ಅಂತರಂಗ
ಕೃಷಿ ಬಿಕ್ಕಟ್ಟಿನ ನಿರ್ಲಕ್ಷ್ಯ ಮೋದಿ ಸೋಲಿಸೀತೆ? : ಮಂಡ್ಯದ ವಳಗೆರೆಹಳ್ಳಿಯ ರೈತ ಆತ್ಮಹತ್ಯೆಗಳ ‘ಪೋಸ್ಟ್ ಮಾರ್ಟಂ’

- ಮಂಡ್ಯದ ವಳೆಗೆರೆಹಳ್ಳಿಯ ಆತ್ಮಹತ್ಯೆ ಮಾಡಿಕೊಂಡ ಐವರು ರೈತರ ಆತ್ಮಹತ್ಯೆಗಳನ್ನು ‘ರಾಜಕೀಯ-ಆರ್ಥಿಕ ಪೋಸ್ಟ್ ಮಾರ್ಟಂ’ ಮೂಲಕ ಕೃಷಿ ಸಂಕಟದ ಆಳ ಅಗಲಗಳನ್ನು ಇಲ್ಲಿ ಅಳೆಯಲಾಗಿದೆ. ಮಂಡ್ಯ ಮತ್ತು ಕೊಪ್ಪಳದ ಕೃಷಿ ಸಂಕಟಗಳನ್ನು ಕುರಿತು ಸಂಶೋಧನೆ ಮಾಡುತ್ತಿರುವ ದೀಪಾ ಕುರುಪ್ ಅದರ ಬೆಳಕಿನಲ್ಲಿ ಕಳೆದ ಐದು ವರ್ಷಗಳಲ್ಲಿ ಈ ಕುರಿತು ಮೋದಿ ಸರಕಾರದ ಘೋಷಣೆ ಮತ್ತು ‘ಸಾಧನೆ’ಗಳ ನಡುವಿನ ಕಂದಕವನ್ನು ತೆರೆದಿಡುತ್ತಾರೆ. ಅದಕ್ಕೆ ಪ್ರತಿಕ್ರಿಯೆಯಾಗಿ ಬಂದಿರುವ ರೈತರ ಚಳುವಳಿಯ ಬಗೆಗೂ ಬರೆಯುತ್ತಾರೆ. ಲೋಕಸಭಾ ಚುನಾವಣೆಗಳ ಹಿನ್ನೆಲೆಯಲ್ಲಿ ಕೃಷಿ ಸಂಕಟಗಳ ತೀವ್ರ ನಿರ್ಲಕ್ಷ ಮೋದಿಯನ್ನು ಸೋಲಿಸಬಲ್ಲದು ಎಂದು ಅಂತರ್ರಾಷ್ಟ್ರೀಯ ಓದುಗರಿಗೆ ತಿಳಿಸುವ ಈ ಲೇಖನ ‘ಅಲ್ ಜಜೀರಾ’ (https://www.aljazeera.com/news/2019/04/india-elections-farm-crisis-pm-narendra-modi-190418191725241.html)ವೆಬ್ ಮ್ಯಾಗಜೀನ್ ನಲ್ಲಿ ಪ್ರಕಟವಾಗಿದೆ. ಇಲ್ಲಿ ಬರುವ ಕೃಷಿ ಸಂಕಟದ ಹಲವು ಆಯಾಮಗಳ ಬಗ್ಗೆ ಈ ಪತ್ರಿಕೆಯಲ್ಲಿ ಹಲವು ಬರಹಗಳು ಪ್ರಕಟವಾಗಿದ್ದರೂ, ಕ್ಷೇತ್ರ ಸಮೀಕ್ಷೆಯ ಪ್ರಕರಣಗಳ ಆಧಾರವಿರುವುದರಿಂದ ಈ ಲೇಖನವನ್ನು ಇಡಿಯಾಗಿ ಪ್ರಕಟಿಸಲಾಗುತ್ತಿದೆ. ಇದನ್ನು ಈ ಕ್ಷೇತ್ರ ಸಮಿಕ್ಷೆಯಲ್ಲಿ ಭಾಗವಹಿಸಿದ ಕರ್ನಾಟಕ ಪ್ರಾಂತ ರೈತ ಸಂಘದ ನಾಯಕ ಟಿ. ಯಶವಂತ ಅನುವಾದಿಸಿದ್ದಾರೆ.
“ಮಂಡ್ಯದಲ್ಲಿ ಏಕೆ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ”ಎಂದು ಮುಜಗರದಿಂದಲೇ ವಳೆಗೆರಹಳ್ಳಿ ಗ್ರಾಮಸ್ಥರನ್ನು ಪ್ರಶ್ನಿಸಿದೆ. ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿಗೆ ಸೇರಿರುವ ವಳೆಗೆರೆಹಳ್ಳಿ ಗ್ರಾಮದ ಬಹಳಷ್ಟು ಜನರಿಗೆ 2015 ಹಾಗೂ 2017 ರ ನಡುವಿನ ಎರಡು ವರ್ಷದಲ್ಲಿ ತನ್ನ ಗ್ರಾಮದ ಐವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬುದು ಆಶ್ಚರ್ಯವನ್ನೇನೂ ಹುಟ್ಟಿಸಲಿಲ್ಲ.
ಆದರೆ ಏಪ್ರಿಲ್ 1ರಂದು ನಡೆದ ಶ್ರೀನಿವಾಸ್ ರವರ ಆತ್ಮಹತ್ಯೆ ಅವರ ಮನಸ್ಸಿನಲ್ಲಿ ಹಸಿರಾಗಿದೆ. 45 ವರ್ಷ ವಯಸ್ಸಿನ ರೈತ ಸುಮಾರು ಐದು ಲಕ್ಷ ರೂ ನಷ್ಟಿದ್ದ ಸಾಲದಿಂದ ಮುಕ್ತನಾಗದೆ ವೃದ್ದೆ ತಾಯಿ, ಪತ್ನಿ ಮತ್ತು ಮಗನನ್ನು ಬಿಟ್ಟು ಅಗಲಿದ್ದಾರೆ. ಕಳೆದ ವರ್ಷವಷ್ಟೇ ಬಂಧು, ಸ್ನೇಹಿತರು ಹಾಗೂ ಗ್ರಾಮದ ಲೇವಾದೇವಿದಾರರಿಂದ ಮಗಳ ಮದುವೆ ವೆಚ್ಚ ಭರಿಸಲು ಸಾಲ ಪಡೆದಿದ್ದರು. ಮತ್ತೇ ಈ ವರ್ಷ ತನ್ನ ಒಂದು ಎಕರೆ ಜಮೀನಿನಲ್ಲಿ ಭತ್ತ ಬೆಳೆಯಲು ಮತ್ತಷ್ಟು ಸಾಲ ಮಾಡಿದ್ದರು. ಹಾಕಿದ್ದ ಬಂಡವಾಳಕ್ಕಿಂತ ಸಾಕಷ್ಟು ಕಡಿಮೆ ಬೆಲೆಗೆ ಭತ್ತ ಮಾರಾಟ ಆಗಿದ್ದು, ಸಾಲ ತೀರಿಸುವ ಅವನ ನಿರೀಕ್ಷೆಯನ್ನು ಮಣ್ಣುಪಾಲು ಮಾಡಿತು.
ಆದರೆ ಶ್ರೀನಿವಾಸ್ ರವರ ಸಾವು ರೈತ ಆತ್ಮಹತ್ಯೆ ಯ ಕೃಷಿ ಇಲಾಖೆ ಅಂಕಿ ಸಂಖ್ಯೆ ಪಟ್ಟಿಯಲ್ಲಿ ಸೇರ್ಪಡೆ ಆಗಿಲ್ಲ. ಲೆಕ್ಕಕ್ಕೆ ಹಾಗೂ ಪರಿಹಾರ ಸೌಲಭ್ಯಗಳ ಕ್ರಮಕ್ಕೆ ಒಳಪಡಬೇಕಾದರೆ, ಮರಣೋತ್ತರ ಪರೀಕ್ಷೆ ಮಾಡಿಸಬೇಕು. ಅವರ ಕುಟುಂಬದಂತೆ ಬಹಳಷ್ಟು ಇತರರು ಸಾಂಸ್ಕೃತಿಕ ಮತ್ತು ಭಾವನಾತ್ಮಕ ಕಾರಣಗಳಿಗಾಗಿ ಇಂತಹ ಪ್ರಕ್ರಿಯೆಯನ್ನು ನಿರಾಕರಿಸಿರುತ್ತಾರೆ. ಶ್ರೀನಿವಾಸ್ ರವರ ರೀತಿ ಎಣಿಕೆಗೆ ಪರಿಗಣಿಸದ ಆತ್ಮಹತ್ಯೆಗಳು ವಾರ್ಷಿಕವಾಗಿ ರಾಷ್ಟ್ರೀಯ ಅಪರಾಧ ರೆಕಾಡ್ರ್ಸ್ ಬ್ಯೂರೋ (ಓಅಖಃ) ಪ್ರಕಟಿಸುವ ರೈತ ಆತ್ಮಹತ್ಯೆಗಳ ಸಂಖ್ಯೆಗಿಂತ ವಾಸ್ತವವಾಗಿ ಜರುಗುತ್ತಿರುವ ಅತ್ಮಹತ್ಯೆಗಳು ಹೆಚ್ಚಿರುವುದನ್ನು ತೋರಿಸುತ್ತದೆ.
ನಿಖರವಲ್ಲದಿದ್ದರೂ 2016ರ ತನಕ ಸಾಮಾಜಿಕ ಕಾರ್ಯಕರ್ತರು ಹಾಗೂ ನೀತಿ ನಿರೂಪಕರು ಉಲ್ಲೇಖಿಸಬಹುದಾಗಿದ್ದು ಓಅಖಃ ದತ್ತಾಂಶ ಮಾತ್ರವಾಗಿತ್ತು. ಆ ನಂತರದಿಂದ ಬಿಜೆಪಿ ಸರ್ಕಾರ ಆತ್ಮಹತ್ಯೆ ಅಂಕಿಸಂಖ್ಯೆಗಳನ್ನು ಪ್ರಕಟಿಸಲು ನಿರಾಕರಿಸಿದೆ. ಅದರ ಒಟ್ಟು ರಾಜಕೀಯ ಕಥನಕ್ಕೆ ಅನುಕೂಲವಾಗುವಂv,É ನಿರುದ್ಯೋಗ ಮಟ್ಟ ಅಥವಾ ಆರ್ಥಿಕ ಬೆಳವಣಿಗೆಗೆ ಸಂಬಂಧಿಸಿದ ತನಗೆ `ಮುಜುಗರ ಉಂಟುಮಾಡುವ’ ಅಂಕಿ ಸಂಖ್ಯೆಗಳನ್ನು ಮರೆಮಾಚುವ ಇಲ್ಲವೆ ತಿರುಚುವ ಕಾರ್ಯತಂತ್ರದ ಭಾಗವಾಗಿಯೇ ಇದನ್ನು ಮಾಡಲಾಗಿದೆ.
ಜನಸಂಖ್ಯೆಯ ಶೇಕಡಾ 69 ರಷ್ಟು ಅಂದರೆ 83 ಕೋಟಿ ಜನ ಇರುವ ಗ್ರಾಮೀಣ ಪ್ರದೇಶದ ಸಂಕಷ್ಟ ಅಳೆಯುವ ಸೂಚಕವಿದು. ಓಅಖಃ ಪ್ರಕಾರ 2015 ರ ಹಿಂದಿನ ಎರಡು ದಶಕಗಳಲ್ಲಿ ಕನಿಷ್ಠ 3.21 ಲಕ್ಷ ರೈತರು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ಬಿಜೆಪಿ ಆಡಳಿತದ ಹಿಂದೆಯೂ ಬಿಕ್ಕಟ್ಟು ಇರುವ ಬಗ್ಗೆ ಕೂಡ ಓಅಖಃ ಬೆಳಕು ಚೆಲ್ಲುತ್ತಿದೆ. 2014 ರಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ `ಕ್ರಾಂತಿ’ ಮಾಡುವುದಾಗಿ ರೈತ-ಕೃಷಿ ಕೂಲಿಕಾರರನ್ನು ನಂಬಿಸಿ ಮೋದಿ ಸರ್ಕಾರ ಅಧಿಕಾರಕ್ಕೆ ಬಂದಿದ್ದರೂ ಗ್ರಾಮೀಣ ಬಿಕ್ಕಟ್ಟು ಮಾತ್ರ ಮತ್ತಷ್ಟು ಉಲ್ಬಣಿಸಿದೆ.
2014 ರ ಬಿಜೆಪಿ ಪ್ರಣಾಳಿಕೆ ರೈತರಿಗೆ ಉತ್ಪಾದನಾ ವೆಚ್ಚದ ಶೇಕಡಾ 50 ರಷ್ಟು ಲಾಭಾಂಶದ ಭರವಸೆ ನೀಡಿತ್ತು. ಮತ್ತೊಂದು ಅವಧಿಗೆ ಅಧಿಕಾರ ನಿರೀಕ್ಷಿಸುತ್ತಿರುವ ಮೋದಿ, 2019ರ ಬಿಜೆಪಿ ಪ್ರಣಾಳಿಕೆಯಲ್ಲಿ ಪುನುರುಚ್ಚರಿಸಿರುವ ಕೃಷಿ ಆದಾಯವನ್ನು ದುಪ್ಪಟ್ಟುಗೊಳಿಸಲು 2022 ರವರೆಗೆ ಅವಕಾಶ ನೀಡುವಂತೆ ಮತದಾರರನ್ನು ಕೇಳುತ್ತಿದ್ದಾರೆ. ಆದರೆ ಕೃಷಿ ಕ್ಷೇತ್ರದ ಒಟ್ಟಾರೆ ಚಿತ್ರಣ ಈ ಭರವಸೆಯ ವಿರುದ್ದ ದಿಕ್ಕಿನಲ್ಲಿದೆ.
ಕೃಷಿ ಕ್ಷೇತ್ರದ ಆರ್ಥಿಕ ಚಟುವಟಿಕೆಯ ಮಾಪಕವಾದ ಒಟ್ಟು ಮೌಲ್ಯ ವರ್ದನೆಯು(ಉಗಿಂ)2014-19 ರ ಪ್ರಸ್ತುತ ಬಿಜೆಪಿ ನೇತೃತ್ವದ ಎನ್.ಡಿ.ಎ. ಅವಧಿಯ ಸ್ಥಿರ ದರದಲ್ಲಿ ಸರಾಸರಿ ಶೇಕಡಾ 2.8 ರಷ್ಟು ಬೆಳವಣಿಗೆ ಕಂಡಿದೆ. ಹಿಂದಿನ ನಿರಂತರ ಎರಡು ಅವಧಿಯ ಕಾಂಗ್ರೆಸ್ ನೇತೃತ್ವದ ಸರ್ಕಾರಗಳಾದ ಯುಪಿಎ-1 (2004-09) ಹಾಗೂ ಯುಪಿಎ-2 (2009-14) ಗಳಿಗೆ ಹೋಲಿಸಿದರೆ ಇದು ಗಮನಾರ್ಹವಾಗಿ ಕಡಿಮೆ. ಇತ್ತೀಚಿನ ವರ್ಷಗಳಲ್ಲಿ ಕೃಷಿಯಲ್ಲಿ ತೊಡಗಿರುವ ಪುರುಷ ಹಾಗೂ ಮಹಿಳೆಯರ ಗ್ರಾಮೀಣ ಕೂಲಿಯ ಪ್ರಮಾಣ ಸಹ ಕುಂಠಿತಗೊಂಡಿದೆ.
ವಳೆಗೆರಹಳ್ಳಿ ಆತ್ಮಹತ್ಯೆಗಳು
ಗ್ರಾಮಗಳಲ್ಲಿನ ಬಿಕ್ಕಟ್ಟಿನ ಲಕ್ಷಣಗಳು ಹಾಗೂ ಹೊರಬಿದ್ದಿರುವ ಅಂಕಿಸಂಖ್ಯೆಗಳು, ಬಿಜೆಪಿಯ ಭರವಸೆಗಳಿಗೂ ‘ಸಾಧನೆ’ಗಳಿಗ ಇರುವ ಕಂದಕವನ್ನು ತೋರಿಸುತ್ತಿವೆ. ಬಿಜೆಪಿ ಗ್ರಾಮೀಣ ಬಿಕ್ಕಟ್ಟನ್ನು ಒಂದು ರಚನಾತ್ಮಕ ಬಿಕ್ಕಟ್ಟು ಎಂದು ಗ್ರಹಿಸುವುದಿಲ್ಲ. ಬಹುತೇಕ ಕೃಷಿ ಭೂಮಿಗೆ ಕಾಲುವೆ ನೀರಾವರಿ ಹೊಂದಿರುವ ಹಾಗೂ ಭತ್ತ, ಕಬ್ಬು, ರೇಷ್ಮೆ ಬೆಳೆಯುವ ವಳೆಗೆರಹಳ್ಳಿಯಲ್ಲಿನ ಪರಿಸ್ಥಿತಿ ಇದಕ್ಕೆ ಕನ್ನಡಿಯಾಗಿದೆ. 2015 ಮತ್ತು 2017 ರ ನಡುವೆ ಆತ್ಮಹತ್ಯೆ ಮಾಡಿಕೊಂಡಿರುವ ಐದು ಕುಟುಂಬಗಳ ಜೊತೆಗಿನ ಸಂವಾದವು ಗ್ರಾಮೀಣ ಭಾರತದ ರಾಜಕೀಯ ಆರ್ಥಿಕತೆಯಲ್ಲಿನ ಬಿಕ್ಕಟ್ಟಿಗೆ ಸಾಕ್ಷಿ ಒದಗಿಸುವ ಮಾನವ ದುರಂತವನ್ನು ಅನಾವರಣಗೊಳಿಸಿದೆ.
ಜಯರಾಮು ಎಂ.(36), ಮಧುಕರ್ (40), ನಾಥಪ್ಪ,(46), ಸಿ.ಎಂ.ಸಂಪತ್(37) ಮತ್ತು ಮರಿಗೌಡ (50) – ಆತ್ಮಹತ್ಯೆ ಮಾಡಿಕೊಂಡ ಈ ಐವರ ಕುಟುಂಬಗಳು ಎರಡು ಎಕರೆಗಿಂತ ಕಡಿಮೆ ಹಿಡುವಳಿ ಹೊಂದಿದ್ದು, ಕೃಷಿ ಕೂಲಿಗಾರರಾಗಿಯೂ ಸಹ ಕೆಲಸ ಮಾಡುತ್ತಿದ್ದರು. ರಾಷ್ಟ್ರೀಯ ಸರಾಸರಿ ಹಿಡುವಳಿ 2.7 ಎಕರೆ. ಈ ಎಲ್ಲಾ ಐದು ರೈತರು ಲಾಭಗಳಿಸುವಲ್ಲಿ ವಿಫಲರಾಗಿದ್ದು ಕುತ್ತಿಗೆಮಟ್ಟ ಸಾಲದಲ್ಲಿ ಮುಳುಗಿದವರು. ಅನಾರೋಗ್ಯ, ಮದುವೆ, ಕೃಷಿ ಲಾಗುವಾಡು ಮತ್ತಿತರೆ ವೆಚ್ಚ ನಿಭಾಯಿಸುವ ಕಾರಣದಿಂದಾಗಿ ಸಾಲಗಾರರಾಗಿದ್ದರು.
ಈ ಸಾಲದ ಗಣನೀಯ ಮೊತ್ತವನ್ನು ಸ್ಥಳೀಯ ಲೇವಾದೇವಿದಾರರಿಂದ ಪಡೆಯಲಾಗಿತ್ತೇ ವಿನಃ ಬ್ಯಾಂಕ್ನಿಂದಲ್ಲ. ಮಾಸಿಕ ಶೇಕಡಾ 5 ರ ದುಬಾರಿ ಬಡ್ಡಿ ದರ. ಜುಲೈ 2015 ರಲ್ಲಿ ಆತ್ಮಹತ್ಯೆಗೀಡಾದ ಜಯರಾಮು ತಾಯಿ 58 ವರ್ಷದ ಸಣ್ಣಮ್ಮ, ರಾಜ್ಯ ಸರ್ಕಾರ ಕೊಟ್ಟ ಪರಿಹಾರ ಧನ ಅವಳ ಮಗನ ಸುಸ್ಥಿ ಸಾಲದ ಬಡ್ಡಿಗೆ ಸರಿ ಹೋಯಿತು ಎಂದು ನಿಟ್ಟುಸಿರು ಬಿಟ್ಟರು.
ಮಧುಕರ್, ಒಬ್ಬ ದಲಿತ ರೈತ, ಸುಮಾರು ಶೇಕಡಾ 9 ರಷ್ಟು ಮಾಸಿಕ ದುಬಾರಿ ಬಡ್ಡಿ ದರದ ಸಾಲಗಾರ. ಆಗಷ್ಟೇ ಗುತ್ತಿಗೆ ಪಡೆದಿದ್ದ ಒಂದು ಎಕರೆ ಭೂಮಿಗೆ ಬಾಡಿಗೆ ಪಾವತಿಸಲು ಸಾಲ ಮಾಡಿದ್ದ. ಲೇವಾದೇವಿದಾರರು ತಮ್ಮ ಹಣದ ಸುರಕ್ಷತೆಗಾಗಿ ಸಾಮಾನ್ಯವಾಗಿ ದಲಿತರನ್ನು ಹಾಗೂ ಇತರೆ ಭೂ ಹೀನ ಬಡವರನ್ನು, ಅವರ ಹತ್ತಿರ ಈ ಸಣ್ಣ ಮೊತ್ತಕ್ಕೆ ಗ್ಯಾರಂಟಿ ನೀಡಬಹುದಾದ ಯಾವುದೇ ಆಸ್ತಿ ಇರದೇ ಇರುವುದರಿಂದ, ಹೆಚ್ಚಿನ ನಷ್ಟ ಉಂಟು ಮಾಡಬಹುದಾದ ಸಾಲಗಾರರೆಂದು ಪರಿಗಣಿಸುತ್ತಾರೆ.
ಮಧುಕರ್ ಆತ್ಮಹತ್ಯೆ ಮಾಡಿಕೊಂಡ ಮೇಲೆ ಆತನ ವಿಧವೆ ಪತ್ನಿ, ಸುನಂದಾ (30),ಸಾಲ ತೀರಿಸಲು ಇದ್ದ ಅರ್ಧ ಎಕರೆ ಜಮೀನು ಮಾರಾಟ ಮಾಡಿದ್ದಾಗಿ ಹೇಳಿದರು. ಈಗ ಈ ಕುಟುಂಬಕ್ಕೆ ಯಾವುದೇ ಭೂಮಿ ಇಲ್ಲ. ಕುಟುಂಬ ನಿರ್ವಹಣೆಗಾಗಿ ಗಾಮೆರ್ಂಟ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದಾರೆ.
ಕೃಷಿ ಇಲಾಖೆ, ಆತ್ಮಹತ್ಯೆಗೀಡಾದ ವಳೆಗೆರಹಳ್ಳಿ ರೈತರನ್ನು ಸಣ್ಣ ಮತ್ತು ಅಂಚಿನ ರೈತರೆಂದು ವರ್ಗೀಕರಿಸಿದೆ. ಇಂತಹವರ ಪ್ರಮಾಣ ದೇಶದಲ್ಲಿ ಶೇಕಡಾ 86 ರಷ್ಷಿದ್ದರೂ, ಗಣತಿ ಪ್ರಕಾರ ಕೇವಲ ಶೇಕಡಾ 47 ರಷ್ಟು ಕೃಷಿ ಭೂಮಿ ಹೊಂದಿದ್ದಾರೆ. ಈ ಶೇಕಡಾ 86 ಜನರೇ ಭಾರತದ ಕೃಷಿ ಬಿಕ್ಕಟ್ಟಿನ ಬಹು ಭಾರ ಹೊತ್ತಿರುವವರು. ಕೃಷಿ ಸಂಕಟವು ಭಾರತೀಯ ರೈತರನ್ನು ತಲೆಮಾರಿನಿಂದ ತಲೆಮಾರಿಗೆ ಹೆಚ್ಚು ಹೆಚ್ಚು ತುಂಡು ಹಿಡುವಳಿದಾರರನ್ನಾಗಿಸುತ್ತಿದೆ. ಭೂ ಹಂಚಿಕೆಯ ಅಸಮಾನತೆ ಕೂಡ ತೀವ್ರಗೊಂಡಿದೆ.
ಬರಗಾಲ, ಬೆಳೆ ವಿಮೆ ಇತ್ಯಾದಿ
ಮಂಡ್ಯವೂ ಸೇರಿದಂತೆ ಭಾರತದ ಬಹುತೇಕ ಭಾಗ 2014 ರಿಂದ ಸತತ ಎರಡು ವರ್ಷಗಳ ಬರಗಾಲವನ್ನು ಅನುಭವಿಸಿದ್ದರೂ, ಈ ಯಾವ ಕುಟುಂಬಗಳು ಕೇಂದ್ರ ಸರ್ಕಾರದಿಂದ ಬರ ಪರಿಹಾರ ಪಡೆದಿಲ್ಲ. ಅಸಮರ್ಪಕ ಭೂ ದಾಖಲಾತಿ ಅಥವಾ ಆಧಾರ್ ಜೊತೆ ಬ್ಯಾಂಕ್ ಖಾತೆ ಜೋಡಣೆ ಆಗದಿರುವ ಕಾರಣದಿಂದ ಬರ ಪರಿಹಾರ ಪಟ್ಟಿಯಿಂದ ಅವರು ಹೊರಗುಳಿದಿದ್ದರು ಎಂದು ವಳೆಗೆರಹಳ್ಳಿ ಗ್ರಾಮ ಲೆಕ್ಕಾಧಿಕಾರಿ ಆರೋಪಿಸಿದರು.
ರೈತನ ಜೊತೆ ಪ್ರಿಮಿಯಂ ನ ಒಂದು ಭಾಗವನ್ನು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಪಾವತಿಸುವ, ಮೋದಿ ಸರ್ಕಾರದ ಮಹತ್ವಕಾಂಕ್ಷಿ ಬೆಳೆ ವಿಮೆ ಯೋಜನೆಯಾದ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯೂ, ಅವರನ್ನು ಒಳಗೊಂಡಿಲ್ಲ. ಇಡೀ ಊರಿನ ಎಲ್ಲಾ ಬೆಳೆಗಳು ನಾಶವಾದರೆ ಮಾತ್ರ ವಿಮೆ ದಾವೆಗೆ ಅವಕಾಶ ಇರುವ ಈ ಯೋಜನೆ ಉಪಯೋಗಿಯಾಗಿಲ್ಲ ಎಂದು ವಳೆಗೆರಹಳ್ಳಿ ರೈತರು ತಿಳಿಸಿದರು. ಮಿಗಿಲಾಗಿ ವಾಣಿಜ್ಯ ಬೆಳೆಗಳನ್ನು ಈ ವಿಮೆ ಯೋಜನೆ ಒಳಗೊಂಡಿಲ್ಲವಾದ್ದರಿಂದ ಕಬ್ಬು ಬೆಳೆಯುವ ಎಲ್ಲರನ್ನೂ ಹೊರಗಿಟ್ಟಿದೆ.
ಸತತ ಎರಡು ವರ್ಷಗಳ ಬೆಳೆ ವಿಫಲತೆ ಕಾರಣದಿಂದ ತನ್ನ ಹೊಲದಲ್ಲಿ ಸಣ್ಣಮ್ಮನ 30 ವರ್ಷದ ಮಗ ಜಯರಾಮು 2015 ರಲ್ಲಿ ಆತ್ಮಹತ್ಯೆಗೀಡಾದರು. ಆದರೆ ಆತನಿಗೆ ಬೆಳೆ ವಿಮೆ ಸಹಾಯಕ್ಕೆ ಬಂದಿಲ್ಲ. ಈ ಯೋಜನೆ ಮೋದಿರವರ 2018-19 ರ ಕೃಷಿ ಬಜೆಟ್ ನ ಕಾಲು ಭಾಗದಷ್ಟು ಅಂದರೆ 57,600 ಕೋಟಿ ರೂಗಳ ಅನುದಾನವನ್ನು ಪಡೆದಿದ್ದರೂ, ಹೇಗೆ ಸರ್ಕಾರಿ ವೆಚ್ಚದ ಹೆಚ್ಚಳ ಅಂತಿಮವಾಗಿ ಕಾರ್ಪೋರೆಟ್ ಗಳಿಗೆ ಅನುಕೂಲವಾಗುತ್ತದೆ ಎಂಬುದಕ್ಕೆ ಇದು ಒಂದು ಉದಾಹರಣೆ. ಈ ಯೋಜನೆಯ ಅಡಿಯಲ್ಲಿ ಬರುವ 18 ವಿಮಾ ಕಂಪನಿಗಳಲ್ಲಿ 13 ಖಾಸಗಿಯಾಗಿದ್ದು, ಈ ಎಲ್ಲವೂ ರಿಲಯನ್ಸ್ ಗ್ರೂಪ್, ಟಾಟಾ ಸನ್ಸ್, ಬಜಾಜ್ ಗ್ರೂಪ್ ಹಾಗೂ ಭಾರತಿ ಎಂಟರ್ಪ್ರೈಸಸ್ ನಂತಹ ಭಾರತದ ದೈತ್ಯ ಕಾರ್ಪೊರೇಟ್ ಉಧ್ಯಮಗಳ ಒಡೆತನಕ್ಕೆ ಒಳಪಟ್ಟಂತಹವು.
ಬಿಜೆಪಿ ಯೇತರ ನೇತೃತ್ವದ ರಾಜ್ಯ ಸರ್ಕಾರಗಳು ಬರಪರಿಹಾರದಲ್ಲಿ ಕೇಂದ್ರ ರಾಜಕೀಯ ಮಾಡುತ್ತಿದೆ ಎಂದು ಆರೋಪಿಸಿವೆ. “2018-19 ರಲ್ಲಿ ಬರ ಪರಿಹಾರವಾಗಿ ಬಿಜೆಪಿ ಅಧಿಕಾರದಲ್ಲಿದ್ದ ಮಹಾರಾಷ್ಟ್ರ ವು 4700 ಕೋಟಿ ರೂ ಅನುದಾನ ಪಡೆದಿದೆ. ಆದರೆ ಕರ್ನಾಟಕ ಅತ್ಯಂತ ತೀವ್ರ ಹಾಗೂ ವಿಶಾಲ ವ್ಯಾಪ್ತಿಯಲ್ಲಿ ಬರಗಾಲದ ಬವಣೆಯಲ್ಲಿದ್ದರೂ ಕೇವಲ 949 ಕೋಟಿ ರೂ ಮಾತ್ರ ಪಡೆಯಿತು. ಇದು ಕಣ್ಣಿಗೆ ರಾಚುವ ತಾರತಮ್ಯ. ಬರಪರಿಹಾರದಲ್ಲಿ ರಾಜಕೀಯ ಮಾಡುವುದು ಅಮಾನವೀಯ” ಎನ್ನುತ್ತಾರೆ ಗ್ರಾಮೀಣಾಭಿವೃದ್ದಿ ಮಂತ್ರಿ ಹಾಗೂ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೃಷ್ಣ ಭೈರೇಗೌಡ.
ಬಿಜೆಪಿ ಯ ಡಿ.ವಿ.ಸದಾನಂದ ಗೌಡ ಕೇಂದ್ರ ಸರ್ಕಾರದ ಸಾಂಖ್ಯಿಕ ಹಾಗೂ ಯೋಜನೆ ಮಂತ್ರಿಗಳು ಮತ್ತು ಮಾಜಿ ಮುಖ್ಯಮಂತ್ರಿ ಗಳು “ಇದೂಂದು ಸುಳ್ಳಿನ ಕಂತೆ. ಕಳೆದ ಐದು ವರ್ಷಗಳಲ್ಲಿ ಕೇಂದ್ರ ಸರ್ಕಾರ ಕರ್ನಾಟಕಕ್ಕೆ 2.4 ಲಕ್ಷ ಕೋಟಿ ಕೊಟ್ಟಿದೆ. ಇದು ಕಾಂಗ್ರೆಸ್ ಕೊಟ್ಟಿದ್ದಕ್ಕಿಂತ ಮೂರು ಪಟ್ಟು ಹೆಚ್ಚು “ಎಂದು ಆರೋಪಗಳನ್ನು ಅಲ್ಲಗಳೆಯುತ್ತಾರೆ.
ಬೆಲೆಗಳ ಸಮಸ್ಯೆ
ರೈತರ ಪ್ರಕಾರ ಇತ್ತೀಚಿನ ವರ್ಷಗಳಲ್ಲಿ ತಾವು ಪಡೆಯುವ ಕೃಷಿ ಉತ್ಪನ್ನಗಳ ದರದಲ್ಲಿ ಯಾವುದೇ ಬದಲಾವಣೆ ಇಲ್ಲ. ರೈತರಿಗೆ ಸಿಗುವ ಬೆಲೆಯ ಮಾಪಕವಾದ ಪ್ರಾಥಮಿಕ ಆಹಾರ ಸರಕಿನ ಸಗಟು ದರ ಸೂಚ್ಯಂಕ (WPI) ದ ಪ್ರಕಾರ 2013 -2014 ರಿಂದ ಸಗಟು ದರ ಸೂಚ್ಯಂಕ ಇಳಿಕೆ ಅಥವಾ ನಿಶ್ಚಲ ಸ್ಥಿತಿಯಲ್ಲಿದೆ. ಬೆಲೆಗಳ ಸಮಸ್ಯೆಗೆ ರಾಜಕಾರಣಿಗಳು ಆಗ್ಗಾಗ್ಗೆ ಆರೋಪಿಸುವಂತೆ ಮಳೆ ಕಾರಣ ಎನ್ನುತ್ತಿದ್ದರೆ, ಕರ್ನಾಟಕದ ಮಂಡ್ಯ, ಕೊಪ್ಪಳ ಹಾಗೂ ಕೋಲಾರ ಜಿಲ್ಲೆಗಳ ರೈತರ ಪ್ರಕಾರ ಕೃಷಿ ಬಿಕ್ಕಟ್ಟಿನ ಮೂಲ ಬೆಲೆಗಳಲ್ಲಿದೆ. ರೈತರು ಪಡೆಯುವ ದರ ವಿರಳವಾಗಿ ಲಾಭದಾಯಕವಾಗಿದ್ದು, ಅದರ ಏರಿಳಿತವು ರೈತರ ಜೀವನವನ್ನು ಹೆಚ್ಚು ಅನಿಶ್ಚಿತೆಗೊಳಿಸಿದೆ.
ಭತ್ತದ ಗದ್ದೆಯಲ್ಲಿ ಆತ್ಮಹತ್ಯೆಗೀಡಾದ ಮರೀಗೌಡ (50)ರ ಪತ್ನಿ ಚಿಕ್ಕತಾಯಮ್ಮ (42) “ಆಗಾಗ್ಗೆ ನಾವು ಹಲವು ಬರಗಳನ್ನು ಎದುರಿಸಿದ್ದೇವೆ. ಇದು ಪ್ರಕೃತಿಯಲ್ಲಿ ಸಾಮಾನ್ಯ. ಆದರೆ ಭತ್ತ ಮಾರಿದ್ದರಿಂದ ಬಂದ ಹಣ ಆ ವರ್ಷದ ರಸಗೊಬ್ಬರದ ಖರ್ಚಿಗೂ ಸಾಲದೇ ಇರುವುದನ್ನು ನನ್ನ ಗಂಡ ಎದುರಿಸಲಾರದೇ ಹೋದ” ಎಂದು ದುಃಖಿಸಿದಳು.
ಮರೀಗೌಡ ತೀರಿ ಹೋದ ನಂತರ ಅವಳು ಮತ್ತು ಅವಳ ಮಗ ತನ್ನ ಎರಡು ಎಕರೆ ಜಮೀನಿನ ಬೆಳೆಯನ್ನು ಕಬ್ಬು ಬೆಳೆಗೆ ಬದಲಾಯಿಸಿದರು. ಇತ್ತೀಚಿನ ಬೆಳೆಯನ್ನು ಟನ್ ಗೆ 2400 ರೂಗೆ ಮಾರಿದ್ದಾರೆ. ಕಡ್ಡಾಯವಾಗಿ ರೈತರಿಗೆ ಪಾವತಿಸಬೇಕಾದ, ಸರ್ಕಾರ ನಿಗದಿಪಡಿಸಿದ ನ್ಯಾಯ ಮತ್ತು ಲಾಭದಾಯಕ ಬೆಲೆ (ಈಖP) ಗಿಂತ ಇದು 350 ರೂ ಕಡಿಮೆ. ಕಾರ್ಖಾನೆಯು ಈ ಪಾವತಿಯನ್ನೂ ನಾಲ್ಕು ತಿಂಗಳು ವಿಳಂಬ ಮಾಡಿದೆ. “ಈ ಹಣ ಬರುವಷ್ಟರಲ್ಲಿ ಬೆಳೆ ಸಾಲದ ಬಡ್ಡಿ ಬೆಳೆದಿತ್ತು. ಬೆಳೆ ಖರ್ಚಿಗಿಂತ ಈಖP ದರವೇ ಕಡಿಮೆ ಇರುವಾಗ, ನಾವು ಈಖP ಗಿಂತ ಕಡಿಮೆ ದರಕ್ಕೆ ಮಾರಾಟ ಮಾಡಿದ್ದೇವೆ” ಎಂದು ಚಿಕ್ಕತಾಯಮ್ಮ ವಿವರಿಸಿದರು.
ಕಬ್ಬು ಬೆಳೆ ಖರ್ಚಿನ ಶೇಕಡಾ 77 ರಷ್ಟು ಸೇರಿಸಿ ಈಖP ನಿಗದಿಪಡಿಸಿದ್ದೇವೆ ಎಂಬ ಕೇಂದ್ರ ಸರ್ಕಾರದ ವಾದವನ್ನು ಸಂದರ್ಶಿಸಿದ ಪ್ರತಿ ಕಬ್ಬು ಬೆಳೆಗಾರರು ನಿರಾಕರಿಸಿದರು. ಜಿಲ್ಲೆಯಲ್ಲಿದ್ದ ಏಕೈಕ ಸಾರ್ವಜನಿಕ ಕಾರ್ಖಾನೆಯನ್ನು 2013 ರಲ್ಲಿ ಮುಚ್ಚುವ ಮೂಲಕ ಸರ್ಕಾರ ಖರೀದಿಯಿಂದ ಅಧಿಕೃತವಾಗಿ ದೂರ ಉಳಿಯಿತು.
2017 ಮತ್ತು 2018 ರ ಕಬ್ಬು ಅರೆಯುವ ಅವಧಿಯಲ್ಲಿ ಕರ್ನಾಟಕ, ಉತ್ತರ ಪ್ರದೇಶ, ಮಹಾರಾಷ್ಟ್ರ ಹಾಗೂ ಪಂಜಾಬ್ ನ ರೈತರು ದೊಡ್ಡ ಸಂಖ್ಯೆಯಲ್ಲಿ ಬೀದಿಗಿಳಿದರು. ಬಹುತೇಕ ಸಕ್ಕರೆ ಕಾರ್ಖಾನೆಗಳು ರಾಜಕಾರಣಿಗಳ ಒಡೆತನ ಅಥವಾ ನಿಯಂತ್ರಣದಲ್ಲಿರುವುದರಿಂದ ಸಕ್ಕರೆ ಕಾರ್ಖಾನೆಗಳ ಲಾಬಿಗೆ ಸರ್ಕಾರಗಳು ತೀವ್ರವಾಗಿ ಸ್ಪಂದಿಸುತ್ತವೆ. ಜಾಗತಿಕ ಮಾರುಕಟ್ಟೆಯಲ್ಲಿ ಸಕ್ಕರೆ ದರ ಕುಸಿತಕ್ಕೆ ಒಳಗಾದಾಗ ವಿಶ್ವದ ಎರಡನೇ ಅತಿದೊಡ್ಡ ಉತ್ಪಾದಕ ದೇಶ ಭಾರತ ಸಕ್ಕರೆ ಮೇಲಿನ ರಪ್ತು ತೆರಿಗೆಯನ್ನು ತೆಗೆದುಹಾಕಿತು. ಈ ವರ್ಷದ ಮೊದಲು ಸಕ್ಕರೆ ಕಾರ್ಖಾನೆಗಳಿಗೆ 10,500 ಕೋಟಿ ರೂ. ಉತ್ತೇಜಕ ಸಾಲದ ನೆರವು ನೀಡಿತ್ತು
ಕನಿಷ್ಠ ಬೆಂಬಲ ಬೆಲೆ ನೀಡುವುದಾಗಿ ಬಿಜೆಪಿ ಪುನಃ ಭರವಸೆ ನೀಡಿದೆ. 2015 ರಲ್ಲಿ ಅಧಿಕೃತವಾಗಿ ಬಿಜೆಪಿ ಸರ್ಕಾರ ವೇ ಸುಪ್ರೀಂ ಕೋರ್ಟ್ ಗೆ “ಉತ್ಪಾದನೆ ವೆಚ್ಚಕ್ಕೂ, ಕನಿಷ್ಠ ಬೆಂಬಲ ಬೆಲೆಗೂ ಯಾಂತ್ರಿಕ ಸಂಬಂಧ ಕಲ್ಪಿಸುವುದು ಉತ್ಪಾದನೆಯನ್ನು ನಿರುತ್ಸಾಹಗೊಳಿಸಲಿದೆ ಮತ್ತು ಮಾರುಕಟ್ಟೆಯನ್ನು ವಿಕೃತಿಗೊಳಿಸಲಿದೆ” ಎಂದು ಅಪಿಡವೆಟ್ ಸಲ್ಲಿಸಿ ತನ್ನ ಅಧಿಕೃತ ಧೋರಣೆಯನ್ನು ಪ್ರಕಟಪಡಿಸಿತ್ತು.
ಕನಿಷ್ಟ ಬೆಂಬಲ ಬೆಲೆಯಲ್ಲಿ `ಐತಿಹಾಸಿಕ` ಹೆಚ್ಚಳ ಎಂದು ಮೋದಿ ರವರು ಬಣ್ಣಿಸಿ ರೈತರ ಉತ್ಪನ್ನಗಳಿಗೆ ಶೇಕಡಾ 50 ರಷ್ಟು ಲಾಭಾಂಶ ನೀಡುವ ಚುನಾವಣಾ ಭರವಸೆ ಈಡೇರಿದಂತಾಗಿದೆ ಎಂಬುದನ್ನು 2018 ರ ತನಕವೂ ಪ್ರಕಟಿಸಿರಲಿಲ್ಲ. ಆದರೆ ಈ ಹೆಚ್ಚಳ ನಾಲ್ಕು ವರ್ಷಗಳಷ್ಟೂ ತುಂಬಾ ವಿಳಂಬ ಮಾತ್ರವೇ ಅಲ್ಲ ಜೊತೆಗೆ ಭೂ ಬಾಡಿಗೆಯನ್ನು ಪರಿಗಣಿಸದೆ ಅಸಮರ್ಪಕವಾಗಿತ್ತು. ಗೇಣಿ ಭೂಮಿಯಲ್ಲಿ ಬೇಸಾಯ ಮಾಡುವ ದೊಡ್ಡ ಸಂಖ್ಯೆಯ ರೈತರನ್ನು ಒಳಗೊಂಡಿರಲಿಲ್ಲ. ಹಲವಾರು ವರದಿಗಳು ಹೇಳುವಂತೆ ಸರ್ಕಾರ ಖರೀದಿಯಲ್ಲಿ ವಿಳಂಬ ಹಾಗೂ ನಿರಾಸಕ್ತಿ ವಹಿಸಿದ್ದರಿಂದ ಬೆಲೆಗಳ ಮೇಲೆ ಪರಿಣಾಮ ಬೀರಲು ಕನಿಷ್ಠ ಬೆಂಬಲ ಬೆಲೆ ಸಂಪೂರ್ಣ ವಿಫಲವಾಯಿತು.
ಕಟಾವು ಮುಗಿದ 45 ದಿನಗಳ ನಂತರವಷ್ಟೇ ಸರ್ಕಾರಿ ಖರೀದಿ ವ್ಯವಸ್ಥೆ ಪ್ರಾರಂಭವಾಯಿತು ಎಂದು ಮಂಡ್ಯ ಹಾಗೂ ಕೊಪ್ಪಳ ಜಿಲ್ಲೆಯ ಭತ್ತ ಬೆಳೆಗಾರರು ತಿಳಿಸಿದ್ದಾರೆ. ಹಣ ಪಾವತಿ ತಿಂಗಳುಗಟ್ಟಲೆ ವಿಳಂಬ ಆಗುವುದರಿಂದ ಸರ್ಕಾರಿ ಖರೀದಿ ಕೇಂದ್ರಕ್ಕೆ ಮಾರುವುದಿಲ್ಲ ಎಂದು ಸಣ್ಣ ರೈತರು ಅತೃಪ್ತಿ ವ್ಯಕ್ತಪಡಿಸಿದರು. ಹೀಗೆ ಇವರಿಗೆ ಒSP ಯ ಮೂರನೇ ಒಂದರಷ್ಟು ಕಡಿಮೆ ಬೆಲೆಗೆ ಖಾಸಗಿ ವ್ಯಾಪಾರಿಗಳಿಗೆ ಮಾರುವುದನ್ನು ಹೊರತುಪಡಿಸಿ ಬೇರೆ ದಾರಿ ಇಲ್ಲ.
ಜಾಗತಿಕ ಮಾರುಕಟ್ಟೆಯ ಏರಿಳಿತಗಳು
ಉದಾರೀಕರಣಗೊಂಡ ವ್ಯಾಪಾರಿ ದೋರಣೆಗಳು ಈ ಬಿಕ್ಕಟ್ಟನ್ನು ಹೆಚ್ಚಿಸಿವೆ. ಗೋಧಿ, ದ್ವಿದಳ ಧಾನ್ಯಗಳು ಹಾಗೂ ಹಾಲು ಉತ್ಪನ್ನಗಳು ಮುಂತಾದ ಸರಕುಗಳ ಅನಿಯಂತ್ರಿತ ಅಮದು ಬೆಲೆಗಳ ಅನಿಶ್ಚಿತತೆಗೆ ಕೊಡುಗೆ ನೀಡಿದೆ. ವಳೆಗೆರಹಳ್ಳಿ ಯಲ್ಲಿ ರೇಷ್ಮೆ ಕೃಷಿಕರು ಜಾಗತಿಕ ಮಾರುಕಟ್ಟೆಯ ಏರಿಳಿತಗಳಿಗೆ ನೇರವಾಗಿ ಜೋಡಿಸಲ್ಪಟ್ಟಿದ್ದಾರೆ.
2015 ರಲ್ಲಿ ಕಚ್ಚಾ ರೇಷ್ಮೆಯ ಅಮದು ಸುಂಕವನ್ನು ಸರ್ಕಾರ ಕಡಿತಗೊಳಿಸಿದಾಗ ಸರಸಮ್ಮನ ಪ್ರಪಂಚ ತಲೆಕೆಳಗಾಯಿತು. ಜನವರಿ 2016 ರಲ್ಲಿ ಆಕೆಯ ಗಂಡ ನಾಥಪ್ಪ ರೇಷ್ಮೆ ಗೂಡನ್ನು ಪ್ರತಿ ಕೆಜಿಗೆ 80 ರೂನಂತೆ ಮಾರಾಟ ಮಾಡಿದ. ಇದು ಆತ ಸಾಮಾನ್ಯವಾಗಿ ಮಾರಾಟ ಮಾಡುತ್ತಿದ್ದ ದರದ ಕಾಲು ಭಾಗ. “ಇದಾದ ಒಂದು ವಾರದಲ್ಲೇ ಅವರು ಆತ್ಮಹತ್ಯೆಗೀಡಾದರು” ಎಂದು 37 ವರ್ಷದ ವಿಧವೆ ಕಣ್ಣು ಒರೆಸಿಕೊಂಡರು.
ನೋಟು ರದ್ದಿನ ಮರ್ಮಘಾತ
ಭಾರತೀಯ ಆರ್ಥಿಕತೆಗೆ ಹಣಕಾಸು ಆಘಾತಕಾರಿಯಾಗಿ ಎರಗಿದ ಮೋದಿ ರವರ ನವೆಂಬರ್ 2016 ನೋಟು ರದ್ದು ಸತತ ಬರಗಾಲದಿಂದ ತತ್ತರಿಸಿ ತೆವಳುತ್ತಾ ಚೇತರಿಸಿಕೊಳ್ಳುತ್ತಿದ್ದ ಗ್ರಾಮೀಣ ಭಾರತಕ್ಕೆ ಆದ ಮರ್ಮಘಾತ. ನೋಟು ರದ್ದು ಕೃಷಿ ಮಾರುಕಟ್ಟೆಯನ್ನು ಹಾಳುಗೆಡುವಿದೆ ಎಂದು ಎರಡು ವರ್ಷದ ನಂತರ ಕೇಂದ್ರ ಸರ್ಕಾರದ ಕೃಷಿ ಮಂತ್ರಾಲಯ ಸಂಸದೀಯ ಸಮಿತಿ ಮುಂದೆ ಹೇಳಿಕೊಂಡಿದೆ. ನೋಟು ರದ್ದು ಕೆಟ್ಟ ಕಾಲದಲ್ಲಿ ಬಂದ ಮತ್ತೊಂದು ದುರ್ಘಟನೆ ಮಾತ್ರವೇ ಅಲ್ಲ. ಮುಂಗಾರು
ಬೆಳೆ(ಖಾರೀಪ್)ಮಾರಬೇಕಿತ್ತು ಅಥವಾ ಹಿಂಗಾರು (ರಾಬಿ)ಬೆಳೆಗೆ ಬೇಕಾದ ಸಾಮಗ್ರಿ ಖರೀದಿಸಬೇಕಿತ್ತು. ನಗದು ಕೊರತೆ ಈ ಎರಡು ಚಟುವಟಿಕೆಗಳನ್ನು ಸ್ಥಭ್ದಗೊಳಿಸಿತ್ತು.
ನೋಟು ರದ್ದು ಪರಿಣಾಮಕಾರಿಯಾಗಿ ಕೃಷಿ ಪೂರೈಕೆ ಸರಪಳಿಯನ್ನು ಹಾಳುಗೆಡುವಿತು. ಸರ್ಕಾರವು ಒಂದು ವಾರದಲ್ಲೇ ತನ್ನ ಅಂದಾಜಿನಿಂದ ಹಿಂದೆ ಸರಿದು ನೋಟು ರದ್ದು “ಕೃಷಿ ರಂಗವನ್ನು ಔಪಚಾರಿಕಗೊಳಿಸುತ್ತಿದೆ” ಎಂದು ಹೊಗಳಿ ಹೊಸ ವರದಿಯನ್ನು ತಯಾರಿಸಿತು. ಸಂದರ್ಶಿಸಿದ ಪ್ರತಿಯೊಬ್ಬ ರೈತನ ಬಳಿಯೂ ನೋಟು ರದ್ದು ಸಮಯದಲ್ಲಿ ಅವನು ಅನುಭವಿಸಿದ ಸಂಕಟದ ಕಥೆ ಇದ್ದು, ಸರ್ಕಾರದ ವಾದವನ್ನು ಅಲ್ಲಗಳೆಯುತ್ತವೆ. ಕೃಷಿ ಕೂಲಿಕಾರರು ಸಹ ಸಂಕಟಕ್ಕೀಡಾದರು. ಕೂಲಿಕಾರರಿಗೆ ಪಾವತಿಸಲು ರೈತರ ಬಳಿ ಹಣವೇ ಇರಲಿಲ್ಲವಾದ್ದರಿಂದ ಕೆಲಸಕ್ಕಾಗಿ ಪರಿತಪಿಸಬೇಕಾಯಿತು. ಹಳ್ಳಿಗಳಲ್ಲಿ ಕೆಲಸದ ಅವಕಾಶ ಕ್ಷೀಣಿಸಿದಾಗ ಕಟ್ಟಡ ನಿರ್ಮಾಣ ಚಟುವಟಿಕೆಗಳಲ್ಲಿ ಕೆಲಸ ಅರಸಿ ನಗರ, ಪಟ್ಟಣಗಳಿಗೆ ಸಾಮಾನ್ಯವಾಗಿ ಕೂಲಿಕಾರರು ವಲಸೆ ಹೋಗುತ್ತಾರೆ. ಭಾರತದ ಬೆಳೆಯುತ್ತಿರುವ ಕಟ್ಟಡ ನಿರ್ಮಾಣ ವಲಯದಲ್ಲಿ ಅಷೊತ್ತಿಗಾಗಲೇ ಐದು ಕೋಟಿ ಜನ ಉದ್ಯೋಗ ಕಂಡು ಕೊಂಡಿದ್ದರು. ಆದರೆ ನೋಟು ರದ್ದತಿ ಹಾಗೂ 2017 ರಿಂದ ಜಾರಿಗೆ ಬಂದ ಜಿ.ಎಸ್.ಟಿ. ಕಟ್ಟಡ ನಿರ್ಮಾಣ ವಲಯದ ಚಟುವಟಿಕೆಗಳನ್ನು ನಿಧಾನಗೊಳಿಸಿತು. ಉತ್ತರ ಕರ್ನಾಟಕದ ಕೊಪ್ಪಳ ದಲ್ಲಿ ನೂರಾರು ಜನ ತಮ್ಮ ಗ್ರಾಮಕ್ಕೆ ಮರಳಿದ್ದರು.
ಕೊಪ್ಪಳದ ಕುಷ್ಟಗಿಯ ಭೂ ಹೀನ ಕೂಲಿಕಾರ ಮಾಲಕ್ ಸಾಬ್ (37) “ರೈತರು ಯಂತ್ರಗಳನ್ನು ಬಳಸುತ್ತಿರುವುದು ಮತ್ತು ಕಡಿಮೆ ಬೆಳೆ ಬೆಳೆಯುತ್ತಿರುವುದರಿಂದ ಗ್ರಾಮದಲ್ಲಿ ಕೆಲಸ ಸಿಗುವುದು ಕಷ್ಟವಾಗಿದೆ. ಇದು ಗಾಯದ ಮೇಲೆ ಉಪ್ಪು ಸವರಿದಂತೆ. ಕಟ್ಟಡ ಕಾಮಗಾರಿ ಕೆಲಸಕ್ಕೆ ವಾಪಸ್ಸಾಗಲು ಇನ್ನು ಆರು ತಿಂಗಳು ಬೇಕು” ಎನ್ನುತ್ತಾ ನಿಟ್ಟುಸಿರು ಬಿಟ್ಟರು.
ತನ್ನ ಮಹತ್ವಾಕಾಂಕ್ಷಿ ಯೋಜನೆ ಉದ್ಯೋಗ ಖಾತರಿ ಯೋಜನೆಯನ್ನು ಅನುಷ್ಠಾನಕ್ಕೆ ತರಲು ಸರ್ಕಾರ ವಿಫಲವಾಗಿದೆ. ಪ್ರತಿ ಸಾರಿಯೂ ವೇತನ ಪಾವತಿಯನ್ನು ವಿಳಂಬಿಸಲಾಗುತ್ತಿದೆ. ಜನ ಜೀವನ ನಿಸ್ತೇಜಗೊಂಡು ವ್ಯಾಪಕವಾಗಿ ಕುಸಿದಿರುವ ಹಿನ್ನೆಲೆಯಲ್ಲಿ ಈ ರೀತಿಯ ಅನುಷ್ಠಾನ ಗ್ರಾಮೀಣ ಬಡವರ ಬದುಕಿನಲ್ಲಿ ಮತ್ಯಾವ ಪರಿಣಾಮ ಬೀರಲು ಸಾಧ್ಯ.
ರೈತ ಚಳುವಳಿಗಳು
ಇತ್ತೀಚಿನ ವರ್ಷಗಳಲ್ಲಿ ರೈತರು ಹೆಚ್ಚಿನ ಪ್ರತಿಭಟನೆ ವ್ಯಕ್ತಪಡಿಸುತ್ತಿದ್ದಾರೆ. ಗ್ರಾಮೀಣ ಭಾರತದ ಬಿಕ್ಕಟ್ಟು ನಗರದ ರಸ್ತೆಗಳಲ್ಲಿ ಅಭಿವ್ಯಕ್ತಿಗೊಳ್ಳುತ್ತಿದೆ. ಬೆಲೆ ಕುಸಿತ ಖಂಡಿಸಿ ತಮ್ಮ ಉತ್ಪನ್ನಗಳನ್ನು ರಸ್ತೆಯಲ್ಲಿ ಸುರಿದು ಅಥವಾ ಸುಟ್ಟು ಪ್ರತಿಭಟಿಸುತ್ತಿರುವ ದೃಶ್ಯಗಳು ಕರುಣಾಜನಕವಾಗಿವೆ.
ಕಾರ್ಷಿಕ ಬಿಕ್ಕಟ್ಟಿನ ಕಾರಣದಿಂದ ರೈತ ಆತ್ಮಹತ್ಯೆಗಳು 2015 ರಲ್ಲಿ 2683 ವರದಿಯಾಗಿದ್ದು ಇದು ಹಿಂದಿನ ವರ್ಷದ ಸಂಖ್ಯೆ 628 ಕ್ಕೆ ಹೋಲಿಸಿದರೆ ನಾಲ್ಕು ಪಟ್ಟು ಹೆಚ್ಚು. ರಾಷ್ಟ್ರೀಯ ಅಪರಾಧ ಅಂಕಿಸಂಖ್ಯೆಗಳು ಲಭ್ಯವಿರುವ ಕೊನೆ ವರ್ಷ 2016 ರಲ್ಲಿ ಈ ಹಿಂದಿನ ವರ್ಷಕ್ಕೆ ಹೋಲಿಸಿದರೆ ಎರಡು ಪಟ್ಟು ಹೆಚ್ಚು.
ಆದರೆ, ಪ್ರತಿಭಟನೆಯೂ ಹೆಚ್ಚು ಸುಸಂಘಟಿತಗೊಳ್ಳುತ್ತಿದೆ. 2017 ರ ವರೆಗೂ ರೈತ ಸಂಘಟನೆಗಳು ತಮ್ಮ ತಮ್ಮ ರಾಜ್ಯಗಳ ರಾಜಧಾನಿಗಳಲ್ಲಿ ಬೃಹತ್ ಪ್ರತಿಭಟನಾ ರ್ಯಾಲಿಗಳನ್ನು ನಡೆಸುತ್ತಿದ್ದವು. ನೋಟು ರದ್ದು ಮತ್ತು ತೀವ್ರ ಬೆಲೆ ಕುಸಿತದಲ್ಲಿ ವ್ಯಕ್ತವಾಗುತ್ತಿರುವ ತೀವ್ರಗೊಂಡ ಬಿಕ್ಕಟ್ಟು ರೈತ ಸಂಘಟನೆಗಳು ಕೇಂದ್ರ ಸರ್ಕಾರದ ಮೇಲೆ ಗಮನ ಕೇಂದ್ರೀಕರಿಸುವಂತೆ ಮಾಡಿವೆ.
ಆ ವರ್ಷ ಲಾಭದಾಯಕ ಬೆಲೆ ಹಾಗೂ ಸಾಲ ಮನ್ನಾ ಬೇಡಿಕೆಗಳ ಆಧಾರದಲ್ಲಿ ಸುಮಾರು 150 ರೈತಾಪಿ ಸಂಘಟನೆಗಳು ಅಖಿಲ ಭಾರತ ಕಿಸಾನ್ ಸಂಘರ್ಷ ಸಮನ್ವಯ ಸಮಿತಿ ರಚಿಸಿಕೊಂಡವು. 2018 ರಲ್ಲಿ ,ವಿವಿದೆಡೆಗಳಿಂದ ಬಂದ ನಾಲ್ಕು ಬೃಹತ್ ರ್ಯಾಲಿಗಳು ದೇಶದ ರಾಜಧಾನಿ ನವ ದೆಹಲಿಯಲ್ಲಿ ಸಮಾವೇಶಗೊಂಡು ಪ್ರತಿಭಟನಾ ಅಲೆಯನ್ನೇ ಎಬ್ಬಿಸಿದವು.
ವ್ಯಾಪಕ ಸಾಮಾಜಿಕ ಸಂಯೋಜನೆ ಒಳಗೊಂಡ ಕಾರಣದಿಂದ ಸಹ ಈ ಕಾರ್ಷಿಕ ಪ್ರತಿಭಟನೆ ಪ್ರಾಮುಖ್ಯತೆ ಪಡೆದಿದೆ. “ಗ್ರಾಮೀಣ ಸಮಾಜದ ವಿವಿಧ ಸ್ತರಗಳ ರೈತಾಪಿ ಸಮೂಹವನ್ನು ಒಟ್ಟಾಗಿ ಸೆಳೆದಿರುವುದರಿಂದ ನಮ್ಮ ಈ ಪ್ರತಿಭಟನೆ ಅತ್ಯಂತ ಮಹತ್ವಪೂರ್ಣವಾದುದ್ದಾಗಿದೆ” ಎಂದು 1.5 ಕೋಟಿ ಸದಸ್ಯತ್ವದ ಅಖಿಲ ಭಾರತ ಕಿಸಾನ್ ಸಭಾ ದ ಜಂಟಿ ಕಾರ್ಯದರ್ಶಿ ವಿಜು ಕೃಷ್ಣನ್ ಅಭಿಪ್ರಾಯ ಪಡುತ್ತಾರೆ
ಗ್ರಾಮೀಣ ಮತ
2018 ರಲ್ಲಿ ಮೂರು ಮುಖ್ಯ ರಾಜ್ಯಗಳ ಬಿಜೆಪಿ ಸೋಲಿಗೆ ಗ್ರಾಮೀಣ ಮತವೇ ಕಾರಣ ಎಂದು ವ್ಯಾಪಕವಾಗಿ ಆರೋಪಿಸಲಾಗುತ್ತಿದೆ. ಅಂದಿನಿಂದ ಎಲ್ಲ ರಾಜಕೀಯ ಪಕ್ಷಗಳು ಸಾಲ ಮನ್ನಾ ಮತ್ತು ರೈತರ ಖಾತೆಗೆ ಹಣ ಹಾಕುವ ಯೋಜನೆ ಪ್ರಕಟಿಸುತ್ತಿವೆ.ಈ ವರ್ಷದ ಫೆÉಬ್ರವರಿ ಯಲ್ಲಿ ಸಣ್ಣ ಹಾಗೂ ಅತಿ ಸಣ್ಣ ರೈತರಿಗೆ ವಾರ್ಷಿಕ 6000 ರೂ. ಹಣ ನೀಡುವ ರಾಷ್ಟ್ರೀಯ ನಗದು ವರ್ಗಾವಣೆ ಯೋಜನೆಯನ್ನು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಪ್ರಕಟಿಸಿತು. ಕಾಂಗ್ರೆಸ್ ಪ್ರಣಾಳಿಕೆ ಐದು ಕೋಟಿ ಕಡು ಬಡವರಿಗೆ ಅಷ್ಟೇ ಮೊತ್ತವನ್ನು ಪ್ರತಿ ತಿಂಗಳು ನೀಡುವುದಾಗಿ ಘೋಷಿಸಿದೆ.
ರಾಷ್ಟ್ರೀಯ ಹಾಗೂ ಪ್ರಾದೇಶಿಕ ಪಕ್ಷಗಳು ರೈತ ಭರವಸೆಗಳನ್ನು ಒಳಗೊಂಡ ಪ್ರಣಾಳಿಕೆ ಬಿಡುಗಡೆ ಮಾಡಿವೆ. ಬಿಜೆಪಿ ಕೂಡ ಒಂದು ಲಕ್ಷ ರೂ ವರೆಗೆ ಬಡ್ಡಿ ರಹಿತ ಸಾಲ ನೀಡುವುದಾಗಿ ಹೇಳಿದರೆ, ಕಾಂಗ್ರೆಸ್ ರೈತರ ಸಂಪೂರ್ಣ ಸಾಲ ಮನ್ನಾ ಮಾಡುವ ಹಾಗೂ ಪ್ರತ್ಯೇಕ ಕೃಷಿ ಬಜೆಟ್ ಮಾಡುವುದಾಗಿ ಭರವಸೆ ನೀಡಿದೆ. ದಶಕಗಳಿಂದ ವ್ರಣಗೊಂಡು ಉಲ್ಬಣವಾಗಿರುವ ಬಿಕ್ಕಟ್ಟನ್ನು ಈ ರಾಜಕೀಯ ಪಕ್ಷಗಳು ಹೇಗೆ ನಿಭಾಯಿಸಲಿವೆ ಎಂಬುದನ್ನು ಮುಂದೆ ನೋಡಬೇಕಿದೆ. ಆದರೆ ಈಗ ವಳೆಗೆರಹಳ್ಳಿ ಯ ಎಲ್ಲ ರೈತರು ಈ ಭರವಸೆಗಳನ್ನು ನಂಬುತ್ತಿಲ್ಲ.
“ಬೆಲೆ ಬಗ್ಗೆ ಏನು? ಮತ್ತೊಮ್ಮೆ ನಮ್ಮ ಬೆಳೆ ಮಾರುವಾಗ ಈ ಹಣ ಹಾಕುವ ಯೋಜನೆ ಹೇಗೆ ಖಾತರಿ ನೀಡುತ್ತದೆ, ಇವೆಲ್ಲವನ್ನೂ ನಾವು ಹೇಗೆ ತಿಳಿಯುವುದು, ನೀವು ಮತ್ತೇ ಇಲ್ಲಿಗೆ ಬರುವ ಹೊತ್ತಿಗೆ ನಾವು ಇದ್ದವೂ ಇಲ್ಲವೋ, ನಮ್ಮ ಕುಟುಂಬದವರನ್ನು ನೀವು ಮಾತನಾಡಿಸುವುದಿಲ್ಲ ಎಂದು ನಾನು ಹೇಗೆ ಹೇಳಲಿ?”ಎಂದು , ತನ್ನ ಗ್ರಾಮದ ಮತ್ತೊಬ್ಬರನ್ನು ಕಳೆದುಕೊಂಡು ದುಃಖತಪ್ತನಾದ 32 ವರ್ಷದ ರೈತ ಉಮೇಶ್ ಕೇಳುತ್ತಾನೆ. ಇವರ ಪ್ರಕಾರ ಇದು ಒಂದು ಮುಗಿಯದ ಮಾನವ ನಿರ್ಮಿತ ದುರಂತ.
– ದೀಪಾ ಕುರುಪ್ (ಕನ್ನಡಕ್ಕೆ : ಟಿ.ಯಶವಂತ)
ಕೃಪೆ: ಅಲ್ ಜಜೀರಾ
ಮೂಲ ಲೇಖನ ಓದಲು ಲಿಂಕ್ ಮೇಲೆ ಕ್ಲಿಕ್ ಮಾಡಿ
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂತರಂಗ
ಮರೆಯಾದ ಅಪೂರ್ವ ಚಿತ್ರಕಲಾ ಪ್ರತಿಭೆ ‘ಶೋಭಾ ಕರಣಿಕ್’

- ಡಾ.ಎನ್.ಕೆ.ಪದ್ಮನಾಭ, ಸಹಾಯಕ ಪ್ರಾಧ್ಯಾಪಕರು, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ,ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರ,ಉಜಿರೆ
ಅವರು ಬಿಡಿಸುತ್ತಿದ್ದ ರೇಖೆಗಳು ನಮ್ಮ ದೇಶೀ ಸಂಸ್ಕೃತಿಯ ವಕ್ತಾರಿಕೆಯ ಪಾತ್ರ ನಿರ್ವಹಿಸುತ್ತಿದ್ದವು. ಕನ್ನಡದ್ದೇ ಆದ ಕಲಾತ್ಮಕ ಪರಂಪರೆಯನ್ನು ಸೂಕ್ಷ್ಮವಾಗಿ ಗ್ರಹಿಸಿದ್ದ ಅವರ ಚಿತ್ರಗಳು ಜೀವಂತಿಕೆಯ ಗುಣಲಕ್ಷಣದೊಂದಿಗೆ ಕಂಗೊಳಿಸುತ್ತಿದ್ದವು.
ಸಾಂಪ್ರದಾಯಿಕ ಚಿತ್ರಶೈಲಿಯನ್ನು ಆಧುನಿಕ ಅಗತ್ಯಗಳಿಗೆ ತಕ್ಕಂತೆ ಮಣಿಸಿ ಪರಂಪರೆಯೊಳಗೇ ಅಡಗಿದ್ದ ಮೌಲಿಕ ಮಾದರಿಗಳನ್ನು ಮನಗಾಣಿಸುವ ಶ್ರದ್ಧೆಯೊಂದಿಗೇ ಅವರು ಚಿತ್ರವಿನ್ಯಾಸ ರೂಪಿಸುತ್ತಿದ್ದರು. ಇನ್ಸ್ಟಾಗ್ರಾಮ್, ಫೇಸ್ಬುಕ್ ಮತ್ತಿತರ ಮಾಧ್ಯಮಗಳ ಮೂಲಕ ತಮ್ಮ ಚಿತ್ರಗಳನ್ನು ಕಾಣಿಸುತ್ತಿದ್ದರು. ಪರಂಪರೆ ಮತ್ತು ವರ್ತಮಾನವನ್ನು ಬೆಸೆದು ಹೊಸ ಬಗೆಯ ಚಿತ್ರಪ್ರಯೋಗಗಳನ್ನು ನಡೆಸುವ ಹುಮ್ಮಸ್ಸಿನೊಂದಿಗೆ ಚಿತ್ರಕಲಾಯಾನ ಮುಂದುವರೆಸಿದ್ದರು. ಅವರ ಹೆಸರು ಶೋಭಾ ಕರಣಿಕ್.
ಇತ್ತೀಚೆಗಷ್ಟೇ ಅವರ ಚಿತ್ರಕಲಾಯಾನ ನಿಂತಿತು. ಅವರ ನಿಧನವು ವಿನೂತನವಾದ ಪ್ರಯೋಗಶೀಲ ಚಿತ್ರಕಲಾ ಸಾಧ್ಯತೆಗಳನ್ನು ತಡೆದು ನಿಲ್ಲಿಸಿತು. ಪುರಾಣದ ಕಥನ ಪ್ರಸಂಗಗಳಲ್ಲಿ ಉಲ್ಲೇಖಿತ ದೇವರು-ದೇವತೆಗಳ ಅಸ್ಮಿತೆ ಮತ್ತು ದೇಸೀ ಸಂಸ್ಕೃತಿಯನ್ನು ಬಿಂಬಿಸುವ ವಿನ್ಯಾಸಗಳನ್ನು ಸಮನ್ವಯಗೊಳಿಸಿ ಚಿತ್ರಕಲೆಗೆ ಹೊಸ ಆಯಾಮ ತಂದುಕೊಟ್ಟ ಪ್ರತಿಭೆಯಾಗಿ ಶೋಭಾ ಕರಣಿಕ್ ಅವರದ್ದು ವಿಶೇಷ ವ್ಯಕ್ತಿತ್ವವಾಗಿತ್ತು. ಮ್ಯೂರಲ್ ಪೇಂಟಿಂಗ್ನಲ್ಲಿ ಅವರಿಗಿದ್ದ ಪರಿಣತಿ, ಉತ್ತರ ಕನ್ನಡದ ಕಾವಿ ಕಲೆಯ ಕುರಿತಾದ ವಿಸ್ತೃತ ಜ್ಞಾನವು ಚಿತ್ರಕಲೆಯನ್ನು ಉನ್ನತೀಕರಿಸುವುದಕ್ಕೆ ಅವರಿಗೆ ನೆರವಾಗಿತ್ತು.
ಕಲೆಯ ಜೊತೆಗಿನ ಅನುಸಂಧಾನದ ಕ್ಷಣಗಳು ಅಪೂರ್ವ. ಒಂದು ನಿರ್ದಿಷ್ಟ ನಿರ್ಣಾಯಕ ಸಂದರ್ಭ, ಸಮಯದಲ್ಲಿ ಕಲೆಯೊಂದು ವ್ಯಕ್ತಿತ್ವವನ್ನು ಪ್ರಭಾವಿಸಿ ಸೃಜನಶೀಲತೆಯ ಹಸಿವನ್ನು ನೆಲೆಗೊಳಿಸುವುದಕ್ಕೆ ಪ್ರೇರಣೆಯಾಗುತ್ತದೆ. ಕಲೆಯ ಪ್ರಭಾವ ಎರಡು ಬಗೆಯದ್ದು. ಸಹೃದಯರನ್ನು ತನ್ನ ಕಲಾತ್ಮಕ ಮಾದರಿಗಳಿಂದ ಸೆಳೆದು ಅವರೊಳಗೆ ವಿಶೇಷ ಅನುಭೂತಿ ಧಾರೆ ಎರೆಯುವಂಥದ್ದು ಒಂದು ಬಗೆಯಾದರೆ ಹೀಗೆ ಸೆಳೆದುಕೊಂಡು ಮತ್ತೆ ಮತ್ತೆ ಪ್ರಭಾವಿಸುತ್ತಾ ಸಹೃದಯರನ್ನೇ ಕಲಾವಿದರನ್ನಾಗಿಸುವ ಸಾಧ್ಯತೆ ಮತ್ತೊಂದು ತೆರನಾದದ್ದು.
ಈ ಕಾರಣಕ್ಕಾಗಿಯೇ ಕಲಾತ್ಮಕ ಸಂಭವನೀಯತೆಯು ಅನನ್ಯವೆನ್ನಿಸಿಕೊಂಡಿದೆ. ಇಂಥ ಅನನ್ಯತೆಯೊಂದಿಗೇ ಶೋಭಾ ಕರಣಿಕ್ ಗುರುತಿಸಿಕೊಂಡಿದ್ದರು. ಅವರು ಓದಿದ್ದು ತಾಂತ್ರಿಕ ವಿಜ್ಞಾನ. ಆದರೆ, ಅವರ ನಿಜದ ಪ್ರತಿಭೆ ಅಭಿವ್ಯಕ್ತವಾದದ್ದು ಚಿತ್ರಕಲೆಯ ಮೂಲಕ.
ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಪರಿಸರದಲ್ಲಿ ಬೆಳೆದ ಶೋಭಾ ಕರಣಿಕ್ ಮೊದಲಿನಿಂದಲೂ ದೇಶೀ ಕಲೆಯ ಕುರಿತು ವಿಶೇಷ ಆಸಕ್ತಿಯನ್ನು ಬೆಳೆಸಿಕೊಂಡು ಬಂದಿದ್ದರು. ಹೈಸ್ಕೂಲ್ ಓದುತ್ತಿರುವಾಗಲೇ ಕಾವಿಕಲೆಯ ವಿನ್ಯಾಸ ಅವರನ್ನು ಸೆಳೆದಿತ್ತು. ಇವುಗಳನ್ನು ಮತ್ತೆ ಮತ್ತೆ ನೋಡುತ್ತಾ ಹೋದಂತೆಲ್ಲಾ ಕಾವಿ ಕಲೆಯ ಕುರಿತ ಆಕರ್ಷಣೆ ಕಲಿಕೆಯ ಹಂಬಲವಾಗಿ ಮಾರ್ಪಟ್ಟಿತು. ಉತ್ತರ ಕನ್ನಡದ ಟೆಂಪಲ್ ರ್ಟ್ ಪ್ರಕಾರದ ಭಾಗವಾಗಿ ಕಾವಿ ಕಲೆಯನ್ನು ಪರಿಚಯಿಸುವ ದೃಷ್ಟಿಯಿಂದ ಅವರು ರಚಿಸಿದ್ದ ತರಹೇವಾರಿ ವಿನ್ಯಾಸಗಳು ವಿವಿಧ ಚಿತ್ರಕಲಾ ಪ್ರದರ್ಶನ ಕಾರ್ಯಕ್ರಮಗಳಲ್ಲಿ ಗಮನ ಸೆಳೆದಿದ್ದವು.
ಕಾವಿ ಕಲೆಯೂ ಸೇರಿದಂತೆ ನಮ್ಮ ಸಾಂಪ್ರದಾಯಿಕ ಕಲೆಗಳು ಈ ಹಿಂದಿನ ಕಾಲದ ತಲೆಮಾರನ್ನಷ್ಟೇ ಪ್ರಭಾವಿಸಿದ್ದಲ್ಲದೇ ನಂತರದ ಹೊಸ ಪೀಳಿಗೆಯನ್ನೂ ಆಕರ್ಷಿಸುವ ಗುಣ ಹೊಂದಿವೆ. ಮೂಲ ಅಂತಃಸತ್ವಕ್ಕೆ ಧಕ್ಕೆಯೊದಗದ ಹಾಗೆ ಹೊಸ ಕಾಲದ ಅಗತ್ಯಗಳಿಗೆ ಅನುಗುಣವಾಗಿ ಈ ಸಾಂಪ್ರದಾಯಿಕ ಚಿತ್ರಕಲಾ ವಿನ್ಯಾಸಗಳನ್ನು ಮರುರೂಪಿಸಬಹುದು. ಹೊಸ ಕಾಲದಲ್ಲಿ ಅವುಗಳ ಮಹತ್ವವನ್ನು ಮನಗಾಣಿಸಬಹುದು ಎಂಬುದು ಅವರ ಆಶಯವಾಗಿತ್ತು.
ಕಲೆಯೊಂದು ಒಂದು ಕಾಲದಿಂದ ಮತ್ತೊಂದು ಕಾಲಕ್ಕೆ ದಾಟಿಕೊಳ್ಳುವಾಗ ಪಲ್ಲಟಗಳು ಸಹಜ. ಈ ಪಲ್ಲಟಗಳನ್ನು ದೃಷ್ಟಿಯಲ್ಲಿರಿಸಿಕೊಂಡು ಇಂತಹ ಕಲೆಗಳಿಗೆ ಹೊಸಕಾಲದಲ್ಲೂ ಜೀವಂತಿಕೆಯನ್ನು ತಂದುಕೊಡುವ ಪ್ರಯತ್ನದ ಅಗತ್ಯವನ್ನು ಮನಗಾಣಿಸುವುದಕ್ಕಾಗಿಯೇ ಶೋಭಾ ಕರಣಿಕ್ ಅವರು ಚಿತ್ರಕಲಾ ರಚನೆಯ ವೈವಿಧ್ಯಮಯ ಪ್ರಯೋಗಗಳಲ್ಲಿ ತೊಡಗಿಸಿಕೊಂಡಿದ್ದರು.
ಅವರ ನಿಧನದಿಂದ ಈ ಪ್ರಯೋಗಶೀಲ ಹೆಜ್ಜೆಗಳು ನಿಂತಂತಾಗಿವೆ. ಆದರೆ, ಅವರು ಪರಂಪರೆ ಮತ್ತು ವರ್ತಮಾನವನ್ನು ಸಮನ್ವಯಗೊಳಿಸಿ ಸಾಬೀತುಪಡಿಸಿದ ಅಪೂರ್ವ ಚಿತ್ರಕಲಾ ಪ್ರಯೋಗಶೀಲತೆಯ ಜೀವಂತಿಕೆ ಹೊಸ ಪೀಳಿಗೆಗೆ ಸದಾ ಸ್ಫೂರ್ತಿಯ ಸೆಲೆಯಾಗಿರುತ್ತದೆ. ಅವರ ಹೆಸರಿನ ಇನಸ್ಟಾಗ್ರಾಂನಲ್ಲಿ ಕಾಣಿಸಿಕೊಂಡಿರುವ ಚಿತ್ರಗಳು ಇಂಥ ಸ್ಫೂರ್ತಿಯ ಪ್ರಭೆಯನ್ನು ದಾಟಿಸುತ್ತಿವೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂತರಂಗ
ಹೊಸತನದ ಹೊಸ್ತಿಲಲ್ಲಿ..!

- ಮೀನಾಕ್ಷಿ .ಬಿ, ಎಂ. ಎ ವಿದ್ಯಾರ್ಥಿನಿ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ, ದಾವಣಗೆರೆ ವಿಶ್ವವಿದ್ಯಾಲಯ
ಹೊಸವರ್ಷ ವೆಂಬುದು ಪ್ರತಿಯೊಬ್ಬರ ಬಾಳಲ್ಲಿ ವರ್ಷಕ್ಕೊಮ್ಮೆ ಬರುವ ಹೊಸದಿನಗಳ ಆಗಮನ ಯಾಕೆಂದರೆ ಹೊಸತನವನ್ನು ತರುತ್ತಾ ಇರುವ ಹೊಸವರ್ಷ ಕೂಡ ಒಂದು ಜೀವನದ ಭರವಸೆ, ನಿರೀಕ್ಷೆ ಕನಸುಗಳ ಬಂಡಿಯ ಮೇಲೆ ಸಾಗುವ ಪ್ರಯಾಣ ನಮ್ಮ ಜೀವನ.
ವ್ಯಕ್ತಿಯ ನಂಬಿಕೆಯ ಆಧಾರದ ಮೇಲೆಯೇ ಜೀವನ ಸಾಗುಸುತ್ತಿರುವುದು.ಯಾಕೆಂದರೆ ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲಿಯೂ ಕೂಡ ಕಷ್ಟ -ಸುಖ ದುಃಖದ ಸಂಗತಿಗಳು ಇದ್ದೆ ಇರುತ್ತದೆ. ಕೆಲವೊಂದು ಬಾರಿ ಹತಾಶೆಯನ್ನು ಹೊಂದಿ ಜೀವನದಲ್ಲಿ ಜಿಗುಪ್ಸೆ ಒಂದು ಕೆಟ್ಟ ನಿರ್ಧಾರಕ್ಕೆ ಮನಸ್ಸು ದಾರಿ ಮಾಡಿಕೊಡುತ್ತದೆ. ಹಾಗೆಯೇ ಕಷ್ಟ ಇದ್ದಲ್ಲಿ ಸುಖವಿರುವುದುಂಟು ಅನ್ನುವ ಹಾಗೇ ಇವತ್ತಲ್ಲ ನಾಳೆ ಒಳ್ಳೆಯ ದಿನಗಳು ನಮ್ಮ ಜೀವನದಲ್ಲಿ ಬರಬಹುದೆಂಬ ಭರವಸೆ,ಆತ್ಮವಿಶ್ವಾಸವನ್ನು ಇಟ್ಟುಕೊಂಡು ಜೀವನ ನಡೆಸುತ್ತಲೇ ಇದ್ದೇವೆ.
ಈ ವರ್ಷ ಒಳ್ಳೆಯದಾಗಿಲ್ಲ ಅಂದರೆ ಏನು ಮುಂದಿನ ವರ್ಷ ಆದರೂ ನನ್ನ ಬದುಕು ಬದಲಾಗಬಹುದು ಎಂಬ ಹೊಸತನವನ್ನು ನಮ್ಮಲ್ಲಿ ಭರವಸೆ,ನಂಬಿಕೆಯ ಬೇರಿನೊಂದಿಗೆ ಬೆರೆಸಿಕೊಂಡು ಬದುಕಬೇಕು.ನಾಳೆಯ ದಿನಗಳ ಮೇಲಿನ ಅನಿರೀಕ್ಷಿತ ತೀರಿವಿನಿಂದಾಗುವ ಬದುಕಿನಲ್ಲಾಗುವ ಬದಲಾವಣೆ ಹೊಸತನದ ಚಾಪನ್ನು ಮೂಡಿಸುತ್ತದೆ.
ಎಂಥ ಹತಾಶ ಮನಸ್ಥಿತಿಯವರಲ್ಲೂ ಹೊಸವರ್ಷ ಭರವಸೆಯ ಅಭಯ ಹಸ್ತವನ್ನು ಚಾಚುತ್ತದೆ. ಅದೆಲ್ಲಿಂದಲೇ ಆತ್ಮ ವಿಶ್ವಾಸದ ಬೆಳಕಿನ ಕಿಡಿಯೊಂದು ಕಾಣಿಸಿಕೊಳ್ಳುತ್ತದೆ.
ಹೊಸವರ್ಷವೆಂಬುದು ಕೇವಲ ಸಂಭ್ರಮದ ಕಾಲ ಮಾತ್ರವಲ್ಲ. ಕಳೆದ ದಿನಗಳತ್ತ ಹಿಂತಿರುಗಿ ನೋಡುವ ಸಮಯ ಕೂಡ ಹಿಂದಿನ ದಿನಗಳ ಪುಟಗಳನ್ನು ತೆಗೆದು ನೋಡಿದರೆ. ಉತ್ಸಾಹದ ಗಳಿಗೆಗಳು ಮುಂದಿನ ಕೆಲಸಗಳಿಗೆ ಚೈತನ್ಯ, ಉತ್ಸಾಹ ನೀಡಬಲ್ಲದು.ನಮ್ಮ ದಿಕ್ಕಿಲ್ಲದ ದಾರಿಗೆ ಖಚಿತ ದಿಕ್ಕು ದಾರಿಯನ್ನು ತೋರಬಲ್ಲದು.
ಜೀವನದ ಪ್ರಯಾಣಕ್ಕೆ ಒಂದು ನಿಲ್ದಾಣವಾಗಿದೆ. ನಾವು ಕಾಣುವ ಕನಸಗಳು ಕನಸಾಗಿಯೇ ಉಳಿದಿದೆ ಯಾಕೆಂದರೆ ನಮ್ಮಲ್ಲಿನ ಬೇಜವಾಬ್ದಾರಿ, ನಿರ್ಲಕ್ಷತನ ಆಮೇಲೆ ಮಾಡಿದರೆ ಆಯ್ತು ಅನ್ನೋ ಮನೋಭಾವನೆ ಯಾವುದರ ಬಗ್ಗೆಯೂ ಆಸಕ್ತಿ ಕೊಡದೆ ಇರೋದು ಎಲ್ಲವು ನಮ್ಮ ಕನಸಿನ ಜೀವನ ರೂಪಿಸಿಕೊಳ್ಳುವಲ್ಲಿ ಸಫಲರಾಗದೆ ಉಳಿಯಲು ಕಾರಣ.
ಮೊದಲು ಆತ್ಮವಿಶ್ವಾಸ ಬೇಕು ನಾನು ಈ ಕೆಲಸವನ್ನು ಮಾಡುವೆ ಎಂಬ ಒಂದು ನಿರ್ಧಿಷ್ಟ ಗುರಿ ಇರಬೇಕು ಅಂಗಿದ್ರೆ ಅಷ್ಟೇ ಜೀವನದ ಪಯಣದ ಹಾದಿಯಲ್ಲಿ ಯಶಸ್ಸನ್ನು ಕಾಣಲು ಸಾಧ್ಯ ಇಲ್ಲವಾದಲ್ಲಿ ಸೋಲನ್ನು ಅನುಭವಿಸುವ ಪರಿಸ್ಥಿತಿ ಎದುರಾಗುತ್ತದೆ. ಮುಂದಿನ ದಿನಗಳ ಆಗಮನದೊಂದಿಗೆ ನಾವು ಕಂಡ ಕನಸನ್ನು ಈಡೇರಿಸಿಕೊಳ್ಳುವ ಸತತ ಪ್ರಯತ್ನದೊಂದಿಗೆ ಬರುವ ದಿನವನ್ನು ಸ್ವಾಗತಿಸಿಕೊಳ್ಳೋಣ.
ಎಲ್ಲರ ಬಾಳಲಿ ಹರುಷ ,ಸಂತೋಷ ಮನೆಮಾಡಲಿ ಎಂದು ಆಶಿಸುತ್ತಾ ಎಲ್ಲರಿಗೂ ಹೊಸವರ್ಷದ ಶುಭಾಶಯಗಳು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂತರಂಗ
ಕಾಮರೂಪದ ಪ್ರಭಾಕರ

- ಪ್ರೊ.ರಹಮತ್ ತರೀಕೆರೆ
ನಾನು ಕೋಲಾರಕ್ಕೆ ಹೋದಾಗೆಲ್ಲ ಎರಡು ಜಾಗಗಳಿಗೆ ತಪ್ಪದೆ ಭೇಟಿ ಕೊಡುತ್ತೇನೆ. ಒಂದು-ಕೆ.ರಾಮಯ್ಯ ಮತ್ತವರ ಸಂಗಾತಿಗಳು ಸೇರಿ ತೇರುಹಳ್ಳಿ ಬೆಟ್ಟದ ಮೇಲೆ ಕಟ್ಟಿರುವ `ಆದಿಮ’ಕ್ಕೆ; ಇನ್ನೊಂದು-`ಕಾಮರೂಪಿ’ ಎಂಬ ಹೆಸರಲ್ಲಿ ಬರೆಯುತ್ತಿದ್ದ ಕನ್ನಡ ಲೇಖಕ ಡಾ. ಎಂ.ಎಸ್. ಪ್ರಭಾಕರ ಅವರಿರುವ ಕಠಾರಿಪಾಳ್ಯದ ಮನೆಗೆ. 50ರ ದಶಕದ ಕೊನೆಯಲ್ಲಿ ಕರ್ನಾಟಕ ಬಿಟ್ಟುಹೋದ ಪ್ರಭಾಕರ, ‘ಹಿಂದೂ’ ಪತ್ರಿಕೆಯ ವರದಿಗಾರರಾಗಿ ಆಫ್ರಿಕಾ ಅಮೇರಿಕ ಬಾಂಗ್ಲಾದೇಶ ಈಶಾನ್ಯ ಭಾರತವನ್ನೆಲ್ಲ ಅಲೆದಾಡಿ, ಕಡೆಗೆ ಕಾಮರೂಪದಲ್ಲಿ (ಅಸ್ಸಾಮಿನ ಪುರಾತನ ಹೆಸರಿದು) ನೆಲೆಸಿಬಿಟ್ಟರು.
`ಕಾಮರೂಪ’ ಶಬ್ದಕ್ಕೆ ಬಯಸಿದ ರೂಪಧಾರಣೆ ಮಾಡುವ ಮಾಯಾವಿ ವಿದ್ಯೆ ಎಂಬರ್ಥವೂ ಇದೆ. ಎಂಬತ್ತರ ಪ್ರಾಯದಲ್ಲಿ ಕರ್ನಾಟಕಕ್ಕೆ ಮರಳಿ ಬಂದಿರುವ ಪ್ರಭಾಕರ ಅವರು, ತಾವು ಹುಟ್ಟಿಬೆಳೆದ ಮನೆಯಲ್ಲಿ ಬಿಡಾರ ಹೂಡಿದ್ದಾರೆ. ಹಿರೀಕರು ಕಟ್ಟಿದ ದೊಡ್ಡಮನೆ. ಮನೆಯೊಳಗೊಂದೇ ಜೀವ; ಮನೆ ತುಂಬ ಪುಸ್ತಕದ ರಾಶಿ (ಹೆಚ್ಚಿನವು ಇಂಗ್ಲೀಶ್ ಬಂಗಾಳಿ ಅಸ್ಸಾಮಿ). ನಟ್ಟನಡುವಿರುವ ಹಾಲಿನ ಮೂಲೆಯಲ್ಲಿ ಬೀದಿಗೆ ಬೆನ್ನುಕೊಟ್ಟಂತೆ ಕೂತು, ಲ್ಯಾಪ್ಟಾಪಿನಲ್ಲಿ ಬರೆಯುತ್ತ, ವೆಬ್ಸೈಟುಗಳನ್ನು ಜಾಲಾಡುತ್ತ, ಬ್ಲಾಗುಗಳನ್ನೋದುತ್ತ ಪ್ರಭಾಕರ ಕುಳಿತಿರುತ್ತಾರೆ.
ಅವರ ಮನಗೆ ಹೋದಾಗಲೆಲ್ಲ ನನಗೆ ರಾಗಿಮುದ್ದೆ ಸೊಪ್ಪಿನ ಸಾರಿನ ಊಟ ಸಿಗುತ್ತದೆ. ಅವರು ಉಣ್ಣುವುದೊಂದು ಅಪೂರ್ವ ದೃಶ್ಯ. ತಣಿಗೆಯ ನಡುವೆ ಹದವಾಗಿ ಬೆಂದು ಕಂಪು ಬೀರುವ ಗೋಂದಿನಂತಹ ಕೆಂಗಪ್ಪು ಬಣ್ಣದ ಬಿಸಿಮುದ್ದೆಯನ್ನಿಟ್ಟು, ಅದರ ತಲೆಯ ಮೇಲೆ ಶಿಖರವನ್ನು ಹಿಮವು ಅಲಂಕರಿಸುವಂತೆ ಬೆಣ್ಣೆಯ ಚೂರನ್ನಿಡುತ್ತಾರೆ; ಬೆಣ್ಣೆಯು ಮುದ್ದೆ ಕಾವಿಗೆ ಕರಗಿ ಇಡೀ ಚೆಂಡನ್ನು ಆವರಿಸಿ ಅಭಿಷೇಕ ಮಾಡಿಸಿಕೊಂಡ ಮೂರುತಿಯಂತೆ ಥಳಥಳ ಹೊಳೆಯುತ್ತದೆ. ಆಗ ಘಮಿಸುವ ಮುದ್ದೆಯನ್ನು ಚೆನ್ನಾಗಿ ಮಿದ್ದು, ಒಂದು ಬದಿಯಿಂದ ಇಷ್ಟಿಷ್ಟೇ ಮುರಿದು ತುತ್ತು ಮಾಡಿ, ಸೊಪ್ಪಿನ ಗಟ್ಟಿಸಾರಲ್ಲಿ ಹೊರಳಾಡಿಸಿ ಗುಕ್ಕನೆ ನುಂಗಿ ಕಣ್ಮುಚ್ಚಿ ಕೊಳ್ಳುತ್ತಾರೆ. ತರುವಾಯ ಶ್ರೀಯುತರು ಜ್ಞಾನೋದಯವಾದ ಸಿದ್ಧನಂತೆ ಅವರ ಮುಖದಲ್ಲಿ ಪರಮಾನಂದದ ಒಂದು ಕಳೆ ಆವಿರ್ಭವಿಸುತ್ತದೆ. ಇದನ್ನೆಲ್ಲ ಕಾಣುವಾಗ, ಲೋಕವನ್ನೆಲ್ಲ ಸುತ್ತಾಡಿರುವ ಇವರು ಕೋಲಾರಕ್ಕೆ ಮುದ್ದೆಸುಖಕ್ಕಾಗಿಯೆ ಬಂದರೇನೊ ಎಂದು ಶಂಕೆ ಬರುತ್ತದೆ. ಪ್ರಭಾಕರ ಅವರಿಗೆ ಆಧುನಿಕ ಕನ್ನಡ ಸಾಹಿತ್ಯದ ಮೇಲೆ ಅನೇಕ ದೂರುಗಳಿವೆ. ಅವುಗಳಲ್ಲಿ ಆಹಾರ ತಯಾರಿಕೆ ಮತ್ತು ಸೇವನೆ ಕುರಿತು ಅದರಲ್ಲಿ ವಿವರಗಳೇ ಇಲ್ಲ ಎಂಬುದೂ ಒಂದು.
ಕನ್ನಡದ ಅತಿಹಿರಿಯ ಮತ್ತು ಹೆಚ್ಚು ಬರೆಯದ ಲೇಖಕರಲ್ಲಿ ಪ್ರಭಾಕರ ಅವರೂ ಒಬ್ಬರು. ನಾನು ಅವರ ‘ಕುದುರೆಮೊಟ್ಟೆ’ ಕಾದಂಬರಿಯನ್ನೂ ‘ಒಂದು ತೊಲ ಪುನುಗು ಮತ್ತು ಇತರ ಕತೆಗಳು’ ಸಂಕಲನವನ್ನೂ ಓದಿದ್ದೆ. ಇವುಗಳಲ್ಲಿ ‘ಕುದುರೆ ಮೊಟ್ಟೆ’ ಈಗಲೂ ಪ್ರಿಯವಾದ ಪುಸ್ತಕ. ಅದರಲ್ಲಿರುವ ಕೆಲವು ಪಾತ್ರಗಳು ಕೊಂಚ ವಿಕ್ಷಿಪ್ತವಾಗಿವೆ; ಅಲ್ಲಿನ ಬಾಳಿನ ಸನ್ನಿವೇಶಗಳೂ ಅನಿರೀಕ್ಷಿತವಾಗಿವೆ. ಆದರೆ ಎಲ್ಲಿಯೂ ಹುಸಿ ಅನಿಸದಂತೆ, ಒಂದೇ ಶಬ್ದ ಅಪವ್ಯಯವಾಗದಂತೆ ಅದನ್ನು ಬರೆಯಲಾಗಿದೆ. ಪಾತ್ರಗಳನ್ನು ತಮ್ಮ ಸಿದ್ಧಾಂತಕ್ಕೆ ತಕ್ಕಂತೆ ಮಣಿಸಿ ಕೈಗೊಂಬೆಯಂತೆ ಆಡಿಸುತ್ತ, ಕೆಲವನ್ನು ಮುದ್ದಾಮಾಗಿ ದುರುಳಗೊಳಿಸಿ ಕಲೆಯ ಜಾಣಮುಸುಕಿನಲ್ಲಿ ಅಡಗಿಸುತ್ತ, ಕೆಲವು ಕಾದಂಬರಿಗಳು ಕನ್ನಡದಲ್ಲಿ ಪ್ರಕಟವಾಗುತ್ತಿವೆ. ಇಂತಹ ಹೊತ್ತಲ್ಲಿ ಅರ್ಧ ಶತಮಾನದ ಹಿಂದೆ ಪ್ರಕಟವಾದ ಈ ಕಾದಂಬರಿ, ಬಾಳನ್ನು ಕುರಿತು ತೋರುವ ಕಕ್ಕುಲಾತಿ ಕಂಡು ಖುಶಿಯಾಗುತ್ತದೆ. ಕತೆಗಾರರಿಗೆ ತಾವು ಸೃಷ್ಟಿಸುವ ಕೆಲವು ಪಾತ್ರಗಳ ಮೇಲೆ ಕೊಂಚ ಭಾವ ಪಕ್ಷಪಾತವಿರುತ್ತದೆ. ಆದರೆ ತಾವು ಸೃಜಿಸುವ ಎಲ್ಲ ಪಾತ್ರಗಳನ್ನು ತಾಯಿಯಂತೆ ನೋಡುವುದು ಬರೆಹದ ನೈತಿಕತೆ. ಈ ಸಂಗತಿ ಕುವೆಂಪು ಮತ್ತು ಟಾಲ್ ಸ್ಟಾಯ್ ಕಾದಂಬರಿ ಓದಿದವರಿಗೆ ಗೊತ್ತಿದೆ.
ಕಾಮವನ್ನು ಇಟ್ಟುಕೊಂಡು ಜೀವನದ ಸತ್ಯಗಳನ್ನು ಶೋಧಿಸುವ ವಿಷಯದಲ್ಲಿ ಕಾಮರೂಪಿಯವರು, ಒಬ್ಬ ಟಿಪಿಕಲ್ ನವ್ಯಲೇಖಕರೇ. ಆದರೆ ನವ್ಯದ ಕೆಲವು ಲೇಖಕರಲ್ಲಿ ಕಾಣುವಂತೆ, ಅದಕ್ಕವರು ಅನಗತ್ಯ ಪ್ರಾಮುಖ್ಯ ಕೊಡುವುದಿಲ್ಲ. ಅದನ್ನು ಚಪ್ಪರಿಸುವುದಿಲ್ಲ. ವೈಭವೀಕರಿಸುವುದಿಲ್ಲ. ಬದಲಿಗೆ, ಮನುಷ್ಯರಾದವರು ಜೀವನದ ಇಕ್ಕಟ್ಟುಗಳಲ್ಲಿ ಸಿಲುಕಿ ಅನಿವಾರ್ಯವಾಗಿ ವರ್ತಿಸುವ ಪರಿಯನ್ನು ತಣ್ಣಗೆ ವ್ಯಂಗ್ಯವಾಗಿ ಚಿತ್ರಿಸುತ್ತಾ ಹೋಗುತ್ತಾರೆ. ಸತ್ಯಕ್ಕಿರುವ ಹಲವು ಮುಖಗಳನ್ನು ಹಿಡಿಯುವಂತಹ ಕುರುಸೋವಾನ ‘ರಶೋಮನ್’ ಸಿನಿಮಾ ನೆನಪಿಸುವ ಈ ಕಾದಂಬರಿ, ಮತ್ತೆಮತ್ತೆ ಓದಬೇಕು ಎನಿಸುವಷ್ಟು ತಾಜಾ ಆಗಿದೆ. ‘ಉಪಪತ್ತಿಯೋಗ’ ಎಂಬುದನ್ನು ಬಿಟ್ಟರೆ, ಉಳಿದಂತೆ ವ್ಯಕ್ತಿವಾದವನ್ನು ಅತಿಯಾಗಿ ಬಿಂಬಿಸುವ ತಂತ್ರದ ಬಿಗಿತದಲ್ಲಿರುವ ಅವರ ಕತೆಗಳು ಅಷ್ಟು ಆಪ್ತವೆನಿಸಿಲ್ಲ.
ನನಗೆ ಪ್ರಭಾಕರ್ ಕುರಿತು ಆಸಕ್ತಿ ಮೂಡಿಸಿದವರು ಮಾರ್ಕ್ಸ್ವಾದಿ ಚಿಂತಕ ಕೆ.ರಾಘವೇಂದ್ರರಾವ್ ಅವರು. ಅಮೆರಿಕೆಯ ವಿಶ್ವವಿದ್ಯಾಲಯಗಳಲ್ಲಿ ಕೆಲಸ ಮಾಡುತ್ತಿದ್ದ ಎ.ಕೆ.ರಾಮಾನುಜನರ ಹೊಂದಾಣಿಕೆಯ ಗುಣವನ್ನು ಕಟುವಾಗಿ ವಿಮರ್ಶಿಸುತ್ತ, ಅಲ್ಲಿನ ಶೈಕ್ಷಣಿಕ ಕ್ಷೇತ್ರದಲ್ಲಿರುವ ಬಿಳಿಯರ ಯಜಮಾನಿಕೆಗೆ ಬಾಗದೆ ಹೊರಬಂದ ಪ್ರಭಾಕರ ಅವರ ದಿಟ್ಟ ಸ್ವಭಾವವನ್ನು ಅವರು ತಮ್ಮ ಸಂದರ್ಶನದಲ್ಲಿ ಪ್ರಸ್ತಾಪಿಸಿದ್ದರು. ಪ್ರಭಾಕರ ಅವರನ್ನು ಭೇಟಿಯಾಗಬೇಕು ಎಂದು ಅನಿಸುತ್ತಿತ್ತು. ಅದರಲ್ಲೂ ಭಾರತದ ಶಾಕ್ತಪೀಠಗಳಲ್ಲಿ ಮುಖ್ಯವಾಗಿರುವ ಅಸ್ಸಾಮಿನ ಕಾಮಾಖ್ಯಕ್ಕೆ ಹೋಗಲು ಯತ್ನಿಸುತ್ತಿದ್ದ ನಾನು, ಅಲ್ಲೇ ಸಮೀಪದ ಗೌಹಾತಿಯಲ್ಲಿರುವ ಅವರನ್ನು ಕಾಣಲು ಹವಣಿಕೆ ಮಾಡಿಕೊಂಡಿದ್ದೆ. ಆದರೆ ಸಾರ್ವಜನಿಕ ವ್ಯಕ್ತಿಯಾಗಲು ನಿರಾಕರಿಸಿ ಅಜ್ಞಾತವಾಗಿಯೇ ಬಾಳುವ ಅವರು ಸುಲಭವಾಗಿ ಸಿಗುತ್ತಿರಲಿಲ್ಲ.
ನನ್ನ ತವಕವನ್ನರಿತಿದ್ದ ಕೆ.ರಾಮಯ್ಯ, ‘ಪ್ರಭಾಕರ್ ಕರ್ನಾಟಕಕ್ಕೆ ಬಂದಿದ್ದಾರೆ. ಬನ್ನಿ’ ಎಂದು ಅವರ ಮನೆಗೆ ಕರೆದುಕೊಂಡು ಹೋದರು. ಮಧ್ಯಾಹ್ನದ ಸುಡುಹೊತ್ತು. ಪ್ರಭಾಕರ ಪ್ರೀತಿಯಿಂದ ಬರಮಾಡಿಕೊಂಡು ನೊರೆ ತುಂಬಿದ ಒಗರು ಬೀರಿನ ಮಗ್ಗನ್ನು ಕೈಗೆ ಕೊಟ್ಟು, ಕಾಮಾಖ್ಯದ ಬಗ್ಗೆಯೂ ತಂತ್ರ ಪಂಥದ ಬಗ್ಗೆಯೂ ಇರುವ ಕೃತಿಗಳನ್ನು ತೋರಿಸುತ್ತ, ಗಂಟೆಗಟ್ಟಳೆ ಮಾತಾಡಿದರು. ಅರಿವಿನ ಕಿಡಿಗಳು ಹಾರುವ ಅದೊಂದು ವಿದ್ವತ್ಪೂರ್ಣ ಹರಟೆ.
ನಾನು ಅವರಲ್ಲಿ ಶಿಷ್ಯವೃತ್ತಿ ಸ್ವೀಕರಿಸಿ ಹಲವಾರು ಸಲ ಕೋಲಾರಕ್ಕೆ ಹೋಗಿ ಬಂದಿದ್ದೇನೆ. ಅವರ ಮಾತುಕತೆಗಳಲ್ಲಿ ನನಗೆ ಮುಖ್ಯವಾಗಿ ಕಂಡಿದ್ದು, ಜಾತ್ಯತೀತವಾದ ಮನಸ್ಸು; ಸಣ್ಣಪುಟ್ಟ ಸಂಗತಿಗಳ ಮೇಲೂ ಕಾಳಜಿಯಿಂದ ಸೂಕ್ಷ್ಮವಾಗಿ ಚಿಂತಿಸುವ ಮಾನವೀಯತೆ; ಗತಕಾಲದ ಬಗ್ಗೆ ಹಳಹಳಿಕೆಯಿಲ್ಲದೆ ವರ್ತಮಾನದ ಸಮಸ್ಯೆಗಳನ್ನು ಕುರಿತು ಚಿಂತಿಸುವ ಪ್ರಖರವೂ ನಿಷ್ಠುರವೂ ಆದ ರಾಜಕೀಯ ಪ್ರಜ್ಞೆ. ಸಾರ್ವಜನಿಕ ಬದುಕಿನಲ್ಲಿ ಜಾತಿಪದ್ಧತಿ ಎಲ್ಲೆಮೀರಿ ನಿರತವಾಗಿರುವ ಕುರಿತ ಹೇವರಿಕೆ. ಹಿರಿಯ ಲೇಖಕರಲ್ಲಿ ಸಾಮಾನ್ಯವಾಗಿ ಎರಡು ಸ್ವಭಾವಗಳಿರುತ್ತವೆ. ಒಂದು- ಕಳೆದುಹೋದ ಕಾಲದ ಬಗ್ಗೆ ಭಾವುಕ ಮರುಕಳಿಕೆ. ಎರಡು-ವರ್ತಮಾನದ ಸಾಮಾಜಿಕ ರಾಜಕೀಯ ವೈರುಧ್ಯಗಳನ್ನು ಉದಾರವಾಗಿ ನೋಡುತ್ತ, ಚಿಂತನೆಯ ಮೊನಚನ್ನು ಕಳೆದುಕೊಳ್ಳುವುದು. ಆದರೆ ಆತ್ಮಕ್ಕೆ ಸದಾ ಬೆಂಕಿ ಹತ್ತಿಸಿಕೊಂಡಂತೆ ಉರಿಯುವ ಕೆಲವರಿದ್ದಾರೆ. ಕೋಚೆ, ಕುಸುಮಾಕರ ದೇವರಗೆಣ್ಣೂರ, ಎಂ.ಡಿ. ನಂಜುಂಡಸ್ವಾಮಿ, ನೀಲಗಂಗಯ್ಯ ಪೂಜಾರ, ಕೆ.ರಾಘವೇಂದ್ರರಾವ್, ಅಬ್ಬಿಗೇರಿ ವಿರೂಪಾಕ್ಷಪ್ಪ, ಸಾರಾ ಅಬೂಬಕರ್, ಕಾಮರೂಪಿ ಪ್ರಭಾಕರ-ಇವರೆಲ್ಲ ಇಂತಹವರು. ಈ ಹಿರಿಯರ ಜತೆ ಮಾತಾಡುವಾಗ ಇವರ ಹಠಮಾರಿತನ, ಜಗಳಗಂಟಿತನ, ಆದರ್ಶವಾದ, ನೈತಿಕ ಪ್ರಜ್ಞೆ ಹಾಗೂ ಭಿನ್ನಮತ ಇಷ್ಟವಾಗುತ್ತದೆ.
ಕರ್ನಾಟಕದಿಂದ ಬಹುಕಾಲ ದೂರವಿದ್ದ ಕಾರಣದಿಂದ ಏರ್ಪಟ್ಟಿರುವ ಅಪರಿಚಿತತೆಯಿಂದಲೊ ಅಥವಾ ಕರ್ನಾಟಕದ ಒಳಗೇ ಇದ್ದೂಇದ್ದೂ ನಮಗೆ ಕಾಣದಂತಾಗಿರುವ ವೈರುಧ್ಯಗಳು ‘ಹೊರಗಿನಿಂದ’ ಬಂದಿರುವ ಅವರಿಗೆ ಒಡೆದು ಕಾಣುತ್ತಿರುವುದರಿಂದಲೊ, ಪ್ರಭಾಕರ ಕರ್ನಾಟಕದ ಸಮಕಾಲೀನ ಸಾಂಸ್ಕೃತಿಕ ರಾಜಕಾರಣದ ವೈರುಧ್ಯಗಳ ಬಗ್ಗೆ ತೀಕ್ಷ್ಣವಾದ ಟಿಪ್ಪಣಿ ಮಾಡುತ್ತಿರುತ್ತಾರೆ; ಕನ್ನಡಿಗರ ಸ್ವಭಾವದಲ್ಲೇ ವ್ಯಕ್ತಿನಿಷ್ಠೆಗಾಗಿ ವಿಮರ್ಶೆಯ ನಿಷ್ಠುರತೆ ಬಿಟ್ಟುಕೊಡುವ, ಸಜ್ಜನಿಕೆಯ ಭಾಷೆಯಲ್ಲಿ ವಾಸ್ತವವನ್ನು ಅಡಗಿಸುವ ಪ್ರವೃತ್ತಿಯಿದೆ ಎಂದು ಹೇಳುತ್ತಿರುತ್ತಾರೆ. ಸಂಘಟಕರೊಬ್ಬರು ಕಾರ್ಯಕ್ರಮವೊಂದಕ್ಕೆ ಕರೆಸಿಕೊಂಡು ಪರಿಚಯ ಭಾಷಣದಲ್ಲಿ ತಮ್ಮನ್ನು ಅತಿಯಾಗಿ ಹೊಗಳಿದ್ದನ್ನು ನೆನೆಯುತ್ತ ಅವರೊಮ್ಮೆ ಹೇಳಿದರು: “ಏನ್ ಸ್ವಾಮಿ ಕನ್ನಡಿಗರು? ಎಷ್ಟು ಉದಾರತೆ! ನನ್ನ ಬಗ್ಗೆ ಅವರಿಗೆ ಏನೂ ಗೊತ್ತಿಲ್ಲ. ನಾನು ಎಲ್ಲ ಸೇರಿದರೆ ನೂರೈವತ್ತು ಪುಟಗಳನ್ನೂ ಬರೆದಿಲ್ಲ. ಕನ್ನಡಕ್ಕೆ ದೊಡ್ಡ ಕೊಡುಗೆಯನ್ನು ಕೊಟ್ಟಿಲ್ಲ. ಆದರೂ ವಾಚಾಮಗೋಚರ ಹೊಗಳಿಬಿಟ್ಟರು. ಕರ್ನಾಟಕದಲ್ಲಿ ಮಾತಿಗೆ ಬೆಲೆಯೇ ಇದ್ದಂತಿಲ್ಲ.’’
ಇದನ್ನು ಕೇಳುವಾಗ ಈಚೆಗೆ ಕಲ್ಕತ್ತಾದಲ್ಲಿ ನಾನು ಕಂಡ, ಹಿರಿಯ ಲೇಖಕ ರುದ್ರಪ್ರತಾಪ ಸೇನರ ಸನ್ಮಾನ ಕಾರ್ಯಕ್ರಮ ನೆನಪಾಯಿತು. ಸೇನರಿಗೆ 75ವರ್ಷ ತುಂಬಿದ ನೆಪದಲ್ಲಿ ಇರಿಸಿಕೊಂಡಿದ್ದ ಆ ಕಾರ್ಯಕ್ರಮ ಎಷ್ಟು ವಿಮರ್ಶಾತ್ಮಕವಾಗಿತ್ತು ಎಂದರೆ, ಅವರ ಶಿಷ್ಯರು ತಮ್ಮ ಗುರುವಿನ ಜತೆ ಕೋರ್ಟ್ಮಾರ್ಶಲ್ ನಡೆಸುವವರ ಹಾಗೆ ಪ್ರಶ್ನೆ ಕೇಳುತ್ತಿದ್ದರು. ಸೇನರು ಆ ಕಟುತರ ಪ್ರಶ್ನೆಗಳಿಗೆಲ್ಲ ಪ್ರಾಮಾಣಿಕವಾಗಿ ದ್ವಂದ್ವವಿಲ್ಲದೆ ಉತ್ತರಿಸುತ್ತಿದ್ದರು. ಹಿರಿಯರ ತಲೆಗೆ ಅಭಿನಂದನ ಗ್ರಂಥಗಳ ಸರಮಾಲೆಯನ್ನು ತಂದು ಕಟ್ಟಿ, ಎಗ್ಗಿಲದೆ ಹೊಗಳಿ ವೈಭವೀಕರಿಸುವ ಪದ್ಧತಿಯಿರುವ ಕರ್ನಾಟಕದಲ್ಲಿ, ಈ ಪರಿಯ ನಿಷ್ಠುರತೆ ಕಲ್ಪಿಸಿಕೊಳ್ಳುವುದೇ ಕಷ್ಟ.
ತೋರುಗಾಣಿಕೆಯನ್ನು ಸದಾ ನಿರಾಕರಿಸುವ ಪ್ರಭಾಕರ ಅವರಲ್ಲಿ, ಅವರ ಖಂಡಿತವಾದಿ ನಿಲುವಿಗೆ ಅಷ್ಟೊಂದು ತಾಳೆಯಾಗದ ಇನ್ನೊಂದು ಮುಖವಿದೆ. ಅದೆಂದರೆ, ಜೀವನಪ್ರೀತಿಯ ಸಂಕೇತದಂತಿರುವ ತಮಾಶೆ ಮತ್ತು ಪೋಲಿತನ. ಈ ತಮಾಶೆಯ ಗುಣ ಅದ್ಭುತ ನಾಟಕೀಯ ಶೈಲಿಯಾಗಿ ಅವರ ಕಥೆ ಕಾದಂಬರಿಗಳಲ್ಲೆಲ್ಲ ಆವರಿಸಿಕೊಂಡಿದೆ. ತಮಗೆ ಪಾಠ ಹೇಳಿದ ಗುರುಗಳ ವೈಯಕ್ತಿಕ ಬದುಕಿನಲ್ಲಿದ್ದ ಸನಾತನವಾದ ಮತ್ತು ತರಗತಿಗಳಲ್ಲಿ ಕನ್ನಡ ಬಳಸದ ಅವರ ಇಂಗ್ಲಿಷಿನ ವ್ಯಾಮೋಹ ಕುರಿತಂತೆ, ಅವರಲ್ಲಿ ಸ್ವಾರಸ್ಯಕರ ಮಾಹಿತಿಗಳಿವೆ. ಪ್ರಭಾಕರ ಅವರು ಆಪ್ತರ ಎದುರು ತಾವು ಬರೆದಿರುವ ಅಪ್ರಕಟಿತ ಪೋಲಿ ಪದ್ಯಗಳನ್ನು ವಾಚಿಸುವುದುಂಟು. ಬಹುಶಃ ಇದು ಅವರ ಗೆಳೆಯರಾಗಿದ್ದ ಎಚ್.ಎಸ್. ಬಿಳಿಗಿರಿಯವರ ಸಹವಾಸ ಫಲವಿರಬೇಕು.
ಒಂದೇ ವ್ಯಕ್ತಿತ್ವದಲ್ಲಿ ಒಟ್ಟಿಗೇ ಇರಲು ಕಷ್ಟವೆನಿಸಬಹುದಾದ ಇನ್ನೂ ಅನೇಕ ಸಂಗತಿಗಳು ಅವರಲ್ಲಿ ಸಹಜವಾಗಿ ನಿರಾಳವಾಗಿ ಇವೆ. ಉದಾ.ಗೆ, ಬಹುಭಾಷಿಕರಾದ ಅವರ ಮನೆಮಾತು ತಮಿಳುಗನ್ನಡ; ಬರವಣಿಗೆ ಕನ್ನಡ ಮತ್ತು ಇಂಗ್ಲೀಶಿನಲ್ಲಿ; ಸಂಸ್ಕೃತ ಅಸ್ಸಾಮಿ ಬಂಗಾಳಿ ಭಾಷೆಗಳಲ್ಲಿ ದೊಡ್ಡ ವಿದ್ವತ್ತು. (ಅವರ ಅಸ್ಸಾಮಿ ಬಂಗಾಳಿ ತಿಳಿವಳಿಕೆಯಿಂದ ಕನ್ನಡಕ್ಕೆ ಪ್ರಯೋಜನವಿನ್ನೂ ಆಗಿಲ್ಲ). ಪಂಪ ಅವರ ಇಷ್ಟದ ಕವಿ. ಮೂಲತಃ ಇಂಗ್ಲೀಶ್ ಸಾಹಿತ್ಯದ ವಿದ್ಯಾರ್ಥಿಯಾದರೂ ಸಾಹಿತ್ಯಕ್ಕಿಂತ ಹೆಚ್ಚಾಗಿ ಅಂತರಾಷ್ಟ್ರೀಯ ರಾಷ್ಟ್ರೀಯ ರಾಜಕಾರಣದ ಮೇಲೆ ಹೆಚ್ಚು ಬರೆವಣಿಗೆ. ಅದರಲ್ಲೂ ಈಶಾನ್ಯ ಭಾರತದ ರಾಜಕಾರಣ ಭಾಷೆ ಧರ್ಮ ಸಂಸ್ಕೃತಿ ಕುರಿತ ಅವರ ತಿಳಿವಳಿಕೆ ಅಪರೂಪದ್ದು. ಇವನ್ನೆಲ್ಲ ಒಟ್ಟಿಗೆ ಹೇಗೆ ಕಲ್ಪಿಸಿಕೊಳ್ಳುವುದು? ಪ್ರಭಾಕರ ತಮ್ಮ ಕಾದಂಬರಿಯ ಒಂದು ಪಾತ್ರದ ಹಾಗೇ ಬದುಕಿದ್ದಾರೆ.
ಅವರು ಈಚೆಗೆ ಮಾತಾಡುತ್ತ ಕೊಂಚ ದಣಿದ ದನಿಯಲ್ಲಿ “ಸ್ವಾಮಿ, ಕರ್ನಾಟಕ ನನಗೆ ಸಾಕಾಗಿದೆ. ಗೌಹಾಟಿಗೆ ಹೋಗಬೇಕು ಅನಿಸುತ್ತಿದೆ’ ಎಂದು ಗೊಣಗಿದರು. “ಹೋಗಿ. ಆದರೆ ಮತ್ತೆಬನ್ನಿ’’ ಎಂದೆ. ಅವರಲ್ಲಿ ಕೋಲಾರ-ಗೌಹಾತಿಗಳ ನಡುವೆ ವಿಚಿತ್ರವಾದ ಆಕರ್ಷಣೆ ವಿಕರ್ಷಣೆಯಿದೆ. ಇದು ಬಹುಕಾಲ ಬೇರೆಡೆ ಬೆಳೆದ ಮರ ತನ್ನ ಮೂಲನೆಲಕ್ಕೆ ಬಂದು ನಾಟಿಗೊಂಡರೆ ಬೇರೂರುವ ಕಷ್ಟ. ಮರಳಿ ಹುಟ್ಟಿದೂರಿಗೆ ಬರುವಿಕೆ ಬಾಲ್ಯದ ನೆನಪುಗಳನ್ನು ಎಚ್ಚರಿಸಿ ಸುಖ ಕೊಡುತ್ತದೆ; ಆದರೆ ಹೊಚ್ಚ ಹೊಸತೆೆನಿಸುವಷ್ಟು ಬದಲಾಗಿರುವ ಪರಿಸರವು, ಕಾಡುವ ಏಕಾಂಗಿತನವನ್ನೂ ತಂದಿಡುತ್ತದೆ. ಯಾರ ಮರುಕವನ್ನೂ ಬಯಸದೆ ಏಕಾಂತದಲ್ಲಿ ಘನತೆಯಿಂದ ಕೊನೆಯ ದಿನಗಳನ್ನು ಕಳೆಯ ಬಯಸುವ ಇಂತಹ ಹಠಮಾರಿ ಜೀವಗಳು, ಒಳಗೇ ಮೃದ್ವಂಗಿಗಳಾಗಿ ಆಪ್ತಸಂಗಾತಕ್ಕೆ ಹಾತೊರೆಯುತ್ತಿರುತ್ತವೆ.
ಆ ಸಂಗಾತದ ಸ್ವರೂಪ ಎಂತಹುದು ಎಂದು ಸ್ಪಷ್ಟವಾಗುವುದಿಲ್ಲ. ನಾನು ‘ಕಾಮರೂಪಕ್ಕೆ ಯಾವಾಗ ಹೋಗುತ್ತೀರಿ’ ಎಂದು ಕೇಳಿದೆ: ‘ಆದಿಮದ 50ನೇ ಬೆಳುದಿಂಗಳ ಕಾರ್ಯಕ್ರಮ ಮುಗಿಸಿಕೊಂಡು’ ಎಂದರು.
ಪ್ರತಿಯೊಬ್ಬರಿಗೂ ಬಾಳಿನಲ್ಲಿ ಬಹುರೂಪಧಾರಣೆ ಮಾಡಬೇಕಾದ ಒತ್ತಡಗಳು ಎದುರಾಗಬಹುದು. ಆದರೆ ಈ ರೂಪಧಾರಣೆಗೆ ಕಾರಣ, ನಮ್ಮ ಇಚ್ಛಾನಿಚ್ಛೆಗಳು ಮಾತ್ರವಲ್ಲ, ಬಾಳಿನ ಅನೂಹ್ಯ ಒತ್ತಡಗಳು ಸಹ. ಈ ಒತ್ತಡಗಳು ಬರೆಹ ಇಲ್ಲವೇ ಮಾತಿನ ವ್ಯಾಖ್ಯಾನಕ್ಕೆ ಕೆಲವೊಮ್ಮೆ ನಿಲುಕುವಂತೆ ಇರುವುದಿಲ್ಲ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ4 days ago
ನಾಳೆಯಿಂದ ತಮಿಳುನಾಡಿಗೆ ಕಾವೇರಿ ನೀರು ; ಕಾವೇರಿ ನದಿ ನೀರು ಸಮಿತಿ ನಿರ್ದೇಶನ
-
ದಿನದ ಸುದ್ದಿ5 days ago
ಬೆಂಗಳೂರು ಬಂದ್ ಹಿನ್ನೆಲೆಯಲ್ಲಿ ನಗರದೆಲ್ಲೆಡೆ ಬಿಗಿ ಬಂದೋಬಸ್ತ್ : ಪೊಲೀಸ್ ಕಮೀಷನರ್ ದಯಾನಂದ್
-
ದಿನದ ಸುದ್ದಿ4 days ago
ಉಚಿತ ಲ್ಯಾಪ್ಟಾಪ್ ಪಡೆಯಲು ಅರ್ಜಿ ಆಹ್ವಾನ
-
ದಿನದ ಸುದ್ದಿ4 days ago
ಉತ್ತಮ ಶಿಕ್ಷಕರ ಪ್ರಶಸ್ತಿಗೆ ಸುಮಂಗಳಾ ಮೇಟಿ ಆಯ್ಕೆ