ಭಾವ ಭೈರಾಗಿ
ಕವಿತೆ | ಕಿರಿಯ ಕವಿಗೆ ೧ – ೨

- ಕೆ.ಎಸ್. ನರಸಿಂಹ ಸ್ವಾಮಿ
೧
ಅನುಭವವೆ ನೆನಪಾಗಿ ಹೆಪ್ಪುಗಟ್ಟುವ ತನಕ
ನೀನು ಕವಿತೆಗೆ ಕೈಯ ಹಾಕಬೇಡ;
ಮಳೆಯಿರದ ಮೋಡಗಳ ಚೆಲುವ ವರ್ಣಿಸಬೇಡ,
ಇಲ್ಲದುದ ಇಹುದೆಂದು ಹಾಡಬೇಡ.
ಬೆಟ್ಟಗಳ ಹತ್ತಿ ಬಾ, ನದಿಗಳನು ದಾಟಿ ಬಾ
ಆಗುವಾಯಾಸಕ್ಕೆ ಹೆದರಬೇಡ;
ಅಗ್ಗಿಷ್ಟಿಕೆಯ ಕೆಂಡ ಹೊತ್ತಿಕೊಳ್ಳುವ ತನಕ
ಒಲೆಯ ಮೇಗಡೆ ಪಾತ್ರೆ ಇರಿಸಬೇಡ.
ಎಲೆ ಮರೆಯ ಕೋಗಿಲೆಯ ಹಾಡು ಕೇಳುತ ನಿಂತ ನೀನದನು ವರ್ಣಿಸಲು ತೊಡಗಬೇಡ;
ಚಿಂತಾಗ್ನಿಯಲ್ಲಿ ಚಿನ್ನ ಕರಗುವುದ ಕಂಡಿಹೆಯ?-
ಭಾಷೆ ಒದಗಲಿ, ಹೊಳಪು ಕಂಡುಬರಲಿ.
ಭಾವಗೀತೆಯಲಿ ಸಂಕೀರ್ಣತೆಯನಳವಡಿಸು,
ಬೆಂಕಿ ಕಲ್ಮಷಗಳನು ಸುಟ್ಟುಬಿಡಲಿ;
ಹಸೆಯ ಮೇಲಿನ ಹೆಣ್ಣು ಗಂಡುಗಳ ರೀತಿಯಲಿ
ಮಾತು ಮಾತಿನ ಜೊತೆಗೆ ಸೇರಿಕೊಳಲಿ.
ಒಂದೊಂದು ಪದ್ಯವೂ ಒಂದು ಮೆರವಣಿಗೆ ಕಣಾ,
ಅಂಕಗಣಿತದ ಹಾಗೆ ಹಾಕು ತಾಳ;
ಅರಿತವನು ಅಪ್ಪುವನು ಭಾವದೊಲುಮೆಯ ಹೆಣ್ಣ,
ಅರಿಯದವರಿಗೆ ಅದುವೆ ಬರಿಯ ಚಿತ್ರ!
ಹಸಿದ ಒಡಲಿಗೆ ಬೇಕು ಅನ್ನ, ಬರಿ ಹಾಡಲ್ಲ
ಬಾಯಾರಿಕೆಗೆ ಬೇಕು ತಂಪು ನೀರು;
ಚಳಿಗಾಲ ಕಳೆಯುತ್ತ ಜೀವ ನಡೆದಿದೆ ಮುಂದೆ,
ಒಂದು ಶಾಲೇ ಅದರ ಚಳಿಗೆ ಸಾಕು.
ಮಾತಿಗೂ ಮೌನಕೂ ಇರುವ ಅಂತರದಲ್ಲಿ
ಮೂಡುವುದು ಬಾನಾಡಿಯಳತೆ ಭಾವ;
ನೊಂದ ಬದುಕಿಗೆ ಬೇಕು ಸಾವಿರ ಸಮಾಧಾನ,
ಅದರ ಜೊತೆಗೂ ಬರಲಿ ನಿನ್ನ ಕವನ!
ನಿನ್ನಹಂಕಾರಕ್ಕು ಒಂದು ಮಿತಿಯಿರಬೇಕು,
ಸ್ಥಿತಿಗತಿಗಳಿರಬೇಕು ನಿನ್ನ ಕೃತಿಗೆ;
ಕವನವೇ ಒಂದು ನಂದಾದೀಪ, ನುಡಿಯಲ್ಲಿ
ಮಾಡಲೇಬೇಕು ಆನಂದಲಹರಿ!
