Connect with us

ರಾಜಕೀಯ

ಸಾವು ನೋವಿಗೆ ಮಿಡಿಯದ ಹಂತಕ ವ್ಯವಸ್ಥೆ

Published

on

  • ನಾ ದಿವಾಕರ

ಭಾರತದ ರಾಜಕಾರಣ ತನ್ನ ಮಾನವೀಯ ಸ್ಪರ್ಶವನ್ನು ಕಳೆದುಕೊಂಡಿದೆ. ಅಧಿಕಾರ ರಾಜಕಾರಣದ ಮೆಟ್ಟಿಲುಗಳು ದುಬಾರಿಯಾಗುತ್ತಿರುವಂತೆಲ್ಲ ಮನುಜ ಜೀವದ ಮೌಲ್ಯ ಅಗ್ಗವಾಗುತ್ತಿದೆ. ಜನಸಾಮಾನ್ಯರ ಸಾವು ನೋವುಗಳು, ಸಂಕಷ್ಟಗಳು, ಹತಾಶೆ ಆತಂಕಗಳು ಆಳುವವರ ಪಾಲಿಗೆ ಕೇವಲ ಒಂದು ಸುದ್ದಿಯಾಗಿ ಕಾಣುತ್ತಿದೆ, ಅಥವಾ ಚುನಾವಣಾ ರಾಜಕಾರಣದ ಮಾರುಕಟ್ಟೆ ಸರಕುಗಳಂತೆ ಕಾಣುತ್ತಿವೆ. ಕಳೆದ ಒಂದು ವರ್ಷದಲ್ಲಿ ಕೋವಿದ್ ಸೋಂಕಿನಿಂದಲೇ ಭಾರತ ಎರಡು ಲಕ್ಷಕ್ಕೂ ಹೆಚ್ಚು ನಾಗರಿಕರನ್ನು ಕಳೆದುಕೊಂಡಿದೆ. ಭಾರತದಂತಹ ಸಂಕೀರ್ಣ ಸಮಾಜದಲ್ಲಿ 2 ಲಕ್ಷ ಜನರ ಸಾವು ಹತ್ತು ಲಕ್ಷ ಜನರ ಬದುಕಿಗೆ ನಿರ್ಣಾಯಕವಾಗುತ್ತದೆ. ಈ ಕನಿಷ್ಟ ಪ್ರಜ್ಞೆ ನಮ್ಮ ಈಗಿನ ರಾಜಕೀಯ ನಾಯಕರುಗಳಿಗೆ ಇಲ್ಲ ಎಂದು ಹೇಳಬೇಕಿಲ್ಲ.

ಆದರೂ ಕೊರೋನಾ ಮತ್ತೊಮ್ಮೆ ಜನಸಾಮಾನ್ಯರ ನಿತ್ಯ ಬದುಕಿನಲ್ಲಿ ಹತಾಶೆಯನ್ನುಂಟುಮಾಡಿದೆ. ಮಧ್ಯಮ, ಮೇಲ್ ಮಧ್ಯಮ ವರ್ಗಗಳಲ್ಲಿಯೇ ಈ ಸನ್ನಿವೇಶ ಹತಾಶ ಪರಿಸ್ಥಿತಿಯನ್ನು ಸೃಷ್ಟಿಸುತ್ತಿದೆ. ಏಕೆ ಹೀಗೆ ಸಾಯುತ್ತಿದ್ದಾರೆ ? ಎಂಬ ಪ್ರಶ್ನೆ ಪ್ರತಿಯೊಬ್ಬರನ್ನೂ ಕಾಡುತ್ತಿದೆ. ನಿಜ, ಸಾವಿಗೆ ಕಾರಣಗಳಿವೆ. ಕೋವಿದ್ ಸಂದರ್ಭದಲ್ಲಿ ಇತರ ದೈಹಿಕ ನ್ಯೂನತೆಗಳನ್ನು ಹೊಂದಿರುವವರು ಸುಲಭ ತುತ್ತಾಗುತ್ತಾರೆ. ನಿತ್ಯ ಬದುಕಿನ ಅನಿವಾರ್ಯತೆಗಳು ಅಸಂಖ್ಯಾತ ಜನರನ್ನು ಸಾವಿನ ದವಡೆಗೆ ದೂಡುತ್ತಿರುವುದನ್ನು ನೋಡುತ್ತಲೇ, ಸಂತಾಪ, ಶ್ರದ್ಧಾಂಜಲಿ ಮತ್ತು ಕಂಬನಿಗಳ ನಡುವೆ ಮತ್ತೊಂದು ಸಾವಿನ ಸುದ್ದಿಯ ನಿರೀಕ್ಷೆಯಲ್ಲಿ ದಿನ ಕಳೆಯುವಂತಾಗಿದೆ.

137 ಕೋಟಿ ಜನರ ಪೈಕಿ ಕೇವಲ ಎರಡು ಲಕ್ಷ ಜನರು ಸತ್ತಿದ್ದಾರೆ. ನಗಣ್ಯ ಅಲ್ಲವೇ ? ಕರ್ನಾಟಕದ ಆರೋಗ್ಯ ಸಚಿವರು ಹೌದೆನ್ನುತ್ತಾರೆ. ಚಾಮರಾಜನಗರದಲ್ಲಿ 24 ಅಮಾಯಕ ಜೀವಗಳು ಆಮ್ಲಜನಕ ಇಲ್ಲದೆ ಅಸುನೀಗಿದಾಗ, ಕೇವಲ ಮೂರೇ ಜನ ಎಂದು ಎಣಿಸಿ ಹೇಳುವವರನ್ನು ನಾವು ಆರೋಗ್ಯ ಮಂತ್ರಿ ಎಂದು ಗೌರವಿಸುತ್ತಿದ್ದೇವೆ. ಹೆಣಗಳ ಎಣಿಕೆ ನಮ್ಮ ರಾಜಕೀಯ ಜೀವನದಲ್ಲಿ ಒಂದು ಸಂಸ್ಕೃತಿಯಾಗಿಯೇ ನೆಲೆಸಿಬಿಟ್ಟಿದೆ. ಹಣ ಎಣಿಸಿ ಮತ ಗಳಿಸುವುದು, ಮತ ಎಣಿಸಿ ಅಧಿಕಾರ ಗಳಿಸುವುದು, ಹೆಣ ಎಣಿಸಿ ಅಧಿಕಾರ ಉಳಿಸಿಕೊಳ್ಳುವುದು ಇದು ನವ ಭಾರತದ ಆಡಳಿತ ಸಂಹಿತೆಯಾಗಿರುವುದನ್ನು ವಿಷಾದದಿಂದಲೇ ಒಪ್ಪಿಕೊಳ್ಳಬೇಕಿದೆ.

ವಿಜಯೋತ್ಸವದ ಗುಂಗಿನಲ್ಲಿ ಜೀವ ಹರಣ ಮಾಡುವ ಒಂದು ವಿಕೃತ ಸಂಸ್ಕೃತಿಯನ್ನೂ ನಾವೇ ಬೆಳೆಸಿಕೊಂಡುಬಂದಿದ್ದೇವೆ. ಪಶ್ಚಿಮಬಂಗಾಲದಲ್ಲಿ ತೃಣಮೂಲ ಕಾಂಗ್ರೆಸ್ ಈಗಾಗಲೇ ಒಂದು ಪ್ರಾತ್ಯಕ್ಷಿಕೆಯನ್ನು ನಮ್ಮ ಮುಂದಿಟ್ಟಿದೆ. ಸೋಲಿನ ಹತಾಶೆಯೂ ಜೀವ ನಾಶಕ್ಕೆ ಕಾರಣವಾಗುವುದನ್ನೂ ನೋಡಿದ್ದೇವೆ. ಈ ಘಟನೆಗಳು ನಮ್ಮ ಪ್ರಜ್ಞೆಯನ್ನು ಕಲಕುವುದಿಲ್ಲ, ತಾತ್ವಿಕ ನೆಲೆಯಲ್ಲಿ ಅಪರಾಧಿಗಳ ಶೋಧಕ್ಕೆ ಪ್ರೇರೇಪಿಸುತ್ತವೆ. ಏಕೆ ಹೀಗಾಗುತ್ತಿದೆ ಎಂಬ ಜಿಜ್ಞಾಸೆ ನಮ್ಮನ್ನು ಮತ್ತಷ್ಟು ಚಿಂತನೆಗೆ ದೂಡುವುದಿಲ್ಲ. ಬದಲಾಗಿ ರಾಜಕೀಯ/ಸೈದ್ಧಾಂತಿಕ ಗೋಡೆಗಳ ಹಿಂದೆ ನಿಂತು ಹೆಣಗಳಲ್ಲಿ ಅಧಿಕಾರದ ಮೆಟ್ಟಿಲುಗಳನ್ನು ಕಾಣತೊಡಗುತ್ತೇವೆ. ಹಾಗಾಗಿಯೇ ಸಾವಿರಾರು ಸಾವುಗಳನ್ನು ಸಂಭ್ರಮಿಸುವ ಮನಸುಗಳೂ ಏಳೆಂಟು ಜೀವಗಳಿಗೆ ಲೆಕ್ಕ ಕೇಳಲು ಮುಂದಾಗುತ್ತವೆ.

ಇದನ್ನೂ ಓದಿ |ರಾಜ್ಯದಲ್ಲಿ ಮೇ 10 ರಿಂದ ಸಂಪೂರ್ಣ ಲಾಕ್ ಡೌನ್ ಘೋಷಣೆ

ಇಲ್ಲಿ ನಮಗೆ ಜಾರ್ಜ್ ಫ್ಲಾಯ್ಡ್ ಮತ್ತೆ ನೆನಪಾಗುತ್ತಾನೆ. #ನನಗೆಉಸಿರಾಡಲಾಗುತ್ತಿಲ್ಲ ಎನ್ನುವ ಆ ಹತಾಶೆಯ ಧ್ವನಿ ಭಾರತದ ಉದ್ದಗಲಕ್ಕೂ ಧ್ವನಿಸುತ್ತಲೇ ಇದೆ. ಇಲ್ಲಿ ಜನಸಾಮಾನ್ಯರ ಕತ್ತು ಹಿಸುಕುತ್ತಿರುವುದು ಪೊಲೀಸರಲ್ಲ, ಒಂದು ವೈರಾಣು. ಉಸಿರಾಡುವ ಗಾಳಿ ಒದಗಿಸುವ ಹೊಣೆ ಆಡಳಿತ ನಿರ್ವಹಣೆ ಮಾಡುವ ಸರ್ಕಾರದ್ದು. ಎಷ್ಟು ಸುಂದರ ಶ್ರೇಣೀಕೃತ ಅಧಿಕಾರದ ಮೆಟ್ಟಿಲುಗಳನ್ನು ನಾವು ಸೃಷ್ಟಿಸಿಕೊಂಡಿದ್ದೇವೆ. ಮಂಡಲ ಪಂಚಾಯತಿಯಿಂದ ಸಂಸತ್ತಿನವರೆಗೆ. ಈ ಮೆಟ್ಟಲುಗಳ ಮೇಲೆ ನಡೆದಾಡುವ ಸಾಲಂಕೃತ ಪ್ರತಿನಿಧಿಗಳಿಗೆ ಮನುಜ ಪ್ರಜ್ಞೆ ಇದ್ದಿದ್ದರೆ ಬಹುಶಃ ಭಾರತ ಸಾವಿನ ಕೂಪ ಆಗುತ್ತಿರಲಿಲ್ಲ. ನಮ್ಮ ದೂಷಣೆಗೆ, ನಿಂದನೆಗೆ ಈಗ ಚೀನಾ, ಜಮಾತ್, ತಬ್ಲೀಗಿಗಳು ನಿಲುಕುವುದಿಲ್ಲ. ಅದು ಮುಗಿದ ಅಧ್ಯಾಯ.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೊರೋನಾ ನಿಭಾಯಿಸಲು ಸಿದ್ಧತೆ ನಡೆಸುತ್ತಿರುವುದನ್ನು ನೋಡಿದರೆ ನಮ್ಮ ದೇಶಕ್ಕೆ ಕೋವಿದ್ 19 ಈ ವರ್ಷವೇ ಪ್ರವೇಶಿಸಿದೆ ಎಂದು ಭಾಸವಾಗುತ್ತದೆ. ಆರು ತಿಂಗಳ ಕಾಲ ಮೈಮರೆತು ನಿದ್ರಿಸಿದ ಆಡಳಿತ ವ್ಯವಸ್ಥೆ ಈ ಒಮ್ಮೆಲೆ ಪುಟಿದೆದ್ದು ನಿಲ್ಲಲು ಸಾಧ್ಯವಾಗುತ್ತಿಲ್ಲ. ಏಕೆಂದರೆ ನಮ್ಮ ದೇಶದ ಆರೋಗ್ಯ ವ್ಯವಸ್ಥೆಗೆ ಸುಭದ್ರ ಬುನಾದಿ ಇಲ್ಲ. ಸಾಂದರ್ಭಿಕ, ಸಮಯೋಚಿತ ಕ್ರಮಗಳನ್ನು ಕೈಗೊಳ್ಳುವುದನ್ನು ನಿರ್ವಹಣೆ ಎನ್ನುವುದಿಲ್ಲ, ಮೇಲ್ವಿಚಾರಣೆ ಎನ್ನುತ್ತಾರೆ. ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿದಂತೆ ನಮ್ಮ ಸರ್ಕಾರಗಳು ಮಾಡುತ್ತಿರುವುದು ಮೇಲ್ವಿಚಾರಣೆ ಮಾತ್ರ.

ಹಾಗಾಗಿಯೇ ಈಗ ದೇಶಾದ್ಯಂತ ಹಾಹಾಕಾರ ಎದ್ದಿದೆ. ಆಸ್ಪತ್ರೆಯ ಸೌಲಭ್ಯಗಳಿಲ್ಲ, ಹಾಸಿಗೆಗಳು ದೊರೆಯುತ್ತಿಲ್ಲ, ಆಕ್ಸಿಜನ್ ಪೂರೈಕೆಯಾಗುತ್ತಿಲ್ಲ, ವೆಂಟಿಲೇಟರ್ ಕೊರತೆ ಇದೆ, ರೆಮಿಡಿಸಿವಿರ್‍ನಂತಹ ಔಷಧಿಗಳಿಗೂ ಕೊರತೆ ಇದೆ. ಆದರೆ ಎಲ್ಲವೂ ಕಾಳಸಂತೆಯಲ್ಲಿ ದೊರೆಯುತ್ತಿದೆ. ಇಂತಹ ವಿಷಮ ಸನ್ನಿವೇಶದಲ್ಲೂ ಕರಾಳದಂಧೆಯೇ ಎಂದು ಹುಬ್ಬೇರಿಸುವುದು ಸಹಜ. ಅಚ್ಚರಿ ಬೇಕಿಲ್ಲ ಏಕೆಂದರೆ, ಇದು ಮಾರುಕಟ್ಟೆ ಪ್ರಪಂಚ. ಹೆಣವೂ ಬಿಕರಿಯಾಗುವ ಕರಾಳ ಮಾರುಕಟ್ಟೆಯಲ್ಲಿ ನಾವು ಮೌಲ್ಯಯುತ ಆಡಳಿತದ ನಿರೀಕ್ಷೆಯಲ್ಲಿದ್ದೇವೆ. ಕಾಳಸಂತೆ ವ್ಯಾಪಾರದ ಮೂಲ ಇರುವುದೇ ಸರಬರಾಜಿನ ಕೊರತೆಯಲ್ಲಿ, ಉತ್ಪಾದನೆಯ ಕೊರತೆಯಲ್ಲಿ ಅಲ್ಲ. ಈ ಸರಬರಾಜು ಅನಿರ್ಬಂಧಿತವಾಗಿ, ಶಿಸ್ತುಬದ್ಧತೆಯಿಂದ, ಕಾನೂನುರೀತ್ಯಾ ಚಾಲ್ತಿಯಲ್ಲಿರಬೇಕೆಂದರೆ ಇದನ್ನು ನಿರ್ವಹಿಸಲು ಒಂದು ಜವಾಬ್ದಾರಿಯುತ ಸರ್ಕಾರ ಅಗತ್ಯ.

ನಮ್ಮ ಕೊರತೆ ಇರುವುದೇ ಇಲ್ಲಿ. ಕಳೆದ ಎರಡು ದಶಕಗಳಲ್ಲಿ ನಾವು ಶಾಸನಸಭೆಗಳಿಗೆ ಆಯ್ಕೆ ಮಾಡುತ್ತಿರುವುದು ವ್ಯಾಪಾರಿಗಳನ್ನೇ ಹೊರತು, ನುರಿತ ಪ್ರಜ್ಞಾವಂತ ರಾಜಕಾರಣಿಗಳನ್ನು ಅಲ್ಲ. ಸಾಮಾಜಿಕ ಜನಾಂದೋಲನಗಳು, ಜನಪರ ಚಳುವಳಿಗಳು, ಕಾರ್ಮಿಕ ಹೋರಾಟಗಳ ಮಧ್ಯದಿಂದ ಮುನ್ನೆಲೆಗೆ ಬಂದಿರುವವರು ಮತ್ತು ಬೌದ್ಧಿಕವಾಗಿ ಪ್ರಬುದ್ಧತೆ ಹೊಂದಿರುವ ವ್ಯಕ್ತಿಗಳು ಅಧಿಕಾರ ರಾಜಕಾರಣದ ಚೌಕಟ್ಟಿನಿಂದಲೇ ಹೊರಗಿದ್ದಾರೆ.

ಒಂದು ವೇಳೆ ಒಳಗಿದ್ದರೂ ಬಹಿಷ್ಕೃತರಾಗಿ, ನಿರ್ಲಕ್ಷಿತರಾಗಿ ಅಧಿಕಾರ ಕೇಂದ್ರಗಳಿಂದ ದೂರವೇ ಇರುತ್ತಾರೆ. ಸೂಕ್ಷ್ಮ ಸಂವೇದನೆಯ ಅರ್ಥವನ್ನಾದರೂ ಅರಿತಿರುವ ಇಂಥವರ ಸ್ಥಾನವನ್ನು ಗುತ್ತಿಗೆದಾರರು, ಗಣಿ ಉದ್ಯಮಿಗಳು, ರಿಯಲ್ ಎಸ್ಟೇಟ್ ಉದ್ಯಮಿಗಳು, ಕೈಗಾರಿಕೋದ್ಯಮಿಗಳು, ದಂಗೆಕೋರರು, ಮಾಫಿಯಾಗಳು, ಕ್ರಿಮಿನಲ್ ಹಿನ್ನೆಲೆಯುಳ್ಳವರು ಆಕ್ರಮಿಸಿಕೊಳ್ಳುತ್ತಿದ್ದಾರೆ.

ಅಧಿಕಾರ ಸ್ಥಾನಗಳನ್ನು ಆಕ್ರಮಿಸಿಕೊಳ್ಳುವವರು ಇಂತಹ ಜನಪ್ರತಿನಿಧಿಗಳಿಗೆ ಬದ್ಧರಾಗಿರುತ್ತಾರೆ ಅಥವಾ ಕೆಲವೊಮ್ಮೆ ಇದೇ ಹಿನ್ನೆಲೆ ಇರುವವರೂ ಆಗಿರುತ್ತಾರೆ. ಸುಸ್ಥಿರ ಸರ್ಕಾರ ಎನ್ನುವ ಕಲ್ಪನೆ ಈ ಸ್ವಾರ್ಥ ರಾಜಕಾರಣವನ್ನು ಸಂರಕ್ಷಿಸುವ ಒಂದು ಪ್ರಜಾಸತ್ತಾತ್ಮಕ ವಿಧಾನ ಎಂದಷ್ಟೇ ಹೇಳಬಹುದು. ಆದ್ದರಿಂದಲೇ ಎಂತಹ ಪ್ರಮಾದವೇ ನಡೆದರೂ, ನೂರಾರು ಜನರ ಸಾವು ಸಂಭವಿಸಿದರೂ ಸಚಿವರೊಬ್ಬರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡುವ ದೃಶ್ಯವನ್ನು ಕಲ್ಪಿಸಿಕೊಳ್ಳಲೂ ಸಾಧ್ಯವಾಗುವುದಿಲ್ಲ. ಈ ರಾಜಕೀಯ ನಾಯಕರುಗಳಿಗೆ ತಮ್ಮ ಸ್ವಹಿತಾಸಕ್ತಿ ಮತ್ತು ತಾವು ನಂಬಿರುವ ಪಕ್ಷದ ಅಧಿಕಾರಾಸಕ್ತಿ ಎರಡೇ ಮುಖ್ಯವಾಗುತ್ತದೆ. ಜನರ ಸಾವು ನೋವುಗಳು ನಗಣ್ಯ ಎನಿಸಿಬಿಡುತ್ತವೆ.

ಇದನ್ನು ಚಾಮರಾಜನಗರದಲ್ಲಿ ಸಂಭವಿಸಿದ 24 ಸಾವುಗಳ ಹಿನ್ನೆಲೆಯಲ್ಲೇ ಗಮನಿಸಬಹುದು. ಸಂಸದ ತೇಜಸ್ವಿ ಸೂರ್ಯ ತಮ್ಮ ರಹಸ್ಯ ಕಾರ್ಯಾಚರಣೆಯ ಮೂಲಕ ಬಯಲಿಗೆಳೆದಿರುವ ಬೆಡ್ ಬ್ಲಾಕಿಂಗ್ ಹಗರಣದಲ್ಲೂ ಗಮನಿಸಬಹುದು. ಈ ಅವಘಡಗಳಿಗೆ ಯಾರು ಕಾರಣ ? ಎರಡೂ ಪ್ರಕರಣಗಳಲ್ಲಿ ಯಾವುದೋ ಅಗೋಚರ ಮಾಫಿಯಾ ಕೈವಾಡವಿರುತ್ತದೆ. ಉನ್ನತ ಮಟ್ಟದ ಅಧಿಕಾರಿಗಳಿಂದ ವಿಧಾನಸೌಧದವರೆಗೆ ಈ ಮಾಫಿಯಾದ ಬಾಹುಗಳು ಚಾಚಿರುತ್ತವೆ. ಬಿಬಿಎಂಪಿ ಹಗರಣದ ಹಿಂದೆ ಅಲ್ಲಿ ಗುತ್ತಿಗೆ ಕೆಲಸ ಮಾಡುವ ಕೆಳಮಟ್ಟದ ಅಧಿಕಾರಿಗಳೋ ಅಥವಾ ಗುತ್ತಿಗೆ ನೌಕರರೋ ಕಾರಣವಾಗಿರುವುದಿಲ್ಲ. ಇವರು ನಿಮಿತ್ತ ಮಾತ್ರ. ಬಿಬಿಎಂಪಿ ಉಸ್ತುವಾರಿ ಸಚಿವರ ಗಮನಕ್ಕೆ ಬಾರದೆ ಇಷ್ಟೆಲ್ಲಾ ನಡೆದಿರುತ್ತದೆ ಎಂದು ನಂಬಲು ಆಧಾರಗಳೂ ಇಲ್ಲ.

ಇಲ್ಲಿ ನಾವು ಗಮನಿಸಬೇಕಿರುವ ಒಂದು ಸಂಗತಿ ಇದೆ. ಮಂಡಲ್ ಪಂಚಾಯತ್ ಹಂತದಿಂದ ದೆಹಲಿಯವರೆಗೆ ಪ್ರತಿಯೊಂದು ಹಂತದಲ್ಲೂ ಒಬ್ಬ ಜವಾಬ್ದಾರಿಯುತ ಜನಪ್ರತಿನಿಧಿ ಇರುತ್ತಾನೆ. ಈ ಪ್ರತಿನಿಧಿಗೆ ತನ್ನ ಸುತ್ತಲಿನ ಆಡಳಿತದ ಮೇಲ್ವಿಚಾರಣೆ ನಡೆಸುವ ಅಧಿಕಾರ ಮತ್ತು ನೈತಿಕ ಹೊಣೆ ಇರುತ್ತದೆ. ಕನಿಷ್ಟ ತನ್ನ ಚುನಾವಣಾ ಕ್ಷೇತ್ರದ ವ್ಯಾಪ್ತಿಯಲ್ಲಿ ಏನು ನಡೆಯುತ್ತಿದೆ ಎಂದು ಅರಿತಿರಬೇಕಾದ್ದು ಈ ಪ್ರತಿನಿಧಿಯ ಸಾಂವಿಧಾನಿಕ ಕರ್ತವ್ಯವಲ್ಲವೇ ? ಆಡಳಿತ ನಿರ್ವಹಣೆಯಲ್ಲಿ ಉಂಟಾಗುವ ಪ್ರತಿಯೊಂದು ಲೋಪವನ್ನೂ ಗಮನಿಸಿ ಸರಿಪಡಿಸಲು ಒಬ್ಬ ಸಚಿವ ಇರುತ್ತಾನೆ. ನಡುವೆ ಸು(ಉ)ಸ್ತುವಾರಿ ಸಚಿವರೂ ಇರುತ್ತಾರೆ. ಸಚಿವರನ್ನು ಗಮನಿಸಲು ಮುಖ್ಯಮಂತ್ರಿಯ ಕುರ್ಚಿ ಇರುತ್ತದೆ. ಈ ಸರಪಳಿಯ ಒಂದು ಕೊಂಡಿ ಸಡಿಲವಾದರೂ ಅವಘಡಗಳು ಸಂಭವಿಸುತ್ತವೆ. ಆದರೆ ಹೊಣೆ ಯಾರದು ?

ಇಲ್ಲಿ ಅಧಿಕಾರ ರಾಜಕಾರಣದ ತೋಳ್ಬಲ ಮುನ್ನೆಲೆಗೆ ಬರುತ್ತದೆ. ಚಾಮರಾಜನಗರದ ಆಸ್ಪತ್ರೆಯಲ್ಲಿ ಆಮ್ಲಜನಕ ಕೊರತೆಯಿಂದ ಸತ್ತಿದ್ದು ಮೂರೇ ಜನ ಎಂದು ರಾಜ್ಯ ಆರೋಗ್ಯ ಸಚಿವರು ಹೇಳುತ್ತಾರೆ. ಅಂದರೆ ಉಳಿದವರೇನು ಆತ್ಮಹತ್ಯೆ ಮಾಡಿಕೊಂಡರೇ ? ಮೂರೇ ಜನ ಸತ್ತರು ಎಂದರೆ ಆ ಮೂರು ಜೀವಗಳಿಗೆ ಮೌಲ್ಯ ಇಲ್ಲವೇ ? ಇಂತಹ ದಾರುಣ ಸಾವು ಸಂಭವಿಸಿದರೂ, ಇಷ್ಟೆಲ್ಲಾ ಅನಾಹುತವಾದರೂ ಕೊಂಚವೂ ಪಾಪಪ್ರಜ್ಞೆ ಇಲ್ಲದೆ ತಮ್ಮ ಸ್ಥಾನಭದ್ರತೆಗಾಗಿ ಅನ್ಯ ಮಾರ್ಗಗಳನ್ನು ಹುಡುಕುತ್ತಾ ಹೋಗುವಂತಹ ಪ್ರತಿನಿಧಿಗಳನ್ನು ನಾವು ಆಯ್ಕೆ ಮಾಡಿದ್ದೇವೆ. ಇವರೇಕೆ ಹೀಗೆ ? ಏಕೆಂದರೆ ಇವರು ಮೂಲತಃ ವ್ಯಾಪಾರಿಗಳು. ಗುತ್ತಿಗೆದಾರರು. ಸಾವು, ನೋವು, ನಷ್ಟ, ಸಂಕಷ್ಟ ಎಲ್ಲವೂ ವ್ಯಾಪಾರದ ಒಂದು ಭಾಗ. ಅಷ್ಟೇ ಅಲ್ಲವೇ ?

ಭೂಪಾಲ್ ಅನಿಲ ದುರಂತದಿಂದ ವಿಶಾಖಪಟ್ಟಣಂ ದುರಂತದವರೆಗೆ, ಇತ್ತೀಚೆಗೆ ಕರ್ನಾಟಕದಲ್ಲೇ ನಡೆದ ಗಣಿ ಸ್ಪೋಟದವರೆಗೆ ಪ್ರಾಣ ಕಳೆದುಕೊಂಡ ಅಮಾಯಕ ಕಾರ್ಮಿಕರಿಗೆ ಪರಿಹಾರದ ಚೆಕ್ ಹೊರತುಪಡಿಸಿ ಮತ್ತಾವ ಪರಿಹಾರ ದೊರೆತಿದೆ ? ಈಗ ಕೊರೋನಾ ಪೀಡಿತರೂ ಇವರ ಸಾಲಿಗೇ ಸೇರುತ್ತಾರೆ. ಕೊರೋನಾ ಸೋಂಕು ಹೆಚ್ಚಾಗುತ್ತಿದೆ ಎಂದು ತಿಳಿದಿದ್ದರೂ ಚುನಾವಣಾ ಸಭೆಗಳನ್ನು ನಡೆಸಿ, ಲಕ್ಷಾಂತರ ಜನರು ಸೇರುವಂತೆ ಮಾಡಿದ ರಾಜಕೀಯ ಪಕ್ಷಗಳು ಹೊಣೆ ಹೊರುವುದಿಲ್ಲ. ಭಾರತ ಕೋವಿದ್ ವಿರುದ್ಧ ಗೆದ್ದಿದೆ ಎಂದು ಆತ್ಮರತಿಯಿಂದ ಬೀಗಿದ ಪ್ರಧಾನಮಂತ್ರಿ ಇಂದಿನ ಪರಿಸ್ಥಿತಿಗೆ ನೈತಿಕ ಹೊಣೆ ಹೊರುವುದಿಲ್ಲ. ಕುಂಭಮೇಳ ನಡೆಸಿದ ಉತ್ತರಖಾಂಡ ಸರ್ಕಾರ ಹೊಣೆ ಹೊರುವುದಿಲ್ಲ. ಏಕೆಂದರೆ ಬಲಿಯಾಗುತ್ತಿರುವ ಮತದಾರರು, ಮತ್ತೊಂದು ಮತದಾನದ ವೇಳೆಗೆ ಇವೆಲ್ಲವನ್ನೂ ಮರೆತಿರುತ್ತಾರೆ.

ಇಂದು ಭಾರತ ಕೋವಿದ್ 19 ಹಿನ್ನೆಲೆಯಲ್ಲಿ ಎದುರಿಸುತ್ತಿರುವ ಮೂಲ ಸಮಸ್ಯೆಗಳೆಂದರೆ, ಆಮ್ಲಜನಕ ಪೂರೈಕೆ, ಆಕ್ಸಿಜನ್ ಇರುವ ಹಾಸಿಗೆಯ ಕೊರತೆ, ಸೋಂಕಿತರಿಗೆ ಆಸ್ಪತ್ರೆಗಳ ಕೊರತೆ, ಕೆಲವೆಡೆ ರೆಮಿಡಿಸಿವರ್ ನಂತಹ ಶಮನಕಾರಿ ಔಷಧಿಯ ಕೊರತೆ , ವೆಂಟಿಲೇಟರ್ ಕೊರತೆ. ಈ ಕೊರತೆಗಳು ಸೃಷ್ಟಿಯಾಗಲು ಕಾರಣವೇನು ? ಕೇಂದ್ರ ಸರ್ಕಾರ ಭಾರತ ಕೋವಿದ್ ಮುಕ್ತವಾಗಿದೆ ಎಂಬ ಆತ್ಮರತಿಯಲ್ಲಿ ಮುಳುಗಿಹೋಗಿದ್ದುದು. ಬಿಜೆಪಿಯ ರಾಷ್ಟ್ರೀಯ ಕಾರ್ಯಕಾರಿ ಸಮಿತಿಯಲ್ಲಿಯೂ ಇದೇ ಸ್ವಪ್ರಶಂಸೆಯ ಮಾತುಗಳನ್ನು ದಾಖಲಿಸಲಾಗಿದೆ. ಈ ಎಲ್ಲ ಕೊರತೆಗಳು ಕಳೆದ ಬಾರಿಯ ಕೋವಿದ್ ಸಂದರ್ಭದಲ್ಲೂ ತಲೆದೋರಿದ್ದವು ಎಂದ ಮೇಲೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬಹುದಿತ್ತಲ್ಲವೇ ? ಈ ಲೋಪಕ್ಕೆ ಯಾರು ಹೊಣೆ. ನಮ್ಮ ಜನಪ್ರತಿನಿಧಿಗಳಿಗೆ ನೈತಿಕತೆ ಇದ್ದರೆ ಪ್ರಧಾನಿಯಿಂದ ಮಂಡಲ ಪಂಚಾಯತಿ ಸದಸ್ಯನವರೆಗೂ ಈ ಹೊಣೆ ಹೊರಬೇಕಾಗುತ್ತದೆ.

ಪ್ರಜಾತಂತ್ರ ವ್ಯವಸ್ಥೆ ಇದನ್ನೇ ಬಯಸುತ್ತದೆ. ಆದರೆ ನಾವು ಪ್ರಜಾತಂತ್ರವನ್ನು ಮತಪೆಟ್ಟಿಗೆಯಿಂದ ಹೊರತೆಗೆದೇ ಇಲ್ಲ. ಪ್ರಜಾತಂತ್ರದ ಸಾಂವಿಧಾನಿಕ ಮೌಲ್ಯಗಳ ಪರಿವೆಯೇ ಇಲ್ಲದ ಉದ್ಯಮಿಗಳನ್ನು ನಾವೇ ಆಯ್ಕೆ ಮಾಡಿದ್ದೇವೆ. ಊಳಿಗಮಾನ್ಯ ಧೋರಣೆಯಿಂದ ಇಂದಿಗೂ ಹೊರಬರದ ಈ ಔದ್ಯಮಿಕ ಹಿತಾಸಕ್ತಿಗಳಿಗೆ ಪ್ರಜೆಗಳ ಅಮೂಲ್ಯ ಜೀವಗಳೂ ಮಾರುಕಟ್ಟೆ ಸರಕುಗಳಂತೆಯೇ ಕಾಣುತ್ತವೆ. ಅನಿಲ ಸೋರಿಕೆಯೋ, ಬಾಂಬ್ ಸ್ಫೋಟವೋ, ರೈಲು ಅಪಘಾತವೋ, ಕೋಮು ದಂಗೆಯೋ, ಹತ್ಯಾಕಾಂಡವೋ, ಭಯೋತ್ಪಾದನೆಯೋ ಜೀವ ಕಳೆದುಕೊಳ್ಳುವ ದೇಹಗಳು ಹೆಣಗಳ ಎಣಿಕೆಯ ನಂತರ ನಗಣ್ಯವಾಗಿಬಿಡುತ್ತದೆ. ಚಾಮರಾಜನಗರದ 24 ಶವಗಳಿಗೂ, ದೇಶಾದ್ಯಂತ ನಿತ್ಯ ಆಮ್ಲಜನಕ ಇಲ್ಲದೆ ಸಾಯುತ್ತಿರುವವರಿಗೂ ವ್ಯತ್ಯಾಸವೇನಾದರೂ ಇದ್ದರೆ ಅದು ಭೌಗೋಳಿಕ ಅಂತರವಷ್ಟೇ.

ಕೊರೋನಾ ನಮ್ಮನ್ನು ಕೊಲ್ಲುತ್ತಿಲ್ಲ. ಸುದ್ದಿಮನೆಗಳಲ್ಲಿ ಹೇಳುವಂತೆ ಅದು ಮಹಾಮಾರಿಯೂ ಅಲ್ಲ, ಹೆಮ್ಮಾರಿಯೂ ಅಲ್ಲ, ರಣಚಂಡಿಯೂ ಅಲ್ಲ. ಈ ವೈರಾಣುವನ್ನು ಎದುರಿಸಲು ಅಗತ್ಯವಾಗಿದ್ದ ಆರೋಗ್ಯ ವ್ಯವಸ್ಥೆಯನ್ನು ನಿರ್ವಹಿಸುವಲ್ಲಿ ನಮ್ಮ “ರಣಕಲಿಗಳು ” ವಿಫಲವಾಗಿರುವುದು ಈ ಸಾವುಗಳಿಗೆ ಕಾರಣ. ಮತ್ತೆ ಫ್ಲಾಯ್ಡ್ ನೆನಪಾಗುತ್ತಾನೆ. #ನನಗೆಉಸಿರಾಡಲಾಗುತ್ತಿಲ್ಲ ಎನ್ನುವ ನೋವಿನ ಧ್ವನಿಗಳು ನಮ್ಮ ನಡುವೆ ಕೇಳಿಬರುತ್ತಲೇ ಇದೆ. ಸರ್ಕಾರಗಳು ಕೋವಿದ್ ವಿರುದ್ಧ ಹೋರಾಡಲಿ. ನಾವು ಹೋರಾಡಬೇಕಿರುವುದು ಈ ಹಂತಕ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುತ್ತಿರುವ ಹೊಣೆಗೇಡಿ ರಾಜಕೀಯ ಶಕ್ತಿಗಳ ವಿರುದ್ಧ. ಇಲ್ಲವಾದಲ್ಲಿ ಫ್ಲಾಯ್ಡ್‍ಗಳ ಸಂಖ್ಯೆ ಹೆಚ್ಚಾಗುತ್ತಲೇ ಹೋಗುತ್ತದೆ. #ನನಗೆಉಸಿರಾಡಲಾಗುತ್ತಿಲ್ಲ ಈ ನೋವಿನ ಧ್ವನಿ ಸಾರ್ವತ್ರಿಕವಾಗಿಬಿಡುತ್ತದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ಮಾನವ ಸಂಪನ್ಮೂಲ ನೀತಿ ಗುತ್ತಿಗೆ ನೌಕರರಿಗೆ ಮಾರಕ | ನೀತಿ ರದ್ದುಗೊಳಿಸಲು ಶಾಸಕ ಜೆ.ಎಸ್.ಬಸವಂತಪ್ಪಗೆ ಮನವಿ

Published

on

ಸುದ್ದಿದಿನ,ದಾವಣಗೆರೆ: ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳ ಪ್ರಸ್ತಾವನೆ ಎನ್ಎಚ್ ಎಂ ಸಿಬ್ಬಂದಿಗಳಲ್ಲಿ ಆತಂಕ ಮೂಡಿಸಿದ್ದು, ಮುಖ್ಯಮಂತ್ರಿಗಳು ಹಾಗೂ ಆರೋಗ್ಯ ಸಚಿವರು ಮಧ್ಯಸ್ತಿಕೆ ವಹಿಸಿ ಸರಿಪಡಿಸಲು ಶಿಪಾರಸ್ಸು ಮಾಡಬೇಕು. ಈ ಬಗ್ಗೆ ಬೆಳಗಾವಿಯ ಚಳಿಗಾಲ ಅಧಿವೇಶನದಲ್ಲಿ ಪ್ರಸ್ತಾಪ ಮಾಡಬೇಕೆಂದು ಕರ್ನಾಟಕ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆ ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರ ಸಂಘದ ಜಿಲ್ಲಾ ಪದಾಧಿಕಾರಿಗಳು ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ ಅವರಿಗೆ ಶನಿವಾರ ಮನವಿ ಸಲ್ಲಿಸಿದರು.

ರಾಷ್ಟ್ರೀಯ ಆರೋಗ್ಯ ಅಭಿಯಾನ ಅಡಿಯಲ್ಲಿ ಗುತ್ತಿಗೆ ಆಧಾರದ ಮೇಲೆ ಸುಮಾರು 30 ಸಾವಿರ ಸಿಬ್ಬಂದಿಗಳು ಕರ್ತವ್ಯ ನಿರ್ವಹಿಸುತ್ತಿದ್ದು, ಈ ಸಿಬ್ಬಂದಿಗಳಿಗೆ ನೇಮಕಾತಿ ಮತ್ತು ವರ್ಗಾವಣೆ ಒಳಗೊಂಡು ಮಾನವ ಸಂಪನ್ಮೂಲ (HR Policy) ನೀತಿಯನ್ನು ಜಾರಿಗೊಳಿಸುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು ಕಳೆದ ಅ.28ರಂದು ಆದೇಶ ಹೊರಡಿಸಿ, ಅಭಿಯಾನ ನಿರ್ದೇಶಕರು, ಮುಖ್ಯ ಆಡಳಿತಾಧಿಕಾರಿಗಳು ಹಾಗೂ ಮುಖ್ಯ ಆರ್ಥಿಕ ಅಧಿಕಾರಿಗಳಿಗೆ ವರದಿ ನೀಡಲು ಸೂಚನೆ ನೀಡಿದ್ದಾರೆ.

ಈ ವಿಷಯದ ಬಗ್ಗೆ ಈಗಾಗಲೇ ಅಭಿಯಾನ ನಿರ್ದೇಶಕರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಎಲ್ಲಾ ಗುತ್ತಿಗೆ ನೌಕರರ ವೃಂದವಾರು ಸಂಘಟನೆಗಳ ಅಭಿಪ್ರಾಯ ನೀಡಲಾಗಿದೆ. ಎಲ್ಲಾ ಸಂಘಟನೆಗಳು ಈ ಒಂದು ಹೊಸ ಸಿಬ್ಬಂದಿಗಳಿಗೆ ಮಾರಕ ಇರುವಂತಹ ಮಾನವ ಸಂಪನ್ಮೂಲ ನೀತಿಯನ್ನು ಜಾರಿಗೊಳಿಸಲು ವಿರೋಧ ವ್ಯಕ್ತಪಡಿಸಿವೆ.

ಸರ್ಕಾರ ಈಗ ನೀಡುತ್ತಿರುವ ಕಡಿಮೆ ವೇತನದಲ್ಲಿ ಈ ಸಿಬ್ಬಂದಿಗಳು ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದಾರೆ. ಈ ಸಿಬ್ಬಂದಿಗಳಿಗೆ ಖಾಯಂ ಸಿಬ್ಬಂದಿಗಳಂತೆ ಕಡ್ಡಾಯ ವರ್ಗಾವಣೆ ಮಾಡಿದರೆ ಈ ಕಡಿಮೆ ವೇತನದಲ್ಲಿ ಕುಟುಂಬ ನಿರ್ವಹಣೆ ಹೇಗೆ ಸಾಧ್ಯ? ಮೂರು ಮೂರು ತಿಂಗಳಿಗೊಮ್ಮೆ ವೇತನ ಆಗುತ್ತಿದ್ದು ಬೇರೆ ಜಿಲ್ಲೆಗೆ ಕಡ್ಡಾಯ ವರ್ಗಾವಣೆ ಮಾಡಿದ್ದರೆ ಮನೆ ಬಾಡಿಗೆ ಕಟ್ಟಲಾಗದೇ ಬೀದಿಗೆ ಬರಬೇಕಿದೆ ಎಂದು ಶಾಸಕರಿಗೆ ಮನವರಿಕೆ ಮಾಡಿದರು.

ಒಂದು ವೇಳೆ ಇಂತಹ ಕ್ರಮ ಕೈಗೊಂಡರೆ ಖಾಯಂ ಸಿಬ್ಬಂದಿಗಳಿಗೆ ನೀಡಿದಂತೆ ಎಲ್ಲಾ ಸೌಕರ್ಯ ಹಾಗೂ ಖಾಯಂ ಸೇರಿದಂತೆ ವೇತನ ಹೆಚ್ಚಳ ಮಾಡಿ, ಟಿಎ, ಡಿಎ, ಎಚ್ ಆರ್ ಎ ನೀಡಿ ಇಂತಹ ಆದೇಶ ಮಾಡಬೇಕು. ಸಿಬ್ಬಂದಿಗಳಿಗೆ ಬೆನ್ನು ತಟ್ಟಿ ಕೆಲಸ ಮಾಡಿಸಿಕೊಳ್ಳಬೇಕು.ಅದು ಬಿಟ್ಟು ಹೊಟ್ಟೆ ಮೇಲೆ ಹೊಡೆಯುವಂತಹ ಯಾವುದೇ ಆದೇಶ ಹೊರಡಿಸುವುದು ಎಷ್ಟು ಸರಿ ಎಂದು ಸಿಬ್ಬಂದಿಗಳು ಪ್ರಶ್ನೆ ಮಾಡಿದ್ದಾರೆ.

ಪ್ರಧಾನ ಕಾರ್ಯದರ್ಶಿಗಳ ಈ ಒಂದು ಪತ್ರ 30 ಸಾವಿರ ನೌಕರರಿಗೆ ಆತಂಕ ಸೃಷ್ಟಿ ಮಾಡಿದೆ. ಇದು ಈ ವರ್ಷದಲ್ಲಿ ಮೊದಲ ಸಾರಿ ಅಲ್ಲದೆ ಇದೇ ವರ್ಷ ಸಾಕಷ್ಟು ಮಾನಸಿಕ ಒತ್ತಡ ಹೆಚ್ಚಳವಾಗಿರುವ ಅನೇಕ ಆದೇಶ ಮಾಡಿದ್ದಾರೆ.

ಪ್ರತಿ ವರ್ಷ ಏಪ್ರಿಲ್ ಒಂದನೇ ತಾರೀಖು ಎಲ್ಲಾ ನೌಕರರಿಗೆ ಒಂದು ದಿವಸ ವಿರಾಮ ನೀಡಿ ಮುಂದುವರೆಸುತ್ತಿದ್ದು 2005 ರಿಂದ ಸುಮಾರು 20 ವರ್ಷಗಳವರೆಗೆ ಈ ಪದ್ಧತಿ ನಡೆದುಕೊಂಡು ಬಂದಿದೆ. ಆದರೆ ಈ ವರ್ಷ ಏಕಾಏಕಿ ಕೇವಲ 15 ದಿವಸ ವಿಸ್ತರಣೆ ನೀಡಿ, ತದನಂತರ ಒಂದು ತಿಂಗಳು ವಿಸ್ತರಣೆ ನೀಡಿ ಆಮೇಲೆ ಮೂರು ತಿಂಗಳ ವಿಸ್ತರಣೆ ನೀಡಿ ತದನಂತರ ಸಿಬ್ಬಂದಿಗಳಿಗೆ ಕರ್ತವ್ಯದಿಂದ ವಿಮುಕ್ತಿಗೊಳಿಸುವ ಆದೇಶ ನೀಡಿದ್ದು ನಮ್ಮ ಸಂಘಟನೆಯಿಂದ ಕೋರ್ಟ್ ನಲ್ಲಿ ದಾವೆ ಹೂಡಿದ್ದು ಇದೆ, ಕಳೆದ 8 ತಿಂಗಳಲ್ಲಿ ವೇತನ ಪಡೆಯಲು ಸರಿಯಾಗಿ ಅನುದಾನ ಬಿಡುಗಡೆ ಆಗದೇ ಸಿಬ್ಬಂದಿಗಳು ಪರದಾಡುವಂತಾಗಿದೆ. ಈ ಬಗ್ಗೆ ಸದನದಲ್ಲಿ ಗಮನ ಸೆಳೆದು ನಮಗೆ ನ್ಯಾಯ ಕೊಡಿಸಬೇಕೆಂದು ಶಾಸಕರಲ್ಲಿ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಸಂಘದ ಜಿಲ್ಲಾಧ್ಯಕ್ಷ ಹಾಲಸ್ವಾಮಿ, ಪ್ರಧಾನ ಕಾರ್ಯದರ್ಶಿ ಡಾ.ಮಂಜುನಾಥ್, ಸುನೀಲ್, ಸುರೇಶ್, ಮಹಾಲಿಂಗಪ್ಪ, ಬಸವರಾಜ್, ದೊಡ್ಡಮನಿ, ಡಾ.ರೇಣುಕಾ, ಇನ್ನಿತರರಿದ್ದರು‌.”

  • ಪ್ರಧಾನ ಕಾರ್ಯದರ್ಶಿಗಳ ಆದೇಶ ರದ್ದುಗೊಳಿಸಲು ಎನ್ ಎಚ್ ಎಂ ಸಿಬ್ಬಂದಿಗಳು ಆಗ್ರಹ
  • ಈ ಬಗ್ಗೆ ಬೆಳಗಾವಿ ಚಳಿಗಾಲ ಅಧಿವೇಶನದಲ್ಲಿ ಚರ್ಚಿಸಲು ಶಾಸಕ ಕೆ.ಎಸ್.ಬಸವಂತಪ್ಪಗೆ ಸಿಬ್ಬಂದಿಗಳ ಮನವಿ

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ದಾವಣಗೆರೆ | ಜಿಲ್ಲಾ ಪಂಚಾಯಿತಿ ಸಿ.ಇ.ಒ ಗಿತ್ತೆ ಮಾಧವ್ ವಿಠ್ಠಲ್ ರಾವ್ ವಿರುದ್ಧ ಲೋಕಾಗೆ ದೂರು

Published

on

ಸುದ್ದಿದಿನ,ದಾವಣಗೆರೆ:2023-24ನೇ ಸಾಲಿನಲ್ಲಿ ಚನ್ನಗಿರಿ ತಾಲ್ಲೂಕಿನಲ್ಲಿ ಬರುವ ಸಮಸ್ಯಾತ್ಮಕ ಗ್ರಾಮಗಳಲ್ಲಿ ತುರ್ತು ಕುಡಿಯುವ ನೀರಿನ ಕಾಮಗಾರಿಯಲ್ಲಿ ನಡೆದಿರುವ ಅವ್ಯವಹಾರ ತನಿಖೆಗೆ ಒಳಪಡಿಸುವಂತೆ ಕೋರಿ ಅರ್ಜಿ ಸಲ್ಲಿಸಿ 5 ತಿಂಗಳು ಕಳೆದರೂ ಯಾವುದೇ ತನಿಖೆ ನಡೆಸದೆ ನಿರ್ಲಕ್ಷ್ಯ ತೋರಿದ ದಾವಣಗೆರೆ ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶ್ರೀ ಗಿತ್ತೆ ಮಾಧವ್ ವಿಠ್ಠಲ್ ರಾವ್, ಇವರ ವಿರುದ್ಧ ಕರ್ತವ್ಯ ಲೋಪದ ಅಡಿಯಲ್ಲಿ ಪ್ರಕರಣ ದಾಖಲಿಸಿರುವುದಾಗಿ ವಕೀಲ ಡಾ.ಕೆ.ಎ.ಓಬಳೇಶ್ ತಿಳಿಸಿದ್ದಾರೆ.

ದಾವಣಗೆರೆ ಜಿಲ್ಲಾ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ, ದಾವಣಗೆರೆ ಇಲ್ಲಿಗೆ 2023-24ನೇ ಸಾಲಿನಲ್ಲಿ ಉಂಟಾದ ಮಳೆಯ ಅಭಾವ ಮತ್ತು ಬರದ ಕಾರಣದಿಂದ ಕೋಟ್ಯಾಂತರ ರೂಪಾಯಿಗಳನ್ನು ಕುಡಿಯುವ ನೀರಿಗಾಗಿ ಸರ್ಕಾರ ಬಿಡುಗಡೆ ಮಾಡಿರುತ್ತದೆ. ಆದರೆ ಕೆಲವು ಅಧಿಕಾರಿಗಳು ತುರ್ತು ಕುಡಿಯುವ ನೀರಿನ ಅನುದಾನವನ್ನು ದುರುಪಯೋಗಪಡಿಸಿಕೊಂಡ ಮಾಹಿತಿ ತಿಳಿದು, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ, ಉಪ ವಿಭಾಗ, ಚನ್ನಗಿರಿ ಇವರಿಂದ ಮಾಹಿತಿಹಕ್ಕು ಅಡಿಯಲ್ಲಿ ದಾಖಲೆ ಪಡೆಯಲಾಗಿದೆ.

ದಾಖಲೆಗಳನ್ನು ಪರಿಶೀಲನೆ ಮಾಡಿದಾಗ ಸಾಕಷ್ಟು ಅವ್ಯವಹಾರ ನಡೆದಿರುವುದು ಕಂಡುಬಂದ ಕಾರಣ ಸೂಕ್ತ ದಾಖಲೆಗಳೊಂದಿಗೆ ದಿನಾಂಕ: 05-07-2025 ರಂದು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಜಿಲ್ಲಾ ಪಂಚಾಯಿತಿ, ದಾವಣಗೆರೆ ಇವರಿಗೆ ದೂರು ನೀಡಿ, ತನಿಖೆಗೆ ಒಳಪಡಿಸುವಂತೆ ಕೋರಿದ್ದರು. ದೂರು ನೀಡಿ 3 ತಿಂಗಳು ಕಳೆದರೂ ದೂರು ಅರ್ಜಿಗೆ ಸಂಬಂಧಿಸಿದಂತೆ ತನಿಖೆಯನ್ನು ಕೈಗೊಂಡ ಬಗ್ಗೆ ಮಾಹಿತಿಯನ್ನಾಗಲಿ ಅಥವಾ ಹಿಂಬರಹವನ್ನಾಗಲಿ ನೀಡದ ದಿನಾಂಕ: 29-10-2025 ರಂದು ಜ್ಞಾಪನವನ್ನು ಸಹ ನೀಡಲಾಗಿತ್ತು.

ಆದರೆ ನಾವು ಜ್ಞಾಪನ ನೀಡಿ ಒಂದು ತಿಂಗಳು ಕಳೆದರೂ ಯಾವುದೇ ತನಿಖೆ ನಡೆಸದೆ ನಿರ್ಲಕ್ಷ್ಯ ತೋರಿದ ದಾವಣಗೆರೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಶ್ರೀ ಗಿತ್ತೆ ಮಾಧವ್ ವಿಠ್ಠಲ್ ರಾವ್ ಇವರ ವಿರುದ್ಧ ಕರ್ತವ್ಯ ಲೋಪದ ಅಡಿಯಲ್ಲಿ ವಕೀಲ ಡಾ.ಕೆ.ಎ.ಓಬಳೇಶ್ ಲೋಕಾಯುಕ್ತದಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಉಳಿಕೆ ಸರ್ಕಾರಿ ನಿವೇಶನ ಇಲಾಖೆಗಳ ವಿವಿಧ ಉದ್ದೇಶಿತ ಕಟ್ಟಡಗಳಿಗೆ ಹಂಚಿಕೆ: ಡಿಸಿ ಜಿ.ಎಂ.ಗಂಗಾಧರಸ್ವಾಮಿ

Published

on

ಸುದ್ದಿದಿನ,ದಾವಣಗೆರೆ: ದಾವಣಗೆರೆಯಲ್ಲಿ ಸರ್ಕಾರಿ ನಿವೇಶನಗಳು ಖಾಲಿ ಇದ್ದರೆ ಅವುಗಳನ್ನು ಕೂಡಲೇ ಸರ್ಕಾರಿ ಕಚೇರಿಗಳ ಉಪಯೋಗಕ್ಕೆ ನೀಡಬೇಕೆಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಗಂಗಾಧರಸ್ವಾಮಿ.ಜಿ.ಎಂ ಸೂಚಿಸಿದರು.

ಮಂಗಳವಾರ(ಡಿ.2) ರಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಪ್ರಧಾನ ಮಂತ್ರಿಗಳ 15 ಅಂಶಗಳ ಕಾರ್ಯಕ್ರಮದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಕೊರತೆಯಾಗಬಾರದು. 100 ವಿದ್ಯಾರ್ಥಿಗಳು ವಾಸಿಸುವ ಕಟ್ಟಡಕ್ಕೆ ಬದಲಾಗಿ 400 ವಿದ್ಯಾರ್ಥಿಗಳು ವಾಸ ಮಾಡುವ ಕಟ್ಟಡವನ್ನು ನಿರ್ಮಿಸಬೇಕು ಎಂದರು. ಖಬರಸ್ಥಾನಕ್ಕೆ ಮತ್ತು ಸ್ಮಶಾನಕ್ಕೆ ಜಾಗದ ಅವಶ್ಯಕತೆ ಇದ್ದರೆ ನೀಡಲಾಗುತ್ತದೆ ಎಂದು ಭರವಸೆ ನೀಡಿದರು.

ಅಂಗನವಾಡಿ ಕೇಂದ್ರಗಳನ್ನು ಅಲ್ಪಸಂಖ್ಯಾತರ ಸಮುದಾಯದ ಜನರು ಅಧಿಕವಾಗಿ ವಾಸಿಸುತ್ತಿರುವ ತಾಲ್ಲೂಕುಗಳು ಮತ್ತು ಗ್ರಾಮಗಳಲ್ಲಿ ತೆರೆಯುವುದು, ಇದರಿಂದಾಗಿ ಯೋಜನೆಯ ಪ್ರಯೋಜನೆಗಳು ಅವರುಗಳಿಗೆ ನೇರವಾಗಿ ಸಿಗುತ್ತವೆ. ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿರುವ ಶಾಲೆ, ಕಾಲೇಜು ಹಾಗೂ ಅಂಗನವಾಡಿಗಳಿಗೆ ವಕ್ಫ್ ಬೋರ್ಡ್ ಅಥವಾ ಯಾವುದೇ ಇಲಾಖೆಯ ಅಧೀನದಲ್ಲಿನ ನಿವೇಶನವಿದ್ದರೂ ಗುರುತಿಸಿ ಶಾಲೆ, ಕಾಲೇಜುಗಳ ಕಟ್ಟಡ ನಿರ್ಮಿಸಬೇಕು. ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚಾಗಿ ವಾಸಿಸುತ್ತಿರುವ ಅಲ್ಪಸಂಖ್ಯಾತ ಸಮುದಾಯಗಳಿಗೆ ಇಲಾಖೆಗಳಲ್ಲಿನ ಯೋಜನೆಗಳನ್ನು ಸಮರ್ಪಕವಾಗಿ ಒದಗಿಸುವ ಮೂಲಕ ಶಿಕ್ಷಣ ಮತ್ತು ಆರೋಗ್ಯಕ್ಕೆ ಹೆಚ್ಚಿನ ಆಧ್ಯತೆ ನೀಡಬೇಕು.

ವಿವಿಧ ಇಲಾಖೆಯ ಅನುಪಾಲನಾ ವರದಿಯನ್ನು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅಧಿಕಾರಿ ಭಕ್ತಮಾರ್ಕಡೇಶ್ವರ ಜಿಲ್ಲಾಧಿಕಾರಿಯವರಿಗೆ ಸಲ್ಲಿಸಿದರು.

ಸಮಾಜದ ಧಾರ್ಮಿಕ ಮುಖಂಡರು ಅಲ್ಪಸಂಖ್ಯಾತ ವಿದ್ಯಾರ್ಥಿಗಳನ್ನು ವಸತಿ ಶಾಲೆಗೆ ಸೇರಿಸುವಂತಾಗಲು ಪ್ರೇರೇಪಿಸಬೇಕು. ವಸತಿ ಶಾಲೆಯಲ್ಲಿ ಗುಣಮಟ್ಟದ ಶಿಕ್ಷಣ ದೊರೆಯುವುದರ ಜೊತೆಗೆ ಅಗತ್ಯ ಸೌಲಭ್ಯ ಇರುವ ಬಗ್ಗೆ ತಿಳಿಸಬೇಕು ಎಂದರು.

ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಮಮತ ಹೊಸಗೌಡ್ರು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕರಾದ ರಾಜಾನಾಯ್ಕ, ಡಿಡಿಪಿಐ ಕೊಟ್ರೇಶ್, ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿರುವರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending