವಲ ಕಿರಿಯ ವಯಸ್ಸಿನ ಮಕ್ಕಳು ಮಾತ್ರ ತಮ್ಮ ಬಲಮೆದುಳನ್ನು ಬಳಸಿಕೊಂಡು ನುಡಿಯನ್ನು ಗಳಸಿಕೊಳ್ಳುವ ಸಾಮರ್ಥ್ಯವನ್ನು ತೋರಿಸುತ್ತಾರೆ.

ಆದರೆ ಈ ನಿರ್ಣಾಯಕ ಕಾಲದಲ್ಲಿ ಸಾಮನ್ಯ ಮಗು ಅತ್ಯಂತ ಸುಲಭವಾಗಿ ನುಡಿಯನ್ನು ಗಳಿಸಿಕೊಳ್ಳುತ್ತದೆ ಎಂಬುದು ಮಾತ್ರ ದಿಟ. ಈ ನಿರ್ಣಾಯಕ ಕಾಲ ಎಂಬ ನೆಲೆಯೂ ಜೈವಿಕವಾಗಿ ನಿರ್ಧರಿಸಲ್ಪಟ್ಟಿರುತ್ತದೆ. ಹಾಗಾಗಿ ನುಡಿ ಗಳಿಕೆಗೆ ಯಾವ ಕಾಲ ಸುಳುವಾಗಿರುತ್ತೆ ಮತ್ತು ಯಾವುದು ಕಷ್ಟಕರವಾಗಿರುತ್ತೆ ಎಂಬ ಸಂಗತಿಗಳೂ ಮೊದಲೇ ನಿರ್ಧಾರವಾಗಿರುತ್ತವೆ.

ಲೆನ್‌ಬರ್ಗ್ನ ಪ್ರಕಾರ ನುಡಿ ಗಳಿಕೆಯ ಪ್ರಕ್ರಿಯೆ ಅಂಬೆಗಾಲಿಡುವ ಮಗುವಿಂದ ಶುರುವಾಗಿ ಹದಿಹರೆಯದಲ್ಲಿ ಕೊನೆಗೊಳ್ಳುತ್ತದೆ. ಮತ್ತು ಇದರ ಜೊತೆಗೇನೆ ಮಗ್ಗಲಾಗುವಿಕೆ ಪ್ರಕ್ರಿಯೆಯೂ ಕೊನೆಗೊಳ್ಳುತ್ತದೆ. ಈ ವೇಳೆಯಲ್ಲಿ ಯಾವುದೇ ಔಪಚಾರಿಕ ತರಬೇತಿಯಿಲ್ಲದೇ ಮಗು ತನ್ನ ತಾಯ್ನುಡಿ ಇಲ್ಲವೇ ಮೊದಲ ನುಡಿಯನ್ನು ಅತ್ಯಂತ ಸುಳುವಾಗಿ ಕಲಿಯಬಲ್ಲದು. ಹದಿಹರಯ ಇಲ್ಲವೇ ಪಬರ್ಟಿಯ ನಂತರ ನುಡಿ ಗಳಿಕೆಯ ಕಸುವು ತನ್ನಷ್ಟಕ್ಕೆ ಸ್ಥಗಿತಗೊಳ್ಳುತ್ತದೆ.

ಎಡಮೆದುಳು ಮತ್ತು ಬಲಮೆದುಳು
ಮೆದುಳು ಮೋಟರ್, ಸೆನ್ಸರಿ ಚಟುವಟಿಕೆ ಹಾಗೂ ಚಿಂತನೆಯ ಪ್ರಕ್ರಿಯೆಯನ್ನು ನಿಯಂತ್ರಿಸುತ್ತದೆ. ಬೌದ್ಧಿಕ (ಸೆರೆಬ್ರಲ್) ಮೆದುಳನ್ನು ಎಡ ಮತ್ತು ಬಲ ಎಂದು ಎರಡು ಭಾಗಗಳನ್ನಾಗಿ ವಿಂಗಡಿಸಲಾಗುತ್ತದೆ. ಈ ಎರಡೂ ಭಾಗಗಳು ಕೆಲವು ವಿಶೇಷ ರಚನೆ ಹಾಗೂ ಕ್ರಿಯೆಗಳನ್ನು ನೆರವೇರಿಸುವಂತೆ ಕಾಣುತ್ತವೆ. ಇವುಗಳಲ್ಲಿ ಕೆಲವಷ್ಟು ಕ್ರಿಯೆಗಳು ಎಡಮೆದುಳಿನಲ್ಲಿ ಉಂಟಾದರೆ, ಮತ್ತೆ ಕಲವು ಕ್ರಿಯೆಗಳು ಬಲಮೆದುಳಿನಲ್ಲಿ ಉಂಟಾಗುತ್ತವೆ. ಲೆನ್‌ಬರ್ಗ್ನ ಪ್ರಕಾರ ಮೆದುಳು ಹೀಗೆ ಇಬ್ಭಾಗವಾಗುವ ಬಗೆಯನ್ನು ಮಗ್ಗಲಾಗುವಿಕೆ (ಲ್ಯಾಟರಲೈಜೇಶನ್) ಎಂದು ಕರೆಯಲಾಗುತ್ತದೆ.

ಇವುಗಳು ಒಂದಕ್ಕೊಂದು ಕನ್ನಡಿ ಬಿಂಬದಂತೆ ಕೆಲಸ ಮಾಡುತ್ತವೆ. ಎಡಮೆದುಳು ದೇಹದ ಬಲಗಡೆಯನ್ನು ನಿಯಂತ್ರಿಸಿದರೆ, ಬಲಮೆದುಳು ದೇಹದ ಎಡಗಡೆಯನ್ನು ನಿಯಂತ್ರಿಸುತ್ತದೆ. ಮತ್ತಿತರ ತಜ್ಞ ಕ್ರಿಯೆಗಳನ್ನು ಮೆದುಳಿನ ಎರಡೂ ಭಾಗಗಳು ನಿಭಾಯಿಸುತ್ತವೆ. ಈ ನಿಟ್ಟಿನಲ್ಲಿ ಸಾಕಷ್ಟು ಸಂಶೋಧನೆಗಳು ನಡೆದಿವೆಯಾದರೂ, ಈ ನಿಲುವುಗಳನ್ನು ಸಮರ್ಥಿಸುವಷ್ಟು ಆಧಾರಗಳು ಇನ್ನೂ ಸಿಕ್ಕಿಲ್ಲ. ಆದರೆ ಈ ಎರಡೂ ಭಾಗಗಳಲ್ಲಿ ಎಡಮೆದುಳಿನ ಭಾಗವೇ ಹೆಚ್ಚು ಪ್ರಾಬಲ್ಯವನ್ನು ಹೊಂದಿದೆ.

ನುಡಿ ಸಂಬಂಧಿ ಚಟುವಟಿಕೆಗಳಿಗೆ ಈ ಭಾಗವೇ ಹೊಣೆಯಾಗಿರುವ ಕಾರಣ ಸಹಜವಾಗಿಯೇ ಎಡಮೆದುಳಿನ ಭಾಗ ಪ್ರಾಬಲ್ಯವನ್ನು ಹೊಂದಿದೆ. ಏಕೆಂದರೆ, ನುಡಿಗೆ ಸಂಬಂಧಿಸಿದ ಬ್ರೊಕಾ ಮತ್ತು ವರ್ನಿಕ್ ಏರಿಯಾಗಳು, ಆರ್ಕ್ಯುವೇಟ್ ಫ್ಯಾಸಿಕುಲಸ್, ಆಂಗ್ಯುಲರ್ ಗಯ್ರಸ್ ಈ ಎಲ್ಲ ಜಾಗಗಳೂ ಎಡಮೆದುಳಿನಲ್ಲಿ ನೆಲೆನಿಂತುರಿವುದು ಕೂಡ ಇಂತಹ ಪ್ರಾಬಲ್ಯಕ್ಕೆ ಒತ್ತಾಸೆಯಾಗಿರಬಹುದು.

ಅಫೇಶಿಯಾ (ಮಾತಿನ ಕಸುವನ್ನು ಕಳೆದುಕೊಳ್ಳುವ ಬಗೆ. ಇದು ಬೇರೆ ಬೇರೆ ನೆಲೆಗಳಲ್ಲಿ ಇಲ್ಲವೇ ಸ್ವರೂಪಗಳಲ್ಲಿ ಉಂಟಾಗುತ್ತದೆ. ಇದು ಕೂಡ ಒಂದು ಕಾಯಿಲೆ?) ಬಗೆಗಿನ ಅಧ್ಯಯನಗಳು ಹೇಳುವಂತೆ ನುಡಿ ಕುರಿತ ಚಟುವಟಿಕೆಗಳು ಮೊದಲಾಗುವುದೇ ಎಡಮೆದುಳಿನಲ್ಲಿ. ಮೆದುಳಿನಲ್ಲಿ ಮಗ್ಗಲಾಗುವಿಕೆ ಕೆಲಸ ನಡೆಯುತ್ತದೆ ಎಂಬ ಸಂಗತಿಯನ್ನು ತಿಳಿಯಲು ಕೂಡ ಈ ಅಧ್ಯಯನಗಳೇ ಆಧಾರವಾಗಿವೆ. ಸ್ಟೇನ್‌ಬರ್ಗ್ನ ಪ್ರಕಾರ ಸೀಳು ಮೆದುಳಿನ (ಸ್ಪ್ಲಿಟ್‌ಬ್ರೇನ್) ರೋಗಿಗಳು, ಮೆದುಳು ಮಗ್ಗಲಾಗುವಿಕೆಗೆ ಬೇಕಾಗುವ ಇನ್ನೂ ಹೆಚ್ಚಿನ ಆಧಾರಗಳನ್ನು ಒದಗಿಸುತ್ತಾರೆ.

ಆದರೆ ಈ ಸೀಳು ಮೆದುಳಿನ ರೋಗಿಗಳಲ್ಲಿ ಎಡ ಮತ್ತು ಬಲ ಎರಡೂ ಮೆದುಳುಗಳು ಪ್ರತ್ಯೇಕವಾಗಿ ಕೆಲಸ ಮಾಡುತ್ತವೆ. ಆರೋಗ್ಯವಂತರ ಮೆದುಳಿನಂತೆ ಇವು ಒಂದಕ್ಕೊಂದು ಪೂರಕವಾಗಿ ಕೆಲಸ ಮಾಡುವುದಿಲ್ಲ. ಹಾಗೂ ಇವುಗಳ ನಡುವೆ ಯಾವ ಬಗೆಯ ಹೊಂದಾಣಿಕೆಯೂ ಇರುವುದಿಲ್ಲ. ಅಂದರೆ ಒಂದು ಮೆದುಳಿನಲ್ಲಿ ಇರುವ ಮಾಹಿತಿ ಮತ್ತೊಂದಕ್ಕೆ ರವಾನೆಯಾಗುವುದಿಲ್ಲ. ಆದರೆ ಆರೋಗ್ಯವಂತರ ಮೆದುಳಿನ ಈ ಎರಡೂ ಭಾಗಗಳು ಎಷ್ಟೊಂದು ವಿಷಯಗಳಲ್ಲಿ ಒಂದಕ್ಕೊಂದು ನೆರವಾಗುತ್ತವೆ ಎನ್ನುವುದು ವಿಶೇಷ.

ಡಾ.ಮೇಟಿ ಮಲ್ಲಿಕಾರ್ಜುನ್, ಪ್ರಾಧ್ಯಾಪಕರು, ಭಾಷಾಶಾಸ್ತ್ರ ವಿಭಾಗ, ಸಹ್ಯಾದ್ರಿ ಕಾಲೇಜು, ಶಿವಮೊಗ್ಗ

ಮೆದುಳಿನ ಯಾವ ಜಾಗದಲ್ಲಿ ಏನಿರುತ್ತದೆ?
ನುಡಿ, ತರ್ಕ, ವಿಶ್ಲೇಷಣಾತ್ಮಕ ಚಟುವಟಿಕೆ, ಗಣಿತಶಾಸ್ತ್ರದಲ್ಲಿ ವಿಶೇಷ ತಜ್ಞತೆ ಇವುಗಳನ್ನೆಲ್ಲ ಒಳಗೊಂಡಿರುವ ಜಾಗವೇ ಎಡಮೆದುಳು. ಹಲವಾರು ಅಧ್ಯಯನಗಳ ಮೂಲಕ ಈ ಸಂಗತಿ ಸಾಬೀತಾಗಿದೆ. ಬ್ರೊಕಾ ಮತ್ತು ವರ್ನಿಕ್ ಏರಿಯಾಗಳು, ಆರ್ಕ್ಯುವೇಟ್ ಫ್ಯಾಸಿಕುಲಸ್, ಆಂಗ್ಯುಲರ್ ಗಯ್ರಸ್ ಈ ಎಲ್ಲ ಜಾಗಗಳು ನುಡಿಯ ತಿಳುವಳಿಕೆ ಮತ್ತು ಉತ್ಪಾದನೆಯನ್ನು ನಿಯಂತ್ರಿಸುವ ಜಾಗಗಳೇ ಆಗಿವೆ ಎಂಬುದು ಗಮನಾರ್ಹ.