ಕೊಡು ಅದನು ಜನಕೆ, ಕೈಬಿಡು ವ್ಯರ್ಥ ಪದಗಳನು
ಕೇವಲ ಅಲಂಕಾರ ಕವಿತೆಯಲ್ಲ:
ಬರಿ ಮಾತ ಮಿಂಚುಗಳು ಬಂದು ಹೋಗಲಿ, ಬಳಿಕ
ನಿನ್ನ ಬದಕೇ ಒಂದು ಹಾಡಾಗಲಿ!
ಕವಿತೆ | ಕಿರಿಯ ಕವಿಗೆ – ೨
ಒಂದೆರಡು ಹೂಗಳನು ಗಿಡದ ಮೇಲೆಯೆ ಬಿಟ್ಟು
ಉಳಿದವನು ಕಿತ್ತುಕೋ ಎನುವೆ ನಾನು;
ಎಲ್ಲವೂ ಅರ್ಥವಾಯಿತು ಎಂದು ಹೇಳದಿರು,
ಕವಿತೆಗಸ್ಪಷ್ಟತೆಯು ಒಂದು ಚೆಲುವು.
ನೀನು ಹುಟ್ಟುವ ಮುನ್ನ ಲೋಕ ಹೇಗಿತ್ತೆಂದು
ಹೇಗೆ ಹೇಳಲಿ ನಾನು, ಅರಿಯದವನು;
ಇಲ್ಲಿ ಯಾವುದು ಪೂರ್ತಿ, ಯಾವುದರೆ ಗೊತ್ತಿಲ್ಲ
ಅರಕೆಯಿಂದಲೆ ಕವಿತೆ ಹುಟ್ಟಬಹುದು.
ಅಷ್ಟಿಷ್ಟು ಲೋಪವಿಲ್ಲದ ಕೃತಿಯನೇ ಕಾಣೆ,
ಮುಖದ ಚೆಲುವಿಗೆ ಬೇಕು ಯಾವುದೊ ಕಲೆ;
ಮಿಂಚಿಗಾಸರೆ ಮುಗಿಲು, ಸೂರ್ಯಸಾರಥಿ ಹೆವಳ
ಬಿಸಿಲಲ್ಲೆ ಆಡುವನು ತುಂಟ ಹುಡುಗ.
ತಕ್ಕಡಿಯೆ ಏರುಪೇರಾಗುವುದು ಎನ್ನುವರು,
ಇನ್ನೊಂದರಲಿ ದೋಷ ಒಂದರ ಗುಣ;
ಯಾರು ಯಾರೋ ಕುಳಿತು ಕೊಟ್ಟ ತೀರ್ಪೆಂತಿರಲಿ,
ಕೃತಿಯ ಬೆಲೆಯೇ ಅಲ್ಲ ನೀಡಿದ ಹಣ.
ಶಾಸ್ತ್ರಗಾರರ ಬೀದಿಯಲ್ಲಿ ಓಡಾಡದಿರು,
ಶಾಸ್ತ್ರವನು ಮೀರುವುದು ಕವಿತೆಯ ಕಲೆ,
ಕವಿಹೃದಯ ಕಂಡುಕೊಳ್ಳುವುದು ಕವಿತೆಯ ಚೆಲುವು,
ನಿನ್ನ ತಲೆಯಲ್ಲಿಲ್ಲ ಕವನದ ಸೆಲೆ.
ಉಪಹಾರ ಮಂದಿರದ ಮೂಲೆ ಕುರ್ಚಿಗಳಲ್ಲಿ
ವಿಪರೀತ ಚರ್ಚೆಗಳು ನಡೆಯುತಿಹವು;
ಸಿಗರೇಟಿನ ಹೊಗೆಯಲ್ಲಿ ಎದ್ದು ಹೋಗುವ ಮಂದಿ
ಕವಿತೆಯ ವಿಮರ್ಶೆಯನು ಮಾಡುತಿಹರು!
(‘ಎದೆ ತುಂಬ ನಕ್ಷತ್ರ’ ಕವನ ಸಂಕಲನದಿಂದ ಆಯ್ದ ಕವಿತೆಗಳು)
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂಕಣ
ಕವಿತೆ | ಅವಳೀಗ ಕಾಯುವುದಿಲ್ಲ

- ಶಮೀಮ ಕುತ್ತಾರ್, ಮಂಗಳೂರು
ಬೆಳಕು ಬರಲೆಂದು
ಕಿಟಕಿಯನ್ನೊಂಚೂರು
ಸರಿಸಹೊರಟಿದ್ದಳು…
ಒಳಗಿನಿಂದಲೇ ಸರಪಳಿಗಳು
ಕೈಗಳ ಬಿಗಿದಾಗ
ಬೆಳಕಿಗಿಂತ ಬಿಡುಗಡೆಯೇ
ಸಾಕೆನಿಸಿತ್ತು.
ಬಯಕೆಗಳು ಶಾಪವಾದಾಗ
ಇರವನ್ನೂ ಮರೆಯಬೇಕವಳು
ಓದಿ ಮುಗಿಸಲಾಗದ
ಇತಿಹಾಸದ ಮೌನಗಳಲ್ಲಿ
ಅಹಲ್ಯೆ ಕಲ್ಲಾದಂತೆ.
ಬಲದ ಬಲೆಯಾಗಿ
ಬಗಲಲ್ಲಿ ಬೀಳುವಾಗ
ಮೋಹ ಮರೆತ ದ್ರೌಪದಿ
ಐವರ ಮಡದಿಯಾದಂತೆ.
ನೆನಪುಗಳ ವಿಲೇವಾರಿಯಲ್ಲಿ
ನೋವಿನ ಲೆಕ್ಕ ಕೇಳುವ
ಬದುಕ ವಹಿವಾಟುಗಳಲ್ಲಿ
ಅವಳಿಗಷ್ಟೇ ದಕ್ಕುವ ಉತ್ತರಗಳು.
ಹೆಣ್ಣು ಕ್ರಾಂತಿಯಾಗಲು
ಕಾರಣಗಳನ್ನು ಕಾಲವೇ ಸೃಷ್ಟಿಸಿತು..
ಯಾವ ದಿಕ್ಕಿನಿಂದ ಬೀಸಿದರೂ
ವಿಳಾಸದ ಹಂಗಿಲ್ಲದ ಗಾಳಿಯಂತೆ.
ಮುಹಬ್ಬತಿನಲ್ಲಿ ಮುಳುಗಿಸುವ
ಅವಳೊಲುಮೆಯ ಟಪಾಲನ್ನು
ಜತನದಿಂದ ಕಾಯಬೇಕಿತ್ತು
ಲೋಕ,
ಅರುಂಧತಿ ನಕ್ಷತ್ರದಂತೆ..
ಆದರೆ ಲೋಕದ ಕಣ್ಣಿಗೆ
ಅವಳು ಹೆಣ್ಣು…
ಹಾಗಾಗಿ ಈಗೀಗ ಅವಳು
ಇದ್ಯಾವುದನ್ನೂ ಕಾಯುವುದಿಲ್ಲ..
ಎದೆಗೆ ಬಿದ್ದ ಸಾವಿತ್ರಿಯ ಅಕ್ಷರಗಳು
ಕಾಲಾಂತದಲ್ಲಿ ಅವಳ
ಯೋಚನೆಗೆ ಉಸಿರಾದರೆ,
ಕಾಲ ಕಳೆದು ಕೂಡಿಸಿದ
ಅವಳ ಮಾತು-ಮೌನಗಳು
ಕಾಲಾತೀತವಾಗಿ ಬೆಳೆದು
ಕಿಟಕಿಯಲ್ಲಿ ಹುಡುಕಿದ ಬೆಳಕಿಗೆ
ಹೆಬ್ಬಾಗಿಲು ತೆರೆದುಕೊಂಡಿತು…(ಕವಯಿತ್ರಿ- ಶಮೀಮ ಕುತ್ತಾರ್
ಮಂಗಳೂರು)
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂಕಣ
ಕವಿತೆ | ಇಷ್ಟಂತೂ ಹೇಳಬಲ್ಲೆ..!

- ರಂಗಮ್ಮ ಹೊದೇಕಲ್, ತುಮಕೂರು
ನಾವು
ಗುಡಿಸಲಿನಲ್ಲಿ ಹುಟ್ಟಿ
ಅವ್ವನೆದೆಯ ಹಾಲು ಕುಡಿದು
ಗೋಣಿತಾಟಿನ ಮೇಲೆ ಮಲಗಿ
ನಕ್ಷತ್ರ ಎಣಿಸಿದವರು!
ಚೀಕಲು ರಾಗಿಯ ಅಂಬಲಿ ಕುಡಿದು
ತಂಗಳು ಹಿಟ್ಟಿಗೆ ಉಪ್ಪು ಸವರಿ
ಹಸಿವ ನೀಗಿಸಿಕೊಂಡವರು
ದಾಹಕ್ಕೆ ಕಣ್ಣೀರನ್ನೇ ಕುಡಿದವರು!
ದಾಸಯ್ಯನಂತಹ ಅಪ್ಪ
ಭೂಮ್ತಾಯಿಯಂತಹ ಅವ್ವ
ಎದೆಗಿಳಿಸಿದ್ದು
ಅಕ್ಷರ ಮತ್ತು ಅಂತಃಕರಣ!
ಯಾರು ಯಾರೋ ಕೊಟ್ಟ
ಹರಿದ ಚೀಲ,ಮುರುಕು ಸ್ಲೇಟು
ತುಂಡು ಬಳಪ,ಬಳಸಿ ಎಸೆದ ಬಟ್ಟೆ
ನಮ್ಮ ಪ್ರಿಯವಾದ ಆಸ್ತಿಗಳು!
ಬುಡ್ಡಿದೀಪದ ಬೆಳಕಿನಲ್ಲಿ
ಅಕ್ಷರಗಳ ಜೊತೆ ಆಡಿದ ನಾವು
ಯಾರದೋ ಸಂಭ್ರಮದಲ್ಲಿ
ಉಳಿದ ಅನ್ನಕ್ಕೆ ಕಾದಿದ್ದು
ಇನ್ನೂ ಹಸಿಯಾಗಿದೆ!
ಯಾರದೋ ಜಮೀನಿಗೆ
ಬೆವರು ಬಸಿದ
ಅಪ್ಪ ಅವ್ವ
ಅರ್ಧ ಉಂಡು ಕಣ್ಣೀರಾದದ್ದೂ
ನೆನಪಿದೆ!
ಅಂದೂ ನಾವು
ಶಾಪವಾಗಲಿಲ್ಲ
ಕೇಡನ್ನೂ ಹಾಡಲಿಲ್ಲ!
ಉಪ್ಪಿಟ್ಟಿನಿಂದ ಅನ್ನಕ್ಕೆ ಬದಲಾದ
ಈ ಯುಗದಲ್ಲಿಯೂ
ನೀವು ನಿಮಗೆ ಪರಂಪರೆಯಿಂದ ಬಂದಿರುವ ಆಸ್ತಿ,ಅಂತಸ್ತು
ಸೇವಕರು…ಇತ್ಯಾದಿತ್ಯಾದಿಗಳನ್ನು
ಪ್ರದರ್ಶಿಸುತ್ತಲೇ ಇದ್ದೀರಿ!
ಸಹ್ಯವಾಗದ ಅಸ್ತ್ರಗಳನ್ನೇ
ನೀವು ಮಸೆಯುವಾಗ
ನಿಮ್ಮ ಅಜ್ಞಾನಕ್ಕೂ ನಮ್ಮ ಅನುಕಂಪವಿದೆ!
ನಾವು ಈ ನೆಲದ ಮಕ್ಕಳು
ಬೆಂಕಿಯೂ.ಬೆಳಕೂ ಆಗಬಲ್ಲ ಕಿಡಿಗಳು
ಭದ್ರ ಬೇರೂರಿ ಆಕಾಶಕ್ಕೆ ಚಿಮ್ಮಿ
ನಿಮ್ಮ ಕಣ್ಣಲ್ಲೂ ಮತಾಪು ಹೊತ್ತಿಸಬಲ್ಲವರು!! (ರಂಗಮ್ಮ ಹೊದೇಕಲ್, ತುಮಕೂರು)
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂಕಣ
ಕವಿತೆ | ಚಳಿಗಾಲದ ಎರಡು ಜೀವರಸಗಳು

- ಜಿ. ದೇವೂ ಮಾಕೊಂಡ
ನಮ್ಮಿಬ್ಬರ ಸಂಗಮಕ್ಕೆ ಈ ಚಳಿಗಾಲ
ಎಷ್ಟೊಂದು ನಿಶಬ್ದವಾಗಿ ಕರೆಯುತ್ತಿದೆ
ಒಂದು ಕಡೆ ಕಾಫಿಯ ಸ್ವಾಗತ
ಮತ್ತೊಂದು ಕಡೆ ಮುತ್ತಿನ ಸೆಳೆತ.
ಯಾವುದು ಆರಿಸಿಕೊಳ್ಳಲಿ
ಈ ನಿಶಬ್ಧ ಚಳಿಯಲಿ?
ಕಾಫಿಯ ಇಚ್ಚೆಯನ್ನೊ?
ಮುತ್ತಿನ ಬಿಸಿಯನ್ನೊ?
ಇಷ್ಟೊಂದು ಚಡಪಡಿಕೆಯಿರಬಾರದು
ಇಚ್ಚೆಯ ಸಂಚಯನಗಳಲ್ಲಿ!
ನಮ್ಮ ಆರಂಭದ ಭೇಟಿಗೆ,
ಒಂದರ ನೆನಪಿಗೆ ಇನ್ನೊಂದು
ಸುಂಕವಾಗಲಿ
‘ಬೈ ವನ್ ಗೆಟ್ ವನ್ ಫ್ರಿ’
ಚಳಿಗಾಲದ ಜಾಹಿರಾತು ಆಫರ್.
ಕೊನೆಗೊಂದು ದಿನ ಕುರುಹುಗಳಂತೆ ನೆನಪಿಸಿಕೊಳ್ಳೊಣ
ಇದು ಆರಂಭವೊ ಅಥವ
ಅಂತ್ಯವಾಗುವುದೊ?
ಯಾರಿಗ್ಗೊತ್ತು?
ಈ ಕಾಫಿ
ಈ ಮುತ್ತು
ಯುದ್ದೋನ್ಮಾದದ ಸಂಕೇತಗಳಾ?
ಅಥವ
ಕೊನೆಯ ಯುದ್ದದ
ಕರಾರುಗಳಾ?
ನೆನಪಿಗೆ ಒಂದೊಂದು ಸೆಲ್ಫಿ ಇರಲಿ
ಜೊತೆಗೊಂದಿಷ್ಟು ಭಿನ್ನ ನಗುವಿರಲಿ.. (ಕವಿ: ಜಿ.ದೇವೂ ಮಾಕೊಂಡ)
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ6 days ago
ಸುದ್ದಿದಿನ.ಕಾಂ ಫಲಶೃತಿ | ಕಬ್ಬಿಣ ಬಿಸಾಡಿ ಓಡಿ ಹೋದ ಶಾಸಕರ ಆಪ್ತರು ; ಗೇಟ್ ಗೆ ಡಿಕ್ಕಿ, ಕ್ಯಾಮರಾಗಳಲ್ಲಿ ಸೆರೆ
-
ದಿನದ ಸುದ್ದಿ6 days ago
ವಕ್ಫ್ ತಿದ್ದುಪಡಿ ಕಾಯ್ದೆ- 2025 | ಇಂದು ಸುಪ್ರೀಂ ವಿಚಾರಣೆ
-
ರಾಜಕೀಯ4 days ago
ಪರಿಶಿಷ್ಟ ಜಾತಿ ವಿದ್ಯಾರ್ಥಿಗಳ 6ನೇ ತರಗತಿ ಪ್ರವೇಶಕ್ಕಾಗಿ ಅರ್ಜಿ ಆಹ್ವಾನ
-
ದಿನದ ಸುದ್ದಿ4 days ago
ಚನ್ನಗಿರಿ | ಮುಸ್ಲಿಂ ಮಹಿಳೆ ಮೇಲೆ ಹಲ್ಲೆ ; ಕಾನೂನು ಮೂಲಕ ಪರಿಹಾರ ಕಂಡುಕೊಳ್ಳಿ : ಡಿವೈಎಸ್ಪಿ ಸ್ಯಾಮ್ ವರ್ಗೀಸ್ ಎಚ್ಚರಿಕೆ
-
ದಿನದ ಸುದ್ದಿ5 days ago
ಅಂಬೇಡ್ಕರ್ ಸ್ಮರಣೆಯಿಂದ ದೇಶ ಪ್ರಗತಿಪರವಾಗಲು ಸಾಧ್ಯ : ಸಹಾಯಕ ಪ್ರಾಧ್ಯಾಪಕ ಷಣ್ಮುಖಪ್ಪ ಕೆ.ಎಚ್
-
ದಿನದ ಸುದ್ದಿ6 days ago
ಚನ್ನಗಿರಿ | ಮುಸ್ಲಿಂ ಮಹಿಳೆ ಮೇಲೆ ಹಲ್ಲೆ ; ಆರು ಮಂದಿ ಬಂಧನ
-
ದಿನದ ಸುದ್ದಿ4 days ago
ದಾವಣಗೆರೆ | ಮೊಬೈಲ್ ಕ್ಯಾಟೀನ್ ; ಸಹಾಯಧನಕ್ಕಾಗಿ ಅರ್ಜಿ ಆಹ್ವಾನ
-
ದಿನದ ಸುದ್ದಿ4 days ago
ದಾವಣಗೆರೆ | ಪ್ರಾಂಶುಪಾಲರ ಹುದ್ದೆಗೆ ಅರ್ಜಿ ಆಹ್ವಾನ