ಭಾವ ಭೈರಾಗಿ
ಕವಿತೆ | ಇತಿ ನಿನ್ನ ಬೆಂಗಳೂರು

- ದುನಿಯಾ ಸೂರಿ, ಚಿತ್ರ ನಿರ್ದೇಶಕ
ತರಕಾರಿ ಗಾಡಿಯ ಮೇಲೆ
6 1/2 ವರ್ಷದ ಕೂಸು, ಬೆಳಗಿನ ಜಾವ
ಕತ್ತಲೆಯನ್ನು ನುಂಗುವಾಗ,
ಎಷ್ಟು ಮುಷ್ಟಿ ಬಿಗಿ ಹಿಡಿದರೂ ಮೈಯೆಲ್ಲಾ ಚಳಿ.
ಬೆಳಗಿನ ಮೂರುವರೆ ಸಮಯ
ಎದ್ದು ಕೂತಾಗ, ಕಿವಿಗೆ ನುಗ್ಗಿದ ಗಾಳಿಗೆ
ದೂರದಲ್ಲಿ ಬರುವ ದೀಪಗಳು ಮಬ್ಬು ಮಬ್ಬು
ಇದು ಕನಸೋ ಎಚ್ಚರವೋ ಗೊತ್ತಿಲ್ಲ.
ಅಪ್ಪಗಾಡಿ ತಳ್ಳುವಾಗ ನಾನು ಪ್ರಯತ್ನ ಪಡದೇ
ಮುನ್ನಡೆದಂತೆ ಏನೋ ಹಗುರ
ಇವತ್ತಿಗೂ ಆ ಅನುಭವಕ್ಕೆ ಹೆಸರಿಟ್ಟು
ಹೀಗೆ ಎಂದು ವಿವರಿಸಲು ಇನ್ನೊಂದು
ಅದೇ ರೀತಿಯ ಅನುಭವ ಇಲ್ಲ
ಹಾಗೇ ಈ ನಗರವನ್ನು ನನ್ನ ದೃಷ್ಟಿಕೋನದಿಂದ
ನೋಡುತ್ತಿದ್ದೇನೆ… ನಿರಂತರವಾಗಿ
ಅದೇ ಅದೇ ರಸ್ತೆಗಳು ಸೋತು ಕೂತು
ಗೆದ್ದು ಕಾರಿನಲ್ಲಿ ಅಲೆಯುವಾಗ
ಮತ್ತೆ ಮತ್ತೆ ನೆನಪಾಗುವ ನನ್ನೊಳಗಿನ
ನೆನಪುಗಳು, ಆ ನೆನಪುಗಳನ್ನೇ
ಮತ್ತೆ ಮತ್ತೆ ಸಿನೆಮಾ ಮಾಡುತ್ತೇನೆ
ಇದು ಮಾತ್ರ ಕ್ಷಣ ಕ್ಷಣದ ಮಧ್ಯೆ ಇರುವ
ಖಾಲಿತನ, ಇನ್ನೊಂದು ಶುರುವಾಗುವ
ಮೊದಲು ಇದ್ದ ಸೈಲೆನ್ಸ್,
ನಗರ ಎಂದರೆ ನನ್ನ ದೇಹ ಎಚ್ಚರವಾಗಿ
ಆಕಾಶ ನೋಡಿ ಭೂಮಿಯ ಮೇಲೆ ಕಾಲಿಟ್ಟು
ಸಂಜೆ ಕತ್ತಲಿಗೆ ಬೆಂಕಿ ಬೆಳಕಾಗಿ ಮಲಗಿ,
ಮತ್ತೆ ಎಚ್ಚರ ಬೇರೊಂದು ನಗರ
ನೆನಪುಗಳು ಪೋಟೋ ರೀತಿ
ವಿಡಿಯೋ ರೀತಿ ನೆನಪಾಗುವುದು.
ಅಲ್ಲೆಲ್ಲಾ ಭೂಮಿ-ಭಾನು ಇದ್ದಲ್ಲೆಲ್ಲಾನಗರ-ರಸ್ತೆ.
ನಮ್ಮ ಯೋಚನೆಯಲ್ಲಿ ಬರುವ ಎಲ್ಲಾ
ನೆನಪಿನಲ್ಲೂ ನಗರ ರಸ್ತೆ, ಊರು,
ನಿನಗೊಂದು ಹೆಸರಿಟ್ಟರೆ ಅದು ನೀನು ಬೆಂಗಳೂರು.
ನೀನು ನಿನ್ನ ನಗು ಇರೋ ಕಡೆ,
ಸಾವು ಬರಲ್ಲ ಅಕಸ್ಮಾತ್ ಸಾವು
ಬಂದರೂ, ಒಂದು ಕ್ಷಣ ನಿನ್ನ ನೋಡುತಾ…
ಬಂದ ಕೆಲಸ ಮರೆಯುವಂತೆ,
ಸದಾ ನಗು ಜೀವಂತವಾಗಿ ರಾಕ್ಷಸಿ.
ಸದಾ ನಿರಂತರವಾಗಿ,
ಇತಿ ನಿನ್ನ ಬೆಂಗಳೂರು
-ಸೂರಿ
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂಕಣ
ಕವಿತೆ | ಮೌನಾಮೃತ

~ ತಾರಾ ಸಂತೋಷ್ ಮೇರವಾಡೆ (ಕಾವ್ಯಾಗ್ನಿ), ಗಂಗಾವತಿ
ಅದೆಷ್ಟೋ ಬಗೆಹರಿಯದ
ಸಮಸ್ಯೆಗಳಿಗೆ
ಮೌನಾಮೃತವ
ಸಿಂಪಡಿಸಿ ಸುಮ್ಮನಾಗಿಬಿಡು.
ಅರ್ಥವಿರದ
ವ್ಯರ್ಥ ವಾಗ್ವಾದಗಳಿಗೆ
ಮೌನದ ಪೂರ್ಣವಿರಾಮವನಿಟ್ಟು
ಹೊರಟುಬಿಡು.
ಮಾತಾಡಿ
ಕಿರುಚಾಡಿ
ರಮಟರಾಡಿ ಮಾಡುವ ಬದಲು
ಒಂದರೆಗಳಿಗೆ
ಮೌನದ ಮೊರೆಹೋಗಿ ನೋಡು.
ಅದೆಷ್ಟೋ ಮುಗಿಯದ
ಮನದ ತೊಳಲಾಟಗಳಿಗೆ
ಮೌನವೆಂಬ ಉತ್ತರವುಂಟು
ಅದನ್ನಪ್ಪಿ ಮನಕ್ಕೊಂದಿಷ್ಟು
ಶಾಂತಿಯ ನೀಡಿ ನಕ್ಕುಬಿಡು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂಕಣ
ಕವಿತೆ | ಅವ ಸುಡುತ್ತಾನೆ

~ ಶೃತಿ ಮಧುಸೂದನ (ರುದ್ರಾಗ್ನಿ)
ಅವ ಸುಡುತ್ತಾನೆ…
ಅವ ಸಂಪ್ರದಾದಯವ
ಸೆರಗ ನನಗುಡಿಸಿ
ನಗುತ್ತಾನೆ…
ಅವ ಅತ್ತಿಂದತ್ತ
ಅಲೆದಾಡುವ
ಮುಂಗುರುಳ
ಮುದ್ದಿಸಿ ಮಡಿ
ಮಡಿಕೆಯ ನಿವಾಳಿಸಿ
ನಿಟ್ಟುಸಿರ ಬಿಟ್ಟ
ಬಸವನಂತೆ…
ನೆತ್ತಿ ಮೇಲಣ
ಮದ್ದೇರಿ ಮೆರೆವ
ಮುದ್ದಣನ
ಕರಿಯಂತೆ…
ಕಣ್ಣು ಕುಕ್ಕುವ
ಕೊರತೆಗಳ
ಬದಿಗಿಟ್ಟು
ಬೈತಲೆಯ
ಬಿಂದಿಯ
ಬೆವರೊಳಗಣ
ಕಾವ್ಯ ಕುಂಕುಮದಂತೆ…
ಅವ… ಅವ ಕವಿ
ಎಂಬುವ ಕಾಡಿಗೆಗೆ
ತನ್ನ ಕಪ್ಪೆಂದುಕೊಂಡು
ನನ್ನಿಂದ ದೂರ ಸರಿದವ…
ಹಾಲ್ಬೆಳಕ
ಹಠವಾದಿ
ಹೆಣ್ಣಿನ ಮುಂದೆ
ಹಮ್ಮು ಬಿಟ್ಟು
ಹಿಂದಿರುಗುವ
ಇರಾದೆ ಇಲ್ಲದೇ
ನಡೆದು ಹೋದವ…
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂಕಣ
ಅನ್ನಕ್ಕೆ ಯಾವ ಧರ್ಮ..? ಮತ್ತು ಇತರೆ ಕವಿತೆಗಳು

~ವಿಜಯ್ ನವಿಲೇಹಾಳು
ನನ್ನ ಮನವ, ಹಸಿದ ತೋಳಗಳಂತೆ ಕಿತ್ತು ತಿಂದು ಅದೆಷ್ಟೋ ದಿನಗಳಿಂದ ಎದೆನಡುಗಿಸುತ್ತ ರಣಕೇಕೆ ಹಾಕುತ್ತಿರುವ ನೋವಿನ ಪದಗಳನು ಜೋಡಿಸುತ್ತಿರುವೆ ಅಷ್ಟೇ
ಮಾರಮ್ಮನ ಜಾತ್ರೆಯ ಪ್ರಸಾದ,
ಮೊಹರಮ್ ನ ಚೋಂಗಿ ಕೂಡಿ ಉಂಡು
ಅಡುಗೆ ರುಚಿಯೂ; ಮಾಯಾ ದೀವಿಗೆಯನು
ತಿಕ್ಕಿದಾಗ ಬರುವ ಜೀನಿಯಂತೆ ಅದ್ಭುತ ವಾಗಿತ್ತು
ಪಂಕ್ತಿಯಲ್ಲಿ ಹಿಂದುವೋ, ಮುಸಲ್ಮಾನನೋ, ಕ್ರಿಶ್ಚಿಯನ್ನನೋ, ಯಾರಾದರೇನು? ಅನ್ನಕ್ಕೆ ಯಾವ ಧರ್ಮ ?
ಈಗ ಅಲ್ಲೆಲ್ಲೊ ಯಾರೋ ಕೆಲವರು ಜಾತಿ ಧರ್ಮದ ವಿಷವನು ಹನಿ ಹನಿ ಉಣಬಡಿಸಿ ಊರಿಗೂರಿಗೆ ದ್ವೇಷದ ನಶೆಯೇರಿಸಿದ್ದಾರೆ
ಈಗೀಗ ಅವರ ಹಸಿವು ನೀಗುತ್ತಿರುವುದು ಕ್ರೌರ್ಯದ ಕತ್ತಿಯಿಂದ ಜಿನಿಗುತ್ತಿರುವ ರಕ್ತದಿಂದ
ನಾನೆಂದು ಕವಿತೆ ಬರೆದವನಲ್ಲ ಎದೆಯೊಳಗಿನ ನೋವಿನ ಪದಗಳನು ಜೋಡಿಸುತ್ತಿರುವೆ ಅಷ್ಟೇ.
ಇತರೆ ಕವಿತೆಗಳು
೧..
ಅವಳ ಮಾತುಗಳು ಅಲ್ಪ ಪ್ರಾಣಗಳಂತೆ
ಕಿವಿಗಳಿಗೆ ನಾಟುತ್ತವೆ
ಅವಳ ಮೌನ ಮಹಾ ಪ್ರಾಣಗಳಂತೆ
ಸೀದ ಹೃದಯಕ್ಕೆ ಅಪ್ಪಳಿಸುತ್ತವೆ
ಅವಳ ಮಾತು ಮತ್ತು ಮೌನದ ಕೊನೆಯಲಿ
ನಾನು ಅನುನಾಸಿಕದಂತೆ.
೨..
ಮಡಿವಂತಿಕೆಯೇ ಶ್ರೇಷ್ಟ ಮೈಲಿಗೆಯು ಅನಿಷ್ಟ ಅಂದುಕೊಂಡಿದ್ದರೆ ಊರಾಚೆಗಿನ ಕಲ್ಲು ಬಂಡೆ ವಿಗ್ರಹವಾಗುತ್ತಿರಲಿಲ್ಲ.
೩..
ಅವಳು ಅಣು ಅಣುವಾಗಿ ಹೃದಯದ
ಆಳವನು ಸೇರಿಕೊಂಡು ಬೇರು ಬಿಟ್ಟಳು
ಅವಳ ಒಲವಿನ ಆಕ್ರಮಣಕೆ
ನಾ ಮರುಮಾತುಗಳಾಡದೆ ಹೆಪ್ಪುಗಟ್ಟಿದೆ. (ಕವಿ:ವಿಜಯ್ ನವಿಲೇಹಾಳು)
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ5 days ago
ವಿವಿಧ ಮಾಧ್ಯಮ ಸಂಸ್ಥೆಗಳಲ್ಲಿ ಇಂಟರ್ನ್ಶಿಪ್ ಅವಕಾಶ : ಅರ್ಜಿ ಆಹ್ವಾನ
-
ದಿನದ ಸುದ್ದಿ2 days ago
ವಿವಿಧ ವರ್ಗಗಳ ಅಸಂಘಟಿತ ಕಾರ್ಮಿಕರಿಗೆ ಸ್ಮಾರ್ಟ್ ಕಾರ್ಡ್ ವಿತರೆಣೆ
-
ದಿನದ ಸುದ್ದಿ16 hours ago
500 ಪಡಿತರ ಚೀಟಿಗಳಿಗೆ ಒಂದು ಪಡಿತರ ಅಂಗಡಿ ತೆರೆಯಲು ಸರ್ಕಾರ ನಿರ್ಧಾರ
-
ದಿನದ ಸುದ್ದಿ2 days ago
ಪಿಹೆಚ್ಡಿ ವ್ಯಾಸಂಗ ಮಾಡುತ್ತಿರುವ ಅಲ್ಪಸಂಖ್ಯಾತರಿಗೆ ವಿದ್ಯಾರ್ಥಿವೇತನ : ಅರ್ಜಿ ಆಹ್ವಾನ
-
ದಿನದ ಸುದ್ದಿ2 days ago
ಜುಲೈ 12 ರಂದು ರಾಷ್ಟ್ರೀಯ ಲೋಕ್ ಅದಾಲತ್
-
ದಿನದ ಸುದ್ದಿ17 hours ago
ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಲ್ಲಿ ಮೂಲ ಸೌಲಭ್ಯಗಳ ಕೊರತೆ : ಕರವೇ ಮನವಿ
-
ದಿನದ ಸುದ್ದಿ24 hours ago
ದತ್ತಾಂಶ ನಿರ್ವಾಹಕ ಗ್ರೇಡ್ ಎ ಪರೀಕ್ಷೆಗೆ ಅರ್ಜಿ ಆಹ್ವಾನ
-
ದಿನದ ಸುದ್ದಿ1 day ago
ಉದ್ಯೋಗ | ಜುಲೈ 15 ರಂದದು ನೇರ ಸಂದರ್ಶನ