ಭಾವ ಭೈರಾಗಿ
ಪುಸ್ತಕ ವಿಮರ್ಶೆ | ಒಡಲಬೇಗೆಯ ನಡುವೆ ಹೊಳೆವ ‘ಮಡಿಲ ನಕ್ಷತ್ರ’
- ಡಾ.ಎನ್.ಕೆ.ಪದ್ಮನಾಭ
ಕವಿತೆ ಎಂದರೆ ಹಾಗೆಯೇ. ಅದು ಮನಸ್ಸಿಗೆ ಹತ್ತಿರ. ಬುದ್ಧಿ-ಭಾವಗಳ ಎಚ್ಚರದೊಳಗೆ ಸೃಷ್ಟಿಯಾಗುವ ಕೌತುಕ. ಒಂದಷ್ಟು ಖುಷಿ, ಒಂದಷ್ಟು ವಿಷಾದದ ಛಾಯೆಯನ್ನು ಅಕ್ಷರಗಳಲ್ಲಿ ಹಿಡಿದಿಟ್ಟು ಬೆಳಕಿನ ಗಮ್ಯವನ್ನು ಹೊಳೆಸುವ ದಿವ್ಯತ್ವ ಅದಕ್ಕಿರುತ್ತದೆ.
ಕಾಲದಿಂದ ಮತ್ತೊಂದು ಕಾಲಕ್ಕೆ ದಾಟಿಕೊಳ್ಳುವಾಗ ಮನುಷ್ಯ ಸ್ವಭಾವ ಆವಾಹಿಸಿಕೊಳ್ಳುತ್ತಲೇ ಇರುವ ಸಂಕೀರ್ಣತೆಯನ್ನು ಅದರ ಎಲ್ಲಾ ನೆಲೆಗಳೊಂದಿಗೆ ಪರೀಕ್ಷಿಸಿ ದಾಖಲಿಸುವ ಚಾರಿತ್ರಿಕ ಎನ್ನಬಹುದಾದ ಹೊಣೆಗಾರಿಕೆಯನ್ನು ನಿರ್ವಹಿಸುತ್ತಲೇ ಇರುತ್ತದೆ.
ಓದಿಸಿಕೊಳ್ಳುವ ಮತ್ತು ಹಾಗೆ ಓದಿಸಿಕೊಳ್ಳುತ್ತಲೇ ಆಪ್ತವಾಗಿಬಿಡುವ ಅದರ ವ್ಯಾಕರಣ ಭಿನ್ನವಾಗುತ್ತಲೇ ಇರುತ್ತದೆ. ಹೀಗಾಗಿಯೇ ನಿರ್ದಿಷ್ಟ ಚೌಕಟ್ಟುಗಳಾಚೆಗೆ ಜಿಗಿದು ಹೊಸದೊಂದು ಶೈಲಿಯನ್ನು ಹಾದು ವಿನೂತನ ಅರ್ಥವಿನ್ಯಾಸ ರೂಪಿಸುವಷ್ಟು ಪ್ರಭಾವೀಯಾಗಿರುತ್ತದೆ.
ಮತ್ತೊಂದು ದೇಶಕಾಲದ ಕಾವ್ಯಮಾದರಿಯ ಪ್ರಭಾವ ಜೊತೆಯಾದರಂತೂ ಕವಿತೆಯ ಜೀವಂತಿಕೆಯ ಶಕ್ತಿ ಮತ್ತಷ್ಟು ವಿಸ್ತಾರಗೊಳ್ಳುತ್ತದೆ. ಕನ್ನಡದ ಗಜಲ್ ಮೂಲಕ ಇದು ಸಾಧ್ಯವಾಗುತ್ತಿದೆ.
ಪರ್ಷಿಯಾ ಮೂಲದ ಗಜಲ್ ಕಾವ್ಯಪ್ರಕಾರ ಕನ್ನಡದೊಳಗೆ ಅವತರಿಸಿದ ಪರಿಯೇ ಅನನ್ಯವಾದುದು.
ಹಿಂದಿ, ತರ್ಕಿಷ್, ಅರೇಬಿಕ್ ಮತ್ತು ಪರ್ಷಿಯನ್ ಭಾಷೆಗಳ ಶಾಬ್ದಿಕ ಶಕ್ತಿಯೊಂದಿಗಿನ ಗಜಲ್ ಕನ್ನಡತ್ವದ ಸ್ಪರ್ಶ ಪಡೆದು ಹೊಸ ಬಗೆಯ ಕಾವ್ಯಾಸ್ವಾದ ಹೊಮ್ಮಿಸುತ್ತಿದೆ. ನಮ್ಮದಲ್ಲದ ದೇಶದ ಭಾಷಿಕ ಸಂಸ್ಕೃತಿಯ ಪರಿಸರದೊಳಗೆ ರೂಪುಗೊಂಡ ಕಾವ್ಯಾಕೃತಿಯಾಗಿದ್ದ ಗಜಲ್ ಭಾರತದಲ್ಲಿ ಭಿನ್ನ ಸ್ವರೂಪವನ್ನು ತನ್ನದಾಗಿಸಿಕೊಂಡಿದ್ದಕ್ಕೆ ಇಲ್ಲಿಯ ಪ್ರತಿಭಾನ್ವಿತರ ಗ್ರಹಿಕೆ ಮತ್ತು ಅನ್ವಯಿಸುವಿಕೆಯ ಕೌಶಲ್ಯದ ಕಾಣ್ಕೆ ದೊಡ್ಡದು. ಶಾಂತರಸರಿಂದ ಶುರುವಾದ ಈ ಕಾಣ್ಕೆಯ ಯಾನ ಇದೀಗ ಪರಿಪಕ್ವತೆಯ ಪ್ರವರ್ಧಮಾನದ ಆಯಾಮ ಪಡೆದಿದೆ.
ಇದನ್ನು ಸಾಬೀತುಪಡಿಸುವಂತೆಯೇ ರೇಖಾ ಭಟ್ಟ ಹೊನ್ನಗದ್ದೆ ಅವರ ‘ಮಡಿಲ ನಕ್ಷತ್ರ’ ಗಜಲ್ ಸಂಕಲನ ಇದೆ. ಇದನ್ನು ಕೇವಲ ಗಜಲ್ ಸಂಕಲನ ಎನ್ನುವುದಕ್ಕಿಂತ ಗಜಲ್ ಪ್ರಕಾರಕ್ಕೆ ನೂತನ ಆಯಾಮ ದಕ್ಕಿಸಿಕೊಟ್ಟ ಕಲಾಕೃತಿ ಎನ್ನುವುದು ಸೂಕ್ತ. ಪ್ರೀತಿ-ಪ್ರೇಮದ ಭಾವಗಳನ್ನು ತಾತ್ವಿಕತೆಗೆ ತಿರುಗಿಸುವ ಸಾಧ್ಯತೆಯನ್ನು ಮನವರಿಕೆ ಮಾಡಿಕೊಡುವುದರಲ್ಲಿಯೇ ಈ ಕೃತಿಯ ಹೆಗ್ಗಳಿಕೆ ಇದೆ.
ಗಜಲ್ನಂಥ ಬೇರೊಂದು ದೇಶದ ಭಾಷಿಕ ಸಂಸ್ಕøತಿಯ ಕಾವ್ಯಾತ್ಮಕ ಭಿತ್ತಿಯನ್ನು ಕನ್ನಡೀಕರಿಸುವ ಮತ್ತು ಆ ಮೂಲಕ ಕನ್ನಡದ ಕಾವ್ಯ ಪರಂಪರೆಯನ್ನು ಪ್ರಖರಗೊಳಿಸುವ ಪ್ರಯತ್ನದಲ್ಲಿ ರೇಖಾ ಅವರು ಯಶಸ್ವಿಯಾಗಿದ್ದಾರೆ. ಈ ಯಶಸ್ಸು ಕೇವಲ ಅವರ ವ್ಯಕ್ತಿಗತ ಕಾವ್ಯಪ್ರತಿಭೆಗಷ್ಟೇ ಸೀಮಿತವಲ್ಲ.
ಈ ಪ್ರಕಾರದಲ್ಲಿ ಕಾರ್ಯನಿರ್ವಹಿಸುವವರೆಲ್ಲರಿಗೂ ಒಂದು ಮಾದರಿಯನ್ನು ರೂಪಿಸಿಕೊಡುವ ನಿಟ್ಟಿನಲ್ಲಿ ಈ ಯಶಸ್ಸಿನ ಶ್ರೇಷ್ಠತೆ ಇದೆ. ಮಾಧುರ್ಯದ ನಿವೇದನೆ ಮತ್ತು ವೇದನೆಯ ಅಭಿವ್ಯಕ್ತಿಯನ್ನೇ ಕೇಂದ್ರವಾಗಿಸಿಕೊಂಡ ಗಜಲ್ ಬದಲಾದ ಕಾಲಘಟ್ಟದಲ್ಲಿ ಮನುಷ್ಯ ಮತ್ತು ಜೀವಜೀವಗಳೊಳಗಿನ ಸಂಕೀರ್ಣ ಸ್ವರೂಪದ ಶೋಧನೆಯ ಕಲಾಪ್ರಕಾರವಾಗಿ ಮಾರ್ಪಡುವ ವಿಸ್ಮಯಕ್ಕೆ ಈ ಕೃತಿಯ ಸಾಲುಗಳು ಸಾಕ್ಷಿ ನುಡಿಯುತ್ತವೆ. ಈ ದೃಷ್ಟಿಯಿಂದ ರೇಖಾ ಅವರ ಗಜಲ್ ಬರವಣಿಗೆಯ ಯಶಸ್ಸು ವ್ಯಕ್ತಿಗತ ಗೆಲುವಿನಾಚೆಗಿನ ಸಾಮುದಾಯಿಕ ಆತ್ಮಶೋಧದ ಎತ್ತರವನ್ನೂ ದಕ್ಕಿಸಿಕೊಂಡುಬಿಡುತ್ತದೆ.
ಪ್ರೀತಿ, ಪ್ರೇಮ, ವಿರಹ, ದುಃಖ-ದುಮ್ಮಾನ, ಅಸಹಾಯಕತೆ – ಇವೆಲ್ಲವೂ ಮನುಷ್ಯ ಸ್ವಭಾವದ ಒಳಗೇ ಸಮ್ಮಿಳಿತಗೊಂಡ ವಿವಿಧ ಭಾವಗಳು. ಇವುಗಳನ್ನು ಹೊರತುಪಡಿಸಿ ಮನುಷ್ಯ ಅಸ್ತಿತ್ವವನ್ನು ಕಲ್ಪಿಸಿಕೊಳ್ಳಲಾಗದು. ಮನುಷ್ಯ ಸ್ವಭಾವವನ್ನು ಅದರ ಎಲ್ಲ ಇತಿ-ಮಿತಿಗಳ ಜೊತೆಗೆ ಸಮಗ್ರವಾಗಿ ಶೋಧಿಸಿ ಆ ಕ್ಷಣಕ್ಕೆ ಮನದೊಳಗೆ ಭಾವುಕ ಸಂಚಲನವನ್ನು ಕವಿತೆ ಮೂಡಿಸುತ್ತದೆ.
ಚೌಕಟ್ಟುಗಳ ದಿಗ್ಬಂಧನದಿಂದ ವಿಮುಕ್ತಗೊಳ್ಳುವುದಕ್ಕೆ ರಹದಾರಿ ತೋರುತ್ತದೆ. ಈ ಅಂತಃಸತ್ವದೊಂದಿಗೇ ಭಾರತೀಯ ಕಾವ್ಯಪ್ರಕಾರ ವಿವಿಧ ಕಾಲಗಳನ್ನು ಹಾದುಹೋಗಿದೆ. ಆಯಾ ಪ್ರಾದೇಶಿಕ ಭಾಷೆಗಳಲ್ಲಿ ರೂಪುಗೊಳ್ಳುವ ಕಾವ್ಯಪ್ರಕಾರವು ಭಾವಸಂವೇದನೆಯ ಬಹುಮುಖೀ ಪಾತ್ರಗಳೊಂದಿಗೆ ಗುರುತಿಸಿಕೊಂಡಿದೆ.
ಈ ಕಾವ್ಯಪರಂಪರೆಯನ್ನು ಸಮಗ್ರವಾಗಿ ಗ್ರಹಿಸಿಕೊಂಡು ಗಜಲ್ನ ವ್ಯಾಕರಣ ಪ್ರಜ್ಞೆ ಮತ್ತು ಆಶಯ ವಿನ್ಯಾಸದ ಮಾದರಿಯ ಆಧಾರದಲ್ಲಿ ಸೃಜನಶೀಲತೆಯನ್ನು ಸಾಬೀತುಪಡಿಸುವ ಶ್ರದ್ಧಾಪೂರ್ವಕ ಪ್ರಯತ್ನ ‘ಮಡಿಲ ನಕ್ಷತ್ರ’ದಂಥ ಕೃತಿಯನ್ನು ರೂಪಿಸುತ್ತದೆ.
ಕನ್ನಡದ ಕಾವ್ಯ ಮತ್ತು ಕಥನ ಕ್ರಮಗಳೊಳಗೇ ಬುದ್ಧಿ-ಭಾವಗಳ ಜುಗಲ್ಬಂದಿಯ ಎಳೆಗಳನ್ನು ಕಾಣಬಹುದು. ಮಹಿಳೆಯಾದ ಕಾರಣಕ್ಕೇ ಅನುಭವಿಸುವ ಎಲ್ಲ ಬಗೆಯ ಸಂಕಟಗಳು ಸಾಹಿತ್ಯದ ಮೂಲಕ ಧ್ವನಿತವಾಗಬೇಕಾದ ಅನಿವಾರ್ಯತೆ ಈಗಲೂ ಇದೆ. ಈ ಅನಿವಾರ್ಯತೆಯನ್ನು ಕನ್ನಡದ ಮಹಿಳಾ ಬರಹಗಾರರು ಕಾಡಿಸಿಕೊಂಡು ಸೃಜನಶೀಲ ಅಭಿವ್ಯಕ್ತಿ ಸಾಧಿಸಿದ್ದಾರೆ ಎನ್ನಬಹುದು.
ಬೌದ್ಧಿಕ ಎಚ್ಚರದೊಳಗೆ ರೂಪುಗೊಂಡ ಕಾವ್ಯ, ಕಥನಗಳು ವಾಸ್ತವದೊಂದಿಗೆ ಮುಖಾಮುಖಿಯಾಗಿ ಬಂಡಾಯದ ಧ್ವನಿಯನ್ನು ಅಣುರಣಿಸಿವೆ. ಪ್ರತಿಭಾ ನಂದಕುಮಾರ್ ಕಾವ್ಯಧ್ವನಿ ಈ ಬಗೆಯದ್ದು. ಸತ್ಯವನ್ನು ಅತ್ಯಂತ ನಿಷ್ಠುರ ಪ್ರಖರತೆಯ ವ್ಯಾಪ್ತಿಯಲ್ಲಿಟ್ಟು ಸಂಕಟಕ್ಕೆ ಕಾರಣವಾದ ವ್ಯವಸ್ಥೆಯನ್ನು ನಿಕಷಕ್ಕೊಡ್ಡುವ ಕ್ರಮ ಅವರ ಕಾವ್ಯದಲ್ಲಿ ಕಾಣುತ್ತೇವೆ. ವೈದೇಹಿ ಅವರ ಅಭಿವ್ಯಕ್ತಿಯು ಈ ರೀತಿಯದ್ದಲ್ಲ.
ಅಂತಃಕರಣದ ಆಪ್ತ ಭಾಷೆಯೊಳಗೆ ಎಲ್ಲ ಸಂಕಟಗಳನ್ನು ಕಾಣಿಸಿ ಸೌಜನ್ಯದ ಧಾಟಿಯಲ್ಲಿ ಪರ್ಯಾಯದ ಹಾದಿ ಹೊಳೆಸುವ ಪ್ರತಿಭೆ ಅವರದ್ದು. ಬುದ್ಧಿ-ಭಾವಗಳೊಂದಿಗಿನ ಈ ಬಗೆಯ ಅಭಿವ್ಯಕ್ತಿ ಮಾದರಿಗಳನ್ನು ಭಿನ್ನವಾಗಿ ಗ್ರಹಿಸಿಕೊಂಡಾಗ ಮಾತ್ರ ಕಾವ್ಯ ಅಥವಾ ಕಥನ ಪ್ರಕಾರಕ್ಕೆ ಹೊಸ ಕಾಲದ ಅಗತ್ಯಗಳಿಗೆ ಅನುಗುಣವಾಗಿ ನೂತನ ಆಯಾಮ ನೀಡುವುದಕ್ಕೆ ಸಾಧ್ಯವಾಗುತ್ತದೆ.
ರೇಖಾ ಭಟ್ಟ ಹೊನ್ನಗದ್ದೆ ಅವರ ಗಜಲ್ ಸಂಕಲನ ಈ ಸಾಧ್ಯತೆಯನ್ನು ಕಂಡರಿಸುತ್ತದೆ. ‘ಮಡಿಲ ನಕ್ಷತ್ರ’ ಶೀರ್ಷಿಕೆಯೇ ಹಲವು ಅರ್ಥಗಳನ್ನು ಧ್ವನಿಸುತ್ತದೆ. ಒಡಲೊಳಗೆ ಸಂಕಟಗಳ ಕೆಂಡ ಧಗಧಿಗಿಸುತ್ತಿದ್ದರೂ ಅದು ನೇರವಾಗಿ ಇಲ್ಲಿ ದಾಖಲಾಗದು. ಅದರ ಬದಲು ‘ಮಡಿಲ ನಕ್ಷತ್ರ’ ಹೊಳೆಯುತ್ತದೆ. ಆಕ್ರೋಶ, ಬಂಡಾಯಕ್ಕಿಂತ ಬದಲಾವಣೆಯ ಬೆಳಕಿನೆಡೆಗಿನ ಆಶಾವಾದಿ ನೋಟವನ್ನೇ ರೇಖಾ ಅವರು ಮುಖ್ಯವಾಗಿಸಿಕೊಳ್ಳುತ್ತಾರೆ.
ಈ ಕೃತಿಯ ಗಜಲ್ಗಳು ಅಂತರಾಳದ ಹೊಯ್ದಾಟಗಳಿಗೆ ಕಾರಣವಾಗುವ ವಾಸ್ತವಗಳನ್ನು ನೆಮ್ಮದಿಯ ನಾಳೆಗಳ ಹುಡುಕಾಟದ ಪ್ರಜ್ಞೆಯೊಂದಿಗೇ ರಚಿತವಾಗಿವೆ. ಆಶಾವಾದ ಕಳೆದುಕೊಳ್ಳದೇ ನಿಷ್ಠುರ ನಿರ್ಲಿಪ್ತತೆಯೊಂದಿಗೇ ಒಡಲಾಳದ ಬೇಗೆಯನ್ನು ಸಹಿಸಿಕೊಂಡು ಹೊಸ ಹೆಜ್ಜೆಗಳ ಕಡೆಗೆ ಪಯಣಿಸುವ ಜೀವನೋತ್ಸಾಹವೇ ಇಲ್ಲಿಯ ಗಜಲ್ಗಳ ಮುಖ್ಯಗಮ್ಯವಾಗಿದೆ.
ಸಂಕಲನದುದ್ದಕ್ಕೂ ಕಾಣಿಸಿಕೊಳ್ಳುವ ‘ರೇಖೆ’ ಕೇವಲ ಕಾವ್ಯನಾಮವಷ್ಟೇ ಅಲ್ಲ. ಎಲ್ಲ ಬಗೆಯ ಸಂಕುಚಿತ ಗಡಿರೇಖೆಗಳಾಚೆಗೆ ಜಿಗಿದು ಹೊಸ ಪಲ್ಲಟಗಳೊಂದಿಗಿನ ನಕ್ಷತ್ರಪ್ರಭೆಯೊಂದಿಗೆ ಗುರುತಿಸಿಕೊಳ್ಳುವ ಭಾವುಕ ಹಂಬಲದ ಪ್ರತೀಕವಾಗಿಯೂ ಅದನ್ನು ಗ್ರಹಿಸಬಹುದು. ವ್ಯವಸ್ಥೆಯೊಳಗೇ ರೂಪಿತವಾದ ಚೌಕಟ್ಟುಗಳಿಂದ ವಿಮುಕ್ತಗೊಳ್ಳುವ ಆಂತರ್ಯದ ಶೋಧಪ್ರಜ್ಞೆ ಹೊಳೆಸಿಕೊಂಡ ಎಚ್ಚರದ ಪ್ರತಿಮೆಯನ್ನಾಗಿಯೂ ‘ರೇಖೆ’ಯನ್ನು ವಿಶ್ಲೇಷಿಸಬಹುದು. ಇದಕ್ಕೆ ಉದಾಹರಣೆಯಾಗಿ ಈ ಗಜಲ್ನ್ನು ಪ್ರಸ್ತಾಪಿಸಬಹುದು;
ನಿರಾಸೆಯ ಮಡಿಲಲ್ಲಿ ಕನಸೊಂದು ತೂಗಿದರೆ ಸೋಲಾಗದು
ಹುತ್ತಗಟ್ಟಿದ ಚಿತ್ತದಿ ಹೊಸಬೆಳಕು ಹೊಕ್ಕರೆ ಮತ್ತೆ ಕತ್ತಲಾಗದು
ಸೂಜಿ ನೂರು ಚೂರುಗಳ ಸೇರಿಸಿ ಹೊಲಿದಾಗ ಹರವು ಕೌದಿ
ಮೊನಚಿಗೆ ಮೈಯೊಡ್ಡಿದರೂ ಖುಷಿಯ ನಡೆಗೆ ನೋವಾಗದು
ಬಿರುಗಾಳಿಯಾಗಿ ಬಂದೆರಗುವ ದುಗುಡಗಳೆಲ್ಲ ಯಾವ ಲೆಕ್ಕ
ಎದೆಗೆ ಬೇರಿಳಿಸಿ ಬೆಳೆದು ನಿಂತಿರುವ ಗಿಡವೆಂದಿಗೂ ಉರುಳದು
ಜೇನುಹುಳ ಅಲೆದಲೆದು ಸಿಹಿಗೂಡನು ಕಟ್ಟುವುದು ತಾನೇ
ಹೊರಗಂಟಿದ ನಂಜಿಗೆ ಅಂತರಂಗದ ಸವಿಯು ಬರಡಾಗದು
ಸಾವಿರ ದಾರಿಗಳು ಕರೆದರೇನು ನನ್ನ ಗುರಿ ನೀನು ಮಾತ್ರ
ಸರಳ ‘ರೇಖೆ’ಯ ಪಯಣವಿದು ಎಂದಿಗೂ ಹಿಮ್ಮರಳದು
ಹೀಗೆ ದುಗುಡ-ದುಮ್ಮಾನದ ನಿವೇದನೆಯಿದ್ದರೂ ಕೊನೆಗೆ ಆಶಾವಾದದ ಧ್ವನಿ ಹೊಮ್ಮಿಸುವಲ್ಲಿಯೇ ಇಲ್ಲಿಯ ಗಜಲ್ಗಳ ಭಿನ್ನತೆ ಇದೆ. ಇಲ್ಲಿಯ ಗಜಲ್ಗಳು ಪ್ರೀತಿಪೂರ್ವಕ ತಕರಾರು ಎತ್ತುತ್ತವೆ. ನೋಯಿಸಿದ್ದಕ್ಕೆ ಸಿಟ್ಟಿಲ್ಲ, ಆಕ್ರೋಶವಿಲ್ಲ, ದ್ವೇಷದ ಹೊಗೆಯಾಡುವುದಿಲ್ಲ. ಸೌಜನ್ಯದ ಪ್ರತಿಕ್ರಿಯೆಯ ಪದಗಳಲ್ಲಿಯೇ ಬಹುದೊಡ್ಡ ಸವಾಲೆಸೆಯುತ್ತವೆ.
‘ಎದೆಕಾಡ ಬಿದಿರಮೇಳೆ ನಿನಗಾಗಿ ತುಡಿದು ಕೊಳಲಾಗಿತ್ತು, ಒಲವ ನಾದ ಹೊಮ್ಮಿಸದೇ ಮುರಿದುಹೋದೆ ನೀನು’ ಎಂಬ ತಕರಾರು ಕನ್ನಡದ ಗಜಲ್ಗೆ ಹೊಸದೊಂದು ಪರಿಭಾಷೆಯನ್ನೇ ನೀಡಿದೆ ಎಂದೆನ್ನಿಸುತ್ತದೆ. ‘ರಕ್ತಬೀಜಾಸುರರು ತಲೆಎತ್ತಿ ಮೆರೆದು ನೆಲವೀಗ ನರಕ, ಸುರಿಸಿದ ಪ್ರೀತಿಮಳೆಯ ಕುರುಹಿರದೆ ಮುಗಿಲು ನರಳಿದೆ’ ಎಂಬ ಸಾಲುಗಳು ಪ್ರಕೃತಿಯ ವಕ್ತಾರಿಕೆ ಪಾತ್ರವನ್ನು ನಿಭಾಯಿಸಿವೆ.
‘ರೇಖೆ’ಯ ಅರೆಗಳಿಗೆ ಬಿಟ್ಟಿರದ ನಿನ್ನದಿಂದು ಅರಿವಿರದ ಬದುಕು, ಕೊನೆಗೂ ತೊರೆದೇ ಹೋದೆಯೆಂದು ದ್ವೇಷಿಸಲಾರೆ ನಿನ್ನನು’ ಎನ್ನುವ ನಿವೇದನೆ ನೋವಿನ ನಡುವೆಯೂ ಮನುಷ್ಯ ಸಕಾರಾತ್ಮಕತೆಯ ಕಡೆಗೆ ಹೊರಳಿಕೊಳ್ಳುವ ಅನಿವಾರ್ಯತೆಯನ್ನು ಮನಗಾಣಿಸುತ್ತದೆ.
ಕನ್ನಡ ಪುಸ್ತಕ ಪ್ರಾಧಿಕಾರದ ಧನಸಹಾಯದೊಂದಿಗೆ ಪ್ರಕಟಿತವಾದ ಈ ಸಂಕಲನ ರೇಖಾ ಭಟ್ಟ ಹೊನ್ನಗದ್ದೆ ಅವರ ಕಾವ್ಯಪ್ರತಿಭೆಯ ವೈಶಿಷ್ಟ್ಯತೆಗೆ ಕನ್ನಡಿ ಹಿಡಿಯುತ್ತದೆ. ಹೊಸ ಕಾಲ ಎದುರುಗೊಳ್ಳಬಹುದಾದ ಸವಾಲು ಮತ್ತು ಆ ಕಾರಣಕ್ಕಾಗಿಯೇ ಅನುಭವಿಸಬಹುದಾದ ಸಂಕಟಗಳನ್ನು ಹಿಡಿದಿಟ್ಟು ಹೊಸ ಪ್ರಜ್ಞೆ ಮೂಡಿಸುವ ಜವಾಬ್ದಾರಿ ಕನ್ನಡ ಕಾವ್ಯ ಹೊತ್ತುಕೊಳ್ಳಬೇಕಿದೆ.
ಸರಕು ಸಂಸ್ಕೃತಿಯೇ ವಿಜೃಂಭಿಸುತ್ತಿರುವ ನಿರ್ಭಾವುಕ ಜಗತ್ತಿನೊಳಗೆ ಭಾವುಕ ಪ್ರಪಂಚದ ಆಶಾವಾದಿ ನೆಲೆಗಳನ್ನು ಕಾಣಿಸುವ ಹೊಸ ಅಭಿವ್ಯಕ್ತಿ ಮಾದರಿಗಳು ಮುನ್ನೆಲೆಗೆ ಬರಬೇಕಿದೆ. ಅಂಥ ವಿರಳ ಅಭಿವ್ಯಕ್ತಿ ಮಾದರಿಯಾಗಿ ರೇಖಾ ಅವರ ಗóಜಲ್ ಶೈಲಿ ವಿಶೇಷವೆನ್ನಿಸುತ್ತದೆ. ಈ ಕಾರಣಕ್ಕಾಗಿಯೇ ಅವರ ಕಾವ್ಯದ ಧಾಟಿ ಆಪ್ತವಾಗುತ್ತದೆ. ಸದ್ಯದ ಜಗತ್ತನ್ನು ಸ್ವಯಂಸ್ಫೂರ್ತಿಯೊಂದಿಗೆ ಎದುರುಗೊಳ್ಳಲು ನೆರವಾಗುತ್ತದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂಕಣ
ಭಾಷೆ ಗಡಿಗಳ ಮೀರಿ ಮೊಳಗಿದ ಧ್ವನಿ ; ಗಾನಕೋಗಿಲೆ ಎಸ್. ಜಾನಕಿ ನಿರ್ಗಮನ
ಭಾರತೀಯ ಚಿತ್ರಸಂಗೀತದ ಇತಿಹಾಸದಲ್ಲಿ ಕೆಲವೇ ಕೆಲವು ಧ್ವನಿಗಳು ಕಾಲವನ್ನು ಮೀರಿ ಅಮರತ್ವ ಪಡೆದಿವೆ. ಅಂತಹ ಅಮರ ಸ್ವರಗಳಲ್ಲಿ ಅತ್ಯಂತ ಪ್ರಕಾಶಮಾನವಾದ ಹೆಸರು ಎಸ್. ಜಾನಕಿ. ತಮ್ಮ ಅಪೂರ್ವ ಕಂಠಸಿರಿಯಿಂದ ಆರು ದಶಕಗಳಿಗೂ ಹೆಚ್ಚು ಕಾಲ ಕೋಟ್ಯಂತರ ಸಂಗೀತಾಭಿಮಾನಿಗಳ ಹೃದಯವನ್ನು ಗೆದ್ದಿದ್ದ ಈ ಮಹಾನ್ ಹಿನ್ನೆಲೆ ಗಾಯಕಿ ಇಹಲೋಕ ತ್ಯಜಿಸಿದ್ದಾರೆ. ಅವರ ನಿಧನವು ಕೇವಲ ಒಬ್ಬ ಗಾಯಕಿಯ ಅಗಲಿಕೆಯಲ್ಲ; ಭಾರತೀಯ ಸಂಗೀತ ಪರಂಪರೆಯ ಒಂದು ಮಹತ್ತರ ಯುಗದ ಅಂತ್ಯವಾಗಿದೆ.
ಸಂಗೀತವು ಭಾಷೆಯ ಎಲ್ಲೆಗಳನ್ನು ಮೀರಿ ಹೃದಯವನ್ನು ತಲುಪುವ ಮಾಧ್ಯಮ. ಆ ಸತ್ಯವನ್ನು ತಮ್ಮ ಗಾಯನದ ಮೂಲಕ ಸಾಬೀತುಪಡಿಸಿದ ಕಲಾವಿದೆ ಎಸ್. ಜಾನಕಿ. ಅವರು ಹಾಡಿದ ಸಾವಿರಾರು ಗೀತೆಗಳು ಇಂದಿಗೂ ಪ್ರೀತಿ, ವಿರಹ, ಭಕ್ತಿ, ಮಾತೃತ್ವ, ಸಂತೋಷ ಮತ್ತು ಬದುಕಿನ ಸೂಕ್ಷ್ಮ ಭಾವನೆಗಳಿಗೆ ಧ್ವನಿಯಾಗಿವೆ. ಅವರ ಕಂಠ ಕೇಳಿದ ಕ್ಷಣವೇ ಹಾಡಿನ ಪಾತ್ರ ಜೀವಂತವಾಗಿ ಕಣ್ಣೆದುರು ಮೂಡುತ್ತಿತ್ತು. ಅದೇ ಅವರ ಗಾಯನದ ಮಹತ್ವ.
ಸಾಮಾನ್ಯ ಕುಟುಂಬದಿಂದ ಸಂಗೀತ ಸಾಮ್ರಾಜ್ಯದವರೆಗೆ
1938ರ ಏಪ್ರಿಲ್ 23ರಂದು ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ರೆಪಲ್ಲೆ ಸಮೀಪ ಜನಿಸಿದ ಜಾನಕಿ, ಬಾಲ್ಯದಿಂದಲೇ ಸಂಗೀತದತ್ತ ಅತೀವ ಆಸಕ್ತಿ ಹೊಂದಿದ್ದರು. ಮನೆಯಲ್ಲಿದ್ದ ಸಂಗೀತದ ವಾತಾವರಣವೇ ಅವರ ಪ್ರತಿಭೆಗೆ ಮೊದಲ ಪ್ರೇರಣೆ. ಸಂಪ್ರದಾಯಬದ್ಧ ಸಂಗೀತ ಶಿಕ್ಷಣ ಸೀಮಿತವಾಗಿದ್ದರೂ, ದೇವರು ನೀಡಿದ ಸಹಜ ಕಂಠವೇ ಅವರನ್ನು ಅಪರೂಪದ ಗಾಯಕಿಯನ್ನಾಗಿ ರೂಪಿಸಿತು.
ಕುಟುಂಬದ ಬೆಂಬಲದೊಂದಿಗೆ ಅವರು ಆಗಿನ ಮದ್ರಾಸಿಗೆ ತೆರಳಿ ಹಿನ್ನೆಲೆ ಗಾಯನದಲ್ಲಿ ಅವಕಾಶ ಹುಡುಕಿದರು. ಆರಂಭದ ದಿನಗಳು ಸುಲಭವಾಗಿರಲಿಲ್ಲ. ಆದರೆ ಪ್ರತಿಭೆ, ಶ್ರಮ ಮತ್ತು ಸಂಗೀತದ ಮೇಲಿನ ಅಚಲ ನಿಷ್ಠೆ ಅವರನ್ನು ಬೇಗನೇ ಸಂಗೀತ ನಿರ್ದೇಶಕರ ಗಮನಕ್ಕೆ ತಂದಿತು. 1957ರಲ್ಲಿ ಆರಂಭವಾದ ಅವರ ಗಾಯನಯಾನ, ನಂತರ ಭಾರತದ ಸಂಗೀತ ಇತಿಹಾಸದಲ್ಲೇ ಅತ್ಯಂತ ದೀರ್ಘ ಹಾಗೂ ಯಶಸ್ವಿ ಪಯಣಗಳಲ್ಲಿ ಒಂದಾಗಿ ಬೆಳೆಯಿತು.
ಭಾಷೆಗಳ ಗಡಿಗಳನ್ನು ಮೀರಿ ಮೊಳಗಿದ ಧ್ವನಿ
ತೆಲುಗು, ಕನ್ನಡ, ತಮಿಳು, ಮಲಯಾಳಂ, ಹಿಂದಿ, ಒಡಿಯಾ, ತುಳು, ಕೊಂಕಣಿ ಸೇರಿದಂತೆ ಅನೇಕ ಭಾರತೀಯ ಭಾಷೆಗಳಲ್ಲಿ ಅವರು ಸಾವಿರಾರು ಹಾಡುಗಳನ್ನು ಹಾಡಿದರು. ವಿವಿಧ ಮೂಲಗಳ ಪ್ರಕಾರ ಅವರು 40 ಸಾವಿರಕ್ಕೂ ಅಧಿಕ ಗೀತೆಗಳಿಗೆ ಧ್ವನಿಯಾಗಿದ್ದಾರೆ.
ಪ್ರತಿ ಭಾಷೆಯ ಉಚ್ಚಾರಣೆಯನ್ನು ಅತ್ಯಂತ ಶ್ರದ್ಧೆಯಿಂದ ಕಲಿತು, ಆ ಭಾಷೆಯವರೇ ಹಾಡಿದಂತೆ ಹಾಡುವುದು ಅವರ ವಿಶೇಷತೆ. ಅದಕ್ಕಾಗಿಯೇ ಅವರು ಹಾಡಿದ ಗೀತೆಗಳನ್ನು ಯಾವ ರಾಜ್ಯದ ಜನರೂ ತಮ್ಮದೇ ಭಾಷೆಯ ಹಾಡುಗಳೆಂದು ಪ್ರೀತಿಸಿದರು. ಒಬ್ಬ ಗಾಯಕಿಗೆ ಇದಕ್ಕಿಂತ ದೊಡ್ಡ ಗೌರವ ಮತ್ತೊಂದಿಲ್ಲ.
ಕನ್ನಡಿಗರ ಮನದ ಜಾನಕಿ
ಕರ್ನಾಟಕದ ಸಂಗೀತಾಸಕ್ತರಿಗೆ ಎಸ್. ಜಾನಕಿ ಎಂದರೆ ವಿಶೇಷವಾದ ಭಾವನಾತ್ಮಕ ಬಂಧ. ಕನ್ನಡ ಚಿತ್ರರಂಗದ ಸುವರ್ಣಯುಗದ ನೂರಾರು ಅಮರಗೀತೆಗಳಿಗೆ ಅವರು ಜೀವ ತುಂಬಿದ್ದಾರೆ.
ಡಾ. ರಾಜ್ಕುಮಾರ್, ವಿಷ್ಣುವರ್ಧನ್, ಅಂಬರೀಷ್, ಶಂಕರ್ ನಾಗ್, ಅನಂತ್ ನಾಗ್, ರಮೇಶ್ ಅರವಿಂದ್ ಸೇರಿದಂತೆ ಹಲವು ತಲೆಮಾರಿನ ನಟ–ನಟಿಯರ ಭಾವನೆಗಳಿಗೆ ಅವರ ಧ್ವನಿಯೇ ಆತ್ಮವಾಗಿತ್ತು.
ವಿಜಯಭಾಸ್ಕರ್, ಜಿ.ಕೆ. ವೆಂಕಟೇಶ್, ರಾಜನ್–ನಾಗೇಂದ್ರ, ಉಪೇಂದ್ರ ಕುಮಾರ್, ಹಂಸಲೇಖ ಸೇರಿದಂತೆ ಕನ್ನಡದ ಶ್ರೇಷ್ಠ ಸಂಗೀತ ನಿರ್ದೇಶಕರೊಂದಿಗೆ ಅವರು ನೀಡಿದ ಹಾಡುಗಳು ಇಂದಿಗೂ ಸಂಗೀತಾಸಕ್ತರ ತುಟಿಗಳಲ್ಲಿ ಜೀವಂತವಾಗಿವೆ.
ಪ್ರೇಮಗೀತೆಗಳಾಗಲಿ, ಭಕ್ತಿಗೀತೆಗಳಾಗಲಿ, ಜಾನಪದ ಸೊಗಡಿನ ಹಾಡುಗಳಾಗಲಿ ಅಥವಾ ವಿರಹದ ಮೌನವನ್ನು ಹೇಳುವ ಮಧುರಗೀತೆಗಳಾಗಲಿ—ಜಾನಕಿ ಅವರ ಧ್ವನಿ ಪ್ರತಿಯೊಂದು ಭಾವಕ್ಕೂ ಹೊಸ ಅರ್ಥ ನೀಡುತ್ತಿತ್ತು.
ಇಳಯರಾಜಾ–ಜಾನಕಿ: ಸಂಗೀತದ ಅದ್ಭುತ ಜೋಡಿ
ತಮಿಳು ಚಿತ್ರರಂಗದಲ್ಲಿ ಸಂಗೀತ ನಿರ್ದೇಶಕ ಇಳಯರಾಜಾ ಮತ್ತು ಎಸ್. ಜಾನಕಿ ಅವರ ಸಂಗಮ ಭಾರತೀಯ ಚಿತ್ರಸಂಗೀತದ ಅತ್ಯಂತ ಯಶಸ್ವಿ ಜೋಡಿಗಳಲ್ಲಿ ಒಂದು.
ಇಳಯರಾಜಾ ಅವರ ಸಂಗೀತದ ಸೂಕ್ಷ್ಮ ಭಾವಗಳನ್ನು ಜಾನಕಿ ತಮ್ಮ ಧ್ವನಿಯಲ್ಲಿ ಜೀವಂತಗೊಳಿಸುತ್ತಿದ್ದರು. ಈ ಜೋಡಿಯ ಅನೇಕ ಗೀತೆಗಳು ಇಂದಿಗೂ ದಕ್ಷಿಣ ಭಾರತದ ಸಂಗೀತಾಭಿಮಾನಿಗಳ ನಿತ್ಯ ಸಂಗಾತಿಗಳಾಗಿವೆ.
ಅದೇ ರೀತಿ ಎಂ.ಎಸ್. ವಿಶ್ವನಾಥನ್, ಕೆ.ವಿ. ಮಹಾದೇವನ್, ಚಕ್ರವರ್ತಿ, ಹಂಸಲೇಖ, ರಾಜನ್–ನಾಗೇಂದ್ರ, ವಿಜಯಭಾಸ್ಕರ್ ಮೊದಲಾದ ದಿಗ್ಗಜರ ಸಂಗೀತಕ್ಕೂ ಅವರು ವಿಶಿಷ್ಟ ಕಂಠಸಿರಿ ನೀಡಿದ್ದಾರೆ.
ಧ್ವನಿಯೊಳಗಿದ್ದ ಸಾವಿರ ರೂಪಗಳು
ಎಸ್. ಜಾನಕಿ ಅವರ ಗಾಯನದ ಅತ್ಯಂತ ದೊಡ್ಡ ವೈಶಿಷ್ಟ್ಯವೆಂದರೆ ಧ್ವನಿಯ ರೂಪಾಂತರ. ಒಂದು ಹಾಡಿನಲ್ಲಿ ಮಗು ಮಾತನಾಡಿದಂತೆ ಹಾಡಬಲ್ಲರು; ಮತ್ತೊಂದು ಹಾಡಿನಲ್ಲಿ ವಯಸ್ಸಾದ ಮಹಿಳೆಯ ಭಾವನೆ ಮೂಡಿಸುತ್ತಿದ್ದರು. ಕೆಲವೊಮ್ಮೆ ಗ್ರಾಮೀಣ ಹುಡುಗಿಯ ಮುಗ್ಧತೆ, ಮತ್ತೊಮ್ಮೆ ನಗರ ಮಹಿಳೆಯ ಆತ್ಮವಿಶ್ವಾಸ, ಇನ್ನೊಮ್ಮೆ ತಾಯಿಯ ಮಮತೆ, ಮತ್ತೆ ಭಕ್ತೆಯ ಪ್ರಾರ್ಥನೆ—ಪ್ರತಿ ಭಾವಕ್ಕೂ ಬೇರೆ ಧ್ವನಿಯನ್ನು ನೀಡುವ ಸಾಮರ್ಥ್ಯ ಅವರಿಗೆ ಮಾತ್ರ ಸಾಧ್ಯವಾಗಿತ್ತು. ಅವರ ಧ್ವನಿ ಕೇವಲ ಸಂಗೀತವಲ್ಲ; ಅದು ಅಭಿನಯವೂ ಆಗಿತ್ತು.
ಶ್ರಮ, ಶಿಸ್ತು ಮತ್ತು ಪರಿಪೂರ್ಣತೆಯ ಪ್ರತೀಕ
ಒಂದು ಹಾಡನ್ನು ಹಾಡುವ ಮೊದಲು ಅದರ ಸಾಹಿತ್ಯವನ್ನು ಸಂಪೂರ್ಣ ಅರ್ಥೈಸಿಕೊಳ್ಳುವುದು ಅವರ ಅಭ್ಯಾಸ. ಉಚ್ಚಾರಣೆಯಲ್ಲಿ ಯಾವುದೇ ತಪ್ಪು ಆಗಬಾರದು ಎಂಬ ಕಾರಣಕ್ಕೆ ಹೊಸ ಭಾಷೆಗಳನ್ನು ಸಹ ಕಲಿಯುತ್ತಿದ್ದರು.
ರೆಕಾರ್ಡಿಂಗ್ ಸ್ಟುಡಿಯೋದಲ್ಲಿ ಸಮಯಪಾಲನೆ, ಶಿಸ್ತು ಹಾಗೂ ಸಂಗೀತದ ಮೇಲಿನ ಅಪಾರ ಗೌರವದಿಂದ ಅವರು ಎಲ್ಲರ ಪ್ರೀತಿಗೆ ಪಾತ್ರರಾಗಿದ್ದರು.
ಸಂಗೀತ ನಿರ್ದೇಶಕರು ಅನೇಕ ಬಾರಿ ಹೇಳಿದ್ದೇನಂದರೆ, ಜಾನಕಿ ಹಾಡನ್ನು ಒಮ್ಮೆ ಅರ್ಥ ಮಾಡಿಕೊಂಡರೆ ಅದನ್ನು ಮತ್ತೆ ವಿವರಿಸುವ ಅಗತ್ಯವೇ ಇರಲಿಲ್ಲ.
ಪ್ರಶಸ್ತಿಗಳಿಗಿಂತ ದೊಡ್ಡದು ಜನರ ಪ್ರೀತಿ
ಎಸ್. ಜಾನಕಿ ಅವರು ನಾಲ್ಕು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಪಡೆದಿದ್ದಾರೆ. ವಿವಿಧ ರಾಜ್ಯ ಸರ್ಕಾರಗಳಿಂದ ಮೂವತ್ತಕ್ಕೂ ಅಧಿಕ ಅತ್ಯುತ್ತಮ ಹಿನ್ನೆಲೆ ಗಾಯಕಿ ಪ್ರಶಸ್ತಿಗಳು ಅವರಿಗೆ ಸಂದಿವೆ. ಆದರೆ ಅವರು ಎಂದಿಗೂ ಪ್ರಶಸ್ತಿಗಳಿಗಾಗಿ ಹಾಡಲಿಲ್ಲ. ಸಂಗೀತವೇ ಅವರ ಧ್ಯಾನ, ಗಾಯನವೇ ಅವರ ಪೂಜೆ.
ಪದ್ಮಭೂಷಣ ಪ್ರಶಸ್ತಿಯನ್ನು ಅವರು ವಿನಯಪೂರ್ವಕವಾಗಿ ನಿರಾಕರಿಸಿದ್ದು ದೇಶಾದ್ಯಂತ ಚರ್ಚೆಗೆ ಕಾರಣವಾಗಿತ್ತು. ತಮ್ಮ ಸಾಧನೆಗೆ ತಡವಾಗಿ ಗೌರವ ನೀಡಲಾಗಿದೆ ಎಂಬ ಭಾವನೆಯನ್ನು ಅವರು ಅತ್ಯಂತ ಗೌರವಯುತವಾಗಿ ವ್ಯಕ್ತಪಡಿಸಿದ್ದರು.
ಎಸ್.ಪಿ.ಬಿ.–ಜಾನಕಿ: ಮರೆಯಲಾಗದ ಸಂಗೀತಯಾನ
ಎಸ್.ಪಿ. ಬಾಲಸುಬ್ರಹ್ಮಣ್ಯಂ ಮತ್ತು ಎಸ್. ಜಾನಕಿ ಅವರ ಜೋಡಿ ಭಾರತೀಯ ಚಿತ್ರಸಂಗೀತದ ಅತ್ಯಂತ ಜನಪ್ರಿಯ ಗಾಯನ ಜೋಡಿಗಳಲ್ಲಿ ಒಂದು.
ಅವರಿಬ್ಬರು ಹಾಡಿದ ಸಾವಿರಾರು ಯುಗಲಗೀತೆಗಳು ಇಂದಿಗೂ ರೇಡಿಯೋಗಳಲ್ಲಿ, ಸಂಗೀತ ಕಾರ್ಯಕ್ರಮಗಳಲ್ಲಿ ಮತ್ತು ಅಭಿಮಾನಿಗಳ ನೆನಪುಗಳಲ್ಲಿ ಸದಾ ಕೇಳಿಸುತ್ತಿವೆ.ಇವರ ಗಾಯನದಲ್ಲಿ ಸ್ಪರ್ಧೆಯಿರಲಿಲ್ಲ; ಪರಸ್ಪರ ಪೂರಕವಾದ ಸಂಗೀತ ಮಾತ್ರ ಇತ್ತು.
ಸರಳತೆಯೇ ಅವರ ಅಲಂಕಾರ
ಅಸಂಖ್ಯಾತ ಪ್ರಶಸ್ತಿಗಳು, ಲಕ್ಷಾಂತರ ಅಭಿಮಾನಿಗಳು, ದೇಶವ್ಯಾಪಿ ಖ್ಯಾತಿ—ಇವೆಲ್ಲ ಇದ್ದರೂ ಎಸ್. ಜಾನಕಿ ಅತ್ಯಂತ ಸರಳ ಜೀವನ ನಡೆಸಿದರು.ವೇದಿಕೆಯಲ್ಲಿ ಎಂದಿಗೂ ಆಡಂಬರ ತೋರಲಿಲ್ಲ. ಸಂದರ್ಶನಗಳಲ್ಲಿಯೂ ತಮ್ಮ ಸಾಧನೆಗಿಂತ ಸಂಗೀತದ ಮಹತ್ವದ ಬಗ್ಗೆ ಹೆಚ್ಚು ಮಾತನಾಡುತ್ತಿದ್ದರು.ಹೊಸ ಗಾಯಕರಿಗೆ ಪ್ರೋತ್ಸಾಹ ನೀಡುವುದು, ಅವರನ್ನು ಮೆಚ್ಚುವುದು ಮತ್ತು ಸಂಗೀತವನ್ನು ಗೌರವಿಸುವಂತೆ ಸಲಹೆ ನೀಡುವುದು ಅವರ ಸ್ವಭಾವವಾಗಿತ್ತು.
ಹೊಸ ತಲೆಮಾರಿನಲ್ಲೂ ಜೀವಂತ ಧ್ವನಿ
ಡಿಜಿಟಲ್ ಸಂಗೀತದ ಯುಗದಲ್ಲಿಯೂ ಎಸ್. ಜಾನಕಿ ಅವರ ಹಾಡುಗಳ ಜನಪ್ರಿಯತೆ ಕಡಿಮೆಯಾಗಲಿಲ್ಲ. ಯೂಟ್ಯೂಬ್, ಸಂಗೀತ ಆ್ಯಪ್ಗಳು, ರಿಯಾಲಿಟಿ ಶೋಗಳು, ಸಾಮಾಜಿಕ ಜಾಲತಾಣಗಳು—ಎಲ್ಲೆಡೆ ಅವರ ಹಾಡುಗಳು ಹೊಸ ತಲೆಮಾರಿನ ಕಿವಿಗಳಿಗೆ ತಲುಪುತ್ತಲೇ ಇವೆ. ಇಂದಿನ ಅನೇಕ ಯುವ ಗಾಯಕ–ಗಾಯಕಿಯರು ತಮ್ಮ ಸಂಗೀತಯಾನದ ಪ್ರೇರಣೆಯಾಗಿ ಜಾನಕಿ ಅವರನ್ನು ಉಲ್ಲೇಖಿಸುತ್ತಾರೆ.
ಸಂಗೀತ ಲೋಕದ ಕಂಬನಿ
ಅವರ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ದೇಶದಾದ್ಯಂತ ಸಂಗೀತ ಲೋಕದಲ್ಲಿ ಶೋಕದ ಛಾಯೆ ಆವರಿಸಿತು. ಚಿತ್ರರಂಗದ ಗಣ್ಯರು, ಸಂಗೀತ ನಿರ್ದೇಶಕರು, ಗಾಯಕ–ಗಾಯಕಿಯರು, ಸಾಹಿತ್ಯಿಕರು, ರಾಜಕೀಯ ನಾಯಕರು ಹಾಗೂ ಲಕ್ಷಾಂತರ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳ ಮೂಲಕ ಭಾವಪೂರ್ಣ ನಮನ ಸಲ್ಲಿಸಿದರು.
“ಒಂದು ಯುಗ ಮುಗಿಯಿತು”, “ಗಾನಕೋಗಿಲೆಯ ಧ್ವನಿ ಎಂದೆಂದಿಗೂ ಜೀವಂತ”, “ನಮ್ಮ ಜೀವನದ ನೆನಪುಗಳಿಗೆ ಹಿನ್ನೆಲೆ ಸಂಗೀತ ನೀಡಿದ ಧ್ವನಿ” ಎಂಬ ಮಾತುಗಳು ಎಲ್ಲೆಡೆ ಕೇಳಿಬಂದವು.
ಕನ್ನಡಿಗರ ನೆನಪಿನಲ್ಲಿ ಎಂದೆಂದಿಗೂ
ಕರ್ನಾಟಕದ ಮನೆಮನೆಗಳಲ್ಲೂ ಎಸ್. ಜಾನಕಿ ಅವರ ಹಾಡುಗಳು ಇಂದಿಗೂ ಬೆಳಗಿನ ಭಕ್ತಿಗೀತೆಗಳಾಗಿ, ಪ್ರೇಮಗೀತೆಗಳಾಗಿ, ಹಬ್ಬದ ಸಂಭ್ರಮವಾಗಿ, ಬದುಕಿನ ನೆನಪುಗಳಾಗಿ ಮೊಳಗುತ್ತಿವೆ.
ಅವರ ಧ್ವನಿ ಅನೇಕ ಕುಟುಂಬಗಳ ಭಾವನೆಗಳ ಒಂದು ಭಾಗವಾಗಿದೆ. ತಾಯಿಯ ನೆನಪಿನಲ್ಲಿ, ಪ್ರೀತಿಯ ನೆನಪಿನಲ್ಲಿ, ಬಾಲ್ಯದ ನೆನಪಿನಲ್ಲಿ, ಹಬ್ಬದ ಸಂಭ್ರಮದಲ್ಲಿ—ಎಲ್ಲೆಲ್ಲೂ ಜಾನಕಿ ಅವರ ಹಾಡುಗಳಿವೆ.
ಸ್ವರ ಮೌನವಾದರೂ…
ಕಾಲ ಬದಲಾಗಬಹುದು. ಸಂಗೀತದ ಶೈಲಿಗಳು ಬದಲಾಗಬಹುದು. ಹೊಸ ತಂತ್ರಜ್ಞಾನಗಳು ಬರಬಹುದು. ಆದರೆ ಭಾವನೆಗೆ ಜೀವ ತುಂಬುವ ಧ್ವನಿಗಳು ಅಪರೂಪ.
ಎಸ್. ಜಾನಕಿ ಅಂತಹ ಅಪರೂಪದ ಧ್ವನಿ. ಅವರ ದೇಹ ನಮ್ಮೊಂದಿಗಿಲ್ಲ. ಆದರೆ ಅವರು ಹಾಡಿದ ಪ್ರತಿಯೊಂದು ಗೀತೆ ಮುಂದಿನ ಹಲವು ತಲೆಮಾರುಗಳಿಗೂ ಬದುಕಿನ ಸಂಗಾತಿಯಾಗಿರುತ್ತದೆ. ಸಂಗೀತ ಇತಿಹಾಸವನ್ನು ಬರೆಯುವಾಗ ಅವರ ಹೆಸರನ್ನು ಬಿಟ್ಟು ಮುಂದೆ ಸಾಗುವುದು ಅಸಾಧ್ಯ. ಮರಣವು ಒಬ್ಬ ವ್ಯಕ್ತಿಯನ್ನು ಮಾತ್ರ ಕಸಿದುಕೊಳ್ಳಬಹುದು; ಅವರು ಸೃಷ್ಟಿಸಿದ ಕಲೆಯನ್ನು ಅಲ್ಲ.
ಎಸ್. ಜಾನಕಿ ಅವರ ಸ್ವರ ಇಂದು ಮೌನವಾಗಿದೆ. ಆದರೆ ಅವರು ಹಾಡಿದ ಸಾವಿರಾರು ಗೀತೆಗಳು ಭಾರತೀಯ ಸಂಗೀತಾಕಾಶದಲ್ಲಿ ಶಾಶ್ವತವಾಗಿ ಪ್ರತಿಧ್ವನಿಸುತ್ತಲೇ ಇರುತ್ತವೆ.
ಅವರ ಕಂಠಸಿರಿ ಕಾಲವನ್ನು ಮೀರಿದೆ.
ಅವರ ಸಂಗೀತ ತಲೆಮಾರುಗಳನ್ನು ಮೀರಿದೆ.
ಅವರ ನೆನಪು ಎಂದಿಗೂ ಅಳಿಯದು.
ಸ್ವರ ಮೌನವಾಗಿದೆ… ಆದರೆ ಸಂಗೀತ ಅಮರವಾಗಿದೆ. ಅದೇ ಎಸ್. ಜಾನಕಿ ಅವರ ಶಾಶ್ವತ ಪರಂಪರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂಕಣ
ದೀಪಾವಳಿ ವಿಶೇಷಾಂಕ | ದೇವನಗರಿ ಸುದ್ದಿದಿನ ಪತ್ರಿಕೆಯಿಂದ ಕತೆ- ಕವಿತೆ- ಲೇಖನ- ರೂಪದರ್ಶಿ ಫೋಟೋ ಗಳಿಗೆ ಆಹ್ವಾನ
ಸುದ್ದಿದಿನ,ದಾವಣಗೆರೆ: ಪ್ರಿಯ ಓದುಗರೆ, ಬೆಳಕಿನ ಹಬ್ಬ ದೀಪಾವಳಿಯ ಪ್ರಯುಕ್ತ ದೇವನಗರಿ ಸುದ್ದಿದಿನ – ಕನ್ನಡ ದಿನ ಪತ್ರಿಕೆ ಹಾಗೂ ಶ್ಯಾಮ್ ಪ್ರಕಾಶನದವತಿಯಿಂದ ‘ ದೀಪಾವಳಿ ವಿಶೇಷಾಂಕ’-2026ನ್ನು ತರಲಾಗುತ್ತಿದೆ.
ಈ ಹಿನ್ನೆಲೆಯಲ್ಲಿ ದೀಪಾವಳಿ ವಿಷೇಶಾಂಕ 2026ರ ವಿಭಾಗಕ್ಕೆ ಕತೆ, ಕವಿತೆ ಹಾಗೂ ಲೇಖನ ಹಾಗೂ ರೂಪದರ್ಶಿಗಳ ಛಾಯಾಚಿತ್ರಗಳನ್ನು ಆಹ್ವಾನಿಸಿದ್ದೇವೆ.
ಕತೆ – ಕವಿತೆಗಳನ್ನು ಕಳುಹಿಸಲು ಇರುವ ನಿಯಮಗಳು
ಕತೆ/ಕವಿತೆ ಸ್ವತಂತ್ರ ರಚನೆಯಾಗಿರಬೇಕು. ಈ ಮೊದಲು ಯಾವ ಮಾಧ್ಯಮಗಳಲ್ಲಿಯೂ ಪ್ರಕಟ ಅಥವಾ ಪ್ರಸಾರ ಆಗಿರಬಾರದು.
ಕತೆ 1500 ಸಾವಿರ ಪದಗಳ ಮಿತಿಯಲ್ಲಿರಲಿ. ಕವಿತೆಗೆ 40 ಸಾಲಿನ ಮಿತಿಯಿರಲಿ, ನುಡಿ ಅಥವಾ ಬರಹ ತಂತ್ರಾಂಶದಲ್ಲಿ ಇಲ್ಲವೆ ಯೂನಿಕೋಡ್ನಲ್ಲಿ ಇರಬೇಕು. ವಯಸ್ಸಿನ ಮಿತಿ ಇರುವುದಿಲ್ಲ.
ಕತೆ/ಕವಿತೆ ಇರುವ ಪುಟದಲ್ಲಿ ಹೆಸರು, ವಿವರ ಬರೆಯುವಂತಿಲ್ಲ. ಪ್ರತ್ಯೇಕ ಪುಟದಲ್ಲಿ ಹೆಸರು, ಅಂಚೆ ವಿಳಾಸ, ಮೊಬೈಲ್ ನಂಬರ್, ಇ-ಮೇಲ್ ವಿಳಾಸ ಒದಗಿಸಬೇಕು.
ಇತ್ತೀಚಿನ ಪಾಸ್ಪೋರ್ಟ್ ಅಳತೆಯ ವರ್ಣಮಯ ಭಾವಚಿತ್ರದೊಂದಿಗೆ 100 ಪದಗಳ ಒಳಗೆ ಕಿರು ಪರಿಚಯ ಕಳುಹಿಸಬೇಕು.
ಸ್ಪರ್ಧೆಗೆ ಕಳುಹಿಸಿರುವ ಬರಹಗಳನ್ನು ಹಿಂದಿರುಗಿಸುವುದಿಲ್ಲ. ಬರಹಗಳು ಕಡ್ಡಾಯವಾಗಿ ಎಂಎಸ್ ವರ್ಡ್ ಫೈಲ್ (MS word File) ನಲ್ಲಿರಲಿ.
ಬರಹ ಮತ್ತು ಫೋಟೋಗಳನ್ನು ಇ-ಮೇಲ್ ಮೂಲಕವಷ್ಟೇ ಕಳಿಸಿ.
ಲೇಖನಗಳಿಗೆ ಆಹ್ವಾನ : ವೈಚಾರಿಕತೆ, ವಿಮರ್ಶೆ, ಕಾನೂನು, ಸಾಹಿತ್ಯ, ತಂತ್ರಜ್ಞಾನ, ವಿಜ್ಞಾನ, ಡಿಜಿಟಲ್ ಮಾಧ್ಯಮ, ಸಿನೆಮಾ, ಪ್ರೇಮಪತ್ರ, ಕೃಷಿ, ರಾಜಕೀಯ, ಕಲೆ, ಆರೋಗ್ಯ, ಪ್ರವಾಸ, ಅಡುಗೆ, ಫೋಟೋಗ್ರಫಿ, ವೈಲ್ಡ್ ಲೈಫ್, ಹಾಸ್ಯ ಕುರಿತಾದ ಲೇಖನಗಳನ್ನು 450 ಪದಗಳನ್ನು ಮೀರದಂತೆ ಬರೆದು ಕಳುಹಿಸಿ.
ಹಾಗೆಯೇ, ವಿಶೇಷಾಂಕದ ಮುಖಪುಟದ ರೂಪದರ್ಶಿಯಾಗಲು ಅವಕಾಶವನ್ನು ಕಲ್ಪಸಿಲಾಗಿದೆ. ಆಸಕ್ತ ರೂಪದರ್ಶಿಗಳು ಸ್ಟುಡಿಯೋ ಅಥವಾ ಫೋಟೋಗ್ರಾಫರ್ ಮೂಲಕ ತೆಗೆದ ‘6*4 ಅಳತೆಯ ಮುದ್ರಿತ ಫೋಟೋ ಮತ್ತು ಇ-ಮೇಲ್ ಮೂಲಕವೂ ಕಳಿಸಬಹುದು. 80 ಪದಗಳಮಿತಿಯೊಳಗೆ ನಿಮ್ಮ ಪರಿಚಯದೊಂದಿಗೆ, ಒಬ್ಬರು 4 ಫೋಟೋ ಕಳುಹಿಸಬೇಕು. ವಯಸ್ಸಿನ ಮಿತಿಯಿಲ್ಲ ಇರುವುದಿಲ್ಲ.
ಕತೆಯ ವಿಜೇತರಿಗೆ ಪ್ರಥಮ ಬಹುಮಾನ : 10000, ದ್ವಿತೀಯ ಬಹುಮಾನ : 5000, ತೃತೀಯ ಬಹುಮಾನ : 3000 ಹಾಗೂ ಕವಿತೆ ಬಹುಮಾನ ವಿಜೇತರಿಗೆ ಪ್ರಥಮ ಬಹುಮಾನ : 5000 ದ್ವಿತೀಯ ಬಹುಮಾನ : 3000 ಹಾಗೂ ತೃತೀಯ ಬಹುಮಾನ : ₹2000 ಸಿಗಲಿದೆ.
ಆಗಸ್ಟ್ 30ರೊಳಗೆ ಬರಹಗಳನ್ನು ಇ-ಮೇಲ್: deepasuddidina@gmail.com ಗೆ ಕಳುಹಿಸಲು ತಿಳಿಸಿದೆ. ಈ ಕುರಿತು ಹೆಚ್ಚಿನ ಮಾಹಿತಿಗಾಗಿ :9980346243 ಹಾಗೂ visit: www.suddidina.com ಅನ್ನು ವೀಕ್ಷಿಸಬಹುದಾಗಿದೆ.
ಕಚೇರಿ ವಿಳಾಸ
ದೇವನಗರಿ ಸುದ್ದಿದಿನ- ಕನ್ನಡ ದಿನ ಪತ್ರಿಕೆ
ದೀಪಾವಳಿ ವಿಶೇಷಾಂಕ ವಿಭಾಗ
#3231/1, ಸಂಜೀವ ಸದನ, 11ನೇ ಮುಖ್ಯರಸ್ತೆ, 4 ನೇ ಅಡ್ಡರಸ್ತೆ, ಎಂಸಿಸಿ ಬಿ ಬ್ಲಾಕ್, ದಾವಣಗೆರೆ, 577004
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂಕಣ
ಕವಿತೆ | ದೇವರ ಹೂವು
~ ಡಾ. ಸಿ.ಬಿ.ಐನಳ್ಳಿ
ಊಟ ಮಾಟ ವೇಷ ಭಾಷೆ
ಪ್ರಾರ್ಥನೆ ಬೇರೆ ಬೇರೆ
ಪವಿತ್ರಪಠ್ಯ ಅವನದೊಂದು
ನನ್ನದಿನ್ನೊಂದಂತೆ
ನದಿ ದಂಡೆಯ ಮೇಲೆ
ನೋಟ ಬೆರೆತು ಮಾತು ಮರೆತು
ಮೈತ್ರಿ ಮೊಳೆಯಿತು
ಎಷ್ಟು ಬಿಗಿದಪ್ಪಿಕೊಂಡರೂ
ಉಳಿಯುತ್ತಿತ್ತು ನಡುವೆ ಸಣ್ಣ ಪೊಳ್ದಾಣ
ಹೂದೋಟದ ದುಂಬಿ ಸತತ ಮೂರು
ವಸಂತದ ಗಾಳಿ ಅಣಕಿಸಿದಾಗ
ಪರಾಗಸ್ಪರ್ಶಕೆ ಹೊಸ ಹೂವೊಂದು
ಅರಳಿ ನಿಂತಿತು
ಪೊಳ್ಳಿನ ನೆನಪೇ ಮಾಯವಾಗಿದೆ
ಎಳೆ ಹೂವು ಮೈಮರೆತು
ಹಾಡಿ ಓಡಿ ನಲಿಯುತಿದೆ
ಧರ್ಮ ನನ್ನ ಕಣ್ಣೊಳಗೆ ಜಿನುಗಿ
ಹನಿಯಾಗಿ ಜಾರುತಿದೆ
ಕವಿ ಪರಿಚಯ : ಡಾ. ಸಿ.ಬಿ.ಐನಳ್ಳಿ, ಸಹಾಯಕ ಪ್ರಾಧ್ಯಾಪಕರು, ಇಂಗ್ಲೀಷ್ ವಿಭಾಗ, ಕರ್ನಾಟಕ ಕಲಾ ಮಹಾವಿದ್ಯಾಲಯ, ಧಾರವಾಡ
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ6 days agoಸ್ಟಾರ್ ಹೆಲ್ತ್ ಉಚಿತ ವೈದ್ಯಕೀಯ ಸಲಹೆ
-
ದಿನದ ಸುದ್ದಿ1 day agoಎಸ್ ಐ ಆರ್ | ರಾಜ್ಯದಲ್ಲೇ ಮಾಯಾಕೊಂಡ ಕ್ಷೇತ್ರಕ್ಕೆ ಪ್ರಥಮ ಸ್ಥಾನ
-
ದಿನದ ಸುದ್ದಿ1 day agoನೀಟ್ ಪ್ರಶ್ನೆಪತ್ರಿಕೆ ಸೋರಿಕೆ; ವಿದ್ಯಾರ್ಥಿಗಳ ಆತ್ಮಹತ್ಯೆ: ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ವಿನಾಯಕ ಬಿ. ಎನ್ ಆಗ್ರಹ
-
ದಿನದ ಸುದ್ದಿ6 hours agoಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮಹಬೂಬ್ ಬಾಷಾ ಒತ್ತಾಯ