ಭಾವನೆಗಳನ್ನು ಹುಟ್ಟಿಸುವ ಹಾಗೂ ಅವುಗಳನ್ನು ಗುರುತಿಸುವ ನೆಲೆಗಳು, ಮುಖ ಚಹರೆಗಳನ್ನು ಗುರುತಿಸುವ, ವಸ್ತುಗಳ ರಾಚನಿಕ ಸ್ವರೂಪವನ್ನು ಸಾರ್ವತ್ರಿಕವಾಗಿ ಗ್ರಹಿಸುವ ನೆಲೆಗಳನ್ನು ಬಲಮೆದುಳೇ ಒಳಗೊಂಡಿರುತ್ತದೆ. ಮತ್ತು ಸಂಗೀತ, ಅತ್ಯಂತ ತೊಡಕಿನ ಕಣ್ನೋಟದ ಬಗೆಗಳು ಕೂಡ ಬಲಮೆದುಳಿನಲ್ಲಯೇ ಕ್ರಿಯಾಶೀಲವಾಗಿರುತ್ತವೆ. ನುಡಿಗೆ ಹೊರತಾದ ಉಲಿಗಳು ಅಂದರೆ, ಸಪ್ಪಳ ಹಾಗೂ ಪ್ರಾಣಿಗಳ ಕೂಗಾಟದ ಉಲಿಗಳನ್ನೂ ಬಲಮೆದುಳು ಒಳಗೊಂಡಿರುತ್ತದೆ. ಎಡಮೆದುಳನ್ನು ಯಾವುದೇ ಅಪಾಯ ಇಲ್ಲವೇ ಕಾಯಿಲೆಯ ಕಾರಣ ತೆಗೆದು ಹಾಕಿದರೆ, ನುಡಿಗೆ ಸಂಬಂಧಿಸಿದ ಕೆಲಸವನ್ನು ಇದು ವಹಿಸಿಕೊಳ್ಳುತ್ತದೆ.

ಪೌಲ್ ಬ್ರೋಕಾ ಮತ್ತು ಕರ‍್ಲ್ ವರ್ನಿಕ್

ಯಾರಿವರು? ಪೌಲ್ ಬ್ರೋಕಾ ಇವನೊಬ್ಬ ಫ್ರೆಂಚ್ ಸರ್ಜನ್/ನರತಜ್ಞ (ನ್ಯೂರೋಅನಾಟಮಿಸ್ಟ್). ಇವನು ಯುದ್ಧದ ಗಾಯಾಳುಗಳ ಜೀವವನ್ನು ಉಳಿಸುವ ಕೆಲಸದಲ್ಲಿ ತೊಡಗಿಕೊಂಡಿದ್ದನು. ಈ ಗಾಯಾಳುಗಳಿಗೆ ಚಿಕಿತ್ಸಿಸುವಾಗ ಅವನು ತೀರಾ ನಿಗಾವಹಿಸಿ ಎಲ್ಲರನ್ನು ಗಮನಿಸುತ್ತಿದ್ದನು. ಹಾಗೂ ಆ ಎಲ್ಲ ಗಾಯಾಳುಗಳನ್ನು ತುಂಬಾ ಕಾಳಜಿಯಿಂದಲೂ ನೋಡಿಕೊಳ್ಳುತ್ತಿದ್ದನು. ಅಸಾಧಾರಣವಾದದ್ದನ್ನು ಕಂಡುಹಿಡಿಯಲು ಕಾರಣವೇ ಅವನ ಈ ಬದ್ಧತೆ ಎಂದು ಹೇಳಬಹುದು.

ಇವನ ಚಿಕಿತ್ಸೆಯಿಂದ ಚೇತರಿಸಿಕೊಂಡ ಒಂದಿಷ್ಟು ಗಾಯಾಳುಗಳು ಎಲ್ಲ ರೀತಿಯಿಂದಲೂ ಸಹಜವಾಗಿಯೇ ಕಾಣುತ್ತಿದ್ದರು. ಆದರೆ ಇವರೆಲ್ಲರೂ ಮಾತಿನ ಕೊರತೆಯಿಂದ ಬಳಲುತ್ತಿದ್ದರು. ಈ ರೋಗಿಗಳ ಎಡಮೆದುಳಿನ ಸೀಮಿತ ಜಾಗದಲ್ಲಿ ಗಾಯವಾಗಿರುವುದೇ ಕಾರಣವಾಗಿರುತ್ತಿತ್ತು. ಮೆದುಳಿನಲ್ಲಿಯ ಈ ಜಾಗವನ್ನು ಇವನು ತನ್ನ ಸಂಶೋಧನೆಯಲ್ಲಿ ಕಂಡುಹಿಡಿದನು. ಇದನ್ನೇ ಬ್ರೋಕಾ ಏರಿಯಾ ಎಂದು ಕರೆಯಲಾಗುತ್ತದೆ.

ಮೆದುಳಿನ ಈ ಜಾಗಕ್ಕೆ ಯಾವುದೇ ಗಾಯ ಇಲ್ಲವೇ ಹೊಡೆತದ ಪರಿಣಾಮದಿಂದ ಮಾತಿನ ಕೊರತೆ ಉಂಟಾದರೆ, ಆ ಜಾಗವನ್ನು ಬ್ರೋಕಾ ಅಫೇಸಿಯಾ ಎಂದು ಗುರುತಿಸಲಾಗಿದೆ. ಅಫೇಸಿಯಾ ಎಂಬುದು ಗ್ರೀಕ್ ಪದ, ಮಾತಿನ ಕಸುವನ್ನು (ಸ್ಪೀಚ್‌ಲೆಸ್) ಕಳೆದುಕೊಂಡ ನೆಲೆಯನ್ನು ಇದು ಸೂಚಿಸುತ್ತದೆ. ಸಾವಿರದ ಎಂಟನೂರು ಎಂಬತ್ತೊಂದರಲ್ಲಿ ಮಾತಿನ ಬೇನೆಗೆ (ಅಫೇಸಿಯಾ) ಒಳಗಾಗಿದ್ದ ಒಬ್ಬ ವ್ಯಕ್ತಿಗೆ ಬ್ರೋಕಾ ಚಿಕಿತ್ಸೆಯ (ಸಲಹೆಗಳ)ನ್ನು ನೀಡುತ್ತಿದ್ದನು. ಆ ವ್ಯಕ್ತಿಯನ್ನು ಬ್ರೋಕಾ ‘ತಾನ್’ ಎಂದು ಕರೆದನು.

ಈ ತಾನ್ ತೀರಿಕೊಂಡ ಮೇಲೆ ಬ್ರೋಕಾ ಅವನ ಶವಪರೀಕ್ಷೆ ಮಾಡುತ್ತಾನೆ. ಆವಾಗ ಆ ವ್ಯಕ್ತಿಯ ಎಡಮೆದುಳಿನ ಒಂದು ಜಾಗದಲ್ಲಿ ಗಾಯವಿರುವುದು ಕಂಡುಬರುತ್ತದೆ. ಎಡ ಕಿವಿಯ ಹಾಲೆಯ ಮುಂಭಾಗದ (ಫ್ರಂಟಲ್ ಲೋಬ್) ಮೇಲಿನ ಜಾಗವೇ ಈ ಗಾಯವಿರುವ ಜಾಗವಾಗಿತ್ತು. ಅಂದರೆ ಎಡಮೆದುಳು ನೆಲೆಗೊಂಡಿರುವ ಜಾಗವೆಂದೇ ಹೇಳಬೇಕು.

ಈ ಜಾಗದಲ್ಲಿ ಉಂಟಾಗಿರುವ ಗಾಯವನ್ನು ಬ್ರೋಕಾ ಗುರುತಿಸಿದ್ದಕ್ಕಾಗಿ ಆ ಜಾಗವನ್ನೇ ಬ್ರೋಕಾ (ಜಾಗ) ಏರಿಯಾ ಎಂದು ಕರೆಯುತ್ತಾರೆ. ‘ನುಡಿಯ ಸಾಮರ್ಥ್ಯ ಮಾನವರ ದೇಹದ ಯಾವ ಭಾಗದಲ್ಲಿ ನೆಲೆಗೊಂಡಿರುತ್ತೆ?’ ಮೆದುಳಿನಲ್ಲಿಯೋ? ಇಲ್ಲವೇ ಮನಸ್ಸಿನಲ್ಲೋ? ಎಂಬ ಆವತ್ತಿನ ಕಾಲದ ನುಡಿ ಬಗೆಗಿನ ಚರ್ಚೆಗೆ ಬ್ರೋಕಾನ ಈ ನಿಲುವು, ನುಡಿ ಮೆದುಳಿನಲ್ಲಿಯೇ ನೆಲೆ ನಿಂತಿರುತ್ತದೆ ಎಂಬುದಕ್ಕೆ ಇದೊಂದು ಸಮರ್ಥನೆಯೂ ಆಗಿದೆ ಎಂಬುದನ್ನು ಮನಗಾಣುವುದಕ್ಕೆ ಈ ಸಂಗತಿಯು ಒತ್ತಾಸೆಯಾಗಿದೆ.

ಬ್ರೋಕಾ ಜಾಗದಲ್ಲಿ ಉಂಟಾಗುವ ಬೇನೆಯಿಂದ ಬಳಲುವ ವ್ಯಕ್ತಿ, ನುಡಿಗೆ ಸಂಬಂಧಿಸಿದ ಯಾವ ಬಗೆಯ ತೊಡಕುಗಳನ್ನು ಎದುರಿಸುತ್ತಾನೆ ಎಂಬುದನ್ನು ಬ್ರೋಕಾ ಕಂಡುಹಿಡಿದನು. ನುಡಿಗೆ ಸಂಬಂಧಿಸಿದ ಆ ತೊಂದರೆ ಯಾವುದೆಂದರೆ, ಮಾತನ್ನು ಹೊರಡಿಸುವುದೇ ಆಗಿರುತ್ತದೆ. ಏಕೆಂದರೆ, ಮಾತನ್ನು ಹೊರಡಿಸುವ ಜಾಗವಿರುವುದೇ ಬ್ರೋಕಾ ಏರಿಯಾ. ಇಂತವರಿಗೆ ಸರಾಗವಾಗಿ ಮಾತನಾಡಲು ಸಾಧ್ಯವಾಗುವುದಿಲ್ಲ. ಈ ನೆಲೆಯ ವ್ಯಕ್ತಿಗಳು ಬಹುತೇಕ ಸನ್ನಿವೇಶದಲ್ಲಿ ಮಾತನಾಡುವ ಕಸುವನ್ನೇ ಕಳೆದುಕೊಳ್ಳುತ್ತಾರೆ. ಇದನ್ನು ವರ್ಬಲ್ ಅಪ್ರಾಕ್ಸಿಯಾ [ಮಾತನಾಡದ ನೆಲೆ] ಎಂದು ಕರೆಯುತ್ತಾರೆ.

ಆದರೆ ಬೇರೆಯವರು ಮಾತಾಡುವುದನ್ನು ಇವರು ಅರ್ಥ ಮಾಡಿಕೊಳ್ಳುತ್ತಾರೆ. ಹಾಗೂ ವರ್ಬಲ್ ಅಪ್ರಾಕ್ಸಿಯಾದಿಂದ ಬಳಲುವ ಈ ವ್ಯಕ್ತಿಗಳಿಗೆ ಉಚ್ಚಾರಣೆಯಲ್ಲಿ ತೊಂದರೆಯಾಗುತ್ತದೆ. ಅಂದರೆ ಇವರಿಗೆ ಗಂಟಲು, ಉಲಿಪೆಟ್ಟಿಗೆ, ತುಟಿ, ದವಡೆ ಇವುಗಳ ಮೂಲಕ ಉಚ್ಚರಿಸುವಲ್ಲಿ ಕಷ್ಟವಾಗುತ್ತದೆ. ಸರಿಯಾಗಿ ಪದಗಳನ್ನು ಜೋಡಿಸಿ ಉಚ್ಚರಿಸಲು ಸಾಧ್ಯವಾಗುವುದಿಲ್ಲ. ಮುಖ್ಯವಾಗಿ ಇನ್ನೊಬ್ಬರಿಗೆ ಪ್ರತಿಕ್ರಿಯಿಸುವಾಗ, ಸ್ವಂಪ್ರೇರಿತವಾಗಿ ಏನನ್ನಾದರೂ ಉಚ್ಚರಿಸಬೇಕೆಂದರೆ ಇವರು ತಡಕಾಡುತ್ತಾರೆ.

ಪ್ರತಿಸಲವೂ ಅವರ ಹೊರಡಿಸುವ ಉಲಿಗಳ ವಿಧಾನವೇ ಬೇರೆ ಬೇರೆಯಾಗಿರುತ್ತದೆ. ಇನ್ನೊಬ್ಬರು ಉಚ್ಚರಿಸುವುದನ್ನು ನೋಡಿ ಇವರು ಅನುಕರಿಸಬಹುದಾದರೂ, ಅದು ಯಾವಾಗಲೂ ನಡೆಯುವ ಕೆಲಸವಲ್ಲ. ಇವರಿಗೆ ಗ್ರಹಿಕೆಯಲ್ಲಿ ಸುಮಾರು 50% ರಿಂದ 90% ರಷ್ಟು ನಿಖರತೆ ಇರುತ್ತದೆ. ಆದರೆ ಇದೇ ನಿಖರತೆಯನ್ನು ಪರಸ್ಪರ ಮಾತುಕತೆಗಳಲ್ಲಿ ಎದರು ನೋಡಲು ಸಾಧ್ಯವಿಲ್ಲ. ಇಂತಹ ಸನ್ನಿವೇಶದಲ್ಲಿ ಇವರ ಗ್ರಹಿಕೆಯ ಕಸುವು ಸುಮಾರು 50% ಕ್ಕಿಂತ ಕಡಿಮೆಯಾಗಬಹುದು.

ಹಾಗೂ ಇವರು ಕೇವಲ ನಾಮಪದಗಳನ್ನು ಮಾತ್ರ ಹೊರಡಿಸಬಲ್ಲರು, ಬೇರೆ ಬಗೆಯ ಪದಗಳನ್ನು ಹೊರಡಿಸಲು ಇವರಿಗೆ ಸಾಧ್ಯವಾಗುವುದಿಲ್ಲ. ನಾಮಪದಗಳೊಂದಿಗೆ ಬರುವ ಒಟ್ಟು (ಪ್ರತ್ಯಯ)ಗಳನ್ನೂ ಇವರು ಹೊರಡಿಸಲಾರರು. ಹಾಗೂ ಸೊಲ್ಲರಿಮೆ/ವ್ಯಾಕರಣದ ಅಪೂರ್ಣತೆ (ಅಗ್ರಾöಮ್ಯಾಟಿಕ್) ಮತ್ತು ಟೆಲಿಗ್ರಾಫಿಕ್ ಮಾದರಿಯ ಮಾತುಗಳನ್ನು ಮಾತ್ರ ಆಡುತ್ತಾರೆ. (ಉದಾ.ಗೆಗಾಗಿ, ನಾನು ಮನೆಗೆ ಹೋಗಿ ಊಟ ಮಾಡಿಕೊಂಡು ಬರುತ್ತೇನೆ) ಎಂಬುದನ್ನು ನಾ….ಮನೆ…..ಊಟ…. ಮುಂತಾಗಿ ಹೇಳಬಹುದು. ಬರವಣಿಗೆ ಮತ್ತು ಓದುವ ಚಳಕಗಳನ್ನೂ ಈ ಅಪ್ರಾಕ್ಸಿಯಾ ಬಾಧಿಸುತ್ತದೆ.

ನುಡಿಯ ಉತ್ಪಾದಕತೆಯಲ್ಲಿ ಕೊರತೆಯನ್ನು ಅನುಭವಿಸುವುದೇ ಬ್ರೋಕಾ ಅಫೇಸಿಯಾ. ಈ ಕೊರತೆಗಳು ನುಡಿ ಉತ್ಪಾದಕತೆಯ ಬೇರೆ ಬೇರೆ ನೆಲೆಯಲ್ಲಿಯೂ ಎದುರಾಗುತ್ತವೆ. ಬ್ರೋಕಾ ಏರಿಯಾ ಕುರಿತ ಎಲ್ಲ ವಿವರಗಳನ್ನು ಇಲ್ಲಿ ಚರ್ಚಿಸುವುದು ಸಾಧ್ಯವಿಲ್ಲ. ಸದ್ಯಕ್ಕೆ ಆ ಎಲ್ಲ ವಿವರಗಳನ್ನು ಚರ್ಚಿಸುವ ಅಗತ್ಯವೂ ಇಲ್ಲಿ ಎದ್ದು ಕಾಣುವುದಿಲ್ಲ. ಹಾಗಾಗಿ ಈಗ ಇಲ್ಲಿ ನುಡಿ ನೆಲೆಗೊಳ್ಳುವ ಮೆದುಳಿನ ಇನ್ನೊಂದು ಪ್ರಮುಖ ಭಾಗವಾಗಿರುವ ವರ್ನಿಕ್ ಏರಿಯಾ ಕುರಿತು ಚರ್ಚಿಸೋಣ.

ಕಾರ್ಲ್ ವೆರ್ನಿಕೆ

ಕಾರ್ಲ್ ವೆರ್ನಿಕೆ ಜರ್ಮನಿಯ ನರತಜ್ಞ-ನುಡಿಯರಿಗ. ಇವನು ನುಡಿ ಮತ್ತು ಮೆದುಳಿನ ನಂಟಸ್ತಿಕೆಯನ್ನು ಕುರಿತು ಪೌಲ್ ಬ್ರೋಕಾ ನಂತರ ಚಿಂತಿಸಿದವರಲ್ಲಿ ಮತ್ತೊಬ್ಬ ಬಹುದೊಡ್ಡ ಚಿಂತಕ. ಇವನು ಬ್ರೋಕಾ ಏರಿಯಾ ಹಾಗೂ ಮಾತಿನ ಕೊರತೆಯನ್ನು ಕುರಿತು ತನ್ನ ಸಂಶೋಧನಾ ತೀರ್ಮಾನಗಳನ್ನು ಪುಸ್ತಕೆ ರೂಪದಲ್ಲಿ ಪ್ರಕಟಿಸಿದನು. ಇದರಿಂದ ಇವನು ಲೋಕದಾದ್ಯಂತ ಹೆಸರುವಾಸಿಯಾದನು.

ತನ್ನ ಈ ಸಂಶೋಧನೆಯನ್ನು ಮುಂದುವರಿಸುತ್ತಿರುವ ಸಂದರ್ಭದಲ್ಲಿಯೇ ವೆರ್ನಿಕೆ ಒಂದು ಮುಖ್ಯವಾದ ಸಂಗತಿಯನ್ನು ಕಂಡುಕೊಂಡನು. ಅದೇನೆಂದರೆ, ಕೇವಲ ಬ್ರೋಕಾ ಏರಿಯಾಗೆ ಒದಗುವ ತೊಂದರೆಯ ಪರಿಣಾಮದಿಂದ ಮಾತ್ರ ಎಲ್ಲ ಬಗೆಯ ನುಡಿ ಕೊರತೆಗಳು ಉಂಟಾಗುವುದಿಲ್ಲ, ಮೆದುಳಿನ ಮತ್ತೊಂದು ಜಾಗದಲ್ಲಿ ಆಗುವ ತೊಂದರೆಯಿಂದಲೂ, ಮಾನವರು ಮಾತಿನ ಕೊರತೆಯನ್ನು ಎದುರಿಸುತ್ತಾರೆ ಎಂಬ ಸಂಗತಿಯನ್ನು ಕಂಡುಹಿಡಿದನು.

ಹಾಗಾದರೆ ವೆರ್ನಿಕೆ ಕಂಡುಕೊಂಡ ನುಡಿ ಕುರಿತ ಕೊರತೆಗಳು ಎಂತಹವು? ಕಾರ್ಲ್ ವೆರ್ನಿಕೆ ಕಂಡುಹಿಡಿದ ಆ ಜಾಗವು ಬ್ರೋಕಾ ಏರಿಯಾಕ್ಕಿಂತ ಕೊಂಚ ಹಿಂದುಗಡೆ ಇರುತ್ತದೆ. ಅಂದರೆ ಆಡಿಟರಿ ಕರ‍್ಟೆಕ್ಸ್ಗೆ ಹೊಂದಿಕೊಂಡಿರುತ್ತದೆ. ಇದನ್ನು ಮೆದುಳಿನ ಎಡ ಹಿಂಭಾಗವೆಂದು (ಟೆಂಪರಾಲ್ ಲೋಬ್) ಹೇಳಬಹುದು. ಮಾನಸಿಕ ನ್ಯೂನತೆಯ ಕಾರಣದಿಂದ ಮೆದುಳಿನ ಬೇರೆ ಬೇರೆ ಜಾಗಗಳಲ್ಲಿ ಯಾವ ಬಗೆಯ ಮಾತಿನ ಕೊರತ (ಅಫೇಸಿಯಾ)ಗಳು ಉಂಟಾಗುತ್ತವೆ ಎಂಬುದನ್ನು ತನ್ನ ಶೋಧಗಳಿಂದ ವೆರ್ನಿಕೆ ತೋರ್ಪಡಿಸಿದ್ದಾನೆ.

ಆ ಶೋಧಗಳಿಂದ ಮಾತಿನ ಬೇರೆ ಬಗೆಯ ತೊಂದರೆಗಳು ಯಾವವು ಎಂಬುದನ್ನು ವೆರ್ನಿಕೆ ಗುರುತಿಸಿದ್ದಾನೆ. ಈ ವೆರ್ನಿಕೆ ಅಫೇಸಿಯಾದಿಂದ ಬಳಲುವವರ ಉಚ್ಚಾರಣೆಗಳು ಸರಿಯಾಗಿದ್ದು, ಸೊಲ್ಲರಿಮೆಗೆ ಒಪ್ಪಿತವಾದ ಸೊಲ್ಲುಗಳನ್ನೇ ಉತ್ಪಾದಿಸುತ್ತಿದ್ದರೂ, ಅರ್ಥಗಳನ್ನು ಒದಗಿಸು ನೆಲೆಗಳು ಮಾತ್ರ ಸರಿಯಾಗಿರುವುದಿಲ್ಲ. ಹಾಗೂ ಬೇರೆಯವರು ಮಾತಾಡಿದ್ದನ್ನು ಇವರಿಗೆ ಅರ್ಥ ಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ. ಮಾತನ್ನು ಉತ್ಪಾದಿಸುವ ನೆಲೆ ಇವರಿಗೆ ಸರಿಯಾಗಿದ್ದರೂ, ಅರ್ಥಗಳನ್ನು ಒದಗಿಸುವ ಹಾಗೂ ಅರ್ಥಗಳನ್ನು ಪಡೆಯುವ ನೆಲೆಯಲ್ಲಿ ಇವರು ತೊಂದರೆಗಳನ್ನು ಎದುರಿಸುತ್ತಾರೆ.

ನಮ್ಮ ಮೆದುಳಿನಲ್ಲಿ ಉಲಿ ಮತ್ತು ಆರ್ಥಗಳನ್ನು ಕೊಡಿಟ್ಟುಕೊಂಡು ಮತ್ತೆ ಅವುಗಳನ್ನು ನಮ್ಮ ಬಳಕೆಗೆ ಒದಗಿಸುವ ಜಾಗಗಳು ಬೇರೆ ಬೇರೆ ಎಂಬುದನ್ನು ಮೇಲಿನ ಚರ್ಚೆಗಳಿಂದ ನಿಚ್ಚಳವಾಗಿ ಕಾಣುತ್ತದೆ. ಅವುಗಳನ್ನು ಬ್ರಾಕಾ ಜಾಗ (ಏರಿಯಾ) ಮತ್ತು ವೆರ್ನಿಕೆ ಜಾಗವೆಂದು ಗುರುತಿಸಲಾಗಿದೆ. ಈ ಎರಡು ಜಾಗಗಳಲ್ಲಿ ಯಾವುದೇ ಒಂದಕ್ಕೆ ತೊಂದರೆಯಾದರೂ ನುಡಿಯನ್ನು ಸರಾಗವಾಗಿ ಸಂವಹಿಸಲು ಸಾಧ್ಯವಿಲ್ಲ. ಹಾಗಾಗಿ ಈ ಎರಡೂ ಜಾಗಗಳು ನುಡಿ ಗಳಿಕೆ ಹಾಗೂ ಬಳಕೆಯ ನೆಲೆಯಿಂದ ತುಂಬಾ ಮುಖ್ಯವಾಗಿವೆ.

  • ಉಲಿ ಪೆಟ್ಟಿಗೆಗೆ (ಪದಗಳನ್ನು ಹೇಳುತ್ತೇವೆ)
  • ಮೋಟಾರ್‌ಕೋರಟೆಕ್ಸ್ (ಕ್ರಿಯೆಗಾಗಿ)
  • ಬ್ರೋಕಾನ ಜಾಗಕ್ಕೆ (ಉಲಿಗಳಿಗಾಗಿ)
  • ವೆರ್ನಿಕ್‌ನ ಜಾಗಕ್ಕೆ (ಅರ್ಥಗಳನ್ನು ಒದಗಿಸುವ/ಗಳಿಸುವ)
  • ಪ್ರೈಮರಿ ವಿಸ್ಯುಯಲ್ ಕೊರಟೆಕ್ಸ್ ಟು ಪ್ರೈಮರಿ ಆಡಿಟರಿ ಏರಿಯಾ (ನಾವು ನೋಡುವ ಪದ) (ನಾವು ಕೇಳುವ ಪದ)
  • ನೋಡುವ ಪಠ್ಯ (ಕಣ್ಣಿನ ನುಡಿ)
  • ಕೇಳು ಉಲಿಗಳು (ಕಿವಿಯ ನುಡಿ)

ನಾವು ಜೋರಾಗಿ ಓದುವಾಗ ಕೇಳಿದ ಪದವನ್ನು ಮರುಬಳಿಸುವ

ಚಿತ್ರ – 01 : ವೆರ್ನಿಕೆ-ನರ‍್ಮನ್ ಗೇಶ್ಚ್ವಿಂಡ್ ಅವರ ಸರಳೀಕರಿಸಿದ ಮಾದರಿ
ಈ ಮೇಲಿನ ಚಿತ್ರ ನುಡಿಯನ್ನು ನಾವು ಹೇಗೆ ಗ್ರಹಿಸುತ್ತೇವೆ, ಓದುತ್ತೇವೆ ಹಾಗೂ ಹೇಳುತ್ತೇವೆ ಹಾಗೂ ಈ ಕೆಲಸ ಮೆದುಳಿನ ಮೂಲಕ ಹೇಗೆ ನಡೆಯುತ್ತದೆ ಎಂಬುದನ್ನು ತೋರಿಸುತ್ತದೆ. ಈ ಮಾದರಿ ನುಡಿ ಮತ್ತು ಮೆದುಳುಗಳ ನಡುವಣ ನಂಟಸ್ತಿಕೆಯ ಹೊಸ ಆಯಾಮಗಳನ್ನು ತೋರಿಸುತ್ತದೆ. ನುಡಿ ಮೆದುಳಿನಲ್ಲಿ ಯುಕ್ತತೆಯಿಂದ ನೆಲೆಗೊಂಡಿರುತ್ತದೆ.

ಬ್ರಾಕಾ ಜಾಗವು ಆಡಿಟರಿ ಮತ್ತು ಮೋಟಾರ್ ಕರ‍್ಟೆಕ್ಸ್ಗಳಗೆ ಹೊಂದಿಕೊಂಡಿರುತ್ತದೆ. ಈ ಆಡಿಟರಿ ಕರ‍್ಟೆಕ್ಸ್ ಕಿವಿಯ ಮೂಲಕ ಬರುವ ಸಂಕೇತಗಳನ್ನು ಪಡೆಯುತ್ತದೆ. ಹಾಗೂ ಮೋಟಾರ್ ಕರ‍್ಟೆಕ್ಸ್ನಿಂದ ಸಂಕೇತಗಳು ಮೆದುಳಿನ ಗ್ರಂಥಿಗಳಿಗೆ ಹೋಗುತ್ತವೆ. ಅಲ್ಲಿಂದ ನಮ್ಮ ಎಲ್ಲ ನುಡಿಗೆ ಸಂಬಂಧಿಸಿದ ಚಟುವಟಿಕೆಗಳು ಶುರುವಾಗುತ್ತವೆ. ಉಲಿ ಸಂಕೇತಗಳು ಉಲಿಪೆಟ್ಟಿಗೆಗೆ ಕೂಡ ಇದೇ ಜಾಗದಿಂದ ಹೊರಹೊಮ್ಮುತ್ತವೆ. ಈ ಕೇಳಗಿನ ಎರಡೂ ಚಿತ್ರಗಳು ಇನ್ನಷ್ಟೂ ವಿವರವಾಗಿ ನುಡಿ ಹಾಗೂ ಮೆದುಳಿನ ನಡುವಣ ನಂಟಸ್ತಿಕೆಯನ್ನು ತಿಳಿಸುತ್ತವೆ.

ಈ ಮೇಲಿನ ಎಲ್ಲ ಚರ್ಚೆಗಳು ಕೇವಲ ನುಡಿ ಎಂದರೇನು ಎಂಬ ಕೇಳ್ವಿಗೆ ಬದಲುಗಳನ್ನು ಕೊಡುವುದಕ್ಕೆ ಮಾತ್ರ ಸೀಮಿತಗೊಳ್ಳದೇ, ನುಡಿ ಸ್ವರೂಪದ ಬೇರೆ ಬೇರೆ ನೆಲೆಗಳನ್ನು ತಿಳಿಯುವ ಯತ್ನವನ್ನು ಮಾಡಲಾಗಿದೆ. ಆ ಮೂಲಕ ಇಲ್ಲಿಯ ಚರ್ಚೆಗಳು ನುಡಿಯ ಬೇರೆ ಬೇರೆ ಆಯಾಮಗಳನ್ನು ಚರ್ಚಿಸುವುದಷ್ಟೆ ಅಲ್ಲ, ಬದಲಾಗಿ ನುಡಿ ಕುರಿತ ಭಿನ್ನ ಕಣ್ನೋಟಗಳನ್ನು ತೋರ್ಪಡಿಸುತ್ತವೆ. ನುಡಿಯರಿಮೆಗೆ ನುಡಿಯ ಯಾವ ನೆಲೆಗಳು ಅತ್ಯಂತ ಮಹತ್ವ ಸಂಗತಿಗಳು ಅನ್ನುವ ನಿಲುವುಗಳನ್ನೂ ಈ ಟಿಪ್ಪಣಿಯಲ್ಲಿ ಗಮನಿಸಲು ಸಾಧ್ಯವಾಗಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂತರಂಗ

250ಕ್ಕೂ ಹೆಚ್ಚು ಗಿಳಿಗಳ ನಿಗೂಢ ಸಾವು ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ ಆತಂಕ

Published

on

250ಕ್ಕೂ ಹೆಚ್ಚು ಗಿಳಿಗಳ ನಿಗೂಢ ಸಾವು

ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ ಆತಂಕ

ಬೆಂಗಳೂರು: ಮಧ್ಯಪ್ರದೇಶ ರಾಜ್ಯದ ಖಾರ್ಗೋನ್ ಜಿಲ್ಲೆಯಲ್ಲಿರುವ ನರ್ಮದಾ ನದಿ ತೀರದಲ್ಲಿ 250ಕ್ಕೂ ಹೆಚ್ಚು ಗಿಳಿಗಳು ಕೃಷಿ ಭೂಮಿಯಲ್ಲಿ ಬಳಸುವ ಕೀಟನಾಶಕ ಮಿಶ್ರಿತ ಆಹಾರ ಅಥವಾ ನರ್ಮದಾ ನದಿಯ ಕಲುಷಿತ ನೀರು ಸೇವಿಸಿ ಸಾವನ್ನಪ್ಪಿರುವ ಪ್ರಕರಣ ಇಡೀ ದೇಶದಲ್ಲಿ ಇದೇ ಮೊದಲ ಬಾರಿಗೆ ನಡೆದ ದುರ್ಘಟನೆ ಎಂದು ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷರೂ ಹಾಗೂ ರಾಷ್ಟ್ರೀಯ ಸಮಿತಿ ನಿರ್ದೇಶಕರಾದ ಮಾಲತೇಶ್ ಅರಸ್ ಹರ್ತಿಕೋಟೆ ಆತಂಕ ವ್ಯಕ್ತಪಡಿಸಿದ್ದಾರೆ.

ಕಳೆದ ಮೂರು ದಿನಗಳಲ್ಲಿ ನರ್ಮದಾ ನದಿ ತೀರದಲ್ಲಿ ಸುಮಾರು ಇನ್ನೂರಕ್ಕೂ ಅಧಿಕ ಗಿಳಿಗಳು ನಿಗೂಢವಾಗಿ ಸಾವನ್ನಪ್ಪಿದ್ದು ಆರಂಭದಲ್ಲಿ ಇದು ಹಕ್ಕಿ ಜ್ವರ ದಿಂದ ಸಾವನ್ನಪ್ಪಿರಬಹುದು ಎಂದು ಶಂಕಿಸಲಾಗಿತ್ತು ಆದರೆ ಪಶುವೈದ್ಯಕೀಯ ಅಧಿಕಾರಿ ಡಾ. ಸುರೇಶ್ ಬಫೇಲ್ ಅವರು ನೀಡಿದ ಮಾಹಿತಿ ಪ್ರಕಾರ ಹಕ್ಕಿಗಳ ಹೊಟ್ಟೆಯಲ್ಲಿ ಅಕ್ಕಿ ಕಾಳುಗಳು ಮತ್ತು ಸಣ್ಣ ಕಲ್ಲುಗಳು ಪತ್ತೆಯಾಗಿವೆ. ಅಲ್ಲದೆ ಕೃಷಿ ಭೂಮಿಯಲ್ಲಿ ಬಳಸುವ ಕೀಟನಾಶಕ ಮಿಶ್ರಿತ ಆಹಾರ ಅಥವಾ ನರ್ಮದಾ ನದಿಯ ಕಲುಷಿತ ನೀರು ಸೇವಿಸಿ 200 ರಿಂದ 50 ಕ್ಕೂ ಅಧಿಕ ಮೃತಪಟ್ಟಿರುವ ಸಾಧ್ಯತೆಗಳು ಹೆಚ್ಚಿವೆ ಎಂದು ಹೇಳಿದ್ದು ಇವರ ಮಾಹಿತಿಯನ್ನು ಆದರಿಸಿ ವಿಶೇಷ ತನಿಖೆ ಮಾಡಬೇಕು ಎಂದು ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ ಆಗ್ರಹಿಸಿದೆ.

ಖರ್ಗೋನ್‌ ಜಿಲ್ಲೆಯ ಬದ್ವಾ ಪ್ರದೇಶದ ನರ್ಮದಾ ನದಿ ತೀರದಲ್ಲಿರುವ ಅಕ್ವೆಡಕ್ಟ್ ಸೇತುವೆಯ ಸಮೀಪ ಈ ಘಟನೆ ಬೆಳಕಿಗೆ ಬಂದಿದ್ದು ಅರಣ್ಯ ಇಲಾಖೆಯು ಸೇತುವೆಯ ಸುತ್ತಮುತ್ತ ಹಕ್ಕಿಗಳಿಗೆ ಆಹಾರ ನೀಡುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಿದೆ. ಸದ್ಯ ಹಕ್ಕಿಗಳ ಸಾವಿಗೆ ನಿಖರ ಕರಣ ತಿಳಿಯಲು ಹಕ್ಕಿಗಳ ಅವಶೇಷಗಳನ್ನು ಜಬಲ್ಪುರಕ್ಕೆ ಕಳುಹಿಸಲಾಗಿದೆ. ಸದ್ಯ ಅರಣ್ಯ ಇಲಾಖೆ ಮತ್ತು ಪಶುವೈದ್ಯಕೀಯ ತಂಡಗಳು ಸ್ಥಳದಲ್ಲೇ ಬೀಡುಬಿಟ್ಟಿದ್ದು, ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿವೆ.

ಇನ್ನೊಂದು ಮುಖ್ಯ ವಿಚಾರ ಏನೆಂದರೆ ಪಕ್ಷಿಗಳಿಗೆ ಮನುಷ್ಯರು ಸೇವಿಸುವ ಎಣ್ಣೆ ಪದಾರ್ಥ ಅಥವಾ ಬೇಯಿಸಿದ ಆಹಾರ ನೀಡುವುದು ಅವುಗಳ ಜೀರ್ಣಾಂಗ ವ್ಯವಸ್ಥೆಯ ಮೇಲೆ ಮಾರಕ ಪರಿಣಾಮ ಬೀರುತ್ತದೆ ಎಂದು ಪಶುವೈದ್ಯಕೀಯ ಅಧಿಕಾರಿ ಡಾ. ಮನಿಷಾ ಚೌಹಾಣ್ ಹೇಳಿದ್ದಾರೆ. ಏನೇ ಆದರೂ ನೂರಾರು ಗಿಳಿಗಳು ಸಾವನ್ನಪಿರುವುದು ಮಾತ್ರ ದುರಂತ.

ಈ ಸಂದರ್ಭದಲ್ಲಿ ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷರೂ ಹಾಗೂ ರಾಷ್ಟ್ರೀಯ ಸಮಿತಿ ನಿರ್ದೇಶಕರಾದ ಮಾಲತೇಶ್ ಅರಸ್ ಹರ್ತಿಕೋಟೆ, ಹಿರಿಯ ಉಪಾಧ್ಯಕ್ಷರಾದ ಗುರುರಾಜ್ ಹೂಗಾರ್, ಉಪಾಧ್ಯಕ್ಷರಾದ ಯೋಗೀಶ್ ಕುಮಾರ್, ರುದ್ರಮುನಿ, ಡಾ.ಸಿದ್ದಲಿಂಗಪ್ಪ, ಮತ್ತು ಪದಾಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

Continue Reading

ಅಂತರಂಗ

ಭೀಮಾ ಕೋರೆಗಾಂವ ; ಮಹರ್ ಸೈನಿಕರ ವೀರಗಾಥೆ

Published

on

~ ಡಾ. ಸುಜಾತಾ ಚಲವಾದಿ

ಭಾರತದ ಇತಿಹಾಸದಲ್ಲಿ ಅನೇಕ ಕ್ರೂರ ವ್ಯಂಗ್ಯಗಳಿವೆ. ಅವುಗಳಲ್ಲಿ ಪೇಶ್ವಾಶಾಹಿ ಆಡಳಿತವು ಒಂದು. ಅವರ ಆಡಳಿತ ಸಂದರ್ಭದಲ್ಲಿ ಅಸ್ಪೃಶ್ಯರು ತಮ್ಮ ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಬದುಕುವ ಸ್ಥಿತಿಯಿತ್ತು. ಜಾತಿ ವ್ಯವಸ್ಥೆ ವಿಜೃಂಭಿಸುತ್ತಿದ್ದ ಕಾಲವದು.

ದೌರ್ಜನ್ಯ, ಅನ್ಯಾಯಕ್ಕೆ ಒಳಗಾಗಿ ಸದಾ ನೋವಿನ ಬದುಕು ಅಸ್ಪೃಶ್ಯರದ್ದಾಗಿತ್ತು. ಕಿತ್ತುತಿನ್ನುವ ಬಡತನ, ಹಸಿವು, ದಾರಿದ್ರö್ಯ, ಅಶಿಕ್ಷಿತರಾದ ಅಸ್ಪಶ್ಯರು ಅನ್ಯಾಯದ ವಿರುದ್ಧ ಹೋರಾಟ ಮಾಡುವುದು ಕನಸಿನ ಮಾತಾಗಿತ್ತು. ಇವರ ಬಲಹೀನತೆಯನ್ನು ಬಳಸಿಕೊಂಡು ‘ಪ್ರಾಣಿಗಿಂತ ಕೀಳಾಗಿ’ ನಡೆಸಿಕೊಳ್ಳುತ್ತಿದ್ದ ಪೇಶ್ವಾ ಆಡಳಿತವು ಶೂದ್ರರ, ನಿಮ್ನರ ಮೇಲೆ ತಮ್ಮ ಅಟ್ಟಹಾಸವನ್ನು ಮೆರೆಯುತ್ತಿದ್ದರು.

ಅನ್ಯಾಯಕ್ಕೆ ಒಳಗಾದ ಕೆಳಜಾತಿಯ ಮಹಾರರು, ಮಾಂಗರು, ಚಮ್ಮಾರರು ಮತ್ತು ಮಹಿಳೆಯರು ತತ್ತರಿಸಿ ಹೋಗಿದ್ದರು. ಮಹಾರಾಷ್ಟçದ ಪೇಶ್ವಾಶಾಹಿ ಕಾಲಘಟ್ಟದಲ್ಲಿ ನಡೆದ ಭೀಮಾ ಕೋರೆಗಾಂವ ಚಳವಳಿಯನ್ನು ಬರಹದ ರೂಪದಲ್ಲಿ ಬಾಬಾಸಾಹೇಬ ಅಂಬೇಡ್ಕರ್ ನಮ್ಮ ಮುಂದೆ ಇರಿಸಿದ್ದಾರೆ.
1ನೇ ಜನವರಿ 1818ರಲ್ಲಿ ಅಂದರೆ ಇಂದಿಗೆ 207 ವರ್ಷಗಳ ಹಿಂದೆ 28,000 ಸಾವಿರ ಸಂಖ್ಯೆಯ ಪೇಶ್ವಾಸೈನ್ಯದ ಎದುರು ಐದುನೂರು ಮಹಾರ ಜನಾಂಗದವರು ಹೋರಾಡಿ ವಿಜಯ ಸಾಧಿಸಿದ ದಿನ ಕೋರೆಗಾಂವ್ ಯುದ್ಧ ‘ನ್ಯಾಯದ ಯುದ್ಧ’, ಇಡೀ ಪರಿಶಿಷ್ಟ ಜಾತಿಯವರಿಗೆ ಸ್ವಾಭಿಮಾನದ ಸಂಕೇತವಾಗಿ ಪರಿಣಮಿಸಿದೆ.

ಈ ದಿನವನ್ನು ಯಾವ ಮಹಾರರೂ ಮರೆಯುವ ಹಾಗಿಲ್ಲ. ಬಾಬಾಸಾಹೇಬರು ಈ ದಿನದ ಸ್ಮರಣೆಯನ್ನು “ದಲಿತರ ಪರಾಕ್ರಮ ದಿನ”ವೆಂದು ತಿಳಿದು ಕೋರೆಗಾಂವನಲ್ಲಿ ನಿರ್ಮಿಸಿದ ವಿಜಯಸ್ತಂಭ ಸ್ಮಾರಕಕ್ಕೆ ವಂದಿಸಲು ಪ್ರತೀ ವರ್ಷ ಜನವರಿ 1 ರಂದು ತಪ್ಪದೇ ಹೋಗಿ ಬರುತ್ತಿದ್ದರು. ಜಾತಿಪದ್ಧತಿಯೇ ಪ್ರಧಾನವಾದ ಕಾಲದಲ್ಲಿ ಅಸ್ಪಶ್ಯರ ಸ್ಥಿತಿ ತುಂಬಾ ಹದಗೆಟ್ಟು ಹೋಗಿತ್ತು. ಮೇಲು-ಕೀಳು ಎಂಬ ಭಾವನೆ ಏರುಮುಖದಲ್ಲಿದ್ದ ಕಾಲ.

ಮನುಸ್ಮೃತಿಯನ್ನು ಚಾಚೂ ತಪ್ಪದೇ ಮುನ್ನಡೆಸಿಕೊಂಡು ಬರುವ ಮೇಲ್ವರ್ಗದವರು ಅಸ್ಪೃ್ಪಶ್ಯರನ್ನು ಕಂಡರೆ ಅನೇಕ ಬಗೆಯ ಶಿಕ್ಷೆಗೆ ಒಳಗು ಮಾಡುತ್ತಿದ್ದರು. ಅಸ್ಪೃಶ್ಯರನ್ನು ಕಂಡರೆ ಮೈಲಿಗೆಯಾಗುತ್ತದೆ ಎನ್ನುವ ಮನಸ್ಥಿತಿ ಅವರದ್ದು, ಅಸ್ಪೃಶ್ಯ ರಸ್ತೆಗೆ ಇಳಿಯಕೂಡದು, ಒಳ್ಳೆ ಬಟ್ಟೆ ಹಾಕಿಕೊಳ್ಳುವ ಹಾಗಿಲ್ಲ, ಒಳ್ಳೆಯ ಆಹಾರ ಸೇವನೆಯಂತೂ ಕನಸಿನ ಮಾತಾಗಿತ್ತು. ಊರ ಪ್ರವೇಶಕ್ಕೆ ಸಮಯ ನಿಗದಿ ಮಾಡಿದ್ದರು.

ಸೂರ್ಯೋದಯ, ಸೂರ್ಯಾಸ್ತದ ಸಂದರ್ಭದಲ್ಲಿ ಅಸ್ಪೃಶ್ಯ ವ್ಯಕ್ತಿ ಊರಲ್ಲಿ ಬರುವಂತಿರಲಿಲ್ಲ. ಸೂರ್ಯ ನೆತ್ತಿಯ ಮೇಲಿದ್ದಾಗ ಮಾತ್ರ ಊರ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಬೀದಿಯಲ್ಲಿ ಹೋಗಬೇಕಾದರೆ ಕೊರಳಿಗೆ ಮಣ್ಣಿನ ಸಣ್ಣ ಕುಡಿಕೆಯನ್ನು ಹಾಕಿಕೊಂಡು ಹೋಗಬೇಕು, ಉಗುಳುವ ಸಂದರ್ಭ ಬಂದರೆ, ಅದೇ ಕುಡಿಕೆಯಲ್ಲಿಯೇ ಉಗುಳಿಕೊಳ್ಳಬೇಕು. ಕಾರಣ ರಸ್ತೆಯಲ್ಲಿ ಅಸ್ಪೃಶ್ಯರು ಉಗುಳಿದರೆ ಅವನ ಹೇಸಿಗೆಯನ್ನು ಸವರ್ಣೀಯರು ತುಳಿಯಬಾರದು.

ತುಳಿದರೆ ಮೈಲಿಗೆಯಾಗುತ್ತಿತ್ತು. ರಸ್ತೆಯಲ್ಲಿ ನಡೆಯುವಾಗ ಆತನ ನೆರಳು ಅವನ ಕಾಲಲ್ಲಿಯೇ ಉಳಿಯುವ ಹಾಗೇ ಮಧ್ಯಾಹ್ನದ ನೆತ್ತಿ ಸುಡುವ ಬಿಸಿಲಿನಲ್ಲಿ ಮಾತ್ರ ಊರಲ್ಲಿ ಬರಬೇಕು. ನಡೆದುಕೊಂಡು ಹೋಗುವಾಗ ಹೆಜ್ಜೆ ಗುರುತುಗಳು ಕಾಣದಿರಲಿ ಎಂದು ಬೆನ್ನಿಗೆ ಮುಳ್ಳಿನ ಪೊರಕೆಯನ್ನು ಕಟ್ಟಿಕೊಂಡು ಸಾಗಬೇಕಾದ ಸ್ಥಿತಿ ಅವರದಾಗಿತ್ತು. ಹಾಗೇ ಅಸ್ಪೃಶ್ಯನೊಬ್ಬ ಬರುವುದನ್ನು ‘ಸಂಭೋಳಿ ಸಂಭೋಳಿ ಮಾಯ್ ಬಾಪ್ ಹೊಲೆಯ ಬರುತ್ತಿದ್ದೇನೆ’ ಅಂತಾ ಕೂಗಿ ಹೇಳಬೇಕು. ಇಲ್ಲ, ಕೈಯಲ್ಲಿ ಗೆಜ್ಜೆಕಟ್ಟಿದ ಕೋಲನ್ನು ಹಿಡಿದುಕೊಂಡು ನೆಲಕ್ಕೆ ಕುಕ್ಕಿಸಿಕೊಂಡು ಸದ್ದು ಮಾಡುತ್ತ ಹೋಗಬೇಕು.

ಇದಲ್ಲದೆ ಅಸ್ಪೃಶ್ಯ ಊರ ಪ್ರವೇಶ ಮಾಡಿದಾಗ ಯಾರಾದರೂ ಎದುರು ಬಂದರೆ ಸುಡುವ ಬಿಸಿಲಲ್ಲಿ ಓಡಿ ಹೋಗಿ ಭೂಮಿಯನ್ನು ಅಪ್ಪಿಕೊಳ್ಳಬೇಕು. ಸವರ್ಣೀಯರಿಗೆ ಅವನ ನೆರಳೂ ಸ್ಪರ್ಶ ಮಾಡುವಂಗಿರಲಿಲ್ಲ. ಇಂತಹ ಅಮಾನವೀಯ ನಿಯಮಗಳನ್ನು ಹೊರಡಿಸಿದ ಕಾಲಘಟ್ಟವದು. ಇಷ್ಟೆಲ್ಲಾ ನಿಯಮಗಳನ್ನು ಅಸ್ಪಶ್ಯರ ಮೇಲೆ ಹೇರಿದರೂ ಕೂಡಾ ಮಹಾರ್ ಸೈನಿಕರು ತಮ್ಮ ಪ್ರಾಣವನ್ನು ಲೆಕ್ಕಿಸದೆ ಮೊಗಲರ ಬೃಹತ್ ಸೈನ್ಯದ ವಿರುದ್ಧ ಹೋರಾಡಿ ಪೇಶ್ವೆಗಳ ಪರವಾಗಿ ಯುದ್ಧಕ್ಕೆ ಸನ್ನದ್ಧರಾಗಿದ್ದರು. ಮಹಾರ್ ಸೈನಿಕರ ಶೌರ್ಯದಿಂದಲೇ ಪೇಶ್ವೆಗಳ ಆಡಳಿತ ಸುಗಮವಾಗಿ ನಡೆಯುತ್ತಿತ್ತು. ಆದರೆ ಪೇಶ್ವಗಳು ಮತ್ತು ಸವರ್ಣೀಯರು ಮಹಾರ್‌ಸೈನಿಕರನ್ನು ತುಚ್ಛವಾಗಿ ನಡೆಸಿಕೊಳ್ಳುತ್ತಿದ್ದರು.

1758 ರಲ್ಲಿ ಬ್ರಿಟಿಷರು ಈಸ್ಟ್ ಇಂಡಿಯಾ ಕಂಪನಿಯನ್ನು ಸ್ಥಾಪಿಸಿದ ನಂತರ ಮಹಾರ್ ಜನರನ್ನು ಸೈನಿಕರಾಗಿ ನೇಮಕ ಮಾಡಿಕೊಳ್ಳಲು ಪ್ರಾರಂಭಿಸಿದರು. ಭಾರತೀಯ ಮಹಾರ್ ಸೈನಿಕರಿಗೆ ಶಿಕ್ಷಣದ ಅವಕಾಶವನ್ನು ಮಾಡಿಕೊಟ್ಟಿದ್ದರ ಪರಿಣಾಮ ಸ್ವಲ್ಪ ಮಟ್ಟಿಗೆ ತಿಳಿವಳಿಕೆ ಮೂಡಲು ಸಹಾಯವಾಯಿತು. ತಮ್ಮ ಹಕ್ಕು-ಬಾಧ್ಯತೆಗಳನ್ನು ತಿಳಿಯುವಂತಾಯಿತು. ಬ್ರಿಟಿಷರಲ್ಲಿ ಇರದ ಜಾತಿವ್ಯವಸ್ಥೆ ನಮ್ಮ ದೇಶದಲ್ಲಿ ಕಂಡ ಮಹಾರ್ ಸೈನಿಕರು ಬ್ರಿಟಿಷರಿಗೆ ತಮ್ಮ ಬೆಂಬಲವನ್ನು ನೀಡುವಂತಾಯಿತು. ಅವಮಾನ, ಅನ್ಯಾಯ, ದೌರ್ಜನ್ಯಕ್ಕೆ ಒಳಗಾದ ಮಹಾರ್ ಜನಾಂಗದವರು, ಈ ಎಲ್ಲದರಿಂದ ಮುಕ್ತಿ ಕಾಣಲು ಬ್ರಿಟಿಷರ ಪರವಾಗಿ ಯುದ್ಧಗಳಲ್ಲಿ ಹೋರಾಡಲು ಪ್ರಾರಂಭಿಸಿದರು.

ಎರಡನೆಯ ಬಾಜೀರಾವ್ ಪೇಶ್ವೆಯ ರಾಜ್ಯಾಡಳಿತವಿದ್ದ ಸಂದರ್ಭದಲ್ಲಿ 31 ನೇ ಡಿಸೆಂಬರ್ 1817 ರ ರಾತ್ರಿ ಬ್ರಿಟಿಷರ ಸೇನಾಪತಿ ಕ್ಯಾಪ್ಟನ್ ಫ್ರಾನ್ಸಿಸ್ ಸ್ಟಂಡನ್ ಮುಂದಾಳತ್ವದಲ್ಲಿ ಸೇನೆ ಪೇಶ್ವೆಗಳ ಮೇಲೆ ದಾಳಿ ಮಾಡಲು ಸಿದ್ಧಗೊಂಡಿತು. ಇದನ್ನು ತಿಳಿದ ಮಹಾರ್ ಬೆಟಾಲಿಯನ್ನಿನ ನಾಯಕ ಸಿದ್ಧನಾಕ ಮಾರುವೇಷದಲ್ಲಿ ಪೇಶ್ವೆಯನ್ನು ಕಾಣುತ್ತಾನೆ. ಆಗ ಪೇಶ್ವೆ ಮಹಾರ್ ಬೆಟಾಲಿಯನ್ನಿನ ನಾಯಕ ಸಿದ್ಧನಾಕನನ್ನು ಒಳಗೆ ಬಿಟ್ಟವನನ್ನು ಕೊಲ್ಲಿಸುತ್ತಾನೆ. ಇಂಗ್ಲಿಷರು ನಿಮ್ಮ ಮೇಲೆ ಯುದ್ಧ ಮಾಡುವರಿದ್ದಾರೆ, ನೀವು ನಮ್ಮ ಹಕ್ಕುಗಳನ್ನು ನಮಗೆ ನೀಡುವುದಾದರೆ ನಿಮ್ಮ ಪರವಾಗಿ ಅವರ ವಿರುದ್ಧ ನಾವು ಹೋರಾಡುತ್ತೇವೆ ಎನ್ನುತ್ತಾನೆ. “ನಿಮ್ಮ ಹಕ್ಕುಗಳು ಯಾವವು? ನೀನು ಇನ್ನೊಂದು ಘಳಿಗೆ ಇಲ್ಲಿ ನಿಂತರೆ ನಿನ್ನ ಶಿರಚ್ಛೇದನ ಮಾಡುತ್ತೇನೆ” ಎಂದು ಗದರುತ್ತಾನೆ. ಸಿದ್ಧನಾಕ ಮರಳಿ ಬಂದು ಅಲ್ಲಿ ನಡೆದ ಎಲ್ಲ ವಿವರ ಸಂಗಾತಿಗಳಿಗೆ ನೀಡುತ್ತಾನೆ. ಅಂತಿಮವಾಗಿ ಇಂಗ್ಲಿಷರ ಪರವಾಗಿ ಮಹಾರ್ ಬೆಟಾಲಿಯನ್ ಹೋರಾಡಲು ಸಿದ್ಧವಾಗುತ್ತದೆ. ಪೇಶ್ವೆಗಳ ಸೈನ್ಯ ಕೋರೆಗಾಂವ್ ಪ್ರದೇಶದ ಭೀಮಾನದಿಯ ಬಲದಂಡೆಯ ಮೇಲೆ ಯುದ್ಧಕ್ಕೆ ಸಜ್ಜಾಗಿ ಸುತ್ತುವರೆದು ನಿಂತುಕೊಂಡಿತು. ಮಹಾರ್ ರೆಜಿಮೆಂಟ್ ಸೈನ್ಯ ಬ್ರಿಟಿಷರ ಪರವಾಗಿ ಯುದ್ಧಕ್ಕೆ ಸಜ್ಜಾಗಿದ್ದರು.

ಪೇಶ್ವೆಗಳ ಸೇನೆಯು 25,000 ಕುದುರೆ ಸವಾರರು ಮತ್ತು 3,000 ಕ್ಕಿಂತಲೂ ಹೆಚ್ಚು ಸಂಖ್ಯೆಯಲ್ಲಿದ್ದ ಯೋಧರಿಂದ ತುಂಬಿ ತುಳುಕುತ್ತಿತ್ತು. ಎರಡೂ ಸೇನೆಗಳ ನಡುವೆ ಘನಘೋರ ಯುದ್ಧ ಪ್ರಾರಂಭವಾಗುತ್ತದೆ. ಬೃಹತ್ ಸೇನೆಯ ವಿರುದ್ಧ ಬ್ರಿಟಿಷ್ ಸೇನಾಪತಿ ಕ್ಯಾಪ್ಟನ್ ಪ್ರಾನ್ಸಿಸ್ ಸ್ಟಂಡನ್ ತಾನು ಸೋಲುತ್ತೇನೆ ಎಂದುಕೊAಡು ನಿರಾಶೆಯನ್ನು ತಳೆದಿದ್ದ. ಆದರೂ ಎದುರಾಳಿಯ ಜೊತೆ ಯುದ್ಧದಲ್ಲಿ ಮುನ್ನುಗ್ಗುವುದು ಆತನ ವಿಚಾರವಾಗಿತ್ತು. “ಮಹಾರ್ ಸೈನಿಕರು ವೀರಾವೇಶದಿಂದ ಹೋರಾಡಿ ಪೇಶ್ವೆಗಳು ಪಲಾಯನ ಗೈಯ್ಯಲು ಕಾರಣರಾದರು. ಈ ಯುದ್ಧದಲ್ಲಿ ಎರಡನೆಯ ಬಾಜಿರಾವ್ ಪೇಶ್ವೆಯು ಪಲಾಯನ ಮಾಡುವುದರಲ್ಲಿ ಮೊದಲಿಗ”ನೆಂದು ಬಾಬಾಸಾಹೇಬರು ತಮ್ಮ ಬರಹದಲ್ಲಿ ದಾಖಲಿಸಿದ್ದಾರೆ.

ಬೆಳಿಗ್ಗೆ ಆರು ಗಂಟೆಗೆ ಪ್ರಾರಂಭವಾದ ಯುದ್ಧ ರಾತ್ರಿ ಆರು ಗಂಟೆಗೆ ಮುಕ್ತಾಯಗೊಳ್ಳುತ್ತದೆ. ಸಂಖ್ಯೆಯಲ್ಲಿ ಅಲ್ಪವಾಗಿದ್ದರೂ ಅತ್ಯಂತ ಕೆಚ್ಚಿನಿಂದ ಕಲಿತನ ಪ್ರದರ್ಶಿಸಿದ ಮಹಾರ್ ಯೋಧರು, ತಮ್ಮ ಮೇಲೆ ಅಮಾನವೀಯವಾದ ಅಸ್ಪೃಶ್ಯತೆಯನ್ನು ಹೇರಿದ್ದ ಪೇಶ್ವೆ ಆಡಳಿತವನ್ನು ಯುದ್ಧದಲ್ಲಿ ಮಣ್ಣು ಮುಕ್ಕಿಸಿದರು. ಮಹಾರ್ ಸೈನಿಕರ ಅಭೂತಪೂರ್ವ ಕಲಿತನದ ಕಾರಣದಿಂದಲೇ ಬ್ರಿಟಿಷರು ಕೋರೆಗಾಂವ್ ಯುದ್ಧವನ್ನು ಗೆಲ್ಲಲು ಸಾಧ್ಯವಾಯಿತು. ಗೆಲುವಿಗೆ ಕಾರಣರಾದ, ಕದನದಲ್ಲಿ ಹುತಾತ್ಮರಾದ ಯೋಧರನ್ನು ಸದಾಕಾಲ ಸ್ಮರಿಸುವಂತೆ ಕೋರೆಗಾಂವನ ಭೀಮಾನದಿ ತೀರದ ಪ್ರಶಸ್ತವಾದ ಮೈದಾನ, ಕದನದ ಕಿಡಿ ಮೊಟ್ಟ ಮೊದಲು ಹೊತ್ತಿದ ಸ್ಥಳದಲ್ಲಿ ಬ್ರಿಟಿಷರು ಸ್ಮರಣ ಸ್ತಂಭವನ್ನು ಸ್ಥಾಪಿಸಿದರು.

26 ನೆಯ ಮಾರ್ಚ್ 1821 ರಲ್ಲಿ ಈ ಭವ್ಯ ವಿಜಯಸ್ತಂಭಕ್ಕೆ ಅಡಿಗಲ್ಲು ಹಾಕಿದಾಗ ಬಂದೂಕು ಮತ್ತು ತೋಪುಗಳ ಮೂಲಕ ಹುತಾತ್ಮರಿಗೆ ರಾಜಮರ್ಯಾದೆಯ ಶ್ರದ್ಧಾಂಜಲಿ ಸಲ್ಲಿಸಲಾಯಿತು. 63 ಅಡಿ ಎತ್ತರ ಇರುವ ಈ ವಿಜಯಸ್ತಂಭವು 1822 ರಲ್ಲಿ ಪೂರ್ಣವಾಗಿ ನಿರ್ಮಾಣವಾಯಿತು. ಮೊದಲಿಗೆ ಈ ಸ್ತಂಭವನ್ನು ಮಹಾರ್ ಸ್ತಂಭವೆAದು ಕರೆಯಲಾಗುತ್ತಿತ್ತು. ನಂತರದಲ್ಲಿ ವಿಜಯಸ್ತಂಭವೆಂದು ಹೆಸರಿಸಲಾಯಿತು.

ವಿಜಯಸ್ತಂಭದ ಮೇಲೆ 20 ಮಹಾರ್ ಸೈನಿಕರ ಹೆಸರುಗಳನ್ನು ಕೆತ್ತಿಸಲಾಗಿದೆ. ಪ್ರತಿವರ್ಷ ಜನೆವರಿ 1 ರಂದು ಬಾಬಾಸಾಹೇಬರು ಕೋರೆಗಾಂವ್ ವಿಜಯಸ್ತಂಭಕ್ಕೆ ಭೇಟಿ ಕೊಟ್ಟು ನಮನವನ್ನು ಸಲ್ಲಿಸುತ್ತಿದ್ದರು. ಇಂತಹ ಐತಿಹಾಸಿಕ ವಿಜಯದ ಸಂಕೇತವಾದ ಕೋರೆಗಾಂವ ಚಳವಳಿಯನ್ನು ಮತ್ತೆ ಮತ್ತೆ ನೆನೆಯುವುದು ಇಂದಿನ ಅನಿವಾರ್ಯವೂ ಹೌದು. ಏಕೆಂದರೆ ಬಾಬಾಸಾಹೇಬರೇ ಹೇಳಿದ ಹಾಗೆ “ಇತಿಹಾಸವನ್ನು ತಿಳಿಯದವನು ಇತಿಹಾಸವನ್ನು ಸೃಷ್ಟಿಸಲು ಸಾಧ್ಯವಾಗದು” ಎಂದಿದ್ದಲ್ಲದೆ ದಲಿತರಾರೂ ಕುರಿಗಳಲ್ಲ, ಅವರು ಹುಲಿಗಳು’ ಎಂದು ಹೇಳಿರುವುದನ್ನು ಮತ್ತೆ ಮತ್ತೆ ಮನನಿಸಬೇಕಾಗಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಅಂತರಂಗ

ಕುವೆಂಪು ಅವರಿಗೆ ಲಂಕೇಶರ ಎಂಟು ಪ್ರಶ್ನೆಗಳು

Published

on

ಕುವೆಂಪು ಅವರನ್ನು ನಾನು ಅಂದು ನೋಡಿದ್ದು ಎರಡನೆ ಸಲ. ನಾನು ನೋಡಲು ಬಂದಿರುವ ವಿಷಯ ತಿಳಿದು ಕೈಯಲ್ಲಿ ನನ್ನ ಪ್ರಶ್ನೆ ಮತ್ತು ತಮ್ಮ ಉತ್ತರಗಳಿಂದ ಕೂಡಿದ ಟೈಪ್ ಮಾಡಿದ ಹಾಳೆಗಳನ್ನು ಹಿಡಿದುಕೊಂಡು ಬಂದರು. ನಾನು ಮತ್ತು ಮಿತ್ರ ನೆಲಮನೆ ದೇವೇಗೌಡರು ನಮಸ್ಕರಿಸಿದೊಡನೆ ಕೂತು ಪ್ರಶ್ನೆ ಮತ್ತು ಉತ್ತರಗಳನ್ನು ಓದುತ್ತ ವಿವರಿಸತೊಡಗಿದರು.

ತಮಗೆ ಯಾವುದೇ ಜಾತಿಯ ಬಗ್ಗೆ ಒಣ ಅಭಿಮಾನವಾಗಲಿ ಅನಗತ್ಯ ಪೂರ್ವಗ್ರಹವಾಗಲಿ ಇಲ್ಲವೆಂದು ಸ್ಪಷ್ಟಪಡಿಸಿದರು. ಅವರ ಮಾತಿನಲ್ಲಿ ತಮ್ಮ ಉತ್ತರಗಳು ಜನಕ್ಕೆಲ್ಲಿ ತಿಳಿಯುವುದಿಲ್ಲವೋ ಎಂಬ ಆತಂಕವಿದ್ದಂತಿತ್ತು. ಆದ್ದರಿಂದ ತಮ್ಮ ಕೃತಿಗಳಿಂದ ಉದಾಹರಣೆ ಎತ್ತಿಕೊಂಡು ಮಾತಾಡಿದರು. ನಾನು ಅವೆಲ್ಲವನ್ನೂ ಓದಿದ್ದೆನಾದ್ದರಿಂದ ಆ ವಿವರಣೆ ಅನಗತ್ಯವಾಗಿತ್ತು. ಆದರೆ ಕುವೆಂಪು ಅವರಿಗೆ ಅದಮ್ಯ ಉತ್ಸಾಹವಿದೆ; ಈ ಸಮಾಜದ ಕೆಡಕುಗಳ ಬಗ್ಗೆ ಕೋಪವಿದೆ. ತಾವು ಎಷ್ಟೇ ಬರೆದರೂ ಮಾತಾಡಿದರೂ ಈ ಜನತೆ ಸರಿಹೋಗುತ್ತದೋ ಇಲ್ಲವೋ ಎಂಬ ಸಂದೇಹವಿದೆ. ಆದ್ದರಿಂದಲೇ ಹಲವೊಮ್ಮೆ ವ್ಯಗ್ರವಾಗಿ ಮಾತಾಡುತ್ತಾರೆ. ಅವರು ನನ್ನ ಪ್ರಶ್ನೆಗಳಿಗೆ ಉತ್ತರ ಹೇಳುತ್ತ ಹೊಸ ಸಾಹಿತ್ಯದ ಬಗ್ಗೆ ಮಾತಾಡಿರುವುದನ್ನೂ ಈ ಅರ್ಥದಲ್ಲೇ ತೆಗೆದುಕೊಳ್ಳಬೇಕೆಂದು ಕಾಣುತ್ತದೆ.

ಕಿರಿಯ ಲೇಖಕರು ಯಾರಿಗೂ ಅರ್ಥವಾಗದ ಗೊಂದಲಗಳಲ್ಲಿ ಸಿಲುಕಿಕೊಂಡು ತಮ್ಮನ್ನು ತಾವು ಮೋಸಗೊಳಿಸಿಕೊಳ್ಳುವ ಬದಲು ಸಮಾಜಕ್ಕೆ ತಮ್ಮನ್ನು ತಾವು ತೆರೆದುಕೊಳ್ಳಬೇಕೆಂದೂ ಸಮಾಜದ ಅನಿಷ್ಟಗಳನ್ನು ಸರಿಪಡಿಸಬೇಕೆಂದೂ ಅವರು ಸೂಚಿಸುತ್ತಾರೆ. ಇದು ಕಿರಿಯ ಬರಹಗಾರರು ಅನುಭವ ಪಡೆಯುವ ಬಗ್ಗೆ ಉತ್ತಮ ಹಿತವಚನ. ಇನ್ನೊಂದು ಬಗೆಯಲ್ಲಿ ಇದು ನೀತಿ ಪಾಠ. ಇವೆರಡೂ ಕುವೆಂಪು ಮಾತುಗಳಲ್ಲಿರುವುದು ಎಂಥವರಿಗೂ ಕಂಡು ಬರುತ್ತದೆ.

ಆವೊತ್ತು ಮಾತಾಡುವ ಮೂಡಲ್ಲಿದ್ದರು ಕುವೆಂಪು ನಾವಿಬ್ಬರೂ ಕೆಲಸದ ಮೂಡಿನಲ್ಲಿದ್ದೆವು. ಅವರು ತಮ್ಮ ‘ರಾಮಾಯಣ ದರ್ಶನಂ’ನಿಂದ ಓದಿ ತೋರಿಸುವುದಾಗಿ ಸೂಚಿಸಿ ಬೇರೊಂದು ವಿಷಯ ಎತ್ತಿಕೊಂಡು ವಿವರಿಸತೊಡಗಿದರು. ‘ಪಾಂಚಾಲಿ’ ವಿವಿಧ ತೊಡಕುಗಳಲ್ಲಿ ಸಿಲುಕಿದ್ದ ನಾನು ಮತ್ತು ದೇವೇಗೌಡರು ನಮಸ್ಕಾರ ಹೇಳಿ ಹೊರಬಿದ್ದೆವು.

ಕುವೆಂಪು ಒಂದು ಸಂಸ್ಥೆ ಅಥವಾ ದೇವತೆಯಾಗಿ ಹುಂಬರ ಮನಸ್ಸಿನಲ್ಲಿ ಬೆಳೆಯುತ್ತಿದ್ದ ವೇಳೆಗೆ ಸರಿಯಾಗಿ ಅವರು ಮೈಕೊಡವಿಕೊಂಡು ಹೊರಬಂದು ಮನುಷ್ಯರೂ ವಿಚಾರವಾದಿಗಳೂ ಆಗಿ ಮಾತಾಡುತ್ತಿದ್ದುದು ನನಗೆ ಸಂತಸ ಉಂಟುಮಾಡಿತ್ತು.

——————————————————————-

ಲಂಕೇಶ್: ಸಾಮಾನ್ಯವಾಗಿ ಸಾರ್ವಜನಿಕ ಸಭೆಗಳಲ್ಲಿ ಮತ್ತು ವಾದವಿವಾದಗಳಲ್ಲಿ ಭಾಗವಹಿಸದ ತಾವು ಈಚೆಗೆ ಹೀಗೆ ಭಾಗವಹಿಸುವ ಮೂಲಕ ತಮ್ಮ ವಿಶಿಷ್ಟ ಬಗೆಯ ಕೀರ್ತಿಗೆ ಕಳಂಕ ತಂದುಕೊಳ್ಳುತ್ತಿರಬಹುದೇ ಎಂಬ ಅಳುಕು ತಮ್ಮ ಅಭಿಮಾನಿಗಳಲ್ಲಿ ಕೆಲವರಿಗಿದೆ. ಈ ಬಗ್ಗೆ ತಮ್ಮ ಅಭಿಪ್ರಾಯವೇನು?

ಕುವೆಂಪು: ಕೀರ್ತಿಗಿಂತಲೂ ನನಗೆ ಹೆಚ್ಚು ಪ್ರಿಯವಾದದ್ದು ಸತ್ಯ. ಸತ್ಯ ಹೇಳಿದರೆ ಕಲುಷಿತವಾಗುವ ಕೀರ್ತಿ ಭ್ರಷ್ಟಾಚಾರದ ವಸ್ತುವಾಗುತ್ತದೆ. ಅಲ್ಲದೆ ‘ಕೀರ್ತಿಶನಿ’ ಎಂಬ ನನ್ನ ಸಾನೆಟ್ಟಿನಲ್ಲಿ ಅನೇಕ ವರ್ಷಗಳ ಹಿಂದೆಯೇ ನಾನು ಅದನ್ನು ‘ತೊಲಗಾಚೆ’ ಎಂದು ತೊಲಗಿಸಿದ್ದೇನೆ. ಆದರೂ, ಶ್ರೀ ಎ.ಆರ್. ಕೃಷ್ಣಶಾಸ್ತ್ರಿಗಳು ಹೇಳಿದಂತೆ, ಶನಿ ಒಮ್ಮೆ ಬೆನ್ನು ಹತ್ತಿದರೆ ಬಿಡುವುದಿಲ್ಲವಂತೆ. ನನ್ನ ಮತ್ತೊಂದು ಸಾನೆಟ್ ‘ಯಶೋಲಕ್ಷ್ಮಿ’ ಈ ವಿಚಾರವಾಗಿ ನನ್ನ ಭಾವನೆ ಏನು ಎಂಬುದನ್ನು ತಿಳಿಸುತ್ತದೆ. ಕೀರ್ತಿ ಕಲುಷಿತವಾಗುವುದಿರಲಿ ಅಪಕೀರ್ತಿಯೆ ಬಂದರು ಸತ್ಯ ಹೇಳುವುದನ್ನು ಬಿಡುವುದಿಲ್ಲ.

ಲಂಕೇಶ್: ಕೆಟ್ಟಿರಲಿ, ಕೆಡದಿರಲಿ ಭಾರತೀಯ ಸಂಸ್ಕೃತಿಯೆಂದರೆ ವೈದಿಕ ಸಂಸ್ಕೃತಿಯೇ ಎಂಬ ಅಭಿಪ್ರಾಯದ ಬಗ್ಗೆ ನಿಮಗೇನೆನ್ನಿಸುತ್ತದೆ?

ಕುವೆಂಪು: ಇದೊಂದು ತಪ್ಪು ಅಭಿಪ್ರಾಯ. ಭಾರತೀಯ ಸಂಸ್ಕೃತಿ ಬರಿಯ ವೈದಿಕವಲ್ಲ. ಅವೈದಿಕವೂ ಅದರ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿದೆ. ಬೌದ್ಧ, ಜೈನಗಳಲ್ಲದೆ ನ್ಯಾಯ, ವೈಶ್ಲೇಷಿಕ, ಸಾಂಖ್ಯ, ಯೋಗ ದರ್ಶನಗಳೂ ವೇದದ ಪರಮ ಪ್ರಾಮಾಣ್ಯವನ್ನು ಅವಿಚಾರಕವಾಗಿ ಒಪ್ಪಬೇಕು ಅನ್ನುವುದಿಲ್ಲ. ನನ್ನದು ವಿಶ್ವಸಂಸ್ಕೃತಿ. ಅಭಾರತೀಯವೂ ಅದರಲ್ಲಿ ಸೇರಿದೆ. ಸನಾತನವೂ (ಪುರಾತನ ಅಲ್ಲ.) ಶಾಶ್ವತವೂ ಆಧ್ಯಾತ್ಮಿಕವೂ ವಿಚಾರ ಮತ್ತು ವಿಜ್ಞಾನಗಳಿಗೆ ಅವಿರುದ್ಧವೂ ಆಗಿರುವ ಸತ್ಯ ಎಲ್ಲಿಯೇ ಇರಲಿ ಅದನ್ನು ನಾನು ಸ್ವೀಕರಿಸಿದ್ದೇನೆ.

ಲಂಕೇಶ್: ಬ್ರಾಹ್ಮಣ ಜಾತಿಯಲ್ಲಿ ಹಲವು ಒಳಪಂಗಡಗಳಿದ್ದರೂ ಕೇವಲ ಒಂದು ಪಂಗಡವನ್ನು ನೀವು ಟೀಕಿಸಿದ್ದು ಕೇವಲ ಉದಾಹರಣೆಗೋ ಅಥವಾ ಆ ಪಂಗಡ ತೀರಾ ಮಲಿನಗೊಂಡಿದೆ ಎಂಬ ಕಾರಣಕ್ಕೋ?

ಕುವೆಂಪು: ನನ್ನ ಭಾಷಣ ಬ್ರಾಹ್ಮಣರಿಗಾಗಲಿ, ಮಾಧ್ವರಿಗಾಗಲೀ ನಿರ್ದೆಶಿಸಿದ್ದಲ್ಲ; ಒಕ್ಕೂಟದವರಿಗಾಗಿ ಮಾತ್ರ. ಜಗತ್ತಿನ ಪುರೋಹಿತಶಾಹಿ ಅವೈಚಾರಿಕ ಮತ್ತು ಅವೈಜ್ಞಾನಿಕ ಮೂಢ ಭಾವನೆಗಳ ಆಶ್ರಯದಲ್ಲಿ ಶ್ರೀ ಸಾಮಾನ್ಯರನ್ನು ಹೇಗೆ ವಂಚಿಸುತ್ತಾ ಬಂದಿದೆ ಎನ್ನುವುದನ್ನು ಕುರಿತು ವಿಚಾರವಾದಿಗಳಾಗಿ ಬಾಳನ್ನು ನಡೆಸಬೇಕು ಎನ್ನುವ ತರುಣರಿಗೆ ತಿಳಿಸುತ್ತಿದ್ದೆ. ಪ್ರಾಸಂಗಿಕವಾಗಿ, ನಾನು ಕೆಲವೇ ದಿನಗಳ ಹಿಂದೆ ಆ ಪುಸ್ತಕಗಳನ್ನು ಓದುತ್ತಿದ್ದು ಸಂಗತಿ ಮನಸ್ಸಿನಲ್ಲಿ ಹೊಚ್ಚ ಹೊಸದಾಗಿ ಇದ್ದುದರಿಂದ ಮಧ್ವ-ಜಯತೀರ್ಥರ ನಿದರ್ಶನಗಳನ್ನು ಕೊಟ್ಟೆನಷ್ಟೆ; ಆಮೇಲೆ ಗುಲ್ಲೆದ್ದ ಮತಭ್ರಾಂತರ ಗಲಾಟೆಯಿಂದಲೇ ಗೊತ್ತಾದದ್ದು ನಾನು ಎಂತಹ ಹೇಸಿಗೆಯ ಹೊಂಡಕ್ಕೆ ಕಲ್ಲು ಎಸೆದಿದ್ದೇನೆ ಎಂದು.

ಲಂಕೇಶ್: ತಮ್ಮ ಕಾವ್ಯದ ಮತ್ತು ಮುಖ್ಯ ಕಥಾಸಾಹಿತ್ಯದ (fiction) ಕೇಂದ್ರ ನಿಲುವು ವೈದಿಕ, ಆದರ್ಶಮಯ, ಅವಾಸ್ತವ ಎಂದು ಹಲವರು ಟೀಕಿಸುತ್ತಾರೆ. ಇದಕ್ಕೆ ತಮ್ಮ ಉತ್ತರವೇನು?

ಕುವೆಂಪು: ಅವರ ತಲೆ; ನನ್ನದು ವಿಶ್ವಪ್ರಜ್ಞೆ. ನಾನು ಭಾರತೀಯನಾಗಿ ಅದರಲ್ಲೂ ಕನ್ನಡಿಗನಾಗಿ ಹುಟ್ಟಿದ್ದರಿಂದ ಆ ಸಂಸ್ಕೃತಿಯ ಮತ್ತು ಆ ಭಾಷೆಯ ಪರಿಭಾಷೆಯನ್ನು ಅನಿವಾರ್ಯವಾಗಿ ಉಪಯೋಗಿಸುತ್ತೇನಷ್ಟೆ. ಸತ್ಯ ವೈದಿಕವಾಗಿ ಪ್ರಕಟವಾದ ಮಾತ್ರಕ್ಕೆ ಅಸತ್ಯವಾಗುವುದಿಲ್ಲ. ಆದರ್ಶಮಯವಾದ ಮಾತ್ರಕ್ಕೆ ಅವಾಸ್ತವವಾಗುವುದಿಲ್ಲ. ನನ್ನ ಭಾಷಣದ ಉದ್ದೇಶವೆ ಒಕ್ಕೂಟದ ಹುಡುಗರನ್ನು ಅಂತಹ ತಪ್ಪುದಾರಿಗೆ ಹೋಗದಿರುವಂತೆ ತಡೆಯಬೇಕು ಎಂಬುದಾಗಿತ್ತು. ಚಿನ್ನದ ಒಡವೆಯನ್ನು ಅಕ್ಕಸಾಲಿ ಮಾಡಿದ ಮಾತ್ರಕ್ಕೆ ಚಿನ್ನ ಅಸತ್ಯವಾಗುತ್ತದೆಯೇ? ಗ್ರಾವಿಟೇಶನ್ ಸಿದ್ಧಾಂತವನ್ನು ನ್ಯೂಟನ್ ಕಂಡುಹಿಡಿದ ಮಾತ್ರಕ್ಕೆ ಅದು ಕ್ರೈಸ್ತವಾಗುತ್ತದೆಯೇ? ವೇದದ ಋಷಿ ಸನಾತನ ಶಾಶ್ವತ ಸತ್ಯವನ್ನು ಸಾಕ್ಷಾತ್ಕರಿಸಿಕೊಂಡು ಅದಕ್ಕೆ ‘ಬ್ರಹ್ಮನ್’ ಎಂದು ಹೆಸರು ಕೊಟ್ಟ ಮಾತ್ರಕ್ಕೆ ಆ ಸತ್ಯ ಆ ಋಷಿಯ ಸೃಷ್ಠಿಯಾಗುತ್ತದೆಯೇ? ಆ ಸತ್ಯ ಋಷಿಗೆ ಪೂರ್ವದಲ್ಲಿಯೇ ಇದ್ದುದು; ಆ ಋಷಿ ಮಾತ್ರವಲ್ಲ ಮನುಷ್ಯರೆಲ್ಲ ಮುಗಿದ ಮೇಲೆಯೂ ಆ ಸತ್ಯಕ್ಕೆ ಚ್ಯುತಿ ಬರುವುದಿಲ್ಲ. ಗುರುತ್ವಾಕರ್ಷಣ ಶಕ್ತಿ ನ್ಯೂಟನ್ನಿಗೆ ಪೂರ್ವದಲ್ಲಿಯೂ ಇತ್ತು, ಮನುಷ್ಯ ಕುಲವೇ ನಾಶವಾದ ಮೇಲೆಯೂ ಇರುತ್ತದೆ.

ಅಂತಹ ಸತ್ಯವನ್ನು ನಿತ್ಯ, ಸನಾತನ ಶಾಶ್ವತ ಎನ್ನುತ್ತೇವೆ. ಬೇರೆ ಬೇರೆ ದೇಶಗಳು, ಬೇರೆ ಬೇರೆ ಭಾಷೆಗಳೂ ಬೇರೆ ಬೇರೆ ಹೆಸರು ಕೊಡಬಹುದಷ್ಟೆ. ನನ್ನ ಜೀವನ ದರ್ಶನ ಅಂತಹ ಅಚ್ಯುತ ಸತ್ಯದ ಮೇಲೆ ನಿಂತಿದೆ. ನನ್ನ ಸಾಹಿತ್ಯವೂ ಅದನ್ನೆ ಅಭಿವ್ಯಕ್ತಗೊಳಿಸುತ್ತದೆ. ಅದನ್ನು ‘ನಿಮ್ಮಲ್ಲಿ’ ಕೆಲವರು ‘ವೈದಿಕ’ ಎಂದು ನಿಂದಿಸುವಂತೆ ‘ಅವರಲ್ಲಿ’ ಕೆಲವರು ‘ಅವೈದಿಕ’ ಎಂದೂ ತಿರಸ್ಕರಿಸುತ್ತಾರೆ. ಆದರೆ ನನ್ನ ಸಾಹಿತ್ಯ ಉದ್ಭವಿಸುವುದು ಬದುಕಿನಿಂದ, ಬದುಕಿಗಾಗಿ; ಮತ್ತು ಬದುಕಿನಾಚೆಯ ಬದುಕಿಗಾಗಿ.

ಲಂಕೇಶ್: ಈಚೆಗೊಬ್ಬರು ತಮ್ಮ ಸಾಮಾಜಿಕ ವಿಮರ್ಶೆಯನ್ನು ಕುರಿತು ಹೇಳುತ್ತಾ ‘ಕುವೆಂಪು ಅವರ ಮಾತಿನಲ್ಲಿ ಬ್ರಾಹ್ಮಣ ವಿರೋಧಿ ಧ್ವನಿ ಕೇಳಿ ಬರುತ್ತಿದ್ದರೆ ಅದಕ್ಕೆ ಕಾರಣವನ್ನು ಅವರ ವೈಯಕ್ತಿಕ ಅನುಭವದಲ್ಲಿ ಹುಡುಕಬೇಕು’ ಎಂದಿದ್ದಾರೆ. ಇದಕ್ಕೆ ತಮ್ಮ ಪ್ರತಿಕ್ರಿಯೆ?

ಕುವೆಂಪು: ಶುದ್ಧ ಅಪಾರ್ಥ! ಮೊದಲನೆಯದಾಗಿ ಅದು ಬ್ರಾಹ್ಮಣ ವಿರೋಧಿ ಧ್ವನಿಯಲ್ಲ. ಅಂದರೆ ಬೌದ್ಧ, ಜೈನ, ಕ್ರೈಸ್ತ, ಇಸ್ಲಾಂ ಮತ್ತು ಲಿಂಗಾಯಿತ ಪುರೋಹಿತಶಾಹಿಯನ್ನೂ ಒಳಗೊಂಡಿದೆ. ನನ್ನ ಪುರೋಹಿತಶಾಹಿ ಖಂಡನೆಗೆ ಕಾರಣವನ್ನು ನನಗಿರಬಹುದಾದ ವೈಯಕ್ತಿಕ ಅನುಭವದಲ್ಲಿ ಹುಡುಕುವುದು ಅತ್ಯಂತ ಹಾಸ್ಯಾಸ್ಪದ. ನನ್ನ ಮೂವತ್ತು ನಲವತ್ತು ವರ್ಷದ ಹಿಂದಿನ ಬರಹವನ್ನು ಯಾರೋ ಒಬ್ಬರು ಅಂದು ಟೀಕಿಸಿದುದಕ್ಕಾಗಿ ಇಂದು ನಾನು ನಲವತ್ತು ವರ್ಷಗಳ ಮೇಲೆ ರೊಚ್ಚು ತೀರಿಸಿಕೊಳ್ಳುವುದಕ್ಕೆ ಹಾಗೆ ಮಾತನಾಡಿದೆನೆಂದು ಹೇಳುವುದು ನನ್ನ ವ್ಯಕ್ತಿತ್ವಕ್ಕೆ ಅತ್ಯಂತ ‘ಅಲ್ಪತನ’ ಆರೋಪಿಸಿದಂತಾಗುತ್ತದೆ. ನಾನು ಅಷ್ಟು ‘ಸಣ್ಣ’ವನಲ್ಲ. ನಲವತ್ತು ಐವತ್ತು ವರ್ಷಗಳಿಂದಲೂ ನಾನು ಗದ್ಯ, ಪದ್ಯ, ನಾಟಕ ಎಲ್ಲದರಲ್ಲಿಯೂ ಹೇಳುತ್ತಾ ಬಂದಿರುವುದನ್ನೆ ಮೊನ್ನೆಯು ಹೇಳಿದ್ದೇನೆ ಅಷ್ಟೆ. ಆದರೆ ಇವರು ಯಾರೂ ನೀವೂ ಸೇರಿ, ನನ್ನ ಬರಹಗಳನ್ನು ಅಷ್ಟು ಆಸ್ಥೆಯಿಂದ ಓದಿಯೇ ಇಲ್ಲ ಎಂಬುದು ನನ್ನ ಗುಮಾನಿ. ಇಡೀ ರಾಮಾಯಣದರ್ಶನವೆ ನನ್ನ ‘ದರ್ಶನ’ಕ್ಕೆ ಒಡ್ಡಿದ ಮಹಾ ಪ್ರತಿಮೆಯಾಗಿದೆ. (ನಿಮ್ಮ ಎರಡನೆಯ ಪ್ರಶ್ನೆಗೆ ಕೊಟ್ಟಿರುವ ಉತ್ತರವನ್ನೂ ನೋಡಬಹುದು.)

ಲಂಕೇಶ್: ‘ಬ್ರಾಹ್ಮಣ’ ‘ಶೂದ್ರ’ ‘ಮಣ್ಣಿನ ವಾಸನೆ’ ಇತ್ಯಾದಿ ಮಾತು ಬಹಳವಾಗಿ ಕೇಳಿಬರುತ್ತಿರುವ ಈ ಕಾಲದಲ್ಲಿ ಬ್ರಾಹ್ಮಣ, ಶೂದ್ರರ ಭಾಷೆ, ಅನುಭವ ದೃಷ್ಟಿಯನ್ನು ಕುರಿತ ತಮ್ಮ ವಿಶ್ಲೇಷಣೆ ಏನು?

ಕುವೆಂಪು: ಈ ಮಾತುಗಳೆಲ್ಲ ಮತ್ತೆ ಪುರೋಹಿತಶಾಹಿಯ ಪಿತೂರಿಯ ಟಂಕಸಾಲೆಯ ನಾಣ್ಯಗಳೆ. ನಿಮ್ಮನ್ನು ದಿಕ್ಕು ತಪ್ಪಿಸಿ ಬದುಕಿನ ಋಜುಮಾರ್ಗದಿಂದ ಕಟಂಕಿತ ಮಾರ್ಗಕ್ಕೆ ತಳ್ಳುವ ಉಪಾಯದಿಂದಲೆ ಅವರು ಅವನ್ನು ಹುಟ್ಟಿಸಿದ್ದಾರೆ. ನೀವೂ ಹಿಂದಿನಂತೆಯೇ ಇಂದು ಬೆಪ್ಪುಗಳಾಗಿ ಅದಕ್ಕೆ ವಶರಾಗಿ, ಜನರ ಬದುಕನ್ನು ಮತಮೌಢ್ಯದಿಂದ ಪಾರು ಮಾಡಿ ಅವರನ್ನು ವೈಚಾರಿಕ ಬುದ್ಧಿ ಮತ್ತು ವೈಜ್ಞಾನಿಕ ದೃಷ್ಟಿ ಸಂಪನ್ನರಾಗಿ ಪರಿವರ್ತಿಸಿ ಅವರ ಮನಸ್ಸು ಮತ್ತು ಹೃದಯಗಳನ್ನು ಬೆಳಗುವ, ಅವರ ಸೋತ ಹೃದಯಗಳನ್ನು ಹುರಿದುಂಬಿಸುವ, ಮತ್ತು ವರ್ಣ, ಜಾತಿ ಭೇದಭಾವನೆಗಳನ್ನೆಲ್ಲ ಕಸದ ಬುಟ್ಟಿಗೆ ತೂರಿ ಅವರನ್ನು ಸಮಾನತಾವಾದಿಗಳನ್ನಾಗಿ ಪರಿವರ್ತಿಸುವ ಸಾಹಿತ್ಯ ಸೃಷ್ಟಿ ಮಾಡುವ ಬದಲು, ಗುಂಪುಗಾರಿಕೆಗಲ್ಲದೆ ಮತ್ತೆ ಯಾರಿಗೂ ಬೇಡದ ಮತ್ತು ಯಾರಿಗೂ ಅರ್ಥವಾಗದ ‘ನವ್ಯ’ ನಾಮಕ ವಿಕಾರ ಸೃಷ್ಟಿಗೆ ಮರುಳಾಗಿ ಹೋಗಿದ್ದೀರಿ. ಅಂತಹ ಕೃತಕ ಅನುಕರಣೀಯ ಪಂಥಗಳನ್ನೆಲ್ಲ ನಿಮ್ಮ ಹೃದಯದಿಂದ ಕಿತ್ತೊಗೆದು, ನಿಮ್ಮವರ ಬದುಕನ್ನು ನೇರವಾಗಿ ನೋಡಿ ಅದರಿಂದ ಉದ್ಭವಿಸುವ ಸಮಸ್ಯೆಗಳನ್ನು ಅರ್ಥ ಮಾಡಿಕೊಂಡು ಅವರನ್ನು ಮೇಲಕ್ಕೆತ್ತುವ ಧೀರಭಾವಗಳನ್ನೂ ಕ್ರಿಯಾಶೀಲ ಆದರ್ಶಗಳನ್ನೂ ನಿಮ್ಮ ಬರವಣಿಗೆಗಳಲ್ಲಿ ನೀಡಬೇಕಾಗಿರುವುದು ಸದ್ಯದ ನಿಮ್ಮ ಆದ್ಯ ಕರ್ತವ್ಯ. ಪುರೋಹಿತಶಾಹಿಯ ಮೆಚ್ಚುಗೆಗೂ ಹೊಗಳಿಕೆಗೂ ಹಾತೊರೆದು ಬಾಯಿ ಬಿಟ್ಟು ನಿಮ್ಮ ಪೌರುಷ ತೇಜಸ್ಸುಗಳಿಗೆ ಅಪಮಾನ ಮಡಿಕೊಳ್ಳುವುದನ್ನು ಒಡನೆಯೇ ನಿಲ್ಲಿಸಿಬಿಡಿ. (ಮಾನಸ ಗಂಗೋತ್ರಿಯಲ್ಲಿ ಏರ್ಪಡಿಸಿದ್ದ ಲೇಖಕರ ಗೋಷ್ಠಿಯನ್ನು ಉದ್ಘಾಟಿಸುತ್ತಾ ನಾನು ಮಾಡಿದ ಭಾಷಣವನ್ನು ಗಮನವಿಟ್ಟು ಓದಿ ನೋಡಿದರೆ ನನ್ನ ಅಭಿಪ್ರಾಯಗಳು ಸ್ಪಷ್ಟಗೊಳ್ಳುತ್ತವೆ.)

ಲಂಕೇಶ್: ಕನ್ನಡ ಸಾಹಿತಿಗಳು ಬಹುಕಾಲದಿಂದ ಈ ನಾಡ ಹೆಸರಿನ ಬದಲಾವಣೆ, ಕನ್ನಡ ಮಾಧ್ಯಮ ಕುರಿತು ಮಾತನ್ನಾಡುತಿದ್ದರೂ ಕೇವಲ ಹೆಸರಿನ ಬದಲಾವಣೆ ಮಾತ್ರ ಆಗಿ ಮಾಧ್ಯಮದ ಪ್ರಶ್ನೆ ಹಾಗೇ ಉಳಿದಿದೆ. ಇದು ಸಾಹಿತಿಯ ಪ್ರಭಾವದ ದೌರ್ಬಲ್ಯ ತೋರುತ್ತದೆಯೆ?

ಕುವೆಂಪು: ಹಾಗೇನಿಲ್ಲ, ಈಗಾಗಲೆ ತಕ್ಕಷ್ಟು ಕಾರ್ಯ ನಡೆದಿದೆ. ನಡೆಯುತ್ತಲೂ ಇದೆ. ಜನತೆ, ಸರಕಾರ, ಸಾಹಿತ್ಯ ಪರಿಷತ್ತು ಮತ್ತು ವಿಶ್ವವಿದ್ಯಾಲಯಗಳು ಎಲ್ಲವೂ ಕನ್ನಡ ಮಾಧ್ಯಮ ತತ್ವವನೊಪ್ಪಿ ಕ್ರಿಯಾಶೀಲವಾಗಿ ಮುಂದುವರೆಯುತ್ತಿವೆ. ಅದು ಪೂರ್ತಿ ಕೈಗೂಡಲು ತುಸು ಸಮಯ ಬೇಕಾಗಬಹುದು ಅಷ್ಟೆ.

ಲಂಕೇಶ್: ಈ ನಾಡ ತರುಣರಿಗೆ ತಮ್ಮ ಹಿತವಚನವೇನು?

ಕುವೆಂಪು: ನನ್ನ ಸಾಹಿತ್ಯದಲ್ಲಿ- ಕತೆ, ಕಾದಂಬರಿ, ಭಾವಗೀತೆ, ಕಾವ್ಯ, ಮಹಾಕಾವ್ಯ, ಜೀವನ ಚರಿತ್ರೆ, ಭಾಷಣ, ವಿಮರ್ಶೆ ಇತ್ಯಾದಿ- ನಾನು ಹೇಳಬೇಕಾದ್ದೆಲ್ಲವನ್ನೂ ಹೇಳಿದ್ದೇನೆ. ಇಷ್ಟವಿರುವ ತರುಣರು ಅವುಗಳನ್ನು ಮನಸ್ಸಿಟ್ಟು ಓದಲಿ. ವಿಶೇಷವಾಗಿ, ಅದರ ಮುನ್ನುಡಿ ಸಹಿತ ‘ಆತ್ಮಶ್ರೀಗಾಗಿ ನಿರಂಕುಶಮತಿಗಳಾಗಿ’ ಎಂಬ ಪುಸ್ತಕದ ನಾಲ್ಕು ಭಾಷಣಗಳನ್ನಾದರೂ ಓದಲಿ. ಆದರೆ ನಾಲ್ಕನ್ನೂ ಸಮಗ್ರವಾಗಿ ತೆಗೆದುಕೊಳ್ಳಬೇಕು, ಅಷ್ಟೆ.- ಸರ್ವೋದಯ, ಸಮನ್ವಯ ಮತ್ತು ಪೂರ್ಣದೃಷ್ಟಿ ಇವುಗಳೇ ಎಲ್ಲರ ಧ್ಯೇಯಮಂತ್ರಗಳಾಗಲಿ.

ಕೃಪೆ: -‘ಪಾಂಚಾಲಿ’ (ದೀಪಾವಳಿ-ರಾಜ್ಯೋತ್ಸವ ವಿಶೇಷ ಸಂಚಿಕೆ, ಪುಟ: 11-14, 1974)
ಸಂಪಾದಕರು: ಪಿ. ಲಂಕೇಶ್

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending