Connect with us

ದಿನದ ಸುದ್ದಿ

“ಕರ್ನಾಟಕ ರಾಜ್ಯ ಮಹರ್ಷಿ ವಾಲ್ಮೀಕಿ ಮ್ಯಾಸ ಬೇಡರ ಅಭಿವೃಧ್ದಿ ನಿಗಮ” ಸ್ಥಾಪನೆಗೆ ಮ್ಯಾಸ ಬೇಡ ಬುಡಕಟ್ಟು ಸಂಸ್ಕೃತಿ ಸಂರಕ್ಷಣಾ ಸಮಿತಿ ಮನವಿ

Published

on

ಸುದ್ದಿದಿನ, ದಾವಣಗೆರೆ : ಮ್ಯಾಸ ಬೇಡ ಬುಡಕಟ್ಟು ಜನರ ಅಭಿವೃದ್ದಿಗಾಗಿ “ಕರ್ನಾಟಕ ರಾಜ್ಯ ಮಹರ್ಷಿ ವಾಲ್ಮೀಕಿ ಮ್ಯಾಸ ಬೇಡರ ಅಭಿವೃಧ್ದಿ ನಿಗಮ” ಸ್ಥಾಪನೆ ಮಾಡಲು ಕೋರಿ ಸೋಮವಾರ ಮ್ಯಾಸ ಬೇಡ (ಮ್ಯಾಸ ನಾಯಕ) ಬುಡಕಟ್ಟು ಸಂಸ್ಕೃತಿ ಸಂರಕ್ಷಣಾ ಸಮಿತಿವತಿಯಿಂದ ಉಪವಿಭಾಗಾಧಿಕಾರಿಗಳಿಗೆ ಮನವಿ ಮಾಡಲಾಯಿತು.

ಮನವಿಯು ಈ ಕೆಳಕಂಡ ಅಂಶಗಳನ್ನು ಒಳಗೊಂಡಿದೆ

ಕರ್ನಾಟಕ ಆಂದ್ರ ಗಡಿ ಜಿಲ್ಲೆಗಳಾದ ಬಳ್ಳಾರಿ ಚಿತ್ರದುರ್ಗ, ದಾವಣಗೆರೆ ಜಿಲ್ಲೆಗಳಲ್ಲಿ ನಾಯಕ ಪಂಗಡದವರಾದ ಮ್ಯಾಸ ನಾಯಕ/ಮ್ಯಾಸ ಬೇಡರು ನೆಲೆಸಿರುತ್ತೇವೆ. ನಮ್ಮ ಬುಡಕಟ್ಟಿನಲ್ಲಿ ಮಂದ ನಾಯಕ ಮತ್ತು ಮಲ್ಲ ನಾಯಕ ಎಂಬ ಎರಡು ಗುಂಪುಗಳಿರುತ್ತವೆ. ಮ್ಯಾಸ ಬೇಡರ ಭಾಷೆ ತೆಲುಗು ಭಾಷೆಯ ಉಪ ಭಾಷೆ. ವಿದ್ವಾಂಸರು ಇದನ್ನು “ಮ್ಯಾಸ ಭಾಷೆ “ಎಂದೇ ಕರೆದಿರುತ್ತಾರೆ.

ನಾವು ಮೂಲತ: ಗೊಂಡವಾನ ಪ್ರದೇಶದ ಬುಡಕಟ್ಟುಗಳಲ್ಲಿ ಒಂದಾದ ‘ಭಿಲ್’ ಬುಡಕಟ್ಟು ಜನಾಂಗದಿಂದ ಬೇರ್ಪಟ್ಟ ‘ನಾಯ್ಕಡ’ ಬುಡಕಟ್ಟಿಗೆ ಸೇರಿರುತ್ತೇವೆ. ಆಂದ್ರದ ಶ್ರೀಶೈಲದ ಮೂಲಕ ಕರ್ನಾಟಕ ಆಂದ್ರ ಗಡಿಗೆ ಹೊಂದಿಕೊಂಡಂತೆ ಬಂದು ನೆಲೆಸಿರುತ್ತೇವೆ. ನಾಯ್ಕಡ ನಾಯಕ ಪಂಗಡದವರಾದ ಮ್ಯಾಸ ನಾಯಕ / ಮ್ಯಾಸ ಬೇಡ ಬುಡಕಟ್ಟು ಜನರು ಆದ ನಾವು ಮೂರ್ತಿ ಪೂಜಕರು ಅಲ್ಲ. ‘ಉದಿ-ಪದಿ’ ಎಂಬ ಬುಡಕಟ್ಟು ಧಾರ್ಮಿಕ ಸಂಪ್ರದಾಯವನ್ನು ಪಾಲಿಸುತ್ತೇವೆ.

‘ಉದಿ’ ಎಂದರೆ ಪೆಟ್ಟಿಗೆ, ಬುಟ್ಟಿಗಳಲ್ಲಿ ಇಟ್ಟಿರುವ ಪವಿತ್ರ ವಸ್ತುಗಳ ಪುಟ್ಟಿ ಅಥವಾ ಪೆಟ್ಟಿಗೆ ಇವುಗಳನ್ನೇ ದೇವರೆಂದು ನಾವು ಪೂಜಿಸುವುದರಿಂದ ಇವುಗಳನ್ನು ಪೆಟ್ಟಿಗೆ ದೇವರುಗಳೆಂದು ಕರೆಯುತ್ತೇವೆ.. ಬಿಲ್ಲು, ಕತ್ತಿ, ಕೋಲು ಮುಂತಾದ ಆಯುಧಗಳನ್ನು ಸಹ ಪೂಜಿಸುತ್ತೇವೆ. ಈ ಪೆಟ್ಟಿಗೆ ಮತ್ತು ಆಯುಧಗಳನ್ನು ನಮ್ಮ ಹಟ್ಟಿಗಳಲ್ಲಿ ಇರುವ ಗುಬ್ಬ (ಹುಲ್ಲಿನ ಗುಡಿಸಲು) ಗಳಲ್ಲಿ ಇಟ್ಟು ದೇವರೆಂದು ಪೂಜೆಮಾಡುವವರನ್ನು ‘ಉದಿ’ ಪೂಜಾರಿ ಎಂದು ಕರೆಯುತ್ತೇವೆ.

ದೇವರ ಎತ್ತುಗಳನ್ನು ಸಾಕುವುದಕ್ಕಾಗಿ ನೇಮಿಸಿರುವವರನ್ನು ‘ಪದಿ ಪೂಜಾರಿ’ ಅಥವಾ ‘ಕಿಲಾರಿ’ ಎನ್ನುತ್ತೇವೆ. ಈ ದೇವರ ಎತ್ತುಗಳು ನಮ್ಮ ಪೂರ್ವಿಕರ ಆತ್ಮವನ್ನು ಹೊಂದಿರುವ ಪ್ರಾಣಿಗಳೆಂದು ಪೂಜಿಸುತ್ತೇವೆ. ನಾವು ಪ್ರಾಣಿ ಪೂಜಕರೆ ಹೊರತು, ಮೂರ್ತಿ ಪೂಜಕರಲ್ಲ ಮತ್ತು ವೈಧಿಕ ಸಂಪ್ರದಾಯಗಳನ್ನು ಪಾಲಿಸುವವರಲ್ಲ. ಮ್ಯಾಸ ಬೇಡರ ಉಡುಪು, ಬಿಳಿ ಚಲ್ಲಣ, ಬಿಳಿ ರುಮಾಲು, ಹೆಗಲ ಮೇಲೆ ಕರಿ ಕಂಬಳಿ ಕೈಯಲ್ಲಿ ಕೋಲು. ನಾವು ‘ಮ್ಯಾಸರಟ್ಟಿ’ ಎಂಬ ಪ್ರತ್ಯೇಕ ಹಟ್ಟಿಗಳಲ್ಲಿ ಮುಖ್ಯವಾಹಿನಿಯಿಂದ ಪ್ರತ್ಯೇಕವಾಗಿ ವಾಸಿಸುತ್ತೇವೆ. ನಾವು ತೆಲುಗಿನ ಉಪ ಭಾಷೆಯನ್ನು ಮಾತನಾಡುತ್ತೇವೆ.

ನಾವು ಕೋಳಿ ಮಾಂಸವನ್ನು ತಿನ್ನುವುದಿಲ್ಲ ಮತ್ತು ಕೋಣದ ಮಾಂಸವನ್ನು ಸಮಾನ್ಯವಾಗಿ ಮುಖ್ಯ ಮಾಂಸ ಭೋಜನವಾಗಿ ಉಪಯೋಗಿಸುತ್ತೇವೆ. ನಾವು ಶಟ್ಲು ದ್ಯಾವರಿ, ದೂಲಿಹಬ್ಬ, ಗುಗ್ಗರಿ ಹಬ್ಬ ಮುಂತಾದ ನಮ್ಮದೇ ಹಬ್ಬಗಳನ್ನು ಆಚರಿಸುತ್ತೇವೆ. ದೇವರ ಕುಣಿತ, ಮಣೇವು ಕಣಿತ, ಪೋತಪ್ಪಗಳ ಕುಣಿತ ಮುಂತಾದವು ನಮ್ಮ ಬುಡಕಟ್ಟು ನೃತ್ಯಗಳಾಗಿವೆ. ಪೋತಪ್ಪಗಳು ಎಂದರೆ ದಡ್ಡಲು ಮಾರಮ್ಮ ಮತ್ತು ಗೌರಸಮುದ್ರ ಮಾರಮ್ಮನ ಮತ್ತು ಮಾದಲಿಂಗಪ್ಪನ ಪೂಜಿಸುವ ಬುಟುಗಲರು ಬೆಡಗಿನವರು ಮೇಕೆಯ (ಆಡು) ಮರಿಯ ಬಿಸಿ ರಕ್ತವನ್ನು ಕುಡಿಯುತ್ತಾರೆ ಮತ್ತು ಹಸಿ ಮಾಂಸವನ್ನು ತಿನ್ನುತಾರೆ.

ಚಾಟಿಯಿಂದ ಮೈಯಿಗೆ ಹೊಡೆದು ಕೊಳ್ಳುತ್ತಾ ಕುಪ್ಪಳಿಸುತ್ತಾ ಮಾಡುವ ಸಹಾಸ ಭಯಾನಕವಾಗಿರುತ್ತವೆ. ಇವೆಲ್ಲಾ ಮ್ಯಾಸ ಬೇಡರ ವಿಶೇಷ ಬುಡಕಟ್ಟು ಅಚಾರ ಮತ್ತು ಸಂಪ್ರದಾಯಗಳಾಗಿವೆ. ಚಿತ್ರದುರ್ಗ ಪಾಳೆಯಗಾರರು ನಮ್ಮ ಮ್ಯಾಸ ಬೇಡ ಬುಡಕಟ್ಟಿನ ಕಾಮಗೇತಿ ಬೆಡಗಿಗೆ ಸೇರಿದ ವೀರರಾಗಿರುತ್ತಾರೆ. ರಾಜ್ಯದ ಬಳ್ಳಾರಿ ಜಿಲ್ಲೆ, ಚಿತ್ರದುರ್ಗ ಜಿಲ್ಲೆ ಮತ್ತು ಜಗಳೂರು ತಾಲ್ಲೂಕಿನಲ್ಲಿ ನಮ್ಮ ನಾಯಕ ಪಂಗಡ ಮ್ಯಾಸ ಬೇಡರು ಜನ ಸಂಖ್ಯೆಯಲ್ಲಿ ಬಹುಸಂಖ್ಯಾತರಾಗಿರುತ್ತೇವೆ.

ಮ್ಯಾಸ ಬೇಡ ಸಮುದಾಯದ ಜನರು ಆರ್ಥಿಕ, ಸಮಾಜಿಕ, ಶೈಕ್ಷಣಿಕವಾಗಿ ತುಂಬಾ ಹಿಂದುಳಿದಿದ್ದೇವೆ. ಬುಡಕಟ್ಟು ಹಿನ್ನೆಲೆಯನ್ನು ಹೊಂದಿರುವ ಮ್ಯಾಸ ಬೇಡ ಸಮುದಾಯದ ಜನರನ್ನು ಈಗಾಗಲೇ ನಾಯಕ ವಾಲ್ಮೀಕಿ ಎಂಬ ಹೆಸರಿನಲ್ಲಿ ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆ ಮಾಡಿ ಮೀಸಲಾತಿಯನ್ನು ನೀಡಿ 45ವರ್ಷಗಳೇ ಗತಿಸಿದರು ಸಹ ಈ ಬುಡಕಟ್ಟು ಜನರು ಮುಖ್ಯವಾಹಿನಿಗೆ ಬರಲು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಈ ಮ್ಯಾಸ ಬೇಡ ಸಮುದಾಯವು ನೆಲೆಸಿರುವ ಹಟ್ಟಿಗಳು ಇದುವರೆಗೂ ಕಂದಾಯ ಗ್ರಾಮಗಳು ಆಗಿರುವುದಿಲ್ಲ. ನಮ್ಮ ಬುಡಕಟ್ಟು ಜನಾಂಗದ ಸಾಂಸ್ಕೃತಿಕ ವೀರರ ಹೆಸರಲ್ಲಿ ಮತ್ತು ಮ್ಯಾಸರಹಟ್ಟಿ ಎಂಬ ಹೆಸರಿನಲ್ಲಿ ಊರುಗಳು ಇರುತ್ತವೆ. ನಮ್ಮ ಬುಡಕಟ್ಟು ಸಮುದಾಯದ ಧಾರ್ಮಿಕ ನಂಬಿಕೆಯ ಪ್ರತೀಕವಾದ ದೇವರು ಎತ್ತುಗಳು ಇವೆ.

ಸುಮಾರು ಗುಡಿಕಟ್ಟೆಯ ದೇವರ ಎತ್ತುಗಳು ದಶಕಗಳಿಂದ ಮೇವು ನೀರಿಲ್ಲದೆ ಸತ್ತುಹೋಗಿರುತ್ತವೆ. ಬಯಲು ಸಿಮೇಯಲ್ಲಿ ಇರುವುದರಿಂದ ಇವುಗಳನ್ನು ಉಳಿಸಿಕೊಳ್ಳಲು ಕಿಲಾರಿಗಳು ತುಂಬಾ ತೊಂದರೆಯನ್ನು ಅನುಭವಿಸುತ್ತಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಹಾಲವಾರು ಬಾರಿ ಮಾದ್ಯಮಗಳಲ್ಲಿಯು ವರದಿಯಾಗಿರುತ್ತದೆ. ನಾವು ಕೂಡ ಹಾಲವಾರು ಬಾರಿ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಮನವಿಯನ್ನು ಸಹ ಸಲ್ಲಿಸಲಾಗಿದೆ ಆದರೆ ಯಾವುದೇ ರೀತಿ ಕ್ರಮಕೈಗೊಂಡಿರುವುದಿಲ್ಲ.

ಸರ್ಕಾರದಿಂದ ಸಿಗಬೇಕಾದ ಮೂಲಭೂತ ಸೌಲಭ್ಯಗಳು ಮತ್ತು ಅನುಧಾನವು ತಳವಾರ ಪರಿವಾರ ಜಾತಿಯವರ ಪಾಲಗುತ್ತಿದೆ. ಮೂಲಭೂತ ಸೌಲಭ್ಯಗಳಿಂದ ವಂಚಿತವಾಗಿರುವುದರಿಂದ ನಿಧಾನವಾಗಿ ನಮ್ಮ ಬುಡಕಟ್ಟು ಸಂಸ್ಕೃತಿಯು ನಾಶವಾಗುವ ಹಂತಕ್ಕೆ ತಲುಪಿರುತ್ತದೆ. ಈ ಸಮುದಾಯದ ಹಟ್ಟಿಗಳು ಮತ್ತು ಜನರು ಮೂಲ ಸೌಲಭ್ಯಗಳಿಲ್ಲದೆ ಸಂಪೂರ್ಣವಾಗಿ ಅಭಿವೃದ್ದಿಯಿಂದ ವಂಚಿತವಾಗಿದ್ದೇವೆ.

ನಮ್ಮ ಮ್ಯಾಸ ಬೇಡ ಬುಡಕಟ್ಟಿಗೆ ಸಂಬಂಧವಿರದ ತಳವಾರ ಪರಿವಾರ ಸಮುದಾಯವು ಸಹ ನಾಯಕ ವಾಲ್ಮೀಕಿ ಹೆಸರಲ್ಲಿ ಮೀಸಲಾತಿಯನ್ನು ಪಡೆಯುವುದರಿಂದ ನಮಗೆ ತುಂಬಾ ಅನ್ಯಾಯವಾಗಿದೆ. ಶ್ರೀ ಮಹರ್ಷಿ ವಾಲ್ಮೀಕಿ ಮಠ ರಾಜನಹಳ್ಳಿಯಿಂದಲೂ ಸಹ ಸಾಕಷ್ಟು ಅನ್ಯಾಯವಾಗಿರುತ್ತದೆ. ವಾಲ್ಮೀಕಿ ಮಠವನ್ನು ಮ್ಯಾಸ ನಾಯಕ ಬುಡಕಟ್ಟಿಗೆ ಸೇರಿದ ಮಾಜಿ ಮಂತ್ರಿಗಳಾದ ದಿ.ತಿಪ್ಪೇಸ್ವಾಮಿ ಚಳ್ಳಕೆರೆಯವರು ಮತ್ತು ಇತರೆ ಮ್ಯಾಸ ನಾಯಕ ಮುಖಂಡರು ಸ್ಥಾಪನೆ ಮಾಡಿರುತ್ತಾರೆ.

ಆದರೆ 2014 ರಲ್ಲಿ ಬುಡಕಟ್ಟು ಸಂಶೋಧನ ಸಂಸ್ಥೆ ಮೈಸೂರು ರವರು ಸರ್ಕಾರಕ್ಕೆ ನೀಡಿರುವ ವರದಿಯಲ್ಲಿ ವಾಲ್ಮೀಕಿ ಮಠವನ್ನು ತಳವಾರ ಪರಿವಾರದವರು ಸ್ಥಾಪನೆ ಮಾಡಿಕೊಂಡಿದ್ದಾರೆ ಎಂದು ಬರೆಯಿಸಿ ಮ್ಯಾಸ ನಾಯಕರಿಗೆ ವಂಚನೆ ಮಾಡಿರುತ್ತಾರೆ. ಈಗಾಗಲೇ ಇರುವ ಮಹರ್ಷಿ ವಾಲ್ಮೀಕಿ ಅಭಿವೃದ್ದಿ ನಿಗಮದಿಂದ ನಮಗೆ ಯಾವುದೇ ರೀತಿಯ ಅನುಕೂಲವಿಲ್ಲ.

ಆದ್ದರಿಂದ ಕರ್ನಾಟಕ ಆಂದ್ರ ಗಡಿ ಭಾಗದಲ್ಲಿರುವ ನಾಯಕ ಪಂಗಡದ ಮ್ಯಾಸ ಬೇಡ ಬುಡಕಟ್ಟು ಜನಾಂಗದ ಅಳಿವು ಉಳಿವು ನಿಮ್ಮ ಕೈಯಲ್ಲಿ ಇದೆ. ರಾಜಕೀಯ ಮುಖಂಡರ ಇಚ್ಛಾಶಕ್ತಿಯ ಕೊರೆತೆಯಿಂದಾಗಿ ಇಂದು ಈ ಸಮುದಾಯ ಜ್ವಾಲಂತ ಸಮಸ್ಯೆಗಳ ಸುಳಿಯಲ್ಲಿ ಸಿಲುಕಿದೆ.

ಮುಗ್ದ ಸಾಮಾನ್ಯ ಮ್ಯಾಸ ಬೇಡ ಬುಡಕಟ್ಟು ಜನರ ಉಳಿವಿಗಾಗಿ ಮತ್ತು ಅಭಿವೃದ್ದಿಗಾಗಿ ತಮ್ಮ ಅಧಿಕಾರ ಅವಧಿಯಲ್ಲಿ “ಕರ್ನಾಟಕ ರಾಜ್ಯ ಮಹರ್ಷಿ ವಾಲ್ಮೀಕಿ ಮ್ಯಾಸ ಬೇಡರ ಅಭಿವೃಧ್ದಿ ನಿಗಮ” ಸ್ಥಾಪನೆ ಮಾಡಿ ಪ್ರತ್ಯೇಕ ಅನುದಾನವನ್ನು ಮೀಸಲಿಡುವುದರ ಮೂಲಕ ಸಂವಿಧಾನ ಬದ್ದ ನಮ್ಮ ಹಕ್ಕುಗಳು ಮತ್ತು ಸೌಲಭ್ಯಗಳು ನಮಗೆ ಸಿಗುವಂತೆ ಮಾಡಿ ನಮಗೆ ನ್ಯಾಯ ಒದಗಿಸಿಕೊಡಬೇಕೆಂದು ಈ ಮೂಲಕ ತಮ್ಮಲ್ಲಿ ಮನವಿ ಮಾಡಿಕೊಳ್ಳುತ್ತೇವೆ.

ಈ ಸಂದರ್ಭದಲ್ಲಿ ಸಮಿತಿಯ ಅಧ್ಯಕ್ಷರಾದ ಡಾ.ಗೆರೆಗಲ್‌ ಪಾಪಯ್ಯ, ಕಾರ್ಯದರ್ಶಿ ದೊಡ್ಡಮನಿ ಪ್ರಸಾದ್‌, ಡಾ. ಓಬಳೇಶ್, ಮಂಜುನಾಥ್ ಗೋಣಿವಾಡ, ಪ್ರಕಾಶ್ ಹಾಗೂ ಸದಸ್ಯರು ಭಾಗವಹಿಸಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ದುರ್ಗಾಂಬಿಕಾದೇವಿ ಜಾತ್ರೆ ; ಭಕ್ತಾದಿಗಳಿಗೆ ಶೌಚಾಲಯ ವ್ಯವಸ್ಥೆ

Published

on

ಸುದ್ದಿದಿನ,ದಾವಣಗೆರೆ:ಫೆಬ್ರವರಿ 23 ರಿಂದ 27 ರವರೆಗೆ ನಡೆಯುವ ದುರ್ಗಾಂಬಿಕಾದೇವಿ ಜಾತ್ರೆ ಪ್ರಯಕ್ತ ದೇವಾಲಯಕ್ಕೆ ಆಗಮಿಸುವ ಭಕ್ತಾಧಿಗಳಿಗೆ ಶೌಚಾಲಯಗಳ ವ್ಯವಸ್ಥೆ ಕಲ್ಪಿಸಲಾಗಿದೆ.

ದೊಡ್ಡಪೇಟೆಯ ನಾಮದೇವ ಸಿಂಪಿ ಕಲ್ಯಾಣ ಮಂಟಪ, ವಿರಕ್ತಮಠ ಮತ್ತು ನಗರ ಕುಟುಂಬ ಕಲ್ಯಾಣ ಕೇಂದ್ರ-1, ಎಸ್.ಕೆ.ಪಿ ರಸ್ತೆಯ ಎಸ್.ವಿ.ಎಸ್.ಶಾಲೆ ಮತ್ತು ಕನ್ನಿಕಾಪರಮೇಶ್ವರಿ ದೇವಸ್ಥಾನ ಸಂಘ, ಮಾರ್ಕಂಡೇಶ್ವರ ಕಲ್ಯಾಣ ಮಂಟಪ, ಈ ಸ್ಥಳಗಳಲ್ಲಿರುವ ಶೌಚಾಲಯಗಳನ್ನು ಉಪಯೋಗಿಸುವ ಮೂಲಕ ದೇವಾಲಯದ ಸುತ್ತಮುತ್ತಲಿನ ಆವರಣವನ್ನು ಸ್ವಚ್ಚವಾಗಿಡಲು ಸಹಕರಿಸಬೇಕೆಂದು ಪಾಲಿಕೆ ಆಯುಕ್ತರು ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಮಾಜಿ ದೇವದಾಸಿ ಮಹಿಳೆಯರ ಮರು ಸಮೀಕ್ಷೆ : ಆಕ್ಷೇಪಣೆಗಳಿಗೆ ಅರ್ಜಿ ಆಹ್ವಾನ

Published

on

ಸುದ್ದಿದಿನ,ದಾವಣಗೆರೆ : ಮಾಜಿ ದೇವದಾಸಿ ಮಹಿಳೆಯರ ಮರು ಸಮೀಕ್ಷೆ -2025ಕ್ಕೆ ಸಂಬಂಧಿಸಿದಂತೆ ಜಿಲ್ಲಾ ಮಟ್ಟದ ಮೇಲ್ವಿಚಾರಣೆ ಮತ್ತು ಮೌಲ್ಯಮಾಪನಗಳಿಗೆ ಆಕ್ಷೇಪಣೆ, ತಕರಾರು ಸಲ್ಲಿಸಲು ಅರ್ಜಿ ಆಹ್ವಾನಿಸಲಾಗಿದೆ.

ತಿರಸ್ಕೃತಗೊಂಡ ಅರ್ಜಿಗಳ ಅಭ್ಯರ್ಥಿಗಳ ಆಕ್ಷೇಪಣೆಗಳಿದ್ದಲ್ಲಿ, ಮಾರ್ಚ್ 13 ರೊಳಗೆ ನಿಗದಿಪಡಿಸಿದ ದಿನಾಂಕದೊಳಗಾಗಿ ಪೂರಕ ದಾಖಲಾತಿಗಳನ್ನು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಗೆ ಸಲ್ಲಿಸಬೇಕೆಂದು ಜಿಲ್ಲಾಧಿಕಾರಿ ಗಂಗಾರ‍್ವಾಮಿ.ಜಿ.ಎಂ.ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಉದ್ಯೋಗಿಗಳಿಗೆ ಗೂಗಲ್ ಶಾಕ್..! AI ಕಲಿಯದಿದ್ದರೆ ಉದ್ಯೋಗ ತೊರೆಯಿರಿ

Published

on

ಸುದ್ದಿದಿನ,ಬೆಂಗಳೂರು: ಜಗತ್ತಿನ ಟೆಕ್ ದೈತ್ಯ ಕಂಪನಿ ಗೂಗಲ್ ತನ್ನ ಉದ್ಯೋಗಿಗಳಿಗೆ ಶಾಕ್ ನೀಡಿದೆ. AI ಕಲಿಯದಿದ್ದರೆ ಉದ್ಯೋಗ ತೊರೆಯುವಂತೆ ಸೂಚಿಸಿದ್ದು, ‘ವಾಲಂಟರಿ ಎಕ್ಸಿಟ್ ಪ್ರೋಗ್ರಾಮ್’ (VEP) ಘೋಷಿಸಿದೆ.

ವಾಲಂಟರಿ ಎಕ್ಸಿಟ್ ಪ್ರೋಗ್ರಾಮ್’ (VEP)

AI ಕಲಿಯುವುದು ಅನಿವಾರ್ಯ: ಗೂಗಲ್ ಈಗ ಸಂಪೂರ್ಣವಾಗಿ ‘AI ಫಸ್ಟ್’ ಕಂಪನಿಯಾಗಿ ರೂಪಾಂತರಗೊಳ್ಳುತ್ತಿದೆ. ತಂತ್ರಜ್ಞಾನದ ವೇಗಕ್ಕೆ ಹೊಂದಿಕೊಳ್ಳಲು ಸಾಧ್ಯವಾಗದ ಅಥವಾ AI ಕಲಿಯಲು ಆಸಕ್ತಿ ಇಲ್ಲದ ಉದ್ಯೋಗಿಗಳಿಗೆ ಗೌರವಯುತವಾಗಿ ಉದ್ಯೋಗ ತೊರೆಯಲು ‘ವಾಲಂಟರಿ ಎಕ್ಸಿಟ್ ಪ್ರೋಗ್ರಾಮ್’ (VEP) ಯನ್ನು ಜಾರಿಗೊಳಿಸಿದೆ.

ಯಾರಿಗೆ ಅನ್ವಯಿಸುತ್ತದೆ?: ಇದು ಮುಖ್ಯವಾಗಿ ಗೂಗಲ್‌ನ ಗ್ಲೋಬಲ್ ಬಿಸಿನೆಸ್ ಆರ್ಗನೈಸೇಷನ್ (GBO) ವಿಭಾಗದ ಉದ್ಯೋಗಿಗಳಿಗೆ (ಸೇಲ್ಸ್, ಕಾರ್ಪೊರೇಟ್ ಡೆವಲಪ್ಮೆಂಟ್ ಮತ್ತು ಸೊಲ್ಯೂಷನ್ಸ್ ಟೀಮ್) ಗೆ ಅನ್ವಯಿಸುತ್ತದೆ. ಆದರೆ, ಗ್ರಾಹಕರೊಂದಿಗೆ ನೇರ ಸಂಪರ್ಕ ಹೊಂದಿರುವ ತಂಡಗಳಿಗೆ ಇದರಿಂದ ವಿನಾಯಿತಿ ನೀಡಲಾಗಿದೆ.

ಇದು ಲೇ-ಆಫ್ ಅಲ್ಲ: ಇದು ಕಡ್ಡಾಯವಾಗಿ ಕೆಲಸದಿಂದ ತೆಗೆದುಹಾಕುವ ಪ್ರಕ್ರಿಯೆಯಲ್ಲ. ಬದಲಾಗಿ, ಸ್ವತಃ ಹೊರಹೋಗಲು ಬಯಸುವ ಉದ್ಯೋಗಿಗಳಿಗೆ ಉತ್ತಮ ಪರಿಹಾರ ಧನ (Severance Package) ಮತ್ತು ಇತರ ಸೌಲಭ್ಯಗಳನ್ನು ನೀಡಿ ಕಳುಹಿಸಿಕೊಡುವ ಯೋಜನೆಯಾಗಿದೆ.

ಕಾರಣವೇನು?: ತಂತ್ರಜ್ಞಾನ ಅತ್ಯಂತ ವೇಗವಾಗಿ ಬದಲಾಗುತ್ತಿದ್ದು, ಕಂಪನಿಗೆ AI ಮಿಷನ್‌ಗೆ ಸಂಪೂರ್ಣವಾಗಿ ಹೊಂದಿಕೊಳ್ಳುವ ಮತ್ತು ಕ್ರಿಯಾತ್ಮಕವಾಗಿ ಕೆಲಸ ಮಾಡುವ ಕಾರ್ಯಪಡೆಯ ಅಗತ್ಯವಿದೆ ಎಂದು ಗೂಗಲ್‌ನ ಚೀಫ್ ಬಿಸಿನೆಸ್ ಆಫೀಸರ್ ಫಿಲಿಪ್ ಶೆಡ್ಲರ್ ತಿಳಿಸಿದ್ದಾರೆ.

ಭವಿಷ್ಯದ ಮುನ್ಸೂಚನೆ: ಅಮೆಜಾನ್, ಮೆಟಾ ಮತ್ತು ಮೈಕ್ರೋಸಾಫ್ಟ್‌ನಂತಹ ಇತರ ಟೆಕ್ ದೈತ್ಯ ಕಂಪನಿಗಳು ಕೂಡ ಇದೇ ಹಾದಿಯಲ್ಲಿ ಸಾಗುವ ಸಾಧ್ಯತೆ ಇದೆ. 2026ರಲ್ಲಿ ಈ ನಾಲ್ಕು ಕಂಪನಿಗಳು AI ತಂತ್ರಜ್ಞಾನಕ್ಕಾಗಿ ಸುಮಾರು 58.92 ಲಕ್ಷ ಕೋಟಿ ರೂಪಾಯಿ ಹೂಡಿಕೆ ಮಾಡುವ ಅಂದಾಜಿದೆ.

ಒಟ್ಟಾರೆಯಾಗಿ, ಭವಿಷ್ಯದ ಉದ್ಯೋಗ ಮಾರುಕಟ್ಟೆಯಲ್ಲಿ AI ಕೌಶಲ್ಯ ಅತ್ಯಂತ ಅನಿವಾರ್ಯ ಎಂಬ ಎಚ್ಚರಿಕೆಯ ಸಂದೇಶವನ್ನು ಗೂಗಲ್ ಈ ಮೂಲಕ ನೀಡಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending