Connect with us

ದಿನದ ಸುದ್ದಿ

ಸಂಕೇಶ್ವರ್ ಬಸ್ ನಿಲ್ದಾಣ; ಪುರಸಭೆ ಕಟ್ಟಡ ಉದ್ಘಾಟನೆ | ಕನ್ನಡ ನೆಲ-ಜಲ ರಕ್ಷಣೆಗೆ ಬದ್ಧ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

Published

on

ಸುದ್ದಿದಿನ,ಬೆಳಗಾವಿ : ರಾಜ್ಯದ ನೆಲ-ಜಲ‌‌ ಹಾಗೂ‌ ಜನರ ರಕ್ಷಣೆಗೆ ಸರಕಾರ ಕಟಿಬದ್ಧವಾಗಿದೆ. ಇದಲ್ಲದೇ ಉತ್ತರ ಕರ್ನಾಟಕ ಅಭಿವೃದ್ಧಿ ಸೇರಿದಂತೆ ಕೃಷ್ಣಾ ಯೋಜನೆಯಡಿ ರಾಜ್ಯದ ಪಾಲಿನ ನೀರಿನ ಸಂಪೂರ್ಣ ಬಳಕೆಗೆ ಸರಕಾರ ಬದ್ಧವಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೇಳಿದರು.

ಸಂಕೇಶ್ವರ ಪಟ್ಟಣದಲ್ಲಿ ಶನಿವಾರ (ಸೆ.25) ಸಂಜೆ 4 ಕೋಟಿ ರೂಪಾಯಿ ವೆಚ್ಚದ ನೂತನ ಬಸ್ ನಿಲ್ದಾಣ ಹಾಗೂ ಎಸ್.ಎಫ್.ಸಿ. 3.50 ಕೋಟಿ ಅನುದಾನದಲ್ಲಿ ನಿರ್ಮಿಸಲಾದ ಪುರಸಭೆ ಕಟ್ಟಡವನ್ನು ಉದ್ಘಾಟಿಸಿದ ಬಳಿಕ ನೇಸರಿ ಗಾರ್ಡನ್ ನಲ್ಲಿ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸೂಕ್ತ ವ್ಯವಸ್ಥೆ ಲಭ್ಯವಾದರೆ ರಾಜ್ಯದಲ್ಲಿ ವಿದ್ಯುತ್ ‌ವಿತರಣೆ ವ್ಯವಸ್ಥೆ ವಿಕೇಂದ್ರೀಕರಣಕ್ಕೆ ಸರಕಾರ‌ ಸಿದ್ಧವಿದೆ ಎಂದು ಅವರು ತಿಳಿಸಿದರು.

ಸರಕಾರಿ ಸೇವೆಗಳ ವಿಕೇಂದ್ರೀಕರಣ

ಜನವರಿ 26 ರಿಂದ ಐದು‌ ಜಿಲ್ಲೆಗಳಲ್ಲಿ ಸರಕಾರದ ಪ್ರತಿಯೊಂದು ಸೇವೆಗಳನ್ನು ಗ್ರಾಮ‌ ಪಂಚಾಯಿತಿ ಮೂಲಕ ನೀಡುವ ವ್ಯವಸ್ಥೆ ಮಾಡಲಾಗುವುದು.
ಸರಕಾರಿ ಸೇವೆಗಳ ವಿಕೇಂದ್ರೀಕರಣ ಮಾಡುವ ಮೂಲಕ ಜನರ ಮನೆಬಾಗಿಲಿಗೆ ಸೇವೆ ಒದಗಿಸಲಾಗುವುದು. ಇದಕ್ಕೆ ಸರಕಾರ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ ಎಂದು ತಿಳಿಸಿದರು.

ರೈತರ ಮಕ್ಕಳಿಗೆ ಶಿಷ್ಯವೇತನ ಒದಗಿಸುವ ಮೂಲಕ ಅವರ ಬದುಕಿಗೆ ಸರಕಾರ ಆಸರೆ‌ಯಾಗಲಿದೆ. ರೈತರ ಮಕ್ಕಳು ಬೇರೆ‌ಬೇರೆ‌ ರೀತಿಯ ವೃತ್ತಿಶಿಕ್ಷಣ ಪಡೆಯಲು ಈ ಯೋಜನೆ ಸಹಕಾರಿಯಾಗಲಿದೆ. ಅಮೃತ‌ ಯೋಜನೆಗಳ ಜಾರಿ ಮೂಲಕ ಹಳ್ಳಿಗಳ ಪ್ರಗತಿಗೆ ಸರಕಾರ ಮುಂದಾಗಿದೆ ಎಂದರು.

ಏತ ನೀರಾವರಿ ಯೋಜನೆಗಳಿಗೆ ಶೀಘ್ರ ಚಾಲನೆ

ಶಂಕರಲಿಂಗ ಏತ ನೀರಾವರಿ ಹಾಗೂ ಅಡವಿ ಸಿದ್ಧೇಶ್ವರ ಏತ ನೀರಾವರಿ ಯೋಜನೆಗಳನ್ನು ಶೀಘ್ರ ಆರಂಭಿಸಲಾಗುವುದು. ಅದೇ ರೀತಿ ಆರು ಬ್ಯಾರೇಜ್ ತುಂಬಿಸಲು ಆದಷ್ಟು ಬೇಗನೇ ಮಂಜೂರಾತಿ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದರು.
ಪ್ರಧಾನಮಂತ್ರಿಗಳ ದೂರದೃಷ್ಟಿಯ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವ ಮೂಲಕ ಒಟ್ಟಾರೆ ಅಭಿವೃದ್ಧಿ ನಿಟ್ಟಿನಲ್ಲಿ ‌ಸರಕಾರ ಕೆಲಸ ಮಾಡಲಿದೆ ಎಂದು ಹೇಳಿದರು.

ಸಂಕೇಶ್ವರ ಪಟ್ಟಣಕ್ಕೆ ಒಳಚರಂಡಿ ವ್ಯವಸ್ಥೆ

ಸಂಕೇಶ್ವರ ಪಟ್ಟಣಕ್ಕೆ‌ ಸಂಪೂರ್ಣ ಒಳಚರಂಡಿ ವ್ಯವಸ್ಥೆ ಯೋಜನೆಗೆ ವರ್ಷಾಂತ್ಯದ ಲ್ಲಿ ಅನುಮತಿ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದರು.ವಿಶ್ವನಾಥ್ ಕತ್ತಿ ಹಾಗೂ ತಮ್ಮ ತಂದೆಯವರಾದ ದಿ.ಎಸ್.ಆರ್.ಬೊಮ್ಮಾಯಿ ಅವರ ಆತ್ಮೀಯ ಒಡನಾಟವನ್ನು ಸ್ಮರಿಸಿದರು.

ಅಧಿಕಾರ ಶಾಶ್ವತವಲ್ಲ; ಪ್ರತಿದಿನ ಇದನ್ನು ನೆನಪಿನಲ್ಲಿಟ್ಟುಕೊಂಡು ಕೆಲಸ ಮಾಡುತ್ತೇವೆ. ಜನರ ಮನಸ್ಸಿನಲ್ಲಿ ನಮ್ಮ ಬಗ್ಗೆ ಪ್ರೀತಿ-ವಿಶ್ವಾಸ ಇರುವವರೆಗೆ ನಾವು ಅಧಿಕಾರದಲ್ಲಿರುತ್ತೇವೆ ಎಂದರು. ಜನರ‌ ಸುತ್ತ ಅಭಿವೃದ್ಧಿ ಕೆಲಸಗಳಾಗಬೇಕು; ಸುಸಜ್ಜಿತ ಬಸ್ ನಿಲ್ದಾಣ, ಪುರಸಭೆ ಕಟ್ಟಡಗಳಿಂದ ಇಡೀ ತಾಲ್ಲೂಕಿನ ಹಾಗೂ ‌ಪಟ್ಟಣದ ಜನರಿಗೆ ಅನುಕೂಲವಾಗಲಿದೆ ಎಂದರು.

ವಸತಿ ಕಲ್ಪಿಸಲು 50 ಎಕರೆ ಜಮೀನು ಹಸ್ತಾಂತರ

ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು, ಸಂಕೇಶ್ವರ ಹೋಬಳಿಯ ಹರಗಾಪುರ ಗ್ರಾಮದ ಸರಕಾರಿ ಗಾಯರಾಣದ 50 ಎಕರೆ‌ ಜಮೀನನ್ನು ವಸತಿರಹಿತರಿಗೆ ವಸತಿ ಕಲ್ಪಿಸಲು ಸಂಕೇಶ್ವರ ಪುರಸಭೆಗೆ ಹಸ್ತಾಂತರಿಸಿದರು.

ರಾಜ್ಯದ ಸಮಗ್ರ ಅಭಿವೃದ್ಧಿಗೆ ಬದ್ಧ-ಶ್ರೀರಾಮುಲು

ಮುಖ್ಯ ಅತಿಥಿಯಾಗಿ ಮಾತನಾಡಿದ ಸಾರಿಗೆ ಹಾಗೂ‌ ಪರುಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯ ಸಚಿವರಾದ ಬಿ.ಶ್ರೀರಾಮುಲು ಅವರು, ಮುಖ್ಯಮಂತ್ರಿಗಳು ಅಭಿವೃದ್ಧಿಯ ಕಲ್ಪನೆಯನ್ನು ಸಣ್ಣ ಪಟ್ಟಣ ಹಾಗೂ ಗ್ರಾಮಗಳ ಕಡೆಗೆ ತೆಗೆದುಕೊಂಡು ಹೋಗುವ ಮೂಲಕ ರಾಜ್ಯದ ಸಮಗ್ರ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ ಎಂದು ಬಣ್ಣಿಸಿದರು.

ರಾಜ್ಯದ ನಾಗರಿಕರು ಸರಕಾರಿ‌ ಬಸ್ ಗಳಲ್ಲಿ ಸುರಕ್ಷಿತ ಹಾಗೂ ನೆಮ್ಮದಿಯಿಂದ ಪ್ರಯಾಣ ಕೈಗೊಳ್ಳಲು ಎಲ್ಲ ಅಗತ್ಯ ವ್ಯವಸ್ಥೆ ಕಲ್ಪಿಸಲು ಸರಕಾರ ಬದ್ಧವಾಗಿದೆ ಎಂದು ರಾಮುಲು ಹೇಳಿದರು. ಕೇಂದ್ರ‌‌ ಹಾಗೂ ರಾಜ್ಯ ಸರಕಾರಗಳಿಂದ ಅಭಿವೃದ್ಧಿ ಕೆಲಸಗಳು ಡಬಲ್ ಎಂಜಿನ್ ‌ಗಾಡಿಯಂತೆ ನಾಗಾಲೋಟದಲ್ಲಿ ಸಾಗಿವೆ ಎಂದು ಹೇಳಿದರು.

ಸಂಪೂರ್ಣ ಒಳಚರಂಡಿ ವ್ಯವಸ್ಥೆ- ಸಚಿವ ಭೈರತಿ ಭರವಸೆ

ನಗರಾಭಿವೃದ್ಧಿ ಇಲಾಖೆಯ ಸಚಿವ ಭೈರತಿ ಬಸವರಾಜ ಮಾತನಾಡಿ, ಸರಕಾರ ಜನರ ಮನೆಬಾಗಿಲಿಗೆ ಎಂಬ ಯೋಜನೆಯನ್ನು ಮುಖ್ಯಮಂತ್ರಿಗಳು ಜಾರಿಗೆ ತಂದಿದ್ದಾರೆ. ಇದೇ ರೀತಿ ವಿನೂತನ ಯೋಜನೆಗಳನ್ನು ರೂಪಿಸಲಿದ್ದಾರೆ ಎಂದರು.

ಸಂಕೇಶ್ವರ ಪಟ್ಟಣದಲ್ಲಿ 110 ಕೋಟಿ ವೆಚ್ಚದಲ್ಲಿ ಸಂಪೂರ್ಣ ಒಳಚರಂಡಿ ವ್ಯವಸ್ಥೆಯನ್ನು ನಮ್ಮ ಸರಕಾರದ ಅವಧಿಯಲ್ಲಿ ಮಾಡುತ್ತೇವೆ ಎಂದು ಸಚಿವರು ಭರವಸೆ ನೀಡಿದರು.

ಇಡೀ ರಾಜ್ಯದಲ್ಲಿ ಹಂತ ಹಂತವಾಗಿ ಒಳಚರಂಡಿ ವ್ಯವಸ್ಥೆ ಹಾಗೂ ಕುಡಿಯುವ ನೀರಿನ ಸೌಕರ್ಯ ಕಲ್ಪಿಸುವುದು ಸರಕಾರದ ಆದ್ಯತೆಯಾಗಿದೆ. ಈ ನಿಟ್ಟಿನಲ್ಲಿ ಮುಖ್ಯಮಂತ್ರಿಗಳ ಜತೆ ಚರ್ಚಿಸಿ ಸೂಕ್ತ ಯೋಜನೆ ರೂಪಿಸಲಾಗುವುದು ಎಂದು ತಿಳಿಸಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಡಿಸಿಸಿ ಬ್ಯಾಂಕ್ ಅಧ್ಯಕ್ಷ ರಮೇಶ್ ಕತ್ತಿ ಅವರು, ಸಂಕೇಶ್ವರ ಪಟ್ಟಣದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳುವ ಮೂಲಕ ಪಟ್ಟಣದ ಸಮಗ್ರ ಅಭಿವೃದ್ಧಿಗೆ ನೆರವು ನೀಡಿದ ಮುಖ್ಯಮಂತ್ರಿಗಳು, ಸಚಿವರು‌ ಹಾಗೂ ಸ್ಥಳೀಯ ಶಾಸಕರಿಗೆ ಕೃತಜ್ಞತೆ ಸಲ್ಲಿಸಿದರು.

ಕೃಷ್ಣಾ ಯೋಜನೆಗೆ ಆದ್ಯತೆ ನೀಡಬೇಕು, ಸಂಕೇಶ್ವರ-ಹುಕ್ಕೇರಿ ಪಟ್ಟಣದಲ್ಲಿ ಯು.ಜಿ.ಡಿ. ವ್ಯವಸ್ಥೆ ಕಲ್ಪಿಸುವ ಮೂಲಕ ಸ್ವಚ್ಛ-ಸುಂದರ ನಗರ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಮುಖ್ಯಮಂತ್ರಿಗಳಿಗೆ ಮನವಿ ಮಾಡಿಕೊಂಡರು.

ಹಿರಣ್ಯಕೇಶಿ‌ ನದಿಯ ಮೂಲಕ ಆರು ಬ್ಯಾರೇಜ್ ಗಳಲ್ಲಿ ನೀರು ಸಂಗ್ರಹಿಸಲು, ಹುಕ್ಕೇರಿ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಉಳಿದಿರುವ ಇನ್ನೂ ಹದಿನೇಳು ಕೆರೆಗಳನ್ನು ತುಂಬಿಸಲು ಅವಕಾಶ ಕಲ್ಪಿಸಬೇಕು ಎಂದು ರಮೇಶ್ ಕತ್ತಿ ಒತ್ತಾಯಿಸಿದರು.

ಅರಣ್ಯ, ಆಹಾರ, ನಾಗರಿಕ ಪೂರೈಕೆ ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆಯ ಸಚಿವರಾದ ಉಮೇಶ್ ಕತ್ತಿ ಅಧ್ಯಕ್ಷತೆ ವಹಿಸಿದ್ದರು. ನಗರಾಭಿವೃದ್ಧಿ ಸಚಿವ ಭೈರತಿ‌ ಬಸವರಾಜ್ , ವಿಧಾನಪರಿಷತ್ತಿನ ಸರಕಾರದ ಮುಖ್ಯ ಸಚೇತಕರಾದ‌ ಮಹಾಂತೇಶ ಕವಟಗಿಮಠ, ಸಂಸದ ಅಣ್ಣಾಸಾಹೇಬ್ ಜೊಲ್ಲೆ, ಶಾಸಕ ದುರ್ಯೋಧನ ಐಹೊಳೆ, ಪರಿಷತ್ ಸದಸ್ಯ ಹಣಮಂತ ನಿರಾಣಿ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ರಮೇಶ್ ಕತ್ತಿ, ಪುರಸಭೆಯ ಅಧ್ಯಕ್ಷೆ ಸೀಮಾ ಹತನೂರೆ ಮತ್ತಿತರರು ಉಪಸ್ಥಿತರಿದ್ದರು.

ಸಂಕೇಶ್ವರ ಪುರಸಭೆಗೆ 20 ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡುವಂತೆ ಕೋರಿ ಪುರಸಭೆಯ ಅಧ್ಯಕ್ಷರಾದ ಸೀಮಾ ಹತನೂರೆ ಮುಖ್ಯಮಂತ್ರಿಗಳಿಗೆ ಮನವಿಪತ್ರ ಸಲ್ಲಿಸಿದರು.

ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಸ್ವಾಗತಿಸಿದರು. ಪುರಸಭೆಯ ಸದಸ್ಯರು, ಪಟ್ಟಣದ ಗಣ್ಯರು ಸೇರಿದಂತೆ ನೂರಾರು ಜನರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ಮಾನಸಿಕ ಆರೋಗ್ಯ ಅರಿವು ಅಗತ್ಯ : ಡಾ. ಪ್ರಭು ಎಂ. ಬಿಸ್ಲೇರಿ

Published

on

ಸುದ್ದಿದಿನ,ದಾವಣಗೆರೆ:ಎ.ವಿ.ಕೆ. ಕಾಲೇಜು ಹಾಗೂ ಹಳೆ ಬಿಸ್ಲೇರಿ ಸಂಯುಕ್ತ ಆಶ್ರಯದಲ್ಲಿ ನಡೆಯುತ್ತಿರುವ ಎನ್.ಎಸ್.ಎಸ್. ವಿಶೇಷ ಶಿಬಿರದ ನಾಲ್ಕನೇ ದಿನದ ಕಾರ್ಯಕ್ರಮವು ಯಶಸ್ವಿಯಾಗಿ ಜರುಗಿತು.

ಕಾರ್ಯಕ್ರಮದಲ್ಲಿ ಅಗ್ನಿಶಾಮಕ ಅಧಿಕಾರಿಗಳಾದ ಉಪ್ಪಾರ ಮತ್ತು ರಫಿಕ್ ಅವರು ಬೆಂಕಿ ನಂದಿಸುವ ವಿಧಾನಗಳು, ಗ್ಯಾಸ್ ಲೀಕ್ ಆದಾಗ ಕೈಗೊಳ್ಳಬೇಕಾದ ಸುರಕ್ಷತಾ ಕ್ರಮಗಳು ಹಾಗೂ ಬೆಂಕಿ ಅವಘಡಗಳ ಸಂದರ್ಭದಲ್ಲಿ ಅನುಸರಿಸಬೇಕಾದ ಮುನ್ನೆಚ್ಚರಿಕೆಗಳ ಕುರಿತು ಪ್ರಾಯೋಗಿಕ ಮಾಹಿತಿ ನೀಡಿದರು. ಅಗ್ನಿ ಆಕಸ್ಮಿಕ ನಿರ್ವಹಣೆಯ ಪ್ರಾತ್ಯಕ್ಷಿಕೆ ಶಿಬಿರಾರ್ಥಿಗಳಲ್ಲಿ ಹೆಚ್ಚಿನ ಜಾಗೃತಿ ಮೂಡಿಸಿತು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ ಸಿಜಿ ಆಸ್ಪತ್ರೆ, ದಾವಣಗೆರೆ ಉಪಮುಖ್ಯ ವೈದ್ಯಾಧಿಕಾರಿಗಳಾದ ಡಾ. ಪ್ರಭು ಎಂ. ಬಿಸ್ಲೇರಿ ಅವರು ಮಾನಸಿಕ ಆರೋಗ್ಯದ ಮಹತ್ವ, ದುಶ್ಚಟಗಳಿಂದ ದೂರವಿರುವ ಅಗತ್ಯ ಮತ್ತು ಯುವ ಪೀಳಿಗೆ ಉತ್ತಮ ಜೀವನ ರೂಪಿಸಿಕೊಳ್ಳುವ ಕುರಿತು ಉಪನ್ಯಾಸ ನೀಡಿದರು. ವಿದ್ಯಾರ್ಥಿಗಳು ಒತ್ತಡವನ್ನು ಸಮರ್ಥವಾಗಿ ನಿಭಾಯಿಸಬೇಕು ಹಾಗೂ ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಜಿಲ್ಲಾ ನೋಡಲ್ ಅಧಿಕಾರಿಗಳಾದ ಡಾ. ತಿಪ್ಪೇಸ್ವಾಮಿ ಅವರು ದಾವಣಗೆರೆ ವಿಶ್ವವಿದ್ಯಾನಿಲಯದಲ್ಲಿ ಲಭ್ಯವಿರುವ ವಿವಿಧ ಶೈಕ್ಷಣಿಕ ಹಾಗೂ ಉದ್ಯೋಗಾವಕಾಶಗಳ ಕುರಿತು ಶಿಬಿರಾರ್ಥಿಗಳಿಗೆ ಮಾಹಿತಿ ನೀಡಿದರು.

ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಜಿಲ್ಲಾ ಸಲಹೆಗಾರರಾದ ಸತೀಶ್ ಕಲಹಾಳ್ ಅವರು “ತಂಬಾಕು ಮುಕ್ತ ಯುವ ಅಭಿಯಾನ 2.0” ಕುರಿತು ಮಾತನಾಡಿ, ತಂಬಾಕು ಸೇವನೆಯಿಂದ ಉಂಟಾಗುವ ಆರೋಗ್ಯ ಹಾನಿ, ತಂಬಾಕು ಬಿಡುವ ಲಾಭಗಳು ಹಾಗೂ ತಂಬಾಕು ಉತ್ಪಾದನೆಯ ಕುರಿತು ವಿವರಿಸಿದರು.

ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಶ್ರೀಮತಿ ಜೀವಿತ ಎಂ.ಪಿ., ಶ್ರೀಮತಿ ಉಷಾ ಎಂ.ಆರ್., ಡಾ. ಲೋಹಿತ್, ಡಾ. ಸತೀಶ್, ಡಾ. ವೀಣಾ, ಡಾ. ರಾಜಕುಮಾರ, ಸೂರ್ಯಪ್ರಸಾದ್, ಕವಿತಾ ಎಂ.ಎಂ., ವಿಶ್ವನಾಥ ಡಿ.ಆರ್. ಪರಶುರಾಮ್ ಕಟಾವು ಕರ್, ಗ್ರಾಮಸ್ಥರಾದ ಶ್ರೀಮತಿ ರಶ್ಮಿ ಸತೀಶ್, ಶ್ರೀಮತಿ ರತ್ನಮ್ಮ ಮಹೇಶ್, ಶ್ರೀಮತಿ ಮಂಜುಳಾ ಮಲ್ಲೇಶ್, ಶ್ರೀ ಶಾರದ, ಶಿವರಾಧಿಕಾರಿಗಳಾದ ಡಾ. ವಿಶ್ವನಾಥ ಪಿ., ಡಾ. ಕವಿತ ಆರ್.ಜಿ. ಹಾಗೂ ಅನೇಕ ಶಿಬಿರಾರ್ಥಿಗಳು ಮತ್ತು ಗ್ರಾಮಸ್ಥರು ಭಾಗವಹಿಸಿದ್ದರು.

ಕಾರ್ಯಕ್ರಮವು ಆರೋಗ್ಯ ಮತ್ತು ಸುರಕ್ಷತೆ ಕುರಿತ ಜಾಗೃತಿ ಮೂಡಿಸುವಲ್ಲಿ ಯಶಸ್ವಿಯಾಯಿತು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಬದುಕಿನಲ್ಲಿ ಪ್ರಾಮಾಣಿಕತೆ ಮತ್ತು ಪರಿಶ್ರಮವಿದ್ದರೆ ಯಶಸ್ಸು ನಿಶ್ಚಿತ

Published

on

ಸುದ್ದಿದಿನ,ದಾವಣಗೆರೆ:ಎ.ವಿ.ಕೆ ಮಹಿಳಾ ಕಾಲೇಜು ಹಾಗೂ ಹಳೆಬಿಸಲೇರಿ ಗ್ರಾಮದ ಸಂಯುಕ್ತ ಆಶ್ರಯದಲ್ಲಿ 2025-26 ನೇ ಸಾಲಿನ ವಾರ್ಷಿಕ ವಿಶೇಷ ಶಿಬಿರವನ್ನು ಹಳೆಬಿಸಲೇರಿ ಗ್ರಾಮದಲ್ಲಿ ಆಯೋಜಿಸಲಾದ 5ನೇ ದಿನದ ಸಂಜೆ 6:30 ಕ್ಕೆ ವೇದಿಕೆ ಕಾರ್ಯಕ್ರಮ ಜರುಗಿತು.

ಕಾರ್ಯಕ್ರಮಕ್ಕೆ ವಿಶೇಷ ಆಹ್ವಾನಿತರಾಗಿ ಆಗಮಿಸಿದ ಶ್ರೀ ಬಸವನಗೌಡರ್ ಕುಂದೂರು ಕನ್ಸ್ಟ್ರಕ್ಷನ್ ಪ್ರೈವೇಟ್ ಲಿಮಿಟೆಡ್ ಬೆಂಗಳೂರು. ಇವರು ಶಿಬಿರಾರ್ಥಿಗಳನ್ನು ಕುರಿತು ಮಾತನಾಡುತ್ತಾ ಯುವಜನತೆ ಮೊಬೈಲ್ ಅನ್ನು ಅವಶ್ಯಕತೆಗೆ ಅನುಗುಣವಾಗಿ ಹಿತಮಿತವಾಗಿ ಬಳಸಿದ್ದಲ್ಲಿ ಅದರ ಸದುಪಯೋಗ ಅರಿವು ಮೂಡಿಸಿದಂತಾಗುತ್ತದೆ ಹಾಗೂ ಕಠಿಣ ಪರಿಶ್ರಮ, ಪ್ರಾಮಾಣಿಕತೆ ಇದ್ದಲ್ಲಿ ಬರುತ್ತದೆಂದು ತಿಳಿಸಿದರು.

ಹಾಗೆಯೇ ಕಾಲೇಜಿನ ಪ್ರಾಚಾರ್ಯರಾದ ಪ್ರೊ. ಕಮಲ ಸೊಪ್ಪಿನ್ ರವರು ಶಿಬಿರಾರ್ಥಿಗಳನ್ನುದ್ದೇಶಿಸಿ ಮಾತನಾಡುತ್ತಾ ವಿದ್ಯಾರ್ಥಿ ಬದುಕಿಗೆ ಶಿಸ್ತು, ಸಮಯ ಪ್ರಜ್ಞೆ ಬೇಕು ದಾನ, ಧರ್ಮದ ಸಮಾಜಮುಖಿ ಚಟುವಟಿಕೆಗಳನ್ನು ಸೇವಾ ಮನೋಭಾವದಿಂದ ಪಾಲಿಸಬೇಕೆಂದು ಕರೆ ನೀಡಿದರು.

ಶ್ರೀಯುತ ವಿಶ್ವನಾಥ.ಡಿ.ಆರ್ ಉಪನ್ಯಾಸಕರು ಹಾಗೂ ಪತ್ರಿಕ ವರದಿಗಾರರು ಇಂದಿನ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸದ ಮೂಲಕ ಇಂದಿನ ಯುವಜನತೆ ಗ್ರಾಮೀಣ ಬದುಕನ್ನು ಅಪ್ಪಿಕೊಳ್ಳಬೇಕೆಂದು ಹಾಗೂ ವಿಶೇಷ ವ್ಯಕ್ತಿಗಳ ಅನುಭವದ ಮಾತುಗಳು ತರಗತಿಯ ಜ್ಞಾನಕ್ಕಿಂತ(ಕಲಿಕೆ) ತಿಳಿಸಿದರು. ಎ.ವಿ.ಕೆ ಮಹಿಳಾ ಕಾಲೇಜಿನ ಕನ್ನಡ ಉಪನ್ಯಾಸಕರಾದ ಕಳಚಾರ ಅವರು ಮಾನವೀಯತೆ ಕುರಿತು ಮಾತನಾಡಿದರು.

ಇಂದಿನ ಕಾರ್ಯಕ್ರಮದ ಆರಂಭದಲ್ಲಿ ವಿದ್ಯಾರ್ಥಿನಿ ಚಂದನ ಪ್ರಾರ್ಥನೆ ನೆರವೇರಿಸಿದರು. ಭೂಮಿಕಾ ರವರು ಸ್ವಾಗತಿಸಿದರು. ಮಾಲ ಮತ್ತು ಜ್ಯೋತಿ ಅವರು ನಿರೂಪಿಸಿದರು. ಕಾರ್ಯಕ್ರಮದಲ್ಲಿ ಉಪಸ್ಥಿತರಿರುವ ಡಾ. ಕವಿತಾ ಆರ್. ಜಿ. ಅತಿಥಿ ಪರಿಚಯ ಮಾಡಿಕೊಟ್ಟರು ಹಾಗೂ ಡಾ. ವಿಶ್ವನಾಥ್ ಪಿ ಇವರು ಶಿಬಿರಾರ್ಥಿಗಳು ಆಯೋಜಿಸಿದ್ದ ವಿವಿಧ ಮಹಿಳಾ ಸಂಘಗಳ ಕ್ರೀಡಾ ಸ್ಪರ್ಧೆಗಳಲ್ಲಿ ವಿಜೇತರಾದವರ ಬಗ್ಗೆ ವಾಚಿಸಿದರು ಊರಿನ ಹಿರಿಯ ಮುಖಂಡರು ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ವೇದಿಕೆಯನ್ನು ಅಲಂಕರಿಸಿದರು.

ಕಾಲೇಜಿನ ಬೋಧಕರಾದ ಶ್ರೀ ಚನ್ನಬಸವನಗೌಡ, ದಿವ್ಯಶ್ರೀ ಜಿ, ಶ್ರೀಮತಿ ಉಷಾ ಎಲ್, ಆಂಗ್ಲ ಭಾಷೆ ಉಪನ್ಯಾಸಕ ಮುಂತಾದವರು ಉಪಸ್ಥಿತರಿದ್ದರು ಈ ವಿಶೇಷ ಶಿಬಿರವು ಗ್ರಾಮದ ಮಹಿಳೆಯರನ್ನು ಒಗ್ಗೂಡಿಸುವ, ಶಬರಿಕರಣ ಗೊಳಿಸುವ ಉಧಾರತೆಯ ಗುಣಗಳನ್ನು ಬೆಳೆಸುವಲ್ಲಿ ಮಹತ್ವದ ಕಾರ್ಯಕ್ರಮವಾಗಿ ಎಲ್ಲರ ಗಮನ ಸೆಳೆಯಿತು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ದಾವಣಗೆರೆ | ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಸಮಾರೋಪ ಸಮಾರಂಭ

Published

on

ಸುದ್ದಿದಿನ,ದಾವಣಗೆರೆ:ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು, ದಾವಣಗೆರೆ ವತಿಯಿಂದ 2025–26ನೇ ಸಾಲಿನ ಪಠ್ಯಪೂರಕ ಹಾಗೂ ಪಠ್ಯೇತರ ಚಟುವಟಿಕೆಗಳ ಸಮಾರೋಪ ಸಮಾರಂಭವು ದಿನಾಂಕ 09-05-2026ರಂದು ಬೆಳಿಗ್ಗೆ 11.30 ಗಂಟೆಗೆ ಕಾಲೇಜು ಆವರಣದಲ್ಲಿ ವಿಜೃಂಭಣೆಯಿಂದ ಜರುಗಿತು.

ಕಾರ್ಯಕ್ರಮದ ಉದ್ಘಾಟನೆ ಹಾಗೂ ಸಮಾರೋಪ ಭಾಷಣವನ್ನು ಧಾರಾಶಿವ್ (ಮಹಾರಾಷ್ಟ್ರ) ಜಿಲ್ಲಾಧಿಕಾರಿಗಳಾದ ಶ್ರೀ ಕೀರ್ತಿ ಕಿರಣ್ ಹೆಚ್. ಪೂಜಾರ್, ಐಎಎಸ್ ಅವರು ನೆರವೇರಿಸಿದರು. ತಮ್ಮ ಭಾಷಣದಲ್ಲಿ ವಿದ್ಯಾರ್ಥಿನಿಯರು ಪಠ್ಯ ಚಟುವಟಿಕೆಗಳ ಜೊತೆಗೆ ಪಠ್ಯಪೂರಕ ಚಟುವಟಿಕೆಗಳಲ್ಲಿಯೂ ಸಕ್ರಿಯವಾಗಿ ಭಾಗವಹಿಸುವುದು ಅವರ ಸಮಗ್ರ ವ್ಯಕ್ತಿತ್ವ ವಿಕಾಸಕ್ಕೆ ನೆರವಾಗುತ್ತದೆ ಎಂದು ತಿಳಿಸಿದರು.

ಶಿಸ್ತು, ಸಮಯಪಾಲನೆ ಹಾಗೂ ಸಾಮಾಜಿಕ ಹೊಣೆಗಾರಿಕೆಯ ಮಹತ್ವವನ್ನು ಅವರು ಒತ್ತಿ ಹೇಳಿದರು. ವಿದ್ಯಾರ್ಥಿನಿಯರ ಪ್ರಶ್ನೆಗಳಿಗೆ ಸಮರ್ಪಕ ಉತ್ತರ ನೀಡಿ, ಸ್ಪರ್ಧಾತ್ಮಕ ಪರೀಕ್ಷೆಗಳ ಕುರಿತು ಮಾಹಿತಿಯನ್ನು ಹಂಚಿಕೊಂಡರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಪ್ರಾಂಶುಪಾಲರಾದ ಡಾ. ಕರಿಬಸಪ್ಪ ಬಿ. ಅವರು ಕಾಲೇಜಿನ ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಸಾಧನೆಗಳನ್ನು ಸಂಕ್ಷಿಪ್ತವಾಗಿ ವಿವರಿಸಿ, ವಿದ್ಯಾರ್ಥಿನಿಯರ ಪರಿಶ್ರಮವನ್ನು ಮೆಚ್ಚಿದರು. ಸಂಸದರ ಮತ್ತು ಶಾಸಕರು, ಸಿ ಡಿ ಸಿ ಸದಸ್ಯರು ಸಹಕಾರವನ್ನು ಸ್ಮರಸಿದರು.

ಉಪಸ್ಥಿತರಾಗಿ ಡಾ. ನಾಗನಗೌಡ ಎಸ್.ಪಿ., ಪ್ರಾಧ್ಯಾಪಕರು ಹಾಗೂ ಮುಖ್ಯಸ್ಥರು, ಅರ್ಥಶಾಸ್ತ್ರ ವಿಭಾಗ; ಡಾ. ಭೀಮಪ್ಪ ಎಂ.ಪಿ., ಸಂಚಾಲಕರು, ಐಕ್ಯುಎಸಿ; ಶ್ರೀಮತಿ ಸವಿತಾ ಎಸ್., ಕಚೇರಿ ಅಧೀಕ್ಷಕರು ಸೇರಿದಂತೆ ಹಲವಾರು ವೇದಿಕೆ ಮೇಲೆ ಪಾಲ್ಗೊಂಡಿದ್ದರು.

ಕಾರ್ಯಕ್ರಮದ ಪ್ರಸ್ತಾವಿಕ ನುಡಿ ಹಾಗೂ ವಾರ್ಷಿಕ ವರದಿಯನ್ನು ಡಾ. ಶೋಭಾ ಸಾವಕಾರ, ಸಂಚಾಲಕರು, ಸಾಂಸ್ಕೃತಿಕ ಸಮಿತಿ ವಾಚಿಸಿದರು. ಸ್ವಾಗತವನ್ನು ಡಾ. ಭೀಮಪ್ಪ ಎಂ.ಪಿ. ನೆರವೇರಿಸಿದರು. ನಿರೂಪಣೆಯನ್ನು ಸುಭಾಸ್ ನಿರ್ವಹಿಸಿದರು. ವಿದ್ಯಾರ್ಥಿನಿ ಕವನ ಪ್ರಾರ್ಥನಾ ಗೀತೆಯನ್ನು ಹಾಡಿದರು.

ವೇದಿಕೆಯಲ್ಲಿ ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರಾದ ಕೆ.ಎಸ್. ಈಶ್ವರಪ್ಪ ಮಾತನಾಡಿ, ಪಠ್ಯೇತರ ಚಟುವಟಿಕೆಗಳು ನಾಯಕತ್ವ ಹಾಗೂ ವ್ಯಕ್ತಿತ್ವ ನಿರ್ಮಾಣಕ್ಕೆ ಸಹಕಾರಿ ಎಂದು ಅಭಿಪ್ರಾಯಪಟ್ಟರು. ಸಿ.ಡಿ.ಸಿ. ಸದಸ್ಯರಾದ ಅನಿಲ್ ಗೌಡ್ರು ಮತ್ತು ಶ್ರೀಮತಿ ಸುಜಾತಾ ಉಪಸ್ಥಿತರಿದ್ದರು.

ಉಪನ್ಯಾಸಕರಾದ ತೊಪ್ಪಲು ಮಲ್ಲಿಕಾರ್ಜುನರವರು ಮುಖ್ಯ ಅತಿಥಿಗಳ ಪರಿಚಯ ಮಾಡಿಕೊಟ್ಟರು. ಡಾ. ಕುಮಾರ್ ವಿದ್ಯಾರ್ಥಿನಿಯರ ಸನ್ಮಾನ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಕ್ರೀಡಾ ವಿಭಾಗದ ಸನ್ಮಾನವನ್ನು ದೈಹಿಕ ನಿರ್ದೇಶಕಿ ಸುನೀತಾ, ಸಾಂಸ್ಕೃತಿಕ ವಿಭಾಗದ ಸನ್ಮಾನವನ್ನು ಹಾಗೂ ವಂದನಾರ್ಪಣೆಯನ್ನು ಸುರೇಖಾ ನೆರವೇರಿಸಿದರು.

ಸಮಾರಂಭದಲ್ಲಿ ವಿವಿಧ ಚಟುವಟಿಕೆಗಳಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿನಿಯರಿಗೆ ಪ್ರಶಸ್ತಿಗಳನ್ನು ವಿತರಿಸಲಾಯಿತು. ವೇದಿಕೆ ಕಾರ್ಯಕ್ರಮದ ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

ಸುದ್ದಿದಿನ.ಕಾಂ|ವಾಟ್ಸಾಪ್|9980346243,

Continue Reading

Trending